31 December 2019

*(2020)ಟ್ವೆಂಟಿ- ಟ್ವೆಂಟಿ*(ಹನಿ)

*(2020)ಟ್ವೆಂಟಿ- ಟ್ವೆಂಟಿ*

ನನ್ನ ಅಭ್ಯಂತರವೇನೂ ಇಲ್ಲ
ನೀವು ಆಚರಿಸಲು
(2020)ಟ್ವೆಂಟಿ- ಟ್ವೆಂಟಿ
ಕೇಳುವುದೂ ಇಲ್ಲ
ನಾನು ನೀವು ಮಾಡಿದರೂ ಪಾರ್ಟಿ
ನನ್ನ ಆಶಯವಿಷ್ಟೇ  ಸಕಾಲದಿ
ನಿಮ್ಮ ಮನೆ ತಲುಪಿ
ಬೆಳಗ್ಗೆ ನಿಮ್ಮ ಮನೆಯಲಿ
ಕುಡಿದರಾಯ್ತು ಟೀ

*ಸಿ ಜಿ ವೆಂಕಟೇಶ್ವರ*

ಇಪ್ಪತ್ತು ಇಪ್ಪತ್ತು (ಹನಿ)

*ಇಪ್ಪತ್ತು ಇಪ್ಪತ್ತು*

ಈಗ ಒಂದು ತಿಂಗಳಿಂದ
ಎಲ್ಲರೂ ಹೇಳುವುದೊಂದೆ
ಬರ್ತಾ ಇದೆ ಇಪ್ಪತ್ತು ಇಪ್ಪತ್ತು
2020
ಇಂದು ಬೇಕಾಬಿಟ್ಟಿ ಕುಡಿದು
ತೂರಾಡಿದರೆ ತಪ್ಪಿದ್ದಲ್ಲ
ಆಪತ್ತು

*ಸಿ ಜಿ ವೆಂಕಟೇಶ್ವರ*

ಕ್ರಾಂತಿ ಶಾಂತಿಯಾಗಬೇಕಿದೆ (ಕವನ)


*ಕ್ರಾಂತಿ- ಶಾಂತಿಯಾಗಬೇಕಿದೆ*


ಅರಸನ ಬದಲಿಗೆ ಬಂದ
ರಾಜಕಾರಣಿಗಳು ಸ್ವಹಿತ
ಅರಸುವುದನ್ನು ತಪ್ಪಿಸಲು
ಜನತಾ ಸೇವೆಯೇ ಜನಾರ್ದನ
ಸೇವೆಯೆಂದು ಕಾಯಕ ಮಾಡಲು
ರಾಜಕೀಯ ಕ್ರಾಂತಿಯಾಗಬೇಕಿದೆ.

ಅಂಕಗಳೇ ಜೀವನವೆಂದು
ಅಂಕೆಯಿಲ್ಲದೆ ಬೆಳೆದು
ಸಂಸ್ಕಾರ ತಿಳಿಯದೆ
ಸಂಕಟಪಡುವ ಸಂಭಂಧಗಳ
ಗಾಳಿಗೆ ತೂರುವವರಿಗೆ
ಬುದ್ದಿ ನೀಡುವ
ಶಿಕ್ಷಣ ಕ್ರಾಂತಿಯಾಗಬೇಕಿದೆ.

ಗುಡಿ ಕೈಗಾರಿಕೆಗಳು
ನಾಶವಾಗಿ ಯಂತ್ರಗಳ
ಗುಲಾಮರಾಗಿ  ನಿರುದ್ಯೋಗ
ತಾಂಡವವಾಡುವ ದೃಶ್ಯಗಳನ್ನು
ತೊಲಗಿಸಿ ಪ್ರತಿ ಗೃಹದಲೂ
ಉತ್ಪಾದನೆ ಮಾಡುವ
ಕೈಗಾರಿಕಾ ಕ್ರಾಂತಿಯಾಗಬೇಕಿದೆ.

ಭ್ರಷ್ಟಾಚಾರ, ಸ್ವಜನಪಕ್ಷಪಾತ
ಇವುಗಳಿಂದ ಬೇಸತ್ತ ಜನರು
ಭ್ರಮನಿರಸನ ಹೊಂದಿರುವರು
ಪ್ರಜಾಸ್ನೇಹಿ ಆಡಳಿತ ನೀಡಲು
ಆಡಳಿತದಲ್ಲಿ ಕ್ರಾಂತಿಯಾಗಬೇಕಿದೆ.

ಹೊಸ ವರ್ಷವೆಂದು ಕರೆವ
ಈ ಕ್ಯಾಲೆಂಡರ್ ವರ್ಷದಲ್ಲಾದರೂ
ಸಕಲ ರಂಗದಿ ಕ್ರಾಂತಿಯಾಗಬೇಕಿದೆ
ವಿಶ್ವ ನಾಯಕರಿಗೆ ಒಳ್ಳೆಯ ಬುದ್ದಿ
ಬಂದು ಜಗತ್ ಶಾಂತಿಯಾಗಬೇಕಿದೆ.

*ಸಿ ಜಿ‌ ವೆಂಕಟೇಶ್ವರ*
ತುಮಕೂರು



ಸಂತಸದ ಸುದ್ದಿ (ಲೇಖನ)


ಸಂತಸದ ಸುದ್ದಿ(ಲೇಖನ)

ಭಾರತೀಯ ಅರಣ್ಯ ಸ್ಥಿತಿಗತಿ ವರದಿ 2019 ರ ಪ್ರಕಾರ ಕರ್ನಾಟಕದ ಅರಣ್ಯ1025 ಚದರ ಕಿಲೋಮೀಟರ್‌ ಹೆಚ್ಚಳ ಆಗಿರುವುದು ದಾಖಲಾಗಿದೆ. ಇದು ದೇಶದಲ್ಲೇ ಅತಿ ಹೆಚ್ಚು ದಾಖಲಾದ ಹೆಚ್ಚಳ ಎಂದು ಕರ್ನಾಟಕ ಪ್ರಥಮ ಸ್ಥಾನ ಪಡೆದಿರುವುದು ಕನ್ನಡಿಗರು ಸಂತಸ  ಪಡುವ ವಿಷಯವಾಗಿದೆ. ಅರಣ್ಯ ನಾಶದಿಂದ ಪರಿಸರದಲ್ಲಿ ಅಸಮತೋಲನವನ್ನು ಕಾಣುವ ಈ ದಿನಗಳಲ್ಲಿ ಇಂತಹ ಸುದ್ದಿ ಆಶಾದಾಯಕವಾಗಿ ಮುಂದಿನ ದಿನಗಳ ಬಗ್ಗೆ ಉತ್ತಮ ನಿರೀಕ್ಷೆ ಹೊಂದಬಹುದು .ಮದ್ಯ ಕರ್ನಾಟಕದ ತುಮಕೂರುಜಿಲ್ಲೆಯು 305 ಚದರ ಕಿಲೋಮೀಟರ್‌ ಹೆಚ್ಚಳ ಕಂಡಿರುವುದು ಗಮನಾರ್ಹವಾದ ಸಂಗತಿ ,ಇದೇ ವೇಳೆ ಮಲೆನಾಡಿನ ಶಿವಮೊಗ್ಗದ ಅರಣ್ಯ ಪ್ರದೇಶದಲ್ಲಿ ಇಳಿಕೆ ಕಂಡಿರುವುದು ಆತಂಕದ ವಿಷಯವಾಗಿದೆ. ಇದೇ ರೀತಿ ರಾಜ್ಯದ ಮತ್ತು ದೇಶದ ಅರಣ್ಯ ಪ್ರದೇಶ ‌ನಿಗದಿತ ಶೇಕಡಾ33 ಕ್ಕಿಂತ ಹೆಚ್ಚಾಗಿ ಪರಿಸರ ಸಮತೋಲನ ಉಂಟಾಗಲು ನಾವೆಲ್ಲರೂ ಕೈ ಜೋಡಿಸಬೇಕಿದೆ.
*ಸಿ ಜಿ ವೆಂಕಟೇಶ್ವರ*
ತುಮಕೂರು

29 December 2019

*ಮೂರು ಹನಿಗಳು*

*೧*

ಹೆಸರು ಹೇಳಲು,  ಕೇಳಲು
ಏನೋ ಒಂಥರಾ ಇಂಪು
ಅವರೇ ನಮ್ಮ ಕುವೆಂಪು

*೨*

ಕನ್ನಡ ಸಾಹಿತ್ಯದ ದೊಡ್ಡಪ್ಪ
ಇನ್ಯಾರು ಅಲ್ಲ ಅವರೇ
ಕೆ ವಿ ಪುಟ್ಟಪ್ಪ

*೩*

ಯಾರೋ ಕೇಳಿದರು
ನಿಮಗೆ ಬರೆಯಲು
ಸ್ಪೂರ್ತಿ ಯಾರು
ನಾಟಕ, ಹನಿಗವನ
ಲೇಖನ, ಕಾವ್ಯ
ಕಥೆ ಕವನಾನ
ಅದಕ್ಕೆ ಉತ್ತರಿಸಿದೆ
ದಿನವೂ ನಾನು
ಎದ್ದ ತಕ್ಷಣ ನೋಡುವೆ
ಕುವೆಂಪು ಪೋಟೋನಾ

*ಸಿ ಜಿ ವೆಂಕಟೇಶ್ವರ*
*ತುಮಕೂರು*

27 December 2019

ಅವನೇ ಶ್ರೀಮನ್ನಾರಾಯಣ (ಚಿತ್ರ ವಿಮರ್ಶೆ)



ಅವನೇ ಶ್ರೀಮನ್ನಾರಾಯಣ*

ಚಿತ್ರ ವಿಮರ್ಶೆ

ಅಮರಾವತಿ ಎಂಬ ಕೋಟೆಯ ವ್ಯಾಪ್ತಿಯಲ್ಲಿ
ನಾಟಕ ಮಾಡುವ ಜನರು ಲೂಟಿಕೋರರಾಗಿ ಲೂಟಿ ಮಾಡಿದ ಹಣವನ್ನು ತೆಗೆದುಕೊಂಡು ಹೋಗುವಾಗ ಅಬೀರರ ಕೈಗೆ ಸಿಕ್ಕು ಪ್ರಮುಖ ನಾಯಕರು ಕೊಲೆಯಾಗುತ್ತಾರೆ .ಅದರಲ್ಲಿ ಒಬ್ಬನನ್ನು ಖಳರು ಬ್ಯಾಂಡ್ ಊದುವ ಕೆಲಸ ಮಾಡಿಸುತ್ತಾ, ಲೂಟಿ ಹಣ ಶೋಧನೆಯಲ್ಲಿ ತೊಡಗಿರುತ್ತಾರೆ .ಉಳಿದ ನಾಟಕದ ಪಾತ್ರದಾರಿಗಳು ಭೂಗತರಾಗಿ ಶ್ರೀಮನ್ನಾರಾಯಣನ ಆಗಮನಕ್ಕೆ ಕಾಯುತ್ತಿರುತ್ತರೆ ಅವರಿಗೆ ನಾರಾಯಣ ಸಿಕ್ಕನೆ? ಆ ಲೂಟಿಯ ಹಣ ಪಡೆಯಲು ಖಳ ಅಣ್ಣ ತಮ್ಮಂದಿರು ಹೇಗೆ ಪ್ರಯತ್ನ ಮಾಡುವರು? ಇನ್ಸ್ಪೆಕ್ಟರ್ ರಕ್ಷಿತ್ ಶೆಟ್ಟಿ ಹೇಗೆ ಆ ಹಣ ಹುಡುಕುತ್ತಾರೆ. ಸಾನ್ವಿ ಶ್ರೀವಾತ್ಸವ್ ಹೇಗೆ ಇನ್ಸ್‌ಪೆಕ್ಟರ್ ಗೆ ವಿರುದ್ದವಾಗಿ ಕೊನೆಗೆ ಪ್ರೀತಿ ಮಾಡುತ್ತಾರಾ?  ಲೂಟಿಯ ಹಣ ಯಾರಿಗೆ ಸಿಗುತ್ತದೆ ಎಂಬುದನ್ನು ತಿಳಿಯಲು ನೀವು ಚಿತ್ರ ಮಂದಿರದಲ್ಲಿ ಶ್ರೀಮನ್ನಾರಾಯಣನ ದರ್ಶನ ಮಾಡಲೇಬೇಕು.

 ನಟ ನಿರ್ದೇಶಕ ರಕ್ಷಿತ್ ಶೆಟ್ಟಿಯವರು  ಮತ್ತು ನಿರ್ದೇಶಕ ಸಚಿನ್ ರವರು ಒಂದು ಉತ್ತಮ ವಿಭಿನ್ನವಾದ ಕನ್ನಡ ಸಿನಿಮಾ ನೀಡಿದ್ದಾರೆ ಚಿತ್ರ ನೋಡುತ್ತ ಕುಳಿತರೆ ಎಲ್ಲಿಯೂ ಬೋರ್ ಆಗುವುದಿಲ್ಲ, ಕ್ಷಣ ಕ್ಷಣಕ್ಕೆ ತಿರುವು ನೀಡುವ ,ಚಿತ್ರದ ಕೊನೆವರೆಗೂ ಚುರುಕಾದ ಸಂಭಾಷಣೆ ಗಮನಸೆಳೆಯುತ್ತವೆ. ಅಜನೀಶ್ ಲೋಕನಾಥ್ ರವರ ಸಂಗೀತ ಮತ್ತು ಹಿನ್ನೆಲೆ ಸಂಗೀತ ಚಿತ್ರದ ಪ್ಲಸ್ ಪಾಯಿಂಟ್. ಕ್ಯಾಮರಾ ಕೆಲಸ ಕಣ್ಣಿಗೆ ಹಬ್ಬದ ಅನುಭವ ನೀಡುತ್ತದೆ. ನಟನೆಯ ವಿಷಯಕ್ಕೆ ಬಂದರೆ ರಕ್ಷಿತ್ ಶೆಟ್ಟಿ ಚಿತ್ರವನ್ನು ಆವರಿಸಿಕೊಂಡಿದ್ದಾರೆ.ಅಚ್ಚುತಣ್ಣ ಆಗಿ ಅಚ್ಯತ್ ರವರ ಅಭಿನಯ ಎಂದಿನಂತೆ ಸೂಪರ್.   ಬಾಲಾಜಿ ಮನೋಹರ್ ಪ್ರಮೋದ್ ಶೆಟ್ಟಿರವರು  ಖಳ ಅಣ್ಣತಮಂದಿರಾಗಿ ಒಬ್ಬರಿಗಿಂತ ಒಬ್ಬರು ಉತ್ತಮ ಅಭಿನಯ ನೀಡಿದ್ದಾರೆ. ಹಿಂದಿನ ಚಿತ್ರದಲ್ಲಿ ಗ್ಲಾಮರ್ ಪಾತ್ರದಲ್ಲಿ ಮಿಂಚಿದ್ದ ಶಾನ್ವಿ ಶ್ರೀವಾಸ್ತವ್ ನನಗೂ ನಟಿಸಲು ಬರುವುದು ಎಂದು ಸಾಬೀತು ಪಡಿಸಿದ್ದಾರೆ. ಚಿಕ್ಕ ಪಾತ್ರವಾದರೂ ಭವಿಷ್ಯ ಹೇಳುವ ಯೋಗರಾಜ್ ಭಟ್ ಗಮನ ಸೆಳೆಯುತ್ತಾರೆ.ಸ್ವತಃ ಸಂಕಲನಕಾರರಾದ ಸಚಿನ್ ರವರು ಚಿತ್ರದ ಕೆಲ ಅನವಶ್ಯಕ ದೃಶ್ಯಗಳಿಗೆ ಕತ್ತರಿ ಹಾಕಬಹುದಿತ್ತು.ಒಟ್ಟಾರೆ ಅದ್ದೂರಿ ಮೇಕಿಂಗ್ ,ಸದಭಿರುಚಿಯ ಸಂಭಾಷಣೆ, ಉತ್ತಮ ಸಂಗೀತ, ವಿಭಿನ್ನವಾದ ಕಥೆ ,ಇರುವ ಈ ಚಿತ್ರವನ್ನು ಕನ್ನಡಿಗರಲ್ಲದೇ ಬೇರೆ ಭಾಷೆಯ ಪ್ರೇಕ್ಷಕರು ಇಷ್ಟಪಡದೇ ಇರರು.


*ಸಿ ಜಿ ವೆಂಕಟೇಶ್ವರ*
ತುಮಕೂರು

16 December 2019

ವಿಳಾಸ ತಿಳಿಸಿ (ಕವನ)

*ವಿಳಾಸ ತಿಳಿಸಿ*

ಇಂದು ಸ್ವತಂತ್ರ ,ಸಮಾನತೆ,ಮಾನವೀಯ ಮೌಲ್ಯಗಳು ಸಂಬಂಧಗಳು  ಭಾಗಶಃ ಸತ್ತಿವೆ
ಭಾವನೆಗಳು ಬತ್ತುತ್ತಿವೆ.
ನೀವನ್ನಬಹುದು ನನ್ನನ್ನು ನಿರಾಶಾವಾದಿ
ಯಾವುದೋ ಪಂಗಡ,ಯಾರ ಪರ
ಇನ್ಯಾರದೋ ವಿರೋಧಿ
ನಾನೂ ಆಶಾವಾದಿ
ಕೆಟ್ಟದರ ವಿರೋಧಿ

ಕೆಲವರು ಸ್ವಾತಂತ್ರ್ಯ ದಾಟಿ
ಮಾಡುತಿರುವರು ಸ್ವೇಚ್ಛಚಾರ
ಇನ್ನೂ ಕೆಲವರಿಗೆ ಸ್ವಾತಂತ್ರ್ಯದ
ಮಾತೆತ್ತಿದರೆ ಅಪಚಾರ
ಕೆಲವರಿಗಂತೂ ಸ್ವಾತಂತ್ರ್ಯ ಮಾರುದೂರ
ಸ್ವತಂತ್ರ ಭಾಗಶಃ ಸತ್ತಿದೆ.

ಮಹಲಿನ ಮೇಲೆ ಮಹಲನ್ನೇರಿ
ಜೀವಿಸುತಿಹರು ಧನಿಕರು
ಜೋಪಡಿಗೆ ಪರದಾಡಿ ತುತ್ತು
ಅನ್ನಕ್ಕೆ ಪರದಾಡುತಿಹರು ಬಡವರು
ಸಮಾನತೆ ಭಾಗಶಃ ಸತ್ತಿದೆ.

ದಾರಿಯಲಿ ಅಪಘಾತವಾದರೆ
ಸಹಾಯಮಾಡುವ ಬದಲು
ಚಿತ್ರ ತೆಗೆಯಲು ಹಾತೊರೆವರು
ಮಹಿಳೆ ಮಕ್ಕಳ ಮೇಲೆ
ವಿಕೃತಿ ಮೆರೆವರು
ಮಾನವೀಯತೆ ಮರೆಯುವರು
ಮಾನವೀಯತೆ ಭಾಗಶಃ ಸತ್ತಿದೆ.

ಹೇಳಲು ಮಾತ್ರ ಇಂದು
ವಿಶ್ವವೇ ಹಳ್ಳಿಯಾಗಿದೆ
ಪಕ್ಕದಲಿರುವ ನಮ್ಮವರೊಂದಿಗೆ
ಮಾತನಾಡಲು ಸಮಯ ಇಲ್ಲದಾಗಿದೆ
ವಸ್ತುಗಳನ್ನು ಪ್ರೀತಿಸಿ ಮನುಷ್ಯರ
ಬಳಸುವವರ ಸಂಖ್ಯೆ ಹೆಚ್ಚಾಗಿದೆ
ಸಂಬಂಧಗಳು ಭಾಗಶಃ ಸತ್ತಿವೆ.

ಜೀವನ ಮೌಲ್ಯಗಳು, ಸಂಸ್ಕಾರ,
ಮಾನವೀಯ ಮೌಲ್ಯಗಳು ಕ್ರಮೇಣ ಅವಸಾನಗೊಳ್ಳುವ ಈ ದಿನಗಳಲ್ಲಿ
ಅವುಗಳ ಬದುಕಿಸುವ *ಸಂಜೀವಿನಿ*
ಬೇಕಿದೆ ದಯವಿಟ್ಟು ವಿಳಾಸ ಗೊತ್ತಿದ್ದರೆ ತಿಳಿಸಿ

*ಸಿ ಜಿ ವೆಂಕಟೇಶ್ವರ*

15 December 2019

ನಾನೂ ಒಬ್ಬ ಕುಡುಕ (ಕವನ)


          *ನಾನೂ ಒಬ್ಬ ಕುಡುಕ*

ಹೌದು ನಾನೂ ಒಬ್ಬ ಕುಡುಕ
ದಿನವೂ ತಪ್ಪದೇ ಕುಡಿವ ಕುಡುಕ
ನಾಚಿಕೆ ಬಿಟ್ಟು ಹೇಳುತಿರುವೆ
ನಾನೂ ಕುಡುಕ.

ಬಹಳ ಸಲ ಬೆಳಿಗ್ಗೆ ಎದ್ದ ತಕ್ಷಣ
ಕುಡಿಯುವೆ.ಕುಡಿಯದಿದ್ದರೆ ಎನೋ  ಕಳೆದುಕೊಂಡಂತೆ, ಸ್ನೇಹಿತರು
ಸಿಕ್ಕರೆ ಮುಗಿಯಿತು
ಕುಡಿಯಲೇ ಬೇಕು.

ವೈದ್ಯರು ಕೆಲವೊಮ್ಮೆ
ಕಡಿಮೆ ಕುಡಿಯಿರಿ
ಎಂದರೂ ಅವರ ಮಾತು
ಲೆಕ್ಕಿಸದೇ ತುಸು ಹೆಚ್ಚೇ
ಕುಡಿವ ಕುಡುಕ ನಾನು.

ನಾನೂ ಕುಡಿವುದಲ್ಲದೇ
ನನಗೆ ಪರಿಚಿತರನು
ವಿವಿಧ ಸಂಶೋಧನೆಯ ನೆಪ
ಹೇಳಿ ಒಳಿತಾಗುವುದು
ಕುಡಿಯಿರಿ ಎಂದು
ಅವರನ್ನು ಕುಡುಕರನ್ನಾಗಿ
ಮಾಡುವ ಕುಡುಕ ನಾನು.

ಆ ಬ್ರಾಂಡ್ ಈ ಬ್ರಾಂಡ್
ಎಂದು ನೂರಾರು ಬ್ರಾಂಡ್
ಇದ್ದರೂ ಇಂತದೇ ಬ್ರಾಂಡ್
ಎಂದು ನಾನೇನೂ ಬ್ರಾಂಡ್
ಆದವನಲ್ಲ ಯಾವುದಾದರೂ ಸರಿ
ಕುಡಿಯಲೇ ಬೇಕು.

ಹೌದು ನಾನೂ ಕುಡುಕ
ದಿನವೂ *ಟೀ* ಕುಡಿವ
ಮಹಾನ್ ಕುಡುಕ.

(ಇಂದು ಅಂತರರಾಷ್ಟ್ರೀಯ ಟೀ ದಿನ)

*ಸಿ ಜಿ ವೆಂಕಟೇಶ್ವರ*

11 December 2019

ಮನದ ಪ್ರಶ್ನೆಗಳು (ಕವನ)

*ಮನದ ಪ್ರಶ್ನೆಗಳು*

ನಾ ಸಾಯ ನೀ ಸಾಯ ಮನೆ ಮಂದಿಯಲ್ಲಾ ಸಾಯ ಬೇಸಾಯ
ಸಾಲದಲಿ ಹುಟ್ಟಿ ಸಾಲದಿ ಬೆಳೆದು ಸಾಲದಲಿ  ಮರಣಿಸುವ ಚಿತ್ರಣಗಳು
ಆಳುವವರಿಗೆ ಸಾಲುತ್ತಿಲ್ಲವೆ? ಇನ್ನೆಷ್ಟು ಬಲಿ ಬೇಕು?

ಭರವಸೆಯ ಮಾತುಗಳು ಭರಪೂರ ಆಶ್ವಾಸನೆಗಳಿಗೆ ಬರವಿಲ್ಲ
ಒಳಗಿನ ನೋವ ನುಂಗಿ ಹೊರಗೆ ನಗುವ
ಕಣ್ಣಲಿ ರೈತಕಣ್ಣೀರು ಸುರಿಸುವ ರೈತನ  ಗೋಳು ಕೇಳುವವರು ಯಾರೂ ಇಲ್ಲವೆ?

ಮಳೆರಾಯನೊಡನೆ ಜೂಜಾಡಿ
ಇಳೆಯನೇ ನಂಬಿ ಕಾಯಕ ಮಾಡಿ
ದೇಹ ಕೃಶವಾದರೂ ಕೃಷಿಯ ಬಿಡದೇ
ದುಡಿದು ತಿನ್ನು ಎಂದು ಸಾರುವ
ಅನ್ನದಾತನು ಖುಷಿಯಾಗುವುದು ಯಾವಾಗ?

ರಾಜ್ಯಗಳುದಿಸಿ ರಾಜ್ಯಗಳಳಿದರೂ
ರಾಜರಿಗನ್ನವ ನೀಡುವ ಇವನು
ಕೋಟಿಜನರ ಜೀವದ ಒಡೆಯ
ಮೇಟಿ ವಿದ್ಯೆಬಲ್ಲ ವ್ಯವಸಾಯಗಾರನ ಬವಣೆ  ನೀಗುವುದು ಯಾವಾಗ?

*ಸಿ ಜಿ ವೆಂಕಟೇಶ್ವರ*

20 November 2019

ದಿಟ್ಟ ಹೆಜ್ಜೆ ( ಚಿತ್ರ ಕವನ)


*ದಿಟ್ಟ ಹೆಜ್ಜೆ*

ಇಟ್ಟಿಗೆಯ ಗೂಡಿನಲಿ ಕಾಯಕ ಮಾಡುತಿರುವೆ
ಎದೆಗೂಡಿನಲಿರುವ ನೋವ ಮರೆತಿರುವೆ
ಹಿಟ್ಟು ಸಂಪಾದಿಸಲು ದಿಟ್ಟ ಹೆಜ್ಜೆ ಇಟ್ಟಿರುವೆ
ಇಳಿವಯಸಿನಲೂ ಇಟ್ಟಿಗೆಯ ಹೊರತಿರುವೆ
ಸ್ವತಃ ದುಡಿದು ಹೊಟ್ಟೆ ಹೊರೆಯುತಿರುವೆ .

*ಸಿ ಜಿ ವೆಂಕಟೇಶ್ವರ*

ಗಜಲ್ ೬೦ (ಸಾಲುವುದಿಲ್ಲ)


*ಗಜಲ್*

ಭೂರಮೆಯ ಸೊಬಗು ನೋಡಲು ಕಣ್ಣುಗಳು ಸಾಲವುದಿಲ್ಲ
ಪ್ರಕೃತಿ ಸಿರಿಯ ಬಣ್ಣಿಸಲು ಪದಗಳು ಸಾಲುವುದಿಲ್ಲ.

ಪರಿಸರದಲಿದೆ ಸಂಗೀತ ಹಕ್ಕಿಗಳ ಕಲರವ ದುಂಬಿಗಳ ಝೇಂಕಾರ .
ಸಿಡಿಲು ಮಳೆ ಗುಡುಗಿನಲೂ ಸಾಮಗಾನ ಕೇಳಲು ಕಿವಿಗಳು ಸಾಲುವುದಿಲ್ಲ.


ತರುಲತೆಗಳು ಖಗಮೃಗಗಳು ಕಾನನದ ಸೊಬಗಿನ ಮೂಲ
ನದನದಿ ಝರಿ ತೊರೆಗಳ ಅಂದ ಹೊಗಳಲು ರೂಪಕಗಳು ಸಾಲುವುದಿಲ್ಲ

ಮಲ್ಲೆ ಮಲ್ಲಿಗೆ ಜಾಜಿ ಕೇದಗೆ ಸಂಪಿಗೆಯ ಸುವಾಸನೆ ಬಲು ಚೆಂದ
ವರ್ಷಕಾಲದ ಮಣ್ಣವಾಸನೆಯ ಕಂಪು ಹೊಗಳಲು ಕವನಗಳು ಸಾಲುವುದಿಲ್ಲ.

ಈ ಜಗವು ಆನಂದಮಯವಾಗಲು ಸಿಹಿಜೀವಿಗಳ ಕೊಡುಗೆ ಅಪಾರ
ಪರಿಸರವ  ಬಳಸಿ ಉಳಿಸಿ ಬೆಳೆಸಲು ಸಣ್ಣ ಪ್ರಯತ್ನಗಳು ಸಾಲುವುದಿಲ್ಲ.

*ಸಿ ಜಿ ವೆಂಕಟೇಶ್ವರ*

15 November 2019

ಗಜಲ್ ೫೯(ಕನಕದಾಸರು)

*ಗಜಲ್59*

*ಕನಕದಾಸರ  ಜಯಂತಿಯ‌ ಶುಭಾಶಯಗಳು*

ಧನಕನಕ ತೃಣಸಮಾನರೆಂದು ತೋರಿಸಿದವರು ಕನಕದಾಸರು.
ಕೊನೆತನಕ ಹರಿಚರಣ ಬಿಡಬೇಡವೆಂದು ಬೋಧಿಸಿದವರು ಕನಕದಾಸರು.


ಅಹಂ ನಿಂದ ಒಡೆಯುತ್ತಿವೆ ಮನೆ ಮನಗಳು .
ನಾನು ಹೋದರೆ ಸ್ವರ್ಗಸುಖವೆಂಬ ಸತ್ಯ  ದರ್ಶನ ಮಾಡಿಸಿದವರು ಕನಕದಾಸರು.

ಮಂದಿರ ಮಸೀದಿಗಳಲಿಮಾತ್ರ ಭಗವಂತನಿರುವ ಎಂಬ ಮೂಢರು
ನಿಷ್ಕಲ್ಮಷ  ನಿಜಭಕ್ತಿಯಿಂದ ಕೃಷ್ಣನ ದರ್ಶನ ಪಡೆದವರು ಕನಕದಾಸರು.

ಪಾಶ್ಚಿಮಾತ್ಯರ ಆಹಾರಪದ್ದತಿಯ ಅನುಕರಿಸಿ ಕಾಯ ರೋಗಗಳ ಗೂಡು.
ರಾಮಧಾನ್ಯದ ಮಹತ್ವವನು ಲೋಕಕೆ
ಎತ್ತಿತೋರಿದವರು ಕನಕದಾಸರು.


ಸಂಕಟ ಬಂದಾಗ ದೇವರ ನೆನವವರು ಎಲ್ಲೆಡೆ.
ಸದಾ ಹರಿಭಕ್ತರಾಗಿ ವೆಂಕಟೇಶ್ವರನ ಭಜಿಸಿದವರು ಕನಕದಾಸರು.

*ಸಿ.ಜಿ ವೆಂಕಟೇಶ್ವರ*

01 November 2019

ಎಂದೆಂದೂ (ಹನಿ)

*ಎಂದೆಂದೂ*

ಇಂದು ನವೆಂಬರ್ ಒಂದು
ಕನ್ನಡ ಬಳಸಿ ಬೆಳೆಸಿ ಉಳಿಸೋಣ
ಇಂದು ,ಮುಂದು ಎಂದೆಂದೂ.

ಕನ್ನಡ ರಾಜ್ಯೋತ್ಸವದ ಶುಭಾಶಯಗಳು💐💐

*ಸಿ ಜಿ ವೆಂಕಟೇಶ್ವರ*

31 October 2019

ವಾಲ್ಮೀಕಿ ಹನಿಗವನ

*ವಾಲ್ಮೀಕಿ*

ನಾನು‌ದುರ್ಬಲ
ನನ್ನಿಂದ ಆಗದು
ನನಗೇನೂ ಗೊತ್ತಿಲ್ಲ
ಎಂಬ ಕೀಳರಿಮೆ ಬಿಟ್ಟಾಕಿ.
ಶ್ರದ್ಧೆ, ಸ್ಪಷ್ಟವಾದ ಗುರಿ
 ಛಲ,ಮುಂತಾದ ಸದ್ಗುಣ
ರೂಢಿಸಿಕೊಂಡರೆ ನೀವೂ
ಆಗಬಹುದು ವಾಲ್ಮೀಕಿ.

*ವಾಲ್ಮೀಕಿ ಜಯಂತಿಯ ಶುಭಾಶಯಗಳು*

*ಸಿ ಜಿ ವೆಂಕಟೇಶ್ವರ*

ನಂದನ‌ವನ ಮಾಡೋಣ(ಕವನ)

*ನಂದನವನ ಮಾಡೋಣ*

ಭುವಿಯ ಒಡಲಿಗೆ ರಸಾಯನಿಕ
ಪದಾರ್ಥಗಳ ತುಂಬಿ
ಕಳಪೆ ಬೀಜ‌ಗೊಬ್ಬರ ನಂಬಿ
ಬಹುರಾಷ್ಟ್ರೀಯ ಕಂಪನಿಗಳ
ಜೇಬುಗಳ ತುಂಬಿ
ಭೂತಾಯಿಗೆ ನಂಜನಿಟ್ಟಿರುವೆವು.

ಜಲಮೂಲಗಳಿಗೆ ಕಾರ್ಖಾನೆಗಳ
ಮಲಿನ ನೀರನರಿಸಿ
ಶುದ್ದಜಲವ ಕುಲಗೆಡಿಸಿ
ಜಲಚರಗಳ ಕೊಲ್ಲಿಸಿ
ಗಾಂಗಾಮಾತೆಗೆ ದ್ರೋಹ ಮಾಡಿರುವೆವು

ಶುದ್ದಗಾಳಿಗೆ ಆ ಆಕ್ಸೈಡ್
ಈ ಆಕ್ಸೈಡ್ ಸೇರಿಸಿ
ವಾಯುಮಾಲಿನ್ಯವ ಏರಿಸಿ
ನಂಜುಕಾರಕಗಳ ಬಳಸಿ
ವಿಷಗಾಳಿಯ ಸೇವಿಸಿ
ಸಕಲಜೀವಿಗಳ ರೋಗಗ್ರಸ್ತ ಮಾಡಿಹೆವು.

ಮೂಲತಃ ಪ್ರಾಣಿಯಾದ ಮಾನವ
ವಿಷವುಂಡು ಆಗಿರುವ ದಾನವ
ತಾಯ ಎದೆಹಾಲು ಹಾಲಾಹಲ
ಎಲ್ಲೆಡೆಯೂ ಕೋಲಾಹಲ
ನಮ್ಮಳಿವಿಗೆ ನಾವೇ ತಪ್ಪೆಸಗುತಿಹೆವು.

ನೆಲ ಜಲ ಗಾಳಿ ಮನಗಳೆಲ್ಲ
ಮಲಿನವಾಗಿ ಒದ್ದಾಡುವಾಗ
ಆಶಾವಾದವೊಂದು ಗೋಚರಿಸುತಿಹುದು
ಭಗವಂತನ ಸಾಮೀಪ್ಯವಿದ್ಸರೆ
ಅಮೃತ ಸಿಗುವುದು.
ಒಳಿತು ಮಾಡಲು ಮನ ಸಿದ್ದವಾಗುವುದು
ಇಂದೇ ಭಗವಂತನ ನೆನೆದು
ಅಮೃತ ಪುತ್ರರಾಗೋಣ
ಜಗವ ನಂದನವನ
ಮಾಡೋಣ.

*ಸಿ ಜಿ ವೆಂಕಟೇಶ್ವರ*






ಕನ್ನಡ ರಾಜ್ಯೋತ್ಸವ ನಿತ್ಯೋತ್ಸವ ಆಗಲಿ


ಕನ್ನಡ ರಾಜ್ಯೋತ್ಸವ ನಿತ್ಯೋತ್ಸವವಾಗಲಿ
ಎಲ್ಲರಿಗೂ ಕನ್ನಡ ರಾಜ್ಯೋತ್ಸವದ ಶುಭಾಶಯಗಳು
ಹುಟ್ಟಿದರೆ ಕನ್ನಡ ನಾಡಲಿ ಹುಟ್ಟಬೇಕು ಮೆಟ್ಟಿದರೆ ಕನ್ನಡ ಮಣ್ಣ ಮೆಟ್ಟಬೇಕು
ಎಂಬ ಕವಿವಾಣಿ ಸದಾ ನಮ್ಮ ಕಿವಿಯಲ್ಲಿ ಗುಯ್ ಗುಡುತ್ತದೆ. ನಮ್ಮ ನಾಡು ನುಡಿಯ ಬಗ್ಗೆ ಅವ್ಯಕ್ತ ಗೌರವ ಮೂಡುತ್ತದೆ ಆದರೆ ಈ ಸುಂದರ ನಾಡು ಕಟ್ಟಲು ಹಲವಾರು ಮಹನೀಯರ ಕೊಡುಗೆ ಅಡಗಿದೆ ಎಂಬುದು ಬಹುತೇಕರಿಗೆ ತಿಳಿದಿಲ್ಲ. ಇಂದಿನ ಶುಭ ಸಂದರ್ಭದಲ್ಲಿ ಅದರ ಬಗ್ಗೆ  ಮೆಲುಕು ಹಾಕೋಣ .
೧೯೮೭ ಆಗಸ್ಟ್ ೧೫ ರಂದು   ಬ್ರಿಟೀಷರ ದಾಸ್ಯ ಸಂಕೋಲೆಯಿಂದ . ಮುಕ್ತರಾದ  ನಮ್ಮ ದೇಶವು ೫೬೩ ಕ್ಕಿಂತ ಹೆಚ್ಚು ಸಂಸ್ಥಾನಗಳನ್ನು ಉಕ್ಕಿನ ಮನುಷ್ಯ ಸರ್ದಾರ್ ವಲ್ಲಭಭಾಯಿ ಪಟೇಲ್ ರವರು
ಒಗ್ಗೂಡಿಸಿದರು ನಂತರ ಭಾಷಾವಾರು ಪ್ರಾಂತಗಳ ವಿಂಗಡಣೆಗೆ ಬೇಡಿಕೆ ಬಂದು ಮೊದಲು ಆಂದ್ರಪ್ರದೇಶದ ರಚನೆಯಾಯಿತು. ಆಗ ಮೈಸೂರು ಭಾಗದ ಜನರಲ್ಲಿ  ಸಹ ಪ್ರತ್ಯೇಕವಾದ ರಾಜ್ಯದ ಬೇಡಿಕೆಯು ಚಿಗುರೊಡೆಯಿತು.
ಕನ್ನಡ ಮಾತನಾಡುವ ಜನರು ಮುಂಬೈ ಕರ್ನಾಟಕ, ಹೈದರಾಬಾದ್ ಕರ್ನಾಟಕ, ಮದ್ರಾಸ್ ಕರ್ನಾಟಕ ಹೀಗೆ ಹಲವು ಭಾಗಗಳಲ್ಲಿ ಹರಿದು ಹಂಚಿಹೋಗಿದ್ದರು.ಭಾಷೆಯವಿಚಾರದಲ್ಲಿ ಭಾವನಾತ್ಮಕವಾಗಿ ಒಂದಾಗಿದ್ದ ಕನ್ನಡದ ಮನಗಳು ಬೌಗೋಳಿಕವಾಗಿ ಒಂದು ನೆಲೆಗಾಗಿ ಹೋರಾಟವನ್ನು ಆರಂಬಿಸಿದರು .ಇದಕ್ಕೆ ಸಾಹಿತಿಗಳು ಬುದ್ಧಿಜೀವಿಗಳು ತಮ್ಮದೇ ಆದ ಕೊಡುಗೆ ನೀಡಿದರು .'ಹುಯಿಲಗೋಳ ನಾರಾಯಣರಾವ್ " ರವರು  ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು ಎಂದು ಜನರನ್ನು ಪ್ರೇರೇಪಿಸಿದರೆ ಶಿವರಾಮ ಕಾರಂತ, ಕುವೆಂಪು, ಮುಂತಾದ ಕವಿಗಳು ಸಹ ಪ್ರತ್ಯೇಕ ರಾಜ್ಯದ ರಚನೆಗೆ ಬೆಂಬಲ ಸೂಚಿಸಿದರು. ಕಾರ್ನಾಡ್ ಸದಾಶಿವರಾವ್, ಡೆಪ್ಯುಟಿ ಚನ್ನಬಸಪ್ಪ, ಆರ್ ಆರ್ ದಿವಾಕರ್ ,ಎಸ್ ನಿಜಲಿಂಗಪ್ಪ, ಮುಂತಾದವರು ಹಲವಾರು ಹೋರಾಟಗಳನ್ನು ಸಂಘಟಿಸಿದರು.ಆಲೂರು ವೆಂಕಡರಾಯರು.,ಮುದವೀಡು ಕೃಷ್ಣ ರಾಯರು,ಬೆನಗಲ್ ಶಿವರಾಮ ರವರು,ಫ.ಗು ಹಳಕಟ್ಟಿ ರವರು,ಹೆಚ್ ವಿ ನಂಜುಂಡಯ್ಯ ರವರು,ಮುಂತಾದವರು ನಮ್ಮ ನಾಡ ಏಕೀಕರಣಕ್ಕೆ ಹೊರಟ ಮಾಡಿದರು.ಈ ದಿಸೆಯಲ್ಲಿ ಆಂದಿನ ವೃತ್ತ ಪತ್ರಿಕೆಗಳು ಮತ್ತು ನಿಯತಕಾಲಿಕ ಪತ್ರಿಕೆಗಳು ಜನರಲ್ಲಿ ಜಾಗೃತಿ ಮೂಡಿಸಿದವು.ಅವುಗಳಲ್ಲಿ ವಾಗ್ಭೂಷಣ,ಕರ್ಮವೀರ, ಕರ್ನಾಟಕ ವೃತ್ತ, ,ಸುಭೋದಿನಿ ಮುಂತಾದವು ಪ್ರಮುಖವಾದ ಪತ್ರಿಕೆಗಳು.
ಮೈಸೂರಿನ ವಿವಿದೆಡೆ ಪ್ರತ್ಯೇಕ ರಾಜ್ಯಕ್ಕೆ ಬೇಡಿಕೆಯು ಹೆಚ್ಚುತ್ತಾ ಬಂದಾಗ ಅಂದಿನ  ಕೇಂದ್ರ ಸರ್ಕಾರವು ೧೯೪೮ ರಲ್ಲಿ ಧಾರ್ ಸಮಿತಿಯನ್ನು ನೇಮಕ ಮಾಡಿತು ರಾಜ್ಯಗಳ ಪುನರ್ ವಿಂಗಡಣೆ ಮಾಡಲು ವರದಿ ನೀಡಲು ಹೇಳಿತು.ನಂತರ ೨೯೪೯ ರಲ್ಲಿ ಜೆ .ವಿ. ಪಿ .ಸಮಿತಿ ನೇಮಕ ಮಾಡಿ ಇದರಲ್ಲಿ ಜವಹಾರಲಾಲ್ ನೆಹರೂ ,ವಲ್ಲಭಭಾಯಿ ಪಟೇಲ್ ಮತ್ತು ಪಿ ಸೀತಾರಾಮಯ್ಯ ಸದಸ್ಯರಾಗಿದ್ದರು .೧೯೫೪ ರಲ್ಲಿ  ರಾಜ್ಯ ಪುನರ್ ವಿಂಗಡಣಾ ಸಮಿತಿ ರಚಿಸಿ ಫಜಲ್ ಆಲಿ ರವರನ್ನು ಅಧ್ಯಕ್ಷರನ್ನಾಗಿ ಮಾಡಿ . ಕೆ ಎಂ ಫಣಿಕ್ಕರ್, ಮತ್ತು ಹೆಚ್ ಎನ್ ಕುಂಜ್ರು ರವರು ಸದಸ್ಯರಾಗಿ ಸರ್ಕಾರಕ್ಕೆ ವರದಿ ನೀಡಿದರು.
ಇವೆಲ್ಲದರ ಪರಿಣಾಮ ಕೇಂದ್ರ ಸರ್ಕಾರವು ರಾಜ್ಯ ಪುನರ್ ವಿಂಗಡಣಾ ಮಸೂದೆ ಪಾಸು ಮಾಡಿ ೧೯೫೬ ನವಂಬರ್ ೧ ರಂದು ವಿಶಾಲ ಮೈಸೂರು ರಾಜ್ಯ ಉದಯವಾಯಿತು. ಕೋಟ್ಯಂತರ ಕನ್ನಡಿಗರ ಕನಸು ನನಸಾಯಿತು
ಮಹಾಜನ್  ಆಯೋಗದ ಶಿಪಾರಸ್ ಪ್ರಾಕಾರ ಕರ್ನಾಟಕ ಮಹಾರಾಷ್ಟ್ರದಿಂದ ೨೬೦ ಸ್ಥಳಗಳನ್ನು ಪಡೆಯಿತು. ಬೇರೆ ರಾಜ್ಯದ ಕನ್ನಡ ಮಾತನಾಡುವ ಪ್ರದೇಶಗಳಾದ ಕಾಸರಗೋಡು,ಮಡಕಶಿರ,ಆದವಾನಿ ಬೆಳಗಾವಿ ಪ್ರದೇಶಗಳನ್ನು ಕರ್ನಾಟಕದಲ್ಲಿ ಸೇರಿಸಲು ಶಿಪಾರಸ್ಸು ಮಾಡಲಾಯಿತು.
. 1973 ರ ನವೆಂಬರ್ ೧ ರಂದು ಅಂದಿನ ಕರ್ನಾಟಕದ ಮುಖ್ಯಮಂತ್ರಿಗಳಾಗಿದ್ದ ಶ್ರೀ ದೇವರಾಜ ಅರಸ್ ರವರ ಕಾಲದಲ್ಲಿ ನಮ್ಮ ರಾಜ್ಯವನ್ನು "ಕರ್ನಾಟಕ" ಎಂದು ಮರುನಾಮಕರಣ ಮಾಡಲಾಯಿತು.
ಇಪ್ಪತ್ತೊಂದನೇ ಶತಮಾನದ ಬದಲಾದ ಕಾಲಘಟ್ಟದಲ್ಲಿ ಇಂದು ನಮ್ಮ ನಾಡು ನುಡಿ ಎರಡಕ್ಕೂ ಭಂಗ ಬರುತ್ತಿರುವ ಲಕ್ಷಣಗಳನ್ನು ಕಾಣಬಹುದು ,ಮಹನೀಯರು ಕಷ್ಟ ಪಟ್ಟು ಉಳಿಸಿ ಬೆಳೆಸಿದ ನಮ್ಮ ಕನ್ನಡ ಭಾಷೆ ಕ್ರಮೇಣ ಕಡಿಮೆಯಾಗಿ ಪರಭಾಷೆಗಳ ಹಾವಳಿ ಹೆಚ್ಚಾಗುತ್ತಿದೆ .ಗಡಿನಾಡಿನಲ್ಲಿ ಮತ್ತು ಬೆಂಗಳೂರಿನಂತಹ ನಗರಗಳಲ್ಲಿ ಕನ್ನಡ ಮಾತನಾಡುವ ಜನರ ಸಂಖ್ಯೆ ಕಡಿಮೆಯಾಗಿದೆ ಎಂಬುದು ಹಲವು ವರದಿಗಳಿಂದ ಸಾಬೀತಾಗಿದೆ.ಪ್ರಜ್ಞಾವಂತರಾದ ಕನ್ನಡಿಗರಾದ ನಾವು ನಮ್ಮ ಭಾಷೆಯನ್ನು ಉಳಿಸಲು ಮತ್ತು ಬೆಳೆಸಲು ಪಣ ತೊಡಬೇಕಿದೆ,
ಇನ್ನೂ ನಾಡಿನ ವಿಷಯಕ್ಕೆ ಬಂದರೆ ಹಿಂದಿನಿಂದಲೂ ಕಾಸರಗೋಡು,ಬೆಳಗಾವಿ ಮುಂತಾದ ಗಡಿಭಾಗದಲ್ಲಿ ನೆರೆ ರಾಜ್ಯಗಳ ತಕರಾರು ಒಂದೆಡೆ ಆದರೆ, ನಮ್ಮ ನಾಡಿನಲ್ಲೇ ಇರುವ ಕೆಲ ಸ್ವಾರ್ಥ ವ್ಯಕ್ತಿಗಳು ನಾಡು ವಿಭಜನೆ ಮಾಡುವ ಅವಿವೇಕದ ಆತುರದ ಹೇಳಿಕೆ ನೀಡಿ ನಮ್ಮ ನಾಡಿನ ಏಕೀಕರಣಕ್ಕೆ ಹೋರಾಡಿದ ಆತ್ಮಗಳಿಗೆ ಅವಮಾನ ಮಾಡುತ್ತಿದ್ದಾರೆ. ಇದು ನಿಲ್ಲಬೇಕು. ನಮ್ಮಲ್ಲಿ ಎಷ್ಟೇ ಭಿನ್ನಾಭಿಪ್ರಾಯಗಳು ಇದ್ದರೂ ನಾಡು ನುಡಿಯ ವಿಚಾರದಲ್ಲಿ ಅವು ಗೌಣವಾಗಿ ಏಕರಾಜ್ಯ,ಏಕಭಾಷೆ,ನಮ್ಮ ದ್ಯೇಯಮಂತ್ರವಾಗಬೇಕು..ಕನ್ನಡದ ಹಬ್ಬ ಒಂದು ದಿನಕ್ಕೆ ಮೀಸಲಾಗದೇ ನಿತ್ಯೋತ್ಸವವಾಗಿ ಮಾಡಬೇಕು.
ನಮ್ಮ ಮುಂದಿನ ಪೀಳಿಗೆಗೆ ನಮ್ಮ ನಾಡು ನುಡಿಯನ್ನು ಹಸ್ತಾಂತರ ಮಾಡುವ ದೃಡಸಂಕಲ್ಪವನ್ನು ಇಂದು ನಾವೆಲ್ಲರೂ ಮಾಡೋಣ ಮತ್ತು ನಾಡಿನ ಪ್ರಗತಿಗೆ ಕಂಕಣಬದ್ದರಾಗೋಣ.

ಜೈ ಕನ್ನಡಾಂಭೆ.

ಸಿ.ಜಿ ವೆಂಕಟೇಶ್ವರ
ತುಮಕೂರು

13 October 2019

ಎಲ್ಲಿ ಹೋದವು ಆ ದಿನಗಳು(ಕವನ)



*ಎಲ್ಲಿ ಹೋದವು ಆ ದಿನಗಳು*


ಎಲ್ಲಿ‌ಹೋದವು ಆ ದಿನಗಳು
ಎಲ್ಲಿ ನೋಡಿದರೂ ದಾವಂತದ ಯಾಂತ್ರಿಕ ಬದುಕಿನ ತೋರಿಕೆಗಳು

ಬೆಳ್ಳಿ ಚುಕ್ಕಿ ಬಂತು ಏಳೋ
ಕಂದ ಎಂದು ಎಬ್ಬಿಸಿ ನಿತ್ಯ ಕರ್ಮ ದೊಂದಿಗೆ ಕರ್ಮ ಆರಂಬಿಸಿ
ಗಂಗಾ ಯಮುನ ನದಿಗಳ ನೆನೆದು
ಸ್ನಾನವ ಮಾಡಿ  ಬ್ರಾಹ್ಮಿ  ಮುಹೂರ್ತದಿ ಜಪ ತಪ  ಪೂಜೆಗಳು ಅಂದು.

ಇಂದು

ನೇಸರ ನೆತ್ತಿಗೆ  ಬಂದರೂ
ಏಳು ಎಂದು ಹೇಳಲು ಹಿಂಜರಿವ ಪಾಲಕರು ಎದ್ದರೂ ಕರಾಗ್ರೆ ವಸತೇ...
ಬದಲಾಗಿ ಕರದಲಿ  ಜಂಗಮವಾಣಿ ಹಿಡಿದು ಮುಖ ತೊಳೆಯದೇ ಮುಖಪುಟಕೆ ಹಾತೊರೆವ ನವ
ಪೀಳಿಗೆಗಳು.

ಗೋಧೂಳಿ ಸಮಯದಿ ಮನೆ ಕಸವ
ತೆಗೆದು ದೀಪ ಮುಡಿಸಿ
ಕಾಯಕನಿರತ ಗೃಹಿಣಿಯರು
ಭಾಗವತ ರಾಮಾಯಣ ಕಥೆಗಳ
ಹೇಳುವ ಅಜ್ಜಿಗಳು ಕುತೂಹಲದಿಂದ ಕೇಳುವ ಮಕ್ಕಳು .ನೈತಿಕತೆ ಮೌಲ್ಯಗಳು ಬೆಳೆಯಲು ಪೂರಕ ಚಟುವಟಿಕೆಗಳು.

 ಇಂದಿನ ಬಹುತೇಕ ಡ್ಯಾಡಿ ಮಮ್ಮಿಗಳಿಗೆ
ಮೊಬೈಲೇ ಸ್ವರ್ಗ ಮಕ್ಕಳ ಕೈಗೂ
ಅದನ್ನಿತ್ತು ಬೆಳಕು ನೀಡುವ ಬದಲು
ಕತ್ತಲಾಗಿ ಮಾಡಿ
ಮೌಲ್ಯಗಳ ಸಾರುವ ಕಥೆಗಳ ಹೇಳುವ
ಅಜ್ಜ ಅಜ್ಜಿಯರನು ವೃದ್ದಾಶ್ರಮಕೆ ತಳ್ಳಿ
ಅದೇ ಪುಟ್ಟ ಗೌರಿನೋಡುತಾ ಗಟ್ಟಿ ಮೇಳ ಬಾರಿಸುತಾ  , ಮನೆಯೊಂದು ಮೂರುಬಾಗಿಲು ಮಾಡಲು ಸಜ್ಜಾಗಿರುವ ಆದರ್ಶ ಜನಗಳು.?

ಎಲ್ಲಿ‌ಹೋದವು ಆ ದಿನಗಳು?
ಎಲ್ಲಿ ನೋಡಿದರೂ ದಾವಂತದ ಯಾಂತ್ರಿಕ ಬದುಕಿನ ತೋರಿಕೆಗಳು .

*ಸಿ ಜಿ ವೆಂಕಟೇಶ್ವರ*

02 October 2019

ಅಹಿಂಸೆ ಪಾಲಿಸಿ (ನ್ಯಾನೋ ಕಥೆ,)



*ಅಹಿಂಸೆ ಪಾಲಿಸಿ*
(ನ್ಯಾನೋ ಕಥೆ)


"ಗಾಂಧೀಜಿಯವರ ತತ್ವ ಮತ್ತು ನೀತಿಗಳನ್ನು ನಾವು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಬೇರೆಯವರಿಗೆ ತೊಂದರೆ ಕೊಡಬಾರದು " ಈಗೆ ಗೋವಿಂದಪ್ಪ ನವರು ಸುಮಾರು ಅರ್ಧಗಂಟೆಗಳ ಕಾಲ ಸುಡು ಬಿಸಿಲಿನಲ್ಲಿ ಕುಳಿತ  ಮಕ್ಕಳ ಮುಂದೆ ಭಾಷಣ ಮಾಡುತ್ತಿದ್ದಾಗ  ಕೊನೆ ಸಾಲಿನಲ್ಲಿದ್ದ ಸತೀಶ್ ಎಂಬ ಬಾಲಕ "ಸಾರ್ ಭಾಷಣ ನಿಲ್ಲಿಸಿ ಅಹಿಂಸಾ ನೀತಿ ಪಾಲಿಸಿ" ಎಂದದ್ದು ವೇದಿಕೆಯಲ್ಲಿರುವವರಿಗೆ ಕೇಳದೇ ಇರಲಿಲ್ಲ.

*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*

28 September 2019

ಚುಟಕುಗಳು(ಉತ್ತಮ ಚುಟುಕುಗಳು ಎಂದು ಪುರಸ್ಕೃತ)

ಸಿಹಿಜೀವಿಯ ಹನಿಗಳು (ಮಡದಿ)

*೧*

*ಆಧುನಿಕ ಪತಿಗಳು*

ಮಡದಿ ಹತ್ತಿರವಿದ್ದರೆ
ನನಗದೇ ಕೋಟಿ ರೂಪಾಯಿ
ಎಂದರು ಕವಿಗಳು
ನಮ್ಮ ಪಾಡಿಗೆ ನಮ್ಮ ಬಿಟ್ಟರೆ
ನಮಗದೆ ಕೋಟಿಗಿಂತ ಹೆಚ್ಚು
ಎಂದರು ಆಧುನಿಕ ಪತಿಗಳು .


*೨*

*ಮುತ್ತು*

ಮಡದಿ ಇಷ್ಟಪಡುವಳೆಂದು
ಮೈಸೂರು ಮಲ್ಲಿಗೆ
ಮೈಸೂರ್ ಪಾಕ್ ತಂದು
ಕೇಳಿದನು ಕೊಡೆ ಮುತ್ತೊಂದನು
ಅವಳಂದಳು
ಕೊಡಿಸಬಾರದೆ ಮುತ್ತಿನ
ಸರವೊಂದನು.


*ಸಿ ಜಿ ವೆಂಕಟೇಶ್ವರ*

27 September 2019

ಪ್ರವಾಸ (ಹನಿ)

*ಪ್ರವಾಸ*

(ಇಂದು ವಿಶ್ವ ಪ್ರವಾಸ ದಿನ)

ಎಲ್ಲರಿಗೂ
ಮನೆಯಲಿ
ಪ್ರತಿದಿನ ಮಾಮೂಲಿ
ವಾಸ .
ಹೆಚ್ಚುಕಡಿಮೆಯಾದರೆ
ವನವಾಸ.
ದೇಶ ಸುತ್ತಲು
ಜ್ಞಾನ ಪಡೆಯಲು
ವರ್ಷಕ್ಕೊಮ್ಮೆ ಮಾಡಿ
ಪ್ರವಾಸ.

*ಸಿ ಜಿ ವೆಂಕಟೇಶ್ವರ*
*ಗೌರಿಬಿದನೂರು*

ಚಾಲಕ (ಭಾವಗೀತೆ)

*ಚಾಲಕ*

ಕತ್ತಲ ಕೂಪದಿಂದ
ನಿನಗೆ ಬಿಡುಗಡೆ ಎಂದು?
ಬೆಳಕಿನೆಡೆ ಸಾಗಲು
ನೀನು ಅಡಿಇಡು ಇಂದು.

ನಿನ್ನಾತ್ಮ ದರ್ಶನಕೆ
ಪರರ ನೆರವೇಕೆ?
ನೆರಳಂತೆ ಕಾಯುವುದು
ಸತ್ಕಾರ್ಯ ಚಿಂತೆಯೇಕೆ?

ಜಗದ ಮೂಲೆಗಳಿಂದ
ಪಡೆ ನೀನು ಜ್ಞಾನ
ಜನ ಮೆಚ್ಚಿ ಹೊಗಳುವರು
ನೀನೆ ಮಹಾಜಾಣ.

ಭಕ್ತಿಯಲಿ ಭಜಿಸಿದರೆ
ಕಾಣುವುದು ಸ್ವರ್ಗ
ಮುಕ್ತಿಯ ಮೂಲ
ಅದುವೆ ಭಕ್ತಿಮಾರ್ಗ.

ಮೇಲು ಕೀಳೆನೆದೆ
ಮಾಡು ನಿನ್ನ ಕಾಯಕ
ನಿನ್ನ ಮೋಕ್ಷದ ಯಾತ್ರಗೆ
ನೀನಾಗುವೆ ಚಾಲಕ.

*ಸಿ.ಜಿ ವೆಂಕಟೇಶ್ವರ*
*ಗೌರಿಬಿದನೂರು*


25 September 2019

ಭವಿಷ್ಯದ ಆಹಾರ ಭದ್ರತೆ (ಲೇಖನ)

    ಲೇಖನ

ಭವಿಷ್ಯದ ಅಹಾರ ಭದ್ರತೆ

ಭಾರತ ಸರ್ಕಾರವು ಕರ್ನಾಟಕ ಸರ್ಕಾರಕ್ಕೆ ದ್ವಿದಳ ಉತ್ಪಾದನೆಯಲ್ಲಿ ಗಣನೀಯ ಸಾಧನೆ ಮಾಡಿರುವುದನ್ನು ಗುರ್ತಿಸಿ ಈ ವರ್ಷದ ಪ್ರಶಸ್ತಿಗೆ ಆಯ್ಕೆ ಮಾಡಿ ಪ್ರಶಸ್ತಿ ಪತ್ರ ದ ಜೊತೆಗೆ ಒಂದು ಕೋಟಿ ನಗದು ಬಹುಮಾನವನ್ನು ನೀಡಿ ಗೌರವಿಸಿದೆ.ಇದು ಕರ್ನಾಟಕದ ಪ್ರಜೆಗಳಾದ ನಾವು ಹೆಮ್ಮೆ ಪಡಬೇಕಾದ ಸಂಗತಿ .ಜೊತೆಯಲ್ಲಿ ಮುಂದಿನ ದಿನಗಳಲ್ಲಿ ವಿವಿದ ಕಾರಣದಿಂದ ಆಹಾರದ ಕೊರತೆಯನ್ನು ನೀಗಿಸಲು ,ಸುಸ್ಥಿರ ಅಹಾರ ಉತ್ಪಾದನೆ ಹೆಚ್ಚು ಒತ್ತು ನೀಡ ಬೇಕಾಗಿದೆ. ಈಗಾಗಲೇ ಮುಂದಿನ ದಿನಗಳನ್ನು ಗಮನದಲ್ಲಿಟ್ಟುಕೊಂಡು ವಿಶ್ವದ ಪ್ರಮುಖವಾದ ರಾಷ್ಟ್ರಗಳು ಬೇರೆ ದೇಶಗಳ ದೊಡ್ಡ ಅಹಾರ ಕಂಪನಿಗಳನ್ನು ದುಬಾರಿ ಹಣ ತೆತ್ತು ಖರೀದಿಸಿ ಭವಿಷ್ಯದ ಆಹಾರ ಭದ್ರತೆ ಮತ್ತು ಆಹಾರ ಕೊರತೆ ನೀಗಿಸಲು ಸನ್ನದ್ದವಾಗುತ್ತಿವೆ ಈ ವಿಚಾರದಲ್ಲಿ ಚೀನಾ ದೇಶವು ದುಬಾರಿಯಾದರೂ ಇತರೆ ದೇಶಗಳ ದೊಡ್ಡ ಕಂಪನಿಗಳನ್ನು ಲಕ್ಷಾಂತರ ಕೋಟಿ ನೀಡಿ ಖರೀದಿಸಿ ಆಹಾರದಲ್ಲಿ ವಿಶ್ವ ಮಟ್ಟದಲ್ಲಿ ಪಾರಮ್ಯ ಮೆರೆಯಲು ಸಜ್ಜಾಗುತ್ತಿದೆ. ಭಾರತ ಸರ್ಕಾರವು ಈ ನಿಟ್ಟಿನಲ್ಲಿ  ಯೋಚಿಸಿ,ಯೋಜಿಸಲು ಇದು ಸಕಾಲ .ಕೃಷಿ ಪ್ರಧಾನ ನಮ್ಮ ದೇಶದಲ್ಲಿ ಆಹಾರ ಉತ್ಪಾದನೆ. ಸಂಶೋದನೆಗಳ ಮಾಡಿ ಆಹಾರವನ್ನು ಉತ್ಪಾದಿಸಲು ವಿಪುಲವಾದ ಅವಕಾಶಗಳನ್ನು ಹೊಂದಿದೆ ಹಿಂದಿನ ವರ್ಷಗಳಿಗೆ ಹೋಲಿಸಿದರೆ ಆಹಾರ ಧಾನ್ಯಗಳ ಉತ್ಪಾದನೆಯಲ್ಲಿ ಗಣನೀಯ ಪ್ರಮಾಣದ ಹೆಚ್ಚಳವಾಗಿದ್ದರೂ ಅತೀವೃಷ್ಟಿ ಅನವೃಷ್ಟಿ ಯಂತಹ ನೈಸರ್ಗಿಕ ವಿಕೋಪಗಳ ಸಂಧರ್ಭದಲ್ಲಿ ಮತ್ತು ಜಾಗತಿಕ ಅನಿಶ್ಚಿತತೆಗಳ ಎದುರಿಸಲು ಇತರೆ ದೇಶಗಳಂತೆ ನಾವೂ ಎಚ್ಚರಿಕೆಯಿಂದ ಹೆಜ್ಜೆ ಇಟ್ಟು ಮುಂದಿನ ಸವಾಲುಗಳಿಗೆ ಈಗಲೇ ಸಿದ್ದರಾಗುವುದು ಜಾಣ ನಡೆಯಲ್ಲವೆ ?


*ಸಿ.ಜಿ ವೆಂಕಟೇಶ್ವರ*
*ಗೌರಿಬಿದನೂರು*

*ಬಂಗಾರ (ಹನಿ)

*ಬಂಗಾರ*

ದೀರ್ಘ ಕಾಲ
ಮೌನವಾಗಿರುವ
ಹೆಂಡತಿಯ ಕಂಡು
ಕೌತುಕದಿಂದ
ಅವನು ಯಾಕೆ
ಮೌನ ?ಅಂದ.
ಮಾತು ಬೆಳ್ಳಿ
ಮೌನ ಬಂಗಾರವಂತೆ
ಅದರ ಬೆಲೆ
ಇಳಿದಿದೆಯಂತೆ.

*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*

24 September 2019

ಸಂತಸದಿಂದಿರು (ಕವನ)

*ಸಂತಸದಿಂದಿರು*

ಆಸೆಗಳ ಕೂಪದಲಿ ಬಿದ್ದು
ವಿಲವಿಲನೆ ಒದ್ದಾಡದಿರು
ಅವನ ಭಜಿಸಿ ಸಂತಸದಿಂದಿರು.

ಹೆಂಡತಿ, ಮಕ್ಕಳು , ಬಂಧುಗಳೆಂಬ
ಅತಿಯಾದ ಮೋಹ ಬೇಡ
ದೇವನೊಲವ ಸವಿ ಮೂಢ.

ಜನನ ಮರಣ, ರೋಗಗಳ
ನೆನೆಯುತ  ಚಿಂತಿಸುವುದ ಬಿಡು
ಭಗವಂತನಲಿ ಮನಸಿಡು.

ಹೆಣ್ಣು ಹೊನ್ನು ಮಣ್ಣಿನಲಿ
ಮಾತ್ರ ಸಂತಸವಿಲ್ಲ
ಒಳಗಣ್ಣ ತೆರೆದರೆ ಸವಿಬೆಲ್ಲ

*ಸಿ ಜಿ‌ ವೆಂಕಟೇಶ್ವರ*

22 September 2019

ತಂಗಾಳಿ (ಬಹುಮಾನ ಪಡೆದ ಹನಿ)

*ತಂಗಾಳಿ*

ಸಕಲ ವಿಷಯಗಳಲಿ
ಪಥ್ಯವಿದ್ಧರೆ ದಾಂಪತ್ಯದಲಿ
ಬೀಸುವುದು ತಂಗಾಳಿ
ಇಲ್ಲದಿದ್ದರೆ ಖಂಡಿತ
ತಪ್ಪದು ಬಿರುಗಾಳಿ .

*ಸಿ.ಜಿ ವೆಂಕಟೇಶ್ವರ*
*ಗೌರಿಬಿದನೂರು*



19 September 2019

ಸಿಡಿಗುಂಡು (ಹನಿಗವನ)


*ಸಿಹಿಜೀವಿಯ ಹನಿ*

*ಸಿಡಿಗುಂಡು*

ಮದುವೆಗೆ ಮೊದಲು
ಅವನು
ಗಂಡು
ಸಿಡಿಗುಂಡು
ಬೆಂಕಿ ಚೆಂಡು.
ಈಗ
ಗಂಡ
ಸಿಡಿಯದ ಗುಂಡು
ಬೆಂಕಿಯಿರದ ಚೆಂಡು

*ಸಿ ಜಿ ವೆಂಕಟೇಶ್ವರ*
*ಗೌರಿಬಿದನೂರು*

07 September 2019

ನ್ಯಾನೋ ಕಥೆ(ಹಾರೈಕೆ)ಪ್ರಥಮ ಬಹುಮಾನ ಕವಿ ಕಾವ್ಯ ದೀವಿಗೆ





ಸ್ಪರ್ಧೆಗೆ

*ನ್ಯಾನೋ ಕಥೆ*

ಆರೈಕೆ"

" ನನ್ನ ಮಗ ಅಮೇರಿಕಾದಲ್ಲಿ ದೊಡ್ಡ ಕಂಪನೀಲಿ ಕೆಲಸ ಮಾಡ್ತಾ ಇದ್ದಾನೆ,ನನ್ನ ಹೃದಯದ ಆಪರೇಷನ್ ಮಾಡಿಸಲು ಅಕೌಂಟ್ ಗೆ ಹತ್ತು ಲಕ್ಷ ಹಾಕಿದ್ದಾನೆ ,ನೋಡಿಕೊಳ್ಳಲು ಒಳ್ಳೆಯ ನರ್ಸ್ ನೇಮಕ ಮಾಡಿದ್ದಾನೆ,ನಾಳೇನೆ ಆಪರೇಷನ್, ಆಪರೇಷನ್ ಆದ ಮೇಲೆ ವೀಡಿಯೋ ಕಾಲ್ ಮಾಡಿ ನನ್ನ ಕ್ಷೇಮ ವಿಚಾರಿಸ್ತಾನಂತೆ " ಎಂದು  ತನ್ನ ಮಗನ ಕೆಲಸ ಹಣ ಅಂತಸ್ತಿನ ಬಗ್ಗೆ ಹೆಮ್ಮೆಯಿಂದ ಪಕ್ಕದ ಮನೆಯ ಸಾವಿತ್ರಮ್ಮನಿಗೆ ಹೇಳುತ್ತಲೇ ಇದ್ದರು  ಬಂಗಾರಮ್ಮ . " ಅಮ್ಮಾ ನಿಧಾನ, ಬಾ ಈ ಸೈಕಲ್ ಮೇಲೆ ಕೂತ್ಕೋ ಆಸ್ಪತ್ರೆಗೆ ಹೋಗೋಣ ,ಬೆಳಿಗ್ಗೆಯಿಂದ ನೆಗೆಡಿ ಕೆಮ್ಮು ಸುಸ್ತು ಅಂತಿದ್ದೆ ,ಲೇಟಾದ್ರೆ ಡಾಕ್ಟರ್ ಸಿಗಲ್ಲ ಎಂದು ಅಮ್ಮನನ್ನು ಸೈಕಲ್ ಮೇಲೆ ಕೂರಿಸಿಕೊಂಡ ಸುರೇಶ್ ಸೈಕಲ್ ತುಳಿಯುತ್ತಾ ಕಣ್ಮರೆಯಾಗುವವರೆಗೂ ನೋಡುತ್ತಲೇ ನಿಂತರು ಬಂಗಾರಮ್ಮ...

*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*

03 September 2019

ಗಜಲ್ ೫೮ (ನಾರಿಕೇಳ)

*ಗಜ್ಹಲ್೫೮*

ಕಲಿಯುಗದ ಕಲ್ಪವೃಕ್ಷವೆಂದು ಹೆಸರಾಗಿದೆ ನಾರಿಕೇಳ.
ನಾರಿಯರ ನೀಳ ಕೂದಲಿಗೆ ಕಾರಣವಾಗಿದೆ ನಾರಿಕೇಳ.

ಭಗವಂತನಿಗೆ ಅರ್ಪಿಸಲು ಕಾಯಿ ನೀಡುವೆ
ಔಷದಿಯ ಆಗರದ ಎಳನೀರು ನೀಡಿದೆ ನಾರಿಕೇಳ.

ಬಡವರ ಗುಡಿಸಲಿಗೆ ತೆಂಗಿನ ಚಾಪೆ ಆಧಾರ
ರೈತರ ಬೇಸಾಯಕೆ ಹಗ್ಗವ ಕರುಣಿಸಿದೆ ನಾರಿಕೇಳ.

ಸಾರಿಗೆ ಸಾರ ಕೊಡಲು ತೆಂಗಿನ ತುರಿ ಬೇಕು
ಸಾಮನ್ಯರ ಉರುವಲಿನ ಮೂಲವಾಗಿದೆ  ನಾರಿಕೇಳ.

ಸ್ವಚ್ಛ ಭಾರತ ಅಭಿಯಾನಕೆ ಪೊರಕೆ ನೀಡಿದೆ
ಸಿಹಿಜೀವಿಗಳಿಗೆ ಒಳಿತುಮಾಡುತಲಿದೆ ನಾರಿಕೇಳ

*ಸಿ ಜಿ ವೆಂಕಟೇಶ್ವರ*
*ಗೌರಿಬಿದನೂರು*










02 September 2019

ನಾರಿಕೇಳ (ವಿಶ್ವ ತೆಂಗಿನ ಮರ ದಿನ ಪ್ರಯುಕ್ತ ಹನಿ)

*ನಾರಿಕೇಳ*

ಮನೆಗೆ ಸೂರು
ದೇವರ ನೈವೇದ್ಯ
ತಂಪು ಪಾನೀಯ
ಸಾರಿಗೆ ತುರಿ
ಸ್ವಚ್ಛತೆಗೆ ಪೊರಕೆ
ಕೂದಲಿಗೆ ತೈಲ
ಬೇಕಾದಾಗ ಹಗ್ಗ
ಜನರ ಉರುವಲು
ಕಲಿಯುಗ ಕಲ್ಪವೃಕ್ಷ
ಉಪಯೋಗ ಒಂದಲ್ಲ,
ಎರಡಲ್ಲ, ಹೇರಳ
ಅದುವೆ ನಾರಿಕೇಳ .

*ಸಿ.ಜಿ ವೆಂಕಟೇಶ್ವರ*

(ಇಂದು ವಿಶ್ವ ತೆಂಗಿನ ಮರದ ದಿನ

01 September 2019

ಸುಭಿಕ್ಷವ ನೀಡು

*ಗೌರಿ ಗಣೇಶ ಹಬ್ಬದ ಶುಭಾಶಯಗಳು*

*ಸುಭಿಕ್ಷವ ನೀಡು*

ಗಣನಾಯಕ ಬೆನಕನೆ
ನೀಡುವೆ ನಿನಗೆ ಕಡುಬನ್ನ
ಮೂಷಿಕವಾಹನ ಮೋದಕಹಸ್ತನೆ
ಕರಿಮುಖ ಕಾಯೋ ನಮ್ಮನ್ನ.

ಗೌರಿಯ ಪುತ್ರ ,ಮೊದಲವಂದಿಪ
ಸಂಕಷ್ಟಗಳ ನೀ ನೀಗು
ಸುಬ್ರಹ್ಮಣ್ಯ ಸೋದರ ಗಣಪನೆ
ನಮ್ಮಯ ಬಾಳಿಗೆ ಬೆಳಕಾಗು.

ಗೌರಿತನಯ ವಿಶ್ವ ವಂದ್ಯನೆ
ನಮ್ಮನೆಲ್ಲರ ಒಂದುಗೂಡಿಸು
ಎಕದಂತ ವಕ್ರತುಂಡನೆ
ವಿದ್ಯೆ ಬುದ್ದಿಯ ನೀಡಿ ಹರಸು

ಚಾಮರ ಕರ್ಣ ಶಿವಸುತನೆ
ಭಕ್ತಿಯಲಿ ಹಾಡುವೆ ಈ ಹಾಡು
ವಿಘ್ನವಿನಾಯಕ ಗಜಾನನ
ಧರೆಯಲೆಲ್ಲಾ ಸುಭಿಕ್ಷವ ನೀಡು

*ಸಿ ಜಿ ವೆಂಕಟೇಶ್ವರ*
*ಗೌರಿಬಿದನೂರು*





31 August 2019

ಬೊಂಬೆಗಳು (ಹನಿ)



*ಬೊಂಬೆಗಳು*

ಎಲ್ಲರ ಜೀವನದಿ
ಇದ್ದದ್ದೇ ನಗು ಅಳು
ನಾವೆಲ್ಲರೂ ಅವನಾಡಿಸಿದಂತೆ
ಆಡುವ ಬೊಂಬೆಗಳು

*ಸಿ ಜಿ ವೆಂಕಟೇಶ್ವರ*
   

        

ವ್ಯತ್ಯಾಸವಿಲ್ಲ ,(ಹನಿ)


*ವ್ಯತ್ಯಾಸವಿಲ್ಲ*

ದೂರದಿಂದ ನೋಡಲು
ಸುಂದರ ,ನಯನೋಹರ
ಒಳಹೊಕ್ಕರೆ ಕಲ್ಲು, ಮುಳ್ಳು
ವಿಷಜಂತುಗಳು,ಕ್ರಿಮಿಕೀಟಗಳು
ಅದೇ ವನದಿ
ವ್ಯತ್ಯಾಸವೇನಿಲ್ಲ
ಇದೇ  ಜೀವನದಿ .

*ಸಿ.ಜಿ.ವೆಂಕಟೇಶ್ವರ*

ನನ್ನ ದುರ್ಗ (ತೃತೀಯ ಬಹುಮಾನ ಕವಿ ಸಾಹಿತಿಗಳ‌ ಜೀವಾಳ)




*ನನ್ನ ದುರ್ಗ*
ಮದಿಸಿದ ಕರಿಯ ಮದವಡಗಿಸಿದ
ಹೈದರಾಲಿಯ ಸೊಕ್ಕು ಮುರಿದ
ರಿಪುಗಳಿಗೆ ಸಿಂಹಸ್ವಪ್ನವಾಗಿದ್ದ
ನಾಯಕರಾಳಿದ ಕೋಟೆಯೇ ನನ್ನ ದುರ್ಗ

ಏಕನಾಥೇಶ್ವರಿಯ ಪುಣ್ಯಭೂಮಿ
ಒಬವ್ವಳ ಶೌರ್ಯಕೆ ಹೆಸರಾದ ತಾಣವಿರುವ
ಕಲ್ಲು ಕಥೆ ಹೇಳುವ ಕಲ್ಲಿನ ಕೋಟೆಯೇ ನನ್ನ ದುರ್ಗ

ಅಕ್ಕ ತಂಗಿಯರ ಹೊಂಡವಿರುವ
ಉಯ್ಯಾಲೆ ಕಂಬವಿರುವ
ಆನೆಯ ಕುದುರೆಯ ಹೆಜ್ಜೆಗಳ ಹೊಂದಿದ
ಸಿಡಿಲಿಗೂ ಬೆಚ್ಚದ ಉಕ್ಕಿನ ಕೋಟೆಯೇ ನನ್ನ ದುರ್ಗ

ಹದ್ದುಮೀರಿದ ಅರಿಗಳ ತರಿದ
ಮದ್ದಿನ ಮನೆಯಿರುವ
ಸದ್ದು ಮಾಡಿದ ಪುಂಡರ
ಸದ್ದಡಗಿಸಿ ಜನರ ಕಾಪಾಡಿದ ಕೋಟೆಯೇ ನನ್ನ ದುರ್ಗ


ರಂಗಯ್ಯನ ಬಾಗಿಲು ಆನೆಬಾಗಿಲು
ಬುರುಜು ಬತೇರಿ ಗುಪ್ತದ್ವಾರಗಳು
ಆಹಾರದ ಕಣಜ,ನೀರಿನ ಹೊಂಡವ
ಹೊಂದಿದ ಏಳು ಸುತ್ತಿನ ಕೋಟೆಯೇ ನನ್ನ ದುರ್ಗ

*ಸಿ.ಜಿ ವೆಂಕಟೇಶ್ವರ*




28 August 2019

ಸಿಹಿಜೀವೀಯ ಹನಿಗಳು


*ವ್ಯತ್ಯಾಸ*
ಬೆವರ ಬಸಿದು
ಹಸಿದು ಉಂಡರೆ
ಹಿಟ್ಟು,,ಗೊಜ್ಜೂ ನಳಪಾಕ
ಪರರ ಬೆವರ ಹೀರಿದವರಿಗೆ
ಅಜೀರ್ಣವಾಗುವಂತೆ
ತಿಂದವರಿಗೆ ರುಚಿಸದು
ಮೈಸೂರ್ ಪಾಕ
*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*
*ಕಾಂತ*
ಅವಳಂದಳು
ಸಮೀಪ ಬಂದರೆ
ಆಕರ್ಷಿತವಾಗುವುದು
ವಿರುದ್ದ ದಿಕ್ಕಿನ
ಆಯಸ್ಕಾಂತ.
ನಿನೇಕೆ ಹೀಗೆ  ಕಾಂತ?

*ಸಿ ಜಿ ವೆಂಕಟೇಶ್ವರ*
*ಗೌರಿಬಿದನೂರು*

26 August 2019

ಸಿಹಿಜೀವಿಯ ಹನಿಗಳು

*ಸಿಹಿ ಜೀವಿಯ ಹನಿಗಳು*

*೧*

*ಬಂದಾಗಿದೆ*

ಬೇಗ ಬರಲಿಲ್ಲ ಎಂದು
ಮುನಿಸೇತಕೆ ನಲ್ಲೆ?
ಕೋಪಿಸಿಕೊಳ್ಳಲು ಏನಾಗಿದೆ?
ನಾನೀಗ ಬಂದಾಗಿದೆ
ಬಾಗಿಲು ಬಂದಾಗಿದೆ.

*೨*

*ಯಾಕೆ?*

ಉಂಡು ಮಲಗಿದರೂ
ಮುಗಿಯಲಿಲ್ಲ
ನಮ್ಮಿಬ್ಬಿರ ಜಗಳ
ಯಾಕೆ ? ಯಾಕೆ ?
ಎಂದು ಕೇಳಿದೆ
ನನ್ನವಳೆಂದೆಳು
ಏಳಿ ಮೇಲೆ
ಸೂರ್ಯ ನೆತ್ತಿಗೆ ಬಂದಿದೆ
ಕಾಫಿ ಆರಿ ಹೋಗಿದೆ.
ಹೋ ಕನಸಾ?
ಎಂದು ಕಾಫಿ ಹೀರಿದೆ.


*ಸಿ ಜಿ.ವೆಂಕಟೇಶ್ವರ*..
*ಗೌರಿಬಿದನೂರು*

23 August 2019

ಫಿಟ್ ಇಂಡಿಯಾ( fit India)

*ಫಿಟ್ ಇಂಡಿಯಾ*

ಅಂದು

ಗಾಂಧೀಜಿಯವರು ಬ್ರಿಟೀಷರನ್ನು ನಮ್ಮ
ದೇಶದಿಂದ  ಓಡಿಸಲು ಕರೆ ಕೊಟ್ಟರು
ಕ್ವಿಟ್ ಇಂಡಿಯಾ.

ಇಂದು

ಮೋದೀಜಿಯವರು
ನಮ್ಮ ದೇಹದಿಂದ ರೋಗ ರುಜಿನಗಳನ್ನು,ಸೋಮಾರಿತನವನ್ನು ತೊಲಗಿಸಲು ಕರೆ ನೀಡಿದ್ದಾರೆ
ಫಿಟ್ ಇಂಡಿಯಾ.

*ಸಿ .ಜಿ  .ವೆಂಕಟೇಶ್ವರ*
*ಗೌರಿಬಿದನೂರು*

(ಇದೇ ತಿಂಗಳ 29ಕ್ಕೆ ಪಿಟ್ ಇಂಡಿಯಾ ಅಭಿಯಾನ ದೇಶಾದ್ಯಂತ ಆರಂಭ ಬನ್ನಿ ಫಿಟ್ ಆಗೋಣ)

31 July 2019

ಯಾರು? (ಹನಿಗವನ)

*ಯಾರು*

ಹುಲಿ ಸಂಖ್ಯೆಯಲ್ಲಿ ಹೆಚ್ಚಳ ( ಪ್ರಜಾವಾಣಿ ಸುದ್ದಿ)

ಎಲ್ಲಾ  ಸಂಸಾರದಲ್ಲಿ
ಇದ್ದೇ ಇರುತ್ತವೆ
ಒಂದುಹುಲಿ
ಒಂದು ಇಲಿ
ಅನುಮಾನ ಒಂದೇ
ಯಾರು ಹುಲಿ?

*ಸಿ ಜಿ ವೆಂಕಟೇಶ್ವರ*
*ಗೌರಿಬಿದನೂರು*

30 July 2019

ಸಿಹಿ ಜೀವಿಯ ಹನಿಗಳು

*ಸಿಹಿಜೀವಿಯ ಹನಿಗಳು*

*೧*

*ಮಾರ್ಗ*

ಒಳಿತು ಮಾಡುತ್ತಿರಲಿ ಕರ
ಕರುಣೆ, ಪ್ರೀತಿ ತುಂಬಿರಲಿ ಉರ
ಸತ್ಚಿಂತನೆಗಳಿಂದ ತುಂಬಿರಲಿ ಶಿರ
ನಿನ್ನ ಹೆಸರಾಗುವುದು ಅಮರ .

*೨*

*ಇಂದ್ರಿಯ ನಿಗ್ರಹ*


ಅಮರತ್ವ ಸಿಗಬೇಕೆಂದು
ಮಾಡದ ಪೂಜೆಗಳಿಲ್ಲ
ಜಪತಪಗಳಿಲ್ಲ ಧ್ಯಾನ
ಸತ್ಸಂಗಗಳಿಗೆ ಕೊನೆಯಿಲ್ಲ
ಆದರೂ ಅಮರತ್ವದ ಸುಳಿವಿಲ್ಲ
ಕಾರಣ ಇಂದ್ರಿಯಗಳ
ನಿಗ್ರಹ ಆಗಲೇ ಇಲ್ಲ.

*ಸಿ ಜಿ ವೆಂಕಟೇಶ್ವರ*
*ಗೌರಿಬಿದನೂರು*

29 July 2019

*ದಿನ*(ಹನಿಗವನ)

    *ದಿನ*

ದಿನವು
ಬರುವ ದಿನವೇ
ನೀ ಬರದೆ ದಿನವಿಲ್ಲ
ಬರುವೆ ಅನುದಿನ.

ದೀನ ದಲಿತ
ಬಡವ ಬಲ್ಲಿದ
ಎಂಬ ಬೇಧ
ಮಾಡುವುದಿಲ್ಲ
ದಿನಕರ.

ನೀ ಬಂದ ದಿನವೇ ಶುಭ
ಅಶುಭ ದಿನವಿಲ್ಲ
ಏಕೆಂದರೆ
ದಿನವೂ ನೀನು
ಬರುವೆಯಲ್ಲ.

*ಸಿ ಜಿ ವೆಂಕಟೇಶ್ವರ*
*ಗೌರಿಬಿದನೂರು*

26 July 2019

ಸೈನಿಕ ,( ಕವನ)





*ಸೈನಿಕ*

(ಕಾರ್ಗಿಲ್ ವಿಜಯ ದಿವಸದ 20 ನೇ ವರ್ಷಾಚರಣೆಯ ನೆನಪಿಗೆ ಸೈನಿಕರಿಗೆ ನುಡಿನಮನ)

ಬಿಸಿಲೇ ಇದ್ದರೂ
ಮಳೆಯೇ ಸುರಿದರೂ
ನಿಂತಾ ನೋಡು ಸೈನಿಕ|ಪ|

ಎದುರಾಳಿ ನಿಂತರೂ
ಯುದ್ದ ನಡೆದರೂ
ಎದೆಕೊಟ್ಟು ನಿಲ್ಲುವ ಸೈನಿಕ|

ಕೂಗಿ ಕೂಗಿ ಹೇಳುತೈತೆ
ನಮ್ಮ ಭಾರತ
ಸ್ವಾಭಿಮಾನಿ ನಿನಗೆ ಇದೋ‌
ನಮ್ಮ ಪ್ರಣಾಮ

ಇವನೇ ನೋಡು ಸೈನಿಕ.|೨|

ದೇಶಕ್ಕೆ ಎಲ್ಲಾನೂ  ತ್ಯಾಗ ಮಾಡಿದ
ವೇಶದ ಮಾತೆಂದರೆ ಗೊತ್ತಿಲ್ಲದ
ಭಾಷೆ ಧರ್ಮದ ಹಂಗೆ ಇಲ್ಲ
ಎಲ್ಲರ ರಕ್ಷಣೆ ನಿನ್ನ ಗುರಿ .

ಬೇದ ಭಾವದ ಮಾತೇ ಇಲ್ಲ
ಮಾತೆಯ ಸೇವಕ ನೀನು
ನಿನ್ನ ಶೌರ್ಯವೂ, ನಮ್ಮ ಗರ್ವವೂ
ತನ್ನ ಕಷ್ಟದಿ ಇತರರ ಸುಖವ ಬಯಸೊ
ಆ ಗುಣ
ತಾಯ ರಕ್ಷಣೆಗಾಗಿ ಇವನು ಮಾಡಿದ ಪ್ರಮಾಣ .

ಇವನೇ ನೋಡು‌ಸೈನಿಕ|೧|  ಬಿಸಿಲೇ ಇದ್ದರೂ

ಗುಂಡಿನ ಎದುರು ನಗುವಂತ ಭೂಪ
ಗುಂಡಿಗೆ ಕೊಟ್ಟು ಸೆಣಸಾಡೋ ಧೀರ
ಯಾವುದೆ ತೊಂದರೆ ಬರದುನಿನಗೆ
ನಾವಿರುವೆವು ನಿನ್ನೊಂದಿಗೆ
ಸೋಲು ಗೆಲುವು ನೋಡಿದ ವೀರ.
ನಮನ ನಿನಗೆ ಸಾವಿರ
ಶಿಸ್ತಿಗೆ ಸಿಪಾಯಿ
ಕರುಣೆಗೆ ತಾಯಿ
ದೇಶದಲ್ಲಿ ಎಲ್ಲೆಡೆ ನಿನ್ನ ಹೆಸರೇ ಸವಾಲು
ಬಗ್ಗದೆ ಕುಗ್ಗದೆ ನುಗ್ಗಿ ಹೊಡೆವ  ನಿನ ನಡೆಯೇ ಕಮಾಲು

ಇವನೇ ನೋಡು ಸೈನಿಕ

*ಸಿ ಜಿ ವೆಂಕಟೇಶ್ವರ*
*ಗೌರಿಬಿದನೂರು*

24 July 2019

ಪ್ರಾಮಾಣಿಕ? (ನ್ಯಾನೋ ಕಥೆ )

*ಪ್ರಾಮಾಣಿಕ?*

ಪ್ರಾಮಾಣಿಕ ಅಂಗಡಿಯಲ್ಲಿ ನಿಗದಿತ ಹಣವನ್ನು ಡಬ್ಬಿಯಲ್ಲಿ ಹಾಕಿ ವಸ್ತುಗಳನ್ನು ಪಡೆಯಲು ಒಳಹೊಕ್ಕ ವ್ಯಕ್ತಿ ವಸ್ತು ತೆಗೆದುಕೊಂಡು ಹಣವನ್ನು ಡಬ್ಬಿಯಲ್ಲಿ ಹಾಕದೇ ಹೊರಬರುವುದನ್ನು ಮನೆಯಲ್ಲೇ ಕುಳಿತು ಸಿ ಸಿ ಟೀವಿಯಲ್ಲಿ ನೋಡಿದ ಮಾಲೀಕನ ಮನದಲ್ಲಿ ಹುಟ್ಟಿದ ಪ್ರಶ್ನೆ ಪ್ರಮಾಣಿಕವಾಗಿರುವುದು  ವ್ಯಕ್ತಿಯೋ? ಯಂತ್ರವಾದ ಸಿ ಸಿ ಟೀವಿಯೋ?

*ಸಿ.ಜಿ  ವೆಂಕಟೇಶ್ವರ*
*ಗೌರಿಬಿದನೂರು*

ಆತ್ಮಶೋಧನೆ (ಬಹುಮಾನಿತ ನ್ಯಾನೋ ಕಥೆ)


*ಆತ್ಮಶೋಧನೆ*
(ಹನಿ ಹನಿ ಇಬ್ಬನಿ ಬಳಗದ ಸ್ಪರ್ಧೆಯಲ್ಲಿ  *ಉತ್ತಮಕಥೆ*  ಎಂಬ ಪುರಸ್ಕಾರ ಪಡೆದ
ನ್ಯಾನೋ ಕಥೆ )
ಕಳ್ಳತನ ಮಾಡಿದ ಸರಕಿನೊಂದಿಗೆ ಅವನು ಸರಸರನೆ ಹೆಜ್ಜೆ ಹಾಕುತ್ತಾ ಭಯದಿಂದ ನಡೆಯುವಾಗ ಇದ್ದಕ್ಕಿದ್ದಂತೆ" ಅಂಕಲ್ " ಎಂಬ ಬಾಲಕಿಯ ಧ್ವನಿ ಕೇಳಿ ಹಿಂತಿರುಗಿದ " ಈ ಪರ್ಸ್  ನಿಮ್ಮ ಪ್ಯಾಂಟ್  ನಿಂದ ಬಿತ್ತು ತೊಗೊಳ್ಳಿ" ಎಂದು ಕೊಟ್ಟು ನಗುತ್ತಾ ಹೊರಟಳು .
*ಸಿ.ಜಿ ವೆಂಕಟೇಶ್ವರ*
*ಗೌರಿಬಿದನೂರು*

22 July 2019

ಮಾಂತ್ರಿಕ (ಕವನ)

*ಮಾಂತ್ರಿಕ*

ಅದು
ನೋಡಲು ಕಾಣದಿದ್ದರೂ
ತಿಳಿದವರು ,ಕಂಡವರು
ಹೇಳಿದಂತೆ ,ಚಿತ್ರದಲ್ಲಿ
ನೋಡಿದಂತೆ ಮೆದುವಾಗಿರುವುದು.

ಅದರ ಮಾಯೆ ಒಂದೇ ಎರಡೇ
ಅದು ಸರಿಯಿದ್ದರೆ ಸನ್ಮಾನ
ಬಹುಮಾನ , ಪುರಸ್ಕಾರ ಎಲ್ಲವೂ.
ಸ್ವಲ್ಪ ಸರಿಯಿಲ್ಲದಿದ್ದರೆ
ತಿರಸ್ಕಾರ ,ಕೊಂಕು ನುಡಿಗಳು.

ಗಾತ್ರದಲಿ ಒಂದೇ ಇದ್ದರೂ
ವ್ಯಕ್ತಿಯಿಂದ ವ್ಯಕ್ತಿಗೆ ವಿಭಿನ್ನವಾದ
ಬಳಕೆ ,ತಿಳುವಳಿಕೆ
ಮಾನವನ‌ ಸಕಲ ಅಂಗಗಳ
ನಿಯಂತ್ರಕ ,ಮಾಂತ್ರಿಕ .

ಕೆರಳಿಸುವುದೊಮ್ಮೆ ,
ಅರಳಿಸುವುದೊಮ್ಮೆ
ಬಳಸಿದರೆ ಬೆಳೆಸುವುದು
ಬಳಸದಿರರೆ  ಹಳಸುವುದು
ಏನೆಂದು ಬಣ್ಣಿಸಲಿ ನಿನ್ನ ಲೀಲೆಯ
ಓ ನನ್ನ ಮೆದುಳು
ನೀನು ಆರೋಗ್ಯವಾಗಿದ್ದರೆ
ಹಸನಾಗುವುದು ನಮ್ಮ ಬಾಳು .

*ಸಿ.ಜಿ  ವೆಂಕಟೇಶ್ವರ*
*ಗೌರಿಬಿದನೂರು*

(ಇಂದು ವಿಶ್ವ ಮೆದುಳು ದಿನ)

14 July 2019

*ಬಂಧ ಮುಕ್ತ* (ಕವನ)


*ಬಂಧ ಮುಕ್ತ?*

ಹಣ್ಣೆಲೆಯಾಗಿ ಉದುರಿ
ಮಣ್ಣಲ್ಲಿ‌ ಮಣ್ಣಾದಾಗ
ಸಣ್ಣದಾಗಿ ನೆನಪು
ಬಿಚ್ಚುತ್ತಾ ಹೋಯಿತು

ಸುಬೀಜ ಫಲವತ್ತಾದ ಮಣ್ಣು
ಗೊಬ್ಬರ ನೀರೆರೆದಾಗ ಮೊಳತು ಚಿಗುರೊಡೆದು ಕ್ರಮೇಣ ಸಸಿಯಾಯಿತು
ಬೆಳೆದು ಹೆಮ್ಮರವಾಗಿ ಸೌಂದರ್ಯದ ಖಣಿಯಾಗಿ ಸಕಲರಿಗೆ ಸಕಲದಿ
ನೆರವಾಗಿ ತನಗೆ ತಾನೇ ಸಂತಸಪಟ್ಟು
ನನ ಜೀವನ ಸಾರ್ಥಕ ಎಂಬ ಭಾವ

ಕಾಲ ಸರಿದಂತೆ ಕಾಲನ ಪ್ರಭಾವ
ಎಲೆಗಳುದರಲು ಆರಂಭ ಪೇಲವತೆ
ಮರದ ಟೊಂಗೆಗಳಲಿ ಕಸುವಿಲ್ಲ
ಸಹಾಯ ಪಡೆದವರ ಸುಳಿವಿಲ್ಲ
ನೀರೆರೆವ ಮನಗಳ ಸುಳಿವಿಲ್ಲ
ಬೀಸಿದ ಬಿರುಗಾಳಿಗೆ ಮರದ ಮರಣ
ಗೆದ್ದಲಿಗೆ ಆಹಾರವಾದಾಗ ಆಗಲೂ
ಮರಕ್ಕೆ ಒಳಗೊಳಗೇ ಆನಂದ
ನಾನು ಈಗಲೂ ಉಪಯುಕ್ತ
ಮಣ್ಣಿನಿಂದ ಋಣಮುಕ್ತ.
ಬಗೆಹರಿಯದ ಪ್ರಶ್ನೆ ಮನದಲಿ
ಯಾವಾಗ ?
ಹುಟ್ಟು ಸಾವುಗಳ ಬಂಧ ಮುಕ್ತ?

*ಸಿ ಜಿ ವೆಂಕಟೇಶ್ವರ*
*ಗೌರಿಬಿದನೂರು*

02 July 2019

ಗಜ್ಹಲ್ ೫೭

*ಗಜ್ಹಲ್ ೫೭*

ಕುಟ್ಟಿ ಪುಡಿಮಾಡು ಕಷ್ಟಗಳೆಂಬ ಹೆಬ್ಬಂಡೆಗಳ ಗೆಲ್ಲುವೆ  ನೀನು
ಬಿದ್ದವನೆಂದು ಕೊರಗದಿರು ಮುಂದೆ  ಎದ್ದೇಳುವೆ ನೀನು

ಅವಮಾನ ಅಪಮಾನಗಳೆ  ಸಾಧನೆಗಳ ಮೆಟ್ಟಿಲು
ದಾರಿಯಿಲ್ಲವೆಂದು ಮರುಗದಿರು ದೊರೆಯಾಗುವೆ  ನೀನು

ಸಂತೆಯಲಿ ನಿಂತು ಸದ್ದಿಗಂಜತ ಕಳವಳಪಡಬೇಡ
ಸಂತನಾಗಲು ಸಹಿಸುವುದ ಕಲಿ ಯೋಗಿಯಾಗುವೆ ನೀನು

ಕಳೆದು ಕೊಳ್ಳಲು ನೀನೇನು ತಂದಿಲ್ಲ ಇಲ್ಲಿ
ಕಳೆದಲ್ಲೇ ಹುಡುಕು  ಮುಕ್ತಿ ಹೊಂದುವೆ ನೀನು

ಮುಳ್ಳುಗಳು ನಡುವೆಯೂ ನಗುವುದು ಗುಲಾಬಿ
ಕಷ್ಟದಲೂ ನಗುವುದ ಕಲಿ ಸಿಹಿಜೀವಿಯಾಗುವೆ ನೀನು

*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*



30 June 2019

ಎಲ್ಲೆಡೆ ಬಾ ಮಳೆಯೇ(ಕವನ)

 *ಎಲ್ಲೆಡೆ ಬಾ ಮಳೆಯೇ*

ಮಲೆನಾಡಿನಲಿ ಶುರುವಾಗಿದೆ
ಮಳೆ ಹಾಡು
ನೋಡಲು ‌ಕಣ್ಣಿಗೆ ಹಬ್ಬದ
ಮಳೆ ಕಾಡು
ತಂಗಾಳಿ ಬೀಸುತ
ಮರದ ನಡುವೆ ನುಸುಳಿ
ಬೀಳುವ ಹನಿಗಳು
ಎಲೆಗಳ ಮೇಲೆ ಬಿದ್ದು
ತೊಳೆದು ಸ್ವಚ್ಚಗೊಳಿಸಿ
ಸ್ವಚ್ಚತಾ ಅಭಿಯಾನ ಮಾಡಿ
ಚಿಟ ಪಟ ಚಿಟ ಪಟ
ಸದ್ದು ಮಾಡುವ ಕಾಡುವ
ಮಳೆರಾಯ  ಬರೀ ಕಾಡಲೇ
ಬರ ಬೇಡ
ಬರದಿಂದ  ಕಂಗೆಟ್ಟ ನಾಡಿಗೂ
ಬಾ
ಸಿಡಿಲು ಬಡಿದು ಗುಡು ಗುಡಿಗಿ
ಬರುವ ವರ್ಷವೇ
ಬರಸಿಡಿಲಿನಾಘಾತ ತಪ್ಪಿಸಲು
ಈಗಲೇ ಎಲ್ಲೆಡೆ ಬಾ

*ಸಿ ಜಿ ವೆಂಕಟೇಶ್ವರ*

26 June 2019

*ಜೀವಿಸು* (ಇಂದು ವಿಶ್ವ ಮಾದಕವಸ್ತು ವಿರೋಧಿ ದಿನ)

*ಜೀವಿಸು*
(ಇಂದು ವಿಶ್ವ ಮಾದಕವಸ್ತು ವಿರೋಧಿ ದಿನ)

ನಶೆಯಲೇ ತೇಲುತಾ ಬದುಕಬೇಕೆ?
ಉಷೆಯ ಬೆಳಕಿನ‌ಆನಂದ ಬೇಡವೆ?
ಖುಷಿಯಲಿ ಬದುಕ ಸಾಗಿಸಲು
ಪಶುಪತಿಯ ನೀ ನೆನೆ ಸಾಕು

ಕ್ಷಣಿಕ ಸುಖಕೆ ಹಾತೊರೆಯಬೇಡ
ಪ್ರಾಣ ತೆಗೆವ ಚಟಕೆ ಬಲಿಯಾಗಬೇಡ
ಮಾದಕ ವಸ್ತುಗಳಿಂದ ದೂರವಿರು
ಮೋದಕಪ್ರಿಯನಲಿ‌ ಮನಸಿಡು

ದೇಹವ ಹಿಂಡುವ ಆತ್ಮವಿಶ್ವಾಸ ಅಳಿವ
ಮೋಹವೇಕೆ ಅಮಲೇರಿಸುವ ವಸ್ತುವಿಗೆ
ಕಾಯಕದ ಮೇಲೆ ಮನಸಿಡು ನೀನು
ಪವಿತ್ರವಾದ ಆತ್ಮವ ನೆನೆದು ಜೀವಿಸು

*ಸಿ.ಜಿ ವೆಂಕಟೇಶ್ವರ*
*ಗೌರಿಬಿದನೂರು*


22 June 2019

ಯೋಗಾಯೋಗ ಪಡೆಯೋಣ(ಕವನ)

*ಯೋಗಾಯೋಗ ಪಡೆಯೋಣ*

ಯೋಗವ  ಮಾಡೋಣ ಬನ್ನಿ
ಯೋಗಾಯೋಗ ಪಡೆಯೋಣ ಬನ್ನಿ

ದೇಹವ ದಂಡಿಸಿ ಮನವ
ನಿಯಂತ್ರಿಸಿ ಆಸನ‌ ಹಾಕುತ
ಪ್ರಾಣಾಯಾಮ ಧ್ಯಾನವ ಮಾಡಿ
ಯೋಗವ ಮಾಡೋಣ ಬನ್ನಿ

ಕಾಯಕವೇ ಕೈಲಾಸವೆಂದು
ಕರ್ತವ್ಯಗಳನ್ನು ಮಾಡುತ
ಗಡಿಯಾರದಂತೆ ಕೆಲಸವಮಾಡಿ
ಕರ್ಮ ಯೋಗವ ಮಾಡೋಣ ಬನ್ನಿ

ನಹಿ ಜ್ಞಾನೇನ ಸದೃಶಂ ಎಂದು
ಜ್ಞಾನವ ಪಡೆಯುತ ಹಂಚುತ
ಜ್ಞಾನಿಗಳಾಗಿ  ಸುಜ್ಞಾನವ ಪಡೆಯಲು
ಜ್ಞಾನ ಯೋಗವ ಮಾಡೋಣ ಬನ್ನಿ

ಭಕ್ತಿಯಿಂದ ಬೇಡಿ ದೈವವ
ಶಕ್ತಿಯ ಪಡೆದು ನಮ್ಮಾತ್ಮವು
ಪರಮಾತ್ಮನಲಿ ಲೀನವಾಗುವವರಗೆ
ಭಕ್ತಿ ಯೋಗ ಮಾಡೋಣ ಬನ್ನಿ

*ಸಿ.ಜಿ ವೆಂಕಟೇಶ್ವರ*
*ಗೌರಿಬಿದನೂರು*

22 May 2019

ನಾನು ಬದಲಾಗುತ್ತಿದ್ದೇನೆ (ಕವನ)

*ನಾನು ಬದಲಾಗುತ್ತಿದ್ದೇನೆ*

ಹೌದು ನಾನು ಬದಲಾಗುತ್ತಿದ್ದೇನೆ
ಅಪ್ಪ, ಅಮ್ಮ ಅಣ್ಣ ತಮ್ಮ
ಬಂಧು ,ಬಳಗವನ್ನು ಪ್ರೀತಿಯಿಂದ
ನೋಡಿಕೊಂಡೆನು .
ನಾನು ಈಗ ನನ್ನನ್ನೂ ಪ್ರೀತಿಸಲು
ಕಲಿಯುತ್ತಿದ್ದೇನೆ

ಹೌದು ನಾನು ಬದಲಾಗುತ್ತಿದ್ದೇನೆ
ನಾನು ,ನನ್ನಿಂದ ನಾನು‌ಇದ್ದರೆ ಮಾತ್ರ
ನನ್ನ ಸಂಸಾರ, ನನ್ನ ಊರು,ಎಂಬ ಸಂಕುಚಿತ ಮನೋಭಾವ ಬದಲಾಗಿದೆ
ಪ್ರಪಂಚದ ಭಾರ ಹೊರಲು ನಾನು
ಅಟ್ಲಸ್ ಅಲ್ಲ ಎಂಬುದನ್ನು ಅರ್ಥ ಮಾಡಿಕೊಳ್ಳುತ್ತಿದ್ದೇನೆ.

ಹೌದು ನಾನು ಬದಲಾಗುತ್ತಿದ್ದೇನೆ
ತರಕಾರಿ ,ಹಣ್ಣು ,ಮಾರುವ ಬಡವರೊಂದಿಗೆ ಚೌಕಾಸಿ ಮಾಡಿರುವೆ.
ಚಿಲ್ಲರೆ ಹಣಕ್ಕಾಗಿ ಟ್ಯಾಕ್ಸಿ ಚಾಲಕನೊಂದಿಗೆ ಜಗಳವಾಡಿರುವೆ.
ಚೌಕಾಸಿ ಮಾಡದೆ ಕೊಟ್ಟ ಹಣದಿಂದ ಅವರ ಮಕ್ಕಳ ಶಿಕ್ಷಣ ಬೆಳಗುವುದ ಕಂಡು
ಸಂತಸ ಪಡುತ್ತಿದ್ದೇನೆ.

ಹೌದು ನಾನು ಬದಲಾಗುತ್ತಿದ್ದೇನೆ
ಅಹಂ ನಿಂದ ಬ್ರಹ್ಮನೂ ಕೆಟ್ಟ
ಎಂದು ತಿಳಿದಿದ್ದರೂ ಒಣ ಪ್ರತಿಷ್ಠೆ
ಅಹಂಕಾರದಿಂದ ಸಂಬಂಧಗಳ
ಕಳೆದುಕೊಂಡ ಮೇಲೆ
ಈಗ ಸಂಬಂಧಗಳ ಉಳಿಸಿ
ಬೆಳೆಸಲು ಅಹಂ ಕಡಿಮೆ
ಮಾಡಿಕೊಳ್ಳಲು ಕಲಿಯುತ್ತಿದ್ದೇನೆ.

ಹೌದು ನಾನು ಬದಲಾಗುತ್ತಿದ್ದೇನೆ
ಬೇರೆಯರೊಂದಿಗೆ ಹೋಲಿಕೆ
ಮಾಡಿ, ಬಟ್ಟೆಯ ಒಂದು ಕಲೆ
ನೋಡಿ‌ ಬೇಸರ ಪಟ್ಟಿರುವುದನ್ನು
ಮರೆತು ಬಟ್ಟೆಗಿಂತ ನಾನು ನಡೆಯುವಬಟ್ಟೆ ಮತ್ತು ವ್ಯಕ್ತಿತ್ವ ಮುಖ್ಯ
ಎಂಬುದನ್ನು ಅರಿಯುತ್ತಿದ್ದೇನೆ.

ಹೌದು ನಾನೂ ಬದಲಾಗುತ್ತಿದ್ದೇನೆ
ನನ್ನ ಸಂತೋಷವನ್ನು ಬೇರೆಯವರು
ನಿರ್ಧರಿಸಯವ ಕಾಲವಿತ್ತು
ಪ್ರತಿದಿನವೂ ಜೀವಿಸುವ
ಬಾಹ್ಯಸಂತೋಷಕ್ಕಿಂತ
ಆಂತರಿಕ ಸಂತೋಷ ಮುಖ್ಯ
ನನ್ನ ಸಂತೋಷಕ್ಕೆ ನಾನೇ ಕಾರಣ
ಎಂಬ ಸತ್ಯ ಅರಿಯುತ್ತಿದ್ದೇನೆ .

*ಸಿ.ಜಿ ವೆಂಕಟೇಶ್ವರ*
*ಗೌರಿಬಿದನೂರು*













11 May 2019

ಬೇಗ (ಹನಿ)

*ಬೇಗ*

ಮುಗಿಲ ಮಲ್ಲಿಗೆ
ಗಗನದ ತಾರೆ
ಕಡಲ ಮುತ್ತು
ಏನೇನೋ ತಂದು
ಕೊಡುವ ವಾಗ್ದಾನ
ಮಾಡಿದ್ದ ಹುಡುಗ .
ಅವಳು ಮದುವೆಯಾಗು
ಎಂದಾಗ ಹೋರಟೇಬಿಟ್ಟ
ಬರುವೆನೆಂದು ಬೇಗ .

*ಸಿ.ಜಿ ವೆಂಕಟೇಶ್ವರ*
*ಗೌರಿಬಿದನೂರು*