29 November 2022

KYATHANA MAKKI ..

 

HIKKALLAPPA TEMPLE

 

BARISU KANNADA DIMDIMAVA

 

VISHVA VINOOTHANA VIDYA CHETANA

 

KANNADA RAJYOTSAVA

 

PAKSHILOKA

 

OUR TOUR

 

MANDARAGIRI

 

ಬದುಕು ನಿಂತ ನೀರಲ್ಲ...

 

#ಬದುಕು_ನಿಂತ_ನೀರಲ್ಲ..

ಜೀವನ ಬಹುತೇಕ ಬಾರಿ ನಾವಂದುಕೊಂಡಂತೆ ಇರುವುದಿಲ್ಲ .ನಾವೇನೋ ಅಂದುಕೊಂಡರೆ ಮತ್ತೇನೋ ಆಗಿರುತ್ತವೆ. ಡಾಕ್ಟರ್ ಆಗಬೇಕೆಂದು ಕೊಂಡವ ಆಕ್ಟರ್ ಆಗಿಬಿಡುತ್ತಾನೆ.ಆಗರ್ಭಶ್ರೀಮಂತ ಇದ್ದಕ್ಕಿದ್ದಂತೆ ಎಲ್ಲಾ ಕಳೆದುಕೊಂಡು ಬೀದಿಗೆ ಬಂದು ನಿಂತಿರುತ್ತಾನೆ .ನನ್ನ ಜೀವನ ಇಷ್ಟೇ ಆರಕ್ಕೇರಲ್ಲ ಮೂರಕ್ಕಿಳಿಯಲ್ಲ ಎಂದುಕೊಂಡವ ಯಶಸ್ಸಿನ ಉನ್ನತ ಶಿಖರ ಏರಿಬಿಟ್ಟಿರುತ್ತಾನೆ. ಕೆಲವೊಮ್ಮೆ ನಮ್ಮ ಪ್ರಯತ್ನ ನಮ್ಮ ಯಶಸ್ಸಿಗೆ ಕಾರಣ ಎಂಬುದನ್ನು ಎಲ್ಲರೂ ಒಪ್ಪಿದರೂ ಕೆಲವೊಮ್ಮೆ  ಪ್ರಾಮಾಣಿಕ ಪ್ರಯತ್ನ ಮಾಡಿದರೂ ಯಶಸ್ಸು ಲಭಿಸದೇ ನಮ್ಮ ಕಷ್ಟ ಕೋಟಲೆಗಳು ಮುಂದುವರೆದ ಉದಾಹರಣೆಗಳು ನಮ್ಮ ಮುಂದಿವೆ.
ನಮಗೆ ಯಶಸ್ಸು ಸಿಗದಿದ್ದಾಗ ನಮ್ಮ ಕಷ್ಟ ಕಾಲದಲ್ಲಿ ನಾವು ಹೇಗೆ ವರ್ತನೆ ಮಾಡುತ್ತೇವೆ, ಒತ್ತಡ ಹೇಗೆ ನಿಯಂತ್ರಣ ಮಾಡಿಕೊಳ್ಳುತ್ತೇವೆ ಎಂಬುದರ ಮೇಲೆ ನಮ್ಮ ವ್ಯಕ್ತಿತ್ವ ನಿರ್ಧಾರವಾಗುತ್ತದೆ.
ಹಾಗಾದರೆ ದುಃಖ ಅಥವಾ ಕಷ್ಟಗಳನ್ನು ನಿಗ್ರಹಿಸುವುದು ಅಷ್ಟು ಸುಲಭವೇ? ಎಂದರೆ ಖಂಡಿತವಾಗಿಯೂ ಸುಲಭವಲ್ಲ ಕ್ರಮೇಣವಾಗಿ ನಾವು ಜೀವನದ. ಏರಿಳಿತಗಳು ಮತ್ತು ನೋವು ನಲಿವುಗಳಿಗೆ  ಒಗ್ಗಿಕೊಳ್ಳಲೇಬೇಕು. ನಮ್ಮ ಕೈಯಲ್ಲಿ ಯಾವುದು ಇರುವುದಿಲ್ಲವೋ ಅದರ ಬಗ್ಗೆ ಚಿಂತೆ ಮಾಡುವುದನ್ನು ಕಡಿಮೆ ಮಾಡಿಕೊಂಡರೆ ನಾವು ಅರ್ಧ ನೆಮ್ಮದಿ ಪಡೆದಂತೆ. ನದಿಯು ಹಳ್ಳ ಕೊಳ್ಳ ದಾಟಿ ಸಮುದ್ರ ಸೇರುವಾಗ ನೂರಾರು ಏರಿಳಿತ ಕಂಡಿರುತ್ತದೆ ಕಡೆಗೆ ಸಾಗರವೆಂಬ ಗಮ್ಯ ಸೇರುತ್ತದೆ.ನಾವೂ ಸಹ ಜೀವನವೆಂಬ  ನೌಕೆಯಲ್ಲಿ ಪಯಣ ಮುನ್ನೆಡೆಸಬೇಕು ಅದಕ್ಕೆ ಹಿರಿಯರು ಹೇಳಿರುವುದು ಬದುಕು ನಿಂತ ನೀರಲ್ಲ....

#ಸಿಹಿಜೀವಿ.



28 November 2022

ಹಿಕ್ಕಲ್ಲಪ್ಪ ಬೆಟ್ಟ..


 


ಹಿಕ್ಕಲ್ಲಪ್ಪನ ದರ್ಶನ ಮಾಡೋಣ ಬನ್ನಿ.


ಈ ವರ್ಷದ ಬೆಳಕಿನ ಹಬ್ಬ ದೀಪಾವಳಿಯನ್ನು ವಿಶಿಷ್ಟವಾಗಿ ಆಚರಿಸಲು ಮನಸ್ಸು ಮಾಡಿದ ನಮ್ಮ ಸಮಾನ ಮನಸ್ಕ ತಂಡ ತುಮಕೂರು ಸಮೀಪದ ಮತ್ತೊಂದು ವಿಶೇಷ ಸ್ಥಳ ವೀಕ್ಷಿಸಲು ಸಿದ್ಧವಾಗಿ ಮನೆಯಲ್ಲಿ ಹಬ್ಬದ ಊಟ ಸವಿದು ಬೈಕ್ ಏರಿ ಹೊರಟೇಬಿಟ್ಟೆವು. 

ತುಮಕೂರು  ದಾಟಿ ದಾರಿಯಲ್ಲಿ ತಂದೂರಿ ಟೀ ಸವಿದು ಬೈಕ್ ಏರಿದ ನಮ್ಮನ್ನು ದೇವರಾಯನ ದುರ್ಗದ ಕಾಡಿನ ತಂಪಾದ ಹಿತಕರವಾದ ವಾತಾವರಣ ಸ್ವಾಗತಿಸಿತು.   ಊರ್ಡಿಗೆರೆ ತಲುಪಿದ ನಾವು ಸ್ಥಳೀಯರನ್ನು ಕೇಳಿಕೊಂಡು ವಿಳಾಸ ಪಡೆದು ಕೆಂಪೋನಹಳ್ಳಿ ಕ್ರಾಸ್ ಬಳಿ ತಿರುಗಿ ಹಿಕ್ಕಲ್ಲಪ್ಪ ಬೆಟ್ಟ ಅಥವಾ ಕೂರ್ಮಗಿರಿ ಕಡೆಗೆ ಸಾಗಿದೆವು...




ದೂರದಿಂದಲೇ ಸ್ವಾಗತ ಕಮಾನು ಕಂಡಿತು ಅದರ ಹಿನ್ನೆಲೆಯಲ್ಲಿ ಹಿಕ್ಕಲ್ಲಪ್ಪ ಬೆಟ್ಟವೂ ಕಾಣಿಸಿತು ನಿಧಾನವಾಗಿ ಬೈಕ್ ನಲ್ಲಿ ಬೆಟ್ಟ ಏರಿದೆವು .1650 ಅಡಿಗಳಿಗೂ ಎತ್ತರದ ಬೆಟ್ಟ ಏರುವಾಗ ಅಲ್ಲಲ್ಲಿ ಕಾಣುವ ಮರಗಿಡಗಳ ಸೌಂದರ್ಯ, ದೂರದಲ್ಲಿ ನಿಂತ ತೋಟಗಳು , ದೊಡ್ಡದಾದ ಕೆರೆಗಳ ದೃಶ್ಯಗಳು ನಮ್ಮನ್ನು ಬಹಳ ಆಕರ್ಷಸಿದವು.ಹಾಗೆ ಬರುವಾಗ ಟ್ರೆಕ್ಕಿಂಗ್ ಬಂದಿದ್ದರೆ ಇನ್ನೂ ಚೆನ್ನಾಗಿತ್ತು ಎನಿಸಿತು.

ಬೆಟ್ಟದ ತುದಿ ತಲುಪಿದ ನಾವು ಕೈಕಾಲು ತೊಳೆದುಕೊಂಡು ಹಿಕ್ಕಲ್ಲಪ್ಪ ಅಥವಾ ವೆಂಕಟೇಶ್ವರ ಸ್ವಾಮಿಯ ದರ್ಶನ ಮಾಡಿದೆವು.


ದೇವಾಲಯದ ಮುಖ್ಯ ವಿಗ್ರಹವು ವಿಷ್ಣುವಿನ ಆಮೆ ಅಥವಾ ಕೂರ್ಮ ಅವತಾರದಲ್ಲಿ ಇರುವುದರಿಂದ ಇದನ್ನು ಕೂರ್ಮಗಿರಿ ಕ್ಷೇತ್ರ ಎಂದೂ ಕರೆಯುತ್ತಾರೆ . ಇಲ್ಲಿನ ದೇವರು ವೆಂಕಟರಮಣನಾದರೂ ಇಲ್ಲಿ ಹಿಕ್ಕಲ್ಲಪ್ಪ ಎಂದು ಜನಪ್ರಿಯವಾಗಿ ಕರೆಯುತ್ತಾರೆ. 






ಮೂಲ ಕಪ್ಪು ಗ್ರಾನೈಟ್ ವಿಗ್ರಹವನ್ನು ಸಾಲಿಗ್ರಾಮ ಕಲ್ಲಿನಿಂದ ಮಾಡಲಾಗಿದೆ. ಈ ವಿಗ್ರಹವು ನೆಲಮಟ್ಟದಿಂದ ಕೆಳಮಟ್ಟದಲ್ಲಿ ಪ್ರತಿಷ್ಠಾಪಿಸಲ್ಪಟ್ಟಿದೆ.

 1999 ರಲ್ಲಿ ಸ್ಥಾಪಿಸಲಾದ ಬಾಲಾಜಿಯ ಮತ್ತೊಂದು ವಿಗ್ರಹವಿದೆ . ಇದನ್ನು  ಆಂಧ್ರಪ್ರದೇಶದ ತಿರುಮಲ ತಿರುಪತಿ ದೇವಸ್ಥಾನಂ ಟ್ರಸ್ಟ್ ನವರು ಬಂದು ಪ್ರತಿಷ್ಠಾಪಿಸಿದ್ದಾರೆ.   ಅಂದಿನಿಂದ ಈ ದೇವಾಲಯವು  ತಿರುಮಲದಲ್ಲಿರುವ ಮೂಲ ದೇವರ 108 ಉಪ-ದೇಗುಲಗಳಲ್ಲಿ ಒಂದೆಂದು ಗುರುತಿಸಲ್ಪಟ್ಟಿದೆ.


ಸ್ವಾಮಿಯ ದರ್ಶನ ಮಾಡಿ ಅರ್ಚಕರಾದ ಶಿವಣ್ಣನವರನ್ನು ಈ ಕ್ಷೇತ್ರದ ಬಗ್ಗೆ ಹೆಚ್ಚಿನ ಮಾಹಿತಿ ತಿಳಿಸಲು ಕೋರಿದಾಗ ಅವರು ನೀಡಿದ ಮಾಹಿತಿಯು ಬಹು ಕುತೂಹಲ ಮತ್ತು ಆಸಕ್ತಿಕರವಾಗಿತ್ತು.ಅವರ ಮಾಹಿತಿಯನ್ನು ನಮ್ಮ ಸಮಾನ ಮನಸ್ಕ ತಂಡದ ಹಿರಿಯರಾದ ಕೋಟೆ ಕುಮಾರ್ ರವರು ದಾಖಲು ಮಾಡುತ್ತಿದ್ದರು. ಶಿವಣ್ಣನವರು ಹೇಳುತ್ತಾ ಹೀಗೆಂದರು

"ಇತಿಹಾಸ ಪ್ರಸಿದ್ಧ ದೇವರಾಯನದುರ್ಗದ ಉಪದುರ್ಗ ವಾದ ಕೂರ್ಮಗಿರಿಯೆಂದೇ ಪ್ರಸಿದ್ಧ ಪಡೆದಿರುವ ಬೆಟ್ಟ ಇದು. ಈ ಬೆಟ್ಟಕ್ಕೆ ಹಿಟ್ಟುಕಲ್ಲು ಬೆಟ್ಟ, ಇಕ್ಕಲ್ಲುಬೆಟ್ಟ ಕೂರ್ಮಾದ್ರಿ, ಕೂರ್ಮಾಚಲ ಇತ್ಯಾದಿ ಅನ್ವರ್ಥಕ ನಾಮಗಳಿಂದ ಕರೆಯಲ್ಪಡುವ ಈ ಕ್ಷೇತ್ರದಲ್ಲಿ ನೆಲಸಿರುವ ದೇವರೇ ಶ್ರೀ ವೆಂಕಟೇಶ್ವರಸ್ವಾಮಿ. 


ಪುರಾಣ ಕಥೆಯಲ್ಲಿ ಬರುವ ಶ್ರೀ ನಿವಾಸ ಅಥವಾ ಶ್ರೀ ವೆಂಕಟೇಶ್ವರ ಮಹಿಮಾ ಗ್ರಂಥಗಳಲ್ಲಿ ಉಲ್ಲೇಖೀಸಿರುವಂತೆ ಆಂಧ್ರ ಪ್ರದೇಶದ ತಿರುಮಲಗಿರಿಯಲ್ಲಿ  ಇಬ್ಬರು ಪತ್ನಿಯರ ಕಾಟ ತಾಳಲಾರದೆ ಶಿವರೂಪ ಧರಿಸಿರುವ “ ಬಕುಳಾದೇವಿ” ಆಶ್ರಯ ಪಡೆಯುವ ಮೊದಲು ಶ್ರೀ ವೆಂಕಟೇಶ್ವರ ಸ್ವಾಮಿ ಪತ್ನಿಯಾದ ಲಕ್ಷ್ಮೀದೇವಿಯನ್ನು ಅನ್ವೇಷಣಾರ್ಥವಾಗಿ ವೈಕುಂಠದಿಂದ ಭೂ ಲೋಕದ ಕರವೀರಪುರ ಅಥವಾ ಕೊಲ್ಲಾಪುರದಲ್ಲಿದ್ದ ಶ್ರೀ ಮಹಾಲಕ್ಷ್ಮೀಯನ್ನು ಅರಸುತ್ತಾ ಸಾಮಾನ್ಯ ಮನುಷ್ಯ ರೂಪಧಾರಿಯಾಗಿ ನಟನೆ ಮಾಡುತ್ತಾ ಲಕ್ಷ್ಮೀದೇವಿಯನ್ನು ಪುನಃ ವೈಕುಂಠಕ್ಕೆ ಬರುವಂತೆ ಆಗ್ರಹಿಸಿದನೆಂದು  ಹೇಳಲಾಗಿದೆ. 

ಆಕೆ ಬರಲು ಒಪ್ಪದಿದ್ದ ಕಾರಣ ಈ ಕೂರ್ಮಗಿರಿಯಲ್ಲಿ ನೆಲಸಿದಾಗ ಶ್ರೀ ವೆಂಕಟೇಶ್ವರ ಸ್ವಾಮಿಯು ಕೂರ್ಮನಾಗಿ ಕುಳಿತ ಸ್ಥಳದಲ್ಲೇ ಸ್ವಾಮಿಯನ್ನು ಆವರಿಸಿ ಹುತ್ತ ಬೆಳೆದಿದ್ದು ಹಾಗೂ ಹಸಿವಿನಿಂದ ನರಳುತ್ತಿದ್ದ ಸ್ವಾಮಿಗೆ ಹಾಲುಣಿಸುವ ಸಲುವಾಗಿ ಚತುರ್ಮುಖ ಬ್ರಹ್ಮದೇವರು ಹಾಗೂ ಶ್ರೀ ದುದ್ರದೇವರುಗಳೇ ಹಸು, ಕರು ರೂಪಧರಿಸಿ ಬಂದು ಹುತ್ತಕ್ಕೆ ಹಾಲು ಕರೆಯುತ್ತಿದ್ದರೆಂದು ಹೇಳಲಾಗಿದ್ದು ಸ್ವಾಮಿಯನ್ನು ಅವರಿಸಿ ಬೆಳೆದ ಹುತ್ತವೇ ಮುಂದೆ ಹಿಟ್ಟುಕಲ್ಲಾಗಿ ಪರಿವರ್ತಿತವಾದ್ದರಿಂದ ಹಿಟ್ಕಲ್  ಅಥವಾ ಹಿಕ್ಕಲ್ ಬೆಟ್ಟ ಎಂದು ದಂತ ಕಥೆಯಿಂದ  ಕೇಳಿ ಬರುತ್ತದೆ. ಇಂತಹ ಪವಿತ್ರ ಸ್ಥಳವಾದ ಈ ಕೂರ್ಮಗಿರಿಯೇ “ ಅಧಿತಿರುಮಲೆ” ಎಂದು ಹಾಗೂ ಮೂಲ ತಿರುಪತಿಯೆಂದು ಕರೆಯಲ್ಪಟ್ಟಿದೆ


ಮತ್ತೊಂದು ರೀತಿಯಲ್ಲಿ ಸ್ಥಳೀಯ ಜನರಲ್ಲಿ ಕೇಳಿಬರುವ ಕಥೆಯೆಂದರೆ ಆನೆಯನ್ನು ಸಂಸ್ಕೃತದಲ್ಲಿ “ಕರಿ ಎಂದು ಆಮೆಯನ್ನು ಕೂರ್ಮ' ಎಂತಲೂ ಕರೆಯುವುದು ವಾಡಿಕೆಯಾಗಿದ್ದು  ಇದರ ಅರ್ಥದಂತೆ ಪಕ್ಕದಲ್ಲೇ ಇರುವ ದೇವರಾಯನದುರ್ಗವು ಅತೀ ಎತ್ತರ, ವಿಶಾಲವಾಗಿದ್ದು, ಆನೆಯ ರೂಪದಲ್ಲಿ ಕಾಣಿಸುವುದರಿಂದ ಆ ಸ್ಥಳಕ್ಕೆ ' ಕರಿಗಿರಿ' ಪರ್ವತವೆಂದೂ ಅದರ ಪಕ್ಕದಲ್ಲಿ ಸ್ವಲ್ಪ ಅಂತರದಲ್ಲಿ ಅತೀ ಚಿಕ್ಕ ಗುಡ್ಡೆ ಇದ್ದು ಇದು ಆಮೆಯ ರೂಪದಲ್ಲಿ ಇರುವುದರಿಂದ ಇದು ಕೂರ್ಮಗಿರಿ ಎಂತಲೂ ಕರೆಯಲ್ಪಡುತ್ತಿದ್ದು ಈಗ ಪ್ರಕೃತಿ ನಯನ ಮನೋಹರ ವಾತಾವರಣದಲ್ಲಿರುವ ಪುಣ್ಯಕ್ಷೇತ್ರದಲ್ಲಿರುವ ಶ್ರೀ ವೆಂಕಟೇಶ್ವರ ಸ್ವಾಮಿಗೆ ಭಕ್ತರು ಕ್ಷೀರಾಭಿಷೇಕ ಮಾಡಿ ಪ್ರಾರ್ಥಿಸಿದರೆ ಸ್ವಾಮಿಯು ಪ್ರಸನ್ನನಾಗುತ್ತಾನೆ. ಅಭೀಷ್ಟಸಿದ್ದಿಯಾಗುತ್ತದೆ ಎಂಬುದು ಪ್ರತೀತಿ" ಎಂದು ವಿವರಣೆ ನೀಡಿದರು.

ನಂತರ ದೇವಾಲಯದ ಮುಂಭಾಗದಲ್ಲಿ ಇರುವ 

ಶ್ರೀದೇವಿ ಮತ್ತು ಭೂದೇವಿ ದೇವತೆಗಳ ವಿಗ್ರಹಗಳಿಗೆ ನಮಸ್ಕಾರ ಮಾಡಿ ಬೆಟ್ಟದ ತುದಿಯಿಂದ ಕೆಳಗಿನ ಪ್ರದೇಶದ ಸೌಂದರ್ಯ ಸವಿಯುವಾಗ ದೂರದಿಂದ ಬಂದ ಭಕ್ತರ ಮಾತನಾಡಿಸಿದೆವು.


ಈ ದೇವಾಲಯಕ್ಕೆ ಬೆಂಗಳೂರಿನಿಂದ ಬಂದ ಭಕ್ತರಾದ ಶ್ರೀಮತಿ ಪದ್ಮಾ ರವರನ್ನು ಮಾತನಾಡಿಸಿದಾಗ " ನಮಗೆ ಬಾಲ್ಯದಿಂದಲೂ ಈ ದೇವರ ಕೃಪೆ ಇದೆ.ನಮ್ಮ ಕುಟುಂಬ ಕಾಪಾಡುತ್ತಿರುವ ಸ್ವಾಮಿಯ ದರ್ಶನ ಮಾಡಲು  ಆಗಾಗ್ಗೆ ಬರುತ್ತೇವೆ ಈ ಕ್ಷೇತ್ರವೇ ನಮಗೆ ತಿರುಪತಿ ಇದ್ದಂತೆ ಸ್ವಾಮಿ ನಮ್ಮ ಹಲವಾರು ಕಷ್ಟಗಳನ್ನು ನೀಗಿದ್ದಾನೆ" ಎಂದು ಭಾವುಕವಾಗಿ ಹೇಳುವಾಗ ಅವರ ಕಣ್ಣುಗಳಲ್ಲಿ ನೀರಾಡುವುದನ್ನು ಗಮನಿಸಿದೆ. 






"ಬೆಟ್ಟದ ತುದಿಯಲ್ಲಿ ಎರಡು ದೊಡ್ಡ ಬಂಡೆಗಳ ನಡುವೆ ಒಂದು ಸಣ್ಣ ಸಿಹಿ ನೀರಿನ ಬುಗ್ಗೆ ಇದೆ. ಅದನ್ನು ನಾವು ದೊಣೆ ಎನ್ನುತ್ತೇವೆ . ಅದು ಸಾಕಷ್ಟು ಆಳವಾಗಿದೆ ಮತ್ತು  ಎಂದಿಗೂ ಬತ್ತಿಲ್ಲ. ನೀವು ಆ ಸ್ಥಳ ನೋಡಲೇಬೇಕು " ಎಂದರು.


ಅವರಿಗೆ ಧನ್ಯವಾದಗಳನ್ನು ತಿಳಿಸಿ ಬೈಕ್ ಏರಿ ಬೆಟ್ಟ ಇಳಿಯುವಾಗ ಅವರು ಹೇಳಿದ ಸಿಹಿನೀರಿನ ಹೊಂಡ ನೋಡಿಕೊಂಡು ದೇವರಾಯದುರ್ಗದ ಕಾಡಿನಲ್ಲಿ ಬರುವಾಗ ಸ್ನೇಹಿತರಾದ ಎಂ ಎಚ್ ಹನುಮಂತರಾಯಪ್ಪ ಮತ್ತು ರಂಗಸ್ವಾಮಿ ರವರು ಮಾತನಾಡುತ್ತಾ ತಿರುಪತಿ ನೋಡಿದ ಧನ್ಯತಾ ಭಾವ ಉಂಟಾಯಿತು ಎಂದಿದ್ದು ಸುಳ್ಳಲ್ಲ ಅನಿಸಿತು.


ತುಮಕೂರು ತಲುಪಿದ ನಾನು ಮಕ್ಕಳಿಗೆ ದೀಪಾವಳಿ ಹಬ್ಬಕ್ಕೆ  ಪಟಾಕಿ ಕೊಂಡು ಸಂಜೆ ಮನೆಗೆ ಹಿಂತಿರುಗಿದೆ. ವೆಂಕಟೇಶ್ವರ ಸ್ವಾಮಿಯ ದರ್ಶನ ಮತ್ತು ಪಟಾಕಿ ಸಿಡಿಸುವ ಸಂಭ್ರಮ ದಲ್ಲಿ ಈ ವರ್ಷದ ದೀಪಾವಳಿ ವಿಶೇಷವಾಗಿತ್ತು..


ಸಿಹಿಜೀವಿ

ಸಿ ಜಿ ವೆಂಕಟೇಶ್ವರ

ತುಮಕೂರು.



 

27 November 2022

ನೀ ಗಂಧ

 




ದುರ್ಗಂಧ ಬೀರುವ 

ಜನರೊಡಗೂಡಿದ ಮೇಲೆ 

ನೀ ಸನಿಹವಿದ್ದರೆ ಗಂಧ |

ಸದಾ ಪರಿಮಳದ ಚಿಲುಮೆ 

ನೀ ನನ್ನ ಮುದ್ದು ಕಂದ ||


ಸಿಹಿಜೀವಿ


ಸುರ್ಯ ದೇವಾಲಯ .



 


ಸುರ್ಯ ದೇವಾಲಯ. 


ಧರ್ಮಸ್ಥಳದ  ಮಂಜುನಾಥೇಶ್ವರ ಸ್ವಾಮಿಯ ದರ್ಶನ ಪಡೆದು ಉಜಿರೆಯ ಮೂಲಕ ನಮ್ಮೂರ ಕಡೆ ಹಿಂತಿರುಗುವಾಗ ಸ್ನೇಹಿತರ ಅಪೇಕ್ಷೆಯಂತೆ ಉಜಿರೆಯಿಂದ ನಾಲ್ಕು ಕಿಲೋಮೀಟರ್ ದೂರವಿರುವ "ಸುರ್ಯ" ದೇವಾಲಯಕ್ಕೆ ಭೇಟಿ ಕೊಟ್ಟೆವು.ಬಹುಶಃ ನೀವು ಈಗ ನಾನು ಟೈಪಿಂಗ್ ಮಿಸ್ಟೇಕ್ ಮಾಡಿರುವೆ ಎಂದುಕೊಂಡಿರುವಿರಿ. ಸೂರ್ಯ ಎಂದು ಬರೆಯುವ ಬದಲಿಗೆ ಸುರ್ಯ ಎಂದು ಬರೆದಿರಬಹುದೆಂಬ ಅನುಮಾನ ನಿಮ್ಮದು. ಇಲ್ಲ ನಾನು ಸರಿಯಾಗೇ ಬರೆದಿರುವೆ.ನಾನು ಈ ಸ್ಥಳಕ್ಕೆ ಹೋಗುವ ಮೊದಲು ಅದನ್ನು ಸೂರ್ಯ ದೇವಾಲಯ ಎಂದೇ ಭಾವಿಸಿದ್ದೆ. ಅಲ್ಲಿಗೆ ಹೋದಾಗ ತಿಳಿದದ್ದು ಸುರ್ಯ ಎಂಬುದು ಒಂದು ಹಳ್ಳಿ ಅಲ್ಲಿ ನೆಲೆಸಿರುವ ದೇವರು ಸದಾಶಿವ ರುದ್ರ . ಅದು ಜನರ ಆಡು ಮಾತಿನಲ್ಲಿ ಸೂರ್ಯ ದೇವಾಲಯವಾಗಿ ರೂಢಿಯಾಗಿದೆ.



ಕಾನನದ ನಡುವೆ ಅಲ್ಲಲ್ಲಿ ಕಾಣುವ ರಬ್ಬರ್ ತೋಟಗಳು, ಅಡಿಕೆ ತೆಂಗಿನ ತೋಟಗಳ ಮಧ್ಯದಲ್ಲಿ ಕಂಗೊಳಿಸುವ ಸುರ್ಯದ ಸದಾಶಿವ ರುದ್ರ ದೇವರ ದರ್ಶನ ಪಡೆದು ಅಲ್ಲಿಯ ಅರ್ಚಕರನ್ನು ಮಾತನಾಡಿಸಿದಾಗ ಆ ಕ್ಷೇತ್ರದ ಒಂದೊಂದೇ ವಿಶೇಷಗಳು ಅನಾವರಣಗೊಂಡವು.

ಅವರ ಅಭಿಪ್ರಾಯದಂತೆ  ಈ ಕ್ಷೇತ್ರವು ಭಕ್ತರ ಹರಕೆ ತೀರಿಸುವ ಕ್ಷೇತ್ರ ಮತ್ತು ಮಣ್ಣಿನ ಹರಕೆಯ ಸಂಪ್ರದಾಯದ ಕ್ಷೇತ್ರ ಎಂದು ಮನೆ ಮಾತಾಗಿದೆ.

ಭಕ್ತಜನರು ತಮ್ಮ ಇಷ್ಟಾರ್ಥ ಪ್ರಾಪ್ತಿಗಾಗಿ, ಸಂಕಷ್ಟ ನಿವಾರಣೆಗಾಗಿ ದೇವರನ್ನು ಪ್ರಾರ್ಥನೆ ಮಾಡಿಕೊಂಡು ತಮ್ಮ ಸಂಕಲ್ಪ ಸಿದ್ಧಿಯಾದಾಗ ತಾವು ಪ್ರಾರ್ಥಿಸಿದ ರೀತಿಯ ಮಣ್ಣಿನ ಗೊಂಬೆಗಳನ್ನು ಹರಕೆಯ ರೂಪದಲ್ಲಿ ಶ್ರೀ ಸದಾಶಿವರುದ್ರ ದೇವರಿಗೆ ಅರ್ಪಿಸುವುದು ಸುರ್ಯ ಕ್ಷೇತ್ರದ ವಿಶಿಷ್ಟ ಸಂಪ್ರದಾಯ. ಈ ಸಂಪ್ರದಾಯ ಹೇಗೆ ಆರಂಭವಾಯ್ತು? ಎಂಬುದಕ್ಕೆ ಯಾವುದೇ ಪುರಾವೆ ವಿವರಣೆ, ನಿಖರವಾದ ಮಾಹಿತಿ ಸಿಗುವುದಿಲ್ಲವಾದರೂ ಶತಶತಮಾನಗಳಿಂದ ಈ ಮಣ್ಣಿನ ಹರಕೆ ಸಂಪ್ರದಾಯ ನಿರಂತರವಾಗಿ ನಡೆದು ಬಂದಿದ್ದು ಲಕ್ಷಾಂತರ ಭಕ್ತರ ಸಂಕಷ್ಟ ನಿವಾರಣೆಯಾಗಿ ಇಷ್ಟಾರ್ಥ ಪ್ರಾಪ್ತಿಯಾಗಿರುವುದಕ್ಕೆ ಇಲ್ಲಿ ಭಕ್ತಾದಿಗಳಿಂದ ಅರ್ಪಿಸಲ್ಪಟ್ಟು ಶೇಖರಣೆಯಾದ ಮಣ್ಣಿನ ಹರಕೆಗೊಂಬೆಗಳ ರಾಶಿಯೇ ಸಾಕ್ಷಿಯಾಗಿದೆ.





ಬೆಳ್ಳಿ, ಬಂಗಾರ, ಹಣ, ದವಸ-ಧಾನ್ಯ ಇವ್ಯಾವುದೂ ದುರ್ಲಭವಾದ ಸಂದರ್ಭದಲ್ಲೂ ಭೂಮಿಯಲ್ಲಿ ಲಭ್ಯವಿರುವ ಮಣ್ಣಿನಲ್ಲೇ ಗೊಂಬೆಗಳನ್ನು ಆಕೃತಿಗಳನ್ನು ಮಾಡಿ ದೇವರಿಗೆ ಅರ್ಪಿಸುವುದು ಬಹುಶಃ ಅತ್ಯಂತ ದೀನ-ದುರ್ಬಲರಿಗೂ ಸುಲಭಸಾಧ್ಯ ಸರಳ ಹರಕೆ ಪದ್ದತಿಯಾಗಿ ಹಳ್ಳಿಯ ರೈತಾಪಿ ಜನರಿಂದ ಆರಂಭವಾಗಿರಬಹುದು . ಮನುಷ್ಯ, ದೇವರು ಹಾಗೂ ಮಣ್ಣಿನ ನಿರಂತರ ಸಂಬಂಧವನ್ನು ಇದು ಸಾಂಕೇತಿಕವಾಗಿ ಪ್ರತಿನಿಧಿಸುತ್ತಲೂ ಇದ್ದಿರಬಹುದು . 

ಭಕ್ತರು ತಮ್ಮ ಸಂಕಲ್ಪಗಳನ್ನು ದೇವರಲ್ಲಿ ನಿವೇದಿಸಿಕೊಂಡು ಪ್ರಾರ್ಥಿಸಿ ಅದು ಈಡೇರಿದ ಮೇಲಷ್ಟೆ ಹರಕೆ ಸಲ್ಲಿಸುವುದು ಇಲ್ಲಿನ ಸಂಪ್ರದಾಯ. ಉದಾಹರಣೆಗೆ ಒಬ್ಬ ವ್ಯಕ್ತಿ ಒಂದು ಮನೆಯನ್ನು ಕಟ್ಟಿಸಬೇಕೆಂದು ಬಯಸಿದಲ್ಲಿ ಅದು ನಿರ್ವಿಘ್ನವಾಗಿ ನೆರವೇರಿಸಿದರೆ ಸುರ್ಯ ಸದಾಶಿವರುದ್ರ ದೇವರಿಗೆ ಹರಕೆ ಒಪ್ಪಿಸುತ್ತೇನೆಂದು ದೇವರಲ್ಲಿ ಪ್ರಾರ್ಥನೆ ಮಾಡಿಕೊಂಡರೆ ಈ ಹರಕೆ ಶ್ರೀ ಕ್ಷೇತ್ರದಲ್ಲಿ ಆಗಬಹುದು ಅಥವಾ ಅವರವರ ಮನೆಯಲ್ಲೇ ಪ್ರಾರ್ಥನೆ ಮಾಡಿಕೊಳ್ಳಬಹುದು.ಮನೆ ನಿರ್ಮಾಣ ಆದನಂತರ ಅಂದರೆ ನಮ್ಮ ಇಷ್ಟಾರ್ಥ ಸಿದ್ದಿಸಿದ ಮೇಲೆ  ಮನೆಯ ಮಣ್ಣಿನ ಆಕೃತಿಯನ್ನು ಒಂದು ಸೇರು ಅಕ್ಕಿ, ಒಂದು ತೆಂಗಿನ ಕಾಯಿ, 5 ರೂ. ಕಾಣಿಕೆಯ ಜೊತೆ ದೇವಸ್ಥಾನದಲ್ಲಿ ದೇವರಿಗೆ ಸಮರ್ಪಿಸುವ ಮೂಲಕ ಹರಕೆ ಒಪ್ಪಿಸಬಹುದು. ಇದೇ ರೀತಿ ಸಂತಾನಪ್ರಾಪ್ತಿಗಾಗಿ ತೊಟ್ಟಿಲು ಮಗು, ಮದುವೆ ಭಾಗ್ಯಕ್ಕಾಗಿ ಗಂಡು-ಹೆಣ್ಣಿನ ಗೊಂಬೆ, ವಿದ್ಯಾಭ್ಯಾಸದ ಸಫಲತೆಗಾಗಿ ಪುಸ್ತಕ - ಪೆನ್ನು, ದೇಹಾರೋಗ್ಯಕ್ಕಾಗಿ ಮನುಷ್ಯಾಕೃತಿ ಅಥವಾ ಸಂಬಂಧಪಟ್ಟ ಅಂಗಾಂಗಗಳು, ವಾಹನ ಖರೀದಿಸುವಂತಾಗಲು 

ವಾಹನಗಳು, ಒಳ್ಳೆಯ ಜಲಮೂಲಕ್ಕಾಗಿ ಬೋರ್ ವೆಲ್  ಬಾವಿ ಇತ್ಯಾದಿಯಾಗಿ ಹರಕೆ ಒಪ್ಪಿಸುವ ಪದ್ಧತಿ ಇಲ್ಲಿದೆ. ಕೌಟುಂಬಿಕ ಸಮಸ್ಯೆ, ಆರೋಗ್ಯ, ವಿದ್ಯಾಭ್ಯಾಸ, ವ್ಯವಹಾರ, ಕೃಷಿ, 

 ಜೀವನದ ಎಲ್ಲಾ ವಿಚಾರಗಳ ಸಂಬಂಧಪಟ್ಟ ಹಾಗೆ ದೇವರಲ್ಲಿ ಪ್ರಾರ್ಥಿಸಿ ಅವು ಈಡೇರಿದಾಗ ಅದಕ್ಕೆ ಸೂಕ್ತವಾದ ಮಣ್ಣಿನ ಗೊಂಬೆಗಳನ್ನು ದೇವರಿಗೆ ಹರಕೆ ಒಪ್ಪಿಸುವುದನ್ನು ಇಲ್ಲಿ ಕಾಣಬಹುದಾಗಿದೆ. ಕಾರು, ಬಸ್ಸು, ವಿಮಾನ, ದೋಣಿ, ಹೆಲಿಕಾಪ್ಟರ್, ಕಟ್ಟಡಗಳು, ಕೈ, ಕಾಲು, ಹೃದಯ, ಕಿಡ್ನಿ, ಕಂಪ್ಯೂಟರ್, ಮೇಜು, ಕುರ್ಚಿ, ದನ, ಕರು, ನಾಯಿ, ಕೋಳಿ - ಇತ್ಯಾದಿ ನೂರಾರು ತರದ ಮಣ್ಣಿನ ಹರಕೆಗಳನ್ನು ದೇವರಿಗೆ ಅರ್ಪಿಸಿರುವುದನ್ನು ಇಲ್ಲಿ ನೋಡಬಹುದಾಗಿದೆ. ಒಬ್ಬನೇ ವ್ಯಕ್ತಿ ಎಷ್ಟು ಹರಕೆಗಳನ್ನೂ ಬೇಕಾದರೂ ಹೊರಬಹುದು ಏಕೆಂದರೆ ಮಾನವನ ಆಸೆಗೆ ಮಿತಿಯಿಲ್ಲವಲ್ಲ.ಆದರೆ ಆ ಎಲ್ಲಾ ಆಸೆಗಳ ಈಡೇರಿಸುವ ದೇವನಿರುವುದೇ ನಮ್ಮ ಭಾಗ್ಯ.

ಭಕ್ತರು ದೇವಸ್ಥಾನದಲ್ಲಿ ಅರ್ಪಿಸಿದ ಮಣ್ಣಿನ ಹರಕೆಗೊಂಬೆಗಳು, ಅಕ್ಕಿ, ತೆಂಗಿನಕಾಯಿಗಳನ್ನು ಮಧ್ಯಾಹ್ನ ಮಹಾಪೂಜೆಯ ಮೊದಲು ದೇವಸ್ಥಾನದ ಸಮೀಪವೇ ಇರುವ ಮೂಲಕ್ಷೇತ್ರ ಹರಕೆಬನಕ್ಕೆ  ಒಯ್ಯಲಾಗುವುದು. ಅಲ್ಲಿ ಅರ್ಚಕರು ಪೂಜೆ ಸಲ್ಲಿಸಿ ಹರಕೆಗೊಂಬೆಗಳನ್ನು ಬನದಲ್ಲಿ ಜೋಡಿಸಿಡುತ್ತಾರೆ.

ಈ ಮಣ್ಣಿನ ಗೊಂಬೆಗಳನ್ನು ಮಣ್ಣಿನಿಂದ ಮಾಡಿ ಕುಲುಮೆಯಲ್ಲಿ ಬೇಯಿಸಿ ತಯಾರಿಸಲಾಗುತ್ತದೆ. ದೇವರಿಗೆ ಅರ್ಪಿಸುವಾಗ ಈ ಗೊಂಬೆಗಳಲ್ಲಿ ಯಾವುದೇ ರೀತಿಯ ಬಿರುಕು, ಒಡಕು ಇರಬಾರದು ಎಂಬುದು ಪ್ರತೀತಿ. ದೂರದ ಊರಿಂದ ಬರುವ ಭಕ್ತಾದಿಗಳ ಅನುಕೂಲಕ್ಕಾಗಿ ಈಗ ಎಲ್ಲಾ ರೀತಿಯ ಹರಕೆ ಗೊಂಬೆಗಳನ್ನು ಕುಂಬಾರರಿಂದ ಮಾಡಿಸಿ ದೇವಸ್ಥಾನದಲ್ಲಿ ಸಿಗುವಂತೆ ವ್ಯವಸ್ಥೆ ಮಾಡಲಾಗಿದೆ.ದೇವಸ್ಥಾನದ ಬಲಭಾಗಕ್ಕೆ ಒಂದು ಅಂಗಡಿ ಇದೆ ಆ ಅಂಗಡಿಯಲ್ಲಿ ಎಲ್ಲಾ ರೀತಿಯ ಗೊಂಬೆಗಳು ಮತ್ತು ಹರಕೆ ವಸ್ತುಗಳು ಲಭ್ಯವಿವೆ.





ಈ ಕ್ಷೇತ್ರಕ್ಕೆ ಸುರ್ಯ ಎಂಬ ಹೆಸರಿನ ಹಿನ್ನೆಲೆಯನ್ನು ವಿಚಾರಿಸಿದಾಗ ಅರ್ಚಕರು ನೀಡಿದ ಮಾಹಿತಿಯಂತೆ  

'ಸುರ್ಯ' ಎಂಬ  ಹೆಸರು ಬರಲು ಕಾರಣವಾದ ಒಂದು ದಂತಕಥೆ ಇದೆ. ಹಿಂದೆ ಒಬ್ಬಾಕೆ ತನ್ನ ಮಗ ಸುರೆಯನ ಜೊತೆ ಈ ಪ್ರದೇಶದಲ್ಲಿದ್ದ ಕಾಡಿಗೆ ಸೊಪ್ಪು ಕಡಿಯಲೆಂದು ಹೋಗಿದ್ದಳಂತೆ. ಸೊಪ್ಪು ಕಡಿಯುವಾಗ ಸೊಪ್ಪಿನೆಡೆಯಲ್ಲಿ ಮರೆಯಾಗಿದ್ದ ಲಿಂಗರೂಪಿ ಶಿಲೆಗೆ ಕತ್ತಿ ತಾಗಿ ರಕ್ತ ಚಿಮ್ಮಿತಂತೆ. ಆಗ ಗಾಬರಿಗೊಂಡ ಆಕೆ ತನ್ನ ಮಗನನ್ನು "ಓ.. ಸುರೆಯಾ....” ಎಂದು ಕರೆದಳು ಹಾಗೂ ಈ ಘಟನೆಯ ನಂತರ ಈ ಕ್ಷೇತ್ರಕ್ಕೆ ಸುರೆಯ, ಸುರಿಯ, 'ಸುರ್ಯ' ಎಂಬ ಹೆಸರು ಬಂತು ಎಂದು ಹೇಳಲಾಗುತ್ತಿದೆ. ಅದೇ ರೀತಿ ಆ ಲಿಂಗ ರೂಪಿ ಶಿಲೆಗೆ ಪೂಜೆ ನಡೆಸಿ ದೇವಾಲಯ ನಿರ್ಮಾಣ ಮಾಡಲಾಯಿತು  ಎಂಬುದು ಪ್ರತೀತಿ.


ದೇವಸ್ಥಾನದ ಉತ್ತರಕ್ಕೆ ಸುಮಾರು 100ಮೀಟರ್ ದೂರದಲ್ಲಿ ಪ್ರಶಾಂತವಾದ ವನರಾಶಿಯ ಮಧ್ಯೆ ಮೇಲಿನ ಘಟನೆ ನಡೆಯಿತೆಂದು ಹೇಳಲಾಗುವ ಪ್ರದೇಶ ಹರಕೆಬನ  ಇದೆ.ಈ ಕ್ಷೇತ್ರದ ಮೂಲದ ಬಗ್ಗೆ ಒಂದು ಐತಿಹ್ಯವಿದೆ. ಹಿಂದೆ ಈ ಪ್ರದೇಶದಲ್ಲಿ ಬೈಗು ಮಹರ್ಷಿಯ ಶಿಷ್ಯರೊಬ್ಬರು ತಪವನ್ನು ಮಾಡುತ್ತಿದ್ದು, ಅವರ ತಪಸ್ಸಿಗೊಲಿದ ಶಿವಪಾರ್ವತಿಯರು ಪ್ರತ್ಯಕ್ಷರಾಗಿ ಲಿಂಗ ರೂಪದಲ್ಲಿ ಇಲ್ಲಿ ನೆಲೆಯಾದರು ಎಂಬ ಪ್ರತೀತಿ ಇದೆ. ಇದರ ಕುರುಹಾಗಿ ಇಲ್ಲಿ ಎರಡು ಲಿಂಗರೂಪಿ ಶಿಲೆ ಗಳು ಹಾಗೂ ಶಿಲಾಪಾದಗಳು ಇವೆ. ಮಹರ್ಷಿಗಳ ತಪೋಭೂಮಿಯಾಗಿದ್ದು, ದೇವರೊಲಿದ  ಪುಣ್ಯಕ್ಷೇತ್ರ, ಕಾಲಾಂತರದಲ್ಲಿ ಸೊಪ್ಪು ಕಡಿಯುವ ಮಹಿಳೆಯ ಮೂಲಕ ಊರಿನ ಮುಖ್ಯಸ್ಥರ ಗ್ರಾಮಸ್ಥರ ಗಮನಕ್ಕೆ ಬಂದು, ಇದರ ಸಮೀಪದಲ್ಲಿ ದೇವಾಲಯ ನಿರ್ಮಾಣ ಮಾಡಿದರು. ಎಂಬುದು ಕ್ಷೇತ್ರದ ಮೂಲದ ಬಗ್ಗೆ ಇರುವ ಐತಿಹ್ಯ.


ಇಂದಿಗೂ ಈ ಲಿಂಗ ರೂಪಿ ಶಿಲೆಗಳಿಗೆ ನಿತ್ಯ ಪೂಜೆ ಸಲ್ಲಿಸಲಾಗುತ್ತದೆ ಹಾಗೂ ಭಕ್ತರಿಂದ ಸಮರ್ಪಿತವಾದ ಹರಕೆಗೊಂಬೆಗಳನ್ನು ಈ ಲಿಂಗಗಳ ಸುತ್ತಲೂ ಜೋಡಿಸಿಡಲಾಗುತ್ತದೆ. ಭಕ್ತಾದಿಗಳಿಗೆ ಹಗಲು ವೇಳೆ ಈ 'ಹರಕೆ ಬನ' ಸಂದರ್ಶನಕ್ಕೆ ಅವಕಾಶವಿರುತ್ತದೆ.

ಈ ವಿಷಯಗಳನ್ನು ತಿಳಿದು ನಂತರ ದೇವಾಲಯದಿಂದ ಹೊರಬಂದ ನಮಗೆ ಕಾಣಿಸಿದ್ದು ನಾಗಬನ .

ದೇವಸ್ಥಾನದ ಬಲಭಾಗದಲ್ಲಿರುವ ನಾಗಬನದಲ್ಲಿ  ನಾಗದೇವರಿಗೆ ಪೂಜೆ ನಡೆಯುತ್ತದೆ. ಪ್ರತಿ ತಿಂಗಳು ಪಂಚಮಿ, ಷಷ್ಠಿ ಹಾಗೂ ನಾಗರ ಪಂಚಮಿ, ಕುಕ್ಕೆ ಪಷ್ಠಿಯಂದು ವಿಶೇಷ ಪೂಜೆ ನಡೆಯುತ್ತದಂತೆ. 

ಇದರ ಜೊತೆಯಲ್ಲಿ ದೈವ ಸಾನ್ನಿಧ್ಯವೂ ಈ ದೇವಾಲಯದ ಸಂಕೀರ್ಣದಲ್ಲಿರುವುದು ಗಮನಕ್ಕೆ ಬಂತು.ದೇವಸ್ಥಾನದ ಪೌಳಿಯಲ್ಲಿ, ಬಲಭಾಗದಲ್ಲಿ ಕೊಡಮಣಿತ್ತಾಯಿ, ಪಿಲಿಚಾಮುಂಡಿ, ಇತ್ಯಾದಿ ದೈವಗಳ ಸಾನ್ನಿಧ್ಯ ಇದೆ. ವರ್ಷಾವಧಿ ಜಾತ್ರೆಯ ಸಂದರ್ಭದಲ್ಲಿ ಈ ದೈವಗಳಿಗೆ ನೇಮೋತ್ಸವ ನಡೆಯುತ್ತದಂತೆ.

ಈ ಪ್ರದೇಶದಲ್ಲಿ ನನಗೆ ಬಹಳ ಇಷ್ಟವಾದ ಮತ್ತೊಂದು ಸ್ಥಳ ಅದು ಸುಂದರ ಕೊಳ.  

ದೇವಸ್ಥಾನದ ಉತ್ತರಕ್ಕೆ 50 ಮೀಟರ್ ದೂರದಲ್ಲಿ ನಯನ ಮನೋಹರ ಕೊಳವು ಸುಮಾರು 70x80 ಅಡಿ ವಿಸ್ತಾರವಿದೆ. 35 ಅಡಿ ಆಳವಿದೆ. ಕೊಳದ ಮಧ್ಯ ಒಂದು ಸುಂದರ ಮಂಟಪವಿದ್ದು, ಇದು ಮುಳುಗಡೆ ಹೊಂದಿ ಮಳೆಗಾಲದಲ್ಲಿ ಗೋಚರಿಸುವುದಿಲ್ಲ. ಮಾರ್ಚ್ ಮತ್ತು ಏಪ್ರಿಲ್ ತಿಂಗಳಿನಲ್ಲಿ ನಡೆಯುವ ವರ್ಷಾವಧಿ ಜಾತ್ರೆಯ 'ಕೆರೆಕಟ್ಟೆ  ಉತ್ಸವ'ದ ಸಂದರ್ಭದಲ್ಲಿ ಈ ಮಂಟಪದಲ್ಲಿ ಶ್ರೀ ದೇವರ ಕೆರೆಕಟ್ಟೆ ಪೂಜೆ ನಡೆಯುತ್ತದೆ.




ಈ ದೇವಸ್ಥಾನವನ್ನು ಯಾವಾಗ ನಿರ್ಮಾಣ ಮಾಡಲಾಯಿತು? ಎಂಬುದಕ್ಕೆ, ನಿಖರ ಮಾಹಿತಿ ಅಥವಾ  ಪುರಾವೆಗಳಿಲ್ಲ. ದೇವಸ್ಥಾನದ ಒಳಾಂಗಣದಲ್ಲಿ ಮಂಟಪದಲ್ಲಿರುವ ನಂದಿಯ ವಿಗ್ರಹದ ಪೀಠದಲ್ಲಿ “ಪಿಂಗಲ ನಾಮ ಸಂವತ್ಸರದ ಮಿಥುನ ಮಾಸ ೧೭ನೇ ರವಿವಾರದೊಲು ಶ್ರೀಮತು ವೀರನರಸಿಂಗ ಲಕ್ಷ್ಮಪ್ಪರಸರಾದ ಬಂಗರಾಜ ಒಡೆಯರ ಕಾಲದಲ್ಲಿ ನೂಜಿಯ ಸಂಕು ಅಧಿಕಾರಿಯ ಮಗ ನಾರಾಯಣ ಸೇನ ಭೋವನು ಸುರಾಯದ ದೇವರ ಸನ್ನಿಧಿಯಲ್ಲಿ ಪ್ರತಿಷ್ಠೆ ಮಾಡಿದ ನಂದಿಕೇಶ್ವರನು ನಡೆಸಿದ ಶಂಭುಗೈದು ಶುಭಮಸ್ತು” ಎಂಬುದಾಗಿ ಬರೆಯಲಾಗಿದೆ. ಇದಲ್ಲದೇ ಯಾವುದೇ ಶಾಸನಗಳು ಇಲ್ಲಿ ಲಭ್ಯವಿರುವುದಿಲ್ಲ.


ಅನುವಂಶಿಕವಾಗಿ ಸುರ್ಯಗುತ್ತು ಮನೆತನದ ಆಡಳಿತಕ್ಕೆ ಒಳಪಟ್ಟಿರುವ ಸುರ್ಯದೇವಸ್ಥಾನಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಶ್ರೀ ಡಾ.ವೀರೇಂದ್ರ ಹೆಗಡೆ ರವರ ಮಾರ್ಗದರ್ಶನ ಇರುವುದು ಕ್ಷೇತ್ರದ ಕೆಲಸ ಕಾರ್ಯಗಳು ಶಿಸ್ತಿನಿಂದ ಜರುಗಲು ಸಾಧ್ಯವಾಗಿದೆ .

ಆತ್ಮೀಯರೆ ನೀವು ಒಮ್ಮೆ ಸುರ್ಯ ದ ಸದಾಶಿವ ರುದ್ರ ದೇವಾಲಯಕ್ಕೆ ಭೇಟಿ ನೀಡಿ ನಿಮ್ಮ ಇಷ್ಟಾರ್ಥ ಗಳನ್ನು ಈಡೇರಿಸಿಕೊಳ್ಳಿ.


ಸಿಹಿಜೀವಿ

ಸಿ ಜಿ ವೆಂಕಟೇಶ್ವರ

ತುಮಕೂರು.


ವಿಶ್ವ ವಾಣಿ ೨೬/೧೧


 

ಜನಮಿಡಿತ


 

ವಿಜು ಕರ್ನಾಟಕ


 

ಸುನಾದ

 


ಸುನಾದ 


ಜೀವನದಲ್ಲಿ ಎಷ್ಟೇ ಕಷ್ಟಗಳಿರಲಿ

ನಗು ನಗುತಾ ಬಾಳೋಣ

ಮಾಡುತ ವಿನೋದ |

ಎಷ್ಟೇ ರಂದ್ರಗಳಿದ್ದರೂ ಕೊಳಲು

ಹೊಮ್ಮಿಸಿದಂತೆ ಸುನಾದ ||


ಸಿಹಿಜೀವಿ

ಸಿ ಜಿ ವೆಂಕಟೇಶ್ವರ

ತುಮಕೂರು

26 November 2022

ಮಂದರಗಿರಿ


ಮಂದರಗಿರಿ 

ಕೆಲವೊಮ್ಮೆ ನಾವು ದೂರದ ಪ್ರದೇಶಗಳು, ಇತರೆ ರಾಜ್ಯಗಳ ಸ್ಥಳಗಳು ಅಷ್ಟೇ ಏಕೆ ವಿದೇಶಗಳ ಸಿರಿಯನ್ನು ಕಣ್ತುಂಬಿಸಿಕೊಳ್ಳಲು ಹಾತೊರೆಯುತ್ತೇವೆ.ಆದರೆ ನಮ್ಮ ಸುತ್ತ ಮುತ್ತ ಇರುವ ಎಷ್ಟೋ ಅಮೂಲ್ಯವಾದ ಐತಿಹಾಸಿಕ, ಪರಿಸರದ ಮಹತ್ವವಿರುವ ,ಧಾರ್ಮಿಕ ಪರಂಪರೆಯನ್ನು ಹೊಂದಿರುವ ಸ್ಥಳಗಳನ್ನು ನಾವು ನೋಡಿಯೇ ಇರುವುದಿಲ್ಲ.ಅವುಗಳನ್ನು ನೋಡಿದ ಮೇಲೆ ನಮ್ಮ ಪ್ರದೇಶದ ಬಗ್ಗೆ ನಮಗೆ ಹೆಮ್ಮೆ ಆಗಿ "ಜನನಿ ಜನ್ಮ ಭೂಮಿಶ್ಚ ಸ್ವರ್ಗಾದಪಿ ಗರೀಯಸಿ" ಎಂಬ ರಾಮಾಯಣದ ಉಕ್ತಿ ನೆನಪಿಗೆ ಬರದೆ ಇರದು.ಇಂತದೇ ಅನುಭವ ನನಗೂ  ತುಮಕೂರಿನ ಸಮೀಪದ ಅತ್ಯದ್ಭುತ ತಾಣವನ್ನು ನೋಡಿದಾಗ ಅಯಿತು.   

ಇತ್ತೀಚೆಗೆ   ಬಾಯರ್ಸ್ ಕಾಫಿ ಹೌಸ್  ನಲ್ಲಿ ಕಾಫಿ ಕುಡಿಯುತ್ತಾ  ಮಾತನಾಡುವಾಗ ನಿಮ್ಮನ್ನು ಒಂದು ಐತಿಹಾಸಿಕ ಮತ್ತು ಸುಂದರ ಸ್ಥಳಕ್ಕೆ ಕರೆದುಕೊಂಡು ಹೋಗುವೆ ಎಂದರು ಗೆಳೆಯ ಸದಾಶಿವ್. ಎಂದು? ಅಂದೆ. ಇಂದೆ ಅಂದು ಬಿಟ್ಟರು !  ಆತ್ಮೀಯ ಶಂಕಾರಾನಂದ್ ಮತ್ತು ಸದಾಶಿವ್ ರವರ ಜೊತೆಯಲ್ಲಿ  ಯಾವುದೇ ಪ್ಲಾನ್ ಮಾಡದೇ ದಿಢೀರ್ ಎಂದು ಇಳಿಹೊತ್ತಿನ ಮೂರೂವರೆಗೆ ಕಾರಿನಲ್ಲಿ ತುಮಕೂರು ಬಿಟ್ಟು ಹೊರಟೆವು. ಇನ್ನೂ ಐದು ನಿಮಿಷವಾಗಿರಲಿಲ್ಲ ಕಾರ್ ನಿಲ್ಲಿಸಿ ಇಳೀರಿ ಸರ್ ಇದೇ ನಾವು ನೋಡಬೇಕಾದ ಜಾಗ ಅಂದರು .
ಕಾರ್ ಇಳಿದು ನಿಧಾನವಾಗಿ ನಡೆದು ಸಾಗಿದ ನಮ್ಮನ್ನು ಸ್ವಾಗತಿಸಿದ್ದು ಒಂದು ಸುಂದರ ಗಿರಿ ಅದೇ ಮಂದರಗಿರಿ.ಆ ಗಿರಿಯ ಏರಲು ಮೆಟ್ಟಿಲುಗಳ ಸೌಲಭ್ಯ ಇದೆ. ಒಂದೊಂದೆ ಮೆಟ್ಟಲು ಏರುತ್ತಾ ಹೊದಂತೆ ನಮ್ಮ ಮೈಯಿಂದ ಬೆವರ ಸಾಲುಗಳ ಆಗಮನವಾಗಿ ಆಗಾಗ್ಗೆ ಬೀಸುವ ತಂಗಾಳಿ ಆ ಬೆವರಿಗೆ ಸೋಕಿದೆಡೆ ಹಿತವಾದ ಅನುಭವ.ಇನ್ನೂ ಮೇಲೆ ಸಾಗಿದಂತೆ ತುಮಕೂರು ನಗರ, ಮೈದಾಳ ಕೆರೆ, ಹೊಲಗದ್ದೆಗಳು, ರಸ್ತೆಗಳು ಹೀಗೆ ನೋಡಿದ ಪ್ರದೇಶಗಳೇ ವಿಶೇಷವಾಗಿ ಕಾಣಲಾರಂಬಿಸಿದವು.  ಬೆಟ್ಟದ ತುದಿ ತಲುಪಿದ ನಮ್ಮನ್ನು   ಜೈನ ಮಂದಿರಗಳ ಸಂಕೀರ್ಣ  ಸ್ವಾಗತಿಸಿತು . "ಈ ಸಂಕೀರ್ಣದಲ್ಲಿ  ಶ್ರೀಚಂದ್ರನಾಥ (ಪದ್ಮಾಸನ), ಶ್ರೀಪಾರ್ಶ್ವನಾಥ, ಶ್ರೀಸುಪಾರ್ಶ್ವನಾಥ ಮತ್ತು ಶ್ರೀಚಂದ್ರನಾಥ (ಖಡ್ಗಾಸನ) ಎಂಬ ನಾಲ್ಕು ಬಸದಿಗಳಿವೆ. ಅತ್ಯಂತ ಪುರಾತನವಾದ ಈ ಬಸದಿಗಳನ್ನು 12 ಮತ್ತು 14ನೇ ಶತಮಾನದಲ್ಲಿ ಕಟ್ಟಲಾಗಿದೆ. ಸುಮಾರು ಸಾವಿರ ವರ್ಷಗಳ ಇತಿಹಾಸ ಈ ಕ್ಷೇತ್ರಕ್ಕಿದೆ" ಎಂದು ತುಮಕೂರಿನ ಗೋಕುಲ ಬಡಾವಣೆಯ ನಿವಾಸಿಗಳಾದ ಅಜಿತ್ ರವರು ಮಾಹಿತಿಯನ್ನು ನೀಡಿದರು. ಆ ಜಿನ ಮೂರ್ತಿಗಳಿಗೆ ವಂದಿಸಿ ಹೊರಬಂದಾಗ  ಅಲ್ಲಲ್ಲಿ ಇರುವ ಶಾಸನಗಳು ನಮ್ಮ ಗಮನ ಸೆಳೆದವು. ಇತ್ತೀಚಿಗೆ ಈ ಪ್ರದೇಶದಲ್ಲಿ ಅಭಿವೃದ್ಧಿ ಕಾರ್ಯಗಳು ಬರದಿಂದ ಸಾಗಿದ್ದು ಕಾಂಕ್ರೀಟ್ ಮತ್ತು ಕಬ್ಬಿಣ ಬಳಸಿ ಮರದ ಆಕೃತಿಯ ರಚನೆಯು ಕುತೂಹಲ ಕೆರಳಿಸಿತು . ಬೆಟ್ಟದ ಮೇಲ್ಬಾಗಕ್ಕೆ  ವಾಹನಗಳು ಚಲಿಸುವಂತೆ ಸರ್ವಋತು ರಸ್ತೆ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದೆ.




" ಕರ್ನಾಟಕ ಸರ್ಕಾರದ ವತಿಯಿಂದ ಬೆಟ್ಟಕ್ಕೆ ರಸ್ತೆ ನಿರ್ಮಾಣಕ್ಕೆ ಅನುದಾನ ಮಂಜೂರಾಗಿದ್ದು ಕಾಮಗಾರಿ  ನಡೆಯುತ್ತಿದೆ. ಳಲ್ಲಿ ಯಕ್ಷ-ಯಕ್ಷಿ ವಿಗ್ರಹಗಳ ಸ್ಥಾಪನೆ.ಕಾರ್ಯ ಆಗುತ್ತಿದೆ.
1ನೇ ಬಸದಿಯ ನೆಲಹಾಸು ಜೀರ್ಣೋದ್ಧಾರ ಕಾರ್ಯವು ಯಶಸ್ವಿಯಾಗಿ ನಡೆದಿದ್ದು ಹಾಗೂ ಶ್ರೀ ಚಂದ್ರಪ್ರಭ ಬಸದಿಯ ಪಾಲಿಶ್ ಕಾರ್ಯವು ಪ್ರಗತಿಯಲ್ಲಿದೆ.
ಶ್ರೀ ಬ್ರಹ್ಮದೇವರ ಗುಡಿ ಹಾಗೂ ಗೋಪುರ ನಿರ್ಮಾಣ.  ದೇವಸ್ಥಾನಗಳ ಪ್ರಕಾರದಲ್ಲಿ ಗ್ರಾನೈಟ್, ನೆಲಹಾಸು ಅಳವಡಿಕೆ.
ಉತ್ತರ ದಿಕ್ಕಿನಲ್ಲಿ ಗೋಪುರ ಹಾಗೂ ಮಹಾದ್ವಾರ ನಿರ್ಮಾಣ. ಉತ್ತರ ದಿಕ್ಕಿನಲ್ಲಿ ಗೌತಮ ಗಣಧರರ ಚರಣ ಹಾಗೂ ಭದ್ರಬಾಹು ಶ್ರುತಿಕೇವಲಿ ಚರಣಗಳಿಗೆ ಕೂಟ ನಿರ್ಮಾಣ.
4ನೇ ಜಿನಮಂದಿರದಲ್ಲಿ ಶ್ರುತಸ್ಕಂಧ ಬಸದಿ ನಿರ್ಮಾಣ.  ಮುನಿನಿವಾಸ ಮತ್ತು ಮುನಿಗಳ ಚೌಕ ನಿರ್ಮಾಣ.  ಬಸದಿಯ ಸುತ್ತ ಇರುವ ಕಾಂಪೌಂಡ್ ಗೋಡೆಯ ನವೀಕರಣ,
ಗ್ರೀಲ್, ವಿದ್ಯುತ್ ದೀಪ ಹಾಗೂ ಸಿ. ಸಿ. ಕ್ಯಾಮರಗಳ ಅಳವಡಿಕೆ.  ಬೆಟ್ಟದ ಮೇಲೆ 4 ಕೊಠಡಿ, ಕಾರ್ಯಾಲಯ ಮತ್ತು ಭದ್ರತಾ ಸಿಬ್ಬಂದಿಗೆ ಕೊಠಡಿಗಳ ನಿರ್ಮಾಣ ಕಾರ್ಯ ನಡೆಯುತ್ತಿದೆ.
ಜೀರ್ಣೋದ್ಧಾರ ಕಾರ್ಯದಲ್ಲಿ ದಾನ ನೀಡಲು ಇಚ್ಛಿಸುವ ಭಕ್ತಾಧಿಗಳು  ತನು ಮನ ಧನ ನೀಡಿ  ಸಹಕರಿಸಬಹುದು" ಎಂದು  ಅಜಿತ್ ರವರು ತಿಳಿಸಿದರು.





ಅಲ್ಲೇ ಇರುವ ಗೂಡಂಗಡಿಯಲ್ಲಿ ಚುರುಮುರಿ ಖರೀದಿಸಿ ತಿನ್ನುತ್ತಾ ಸೂರ್ಯಾಸ್ತದ ದೃಶ್ಯವನ್ನು ಮತ್ತು ಮೈದಾಳ ಕೆರೆಯ ಸೌಂದರ್ಯವನ್ನು  ನಮ್ಮ ಕಣ್ತುಂಬಿಸಿಕೊಂಡು ಮೊಬೈಲ್ ನಲ್ಲೂ ತುಂಬಿಸಿಕೊಂಡು ಬೆಟ್ಟದಿಂದ ಕೆಳಗಿಳಿದು ಬಂದು ಅಲ್ಲಿರುವ ಮತ್ತೊಂದು ಆಕರ್ಷಣೆ ಬಸದಿ ನೋಡಲು ಹೊರಟೆವು.





ದೂರದಿಂದಲೇ
ಬಾಹುಬಲಿಯಂತೆ ಕಾಣುವ ಶಾಂತ ಮೂರ್ತಿಯೊಂದು ನಮ್ಮನ್ನು ಸ್ವಾಗತಿಸಿತು. ಆದರೆ ಇದು ಬಾಹುಬಲಿಯಲ್ಲ. ದಿಗಂಬರ ಚಂದ್ರನಾಥ ತೀರ್ಥಂಕರರ ಮೂರ್ತಿ. ಇದನ್ನು 2011ರಲ್ಲಿ ಉದ್ಘಾಟಿಸಲಾಗಿದೆ. ಮೂರ್ತಿಯ ಮುಂದೆ ಸ್ತಂಭವೊಂದಿದ್ದು ಪ್ರವಾಸಿಗರನ್ನು ಇನ್ನಷ್ಟು ಆಕರ್ಷಿಸುತ್ತದೆ. 

ಚಂದ್ರನಾಥ ತೀರ್ಥಂಕರರ ಮೂರ್ತಿ ಪಕ್ಕದಲ್ಲೇ ಚಿತ್ತಾಕರ್ಷಕವಾದ  ನವಿಲಿನ ಗರಿಗಳ ಬೀಸಣಿಗೆಯ  ಆಕಾರದ ಮಂದಿರವು ತನ್ನ ವಿಶಿಷ್ಠವಾದ ವಿನ್ಯಾಸದಿಂದ ಪ್ರವಾಸಿಗರ ಆಕರ್ಷಣೆಯ ಕೇಂದ್ರವಾಗಿದೆ. ಇದು 1855 ರಿಂದ 1955ರವರೆಗೆ ಜೀವಿಸಿದ್ದ ಆಚಾರ್ಯ ದಿಗಂಬರ ಜೈನ ಚಾರಿತ್ರ ಚಕ್ರವರ್ತಿ ಶ್ರೀಶಾಂತಿ ಸಾಗರ್ ಜೀ ಮಹಾರಾಜ್ ಗುರು ಮಂದಿರ. ದಿಗಂಬರ ಜೈನ ಮುನಿಗಳು ಉಪಯೋಗಿಸುತ್ತಿದ್ದ ನವಿಲುಗರಿಯ ಮುಚ್ಚಳಿಕೆಯ ಆಕಾರದ ಈ ಮಂದಿರ 81 ಅಡಿ ಎತ್ತರವಿದೆ ಎಂಬುದು ವಿಶೇಷ. ಇದಲ್ಲದೆ ಇದರಲ್ಲಿ ಜೈನ ತೀರ್ಥಂಕರರ ದಿನನಿತ್ಯದ ಜೀವನಶೈಲಿಯ ಚಿತ್ರಗಳನ್ನು ಪ್ರತಿಮೆಯ ಇಕ್ಕೆಲಗಳಲ್ಲಿ ಇಡಲಾಗಿದೆ. ಗುರು ಮಂದಿರದಲ್ಲಿನ ಫೋಟೊ ಗ್ಯಾಲರಿಯನ್ನು ನೋಡಿದರೆ ಜೈನ ತೀರ್ಥಂಕರರ ಜೀವನಶೈಲಿಯು ನಮಗೆ ಮನದಟ್ಟಾಗುತ್ತದೆ. ಆ ಪ್ರದೇಶದಲ್ಲಿ ಇರುವಾಗ ಎಂತಹ ಬಾಯಿಬಡುಕರು ಸಹ ಮೌನವಹಿಸಿಬಿಡುತ್ತಾರೆ.ಆ ವಾತಾವರಣದಿಂದ ಪ್ರೇರಿತರಾಗಿ ನಾವೂ ಮೌನವಾಗಿ ಕುಳಿತು ಒಂದೈದು ನಿಮಿಷ ಧ್ಯಾನ ಮಾಡಿ ಹೊರಬಂದಾಗ ಮನಕ್ಕೆ ಏನೋ ಒಂಥರ ಆನಂದವುಂಟಾಯಿತು. ನಮ್ಮ ಕಾರಿನ ಕಡೆ ಹೆಜ್ಜೆ ಹಾಕುವಾಗ
ಏಳೆಂಟು  ಕಿಲೋಮೀಟರ್ ಸನಿಹದಲ್ಲೇ ಇರುವ ಇಂತಹ ಇತಿಹಾಸ ಪ್ರಸಿದ್ಧ ತಾಣವನ್ನು ಇಷ್ಟು ದಿನವಾದರೂ ನೋಡದಿದ್ದಕ್ಕೆ ಬೇಸರವಾಯಿತು. ಇದಕ್ಕೆ ಪ್ರಾಯಶ್ಚಿತ್ತ ಎಂಬಂತೆ ಪದೇ ಪದೇ ಈ ಸ್ಥಳಕ್ಕೆ ಬರಬೇಕು ಹಾಗೂ   ನಮ್ಮವರಿಗೂ ಈ ತಾಣದ ಬಗ್ಗೆ ಮಾಹಿತಿ ನೀಡಿ ಅವರ ಸ್ವಾಗತಿಸಬೇಕು ಎನಿಸಿತು ಅದಕ್ಕೆ ಈ ಲೇಖನ .ಆತ್ಮೀಯರೆ ಒಮ್ಮೆ ಬನ್ನಿ ಮಂದರಗಿರಿ ಮತ್ತು ಬಸ್ತಿ ಬೆಟ್ಟದ ಸಿರಿಯ ಸೊಬಗನ್ನು ಕಣ್ತುಂಬಿಸಿಕೊಳ್ಳಿ.

ತಲುಪಲು ಮಾರ್ಗ.
ಈ ಸುಂದರ ತಾಣ  
ತುಮಕೂರಿನಿಂದ 10 ಕಿ.ಮೀ ದೂರದಲ್ಲಿದೆ.  ಬೆಂಗಳೂರು ಪೂನಾ  ರಾಷ್ಟ್ರೀಯ ಹೆದ್ದಾರಿಯಿಂದ ಈ ಬೆಟ್ಟ ಕಾಣಲು ಸಿಗುತ್ತದೆ. ಈ ಸ್ಥಳಕ್ಕೆ ತಲುಪಲು ತುಮಕೂರಿನಿಂದ ಬರುವವರು  ರಾಷ್ಟ್ರೀಯ ಹೆದ್ದಾರಿಯ  ರಸ್ತೆ ಸುಂಕ ಕಟ್ಟಿದ ನಂತರ 1 ಕಿಲೋಮೀಟರ್ ಮುಂದುವರೆದರೆ ಎಡಬಾಗದಲ್ಲಿ ಬೆಟ್ಟದ ಬಗ್ಗೆ ಒಂದು ಸ್ವಾಗತ ಕಮಾನು ಇದೆ. ಇಲ್ಲಿಂದ  ಮತ್ತೊಂದು  ಕಿಲೋಮೀಟರ್ ಕ್ರಮಿಸಿದರೆ ಬಸ್ತಿ   ಬೆಟ್ಟದ ಕೆಳಬಾಗಕ್ಕೆ ತಲುಪಬಹುದು.
ಬೆಳಿಗ್ಗೆ ಏಳು ಗಂಟೆಯಿಂದ ಸಂಜೆ ಆರು ಗಂಟೆಯ ವರೆಗೆ ಕ್ಷೇತ್ರದಲ್ಲಿ ವೀಕ್ಷಿಸಲು ಅವಕಾಶವಿರುತ್ತದೆ.

ಸಿಹಿಜೀವಿ
ಸಿ ಜಿ ವೆಂಕಟೇಶ್ವರ
ತುಮಕೂರು

 

ಎರಡು ಹನಿಗಳು

 


*ಸಿಹಿಜೀವಿಯ ಹನಿಗಳು*


*ಕಾಲ ಎನ್ನುವ ಮದ್ದು..*


ಎಷ್ಟೇ ಕಷ್ಟ ಕೋಟಲೆಗಳಿದ್ದರೂ,

ಬಿದ್ದರೂ   ದೃತಿಗೆಡದೇ 

ನಡೆಯುತಿರಬೇಕು ಎದ್ದು|

ಎಲ್ಲರ ಸಕಲ ಸಮಸ್ಯೆಗಳ

ಪರಿಹರಿಸುವುದು ಕಾಲ

ಎನ್ನುವ ಮದ್ದು ||


೨ 

*ಗಂಧದ ಹೋಳು*


ಸಂಬಂಧಗಳ ಬಿರುಕಾಯಿತೆಂದು

ಕೊರಗದಿರು ಎಂದಿಗೂ

ನಿಲ್ಲಿಸಿ ಬಿಡು ನಿನ್ನ ಗೋಳು |

ಎಷ್ಟೇ ತುಂಡುಗಳಾಗಿ ವಿಭಜಿಸಿದರೂ 

ತನ್ನ ಪರಿಮಳವ ಕಳೆದುಕೊಳ್ಳುವುದೇ

ಗಂಧದ ಹೋಳು ||



*ಸಿಹಿಜೀವಿ*

ಸಿ ಜಿ ವೆಂಕಟೇಶ್ವರ

ತುಮಕೂರು


ಕಾಲ ಎನ್ನುವ ಮದ್ದು.

 



*ಕಾಲ ಎನ್ನುವ ಮದ್ದು..*


ಎಷ್ಟೇ ಕಷ್ಟ ಕೋಟಲೆಗಳಿದ್ದರೂ,

ಬಿದ್ದರೂ   ದೃತಿಗೆಡದೇ 

ನಡೆಯುತಿರಬೇಕು ಎದ್ದು|

ಎಲ್ಲರ ಸಕಲ ಸಮಸ್ಯೆಗಳ

ಪರಿಹರಿಸುವುದು ಕಾಲ

ಎನ್ನುವ ಮದ್ದು ||


*ಸಿಹಿಜೀವಿ*

ಸಿ ಜಿ ವೆಂಕಟೇಶ್ವರ

ತುಮಕೂರು


24 November 2022

ಬಾಲಾಜಿಯ ದರ್ಶನ ಮಾಡೋಣ ಬನ್ನಿ ...

 


ಬಾಲಾಜಿಯ ದರ್ಶನ ಮಾಡೋಣ ಬನ್ನಿ.


ಆಗಾಗ್ಗೆ ಕೇಳಿಸುವ ಮಕ್ಕಳ ಅಳುವಿನ ಸದ್ದು, ಕೆಲವೊಮ್ಮೆ ಸಂತಸದಿಂದ ಕುಣಿದಾಡುವ ಶಿಶುಗಳ ಕಲರವ, ಒಂದೆಡೆ ಹಿಂದಿಮಾತುಗಳು ಕಿವಿಯಮೇಲೆ ಬೀಳುತ್ತಿದ್ದರೆ ಪಕ್ಕದಲ್ಲೇ ತಮಿಳು ಭಾಷೆಯ ಸದ್ದು, ತೆಲುಗು ಭಾಷೆ ಸ್ವಲ್ಪ ಹೆಚ್ಚೇ ಎನ್ನುವಂತೆ ಕೇಳುತ್ತಿದ್ದರೆ.ಕ್ಷೀಣವಾಗಿ ಅಲ್ಲೊಂದು ಇಲ್ಲೊಂದು ಕನ್ನಡ ಪದಗಳು ಕೇಳುತ್ತಿದ್ದವು. 

ಇದು ಇತ್ತೀಚಿನ ತಿರುಮಲದ ಶ್ರೀವೆಂಕಟೇಶ್ವರ ಸ್ವಾಮಿಯ ವೈಕುಂಠ  ಕ್ಯೂ  ಕಾಂಪ್ಲೆಕ್ಸ್ ನಲ್ಲಿರುವ ಸರ್ವ ದರ್ಶನ ಕಂಪಾರ್ಟ್ ಮೆಂಟ್ ನ ಚಿತ್ರಣ...  

ವೆಂಕಟೇಶ್ವರ ಎಂಬ ಹೆಸರಿನ ನಾನು ವರ್ಷಕ್ಕೊಮ್ಮೆ ಬಾಲಾಜಿಯ ದರ್ಶನ ಮಾಡದಿದ್ದರೆ ಏನೋ ಕಳೆದುಕೊಂಡ ಅನುಭವ .ಕೋವಿಡ್ ಕಾರಣದಿಂದ ಕಳೆದೆರಡು ವರ್ಷಗಳಲ್ಲಿ ಸ್ವಾಮಿಯ ದರ್ಶನ ಭಾಗ್ಯದಿಂದ ವಂಚಿತನಾದ ನಾನು ಕಳೆದ ವಾರ ಬಸ್ ಏರಿ ತಿರುಮಲೆಗೆ ಹೊರಟೇಬಿಟ್ಟೆ.ತಿರುಪತಿಯಿಂದ ತಿರುಮಲಾಗೆ ಟಿ ಟಿ ಡಿ ಬಸ್ ನಲ್ಲಿ ಪಯಣ ಆರಂಭವಾದಾಗ ನಿಧಾನವಾಗಿ ಮೋಡ ಕವಿದ ವಾತಾವರಣ ಆಗಾಗ್ಗೆ ಬೀಳುವ ತುಂತುರು ಮಳೆ, ಬಸ್ ಮೇಲೇರಿದಂತೆಲ್ಲಾ  ತಿರುಪತಿಯ ಕಾಂಕ್ರೀಟ್ ಕಾಡು ಮಾಯವಾಗಿ  ಶೇಶಾಚಲಂ ಕಾನನದ ವೈಭವ ನಮ್ಮ ಮನವನ್ನು ಮುದಗೊಳಿಸಿತು .

ತಿರುಮಲ ಬೆಟ್ಟ ತಲುಪಿ ಸ್ನಾನ ಮಾಡಿ. ಮೊದಲಿಗೆ ವರಹಾಸ್ವಾಮಿಯ ದರ್ಶನ ಪಡೆದು ವೆಂಕಟೇಶ್ವರ ಸ್ವಾಮಿಯ ದರ್ಶನಕ್ಕೆ  ಸರ್ವ ದರ್ಶನ ಸಾಲಿನಲ್ಲಿ ನಿಂತಾಗ ಎಷ್ಟು ಹೊತ್ತಿಗೆ ದರ್ಶನವಾಗುತ್ತದೆ ಎಂಬ ನಿರ್ದಿಷ್ಟವಾದ ಸಮಯದ ಅರಿವಿಲ್ಲದಿದ್ದರೂ  ಸ್ವಾಮಿಯ ದರ್ಶನವಾಗೇ ಆಗುತ್ತದೆ ಎಂಬ ಅದಮ್ಯ ವಿಶ್ವಾಸ ನಮ್ಮದು. 





ಸರತಿಯ ಸಾಲು ಗೋವಿಂದ ನಾಮ ಸಂಕೀರ್ತನೆ ಮಾಡುತ್ತ  ಕ್ರಮೇಣ ಮುಂದೆ ಸಾಗಿ ಇಂದು ಕಂಪಾರ್ಟ್ ಮೆಂಟ್ ತಲುಪಿತು. ಅಲ್ಲಿಯ ಚಿತ್ರಣ ಅದೊಂದು ಭಾರತದ ಪ್ರತಿಬಿಂಬ ಎಂಬಂತೆ ಕಂಡಿತು.ಅಲ್ಲಿ ಬಡವರಿದ್ದರು ಧನಿಕರು, ಕಪ್ಪನೆಯ, ಕೆಂಪನೆಯ ಎಣ್ಣೆಗೆಂಪು ಬಣ್ಣದ,ಗಂಡು ಹೆಣ್ಣು, ವಿವಿಧ ಭಾಷೆಯ, ವಿವಿಧ ಸಂಸ್ಕೃತಿಗಳ ಜನ ಸೇರಿದ್ದರು ವಿಭಿನ್ನವಾದ ನೆಲ ಮೂಲ, ಸಂಸ್ಕೃತಿಯಾದರೂ   ,ಗಡಿ,ನೀರು, ಜಾತಿ ಭಾಷೆಗಳ ವಿಚಾರಕ್ಕೆ ಕಿತ್ತಾಡುವವರೆಲ್ಲರ  ಬಾಯಲ್ಲಿ ಗೋವಿಂದ ನಾಮಾವಳಿ ಪ್ರತಿಧ್ವನಿಸುತ್ತಿತ್ತು !ಆ ಮಟ್ಟಿಗೆ ಬಾಲಾಜಿ      ನಮ್ಮನ್ನೆಲ್ಲಾ ಏಕತೆಯ ಮಂತ್ರ ಪಠಿಸುವ ಬುದ್ದಿ ಕರುಣಿಸಿದ್ದ .





ಬಾಲಾಜಿಯ ದರ್ಶನ ಸಮಯದಲ್ಲಿ ನಾವೆಲ್ಲರೂ ಮೊಬೈಲ್ ಮತ್ತು ನಮ್ಮ ಎಲ್ಲಾ ಎಲೆಕ್ಟ್ರಾನಿಕ್ ಡಿವೈಸ್ ಗಳಿಂದ ದೂರವಿರುವ ಕಾರಣ ಉಚಿತವಾದ ಮೊಬೈಲ್ ಡಿ ಅಡಿಕ್ಷನ್ ಆದ ಅನುಭವ ಆ ಸಮಯದಲ್ಲಿ ಕಿವಿಯ ಮೇಲೆ ಬೀಳುವ ಗೋವಿಂದ ನಾಮಾವಳಿ ನಮಗೆ ಬೇರೇನೂ ಬೇಡ  ಎಂಬ ಭಾವನೆ ತರಿಸುವುದು ಸುಳ್ಳಲ್ಲ.

 

ಕಂಪಾರ್ಟ್ ಮೆಂಟ್ ನಲ್ಲಿ ಟಿ ಟಿ ಡಿ ಯವರು ಆಗಾಗ್ಗೆ ಅನ್ನ ಪ್ರಸಾದ ನೀಡುವರು. ಅಲ್ಲೇ ಜಲಪ್ರಸಾದ ಲಭ್ಯ ಉಳಿದಂತೆ ನಿತ್ಯ ಕರ್ಮಕ್ಕೂ ಸ್ಥಳಾವಕಾಶವನ್ನು ಕಲ್ಪಿಸಿದ್ದಾರೆ. ದೊಡ್ಡ ಪರದೆಯ ಮೇಲೆ ಸ್ವಾಮಿಯ ವಿವಿಧ ಸೇವೆಗಳನ್ನು ಕಣ್ತುಂಬಿಸಿಕೊಳ್ಳುವ ಭಾಗ್ಯ. ಇನ್ನೇನು ಬೇಕು ನಮಗೆ ಅದಕ್ಕೆ ಹಿರಿಯರು ಆ ಜಾಗಕ್ಕೆ ವೈಕುಂಠ ಕ್ಯೂ ಕಾಂಪ್ಲೆಕ್ಸ್ ಎಂಬ ನಾಮಕರಣ ಮಾಡಿರುವುದು! 


ಸುಮಾರು ಹದಿನೇಳು ಗಂಟೆಗಳ ಭಕ್ತಿ ಪೂರ್ವಕ ಕಾಯುವಿಕೆಯ ಫಲವಾಗಿ ಸ್ವಾಮಿಯ ದಿವ್ಯ ಸ್ವರೂಪವನ್ನು ಕಣ್ತುಂಬಿಸಿಕೊಂಡು ಹೊರಬರುವಾಗ ಒಂದು ಅವ್ಯಕ್ತವಾದ ಸಂತಸ ಮನೆ ಮಾಡಿ ಧನ್ಯತಾ ಭಾವ ಮೂಡುತ್ತದೆ. ನಂತರದ ಕ್ಷಣದಲ್ಲಿ ನಮ್ಮ ಮನದಲ್ಲಿ ಮತ್ತದೇ ಪ್ರಶ್ನೆ ಮತ್ತೆ ಸ್ವಾಮಿಯ ದರ್ಶನ ಯಾವಾಗ? 





ಈ ಬಾರಿ ತಿರುಪತಿಗೆ ಹೋದಾಗ ನಾನು ಗಮನಿಸಿದ ಮತ್ತೊಂದು ಒಳ್ಳೆಯ ಅಂಶ ಏಕ ಬಳಕೆಯ ಪ್ಲಾಸ್ಟಿಕ್ ಸಂಪೂರ್ಣ ನಿಷೇಧ! ಕುಡಿಯುವ ನೀರಿನ ಪ್ಲಾಸ್ಟಿಕ್ ಬಾಟಲ್ ಬದಲಿಗೆ  ಒಂದು ಲೀಟರ್ ಗಾಜಿನ ಬಾಟಲ್ ಗಳಲ್ಲಿ ನೀರಿನ ಮಾರಾಟ ಮಾಡುವುದು ಕಂಡು ಬಂತು. ದರ ಸ್ವಲ್ಪ ಹೆಚ್ಚಾದರೂ ಪರಿಸರ ಕಾಳಜಿಯ ಸರ್ವರೂ ಇದಕ್ಕೆ ಒಗ್ಗಿಕೊಳ್ಳಲೇ ಬೇಕಿದೆ. ನಾನೂ ಕೂಡಾ ಪುನಃ ಉಪಯೋಗಿಸಬಹುದಾದ  ಗಾಜಿನ ಬಾಟಲ್ ನಲ್ಲಿ ನೀರು ಖರೀದಿಸಿ ಕುಡಿದೆ.

ಲಾಡು ಖರೀದಿಸಲು ಮೊದಲ ಪ್ಲಾಸ್ಟಿಕ್ ಚೀಲದ ಬದಲಿಗೆ ಪರಿಸರ ಸ್ನೇಹಿ ಚೀಲಗಳ ವಿತರಣೆ ಗಮನ ಸೆಳೆಯಿತು. ಈ ಎಲ್ಲಾ ಅಂಶಗಳನ್ನು ಗಮನಿಸಿದಾಗ 

ಈ ಬಾರಿ ಬಾಲಾಜಿಯ ದರ್ಶನಕ್ಕೆ ತೆರಳಿದ ನಮ್ಮದು  ಬರೀ ತೀರ್ಥ ಯಾತ್ರೆ ಅನಿಸಲ್ಲ ಬದಲಿಗೆ ಅದೊಂದು ಸಮಾಜೋ ಆರ್ಥಿಕ ಮಹತ್ವದ ಪಯಣವಾಗಿತ್ತು, ಏಕತೆಯ ಯಾತ್ರೆಯಾಗಿತ್ತು.ಪರಿಸರ ಜಾಗೃತಿಯ ಸಮಾವೇಶವಾಗಿತ್ತು. ಮೊಬೈಲ್ ಮುಂತಾದ ಗಾಡ್ಜೆಟ್ ಅತಿಯಾದ ಬಳಕೆ ವಿರುದ್ಧದ ಜಾಗೃತಿ ಮೂಡಿಸುವ ಕೇಂದ್ರದ ದರ್ಶನ ವಾದಂತಾಗಿತ್ತು. ಆತ್ಮೀಯರೆ ಬನ್ನಿ ನೀವು ಸಹ 

ಪ್ರಪಂಚದ ಶ್ರೀಮಂತ ದೇವ, ಅನಾಥ ರಕ್ಷಕ ಬಾಲಾಜಿಯ ದರ್ಶನ ಮಾಡೋಣ.


ಸಿಹಿಜೀವಿ

ಸಿ ಜಿ ವೆಂಕಟೇಶ್ವರ

ತುಮಕೂರು


18 November 2022

ಕಂಬನಿ ಖಾಲಿ...

 #ಕಂಬನಿ_ಖಾಲಿಯಾಗಿದೆ 


ನೀ ಬೆನ್ನಿಗೆ ಚೂರಿ ಹಾಕಿದರೂ

ಅದು ಹೃದಯಕ್ಕೆ ತಾಗಿದೆ |

ಖಂಡಿತವಾಗಿಯೂ ಅಳುವುದಿಲ್ಲ

ನೀ ಮಾಡಿದ ಮೋಸಕ್ಕೆ

ಏಕೆಂದರೆ ಕಂಬನಿ ಖಾಲಿಯಾಗಿದೆ ||


#ಸಿಹಿಜೀವಿ 

ಕಾಂತಾರ ಮತ್ತು ಕಾಡೊಂದಿತ್ತಲ್ಲ...

 

ಕಾಂತಾರ ಮತ್ತು ಕಾಡೊಂದಿತ್ತಲ್ಲ...

ಪ್ರಾದೇಶಿಕ ಸಿನಿಮಾ ಎಂದುಕೊಂಡದ್ದು ವಿಶ್ವ ಮಟ್ಟದಲ್ಲಿ ಸದ್ದು ಮಾಡುತ್ತಾ ತನ್ನ ನಾಗಾಲೋಟ ಮುಂದುವರೆಸಿರುವ ಚಿತ್ರ ಕಾಂತಾರ... ಚಿತ್ರದಲ್ಲಿ ಅಂತಾದ್ದೇನಿದೆ? ಎಂದು ಅಚ್ಚರಿ ಪಟ್ಟ ಜನಕ್ಕೆ ಚಿತ್ರ  ನೋಡಿದಾಗ ಇದು ನಮ್ಮ ಜೀವನಕ್ಕೆ ಸಂಬಂಧಿಸಿದ ಚಿತ್ರ. ಕಾಡಿನ ಜೊತೆಗಿನ ಸಹ ಜೀವನಕ್ಕೆ ಸಂಬಂಧಿಸಿದ ಚಿತ್ರ ಎಂಬುದು ಅರ್ಥವಾಗಿತ್ತು. ಅದಕ್ಕೆ ಜನ ಮತ್ತೆ ಮತ್ತೆ ಆ ಸಿನಿಮಾ ನೋಡುತ್ತಿದ್ದಾರೆ. ಸಾಹಿತ್ಯ ಮತ್ತು ಸಿನಿಮಾಗಳು ನಮ್ಮ ಜೀವನದ ಪ್ರತಿಬಿಂಬಗಳು.ಸಾಹಿತ್ಯ ಓದುವಾಗ ಮತ್ತು ಸಿನಿಮಾ ನೋಡುವಾಗ ನಮ್ಮ ಜೀವನದಲ್ಲೂ ಅಂತಹ ಘಟನೆಗಳು ಸಂಭವಿಸಿದ್ದರೆ ಅಥವಾ ಅನುಭವಕ್ಕೆ ಬಂದಿದ್ದರೆ ನಮಗೆ ಆ ಕೃತಿ ಹೆಚ್ಚು ಆಪ್ತವಾಗುತ್ತದೆ...
ಮೊನ್ನೆ ಲೇಖಕರಾದ  ಶಶಿಧರ ವಿಶ್ವಾಮಿತ್ರ ರವರ "ಕಾಡೊಂದಿತ್ತಲ್ಲ" ಎಂಬ ಕೃತಿಯನ್ನು ಓದಿದೆ. ಕಾಂತಾರ ಸಿನಿಮಾ ನೋಡಿದ ಕೆಲವೇ ದಿನಗಳಲ್ಲಿ ಓದಿದ್ದರಿಂದ ಈ ಕೃತಿಯು ಹೆಚ್ಚು ಇಷ್ಟವಾಯಿತು.ಈ ಪುಸ್ತಕದಲ್ಲಿ ಉಲ್ಲೇಖಿಸಿರುವ  ಕಾಡಿನ ಮರಗಳು ,ಪ್ರಾಣಿಗಳು, ಸಸ್ಯ ಸಂಕುಲ ಮುಂತಾದ ಹೆಸರುಗಳನ್ನು ಬಹುತೇಕ ನಗರದಲ್ಲಿ ಹುಟ್ಟಿ ಬೆಳೆದ ಮಕ್ಕಳು ಕೇಳೆ ಇಲ್ಲವೇನೋ ಎಂಬುದು ನನ್ನ ಅನಿಸಿಕೆ. ಕಾಡು ಮತ್ತು ನಾಡಿನ ಸಂಬಂಧ, ಕಾಡು ಮತ್ತು ವನ್ಯಜೀವಿಗಳ ಸಹಜೀವನ ಹಿಂದಿಗಿಂತ ಇಂದು ಹೆಚ್ಚು ಪ್ರಸ್ತುತ.

ಲಾರೆನ್ಸ್ ಫಾರೆಸ್ಟ್ ಎಂಬ ಶಾರ್ಪ್ ಶೂಟರ್ ಆಫ್ರಿಕಾದ ಮಳೆ ಕಾಡಿನಲ್ಲಿ  ಸಾವಿರಾರು ಆನೆಗಳನ್ನು ತನ್ನ ಕೋವಿಯಿಂದ ಕೊಂದ ಕಟುಕ . ಭಾರತದಲ್ಲಿ ಬ್ರಿಟಿಷರ ಪರವಾಗಿ ಅರಣ್ಯ ಪ್ರದೇಶದಲ್ಲಿ ಅಧ್ಯಯನ ಮಾಡುವಾಗ ಕರಡಿಯಿಂದ ದಾಳಿಗೊಳಗಾಗಿ ಸಾವು ಬದುಕಿನ ಮಧ್ಯ ಹೋರಾಟ ಮಾಡುವಾಗ ಸಿದ್ದನ ರೂಪದ ದೈವಮಾನವ ಬಂದು ಅವನ ರಕ್ತಸ್ರಾವ ನಿಲ್ಲಿಸಿ ಜೀವದಾನ ಮಾಡಿದ .ಅಂದಿನಿಂದ ಲಾರೆನ್ಸ್ ಎಂದೂ ಬೇಟೆಯಾಡುವುದಿರಲಿ ಒಂದು ಇರುವೆಯನ್ನು ಸಹ ನೋಯಿಸದ ಮನಸ್ಸಿನ ವ್ಯಕ್ತಿಯಾಗಿ ಬದಲಾಗಿ ತನ್ನ ಜೀವನವನ್ನು ವನ್ಯ ಪ್ರಾಣಿಗಳ ಸಂರಕ್ಷಣೆಗೆ ಮುಡಿಪಿಟ್ಟರು.
ಈ ಪುಸ್ತಕದ ಈ ಎರಡೂ ಪಾತ್ರಗಳು ನಮಗೆ ಕಾಂತಾರವನ್ನು ನೆನಪು ಮಾಡುತ್ತವೆ. ಕಟುಕ ಲಾರೆನ್ಸ್ ಬದಲಾದ ರೀತಿಯನ್ನು ನೋಡಿ ಕಾಂತರಾದ ಶಿವ ನೆನಪಾಗುತ್ತಾನೆ. ಕಾಡನ್ನು ಮತ್ತು ಜೀವಿಗಳನ್ನು  ಕಾಯುವ ಶಕ್ತಿಯೊಂದಿದೆ ಎಂಬುದನ್ನು ಪಂಜುರ್ಲಿ ಕಾಂತಾರದಲ್ಲಿ ಪ್ರತಿನಿಧಿಸಿದರೆ ಪ್ರಸ್ತುತ ಕಾಡೊಂದಿತ್ತಲ್ಲ ಕೃತಿಯಲ್ಲಿ ಆ ಪಾತ್ರವನ್ನು ಸಿದ್ದ ಮತ್ತು ಅವನ ಐದು ಜನ ಸಿದ್ದಪುರುಷರನ್ನು ಕಾಣಬಹುದು.

ಸಾಮಾನ್ಯ ಅರಣ್ಯ ದ ಗಾರ್ಡ್ ಆಗಿದ್ದ ಕೃಷ್ಣಪ್ಪ ಲಾರೆನ್ಸ್ ಮತ್ತು ಬರ್ಕ್ ರವರಿಂದ ಪ್ರಭಾವಿತರಾಗಿ ರಾಜ್ಯದ ಅರಣ್ಯ ಇಲಾಖೆಯ ಉನ್ನತವಾದ ಹುದ್ದೆಯಾದ ಮಹಾ ಅರಣ್ಯ ಪಾಲಕ ಹುದ್ದೆಗೆ ಏರಿ ಕಾಡ ರಕ್ಷಣೆಗೆ ಪಣ ತೊಟ್ಟ ರೀತಿಯನ್ನು ನೋಡಿದಾಗ ಕಾಂತಾರದ ಕಿಶೋರ್ ಪಾತ್ರ ನೆನಪಾಗುತ್ತದೆ.

“ಉತ್ತರ ಪ್ರದೇಶದ ಜಿಮ್ ಕಾರ್ಬೆಟ್ಟಿನ ಹುಲಿಗಳ ಗತಿ ಅಧೋಗತಿಯಾಗಿದೆ. ಇದಕ್ಕೆ ಕಾರಣಗಳಲ್ಲಿ ಮುಖ್ಯವಾದವು ಯಾವುವು ಎಂದರೆ, ಉತ್ತರ ಪ್ರದೇಶದ ಆಡಳಿತ ಸರಿಯಿಲ್ಲ. ಸರ್ಕಾರವೂ ಗಟ್ಟಿಯಿಲ್ಲ. ಜನರ ದುರಾಗ್ರಹ ಹೆಚ್ಚು ಎಂದೆಲ್ಲ ಎಲ್ಲರಿಗೂ ಗೊತ್ತಿರುವುದನ್ನೇ ಪಟ್ಟಿಮಾಡಿ ಹೇಳಬಹುದು. ಆದರೆ ಈ ಮಹನೀಯರ ಕರ್ನಾಟಕ ರಾಜ್ಯದ ಪರಿಸ್ಥಿತಿ ಇದಕ್ಕಿಂತ ಭಿನ್ನವಾಗಿದೆ. ಸ್ವಲ್ಪ ವರ್ಷಗಳ ಕೆಳಗೆ ಅಲ್ಲಿಯ ಬಂಡೀಪುರ ನಾಗರಹೊಳೆ ಮುತ್ತತ್ತಿ ಮುಂತಾದ ರಕ್ಷಿತಾರಣ್ಯಗಳ ಸುತ್ತ ಇರುವ ಗಿಡಜನ ಬಂಡೆದ್ದು ಕಾಡಿಗೇ ಕಿಚ್ಚು ಕೊಟ್ಟ ಮೇಲೆ 33 ಸಾವಿರ ಎಕರೆ ಕಾಡು ದಹಿಸಿಹೋಯಿತಂತಲ್ಲ, ಯಾಕೆ? ಈ ವಿಷಯಕ್ಕೆ ವಿಸ್ತಾರ ತನಿಖೆ ನಡೆದಿದೆಯೆ? ಇಲ್ಲಿ ಪ್ರಸ್ತಾಪಕ್ಕೆ ಬರುತ್ತದೆಯೇ? ಉಹು. ನೀವದನ್ನು ಇಂಥಲ್ಲಿಗೆ ಮಂಡಿಸುವ ವಿಷಯವೆಂದು ಸೇರಿಸಿರೋಲ್ಲ, ತನಿಖೆ ನಡೆಸಿದ ಮೇಲೆ ಫೈಲುಗಳನ್ನು ಗೋಪ್ಯವಾಗಿ ಮುಚ್ಚಿಟ್ಟಿರುತ್ತೀರ. ಯಾಕೆ ಗೊತ್ತೆ? ನಾನು ಹೇಳುತೀನಿ ಕೇಳಿ, ಅಭಯಾರಣ್ಯವೆಂಬೋ ಹೆಸರಲ್ಲಿ ಸ್ವಜನ ವಿರೋಧಿ, ಧನವಂತಪರ  ನಿಮ್ಮ ಧೋರಣೆ ಜನರನ್ನ ರೊಚ್ಚಿಗೇಳಿಸುತ್ತ,  ಪಂಚತಾರ ಹೋಟೆಲು? ವಿಹಾರ ಮಂದಿರ? ಇಂಥವಕ್ಕೆ ಪರವಾನಗಿ ಕೊಡುವ ಧೈರ್ಯವನ್ನ ಯಾಕೆ ಮಾಡಿದಿರಿ?... ಇದು ಅರಣ್ಯಪಾಲಕರಾದ ನಿಮಗೆ ಶೋಭೆ ತರುತ್ತಾ" ಎನ್ನುವ ಮಾತುಗಳು ಈ ಕೃತಿಯಲ್ಲಿ ಪರಿಸರ ಹೋರಾಟಗಾರ್ತಿ ನರ್ಮದಾ ವಿಪುಲೆ ರವರ  ಬಾಯಲ್ಲಿ ಲೇಖಕರು ವ್ಯಕ್ತ ಪಡಿಸಿದ  ಅಭಿಪ್ರಾಯಗಳು.. ಪರಿಸರ ಕಾಳಜಿಯ ಈ   ಮಾತುಗಳಲ್ಲಿ ರಾಜಕಾರಣಿಗಳು, ಉದ್ಯಮಿಗಳನ್ನು  ಅಪಹಾಸ್ಯ ಮಾಡುವ ರೀತಿಯನ್ನು ನೋಡಿದಾಗ ಸಮಾಜದಲ್ಲಿ ವನ,ಮತ್ತು ವನ್ಯಜೀವಿಗಳ ಉಳಿವಿಗೆ ಮಾಡುವ ಹೋರಾಟಗಳು ಸಂಪೂರ್ಣವಾಗಿ ಯಶಸ್ವಿಯಾಗದಿರಲು ಯಾರು ಕಾರಣ ಎಂಬ ಅರಿವಾಗುತ್ತದೆ.

ಈ ಕೃತಿಯಲ್ಲಿ ನನ್ನ ಗಮನ ಸೆಳೆದ ಮತ್ತೊಂದು ಅಂಶ
ಮೆಡೋಸ್ ಎಂಬ  ರಾಜ್ಯದ ಒಂದು ಸಣ್ಣ ಹಳ್ಳಿಯ ಒಬ್ಬ ಮಹಿಳೆ ಒಂದು ಸಾವಿರ ಎಕರೆಯಲ್ಲಿ ಸ್ವಯಿಚ್ಛೆಯಿಂದ ಅರಣ್ಯ ಬೆಳೆಸಿ, ತಾನು ಸಾಯುವ ತನಕ ಕಾಪಿಟ್ಟು ತಾನಿದ್ದ ಮನೆಯ ಸಹಿತ ಪುರಸಭೆಗೆ ದಾನ ಮಾಡಿದ ಪ್ರಸಂಗ .ಇದನ್ನು ಓದುವಾಗ ನಮ್ಮ ಸಾಲು ಮರದ ತಿಮ್ಮಕ್ಕ ಕಣ್ಣ ಮುಂದೆ ಬಂದರು. ಇಂತಹ ನಿಸ್ವಾರ್ಥ ಜೀವಿಗಳು ನಮ್ಮ ನಡುವೆ ಇರುವುದೇ ನಮಗೆ ಹೆಮ್ಮೆ.

ಹೆಸರು ಹೇಳುವಂತೆ 'ಕಾಡೊಂದಿತ್ತಲ್ಲ' ಎನ್ನುವುದು ನೆಲ, ನಾಡು, ಭೂಮಿ ಎಂಬ ಮೂಲ ಪರಿಕಲ್ಪನೆಗಳ ಸುತ್ತ  ಇರುವ  ಗುಡ್ಡ, ಬೆಟ್ಟ, ಗುಟ್ಟೆ, ಕೊರಕಲು ಎಂಬುದರ ಮೇಲೆ ಬೀಳುವ ಬಿಸಿಲು, ಆಡುವ ಗಾಳಿ, ಹನಿಯುವ ಮಳೆಯ, ನೆಲದಡಿಯ ಸಾರವನ್ನುಂಡು, ಕಂಗೊಳಿಸುವ ಗೊಂಡಾರಣ್ಯ, ದಟ್ಟಾರಣ್ಯ, ಮಲೆನಾಡು, ಮರಕಾಡು, ಗಿಡಕಾಡು, ಕುರುಚಲು ಕಾಡು, ಹುಲ್ಲುಗಾವಲು, ಗೋಮಾಳ ಎಂಬಲ್ಲಿ ಬಗೆಬಗೆಯ ರೂಪ ಆಕಾರ ಬಣ್ಣಗಳಿಂದ ಮೈ ತಳೆದು ಬಂದು ಎಂದಿನದೋ ಚರಿತಾನುಕಥನವನ್ನು ಹಾಡಿನಲ್ಲಿ ಕುಣಿತದಲ್ಲಿ ಗಾಥೆಯಾಗಿಸಿದ ಪರಿ ಬಹಳ ಸುಂದರ .ಇದರ ಜೊತೆಗೆ
ಅಂದಿನ ಪರಿಸರದಲ್ಲಿ ಇದ್ದೂ ಇಲ್ಲದಂತಿರುವ ಕಾಡಾಡಿ ಸಿದ್ಧರು ಅಲೆದಾಡಿ ಬೈರಾಗಿಗಳು, ಕಾಡಾಡಿ ಗಿಡಜನರು, ನಾಡಾಡಿ ಹಳ್ಳಿಯ ಮುಗ್ಧರು, ಊರಾಡಿಗಳು ಇದ್ದರು.

ಹೆಚ್ಚುತ್ತಿರುವ ಜನಸಂಖ್ಯೆ,ಮಿತಿಮೀರಿದ  ಯಂತ್ರಗಳ ಸದ್ದಿನಲ್ಲಿ   ಏನಾಗುತ್ತಿದೆ. ಎಂತಾಗುತ್ತಿದೆ ಎಂಬುದೇ ತಿಳಿಯದಾಗಿದೆ.  ಈ ಕೃತಿಯಲ್ಲಿ ಕಾಡಿನ ತೋಳ, ಊರಾಡಿ ನಾಯಿ, ಅಲೆದಾಡಿ ಬೈರಾಗಿ ಮೈತಳೆದು ನೆರೆದು ಹಾಡುತ್ತವೆ. ಆಕಾಶಕ್ಕೆ ಮೂತಿ, ಮುಖವೆತ್ತಿ ಹತಾಶೆಯಿಂದ ರೋದಿಸುತ್ತವೆ.
ಈ ಅಳಲು ಆಳುವವರ   ದಿಕ್ಕೆಡಿಸುತ್ತ ಇರುವುದಿಷ್ಟೇ, ಇಷ್ಟೊರಳಗೆ ಹದವಾಗಿ ಪಾಕಗೊಂಡು ಬೆರೆತು ಬಾಳಿದರೆ ಉಳಿವುಂಟು ಎನ್ನುವ ಎಚ್ಚರ ಹೇಳುತ್ತವೆ.
ಓದುಗರನ್ನು ತಟ್ಟಿ ಎಬ್ಬಿಸುವ ಶಕ್ತಿ 'ಕಾಡೊಂದಿತ್ತಲ್ಲ' ಹಾಡ್ಕಥನಕ್ಕಿದೆ. ಇನ್ನೇಕೆ ತಡ ಕಾಂತಾರ ನೋಡಿದಂತೆ ಕಾಡೊಂದಿತ್ತಲ್ಲ ಕೃತಿ ಓದಿಬಿಡಿ ಅದು ಕಾಡದಿದ್ದರೆ ಕೇಳಿ....

ಪುಸ್ತಕ : ಕಾಡೊಂದಿತ್ತಲ್ಲ
ಲೇಖಕರು: ಶಶಿಧರ ವಿಶ್ವಾಮಿತ್ರ.
ಬೆಲೆ:130
ಪ್ರಕಾಶನ:  ಕಮಲಾ ಎಂಟರ್ ಪ್ರೈಸಸ್ ಬೆಂಗಳೂರು

ಸಿಹಿಜೀವಿ
ಸಿ ಜಿ ವೆಂಕಟೇಶ್ವರ
ತುಮಕೂರು.

08 November 2022

ಪಕ್ಷಿಲೋಕ


 

ಪಕ್ಷಿಲೋಕ ...
*ಇಂದಿನ ಸಿಂಹ ಧ್ವನಿ ಪತ್ರಿಕೆಯಲ್ಲಿ ಪ್ರಕಟವಾದ ನನ್ನ ಲೇಖನ*

ಶನಿವಾರದ ಶಾಲಾ ಕರ್ತವ್ಯ ಮುಗಿಸಿಕೊಂಡು ಮನೆಗೆ ಹೊರಡುವಾಗ ಆತ್ಮೀಯರು ಮತ್ತು ಕಲಾವಿದರಾದ ಕೋಟೆ ಕುಮಾರ್ ರವರು ಸಿಹಿಜೀವಿ ನಿಮಗೊಂದು ಹೊಸ ಲೋಕ ತೋರಿಸುವೆ ಬನ್ನಿ ಎಂದರು. ಕುತೂಹಲದಿಂದ ಅವರನ್ನು ಹಿಂಬಾಲಿಸಿದೆ .ಬೈಕ್ ತುಮಕೂರಿನ ರವೀಂದ್ರ ಕಲಾನಿಕೇತನ ದ ಮುಂದೆ ನಿಂತಿತು.ಯಾವುದೋ ಕಲಾಕೃತಿಗಳನ್ನು ತೋರಿಸುವರು ಎಂಬ ನನ್ನ ಊಹೆ ಸುಳ್ಳಾಯಿತು. ಒಳಗೆ ಕಾಲಿಟ್ಟಾಗ ಅನಾವರಣಗೊಂಡಿದ್ದು "ಪಕ್ಷಿ ಲೋಕ "




ಚಿತ್ಕಲಾ ಫೌಂಡೇಷನ್  ಹಾಗೂ ರವೀಂದ್ರ ಕಲಾನಿಕೇತನ ಚಿತ್ರಕಲಾ
ಮಹಾವಿದ್ಯಾಲಯ, ಆರ್.ಟಿ.ನಗರ, ತುಮಕೂರು. ಇವರ ಸಹಯೋಗದಲ್ಲಿ
ಆಯೋಜಿಸಿರುವ ಛಾಯಾಚಿತ್ರ ಪ್ರದರ್ಶನ ನಮ್ಮ ಮನಸೆಳೆಯಿತು.
'ಪರಿಸರದ ಉಳಿವಿಗಾಗಿ ಪಕ್ಷಿಗಳ ಸಂರಕ್ಷಣೆ ಅತ್ಯಗತ್ಯ "ಎಂಬ ಮಹೋನ್ನತ ಗುರಿಯನ್ನು ಹೊಂದಿರುವ ಈ ಪ್ರದರ್ಶನ ಪರಿಸರದ ಕಾಳಜಿ ಮತ್ತು ಪಕ್ಷಿಗಳ ಸೌಂದರ್ಯ ಮತ್ತು ಅವುಗಳ ‌ಜೀವನಕ್ರಮದ ಬಗ್ಗೆ ನಮಗೆ ಉತ್ತಮ ಮಾಹಿತಿ ನೀಡುತ್ತದೆ.





ಹೆಮ್ಮಿಗೆ ಮೋಹನ್ ಹಾಗೂ ವಿ .ಎಸ್. ದೇಸಾಯಿ ರವರು ಜಂಟಿಯಾಗಿ ಈ  ಪಕ್ಷಿ ಛಾಯಾಚಿತ್ರಗಳ ಪ್ರದರ್ಶನ ಏರ್ಪಡಿಸಿದ್ದಾರೆ.

ಹೆಮ್ಮಿಗೆ ಮೋಹನ್ ರವರು
ಹಾಸನ ಜಿಲ್ಲೆಯ ಮಲೆನಾಡಿನ ಊರು ಹೆಮ್ಮಿಗೆಯವರು.ಪಶ್ಚಿಮ ಘಟ್ಟದ ಸೆರಗಿನಂತಿರುವ ಹಮ್ಮಿಗೆಯ ಪರಿಸರ ಪಕೃತಿ ಸೌಂದರ್ಯ, ವೈವಿಧ್ಯತೆಯ  ಮರಗಳು , ಪ್ರಾಣಿ, ಪಕ್ಷಿ, ಕೀಟಗಳನ್ನು ಕ್ಯಾಮರಾದಲ್ಲಿ ಮೋಹನ್‌ ಅವರು ಹಿಡಿದಿಟ್ಟಿರುವುದೇ ವಿಶೇಷ. ಹಾಸನ ಜಿಲ್ಲಾ ಸಹಕಾರ ಬ್ಯಾಂಕ್, ಮಲೆನಾಡು ಅಭಿವೃದ್ಧಿ ಪಾಲಕರಾಗಿ  ಹಾಗೂ ರೆಡ್‌ ಕ್ರಾಸ್ ಸಂಸ್ಥೆಯ ಅದ್ಯಕ್ಷರಾಗಿ ಗೌರವ ವನ್ಯಜೀವಿ ಪರಿಪಾಲಕರಾಗಿ ಅತ್ಯುತ್ತಮ ಕೆಲಸ ನಿರ್ವಹಿಸುತ್ತಾ ಬಂದಿದ್ದಾರೆ.
ಅವರೊಂದಿಗೆ ಛಾಯಾಚಿತ್ರ ಪ್ರದರ್ಶನದಲ್ಲಿ ಗಮನ ಸೆಳೆಯುವ ಚಿತ್ರಗಳ ಕ್ಲಿಕ್ಕಿಸಿದವರು  ಬಿ ಎಸ್ ದೇಸಾಯಿ ರವರು.
ವಿಜಯಪುರ ಜಿಲ್ಲೆಯ ತಾಳಿಕೋಟೆ ಮೂಲದವರಾದ ಇವರು ಹಾಸನ ಜಿಲ್ಲೆಯಲ್ಲಿ ಚಿತ್ರಕಲಾ ಶಿಕ್ಷಕರಾಗಿ  ಚಿತ್ರಕಲಾವಿದರಾಗಿ, ಕಲೆ ಮತ್ತು ಸಾಂಸ್ಕೃತಿಕ ಸಂಘಟನಾಕಾರರಾಗಿ  ವಿದ್ಯಾರ್ಥಿಗಳಿಗೆ ಅಚ್ಚುಮೆಚ್ಚಿನ ಗುರುವಾಗಿ  ಸಮಾಜದಲ್ಲಿ ಸುಮಧುರ ಬಾಂಧವ್ಯದ ಬೆಸುಗೆಯಾಗಿ ಕ್ಯಾಮರಾದ ಮುಖಾಂತರ ಲಕ್ಷಾಂತರ ಪಕ್ಷಿಗಳ ಛಾಯಾಚಿತ್ರಗಳನ್ನು ತೆಗೆದಿದ್ದಾರೆ. ಮತ್ತು ಪ್ರದರ್ಶಿಸಿದ್ದಾರೆ.
ಈ ಇಬ್ಬರೂ ಕಲಾಕಾರರ ಕಲಾಕೃತಿಗಳನ್ನು ನೋಡುವುದೇ ಕಣ್ಣಿಗೆ ಹಬ್ಬ.




ತುಮಕೂರು ಡಯಟ್ ನ ವೃತ್ತಿ ಶಿಕ್ಷಣ
ಉಪನ್ಯಾಸಕರಾದ ಟಿ ಶ್ರೀನಿವಾಸ ಮೂರ್ತಿ ರವರು  ನಮ್ಮ ಜೊತೆಯಲ್ಲಿ ಛಾಯಾಚಿತ್ರ ಪ್ರದರ್ಶನ ವೀಕ್ಷಿಸಿ ಹೀಗೆ ಅಭಿಪ್ರಾಯಪಟ್ಟಿದ್ದಾರೆ
"ಶ್ರೀಯುತ ದೇಸಾಯಿ ರವರ ಈ ವಿಶೇಷ ಛಾಯಾಗ್ರಾಹಕ ಹವ್ಯಾಸ ನಿಜವಾಗಲೂ ಎಲ್ಲರನ್ನು ಬೆರೆಗು ಮಾಡುವಂತದ್ದು.
ನಿಜವಾದ ಛಾಯಾಗ್ರಾಹಕ ವೃತ್ತಿಯವರು, ಛಾಯಾಗ್ರಹಣದ ಬಗ್ಗೆ ಆಸಕ್ತಿ ಇರುವಂತಹವರು, ಕಲಾವಿದರು ಮತ್ತು ನೋಡುವಂತ ಕಲಾ ಆಸಕ್ತಿಯುಳ್ಳವರು ಎಲ್ಲರಿಗೂ  ಬೆರಗಾಗುವಂತಹ ಹಾಗೂ ವಿವಿಧ ಆಯಾಮಗಳಲ್ಲಿ ಅದರಲ್ಲೂ ವಿಶೇಷವಾಗಿ ಪಕ್ಷಿಗಳ ಛಾಯಾಚಿತ್ರಗಳನ್ನು ಅವರ ಕ್ಯಾಮರಾದಲ್ಲಿ ಸೆರೆ ಹಿಡಿದಿರುವುದು ಅವರ ವಿಶೇಷ ಪ್ರಕೃತಿಯ ಆಸಕ್ತಿ ಎಂದರೆ ತಪ್ಪಾಗಲಾರದು ಸ್ನೇಹಿತರೆ. ಶ್ರೀಯುತ ಸಿ ಜಿ ವೆಂಕಟೇಶ್ವರ  ಅವರ ಅಭಿಪ್ರಾಯದಂತೆ ಎಲ್ಲರನ್ನು ಪ್ರಕೃತಿಯಲ್ಲಿ ತೇಲಾಡುವಂತೆ ಮಾಡಿರುವುದು ಅವರ ಕ್ಯಾಮೆರಾ  ಕೈಚಳಕನ            ಘಮ್ಮತ್ತು. ನಾವೆಲ್ಲರೂ ಹಾಗೂ  ನಮ್ಮ ಸ್ನೇಹಿತರು ಹಾಗೂ ಕುಟುಂಬದವರೆಲ್ಲರೂ ಬಂದು ನೋಡಬಹುದಾದ ಸುಂದರ ಛಾಯಾಚಿತ್ರಗಳ ಪ್ರದರ್ಶನ ಇದಾಗಿದೆ... ಶ್ರೀಯುತ ದೇಸಾಯಿ ರವರಿಗೆ  ಶುಭವಾಗಲಿ  ಎಲ್ಲರಿಗೂ ಪ್ರದರ್ಶನದ ಬಗ್ಗೆ ಮಾಹಿತಿಯನ್ನು ನೀಡಿ ನೋಡಲು ವೀಡಿಯೋ ಮೂಲಕ ಆಹ್ವಾನ ನೀಡುವ  ಕಲಾವಿದರಾದ  ಶ್ರೀ ಕೋಟೆ ಕುಮಾರ್ ರವರ ಪ್ರಯತ್ನ ಶ್ಲಾಘನೀಯ " ಎಂದರು..

ಆತ್ಮೀಯರೆ  ನೀವು ಸಹ  ಪಕ್ಷಿ ಲೋಕದಲ್ಲಿ ವಿಹರಿಸುವ ಮನಸ್ಸಾದರೆ
2022ರ ನವೆಂಬರ್ 02ರಿಂದ ನವೆಂಬರ್ 10ರವರೆಗೆ
ಪ್ರತಿದಿನ ಬೆಳಗ್ಗೆ 10ರಿಂದ ಸಂಜೆ 05 ರವರೆಗೆ ಹೋಗಿ ವೀಕ್ಷಿಸಲು ಅವಕಾಶವಿದೆ. ಇ‌ನ್ನೇಕೆ ತಡ ಹೊರಡಿ ಪಕ್ಷಿ ಲೋಕದಲ್ಲಿ ಒಂದು ಸುತ್ತು ಹಾಕಿ ಬನ್ನಿ...

ಸಿಹಿಜೀವಿ
ಸಿ ಜಿ ವೆಂಕಟೇಶ್ವರ
ತುಮಕೂರು.

07 November 2022

ನುಡಿತೋರಣ ನುಡಿ ಜಾತ್ರೆ....


 


ನುಡಿತೋರಣದ ನುಡಿ ಜಾತ್ರೆ. 


ಸಾಮಾಜಿಕ ಮಾಧ್ಯಮಗಳು ನಮ್ಮ ಯುವಪೀಳಿಗೆಯನ್ನು ಹಾಳು ಮಾಡಿವೆ .ನಮ್ಮ ಸಂಸ್ಕೃತಿ ಪರಂಪರೆಯ ನಾಶಕ್ಕೆ ಅವುಗಳೂ ಕಾರಣ ಎಂದು ಆಗಾಗ್ಗೆ ನಾವೆಲ್ಲರೂ ಮಾತನಾಡುತ್ತಾ ಸಮಾಜ  ಮತ್ತು ನಮ್ಮ ಪರಂಪರೆಯ ಬಗ್ಗೆ ಕಾಳಜಿ ವ್ಯಕ್ತಪಡಿಸುವ ಮಾತನಾಡುತ್ತೇವೆ ಈ ವಿಷಯದಲ್ಲಿ ಸತ್ಯ ಇದ್ದರೂ ಪೂರ್ಣವಾಗಿ ಸಾಮಾಜಿಕ ಮಾಧ್ಯಮಗಳಿಂದಲೇ  ಜನ ಹಾಳಾಗುತ್ತಿದ್ದಾರೆ ಸಂಸ್ಕೃತಿಯ ನಾಶವಾಗುತ್ತಿದೆ ಎಂದು ಒಪ್ಪಲಾಗದು. ಒಂದು ಚಾಕುವನ್ನು ಹಣ್ಣು ಕತ್ತರಿಸಲೂ ಬಳಸಬಹುದು ಕ್ರೂರ ಚಟುವಟಿಕೆಗಳಿಗೂ ಬಳಸಬಹುದು ಅದು ನಮ್ಮ ವಿವೇಚನೆ ಅವಲಂಬಿಸಿದೆ. 

ಸಾಮಾಜಿಕ ಮಾಧ್ಯಮ ಮನಸ್ಸು ಮಾಡಿದರೆ ನಮ್ಮ ನಾಡು ನುಡಿ ಸಂಪ್ರದಾಯ, ಸಂಗೀತ, ಸಾಹಿತ್ಯ, ಕಲೆ  ,ಅಧ್ಯಾತ್ಮ ಮುಂತಾದ ವಿಷಯಗಳನ್ನು ಚರ್ಚಿಸಿ ತನ್ಮೂಲಕ ಭಾಷೆ ಮತ್ತು ಸಂಸ್ಕೃತಿಯನ್ನು ಉಳಿಸಿ ಬೆಳೆಸಬಹುದು ಎಂದು ಹಲವಾರು ಸಾಮಾಜಿಕ ಮಾಧ್ಯಮಗಳು ಕಾರ್ಯಕ್ರಮ ರೂಪಿಸಿ ಕಾರ್ಯ ಪ್ರವೃತ್ತವಾಗಿ  ತಮ್ಮ ಬದ್ಧತೆಯನ್ನು ತೋರುತ್ತಾ ಬಂದಿವೆ.


ಇದಕ್ಕೆ ಉದಾಹರಣೆ ನಾನು ಸದಸ್ಯನಾಗಿರುವ "ನುಡಿ ತೋರಣ" ವಾಟ್ಸಪ್ ಬಳಗ. ಈ ಬಳಗದಲ್ಲಿ ನಮ್ಮ ನಾಡು ನುಡಿಯ ಬಗ್ಗೆ ಅಂಕಣಗಳಿವೆ ,ನಮ್ಮ ತಿಂಡಿ ತಿನಿಸು, ಆಚಾರ ವಿಚಾರ ,ಸಂಗೀತ, ಹಾಸ್ಯ, ಮುಂತಾದ ವಿಷಯಗಳ ಬಗ್ಗೆ ಸ್ವಾರಸ್ಯಕರ ಚರ್ಚೆ ನಡೆಯುತ್ತದೆ ಆಗಾಗ್ಗೆ ಗೂಗಲ್ ಮೀಟ್ ಬಳಸಿ ಒಂದೆಡೆ ಸೇರಿ ವಿಚಾರ ವಿನಿಮಯ ನಡೆಯುತ್ತದೆ. 


ನಿನ್ನೆ ಭಾನುವಾರ ನನ್ನ ತುರ್ತು ಕಾರ್ಯ ಮುಗಿಸಿ  ಸಂಜೆ  ಮನೆಗೆ ಬಂದು ನುಡಿತೋರಣ ಬಳಗದ ಗೂಗಲ್ ಮೀಟ್ ಲಿಂಕ್ ಒತ್ತಿ ಒಳಪ್ರವೇಶಿಸಿದರೆ ಅಲ್ಲಿ ಜಾನಪದ ಜಾತ್ರೆಯ ಸಡಗರ ರಂಗೇರಿತ್ತು. 

ಮುಂಬೈನಲ್ಲಿ ನೆಲೆಸಿರುವ ಕನ್ನಡತಿ ಮಧು ವಸ್ತ್ರದ್ ರವರು ತಿಂಗಳಿನಿಂದ ತಯಾರಿ ಮಾಡಿಕೊಂಡು ಅಚ್ಚುಕಟ್ಟಾಗಿ  ಆಯೋಜಿಸಿದ ಈ ಕಾರ್ಯಕ್ರಮದಲ್ಲಿ ಏನುಂಟು ಏನಿಲ್ಲ? ಜನಪದ ಹಾಡುಗಳ ಕಲರವ ,ನಮ್ಮ ಜನಪದ ಉಡುಪುಗಳ ಹಬ್ಬ, ಒಡಪುಗಳ ಸದ್ದು, ಜನಪದ ಹಾಡುಗಳ ಸಂಗೀತ, ಗೀಗಿಪದಗಳ ಸದ್ದು, ಇನ್ನೂ ಎನೇನೋ ...ಒಟ್ಟಾರೆ ಅದೊಂದು ಜನಪದ ಲೋಕ...


ನುಡಿ ತೋರಣ ಬಳಗದ ವತಿಯಿಂದ ಅಂದು  ಜರುಗಿದ ಜಾನಪದ ಜಾತ್ರೆಯು ಮೂರು ಗಂಟೆಗಳಿಗೂ ಅಧಿಕ ಸಮಯವನ್ನು ನಮಗರಿವಿಲ್ಲದೆಯೇ ಪಡೆದು ಯಶಸ್ವಿಯಾಯಿತು ಎನ್ನಬಹುದು.

ಎಷ್ಟು ಜನ ಸೇರಿದ್ದರು ಎಂಬುದು ಮುಖ್ಯವಲ್ಲ ಅದರ ಪರಿಣಾಮ ಮತ್ತು ಪ್ರಯತ್ನ ಪ್ರಶಂಸನೀಯ 

ಮೂವತ್ತಕ್ಕೂ ಅಧಿಕ ಸದಸ್ಯರು ಅತಿ ಸಂಭ್ರಮದಿಂದ ದೇಸೀ ದಿರಿಸುಗಳಲ್ಲಿ ಭಾಗಿಯಾಗಿದ್ದು ಕಾರ್ಯಕ್ರಮದ ಯಶಸ್ಸನ್ನು ರುಜುವಾತು ಮಾಡಿದಂತೆನಿಸಿತು. ಎಲ್ಲರೂ ಬಣ್ಣ ಬಣ್ಣದ ವೇಷಭೂಷಣಗಳಿಂದ, ಮುಖದ ತುಂಬ ಸಂತಸದ ನಗೆಯಿಂದ ಕಂಗೊಳಿಸುತ್ತಿದ್ದರು. ಇದು ಕಾರ್ಯಕ್ರಮವು ತನ್ನ ಗಮ್ಯವನ್ನು ಸೇರಿತೆಂಬ ಸಾರ್ಥಕ ಭಾವನೆಯನ್ನು ತಂದಿತು.

ಬಳಗದ ಹೆಮ್ಮೆಯ ಸದಸ್ಯರಾದ 

ಶೈಲಾ ಜಯಕುಮಾರರ ಪ್ರಾಸ್ತಾವಿಕ ನುಡಿಗಳು ನೆನಪಿಟ್ಟುಕೊಳ್ಳುವಷ್ಟು ಸತ್ವಯುತವಾಗಿದ್ದವು. ಅತಿಥಿಗಳಾಗಿ ಬಂದ ಗೌರಮ್ಮನವರು ಮತ್ತು ಆಶಾ ಯಮಕನಮರಡಿಯವರ ಜಾನಪದ ಗಾಯನ ಮೆರುಗು ತಂದಿತು.


ಸುಮನಾ ಹೇರ್ಳೆಯವರ ತಾಳಮದ್ದಳೆಯ ಕುರಿತಾದ ಮಂಡನೆ, ಮಾಧುರಿ ದೇಶಪಾಂಡೆಯವರ ಮಾತುಗಳು, ಈಶ್ವರ ಸಂಪಗಾವಿಯವರ ಒಡಪುಗಳ ಬಗ್ಗೆ ವ್ಯಾಖ್ಯಾನ ಇಷ್ಟವಾದವು. ಕವಿಕುಟುಂಬ, ಶ್ಯಾಮಸುಂದರ್ಜಿ,  ಗಿರಿಜಾ ಇಟಗಿ, ಬನಾಸು, ಸುಮಾ ಸೂರ್ಯ, ಸ್ವರ್ಣ ರಂಗನಾಥ್, ಸಿಹಿಜೀವಿ, ಡಾ. ರುಕ್ಮಿಣಿ, ಜಯಶ್ರೀ ರಾಜು,  ರತ್ನ ಬಡವನಹಳ್ಳಿ, ಕ್ಷಮಾ ರಘುರಾಮ್, ಮಾನಸಾ ಮುಂತಾದವರ ಪ್ರಸ್ತುತಿಗಳು ಗಮನಸೆಳೆದವು. ಚಿನ್ನುಪ್ರಿಯ, ಜಯಶ್ರೀ ರಾಜು ಮುಂತಾದವರ ಉಪಸ್ಥಿತಿ ಜಾತ್ರೆಯ ಮೆರಗು ಹೆಚ್ಚಿಸಿತು.


ಕಿರಣ್ ಹಿರಿಸಾವೆ, ರವರು ಮತ್ತು ಶ್ರೀಕಾಂತ್ ಪತ್ರೆಮರ ರವರ ನೇತೃತ್ವದ ಸಂಚಾಲನ ಸಮಿತಿಯ ಮಾರ್ಗದರ್ಶನದಲ್ಲಿ ಸಾಗುವ ನುಡಿತೋರಣ ಬಳಗದಲ್ಲಿ ನಾನೂ ಒಬ್ಬ ಹೆಮ್ಮೆಯ ಸದಸ್ಯ ಎಂದು ಹೇಳಿಕೊಳ್ಳಲು ಸಂತಸವಾಗುತ್ತದೆ.

ಮೇಲ್ನೋಟಕ್ಕೆ ಇದು ವಾಟ್ಸಪ್ ಬಳಗದ ಕಾರ್ಯಕ್ರಮ ಆದರೂ ಅದರ ಪರಿಣಾಮ ವಿಸ್ತಾರವಾದುದು. ಈ ಕಾರ್ಯಕ್ರಮಕ್ಕೆ ವಾರದಿಂದ ತಯಾರಿ ಮಾಡಿಕೊಳ್ಳುವಾಗ ಸ್ಪರ್ಧಿಗಳ ಅಭ್ಯಾಸ .ಮಾಡುವಾಗ ಜನಪದ ಗೀತೆಗಳು, ಕಂಜರ,ಡೋಲಕ್, ಚಕ್ಕೆ ಮುಂತಾದ ವಾದ್ಯಗಳ ಪರಿಚಯ ಮನೆಯ ಮಕ್ಕಳಿಗೆ ಆಗಿರುತ್ತದೆ, ಬರೀ ಸಿನಿಮಾ ಹಾಡುಗಳನ್ನೇ ಸಂಗೀತ ಎಂಬ ನಮ್ಮ ಮಕ್ಕಳ ಮನೋಭಾವ ಬದಲಾಗಲು ಇಂತಹ ಕಾರ್ಯಕ್ರಮ ಸಹಾಯಕ .ಇನ್ನೂ ಜನಪದ ಉಡುಪುಗಳು ನಮ್ಮ ಪರಂಪರೆಯ ಪ್ರತೀಕ ನಮ್ಮ ಮುಂದಿನ ಪೀಳಿಗೆಗೆ ಇದರ ಪರಿಚಯ ಮಾಡಿಸಿದ್ದು ಬಳಗದ ಮತ್ತೊಂದು ಪರೋಕ್ಷವಾದ ಯಶಸ್ಸು  ದೂರಗಾಮಿ   ಸಕಾರಾತ್ಮಕ ಹಾಗೂ ಉತ್ತಮ ಪರಿಣಾಮ ಬೀರುತ್ತವೆ  ಎಂಬುದೇ ನನ್ನ ಭಾವನೆ.

 

ಸದಸ್ಯರು, ಅಧ್ಯಕ್ಷರು ಮುಂತಾದ ಪದವಿಗಳನ್ನು ಹೊತ್ತು ನೂರಾರು ಕೋಟಿ ಹಣ ವ್ಯಯ ಮಾಡುವ ಅಕಾಡೆಮಿಗಳು  ಪರಿಷತ್ತುಗಳು  ಮಾಡುವ ಕನ್ನಡ ಕಟ್ಟುವ ಮತ್ತು ಸಂಸ್ಕೃತಿ ಉಳಿಸುವ ಕೆಲಸವನ್ನು ಒಂದು ವಾಟ್ಸಪ್ ಬಳಗ ಸದ್ದಿಲ್ಲದೇ  ಮಾಡುತ್ತಿರುವುದು ಪ್ರಶಂಸನೀಯ. ಬಳಗ ಇಂತಹ ಚಟುವಟಿಕೆಗಳನ್ನು ಇನ್ನೂ ಹೆಚ್ಚು ಸಂಘಟಿಸಲಿ . ನಾಡು ನುಡಿ ಸಂಸ್ಕೃತಿ ಉಳಿಸಲು ಯಾವಾಗಲೂ  ಇನ್ನೊಬ್ಬರು ಮಾಡಲಿ   ಎಂಬ ಭಾವನೆಗಳನ್ನು ಬಿಟ್ಟು ನಮ್ಮ ಕೈಲಾದ ಕೆಲಸ ಮಾಡೋಣ ನಮ್ಮ ಸಂಸ್ಕೃತಿ ಮತ್ತು ಪರಂಪರೆಯನ್ನು ಮುಂದಿನ ಪೀಳಿಗಗೆ ವರ್ಗಾಯಿಸೋಣ..


ಸಿಹಿಜೀವಿ

ಸಿ ಜಿ ವೆಂಕಟೇಶ್ವರ

ತುಮಕೂರು.


  

04 November 2022

ರಂಗಜ್ಜಿ ಮತ್ತು ಕೆಂಚಜ್ಜಿ....ಆತ್ಮಕಥೆ ೪೩

 



ರಂಗಜ್ಜಿ ಮತ್ತು ಕೆಂಚಜ್ಜಿ 


ಆಗ ನಮ್ಮೂರಿಂದ ತಾಲ್ಲೂಕು ಮತ್ತು ಜಿಲ್ಲಾ  ಕೇಂದ್ರ ಸಂಪರ್ಕ ಮಾಡಲು ಇದ್ದ ಬಸ್ ಎರಡೇ ಒಂದು ವಾಣಿ ಬಸ್ ಇನ್ನೊಂದು ಶಾಯಿನ್ ಬಸ್ . ಒಂದು ಬೆಳಿಗ್ಗೆ ಒಂದು ಸಂಜೆ...  ನಮ್ಮೂರ ಗೇಟ್ ನಿಂದ ಇತ್ತ ಚಿತ್ರಳ್ಳಿ ವರೆಗೂ ಅತ್ತ ಐಮಂಗಲ ವರೆಗೂ  ಮಣ್ಣಿನ ರಸ್ತೆ  .ಒಮ್ಮೆ ಬಸ್ಸಿನಲ್ಲಿ ಹತ್ತಿ ಕೂತರೆ ಅದೇ ನಮಗೆಲ್ಲ ಉಚಿತವಾಗಿ ಪೌಡರ್ ಹಾಕುತ್ತಿತ್ತು. ರಸ್ತೆಯ ಗುಂಡಿಗಳ ನಡುವೆ ಧೂಳಿನ ರಸ್ತೆಯಲ್ಲಿ ಡ್ರೈವರ್ ಹರಸಾಹಸ ಪಟ್ಟು ಬಸ್ ಓಡಿಸುವುದನ್ನು ನೋಡಲು ನಾನು ಸೀದಾ ಡ್ರೈವರ್ ಬಳಿ ಹೋಗಿ ನಿಂತುಬಿಡುತ್ತಿದ್ದೆ. ಅದರಲ್ಲೂ ಆಗಿನ ಕಾಲದಲ್ಲಿ ರಿವರ್ಸ್ ಹೊಡೆಯುವ ಮತ್ತು ತಿರುವಿನಲ್ಲಿ ಅವನು ಸ್ಟೇರಿಂಗ್ ತಿರುಗಿಸುವ ರೀತಿ ನೋಡುತ್ತಾ ನಾನು ಮುಂದೆ ಡ್ರೈವರ್ ಆಗಿಬಿಡಬೇಕು ಎಂದು ಕೊಂಡಿದ್ದೆ.


ನಮ್ಮೂರು ಕೊಟಗೇಣಿಯಿಂದ ನಮ್ಮ ಮಾವನವರ ಊರು ಯರಬಳ್ಳಿಗೆ ಹೋಗಲು ನಮಗೆ  ಇದೇ ಬಸ್ ಗಳು ಆಧಾರ. ಸಾಮಾನ್ಯವಾಗಿ ಸಾಯಂಕಾಲದ ನಾಲ್ಕು ವರೆಗೆ ನಮ್ಮ ಗೇಟ್ ಗೆ ಬರುತ್ತಿದ್ದ ವಾಣಿ ಬಸ್ ನಲವತ್ತು ಕಿಲೋಮೀಟರ್ ದೂರದ ಯರಬಳ್ಳಿ ಸೇರುತ್ತಿದ್ದದ್ದು  ರಾತ್ರಿಯ ಏಳುಗಂಟೆಗೆ ಕೆಲವೊಮ್ಮೆ ಇನ್ನೂ ಲೇಟಾಗಿ ತಲುಪಿದ ಉದಾಹರಣೆ ಇದೆ.


ಒಮ್ಮೆ  ಎಂಭತ್ತು ವರ್ಷಕ್ಕೂ ಹೆಚ್ಚು ವಯಸ್ಸಾದ  ನಮ್ಮ ರಂಗಜ್ಜಿಯ ಜೊತೆಯಲ್ಲಿ ಯರಬಳ್ಳಿಗೆ ಹೋಗಲು ನಮ್ಮೂರ ಗೇಟ್ ಗೆ ಒಂದು ಕಿಲೋ ಮೀಟರ್ ನಡೆದುಕೊಂಡು ಬಂದು   ಬಸ್ ಹತ್ತಿದೆವು . ಬಸ್ ಹತ್ತಿದ ತಕ್ಷಣ ಯಾರೋ ಅಜ್ಜಿಗೆ ಸೀಟ್ ಬಿಟ್ಟು ಕೊಟ್ಟರು. ನಾನು ಎಂದಿನಂತೆ ಡ್ರೈವರ್ ಪಕ್ಕದಲ್ಲಿ ನಿಂತೆ.  

ಬಸ್ ಕೆರೆಯಾಗಳ ಹಳ್ಳಿ ಬಿಟ್ಟು, ತೇಕಲವಟ್ಟಿ ಗೊಲ್ಲರಹಟ್ಟಿ ದಾಟಿ ತೇಕಲವಟ್ಟಿಯಲ್ಲಿ ಎಲೆಪೆಂಡಿ ಮತ್ತು ಜನರ ಹತ್ತಿಸಿಕೊಂಡು ಕೊಳಾಳು ಕಡೆ ಧೂಳೆಬ್ಬಿಸುತ್ತಾ ಸಾಗಿತ್ತು.  ಯಲಕೂರನಹಳ್ಳಿಯ ಬಳಿ ಬಂದಾಗ ಸೂರ್ಯ ನನ್ನ ಡ್ಯೂಟಿ ಮುಗೀತು ಎಂದು ಹೊರಟೇಬಿಟ್ಟ. ನಮ್ಮ ಬಸ್ ಕಣಿಮೆಕೆರೆಯ ಪಕ್ಕ ಚಲಿಸುವಾಗ ಕೆರೆಯ ನೀರು ಮಬ್ಬಾಗಿ ಕಪ್ಪಾಗಿ ಕಾಣುತ್ತಿತ್ತು. ಕೆರೆಯ ಏರಿಯ ಬಳಿ ಬಂದಾಗ ಡ್ರೈವರ್ ಬಸ್ ಇಂಜಿನ್ ಆಪ್ ಮಾಡಿ ಎಡಕ್ಕೆ ಬಾಗಿ ಕೈಮುಗಿದ ದೂರದಲ್ಲಿ ಕುಳಿತಿದ್ದ ಅಜ್ಜಿ ಭೂತಪ್ಪಗೆ ಕೈ ಮುಗಿಯೋ ಎಂದು ಸನ್ನೆ ಮಾಡಿ ಅವರು ಕೈಮುಗಿದರು.ಪಯಣದ ತೊಂದರೆಗಳನ್ನು ನಿವಾರಿಸಲು ಎಲ್ಲರೂ ಭೂತಪ್ಪನ ಕೈಮುಗಿದು ಆಶೀರ್ವಾದ ಪಡೆಯುವುದು ನಮ್ಮ ಸಂಪ್ರದಾಯವಾಗಿತ್ತು.ಅಂದು ಭೂತಪ್ಪನ ಆಶೀರ್ವಾದ ಪಡೆದರೂ ಅನಾಹುತ ಸಂಭವಿಸಿಯೇ ಬಿಟ್ಟಿತು. ಕೋವೇರಹಟ್ಟಿ ಗೇಟ್ ದಾಟಿ , ದಾಸಣ್ಣನ ಮಾಳಿಗೆ ಮೂಲಕ ಐಮಂಗಲ ತಲುಪಿದಾಗ ರಾತ್ರಿ ಏಳುಗಂಟೆಯಾಗಿತ್ತು. ಇಂಜಿನ್ ಪ್ರಾಬ್ಲಮ್ ಇದೆ ಬಸ್ ಮುಂದೆ ಹೋಗಲ್ಲ ಎಲ್ಲಾ ಇಳಿರಿ ಅಂದ ಡ್ರೈವರ್. ರಂಗಜ್ಜಿ ಮತ್ತು ನನಗೂ ಭಯ ಆತಂಕ ಶುರುವಾಯಿತು. ನಾವು ತಲುಪಬೇಕಾದ ಯರಬಳ್ಳಿ ಇನ್ನೂ ಹತ್ತು ಕಿಲೋಮೀಟರ್ "  ಕತ್ಲಲ್ಲಿ ಕಾಮದೂರಾಗ್ ನಾವ್ ಎಲ್ಲಿಗ್ ಹೋಗಾನ ಸಾಮಿ, ನೀವೇನೋ ಬಸ್ ಹೋಗಲ್ಲ ಅಮ್ತಾ ಒಂದೆ ಸಲ ಅಂದ್ ಬಿಟ್ರಿ , ಈಗ ನಾವ್ ಏನ್ ಮಾಡಾನಾ " ಎಂದು ಕಂಡಕ್ಟರ್ ಮತ್ತು ಡ್ರೈವರ್ ನನ್ನ ಸ್ವಲ್ಪ ಜೋರಾಗಿಯೇ ತರಾಟೆಗೆ ತೆಗೆದುಕೊಂಡರು ನಮ್ಮ ರಂಗಜ್ಜಿ.  ಅಜ್ಜಿಯ ಬಾಯಿ ಕೇಳಿ ಅಲ್ಲಿಗೆ   ಬಂದ ಓರ್ವ ವ್ಯಕ್ತಿಯು ತನ್ನನ್ನು ಪೊಲೀಸ್ ಎಂದು ಪರಿಚಯ ಮಾಡಿಕೊಂಡು ನಮ್ಮ ಪರಿಸ್ಥಿತಿಯನ್ನು ಅರ್ಥ ಮಾಡಿಕೊಂಡು  ಇಂದು ರಾತ್ರಿ ನಮ್ಮ ಮನೆಯಲ್ಲಿ ಊಟ ಮಾಡಿ, ಮಲಗಿಕೊಂಡು ನಾಳೆ ಬೆಳಿಗ್ಗೆ ನಿಮ್ಮ ಊರಿಗೆ ಹೋಗಬಹುದು ಅಂದರು. ನಾವು ಅಂದು ರಾತ್ರಿ ಅವರ ಮನೆಯಲ್ಲಿ ಊಟ ಮಾಡಿ ಮಲಗಿಕೊಂಡು ಬೆಳಿಗ್ಗೆ ಎದ್ದು ಅವರಿಗೆ ಧನ್ಯವಾದಗಳನ್ನು ಹೇಳಿ ಹೊರಟೆವು. ದೇವರ ಆಗಿ ನಮ್ಮ ಕಷ್ಟ ಕಾಲದಲ್ಲಿ ಬಂದು ಸಹಾಯ ಮಾಡಿದ ಆ ಪೋಲಿಸಪ್ಪ ಎಲ್ಲಿರುವರೋ ತಿಳಿಯದು   ಅವರು  ಮತ್ತು ಅವರ ಕುಟುಂಬ ಎಲ್ಲೇ ಇರಲಿ    ಸುಖಕರವಾಗಿರಲಿ .   


ನಲವತ್ತು ವರ್ಷಗಳ ಕಾಲ ಉರುಳಿದಂತೆ...

ಮೊನ್ನೆ ಆತ್ಮೀಯರಾದ ಶಂಕರಾನಂದ ರವರ ಜೊತೆಯಲ್ಲಿ ನನ್ನ ಕಾರಿನಲ್ಲಿ ನಮ್ಮ ಊರಿಗೆ ಹೋಗಿದ್ದೆ .ಎಂದಿನಂತೆ ಊರಿಗೆ ಹೋದಾಗ ನಮ್ಮ ಅಣ್ಣ ತೆಂಗಿನ ಕಾಯಿ, ಬಾಳೆ ಗೊನೆ ಎಳನೀರು ಅದೂ ಇದೂ ಎಂದು ಡಿಕ್ಕಿ ತುಂಬಿದ ಮೇಲೆ ಹಿಂದಿನ ಎರಡು ಸೀಟಿನ ಮೇಲೂ ವಸ್ತುಗಳ ಹಾಕಿದ್ದರು. ಮುಂದೆ ಡ್ರೈವರ್ ಸೀಟಲ್ಲಿ ನಾನು ಪಕ್ಕದಲ್ಲಿ ಶಂಕರಾನಂದರ ರವರು ಇದ್ರು.  ಊರಿಂದ ತುಮಕೂರಿನ ಕಡೆ ನಮ್ಮ ಕಾರು ಸಾಗುವಾಗ  ತೇಕಲವಟ್ಟಿ  ದಾಟಿದ ಬಳಿಕ ದಾರಿಯಲ್ಲಿ  ಒಂದು  ಅಜ್ಜಿ ಕೈಯಲ್ಲಿ  ಚೀಲ ಹಿಡಿದುಕೊಂಡು ಕಾರಿಗೆ ಕೈ ಅಡ್ಡ ಹಾಕಿತು ಕಾರ್ ಸ್ಲೋ ಮಾಡಿ ನಿಲ್ಲಿಸಿ ಏನಜ್ಜಿ ಅಂದೆ . "ಕೊಳಾಳ್ ಗೆ ಹೋಗ್ ಬೇಕು ಬಸ್ ಇಲ್ಲ ತೇಕಲವಟ್ಟಿಯಿಂದ ನೆಡೆಕಂಡು ಬಂದೆ ಕಣಪ್ಪ ,ಕತ್ಲಾಕ್ತಾ ಐತೆ .ನನ್ನ ಕೊಳಾಳಿಗೆ ಬಿಡ್ರಪ್ಪ" ಅಂತು ಆ ಪರಿಸ್ಥಿತಿಯಲ್ಲಿ ಅಜ್ಜಿಯನ್ನು ಬಿಟ್ಟು ಬರಲು ಮನಸ್ಸಾಗಲಿಲ್ಲ. ಹಿಂದಿನ ಸೀಟಲ್ಲಿ ಜಾಗ ಇರಲಿಲ್ಲ ಮುಂದೆ ಒಬ್ಬರು ಕೂರುವ ಜಾಗದಲ್ಲಿ ಅಜ್ಜಿಯ ಲಗೇಜ್ ಸಮೇತ ಇಬ್ಬರು ಕುಳಿತರು .ಐದಾರು ಕಿಲೋಮೀಟರ್ ಸಾಗಿದ ಮೇಲೆ ಕೊಳಾಳು ಬಂತು.ನಿಧಾನವಾಗಿ ಅಜ್ಜಿ  ಕಾರಿಂದ  ಇಳಿಯಿತು .ನಿಮಗೆ ಒಳ್ಳೆಯದಾಗ್ಲಿ ಕಣಪ್ಪ ಎಂದು ಹರಸಿತು . ಕುತೂಹಲಕ್ಕೆ ಅಜ್ಜಿ ನಿನ್ನ ಹೆಸರೇನು? ಕೇಳಿದೆ ಕೆಂಚವ್ವ ಕಣಪ್ಪ ಅಂತು ಯಾಕೆ ಕೊಳಾಳು ಗೆ ಹೊರಟಿರೋದೆಂದು ಕೇಳಿದೆ ಕೆಂಚಪ್ಪನ್ ಗುಡಿಗೆ ಕಣಪ್ಪ ಅಂತು ತಗ ಅಜ್ಜಿ ಹುಂಡಿಗೆ ಐವತ್ತು ರುಪಾಯಿ ಹಾಕು ಎಂದೆ ಆಗ್ಲಪ್ಪ ನಂದು ಹತ್ತು ಸೇರಿಸಿ ಹಾಕ್ತೀನಿ ಎಂದು ಗಂಟನ್ನು ಹಿಡಿದು ಕತ್ತಲಲ್ಲಿ ಗುಡಿಯ ಕಡೆ ಹೊರಟಿತು...  ನನ್ನ ಕಾರ್ ಮುಂದೆ ಸಾಗಿದಂತೆ  ಯಾಕೋ ನಮ್ಮ  ರಂಗಜ್ಜಿ  ಮತ್ತು ಆ ಪೋಲಿಸಪ್ಪ  ಪದೇ ಪದೇ ನೆನಪಾದರು.


ಸಿಹಿಜೀವಿ

ಸಿ ಜಿ ವೆಂಕಟೇಶ್ವರ

ತುಮಕೂರು


02 November 2022

ಅರ್ಥ


 *ಅರ್ಥ*


ಒಂದೇ ದಿನ ಮಾಡಬಹುದು

ಮದುವೆ ಮತ್ತು ನಿಶ್ಚಿತಾರ್ಥ |

ಇದರಿಂದ ಹೆಣ್ಣು ಮತ್ತು

ಗಂಡಿನ ಕಡೆಯವರಿಗೂ 

ಉಳಿಯುವುದು "ಅರ್ಥ" ||


ಸಿಹಿಜೀವಿ 

ಸಿ ಜಿ ವೆಂಕಟೇಶ್ವರ