09 January 2022

ಕನ್ನಡಿಗರಿಗೆ ಮೊದಲು ಕನ್ನಡದ ಪ್ರಜ್ಞೆ ಇರಬೇಕು.


 



ಕನ್ನಡಿಗರಿಗೆ ಮೊದಲು ಕನ್ನಡದ ಪ್ರಜ್ಞೆ ಇರಬೇಕು.


"ಕನ್ನಡ ಪ್ರಜ್ಞೆಯ ಸುತ್ತಮುತ್ತ" ಎಂಬ ಪುಸ್ತಕದ ಅಡಿ ಬರಹದಲ್ಲಿ

ನಾಡು-ನುಡಿ-ಚಿಂತನೆ ಎಂಬ ಸಾಲು ಓದಿ ಪುಸ್ತಕ ಓದಲು ಶುರು ಮಾಡಿದರೆ ಅಜಮಾಸು 324 ಪುಟಗಳಲ್ಲಿ 72 ಲೇಖಕರು ತಮ್ಮ ಲೇಖನಗಳ ರಸಪಾಕ ಉಣಬಡಿಸಿದ್ದಾರೆ.ಪುಸ್ತಕ ಓದಿ ಮುಗಿಸಿದಾಗ ಎಪ್ಪತ್ತೆರಡು ಪುಸ್ತಕಗಳನ್ನು ಓದಿದ ಅನುಭವವಾಗುತ್ತದೆ. ಇಂತಹ ಪುಸ್ತಕ ಓದಲು ಕಳಿಸಿದ ಆತ್ಮೀಯರು ಗೆಳೆಯರು ಮತ್ತು ಸಾಹಿತಿಗಳೂ ಆದ ಕಿರಣ್ ಹಿರಿಸಾವೆ ರವರಿಗೆ ಮೊದಲಿಗೆ ನನ್ನ ನಮನಗಳ ಸಲ್ಲಿಸುವೆ .


ಡಾ. ಗೀತಾ ಡಿ .ಸಿ. ಮತ್ತು

ನಾಗರೇಖಾ ಗಾಂವಕರ ರವರು ಜಂಟಿಯಾಗಿ ಈ ಕೃತಿಯ ಸಂಪಾದನೆ ಮಾಡಿರುವರು.ಇದರಲ್ಲಿ ಬರುವ 

72 ಲೇಖನಗಳು ಒಂದೊಂದು ಮೌಲಿಕ ಮತ್ತು ಚಿಂತನಾರ್ಹ ಲೇಖನಗಳಾಗಿವೆ . ಸಂಪಾದಕರ ಪ್ರಯತ್ನ ನಿಜಕ್ಕೂ ಅಭಿನಂದನಾರ್ಹ.


ಎಲ್ಲಾ ಲೇಖಕರ ಲೇಖನಗಳು ಅತ್ಯುತ್ತಮ ಆದರೂ ಕೆಲವರ ಚಿಂತನಾರ್ಹ ಅಭಿಪ್ರಾಯಗಳ ಮೆಲುಕು ಹಾಕುವ ಕಾರ್ಯ ಮಾಡುವುದಾದರೆ,

ಕುಸುಮಾ ಆಯರಹಳ್ಳಿ ರವರು ನಮ್ಮ ಕನ್ನಡದ ಪ್ರಾದೇಶಿಕ ಭಾಷಾ ಸೊಗಡು ಇಂದು ನಶಿಸುವ ಬಗ್ಗೆ ನಾವು ಚಿಂತಿಸಬೇಕಿದೆ ಎಂದಿರುವುದು ಮನನೀಯವಾಗಿದೆ .


ಮುಂಬಯಿ ಕನ್ನಡ ಸಂಘಟನೆಯವರು ನಿಘಂಟು ತಜ್ಞರಾದ ಜೀವಿರವರ ಸಂದರ್ಶನದಲ್ಲಿ  ಕೇಳಿದ ಪ್ರಶ್ನೆಗೆ ಅವರು   "ಕನ್ನಡದ ಅಳಿವು ಅಸಾಧ್ಯ. ಕನ್ನಡದ ತಾಕತ್ತು ಅನನ್ಯ ಎಂಬುದು ನಮಗೆ ಸಮಾಧಾನ ತರುತ್ತದೆ. 

ಅವರ ಮಾತುಗಳಲ್ಲೇ ಹೇಳುವುದಾದರೆ

"ಕನ್ನಡ ಅಳಿಯಲ್ಲ  ,ಅನ್ಯಭಾಷಾ ಪದಗಳು ಕನ್ನಡದಲ್ಲಿ ಬೆರೆತರೆ ತಪ್ಪಿಲ್ಲ , ಶಾಸ್ತ್ರೀಯ ಭಾಷೆ ಅನುದಾನ ಪಡೆಯಲು ಯೋಜನೆ ರೂಪಿಸಬೇಕು"


ಕಿರಣ್ ಹಿರಿಸಾವೆ ರವರು 

ಐಟಿ ಕಂಪನಿಗಳು  ಕನ್ನಡದ ಬೆಳವಣಿಗೆಗೆ ಪರೋಕ್ಷವಾಗಿ ಹೇಗೆ ಕೊಡುಗೆ  ನೀಡಿವೆ ಮತ್ತು ಪ್ರತ್ಯಕ್ಷವಾಗಿ ಕನ್ನಡ ಬೆಳೆಯಲು ಬೆಂಗಳೂರಿನ ಐಟಿ ಕಂಪನಿಗಳಲ್ಲಿ ಕನ್ನಡ ಉಳಿಯಲು 

 ಹೆಚ್. ಆರ್ ರಿಸೆಪ್ಷನಿಸ್ಟ್, ಕಟ್ಟಡ ಕಾಮಗಾರಿಯವರು  ಇಂತಹ ಹುದ್ದೆಗಾದರೂ  ಕನ್ನಡದ ಜನರ ನೇಮಕಗೊಂಡರೆ ಅವರು ಆಡುವ ಕನ್ನಡ ಮಾತುಗಳು ಆಂಗ್ಲಮಯವಾದ ಐಟಿ ಕಂಪನಿಗಳಲ್ಲಿ ಸ್ವಲ್ಪಮಟ್ಟಿಗೆ ಕನ್ನಡ ನಲಿಯಲಿದೆ ಎಂಬ ಸಲಹೆ ಸ್ವಾಗತಾರ್ಹ.


ಈ ಪುಸ್ತಕದಲ್ಲಿ ಮಾತೃಭಾಷೆ ಬೇಕೇ ಬೇಕು ಎಂದು ಕೆಲವರು ವಾದ ಮಂಡಿಸಿದರೆ .ಅದಕ್ಕಾಗಿಯೇ ಅಷ್ಟೊಂದು ಚಿಂತೆ ಬೇಡ ಎಂಬುದು ಕೆಲವರ ವಾದವಾಗಿದೆ.

ವಾದಗಳು ಎರಡೂ ಕಡೆಯಿಂದಲೂ ಗಟ್ಟಿಯಾಗಿ ಕೇಳಿಸುತ್ತವೆ. ಸಮರ್ಥನೀಯವಾಗಿ ಕೇಳಿಸುತ್ತವೆ. ಈ ವಿದ್ಯಮಾನವನ್ನು ಸ್ವಾತಂತ್ರ್ಯ ಮತ್ತು ಸಮಾನತೆ ಎಂಬ ಪರಿಕಲ್ಪನೆಗಳಿಂದ ಅರ್ಥಮಾಡಿಕೊಳ್ಳುವ ಪ್ರಯತ್ನಗಳೂ ನಡೆದಿವೆ.


ಡಾ. ಬಿ .ಜನಾರ್ಧನ ಭಟ್ ರವರು ವಾಸ್ತವವಾಗಿ ವಿಷಯ ವಿಶ್ಲೇಷಣೆ ಮಾಡಿದ್ದಾರೆ .ಮಾತೃಭಾಷೆಯೇ ಬೇಕು ಎಂದು ಹೋರಾಡಿದ ನೇಪಾಳ, ಝಾರ್ಕಂಡ್ ರಾಜ್ಯದಲ್ಲಿ ಹೇಗೆ ಅದು ಹಳ್ಳ ಹಿಡಿದು ಪುನಃ ಇತರೆ ಭಾಷೆಯಲ್ಲಿ ಶಿಕ್ಷಣ ಮೇಲುಗೈ ಸಾಧಿಸಿದೆ ಎಂದು ವಿವರಗಳನ್ನು ನೀಡಿದ್ದಾರೆ.

ಮಾತೃಭಾಷೆಯೇ ಬೇಕು ಮತ್ತು ಬೇಡ ಎಂದು ವಾದ ಮಂಡಿಸುತ್ತಾ ಕೂತಿರುವ ಬದಲು ಕನ್ನಡ ಕಲಿಕೆಯನ್ನು ಕಡ್ಡಾಯಗೊಳಿಸುವುದು ಮತ್ತು ಪರಿಣಾಮಕಾರಿಯಾಗಿ ಭಾಷೆ ಮತ್ತು ಸಾಹಿತ್ಯವನ್ನು ಬೋಧಿಸುವ ಕಡೆಗೆ ಗಮನ ಹರಿಸಬೇಕಾಗಿದೆ. ನಾವು ಕನ್ನಡವನ್ನು ಕಲಿಸಬೇಕು ಎನ್ನುವುದನ್ನು ಮಾತಾಡುತ್ತಿದ್ದೇವೆಯೇ ಹೊರತು ಹೇಗೆ ಅನ್ನುವುದನ್ನು ಯೋಚಿಸುತ್ತಿಲ್ಲ.


ಪ್ರತಿ ಸೀಮೆಗೂ ಒಂದು ಹೊಸ ಪದವಿದೆ, ಒಂದು ಅರ್ಥವಿದೆ, ಒಂದು ಭಾವುಕತೆ ಇದೆ  ಮತ್ತು ಅವೆಲ್ಲವುಗಳ ಸಂಗ್ರಹವೇ ಈ ಕನ್ನಡವಾಗಿ ಕಣ್ಣೆದುರಿಗಿದೆ. ಒಟ್ಟಾರೆಯಾಗಿ ನಮ್ಮ ತಾಯ್ತುಡಿಯ ಎದೆ ಹಾಲನ್ನು ಕುಡಿದಿದ್ದೇವೆ ನಮ್ಮ ಉಸಿರಿನ ಕೊನೆಯವರೆಗೂ ಋಣಕ್ಕಾದರೂ ಅವಳನ್ನು ಉಳಿಸಿ-ಬೆಳಸುವಲ್ಲಿ ಸಕ್ರಿಯವಾಗಬೇಕಿದೆ. ನಮ್ಮ ಈ ಲಿಪಿಗಳ ರಾಣಿ ಎಂದೂ ನೊಂದುಕೊಳ್ಳದಂತೆ ಜತನದಿಂದ ಕಾಯ್ದುಕೊಳ್ಳಬೇಕಾಗಿದೆ.ಎಂಬ ಮೌನೇಶ್ ಎಂ ವಿಶ್ವಕರ್ಮ ರವರ ಮಾತುಗಳು ಚಿಂತನಾಯೋಗ್ಯ. 


ಡಾ. ಎಚ್ .ಎಸ್. ರಾಘವೇಂದ್ರ ರಾವ್  ರವರು ಕನ್ನಡ ಪ್ರಜ್ಞೆ ಸಂಪೂರ್ಣವಾಗಿ ಕಡಿಮೆಯಾಗಿಲ್ಲ ಎಂದು ಆಶಾದಾಯಕ ಅಭಿಪ್ರಾಯವನ್ನು ಮಂಡಿಸುತ್ತಾರೆ.ಅವರ ಮಾತುಗಳಲ್ಲಿ ಹೇಳುವುದಾದರೆ

"ಈಗಲೂ  ಪ್ರೀತಿಯಿಂದ ಕನ್ನಡ ಕಲಿಸುವ  ಕೆಲಸ ಮಾಡುತ್ತಿರುವ ಹಲವು ಮೇಷ್ಟ್ರುಗಳು ಮೇಡಮ್ಮುಗಳು ನನಗೆ ಗೊತ್ತು. ಅವರಲ್ಲಿ ಅನೇಕರು ಸರಕಾರೀ ಶಾಲೆಗಳಲ್ಲಿ ಇದ್ದಾರೆ. ಅಂತಹವರ ಸಂತತಿ ಸಾವಿರವಾಗಲಿ, ಅಂತಹವರಿಗೆ ಅಗತ್ಯವಾದ ಪರಿಸರವನ್ನು ರೂಪಿಸಿಕೊಡುವುದು ಸಮುದಾಯಗಳ ಹಾಗೂ ಸರ್ಕಾರದ ಕೆಲಸ. "


ವಾಸುದೇವ್ ನಾಡಿಗ್ ರವರು ಅನ್ಯ ಭಾಷೆಗಳು ಮನೆಯ ಕಿಟಕಿಗಳು ಇದ್ದ ಹಾಗೆ, ತಾಯ್ನುಡಿ ಹೆಬ್ಬಾಗಿಲು ಇದ್ದ ಹಾಗೆ ಎಂಬ ಭಾಷಣದ ಕೋಟ್ಗಳು ಕ್ಲೀಷೆಯಾದ ಈ ಹೊತ್ತಿನಲ್ಲಿ ಮಾತನ್ನು ಒಣಪಾಂಡಿತ್ಯದ ಪ್ರದರ್ಶನವನ್ನು ನಿಲ್ಲಿಸಿ ಅರಿವಿನ ಮೂಲಗಳನ್ನು ಸರಿಪಡಿಸಿಕೊಳ್ಳಬೇಕಾಗಿದೆ. ಕಲಿಕೆ ಎನ್ನುವುದು ಇಬ್ಬದಿಯ ಪ್ರಕ್ರಿಯೆ . ಅರಿವು ಎನ್ನುವುದು ನಿಷ್ಟುರವಾಗಿ ಇಬ್ಬರ ಹೊಣೆ, ಸುರಿಯುವ ಶಿಕ್ಷಕ ತುಂಬಿಕೊಂಡು ನಿಲ್ಲಬೇಕು, ಬೊಗಸೆಯೊಡ್ಡುವ ಮಗು ಖಾಲಿಯಾಗುತ್ತಲೇ ಬರಬೇಕು.ಎಂಬ ಮಾತುಗಳಲ್ಲಿ ಅನಗತ್ಯವಾದ ವಾದ ವಿವಾದಗಳ ಮಾಡದೇ ಕನ್ನಡ ಕಟ್ಟುವ ಕೆಲಸವನ್ನು ಗಟ್ಟಿಯಾಗಿ ಮಾಡೋಣ ಎಂದಿರುವರು.

ರಾಷ್ಟ್ರೀಯ ನೆಲೆಯಲ್ಲಿ ಪ್ರತಿಯೊಂದು ಮಾತೃಭಾಷೆಯೂ ಅಭಿವ್ಯಕ್ತಿಯಲ್ಲಿ ಅಗತ್ಯವಿರುವ ಭಾಷಾ ಸಂಪತ್ತನ್ನು ಮೈಗೂಡಿಸಿಕೊಳ್ಳುವ ಅಗತ್ಯವೂ ಸಹ ಮಾತೃಭಾಷೆಯ ಯಷ್ಟೇ ಮುಖ್ಯವಾದದ್ದು. ಭಾಷಿಕ ಕೊಡು-ಕೊಳ್ಳುವಿಕೆಯಲ್ಲಿ ಮಡಿವಂತಿಕೆಯನ್ನು ಬಿಟ್ಟು ಪದಸಂಪತ್ತನ್ನು ಹೆಚ್ಚಿಸಿಕೊಂಡಾಗ ಬೇರೆ ಬೇರೆ ಕ್ಷೇತ್ರಗಳ ಜ್ಞಾನ ಸಂಪತ್ತನ್ನು ನವೀಕರಿಸಿ ಕೊಂಡು ನಮ್ಮದನ್ನಾಗಿ ಮಾಡಿಸಿಕೊಳ್ಳುವುದು ಸಾಧ್ಯವಾಗುತ್ತದೆ.ಆಗ  ಭಾಷೆಗಳ ನಡುವಿನ ಕೊಡುಕೊಳ್ಳುವಿಕೆ ಕೂಡ ಸುಲಭವಾಗುತ್ತದೆ.ಎಂದು ಬಾಗೇಪಲ್ಲಿಯಂತಹ ಗಡಿ ನಾಡಿನಲ್ಲಿ ಕಾರ್ಯ ನಿರ್ವಹಣೆ ಮಾಡಿದ ಆರ್ .ವಿಜಯರಾಘವನ್ ಅವರ ಮಾತುಗಳಲ್ಲಿ ಅನುಭವದ ಸಾರವಿದೆ.


ಮುಂಬೈನಲ್ಲಿ ನೆಲೆಸಿದ್ದರೂ ಕನ್ನಡದ ಬಗ್ಗೆ ಚಿಂತಿಸುವ ಶ್ರೀನಿವಾಸ ಜೋಕಟ್ಟೆ ರವರು ಕನ್ನಡ ಮಾಧ್ಯಮ  ಮಕ್ಕಳ ಅನ್ನದ ಭಾಷೆಯಾಗುವಂತೆ ನಮ್ಮಿಂದೇನಾದರೂ ಮಾಡಲು ಸಾಧ್ಯವೇ? ಕನ್ನಡ ಮಾಧ್ಯಮದಲ್ಲಿ ಕಲಿತವರಿಗೆ ಉದ್ಯೋಗ ಸಿಗುವ ಸಾಧ್ಯತೆ ಎಷ್ಟಿದೆ? ಇದನ್ನೆಲ್ಲ ಗಮನಿಸಿ ಹೊಸ ಶಿಕ್ಷಣ ನೀತಿಯ ಚರ್ಚೆ ಆಗಬೇಕಾಗಿದೆ. ಅನ್ನ ನೀಡಲಾಗದೆ ಕೇವಲ ಸಂಸ್ಕೃತಿ, ಭಾಷೆ ಉಳಿಯಲಿ ಎನ್ನುವ ಭಾಷಾ ಮಾಧ್ಯಮ ಶಿಕ್ಷಣ ಮವೇ ವ್ಯರ್ಥ ಆದೀತು.

ಇವತ್ತು ಜಾಗತೀಕರಣವನ್ನು ಬಿಟ್ಟು ಮಾತಾಡುವಂತಿಲ್ಲ, ಬದುಕುವಂತಿಲ್ಲ. ನಮ್ಮ ಅನೇಕ ಸಾಹಿತಿಗಳು 'ಪ್ರಗತಿಪರ' ಎಂದು ಕಾಣಿಸಿಕೊಳ್ಳುವುದರಲ್ಲೇ ಬದುಕುವುದರ ಜೊತೆಗೆ ಇಂತಹ ಕನ್ನಡ ಮಾಧ್ಯಮದ ವಿಷಯಗಳ ಕುರಿತೂ ಅಷ್ಟೇ ಆದ್ಯತೆ ನೀಡಲಿ. ಅದು ಅನ್ನ ನೀಡುವ ಮಾಧ್ಯಮವಾಗಬೇಕಾದರೆ ಏನು ಮಾಡಬೇಕು? ಈ ಕುರಿತು ನಮ್ಮ ಗಮನ ಹರಿಯಬೇಕು. ಎಂದು ಖಡಕ್ಕಾಗಿ ತಮ್ಮ ಅಭಿಪ್ರಾಯ ಹೇಳಿದ್ದಾರೆ.


"ಆಯಾ ಪಾಂತ್ಯಗಳಲ್ಲಿ ಆಯಾ ದೇಶ ಭಾಷೆಗಳೇ ಆಡಳಿತ ಭಾಷೆಗಳಾಗಿರಬೇಕು. ಅಲ್ಲಿಯ ಶಿಕ್ಷಣವಲ್ಲ. ಎಲ್ಲ ಮಟ್ಟಗಳಲ್ಲಿಯೂ ದೇಶ ಮಾಧ್ಯಮದಲ್ಲಿಯೇ ಸಾಗಬೇಕು, ಕನ್ನಡಕ್ಕೆ ಪ್ರಪಂಚದಲ್ಲಿ ಎಲ್ಲಾದರೂ ಮಾನ್ಯ ಸ್ಥಾನ ದೊರೆಯಬೇಕಾದರೆ ಅದು ಇಲ್ಲಿ, ಕರ್ನಾಟಕದಲ್ಲಿ, ಇನ್ನೆಲ್ಲಿಯೂ ಅಲ್ಲ"ಎಂಬ ಕುವೆಂಪುರವರ ಮಾತುಗಳನ್ನು ನಾವು ಮನನ ಮಾಡಿಕೊಳ್ಳಬೇಕಿದೆ.


ದ ರಾ ಬೇಂದ್ರೆಯವರು ಭಾಷೆಯ ಪ್ರಾಮುಖ್ಯತೆ ಕುರಿತು ಹೀಗೆ ಹೇಳಿರುವರು.

“ಜನರಿಗೆ ಹಿರಿಯರಿಂದ ಬರುವ ಒಡವೆಗಳಲ್ಲಿ ಭಾಷೆ ಒಂದು, ಅದು ಚೆನ್ನಾಗಿದ್ದಷ್ಟೂ  ಭೂಷಣ. ಅದರಲ್ಲಿ ಎಲ್ಲರಿಗೂ ಪರಿಶ್ರಮವಿದ್ದು, ಪ್ರಮುಖರಾದವರಿಗೆ ಪೂರ್ಣ ಜ್ಞಾನವಿದ್ದರೆ, ಅವರಿಗೆ ಲಾಭವೂ ಇವರಿಗೆ ಉತ್ಸಾಹವೂ ಉಂಟಾಗಿ  ಭಾಷೆಯೂ ಉತ್ಕೃಷ್ಟವಾಗುತ್ತದೆ.


"ಭಾಷೆಯೆಂಬುದು ಕೇವಲ ಅಕ್ಷರಗಳ ಗುಂಪಲ್ಲವಷ್ಟೆ? ಅದು ಸಮಾಜ ವಿಜ್ಞಾನದ, ಭಾವಕೋಶದ, ಸಂಸ್ಕೃತಿ ಪರಂಪರೆಯ ಸಮ್ಯಕ್ ಜೀಗದ ಕೈ ಒಂದು ಹಂತದವರೆಗೆ ಮಕ್ಕಳು ಅವರವರ ಪ್ರದೇಶ ಭಾಷೆಯಲ್ಲೇ ಕಲಿಯುತ್ತ ಮುಂದಿನವನ್ನು ಬೇಕಾದರೆ ಅವರಿಗೆ ಬಿಡೋಣ, ಹೆತ್ತವರೆಂದ ಮಾತ್ರಕ್ಕೆ ಮಕ್ಕಳ ಕುರಿತು ಎಲ್ಲ ಹಕ್ಕೂ ನಮಗಿದೆ ಅಂತ ತಿಳಿಯುವುದೇ ಅಸಂಬದ್ಧ ಎಂಬ ವೈದೇಹಿಯವರ ಮಾತು ವಾಸ್ತವಕ್ಕೆ ಹಿಡಿದ ಕನ್ನಡಿ ಎನ್ನಬಹುದು.



ಮುಗಿಸುವ ಮುನ್ನ.....


ಈ ಪುಸ್ತಕದಲ್ಲಿ ಕೆಲವು ಲೇಖಕರು ತಮ್ಮ ಲೇಖನದಲ್ಲಿ ಹೆಚ್ಚು ಹಳಗನ್ನಡ ಪದಗಳು ಮತ್ತು ಆಡಂಬರದ ಪದಗಳನ್ನು ಬಳಸಿರುವುದು ಸಾಮಾನ್ಯ ಓದುಗರು ತಡವರಿಸಿದಂತಹ  ಅನುಭವವಾಗುತ್ತದೆ ಆದರೂ ಭಾಷಾ ದೃಷ್ಟಿಯಿಂದ ಆ ಲೇಖನಗಳು ಮೌಲ್ಯಯುತ ಎಂಬುದನ್ನು ಒಪ್ಪಲೇಬೇಕು .


ನಮ್ಮಲ್ಲಿ ಕನ್ನಡದ ಪ್ರಜ್ಞೆ ಇನ್ನೂ ಜಾಗೃತವಾಗದಿದ್ದರೆ ಈ ಪುಸ್ತಕದಲ್ಲಿ ಇರುವ ಸವಿತಾ ನಾಗಭೂಷಣ ಅವರ ಕವಿತೆ ಒಮ್ಮೆ ಜೋರಾಗಿ ಓದಿಕೊಳ್ಳಿ ಸಾಕು.


ಕನ್ನಡವೇ ಬೇಕು.

ಓದಿ ಬರೆದು ಮಾತಾಡಲು...


ಕನ್ನಡವೇ ಬೇಕು

ಬೀಸಿ ಕಾಸಿ ಕುದಿಸಿ

ಉಂಡು ತಣಿಯಲು...


ಕನ್ನಡವೇ ಸಾಕು

ಸಿಗಿದು ಬಗೆದು ಉಗಿದು ಉಪ್ಪು ಹಾಕಲು...


ಕನ್ನಡವೇ ಸಾಕು

ಶೋಧಿಸಿ ಸಾಧಿಸಿ

ಸಾರಿಸಿ ಗುಡಿಸಿ ಹಾಕಲು....


ಪುಸ್ತಕ:   ಕನ್ನಡ ಪ್ರಜ್ಞೆಯ ಸುತ್ತ ಮುತ್ತ

ಸಂಪಾದಕರು:ಡಾ. ಗೀತಾ ಡಿ ಸಿ.ಮತ್ತು ನಾಗರೇಖಾ ಗಾಂವಕರ

ಪ್ರಕಾಶನ: ಕ್ರಿಯಾ ಮಾದ್ಯಮ. ಬೆಂಗಳೂರು

ಬೆಲೆ: 400₹ 


ಸಿಹಿಜೀವಿ

 ಸಿ ಜಿ ವೆಂಕಟೇಶ್ವರ

ತುಮಕೂರು

9900925529


No comments: