30 May 2022

29 May 2022

ಹೊರಳು .


 


ಹೊರಳು ಮತ್ತು ಇತರೆ ಕಥೆಗಳು.ವಿಮರ್ಶೆ ೩೯ 




ಆತ್ಮೀಯರು  ಲೇಖಕರು ಮತ್ತು ಪ್ರೊಫೆಸರ್ ಆದ ವಿ ಎಲ್ ಪ್ರಕಾಶ್ ರವರು ನೀವು ಓದಲೇಬೇಕು ಎಂದು  ನನಗೆ ನೀಡಿದ ಪುಸ್ತಕ ಕೆ ಎಸ್ ಪ್ರಭಾ ರವರ ಹೊರಳು ಮತ್ತು ಇತರೆ ಕಥೆಗಳು  .ಈ ಪುಸ್ತಕ ನನಗೆ ನಿಜಕ್ಕೂ ಹಿಡಿಸಿತು.

ದೊಡ್ಡಬಳ್ಳಾಪುರದಂತಹ ಊರಿನಲ್ಲಿ ತಮ್ಮ ಬದುಕಿನ ದಾರಿ ಮತ್ತು ಗುರಿಯನ್ನು ತಾವೇ ಗೊತ್ತುಪಡಿಸಿಕೊಂಡ ವ್ಯಕ್ತಿಗಳಲ್ಲಿ ಪ್ರಭಾ ಮೇಡಂ ಮುಖ್ಯರಾಗಿ ಕಾಣುತ್ತಾರೆ. ಸಾಂಪ್ರದಾಯಿಕ ಎರಕಗಳಲ್ಲಿ ಸಿದ್ಧ ಆಕೃತಿಗಳು ಮಾತ್ರ ದೊರಕುತ್ತವೆ. ಇವು ಸಾದಸೀದ ಹಾಗೂ ಸುರಕ್ಷವಾಗಿರುತ್ತವೆ. ನಮ್ಮ ಚಹರೆ ಪಟ್ಟಿಯನ್ನು ನಾವೇ ರೂಪಿಸಿಕೊಂಡಾಗ, ನಮ್ಮ ವಿಧಿಯನ್ನು ನಾವೇ  ನಿರ್ದೇಶಿಸಿಕೊಂಡಾಗ ಅನೇಕ ಅಗ್ನಿ ದಿವ್ಯಗಳನ್ನು ಹಾದು ಬರಬೇಕಾಗುತ್ತದೆ. ಸ್ಥಾಪಿತ ವ್ಯವಸ್ಥೆಗಳ ವಿರುದ್ಧ ದಂಗೆ ಏಳಬೇಕಾಗುತ್ತದೆ.ಇಂಥ ಸಂದರ್ಭಗಳಲ್ಲಿ ಗೆಲುವಲ್ಲ, ಸೋಲು ಕೂಡ ಘನವಾಗಿಯೇ ಕಾಣುತ್ತದೆ. ಅವು ದೊಡ್ಡ ಪಾಠಗಳಂತೆ ಇರುತ್ತವೆ. ಅದರಲ್ಲೂ ಹೆಣ್ಣಾಗಿದ್ದರಂತೂ ಇದು ಇನ್ನಷ್ಟು ಕಠಿಣ ದಾರಿ.ಪ್ರಭಾ ಅವರು ಇಂಥ ದಾರಿಯಲ್ಲಿ ಬಹುದೂರ ಸಾಗಿ ಬಂದಿದ್ದಾರೆ. ಬಲವಾದ ಹೆಗ್ಗುರುತುಗಳನ್ನು ಮೂಡಿಸಿದ್ದಾರೆ.


70ರ ದಶಕದಲ್ಲಿ ಕನ್ನಡ ನೆಲದಲ್ಲಿ ಮೂಡಿದ ಕ್ರಾಂತಿಕಾರತನ, ಮತ್ತು 'ಸ್ವ'ದ ಹುಡುಕಾಟದ ಮೂಲಕವೇ ಬಹಿರಂಗದಲ್ಲಿ ತಮ್ಮ ಇರುವನ್ನು ಕಂಡುಕೊಳ್ಳುವ ಚಳವಳಿಯ ಪಾಲುದಾರರಾದ ಮೇಡಂ, ಸೃಜನಶೀಲ ಪ್ರಭೆಯನ್ನು ಕಾಪಿಟ್ಟುಕೊಂಡವರು, ಅದು ಕತೆ, ಪ್ರಬಂಧ, ಕವಿತೆಗಳಲ್ಲಿ ಚಲ್ಲುವರೆದಿದೆ. ಹೊರಳು ಮತ್ತು ಇತರ ಕತೆಗಳು ಸಂಕಲನದಲ್ಲಿ ಬರುವ ಮೊದಲ ಕಥೆಯಲ್ಲಿ ಇಲ್ಲಿಯ ನಾಯಕಿಗೆ ಮದುವೆಯಾಗಿ ಏಳುವರ್ಷಗಳಾಗಿವೆ. ಈಸ್ಟ್ ಹಾಕಿದ ಬ್ರೆಡ್ಡಿನ ಹಾಗೆ ಉಬ್ಬಿಕೊಳ್ಳುತ್ತಿರುವ ಬೊಜ್ಜಿನ ಬೆಳವಣಿಗೆಗೆ ಅವಳು ಸಿಕ್ಕಿದ್ದಾಳೆ. ಆದರೂ ಯೌವನ ಇನ್ನೂ ಅವಳಿಂದ ಕಾಲ್ತೆಗೆಯುವ ಸನ್ನಾಹದಲ್ಲಿಲ್ಲ. ಮುಖದ ಮೇಲೆ ಮೊಡವೆ ಅಂದವನ್ನು ಹೆಚ್ಚಿಸುವಂತೆ ತೋರಿದರೂ,ಕೀವುಗಟ್ಟಿದ ಅದೊಂದು ಅಸಹ್ಯ. ಹೊರಗಿನ ಬದುಕೂ ಹೀಗೆಯೇ ಸಹ್ಯ ಮತ್ತು ಅಸಹ್ಯಗಳ ಜೊತೆಗಿನ ಪ್ರೀತಿ ಕಳೆದುಕೊಂಡಿದೆ. ತನ್ನ ಆಫೀಸಿನಲ್ಲಿರುವ ರಮೇಶನ ಚೆಲುವಿಗೆ ಒಲಿಯಲು ಮನಸ್ಸು ಹಾತೊರೆಯುತ್ತಿದೆ. ಅವನ ಸಖ್ಯವನ್ನು ಬಯಸುತ್ತಿದೆ. ಎಂದೆನಿಸಿದರೂ, ಆ ನೋಟವನ್ನೇ ಇವಳು ಬಯಸುತ್ತಿದ್ದಾಳೆ. ತಾನು ಮದುವೆಯಾದ ಹೆಣ್ಣು ರಮೇಶ? ಪ್ರಶ್ನೆಯನ್ನು ಕೇಳಿಕೊಂಡರೂ, ರಮೇಶನ ನೋಟವೇ ಬೇಕೆಂದು  ಒಳಗೇ ಕುಟುಕುತ್ತಿದೆ. ರಮೇಶನಿಗೆ, ಅವನ ರೂಪಕ್ಕೆ  ತಾನು ಮರುಳಾದೆನೇ ಎಂದು ತನ್ನೊಳಗನ್ನು ಅವನು ತನ್ನ ಬಳಿಯೇ ಇರಲಿ ಎಂಬ ಸೆಳೆತ, ಕೀವು ತುಂಬಿದ ಮೊಡವೆಯಂತೆ ಈ ಅನಿಸಿಕೆಗಳು ಅಸಹ್ಯ ಎನಿಸಿದರೂ, ಅದನ್ನು ಬಿಟ್ಟುಕೊಡಲು ಸಿದ್ಧವಿಲ್ಲದ ಆಸೆಗಳು, ಹಂಬಲಗಳು. ಇದು ಇಲ್ಲಿಗೆ ನಿಲ್ಲುವುದಲ್ಲ. ಪಕ್ಕದ ಮನೆಯ ಆನಂದನ ದುಂಡು ಮುಖ, ದಪ್ಪ ಮೀಸೆ, ತುಟಿಗಳನ್ನು ನೋಡುವಾಗಲೂ ರಮೇಶನೇ ಕಣ್ಮುಂದೆ ಬಂದಂತಾಗುತ್ತದೆ. ತನ್ನ ಗಂಡ ಮನೆಗೆ ಬಂದು ಸೊಂಟ ಬಳಸಿದಾಗಲೂ ಈ ಹೆಣ್ಣಿನ ಮನದೊಳಗೆ ಸುಳಿಯುವವನು ರಮೇಶನೇ, ಇಂಥ ತಾಕಲಾಟ, ನೋವು, ನೈತಿಕ ಪ್ರಶ್ನೆಗಳನ್ನು ಮೀರಿ ಅಪೇಕ್ಷೆಗಳು, ಈ ತೊಳಲಾಟದಲ್ಲಿಯೇ ಈಕೆ ತನ್ನ ವಾಸ್ತವವನ್ನು ಕಂಡುಕೊಳ್ಳಬೇಕಾಗಿದೆ.ಬದುಕನ್ನು ಕಟ್ಟಿಕೊಳ್ಳಬೇಕಾಗಿದೆ.ಬದುಕಿಗೆ ಅರ್ಥ ಮತ್ತು ಸಾರ್ಥಕ್ಯವನ್ನು ತಂದುಕೊಳ್ಳಬೇಕಾಗಿದೆ. ಇದೊಂದು ಸವಾಲು.ನಿತ್ಯ ಸೆಣಸಾಟಕ್ಕೆ ಸಿದ್ಧಪಡಿಸುವ ಸವಾಲು.


'ಹೊರಳು' ಕತೆಯನ್ನು ಬಿಟ್ಟರೆ ಇಲ್ಲಿರುವ ಉಳಿದೆಲ್ಲ ಕತೆಗಳೂ 'ಮೊಡವೆ'ಯಂತೆಯೇ ಇಂಥ ತೊಳಲಾಟವನ್ನು ಹಿಡಿದುಕೊಡುವ ಪ್ರಯತ್ನಗಳೇ. ಹೆಣ್ಣಿನ ಮನದಾಳದಲ್ಲಿ ಹೊಮ್ಮುವ ಇಂಥ ಭಾವಗಳನ್ನು ಹಿಡಿದು ಪರೀಕ್ಷಿಸಲು ನೋಡುತ್ತವೆ. ಮನಸ್ಸಿನ ಚಲನೆಯನ್ನು ಅದು ಚಲಿಸುವ ದಿಕ್ಕನ್ನು ಪ್ರಾಮಾಣಿಕ ನೋಟದಿಂದ ಹಿಡಿಯುವುದೇ ಈ ಕತೆಗಳ ಹೆಗ್ಗಳಿಕೆಯಾದಂತೆಯೂ ತೋರುತ್ತದೆ. ಜೊತೆಗೆ ಗಂಡು ಹೆಣ್ಣಿನ ಸಂಬಂಧಗಳ ನಿಜರೂಪವನ್ನು ದಿಟ್ಟತನದಿಂದ ಬಿಡಿಸಿ ನೋಡುವುದು, ಪ್ರೀತಿಯ ಹೆಸರಿನಲ್ಲಿ ತೊಡುವ ಮುಖವಾಡಗಳನ್ನು ಕಳಚಿ ಹಾಕಲೆತ್ನಿಸುವುದು, ಗಂಡು ಮತ್ತು ಹೆಣ್ಣಿನ ನಡುವಿರುವ ನಿರಂತರ ಆಕರ್ಷಣೆಯ ಸ್ವರೂಪ ಎಂಥದ್ದು ಎಂಬುದನ್ನು ಕಂಡುಕೊಳ್ಳಲು ಹೆಣಗುವುದು ಇವೆಲ್ಲ ಪ್ರಭಾ ಅವರ ಕಥನ ಕಲೆಯ ಹಿಂದಿರುವ ಕಾಳಜಿಗಳು. ಇಂಥ ಹುಡುಕಾಟ ನಿಧಾನಕ್ಕೆ ಮಾಗುವುದು, ಬೇರೊಂದು ಮಜಲನ್ನು ಮುಟ್ಟುವುದು, ತನ್ನ ಪ್ರತಿಸ್ಪರ್ಧಿಯಾದ ಇನ್ನೊಬ್ಬ ಹೆಣ್ಣನ್ನು ದ್ವೇಷದಿಂದ ನೋಡುವ ನೋಟದಲ್ಲಿಯೇ ಬದಲಾವಣೆಯಾಗಿ, ಅದು ಸಹಾನುಭೂತಿಗೆ, ಅನುಕಂಪಕ್ಕೆ ದಾರಿಮಾಡಿಕೊಡುವುದನ್ನು (ಕಳೆದುಹೋದವರು-ಕತೆ) ಇಲ್ಲಿ ಗಮನಿಸಬಹುದು. ಹೊರಗಿನ ಮತ್ತು ಒಳಗಿನ ಒತ್ತಡಗಳಿಗೆ ಬಲಿಯಾದ ಹೆಣ್ಣು ತನ್ನ ಏಕಾಂಗಿತನದಲ್ಲಿ, ಅಸಹಾಯಕತೆಯ ಸನ್ನಿವೇಶದಲ್ಲಿ ತನ್ನ ಸಂಗಕ್ಕೆ ಪುರುಷನೊಬ್ಬನನ್ನು ಬಯಸಿದರೆ, ಅದು ಮಹಾ ಅಪರಾಧವಾಗಿ ತನಗೇಕೆ ಕಾಣಬೇಕು ಎಂಬ ಅರಿವು ಕಥಾನಾಯಕಿಯ ಮನದಲ್ಲಿ ಮೂಡುವುದು ಇನ್ನೊಂದು ಬೆಳವಣಿಗೆ. ಈ ಸಹಾನುಭೂತಿಯೇ ಇನ್ನೊಂದು ಜೀವದ ಬಗೆಗಿನ ಪ್ರೀತಿಯೂ ಆಗಿ ಬದಲಾಗುವುದು ಪ್ರಭಾ ಅವರ ಕತೆಗಳಿಗೆ ಹೊಸದೊಂದು ಅಯಾಮವನ್ನೇ ತಂದುಕೊಡುತ್ತದೆ. ಅರಿವಿನ ಬಾಗಿಲು ಎಂದರೆ ಇದೇ. ಅದು ಬೆಳಕಿನ ಬಾಗಿಲು.


'ಹೊರಳು' ಈ ಸಂಕಲನದಲ್ಲಿ ಭಿನ್ನವಾದ ಕತೆ, ದೊಡ್ಡವರ ಪ್ರಪಂಚದ ನಡವಳಿಕೆಗಳು ಪುಟ್ಟ ಮಕ್ಕಳ ಮುಗ್ಧ ಮನಸ್ಸುಗಳ ಮೇಲೆ ಎಂಥ ಕೆಟ್ಟ ಪರಿಣಾಮವನ್ನು ಬೀರುತ್ತವೆ, ಅರಳಬೇಕಾದ ಮನಸ್ಸುಗಳನ್ನು ಹೇಗೆ ಕಮರಿಸುತ್ತವೆ ಎಂಬುದನ್ನು ಬಹಳ ಸೂಕ್ಷ್ಮವಾಗಿ, ನಯಗಾರಿಕೆಯಿಂದ ಹೇಳುವ ಕತೆ. ಕತೆ ಕಟ್ಟುವಲ್ಲಿ ಲೇಖಕಿ ತೋರುವ

ಸಂಯಮ, ಬರವಣಿಗೆಯ ಮೇಲಿನ ಹಿಡಿತ ಇವೆಲ್ಲವನ್ನೂ ಈ ಕತೆ ತೋರಿಸಿಕೊಡುತ್ತದೆ.


ಪ್ರಭಾ ಅವರ ಕತೆಗಳು ಎಲ್ಲಿಯೂ ಜಾಳುಜಾಳಾಗುವುದಿಲ್ಲ. ಕಲೆಗಾರಿಕೆಯನ್ನು ಧಿಕ್ಕರಿಸುವುದಿಲ್ಲ. ಕಲೆಗಾರಿಕೆಯ ಸೂಕ್ಷ್ಮ ಅಂಶಗಳಿಗೆ ಮುಖ ತಿರುಗಿಸುವುದಿಲ್ಲ. ಈ ದೃಷ್ಟಿಯಿಂದ ನೋಡಿದಾಗ ಪ್ರಭಾರವರು  ಅಭಿನಂದನೆಗೆ ಅರ್ಹರಾಗುತ್ತಾರೆ. ಆದರೆ ಇನ್ನಷ್ಟು ಆಳಕ್ಕೆ ಹೋಗುವ, ಮನುಷ್ಯ ಸಂಬಂಧಗಳನ್ನು ತೀವ್ರವಾಗಿ ಶೋಧಿಸುವ ಪ್ರಯತ್ನವನ್ನು ಇವರು ಮಾಡುವುದಿಲ್ಲ. ಇಂಥ ಅವಕಾಶವು ಇದ್ದ ಕಡೆಗಳಲ್ಲೂ ಅದನ್ನು ಬಿಟ್ಟುಕೊಟ್ಟು ಅಲ್ಪತೃಪ್ತಿಯಿಂದಲೇ ಕತೆಗಳನ್ನು ಮುಗಿಸಿಬಿಡುತ್ತಾರೆ.


ಕತೆಯಾಗಲಿ, ಕಾದಂಬರಿಯಾಲಿ, ಕವಿತೆಯಾಗಲಿ ಅಥವಾ ಇನ್ನಾವುದೇ ಸೃಜನಶೀಲ ಬರಹವಾಗಲಿ ಅದೊಂದು ಬದುಕಿನ ಶೋಧ. ನಿರಂತರವಾಗಿ ಈ ಕ್ರಿಯೆಯಲ್ಲಿ ತೊಡಗುವುದರ ಮೂಲಕವೇ ನಾವು ಬದುಕಿನ ಅರ್ಥವನ್ನು ಕಂಡುಕೊಳ್ಳಬಹುದು. ಪ್ರಭಾ  ಮೇಡಂ ರವರು ಇನ್ನಷ್ಟು ಈ ಶೋಧದಲ್ಲಿ ತಮ್ಮನ್ನು ತೊಡಗಿಸಿಕೊಳ್ಳಲಿ ಹಾಗೂ ಅವರ ಲೇಖನಿಯಿಂದ ಇನ್ನೂ ಹತ್ತಾರು ಪುಸ್ತಕಗಳು ಹೊರಹೊಮ್ಮಲಿ ಎಂದು ಆಶಿಸುವೆ.


ಪುಸ್ತಕದ ಹೆಸರು: ಹೊರಳು ಮತ್ತು ಇತರೆ ಕಥೆಗಳು

ಲೇಖಕರು: ಕೆ ಎಸ್ ಪ್ರಭಾ

ಪ್ರಕಾಶನ: ಅನಿಕೇತನ ಟ್ರಸ್ಟ್

ಬೆಲೆ:60₹


ಸಿಹಿಜೀವಿ

ಸಿ ಜಿ ವೆಂಕಟೇಶ್ವರ

ತುಮಕೂರು

ಶಿಕಾರಿ ಕತೆಗಳು .


 



ಸ್ವಾತಂತ್ರ್ಯಪೂರ್ವ

ಶಿಕಾರಿ ಕತೆಗಳು .ವಿಮರ್ಶೆ೩೮


ಗಿರೀಶ್ ತಾಳಿಕಟ್ಟೆ ರವರು ಸಂಗ್ರಹ ಮತ್ತು ಅನುವಾದ ಮಾಡಿರುವ ಸ್ವಾತಂತ್ರ್ಯಪೂರ್ವ

ಶಿಕಾರಿ ಕತೆಗಳು ಎಂಬ ಪುಸ್ತಕ ಹೆಸರೇ ಹೇಳುವಂತೆ ಶಿಕಾರಿಗೆ ಸಂಬಂಧಿಸಿದ ಕಥನಗಳ ಸಂಕಲನ. ಕೆನೆತ್ ಅಂಡರ್ಸನ್ ರವರ ಪುಸ್ತಕ ಓದಿದ್ದ ನನಗೆ ಈ ಪುಸ್ತಕ ಆಕರ್ಷಿಸಿತು. ಪುಸ್ತಕ ಓದಿ ಮುಗಿಸಿದಾಗ ಸ್ವತಂತ್ರ ಪೂರ್ವ ಶಿಕಾರಿ ಕಥೆಗಳ ನೆಪದಲ್ಲಿ ಕಾಡು ಮತ್ತು ಮಾನವನ ಸಂಬಂಧದ ಬಗ್ಗೆ ಉತ್ತಮ ಮಾಹಿತಿ ಸಿಕ್ಕಿತು.

ಇಲ್ಲಿರುವ ಕತೆಗಳು ಬರೀ ಕತೆಗಳಲ್ಲ, ನಿಜವಾಗಿಯೂ ಜರುಗಿದ ಘಟನೆಗಳು ನಮಗಿಂತ ಮೂರು ತಲೆಮಾರುಗಳ ಹಿಂದಿನವು, ವಿನಾಶದ ಅಂಚನ್ನು ತಲುಪಿರುವ ಕಾಡು, ಮಿಗ ಸಂತಾನ, ಪರಿಸರ ಇತ್ಯಾದಿಗಳಲ್ಲಿ ಬದುಕುತ್ತಿರುವ ಇಂದಿನ ನಮಗೆ ಕಲ್ಪಿಸಿಕೊಳ್ಳಲೂ ಆಗದಂತಹ ಗತಲೋಕದ ಕತೆಗಳು, ಅಂದಿನ ದುರ್ಗಮ ಜಗತ್ತಿನ ಕಾಠಿಣ್ಯದ ಬದುಕಿನ ಸಾಮಾಜಿಕ ವಿವರಗಳನ್ನು ಬಿಚ್ಚಿಡುತ್ತಲೇ ಓದುಗರಲ್ಲಿ ಕಾಡಿನ ಕುರಿತು ರಮ್ಯ ಕುತೂಹಲ, ಅರಿವು ಮೂಡಿಸುತ್ತಾ ಸಾಹಸಪ್ರಿಯತೆಯನ್ನು ಸ್ಫುರಿಸುವಂತೆ ಮಾಡುವುವು ಈ ಕಥೆಗಳು.

 ಗಿರೀಶ್, ತಾಳಿಕಟ್ಟೆಯವರು ಅನುವಾದಿಸಿದ ಶಿಕಾರಿ ಕಥೆಗಳನ್ನ ಓದುತ್ತ ಓದುತ್ತ ಕಾಡಿನ ನಿಗೂಢ ಜಗತ್ತೊಂದನ್ನ ಕುಳಿತಲ್ಲೇ ಕಂಡ ಅನುಭವ, ಮನಸ್ಸು ನೆನಪುಗಳ ಹಾಯಿದೋಣಿ ಏರಿ ಹಿಮ್ಮುಖವಾಗಿ ಚಲಿಸಿದಂತೆ, 

ಕಾಲದ ಒತ್ತಡದಲ್ಲಿ ಕಾಡುಗಳೆಲ್ಲ ನಿಧಾನಕ್ಕೆ ಕರಗಿ ಬಯಲಾಗುತ್ತಿರುವ ವರ್ತಮಾನದಲ್ಲಿ ಈ ಶಿಕಾರಿ ಕತೆಗಳು ಓದುಗರಿಗೆ ಆ ಕಾಲದ ಕಾಡು, ಅಲ್ಲಿನ ಅನೂಹ್ಯ ಜಗತ್ತನ್ನ ಕಲ್ಪಿಸಿಕೊಳ್ಳಲು ಒಂದು ಅವಕಾಶ ನೀಡುತ್ತವೆ. ಈಗಿನ ಕಾಡುಗಳನ್ನು ಸುತ್ತಾಡಿದವರಿಗೆ ಆ ಕಾಲದ ಕಾಡುಗಳೊಂದಿಗೆ ತುಲನೆಯೂ ಸಾಧ್ಯ, ಶಿಕಾರಿ ಕುರಿತು ಸಾಕಷ್ಟು ಅನುವಾದಿತ ಪುಸ್ತಕಗಳಿದ್ದರೂ ಗಿರೀಶ್ ಅವರ ಬರವಣಿಗೆ, ಆಯ್ದುಕೊಂಡಿರವ ಕಥೆಗಳು ಮತ್ತು ವಿಭಿನ್ನ ಶೈಲಿಯ ಅನುವಾದ ಇದನ್ನೊಂದು ಬೇರೆ ಕೃತಿಯನ್ನಾಗಿ ನಿಲ್ಲಿಸುತ್ತವೆ. ಓದುವಾಗ ಕೆಲವೊಮ್ಮೆ ಪೂರ್ಣಚಂದ್ರ ತೇಜಸ್ವಿಯವರ ಕಾಡಿನ ಕಥೆಗಳು ನೆನಪಾಗದೇ ಇರಲಾರದು.


ಗಿರೀಶ್ ಅವರ ಅನುವಾದ ಮೂಲ ಕಥೆಯಷ್ಟೆರೋಮಾಂಚನವನ್ನುಂಟು ಮಾಡುತ್ತವೆ. ಇದು ಕೇವಲ ಒಂದು ಕೃತಿಯ ಅನುವಾದವಷ್ಟೇ ಅಲ್ಲ. ಅವರಿಗೆ ಕಾಡಿನ ಕುರಿತು ಇರುವ ಕೌತುಕ, ಹುಚ್ಚು ಮತ್ತು ಉತ್ಸಾಹವನ್ನ ಇಲ್ಲಿನ .ಕತೆಗಳ ಮರುಸೃಷ್ಟಿಯಲ್ಲಿ ಕಾಣಬಹುದು. ಜೇನುನೊಣ  ಹೂಗಳಿಂದ ಮಕರಂದ ಸಂಗ್ರಹಿಸಿ ಸವಿಜೇನಾಗಿಸುವಂತೆ ಗಿರೀಶರವರು ಕನ್ನಡಕ್ಕೆ ಅನುವಾದಿಸಿರುವ ಈ ಕೃತಿ ಒಂದು ಸೃಜನಶೀಲ ಕ್ರಿಯೆ. ಮೈನವಿರೇಳುವಂತೆ ಓದಿಸಿಕೊಂಡ "ಹುಣಸೂರಿನ ಆನೆ ಪೀರ್‌ಭಕ್ಷ್" ಮತ್ತು "ಆಯ್ಯನಮಠದ ನರಭಕ್ಷಕಿ" ಶಿಕಾರಿ ಕಥೆಗಳು ಬಹುಕಾಲ ಕಾಡುವಂತಹವು. ಅನುವಾದವಾದರೂ ಅನುಭವಗಳನ್ನು ವಿಸ್ತರಿಸುವಂತಹ, ಸೃಜನಶೀಲ ಪ್ರಯತ್ನಕ್ಕಾಗಿ ಗಿರೀಶ್‌ರವರಿಗೆ ಅಭಿನಂದಿಸುತ್ತೇನೆ. ಜೊತೆಗೆ ಇವತ್ತಿನ ಪರಿಸ್ಥಿತಿಯಲ್ಲಿ ಕಾಡಿನ ಮೇಲೆ ನಾವು ಹೊರಿಸಿರುವ ಒತ್ತಡ, ಅದರಿಂದಾಗಿ ಅಲ್ಲಿಯ ಪ್ರಾಣಿ, ಪಕ್ಷಿಪ್ರಭೇದಗಳು ನಶಿಸುವ ಹಂತ ತಲುಪಿರುವುದು, ವನ್ಯ ಪ್ರಾಣಿ-ಮಾನವ ಸಂಘರ್ಷ ಇವೆಲ್ಲದರೆಡೆಗ ಇನ್ನಾದರೂ ಒಂಚೂರು ಯೋಚಿಸುವ ಪ್ರೇರಣೆ ನಮ್ಮಲ್ಲಿ ಮೂಡಲಿ. ಆಹಾರ ಸರಪಳಿಯ ತುತ್ತ ತುದಿಯಲ್ಲಿರುವ ಹುಲಿಗಳನ್ನು ಸಂರಕ್ಷಿಸಿದಾಗ ಮಾತ್ರ ನಾವು ಕಾವೇರಿಯಂತಹ ನದಿಯನ್ನ ಸಂರಕ್ಷಿಸಬಹುದು ಎಂಬ ಪ್ರಜ್ಞೆ ನಮ್ಮೆಲ್ಲರಿಗೂ ಬರುವಂತಾಗಲಿ.

ಈ ಪುಸ್ತಕದ ಮುದ್ರಣ ಮತ್ತು ವಿನ್ಯಾಸದ ಬಗ್ಗೆ ಒಂದು ಮಾತು ಹೇಳಲೇಬೇಕು . ಗಿರೀಶ್ ರವರೆ ಸ್ವತಃ ಈ ಪುಸ್ತಕದ ಒಳವಿನ್ಯಾಸ ಮಾಡಿರುವುದು ನನಗೆ ಬಹಳ ಹಿಡಿಸಿತು ಅದರಲ್ಲೂ ಪ್ರತಿ ಅಧ್ಯಾಯಕ್ಕೆ ಸಂಬಂಧಿಸಿದ ಚಿತ್ರಗಳು ಬಹಳ ಸೂಕ್ತವಾಗಿವೆ . 


ಪುಸ್ತಕದ ಹೆಸರು:ಸ್ವಾತಂತ್ರ್ಯಪೂರ್ವ

ಶಿಕಾರಿ ಕತೆಗಳು 

ಲೇಖಕರು: ಗಿರೀಶ್ ತಾಳಿಕಟ್ಟೆ

ಪ್ರಕಾಶನ: ಕಾವ್ಯ ಕಲಾ ಪ್ರಕಾಶನ ಬೆಂಗಳೂರು.

ಬೆಲೆ: 200₹

ಸೌಂದರ್ಯವರ್ಧಕ


 #ಸೌಂದರ್ಯವರ್ಧಕ


#ಸಿಹಿಜೀವಿಯ_ಹನಿ 


ಮೈಕಪ್ಪೆಂದು ಮೇಕಪ್ಪು

ಹಾಕಿಕೊಂಡರೆ ಅಂತಹ 

ಸೌಂದರ್ಯ ಕ್ಷಣಿಕ|

ಆತ್ಮವಿಶ್ವಾಸದಿಂದ ಮೊಗದಲಿ

ಮೂಡುವ ಮಂದಹಾಸ

ನಿಜವಾದ ಸೌಂದರ್ಯವರ್ಧಕ ||


#ಸಿಹಿಜೀವಿ

27 May 2022

ಹೊನ್ನಾವರಿಕೆ. ಪುಸ್ತಕ ವಿಮರ್ಶೆ.

 



ಹೊನ್ನಾವರಿಕೆ. ವಿಮರ್ಶೆ ೩೭ 

ಎಂ ಆರ್ ಕಮಲ ರವರು ರಚಿಸಿರುವ ಹೊನ್ನಾವರಿಕೆ ಪ್ರಬಂಧಗಳ ಸಂಕಲನ ಹೆಸರಿನಿಂದಲೇ ನನ್ನ ಕುತೂಹಲ ಕೆರಳಿಸಿ ಓದುವಂತೆ ಪ್ರೇರೇಪಿಸಿತು.

ಎಂ.ಆರ್. ಕಮಲ, ಹಾಸನ ಜಿಲ್ಲೆಯ ಅರಸೀಕರೆ ತಾಲ್ಲೂಕಿನ ಮೇಟಿಕುರ್ಕೆ ಯವರು, ಹುಟ್ಟಿದ್ದು: ೧೯೫೯ರಲ್ಲಿ, ತಂದೆ ಎಂ. ಎಚ್. ರಾಮಸ್ವಾಮಿ, ತಾಯಿ ವಿಶಾಲಾಕ್ಷಿ. ಬೆಂಗಳೂರು ವಿಶ್ವವಿದ್ಯಾಲಯದ ಎಂ.ಎ., ಎಲ್.ಎಲ್.ಬಿ. ಪದವೀಧರೆಯಾದ ಇವರು ಸ್ನಾತಕೋತ್ತರ ಪರೀಕ್ಷೆಯಲ್ಲಿ ಪಾಶ್ಚಿಮಾತ್ಯ ಸಾಹಿತ್ಯ ಅಧ್ಯಯನಕ್ಕಾಗಿ ಬಿ.ಎಂ.ಶ್ರೀ' ಸ್ವರ್ಣಪದಕ ಪಡೆದಿದ್ದಾರೆ. ಫ್ರೆಂಚ್ ಭಾಷೆಯನ್ನು ಆರು ವರ್ಷಗಳ ಕಾಲ ಅಧ್ಯಯನ ಮಾಡಿರುವ ಕಮಲ ಫ್ರೆಂಚ್ ಭಾಷೆಯಲ್ಲಿ ಪದವೀಧರರು.


ಕನ್ನಡ ಸಾಹಿತ್ಯ ಮತ್ತು ನಾಟ್ಯಕ್ಷೇತ್ರದಲ್ಲಿ ಕಮಲ ಅವರ ಹೆಸರು ಮತ್ತು ಸಾಧನೆಗಳು ಚಿರಪರಿಚಿತ. ಪ್ರಕಟಿತ ಕಾವ್ಯ ಸಂಗ್ರಹಗಳು: ಶಕುಂತಲೋಪಾಖ್ಯಾನ (೧೯೮೮), ಪಾಣೆ ಮತ್ತು ಇತರ ಕವಿತೆಗಳು (೧೯೯೨),  ಮಾತೋಶ್ರೀ ರತ್ನಮ್ಮ ಹೆಗ್ಗಡೆ ಸ್ಮಾರಕ ಪುರಸ್ಕಾರ ಹಾಗೂ ಮುದ್ದಣ ಕಾವ್ಯ ಪ್ರಶಸ್ತಿ ಪಡೆದಿವೆ, ಹೂವ ಚೆಲ್ಲಿದ ಹಾದಿ (೨೦೦೭), ಮಾಡಿದಡಿ (೨೦೧೭), ಗದ್ಯಗಂಧಿ (೨೦೨೦), ಮಾರಿಬಿಡಿ ಸಂಕಲನ ಅಮ್ಮ ಪ್ರಶಸ್ತಿ ಪಡೆದಿದೆ. ಕಾವ್ಯ ಕ್ಷೇತ್ರದಲ್ಲಿನ ಸಾಧನೆಗಾಗಿ ೨೦೧೮ನೇ ಸಾಲಿನ ಮಾಸ್ತಿ ಪ್ರಶಸ್ತಿಯನ್ನು ಕಮಲ ಪಡೆದಿದ್ದಾರೆ. ನೆಲದಾಸೆಯ ನಕ್ಷತ್ರಗಳು (೨೦೨೧) ಅವರ ಆರನೆಯ ಕಾವ್ಯಸಂಗ್ರಹ,


ಕಾಳನಾಮ ಚರಿತೆ ೨೦೧೮ರಲ್ಲಿ ಪ್ರಕಟವಾದ ಹಗುರ ಹರಟೆಯ ಹಂದರ, ಕಸೂತಿಯಾದ ನೆನಪು, ಕೊಳದ ಮೇಲಿನ ಗಾಳಿ ೨೦೧೯ರಲ್ಲಿ, ಊರ ಬೀದಿಯ ಸುತ್ತು ಕ್ವಾರಂಟೈನ್ ೨೦೨೦ರಲ್ಲಿ ಪ್ರಕಟವಾದ ಪ್ರಬಂಧ ಸಂಕಲನ. ಇವು ಇವರ ಪ್ರಮುಖ ಸಾಹಿತ್ಯದ ಕೃತಿಗಳು


ಅನುವಾದ ಸಾಹಿತ್ಯದಲ್ಲಿ ಮಹತ್ವದ ಕೊಡುಗೆ ನೀಡಿರುವ ಕಮಲ ಆಫ್ರಿಕನ್-ಅಮೆರಿಕನ್, ಮಹಿಳಾ ಕಾವ್ಯದಲ್ಲಿ ವಿಶೇಷ ಪರಿಶ್ರಮವನ್ನು ಹೊಂದಿದ್ದಾರೆ. ಕತ್ತಲ ಹೂವಿನ ಹಾಡು (೧೯೮೯), ಇವರು ಸಂಪಾದಿಸಿ, ಕನ್ನಡಿಸಿರುವ ಕಪ್ಪು ಲೇಖಕಿಯರ ಕಾವ್ಯ ಸಂಗ್ರಹ. ಕನ್ನಡದಲ್ಲಿ ಮೊದಲ ಬಾರಿಗೆ ಕಪ್ಪು ಕವಿಗಳನ್ನು ಪರಿಚಯಿಸುವ ಪ್ರಯತ್ನ ಓದುಗರ ಗಮನ ಮತ್ತು ವಿಮರ್ಶಕ ಮಾನ್ಯತೆ ಎರಡನ್ನೂ ಪಡೆಯಿತು. ಈ ಪ್ರಯತ್ನದ ವಿಸ್ತರಣೆಯಾಗಿ ಆಫ್ರಿಕನ್ ಅಮೆರಿಕನ್ ಸಮಾಜ ವಿಕಾಸಗೊಂಡ ಬಗೆ, ಗುಲಾಮಗಿರಿ ಪದ್ಧತಿಯ ವಿರುದ್ಧ ಅವರ ಹೋರಾಟ, ಮಹಿಳೆಯರು ಸಾಹಿತ್ಯದ ಮೂಲಕ ತಮ್ಮ ಅಭಿವ್ಯಕ್ತಿಯನ್ನು ಪಡೆದುಕೊಳ್ಳಲು ಮಾಡಿದ ಹೋರಾಟಗಳ ಕಥೆಯನ್ನು ಕಪ್ಪು ಪಟ್ಟಿ ಬೆಳಕಿನ ಹಾಡು' ಕೃತಿ ಸರಣಿಯ ನಾಲ್ಕು ಪುಸ್ತಕಗಳು ತೆರೆದಿಡುತ್ತವೆ. ಆರು ವರ್ಷಗಳ ಅವಧಿಯಲ್ಲಿ ಆಯ್ಕೆ, ಸಂಪಾದನೆ ಮತ್ತು ಅನುವಾದಗೊಂಡ ಈ ಕೃತಿಗಳು: ಕಪ್ಪು ಪಟ್ಟಿಯ ಬೆಳಕಿನ ಹಾಡು, ಉತ್ತರ ನಕ್ಷತ್ರ, ರೂಸಾಪಾರ್ಕ್ಸ್ಳ ನನ್ನ ಕಥೆ ಮತ್ತು ಸೆರೆ ಹಕ್ಕಿ ಹಾಡುವುದು ಏಕೆಂದು ಬಲ್ಲೆ. ಈ ಪುಸ್ತಕಗಳು ಕರ್ನಾಟಕ ಸಾಹಿತ್ಯ ಅಕಾಡೆಮಿ, ಕರ್ನಾಟಕ ಅನುವಾದ ಸಾಹಿತ್ಯ ಅಕಾಡೆಮಿ ಪುರಸ್ಕಾರಕ್ಕೆ, ಶಿವಮೊಗ್ಗ ಕರ್ನಾಟಕ ಸಂಘದ ಎಸ್.ವಿ.ಪರಮೇಶ್ವರ ಭಟ್ಟ ಪ್ರಶಸ್ತಿಗೆ ಪಾತ್ರವಾಗಿವೆ. ಅನುವಾದ ಕ್ಷೇತ್ರದಲ್ಲಿನ ಸಾಧನೆಗಾಗಿ ಕುವೆಂಪು ಭಾಷಾಭಾರತಿ ಪ್ರಾಧಿಕಾರದ ಗೌರವ ಪ್ರಶಸ್ತಿಯನ್ನು ಕೂಡ ಕಮಲ ಪಡೆದಿದ್ದಾರೆ. 



ಪ್ರಸ್ತುತ ಹೊನ್ನಾವರಿಕೆ ಪ್ರಬಂಧಗಳು

 ಅವರ ಈ ಹಿಂದಿನ ಗದ್ಯ ಬರಹಗಳಂತೆಯೇ ಸರಳ ಮತ್ತು ನೇರ ನಿರೂಪಣೆ ಈ ಪ್ರಬಂಧಗಳಲ್ಲಿಯೂ ವಿಸ್ತಾರಗೊಂಡಿದೆ. ಈ ಅಂಶಗಳೇ ಅವರಿಗೆ ತಮ್ಮದೇ ಓದುಗ ವರ್ಗವನ್ನು ಸೃಷ್ಟಿ ಕೊಟ್ಟಿವೆ.


ಮನುಷ್ಯನ ಖಾಸಗಿ ಬದುಕಿನ ಅನುಭವಗಳು ಲೋಕಾನುಭವವಾಗಿ ಬದಲಾದಾಗ ಅರಿವೇ ಆಗದೆ ಓದುಗನ ಮನಸ್ಸನ್ನು ವ್ಯಾಪಿಸಬಲ್ಲವು  ಇಲ್ಲಿ ಹೇಳುತ್ತಿರುವ ಸಂಗತಿ, ಪ್ರಸಂಗ, ಅನುಭವಗಳು ನಮಗೂ ಆ ಗಿವೆಯಲ್ಲ ಎಂಬ ಅಚ್ಚರಿಯಲ್ಲಿ ಓದುಗ ಅದರಲ್ಲಿ ತಲ್ಲೀನವಾಗಬಲ್ಲ ಗುಣವನ್ನು ಈ ಪ್ರಬಂಧಗಳು ಪಡೆದಿವೆ. ಅದರಲ್ಲೂ ನನ್ನಂತಹ ಶಿಕ್ಷಕರಿಗೆ ಅನಿಸದೆ ಇರದು. ಬದುಕಿನ ಸಾಮಾನ್ಯ ಸಂಗತಿಗಳಿಗೂ ಅದರದೇ ಆದ ಚೆಲುವು ಇರುತ್ತದೆ  ಎಂಬ  ಅರಿವನ್ನು ಈ ಬರಹಗಳು ಮೂಡಿಸತ್ತವೆ.


ಚೋಟುದ್ದದ ಹುಡುಗರು ,

ಕಳೆದುದು ಸಿಗದಿರಲಿ,ಇಡೀ ಮನೆಯನ್ನೇ ಯಾರೋ ಮಡಿಚಿಡುತ್ತಿದ್ದಾರೆ,ಕನಸೊಂದನ್ನು ಸುರುಳಿ ಸುತ್ತಿ,ಬಾಗಿಲು ತೆಗೆಯ,

ವರ್ತಮಾನ ಕಾಲದ ಹುಡುಕಾಟದಲ್ಲಿ , ಎಲ್ಲ ಹೆಣ್ಣುಗಳ ದನಿಯಾಗಲಿ,ಒಂದು ಲಹರಿ,

ಬಚ್ಚಿಟ್ಟಿದ್ದು ಪರರಿಗೂ ಅಲ್ಲ,

'ಡಿಲೀಟ್' ಮಾಡುತ್ತಾ ಬದುಕುವುದು,

ಗಂಟಲಲ್ಲಿ ಮುರಿದ ಮುಳ್ಳು ,

ಬೀದಿಯಲ್ಲಿ ಸಿಕ್ಕ ಕತೆಗಳು,

ಒಂದು ರಫ್ ನೋಟ್ಬುಕ್,ವಾಸ್ತವದ ಬೆಂಕಿಯಲ್ಲಿ ಸುಡದ ನೆನಪುಗಳು, ಗಾಡಿಯ ಮೋಹ,

ನೆನಪುಗಳ ಬುತ್ತಿ ಚಿಗುರು, ಮುಂತಾದ ವಿಭಿನ್ನ ವಿಷಯಗಳ ಪ್ರಬಂಧಗಳು ನನಗೆ ಇಷ್ಟ ಆದವು.

ಅದರಲ್ಲೂ ಕೊನೆಯ ಪ್ರಬಂಧವಾದ 

ಎಲ್ಲಾ "ಪ್ರೀತಿಯ ಶಿಕ್ಷಕರಿಗೆ " ಎಂಬ ಪ್ರಬಂಧವು ನನ್ನಂತವನ ಕುರಿತೇ ಬರದಂತಹ ಸಲಹಾ ರೂಪದ ಪ್ರಬಂಧ ಎನಿಸಿತು.


ಒಟ್ಟಾರೆ ನೀವು ಒಮ್ಮೆ ಹೊನ್ನಾವರಿಕೆ ಓದಿದರೆ ವಿಭಿನ್ನ ವಿಷಯಗಳ ಪ್ರಬಂಧಗಳ ಪ್ರಪಂಚ ನಿಮ್ಮ ಮುಂದೆ ತೆರೆದುಕೊಳ್ಳುತ್ತದೆ.


ಪುಸ್ತಕದ ಹೆಸರು: ಹೊನ್ನಾವರಿಕೆ

ಲೇಖಕರು : ಎಂ ಆರ್ ಕಮಲ 

ಪ್ರಕಾಶನ: ಕಥನ ಪ್ರಕಾಶನ ಬೆಂಗಳೂರು

ಬೆಲೆ: 175.00 ₹



ಸಿಹಿಜೀವಿ

ಸಿ ಜಿ ವೆಂಕಟೇಶ್ವರ

ತುಮಕೂರು

ಗುಣಾತ್ಮಕ ಶಿಕ್ಷಣ ನಮ್ಮ ಅದ್ಯತೆಯಾಗಬೇಕಿದೆ.


 


ಗುಣಾತ್ಮಕ ಶಿಕ್ಷಣಕ್ಕೆ ಮಹತ್ವ ನೀಡೋಣ .

ಈ ಬಾರಿ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ದಾಖಲೆಯ ಫಲಿತಾಂಶ ಪಡೆದ ನಾವು ಪಿ ಯು ಸಿ ಯಲ್ಲಿ ಅಂತಹದೇ ಫಲಿತಾಂಶ ನಿರೀಕ್ಷೆಗಳನ್ನು ಇಟ್ಟುಕೊಂಡಿದ್ದೇವೆ. ಸಂತಸದ ಈ ಹೊತ್ತಿನಲ್ಲಿ ರಾಷ್ಟ್ರೀಯ ಸಾಧನೆ ಸಮೀಕ್ಷೆ (NAS) ವರದಿ ನಮ್ಮ ಕೈ ಸೇರಿದೆ. ಆ ವರದಿಯ ಪ್ರಮುಖವಾದ ಅಂಶಗಳು ನಮ್ಮ ಶಿಕ್ಷಣ ವ್ಯವಸ್ಥೆ ಮತ್ತು ಕಲಿಕೆ ಅಷ್ಟೊಂದು ಅಭಿವೃದ್ಧಿಯಾಗಿಲ್ಲ ಎಂಬುದನ್ನು ಬೊಟ್ಟು ಮಾಡಿ ತೋರಿಸುತ್ತದೆ.ಇದು ದೇಶದಾದ್ಯಂತ ನಡೆದ ಸಮೀಕ್ಷೆಯ  ವರದಿಯಾಗಿದ್ದು ಈ ಸಮೀಕ್ಷೆಯಲ್ಲಿ ಕರ್ನಾಟಕದ ವಿದ್ಯಾರ್ಥಿಗಳು ಸಹ ಪಾಲ್ಗೊಂಡಿದ್ದರು.

3,5,8 ಮತ್ತು 10ನೇ ತರಗತಿಯ ವಿದ್ಯಾರ್ಥಿಗಳ ಕಲಿಕಾ ಸಾಧನೆ ಯಾವಮಟ್ಟದಲ್ಲಿದೆ ಎಂಬುದನ್ನು ತಿಳಿಯುವುದಕ್ಕಾಗಿ ರಾಷ್ಟ್ರಮಟ್ಟದಲ್ಲಿ 'ರಾಷ್ಟ್ರೀಯ ಸಾಧನೆ ಸಮೀಕ್ಷೆ ನಡೆಸಲಾಗಿದೆ. ಸರ್ಕಾರಿ ಶಾಲೆ, ಅನುದಾನಿತ ಶಾಲೆ ಖಾಸಗಿ ಶಾಲೆ ಮತ್ತು ಕೇಂದ್ರೀಯ ಶಾಲೆಯ ವಿದ್ಯಾರ್ಥಿಗಳ ಕಲಿಕಾ ಮಟ್ಟದ ಸಮೀಕ್ಷೆ ನಡೆದಿದೆ. ಇದು ದೊಡ್ಡ ಮಟ್ಟದ ಸಮೀಕ್ಷೆಯಾಗಿದೆ. 2021ರ ಸಮೀಕ್ಷೆಯ ವರದಿಯು ಈಗ ಪ್ರಕಟವಾಗಿದೆ. ಭಾಷೆ, ವಿಜ್ಞಾನ, ಸಮಾಜ ವಿಜ್ಞಾನ, ಇಂಗ್ಲಿಷ್ ಮುಂತಾದ ವಿಷಯಗಳಲ್ಲಿನ ಕಲಿಕಾ ಮಟ್ಟವನ್ನು ವಿಶ್ಲೇಷಣೆಗೆ ಒಳಪಡಿಸಲಾಗಿದೆ. 2017ರ ಸಮೀಕ್ಷೆಗೆ ಹೋಲಿಸಿದರೆ 2021ರಲ್ಲಿ ಕಲಿಕಾಮಟ್ಟವು ಕುಸಿತ ಕಂಡಿದೆ.ಕರ್ನಾಟಕ ರಾಜ್ಯದ ವಿದ್ಯಾರ್ಥಿಗಳ ವಿವಿಧ ವಿಷಯಗಳ ಕಲಿಕಾ ಮಟ್ಟವು ಕಳವಳಕಾರಿಯಾಗಿದೆ ಎಂಬುದರತ್ತ ಸಮೀಕ್ಷಾ ವರದಿಯು ಬೆಳಕು ಚೆಲ್ಲಿದೆ.
ಭಾಷೆ, ಗಣಿತ, ವಿಜ್ಞಾನ, ಪರಿಸರ ಅಧ್ಯಯನ, ಇಂಗ್ಲಿಷ್ ಹಾಗೂ ಆಧುನಿಕ ಭಾರತೀಯ ಭಾಷೆಗಳ ಅಧ್ಯಯನದಲ್ಲಿ 3, 5, 8 ಮತ್ತು 10ನೇ ತರಗತಿಯ ವಿದ್ಯಾರ್ಥಿಗಳ ಕಲಿಕಾ ಸಾಧನೆಯ ಅಂಕಗಳನ್ನು ವರದಿ ಬಹಿರಂಗಪಡಿಸಿದೆ. ಗರಿಷ್ಠ 500  ಅಂಕಗಳನ್ನು ನಿಗದಿಪಡಿಸಲಾಗಿದ್ದು,  ಬಹುತೇಕ ಈ ಎಲ್ಲ ಹಂತಗಳಲ್ಲೂ ಅಂಕಗಳು ಕಡಿಮೆಯಾಗಿರುವುದು ಸಮೀಕ್ಷೆಯಿಂದ ಸಾಬೀತಾಗಿದೆ.

10ನೇ ತರಗತಿಯ ಇಂಗ್ಲಿಷ್ನಲ್ಲಿ ಮಾತ್ರ 2017ಕ್ಕೆ ಹೋಲಿಸಿದರೆ 269ಅಂಕ ಪಡೆದಿದ್ದ ಮಕ್ಕಳು, 2011ರಲ್ಲಿ 383 ಅಂಕ ಪಡೆದಿರುವುದು ತುಸು ಸಮಾಧಾನ ತಂದಿದೆ. ಆದರೆ ಅದಕ್ಕೆ ತದ್ವಿರುದ್ಧವಾಗಿ ಮತ್ತೊಂದು ಮಾಹಿತಿಯ ಅತಂಕಕಾರಿಯಾಗಿದೆ .ಅದೇನೆಂದರೆ ಪ್ರೌಢಶಾಲಾ ಹಂತದಲ್ಲಿ, ಆಧುನಿಕ ಭಾರತೀಯ ಭಾಷಾ ವಿಷಯದಲ್ಲಿ ಉಲ್ಲೇಖವಾಗಿರುವ ಕಥೆ, ನಾಟಕ, ವಸ್ತುವಿಷಯವನ್ನು ಅರ್ಥ ಮಾಡಿಕೊಳ್ಳುವ ಸಾಮರ್ಥ್ಯ ವಿಭಾಗದಲ್ಲಿ ವಿದ್ಯಾರ್ಥಿಗಳು 2017ರಲ್ಲಿ 500ಕ್ಕೆ 252 ಅಂಕ ಪಡೆದಿದ್ದರು, ಆದರೆ 2011ರಲ್ಲಿ ಈ ಸಾಮರ್ಥ್ಯವು 242 ಅಂಕಗಳಿಗೆ  ಕುಸಿದಿದೆ.
ಈ ಮೇಲಿನ ಅಂಶಗಳನ್ನು ಗಮನಿಸಿದರೆ ನಮಗೆ ಸಾಮಾನ್ಯವಾಗಿ ಗ್ರಹಿಕೆಯಾಗುವುದು ನಮ್ಮ ಮಕ್ಕಳ ಓದುವ ಮತ್ತು ಬರೆಯುವ ಕೌಶಲ್ಯ ಕಡಿಮೆಯಾಗಿದೆ ಎಂಬುದು ಸ್ಪಷ್ಟವಾಗುತ್ತದೆ. ಇದಕ್ಕೆ ಪೂರಕವಾಗಿ ಈ ಸಮೀಕ್ಷೆಯು ಮತ್ತೊಂದು ವರದಿಯನ್ನು ಗಮನಿಸುವುದಾದರೆ

ದೇಶದ ಪ್ರೌಢಶಿಕ್ಷಣ ವ್ಯವಸ್ಥೆಯಲ್ಲಿ 10ನೇ ತರಗತಿ ಮಕ್ಕಳಿಗೆ ಆಧುನಿಕ ಭಾರತೀಯ ಭಾಷೆಯೊಂದನ್ನು (ಎಂಐಎಲ್) ಬೋಧಿಸಲಾಗುತ್ತದೆ. ಸಂಸ್ಕೃತ, ಹಿಂದಿ, ಬಂಗಾಳಿ, ಕನ್ನಡ, ತಮಿಳು ಸೇರಿ ಒಟ್ಟು 21 ಭಾಷೆಗಳನ್ನ ಆಧುನಿಕ ಭಾರತೀಯ ಭಾಷೆ ಎಂದು ವರ್ಗೀಕರಿಸಲಾಗಿದೆ. ಆದರೆ ದೇಶದಾದ್ಯಂತ ಸಮೀಕ್ಷೆಯಲ್ಲಿ ಭಾಗಿಯಾಗಿದ್ದ ವಿದ್ಯಾರ್ಥಿಗಳಲ್ಲಿ ಅರ್ಧಕ್ಕೂ ಹೆಚ್ಚಿನವರು,  ಈ  ಪಠ್ಯವನ್ನು ಓದಲು, ಬರೆಯಲು ಮತ್ತು ಅರ್ಥಮಾಡಿಕೊಳ್ಳಲು ಬರುವುದಿಲ್ಲ ಎಂದು ಹೇಳಿದ್ದಾರೆ.

ಹಿಂದಿ ಭಾಷಿಕ ರಾಜ್ಯಗಳಲ್ಲಿ ಹಿಂದಿಯೇತರ ಭಾಷೆಯನ್ನು ಎಂಐಎಲ್ ಆಗಿ ಬೋಧಿಸಲಾಗುತ್ತದೆ. ಹಿಂದಿಯೇತರ ಭಾಷಿಕ ರಾಜ್ಯಗಳಲ್ಲಿ ಅಲ್ಲಿನ ಪ್ರಾದೇಶಿಕ ಭಾಷೆಯನ್ನು ಹೊರತುಪಡಿಸಿದ ಭಾಷೆಗಳನ್ನು ಎಂಐಎಲ್ ಆಗಿ ಬೋಧಿಸಲಾಗುತ್ತದೆ. ಈ ಸಮೀಕ್ಷೆಯಲ್ಲಿ ಭಾಗಿಯಾದ ಎಲ್ಲಾ ರಾಜ್ಯಗಳ ವಿದ್ಯಾರ್ಥಿಗಳಲ್ಲಿ, ಶೇ 59ರಷ್ಟು ಜನರು ಎಂಐಎಲ್ನಲ್ಲಿ ಇರುವ ಕವನ, ಗದ್ಯ ಮತ್ತು ನಾಟಕಗಳನ್ನು ಓದಲು ಬರೆಯಲು ಮತ್ತು ಅರ್ಥಮಾಡಿಕೊಳ್ಳಲು ಬರುವುದಿಲ್ಲ ಎಂದು ಹೇಳಿದ್ದಾರೆ.

ಕರ್ನಾಟಕದಲ್ಲೂ ಶೇ 65ರಷ್ಟು ವಿದ್ಯಾರ್ಥಿಗಳು ಎಂಐಎಲ್ನಲ್ಲಿ ಇರುವ ಕವನ, ಗದ್ಯ ಮತ್ತು ನಾಟಕಗಳನ್ನು ಓದಲು-ಬರೆಯಲು ಮತ್ತು ಅರ್ಥಮಾಡಿಕೊಳ್ಳಲು ಬರುವುದಿಲ್ಲ ಎಂದು ಹೇಳಿದ್ದಾರೆ. ಇದೂ ಮತ್ತೂ ಆಘಾತಕಾರಿಯಾದ ಅಂಶ.

ಈ ರೀತಿಯ ಕಲಿಕಾ ಸಾಧನೆಯ ಕುಸಿತಕ್ಕೆ ಕಾರಣ ಹುಡುಕಲು ಹೊರಟರೆ ಹಲವಾರು ಅಂಶಗಳು  ಇದೇ ಸಮೀಕ್ಷೆಯಲ್ಲಿ ನಮಗೆ ಸಿಗುತ್ತವೆ. ಅಂತಹ ಅಂಶಗಳಲ್ಲಿ ಬೋಧನೆಯ ಜೊತೆಗೆ ಶಿಕ್ಷಕರಿಗೆ ಇತರೆ ಕಾರ್ಯಭಾರ ಹಾಕಿರುವುದು ಎಂದು ದೇಶದ 43% ಶಿಕ್ಷಕರು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ.
ತರಗತಿ ಬೋಧನೆಯಲ್ಲಿ ವಿದ್ಯಾರ್ಥಿಗಳನ್ನು ಸೆಳೆಯಲು ಅತಿಮುಖ್ಯ ಎಂದು ಪರಿಗಣಿತವಾಗಿರುವ ಬೋಧನೋಪಕರಣಗಳು ಹಾಗೂ ಪೂರಕ ಸಲಕರಣೆಗಳ ಪೂರೈಕೆಯಲ್ಲಿ ಕೊರತೆಯಿದೆ ಎಂಬುದರತ್ತ ವರದಿ ಬೊಟ್ಟು ಮಾಡಿದೆ. 3 ಹಾಗೂ 8ನೇ ತರಗತಿಯಲ್ಲಿ ಶೇ.63ರಷ್ಟು ಕೊರತೆಯಿದ್ದರೆ, 5 ಹಾಗೂ 10ನೇ ತರಗತಿಯಲ್ಲಿ ಶೇ. 62ರಷ್ಟು ಕೊರತೆ ಇದೆ ಎಂಬುದು ಸಮೀಕ್ಷೆಯಲ್ಲಿ ಬಿಂಬಿತವಾಗಿದೆ. ಇದೂ ಸಹ ಕಲಿಕೆಯ ಕುಸಿತಕ್ಕೆ ಒಂದು ಕಾರಣ ಎಂದರೆ ತಪ್ಪಾಗಲಾರದು.
ದೇಶದ  ಕೆಲ ಶಾಲೆಗಳಲ್ಲಿ ಮೂಲ ಸೌಲಭ್ಯಗಳ ಕೊರತೆಯಿದೆ ಎಂಬುದನ್ನು ಈ ಸಮೀಕ್ಷೆಯು ಬಹಿರಂಗಪಡಿಸಿದೆ.
ಶಾಲಾ ಕಟ್ಟಡಗಳ ಗುಣಮಟ್ಟವೂ ಶೈಕ್ಷಣಿಕ ಚಟುವಟಿಕೆಯಲ್ಲಿ ಅತಿಮುಖ್ಯ. ಆದರೆ ರಾಜ್ಯದ 3ನೇ ತರಗತಿ ಹಂತದ ಶಾಲಾ ಕಟ್ಟಡಗಳನ್ನು ಸಂಪೂರ್ಣವಾಗಿ ದುರಸ್ತಿ ಮಾಡಬೇಕಿದೆ ಎಂದು ಶೇ 23ರಷ್ಟು ಶಿಕ್ಷಕರು ಅಭಿಪ್ರಾಯಪಟ್ಟಿದ್ದಾರೆ. ಪ್ರೌಢಶಾಲಾ ಹಂತದಲ್ಲಿ ಕಟ್ಟಡಗಳ ದುರಸ್ತಿ ಬೇಡಿಕೆ ಸ್ವಲ್ಪ ಕಡಿಮೆಯಿದೆ ಎಂಬುದು ಸಮಾಧಾನಕರ ಸಂಗತಿ.
ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯ ಅನುಷ್ಠಾನದ ಈ ಹಂತದಲ್ಲಿ ಮಕ್ಕಳ ಕಲಿಕೆಯ ಕುಸಿತ ಎಲ್ಲರೂ ಯೋಚಿಸಬೇಕಾದ ಸಂಗತಿ. ಈ ಸಂಧರ್ಭದಲ್ಲಿ  ಪಠ್ಯಕ್ರಮ ಪಠ್ಯ ಪುಸ್ತಕ ಕುರಿತಾಗಿ ಅನಗತ್ಯ ಗೊಂದಲ ಮಾಡಿಕೊಂಡು ರಾಡಿ ಎಬ್ಬಿಸುತ್ತಿರುವುದು ದುರದೃಷ್ಟಕರ .ಇಂತಹ ಸಂಧರ್ಭದಲ್ಲಿ ಒಬ್ಬರ  ಮೇಲೋಬ್ಬರು ಅನಗತ್ಯವಾಗಿ ದೂರದೆ ಆಳುವವರು,ಅಧಿಕಾರಿಗಳು,ಶಿಕ್ಷಕರು, ಪೋಷಕರು ಮತ್ತು ಮಕ್ಕಳು ಎಲ್ಲರೂ ಸೇರಿ ನಮ್ಮ ದೇಶದ ಮಕ್ಕಳ ಕಲಿಕೆ ಉತ್ತಮವಾಗಲು ಹಾಗೂ ಗುಣಾತ್ಮಕ ಆಗಿರುವಂತೆ ಕ್ರಮ ವಹಿಸಬೇಕಿದೆ. ದೇಶದ ಜವಾಬ್ದಾರಿಯುತ ಪ್ರಜೆಗಳನ್ನಾಗಿ ಮಾಡುವ ಶಿಕ್ಷಣ ನೀಡುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಬೇಕಿದೆ.

ಸಿಹಿಜೀವಿ
ಸಿ ಜಿ ವೆಂಕಟೇಶ್ವರ
ತುಮಕೂರು
9900925529

26 May 2022

ಕವಿ ಹಿಡಿದ ಕನ್ನಡಿ .


 



ಕವಿ ಹಿಡಿದ ಕನ್ನಡಿ.  ವಿಮರ್ಶೆ.



ಕವಿ ಹಿಡಿದ ಕನ್ನಡಿ .ಇದು ಕವಿ ದೊಡ್ಡರಂಗೇಗೌಡರು ಅಂಕಣ ಬರಹಗಳ ಸಂಕಲನವಾಗಿದೆ. ಇಲ್ಲಿ ದೇಸೀಯ ನೆಲೆಗಟ್ಟಿನಲ್ಲಿಯೇ ಸಹಜವಾದ ಸಹೃದಯ ಪ್ರೀತಿಯ ವಿಮರ್ಶಾ ಲೇಖನಗಳಿವೆ. ಈ ಕೃತಿಯಲ್ಲಿ ಅನೇಕ ಲೇಖನಗಳಿದ್ದು ಸಾಹಿತ್ಯ ದಿಗ್ಗಜರಾದಂಥ ಶ್ರೇಷ್ಠ ಕವಿಗಳಿಂದ ಸಾಮಾನ್ಯ ಎಲೆಮರೆಯ ಕಾಯಿಯಂಥ ಕವಿಗಳ ಕಾವ್ಯ ಕೃತಿಗಳವರೆಗೆ ವಿಮರ್ಶೆ ಸಾಗುತ್ತದೆ. ಪ್ರಾಚೀನ ಕಾಲದ ಮಹತ್ವತೆಯನ್ನು ಆಧುನಿಕ ಜಗತ್ತಿನವರೆಗೂ ನಡೆದ ಘಟನೆಗಳು ಅವುಗಳ ವಿಭಿನ್ನ ದೃಷ್ಟಿ ಧೋರಣೆಯ ಆಯಾಮಗಳನ್ನು ಇಂದು ಎಲ್ಲ ವರ್ಗದ ಜನರೂ ಓದಿ ಅರ್ಥೈಸಿಕೊಂಡು ತಮ್ಮ ಜ್ಞಾನವನ್ನು ಹೆಚ್ಚಿಸಿಕೊಳ್ಳಬಹುದಾದ ಗಹನವಾದ ವಿಚಾರ ಅಡಗಿದೆ.

ಸಾಹಿತ್ಯ ನಿರ್ಮಿತಿಯ ಹಿಂದಿರುವ ಪ್ರಜ್ಞೆಯನ್ನು ಹೆಚ್ಚು ವಾಸ್ತವಿಕವನ್ನಾಗಿ ಮಾಡುತ್ತದೆ. ಹಾಗೆಯೇ ದೊಡ್ಡರಂಗೇಗೌಡರ ಕಾಲದ ವಸ್ತುವನ್ನು ಗ್ರಹಿಸಿದ ರೀತಿಯನ್ನು ಅವರ ಒಟ್ಟಾರೆ ತಾತ್ವಿಕ ಹಿನ್ನೆಲೆಯಲ್ಲಿಯೇ ಅರ್ಥಮಾಡಿಕೊಳ್ಳಬೇಕು. ಈ ಜಾಗತಿಕ ಅನುಭವದ ಹಿನ್ನೆಲೆ ದಟ್ಟವಾಗಿದೆ  ಕವಿ ಯೇಟ್ಸ್ ನ ಹಾಗೆ ದೊಡ್ಡರಂಗೇಗೌಡರು ಕೂಡಾ ಪೂರ್ಣ ಬೌದ್ಧಿಕ ವ್ಯವಸ್ಥೆಯನ್ನು ವೈಯುಕ್ತಿಕ ಹಂತದಲ್ಲಿ ನಿರ್ಮಿಸಿಕೊಂಡರು. ಹಾಗಾಗಿ ಆಲೋಚನಾ ಕ್ರಮಗಳು ನಿರಾಯಾಸವಾಗಿ ಬರುತ್ತವೆ. ಈ ರೀತಿಯ ಕವಿಗಳು ತಮ್ಮ ವಿಚಾರಗಳನ್ನು ತಮ್ಮ ವೈಚಾರಿಕ ಆಕೃತಿಗಳ ಶೋಧನೆಗಾಗಿ ಬಳಸಿದ್ದಾರೆ. ಇವರ ಪ್ರತಿಮಾ ಜಗತ್ತು, ಭಾಷೆಯ ಉಪಯೋಗ ಮುಂತಾದವು ಅಭಿವ್ಯಕ್ತಿಯಲ್ಲಿ ತಮ್ಮ ಬೌದ್ಧಿಕ ಜಗತ್ತಿನ ಸೂಕ್ಷ್ಮ ವಾಹಕಗಳಾಗಿ ದುಡಿಯುತ್ತವೆ. ಇದು ಮೆಚ್ಚಬೇಕಾದ ಅಂಶವಾಗಿದೆ.

ಕವಿ ಮತ್ತು ಲೇಖಕರಾದ ದೊಡ್ಡರಂಗೇಗೌಡರು ಈ ಪುಸ್ತಕ ಬರೆಯಲು ಪ್ರೇರಣೆಯಾದ ಅಂಶಗಳನ್ನು ಹೀಗೆ ವಿವರಿಸುತ್ತಾರೆ.

"ಅರವತ್ತರ ದಶಕದಿಂದಲೂ ನಾನು ಬರವಣಿಗೆಯನ್ನು ಗಂಭೀರವಾಗಿ ತೆಗೆದುಕೊಂಡೆ, ನಿರಂತರ ಕೃಷಿ ಮಾಡುತ್ತಾ ಬಂದೆ, ಕನ್ನಡ ಪತ್ರಿಕೆಗಳಿಗೆ ಅಂಕಣಗಳನ್ನು ಬರೆಯುತ್ತಾ ಬಂದೆ. ಹಾಗೆ ಬರೆದ ಕೆಲವು ಲೇಖನಗಳನ್ನು ಸಂಕಲಿಸಿ ಇಲ್ಲಿ ಕೃತಿಯ ರೂಪದಲ್ಲಿ ನೀಡಿದ್ದೇನೆ.


ನನ್ನ ಸುತ್ತ ಮುತ್ತಣ ಸನ್ನಿವೇಶಗಳಿಗೆ ಪ್ರಾಮಾಣಿಕವಾಗಿ ಒಬ್ಬ ಕವಿಯಾಗಿ ಸಮಾಜಕ್ಕೆ ಕನ್ನಡಿ ಹಿಡಿಯುವ ಪ್ರಯತ್ನ ಮಾಡಿದ್ದೇನೆ. ಸಾಹಿತ್ಯ ಯಾವತ್ತೂ ಜನಜೀವನದ ಪ್ರತಿಬಿಂಬವೂ ಹೌದು. ಈ ಕಾರಣದಿಂದಲೂ ಇದು ಕವಿ ಗ್ರಹಿಸಿದ ಗ್ರಹಿಕೆಗಳು ಎಲ್ಲ ರೂಕ್ಷ ವಿಷಯಗಳಿಗೂ ಕವಿ ಕನ್ನಡಿ ಹಿಡಿದು ನೋಡಿ ಪ್ರತಿಕ್ರಿಯಿಸಿದ್ದರ ಫಲ ಇದು.  ಹೀಗಾಗಿ "ಕವಿ ಹಿಡಿದ ಕನ್ನಡಿ” ಎಂದು ಪುಸ್ತಕಕ್ಕೆ ಹೆಸರಿಸಿದ್ದೇನೆ." ಎಂದಿದ್ದಾರೆ.

ಈ ಕೃತಿಯಲ್ಲಿ ಬರುವ ಲೇಖನಗಳ ಕಡೆ ಒಮ್ಮೆ ಗಮನ ಹರಿಸುವುದಾದರೆ 

ನಾವು ಭಾರತೀಯರು ಎತ್ತ ಸಾಗುತ್ತಿದ್ದೇವೆ? ಎಂಬ ಲೇಖನದಲ್ಲಿ ಆಧುನಿಕತೆಯೆಡೆಗೆ ಮಾನವ ಸಾಗಬೇಕಾದಾಗ ಆದ ಕೆಲ ಘಟನೆಗಳ ಚಿತ್ರಣ ನೀಡಿದ್ದಾರೆ.

ಸಾಹಿತ್ಯ ಸೌರಭ “ವಡ್ಡಾರಾಧನೆ” ,

ಕವಿ ಪಂಪಣ್ಣ ಅವರ ಮಹಾನ್ ಸಾಧನೆ ,ಪಾಂಡಿತ್ಯದಲ್ಲಿ ಎತ್ತಿದ ಕೈ : ಮಂಜೇಶ್ವರದ ಗೋವಿಂದ ಪೈ! 

ಮುಂಬೆಳಕಿನ ಮುಂಗೋಳಿ ಹಟ್ಟಿಯಂಗಡಿ ನಾರಾಯಣರಾಯರು, ಕನ್ನಡ ಕಾವ್ಯಕ್ಕೆ ಹೊಸ ನುಡಿಗಟ್ಟು ನೀಡಿದ  ಬಿ.ಎಂ.ಶ್ರೀ ,ಅಮಿತಾನಂದ ನೀಡುವ ಸೃಜನ ಸಂಪನ್ನ,ದಾರ್ಶನಿಕ ಮಾರ್ಗ ಕವಿ ಡಿ.ವಿ.ಜಿ.,ವೈಚಾರಿಕತೆ ಬಿತ್ತಿದ ಅಪೂರ್ವ ಮಹಾಕವಿ ಕುವೆಂಪು,“ಸರ್ವ ಸೌಖ್ಯವೂ ಕುಟುಂಬದಲ್ಲೇ ಇದೆ”ಎಂದು ಸಾರಿದ ವರಕವಿ ದ.ರಾ.ಬೇಂದ್ರೆ ಬಹುಮುಖಿ ಆಯಾಮಗಳ ಬೇಂದ್ರೆ,ನಮ್ಮ ನಮ್ಮ ಮತಿಗಳು ನಮ್ಮ ಮೆಚ್ಚಿನ ದೀವಿಗೆಯಾಗಲಿ!

ಸಾಹಿತ್ಯ ಸಂಸರ್ಗ ಹಾ.ಮಾ.ನಾ ಒಂದು ಸಂಸ್ಮರಣೆ, ಮಂದಾರ ಹೂವಿನಂಥ ಮಹೋನ್ನತ ಮುಗಳಿ,

ಉತ್ಕರ್ಷದ ಹೊನಲಿನಲ್ಲಿ ಸುಗಮ ಸಂಗೀತ ಮುತ್ತಿನಂಥ ಕಾವ್ಯ ಬರೆದ ಕೊಡಗಿನ ಮುತ್ತಣ್ಣ,

ಸಹೃದಯರ ಭಾವ ಸಂಚಲನ ಮಾಡಿದ ಕವಿ ಇಂಚಲ ಅನನ್ಯ ಆಧ್ಯಾತ್ಮ ರಂಗ: ಅವತಾರ ಶೃಂಗ ,

ಆದರ್ಶ ಗುರುಗಳು ಸತ್ಪುರುಷರು ಕನ್ನಡ ನವ್ಯಕಾವ್ಯದ ಬಹುಮುಖೀ ಆಯಾಮಗಳು,ಕನ್ನಡ ಕಾವ್ಯಲೋಕ ದಾಖಲಿಸಿದ ಯುಗಾದಿ ನಾಡಕಟ್ಟುವ ಹಾಡು ಬರೆದನವ್ಯ ಕವಿ ಗೋಪಾಲಕೃಷ್ಣಾಡಿಗರು, ಪರ್ವತವಾಣಿ ಅವರ ಬಿಂಬ ಪ್ರತಿಬಿಂಬಗಳು , ಸಿ.ಪಿ.ಕೆ. ಅವರ “ಚಿಂತನೆ ಚಿಂತಾಮಣಿ" ಭಾವನೆಗಳ ಜೊತೆಗೆ ಚಿಂತನೆಗಳ ಬೆಸೆದ ಕವಿ  ವಿಷ್ಣುನಾಯ್ಕ, ಅಭಿವ್ಯಕ್ತಿಯ ಸಾಧ್ಯತೆಗಳ ವಿಸ್ತರಿಸಿದ ಅಸೀಮ ಅನ್ವೇಷಕತೇಜಸ್ವಿ,ಜ್ವಾಲಾಮುಖಿಯಂಥ ಕಾವ್ಯ ಬರೆದ ವಾಲೀಕಾರ

ಮಧು ಮಧುರ ಗೀತೆಗಳನಿತ್ತ ಗೀತಕಾರ ಸು. ರುದ್ರಮೂರ್ತಿಶಾಸ್ತ್ರಿ, ಶ್ರೀನಿವಾಸರಾಜು ಅಕ್ಕರೆಯ ಕನ್ನಡದ ಅನನ್ಯ ಪರಿಚಾರಕ ಅಸಮಾನತೆಯ ವಿರುದ್ಧ ಸಿಡಿದೆದ್ದ ತಪ್ತಕವಿ,ದಲಿತ ಬದುಕಿನ ಸಮರ್ಥ ಚಿತ್ರಣ ನೀಡಿದ ಕವಿ,ಡಾ|| ಸಿದ್ಧಲಿಂಗಯ್ಯ ,

 ಈ ನೆಲದ ಕೃಷಿಕ ಕವಿ ಸಿದ್ದಪ್ಪ ಬಿದರಿ, ಅಲೆಮಾರಿ ಜೀವನಕ್ಕೆ ಹಿಡಿದ ರನ್ನಗನ್ನಡಿಗಬಾಳ,

ಆಧುನಿಕ ಕಾವ್ಯ ವೈಚಾರಿಕತೆಗೆ ಪ್ರಾಮುಖ್ಯ ವಾಸ್ತವತೆಯ ರೂಕ್ಷ ಮುಖಗಳು,ಮುಂತಾದ ಲೇಖನಗಳು ಓದುಗರಿಗೆ ಕೆಲ ಮಹಾನ್ ವ್ಯಕ್ತಿಗಳ ಪರಿಚಯ ಮಾಡುತ್ತಾ ನಮ್ಮ ಜ್ಞಾನವನ್ನು ಹೆಚ್ಚಿಸುತ್ತವೆ ಎಂಬುದರಲ್ಲಿ ಎರಡು ಮಾತಿಲ್ಲ.


ಪುಸ್ತಕದ ಹೆಸರು: ಕವಿ ಹಿಡಿದ ಕನ್ನಡಿ 

ಲೇಖಕರು:ಡಾ. ದೊಡ್ಡ ರಂಗೇಗೌಡ.

ಪ್ರಕಾಶನ:ಉನ್ನತಿ ಪ್ರಕಾಶನ

ವರ್ಷ:೨೦೧೫

ಬೆಲೆ:೨೪೦₹


ಸಿಹಿಜೀವಿ

ಸಿ ಜಿ ವೆಂಕಟೇಶ್ವರ

25 May 2022

ಓಟ .ಹನಿಗವನ


 


ಓಟ 

ಪ್ರೀತ್ಸೆ ...ಪ್ರೀತ್ಸೇ... ಎಂದು
ಪೀಡಿಸುತಾ ಅವನು
ಹಿಂದೆ ಬಿದ್ದಿರುವುದನ್ನು 
ಕಂಡು ಬೀರಿದಳು ತೀಕ್ಷ್ಣ ನೋಟ|
ಅವಳ ಕಣ್ಣೋಟಕ್ಕೆ ಹೆದರಿ
ಶುರು ಮಾಡಿದ ಮನೆ ಕಡೆ ಓಟ||

ಸಿಹಿಜೀವಿ
ಸಿ ಜಿ ವೆಂಕಟೇಶ್ವರ

22 May 2022

ಆಕೆ ಉಲಿದ ಹಾಡು .


 


ಆಕೆ ಉಲಿದ ಹಾಡು.


ಹಾಡೆಂದರೆ ನನಗೆ ಪಂಚಪ್ರಾಣ ಬಾಲ್ಯದಿಂದಲೂ ಶಿಕ್ಷಕರ ಮತ್ತು ಸ್ನೇಹಿತರ ಒತ್ತಾಯದ ಮೇರೆಗೆ ಆಗಾಗ ಹಾಡುತ್ತಿದ್ದೆ. ನಾನು ಬೇರೆಯವರ ಹಾಡು ಕೇಳಿ ಖುಷಿ ಪಡುವುದರಲ್ಲಿ ಹಿಂದೆ ಬೀಳುತ್ತಿರಲಿಲ್ಲ. ನಾನು ಯರಬಳ್ಳಿಯಲ್ಲಿ ಪಿ ಯು ಸಿ ಓದುವಾಗ ನಮ್ಮ ಸಹಪಾಠಿಯಾಗಿದ್ದ ಹರ್ತಿಕೋಟೆಯ ರೂಪ ಎಂಬ ವಿದ್ಯಾರ್ಥಿನಿ ಶಬರಿ ಮಲೆ ಸ್ವಾಮಿ ಅಯ್ಯಪ್ಪ ಚಿತ್ರದ "ಗಣಪತಿಯೇ..... ಬುದ್ದಿದಾತನೆ.... ಸಲಹು ಗಣೇಶನೇ ....ನೀ ನಮ್ಮ ಗೆಲುವಾಗಿ ಬಾ....." ಎಂಬ ಗೀತೆಯನ್ನು ಸುಶ್ರಾವ್ಯವಾಗಿ ಹಾಡಿದರು .ಅವರು ಹಾಡಿದ ಹಾಡು ಕ್ಯಾಸೆಟ್ ನಲ್ಲಿ ಹಾಡಿದ ರೀತಿಯೇ ಇತ್ತು. ಈಗಲೂ ಆ ಭಕ್ತಿ ಗೀತೆ ಕೇಳಿದಾಗ ರೂಪ ನೆನಪಾಗುತ್ತಾರೆ. 

ಟಿ ಸಿ ಹೆಚ್ ಓದುವಾಗ ಗಾಯಕಿಯರ ದಂಡೇ ಇತ್ತು. ಭಾರತಿ ಎಂಬ ಪ್ರಶಿಕ್ಷಣಾರ್ಥಿ " ಹಿಂದೂಸ್ತಾನವು ಎಂದೂ ಮರೆಯದ ಭಾರತ ರತ್ನವು ಜನ್ಮಿಸಲಿ " ಎಂಬ ಹಾಡನ್ನು ಭಾವ ತುಂಬಿ ಹಾಡುತ್ತಿದ್ದರು. ಹದಿನೈದು ದಿನಕ್ಕೆ ಒಂದು ಸಮಾರಂಭದಲ್ಲಿ ಇವರ ಹಾಡನ್ನು ಕೇಳಲು ನಾವು ಕಾತುರರಾಗಿದ್ದೆವು. ಅದೇ ಸಮಯದಲ್ಲಿ ಶೈಲಜಾ ಎಂಬ ನಮ್ಮ ಸಹಪಾಠಿ" ಹಸಿರು ಗಾಜಿನ ಬಳೆದಳೆ.... ಸ್ತ್ರೀ ಕುಲದ ಶುಭ ಕರಗಳೆ" ಎಂಬ ಗೀತೆಯನ್ನು ಬಹಳ ಸೊಗಸಾಗಿ ಹಾಡುತ್ತಿದ್ದರು. ನೋಡಲು ಸ್ವಲ್ಪ ಕಪ್ಪಾಗಿದ್ದರೂ ಇವರ ಸ್ವರಕ್ಕೆ ಮಾರುಹೋಗದ ಹುಡಗರಿರಲಿಲ್ಲ. ಆ ಪೈಕಿ ಸ್ವಲ್ಪ ಹೆಚ್ಚಾಗಿ ಮಾರುಹೋದ ನಮ್ಮ ಗೆಳೆಯ ಲೋಕೇಶ್ ಶೈಲಾಜಾಳನ್ನೇ ಮದುವೆಯಾಗಿ ಈಗ ಸುಖ ಸಂಸಾರ ನಡೆಸುತ್ತಿದ್ದಾರೆ. ಇವರಿಬ್ಬರೂ ಈಗಲೂ ಸಂಪರ್ಕದಲ್ಲಿ ಇದ್ದು ಸ್ನೇಹವನ್ನು ಮುಂದುವರೆಸಿದ್ದೇವೆ. ಭಾರತಿ ಮತ್ತು ರೂಪರವರು ಈಗ ಎಲ್ಲಿವರೋ ತಿಳಿದಿಲ್ಲ. ಆದರೂ ಅವರು ಹಾಡಿದ ಹಾಡುಗಳ ಕೇಳಿದಾಗ ಅವರ ನೆನಪಾಗುತ್ತದೆ. ಮತ್ತು ಕಾಲೇಜಿನ ದಿನಗಳು ಮರುಕಳಿಸುತ್ತವೆ.



ಸಿಹಿಜೀವಿ

ಸಿ ಜಿ ವೆಂಕಟೇಶ್ವರ

12 May 2022

ಬೆಲ್ಲಂ ಪುಲ್ಲಕ್ಕ .ಪುಸ್ತಕ ವಿಮರ್ಶೆ


 ವಿಮರ್ಶೆ 35.


ಬೆಲ್ಲಂ ಪುಲ್ಲಕ್ಕ 



ತುಮಕೂರು ಮೂಲದ ಲೇಖಕರಾದ

ಮಲ್ಲಿಕಾರ್ಜುನ ಹೊಸಪಾಳ್ಯರ ಬೆಲ್ಲಂಪುಲ್ಲಕ್ಕ  ಶೀರ್ಷಿಕೆಯ ಆಕರ್ಷಕ ಪುಸ್ತಕದ  ಹದಿನೈದು ಅಧ್ಯಾಯಗಳಲ್ಲಿ ಪ್ರತಿ ಅಧ್ಯಾಯವೂ ಓದಿಸಿಕೊಂಡು ಹೋಗುತ್ತವೆ. ಈ ಸಂಕಲನದಲ್ಲಿ ಕೃಷಿಯನ್ನು ನಂಬಿದ ರೈತರ ದಿನನಿತ್ಯದ ಬದುಕಿನ ತವಕ ತಲ್ಲಣ, ನೋವು ನಲಿವು, ಸಂಭ್ರಮ ಸಡಗರ, ಜಗಳ-ಮುನಿಸು ಎಲ್ಲವೂ ಇವೆ. ಓದುಗರಿಗೆ ಅಪರೂಪಕ್ಕೆ ಸಿಗುವ ಹಳ್ಳಿಗಾಡಿನ ಒಳನೋಟಗಳನ್ನು ಅವರು ಚೆನ್ನಾಗಿ ಕಟ್ಟಿ ಕೊಟ್ಟಿದ್ದಾರೆ.


ನಗರಗಳಿಗೆ ಹೋಲಿಸಿ ಗ್ರಾಮಗಳಲ್ಲಿ ಅದಿಲ್ಲ ಇದಿಲ್ಲ ಎಂಬ 'ಇಲ್ಲವುಗಳ ಪಟ್ಟಿಯನ್ನೇ ಎಲ್ಲರೂ ಮುಂದಿಡುತ್ತಾರೆ. ಆದರೆ ಒಳಹೊಕ್ಕು ನೋಡಿದರೆ ಅಲ್ಲಿನ ಸೀಮಿತ ಅವಕಾಶಗಳನ್ನು ಹಿಗ್ಗಿಸಬಲ್ಲ ನಾನಾ ಬಗೆಯ ಸಾಧ್ಯತೆಗಳನ್ನು ಶೋಧಿಸುವವರ ಎಷ್ಟೊಂದು ಕಥನಗಳು ಕಾಣುತ್ತವೆ. ಅಲ್ಲಿನ ಬದುಕಿನಲ್ಲಿ ಎಷ್ಟೊಂದು ಬಣ್ಣಗಳು ಕಾಣುತ್ತವೆ. ದುಡಿಮೆಗೆ ಎಷ್ಟೊಂದು ಪರ್ಯಾಯಗಳಿಗೆ ಮನರಂಜನೆಗೆ ಏನೆಲ್ಲ ಅವಕಾಶಗಳಿವೆ. ಎಲ್ಲಕ್ಕಿಂತ ಮುಖ್ಯವಾಗಿ ಜನರಾಡುವ ಭಾಷೆಯಲ್ಲಿ ಎಷ್ಟೊಂದು ವೈವಿಧ್ಯ ಕಾಣುತ್ತದೆ.


ಮಲ್ಲಿಕಾರ್ಜುನ ಹೊಸಪಾಳ್ಯರವರ 

ಹುಟ್ಟೂರು, ತುಮಕೂರು ಜಿಲ್ಲೆಯ ಮಧುಗಿರಿ ತಾಲ್ಲೂಕಿನ ಹೊಸಪಾಳ್ಯ ಪತ್ರಿಕೋದ್ಯಮ ಸ್ನಾತಕೋತ್ತರ ಪದವಿಯಲ್ಲಿ ಎರಡು ಚಿನ್ನದ ಪದಕ ಮತ್ತು ಪದವಿಯಲ್ಲಿ ಕನ್ನಡ ವಿಷಯದಲ್ಲಿ ಟಿ.ಪಿ.ಕೈಲಾಸಂ ಚಿನ್ನದ ಪದಕ ಪಡೆದ ಇವರು ಮೂರು ದಶಕಗಳಿಂದ ದೇಸಿ ಬೀಜಗಳ ಸಂರಕ್ಷಣೆ, ಜಲಮೂಲ ದಾಖಲಾತಿ, ಸುಸ್ಥಿರ ಕೃಷಿ, ಸಿರಿಧಾನ್ಯ ಉತ್ತೇಜನ ಕ್ಷೇತ್ರಗಳಲ್ಲಿ ಕಾರ್ಯನಿರ್ವಹಣೆ, ವಿವಿಧ ಸಂಸ್ಥೆ ಹಾಗೂ ಸರ್ಕಾರಿ ಯೋಜನೆಗಳಲ್ಲಿ ದಾಖಲಾತಿ ಸಮಾಲೋಚಕ ವೃತ್ತಿ ಹವ್ಯಾಸಿ ಬರಹಗಾರರಾದ ಇವರ ರಚನೆಗಳು  ಕನ್ನಡ ಪ್ರಭ, ವಿಜಯಕರ್ನಾಟಕ ಹಾಗೂ ಉದಯವಾಣಿ ಪತ್ರಿಕೆಗಳಲ್ಲಿ ಕೃಷಿ ವಿಚಾರಗಳ ಅಂಕಣ ಬರವಣಿಗೆ, ಪ್ರಬಂಧ ಹಾಗೂ ಕಥೆಗಳು ವಿವಿಧ ಪತ್ರಿಕೆಗಳಲ್ಲಿ ಪ್ರಕಟವಾಗಿವೆ.


ಕೃಷಿ ಮಾಧ್ಯಮ ಕೇಂದ್ರದ ಕೃಷಿ ಪತ್ರಿಕೋದ್ಯಮ ಪ್ರಶಸ್ತಿ: ಸಿಡಿಎಲ್ ಸಂಸ್ಥೆಯ 'ಚರಕ' ಅಭಿವೃದ್ಧಿ ಪತ್ರಿಕೋದ್ಯಮ ಪ್ರಶಸ್ತಿ, ಮೈಸೂರು ಜಿಲ್ಲಾ ಪತ್ರಕರ್ತರ ಸಂಘದ 'ಮುರುಘಾಶ್ರೀ' ಅಭಿವೃದ್ಧಿ ಪತ್ರಿಕೋದ್ಯಮ ಪ್ರಶಸ್ತಿ, ಸುಕೃತ ಕೃಷಿ ಬರಹಗಾರ ಪ್ರಶಸ್ತಿ ಪುರಸ್ಕೃತ, ತುಮಕೂರು ಜಿಲ್ಲಾ ಲೇಖಕಿಯರ ಸಂಘದ ಕಥಾ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಸಂದಿದೆ.


'ತೇಜಸ್ವಿ ನೆನಪಲ್ಲಿ ಅಲ್ಮೇರಾ ರಿಪೇರಿ' ಪ್ರಬಂಧಗಳ ಸಂಕಲನವೂ ಸೇರಿದಂತೆ, ಕೃಷಿ ಮತ್ತು ನೀರಿಗೆ ಸಂಬಂಧಪಟ್ಟ 'ನೆಟ್ಟಿರಾಗಿ', 'ಕೃಷಿ ಆಚರಣೆ', 'ಪೈರುಪಚ್ಚೆ. 'ಕೊರಲೆ', 'ಚೌಳು ನೆಲದ ಬಂಗಾರ', 'ಸಿರಿಧಾನ್ಯ ಪರಂಪರೆ', 'ನಶಿಸುತ್ತಿರುವ ನೀರಿನ ಜ್ಞಾನ', 'ತಲಪರಿಗೆ' ಇತ್ಯಾದಿ 13 ಪುಸ್ತಕಗಳ ಪ್ರಕಟಣೆ ಆಗಿವೆ.

 

ಗದ್ದಲದ ಸಂಭ್ರಮದ ಗದ್ದೆ ಕಣಗಾಲ ನನ್ನ ಬಾಲ್ಯ ನೆನಪಿಸಿತು. ರಾಜ್ ಕುಮಾರ್ ಮತ್ತು ರಾಗಿ ರೊಟ್ಟಿ ಪ್ರಬಂಧ ನನ್ನ ತಾಯಿಯ ನೆನಪು ಮಾಡಿಸಿತು. ಮಲ್ಲಿಕಾರ್ಜುನ್ ರವರಿಗೆ ರೊಟ್ಟಿ ಇಷ್ಟ ಇರಲಿಲ್ಲ .ಆದರೆ ನನಗೆ ನನ್ನಮ್ಮ ಮಾಡಿದ ರಾಗಿ ರೊಟ್ಟಿ ಈಗಲೂ ಇಷ್ಟ. ಗಂಧಸಾಲೆಯ ಘಮಲಿನಲ್ಲಿ ಬರುವ  ಭತ್ತದ ತಳಿಗಳಂತಹ ತಳಿಗಳ ಸಂರಕ್ಷಣೆ ಮಾಡುವುದು ನಮ್ಮ ಕರ್ತವ್ಯ ಆಗಬೇಕು. ಪೊರಕೆಗಳ ಬಗ್ಗೆ ಬರೆದ ಪ್ರಬಂಧವು ನಾನೂ ಒಮ್ಮೆ ಪ್ರಬಂಧ ಬರೆದಿದ್ದನ್ನು ನೆನಪಿಗೆ ತಂದಿತು.

ಪ್ರತಿಯೊಂದು ಪ್ರಬಂಧಕ್ಕೆ ಹೊಂದುವ ರೇಖಾಚಿತ್ರಗಳ ಉಲ್ಲೇಖ ಮಾಡಲೇಬೇಕು .ಜೊತೆಗೆ ಆಕರ್ಷಕ ಶೀರ್ಷಿಕೆಗೆ ತಕ್ಕಂತೆ ಮುಖಪುಟವಿದೆ.

ಒಟ್ಟಾರೆ ಹಳ್ಳಿಗಾಡಿನ ಸುತ್ತಾಟದ ಕಥೆಗಳನ್ನು ಓದಿ ಬೆಲ್ಲಂಪುಲ್ಲಕ್ಕರ ಚಾಕಚಕ್ಯತೆ, ಲೇಖಕರ ತಂದೆಯವರ ಬೈಯ್ಗಳವನ್ನು ಸವಿಯಲು ನೀವು ಬೆಲ್ಲಂ ಪುಲ್ಲಕ್ಕ ಓದಲೇಬೇಕು.


ಸಿಹಿಜೀವಿ

ಸಿ ಜಿ ವೆಂಕಟೇಶ್ವರ

ತುಮಕೂರು


11 May 2022

ಆರ್ಯ ವೀರ್ಯ .ಪುಸ್ತಕ ವಿಮರ್ಶೆ.


 


ವಿಮರ್ಶೆ ೩೪

ಆರ್ಯ ವೀರ್ಯ 


ಆರ್ಯ ವೀರ್ಯ ಪುಸ್ತಕದ ಲೇಖಕರಾದ ಕೆ ಎನ್ ಗಣೇಶಯ್ಯ ರವರು ಓದುಗರನ್ನು ಚಿಂತನೆಗೆ ಹಚ್ಚುವ ಕೃತಿಗಳನ್ನು ಬರೆಯುವುದರಲ್ಲಿ ಎತ್ತಿದ ಕೈ. 

ವೃತ್ತಿಯಿಂದ ಕೃಷಿ ವಿಜ್ಞಾನಿ, ಕೋಲಾರ ಜಿಲ್ಲೆಯವರು. 30 ವರ್ಷ ತಳಿ ಅಭಿವೃದ್ಧಿಯಲ್ಲಿ ತೊಡಗಿದ್ದವರು, ಪ್ರಾಣಿ, ಮತ್ತು ಸಸ್ಯಗಳ ವರ್ತನೆಗೆ ಮೂಲಭೂತವಾದ ಜೀವವಿಕಾಸದ ತತ್ವಗಳನ್ನು ಅನ್ವೇಷಿಸುವುದು ಇವರ ಮತ್ತೊಂದು ಸಂಶೋಧನಾಸಕ್ತಿ, ಭಾರತದ ಪ್ರಮುಖ ಜೀವ ವೈವಿಧ್ಯ ತಾಣಗಳಲ್ಲಿನ ಸಸ್ಯಗಳ ಮತ್ತು ದೇಶದ ಜೀವಸಂಪತ್ತಿನ ಬಗ್ಗೆ ಇವರು ತಯಾರಿಸಿರುವ ಮಾಹಿತಿ ಖಜಾನೆಯ ಸಿ.ಡಿ.ಗಳು ಮತ್ತು ಅಂತರ್ಜಾಲ ಒಂದು ಅಪೂರ್ವ ಹೆಜ್ಜೆ, ಇನ್ನೂರಕ್ಕೂ ಹೆಚ್ಚು ವೈಜ್ಞಾನಿಕ ಪ್ರಬಂಧಗಳು ಮತ್ತು ಆರು ವೈಜ್ಞಾನಿಕ ಪುಸ್ತಕಗಳ ಪ್ರಕಟಣೆ ಮಾಡಿರುವರು.


'ಶಾಲಭಂಜಿಕೆ' ಸಣ್ಣಕಥೆ ಮೊದಲ ಸೃಜನಶೀಲ ಬರವಣಿಗೆ, ಅದೇ ಹೆಸರಿನ ಸಂಕಲನವೂ ಪ್ರಕಟವಾಗಿದೆ. ವಿವಿಧ ಪತ್ರಿಕೆಗಳಲ್ಲಿ ಹಲವಾರು ಕಥೆಗಳು ಪ್ರಕಟವಾಗಿವೆ. 'ಕನಕ ಮುಸುಕು', 'ಕರಿಸಿರಿಯಾನ', 'ಕಪಿಲಿಪಿಸಾರ', 'ಚಿತಾದಂತ', 'ಏಳು ರೊಟ್ಟಿಗಳು', 'ಮೂಕ ಧಾತು', 'ಶಿಲಾಕುಲ ವಲಸೆ', 'ಬಳ್ಳಿಕಾಳ ಬಳ್ಳಿ' ಮತ್ತು 'ರಕ್ತ ಸಿಕ್ತ ರತ್ನ' ಇವು ಅವರ ಕಾದಂಬರಿಗಳು. 'ಶಾಲಭಂಜಿಕೆ', 'ಪದ್ಮಪಾಣಿ, 'ನೇಹಲ', 'ಸಿಗೀರಿಯಾ', 'ಕಲ್ಪವಸಿ', 'ಮಿಹಿರಾಕುಲ', 'ಪಂನಿ ತಾಂಡವ' ಮತ್ತು 'ಆರ್ಯ ವೀರ್ಯ' ಕಥಾಸಂಕಲನಗಳು: 'ಭಿನ್ನೋಟ', 'ವಿ-ಚಾರಣ', 'ಭಿನ್ನಬಿಂಬ' ಮತ್ತು 'ತಾರುಮಾರು' ಇವು ಅವರ ಲೇಖನಗಳ ಸಂಗ್ರಹ.

ಕರ್ನಾಟಕ ಸರಕಾರದ ಪರಿಸರ ಪ್ರಶಸ್ತಿ ಮತ್ತು ಕನ್ನಡ ಸಾಹಿತ್ಯ ಪರಿಷತ್ತಿನ : ದತ್ತಿ ಪ್ರಶಸ್ತಿ ಜೊತೆಗೆ ಹಲವಾರು ಪ್ರಶಸ್ತಿಗಳಿಗೆ ಇವರು ಭಾಜನರಾಗಿದ್ದಾರೆ.


ಪ್ರಸ್ತುತ ಕಥಾ ಸಂಕಲನದಲ್ಲಿ ಇರುವ 

ಚಿಂತನಾ ಬೊಗುಣಿ ಎಂಬ ಕಥೆಯಲ್ಲಿ

ಮಾಧವ ರಾವ್ ಮಗ ಮುರುಳಿ ಉತ್ತರ ಪ್ರದೇಶದ ಪ್ರವಾಸ ಹೋಗಿ ಬಂದಾಗಿನಿಂದ ಆದ ಅನಪೇಕ್ಷಿತ ವರ್ತನೆಗಳನ್ನು ಹಾಗೂ  ಬದಲಾವಣೆಗಳನ್ನು  ಗಮನಿಸುವ ತಂದೆ ಹಾಗೂ ತಂದೆಯ ಗೆಳೆಯರಾದ  ಶ್ರೀಧರ್ ರವರು  ಸಮಸ್ಯೆಯನ್ನು ಬಗೆಹರಿಸುವರೇ ಅಥವಾ ಸಮಸ್ಯೆಗಳನ್ನು ಸೃಷ್ಟಿ ಮಾಡಿದರೇ ಎಂಬುದೇ ಕಥೆಯ ಕುತೂಹಲಕರ ಅಂಶ .

ಈ ಕಥೆಯಲ್ಲಿ ಬರುವ ಕೆಲ ಸಂಭಾಷಣೆಗಳಲ್ಲಿ ಕೆಲವು ನಮ್ಮನ್ನು ಯೋಚಿಸುವಂತೆ ಮಾಡುತ್ತವೆ.

'ಯಾವುದೇ ಒಂದು ಚಿಂತನೆ ಮಾತ್ರವೇ ಪ್ರಬಲವಾದ ವ್ಯಕ್ತಿಯಾಗಿ ಬೆಳೆದು ನೆಲೆಯಾಗಲು  ಅದರ ನೆರಳಿನಲ್ಲಿ ಆಶ್ರಯ ಪಡೆಯುವ ಬುದ್ಧಿಜೀವಿಗಳನ್ನು ಹೊರಗೆಳೆಯದಿದ್ದರೆ ಸಮಾಜಕ್ಕೆ ಉಪಯುಕ್ತವಾಗಬಹುದಾದ ಇತರೆ ಜ್ಞಾನ ಸಸ್ಯಗಳ ಬೆಳವಣಿಗೆ ಕುಂಠಿತ ವಾಗುತ್ತದೆ ಎಂಬ ಸಂಶಯಾಸ್ಪದ ಕಾರಣಕ್ಕಾಗಿ ನಾವು ಅಂತಹ ಅಪಾಯಕಾರಿ ಬೆಳವಣಿಗೆಗಳನ್ನು ವಿರೋಧಿಸಬೇಕು ಎನ್ನುವುದು ನಮ್ಮ ಸಂಘದ ಗುರಿಯಾಗಿದ್ದಲ್ಲಿ ಅಂತಹ ಎಲ್ಲ ಬೆಳವಣಿಗೆಗಳನ್ನೂ ವಿರೋಧಿಸಬೇಕು ಅಲ್ಲವೇ? 'ದಾಸ ಕ್ಯಾಪಿಟಲ್' ಆಗಲಿ, ಲೋಹಿಯಾರ ತತ್ವಗಳಾಗಲಿ, ವಿವೇಕಾನಂದರ ಬೋಧನೆ ಗಳಾಗಲಿ, ಮಹಾತ್ಮ ಗಾಂಧಿಯವರ ತತ್ವಗಳಾಗಲಿ, ಹೀಗೆ ಯಾವುದೇ ವಿಚಾರ ಪ್ರಬಲ ಶಕ್ತಿಯಾಗಿ ಬೆಳೆದು ಆ ಕಾಲಘಟ್ಟದ ವೈಚಾರಿಕ ಮನಸ್ಸುಗಳನ್ನು ತಮ್ಮ ದಾಸರನ್ನಾಗಿಸಿಕೊಂಡಲ್ಲಿ ಆಗ ಸರ್ವತೋಮುಖ ಜ್ಞಾನವೃದ್ಧಿಗೆ ಅಡ್ಡಿಯಾಗುತ್ತದೆ. ಎನ್ನುವ ಅಂಶಗಳು ನಮ್ಮನ್ನು ಚಿಂತನೆಗೆ ಹಚ್ಚುತ್ತವೆ.


 ರುಂಡಗಂಡ ಎಂಬ ಕಥೆಯಲ್ಲಿ 

ನಂದನ್ ಅವರ ಮಗಳು ಸಂದ್ಯಾ ರಾಘವ್ ನನ್ನು ಮದುವೆಯಾಗಿ ,ನಂತರ ಸಂದ್ಯಾಳ ಕಾಲೇಜಿನ ಗೆಳೆಯ ಸಂತೋಷ್ ದೇಹಕ್ಕೆ ರಾಘವ್ ಮುಖ ಸೇರಿದ ಬಗ್ಗೆ ಸಂಧ್ಯಾ ತನಿಖಾದಿಕಾರಿಯಾಗಿ ,ಹಣ ವರ್ಗಾವಣೆಯಾದ ಬಗ್ಗೆ ಹಾಗೂ ರಾಘವ್ ನ ಮೋಸವನ್ನು , ಆಧಾರ್ ಕಾರ್ಡ್ ನ  ಅಧಾರದ ಮೇಲೆ ಚಾಕಚಕ್ಯತೆಯಿಂದ ಕಂಡುಹಿಡಿಯುವ ಕಥನ ಕುತೂಹಲಕಾರಿಯಾಗಿದೆ.

ಕಥೆಯ ಪಾತ್ರಧಾರಿ ಸಂಧ್ಯಾ ಹೇಳುವಂತೆ ,ಇಟಲಿಯ ಸೆರ್ಗಿಯೋ ಕನವರೋ ಎಂಬ ವೈದ್ಯ ವಿಜ್ಞಾನಿ ಹತ್ತು ವರ್ಷದ ಹಿಂದೆ, ಅಂದರೆ ಸುಮಾರು 2015 ರಿಂದ 2017ರ ಸಮಯದಲ್ಲಿ ಒಬ್ಬ ಚೀನೀ ವೈದ್ಯನೊಡನೆ ಸೇರಿ ಒಬ್ಬರ ಶಿರವನ್ನು ಮತ್ತೊಬ್ಬರ ದೇಹಕ್ಕೆ ಕಸಿಮಾಡುವ ತಮ್ಮ ಪ್ರಯತ್ನ ಫಲಕಾರಿಯಾಗಿದೆ ಎಂದು ಘೋಷಿಸಿದ್ದ. ಅದೇ ಸಮಯದಲ್ಲಿ ದೇಹವೆಲ್ಲ ಊನವಾಗಿದ್ದ, ಆದರೆ ಎಲ್ಲ ರೀತಿಯಲ್ಲೂ ಆರೋಗ್ಯಕರ ಶಿರವನ್ನು ಹೊಂದಿದ್ದ, ಅತ್ಯಂತ ಬುದ್ಧಿಶಾಲಿಯೂ ಆದ ಚೀನೀ ವ್ಯಕ್ತಿಯೊಬ್ಬ ಅಂತಹ ಶಸ್ತ್ರಚಿಕಿತ್ಸೆ ಸಾಧ್ಯವಾಗುವ ಹಾಗಿದ್ದರೆ ತಾನು ಒಂದು ದೇಹ ಪಡೆಯಲು ಸಿದ್ಧವೆಂದು ಹೇಳಿಕೊಂಡಿದ್ದ. ಅದಕ್ಕೆ, 'ಬೈನ್ ಡೆಡ್' ಆಗಿದ್ದ ರೋಗಿಗಳು ಸಿಕ್ಕಿದಲ್ಲಿ ತಾನು ಆ 29 ಶಸ್ತ್ರಚಿಕಿತ್ಸೆ ಮಾಡುವುದಾಗಿ ಇಟಲಿಯ ಈ ವೈದ್ಯ ಒಪ್ಪಿದ್ದ ಕೂಡಾ. ಇದರ ಬಗ್ಗೆ ಹಲವಾರು ವಿಜ್ಞಾನಿಗಳು ಮತ್ತು ವೈದ್ಯರು ಸಂಶಯ ವ್ಯಕ್ತಪಡಿಸಿದ್ದರೂ, ಇಲಿಗಳಲ್ಲಿ ಇದು ಸಾಧ್ಯ ಎಂದು ಈಗಾಗಲೇ ತೋರಿಸಲಾಗಿತ್ತು. ಪಲ್ಲವ್ ಭಾಗ ಅವರು ಕೊಟ್ಟ ವರದಿಯ ಪ್ರಕಾರ ಈ ಶಸ್ತ್ರಕ್ರಿಯೆ ಮಾನವರಲ್ಲಿಯೂ ನಡೆಯುತ್ತಿದ್ದು, ಹಲವಾರು ಅಂತಹ ವ್ಯಕ್ತಿಗಳು ಈಗಾಗಲೇ  ಶಸ್ತ್ರಚಿಕಿತ್ಸೆ ಗೆ ಒಳಗಾಗಿರುವ ಸಾಧ್ಯತೆಗಳ ಬೆನ್ನಟ್ಟುವ ಮೂಲಕ ಪತ್ತೇದಾರಿ ಕೆಲಸ ಮಾಡಿ ಅಪರಾಧಿಗಳ ಹಿಡಿಯುವ ಕಾರ್ಯ ಮಾಡಿದರು.


ಮತ್ತೊಂದು ಕಥೆ ಆರ್ಯ ವೀರ್ಯ ಓದಿದಾಗ ಮಾನವನ ವಂಶಧಾತುಗಳನ್ನು ಸಂಸ್ಕರಣಗೊಳಿಸಿ, ತಿದ್ದಿ, ಬದಲಾವಣೆ ಮೂಲಕ 'ಬುದ್ಧಿವಂತಿಕೆಯನ್ನು ಹೆಚ್ಚಿಸುವತ್ತ ಅಥವಾ ಆರೋಗ್ಯವನ್ನು ಉತ್ತಮ ಗೊಳಿಸುವತ್ತ ಅಥವಾ ಜೀವನವನ್ನು ಸುಗಮಗೊಳಿಸುವತ್ತ ನಡೆಯುತ್ತಿರುವ ಪ್ರಯತ್ನಗಳು ಇಂದು ನಿನ್ನೆಯವಲ್ಲ. ಈ ನಿಟ್ಟಿನಲ್ಲಿ ಒಂದು ಅಪರೂಪದ, ರಹಸ್ಯ ಯೋಜನೆಯನ್ನು ನಾಜಿ ಪ್ರಮುಖರು ಕೈಗೊಂಡಿದ್ದರೆಂಬ ಬಗ್ಗೆ ಹಲವು ಮೂಲಗಳಿಂದ ದೃಢಪಟ್ಟಿದೆ. ಅಂತಹ ಒಂದು ಯೋಜನೆಯ ಸುತ್ತ ಬೆಳೆದ ಕತೆಯೂ ಈ ಸಂಕಲನದಲ್ಲಿದೆ. ಈ ಕಾರ್ಯ ಸಾಧಿಸಲು ನಾಜಿಗಳು ಯಾವ ಮಟ್ಟಕ್ಕೂ ಇಳಿಯಬಲ್ಲರು ಎಂಬುದನ್ನು ಈ ಕಥೆಯಲ್ಲಿ ಚಿತ್ರ ಸಹಿತ ದಾಖಲೆ ಸಹಿತ ನೀಡಿದ್ದಾರೆ.

ಎಂದಿನಂತೆ ಕೆ ಎನ್ ಗಣೇಶಯ್ಯ ರವರ ಶೈಲಿಯಾಗಿ ಆಧಾರಗಳ ಉಲ್ಲೇಖ,ಪೂರಕ ಚಿತ್ರಗಳು ಸಂಶೋಧನಾ ಗುಣ ಹಾಗೂ

ಘಟನೆಗಳು ನಿರೂಪಣೆಯ ಚಾಕಚಕ್ಯತೆ ಈ ಕಥಾ ಸಂಕಲನದಲ್ಲಿಯೂ ಇದೆ .ಒಮ್ಮೆ ಓದಿ  ನಿಮಗೆ ವಿಶ್ವ ಪರ್ಯಟನೆ ಮಾಡಿದ, ವಿಜ್ಞಾನದ ಸಂಶೋಧನೆ ಮಾಡಿದ ಅನುಭವವಾಗುವುದರಲ್ಲಿ ಸಂದೇಹವಿಲ್ಲ..


ಸಿಹಿಜೀವಿ

 ಸಿ ಜಿ ವೆಂಕಟೇಶ್ವರ


10 May 2022

ಜಾಲಾರ ಹೂ ಪುಸ್ತಕ .ವಿಮರ್ಶೆ


 ವಿಮರ್ಶೆ ೩೩

ಜಾಲಾರ ಹೂ .


ಜಿ ವಿ ಆನಂದ ಮೂರ್ತಿ ರವರ ಜಾಲಾರ ಪ್ರಬಂಧಗಳನ್ನು ಓದಿದಾಗ ನಮ್ಮ ಹಳ್ಳಿಯ ಜೀವನ ನೆನಪುಗಳನ್ನು ಇವರ ಎಲ್ಲಾ ಪ್ರಬಂಧಗಳು ಕುತೂಹಲಕಾರಿ  ಹಾಗೂ ಓದಲು ಆಸಕ್ತಿಕರವಾಗಿವೆ.

ಜಾಲಾರ ಹೂವು,ಕೆರೆ ಕಟ್ಟೆ ಬಯಲಾಗಿ ಹೋಗುವಾಗ,

ಮಾಗಿಯ ದಿನಗಳು, ಪೂವಮ್ಮನ ಹೂತೋಟ,ನಾನ್ಯಾರಿಗಲ್ಲದವಳು,

ಅವ್ವ ಮತ್ತು ರಾಗಿರೊಟ್ಟಿ,ಕೇರಿಗೆ ಬಂದ ಯುಗಾದಿ,ಕವಿಯ ತೋಟದಲ್ಲಿ ಒಂದು ಯುಗಾದಿ,ಬೆಟ್ಟದ ದಾರಿಯಲ್ಲಿ,ತೊಗಲುಗೊಂಬೆಗಳೊಡನೆ ಒಂದು ದಿನ,ಮುಂತಾದ ಪ್ರಬಂಧಗಳು ನನಗೆ ಬಹಳ ಹಿಡಿಸಿದವು.

ಕನ್ನಡದಲ್ಲಿ ಅಪರೂಪವಾಗುತ್ತಿರುವ ಲಲಿತ ಪ್ರಬಂಧಗಳೆಂಬ ಪ್ರಕಾರಕ್ಕೆ ಉತ್ತಮ ಸೇರ್ಪಡೆಯಾಗಿ ರೂಪುಗೊಂಡಿವೆ. ಬೌದ್ಧಿಕತೆಯ ಭಾರವಿಲ್ಲದೆಯೂ ಚಿಂತನೆಯನ್ನು ಪ್ರಚೋದಿಸುವ ಗುಣವನ್ನು ಹೊಂದಿರುವ ಆನಂದಮೂರ್ತಿಯವರ ಬರವಣಿಗೆ ಓದುಗರ ನೆನಪನ್ನು ಉದ್ದೀಪಿಸಿ ಜೀವನೋತ್ಸಾಹವನ್ನು ಮೂಡಿಸುತ್ತದೆ. ಇಲ್ಲಿನ ಎಲ್ಲ ಪ್ರಬಂಧಗಳಲ್ಲಿ ಆತ್ಮಕಥೆಯ ಆಪ್ತತೆ ಇದೆ. ಕೇವಲ ವ್ಯಕ್ತಿಗಳ ಕಥನವಾಗದೆ ಬದಲಾಗಿರುವ ಜೀವನಕ್ರಮದ ಬಗ್ಗೆ, ಕಳೆದು ಹೋಗುತ್ತಿರುವ ಹಳ್ಳಿಯ ಬದುಕಿನ ಒಟ್ಟಂದದ ಬಗ್ಗೆ ವಿಷಾದದ ಅಲೆಯನ್ನು ಎಬ್ಬಿಸುವಷ್ಟು ಶಕ್ತವಾಗಿಯೂ ಇದೆ. ಅನಂದಮೂರ್ತಿಯವರ ಬರವಣಿಗೆಯಲ್ಲಿ ಬೌದ್ಧಿಕತೆಯ ಸೋಗು ಇಲ್ಲ, ಬದಲಾಗುತ್ತಿರುವ ಜಗತ್ತಿನ ಬಗ್ಗೆ, ಕಳೆದು ಹೋಗುತ್ತಿರುವ ಬದುಕಿನ ಚೆಲುವಿನ ಬಗ್ಗೆ ನೆನಪಗಳು ಉದ್ದೀಪಿಸುವ 'ಇದು ಸರಿಯಲ್ಲ' ಎಂಬ ಭಾವವನ್ನು ಓದುಗರಿಗೆ ಆಪ್ತವಾಗಿ ಧಾಟಿಸುವ ಗೆಳೆಯರ ಮಾತಿನ ಗುಣ ಇದೆ. ನಮ್ಮನ್ನೆಲ್ಲ ಆವರಿಸಿಕೊಂಡಿರುವ ಆಧುನಿಕತೆಯಿಂದ ನಾವು ಪಡೆದದ್ದೆಷ್ಟು, ಕಳಕೊಂಡದ್ದೆಷ್ಟು ಅನ್ನುವ ಪರಿಶೀಲನೆಗೆ ತೊಡಗಿಸುವಂತಿದೆ.


ಈ ಪುಸ್ತಕಕ್ಕೆ ಸುಂದರವಾದ ಮುನ್ನುಡಿ ಬರೆದ ಓ ಎಲ್ ನಾಗಭೂಷಣ ಸ್ವಾಮಿ ರವರು ಪ್ರಬಂಧ ಸಂಕಲನದ ಬಗ್ಗೆ ಸಕಾರಾತ್ಮಕವಾಗಿ ಬರೆದಿರುವರು.

ಇಲ್ಲಿನ ಒಂದೊಂದು ಪ್ರಬಂಧದಲ್ಲೂ ಲೇಖಕರು ಮಾತ್ರವಲ್ಲದೆ ಅವರು ತಮ್ಮ ಬಾಲ್ಯದಲ್ಲಿ ಕಂಡ, ಅವರ ಮನಸ್ಸಿನಲ್ಲಿ ಉಳಿದ ಒಬ್ಬಿಬ್ಬರು ವ್ಯಕ್ತಿಗಳ ಚಿತ್ರಣವೂ ಬೆರೆತಿದೆ. 'ಜಾಲಾರ ಹೂವು' ಪ್ರಬಂಧದಲ್ಲಿ ಬರುವ ದಾಸಿ, ಸುಕಾಲಿಗರು, 'ಜಾತ್ರೆ'ಯಲ್ಲಿ ಸೇರುವ ಜನಸಂದಣಿಯ ಚಿತ್ರಣ, ಕೆರೆ ಕಟ್ಟೆ ಬಯಲಾಗಿ' ಪ್ರಬಂಧದಲ್ಲಿ ಬರುವ ಗಂಗಣ್ಣಮ್ಮ, 'ಅವ್ವ ಮತ್ತು ರಾಗಿರೊಟ್ಟಿ'ಯ ಆವ್ವ ಹೀಗೆ, ಹಾಗಾಗಿ ಇಲ್ಲಿನ ಬರವಣಿಗೆ ಕೇವಲ ಖಾಸಗಿ ನೆನಪಷ್ಟೇ ಆಗಿ ಉಳಿಯದೆ ಇಡೀ ಊರಿನ ಕಥೆಯಾಗುವ ಗುಣ ಪಡೆದುಕೊಂಡಿವೆ,

ಆನಂದಮೂರ್ತಿಯವರು 'ನನ್ನ ಬಾಲ್ಯದ ದಿನಗಳಲ್ಲಿ ಅರಿವಿಗೆ ಹಾಕಿದ ಲೌಕಿಕದ ಎಲ್ಲ ಅನುಭವಗಳ ಕೈಸೆರೆಯಾಗಿದ್ದೇನೆ. ಅವುಗಳಿಂದ ಬಿಡುಗಡೆ ಹೊಂದುವುದೆಂದರೆ, ಮತ್ತೊಮ್ಮೆ ತಾಯಿಕರುಳಿನ ಸಂಬಂಧವನ್ನು ಹರಿದುಕೊಂಡು ಬಂದಂತೆ, ಇಂದಿನ ಯಾವ ಅನುಭವಗಳೂ ನನ್ನ ಎಳವೆಯ ದಿನಗಳ ಮುಗ್ಧ ಸೌಂದರ್ಯವನ್ನು, ಅದು ಕಲಿಸಿದ ಜೀವನದ ಪಾಠಗಳನ್ನು ಕಸಿದುಕೊಳ್ಳಲಾರವು. ಅಷ್ಟರಮಟ್ಟಿಗೆ ನಾನು ಇಂದಿನ ಅನುಭವಗಳ

ಮೇಲೆ ಜಯ ಸಾಧಿಸಿದ್ದೇನೆ' ಎನ್ನುತ್ತಾರೆ ಅವ್ರ ಮತ್ತು ರಾಗಿರೊಟ್ಟಿ, ಪ್ರಬಂಧದಲ್ಲಿ 'ತರ್ಕವಿಲ್ಲದ ಎಳವೆಯ ದಿನಗಳಲ್ಲಿ ನನ್ನ ತಿಳಿವಿಗೆ ಬಂದ ಸರಳ ವಿಚಾರಗಳಿವು! ನಮ್ಮ ಕುಟುಂಬವು ದಶಕಗಳಷ್ಟು ಕಾಲ ಸವೆಸಿದ ಹಾದಿಯನ್ನು ಹಿಂದಿರುಗಿ ನೋಡುತ್ತಾ, ಕಳೆದ ದಿನಗಳ ಅನುಭವಗಳನ್ನೆಲ್ಲ ಹೀಗೆ ಕವಳಿಗೆಯಂತೆ ಜೋಡಿಸಿಕೊಂಡು ನಿಮ್ಮ ಮುಂದಿಟ್ಟಿದ್ದೇನೆ. ಎನ್ನುತ್ತಾರೆ 'ನಾನ್ಯಾರಿಗಲ್ಲದವಳು' ಪ್ರಬಂಧದಲ್ಲಿ, ಈ ಎರಡು ಮಾತುಗಳು ಅವರ ಬರವಣಿಗೆಯ ಸ್ವರೂಪವನ್ನು ಸಮರ್ಪಕವಾಗಿ ವಿವರಿಸುತ್ತವೆ.

'ಹೂ ಪೇಟೆ' ಎಂಬಂಥ ಪದಗಳ ಪ್ರಯೋಗದಿಂದ ಹಿಡಿದು ಕೆರೆಯ ಅಲೆಗಳ ವರ್ಣನೆ 'ಮಾಗಿಯ ದಿನಗಳಲ್ಲಿ ನಮ್ಮ ಮುಖ, ತುಟಿ, ಅಂಗಾಲು ಇವುಗಳೆಲ್ಲ ಬಿರಿದು, ಉಂಡಿಗೆ ಹಾಕಿದ ಕಲ್ಲಂಗಡಿ ಹಣ್ಣಿನಂತೆ ಕಾಣುತ್ತಿದ್ದವು. ವತ್ತಿನಂಟೆ ಎದ್ದು ಮುಖಕ್ಕೆ ತಣ್ಣೀರು ಸೋಕಿಸಿದ. ಪ್ರಾಣವೇ ಹೋದಂತಾಗುತ್ತಿತ್ತು' ಅನ್ನುವ ಚಿತ್ರಣ, 'ಮಳೆ ಮತ್ತು ಬಿಸಿಲು ಪರಸ್ಪರ ಕೈ ಹಿಡಿದು ಬರುತ್ತಾ, ಹೋಗುತ್ತಾ ಆಟವಾಡುತ್ತಿದ್ದವು' 'ಎತ್ತ ನೋಡಿದರೂ ಸುತ್ತುವರೆದಿರುವ ಹೆಸರು ಕೋಟೆಯಂತಹ ಕಾಡು' ಅನ್ನುವಂಥ ನಿರೂಪಣೆಗಳು, ಸಂತೆಯ ವಿವರಗಳನ್ನು ಅವರು ಕಟ್ಟಿಕೊಡುವ ರೀತಿ ಇವೆಲ್ಲ ಆನಂದಮೂರ್ತಿಯವರಲ್ಲಿರುವ ಕವಿ ವ್ಯಕ್ತಿತ್ವದ ನಿದರ್ಶನಗಳಂತಿವೆ. ಶೇರು ಹರಿದ ನಂತರ ಜಾತ್ರೆಯು "ಕುಯಿಲು ಮಾಡಿದ ಹೊಲದಂತೆ ಬಣಗುಡುತ್ತಿರುತ್ತದೆ' ಎಂದು ಪುಟ್ಟ ವಾಕ್ಯದಲ್ಲಿ ಭಾವಪೂರ್ಣವಾಗಿ ವಿವರಿಸುವ ಆನಂದಮೂರ್ತಿಯವರು ಸಂತೆಯನ್ನು ವಿವರವಾಗಿ ವರ್ಣಿಸಲೂ ಬಲ್ಲರು, ಅವರ ಸಮತೆಯ ವರ್ಣನೆ, ಮನಸ್ಸನ್ನು ಸೆಳೆಯುತ್ತದೆ:

'ಸಂತೆಯೊಳಗೆ ನೀವೊಂದು ಸುತ್ತು ಕಣ್ಣಾಡಿಸುತ್ತಾ ಹೊರಟರೆ ಕಾಣುವ ಒಂದೊಂದೂ ಚಿತ್ರಗಳೂ ಒಂದೊಂದು ಪುಟ್ಟ ದ್ವೀಪಗಳಂತೆ ಆಕರ್ಷಿಸುತ್ತವೆ. ಒಂದೊಂದೂ ಒಂದು ಬಣ್ಣ ವಿನ್ಯಾಸ ಅಪರಿಮಿತ ಪರಿಮಳದ, ಬಿಡಿ ಬಿಡಿಯಾದ ಜೀವ ಇರುವ ತುಣುಕುಗಳೇ! ಇವುಗಳ ನಡುವೆ ಕಂಡೂ ಕಾಣದಂತಹ ಒಂದು ಒಳಹೆಣ್ಣಿಗೆ ಇತ್ತು. ಇವೆಲ್ಲವೂ ಕಲಾತ್ಮಕವಾಗಿ ಹೆಣೆದ ಕೌದಿಯಂತೆ ಕಣ್ಣಿಗೆ ಕಟ್ಟುತ್ತದೆ.

'ಸಂತ ಮೈದಾನದ ಒಂದು ಮೋಟುಮರದ ಕೆಳಗೆ ಚೌರ ಮಾಡುತ್ತಾ ಕುಳಿತಿರುವ ರಂಗಪ್ಪ, ಅದೇ ಸಾಲಿನಲ್ಲಿ ಕೋಳಿ ಮಾರುವ ಪೈಕಿಯವರು, ಅಲ್ಲಿನ ರಣಬಿಸಿಲಿಗೆ ಹೇಗೋ ತಲೆಮರೆಸಿಕೊಂಡು ಉಳಿದಿದ್ದ ತುಸು ನೆರಳಿನಲ್ಲಿ ಕುರಿ-ಮೇಕೆಗಳನ್ನು ಬಿಟ್ಟುಕೊಂಡು, ಕೈಯಲ್ಲಿ ಆಗಸ ಸೊಪ್ಪನ್ನು ಹಿಡಿದುಕೊಂಡು ನಿಂತಿರುತ್ತಿದ್ದ ಗೊಲ್ಲರು, ಅವರ ಕುರಿ ಪಟ್ಟಿಗಳನ್ನು ಎಳೆದಾಡುತ್ತಾ ಚೌಕಾಸಿ ಮಾಡುತ್ತಿದ್ದ ಕಟುಕರು, ಇತ್ತ ಇನ್ನೊಂದು ಸಾಲಿನಲ್ಲಿ ಸೀಗಡಿ-ಕರಿಮೀನು ಮಾರುವ ಜಮಾಲ್ ಸಾಬರು, ಅವರಿಂದ ತುಸು ದೂರಕ್ಕೆ ಮಡಕೆ ಕುಡಿಕೆ, ಬೋಗಣಿ, ಹರಿವೆ, ಮಗೆ, ಬಾಧ(ಗವಾಕ್ಷಿ), ಬಾನಿ, ಎಲೆ ಅಂಬುಗಳಿಗೆ ನೀರು ಹುಯ್ಯಲು ಬಳಸುವ ಗುಂಬಗಳು ಮತ್ತು ಮುಸುರಕೂನಿಗಳನ್ನು ತಮ್ಮ ಒಂಟೆತ್ತಿನ ಗಾಡಿಗಳ ಮುಂದೆ ಹರಡಿಕೊಂಡು ಕುಳಿತಿರುತ್ತಿದ್ದ ಕುಂಬಾರರು, ಸೀಗಡಿ-ಕರಿಮೀನು ಮಾರುವವರ ಹಿಂಭಾಗದಲ್ಲಿ ಎತ್ತುಗಳಿಗೆ ಲಯಬದ್ಧವಾಗಿ ಲಾಳ ಕಟ್ಟುತ್ತಿದ್ದ ಸಾಬರು, ಅವರ ಒತ್ತಿನಲ್ಲೇ

ದನಗಳಿಗೆ ಕೊಂದರೆಯುತ್ತಿದ್ದ. ದಕ್ಕೇರು. ಇವರುಗಳ ಆಜುಬಾಜಿನಲ್ಲಿ ಹಳೆ ಕೆರಗಳಿಗೆ ಉಂಗುಷ್ಟ ಹಾಕುತ್ತಲೋ ಅಥವಾ ಅಟ್ಟೆಗೆ ಮಳೆಹೊಡೆಯುವಲ್ಲಿ ಧ್ಯಾನಾಸಕ್ತರಾಗಿರುತ್ತಿದ್ದ ಮೆಟ್ಟು ಹೊಲೆಯುವವರು. ಇಡೀ ಸಮಾಜವನ್ನೇ ಮೊರೆಯುವ ನೂರೆಂಟು ಜಾತಿಯಿಂದ ಬಂದ

ಹೋಗುತ್ತದೆ.' ಈ ವರ್ಣನೆಯನ್ನು ಓದುತ್ತಾ ಮಾಸ್ತಿಯವರ ಕಥೆಯೊಂದರಲ್ಲಿ ಸಂತೆ ಮುಗಿದ ಮೇಲೆ ಮನಸ್ಸಿನಲ್ಲಿ ಮೂಡಿಕೊಳ್ಳುವ ವರ್ಣನೆ ಬಂದಿರುವುದು

ಕೇವಲ ಚಲುವಾದ: ನೆನಪಿನ ಚಿತ್ರಗಳಷ್ಟೇ ಆಗಿದ್ದಿದ್ದರೆ, ಈ ಪ್ರಬಂಧಗಳು ಯಶಸ್ಸು ಸೀಮಿತವಾಗುತ್ತಿತ್ತು. ಚಾಲಾರದಂಥ ಹೂವು ಜಾನಪದದಲ್ಲಿ ಉಳಿದಿರುವ ಹೇಳುತ್ತಾರೆ. ಹಳ್ಳಿಯ ಮಗು ಪಾಡಿಗೆ ಸಂತೆಯಲ್ಲಿ ಸೊಪ್ಪು ಮಾರಲು ಹೋಗಲೇಬೇಕಾದ ಶಾಲೆಯ ಗೆಳೆಯರನ್ನು, ಮೇಷ್ಟರನ್ನು ಕಂಡು ಅವಮಾನ, ನಾಚಿಕೆಗಳಿಂದ ಕುಗ್ಗಿ ಹೋಗುವುದನ್ನು ಹೇಳುತ್ತ, ಆಧುನಿಕತೆಯನ್ನು ತರುವ ಶಿಕ್ಷಣ ಬೇರು ಬಿಟ್ಟಿರುವ ಮಗುವಿನಲ್ಲಿ ಸೃಷ್ಟಿಸುವ ಭಾವಗಳನ್ನು ಬಯಲಾಗಿರುವುದನ್ನು ಕಣ್ಣಿಗೆ ಕಟ್ಟುವಂತೆ ವಿವರಿಸುತ್ತ ಆಧುನೀಕರಣಗಳು ನಮ್ಮ ಮೇಲೆ ಪ್ರಭಾವಗಳ ಬಗ್ಗೆ ವಿಷಾದ ಮೂಡುವಂತೆ ಮಾಡುತ್ತಾರೆ. ಮಾಗಿಯ ಕಾಲದಲ್ಲಿ ರೊಪ್ಪದ ಸಣ್ಣತಿಮ್ಮಕ್ಕ ಆಗಸಗಿತ್ತಿಯು ಕುಲವನ್ನು ಉಳಿಸಿದ ಕಥೆಯಂಥ ಪ್ರಸಂಗಗಳಲ್ಲಿ ವರ್ಗವೈಷಮ್ಯ, ಜಾತಿಗಳ ಕಟ್ಟುಪಾಡುಗಳ ಬಾಳುವಿಕೆಯ ಗಟ್ಟಿ ನಮ್ಮ ಗ್ರಾಮಗಳ ಇಂದಿಗೂ ಉಸಿರಾಡುತ್ತಿದೆ' ಎನ್ನುತ್ತಾರೆ. ಇವೆಲ್ಲವೂ ನೆನಪಿನಿಂದ ಮೂಡುವ ಆಪ್ತವಾಗುತ್ತವೆ.

“ಕೇರಿಗೆ ಬಂದ 'ಯುಗಾದಿ' ಪ್ರಬಂಧದ ಕೊನೆಯಲ್ಲಿ ಎಲ್ಲಿ ಹೋದವೋ ಆ ಕಾಲ ಎಂಬ ಬರುತ್ತದೆ. ಇದು ನೆನಪಿನ ಹಳಹಳಿಕೆಯಾಗಿ ಕಾಣುವುದಷ್ಟೇ ಅಲ್ಲದೆ ನಾವೆಲ್ಲ ಒಪ್ಪಿಕೊಂಡಿರುವ ಮರುಕವಿಲ್ಲದ ಅಭಿವೃದ್ಧಿಯ ಕಲ್ಪನೆ ಬದುಕಿನ ಕ್ರಮಗಳನ್ನೆಲ್ಲ ನಿರ್ದಯವಾಗಿ ಅಳಿಸಿಬಿಡುತ್ತಿರುವುದರ ವ್ಯಾಖ್ಯಾನದಂತೆಯೂ ಕೇಳುತ್ತದೆ. ಅಭಿವೃದ್ಧಿಯನ್ನು ಮಾತ್ರ ಮುಖ್ಯವೆಂದು ಭ್ರಮಿಸುವುದಕ್ಕಿಂತ ವೈವಿಧ್ಯಮಯವಾದ ಬದುಕಿನಲ್ಲಿ ಸಂತೋಷವನ್ನೂ ಹೇಗೆ ಅನ್ನುವ, ಅದು ಎಂಬ ಆತಂಕವನ್ನೂ ಓದುಗರಲ್ಲಿ ಮೂಡಿಸುತ್ತದೆ.

ಕಥೆಗಳಾಗಿ ಹಿಗ್ಗಬಹುದಾದ, ಕಾದಂಬರಿಯಾಗಿ ವಿಸ್ತರಿಸಿಕೊಳ್ಳಬಹುದಾದ ಬೀಜಗಳು ಪ್ರಬಂಧಗಳಲ್ಲಿವೆ. ಆನಂದಮೂರ್ತಿಯವರು ಮತ್ತಷ್ಟು ಬರೆಯಲಿ ಎಂಬ ಆಸೆಯನ್ನು ಹುಟ್ಟಿಸುವಂತಿವೆ.

ಬನ್ನಿ ಜಾಲಾರ ಪುಸ್ತಕ ಓದುತ್ತಾ ಜಾಲಾರಾ ಸುಮದ ಘಮವನ್ನು ಆಘ್ರಾಣಿಸುತ್ತಾ ನಮ್ಮ ಬಾಲ್ಯ ಮತ್ತು ಹಳ್ಳಿಯ ಜೀವನದ ನೆನಪುಗಳೊಂದಿಗೆ ಮತ್ತೊಮ್ಮೆ ವಿಹರಿಸೋಣ.


ಸಿಹಿಜೀವಿ

ಸಿ ಜಿ ವೆಂಕಟೇಶ್ವರ

ತುಮಕೂರು



09 May 2022

ನನ್ನ ಪರಿಚಯ.ಅಗ್ರಹಾರ ಪ್ರಶಾಂತ್ ರವರಿಂದ


 


ಪರಿಚಯ ಶುದ್ಧ ಸಾಹಿತ್ಯ ಬಳಗ

ದಿನಾಂಕ ೦೯/೦೫/೨೦೨೨ ಸೋಮವಾರ

*ನಾವು - ನಮ್ಮವರು* ಪರಿಚಯ ಮಾಲಿಕೆ ೧

ಬಹುಮುಖ ಪ್ರತಿಭೆ - ಸಿ ಜಿ ವೆಂಕಟೇಶ್ವರ್

ನಾವು ಇಂದಿನ ಶುಭ ಸೋಮವಾರದಂದು *ನಾವು - ನಮ್ಮವರು* ಮಾಲಿಕೆಯಲ್ಲಿ  *ಸಿಹಿಜೀವಿ* ಯೆಂದೇ ಮನೆಮಾತಾಗಿರುವ ಬಹುಮುಖ ಪ್ರತಿಭೆಯ ಶಿಕ್ಷಕರೂ, ಕವಿಗಳೂ ಮತ್ತು ಕಲಾವಿದರಾಗಿರುವ ಸಿ ಜಿ ವೆಂಕಟೇಶ್ವರ್ ರವರನ್ನು ಪರಿಚಯ ಮಾಡಿಕೊಡುತ್ತಿದ್ದೇವೆ.
   *ಆಡು ಮುಟ್ಟದ ಸೊಪ್ಪಿಲ್ಲ, ಹಾಗೆಯೇ ಸಿಹಿ ಜೀವಿಯಿರದ ಕ್ಷೇತ್ರವಿಲ್ಲ ಎಂಬ ನುಡಿಗೆ ಸರಿಹೊಂದುವಂತಿರುವ ಶ್ರೀಯುತರು ಕೀರ್ತಿಶೇಷ ಗೋವಿಂದಪ್ಪ ಮತ್ತು ಶ್ರೀದೇವಮ್ಮರವರ ಸುಪುತ್ರರಾಗಿ ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ತಾಲ್ಲೂಕಿನ ಚೌಡಗೊಂಡನಹಳ್ಳಿಯಲ್ಲಿ ಜನಿಸಿದರು. ಇವರ ವಿದ್ಯಾಭ್ಯಾಸವು ಚೌಡಗೊಂಡನಹಳ್ಳಿ, ಉಪ್ಪರಿಗೇನಹಳ್ಳಿ, ಯರಬಳ್ಳಿ, ಹಿರಿಯೂರು, ಮೈಸೂರುಗಳಲ್ಲಿ ನಡೆಯಿತು. ರಾಜ್ಯಶಾಸ್ತ್ರದಲ್ಲಿ ಮತ್ತು ಅರ್ಥಶಾಸ್ತ್ರದಲ್ಲಿ ಎಂ ಎ ಪದವಿಯನ್ನು ಪಡೆದಿರುವ ಶ್ರೀಯುತರು ಕಥೆ, ಗಜಲ್, ಹನಿಗವನ, ಶಾಯರಿ, ಪರ್ದ್ ಬರೆಯುವುದನ್ನೇ ಮುಖ್ಯ ಹವ್ಯಾಸವಾಗಿ ಬೆಳಿಸಿಕೊಂಡು ಸುಮಾರು ಹತ್ತಕ್ಕೂ ಅಧಿಕ ಕವನ ಮತ್ತು ಲೇಖನಗಳನ್ನು ಒಳಗೊಂಡ ಪುಸ್ತಕಗಳು ಲೋಕಾರ್ಪಣೆಯಾಗಿರುವುದು ತುಂಬಾ ಸಂತೋಷಕರವಾದ ವಿಚಾರವಾಗಿದೆ. ಶ್ರೀಯುತರ ಲೇಖನಗಳು  ನಾಡಿನ ಎಲ್ಲಾ ನಿಯತಕಾಲಿಕಗಳಲ್ಲಿ ಪ್ರಕಟವಾಗಿವೆ. ಪೌರಾಣಿಕ ನಾಟಕಗಳಲ್ಲಿ ಅಭಿನಯಿಸುವ ಆಸಕ್ತಿಯನ್ನು ಹೊಂದಿರುವ ಇವರು ರಾಜ್ಯ ಮಟ್ಟದ ಕವಿಗೋಷ್ಠಿಯಲ್ಲಿ ಕವನ ವಾಚನ ಮಾಡಿರುತ್ತಾರೆ. ಜೊತೆಗೆ ವೃತ್ತಿಗೆ ಸಂಬಂಧಿಸಿದಂತೆ ರಾಜ್ಯ ಮತ್ತು ಜಿಲ್ಲಾ ಮಟ್ಟದ ಸಮಾಜವಿಜ್ಞಾನ ಶಿಕ್ಷಕರ ಸಂಪನ್ಮೂಲ ವ್ಯಕ್ತಿಯಾಗಿ ಸೇವೆ ಸಲ್ಲಿಸುತ್ತಾ ಪರಿಸರಕ್ಕೆ ಸಂಬಂಧಿಸಿದಂತೆ ರಾಷ್ಟ್ರಮಟ್ಟದ ಕಾರ್ಯಾಗಾರಗಳಲ್ಲಿ ಪಾಲ್ಗೊಂಡಿದ್ದಾರೆ. ಸಿಹಿಜೀವಿಯವರು ಎಲ್ಲದಕ್ಕಿಂತ ಹೆಚ್ಚಾಗಿ ಹವ್ಯಾಸಿ ಹಾಡುಗಾರ ಮಾತ್ರವಲ್ಲ, ಉತ್ತಮ ಛಾಯಾಚಿತ್ರಗಾರ ಮತ್ತು ಬ್ಲಾಗ್ ಸಹ ಆಗಿರುವುದು ಹೆಮ್ಮೆಯ ವಿಚಾರವಾಗಿದೆ. ಇವರ ಬ್ಲಾಗ್ ನ್ನು ಜಗತ್ತಿನಾದ್ಯಂತ ಸುಮಾರು ಎರಡೂವರೆ ಲಕ್ಷಕ್ಕೂ ಅಧಿಕ ಜನರು ಓದುತ್ತಿರುವುದು ಶ್ಲಾಘನೀಯ ವಿಚಾರವಾಗಿದೆ.
        ಶ್ರೀಯುತರ *ಸಾಲು ದೀಪಾವಳಿ, ಸಿಹಿಜೀವಿಯ ಗಜಲ್, ಶಾಲಾ ಪ್ರಬಂಧ ಮತ್ತು ಪತ್ರ ಲೇಖನ, ನನ್ನಮ್ಮ ನಮ್ಮೂರಿನ ಫ್ಲಾರೆನ್ಸ ನೈಟಿಂಗೇಲ್ ಲಲಿತ ಪ್ರಬಂಧ, ರಂಗಣ್ಣನ ಗುಡಿಸಲು ಇವಿಷ್ಟು ಕೃತಿಗಳು ಲೋಕಾರ್ಪಣೆ ಗೊಂಡು ಓದುಗರ ಕೈ ಸೇರಿ ಪ್ರಶಂಸೆಗೆ ಪಾತ್ರವಾಗಿವೆ.
    ಇನ್ನು ಹೊರಬರಲು ಕಾಯ್ದು ಕುಳಿತಿರುವ ಕೃತಿಗಳೆಂದರೆ *ಉದಕದೊಳಗಿನ ಕಿಚ್ಚು*, *ಶಿಕ್ಷಣವೇ ಶಕ್ತಿ* , *ವಿದ್ಯಾರ್ಥಿಗಳಿಗಾಗಿ* *ಸಿಹಿಜೀವಿಯ ಹನಿಗಳು*, *ಬಹುಮುಖ*
   ಸಿ. ಜಿ. ವೆಂ ರವರು *ತಾಲ್ಲೂಕು ಮಟ್ಟದ ಕವಿಗೋಷ್ಠಿ,*, ಕವಿಬಳಗ, ಹನಿ ಹನಿ ಇಬ್ಬನಿ ಬಳಗ, ಸಾಧನಕೇರಿ ಬಳಗ, ಸಾಹಿತ್ಯ ಬಳಗ ಚಿಂತಾಮಣಿ, ಮುಂತಾದವರು ಆಯೋಜಿಸಿದ್ದ  *ರಾಜ್ಯ ಮಟ್ಟದ ಕವಿಗೋಷ್ಠಿ*, ತಾಲ್ಲೂಕು ಸಾಹಿತ್ಯ ಪರಿಷತ್ ಗೌರಿಬಿದನೂರು ಮುಂತಾದ ಕವಿಗೋಷ್ಠಿಯಲ್ಲಿ ಭಾಗವಹಿಸಿ ತಮ್ಮ ಕವನಗಳನ್ನು ವಾಚಿಸಿ ಅಪಾರ ಜನಮನ್ನಣೆಯನ್ನು ಗಳಿಸಿಕೊಂಡಿದ್ದಾರೆ.
     ಈ ಸಾಧಕರಿಗೆ ರಾಜ್ಯ ಮಟ್ಟದ *ಕಾವ್ಯ ಚಿಂತಾಮಣಿ*, ಜಿಲ್ಲಾ ಮಟ್ಟದ *ಅತ್ಯುತ್ತಮ ಶಿಕ್ಷಕ ಪ್ರಶಸ್ತಿ*, ಕೇಂದ್ರ ಸಾಹಿತ್ಯ ವೇದಿಕೆಯಿಂದ ರಾಜ್ಯ ಮಟ್ಟದ ಸಂಘಟನಾ ಚತುರ*, ರೋಟರಿ ಕ್ಲಬ್ ನಿಂದ ನೇಷನ್ ಬಿಲ್ಡರ್*  ಪ್ರಶಸ್ತಿ ಮುಂತಾದವು ಸಂದಿವೆ.

ಇನ್ನು ಸನ್ಮಾನದ ವಿಚಾರಕ್ಕೆ ಬಂದರಂತೂ ಅಪಾರ ಸಂಖ್ಯೆಯ ಗೌರವ ಸನ್ಮಾನಗಳು ಶ್ರೀಯುತರನ್ನು ಅರಸಿ ಬಂದಿವೆ, ಪ್ರಮುಖವಾದವುಗಳೆಂದರೆ *ಬಿ ಎಂ ಕೆ ಸಿ ಕಬ್ಬಡಿ ಕ್ಲಬ್* ಗೌರೀಬಿದನೂರು, *ಸಾಹಿತ್ಯ ಪರಿಷತ್* ಗೌರಿಬಿದನೂರು, *ಲಯನ್ಸ್ ಕ್ಲಬ್* ಗೌರಿಬಿದನೂರು, *ಶಾರದಾ ದೇವಿ ರಾಮಕೃಷ್ಣ ಶಾಲೆ* ಗೌರಿಬಿದನೂರು, *ಬಿಜಿಎಸ್ ಶಾಲೆ ಅಲೀಪುರ*, *ಪಾಂಚಜನ್ಯ ಟ್ರಸ್ಟ್ ಗೌರಿಬಿದನೂರು*, ಸಿದ್ಧ ಗಂಗಾ ಮಠಾಧೀಶರಾದ ಶ್ರೀ ಸಿದ್ಧಲಿಂಗ ಮಹಾಸ್ವಾಮೀಜಿಯವರಿಂದ ಶ್ರೀಯುತರ ಸಾಧನೆಗೆ ಗೌರವ ಸನ್ಮಾನಗಳು ಸಂದಿವೆ ಎಂದು ಹೇಳಲು ತುಂಬಾ ಹೆಮ್ಮೆ ಎನಿಸುತ್ತದೆ.
     ಶ್ರೀಯುತರ ಶೈಕ್ಷಣಿಕ ಸಾಧನೆಯ ಕಡೆಗೆ ಗಮನ ಹರಿಸಿದಾಗ  ಮೇಲೆ ತಿಳಿಸಿದಂತೆ ಸಮಾಜ ವಿಜ್ಞಾನ ಸಂಪನ್ಮೂಲ ವ್ಯಕ್ತಿಗಳಾಗಿ, ದೀಕ್ಷಾ ಪೋರ್ಟಲ್ ನಲ್ಲಿ ೨೧ ಡಿಜಿಟಲ್ ಸಂಪನ್ಮೂಲ ರಚಿಸಿದ್ದಾರೆ. ಇದು ದೇಶದಾದ್ಯಂತ ಮಕ್ಕಳಿಗೆ ತುಂಬಾ ಉಪಯುಕ್ತವಾಗಿದೆ‌. ಶಾಲೆಯಲ್ಲಿ ಕಂಪ್ಯೂಟರ್ ಪ್ರೊಜೆಕ್ಟರ್ ಆಧಾರಿತ ಕಲಿಕೆಗೆ ಹೆಚ್ಚು ಒತ್ತು ನೀಡುತ್ತಿದ್ದಾರೆ.
  ಕೋವಿಡ್ ಸಂದಿಗ್ಧ ಪರಿಸ್ಥಿತಿಯಲ್ಲಿ ಚಿಕ್ಕ ಚಿಕ್ಕ ವೀಡಿಯೋಗಳನ್ನು ಮಾಡಿ ಮಕ್ಕಳಿಗೆ ಹಂಚಿ ಕಲಿಕೆ ನಿರಂತರವಾಗಿ ನಡೆಯುವತ್ತ ಕಾಳಜಿ ವಹಿಸಿರುತ್ತಾರೆ.
ಇದೆಲ್ಲಕಿಂತ ಹೆಚ್ಚಾಗಿ ಎಸ್ ಎಸ್ ಎಲ್ ಸಿ ಪರೀಕ್ಷೆಗೆ ಸಂಬಂಧಿಸಿದಂತೆ ಇರುವ ಸಂದೇಹಗಳನ್ನು  ನಿವಾರಿಸಲು  ಜಿಲ್ಲಾ ಹಂತದ ಕಾರ್ಯಕ್ರಮಗಳನ್ನು ಏರ್ಪಡಿಸಿ ಯಶಸ್ವಿಯಾಗಿರುತ್ತಾರೆ. ಅದಕ್ಕಾಗಿ ಸಿ ಜಿ ವೆಂ ರವರಿಗೆ ಹೃನ್ಮನದ ಅಭಿನಂದನೆಗಳು. ಜೊತೆಗೆ ದೂರದರ್ಶನದ ನೇರಪ್ರಸಾರದಲ್ಲಿ ಭಾಗವಹಿಸಿ ಮಾರ್ಗದರ್ಶನ ಮಾಡಿದ ಕೀರ್ತಿ ಶ್ರೀಯುತರಿಗೆ ಸಲ್ಲುತ್ತದೆ.
     ಎಲ್ಲಕ್ಕಿಂತ ಹೆಚ್ಚಾಗಿ ಮಕ್ಕಳಲ್ಲಿ ಹುದುಗಿರುವ ಅದಮ್ಯ ಪ್ರತಿಭೆಗಳನ್ನು ಹೆಕ್ಕಿ ಹೊರತರುವ ನಿಟ್ಟಿನಲ್ಲಿ ಮತ್ತು ಸೃಜನಶೀಲತೆಯನ್ನು ಪ್ರೋತ್ಸಾಹಿಸುವ ಸಲುವಾಗಿ ತಮ್ಮ ಶಾಲೆಯಲ್ಲಿ *ಭಿತ್ತಿ ಪತ್ರಿಕೆ*ಯನ್ನು ಪ್ರಾರಂಭಿಸಿ ಮಕ್ಕಳಿಂದಲೇ *ಕಥೆ, ಕವನ, ಹನಿಗವನ* ಬರೆಯಿಸಿ ತಿದ್ದಿ ಪ್ರೇರೇಪಿಸುವ ಮಹತ್ಕಾರ್ಯ ಮಾಡುತ್ತಾ ಬರುತ್ತಿದ್ದಾರೆ.

    ಇಂತಹ ಸಾಧಕರು ನಮ್ಮ ಶುದ್ಧ ಸಾಹಿತ್ಯ ಬಳಗದಲ್ಲಿ ಇರುವುದು ನಮ್ಮೆಲ್ಲರಿಗೂ ತುಂಬಾ ಹೆಮ್ಮೆಯ ವಿಚಾರವಾಗಿದೆ. ಇಂತಹ ಮಹನೀಯರನ್ನು *ನಾವು- ನಮ್ಮವರು* ಮಾಲಿಕೆಯಲ್ಲಿ ಅವರ ಸಾಧನೆಯನ್ನು ಪರಿಚಯ ಮಾಡಿಕೊಡುತ್ತಿರುವುದು ನಮಗೆ ತುಂಬಾ ಸಂತೋಷಕರವಾದ ವಿಚಾರವಾಗಿದೆ. ಶ್ರೀಯುತರ ಸಾಧನೆ ಜಗದೆತ್ತರಕ್ಕೆ ಏರಿ ಹಲವಾರು ಪ್ರಶಸ್ತಿ, ಸನ್ಮಾನಗಳು ಸಂದಲಿ ಎಂಬ ಹಾರೈಕೆಯೊಂದಿಗೆ ಇಂದಿಗೆ ಮಾಲಿಕೆಗೆ  ವಿರಾಮ ಹಾಕುತ್ತಿದ್ದೇನೆ.

ನಾಳೆ ಮತ್ತೊಬ್ಬ ಸಾಧಕರ ವಿವರದೊಂದಿಗೆ ನಿಮ್ಮ ಮುಂದೆ ಬರುವೆ

ಇಂತಿ

ಅಗ್ರಹಾರಪ್ರಶಾಂತ್

06 May 2022

ವಜ್ರದ ಹರಳು .


ವಜ್ರದ ಹರಳು .


ಕಳವಳಗೊಂಡು ತಲ್ಲಣಿಸಿತ್ತು

ಮನ ಸಿಗುವಳೋ ಅಥವಾ

ಸಿಗದಿರುವಳೋ ಅವಳು|

ಅದೇ ಮನ ಸಮಾಧಾನ

ಪಡಿಸಲು ನನ್ನ ಪ್ರಶ್ನೆ ಮಾಡಿತು

ಹೇಗೆ ಕಳೆದುಕೊಳ್ಳುವಳು 

ನಿನ್ನಂತಹ ವಜ್ರದ ಹರಳು||



ಸಿಹಿಜೀವಿ 

 

03 May 2022

ಮೇಧಾಶಕ್ತಿ.ಹನಿಗವನ

 


ಮೇಧಾಶಕ್ತಿ

ಕೊರಗದಿರು ನಾ ಬಲಹೀನ
ನಾ ಬುದ್ದಿವಂತನಲ್ಲ ಎಂದು
ಅಂದುಕೊಳ್ಳದಿರು ನನಗಿಲ್ಲ ಯುಕ್ತಿ|
ಜ್ಞಾನವ ಪಡೆಯುತ,ಹಂಚುತಾ
ವಿವೇಕದಿ ಕಾಯಕ ಮಾಡುತಿರು
ನಿನಗರಿವಿಲ್ಲದೇ ನಿನ್ನಲಿ
ಉದಯಿಸುವುದು ಮೇಧಾಶಕ್ತಿ||

ಸಿಹಿಜೀವಿ
ಸಿ ಜಿ ವೆಂಕಟೇಶ್ವರ


02 May 2022

ನಟರಾಜ .ಲೇಖನ


 *"ನಟರಾಜ "ಬಾಲ್ಯದ ನೆನಪಿನ ಲೇಖನ*


https://pratilipi.page.link/ThsAjAMtiN6HLYhp8


*ನಟರಾಜ*


ನಾನಾಗ  ನಮ್ಮೂರ  ಪ್ರಾಥಮಿಕ ಶಾಲೆಯಲ್ಲಿ ಓದುತ್ತಿದ್ದೆ. ನಮ್ಮ ಶಿಕ್ಷಕರು ಪ್ರತಿವಾರ ನಮ್ಮನ್ನು ಹೊರಸಂಚಾರ ಕರೆದುಕೊಂಡು ಹೋಗುತ್ತಿದ್ದರು. ಅಷ್ಟೇನೂ ದೂರವಲ್ಲದಿದ್ದರೂ ಕನಿಷ್ಠ ಮೂರ್ನಾಲ್ಕು ಕಿಲೋಮೀಟರ್ ಹೊರಸಂಚಾರ  ಕರೆದುಕೊಂಡು ಹೋಗಿ ಯಾವುದಾದರೊಂದು ಕೆರೆ ಅಥವಾ ತೋಟದಲ್ಲಿ ನಾವು ನಮ್ಮ ಮನೆಯಿಂದ ಕಟ್ಟಿಕೊಂಡು ಹೋದ ಬುತ್ತಿ ಅನ್ನ, ಚಿತ್ರನ್ನ, ಪಕೋಡ, ರೊಟ್ಟಿ ಹೀಗೆ ವಿವಿಧ ತಿಂಡಿಗಳನ್ನು  ಪರಸ್ಪರ ಹಂಚಿಕೊಂಡು ತಿಂದ ನಂತರ  ಎಲ್ಲಾ ಮಕ್ಕಳ ಚಿತ್ತ ನನ್ನ ಕಡೆ ಹರಿಯುತ್ತಿತ್ತು. ಅವರು"  ಸಾ ವೆಂಕಟೇಶ್ ಹತ್ರ ಡ್ಯಾನ್ಸ್ ಮಾಡ್ಸಿ ಸಾ... " ಅಂದಾಗ ಆ... ಬಾರಾ ವೆಂಕಟೇಶ ಡ್ಯಾನ್ಸ್ ಮಾಡು ನಮ್ಮ ಶಿಕ್ಷಕರು ಕರೆಯುತ್ತಿದ್ದರು. ನಾನು ಹೋಗಿ ಆಗ ಪ್ರಚಲಿತದಲ್ಲಿದ್ದ "ಕಾಣದಂತೆ ಮಾಯವಾದನು ನಮ್ಮ ಶಿವ ಕೈಲಾಸ ಸೇರಿಕೊಂಡನು...." ಹಾಡನ್ನು ನಾನೇ ಹೇಳಿಕೊಂಡು ಕುಣಿಯತೊಡಗಿದೆ. ಎಲ್ಲಾ ನನ್ನ ಸಹಪಾಠಿಗಳು ಮತ್ತು ಶಿಕ್ಷಕರು ಚಪ್ಪಾಳೆ ತಟ್ಟಿ ಹುರಿದುಂಬಿಸಿ ಮತ್ತೊಮ್ಮೆ ಕುಣಿಯಲು ಹೇಳಿದರು .ಹೀಗೆ ಮೂರು ಬಾರಿ ಕುಣಿದ ಮೇಲೆ ಚೂರು ಚೂರು ತಿಂದ ವಿವಿಧ ಬಗೆಯ ತಿಂಡಿಗಳು ಯಾವಾಗಲೋ ಕರಗಿದ್ದವು. ನನ್ನ ಡ್ಯಾನ್ಸ್ ಆದ ಮೇಲೆ ಆನಂದ ಎಂಬ ನನ್ನ ಕ್ಲಾಸ್ ಮೇಟ್ ನನ್ನ ಕುಣಿಯಲು ಹೇಳಿದರು ಅವನು " ಒನ್ ಟೂ ತ್ರೀ ಪೋರ್ ಪಾನ್ ಪಟಾನ" ಎಂದು ಯಾರಿಗೂ ಅರ್ಥವಾಗದಿದ್ದರೂ ತೆಲುಗು ಹಾಡು ಹೇಳಿಕೊಂಡು ಕುಣಿಯುವಾಗ ನಾವೆಲ್ಲರೂ ಚಪ್ಪಾಳೆ ತಟ್ಟಿ ಅವನನ್ನು ಹುರಿದುಂಬಿಸಿ ಇನ್ನೂ ಕುಣಿಯುವಂತೆ ಮಾಡಿದೆವು. ಈ ರೀತಿಯಾಗಿ ಕುಣಿಯಲು ಆರಂಭ ಮಾಡಿದ  ನಮ್ಮನ್ನು ಶಾಲೆಯಲ್ಲಿ ಯಾವುದೇ ಕಾರ್ಯಕ್ರಮಗಳನ್ನು ಮಾಡಿದರೂ ನಮ್ಮ ಡ್ಯಾನ್ಸ್ ಖಾಯಂ ಆಗಿರುತ್ತಿತ್ತು. ಒಂದು ರೀತಿಯಲ್ಲಿ ನಾವು ನಮ್ಮ ಶಾಲೆಯ  ಅಧಿಕೃತ ನಟ ರಾಜರಾಗಿ ಗುರ್ತಿಸಿಕೊಂಡಿದ್ದೆವು. 

ನಂತರ ನನ್ನ ವಿದ್ಯಾಭ್ಯಾಸ ಮುಂದುವರೆದು ಟಿ ಸಿ ಹೆಚ್ ಓದುವಾಗ ಹಿರಿಯೂರಿನಲ್ಲಿ " ತೂ ಚೀಜ್ ಬಡೀ ಹೈ....." ಹಾಡಿಗೆ ಡ್ಯಾನ್ಸ್ ಮಾಡಿದ್ದೆ. ಮೈಸೂರಿನಲ್ಲಿ ಬಿ ಎಡ್ ಓದುವಾಗ ಸಿ ಟಿ ಸಿ ಕ್ಯಾಂಪ್ ನಲ್ಲಿ " ಸಂದೇಶ್ ಆತೇ ಐ ..... ಎಂಬ ಹಾಡಿಗೆ  ಗೆಳೆಯರೊಂದಿಗೆ ಹೆಜ್ಜೆ ಹಾಕಿದ್ದೆ. 

ಇತ್ತೀಚಿಗೆ ರಾಷ್ಟ್ರ ಮಟ್ಟದ ಶೈಕ್ಷಣಿಕ ಸಮಾವೇಶದ ನಿಮಿತ್ತವಾಗಿ  ಹೈದರಾಬಾದ್ ಗೆ ಹೋದಾಗ ರಾಮೋಜಿ   ಪಿಲಂ ಸಿಟಿಯಲ್ಲಿ ಕೃತಕ ಮಳೆ ನೀರಿನಲ್ಲಿ ಎಲ್ಲಾ ಭಾಷೆಗಳ ಹಾಡಿಗೆ   ರೈನ್ ಡ್ಯಾನ್ಸ್ ಮಾಡಿದ್ದು ನೆನಪಾಯಿತು . ವಯಸ್ಸಿನ ನಿರ್ಬಂಧವಿಲ್ಲದೇ ತಮಗಿಷ್ಟ ಬಂದ ಹಾಗೆ ಕುಣಿದ ಆ ಕ್ಷಣಗಳು ನಮ್ಮ ಜೀವನದಿ ಮರೆಯಲಾರದ ಕ್ಷಣಗಳೆಂದು  ಹೇಳಬಹುದು.

ಆದರೂ ಬಾಲ್ಯದಲ್ಲಿ ಕುಣಿದ "ಕಾಣದಂತೆ ಮಾಯವಾದನು ... ಹಾಡು ನೆನೆದರೆ ಏನೋ ಒಂತರ ಸಂತಸ .ಮೊನ್ನೆ ಊರಿಗೆ ಹೋದಾಗ ಆನಂದ ಸಿಕ್ಕಿದ್ದ ಆ ಡ್ಯಾನ್ಸ್ ಜ್ಞಾಪಿಸಿದ ಮತ್ತೊಮ್ಮೆ ಆನಂದದಿಂದ ನಮ್ಮ ನೆನಪಿಗೆ ಜಾರಿ ಆನಂದಪಟ್ಟೆವು.


ಸಿಹಿಜೀವಿ

ಸಿ ಜಿ ವೆಂಕಟೇಶ್ವರ