31 July 2023

ಬಯಕೆ

 


ಬಯಕೆ..


ಅವನಿಗೂ ತನ್ನ ಪ್ರೇಯಸಿಯ

ಎತ್ತಿ ಮುದ್ದಾಡಬೇಕೆಂಬ ಬಯಕೆ|

ದೂರದಲ್ಲೇ ನಿಂತು ಪ್ಲೈಯಿಂಗ್ ಕಿಸ್

ನೀಡುವನು ಅವಳ ತೂಕದ ಭಯಕೆ ||


ಸಿಹಿಜೀವಿ ವೆಂಕಟೇಶ್ವರ

ತುಮಕೂರು

ಆಗಸ್ಟ್ ಮಾಸದ ನೆನಪುಗಳು ಭಾಗ ೧ .#ಚಂದ್ರಶೇಖರ್ ಆಜಾದ್


 


ಸ್ವಾತಂತ್ರ್ಯದ ಹಣತೆಗಳು ..

ಭಾಗ ೧
ಚಂದ್ರಶೇಖರ ಆಜಾದ್.

ಚಂದ್ರಶೇಖರ ಸೀತಾರಾಮ ತಿವಾರಿಯವರು ಭಾರತದ
ಸ್ವಾತಂತ್ರ್ಯ ಹೋರಾಟದ ಸಮಯದಲ್ಲಿ ನಾಗರಿಕ ಶಾಸನಭಂಗದ ಆಧಾರದ ಮೊಕದ್ದಮೆಯಲ್ಲಿ   ಬಂಧಿತರಾದಾಗ ,  ನ್ಯಾಯಾಧೀಶರು  ಅವರ ಹೆಸರೇನೆಂದು ಕೇಳಿದಾಗ, ಅವರು "ಆಜಾದ್ " ಎಂದು ಹೇಳಿದರು. ಈ ಉದ್ಧಟತನಕ್ಕಾಗಿ ಅವರಿಗೆ ಹದಿನೈದು ಛಡಿಏಟುಗಳ ಶಿಕ್ಷೆಯನ್ನು ನೀಡಲಾಯಿತು.ಆದರೂ ತಮ್ಮ ಹೆಸರು ಆಜಾದ್ ಎಂದೇ ಹೇಳಿದರು. ಅಂದಿನಿಂದ ಚಂದ್ರಶೇಖರ ಆಜಾದ್ ಆಗಿಯೇ ಭಾರತದ ಸ್ವಾತಂತ್ರ್ಯ ಸಂಗ್ರಾಮದ ಇತಿಹಾಸದಲ್ಲಿ ಪ್ರಮುಖವಾದ ಗುರುತು ಮೂಡಿಸಿದರು.
ಚಂದ್ರಶೇಖರ ಆಜಾದ್ರವರು 23 ಜುಲೈ 1906ರಂದು  ಮಧ್ಯಪ್ರದೇಶದ ಜಬುವಾ ಜಿಲ್ಲೆಯಲ್ಲಿರುವ ಭವ್ರಾ ಎಂಬ ಹಳ್ಳಿಯಲ್ಲಿ ಜನಿಸಿದರು.ಅವರ ತಂದೆ ಪಂಡಿತ್ ಸೀತಾರಾಮ್ ತಿವಾರಿಯವರು  ಜಾಗ್ರಣೀ ದೇವಿಯವರು ಅವರ ತಾಯಿ. ಭಾವರಾ ಮತ್ತು ವಾರಾಣಸಿಯ ಸಂಸ್ಕೃತ ಪಾಠಶಾಲೆಯಲ್ಲಿ ವಿದ್ಯಾಭ್ಯಾಸ ಮಾಡಿದರು. ವಿದ್ಯಾರ್ಥಿದೆಸೆಯಲ್ಲಿಯೇ ಮಹಾತ್ಮಾ ಗಾಂಧಿಯವರ ಮೋಡಿಗೊಳಗಾಗಿ ಕಾಂಗ್ರೆಸ್ ಮೂಲಕ ಸ್ವಾತಂತ್ರ್ಯ ಹೋರಾಟದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡರು. 





ಆಜಾದರು  ಆಕ್ರಮಣಶಾಲಿ ಹಾಗೂ ಉಗ್ರ ಕ್ರಾಂತಿಕಾರಿ ಆದರ್ಶಗಳಿಂದ ಆಕರ್ಷಿತರಾದರು. ಯಾವುದೇ ಮಾರ್ಗದಿಂದಾದರೂ ಸಂಪೂರ್ಣ ಸ್ವಾತಂತ್ರ್ಯ ಪಡೆಯುವ ಧ್ಯೇಯಕ್ಕೆ ತಮ್ಮನ್ನೇ  ಮುಡಿಪಾಗಿಡಲು ನಿರ್ಧರಿಸಿದರು.
ಈ ನಿಟ್ಟಿನೆಡೆಗೆ ಮುಂದುವರೆಯುವ ಪ್ರಥಮ ಹೆಜ್ಜೆಯಾಗಿ ಅವರು ಹಿಂದೂಸ್ತಾನ್ ಸಮಾಜವಾದಿ ಪ್ರಜಾಪ್ರಭುತ್ವವಾದಿ ಸಂಘಟನೆ  ಆರಂಭಿಸಿದರಲ್ಲದೇ ಭಗತ್ ಸಿಂಗ್, ಸುಖ್ದೇವ್, ಬಟುಕೇಶ್ವರ ದತ್  ಮತ್ತು ರಾಜ್ಗುರುರಂತಹಾ ಕ್ರಾಂತಿಕಾರಿಗಳಿಗೆ ಮಾರ್ಗದರ್ಶಕರಾದರು.  
ಆಜಾದರು ಭಾರತದ ಭವಿಷ್ಯವು ಸಮಾಜವಾದದಲ್ಲಿಯೇ ಇದೆ ಎಂದು  ನಂಬಿದ್ದರು. ಪಂಡಿತ್ ರಾಮ್ ಪ್ರಸಾದ್ ಬಿಸ್ಮಿಲ್ ಮತ್ತು ಜ್ಯೋತಿ ಶ್ರೀವಾಸ್ತವ್ ರೊಂದಿಗೆ ಉತ್ತಮ ಸ್ನೇಹತ್ವ ಸಂಪಾದಿಸಿದ್ದರು.

1925 ರಲ್ಲಿ  ಕಾಕೊರಿ ರೈಲು ದರೋಡೆ , 1926ರಲ್ಲಿ  ವೈಸ್ರಾಯ್  ರೈಲನ್ನು ಸ್ಫೋಟಿಸಲು ನಡೆಸಿದ ವಿಫಲ ಯತ್ನ , ಮತ್ತು ಲಾಲಾ ಲಜಪತ್ ರಾಯ್ರನ್ನು ಕೊಂದುದರ ಪ್ರತೀಕಾರವಾಗಿ ಲಾಹೋರ್ನಲ್ಲಿ 1928 ರಲ್ಲಿ  ಜಾನ್ ಪಾಯಂಟ್ಜ್ ಸಾಂಡರ್ಸ್ನನ್ನು ಗುಂಡು ಹಾರಿಸಿ ಕೊಂದಂತಹಾ ಅನೇಕ ಹಿಂಸಾತ್ಮಕ ಚಟುವಟಿಕೆಗಳಲ್ಲಿ ಅವರು ಭಾಗಿಯಾಗಿ ಬ್ರಿಟಿಷರಿಗೆ ಸಿಂಹ ಸ್ವಪ್ನವಾದರು.
24 ವರ್ಷಗಳ ಅಲ್ಪಾವಧಿಯ ಜೀವಿತದಲ್ಲಿ, ಚಂದ್ರಶೇಖರ ಆಜಾದ್ರವರು ಗಮನಾರ್ಹ ಅವಧಿಯವರೆಗೆ ಝಾನ್ಸಿಯನ್ನು ತಮ್ಮ ಸಂಘಟನೆಯ ಕೇಂದ್ರಸ್ಥಳವನ್ನಾಗಿ ಮಾಡಿಕೊಂಡಿದ್ದರು. ಇದರ ಸಮೀಪವಿರುವ ಅರಣ್ಯವನ್ನು ಗುಂಡು ಹಾರಿಸುವುದನ್ನು ಅಭ್ಯಾಸ ಮಾಡಲು ಆಯ್ಕೆ ಮಾಡಿಕೊಂಡಿದ್ದರು.

ಅವರು ಗುಂಡು ಹಾರಿಸುವುದರಲ್ಲಿ ಅದ್ಭುತ ಗುರಿಕಾರರಾಗಿದ್ದರು ಹಾಗೂ ತಮ್ಮ ತಂಡದ ಇತರೆ ಸದಸ್ಯರಿಗೆ ಈ ಸ್ಥಳದಲ್ಲಿಯೇ ಅವರು ತರಬೇತಿ ನೀಡುತ್ತಿದ್ದರು. ಅರಣ್ಯದ ಸಮೀಪ ಸಾತಾರ್ ಎಂದು ಕರೆಯಲ್ಪಡುತ್ತಿದ್ದ ಸಣ್ಣ ನದಿಯ ತೀರದಲ್ಲಿರುವ ಹನುಮಾನ್ ದೇವರ ದೇವಸ್ಥಾನದ ಬಳಿ, ಆಜಾದರು ಒಂದು ಸಣ್ಣ ಗುಡಿಸಲನ್ನು ಕಟ್ಟಿಕೊಂಡಿದ್ದರು. ಅವರು ಅಲ್ಲಿ ಪಂಡಿತ್ ಹರಿಶಂಕರ್ ಬ್ರಹ್ಮಚಾರಿ ಎಂಬ ಹೆಸರಿನಿಂದ ಮಾರುವೇಷದಲ್ಲಿ ವಾಸಿಸಲು  ಆರಂಭಿಸಿದರು.  
ಸಮೀಪದ ಧಿಮಾರ್ಪುರ ಎಂಬ ಹಳ್ಳಿಯ ಮಕ್ಕಳಿಗೆ ಪಾಠ ಮಾಡಲು ಆರಂಭಿಸಿದರಲ್ಲದೇ ಸ್ಥಳೀಯ ನಿವಾಸಿಗಳೊಂದಿಗೆ ಉತ್ತಮ ಬಾಂಧವ್ಯವನ್ನು ಹೊಂದಿದ್ದರು. ಧಿಮಾರ್ಪುರ ಎಂಬ ಆ ಹಳ್ಳಿಗೆ ಈಗ ಅವರದೇ ಹೆಸರಿಡಲಾಗಿದ್ದು, ಅದೀಗ ಆಜಾದ್ಪುರ ಎಂಬ ಹೆಸರನ್ನು ಹೊಂದಿದೆ. ಝಾನ್ಸಿಯಲ್ಲಿ ದಂಡುಪ್ರದೇಶದಲ್ಲಿರುವ ಸಾದರ್ ಬಜಾರ್ ಎಂಬಲ್ಲಿದ್ದ ಬುಂದೇಲ್ಖಂಡ್ ಮೋಟಾರ್ ಗ್ಯಾರೇಜಿನಲ್ಲಿ ಅವರು ಕಾರನ್ನು ಚಲಾಯಿಸಲು ಕಲಿತರು.
ಸದಾಶಿವರಾವ್ ಮಲ್ಕಾಪುರ್ಕರ್, ವಿಶ್ವನಾಥ್ ವೈಶಂಪಾಯನ್, ಭಗವಾನ್ ದಾಸ್ ಮಾಹೌರ್ರವರುಗಳನ್ನು ಝಾನ್ಸಿಯಲ್ಲಿಯೇ ಅವರು ಭೇಟಿಯಾಗಿದ್ದು, ತದನಂತರ ಇವರುಗಳೆಲ್ಲಾ ಅವರ ಕ್ರಾಂತಿಕಾರಿ ತಂಡದ ಅವಿಭಾಜ್ಯ ಅಂಗವಾದರು. ಝಾನ್ಸಿ ಮೂಲದ ಆಗಿನ ಕಾಂಗ್ರೆಸ್ ಪಕ್ಷದ ನಾಯಕರುಗಳಾದ ಪಂಡಿತ್ ರಘುನಾಥ್ ವಿನಾಯಕ್ ಧುಲೇಕರ್ ಮತ್ತು ಪಂಡಿತ್ ಸೀತಾರಾಮ್ ಭಾಸ್ಕರ್ ಭಾಗವತ್ರವರುಗಳು ಕೂಡಾ ಚಂದ್ರಶೇಖರ ಆಜಾದ್ರ ನಿಕಟ ಸಹಾಯಕರಾಗಿದ್ದರು.
1931ರ ವೇಳೆಗೆ ಆಜಾದರು ಅಲಹಾಬಾದ್ನಲ್ಲಿ ವಾಸಿಸುತ್ತಿದ್ದರು. 27 ಫೆಬ್ರವರಿ 1931ರಂದು, ಪೊಲೀಸ್ ಮಾಹಿತಿದಾರರು ಆಜಾದ್ ಮತ್ತು ಸುಖ್ದೇವ್ ರವರು ಆಲ್ಫ್ರೆಡ್ ಉದ್ಯಾನದಲ್ಲಿ ಕೆಲ ಯೋಜನೆಗಳ ಬಗ್ಗೆ ಚರ್ಚೆ ನಡೆಸುತ್ತಿದ್ದುದನ್ನು ಗಮನಿಸಿ ಬ್ರಿಟಿಷ್ ಆಡಳಿತದ ಗಮನಕ್ಕೆ ತಂದರು.
ಕೆಲವೇ ನಿಮಿಷಗಳಲ್ಲಿ ನೂರಾರು ಪೊಲೀಸರು  ಇಡೀ ಉದ್ಯಾನವನ್ನು ಸುತ್ತುವರೆದು ಅವರನ್ನು ಸೆರೆ ಹಿಡಿಯಲು ಮುಂದಾದರು.
ಜಾಗೃತರಾದ ಇಬ್ಬರೂ  ಪ್ರತಿರೋಧ ತೋರಿದರು.
ಹೋರಾಟದ ಆರಂಭದಲ್ಲಿಯೇ, ಆಜಾದರ ತೊಡೆಗೆ ಗುಂಡು ತಗುಲಿ ಗಾಯವಾಯಿತಾದ್ದರಿಂದ ಅವರಿಗೆ ತಪ್ಪಿಸಿಕೊಳ್ಳಲು ಕಷ್ಟಸಾಧ್ಯವಾಗಿತ್ತು. ಆದರೆ ಅವರು ಸುಖ್ದೇವ್ ರವರು ತಪ್ಪಿಸಿಕೊಳ್ಳಲು ಅವಕಾಶವಾಗುವಂತೆ ಅವರಿಗೆ ರಕ್ಷಣೆಯನ್ನು ಒದಗುವಂತೆ ಗುಂಡುಹಾರಿಸತೊಡಗಿದರು. ಸುಖ್ದೇವ್ರವರು ತಪ್ಪಿಸಿಕೊಂಡ ನಂತರ ಆಜಾದರು ಸಾಕಷ್ಟು ಹೊತ್ತಿನವರೆಗೆ ಪೊಲೀಸರು ಮೇಲೆರಗದಂತೆ ಹೋರಾಟ ಮಾಡಿದರು.  
ಅಂತಿಮವಾಗಿ, ಸಂಪೂರ್ಣವಾಗಿ ಸುತ್ತುವರೆಯಲ್ಪಟ್ಟು ಪೋಲೀಸರ ಸಂಖ್ಯಾಬಲವು ಹೆಚ್ಚುತ್ತಲೇ ಇತ್ತು.
ಏಕಾಂಗಿ ಹೋರಾಟ ವ್ಯರ್ಥ ಎಂಬ ಅರಿವು ಆಜಾದ್ ರವರಿಗೆ ಆಗಿತ್ತು. ಅವರ ಪಿಸ್ತೂಲಿನಲ್ಲಿ ಒಂದೇ ಒಂದು ಗುಂಡು ಉಳಿದಿರುವುದು ಗಮನಕ್ಕೆ ಬಂದು  ಬ್ರಿಟಿಷರಿಗೆ ಶರಣಾಗುವ ಬದಲಿಗೆ ತಮ್ಮ ಮೇಲೆಯೇ ಗುಂಡು ಹಾರಿಸಿಕೊಂಡು ಪ್ರಾಣಾರ್ಪಣೆ ಮಾಡಿಕೊಂಡು ತಮ್ಮನ್ನು ಜೀವಂತವಾಗಿ ಯಾರೂ ಸೆರೆಹಿಡಿಯಲಾರರೆಂಬ ತಮ್ಮ ಪ್ರತಿಜ್ಞೆಯನ್ನು ಕಾಪಾಡಿಕೊಂಡರು.

ಸಿಹಿಜೀವಿ ಸಿ ಜಿ ವೆಂಕಟೇಶ್ವರ
ತುಮಕೂರು.
9900925529

ಪಿ ಎಚ್ ಡಿ ಪಡೆದ ಕೃಷಿ ಕಾರ್ಮಿಕ ಮಹಿಳೆ..


 


ಪಿಹೆಚ್ಡಿ ಪಡೆದ ಕೃಷಿ ಕಾರ್ಮಿಕ ಮಹಿಳೆ.


ಎಷ್ಟೇ ಕಾನೂನುಗಳನ್ನು ಜಾರಿಗೆ ತಂದರೂ ,ಎಷ್ಟೇ ಜನಜಾಗೃತಿ ಮೂಡಿಸಿದರೂ ಸಮಾಜದಲ್ಲಿ ಬಾಲ್ಯ ವಿವಾಹಗಳು ಇಂದಿಗೂ ನಡೆಯುತ್ತಲೇ ಇವೆ. ತನ್ಮೂಲಕ ಏನೇನೂ ಆಸೆ ಆಕಾಂಕ್ಷೆಗಳನ್ನು ಹೊತ್ತ  ಮಹಿಳೆಯರು ಪ್ರತಿಭೆಯಿದ್ದರೂ ಅವನ್ನು ಹೊರಗೆ ಹಾಕಲು ಅವಕಾಶ ಸಿಗದೆ ಸಂಸಾರದಲ್ಲಿ ಬಂಧಿಯಾಗಿ ಜೀವನ ಸಾಗಿಸುವುದು ಸಾಮಾನ್ಯವಾಗಿಬಿಟ್ಟಿದೆ.
ಆದರೆ ಇಲ್ಲೊಬ್ಬ ಶಾಲೆ ಬಿಟ್ಟ ವಿದ್ಯಾರ್ಥಿನಿ ಬಾಲ್ಯವಿವಾಹವಾದರೂ ತನ್ನ ಗುರಿಸಾಧಿಸುವ ಹಂಬಲ, ನಿರಂತರ ಪ್ರಯತ್ನ, ಕುಟುಂಬದ ಸಹಕಾರದಿಂದ ಪಿ ಎಚ್ಡಿ ಪದವಿ ಪಡೆದು ಸಹಾಯಕ ಪ್ರೊಫೆಸರ್ ಆಗುವ ಹೊಸ್ತಿಲಲ್ಲಿ ನಿಂತಿದ್ದಾರೆ.

ಅನಂತಪುರ ಜಿಲ್ಲೆಯ ನಾಗುಲಗುಡ್ಡೆ ಗ್ರಾಮದ ಯುವತಿ ಸಾಕೆ ಭಾರತಿಯವರು ಯಶಸ್ಸು ಬೇರೆಲ್ಲೂ ಇಲ್ಲ ನಮ್ಮ ಕೈಯಲ್ಲೇ ಇದೆ ಎಂದು ತೋರಿದ ದಿಟ್ಟ ಮಹಿಳೆ.
ಬಡತನದ ಹಿನ್ನೆಲೆಯಿಂದ ಬಂದ
ಭಾರತಿಯವರು ಬಾಲ್ಯದಿಂದಲೇ ಶಿಕ್ಷಣ ಮತ್ತು ಅವಕಾಶಗಳಿಂದ ವಂಚಿತರಾದರು. ಮೂರು ಮಕ್ಕಳಲ್ಲಿ ಹಿರಿಯಳಾದ ಆಕೆ ಹನ್ನೆರಡನೇ ತರಗತಿಯವರೆಗೆ ವಿವಿಧ ಸರ್ಕಾರಿ ಸಂಸ್ಥೆಗಳಲ್ಲಿ ಓದಿದ್ದಳು.

ಆಕೆಯ ಕುಟುಂಬದ ಆರ್ಥಿಕ ಅಡಚಣೆಗಳಿಂದಾಗಿ ಆಕೆಯು ತನ್ನ ಪಿ ಯು ಸಿ  ಮುಗಿಸಿದ ನಂತರ ಚಿಕ್ಕ ವಯಸ್ಸಿನಲ್ಲೇ ತನ್ನ ತಾಯಿಯ ಸಂಬಂಧಿಯೊಬ್ಬರನ್ನು  ವಿವಾಹವಾದರು. ಮತ್ತು ಶೀಘ್ರದಲ್ಲೇ ಅವರು ಮಗುವಿನ ತಾಯಿಯಾದರು. ಇಷ್ಟೆಲ್ಲ ಅಡಚಣೆಗಳ ಮಧ್ಯೆ ಭಾರತಿಯವರ ಶಿಕ್ಷಣದ ಬಗ್ಗೆ ತುಡಿತ ಕಡಿಮೆಯಾಗಿರಲಿಲ್ಲ.

ಕೂಲಿ ಕೆಲಸ ಮಾಡುತ್ತಲೇ ತನ್ನೆಲ್ಲಾ ಜವಾಬ್ದಾರಿಗಳನ್ನು ನಿರ್ವಹಿಸುತ್ತಾ
ಅನಂತಪುರದ ಎಸ್ ಎಸ್ ಬಿ ಎನ್ ಪದವಿ ಮತ್ತು ಪಿಜಿ ಕಾಲೇಜಿನಲ್ಲಿ ರಸಾಯನಶಾಸ್ತ್ರದಲ್ಲಿ ಪದವಿ ಮತ್ತು ಸ್ನಾತಕೋತ್ತರ ಪದವಿಯನ್ನು ಪೂರ್ಣಗೊಳಿಸಿದರು. 

ಪ್ರತಿದಿನ ಮುಂಜಾನೆ ಬೇಗ ಎದ್ದು  ತನ್ನ ಮನೆಕೆಲಸಗಳನ್ನು ಮುಗಿಸಿದ ನಂತರ  ತನ್ನ ಹಳ್ಳಿಯಿಂದ ಸುಮಾರು 30 ಕಿಲೋಮೀಟರ್ ದೂರದಲ್ಲಿರುವ ತನ್ನ ಕಾಲೇಜಿಗೆ ಬಸ್ ಹಿಡಿಯಲು ಅವಳು ಹಲವಾರು ಮೈಲುಗಳಷ್ಟು ನಡೆಯಬೇಕಾಗಿತ್ತು.  ಇಷ್ಟೆಲ್ಲಾ ಸವಾಲುಗಳನ್ನು ಎದುರಿಸಿ ಸ್ನಾತಕೋತ್ತರ ಪದವಿ ಪಡೆದ ಭಾರತಿಯ ಇಚ್ಛಾಶಕ್ತಿ ಗಮನಿಸಿದ ಪ್ರೊಫೆಸರ್ ಒಬ್ಬರು ಪಿ ಎಚ್ ಡಿ  ಪದವಿ ಪಡೆಯಲು ಸಲಹೆ  ನೀಡಿದರು. ಅದರಂತೆ  ಶ್ರೀ ಕೃಷ್ಣ ದೇವರಾಯ  ವಿಶ್ವವಿದ್ಯಾನಿಲಯದಲ್ಲಿ ಪಿ ಎಚ್ಡಿ ಕೋರ್ಸ್ ಗೆ   ದಾಖಲಾಗಿ ಇತ್ತೀಚಿಗೆ ಡಾಕ್ಟರೇಟ್ ಪಡೆದರು. ಭಾರತಿಯವರ ಈ ಸಾಧನೆಯ ಹಿಂದೆ  ಭೂರಹಿತ ಕೃಷಿ ಕಾರ್ಮಿಕರಾಗಿರುವ ಅವರ ಪತಿ ಶಿವಪ್ರಸಾದ್ ರವರ ಬೆಂಬಲವನ್ನು ಮರೆಯುವಂತಿಲ್ಲ.
ಪ್ರೊಫೆಸರ್ ಆಗುವ ಭಾರತಿಯವರ ಕನಸಿಗೆ ನಿಮ್ಮ ಹಾರೈಕೆಯಿರಲಿ ..

ಸಿಹಿಜೀವಿ ವೆಂಕಟೇಶ್ವರ
ತುಮಕೂರು

30 July 2023

ಕೊರತೆ..

 


ಕೊರತೆ...



ಮಾತನಾಡುವಾಗ

ಹೇಗಿದ್ದರೂ ಜರಿಯುವರು ಜನ 

ಕಡಿಮೆ ಮಾತನಾಡಿದರೆ ಕೊರತೆ|

ಎರಡು ಹೆಚ್ಚು ಆಡಿದರೆ 

ಗೊನಗಿ ಹೇಳುವರು ಕೊರೆತ ||


ಸಿಹಿಜೀವಿ ವೆಂಕಟೇಶ್ವರ

ತುಮಕೂರು.


ಬಾರೆ...


 



ಬಾರೆ...

ಮುನಿಸೇತಕೆ ನನ್ನ ಮೇಲೆ

ಹೃದಯ ಸಿಂಹಾಸನಕೆ ಬಾರೆ|

ನನ್ನ ತೊರೆದು ನೀನು

ಆಗ ಬೇಡ ಅಂಬರದ ತಾರೆ ||


ಸಿಹಿಜೀವಿ ವೆಂಕಟೇಶ್ವರ

ತುಮಕೂರು

28 July 2023

ದಿನ


 


ದಿನ

ನಗುತಾ ಬರುವನು ನಮ್ಮನು


ಜಗವನ್ನು ಬೆಳಗಲು ಆ ದಿನ ||
ಕರಮುಗಿದು ಅವನಿಗೆ
ಆರಂಭಿಸಿಬಿಡು ನಿನ್ನ ದಿನ |

ಸಿಹಿಜೀವಿ ವೆಂಕಟೇಶ್ವರ
ತುಮಕೂರು.


26 July 2023

ಅಭಿಸಾರಿಕೆ.. ಕವಿತೆ

 

ಅಭಿಸಾರಿಕೆ..

ಲತಾಂಗಿ ಇವಳು ನೋಡಣ್ಣ
ಪೂರ್ಣ ಹುಣ್ಣಿಮೆಯ ಮೈಬಣ್ಣ
ಸೌಂದರ್ಯದಲಿ ಲಾವಣ್ಯವತಿ
ಮೃದು ಮನಸಿನ ಗುಣವತಿ.

ಮನ್ಮಥನ ಬಿಲ್ಲಿನ ಹುಬ್ಬುಗಳು
ದಾಳಿಂಬೆಯ ದಂತಪಂಕ್ತಿಗಳು
ಸಮುದ್ರದ ತೆರೆಯಂತಹ ಕೇಶರಾಶಿಗಳು
ವನರಾಜ ಸಿಂಹದ ನಡುವಿನವಳು.

ಹಾತೊರೆದೆನು ಅವಳ ಸಾಂಗತ್ಯಕೆ
ಬಳಿಸಾರುವಳೇ ನನ್ನ ಅಭಿಸಾರಿಕೆ
ರೂಪರಾಶಿಯಲಿ ಇವಳೇ  ಮೇನಕೆ
ದಿನವೂ ಅವಳದೇ ಕನವರಿಕೆ

ಸನಿಹಕೆ  ಬಂದು ನಿಂತಿಹಳು
ತೊಂಡೆ ಹಣ್ಣಿನ ತುಟಿಯವಳು
ಮಾದಕ ನಗೆಯನು  ಬೀರಿಹಳು
ನನಗೀಗ ಅರಳು ಮರಳು.

ಸಿಹಿಜೀವಿ  ವೆಂಕಟೇಶ್ವರ
ತುಮಕೂರು
9900925529.

25 July 2023

ಮಂದಹಾಸ...

 


ಮಂದಹಾಸ


ನನಗೆ ಬೇಕಿಲ್ಲ ನಗ, ನಾಣ್ಯ

ಬಂಗಲೆ, ಮಹಲುಗಳ ವಾಸ 

ನನ್ನೊಂದಿಗಿದ್ದರೆ ಸಾಕು ನಿನ್ನ

ಬೆಲೆಕಟ್ಟಲಾಗದ ಮಂದಹಾಸ 


ಸಿಹಿಜೀವಿ ವೆಂಕಟೇಶ್ವರ

ತುಮಕೂರು

ಮಿಯಾವಾಕಿ ಕಾಡು...

 


ಮಿಯಾವಾಕಿ ಕಾಡು . 


ನಮ್ಮ ಸಹೋದ್ಯೋಗಿಗಳ ಜೊತೆಯಲ್ಲಿ ಒಂದು ದಿನದ ಪ್ರವಾಸ ಕೈಗೊಂಡು ನಾಗರಹೊಳೆ, ಮಡಿಕೇರಿ ನೋಡಿಕೊಂಡು ಕಾವೇರಿ ನಿಸರ್ಗಧಾಮ ತಲುಪಿದೆವು.

ಎರಡು ಬಾರಿ ಅದೇ ಜಾಗಕ್ಕೆ  ಬೇಟಿ ನೀಡಿದ ಪರಿಣಾಮವಾಗಿ ಆ ಸ್ಥಳದ ಬಗ್ಗೆ ಅಷ್ಟಾಗಿ ಆಸಕ್ತಿಯಿಲ್ಲದೆ   ಮತ್ತು ಕುಸಿದು ಬಿದ್ದ ತೂಗುಸೇತುವೆಯ ನೋಡಿ ಬೇಸರದಿಂದಲೇ ಕಾವೇರಿ ನಿಸರ್ಗ ಧಾಮಕ್ಕೆ ಕಾಲಿಟ್ಟೆವು.

ಈ ಬಾರಿ ನಿಸರ್ಗಧಾಮದಲ್ಲಿ ನಾನು ಹಿಂದೆ ನೋಡಿದ್ದಕ್ಕಿಂತ ಎರಡು ವಿಶೇಷ ಸ್ಥಳಗಳು ಗಮನ ಸೆಳೆದವು.ಒಂದು ಪಕ್ಷಿ ಲೋಕ ಮತ್ತೊಂದು "ಮಿಯಾವಾಕಿ ಅರಣ್ಯ "

ಪಕ್ಷಿ ಲೋಕದ ಬಗ್ಗೆ ನಂತರ ಬರೆಯುವೆ.

ಈಗ ಮಿಯಾವಾಕಿ ಅರಣ್ಯದ ಬಗ್ಗೆ ನೋಡೋಣ.ಅಲ್ಲೇ ಹಾಕಿರುವ ಮಾಹಿತಿ ಫಲಕಗಳು ನಮಗೆ ಇದರ ಬಗ್ಗೆ ಸಮಗ್ರ ಮಾಹಿತಿ ನೀಡುತ್ತವೆ.

ಜಪಾನಿನ ವಿಶ್ವವಿದ್ಯಾನಿಲಯದ ಸಸ್ಯಶಾಸ್ತ್ರದ ಪ್ರಾಧ್ಯಾಪಕ ಅಖಿರ ಮಿಯಾವಾಕಿ ರವರ ಹೆಸರಲ್ಲಿ ಸ್ಥಾಪಿತವಾದ ಕಾಡೇ ಮಿಯಾವಾಕಿ ಕಾಡು.

ಕರ್ನಾಟಕದಲ್ಲಿ ಈ ಪ್ರಯೋಗವನ್ನು ಮಂಗಳೂರಿನ ರಾಮಕೃಷ್ಣ ಮಿಶನ್  2019 ರಲ್ಲಿ ಮಾಡಿದ್ದಾರೆ. ನಗರದ ಮಧ್ಯಭಾಗದಲ್ಲಿ ಅರ್ಧದಿಂದ ಒಂದು ಎಕರೆ ಜಾಗದಲ್ಲಿ ಈ ಪ್ರಯೋಗವನ್ನು    ಮಾಡಲಾಗಿದೆ. 

ಕಾವೇರಿ ನಿಸರ್ಗಧಾಮದ ಮಿಯಾವಾಕಿ ಕಾಡನ್ನು ಟಯೊಟ ಕಿರ್ಲೋಸ್ಕರ್ ಮತ್ತು ಅರಣ್ಯ ಇಲಾಖೆಗಳ ಸಹಯೋಗದೊಂದಿಗೆ ಅಭಿವೃದ್ಧಿಪಡಿಸಲಾಗಿದೆ.

ಈ ಅರಣ್ಯಗಳಲ್ಲಿ ಸ್ಥಳೀಯವಾಗಿ ಬೆಳೆಯುವ  ಶ್ರೀಗಂಧ, ರೆಂಜೆ, ಚಂಪಕ, ಚಿಕ್ಕು, ಮಾವು, ಅಶೋಕ, ತೇಗ, ಬೇವು, ಜಾಮೂನ್, ಪೀಪಲ್  ಮುಂತಾದ 28 ಗಿಡಗಳನ್ನು ನೆಡಲಾಗಿದೆ. 






ಭಾರತದ ಹಲವಾರು ಕಡೆ ‘ಮಿಯಾವಾಕಿ’ ನಗರ ಅರಣ್ಯದ ಒಂದು ಪ್ರಯೋಗ ನಡೆದಿದೆ. ಮಹಾರಾಷ್ಟ್ರದ ನವಮುಂಬಯಿನಲ್ಲಿ 42 ಎಕರೆ ಜಾಗದಲ್ಲಿ ‘ನಿಸರ್ಗ ಉದ್ಯಾನ’ ಎಂಬ ಒಂದು ಸುಂದರ ಅರಣ್ಯ ಸೃಷ್ಟಿಸಲಾಗಿದೆ.  ಕೇರಳದ ತಿರುವನಂತಪುರ, ತಮಿಳುನಾಡಿನ ಚೆನೈ, ತಿರುನಲ್ವೇಲಿ, ತಿರುಚಿ ಹಾಗೂ ಆಂಧ್ರದ ಹೈದರಾಬಾದ್ನಲ್ಲೂ ಅಲ್ಲದೆ ತೆಲಂಗಾಣ, ಉತ್ತರ ಪ್ರದೇಶಗಳಲ್ಲೂ ಕೂಡ ‘ಮಿಯಾವಾಕಿ’ ನಗರಾರಣ್ಯ ತಲೆಯೆತ್ತಿದೆ. ಇತ್ತೀಚಿಗೆ ಚಿಕ್ಕಬಳ್ಳಾಪುರದಲ್ಲಿ ಕೆಲ ಟೆಕ್ಕಿಗಳು ಮತ್ತು ರೈತರ ಸಹಾಯದಿಂದ ಮಿಯಾವಾಕಿ ಕಾಡು ಬೆಳೆಸುವ ಪ್ರಯತ್ನವಾಗಿರುವುದು ಸ್ವಾಗತಾರ್ಹ.


‘ಮಿಯಾವಾಕಿ’ ಅರಣ್ಯಕ್ಕೆ ತಗಲುವ ಖರ್ಚು ಅತೀ ಕಡಿಮೆ. ಒಮ್ಮೆ ಗುಂಡಿತೋಡಿ ಒಳ್ಳೆಯ ಮಣ್ಣು, ಗೊಬ್ಬರ ಹಾಕಿ ಮರಗಳ ಸಸಿ ನೆಟ್ಟರೆ ಆಯಿತು. ಸುಮಾರು ಒಂದು ಚದರ ಮೀಟರ್ಗೆ ನಾಲ್ಕು ಸಸಿ ನೆಡಬಹುದು. ಹನಿ ನೀರಾವರಿ ಮಾಡಿದರೆ ಅರಣ್ಯ ಬಹುಬೇಗ ಬೆಳೆಯುತ್ತದೆ. ಸುಮಾರು ಮೂರು ವರ್ಷಗಳ ಕಾಲ ಇದರ ಆರೈಕೆಯಾದರೆ ಮುಂದಿನ 25 ವರ್ಷ ಏನೂ ಮಾಡಬೇಕಿಲ್ಲ. ಮರಗಳನ್ನು ಕಡಿದು ಮಾರಿದರೆ ಲಾಭದಾಯಕ ಮತ್ತು ಆ ಸ್ಥಳದಲ್ಲಿ ಹೊಸ ಮರದ ಸಸಿ ನೆಡಬಹುದು. 

‘ಮಿಯಾವಾಕಿ’ಯಿಂದ ಅಂತರ್ಜಲ ಏರಿಕೆಯಾಗಿರುವ ಉದಾಹರಣೆಗಳಿವೆ. ಜೀವ ವೈವಿಧ್ಯ, ಜೈವಿಕ ವೈವಿಧ್ಯತೆ, ಪರಿಸರ ವೈವಿಧ್ಯತೆ ಎಲ್ಲವೂ ಈ ನಗರ ಅರಣ್ಯಗಳಿಂದ ಲಭ್ಯ. ಮರಗಳ ಉದುರಿದ ಎಲೆಗಳೇ ಅದಕ್ಕೆ ಗೊಬ್ಬರವಾಗುತ್ತದೆ . ನಗರ ಪ್ರದೇಶದ ಬರಡು ಭೂಮಿಯನ್ನು ಸುಂದರ ಸ್ವಚ್ಛ ಅರಣ್ಯವಾಗಿಸಲು ‘ಮಿಯಾವಾಕಿ’ ಒಂದು ವರದಾನ 


‘ಮಿಯಾವಾಕಿ’ ವಿಧಾನಕ್ಕೆ ನಾಲ್ಕು ಸೂತ್ರಗಳಿವೆ. ಜಾಗದ ಆಯ್ಕೆ, ಗಿಡ, ಮರಗಳ ಆಯ್ಕೆ, ನೀರಿನ ಸೌಲಭ್ಯ, ಹನಿ ನೀರಾವರಿ ಹೆಚ್ಚು ಸೂಕ್ತ. ಗೊಬ್ಬರ ಹಾಗೂ ಸ್ವಲ್ಪ ಕಾಲದ ನಿರ್ವಹಣೆ ಇದಿಷ್ಟನ್ನೂ ಒಂದು ಗೂಡಿಸಿದರೆ ನಗರ ಮಧ್ಯ ಭಾಗದಲ್ಲಿ ಸುಂದರ ಅರಣ್ಯ ಕಲ್ಪನೆ ನನಸಾದೀತು. ಭಾರತ ಎಲ್ಲಾ ನಗರಗಳಲ್ಲೂ ಈ ‘ಮಿಯಾವಾಕಿ’ ನಗರ ಅರಣ್ಯಗಳನ್ನೂ ಪ್ರಾರಂಭಿಸಿದರೆ ಹಲವಾರು ಕೋಟಿ ಮರಗಳನ್ನು ಬೆಳೆಸಿ ಪರಿಸರದ ಈಗಿನ ಹಾಗೂ ಮುಂದಿನ ದುರಂತಗಳನ್ನು ಸ್ವಲ್ಪ ಮಟ್ಟಿಗೆ ಸರಿದೂಗಿಸಬಹುದು. ಆಯಾ ಪ್ರದೇಶಗಳಲ್ಲಿ ಚೆನ್ನಾಗಿ ಬೆಳೆಯುವ ಹಣ್ಣಿನ, ಹೂವಿನ, ವಾಣಿಜ್ಯ, ಪರಿಸರಸ್ನೇಹಿ ಬೃಹತ್ ಮರಗಳನ್ನು ನೆಡಬಹುದು. ಮಿಯಾವಾಕಿ ನಗರ ಅರಣ್ಯದಿಂದ ಜೀವವೈವಿಧ್ಯತೆಗೆ ಪ್ರೋತ್ಸಾಹ ದೊರೆತು ಪ್ರಾಕೃತಿಕ ಪರಂಪರೆಯನ್ನು ಉಳಿಸಲು ಸಹಕಾರಿಯಾಗುತ್ತದೆ.

ತನ್ಮೂಲಕ ಸಹಸ್ರಮಾನದ  ಸುಸ್ಥಿರ ಅಭಿವೃದ್ಧಿ ಸಾಧಿಸಲು ಸಾಧ್ಯವಾಗುತ್ತದೆ.


ಸಿಹಿಜೀವಿ ವೆಂಕಟೇಶ್ವರ

ತುಮಕೂರು

9900925529


24 July 2023

ಸಂಭ್ರಮ ಶನಿವಾರ

 

ಚಿಕ್ಕಮಗಳೂರು....

 

ಯಂಗ್ಟಿ...ಪುಸ್ತಕ ಬಿಡುಗಡೆ..

 

ಅರಸಿ

 




ಅರಸಿ...


ಬಳಲಿ ಬೆಂಡಾಗಿರುವೆ

ಅಲೆದಾಡುತ ನಿನ್ನ ಅರಸಿ|

ಪರಿತಪಿಸುತಲಿರುವೆ

ಬಂದು ಬಿಡು ನನ್ನ

ಹೃದಯದರಮನೆಯರಸಿ|


ಸಿಹಿಜೀವಿ ವೆಂಕಟೇಶ್ವರ

ತುಮಕೂರು


ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಜೆ ಸಿ ಬಿ ಆಪರೇಟರ್...



 

ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಜೆ ಸಿ ಬಿ ಆಪರೇಟರ್ 

ಸಾಧಿಸಬೇಕೆಂಬ ಹಂಬಲ ಮತ್ತು ಸತತ ಪ್ರಯತ್ನ ಮತ್ತು ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸುವವರಿಗೆ ಸೋಲೆಂಬ ಮಾತೇ ಇಲ್ಲ ಯಶಸ್ಸು ಕಟ್ಟಿಟ್ಟ ಬುತ್ತಿ ಎಂಬುದಕ್ಕೆ ತಾಜಾ ಉದಾಹರಣೆ ಕೇರಳದ ಕೆ ಅಖಿಲ್.

ರಾತ್ರಿ  ವೇಳೆ ಜೆಸಿಬಿ ಆಪರೇಟರ್ ಕೆಲಸಮಾಡಿಕೊಂಡು  ಬೆಳಿಗ್ಗೆ ಮನೆ ಮನೆಗೆ ದಿನಪತ್ರಿಕೆ ಹಾಕುವ ಕಾಯಕ ಮಾಡುತ್ತಿದ್ದು  ಬಿಡುವಿನ ಸಮಯದಲ್ಲಿ ಬರವಣಿಗೆಯ ಗೀಳು ಹತ್ತಿಸಿಕೊಂಡು ಸಾಹಿತ್ಯ ರಚನೆ ಮಾಡುತ್ತಿದ್ದ ಅಖಲ್ ರವರ ಮೊದಲ ಕಥಾ ಸಂಕಲನಕ್ಕೆ   ಕೇರಳ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಲಭಿಸಿದೆ.
ಅಷ್ಟಕ್ಕೂ ಈ ಯಶಸ್ಸು ರಾತ್ರೋರಾತ್ರಿ ಬರಲಿಲ್ಲ ಅದರ ಹಿಂದೆ ಸತತ ಶ್ರಮ ಇರುವುದು ಸತ್ಯ.
ಎಂಟು ಬಾರಿ ಮರುಮುದ್ರಣ ಕಂಡಿರುವ "ನೀಲಚಡಯನ್ " ಕಥಾ ಸಂಕಲನದ ಒಂದೂ ಪ್ರತಿ ಖರ್ಚಾಗಿರಲಿಲ್ಲ. ಯಾರೂ ಓದಿರಲಿಲ್ಲ ಈಗ ಅದ್ಭುತ ಯಶಸ್ಸಿನ ಕೃತಿಯಾಗಿ ಪ್ರಶಸ್ತಿ ಚಾಚಿಕೊಂಡಿರುವ ವಿಷಯ ಹೇಳುವಾಗ  ಅಖಿಲ್ ಕಣ್ಣಲ್ಲಿ ನೀರಾಡುತ್ತವೆ! ಹೌದು ಅವು ಆನಂದ ಬಾಷ್ಪಗಳು!
ಬಡತನದಿಂದಾಗಿ  ಕುಟುಂಬವನ್ನು ಪೋಷಿಸುವ ಸಲುವಾಗಿ ಅರ್ಧದಲ್ಲೇ ಶಿಕ್ಷಣವನ್ನು  ಮೊಟಕುಗೊಳಿಸಿದ  ಅಖಿಲ್ ಪಿಯುಸಿ ಬಳಿಕ ಶಿಕ್ಷಣ ಮುಂದುವರಿಸಬೇಕೆಂಬ ಹಂಬಲವಿತ್ತು. ಆದರೆ ಅವರ ಕೌಟುಂಬಿಕ ಪರಿಸ್ಥಿತಿ ಬೇರೆಯೇ ಇತ್ತು. ತಂದೆ,ತಾಯಿ, ಅಜ್ಜಿ ಮತ್ತು ತಮ್ಮನನ್ನು ಸಲಹುವ ಜವಾಬ್ದಾರಿ ಅವರ ಹೆಗಲ ಮೇಲೇರಿತು.  ಅಖಿಲ್ ಅವರ ತಾಯಿ ಕೂಡ ದಿನಗೂಲಿ ನೌಕರಿ ಮಾಡುತ್ತಾ ಸಂಸಾರಕ್ಕೆ ಅಧಾರವಾದರು.    


ಾತ್ರಿ ವೇಳೆ ಬಿಡುವಿನ ಸಮಯದಲ್ಲಿ ಅವರ  ಕಲ್ಪನೆಗ


ಳಲ್ಲಿ ಮೂಡಿ ಬರುವ ಕಥೆಗಳನ್ನು ಬರೆಯಲಾರಂಭಿಸಿದರು ದಿನನಿತ್ಯದ ಬದುಕಿನ ಅನುಭವ ಗಳನ್ನೇ ಆಧಾರವಾಗಿಟ್ಟುಕೊಂಡು ಕಥೆಗಳನ್ನು ಬರೆದರು.ಇದರ ಪರಿಣಾಮವಾಗಿಯೇ  'ನೀಲಚಡಯನ್' ಕೃತಿ ಹೊರಬಂತು.



ಅದೂ ಕೂಡಾ ಅಷ್ಟು ಸುಲಭವಾಗಿರಲಿಲ್ಲ. ಕೇರಳದ
ಗಾಂಜಾ ತಳಿಯ ಗಿಡಕ್ಕೆ 'ನೀಲಚಡಯನ್' ಎನ್ನುತ್ತಾರೆ. ಈ ಹೆಸರನ್ನು ಕೃತಿಯ ಶೀರ್ಷಿಕೆಯಾಗಿಟ್ಟು ಪುಸ್ತಕ ಪ್ರಕಟಿಸಲು ಪ್ರಕಾಶಕರನ್ನು ಎಡತಾಕಿದಾಗ ಎಂದಿನಂತೆ ಪ್ರಕಾಶಕರು ನಿರಾಕರಿಸಿದಾಗ ತಾವೇ ಪುಸ್ತಕ ಪ್ರಕಾಶನ ಮಾಡಲು ಮುಂದೆ ಬಂದರು. 
20 ಸಾವಿರ ಪಾವತಿಸಿದರೆ ಪುಸ್ತಕ ಪ್ರಕಟಿಸುತ್ತೇವೆ ಎಂಬ ಜಾಹೀರಾತನ್ನು ಫೇಸ್ಬುಕ್ನಲ್ಲಿ ಗಮನಿಸಿದ ಅವರು  ಉಳಿತಾಯ ಮಾಡಿದ್ದ 10,000 ಹಾಗೂ ತಾಯಿ ನೀಡಿದ 10,000 ಪಾವತಿಸಿ ಈ ಪುಸ್ತಕ ಪ್ರಕಟಿಸಿದ್ದರು ಆಗ ಅದು ಆನ್ಲೈನ್ ಮೂಲಕ ಮಾತ್ರವೇ ಮಾರಾಟವಿತ್ತು .
ಆರಂಭದಲ್ಲಿ ಪುಸ್ತಕಗಳು ಮಾರಾಟವಾಗಲಿಲ್ಲ. ಪ್ರಥಮ ಚುಂಬನಂ ದಂತ ಭಗ್ನಂ ಎಂಬಂತೆ ಒಂದೂ ಪುಸ್ತಕ ಮಾರಾಟವಾಗದೇ ಕಷ್ಟ ಪಟ್ಟು ರಾತ್ರಿಹಗಲು ದುಡಿದ ಹಣ ವನ್ನು ಹೀಗೆ ವ್ಯಯ ಮಾಡಿದೆನಲ್ಲ ಎಂದು ಕೊರಗುವ ಸಮಯದಲ್ಲಿ ಕೇರಳದ  ಚಿತ್ರಕಥೆಗಾರ ಬಿಪಿನ್ ಚಂದ್ರನ್ ಅವರು ಪುಸ್ತಕದ ಕುರಿತು ಫೇಸ್ಬುಕ್ನಲ್ಲಿ ಬರೆದ ಬಳಿಕ ಜನರಿಂದ ಬೇಡಿಕೆ ಬಂತು. ಇದೀಗ ಈ ಪುಸ್ತಕದ ಎಂಟನೇ ಅವೃತ್ತಿ ಮುದ್ರಣಾಗಿ ಪ್ರತಿಗಳು ಭರ್ಜರಿಯಾಗಿ ಮಾರಾಟವಾಗುತ್ತಿವೆ. ಅಖಿಲ್ ರವರಿಗೆ ಪ್ರಶಸ್ತಿಯ ಜೊತೆಯಲ್ಲಿ ಸಂಪಾದನೆ ಮತ್ತು ಹೆಸರು ಸಿಕ್ಕಿದೆ. ಅಭಿನಂದನೆಗಳು ಅಖಿಲ್.ನಿಮ್ಮಲ್ಲೂ ಒಬ್ಬ ಅಖಿಲ್ ಇರಬಹುದು ಹಿಡಿದ  ಕಾರ್ಯವನ್ನು ಸಾಧಿಸುವ ಗುಣ ನಿಮ್ಮದಾಗಲಿ ...

ಸಿಹಿಜೀವಿ ವೆಂಕಟೇಶ್ವರ
ತುಮಕೂರು
9900925529

23 July 2023

ಸಿಹಿಜೀವಿಯ ಹನಿ

 


ವ್ಯತ್ಯಾಸ 


ಮೂಗಿ‌ನ ಮೇಲೆ

ಬೆರಳಿಟ್ಟುಕೊಂಡರೆ ಅಚ್ಚರಿ!

ಮೂಗಿನ ಒಳಗೆ ಇಟ್ಟರೆ

ಥೂ ಅಸಹ್ಯ ಮೊದಲು

ಹೊರಗೆ ತಗೀರಿ !!


ಸಿಹಿಜೀವಿ ವೆಂಕಟೇಶ್ವರ

ತುಮಕೂರು


ಯಾವ್ ಕಾಲೇಜು?....ನ್ಯಾನೋ ಕಥೆ

 



ಯಾವ್ ಕಾಲೇಜ್?


"ನಿನ್ನ ಮಗಳಿಗೆ ಇಲ್ಲೇ ಇರುವ ಲೋಕಲ್ ಕಾಲೇಜ್ ಬೆಟರ್ " ಆತ್ಮೀಯ ಸ್ನೇಹಿತ ಸಲಹೆ ನೀಡಿದ."ನೀಟ್, ಜೆ ಈ ಈ, ಸಿ ಈಟಿ ಈ ಟೌನ್ ನಲ್ಲಿ ಕೋಚಿಂಗ್ ಸರಿ ಇಲ್ಲ ಸುಮ್ನೇ ಬೆಂಗಳೂರಿಗೆ ಹಾಕು" ಹತ್ತಿರದ  ಸಂಬಂಧಿ ಸತೀಶ ತಾಕೀತು ಮಾಡಿದ. ಸಹೋದ್ಯೋಗಿ ಸುಮ ಸಲಹೆಯೇ ಬೇರೆ" ಸಾರ್ ನನಗೆ ಗೊತ್ತಿರೋ ಒಂದ್ಕಾಲೇಜು ಮಂಗ್ಳೂರಾಗೈತೆ ಸುಮ್ನೆ ಅಲ್ಗಾಕಿ ನಿಮ್ ಮಗ್ಳು ಗ್ಯಾರಂಟಿ ಡಾಕ್ಟ್ರು ".

ಮಗಳ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ತೊಂ ಭತ್ತೆಂಟು ಪರ್ಸೆಂಟೇಜ್ ಪಡೆದ ಖುಷಿಯಲ್ಲಿದ್ದ ರವಿಕುಮಾರ್ ಗೊಂದಲದ ಗೂಡಿನಲ್ಲಿ ಬಿದ್ದು ಚಿಂತಿಸುತ್ತಾ ಮನೆಗೆ ಬಂದು ಕಾಫಿ ಹೀರುವಾಗ .ಮಗಳು ಅಪ್ಪಾ ನಾನ್ ಯಾವ್ ಕಾಲೇಜ್ ಸೇರಲಿ ಎಂದಾಗ ಅಪ್ಪ ಮಗಳ ಮುಖವನ್ನೇ ನೋಡುತ್ತಿದ್ದ ಉತ್ತರ ಬರಲಿಲ್ಲ....


ಸಿಹಿಜೀವಿ ವೆಂಕಟೇಶ್ವರ

ತುಮಕೂರು

21 July 2023

ನಮ್ಮ ಮೆದುಳು ನಮ್ಮ ಆರೋಗ್ಯ...


 


ನಮ್ಮ ಮೆದಳು ನಮ್ಮ ಆರೋಗ್ಯ.

ಮಾನವ ಇತರೆ ಪ್ರಾಣಿಗಳಿಗಿಂತ ವಿಭಿನ್ನವಾಗಿರುವುದಕ್ಕೆ  ಅವನ ಮೆದುಳು ಕೂಡ ಒಂದು ಕಾರಣ
ಪ್ರಪಂಚದಾದ್ಯಂತ  ಪ್ರತಿ ವರ್ಷ ಜುಲೈ 22 ರಂದು ವಿಶ್ವ ಮೆದುಳಿನ ದಿನವನ್ನು ಆಚರಿಸಲಾಗುತ್ತದೆ. ಇದು ಪ್ರಪಂಚದ ಅತ್ಯಂತ ಪ್ರಮುಖ ವಾರ್ಷಿಕ ಆಚರಣೆಗಳಲ್ಲಿ ಒಂದಾಗಿದೆ. ವಿಶೇಷವಾಗಿ ನಮ್ಮ ಆಧುನಿಕ ಯುಗದಲ್ಲಿ ಹೆಚ್ಚುತ್ತಿರುವ ಮಹತ್ವದ ಆರೋಗ್ಯ ಸಮಸ್ಯೆಯ ಬಗ್ಗೆ ಜಾಗೃತಿ ಮೂಡಿಸಲು ಸಹಾಯ ಮಾಡುತ್ತದೆ. 
ಒಂದೂವರೆ ಕೇಜಿ ತೂಕದ ಮೆದುಳೇ ಒಂದು ಸಂಕೀರ್ಣವಾದ ಮತ್ತು ಅಚ್ಚರಿದಾಯಕ ಕೆಲಸ ಮಾಡುವ ಅದ್ಬುತ ಯಂತ್ರ ಎಂದರೆ ತಪ್ಪಾಗಲಾರದು.10000ಕೋಟಿ ನರಕೋಶಗಳನ್ನು ಹೊಂದಿರುವ ಇದು ನಮ್ಮ ಮಾನಸಿಕ ಆರೋಗ್ಯದ ಕೀಲಿ ಕೈ ಎಂದರೆ ತಪ್ಪಾಗಲಾರದು.
9 ನೇ ವಾರ್ಷಿಕ ವಿಶ್ವ ಮೆದುಳಿನ ದಿನವನ್ನು ವಿಶ್ವದಾದ್ಯಂತ ಆಚರಿಸುವ ಈ ಸಂದರ್ಭದಲ್ಲಿ  ವರ್ಲ್ಡ್ ಫೆಡರೇಶನ್ ಆಫ್ ನ್ಯೂರಾಲಜಿ ಪ್ರಮುಖವಾದ ಪಾತ್ರ ವಹಿಸುತ್ತಾ  ಆರೋಗ್ಯದ ಪ್ರಾಮುಖ್ಯತೆಯ ಬಗ್ಗೆ ಜಾಗೃತಿ ಮೂಡಿಸುತ್ತದೆ.

ಈ ವರ್ಷದ ಮೆದುಳು ದಿನದ  ಥೀಮ್  "ಮೆದುಳಿನ ಆರೋಗ್ಯ ಮತ್ತು ಅಂಗವೈಕಲ್ಯ, ಯಾರನ್ನೂ ಹಿಂದೆ ಬಿಡಬೇಡಿ"

 ಇಂದಿನ ಧಾವಂತದ ಗಡಿಬಿಡಿಯ ದಿನಗಳಲ್ಲಿ ಅಬಾಲರಾದಿಯಾಗಿ ವೃದ್ದರ ವರೆಗೆ ಎಲ್ಲರೂ ಒಂದಲ್ಲ ಒಂದು ರೀತಿಯಲ್ಲಿ ಒತ್ತಡ ಅನುಭವಿತ್ತಾ ಅದು ಮೆದುಳಿನ ಮೇಲೆ ಪ್ರಭಾವವನ್ನು ಮೀರಿ ನಾವು ಕೇಳಿರದ ಹೊಸ ಹೊಸ ಖಾಯಿಲೆಯಿಂದ ಬಳಲುವಂತೆ ಮಾಡುತ್ತಿದೆ.
ಈ ಮೆದುಳು ದಿನದ ಅಂಗವಾಗಿ ನಾವು ನಮ್ಮ ಜೀವನಶೈಲಿಯಲ್ಲಿ ಕೆಲ ಬದಲಾವಣೆಗಳನ್ನು ಮಾಡಿಕೊಂಡು ಮೆದುಳಿನ ಆರೋಗ್ಯ ಕಾಪಾಡಿಕೊಳ್ಳುವ ಸಂಕಲ್ಪ ಮಾಡಬೇಕಾಗಿದೆ.
ಅಮೇರಿಕನ್ ಬ್ರೈನ್ ಫೌಂಡೇಶನ್ ಈ ದಿನದ ನೆನಪಿನಲ್ಲಿ  ನಮ್ಮ ಮಾನಸಿಕ ಆರೋಗ್ಯ ಕಾಪಾಡಿಕೊಳ್ಳಲು ಕೆಲ ಸಲಹೆಗಳನ್ನು ನೀಡಿದೆ.ಅವುಗಳಲ್ಲಿ ಕೆಲವನ್ನಾದರೂ ಪಾಲಿಸೋಣ.

ಪಾರ್ಕಿನ್ಸನ್ ಮತ್ತು ಆಲ್ ಜಮೈನರ್ ನಂತಹ   ಮೆದುಳಿಗೆ ಸಂಬಂಧಪಟ್ಟ ನ್ಯೂರೋ ಡಿಜೆನೆರೇಟಿವ್ ಕಾಯಿಲೆಗಳಿಗೆ ಸರಿಯಾಗಿ ನಿದ್ರೆ ಮಾಡದಿರುವುದು ಪ್ರಮುಖವಾದ ಕಾರಣ. 41% ಜನರು ಸರಿಯಾದ ನಿದ್ರೆ ಮಾಡದೇ ಈ ರೋಗಕ್ಕೆ ತುತ್ತಾಗುತ್ತಾರೆ ಎಂದು ಸಂಶೋಧನೆಗಳು ದೃಢಪಡಿಸಿವೆ.  ಆದ್ದರಿಂದ ವಯಸ್ಕರು ದಿನಕ್ಕೆ ಕನಿಷ್ಟಪಕ್ ಏಳರಿಂದ ಎಂಟು ಗಂಟೆಗಳ ಕಾಲ ಗುಣಮಟ್ಟದ ನಿದ್ರೆ ಮಾಡಿದರೆ ಅಲ್ ಜಮೈರ್ ರೋಗಕ್ಕೆ ಕಾರಣವಾದ ಪ್ರೋಟೀನ್ ಅಮಿಲಾಯ್ಡ್ ಪ್ಲೇಕ್ಗಳ ವಿಷಕಾರಿ ಸಂಗ್ರಹವನ್ನು ತಡೆಯಲು ನಮ್ಮ ಮಿದುಳುಗಳು ಸಾಧ್ಯವಾಗುತ್ತದೆ ಎಂದು ಸಂಶೋಧನೆಗಳು ತೋರಿಸುತ್ತವೆ.ಆದ್ದರಿಂದ ಇಂದೇ ನಾವೆಲ್ಲರೂ ಗುಣಮಟ್ಟದ ನಿದ್ರೆ ಮಾಡಲು ಪಣ ತೊಡೋಣ. 

ಮೆದುಳಿನ ಸಮಸ್ಯೆ ಬರಲು ಕಾರಣಗಳಲ್ಲಿ ತಲೆಗೆ ಬಲವಾದ ಪೆಟ್ಟು ಬೀಳುವುದು ಒಂದು ಕಾರಣ
ತಲೆ ಗಾಯಗಳು ಆಗದಂತೆ   ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುವುದು ನಮ್ಮ ಮೆದುಳಿನ ಆರೋಗ್ಯವನ್ನು ರಕ್ಷಿಸಲು ಸಹಾಯ ಮಾಡುತ್ತದೆ. ಮಿದುಳಿನ ಗಾಯವನ್ನು ತಡೆಗಟ್ಟಲು ಸೀಟ್ ಬೆಲ್ಟ್ ಅಥವಾ ಹೆಲ್ಮೆಟ್ ಧರಿಸುವಂತಹ ಕ್ರಮಗಳು ಮುಖ್ಯ. ಕ್ರೀಡೆಗಳನ್ನು ಆಡುವಾಗ, ಎಲ್ಲಾ ಸುರಕ್ಷತಾ ನಿಯಮಗಳನ್ನು ಅನುಸರಿಸಿಕೊಂಡು ಆಟವಾಡೋಣ.

ನಿಯಮಿತ ವ್ಯಾಯಾಮವು   ಮೆದುಳಿನ ಆರೋಗ್ಯವನ್ನು ಉತ್ತೇಜಿಸಲು ಅತ್ಯಂತ ಪರಿಣಾಮಕಾರಿ ಮಾರ್ಗಗಳಲ್ಲಿ ಒಂದಾಗಿದೆ. ಏರೋಬಿಕ್ಸ್ ನಂತಹ  ವ್ಯಾಯಾಮಗಳು  ಮೆದುಳಿನಲ್ಲಿ ಪ್ರಯೋಜನಕಾರಿ ಜೀನ್ಗಳನ್ನು ಸಕ್ರಿಯಗೊಳಿಸಬಹುದು ಮತ್ತು ಸ್ಮರಣೆಗೆ ಸಹಾಯ ಮಾಡುತ್ತದೆ.   ವ್ಯಾಯಾಮದ ಸಮಯದಲ್ಲಿ ಮೆದುಳಿಗೆ ಹೆಚ್ಚಿದ ರಕ್ತದ ಹರಿವಿನೊಂದಿಗೆ ನಮ್ಮ ಮೆದುಳಿನ ಆರೋಗ್ಯ ವೃದ್ಧಿಸಲು ಸಹಕಾರಿ.
ಆದ್ದರಿಂದ. ಈ ಮೆದುಳು ದಿನದಂದು ದಿನಕ್ಕೆ ಕನಿಷ್ಠ 30 ನಿಮಿಷಗಳ ವ್ಯಾಯಾಮ ಮಾಡುವ ಸಂಕಲ್ಪ ಮಾಡೋಣ.
ಇದರ ಜೊತೆಯಲ್ಲಿ ನಮ್ಮ ಮನಸ್ಸನ್ನು ಸಂತೋಷವಾಗಿಟ್ಟುಕೊಳ್ಳುವುದು ಬಹಳ ಮುಖ್ಯ ಹಾಗೂ ನಾವು ಮಾನಸಿಕವಾಗಿ ಸಕ್ರಿಯವಾಗಿರುವುದು ಮುಖ್ಯ. ಹವ್ಯಾಸಗಳು ಮತ್ತು ವೈಯಕ್ತಿಕ ಆಸಕ್ತಿಗಳು, ಸಾಮಾಜಿಕ ತೊಡಗಿಸಿಕೊಳ್ಳುವಿಕೆ ಮತ್ತು ಹೊಸ ವಿಷಯಗಳನ್ನು ಕಲಿಯುವುದು ಇವೆಲ್ಲವೂ ಮೆದುಳಿನ ಆರೋಗ್ಯದ ಮೇಲೆ ಸಕಾರಾತ್ಮಕ ಪರಿಣಾಮ ಬೀರುತ್ತವೆ. 

ನಮ್ಮ ಮಾನಸಿಕ ಆರೋಗ್ಯ ಮತ್ತು ಮೆದುಳಿನ ಆರೋಗ್ಯ ಪರಸ್ಪರ ಪೂರಕ ಸಂಬಂಧ ಹೊಂದಿದೆ. ವಾಸ್ತವವಾಗಿ, ಖಿನ್ನತೆ ಮತ್ತು ಒತ್ತಡವು ಮೆಮೊರಿ ನಷ್ಟಕ್ಕೆ ಕಾರಣವಾಗಬಹುದು. ನಿಯಮಿತ ಸಾಮಾಜಿಕ ಸಂವಹನವು ಮಾನಸಿಕ ಆರೋಗ್ಯವನ್ನು ಸುಧಾರಿಸಲು ಮತ್ತು ಒತ್ತಡವನ್ನು ನಿಭಾಯಿಸುವ ಆರೋಗ್ಯಕರ ವಿಧಾನಗಳನ್ನು ಉತ್ತೇಜಿಸಲು ಸಹಾಯ ಮಾಡುತ್ತದೆ, ಆದ್ದರಿಂದ ಸಾಧ್ಯವಾದಾಗಲೆಲ್ಲಾ ಸ್ನೇಹಿತರು ಮತ್ತು ಕುಟುಂಬದೊಂದಿಗೆ ಸಂಪರ್ಕ ಸಾಧಿಸಲು ಸಮಯ ಮಾಡಿಕೊಳ್ಳೋಣ.
ಖ್ಯಾತ ಮನೋವೈದ್ಯರಾದ ಸಿ ಆರ್ ಚಂದ್ರಶೇಖರ್ ರವರು ಮೆದುಳು ದಿನದ ಅಂಗವಾಗಿ ನಮಗೆ ಕೆಲ ಅಮೂಲ್ಯವಾದ ಸಲಹೆಗಳನ್ನು ನೀಡಿದ್ದಾರೆ."ಮೆದುಳಿಗೆ ಹಾನಿಯಾಗುವ ಮದ್ಯಪಾನ ತ್ಯಜಿಸಿ, ಜಂಕ್ ಪುಡ್ ವರ್ಜಿಸಿ, ಓದು ಚರ್ಚೆ, ಸಂಗೀತದೊಂದಿಗೆ ಕಾಲ ಕಳೆಯಿರಿ ನಿಮ್ಮ ಮೆದುಳಿನ ಆರೋಗ್ಯ ಕಾಪಾಡಿಕೊಳ್ಳಿ"
ಮೆದುಳು ದಿನದಂದು ನಮ್ಮ  ದೈನಂದಿನ ದಿನಚರಿಯಲ್ಲಿ ಕೆಲ ಸಕಾರಾತ್ಮಕ ಬದಲಾವಣೆಗಳನ್ನು ಅಳವಡಿಸಿಕೊಂಡು ಕ್ ನಮ್ಮ ಮೆದುಳನ್ನು ಆರೋಗ್ಯಕರವಾಗಿ ಮತ್ತು ಕ್ರಿಯಾಶೀಲವಾಗಿಟ್ಟುಕೊಳ್ಳೋಣ.ಮತ್ತು ಮಾನಸಿಕ ಅರೋಗ್ಯ ಪಡೆಯೋಣ.

ಸಿಹಿಜೀವಿ ವೆಂಕಟೇಶ್ವರ
ಶಿಕ್ಷಕರು
ತುಮಕೂರು
9900925529

ತಿರುಮಲಾದ ಶಿಲಾತೋರಣ


 


ಶಿಲಾ ತೋರಣ

ಪ್ರತಿವರ್ಷ ಜುಲೈ ಹದಿಮೂರನ್ನು  ಅಂತರರಾಷ್ಟ್ರೀಯ ಶಿಲಾ ದಿನ ಎಂದು ಆಚರಿಸಲಾಗುತ್ತದೆ. ಈ ಹಿನ್ನೆಲೆಯಲ್ಲಿ ಇತ್ತೀಚೆಗೆ ಕುಟುಂಬ ಸಮೇತ ತಿರುಮಲೆ ಗೆ ಹೋದಾಗ ನೋಡಿದ ಶಿಲಾತೋರಣ ನೆನಪಾಯಿತು.ವೆಂಕಟೇಶ್ವರ ಸ್ವಾಮಿಯ ದರ್ಶನ ಪಡೆದ ನಂತರ ತಿರುಮಲೆಯ ಇತರ ಸ್ಥಳಗಳನ್ನು ನೋಡಲು ಹೊರಟಾಗ ಮೊದಲು ಸಿಕ್ಕಿದ್ದೇ ಈ ಶಿಲಾತೋರಣ!

ತಿರುಮಲ ಬೆಟ್ಟಗಳಲ್ಲಿನ ನೈಸರ್ಗಿಕ ಕಮಾನು ಅಥವಾ ಶಿಲಾತೋರಣ ಒಂದು ಅಧಿಸೂಚಿತ  ರಾಷ್ಟ್ರೀಯ ಭೂ-ಪರಂಪರೆ ಸ್ಮಾರಕವಾಗಿದೆ. ಇದು  ತಿರುಮಲ ವೆಂಕಟೇಶ್ವರ ಸ್ವಾಮಿ ದೇವಾಲಯದ ಉತ್ತರಕ್ಕೆ 2ಕಿಲೊಮೀಟರ್ ದೂರದಲ್ಲಿದೆ. ಸ್ಥಳೀಯ ತೆಲುಗು  ಭಾಷೆಯಲ್ಲಿ ಕಮಾನುಗಳನ್ನು ಸಿಲಾ ತೋರಣಂ ಎಂದೂ ಕರೆಯುತ್ತಾರೆ ತೆಲುಗು ಭಾಷೆಯಲ್ಲಿ ಸಿಲಾ ಎಂದರೆ 'ಬಂಡೆ' ಮತ್ತು ತೋರಣಂ ಎಂದರೆ ಹೊಸ್ತಿಲ ಮೇಲೆ ಕಟ್ಟಲಾದ ಹಾರ.  ಈ ಅಪರೂಪದ ಭೂವೈಜ್ಞಾನಿಕ ಕಮಾನು 1,500 ಮಿಲಿಯನ್ ವರ್ಷಗಳಷ್ಟು ಹಳೆಯದು ಎಂದು ಅಂದಾಜಿಸಲಾಗಿದೆ. ಈ ಭವ್ಯವಾದ, ಸ್ವಾಭಾವಿಕವಾಗಿ ರೂಪುಗೊಂಡ ಕಮಾನು ಏಷ್ಯಾದಲ್ಲಿ ಕಂಡು ಬರುವುದು ಇದೊಂದು ಮಾತ್ರ.    ಮತ್ತು ಪ್ರಪಂಚದಲ್ಲಿ ಈ ರೀತಿಯ ಎರಡು  ರಚನೆಗಳಿವೆ   ಅಮೆರಿಕಾ ದ  ಉತಾಹ್ನ ರೈನ್ಬೋ ಆರ್ಚ್ ಮತ್ತು ಯುನೈಟೆಡ್ ಕಿಂಗ್ಡಮ್ ನಲ್ಲಿ ಕಟ್ ಥ್ರೂ ಆರ್ಚ್ ಇವೆ. 

ಒಂದು ನಂಬಿಕೆಯ ಪ್ರಕಾರ ವೆಂಕಟೇಶ್ವರ ಸ್ವಾಮಿಯು ಭುವಿಗೆ ಬಂದಾಗ ಮೊದಲು ಗಿರಿಯ ಮೇಲೆ ಒಂದು ಪಾದ ಇಟ್ಟ ಜಾಗವು ಇಂದಿನ
ಶ್ರೀವಾರಿ ಪದಾಲು ಅಥವಾ ಸ್ವಾಮೀ ಪಾದ  ಅಲ್ಲಿರುವ  ಪಾದಮುದ್ರೆಗಳನ್ನು ಭಕ್ತರು ಶ್ರಧ್ದಾ ಭಕ್ತಿಯಿಂದ ಪೂಜಿಸುತ್ತಾರೆ. ಇದು ತಿರುಮಲ ಬೆಟ್ಟಗಳ ಅತ್ಯುನ್ನತ ಸ್ಥಳವಾಗಿದೆ, ಕಮಾನಿನ ಸ್ಥಳವಾದ ಶಿಲಾತೋರಣದ ಬಳಿ ಸ್ವಾಮಿಯು ಎರಡನೇ ಹೆಜ್ಜೆ ಇಟ್ಟರು.   ನಂತರ ಮೂರನೇ ಹೆಜ್ಜೆಯನ್ನು  ತಿರುಮಲದಲ್ಲಿರುವ ದೇವಾಲಯದಲ್ಲಿ ಈಗ ಅವರ ವಿಗ್ರಹವನ್ನು ಪೂಜಿಸುವ ಸ್ಥಳದಲ್ಲಿ ಇರಿಸಲಾಗಿದೆ ಎಂದು ಹೇಳಲಾಗುತ್ತದೆ.

1980 ರ ದಶಕದಲ್ಲಿ,   ತಿರುಮಲ ಬೆಟ್ಟಗಳಲ್ಲಿ ಭೂವೈಜ್ಞಾನಿಕ  ಉತ್ಖನನದ ಸಮಯದಲ್ಲಿ ಭೂವಿಜ್ಞಾನಿಗಳು  ಈ ಅಪರೂಪದ ಬಂಡೆಯ ಕಮಾನು ರಚನೆಯನ್ನು ಗಮನಿಸಿದರು. ಇದು ಸಂಪರ್ಕಿಸುವ ತೆಳುವಾದ ಕೊಂಡಿಯೊಂದಿಗೆ ಎರಡು ಭಿನ್ನವಾದ ಬಂಡೆಗಳನ್ನು ಹೊಂದಿದೆ. ಕಲ್ಲಿನ ಕಮಾನುಗಳ ಅಂದಾಜು ಭೂವೈಜ್ಞಾನಿಕ ವಯಸ್ಸು 2.5 ಮಿಲಿಯನ್ ವರ್ಷಗಳು. ಕಮಾನು ರಚನೆಯು ತೀವ್ರವಾದ ಹವಾಮಾನ ಮತ್ತು ಪ್ರಕೃತಿಯ ಟಾರ್ಕ್ ಅನ್ನು ತಡೆದುಕೊಳ್ಳುವ ಸ್ಟ್ರೀಮ್ ಕ್ರಿಯೆಯ ಸವೆತಕ್ಕೆ ಕಾರಣವಾಗಿದೆ. ಇದು ಅಪರೂಪದ ಭೂವೈಜ್ಞಾನಿಕ ದೋಷವಾಗಿದ್ದು, ಇದನ್ನು ತಾಂತ್ರಿಕವಾಗಿ ಭೂವೈಜ್ಞಾನಿಕ ಭಾಷಾವೈಶಿಷ್ಟ್ಯದಲ್ಲಿ ' ಎಪಾರ್ಚಿಯನ್ ಅಸಂಗತತೆ ' ಎಂದು ಕರೆಯಲಾಗುತ್ತದೆ.

ಈ ಶಿಲಾತೋರಣ ನೋಡಲು ಸ್ಥಳೀಯವಾಗಿ ಲಭ್ಯವಿರುವ ಟ್ಯಾಕ್ಸಿ ಜೀಪ್ ಲಭ್ಯವಿವೆ. ತಮ್ಮ ಖಾಸಗಿ ವಾಹನಗಳಲ್ಲೂ ಹೋಗಬಹುದು ಆದರೆ ಚಾಲಕರು ಘಟ್ಟದ ಪ್ರದೇಶದಲ್ಲಿ ವಾಹನ ಚಲಾಯಿಸುವ ಅನುಭವ ಇದ್ದರೆ ಉತ್ತಮ.
ಬೆಳಿಗ್ಗೆ ಆರರಿಂದ   ಎಂಟು ಗಂಟೆಗಳ ಸಮಯದಲ್ಲಿ ಈ ಪ್ರದೇಶದ ವೀಕ್ಷಿಸಲು ಸೂಕ್ತ  ಅಗಾಗ್ಗೆ ಬಂದು ಮಾಯವಾಗುವ ಮಂಜು, ದಟ್ಟವಾದ ಕಾಡಿನ ಹಿನ್ನೆಲೆಯಲ್ಲಿ ಶಿಲಾತೋರಣ ನೋಡುವುದೇ ಒಂದು ಸುಂದರ ಅನುಭವ. ಶಿಲಾತೋರಣದ ಮುಂಭಾಗದಲ್ಲಿ   ಉತ್ತಮವಾಗಿ ನಿರ್ವಹಿಸಲ್ಪಟ್ಟ ಉದ್ಯಾನವಿದೆ. ಸೂರ್ಯಾಸ್ತವು ಭೇಟಿ ನೀಡಲು ಉತ್ತಮ ಸಮಯವಾಗಿದೆ, ಏಕೆಂದರೆ ಕಮಾನು ಸೂರ್ಯಾಸ್ತದ  ಬೆಳಕಿನಲ್ಲಿ ಇನ್ನಷ್ಟು ಆಕರ್ಷಕವಾಗಿ ಮತ್ತು ನಿಗೂಢವಾಗಿ ಕಾಣುತ್ತದೆ.
ನೀವು ಮುಂದಿನ ಬಾರಿ ತಿರುಮಲೆಗೆ ಭೇಟಿ ನೀಡಿದಾಗ ವೆಂಕಟೇಶ್ವರ ಸ್ವಾಮಿಯ ದರ್ಶನದ ಬಳಿಕ ಈ ಪ್ರಾಕೃತಿಕ ಪರಂಪರೆಯನ್ನು ನೋಡಿ ಕಣ್ತುಂಬಿಕೊಳ್ಳಲು ಮರೆಯದಿರಿ.

ಸಿಹಿಜೀವಿ ವೆಂಕಟೇಶ್ವರ
ತುಮಕೂರು
9900925529.


14 July 2023

ಟೊಮ್ಯಾಟೋ ಪುರಾಣ...


 

ಟೊಮ್ಯಾಟೊ ಪುರಾಣ...

ಟೊಮ್ಯಾಟೊ...ಟೊಮ್ಯಾಟೊ... ದೇಶದಾದ್ಯಂತ ಜನರ ನಿದ್ದೆಗೆಡಿಸಿದ ಪದ! ಅದರ ದರ ಕೇಳಿ ಜನರು ಕನಸಲ್ಲೂ ಬೆಚ್ಚಿಬೀಳುತ್ತಿದ್ದಾರೆ.

ಹೆಂಡತಿ ಬಲವಂತ ಮಾಡಿದಾಗ
ಅವನಂದ ಬೇಡ ಟೊಮ್ಯಾಟೊ
ಜಾಸ್ತಿಯಾಗಿದೆ  ಅದರ ದರ |
ಆಯ್ತು ತರಬೇಡಿ ಬಿಡಿ
ನಿಮಗೆ ಸಿಗುವುದು ಡೌಟು
ನನ್ನ ಅಧರ ||

ಕೆಲವೆಡೆ ಟೊಮ್ಯಾಟೊ ಅಂಗಡಿಗಳಲ್ಲಿ ಸಿಸಿ ಟಿ ವಿ ಅಳವಡಿಸಿದ್ದರೆ ಇನ್ನೂ ಕೆಲವೆಡೆ ಟೊಮ್ಯಾಟೊ ಬೆಳೆದ ರೈತರು ಕಳ್ಳರ ಕಾಟದಿಂದ  ಹೈರಾಣಗಿದ್ದಾರೆ . ರಾತ್ರಿಯಿಡಿ ಕಣ್ಣಿಗೆ ಎಣ್ಣೆ ಬಿಟ್ಟುಕೊಂಡು ತಮ್ಮ ಬೆಳೆ ಕಾಯುವ ದೃಶ್ಯಗಳು ಸಾಮಾನ್ಯವಾಗಿವೆ.
ಈ ಟೊಮ್ಯಾಟೊ ಪ್ರವರ ಇಲ್ಲಿಗೇ ನಿಂತಿಲ್ಲ ಇದು ಕೆಲ ಸಂಸಾರಗಳನ್ನು ಒಡೆದ ಅಪಖ್ಯಾತಿಗೆ ಒಳಗಾಗಿದೆ.ಗಂಡ ಎರಡು ಟೊಮ್ಯಾಟೊ ಹಣ್ಣು ಹಾಕಿ ಅಡುಗೆ ಮಾಡಿದ ಎಂದು ಮುನಿದ ಹೆಂಡತಿ ಜಗಳವಾಡಿಕೊಂಡು ಮನೆ ಬಿಟ್ಟು ತವರು ಮನೆಗೆ ಹೋದ ಬಗ್ಗೆ ಹೊರ ರಾಜ್ಯದಿಂದ ವರದಿಯಾಗಿದೆ.

ರುಚಿಯಿರಲಿ ಎಂದು
ಎರಡು ಟೊಮ್ಯಾಟೊ ಹೆಚ್ಚು
ಹಾಕಿ ಅಡುಗೆ ಮಾಡಿದೆ |
ಬೇಸರಗೊಂಡು ತವರು
ಮನೆಗೆ ಹೊರಟೇ ಬಿಟ್ಟಳು
ನನ್ನ ಮುದ್ದಿನ ಮಡದಿ ||

ಎಂದು ವರ ಪರಿತಪಿಸುತ್ತಿದ್ದಾನೆ.
ಇದಕ್ಕೆ ವಿರುದ್ಧವಾಗಿ ನೆರೆಮನೆಯವನು ಟೊಮ್ಯಾಟೊ ತರದೇ ತನ್ನ ಹೆಂಡತಿಗೆ ಗೋಳಾಡಿಸಿ ಯಾಮಾರಿಸಿದ್ದಾನೆ.

ಮಾರುಕಟ್ಟೆಗೆ ಹೋಗಿ
ಟೊಮ್ಯಾಟೊ ತನ್ನಿ ಎಂದು
ಗಂಡನಿಗೆ ಹೇಳುತ್ತಿದ್ದಾಳೆ ತಟ್ಟಿ ತಟ್ಟಿ|
ಹುಣಸೆ ಹಣ್ಣು ಹಾಕಿ
ಅಡುಗೆ ಮಾಡಿ ಬಿಡೆ
ಟೊಮ್ಯಾಟೊ ಆಗಿದೆ ತುಟ್ಟಿ ತುಟ್ಟಿ||

ಇತ್ತೀಚಿನ ದಿನಗಳಲ್ಲಿ ಟೊಮ್ಯಾಟೊ ಹಾರ ಹಾಕಿಕೊಂಡು ಓಡಾಡುವ ಜನರು ಅಲ್ಲಲ್ಲಿ ಕಾಣಬಹುದು

ಮೊದಲು ನನ್ನವಳು ವರಾತ
ತೆಗೆಯುತ್ತಿದ್ದಳು ಎಂದು
ಕೊಡಿಸುವಿರಿ ಬಂಗಾರದ
ಕಾಸಿನ ಸರ, ಅವಲಕ್ಕಿ ಸರ|
ಈಗ ವರಸೆ ಬದಲಿಸಿದ್ದಾಳೆ
ಕೊಡಿಸಿ ಸಾಕು ಒಂದು
ಟೊಮ್ಯಾಟೊ ಸರ ಅವಳಿಗೂ
ತಿಳಿದುಹೋಗಿದೆ ಏರಿದ ಟೊಮ್ಯಾಟೊ ದರ ||

ಟೊಮ್ಯಾಟೊ ಬಗ್ಗೆ ಮಾತನಾಡುವಾಗ
ಮತ್ತಷ್ಟು ಸ್ವಾರಸ್ಯಕರ ಸಂಗತಿಗಳು ನಮ್ಮ ಗಮನ ಸೆಳೆಯುತ್ತವೆ.
ಕೆಂಪು ಬಣ್ಣದಲ್ಲಿ ಇರುವುದು ಮಾತ್ರ ಟೊಮೆಟೊ ಅಲ್ಲ. ಬದಲಿಗೆ ಹಳದಿ, ಗುಲಾಬಿ, ನೇರಳೆ, ಕಪ್ಪು ಹಾಗೂ ಬಿಳಿ ಬಣ್ಣಗಳ ಟೊಮೆಟೊಗಳು ಇವೆ.
ಯುರೋಪ್ನಲ್ಲಿ ಮೊದಲ ಬಾರಿಗೆ ಬೆಳೆದ ಟೊಮೆಟೊ ಹಳದಿ ಬಣ್ಣದ್ದಾಗಿತ್ತು. ಹೀಗಾಗಿ ಅಲ್ಲಿ ಇದನ್ನು ಆರಂಭದಲ್ಲಿ 'ಪೊಮೊ ಡಿ'ಒರೊ' (ಚಿನ್ನದ ಸೇಬು) ಎಂದು ಕರೆಯಲಾಗಿತ್ತು,
ಜಗತ್ತಿನಾದ್ಯಂತ ಟೊಮೆಟೊದ ಸುಮಾರು 10 ಸಾವಿರ ತಳಿಗಳಿವೆ ಎಂದು ಸಸ್ಯ ವಿಜ್ಞಾನಿಗಳು ಹೇಳುತ್ತಾರೆ.
ಅಮೆರಿಕಾದ ಫ್ಲೋರಿಡಾದಲ್ಲಿರುವ ವಾಲ್ಟನ್ ಡಿಸ್ನಿ ರೆಸಾರ್ಟ್ನಲ್ಲಿ ಈವರೆಗೂ ಪತ್ತೆಯಾದ ಟೊಮೆಟೊ ಗಿಡಗಳಲ್ಲಿ ಅತ್ಯಂತ ದೊಡ್ಡದು.
ಈ ಗಿಡ 56.73 ಚದರ ಮೀಟರ್ನಷ್ಟು ವ್ಯಾಪ್ತಿ ಹೊಂದಿದೆ. ಹಾಗೆಯೇ ಜಗತ್ತಿನ ಅತಿ ದೊಡ್ಡ ಟೊಮೆಟೊ 1986ರಲ್ಲಿ ಅಮೆರಿಕಾದ ಒಕ್ಲಹೊಮಾದಲ್ಲಿ ಪತ್ತೆಯಾಗಿತ್ತು. ಒಂದು ಟೊಮೆಟೊ3.5 ಕೆ.ಜಿ. ತೂಗುತ್ತಿತ್ತು. ಸ್ಪೇನ್ನಲ್ಲಿ ನಡೆಯುವ ಲಾ ಟೊಮಾಟಿನಾ ಎಂಬ ವಾರ್ಷಿಕ ಹಬ್ಬದಲ್ಲಿ ಸುಮಾರು 1.5ಲಕ್ಷ ಟೊಮೆಟೊವನ್ನು ಹೋಳಿ ಹಬ್ಬದ ಬಣ್ಣದ ರೀತಿಯಲ್ಲಿ ಜನರು ಪರಸ್ಪರ ಎರಚಿಕೊಂಡು ಸಂಭ್ರಮಿಸುತ್ತಾರೆ. ಈ ವರ್ಷ ಆಗಸ್ಟ್ 30ರಂದು ಈ ಹಬ್ಬಕ್ಕೆ ದಿನಾಂಕ ನಿಗದಿಯಾಗಿದೆ.
ಹೀಗೆ ಟೊಮ್ಯಾಟೊ ಪುರಾಣ ಹೇಳುತ್ತಾ ಹೊರಟರೆ ಮುಗಿಯುವುದಿಲ್ಲ. ಏರಿರುವ ಕೆಂಪಣ್ಣಿನ ದರ ಇಳಿಯಲಿ ರೈತರು ಮತ್ತು ಗ್ರಾಹಕರ ಮೊಗದಲ್ಲಿ  ಆದರ್ಶ ದರದಿಂದ ಮಂದಹಾಸ ಮೂಡಲಿ ಕೆಂಪಾದ ಹಣ್ಣಿನ ಪರಿಣಾಮವಾಗಿ ಮನಸ್ತಾಪವಾದ ಮನಗಳು ಒಂದುಗೂಡಲಿ ಎಂಬುದೇ ನಮ್ಮ ಆಶಯ.

ಸಿಹಿಜೀವಿ
ಸಿ ಜಿ ವೆಂಕಟೇಶ್ವರ
ತುಮಕೂರು
9900925529

07 July 2023

ಕೆಂಬಳಲಿನಲ್ಲಿ ಅರಳಿದ ಸುಮ


 


ಕೆಂಬಳಲಿನಲ್ಲಿ ಅರಳಿದ ಸುಮ...


ಭಾನುವಾರ ಹಿಂದೂ ಪತ್ರಿಕೆ ಓದುವಾಗ ಒಬ್ಬ ವಿದ್ಯಾರ್ಥಿ ಹತ್ತತರ ನಾಲ್ಕು ಕೋಟಿ ಫೆಲೋಶಿಪ್ ಪಡೆದು ಅಮೆರಿಕಾದ ಪೆನ್ಸಿಲ್ವೇನಿಯಾ ವಿಶ್ವವಿದ್ಯಾಲಯದಲ್ಲಿ ಡಾಕ್ಟರೇಟ್ ಮಾಡಲು ಆಯ್ಕೆಯಾಗಿರುವುದು ಕೇಳಿ ಬಹಳ ಸಂತಸವಾಗಿ ಲೇಖನ ಓದಿದಾಗ ಆ ಹುಡುಗ ಕೆಂಬಳಲು ಗ್ರಾಮದವನು ಎಂದು ಗೊತ್ತಾಗಿ ನನ್ನ ಸಹೋದ್ಯೋಗಿಗಳಾದ ಕೋಟೆ ಕುಮಾರ್ ರವರು  ಅದೇ ಗ್ರಾಮದವರೆಂದು ನೆನಪಾಗಿ ಅವರಿಗೆ ಕರೆ ಮಾಡಿ ವಿಚಾರಿಸಿದಾಗ ಯಶವಂತ್ ಮಹೇಶ್ ಬಗ್ಗೆ ಅವರು ಮೆಚ್ಚುಗೆ ಸೂಚಿಸಿದರು.ಜೊತೆಗೆ ನಮ್ಮ ಊರು ಮತ್ತು ನಾಡಿಗೆ ಕೀರ್ತಿ ತಂದ ಯುವಕನ ಸಾಧನೆಗೆ ಅವರು  ಹೆಮ್ಮೆ ಪಟ್ಟರು.


ಕರ್ನಾಟಕದ ಈ  ವಿದ್ಯಾರ್ಥಿಯ ಸಾಧನೆಯನ್ನು ದೇಶವೇ ಕೊಂಡಾಡುತ್ತಿದೆ. ತುಮಕೂರಿನ ಯಶವಂತ್ ಮಹೇಶ್ ಇದೀಗ ಅಮೆರಿಕದ ಪೆನ್ಸಿಲ್ವೇನಿಯಾ ವಿಶ್ವವಿದ್ಯಾಲಯದಲ್ಲಿ ಜೈವಿಕ ಇಂಜಿನಿಯರಿಂಗ್‌ನಲ್ಲಿ ಡಾಕ್ಟರೇಟ್ ಅಧ್ಯಯನಕ್ಕಾಗಿ 3.8 ಕೋಟಿ ರೂಪಾಯಿ ಫೆಲೋಶಿಪ್ ಪಡೆದಿದ್ದಾರೆ.  ಸದ್ಯ ಬೆಂಗಳೂರಿನಲ್ಲಿ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್‌ನಲ್ಲಿ ಸಂಶೋಧನಾ ಸಹಾಯಕರಾಗಿರುವ ಮಹೇಶ್ ಯಶವಂತ್, ತುಮಕೂರಿನ ಸಿದ್ದಗಂಗಾ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (SIT) ಜೈವಿಕ ತಂತ್ರಜ್ಞಾನದಲ್ಲಿ ಎಂಜಿನಿಯರಿಂಗ್ ಪದವಿ ಪಡೆದಿದ್ದಾರೆ 

ಪೆನ್ಸಿಲ್ವೇನಿಯಾ ವಿಶ್ವವಿದ್ಯಾಲಯ ಅಮೆರಿತ ಪ್ರತಿಷ್ಠಿತ ಯುನಿವರ್ಸಿಟಿಗಳಲ್ಲಿ ಒಂದು. ಇದು ಅಮೆರಿಕದ ಅತ್ಯಂತ ಹಳೆಯ ಸಂಸ್ಥೆಯಾಗಿದೆ.  ಇದೇ ವಿಶ್ವವಿದ್ಯಾಲಯದಲ್ಲಿ ಕೋವಿಡ್ ವೈರಸ್ ವಿರುದ್ದ ಸಮರ್ಥವಾಗಿ ಹೋರಾಡಬಲ್ಲ MRNA ಲಸಿಕೆಯನ್ನು ಅಭಿವೃದ್ಧಿಪಡಿಸಲಾಗಿತ್ತು. ಇದೀಗ ಇದೇ ವಿಶ್ವವಿದ್ಯಾಲದಲ್ಲಿ ಡಾಕ್ಟರೇಟ್ ಅಧ್ಯಯನಕ್ಕೆ ಯಶವಂತ್ ಮಹೇಶ್ 3.8 ಕೋಟಿ ರೂಪಾಯಿ ಫೆಲೋಶಿಪ್ ಪಡೆದಿದ್ದಾರೆ. ಕ್ಯಾನ್ಸರ್ ಸಿಸ್ಟಮ್ಸ್ ಬಯಾಲಜಿ ಲ್ಯಾಬೊರೇಟರಿನಲ್ಲಿ ಸಂಶೋಧನೆ ಮಾಡುತ್ತಿರುವ ಯಶವಂತ್ ಮಹೇಶ್, ಇದೀಗ ಈ ಅವಕಾಶಕ್ಕೆ ಅತೀವ ಸಂತಸ ವ್ಯಕ್ತಪಡಿಸಿದ್ದಾರೆ. "ಜೈವಿಕ ಎಂಜಿನಿಯರಿಂಗ್‌ನಲ್ಲಿ ಪಿಹೆಚ್‌ಡಿ ಮಾಡುತ್ತಿದ್ದೇನೆ. ಈ ಕೋರ್ಸ್ 5 ವರ್ಷವಿದೆ. ಇದೀಗ ನೇರವಾಗಿ ನಾನು ಪಿಹೆಚ್‌ಡಿಗೆ ಆಯ್ಕೆಯಾಗಿದ್ದೇನೆ. ಅದರಲ್ಲೂ ಸಂಪೂರ್ಣ ಫೆಲೋಶಿಪ್ ಲಭ್ಯವಾಗಿದೆ "ಎಂದಿದ್ದಾರೆ. 


ಯಶವಂತ್ ಮಹೇಶ್ ರೈತ ಕುಟುಂಬದಿಂದ ಬಂದ ಪ್ರತಿಭಾನ್ವಿತ ವಿದ್ಯಾರ್ಥಿ. ತುಮಕೂರಿನ ಸಿದ್ದಗಂಗಾದಲ್ಲಿ ವಿಧ್ಯಾಭ್ಯಾಸ ಮುಗಿಸಿದ ಯಶವಂತ್ ಮಹೇಶ್ ಹಲವು ಪ್ರತಿಷ್ಠಿತ ವಿಶ್ವವಿದ್ಯಾಲಯದ ಸ್ಪರ್ಧೆಗಳಲ್ಲಿ ಪ್ರಶಸ್ತಿ ಪಡೆದುಕೊಂಡಿದ್ದಾರೆ.  ತುಮಕೂರು ಜಿಲ್ಲೆಯ ಹೆಬ್ಬೂರು ಹೋಬಳಿಯ ಕೆಂಬಾಳು ಗ್ರಾಮದ ನಿವಾಸಿಯಾಗಿರುವ ಯಶವಂತ್ ಮಹೇಶ್ ಅಧ್ಯಯನದಲ್ಲಿ ಹಲವು ಚಿನ್ನದ ಪದಕ ಗೆದ್ದುಕೊಂಡಿದ್ದಾರೆ. ಇನಿಶಿಯೇಟಿವ್ ಫಾರ್ ರಿಸರ್ಚ್ ಅಂಡ್ ಇನ್ನೋವೇಶನ್ ಇನ್ ಸೈನ್ಸ್ (IRIS), ನ್ಯಾಷನಲ್ ಸೈನ್ಸ್ ಫೇರ್ 2012ರ ಯೋಜನೆಯಲಲ್ಲಿ ಯಶವಂತ್ ಮಹೇಶ್ ಚಿನ್ನದ ಪದಕ ಪಡೆದಿದ್ದಾರೆ. ಅಮೆರಿಕದ  ಫೀನಿಕ್ಸ್‌ನಲ್ಲಿ ವಾರ್ಷಿಕ ಇಂಟೆಲ್ ಇಂಟರ್‌ನ್ಯಾಶನಲ್ ಸೈನ್ಸ್ ಆಫ್ ಎಂಜಿನಿಯರಿಂಗ್ ಫೇರ್‌ನಲ್ಲಿ ಭಾರತವನ್ನು ಪ್ರತಿನಿಧಿಸಿದ ಕಿರಿಯ ವಿದ್ಯಾರ್ಥಿ ಅನ್ನೋ ಹೆಗ್ಗಳಿಕೆಗೂ ಯಶವಂತ್ ಮಹೇಶ್ ಪಾತ್ರರಾಗಿದ್ದರು. ಕರ್ನಾಟಕದ ಸರ್ಕಾರದ ವಿಜ್ಞಾನ ಹಾಗೂ ತಂತ್ರಜ್ಞಾನ ಇಲಾಖೆ ನೀಡುವ ಜ್ಯೂನಿಯರ್ ವಿಜ್ಞಾನಿ ಪ್ರಶಸ್ತಿಯನ್ನು ಯಶವಂತ್ ಮಹೇಶ್ ಪಡೆದುಕೊಂಡಿದ್ದಾರೆ. ಇದೀಗ ಮಹೇಶ್ ಸಾಧನೆಯನ್ನು ಪೋಷಕರು, ಕುಟುಂಬಸ್ಥರು ಕೊಂಡಿದ್ದಾರೆ. ಅಮೆರಿಕದಲ್ಲಿ ಡಾಕ್ಟರೇಟ್ ಅಧ್ಯಯನದ ಖರ್ಚು ವೆಚ್ಚ ಸಂಪೂರ್ಣವಾಗಿ ಇದೇ ಫೆಲೋಶಿಪ್‌ನಿಂದ ಸುಲಭವಾಗಲಿದೆ.


ಛಲಬಿಡದೆ ತಮ್ಮ ಗುರಿಯೆಡೆಗೆ ಸಾಗಿದರೆ ಸಾಧನೆ ಅಸಾಧ್ಯವಲ್ಲ ಎಂಬುದನ್ನು ಯಶವಂತ್ ಮಹೇಶ್ ತೋರಿಸಿಕೊಟ್ಟಿದ್ದಾರೆ.ಇಂದಿನ ಯುವಕರಿಗೆ ಮತ್ತು ಶಾಲಾ ಮಕ್ಕಳಿಗೆ ಯಶವಂತ್ ಮಾದರಿಯಾಗಲಿ ಎಂಬುದೇ ನಮ್ಮ ಆಶಯ..


ಸಿಹಿಜೀವಿ

ಸಿ ಜಿ ವೆಂಕಟೇಶ್ವರ

ತುಮಕೂರು.