30 July 2020

ಸುಕ್ಕು (ಹನಿಗವನ)

*ಸುಕ್ಕು*

ನಾನೇ ಸುಂದರಿ
ನನಗಿಂತ ಮಿಗಿಲು
ಯಾರಿಲ್ಲ‌ ಎಂದು
ತೋರುತ್ತಿದ್ದಳು ಸೊಕ್ಕು|
ವಯಸ್ಸಾಗುತ್ತಾ 
ಚಿಂತಿಸತೊಡಗಿದಳು
ನೋಡಿ ತನ್ನ ಚರ್ಮದ ಸುಕ್ಕು||

*ಸಿ‌ ಜಿ ವೆಂಕಟೇಶ್ವರ*

ಪ್ರಜಾ ಪ್ರಗತಿ ಪತ್ರಿಕೆಯಲ್ಲಿ ಪ್ರಕಟವಾದ ನನ್ನ ಶೈಕ್ಷಣಿಕ ಲೇಖನ


29 July 2020

ಅರೆಗಳಿಗೆ (ಹನಿ)

*ಅರೆಗಳಿಗೆ*

ಅದೇನು 
ಆಕರ್ಷಣೆ
ಇರುವುದು ಪ್ರಿಯೆ
ಆ ನಿನ್ನ  ಕಂಗಳಿಗೆ|
ನೋಡದೆ ಇರಲಾರೆ
ಅರೆಗಳಿಗೆ||

*ಸಿ ಜಿ ವೆಂಕಟೇಶ್ವರ*
*ತುಮಕೂರು*

ಸಿಹಿ ಜೀವಿಯ ಹಾಯ್ಕುಗಳು

*ಸಿಹಿಜೀವಿಯ ಹಾಯ್ಕುಗಳು*

(ಇಂದು ಅಂತರಾಷ್ಟ್ರೀಯ  ವಿಶ್ವ ಹುಲಿ ದಿನ international tiger day)

೮೯

ಹುಲಿ ಉಳಿವು
ಕಾಡಿನ ಸಂರಕ್ಷಣೆ
ಉಳಿಸೋಣವೇ? 

೯೦

ಹುಲಿಯೆಂದರೆ
ಮಾದೇವನ ವಾಹನ
ಕೈಮುಗಿದೇವು.

೯೧

ನಮ್ಮಲೇ ಹೆಚ್ಚು
ನೂರಾಕ್ಕೆ ಎಪ್ಪತ್ತು
ಹುಲಿ‌ಸಂತತಿ.

*ಸಿ ಜಿ ವೆಂಕಟೇಶ್ವರ*

ಸಿಹಿಜೀವಿಯ ಹನಿ (ಪಂಗನಾಮ)



*ಪಂಗನಾಮ*

ಅತಿಯಾದ ಬಡ್ಡಿಯ
ಆಸೆಗೆ ಲಕ್ಷಾಂತರ
ಸಾಲ ಕೊಟ್ಟನು
ನಮ್ಮೂರ ಶ್ಯಾಮ|
ಬಡ್ಡಿಯೂ ಇಲ್ಲ
ಅಸಲು ಮೊದಲಿಲ್ಲ
ಎಲ್ಲರೂ ಸೇರಿ
ಹಾಕಿದರು ಪಂಗನಾಮ||

*ಸಿ ಜಿ ವೆಂಕಟೇಶ್ವರ*

28 July 2020

ಸಿಹಿಜೀವಿಯ ಹಾಯ್ಕುಗಳು


*ಸಿಹಿಜೀವಿಯ ಹಾಯ್ಕುಗಳು*

( ಇಂದು ವಿಶ್ವ ಪ್ರಕೃತಿ ಸಂರಕ್ಷಣಾ ದಿನ World nature conservation day)

೮೬

ಪ್ರಕೃತಿ ಮಾತೆ
ನಮಗೆ ಅನಿವಾರ್ಯ
ಸಂರಕ್ಷಿಸೋಣ

೮೭

ಉಳಿಸಬೇಕು
ಪ್ರಕೃತಿ ಪರಂಪರೆ
ನಮ್ಮೆಲ್ಲರಿಗೆ.

೮೮


ಗಿಡ ನೆಡಿರಿ
ಕಳೆಯಲೇನು ಇಲ್ಲ
ಕಾವುದು ನಮ್ಮ.

*ಸಿ ಜಿ ವೆಂಕಟೇಶ್ವರ*



27 July 2020

ಹಾಸನ ವಾಣಿ ಪತ್ರಿಕೆಯಲ್ಲಿ ಪ್ರಕಟವಾದ ನಾಲ್ಕು ಹನಿಗಳು

ಹಾಸನ ವಾಣಿ ಪತ್ರಿಕೆಯಲ್ಲಿ ಪ್ರಕಟವಾದ ನಾಲ್ಕು ಹನಿಗಳು

ಪ್ರತಿನಿಧಿ ಪತ್ರಿಕೆಯಲ್ಲಿ ಪ್ರಕಟವಾದ ಎರಡು ಹನಿಗಳು

ಪ್ರತಿನಿಧಿ ಪತ್ರಿಕೆಯಲ್ಲಿ ಪ್ರಕಟವಾದ ಎರಡು ಹನಿಗಳು

ಸಿಹಿಜೀವಿಯ ಹನಿ( ಮುಗೀತಾ?)


*ಮುಗೀತಾ?*

ನಾನು ತನ್ಮಯದಿಂದ
ಹಾಡಲು ಶುರುಮಾಡಿದೆ
ಸಂಗೀತ |
ಹಾಡಿ ಮುಗಿಸಿದಾಗ
ನಮ್ಮ ಮನೆಯವರು
ನಿಧಾನವಾಗಿ ಕಿವಿಯಿಂದ
ಹತ್ತಿಯ ತೆಗೆದು ಕೇಳಿದಳು
ಮುಗೀತಾ? ||

*ಸಿ ಜಿ ವೆಂಕಟೇಶ್ವರ*

26 July 2020

ನಡೆದಾಡುವ ದೇವರು


*ನಡೆದಾಡುವ ದೇವರು* 

ಸಿದ್ದರ ನಾಡಲಿ ಸಿದ್ದಿಯ
ಮಾರ್ಗವ ತೋರಿದ ದೇವ
ಗಂಗೆಯಂತೆ ನಮ್ಮ ಮಲಿನವ
ತೊಳೆದು ಮರೆಸಿದಿರಿ ನೋವ.

ಬಡವರ ಪಾಲಿಗೆ ಬದುಕುವ
ದಾರಿಯನು ತೋರಿದಿರಿ
ನರನ ಸೇವೆಯೇ ನಾರಾಯಣ
ಸೇವೆಯೆಂಬ ನೀತಿಯ ಸಾರಿದಿರಿ .

ನಡೆಯ ತಪ್ಪಿದವರಿಗೆ ಬುದ್ದಿ
ಕಲಿಸಿದ ನಡೆದಾಡುವ ದೇವರು
ಸಿದ್ದಗಂಗೆಯಾಯಿತು ಇಂದು
ಜ್ಞಾನ  ಅನ್ನ ,ವಿದ್ಯೆಯ ತವರು .

ಮಾನವ ರೂಪದಿ ಬಂದ
ಧರೆಗವತರುಸಿದ ಶಿವಪ್ಪನೇ ನೀವು
ಸಕಲರ ಮನದಲಿ ಎಂದಿಗೂ
ಇರುವಿರಿ ಮರೆಯುವುದಿಲ್ಲ ನಾವು .

*ಸಿ ಜಿ ವೆಂಕಟೇಶ್ವರ*
*ತುಮಕೂರು*
೯೯೦೦೯೨೫೫೨೯

ಸಿಹಿಜೀವಿಯ ಹಾಯ್ಕುಗಳು


*ಸಿಹಿಜೀವಿಯ ಹಾಯ್ಕುಗಳು*
(ಕಾರ್ಗಿಲ್ ವಿಜಯ ದಿನದ ನೆನಪಿಗಾಗಿ ಧೀರ ಯೋಧರಿಗೆ ಅರ್ಪಣೆ)
೮೨
ನಮ್ಮುಸಿರಿಗೆ
ತಮ್ಮುಸಿರನಿತ್ತರು
ಸಿಪಾಯಿಗಳು.
೮೩
ವೀರ ಯೋಧರು
ಜಯವ ತಂದಿತ್ತರು
ಕಾರ್ಗಿಲ್ ದಿನ
೮೪
ಯೋಧರ ಶಕ್ತಿ
ವಿಜಯದ ದಿವಸ
ಮಾತೆಗೆ ಜಯ .
೮೫
ಯೋಧರ ಬಲ
ಪಾಕಿಗಳಿಗೆ ಸೋಲು
ಜಯಭಾರತ .
*ಸಿ ಜಿ ವೆಂಕಟೇಶ್ವರ*

ಮಗಳಿಗೊಂದು ಪತ್ರ


*ಮಗಳಿಗೊಂದು ಪತ್ರ*
ನನ್ನ ಮುದ್ದಿನ ಮಗಳೆ ...
ನಾನಿಲ್ಲಿ‌ ಸುಖಿ. ನಿನ್ನ ಪತ್ರ ತಲುಪಿತು . ನಿನ್ನ ಮನದ ಬೇಗೆ , ಬೇಸರದ ಬಗ್ಗೆ ತಿಳಿಯಿತು. ಮಗಳೆ  , ಒಂದು ಸಣ್ಣ ಸೋಲಿನಿಂದ ನೀನು ಕಂಗೆಡಬೇಡ, ಸೋಲೇ ಗೆಲುವಿನ ಸೋಪಾನ, ಇಂದಿನ ಬಹುತೇಕ ಸಂಶೋಧನೆಗಳು ಒಂದೇ ದಿನ ನಡೆಯಲಿಲ್ಲ , ಹಲವಾರು ಸೋಲುಗಳ ನಂತರ ಪುಟಿದೆದ್ದವರು ಸಾಧಿಸಿದರು. ಸಾಧಕನಾಗಬೇಕೆಂದರೆ ಸೋಲು ಗೆಲುವುಗಳನ್ನು ಸಮಾನವಾಗಿ ಸ್ವೀಕರಿಸುವ ಗುಣ ಬೆಳೆಸಿಕೊಳ್ಳಬೇಕು, ನೀನೂ ಖಂಡಿತವಾಗಿಯೂ ಮುಂದೊಂದು ದಿನ ಸಾಧಕಳಾಗೇ  ಆಗುವೆ  , ಅದಕ್ಕೆ ಎಡೆಬಿಡದೆ ನಿರಂತರ ಪ್ರಯತ್ನ ಜಾರಿಯಲ್ಲಿರಲಿ. ನಿನ್ನಲ್ಲಿ ಗೆಲ್ಲುವ ಛಲವಿದೆ, ಬಲವಿದೆ, ನೀನು ಅಮರ ಆತ್ಮಳು  ,ಅಮೃತಪುತ್ರಳು, ನಿನ್ನ ಕೀಳರಿಮೆಯ ಚಿಪ್ಪಿನಿಂದ ಹೊರಗಡೆ ಬಾ, ಅವರಿವರ ಕಂಡು ನೀನು ಕೀಳು‌,ನಿನ್ನಲಿ ಏನೂ ಸಾಧಿಸುವ ಶಕ್ತಿ ಇಲ್ಲವೆಂದು ಕೊರಗದಿರು, ನಿನ್ನ ಹಿಂದೆ ಮುಂದೆ ಇರುವ ಎಲ್ಲಾ ಶಕ್ತಿಗೆ ಹೋಲಿಸಿದರೆ ಅದು ನಗಣ್ಯ ನಿನ್ನಲಿ ಇನ್ನೂ ಅಧಿಕ ಬಲವಿದೆ ,ನೀ ಮನಸ್ಸು ಮಾಡಿ ,ಒಂದೇ ಚಿತ್ತದಲಿ ಕಾರ್ಯ ಕೈಗೊಂಡರೆ ನಿನಗ್ಯಾರೂ ಸಾಟಿ ಇಲ್ಲ , ನಿನಗೆ ನೀನೇ ಸಮ , ಅದೃಷ್ಟದ ಮೇಲೆ ನಂಬಿಕೆ ಇಡಬೇಡ. ಅದೃಷ್ಟವೆಂದಿಗೂ ಧೈರ್ಯವಂತರ ಕಡೆ ಇರುವುದು. ನಿನ್ನ ಭವಿಷ್ಯ ಸುಂದರವಾಗಿರಬೇಕು ಎಂದರೆ ನೀನು ವರ್ತಮಾನದಲ್ಲಿ ಶ್ರದ್ಧೆಯಿಂದ ಕೆಲಸ ಮಾಡು ,ಕಾಯಕವೇ ಕೈಲಾಸವೆಂಬ ಅಣ್ಣನ ನಿಯಮವನ್ನು ಪಾಲನೆ ಮಾಡು. ಸೋಮಾರಿಯ ತಲೆ ಸೈತಾನನ ನೆಲೆ ಎಂಬಂತೆ ಸುಮ್ಮನೆ ಕುಳಿತು ಏನೇನೋ ನಕಾರಾತ್ಮಕ ಅಂಶಗಳ ಬಗ್ಗೆ ಚಿಂತಿಸಿ ತಲೆಕೆಡಿಸಿಕೊಳ್ಳಬೇಡ, ಸಕಾರಾತ್ಮಕ ಭಾವವಿರುವವರ ಒಡನಾಟವಿರಲಿ ,ಯಾವುದೇ ಕಾರ್ಯವನ್ನು ಯೋಜಿಸಿ ಕೈಗೊಳ್ಳಬೇಕು, ಉತ್ತಮವಾಗಿ ಯೋಜಿಸಿದರೆ ಅರ್ಧ ಕಾರ್ಯ ಮುಗಿದಂತೆ, ಚಿಂತಿಸಿದರೆ ಫಲವಿಲ್ಲ, ಚಿಂತನೆಗೆ ಸೋಲಿಲ್ಲ. ಸನ್ಮಾರ್ಗದಲಿ ನಡೆಯಲು ಅಂಜಿಕೆ ಬೇಕಿಲ್ಲ , ಅನವಶ್ಯಕವಾಗಿ ಕಾಲೆಳೆವ ಜನರ ಗೊಡ್ಡು ಟೀಕೆಗಳಿಗೆ ಸೊಪ್ಪು ಹಾಕಬೇಡ. ಸಕಾರಾತ್ಮಕ ವಿಮರ್ಶೆಗಳನ್ನು ಆಲಿಸದೇ ಬಿಡಬೇಡ. ಜಗದೊಳಿತಿಗೆ ಚಿಂತಿಸಿ, ನಿನ್ನ ಆತ್ಮದ ಮಾತು ಕೇಳಿ, ಆತ್ಮವಿಶ್ವಾಸದಿಂದ. ಮುಂದಡಿ ಇಡು . ಸೋಲು ನಿನ್ನ ಬಳಿ ಸುಳಿಯದು‌. ಆಗ ನೀನು ಇತರರಿಗೆ ಮಾದರಿಯಾಗುವೆ. ನಾನು  ಮಾದರಿ ಸಮಾಜದ ಕನಸು ಕಾಣುತ್ತಿರುವೆ ಮಗಳೆ  ನೀನು ಗೆದ್ದೇ ಗೆಲ್ಲುವೆ ,ತನ್ಮೂಲಕ ನಾನೂ ನನ್ನ ಸಮಾಜ ನನ್ನ ದೇಶವೂ ಗೆಲ್ಲವುದು .ಆ ತಾಕತ್ತು ನನ್ನಲ್ಲಿ, ನಿನ್ನಲಿ ಮತ್ತು ಎಲ್ಲರಲ್ಲಿದೆ. ಬಾ ಉನ್ನತವಾಗಿರುವುದನ್ನು ಯೋಚಿಸೋಣ, ಯೋಜಿಸೋಣ, ಸಾಧಿಸೋಣ . ನಾವೇನೆಂದು ಜಗಕೆ ತೋರಿಸೋಣ .
ಇಂತಿ‌ ನಿನ್ನ ಬಗ್ಗೆ ವಿಶ್ವಾಸವಿರುವ ನಿನ್ನ ಅಪ್ಪ
*ಸಿ ಜಿ ವೆಂಕಟೇಶ್ವರ*
*ತುಮಕೂರು*
ದಿನಾಂಕ : ೨೫:೭:೨೦೨೦

25 July 2020

ಸಿಹಿಜೀವಿಯ ಮೂರು ಹನಿಗಳು


ಸಿಹಿಜೀವಿಯ ಹನಿಗಳು


ಸಿಹಿಜೀವಿಯ ‌ಹನಿಗಳು


*ಸುದರ್ಶನಾಸ್ತ್ರ*

ವಾಸು ದೇವ ಕೃಷ್ಣನ
ಭಕ್ತರು ನಾವು
ವೈರಿಗಳ ಮನಗೆಲ್ಲಲು
ನುಡಿಸಲು‌ ಗೊತ್ತು
ಮುರುಳಿಯ ಗಾನ|
ಬಗ್ಗದಿದ್ದರೆ ಪ್ರಯೋಗ
ಮಾಡಲು ಗೊತ್ತು
ಮಹಾ ಅಸ್ತ್ರ ಸುದರ್ಶನ ||



*ಏನೂ ಇಲ್ಲ*

ಕರೋನ  ಮಾಡುವ
ಅವಾಂತರಗಳ ನೋಡುವ
ಸಂಧರ್ಭದಲ್ಲಿ ನಮಗೆ
ಎಲ್ಲರಿಗೂ  ಸ್ಪಷ್ಟವಾಗಿ
ಅರ್ಥವಾಯಿತು ನಮ್ಮ
ಕೈಯಲ್ಲಿ ಏನೂ ಇಲ್ಲ|
ಅದೇ ತರ ಪದೇ ಪದೇ
ಕೈತೊಳೆಯದಿದ್ದರೂ
ಮುಂಜಾಗ್ರತೆ ವಹಿಸದೆ
ನಿರ್ಲಕ್ಷ್ಯ ಮಾಡಿದರೂ
ಏನೂ ಇಲ್ಲ.||


*ಸಿರಿವಂತರು*

ಕೆಲವರಿಗಂತೂ
ಎಲ್ಲಿಲ್ಲದ ಹೆಮ್ಮೆ
ಹೊಗಳಿಕೊಳ್ಳಲು
ತಮ್ಮದೇ ದೈಹಿಕ ರೂಪ|
ಅಂತರಂಗದ
ಸೌಂದರ್ಯದ
ಸಿರಿವಂತರ ಮುಂದೆ
ಅವರು ಬಡವರೆಂದು
ಗೊತ್ತಿರುವುದಿಲ್ಲ ಪಾಪ||

*ಸಿ ಜಿ ವೆಂಕಟೇಶ್ವರ*


24 July 2020

ಸಿಹಿಜೀವಿಯ ಹನಿಗಳು

*ಸಿಹಿಜೀವಿಯ ಹನಿಗಳು*



*ಬ್ರೇಕು*

ಇನ್ನೂ ನಿಂತಿಲ್ಲ
ಅತಿಯಾಸೆಯ ಮೋಹ
ಹೇಳುವೆ ಇನ್ನೂ ಬೇಕು ಬೇಕು
ನಿಜವಾದ ಆನಂದ ಬೇಕೇ?
ಬೇಕುಗಳಿಗೆ ನೀನು
ಹಾಕಲೇಬೇಕು ಬ್ರೇಕು.



*ಮಾನಕಗಳು*

ಬಡವ ಬಲ್ಲಿದ
ಯಾರಾದರೇನು?
ಬಾಳಬೇಕುಅರಿತು
ನಿನ್ನ ಸಾಧನೆಗಳು,
ನಿನ್ನ ಗುಣಗಳು
ಹೇಳಬೇಕು.
ನಿನ್ನಯ ಗುರುತು .

*24/7*

ನಿನಗೆ ನಾನು
ಮಾತು ಕೊಟ್ಟಿದ್ದೆ
ಪ್ರೀತಿಸುವೆ 24/7
ಉಳಿಸಿಕೊಳ್ಳುವೆ ಮಾತನು
ಇಂದು ಪ್ರೀತಿಸಿ
ಇಂದಿನ ತಾರೀಖು24/7

*ಸಿ ಜಿ ವೆಂಕಟೇಶ್ವರ*

12 July 2020

ಸಿಹಿಜೀವಿಯ ಹಾಯ್ಕುಗಳು ( ರಾಷ್ಟ್ರೀಯ ಸರಳ ದಿನದ ನೆನಪಿಗೆ )


 *ಸಿಹಿಜೀವಿಯ  ಹಾಯ್ಕುಗಳು*

(ಇಂದು ರಾಷ್ಟ್ರೀಯ ಸರಳತೆಯ ದಿನ National Simplicity Day )

೭೬

ಸಂಕೀರ್ಣವೇಕೆ
ಸರಳವಾಗಿರೋಣ
ಎಲ್ಲರೂ ಸುಖಿ .

೭೭

ಸರಳವಾಗಿರು
ಅತಿಯಾಸೆಯ ಬಿಡು
ನಾಕವು ಇದೆ.

೭೮

ಆಡಂಬರವು
ಸಿರಿತನವೇ ಅಲ್ಲ
ಸರಳ ಗುಣ.

೭೯

ವೈಭವವೇಕೆ?
ಮಹಾತ್ಮಾ ಅಗಬೇಕೆ?
ಸರಳನಾಗು.

೮೦

ಕಲಿಸುತಿದೆ
ಸರಳವಾಗಿರಲು
ಕರೋನಕಾಲ .

*ಸಿ ಜಿ ವೆಂಕಟೇಶ್ವರ*

ಪ್ರಜಾಪ್ರಗತಿ ದಿನಪತ್ರಿಕೆಯಲ್ಲಿ ಪ್ರಕಟವಾದ ಹನಿಗಳು

ಪ್ರಜಾಪ್ರಗತಿ ದಿನಪತ್ರಿಕೆಯಲ್ಲಿ ಪ್ರಕಟವಾದ ಹನಿಗಳು

ಎರಡು ಹಾಯ್ಕುಗಳು

ಹಾಯ್ಕುಗಳು

೭೪

ನಮ್ಮೊಳಿತಿಗೆ
ಪ್ರಕೃತಿ ಉಳಿಸೋಣ
ವಿಕೃತಿ ಬೇಡ

೭೫

ನಾವು ಬಾಳಲು
ಪ್ರಕೃತಿಯ ಮಡಿಲು
ನಮಗಾಧಾರ

ಸಿ ಜಿ ವೆಂಕಟೇಶ್ವರ

08 July 2020

ಉದಕದೊಳಗಿನ ಕಿಚ್ಚು ಭಾಗ ೧೧


ಉದಕದೊಳಗಿನ ಕಿಚ್ಚು  ಭಾಗ ೧೧

ಹಿರಿಯೂರು ಕಡೆಯಿಂದ ಬರುವಾಗ ಊರು ಕಾಣುವ ಮೊದಲೇ ಎಡಭಾಗದಲ್ಲಿ ಸಣ್ಣದಾದ ಹೊಗೆ ಕಾಣುವುದು  .ಹತ್ತಿರ ಹೋದಂತೆ ಟಣ್ ಟಣಾ  ಟಣ್ ಎಂಬ ಸದ್ದು, ಅಲ್ಲೆ ಪಕ್ಕದಲ್ಲಿ ಕುಳಿತಿದ್ದ ವ್ಯಕ್ತಿ ಬಲಗೈಯಲ್ಲಿ ಒಂದು ತಿರುಪಳಿ ತರುಗಿಸುತ್ತಿದ್ದ ಅದು ಕೊಳವೆಯ ಮೂಲಕ ಇದ್ದಿಲು ಇರುವ ಭಾಗಕ್ಕೆ ಸೇರಿತ್ತು ಜೋರಾಗಿ ತಿರುಗಿಸಿದರೆ ಜೋರಾದ ಕೆಂಡ  ನಿಧಾನವಾಗಿ ತಿರುಗಿಸಿದರೆ ಬೂದಿ ಆರಿ ಅಕ್ಕ ಪಕ್ಕದಲ್ಲಿ ಚದುರುತ್ತಿತ್ತು .ಕೆಂಪಾಗಿ ಕಾದ ಗುದ್ದಲಿಯನ್ನು ಇಕ್ಕಳದಿಂದ ಹಿಡಿದು ‌ತೆಗೆದು" ಹುಂ ಹಾಕು "
ಎಂದದ್ದೆ ತಡ , ದೊಡ್ಡ ಸುತ್ತಿಗೆಯಿಂದ ವಿಚಿತ್ರ ಸದ್ದು ಮಾಡುತ್ತಾ  ,ಒಂದೆ ಸಮನೆ ಬಡಿಯಲಾರಂಬಿಸಿದ ಮಹಂತೇಶ . ಸುಮಾರಾದವರಿಗೆ ಸುತ್ತಿಗೆ ಅಲ್ಲಾಡಿಸಲು ಆಗುತ್ತಿರಲಿಲ್ಲ  ,ಅಂದರೆ ನೀವೇ ಊಹಿಸಬಹುದು ಮಹಾಂತೇಶನ ದೈತ್ಯ ಶಕ್ತಿಯನ್ನು , ದೊಡ್ಡ ಏಟಾಕಿ  ಉಸ್ಸಪ್ಪಾ ಎಂದು ಕುಳಿತ ಮಹಂತೇಶ , ಅಲ್ಲೇ ಮಣ್ಣಿನ ಮಡಕೆಯಲ್ಲಿದ್ದ ನೀರನ್ನು ಒಂದು ಚೆಂಬಿನಲ್ಲಿ ತುಂಬಿಕೊಂಡು ಗಟಗಟ ಕುಡಿದುಬಿಟ್ಟ. ಎಡಗೈಯಲ್ಲಿ  ಇಕ್ಕಳದಲಿ ಕಾದ ಕಬ್ಬಿಣದ ತುಂಡು‌ಹಿಡಿದು , ಬಲಗೈಯಲ್ಲಿ ಸಣ್ಣ ಸುತ್ತಿಗೆ ಹಿಡಿದು , ಕಮ್ಮಾರಣ್ಣ ತನಗೆ ಬೇಕಾದ ಆಕಾರಕ್ಕೆ ತರಲು ಹೊರಟರೆ , ಕಬ್ಬಿಣ ಕ್ರಮೇಣವಾಗಿ ಕೆಂಪಿನಿಂದ ಕಪ್ಪಾಯಿತು. ಎಷ್ಟೇ ಏಟಾಕಿದರೂ ಬಗ್ಗದಿದ್ದಾಗ ಮತ್ತೆ ಗುದ್ದಲಿಯನ್ನು  ತಿದಿಗೆ ಇಟ್ಟು , ಕಪ್ಪಗಾಗಿದ್ದ ತನ್ನ ಟವಲಿನಿಂದ ಬೆವೆತ ಹಣೆ ಮೈ ಒರೆಸಿಕೊಂಡ ಕಮ್ಮಾರಣ್ಣ
"ಬಾರೋ ಮಾಂತೇಶ ಹಾಕು ನಾಕೇಟ" ಅಂದರು ಗೊಣಗುತ್ತಲೆ
"ಹೇ ಎಷ್ಟಂತ ಹಾಕಲಿ ನನಗೂ ಸಾಕಾಗಿದೆ ಮೈ ಕೈ ನೊವಾಗಿದೆ , ಆಗಲೇ ಐದು ಗಂಟೆ ಆತು ಲೇಟಾದ್ರೆ  ಕಂಬಣ್ಣನ ಹೆಂಡಂದಂಗಡಿ ಬಾಗಿಲು ಹಾಕುತ್ತೆ ತಗ" ಮತ್ತೆ ಟಣ್ ಟಣಾ ಟಣ್ ಶುರುವಾಯಿತು. "ಹು ನೋಡಪ್ಪ ಹನುಮಾಭೋವಿ , ಸಾಕಾ ಇಷ್ಟು ಮನೆ ಇದ್ದರೆ ಬಾಳ ಮೊಂಡಾಗಿತ್ತು ನಿನ್  ಗುದ್ದಲಿ.
" ಇನ್ನೋಂದ್ ಸ್ವಲ್ಪ ಚೂಪುಗ್ ಮಾಡು " ಎಂದಿದ್ದೇ ತಡ ,ಮಹಾಂತೇಶನ ಪಿತ್ತ ನೆತ್ತಿಗೇರಿ ಏ ಹನುಮಾಬೋವಿ ,ಜಾಸ್ತಿ ಚೂಪಾದರೆ ಗುದ್ದಲಿ  ನಿನ್ನ ಕಾಲ ಮೇಲೆ ಬಿದ್ದು  ,ಕಾಲು ತೂತು ಬೀಳುತ್ತೆ , ಸಾಕು ನಡಿ" ಅಂದ ಮಹಾಂತೇಶ.
" ಲೇ ಮಾಂತ ನಾನೇನು ಹೆಂಡ ಕುಡ್ದು ಕರಿಕೆ ಕಡಿಯಲ್ಲ ಕಣಲ   ,ಸುಮ್ಮನೆ ನಾಕೇಟಾಕು  , ಅದೆಲ್ಲಿಗೋ ಅಂದೆಲ್ಲಾ ಆಮೇಲೆ ಹೋಗುವಂತೆ ", ಎಂದರು ಹನುಮಾಭೋವಿ .
ಮಹಂತೇಶನ ಬಡಿತ ಜೋರಾಯಿತು, ಟಣ್ ಟಣಾ ‌ಟಣ್ ...
ಹನುಮಾಭೋವಿಗೆ ಆಗ ಅರವತ್ತೋ ಅರವತ್ತೈದು ಇರಬಹುದು, ಕಣ್ಣಿಗೆ ಕನ್ನಡಕ ಬಂದರೂ  ,ಹೊತ್ತಾರೆ ಎದ್ದು ಚೂಪಾದ ಗುದ್ದಲಿಯನ್ನು ಹೆಗಲಿಗೆ ಸಿಕ್ಕಿಸಿಕೊಂಡು , ಮೊದಲೇ ನಿಗದಿಪಡಿಸಿದ ಹೊಲದ ಕಡೆಗೆ ಪಯಣ ಆರಂಭಿಸುತ್ತಿದ್ದರು.
ಇನ್ನೂ ಸೂರ್ಯದೇವನ ಆಗಮನಕ್ಕೆ ಮುನ್ನವೆ , ಕೆರೆಏರಿಯ ಮೇಲೆ ನಡೆದು ಹೋಗುತ್ತಿದ್ದರೆ ಮನಕ್ಕೇನೊ ಮುದ . ಎಡಕ್ಕೆ ಕೆಂಪಾದ ಆಕಾಶ , ಬಲದಿಂದ ಹಿತವಾದ ತಂಗಾಳಿ , ಅಕ್ಕ ಪಕ್ಕ ಸೀಮೇಜಾಲಿಯ ಗಿಡಗಳು, ಆಗೊಮ್ಮೆ ಈಗೊಮ್ಮೆ ತಲೆ ಮೇಲೆ ಹಾಲು, ಮೊಸರಿನ ಗಡಿಗೆ ಹೊತ್ತು ಬರುವ ಗೊಲ್ಲರ ಹೆಣ್ಣುಮಕ್ಕಳು. ಇದು ಹೊರಗಿನವರಿಗೆ ವಿಶೇಷವಾಗಿ ಕಂಡರೂ ಹನುಮಾಭೊವಿಗೆ ದಿನ(ಸೂರ್ಯ) ಬರುವ ಮೊದಲು ದಿನದ ದಿನಚರಿಯ ಒಂದು ಭಾಗ . ದೇವರಲ್ಲಿ ಅವನ ಬೇಡಿಕೆ ಒಂದೆ ಇಂದು ಕರಿಕೆ( ಗರಿಕೆ ) ಕಡಿವ ಪ್ರದೇಶ ಮೆತ್ತಗಿರಲಿ , ಬಿಸಿಲು ಕಡಿಮೆಯಿರಲಿ  ,ಸಂಜೆ ಹೆಂಡದಂಗಡಿಗೆ ಹೋದಾಗ ಪಟಾಪಟಿ‌ ನಿಕ್ಕರ್ ಜೇಬಿನಲ್ಲಿ ದುಡ್ಡಿರಲಿ , ಅಷ್ಟೇ ಅವನ ಸಂತೃಪ್ತ ಜೀವನದ ಗುಟ್ಟು.
ಹನುಂತಾಭೋವಿ ಹೊಲಕ್ಕೆ  ಹೋಗಿ ಕರಿಕೆ ಕುಡಿಯಲು ಶುರು ಮಾಡುವನು ,ಬೇರು ಸಮೇತ ಕರಿಕೆ (ಗರಿಕೆ) ಕಡಿಯಲು ಕೆಲವೊಮ್ಮೆ ಎರೆ ನೆಲದಲ್ಲಿ ಐದಾರು ಅಡಿ ಆಳಕ್ಕೆ ಅಗೆಯಬೇಕಾದ ಪ್ರಸಂಗ ಬರುತ್ತಿತ್ತು  ,ಅಂತ ಸಮಯದಲ್ಲಿ ತಗಡಿನ ಬಿಲ್ಲೆಯಲ್ಲಿ ಮಣ್ಣನ್ನು ಹೊರಹಾಕಿ ಕರಿಕೆಯ ಮೂಲ ಹುಡುಕಿ ತೆಗೆಯುವ ಕಾಯಕ ನಿಜಕ್ಕೂ ಶ್ರಮದಾಯಕ. ರವಿರಾಯ ನಿಧಾನವಾಗಿ ಮೇಲೇರುತ್ತಿದ್ದಂತೆ ಹನುಮಾಭೋವಿಯ ಬರಿ ಮೈ ಚುರುಗುಟ್ಟುತ್ತಾ , ಬೆವರ ನೀರು ಇಳಿಯಲು ತಲೆಗೆ ಸುತ್ತಿದ್ದ ಟವಲ್ನಲ್ಲಿ ಉಸ್ ಎಂದು ಒರೆಸಿಕೊಂಡು  ,ಪಟಾಪಟಿ ನಿಕ್ಕರ್ ಜೋಬಿನಿಂದ ಒಂದು ಗಣೇಶ ಬೀಡಿ ತೆಗೆದು  ,ಬಾಯಿಗಿಟ್ಟು ಬೆಂಕಿಕಡ್ಡಿ ಗೀರಿ  ,ಎರಡೂ ಕೈಗಳನ್ನು ಬಾಯ ಬಳಿ ತಂದು ಹೊತ್ತಿಸಿ  ,ದಮ್ ಎಳೆದು ಆಕಾಶದೆಡೆ ಹೊಗೆ ಬಿಡುತ್ತಾ ಮನದಲ್ಲೇ ಏನೋ ದ್ಯಾನಿಸುತ್ತಾ ,ಮೋಟು ಬೀಡಿಯನ್ನು ಹೊಸಕಿ ಹಾಕಿ ಮತ್ತೆ ಗುದ್ದಲಿಗೆ ಕೈ ಹಾಕುತ್ತಿದ್ದ .
ಬಾಯಾರಿಕೆಯಾದರೆ , ಅಲ್ಲೇ ದೊಡ್ಡಪ್ಪಗಳ ಹೊಲದಲ್ಲಿ ಬೇಸಿಗೆಯಲ್ಲೂ ಇರುವ ಮಣ್ಣಿನ   ನೀರಿನ‌ ತೊಟ್ಟಿಯಲ್ಲಿ  ನೀರು‌ಕುಡಿಯುತ್ತಿದ್ದ  ,ಇನ್ನೊಂದು ಬದಿಯಲ್ಲಿ ಎಮ್ಮೆ ನೀರು ಕುಡಿಯುತ್ತಿತ್ತು.


"ಏ ಬಿಳಿಯಪ್ಪ ಬರೀ ಮಡಿಕೆ ಕುಳ (ನೇಗಿಲ ಮುಂದಿನ ಕಬ್ಬಿಣದ ಚೂರು ) ಇಡ್ಕಂಡು ಅಲ್ಲಾಡಿಸ್ಕಂಡು ಬಂದ್ರೆ ಇದ್ಲು ಬ್ಯಾಡೇನಪ್ಪ ಇವತ್ತು ನಾನು ಕುಳ ಮಾಡ್ಕೊಡಲ್ಲ ನಡಿ " ಎಂದು ಸಿಟ್ಟಾಗಿ ಕಡ್ಡಿ ಮುರಿದಂತೆ ಹೇಳಿ ಬಿಟ್ಟ ಕಮ್ಮಾರಣ್ಣ . ನಾಳೆ ಒಂದಿನ‌ ,ಆಯ್ತುವಾರ ಮಾತ್ರ ಬ್ಯಾಸಾಯ ಹೊಡೆಯೋದು ,ಸೋಮಾರ ಬ್ಯಾಸಾಯ ಹೊಡ್ಯಂಗಿಲ್ಲ ,ನಿನ್ಗು ಗೊತ್ತು ಈ ಸತಿ ಕುಳ ತಟ್ಟಿ ,  ಮನೆ ಮಾಡ್ಕೊಡು ಅದ್ಯಾಕೆ ಅಂಗಾಡ್ತಿಯಾ? ಮುಂದ್ಲುವಾರ ಬಾರೋವಾಗ ಶ್ಯಾನೆ ಇದ್ಲು ತತ್ತೀನಿ , ಈ ಸತಿ ಒಳ್ಳೆ ಉಳುಮೆ ಮಾಡುಬೇಕು ನಾನು " ಎಂದು  ಬಿಳಿಯಪ್ಪ ಒಂದೆ ಸಮನೆ ಮಾತನಾಡುತ್ತಿದ್ದ ಕಮ್ಮಾರಣ್ಣ ಗೊನಗುತ್ತಾ , ಮಡಿಕೆ ಕುಳಕ್ಕೆ ನಾಕೇಟು ಹಾಕಿ‌ , ಚೂಪು ಮಾಡುವ ಕಾರ್ಯದಲ್ಲಿ ‌ತಲ್ಲೀನನಾದ .
ಮನೆಯಿಂದ ಊರ ಹೊರಗೆ ತಂದಿಟ್ಟ ನೊಗ ,ಪಟಗಣ್ಣಿ, ಮಡಿಕೆ , ಹೂಟೆ ಹಗ್ಗ  ಇವುಗಳನ್ನು ಊರಮುಂದೆ ತರಬೇಕು, ಏಕೆಂದರೆ ಅದು ಆ ಊರಿನ ಸಂಪ್ರದಾಯ.
ಅದರ ಪ್ರಕಾರ ಯಾರೇ ಆದರೂ ಮನೆಯಿಂದಲೇ ನೇರವಾಗಿ ನೊಗ ಹೂಡಿ ಹೊಲಕ್ಕೆ ತೆರಳಬಾರದು . ಆದರೆ ಇದು ಎತ್ತಿನ ಗಾಡಿಗಳಿಗೆ ಅನ್ವಯವಾಗುತ್ತಿರಲಿಲ್ಲ.
ಸತೀಶ ನೊಗ ತಂದರೆ , ಬಿಳಿಯಪ್ಪ ಎತ್ತು‌ಹಿಡಿದು ಮಡಿಕೆ ಹಗ್ಗ ತಂದು . ಎತ್ತುಗಳ ಮೇಲೆ ನೊಗವಿಟ್ಟು ಅದರ ಮೇಲೆ ನೇಗಿಲು ಇಟ್ಟು ಹಗ್ಗದಿಂದ ಬಿಗಿದು ."ಆ ಬಿಡು ....."ಎಂಬ ಸದ್ದಿನೊಂದಿಗೆ ದೂಳು ಮಾಡುತ್ತಾ ಕೆಂಗಲು (ಕೆಂಪು ಮಣ್ಣ ) ಹೊಲದೆಡೆ  ಹೊರಟ . ನೊಗದಿಂದ ಮಡಿಕೆ ಇಳಿಸಿ ತಿರುಗಿಸಿ  ,ಭೂಮಿಯಲ್ಲಿ ಕುಳ ಹೋಗುವಂತೆ ಇಟ್ಟು ಹಗ್ಗದಿಂದ ನೊಗಕ್ಕೆ ಬಂದಿಸಿ , ಸ್ವಲ್ಪ ಮುಂದೆ ಹೋಗಿ ಕಡದು, ಬಳದು ,ನೋಡಿ ಮತ್ತೆ ಹಗ್ಗ ಸರಿಮಾಡಿ , ಎಡಗೈಯಲ್ಲಿ ಮಡಿಕೆ ಹಿಡಿ ಹಿಡಿದು , ಬಲಗೈಯಲ್ಲಿ ಬಾರುಕೋಲು ತಿರುಗಿಸುತ್ತಾ ಟೇಪು ಹಿಡಿದಂತೆ ಮೊದಲ ಸಾಲು ಹೊಡೆದು ತಿರುಗಿಕೊಳ್ಳುವಾಗ  ,ಗುಣಾರಳ್ಳಿ ಕೆರೆಯ ಮಗ್ಗುಲಿನಿಂದ ಸೂರ್ಯ ಇಣುಕಿನೋಡುತ್ತಿದ್ದ. ಯಾವದೋ ಚಿತ್ರ ಗೀತೆ ,ಮತ್ತಾವುದೋ ನಾಟಕದ ಹಾಡುಗಳನ್ನು ತನ್ನದೆ ರಾಗದಲ್ಲಿ ಹಾಡುತ್ತಾ , ಕೆಲವೊಮ್ಮೆ ಸಾಲು ತಪ್ಪಿದ ಎತ್ತುಗಳಿಗೆ ಬೈಯುತ್ತ  ,ಉಳುಮೆ ಕೆಲಸ ಮುಂದುವರೆಸಿದ ಬಿಳಿಯಪ್ಪ.
"ಅಡಿಕೆ ಎಲೆ ಐತೇನೊ ಬಿಳಿಯ" ಎಂದು ಹತ್ತಿರ ಬಂದವರು ಪಕ್ಕದ ಹೊಲದಲ್ಲಿ ಹೊಲ ಹೂಳುತ್ತಿದ್ದ ರಾಮಣ್ಣ
"ಅಡಿಕೆ ಐತೆ  ಎಲೆ ಒಣಗೈತೆ ತಗ "
ತಾನೂ ಎರಡು ಅಡಿಕೆಯನ್ನು ಬಾಯಲ್ಲಿ ಹಾಕಿಕೊಂಡು, ಒಣಗಿದ ವಿಳ್ಯೆದೆಲೆಗೆ  ಸುಣಗಾಯಿ ಡಬ್ಬಿಯಿಂದ ತೋರ್ಬೆರಳಲ್ಲಿ ಸುಣ್ಣ ತೆಗೆದು ಎಲೆಗೆ ಸವರಿ , ಬಾಯಲ್ಲಿ ತುರುಕಿಕೊಂಡು   ಇಬ್ಬರೂ ಜಗಿಯಲಾರಂಬಿಸಿದರು .
ನಿಮ್ಮೊಲ ಎಂಗೆ ಚೆನ್ನಾಗಿ ಅರಿಯುತ್ತಾ?( ಉಳುಮೆ ಆಳದ ಬಗ್ಗೆ) ಕೇಳಿದ ಬಿಳಿಯಪ್ಪ
" ಏ ನಮ್ಮದು ಜಜ್ಜು ನೆಲ ಸುಮಾರಾಗಿ ಅರಿಯುತ್ತೆ ಇನ್ನೆರಡ್ ದಿನ  ಬಿಟ್ರೆ ಮಡಿಕೆ ತೂರಲ್ಲ  , ಮಳೆ ಬಂದರೇನೆ ಬ್ಯಾಸಾಯ ನಂದು,ಸರಿ ಬಿಸ್ಲಾಗುತ್ತೆ ನಾನು ಹೋಗಿ ಮಡಿಕೆ ಹೊಡಿಬೇಕು ಅಂತ ಹೊರಟರು ರಾಮಣ್ಣ.
ಕ್ರಮೇಣವಾಗಿ ಬಿಸಿಲು ಬಲಿತಂತೆ ಹೊಟ್ಟೆ ತಾಳ ಹಾಕಲಾರಂಬಿಸಿತು , ದೂರದಲ್ಲಿ ಸತೀಶ ಬರುವುದು ಕಂಡು , ಸ್ಕೂಲ್ಗೆ ರಜಾ ಇರಾದಿಕ್ಕೆ ಸತೀಶ ಬುತ್ತಿ ತತ್ತಾನೆ ಎಂದು ಮನದಲ್ಲಿ ಅಂದುಕೊಂಡನು ಬಿಳಿಯಪ್ಪ.
ಕೈತೊಳೆದುಕೊಂಡು  ,ತಲೆಗೆ ಕಟ್ಟಿದ ಟವಲ್ ತೆಗೆದು ಗಂಗಳದಲ್ಲಿ(ತಟ್ಟೆ) ಜೋಳದ ಮುದ್ದೆ , ಉರಿದುಳ್ಳಿಕಾಳು ಸಾರಿನಲ್ಲಿ ಒಂದು   ಮುದ್ದೆ ಉಂಡು ಎರಡನೇ ಮುದ್ದೆಗೆ ಮಜ್ಜಿಗೆ ಕಲೆಸಿಕೊಂಡು ಚೆನ್ನಾಗಿ ಕಲೆಸಿ , ಸೊರ್ ....ಸೊರ್.... ಎಂದು ಸವಿಯತೊಡಗಿದ. ಕೊನೆಗೆ ಗಂಗಳದಲ್ಲೇ ಅರ್ಧ ಚೆಂಬಿನಷ್ಟು ಮಜ್ಜಿಗೆ ಹಾಕಿಸಿಕೊಂಡು , ಗಟಗಟನೆ  ಕುಡಿದು ಕೊನೆಗೆ ನೀರು ಕುಡಿವ ಶಾಸ್ತ್ರ ಮಾಡಿ , "ನೀರು ಅಲ್ಲಿ ಹೊಂಗೆ ಮರದಡಿ ಇಟ್ಟು ಹೋಗು"
ಎಂದು ಸತೀಶನಿಗೆ ಹೇಳಿದ .
ಸತೀಶ ಊರಕಡೆ ಹೆಜ್ಜೆ ಹಾಕಿದ .


ಸತೀಶ ಹೋಗಿ ಅರ್ಧ ಗಂಟೆ ಆಗಿರಬಹುದು .ದೂರದಿಂದ ಒಂದು ಹೆಣ್ಣಿನ ಆಕೃತಿ ಬರುತ್ತಿರುವದನ್ನು ಮಡಿಕೆ ಸಾಲಿನ ನಡುವೆಯೂ ಗಮನಿಸಿದ ಬಿಳಿಯಪ್ಪ .
ಇವಳ್ಯಾಕೆ ಇತ್ತ ಬರುತ್ತಿದ್ದಾಳೆ ? ಇವಳ ಅಪ್ಪನಿಗೆ ಬುತ್ತಿ ತಂದಳೆ? ಛೆ ಇಲ್ಲ ಅವರಪ್ಪ ಇವತ್ತು ಬ್ಯಾಸಾಯಕ್ಕೆ ಬಂದಿಲ್ಲ? ಮತ್ಯಾಕೆ ಬಂದಳು? ಹೊಲದಲ್ಲೇನಾದರೂ ಕಲ್ಲುಗಳ ಆರಸಿ ಹಾಕಲು? ಇಲ್ಲ ಅವರ ಹೊಲದಲ್ಲಿ ಕಲ್ಲುಗಳೆ ಇಲ್ಲ ? ಹೇ ಇವಳು ಅವಳಲ್ಲ , ಬ್ಯಾರೆ  ಯಾರೋ ಇರಬಹುದು , ನನಗೆ ಅವಳ ಭ್ರಮೆ, ಮೊನ್ನೆ ಗೌಡ್ರಬಾವಿಯಲ್ಲಿ ಭಜಾರಿಯಂತೆ ಜಗಳಕ್ಕೆ ನಿಂತಾಗ ಅವಳ ಕೈ ಸೋಕಿದಾಗ ಮೈಯೆಲ್ಲಾ ಕರೆಂಟ್ ಪಾಸಾದಂಗಾಗಿತ್ತು .
"ಏ ಗಿಡ್ಡಿ ನಿನಗೈತೆ ಕಣೆ" ಸಿಟ್ಟಿನಿಂದ ನುಡಿದ ಬಿಳಿಯಪ್ಪ
" ಏ ಹೋಗೊಲೋ ಕಂಡಿದಿನಿ ಇವ್ನೇನು ಬಿದುರು ಗಳ ಬೆಳದಂಗ್ ಬೆಳದವ್ನೆ"
ಅಂದು ತುಂಬಿದ ಬಿಂದಿಗೆ ಭರದಲ್ಲಿ ಎತ್ತಿ ಸೊಂಟದ ಮೇಲೆ ಇಡುವಾಗ  ,ಚೆಲ್ಲಿದ ನೀರು ಸೊಂಟದ ಕೆಳಗಿನ ಭಾಗ ನೆನೆಸಿತ್ತು. ಅದನ್ನೇ ನೋಡುತ್ತಾ ನಿಂತ ಬಿಳಿಯಪ್ಪ ಜಗಳ ಮರೆತಿದ್ದ. 
ನಿನ್ನೆಯ ಜಗಳದ ದೃಶ್ಯ ಬಿಳಿಯಪ್ಪನ ಕಣ್ಣ ಮುಂದೆ ಬಂದಿತು .
ಹತ್ತಿರಕ್ಕೆ    ಬರು  ಬರುತ್ತಾ ಪಕ್ಕಾ ಆಗಿತ್ತು ಅವಳೇ ಶೀಲಾ ! ರಂಬೆಯಂತೆ ಇಲ್ಲದಿದ್ದರೂ, ಕೊಂಬೆಗೆ ಲಂಗ ದಾವಣಿ ಹಾಕಿದರೆ ಉಬ್ಬು ತಗ್ಗು ಕಾಣುವಷ್ಟು ಸೌಂದರ್ಯಕ್ಕೇನೂ ಬರವಿರಲಿಲ್ಲ ,ಹಾಲಿನ ಬಿಳುಪಿಲ್ಲದಿದ್ದರೂ ಗೋದಿ ಬಣ್ಣದ, ಸಾಮಾನ್ಯರಿಗಿಂತ  ಅರ್ಧ ಅಡಿ ಕಡಿಮೆ ಎತ್ತರದ ಹುಡುಗಿ  ,ಓದಿನಲ್ಲಿ ಬಿಳಿಯಪ್ಪನಷ್ಟೆ ಓದಿ ಮೂರನೆ ಕ್ಲಾಸು ಪೇಲಾಗಿ , ಈಗ  ಹದಿನೆಂಟನೆ ವರ್ಷದ ಹರೆಯ ಎದ್ದು ಕಾಣುತ್ತಿತ್ತು. ಬಿದಿರಿನ ಬುಟ್ಟಿಯಲ್ಲಿನ ಬುತ್ತಿಯನ್ನು ತಲೆ ಮೇಲೆ ಹೊತ್ತು ಬರುವಾಗ ಕೆಲ ಅವಯವಗಳು ಹೆಚ್ಚೇ ಕುಲುಕುತ್ತಿರುವಂತಿದ್ದವು.
"ಏ ಗಿಡ್ಡಿ ..ಎನ್ ಸಮಾಚಾರ" ರಸ್ತೆಯಲ್ಲಿ ನಡೆವ ಶೀಲಾಳಿಗೆ  ಹೊಂಗೆ ಮರದ ಕೆಳಗೆ ಕೂತು ನೀರು ಕುಡಿಯುತ್ತಾ ಕೂಗಿದ ಬಿಳಿಯಪ್ಪ.
"ಗಿಡ್ಡಿ ಬುಡ್ಡಿ ಅಂದರೆ ಸೆನ್ನಗಿರಲ್ಲ ನೀನೇನು ನನಗೆ ಹೆಸರಿಕ್ಕಿದಿಯಾ?
ಎಂದು ದಾರಿ ಬಿಟ್ಟು, ಬಿಳಿಯಪ್ಪನ ಹೊಲದೆಡೆ ಹೆಜ್ಜೆ ಹಾಕಿದಳು ಶೀಲಾ,
"ನಾನು ಗಿಡ್ಡಿ ಅಂತಲೆ ಕರೀತಿನಿ ಏನೇ ಈಗ"
"ನನ್ನ ಸುದ್ದಿ ನಿನಗ್ ಗೊತ್ತಿಲ್ಲ ಎಲ್ಲ ಹುಡ್ಗೇರಂಗಲ್ಲ ನೋಡು ನಾನು"
" ಎನೇ ಏನ್ ಮಾಡ್ತಿಯೇ ನೀನು "
ಏನ್ ಮಾಡ್ತಿನಾ ನೋಡು ನಿನ್ನೆ ನೀರ್ಸೇದೋವಾಗ ಎಲ್ಲರ್ ಮುಂದೆ ಗಿಡ್ಡಿ ಅಂತಿಯಾ?"
ಮಾತನಾಡುತ್ತಾ ,ಮಾತನಾಡುತ್ತಾ ಆಗಲೇ ಬಿಳಿಯ ಕುಳಿತ ಹೊಂಗೆಯ ಮರದ ನೆರಳಿಗೆ ಬಂದು ನಿಂತಿದ್ದಳು.
ಬುತ್ತಿಯ ಬುಟ್ಟಿ ಕೆಳಗಿಟ್ಟು  ಕೈಯಿಂದ ಬಿಳಿಯನ ಹೊಡೆಯಲು ಮುಂದಾಗುತ್ತಿದ್ದಂತೆ, ಬಿಳಿಯ ಅವಳ ಕೈಹಿಡಿದ. ಕೊಸರಾಡಿ ಅವನ ಕೈಯಿಂದ ಬಿಡಿಸಿಕೊಳ್ಳುವ ಪ್ರಯತ್ನ ಮಾಡಿದಳು , ಗಂಡಿನ ಬಿಗಿಯಾದ ಹಿಡಿತ , ಮತ್ತು  ಬಿಸಿಯುಸಿರು  ತಾಗುತ್ತಿದ್ದಂತೆ
ಶೀಲಾಳು ಕೊಸರುವುದು ಕ್ರಮೇಣ ಕಡಿಮೆಯಾಯಿತು. ಉಸಿರು ಬಿಗಿಯಾಗಿ ,ದೇಹದ ಅಂಗಗಳಲ್ಲಿ ಎನೋ ಬದಲಾವಣೆ ಕಂಡಂತಾಯಿತು .ಅವನೂ ಹಿಡಿತ ಸಡಿಲಿಸಿದ ನಿಧಾನವಾಗಿ ಅವಳನ್ನು ಹತ್ತಿರ ಎಳೆದುಕೊಂಡ, ಅವಳ ಕಡೆ ಪ್ರತಿರೋಧ ಇರದಿರುವುದು ಮನವರಿಕೆಯಾಯಿತು .ಪಕ್ಕದ ಹೊಲದಲ್ಲಿ ರಾಮಣ್ಣ ತನ್ನ ಮಡಿಕೆ ( ನೇಗಿಲು) ಮುರಿದ ಪರಿಣಾಮ ಮನೆಗೆ ಹೋಗಿದ್ದು ನೆನಪಾಯಿತು, ಸುತ್ತಮುತ್ತ ಬರೀ ಕೆಂಗಲು ನೆಲ ,ಹೊಂಗೆ ಮರದಡಿ ಇವರ ಬಿಟ್ಟರೆ ಬೇರೆ ನರಮನುಷ್ಯರಿಲ್ಲ .
ಗಂಡಸಿನ ಬಿಸಿಯುಸಿರು ತಾಗುತ್ತಲೇ ಅವಳ ಕಾಮನೆಗಳ ಕಟ್ಟೆಯೊಡೆದು ಯಾವುದೋ ಸುಖಕೆ ಅವಳ ದೇಹ ಸಜ್ಜಾದಂತಿತ್ತು ,ಅವನ ಪರಿಸ್ಥಿತಿಯೂ ಅದಕ್ಕಿಂತ ಭಿನ್ನವಾಗೇನೂ ಇರಲಿಲ್ಲ ,ಅವನ ಮನದಲ್ಲಿ ಒಂದೇ ಪ್ರಶ್ನೆ ಇವಳೇನಾ ನಿನ್ನೆ ಬಜಾರಿಯಂತೆ ನನ್ನೊಂದಿಗೆ ಜಗಳ ಆಡಿದವಳು ?ಈಗ ಮದನ ಕಾಮ ಕ್ರೀಡೆಗೆ ಸಿದ್ದಳಾಗಿಹಳಲ್ಲ? ಎಂದು ಕೊಳ್ಳುತ್ತಾ, ಛೆ ಇಂತಹ ಸುಂದರ ಶೃಂಗಾರ ಸಮಯದಲ್ಲಿ ಆ ನೆನಪೇಕೆ? ಎಂದು ಅವಳನ್ನು ಇನ್ನೂ ಹತ್ತಿರಕ್ಕೆ ಬರಸೆಳೆದುಕೊಂಡನು .ಹೊಂಗೆ ಮರದ ತಂಪಿನಲೂ ಎರಡೂದೇಹಗಳಲ್ಲಿ ಬೆವರು ಹರಿದಿತ್ತು .ದೂರದಲ್ಲಿ ಬಿಸಿಲಿನಲ್ಲಿ ನೊಗವೊತ್ತು ನಿಂತ ಎತ್ತುಗಳು ಏದುಸಿರು ಬಿಡುತ್ತಿದ್ದವು.....


"ತಾಗಂಬಾರವ್ವ ಮುದ್ದೆ ಸಾರ್ನಾ " ಎಂದು ತಾನು ತಂದಿದ್ದ ಬಿದಿರು ಬುಟ್ಟಿ ಕೆಳಗಿಟ್ಟು ಅದಕ್ಕೆ ಹೊದಿಸಿದ್ದ ಬಿಳಿ ಬಟ್ಟೆ ಬಿಡಿಸಿದರು ಅಗಸರ ಮಾರಪ್ಪ .
ವರ್ಷ ಪೂರ್ತಿ ಕೆಲವರ ಮನೆಯಲ್ಲಿ ಆ ಊರಿನ ಅಗಸರು ಬಟ್ಟೆ ಒಗೆದು ಇಸ್ತ್ರಿ ಮಾಡಿ ಮನೆಗಳಿಗೆ ತಂದು ಕೊಡುತ್ತಿದ್ದರು. ಇದಕ್ಕೆ ಬದಲಾಗಿ  ಅವರು ಹಣ ಪಡೆಯದೇ ಪ್ರತಿದಿನ ಬೆಳಿಗ್ಗೆ ಈ ಎಲ್ಲಾ ಮನೆಗಳಿಂದ ಮುದ್ದೆ ಅನ್ನ .ಸಾರು. ಮಜ್ಜಿಗೆ ,ರೊಟ್ಟಿ ಹೀಗೆ ವಿವಿಧ ಆಹಾರದ ಪದಾರ್ಥಗಳನ್ನು ಒಂದೆ ಬುಟ್ಟಿಯಲ್ಲಿ ಹಾಕಿಸಿಕೊಂಡು ತರುತ್ತಿದ್ದರು. ಸಾರು ಹಾಕಿಸಿಕೊಳ್ಳಲು ಒಂದೇ ಪಾತ್ರೆ ಇರುತ್ತಿದ್ದರಿಂದ ಎಲ್ಲರ ಮನೆಯ ಎಲ್ಲಾ ತರದ ಸಾರನ್ನು ಒಂದೇ ಪಾತ್ರೆಯಲ್ಲಿ ಹಾಕಿಸಿಕೊಳ್ಳುತ್ತಿದ್ದರು ಅದಕ್ಕೆ "ಕೂಡಾಮ್ರ " ಅನ್ನುತ್ತಿದ್ದರು. ಕೂಡು + ಆಮ್ರ(ಸಾಂಬಾರು)  ಸತೀಶನ ಗೆಳೆಯ ಗೋಪಾಲ ಅಗಸರ ಹುಡುಗನಾದ್ದರಿಂದ ಅವನ ಗೆಳೆಯರು ಅವನಿಗೆ ಕೂಡಾಮ್ರ ಎಂದು ಅಡ್ಡೆಸರಿಟ್ಟಿದ್ದರು. "ಹೇ ಕೂಡಾಮ್ರ" ಎಂದ ತಕ್ಷಣ ಗೆಳೆಯರ ಹೊಡೆಯಲು ಅವನು ಓಡಿ ಬರುತ್ತಿದ್ದ.
ಒಂದು ಮುದ್ದೆ ,ಸ್ವಲ್ಪ ಅನ್ನ , ಒಂದು ಸೌಟು  ಸಾರು,ಒಂದು ಲೋಟ ಮಜ್ಜಿಗೆ ಹಾಕಿ "ಮಾರಣ್ಣ ಈ ಬಟ್ಟೆಗಳನ್ನು ಒಗೆದುಕೊಂಡು ಬಾ " ಎಂದು ಬಟ್ಟೆ ಗಂಟು ಕೊಟ್ಟಳು ತಿಪ್ಪಕ್ಕ.
ಬಟ್ಟೆ ಗಂಟಲಿನಲ್ಲಿ ಮೇಲಿದ್ದ ಪಟಾಪಟಿ ನಿಕ್ಕರ್ ಮೇಲಿನ ಕಲೆ ನೋಡಿ ತಿಪ್ಪಕ್ಕ ಇದು ಬಿಳಿಯಪ್ಪನ ನಿಕ್ಕರಾ? ಎಂದ
"ಹೌದು ಅಣ್ಣ ನಿಮಗೇಗೆ ಗೊತ್ತಾಯಿತು?" ಎಂದು ತಿಪ್ಪಕ್ಕ ಆಶ್ಚರ್ಯಕರವಾಗಿ ಕೇಳಿದಳು .
ನಾವು ಅಗಸರಮ್ಮ... ನಮಗೆ ಎಲ್ಲಾ ಗೊತ್ತಾಗುತ್ತೆ .... ಎಂದು ಮುಂದಿನ ಮನೆಗೆ ಹೊರಟರು ಮಾರಣ್ಣ.....

ಮುಂದುವರೆಯುವುದು

ಸಿ ಜಿ ವೆಂಕಟೇಶ್ವರ



05 July 2020

ಸಿಹಿಜೀವಿಯ ಹಾಯ್ಕುಗಳು ( ಗುರುಪೂರ್ಣಿಮ ವಿಶೇಷ)


*ಸಿಹಿಜೀವಿಯ ಹಾಯ್ಕುಗಳು*

(ಇಂದು ಗುರುಪೂರ್ಣಿಮೆ . ಎಲ್ಲರಿಗೂ ಗುರುಪೂರ್ಣಿಮೆಯ ಶುಭಾಶಯಗಳು)

೬೯

ಗುರು ಪೂರ್ಣಿಮ
ಗುರುವಿಗೆ ನಮನ
ಜನ್ಮ ಸಾರ್ಥಕ.

೭೦

ಅಕ್ಷರ ಧಾರೆ
ಎರೆಯುವನು ಗುರು
ಶಿಷ್ಯ ಪಾವನ.

೭೧

ಮಕ್ಕಳ ಶಾಲೆ
ಮನೆಯಲಿ ಅಲ್ಲವೇ?
ಅಮ್ಮನೇ ಗುರು.

೭೨

ಗುರು ಇಲ್ಲದ
ಗುರಿಯು ಇನ್ನೆಲ್ಲಿದೆ?
ಗುರುವೇ ನಮಃ.

೭೩

ಒಟ್ಟಿಗಿಹರು
ಬ್ರಹ್ಮ, ವಿಷ್ಣು ಈಶ್ವರ
ಅವನೇ ಗುರು.

*ಸಿ ಜಿ ವೆಂಕಟೇಶ್ವರ*



ಸಿಹಿಜೀವಿಯ ಹನಿಗಳು (ಅಮ್ಮ)





*ಹೆತ್ತಮ್ಮ*

ಅಲ್ಲಿ ಇಲ್ಲಿ ಯಾಕೆ
ಹುಡುಕ್ತಿಯಾ ನೀ
ಕಣ್ಣಿಗೆ ಕಾಣದ
ದೇವ್ರನ್ನ ತಮ್ಮ?|
ಮನೇಲೇ ಇದ್ದಾರಲ್ಲ
ಹೆತ್ತಮ್ಮ||



*ಗುರು*

ಮನೆಯಲಿ ಮೊದಲಿಗೆ
ಅಕ್ಷರ ಸಂಸ್ಕಾರಗಳ
ಕಲಿಸಿದವರಾರು?
ಮತ್ತಿನ್ನಾರು?|
ಅಮ್ಮನೇ ತಾನೆ
ನಮ್ಮ ಗುರು ||

*ಸಿ ಜಿ ವೆಂಕಟೇಶ್ವರ*
9900925529




01 July 2020

*ಉದಕದೊಳಗಿನ ಕಿಚ್ಚು* ಕಾದಂಬರಿ ಭಾಗ ೧೦

*ಉದಕದೊಳಗಿನ ಕಿಚ್ಚು* ಕಾದಂಬರಿ ಭಾಗ ೧೦



  
ಪರೀಕ್ಷೆಗೆ ಓದಲು ರಜೆ ಕೊಟ್ಟಾಗ ಸತೀಶನು ಮನೆಯಲ್ಲಿ ಓದಲು ಅಕ್ಕಪಕ್ಕದ ಜನರ ಮಾತುಗಳಿಂದ ತೊಂದರೆಯಾಗಬಹುದೆಂದು ಭಾವಿಸಿ ಹೊಲಗಳಲ್ಲಿರುವ ಹೊಂಗೆ ಮರಗಳ ಕೆಳಗೆ ಪುಸ್ತಕಗಳನ್ನು ಓದುತ್ತಾ , ಮಧ್ಯಾಹ್ನದ ಊಟಕ್ಕೆ ಮನೆಗೆ ಬಂದು ಊಟ ಮಾಡಿ , ಪು‌ನಃ ಓದಲು ಹೊಂಗೆ ಮರದೆಡೆ ಸಾಗುತ್ತಿದ್ದ ,ಮೂರನೇ ದಿನದಿಂದ ವೆಂಕಟೇಶ್ ಮತ್ತು ಸಿದ್ದಮಲ್ಲ ಸಹ ಸತೀಶನ ಜೊತೆಗೆ ಓದಲು ಹೊಲಕ್ಕೆ ಹೋದರೂ ಓದಿಗಿಂತ ಅವರಿಬ್ಬರ ಮಾತುಗಳು ಹೆಚ್ಚಾದಾಗ ನಾಳೆಯಿಂದ ನೀವು ನನ್ನ ಜೊತೆ ಓದಲು ಬರಬಾರದೆಂದು ನೇರವಾಗಿ ಹೇಳಿ ಒಬ್ಬನೇ ಮರದಡಿ ಓದಲು ಮುಂದುವರೆಸಿದನು ಸತೀಶ.
ಅಂದು ಊರಿನ ಇಕ್ಕೆಲಗಳಲ್ಲಿ ಜನರು ಜಮಾಯಿಸಿದ್ದರು . ಯುದ್ಧಕ್ಕೆ ಸಜ್ಜಾದ ಯೋಧರನ್ನು ಕಳಿಸುವಂತೆ ಪರೀಕ್ಷೆ ಬರೆಯುವ ಮಕ್ಕಳಿಗೆ ಹಾರೈಸಿ ಪರೀಕ್ಷಾ ಕೊಠಡಿಯವರೆಗೆ ಬಿಟ್ಟ ,"ಚೆನ್ನಾಗಿ ಬರಿ" ಎಂದು ಹಾರೈಸಿದ ಪೋಷಕರು ಮನೆಗೆ ಬರದೇ ಅಲ್ಲೇ ಇರುವ ಕಿಲಿಕಿಸ್ತ್ರೆ ಮರದ ಕೆಳೆಗೆ ನಿಂತೇಬಿಟ್ಟರು.
ಪರೀಕ್ಷಾ ಕೊಠಡಿಯ ಒಳಗೆ ನಿಶ್ಯಬ್ದ ವಾತಾವರಣ ಮಕ್ಕಳ ಕೈಗೆ ಪ್ರಶ್ನೆ ಪತ್ರಿಕೆಗಳು ಮತ್ತು ಉತ್ತರ ಪತ್ರಿಕೆಗಳನ್ನು  ನೀಡಿ ಶಥ ಫಥ ತಿರುಗಾಡುತ್ತಿದ್ದರು ಕೊಠಡಿಯ ಮೇಲ್ವಿಚಾರಕರು. ಸತೀಶನು ಒಮ್ಮೆ ಪ್ರಶ್ನೆ ಪತ್ರಿಕೆ ಓದಿದ . ನನಗೆಲ್ಲ ಉತ್ತರ ಗೊತ್ತು , ನಾನು ಬರೆಯಬಲ್ಲೆ , ಎಂಬ ಆತ್ಮವಿಶ್ವಾಸದ ಮಿಂಚು ಅವನ ಮೊಗದಲ್ಲಿ  ಮೂಡಿ ಮರೆಯಾಯಿತು. ಉತ್ತರ ಬರೆಯಲು ಶುರುಮಾಡಿದ .ಉಳಿದ ಬಹುತೇಕ ವಿದ್ಯಾರ್ಥಿಗಳು "ಅವನ್ಯಾರೋ ಪ್ರಶ್ನೆ ಕೊಡೋನು ನಮಗೆ ಮಾತ್ರ ಕಷ್ಟದ ಪ್ರಶ್ನೆಗಳ ಕೊಟ್ಟಿರುವ" ಎಂದು ಶಪಿಸುತ್ತಾ , ಮಾರಮ್ಮನ ದೇವಸ್ಥಾನದ ಭಂಡಾರ ಹಚ್ಚಿ ತಂದ ಪೆನ್ನು ತೆಗೆದು , ಪೆನ್ನಿಗೆ ಭಕ್ತಿಯಿಂದ ಕೈಮುಗಿದು , ಬರೆಯಲು ಪ್ರಯತ್ನಪಟ್ಟರೂ ಮುಂದಕ್ಕೆ ಹೋಗುತ್ತಿಲ್ಲ.
ಇದ್ದಕ್ಕಿದ್ದಂತೆ ರಸ್ತೆಯಲ್ಲಿ  ಶಿಳ್ಳೆಗಳು, ಕೇಕೆಗಳು ಅದನ್ನು ಕೇಳಿದ ಕೊಠಡಿಗಳ ಒಳಗಿರುವ ಹುಡುಗರು ದಬದಬನೆ ಎದ್ದು ತಾವು ತಂದಿದ್ದ ವಿಕ್ರಂ ಡೈಜೆಸ್ಟ್ ನ ಚಿಕ್ಕ ಪುಸ್ತಕಗಳನ್ನು ಕಿಟಕಿಯ ಮೂಲಕ ರಪರಪನೆ ಬಿಸಾಡಿ ಬಂದು ತಮ್ಮ ಆಸನಗಳಲ್ಲಿ ಆಸೀನರಾದರು.ಸತೀಶನಿಗೆ ಇದು ಸ್ವಲ್ಪ ಗಾಬರಿಯಾದರೂ ನಂತರ ಸಾವರಿಸಿಕೊಂಡು ಬರೆಯಲು ಮುಂದುವರೆಸಿದ .ಕೊಠಡಿಯ ಒಳಗೆ ಬಂದ ಸ್ಕ್ವಾಡ್ ನಿಜಲಿಂಗಪ್ಪನನ್ನು ಎಬ್ಬಿಸಿ , ಅವನ ಪ್ಯಾಂಟ್ ಜೇಬು, ಶರ್ಟ್ ಜೇಬು , ಚೆಕ್ ಮಾಡಿ ಕೈ ಕಾಲುಗಳು ಮತ್ತು ಇತರೆ ಅಂಗಗಳನ್ನು ಬಟ್ಟೆಯ ಮೇಲೆಯೇ ಸವರಿ ಏನೂ ಇಲ್ಲ ಎಂದು ಖಚಿತವಾದ ಮೇಲೆ ಕುಳಿತುಕೊ .ಎಂದು ಸಂಜ್ಞೆ ಮಾಡಿ ,ಎಲ್ಲರನ್ನೂ ಕಳ್ಳರಂತೆ ನೋಡುತ್ತಾ ಶಿಕ್ಷಕರಿಗೆ ಏನೋ ಹೇಳಿ , ಹೊರಟರು .ಎರಡು ನಿಮಿಷದ ನಂತರ ಬಂದು ಕಿಟಕಿಯಲ್ಲಿ‌ ಇಣುಕಿ ನೋಡಿದರು .
ಮೊದಲ ಪರೀಕ್ಷೆಯನ್ನು ಚೆನ್ನಾಗಿ ಬರೆದ ಖುಷಿಯಲ್ಲಿದ್ದ ಸತೀಶನ ಕಣ್ಣುಗಳು ಸುಜಾತಳ ನ್ನು ಹುಡುಕುತ್ತಿದ್ದವು .ನಗುತ್ತಲೇ ಬಂದ ಸುಜಾತ "ಹೆಂಗೆ ಬರ್ದೆ ಕನ್ನಡ ಪೇಪರ್" ಎಂದಳು ಸೂಪರ್ ಎಂದ " ನೀನು ಹೆಂಗೆ ಬರ್ದೆ"
"ಪರವಾಗಿಲ್ಲ ಅರವತ್ತೋ ಎಪ್ಪತ್ತೊ ಬರಬಹುದು". ಅಂದಳು ಸುಜಾತ.
ಅಷ್ಟರಲ್ಲಿ ಅವರ ಅಪ್ಪ ಬಂದಿದ್ದ ಕಂಡ ಸತೀಶ ಗೆಳೆಯರ ಕಡೆ ನಡೆದ .
ಪರೀಕ್ಷೆ ಮುಗಿಯಿತು ಮತ್ತೊಮ್ಮೆ ಸತೀಶನಿಗೆ ಮನದಲ್ಲಿ ದುಗುಡ  ಆರಂಭವಾಯಿತು. ದಿನವೂ ಅವಳ ನೋಡಲಾಗುವುದಿಲ್ಲವಲ್ಲ ಎಂದು ಮನದಲ್ಲೇ ಕೊರಗಲಾರಂಭಿಸಿದ.
ವಾಣಿ  ಬಸ್ಸಿನಿಂದ ಸಾಮಾನ್ಯ ನೀಲಿ ಸೀರೆಯನ್ನು ಉಟ್ಟ, ಕಪ್ಪಗಿದ್ದರೂ ಲಕ್ಷಣವಾದ ಮುಖ ಅಲ್ಲೊಂದು ಇಲ್ಲೊಂದು ಬಿಳಿಕೂದಲು ಕಾಣುತ್ತಿದ್ದವು .ಮುಖದಲ್ಲಿ ಆತ್ಮವಿಶ್ವಾಸ ಎದ್ದು ಕಾಣುತ್ತಿತ್ತು, ಅಷ್ಟಿಲ್ಲದಿದ್ದರೆ ಚಿಕ್ಕ ವಯಸ್ಸಿನಲ್ಲಿ ಗಂಡನ ಕಳೆದುಕೊಂಡು ಎರಡು ಮಕ್ಕಳ ಸಾಕುವುದು ಸಾಮಾನ್ಯವೆ? ಅವರು ಸತೀಶನ ಅಮ್ಮ ಗಂಟು ಮತ್ತು ಚೀಲದೊಂದಿಗೆ ಯರಬಳ್ಳಿ ಬಸ್ಟಾಂಡ್ ನಲ್ಲಿ ಇಳಿದರು  ಜೊತೆಗೆ ಒಬ್ಬ ಹುಡುಗನಿದ್ದ ಅವನೇ ಸತೀಶನ ತಮ್ಮ ಬಾಲಾಜಿ. ಆಗ ತಾನೆ ಏಳನೇ ತರಗತಿ ಪರೀಕ್ಷೆ ಬರೆದು ಜಾತ್ರೆಗೆ ಅಮ್ಮನ ಜೊತೆ ಬಂದಿದ್ದ . ಅಲ್ಲೇ ಬಸ್ಟಾಂಡ್ ನಲ್ಲಿ ನಿಂತಿದ್ದ ಬಿಳಿಯಪ್ಪ ಚೀಲ ತೆಗೆದುಕೊಂಡು " ಅಕ್ಕ ಸೆನ್ನಾಗಿದ್ದಿಯಾ? ಬಾ ಹೋಗಾನಾ?" ಎಂದು ಮಾತನಾಡುತ್ತಾ ಮಾರಮ್ಮನ ಗುಡಿ ದಾಟಿ ಮನೆಯತ್ತ ನಡೆದರು.
ಹಸುವನಗಲಿದ ಕರುವಿನಂತೆ ಎಲ್ಲಿದ್ದನೊ ಓಡಿ ಬಂದು ಅಮ್ಮನ ತಬ್ಬಿದ ಸತೀಶ .
ಅಮ್ಮ ‌ಬಂದ ಸಂತಸದಿಂದ ಸತೀಶನ ವರ್ತನೆಯಲ್ಲಿ ಇದ್ದಕ್ಕಿದ್ದಂತೆ ಬದಲಾವಣೆ ಕಂಡಿತು . ಅಪ್ಪ ಅಮ್ಮನ ಪ್ರೀತಿ ವಂಚಿತ ಮಕ್ಕಳು ಇದ್ದಕ್ಕಿದ್ದಂತೆ ಅಪ್ಪ ಅಮ್ಮ ದೊರತರೆ, ಕೆಲವೊಮ್ಮೆ ವಿಶೇಷವಾದ  ವರ್ತನೆಯಲ್ಲಿ ತೊಡಗುವರು, ಕೆಲವೊಮ್ಮೆ ಕೆಲವರು ಬಾಲ್ಯದಲ್ಲೇ ದುಷ್ಚಟಗಳ ದಾಸರಾಗುತ್ತಾರೆ.  ಆದರೆ  ಸತೀಶ ಅಂತಹ ಹುಡುಗನಾಗಿರಲಿಲ್ಲ.
ಅಪರೂಪಕ್ಕೆ ಅಮ್ಮ ಬಂದಿದ್ದರಿಂದ ಅಮ್ಮನ ಪ್ರೀತಿ ಸವಿದು ಸ್ವಲ್ಪ ಅತಿಯಾದ ಮಾತು ಮತ್ತು ಚಟುವಟಿಕೆಗಳನ್ನು ತೋರಿದ . ಆಗಲೆ ಅನಾಹುತವೊಂದು ಸಂಭವಿಸಿದ್ದು.
ಇದ್ದಕ್ಕಿದ್ದಂತೆ ಅಕ್ಕಪಕ್ಕದ ಮನೆಯವರು ಸೇರಿದರು ಪೂಜಾರ ಫಣಿಭೂಷಣನ ಕರೆಸಿದರು, ನಾಟಿ‌ಔಷದ ಹಾಕುವ ರಂಗಣ್ಣನವರನ್ನು ಕರೆಸಿದರು. ರಾತ್ರಿ ಒಂಭತ್ತೂವರೆ, ಮಲಗುವ ಸಮಯದಲ್ಲಿ ಇಡೀ ಬೀದಿ ಎಚ್ಚರಾಗಿ ಎಲ್ಲರ ಮನದಲ್ಲಿ ದುಗುಡ ಮನೆ ಮಾಡಿತ್ತು.
ಭೂದೇವಮ್ಮ , ಮನದಲ್ಲೇ ಚಡಪಡಿಸತೊಡಗಿದರು . ದೇವರೇ ಅಂದು ಆದಂತೆ ಇಂದು ಆಗದಿರಲಿ. ಈಗಾಗಲೇ ನೊಂದಿರುವೆ , ಮತ್ತೆ ನನಗೆ ನೋವು ಕೊಡ ಬ್ಯಾಡ .ಈಗಾಗಲೇ ಒಂದು ಜೀವ ತಗಂಡಿದಿಯಾ ಮತ್ತೆ? ಈಗ? ಇಲ್ಲ , ಹಾಗಾಗಬಾರದು , ಎಂದು ಮಗನ ಬಳಿ ಬಂದು ಕುಸಿದು ಬಿದ್ದರು .
ಭೂದೇವಮ್ಮ ಹನ್ನೆರಡು ವರ್ಷಗಳ ಹಿಂದೆ ನಡೆದ ದುರ್ಘಟನೆ ಇಡೀ ತನ್ನ ಜೀವನವನ್ನು ಬದಲಿಸಬಹುದು ನಾನು‌ ಮತ್ತು ಚಿಕ್ಕ ಮಗ ಒಂದೆಡೆ ದೊಡ್ಡ ಮಗ ಒಂದೆಡೆ ವಾಸ ಮಾಡಬೇಕು , ಗಂಡಸಿನಂತೆ ದುಡಿದು ಸಂಸಾರ‌ ಸಾಗಿಸಬೇಕಾಗಬಹುದು, ಸರೀಕರೊಡನೆ ಸಮನಾಗಿ ಬಾಳಬೇಕು ,ದುಷ್ಟರಿಗೆ ದುಸ್ವಪ್ನವಾಗಿ ಶಿಷ್ಟರಿಗೆ ಸಿಹಿಯಾಗಿ ಬಾಳಬೇಕು  ಎಂದು ಕನಸು ಮನಸಿನಲ್ಲೂ ಎಣಿಸಿರಲಿಲ್ಲ .
ಕೊಟಗೇಣಿ ಎಂದು ಆಡುಭಾಷೆಯಲ್ಲಿ ಕರೆವ ಚೌಡಗೊಂಡನಹಳ್ಳಿಗೆ ಭೂದೇವಮ್ಮ ನವರನ್ನು ‌ಬಾಲಾಜಿಯವರೊಂದಿಗೆ‌‌ ಮದುವೆ ‌ಮಾಡಿಕೊಡಲಾಗಿತ್ತು. ಈಗಾಗಲೇ ಹೇಳಿದಂತೆ ಭೂದೇವಮ್ಮ ಬಣ್ಣದಲ್ಲಿ ಕಪ್ಪುಆದರೂ  ಲಕ್ಷಣವಂತೆ , ಓದಿದ್ದು ಮೂರನೇ ಕ್ಲಾಸ್ ಪೇಲ್ ,  ಇದಕ್ಕೆ ವಿರುದ್ಧವಾಗಿ ಬಾಲಾಜಿಯವರು ಕೆಂಪನೆಯ  , ಐದೂವರೆ ಅಡಿ ಎತ್ತರದ ,ಸುಂದರ ಅಂಗಸೌಷ್ಟವವಿರುವ ಎತ್ತರದ ಆಳು. ಆ ಊರಿನಲ್ಲಿ ಆ ಕಾಲದಲ್ಲೆ ಪಿ‌ಯುಸಿ ಪಾಸ್ ಮಾಡಿದ ‌ನಾಲ್ವರಲ್ಲಿ ಇವರೂ ಒಬ್ಬರು. ಭೂದೇವಮ್ಮ ಯರಬಳ್ಳಿಯ ಮೂಡಲಸೀಮೆಯಾದರೆ , ಬಾಲಜಿಯವರು  ಚೌಡಗೊಂಡನಹಳ್ಳಿ ಪಡುವಲಸೀಮೆ  ,ಒಟ್ಟಿನಲ್ಲಿ ಈ ಜೋಡಿಯನ್ನು ಉತ್ತರ ,ದಕ್ಷಿಣ ಕಲೆಹಾಕಲಾದಂತಾಗಿತ್ತು.
"ಅಷ್ಟು ದೂರ ಪಡುವಲ ಸೀಮೆಗೆ ಎಂಗೆ ಕೊಡ್ತೀರಾ ಮಗಿನ್ನ ಇನ್ನೊಂದು ಸಲ ಯೋಚ್ನೆ ಮಾಡ್ರಿ " ಎಂದು ನೆರೆಮನೆಯವರು ಅಂದಾಗ ಸರಸ್ವತಜ್ಜಿ ಸ್ವಲ್ಪಮಟ್ಟಿಗೆ ಯೋಚಿಸಿದರೂ ಮಕ್ಕಳ ಧೈರ್ಯದಿಂದ ಮದುವೆ ಮಾಡಿಯೇ ಬಿಟ್ಟರು.
ತಾವು ಅಂದು ಕೊಂಡದ್ದಕ್ಕಿಂತ ಚೆನ್ನಾಗಿ ಅಳಿಯ ಮಗಳನ್ನು ನೋಡಿಕೊಳ್ಳುವುದು ಕಂಡು ಸರಸ್ವತಜ್ಜಿ ಆಡಿಕೊಂಡವರನ್ನು, ತನ್ನ ಸ್ವಂತ ಖರ್ಚಿನಲ್ಲಿ ಹೊರಕೆರೆದೇವರ ಪುರದ ಶ್ರೀ ಲಕ್ಷಿ ನರಸಿಂಹ ಸ್ವಾಮಿ ಜಾತ್ರೆಗೆ ಕರೆದುಕೊಂಡು ಹೋಗಿ , ಅಳಿಯ ಮತ್ತು ಮಗಳ ಸಂಸಾರ ತೋರಿಸಿ ತಿರುಗೇಟು ನೀಡಿದ್ದರು.
ಹೀಗೆ  ಇರುವ ಎಂಟು ಎಕರೆ ಬೆದ್ಲು ( ನೀರಾವರಿಅಲ್ಲದ ಭೂಮಿ) ‌ ಹೊಲದಲ್ಲಿ ಚೆನ್ನಾಗಿ ಬೆಳೆ ಬೆಳೆಯುವ ಮೂಲಕ ಆ ಹಳ್ಳಿಯಲ್ಲಿ, ಜೀವನ ಮಾಡುತ್ತಾ, ಸಂಸಾರ ಸಾಗಿತ್ತು .
ಅಂದು ರಾತ್ರಿ ನಾಟಿ ಕೋಳಿ‌ಸಾರು ಉಂಡು, ದಂಪತಿಗಳು ಮಕ್ಕಳೊಂದಿಗೆ ಆಟವಾಡಿ , ಅವರು ನಿದ್ದೆ ಹೋದ ಮೇಲೆ ಅಡಿಕೆ ಎಲೆ ಮೆದ್ದ ಜೋಡಿ ಒಳಗಿನ ಮನೆಯಲ್ಲಿ ಮಲಗಿದ್ದರು .
ಮಧ್ಯರಾತ್ರಿ ಎರಡು ಗಂಟೆ ಇರಬಹುದು , ಇದ್ದಕ್ಕಿದ್ದಂತೆ ಬಾಲಾಜಿ ಭೂದೇವಮ್ಮನವರನ್ನು ಹಿಡಿದೆಳೆದರು , ನಿದ್ದೆಗಣ್ಣಲ್ಲಿದ್ದ ಭೂದೇವಮ್ಮ
" ಏ ಸುಮ್ನೆ ಮಕ್ಕ ನಿಂಗೆ ಯಾವಾಗಲೂ ಅದೇ ದ್ಯಾಸ"
ಎಂದು ಮಲಗಿದಳು .ಭೂದೇವಮ್ಮ ಏಳದಿದ್ದಾಗ  ಅನಾಮತ್ತಾಗಿ ಅವರನ್ನು ಎತ್ತಿಕೊಂಡು ಮನೆಯ ಪಡಸಾಲೆ ಗೆ ಬಿಟ್ಟು, ಮತ್ತೆ ಒಳಗೆ ಹೋಗಿ ಮಕ್ಕಳನ್ನು ತಬ್ಬಿಕೊಂಡು ಬಂದು  ಬಿಟ್ಟರು. ಗಂಡನ ವಿಚಿತ್ರ ವರ್ತನೆ ಕಂಡು ಬುಡ್ಡಿ ಹಚ್ಚಿದರು ಭೂದೇವಮ್ಮ  .ಬಾಲಜಿ ನಾಲಿಗೆ ತೋರುತ್ತಾ  , ಕಿವಿ ತೋರಿಸಿ ‌, ಸಂಜ್ಞೆ ಮಾಡುವುದು ಕಾಣಿಸಿತು . ಮಾತನಾಡಲಿಲ್ಲ .ಮತ್ತೆ ಹೊರ ಹೋದ ಬಾಲಾಜಿ‌ , ದೊಡ್ಡ ಕೋಲಿನಿಂದ ಒಳಬಂದು ಬುಡ್ಡಿಯ ಹಿಡಿದು , ಕೋಣೆಯ  ಒಳಗೋದರು . ಮಕ್ಕಳು ಮತ್ತು ಭೂದೇವಮ್ಮರ ಗಾಬರಿ ಹೆಚ್ಚಾಯಿತು. ಸ್ವಲ್ಪ ಸಮಯದ ನಂತರ ಕೋಲಿನ ತುದಿಯಲ್ಲಿ , ದಾರದಂತಹ ವಸ್ತು ಬುಡ್ಡಿ ಬೆಳಕಲ್ಲಿ ಕಂಡಿತ್ತು . ಹತ್ತಿರ ಬರುತ್ತಿದಂತೆ ನೋಡಿ  , ಮಕ್ಕಳು ಮತ್ತು ಭೂದೇವಮ್ಮ ಜೋರಾಗಿ ಕಿರುಚಿದರು. ಬೀದಿಯವರೆಲ್ಲ ಜಮಾಯಿಸಿದರು . ಒಂದೆಡೆ ಕೋಲು ಮತ್ತೊಂದೆಡೆ ಇರುವ ಅದನ್ನು ತೋರಿಸಿ ಕಿವಿ ತೋರಿಸಿದರು ಜನರಿಗೆ ಅರ್ಥವಾಯಿತು.ಕಿವಿಗೆ ಕಚ್ಚಿದ ಹಾವು!!  ಅದು ಅಲ್ಲಿ ನಿರ್ಜೀವವಾಗಿದೆ. ಸ್ವಲ್ಪ ಯಾಮಾರಿದ್ದರೂ ಮಕ್ಕಳು ಮತ್ತು ಭೂದೇವಮ್ಮರಿಗೂ ತೊಂದರೆಯಾಗುವುದರಲ್ಲಿತ್ತು .
ರಾಜಣ್ಣ ಬೇಗ ಹೋಗಿ ಒಂದು ನಾಟಿ ಕೋಳಿ‌ತಂದು‌ , ಹಾವು ಕಚ್ಚಿದ ಕಿವಿಯ ಭಾಗವನ್ನು ಸ್ವಲ್ಪ ಗಾಯ ಮಾಡಿ  , ಅದರ ಮೇಲೆ ಕೋಳಿಯ ಗುದದ್ವಾರ ಇಟ್ಟರು . ಕೋಳಿ ಸತ್ತು ಹೋಯಿತು ಜನರಿಗೆ ಆಗ ಅರಿವಾಗಿತ್ತು ,ಅದು ಬಾರಿ ವಿಷದ ಹಾವೆಂದು .
ಬಾಲಾಜಿ ಯವರು ಮಾತನಾಡುತ್ತ ಇಲ್ಲ , ನಾಲಿಗೆ ದಪ್ಪವಾಗುತ್ತಿತ್ತು , ಬಲಗೈಯನ್ನು ಎತ್ತಿ ತೋರ್ಬೆರಳು ತಂದು ‌,ಎಡ ಭುಜಕ್ಕೆ ಇಟ್ಟುಕೊಂಡು ಸಂಜ್ಞೆ ಮಾಡಿದರು . ಜುಂಜಪ್ಪ ಸೂಜಿ? ಅಂದ  . ಹೌದು ಎಂಬಂತೆ  ತಲೆಯಾಡಿಸಿದರು ಬಾಲಾಜಿ . ಅದೇ ಜಾವದಲ್ಲಿ ಎತ್ತಿನ ಗಾಡಿಯಲ್ಲಿ ಬಾಲಾಜಿಯವರನ್ನು ಹೊರಕೆರೆದೇವರಪುರದ ಆಸ್ಪತ್ರೆಗೆ ಕರೆದುಕೊಂಡು ಹೊರಟರು .ಬರುಬರುತ್ತಾ  ಬಾಲಾಜಿ ಯವರ ಬಾಯಲ್ಲಿ ನೊರೆ ಬರುವುದು ಹೆಚ್ಚಾಯಿತು. ದೊಡ್ಡ ಹಳ್ಳದ ದಿನ್ನೆ ಹತ್ತವಾಗ ಭೂದೇವಮ್ಮನ ಅಳುವ ಧ್ವನಿ ಹೆಚ್ಚಾಯಿತು ಅಲ್ಲಿಗೆ ಗಾಡಿ ನಿಂತಿತು.
ಅಂದಿನಿಂದ ಭೂದೇವಮ್ಮ ನ ಜೀವನದ ಕಷ್ಟದ ದಿನಗಳ ಆರಂಭವಾಗಿದ್ದವು. ಅಳಿಯನ ತಿಥಿಯ ಶಾಸ್ತ್ರಕ್ಕೆ ಬಂದ ಸರಸ್ವತಜ್ಜಿ ಮತ್ತು ಮಕ್ಕಳು ಅಕ್ಕನನ್ನು ಯರಬಳ್ಳಿಗೆ ಕರೆದರು . ಸ್ವಾಭಿಮಾನಿ ಭೂದೇವಮ್ಮ ಹೋಗಲು ಒಪ್ಪದಿದ್ದಾಗ .ಸತೀಶನನ್ನು ಕರೆದುಕೊಂಡು ಹೋಗಿ ಓದಿಸುತ್ತಿದ್ದರು.
ಯರಬಳ್ಳಿಯ ದೊಡ್ಡಪ್ಪಗಳ ಮನೆಯಲ್ಲಿ
ಗುರುಸಿದ್ದ ಹಸಿಹುಲ್ಲಿನ ಮೆದೆಯನ್ನು ಸರಿಸಿದ  , ಏನೋ ಸರಿದಾಡಿದಂತಾಯಿತು ಲಾಟೀನು ಹಿಡಿದು ನೋಡಿದರೆ , ಮೊಂಡರಕಪ್ಪೆ !!!( ದೊಡ್ಡ ಗಾತ್ರದ ಚೇಳು)
ಅದೇ ಸತೀಶನಿಗೆ ಕಚ್ಚಿರುವುದು ಎಂದು ಖಾತ್ರಿಯಾಗಿತ್ತು .ಯಾರೋ ಭೂದೇವಮ್ಮಗೆ ಮುಖಕ್ಕೆ ನೀರು ಚಿಮುಕಿಸಿದಾಗ ಎಚ್ಚರಗೊಂಡ ಭೂದೇವಮ್ಮ ಮತ್ತೆ ಅಳಲು ಶುರುಮಾಡಿದರು. ಮುಕುಂದಯ್ಯ ಅಕ್ಕನನ್ನು ಗದರುತ್ತಾ "ಸುಮ್ನಿರು ಏನೂ ಆಗಲ್ಲ ನಾವೆಲ್ಲ ಇಲ್ಲವಾ? " ಎಂದು ಧೈರ್ಯ ಹೇಳಿದರು.
ಪೂಜಾರ ಫಣಿಭೂಷಣ ಕಾಲಿಗೆ ಎಂತದೊ ಮಂತ್ರ ಹೇಳಿ , ನಿಂಬೆಹಣ್ಣು ನೀವಳಿಸಿ , ಕೋಯ್ದರು. ನಾಟಿ ಔಷದದ ರಂಗಣ್ಣ ಯಾವುದೋ ಬೇರು ತೇದು ಹಚ್ಚಿ ,ಬೆಳ್ಳುಳ್ಳಿ ಸಿಪ್ಪೆ ಹೊಗೆಯನ್ನು ‌ಮೊಂಡರಗಪ್ಪೆ ಕಡಿದ ಜಾಗಕ್ಕೆ  ಹಾಕಿ
" ನೋಡ್ರಿ ಮಂಡ್ರಗಪ್ಪೆ ಬಾಳ ದೊಡ್ಡದು , ಜೀವಕ್ಕೆ ಅಪಾಯ ಇಲ್ಲ  ,ಆದರೆ ರಾತ್ರಿ ಪೂರಾ ನಿದ್ದೆ ಮಾಡಂಗಿಲ್ಲ ಮಾಡಿದರೆ ಇಷ ಏರುತ್ತೆ ಕುಡಿಯಾಕೆ ಬಿಸಿನೀರು ಕೊಡ್ರಿ" ಅಂದರು
"ಆಸ್ಪತ್ರೆಗೇನು ಬ್ಯಾಡವೋ ? "
ಅಂದರು ಮುರಾರಿ
"ಏನೂ ಬ್ಯಾಡಬಿಡು  ,ಒಟ್ನಲ್ಲಿ ಮಗ ನಿದ್ದೆ ಮಾಡಬಾರದು  ,ಸ್ವಲ್ಪ ಉರಿ ಇರುತ್ತೆ ಬೆಳಿಗ್ಗೆ ಸರಿ ಹೋಗುತ್ತೆ."
ಎಂದು ಎದ್ದು ಟವಲ್ ಕೊಡವಿಕೊಂಡು , ಔಷಧೀಯ ಚೀಲ ತೆಗೆದುಕೊಂಡು , ಲಾಟೀನು ಹಿಡಿದು ಹೊರಟರು ರಂಗಣ್ಣ.
ಬೆಳಗಿನ ಜಾವದ ಹೊತ್ತಿಗೆ ಉರಿ ಕಡಿಮೆಯಾಗಿ ಸತೀಶನಿಗೆ ನಿದ್ರೆ ಹತ್ತಿದರೆ , ಅವನನ್ನು ಎಚ್ಚರ ಮಾಡುತ್ತಿದ್ದರು . ಭೂದೇವಮ್ಮ ಮನದಲ್ಲೇ ಮಾರಮ್ಮನ ನೆನೆದು  ,ಮಗನಿಗೆ ಹುಷಾರಾದರೆ ಬೇವಿನ ಸೀರೆ ಸೇವೆ ಉಡುವೆ , ಎಂದು ಹರಕೆ ಹೊತ್ತರೆ .ಸರಸ್ವತಜ್ಜಿ ಮೊಮ್ಮಗ ಗುಣಮುಖ ಆದರೆ  ,ದೇವಿ ಪುರಾಣ ಓದಿಸುವುದಾಗಿ ಹರಕೆ ಕಟ್ಟಿಕೊಂಡರು.
ಎಲ್ಲರ ಹರಕೆಯ ಫಲವೋ ಫಣಿಭೂಷಣ ನ ಮಂತ್ರವೋ, ರಂಗಣ್ಣನವರ ನಾಟಿ ಔಷಧವೊ ಸತೀಶ ಬೆಳಿಗ್ಗೆ ಉರಿಯಿಲ್ಲದೇ , ತೊಂದರೆಯಿಲ್ಲದೆ , ಆರೋಗ್ಯವಾಗಿ ,ಗೆಲುವಾಗಿ ಮಾತನಾಡ ತೊಡಗಿದ, ಮನೆಯವರೆಲ್ಲರ ಸಂತಸಕ್ಕೆ ಪಾರವೇ ಇಲ್ಲ .ಗೊತ್ತಿಲ್ಲದೆ ಒಂದೆರಡು ಆನಂದಬಾಷ್ಪ ಭೂಮಿಯನ್ನು ತಲುಪಿದವು ಭೂದೇವಮ್ಮ ನ ಕಣ್ಣಿಂದ . ಮಗಳ ನೋಡಿ ಸರಸ್ವತಜ್ಜಿ ಭಾವುಕಳಾಗಿ ದೇವರ ಕೋಣೆ ಕಡೆ ನಡೆದರು.

ಮುಂದುವರೆಯುವುದು...

ಸಿ ಜಿ ವೆಂಕಟೇಶ್ವರ