30 January 2022

ಚೆಲ್ಲಾಡಿದ ಚಿತ್ರಗಳು .ವಿಮರ್ಶೆ


 

ಚೆಲ್ಲಾಡಿದ ಚಿತ್ರಗಳು
ಪುಸ್ತಕ ವಿಮರ್ಶೆ.

ಈ ವರ್ಷ ಗಣರಾಜ್ಯೋತ್ಸವದ ದಿನದಂದು ತುಮಕೂರಿನ ಗೋಕುಲ ಬಡಾವಣೆಯ ಗಣೇಶ ಮಂದಿರದಲ್ಲಿ  ನಗರ ಕ ಸಾ ಪ ವತಿಯಿಂದ ನಡೆದ ವತಿಯಿಂದ ನಡೆದ ಕವಿ ಗೋಷ್ಠಿಯಲ್ಲಿ  ಪಾಲ್ಗೊಂಡ ನನಗೆ ಬಹುಮಾನವಾಗಿ ನೀಡಿದ ಪುಸ್ತಕವೇ ಚೆಲ್ಲಾಡಿದ ಚಿತ್ರಗಳು.
ಡಾ. ಸೋ ಮು ಭಾಸ್ಕರಾಚಾರ್ ರವರ ಆತ್ಮಕಥನ ಓದುತ್ತಿದ್ದರೆ ಇದು ನನ್ನದೇ ಕಥೆಯೆಂದು ಭಾಸವಾಯಿತು.
ಈ ಕಥಾನಕದ ಭಾಷೆ , ನಿರೂಪಣೆ ಬಹಳ ಸುಂದರವಾಗಿರುವುದು ವಿಶೇಷವಾದದು.
ಇದು ಇವರ ಹನ್ನೊಂದನೇ ಕೃತಿ. ಅವರು ಉಪನ್ಯಾಸಕರಾಗಿ  ನಿವೃತ್ತಿ ಹೊಂದಿದ ತರುವಾಯ   ತುಮಕೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದರು. ಶ್ರೀಯುತರ ಬದುಕು ತುಂಬಾ ತಿರುವುಗಳಿಂದ ಕೂಡಿದ್ದು ರೋಚಕವಾಗಿದೆ. ಹಾಗಾಗಿ ಅವರು  ಕಂಡುಂಡ ಸತ್ಯಗಳನ್ನು, ಎದುರಾದ ಘಟನೆಗಳನ್ನು ಒಂದೊಂದಾಗಿ ನಮ್ಮೆದುರು ತೆರೆದಿಟ್ಟಿದ್ದಾರೆ  . ಇಲ್ಲಿನ ಘಟನೆಗಳು ಒಂದೇ ಬಾರಿಗೆ ಘಟಿಸಿದವುಗಳಲ್ಲ. ಬೇರೆ ಬೇರೆ ಸಂದರ್ಭಗಳಲ್ಲಿ ಎದುರಾದ ರೋಚಕ ಅನುಭವಗಳು. ಇವುಗಳನ್ನು ಕೇಳಿದ್ದ ಮಿತ್ರರು ಬರವಣಿಗೆ ರೂಪದಲ್ಲಿ ಪ್ರಕಟಿಸಲು ಯೋಗ್ಯವಾಗಿವೆ, ಪ್ರಕಟಿಸಿ ಎಂದು ನೀಡಿದ ಸಲಹೆ ಮೇರೆಗೆ ಈ ಕೃತಿ ಹೊರಬರಲು ಸಾಧ್ಯವಾಗಿದೆ. ಎಂದು ಲೇಖಕರು ಅಭಿಪ್ರಾಯಪಟ್ಟಿದ್ದಾರೆ.

'ಚೆಲ್ಲಾಡಿದ ಚಿತ್ರಗಳು' ಈ ಪುಸ್ತಕಕ್ಕೆ ಡಾ .ಮನು ಬಳಿಗಾರ್ ರವರು ಬರೆದ ಮುನ್ನುಡಿ ಪುಸ್ತಕದ ತೂಕವನ್ನು ಹೆಚ್ಚಿಸಿದೆ.
ಈ ಪುಸ್ತಕ ಆಶ್ಚರ್ಯ ಹಾಗೂ ಅದ್ಭುತವೆನಿಸುವ ಜೀವನಾನುಭವಗಳಿಂದ ಕೂಡಿದ್ದು ಓದುಗರಿಗೆ ವಿಶಿಷ್ಟ ಅನುಭವ ತಂದುಕೊಡುತ್ತದೆ, ಇದೊಂದು ರೋಚಕ ಅನುಭವ ನೀಡುವ ಕೃತಿಯಾಗಿದೆ. 'ಅಪ್ಪನಿಗೆ ಹೆದರಿ ಶಾಲೆಗೆ ಹೋದೆ', 'ಸಾಲ ವಸೂಲಿಗೆ ಬಂದ ವ್ಯಕ್ತಿಯೇ ಬುಕ್ಸ್ ಕೊಡಿಸಿದ್ದು, ಪ್ರೀತಿಯ ಮುದ್ದೆ ತಿನ್ನಿಸಿದ ಮುಖ್ಯೋಪಾಧ್ಯಾಯ', 'ಸೊಡರೆಮ್ಮೆ ಸವಾರಿ ಮಾಡಿ  ಕೈ  ಮುರಿದುಕೊಂಡೆ', 'ಪಂಡರ  ಭಜನೆಯಲ್ಲೂ ಜಾತಿ ಕುಣಿತ', 'ನಾಟಕಾಭಿನಯಕ್ಕೆ ಇನಾಮು', 'ಸ್ನೇಹದಲ್ಲೂ ಇಣುಕಿದ ಜಾತಿ ಜಂಜಾಟ' . . ಮುಂತಾದ ಲೇಖನಗಳು ಇದ್ದು, ಒಂದೊಂದೂ ಸ್ವಂತಿಕೆಯನ್ನು ಪಡೆದಿದ್ದು, ಓದುಗರಿಗೆ ಬಾಲ್ಯದ ದರ್ಶನವನ್ನು ಆಪ್ಯಾಯಮಾನವಾಗಿ ಮಾಡಿಸಿದ್ದಾರೆ.

ತಮ್ಮ ಬಡತನದ ಬದುಕು, ಆ ಕಾಲದಲ್ಲೇ ಕಂಡ ಜಾತಿ ವ್ಯವಸ್ಥೆಯನ್ನು ಕಂಡು ಕನಲಿರುವ ಶ್ರೀಯುತರು ಅದನ್ನು ಕಲಾತ್ಮಕವಾಗಿ ಬಿಡಿಸಿದ್ದಾರೆ. ಅದರಲ್ಲೂ ಇವರು ಶಾಲೆಗೆ ತಪ್ಪಿಸಿಕೊಂಡು ತಮ್ಮ ಊರಿನ ಆಂಜನೇಯ ದೇವಸ್ಥಾನದ ವಿಗ್ರಹದ ಹಿಂದೆ ಆಶ್ರಯ ಪಡೆದು, ಶಾಲೆಯ ಎಲ್ಲಾ ಮಕ್ಕಳು ಮನೆಗೆ ತಲುಪುವಾಗ ಹೊರ ಬಂದು ಸೇರುವ ಪ್ರಸಂಗ, ಆಗ ಇವರ ತಂದೆಯವರಿಂದ ಸಿಕ್ಕಿದ ಬಳುವಳಿಯ ಏಟುಗಳನ್ನು ಸ್ಮರಿಸಿಕೊಂಡಿದ್ದಾರೆ. ಮುಗ್ಧತೆಯ ಪ್ರತೀಕವಾಗಿರುವ ಈ ಪ್ರಸಂಗ ಬಹಳಷ್ಟು ಆಲೋಚನೆಗಳಿಗೆ ದಾರಿ ಮಾಡಿಕೊಡುತ್ತದೆ. ಆ ಕಾಲದ ಆಚಾರ, ವಿಚಾರಗಳು ಹೇಗಿದ್ದವೆಂಬುದನ್ನು ತಿಳಿಯಲು ಸಹಕಾರಿಯಾಗಿದೆ. ಇಲ್ಲಿನ ಬಹಳಷ್ಟು ಲೇಖನಗಳಲ್ಲಿ ಶ್ರೀಯುತರು ತಮ್ಮ ಕಾಲದಲ್ಲಿ ಘಟಿಸಿದ ಘಟನಾವಳಿಗಳನ್ನು ಎಳೆ ಎಳೆಯಾಗಿ ಬಿಡಿಸಿದ್ದಾರೆ. ಅವರ ಊರಿನಲ್ಲಿ ನಡೆದ ಪ್ರಸಂಗಗಳಲ್ಲಿ ಕೆಲವು ನಗು ಬರಿಸುವಂತಿದ್ದರೆ, ಮತ್ತೆ ಕೆಲವು ಆ ಕಾಲದ ಸಂಪ್ರದಾಯಗಳನ್ನು ಯಥಾವತ್ತಾಗಿ ನೀಡಿರುವುದರಿಂದ ತಮ್ಮ ಸಮಕಾಲೀನ ಸಂಗತಿಗಳನ್ನು ತಿಳಿದುಕೊಳ್ಳಲು ಈ ಕೃತಿ ನೆರವಾಗುತ್ತದೆ ಎನಿಸುತ್ತದೆ. ತಮ್ಮ ಬರವಣಿಗೆಯಲ್ಲಿ ಎಲ್ಲಿಯೂ ಅತಿರೇಕವನ್ನಾಗಲೀ, ಉತ್ಪ್ರೇಕ್ಷೆಯನ್ನಾಗಲೀ ತೋರಿಸದಿರುವುದು ಇವರ ಗಂಭೀರ ಚಿಂತನೆಗೆ ಸಾಕ್ಷಿಯಾಗಿದೆ. ಇಲ್ಲಿನ ಒಂದೊಂದು ಪ್ರಸಂಗಗಳೂ ಕೂಡ ಆ ಕಾಲದ ಬದುಕನ್ನು ಕಟ್ಟಿಕೊಡುವಲ್ಲಿ ಸಾಫಲ್ಯ ಪಡೆದಿರುವುದು ಕಂಡುಬರುತ್ತದೆ. ಹರೆಯದಲ್ಲಿ ನಡೆದ ಪ್ರೇಮ, ಕಾಲೇಜಿನಲ್ಲಿ ಒಂದು ವರ್ಷದ ಪಿಯುಸಿಯಲ್ಲಿ ನಪಾಸಾಗಿ ತಮ್ಮ ಗುರುಗಳ ಸಹಕಾರದಿಂದ ಕನ್ನಡದಲ್ಲಿ ವಿಜ್ಞಾನದ ವಿಷಯವನ್ನು ಬರೆದು ತೇರ್ಗಡೆಯಾದುದು. ಪ್ರೌಢ ಶಾಲೆಯಲ್ಲಿರಬೇಕಾದರೆ ತಮ್ಮ ಮುಖ್ಯೋಪಾಧ್ಯಾಯರಿಗೆ ಧಿಕ್ಕಾರ ಕೂಗಿದ್ದು ಹಾಗೂ ನಾಟಕಾಭಿನಯದಲ್ಲಿ ತೋರಿದ ಉತ್ಸಾಹ ಮತ್ತು ಅದಕ್ಕೆ ನಡೆದ ಪ್ರೋತ್ಸಾಹವನ್ನು ಯಥಾವತ್ತಾಗಿ ನೀಡಿದ್ದಾರೆ. ಜೊತೆಗೆ ತಮಗೆ ನೀಡಿದ ಸಹಕಾರದ ಉಪಕಾರವನ್ನು ಕೃತಜ್ಞತೆಯಿಂದ ಸ್ಮರಿಸಿದ್ದಾರೆ.

ಒಟ್ಟಾರೆ  ನೀವು ನಿಮ್ಮ ಬಾಲ್ಯದ ಮತ್ತು ಕಾಲೇಜು ದಿನದ ನೆನಪಗಳ ಮೆಲಕು ಹಾಕಲು ಒಮ್ಮೆ ಈ ಕೃತಿ ಓದಿಬಿಡಿ.

ಪುಸ್ತಕ: ಚೆಲ್ಲಾಡಿದ ಚಿತ್ರಗಳು
ಲೇಖಕರು: ಸೋ ಮು ಭಾಸ್ಕರಾಚಾರ್.
ಪ್ರಕಾಶನ: ಕಿರಣ್ ಪ್ರಕಾಶನ ತುಮಕೂರು.
ಬೆಲೆ: 100₹

ಸಿಹಿಜೀವಿ
ಸಿ ಜಿ ವೆಂಕಟೇಶ್ವರ
ತುಮಕೂರು.
9900925529

ಆವರ್ತನ .ಹನಿಗವನ


 



*ಆವರ್ತನ*


ಹೆತ್ತವರ ಮನ ನೋಯಿಸಿ

ತುತ್ತು  ಅನ್ನ ನೀಡದೆ ನಿನ್ನ

ಮಕ್ಕಳ ಮುಂದೆ ಮಾಡದಿರು ನರ್ತನ|

ಹತ್ತಿರವೇ ಇದೆ ದೂರವಿಲ್ಲ

ನಿನಗಾಗಿ ಕಾದಿದೆ ಆವರ್ತನ ||


ಸಿಹಿಜೀವಿ

ಸಿ ಜಿ ವೆಂಕಟೇಶ್ವರ

ಪ್ರಜಾಪ್ರಗತಿ ೩೦/೧/೨೨


 

*ಇಂದಿನ ಪ್ರಜಾಪ್ರಗತಿ ಪತ್ರಿಕೆಯಲ್ಲಿ ಪ್ರಕಟವಾದ ನಾನು ಬರೆದ ಕಥೆ "ಜೀತಮುಕ್ತ"* ಇದು ಮುದ್ರಣಕ್ಕೆ ಸಿದ್ದವಾಗುತ್ತಿರುವ ನನ್ನ "ರಂಗಣ್ಣನ ಗುಡಿಸಲು" ಕಥಾಸಂಕಲನದ ಒಂದು ಕಥೆ ೩೦/೧/೨೨


 

29 January 2022

ಸಿಂಹ ಧ್ವನಿ .೨೯/೧/೨೨


 

ಉದಕದೊಳಗಿನ ಕಿಚ್ಚು ಭಾಗ . ೧೬




ಜೀತ ಮುಕ್ತ 

"ಏನ್ ರಂಗಮ್ಮ ಇಷ್ಟು ದೂರ ಬಂದ್ ಬಿಟ್ಟೆ ಹೇಳ್ಕಳಿಸಿದ್ದರೆ ನಾನೆ ಬರ್ತಿದ್ದೆ ನಿಮ್ಮ ಮನೆ ಹತ್ರ" ಸಿಟ್ಟು  ಅಸಹನೆ ಮತ್ತು ವ್ಯಂಗ್ಯಭರಿತವಾಗಿ ಮುಕುಂದಯ್ಯ ಮಾತನಾಡಿದಾಗ
" ಏ ಬಿಡ್ತು ಅನ್ ಸ್ವಾಮಿ ಅದ್ಯಾಕೆ ಅಂಗ್ ಮಾತಾಡ್ತಿರಾ? ನೀವು ನಮ್ ಗೌಡ್ರು ನಾವು ನಿಮ್ಮ ಮನೆತಾಕ ಬರಬೇಕೆ ವಿನಾ ನಮ್ಮಂತ ಕೀಳು ಜನದ್ ಮನೆಗೆ ನೀವು ಬರಬಾರದು". ಅಂದರು ರಂಗಮ್ಮ
" ಇಲ್ಲ ರಂಗಮ್ಮ ನಿಮ್ಗೆ ದೊಡ್ ದೊಡ್ ಜನ ಗೊತ್ತು ನಾವು ಈ ಹಳ್ಳಿ ಚಿಕ್ಕ ಜನ ಕಣವ್ವ,ನಿಮಿಗೆ ಹಿರಿಯೂರು, ಡೆಲ್ಲಿ,ಜನ ಗೊತ್ತು ನಮಗ್ಯಾರು ಗೊತ್ತು " ಮುಕುಂದಯ್ಯ ಮಾತು ಮುಂದುವರೆಸಿದರು .
ರಂಗಮ್ಮನಿಗೆ ಈಗ ಎಲ್ಲಾ ಅರ್ಥವಾಗಿತ್ತು.

ಅಂದು ಒತ್ತಾರೆ ಹಟ್ಟಿಯಲ್ಲಿ  ಊಟ ಮಾಡಿ ಅವರವರ ಪಾಡಿಗೆ ಮೇಲ್ವರ್ಗದ ಜನರ ಹೊಲಗಳಿಗೆ ಕೆಲಸಕ್ಕೆ ಹೊರಡುವ ವೇಳೆಗೆ ಮೂರ್ನಾಲ್ಕು ಜನ ಪ್ಯಾಂಟ್, ಶರ್ಟ್ದಾರಿಗಳು ಹಟ್ಟಿಗೆ ಬಂದರು. ಎಲ್ಲರೂ ಅವರನ್ನೇ ನೋಡುತ್ತಿದ್ದಂತೆ ಪಾತಲಿಂಗಪ್ಪನ ಹತ್ತಿರ ಬಂದು ಪರಿಚಯ ಮಾಡಿಕೊಂಡರು ನಾವು ಭೀಮಸೇನೆ ಕಡೆಯಿಂದ ಬಂದಿದ್ದೇವೆ .ನಮ್ಮದು ಹಿರಿಯೂರು .ನಾವು ಬಂದ ಉದ್ದೇಶ ನಿಮ್ಮ ಹಟ್ಟಿನಲ್ಲಿ  ಮತ್ತು ನಿಮ್ಮ ಊರಲ್ಲಿ ನಮ್ಮ ಜನಕ್ಕೆ ಏನಾದರೂ ತೊಂದರೆ ಇದೆಯಾ ಅಂತ ಕೇಳೋಕೆ ಬಂದಿದೀವಿ .
ಅಂದರೆ ಜೀತ ,ಯಾರ ಮನೇಲಾದ್ರು ಸಂಬಳಕ್ಕೆ ಇರೋದು ,ನಿಮಗೆ ಬಾವಿ ನೀರು ಕೊಡದೆ ಇರೋದು ಇತ್ಯಾದಿ....
" ಅಂತದ್ದೇನೂ ಇಲ್ಲ ನಮ್ ಹಟ್ಟಿ ಹುಡುಗ್ರು ಒಂದು ಐದಾರು ಗೌಡರ ಮನೇಲಿ ಸಂಬಳಕ್ಕೆ ಅದವೆ ಅಷ್ಟೇ " ಬಾಯಿ ಬಿಟ್ಟ ಪಾತಲಿಂಗಪ್ಪ.
ಯಾರ ಮನೆಯಲ್ಲಿ ಯಾರು ಜೀತಕ್ಕೆ ಇದ್ದಾರೆ ? ಅವರ ವಿಳಾಸ ಪಡೆದು ಕೊಳ್ಳುವ ವೇಳೆಗೆ ಹಟ್ಟಿ ಜನ ಕುತೂಹಲದಿಂದ ಗುಂಪುಗೂಡಿದರು ಆಗ ಕೆಂಪು ಅಂಗಿ ಧರಿಸಿದ ಕಪ್ಪನೆಯ ದಪ್ಪನೆಯ ವ್ಯಕ್ತಿ ಮಾತನಾಡಲು ಶುರು ಮಾಡಿದರು .
"ನೋಡಿ ಬಂಧುಗಳೆ ಜೀತಪದ್ದತಿ ಅಮಾನವೀಯ ಪದ್ದತಿ ಇದನ್ನು ಕೇಂದ್ರ ಸರ್ಕಾರ  ೧೯೭೬  ನೇ ಇಸವಿಯಲ್ಲಿ ನಿಷೇಧ ಮಾಡಿ ಕಾನೂನು ಮಾಡಿದೆ .ಯಾರಾದರೂ ನಮ್ಮ ಜನಾನಾ ಜೀತಕ್ಕೆ ಇಟ್ಟುಕೊಂಡರೆ ಅವರಿಗೆ ಭಾರತೀಯ ದಂಡಸಂಹಿತೆ
೩೭೦ ರ  ಪ್ರಕಾರ ಶಿಕ್ಷೆ ಆಗುತ್ತದೆ. ಅವರನ್ನು ಜೈಲಿಗೆ ಕಳಿಸಬಹುದು."
ಜೈಲು ಅಂದ ತಕ್ಷಣ ಮೂರ್ನಾಕು ಜನ ಗುಂಪಿನಿಂದ  ಮೆಲ್ಲಗೆ ನಡೆದು ಹೊರಟರು .
"ಜೀತಕ್ಕಿಟ್ಟುಕೊಂಡ ವ್ಯಕ್ತಿಗೆ ಗರಿಷ್ಠ ಮೂರುವರ್ಷ ಜೈಲು ಮತ್ತು ಎರಡು ಸಾವಿರ ದಂಡ ವಿಧಿಸಬಹುದು. ನೀವು ಈ ವಿಷಯ ತಿಳಿದು ಯಾರನ್ನು ಜೀತಕ್ಕೆ ಇಡಬಾರದು" .
ಹೀಗೆ ಆ ವ್ಯಕ್ತಿ ಮಾತು ಮುಗಿಸುವ ವೇಳೆಗೆ ಅವರ ಮುಂದೆ ಇದ್ದವನು ಪಾತಲಿಂಗಪ್ಪ ಮಾತ್ರ.
ಜೀತಕ್ಕೆ ಇಟ್ಟುಕೊಂಡು ಎಲ್ಲಾ ಮನೆಗೆ ಭೇಟಿ ನೀಡಿದಂತೆ ಮುಕುಂದಯ್ಯ ರವರ ಮನೆಗೂ ಆ ತಂಡ ಭೇಟಿ ನೀಡಿತು
" ಏನ್ ಸಾರ್ ನಮ್ಮ ಹುಡುಗುನ್ನ ಜೀತಕ್ಕೆ  ಇಟ್ಟುಕೊಂಡಿದ್ದೀರಂತೆ ಇದು ಕಾನೂನು ಪ್ರಕಾರ ತಪ್ಪು ಅಲ್ವ ?" ಕೇಳಿದ ಹಿರಿಯೂರು ವ್ಯಕ್ತಿ.
" ನಾನೂ  ಎಸ್ಸೆಲ್ಸಿ ಓದಿದಿನಿ .ನನಗೂ ಕಾನೂನು ಗೊತ್ತು ಈಗ ಏನ್ ಆಗ್ಬೇಕು ಹೇಳ್ರಿ?"
"ಅದೇ ನಮ್ಮ ಗುರುಸಿದ್ದನ ಜೀತ ಮುಕ್ತ ಮಾಡಿ".
"ನೋಡಿ ನಮಗೇನು  ಅವನು ನಮ್ಮ ಮನೇಲಿ ಕೆಲಸ ಮಾಡ್ಲಿ ಅಂತ ಆಸೆ ಇಲ್ಲ. ಅವರಮ್ಮ ನಮ್ಮ ಹತ್ರ ಹದಿನೈದು ಸಾವ್ರ ದುಡ್ ಇಸ್ಕಂಡವ್ರೆ ಅದನ್ನು ಕೊಟ್ಟು ಅವನ್ ಕರ್ಕೊಂಡೋದರೆ ನಂದೇನು ತಕರಾರಿಲ್ಲ ,ಅವನ ಪರವಾಗಿ ಬಂದಿರೂ   ನಿಮ್ಮಲ್ಲೆ ಯಾರಾದ್ರೂ ಕೊಟ್ಟರೂ ಒಕೆ " ಅನ್ನುತ್ತಿದ್ದಂತೆ ಅವರವರೆ ಒಬ್ಬರಿಗೊಬ್ಬರು ಮುಖ ನೋಡಿಕೊಂಡು ,
" ಸರಿ ಸರ್ ಅದಷ್ಟು ಬೇಗ ಅವನನ್ನು ಜೀತ ಮುಕ್ತ ಮಾಡಿ' ಎಂದು ಹೊರಟು ಹೋದರು .

ಅಂದಿನಿಂದ ಮುಕುಂದಯ್ಯ ಕುದಿಯುತ್ತಿದ್ದರು ಇಂದು  ರಂಗಮ್ಮ ಬಂದಾಗ ಸ್ವಲ್ಪ ಖಾರವಾಗೇ ಮಾತನಾಡಿದರು.

" ಸಅ್ವಾಮಿಂದರು... ಅವರಿಗೆ ನಾವೇನೂ ಹೇಳ್ಲಿಲ್ಲ ಆ ಪಾತಲಿಂಗನೆ ಹೇಳಿದ್ದು ಇದರಲ್ಲಿ ನಂದೇನು ತಪ್ಪಿಲ್ಲ ಗೌಡ, "

ಆತು ಆ ಪಾತಲಿಂಗ, ಮತ್ತು ಹಿರಿಯೂರು ಜನದತ್ರ ದುಡ್ ತಂದು ನಿನ್ ಮಗನ್ನ ಕರ್ಕೊಂಡು ಹೋಗವ್ವ ನಿಮ್ ಸಹವಾಸ ಸಾಕು ಬಡ್ಡಿ ಬ್ಯಾಡ ಬರಿ ಅಸಲು ಸಾಕು.
ನಿನ್ ಮಗ ಒಳ್ಳೆ ನರಪೇತಲ ನಾರಾಯಣ ಇದ್ದಂಗೈದಾನೆ ಅವ್ನು ಕೆಲ್ಸ ಮಾಡೋದು ಆಟ್ರಾಗೆ ಐತೆ ,ಯಾವಾಗಲೂ ಕೆಮ್ತಿರ್ತಾನೆ ಕರ್ಕೊಂಡು ಹೋಗು ನಿನ್ ಮಗನ್ನ" ರೇಗಿದರು ಮುಕುಂದಯ್ಯ.

"ನಾನ್ ಏನ್ ತಪ್ ಮಾಡ್ದೆ ಅಂತ ನನ್ ಮ್ಯಾಲೆ ರೇಗ್ತಿಯಾ ಗೌಡ "ಎಂದು ಕಣ್ಣಲ್ಲಿ ನೀರು ಹಾಕುತ್ತಾ ಅವನ್ ಕೆಮ್ಮು ಜಾಸ್ತಿ ಆಗೈತೆ ಒಂದ್ ತಿಂಗಳಿಂದ ಗೊರ ಗೊರ ಒಳ್ಳೆ ದನ ಕೆಮ್ಮಿದಂಗೆ ಕೆಮ್ತಾನೆ ,ಅವನ್ ಆಸ್ಪತ್ರೆಗೆ ತೋರ್ಸಿ ಗೌಡ"
"ಅವರ್ಯಾರೋ ಬಂದಿದ್ರಲ್ಲ ಅವರ ಜೊತಿಗ್ ಆಸ್ಪತ್ರೆಗೆ ಕಳಸ್ಬೇಕಾಗಿತ್ತು" ಮತ್ತೆ ಕುಟುಕಿದರು ಮುಕುಂದಯ್ಯ.
"ಸಾಕ್ ಬಿಡೋ ಮುಕುಂದ ಅವಳ್ಗೇನೂ ಗೊತ್ತಿಲ್ಲ ಅಂದ್ಳಲ್ಲ ಬಿಡು ,ನಾನು ನೋಡಿದಿನಿ ಆ ಹುಡುಗ ದಿನಾ ಕೆಮ್ಮುತ್ತೆ ಪಾಪ ....ನಾಳೆ  ಅವುನ್ನ ಆಸ್ಪತ್ರೆಗೆ ತೋರ್ಸು ಅಷ್ಟೇ" ಆದೇಶ ಮಾಡಿದರು ಸರಸ್ವತಜ್ಜಿ.
ಮುಕುಂದಯ್ಯ ಮಾತನಾಡದೆ ಸುಮ್ಮನಾದರು ರಂಗಮ್ಮ ಕಣ್ಣಲ್ಲಿ ನೀರು ಹಾಕತ್ತ ಎದ್ದು ಹೊರಡಲು ಸಿದ್ದವಾಗುವಾಗ
"ಏ ರಂಗವ್ವ ತಟ್ಟೆ ತಗಾ ಅರ್ದಾಂಬ್ರ ಮುದ್ದೆ ಉಂಡೋಗು" ಅಂದರು ಯಜಮನಿ .
ತಟ್ಟೆಗೆ ಹುಡುಕಾಡಿದಳು ಈ ಹುಡ್ಗ ಅದೆಲ್ಲಿ ಇಕ್ಕೆದಾನೋ ತಟ್ಟೆನ,ಹಾ.. ಚೆಂಬು ಸಿಕ್ತು ಎಂದು ಮನದಲ್ಲೇ ಅಂದುಕೊಂಡು ಕೈತೊಳೆದುಕೊಂಡು ಊಟಕ್ಕೆ ಕುಂತರು ರಂಗಮ್ಮ
"ಅಂಗೆ ಕೈಯಾಕೆ ಕೊಡಮ್ಮ ಮುದ್ದೆನಾ"
"ಅಂಗೆ ಎಂಗ್ ಉಂಬ್ತಿಯ " ಕೇಳಿದರು ತಿಮ್ಮಕ್ಕ .
" ನೀನು ಕೊಡಮ್ಮ ಎಂದಾಗ ಮೇಲಿಂದ ತಿಮ್ಮಕ್ಕ ಮುದ್ದೆಯನ್ನು ಹಾಕಿದರು ,ರಂಗಮ್ಮ ಆ ಮುದ್ದೆಯ ಮೇಲೆ ಚಿಕ್ಕ ಗುಂಡಿ ಮಾಡಿಕೊಂಡು "ಹುಂ ...ಇದರಾಕೆ ಸಾರು ಹಾಕವ್ವ" ಎಂದಾಗ ಸ್ವಲ್ಪ ಸ್ವಲ್ಪ ಸಾರು ಹಾಕಿಸಿಕೊಂಡು ಮುದ್ದೆ ಸಾರು ತಿನ್ನಲು ಪ್ರಯತ್ನ ಪಟ್ಟರೂ ಮುದ್ದೆ ಹೊಟ್ಟೆಗೆ ಇಳಿಯಲು ಬಹು ಕಾಲ ಬೇಕಾಯಿತು.
****************************
ನೀನು ಸ್ವಲ್ಪ ಹೊತ್ತು ಹೊರಗೆ ಇರಪ್ಪ ಅಮೇಲೆ ಕರೀತೆನೆ ಎಂದು ಗುರುಸಿದ್ದನಿಗೆ ಹೇಳಿ
" ನೋಡಿ ಇವ್ರೆ ಈ ಹುಡುಗನ ಕಫ ಪರೀಕ್ಷೆ ಮಾಡಿದಾಗ ಇವನಿಗೆ ಟಿ. ಬಿ. ಅಂದರೆ ಟುಬಾರ್ಕುಲಾಸಿಸ್ ಕಾಯಿಲೆ ಇದೆ ಇದಕ್ಕೆ ಸರಿಯಾದ ಟ್ರೀಟ್ಮೆಂಟ್ ಕೊಟ್ಟರೆ ಜೀವಕ್ಕೆ ಅಪಯವಿಲ್ಲ .ಒಳ್ಳೆ ಪೌಷ್ಟಿಕಾಹಾರ ತಿಂದರೆ ಬೇಗ ಗುಣಮುಖ ಆಗಬಹುದು " ಡಾ. ಹರೀಶ್ ರವರು ಹೇಳುತ್ತಲೆ ಇದ್ದರು
" ಎಷ್ಟು ದಿನಕ್ಕೆ ಇದು ವಾಸಿಯಾಗುತ್ತೆ ಡಾಕ್ಟರ್ ? " ಪ್ರಶ್ನೆ ಮಾಡಿದರು ಮುಕುಂದಯ್ಯ.
" ನೋಡಿ ನೀವು ಸರಿಯಾದ ಸಮಯಕ್ಕೆ ಕರೆದುಕೊಂಡು ಬಂದಿದೀರಾ ಈಗ ಟ್ರೀಟ್ಮೆಂಟ್ ಶುರು ಮಾಡಿದರೆ ಮೊದಲನೇ ಕೋರ್ಸ್ ಮುಗಿಯೋದಕ್ಕೆ ೬ ರಿಂದ ೯ ತಿಂಗಳು ಆಗಬಹುದು .
ಬೇಗ ವಾಸಿಯಾಗಲಿಲ್ಲ ಅಂದರೆ ೧೮ ತಿಂಗಳ ತನಕ ಆಗಬಹುದು.ಕೆಲವೊಮ್ಮೆ ೨೪ ರಿಂದ ೨೭ ತಿಂಗಳಾದರೂ ಆಗಬಹುದು ಗುಣ ಅಗೋದಕ್ಕೆ.
" ಎಲ್ಲಾ ಎಷ್ಟು ಖರ್ಚಾಗುತ್ತದೆ ಡಾಕ್ಟರ್? "
"ಮಾತ್ರೆಗಳು ಸರ್ಕಾರದಿಂದ ಉಚಿತ ಚಿಕಿತ್ಸೆ ಉಚಿತ ಇದಕ್ಕೇನೂ ಖರ್ಚಾಗಲ್ಲ ಸರಿಯಾಗಿ ಮಾತ್ರೆ ನುಂಗಬೇಕು ನಾವ್ ಹೇಳಿದ್ದು ಮಾಡಬೇಕು ಅಷ್ಟೇ"
" ಇವನಿಂದ ಈ ಕಾಯಿಲೆ ಬೇರೆಯವರಿಗೆ ಹರಡುತ್ತಾ ಡಾಕ್ಟರ್ "
"ಇವನು ಕೆಮ್ಮುವಾಗ ಅಡ್ಡ ಬಟ್ಟೆ ಇಟ್ಟುಕೊಂಡರೆ, ತೊಂದರೆ ಇಲ್ಲ ಇಲ್ಲವಾದರೆ ಬೇರೆಯವರಿಗೆ ಹರಡಬಹುದು. ಬೇರೆ ಬಟ್ಟೆ , ಬೇರೆ ತಟ್ಟೆ ಲೋಟ ಬಳಸಿದರೆ ಒಳಿತು. ಹಾಗಾದರೆ ಟ್ರೀಟ್ಮೆಂಟ್ ಕೋರ್ಸ ಶುರು ಮಾಡಲೆ? ಎಂದು ಕೇಳಿದರು ಡಾಕ್ಟರ್ .
"ಆಗಲಿ ಮಾಡಿ ಡಾಕ್ಟರ್" ಎಂದರು ಮುಕುಂದಯ್ಯ.
ಒಂದು ಇಂಜೆಕ್ಷನ್ ಮಾಡಿ ಒಂದು ತಿಂಗಳಿಗಾಗುವಷ್ಟು ಎರಡು ಮೂರು ಬಣ್ಣದ  ರಾಶಿ ಮಾತ್ರೆ ಕೊಟ್ಟರು .ಡಾಕ್ಟರ್ ಗೆ ಮುಕುಂದಯ್ಯ ಹತ್ತು ರೂ ಕೊಡಲು ಮುಂದಾದರು "ಯಾಕೆ ದುಡ್ ಕೊಡ್ತೀರಾ? ಇದು ಸರ್ಕಾರಿ ಆಸ್ಪತ್ರೆ ನನಗೆ ಸರ್ಕಾರ ಸಂಬಳ ಕೊಡುತ್ತೆ ಬೇಡ ನಡಿರಿ ಆ ಹುಡುಗನಿಗೆ ಬ್ರೆಡ್ ಅಥವಾ ಬಿಸ್ಕತ್ತು ಕೊಡಿಸಿ" ಎಂದು ಬೇರೆ ರೋಗಿಗಳ ತಪಾಸಣೆ ಮಾಡಲು ಡಾ.ಹರೀಶ್ ಹೊರಟರು.
ಇಂತಹ ಡಾಕ್ಟರ್ ಇರ್ತಾರಾ ಎಂದು ಮುಕುಂದಯ್ಯ ಮನದಲ್ಲೇ ಅವರಿಗೆ ವಂದಿಸಿ ಆಸ್ಪತ್ರೆಯಿಂದ ಮನೆಗೆ ಬರುವವರೆಗೆ ಏನೋನೋ ಯೋಜನೆ ಯೋಚನೆ ಹಾಕುತ್ತಿದ್ದು. ಗುರುಸಿದ್ದನಿಗೆ ಈಗ ಈ ಕಾಯಿಲೆ ಬಂದಿದೆ ಇವನು ನಮ್ಮನೇಲಿ ಇದ್ದರೆ ನಮಗೆ ರೋಗ ಬಂದರೆ? ಇವನು ಕೆಲಸ ಮಾಡೋದು ಅಷ್ಟಕ್ಕಷ್ಟೆ ಸುಮ್ಮನೆ ಅವರಮ್ಮನ ಬಳಿ ದುಡ್ ಇಸ್ಕಂಡು ಇವನ ಕಳಿಸಿಬಿಡೋಣ ಎಂದು ಮನದಲ್ಲೇ ಲೆಕ್ಕಾಚಾರ ಹಾಕಿದ .

ಬೆಳಿಗ್ಗೆ  ಒಂಭತ್ತು ಗಂಟೆಗೆ ಹೋದವರು ಮಟ ಮಟ ಮಧ್ಯಾಹ್ನ  ಹೊತ್ತಾದರೂ  ಬರಲಿಲ್ಲ ಎಂದು ರಂಗಮ್ಮ ದೊಡ್ಡಪ್ಪಗಳ ಮನೆಯ ಚಪ್ಪರದ ಕೆಳಗೆ  ಗೂನು ಬೆನ್ನು ಹೊತ್ತು ಅತ್ತಿಂದಿತ್ತ ಓಡಾಡುತ್ತಿದ್ದರು.
" ಏ ಕುತ್ಕ ಬಾರೆ ರಂಗವ್ವ ಅದ್ಯಾಕಂಗೆ ಯೋಚ್ನೆ ಮಾಡ್ತಿಯಾ ? ಏನ್ ನಿನ್ ಮಗ ಒಬ್ನೆ ಹೋಗೆದಾನಾ? ಮುಕುಂದ ಹೋಗಿಲ್ವ?  ಅಲ್ಲೇನು ರಷ್ ಇತ್ತೇನೊ ಡಾಕ್ಟರ್ ಸಿಕ್ಕಿದರೊ ಇಲ್ವೋ ಬಾ ಕುತ್ಕ."  ಎಂದು ಸರಸ್ವತಜ್ಜಿ ಗದರಿದರು.

ಮಗನನ್ನು ಕನ್ನಡಕದಲ್ಲೆ ದೂರದಿಂದ ಗುರ್ತಿಸಿದ ಹೆತ್ತ ಕರುಳು ಸ್ವಲ್ಪ ಸಮಾಧಾನಗೊಂಡಿತು ಹತ್ತಿರ ಬರುತ್ತಲೆ ಏನಂತೆ ಗೌಡ? ಡಾಕ್ಟರು ಏನ್ ಅಂದ್ರು ?ಮಗನ ಮೈದಡವುತ್ತಾ ಕೇಳಿದಳು ರಂಗಮ್ಮ
"ಇವನಿಗೆ ಟಿ ಬಿ ಅಂತೆ ಕಣಮ್ಮ " ಅಂದ ತಕ್ಷಣವೇ ರಂಗಮ್ಮ ಜೋರಾಗಿ   ಅಳಲು ಶುರುಮಾಡಿದರು. "ಮೊನ್ನೆ ಹರ್ತಿಕೋಟ್ಯಾಗೆ ನಮ್ಮೋರು ಒಬ್ಬರು ಟಿ ಬಿ ಬಂದು ಸತ್ರು ನನ್ ಮಗ ಉಳಿಯಲ್ಲ ಅಯ್ಯೋ ದೇವ್ರೆ ಅವ್ರುನ್ನೂ ಕಿತ್ಗೊಂಡೆ .ಈಗ ಇವನು? ನಾನೇ ಮೊದ್ಲು ಹೋಗ್ಬೇಕಾಗಿತ್ತು ಇದನ್ನೆಲ್ಲಾ ನೊಡಕೆ ಉಳಿಸಿದ್ಯೇನಪ್ಪ ಶಿವ" ಎಂದು ಎದೆ ಬಡಿದುಕೊಂಡು ಅಳಲಾರಂಭಿಸಿದರು. ಅಮ್ಮ ಅಳುವುದ ಕಂಡು ಕೆಮ್ಮುತ್ತಲೆ ಅಳಲಾರಂಬಿಸಿದ ಗುರುಸಿದ್ದ ಇಡಿ ವಾತಾವರಣ ದುಃಖದಿಂದ ಕೂಡಿತ್ತು.

"ಯೋ ರಂಗವ್ವ ಸಾಕು ನಿಲ್ಸು ಅಳೋದನ್ನ
ಡಾಕ್ಟರ್ ಹೇಳಿದಾರೆ ಸರಿಯಾಗಿ ಮಾತ್ರೆ ತಗಂಡರೆ ಏನೂ ತೊಂದ್ರೆ ಇಲ್ವಂತೆ ತಕ ಈ ಮಾತ್ರೆ ಒಂದು ತಿಂಗಳಿಗೆ ಆಗುತ್ತೆ, ಎಂದು ಮಾತ್ರೆ ರಂಗಮ್ಮನ ಕೈಗೆ ಕೊಟ್ಟು
" ನೋಡು ರಂಗಮ್ಮ ನಿಮ್ ಕಡೇರು ಹಿರಿಯೂರುನಿಂದ ಬಂದು ಇವನ್ನ ಜೀತ ಬಿಡಿಸಿ ಅಂದರು ಅದೇ ಟೈಮ್ಗೆ ಇವನಿಗೆ ಆರೋಗ್ಯ ಬ್ಯಾರೆ ಸರಿ ಇಲ್ಲ .ಇಲ್ಲಿ ಇನ್ನೇನ್ ಕೆಲ್ಸ ಮಾಡ್ತಾನೆ  ?ನಿನ್ ಮಗನ್ನ ನಿನ್ ಮನೆಗೆ ಕರ್ಕೊಂಡು ಹೋಗು. ಮುಂದಿನ ವಾರ ನಮ್ ದುಡ್ಡು ತಂದು ಕೊಡು "
ಮತ್ತೆ ಅಳುತ್ತಾ " ಎಲೈತೆ ಸಾಮಿ ದುಡ್ಡು "
" ನಿಮ್ ದರಖಾಸ್ತ್ ಜಮೀನು ನಾಕುಎಕರೆ ಸರ್ಕಾರದವರು ಕೊಟ್ಟ ಜಮೀನು ಮಾರು ಓದೋ ರಂಗಸ್ವಾಮಿ ಕೇಳ್ತಿದ್ದ ನೋಡು "
ಎಂದಾಗ ರಂಗಮ್ಮ ಮಗನ ಆರೋಗ್ಯಕ್ಕಿಂತ ನನಗೆ ಜಮೀನು ಮುಖ್ಯ ಅಲ್ಲ ಜಮೀನು ಮಾರುವೆ ಎಂದು ನಿಶ್ಚಯ ಮಾಡಿಕೊಂಡು ಮಾತ್ರೆ ತೆಗೆದುಕೊಂಡು ಮಗನ ಕರೆದುಕೊಂಡು ಹೊರಟಳು .
ಇದನ್ನು ಕೇಳಿಸಿಕೊಂಡ ಗುರುಸಿದ್ದ ಜೀತಮುಕ್ತನಾಗುತ್ತಿರುವುದಕ್ಕೆ  ಮನದಲ್ಲೇ ಸ್ವಲ್ಪ ಸಂತಸವಾದರೂ ಇದ್ಯಾವುದೋ ಟಿ ಬಿ ಕಾಯಿಲೆ ನನಗೆ ಬರಬೇಕೆ ಎಂಬ   ದುಃಖ ಆವರಿಸಿತು.
ಗುರುಸಿದ್ದ ಕಡೆಯ ಬಾರಿ ಎಂಬಂತೆ ದೊಡ್ಡಪ್ಪಗಳ ಮನೆ, ದನದ ಅಕ್ಕೆ, ಕಲ್ಲಿನ ಬಾನಿ,ಸಪ್ಪೆ ಕತ್ತರಿಸೋ ಕತ್ತರಿ ,ದನದ ಕಣ್ಣಿಗಳು,ಇಂಡಿ ಚೀಲ, ತೆಂಗಿನ ಗರಿ ಪೊರಕೆ, ಈಚಲ ತೊಟ್ಟಿ, ಗೋಣಿಚೀಲ ,ಇವುಗಳನ್ನು ಮತ್ತೊಮ್ಮೆ ನೋಡಿ ಅಮ್ಮನ ಜೊತೆ ಹೆಜ್ಜೆ ಹಾಕಿದ .

ರಾತ್ರಿ ಮಗನಿಗೆ ಮಾತ್ರೆ ನುಂಗಿಸಿ ಅಂಗಳದಲ್ಲಿ ಮಲಗಿ ನಕ್ಷತ್ರಗಳ ನೋಡುತ್ತಾ ರಂಗಮ್ಮನ ಮನದಲ್ಲಿ ಪ್ರಶ್ನೆಗಳು ಏಳುತ್ತಿದ್ದವು. ದೇವರು ನನ್ನ ಮಗನಿಗೆ ಜೀತ ಮುಕ್ತಿ ಮಾಡಲು ಈ ಕಾಯಿಲೆ ಕೊಟ್ಟನೆ ? ಅಥವಾ ನಮಗಿರುವ  ನಾಕೆಕರೆ ಜಮೀನು ನಮ್ಮಿಂದ ಮುಕ್ತಿ ಮಾಡಲು ಈ ರೋಗ ಕೊಟ್ಟನೆ ? ಉತ್ತರ ಹೊಳೆಯದೆ ನಿದ್ರೆ ಬಾರದೆ  ಕಣ್ಣು ಬಿಟ್ಟು ಶುಭ್ರವಾದ ಆಗಸವನ್ನು ರಾತ್ರಿ ಹನ್ನೆರಡರವರೆಗೆ ನೋಡುತ್ತಲೇ ಇದ್ದಳು . ನೋಡ ನೋಡುತ್ತಲೇ ಒಂದು ನಕ್ಷತ್ರ ಕಳಚಿಬಿತ್ತು....

ಸಿಹಿಜೀವಿ
ಸಿ ಜಿ ವೆಂಕಟೇಶ್ವರ
ತುಮಕೂರು
9900925529

27 January 2022

ಆವುದು ಘನ ಆವುದು ಕಿರಿದು ಹೇಳಾ?. ವಿಮರ್ಶೆ


 

ಆವುದು ಘನ. ಆವುದು ಕಿರಿದು ಹೇಳಾ? 
ಪುಸ್ತಕ ವಿಮರ್ಶೆ.

ಆತ್ಮೀಯರು ,ಪ್ರಕಾಶಕರು, ನೂರಕ್ಕೂ ಹೆಚ್ಚು ಪುಸ್ತಕಗಳ ಲೇಖಕರಾದ
ಎಂ.ವಿ.ಶಂಕರಾನಂದ ರವರ ಆವುದು ಘನ ಆವುದು ಕಿರಿದು ಹೇಳಾ ಪುಸ್ತಕದಲ್ಲಿ ನಮಗೆ ಐವತ್ತೊಂಭತ್ತು ಸೂಫಿ ಕಥೆಗಳಿವೆ .
ಆ ಎಲ್ಲಾ ಸೂಫಿ  ಕಥೆಗಳು ಮಕ್ಕಳಿಂದ ಹಿಡಿದು ವೃದ್ಧ ರವರೆಗೂ ಎಲ್ಲರಿಗೂ ಇಷ್ಟವಾಗುತ್ತವೆ .

ಈ ಕೃತಿಯ  ಡಾ.ರವಿಕುಮಾರ್ ನೀಹ ರವರು ಸುಧೀರ್ಘವಾದ ಮುನ್ನುಡಿಯಲ್ಲಿ ಉಲ್ಲೇಖ ಮಾಡಿದಂತೆ ಈ ಸೂಫಿ ಕಥೆಗಳನ್ನು  ಓದಿದರೆ ನಮಗೊಂದು ಹೊಳಹು ಮೂಡಿ ಒಂದು ಚಿಂತನೆ ಮೊಳಕೆಯೊಡೆಯುವುದರಲ್ಲಿ ಸಂದೇಹವಿಲ್ಲ.
ಅವರ ಮಾತಿನಲ್ಲೇ ಹೇಳುವುದಾದರೆ ..
ಬದುಕಿನ ಅನಂತ ದರ್ಶನಗಳನ್ನು ಹುಡುಕ ಹೊರಟ ಕಾರಣದಿಂದ ಇಲ್ಲಿನ ಕತೆಗಳಲ್ಲಿ ಇಡೀ ಜೀವಮಂಡಲವೇ ಪಾತ್ರವಾಗಿ ನಿಂತಿವೆ. ಅವು ಪಾತ್ರಗಳು ಎನ್ನುವುದಕ್ಕಿಂತ ಈ ಲೋಕ ತಲುಪಬೇಕಾದ ಮಾನವೀಯ ದರ್ಶನದ ಕಡೆ ಈ ಕತೆಗಳು ಬೆರಳು ತೋರುತ್ತವೆ. ಆ ಕಾರಣದಿಂದ ಈ ಸಂಕಲನದ ತುಂಬಾ ನದಿ, ಮರಳುಭೂಮಿ, ನೆಲ-ಗಾಳಿ, ಮರಳುಗಾಡಿನ ನೀರು, ನೊಣ-ಆನೆ ಸಂಭಾಷಣೆ, ಪ್ರತಿಮೆ, ನಿಧಿ, ಸಾಹುಕಾರನ ಚಿನ್ನದ ನಾಣ್ಯ, ನಡುವಯಸ್ಸಿನ ಹೆಣ್ಣು, ಹಾದಿ ತಪ್ಪಿದ ಮಗ, ರಾಜ-ದರ್ವಸಿ, ಮೂರ್ಖರಾಜ, ಮಸೀದಿ-ಚಪ್ಪಲಿ, ಕಬ್ಬಿಣದ, ದೀಪದ ಕಂಭ, ಮಾಯಾಕನ್ನಡಿ, ಮಾಯಾಭಟ್ಟಲು, ಮಾರಿ ಮುಖವಾಡ, ಮಂತ್ರದಂಡ, ವಿದ್ಯೆ-ಆಹಾರ, ಕತ್ತೆಗಳು, ನಾಯಿ, ಉಡುಪು, ಮೂತ್ರ, ಮರಜೇನು, ನೆಲದೊಳಗಿನ ಮೊರೆತ ಇರುವೆ-ಚಿನ್ನದ ನಾಣ್ಯ, ಮೀನು-ವಜ್ರ, ಮೀನುಗಾರ ರೈತ, ವ್ಯಾಪಾರಿ, ಸನ್ಯಾಸಿ, ಹಕ್ಕಿ, ಬೆಕ್ಕು, ನಾಯಿ, ಹೀಗೆ ಬಹುಪಾತ್ರಗಳು ಇಲ್ಲಿಲ್ಲ ಹರಡಿಕೊಂಡಿವೆ. ಇವೆಲ್ಲವೂ ಜನಸಾಮಾನ್ಯರ ನಡುವಿನಲ್ಲೇ ಇರುವಂಥವು. ತಮ್ಮ ಸುತ್ತಲೇ ಇರುವ ಸಂಗತಿಗಳ ಜತೆಯೇ ಬದುಕಿನ ದರ್ಶನ ಮಾಡಿಸುವುದು ಈ ಕತೆಗಳ ವೈಶಿಷ್ಟ್ಯ ಆ ಕಾರಣದಿಂದ ಕೇವಲ ತಾತ್ವಿಕತೆಗಳೆಂಬ ಕಬ್ಬಿಣದ ಕಡಲೆಗಳು ಜನರನ್ನು ತಲುಪಲು ಏದುಸಿರುಬಿಡುತ್ತಿವೆ. ಜನರ ನಡುವಿನಿಂದಲೇ ಹುಟ್ಟಿದವು ಸಹಜ ಉಸಿರಾಟದಿಂದ ಓಡಾಡಿಕೊಂಡಿರುತ್ತವೆ ಎಂಬುದನ್ನು ಈ ಕತೆಗಳು ಅಂತರ್ಯದಲ್ಲಿ ಧರಿಸಿರುವ ನೆಲೆಗಳು.
ಶಂಕರಾನಂದ ರವರು    ಇಡೀ ಸೂಫಿಯನ್ನು ನಮ್ಮ ಶರಣ ಪರಂಪರೆಗೆ ಅನ್ವಯಿಸಿರುವುದು ವಿಶೇಷವಾಗಿದೆ. ಮತ್ತು ಸರಿಯಾಗಿಯೇ ಇದೆ. ಇಲ್ಲಿನ ಪ್ರತಿ ಕತೆಗಳಿಗೂ ಶರಣರ ವಚನಗಳ ಸಾಲನ್ನೇ ಶೀರ್ಷಿಕೆಯನ್ನಾಗಿ ಇಟ್ಟಿರುವುದು ಅಧ್ಯಯನಕ್ಕೆ ಹೊಸ ತೋರುಗಲ್ಲಾಗಿದೆ ಎಂದರೆ ತಪ್ಪಾಗಲಾರದು.

ಈ ಕೃತಿಯ ಎಲ್ಲಾ ಕಥೆಗಳು ನನಗೆ ಇಷ್ಟವಾದರೂ ಕೆಲವು ನನ್ನನ್ನು ಬಹಳ ಕಾಡಿದವು ಇನ್ನೂ ಕೆಲವನ್ನು ಪುನಃ ಮನನ ಮಾಡಿಕೊಳ್ಳುತ್ತಿರುವೆ.

"ಅರ್ಥದ ಮೇಲಣ ಆಶೆ " ಎಂಬ ಕಥೆಯಲ್ಲಿ
ಕುರುಡರಾದವರು  ಆನೆಯ ಆಕಾರದ ಬಗೆಗಾಗಲೀ ಗಾತ್ರದ ಬಗೆಗಾಗಲಿ
ಯಾವ ಕಲ್ಪನೆಯೂ ಇರದೇ ಆನೆಯನ್ನು ಸಮೀಪಿಸಿ ಕೈಗೆ ತಾಕಿದ ಅದರ ಬೃಹತ್ ದೇಹದ ಅಂಗಾಂಗಗಳ ಮೇಲೆ ಕೈ ಆಡಿಸುತ್ತಾ ಆನೆಯ ಬಗ್ಗೆ ಮಾಹಿತಿಯ ಪಡೆದುಕೊಳ್ಳುವ ಪ್ರಯತ್ನದಲ್ಲಿ ನಿರತರಾದ ಬಗ್ಗೆ ಹೇಳುತ್ತಾ
ತಾವು ಬಿಡಿಬಿಡಿಯಾಗಿ ಮುಟ್ಟಿದ ಅವಯವವೇ ಆನೆ ಎಂಬುದಾಗಿ ಕಲ್ಪಿಸಿಕೊಳ್ಳಲು ಅವರಿಗೆ ಸಾಧ್ಯವಾಯಿತೇ ಹೊರತು ಆ ಎಲ್ಲಾ ಅವಯವಗಳ ಸಮಗ್ರತೆಯಲ್ಲಿ ಮಾತ್ರವೇ ಆನೆ  ಎಂಬ ಪರಿಕಲ್ಪನೆ  ಇರಲು ಸಾಧ್ಯ ಎಂಬುದನ್ನು ಕಲ್ಪಿಸಿಕೊಳ್ಳುವುದೂ ಅವರಿಗೆ ಸಾಧ್ಯವಿರಲಿಲ್ಲ.

ಜ್ಞಾನವನ್ನು ಅದರ ಅಖಂಡತೆಯಲ್ಲಿ ಕಂಡುಕೊಳ್ಳಲಾರದವರು. ನಾವೂ ಸಹ ಕುರುಡರಂತೆಯೇ ಅಪೂರ್ಣತೆಯನ್ನೇ ಪೂರ್ಣತೆ ಎಂಬ ಭ್ರಮೆಯಲ್ಲಿ ಬದುಕುತ್ತೇವೆ .
ನಮ್ಮ ಅಭಿಪ್ರಾಯಗಳು ಬಿಡಿಯಾಗಿ ಸರಿ,ಒಟ್ಟಾಗಿ ತಪ್ಪು ಆದರೂ ಕೆಲವೊಮ್ಮೆ ನಮ್ಮದೇ ಸರಿ ಎಂದು ವಿತಂಡವಾದ ಮಾಡುವುದನ್ನು ನಿಲ್ಲಿಸುವುದಿಲ್ಲ.

"ಅವಧಿ ಅಳಿಯಿತ್ತು" ಎಂಬ ಕಥೆಯು ಚಿಕ್ಕದಾದರೂ  ಬಹುದೊಡ್ಡ ಸಂದೇಶ ನೀಡಿದೆ.
ತನ್ನೆಲ್ಲ ಸಮಸ್ಯೆಗಳು ಬಗೆಹರಿದರೆ ಮನೆಯನ್ನು ಮಾರಿ ಅದರಿಂದ ಬರುವ ಹಣವನ್ನೆಲ್ಲಾ ಬಡಬಗ್ಗರಿಗೆ ದಾನಮಾಡುವುದಾಗಿ ಹರಕೆ ಹೊತ್ತುಕೊಂಡ.
ಸ್ವಲ್ಪ ದಿನಗಳು ಕಳೆಯುವಷ್ಟರಲ್ಲಿ ಅವನ ಸಮಸ್ಯೆಗಳು ಬಗೆಹರಿದವು. ಹರಕೆಯಂತೆ
ನಡೆದುಕೊಳ್ಳಲೇಬೇಕಾದ ವೇಳೆ ಬಂದೊದಗಿತು. ಆದರೆ ಮನೆಯ ಮಾರಾಟದಿಂದ

ಬರುವ ಅಪಾರ ಹಣವನ್ನು ದಾನಮಾಡುವುದೆಂದರೆ ಹೇಗೆ ಎಂಬ ಚಿಂತೆ ಕಾಡತೊಡಗಿತು.
ಒಂದು ಉಪಾಯವನ್ನು ಹುಡುಕಿ ತೆಗೆದ. ಮನೆಗೆ ಒಂದು ಬೆಳ್ಳಿ ನಾಣ್ಯದ ದರವನ್ನು ನಿಗದಿಪಡಿಸಿದ. ಆದರೆ ಮನೆಕೊಳ್ಳುವವನು ಅದರ ಜೊತೆಗೆ ಒಂದು ಬೆಕ್ಕನ್ನು ಕೊಳ್ಳಬೇಕೆಂಬ ಷರತ್ತು ಹಾಕಿದ. ಬೆಕ್ಕಿನ ಬೆಲೆ ಹತ್ತು
ಸಾವಿರ ಬೆಳ್ಳಿ ನಾಣ್ಯಗಳೆಂದು ನಿಗದಿಪಡಿಸಿದ. ಮನೆ ಮತ್ತು ಬೆಕ್ಕು ಷರತ್ತಿನಂತೆ ಜಂಟಿಯಾಗಿ ಮಾರಾಟವಾದುವು. ಆದರೆ ಹರಕೆ ಹೊತ್ತಿದ್ದ ವ್ಯಕ್ತಿಯು ಮನೆಯ ಲೆಕ್ಕದ ಒಂದು ಬೆಳ್ಳಿ ನಾಣ್ಯವನ್ನು ಬಡವನಿಗೆ ದಾನಮಾಡಿ ಬೆಕ್ಕಿನ ಲೆಕ್ಕದ ಹತ್ತು ಸಾವಿರ ಬೆಳ್ಳಿ ನಾಣ್ಯಗಳನ್ನು ತಿಜೋರಿಗೆ ತುಂಬಿಕೊಂಡ. ಹರಕೆಯೇನೋ ತೀರಿದಂತಾಯಿತು. ಆದರೆ ಸ್ವಾರ್ಥದ ದೃಷ್ಟಿಯಲ್ಲಿ ಅದನ್ನು ವ್ಯಾಖ್ಯಾನಿಸಿಕೊಂಡು ಅದರಲ್ಲಿಯೂ ಲಾಭಮಾಡಿಕೊಂಡ.  ಇಂತಹ  ಮನೋಭಾವನೆ ಇರುವ ಜನರು ಸಂಕಟ ಬಂದಾಗ ವೆಂಕಟರಮಣ ಎಂಬುದನ್ನೇ ಮುಂದುವರೆಸುತ್ತಾರೆ.

"ಆವುದು ಘನ, ಆವುದು ಕಿರಿದು ಹೇಳಾ?"ಎಂಬ ಶೀರ್ಷಿಕಾ ಕಥೆಯಲ್ಲಿ ಬರುವ ನೀತಿಯು ಸಾರ್ವಕಾಲಿಕ .ಯಾರು ಭಗವಂತನ ಕರುಣೆಯನ್ನು ಉಪೇಕ್ಷಿಸಿ ಹೆಣ್ಣು, ಹೊನ್ನು, ಮಣ್ಣಿಗಾಗಿ ಆಸೆ ಪಡುತ್ತಾರೋ ಅಂತವರಿಗೆ  ದುರ್ಗತಿ ತಪ್ಪಿದ್ದಲ್ಲ .

ಇತಿಹಾಸ ಲೇಖಕರು ಆತ್ಮೀಯರೂ ಸಂಘಟಕರೂ ಆದ ಎಂ ಎಚ್ ನಾಗಾರಾಜು ರವರು ಬೆನ್ನುಡಿಯಲ್ಲಿ ಹೇಳಿದಂತೆ  ಓದುಗರ  ಮನಸ್ಸನ್ನು ಸಮೃದ್ಧಗೊಳಿಸಿರುವ ಶಂಕರಾನಂದ ರವರಿಗೆ ಸಾಹಿತ್ಯದ ರಚನೆ ಮತ್ತು ಭಾಷಾಂತರದ ಕಲೆ  ಸಿದ್ಧಿಸಿದೆ. ಯಾವುದೇ ಅಡೆತಡೆ ಇಲ್ಲದೆ ನೀರು ಕುಡಿದಷ್ಟೇ  ಸುಲಭವಾಗಿ ಲೀಲಾಜಾಲವಾಗಿ ಭಾಷೆ ಬಳಸುತ್ತಾರೆ. ಮಕ್ಕಳು ಮಾತ್ರವಲ್ಲ ಎಲ್ಲಾ ವಯೋಮಾನದ ಓದುಗರಿಗೂ ಇಲ್ಲಿನ ಕಥೆಗಳು ಋಷಿ ಕೊಡುತ್ತವೆ. ಮುದಗೊಳಿಸುತ್ತವೆ. ಅವರ ಜ್ಞಾನದ ದಿಗಂತವನ್ನು ವಿಸ್ತರಿಸುತ್ತವೆ.ಇದು ನಿಜವೂ ಹೌದು.
ಆದ್ದರಿಂದ ನೀವೂ ಸಹ ಒಮ್ಮೆ ಆವುದು ಘನ ಆವುದು ಕಿರಿದು ಹೇಳಾ? ಪುಸ್ತಕ ಓದಲೇಬೇಕು 

ಪುಸ್ತಕ: ಆವುದು ಘನ ಆವುದು ಕಿರಿದು ಹೇಳಾ?
ಪ್ರಕಾಶನ: ಕಲ್ಪತರು ಪ್ರಕಾಶನ
ವರ್ಷ: 2021
ಬೆಲೆ: 165

ಸಿಹಿಜೀವಿ
ಸಿ ಜಿ ವೆಂಕಟೇಶ್ವರ
ತುಮಕೂರು
9900925529.

26 January 2022

ಆಡಿನ ಆಟ.ಶಿಶುಗೀತೆ.


 #ಚಿತ್ರಕವನ


#ಮಕ್ಕಳಕವನ



#ಆಡಿನ_ಆಟ




ಆಡುತ ಬಂದು ಮೋಟಾರು

ಮೇಲೆ ಕುಳಿತಿದೆ ನೋಡು ಆಡೊಂದು

ಹಾಡುತ ಬಂದ ಬಾಲಕ ನೋಡಿ

ಅಚ್ಚರಿ ಪಟ್ಟನು ಕೇಳಿಂದು .


ಕೇಳಿದ  ಬಾಲಕ ಇದು

ನಮ್ಮಯ ವಾಹನ ಮೇಲೇಳು 

ಒಂದಿನ ಕುಳಿತಿಹೆ ಸುಮ್ಮನಿದ್ದು ಬಿಡು

ನೋಯುತಿವೆ ನನ್ನ ಕಾಲ್ಗಳು.


ಅಪ್ಪನ ಜೊತೆಗೆ ಶಾಲೆಗೆ ಹೋಗುವೆ

ಜಾಗ ಬಿಡು ಈಗಲೆ

ನಮ್ಮಮ್ಮ ಬರೋವರೆಗೂ ಏಳಲ್ಲ

ಸುಮ್ಮನೆ ನೀನು ಕಾಯಲೆ.


ಉಪಾಯ ಮಾಡಿ ಸೊಪ್ಪನು 

ತಂದು ಹಿಡಿದನು  ಬಾಲಕನು

ಸ್ಕೂಟರ್ ಇಳಿದೇ ಬಿಟ್ಟಿತು

ಆಡು ತಿನ್ನಲು ಸೊಪ್ಪನ್ನು .


ಹೊಟ್ಟೆಗೆ ಇಂಧನ ಬೀಳಲು

ಆಡು ಹೊರಟಿತು ಹೊಲದ ಕಡೆ 

ಅಪ್ಪನ ಕರೆದ ಬಾಲಕ ಸ್ಕೂಟರ್ 

ಏರಿ ಹೊರಟ ಶಾಲೆ ಕಡೆ .



#ಸಿಹಿಜೀವಿ 

ಸಿ ಜಿ ವೆಂಕಟೇಶ್ವರ

ತುಮಕೂರು

ನಮ್ಮ ಗಣ ತಂತ್ರ ವ್ಯವಸ್ಥೆಯನ್ನು ಬಲಪಡಿಸೋಣ. ಲೇಖನ


 *ಭಾರತದ ೭೪ ನೇ ಗಣರಾಜ್ಯೋತ್ಸವದ ಶುಭಾಶಯಗಳು*💐🌹🌷.


ಆತ್ಮೀಯರೇ...


ನಮ್ಮದು ಪ್ರಪಂಚದಲ್ಲಿಯೇ ದೊಡ್ಡ ಪ್ರಜಾಪ್ರಭುತ್ವ ಗಣತಂತ್ರ ಎಂಬುದಕ್ಕೆ ಭಾರತೀಯರಾದ ನಾವು ಹೆಮ್ಮೆ ಪಡೋಣ. 

ವಿವಿಧ ಭಾಷೆ , ಧರ್ಮ ,ಸಂಸ್ಕೃತಿ ಪರಂಪರೆಗಳನ್ನು ಪ್ರೊತ್ಸಾಹಿಸುತ್ತಾ ಬೆಳೆಸುತ್ತಾ ,ಬೆಳೆಯುತ್ತಾ ಬಂದಿರುವ ನಮ್ಮ ಗಣತಂತ್ರವನ್ನು  ನೋಡಿ ಜಗತ್ತು ಬೆರಗಾಗಿದೆ. 


ಫೆಡರಲ್ ಮತ್ತು ಯುನಿಟರಿ ಎರಡೂ ಸರ್ಕಾರಗಳ ಒಳ್ಳೆಯ ಅಂಶಗಳನ್ನು ಹದವಾಗಿ ಬೆರೆಸಿ ಆಡಳಿತಕ್ಕೆ ಸಜ್ಜುಗೊಳಿಸಿದ ಸಂವಿಧಾನಕಾರರ ಚಾಕಚಕ್ಯತೆ ಮೆಚ್ಚಲೇಬೇಕು. 

ಕೇಂದ್ರ ಮತ್ತು ರಾಜ್ಯಸರ್ಕಾರಗಳ ಅಧಿಕಾರಗಳನ್ನು ಒಕ್ಕೂಟ ವ್ಯವಸ್ಥೆಯ ಮಾರ್ಗಸೂಚಿಯಾಗಿ ಹಂಚಲಾಗಿದೆ .ಕೇಂದ್ರ ಪಟ್ಟಿ, ರಾಜ್ಯ ಪಟ್ಟಿ ,ಸಮವರ್ತಿ ಪಟ್ಟಿ ಹೀಗೆ ಪಟ್ಟಿ ಮಾಡಿ ನಮ್ಮ ಆಡಳಿತಕ್ಕೆ ದಿಕ್ಸೂಚಿ ನೀಡಲಾಗಿದೆ. ಅದರೂ ಕೆಲವೊಮ್ಮೆ ವಿತಂಡವಾದ , ರಾಜಕೀಯ ಮೇಲಾಟ ಮುಂತಾದ ಕಾರಣದಿಂದಾಗಿ ಕೇಂದ್ರ ಮತ್ತು ಸ್ಥಳೀಯ ಸರ್ಕಾರಗಳ ನಡುವೆ ತಿಕ್ಕಾಟ ಉಂಟಾಗಿ ನ್ಯಾಯಾಲಯವು ಮಧ್ಯ ಪ್ರವೇಶಿಸಿ ಸರಿಪಡಿಸಿರುವುದನ್ನು ಕಾಣುತ್ತೇವೆ.


ಇತ್ತೀಚಿನ ದಿನಗಳಲ್ಲಿ ಅನವಶ್ಯಕವಾಗಿ ಪ್ರತ್ಯೇಕವಾದ, ಸಂಕುಚಿತ ಮನೋಭಾವ ಬೆಳೆಸುವುದು, ಜನರಲ್ಲಿ ಪರಸ್ಪರ ದ್ವೇಷದ ಬಾವನೆಗಳ ಕೆರಳಿಸುವುದನ್ನು  ಅಲ್ಲಲ್ಲಿ ಕಾಣುತ್ತಿರುವುದು ದುರದೃಷ್ಟಕರ .ನಮ್ಮೆಲ್ಲ ವೈಯಕ್ತಿಕ ಹಿತಾಸಕ್ತಿಗಿಂತ" ಮಾತೆಯೇ ಮೇಲು" ಎಂಬ ಭಾವನಾತ್ಮಕ ಅಂಶ ನಮ್ಮನ್ನು ಬೆಸೆಯಬೇಕಿದೆ .ಇಲ್ಲದಿದ್ದರೆ ನಮ್ಮ ದೇಶ ಈಗ ಗಳಿಸಿರುವ ಹೆಸರಿಗೆ ಮಸಿ ಬಳಿಯಲು ವಿದೇಶಗಳಲ್ಲಿ ಕೆಲವು ಕಾದು ಕುಳಿತಿವೆ.  ಭಾರತೀಯರಾದ ನಾವು ಇದಕ್ಕೆ ಆಸ್ಪದ ನೀಡಬಾರದು  ೭೩ ನೇ ಗಣರಾಜ್ಯೋತ್ಸವ ಅಚರಿಸುವ ಈ ಶುಭಸಂದರ್ಭದಲ್ಲಿ ಜನನೀ ಜನ್ಮ ಭೂಮಿಶ್ಚ ಸ್ವರ್ಗಾದಪಿ ಗರೀಯಸಿ ಎಂಬಂತೆ ನಮ್ಮ ಭರತಖಂಡ ನಮಗೆ ಸ್ವರ್ಗಕ್ಕಿಂತಲೂ ಮಿಗಿಲು ಭಾರತಮಾತೆಗೆ ಸದಾ ನಮಿಸುತ್ತಾ ಒಗ್ಗಟ್ಟಾಗಿ ಬಾಳೋಣ. ನಮ್ಮ ಗಣತಂತ್ರವನ್ನು ಬಲಪಡಿಸೋಣ.



*ಸಿಹಿಜೀವಿ*

ಸಿ ಜಿ ವೆಂಕಟೇಶ್ವರ

ತುಮಕೂರು.

25 January 2022

ಮೀನಾಕ್ಷಿಯ ಸೌಗಂಧ. ಪುಸ್ತಕ ವಿಮರ್ಶೆ.


 




ಮೀನಾಕ್ಷಿಯ ಸೌಗಂಧ.

ವಿಮರ್ಶೆ 


ಬಿ .ಜಿ.ಎಲ್. ಸ್ವಾಮಿ ಶತಮಾನೋತ್ಸವ ವಿಶೇಷವಾದ  ಮೀನಾಕ್ಷಿಯ ಸೌಗಂಧ ಎಂಬ   ಬಿಡಿ ಲೇಖನಗಳು ಓದುಗರಿಗೆ ರಸದೌತಣ ನೀಡುತ್ತವೆ.


ಸ್ವಾಮಿ ಎಂದೇ ಹೆಚ್ಚು ಪರಿಚಿತರಾದ ಡಾ. ಬೆಂಗಳೂರು ಗುಂಡಪ್ಪ ಲಕ್ಷ್ಮೀನಾರಾಯಣ ರವರು ಅಂತರರಾಷ್ಟ್ರೀಯ ಖ್ಯಾತಿಯ ಸಸ್ಯವಿಜ್ಞಾನಿ, ಹೆಸರಾಂತ ಲೇಖಕರಾದ ಡಿ ವಿ ಜಿ ರವರ  ಸುಪುತ್ರರು. ೧೯೧೮ರ ಫೆಬ್ರವರಿ ಜನಿಸಿದ ಸ್ವಾಮಿಯವರು ಸಸ್ಯಶಾಸ್ತ್ರದಲ್ಲಿ ಡಾಕ್ಟರೇಟ್ ಪದವಿಯನ್ನು ಪಡೆದಿದ್ದರು. ೧೯೫೩ರಿಂದ ಚೆನ್ನೈನ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ ಅವರು ಕಾಲೇಜಿನ ಪ್ರಾಂಶುಪಾಲರೂ ಆಗಿದ್ದರು. ಕೆಲವಾರು ಸಸ್ಯಗುಂಪುಗಳನ್ನು ಅನ್ವೇಷಿಸಿದ್ದು, ಅವುಗಳಲ್ಲಿ ಮಹೇಶ್ವರಿ, ಸರ್ಕಂಡ್ರಾ ಇರಿಂಗ್‌ವೈಲಿಯ್ಯ ಸೇರಿವೆ. ಗುರುಗಳ ಹೆಸರುಗಳನ್ನೇ ಗುಂಪುಗಳಿಗೆ ಇರಿಸಿದ್ದಾರೆ. ತಿರುಚರಾಪಳ್ಳಿಯಲ್ಲಿನ ಭಾರತಿದಾಸನ್ ವಿಶ್ವವಿದ್ಯಾಲಯದಲ್ಲಿ ಡಾ. ಸ್ವಾಮಿಯವರ ಹೆಸರಿನ ಗೌರವಾರ್ಥ ಸ್ವಾಮಿ ಬಟಾನಿಕಲ್ ಗಾರ್ಡನ್  ಸ್ಥಾಪಿತಗೊಂಡಿದೆ.


ಸ್ವಾಮಿಯವರ ಬರವಣಿಗೆಯ ವೈವಿಧ್ಯಮಯವಾದುದು. ಅವರ ವಿಷಯ ನಿರೂಪಣೆಯಂತೂ ಮಗ್ಗುಲುಗಳನ್ನು ಒಟ್ಟಿಗೆ ಕಾಣಿಸಿ ಆಸಕ್ತಿ ಹುಟ್ಟಿಸುವಂತಹುದು. ಸೊಗಸಾದ ಹಾಸ್ಯದೊಂದಿಗೆ ಜನಸಾಮಾನ್ಯರಿಗೂ ಅರ್ಥವಾಗುವಂತೆ ಕುರಿತು ತಿಳಿಸಿಕೊಡುವ ಪ್ರತಿಭೆ ಜೊತೆ ಜೊತೆಗೆ ಕಾವ್ಯಗಳಿಂದ ಉಲ್ಲೇಖಗಳನ್ನು ನೀಡುವುದು ಇನ್ನೊಂದು ಸೊಬಗು.


ಬಿ.ಜಿ.ಎಲ್. ಸ್ವಾಮಿಯವರ ಲೇಖನಿಯಿಂದ ಹರಿದುಬಂದಿರುವ ಕೃತಿಗಳಲ್ಲಿ ಕೆಲವೆಂದರೆ: ಹೊನ್ನು, ಕಾಲೇಜು ರಂಗ, ಕಾಲೇಜು ತರಂಗ, ಪ್ರಾಧ್ಯಾಪಕನ ಪೀಠದಲ್ಲಿ, ತಮಿಳು ತಲೆಗಳ ನಡುವೆ , ದಕ್ಷಿಣ ಅಮೆರಿಕ, ಅಮೆರಿಕದಲ್ಲಿ ಬೃಹದಾರಣ್ಯಕ, ಮೊದಲಾದವು. ಅವರು ತಮಿಳಿನಿಂದಲೂ ಕನ್ನಡಕ್ಕೆ ಕೃತಿಗಳನ್ನು ತಂದಿದ್ದಾರೆ.


ಅವರ 'ಹಸುರು ಹೊನ್ನು' ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಸಂದಿದೆ.


ಪ್ರಸ್ತುತ ಪುಸ್ತಕದ

ಆರ್ಜಿತ ಗುಣಗಳೂ ಅನುವಂಶೀಯತೆಯೂ ಎಂಬ ಲೇಖನದಲ್ಲಿ ನಮ್ಮ ಅನುವಂಶೀಯತೆ ಮತ್ತು ಪರಿಸರ ಹೇಗೆ ನಮ್ಮ ವ್ಯಕ್ತಿತ್ವ ರೂಪಿಸಬಹುದು ಎಂಬುದನ್ನು ಸಾಧಾರವಾಗಿ ವಿಶ್ಲೇಷಣೆ ಮಾಡಿರುವರು.


 ಲಿಂಗಜಾತಿಗಳ ಪರಸ್ಪರ ಪರಿಮಾಣ,ಜೀವವಿಜ್ಞಾನದ ತಿಲೋತ್ತಮೆ,ಆದರ್ಶ ಗೆಳೆತನ,ಒಡಲೆರಡು ಆಸುವೊಂದು

,ಅಂತರ ಬುಡಕಟ್ಟಿನವರ ಮದುವೆಗಳಾದಾಗ,“ಕಾಮದಿಂ ಕಡು ಕುರುಡರಾದವರು...",ಪ್ರಣಯ ಪ್ರಸಂಗ,ಪ್ಲಾಟಿಪಸ್,ಜೇಡನ ಚರಕ ,ಹಸಿವಿನ ಬಳ್ಳಿ,ಕದಂಬ, ಪಂಚಾವತಾರ,ಈ ಪರಿಯ ಪ್ರಭೆ ಮುಂತಾದ ಲೇಖನಗಳು ನಮ್ಮನ್ನು ಚಿಂತನೆಗೆ ಹಚ್ಚುತ್ತವೆ.


ಚರಿತ್ರೆಗೆ ಸಂಬಂಧಿಸಿದ ಲೇಖನಗಳಾದ 

ಕೊಂಗುದೇಶದ ರಾಜರು,

ಕೊಡುಂದಾಳೂರಿನಲ್ಲಿ ಕನ್ನಡ, ಎಂಬ ಬರೆಹಗಳು ಇತಿಹಾಸದ ಮೇಲೆ ಹೊಸ ಬೆಳಕು ಚೆಲ್ಲುತ್ತವೆ.


ಸಾಹಿತ್ಯ ಸಂಬಂಧಿತ ಲೇಖನಗಳಾದ 

ರಾಯರ ಆದ್ಯಂಜನ,ಮೀನಾಕ್ಷಿಯ ಸೌಗಂಧ, ಜೇಡರ ದಾಸಿಮಯ್ಯನ ಮತ ವಿಚಾರ,ಕಲಾವಿದ ಕೆ. ವೆಂಕಟಪ್ಪ ಮತ್ತು ವೆಂಕಟಪ್ಪ ಚಿತ್ರಶಾಲೆ, ಪುರಂದರದಾಸರು ಮತ್ತು ಬಿ.ವಿ. ಕಾರಂತರು ಮುಂತದವುಗಳಲ್ಲಿ ಸ್ಚಾಮಿ ರವರು ಬಳಸಿದ ಭಾಷೆ ಉತ್ಕೃಷ್ಟವಾದುದು.ನಿಮಗೆ ಆ ಅನುಭವವಾಗಬೇಕಾದರೆ ನೀವು ಒಮ್ಮೆ ಮೀನಾಕ್ಷಿಯ ಸೌಗಂಧ ಆಘ್ರಾಣಿಸಲೇಬೇಕು.


ಸಿಹಿಜೀವಿ

ಸಿ ಜಿ ವೆಂಕಟೇಶ್ವರ


23 January 2022

ಸೆಲೆಬ್ರಿಟಿಗಳೊಂದಿಗೆ ಸಿಹಿಜೀವಿ.ಲೇಖನ ಆತ್ಮ ಕಥೆ ೨೬


 


ಸೆಲೆಬ್ರಿಟಿಗಳೊಂದಿಗೆ ಸಿಹಿಜೀವಿ

ನಾನು ಮೈಸೂರಿನಲ್ಲಿ ಬಿ ಎಡ್ ಮಾಡುವಾಗ ನನ್ನ ಅಣ್ಣನ ಜೊತೆ ದಸರಾ ವಸ್ತು ಪ್ರದರ್ಶನ ವೀಕ್ಷಿಸಲು ಹೋದಾಗ ನಟ ರಮೇಶ್ ಅವರನ್ನು ನೋಡಿದ್ದೆ ಬಹಳ ಸರಳ ನಡೆ ನುಡಿಯ ರಮೇಶ್ ರವರು ನಮ್ಮನ್ನು ಚೆನ್ನಾಗಿ ಮಾತನಾಡಿಸಿದರು. ಆದರೆ ಅಂದು ನಮ್ಮ ಬಳಿ ಕ್ಯಾಮರಾ ಇರಲಿಲ್ಲ ಅವರೊಂದಿಗೆ ಫೋಟೋ ತೆಗೆಸಿಕೊಳ್ಳಲು ಆಗಲಿಲ್ಲ .

ಗೌರಿಬಿದನೂರಿನ SSEA ಸರ್ಕಾರಿ ಪ್ರೌಢಶಾಲೆಯಲ್ಲಿ ನಾನು ಕೆಲಸ ಮಾಡುವಾಗ ಮಕ್ಕಳನ್ನು ಮೂರು ದಿನದ ಪ್ರವಾಸಕ್ಕೆ ಕರೆದುಕೊಂಡು ಹೋದಾಗ ಕೊಲ್ಲೂರಿನಲ್ಲಿ ಅಚಾನಕ್ ಆಗಿ ದರ್ಶನ್ ಅವರ ಭೇಟಿ ಮಾಡಿದೆ.ಅವರು ನಗುತ್ತಲೆ ನನ್ನ ಕೈ ಕುಲುಕಿದರು .ಆದರೆ ಅವರ ಬೌನ್ಸರ್ ಗಳು ಅನವಶ್ಯಕವಾಗಿ ಅಭಿಮಾನಿಗಳನ್ನು ತಳ್ಳುತ್ತಿದ್ದುದು ಯಾಕೋ ನನಗೆ ಇಷ್ಟ ಆಗಲಿಲ್ಲ.

ಅಂತರರಾಷ್ಟ್ರೀಯ ಛಾಯಾಗ್ರಾಹಕರಾದ
ನಮ್ಮ ತಿಪ್ಪೇಸ್ವಾಮಣ್ಣ  ರವರ ಮಗನಾದ ಅರುಣ್ ರವರ ಮದುವೆಗೆ ಹೋದಾಗ ಬೆಂಗಳೂರಿನಲ್ಲಿ ಪ್ರಣಯರಾಜ ಶ್ರೀನಾಥ್ ರವರನ್ನು ನಮ್ಮ ಕುಟುಂಬ ಸಮೇತ ಭೇಟಿ ಮಾಡಿ ಬಹಳ ಹೊತ್ತು  ಮಾತನಾಡಿದೆವು .ನಮ್ಮ ತಿಪ್ಪೇಸ್ವಾಮಣ್ಣ ಶ್ರೀನಾಥ್ ರವರಿಗೆ " ನಮ್ಮ ಹುಡುಗ ಕಥೆ ಕವನ ಬರೀತಾನೆ ಎಂದು ಪರಿಚಯ ಮಾಡಿಸಿದಾಗ ಶ್ರೀನಾಥ್ ರವರು ಮೆಚ್ಚುಗೆ ವ್ಯಕ್ತಪಡಿಸಿ ಗುಡ್ , ಬರೀತಾ ಇರಿ ಎಂದಾಗ ಸ್ವರ್ಗಕ್ಕೆ ಮೂರೇ ಗೇಣು.

ಗೌರಿಬಿದನೂರಿನ ಒಂದು ಫಾರ್ಮ್ ಹೌಸ್ ನಲ್ಲಿ ಶಿವರಾಜ್ ಕುಮಾರ್ ಅಭಿನಯದ ಒಂದು ಚಿತ್ರದ ಶೂಟಿಂಗ್ ಸಮಯದಲ್ಲಿ ಗೆಳೆಯ ಅಂಜನಪ್ಪ ಮತ್ತು ನಾನು ಹೋಗಿ ಶಿವರಾಜ್ ಕುಮಾರ್ ರವರನ್ನು ಭೇಟಿ ಮಾಡಿ ಪೋಟೋ ತೆಗೆಸಿಕೊಂಡೆವು ಶಿವಣ್ಣನ ಸರಳತೆ ಇಷ್ಟವಾಯಿತು.

ಇನ್ನೂ ಕವಿಗಳಾದ ದೊಡ್ಡರಂಗೇಗೌಡ ರವರು, ದಿವಂಗತ ಸಿದ್ದಲಿಂಗಯ್ಯ ಅವರು, ಬಿ ಆರ್ ಲಕ್ಷ್ಮಣ ರಾವ್ ರವರು, ಚಂಪಾರವರು ಜರಗನಳ್ಳಿ ಶಿವಶಂಕರ್ ರವರು ಡಾ. ಹೆಚ್ ಎಲ್ ಪುಷ್ಷ ರವರು, ಗೋರೂರು ಚನ್ನಬಸಪ್ಪ ರವರು ಮುಂತಾದ ಕವಿಗಳನ್ನು ಭೇಟಿಯಾಗಿ ಅವರೊಂದಿಗೆ ಮಾತನಾಡಿರುವುದು ನನ್ನ ಸೌಭಾಗ್ಯ.

ನನ್ನ ನೆಚ್ಚಿನ ನಟರಾದ ರೆಬೆಲ್ ಸ್ಟಾರ್ ಅಂಬರೀಶ್ ರವರನ್ನು ಭೇಟಿ ಮಾಡಲು ಆಗಲಿಲ್ಲ ಎಂಬ ಕೊರಗು ಇದ್ದೇ ಇದೆ.ಆದರೂ ಅವರ ಚಿತ್ರಗಳನ್ನು ನೋಡಿದಾಗ ಅಣ್ಣನವರ ಭೇಟಿಯಾದಷ್ಟೇ ಪುಳಕವಾಗುತ್ತೇನೆ.

ಸಿಹಿಜೀವಿ
ಸಿ ಜಿ ವೆಂಕಟೇಶ್ವರ

ಏಕಲವ್ಯ .ಶಿಶುಗೀತೆ .


 



ಏಕಲವ್ಯ .



ಬಿಲ್ಲು ವಿದ್ಯೆ ಕಲಿವ ಆಸೆಯಿಂದ

ಏಕಲವ್ಯ ಬಂದನು 

ದ್ರೋಣರನ್ನು ಕಂಡು ತನ್ನ

ಮನದ ಬಯಕೆ ಹೇಳಿದನು.


ನಿರಾಕರಿಸಿ ದ್ರೋಣರೆಂದರು ನನ್ನ ವಿದ್ಯೆ  ಕ್ಷತ್ರಿಯರಿಗೆ ಮಾತ್ರ ಮೀಸಲು 

ಬೇಸರದಿ ಹಿಂದೆ ತಿರುಗಿ ಹೊರಟ

ಅವನು ಸ್ವಯಂ ವಿದ್ಯೆ ಕಲಿಯಲು .


ದ್ರೋಣರ ವಿಗ್ರಹವನು ಪ್ರತಿಷ್ಠಾಪಿಸಿ

ಬಿಲ್ವಿದ್ಯೆ ಕಲಿಯಲಾರಂಭಿಸಿದ

ಶಬ್ಧವೇದಿ ವಿದ್ಯೆ ಕಲಿತು ಬಿಲ್ಲಿನಿಂದ 

ಪ್ರಾಣಿಯನ್ನು ವಧಿಸಿದ .


ಅರ್ಜುನನಿಗೆ ವಿಷಯ ತಿಳಿದು

ಹೊಟ್ಟೆಯುರಿಯಲಿ ಬೆಂದನು

ದ್ರೋಣರಿಗೆ ಚಾಡಿ ಹೇಳಿ 

ಏಕಲವ್ಯನ ಹೆಬ್ಬೆಟ್ಟನು ಪಡೆದನು.


*ಸಿಹಿಜೀವಿ*

ಸಿ ಜಿ ವೆಂಕಟೇಶ್ವರ

22 January 2022

ಉದಕದೊಳಗಿನ ಕಿಚ್ಚು ಭಾಗ ೧೫


 


ಜಾತ್ರೆ ನಡೆದು ವಾರವಾಗಿತ್ತು ,ಗುಡಿಯ ಅಕ್ಕಪಕ್ಕದಲ್ಲಿ ನಡೆದಾಡಿದರೆ ಒಣಗಿದ ರಕ್ತದ ಕಮಟು ವಾಸನೆ, ಅಲ್ಲೊಂದು ಇಲ್ಲೊಂದು ರಸ್ತೆಯ ಪಕ್ಕದಲ್ಲಿ ಆಟಿಕೆ ಸಾಮಾನುಗಳ ಅಂಗಡಿಗಳು, ತೋಪಿನಲ್ಲಿ ಅಲ್ಲಲ್ಲಿ ಉಂಡು ಬಿಸಾಡಿರುವ ಅಡಿಕೆ ಪಟ್ಟೆಗಳು, ರಸ್ತೆಗಳ ಅಕ್ಕ ಪಕ್ಕದಲ್ಲಿ ಊದಗಡ್ಡಿ, ಕರ್ಪೂರ, ತೆಂಗಿನ ಕಾಯಿ ಕಸ, ಗಾಳಿಗೆ ಅತ್ತಿಂದಿತ್ತ ಇತ್ತಿಂದತ್ತ ಹಾರಾಡುತ್ತಿದ್ದವು . ಇವುಗಳನ್ನು ಸ್ವಚ್ಛ ಮಾಡಲು ಗುಡಿಗೌಡ್ರು ಕೆಳವರ್ಗದ ಜನರಿಗೆ ಎರಡು ದಿನದಿಂದ ಹೇಳುತ್ತಿದ್ದರೂ  ಕಸದ ಬಾವುಟಗಳ ಹಾರಾಟ  ನಿಂತಿರಲಿಲ್ಲ . ಕೆಳವರ್ಗದ ಪಾತಲಿಂಗಪ್ಪ ದಾರಿಯಲ್ಲಿ ಬರುವುದ ಕಂಡು  " ಇನ್ನ ಏಸ್ ದಿನ ಬೇಕ್ರಲ ನಿಮಿಗೆ ಈ ರೋಡ್ ಕಸ ಗುಡಸಕೆ ನೀನಂತುನುನು ಅದಕ್ಕು ಒಂದ್ ಬೆಲೆ ಬ್ಯಾಡವೋ?  ಮೊದ್ಲೆ ನಮ್ಮೂರು ಮೇನ್ ರೋಡಾಗೈತೆ  ಈ ಗಬ್ಬು ನೋಡಿ ವೆಹಿಕಲ್ನಲ್ಲಿ ಹೋಗೋ  ಜನ ಯರಬಳ್ಳಿ ಜನ ಕೊಳಕರು ಅಂಬಲ್ವೇನಲೇ?" ಎಂದು ಸಿಟ್ಟಿನಿಂದ ಒಂದೇ ಸಮನೆ ಬೈಯಲಾರಂಬಿಸಿದರು ಗುಡಿ ಗೌಡರು.
" ಇವತ್ತು ಬಿಟ್ಟು ನಾಳೆ  ಕಸ ಹೊಡಿತಿವಿ‌ ಗೌಡ , ಕಳ್ಳೆ ಮ್ಯಾಲೆ ಒಣಗಾಕಿದ್ದ ಮಾಂಸ ಒಂಚೂರಿತ್ತು ,ಬ್ಯಾಡರಳ್ಳಿ ನೆಂಟರು ಇನ್ನೂ ಹೋಗಿಲ್ಲ ಇವತ್ತು ಮಾಡಿಕ್ಯಾಂಡು ಉಂಡು , ನಮ್ಮ ಹುಡುಗ್ರುನ್ನ  ನಾಳೆ ಕರ್ಕಂಬಂದು   ಇದನ್ನೆಲ್ಲ ಕ್ಲೀನ್ ಮಾಡ್ತೀನಿ ಗೌಡ " ಎಂದು ತಲೆ ಕರೆದುಕೊಂಡು , "ಜೋಬಲ್ಲಿ ಕೈಯಿಕ್ಕು ಗೌಡ" ಅಂದ ಪಾತಲಿಂಗಪ್ಪ .
" ಏನ್ ಜೋಬಲ್ಲಿ ಕೈ ಇಕ್ಕದು , ಏ ನಿನಗೇನ್ ಪ್ರಜ್ಞೆ ಐತಾ ಇಲ್ವ? ನಿನ್ನೆ ಮುನ್ನೂರು ರುಪಾಯಿ ನಿನ್ ಒಬ್ಬನಿಗೆ ಕೊಟ್ಟಿದಿನಿ , ಈಗ ಬಂದು ಮತ್ತೆ ಜೋಬಲ್ಲಿ ಕೈ ಇಕ್ಕು ಅಂದ್ರೆ  ನಿಮಗೇನು ಅಳತೆ ಇಲ್ಲ ಹೋಗಪ್ಪ ನೀನಂತುನುನು" ಎಂದರು ಗೌಡ್ರು
" ಜಾತ್ರೆ
ಬಿಟ್ಟು ಇನ್ಯಾವಾಗ ಕೊಡ್ತೀರಾ ಕೊಡು ಗೌಡ "
ಇವನ ಕಾಟ ತಡೆಯದೆ ಗೌಡರು ಬಿಳಿ ಪಂಚೆಯನ್ನು ಎಡಗೈಯಲ್ಲಿ ಸರಿಸಿ ಪಟಾಪಟಿ ನಿಕ್ಕರ್ ನಿಂದ ಐವತ್ತು ರೂಪಾಯಿ ತೆಗೆದು ಪಾತಲಿಂಗಪ್ಪ ನಿಗೆ ಕೊಟ್ಟರು .ಪಾತಲಿಂಗಪ್ಪ ದುಡ್ಡನ್ನು ಕಣ್ಣಿಗೊತ್ತಿಕೊಂಡು ಕಂಬಣ್ಣನ ಹೆಂಡದ ಅಂಗಡಿ ಕಡೆ ನಡೆದ.

***********************

"ಕರೆಂಟ್ ರೂಮಿನ ಮೇಲಿಂದ ಡೈ ಒಡಿತಿಯೇನ ಸೋಮ" ಕೇಳಿದ ಮಹೇಶ
"ಅದಕ್ಕಿಂತ ಮೇಲೆ ಹೇಳು ಒಡೆಯುವೆ "
ಮೈಮೇಲೆ ಕಾಚ ಮಾತ್ರ ಇತ್ತು ಆಗ ತಾನೆ ನೀರಿನಿಂದ ಮೇಲೆದ್ದ ಸೋಮ ಆತ್ಮವಿಶ್ವಾಸದಿಂದ ಹೇಳಿದ  ಮತ್ತು ಕರೆಂಟಿನ ಮನೆ ಹತ್ತಿ  , ತಲೆ ಕೆಳಗು ಮಾಡಿ ಮೂವತ್ತು ಅಡಿ ಆಳದ ನೀರಿಗೆ ಡೈ ಹೊಡೆದಾಗ ಉಳಿದ ಹುಡುಗರು ಉಸಿರು ಬಿಗಿಹಿಡಿದು ನೋಡುತ್ತಿದ್ದರು ದಬಾಲ್... ಎಂದು ನೀರಿಗೆ ಬಿದ್ದ ತಕ್ಷಣ ನೀರ್ಗುಳ್ಳೆಗಳು ಮೇಲೆದ್ದು ಇಡೀ ಬಾವಿಯು  ತುಳುಕುವಂತಿತ್ತು. ನೀರೊಳಗೆ ಹೋದ ಸೋಮ ಒಂದು ನಿಮಿಷವಾದರೂ ಮೇಲೆ ಬರದಿದ್ದಾಗ ಮತ್ತೆ ಹುಡುಗರ ಮುಖದಲ್ಲಿ ಆತಂಕ ನಾಲ್ಕು ಮಟ್ಟ( ೨೦ಅಡಿ) ಆಳವಾದ ಈ ಬಾವಿಯಲ್ಲಿ ಸೋಮ? ಎನೇನೋ ಯೋಚಿಸುತ್ತಾ ಹುಡುಗರು ಚಿಂತೆಗೆ ಬಿದ್ದಾಗ ಗುಳ್ಳೆಗಳೇಳುತ್ತಾ ಸೋಮ ಮೇಲೆ ಬರುವುದ ನೋಡಿ ಹುಡುಗರು ಶಿಳ್ಳೆ ಚಪ್ಪಾಳೆ ತಟ್ಟುತ್ತಾ ಹೀರೋ ತರ ಸ್ವಾಗತ ಮಾಡಿದರು.

" ಏ ಸತೀಶ , ನೀನು ಅಂಗೆ ಡೈ ಒಡಿತಿಯೇನ ಚಾಲೆಂಜ್ ಹತ್ತು ರುಪಾಯಿ " ಅಂದ ಚಿದಾನಂದ್
" ಅಪ್ಪ ನಾನು ಇನ್ನೂ ಈಗ ಈಜು ಕಲ್ತಿದಿನಿ ಅಷ್ಟು ಮೇಲಿಂದ ಆಗಲ್ಲಪ್ಪ ಅದೂ ಅಲ್ದೆ ನಾನು ಈಜಾಡಕೆ ಬಂದಿರೋದು ನಮ್ಮಜ್ಜಿ ನಮ್ಮಾವರಿಗೆ ಗೊತ್ತಿಲ್ಲ .ಗೊತ್ತಾದರೆ ಅಷ್ಟೇ" ಎನ್ನುತ್ತಾ ಬಾವಿಯ ದಡದ ಮೇಲೆ ಬಟ್ಟೆಗಳನ್ನು ಬಿಚ್ಚಿ ಬರೀ ಕಾಚಾ ಮಾತ್ರ ತೊಟ್ಟು  , ಕಲ್ಲು ಕಟ್ಟಡದ ಬಾವಿಯಲ್ಲಿ ನಿಧಾನವಾಗಿ ಇಳಿದು ಈಜಲು‌ ಶುರುಮಾಡಿದ .

" ಥು ನನ್ ಮಗ್ನೆ, ಮಾನ ಮರ್ಯಾದೆ ಇಲ್ವ ನಿನಗೆ ಗೊಮ್ಮಟೇಶ್ನಂಗೆ  ಎಲ್ಲಾರ್ಗೂ ತೋರಿಸ್ಕಂಡು ಓಡಾಡ್ತಿಯಾ? ಎಸ್ಸೆಲ್ಸಿ ನಾಕು ಸತಿ ಪೇಲಾಗಿದಿಯಾ,  ಮುಂದುಲ್ ವರ್ಸ ನಿಮ್ಮಪ್ಪ ಮದುವೆ ಮಾಡ್ತಾನಂತೆ ಇಂಗೆ ಬಿಚ್ಕೊಂಡು ಈಜಾಡಕೆ ಬರಕೆ ನಾಚ್ಕೆ ಆಗಲ್ವ ? "
ಎಂದು ರವಿವನ್ನು  ಮಧು ಹಿಗ್ಗಾಮುಗ್ಗಾ  ಬೈಯುವದನ್ನು ಇತರರು ನೋಡುತ್ತಾ ಕೇಳುತ್ತ ಈಜಾಡುತ್ತಿದ್ದರು.

" ಏ ಯಾಕಲ ಅಷ್ಟು ಎಗಾರಡ್ತಿಯಾ ? ಇಲ್ಲಿ ಎಲ್ಲಾ ಹುಡುಗ್ರೆ ಇರೋದು ಅದ್ಕ್ಯಾಕೆ ಬಟ್ಟೆ ಹಾಕೋದು ಅಂತ ಎಲ್ಲಾ ಬಿಚ್ಚಿದೆ ,ನನ್ ಮಗನೆ ಬಾ ಬಾವೀಲಿ ಅಮಿಕ್ಯಾಕಿ ಬಿಡ್ತಿನಿ " ಅಂದ ರವಿ.
ಸೂರ್ಯ ನೆತ್ತಿಯ ಮೇಲೆ ಬಂದಂತೆ ನೀರಲ್ಲಿ ಹುಡುಗರು ಹೆಚ್ಚಾದರು ,ಕೆಲವರು ಮನೆ ನೆನಪಾಗಿ ದಡಕ್ಕೆ ಬಂದು , ಬಿಸಿಲಿನ  ತಾಪ ನೋಡಿ ಪುನಃ ನೀರಿಗೆ ಬಿದ್ದು ಈಜಾಡುತ್ತಿದ್ದರು.
"ಏ ಸತೀಶ ನಾಳೆ ಪಾಸು ಪೇಲು ಹಾಕ್ತಾರಂತೆ , ರೇಡಿಯೋದಾಗೆ ಹೇಳಿದರು ಅಂತ  ನಮ್ಮಪ್ಪ  ಅಂದರು" ಮೋಟಪ್ಪರ ಬಾವಿಯಿಂದ ಈಜಾಡಿಕೊಂಡು ತಲೆ ಮೇಲೆ ಟವಲ್ ಹಾಕಿಕೊಂಡು ನಡೆದು ಬರುವಾಗ ಚಿದಾನಂದ್ ಹೇಳಿದ .
" ಹೌದಾ ನಾನು ರೇಡಿಯೋ ಕೇಳುತ್ತಿದ್ದೆ ಗೊತ್ತಾಗಲಿಲ್ಲ ಅಲ್ಲ?" ಎಂದ ಸತೀಶ

"ಏ ನೀನು ಯಾವಾಗಲೂ ಬರೀ ಹಾಡು ಕೇಳೋದು ನನಗೆ ಗೊತ್ತಿಲ್ವ ನ್ಯೂಸ್ ಎಲ್ಲಿ ಕೇಳ್ತಿಯಾ ಅದು ಲವ್ ಸಾಂಗ್ ಕೇಳೋದ್ರಲ್ಲಿ ನೀನು ಹೀರೋ.
ನಾಳೆ ನಾನು ಪಾಸಾಗ್ತಿನೋ ಪೇಲಾಗ್ತಿನೊ? ನೀನ್ ಬಿಡಪ್ಪ ಪಾಸು" ಎಂದು ಒಂದು ದಿನ ಮೊದಲೆ ರಿಸಲ್ಟ್ ಹೇಳಿಬಿಟ್ಟ ಚಿದಾನಂದ್.

****************************

ಅಂದು ಶನಿವಾರ. ಸ್ನಾನ ಮಾಡಿ  ತನ್ನ ಮನೆದೇವರಾದ ವೆಂಕಟರಮಣಸ್ವಾಮಿಗೆ
ಪೂಜೆ ಮಾಡಿ ಲಕ್ಷ್ಮಿ ರಮಣ  ಗೋವಿಂದ......  ಗೋವಿಂದ .... ಪ್ರಹ್ಲಾದ ವರದ ಗೋವಿಂದ...... ಗೋವಿಂದ... ತಿರುಪತಿ ತಿಮ್ಮಪ್ಪನ ಪಾದಕ್ಕೆ ಗೋವಿಂದ.... ಗೋವಿಂದ. ....
ಎಂದು ಮೂರು ಸಾರಿ ಹೇಳಿ  , ಸರಸ್ವತಜ್ಜಿಯ ಹತ್ತಿರ ಬಂದು ನಿಂತ. ಅಜ್ಜಿ ಕುಟ್ನಿಯಲ್ಲಿ ಎಲೆ ಅಡಿಕೆ ಹಾಕಿ ಕಬ್ಬಿಣದ ಗಟ್ಟಿ ಸರಳಿನಲ್ಲಿ ಲೊಟ ,,ಲೊಟ.. ಕುಟ್ಟುತ್ತಾ,  ಸುಣ್ಣದ ಡಬ್ಬಿಯಿಂದ ಉಗುರಲ್ಲಿ ಸ್ವಲ್ಪ ಸುಣ್ಣ ತೆಗೆದು ಕುಟ್ನಿಗೆ ಹಾಕಿ ಮತ್ತೆ ಕುಟ್ಟಲು ಶುರುಮಾಡಿದರು.
" ಅಜ್ಜಿ ಆಶೀರ್ವಾದ ಮಾಡು ಇವತ್ತು ನಮ್ ರಿಸಲ್ಟು" ಎಂದು ಅಜ್ಜಿಯ ಕಾಲಿಗೆ ಬೀಳಲು ಮುಂದಾದ ಸತೀಶ
"ರಿಜಲ್ಟು ಅಂದ್ರೆ" ಅಚ್ಚರಿಯಿಂದ ಕಾಲು ಮುಂದೆ ಮಾಡಿ ಕೇಳಿದರು ಅಜ್ಜಿ
" ಅಜ್ಜಿ ಅಂಗಂದ್ರೆ ಇವತ್ತು ನಂದು ಪಾಸು ಪೇಲು ಹೇಳ್ತಾರೆ" ಅಂದಾಗ
"ಹೋ ಒಳ್ಳೆದಾಗ್ಲಪ್ಪ ಹೋಗು" ಎಂದು ತಲೆ ಸವರಿದರು ಪ್ರೀತಿಯಿಂದ.
ಮತ್ತೊಮ್ಮೆ ಕನ್ನಡಿಯಲ್ಲಿ ಮುಖ  ನೋಡಿಕೊಂಡು ತಲೆ ಬಾಚಿಕೊಂಡು, ಸ್ಕೂಲ್ ಕಡೆ ಹೊರಟಾಗ ಗುರುಸಿದ್ದ ದನ ಮೇಯಿಸಲು ದನಗಳ ಕಣ್ಣಿ ಬಿಚ್ಚುತ್ತಿದ್ದ " ಏನ್ ಸತೀಶಣ್ಣ ಇವತ್ತು ನಿಂದು ಪಾಸು ಪೇಲಂತೆ ಸಾಯಿಂಕಾಲ ಬತ್ತಿನಿ ನನಿಗೆ ಸ್ವೀಟ್ ಕೊಡ್ಬೇಕು " ಎಂದ
" ಆತು ಬಾ ಕೊಡ್ತಿನಿ" ಎಂದ ಸತೀಶ.
ಗಂಟೆ ಹನ್ನೊಂದು ಆಗಿ ಬಹುತೇಕ ಹತ್ತನೆಯ ತರಗತಿಯ ಪರೀಕ್ಷೆ ಬರೆದ ಎಲ್ಲರೂ  ಸೇರಿದ್ದರು ಬರೀ ಮಕ್ಕಳು ಅಲ್ಲದೆ ಅವರ ಅಪ್ಪ, ಅಣ್ಣ, ತಮ್ಮ ,ದೊಡ್ಡಪ್ಪ, ಮಾವ ಹೀಗೆ ಅದೊಂದು ಸಣ್ಣ ಜಾತ್ರೆಯಂತೆ ಕಾಣುತ್ತಿತ್ತು, ಕೆಲವರು ಮೊದಲೆ ಸಿಹಿತಂದು ಹಂಚಲು ಕಾಯುತ್ತಿದ್ದರು.

"ಏನ್ ಹೆಡ್ ಮೇಷ್ಟ್ರು ಇವರು? ಹನ್ನೆರಡು ಗಂಟೆಯಾದರೂ ಪಾಸು ಪೇಲು ಹೇಳೋಕೇನ್ ದಾಡಿ" ಎಂದು ಬಸವರಾಜ್ ಕೂಗಾಡಿದಾಗ ದೂರದಿಂದಲೇ ಹೆಂಡದ ವಾಸನೆ ಕೆಲವರಿಗೆ ಬಡಿಯದೇ ಇರಲಿಲ್ಲ.
ಬಸವರಾಜನ ಗಲಾಟೆ ಕೇಳಿ ಮೀಸೆ ತಿರುವುತ್ತಲೆ ಬಂದ ಪ್ಯೂನ್ ಕಂ ತಳವಾರ ಸಿದ್ದಾನಾಯ್ಕ "ಏ ಬಸವ ಏನಲೆ ಅದು ಗಲಾಟೆ ನಾವು ಅವರೆ ಕಣಲಾ, ಬಾರಲ ಇಲ್ಲಿ ,  ಏಟು ಕುಡ್ದದಿಯೆಲಾ? ಬಾರ ಇಲ್ಲಿ." ಎಂದಾಗ ಬಸವರಾಜ್ ಗಪ್ ಚುಪ್ .

"ಮಾವ ಎಷ್ಟೋತ್ತಿಗಂತೆ ರಿಸಲ್ಟ್ ಹಾಕೋದು? " ಸಿದ್ದಾನಾಯ್ಕ ,ನಾಯಕರ ಜಾತಿಯಾದರೂ ಸತೀಶ ಯಾವಾಗಲೂ ಬಾಯಿ ತುಂಬಾ ಮಾವ ಅಂತಲೆ ಕರೆಯುತ್ತಿದ್ದ ಸಿದ್ದಾನಾಯ್ಕ ಗೆ ಸತೀಶ ಎಂದರೆ ಪ್ರೀತಿ
" ಅಳಿಯ ಹೆಡ್ ಮೇಷ್ಟ್ರು ರಿಸಲ್ಟ್ ತರಾಕೆ ಹಿರಿಯೂರಿಗೆ ಹೊಗೆದಾರೆ ಅವ್ರು ಬಂದ ಮ್ಯಾಲೆನೆ ರಿಸಲ್ಟ್ ಕಣಪ್ಪ" ಎಂದು ಸಿದ್ದಾನಾಯ್ಕ ಸತ್ಯ ಹೇಳಿದಾಗ ಎಲ್ಲರೂ ರಸ್ತೆಯ ಪಕ್ಕದಲ್ಲಿ ಇರುವ ಕಿಲಕಿಸ್ತರೆ ಮರದ ಕೆಳಗೆ , ಬಸ್ ಸ್ಟ್ಯಾಂಡ್ ಕಡೆ ನೋಡುತ್ತಾ ಕುಳಿತರು.

ಕೈಯಲ್ಲಿ ಒಂದು ಬಟ್ಟೆಯ ಚೀಲ ಹಿಡಿದುಕೊಂಡು ದೂರದ ಬಸ್ಟಾಂಡ್ ನಲ್ಲಿ ಜೈರಾಂ ಬಸ್ನಿಂದ  ಒಬ್ಬ ವ್ಯಕ್ತಿ ಇಳಿಯುವುದನ್ನು ಕಂಡ ಚಿದಾನಂದ್
" ಹಾ.. ಹೆಡ್ ಮಾಸ್ಟರ್ ಬಂದ್ರು " ಅಂದಾಗ ಸೂರ್ಯ ನೆತ್ತಿಯ ಮೇಲೆ ಬಂದು ಗಂಟೆ ಒಂದಾಗಿತ್ತು. ಶಾಲೆಯ ಹತ್ತಿರ ಹೆಡ್ ಮಾಸ್ಟರ್ ಬಂದಂತೆ ಮಕ್ಕಳು ಮತ್ತು ಪೋಷಕರು ಜೇನು ನೊಣ ಮುತ್ತಿಕೊಳ್ಳುವ ಹಾಗೆ ಅವರ ಸುತ್ತ ನಿಂತರು.

" ಹೇ ಜಾಗ ಬಿಡ್ರಪ್ಪ ಏನ್ ಜನಾನಪ್ಪ ನೀವು ಸ್ವಲ್ಪ ತಾಳ್ಮೆ ಇರಲಿ" ಅಂತ ಅವರ ಕೈಯಲ್ಲಿದ್ದ ಬಟ್ಟೆ ಚೀಲ ತೆಗೆದುಕೊಂಡ ಶಾಲಾ ಕಛೇರಿಯ ಒಳಗೆ ಮುಖ್ಯ ಶಿಕ್ಷಕರ ಹಿಂದೆ ನಡೆದ ಸಿದ್ದಾನಾಯ್ಕ.
ಮಧ್ಯಾಹ್ನದ ಒಂದೂವರೆ ,ಎರಡು ಗಂಟೆ ಇರಬಹುದು ಆಫೀಸ್ ರೂಂ ಪಕ್ಕದಲ್ಲಿ ಇರುವ ಕೋಣೆಯ ಕಿಟಕಿಗಳು ಒಳಭಾಗದಲ್ಲಿ ಒಂದೊಂದೇ ರಿಸಲ್ಟ್ ಶೀಟ್ ಅಂಟಿಸುತ್ತಿದ್ದರು ಸಿದ್ದಾನಾಯ್ಕ. ಕಿಟಕಿಗಳ ಹೊರಭಾಗದಲ್ಲಿ ಕಬ್ಬಿಣದ ಮೆಸ್ ಹಾಕಿಸಿದ್ದರಿಂದ ದೂರದಿಂದ ರಿಸಲ್ಟ್ ನೋಡಬಹುದಾಗಿತ್ತು ಆದರೆ ಮುಟ್ಟುವ ಹಾಗಿರಲಿಲ್ಲ ,ಮೊದಲು ರಿಸಲ್ಟ್ ಹೊರಗೆ ಹಾಕುತ್ತಿದ್ದರು. ಪೇಲ್ ಆದವರು ಒಡೀ ರಿಸಲ್ಟ್ ಶೀಟ್ ಹರಿದು ಬಿಸಾಕುತ್ತಿದ್ದರು ಅದಕ್ಕೆ ಈಗ ಒಳಗೆ ಹಾಕಿದ್ದಾರೆ.

"ಆ ....ನಂದು ಪಾಸಾಗಿದೆ "ಅವನ ಹೆಸರು ನೋಡಿ ಕುಣಿದಾಡಿದ ಚಿದಾನಂದ ಅವನ ಅಪ್ಪ ಅವನು ಪೇಲಾಗುವನು ಎಂದುಕೊಂಡಿದ್ದರು
" ಮಾರಮ್ಮನಿಗೆ ಮುಂದಲ್ ವರ್ಸ ಜಾತ್ರೆಗೆ ಜೋಡ್ ಕುರಿ ಕಡ್ಯಾದೆ ಬಾರ್ಲಾ ಹೋಗನಾ " ಎಂದು ಬೀಗುತ್ತಾ ನಡೆದ .
ಐದಾರು ಹುಡುಗರು ಬಿಟ್ಟು ಉಳಿದೆಲ್ಲರೂ ಪಾಸಾಗಿದ್ದರು ಅದಕ್ಕೆ ಪರೀಕ್ಷೆ ನಡೆಸಿದ ರೀತಿಯೂ ಕಾರಣ ಎಂದು ಕೆಲವರು ಮಾತನಾಡುತ್ತಿರುವುದು ಕಿವಿಯ ಮೇಲೆ ಬೀಳದೆ ಇರಲಿಲ್ಲ.

ಸತೀಶನ ಎಲ್ಲಾ ಸ್ನೇಹಿತರಿಗೆ ಸತೀಶನ ರಿಸಲ್ಟ್ ಬಗ್ಗೆ ಕಾತರ , ಮಹೇಶ್ ಸೆಕೆಂಡ್ ಕ್ಲಾಸಲ್ಲಿ ಪಾಸಾಗಿದ್ದ. ಸುಜಾತ ಸಹ ಸೆಕೆಂಡ್ ಕ್ಲಾಸ್ ನಲ್ಲಿ ಪಾಸಾಗಿದ್ದಳು. ಸತೀಶ ಅವಳಿಗೆ ನಗುತ್ತಾ ಅಭಿನಂದನೆಗಳ ಸಲ್ಲಿಸಿದ್ದ
" ಅಯ್ಯೋ ಬರಿ ಸೆಕೆಂಡ್ ಕ್ಲಾಸ್ ,ನಿಂದು ಜಾಸ್ತಿ ಇರುತ್ತೆ ಬಿಡು " ಎಂದು ನಕ್ಕಿದ್ದಳು ಸುಜಾತ .ಆದರೆ ಸತೀಶನಿಗೆ ಅಂತಹ ಸಂತಸ ಇರಲಿಲ್ಲ.
ಸತೀಶನ ಹೆಸರು ಎಲ್ಲಿಯೂ ಕಾಣಿಸಿರಲಿಲ್ಲ! ಇದರಿಂದ ಸತೀಶನಿಗೆ ಮತ್ತು ಅವನ ಸ್ನೇಹಿತರಿಗೆ ಆತಂಕ ,ಬೇಸರ ಶುರುವಾಗಿತ್ತು ಎಲ್ಲರ ಮುಖದಲ್ಲಿ ಅದು ಎದ್ದು ಕಾಣುತ್ತಿತ್ತು.
"ನಾನೇನಾದ್ರೂ ಪೇಲ್ ಆಗ್ಬಿಟ್ನಾ? ಅಕಸ್ಮಾತ್ತಾಗಿ ಪೇಲ್ ಆದರೆ ಮನೇಲಿ ಅಜ್ಜಿಗೆ, ಮಾವನಿಗೆ  ಹೇಗೆ ಮುಖ ತೋರಿಸಲಿ? ಇನ್ನೂ ನನ್ನ ಅಮ್ಮ ನನ್ನ ಮೇಲೆ ಪ್ರಾಣ ಇಟ್ಟುಕೊಂಡಿದ್ದಾಳೆ, ನಾನು ಓದಿ ಏನೋ ಸಾಧನೆ ಮಾಡುವೆ ಎಂದು ಕನಸು ಕಂಡಿದ್ದಾಳೆ ,ಈಗ ನಾನು ಪೇಲ್ ಆದರೆ ಅಮ್ಮ ಹೇಗೆ ಸಹಿಸಿಕೊಳ್ಳುತ್ತಾರೆ? ಈ ರೀತಿಯಾಗಿ ಹಲವಾರು ಪ್ರಶ್ನೆಗಳು ಸತೀಶನ ಮನದಲ್ಲಿ ಸುಳಿದವು.
ಅರ್ದಕ್ಕರ್ದ ವಿದ್ಯಾರ್ಥಿಗಳು ಮತ್ತವರ ಪೋಷಕರು ಶಾಲೆಯಿಂದ ಮನೆಕಡೆ ಹೋಗಿದ್ದರು, ಮಹೇಶಗೆ ಒಳಗೊಳಗೆ ಸತೀಶ ಪೇಲಾದರೆ ಅವನನ್ನು ರೇಗಿಸಬಹುದು ಎಂದು ಅಲ್ಲೇ ಇದ್ದ.
ಹೆಡ್ ಮಾಸ್ಟರ್ ಒಂದು ಹಾಳೆ ಹಿಡಿದು ಆಪೀಸ್ನಿಂದ ಹೊರ ಬಂದು ಸತೀಶ... ಅಂದರು.
ಅಯ್ಯೋ ನನ್ನ ಮೇಲೆ ಇವರೆಲ್ಲರೂ ಇಷ್ಟೊಂದು ಭರವಸೆ ಇಟ್ಟುಕೊಂಡು ಪ್ರೋತ್ಸಾಹ ಕೊಟ್ಟರು ನಾನೇನಾದರೂ ಪೇಲ್ ಆಗಿರುವುದು ಕಂಡು ಹೆಡ್ ಮಾಸ್ಟರ್ ನನ್ನ ಕರೆಯುತ್ತಿರಬಹುದು ಎಂದು ಅಳುಕಿನಿಂದಲೇ ಹೋದ ಸತೀಶ.

" ನೀನು ನಮ್ಮ ಶಾಲೆಯ ಹೆಮ್ಮೆ ಕಣಯ್ಯ" ಅಂತ ಬೆನ್ನು ಸವರುತ್ತ
  "ಏ ಬಾರೋ ಇಲ್ಲಿ ಅಂಗಡಿಗೋಗಿ ಸ್ವೀಟ್ ತಗೊಂಬಾರೊ ಇವತ್ತು ಸತೀಶನಿಗೆ ನಾನೇ ಸ್ವೀಟ್ ತಿನ್ನುಸ್ತೀನಿ " ಎಂದು ಹಣ ಕೊಟ್ಟರು .
ಸತೀಶನಿಗೆ ನಂಬಲಾಗಲಿಲ್ಲ  ಹೆಡ್ ಮಾಸ್ಟರ್ ಅವನ ಕೈಗೆ ಒಂದು ಬಿಳಿ ಚೀಟಿಯನ್ನು ಕೊಟ್ಟು "ನೋಡು ಇಡೀ ತಾಲೂಕಿಗೆ ಫಸ್ಟ್ ಬಂದಿದಿಯಾ ಕಣಯ್ಯ. ನಮಗೂ ನಮ್ಮ ಸ್ಕೂಲ್ ಗೆ ನಿಮ್ಮ ಅಪ್ಪ ಅಮ್ಮನಿಗೆ ಒಳ್ಳೆಯ ಹೆಸರು ತಂದೆ . ವೆರಿ ಗುಡ್ ಐ ಯಾಮ್ ವೆರಿ ಪ್ರೌಡ್ ಆಫ್ ಯು ಮೈ ಬಾಯ್" ಎಂದು ತಬ್ಬಿಕೊಂಡರು ಸತೀಶನಿಗೆ ಕಣ್ಣೀರು ತಡೆಯಲಾರದೆ ಉದುರಿದವು .

ಎಂದಿನಂತೆ ಮೊದಲು ಸುಜಾತ ಜೋರಾಗಿ ಚಪ್ಪಾಳೆ ತಟ್ಟಿದರೆ ಉಳಿದವರು ಚಪ್ಪಾಳೆ ತಟ್ಟದೆ ಇರಲಿಲ್ಲ.
ಮಹೇಶ ಮಾತ್ರ ಮುಖ ಸಿಂಡರಿಸಿಕೊಂಡು ಮನೆ ಕಡೆ ಹೆಜ್ಜೆ ಹಾಕಿದ.

ಮುಂದುವರೆಯುವುದು

ಸಿ ಜಿ ವೆಂಕಟೇಶ್ವರ

21 January 2022

ಪರಿಮಳ .ಹನಿ


 


*ಪರಿಮಳ*



ತಳುಕು ಬಳುಕಿನ

ಬಾಹ್ಯ ಸೌಂದರ್ಯ

ಶೋಭಿಸಬಹುದೇ?

ಬೆಲೆ ಬಾಳುವ 

ಸ್ವರ್ಣ ಪುಷ್ಪವು

ಪರಿಮಳ ಸೂಸುವುದೇ?


*ಸಿಹಿಜೀವಿ*

ಸಿ ಜಿ ವೆಂಕಟೇಶ್ವರ


20 January 2022

ನನ್ನ ಹೃದಯದಲಿ ಅವನಿಗೆ ಜಾಗವಿದೆ.


 


ಅವನ ಹೃದಯದಲ್ಲಿ ನನಗೆ ಜಾಗವಿದೆ .

ಅವನು ಮುಸ್ಲಿಂ,ನಾನು ಹಿಂದೂ .ಅವನು ನಗರದಲ್ಲಿ ಹುಟ್ಟಿ ಬೆಳೆದದ್ದು ನಾನು ಹಳ್ಳಿಯಲ್ಲಿ.ಅವನೀಗ ಆರಕ್ಷಕ, ನಾನು ಶಿಕ್ಷಕ . ನಮ್ಮಿಬ್ಬರದು ಈಗಲೂ ಒಳ್ಳೆಯ ಒಡನಾಟ. ಅಷ್ಟಕ್ಕೂ ನಮ್ಮಿಬ್ಬರನ್ನೂ ಒಂದುಗೂಡಿಸಿರುವ ಶಕ್ತಿ ಯಾವುದು? ಇನ್ನಾವುದು ಅದೇ ಗೆಳೆತನ!

ನಮಗೆ ನಮ್ಮ ಬಾಲ್ಯದ ಗೆಳೆಯರ ಒಡನಾಟವನ್ನು ಮರೆಯಲು ಸಾದ್ಯವಿಲ್ಲ ಆ ನೆನಪುಗಳೇ ಅಮರ .ನನಗೂ ನ್ನ ಲಬಾಲ್ಯವನ್ನು ಅವಿಸ್ಮರಣೀಯವಾಗಿಸಿದ  ಬಹಳ ಜನ ಚಡ್ಡಿ ದೋಸ್ತ್ಗಳಿದ್ದಾರೆ .ಅವರೆಲ್ಲರೂ ನನ್ನ ಜೀವನದಲ್ಲಿ ದೊರೆತ ಅಮೂಲ್ಯವಾದ ರತ್ನಗಳೆ ಸರಿ ಆ  ಗೆಳೆಯರ ಬಗ್ಗೆ ನಂತರ ಮಾತನಾಡುವೆ.

ನಾನೀಗ ಹೇಳಹೊರಟಿರುವುದು ನನ್ನ ಪ್ಯಾಂಟ್ ದೋಸ್ತ್ ಬಗ್ಗೆ ಅವನೇ ಇಸ್ಮಾಯಿಲ್ ಜಬೀವುಲ್ಲಾ . ಯರಬಳ್ಳಿಯಲ್ಲಿ ಪಿ. ಯು. ಮುಗಿಸಿ ಹಿರಿಯೂರಿನ ವಾಣಿ ಕಾಲೇಜ್ ಗೆ ಅಡ್ಮಿಷನ್ ಆದಾಗ ಇದ್ದವನೊಬ್ಬನೇ ಗೆಳೆಯ ಅವನು ಶಿವಕುಮಾರ .ಈಗ ಬೆಂಗಳೂರಿನಲ್ಲಿ ಲಾಯರ್ ಆಗಿ ಕೆಲಸ ಮಾಡುತ್ತಿದ್ದಾನೆ. ಕ್ರಮೇಣವಾಗಿ ಹಿರಿಯೂರಿನ ಟಿ. ಬಿ. ಸರ್ಕಲ್ ನಿಂದ ಮಾರಿಕಣಿವೆ ಸರ್ಕಲ್ ಮಧ್ಯ ಎರಡು ಕಿಲೋಮೀಟರ್ ಅಂತರ ನಡೆಯಲಾರದೆ ಆ ಮಾರ್ಗವಾಗಿ ಹೊಸದುರ್ಗದ ಕಡೆ ಹೋಗುವ ಬಸ್ ನ ಟಾಪ್ ಹತ್ತಿ ನಮ್ಮ ಕಾಲೇಜ್ ಗೆ ಪಯಣ ಬೆಳೆಸುವಾಗ ಪರಿಚಿತನಾದವನೇ ಜಬಿ!

ಈಗ ಚಿತ್ರದುರ್ಗದಲ್ಲಿ ಪೊಲಿಸ್ ಇಲಾಖೆಯಲ್ಲಿ ಸೇವೆ ಮಾಡುವ ಜಬಿಯ ಗೆಳೆತನ ಈಗಲೂ ಮುಂದುವರೆದಿದೆ ಮುಂದೆಯೂ ಇರುವುದು.
ನಮ್ಮಿಬ್ಬರಲ್ಲಿ ಈಗಲೂ ಯಾರಾದರೂ
ಸಣ್ಣ ಪೆನ್ ನಿಂದ ಹಿಡಿದು ಹೊಸ ಮೊಬೈಲ್, ಆಗಲಿ, ಬೈಕ್, ಆಗಲಿ, ಯೂ. ಪಿ. ಎಸ್. ಆಗಲಿ, ಕಾರ್ ಆಗಲಿ ಏನೇ ಕೊಳ್ಳಬೇಕಾದರೆ ಗಂಟೆಗಟ್ಟಲೆ ಪೋನ್ ನಲ್ಲಿ ಸಂಭಾಷಣೆ ಮಾಡಿ ಪರಸ್ಪರ ಸಲಹೆ ಪಡೆದು ಖರೀದಿಸುವುದಿದೆ. ಜಬಿ ಪೋನ್ ಮಾಡಿದ ಎಂದರೆ ನನ್ನ ಮೊದಲ ಮಗಳು "ಅಪ್ಪ ,ಮಿನಿಮಮ್ ಅಂದರೆ  ಇನ್ನರ್ದ ಗಂಟೆ ನಿಮ್ ಮಾತು ಮುಗಿಯಲ್ಲ "ಎಂದು ಜೋಕ್ ಮಾಡುತ್ತಾಳೆ . ನಮ್ಮ ಮಾತು ಬರೀ ಪೋನ್ ನಲ್ಲಿ ಮುಗಿಯಲ್ಲ ಮುಖತಃ ಮಾತನಾಡಬೇಕು ಎಂದರೆ ದಿಢೀರ್ ಭೇಟಿಯಾಗುವುದೂ ಉಂಟು. ಒಮ್ಮೆ ತಾನು ಕೊಂಡ ಹೊಸ ಮೊಬೈಲ್ ತೋರಿಸಲು ಚಿತ್ರದುರ್ಗದಿಂದ ನಾನು ಕೆಲಸ ಮಾಡುವ ಗೌರಿಬಿದನೂರಿಗೆ ಬಂದಿದ್ದ ಎಂದರೆ ನೀವು ನಂಬಲೇಬೇಕು.
ನಮ್ಮ ಸ್ನೇಹ ನಮಗೆ ಮಾತ್ರ ಸೀಮಿತವಾಗಿಲ್ಲ ಅದು ಕುಟುಂಬಕ್ಕೂ ವಿಸ್ತರಿಸಿದೆ. ನಾವು ಡಿಗ್ರಿ ಓದುವಾಗ ಅವರ ಅಮ್ಮ ಅವರ ಗುಡಿಸಲ ಮನೆಯಲ್ಲಿ ಸೀಮೇಎಣ್ಣೆ ಸ್ಟೌವ್  ಮೇಲೆ ಮಾಡಿಕೊಡುತ್ತಿದ್ದ ನೀರ್ ದೋಸೆ ನೆನೆದರೆ ಈಗಲೂ ಬಾಯಲ್ಲಿ ನೀರೂರುತ್ತದೆ.  ಆಗ ಅವರ ಮನೆಯಲ್ಲಿ ನೀರ್ ದೋಸೆ ತಿಂದು ಒಂದು ಸಿನಿಮಾ ನೋಡಿ ಸಂಜೆ ಅವರ ಮನೆಯಲ್ಲಿ ಟೀ ಕುಡಿದು ನಮ್ಮ ಮನೆಯ ಕಡೆ ಹೊರಡುತ್ತಿದ್ದೆ .ನಮ್ಮಿಬ್ಬರಲ್ಲಿ ಯಾರ ಬಳಿಯಾದರೂ ಆರು ರೂಪಾಯಿ ಇದ್ದರೆ ಅಂದು ಸಿನಿಮಾ ಫಿಕ್ಸ್ ಏಕೆಂದರೆ ಆಗ ಜಯಲಕ್ಷ್ಮಿ ಥಿಯೇಟರ್ ನಲ್ಲಿ ಬೆಂಚಿನ ಮೇಲೆ ಕುಳಿತು ಸಿನಿಮಾ ನೋಡಲು ಮೂರು ರೂಪಾಯಿ ಟಿಕೆಟ್! ಆದರೆ ಕಾಲೇಜ್ ಬಂಕ್ ಮಾಡಿ ಮನೆಯಲ್ಲಿ ಹೇಳದೆ ಎಂದೂ ಸಿನಿಮಾಕ್ಕೆ ಹೋಗುತ್ತಿರಲಿಲ್ಲ. ಆದರೂ ಜಬಿಯ ತಾಯಿ "ನೀವಿಬ್ಬ್ರೂ ಇಂಗೇ ಸಿನಿಮಾ ನೋಡಿದ್ರೆ ಡಿಗ್ರಿ ಮಾಡದೆಂಗೆ "ಎಂದು ಪ್ರೀತಿಯಿಂದ ಬೈಯುತ್ತಿದ್ದರು.ಅವರಿಗೂ ಗೊತ್ತಿತ್ತು ನಮಗೆ ಸಿನಿಮಾ ನೋಡುವುದು ಮತ್ತು ಹಾಡು ಕೇಳೊದು ಬಿಟ್ಟು ಇನ್ನಾವುದೇ ಚಟಗಳಿಲ್ಲ ಎಂಬುದು.

ಜಬಿ ಏನದರೂ ತಿಂಗಳಲ್ಲಿ  ನಮ್ಮ ಊರಿಗೆ ಬರಲಿಲ್ಲ ಎಂದರೆ ಯಾಕೋ ಜಬಿ ಬರಲಿಲ್ಲ ಕಣಪ್ಪ ಎಂದು ನಮ್ಮ ಅಮ್ಮ ಕೇಳುತ್ತಿದ್ದರು. ನಮ್ಮ ತೋಟದ ಎಳನೀರು, ಮಾವಿನ ಕಾಯಿ , ಅಡಿಕೆ , ಬಾಳೆ ಹಣ್ಣು ಎಂದರೆ ಅವನಿಗೆ ಬಲು ಇಷ್ಟ

ಒಮ್ಮೆ ಚಿತ್ರದುರ್ಗ ದ ಬಳಿ ನನಗೆ ಬೈಕ್ ನಲ್ಲಿ  ಅಪಘಾತವಾದಾಗ ಮೊದಲು ಓಡೋಡಿ ಬಂದು ಆಸ್ಪತ್ರೆಗೆ ಸೇರಿಸಿ ಆರೈಕೆ ಮಾಡಿ ನಮ್ಮ ಮನೆಯವರಿಗೆ ಸುದ್ದಿ ಮುಟ್ಟಿಸಿ ತಮ್ಮ ಮನೆಯಲ್ಲೇ ಹಾರೈಕೆ ಮಾಡಿದ ಗೆಳೆಯನ ಹೇಗೆ ಮರೆಯಲಿ? 

ನನ್ನ ಬರವಣಿಗೆಯ ದೊಡ್ಡ ಅಭಿಮಾನಿಯಾದ ಅವನು ನನ್ನ  ಮೊದಲ ಕವನ ಸಂಕಲನ ಸಾಲು ದೀಪಾವಳಿ ಬಿಡುಗಡೆಯಾದಾಗ ಆ ಪುಸ್ತಕದ ಬೆಲೆ ಎಪ್ಪತ್ತು ಇತ್ತು ಗೂಗಲ್ ಪೇ ನಲ್ಲಿ ಎಂಭತ್ತು ರೂ ಹಾಕಿದ .ಯಾಕೆ ಅಂತ ಪ್ರಶ್ನೆ ಮಾಡಿದ್ದಕ್ಕೆ ನನ್ನ ಗೆಳೆಯ ಕವಿಯಾಗಿದ್ದಾನೆ ,ಅವನ ಸಾಹಿತ್ಯಕ್ಕೆ ಬೆಲೆ ಕಟ್ಟಲಾಗದು ಆದರೂ ನಾನು ಹತ್ತು ರೂ ಅಷ್ಟೇ ಜಾಸ್ತಿ ಕೊಡುತ್ತಿರುವೆ  ಅದು ನನ್ನ ಸಂತೋಷ ನೀನು ಕೇಳಬಾರದು ಎಂದು ಬಾಯಿ ಮುಚ್ಚಿಸಿದ.ಮೊನ್ನೆ " ನನ್ನಮ್ಮ ನಮ್ಮೂರಿನ ಪ್ಲಾರೆನ್ಸ್ ನೈಟಿಂಗೇಲ್ " ಪುಸ್ತಕ ಪ್ರಕಟವಾದಾಗ ನೂರಿಪ್ಪತ್ತರ ಪುಸ್ತಕಕ್ಕೆ ನೂರೈವತ್ತು ಕೊಟ್ಟು ಖರೀದಿಸಿ ,ಪುಸ್ತಕದ ಮುಖಪುಟವನ್ನು ವಾಟ್ಸಪ್ ,ಪೇಸ್ ಬುಕ್ ಗಳಲ್ಲಿ ಶೇರ್ ಮಾಡಿ ತನ್ನದೇ ಪುಸ್ತಕ ಬಿಡುಗಡೆಯಾಗಿದೆಯೇನೋ ಎಂದು ಸಂಭ್ರಮಿಸಿದನು.
ನಾನೀಗ ಇರುವುದು ತುಮಕೂರು ಅವನು ಚಿತ್ರದುರ್ಗ ಆದರೂ
ನಮ್ಮ ಸ್ನೇಹ ಹೀಗೆಯೇ ಮುಂದುವರೆದಿದೆ .ಒಂದೇ ಕಡೆ ನಾವು ಸೇರಿ ಮನೆಕಟ್ಟಿಕೊಳ್ಳಬೇಕೆಂದು ಒಂದೇ ಬಡಾವಣೆಯಲ್ಲಿ ಸೈಟ್ ಕೊಂಡಿದ್ದೇವೆ ಅಲ್ಲಿ ಮನೆ ಕಟ್ಟುತ್ತೇವೋ ಇಲ್ಲವೋ ಗೊತ್ತಿಲ್ಲ. ಅವನ ಹೃದಯದಲ್ಲಿ ನನಗೆ ಬೇಕಾದಷ್ಟು, ಅವನ ಹೃದಯದಲ್ಲಿ ನನಗೆ ಬೇಕಾದಷ್ಟು ಜಾಗವಿರುವುದು ಮಾತ್ರ ಸತ್ಯ.

ಸಿಹಿಜೀವಿ
ಸಿ ಜಿ ವೆಂಕಟೇಶ್ವರ
ತುಮಕೂರು
9900925529

18 January 2022

ದಿನಕರ .ಹನಿ


 


*ದಿನಕರ*


ಅಲೆಗಳೇರಿ ಬಂದನು

ನೋಡಲ್ಲಿ  ದಿನಕರ|

ನಮಿಸೋಣ ನಾವು

ಮುಗಿಯುತ ಕರ||


*ಸಿಹಿಜೀವಿ*

ಸಿ ಜಿ ವೆಂಕಟೇಶ್ವರ

ಪ್ರಜಾಪ್ರಗತಿ ೧೮/೧/೨೨


 

ಆತ್ಮಾನಂದ .ಹನಿ

 

ಹೆಣ್ಣು ಹೊನ್ನು ಮಣ್ಣು

ನೀಡಬಹುದು ನಿನಗೆ

ಅರೆಕಾಲಿಕ ನೆಮ್ಮದಿ|

ಮಹದಾನಂದ, ಆತ್ಮಾನಂದ

ಲಭಿಸಬೇಕಾದರೆ ಮಣಿಯಬೇಕು

ಅವನ ಚರಣದಿ ||

17 January 2022

ಮಹಿಷನಾಗಿ ಸಿಹಿಜೀವಿ .ಆತ್ಮಕಥೆ ಭಾಗ ೨೨


 

ಮಹಿಷನಾಗಿ ಸಿಹಿಜೀವಿ.ಆತ್ಮಕಥೆ ೨೨

ನಾಟಕ ಸಂಗೀತ ಕಲೆ ಎಂದರೆ ನನಗೆ ಬಾಲ್ಯದಿಂದಲೂ ಬಲು ಆಸಕ್ತಿ ನಾನು ಮೊದಲು ನೋಡಿದ ನಾಟಕ ಶ್ರೀ "ದೇವಿ ಮಹಾತ್ಮೆ" ಅರ್ಥಾತ್ "ರಕ್ತಬಿಜಾಸುರ ವಧೆ" ಆಲೂರು ಪುಟ್ಟಾಚಾರ್ ಅವರು ಬರೆದು ನಿರ್ದೇಶಿಸಿದ ಆ ನಾಟಕ ನನಗೆ ಈಗಲೂ ಅಚ್ಚು ಮೆಚ್ಚು.

ಬಹುತೇಕ ಅನಕ್ಷರಸ್ಥರಿಗೆ ಪುಟ್ಟಾಚಾರ್ ರವರು ನಾಟಕ ಹೇಳಿಕೊಡುತ್ತಿದ್ದುದನ್ನು ನೋಡಲು ನಾವು ಪ್ರತಿದಿನ ರಾತ್ರಿ ಪ್ರಾಕ್ಟೀಸ್ ನೋಡಲು ಯರಬಳ್ಳಿಯ ರಂಗಪ್ಪನ ಗುಡಿಗೆ ಹೋಗುತ್ತಿದ್ದೆವು. ಅಲ್ಲಿ ನಮಗೆ ಹಾಸ್ಯ ಕುರುಕ್ಷೇತ್ರ ನಾಟಕದ  ಪ್ರಸಂಗಗಳಂತೆ ಕೆಲ ಅಮೂಲ್ಯವಾದ ಪ್ರಸಂಗಗಳನ್ನು ನೋಡಿ ಪುಕ್ಕಟೆ ಮನರಂಜನೆಗೆ ಕೊರತೆಯಿರುತ್ತಿರಲಿಲ್ಲ. ಮೊದ ಮೊದಲು ಹಾಡು ಹಾಡಲು ಬರದೇ , ಮಾತುಗಳನ್ನು ಸರಿಯಾಗಿ ಆಡದೆ ಹಾಸ್ಯ ಪಾತ್ರಗಳಂತೆ ಕಾಣುವ ಕಲಾವಿದರು ದೇವಿಯ ಕೃಪೆಯೋ ಎಂಬಂತೆ    ನಾಟಕದ ದಿನ ಹತ್ತಿರ ಬಂದಂತೆ ಪಾತ್ರಧಾರಿಗಳು ಉತ್ತಮವಾಗಿ ಹಾಡುಗಳು ಮತ್ತು ಮಾತುಗಳನ್ನು ಹೇಳುತ್ತಿದ್ದರು. ಅದಕ್ಕೆ ಹೇಳೋದು ಪ್ರಾಕ್ಟೀಸ್ ಮೇಕ್ಸ್ ಮ್ಯಾನ್ ಪರ್ಪೆಕ್ಟ್  ಎಂದು .

ನಾಟಕದ ದಿನ ಹತ್ತೂವರೆಗೆ ನಾಟಕ ಶುರುವಾದರೆ ನಾನು ಮತ್ತು ನನ್ನ ಗೆಳೆಯರು  ಸಂಜೆ ಏಳು ಗಂಟೆಗೆ ಚಾಪೆ ತೆಗೆದುಕೊಂಡು ಹೋಗಿ ಸ್ಟೇಜಿನ ಮುಂದೆ ಹಾಸಿ ನಾಟಕ ನೋಡಲು ಕುಳಿತುಬಿಡುತ್ತಿದ್ದೆವು.

ಒಂ ನಮೋ ಭವಾನಿ ತಾಯೇ..... ಎಂಬ ಪ್ರಾರ್ಥನೆಯ ಮೂಲಕ ಅರಂಭವಾಗುವ ನಾಟಕದ ಮೊದಲ ಸೀನ್ ಕಶ್ಯಪ ಬ್ರಹ್ಮ ನ ಅರಮನೆಯಲ್ಲಿ ನಾರದರ ಭೇಟಿಯ ಸಂಭಾಷಣೆ ಎಲ್ಲರ ಸೆಳೆಯುತ್ತಿತ್ತು. ರಕ್ತ ಬಿಜಾಸುರ, ಮಹಿಷಾಸುರ, ಶುಂಭ ,ನಿಶುಂಭರ ಆರ್ಭಟಗಳು, ಶ್ರೀದೇವಿ, ಶ್ರೀಕೃಷ್ಣ, ಬ್ರಹ್ಮ, ಮತ್ತು ಮಹೇಶ್ವರ ಇವರ ಸೌಮ್ಯ ಸ್ವಭಾವದ ಅಭಿನಯ ನೋಡುತ್ತಾ ನಿಜಕ್ಕೂ ನಾವೆಲ್ಲರೂ ಭಕ್ತಿ ಪರವಶದಿಂದ ನಾಟಕ ನೋಡುತ್ತಿದ್ದೆವು .ಶ್ರೀ ದೇವಿ ಪ್ರತ್ಯಕ್ಷವಾಗುವ ಸೀನ್ ನಲ್ಲಿ ರಂಗಸ್ಥಳದ ಮುಂದಿನ ಎಲ್ಲಾ ಪ್ರೇಕ್ಷಕರು ತಮಗರಿವಿಲ್ಲದೇ ಕೈಜೋಡಿಸಿ ವಂದಿಸುತ್ತಿದ್ದೆವು.

ನಾಟಕ ಮುಂದುವರೆದಂತೆ ದೇವಿಯು ಒಬ್ಬೊಬ್ಬ ಅಸುರರ ಸಂಹಾರ ಮಾಡುತ್ತಾ ಕೊನೆಯದಾಗಿ ರಕ್ತಬಿಜಾಸುರನ ಸಂಹಾರ ಮಾಡುವಾಗ ಮೂಡಣದಲಿ ಸೂರ್ಯ ಉದಯಿಸುವ ಲಕ್ಷಣ ಗೋಚರಿಸುತ್ತಿತ್ತು.

ನಾಟಕದ ನಂತರದ ದಿನ ನಾವು ಗೆಳೆಯರೆಲ್ಲಾ  ಸೇರಿ ರಂಗಪ್ಪನ ಗುಡಿಯಲ್ಲಿ ಕಲೆತು ಕಟ್ಟಿಗೆಯ ಗದೆ, ಬಿಲ್ಲು ಬಾಣ ಮಾಡಿಕೊಂಡು ನಾವೇ ಹಾಡುತ್ತಾ .ಮಾತು ಹೇಳುತ್ತಾ ನಾಟಕ ಆಡುತ್ತಿದ್ದೆವು . ಸೀನ್ , ಹಾರ್ಮೋನಿಯಂ , ಪ್ರೇಕ್ಷಕರು ಮಾತ್ರ ಇರುತ್ತಿರಲಿಲ್ಲ!

ಅಂದು ಹುಡುಗರ ಆಟವಾಗಿ ಆಡಿದ ದೇವಿ ಮಹಾತ್ಮೆ ನಾಟಕದಲ್ಲಿ ನಾನು ದೊಡ್ಡವನಾದ ಮೇಲೆ ಮಹಿಷಾಸುರ ಪಾತ್ರವನ್ನು ಮಾಡುತ್ತೇನೆಂದು ಕನಸಲ್ಲೂ ಎಣಿಸಿರಲಿಲ್ಲ.
ಮೊನ್ನೆ ನನ್ನ ಕಿರಿಯ ಮಗಳು ನಾನು ಅಭಿನಯಿಸಿದ ಮಹಿಷಾಸುರ ಪಾತ್ರದ ಪೋಟೊ ನೋಡಿದಾಗ ಇದೆಲ್ಲವೂ ನೆನಪಾಯಿತು.

ಸಿಹಿಜೀವಿ.
ಸಿ ಜಿ ವೆಂಕಟೇಶ್ವರ

ಸಿಹಿಜೀವಿಯ ಹನಿ


 #ಹಾಸ್ಯಬರಹ 


#ಸಿಹಿಜೀವಿಯ_ಹನಿ


ಬಹಳ ಸಲ ಅವಳು

 ನನಗೆ ಕೊಡುವ 

ಸಲಹೆಗಳು 

ಸಮಯೋಚಿತ| 

ಅವುಗಳಲ್ಲಿ ಬಹುತೇಕ

 ಅದು ತಾ. ..ಇದು ತಾ. ..||


ಸಿಹಿಜೀವಿ

 ಸಿ ಜಿ ವೆಂಕಟೇಶ್ವರ .

16 January 2022

ಮಹಾಬಯಲು. ವಿಮರ್ಶೆ



ಮಹಾಬಯಲು .ಕೃತಿ ವಿಮರ್ಶೆ.


  ವೃತ್ತಿಯಲ್ಲಿ ವೈದ್ಯರಾದ ಡಾ. ಎಸ್ ಪರಮೇಶ್ ರವರು ನಡೆದಾಡುವ ದೇವರಾದ ಶ್ರೀ ಶಿವಕುಮಾರ ಸ್ವಾಮೀಜಿರವರ ಕುರಿತಾದ ಪುಸ್ತಕ "ಮಹಾಬಯಲು" ಓದುತ್ತಿದ್ದರೆ ಸ್ವಾಮೀಜಿಯವರು ನಮ್ಮ ಪಕ್ಕ ಕುಳಿತು ಮಾತನಾಡುವ ಅನುಭವವಾಗುತ್ತದೆ.


ಲೇಖಕರು ಹತ್ತು ವರ್ಷದ ಬಾಲಕನಿದ್ದಾಗಿನಿಂದ ಅವರು ಶಿವೈಕ್ಯವಾಗುವವರೆಗೆ ಅವರೊಂದಿಗೆ ಒಡನಾಡಿದ ಪ್ರಸಂಗಗಳನ್ನು ಕಣ್ಣಿಗೆ ಕಟ್ಟುವಂತೆ ಚಿತ್ರಿಸಿದ್ದಾರೆ.



ಶ್ರೀಗಳ    ದಿನಚರಿಯೇ ಅಚ್ಚರಿ! ಸೂರ್ಯನ ಹಾಗೆ ಬದಲಾವಣೆ ಆಗದ ಹಾಗಿರುತ್ತಿತ್ತು. ಬೆಳಗಿನ ಜಾವ 2.30 ಎಚ್ಚರವಾಗಿ ರಾತ್ರಿ 11 ಗಂಟೆಯವರೆಗೂ ನಿರಂತರವಾಗಿ ಕೆಲಸ ಕಾರ್ಯಗಳನ್ನು ಮಾಡುತ್ತಿದ್ದರು. ಎದ್ದ ತಕ್ಷಣ ಲಘು ವ್ಯಾಯಾಮ, ಧ್ಯಾನ ಮಾಡಿ ಸ್ನಾನಪೂಜಾದಿ ಶಿವಯೋಗ ಮಾಡಿ ನಂತರ ಕಛೇರಿಗೆ ಬಂದು ದಾಸೋಹ, ಶಿಕ್ಷಣ ಸಂಸ್ಥೆಗಳ ಬಗ್ಗೆ ವಿಚಾರ ಮಾಡಿ ಭಕ್ತರ ಭೇಟಿ ಮಾಡಿ ನಂತರ ಹೊರಗಿನ ಪೂಜಾ ಕಾರ್ಯಕ್ರಮಗಳಿಗೆ ಹೋಗಿ ಬರುತ್ತಿದ್ದರು. ಸಂಜೆಗೆ ಎಲ್ಲಾ ಜಮೀನುಗಳಿಗೆ ಹೋಗುವಂತಹದ್ದು. ಶ್ರಮದಾನ ಕಾರ್ಯಕ್ರಮಗಳಿಗೆ ಹೋಗುತ್ತಿದ್ದರು. ನ೦ತರ ಸಂಜೆಯ ಸಾಮೂಹಿಕ ಪ್ರಾರ್ಥನೆಗೆ ಎಂತಹ ಬಿಡುವಿಲ್ಲದ ವೇಳೆಯಲ್ಲೂ ಹಾಜರಾಗಿ ಮಕ್ಕಳಿಗೆ ಪ್ರಾರ್ಥನೆಯ ಮಹತ್ವ ತಿಳಿಸುತ್ತಿದ್ದರು. ನಂತರ ಭದ್ರಾಸನದಲ್ಲಿ ಕುಳಿತು ಬಂದ ಭಕ್ತಾದಿಗಳಿಗೆ ದರ್ಶನ ನೀಡುತ್ತಿದ್ದರು. ಬಂದಂಥವರಿಗೆ ಅವರ ಕಷ್ಟ ಸುಖಗಳನ್ನ ಕೇಳಿ ಆಶೀರ್ವದಿಸುತ್ತಿದ್ದರು. ರಾತ್ರಿ 9 ರ ನಂತರ ವಿದ್ಯಾರ್ಥಿ ನಿಲಯಗಳಿಗೆ ಭೇಟಿ ನೀಡಿ ನಂತರ ಶಿವಪೂಜೆ ಪ್ರಸಾದ ಸ್ವೀಕರಿಸಿ ವಿಶ್ರಾಂತಿ ಪಡೆಯುತ್ತಿದ್ದರು. ಎಂದು  ಶ್ರೀಗಳ ಬಗ್ಗೆ ಪ್ರಸ್ತುತ ಮಠದ ಸ್ವಾಮೀಜಿ ಗಳಾದ ಸಿದ್ದಲಿಂಗ ಮಹಾಸ್ವಾಮಿಗಳು  ನೀಡಿರುವ ವಿವರಣೆ ಇಂದಿನ ಸರ್ವರಿಗೂ ಮಾದರಿ .


ಈ ಪುಸ್ತಕಕ್ಕೆ ಮುನ್ನುಡಿಯನ್ನು ಬರೆದ ಡಾ.ಗೋ .ರು .ಚ ರವರು 

ಸಿದ್ಧಗಂಗಾ ಕ್ಷೇತ್ರವನ್ನು ಲೋಕಸೇವೆಯ ಮಹಾಮಣಿಹದ ಸೋಜಿಗದ ಕೇಂದ್ರವನ್ನಾಗಿಸಿದ ಈ ಕಾಯಕಯೋಗಿಯನ್ನು, ದಾಸೋಹದ ದಿವ್ಯವನ್ನು, ಅನುಭಾವದ ಅನಂತವನ್ನು, ಪಾವಿತ್ರ್ಯತೆಯ ಪಾದುಕೆಯನ್ನು, ಸಂಕಲ್ಪಸಿದ್ಧಿಯ ವಾಕ್ಕನ್ನು, ನೇಗಿಲಯೋಗದ ಋಷಿಯನ್ನು, ಜ್ಞಾನಯೋಗದ ಜ್ಯೋತಿಯನ್ನು, ಸಕಲ ಜೀವರಾಶಿಯ ಲೇಸನ್ನು, ನಿಸರ್ಗಪ್ರೀತಿಯ ಸಾಗರವನ್ನು, ಜೀವಾನುಕಂಪದ ಆಗರವನ್ನು, ಜನಪ್ರೇಮದ ಜಂಗಮವನ್ನು, ಗಂಭೀರ ಚಿಂತನೆಯ ಘನವನ್ನು, ಮಕ್ಕಳ ಪಾಲಿನ ಕಕ್ಕುಲತೆಯನ್ನು, ಅನಾಥರ ಬಗೆಗಿನ ಕಾರುಣ್ಯವನ್ನು, ಶಿಕ್ಷಣಸೇವೆಯ ಶೈಲವನ್ನು, ಸರ್ವಸಮಾನತೆಯ ಸಮದರ್ಶಿಯನ್ನು ಶರಣ ಸಂಸ್ಕೃತಿಯ ಸಾಕಾರವನ್ನು ಕುರಿತು ಯಾರು ಎಷ್ಟು ಬರೆದರೂ ಸಾಲದು, ಪೂಜ್ಯರ ಬದುಕು ಅಳೆಯಲಾಗದ ಆಕಾಶ, ಎಣಿಸಲಾಗದ ನಕ್ಷತ್ರ; ಆದರೂ ಅವರ ಬಗೆಗೆ ಶ್ರದ್ಧಾಭಕ್ತಿಯಿದ್ದವರು ತಮ್ಮ ತಮ್ಮ ಶಕ್ತಿಗೆ ಸಾಮರ್ಥವಿದ್ದಷ್ಟು ಬರೆದಿದ್ದಾರೆ ಹಾಗೂ ಪ್ರಕಟಿಸಿದ್ದಾರೆ. ಆ ಎಲ್ಲ ಸಾಹಿತ್ಯದಲ್ಲಿ ಪೂಜ್ಯರ ಬದುಕಿನ ಬಹುತೇಕ ಸಂಗತಿಗಳು ದಾಖಲೀಕರಣವಾಗಿವೆ.ಎಂದಿರುವರು


ನೂರಾ ಅರವತ್ತು ಪುಟಗಳ ಈ ಕೃತಿಯಲ್ಲಿ ಮೂವತ್ತೇಳು ಅಧ್ಯಾಯಗಳಿದ್ದು ,ಲೇಖಕರು ತಾವು ಕಂಡ  ಶ್ರೀಗಳ ಬಗ್ಗೆ  ಮಾಹಿತಿಯನ್ನು ಹಂಚಿಕೊಂಡಿರುವರು.


 ತಾಯಿಗೆ ಮಗು ಕಾದಂತೆ ಕಾಯುತ್ತಾ ನಿಂತಿತ್ತು ನಮ್ಮೂರು ಎಂಬ ಅಧ್ಯಾಯದಲ್ಲಿ ಅವರು ಮೊದಲು ಶ್ರೀಗಳ ಭೇಟಿ ಮಾಡಿದ ಚಿತ್ರಣ ನೀಡಿರುವರು.   ಜಾತ್ರೆ ಗೆ ಬಂದಾಗ ಜಾಗವಿರದೆ   ಶ್ರೀಗಳ ದರ್ಶನದ ಮಂಚದ ಕೆಳಗೆ ಮಲಗಿದ್ದೆವು ಎಂಬ ಅಧ್ಯಾಯದಲ್ಲಿ ತಮ್ಮ ಅದೃಷ್ಟದ ಬಗ್ಗೆ ಉಲ್ಲೇಖ ಮಾಡಿರುವರು.

ಮಠದ ಆಶ್ರಯ ಅರಸಿ ಬರುವ  ಪ್ರತಿಯೊಂದು ಮಗುವಿನ ಅಡ್ಡಿಷನ್ ಫಾರಂಗೆ ಸಹಿ ಹಾಕುತ್ತಿದ್ದ ಶ್ರೀಗಳು  ಮಕ್ಕಳಿಗೆ ಹೇಳುವ ಬುದ್ದಿ ಮಾತು ಇಂದಿಗೂ ಪ್ರಸ್ತುತ.


ಇನ್ನೂ ಈ ಕೃತಿಯಲ್ಲಿ ನನಗೆ ಬಹಳ ಇಷ್ಟವಾದ ಅಧ್ಯಾಯಗಳೆಂದರೆ 

 'ಬುದ್ದೀ' ಅನ್ನೋದ್ರಲ್ಲಿ 'ಅಮ್ಮ' ಎನ್ನುವ ಕೂಗಿತ್ತು,

ಭಕ್ತಿಯಿಂದ ನೀಡಿದ ಪೊರಕೆ ದೇವರ ಗುಡಿ ಮುಟ್ಟಿತ್ತು, ಕಾಳುಗಳ ಸಾಂಬಾರ್' ಎಂದರೆ ಶ್ರೀಗಳಿಗೆ ಇಷ್ಟ,

ಮಿತಿಯಾದ ಆಹಾರವೇ ಕಾಯಕದ ಶಕ್ತಿ,  ಆರ್ಬಿಐ ಅಧಿಕಾರಿಗಳೇ ತಬ್ಬಿಬ್ಬಾಗಿದ್ದರು!

 ಒಂದರಿಂದ ಇನ್ನೊಂದು ಕೆಲಸಕ್ಕೆ ತೊಡಗುವುದೇ ವಿಶ್ರಾಂತಿ, ಇಷ್ಟೊಂದು ಕಾಣಿಕೆ ನೀಡಿ ನಿನಗೇನು ಮಾಡುತ್ತೀಯಾ?

 ಹಳೆಯ ಮಠದಲ್ಲಿ ಆಗುವ ಸಣ್ಣ ಬದಲಾವಣೆಯನ್ನೂ ಸಹಿಸುತ್ತಿರಲಿಲ್ಲ! ಶ್ರೀಗಳಿಗೆ ಎಂಡೋಸ್ಕೋಪಿ ಮಾಡಲು ನಡೆದ ವ್ಯಾಪಕ ಚರ್ಚೆ,  ಹಳೆಯ ಮಠ ಮಿನಿ ಐಸಿಯುವಿನಂತೆ ಬದಲಾಗಿತ್ತು! 


ಇದರ ಜೊತೆಗೆ ಶ್ರೀಗಳ ಕಡೆಯ ದಿನಗಳಲ್ಲಿ ಆಸ್ಪತ್ರೆಯಲ್ಲಿ ಕಳೆದ ವಿವರಗಳನ್ನು ಓದುವಾಗ ಮನಸ್ಸಿಗೆ  ಬಹಳ ನೋವಾಗುತ್ತದೆ.ಆದರೂ ಅವರು ಮಾನವ ಕುಲಕ್ಕೆ ನೀಡಿರುವ ಸೇವೆಯನ್ನು ನೆನೆದು ಸಂತಸವಾಗುತ್ತದೆ .ನಮ್ಮ ನಾಡಿನಲ್ಲಿ ಅಂತಹ ಮಹಾಪುರುಷರು ಪುನಃ ಹುಟ್ಟಿ ಬರಲಿ ಎಂಬ ಬಯಕೆಯಾಗುತ್ತದೆ.


ಈ ಪುಸ್ತಕ ಓದುವಾಗ ವಿಷಯಕ್ಕೆ ಪೂರಕವಾದ ರೇಖಾಚಿತ್ರಗಳು ಮತ್ತು ಮುಖಪುಟ ವಿನ್ಯಾಸ ಮತ್ತು ಒಳಪುಟ ವಿನ್ಯಾಸ ನಮ್ಮ ಗಮನ ಸೆಳೆಯುತ್ತವೆ. ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಕಲಾವಿದರಾದ ಕೋಟೆ ಕುಮಾರ್ ಮತ್ತು ಅವರ ಗೆಳೆಯರಾದ ಗುರುದತ್ ರವರ ಕಲಾಕುಸುರಿ ಪುಸ್ತಕಕ್ಕೆ ಹೊಸ ಮೆರಗು ನೀಡಿದೆ.

ನೀವೂ ಒಮ್ಮೆ ಈ ಮಹಾಬಯಲು ಪುಸ್ತಕ ಓದಿ ಶ್ರೀಗಳ ನೆನಪುಗಳು ನಿಮ್ಮನ್ನು ಹರಸಲಿ.


ಪುಸ್ತಕದ ಹೆಸರು: ಮಹಾಬಯಲು

ಪ್ರಕಾಶನ: ಪರಂಜ್ಯೋತಿ ಪ್ರಕಾಶನ

ಬೆಲೆ: 150 


ಸಿಹಿಜೀವಿ

ಸಿ ಜಿ ವೆಂಕಟೇಶ್ವರ

ತುಮಕೂರು

9900925529


 

ಗತ ನೆನಪುಗಳ ಸ್ಮರಿಸೋಣ.


 



ಇಂದು ಬೆಳಿಗ್ಗೆ ಡೆಕ್ಕನ್ ಹೆರಾಲ್ಡ್ ಪತ್ರಿಕೆಯ ಒಂದು ಅಂಕಣ ಓದುವಾಗ   ಅಮೇರಿಕಾದ ಲೇಖಕರಾದ ರಿಕ್ ವಾರೆನ್ ಅವರು ಹೇಳಿದ ಮಾತು ನನ್ನನ್ನು ಸೆಳೆಯಿತು.ಅದು " ನಾವು ಭೂತಕಾಲದಿ ಉದಯಿಸಿದವರು ಆದರೆ ಅದೇ ಭೂತದಲ್ಲಿ ಬಂಧಿಯಾಗಬಾರದು" ಹೌದಲ್ಲವೇ ನಾವು ಇಂದು ಏನಾಗಿದ್ದೇವೋ ಅದಕ್ಕೆ ಗತಕಾಲದೊಂದಿಗೆ ಖಂಡಿತವಾಗಿಯೂ ಸಂಬಂಧವಿದೆ. ಆದರೆ ಅದನ್ನೇ ನೆನೆಪು ಮಾಡಿಕೊಂಡು ಪ್ರತಿದಿನ ಪ್ರತಿಕ್ಷಣ ಕುಳಿತರೆ ವರ್ತಮಾನದಲ್ಲಿ ಜೀವನ ಸಾದ್ಯವೇ?  ಭೂತವೂ ಬೇಕು , ವರ್ತಮಾನದಿ ಬದುಕಬೇಕು ಮತ್ತು ತನ್ಮೂಲಕ ಭವಿಷ್ಯವನ್ನು ಕಟ್ಟಿಕೊಳ್ಳಬೇಕು.


ಸವಿನೆನಪುಗಳು ಬೇಕು ಸವಿಯಲೀ ಬದುಕು ಎಂಬ ಕವಿವಾಣಿಯಂತೆ ಸವಿ ನೆನಪುಗಳು ನಮ್ಮನ್ನು ಸಂತಸವಾಗಿಡಲು ನಮ್ಮ ಆನಂದವನ್ನು ಇಮ್ಮಡಿಗೊಳಿಸಲು ಖಂಡಿತವಾಗಿಯೂ ಬೇಕು. ಆದರೆ ಬಹುತೇಕ ಬಾರಿ ಬೇಡವೆಂದರೂ ನಮಗಾದ ನೋವು, ಅವಮಾನ, ತೊಂದರೆಗಳೇ ದುತ್ತೆಂದು ಬಂದು ನಮ್ಮ ಮೇಲೆಯೇ ಎರಗಿ ನಮ್ಮ ಮನೋಬಲವನ್ನು ಕುಗ್ಗಿಸಿ ನಮ್ಮ ಕಡೆ ಕುಹಕದ ನಗೆ ಬೀರಿ ಹಂಗಿಸುತ್ತವೆ.


ವರ್ತಮಾನದಲದಲಿ ಜೀವಿಸಿ ಎಂದು ಸಾಧು ಸಂತರು, ಹಿರಿಯರು, ತಿಳಿದವರು ,ಹಿತೈಷಿಗಳು, ವ್ಯಕ್ತಿತ್ವ ವಿಕಸನದ ಗುರುಗಳು ದಿನಗಟ್ಟಲೆ ಉಪನ್ಯಾಸ ನೀಡಿದರೂ ಅವರೇಳಿದಷ್ಟು ಸಲೀಸಾಗಿ ವರ್ತಮಾನದಲ್ಲಿ ಜೀವಿಸಲು ಸಾದ್ಯವೇ? ಕಷ್ಟ ಸಾಧ್ಯ. ಅವರ ಮಾತುಗಳಲ್ಲಿ ಸತ್ಯವಿದೆ  ಆದರೂ ಆಚರಣೆಯಲ್ಲಿ ಅಷ್ಟು ಸುಲಭವಲ್ಲ . ವರ್ತಮಾನದಲ್ಲಿ ಜೀವಿಸುವ  ಪ್ರಯತ್ನ ಜಾರಿಯಲ್ಲಿರಲಿ.


ಕೆಲವೊಮ್ಮೆ ನಮ್ಮ ಹಳೆಯ ನೆನಪುಗಳು ಮಧುರವೂ ಹೌದು .ಇತ್ತೀಚಿನ ದಿನಗಳಲ್ಲಿ"  ಪಾಸ್ಟ್ ಲೈಪ್ ರಿಗ್ರೆಷನ್ ಟೆಕ್ನಿಕ್"  ಎಂಬ ಚಿಕಿತ್ಸಾ ಪದ್ದತಿಯು ಬಹಳ ಜನಪ್ರಿಯವಾಗುತ್ತಿದೆ. ನಮ್ಮ ಕೆಲ ಅನಾರೋಗ್ಯದ ಸಮಸ್ಯೆಗಳಿಗೆ ಅಲೋಪತಿ, ಹೋಮಿಯೋಪತಿ ಮುಂತಾದ ಚಿಕಿತ್ಸಾ ಪದ್ಧತಿಯಲ್ಲಿ ಗುಣವಾಗದ ಖಾಯಿಲೆಗಳು ನಮ್ಮ ಗತಕಾಲದ ನೆನಪುಗಳು ಮರುಕಳಿಸುವ ಚಿಕಿತ್ಸೆಯ ಮೂಲಕ ಗುಣಪಡಿಸುವುದನ್ನು ಕಂಡಿದ್ದೇವೆ. ಈ ಕೇಂದ್ರಗಳು ‌ಮೊದಲು ವಿದೇಶಗಳಲ್ಲಿ ಜನಪ್ರಿಯವಾಗಿ ಈಗ ಬೆಂಗಳೂರಿನಂತಹ ನಗರಗಳಲ್ಲೂ ತಲೆಎತ್ತಿವೆ. 

ಇಂದಿನ ಆಧುನಿಕತೆಯ ಭರಾಟೆ, ಮಾಲಿನ್ಯ, ದಿನಕ್ಕೊಂದು ರೋಗದ ಜನನ, ಸಂಬಂಧಗಳಲ್ಲಿ ಬಿರುಕು, ಅತಿಯಾದ ಯಾಂತ್ರೀಕರಣ, ಎಲ್ಲದರಲ್ಲೂ ಕೃತಕತೆ, ಹಣವೇ ಶ್ರೇಷ್ಠ ಎಂಬ ಭಾವನೆಗಳನ್ನು ನೋಡಿದಾಗ ನಮ್ಮ ಸುಮಧುರ ಬಾಲ್ಯ, ನಮ್ಮ ಕಾಲೇಜು ದಿನಗಳು, ಮೊದಲ ಕ್ರಷ್, ಗೆಳೆಯರೊಡನೆ ಮಾಡಿದ ಪ್ರವಾಸ ನೆನದಾಗ ಏನೋ ಒಂದು ರೀತಿಯ ಆನಂದ ನಮ್ಮನ್ನು ಆವರಿಸಿಕೊಳ್ಳುವುದು ಸುಳ್ಳಲ್ಲ. ಆದ್ದರಿಂದ ಗೆಳೆಯರೇ ದುಡ್ಡು ಕೊಟ್ಟು ಗತಕಾಲಕ್ಕೆ ಹಿಂದಿರುಗುವ ಥೆರಪಿಗೆ ಒಳಗಾಗದೆ ಪ್ರತಿದಿನ ಅಥವಾ ವಾರಕ್ಕೊಮ್ಮೆ ಕೆಲ ಕಾಲವಾದರೂ ನಮ್ಮ ಬಾಲ್ಯದ ಗತವೈಭವಕ್ಕೆ ಮರಳೋಣ ಸುಂದರ ಗತ ನೆನಪುಗಳ ನೆನೆಯೋಣ ಸಂತಸದ ಮಳೆಯಲಿ ನೆನೆಯೋಣ .


ಸಿಹಿಜೀವಿ

ಸಿ ಜಿ ವೆಂಕಟೇಶ್ವರ.


ಕಾಗದ.ಹನಿ

 




ನಿನ್ನ ಸೌಂದರ್ಯವನು ಹೊಗಳಿ

ಕವಿತೆ ಬರೆಯಲು ಸಿಗುತ್ತಿಲ್ಲ ಪದ

ನನ್ನ ಹೃದಯಕೆ ನೀ ಬಂದು

ಖಾಲಿಯಾದ ನನ್ನದೆಯ ಹಾಳೆಯಲಿ

ಬರೆದುಕೋ ನಿನಗೇ ಒಂದು ಕಾಗದ ||


ಸಿಹಿಜೀವಿ.

ಕಾವೇರಿಯ ಹನಿಗಳು


 




ಕಾವೇರಿ ಹನಿಗಳು 



ಮಾತು ಕಥೆ 


ಜಲವಿವಾದಗಳು ಎಂದಿಗೂ

ಇದ್ದದ್ದೆ ಅದೊಂದು ಹಳೇ ಕಥೆ||

ಖಂಡಿತವಾಗಿಯೂ ಬಗೆಹರಿವುದು

ನಡೆದರೆ ಎಲ್ಲರ ನಡುವೆ ಮುಕ್ತ ಮಾತುಕತೆ||


ರಾಜಕಾರಣ



ರಾಜಕೀಯಪ್ರತಿಷ್ಠೆ ಮತ್ತು ಅತಿಯಾಸೆ 

ಜಲವಿವಾದಗಳಿಗೆ ಮೂಲಕಾರಣ||

ರಾಜ್ಯಗಳ ಮಧ್ಯ ಸೌಹಾರ್ದ ಮಾತುಕತೆಯಾಗಲಿ

ನಿಲ್ಲಿಸಿ ಬಿಡಲಿ ಸ್ವಾರ್ಥ ರಾಜಕಾರಣ||



೩ 

ನೀವೇರಿ 


ಬೈಯುತಿಹಳು ನಮ್ಮನೆಲ್ಲ 

ಪಾಪ ತೊಳೆಯುವ ತಾಯಿ ಕಾವೇರಿ||

ನೀವು  ಜಗಳವಾಡಲು  ನನ್ನ ಹೆಸರೇಕೆ?

ನಿಮ್ಮ ಜಗಳಕೆ ಕಾರಣ ನಾನಲ್ಲ ನೀವೇರಿ||



ಸಿಹಿಜೀವಿ

ಸಿ ಜಿ ವೆಂಕಟೇಶ್ವರ




15 January 2022

ಸಿಹಿಜೀವಿಯ ದಿನಚರಿ


 

ಸಿಹಿಜೀವಿಯ ದಿನಚರಿ
 ಸಂಕ್ರಾಂತಿ ಹಬ್ಬದ ದಿನ

ಬೆಳಿಗ್ಗೆ ಬೇಗ ಎದ್ದು ನಿತ್ಯಕರ್ಮ ಮುಗಿಸಿ ದಿನಪತ್ರಿಕೆ ಓದಿದೆನು. ಮನೆಯವರೆಲ್ಲರೂ ಸ್ನಾನ ಮಾಡಿ ಪೂಜೆ ಮಾಡಲು ಸಿದ್ದರಾದರು .ವಾರದಿಂದ ಕಷ್ಟ ಪಟ್ಟು ಇಷ್ಟ ಪಟ್ಟು  ತಯಾರಿಸಿದ ಎಳ್ಳು ಬೆಲ್ಲ ದೇವರಿಗೆ ನೈವೇದ್ಯ ಮಾಡಿ ಮನೆಯವರಿಗೆಲ್ಲ ಹಂಚಿ ತಿಂದು ನಲಿದೆವು.
ನಿನ್ನೆ ದಿನ ಶಾಪಿಂಗ್ ಮಾಡಿ ತಂದ ಅವರೇಕಾಯಿ, ಕಬ್ಬು ದೇವರಿಗೆ ನೈವೇದ್ಯ ಮಾಡುವುದನ್ನು ಮರೆಯಲಿಲ್ಲ.
ನಂತರ ಸಿಹಿ ಮತ್ತು ಖಾರ ಪೊಂಗಲ್ ಸವಿದೆವು. ಬಹುದಿನಗಳ ಹಿಂದೆ ಓದಿದ್ದ ಆವಿಷ್ಕಾರದ ಹರಿಕಾರ ಎಂಬ ಪುಸ್ತಕಕ್ಕೆ ವಿಮರ್ಶೆ ಬರೆದು ನನ್ನ ಬ್ಲಾಗ್ ನಲ್ಲಿ ಪ್ರಕಟ ಮಾಡಿದೆ. ವಾಸು ಸಮುದ್ರವಳ್ಳಿ ಅವರು ಬರೆದ ಮಕ್ಕಳ ಕವಿತೆಗಳ ಪುಸ್ತಕ "ಉಂಡಾಡಿ ಗುಂಡ" ಓದಿ ವಿಮರ್ಶೆ ಬರೆದು ನನ್ನ ಬ್ಲಾಗ್ ಮತ್ತು ಪ್ರತಿಲಿಪಿಯಲ್ಲಿ ಪ್ರಕಟಮಾಡಿದೆನು. ಡಾ.ಪರಮೇಶ್ ರವರು ತುಮಕೂರಿನ ಸಿದ್ದಗಂಗಾ ಮಠದ ಶಿವಕುಮಾರ ಸ್ವಾಮೀಜಿಗಳ ಕುರಿತಾದ "ಮಹಾಬಯಲು" ಎಂಬ ಪುಸ್ತಕ ಓದಲು ಶುರುಮಾಡಿದೆ.

ನನ್ನ ವಿದ್ಯಾರ್ಥಿ ವಿಶ್ವನಾಥ್ ಬರೆದ ಕವನ ಸಂಕಲನದ ಕರಡು ಪ್ರತಿಯನ್ನು ಓದಿ ಮುನ್ನುಡಿ ಬರೆಯಲು ಆರಂಭಿಸಿದೆ.
ಮಧ್ಯಾಹ್ನ ಸ್ವಲ್ಪ ಹೊತ್ತು ವಿಶ್ರಾಂತಿ ಪಡೆದೆನು.
ಸಂಜೆ ನನ್ನ ಮಕ್ಕಳು ಮನೆಗೆ ಬರುವವರಿಗೆ ಎಳ್ಳು ಬೆಲ್ಲ ವಿತರಣೆ ಮಾಡಲು ಸಿದ್ದವಾದ ಬಗೆ ಸಂತಸವಾಯಿತು .
ಮನೆಯವರೆಲ್ಲರೂ ಕುಳಿತು
ಅಪರೂಪಕ್ಕೆ ಟೀವಿಯಲ್ಲಿ ಯುವರತ್ನ ಚಿತ್ರ ನೋಡಿದೆವು . ಆದರೂ ಸಂಜೆಯ ಹೊತ್ತಿಗೆ ನಮ್ಮ ಮಾವನವರಾದ ಕೃಷ್ಣಮೂರ್ತಿ ರವರ ಹಾರ ಹಾಕಿದ ಭಾವಚಿತ್ರ ನೋಡಿ ಬೇಡವೆಂದರೂ ಯಾಕೊ ಮನಸ್ಸು ಭಾರವಾಯಿತು. ಕಳೆದವರ್ಷ ನಮ್ಮೊಂದಿಗೆ ಹುಡುಗರಂತೆ ಚಟುವಟಿಕೆಯಿಂದ ಇದ್ದು ನಮ್ಮನೆ ಹಬ್ಬದಲ್ಲಿ ಪಾಲ್ಗೊಂಡ ಮಾವ ಈಗ ನಮ್ಮೊಂದಿಗೆ ಇಲ್ಲ ಅಂದರೆ ನಮ್ಮ ಕೈಯಲ್ಲಿ ಏನೂ ಇಲ್ಲ ಅವನಾಟ ಎಂದು ಯೋಚಿಸುತ್ತಾ ಹಾಸಿಗೆಗೆ ಹೋದರೆ ನಿದ್ರೆ ಹತ್ತಲು ಯಾಕೋ ಬಹಳ ಹೊತ್ತು ಹಿಡಿಯಿತು....

ಸಿಹಿಜೀವಿ
ಸಿ ಜಿ ವೆಂಕಟೇಶ್ವರ.

ಉಂಡಾಡಿ ಗುಂಡ .ವಿಮರ್ಶೆ.


 


ಉಂಡಾಡಿ ಗುಂಡ. ಕೃತಿ ವಿಮರ್ಶೆ


ಕೇಂದ್ರ ಕನ್ನಡ ಸಾಹಿತ್ಯ ವೇದಿಕೆಯಲ್ಲಿ ಪರಿಚಿತರಾದ ವಾಸು ಎಂದೇ ಪರಿಚಿತವಾಗಿರುವ ಸಮುದ್ರವಳ್ಳಿ ವಾಸು ರವರ ಮಕ್ಕಳ ಕವನಗಳ ಸಂಕಲನ  ಉಂಡಾಡಿ ಗುಂಡ ಪುಸ್ತಕ ಓದಿದೆ.ಇದರಲ್ಲಿ ಮಕ್ಕಳಿಗೆ ಬಹಳ ಇಷ್ಟವಾಗುವ ಮೂವತ್ತೈದು ಕವನಗಳಿವೆ.ನೀವು ಕೂಡಾ ಓದಿ    ಇವು ದೊಡ್ಡವರಿಗೂ ಇಷ್ಟವಾಗುತ್ತವೆ. 


 ಸಮುದ್ರವಳ್ಳಿ  ವಾಸುರವರು ಹಾಸನ ಜಿಲ್ಲೆಯ ಆಲೂರು ತಾಲ್ಲೂಕಿನ ಸಮುದ್ರವಳ್ಳಿ ಎಂಬ ಗ್ರಾಮದಲ್ಲಿ ಜನಿಸಿದವರು ರೈತ ಕುಟುಂಬದಲ್ಲ ಜನಿಸಿದ ಇವರು ಬಾಲ್ಯದಲ್ಲಿಯೇ ಸಾಹಿತ್ಯಾಸಕ್ತಿಯ ಗೀಳನ್ನು ಹೊಂದಿದ್ದು ನಾಡಿನ ವಿವಿಧ ಪತ್ರಿಕೆಗಳಲ್ಲಿ ಲೇಖನಗಳು , ಕವಿತೆಗಳು, ಕಥೆಗಳು ಪ್ರಕಟಗೊಂಡಿವೆ. ಈಗಾಗಲೇ ಸಿಹಿಮುತ್ತು ಎಂಬ ಚುಟುಕು ಸಂಕಲನ, ಯಡವಟ್ಟು ವಾಸು ಎಂಬ  ಹಾಸ್ಯ ಲೇಖನ  ಮಕ್ಕಳ ಕಿರುನಾಟಕಗಳು, ಹುಚ್ಚುತ್ತಿ ಎಂಬ ಕಥಾ ಸಂಕಲನ, ಮಲೆನಾಡಿನ ಮಾರ್ಗದಾಳುಗಳು ಎಂಬ  ಕಾದಂಬರಿ,ಧಣ ಢಣ ಘಂಟೆ ಬಾರಿಸಿತು ಎಂಬ ಮಕ್ಕಳ ಕವನಗಳ ಸಂಕಲನ ಸಿಂಗಾರಿ ಎಂಬ  ಕಥಾಕವನ ಸಂಕಲನ , ನನ್ನಾಕೆ ಹೇಳಿದ್ದು ಎಂಬ  ಹನಿಗವನ ಸಂಕಲನ, ಅಂತರಂಗದ ಅಳಲು ಎಂಬ ಕವನ ಸಂಕಲನ ಪ್ರಕಟಮಾಡಿದ್ದಾರೆ ಪ್ರಸ್ತುತ ಉಂಡಾಡಿ ಗುಂಡ ಎಂಬ ಮಕ್ಕಳ ಕವನಗಳು ಮಕ್ಕಳ ಮನಗೆಲ್ಲುವುದರಲ್ಲಿ ಸಂದೇಹವಿಲ್ಲ.   ಇವರ ಮಲೆನಾಡಿನ ಮಾರ್ಗದಾಳುಗಳು ಕಾದಂಬರಿ ಎರಡನೇ ಮುದ್ರಣಗೊಂಡು ಓದುಗರ ಮನಗೆದ್ದ ರೀತಿಯಲ್ಲಿ  ಈ ಪುಸ್ತಕವೂ ಓದುಗರ ತಲುಪಲಿ ಎಂದು ಹಾರೈಸುವೆ .


ಪ್ರಸ್ತುತ ಉಂಡಾಡಿ ಗುಂಡ ಪುಸ್ತಕದ ಬಗ್ಗೆ ಹೇಳುವುದಾದರೆ

ವಾಸು ಅವರು ನಮ್ಮ ನಾಡಿನ  ಹಿರಿಯ ಕವಿಗಳ ಬಗ್ಗೆ ಬರೆಯುವಾಗ ಹಲವಾರು ವಿಚಾರಗಳನ್ನು ಸಂಗ್ರಹಿಸಿದ್ದಾರೆ. ಹಲವು ದಿನ ಕೂತು ಪದ್ಯ ರೂಪ ಕೊಟ್ಟಿದ್ದಾರೆ.


ಮಗ್ಗಿಯ ಮೇಲಿನ ಕವನಗಳು ಮತ್ತಷ್ಟು ಸುಂದರವಾಗಿವೆ. 


'ಹಣ್ಣು' ಕವಿತೆಯಲ್ಲಿ

 "ಬಾಳೆಹಣ್ಣು ತಿಂದು

ಸಹಬಾಳ್ವೆ ಮಾಡಿ ...

ಕಿತ್ತಲೆಹಣ್ಣು ತಿಂದು 

ಕಿತ್ತಾಡದೆ ಒಟ್ಟಾಗಿರಿ "

ಎಂಬ ಒಗ್ಗಟ್ಟಿನ ತತ್ವ ಹೇಳಿದೆ.


'ಪಾಪು' ಕವಿತೆಯಲ್ಲಿ ಬರುವ

"ನಗುವಿನಲೆಯ ಇರುಳ ದೀಪ

 ಬಿದಿಗೆ ಚಂದ್ರನಂತೆ ರೂಪ !"

ಎಂಬ ಪದಗಳು ನಮ್ಮನ್ನು ಸೆಳೆಯುವವು.


ಪೊಲೀಸ್ ಗೆಳೆಯರ ಬಗ್ಗೆ ಬರೆದಿರುವ ಕವನ  ಅಭಿಮಾನದ ನುಡಿಗಳಿಂತಿವೆ.

"ಸಮವಸ್ತ್ರ ಧರಿಸಿ, ತಮೋಗುಣ ಅಳಿಸುವಿರಿ

ಸಹಬಾಳ್ವೆ, ಸಮಾನತೆ ಉಳಿಸುವಿರಿ."


'ಪರೀಕ್ಷೆ' ಕವಿತೆಯಲ್ಲಿ ಮಕ್ಕಳಿಗೆ ಪರೀಕ್ಷೆಗಳ ಬಗ್ಗೆ ಭಯ ಬೇಡ ಎಂಬ ಸಲಹೆ ನೀಡಿರುವರು.

"ಇಷ್ಟದಿ ಕಲಿತರೆ ರಸಗುಲ್ಲ

ಕಷ್ಟದಿ ಕಲಿತರೆ ಕಸ ಎಲ್ಲಾ"


ಪುಟ್ಟನ ಪರಿಸರ ಪ್ರಜ್ಞೆ ನಿಮಗೂ  ಖಂಡಿತಾ ಖುಷಿಕೊಡುತ್ತದೆ.

"ಕೆರೆಗಳ ಹೂಳನು ಎತ್ತೋಣ ಗಿಡಮರಬಳ್ಳಿ ಬೆಳೆಸೋಣ."


ವ್ಯಾಕರಣದ ಬಗೆಗಿನ ಕವಿತೆ ಲಘುಹಾಸ್ಯದ ಮೂಲಕ ಜ್ಞಾನವನ್ನು ನೀಡುತ್ತದೆ. ಉದಾಹರಣೆಗೆ 

"ಸ್ವರಗಳು ಎಂದರೆ ಸರಗಳು ಅಲ್ಲ ವ್ಯಂಜನವೆಂದರೆ ಅಂಜನವಲ್ಲ

ಗಾದೆ ಮಾತಿನಲಿ ಬಾಧೆಯು ಇಲ್ಲ."


 ಹೀಗೆ 35 ಮಕ್ಕಳ ಕವನಗಳು ಭಿನ್ನವಿಭಿನ್ನ ವಸ್ತುವನ್ನು ಒಳಗೊಂಡಿವೆ. ಕೆಲವು ಪದ್ಯ ಗಳಿಗೆ ಛಂದಸ್ಸನ್ನೂ ಬಳಸಲಾಗಿದೆ.ಕೆಲವು ಉತ್ತಮ ಪ್ರಾಸಗಳಿಂದ ಕೂಡಿವೆ .

ಮಕ್ಕಳ ಸಾಹಿತ್ಯ ಕೃತಿಗಳು ಕಡಿಮೆಯಾಗುತ್ತಿರುವ ಈ ಕಾಲದಲ್ಲಿ ಸಮುದ್ರವಳ್ಳಿ ವಾಸು ರಂತವರು ಇನ್ನೂ ಹೆಚ್ಚಿನ ಮಕ್ಕಳ ಪುಸ್ತಕಗಳನ್ನು ಬರೆಯಲಿ ಎಂದು ಹಾರೈಸುವೆ.



ಪುಸ್ತಕ: ಉಂಡಾಡಿ ಗುಂಡ.

ಕವಿ: ಸಮುದ್ರವಳ್ಳಿ ವಾಸು.

ಪ್ರಕಾಶನ: ಯದುನಂದನ ಪ್ರಕಾಶನ

ಬೆಲೆ: 80


ಸಿಹಿಜೀವಿ

ಸಿ ಜಿ ವೆಂಕಟೇಶ್ವರ.

ತುಮಕೂರು

9900925529


ಆವಿಷ್ಕಾರದ ಹರಿಕಾರ .ವಿಮರ್ಷೆ





ಆವಿಷ್ಕಾರದ ಹರಿಕಾರ 
ಕೃತಿ ವಿಮರ್ಶೆ

ಅವಿ ಯೋರಿಶ್ ರವರು ಬರೆದಿರುವ
ಆವಿಷ್ಕಾರದ ಹರಿಕಾರ ಪುಸ್ತಕವನ್ನು ವಿಶ್ವೇಶ್ವರ ಭಟ್ ರವರು ಕನ್ನಡಕ್ಕೆ ಬಹು ಸೊಗಸಾಗಿ ಅನುವಾದ ಮಾಡಿದ್ದಾರೆ.
ಅವಿ ಯೋರಿಶ್ ಮೂಲತಃ ಓರ್ವ ಉದ್ಯಮಿ, ಐದು ಪುಸ್ತಕಗಳ  ಲೇಖಕ ಮತ್ತು ಚಿಂತಕ ಅಮೆರಿಕ ಸರ್ಕಾರದ ಹಣಕಾಸು ಮತ್ತು ರಕ್ಷಣಾ ಇಲಾಖೆಯ ಮಾಜಿ ಅಧಿಕಾರಿ. ಅಮೆರಿಕ ವಿದೇಶಾಂಗ ನೀತಿ ಮಂಡಳಿಯಲ್ಲಿ ಸೀನಿಯರ್ ಫೆಲೋ, ಕಳೆದ ಇಪ್ಪತ್ತು ವರ್ಷಗಳಲ್ಲಿ, ಅವಿ ಜಗತ್ತಿನಾದ್ಯಂತ ಪ್ರಮುಖ ವೇದಿಕೆಗಳಲ್ಲಿ ಉಪನ್ಯಾಸ ನೀಡಿದವರು 'ದಿ ನ್ಯೂಯಾರ್ಕ್ ಟೈಮ್ಸ್,' 'ದಿ ವಾಲ್ ಸ್ಟ್ರೀಟ್ ಜರ್ನಲ್ ಸೇರಿದಂತೆ ವಿಶ್ವದ ಐವತ್ತಕ್ಕೂ ಹೆಚ್ಚು ಪ್ರಭಾವಿ ಪತ್ರಿಕೆ ಮತ್ತು ನಿಯತಕಾಲಿಕಗಳಲ್ಲಿ ಲೇಖನಗಳನ್ನು ಪ್ರಕಟಿಸಿರುವ ಆವಿ , ಸಿಎನ್ಎನ್, ಫಾಕ್ಸ್ ನ್ಯೂಸ್ ಸೇರಿದಂತೆ ಅನೇಕ ಪ್ರಮುಖ ಟಿವಿ ಚಾನೆಲ್ಲುಗಳ ಸಂವಾದದಲ್ಲಿ ಕಾಣಿಸಿಕೊಂಡಿದ್ದಾರೆ. ಮಧ್ಯಪ್ರಾಚ್ಯ ಪರಿಣತರಾಗಿರುವ, ಅವಿ ಅವರ ಪ್ರಸ್ತುತ ಪುಸ್ತಕ, ವಿಶ್ವದ ನಲವತ್ತಕ್ಕೂ ಅಧಿಕ ಭಾಷೆಗಳಿಗೆ ಅನುವಾದವಾಗಿರುವುದು ಅವರ ಚಿಂತನೆಯ ಪ್ರಸ್ತುತತೆ ಮತ್ತು ಮಹತ್ವವನ್ನು ಸಾರುತ್ತವೆ.

ಬುದ್ಧಿಶಾಲಿ ಇಸ್ರೇಲಿಗಳು ವಿಶ್ವವನ್ನು ಬದಲಿಸಿದ ಪರಿ ಎಂಬ ಟ್ಯಾಗ್ ಲೈನ್ ನೊಂದಿಗೆ ಇರುವ ಈ ಪುಸ್ತಕ ಓದಿದಾಗ ಒಂದು ಪುಟ್ಟ ರಾಷ್ಟ್ರ ತನ್ನ ಬದ್ಧತೆ ಮತ್ತು ಛಲದಿಂದ ಹೇಗೆ ಜಗತ್ತಿನಲ್ಲಿ ತನ್ನದೇ ಹೆಸರು ಉಳಿಸಿಕೊಂಡಿದೆ ಎಂಬುದನ್ನು ಮನವರಿಕೆ ಮಾಡುತ್ತಾ  ಆ ದೇಶದ ನಾಗರಿಕರ ದೇಶಭಕ್ತಿಯ ಪರಿಚಯ ಮಾಡಿಸುವುದು ಹಾಗೂ   ನಮ್ಮಲ್ಲೂ ನಮ್ಮ ದೇಶದ ಬಗ್ಗೆ ಇರಬೇಕಾದ  ಗೌರವ ಮತ್ತು ಭಕ್ತಿಯನ್ನು ಬಡಿದೆಬ್ಬಿಸುತ್ತದೆ. 

ಅನುವಾದಕರ ಮಾತಿನಲ್ಲೇ ಹೇಳುವುದಾದರೆ ಹಸಿದ ಹೊಟ್ಟೆ ತುಂಬಿಸಲು, ಅನಾರೋಗ್ಯ ಗುಣಪಡಿಸಲು, ರಕ್ಷಣೆ ಇಲ್ಲದವರ ರಕ್ಷಿಸಲು ಹಾಗೂ ಮರುಭೂಮಿಯನ್ನು ಅರಳಿಸಲು ಇಸ್ರೇಲಿಗರು ಏನೆಲ್ಲಾ ಮಾಡುತ್ತಿದ್ದಾರೆ, ಗೊತ್ತಾ?

ಇಸ್ರೇಲ್ ಎಂಬ ಪುಟ್ಟ ದೇಶದಲ್ಲಿರುವ ಎಲ್ಲಾ ಧರ್ಮಗಳ ಸೃಜನಶೀಲ ಮಿದುಳುಗಳೂ ಹಠಕ್ಕೆ ಬಿದ್ದವರಂತೆ ಜಗತ್ತನ್ನು ಸುಂದರ ತಾಣವನ್ನಾಗಿ ರೂಪಿಸಲು ಪಟ್ಟು ಹಿಡಿದು ಕುಳಿತಿರುವುದು ಏಕೆ? ಜಗತ್ತಿನಾದ್ಯಂತ ನೂರಾರು ಕೋಟಿ ಜನರ ಬದುಕನ್ನು ಇಸ್ರೇಲಿನ ಅದ್ಭುತ ಆವಿಷ್ಕಾರಗಳು ಹೇಗೆ ಬದಲಿಸುತ್ತಿವೆ ಎಂಬುದನ್ನು 'ಈ' ಕೃತಿ ಕಟ್ಟಿಕೊಡುತ್ತದೆ. ಜಗತ್ತನ್ನು ದುರಸ್ತಿ ಮಾಡುವ ಯಹೂದಿಗಳ 'ಟಿಕ್ಕುನ್ ಓಲಮ್' ಎಂಬ ಚಿಂತನೆಯನ್ನು ಬಳಸಿ, ದೇಶದೇಶಗಳ ಆತ್ಮವನ್ನೇ ತಟ್ಟಿ, ಪ್ರಪಂಚದ ಬಹುದೊಡ್ಡ ಸವಾಲುಗಳನ್ನು ಮುಗುಮ್ಮಾಗಿ ಪರಿಹರಿಸಲು ಇಸ್ರೇಲ್ ತನ್ನ ಗಾತ್ರಕ್ಕೆ ಮೀರಿದ ಪಾತ್ರವನ್ನು ನಿಭಾಯಿಸುತ್ತಿದೆ.

ಇಸ್ರೇಲ್ನಲ್ಲಿ ಪರಮಾದ್ಭುತ ಆವಿಷ್ಕಾರಿಗಳಿದ್ದಾರೆ. ಜನರನ್ನು ಉಳಿಸುವ ಹಾಗೂ ಬದುಕಿನ ಉನ್ನತ ಉದ್ದೇಶವನ್ನು ಕಂಡುಕೊಳ್ಳುವ ಸೂತ್ರಕ್ಕೆ ಅವರೆಲ್ಲ ಬಂಧಿಗಳು, ವೈಫಲ್ಯ ಹಾಗೂ ಅಡ್ಡಿ ಆತಂಕಗಳ ಮುಖಕ್ಕೆ ಹೊಡೆದಂತೆ ಈ ಸೃಜನಶೀಲ ಮನಸ್ಸುಗಳು ಅವಕಾಶ ಮತ್ತು ಧೈರ್ಯವನ್ನು ಹುಡುಹುಡುಕಿ ಬಾಚಿಕೊಳ್ಳುತ್ತವೆ. ತನ್ನ ಪಾಲಿಗಿಂತ ಹೆಚ್ಚು ಕತ್ತಲೆಯನ್ನು ಅನುಭವಿಸಿದ ದೇಶಕ್ಕೆ ಈ ಕತೆಗಳೇ ಬೆಳಕಿನ ಕಿರಣಗಳು ಉದ್ಯಮಶೀಲರು, ಸ್ಪಾರ್ಟಪ್ಗಳ ಬಗ್ಗೆ ಆಸಕ್ತಿ ಹೊಂದಿರುವವರು ಹಾಗೂ ಸೃಜನಶೀಲ ಆವಿಷ್ಕಾರಗಳ ಬಗ್ಗೆ ಕುತೂಹಲ ಹೊಂದಿರುವ ಪ್ರತಿಯೊಬ್ಬರೂ ಓದಬೇಕಾದ ಪುಸ್ತಕವಿದು.
ಜಗತ್ತಿನಲ್ಲಿ ಅತಿ ಹೆಚ್ಚು ಅನ್ವೇಷಣೆ ಮತ್ತು ಆವಿಷ್ಕಾರಗಳು ನಡೆಯುವ ದೇಶವೆಂದರೆ ಇಸ್ರೇಲ್, ಇವನ್ನೆಲ್ಲಾ ನೋಡಿದರೆ, 85 ಲಕ್ಷ ಜನರಿರುವ ಆ ಒಂದು ಪುಟ್ಟ ದೇಶದಲ್ಲಿ ನಡೆಯುತ್ತಿರುವ ವಿದ್ಯಮಾನಗಳು ಪವಾಡಸದೃಶ, ಕರ್ನಾಟಕದ ಆರು ಜಿಲ್ಲೆಗಳಷ್ಟು ಚಿಕ್ಕದಾಗಿರುವ ಇಸ್ರೇಲ್ನಲ್ಲಿ ಜಗತ್ತಿನ ಯಾವ ದೇಶಗಳಲ್ಲೂ ನಡೆಯುವುದಕ್ಕಿಂತ ಹೆಚ್ಚು ಆವಿಷ್ಕಾರಗಳು, ಸಂಶೋಧನೆಗಳು ನಡೆಯುತ್ತಿವೆ.

ಅತಿ ಕಡಿಮೆ ನೈಸರ್ಗಿಕ ಸಂಪನ್ಮೂಲ, ಕಡಿಮೆ ಜನಸಂಖ್ಯೆ ಮತ್ತು ವೈರಿ ನೆರೆ-ಹೊರೆಗಳನ್ನು ಹೊಂದಿರುವ ಆವಿಷ್ಕಾರಗಳ ಹರಿಕಾರನಾಗಿದ್ದು ಹೇಗೆ? ಭಾರತ, ಕೆನಡ, ಜಪಾನ್, ಕೊರಿಯಾ, ಬ್ರಿಟನ್ಗಳಿಗಿಂತ ಹೆಚ್ಚು ಸ್ಟಾರ್ಟ್ಪ್ಗಳು ಇಸ್ರೇಲಿನಲ್ಲಿರಲು ಸಾಧ್ಯವಾಗಿದ್ದು ಹೇಗೆ ? ಅದು ಜಾಗತಿಕ ಜಲ ಮಹಾಶಕ್ತಿಯಾಗಿ ಹೊರಹೊಮ್ಮಿದ್ದು ಹೇಗೆ? ಆಹಾರ, ನೀರು, ಹೈನು, ಔಷಧ, ರಕ್ಷಣಾ ಉಪಕರಣಗಳಿಗೆ ಬೇರೆ ದೇಶಗಳನ್ನು ಅವಲಂಬಿಸದೇ ಇಂದು ಇಸ್ರೇಲ್ ಸ್ವಾವಲಂಬನೆ ಸಾಧಿಸಿರುವುದು ಹೇಗೆ? ಇದು ನಿಜಕ್ಕೂ ರೋಚಕ ಕಥನ. ಎಂಬುದು ನೀವು ಈ ಪುಸ್ತಕ ಓದಿ ಮುಗಿಸಿದಾಗ ನಿಮಗೆ ಅನ್ನಿಸದೇ ಇರದು.

ಒಟ್ಟು  ೧೮ ಅಧ್ಯಾಯಗಳಿರುವ ಈ ಕೃತಿಯು  ಈಗಾಗಲೇ ಐದು ಬಾರಿ ಮರುಮುದ್ರಣ ಕಂಡಿದೆ ಎಂಬುದು ಪುಸ್ತಕದ ಜನಪ್ರಿಯತೆ ಬಗ್ಗೆ ತಿಳಿಸುತ್ತದೆ. ಯಹೂದಿಗಳು ಕಣ್ಮುಚ್ಚಿ ಕುಳಿತುಕೊಳ್ಳಲು ಸಾಧ್ಯವಿಲ್ಲ, ಬೈಕ್  ಆ್ಯಂಬುಲೆನ್ಸ್ಗಳ  ಕ್ರಾಂತಿ ನಿಜವಾದ ಉಕ್ಕಿನ ಮನುಷ್ಯರು,
ಮಿದುಳಿಗೊಂದು ಜಿಪಿಎಸ್ ,ಗೋಲ್ಡನ್ ಪೈರ್ ವಾಲ್ , ಬೆನ್ನುಹುರಿಯ ಮೇಲೆ ಕಣ್ಣು,
ಮರೆಯಾದವರಿಗೆ ಮರುಜೀವ ಈ ಅಧ್ಯಾಯಗಳು ನನಗೆ ಬಹಳ ಇಷ್ಟವಾದವು .


ಪುಸ್ತಕದ ಹೆಸರು: ಆವಿಷ್ಕಾರದ ಹರಿಕಾರ.
ಅನುವಾದ : ವಿಶ್ವೇಶ್ವರ ಭಟ್
ಪ್ರಕಾಶನ: ವಿಶ್ವ ವಾಣಿ
ಬೆಲೆ : 350.

ಸಿಹಿಜೀವಿ ಸಿ ಜಿ ವೆಂಕಟೇಶ್ವರ
ತುಮಕೂರು


ಉದಕದೊಳಗಿನ ಕಿಚ್ಚು. ಭಾಗ ೧೪


 ಉದಕದೊಳಗಿನ ಕಿಚ್ಚು ಭಾಗ ೧೪


ಮಾರಮ್ಮನ ಜಾತ್ರೆ ಭಾಗ ೨



"ಏ ರಂಗ ಬಾನ್ಗುರಿ ಇಡ್ಕಂಬಾರ್ಲ" ಗುಡಿಗೌಡ್ರು ಆದೇಶ ನೀಡಿದರು.


"ಅಣ್ಣ ಯಾರ ಮನೆ ಹತ್ರ ಐತಣ್ಣ "


" ಊರಗೊಲ್ಲರ ನಿಜಲಿಂಗಪ್ಪರ ಮನೆ ಹತ್ರ ಐತೆ ಹೋಗಲೆ ಹಿಡಕಂಬಾ "


"ಅಣ್ಣ ಪಟ್ಲಿನಾ ಹೆಣ್ಗುರಿನಾ"


ಲೇ ಇಡ್ಕಂಬಾ ಹೋಗಲೆ ಗೊತ್ತಾಗುತ್ತೆ ನೀನಂತುನು" 


"ಹೇ ಉರುಮೇರಿಗೆ ಏಳೋ ಒಳ್ಳೆ ಟೈಮಿಗೆ ಓಡ್ ಹೋಗ್ತಾರೆ ಹೆಂಡ ಕುಡಿಯಾಕೆ "ಎನ್ನುವಾಗ

 "ಇಲ್ಲೇ ಇದಿವಿ ಗೌಡರೆ "ಎಂದು ಉರಿಮೆ ಬಡಿಯಲು ಸುರು ಮಾಡಿದರು .


ರಂಗ ಹಿಡಿದುಕೊಂಡು ತಂದ ಬಾನಗುರಿಯನ್ನು ಪಾತಲಿಂಗ ನಡು ಹಿಡಿದು ನೀಡಿ " ಒಳ್ಳೆ ಮರಿ ತಂದಿದಿಯಾ ಗೌಡ, ಒಳ್ಳೆ ನೆಣ ಐತೆ. ಇಪ್ಪತ್ತು ಕೇಜಿ ಮಾಂಸಕ್ಕೇನು ಮೋಸ ಇಲ್ಲ "


"ಹುಂ ಹಿಡ್ಕಂಡು ಬಾ "ಎಂದರು ಗೌಡರು.


ಪೂಜಾರಪ್ಪ ಪೂಜೆ ಮಾಡಿ ಅರಿಷಿಣ ,ಬೇವಿನ ಸೊಪ್ಪು, ಕುರಿಯ ತಲೆಗೆ ಇಟ್ಟು, ಅಮ್ಮನ ಮೇಲಿಂದ ತಂದ ಹೂವನ್ನು ಕುರಿಯ ಕೊರಳಿಗೆ ಕಟ್ಟಿ, ಗುಡಿಯ ಒಳಗೆ ಹೋದ ಕೂಡಲೆ ಸಿದ್ದಾನಾಯ್ಕ ಒಂದೇ ಬಾರಿಗೆ ಕಚಕ್ ಎಂದು ಕಡಿದು ಬಿಟ್ಟ.


" ಗೌಡ್ರೆ ಮಚ್ಚು ಬಾಳ ಚೆನ್ನಾಗೈತೆ ಈ ಸತಿ ಕುರಿ ,ಮ್ಯಾಕೆ ಏನು? ಕೋಣಾನೂ ಒಂದೆ  ಏಟೆ" ಎಂದು ಉದ್ದನೆಯ ಗಿರಿಜಾ ಮೀಸೆಯನ್ನು ಎಡಗೈಯಲ್ಲಿ ತೀಡಿದನು ಸಿದ್ದಾನಾಯ್ಕ.


"ಆತಪ್ಪ ....ಹುಸಾರು, ನಿನಂತುನು ಉಪ್ಪರಿಗೇನಹಳ್ಳಿ ಜಾತ್ರೆಲ್ಲಾದ ಸಮಸ್ಯೆ ಗೊತ್ತಲ್ಲ ?ನೀನಂತುನುನು" 


"ಹೇ ಸುಮ್ಕಿರಿ ಗೌಡ್ರೆ ಯಾವಾಗಲೂ ಅದುನ್ನೆ ಹೇಳ್ತಿರಾ,ಯಾವೊನೊ ಅವೋಗ್ಯ ಮಾಡುದ್ರೆ ಎಲ್ಲಾ ಹಂಗೆ ಇರ್ತರಾ?" ಅಂದ ಗೌಡರು ಸುಮ್ಮನಾದರು.


ಬಾನ ಗುರಿ ಕಡಿದ ಮೇಲೆ ಅಮ್ಮನಿಗೆ ನೈವೇದ್ಯ ಮಾಡಿ ಊರ ಸುತ್ತ ತಳಿ ಹಾಕಲು ಕೆಲವರು ಹೋದರೆ ಕೆಲವರು ಸಾಂಬರು ಕಾರ ಜೋಡಿಸಿ ಹೆಂಗಸರಿಗಿಂತ ನಾವೇನು ಕಡಿಮೆಯಲ್ಲ ಭೀಮ ನಳಮಹಾರಾಜರು ಇದ್ದಂಗೆ  ಎಂದು ಕುರಿ ಸಾರು ಅನ್ನ ಮುದ್ದೆ ಮಾಡಿ, ಕೆಲವರು ಬಿಟ್ಟುಕೊಂಡು ತೊದಲುತ್ತಲೆ ಸರೊತ್ತಲ್ಲಿ ಊರ ಮೊದಲು ಜಾತ್ರೆಯ ಸೊಭಗು ಸವಿದರು .ಅಲ್ಲಿದ್ದ ಬೆರಳೆಣಿಕೆಯಷ್ಟು ಜನ.

******************************


ಶುಕ್ರವಾರ ಮಾರಮ್ಮ ತಾಯಿಯ ಜಾತ್ರೆಯ ಪ್ರಮುಖ ದಿನ ಅಂದು ಆರತಿ ಮತ್ತು ಬೇವಿನ ಸೀರೆ ಆಚರಣೆಗೆ ಸಿದ್ದವಾಗುತ್ತಿತ್ತು ಯರಬಳ್ಳಿ.


"ಏ ಬಿಳಿಯ, ಹೊಲಕ್ಕೆ ಹೋಗಿ ಬೇವಿನ್ ಸೊಪ್ಪು ತಾಂಬ. ಈ ವರ್ಸ ಬೇವಿನ್ ಸೀರೆ ಉಡಬೇಕು. ಆವತ್ತು ಸತೀಸ್ಗೆ ಅದೇನೋ ಹುಳ ಮುಟ್ಟಿತ್ತಲ್ಲ ಆವತ್ತು ಹರಕೆ ಹೊತ್ಗಂಡಿದ್ದೆ" ಎಂದರು ಊರಿಂದ ಜಾತ್ರೆಗೆ ಬಂದ ಭೂದೇವಮ್ಮ .


" ನೋಡಕ ಬೇವಿನ ಸೊಪ್ಪು ತತ್ತಿನಿ, ಜಾತ್ರೆ ಖರ್ಚಿಗೆ ನನಗೆ ಏನಾರಾ ಕೊಡಬೇಕು" .


ಎಂದಿದ್ದನ್ನು ಒಳಗಿನ ಮನೆಯಲ್ಲಿ ಕೇಳಿಸಿಕೊಂಡ ಸರಸ್ವತಜ್ಜಿ "ಅಲಾಕ್ದ್ವನೆ ನಿಮ್ಮಕ್ಕನ್ನ  ನೀವು ಹೋಗಿ ಜಾತ್ರೆ ಕರ್ಕಂಡು ಬರ್ಬೇಕಾಗಿತ್ತು. ಪಾಪ ಆ ಹುಡುಗಿನೆ ಬಸ್ಚಾರ್ಜು ಇಟ್ಕೊಂಡು ಬಂದಾವ್ಳೆ  ಅವ್ಳನ್ನೆ ದುಡ್ ಕೇಳ್ತಾನೆ ಅಲ್ಕಾ ನನ್ ಮಗ " ಎಂದು ಗುಡುಗಿದರು " ಏ ನಾನ್ ಸುಮ್ಮನೆ ಅಂಗ್ ಅಂದೆ ಮುದ್ಕಿ ನೀನೇನು ನನ್ ಒದಿಯಾಕೆ ಬತ್ತಿಯಲ್ಲ, ಆತು ಹೋಗ್ತಿನಿ ಬಿಡಮ್ಮ ಬೇವಿನ್ ಸೊಪ್ಪು ತರಕೆ "ಎಂದು ಹೊರಟ ಬಿಳಿಯಪ್ಪ.


*****************************

ಸೂರ್ಯನು ಪೂರ್ವದಿಂದ ಪಶ್ಚಿಮಕ್ಕೆ ತನ್ನ ಪಯಣ ಬೆಳಸುವ ಕಾಲದಲ್ಲಿ ಎಲ್ಲರ ಮನೆಯಲ್ಲಿ ಅಕ್ಕಿಯ ತಂಬಿಟ್ಟನ್ನು ಆಯತಾಕರಾದಲ್ಲಿ ಮಾಡಿ ಅದರ ಮದ್ಯ ದೀಪವಿಡಲು ಜಾಗ ಬಿಟ್ಟು ನಾಲ್ಕು ಕಡೆಯಿಂದ ನಾಲ್ಕು ಅಂಚಿಕಡ್ಡಿ ಮತ್ತು ವಿಳ್ಯೆದೆಲೆ ಇಟ್ಟು ಕಡ್ಡಿಗಳಿಗೆ ಕಣಗಿಲೆ ಹೂ ಅಲಂಕಾರ ಮಾಡಿ ,ಆ ಆರತಿಗಳನ್ನು ಸ್ಟೀಲ್ ಬೇಸನ್ ಅಥವಾ ಪಾತ್ರೆಗಳಲ್ಲಿ ಅಲಂಕಾರ ಮಾಡಿ ,ತಂಬಿಟ್ಟು ಮಾಡಿದ್ದಕ್ಕಿಂತ ಹೆಚ್ಚು ಸಮಯ ತಮ್ಮ ಅಲಂಕಾರಕ್ಕಾಗಿ ಮೀಸಲಿಟ್ಟರು .


ಸಂಜೆಗತ್ತಲಾಗುತ್ತಲೇ ಮನೆಯಲ್ಲಿ ದೀಪ ಮುಡಿಸಿ ,ವಾಲಗದವರು ನಮ್ಮ ಮನೆಗೆ ಯಾವಾಗ ಬರುವರೋ ಎಂದು ಕಾತುರತೆಯಿಂದ ಕಾಯುವ ಹೆಣ್ಣುಮಕ್ಕಳು, ಊರ ಮುಂದೆ ಅಷ್ಟೇ ಯಾರನ್ನೋ ನೋಡಲು  ಕಾತುರತೆಯಿಂದ ಕಾಯುವ ಹುಡುಗರು .


ವಾಲಗದವರ ಜೊತೆ ಮಡಿವಾಳರ ಪಂಜು ಅಗತ್ಯ ಆದರೆ ಒಂದೇ ಬಾರಿ ಎಲ್ಲಾ ಬೀದಿಗಳಲ್ಲಿ ಅಷ್ಟು ಪಂಜು ತರುವುದು ಹೇಗೆ? ಅದಕ್ಕೆ ಕೆಳವರ್ಗದ ಜನ ಪೂರಾ ಒಣಗಿದ ಒಂದು ದಪ್ಪನೆಯ ಕೋಲನ್ನು ಸಿಬಿರು ಮಾಡಿ ಅದಕ್ಕೆ ಬೆಂಕಿ ಹಚ್ಚಿ ಪಂಜು ಮಾಡಿರುವುದು ಒಂದು ಸಂಶೋಧನೆಯೇ ಸರಿ.


ಆರತಿ ಬೆಳಗುವ ಮಹಿಳೆಯರ ಪೈಕಿ  ಕೆಲವರು ಬೇವಿನ ಸೀರೆ ಉಟ್ಟವರು ಇದ್ದರು .


ಬೇವಿನ ಸೊಪ್ಪಿನ‌ ರೆಂಬೆ ಕೊಂಬೆಗಳನ್ನು ಜೋಡಿಸಿ ಅವುಗಳನ್ನು ಟ್ವೈನ್ ದಾರ ಅಥವಾ ತೆಂಗಿನ ಉರಿಯಲ್ಲಿ ಒಂದಕ್ಕೊಂದು ಒತ್ತಾಗಿ ಜೋಡಿಸಿ ನಿರ್ವಸ್ತ್ರರಾಗಿ ಆ ಬೇವಿನ ಸೊಪ್ಪಿನ ಸೀರೆಯನ್ನು ಉಟ್ಟು ಹರಕೆಯಂತೆ ತಾಯಿಗೆ ಆರತಿ ಬೆಳಗುವ ಸಂಪ್ರದಾಯವೇ ಬೇವಿನ ಸೀರೆ ಉತ್ಸವ.



ಮೊದಲು ಮಾರಮ್ಮನಿಗೆ ಆರತಿ ಬೆಳಗಿ ಬೇವಿನ ಸೀರೆ ಉಟ್ಟವರು ಪೌಳಿಯ ಹಿಂದೆ ಹೋಗಿ ಸ್ನಾನ ಮಾಡಿ ಬಟ್ಟೆ ಧರಿಸಿ ತಾಯಿಯ ದರ್ಶನ ಪಡೆಯುವರು. ನಂತರ ರಂಗಪ್ಪನಿಗೆ ಆರತಿ ,ಇತ್ತೀಚಿನ ದಿನಗಳಲ್ಲಿ ಶ್ರೀದೇವಿ ಮಹಾತ್ಮೆ ನಾಟಕ ಆಡುವ ರಂಗಸ್ಥಳದ ಹತ್ತಿರ ಇರುವ ದೇವಿಗೂ ಒಂದು ಆರತಿ ಮಾಡುವುದುಂಟು .


ಪೂಜಾರಪ್ಪನಿಗೆ,ವಾಲಗದವರಿಗೆ,ಅಸಾದಿಗಳಿಗೆ,ತಳವಾರಪ್ಪನಿಗೆ,ತಮ್ಮ ಶಕ್ತಾನುಸಾರ ಮಹಿಳೆಯರು ತಂಬಿಟ್ಟು, ತೆಂಗಿನಕಾಯಿ, ಬಾಳೆಹಣ್ಣು, ಕೆಲವರು ಹಣ ಕೊಟ್ಟು ಮನೆಗೆ ಹಿಂತಿರುಗಿ ಕರಿಗಡುಬೋ ,ಹೋಳಿಗೆಯ ಊಟವನ್ನು ಮಾಡಿದರೆ ಅಲ್ಲಿಗೆ ಮಾರಮ್ಮನಿಗೂ ಸಮಾಧಾನ ಭಕ್ತರಿಗೂ ಸಮಾಧಾನ.


**************************

" ಮಾವ ಪ್ರಾಣಿ ಬಲಿ‌ ನಿಷೇಧಿಸಲಾಗಿದೆ ಎಂದು ನಮ್ಮ ಮೇಷ್ಟ್ರು ಪಾಠ ಮಾಡಿದ್ರು" ಎಂದು ಮಾರಮ್ಮನ ದೇವಸ್ಥಾನದ ಕಡೆಗೆ ಕುರಿಯನ್ನು ಕಡಿಯಲು  ಹೊಡೆದುಕೊಂಡು ಹೋಗುತ್ತಾ ಸತೀಶ ಮುರಾರಿಯನ್ನು ಪ್ರಶ್ನಿಸಿದ" "ಕಾನೂನೇನೋ ಮಾಡವ್ರೆ ಆದರೆ ನಾವು ಅಮ್ಮನಿಗೆ ಮರಿ ಕಡಿದಿದ್ರೆ ಸುಮ್ಮನೆ ಬಿಡ್ತಾಳ? " ಎಂದ ಮುರಾರಿ.



ಶನಿವಾರ ಸೂರ್ಯ ಇನ್ನೂ ಎಚ್ಚರಗೊಂಡಿರಲಿಲ್ಲ ಯರಬಳ್ಳಿಯ ಜನರು ಮನೆಗೊಂದರಂತೆ ಕುರಿ ,ಮೇಕೆ ಹಿಡಿದು ನನ್ನದು ಮೊದಲು ಕಡಿ ಎಂದು ಸಿದ್ದಾನಾಯ್ಕನೊಂದಿಗೆ  ಜಗಳಕ್ಕೆ ನಿಂತಿದ್ದರು. ಮಕ್ಕಳು ಮಾತ್ರ ಅವರ ಜಗಳ ಮತ್ತು ಸಿದ್ದಾನಾಯ್ಕ ಮಚ್ಚು ಹಿಡಿವ ರೀತಿ ,ಒಂದೇ ಬಾರಿಗೆ ಕಚಕ್ ಎಂದು ಕುರಿಗಳ ಕಡಿಯುವದನ್ನು ತದೇಕಚಿತ್ತದಿಂದ ನೋಡುತ್ತಿದ್ದರು. " ಏ ದೂರ ಹೋಗ್ರೊ ಹುಡುಗ್ರ, ಯಾರಿಗಾದರೂ ಮಚ್ಚು ತಗುಲೀತು ಮೊದ್ಲೇ ಗೌಡ್ರು ನೀನಂತುನುನು ಅಂತ ಎಗರಾಡ್ತಾರೆ " ಎಂದು ಮತ್ತೊಂದು ಮೇಕೆ ಕಡಿಯಲು ಕೈ ಮೇಲೆತ್ತಿದ ಸಿದ್ದಾನಾಯ್ಕ.



ಸಾಮಾನ್ಯವಾಗಿ ಕುರಿ ಕೋಳಿನ ಶನಿವಾರ ಸೋಮವಾರ ಕೊಯ್ಯಂಗಿಲ್ಲ ಎಂಬ ಗಾದೆ ಇದೆ ಇದು ಬಹುತೇಕ ಕಡೆ ಜಾರಿಯಲ್ಲಿರುವ ಸಂಪ್ರದಾಯ ಆದರೆ ಈ ಊರಲ್ಲಿ ಶನಿವಾರ ಮಾಂಸಾಹಾರಕ್ಕೆ ಅಡ್ಡಿ ಬಂದಿಲ್ಲ .ಕೆಲವರು ವೆಂಕಟೇಶ್ವರ ಸ್ವಾಮಿಯ ಆರಾಧಕರಿದ್ದು ಬೆಳಿಗ್ಗೆ ಸ್ನಾನ ಮಾಡಿ ಪೂಜೆ ಮಾಡಿ ಏಳು ಕೊಂಡಲವಾಡ ನಿನಗೀಗಾಲೆ ಪೂಜೆ ಮಾಡಿರುವೆ ಇಂದು ಮಟನ್ ಚಿಕನ್ ತಿನ್ನುವೆ ಬೇಜಾರಾಗಬೇಡ ಪ್ಲೀಸ್ ಎಂಬಂತೆ ಪೂಜೆ ಮಾಡಿ ಮೂಳೆ ಕಡಿಯಲು ಸಜ್ಜಾಗುತ್ತಿದ್ದರು.



ಬಿಸಿಲೇರಿದಂತೆ ಒಂದು ಬೀದಿಯಿಂದ ಮತ್ತೊಂದು ಬೀದಿಗೆ ಮಸಾಲೆ ಕಂಪು ಪಸರಿಸುತ್ತಾ ಶೆಟ್ಟರ ಮನೆಯವರೆಗೂ ಹೋದಾಗ  " ಮೂಗು ಮುಚ್ಚಿಕೊಂಡು ಅದೇನ್ ತಿಂತಾರೋ ಈ ಜನ ದರಿದ್ರ ವಾಸನೆ " ಎಂದು ಬೈಯ್ದುಕೊಳ್ಳುತ್ತಿದ್ದರು.



ಸಂಜೆಯ ವೇಳೆಗೆ ಬೇರೆ ಊರುಗಳಿಂದ ನೆಂಟರು ಮಟನ್ ಊಟಕ್ಕಾಗಿಯೇ ಬರುತ್ತಿದ್ದರು. ಅದರಲ್ಲಿ ಕೆಲವರು ಸದ್ದಿಲ್ಲದೆ ಊಟ ಮಾಡಿ ಅಡಿಕೆ ಎಲೆ ಹಾಕಿಕೊಂಡು ಹೊರಟರೆ ,ಕೆಲ ತೀರ್ಥಂಕರರು ಅರೆ ಬರೆ ಊಟಮಾಡಿ ಗಲಾಟೆ ಮಾಡಿ ಚರಂಡಿಯಲ್ಲಿ ಬಿದ್ದು ಒದ್ದಾಡುವುದೂ ಇದೆ. 



ಭಾನುವಾರ ಮೊದಲ ಸಿಡಿ ಉತ್ಸವ ಸೋಮವಾರ ಎರಡನೇ ಸಿಡಿ ಉತ್ಸವ ಮತ್ತು ಕೆಳಜನಾಂಗದವರ ಮಾಂಸದೂಟದ ಸಂಭ್ರಮ.

*****************************

ಮೈಗೆ ಅರಿಶಿಣ ಬಳಿದುಕೊಂಡ ಕೈಯಲ್ಲಿ ಒಂದು ಗುದ್ಬಾಕು ಅದಕ್ಕೆ ನಿಂಬೆಹಣ್ಣು ಸಿಕ್ಕಿಸಿಕೊಂಡು ವಾಲಗದವರ ಜೊತೆಗೆ ಕೆಲ ಮನೆಗಳಿಗೆ ತೆರಳಿ  ಪುನಃ ಗುಡಿಯ ಬಳಿ ಬಂದು ಸಿಡಿ ಮರಕ್ಕೆ ಕೈಮುಗಿದು ನಿಂತ ಸಿಡಿ ಆಡುವವರನ್ನು ಸಿಡಿ ಮರಕ್ಕೆ ಕಟ್ಟಿ ಎತ್ತುಗಳನ್ನು ಹೂಡಿ ಆಸ್ಪತ್ರೆಯ ದಿನ್ನೆಯವರೆಗೆ ಕರೆದುಕೊಂಡು ಹೋಗಿ ಅಲ್ಲಿ ಸಿಡಿಮರ ಬಿಟ್ಟು, ಸಿಡಿಯಾಡುವವರನ್ನು ಮರದಿಂದ ಬಿಚ್ಚಿ ಗುಡಿಗೆ ಹಿಂತಿರುಗಿ ಕೈಮುಗಿದು ಮನೆಗೆ ಹೋಗುತ್ತಿದ್ದರು. ಮರುದಿನ ಬೆಳಿಗ್ಗೆ ಸಿಡಿಮರ ಅಮ್ಮನ ಸನ್ನಿಧಿಗೆ ಹಿಂತಿರುಗುತ್ತಿತ್ತು. ಇದೇ ರೀತಿ ಎರಡು ದಿನ ಉತ್ಸವ ನಡೆಯುತ್ತಿತ್ತು. ಬಹುತೇಕ ಕೆಳವರ್ಗದ ಜನ ಸಿಡಿಮರದ ಉತ್ಸವಕ್ಕೆ ಹರಕೆ ಹೊತ್ತು ಅವರೇ ಸಿಡಿ ಆಡುತ್ತಿದ್ದರು .


ಸಾಮಾನ್ಯವಾಗಿ ಗಂಡಸರು ಸಿಡಿಯಾಡಿದರೆ ಅಪರೂಪಕ್ಕೊಮ್ಮೆ ಹೆಂಗಸರೂ ಸಿಡಿ ಆಡುವುದುಂಟು.



ಸೋಮವಾರ ಕೆಳವರ್ಗದ ಕಾಲೋನಿ ಕಡೆಯಿಂದ ಹಿಂಡು ಹಿಂಡು ಕೋಣಗಳು ಮತ್ತು ಜನರು ಬರುವುದು ನೋಡಿ ಅವರು ಕೋಣ ಮೇಯಿಸಲು  ಹೊರಟಿರುವರು ಎಂದುಕೊಂಡರೆ ತಪ್ಪು!


ಅವರು ಸೀದಾ ಮಾರಮ್ಮನ ಗುಡಿಗೆ ಬಂದು ಎಲ್ಲಾ ಕೋಣಗಳನ್ನು ಪೂಜೆ ಮಾಡಿಸಿ 


" ಸಿದ್ದಣ್ಣ ನಮ್ ಕ್ವಾಣ ಒಂದೇ ಏಟಿಗೆ ಹೋಗ್ಬೇಕು ,ಕಡಿ" ಎಂದ ಗುರುಸಿದ್ದ .



ಹೋದೊರ್ಸ ನಮಗೆ ಕ್ವಾಣ ಕೊಡ್ಲಿಲ್ಲ ನೀವು, ನಾವು ಯಾರ್ಯಾರ ಮನೆಗೆ ಹೋಗಾಕಾಗುತ್ತ ,ನೆಂಟರು ಬತ್ತಾರೆ


ಜಾತ್ರೆಗೆ ಈ ಸಲ ನಮಗೆ ಕ್ವಾಣ ಕೊಡ್ಬೇಕು ಗೌಡರೆ" ಎಂದು ಗುರುಸಿದ್ದನ ತಾಯಿ ಬೇಡಿದ ಪರಿಣಾಮವಾಗಿ ಮುಕುಂದಯ್ಯ ಎರಡು ವರ್ಷದ ಕೋಣ ಮತ್ತು ದವಸ ಧಾನ್ಯಗಳನ್ನು ಕೊಟ್ಟು ಕಳಿಸಿದ್ದ 


ಹೋಗುವಾಗ " ಜಾತ್ರೆನಾಗೆ ನಮ್ ಹುಡ್ಗುಗೆ ರಜೆ ಕೊಟ್ಟು ಮನಿಗ್ ಕಳ್ಸಿ ಸಾಮಿ " ತಲೆಕೆರೆದುಕೊಂಡು ಅಳುಕುತ್ತಲೇ ಕೇಳಿದಳು ರಂಗಮ್ಮ" ದನಗಳನ್ನು ಯಾರ್ ಕಾಯಾಕೋಗ್ತಾರೆ ನಮಗೂ ಜಾತ್ರೆ ಅಲ್ವ? ನೀನ್ ಹೋಗ್ತಿಯಾ? ಬಿಸಿರಕ್ತದ ಬಿಳಿಯಪ್ಪ ಎಗರಿಬಿದ್ದ" ಹೋಗ್ಲಿ ಬಿಡಲೆ ಎಂಗ ಆಗುತ್ತೆ ನೋಡು ರಂಗವ್ವ ನಿಮ್ಮ ಮಟನ್ ದಿನ ಮಾತ್ರ ರಜ ತಗಳ್ಲಿ ಬ್ಯಾರೆ ದಿನ ಕಳ್ಸು ದನ ಮೇಸಿ ಕಟ್ಟಾಕಿ ಬೇಕಿದ್ರೆ ನಿಮ್ ಮನೆಗೆ  ಬರ್ಲಿ " ಆರ್ಡರ್ ಮಾಡಿದರು ಸರಸ್ವತಜ್ಜಿ.



ಅಂದು ಒಂದು ದಿನ‌ ಸಿಕ್ಕಿದ ವರ್ಷದ  ಸ್ವತಂತ್ರವನ್ನು ಅನುಭವಿಸುತ್ತಾ ಸಿದ್ದಾನಾಯ್ಕ ಅವರ ಕೋಣವನ್ನು ಒಂದೇ ಏಟಿಗೆ ಕಡಿದಾಗ ಕುಣಿದು ಕುಪ್ಪಳಿಸಿ ಕೇಕೆ ಹಾಕಿದ ಯಾರೋ ಬೇಕಂತಲೆ "ಅಗ ಬಿಳಿಯಪ್ಪ ಬಂದ" ಅಂದ ತಕ್ಷಣ ಭಯದಿಂದ ಸುಮ್ಮನೆ ನಿಂತ .ಅದು ಸುಳ್ಳು ಎಂದು ಗೊತ್ತಾಗುತ್ತಲೆ ಮತ್ತೆ ಕುಣಿಯುತ್ತ ಕೋಣದ ತಲೆ ಹಿಡಿದುಕೊಂಡು ಮನೆ ಕಡೆ ಹೆಜ್ಜೆ ಹಾಕಿದ .ಅಂದು ಕಾಲೊನಿ ಪೂರಾ ಮಸಾಲೆ ವಾಸನೆ ಜೊತೆಗೆ ಸಂಜೆಯಾಗುತ್ತಲೆ ಕೊಂಚ ಹೆಂಡದ ವಾಸನೆ  ಬೇಡವೆಂದರೂ ನಿಲ್ಲದ ಜಗಳಗಳು ಒಟ್ಟಾರೆ ಮಾರಮ್ಮನ ಜಾತ್ರೆ ಕಾಲೋನಿಯಲ್ಲಿ ಕಳೆಗಟ್ಟಿತ್ತು.


******************************


"ನಾನು ಊರಿಗೆ ಹೋಗಬೇಕು ಹೊರಡುವೆ " ಎಂದು ಭೂದೇವಮ್ಮ ಬ್ಯಾಗ್ ಸಿದ್ದಪಡಿಸುತ್ತಿದ್ದರು


 " ನಿನಗೇನ್ ತಲೆ ಕೆಟೈತಾ ಮಂಗಳವಾರ ಹೆಣ್ಣುಮಕ್ಕಳು ಅಂಗಳ ದಾಟಬಾರದು ,


ಅದೂ ಅಲ್ದೇ ನಾಳೆ ಬುಧವಾರ ಗಾವು ಸಿಗ್ಯಾದಾದ ಮ್ಯಾಕೆ ಜಾತ್ರೆ ಮುಗಿಯಾದು ಅಲ್ಲೇನು ಕೊಳ್ಳೆ ಹೋಗಿಲ್ಲ ಸುಮ್ನೆ ಬಿದ್ದಿರು"

ಸರಸ್ವತಜ್ಜಿ ಮಗಳನ್ನು ಗದರಿದರು.ಭೂದೇವಮ್ಮ ಬ್ಯಾಗ್ ಎತ್ತಿಟ್ಟು, ಉಳಿದ ಚಿಕನ್ ಸಾಂಬಾರ್ಗೆ ಚಪಾತಿ ಮಾಡಲು ತಿಮ್ಮಕ್ಕನಿಗೆ ಸಹಾಯ ಮಾಡಲು ಅಡಿಗೆ ಮನೆಯ ಕಡೆ ಬೇಸರದಿಂದ ನಡೆದರು ಆದರೆ ಸತೀಶನಿಗೆ ಇನ್ನೂ ಒಂದು ದಿನ ಅಮ್ಮ ನನ್ನ ಜೊತೆಗಿರುವಳು ಎಂದು ಸಂತಸದಿಂದ ಕುಣಿದನು.


"ಮಾವ ಅಜ್ಜಿ   ನಾಳೆ ಗಾವು ಸಿಗ್ಯಾದು ಅಂದರಲ್ಲ  ಅಂಗಂದರೇನು? ಎಂದು ಮುಕುಂದಯ್ಯ ನನ್ನು ಕೇಳಿದ ಸತೀಶ.



 "ಪೋತರಾಜರನ್ನು ಮಾರಿಯ ಸೇವೆ ಮಾಡುವ ಆರಾಧಕರೆಂದು ಕರೆಯಲಾಗುತ್ತದೆ. ‘ಪೋತ’ ಎಂದರೆ ‘ಹೋತ’(ಗಂಡು ಮೇಕೆ) ಎಂಬ ಅರ್ಥವಿದೆ. ‘ಪ’ಕಾರ ‘ಹ’ ಕಾರಗಳಿಗಾಗಿ ಬದಲಾದರೂ ‘ಪೋತ’ದ ವೇಷವನ್ನು ಯಾಕೆ ಧರಿಸುತ್ತಾರೆ ಎಂಬುದರ ಒಂದು ಸ್ವಾರಸ್ಯಕರ ಕತೆಯೇ ಇದೆ.


" ಆ ಕಥೆ ಹೇಳು ಮಾವ "


"ಬ್ರಾಹ್ಮಣಳಾದ ಮಾರಮ್ಮನನ್ನು ದಲಿತನೊಬ್ಬ ವಂಚಿಸಿ ಮದುವೆಯಾಗಿರುತ್ತಾನೆ. ‘ಕೋಣ’ದ ರೂಪದಲ್ಲಿ ಮಕ್ಕಳನ್ನು ದೃಷ್ಟಿಮರಿ, ಹೊಳೆಮರಿಗಳ ರೂಪದಲ್ಲಿ ಮಕ್ಕಳ ಬಲಿ ಪಡೆವೆ ಎಂದು ಶಪಥ ಮಾಡಿದ್ದಳು ಮಾರಮ್ಮ. ಅದರಂತೆ ಮೊನ್ನೆ ಗುರುವಾರ ಅಮ್ಮ ಜಲದಿ ಹೊಳೆಯಿಂದ ಬರುವಾಗ    ‘ಹೊಳೆ ಮರಿ’ಯೆಂದು, ಹಿಂತಿರುಗಿ ಬರುವಾಗ ಜನಗಳ ಕಣ್ಣ ದೃಷ್ಟಿ ಪರಿಹಾರಕ್ಕೊಂದು ‘ದೃಷ್ಟಿ ಮರಿ’ಯನ್ನು  ಕಡಿದಿದ್ದು ನೀನು ನೋಡಿದೆಯಲ್ಲ."

"ಹೌದು ಮಾವ ನೋಡಿದೆ ಆ ಮರಿ 

 ಕಳ್ಳು ಪಚ್ಚಿ ಹೊರಕ್ಕೆ ಬಂತು"

"ಜಾತ್ರೆಯ ಕೊನೆ ದಿನ ಮಾರಮ್ಮ 

ಗುಡಿದುಂಬುವ ಮುಂಚೆ ಆಕೆಯ ಕೋಪದ ಶಮನಕ್ಕಾಗಿ ‘ಗಾವು ಮರಿ’ ಯನ್ನು ಈ ಪೋತರಾಜರು ಅದರ ಗಂಟಲಿಗೇ ಬಾಯಿಹಾಕಿ ಕಚ್ಚಿ ಕೊಲ್ಲುವರು."


"ಅಲೆಮಾರಿ ಪಶುಪಾಲಕರ ದೇವತೆ ಹನ್ನೆರಡು ಪೆಟ್ಟಿಗೆ ದೇವರುಗಳಲ್ಲೊಂದಾದ ‘ದಡ್ಲಮಾರಮ್ಮ’ ದನಗಳ ದೊಡ್ಡಿಯಲ್ಲಿ, ಅದೂ ದೇವರ ಎತ್ತುಗಳ ಕಾಲ ಗೊರಸಿನಲ್ಲಿ ಹುಟ್ಟಿದವಳು. ಪಶುಪಾಲಕ ಮಾರಮ್ಮನವರ ಸಂಬಂಧಗಳನ್ನು ಇದು ಸ್ಪಷ್ಟವಾಗಿ ಹೇಳುತ್ತದೆ. ಅಂದರೆ ಮಾರಮ್ಮಗೆ ಪಶುಪಾಲಕರು ತವರು ಮನೆಯವರು ಇದ್ದ ಹಾಗೆ  ಇಂಥ ಮಾರಮ್ಮ ತನ್ನ ಗಂಡನಿಂದ ಅನ್ಯಾಯವಾಯಿತೆಂದು ಉರಿದೆದ್ದಾಗ ಅವಳ ಸಹಾಯಕ್ಕೆ ನಿಂತವರು ತವರು ಸಂಬಂಧದ ಈ ಮ್ಯಾಸಬೇಡರು  ಹೀಗಾಗಿ ಬೇಡರಲ್ಲಿ ಮಾರಮ್ಮನಿಗೆ ಬೆಂಗಾವಲ ಪಡೆಯಂತೆ ರೂಪುಗೊಂಡವರೆ ಪೋತರಾಜರು."


"ಉಂ ಅನ್ನು ಇಲ್ಲ ಅಂದರೆ ನಾನು ಕಥೆ ಹೇಳಲ್ಲ "

ಅಂದರು ಮುಕುಂದಯ್ಯ.


"ಆತು  ಊಂಗುಟ್ಟುತ್ತಿನಿ ಹೇಳು ಮಾವ"


"ಮಾರಮ್ಮನ ಜಾತ್ರೆ ಸಂದರ್ಭದಲ್ಲಿ ಇವರ ಪ್ರಧಾನವಾದ ಕೆಲಸವೆಂದರೆ ‘ಗಾವು ಸಿಗಿಯುವುದು’. ಈ ಸಂದರ್ಭದಲ್ಲಿ ಹೋತದ ರೀತಿಯಲ್ಲಿ ಮುಖವನ್ನು ಅಲಂಕರಿಸಿಕೊಂಡು, ಹೋತವನ್ನೇ ಸಿಗಿಯುವುದು? ‘ಗಾವುಮರಿ’ ಕಡು ಕಪ್ಪು ಅಥವಾ ಬಿಳಿಯ ಬಣ್ಣದ ‘ಹೋತ ಮರಿ’ (ಗಂಡು ಆಡುಮರಿ). ಇದರ ಗಂಟಲನ್ನು ಹಲ್ಲುಗಳಿಂದಲೇ ಕಚ್ಚಿ– ಕಚ್ಚಿ ಅದರ ರಕ್ತ ,ಮಾಂಸಗಳನ್ನು ಕುಡಿದು  ತಿನ್ನುವ ಭೀಕರವಾದ ಆಚರಣೆಯೇ  ‘ಗಾವು ಸಿಗಿಯುವುದು’."


"ಈ ಸಂದರ್ಭದಲ್ಲಿ ಹೋತದ ರೀತಿಯಲ್ಲಿ ಮುಖವನ್ನು ಅಲಂಕರಿಸಿಕೊಂಡು, ಹೋತವನ್ನೇ ಸಿಗಿಯುವುದರಿಂದ ಇವರಿಗೆ ಪೋತರಾಜರು ಎಂಬ ಹೆಸರು ಬಂದಿದೆ .ಹಿಂದಿನ ಕಾಲದಲ್ಲಿ ಆನೆ, ಒಂಟೆ, ಕೋಣ, ಹಂದಿಗಳನ್ನು ‘ಗಾವು ಮರಿ’ಯಾಗಿ ಬಳಸುತ್ತಿದ್ದರಂತೆ. ಮಾರಮ್ಮನ ಜಾತ್ರೆಯ ಉಳಿದ ‘ಬಲಿ’ ಪ್ರಕ್ರಿಯೆಗಳನ್ನು ಪೂರೈಸುವವರು ಮ್ಯಾಸಬೇಡ ಮೂಲದ ತಳವಾರ ನಾಯಕರು.  ಹೀಗೆ ಮಾಡಿದರೆ  ಕೃಷಿ ಮತ್ತು, ಪಶುಸಂಪತ್ತು  ಅಭಿವೃದ್ಧಿಯಾಗುವುದು ಎಂಬ ನಂಬಿಕೆ."



"ಬಲಿಯ ನಂತರ ಚೆಲ್ಲುವ ‘ಸರಗ’(ಚರಗ)ದ ರಕ್ತಬೆರೆತ ಅನ್ನ ಕೃಷಿಮಾತೆ ಭೂತಾಯಿಯ ತಣ್ಣಗೆ ಮಾಡುತ್ತಂತೆ."


"ಗಾವುಗಳಲ್ಲಿ ಎರಡು ಬಗೆ;

ಮೊದಲನೆಯದು ನೆಲಗಾವು,

ನೆಲಗಾವು ಅಂದರೆ ಗಾವು ಮರಿಯನ್ನು ನೆಲದ ಮೇಲೆ ಅಂಗಾತ ಮಲಗಿಸಿ ಚೂರಿಯಿಂದ ಕತ್ತು ಕೊಯ್ಯುವುದು. ಈ ಬಗೆಯ ಬಲಿ ಅಪರೂಪ. 

ಎರಡನೆಯದು ಎದ್ದಗಾವು

ಎದ್ದಗಾವು ಅಂದರೆ ನಿಂತುಕೊಂಡೇ ತನ್ನ ಹಲ್ಲುಗಳಿಂದ ಗಾವು ಮರಿಯ ಗಂಟಲು ಸಿಗಿಯಬೇಕು. ಇದನ್ನು ‘ನಿಂತ ಗಾವು’ಎಂದೂ ಕರೆಯುತ್ತಾರೆ. ನಾಳೆ ನಮ್ಮ ಊರಲ್ಲಿ ಮಾಡುವ ಗಾವು ಇದೇ ತರದ್ದು."


"ಪೋತರಾಜರು ‘ಒಂದೊತ್ತು’ ಇದ್ದು, ಸಂಜೆ ಮ್ಯಾಗಳ ಮನೆ ರಂಗಸ್ವಾಮಿಯವರ ಬಾವಿಗೆ   ಹೋಗಿ ಗಂಗಾಪೂಜೆ ಮಾಡಿ, ಅಲ್ಲಿಯೇ ಪೋತರಾಜರ ವೇಷ ಧರಿಸಿಕೊಳ್ಳುತ್ತಾರೆ. ಒಂಭತ್ತು ಸಂಖ್ಯೆಯಲ್ಲಿರುವ ರುದ್ರಾಕ್ಷಿ ಸರ ಕೊರಳನ್ನು ಅಲಂಕರಿಸಿರುತ್ತದೆ. ಬರೀ ಮೈಯಲ್ಲಿರುವ ಇವರು   ಮೊಣಕಾಲಿನವರೆಗೂ ಕಚ್ಚೆ ಪಂಚೆ   ಧರಿಸಿರುತ್ತಾರೆ. ಅದನ್ನು ‘ಸೆಳ್ಳ’ ಎಂದು ಕರೆಯುತ್ತಾರೆ. ತಲೆಗೆ ಬಿಳಿಯ ಪೇಟ ಕಟ್ಟಿರುತ್ತಾರೆ. ಕೈಯಲ್ಲಿ ಐದಾರು ಅಡಿ ಉದ್ದದ ಚಾಟಿ ಹಿಡಿದಿರುತ್ತಾರೆ. ಆಗಾಗ್ಗೆ ಅದನ್ನು ‘ಛಟೀರ್’ 'ಛಟೀರ್' ... ಎಂದು ಸೆಳೆಯುತ್ತಾ ಶಬ್ದ ಮಾಡುತ್ತಿರುತ್ತಾರೆ.  ಕಾಲಿಗೆ ಸೆಲಿಗೆ ಧರಿಸಿ, ಸೊಂಟಕ್ಕೆ ಗಂಟೆಯ ಸರದ ಚರ್ಮಪಟ್ಟಿಯನ್ನು ಕಟ್ಟಿ, ಮೈತುಂಬಾ ಅರಿಶಿನವನ್ನು ಹಚ್ಚಿಕೊಂಡು, ಮುಖಕ್ಕೆ ಮಾತ್ರ ಹೋತನ ಆಕಾರ ಕಾಣುವ ರೀತಿಯಲ್ಲಿ ಅರಿಶಿನ ಕುಂಕುಮವನ್ನು ಬಳಿದುಕೊಳ್ಳುತ್ತಾರೆ. ‘ಗಿರಿಜಾ ಮೀಸೆ’ ತಿರುವುತ್ತಿದ್ದರೆ ಪೋತರಾಜನ ಕಳೆ ವಿಜೃಂಭಿಸುತ್ತದೆ.ಸಣ್ಣವರಿದ್ದಾಗ ನಾವು ಅವರನ್ನು ನೋಡಿ ಮನೆಯಲ್ಲಿ ಬಚ್ಚಿಟ್ಟುಕೊಂಡು ಅವರು ಹೋದ ನಂತರ ಹೊರಗೆ ಬರುತ್ತಿದ್ದೆವು."



"ಉರುಮೆ ವಾದ್ಯದವರೊಂದಿಗೆ ಅಲ್ಲಿಂದಲೇ ಕುಣಿಯುತ್ತಾ, ಕೇಕೆ ಹಾಕುತ್ತಾ, ವೀರನಾಟ್ಯ ಮಾಡುತ್ತಾ, ಎರಡೂ ಕೈಯಲ್ಲಿರುವ ಚಾಟಿಗಳನ್ನು ಝಳಪಿಸುತ್ತಾ, ಮತ್ತೇರಿದಂತೆ ಆರ್ಭಟಿಸುತ್ತಾ ಮಾರಿಗುಡಿಯ ಮುಂಭಾಗಕ್ಕೆ ಬಂದು ‘ಗಾವು ಸಭೆ’ ನಡೆಸುತ್ತಾರೆ.  ಮೊದಲು  ಹತ್ತರಿಂದ ಇಪ್ಪತ್ತು ಸಂಖ್ಯೆಯಲ್ಲಿ  ಪೋತರಾಜರು ಬಂದು ಗಾವು ಸಿಗಿಯುತ್ತಿದ್ದರು. ಈಗ ಮೂರ್ನಾಕು ಜನ ಬರುತ್ತಾರೆ. ಊರಾಡಿ


ಮಾರಮ್ಮನ ಗುಡಿ ತಲುಪಲು ರಾತ್ರಿ ಏಳೆಂಟು ಗಂಟೆ ಆಗುತ್ತದೆ. ಗುಡಿಯ ಮುಂದೆ ಪೋತರಾಜ’ಕುಳಿತು, ಗಾವು ಸಿಗಿಯಲು ನೆರೆದ ಜನಗಳ ಅಪ್ಪಣೆ ಕೇಳುತ್ತಾನೆ. ಇವನ ಹಿಂದಿರುವ ಇತರೆ ಪೋತರಾಜ ಪಡೆ ಬೇಗ ಅನುಮತಿ ಕೊಡುವಂತೆ ಬೊಬ್ಬೆ ಹಾಕತೊಡಗುತ್ತದೆ."

"ಜನ ಒಪ್ಪಿಗೆ ಕೊಟ್ಟ ನಂತರ ಮಾರಮ್ಮನ ಗುಡಿಯ ಮುಂದೆ ‘ಗಾವಿನ ಗುಂಡಿ’ ತೆಗೆಸಿ, ಅದಕ್ಕೆ ಶಾಸ್ತ್ರೋಕ್ತವಾದ ರೀತಿಯಲ್ಲಿ ಪೂಜೆ ಮಾಡುತ್ತಾರೆ. ಮರಿ ಹೋತವನ್ನು ಗಾವಿನ ಗುಂಡಿಯ ಬಳಿ ತಂದು ಮಂತ್ರ ಹಾಕುತ್ತಾರೆ. ಅದು ಸತ್ತ ಹಾಗೆ ನಿಸ್ತೇಜವಾಗುತ್ತಿದ್ದಂತೆ, ಜನರ ಸಿಳ್ಳು– ಕೇಕೆ ಮುಗಿಲು ಮುಟ್ಟುತ್ತದೆ. ಪೋತರಾಜ ಗಾವಿನ ಮರಿಯನ್ನು ಎದೆಗೆ ಅವುಚಿಕೊಂಡು ಗಾವು ಸಿಗಿಯಲು ಸಿದ್ಧನಾಗುತ್ತಾನೆ. ಇನ್ನುಳಿದ ಸಹಾಯಕ ಪೋತರಾಜರು ವೀರನಾಟ್ಯ ಮಾಡುತ್ತಾ ಅಬ್ಬರಿಸುತ್ತಿರುವಂತೆ, ಗಾವು ಸಿಗಿದು ಅದರ ರಕ್ತ– ಮಾಂಸಗಳನ್ನು ಗಾವಿನ ಗುಂಡಿಗೆ ಉಗಿಯುತ್ತಾನೆ. ರಕ್ತಸಿಕ್ತವಾದ ಪೋತರಾಜನ ಮುಖ ಭಯಾನಕವಾಗಿರುತ್ತದೆ."


"ಕೊನೆಗೆ ಸತ್ತ ಗಾವಿನ ಮರಿಯ ತಲೆ ಕತ್ತರಿಸಿ ಗಾವಿನ ಗುಂಡಿಗೆ ಹಾಕುತ್ತಾರೆ. ಗಾವು ಮರಿಯ ದೇಹವನ್ನು ಉರುಮೆ ಬಡಿಯುವವರಿಗೆ ಪೋತರಾಜರೇ ಕೊಟ್ಟು ಬಿಡುತ್ತಾರೆ. ತಮ್ಮ ಮೈಗೆ ಮೆತ್ತಿಕೊಂಡ ಅರಶಿನ– ಕುಂಕುಮ ತೊಳೆದ ನೀರನ್ನು ಗಾವಿನ ಗುಂಡಿಗೆ ಹರಿಸಿ ಗುಂಡಿ ಮುಚ್ಚಿ ಅನ್ನ– ಮೊಸರಿನ ಎಡೆ ಹಾಕಿ ಶಾಂತಿ ಮಾಡುತ್ತಾರೆ. ನಂತರ ‌ದುಡ್ಡು‌ ದವಸ ಪಡೆದು ಹೊರಡುತ್ತಾರೆ."

ಮಾವನ ಕಥೆ ಕೇಳುತ್ತ ಸತೀಶ ನಿದ್ದೆಗೆ ಜಾರಿದ್ದ.



ರಾತ್ರಿಯೆಲ್ಲಾ‌ ಮಾವ ಹೇಳಿದ ಪೋತರಾಜರ ಕಥೆ ಕೇಳಿ ಮಲಗಿದ ಸತೀಶನಿಗೆ ಪೋತರಾಜರು ಚಾಟಿಯಿಂದ ಛಟೀರ್ ಎಂದು ಬಾರಿಸಿದಂತಾಯಿತು ಅಮ್ಮಾ  ...... ಎಂದು ಕಿರುಚಿಕೊಂಡು ಎದ್ದ .ಭೂದೇವಮ್ಮ ನೀರು ಕುಡಿಸಿ ಸಮಾಧಾನ ಮಾಡಿ ಮಲಗಿಸಿದರು


***************************

ಮರು ದಿನ ಮಾವ ಹೇಳಿದಂತೆ ಪೋತರಾಜರ ವೇಷಭೂಷಣ ನೋಡಿ ಸತೀಶನಿಗೂ ಮೊದಲು ಭಯವಾಯಿತು.

ದೇವಸ್ಥಾನದ ಮುಂದೆ ಜನಜಂಗುಳಿ ಸೇರಿತ್ತು ಗಂಡು ಹೆಣ್ಣು ಎಂಬ ಭೇದವಿರದೆ ಜನರು ಗಾವು ಸಿಗಿಯುವುದನ್ನು ನೋಡಲು ಮುಗಿಬೀಳುತ್ತಿದ್ದರು .


ಬಿಳಿಯಪ್ಪನ ನೋಡಿದ ಶೀಲಾ ಹತ್ತಿರ ಬಂದು ಮೈ ತಾಗಿಸಿ ನಿಂತಳು. ಬಿಳಿಯಪ್ಪನಿಗೆ  ಅವಳ  ಮೆದುವಾದ ಸ್ಪರ್ಶದಿಂದ ಮೈ ಬಿಸಿಯಾಗಿ ಹೊಂಗೆ ಮರದ ಘಟನೆ  ನೆನಪು ಮಾಡಿತ್ತು .ಒಮ್ಮೆಲೆ ಅವರ ಮನೆಗೆ ಗಂಡಿನ ಕಡೆಯವರು ಜಾತ್ರೆಗೆ ಬಂದಿರುವ ಸುದ್ದಿಯ ನೆನೆದು ,ಹಾಗಾದರೆ ಶೀಲಾ ನನಗೆ ಸಿಗುವುದಿಲ್ಲವೆ? ಏಕೆ ಸಿಗುವುದಿಲ್ಲ ನಾಳೆಯೇ ಅವರ ಅಪ್ಪನ ಬಳಿ ಹೋಗಿ ಹೆಣ್ಣು ಕೇಳುವೆ, ಎಂದು ಒಮ್ಮೆ ಯೋಚಿಸುತ್ತಾ, ಬೇಡ ನಮ್ಮ ಅಮ್ಮನ ಮೂಲಕ ಕೇಳಿಸೋಣ, ಅಮ್ಮ ದಿನವೂ ಅವರ ಮನೆಗೆ ಚೌಕಾಬಾರ ಆಡಲು ಹೋಗತ್ತಾಳಲ್ಲ ಅಮ್ಮ ಹೇಳಿದರೆ ಅವರಪ್ಪ  ನಮ್ಮ ಮದುವೆಗೆ ಒಪ್ಪೇ  ಒಪ್ಪುತ್ತಾನೆ . ಒಪ್ಪದಿದ್ದರೆ ? ಮತ್ತೆ ಪ್ರಶ್ನೆಗಳ ಹುತ್ತ ಬೆಳೆಯುತ್ತಿತ್ತು. "ಏ ಬಿಳಿಯ ಬಾರಲೆ ಗಾವು ಮುಗಿತು ಈ ವರ್ಸದ ಜಾತ್ರೆನೂ  ಮುಗಿತು " ಎಂದು ಬ್ರಮ್ಮಿ ಕೂಗಿದಾಗ ಬಿಳಿಯಪ್ಪ ಗುಡಿಯ ಮುಂದೆ ಒಬ್ಬನೆ ನಿಂತಿದ್ದ .ವಾಸ್ತವಕ್ಕೆ ಬಂದ ಬಿಳಿಯಪ್ಪನಲ್ಲಿ ಹಲವಾರು ಪ್ರಶ್ನೆಗಳು ಎದ್ದವು.  ಜನ ಎಲ್ಲಾ   ಯಾವಾಗ ಅವರ ಮನೆಗೆ ಹೋದರು.? ಶೀಲಾ ಯಾವಾಗ ಹೋದಳು ? ಇಂದಿಗೆ ಮಾರಮ್ಮನ ಜಾತ್ರೆ ಮುಗಿಯಿತು.ಅದೇ ರೀತಿ ನನ್ನ ಬಾಳಲ್ಲಿ ಶೀಲಾಳ ಸಂಬಂಧ ಮುಗಿಯುವುದೇ ? ಇಲ್ಲಾ ನಮ್ಮಿಬ್ಬರ ವೈವಾಹಿಕ ಜೀವನದ ಮೊದಲ ಪುಟ ಆರಂಭವಾಗುವುದೆ? ಬರೀ ಪ್ರಶ್ನೆಗಳು ಬಿಳಿಯಪ್ಪನ ಬಾಳಲ್ಲಿ ಉತ್ತರ ಸಿಗುವುದು ಯಾವಾಗ?




ಮುಂದುವರೆಯುವುದು.....



ಸಿ ಜಿ ವೆಂಕಟೇಶ್ವರ


14 January 2022

ವೈಫಲ್ಯವೂ ಬೇಕು

 




ವೈಫಲ್ಯಗಳಿಲ್ಲದೇ ಸಾಫಲ್ಯ ಕಾಣುವುದು ಬಹುಶಃ ಕನಸಿನಲ್ಲಿ ಅಥವಾ ಮೂರ್ಖರ ನಿಘಂಟಿನಲ್ಲಿ ಮಾತ್ರ. ವೈಫಲ್ಯಗಳು ನಮ್ಮ ಸಾಮರ್ಥ್ಯಕ್ಕೆ ಸವಾಲೊಡ್ಡುತ್ತವೆ .ಆ ಸವಾಲುಗಳನ್ನು  ಧೈರ್ಯದಿಂದ ಸ್ವೀಕರಿಸಿ ಮುನ್ನುಗ್ಗಲು ನಮ್ಮ ತಪ್ಪುಗಳನ್ನು ತಿದ್ದಿಕೊಳ್ಳಲು ಪರೋಕ್ಷವಾಗಿ ಮಾರ್ಗದರ್ಶಕರಾಗಿ ಕಾರ್ಯನಿರ್ವಹಿಸುತ್ತವೆ ಎಂದರೆ ತಪ್ಪಾಗಲಾರದು. 


ಇನ್ನೂ ಕೆಲವೊಮ್ಮೆ ಈ ವೈಫಲ್ಯಗಳು ಮಾನವ ಸಹಜವಾದ   ನಮ್ಮ ಅಹಂ ಮೇಲೆ ಪೆಟ್ಟು ನೀಡಿ ತಲೆಯ ಮೇಲೆ ಒಂದು ಮೊಟಕಿ ನಮ್ಮ ವ್ಯಕ್ತಿತ್ವ ಉತ್ತಮ ಪಡಿಸಲೂ ಸಹಾಯಕವಾಗುತ್ತವೆ .


ಒಟ್ಟಿನಲ್ಲಿ ಸಾಫಲ್ಯದ ಸೌಧಕ್ಕೆ  ವೈಫಲ್ಯಗಳೆಂಬ ಇಟ್ಟಿಗೆಗಳೆ ಬುನಾದಿ ಕಲ್ಲುಗಳು . ನಮಗೆ ಪಾಠ ಕಲಿಸುವ ಅಂತಹ ವೈಫಲ್ಯಗಳಿಗೆ ಧನ್ಯವಾದಗಳ ಹೇಳುತ್ತಾ ಸಾಗಬೇಕಿರುವುದು ಅಪೇಕ್ಷಣೀಯ.    ನಮ್ಮ ವೈಫಲ್ಯಗಳಿಗೆ ಕುಂದದೇ ಸಾಫಲ್ಯದೆಡೆಗೆ ಹೆಜ್ಜೆ ಹಾಕೋಣ ನಮ್ಮ ಬದುಕನ್ನು ಹಸನು ಮಾಡಿಕೊಳ್ಳೋಣ .


ಸಿಹಿಜೀವಿ

ಸಿ ಜಿ ವೆಂಕಟೇಶ್ವರ

10 January 2022

ದೇಶ,ಭಾಷೆ ವೇಷ. ಹನಿಗಳು


 

ಸಿಹಿಜೀವಿಯ ಹನಿಗಳು


ದೇಶ 

ಜಗದಿ ಸರ್ವರಿಗೂ ಹೆಸರಿಗೆ 
ಇದೆ ಒಂದೊಂದು ದೇಶ|
ವಸು ದೈವ ಕುಟುಂಬ ಎಂದು
ಬಿಟ್ಟು ಬಿಡೋಣ ದ್ವೇಷ||


ಭಾಷೆ 

ನನ್ನ ಹೆತ್ತಮ್ಮ ಕಲಿಸಿದಳು 
ಅದು ತಾಯಿ ಭಾಷೆ|
ಅದನ್ನು ಉಳಿಸಿ ಬೆಳೆಸಲು
ಕನ್ನಡಮ್ಮನಿಗೆ ಕೊಡುವೆ ಭಾಷೆ||


ವೇಷ

ಉದರ ನಿಮಿತ್ತವಾಗಿ 
ಹಾಕುವೆವು ದಿನಕ್ಕೊಂದು ವೇಷ|
ವೇಷಗಳು ಮಿತಿಮೀರಿದರೆ 
ತಪ್ಪದು ವಿನಾಶ ||

ಸಿಹಿಜೀವಿ
ಸಿ ಜಿ ವೆಂಕಟೇಶ್ವರ
ತುಮಕೂರು

09 January 2022

ಕನ್ನಡಿಗರಿಗೆ ಮೊದಲು ಕನ್ನಡದ ಪ್ರಜ್ಞೆ ಇರಬೇಕು.


 



ಕನ್ನಡಿಗರಿಗೆ ಮೊದಲು ಕನ್ನಡದ ಪ್ರಜ್ಞೆ ಇರಬೇಕು.


"ಕನ್ನಡ ಪ್ರಜ್ಞೆಯ ಸುತ್ತಮುತ್ತ" ಎಂಬ ಪುಸ್ತಕದ ಅಡಿ ಬರಹದಲ್ಲಿ

ನಾಡು-ನುಡಿ-ಚಿಂತನೆ ಎಂಬ ಸಾಲು ಓದಿ ಪುಸ್ತಕ ಓದಲು ಶುರು ಮಾಡಿದರೆ ಅಜಮಾಸು 324 ಪುಟಗಳಲ್ಲಿ 72 ಲೇಖಕರು ತಮ್ಮ ಲೇಖನಗಳ ರಸಪಾಕ ಉಣಬಡಿಸಿದ್ದಾರೆ.ಪುಸ್ತಕ ಓದಿ ಮುಗಿಸಿದಾಗ ಎಪ್ಪತ್ತೆರಡು ಪುಸ್ತಕಗಳನ್ನು ಓದಿದ ಅನುಭವವಾಗುತ್ತದೆ. ಇಂತಹ ಪುಸ್ತಕ ಓದಲು ಕಳಿಸಿದ ಆತ್ಮೀಯರು ಗೆಳೆಯರು ಮತ್ತು ಸಾಹಿತಿಗಳೂ ಆದ ಕಿರಣ್ ಹಿರಿಸಾವೆ ರವರಿಗೆ ಮೊದಲಿಗೆ ನನ್ನ ನಮನಗಳ ಸಲ್ಲಿಸುವೆ .


ಡಾ. ಗೀತಾ ಡಿ .ಸಿ. ಮತ್ತು

ನಾಗರೇಖಾ ಗಾಂವಕರ ರವರು ಜಂಟಿಯಾಗಿ ಈ ಕೃತಿಯ ಸಂಪಾದನೆ ಮಾಡಿರುವರು.ಇದರಲ್ಲಿ ಬರುವ 

72 ಲೇಖನಗಳು ಒಂದೊಂದು ಮೌಲಿಕ ಮತ್ತು ಚಿಂತನಾರ್ಹ ಲೇಖನಗಳಾಗಿವೆ . ಸಂಪಾದಕರ ಪ್ರಯತ್ನ ನಿಜಕ್ಕೂ ಅಭಿನಂದನಾರ್ಹ.


ಎಲ್ಲಾ ಲೇಖಕರ ಲೇಖನಗಳು ಅತ್ಯುತ್ತಮ ಆದರೂ ಕೆಲವರ ಚಿಂತನಾರ್ಹ ಅಭಿಪ್ರಾಯಗಳ ಮೆಲುಕು ಹಾಕುವ ಕಾರ್ಯ ಮಾಡುವುದಾದರೆ,

ಕುಸುಮಾ ಆಯರಹಳ್ಳಿ ರವರು ನಮ್ಮ ಕನ್ನಡದ ಪ್ರಾದೇಶಿಕ ಭಾಷಾ ಸೊಗಡು ಇಂದು ನಶಿಸುವ ಬಗ್ಗೆ ನಾವು ಚಿಂತಿಸಬೇಕಿದೆ ಎಂದಿರುವುದು ಮನನೀಯವಾಗಿದೆ .


ಮುಂಬಯಿ ಕನ್ನಡ ಸಂಘಟನೆಯವರು ನಿಘಂಟು ತಜ್ಞರಾದ ಜೀವಿರವರ ಸಂದರ್ಶನದಲ್ಲಿ  ಕೇಳಿದ ಪ್ರಶ್ನೆಗೆ ಅವರು   "ಕನ್ನಡದ ಅಳಿವು ಅಸಾಧ್ಯ. ಕನ್ನಡದ ತಾಕತ್ತು ಅನನ್ಯ ಎಂಬುದು ನಮಗೆ ಸಮಾಧಾನ ತರುತ್ತದೆ. 

ಅವರ ಮಾತುಗಳಲ್ಲೇ ಹೇಳುವುದಾದರೆ

"ಕನ್ನಡ ಅಳಿಯಲ್ಲ  ,ಅನ್ಯಭಾಷಾ ಪದಗಳು ಕನ್ನಡದಲ್ಲಿ ಬೆರೆತರೆ ತಪ್ಪಿಲ್ಲ , ಶಾಸ್ತ್ರೀಯ ಭಾಷೆ ಅನುದಾನ ಪಡೆಯಲು ಯೋಜನೆ ರೂಪಿಸಬೇಕು"


ಕಿರಣ್ ಹಿರಿಸಾವೆ ರವರು 

ಐಟಿ ಕಂಪನಿಗಳು  ಕನ್ನಡದ ಬೆಳವಣಿಗೆಗೆ ಪರೋಕ್ಷವಾಗಿ ಹೇಗೆ ಕೊಡುಗೆ  ನೀಡಿವೆ ಮತ್ತು ಪ್ರತ್ಯಕ್ಷವಾಗಿ ಕನ್ನಡ ಬೆಳೆಯಲು ಬೆಂಗಳೂರಿನ ಐಟಿ ಕಂಪನಿಗಳಲ್ಲಿ ಕನ್ನಡ ಉಳಿಯಲು 

 ಹೆಚ್. ಆರ್ ರಿಸೆಪ್ಷನಿಸ್ಟ್, ಕಟ್ಟಡ ಕಾಮಗಾರಿಯವರು  ಇಂತಹ ಹುದ್ದೆಗಾದರೂ  ಕನ್ನಡದ ಜನರ ನೇಮಕಗೊಂಡರೆ ಅವರು ಆಡುವ ಕನ್ನಡ ಮಾತುಗಳು ಆಂಗ್ಲಮಯವಾದ ಐಟಿ ಕಂಪನಿಗಳಲ್ಲಿ ಸ್ವಲ್ಪಮಟ್ಟಿಗೆ ಕನ್ನಡ ನಲಿಯಲಿದೆ ಎಂಬ ಸಲಹೆ ಸ್ವಾಗತಾರ್ಹ.


ಈ ಪುಸ್ತಕದಲ್ಲಿ ಮಾತೃಭಾಷೆ ಬೇಕೇ ಬೇಕು ಎಂದು ಕೆಲವರು ವಾದ ಮಂಡಿಸಿದರೆ .ಅದಕ್ಕಾಗಿಯೇ ಅಷ್ಟೊಂದು ಚಿಂತೆ ಬೇಡ ಎಂಬುದು ಕೆಲವರ ವಾದವಾಗಿದೆ.

ವಾದಗಳು ಎರಡೂ ಕಡೆಯಿಂದಲೂ ಗಟ್ಟಿಯಾಗಿ ಕೇಳಿಸುತ್ತವೆ. ಸಮರ್ಥನೀಯವಾಗಿ ಕೇಳಿಸುತ್ತವೆ. ಈ ವಿದ್ಯಮಾನವನ್ನು ಸ್ವಾತಂತ್ರ್ಯ ಮತ್ತು ಸಮಾನತೆ ಎಂಬ ಪರಿಕಲ್ಪನೆಗಳಿಂದ ಅರ್ಥಮಾಡಿಕೊಳ್ಳುವ ಪ್ರಯತ್ನಗಳೂ ನಡೆದಿವೆ.


ಡಾ. ಬಿ .ಜನಾರ್ಧನ ಭಟ್ ರವರು ವಾಸ್ತವವಾಗಿ ವಿಷಯ ವಿಶ್ಲೇಷಣೆ ಮಾಡಿದ್ದಾರೆ .ಮಾತೃಭಾಷೆಯೇ ಬೇಕು ಎಂದು ಹೋರಾಡಿದ ನೇಪಾಳ, ಝಾರ್ಕಂಡ್ ರಾಜ್ಯದಲ್ಲಿ ಹೇಗೆ ಅದು ಹಳ್ಳ ಹಿಡಿದು ಪುನಃ ಇತರೆ ಭಾಷೆಯಲ್ಲಿ ಶಿಕ್ಷಣ ಮೇಲುಗೈ ಸಾಧಿಸಿದೆ ಎಂದು ವಿವರಗಳನ್ನು ನೀಡಿದ್ದಾರೆ.

ಮಾತೃಭಾಷೆಯೇ ಬೇಕು ಮತ್ತು ಬೇಡ ಎಂದು ವಾದ ಮಂಡಿಸುತ್ತಾ ಕೂತಿರುವ ಬದಲು ಕನ್ನಡ ಕಲಿಕೆಯನ್ನು ಕಡ್ಡಾಯಗೊಳಿಸುವುದು ಮತ್ತು ಪರಿಣಾಮಕಾರಿಯಾಗಿ ಭಾಷೆ ಮತ್ತು ಸಾಹಿತ್ಯವನ್ನು ಬೋಧಿಸುವ ಕಡೆಗೆ ಗಮನ ಹರಿಸಬೇಕಾಗಿದೆ. ನಾವು ಕನ್ನಡವನ್ನು ಕಲಿಸಬೇಕು ಎನ್ನುವುದನ್ನು ಮಾತಾಡುತ್ತಿದ್ದೇವೆಯೇ ಹೊರತು ಹೇಗೆ ಅನ್ನುವುದನ್ನು ಯೋಚಿಸುತ್ತಿಲ್ಲ.


ಪ್ರತಿ ಸೀಮೆಗೂ ಒಂದು ಹೊಸ ಪದವಿದೆ, ಒಂದು ಅರ್ಥವಿದೆ, ಒಂದು ಭಾವುಕತೆ ಇದೆ  ಮತ್ತು ಅವೆಲ್ಲವುಗಳ ಸಂಗ್ರಹವೇ ಈ ಕನ್ನಡವಾಗಿ ಕಣ್ಣೆದುರಿಗಿದೆ. ಒಟ್ಟಾರೆಯಾಗಿ ನಮ್ಮ ತಾಯ್ತುಡಿಯ ಎದೆ ಹಾಲನ್ನು ಕುಡಿದಿದ್ದೇವೆ ನಮ್ಮ ಉಸಿರಿನ ಕೊನೆಯವರೆಗೂ ಋಣಕ್ಕಾದರೂ ಅವಳನ್ನು ಉಳಿಸಿ-ಬೆಳಸುವಲ್ಲಿ ಸಕ್ರಿಯವಾಗಬೇಕಿದೆ. ನಮ್ಮ ಈ ಲಿಪಿಗಳ ರಾಣಿ ಎಂದೂ ನೊಂದುಕೊಳ್ಳದಂತೆ ಜತನದಿಂದ ಕಾಯ್ದುಕೊಳ್ಳಬೇಕಾಗಿದೆ.ಎಂಬ ಮೌನೇಶ್ ಎಂ ವಿಶ್ವಕರ್ಮ ರವರ ಮಾತುಗಳು ಚಿಂತನಾಯೋಗ್ಯ. 


ಡಾ. ಎಚ್ .ಎಸ್. ರಾಘವೇಂದ್ರ ರಾವ್  ರವರು ಕನ್ನಡ ಪ್ರಜ್ಞೆ ಸಂಪೂರ್ಣವಾಗಿ ಕಡಿಮೆಯಾಗಿಲ್ಲ ಎಂದು ಆಶಾದಾಯಕ ಅಭಿಪ್ರಾಯವನ್ನು ಮಂಡಿಸುತ್ತಾರೆ.ಅವರ ಮಾತುಗಳಲ್ಲಿ ಹೇಳುವುದಾದರೆ

"ಈಗಲೂ  ಪ್ರೀತಿಯಿಂದ ಕನ್ನಡ ಕಲಿಸುವ  ಕೆಲಸ ಮಾಡುತ್ತಿರುವ ಹಲವು ಮೇಷ್ಟ್ರುಗಳು ಮೇಡಮ್ಮುಗಳು ನನಗೆ ಗೊತ್ತು. ಅವರಲ್ಲಿ ಅನೇಕರು ಸರಕಾರೀ ಶಾಲೆಗಳಲ್ಲಿ ಇದ್ದಾರೆ. ಅಂತಹವರ ಸಂತತಿ ಸಾವಿರವಾಗಲಿ, ಅಂತಹವರಿಗೆ ಅಗತ್ಯವಾದ ಪರಿಸರವನ್ನು ರೂಪಿಸಿಕೊಡುವುದು ಸಮುದಾಯಗಳ ಹಾಗೂ ಸರ್ಕಾರದ ಕೆಲಸ. "


ವಾಸುದೇವ್ ನಾಡಿಗ್ ರವರು ಅನ್ಯ ಭಾಷೆಗಳು ಮನೆಯ ಕಿಟಕಿಗಳು ಇದ್ದ ಹಾಗೆ, ತಾಯ್ನುಡಿ ಹೆಬ್ಬಾಗಿಲು ಇದ್ದ ಹಾಗೆ ಎಂಬ ಭಾಷಣದ ಕೋಟ್ಗಳು ಕ್ಲೀಷೆಯಾದ ಈ ಹೊತ್ತಿನಲ್ಲಿ ಮಾತನ್ನು ಒಣಪಾಂಡಿತ್ಯದ ಪ್ರದರ್ಶನವನ್ನು ನಿಲ್ಲಿಸಿ ಅರಿವಿನ ಮೂಲಗಳನ್ನು ಸರಿಪಡಿಸಿಕೊಳ್ಳಬೇಕಾಗಿದೆ. ಕಲಿಕೆ ಎನ್ನುವುದು ಇಬ್ಬದಿಯ ಪ್ರಕ್ರಿಯೆ . ಅರಿವು ಎನ್ನುವುದು ನಿಷ್ಟುರವಾಗಿ ಇಬ್ಬರ ಹೊಣೆ, ಸುರಿಯುವ ಶಿಕ್ಷಕ ತುಂಬಿಕೊಂಡು ನಿಲ್ಲಬೇಕು, ಬೊಗಸೆಯೊಡ್ಡುವ ಮಗು ಖಾಲಿಯಾಗುತ್ತಲೇ ಬರಬೇಕು.ಎಂಬ ಮಾತುಗಳಲ್ಲಿ ಅನಗತ್ಯವಾದ ವಾದ ವಿವಾದಗಳ ಮಾಡದೇ ಕನ್ನಡ ಕಟ್ಟುವ ಕೆಲಸವನ್ನು ಗಟ್ಟಿಯಾಗಿ ಮಾಡೋಣ ಎಂದಿರುವರು.

ರಾಷ್ಟ್ರೀಯ ನೆಲೆಯಲ್ಲಿ ಪ್ರತಿಯೊಂದು ಮಾತೃಭಾಷೆಯೂ ಅಭಿವ್ಯಕ್ತಿಯಲ್ಲಿ ಅಗತ್ಯವಿರುವ ಭಾಷಾ ಸಂಪತ್ತನ್ನು ಮೈಗೂಡಿಸಿಕೊಳ್ಳುವ ಅಗತ್ಯವೂ ಸಹ ಮಾತೃಭಾಷೆಯ ಯಷ್ಟೇ ಮುಖ್ಯವಾದದ್ದು. ಭಾಷಿಕ ಕೊಡು-ಕೊಳ್ಳುವಿಕೆಯಲ್ಲಿ ಮಡಿವಂತಿಕೆಯನ್ನು ಬಿಟ್ಟು ಪದಸಂಪತ್ತನ್ನು ಹೆಚ್ಚಿಸಿಕೊಂಡಾಗ ಬೇರೆ ಬೇರೆ ಕ್ಷೇತ್ರಗಳ ಜ್ಞಾನ ಸಂಪತ್ತನ್ನು ನವೀಕರಿಸಿ ಕೊಂಡು ನಮ್ಮದನ್ನಾಗಿ ಮಾಡಿಸಿಕೊಳ್ಳುವುದು ಸಾಧ್ಯವಾಗುತ್ತದೆ.ಆಗ  ಭಾಷೆಗಳ ನಡುವಿನ ಕೊಡುಕೊಳ್ಳುವಿಕೆ ಕೂಡ ಸುಲಭವಾಗುತ್ತದೆ.ಎಂದು ಬಾಗೇಪಲ್ಲಿಯಂತಹ ಗಡಿ ನಾಡಿನಲ್ಲಿ ಕಾರ್ಯ ನಿರ್ವಹಣೆ ಮಾಡಿದ ಆರ್ .ವಿಜಯರಾಘವನ್ ಅವರ ಮಾತುಗಳಲ್ಲಿ ಅನುಭವದ ಸಾರವಿದೆ.


ಮುಂಬೈನಲ್ಲಿ ನೆಲೆಸಿದ್ದರೂ ಕನ್ನಡದ ಬಗ್ಗೆ ಚಿಂತಿಸುವ ಶ್ರೀನಿವಾಸ ಜೋಕಟ್ಟೆ ರವರು ಕನ್ನಡ ಮಾಧ್ಯಮ  ಮಕ್ಕಳ ಅನ್ನದ ಭಾಷೆಯಾಗುವಂತೆ ನಮ್ಮಿಂದೇನಾದರೂ ಮಾಡಲು ಸಾಧ್ಯವೇ? ಕನ್ನಡ ಮಾಧ್ಯಮದಲ್ಲಿ ಕಲಿತವರಿಗೆ ಉದ್ಯೋಗ ಸಿಗುವ ಸಾಧ್ಯತೆ ಎಷ್ಟಿದೆ? ಇದನ್ನೆಲ್ಲ ಗಮನಿಸಿ ಹೊಸ ಶಿಕ್ಷಣ ನೀತಿಯ ಚರ್ಚೆ ಆಗಬೇಕಾಗಿದೆ. ಅನ್ನ ನೀಡಲಾಗದೆ ಕೇವಲ ಸಂಸ್ಕೃತಿ, ಭಾಷೆ ಉಳಿಯಲಿ ಎನ್ನುವ ಭಾಷಾ ಮಾಧ್ಯಮ ಶಿಕ್ಷಣ ಮವೇ ವ್ಯರ್ಥ ಆದೀತು.

ಇವತ್ತು ಜಾಗತೀಕರಣವನ್ನು ಬಿಟ್ಟು ಮಾತಾಡುವಂತಿಲ್ಲ, ಬದುಕುವಂತಿಲ್ಲ. ನಮ್ಮ ಅನೇಕ ಸಾಹಿತಿಗಳು 'ಪ್ರಗತಿಪರ' ಎಂದು ಕಾಣಿಸಿಕೊಳ್ಳುವುದರಲ್ಲೇ ಬದುಕುವುದರ ಜೊತೆಗೆ ಇಂತಹ ಕನ್ನಡ ಮಾಧ್ಯಮದ ವಿಷಯಗಳ ಕುರಿತೂ ಅಷ್ಟೇ ಆದ್ಯತೆ ನೀಡಲಿ. ಅದು ಅನ್ನ ನೀಡುವ ಮಾಧ್ಯಮವಾಗಬೇಕಾದರೆ ಏನು ಮಾಡಬೇಕು? ಈ ಕುರಿತು ನಮ್ಮ ಗಮನ ಹರಿಯಬೇಕು. ಎಂದು ಖಡಕ್ಕಾಗಿ ತಮ್ಮ ಅಭಿಪ್ರಾಯ ಹೇಳಿದ್ದಾರೆ.


"ಆಯಾ ಪಾಂತ್ಯಗಳಲ್ಲಿ ಆಯಾ ದೇಶ ಭಾಷೆಗಳೇ ಆಡಳಿತ ಭಾಷೆಗಳಾಗಿರಬೇಕು. ಅಲ್ಲಿಯ ಶಿಕ್ಷಣವಲ್ಲ. ಎಲ್ಲ ಮಟ್ಟಗಳಲ್ಲಿಯೂ ದೇಶ ಮಾಧ್ಯಮದಲ್ಲಿಯೇ ಸಾಗಬೇಕು, ಕನ್ನಡಕ್ಕೆ ಪ್ರಪಂಚದಲ್ಲಿ ಎಲ್ಲಾದರೂ ಮಾನ್ಯ ಸ್ಥಾನ ದೊರೆಯಬೇಕಾದರೆ ಅದು ಇಲ್ಲಿ, ಕರ್ನಾಟಕದಲ್ಲಿ, ಇನ್ನೆಲ್ಲಿಯೂ ಅಲ್ಲ"ಎಂಬ ಕುವೆಂಪುರವರ ಮಾತುಗಳನ್ನು ನಾವು ಮನನ ಮಾಡಿಕೊಳ್ಳಬೇಕಿದೆ.


ದ ರಾ ಬೇಂದ್ರೆಯವರು ಭಾಷೆಯ ಪ್ರಾಮುಖ್ಯತೆ ಕುರಿತು ಹೀಗೆ ಹೇಳಿರುವರು.

“ಜನರಿಗೆ ಹಿರಿಯರಿಂದ ಬರುವ ಒಡವೆಗಳಲ್ಲಿ ಭಾಷೆ ಒಂದು, ಅದು ಚೆನ್ನಾಗಿದ್ದಷ್ಟೂ  ಭೂಷಣ. ಅದರಲ್ಲಿ ಎಲ್ಲರಿಗೂ ಪರಿಶ್ರಮವಿದ್ದು, ಪ್ರಮುಖರಾದವರಿಗೆ ಪೂರ್ಣ ಜ್ಞಾನವಿದ್ದರೆ, ಅವರಿಗೆ ಲಾಭವೂ ಇವರಿಗೆ ಉತ್ಸಾಹವೂ ಉಂಟಾಗಿ  ಭಾಷೆಯೂ ಉತ್ಕೃಷ್ಟವಾಗುತ್ತದೆ.


"ಭಾಷೆಯೆಂಬುದು ಕೇವಲ ಅಕ್ಷರಗಳ ಗುಂಪಲ್ಲವಷ್ಟೆ? ಅದು ಸಮಾಜ ವಿಜ್ಞಾನದ, ಭಾವಕೋಶದ, ಸಂಸ್ಕೃತಿ ಪರಂಪರೆಯ ಸಮ್ಯಕ್ ಜೀಗದ ಕೈ ಒಂದು ಹಂತದವರೆಗೆ ಮಕ್ಕಳು ಅವರವರ ಪ್ರದೇಶ ಭಾಷೆಯಲ್ಲೇ ಕಲಿಯುತ್ತ ಮುಂದಿನವನ್ನು ಬೇಕಾದರೆ ಅವರಿಗೆ ಬಿಡೋಣ, ಹೆತ್ತವರೆಂದ ಮಾತ್ರಕ್ಕೆ ಮಕ್ಕಳ ಕುರಿತು ಎಲ್ಲ ಹಕ್ಕೂ ನಮಗಿದೆ ಅಂತ ತಿಳಿಯುವುದೇ ಅಸಂಬದ್ಧ ಎಂಬ ವೈದೇಹಿಯವರ ಮಾತು ವಾಸ್ತವಕ್ಕೆ ಹಿಡಿದ ಕನ್ನಡಿ ಎನ್ನಬಹುದು.



ಮುಗಿಸುವ ಮುನ್ನ.....


ಈ ಪುಸ್ತಕದಲ್ಲಿ ಕೆಲವು ಲೇಖಕರು ತಮ್ಮ ಲೇಖನದಲ್ಲಿ ಹೆಚ್ಚು ಹಳಗನ್ನಡ ಪದಗಳು ಮತ್ತು ಆಡಂಬರದ ಪದಗಳನ್ನು ಬಳಸಿರುವುದು ಸಾಮಾನ್ಯ ಓದುಗರು ತಡವರಿಸಿದಂತಹ  ಅನುಭವವಾಗುತ್ತದೆ ಆದರೂ ಭಾಷಾ ದೃಷ್ಟಿಯಿಂದ ಆ ಲೇಖನಗಳು ಮೌಲ್ಯಯುತ ಎಂಬುದನ್ನು ಒಪ್ಪಲೇಬೇಕು .


ನಮ್ಮಲ್ಲಿ ಕನ್ನಡದ ಪ್ರಜ್ಞೆ ಇನ್ನೂ ಜಾಗೃತವಾಗದಿದ್ದರೆ ಈ ಪುಸ್ತಕದಲ್ಲಿ ಇರುವ ಸವಿತಾ ನಾಗಭೂಷಣ ಅವರ ಕವಿತೆ ಒಮ್ಮೆ ಜೋರಾಗಿ ಓದಿಕೊಳ್ಳಿ ಸಾಕು.


ಕನ್ನಡವೇ ಬೇಕು.

ಓದಿ ಬರೆದು ಮಾತಾಡಲು...


ಕನ್ನಡವೇ ಬೇಕು

ಬೀಸಿ ಕಾಸಿ ಕುದಿಸಿ

ಉಂಡು ತಣಿಯಲು...


ಕನ್ನಡವೇ ಸಾಕು

ಸಿಗಿದು ಬಗೆದು ಉಗಿದು ಉಪ್ಪು ಹಾಕಲು...


ಕನ್ನಡವೇ ಸಾಕು

ಶೋಧಿಸಿ ಸಾಧಿಸಿ

ಸಾರಿಸಿ ಗುಡಿಸಿ ಹಾಕಲು....


ಪುಸ್ತಕ:   ಕನ್ನಡ ಪ್ರಜ್ಞೆಯ ಸುತ್ತ ಮುತ್ತ

ಸಂಪಾದಕರು:ಡಾ. ಗೀತಾ ಡಿ ಸಿ.ಮತ್ತು ನಾಗರೇಖಾ ಗಾಂವಕರ

ಪ್ರಕಾಶನ: ಕ್ರಿಯಾ ಮಾದ್ಯಮ. ಬೆಂಗಳೂರು

ಬೆಲೆ: 400₹ 


ಸಿಹಿಜೀವಿ

 ಸಿ ಜಿ ವೆಂಕಟೇಶ್ವರ

ತುಮಕೂರು

9900925529