31 March 2018

ಪ್ರಜಾಪ್ರಭುತ್ವ ಉಳಿಸೋಣ (ಭಾವಗೀತೆ) ಮತದಾರರ ಜಾಗೃತಿ ಗೀತೆ

*ಪ್ರಜಾಪ್ರಭುತ್ವ ಉಳಿಸೋಣ*

ಆರಿಸೋಣ  ಉತ್ತಮ ನಾಯಕರ
ಮಾಡಿಕೊಳ್ಳೋಣ ಜೀವನ ಶುಭಕರ
ಮಾಡೋಣ  ಎಲ್ಲರು ಮತದಾನ
ನಿರಾಕರಿಸೋಣ   ನೀಡಿದರೆ ಧನ

ಮರುಗದಿರಿ ಮೊಸಳೆ ಕಣ್ಣೀರಿಗೆ
ಕೊರಗದಿರಿ ಮೈಮರೆತು ಅರೆಘಳಿಗೆ
ಓಟಿನ ದಿನ ಬದಿಗೊತ್ತಿ ನಿಮ್ಮ ಕೆಲಸ
ಸರ್ಕಾರ ರಚಿಸುವುದು ನಮ್ಮ ಕೆಲಸ

ಬೇಡಿಕೆ ಇಡದಿರಿ ಸ್ವಾರ್ಥದಿ ನಿಮಗಾಗಿ
ಹಕ್ಕು ಚಲಾವಣೆ ಮಾಡಿ ದೇಶಕ್ಕಾಗಿ
ಮಾರಿಕೊಳ್ಳದಿರಿ ನಿಮ್ಮ ಮತ
ಒಳ್ಳೆಯ ನಾಯಕಗಿರಲಿ ಸಹಮತ

ಮತಗಟ್ಟೆಗೆ ಎಲ್ಲರೂ ಹೋಗೋಣ
ಓಟು ಮಾಡುವ ಪಣ ತೊಡೋಣ
ನಮ್ಮಯ ಸೇವಕರ ಆರಿಸೋಣ
ಪ್ರಜಾಪ್ರಭುತ್ವವನ್ನು ಉಳಿಸೋಣ

*ಸಿ.ಜಿ. ವೆಂಕಟೇಶ್ವರ*
*ಗೌರಿಬಿದನೂರು*

30 March 2018

ತಿಥಿ ವಡೆ ( ಹನಿಗವನ ವಿಶ್ವ ಇಡ್ಲಿದಿನ ಹಾಗೂ ಗುಡ್ ಪ್ರೈಡೆ ನಿಮಿತ್ತ)

*ಹನಿಗವನ*

(ವಿಶ್ವ ಇಡ್ಲಿ ದಿನ ಮತ್ತು ಗುಡ್ ಪ್ರೈಡೆ ನಿಮಿತ್ತ)

*ತಿಥಿ ವಡೆ*

ಇಂದು ವಿಶ್ವ ಇಡ್ಲಿ ದಿನ
ತಿಂತಾರೆ ಪಿಜ್ಹಾ ದಿನ
ಇಂದು‌ ಗುಡ್ ಪ್ರೈಡೆ
ಯೇಸು ತತ್ವ ಸಮಾಧಿ
ಮಾಡಿ ತಿನ್ನುತ್ತಿದ್ದಾರೆ
ಮರೆಯದೆ ತಿಥಿ ವಡೆ

*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*

ಗಜ಼ಲ್೩೬ (ಮಾಡಬಹುದಿತ್ತು)

*ಗಜ಼ಲ್ ೩೬*

ಓ ದೇವಾ ಧರೆಯನು ನಂದನವನವನಾಗಿ  ಮಾಡಬಹುದಿತ್ತು
ಧರಣಿಯನು ಸುಂದರ ಸ್ವರ್ಗವನಾಗಿ ಮಾಡಬಹುದಿತ್ತು

ಅತಿ ವೃಷ್ಟಿ ಅನಾವೃಷ್ಟಿ ಬರಗಾಲ ಭೂಕಂಪಗಳೇಕೆ ಮಾಡಿಸುವೆ
ಕಾಲ ಕಾಲಕೆ ಮಳೆ ಬೆಳೆನೀಡಿ ಸುಭಿಕ್ಷ  ನಾಡಾಗಿ ಮಾಡಬಹುದಿತ್ತು

ಮೋಸ ಕೊಲೆ ಸುಲಿಗೆ ಸುಳ್ಳು ಪೊಳ್ಳು ಮನಸುಗಳನೇಕಿತ್ತೆ
ನಿಷ್ಕಲ್ಮಶ ಮನಸುಗಳ ಸೃಷ್ಟಿಸಿ ರಾಮರಾಜ್ಯವಾಗಿ ಮಾಡಬಹುದಿತ್ತು

ಮೇಲು ಕೀಳು ಬಡವ ಬಲ್ಲಿದ ಜಾತಿ ಮತಗಳು ಏಕೆ ಬೇಕು
ಎಲ್ಲರಿಗೆ ಸಮಬಾಳು ನೀಡಿ ಏಕತೆಯ ಗೂಡಾಗಿ ಮಾಡಬಹುದಿತ್ತು

ಪರಿಸರ ಅಸಮತೋಲನ ಪರಿಸರ ಮಾಲಿನ್ಯ ಬೇಕೆ
ಸೀಜೀವಿಯ ಕನಸಿನ  ಆದರ್ಶ ಇಳೆಯಾಗಿ ಮಾಡಬಹುದಿತ್ತು

*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*

29 March 2018

ದಿನ (ಭಾವಗೀತೆ)

*ದಿ‌ನ*

ದಿನವ ಬೆಳಗೊ ದಿನವು ನೀನು
ದಿನಕರನೆಂದೆನುವೆ ನಾನು
ನೀನು ಬರದೆ ದಿನವು ಇಲ್ಲ
ನೀನಿರದೇ ನಮ್ಮ ಜೀವನವಿಲ್ಲ

ತಮವ ತೊರೆದು ಬೆಳಕ ನೀಡುವೆ
ರಾತ್ರಿ ಚಂದಿರನಿಗೆ ಜಾಗ ಬಿಡುವೆ
ಥಳ  ಥಳ   ಹೊಳೆಸುವೆ  ಜಗವ
ನೀಡುತಲಿರುವೆ  ಶಕ್ತಿಯ ಮೂಲವ

ಹಳಿಯುವುದಿಲ್ಲ ಇತರರ ಕೆಲಸವ
ಮರೆಯುವುದಿಲ್ಲ ಬೆಳಗುವ ಕಾರ್ಯವ
ನನ್ನ  ಹಳೆಯ ದಿನಗಳ  ಮರೆಸುವೆ
ಹೊಸತು ಹುರುಪು ನೀಡಿ ಮೆರೆಸುವೆ

*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*

28 March 2018

ನಾನು ಮುಖ್ಯ ಮುಂತ್ರಿ ಆದರೆ?!!! (ಲೇಖನ) ಪ್ರಜಾವಾಣಿ ಪತ್ರಿಕೆಯಲ್ಲಿ ಪ್ರಕಟವಾದ ಲೇಖನ


ನಾನು ಮುಖ್ಯ ಮಂತ್ರಿ ಆದರೆ

‌ನಾನು ಈ ರಾಜ್ಯದ ಮುಖ್ಯ ಮಂತ್ರಿಯಾದರೆ ಮೊದಲು ರಾಜ್ಯಾದ್ಯಂತ ಮದ್ಯಪಾನ ಮತ್ತು ಧೂಮಪಾನ ನಿಷೇಧ ಮಾಡುವೆ. ಲೋಕಾಯುಕ್ತ ಸಂಸ್ಥೆಗೆ ಹೆಚ್ಚಿನ ಅಧಿಕಾರ ನೀಡಿ ಭ್ರಷ್ಟ ಅಧಿಕಾರಿಗಳಿಗೆ ಕಠಿಣ ಶಿಕ್ಷೆ ವಿಧಿಸುವೆ.ರೈತರ ಕಷ್ಟಗಳ ನಿವಾರಣೆಗೆ ಶ್ರಮಿಸುವೆ.ನದಿಗಳ ಜೋಡಣೆಯ ಮೂಲಕ ನೀರಾವರಿ ಸೌಲಭ್ಯ ಕಲ್ಪಿಸುವೆ.ಕೈಗಾರಿಕೆಗಳು ತಮ್ಮ ವಸ್ತುಗಳ ಬೆಲೆ ನಿಗದಿ ಮಾಡುವಂತೆ ರೈತರು ತಮ್ಮ ವಸ್ತುಗಳ ಬೆಲೆ ನಿಗದಿ ಮಾಡಲು (ಎಂ ಆರ್.ಪಿ) ಅವಕಾಶ ಕೊಡುವೆ.ಕೃಷಿಯನ್ನು ಆಧುನೀಕರಣ ಗೊಳಿಸಿ ಲಾಭದಾಯಕ ಉದ್ಯೋಗ ವನ್ನಾಗಿ ಮಾಡುವೆ .ಶೈಕ್ಷಣಿಕ ವಾಗಿ ಕೇಂದ್ರ ಸರ್ಕಾರದ ನೆರವಿನಿಂದ ಎಲ್ಲಾ ಖಾಸಗಿ ಶಾಲೆಗಳ ರಾಷ್ಟ್ರೀಕರಣ ಮಾಡಿ ಸರ್ಕಾರದ ವಶಕ್ಕೆ ಪಡೆದು ಏಕರೂಪದ ಶಿಕ್ಷಣ ನೀಡಲು ಕ್ರಮ ಕೈಗೊಳ್ಳುವೆ ಒಂದರಿಂದ ಎಂಟನೇ ತರಗತಿವರೆಗೆ ಕಡ್ಡಾಯವಾಗಿ ಕನ್ನಡ ಕಲಿತಲು ಶಾಸನ ಮಾಡುವೆ .

27 March 2018

ಗಜ಼ಲ್ ೩೫(ಇದುವೆ ಜೀವನ)

*ಗಜ಼ಲ್ ೩೫*

ಇಲ್ಲದಿರೆ ತಿರಿದು ತಿವಿದರೂ ದಕ್ಕಲ್ಲ ಇದುವೆ ಜೀವನ
ಇದ್ದರೆ ಬೇಡವೆಂದು ಜಾಡಿಸಿದರೂ ಬರುವುದಲ್ಲ ಇದುವೆ ಜೀವನ

ಕಾಡಿ ಬೇಡಿದರೂ ದಮ್ಮಡಿ ದೊರೆಯಲಿಲ್ಲ ಅಂದು
ಅದೃಷ್ಟದ ಲಾಟರಿ ಒಡೆದು ಎಲ್ಲಾ ಸಿಕ್ಕಿತಲ್ಲ ಇದುವೇ ಜೀವನ

ಮರಳುಗಾಡಲಿ ಪಯಣ ಏಕಾಂಗಿ ಜೀವನದ ಹತಾಶೆ
ಯಶವಿರಲು ಊರೆಲ್ಲ ನೆಂಟರು ಬರುವರಲ್ಲ  ಇದುವೇ ಜೀವನ


ಬೆಂಬಿಡದೆ ಪೆಡಂಬೂತವಾಗಿ ಕಾಡುವುವು ದುರಿತಗಳು
ಪುಣ್ಯಕಾರ್ಯಗಳು ಕಾಯುವವು ಕೈಬಿಡಲ್ಲ  ಇದುವೆ ಜೀವನ

ಬೇವು ಬೆಲ್ಲ ಸಹಜ ಜೀವನದಿ ಸೀಜೀವಿ ಮುನ್ನುಗ್ಗು
ಕಷ್ಟಗಳ ನಂತರ ಸುಖಾಗಮನ ನಿಲ್ಲಲ್ಲ  ಇದುವೆ ಜೀವನ

*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*.

ಬಂದಿ (ಹನಿಗವನ) ಮೊದಲ ಶತಕ 2018 ರ ನೂರನೇ( 100) ಪೋಸ್ಟ್ ಕವಿಬಳಗ ವಾಟ್ಸಪ್ ಗುಂಪಿನ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ ಪಡೆದ ಹನಿಗವನ


ಹನಿಗವನ

ಬಂದಿ

ನಮಗೆ ಜೀವವಿಲ್ಲ‌ ಆತ್ಮ ವಿಲ್ಲ
ಆದರೂ ಬಂಧನ ತಪ್ಪಲಿಲ್ಲ
ನಿಮಗೆ ಆತ್ಮವಿದೆ ಜೀವಿಸುತ್ತಿಲ್ಲ
ನಿಮಗೂ ನಮಗೂ ವ್ಯತ್ಯಾಸವಿಲ್ಲ
ನೀವು ಸಂಸಾರ ಸಾಗರದಿ ಬಂದಿ
ನಾವು ತಂತಿ ಪಂಜರದಲ್ಲಿ ಬಂದಿ

*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*

26 March 2018

ಗಜ಼ಲ್ ೩೪ (ಏನಾಗಿತ್ತು)


*ಗಜ಼ಲ್ ೩೪*

ಜೀವನ ಸವಿಯುವ ಮೊದಲು ಲೋಕ ತ್ಯಜಿಸಲು ಏನಾಗಿತ್ತು
ಜೀವನೀಡಿದವರ ತೊರೆದು ಹಾರಿ ಹೋಗಲು ಏನಾಗಿತ್ತು

ಮೀಸೆ ಮೂಡುವ ಮೊದಲು ಪ್ರೀತಿ ಪ್ರೇಮದ ಅಮಲು
ಹೆತ್ತವರ ಆಸೆಗಳ ಮಣ್ಣು ಪಾಲು ಮಾಡಿ ತೆರಳಲು ಏನಾಗಿತ್ತು

ಉಜ್ವಲವಾದ ಭವಿಷ್ಯದ ಕನಸ ಕಂಡ ಜನ್ಮದಾತರು
ಕನಸುಗಳಿಗೆ ಕೊಳ್ಳಿ ಇಟ್ಟು ಹೇಡಿಗಳಂತೆ ಸಾಯಲು ಏನಾಗಿತ್ತು

ತಾಳಿದವನು ಬಾಳಿಯಾನು ಎಂದರು ಅನುಭಾವಿ ಗಳು
ಆಕರ್ಷಣೆಯ ತೊರೆದು  ಕ್ಷಣ ಕಾಲ ಯೋಚಿಸಲು ಏನಾಗಿತ್ತು

ಯುವಮನಸುಗಳ ಜಾಗೃತಗೊಳಿಸಲು‌ ಸೀಜೀವಿಯ ಆಸೆ
ಹಿರಿಯರ ತಿಳುವಳಿಕೆ ಮಾತುಗಳ ಕೇಳಲು‌ ಏನಾಗಿತ್ತು

*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*

*"ಬೇಸಿಗೆ ಶಿಬಿರಗಳು ಮಕ್ಕಳ ಮೇಲೆ ಬೀರುವ ಪರಿಣಾಮಗಳು

*"ಬೇಸಿಗ ಶಿಬಿರಗಳು ಮಕ್ಕಳ ಮೇಲೆ ಬೀರುವ ಪರಿಣಾಮಗಳು"

ನಮ್ಮ ಬಾಲ್ಯದ ದಿನಗಳಲ್ಲಿ ಪರೀಕ್ಷೆ ಮುಗಿದ ಮಾರನೆ ದಿನವೇ ನಮ್ಮ ನಿಜವಾದ ಹಬ್ಬ ಆರಂಭವಾಗುತ್ತಿತ್ತು.ಬೇಲಿ ಸಾಲಿನ ಓತಿಕ್ಯಾತ ಹೊಡೆಯುವ ಕಾರ್ಯದಿಂದ ಗೋಲಿ‌,ಗಜ್ಹುಗ, ಟಿಕ್ಕಿ,ಉಯ್ಯಾಲೆ, ಲಗೋರಿ,ಬುಗುರಿ,ಚಿನ್ನಿದಾಂಡು ....ಇತ್ಯಾದಿ ಆಟಗಳಲ್ಲಿ ಮುಳುತ್ತಿದ್ದ ನಾವು ಮನೆ ಸೇರದೆ ಅಮ್ಮನ ಬೆತ್ತದ ರುಚಿ‌ ಕಂಡದ್ದೂ‌ಇದೆ .
ನಮ್ಮ ಆ ಬಾಲ್ಯದ ದಿನಗಳ ಸಂಭ್ರಮ ನಿಜವಾದ ಮೋಜಿನ‌ ನೆನಪು

 ಈಗಿನ ಚಿತ್ರಣವೆದ ಬೇರೆ   ಬಹತೇಕ ನಗರ ಮತ್ತು ಹಳ್ಳಿಗಳಲ್ಲಿ ‌ಆಟವೆಂದರೆ  ಮೊಬೈಲ್ ಗೇಮ್ ಮನರಂಜನೆ ಎಂದರೆ ಟಿ ವಿ ಸೀರಿಯಲ್ ಕ್ರಿಕೆಟ್ ಎಂದಾಗಿದೆ ಈ ಹಿನ್ನೆಲೆಯಲ್ಲಿ ಕೆಲ ಪೋಷಕರು ಬೇಸಿಗೆ ಶಿಬಿರಗಳ ಮೂಲಕವಾಗಿ ನಮ್ಮ ಮಕ್ಕಳ ಮೊಬೈಲ್ ಮತ್ತು ಟಿ.ವಿ ಯಿಂದ ದೂರಸರಿಸಲು ಪ್ರಯತ್ನ ಮಾಡುವರು
ಇಂದು ಪರೀಕ್ಷೆ ಮುಗಿದ ಕೂಡಲೆ ಎಲ್ಲಾ ಪಟ್ಟಣ ನಗರಗಳಲ್ಲಿ ಬೇಸಿಗೆ ಶಿಬಿರಗಳ ಭರಾಟೆ ಆರಂಭವಾಗುತ್ತದೆ ‌ಕೆಲವು ಕಡೆ ಮಕ್ಕಳು ಓದುವ ಶಾಲೆಗಳೆ ಈ ರೀತಿಯ ಶಿಭಿರ ಆಯೋಜನೆ ಮಾಡಿದರೆ .ಇನ್ನೂ ಕೆಲವು ಕಡೆ ಈ ರೀತಿಯ ಶಿಬಿರ ಮಾಡುವ ದಂದೆ ಮಾಡಿ‌ ಕೇವಲ ಹಣ ಗಳಿಕೆಯನ್ನು ಮಾಡಲು ಇರುವ ಮಾರ್ಗ ವಾಗಿರುವುದು ವಿಪರ್ಯಾಸ

ಹಾಗಾದರೆ ಈ ಬೇಸಿಗೆ ಶಿಬಿರಗಳು ಬೇಡವೆ ?

ಖಂಡಿತವಾಗಿಯೂ ಬೇಡ ಎನ್ನಲಾಗುವುದಿಲ್ಲ ಇಂತಹ ಬೇಸಿಗೆ ಶಿಬಿರಗಳಲ್ಲಿ ಸರಿಯಾದ ರೀತಿಯಲ್ಲಿ ಆಯೋಜಿಸಿ ಮಕ್ಕಳ ಸಮಯದ ಸದುಪಯೋಗ ಮಾಡುವ ಕೆಲ ಸಂಘಟನೆ ಮತ್ತು  ಶಾಲೆಗಳು ಮಕ್ಕಳ ವಿರಾಮ ಕಾಲದ ಸದುಪಯೋಗ ಪಡಿಸಿಕೊಳ್ಳಲು ಮತ್ತು ಸೃಜನಶೀಲತೆ ಬೆಳೆಸಲು ಸಹಕಾರಿ ಆಗಿವೆ ಆದರೆ ಕೆಲ ಶಾಲೆ ಮತ್ತು ಸಂಘಟನೆಗಳು ನಡೆಸುವ ಬೇಸಿಗೆ ಶಿಬಿರಗಳು ಯಾಂತ್ರಿಕವಾಗಿ ಹಣಮಾಡುವ ಉದ್ಯೋಗ ಮಾಡಿಕೊಂಡು ಮಕ್ಕಳ ಬಾಲ್ಯವನ್ನು ಕಿತ್ತುಕೊಳ್ಳುವ ಕಾರ್ಯ ಮಾಡುತ್ತಿವೆ .

ಬೇಸಿಗೆ ಶಿಬಿರಕ್ಕೆ ಪರ್ಯಾಯ ಏನು?

೧ ಬೇಸಿಗೆ ರಜೆಯಲ್ಲಿ ಮಕ್ಕಳ ಅಜ್ಜ ಅಜ್ಜಿ ಯರ ಮನೆಗೆ ಹೋಗಿ ಅವರ ಜೊತೆ ಕಾಲ ಕಳೆದರೆ  ಸಂಬಂಧಗಳ ಬೆಳವಣಿಗೆಯಾಗುವುದು
೨ ಹಳ್ಳಿ ಗಳಲ್ಲಿ ಆಡುವ ಕೆಲ ಆಟಗಳ ಪರಿಚಯ ಆಗುತ್ತದೆ
೩ ಅಜ್ಜ ಅಜ್ಜಿಯರು ಹೇಳುವ ಕಥೆಗಳು ಧಾರ್ಮಿಕ  ಮತ್ತು ಮಾನವೀಯ ಮೌಲ್ಯಗಳನ್ನು ಬೆಳೆಸಲು‌ ಸಹಕಾರಿ
೪ ಹಳ್ಳಿಯ ಪರಿಸರ ,ಸಹಜೀವನ, ಕೂಡುಕುಟುಂಬದ ಪರಿಕಲ್ಪನೆಯನ್ನು ತಿಳಿಯುವರು
೫ ಕೇವಲ ಶಾಲಾ ಪರಿಸರ ದ ಏಕಾತಾನತೆಯನ್ನು ಹೋಗಲಾಡಿಸುವ ಮೂಲಕ ಅಪ್ಪ ಅಮ್ಮನಿಂದ ದೂರವಾಗಿ ಬೇರೆಯರ ಜೊತೆ ಬೆರೆಯುವ ಗುಣ ಬೆಳೆಯುತ್ತದೆ.
೬ ಪೋಷಕರು ತಮ್ಮ ಮಕ್ಕಳ ಜೊತೆ ಪ್ರವಾಸ ಹೋಗಬಹುದು.
೭ ಜಾತ್ರೆ ,ಸಂತೆ ,  ಕಾರ್ಯಾಗಾರ ಮುಂತಾದ ಕಡೆ ಕರೆದುಕೊಂಡು ಹೋಗಿ ನಮ್ಮ ಆಚರಣೆ, ಸಂಸ್ಕೃತಿ ಪರಿಚಯಿಸುವುದು
೮ ಮನೆಗಳಲ್ಲಿ ಚಿಕ್ಕ ಪುಟ್ಟ ಕೆಲಸಗಳಾದ ಅಡುಗೆ ಮಾಡುವುದು, ನೀರು ತರುವುದು ಪ್ರಾಣಿಗಳ ಪಾಲ್ ಮುಂತಾದ ಕೆಲಸಗಳನ್ನು ಕೌಶಲ್ಯ ದಿಂದ ಮಾಡುವುದರ ಕಲಿಸಬಹುದು .

ಒಟ್ಟಾರೆ ಹೇಳುವುದಾದರೆ ಉತ್ತಮ ಉದ್ದೇಶ ಇಟ್ಟುಕೊಂಡು ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಪೂರಕವಾದ ಮತ್ತು ಸೇವೆಯನ್ನು ಗುರಿಯಾಗಿಟ್ಟುಕೊಂಡು ಮಾಡುವ ಬೇಸಿಗೆ ಶಿಬಿರಗಳು ಇದ್ದರೆ ಪೋಷಕರು ಅಂತಹ ಕಡೆ ಮಕ್ಕಳನ್ನು ಕಳಿಸಬಹುದು .ಆದರೆ ಹಣ ಮಾಡುವ ದಂದೆಯಾಗಿರುವ ಕುರಿಗಳಂತೆ ಮಕ್ಕಳನ್ನು ಸೇರಿಸಿಕೊಂಡು ನಾಟಕ ಆಡುವ ಶಿಬಿರಗಳಿಂದ ದೂರವಿರವುದೇ ಒಳಿತು.ಅದರ ಬದಲಾಗಿ ಪೋಷಕರು ತಮ್ಮ ಮಕ್ಕಳನ್ನು ಪ್ರವಾಸ ಕರೆದುಕೊಂಡು ಹೋಗಿಬರಬಹುದು ಅಥವ ಸಂಬಂಧಿಕರ ಮನೆಗೆ ಮತ್ತು ಅಜ್ಜ ಅಜ್ಜಿಯರ ಮನೆಗೆ ಹೋಗಿ ಬರಬಹುದು.
ಒಟ್ಟಿನಲ್ಲಿ ಬೇಸಿಗೆಯ ರಜೆಯು ಮಕ್ಕಳಿಗೆ ವರವಾಗಬೇಕೆ ಹೊರತು ಒತ್ತಡ ಹೇರಿ ಅವರ ಬಾಲ್ಯದ ಅಮೂಲ್ಯವಾದ ಕ್ಷಣಗಳನ್ನು ಕಿತ್ತುಕೊಳ್ಳುವಂತಿರಬಾರದು .

*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*



25 March 2018

ಬಾ ಶ್ರೀ ರಾಮ (ಭಕ್ತಿ ಗೀತೆ)

*ಬಾ ಶ್ರೀ ರಾಮ*

ಮತ್ತೊಮ್ಮೆ ಬಾ ಶ್ರೀ ರಾಮ ಭುವಿಗೆ
ನೀಡು ಸಮಾಧಾನ ನಮ್ಮ ನೋವಿಗೆ |ಪ|

ಅಧಿಕಾರಕ್ಕಾಗಿ ಕಚ್ಚಾಟ ಕೆಸರೆರಚಾಟ
ಯಾವ ಮಾರ್ಗವಾದರೂ ಸರಿ
ವಾಮಮಾರ್ಗವೂ ಅಯಿತು
ಅಧಿಕಾರದ ಬೆನ್ನ ಹತ್ತದೇ ಭರತನಿಗೆ
ರಾಜ್ಯ ಅಧಿಕಾರ ನೀಡಿದ ನೀ
ಭಾರತ ಕ್ಕೆ ಮತ್ತೆ ಬಾ ಶ್ರೀ ರಾಮ|೧|

ಅತ್ಯಾಚಾರ ಅನಾಚಾರ ಮಹಿಳೆಯರ
ಶೋಷಣೆ ಎಲ್ಲೆಲ್ಲೂ ಅವ್ಯಾಹತ
ಏಕಪತ್ನಿ ವೃತಸ್ತ ತಾಯಿಮಾತಿನ
ಪರಿಪಾಲಕನಾದ ನೀನು ನಮಗೆ ಮಾದರಿ
ಸಂಬಂಧಗಳ ಬೆಲೆ ತಿಳಿಸಿಕೊಡಲು
ಮತ್ತೆ ಧರೆಗೆ ಬಾ ಶ್ರೀ ರಾಮ|೨|

ಎಲ್ಲೆಲ್ಲೂ ಅಪಮೌಲ್ಯ ಅಧರ್ಮ
ದುಷ್ಟ ಶಕ್ತಿಗಳ ಅಟ್ಟಹಾಸ
ಮೌಲ್ಯವನ್ನು ಎತ್ತಿ ಹಿಡಿಯಲು
ಧರ್ಮಮಾರ್ಗದಿ ನಡೆಸಲು
ರಾಮರಾಜ್ಯವನು ಕರುಣಿಸಲು
ಮರಳಿ ಇಳೆಗೆ ಬಾ ಶ್ರೀ ರಾಮ|೩|

*ಸಿ.ಜಿ ವೆಂಕಟೇಶ್ವರ*
*ಗೌರಿಬಿದನೂರು*

*ಸರ್ವರಿಗೂ ‌ಶ್ರೀರಾಮ‌ನಮವಿ ಹಬ್ಬದ ಶುಭಾಶಯಗಳು*

24 March 2018

ಪಟ್ಟದರಸಿಯಾಗು (ಭಾವಗೀತೆ) ಮದುಮಗಳಿಗೆ ತಾಯಿಯ ಬುದ್ದಿ ಮಾತುಗಳು

*ಪಟ್ಟದರಿಸಿಯಾಗು*

ಅಮ್ಮ ನಾನೀಗ ಹೇಳುವೆ ಕೇಳು
ನಮ್ಮನೆಯ ಮುತ್ತು ನೀ ಕೇಳು
ಹೆಮ್ಮೆಯ ಸೊಸೆಯಾಗಿ ಬಾಳು
ಸುಮ್ಮನೆ ಗೊಡವೆ ಮಾಡದಿರು| ಪ|

ಸುತ್ತುವ ಮನವನು ಹಿಡಿದಿಡು
ಸುತ್ತೆಲ್ಲ ಎಚ್ಚರದ ಕಣ್ಣಿಡು
ಮಾತುಗಳ ಕಡಿಮೆ ಮಾಡು
ಅತ್ತೆಗೆ ಮುದ್ದಿನ ಸೊಸೆಯಾಗು|೧|

ಇಟ್ಟ ಮನೆಯ ಮರೆಯದಿರು
ಕೊಟ್ಟ ಮನೆಯ ತೊರೆಯದಿರು
ಕೆಟ್ಟವರ ಸಂಘ ಮಾಡದಿರು
ಪಟ್ಟದರಿಸಿಯಾಗು ನಿನ್ನ ಗಂಡಗೆ|೨|

ವಿರಸದ ಮಾತನು ಕಡಿಮೆ ಮಾಡು
ಸರಸದಿಂದಲಿ ಗಂಡನ ಕೂಡು
ಸಮರಸದ ಸಂಸಾರ ಮುನ್ನೆಡೆಸು
ಮಾದರಿ ತಾಯಾಗು ನಿನ್ನ ಮಕ್ಕಳಿಗೆ|೩|

*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*

23 March 2018

ಗಜ಼ಲ್ ೩೩ (ಕನಸಾಗಿತ್ತು)

*ಗಜ಼ಲ್ ೩೩*


ಕೇಡಿಲ್ಲದ ದುಗುಡವಿಲ್ಲದ ಸಮಾಜ ಕಟ್ಟುವ  ಕನಸಾಗಿತ್ತು
ಸರ್ವಸಮಾನತೆಯ ಸಮಾಜ ಹೊಂದುವ ಕನಸಾಗಿತ್ತು

ಉಳಿವಿಗಾಗಿ ಹೋರಾಟ ಬಲಿಷ್ಠರ ಹಾರಾಟ ನಿಂತಿಲ್ಲ
ಉಳ್ಳವರ ಇರದವರ ಸಾಮರಸ್ಯ ಕಾಣುವ ಕನಸಾಗಿತ್ತು

ಮತಗಳಿಕೆಗೆ ಮತಗಳ ಒಲೈಕೆ ರಾಜಕಾರಣ ಎಲ್ಲೆಲ್ಲೂ
ಜಾತಿಮತದ ಭೇದವಿರದ ನಾಡು  ಕಟ್ಟುವ ಕನಸಾಗಿತ್ತು

ಹೆಜ್ಜೆ ಹೆಜ್ಜೆಗೆ ಕೊಲೆ ಸುಲಿಗೆ ಮೋಸಗಳ  ಮೆರವಣಿಗೆ
ಅಪರಾಧ ಮುಕ್ತ ಶಾಂತ  ಜಗವ ಹೊಂದುವ ಕನಸಾಗಿತ್ತು

ಐಹಿಕ ಸುಖ ಭೋಗದ ಲಾಲಸೆಯಲಿ‌ ಮಳುಗಿಹುದು‌ ಜಗ
ಸೀಜೀವಿಗೆ ಮುಕ್ತಿ ಹೊಂದಲು ಆತ್ಮಸಾಕ್ಷಾತ್ಕಾರ ಪಡೆವ ಕನಸಾಗಿತ್ತು

*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*

22 March 2018

ಗಜ಼ಲ್ ೩೨ (ಕೊನೆಯಿಲ್ಲ)


*ಗಜ಼ಲ್ ೩೨*
ಬ್ರಹ್ಮಾಂಡವನೆ ಕೊಟ್ಟರೂ ಆಸೆಗಳ ಕೂಪಕೆ ಕೊನೆಯಿಲ್ಲ
ಬ್ರಹ್ಮ ಬಂದರೂ ಮಾನವರ ಕಚ್ಚಾಟಕೆ ಕೊನೆಯಿಲ್ಲ

ಸೂರ್ಯ ಚಂದ್ರ ತಾರೆಗಳ ಅನಂತ ವಿಶ್ವ ನಮ್ಮ ಅನುಕೂಲಕಿವೆ
ಅಪರಿಮಿತವಾದ ಬೇಡಿಕೆಗಳ ಮೋಹಕೆ ಕೊನೆಯಿಲ್ಲ

ನಾನು ನನ್ನದು ನನ್ನಿಂದಲೇ ಎಂದು ಅಹಂಕಾರದಿ ಮೆರೆವರು
ಸ್ವಾರ್ಥ ಲೋಭ  ಮೋಹ ಮದಗಳ ಜಾಲಕೆ ಕೊನೆಯಿಲ್ಲ

ನಿಸರ್ಗಕೆ ವಿರುದ್ದವಾದ ಜೀವನ ಆಚರಣೆಗಳು ಅವ್ಯಾಹತ
ಭೂಕಂಪ ಸುನಾಮಿ ಜ್ವಾಲಾಮುಖಿ ಪ್ರಕೃತಿ ವಿನಾಶಕೆ ಕೊನೆಯಿಲ್ಲ

ಮತೀಯತೆ ಪ್ರಾಂತೀಯತೆಯ ಬಡಿದಾಟ ನಿಲ್ಲುತ್ತಿಲ್ಲ
ಸೀಜೀವಿಯ ವದುಧೈವಕುಟುಂಬಕಂ ಆಶಯಕೆ ಕೊನೆಯಿಲ್ಲ

*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*

21 March 2018

ದಯವಿಟ್ಟು ಓಟು ಕೊಡಿ (ಕವನ) ಇಂದು ವಿಶ್ವ ಕವನ ದಿನ ಅದರ ನೆನಪಿಗಾಗಿ ಈ ಕವನ

ದಯವಿಟ್ಟು ಓಟು ಕೊಡಿ

ಸದನದಲಿ ನಿದ್ದೆ ಮಾಡುವೆವು
ಎಚ್ಚರಾದಾಗ ಗದ್ದಲವೆಬ್ಬಿಸುವೆವು
ಮಸೂದೆಗಳ ಹರಿದು ಹಾಕುವೆವು
ದಯವಿಟ್ಟು ನಮಗೆ ಓಟು ಕೊಡಿ

ನಿಮ್ಮ ಚಿಂತೆ ಮಾಡುವುದಿಲ್ಲ
ನಮ್ಮ ಚಿಂತೆ ನಿಮಗೆ ಬೇಡ
ನಾವಿರುವುದೇ ನಮಗಾಗಿ
ದಯವಿಟ್ಟು ನಮಗೆ ಓಟು ಕೊಡಿ

ನಿಮ್ಮ ಒಗ್ಗಟ್ಟು ನಾವು ಸಹಿಸುವುದಿಲ್ಲ.
ಒಡೆದು ಆಳುವುದ  ನಾವು ಬಲ್ಲೆವಲ್ಲ
ನೀವು ಬಡಿದಾಡಿದರೆ ಲಾಭ ನಮಗೆ
ದಯವಿಟ್ಟು ನಮಗೆ ಓಟು ಕೊಡಿ

ಗೆದ್ದ ಮೇಲೆ ನಿಮ್ಮ ಸುದ್ದಿಗೆ ಬರುವುದಿಲ್ಲ
ಗದ್ದುಗೆಯನು ಬಿಡುವುದೇ ಇಲ್ಲ
ದೋಚುವ ಕಾಯಕ ಮರೆಯುವುದಿಲ್ಲ
ದಯವಿಟ್ಟು ನಮಗೆ ಓಟು ಕೊಡಿ

*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*

20 March 2018

ಗಜ಼ಲ್ ೩೧ (ಕಳೆದುಕೊಂಡೆ ) ( ನನ್ನ ಬ್ಲಾಗ್ ನ ಮುನ್ನೂರನೇ300 ಪೋಸ್ಟ್ ಸಂಭ್ರಮ )


*ಗಜ಼ಲ್೩೧*

ಬನ್ನಪಡುತ ಈ ಕ್ಷುದ್ರ ಜೀವನದಿ ಸಂತಸವ ಕಳೆದುಕೊಂಡೆ
ಬೆಳೆದು ಬಲಿತು ದೊಡ್ಡವನಾಗಿ ಬಾಲ್ಯವ  ಕಳೆದುಕೊಂಡೆ

ಮತ್ಸರ ಸುಲಿಗೆ  ಕಾಲೆಳವ ಗುಣ ಸಾಮಾನ್ಯ ಎಲ್ಲೆಡೆ
ಎಲ್ಲ ಒಂದೇ  ಎನುವ ಮುಗ್ದ ಮಗುವಿನ ಮನವ ಕಳೆದುಕೊಂಡೆ

ಆಟಗಳೆಂದರೆ ಜೂಜು ಮೋಜು ಮೋಸ ವಂಚನೆಗಳ ಜಾಲ
ಗೆಳೆಯರ ಜೊತೆಗೂಡಿದ ಆಟ ಪಾಟವ ಕಳೆದುಕೊಂಡೆ

ಬಾಯಲ್ಲಿ ಬೆಣ್ಣೆ ಬಗಲಲ್ಲಿ ದೊಣ್ಣೆಯ ಜನರ ಜಗವಿದು
ನುಡಿದಂತೆ ನಡೆದ ಒಳ್ಳೆಯ ಮಾನವಕುಲವ  ಕಳೆದುಕೊಂಡೆ

ಐಶ್ವರ್ಯ ಸೌಂದರ್ಯಕೆ ಪ್ರಥಮ ಪ್ರಾಶಸ್ತ್ಯ ಎಲ್ಲೆಡೆ
ಸೀಜೀವಿಯ ಮುತ್ತಿನಂತಹ ಕಾಲವ ಕಳೆದುಕೊಂಡೆ

*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*

19 March 2018

ಸಂಕರಣ (ಹನಿಗವನ)

ಹನಿಗವನ
*ಸಂಕರಣ*

ಬಣ್ಣದ ಹಣ್ಣುಗಳು ತೋರಣ
ಇದಕೆ ಕಾರಣ ತಳಿ   ಸಂಕರಣ
ನನ್ನ ಬೆಳೆ ನೋಡಲು ಸೊಗಸು
ಬೇಕಿದ್ದರೆ ನೀ ಈಗಲೆ  ಖರೀದಿಸು
ಸಮಯವೆ ನನ್ನ ದೇವರು ನೋಡು
ಬೆಳೆದಿಹ ಬೆಳೆಗಳ ನೀ ಕಾಪಾಡು

*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*

*ಜೀವನ ಬಹಳ ಬೇಜಾರು ಅಲ್ಲ ಸಂಭ್ರಮ*(ಸಂಗ್ರಹ ಲೇಖನ)

*ಜೀವನ ಬಹಳ ಬೇಜಾರು ಅಲ್ಲ ಸಂಭ್ರಮ*(ಸಂಗ್ರಹ ಲೇಖನ)

ಜೀವನ “ಬಹಳ ಬೇಜಾರು” ಅನ್ನುವವರು ಬುದ್ಧನ ಈ 19 ವಿಷಯಗಳನ್ನು ತಲೆಯಲ್ಲಿ ಇಟ್ಟುಕೊಂಡರೆ ಒಳ್ಳೆಯದು .

1. ಒಳ್ಳೆಯವರಾಗಿರಿ ಆದರೆ ಅದನ್ನು ಸಾಬೀತುಪಡಿಸವಲ್ಲಿಯೇ ನಿಮ್ಮ ಜೀವನವನ್ನು ಮತ್ತು ಸಮಯವನ್ನು ವ್ಯರ್ಥ ಮಾಡಬೇಡಿ.

2. ನೀವೇ ನಿಮ್ಮ ಜೀವನದ ಚಾಲಕರು ಆ ಚಾಲನೆಯ ಅಧಿಕಾರವನ್ನು ಮತ್ತು ಆ ಸ್ಥಳವನ್ನು ಬೇರೆಯವರು ಕದಿಯಲು ಅವಕಾಶ ಮಾಡಿಕೊಡಬೇಡಿ.

3. ಯಾವತ್ತೂ ಬೇರೆಯವರಲ್ಲಿ ಕ್ಷಮೆ ಕೇಳಬೇಡಿ. ಯಾಕೆಂದರೆ ಅವರು ನಿಮ್ಮ ಮಾತನ್ನು ತಪ್ಪು ಅರ್ಥ ಮಾಡಿಕೊಂಡರೆ ನೀವ್ಯಾಕೆ ಕ್ಷಮೆ ಕೇಳಬೇಕು.

 4. ನಾವು ಒಂಟಿಯಾಗಿ ಇದ್ದರೆ ಅದರ ಅರ್ಥ ನಾವು ಒಂಟಿಯಾಗಿದ್ದೇವೆ ಎಂದು ಅಲ್ಲ. ಅದರ ಅರ್ಥ ನಾವು ಒಬ್ಬರೇ ಎಲ್ಲಾ ವಿಷಯಗಳನ್ನು ಎದುರಿಸುವ ಸಾಮರ್ಥ್ಯ ನಮಗಿದೆ ಎಂದು.

5. ಎಲ್ಲೇ ಆಗಲಿ ನೀವು ಒಂದೇ ತರದ ವ್ಯಕ್ತಿತ್ವವನ್ನು ಕಾಪಾಡಿಕೊಂಡು ಒಂದೇ ತರನಾದ ವ್ಯಕ್ತಿಯಾಗಿರಿ. ಅದು ನಿಮ್ಮ ಸ್ವಂತ ವಿಷಯದಲ್ಲಾಗಲಿ, ಸಾರ್ವಜನಿಕವಾಗಿಯಾಗಲಿ ಅಥವಾ ಖಾಸಗಿಯಾಗಲಿ.

 6. ಹಣ ಮನುಷ್ಯರ ಜೀವನದ ಒಂದು ಅತೀ ಕೆಟ್ಟ ಸಂಶೋಧನೆ. ಆದರೆ ಅದು ನಂಬಿಕೆಗೆ ಮನುಷ್ಯನು ಅರ್ಹನೋ ಆಲ್ಲವೋ ಎಂಬುದನ್ನು ಮತ್ತು ಮನುಷ್ಯನ ಸ್ವಭಾವವನ್ನು ಪರೀಕ್ಷೆ ಮಾಡುತ್ತದೆ.

7. ಈ ಜಗತ್ತಿನ ತುಂಬೆಲ್ಲಾ ಅಧಿಕವಾಗಿ ರಾಕ್ಷಸರೇ ಇರುವುದು. ಆದರೆ ಸ್ನೇಹಿತರಂತೆ ಮುಖವಾಡವನ್ನು ಹಾಕಿಕೊಂಡಿದ್ದಾರೆ ಅಷ್ಟೇ.

8. ನಿಮ್ಮ ಮಕ್ಕಳನ್ನು ಶ್ರೀಮಂತರನ್ನಾಗಿ ಮಾಡಿಸಲು ಶಿಕ್ಷಣ ಕೊಡಿಸಬೇಡಿ. ಅದರ ಬದಲು ಜೀವನದಲ್ಲಿ ಹೇಗೆ ಖುಷಿಯಾಗಿರುವುದು ಎಂದು ಹೇಳಿಕೊಡಿ. ಆಗ ಅವರು ಬೆಳೆದು ದೊಡ್ಡವರಾದಾಗ ವಸ್ತುಗಳ ಮಹತ್ವ ತಿಳಿಯುತ್ತಾರೆ ಬರೀ ಅದರ ಬೆಲೆಯನಲ್ಲ.

9. ನೀವು ಎಷ್ಟು ಕಡಿಮೆ ಕೆಟ್ಟ ವ್ಯಕ್ತಿಗಳಿಗೆ ಸ್ಪಂದಿಸದೇ ಇರುತ್ತೀರೋ, ಜೀವನದಲ್ಲಿ ಅಷ್ಟು ನೆಮ್ಮದಿಯಿಂದ ಇರುತ್ತೀರಿ.

10. ಬಲಹೀನ ವ್ಯಕ್ತಿಗಳು ಪ್ರತೀಕಾರವನ್ನು ತೆಗೆದುಕೊಳ್ಳುತ್ತಾರೆ. ಬಲವಾದ ವ್ಯಕ್ತಿಗಳು ಕ್ಷಮಿಸಿಬಿಡುತ್ತಾರೆ, ಬುದ್ದಿವಂತ ವ್ಯಕ್ತಿಗಳು ನಿರ್ಲಕ್ಷಿಸುತ್ತಾರೆ.

11. ನೀವು ಸಂತೋಷದಿಂದ ಇರಬೇಕಾದರೆ, ಹಿಂದೆ ನಿಮ್ಮ ಜೀವನದಲ್ಲಿ ಆದ ಘಟನೆಗಳನ್ನು ನೆನೆಸಿಕೊಂಡು ಕೊರಗಬೇಡಿ. ಮುಂದಿನ ಜೀವನದ ಬಗ್ಗೆ ಯೋಚನೆ ಮಾಡಿ ತಲೆ ಕೆಡಿಸಿಕೊಳ್ಳಬೇಡಿ. ಈಗಿರುವ ಜೀವನದ ಬಗ್ಗೆ ಸಂಪೂರ್ಣವಾಗಿ ಹೇಗಿರಬೇಕೆಂದು ಯೋಚಿಸಿ.

12. ನೀವು ನಿಮ್ಮ ಜೀವನದಲ್ಲಿ ಗಳಿಸುವ ಸಂತೋಷಕ್ಕೆ ನೀವೇ ಕಾರಣಕರ್ತರಾಗಬೇಕು. ಬೇರೆಯವರು ನಿಮ್ಮನ್ನು ಸಂತೋಷಪಡಿಸುತ್ತಾರೆ ಎಂದು ಅಂದುಕೊಂಡರೆ, ಅದು ಯಾವಾಗಲೂ ಕೊನೆಗೆ ನಿರಾಸೆಯಿಂದಲೇ ಕೊನೆಗೊಳ್ಳುತ್ತದೆ.

13. ನಾನು ಸತ್ಯವನ್ನು ಹೇಳುವವರನ್ನು ಗೌರವಿಸುತ್ತೇನೆ. ಸತ್ಯವು ಎಷ್ಟೇ ಕಠಿಣವಾಗಿದ್ದರೂ ಸರಿಯೇ.

14. ನೀವು ಜೀವನದಲ್ಲಿ ಗಿಣಿಯ ತರ ಇರಬೇಡಿ ಬದಲಿಗೆ ಹದ್ದುಗಳಾಗಿ ಇರಿ. ಗಿಣಿಯು ಅಧಿಕವಾಗಿ ಮಾತನಾಡುತ್ತದೆ. ಆದರೆ ಹದ್ದು ಶಾಂತವಾಗಿ ಇದ್ದು, ಅದಕ್ಕೆ ಆಕಾಶವನ್ನು ಮುಟ್ಟುವಂತಹ ಯೋಚನಾ ಶಕ್ತಿ ಇದೆ.

15. ಜೀವನದಲ್ಲಿ ಬದಲಾವಣೆಯನ್ನು ಕಾಲಕ್ಕೆ ತಕ್ಕಂತೆ ಮಾಡಿಕೊಳ್ಳಿ, ಹೆದರಿಕೊಳ್ಳಬೇಡಿ, ನೀವು ಯಾವುದೋ ಒಂದು ಒಳ್ಳೆಯದನ್ನು ಕಳೆದುಕೊಳ್ಳುತ್ತೀರ, ಆದರೆ ಏನೋ ಒಂದು ಉತ್ತಮವಾದುದನ್ನು ಪಡೆದುಕೊಳ್ಳುತ್ತೀರ.

16. ನಮ್ಮ ತೊಂದರೆಗಳ ಬಗ್ಗೆ ಮಾತನಾಡುವುದೇ ನಮ್ಮ ಅತೀ ದೊಡ್ಡ ತಪ್ಪು, ಹುಚ್ಚು ಚಟವಾಗಿದ್ದು , ಅಂತಹ ಅಭ್ಯಾಸವನ್ನು ಬಿಟ್ಟುಬಿಡಿ, ನಿಮ್ಮ ಸಂತೋಷ ಮತ್ತು ಖುಷಿಯ ಬಗ್ಗೆ ಮಾತನಾಡಿ.

17. ಯಾರ ಜೊತೆಗೂ ಯಾವತ್ತೂ ಕೂಡ ಅತಿಯಾದ ಬಾಂಧವ್ಯವನ್ನು ಇಟ್ಟುಕೊಳ್ಳಬೇಡಿ, ಯಾಕೆಂದರೆ ಆ ಅತಿಯಾದ ಬಾಂಧವ್ಯ ಅತಿಯಾದ ನಿರೀಕ್ಷೆಗಳನ್ನು ತಂದೊಡ್ಡಿ ಆ ನೀರಿಕ್ಷೆಗಳು ಸುಳ್ಳಾದಾಗ ನೋವಿನಿಂದ ಬಳಲುವಂತೆ ಮಾಡುತ್ತದೆ.

18. ಅಸಂಬದ್ಧತೆಗಿಂತ ಶಾಂತಿಯೇ ಮೇಲು.

19. ಅತಿಯಾದ ಯೋಚನೆಯೇ ನಮ್ಮ ಜೀವನದ ಸಂತೋಷವನ್ನು ಹಾಳುಮಾಡಿ ದುಃಖಪಡಲು ಅತೀ ದೊಡ್ಡ ಕಾರಣವಾಗುತ್ತದೆ.





One thought on “ಜೀವನ “ಬಹಳ ಬೇಜಾರು” ಅನ್ನುವವರು….ಬುದ್ಧನ ಈ 19 ವಿಷಯಗಳನ್ನು ತಲೆಯಲ್ಲಿ ಇಟ್ಟುಕೊಂಡರೆ ಒಳ್ಳೆಯದು...


*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*
ಕೃಪೆ: ವಾಟ್ಸಪ್

18 March 2018

ಆದರ್ಶ ರೈತ ( ನನ್ನ ಮೊದಲ ಕಥೆ) ಕವಿಬಳಗ ವಾಟ್ಸಪ್ ಗುಂಪಿನ ಕಥಾ ಸ್ಪರ್ಧೆ ಯಲ್ಲಿ ಸಮಾಧಾನಕರ ಬಹುಮಾನವನ್ನು ಪಡೆದ ಕಥೆ

ಆದರ್ಶ ರೈತ*

"ಚೆನ್ನಾಗಿ ಒದಿ ಪಾಸಾದರೆ ಬಿಎಸ್ಸಿ ಎಜಿ ಓದುಸ್ತೀನಿ ಪೇಲ್ ಆದ್ರೆ ಅಗೋ ನೋಡು ಆ ಮೂಲೆಯಲ್ಲಿ ಸಲಿಕೆ ಇದೆ ತೊಗೊಂಡು ನೀರ್ ಕಟ್ಟು ಹೊಲದಲ್ಲಿ ಕೆಲಸ ಮಾಡು" ಎಂದು ಮಾಧವ ಮೂರ್ತಿ ತನ್ನ ಅಳಿಯನಿಗೆ ಎಚ್ಚರಿಕೆಯ ರೂಪದ ತಿಳುವಳಿಕೆ ಮಾತು ಅಷ್ಟಾಗಿ ತಲೆಯೊಳಗೆ ಹೋಗಿರಲಿಲ್ಲ .

ಮಾಧವ ಮೂರ್ತಿಯ ಅಕ್ಕನನ್ನು ದೂರದೂರಿನ ರೈತಕುಟಂಬದ ಬಾಲಜಿಗೆ ಕೊಟ್ಟು ಮದುವೆ ಮಾಡಿ ಎರಡು ಗಂಡು ಮಕ್ಕಳ ಪಡೆದು ಸುಖೀ ಸಂಸಾರ ನಡೆಸುವಾಗಲೆ ವಿಧಿಯು ತನ್ನ ಕ್ರೂರತನ ತೋರಿ ಬಾಲಾಜಿಯು ಹಾವು ಕಚ್ಚಿ  ವಿಧಿವಶನಾದನು ಚಿಕ್ಕ ಮಕ್ಕಳು ಮತ್ತು ತನ್ನ ಅಕ್ಕನ ಸ್ಥಿತಿಯನ್ನು ನೋಡಿದ ಮಾಧವ ಮೂರ್ತಿ ತವರುಮನೆಗೆ ಬರಲು ಆಹ್ವಾನವನ್ನು ನೀಡಿದ ಸ್ವಾಭಿಮಾನಿಯಾದ ಶಾಂಭವಿಯು ತನ್ನ ತಮ್ಮನ ಕರೆಯ ನ್ನು ನಯವಾಗಿ ತಿರಸ್ಕರಿಸಿದರು. ನಿನ್ನ ದೊಡ್ಡ ಮಗನಾದ  ಸುರೇಂದ್ರ ನನ್ನಾದರೂ ನಮ್ಮ ಜೊತೆಗೆ ಕಳಿಸಿ ಕೊಡು ಇಬ್ಬರೂ ಮಕ್ಕಳ ಸಾಕಲು ನಿನಗೆ ಕಷ್ಟವಾಗುತ್ತದೆ ಎಂದಾಗ ಶಾಂಭವಿಗೆ ಇಲ್ಲ‌ಎನ್ನಲು ಮನಸ್ಸು ಬರಲಿಲ್ಲ.

ಒಂದರಿಂದ ಪಿ.ಯು.ಸಿ.ವರೆಗೆ ಯಾವುದೇ ಕೊರತೆ ಬರದೇ ಸ್ವಂತ ಮಗನಂತೆ ಸಾಕಿ ವಿದ್ಯಾಭ್ಯಾಸವನ್ನು ನೀಡಿದ ಮಾಧವ ಮೂರ್ತಿ ಎಂದೂ ಸುರೇಂದ್ರ ನಿಗೆ ಆರೀತಿಯಲ್ಲಿ ಎಚ್ಚರಿಕೆಯ ಮಾತನ್ನು ಗಟ್ಟಿಯಾಗಿ ಆಡಿರಲಿಲ್ಲ .
ಇದೇ ವಿಷಯ ಯೋಚಿಸುತ್ತಾ ಸುರೇಂದ್ರ ರಾತ್ರಿಯ ನಿದ್ರೆ ಮಾಡಲಿಲ್ಲ

"ಪಿ.ಯು.ಸಿ.ಸೈನ್ಸ್ ಪಾಠಗಳನ್ನು ಸರಿಯಾಗಿ ಅರ್ಥ ಮಾಡಿಕೊಳ್ಳಲು ಕಷ್ಟ ಮಾವ ನಾನು ಪಟ್ಟಣಕ್ಕೆ ಟ್ಯೂಷನ್ ಗೆ ಹೋಗುವೆ " ಎಂದಿದ್ದಕ್ಕೆ
"ಎಷ್ಟು ಪೀಸು ತಗೋ ನಾಳೆಯಿಂದಲೇ ಟ್ಯೂಷನ್ಗೆ ಹೋಗು ಆದರೆ ಚೆನ್ನಾಗಿ ಪಾಸಾಗಬೇಕು ,ಬಿಎಸ್ಸಿ ಎಜಿ ಮಾಡಬೇಕು ಅಷ್ಟೇ"
ಎಂದು ಸಾವಿರ ಹಣ ನೀಡಿದ ಮಾಧವ ಮೂರ್ತಿ ಹೊಲದಲ್ಲಿ ಕಡಲೆ ಬೆಳೆಗೆ ನೀರು ಬಿಡಲು ಹೊರಟರು.

" ಮಾಧವಣ್ಣ ನಿನ್ನ ಅಳಿಯ ಇಂದು ಟ್ಯೂಷನ್ ಬಿಟ್ಟು ಸಿನಿಮಾ ತೇಟರ್ ನಲ್ಲಿದ್ದಾಗ ನಾನು ನೋಡಿದೆ" ಎಂದು ಗುರುಸಿದ್ದ ಹೇಳಿದಾಗ ಅಳಿಯನ ಮೇಲಿನ‌ ನಂಬಿಕೆಯಿಂದ ಅದನ್ನು ನಿರ್ಲಕ್ಷಿಸಿ ಸುಮ್ಮನಾಗಿದ್ದರು .

"ಮಾಧವಣ್ಣ ನಿಮ್ಮ ಅಳಿಯನನ್ನು ಪೋಲಿ ಹುಡುಗರ ಜೊತೆ ನೋಡಿದೆ ಯಾವುದಕ್ಕೂ ನೀನು ಸ್ವಲ್ಪ ಗಮನಿಸು"  ಎಂದು ಭಾಗ್ಯಮ್ಮ ಹೇಳಿದಾಗ ಎರಡನೆಯ ಪಿ ಯು ಸಿ ಪರೀಕ್ಷೆ ಮೂರು ದಿನ ಉಳಿದಿತ್ತು. ಈಗ ಬೇಡ ಎಂದು ಸುಮ್ಮನಾದ ಮಾಧವ ಮೂರ್ತಿ ಎಂದಿನಂತೆ ತನ ತೋಟದ ಕೆಲಸವನ್ನು ಮಾಡುತ್ತಾ ಇದ್ದರು

ಪಿ ಯು. ರಿಸಲ್ಟ್ ದಿನ ಮಾಧವ ಮೂರ್ತಿ ಯ ಆಶಾಸೌಧ ಕುಸಿದು ಬಿದ್ದಿತ್ತು ತನ್ನ ಅಳಿಯನ ಲೀಲೆಗಳ ಬಗ್ಗೆ ಊರವರು ಹೇಳಿದ ದೂರುಗಳು ಒಂದೊಂದಾಗಿ ತಲೆಯಲ್ಲಿ ಗುಯ್ ಗುಯ್ ಗುಡ ತೊಡಗಿದವು ಎಸ್ ಎಸ್ ಎಲ್ ಸಿ ವರೆಗೆ ಉತ್ತಮವಾಗಿ ಓದುತ್ತಿದ್ದ ಅಳಿಯ ಪಿ ಯು.ಸಿ.ಯಲ್ಲಿ ಆಲ್ಡೌನ್ ಆಗಿ ಮಾವನ ಮುಂದೆ ತಲೆ ತಗ್ಗಿಸಿ‌ ನಿಂತಿದ್ದ . ಒಂದೇ ಏಟಿಗೆ ಒಡೆದು ಬಿಡಬೇಕು ಎಂಬ ರಣಕೋಪ ಬಂದರೂ ಅಕ್ಕನ‌ ನೆನೆದು ಸಮಾಧಾನ ಪಟ್ಟುಕೊಂಡು‌ ಅಳಿಯನ ಹತ್ತಿರ ಕರೆದು " ಬರುವ ಸಪ್ಲಿಮೆಂಟರಿ  ಯಲ್ಲಿ ಪರೀಕ್ಷೆ ಬರೆಯುವಂತೆ ಪರೀಕ್ಷೆ ಕಟ್ಟಿ‌ ಈಗಲಾದರೂ ಚೆನ್ನಾಗಿ ಓದು" ಎಂದು  ಸಮಾಧಾನ ದಿಂದ ಹೇಳಿದರು " ನಾನು ಓದಲ್ಲ ಹೊಲದಲ್ಲಿ ಕೆಲಸ ಮಾಡುವೆ " ಎಂದು ಮೆಲ್ಲನೆಯ ಧ್ವನಿಯಲ್ಲಿ ಹೇಳಿದಾಗ ಮಾಧವ ಮೂರ್ತಿ ಯ ಪಿತ್ತ ನೆತ್ತಿಗೇರಿ ನಾಳೆ ನಿಮ್ಮಮ್ಮನನ್ನು ಕರೆಸಿ‌ ಕಳುಹಿಸುತ್ತೇನೆ ನಿನಗೆ ತಿಳಿದಂಗೆ ಮಾಡು ಎಂದು ಎದ್ದು ಹೋದರು .

ಅಕ್ಕನನ್ನು ಸಮ್ಮುಖದಲ್ಲಿ ಸುರೇಂದ್ರ ನನ್ನ ಪಕ್ಕದಲ್ಲಿ ಕೂರಿಸಿಕೊಂಡು " ನೋಡು ಸುರೇಂದ್ರ ನನ್ನ ಅನುಭವದ ಆಧಾರದ ಮೇಲೆ ಹೇಳುವುದಾದರೆ ವ್ಯವಸಾಯ ಬಹಳ ಕಷ್ಟ ನನ್ನ ಮಾತು ಕೇಳು   ಓದಿ ಒಂದು ಚಿಕ್ಕ ದಾದರೂ ಒರವಾಗಿಲ್ಲ ಸರ್ಕಾರಿ ಕೆಲಸ ಪಡಿ ಈ ಬೇಸಾಯ ಸವಾಸ ಮಾತ್ರ ಬ್ಯಾಡಪ್ಪ "ಎಂದು ತಿಳಿ ಹೇಳಿದರು

ಶಾಂಭವಿಯು ತನ್ನ ಮಗನ ನಿರ್ಧಾರ ದಿಂದ ಮೊದಲು ಆಘಾತಕ್ಕೊಳಗಾದರೂ ಪುನಃ ಸಾವರಿಸಿಕೊಂಡು ತನ್ನ ತಮ್ಮನಿಗೆ " ಹೋಗಲಿ ಬಿಡಪ್ಪ ಅವನ ತಲೆಗೆ ವಿದ್ಯ ಹತ್ತಲ್ಲ ಅನುಸುತ್ತೆ  ಅವನಿಗೆ ಬ್ಯಾಸಾಯ ಮಾಡಕೆ ಇಷ್ಟ ಅಂತೆ ನಿಮ್ಮ ತೋಟದಲ್ಲಿ ಕೆಲಸ ಮಾಡ್ಲಿ" ಎಂದರು

ಸ್ವಲ್ಪ ದಿನ ಮಾವನ‌ ತೋಟದಲ್ಲಿ ಕೆಲಸ ಮಾಡಿದ ಸುರೇಂದ್ರ ತಮ್ಮ ಊರಿನಲ್ಲಿ ಇರುವ ಜಮೀನಿನಲ್ಲಿ ಬೋರ್ವೆಲ್ ಕೊರೆಸಿ
ಕ್ರಮೇಣ  ಸ್ವಂತ ಹೊಲದಲ್ಲಿ ಕೆಲಸ ಮಾಡಲು ಆರಂಭಿಸಿದ ಸುರೇಂದ್ರ ರೇಷ್ಮೆ ಬೆಳೆಯುವ ತಾಲ್ಲೂಕಿನ ಹೆಸರುವಾಸಿ ರೈತನಾದ .ತಾಲ್ಲೂಕಿನ ಎಲ್ಲರೂ ಇವನ ಬಳಿ‌ಸಲಹೆ ಕೇಳಿ ಅವರ ರೇಷ್ಮೆ ಬೆಳೆಯ ಇಳುವರಿ ಹೆಚ್ಚು ಪಡೆದರು .
ಜೊತೆಗೆ ತೆಂಗು, ಅಡಿಕೆ ಸಪೋಟ ಮಾವಿನ ಬೆಳೆ ಈಗೆ ಬಹುಬೆಳೆ ಕೃಷಿಮಾಡಿ ಸುರೇಂದ್ರ ಜಿಲ್ಲಾ ಮತ್ತು ರಾಜ್ಯದ ಪ್ರಗತಿ ರೈತ ಎಂದು ಪ್ರಶಸ್ತಿ ಪಡೆದ .
ಇದ್ದಕ್ಕಿದ್ದಂತೆ ಒಂದು ದಿನ ಬೋರ್ ವೆಲ್ ನಲ್ಲಿ ನೀರು ಪೂರ್ಣ ನಿಂತು ಬೆಳೆಗಳೆಲ್ಲಾ ಒಣಗಲಾರಂಬಿಸಿದವು . ಎರಡು ಬೋರ್ವೆಲ್ ಕೊರೆಸಿ ಲಕ್ಷಾಂತರ ಹಣ ಖರ್ಚು ಮಾಡಿದರೂ ನೀರಿನ ಸುಳಿವಿರಲಿಲ್ಲ . ಕಷ್ಟ ದ ದಿನಗಳ ನೆನದು ಸುರೇಂದ್ರ ಪಿ ಯು ಸಿ‌ ಪೇಲಾದಾಗ ಮಾವ ಆಡಿದ ಮಾತು ನೆನಪಾದವು .ಛಲಬಿಡದೆ
ಕೊನೆಗೆ ದೇವರ ಮೇಲೆ  ಭಾರ ಹಾಕಿ‌ ಮತ್ತೊಂದು ಬೋರ್ ಕೊರೆಸಿದಾಗ ಉತ್ತಮ ನೀರು ಬಂದವು
ಮಾಧವ ಮೂರ್ತಿಗಳ ತೋಟಕ್ಕಿಂತ ಸುರೇಂದ್ರ ನ ತೋಟ   ಉತ್ತಮ ಮತ್ತು ಲಾಭದಾಯಕವಾದ ರೀತಿ ನೋಡಿ
" ಸುರೇಂದ್ರ ನೀನು ಬಿಎಸ್ಸಿ ಎಜಿ‌ ಮಾಡದಿದ್ದರೂ ಕೃಷಿ ವಿಜ್ಞಾನಿಯಂತೆ ಕೃಷಿ ಮಾಡುತ್ತಿರುವೆ  ನಿನಗೆ ಒಳ್ಳೆಯದಾಗಲಿ ,ನೀನು‌ ಇಷ್ಟ ಪಟ್ಟರೆ ನನ್ನ ಮಗಳ ಜೊತೆಯಲ್ಲಿ ನಿನಗೆ ಮದುವೆ ಮಾಡುವೆ" ಎಂದರು .

*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*

ಗಜ಼ಲ್ ೩೦ (ಮಳೆ )


*ಗಜ಼ಲ್೩೦*

ಮನೆ ಮಠಗಳ ಕೊಚ್ಚಿ ರೊಚ್ಚಿಗೇಳುವುದು  ಮಳೆ
ಇಳೆಯ  ನಲಿವಿಗೆ ಆಧಾರವಾಗಿಹುದು  ಮಳೆ

ಬಿರಿದ ಮಣ್ಣಿಗೆ ತಂಪೆರೆದು ಹದಗೊಳಿಸುವುದು
ಮನ ಮನಗಳ ಬೆಸುಗೆಯ ಕಾರಕವಾಗಿಹುದು  ಮಳೆ

ಸಕಲ ಕೊಳೆಯ ತೊಳೆದು ಹಸನುಗೊಳಿಸುವುದು
ನಲ್ಲೆ ಬಳಿಯಿರಲು ರೋಮಾಂಚನಗೊಳಿಸುವುದು ಮಳೆ

ಬರಡು ಮರುಭೂಮಿ ಬಡತನದ ಜ್ವಾಲೆ
ಸಮೃದ್ಧ ಹಸಿರುಡುಗೆ ಉಡಿಸುವುದು ಮಳೆ 

ಸುಮಧುರ ಮಣ್ಣಿನ ಘಮಲು ನಾಸಿಕಕೆ ಅಹ್ಲಾದ
ಸೀಜೀವಿಯ ಮನಕಾನಂದಗೊಳಿಸುವುದು ಮಳೆ

*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*

17 March 2018

ಉದುರುವ ಎಲೆ (ಭಾವಗೀತೆ ,ತಾಯಿ ಮಗ ಮತ್ತು ಹೆಂಡತಿಯ ಸಂಬಂಧಗಳ ಕುರಿತು ಭಾವಗೀತೆ). ಕವಿಬಳಗ ವಾಟ್ಸಪ್ ಗುಂಪಿನ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದ ಭಾವಗೀತೆ



*ಉದುರುವ ಎಲೆ*

ಮನ್ನಿಸು ನನ್ನ ಹೆತ್ತಮ್ಮ
ಹೀನನು ನಾನು ಕ್ಷಮಿಸಮ್ಮ
ಜನ್ಮದಾತೆಯ ದೂಡಿದೆ ನಾ
ನನ್ನ ಮೇಲೆ ನಿನಗೆ ಕೋಪಾನಾ?|೧|

ಮರುಗುವೆಯೇಕೆ  ಸುತನೆ
ನಿನ್ನದೇನು ತಪ್ಪೇನಿಲ್ಲ ಮಗನೆ
ನಿನ್ನವಳ ಬುದ್ದಿಯು ಬಲಿತಿಲ್ಲ
ನಾನವಳಿಗೆ ಕೆಡುಕ ಬಯಸಲ್ಲ|೨|

ಹೊತ್ತು ಹೆತ್ತು ನಿನ್ನ ಸಾಕಲಿಲ್ಲ
ನನ್ನ ಪಾಪಕೆಂದು  ಕ್ಷಮೆಯಿಲ್ಲ
ಕೈತುತ್ತನ್ನು  ನೀಡಿದೆ ನೀನು
ಕೈಹಿಡಿದು ಸಲಹಲಿಲ್ಲ ನಾನು|೩|

ಮನೆಬೆಳೆಗಲು ಅವಳ ತಂದೆ
ಅವಳ ಕಾಟಕೆ ಮನೆ ಬಿಟ್ಟು ಬಂದೆ
ಬಾಳಿರಿ ನೂರ್ಕಾಲ ಸಂತಸದಿ
ಉದುರುವ ಎಲೆ ನಾ ಕಾನನದಿ|೪|

*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*

ನಮ್ಮೆಲ್ಲರ ಹಬ್ಬ ( ಯುಗಾದಿ ಹಬ್ಬದ ಶುಭಾಶಯಗಳು)

*ನಮ್ಮೆಲ್ಲರ ಹಬ್ಬ*

ಬಂದಿತು ಬಂದಿತು  ನಮ್ಮೆಲ್ಲರ ಹಬ್ಬ
ಯುಗದ ಆದಿಯ ಜಗದ  ಹಬ್ಬ
ಸಕಲರ ಪಾಲಿನ ಸವಿಯಾದ ಹಬ್ಬ
ಅದುವೆ ನೋಡಿ  ಯುಗಾದಿ ಹಬ್ಬ

ಅಭ್ಯಂಜನ ಸ್ನಾನ ಮಾಡೋಣ
ಹೊಸ ಉಡುಪಲಿ ಸಂಭ್ರಮಿಸೋಣ
ಹೋಳಿಗೆ ತುಪ್ಪ ಸವಿಯೋಣ
ಪಂಚಾಂಗ ಪಠಣ ಮಾಡೋಣ

ಮಾಮರ ನಲಿಯುತ ಚಿಗುರುವುದು
ಕೋಗಿಲೆ ಕಂಠದಿ ಕರೆಯುವುದು
ಬೇವು ಬೆಲ್ಲ ಹಂಚಿ ಸವಿಯೋಣ
ಸುಖಃ ದುಃಖಗಳಿದ್ದರೂ ಬಾಳೋಣ

ಕಳೆಯಿತು ಶೋಭಕೃತ  ಸಂವತ್ಸರ
ಕಾಲಿಟ್ಟಿದೆ  ಕ್ರೊಧಿ    ಸಂವತ್ಸರ
ಸುಭೀಕ್ಷವಾಗಲಿ ಧರೆಯೆಲ್ಲಾ
ಶಾಂತಿಯು  ನೆಲೆಸಲಿ ಜಗವೆಲ್ಲಾ

*ಸಿ.ಜಿ ವೆಂಕಟೇಶ್ವರ*
*ಗೌರಿಬಿದನೂರು*

16 March 2018

ಉಗಾದಿ ಹಬ್ಬ ಮಾಡೋಣ ಸಾಂಸ್ಕೃತಿಕ ಪರಂಪರೆ ಉಳಿಸೋಣ (ಕವಿಬಳಗ ವಿಟ್ಲ ಗುಂಪಿನ ಯುಗಾದಿಯ ಸ್ಪರ್ಧೆಯಲ್ಲಿ ನಾಲ್ಕನೇ ಪ್ರಶಸ್ತಿ ಪಡೆದ ಲೇಖನ

ಸಾಂಸ್ಕೃತಿಕ ಪರಂಪರೆಯನ್ನು ಉಳಿಸೋಣ

ಯುಗಾದಿಯ ಕುರಿತು ಲೇಖನ

ಬೇಂದ್ರೆ ಯವರು ಬರೆದಂತೆ *ಯುಗ ಯುಗಾದಿ ಕಳೆದರೂ ಯುಗಾದಿ ಮರಳಿ ಬರುತಿದೆ* ಎಂಬಂತೆ ಬಹುತೇಕ ಭಾರತೀಯ ಹಿಂದೂಗಳು ಯುಗಾದಿ ಹಬ್ಬವನ್ನು ಬಹುಶ್ರಧ್ದಾ ಭಕ್ತಿಯಿಂದ ಆಚರಿಸುವರು ಅದರಲ್ಲೂ ದಕ್ಷಿಣ ಭಾರತದಲ್ಲಿ ಇದು ಹೊಸ ವರ್ಷವೆಂದು ಅಚರಿಸುವ ಪ್ರಮುಖ ಹಬ್ಬ
ಶಿಶಿರ ಋತು ಮುಗಿದು ವಸಂತಕಾಲದ ಆಗಮನದ ಹಿನ್ನೆಲೆಯಲ್ಲಿ ಮಾಡಲಾಗುವ ಈ ಹಬ್ಬಕ್ಕೆ ಪ್ರಕೃತಿಯೇ ಚಿಗುರು ಹೂಗಳಿಂದ ಮರಗಿಡಗಳ ಸಿಂಗರಿಸಿದಂತೆ ಪರಿಸರ  ನಳಿಸುತ್ತದೆ .ಇದು ಮನೆ ಮನೆಗಳಲ್ಲಿ ಆನಂದ ತರುತ್ತದೆ .

ಜನವರಿ ಒಂದಕ್ಕಿಂತ ನಮಗೆ ಯುಗಾದಿಯೇ ಹೊಸ ವರ್ಷ ಅದರ ಮಹತ್ವ ಆಚರಣೆ ಮತ್ತು ವೈಜ್ಞಾನಿಕ ಕಾರಣಗಳನ್ನು ಈ ಮುಂದಿನಂತೆ ವಿವರಿಸಬಹುದು.

 ಯುಗಾದಿ ಹಬ್ಬವನ್ನು ಆಚರಿಸುವುದರ ಮಹತ್ವ ಮತ್ತು ಕಾರಣಗಳು

ಎಲ್ಲ ವರ್ಷಾರಂಭಗಳಲ್ಲಿ ಅತ್ಯಂತ ಯೋಗ್ಯ ವರ್ಷಾರಂಭದ ದಿನವೆಂದರೆ ‘ಚೈತ್ರ ಶುಕ್ಲ ಪ್ರತಿಪದೆ. ’ಜನವರಿ ೧ ರಂದು ವರ್ಷಾರಂಭವನ್ನು ಏಕೆ ಮಾಡಬೇಕು ಎನ್ನುವುದಕ್ಕೆ ಯಾವುದೇ ಕಾರಣ ಇಲ್ಲ. ಯಾರೋ ಒಬ್ಬರು ನಿರ್ಧರಿಸಿದರು ಮತ್ತು ಅದು ಪ್ರಾರಂಭವಾಯಿತು. ತದ್ವಿರುದ್ಧ ಚೈತ್ರ ಶುಕ್ಲ ಪ್ರತಿಪದೆಯಂದು ವರ್ಷಾರಂಭವನ್ನು ಮಾಡಲು ನೈಸರ್ಗಿಕ, ಐತಿಹಾಸಿಕ ಮತ್ತು ಆಧ್ಯಾತ್ಮಿಕ ಕಾರಣಗಳಿವೆ.

ನೈಸಗಿಕ ಕಾರಣಗಳು:

 ಸರಿಸುಮಾರು ಪ್ರತಿಪದೆಯ ಸಮಯದಲ್ಲಿ ಸೂರ್ಯನು ವಸಂತ – ಸಂಪಾತದ ಮೇಲೆ ಬರುತ್ತಾನೆ (ಸಂಪಾತ ಬಿಂದು ಎಂದರೆ (ಮಕರ) ಕ್ರಾಂತಿವೃತ್ತ ಮತ್ತು ವಿಷುವವೃತ್ತ (ಕರ್ಕಾಟಕ) ಈ ಎರಡು ವೃತ್ತಗಳು ಯಾವ ಬಿಂದುವಿನಲ್ಲಿ ಪರಸ್ಪರ ಭೇದಿಸುತ್ತವೆಯೋ ಆ ಬಿಂದು) ಮತ್ತು ವಸಂತ ಋತುವು ಪ್ರಾರಂಭವಾಗುತ್ತದೆ. ಎಲ್ಲ ಋತುಗಳಲ್ಲಿ ‘ಕುಸುಮಾಕರಿ ವಸಂತ ಋತುವು ನನ್ನ ವಿಭೂತಿಯಾಗಿದೆ’ ಎಂದು ಭಗವಂತನು ಶ್ರೀಮದ್ಭಗವದ್ಗೀತೆಯಲ್ಲಿ (೧೦:೩೫) ಹೇಳಿದ್ದಾನೆ. ಈ ಸಮಯದಲ್ಲಿ ಸಮಶೀತೋಷ್ಣ, ಉತ್ಸಾಹವರ್ಧಕ ಮತ್ತು ಆಹ್ಲಾದಕರ ವಾತಾವರಣವಿರುತ್ತದೆ. ಶಿಶಿರ ಋತುವಿನಲ್ಲಿ ಗಿಡಮರಗಳ ಎಲೆಗಳು ಉದುರಿ ಹೋಗಿರುತ್ತವೆ ಮತ್ತು ಪ್ರತಿಪದೆಯ ಸಮಯದಲ್ಲಿ ಅವುಗಳಿಗೆ ಹೊಸ ಚಿಗುರು ಬರುತ್ತಿರುತ್ತವೆ. ಗಿಡಮರಗಳು ಚೆನ್ನಾಗಿ ಕಾಣುತ್ತವೆ. ಯುಗಾದಿ ಪಾಡ್ಯದಂದು ಪ್ರಾರಂಭವಾಗುವ ಹೊಸವರ್ಷದ ಕಾಲಚಕ್ರವು ವಿಶ್ವದ ಉತ್ಪತ್ತಿಯ ಕಾಲಚಕ್ರಕ್ಕೆ ಸಂಬಂಧಿಸಿದೆ. ಆದುದರಿಂದ ಸೃಷ್ಟಿಯು ನವಚೇತನದಿಂದ ತುಂಬಿರುತ್ತದೆ. ತದ್ವಿರುದ್ಧವಾಗಿ ಡಿಸೆಂಬರ್ ೩೧ ರಂದು ರಾತ್ರಿ ೧೨ ಗಂಟೆಗೆ ಪ್ರಾರಂಭವಾಗುವ ಹೊಸವರ್ಷದ ಕಾಲಚಕ್ರವು ವಿಶ್ವದ ಲಯಕಾಲಕ್ಕೆ ಸಂಬಂಧಿಸಿದೆ. ಯುಗಾದಿ ಪಾಡ್ಯದಂದು ಪ್ರಾರಂಭವಾಗುವ ಹೊಸವರ್ಷದ ತುಲನೆಯನ್ನು ಸೂರ್ಯೋದಯಕ್ಕೆ ಉದಯವಾಗುವ ತೇಜೋಮಯ ದಿನದೊಂದಿಗೆ ಮಾಡಬಹುದು.

ನಿಸರ್ಗದ ನಿಯಮವನ್ನು ಅನುಸರಿಸಿ ಮಾಡಿದ ವಿಷಯಗಳು ಮನುಷ್ಯರಿಗೆ ಪೂರಕವಾಗಿರುತ್ತವೆ ಮತ್ತು ಅದಕ್ಕೆ ವಿರುದ್ಧವಾಗಿ ಮಾಡಿರುವ ವಿಷಯಗಳು ಮನುಷ್ಯರಿಗೆ ಹಾನಿಕಾರಿಯಾಗಿರುತ್ತವೆ. ಆದುದರಿಂದ ಪಾಶ್ಚಾತ್ಯ ಸಂಸ್ಕೃತಿಗನುಸಾರ ಜನವರಿ ಒಂದರಂದು ಹೊಸವರ್ಷಾರಂಭವನ್ನು ಮಾಡದೇ, ಯುಗಾದಿ ಪಾಡ್ಯದಂದೇ ಹೊಸವರ್ಷವನ್ನು ಆಚರಿಸುವುದರಲ್ಲಿ ನಮ್ಮ ನಿಜವಾದ ಹಿತವಿದೆ.

ಐತಿಹಾಸಿಕ ಕಾರಣಗಳು:

 ಈ ದಿನದಂದು ರಾಮನು ವಾಲಿಯನ್ನು ವಧಿಸಿದನು. ವಿಜಯದ ಪ್ರತೀಕವು ಎತ್ತರದಲ್ಲಿರುತ್ತದೆ. ಹಾಗಾಗಿ ಬ್ರಹ್ಮಧ್ವಜ ಎತ್ತರದಲ್ಲಿರುತ್ತದೆ. ಈ ದಿನದಿಂದಲೇ ‘ಶಾಲಿವಾಹನ ಶಕೆ’ ಪ್ರಾರಂಭವಾಯಿತು, ಏಕೆಂದರೆ ಈ ದಿನ ಶಾಲಿವಾಹನನು ಶತ್ರುಗಳ ಮೇಲೆ ವಿಜಯವನ್ನು ಪಡೆದನು.

ಆಧ್ಯಾತ್ಮಿಕ ಕಾರಣಗಳು :

 ಬ್ರಹ್ಮದೇವನು ಇದೇ ದಿನದಿಂದು ಸೃಷ್ಟಿಯನ್ನು ನಿರ್ಮಿಸಿದನು. ಅರ್ಥಾತ್ ಈ ದಿನ ಸತ್ಯಯುಗವು ಪ್ರಾರಂಭವಾಯಿತು. ಆದುದರಿಂದಲೇ ಈ ದಿನದಂದು ವರ್ಷಾರಂಭವನ್ನು ಮಾಡುತ್ತಾರೆ. ಯುಗಾದಿಯಂದು ತೇಜ ಮತ್ತು ಪ್ರಜಾಪತಿ ಲಹರಿಗಳು ಹೆಚ್ಚಿನ ಪ್ರಮಾಣದಲ್ಲಿ ಕಾರ್ಯನಿರತವಾಗಿರುತ್ತವೆ. ಸೂರ್ಯೋದಯದ ಸಮಯದಲ್ಲಿ ಈ ಲಹರಿಗಳಿಂದ ಪ್ರಕ್ಷೇಪಿತವಾಗುವ ಚೈತನ್ಯವು ಹೆಚ್ಚಿನ ಸಮಯದವರೆಗೆ ಉಳಿಯುತ್ತದೆ. ಅದು ಜೀವದ ಜೀವಕೋಶಗಳಲ್ಲಿ ಸಂಗ್ರಹವಾಗುತ್ತದೆ ಹಾಗೂ ಅವಶ್ಯಕತೆಗನುಸಾರ ಆ ಜೀವದಿಂದ ಉಪಯೋಗಿಸಲ್ಪಡುತ್ತದೆ.

*ಚೈತ್ರ ಮಾಸದ ಮಹತ್ವ -
*ಯುಗಾದಿ ಹಬ್ಬದ ಮಹತ್ವ*

ಚೈತ್ರಮಾಸಕ್ಕೆ  ವಿಷ್ಣು  ನಿಯಾಮಕ
ಚೈತ್ರ ಶುಕ್ಲ ಪ್ರತಿಪತ್ತಿನoದು ಯುಗಾದಿ ಹಬ್ಬದ ದಿನ ನೂತನ ವರ್ಷಾರಂಭ
*ಈ ದಿನ ಅರುಣೋದಯದ ಕಾಲದಲ್ಲಿಯೇ ಎದ್ದು ಭಗವಂತನ ನಾಮಸ್ಮರಣೆಯನ್ನು ಮಾಡುತ್ತಾ -ದೇವರ ಮನೆಗೆ ಹೋಗಿ ದೇವರ ಮುoದೆ ಇಟ್ಟಿರುವ  ಪಂಚಾoಗ ,ತರಕಾರಿಗಳು -ಧಾನ್ಯಗಳು ,ಫಲ-ತಾoಬೂಲಗಳು ಎಣ್ಣೆ ನೆಲ್ಲಿಕಾಯಿ* *ಮುoತಾದ ವಸ್ತುಗಳನ್ನು ಹೊಸ ಕನ್ನಡಿಯ ಮೂಲಕ ನೋಡಬೇಕು* .ಯಾವ ಯಾವ ವಸ್ತುಗಳನ್ನು ಕನ್ನಡಿಯ ಮೂಲಕ ನೋಡುವೇವೋ ಅವುಗಳನ್ನು ಬಿoಬರೂಪಿ ಪರಮಾತ್ಮನು ದೊರಕಿಸಿಕೋಡುವನು. ಮುಖಪ್ರಕ್ಷಾಲನೆಯನ್ನು ಮಾಡಿ *ಗಜೇoದ್ರ ಮೋಕ್ಷಪಾರಯಣ ಮಾಡಬೇಕು*

ಯುಗಾದಿಯಂದು ಪ್ರತಿಯೋಬ್ಬನು
ಅಭ್ಯoಜನ ಮಾಡಲೇಬೇಕು . ಈ ಮೊದಲು ಪೂಜಕನು ಸ್ನಾನ ಮಾಡಿ *ಭಗವoತನಿಗೆ ಎಣ್ಣೆ ಸೀಗೆಪುಡಿ -ಬಿಸಿನಿರಿನಿoದ ಅಭ್ಯoಜನವನ್ನು ಮಾಡಿಸಬೇಕು . ಭಗವಂತನಿಗೆ* *ಮಾಡಿ ಉಳಿದ ಎಣ್ಣೆ -ಸೀಗೆಪುಡಿಗೆ ಬೇರೆ ಎಣ್ಣೆ ,ಸೀಗೆಪುಡಿಯನ್ನು ಬೆರೆಸಿ ಪ್ರತಿಯೋಬ್ಬರು ಹಚ್ಚಿಕೊoಡು ನಂತರ ಸ್ನಾನ ಮಾಡಬೇಕು.*

*ಸಪ್ತಚಿರoಜೀವಿಸ್ಮರಣೆ*

ಎಣ್ಣೆಯನ್ನು ಹಚ್ಚಿಕೊಳ್ಳುವಾಗ ಅಶ್ವತ್ಥಾಮಾದಿ ಸಪ್ತ ಚಿರoಜೀವಿಗಳನ್ನು ಮಾರ್ಕoಡೇಯನನ್ನು ಈ ಕೆಳಗೆ ಕೊಟ್ಟಿರುವ ಮಂತ್ರವನ್ನು ಹೇಳಿ  ಸ್ಮರಿಸಬೇಕು .


ಅಶ್ವತ್ತಾಮಾ ಬಲಿರ್ವ್ಯಾಸ: ಹನೂಮಾಂಶ್ಚ ವಿಭೀಷಣ: | ಕೃಪ: ಪರಶುರಾಮಶ್ಚ ಸಪ್ತೈತೇ ಚಿರಂಜೀವಿನ: |

ಅಭ್ಯoಜನವನ್ನು ಮಾಡಿದ ನಂತರ ಭಗವಂತನ ವಿಶೇಷ ಪೂಜೆಯನ್ನು  ಮಾಡಿ ನಂತರ ಹೊಸಬಟ್ಟೆಯನ್ನು ಧರಿಸಿ ನಿoಬಕ ದಳ ಬಕ್ಷಣ
(ಬೇವು -ಬೆಲ್ಲ)ವನ್ನು ಮಾಡಬೇಕು

*ಬೇವು ಬೆಲ್ಲ ಭಕ್ಷಣೆ ಮಾಡುವಾಗ ಹೇಳಬೇಕಾದ ಮ oತ್ರ

*ಶತಾಯುರ್ವಜ್ರದೇಹಾಯ ಸರ್ವಸಂಪತ್ಕರಾಯ ಚ | ಸರ್ವಾರಿಷ್ಟವಿನಾಶಾಯ ನಿಂಬಕದಳಭಕ್ಷಣಮ್ |*

*ನೂರು ವರ್ಷಆಯುಸ್ಸು -ವಜ್ರದಂತೆ ಧೃಢವಾದ ಶರೀರ ಸರ್ವಸಂಪತ್ತು ಸರ್ವರಿಷ್ಟನಾಶ* *ಇವುಗಳಿಗಾಗಿ  ಯುಗಾದಿಯoದು ಬೇವು ಬೆಲ್ಲಗಳ ಭಕ್ಷಣೆ ಮಾಡಬೇಕು*
*ನಂತರ ಪಂಚಾoಗ ಶ್ರವಣಮಾಡಬೇಕು*

ಯುಗಾದಿಯ ಆಚರಣೆಗೆ ಕೆಲ ಭಾಗಗಳಲ್ಲಿ ಅಮಾವಾಸೆಯ ದಿನವೇ  ಸಿದ್ಧತೆಗಳು ಅರಂಭವಾಗುತ್ತವೆ .
ಹರಳೆಣ್ಣೆಯ ಅಭ್ಯಂಜನ ಸ್ನಾನ ಮಾಡುವುದು ಈ ಹಬ್ಬದ ವಿಶೇಷ ಗಳಲ್ಲೊಂದು ಹಳ್ಳಿಗಳಲ್ಲಿ ವಯಸ್ಸಿನ ಭೇದ ವಿಲ್ಲದೆ ಪ್ರತಿಯೊಬ್ಬರೂ ಎಣ್ಣೆ ಸ್ನಾನ‌ಮಾಡುವರು .ಮನೆಯ ಎಲ್ಲಾ ಬಾಗಿಲಿಗೆ ಮಾವಿನ ಎಲೆ ಬೇವಿನ ಸೊಪ್ಪನ್ನು ಕಟ್ಟಿ  ಸಂಭ್ರಮ ಪಡುವರು .ಅಂದು ಕುಟುಂಬದ ಎಲ್ಲಾ ಸದಸ್ಯರು ಹೊಸ ಬಟ್ಟೆಗಳನ್ನು ಉಡುಪು ಧರಿಸಿ ಕರಿಗಡುಬು ಹೋಳಿಗೆ ಮುಂತಾದ ಸಿಹಿ ಭಕ್ಷ್ಯಗಳನ್ನು ತಯಾರಿಸಿ ತಮ್ಮ ಇಷ್ಟ ದೇವರಿಗೆ ಅರ್ಪಣೆ ಮಾಡಿ ಮನೆ ಮಂದಿಯೆಲ್ಲ ಬೇವು ಬೆಲ್ಲ ತಿಂದು ಸಂಭ್ರಮದಿಂದ ಹಬ್ಬ ಆಚರಿಸುತ್ತಾರೆ.
ಬೇವು ಬೆಲ್ಲ ನೀಡಲು ಕಾರಣವೆಂದರೆ ನಮ್ಮ ಮುಂಬರುವ ಹೊಸ ವರ್ಷದಲ್ಲಿ ನಮಗೆ ಬೆಲ್ಲದಂತೆ  ಸಿಹಿ ಬಂದಾಗ ಹಿಗ್ಗದೇ  ಬೇವಿನಂತೆ ಕಷ್ಟಗಳು ಬಂದಾಗ ಕುಗ್ಗದೆ ಜೀವನದಲ್ಲಿ ಸಮಚಿತ್ತವಾಗಿರಬೇಕು ಎಂಬ ಸಂದೇಶವನ್ನು ನೀಡುತ್ತದೆ ವೈಜ್ಞಾನಿಕ ವಾಗಿ ನೋಡಿದರೂ ಬೇವಿನಲ್ಲಿ ಔಷಧೀಯ ಗುಣವಿರುವುದು ಸಾಬೀತಾಗಿದೆ ಆದ್ದರಿಂದ ನಮ್ಮ ಆರೋಗ್ಯ ದೃಷ್ಟಿಯಿಂದ ಸಹ ಬೇವು ಬೆಲ್ಲ ಮಹತ್ತರವಾದುದಾಗಿದೆ .
ಹಬ್ಬದ ಮಾರನೇ ದಿನ ಕೆಲ ಕಡೆಗಳಲ್ಲಿ ಮನರಂಜನಾ ಆಟಗಳಾದ ,ನೀರು ಹಾಕುವುದು, ಉಯ್ಯಾಲೆ ಆಡುವುದು, ಮೋಡಿಆಟ,ಕೋಲಾಟ ಜೂಜಾಟ ಆಡುವುದು ಕಂಡುಬರುತ್ತದೆ.

ಅಂದು ಸಂಜೆ ಹೊಸ ವರ್ಷದ ಹೊಸ ಚಂದದ ಚಂದಿರನ ನೋಡಲು ಜನರು ಕಾತತರಾಗಿ ಚಂದ್ರನ ದರ್ಶನ ಪಡೆದು ಅದರ ಆಕಾರದ ಮೇಲೆ ಕೆಲ ಕಡೆ ಮುಂದಿನ ವರ್ಷದ ಭವಿಷ್ಯವನ್ನು ಹೇಳುವರು ಉದಾಹರಣೆಗೆ ಚಂದ್ರ ಬಲಕ್ಕೆ ಬಾಗಿದರೆ ಸುಭಿಕ್ಷ ಎಡಕ್ಕೆ ವಾಲಿದರೆ ಮತ್ತೊಂದು ಈಗೆ ಅರ್ಥೈಸಲಾಗುತ್ತದೆ. ಕೆಲವು ಕಡೆ ಯುಗಾದಿ ಹಬ್ಬದ ದಿನ ಮನೆಮಂದಿಯೆಲ್ಲಾ ಕುಳಿತ ವಿಶೇಷ ಪಂಚಾಂಗದ ಪಠಣ ಮಾಡುವರು .
ಕರ್ನಾಟಕದ ಕೆಲ ಜಿಲ್ಲೆಯ ಜನರು ಹಬ್ಬದ ಮಾರನೆಯ ದಿನ ವರುಷದ ತೊಡಕು (ಹೊಸ ತೊಡಕು) ಎಂದು ಮಾಂಸದ ಅಡಿಗೆ ಮಾಡಿ ಊಟ ಮಾಡಿ ಸಂಭ್ರಮ ಪಡುತ್ತಾರೆ.

ಒಟ್ಟಿನಲ್ಲಿ ಉಗಾದಿ ಎಂದು ಆಡುಭಾಷೆಯಲ್ಲಿ ಕರೆಯುವ ಈ ಹಬ್ಬವು ಸಕಲ ಜೀವ ರಾಶಿಯು ಸಂಭ್ರಮ ಪಡುವ ಯುಗದ ಆದಿಯಾಗಿ ಕಂಡುಬರುತ್ತದೆ. ಆದರೆ ಆಧುನಿಕತೆಯ ಪರಿಣಾಮವಾಗಿ ಕೆಲ ಕಡೆ ಈ ಯುಗಾದಿ ಹಬ್ಬದ ದಿನ ಪ್ಲಾಸ್ಟಿಕ್ ತೋರಣ ಪ್ಲಾಸ್ಟಿಕ್ ಎಲೆ ಮುಂತಾದವುಗಳ ಬಳಕೆಯಿಂದ ಪರಿಸರಕ್ಕೆ ಪೂರಕ ಹಬ್ಬ ವಾಗುವ ಬದಲಿಗೆ ಮಾರಕವಾಗುತ್ತಿರುವುದು ವಿಪರ್ಯಾಸ.
ಇನ್ನೂ ಕೆಲ ಕಡೆ ಹಬ್ಬದ ದಿನ ಹೋಟೆಲ್ ಗಳಲ್ಲಿ ಒಬ್ಬಟ್ಟು ಊಟ ಮಾಡಿ .ಪೂಜೆ ಮಾಡಲು ಕೆಲಸದವರಿಗೆ ಹೇಳಿ ಬೇರೆ ಕಡೆ ಪ್ರವಾಸ ಹೋಗುವ ಕೆಲ ಕುಟುಂಬಗಳನ್ನು ಅಲ್ಲಲ್ಲಿ ಕಾಣುತ್ತೇವೆ ಇದೇ ರೀತಿ ಮುಂದುವರೆದರೆ ನಮಯ ಮುಂದಿನ ಪೀಳಿಗೆಗೆ ಈ ಹಬ್ಬದ ಮಹತ್ವ ತಿಳಿಯದೇ ಹೋಗಬಹುದು. ಆಗಾಗದಂತೆ ನೋಡಿಕೊಂಡು ನಮ್ಮ ಸಂಸ್ಕೃತಿ, ಸಂಪ್ರದಾಯವನ್ನು ಬೆಳೆಸುವ ಇಂತಹ ಹಬ್ಬಗಳನ್ನು ಅರ್ಥ ಪೂರ್ಣವಾಗಿ ಆಚರಿಸಿ ನಮ್ಮ ಸಾಂಸ್ಕೃತಿಕ ಪರಂಪರೆಯನ್ನು ಉಳಿಸಿ ಬೆಳೆಸ ಬೇಕಿದೆ .

*ಸಿ.ಜಿ.ವೆಂಕಟೇಶ್ವರ*
ಶಿಕ್ಷಕರು ಹಾಗೂ ಹವ್ಯಾಸಿ ಬರಹಗಾರರು
ಎಸ್. ಎಸ್ ಇ.ಎ ಸರ್ಕಾರಿ ಪ್ರೌಢಶಾಲೆ
*ಗೌರಿಬಿದನೂರು*

15 March 2018

ಎಲ್ಲಿದೆ ದಾರಿ ( ಕವನ)

*ಎಲ್ಲಿದೆ ದಾರಿ?*


ನಿನ್ನ ಕರ್ಮವನು ಮಾಡು
ಮುಕ್ತಿ ದೊರೆವುದು ಎಂದರು
ಭಕುತಿಯಲಿ  ಮಿಂದೇಳು
ಮುಕ್ತಿ ಸಿಗುವುದೆಂದರು ಕೆಲವರು.

ಜ್ಞಾನ ಸಂಪಾದಿಸು ನೀನು
ಆತ್ಮ ಸಾಕ್ಷಾತ್ಕಾರವಾಗುವುದೆಂದರು
ಧ್ಯೇಯವಿರಲಿ ಬಾಳಿಗೆ ದುಡಿಯುತಿರು
ವಿಜಯಿಯಾಗುವೆ ಎಂದರು ತಿಳಿದವರು.

ಭಕ್ತಿಯಿಂದಲೇ ದಿನವೂ ಪೂಜಿಸಿದೆ
ಜ್ಞಾನ ಸಂಪಾದನೆ ಮಾಡುತಲೇ ಇರುವೆ
ಕಾಯಕವೇ ಕೈಲಾಸವೆಂದು ದುಡಿದೆ
ಆದರೂ ಮುಕ್ತಿಯ ಸುಳಿವಿಲ್ಲ.

ಇಂದು ಎಲ್ಲ ಕಾರ್ಯ ಶೀಘ್ರವಾಗಬೇಕು
ಅಡ್ಡದಾರಿಯಾದರೂ ಅದೇ ಬೇಕು
ತಿಳಿದವರಿದ್ದರೆ ಈಗಲೇ ಹೇಳಿ
ಮುಕ್ತಿ ಪಡೆಯಲು ಎಲ್ಲಿದೆ ಅಡ್ಡ ದಾರಿ ?


*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*



14 March 2018

*ವಿರಹ*(ಕವನ)


*ವಿರಹ*(ಕವನ)

ಮರೆತೆಯೆಂದರೆ ಮರೆಯಲಾರೆ
ವಿರಹವನೀಗ  ತಾಳಲಾರೆ
ಯಾರಿಗೂ ಹೇಳಲಾರೆ
ಮನದಿ ಮುಚ್ಚಿಡಲಾರೆ

ನಗುಮೊಗದ ನಲ್ಲ
ಹೃದಯವ  ಕದ್ದನಲ್ಲ.
ಬರುವೆಂದು ಹೋದವನು
ಇನ್ನೂ ಸುಳಿವಿಲ್ಲವಲ್ಲ 

ನನ್ನ  ಕೂದಲಲಿ ಕೈಯಿಟ್ಟು
ನವಿರಾಗಿ ನೇವರಿಸಿದ ನೆನಪು
ಎದೆಯಾಳದಲಿ ಸಾವಿರ ನೆನಪು
ಗೆಳೆಯ  ಬಂದು ನನ್ನ ಅಪ್ಪು

ಹೃದಯ ಹೇಳುತಿದೆ ಈಗ
ಇನಿಯ ಬರುವನು ಬೇಗ
ಮನದಲಿದೆ  ಅವನ ಚಿತ್ತಾರ
ಬಂದೇ ಬರುವ ನನ್ನ ಹತ್ತಿರ

*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*


ಯಾವ ಮಾಯೆ? (ಕವನ)

*ಯಾವ ಮಾಯೆ*


ಹುಟ್ಟುವಾಗ ವಿಶ್ವಮಾನವನಾಗಿ
ಬೆಳೆಯುತ ಸಂಕುಚಿತನಾಗಿ
ಬಂದಿಯಾಗುವಿಯೆಲ್ಲ
ಇದು ಯಾವ ಮಾಯೆ?

ಜಾತನಾದಾಗ ಜಾತಿಯ ಹಂಗಿಲ್ಲ
ಬೆಳೆದು ಜಾತಿವಿಷವರ್ತುಲದಿ ಸಿಲುಕಿ
ಜಗಳಗಂಟನಾಗಿ ಬದಲಾಗುವೆ
ಇದು ಯಾವ ಮಾಯೆ?

ಪ್ರಕೃತಿಯಲಿ ಹುಟ್ಟಿ ಬೆಳೆದು
ವಿಕೃತಿಯ ವಿಕಾರ ತೋರುವೆ
ಸಂಸ್ಕೃತಿ ಮರೆತು ಅನಾಗರಿಕನಾದೆ
ಇದು ಯಾವ ಮಾಯೆ?

ಬಡವ ಬಲ್ಲಿದ ಧನಿಕರ ಜೀವನ
ಮೇಲು ಕೀಳಿನ ಆಡಂಬರ
ಕೊನೆಗೆ ಸೇರುವುದು ಮಣ್ಣ
ಇದು ಯಾವ ಮಾಯೆ?

ಮುಗ್ಧ ಮಗುವಿನ ಮನಸು
ಕ್ರಮೇಣ ಆಯಿತು ಹೊಲಸು
ಮನವು ನಿಯಂತ್ರಣವಿಲ್ಲ
ಇದು ಯಾವ ಮಾಯೆ?

*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*


13 March 2018

ಕೋಮಲೆ (ಹನಿಗವನ)


*ಹನಿಗವನ*
ಕೋಮಲೆ

ಚಿಂತಿಸುತಿಹಳು ಕೋಮಲೆ
ಕಟ್ಡಲಾಗುತ್ತಿಲ್ಲ ಹೂಮಾಲೆ
ಮನದಲೇನೋ ತಲ್ಲಣ
ಬರುವನೇನೋ ಮದನ
ಮನಸು ಹಿಡಿತದಲಿಲ್ಲ
ಆಸೆಯ  ಬಿಡುವಂತಿಲ್ಲ
ಸಿದ್ದಳಾಗಿಹಳು ಕಾತರದಿ
ಕಾಯುತಿಹಳು ಮುದದಿ

*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*



ಜನನಾಯಕರೆ? (ಕವನ)

*ಜನನಾಯಕರೆ?*

ಓಟಿಗಾಗಿ ನೋಟು ನೀಡಿ
ಕೋಟಿ ನುಂಗಿ ನೀರ ಕುಡಿದು
ತಮ್ಮನುದ್ದರಿಸಿಕೊಳುವ
ಇವರು ನಮ್ಮ ಜನ ನಾಯಕರೆ|೧|

ಜಾತಿ ಧರ್ಮ ಹೆಸರ ಹೇಳಿ
ನಮ್ಮನ್ನೆಲ್ಲ ಎತ್ತಿ ಕಟ್ಟಿ
ತಮ್ಮ ಬೇಳೆ ಬೇಯಿಸಿಕೊಳ್ಳುವ
ಇವರು ನಮ್ಮ  ಜನ ನಾಯಕರೆ|೨|

ಕಾಡಿ ಬೇಡಿ ಮತವ ಪಡೆದು
ಕೈಗೆ ಸಿಗದೆ ಓಡಿ ಹೋಗಿ
ಹೊರೆಯಾಗಿ ನಮ್ಮ ಕಾಡುವ
ಇವರು ನಮ್ಮ ಜನ ನಾಯಕರೆ|೩|

ಸುಳ್ಳು ಪೊಳ್ಳು ಆಸೆ ತೋರಿ
ಮಳ್ಳರಾಗಿ ಮೋಸ ಮಾಡಿ
ಮತಕ್ಕಾಗಿ ಕಾಲುಹಿಡಿವ
ಇವರು ನಮ್ಮ ಜನನಾಯರೆ|೪|

*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*

12 March 2018

ವರ (ಹನಿಗವನ)

ಹನಿಗವನ

*ವರ*

ಅವಳು  ಬೇಡಿದಳು
ದೇವರಲಿ ಒಂದು
ವರ
ಇಲ್ಲದೇ
ಸ್ವಯಂವರ
ಕರುಣಿಸಲು ಒಳ್ಳೆಯ
ವರ

*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*

ಗಜ಼ಲ್ ೨೯ (ಬಲ್ಲೆಯಾ?) ಕವಿ ಬಳಗ ವಾಟ್ಸಪ್ ಗುಂಪಿನ ಸ್ಪರ್ಧೆಯ ಲ್ಲಿ ಗಮನಾರ್ಹ ಉಲ್ಲೇಖ ಪುರಸ್ಕೃತ ಗಜ಼ಲ್

ಗಜ಼ಲ್ ೨೮ (ಬಲ್ಲೆಯಾ?)

ಅವಳು ಎಂದರೆ ಪ್ರಕೃತಿಯ ಶಕ್ತಿಯೆಂದು ಬಲ್ಲೆಯಾ
ಆದಿ ಅಂತ್ಯದ  ನಿಯಾಮಕಳೆಂದು ಬಲ್ಲೆಯಾ

ಹೆತ್ತು ಹೊತ್ತು ತುತ್ತ ನೀಡಿ ಪೊರೆಯುವವಳು
ನಮ್ಮಲ್ಲಿರುವ ಸರ್ವ ಶಕ್ತಿಯ ಮೂಲವೆಂದು ಬಲ್ಲೆಯಾ

ಬ್ರಹ್ಮ ವಿಷ್ಣು ರುದ್ರರ ಮಾತೆಯಾಗಿಹಳು  ಅವಳು
ಸೃಷ್ಟಿ ಸ್ತಿತಿ ಲಯಗಳ ಕಾರಣಳಾದವಳೆಂದು ಬಲ್ಲೆಯಾ

ಗಾಳಿ ನೀರು ಮಣ್ಣಿನ ಕಣಗಳು ಅಂಶ ಅವಳು
ನಮ್ಮುಸಿರಿನ ಮೂಲ ಪ್ರಕೃತಿ ಮಾತೆಯೆಂದು ಬಲ್ಲೆಯಾ

ಜೋಡಿಯಿರದ ಬದುಕು ಇರುವುದುಂಟೆ ಜಗದಿ
ಸೀಜೀವಿಯ ಮನಗೆದ್ದ ನಲ್ಲೆ ಇವಳೆಂದು ಬಲ್ಲೆಯಾ

*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*


11 March 2018

ಪರಮಾತ್ಮನಲಿ ಮನಸಿಡು (ಆಧ್ಯಾತ್ಮಿಕ ಕವನ)

*ಪರಮಾತ್ಮನಲಿ ಮನಸಿಡು*

ಇನ್ನೆಷ್ಟು ಕಾಲ ಬಿದ್ದು ಒದ್ದಾಡುವೆ
ಎದ್ದು ಆತ್ಮವನುದ್ದರಿಸಿಕೋ
ಸ್ವಾರ್ಥ ಲೋಭಗಳ ಬಿಡು
ಜಗದ ಜಂಜಡವ ಬಿಡು
ಸಿಧ್ಧಿಯೆಡೆಗೆ ಮನಸಿಡು|೧|

ಕಾಮದ ಬಲೆಯಲಿ ಸಿಲುಕಿ
ಬಿಡಿಸಿಕೊಳ್ಳದೆ ನಲುಗಿ
ಇಂದ್ರಿಯ ಸುಖದಿ ಮುಳುಗಿ
ಅಂಧನಾಗುವುದ ಬಿಡು
ಭಗವಂತನಲಿ ಮನಸಿಡು|೨|

ಕ್ರೋಧದಿಂದಲಿ  ಎಗರಾಡಿ
ಮಾಡಿಕೊಂಡು ಜೀವನ ರಾಡಿ
ಮತ್ಸರದಿಂದಲಿ  ಬಡಿದಾಡಿ
ಕತ್ತಿ ಮಸೆಯುವುದ ಬಿಡು
ಸರ್ವಶಕ್ತನಲಿ  ಮನಸಿಡು|೩|

ಮೋಹದಿ ಮೈಮರೆತು
ನಾನು ನನದೆಂದು ಅಬ್ಬರಿಸಿ
ಲೌಕಿಕವೆ ದಿಟವೆಂದು ತಿಳಿದು
ಮರುಳಾಗುವುದ ಬಿಡು
ಪರಮಾತ್ಮನಲಿ  ಮನಸಿಡು|೪|

*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*

10 March 2018

ಹನಿ ಹನಿ ಇಬ್ಬನಿ ವಾಟ್ಸಪ್ ಕವಿ ಬಳಗದ ಯಶೋಗಾಥೆ (ಲೇಖನ)

*ಹನಿ ಹನಿ‌ ಇಬ್ಬನಿಯ  ವಾಟ್ಸಪ್ ಗುಂಪಿನ ಯಶೋಗಾಥೆ*

ವಾಟ್ಸಪ್ ಅನ್ನು ಕೇವಲ ಮನರಂಜನೆಯ ಮತ್ತು ಟೈಂಪಾಸ್ ಮಾಡಲು ಬಳಸುವ ಈ ಕಾಲದಲ್ಲಿ ಅದರ ಬಳಕೆಯಿಂದ ಸಾಹಿತ್ಯ ಸೇವೆ ಮಾಡಬಹುದು ಎಂಬುದನ್ನು ಸದ್ದಿಲ್ಲದೇ ಹಲವು ವಾಟ್ಸಪ್ ಕವಿ ಬಳಗಗಳು ಮಾಡಿತೋರಿಸುತ್ತಿವೆ ಅವುಗಳಲ್ಲಿ ಮುಂಚೂಣಿಯಲ್ಲಿರುವ ಗುಂಪು "ಹನಿ ಹನಿ ಇಬ್ಬನಿ ಕವಿ ಬಳಗ "

ಒಂದು ಕಾಲದಲ್ಲಿ ಸಾಹಿತ್ಯ ಕೇವಲ ಪಂಡಿತರಿಗೆ ಸೀಮಿತ ,ಕವನ ದೊಡ್ಡ ಕವಿಗಳ ಸ್ವತ್ತು ಎಂದು ನಂಬಲಾಗಿತ್ತು ಅದನ್ನು ಸುಳ್ಳು ಮಾಡಲು ಸಾಮಾನ್ಯರಲ್ಲಿರುವ ಕವಿ ಭಾವನೆಗಳನ್ನು ಬಡಿದೆಬ್ಬಿಸಲು *ಹನಿ ಹನಿ ಇಬ್ಬನಿ* ಬಳಗ ಟೊಂಕ ಕಟ್ಟಿ ನಿಂತಿದೆ


ಖುಷಿ ಕೃಷ್ಣ ರವರ ನೇತೃತ್ವದಲ್ಲಿ ಮುನ್ನೆಡಯುತ್ತಿರುವ ಈ ಬಳಗಕ್ಕೆ ಚಂದ್ರು ರವರು ಬೆನ್ನೆಲುಬಾಗಿ ನಿಂತು‌ ನಾಡಿನಾದ್ಯಂತ ಸಾಹಿತ್ಯದ ಕಂಪನ್ನು ಪಸರಿಸುತ್ತಿದ್ದಾರೆ.ಒಂದು ವಿಶ್ವವಿದ್ಯಾಲಯ ಮಾಡಬಹುದಾದ ಕನ್ನಡ ಕಟ್ಟುವ ಕೆಲಸವನ್ನು. ಒಂದೊಂದು ಪ್ರಸಾರಾಂಗ ಮಾಡಬಹುದಾದ ಪ್ರಕಟಣಾ ಕೆಲಸವನ್ನು ಸದ್ದಿಲ್ಲದೆ ಮಾಡಿ ನೂರಾರು ಉದಯೋನ್ಮುಖ ಸಾಹಿತಿಗಳನ್ನು ಬೆಳೆಸುವ ಕಾರ್ಯದಲ್ಲಿ ಬಳಗ ಯಶಸ್ವಿಯಾಗಿ ಮಾಡುತ್ತಿದೆ.
ಈಗಾಗಲೇ ಬಳಗವು
೧ *ಹನಿ ಹನಿ ಇಬ್ಬನಿ*
೨ *ಹನಿಹನಿ ಕಾವ್ಯಕಹಾನಿ*
೩*ಹನಿಹನಿ ತುಂತುರು*
೪ *ಹನಿಹನಿಭಾವಸಿಂಚನ*
೫ * ನನ್ನ ಪ್ರೀತಿಯ ಕೋತಿ ಮರಿ ಭಾಗ ೧*
೬ * ಹನಿ ಹನಿ ಕಾವ್ಯಧಾರೆ*
ಎಂಬ ಆರು ರತ್ನ ಗಳನ್ನು ಸಾಹಿತ್ಯ ಲೋಕಕ್ಕೆ ಅರ್ಪಿಸಿದೆ

ಮುಂದುವರೆದು ಬಳಗವು ರಾಜ್ಯಾದ್ಯಂತ ಸುಪ್ತ ಪ್ರತಿಭೆಯನ್ನು ಪ್ರೋತ್ಸಾಹ ಮಾಡಲು ಮೂರು ರಾಜ್ಯ ಮಟ್ಟದ ಕವಿಗೋಷ್ಟಿಗಳ ಹಮ್ಮಿಕೊಂಡು ಯಶಸ್ವಿಯಾಗಿ ಮುನ್ನೆಡೆದಿದೆ.
ಬಳಗದ ಮುಂದಿನ ಯೋಜನೆಯನ್ನು ಕರಾರುವಕ್ಕಾಗಿ ಮಾಡಿದ ಅಡ್ಮಿನ್ ದ್ವಯರು  ಮುಂದಿನ ದಿನಗಳಲ್ಲಿ ಭಾವಗೀತೆಗಳ ಸಿ.ಡಿ  ಮಾಡುವ  ಕೆಲಸವನ್ನು ಸದ್ದಿಲ್ಲದೆ ಪ್ರಾರಂಭಿಸಿದರು. ಮುಂದಿನ ದಿನಗಳಲ್ಲಿ ಬಳಗದ. ಕವಿಗಳ ವೈಯಕ್ತಿಕ ಕವಿಗಳ ಪುಸ್ತಕ ಪ್ರಕಾಶನ ಮಾಡುವ ಮಹೋನ್ನತ ಕನಸ ಕಂಡಿದ್ದು ಆ ನಿಟ್ಟಿನಲ್ಲಿ ಯಶಸ್ವಿಯಾಗಲು‌ ನಾನು  ಹಾರೈಸುವೆನು.

ಹನಿ ಹನಿ ಇಬ್ಬನಿ ಬಳಗ  ಹತ್ತರಲ್ಲಿ ಹನ್ನೊಂದಾಗದೇ ವಿಶೇಷವಾಗಿ ಬೆಳೆಯಲು‌ ಕಾರಣವಾಗಿರುವ *ದಶಾಂಶಗಳು*

೧ ಬಳಗಕ್ಕೆ ತನ್ನದೇ ಆದ ಗುರಿ ಇದ್ದು ಅದರಂತೆ ಮುನ್ನಡೆಯುತ್ತಿದೆ.

೨ ನೀನು ಬೆಳೆ ಮತ್ತು ಇತರರನ್ನು ಮಾರ್ಗದರ್ಶನ ಮಾಡಿ ಬೆಳೆಸು ಎಂಬ ಸದುದ್ದೇಶವನ್ನು ಹೊಂದಿದೆ

೩ ಬಳಗದ ಒಳಗೆ ಒಂದು ಆಂತರಿಕ ಶಿಸ್ತು ಎಲ್ಲರನ್ನು ಹಿಡಿದಿಟ್ಟಿದೆ

೪ ಬಳಗ ಕೇವಲ ಬಳಗವಲ್ಲ , ಒಂದು ಕುಟುಂಬದ ವಾತಾವರಣವು ನಿರ್ಮಾಣವಾಗಿದೆ ನೋವು ನಲಿವುಗಳಲ್ಲಿ ಬಂಧುಗಳಿಗಿಂತ ಹೆಚ್ಚಾಗಿ ಸ್ಪಂದಿಸುವ ಗುಣ

೫ ಗೊಂದಲಕ್ಕೆ ಅವಕಾಶ ನೀಡದೆ ..ಕವನ ಬರೆಯಲು  *ಹನಿಹನಿ ಇಬ್ಬನಿ*, ಅನಿಸಿಕೆ ವಿಮರ್ಶೆಗೆ *ಚಿಂತಕರ ಚಾವಡಿ*, ತೀರ್ಪು ನೀಡಲು *ತೀರ್ಪುಗಾರರ ಬಳಗ*, ಕೊನೆಗೆ ಮುಕ್ತ ಮಾತುಕತೆಗೆ *ತಾರೆಗಳ ತೋಟ* . ಎಂಬ ಸಮಾನಾಂತರ ಗುಂಪುಗಳು ಸಕ್ರೀಯವಾಗಿವೆ .

 ೬ ದಿನದ ಅಡ್ಮಿನ್, ವಾರದ ಅಡ್ಮಿನ್ ಎಂಬ ವಿಧವಿಧ ಪದನಾಮಗಳ ಸೃಷ್ಟಿಸುವ ಮೂಲಕ ಜವಾಬ್ದಾರಿ ಯ ವಿಕೇಂದ್ರೀಕರಣ ಮಾಡಲಾಗಿದೆ.

  ೭ ದಿನಕ್ಕೊಂದು *ಶೀರ್ಷಿಕೆ* ನೀಡುವುದರ ಮೂಲಕ  ಬರೆಯಲು  ಪ್ರೋತ್ಸಾಹ ಮತ್ತು ಪ್ರೇರಣೆ ನೀಡುತ್ತಿರುವುದು

೮ ವಾರದ ಸ್ಪರ್ಧೆ ಮಾಡಿ ಬಹುಮಾನ ನೀಡಿ ಬರೆಯಲು ಕವಿಗಳಿಗೆ ಪ್ರೋತ್ಸಾಹ ನೀಡುತ್ತಿರುವುದು.

೯ ಕೇವಲ ಕವನ ಬರೆಯಲು ಪ್ರೋತ್ಸಾಹ ನೀಡದೆ ಸಾಹಿತ್ಯದ ವಿವಿಧ ಪ್ರಕಾರಗಳಾದ ಭಾವಗೀತೆ, ಕಿರುಗಥೆ, ಗಜ಼ಲ್, ಶಾಹಿರಿ,ಹಾಯ್ಕು ಲೇಖನ ಬರೆಯಲು ಪ್ರೋತ್ಸಾಹ ನೀಡುತ್ತಿರುವುದು

೧೦  ಬಿ.ಆರ್ ಲಕ್ಷಣರಾವ್ . ಎಸ್ ಜಿ‌ ಸಿದ್ದ ರಾಮಯ್ಯ ಮುಂತಾದ ಕವಿಗಳೊಂದಿಗೆ ಸಂವಾದ ನಡೆಸಿ ಕವಿಗಳಿಗೆ ಪ್ರೇರಣೆ ನೀಡಿರುವುದು.

ಇಂತಹ ಕ್ರಿಯಾಶೀಲ ಬಳಗದಲ್ಲಿರುವುದು ನನಗೆ ಹೆಮ್ಮೆಯೆನಿಸುತ್ತದೆ  ಈ ಬಳಗಕ್ಕೆ ಸೇರಿದ ಮೇಲೆ ನಾನು ವಿವಿಧ ಪ್ರಕಾರಗಳಲ್ಲಿ ಬರೆಯಲು ನನಗೆ ಹಲವಾರು ಹಿರಿಯ ಕವಿಗಳು ಮಾರ್ಗದರ್ಶನ ನೀಡಿರುವುದು ನನ್ನ ಸುದೈವ ಎಲ್ಲರೂ ಕಲಿಯೋಣ ಎಲ್ಳರೂ ಬೆಳೆಯೋಣ ಎಂಬ ತತ್ವ ದಲ್ಲಿ ಬಳಗ ಮುನ್ನಡೆಯುತ್ತಿದೆ ನನ್ನಂತಹ  ಹನಿ ಹನಿ ಗಳನ್ನು ಸೇರಿಸಿ ಬಳಗವನ್ನು ಕಟ್ಟಿ ಮುನ್ನೆಡೆಸುತ್ತಿರುವ ಅಡ್ಮಿನ್ ದ್ವಯರಾದ ಖುಷಿ ಸರ್ ಹಾಗು ಚಂದ್ರು ಸರ್ ಮತ್ತು ಎಲ್ಲಾ ಕವಿಮನಗಳಿಗೆ ಹೃದಯ ಪೂರ್ವಕ ಧನ್ಯವಾದಗಳು

*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*




09 March 2018

ನನ್ನಯ ಶಾಲೆ ( ಶಿಶುಗೀತೆ)

*ಶಿಶುಗೀತೆ*

*ನನ್ನಯ ಶಾಲೆ*

ಮರೆಯಲಾರೆ ನನ್ನಯ ಶಾಲೆ
ನನ್ನಯ ಅಚ್ಚುಮೆಚ್ಚಿನ ಶಾಲೆ
ವಿದ್ಯೆಗೆ ಇದುವೆ ವಿದ್ಯಾಲಯ
ಕಲಿಯುವ ಮಕ್ಕಳ ದೇವಾಲಯ|೧|

ಪುಣ್ಯವು ನನ್ನದು ಇಲ್ಲಿರಲು
ಉತ್ತಮ ಪರಿಸರ ಹೊಂದಿರಲು
ನೀಡಿಹುದೆನಗೆ ಅಧಮ್ಯ  ಚೇತನ
ಶಾಂತ ಪರಿಸರದ ಶಾಂತಿ ನಿಕೇತನ|೨|

ಪ್ರೇರಣೆ ನೀಡಿದ ಮುಖ್ಯ ಶಿಕ್ಷಕರು
ಸುಂದರ ಬೋಧನೆಗೈದ ಶಿಕ್ಷಕರು
ನೆನೆವೆನು  ಅನ್ನಪೂರ್ಣೆಯರ
ಸೇವೆ ಸಲ್ಲಿಸಿದ ಸಿಬ್ಬಂದಿಯವರ |೩|

 ಆಟಗಳ  ಪಾಠಗಳ ಕಲಿತಿಹೆನು
ಸಹಪಾಟಿಗಳೊಂದಿಗೆ ನಲಿದಿಹೆನು
ಮಾದರಿ  ಪ್ರಜೆಯು ಆಗುವೆನು
ಶಾಲೆಯ ಕೀರ್ತಿಯ ಬೆಳಗುವೆನು|೪|

*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*

08 March 2018

ಅಮ್ಮ (ಕವನ)/ಅಂತರ ರಾಷ್ಟ್ರೀಯ ಮಹಿಳಾ ದಿನಾಚರಣೆಯ ಅಂಗವಾಗಿ ನನ್ನ ಕವನ‌ ನನ್ನ ಅಮ್ಮನಿಗೆ ಅರ್ಪಣೆ

*ಅಮ್ಮ*

ನನ್ನ ಹೊತ್ತು ಹೆತ್ತ ಅಮ್ಮ ನೀನು
ನಿನ್ನಾಸರೆಯಲಿ ಕರುವು ನಾನು
ಸಹಿಸಿದೆ ನೂರು ನೋವುಗಳ
ಸರಿಸಿದೆ ಬದುಕಿನ  ಕಷ್ಟಗಳ|೧|

ಹಗಲಿರುಳು ದುಡಿದೆ ನನಗೆ
ಮರೆತೆಬಿಟ್ಟೆ  ನಿನ್ನ ಏಳಿಗೆ
ಉಡಲಿಲ್ಲ ಉಣಲಿಲ್ಲ ನೀನು
ಉಡಿಸಿ ಉಣಿಸಿ ಸಂಭ್ರಮಿಸಿದೆ|೨|

ದಾರಿ ತಪ್ಪಿದಾಗ ತಿದ್ದಿ ತೀಡಿದೆ
ಭಾರೀ ಪ್ರೀತಿಯ ಧಾರೆಯೆರೆದೆ
ಬೆಳೆಸಿದೆ ನನ್ನಲಿ ಸಂಸ್ಕಾರ
ನಿನ್ನ ‌ಹಾರೈಕೆಯ ರೀತಿ ಸುಂದರ|೩|

ಬೆಲೆ ಕಟ್ಟಲಾಗದು ನಿನ್ನ ತ್ಯಾಗಕೆ
ನೆಲೆ ನೀಡಿದೆ ನನ್ನ  ಬದುಕಿಗೆ
ಚಿಂತೆಯೆಲ್ಲವನೀಗ ನೀಗು
ಎಲ್ಲಾ ಜನ್ಮಕು ತಾಯಿ ನೀನಾಗು|೪|

*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*

07 March 2018

*ಮತದಾನ ಜಾಗೃತಿ ಮೂಡಿಸುವಲ್ಲಿ ಶಾಲೆಗಳ ಚುನಾವಣಾ ಸಾಕ್ಷರತಾ ಕ್ಲಬ್ ಗಳ ಪಾತ್ರ*(ಲೇಖನ)

*ಮತದಾನ ಜಾಗೃತಿ ಮೂಡಿಸುವಲ್ಲಿ  ಶಾಲೆಗಳ ಚುನಾವಣಾ ಸಾಕ್ಷರತಾ ಕ್ಲಬ್ ಗಳ ಪಾತ್ರ*


ಪ್ರಪಂಚದ ಬಹುದೊಡ್ಡ ಪ್ರಜಾಪ್ರಭುತ್ವ ದೇಶಗಳಲ್ಲಿ ಭಾರತವು ಅಗ್ರ ಸ್ಥಾನ ಪಡೆದಿದೆ .ಪ್ರಜಾಪ್ರಭುತ್ವವನ್ನು ಗಟ್ಟಿಗೊಳಿಸಲು  ಮುಕ್ತ ಹಾಗೂ ನ್ಯಾಯಸಮ್ಮತವಾದ ಚುನಾವಣೆಗಳು ಪ್ರಮುಖ ಪಾತ್ರ ವಹಿಸುತ್ತವೆ  ಮತದಾರರ ಪಾತ್ರ ಅಷ್ಟೇ ಮಹತ್ವದ್ದಾಗಿದೆ
ಆದರೆ ಇಂದು ಮತದಾರರು ತಮ್ಮ ಕರ್ತವ್ಯಗಳನ್ನು ಸರಿಯಾಗಿ ನಿಭಾಯಿಸುತ್ತಿದ್ದರೆಯೆ ? ಎಂದರೆ ಉತ್ತರ ಸ್ಪಷ್ಟವಾಗಿ ಇಲ್ಲ ಎಂದೇ ಹೇಳಬಹುದು

ನಾಲ್ಕಾರು ಜನ‌ ಒಂದೆಡೆ ಸೇರಿದರೆ ಮುಗಿಯಿತು "ಈ ಸರ್ಕಾರ ಸರಿಯಿಲ್ಲ ಆ ಸರ್ಕಾರ ಸರಿಯಿಲ್ಲ ಈ ಮುಖ್ಯಮಂತ್ರಿ ಸರಿ ಇಲ್ಲ ಆ ಮಂತ್ರಿ ಉಪಯೊಗ ಇಲ್ಲ ಈ ಎಂ ಎಲ್ ಎ ಬರೀ ಆಶ್ವಾಸನೆ ಕೊಡೋದೆ ಆಯ್ತು " ಈಗೆ ಪುಂಕಾನುಪುಂಕವಾಗಿ ಮಾತನಾಡಿ ವೀರಾವೇಶ ತೋರುವಲ್ಲಿ ಎಲ್ಲರೂ ನಾ ಮುಂದು ತಾ ಮುಂದು ಎಂದು‌  ಬೇರೆಯವರ ತೆಗಳಲು ತಮ್ಮ ಜವಾಬ್ದಾರಿಯಿಂದ ನುಣುಚಿಕೊಳ್ಳುವ ಮನೋಭಾವ ತೋರುವರ ಸಂಖ್ಯೆ ಹೆಚ್ಚಾಗಿದೆ.

ಪ್ರಜಾತಂತ್ರ ಗಣರಾಜ್ಯ ದಲ್ಲಿ  ಪ್ರಜೆಗಳ ಜವಾಬ್ದಾರಿ ಅಗಾಧ. ಅದು ಚುನಾವಣಾ ಕಾರ್ಯದಿಂದ ಹಿಡಿದು ನೀತಿ ನಿರೂಪಣೆಯ ವರೆಗೂ ವಿಸ್ತರಿಸಿದೆ .

ಚುನಾವಣಾ ಸಂದರ್ಭದಲ್ಲಿ ದೇಶದಲ್ಲಿ ಶೇಕಡಾವಾರು ನೂರು ಮತದಾನ ಸ್ವಾತಂತ್ರ್ಯ ಬಂದಾಗಿನಿಂದ ಆಗಿಲ್ಲ .ಶೇಕಡಾ ಎಪ್ಪತ್ತು ಮತದಾನವಾದರೆ ಅದೇ ದಾಖಲೆ  ಉಳಿದ ಮತದಾರರಿಗೆ ಜವಾಬ್ದಾರಿ ಇಲ್ಲವೆ ?ಇಂತವರು ನಾಯಕರ ರಾಜಕಾರಣಿಗಳ ಸರ್ಕಾರಗಳನ್ನು ಯಾವ ನೈತಿಕತೆಯಿಂದ ಟೀಕಿಸುತ್ತಾರೆ.?

ಇನ್ನೂ ಮತದಾನ ಮಾಡುವ ಮಹಾಪ್ರಭುಗಳ ಕಥೆ ಬೇರೆಯೇ ಇದೆ ಮತದಾನಕ್ಕೆ ಮುನ್ನ ಹಣ ಹೆಂಡ ಸೀರೆ ಮುಂತಾದ  ಆಮಿಷಗಳಿಗೆ ಬಲಿಯಾಗಿ ತಮ್ಮ ಮತ ಮಾರಿಕೊಂಡು ಮೊದಲ ಬಾರಿಗೆ ಭ್ರಷ್ಟಾಚಾರ ಬೆಳೆಯಲು ಕಾರಣರಾಗಿ ಮುಂದೆ ಇದೇ ಮತದಾರರು ತಮ್ಮ ನೇತಾರರ ತೆಗಳುವುದೆಷ್ಟು ಸರಿ?

*ಹಾಗಾದರೆ ನಮ್ಮ ಜವಾಬ್ದಾರಿಯನ್ನು ಪರಿಣಾಮಕಾರಿ ಯಾಗಿ ನಿಭಾಯಿಸುವುದು ಹೇಗೆ*

ಈ ನಿಟ್ಟಿನಲ್ಲಿ ಹುಟ್ಟಿಕೊಂಡ ಯೋಜನೆ ಇಂದಿನ ಮಕ್ಕಳೇ ಮುಂದಿನ ಮತದಾರರು ಆದ್ದರಿಂದ ಶಾಲಾ ಹಂತಗಳಲ್ಲಿ  *ಚುನಾವಣಾ  ಸಾಕ್ಷರತೆ ಕ್ಲಬ್* (Election Literacy Club) ಗಳ ಸ್ಥಾಪನೆ ಮಾಡಲಾಗಿದೆ

ಚುನಾವಣಾ ಸಾಕ್ಷರತಾ ಕ್ಲಬ್‌ ಗಳ ವಿಧಗಳು

೧  ಒಂಭತ್ತನೆ ತರಗತಿಯಿಂದ ಹನ್ನೆರಡನೇ ತರಗತಿ ವರೆಗೆ ಅಭ್ಯಾಸ ಮಾಡುವ ಭಾವಿ ಮತದಾರರ ಒಳಗೊಂಡ ಚುನಾವಣಾ ಸಾಕ್ಷರತಾ  ಕ್ಲಬ್ ಗಳು

೨  ಹಾಲಿ ಮತದಾರರ ಒಳಗೊಂಡ ಪದವಿ ಕಾಲೇಜು ಗಳಲ್ಲಿ ಚುನಾವಣಾ ಸಾಕ್ಷರತಾ ಕ್ಲಬ್

*ಶಾಲೆಗಳಲ್ಲಿ ಚುನಾವಣಾ ಕ್ಲಬ್‌ಗಳ ರಚನೆ*

೧ ಶಾಲೆಯ ಒಂಭತ್ತನೇ ತರಗತಿಯ ಮೇಲ್ಪಟ್ಟ ಎಲ್ಲಾ ವಿದ್ಯಾರ್ಥಿಗಳು ಚುನಾವಣಾ ಸಾಕ್ಷರತಾ ಕ್ಲಬ್ ನ ಸದಸ್ಯರು.

೨ ಪ್ರತಿಯೊಂದು ಶಾಲೆಯಲ್ಲಿ ಸಮಾಜ ವಿಜ್ಞಾನ ಶಿಕ್ಷಕರನ್ನು ಮುಖ್ಯ ಶಿಕ್ಷಕರು ನೋಡಲ್ ಶಿಕ್ಷಕರು ಎಂದು ನೇಮಕ ಮಾಡುವರು

೩ ನೋಡಲ್ ಶಿಕ್ಷಕರು ಇತರೆ ಶಿಕ್ಷಕರ ಸಹಾಯದಿಂದ ಚುನಾವಣಾ ಪ್ರಕ್ರಿಯೆಯ ಮೂಲಕ ಪ್ರತಿ ತರಗತಿಯಲ್ಲಿ ಹೆಣ್ಣು ಗಂಡು ಮಕ್ಕಳನ್ನು ಒಳಗೊಂಡಂತೆ ಪ್ರತಿನಿಧಿಗಳ ಆಯ್ಕೆ ಮಾಡುತ್ತಾರೆ.

೪ ಆಯ್ಕೆ ಮಾಡಿದ ಪ್ರತಿನಿಧಿಗಳಲ್ಲಿ ಒಬ್ಬರು ಅದ್ಯಕ್ಷ ಮತ್ತು ಒಬ್ಬರು ಉಪಾಧ್ಯಕ್ಷ ರಾಗಿ ಆಯ್ಕೆ ಆಗುತ್ತಾರೆ

೫ ಇವರು ಶಾಲೆಯಲ್ಲಿ ಶಿಕ್ಷಕರ ಮಾರ್ಗದರ್ಶನದಲ್ಲಿ ಕ್ಲಬ್‌ ನ ಚಟುವಟಿಕೆಗಳನ್ನು ನಡೆಸುವರು

೬ ಜಿಲ್ಲಾ ಹಂತದಲ್ಲಿ ಸಮಾಜ ವಿಜ್ಞಾನ ವಿಷಯ ಪರಿವೀಕ್ಷಕರು ಈ ಶಾಲಾ ಕ್ಲಬ್ ಗಳ ಮೇಲುಸ್ತುವಾರಿ ಮತ್ತು ಅನುಪಾಲನೆ ಮಾಡುವರು.


*ಚುನಾವಣಾ ಸಾಕ್ಷರತಾ ಕ್ಲಬ್(E.L.C) ಗುರಿ ಮತ್ತು ಉದ್ದೇಶಗಳು*

೧. ಚುನಾವಣಾ ಸಾಕ್ಷರತೆಯನ್ನು ಮೂಡಿಸುವುದು.
೨ ಭಾವಿ ಮತದಾರರು ಮತದಾನ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಲು ಪ್ರೇರಣೆ ನೀಡುವುದು.
೩ ಪ್ರಜಾಪ್ರಭುತ್ವ ಪರಿಕಲ್ಪನೆಯನ್ನು ನೀಡುವ ಪಠ್ಯೇತರ ಚಟುವಟಿಕೆಗಳನ್ನು ಹಮ್ಮಿಕೊಳ್ಳುವುದು.
೪ ಭಾವಿ  ಮತದಾರರಿಗೆ ಮತದಾನ ಪ್ರಕ್ರಿಯೆಯ ಅರಿವು ಮೂಡಿಸುವುದು.
೫ ವಿದ್ಯಾರ್ಥಿಗಳಿಗೆ ಮತದಾನದ ಮಹತ್ವ ತಿಳಿಸುವುದು.
೬ ವಿದ್ಯುನ್ಮಾನ ಮತಯಂತ್ರ (E.V..M) ಮತ್ತು (V.V.P.AT ) ಮತದಾರರು ಪರಿಶೀಲಿಸಲು ಪೇಪರ್ ಆಡಿಟ್ ಟ್ರಯಲ್ ಬಗ್ಗೆ ಶಾಲೆಯಲ್ಲಿ ಪ್ರಾತ್ಯಕ್ಷಿಕೆಯನ್ನು ಮಾಡಿ ತೋರಿಸಲು ಕ್ರಮ ಕೈಗೊಳ್ಳುವುದು.
೭ ಯಾವುದೇ ಕಾರಣಕ್ಕೆ ಮತದಾನ ವಯಸ್ಸು ತಲುಪಿದ ಮೇಲೆ ಮತಚಲಾಯಿಸುವ ಹಕ್ಕನ್ನು ಕಳೆದುಕೊಳ್ಳಬಾರದು ಎಂದು ತಿಳಿಹೇಳುವುದು.


ಶಾಲೆಯಲ್ಲಿ ಚುನಾವಣಾ ಸಾಕ್ಷರತಾ ಕ್ಲಬ್ ಮೂಲಕ ಕೈಗೊಳ್ಳುತ್ತಿರುವ ಚಟುವಟಿಕೆಗಳು

೧ ಚುನಾವಣೆ ಪ್ರಕ್ರಿಯೆಯ ಕುರಿತು ರಸಪ್ರಶ್ನೆ ಹಮ್ಮಿಕೊಳ್ಳಲಾಗಿದೆ
೨ ಪ್ರಬಂದ ಸ್ಪರ್ಧೆ ಏರ್ಪಡಿಸಲಾಗುತ್ತದೆ
೩ ಭಿತ್ತಿ ಪತ್ರ ರಚನೆ ಸ್ಪರ್ಧೆ ಏರ್ಪಡಿಸಲಾಗುತ್ತದೆ
೪ಚುನಾವಣೆ ಪ್ರಕ್ರಿಯೆಯ ಬಗ್ಗೆ ಚರ್ಚಾ ಸ್ಪರ್ಧೆ ಏರ್ಪಡಿಸಲಾಗುತ್ತದೆ.
೫ ಶಾಲಾ ಸಂಸತ್ ಚುನಾವಣೆ ನಡೆಯುತ್ತದೆ
೬ ಶಾಲಾ ಹಂತದ ಸರ್ಕಾರ ಮತ್ತು ಮಂತ್ರಿ ಗಳ ಆಯ್ಕೆ ಮಾಡಲಾಗುತ್ತದೆ.


*ಉಪಸಂಹಾರ*

ಮುಂಬರುವ ಎಲ್ಲಾ ಚುನಾವಣೆಯಲ್ಲಿ ಎಲ್ಲರೂ ಮತ ಚಲಾಯಿಸುವ ಪ್ರತಿಜ್ಞೆ ಮಾಡೋಣ.ನಮ್ಮ ಮುಂದಿನ ಮತದಾರರು
 ಆಮಿಷಕ್ಕೆ  ಬಲಿಯಾಗದೇ ಮತ ಚಲಾಯಿಸಲು ಪ್ರೇರಣೆ ನೀಡೋಣ
 ಶಾಸನ ಮಾಡುವಾಗ ನಮ್ಮ ಅಭಿಪ್ರಾಯಗಳನ್ನು ಮುಕ್ತವಾಗಿ ಹಂಚಿಕೊಂಡು  ನಮ್ಮ ನೀತಿ ನಿಯಮಗಳನ್ನು ನಾವೆ ರೂಪಿಸಿಕೊಳ್ಳಲು ಪಣ ತೊಡಲು ಮಕ್ಕಳ ಸಿದ್ದಗೊಳಿಸೋಣ . ಸರಿಯಾಗಿ ಕಾರ್ಯ ನಿರ್ವಿಸದ ನಮ್ಮ ಪ್ರತಿನಿಧಿ ಗಳ ಹಿಂದಕ್ಕೆ ಕರೆಯುವ ಚಳುವಳಿ ರೂಪಿಸೋಣ
  ಕಾರ್ಯಾಂಗದ ಪ್ರಾಮಾಣಿಕ ಅಧಿಕಾರಿಗಳಿಗೆ ಬೆಂಬಲ ನೀಡಿ ಆಡಳಿತವನ್ನು ಭ್ರಷ್ಟಾಚಾರ ಮುಕ್ತವಾಗಿ ಮಾಡಲು ಪ್ರಯತ್ನ ಮಾಡಲು ಮಕ್ಕಳಿಗೆ ಈ ಕ್ಲಬ್ ಗಳ ಮೂಲಕ ತಿಳುವಳಿಕೆ ನೀಡಬಹುದು.
ಈ ಮೇಲಿನ‌ ಸಂಕಲ್ಪ ದೊಂದಿಗೆ ಎಲ್ಲಾ ಶಾಲಾ ಚುನಾವಣಾ ಕ್ಲಬ್ ಗಳು ಕಾರ್ಯ ಪ್ರವೃತ್ತವಾದರೆ  ದೇಶದಲ್ಲಿ ಶೇಕಡಾ ನೂರು ಮತದಾನ ನಡೆದು ಉತ್ತಮ ಪ್ರತಿನಿಧಿಗಳ ಆಯ್ಕೆ ಮಾಡಿ  ಆಗ ಪರಿಣಾಮಕಾರಿ ಗಣತಂತ್ರದ ಮೂಲಕ ನಮ್ಮ ದೇಶ ಪ್ರಪಂಚದಲ್ಲಿ ಮಾದರಿ ಆಗುವುದರಲ್ಲಿ  ಸಂದೇಹವಿಲ್ಲ .

*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*






06 March 2018

ಕೈಯಿಂದ ಊಟ ಮಾಡೋಣ ಆರೋಗ್ಯ ಹೊಂದೋಣ (ಸಂಗ್ರಹ ಲೇಖನ)

ಬೋಜನಂ ಅಮೃತಮಸ್ತ್
________________

ಕೈಯಲ್ಲೇ ಊಟ ಮಾಡುವುದರಿಂದ ಆಗುವ ವೈಜ್ಞಾನಿಕ ಲಾಭಗಳು.

ಡೈನಿಂಗ್ ಟೇಬಲ್ ಮೇಲೆ ಸ್ಫೂನ್ಸು, ಫೋರ್ಕ್ಸ್ ಬಂದು ಕೈಯಲ್ಲಿ ಭೋಜನ ಸವಿಯುವವರನ್ನು ಅನಾಗರೀಕರ ತರಹ ನೋಡುವ ಕಾಲ ಇದು. ತಿಂಡಿ ಏನೇ ಇದ್ದರೂ ಫೋರ್ಕ್ ಕಡ್ಡಾಯ ಎಂಬಂತಾಗಿದೆ. ಹೋಟೆಲ್‌ನಲ್ಲಿ ಯಾರಾದರೂ ಕೈಯಲ್ಲಿ ಊಟ ಮಾಡುತ್ತಿದ್ದರೆ ಅವರನ್ನು ವಿಚಿತ್ರವಾಗಿ ನೋಡುವ ಮನೋಭಾವ ಇದೆ. ಇನ್ನು ಮನೆಯಲ್ಲೂ ಅಷ್ಟೇ ಮಕ್ಕಳಿಗೆ ಸ್ಫೂನ್ ಅಭ್ಯಾಸ ಮಾಡುತ್ತಿದ್ದಾರೆ ತಂದೆತಾಯಿ. ಅದಕ್ಕೆ ಅವರು ಕೊಡುತ್ತಿರುವ ಮುಖ್ಯ ಕಾರಣ…ಕೈಗಳು ಸ್ವಚ್ಛವಾಗಿರಲ್ಲ ಅನ್ನೋದು. ಆದರೆ ಒಮ್ಮೆ ಕೈಯಲ್ಲಿ ಊಟ ಮಾಡುವುದರಿಂದ ಆಗುವ ವೈಜ್ಞಾನಿಕ ಲಾಭಗಳನ್ನು ನೋಡೋಣ. ಇದನ್ನು ಓದಿದ ಮೇಲೆ ನೀವು ಎಲ್ಲೇ ಇರಿ…? ನೀವು ಮಟ್ಟಸವಾಗಿ ಕೈಯನ್ನು ಉಪಯೋಗಿಸಿ ಭೋಜನ ಮಾಡುತ್ತೀರಿ ಎಂದು ಆಶಿಸುತ್ತೇವೆ.

ಕೈಯಲ್ಲಿ ಆಹಾರ ತಿನ್ನಿವುದರಿಂದ ಆಗುವ ಪ್ರಯೋಜನಗಳು: ( As Per Science).

1. ಕೈ ಸ್ಪರ್ಶದಿಂದ ದೇಹದಲ್ಲಿ ಶಕ್ತಿ ಸಂಚಯವಾಗುತ್ತದೆ.

2. ಕೈಯಲ್ಲಿ ಆಹಾರ ತಿನ್ನುವುದರಿಂದ ಕೆಲವು ಮಿಲಿಯನ್ ನರಗಳು ನಮ್ಮ ಮಿದುಳಿಗೆ ಸಂಕೇತ ಕಳುಹಿಸುತ್ತವಂತೆ.

3. ಆಹಾರವನ್ನು ಕೈಯಲ್ಲಿ ಸ್ಪರ್ಶಿಸುತ್ತಿದ್ದಂತೆ, ಆಹಾರ ತೆಗೆದುಕೊಳ್ಳುವ ವಿಷಯ ಮಿದುಳು ಉದರಕ್ಕೆ ಸಂಕೇತ ರವಾನಿಸುತ್ತದೆ. ಆಗ ಹೊಟ್ಟೆಯಲ್ಲಿ ಜೀರ್ಣ ರಸಗಳು, ಎಂಜೈಮ್‌ಗಳು ಬಿಡುಗಡೆಯಾಗಿ ಜೀರ್ಣಕ್ರಿಯೆ ಸುಗಮವಾಗಿ ಆಗುತ್ತದೆ.

4. ಕೈಯಲ್ಲಿ ಆಹಾರ ತೆಗೆದುಕೊಳ್ಳುವುದರಿಂದ ಆರೋಗ್ಯವಾಗಿರುವುದಷ್ಟೇ ಅಲ್ಲದೆ, ಯಾವುದೇ ಆಲೋಚನೆಗಳು ಬರದೆ ಒಂದೇ ಆಲೋಚನೆಯಲ್ಲಿ ಇರುತ್ತೇವೆ.

5. ನಮ್ಮ ಆಹಾರದಲ್ಲಿ ಎಣ್ಣೆಯನ್ನು ಹೆಚ್ಚಾಗಿ ಬಳಸುತ್ತೇವೆ. ಹೀಗೆ ತಯಾರಿಸಿದ ಆಹಾರವನ್ನು ಸ್ಫೂನ್ಸ್, ಫೋರ್ಕ್ಸ್‌ನಿಂದ ತಿನ್ನುವುದರಿಂದ ಪ್ರತಿಕ್ರಿಯೆ ಏರ್ಪಟ್ಟು ರುಚಿ ಕೆಡುತ್ತದೆ.

6. ಕೈ ಬೆರಳಲ್ಲಿ ಆಹಾರವನ್ನು ಕಲೆಸಿಕೊಂಡು, ಒಂದೊಂದೇ ತುತ್ತು ತಿನ್ನುವುದರಿಂದ ರಕ್ತಸಂಚಾರ ಚೆನ್ನಾಗಿ ಆಗುತ್ತದೆ.

7. ಕೈಬೆರಳಲ್ಲಿ ಆಹಾರ ತೆಗೆದುಕೊಳ್ಳುವುದರಿಂದ, ಬೆರಳು ತುಟಿಗೆ ತಾಗುತ್ತಿದ್ದಂತೆ ಬಾಯಲ್ಲಿ ಲಾಲಾರಸ ಉತ್ಪನ್ನವಾಗುತ್ತದೆ.

8. ಇನ್ನು ಕೈ ಬೆರಳಲ್ಲಿ ಆಹಾರ ತೆಗೆದುಕೊಳ್ಳುವುದರಿಂದ ಅನಾರೋಗ್ಯ ಪಾಲಾಗದೆ, ಆರೋಗ್ಯವಾಗಿರುತ್ತೇವೆ. ಜೀರ್ಣ ಪ್ರಕ್ರಿಯೆ ಚೆನ್ನಾಗಿ ನಡೆಯುತ್ತದೆ. ಇದು ಒಂದು ರೀತಿ ವ್ಯಾಯಾಮದಂತಿರುತ್ತದೆ.

ಪುರಾಣಗಳ ಪ್ರಕಾರ…

* ಕೈಯಲ್ಲಿರುವ ಒಂದೊಂದು ಬೆರಳು ಒಂದೊಂದು ತತ್ವವನ್ನು ಹೊಂದಿರುತ್ತವೆ.

* ಹೆಬ್ಬೆರಳು: ಅಗ್ನಿತತ್ವ

* ತೋರು ಬೆರಳು: ವಾಯುತತ್ವ

* ಮಧ್ಯ ಬೆರಳು: ಆಕಾಶ

* ಉಂಗುರ ಬೆರಳು: ಭೂಮಿ

* ಕಿರುಬೆರಳು: ಜಲತತ್ವ

ಈ ಐದು ಬೆರಳುಗಳ ಸ್ಪರ್ಶ ಆಹಾರಕ್ಕೆ ತಾಕಿದಾಗ ಜೀವಶಕ್ತಿ ಉತ್ತೇಜನಗೊಳ್ಳುತ್ತದೆ.

ಫ್ಯಾಷನ್‌ಗೆ ಕೊಟ್ಟಷ್ಟು ಬೆಲೆ...

ಸಂಸ್ಕೃತಿಗೆ ಕೊಟ್ಟರೆ...

ಮಾನವ ಜೀವನ ಆರೋಗ್ಯಕರ.....

ಯೋಚಿಸಿ......

ಅಲಂಕಾರ ಬೇಕೆ ?
ಅಥವಾ
ಆರೋಗ್ಯವೇ ????

ಕನಸು (ಹನಿಗವನ) ಕವಿಬಳಗ ವಾಟ್ಸಪ್ ಗುಂಪಿನ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ ಪಡೆದ ಹನಿ


ಹನಿಗವನ
*ಕನಸು*
ಕಂಡೆನು ಕನಸೊಂದನು
ಪಡೆಯಲು ಬೆಳಕನು
ಈಗ ಎಲ್ಲಡೆ  ಬೆಳಕಿಲ್ಲ
ಕತ್ತಲೆಯು ಎಲ್ಲೆಲ್ಲೂ
ಪಾಲಿಸಿದೆ ಅಹಿಂಸೆ ಸತ್ಯ
ಇಂದು ಹಿಂಸೆ,ಸುಳ್ಳು ನಿತ್ಯ

*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*

05 March 2018

ಗಜ಼ಲ್ ೨೮(ಬಂದೆಯಾ ) ಕನ್ನಡ ಕಾವ್ಯಲೋಕ ವಾಟ್ಸಪ್ ತಂಡದ ಸ್ಪರ್ಧೆ ಯಲ್ಲಿ ಉತ್ತಮ ಎಂದು ಪುರಸ್ಕಾರ ಪಡೆದ ಗಜ಼ಲ್

ಗಜ಼ಲ್ ೨೮

ಎಲ್ಲಾ ಮುಗಿದು ಹೋದ ಮೇಲೆ ನೆನಪು ಮಾಡಲು ಬಂದೆಯಾ
ಸೊಲ್ಲಡಗಿದ ನನ್ನ ಹೃದಯವ ಮಾತನಾಡಿಸಲು ಬಂದೆಯಾ

ನಿನ್ನ ಸಂಗದ  ನೆನಪುಗಳ ಪ್ರವಾಹಕ್ಕೆ ಕಟ್ಟೆ ಕಟ್ಟಿ ನಿಲ್ಲಿಸಿದ್ದೇನೆ
ನೀನಿಲ್ಲದೇ ನನಗೆ  ಬಾಳು ಸಾದ್ಯವೇ ಎಂದು ಪ್ರಶ್ನಿಸಲು ಬಂದೆಯಾ

ಒಂದೊಮ್ಮೆ ನೀನಿಲ್ಲದ ನನ್ನ ಬಾಳು ನಶ್ವರ ಈ ಜಗ ಶೂನ್ಯ
ಈಶ್ವರನ ದಯೆಯಿಂದ ನೆಮ್ಮದಿ ಪಡೆದ ಆತ್ಮ ನೋಡಲು ಬಂದೆಯಾ

ನನ್ನ ಛಲ ಉತ್ತಮ ಸಂಸ್ಕಾರವುಳ್ಳ  ಮಾನವನಾಗುವದು
ನಿನ್ನ ಮರೆತು ನಾನೇಗೆ ಬದುಕಿರುವೆನೆಂದು ಪರೀಕ್ಷಿಸಲು‌ ಬಂದೆಯಾ

ಇಂದ್ರಿಯಾಸಕ್ತಿಗಳ ದಾಸನಾಗಿ ನಿನ್ನ ನೆನಪಲಿ ಹುಚ್ಚನಾಗಿದ್ದೆ
ಇಂದ್ರನಿಗಿಂತ ಆತ್ಮಾನಂದ ಸುಖ ಪಡೆವ ಸೀಜೀವಿಯ ವೀಕ್ಷಿಸಲು ಬಂದೆಯಾ

*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*





04 March 2018

ಹರಿ ಓಂ ಸ್ವಸ್ತಿ (ಹನಿಗವನ)



*ಹರಿ ಓಂ ಸ್ವಸ್ತಿ*

ಶುಭ ಕಾರ್ಯದ ರಂಗೋಲಿ
ಆಗಿದೆ ಬಣ್ಣಗಳ ಹೋಲಿ
ಜೋಡಿಸಿದೆ ಫಲ ತಾಂಬೂಲ
ನೀಡಲಿದೆಮಗೆ   ಶುಭ ಫಲ
ಅಲಂಕಾರ ಆಗಿಲ್ಲ ಜಾಸ್ತಿ
ಹೇಳೋಣ ಹರಿ ಓಂ  ಸ್ವಸ್ತಿ

*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*

ಮೂತಿ (ಹನಿಗವನ)


ಹನಿಗವನ

*ಮೂತಿ*

ವರ್ಷಗಳಿಂದ ಅವಳ ಹಿಂದೆ
ಅಲೆದಾಡಿ ಪ್ರೀತಿಯ ನಾಟಕವಾಡಿ
ಮದುವೆಯಾಗು ಎಂದು ಅವಳೆಂದಾಗ
ಅವನು ಉತ್ತರಿಸಿದ ನಮ್ಮದು
ಬೇರೆ ಜಾತಿ
ಸಿಟ್ಟಿಗೆದ್ದ ಅವಳು ಜಾಡಿಸಿದಳು
ಊದಿಕೊಂಡಿದೆ
ಈಗ ಮೂತಿ

*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*

ಗಜ಼ಲ್ ೨೭ (ತೆರೆದಿರಲಿ ಬಾಗಿಲು) ಕನ್ನಡ ಕಾವ್ಯ ಲೋಕ ವಾಟ್ಸಪ್ ಗುಂಪಿನ ಸ್ಪರ್ಧೆ ಯಲ್ಲಿ ಉತ್ತಮ ಗಜ಼ಲ್ ಎಂದು ‌ಪುರಸ್ಕೃತ ಗಜ಼ಲ್



*ಗಜ಼ಲ್ ೨೭*
ಅಜ್ಞಾನದಿಂದ ಸುಜ್ಞಾನ ಪಡೆಯಲು ತೆರೆದಿರಲಿ ಬಾಗಿಲು
ಅಂಧಕಾರವನಳಿಸಿ ಬೆಳಕು ಪಸರಿಸಲು ತೆರೆದಿರಲಿ ಬಾಗಿಲು 

ಅಸೂಯೆ ದ್ವೇಷ ಸ್ವಜನ ಪಕ್ಷಪಾತ ಕಲುಷಿತ ಮನಗಳು
ಸರ್ವರ ಬೆಳೆಸಲು  ಪ್ರೀತಿಸಲು ತೆರೆದಿರಲಿ ಬಾಗಿಲು

ಕರಕಲು ಕೊಳೆತ ಕಲುಷಿತ ಕರ್ಮಟ ವಾಸನೆ ಎಲ್ಲೆಡೆ
ಸುಗಂಧ ಹೃದಯವ ಹೊಂದಲು ತೆರೆದಿರಲಿ ಬಾಗಿಲು

ದೇಶ ಭಾಷೆ ಬಣ್ಣ  ಜಾತಿ ಮತಗಳ ಹೆಸರಲಿ ಕಿತ್ತಾಟ
ಸಹಮತ ಸಮನ್ವಯ ಸಹಬಾಳ್ವೆ ನಡೆಸಲು ತೆರೆದಿರಲಿ ಬಾಗಿಲು

ನಾನು ನನ್ನದೆಂಬ ಸ್ವಾರ್ಥತೆ ತೊರೆಯಲು ಸೀಜೀವಿಯ ಆಶಯ
ಸಂಕುಚಿತತೆ ತೊರೆದು ವೈಶಾಲ್ಯತೆ  ಬೆಳೆಸಲು ತೆರೆದಿರಲಿ ಬಾಗಿಲು

*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*

03 March 2018

ಪ್ರೇಮ ಬರಹ (ಹನಿಗವನ)

*ಹನಿಗವನ*

*ಪ್ರೇಮ ಬರಹ*

ನಾನೊಂದು  ತೀರ
ನೀನೊಂದು ತೀರ
ಮಗಿಯದ ವಿರಹ
ಹೋಗದಿರು ದೂರ
ಸನಿಹಕೀಗ  ಬಾರ
ಬರೆವ ಪ್ರೇಮ ಬರಹ

*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*

*ಬದುಕಲು ಬಿಡಿ* (ವಿಶ್ವ ವನ್ಯಜೀವಿ ದಿನದ ಪ್ರಯುಕ್ತ ನನ್ನ ಕವನ)

*ಬದುಕಲು ಬಿಡಿ*
(ವಿಶ್ವ ವನ್ಯಜೀವಿ ದಿನದ ಪ್ರಯುಕ್ತ ನನ್ನ ಕವನ)


ನಮಗೂ ಹಕ್ಕಿದೆ ಬಾಳಲು
ಭುವಿ ನಮಗೂ ಸೇರಿದ್ದು
ನಮ್ಮನೆಲ್ಲ  ಕೊಲ್ಲಲು
ಯಾರು ನಿಮಗೆ ಹೇಳಿದ್ದು

ನಾವಿರುವೆವು ಕಾಡಲಿ
ಅದಕೆ ಕೊಡಲಿ ಬೀಸುವಿರಿ
ನಾವು ನಾಡಿಗೆ ಬಂದರೆ
ಬೊಬ್ಬೆ ಹೊಡೆಯುವಿರಿ

ಚರ್ಮ ಹಲ್ಲು ದಂತಕೆ
ನಮ್ಮೆಲ್ಲರ ಕೊಲ್ಲುವಿರಿ
ನಮ್ಮ ಸಂತತಿ ಉಳಿಸಲು
ಯೋಜನೆ  ಮಾಡುವಿರಿ

ಅತಿಯಾಸೆ ಏಕೆ ನಿಮಗೆ
ನಮ್ಮ ಪಾಡಿಗೆ ನಮ್ಮ ಬಿಡಿ
ನಿಮ್ಮ ಆಸೆಗೆ ಮಿತಿ ಇರಲಿ
ನಮಗೂ ಬದುಕಲು ಬಿಡಿ

*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*




ಪಯಣಿಸು (ಭಾವಗೀತೆ)



*ಪಯಣಿಸು*

ಈಸಬೇಕು ಇದ್ದು ಜೈಸಬೇಕು
ಜೀವನದ ತೀರ ಸೇರಬೇಕು|ಪ|

ಕಡಲಲೆಗಳು ನಿರಂತರ
ಎದುರಿಸಿ ಮುನ್ನುಗ್ಗಬೇಕು
ಬಿರುಗಾಳಿ ಆಗೊಮ್ಮೆ ಈಗೊಮ್ಮೆ
ಸಾವಕಾಶವಾಗಿ ಸಾಗಬೇಕು|೧|

ತಿಮಿಂಗಿಲ ಮೊಸಳೆಗಳು ನೂರಾರು
ಎಚ್ಚರವಿರಲಿ ಪಯಣದಲಿ
ನಡುವೆ ಮಂಗಳ ತಂಗಾಳಿ
ಆಸ್ವಾದಿಸು ಆನಂದದಲಿ|೨|

ಮೈಮರೆಯದಿರು ಎಂದಿಗೂ
ಅಡೆತಡೆಗಳಿವೆ ಹೆಜ್ಜೆ ಹೆಜ್ಜೆಗು
ಎಲ್ಲರೊಳಗೊಂದಾಗಿ ಪಯಣಿಸು
ಎಲ್ಲರನು ಗೌರವಿಸುತ ಸಾಗು|೩|


*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*



02 March 2018

ಬದುಕಿನ ದಾರಿ(ಕವನ)

*ಬದುಕಿನ ದಾರಿ*

ಬಣ್ಣ ಹಚ್ಚಿ ನಟನೆ ಮಾಡಿ
ನಿಮ್ಮ ನಾನು ನಗಿಸುವೆ
ಮುಖವಾಡ ಹಾಕಿ ಬದುಕುವವರ
ಬಣ್ಣ ಬಯಲು ಮಾಡುವೆ |೧|

ಸರಿ ಗಮ ರಾಗ ತಿಳಿದು
ಹಾಡನ್ನು ಹಾಡುವೆ
ಸರಿಯಾದ ಮಾರ್ಗ ತಿಳಿಸಿ
ಬಾಳು ಸಂಗೀತಮಯ ಎನ್ನುವೆ |೨|

ಬಣ್ಣ ಕುಂಚ ಹಿಡಿಯುವೆ
ಜಗದ ಚಿತ್ರ ಬಿಡಿಸುವೆ
ಮೊಗದಿ ಸಿಹಿ ಒಳಗೆ ಕಹಿ
ಜನರ ವಿಚಿತ್ರ ಗುಣವ  ತೋರುವೆ |೩|

ನವರಸಗಳ ಅರಿಯುವೆ
ನಟನೆಯನ್ನು ಮಾಡುವೆ
ಕೆಟ್ಟ ಜನರ ಮುಖವಾಡವ
ದಿಟ್ಟ ತನದಿ ತೋರುವೆ|೪|

ಸೀಮೆ ಸುಣ್ಣ ಪುಸ್ತಕ ಹಿಡಿವೆ
ಒಲವಿನಲಿ ಪಾಠ ಮಾಡುವೆ
ದಾರಿ ತಪ್ಪಿದ ಮಕ್ಕಳ ತಿದ್ದಿ
ಬದುಕಿನ ದಾರಿ ತೋರುವೆ|೫|

*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*





ಫಲಿತಾಂಶ (ಕಿರುಗಥೆ)

"ಕಿರುಗಥೆ*

*ಫಲಿತಾಂಶ*

ತನ್ನ ಅಪ್ಪ ಹಾವು ಕಡಿದು ಕಾಲವಾದ ಮೇಲೆ ಬಾಲಜಿ ಮತ್ತು ಅಣ್ಣ ಇಂದ್ರೇಶ್ ಅಮ್ಮನೊಂದಿಗೆ ಮಾವನ ಮನೆಯಲ್ಲಿ ಇದ್ದರು .
ಅಣ್ಣಾ ಇಂದ್ರೇಶ್ ಎಸ್ ಎಸ್ ಎಲ್ ಸಿ ಯಲ್ಲಿ ಫಸ್ಟ್ ಕ್ಲಾಸ್ ಪಾಸಾದರೂ  ಪಿ.ಯು .ಸಿ ಯಲ್ಲಿ ಪೇಲಾಗಿ ಮಾವನ ಮನೆಯಲ್ಲಿ ಕೃಷಿ ಕೆಲಸ ಮಾಡುವುದು ನೋಡಿ ನಾಳೆ ನನ್ನ ಪಿ.ಯು ಸಿ   ಫಲಿತಾಂಶ ನಾನು ಫೇಲಾದರೆ? ಮುಂತಾದ ಯೋಚನೆಯಲ್ಲಿ ಬಾಲಜಿಗೆ ರಾತ್ರಿ ನಿದ್ದೆಯೇ  ಬರಲಿಲ್ಲ.
"ಯಾರು ಆ ಕೃಷ್ಣಪ್ಪನ ಅಳಿಯ ಇಡೀ ಕಾಲೇಜಿಗೆ ಪಸ್ಟ್ ಬಂದನಾ ?" ಎಂದು ಊರ ಜನರು ಅರಳಿ ಕಟ್ಟೆ ಮೇಲೆ ಕುಳಿತು ಮಾತನಾಡುತ್ತಿದ್ದರು ."ಓ ಆ ಹುಡುಗ ಒಂದು ದಿನನೂ ಈ ಕಡೆ ಕಾಣಿಸುತ್ತಿರಲಿಲ್ಲ ಚೆನ್ನಾಗಿ ಮಾರ್ಕ್ಸ್ ತೆಗೆದವ್ನಲ್ಲ" ಎಂದು ರಾಮಣ್ಣ ಹೇಳುವ ಸಮಯಕ್ಕೆ ಬಾಲಾಜಿ ಆ ಕಟ್ಟೆಯ ಮುಂದೆ ಬಂದ. ಅಲ್ಲಿನ ಜನ "ಇವನೆ ಅ ಹುಡುಗ  ಚೆನ್ನಾಗಿ ಓದಿದಿಯಾ ಮಗ ಈಗೆ ಓದು ಮುಂದೆ ನಿನಗೆ ಯಾವುದಾದರೂ ಗವರ್ನಮೆಂಟ್ ಕೆಲ್ಸ ಸಿಗುತ್ತೆ ನನ್ನ ಮಗ ನೂ ಅದಾನೆ ಕಳ್ ನನ್ ಮಗ ನಾಲಕ್ ಸಬ್ಜೆಕ್ಟ ಪೇಲ್ ಆಗವ್ನೆ" ಎಂದರು  .ತಿಮ್ಮಣ್ಣ ಮುಂದುವರಿದು "ಈ ಹುಡುಗುಂಗೆ ಅಪ್ಪ ಇಲ್ಲ ಅವರ ಮಾವ ಕೃಷ್ಣಪ್ಪ ಇಲ್ಲೆ ಓದಿಸತವ್ನೆ ಈ ಹುಡುಗನೂ ಚೆನ್ನಾಗಿ ಓದುತಾನೆ" ಎಂದರು .ಎಲ್ಲೋ ಬಾಲಜಿಗ ಸ್ವೀಟ್? ಎಂದು ಕೇಳುವ ಸಮಯಕ್ಕೆ ಕೃಷ್ಣಪ್ಪ ಕೈಯಲ್ಲಿ ಮೈಸೂರ್ ಪಾಕ್ ಬಾಕ್ಸ್ ಹಿಡಿದು ಅಲ್ಲಿಗೇ ಬಂದರು. ಊರವರಿಗೆ ಸಿಹಿ ಕೊಡಲು ಮುಂದಾದ ಕೃಷ್ಣಪ್ಪ ಗೆ "ಮೊದಲು ನಿನ್ನ ಅಳಿಯನಿಗೆ ಕೊಡು ಸ್ವೀಟ್ ನಾವೇನು ದಬ್ಬಾಕಿದಿವಿ" ಎಂದರು ಬಾಲಾಜಿಗೆ ಅವನ ಮಾವ ಸಿಹಿ‌ತಿನ್ನಿಸಿದಾಗ ಬಾಲಾಜಿಯ ಕಣ್ಣುಗಳಲ್ಲಿ ಗೊತ್ತಿಲ್ಲದೇ ನಾಲ್ಕು ಹನಿಗಳು ಹೊರಬಂದವು .

*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*