(ನ್ಯಾನೋ ಕಥೆ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ
(ನ್ಯಾನೋ ಕಥೆ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ

23 ಜುಲೈ 2023

ಯಾವ್ ಕಾಲೇಜು?....ನ್ಯಾನೋ ಕಥೆ

 



ಯಾವ್ ಕಾಲೇಜ್?


"ನಿನ್ನ ಮಗಳಿಗೆ ಇಲ್ಲೇ ಇರುವ ಲೋಕಲ್ ಕಾಲೇಜ್ ಬೆಟರ್ " ಆತ್ಮೀಯ ಸ್ನೇಹಿತ ಸಲಹೆ ನೀಡಿದ."ನೀಟ್, ಜೆ ಈ ಈ, ಸಿ ಈಟಿ ಈ ಟೌನ್ ನಲ್ಲಿ ಕೋಚಿಂಗ್ ಸರಿ ಇಲ್ಲ ಸುಮ್ನೇ ಬೆಂಗಳೂರಿಗೆ ಹಾಕು" ಹತ್ತಿರದ  ಸಂಬಂಧಿ ಸತೀಶ ತಾಕೀತು ಮಾಡಿದ. ಸಹೋದ್ಯೋಗಿ ಸುಮ ಸಲಹೆಯೇ ಬೇರೆ" ಸಾರ್ ನನಗೆ ಗೊತ್ತಿರೋ ಒಂದ್ಕಾಲೇಜು ಮಂಗ್ಳೂರಾಗೈತೆ ಸುಮ್ನೆ ಅಲ್ಗಾಕಿ ನಿಮ್ ಮಗ್ಳು ಗ್ಯಾರಂಟಿ ಡಾಕ್ಟ್ರು ".

ಮಗಳ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ತೊಂ ಭತ್ತೆಂಟು ಪರ್ಸೆಂಟೇಜ್ ಪಡೆದ ಖುಷಿಯಲ್ಲಿದ್ದ ರವಿಕುಮಾರ್ ಗೊಂದಲದ ಗೂಡಿನಲ್ಲಿ ಬಿದ್ದು ಚಿಂತಿಸುತ್ತಾ ಮನೆಗೆ ಬಂದು ಕಾಫಿ ಹೀರುವಾಗ .ಮಗಳು ಅಪ್ಪಾ ನಾನ್ ಯಾವ್ ಕಾಲೇಜ್ ಸೇರಲಿ ಎಂದಾಗ ಅಪ್ಪ ಮಗಳ ಮುಖವನ್ನೇ ನೋಡುತ್ತಿದ್ದ ಉತ್ತರ ಬರಲಿಲ್ಲ....


ಸಿಹಿಜೀವಿ ವೆಂಕಟೇಶ್ವರ

ತುಮಕೂರು

09 ಅಕ್ಟೋಬರ್ 2022

ನೆಮ್ಮದಿ ಎಲ್ಲಿದೆ ? ನ್ಯಾನೋ ಕಥೆ


 ನೆಮ್ಮದಿ ಎಲ್ಲಿದೆ 


ಸ್ಮಾರ್ಟ್ ಹೋಂ ನಲ್ಲಿ ಏನಿರಬೇಕೆಂದು  ನಿರ್ಧರಿಸಿದ ಮಾವನವರೇ  ನಿಂತು  ಅಳಿಯ, ಮಗಳ  ನೆಮ್ಮದಿಗೆ   ಐಷಾರಾಮಿ ಬಂಗಲೆ  ಕಟ್ಟಿಸಿದರು. ಇಂಪೋರ್ಟೆಡ್ ಹಾಸಿಗೆ ದಿಂಬು ಅವೂ ಲಕ್ಷಗಳ ಲೆಕ್ಕ !  ರಾತ್ರಿಯ ಪೈವ್ ಸ್ಟಾರ್ ಗೆ ಸಮನಾದ ಡೈನಿಂಗ್ ಟೇಬಲ್ ಮೇಲೆ ಭಕ್ಷ್ಯ ಭೋಜನದ ನಂತರ ಬೆಡ್ರೂಂಗೆ ತೆರಳಿದ ಸಂತೋಷನನ್ನು   ಸುವಾಸನೆ ಮತ್ತು ಮಧುರವಾದ ಸಂಗೀತ ಸ್ವಾಗತಿಸಿತು. ಇಂಪೋರ್ಟೆಡ್ ಬೆಡ್ ಮೇಲೆ ಮಲಗಿದವನಿಗೆ ರಾತ್ರಿ ಹನ್ನೆರಡಾದರೂ ನಿದ್ದೆ ಬರಲಿಲ್ಲ.ಬಲವಂತವಾಗಿ ಕಣ್ಣ ಮುಚ್ಚಿದವನಿಗೆ ಬಾಲ್ಯದಲ್ಲಿ  ಪುಟ್ಟ ಕೋಣೆಯಲ್ಲಿ ಸಗಣಿ ನೆಲದ ಘಮದೊಂದಿಗೆ ಗಾಢವಾದ ನಿದ್ದೆ ಮಾಡಿದ ನೆನಪಾಯಿತು .


ಸಿಹಿಜೀವಿ

ಸಿ ಜಿ ವೆಂಕಟೇಶ್ವರ.

27 ಆಗಸ್ಟ್ 2022

ನ್ಯಾನೋಕಥೆ

 



ನ್ಯಾನೋ ಕಥೆ ೫೦

ಪೆಟ್ರೋಲ್ ಖಾಲಿಯಾಗಿತ್ತು! 


"ಅಂಕಲ್ ನಮ್ಮ ಅಪ್ಪ ಅಮ್ಮ ದುಡಿಯಾಕ ಬೆಂಗಳೂರ್ ಗೆ ಹೋಗ್ಯಾರ ಮುಂದ್ಲುವಾರ ಬತ್ತಾರೆ" ಎಂದು ಆಸೆ ಗಣ್ಣಿನಿಂದ ಹೇಳಿದ ನಾಲ್ಕು ವರ್ಷದ ಬಾಲಕನ ಮಾತು ಕೇಳಿ ನೆರೆದಿದ್ದವರಿಗೆ ಮೌನ ತಬ್ಬಿದ ಅನುಭವ. "ನಿನ್ನ ಅಪ್ಪ ಅಮ್ಮ ಆದಷ್ಟು ಬೇಗ ಬರಲಿ" ಎಂದು ಮಗುವಿಗೆ ಸಮಾಧಾನ ಹೇಳಿ ತಿಥಿ ಊಟ ಮಾಡಿ     ಮನೆಯಿಂದ ಹೊರಬಂದ ರವಿಗೆ ಒಂದು ಹಳೆಯ ನ್ಯೂಸ್ ಪೇಪರ್ ಕಾಲಿಗೆ ತಡಕಿತು .ದಪ್ಪ ಅಕ್ಷರಗಳು ಅವನ  ಕಣ್ಣಿಗೆ ಬಿದ್ದವು" ರಸ್ತೆ ಅಪಘಾತದಲ್ಲಿ ದಂಪತಿ ಸಾವು ಮಗು ಅನಾಥ" .ಭಾರವಾದ ಮನಸ್ಸಿನಿಂದ ರವಿ  ಬೈಕ್ ಸ್ಟಾರ್ಟ್ ಮಾಡಿ ರಸ್ತೆಯಲ್ಲಿ ಸಾಗುವಾಗ ಬೈಕ್  ಇಂಜಿನ್ ಆಫ್ ಆಯ್ತು .ಟ್ಯಾಂಕ್ ಬೀಗ ತೆಗೆದು ನೋಡಿದ ಪೆಟ್ರೋಲ್ ಖಾಲಿಯಾಗಿತ್ತು! 



ಸಿಹಿಜೀವಿ

ಸಿ ಜಿ ವೆಂಕಟೇಶ್ವರ

30 ಜುಲೈ 2022

ಅವನಿ ಬೇಸರ ಪಡಲಿಲ್ಲ....

 



ಸಣ್ಣಕಥಾ_ಸಂಭ್ರಮ 


ಅವನಿ ಬೇಸರ ಪಡಲಿಲ್ಲ...


ಅವನು ಹುಟ್ಟಿದಾಗ ಅಮ್ಮ ತಾಯ್ತನ ಅನುಭವಿಸಿ ಸಂಭ್ರಮಿಸಿದಳು .ಅವನಿ ಭಾರವಾಯಿತೆಂದು ಬೇಸರಪಡಲಿಲ್ಲ.ಬೆಳೆಯುತ್ತಾ ಅವಗುಣಗಳ ದಾಸನಾದ ಅವನು ದುಶ್ಚಟಕ್ಕೆ ಬಲಿಯಾಗಿ ಅಕಾಲ ಮೃತ್ಯುಗೀಡಾದ ತಾಯಿಕರುಳು ಕಂಬನಿ ಮಿಡಿಯಿತು.ಅವನಿ ಆಗಲೂ ಬೇಸರಪಡಲಿಲ್ಲ...ಏಕೆಂದರೆ ಅವನಿ ಬರೀ ಅವನಿಗಾಗಿ ಇಲ್ಲ......


#ಸಿಹಿಜೀವಿ

11 ಮಾರ್ಚ್ 2022

ಕುಬ್ಜ .ನ್ಯಾನೋ ಕಥೆ.


 


ಕುಬ್ಜ. ನ್ಯಾನೋ ಕಥೆ 


ಅವನು ಇಂಜಿನಿಯರಿಂಗ್ ನಲ್ಲಿ ಬಂಗಾರದ ಪದಕ ಪಡೆದು ಎಂ. ಟೆಕ್ ವಿದೇಶದಲ್ಲಿ ಓದಿ ಕಡಲ ತಡಿಯಲ್ಲಿ ಸುಂದರ ಮನೆ ನಿರ್ಮಿಸಿದ .

ತನ್ನದೇ  ಮನೆಯಾದ್ದರಿಂದ ವಿಶೇಷವಾದ ಮುತುವರ್ಜಿಯಿಂದ ಮನೆಯನ್ನು ಸದೃಢವಾಗಿ ವಿಶೇಷವಾದ ವಿನ್ಯಾಸ ಬಳಸಿ ನಿರ್ಮಿಸಿದ್ದ.

ಕಾರ್ಯನಿಮಿತ್ತವಾಗಿ  ವಿದೇಶದಿಂದ ಹಿಂದಿರುಗಿದವನು ಹೆಂಡತಿ ಮಕ್ಕಳನ್ನು ಕಾಣಲು ಉಡುಗೊರೆಗಳೊಂದಿಗೆ ಮನೆಯ ಬಳಿ ಬಂದವನಿಗೆ ಶಾಕ್ ಕಾದಿತ್ತು! 

ಸುನಾಮಿಯ ಅಲೆಗಳು ಅವನ ಮನೆಯನ್ನು ನೆಲಸಮ ಮಾಡಿದ್ದವು. ಕೈಯಲ್ಲಿದ್ದ ಉಡುಗೊರೆಗಳನ್ನು ನೆಲಕ್ಕೆ ಚೆಲ್ಲಿದ ಅವನ ಕಣ್ಣುಗಳಲ್ಲಿ ನೀರು ಜಿನುಗಲಾರಂಭಿಸಿತು.ಅವನ ಮನದಲ್ಲೇ ಅಂದುಕೊಂಡ ಪ್ರಕೃತಿ ಮುಂದೆ ನನ್ನ ಇಂಜಿನಿಯರಿಂಗ್ ಪ್ರತಿಭೆ ಕುಬ್ಜ.....



ಸಿಹಿಜೀವಿ

ಸಿ ಜಿ ವೆಂಕಟೇಶ್ವರ

24 ಅಕ್ಟೋಬರ್ 2021

ತಂದೆಯ ಕನಸು. ನ್ಯಾನೋ ಕಥೆ


 


*ತಂದೆಯ ಕನಸು*

ನ್ಯಾನೋ ಕಥೆ

"ನನ್ನ ಕನಸು ನನಸಾಯಿತು. ಇಂದು ನೀನು ಇಂಜಿನಿಯರಿಂಗ್ ಪದವಿ ಪಡೆದಿರುವೆ‌. ನಿನಗೆ ಒಳ್ಳೆಯ ಉದ್ಯೋಗ ಖಂಡಿತವಾಗಿ ಸಿಗುತ್ತದೆ. ಅದು ಖಾಸಗಿ ಅಥವಾ ಸರ್ಕಾರಿ ಕೆಲಸವಾಗಲಿ ನಾನು ಕಷ್ಟ ಪಟ್ಟು ನಿನ್ನ ಓದಿಸಿದ್ದು ಸಾರ್ಥಕವಾಯಿತು. ತಾಯಿ ಭಾರತಾಂಬೆಯ ಸೇವೆ ಗೆ ನಿನ್ನ ಜೀವ ಮುಡಿಪಾಗಿರಲಿ" ಶ್ಯಾಮರಾಯರು ಮಗನೆಡೆ ಸಂತೋಷದ ನೋಟ ಬೀರುತ್ತಾ ಹೆಮ್ಮೆಯಿಂದು ನುಡಿದರು.
ತಲೆಕೆರೆದು ಕೊಳ್ಳುತ್ತಾ" ಅಪ್ಪಾ ನಾನು ಈಗಾಗಲೇ ಜರ್ಮನಿಯ ಒಂದು ಕಂಪನಿಯ ಜಾಬ್ ಆಪರ್ ಒಪ್ಪಿ ಸಹಿ ಮಾಡಿರುವೆ . ಮುಂದಿನ ತಿಂಗಳು ವೀಸಾ ಪಾಸ್‌ಪೋರ್ಟ್ ರೆಡಿ ಆದಮೇಲೆ ,ಇವಳನ್ನು ಮದುವೆಯಾಗಿ  ಜರ್ಮನಿಗೆ ಕರೆದುಕೊಂಡು ಹೋಗುವೆ, ಪ್ರತಿ ತಿಂಗಳು ನಿಮ್ಮ ಅಕೌಂಟ್ ಗೆ ಹಣ ಹಾಕುವೆ " ಎಂದು ತಾನು ಮದುವೆ ಆಗಬೇಕಿರುವ ಹುಡುಗಿಯ ಪೋಟೋ ತೋರಿಸಿದ ಪುರುಶೋತ್ತಮ.
ಪೋಟೋ ನೋಡಿದ ಶ್ಯಾಮರಾಯರು ನಿಧಾನವಾಗಿ ತಮ್ಮ ಕೊಠಡಿಯ ಕಡೆ ಹೆಜ್ಜೆ ಹಾಕಿದರು. ಅವರ ಕಣ್ಣಲ್ಲಿದ್ದ ಎರಡು ಹನಿಗಳನ್ನು ಅವರ ಹೆಂಡತಿ ಸುನಂದಮ್ಮ ಮಾತ್ರ ಗುರುತಿಸಿದರು...

ಸಿಹಿಜೀವಿ
ಸಿ ಜಿ ವೆಂಕಟೇಶ್ವರ
ತುಮಕೂರು
9900925529

18 ಸೆಪ್ಟೆಂಬರ್ 2021

ಬೆಳಗೆದ್ದು ಯಾರ ಮುಖವ .ಕಥೆ


 


*ಬೆಳಿಗೆದ್ದು ಯಾರ ಮುಖವ .......* 

ನ್ಯಾನೋ ಕಥೆ 

ಕಾರ್ ನಲ್ಲಿ ಒಬ್ಬನೇ ಹೋಗುತ್ತಿದ್ದ ವಿಲ್ಸನ್ ಕೊರಟಗೆರೆ ದಾಟಿ ಮೂರು ಕಿಲೋಮೀಟರ್ ಮುಂದೆ ಬಂದಿದ್ದ.  ದಾರಿಯ ಬದಿಯಲ್ಲಿ ಓರ್ವ ಮಹಿಳೆ ಮತ್ತು ಮದ್ಯ ವಯಸ್ಕ ಮಹಿಳೆ ಕಾರಿಗೆ ಅಡ್ಡ ಹಾಕಿ " ನಮ್ಮ ಬೈಕ್ ಕೆಟ್ಟಿದೆ,  ದಯಮಾಡಿ ಇವರನ್ನು ಮಧುಗಿರಿಗೆ ಬಿಡಿ , ನಾನು ಬೈಕ್ ರಿಪೇರಿ ಮಾಡಿಸಿಕೊಂಡು ಬರುವೆ" ಎಂದು ಕಾರಿನ ಡೋರ್ ತೆಗೆದು ಕಾರಿನಲ್ಲಿ ಕೂರಿಸಿಯೇ ಬಿಟ್ಟ. ಕಾರು ಚಲಿಸಿದಂತೆ ಆ ಹೆಂಗಸು ತನ್ನ ಮೈಮೇಲಿನ ಒಂದೊಂದೇ ಬಟ್ಟೆ ಬಿಚ್ಚಿ ವಿಲ್ಸನ್ ಜೊತೆ ಸೆಲ್ಪಿ ತೆಗೆದು .

"ಕಾರ್ ಸೈಡಿಗಾಕು, ನಿನ್ನಲ್ಲಿ ಹಣ ಒಡವೆ ಎಷ್ಟು ಇದೆ ತೆಗೆ ಎಂದಳು . ವಿಲ್ಸನ್ ಹೆದರಿ ಕಾರನ್ನು ರಸ್ತೆ ಪಕ್ಕ ನಿಲ್ಲಿಸಿದ"

ಅಷ್ಟೊತ್ತಿಗೆ ಬೈಕ್ ನಲ್ಲಿ ಬಂದ ಗಂಡಸು ಕಾರ್ ಬಳಿ ಬಂದು ಹಣ ಒಡವೆ ಪಡೆಯಲು ಹೆಂಗಸಿಗೆ ಸಹಾಯ ಮಾಡಿದ . 


ಈ ವಿಷಯ ಎಲ್ಲಾದ್ರೂ ಬಾಯಿ ಬಿಟ್ರೆ ರೇಪ್ ಕೇಸ್ ಹಾಕ್ತೀನಿ, ನಿನ್ ಮಾನ ಕಳೀತಿನಿ ಹಿಂದಕ್ಕೆ ನೋಡ್ದೇ ಸುಮ್ನೇ ನಡಿ" ಎಂದಳು ಹೆಂಗಸು .


ಭಯ, ಅಚ್ಚರಿ, ಆತಂಕದ ನಡುವೆ ಕಾರ್ ಸ್ಟಾರ್ಟ್ ಮಾಡಿದ ಕಾರ್ ನ ಮ್ಯೂಸಿಕ್ ಸಿಸ್ಟಮ್ ನಲ್ಲಿ 

" ಬೆಳಿಗೆದ್ದು ಯಾರ ಮುಖವ ನಾನು ನೋಡಿದೆ......"  ಹಾಡು ಬರುತ್ತಿತ್ತು...


ಸಿಹಿಜೀವಿ

ಸಿ ಜಿ ವೆಂಕಟೇಶ್ವರ

16 ಸೆಪ್ಟೆಂಬರ್ 2021

ಹೇಳಪ್ಪನ ಭಾಷಣ .


 


ಹೇಳಪ್ಪನ ಭಾಷಣ .ನ್ಯಾನೋ ಕಥೆ 


"ಇಂದು ವಿಶ್ವ ಓಜೋನ್ ದಿನ 

ನಾವೆಲ್ಲರೂ ಓಜೋನ್ ಪದರವನ್ನು ನಾಶ ಮಾಡುವ ಕಾರ್ಬನ್ ಡೈ ಆಕ್ಸೈಡ್ ಕಡಿಮೆ ಬಳಸಬೇಕು , ಡ್ಯೂಓಡರೆಂಟ್ ಬಳಸಲೇಬಾರದು, ತಂಗಳ ಪೆಟ್ಟಿಗೆಯಾದ ಪ್ರಿಡ್ಜ್ ಬಳಸಲೇಬಾರದು" ಎಂದು ಮಕ್ಕಳಿಗೆ ಹೇಳಪ್ಪನವರು  ಭಾಷಣ ಮಾಡುವಾಗ ಅವರ ಬಟ್ಟೆಯಿಂದ ಸೆಂಟ್ ವಾಸನೆ ಬರುತ್ತಿದ್ದುದನ್ನು ಮುಂದೆ ಕುಳಿತ ಸಹಾಸಿನಿ ಗಮನಿಸಿದಳು. ಭಾಷಣ ಮುಗಿಸಿ ಕುಳಿತ ಹೇಳಪ್ಪನವರು .ಕಾರ್ಯಕ್ರಮ ಸಂಘಕರಿಗೆ ಹೇಳಿದರು" ಒಂದು ಚಿಲ್ಡ್ ವಾಟರ್ ಬಾಟಲ್ ಕೊಡಪ್ಪ "   ಎಂದು ಕೇಳಿದಾಗ ಬಾಲಕಿ ಅಚ್ಚರಿಯಿಂದ ಹೇಳಪ್ಪನವರ ಕಡೆ ನೋಡಿದಳು....


ಸಿಹಿಜೀವಿ

ಸಿ ಜಿ ವೆಂಕಟೇಶ್ವರ

13 ಸೆಪ್ಟೆಂಬರ್ 2021

ನಮ್ಮ ನೆರಳು ನಮ್ಮನ್ನು ಹಿಂಬಾಲಿಸುವುದಿಲ್ಲ.ಕಥೆ


 

ನಮ್ಮ ನೆರಳು ನಮ್ಮನ್ನು ಹಿಂಬಾಲಿಸುವುದಿಲ್ಲ. ಕಥೆ

ರವಿ ಪ್ರಾಮಾಣಿಕ , ಸತ್ಯಸಂಧ, ಉತ್ತಮ ನಡತೆಯ ವ್ಯಕ್ತಿ. ಯಾವುದೇ ಕೆಲಸವನ್ನು ಶ್ರದ್ದೆಯಿಂದ ಮಾಡುತ್ತಿದ್ದ .ಶಾಲೆ ಕಲಿಯದ ಅವನು ತಾನು ಕೂಲಿ ಮಾಡಿದ ಹಣವನ್ನು ಮಾಲೀಕರಿಂದ ಪಡೆಯುವಾಗ, ಅಂಗಡಿಯಲ್ಲಿ ಸಾಮಾನು ಖರೀದಿ ಮಾಡಿ ಚಿಲ್ಲರೆ ಪಡೆಯುವಾಗ ಲೆಕ್ಕ ಗೊತ್ತಾಗದೇ ಅವರು ಕೊಟ್ಟಷ್ಟೇ ಪಡೆದು ತನ್ನ ಅನಕ್ಷರತೆಗೆ ತಾನೇ ಕಾರಣವೆಂದು ತನ್ನನ್ನೆ ಅಳಿದುಕೊಂಡು, ಅಳಿದ ಅಮ್ಮನ ನೆನೆದು " ನಿನ್ನ ಮಾತು ಅಂದು ಕೇಳಿ ಶಾಲೆಗೆ ಹೋಗಿ ಕಲಿಯಬೇಕಿತ್ತವ್ವ " ಎಂದು ಮೇಲೆ ನೋಡುತ್ತಾ ಕ್ಷಮಿಸವ್ವ ಎಂದು ಆಗಾಗ್ಗೆ ಒಬ್ಬನೇ ಮಾತಾಡುತ್ತಿದ್ದ.

ಊರ ಸಾಹುಕಾರನ ಹೊಲದಲ್ಲಿ ಅಂದು ಕೂಲಿ ಕೆಲಸ ಮಾಡಿದ ರವಿ ಸಂಜೆ ಧಣಿಗಳ ಬಳಿ ತೆರಳಿದ ಐದು ನೂರು ರೂಗಳ ಎರಡು ನೋಟು ಕೊಟ್ಟ ಧಣಿಗಳು"  ರವಿ ಇಂದು ನೀನು ಮಾಡಿದ ಕೆಲಸ ಮೆಚ್ಚಿ ಜಾಸ್ತಿ ಕೂಲಿ ನೀಡಿರುವೆ, ಅದಕ್ಕೆ ಇಲ್ಲಿ ಒಂದು ಹೆಬ್ಬೆಟ್ಟು ಹಾಕು"  ಎಂದರು  ಧಣಿಗಳ ಮಾತು ಕೇಳಿ ಹಣ ಎಷ್ಟು ಜಾಸ್ತಿ ಇದೆ? ಯಾಕೆ ಹೆಬ್ಬಟ್ಟು?  ಎಂದು ತೋಚದೇ ಧಣಿಗಳ ಮೇಲಿನ ನಂಬಿಕೆಯಿಂದ ಹೆಬ್ಬಟ್ಟು ಒತ್ತಿದ.

ಮಾರನೇ ದಿನ ಪೋಲಿಸರು ಬಂದು ರವಿಯ ಅರೆಸ್ಟ್ ಮಾಡಿದರು . ರವಿಗೆ ಏನೂ ತೋಚದೆ ಅಳಲಾರಂಬಿಸಿದ. ನಾನೇನೂ ತಪ್ಪು ಮಾಡಿಲ್ಲ ಬಿಡಿ. ಧಣಿಗಳ ಕೇಳಿ ನಾನು ಧಣಿಗಳ ತೋಟ ಬಿಟ್ಟು ಎಲ್ಲೂ ಹೋಗಿಲ್ಲ ಎಂದು ಗೋಳಾಡಿದ"
.ಊರಲ್ಲಿ ಓದಿ ಬುದ್ದಿವಂತನಾದ ಸುರೇಶ್ " ನಿಮ್ಮ ಧಣಿಗಳ ಮಗ  ಎರಡು ದಿನದ ಹಿಂದೆ ಅಪ್ರಾಪ್ತ ಹುಡುಗಿ ಕೆಡಿಸಿ ಸಾಯಿಸಿದ್ದಾನೆ, ಅದನ್ನು ನಿನ್ನ ತಲೆಗೆ ಕಟ್ಟಲು ನಿನ್ನ ಧಣಿ ನಿನ್ನಿಂದ ಹೆಬ್ಬೆಟ್ಟು ಹಾಕಿಸಿಕೊಂಡು ನೀನೇ ಆ ಹುಡುಗಿ ಕೊಂದೆ ಎಂದು ಪೊಲೀಸರಿಗೆ ಮಾಹಿತಿ ನೀಡಿದ, ಈಗ ನೋಡು ಮಾಡದ ತಪ್ಪಿಗೆ ಜೈಲಲ್ಲಿ ಕೊಳೆಯಬೇಕು, ನಾಲ್ಕಕ್ಷರ ಕಲೀರಿ ಅಂದ್ರೆ ನಿಮ್ ತಲೇಗೇ ಹೋಗಲ್ಲ" ಎಂದು ಬೇಸರದಿಂದ ಟವಲ್ ಕೊಡವಿಕೊಂಡು ಮನೆ ಕಡೆ ಹೊರಟ.

ರವಿಗೆ ಕೈಕೊಳ ತೊಡಿಸಿ ಜೀಪ್ ನಲ್ಲಿ ಕೂರಿಸಿಕೊಂಡ ಪೋಲೀಸರು ಸ್ಟೆಷನ್ ಕಡೆ ಹೊರಟರು. ಪೋಲೀಸ್ ಜೀಪ್ ನಲ್ಲಿ ಕುಳಿತ ರವಿಗೆ ಬಾಲ್ಯದಲ್ಲಿ  ಅಪ್ಪ ಹೇಳಿದ ಮಾತುಗಳು ಕಿವಿಯಲ್ಲಿ ಪ್ರತಿಧ್ವನಿಸಿದವು" ಕತ್ತಲಿದ್ದಾಗ ನಮ್ಮ ನೆರಳೂ ನಮ್ಮನ್ನು  ಹಿಂಬಾಲಿಸುವುದಿಲ್ಲ...."

*ಸಿಹಿಜೀವಿ*
ಸಿ ಜಿ ವೆಂಕಟೇಶ್ವರ


05 ಸೆಪ್ಟೆಂಬರ್ 2021

ಮಹಾರಾಜ ಕಿರುಕಥೆ

 

ಮಹಾರಾಜ .


ಮಲ್ಲಪ್ಪ ಗಾಯತ್ರಮ್ಮ ದಂಪತಿಗಳು ಅನಕ್ಷರಸ್ಥ ರಾದರೂ ಹಳ್ಳಿಯಲ್ಲಿ ‌ಕೂಲಿ ಮಾಡುತ್ತಾ ನೆಮ್ಮದಿಯ ಜೀವನ ಸಾಗಿಸುತ್ತಿದ್ದರು. 

ಬಹಳ ದಿನಗಳ ನಂತರ ದಂಪತಿಗೆ ಗಂಡು ಮಗುವಾಯಿತು . 

ಮಗನಿಗೆ ಮಹಾರಾಜ ಎಂದು ನಾಮಕರಣ ಮಾಡಿದರು.

ಮಗ ನಮ್ಮಂತೆ ಅನಕ್ಷರಸ್ಥರಾಗುವುದು ಬೇಡ ಅಕ್ಷರ ಕಲಿಯಲಿ ಎಂದು ಒಳ್ಳೆಯ ಶಾಲೆಗೆ ಸೇರಿಸಿದರು.

ಮಹಾರಾಜನಿಗೆ ವಿದ್ಯೆ ಹತ್ತಲಿಲ್ಲ ಎಸ್ಸೆಲ್ಸಿ ಪೇಲಾಗಿ ಊರಲ್ಲಿ ಅಲೆಯಲು ಶುರುಮಾಡಿದ .

ಸಹವಾಸ ದೋಷ, ಟೀನೇಜ್ ನ ವಯೋಸಹಜ ಕಾಮನೆಗಳ ಫಲವಾಗಿ ಲವ್ ನಲ್ಲಿ ಬಿದ್ದ ಮಗ ಅನ್ಯಜಾತಿಯ ಹುಡುಗಿಯನ್ನು ಕರೆದುಕೊಂಡು ಹೋಗಿ ಮದುವೆಯಾಗಿ ಬಂದ.

ಒಲ್ಲದ ಮನಸ್ಸಿನಿಂದ ಒಪ್ಪಿ ಸೊಸೆ ಯನ್ನು ಮನೆತುಂಬಿಸಿಕೊಂಡ ಅತ್ತೆಗೆ ಒಂದು ತಿಂಗಳಲ್ಲೇ ಆಘಾತ ಕಾದಿತ್ತು.ಮಗನಿರದ ವೇಳೆ ಜಗಳ ತೆಗೆದ ಸೊಸೆ ಅತ್ತೆಯ ಮೇಲೆ ಕುಡುಗೋಲು ಹಿಡಿದು ಹೊಡೆಯಲು ಹೋದಳು .

ಮಗ ಅಸಹಾಯಕತೆ ವ್ಯಕ್ತ ಪಡಿಸಿ ಅಪ್ಪ ಅಮ್ಮನ ತೊರೆದು ನಗರಕ್ಕೆ ವಲಸೆ ಹೋಗಲು ತೀರ್ಮಾನಿಸಿದ.

ಹೆಂಡತಿಯಿಂದ ಅಪ್ಪ ಅಮ್ಮನ ತೊರೆದ ಬಗ್ಗೆ ಚಿಂತಿಸಿ ಮಹಾರಾಜ ಕುಡಿತದ ದಾಸನಾದ.

ಇತ್ತ ವೃದ್ದ ದಂಪತಿಗಳು ಮಗ ಬರುವನು ಎಂದು ಈಗಲೂ ಆಸೆಗಣ್ಣಿನಿಂದ ದಾರಿ ನೋಡುತ್ತಿರುವರು.....


ಸಿಹಿಜೀವಿ

ಸಿ ಜಿ ವೆಂಕಟೇಶ್ವರ


29 ಆಗಸ್ಟ್ 2021

ಸನ್ಮಾನ (ನ್ಯಾನೋ ಕಥೆ)

 


*ಸನ್ಮಾನ* (ನ್ಯಾನೋ ಕಥೆ)


ಕಾಲಿಲ್ಲದವಳು ಎಂದು ಅವಳನ್ನು ಬಾಲ್ಯದಲ್ಲಿ ಊರವರು ಮೂದಲಿಸಿದ್ದರು. 

ಇಂದು ಅದೇ ಊರಿನಲ್ಲಿ ಅಂದು ನಿರ್ಲಕ್ಷ್ಯಕ್ಕೆ ಒಳಗಾದ ಭಾಗ್ಯಮ್ಮ   ಸನ್ಮಾನ  ಸ್ವೀಕರಿಸುತ್ತಿದ್ದಾರೆ. 

"ವಿಕಲಚೇತನೆ ಭಾರತಕ್ಕೆ ಬಂಗಾರದ ಪದಕ ಪಡೆದಿರುವುದು ನಮ್ಮ ದೇಶದ ಭಾಗ್ಯ "ಎಂದು ಗ್ರಾಮ ಪಂಚಾಯಿತಿ ಅಧ್ಯಕ್ಷ  ಸಮಯಸಾಧಕ ಮೂರ್ತಿ ಭಾಷಣ ಮಾಡುವಾಗ ,ಸರ್ಕಾರ ಉಚಿತವಾಗಿ  ವಿಕಲಚೇತನರಿಗೆ ನೀಡುವ ಮೂರು ಚಕ್ರದ ಬೈಕ್ ನೀಡಲು ಸಾವಿರ ರೂ ಲಂಚ ಪಡೆದದ್ದು ಭಾಗ್ಯ ಳಿಗೆ ನೆನಪಾಯಿತು. 


#ಸಿಹಿಜೀವಿ


31 ಜುಲೈ 2021

ಮೊಮ್ಮೊಗಳ ಬಂಧನ


 


ಮೊಮ್ಮಗಳ ಬಂಧನ 


ನಮ್ಮ ಇಚ್ಛೆಗೆ ವಿರುದ್ಧವಾಗಿ ಪ್ರೇಮ ವಿವಾಹವಾದ ಮಗಳು ಹಲವಾರು ಬಾರಿ ತವರು ಮನೆಗೆ ಬಂದಾಗ " ನೀನು ನಮ್ಮ ಪಾಲಿಗೆ ಎಂದೋ ಸತ್ತಿರುವೆ ತೊಲಗು" ಎಂದು ಅವಮಾನ ಮಾಡಿದ್ದರು ಹೆತ್ತವರು.

ಕರುಳಿನ ಸಂಬಂಧ ಕಡಿಯಾಲಾಗದು ಎಂದುಕೊಂಡು ತಾಯಿಯು ಗಂಡನ ಕಣ್ತಪ್ಪಿಸಿ ಮಗಳ ಮನೆಗೆ ಬಂದರು , ಅಂಗಳದಲ್ಲಿ ಆಡುತ್ತಿದ್ದ ಮೊಮ್ಮಗಳ ಕಂಡು ಬರಸೆಳೆದಪ್ಪಿ ಮುದ್ದಾಡಿದರು, ಹೊಸಲಿನ ಬಳಿ ನಿಂತಿದ್ದ ತಾಯಿಯ ಕಣ್ಣಲ್ಲಿ ತನಗರಿವಿಲ್ಲದೇ ನಾಲ್ಕು ಹನಿ ಉದುರಿದವು.


ಸಿಹಿಜೀವಿ

ಸಿ ಜಿ ವೆಂಕಟೇಶ್ವರ


25 ಜುಲೈ 2021

ಹಣ ಪಾಶಾಣ .ನ್ಯಾನೋ ಕಥೆ


 



*ಹಣ ಪಾಶಾಣ* ನ್ಯಾನೋ ಕಥೆ 


ಹಣವೆಂದರೆ ಪಾಷಾಣ, ಬದುಕಲು ಹಣವೊಂದೇ ಬೇಕಿಲ್ಲ, ಹಣ ಸಂಬಂಧಗಳನ್ನು ಬೇರ್ಪಡಿಸುತ್ತದೆ .ಆದಷ್ಟೂ ಹಣದಿಂದ ದೂರವಿರಿ ಎಂದು ವೇದಿಕೆಯಲ್ಲಿ ಭಾಷಣ ಮಾಡಿದ ಸ್ವಾಮಿಜಿಗಳು ವೇದಿಕೆಯ ಕೆಳಭಾಗದಲ್ಲಿ ನಮಸ್ಕರಿಸಿದ ಭಕ್ತನಿಗೆ ತನ್ನ ಮಠಕ್ಕೆ ದೇಣಿಗೆ ಕೇಳಿದರು.


ಸಿಹಿಜೀವಿ

ಸಿ ಜಿ ವೆಂಕಟೇಶ್ವರ

02 ಮೇ 2021

ಕಾಲಾಯ ತಸ್ಮೈ ನಮಃ .ನ್ಯಾನೋ ಕಥೆ


 


ನ್ಯಾನೋ ಕಥೆ


*ಕಾಲಾಯ ತಸ್ಮೈ ನಮಃ*


ಅಂದೊಂದು ದಿನ "ನೀವು ಕೆಳ ಜಾತಿಯವರು ಅಗೋ ಅಲ್ಲಿದೆ ನೋಡು ಬ್ಯಾರೆ ತಟ್ಟೆ ,ಲೋಟ ತಗಾ ಊಟ ಹಾಕ್ತಾರೆ ಉಂಡು ,ತೊಳ್ದು ಅಲ್ಲೇ ಇಕ್ಕು ಅಂದಿದ್ದರು ಸಾಹುಕಾರ್.

ಇಂದು ಕರೋನ ಪಾಸಿಟಿವ್ ಬಂದ ಧಣಿಗಳಿಗೆ ತೋಟದ ಮನೆಯಲ್ಲಿ ಒಬ್ಬರನ್ನೇ ಇಟ್ಟು ದೂರದಿಂದಲೇ  ಊಟ ನೀಡಿ " ನಿಮ್ಮ ತಟ್ಟೆ ನೀವೇ ತೊಳೆದು , ಅಲ್ಲೇ ಇಟ್ಕೊಳ್ಳಿ ,ನಾಳೆ ತಂದು ಅದ್ರಲ್ಲೇ ಊಟ ಹಾಕ್ತೀನಿ" ಎಂದು ದೂರದಿಂದಲೇ ತಟ್ಟೆಗೆ ಚಪಾತಿ ಚಟ್ನಿ ಹಾಕಿ ಹೋದರು ಸಾಹುಕಾರ್ ಸೊಸೆ.


ದೂರದಿಂದ ಇದನ್ನು ನೋಡಿದ ಕೆಳ ವರ್ಗದ ಮಾರಪ್ಪ ,ಎಲ್ಲರಿಗೂ ಒಂದು ಕಾಲ ಬರುತ್ತೆ ಅಂತ ಯಾರೋ ಅಂದಿದ್ರು ಅದು ಇದೆನಾ? ಎಂದು ತನ್ನಲ್ಲೇ ಪ್ರಶ್ನೆ ಹಾಕಿಕೊಂಡನು....


*ಸಿಹಿಜೀವಿ*

ಸಿ ಜಿ ವೆಂಕಟೇಶ್ವರ

ತುಮಕೂರು



ವಿಲ್ .ನ್ಯಾನೋ ಕಥೆ


 



ನ್ಯಾನೋ ಕಥೆ


*ವಿಲ್*


ಮೂರು ಜನ ಗಂಡು ಮಕ್ಕಳು ಆಸ್ತಿಗೋಸ್ಕರ ಕಚ್ವಾಟ ಆಡುವುದನ್ನು ಕಂಡ ರಾಯರು " ನಾನು ಬದುಕಿರುವವರೆಗೂ 159ಕೋಟಿ ರೂ ನ ಈ ಆಸ್ತಿಯನ್ನು ಯಾರಿಗೂ ಹಂಚುವುದಿಲ್ಲ ನಾನು ವಿಲ್ ಮಾಡುವೆ " ಎಂದು ಖಡಾಖಂಡಿತವಾಗಿ ಹೇಳಿದರು.


ಹತ್ತು ವರ್ಷಗಳ ನಂತರ ಅನಾಥಾಶ್ರಮದಿಂದ ತಂದ ರಾಯರ ಪಾರ್ತೀವ ಶರೀರಕ್ಕೆ ಬೆಂಕಿ ಹಾಕಿದ ಮಕ್ಕಳು, ಬೆಂಕಿ ಇನ್ನೂ ಆರಿರಲಿಲ್ಲ,ಮನೆಗೆ ಬಂದು ವಿಲ್ ಹುಡುಕಿದರು...

ವಿಲ್ ಓದಿದ ಮಕ್ಕಳು ದಂಗಾದರು..

ವಿಲ್ ನಲ್ಲಿ ಈಗಿತ್ತು " ನನ್ನ ಎಲ್ಲಾ ಆಸ್ತಿಯು ಶ್ರೀ ವೆಂಕಟೇಶ್ವರ ಅನಾಥಾಶ್ರಮಕ್ಕೆ ಸೇರತಕ್ಕದ್ದು......



*ಸಿಹಿಜೀವಿ*

ಸಿ ಜಿ ವೆಂಕಟೇಶ್ವರ

ತುಮಕೂರು

ಮಾತುಕತೆ .ನ್ಯಾನೋ ಕಥೆ


 


ನ್ಯಾನೋ ಕಥೆ 


*ಮಾತುಕತೆ*


ಇಬ್ಬರ ನಡುವಿನ ಕೋಪ ಕಡಿಮೆಯಾಗಿರಲಿಲ್ಲ ,

ನಾಲ್ಕು ದಿನವಾದರೂ ಒಬ್ಬರಿಗೊಬ್ಬರು ಕನಿಷ್ಠ ಮುಖವನ್ನು ಸಹ ನೋಡಿರಲಿಲ್ಲ ಮೊದಲಾಗಿದ್ದರೆ ಎಷ್ಟೇ ಜಗಳವಾಡಿದ್ದರೂ ಅರ್ಧಗಂಟೆಯೊಳಗೆ "ಯಾಕೋ ತಲೆ ನೋವು ಟೀ ಮಾಡು ಚಿನ್ನ" ಎಂದು ರವಿ ಕೇಳಿದಾಗ "ಬೇಕಾದ್ರೆ ಬಂದು ಮಾಡಿಕೊಂಡು ಕುಡಿ" ಎಂದು ಕರಗದ ಸಿಟ್ಟಿನಿಂದ ಹೇಳಿದರೂ ಹತ್ತು ನಿಮಿಷಗಳ ಬಳಿಕ ಬಂದು ನೊರೆ ಹಾಲಿನ ಕಾಫಿ ಕೊಟ್ಟ ಉಷಾ " ಹೇಗಿದೆ ಕಾಫಿ ಎಂದು ಮುಖ ಊದಿಸಿಕೊಂಡು " ಕೇಳುತ್ತಿದ್ದಳು " ಆಹಾ... ಅಮೃತ ಚಿನ್ನ" ....

ಈಗೆ ಮಾತುಕತೆ ಮುಂದುವರಿದು ಮೋಡ ಕವಿದ ವಾತಾವರಣವು ತಿಳಿಯಾಗಿ ಇಬ್ಬರ ಮನವೆಂಬ ಆಗಸ ಶುಭ್ರವಾಗುತ್ತಿತ್ತು .


ಆದರೆ ಈ ಬಾರಿ ಮುನಿಸು ನಾಲ್ಕು ದಿನಗಳಿಗಿಂತ ವಿಸ್ತರಿಸಿ ಮುಂದುವರೆದಿತ್ತು ,

ಅಂದು ಸಂಜೆ ಉಷಾಳ ತಂದೆ ಊರಿಂದ ಬಂದರು, ದಂಪತಿಗಳು ಅವರನ್ನು ಆತ್ಮೀಯವಾಗಿ ಬರಮಾಡಿಕೊಂಡರು . ಅವರಿಬ್ಬರೂ ಮುನಿಸು ಮರೆತು ಪರಸ್ಪರ ಮಾತನಾಡಲಾರಂಭಿಸಿದರು , ರಾತ್ರಿಯ ಊಟದ ಬಳಿಕ " ನನಗೆ ಪ್ರಯಾಣದ ಆಯಾಸ ಬೇಗ ಮಲಗುವೆ "ಎಂದು ರಾಯರು ಮಲಗಿದರು ನಾವೂ ಮಲಗುವೆವು ಎಂದು ಕೋಣೆಗೆ ಹೋದ ದಂಪತಿಗಳು ನಾಲ್ಕು ದಿನದಿಂದ ಆಡದೇ ಉಳಿದ ಮಾತುಗಳನ್ನು ಒಂದೇ ದಿನ ಮಾತನಾಡಿದರು ಅವರ ಜೊತೆ ಮಂಚವೂ ತುಸು ಜೋರಾಗಿಯೇ ಮಾತನಾಡುವ ಸದ್ದು ಹೊರಗೇನೂ ಕೇಳಿಸಲಿಲ್ಲ.......



*ಸಿಹಿಜೀವಿ*

ಸಿ ಜಿ ವೆಂಕಟೇಶ್ವರ

ತುಮಕೂರು

ಒಂದೂರಲ್ಲಿ ಒಂದು ದಿನ .ನ್ಯಾನೋ ಕಥೆ


 *ನ್ಯಾನೋ ಕಥೆ *


ಒಂದೂರಿನಲ್ಲಿ ಒಂದು ದಿನ 

ಪರ ಊರಿನ ವ್ಯಕ್ತಿ ನಡದುಕೊಂಡು ಹೋಗುತ್ತಿದ್ದ, ಸಂಜೆಯಾಗುತ್ತಾ ಕತ್ತಲಾದಾಗಾ ಅದೇ ಊರಿನಲ್ಲಿ ತಂಗಲು ಯೋಚಿಸುವಾಗ ರಸ್ತೆಯ ಪಕ್ಕ ಒಂದು ಮನೆ ಕಾಣಿಸಿತು,

ಮನೆಯ ಹೊರಗೆ ನೋಡಿದರೆ ತಿಳಿಯುತ್ತಿತ್ತು ಅದು ಪಾಳು ಬಿದ್ದ ಮನೆಯೆಂದು, ಅಂಜುತ್ತಲೇ ಮನೆಯ ಒಳಗೆ ಕತ್ತಲಲ್ಲಿ ನಡೆದವನಿಗೆ," ನಿನ್ನ ಮನೆಗೆ ಆತ್ಮೀಯ ಸ್ವಾಗತ ಬಾ ಗೆಳೆಯ ಎಂಬ ಹೆಣ್ಣು ಧ್ವನಿ " ಕೇಳಿತು 

ನೋಡಲು ಅಲ್ಲಿ ಯಾರೂ ಇರಲಿಲ್ಲ.


ಬೆಳಿಗ್ಗೆ ಅಪರಿಚಿತ ವ್ಯಕ್ತಿಯ ಶವ ನೋಡಲು ಊರಿನ ಬಹಳ ಜನ ಸೇರಿದ್ದರು......


*ಸಿಹಿಜೀವಿ*

ಸಿ ಜಿ ವೆಂಕಟೇಶ್ವರ

ತುಮಕೂರು

28 ಫೆಬ್ರವರಿ 2021

ಗುರುದಕ್ಷಿಣೆ .ನ್ಯಾನೋ ಕಥೆ


 




*ನ್ಯಾನೊ ಕಥೆ*


*ಗುರುದಕ್ಷಿಣೆ*


"ನಾನು ಆರ್ಥಿಕವಾಗಿ ಸಮಸ್ಯೆಯಲ್ಲಿರುವೆ ಅಂತ ತಿಳಿದು ನನಗೆ ಈ ಸಹಾಯ ಮಾಡಲು ಬರಬೇಡಿ , ನಿಮ್ಮ ಅಭಿಮಾನ ಸಾಕು ,ಇದೆಲ್ಲಾ ಬೇಡ ಇಂತಹ ದುಬಾರಿ ಉಡುಗೊರೆ ಬೇಡ, ದಯವಿಟ್ಟು ಹೊರಡಿ "ಎಂದು ತಮ್ಮ ದಪ್ಪನೆಯ ಕನ್ನಡಕವನ್ನು ಸರಿಪಡಿಸಿಕೊಂಡು ಕೋಲನಿಡಿದು ಎದ್ದು ಹೊರಗೆ ಹೋಗಲು ಸಿದ್ದರಾದರು." ತಿಪ್ಪೇಸ್ವಾಮಿ ಗಳು " ಗುರುಗಳೆ ನೀವು ಕಲಿಸಿದ ವಿದ್ಯೆಯಿಂದ ನಾವೆಲ್ಲರೂ ಇಂದು  ಜೀವನದಲ್ಲಿ ಒಂದು ಹಂತಕ್ಕೆ ಬಂದಿದ್ದೇವೆ , ದಯವಿಟ್ಟು ನಮ್ಮ ಉಡುಗೊರೆ ಸ್ವೀಕರಿಸುಲೇ ಬೇಕು ಇದನ್ನು ಗುರುದಕ್ಷಿಣೆ ಎಂದು ಸ್ವೀಕರಿಸಿ " ಎಂದು ಎಲ್ಲರೂ ಒಕ್ಕೊರಲಿನಿಂದ ಹೇಳಿದಾಗ ,ಅವರ ಬಲವಂತಕ್ಕೆ ಕಾರಿನಲ್ಲಿ ಕುಳಿತು,  ಒಂದು ಹೊಸ  ಮನೆಯ ಮುಂದೆ ನಿಂತರು .ಎಲ್ಲಾ ಶಿಷ್ಯರು ಗುರುಗಳ ಕೈಗೆ ಮನೆಯ ಬೀಗದ ಕೀಯನ್ನು ನೀಡಿದರು.

ಹೊಸ ಮನೆಯ ಬಾಗಿಲ ತೆರೆದ ಗುರುಗಳ ಕಣ್ಣಿನಿಂದ, ಹೊಸಿಲ ಮೇಲೆ ನಾಲ್ಕು ಹನಿಗಳು ಉದುರಿದವು....


*ಸಿಹಿಜೀವಿ*

ಸಿ ಜಿ ವೆಂಕಟೇಶ್ವರ

ತುಮಕೂರು

27 ಫೆಬ್ರವರಿ 2021

ಹಿತ್ತಲ ಗಿಡ...... ಪುಟ್ಟ ಕಥೆ

 


*ಹಿತ್ತಲ ಗಿಡ.....*

ನ್ಯಾನೋ ಕಥೆ

"ಏ ಅವರೇನು ಬೇಡ ಸಿಟೀಲಿ ಇರೋ ಟ್ಯೂಷನ್ ಮೇಷ್ಟ್ರು ಬಾಳ ಸೆನಾಗಿ ಹೇಳ್ಕೊಡ್ತಾರಂತೆ  ಅಲ್ಲಿಗೇ ಹೋಗು ಮೂವತ್ತು ಕಿಲೋಮೀಟರ್ ಆದ್ರೂ ಪರವಾಗಿಲ್ಲ ,ಪೀಜ್ ನಾನು ಕೊಡ್ತೀನಿ ಒಟ್ನಲ್ಲಿ ನೀನು ಡಾಕುಟ್ರು ಆಗ್ಬೇಕು"
ಎಂದು ಜೋರು ಧ್ವನಿಯಲ್ಲಿ ಹೇಳುತ್ತಿದ್ದರು ,ರಶ್ಮಿಕಾಳ ತಂದೆ ಪರಮೇಶ್.
" ರೀ ನಮ್ಮೂರಾಗೆ ಇರೋ ಲೋಹಿತಪ್ಪ ಪ್ರೀಯಾಗಿ ಪಾಠ, ಮಾಡ್ತಾರೆ,ಸೆನಾಗೂ  ಮಾಡ್ತಾರಂತೆ,  ಅವರತ್ರಾನೆ ಕಳ್ಸಾನ ನಮ್ಮುಡಿಗೀನಾ ಯಾಕೆ ಪ್ಯಾಟೆ ಸವಾಸ? " ಎಂಬ ಹೆಂಡತಿಯ ಮಾತು ಕೇಳಿ ಕೋಪಗೊಂಡ ಪರಮೇಶ್ "ಇದೆಲ್ಲಾ  ನಿನಿಗೆ ಗೊತ್ತಾಗಲ್ಲ ,ಸುಮ್ಮನೆ ಮುದ್ದೆ ಮಾಡೋಗು" ಎಂದರು.
ಗೊನಗುತ್ತ ಅಡಿಗೆ ಮನೆಗೆ ಹೋದರು ಪವಿತ್ರ .
ದ್ವಿತೀಯ ಪಿ ಯು ಸಿ ಫಲಿತಾಂಶ ಪ್ರಕಟವಾದ ದಿನ ಅದೇ ಊರಿನ ಬಾಲಾಜಿ ೯೮℅  ಅಂಕ ಪಡೆದ ಎಂದು ಪರಮೇಶ್ ರವರ ಮನೆಗೆ ಬಂದು ಸಿಹಿ‌ನೀಡಿದ .
" ಯಾರತ್ರ ಟೂಷನ್ ಗೆ ಹೋಗಿದ್ದಪ್ಪ " ಪ್ರಶ್ನೆ ಮಾಡಿದರು ಪರಮೇಶ್  . ಬಾಲಾಜಿಯು " ಟ್ಯೂಷನ್ ಏನೂ ಇಲ್ಲ ಅಂಕಲ್ ನಮ್ಮೂರ ಲೋಹಿತ್ ಸರ್ ವಾರಕ್ಕೊಂದ್ ಎರಡ್ಸಾರಿ ಸಾರಿ ಗೈಡ್ ಮಾಡ್ತಿದ್ರು " ಎಂದ.
" ನೋಡಮ್ಮ ನೀನು ಇದಿಯಾ, ಟೌನ್ ಗೆ ಟೂಷನ್ ಕಳಿಸಿದ್ರೂ ೬೫℅ ಸಾಕಾ?
ಮಗಳು ತಲೆ ತಗ್ಗಿಸಿಕೊಂಡು ಅಡಿಗೆ ಮನೆ ಕಡೆ ನಡೆದಳು.
ಅಡಿಗೆ ಮನೆಯಲ್ಲಿ ರಶ್ಮಿಕಾಳ ತಾಯಿ "ಹಿತ್ತಲ ಗಿಡ ಮದ್ದಲ್ವಂತೆ " ಎಂದು ಹೇಳಿದ್ದು ಪರಮೇಶ್ ಕಿವಿಗೂ ಬೀಳದಿರಲಿಲ್ಲ...

*ಸಿಹಿಜೀವಿ*
ಸಿ ಜಿ ವೆಂಕಟೇಶ್ವರ

17 ಜೂನ್ 2020

ಸದುಪಯೋಗ?( ನ್ಯಾನೋ ಕತೆ)


*ಸದುಪಯೋಗ?*

ನ್ಯಾನೋ ಕಥೆ

" ಏ ನೀನೇನು ನಿಮ್ಮಪ್ಪನ ಮನೆಯಿಂದ ತಂದಿಲ್ಲ ಕೊಡೊಲೆ ,ಯಾರೋ ಕೊಟ್ಟಿರೋ ಅರ್ದ ಲೀಟರ್ ಹಾಲು ಉಚಿತವಾಗಿ ಹಂಚೋಕೆ ಇಷ್ಟು ಧಿಮಾಕು,  ಅಷ್ಟು ಪೋಸು ಕೊಡ್ತಿಯಾ" ಕಿರುಚಿದ ದಿವಾಕರ.
" ನೀನು ಏನು ಎಗಾರಾಡ್ಬೇಡ, ನೀನು ಪುಕ್ಸಟ್ಟೆ ಸಿಗೋ ಹಾಲು ತಗೊಂಡೋಗಾಕೆ ಬಂದಿರೋದು ,ಸುಮ್ಮನೆ ಲೈನ್ ನಲ್ಲಿ ನಿಂತ್ಕೊಂಡು ಬಾರಪ್ಪ ,ಇಲ್ಲದ್ ಗಾಂಚಾಲಿ ಮಾಡಬೇಡ" ಎಂದ ಜಗದೀಶ .
ಮಾತಿಗೆ ಮಾತು ಬೆಳೆದು, ಇಬ್ಬರೂ ಕೈ ಕೈ ಮಿಲಾಯಿಸಿ, ಕರೋನ ಪ್ರಯುಕ್ತ ಉಚಿತವಾಗಿ ಹಂಚಲು ತಂದಿದ್ದ ಹಾಲಿನ ಪಾಕೆಟ್ಗಳು ಇರುವ  ಟ್ರೇ ಕೆಳಗೆ ಬಿದ್ದಿತು. ಜನರ ಕಾಲ್ತುಳತಕ್ಕೆ ಎಲ್ಲಾ ಪಾಕೆಟ್ ಗಳು ಒಡೆದು ಹಾಲೆಲ್ಲ ಮಣ್ಣು ಪಾಲಾಯಿತು.
ಒಬ್ಬರಿಗೊಬ್ಬರು ಬೈಯ್ದುಕೊಂಡು ಅವರವರ ಮನೆ ಸೇರಿದರು.
ಮನೆಗೆ ಬಂದರೂ ಅದೇ ಸಿಟ್ಟಿನಿಂದ ದಿವಾಕರ ಬೈಯ್ದು ಕೊಳ್ಳುತ್ತಿದ್ದ "ಆ ಜಗದೀಶ ಏನ್ ಅವ್ನೆ ಹಾಲು ಕೊಟ್ಟಂಗೆ ಪೋಸ್ ಕೊಡಾಕೆ ಬಂದ ,ಎಲ್ಲಾ ಹಾಲು ಮಣ್ಣು ಪಾಲಾಯ್ತು , ಅಂಗೆ ಆಗಲಿ " ಎಂದು ಶಾಪ ಹಾಕಿದ.
ಈ ಮಾತು ಕೇಳಿದ ದಿವಾಕರನ ಮಗಳು ಸುಲೋಚನ ಮನದಲ್ಲೇ ನೊಂದುಕೊಂಡಳು " ನಾನು ಕೂಡಿಟ್ಟ ಐನೂರು ರೂಪಾಯಿ ಹಣವನ್ನು ಬಡವರಿಗೆ ಹಾಲು ಕೊಡಿಸಿ  ಎಂದು   ಜಗದೀಶ್ ಅಂಕಲ್ ಗೆ ಕೊಟ್ಟಿದ್ದು ಸದುಪಯೋಗ ಆಗಲಿಲ್ಲವಲ್ಲ "ಎಂದು ಕೊರಗಿದಳು.
*ಸಿ ಜಿ ವೆಂಕಟೇಶ್ವರ*