31 December 2023

ಸೋಮನಗೌಡರ ಮೋತಿ.


 





ಸೋಮನಗೌಡರ ಮೋತಿ.


ಕೆಲವು ಪ್ರಾಣಿಗಳು ಮಾನವರಿಗಿಂತಲೂ ಸೂಕ ಸಂವೇದನೆ ಹೊಂದಿರುತ್ತವೆ.ನಾಯಿಯಂತಹ ಪ್ರಾಣಿಗಳು ನಿಯತ್ತಿಗೆ ಹೆಸರುವಾಸಿ.ಅನ್ನ ಹಾಕಿದ ಮನೆಗೆ ಕನ್ನ ಹಾಕಲು ಬಂದ ಕಳ್ಳರ ಸಂಚನ್ನು ಬಯಲು ಮಾಡಿ ಮಾಲೀಕನ ಸಂಪತ್ತನ್ನು ರಕ್ಷಣೆ ಮಾಡಿದ ಮೋತಿಯ ಕಥೆ   ನಾವು ಪ್ರಾಥಮಿಕ ಹಂತದಲ್ಲಿ ಓದುವಾಗ ನಮ್ಮ ಪಠ್ಯ ವಾಗಿತ್ತು ಈ ಕಥೆಯನ್ನು ನೀವೂ ಓದಿರುತ್ತೀರಿ. ಮತ್ತೊಮ್ಮೆ ಜ್ಞಾಪಿಸಿಕೊಳ್ಳೋಣ.

ಸೋಮನಗೌಡರು ಊರಿಗೆಲ್ಲ ದೊಡ್ಡ ಶ್ರೀಮಂತರು. ಅವರು ಒಂದು ನಾಯಿಯನ್ನು ಸಾಕಿದ್ದರು. ಅದರ ಹೆಸರು ಮೋತಿ, ಮೋತಿ ಬಲು ನಂಬಿಗೆಯ ಪ್ರಾಣಿ. ಜಾಣತನಕ್ಕೆ ಅದು ಊರಿಗೆಲ್ಲ ಹೆಸರಾಗಿತ್ತು. ಗೌಡರ ಮನೆ ಊರ ಹೊರಗೆ ಇತ್ತು. ಪ್ರತಿ ರಾತ್ರಿಯೆಲ್ಲ ಎಚ್ಚರವಾಗಿದ್ದು ಮನೆ ಕಾಯುತ್ತಿತ್ತು. 


ಒಂದು ದಿನ ಆಪ್ತರ ಮದುವೆಗೆ ಗೌಡರ ಮನೆಯವರೆಲ್ಲ ನೆರೆಯೂರಿಗೆ ಹೋದರು. ಮೋತಿಯನ್ನು ಮನೆ ಕಾಯಲು ಬಿಟ್ಟು ಹೋದರು. ಗೌಡರ ಮನೆಯಲ್ಲಿ ಬಹಳ ಬಂಗಾರವಿತ್ತು, ಕಳ್ಳರು ಸಮಯ ಸಾಧಿಸುತ್ತಿದ್ದರು. ಮನೆಯಲ್ಲಿ ಯಾರೂ ಇಲ್ಲದ ಈ ಸಮಯ ನೋಡಿ ಗೌಡರ ಮನೆಗೆ ಹಿಂಬದಿಯಿಂದ ಕನ್ನ ಹಾಕಿದರು. ಕಳ್ಳರ ಗುಂಪಿನಲ್ಲಿ ಮೂರು ನಾಲ್ಕು ಜನರಿದ್ದರು. ಮೋತಿ ಅವರನ್ನು ನೋಡಿತು. ಆದರೆ ಬೊಗಳಲಿಲ್ಲ. ಎಲ್ಲವನ್ನು ನೋಡುತ್ತ ಮರೆಯಲ್ಲಿ ನಿಂತಿತು.

  

ಗೌಡರ ಬಂಗಾರ ಮತ್ತು ಹಣ ತುಂಬಿದ ಪೆಟ್ಟಿಗೆ ಭಾರವಾಗಿತ್ತು. ಕಳ್ಳರಿಗೆ ಅವಸರದಲ್ಲಿ ದೂರ ಒಯ್ಯಲು ಸಾಧ್ಯವಾಗಲಿಲ್ಲ. ಅವರಿಗೆ ಏನು ಮಾಡಬೇಕೆಂದು ತಿಳಿಯದಾಯಿತು. ಅಷ್ಟರಲ್ಲಿ ಬೆಳಗಾಗುತ್ತ ಬಂತು. ಬಹಳ ಯೋಚನೆ ಮಾಡಿದರು. ಕೊನೆಗೆ ಊರ ಹೊರಗಿನ ಗುಡ್ಡದ ಸಮೀಪ ಅದನ್ನು ಒಯ್ದರು. ಅಲ್ಲಿ ಅದನ್ನು ಹೂಳಿಟ್ಟರು. ಮೋತಿ ಗೊತ್ತಾಗದಂತೆ ಅವರನ್ನು ಹಿಂಬಾಲಿಸಿತು. ಹೂಳಿಟ್ಟ ಸ್ಥಳವನ್ನು ನೋಡಿತು. ಮರುದಿನ ಪೆಟ್ಟಿಗೆಯನ್ನು ಒಡೆದು ಕಳ್ಳರು ಅದನ್ನು ಹಂಚಿಕೊಳ್ಳುವವರಿದ್ದರು.


ಮದುವೆ ಮುಗಿಸಿ ಗೌಡರು ಮನೆಗೆ ಬಂದರು. ಮೋತಿ ಎಂದಿನಂತೆ ಒಡೆಯನನ್ನು ಸ್ವಾಗತಿಸಲಿಲ್ಲ. ಮೋತಿಯ ಜೋಲುಮೋರೆ ನೋಡಿ ಗೌಡರಿಗೆ ಗಾಬರಿಯಾಯಿತು, ಬಾಗಿಲು ತೆಗೆದು ಒಳಗೆ ಬಂದರು. ಹಿಂಬದಿಯ ಗೋಡೆ ಒಡೆದಿತ್ತು. ಪೆಟ್ಟಿಗೆ ಮಾಯವಾಗಿತ್ತು.


ಮೋತಿ ದೀನ ಸ್ವರದಿಂದ ಕೂಗಿತು. ಗೌಡರು ಹೊರಗೆ ಬಂದರು. ಮೋತಿ ಗೌಡರ ಧೋತರವನ್ನು ಹಿಡಿದೆಳೆಯಿತು. ಗೌಡರು ಮೋತಿಯ ಹಿಂದೆ ಹೋದರು. ಮೋತಿ ಪೆಟ್ಟಿಗೆ ಹುಗಿದ ಸ್ಥಳವನ್ನು ಕಾಲಿನಿಂದ ಕೆದರಿತು. ಗೌಡರಿಗೆ ಅನುಮಾನ ಬಂದಿತು. ತಮ್ಮ ಆಳುಗಳನ್ನು 

ಕರೆಯಿಸಿದರು. ಆ ಸ್ಥಳದಲ್ಲಿ ಅಗೆಯಿಸಿದರು. ಅಲ್ಲಿ ಅವರಿಗೆ ತಮ್ಮ ಪೆಟ್ಟಿಗೆಯು ಕಾಣಿಸಿತು. ಆಳುಗಳು ಪೆಟ್ಟಿಗೆಯನ್ನು ಹೊತ್ತುಕೊಂಡು ಗೌಡರ ಮನೆಗೆ ತಂದರು. ಗೌಡರು ಮೋತಿಯ ಜಾಣತನಕ್ಕೆ ಮೆಚ್ಚಿದರು. ಪ್ರೀತಿಯಿಂದ ಮೈಮೇಲೆ ಕೈಯಾಡಿಸಿದರು. ಮೋತಿಗೆ ಸಂತೋಷವಾಯಿತು.


ಇಂದಿನ ಪ್ರಸ್ತುತ ಸಮಾಜದಲ್ಲಿ ಬಹುತೇಕ ಕಡೆಯಲ್ಲಿ ಕಾಣಸಿಗುವ ಅಪ್ರಮಾಣಿಕತೆ, ಸೋಮಾರಿತನ, ಕಾರ್ಯಬದ್ದತೆಯ ಕೊರತೆ ಮುಂತಾದವುಗಳ ನೋಡಿ ಯಾಕೋ ಸೋಮನ ಗೌಡರ ಮೋತಿ ನೆ‌ನಪಾಯಿತು..


ಸಿಹಿಜೀವಿ ವೆಂಕಟೇಶ್ವರ

ತುಮಕೂರು

9900925529

28 December 2023

ವಿಶ್ವ ಮಾನವ ಸಂದೇಶ ಪಾಲಿಸೋಣ..


 


ವಿಶ್ವ ಮಾನವ ಸಂದೇಶ ಪಾಲಿಸೋಣ..


ಧರ್ಮ ಜಾತಿಗಳ ಮಧ್ಯೆ ಕಚ್ಚಾಟ, ಇಸಂಗಳ ಮೇಲಾಟ, ದೇಶ ದೇಶಗಳ ಮಧ್ಯ ತಾಕಲಾಟಗಳ ಪರಿಣಾಮವಾಗಿ ಜಗತ್ತಿನಲ್ಲಿ ಇಂದು ಯಾರೂ ನೆಮ್ಮದಿಯಾಗಿಲ್ಲದ ವಾತಾವರಣದಲ್ಲಿ ವಾಸಿಸುವ ಅನಿವಾರ್ಯತೆಯಿದೆ.ಇದನ್ನು ಹೋಗಲಾಡಿಸಲು ಮದ್ದು ನಮ್ಮ ರಾಷ್ಟ್ರಕವಿ, ರಸ ಋಷಿಯ ಚಿಂತನೆ "ವಿಶ್ವ ಮಾನವ ತತ್ವ ".

ಕುವೆಂಪು ರವರ ವಿಶ್ವ ಮಾನವ ತತ್ವ ಸಾರ್ವಕಾಲಿಕ  ಈ ತತ್ವ ಅಳವಡಿಸಿಕೊಂಡರೆ ಉದಾತ್ತ ಚಿಂತನೆ ನಮ್ಮನ್ನು ಆವರಿಸುತ್ತದೆ.ಈ ನಿಟ್ಟಿನಲ್ಲಿ ಕುವೆಂಪು ಅವರ ಚಿಂತನೆಗಳನ್ನು ಪ್ರಚಾರ ಮಾಡಿ ಅಳವಡಿಸಿಕೊಳ್ಳಲು ಕರ್ನಾಟಕ ಸರ್ಕಾರ ಪ್ರತಿ ವರ್ಷ ಅವರು ಹುಟ್ಟಿದ ದಿನವನ್ನು ವಿಶ್ವ ಮಾನವ ದಿನವಾಗಿ ಆಚರಿಸಲಾಗುತ್ತದೆ. ಆದರೆ ಇದು ಕೇವಲ ಆಚರಣೆಗೆ ಮಾತ್ರ ಸೀಮಿತಾವಾಗಿರುವುದು ದುರದೃಷ್ಟಕರ.


ಕುವೆಂಪು ರವರು ತಮ್ಮ ವಿಶ್ವ ಮಾನವ ಸಂದೇಶ ಸಾರಿದ ಓ ನನ್ನ ಚೇತನ.... ಆಗು ನೀ ಅನಿಕೇತನ ...ಜಗದ ರಾಷ್ಟ್ರಗೀತೆಯಾಗಬೇಕಿದೆ..

ಹುಟ್ಟುವ ಪ್ರತಿ ಮಗುವು ವಿಶ್ವಮಾನವನೇ! ಆ ನಂತರ ಆ ಮಗುವನ್ನು "ಜಾತಿ,ಮತ"ದ ಕಟ್ಟುಪಾಡುಗಳಿಂದ ಬಂಧಿಸಲಾಗುತ್ತದೆ. ಹಾಗಾಗ ಬಾರದು. ಯಾವುದೇ ವ್ಯಕ್ತಿ ಜಾತಿಯಿಂದ ಮುಖ್ಯನಾಗಬಾರದು, ನೈತಿಕ ವ್ಯಕ್ತಿತ್ವದಿಂದ ಮುಖ್ಯನಾಗಬೇಕು ಎಂಬ ಪರಿಕಲ್ಪನೆ ಕುವೆಂಪು ಅವರದಾಗಿತ್ತು. ಹಾಗಾಗಿ ಕುವೆಂಪು ಅವರ ಜಾತ್ಯಾತೀತ ಮನೋಭಾವದಿಂದ ಮೂಡಿ ಬಂದ ಆಶಯವೇ ವಿಶ್ವಮಾನವ ಸಂದೇಶವಾಗಿದೆ. ಬುದ್ಧ, ಬಸವರ ಹಾಗೆ ಸಮಾಜದಲ್ಲಿ ವ್ಯಕ್ತಿ ಸ್ವತಂತ್ರವಾಗಿ, ವೈಚಾರಿಕ ದೃಷ್ಟಿಕೋನವನ್ನು ಬೆಳೆಸಿಕೊಳ್ಳಬೇಕೆಂದು ಅವರು ಹೇಳುತ್ತಿದ್ದರು.


ವಿಶ್ವ ಮಾನವ ಗೀತೆಯು ನಮಗೆ " ಪಂಚ ಮಂತ್ರ"ಗಳನ್ನು  ಕಟ್ಟಿಕೊಡುತ್ತದೆ. 


ಪ್ರತಿಯೊಂದು ಮಗುವೂ ಹುಟ್ಟುತ್ತಲೆ ವಿಶ್ವಮಾನವ. ಬೆಳೆಯುತ್ತಾ ನಾವು ಅದನ್ನು 'ಅಲ್ಪಮಾನವ'ನನ್ನಾಗಿ ಮಾಡುತ್ತೇವೆ. ಮತ್ತೆ ಅದನ್ನು 'ವಿಶ್ವಮಾನವ'ನನ್ನಾಗಿ ಮಾಡುವುದೇ ವಿದ್ಯೆಯ ಕರ್ತವ್ಯವಾಗಬೇಕು.

ಹುಟ್ಟುವಾಗ 'ವಿಶ್ವಮಾನವನಾಗಿಯೆ ಹುಟ್ಟಿದ ಮಗುವನ್ನು ನಾವು ದೇಶ, ಭಾಷೆ, ಮತ, ಜಾತಿ, ಜನಾಂಗ, ವರ್ಣ ಇತ್ಯಾದಿಗಳಿಂದ ಬಂಧನ  ಮಾಡುತ್ತೇವೆ. ಅವೆಲ್ಲವುಗಳಿಂದ ಪಾರಾಗಿ ಅವನನ್ನು 'ಬುದ್ಧ'ನನ್ನಾಗಿ, ಅಂದರೆ ವಿಶ್ವಮಾನವನನ್ನಾಗಿ, ಪರಿವರ್ತಿಸುವುದೆ ನಮ್ಮ ವಿದ್ಯೆ, ಸಂಸ್ಕೃತಿ, ನಾಗರಿಕತೆ ಎಲ್ಲದರ ಆದ್ಯ ಕರ್ತವ್ಯವಾಗಬೇಕು. ಲೋಕ ಉಳಿದು, ಬಾಳಿ ಬದುಕಬೇಕಾದರೆ! ಪ್ರಪಂಚದ ಮಕ್ಕಳೆಲ್ಲ 'ಅನಿಕೇತನ'ರಾಗಬೇಕು.

ಮಾನವ ವಿಕಾಸದ ಹಾದಿಯಲ್ಲಿ ಆಯಾ ಕಾಲದ ಅಗತ್ಯವನ್ನು ಪೂರೈಸಲು ಮಹಾಪುರುಷರು ಸಂಭವಿಸಿ ಹೋಗಿದ್ದಾರೆ. ಅವರಲ್ಲಿ ಕೆಲವರ ವಾಣಿ ವಿಶಿಷ್ಟ ಧರ್ಮವಾಗಿ ರೂಪುಗೊಂಡು ಕಡೆಗೆ ಮತವಾಗಿ ಪರಿಮಿತವಾಯಿತು. ಮಾನವರನ್ನು ಕೂಡಿಸಿ ಬಾಳಿಸಬೇಕೆಂಬ ಸದುದ್ದೇಶದಿಂದ ಹುಟ್ಟಿ ಕೊಂಡ ಮಹಾತ್ಮರ ವಾಣಿ ಮತವಾಗಿ ಮಾದಕವಾಯಿತು. ಒಂದು ಯುಗಕ್ಕೆ ಅಗತ್ಯವೆನ್ನಿಸಿದ ಧರ್ಮ ಕಾಲಾನುಕಾಲಕ್ಕೆ ಮತವಾಗಿ ನಿರುಪಯುಕ್ತವೆನಿಸಿ  ಮತ್ತೊಂದು ಹೊಸ ಧರ್ಮಕ್ಕೆ ಎಡೆಗೊಟ್ಟುದೂ ಉಂಟು. ಹೀಗಾಗಿ ಅನೇಕ ಧರ್ಮಗಳು ಮತಗಳಾಗಿ ಜನತೆಯನ್ನು ಗುಂಪುಗುಂಪಾಗಿ ಜನತೆಯನ್ನು ಒಡೆದಿವೆ.ಯುದ್ಧಗಳನ್ನು ಹೊತ್ತಿಸಿವೆ. ಜಗತ್ತಿನ ಕ್ಷೋಭೆಗಳಿಗೆಲ್ಲ ಮೂಲಕಾರಣವೆಂಬಂತೆ ವಿಜ್ಞಾನಯುಗದ ಪ್ರಾಯೋಗಿಕ ದೃಷ್ಟಿಗೆ ಇನ್ನು ಮೇಲೆ ಮತಮೌಢ್ಯ ಒಪ್ಪಿಗೆಯಾಗದು. ವಿನೋಬಾ ಭಾವೆಯವರು ಹಿಂದೆ ಹೇಳಿದಂತೆ 'ಮತ ಮತ್ತು ರಾಜಕೀಯದ ಕಾಲ ಆಗಿ ಹೋಯಿತು. ಇನ್ನೇನಿದ್ದರೂ ಅಧ್ಯಾತ್ಮ ಮತ್ತು ವಿಜ್ಞಾನದ ಕಾಲ ಬರಬೇಕಾಗಿದೆ.'

ಮನುಜಮತ, ವಿಶ್ವಪಥ, ಸರ್ವೋದಯ, ಸಮನ್ವಯ, ಪೂರ್ಣ ದೃಷ್ಟಿ, ಈ ಪಂಚಮಂತ್ರ ಇನ್ನು ಮುಂದಿನ ದೃಷ್ಟಿಯಾಗಬೇಕಾಗಿದೆ. ಅಂದರೆ, ನಮಗೆ ಇನ್ನು ಬೇಕಾದುದು ಆ ಮತ ಈ ಮತ ಅಲ್ಲ; "ಮನುಜಮತ". ಆ ಪಥ ಈ ಪಥ ಅಲ್ಲ; "ವಿಶ್ವಪಥ". ಆ ಒಬ್ಬರ ಈ ಒಬ್ಬರ ಉದಯ ಮಾತ್ರವಲ್ಲ; ಸರ್ವರ ಸರ್ವಸ್ತರದ ಉದಯ ಅದುವೇ "ಸರ್ವೋದಯ". ಪರಸ್ಪರ ವಿಮುಖವಾಗಿ ಸಿಡಿದು ಹೋಗುವುದಲ್ಲ; "ಸಮನ್ವಯ"ಗೊಳ್ಳುವುದು. ಮಿತಮತದ ಆಂಶಿಕ ದೃಷ್ಟಿಯಲ್ಲ; ಭೌತಿಕ ಪಾರಮಾರ್ಥಿಕ ಎಂಬ ಭಿನ್ನ ದೃಷ್ಟಿಯಲ್ಲ.ಎಲ್ಲವನ್ನು ಭಗವದ್ ದೃಷ್ಟಿಯಿಂದ ಕಾಣುವ "ಪೂರ್ಣದೃಷ್ಟಿ".

ಯಾವ ಭಾವನೆಗಳು ಜಗತ್ತಿನಲ್ಲಿ ಎಲ್ಲ ಮಾನವರಿಗೂ ಅನ್ವಯವಾಗಬಹುದೊ ಅಂತಹ ಭಾವನೆ ಅಂತಹ ದೃಷ್ಟಿ ಬರಿಯ ಯಾವುದೊ ಒಂದು ಜಾತಿಗೆ, ಮತಕ್ಕೆ, ಗುಂಪಿಗೆ, ಒಂದು ದೇಶಕ್ಕೆ ಮಾತ್ರ ಅನ್ವಯವಾಗುವುದಿಲ್ಲ. ಸರ್ವಕಾಲಕ್ಕೂ ಅನ್ವಯವಾಗುವ ಇವು ಮೂಲಮೌಲ್ಯಗಳು. ಈ ಮೌಲ್ಯಗಳು ಮಾನವರನ್ನು ಕೂಡಿಸಿ ಬಾಳಿಸುವತ್ತ ನಡೆದಾವು. ಗುಂಪುಗಾರಿಕೆಗೆಂದೂ ಇವು ತೊಡಗುವುದಿಲ್ಲ.ಅದೇನಿದ್ದರೂ ರಾಜಕೀಯದ ಕರ್ಮ. ವ್ಯಕ್ತಿ ಸ್ವಾತಂತ್ರ್ಯವನ್ನು ನೀಡಿಯೂ ಸಮಷ್ಟಿಯ ಉದ್ಧಾರದ ದೃಷ್ಟಿ ಇದರದು. ಈ ದೃಷ್ಟಿಗೆ ವ್ಯಕ್ತಿಗಳೆಷ್ಟೊ ಅಷ್ಟೂ ಸಂಖ್ಯೆಯ ಮತಗಳಿರು ವುದು ಸಾಧ್ಯ.ಅಷ್ಟೂ ವ್ಯಕ್ತಿಗಳು ಸಮಷ್ಟಿಯ ವಿಕಾಸಕ್ಕೆ ಸಾಧಕವಾಗುವುದೂ ಸಾಧ್ಯ. ಈ 'ದರ್ಶನ'ವನ್ನೆ 'ವಿಶ್ವಮಾನವ ಗೀತೆ' ಸಾರುತ್ತದೆ.

 

ಕುವೆಂಪುರವರ ವಿಶ್ವ ಮಾನವ ಸಂದೇಶವನ್ನು ನಾವೆಲ್ಲರೂ ಪಾಲಿಸಿ ಅದರಂತೆ ಬಾಳೋಣ.ಜಗದ ಶಾಂತಿಗೆ ಪಣ ತೊಡೋಣ.ಸರ್ವರಿಗೂ ವಿಶ್ವ ಮಾನವ ದಿನದ ಶುಭಾಶಯಗಳು.


ಸಿಹಿಜೀವಿ ವೆಂಕಟೇಶ್ವರ

ತುಮಕೂರು


27 December 2023

ನುಡಿ ಹಬ್ಬಕ್ಕೆ ಸಿಹಿಜೀವಿಯ ಹನಿಗಳು*


 *ನುಡಿ ಹಬ್ಬಕ್ಕೆ ಸಿಹಿಜೀವಿಯ ಹನಿಗಳು*


*ಎಲ್ಲರೂ ಪಾಲ್ಗೊಳ್ಳೋಣ*


ತುಮಕೂರಿನಲ್ಲಿ ನಡೆಯಲಿದೆ

ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ|

ಸಕುಟುಂಬ ಸಪರಿವಾರ ಸಮೇತ

ಎಲ್ಲರೂ ಪಾಲ್ಗೊಳ್ಳೋಣ|


*ಕನ್ನಡಮ್ಮನ ತೇರು*


ಕಲ್ಪತರು ನಾಡಲ್ಲಿ

ಕನ್ನಡ ಹಬ್ಬಕ್ಕೆ ಸಿದ್ದತೆ ಜೋರು|

ಬನ್ನಿ ಎಲ್ಲರೂ ಸೇರಿ ಎಳೆಯೋಣ

ಕನ್ನಡಮ್ಮನ ತೇರು||


*ಇಪ್ಪತ್ತೊಂಭತ್ತು ಮೂವತ್ತು*


ಮರೀ ಬೇಡಿ  ದಿನಾಂಕಗಳ 

ಡಿಸೆಂಬರ್ ಇಪ್ಪತ್ತೊಂಭತ್ತು 

ಮೂವತ್ತು|

ಕನ್ನಡ ಜಾತ್ರೆಗೆ  ಬಂದು ಬಿಡಿ ಗಾಜಿನ ಮನೆಗೆ ಆವತ್ತು||

 

*ಸಿಹಿಜೀವಿ ವೆಂಕಟೇಶ್ವರ*

ತುಮಕೂರು



 

21 December 2023

#ರಸ್ತೆ ಸುರಕ್ಷತೆ #Roadsafty

 


ನಿಯಮ...


ರಸ್ತೆಯಲ್ಲಿ ಸಂಚರಿಸುವಾಗ

ಪಾಲನೆ ಮಾಡು ನಿಯಮ|

ಇಲ್ಲದಿದ್ದರೆ ಸ್ವಾಗತ ಮಾಡಲು

ನಿಂತಿರುವನು ಯಮ ||


ಸಿಹಿಜೀವಿ ವೆಂಕಟೇಶ್ವರ

ತುಮಕೂರು

ಅಕ್ಷರ ಸಂತ ಡಾ.ಕವಿತಾ ಕೃಷ್ಣ















 

*ಅಕ್ಷರ ಸಂತ ಡಾ.ಕವಿತಾ ಕೃಷ್ಣ*

ವಿದ್ಯಾ ವಾಚಸ್ಪತಿ ,ಸರ್ವೊತ್ತಮ ಆಚಾರ್ಯ ಡಾ. ಕವಿತಾ ಕೃಷ್ಣ ರವರು ನಮ್ಮೊಂದಿಗೆ ಇರುವ ಸರಳತೆಯ ಸಾಕಾರ ಮೂರ್ತಿ,  ಜ್ಞಾನದ ಆಗರ, ಪ್ರಖರ ವಾಗ್ಮಿ,  ಅಕ್ಷರ ಸಂತ.

ಸಾಹಿತ್ಯದ ಎಲ್ಲಾ ಪ್ರಕಾರಗಳಲ್ಲಿ ಬರೆದ ಮಹಾನ್ ಜ್ಞಾನ ಶಿಖರ ಇವರು.ಸಂಸ್ಕೃತ ಮತ್ತು ಕನ್ನಡ ಭಾಷೆಯಲ್ಲಿ ಪಾಂಡಿತ್ಯ ಪಡೆದ ಇವರು ಆದರ್ಶ ಶಿಕ್ಷಕರು, ಕಾದಂಬರಿಕಾರರು, ಮಕ್ಕಳ ಸಾಹಿತ್ಯದಲ್ಲಿ ಅಪಾರ ಹೆಸರು ಗಳಿಸಿದವರು,  ಕರ್ನಾಟಕ ಶಾಲಾ ಶಿಕ್ಷಣ ಪಠ್ಯ ಪುಸ್ತಕ ಸಮಿತಿಯ ಸದಸ್ಯರಾಗಿದ್ದವರು, ಉತ್ತಮ ಸಂಘಟಕರು ,ಪ್ರಕಾಶಕರು, ಪ್ರಖರ ವಾಗ್ಮಿ, ಜನಾನುರಾಗಿ, ಯುವ ಬರಹಗಾರರ ಬೆನ್ತಟ್ಟುವ ಗುರುಗಳು. ಇನ್ನೂ ಇವರ ಬಗ್ಗೆ ಹೇಳುತ್ತಾ ಹೋದರೆ ಗ್ರಂಥಗಳನ್ನೇ ಬರೆಯಬೇಕಾದೀತು.

20ಕವನ ಸಂಕಲನಗಳು,20 ನಾಟಕಗಳು,10 ಅಭಿನಂದನಾ ಗ್ರಂಥಗಳು, 42 ಜೀವನ ಚರಿತ್ರೆಗಳು,25 ಮಕ್ಕಳ ಸಾಹಿತ್ಯ ಕೃತಿಗಳು,2 ಕಾದಂಬರಿಗಳು,14 ಮಹಾನ್ ಕೃತಿಗಳು, 26 ಸಂಪಾದನಾ ಕೃತಿಗಳು,13 ಶೈಕ್ಷಣಿಕ ಕೃತಿಗಳು,6 ಸಂಶೋಧನಾ ಕೃತಿಗಳು ಸೇರಿ ಮುನ್ನೂರಕ್ಕೂ ಹೆಚ್ಚು ಕೃತಿಗಳನ್ನು ರಚಿಸಿರುವ ಇವರ 30 ಕ್ಕು ಹೆಚ್ಚು ಕೃತಿಗಳು ಸದ್ಯದಲ್ಲೇ ಪ್ರಕಟಗೊಳ್ಳಲಿವೆ. ಇದನ್ನು ನೋಡಿದಾಗ ನಮಗೆ ಡಾ ಕವಿತಾ ಕೃಷ್ಣ ರವರು ಸಾಹಿತ್ಯದ ಮೇರು ಪರ್ವತ ಎಂದರೆ ಅತಿಶಯವೇನಲ್ಲ.

ಇವರ ಮಹಾನ್ ಕೃತಿಗಳಾದ ವಾಲ್ಮೀಕಿ ವಚನ ರಾಮಾಯಣ,  ಹಾಗೂ ವ್ಯಾಸ ಭಾರತ ಕೃತಿಗಳು ಹಲವಾರು ಮರುಮುದ್ರಣ ಕಂಡಿವೆ. ನಾಡಿನೆಲ್ಲೆಡೆ ಸಹೃದಯರು ಈ ಪುಸ್ತಕಗಳನ್ನು ಓದಿ ಪುನೀತರಾಗಿದ್ದಾರೆ.
ತಮ್ಮದೇ ಕವಿತಾ ಪ್ರಕಾಶನ ಆರಂಭಿಸಿ ಏಕಕಾಲಕ್ಕೆ ಅವರು ಬರೆದ 30 ಪುಸ್ತಕಗಳನ್ನು ಲೋಕಾರ್ಪಣೆ ಮಾಡಿದ್ದು ಒಂದು ದಾಖಲೆಯಾಗಿ ಉಳಿದಿದೆ.ತಾನೂ ಬೆಳೆದು ಇತರರ ಬೆಳೆಸುವ ಉದಾತ್ತ ಗುಣದ ಇವರು ನಾಡಿನ ಉದಯೋನ್ಮುಖ ಬರಹಗಾರರಿಗೆ ತಮ್ಮ ಪ್ರಕಾಶನದ ವತಿಯಿಂದ ಅತೀ ಕಡಿಮೆ ಬೆಲೆಯಲ್ಲಿ ಪುಸ್ತಕ ಪ್ರಕಾಶನ ಮಾಡಿಸಿದ ಪ್ರೋತ್ಸಾಹ ನೀಡುವ ಕವಿಸ್ನೇಹಿ ನಮ್ಮ ಕವಿತಾ ಕೃಷ್ಣ ರವರು.
ಸುಮಾರು ನಾಲ್ಕು ನೂರು ಕೃತಿಗಳಿಗೆ ಅವರು ಮುನ್ನುಡಿ ಬೆನ್ನುಡಿ ಬರೆದಿರುವುದು  ಸಾಹಿತಿಗಳಿಗೆ ಅವರು  ಬೆಂಬಲ ನೀಡುತ್ತಿರುವುದಕ್ಕೆ  ಮತ್ತೊಂದು  ಉದಾಹರಣೆ.

ಮನೆಯನ್ನೇ ಸಾಹಿತ್ಯ ಮಂದಿರವನ್ನಾಗಿ ಪರಿವರ್ತಿಸಿರುವ ಅವರು ನಿರಂತರವಾಗಿ ಸಾಹಿತ್ಯಿಕ ಚಟುವಟಿಕೆಗಳನ್ನು ಹಮ್ಮಿಕೊಂಡು ಬರುತ್ತಿದ್ದಾರೆ.ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ ಕನ್ನಡದ ನುಡಿಸೇವೆಗೈದ ಇವರು ವಿದೇಶಗಳಲ್ಲೂ ಕನ್ನಡ ಪಸರಿಸುವ ಕಾಯಕ ಮಾಡಿದ್ದಾರೆ.ಡಾ.ರಾಜ್ ಕುಮಾರ್ ನೇತೃತ್ವದಲ್ಲಿ ನಡೆದ ಗೋಕಾಕ್ ಚಳುವಳಿಯಲ್ಲಿ ಸಕ್ರಿಯವಾಗಿ ಪಾಲ್ಗೊಂಡ ಕನ್ನಡದ ಕಟ್ಟಾಳು ನಮ್ಮ ಡಾ. ಕವಿತಾ ಕೃಷ್ಣ ರವರು.

ತಮ್ಮ ಎಪ್ಪತೈದನೇ ಹುಟ್ಟು ಹಬ್ಬದ ಸಂದರ್ಭದಲ್ಲಿ ನಾಡಿನ ಇಬ್ಬರು ಮಹಾನ್ ಸ್ವಾಮೀಜಿಗಳು ಅವರನ್ನು ಆಶೀರ್ವದಿಸಿದ ಕ್ಷಣಗಳನ್ನು ಅವರು ಸಂತಸದಿಂದ ನೆನೆಯುತ್ತಾರೆ. ನಡೆದಾಡುವ ದೈವ ಶ್ರೀ ಶ್ರೀ  ಡಾ. ಶಿವಕುಮಾರ ಸ್ವಾಮೀಜಿಯವರು,ಜ್ಞಾನ ದಾಸೋಹಿ ಚುಂಚನಗಿರಿ ಕ್ಷೇತ್ರದ ಶ್ರೀ ಡಾ. ಬಾಲ ಗಂಗಾಧರನಾಥ ಸ್ವಾಮೀಜಿಯವರು ಅಂದು ಇವರನ್ನು ಆಶೀರ್ವದಿಸಿದ್ದರು.
ಇವರ ಸಾಹಿತ್ಯ ಸೇವೆಯನ್ನು ಪರಿಗಣಿಸಿ ಕನ್ನಡ ಸಾಹಿತ್ಯ ಪರಿಷತ್ತು  ತುಮಕೂರು ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷತೆ ನೀಡಿ ಗೌರವಿಸಿದೆ. ಅವರ ಸಮ್ಮೇಳನದ ಭಾಷಣವನ್ನು ಈಗಲೂ ಹಲವರು ಉಲ್ಲೇಖ ಮಾಡುವುದುಂಟು.

ಇವರ ಸಾಹಿತ್ಯ ಮತ್ತು  ಸಂಘಟನಾ ಶಕ್ತಿ ಗುರುತಿಸಿ ದೇಶ ವಿದೇಶಗಳಲ್ಲಿ ಇವರಿಗೆ ಹಲವಾರು ಪ್ರಶಸ್ತಿ ಪುರಸ್ಕಾರ ನೀಡಿ ಗೌರವಿಸಿವೆ.

ಅವುಗಳಲ್ಲಿ ಪ್ರಮುಖವಾದ
ನವದೆಹಲಿಯ ಭಾರತೀಯ ವಿದ್ಯಾಭವನ ನೀಡುವ ಸರ್ವೋತ್ತಮ ಆಚಾರ್ಯ ಪುರಸ್ಕಾರವು ಬಹಳ ಅತ್ಯನ್ನತವಾದುದು. ಡಾ.ರಾಧಾಕೃಷ್ಣನ್ ರಂತವರಿಗೆ ಇಂತಹ ಪುರಸ್ಕಾರ ನೀಡಲಾಗುತ್ತು ಎಂಬುದನ್ನು ಸ್ಮರಿಸಿಕೊಳ್ಳಬಹುದು. ದಕ್ಷಿಣ ಭಾರತದ ಕೆಲವೇ ಕೆಲವರಿಗೆ ಇಂತಹ ಪುರಸ್ಕಾರ ಲಭಿಸಿರುವುದು. 
ಇದರ ಜೊತೆಯಲ್ಲಿ ಅನೇಕ ಸಂಘ ಸಂಸ್ಥೆಗಳು ಇವರ ಸಾಹಿತ್ಯ ಸೇವೆಯನ್ನು ಗುರ್ತಿಸಿ ಸನ್ಮಾನಿಸಿವೆ. ಇಂತಹ ಮಹಾನ್ ಸಾಹಿತಿ ನಮ್ಮ ಕಾಲಘಟ್ಟದಲ್ಲಿ ಇದ್ದು ನಮಗೆ ಸಲಹೆ ಮಾರ್ಗದರ್ಶನ ನೀಡುತ್ತಿದ್ದಾರೆ ಎಂಬುದೇ ನಮಗೆ ಸಂತಸದ ವಿಷಯ.  ಇಳಿ ವಯಸ್ಸಿನಲ್ಲೂ ಅವರದು ಯುವಕನ ಚೈತನ್ಯ. ಇಂತಹ ಮಹಾನ್ ಚೇತನ ನಮ್ಮೊಂದಿಗೆ ನೂರ್ಕಾಲ ಬಾಳಲಿ ಎಂದು ಎಲ್ಲಾ ಸಾಹಿತ್ಯಾಭಿಮಾನಿಗಳ ಪರವಾಗಿ ದೇವರಲ್ಲಿ ಬೇಡುವೆ....

*ಸಿಹಿಜೀವಿ ವೆಂಕಟೇಶ್ವರ*
ತುಮಕೂರು
9900925529

ನೀರೆಯರಿಗೆ ಸೀರೆ ದಿನದ ಶುಭಾಶಯಗಳು.


 


ನೀರೆಯರಿಗೆ ಸೀರೆ ದಿನದ ಶುಭಾಶಯಗಳು.


 ನಮ್ಮ ಸಹೋದ್ಯೋಗಿಗಳೊಂದಿಗೆ  ಹೀಗೆ ಮಾತುಕತೆ ನಡೆಯುತ್ತಿತ್ತು. "ಅಯ್ಯೋ ನಮ್ ಮನೆ ಬೀರು ತುಂಬಾ ನಮ್ ಮನೇರ ಸೀರೇನೇ ಸರ್, ಆ ಬೀರ್ ನಲ್ಲಿ ಒಂದ್ ಮೂಲೇನಲ್ಲಷ್ಟೇ ನನ್ ಬಟ್ಟೆಗೆ ಜಾಗ" ಎಂದು ಅವರಿನ್ನೂ ಮಾತು ಮುಗಿಸಿರಲಿಲ್ಲ ಮತ್ತೊಬ್ಬ ಸಹೋದ್ಯೋಗಿ "ಅಯ್ಯೋ ನಮ್ ಮನೆ ಕಥೆನೂ ಅದೇ ಸಾ" ಎಂದರು.

ಇತ್ತೀಚಿನ ದಿನಗಳಲ್ಲಿ ನೈಟಿಯು ಸೀರೆಯ ಸ್ಥಾನ ಆಕ್ರಮಿಸಿಕೊಂಡಿದೆಯೇನೋ ಎಂಬ ಅನುಮಾನ ಮೂಡುತ್ತದೆ.


ನೀರೆಯರು

ಸೀರೆಯಿಂದ ದೂರ

ಪಾಶ್ಚಾತ್ಯ ಮೋಹ.


ಅವ್ಯಾವುದೋ ಪಾಶ್ಚಾತ್ಯ ಮಾದರಿಯ ಡ್ರೆಸ್ ಬಂದರೂ ನಮ್ಮ ಮಹಿಳೆಯರು ಸೀರೆ ಕೊಳ್ಳುವುದು ಮತ್ತು  ಉಡುವುದು ಕಮ್ಮಿಯಾಗಿಲ್ಲ.


ಗಂಡ ಹೆಂಡಿರ ನಡುವೆ ಜಗಳ ಆಗಲು ಸಾಮನ್ಯ ಕಾರಣಗಳಲ್ಲಿ ಸೀರೆ ಕೊಳ್ಳುವ ಕಾರಣಕ್ಕೆ ಹೆಚ್ಚು ಜಗಳವಾಗುತ್ತಿರುವುದು ಗುಟ್ಟಾಗೇನೂ ಉಳಿದಿಲ್ಲ.

ಇಂತಹ ಜಗಳ ನೋಡಿದ ಮೇಲೆ ನಾನು ಬರದ ಹನಿಗವನ...


ಪ್ರತಿ ಬಾರಿಯೂ

ನಾನು ಸೀರೆ ಕೊಡಿಸಿ

ಎಂದಾದಲೆಲ್ಲಾ ನಿರಾಕರಿಸುವಿರಿ

ನಿಮಗೆ ಅರ್ಥವಾಗುವುದಿಲ್ಲ

ನನ್ನ ಮನಸ್ಥಿತಿ|

ಅವನು ಗೊಣಗಿದ

ನಿನಗೂ ಅರ್ಥವಾಗುವುದಿಲ್ಲ

ನನ್ನ ಆರ್ಥಿಕ ಪರಿಸ್ಥಿತಿ||


ಸೀರೆ ಮಹತ್ವ ತಿಳಿದ ನಮ್ಮವರು ಸೀರೆಗೂ ಒಂದು ದಿನ ಮೀಸಲಿಟ್ಟಿದ್ದಾರೆ ಪ್ರತಿವರ್ಷ ಡಿಸೆಂಬರ್ 21 ನ್ನೂ ಸೀರೆ ದಿನವಾಗಿ ಆಚರಿಸಲಾಗುತ್ತದೆ.

ಸೀರೆಯ ವಿಧಗಳು ನೂರಾರು ಆಯಾ ಪ್ರಾಂತ್ಯ ಸಂಸ್ಕಾರ, ಸಂಪ್ರದಾಯದ ಆಧಾರದ ಮೇಲೆ ಹಲವಾರು ವಿಧಗಳಿವೆ.

ನಮ್ಮ ನಾಡಲ್ಲಿ ಸೀರೆ ಎಂದರೆ ತಟ್ಟನೆ ಹೊಳೆವುದು ಮೈಸೂರು ಸಿಲ್ಕ್ ಜೊತೆಯಲ್ಲಿ ‌ಇಳಕಲ್ ಮೊಳಕಾಲ್ಮೂರು ಸೀರೆಗಳು ಪ್ರಖ್ಯಾತಿ ಪಡೆದಿವೆ. 


ಆಂದ್ರ ಮತ್ತು ತೆಲಾಂಗಣದಲ್ಲಿ 

ಪೋಚಂಪಲ್ಲಿ ಸೀರೆ, ವೆಂಕಟಕಿರಿ ಸೀರೆ, ಗಡ್ವಾಲ್ ಸೀರೆ, ಗುಂಟೂರ ಸೀರೆ, ನಾರಾಯಣ ಪೇಠ್ ಸೀರೆ,ಮಂಗಲಮುರಿ ಸೀರೆ ,ಧರ್ಮಾವರಂ ಸೀರೆ ಎಂಬ ವಿಧಗಳಿವೆ.  ಬಿಹಾರ, ಚತ್ತೀಸ್ ಘಡ ದಲ್ಲಿ ಈರಿರೇಷ್ಮೆ ಸೀರೆ (ಕಾಡು ರೇಷ್ಮೆಯ ಸೀರೆ ) ಪ್ರಸಿದ್ಧ.

ಗುಜರಾತ್, ಹರ್ಯಾಣ, ಗಳಲ್ಲಿ

ತಾರಿನ್ ಜೋಯಿ ಬ್ರೋಕೇಡ್ಪ ,(ಪಟೋಲಾ ) ಟೋಲಾ ಸೀರೆ , 

ಕೇರಳದಲ್ಲಿ ಬಾಂಧಣಿ ಸೀರೆ , ಭಂದೇಜ ಸೀರೆ,ಬಕರಾಂಪುರಂ ಸೀರೆ ಹೆಚ್ಚು ಬಳಕೆಯಲ್ಲಿವೆ.


 ಈಶಾನ್ಯ ರಾಜ್ಯಗಳಲ್ಲಿ

ಚಂದ್ರಗಿರಿ ಸೀರೆ , ಮಹೆಶ್ವರಿ ಸೀರೆ  ಹೆಚ್ಚು ಜನಪ್ರಿಯ.

ತಮಿಳುನಾಡಿನಲ್ಲಿ

ಕಾಂಜೀವರಂ ಸೀರೆ, ಧರ್ಮಾವರಂ ಸೀರೆ, ಅರನಿ ಸೀರೆ, ಮಧುರೈ ಸೀರೆ, ಚಟ್ಟಿನಾಡು ಸೀರೆ, ಛಿನ್ನಲಪತ್ತಿ ಸೀರೆ, ಕೊಯಂಬತ್ತೋರ ಸೀರೆ ಬಹುಬೇಡಿಕೆ ಹೊಂದಿವೆ.

ಉತ್ತರ ಪ್ರದೇಶದಲ್ಲಿ  

ಬನಾರಸಿ ಸೀರೆ (ಬಫ್ಟಾ ಮತ್ತು ಅಮೃ ಶೈಲಿ), ಶಾಲು ಸೀರೆ, ಕಿಂಕಾಬ್ ಸೀರೆ 

ಪಶ್ಚಿಮ ಬಂಗಾಳದಲ್ಲಿ

ಜಾಮ್ದಾನಿ’ ಎಂಬ ಹೆಸರಿನ ಕುಸುರಿ ಕಲೆ ಹಾಗೂ ಜರಿಯುಳ್ಳ ಮಸ್ಲಿನ್ ಸೀರೆ, ಬಿರ್ ಭೌಮ್ ಸೀರೆ, ಕಲ್ಕತ್ತಾ ಕಾಟನ್ ಸೀರೆ ಧಾನಿಖಾಲಿ ಹತ್ತಿ, ಬುಲುಛರಿ, ಫುಲಿಯ ಮತ್ತು ಸಮುದ್ರಗಡದ ವಿಶಿಷ್ಟ ಸೀರೆಗಳು ಢಾಕಾ ಜಾಮ್ದಾನಿ, ಢಾಕಾ ಕಾಟನ್, ಢಾಕಾ ಸಿಲ್ಕ್, ಐದು ಗ್ರಾಂ ಸೀರೆ, ಕೈಯಿಂದ ನೇಯ್ದ ಫೂಲಿಯಾ, ತಾನ್‌ಚೂಡಿ ಸಿಲ್ಕ್, ಬಾಪಾ ಬುಟ್ಟಿ, ಓಂಕೈ ಕಾಟನ್, ಬನಾರಸಿ, ಟಾಂಗೈ ಬಾಲುಚೂಡಿ, ಮಲ್‌ಮಲೈ ಹೀಗೆ ಹಲವು ಬಗೆಯ ಸೀರೆಗಳು 

ಅಬ್ಬಾ! ನಮ್ಮ ಭಾರತದಲ್ಲಿ ಇಷ್ಟೆಲ ಸೀರೆಗಳ ವಿಧಗಳಿವೆ. ಕರ್ನಾಟಕದ ಸೀರೆಗಳ ಕೊಂಡೇ ನಮ್ಮ ಮನೆಗಳ ಬೀರುಗಳು ತುಂಬಿವೆ ಇನ್ನೂ ಈ ಸೀರೆಗಳ ಮಾಹಿತಿ ನಮ್ಮ ನೀರೆಯರಿಗೆ ಸಿಕ್ಕರೆ ನಮ್ಮ ಪುರುಷರನ್ನು ದೇವರೇ ಕಾಪಾಡಬೇಕು.

ಇರಲಿ ಎಲ್ಲಾ ನೀರೆಯರಿಗೆ ಸೀರೆ ದಿನದ ಶುಭಾಶಯಗಳು...


ಸಿಹಿಜೀವಿ ವೆಂಕಟೇಶ್ವರ

ತುಮಕೂರು

19 December 2023

ನಿಸರ್ಗಕ್ಕೆ ಋಣಿಯಾಗಿರೋಣ.



 


ನಿಸರ್ಗಕ್ಕೆ ಋಣಿಯಾಗಿರೋಣ.


ನಿಸರ್ಗಕ್ಕೆ ನಾವು ಋಣಿಯಾಗಿರಬೇಕು ಎಂದು ಅಂತಃಪ್ರಜ್ಞೆ ಜಾಗೃತಿ ಕೇಂದ್ರದ ಸಂಸ್ಥಾಪಕರಾದ ಶ್ರೀನಿವಾಸ ಅರ್ಕ ಗುರೂಜಿಯವರು ಕರೆ ನೀಡಿದರು.


ಅನನ್ಯ ಕಾಲೇಜು ಮತ್ತು ಕನ್ನಡ ಸಾಹಿತ್ಯ ಪರಿಷತ್ತಿನ ನಗರ ಘಟಕದ ಸಹಯೋಗದೊಂದಿಗೆ ನಡೆದ ಕಾರ್ಯಕ್ರಮದಲ್ಲಿ ಗುರೂಜಿಯವರು ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡುತ್ತಿದ್ದರು. 


ನಮ್ಮ ಸುತ್ತಲಿನ ಪರಿಸರವನ್ನು ಗಮನಿಸಿದರೆ ಚಳಿ, ಮಳೆ, ಬಿಸಿಲು, ಬಿರುಗಾಳಿಯಂತಹ ವಿಭಿನ್ನ ಋತುಮಾನಗಳನ್ನು ಕಾಣುತ್ತೇವೆ.  ನಮಗೆ ನಿಸರ್ಗ  ಎಲ್ಲವನ್ನೂ ನೀಡಿದೆ. ಅದಕ್ಕೆ ನಾವು ಋಣಿಯಾಗಿರಬೇಕು.  ಯಾವಾಗಲೂ ಸಕಾರಾತ್ಮಕವಾಗಿರಬೇಕು. ಯಾವುದೇ ಸನ್ನಿವೇಶಗಳಲ್ಲಿ ರಚನಾತ್ಮಕ ದೃಷ್ಟಿಯಿಂದ ನೋಡುವ ಮನೋಭಾವವನ್ನು ನಾವು ಬೆಳೆಸಿಕೊಂಡಾಗ  ನಮ್ಮೊಳಗೆ ನಿರಾಳವಾದ ಹಾಗೂ  ಹಗುರ ಎಂದೆನಿಸುವ ಭಾವ ಒಡಮೂಡುತ್ತದೆ. ಇಂತಹ ಭಾವ ನಿಮ್ಮ ಉನ್ನತ ವ್ಯಕ್ತಿತ್ವ ರೂಪಿಸುತ್ತದೆ ಎಂದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಕನ್ನಡ ಸಾಹಿತ್ಯ ಪರಿಷತ್ತಿನ ನಗರ ಘಟಕದ ಅದ್ಯಕ್ಷರಾದ ಗೀತಾ ನಾಗೇಶ್ ರವರು ಶ್ರೀನಿವಾಸ ಅರ್ಕ ಗುರೂಜಿಯವರು ಅಂತಾರಾಷ್ಟ್ರೀಯ ಖ್ಯಾತಿಯ ವ್ಯಕ್ತಿತ್ವ ವಿಕಸನ ತರಬೇತುದಾರ ರಾಗಿದ್ದು ಅವರು ನೀಡುವ ಜ್ಞಾನದ ಸದುಪಯೋಗ ಪಡೆದು ನಿಮ್ಮ ವ್ಯಕ್ತಿತ್ವ ಉತ್ತಮಪಡಿಕೊಳ್ಳಿ, ಹಾಗೂ ಕನ್ನಡ ಭಾಷೆಯ ಮಹತ್ವ ಅರಿತು ಉಳಿಸಿ ಬೆಳೆಸುವಲ್ಲಿ ವಿದ್ಯಾರ್ಥಿಗಳು ಕೈಜೋಡಿಸಿ ಎಂದು ನುಡಿದರು.

ಇದೇ ಸಂದರ್ಭದಲ್ಲಿ ವಿದ್ಯಾರ್ಥಿಗಳೊಂದಿಗೆ ಸಂವಹನ ಮಾಡಿದ ಗುರೂಜಿಯವರು ವಿದ್ಯಾರ್ಥಿಗಳ ಸಂದೇಹಗಳಿಗೆ ಪರಿಹಾರ ಸೂಚಿಸಿದರು.

ಕಾರ್ಯಕ್ರಮದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ತಾಲ್ಲೂಕು ಘಟಕದ ಅಧ್ಯಕ್ಷರಾದ ಚಿಕ್ಕ ಬೆಳ್ಳಾವಿ ಶಿವಕುಮಾರ್, ಕನ್ನಡ ಸಾಹಿತ್ಯ ಪರಿಷತ್ತಿನ ನಗರ ಘಟಕದ ಕಾರ್ಯದರ್ಶಿಗಳಾದ ಚಾಂದು, ಸಿಹಿಜೀವಿ ವೆಂಕಟೇಶ್ವರ,

ಅನನ್ಯ ಕಾಲೇಜಿನ ಪ್ರಾಂಶುಪಾಲರಾದ   ಡಾಕ್ಟರ್ ವಿಶ್ವಾಸ್  ಲೇಖಕಿಯರ ಸಂಘದ ನಿಕಟಪೂರ್ವ ಅಧ್ಯಕ್ಷರಾದ ಸುಗುಣದೇವಿ, ಲತಾ ವೆಂಕಟೇಶ್ ಅನನ್ಯ ಕಾಲೇಜು ಸಿಬ್ಬಂದಿ ಉಪಸ್ಥಿತರಿದ್ದರು. 

ಅಹಂಕಾರ...

 ಅಹಂಕಾರ.

ಸುಂದರ ಶಿಲೆಯಾಗಿ ಕೆತ್ತಬಹುದು ಕಲ್ಲನ್ನು ಇಲ್ಲದಿದ್ದರೂ ಯಾವುದೇ ಆಕಾರ|

ಬದಲಿಸಲಾಗುವುದೇ ಇಲ್ಲ

ಮನುಷ್ಯರಲ್ಲಿ ತುಂಬಿಕೊಂಡರೆ ಅಹಂಕಾರ||

18 December 2023

ಚಿತ್ತಾರ...


 ಓ ನಲ್ಲೆ..  ಮನೆಯ ಬಣ್ಣ ಮಾಸಿರಬಹುದು ಕೊಂಚ|

ಚಿತ್ತಾರ ಬಿಡಿಸುವೆನು ತನು,ಮನದಲಿ ಹಿಡಿದು ಕುಂಚ||


ಸಿಹಿಜೀವಿ ವೆಂಕಟೇಶ್ವರ

ತುಮಕೂರು

15 December 2023

ಹೊಣೆ ಯಾರು...?



 


ಯಾರು ಹೊಣೆ...

ಅವನ  ತಂದೆ ಸರ್ಕಾರಿ ನೌಕರಿಯಲ್ಲಿದ್ದರು.ಅವರ ಅಕಾಲಿಕ ಮರಣದಿಂದ ಆ ಹುಡುಗನ ಅಕ್ಕನಿಗೆ ಅನುಕಂಪದ ಸರ್ಕಾರಿ ನೌಕರಿ ದೊರೆಯಿತು. ನೌಕರಿಯ ಬಲದಿಂದ ಕುಟುಂಬದ ಆರ್ಥಿಕ ಪರಿಸ್ಥಿತಿ ಉತ್ತಮವಾಯಿತು. ಹೋಗಿ ಬರುವ ಪಯಣ
ಸುಮಾರು 100 ಕಿಲೋಮೀಟರ್ ಆದರೂ ಕೆಲಸ ಸಿಕ್ಕ ಖುಷಿಯಲ್ಲಿ ಅದೇನು ಅಷ್ಟು ತೊಂದರೆ ಎನಿಸಲಿಲ್ಲ.  ತನ್ನ ಹಳ್ಳಿಯಿಂದ ನಗರಕ್ಕೆ, ಪುನಃ ನಗರದಿಂದ ಮತ್ತೊಂದು ನಗರಕ್ಕೆ ಕೆಲಸ ಮಾಡಲು ಹೋಗಿ ಬರಬೇಕಾಗಿತ್ತು. ಆರಂಭದಲ್ಲಿ ಇದು ಕಷ್ಟವಾದರೂ ಮನೆಯ ಆರ್ಥಿಕ ಪರಿಸ್ಥಿತಿ ಚೆನ್ನಾಗಿದ್ದರೆ ಅಷ್ಟೇ ಸಾಕು ಎಂದು ಬರು ಬರುತ್ತಾ ಕಷ್ಟದ ಜೀವನಕ್ಕೆ ಹೊಂದಿಕೊಂಡಿದ್ದಳು. ದೂರದ ಪ್ರಯಾಣವಾದ್ದರಿಂದ ಬಸ್ ಗಳು ಸಕಾಲದಲ್ಲಿ ಸಿಗದೆ ಕೆಲವೊಮ್ಮೆ ನಗರಕ್ಕೆ ತಲುಪುವುದೇ ರಾತ್ರಿ ಒಂಭತ್ತರ ಮೇಲಾಗುತ್ತಿತ್ತು.ಅಲ್ಲಿಂದ ಹಳ್ಳಿಯ ಮನೆ ಸೇರಲು ಮತ್ತೆ ಕಾಲು ಗಂಟೆ ಬೇಕಾಗುತ್ತಿತ್ತು.
ಕೆಲವು ದಿನ ಡ್ಯೂಟಿಯಿಂದ ರಾತ್ರಿ  ಲೇಟಾಗಿ ಬಂದರೆ ನಗರದಿಂದ ಅಕ್ಕನ ಕರೆತರಲು ಹತ್ತನೇ ತರಗತಿಯಲ್ಲಿ ಓದುವ ತಮ್ಮ ಪಕ್ಕದ ಮನೆಯ ಗೆಳೆಯ ನನ್ನು ಕರೆದುಕೊಂಡು ತನಗೆ ಪರಿಚಿತವಾಗಿರುವ ಅಂಕಲ್ ನಿಂದ  ಬೈಕ್ ಕೇಳಿ ಪಡೆದು ನಗರದಿಂದ ಹಳ್ಳಿಗೆ ಕರೆ ತರುತ್ತಿದ್ದ. ರಾತ್ರಿ ಹತ್ತರ ನಂತರ ಬರುವ ಮಗಳ ಸ್ಥಿತಿಯನ್ನು ನೋಡಿ " ಅಲ್ಲೇ ಟೌನ್ ನಲ್ಲಿ ಒಂದು ರೂಮೋ ಪಿ ಜಿ ನೋ ಮಾಡ್ಕಂಡಿರಮ್ಮ ರಾತ್ರಿ ಹೊತ್ತು ಇಂಗ್ ಬಂದ್ರೆ ಎಂಗಮ್ಮ" ಎಂದು ತಾಯಿ ಸಲಹೆ ನೀಡಿದ್ದರು. ಮಗಳು ಇದನ್ನು ನಯವಾಗಿಯೇ ನಿರಾಕರಿಸಿದ್ದಳು.
ತಂದೆಯ ಅನುಪಸ್ಥಿತಿಯಲ್ಲಿ ತಾಯಿ,  ಮಗಳು, ಮಗ ಸಂತೋಷವಾಗಿ ಜೀವನ ಸಾಗಿಸುತ್ತಿದ್ದರು. ಅದ್ಯಾರ ಕೆಟ್ಟ ದೃಷ್ಟಿ ಬಿತ್ತೋ ಏನೋ..
ಅಂದು ರಾತ್ರಿ ಒಂಭತ್ತು ಗಂಟೆಗೆ ಅಕ್ಕ ಪೋನ್ ಮಾಡಿದರು.ತಮ್ಮನು  ಪಕ್ಕದ ಮನೆಯ ಅಂಕಲ್ ನಿಂದ  ಬೈಕ್ ಪಡೆದು ತನ್ನ ಗೆಳೆಯನ ಜೊತೆಯಲ್ಲಿ ನಗರದ ಕಡೆ ಸ್ವಲ್ಪ ಜೋರಾಗಿಯೇ ಎಕ್ಸಲೇಟರ್  ಒತ್ತಿದ. 
ಅತ್ತ ಅಕ್ಕ ಕಾಯುತ್ತಿದ್ದರು.ಈ ಮಧ್ಯ ರಾತ್ರಿ ಹತ್ತರ ಸಮಯದಲ್ಲಿ ಒಂಟಿ ಯುವತಿ ನಿಂತಿರುವುದನ್ನು ಕಂಡ ಪುಂಡರ ಗುಂಪು ಚುಡಾಯಿಸಲಾರಂಭಿಸಿದೆ.ಯುವತಿ ಅಲ್ಲಿಂದ ನಿಧಾನವಾಗಿ ಮುಂದೆ ಚಲಿಸಿದ್ದಾಳೆ. ಗಾಬರಿಯಿಂದ ತಮ್ಮನಿಗೆ ಮತ್ತೆ ಕರೆ ಮಾಡಿದಳು.ಕರೆ ಸ್ವೀಕರಿಸಿದ ತಮ್ಮ ಗಾಡಿಯ ಎಕ್ಸಲೇಟರ್ ಮತ್ತೂ ಒತ್ತಿದ.  ಸ್ಪೀಡೋಮೀಟರ್ ಮುಳ್ಳು ಏರುತ್ತಾ ಬೈಕ್ ಮುಂದೆ ಚಲಿಸಿತು.ಆಗಲೇ ಅವಘಡ ಸಂಭವಿಸಿದ್ದು! ಕ್ಷಣಾರ್ಧದಲ್ಲಿ   ಅತಿ ವೇಗವಾಗಿ ಬಂದ ಕಾರು ಬೈಕ್ ಗೆ ಡಿಕ್ಕಿ ಹೊಡೆದ ರಭಸಕ್ಕೆ ಬಾಲಕರು ಆರು ಅಡಿ ಜಿಗಿದು ದೂರದಲ್ಲಿ ಬಿದ್ದರು. ರಸ್ತೆ ಅಕ್ಕ ಪಕ್ಕದ ಜನರು ಸೇರಿ ಮಕ್ಕಳ ಎತ್ತಿದ್ದರು.ಅಷ್ಟರಲ್ಲಾಗಲೇ ಇಬ್ಬರ ಪ್ರಾಣಪಕ್ಷಿ ಹಾರಿತ್ತು. ಕಾರಿನ ಚಾಲಕನೂ ಗಾಯಗೊಂಡು ಆಸ್ಪತ್ರೆ ಸೇರಿದ.ಸ್ಥಳಕ್ಕೆ ಬಂದ ಪೋಲಿಸರು ಮಹಜರು ಮಾಡಿ ಬೈಕ್ ಮಾಲೀಕನನ್ನು ಪತ್ತೆ ಹಚ್ಚಿ ಅಪ್ರಾಪ್ತ ಬಾಲಕರಿಗೆ ಬೈಕ್ ಕೊಟ್ಟ ಅರೋಪದ ಮೇಲೆ ಬಂದಿಸಲಾಯಿತು. 
ಸ್ಥಳದಲ್ಲಿದ್ದ ಜನ ಆ ಬಾಲಕರ ಸ್ಥಿತಿಯನ್ನು ಕಂಡು ಮರುಗುತ್ತಿದ್ದರು.ಕೆಲವರು ಅದು ಕಾರ್ ನ ಚಾಲಕನ  ಅಜಾಗರೂಕತೆಯಿಂದ ಆದ ಅವಘಡ ಎಂದರೆ ಕೆಲವರು ಅಪ್ರಾಪ್ತ ಮಕ್ಕಳು ಬೈಕ್ ಯಾಕೆ ಓಡಿಸಬೇಕಿತ್ತು? ಎಂದು ಮಾತನಾಡುವ ವೇಳೆಯಲ್ಲಿ ಸ್ಥಳಕ್ಕೆ ಬಂದ ಸಹೋದರಿ ಈ ದುರ್ಘಟನೆಗೆ ನಾನೇ ಕಾರಣವೆಂದು ಗೋಳಾಡತೊಡಗಿದಳು.ಅಂಬುಲೆನ್ಸ್ ಶಬ್ದ ದೂರದಲ್ಲಿ ಕೇಳುತ್ತಿತ್ತು... ಪಾಪ  ಈ ಹುಡುಗ್ರ ಸಾವಿಗೆ ಯಾರ್ ಹೊಣೆ ಎಂದು ಪ್ರಶ್ನಿಸುತ್ತಿರುವಾಗ ಮೂಲೆಯಲ್ಲಿ ಬೆಡ್ ಶೀಟ್ ಹೊದ್ದು ನಿಂತ ವಯೋವೃದ್ದರು ಹಣೆ ಬರಹಕ್ಕೆ ಯಾರು ಹೊಣೆನಪ್ಪ? ಎಂದಾಗ ನೀರವ ಮೌನ ಆವರಿಸಿತು..

ಸಿಹಿಜೀವಿ ವೆಂಕಟೇಶ್ವರ
ತುಮಕೂರು

ಮದ್ಯ ಪ್ರಿಯರ ಮನವಿ

 


ಮದ್ಯ ಪ್ರಿಯರ ಮನವಿ


ನಮಗೂ ಮರ್ಯಾದೆ ಕೊಡಿ

ಕುಡಿಯುಬಹದು ನಾವು

ಬ್ರಾಂದಿ ,ವಿಸ್ಕಿ ,ಬೀರು|

ಕುಡುಕರೆಂದು ಅವಮಾನಿಸಬೇಡಿ

ಗೌರವದಿ ಹೇಳಿ ಮದ್ಯಪ್ರಿಯರು||


ನಮ್ಮ ಘೋಷವಾಕ್ಯ ನಿತ್ಯ ದುಡಿ,

ಸ್ವಲ್ಪ ಕುಡಿ, ಸತ್ಯ ನುಡಿ|

ಬೈಯಬೇಡಿ ನಮ್ಮನ್ನು ಕುಡಿದಾಗ

ಸ್ವಲ್ಪ ಅಲ್ಲಾಡಬಹುದು ಬಾಡಿ ||


ನಮಗೋಸ್ಕಕರ ಸ್ಥಾಪಿಸಿ ಬಿಡಿ

ಮದ್ಯಪ್ರಿಯರ ಕಲ್ಯಾಣ ನಿಧಿ|

ಇರಲಿ ಒಂದು ಅಂಬುಲೆನ್ಸ್

ನಮಗಾಗಿ ಬಾರ್ ಬದಿ ||


ಸರ್ಕಾರದ ಆದಾಯದಲ್ಲಿ ನಮ್ಮದೂ ಪಾಲಿದೆ ಅದು ಹೆಮ್ಮೆ|

ನಮ್ಮ ಬೇಡಿಕೆಗಳನ್ನು ಪರಿಶೀಲಿಸಿ

ನಮ್ಮ ಕಡೆ ಕೃಪೆ ತೋರಿ ಒಮ್ಮೆ||


(ಮದ್ಯಪಾನ ಆರೋಗ್ಯಕ್ಕೆ ಹಾನಿಕರ)


ಸಿಹಿಜೀವಿ ವೆಂಕಟೇಶ್ವರ

ತುಮಕೂರು


12 December 2023

ಕುದುರೆಗೊಂದು ದಿನ


 


ಕುದುರೆಗೊಂದು ದಿನ 


ಆಕರ್ಷಕವಾಗಿ ಕಾಣುವ ಹಲವು ಪ್ರಾಣಿಗಳಲ್ಲಿ ಕುದುರೆಯೂ ಒಂದು. ಮಹಾರಾಜರು ಕುದುರೆ ಏರಿ ಹೊರಟರೆ ಆ ಗತ್ತೇ ಬೇರೆ. ಸೈನಿಕರ ,ಸಾರಿಗೆಯ ಬಹು ಮುಖ್ಯ ಪ್ರಾಣಿಯಾಗಿದ್ದ   ಕುದುರೆ ಅಶ್ವ ಮೇಧಯಾಗಕ್ಕೂ ಸಿದ್ದ ವಾಗಿದ್ದನ್ನ  ಕಂಡಿದ್ದೇವೆ.ಇಂತಹ ಬಹುಪಯೋಗಿ ಕುದುರೆ ಈಗ    ರೇಸ್  ಓಡುವ ಕುದುರೆಯಾಗಿ ಜೂಜಿಗೆ ಸೀಮಿತವಾಗಿದೆ.

ಅಶ್ವ ,ವಾಜಿ ,ತುರುಗ, ಎಂಬಿತ್ಯಾದಿ ನಾಮಗಳಿಂದ ಪರಿಚಿತವಾದ ಕುದುರೆಗೂ ವಿಶ್ವ ಸಂಸ್ಥೆ ಒಂದು ದಿನ ನಿಗದಿ ಮಾಡಿ ಪ್ರತಿ ವರ್ಷವೂ ಆಚರಿಸಲು ಅನುವು ಮಾಡಿಕೊಟ್ಟಿದೆ. ಪ್ರತಿವರ್ಷ ಡಿಸೆಂಬರ್ 13 ರಂದು ರಾಷ್ಟ್ರೀಯ ಕುದುರೆ ದಿನವಾಗಿ ಆಚರಿಸಲಾಗುತ್ತದೆ.

ಕುದುರೆಗೆ, ರಾಜಕೀಯ, ಸಾಮಾಜಿಕ, ಆರ್ಥಿಕ, ಧಾರ್ಮಿಕ ಮಹತ್ವವಿದೆ.  ಜಾನಪದರ ಬಾಯಲ್ಲಿ ಕುದುರೆ ನಲಿದಾಡಿದೆ.

ಕುದುರೆಯ ಹೆಸರಲ್ಲಿ ಕನ್ನಡದ ಹಲವಾರು ಹಾಡುಗಳು ಬಂದಿವೆ. "ಕುದುರೆ ಏರಿ ಸೂರ್ಯ ಬಂದವ್ನೆ...." ಎಂಬ ಲಾಲಿ ಹಾಡು ಚಿತ್ರದ ಹಾಡು ಈಗಲೂ ಕಿವಿಯಲ್ಲಿ ಗುಂಯ್ಗುಡುತ್ತದೆ. "ಕಾಡು ಕುದುರೆ ಓಡಿ ಬಂದಿತ್ತಾ...." ಎಂಬ ಹಾಡಿನಲ್ಲಿ ಶಿವಮೊಗ್ಗ ಸುಬ್ಬಣ್ಣ ರವರ ಧ್ವನಿಯು ಎಲ್ಲರನ್ನೂ ಆಕರ್ಷಿಸಿದ್ದು ಸುಳ್ಳಲ್ಲ. ಎಲ್ಲಾ ಆರ್ಕೆಸ್ಟ್ರಾಗಳಲ್ಲಿ ಈಗಲೂ ಅತಿ ಹೆಚ್ಚು ಬೇಡಿಕೆಯ ಹಾಡು ಅಣ್ಣಾವ್ರ "ಹೃದಯ ಸಮುದ್ರ ಕಲಕಿ ಹೊತ್ತಿದ ದ್ವೇಷದ ಬೆಂಕಿ..." ಅಶ್ವದೊಂದಿಗೆ ಚಿತ್ರಿತವಾದ ಈ ಹಾಡನ್ನು ಈಗ ನೋಡಿದರೂ  ರೋಮಾಂಚನವಾಗುತ್ತದೆ.

ಇನ್ನೂ "ಕುದುರೇನ ತಂದೀನಿ ಜೀನಾವಾ ಬಿಗಿದೀನಿ ಬರಬೇಕು ತಂಗಿ ಮದುವೇಗೆ" ಜಾನಪದ ಗೀತೆ ಯಾರು ಕೇಳಿಲ್ಲ ಹೇಳಿ?

ಇತ್ತೀಚಿನ ಶಿವಣ್ಣ ಅಭಿನಯದ ಕವಚ ಚಿತ್ರದ "ರೆಕ್ಕೆಯ ಕುದುರೆ ಏರಿ..." ಹಾಡು ಸುಮಧುರ.

ಹೀಗೆ ಕುದುರೆಯ ಮೇಲೆ ಬಂದಿರುವ ಹಾಡುಗಳು ಒಂದಕ್ಕಿಂತ ಒಂದು ಸುಮಧುರ ಮತ್ತು ಅರ್ಥಗರ್ಭಿತ. ಮುಂದೆಯೂ ನಾಟಕಗಳಲ್ಲಿ ಮತ್ತು ಸಿನಿಮಾದಲ್ಲಿ ಇನ್ನೂ ಹೆಚ್ಚಿನ ಕುದುರೆ ಹಾಡುಗಳ ನಿರೀಕ್ಷೆ ಮಾಡೋಣ...

ಎಲ್ಲರಿಗೂ ಅಂತರರಾಷ್ಟ್ರೀಯ ಕುದುರೆ ದಿನದ ಶುಭಾಶಯಗಳು..


ಸಿಹಿಜೀವಿ ವೆಂಕಟೇಶ್ವರ

ತುಮಕೂರು

9900925529


ಹೆಣ್ಣಿನ ದಶಗುಣಗಳು.


 


ಹೆಣ್ಣಿನ ದಶಗುಣಗಳು.


ಹೆಣ್ಣು ಎಂಬ ಎರಡಕ್ಷರದಲ್ಲಿ ಏನಿದೆ?ಏನಿಲ್ಲ? ಜಗದ ಆದಿ ಅಂತ್ಯವೇ ಹೆಣ್ಣು. ತಾಯಿಯಾಗಿ,ತಂಗಿಯಾಗಿ,ಅತ್ತೆಯಾಗಿ,ಸೊಸೆಯಾಗಿ, ಸಹೋದರಿಯಾಗಿ,ಗೆಳತಿಯಾಗಿ...ನಾನಾ ರೂಪಗಳಲ್ಲಿ ನಮ್ಮ ನಡುವೆ ಇರುವ ಹೆಣ್ಣು ಅವಳ ಮಹಾನ್ ಗುಣಗಳಿಂದ ಅಚ್ಚರಿ ಮೂಡಿಸುತ್ತಾಳೆ. ಅಂತಹ ಗುಣಗಳ ಪಟ್ಟಿ ಮಾಡುವಾಗ ನನಗೆ ದಕ್ಕಿದ್ದು ಈ ಕೆಳಗಿನ ಗುಣಗಳು.


 1. ಅವಳು ಬುದ್ಧಿವಂತೆ.


 ಇದಕ್ಕೆ ಯಾವುದೇ ವೈಜ್ಞಾನಿಕ ಆಧಾರಗಳಿಲ್ಲದಿದ್ದರೂ  ಬುದ್ದಿವಂತಿಕೆಯೆಂದರೆ ಹೆಣ್ಣು ಎನ್ನುವಂತಾಗಿದೆ.  ಅವಳು ಬಾಯ್ತೆರೆದು ಮಾತಾನಾಡಲಾರಂಬಿಸಿದರೆ   ಬುದ್ಧಿವಂತಿಕೆಯನ್ನು ಹೊರಹಾಕುತ್ತಾಳೆ.  ಒಬ್ಬರು ಅವಳೊಂದಿಗೆ ಕಠಿಣ ಮತ್ತು ಗಂಭೀರವಾಗಿ ಮಾತನಾಡಬಹುದು.ಅದಕ್ಕೆ ತಕ್ಕಂತೆ ಅವಳ ಉತ್ತರ ಸಿದ್ದವಿರುತ್ತದೆ.


 2. ಅವಳು ಭಾವನಾತ್ಮಕವಾಗಿ ಸ್ಥಿರವಾಗಿರುತ್ತಾಳೆ.


 ಹೌದು ಹೆಣ್ಣು ಗಂಡಿಗಿಂತ ಹೆಚ್ಚು ಭಾವನಾತ್ಮಕ ಜೀವಿ. ಅವಳು  ಕೆಲವೊಮ್ಮೆ ನಗುತ್ತಾಳೆ, ಕೆಲವೊಮ್ಮೆ ಅಳು, ಮತ್ತೆ ಸಿಟ್ಟು ಸೆಡೆವು, ಕರುಣೆ , ಶಾಂತ   ಹೀಗೆ ತನ್ನ ವಿವಿಧ ಭಾವನೆಗಳನ್ನು ವ್ಯಕ್ತಪಡಿಸುವ ಅವಳನ್ನು     ತನ್ನ ಭಾವನೆಗಳ ಮಾಸ್ಟರ್ ಎಂದರೆ ತಪ್ಪಾಗಲಾರದು.


 3. ಅವಳು ಗುಣಿಸುತ್ತಾಳೆ.


ಹೆಣ್ಣಿನ ಕಾರ್ಯ ವರ್ಣಿಸುವಾಗ ಅವಳಿಗೆ ಹತ್ತು ಕೈ ಒಂದೊಂದರಲ್ಲಿ ಒಂದು ಕೆಲಸ ಮಾಡುವ ಗೌರವಪೂರ್ವಕವಾದ ಚಿತ್ರ ನೋಡಿದ್ದೇವೆ.ಅದೇ ಅವಳ ತಾಕತ್ತು 

 ಅವಳು ನೂರನ್ನು   ಸಾವಿರವಾಗಿ, ಸಾವಿರವನ್ನು ಮಿಲಿಯನ್ ಆಗಿ ಪರಿವರ್ತಿಸುತ್ತಾಳೆ. ಅದು ಬರೀ ಹಣದ ಮತ್ತು ಸಂಪತ್ತಿನ ಲೆಕ್ಕಾಚಾರವಲ್ಲ  ಅದರಲ್ಲಿ ಎಲ್ಲವೂ ಇದೆ. 


 4. ಅವಳು ಪ್ರೀತಿಸಲ್ಪಡುವುದನ್ನು ಪ್ರೀತಿಸುತ್ತಾಳೆ.


ಪ್ರೀತಿಗೆ ಮನಸೋಲದವರು ಈ ಜಗದಲ್ಲಿ ಯಾರೂ ಇಲ್ಲ.ಅದಕ್ಕೆ ಅವಳು ಹೊರತಲ್ಲ.ಹಾಗೆ ನೋಡಿದರೆ ಅವಳ ಬಿಟ್ಟು ಪ್ರೀತಿಯಿಲ್ಲ.

 ಹೌದು,  ನೀವು ಅವಳನ್ನು ಪ್ರೀತಿಸಿದಾಗ ಮತ್ತು ಅವಳಿಗೆ ಒಳ್ಳೆಯದನ್ನು ಮಾಡಿದಾಗ, ಅವಳು ಸ್ವೀಕರಿಸುವಳು ಮತ್ತು ಶ್ಲಾಘಿಸುವವಳು.  


 5. ಅವಳು ಆಹಾರದ ಮೂಲಕ ಪ್ರೀತಿಸುತ್ತಾಳೆ.


ಪಾಕ ಪ್ರವೀಣ ಗಂಡಸರು ಇಬ್ಬರೇ ನಮಗೆ ಗೊತ್ತಿರುವವರು ಅವರೇ ನಳ ಮತ್ತು ಭೀಮ ಉಳಿದೆಲ್ಲಾ ಪಾಕ ಪಾಂಡಿತ್ಯವನ್ನು ಅವಳು ಗುತ್ತಿಗೆ ಪಡೆದಾಗಿದೆ.

 ಅವಳು  ಅತ್ಯುತ್ತಮ ಆಹಾರ   ಸಿದ್ದಪಡಿಸಲು  ಪ್ರಯತ್ನಿಸುತ್ತಾಳೆ  ಮತ್ತು  ಪಾಕ ಪ್ರಕ್ರಿಯೆಯಲ್ಲಿ  ನಮ್ಮ ಆತ್ಮಕ್ಕೂ ಆಹಾರವನ್ನು ನೀಡುತ್ತಾಳೆ.


 6. ಅವಳಂದರೆ ಮೋಜು. 


 ಅವಳು ಬುದ್ಧಿವಂತಳಾಗಿದ್ದರೂ, ಅವಳು ಮೂರ್ಖಳಾಗಿ ತನ್ನ ತಾನು ಅಪಹಾಸ್ಯ ಮಾಡಿಕೊಂಡು ಕೆಲವೊಮ್ಮೆ  ಹಾಸ್ಯ ಚಟಾಕಿ ಹಾರಿಸುತ್ತಾಳೆ, ಕೀಟಲೆ ಮಾಡುತ್ತಾಳೆ, ನಗುತ್ತಾಳೆ, ಅವಳಿದ್ದರೆ ಮೋಜಿಗೂ ಬರವಿಲ್ಲ.


 7. ಸಹಾಯ ಪಡೆಯುವಳು 


 ಅವಳು ಯಾವುದಾದರೂ ತೊಂದರೆಯಲ್ಲಿ ಸಿಲುಕಿಕೊಂಡಾಗ ಅಥವಾ ತೊಂದರೆಯಲ್ಲಿದ್ದಾಗ, ಸಹಾಯವನ್ನು ಹೇಗೆ ಕೇಳಬೇಕೆಂದು ಅವಳು ತಿಳಿದಿದ್ದಾಳೆ.  ಅವಳು ಒಬ್ಬಂಟಿಯಾಗಿ ಬಳಲುವುದಿಲ್ಲ. ನಾವು ಆಪತ್ತಿನಲ್ಲಿದ್ದಾಗ . ಸಮಯಕ್ಕೆ ಸರಿಯಾಗಿ ಸೂಕ್ತ ಸಹಾಯ ಬೇಡುವದು ತಪ್ಪಲ್ಲ.


 8. ಅವಳು ದೇವರ ಪ್ರತಿಬಿಂಬ.


ಅವಳು ಕಾಳಿ, ದುರ್ಗೆ, ದೇವಿ, ಶಾರದೆ, ಹೀಗೆ ನಾನಾ ರೂಪಗಳ ಪ್ರತಿಬಿಂಬವಾಗಿ

 ನೀವು ಅವಳನ್ನು ನೋಡುತ್ತೀರಿ ಮತ್ತು ದೇವರನ್ನು ನೋಡುತ್ತೀರಿ, ಅವಳು ಹೆಚ್ಚು ಹೆಚ್ಚು ದೇವರಂತೆ ಆಗುತ್ತಿದ್ದಾಳೆ  ಪ್ರೀತಿಸುವ, ಕ್ಷಮಿಸುವ, ಆಕರ್ಷಕವಾದ, ಬಲವಾದ ಮೌಲ್ಯಯುತ ಜೀವನವನ್ನು ಅವಳಿಂದ ಕಲಿಯಬಹುದು.


 9. ಅವಳೆಂದರೆ ಆತ್ಮವಿಶ್ವಾಸ 


 ಅವಳು ಅಂತರ್ಮುಖಿಯಾಗಿರಲಿ ಅಥವಾ ಬಹಿರ್ಮುಖಿಯಾಗಿರಲಿ, ಅವಳು ಹೆಚ್ಚಿನ ಸ್ವಾಭಿಮಾನವನ್ನು ಹೊಂದಿರುತ್ತಾಳೆ. ಆತ್ಮವಿಶ್ವಾಸದ ವಿಷಯದಲ್ಲಿ  ನೀವು ಅವಳನ್ನು ಬೀಟ್ ಮಾಡಲು  ಸಾಧ್ಯವಿಲ್ಲ.  ಅವಳು ಪ್ರಶಂಸನೀಯ ಗುಣಗಳನ್ನು ಹೊಂದಿದ್ದಾಳೆ


 10. ಅವಳು ಸಂಬಂಧಗಳಿಗೆ ಬೆಲೆ ಕೊಡುತ್ತಾಳೆ.


 ಉತ್ತಮ ಸ್ನೇಹಿತ, ಗೆಳತಿಯರ ಗುಂಪು ಅಥವಾ ಆಪ್ತ ಸ್ನೇಹಿತರ ಗುಂಪೇ ಆಗಿರಲಿ, ಅವಳು ಅವಳನ್ನು ಸುತ್ತುವರೆದಿರುವ ಬಲವಾದ ಜನರನ್ನು ಸುಲಭವಾಗಿ ಬೆರೆಯುತ್ತಾಳೆ.  ಅವಳು ತನ್ನ  ಗಂಡ ಅಥವಾ ಸ್ನೇಹಿತನ ಜೊತೆಯಲ್ಲಿ  ಸಂಬಂಧಕ್ಕೆ   ಬೆಲೆ ಕೊಡುವುದು  ಮಾತ್ರವಲ್ಲ      ಕುಟುಂಬದೊಂದಿಗಿನ ಸಂಬಂಧವನ್ನು ಸಹ  ಗೌರವಿಸುತ್ತಾಳೆ.


ಒಟ್ಟಾರೆ ಹೆಣ್ಣು ಅಗಣಿತ ಗುಣಗಳ ಗಣಿ ಅವಳಿಲ್ಲದ ಈ ಜಗವ ಉಳಿಸಿಕೊಳ್ಳಲು ಸಹ ಕಷ್ಟ. ಆದ್ದರಿಂದ ಹೆಣ್ಣನ್ನು ಗೌರವಿಸೋಣ. 



ಸಿಹಿಜೀವಿ ವೆಂಕಟೇಶ್ವರ

ತುಮಕೂರು

9900925529

 

11 December 2023

ತಂದೆ ತಾಯಿಗಳೇ ಅಸ್ತಿ... ಪುಸ್ತಕ ವಿಮರ್ಶೆ..

 



ತಂದೆ ತಾಯಿಗಳೇ ಅಸ್ತಿ...


ಮಾತೃದೇವೋಭವ ಪಿತೃದೇವೊಭವ ಆಚಾರ್ಯ ದೇವೋಭವ ಎಂದ ಪುಣ್ಯ ಭೂಮಿ ನಮ್ಮದು.  ಅದರಲ್ಲೂ ಮಾತಾಪಿತರ  ಋಣ ತೀರಿಸಲು ಅಸಾಧ್ಯ. ಪ್ರಮೋದ್ ಶ್ರೀಪಾದರಾವ್ ಕುಲಕರ್ಣಿ ರವರು ತಮ್ಮ ತಂದೆ ತಾಯಿಗಳು ಮಾಡಿದ ಆಸ್ತಿಯನ್ನು ಬಯಸದೇ ಅವರನ್ನೇ ನನ್ನ ಆಸ್ತಿ ಎಂದರು! ಎಂತಹ ಉದಾತ್ತ ಚಿಂತನೆ.  ಸ್ವಾರ್ಥವೇ ತುಂಬಿ ತುಳುಕುವ ಇಂದಿನ ಆಧುನಿಕ ಜಗತ್ತಿನಲ್ಲಿ ಕುಲಕರ್ಣಿ ರವರು ರಚಿಸಿರುವ ಈ ಕೃತಿ ಒಂದು ಆಶಾಕಿರಣದಂತೆ ತೋರುತ್ತದೆ.ಎಲ್ಲಾ ಮಕ್ಕಳು ತಮ್ಮ  ಹೆತ್ತವರನ್ನು   ಇಳಿವಯಸ್ಸಿನಲ್ಲಿ ಗೌರವದಿಂದ ಪ್ರೀತಿಯಿಂದ ನೋಡಿಕೊಂಡರೆ ವೃದ್ದಾಶ್ರಮಗಳ ಅಗತ್ಯವೇ ಇರುವುದಿಲ್ಲ.ಎಲ್ಲರೂ ಈ ಪುಸ್ತಕ ಓದೋಣ ನಮ್ಮ ತಂದೆ ತಾಯಿಗಳು ಬೆಲೆ ಕಟ್ಟದ ಆಸ್ತಿ ಎಂಬುದನ್ನು ಮನಗಂಡು ಅವರನ್ನು ಚೆನ್ನಾಗಿ ‌ನೋಡಿಕೊಳ್ಳೊಣ.ಹಾಗೂ ಮೌಲ್ಯಯುತ ಸಮಾಜದ ನಿರ್ಮಾಣಕ್ಕೆ ಒಣ ತೊಡೋಣ.


ಪುಸ್ತಕ: ಮಾತಾ ಪಿತೃಗಳ ಕೊಡುಗೆ

ಲೇಖಕರು: ಪ್ರಮೋದ್ ಶ್ರೀಪಾದರಾವ್ ಕುಲಕರ್ಣಿ


ಸಿಹಿಜೀವಿ ವೆಂಕಟೇಶ್ವರ

ತುಮಕೂರು.


06 December 2023

ಸಿಹಿಜೀವಿಯ ಹಾಯ್ಕುಗಳು

 



ಹಾಯ್ಕುಗಳು 


ಸುಮ್ಮನೇ ಅಲ್ಲ 

ಲೇಖನದ  ಕಿರೀಟ

ತಲೆಬರಹ.



ಕಲಿಸುವುದು 

ತಗ್ಗಿಬಗ್ಗುವುದನು 

ತಲೆಬಾಗಿಲು.


ಸಿಹಿಜೀವಿ ವೆಂಕಟೇಶ್ವರ

ತುಮಕೂರು

ಗಜ ನಮನ

 



ಗಜ ನಮನ 


ಅಕಾಲಿಕ ಸಾವಿಗೀಡಾದ ಅಮ್ಮನ

ಅಂಬಾರಿ ಹೊತ್ತ ಅರ್ಜುನ|

ನಾಡಿನ ಜನರೆಲ್ಲರ ಪರವಾಗಿ

ಜಗ ಮೆಚ್ಚಿದ ಗಜ ಗೆ ನಮನ ||


ಸಿಹಿಜೀವಿ ವೆಂಕಟೇಶ್ವರ

ತುಮಕೂರು

01 December 2023

ಯಶಸ್ವಿ ದಿನಕ್ಕೆ ದಶಸೂತ್ರಗಳು.


 ಯಶಸ್ಸಿ ದಿನಕ್ಕೆ ದಶಸೂತ್ರಗಳು.


"ನೀನು ಟೈಮ್ ಹೇಗೆ ಮೇನೇಜ್ ಮಾಡ್ತೀಯಾ? ಪೇಪರ್ ಗೆ ಬರೀತಿಯಾ, ಪುಸ್ತಕ ಬರೀತಿಯಾ, ಹಾಡು ಹೇಳ್ತಿಯಾ, ಪ್ಯಾಮಿಲಿ ಜೊತೆಯಲ್ಲಿ ಆಗಾಗ್ಗೆ ಪ್ರವಾಸ ಹೋಗ್ತೀಯಾ, ಪ್ರೋಗ್ರಾಮ್ ಆರ್ಗನೈಸ್ ಮಾಡ್ತೀಯಾ ಇದಕ್ಕೆಲ್ಲ ಟೈಮ್ ಹೇಗೆ ಸಿಗುತ್ತೆ?"
ಇವು   ನನ್ನ ಆತ್ಮೀಯರು ಮತ್ತು ಸ್ನೇಹಿತರು ನನಗೆ ಆಗಾಗ್ಗೆ ಕೇಳುವ ಪ್ರಶ್ನೆಗಳು. ಅದಕ್ಕೆ ನನ್ನ ಉತ್ತರ ಪ್ರತಿ ದಿನ ಬೇಗ ಏಳುವುದು ಯೋಜನಾ ಬದ್ಧವಾಗಿ ಕೆಲಸ ಮಾಡುವುದು.
ಅದರ ಜೊತೆಯಲ್ಲಿ ಈ ಕೆಳಕಂಡ ಅಂಶಗಳನ್ನು ಅಳವಡಿಸಿಕೊಳ್ಳುವುದು. ಈ ಅಂಶಗಳು ನಿಮಗೆ ಇಷ್ಟವಾದರೆ ನೀವೂ ಅಳವಡಿಸಿಕೊಳ್ಳಬಹುದು. ಪ್ರಯತ್ನಿಸಿ.

1. ಸ್ಪಷ್ಟ . ಉದ್ದೇಶ

ನಮ್ಮ ದಿನವನ್ನು  ಸ್ಪಷ್ಟವಾದ ಉದ್ದೇಶದೊಂದಿಗೆ ಪ್ರಾರಂಭಿಸೋಣ.
ನಮ್ಮ ಆದ್ಯತೆಗಳನ್ನು ಪ್ರತಿಬಿಂಬಿಸಲು ಮತ್ತು ದಿನಕ್ಕೆ ನಮ್ಮ ಉದ್ದೇಶಗಳನ್ನು ಹೊಂದಿಸಲು ಪ್ರತಿ ಬೆಳಿಗ್ಗೆ ಕೆಲವು ನಿಮಿಷಗಳನ್ನು ತೆಗೆದುಕೊಳ್ಳೋಣ . ಇದು ನಮಗೆ ಏಕಾಗ್ರತೆಯಲ್ಲಿರಲು ಮತ್ತು ನಮ್ಮ ಸಮಯವನ್ನು ಸದುಪಯೋಗಪಡಿಸಿಕೊಳ್ಳಲು ಸಹಾಯ ಮಾಡುತ್ತದೆ. 

2. ಒಂದು ಸಮಯದಲ್ಲಿ ಒಂದೇ  ಕಾರ್ಯ.

  ನಾವು ಒಂದೇ ಬಾರಿಗೆ ಹಲವಾರು ಕೆಲಸಗಳನ್ನು ಮಾಡಲು ಪ್ರಯತ್ನಿಸಿದಾಗ  ತಪ್ಪುಗಳನ್ನು ಮಾಡುವ ಸಾಧ್ಯತೆಯಿದೆ ಮತ್ತು ಕಾರ್ಯಗಳನ್ನು ಪೂರ್ಣಗೊಳಿಸಲು ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ.  ಬದಲಾಗಿ  ಒಂದು ಸಮಯದಲ್ಲಿ ಒಂದು ಕಾರ್ಯವನ್ನು ಕೇಂದ್ರೀಕರಿಸಿ ಮತ್ತು ನಮ್ಮ ಸಂಪೂರ್ಣ ಗಮನವನ್ನು ನೀಡಿದರೆ ಆ ಕಾರ್ಯ ಯಶಸ್ವಿಯಾಗುವುದರಲ್ಲಿ ಸಂದೇಹವಿಲ್ಲ.

3.ವೇಳಾಪಟ್ಟಿಯಿರಲಿ.

ನಮ್ಮ ದೈನಂದಿನ ಕಾರ್ಯಗಳನ್ನು ನಿಗದಿಪಡಿಸಿಕೊಂಡು ಒಂದು ವೇಳಾಪಟ್ಟಿಯಂತೆ ಕಾರ್ಯನಿರ್ವಾಹಿಸಬೇಕು.  ಅದು ಲಿಖಿತವಾಗಿರಬೇಕಿಲ್ಲ.ಮನದಲ್ಲಿ ಮಾಡಿಕೊಂಡರೂ ಆದೀತು.   ಇದು ನಮಗೆ ನಿಗದಿತ ಸಮಯದಲ್ಲಿ ನಿಗದಿತ ಕೆಲಸ ಮಾಡಲು ಮತ್ತು ಆಲಸ್ಯವನ್ನು ತಪ್ಪಿಸಲು ಸಹಾಯ ಮಾಡುತ್ತದೆ.

4. ಸಹಕಾರ ಸಮನ್ವಯ

ಕೆಲವೊಮ್ಮೆ ಎಲ್ಲಾ ಕೆಲಸಗಳನ್ನು ನಾವೇ ಮಾಡಲು ಹೋಗುತ್ತೇವೆ.
ಎಲ್ಲವನ್ನೂ ನಾವೇ ಮಾಡಬೇಕು ಎಂದು ಭಾವಿಸಬೇಡಿ.  ಸಾಧ್ಯವಾದಾಗಲೆಲ್ಲಾ ಕಾರ್ಯಗಳನ್ನು ಇತರರಿಗೆ ನಿಯೋಜಿಸಿ.  ಇದು ನಮ್ಮ ಸಮಯವನ್ನು ಉಳಿಸುತ್ತದೆ ಇದರಿಂದ ನಮ್ಮ ಪ್ರಮುಖ ಆದ್ಯತೆಗಳ ಮೇಲೆ ನಾವು ಗಮನಹರಿಸಬಹುದು.

5. ಇಲ್ಲ ಎಂದು ಬಿಡಿ

ಕೆಲವೊಮ್ಮೆ ಯಾವುದೋ ಮುಲಾಜಿಗೆ ಬಿದ್ದು ನಮ್ಮ ಇಷ್ಟವಿಲ್ಲದ ಕಾರ್ಯ ಒಪ್ಪಿಕೊಂಡು ಒದ್ದಾಡುತ್ತೇವೆ. ಅದಕ್ಕೆ ಬದಲಾಗಿ
ನಮ್ಮ ಗುರಿಗಳೊಂದಿಗೆ ಹೊಂದಿಕೆಯಾಗದ ಬದ್ಧತೆಗಳಿಗೆ ಇಲ್ಲ ಎಂದು ಹೇಳಿಬಿಡೋಣ.  ನಮ್ಮ ವೇಳಾಪಟ್ಟಿಗೆ ಹೊಂದಿಕೆಯಾಗದ ಅಥವಾ ನಮ್ಮ ಗುರಿಗಳಿಗೆ ಹೊಂದಿಕೆಯಾಗದ ವಿಷಯಗಳಿಗೆ ಇಲ್ಲ ಎಂದು ಹೇಳುವುದು ಸರಿ.  ನಮ್ಮ ಸಮಯ ಮತ್ತು ಶಕ್ತಿಯನ್ನು ರಕ್ಷಿಸಲು ಹಿಂಜರಿಯದಿರೋಣ.

6. ವಿರಾಮವೂ ಇರಲಿ

ನಿರಂತರವಾದ ಕೆಲಸ ಮೈ ಮನಗಳಿಗೆ ಒತ್ತಡ ತಂದು ನಮ್ಮ ಕಾರ್ಯದಕ್ಷತೆಯನ್ನು ಕಡಿಮೆಮಾಡುತ್ತವೆ.ಅದಕ್ಕಾಗಿ
ಸೂಕ್ತ ಕಾಲದಲ್ಲಿ  ವಿರಾಮಗಳನ್ನು ತೆಗೆದುಕೊಳ್ಳೋಣ.  ನಮ್ಮ ಮನಸ್ಸು ಮತ್ತು ದೇಹವನ್ನು ರಿಫ್ರೆಶ್ ಮಾಡಲು ಕನಿಷ್ಠ ಪ್ರತಿ ಗಂಟೆಗೊಮ್ಮೆ  ವಿಶ್ರಾಂತಿ ಪಡೆಯೋಣ.ವಿಶ್ರಾಂತಿ ಎಂದರೆ ಬರೀ ಮಲಗುವುದು ,ಸುಮ್ಮನೆ ಕೂರುವುದಲ್ಲ.ಕೆಲಸದ ಬದಲಾವಣೆಯೂ ವಿಶ್ರಾಂತಿಯೇ.  ವಿರಾಮಗಳನ್ನು ತೆಗೆದುಕೊಳ್ಳುವುದು ನಮಗೆ ದಿನವಿಡೀ ಉಲ್ಲಸಿತವಾಗಿರಲು  ಮತ್ತು ಹೆಚ್ಚು  ಉತ್ಪಾದಕವಾಗಿರಲು ಸಹಾಯ ಮಾಡುತ್ತದೆ.

7. ಯಶಸ್ಸನ್ನು ಸಂಭ್ರಮಿಸೋಣ

ಆ ದಿನದಂದು ನಮಗೆ ಚಿಕ್ಕ ಯಶಸ್ಸು ಸಿಕ್ಕರೆ ಅದನ್ನು ಸಂಭ್ರಮಿಸೋಣ.
ಆತ್ಮೀಯರೊಂದಿಗೆ ,ಸಮಾನ ಮನಸ್ಕರೊಂದಿಗೆ  ಯಶಸ್ಸನ್ನು ಆಚರಿಸೋಣ.  ನಮ್ಮ ಸಾಧನೆಗಳನ್ನು ಶ್ಲಾಘಿಸಲು ಸಮಯ ತೆಗೆದುಕೊಳ್ಳೋಣ  ಅವುಗಳು ಎಷ್ಟೇ ಚಿಕ್ಕ ಚಿಕ್ಕ ಯಶಸ್ಸುಗಳಾದರೂ     ಅವು ನಮ್ಮನ್ನು ಪ್ರೇರೇಪಿಸಲು ಮತ್ತು ಮುಂದುವರಿಯಲು ಸಹಾಯ ಮಾಡುತ್ತದೆ.

8. ತಪ್ಪುಗಳಿಂದ ಕಲಿಯೋಣ 

ನಮ್ಮ ದೈನಂದಿನ ಜೀವನದಲ್ಲಿ ತಿಳಿದು ತಿಳಿಯದೇ ಅನೇಕೆ ತಪ್ಪುಗಳನ್ನು ಮಾಡುತ್ತೇವೆ.ತಪ್ಪು ಮಾಡೋದು ಸಹಜ ತಿದ್ದಿ ನಡೆಯೋನು ಮನುಜ ಎಂಬಂತೆ ನಮ್ಮ ತಪ್ಪುಗಳಿಂದ ಪಾಠಗಳನ್ನು  ಕಲಿಯೋಣ.  ನಮ್ಮ ತಪ್ಪುಗಳ  ಮೇಲೆ ನಮ್ಮನ್ನು ಕೈಲಾಗದವರು ಸೋತವರೆಂದು ಹಣೆಪಟ್ಟಿ ಕಟ್ಟಿಕೊಳ್ಳುವುದು ಬೇಡ  ಬದಲಿಗೆ ತಪ್ಪುಗಳನ್ನು ಸರಿಪಡಿಸಿಕೊಂಡು  ಸುಧಾರಿಸಿಕೊಂಡು  ಅವಕಾಶವಾಗಿ ಬಳಸಿಕೊಳ್ಳೋಣ.

9. ಧನಾತ್ಮಕ ಜನರು

ಕೆಲವರು ಯಾವಾಗಲೂ ಋಣಾತ್ಮಕವಾಗಿ ಮಾತನಾಡುವ ಮೂಲಕ ನಮ್ಮ ಕಾರ್ಯಗಳಲ್ಲಿ ಆತ್ಮವಿಶ್ವಾಸ ಕಡಿಮೆಯಾಗುವಂತೆ ಮಾಡುತ್ತಾರೆ. ನಮ್ಮ ಸುತ್ತ ಯಾವಾಗಲೂ ಧನಾತ್ಮಕ ಚಿಂತನೆ ಜನರಿರುವಂತೆ ನೋಡಿಕೊಳ್ಳೋಣ.
ನಾವು ಸಮಯ ಕಳೆಯುವ ಜನರು ನಮ್ಮ ಯಶಸ್ಸಿನ ಮೇಲೆ ದೊಡ್ಡ ಪ್ರಭಾವ ಬೀರಬಹುದು.  ನಮ್ಮನ್ನು ಮತ್ತು ನಮ್ಮ ಗುರಿಗಳನ್ನು ನಂಬುವ ಸಕಾರಾತ್ಮಕವಾಗಿ  ಬೆಂಬಲ ನೀಡುವ ಜನರೊಂದಿಗಿರೋಣ. 

10.  ದೈಹಿಕ ಮತ್ತು ಮಾನಸಿಕ ಆರೋಗ್ಯ

ಆರೋಗ್ಯವೇ ಭಾಗ್ಯ. ನಮ್ಮ ಆರೋಗ್ಯವು ನಮ್ಮ ಪ್ರಮುಖ ಆಸ್ತಿಯಾಗಿದೆ.  ಪ್ರತಿದಿನ ಸಾಕಷ್ಟು ನಿದ್ದೆ ಮಾಡಬೇಕು.ಆರೋಗ್ಯಕರ ಆಹಾರವನ್ನು ಸೇವಿಸಿ ಮತ್ತು ನಿಯಮಿತವಾಗಿ ಯೋಗ ಧ್ಯಾನ ಪ್ರಾಣಾಯಾಮ ಮಾಡುತ್ತಾ   ವಿಶ್ರಾಂತಿಯನ್ನು ಪಡೆಯುತ್ತಾ  ಒತ್ತಡವನ್ನು ನಿವಾರಿಸಿಕೊಳ್ಳೋಣ. ಇದರ ಪರಿಣಾಮವಾಗಿ ಉತ್ತಮ ಮಾನಸಿಕ ಮತ್ತು ದೈಹಿಕ ಆರೋಗ್ಯ ನಮ್ಮದಾಗುತ್ತದೆ.

ಈ ಮೇಲಿನ ದಶ ಸೂತ್ರಗಳನ್ನು    ಅನುಸರಿಸುವ ಮೂಲಕ, ನಮ್ಮ ದೈನಂದಿನ ಕಾರ್ಯಸೂಚಿಯನ್ನು ನಾವು ಹೆಚ್ಚು ಬಳಸಿಕೊಳ್ಳಬಹುದು ಮತ್ತು ನಮ್ಮ ಗುರಿಗಳನ್ನು ಸಾಧಿಸಬಹುದು.  ನೆನಪಿಡಿ, ಯಶಸ್ಸು ಕಷ್ಟಪಟ್ಟು ಕೆಲಸ ಮಾಡುವುದಲ್ಲ. ಇದರ ಬದಲಾಗಿ ಸ್ಮಾರ್ಟ್ ವರ್ಕ್ ಮಾಡಬೇಕು. ದಿನಕರನು ದಿನವೂ ತನ್ನ ಕಾರ್ಯವನ್ನು ನಿಲ್ಲಿಸದೇ ಕ್ರಮಬದ್ಧವಾಗಿ ಮಾಡುವನು ನಾವು ಸಹ ನಮ್ಮ ಮುಂದಿನ ಯಶಸ್ಸು ಗಳಿಸಲು ಈ ದಿನವನ್ನು ಫಲದಾಯಕವಾಗಿ ಮಾಡಿಕೊಳ್ಳೋಣ.

ಸಿಹಿಜೀವಿ ವೆಂಕಟೇಶ್ವರ
ತುಮಕೂರು
9900925529

30 November 2023

ಸಂಸಾರದ ಗಾಡಿ ,ಚುಟುಕು

 


ಸಂಸಾರದ ಗಾಡಿ 


ಜರಿಯದಿರು ಇದು ನನ್ನ ಜೋಪಡಿ 

ನೀನೇ ಬೆರಗಾಗುವೆ ನನ್ನಪ್ರೀತಿ ನೋಡಿ

ಮಲಗಿಸುವೆ ನಿನ್ನ ಲಾಲಿ ಹಾಡಿ

ಇಬ್ಬರೂ ಎಳೆಯೋಣ ಸಂಸಾರದ ಗಾಡಿ 

ಕರೆದರೆ ಎಲ್ಲಿದ್ದರೂ ಬರುವೆ ಓಡಿ 

ಜೀವಿಸೋಣ ಹಕ್ಕಿಗಳಂತೆ ಜೊತೆಗೂಡಿ.


ಸಿಹಿಜೀವಿ ವೆಂಕಟೇಶ್ವರ

ತುಮಕೂರು

ರೋಗಮುಕ್ತರಾಗಿ ದೀರ್ಘಕಾಲ ಜೀವಿಸೋಣ.

 


ರೋಗಮುಕ್ತರಾಗಿ ದೀರ್ಘಕಾಲ ಜೀವಿಸೋಣ.

ಸಾವೆಂದರೆ ಎಲ್ಲರಿಗೂ ಅವ್ಯಕ್ತ ಭಯ. ಸಾಯಲು ಯಾರೂ ತಯಾರಿರುವುದಿಲ್ಲ.ಅದರಲ್ಲೂ ಅಕಾಲಿಕ ಸಾವನ್ನು ಯಾರೂ ಬಯಸುವುದಿಲ್ಲ.ಆದರೂ ಇತ್ತೀಚಿನ ದಿನಗಳಲ್ಲಿ ಪ್ರಾಂತ್ಯ ಭೇದಗಳಿಲ್ಲದೇ ಸಾಯಬಾರದ ವಯಸ್ಸಿನಲ್ಲಿ ಎಲ್ಲಾ ವಯೋಮಾನದವರು ಮರಣಹೊಂದುತ್ತಿರುವುದು ಆಘಾತಕಾರಿ ಸಂಗತಿ.ಇದಕ್ಕೆ ಹವಾಮಾನ ವೈಪರೀತ್ಯ, ಆಹಾರ ಪದ್ದತಿ, ಮಾಲಿನ್ಯ,ಒತ್ತಡದ ಜೀವನ, ಆಶಿಸ್ತಿನ ಜೀವನಶೈಲಿ ಹೀಗೆ ನಾನಾ ಕಾರಣಗಳನ್ನು ಪಟ್ಟಿ ಮಾಡಬಹುದು.

ಇತ್ತೀಚಿನ ಒಂದು  ಅಧ್ಯಯನದ ಪ್ರಕಾರ, ಆರೋಗ್ಯಕರ ಆಹಾರವನ್ನು ಅಳವಡಿಸಿಕೊಂಡು ನಮ್ಮ ಜೀವನ ಶೈಲಿಯನ್ನು ಸ್ವಲ್ಪಮಟ್ಟಿಗೆ ಬದಲಾವಣೆ ಮಾಡಿಕೊಂಡರೆ     ಮಧ್ಯವಯಸ್ಕ ವ್ಯಕ್ತಿಗಳ ಜೀವಿತಾವಧಿಯನ್ನು ಸುಮಾರು ಒಂದು ದಶಕದವರೆಗೆ ವಿಸ್ತರಿಸಬಹುದು ಎಂಬ ಮಾಹಿತಿಯನ್ನು ನೀಡಿದೆ.  ಈ ವಾರದ ಆರಂಭದಲ್ಲಿ ನೇಚರ್ ಫುಡ್ ಜರ್ನಲ್ನಲ್ಲಿ ಪ್ರಕಟವಾದ ಸಂಶೋಧನೆಯು ಯುಕೆ ಬಯೋಬ್ಯಾಂಕ್ ಅಧ್ಯಯನದಲ್ಲಿ ಭಾಗವಹಿಸುವ ಸುಮಾರು ಅರ್ಧ ಮಿಲಿಯನ್ ಬ್ರಿಟಿಷ್ ನಿವಾಸಿಗಳ ಆರೋಗ್ಯ ಡೇಟಾವನ್ನು ವಿಶ್ಲೇಷಿಸಿದೆ, ಕಾಲಾನಂತರದಲ್ಲಿ ಅವರ ಆಹಾರ ಪದ್ಧತಿಯನ್ನು ದಾಖಲಿಸಿದೆ.
ಸಂಶೋಧಕರು 467,354 ಭಾಗವಹಿಸುವವರನ್ನು ಅವರ ಆಹಾರದ ಆಯ್ಕೆಗಳ ಆಧಾರದ ಮೇಲೆ ವರ್ಗೀಕರಿಸಿ  ಈ ಅಭ್ಯಾಸಗಳು ಹೇಗೆ ಆರೋಗ್ಯದ ಮೇಲೆ ಪ್ರಭಾವ ಬೀರುತ್ತವೆ ಎಂಬುದನ್ನು ಟ್ರ್ಯಾಕ್ ಮಾಡಿದ್ದಾರೆ. ಆರೋಗ್ಯಕರ ಆಹಾರದಿಂದ ದೀರ್ಘಾಯುಷ್ಯಕ್ಕೆ ಸಂಬಂಧಿಸಿದ 40 ರ ವಯಸ್ಸಿನ ವ್ಯಕ್ತಿಗಳು ತಮ್ಮ ಜೀವಿತಾವಧಿಯಲ್ಲಿ  ಸುಮಾರು 10 ವರ್ಷಗಳಷ್ಟು ಹೆಚ್ಚು ಕಾಲ ಜೀವಿಸಬಹುದು ಎಂಬುದನ್ನು  ಬಹಿರಂಗಪಡಿಸಿದೆ. 

ಹೆಚ್ಚಿನ  ಜೀವಿತಾವಧಿಯು ನಮ್ಮದಾಗಲು  ಆರೋಗ್ಯಕರ ಆಹಾರದ ಪದ್ಧತಿಯನ್ನು ಅಳವಡಿಸಿಕೊಳ್ಳುವುದು ಅನಿವಾರ್ಯ.  ಆಹಾರ ಪದ್ಧತಿ ಈ ಕೆಳಗಿನಂತಿದ್ದರೆ  ಉತ್ತಮ ಆಯುರಾರೋಗ್ಯ ನಮ್ಮದಾಗುವಲ್ಲಿ ಸಂದೇಹವಿಲ್ಲ.

ಅನಾರೋಗ್ಯಕರ ಕೊಬ್ಬು ,ಸಕ್ಕರೆ, ಸೋಡಿಯಂ  ಪದಾರ್ಥಗಳನ್ನು ಅಧಿಕವಾಗಿ ಸೇವಿಸಿದರೆ ಹೃದ್ರೋ, ಪಾರ್ಶ್ವವಾಯು ಮತ್ತು ಟೈಪ್ 2 ಮಧುಮೇಹದಂತಹ ದೀರ್ಘಕಾಲದ ಕಾಯಿಲೆಗಳ ಬೆಳವಣಿಗೆಗೆ ಕಾರಣವಾಗಬಹುದು. ಆದಷ್ಟು ಇಂತಹ ಆಹಾರವನ್ನು ಕಡಿಮೆ ಸೇವಿಸೋಣ.

ಪೈಬರ್,ಜೀವಸತ್ವಗಳು, ಖನಿಜಗಳು, ಮತ್ತು ಪೋಷಕಾಂಶಗಳನ್ನು ಅಗತ್ಯಕ್ಕೆ ಅನುಗುಣವಾಗಿ ತೆಗೆದುಕೊಳ್ಳೋಣ. ಇಂತಹ ಸಮತೋಲಿತ ಆಹಾರ ಆರೋಗ್ಯವನ್ನು ಕಾಪಾಡಿಕೊಳ್ಳಲು ಮತ್ತು ದೀರ್ಘಕಾಲದ ಕಾಯಿಲೆಗಳ ವಿರುದ್ಧ ರಕ್ಷಿಸುವಲ್ಲಿ ನಿರ್ಣಾಯಕ ಪಾತ್ರವನ್ನು ವಹಿಸುತ್ತವೆ.

ಹಣ್ಣು ತರಕಾರಿಗಳಲ್ಲಿ   ಜೀವಸತ್ವಗಳು, ಖನಿಜಗಳು, ಫೈಬರ್ ಮತ್ತು ಉತ್ಕರ್ಷಣ ನಿರೋಧಕಗಳು ಸಮೃದ್ಧವಾಗಿವೆ. ಅವು  ಒಟ್ಟಾರೆ ಆರೋಗ್ಯಕ್ಕೆ  ಉತ್ತಮ  ಕೊಡುಗೆ ನೀಡುತ್ತವೆ  ಮತ್ತು ವಿವಿಧ ರೋಗಗಳಿಂದ ರಕ್ಷಿಸಲು ಸಹಾಯ ಮಾಡುತ್ತವೆ. ಅದ್ದರಿಂದ ಪ್ರತಿ ದಿನ ಇವುಗಳು ನಮ್ಮ ಆಹಾರದಲ್ಲಿರುವಂತೆ ಗಮನಹರಿಸೋಣ.

ಶಾಖಾಹಾರಿಗಳು ಮೀನುಗಳನ್ನು ಸೇವಿಸಬಹುದು ಸಾಲ್ಮನ್, ಮ್ಯಾಕೆರೆಲ್ ಮತ್ತು ಸಾರ್ಡೀನ್ಗಳಂತಹ ಮೀನುಗಳು ಒಮೆಗಾ -3 ಕೊಬ್ಬಿನಾಮ್ಲಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿರುತ್ತವೆ, ಇದು ಹೃದಯದ ಆರೋಗ್ಯಕ್ಕೆ ಪ್ರಯೋಜನಕಾರಿ ಮತ್ತು ದೀರ್ಘಾಯುಷ್ಯಕ್ಕೆ ಕೊಡುಗೆ ನೀಡುತ್ತದೆ

ಬೀಜಗಳು ಮತ್ತು ಧಾನ್ಯಗಳು ನಮ್ಮ ಆರೋಗ್ಯದಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ.   
ಇವು ಆರೋಗ್ಯಕರ ಕೊಬ್ಬುಗಳು, ಫೈಬರ್, ಜೀವಸತ್ವಗಳು ಮತ್ತು ಖನಿಜಗಳ ಉತ್ತಮ ಮೂಲಗಳಾಗಿವೆ.  ಹೃದಯದ ಆರೋಗ್ಯಕ್ಕೆ ಪ್ರಯೋಜನಕಾರಿಯಾಗಿವೆ  ಮತ್ತು ತೂಕವನ್ನು ನಿರ್ವಹಿಸಲು ಸಹಾಯ ಮಾಡುತ್ತವೆ
ಕಂದು ಅಕ್ಕಿ,  ಗೋಧಿಯಂತಹ ಆಹಾರಗಳು ಸಂಕೀರ್ಣ ಕಾರ್ಬೋಹೈಡ್ರೇಟ್ಗಳು, ಫೈಬರ್ ಮತ್ತು ವಿವಿಧ ಪೋಷಕಾಂಶಗಳನ್ನು ಒಳಗೊಂಡಿರುತ್ತವೆ. ಅವು  ಸ್ಥಿರವಾದ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಾಪಾಡಿಕೊಳ್ಳಲು ಮತ್ತು ಒಟ್ಟಾರೆ ಆರೋಗ್ಯಕ್ಕೆ ಕೊಡುಗೆ ನೀಡಲು ಸಹಾಯ ಮಾಡುತ್ತವೆ.

ಹೀಗೆ ಆಹಾರಕ್ಕೂ ನಮ್ಮ ಸರಾಸರಿ ಜೀವಿತಾವಧಿಗೂ ಪರಸ್ಪರ ಸಂಬಂಧವಿರುವುದರಿಂದ ಉತ್ತಮ ಸಮತೋಲಿತ ಆಹಾರ ಪದ್ಧತಿಯನ್ನು ಅಳವಡಿಸಿಕೊಳ್ಳೋಣ ಮತ್ತು ರೋಗಮುಕ್ತರಾಗಿ  ಆರೋಗ್ಯದಿಂದ  ದೀರ್ಘಕಾಲ ಬಾಳೋಣ.

ಸಿಹಿಜೀವಿ ವೆಂಕಟೇಶ್ವರ
ತುಮಕೂರು
9900925529


29 November 2023

ಕೈಲಾಸಪತಿಯನ್ನು ಜಯಿಸಿದ ನಕ್ಕೀರ

 ಕೈಲಾಸಪತಿಯನ್ನು ಜಯಿಸಿದ ನಕ್ಕೀರ 


 ಅವನ ಹೆಸರು ನಕ್ಕೀರ ಯಾವಾಗಲೂ ಸಮುದ್ರದ ತಡಿ­ಯಲ್ಲೇ ಇರುವವನು. ಅವನ ಕೆಲಸ­ವೆಂದರೆ ಸಮುದ್ರದ ಆಳಕ್ಕೆ ಮುಳುಗಿ ಅಲ್ಲಿದ್ದ ಮುತ್ತುಗಳನ್ನು ಆಯ್ದು ತರು­ವುದು. ಅದು ಅವನಿಗೆ ದೈಹಿಕ ಕೆಲಸ­ವಾದರೂ ಅವನ ಪ್ರತಿ ಉಸಿರಿನಲ್ಲಿ ಶಿವನಿದ್ದ. ಅವನು ನೀರಿನಲ್ಲಿ ಮುಳುಗುವಾಗ, ಮುತ್ತು­ಗಳನ್ನು ಆಯುವಾಗ, ನೀರಿನಿಂದ ಹೊರಬಂದು ಅವುಗಳನ್ನು ಬೇರ್ಪಡಿ­ಸುವಾಗ ಪ್ರತಿಕ್ಷಣವೂ ಶಿವಧ್ಯಾನ. ಅವನಿಗೆ ಶಿವಭಕ್ತನೆಂದು ಅಷ್ಟು ದೊಡ್ಡ ಹೆಸರು ಬಂದ­ದ್ದನ್ನು ಕಂಡು ಶಿವನಿಗೂ ಅಸೂಯೆಯಾಯಿತಂತೆ.  ಅವನನ್ನು ಕಂಡು ಪರೀಕ್ಷಿಸ­ಬೇಕೆಂದು ಶಿವ ಸಮುದ್ರ ದಂಡೆಗೆ ಬಂದು ಪ್ರತ್ಯಕ್ಷನಾದ. ನಕ್ಕೀರ ತನ್ನ ಕಾಯಕ­ದಲ್ಲಿ ಎಷ್ಟು ತನ್ಮಯ­ನಾಗಿದ್ದನೆಂದರೆ ಮುಂದೆ ಶಿವ ನಿಂತದ್ದು ಕಾಣಲಿಲ್ಲವಂತೆ! ಅವನನ್ನು ಗಮನಿಸದೇ ನೀರಿನಲ್ಲಿ ಮುಳುಗು ಹಾಕಿದ. ಶಿವನಿಗೆ ಕೋಪ ಬಂತು.  ತನ್ನ ಭಕ್ತನೆಂದು ಜನ ಈತನನ್ನು ಕೊಂಡಾಡುತ್ತಿದ್ದರೆ ಈತ ಸಾಕ್ಷಾತ್ ತಾನೇ ಮುಂದೆ ಬಂದು ನಿಂತರೂ ಗಮನಿಸುತ್ತಿಲ್ಲ. ಶಿವನ ಕೋಪ ಹೆಚ್ಚಾ­ಯಿತು.


ನಕ್ಕೀರ ನೀರಿನಿಂದ ಮೇಲೆ ಬಂದೊಡನೆ ಕ್ರುದ್ಧನಾಗಿ ತನ್ನ ಮೂರನೆಯ ಕಣ್ಣನ್ನು ತೆರೆದ! ಶಿವನ ಹಣೆಗಣ್ಣು ತೆರೆದರೆ ಪ್ರಪಂಚವೇ ಭಸ್ಮವಾಗಿ ಹೋಗುತ್ತದೆ.  ನಕ್ಕೀರ ಹೇಗೆ ಬದುಕಿ ಉಳಿದಾನು? ಆದರೆ ಆಶ್ಚರ್ಯ! ಶಿವನ ತೆರೆದ ಕಣ್ಣೀರಿನ ಬೆಂಕಿಯ ಉರಿ ನಕ್ಕೀರನಿಗೆ ತಗುಲಲಿಲ್ಲ. ಅವನು ತನ್ನ ಕೆಲಸದಲ್ಲೇ ತೊಡಗಿದ್ದ. ಶಿವ ಆಶ್ಚರ್ಯದಿಂದ ನಕ್ಕೀರನನ್ನು ಕೇಳಿದ,  ‘ಅಲ್ಲಯ್ಯ,  ನನ್ನನ್ನು ಕಾಣಲೆಂದು ಅನೇ­ಕಾ­ನೇಕ  ಶರಣರು ನೂರಾರು ವರ್ಷ ತಪಸ್ಸು ಮಾಡಿದರೂ ದೊರೆಯದ ನಾನು, ನಿನ್ನ ಮುಂದೆಯೇ ನಿಂತಿದ್ದರೂ ನಿರ್ಲಕ್ಷ್ಯದಿಂದ ಕೆಲಸ ಮಾಡುತ್ತೀ­ದ್ದೀಯಾ.  ಇದಕ್ಕೆ ಏನು ಕಾರಣ?’ ಆಗ ನಕ್ಕೀರ, ‘ದೇವಾ, ನಾನು ನನ್ನ ಕೆಲಸದಲ್ಲಿ ತನ್ಮಯ­ನಾಗಿದ್ದೆ.  ನನಗೆ ಕಾಯಕವೇ ಪೂಜೆ.  ಆ ಕಾಯಕ ನೀನೇ.ನೀನೇ ನನ್ನ ಕಾಯಕದ ಉದ್ದೇಶ’ ಎಂದಾಗ ಶಿವ, ‘ಹೌದು, ಆದರೆ ನನ್ನ ಉರಿಗಣ್ಣಿನ ಬೆಂಕಿ  ನಿನ್ನನ್ನು ಯಾಕೆ ಸುಡಲಿಲ್ಲ?’ ಎಂದು ಕೇಳುತ್ತಾನೆ.


ಅದಕ್ಕೆ ನಕ್ಕೀರ, ‘ದೇವಾ, ನಾನು ದುಡಿದು ತಿನ್ನುವವನು, ನೀನು ತಿರಿದು ತಿನ್ನುವವನು. ದುಡಿದು ತಿನ್ನುವವನು ತಿರಿದು ತಿನ್ನುವವನಿಗಿಂತ ದೊಡ್ಡವನು.  ನಿನ್ನ ಉರಿಗಣ್ಣಿಗಿಂತ ನನ್ನ ಕಾಯಕದ ಶಕ್ತಿ ಹೆಚ್ಚು’ ಎನ್ನುತ್ತಾನೆ.  ಈ ಮಾತಿಗೆ ಶಿವ ಮೆಚ್ಚುತ್ತಾನೆ, ನಕ್ಕೀರನ ಕಾಯಕದ ಶಕ್ತಿ­ಯನ್ನು ಹೊಗಳುತ್ತಾನೆ, ಆಶೀರ್ವದಿ­ಸುತ್ತಾನೆ. 


ಕಾಯಕವೇ ಕೈಲಾಸ ಎಂದ ಶರಣರ ಚಿಂತನೆಯು ಇದೇ ಆಶಯವನ್ನು ಹೊಂದಿದೆ.ನಮ್ಮ ಕರ್ತವ್ಯವೇ ನಮಗೆ ದೇವರಾಗಲಿ ಎಲ್ಲರೂ ದುಡಿದು ತಿನ್ನುವ ಗುಣವನ್ನು ಬೆಳೆಸಿಕೊಳ್ಳೋಣ.



ಸಿಹಿಜೀವಿ ವೆಂಕಟೇಶ್ವರ

ತುಮಕೂರು

ಯಶಸ್ಸಿಗೆ ಐದು ಪಾಠಗಳು.


 



ಯಶಸ್ಸಿಗೆ ಐದು ಪಾಠಗಳು.

ನಾವು ಯಾವುದೇ ಸಾಧಕರ ಯಶೋಗಾಥೆಗಳನ್ನು ಕೇಳುವಾಗ ಎಲ್ಲದರಲ್ಲೂ ಕೆಲ ಸಾಮಾನ್ಯ ಅಂಶಗಳು ಕಂಡುಬರುತ್ತವೆ.ಆ ಸಾಧಕರ ಸಾಧನೆಯ ಹಿಂದೆ ಈ ಕೆಳಕಂಡ ಅಂಶಗಳಿದ್ದೇ ಇರುತ್ತವೆ.

1. ನಮ್ಮನ್ನು  ನಂಬೋಣ .
ನಮ್ಮನ್ನು ನಾವು ನಂಬದಿದ್ದರೆ ಮತ್ತಾರು ನಂಬುತ್ತಾರೆ. ಎಲ್ಲಾ ಯಶಸ್ಸಿನ ಅಡಿಪಾಯವೇ ನಂಬಿಕೆ  ನಮ್ಮ ಮೇಲೆ ನಮಗೆ ನಂಬಿಕೆ ಬರಲು ಮೊದಲು ನಾವು ಸಣ್ಣ ಪುಟ್ಟ ಯಶಸ್ಸು ಗಳಿಸುವುದು ನಮ್ಮ ಮೇಲೆ ನಮಗೆ ಆತ್ಮವಿಶ್ವಾಸ ಮೂಡುತ್ತದೆ.   ನಮ್ಮ ಸಾಮರ್ಥ್ಯ ಮತ್ತು ಸಾಧನೆಗಳನ್ನು ಪ್ರತಿಬಿಂಬಿಸಲು ಸ್ವಲ್ಪ ಸಮಯ ತೆಗೆದುಕೊಳ್ಳುತ್ತದೆ ಅದಕ್ಕೆ ತಾಳ್ಮೆ ನಮ್ಮ ಜೊತೆಯಲ್ಲಿರಬೇಕು  ಮತ್ತು ಸಕಾರಾತ್ಮಕ ಸ್ವಯಂಚಿತ್ರಣವನ್ನು ಅಭಿವೃದ್ಧಿಪಡಿಸಿಕೊಳ್ಳಬೇಕು.

2. ಗುರಿಯಿರಲಿನಮಗೆನಾವು ಜೀವನದಲ್ಲಿ ಏನನ್ನು ಸಾಧಿಸಲು ಬಯಸುತ್ತೇವೆ ಎಂಬುದು ನಮಗೆ ಸ್ಪಷ್ಟವಾದ ಗುರಿಯಿರಬೇಕು. ಪ್ರತಿದಿನ ಆ ಗುರಿಯನ್ನು ಜ್ಞಾಪಿಸಿಕೊಳ್ಳುತ್ತಾ , ಕ್ರಮೇಣ ಆ ಗುರಿಯೆಡೆಗೆ ಸಾಗುವ ಪ್ರಮಾಣಿಕ ಪ್ರಯತ್ನ ಮಾಡುತ್ತಲೇ ಇರಬೇಕು. ಆ ಗುರಿ ತಲುಪಲು  ಯೋಜನೆಯನ್ನು ರೂಪಿಸಿ ಕಾರ್ಯರೂಪಕ್ಕೆ ತರಬೇಕು.

3. ಚಲನೆಯಿರಲಿ.
ನಾವು ಬಹುತೇಕರು ಆರಂಭಶೂರರು.ಮೊದಲು ಸ್ವಲ್ಪ ದಿನ ನಮ್ಮ ಗುರಿ ತಲುಪಲು ಬಹಳ ಜೋಶ್ ನಲ್ಲಿ ನಡೆದು,ಕ್ರಮೇಣವಾಗಿ ಸೋಮಾರಿತನ ನಮ್ಮನ್ನು ತಬ್ಬಿದಾಗ ಹೊದ್ದು ಮಲಗಿಬಿಡುತ್ತೇವೆ. ಈಗಾಗಬಾರದು.
ಸದಾ   ಸುಮ್ಮನೆ ಕುಳಿತುಕೊಳ್ಳದೇ  ಮತ್ತು ಏನಾಗುತ್ತದೆ ಎಂದು ಕಾಯದೇ.  ನಮ್ಮ ಕಾರ್ಯದಲ್ಲಿ ಚಲನಶೀಲರಾಗಬೇಕು  ಮತ್ತು ನಮ್ಮ ಗುರಿಗಳತ್ತ  ಸಾಗಲು ಸಣ್ಣ ಸಣ್ಣ ಹೆಜ್ಜೆಗಳನ್ನು ಇಡಬೇಕು. ಈ  ಹೆಜ್ಜೆಗಳು ಕೂಡ ದೊಡ್ಡ ವ್ಯತ್ಯಾಸವನ್ನು ಉಂಟುಮಾಡಬಹುದು. ದೊಡ್ಡ ದಾರಿ ತಲುಪಲು  ಸಣ್ಣ ಹೆಜ್ಜೆಗಳು ಅಗತ್ಯವಲ್ಲವೆ? 

4. ನಿರಂತರ ಪ್ರಯತ್ನ.
ನಮ್ಮ ಸಾಧನೆಯ ಹಾದಿಯಲ್ಲಿ ಅಲ್ಲಲ್ಲಿ ಅಡತಡೆಗಳು, ಕಲ್ಲುಮುಳ್ಳುಗಳು ಸಿಗಬಹುದು.
ದಾರಿಯುದ್ದಕ್ಕೂ ಹಿನ್ನಡೆಗಳು ಉಂಟಾಗಬಹುದು. ಆಗ ನಾವು  ಛಲಬಿಡದ ತ್ರಿವಿಕ್ರಮರಾಗಬೇಕು.ಸತತ ಪ್ರಯತ್ನದಿಂದ ಒಂದಲ್ಲ ಒಂದು ದಿನ ಗೆದ್ದ ನಾವು ನಮ್ಮ  ಗುರಿಗಳನ್ನು ತಲುಜೀವನದಲ್ಲಿನ

5. ಧನಾತ್ಮಕವಾಗಿರಿ. 
ಸಣ್ಣ ಸೋಲು, ಗೆಳೆಯರ ಕೊಂಕು ಮಾತು ಮತ್ತು ನಕಾರಾತ್ಮಕ ಮಾತುಗಳು ನಮ್ಮನ್ನು ಎದೆಗುಂದುವಂತೆ ಮಾಡುತ್ತವೆ.ಇಂತಹ ಸಂದರ್ಭಗಳಲ್ಲಿ ನಾವು ಸಕಾರಾತ್ಮಕ ಚಿಂತನೆಯನ್ನು ಅಳವಡಿಸಿಕೊಳ್ಳ ಬೇಕು.
ಸಕಾರಾತ್ಮಕ ಮನೋಭಾವವು ನಮಗೆ ಅಡೆತಡೆಗಳನ್ನು ನಿವಾರಿಸಲು ಮತ್ತು ಪ್ರೇರೇಪಿಸಲು ಸಹಾಯ ಮಾಡುತ್ತದೆ.  ನಮ್ಮ ಜೀವನದಲ್ಲಿನ  ಒಳ್ಳೆಯ ವಿಷಯಗಳ ಮೇಲೆ ಸದಾ ಕೇಂದ್ರೀಕರಿಸಬೇಕು  ಮತ್ತು ನಕಾರಾತ್ಮಕ ಆಲೋಚನೆಗಳು ನಮ್ಮನ್ನು ಕೆಡಿಸಲು ಬಿಡಬಾರದು.ಧನಾತ್ಮಕ ಜನರೊಂದಿಗೆ ನಮ್ಮನ್ನು ಸುತ್ತುವರೆದಿರುವಂತೆ ನೋಡಿಕೊಳ್ಳೋಣ.ನಮ್ಮ ಸಮಯವನ್ನು ನಾವು ಕಳೆಯುವ ಜನರು ನಮ್ಮ ಯಶಸ್ಸಿನ ಮೇಲೆ ದೊಡ್ಡ ಪ್ರಭಾವ ಬೀರಬಹುದು.  ನಮ್ಮನ್ನು ಬೆಂಬಲಿಸುವ ಮತ್ತು ನಮ್ಮ ಗುರಿಗಳನ್ನು ತಲುಪಲು ನಮ್ಮನ್ನು ಪ್ರೋತ್ಸಾಹಿಸುವ ಸಕಾರಾತ್ಮಕ ಜನರೊಂದಿಗೆ ಹೆಚ್ಚು ಒಡನಾಟ‌ ಹೊಂದಿದರೆ ನಮ್ಮ ಗುರಿ ಸಾಧಿಸಲು ಪೂರಕವಾಗುತ್ತದೆ.


ಈ 5  ಪಾಠಗಳನ್ನು ಅನುಸರಿಸುವ ಮೂಲಕ  ನಮ್ಮ ಜೀವನದ ಎಲ್ಲಾ ಕ್ಷೇತ್ರಗಳಲ್ಲಿ ನಮ್ಮ ಯಶಸ್ಸಿನ ಸಾಧ್ಯತೆಗಳನ್ನು ನಾವು ಹೆಚ್ಚಿಸಬಹುದು.  ನೆನಪಿಡಿ ಯಶಸ್ಸು ಅದೃಷ್ಟ ಅಥವಾ ಪ್ರತಿಭೆಯಿಂದಲ್ಲ.  ಇದು ಕಠಿಣ ಪರಿಶ್ರಮ ಮತ್ತು ನಿರ್ಣಯ.  ಆದ್ದರಿಂದ ನಮ್ಮ ಕನಸುಗಳನ್ನು ನನಸು ಮಾಡಿಕೊಳ್ಳಲು  ಕಷ್ಟಪಟ್ಟು ಇಷ್ಟ ಪಟ್ಟು    ಕೆಲಸ ಮಾಡುವುದನ್ನು ಮುಂದುವರಿಸೋಣ  ತನ್ಮೂಲಕ ಉತ್ತಮವಾದ ಸಾಧನೆ ಮಾಡೋಣ.

ಸಿಹಿಜೀವಿ ವೆಂಕಟೇಶ್ವರ
ಶಿಕ್ಷಕರು
ತುಮಕೂರು
9900925529

27 November 2023

ಬಾಳೋಣ ಬಾರ

 


ಬಾಳೋಣ ಬಾರ 


ಜತನದಿ ಕಾಪಾಡೋಣ ಪರಿಸರ

ನೀಡುವುದದು ನಮಗೆ ಸಕಲ ವರ 

ಸರ್ವ ಜೀವಿಗಳೂ ನಮ್ಮ ಪರಿವಾರ

ಸಮನ್ವಯದಿ ಬಾಳೋಣ ಬಾರಾ.


ಸಿಹಿಜೀವಿ ವೆಂಕಟೇಶ್ವರ

ತುಮಕೂರು

26 November 2023

ವಿಶ್ವದ ಎಂಟನೆಯ ಅದ್ಭುತ

 


ವಿಶ್ವದ ಎಂಟನೆಯ ಅದ್ಭುತ

ಪ್ರಪಂಚದ ಏಳು ಅದ್ಭುತಗಳನ್ನು ತಿಳಿದ ನಮಗೆ ಎಂಟನೆಯ ಅದ್ಭುತ ಯಾವುದು ಎಂಬ ಕುತೂಹಲವಿತ್ತು ಈ ಕುತೂಹಲಕ್ಕೆ ಈಗ ತೆರೆ ಬಿದ್ದಿದೆ.ಇಟಲಿಯ ಪೋಂಪು ವನ್ನು ಹಿಂದಿಕ್ಕಿ  ಕಾಂಬೋಡಿಯಾದ  ಆಂಕೋರ್ ವಾಟ್ ದೇವಾಲಯ ಸಂಕೀರ್ಣ ಈ ಕೀರ್ತಿಗೆ ಭಾಜನವಾಗಿದೆ.  

ನಮ್ಮ ಭಾರತದ ತಾಜ್ ಮಹಲ್ ಸೇರಿದಂತೆ  ಚೀನಾದ ಗ್ರೇಟ್ ವಾಲ್, ಜೋರ್ಡಾನ್ನ ಪೆಟ್ರಾ, ಇಟಲಿಯ ಕೊಲೋಸಿಯಮ್, ಬ್ರೆಜಿಲ್ನ ಕ್ರೈಸ್ಟ್ ದಿ ರಿಡೀಮರ್, ಮೆಕ್ಸಿಕೋದ ಷಿಚೆನ್ ಇಟ್ಜಾ, ಪೆರುವಿನ ಮಾಚು ಪಿಚು ಇವು ಪ್ರಪಂಚದ ಏಳು ಅದ್ಭುತಗಳು.

ಆಂಕೋರ್ ವಾಟ್ ಕಾಂಬೋಡಿಯಾ ದೇಶದಲ್ಲಿರುವ ಹಿಂದೂ ದೇವಾಲಯ ಸಮುಚ್ಛಯ. ಕಾಂಬೋಡಿಯಾ ದೇಶದ ಖ್ಮೇರ್(Khmer) ಸಾಮ್ರಾಜ್ಯದ ರಾಜಧಾನಿಯಾಗಿದ್ದ 'ಆಂಗ್ಕರ್' ಎಂಬಲ್ಲಿದೆ. ಇದನ್ನು ಸಾಮ್ರಾಟ ಎರಡನೆಯ ಸೂರ್ಯವರ್ಮ 12ನೆಯ ಶತಮಾನದಲ್ಲಿ ಕಟ್ಟಿಸಿದನು.ಇದು ಪ್ರಪಂಚದಲ್ಲೇ ಅತ್ಯಂತ ದೊಡ್ಡ ಧಾರ್ಮಿಕ ಸಮುಚ್ಛಯವಾಗಿದೆ.ಇದು ಆಯತಾಕಾರದಲ್ಲಿ 2800 ಆಡಿ ಅಗಲ ಮತ್ತು 3800 ಅಡಿ ಉದ್ದವಾಗಿದೆ. ಮರಳುಕಲ್ಲು ಹಾಗೂ ಇತರೆಕಲ್ಲು ಉಪಯೋಗಿಸಿ ಕಟ್ಟಲಾಗಿದೆ. ಮೇರುಪರ್ವತ ವನ್ನು ಹೋಲುವಂತೆ ಖ್ಮೇರ್ ಹಾಗೂ ದಕ್ಷಿಣ ಭಾರತೀಯ ವಾಸ್ತುಶಿಲ್ಪದಂತೆ ಇದನ್ನು ಕಟ್ಟಲಾಗಿದೆ. ಇದರ ನಿರ್ಮಾಣಕ್ಕೆ 3೦ ವರ್ಷಗಳಿಗಿಂತಲೂ ಹೆಚ್ಚಿನ ಸಮಯ ಬೇಕಾಯಿತು.

2 ನೆಯ ಸೂರ್ಯವರ್ಮ  ತನ್ನ ರಾಜಧಾನಿಯಾಗಿದ್ದ ಯಶೋಧರಪುರದ ಪಕ್ಕದಲ್ಲೇ ಈ ಅಗಾಧ, ಅನುಪಮ ದೇವಾಲಯವನ್ನು ನಿರ್ಮಿಸಿದ. 

ಗೊಂಡಾರಣ್ಯದ ಮಧ್ಯದಲ್ಲಿ ಮರಗಳನ್ನು ಕಡಿದು ಕಟ್ಟಡಕ್ಕೆ ಅಣಿಮಾಡಿಕೊಂಡ ವಿಶಾಲ ಪ್ರದೇಶ; ಅದನ್ನು ಸುತ್ತುಗಟ್ಟಿರುವ ನೀರು ತುಂಬಿದ ರಚನೆಗಳನ್ನು  ದಾಟಿ ದ್ವಾರಮಂಟಪಕ್ಕೆ ಹೋಗುವಂತೆ ಎತ್ತರಿಸಿ ಕಲ್ಲಿನಿಂದ ಕಟ್ಟಿರುವ ಒಡ್ಡುದಾರಿ, ನೀರಿನಿಂದಲೇ ಎದ್ದು ನಿಂತಿರುವಂತೆ ನಿರ್ಮಿತವಾಗಿ ಆ ಪ್ರದೇಶವನ್ನು ಸುತ್ತುವರಿದಿರುವ ಮೊಗಸಾಲೆ, ಪಕ್ಕದಲ್ಲಿ ಸುತ್ತುವರಿದಿರುವ ಹೊರಾಂಗಣ, ಅದರ ಸುತ್ತ ಒಂದು ತಗ್ಗುಗೋಡೆ ಮತ್ತು ಒಳಾಂಗಣ, ಮಧ್ಯದಲ್ಲಿ ಇಡೀ ಪ್ರದೇಶವನ್ನಾಕ್ರಮಿಸಿರುವ, ಪರಸ್ಪರಾನುರೂಪತೆಯನ್ನು ಹೊಂದಿ ವಾಸ್ತುಶಿಲ್ಪಕಲಾವೈಭವವನ್ನು ಮೆರೆಸುತ್ತಲಿರುವ, ಕಟ್ಟಡಗಳ ನಡುವೆ ನಿಂತಿರುವ ದೇವಸ್ಥಾನ. ಚಚ್ಚೌಕವಾದ ಈ ಪ್ರದೇಶದ ಸುತ್ತುಗೋಡೆಗಳು ಒಂದೊಂದೂ ಒಂದು ಮೈಲಿನಷ್ಟು ಉದ್ದವಿದೆ. ಒಳಗೆ ಸುತ್ತಲೂ ಬಂದಿರುವ ಹೊರಾಂಗಣ ಮತ್ತು ಒಳಾಂಗಣಗಳು, ಸಾವಿರಾರು ಜನರು ಸಭೆ ಸೇರಲು ಅನುಕೂಲವಾಗುವಷ್ಟು ವಿಶಾಲವಾದ ಪ್ರದೇಶಗಳು. ಒಳಾವರಣದ ಕಟ್ಟಡ ಪ್ರದೇಶದ ಸುತ್ತಳತೆಯೇ ಅರ್ಧ ಮೈಲಿಗಿಂತ ಹೆಚ್ಚಾಗಿದೆ. ಗೋಪುರಾಕೃತಿಯಲ್ಲಿ ನಿರ್ಮಿತವಾಗಿರುವ ಈ ಕಟ್ಟಡ ಸಮುದಾಯದಲ್ಲಿ ಮೂರು ಹಂತಗಳು, ಕೊನೆಯ ಹಂತದ ಮೇಲೆ ಐದು ಗೋಪುರಗಳನ್ನೊಳಗೊಂಡ ಮುಖ್ಯ ಪೂಜಾಗಾರ. ಈ ಗೋಪುರಗಳಲ್ಲಿ ನಡುವಿನದು ಸುತ್ತಣ ಅರಣ್ಯಪ್ರದೇಶಕ್ಕಿಂತ ಇನ್ನೂರಹದಿನೈದು ಅಡಿ ಎತ್ತರ.ಇಂಥ ಬೃಹದಾಕೃತಿಯ ಕಟ್ಟಡದಲ್ಲೂ ಅಲಂಕಾರ ಚೆಲುವಿದೆ. ಸೂಕ್ಷ್ಮತೆ ಇದೆ. ಅರೆಯುಬ್ಬು ಚಿತ್ರಗಳಲ್ಲಿ ಕಂಡುಬರುವ ಕಲಾಪ್ರೌಢಿಮೆ ಪ್ರೇಕ್ಷಕರನ್ನು ವಿಸ್ಮಯಗೊಳಿಸುತ್ತದೆ. ಆದರೆ ಅಲಂಕಾರ ಅತಿಯಾಗಿ ಎಲ್ಲೂ ಕಟ್ಟಡದ ಭವ್ಯತೆ ಘನತೆಗಳಿಗೆ ಕುಂದು ತಂದಿಲ್ಲ. ರಾಮಾಯಣ ಮಹಾಭಾರತಗಳಿಂದ ಆಯ್ದ ಚಿತ್ರಗಳು ವಿಶೇಷವಾಗಿವೆ.ಕೆಲವೆಡೆ ಎಂಟು ಅಡಿಗಳ ಎತ್ತರ ಇರುವ ಈ ಚಿತ್ರಗಳು ಅರ್ಧ ಮೈಲಿಯಷ್ಟು ದೂರ ಹಬ್ಬಿವೆ. ಭಾರತದ ಸಂಸ್ಕೃತಿ ಆ ಜನರ ಮೇಲೆ ಎಂಥ ಪರಿಣಾಮವನ್ನುಂಟುಮಾಡಿತ್ತು ಎನ್ನುವುದಕ್ಕೆ ಈ ಚಿತ್ರಗಳೇ ನಿದರ್ಶನ. ಅಲ್ಲಲ್ಲೇ ಕಾಣಬಹುದಾದ ದೇವತೆಗಳ ಮತ್ತು ಅಪ್ಸರೆಯರ ಚಿತ್ರಣವಂತೂ ರಮ್ಯವಾಗಿದೆ. ಮುಖದಲ್ಲಿ ಪ್ರಶಾಂತತೆ, ಪ್ರಸನ್ನತೆ, ತುಟಿಯಲ್ಲಿ ಹುಸಿನಗೆ, ಮೋಹಕವಾದ ಕುಡಿನೋಟ, ಆಭರಣ ತೊಡಿಗೆಯಲ್ಲಿ ಹಿತ ಮಿತ.ಆಂಗ್ಕೋರ್‍ವಾಟ್‍ನ ವಾಸ್ತುಶಿಲ್ಪದ ಉತ್ಕಷ್ಟತೆಯನ್ನು ನೋಡಿದವರಿಗೆ, ಅದನ್ನು ನಿರ್ಮಿಸಿದ ವಾಸ್ತುಶಿಲ್ಪಿಗಳು ಅನೇಕ ಶತಮಾನಗಳ ಕಾಲ ವಂಶಪಾರಂಪರ್ಯವಾಗಿ ಆ ಕಲೆಯನ್ನು ರೂಢಿಸಿಕೊಂಡು ಬಂದು ಕೊನೆಗೆ ಪರಾಕಾಷ್ಠತೆ ಪಡೆದಿದ್ದ ಕಲಾವಿದರು ಎಂಬುದು  ವ್ಯಕ್ತವಾಗುತ್ತದೆ. ಈ ಬೆಳೆವಣಿಗೆ ಒಂದು ಸಾವಿರ ವರ್ಷಗಳ ಹಿಂದೆಯೇ ಆರಂಭವಾಗಿರಬೇಕು. ಅನಂತರ ಕೊಂಚ ಕೊಂಚವಾಗಿ ವಿಕಾಸಗೊಳ್ಳುತ್ತ ಎರಡನೆಯ ಜಯವರ್ಮನು ಕಾಂಭೋಜ ರಾಜ್ಯಸ್ಥಾಪನೆ ಮಾಡಿದ ಕಾಲಕ್ಕೆ ಒಂದು ನಿರ್ದಿಷ್ಟನೆಲೆಗೆ ಬಂದು ಗೋಪುರಾಕೃತಿಯ ದೊಡ್ಡ ಕಟ್ಟಡಗಳ ನಿರ್ಮಾಣ ಪ್ರಾರಂಭವಾಯಿತು. ಅದು ತುತ್ತತುದಿಯನ್ನೇರಿದ್ದು ಆಂಗ್ಕೋರ್‍ವಾಟ್‍ನಲ್ಲಿ. ಇಂದಿಗೂ ಆಂಗ್ಕೋರ್‍ಥಾಮ್ ನಗರದ ಹಾಗೂ ಆಂಗ್ಕೋರ್‍ವಾಟ್‍ನ ಅವಶೇಷಗಳು ಪ್ರಾಕ್ತನ ಶಾಸ್ತ್ರಜ್ಞರನ್ನೂ ಪ್ರೇಕ್ಷಕರನ್ನೂ ಆಕರ್ಷಿಸುತ್ತಿವೆ.   
ಅಂಕೋರ್ ವಾಟ್ನಲ್ಲಿನ ಅತ್ಯಂತ ಅಪ್ರತಿಮ ಅನುಭವವೆಂದರೆ ಅದರ ಭವ್ಯವಾದ ಗೋಪುರಗಳ ಮೇಲೆ ಸೂರ್ಯೋದಯವನ್ನು ವೀಕ್ಷಿಸುವುದು.  ಮುಂಜಾನೆ, ದೇವಾಲಯವು ಗುಲಾಬಿ, ಕಿತ್ತಳೆ ಮತ್ತು ಚಿನ್ನದ ಛಾಯೆಗಳಲ್ಲಿ ನೆನೆಸಿ, ಮನಮೋಹಕ  ದೃಶ್ಯವನ್ನು ಸೃಷ್ಟಿಸುತ್ತದೆ.
ಈ ತಾಣವನ್ನು ವಿಶ್ವ ಸಂಸ್ಥೆಯ ಯುನೆಸ್ಕೊ ವಿಶ್ವ ಪಾರಂಪರಿಕ ತಸಣವೆಂದು ಘೋಷಿಸಿದೆ.
ವಾಸ್ತುಶಿಲ್ಪದ ವೈಭವವನ್ನು ಮೀರಿ, ಅಂಕೋರ್ ವಾಟ್ ಅಪಾರವಾದ ಸಾಂಸ್ಕೃತಿಕ ಮತ್ತು ಆಧ್ಯಾತ್ಮಿಕ ಮಹತ್ವವನ್ನು ಹೊಂದಿದೆ. ಈ  ದೇವಾಲಯ ಸಂಕೀರ್ಣವು  ಸಕ್ರಿಯ ಧಾರ್ಮಿಕ ತಾಣವಾಗಿ ಉಳಿದಿದೆ ಬೌದ್ಧ ಸನ್ಯಾಸಿಗಳು ಮತ್ತು ಭಕ್ತರು ತಮ್ಮ ಗೌರವವನ್ನು ಸಲ್ಲಿಸಲು ಮತ್ತು ಪ್ರಾರ್ಥನೆ ಮತ್ತು ಧ್ಯಾನದಲ್ಲಿ ತೊಡಗಿಸಿಕೊಳ್ಳಲು ಇಲ್ಲಿಗೆ  ಬರುತ್ತಾರೆ.

ಸಿಹಿಜೀವಿ ವೆಂಕಟೇಶ್ವರ
ತುಮಕೂರು


ಮನದುಂಬಿ.

 ಮನದುಂಬಿ 


ಜೇನೇ ನೀ ನನ್ನ ಸೃಷ್ಟಿ

ನಾನಿನ್ನ ಪ್ರೀತಿಸುವೆ 

ಹೇಳಿತು ದುಂಬಿ|

ಜೇನು ಮಾರ್ನುಡಿಯಿತು

ನಾನು ನಿನ್ನ ಪ್ರೀತಿಸುವೆ 

ಮನದುಂಬಿ|| 



ಸಿಹಿಜೀವಿ ವೆಂಕಟೇಶ್ವರ

ತುಮಕೂರು 

ಸೈಟ್

 


ಸೈಟ್..


ಅವಳ‌ನ್ನು ಪ್ರೀತಿಸಿದ 

ಮದುವೆಯಾಗಲು ತೀರ್ಮಾನಿಸಿದ

ಕಾರಣ ಅವಳ ಸೈಟ್ |

ಅವಳ ಮದುವೆಯಾಗದೆ ಇವಳ

ಮದುವೆಯಾದ ಕಾರಣ

ಇವಳಪ್ಪ ನೀಡಿದ ಸೈಟ್ ||


ಸಿಹಿಜೀವಿ ವೆಂಕಟೇಶ್ವರ

ತುಮಕೂರು 

24 November 2023

ಉತ್ಥಾನ

 #ಉತ್ಥಾನ*


ಉತ್ಥಾನ ದ್ವಾದಶಿಯಂದು ಕೃಷ್ಣನ 

ಎಲ್ಲರೂ ಪೂಜಿಸುತ್ತಾ 

ಬೇಡುತ್ತಲಿಹರು ಎದ್ದೇಳು|

ಕಾಪಾಡು  ಸಕಲಜೀವಿಗಳನ್ನು 

ಪರಿಹರಿಸುತಾ  ಗೋಳು ||


*#ಸಿಹಿಜೀವಿ ವೆಂಕಟೇಶ್ವರ*

ತುಮಕೂರು

23 November 2023

ಪಾಠ

 


*ಪಾಠ*



ಇದ್ದದ್ದೇ  ಬದುಕಿನಲ್ಲಿ ಜಂಜಾಟ

ಮಾಡದಿರೋಣ ನಾವು ರಂಪಾಟ 

ಬಾಳು ನೋವು ನಲಿವುಗಳು ಕೂಟ 

ಬಲ್ಲವರಾರೂ ಇಲ್ಲ  ದೇವರ ಆಟ 

ಜೀವನಕ್ಕಿರಲಿ ಒಂದು ಮುನ್ನೋಟ

ಕಲಿಯೋಣ ಸರ್ವರಿಂದಲೂ ಪಾಠ


ಸಿಹಿಜೀವಿ ವೆಂಕಟೇಶ್ವರ

ತುಮಕೂರು


21 November 2023

ಪ್ರಾಮಾಣಿಕತೆ ಗೆ ಯಶಸ್ಸು ಖಚಿತ.

 



ಪ್ರಾಮಾಣಿಕತೆ ಗೆ ಯಶಸ್ಸು ಖಚಿತ.

ಚಕ್ರವರ್ತಿಯೊಬ್ಬರಿಗೆ ಸ್ವಂತ ಮಕ್ಕಳಿರಲಿಲ್ಲ.ಮುಂದಿನ ಚಕ್ರವರ್ತಿಯಾಗಿ ಯಾರನ್ನು ಮಾಡಬೇಕೆಂಬುದೇ ಅವರ ಚಿಂತೆ!ಅವರೊಮ್ಮೆ ಸಾಮ್ರಾಜ್ಯದ ಗಣ್ಯರನ್ನೆಲ್ಲ ತಂತಮ್ಮ ಮಕ್ಕಳನ್ನು ಕರೆದುಕೊಂಡು ಅರಮನೆಗೆ ಬರಬೇಕೆಂದು ಆಹ್ವಾನಿಸಿದರು. ಅಂದು ಗಣ್ಯಾತಿಗಣ್ಯರೆಲ್ಲ ಅರಮನೆಗೆ ತಂತಮ್ಮ ಮಕ್ಕಳನ್ನು ಕರೆದುಕೊಂಡು ಬಂದಿದ್ದರು. ಚಕ್ರವರ್ತಿಯವರ ಅಂಗರಕ್ಷಕನೂ ತನ್ನ ಮಗನನ್ನು ಕರೆದುಕೊಂಡು ಬಂದಿದ್ದ.ಚಕ್ರವರ್ತಿಯವರು ನಾನೀಗ ಮುದುಕ ಆಗುತ್ತಿದ್ದೇನೆ.ನನಗೆ ಮಕ್ಕಳಿಲ್ಲ.ನಿಮ್ಮೆಲ್ಲರ ಮಕ್ಕಳಲ್ಲಿ ಒಬ್ಬರನ್ನು ಮುಂದಿನ ಚಕ್ರವರ್ತಿಯಾಗಿ ನೇಮಿಸಬೇಕೆಂದಿದ್ದೇನೆ. ಅದಕ್ಕಾಗಿ ಪರೀಕ್ಷೆಯೊಂದನ್ನು ಏರ್ಪಡಿಸು  ತ್ತಿದ್ದೇನೆ.ಎಲ್ಲ ಮಕ್ಕಳಿಗೆ ಒಂದೊಂದು ಹೂವಿನ ಬೀಜವನ್ನು ಕೊಡುತ್ತೇನೆ. ಮಕ್ಕಳು ತಂತಮ್ಮ ಮನೆಯಲ್ಲಿ ಬಿತ್ತಲಿ. ಅದರಿಂದ ಹುಟ್ಟುವ ಗಿಡವನ್ನು ಮುಂದಿನ ವರ್ಷದ ಮೊದಲನೆಯ ದಿನದಂದು ಅರಮನೆಗೆ ತರಲಿ.ಯಾರ ಗಿಡ ಅತ್ಯುತ್ತಮವಾಗಿರುತ್ತದೋ ಅಂತಹ ಮಗು ಮುಂದಿನ ಚಕ್ರವರ್ತಿಯಾಗುತ್ತಾನೆ ಎಂದು ಘೋಷಿಸಿದರು. ಅಲ್ಲಿದ್ದವರೆಲ್ಲರಿಗೂ ತಮ್ಮ ಮಗನೇ ಮುಂದಿನ ಚಕ್ರವರ್ತಿ ಯಾಕಾಗಬಾರದು ಎನ್ನುವಾಸೆ!ಎಲ್ಲರೂ ನಾಮುಂದು-ತಾಮುಂದು ಎಂದು ಬೀಜಗಳನ್ನು ಪಡೆದು ಕೊಂಡು ಹೋದರು.

ಅಂದಿನಿಂದ ಎಲ್ಲರ ಬಾಯಲ್ಲೂ ಇದೇ  ಮಾತು.ನಮ್ಮ ಮನೆಯಲ್ಲಿ ಬೀಜ ಸಸಿಯಾಗಿದೆ, ಗಿಡವಾಗಿದೆ,ಗಿಡದಲ್ಲೊಂದು ಕಾಯಾಗಿದೆ,ಹೂ ಬಿಟ್ಟಿದೆ ಎಂದೆಲ್ಲ ಹೇಳಿ ಕೊಳ್ಳುತ್ತಿದ್ದರು. ಆದರೆ ಚಕ್ರವರ್ತಿಗಳ ಅಂಗರಕ್ಷಕನ ಮನೆಯಲ್ಲಿ ನಿರಾಸೆ ತುಂಬಿತ್ತು.ಆತನ ಮಗ ಬಿತ್ತಿದ ಬೀಜ ಸಸಿಯಾಗಲೇ  ಇಲ್ಲ!ಇಂದು ಸಸಿಯೊಡೆದೀತು, ನಾಳೆ ಸಸಿಯೊಡೆದೀತು ಎಂಬ ನಿರೀಕ್ಷೆಯಲ್ಲಿದ್ದರೂ,ವರ್ಷ ಕಳೆಯುತ್ತಾ ಬಂದರೂ  ಕುಂಡ ಖಾಲಿಯಾಗೇ  ಇತ್ತು!

ಆ ದಿನ ಬಂದೇ ಬಿಟ್ಟಿತು! ವರ್ಷದಾರಂಭದ ದಿನ ಅರಮನೆಯಲ್ಲಿ ತಾಯ್ತಂದೆಯರ-ಮಕ್ಕಳ  ದೊಡ್ಡ ಗುಂಪೇ ಸೇರಿತ್ತು. ಎಲ್ಲರ ಕೈಯಲ್ಲೂ ಸುಂದರವಾದ ಹೂ-ಹಣ್ಣುಗಳ ಗಿಡಗಳು!ಸಂಭ್ರಮವೋ ಸಂಭ್ರಮ! ಚಕ್ರವರ್ತಿಗಳು ಬಂದರು. ಎಲ್ಲರ ಗಿಡಗಳನ್ನು ನೋಡುತ್ತಾ ಶಹಬಾಷ್! ವಾರೆವ್ಹಾ!ಎಂದೆಲ್ಲ ಹೇಳುತ್ತಾ ಮುಂದೆ ಮುಂದೆ ಸಾಗಿದರು. ಒಂದನ್ನೂ   ಆಯ್ಕೆಮಾಡಲಿಲ್ಲ . ಕೊನೆಯ ಮೂಲೆಯಲ್ಲಿ ಜೋಲುಮುಖದೊಂದಿಗೆ ಅಂಗರಕ್ಷಕನ ಮಗ ನಿಂತಿದ್ದ. ಆತನ ಕೈಯಲ್ಲಿ ಖಾಲಿ ಕುಂಡ!ಚಕ್ರವರ್ತಿಗಳು ಏನಾಯಿತು ಎಂದು ಕೇಳಿದರು.ಆತ ಮಹಾಪ್ರಭು!ತಾವು ಕೊಟ್ಟಿದ್ದ ಬೀಜವನ್ನು ಬಿತ್ತಿದೆ,ಬಹಳ ಜತನ ಮಾಡಿದೆ.ಆದರೆ ಅದು ಸಸಿಯೊಡೆಯಲೇ ಇಲ್ಲ.ಖಾಲಿ ಕುಂಡವನ್ನೇ ತಂದಿದ್ದೇನೆ ಎನ್ನುತ್ತಾ ಬಿಕ್ಕಳಿಸಿ ಅಳತೊಡಗಿದ.ಚಕ್ರವರ್ತಿಗಳು ಆತನಿಗೆ ಸಮಾಧಾನ ಹೇಳಿದರು.ಆತನೇ ಮುಂದಿನ ಚಕ್ರವರ್ತಿಯೆಂದು ಘೋಷಿಸಿಬಿಟ್ಟರು.

ಅಲ್ಲಿದ್ದವರೆಲ್ಲ ಇದೆಂತಹ ಅನ್ಯಾಯ ?ಸುಂದರವಾದ ಗಿಡಗಳನ್ನು ಬೆಳೆದಿರುವ ಮಕ್ಕಳನ್ನು ಬಿಟ್ಟು ಖಾಲಿ ಕುಂಡದ ಹುಡುಗನನ್ನು ಚಕ್ರವರ್ತಿಯಾಗಿ ಘೋಷಿಸುವುದೇ?ಎಂದು ಗದ್ದಲವೆಬ್ಬಿಸಿದಾಗ,ಚಕ್ರವರ್ತಿಯವರು ಏರುದನಿಯಲ್ಲಿ ನಾನು ಅಂದು ಎಲ್ಲರಿಗೂ  ಕೊಟ್ಟಿದ್ದು ಬೇಯಿಸಿದ ಬೀಜಗಳನ್ನು!ಅವು ಸಸಿಯೊಡೆಯಲು ಸಾಧ್ಯವೇ ಇಲ್ಲ.ನೀವೆಲ್ಲಾ ಬೀಜವನ್ನು ಬಿತ್ತಿರುವಿರಿ,ಅದು ಸಸಿಯೊಡೆಯದಿದ್ದಾಗ ಮತ್ಯಾವುದೋ ಸಸಿಯನ್ನು ಬೆಳೆಸಿ ಇಲ್ಲಿಗೆ ತಂದಿದ್ದೀರಿ. ಆದರೆ ಈ ಬಾಲಕ ಪ್ರಾಮಾಣಿಕವಾಗಿ ಇಲ್ಲಿಗೆ ಬಂದಿದ್ದಾನೆ.ನನಗೆ ನಂಬಿಕಸ್ಥ ವ್ಯಕ್ತಿ ಬೇಕಾಗಿದ್ದುದರಿಂದ ನಾನು ಈತನನ್ನೇ ಆಯ್ಕೆ ಮಾಡುತ್ತಿದ್ದೇನೆ.ನೀವೆಲ್ಲ ಆತ್ಮಸಾಕ್ಷಿಯಾಗಿ ನಿಜವನ್ನೇ ಹೇಳಿ.ನೀವು ತಂದಿರುವ ಗಿಡಗಳು ನಾನು ಕೊಟ್ಟ ಬೀಜದ್ದೇ ?ಎಂದಾಗ ಎಲ್ಲರು ತಲೆತಗ್ಗಿಸಿದರು.

ಇಂದಿನ ಜಗದಲ್ಲೂ ಪ್ರಾಮಾಣಿಕತೆ ಕಡಿಮೆಯಾಗಿ ಅಪ್ರಮಾಣಿಕರು ವಿಜೃಂಭಿಸುವುದನ್ನು ಕಾಣಬಹುದು. ಆದರೆ ಅದು ಕ್ಷಣಿಕ.
ಪ್ರಾಮಾಣಿಕತೆಗೆ ಎಂದಿದ್ದರೂ  ಜಯವಿದ್ದೇ ಇರುತ್ತದೆ.ಸತ್ಯವಾಗಿ ನಡೆಯೋಣ ನಿಧಾನವಾದರೂ ಜಯ ನಮ್ಮದೆ.

ಸಿಹಿಜೀವಿ ವೆಂಕಟೇಶ್ವರ.
ಶಿಕ್ಷಕರು
ತುಮಕೂರು
9900925529

16 November 2023

ಕಪ್ ನಮ್ದೇ

 



ಕಪ್ ನಮ್ದೇ 


ಈ ಬಾರಿ ವಿಶ್ವ ಕಪ್ 

ನಮ್ಮದೇ |

ಹತ್ತು ಗೆದ್ದೋರಿಗೆ ಇನ್ನೊಂದು

ದೊಡ್ಡದೇ?|


*ಸಿಹಿಜೀವಿ ವೆಂಕಟೇಶ್ವರ*

ತುಮಕೂರು

14 November 2023

ಪ್ರಜಾಪತಿ...

 


ಪ್ರಜಾಪತಿ


ಜನ ಸೇವಕನಾಗಬೇಕು ಛತ್ರಪತಿ

ಶತ್ರುಗಳ ಎದುರಿಸಲು ಬೇಕು ಛಾತಿ

ಕೈಗೊಳ್ಳಬೇಕು  ಕಲ್ಯಾಣ ಕ್ರಾಂತಿ 

ಅಂತಹ ನಾಯಕನಾಗುವ ಪ್ರಜಾಪತಿ 


ಸಿಹಿಜೀವಿ ವೆಂಕಟೇಶ್ವರ

ತುಮಕೂರು


ದೇವರೊಂದಿಗೆ ಮಾತುಕಥೆ...

 


ದೇವರೊಂದಿಗೆ ವಾಗ್ವಾದ..

ದೇವರು ಪ್ರತ್ಯಕ್ಷನಾಗುವುದೇ ವಿರಳವಾದ ಸಂಧರ್ಭದಲ್ಲಿ ಒಬ್ಬನಿಗೆ ದೇವರು ಪ್ರತ್ಯಕ್ಷನಾದಾಗ ವರ ಕೇಳುವ ಬದಲಿಗೆ ಅವನು ದೇವರ ಮುಂದೆ ದೇವರು ಅವನಿಗೆ ಕೆಡುಕನ್ನೇ ಮಾಡಿದ ಬಗ್ಗೆ ಇಷ್ಟುದ್ದ ಪಟ್ಟಿ ನೀಡುತ್ತಾ ತನ್ನ ಆಕ್ಷೇಪಣೆ ಸಲ್ಲಿಸಿದ.  "ಬೆಳಗ್ಗೆ ಬೇಗ ಎಚ್ಚರವಾಗಲಿಲ್ಲ. ಕಾರುಸ್ಟಾರ್ಟ್ ಆಗಲು ಬಹಳ ತಡವಾಯಿತು. ಮಧ್ಯಾಹ್ನದ ಊಟದ ಡಬ್ಬಿ ಬದಲಾಗಿ, ತೊಂದರೆಯಾಯಿತು. ಸಂಜೆ ಮೊಬೈಲ್ ಕಾಲ್ ರಿಸೀವ್ ಮಾಡುತ್ತಿದ್ದಂತೆ ಹ್ಯಾಂಗ್ ಆಗಿ, ಡೆಡ್ ಆಯಿತು. ಮನೆಗೆ ಬಂದು ಕಾಲು ನೋವು ಪರಿಹರಿಸಿಕೊಳ್ಳಲು ಫುಟ್ ಮಸಾಜರ್ ನಲ್ಲಿ ಕಾಲಿಡುತ್ತಿದ್ದಂತೆ ಅದು ಕೆಟ್ಟು ನಿಂತಿತು. ಇಂದಿನ ಎಲ್ಲ ಕೆಲಸಗಳಲ್ಲೂ ವಿಘ್ನ ಹಾಗೂ ಆತಂಕಗಳು ಕಾಡಿದವು ಏಕೆ ? ಇದೇ ಏನು ನಿನ್ನ ಪೂಜೆ ಮಾಡಿದ್ದಕ್ಕೆ ಜಪ ತಪ ಮಾಡಿದ್ದಕ್ಕಾಗಿ ನೀನು ನನಗೆ ಕೊಡುವ ಬಹುಮಾನ?" ಎಂದು ಒಂದೇ ಸಮನೆ ಬಡಬಡಾಯಿಸಿದ. ಶಾಂತ ಚಿತ್ತದಿಂದ ಆಲಿಸಿದ ದೇವರು ನಗುತ್ತಾ ಉತ್ತರ ನೀಡಿದ.

ಭಕ್ತ " ಬೆಳಗ್ಗೆ ನಿನ್ನ ಜೀವಹರಣ ಮಾಡಲು ಮೃತ್ಯದೂತನೊಬ್ಬ ನಿನ್ನ ಹಾಸಿಗೆ ಬದಿಯಲ್ಲಿಕಾಯುತ್ತಿದ್ದ. ಅವನೊಂದಿಗೆ ಹೋರಾಡಿ ನಿಮ್ಮಜೀವ ಕಾಪಾಡಲು ದೇವದೂತನೊಬ್ಬನನ್ನು ಕಳುಹಿಸಿದ್ದೆ. ಇದು ನಿನಗೆ ಗೊತ್ತಾಗದಂತೆ ಹೆಚ್ಚು ಹೊತ್ತು ನಿದ್ದೆ ಮಾಡುವಂತೆ ಮಾಡಿದೆ.

ನೀನು ಸಂಚರಿಸುವ ದಾರಿಯಲ್ಲಿ ಕುಡಿದಮತ್ತಿನಲ್ಲಿ ಚಾಲಕನೊಬ್ಬ ಡ್ರೈವಿಂಗ್ ಮಾಡಿಕೊಂಡು ಬರುತ್ತಿದ್ದ, ಅವನಿಂದ ನಿನಗೆ ಅಪಘಾತವಾಗದಿರಲಿ ಎಂದು ನಿನ್ನ ಕಾರು ತಡವಾಗಿ ಸ್ಟಾರ್ಟ್ ಆಗುವಂತೆ ಮಾಡಿದೆ.

ನಿನಗೆ ಅಡುಗೆ ಮಾಡಿಕೊಡುತ್ತಿದ್ದ, ಬಾಣಸಿಗ ರೋಗಪೀಡಿತನಾಗಿದ್ದ. ಆತನ ರೋಗ ನಿನಗೆ ಹರಡದಂತೆ ಮಾಡಲು ನಿನ್ನ ಊಟದ ಡಬ್ಬ ಬದಲಿಸಿದೆ.

ಸಂಜೆ ನಿನ್ನ ಸ್ನೇಹಿತ ನಿನಗೆ ಕರೆ ಮಾಡಿ, ಸುಳ್ಳು ಸಾಕ್ಷಿ ಹೇಳಲು ಒಪ್ಪಿಸಲು ಬಯಸಿದ್ದ, ಅದಕ್ಕಾಗಿ ನಿನ್ನ ಮೊಬೈಲ್ ಹ್ಯಾಂಗ್ ಆಗುವಂತೆ ಮಾಡಿದೆ.

ನಿನ್ನ ಮನೆಯಲ್ಲಿದ್ದ ಫುಟ್ ಮಸಾಜರ್ನಲ್ಲಿ ನೀರು ಸೇರಿಕೊಂಡು ಶಾರ್ಟ್ ಆಗಿತ್ತು. ಅದು ಕಾರ್ಯ ನಿರ್ವಹಿಸಿದ್ದರೆ, ನಿನಗೆ ವಿದ್ಯುತ್ ಶಾಕ್ ತಗಲುವ ಸಾಧ್ಯತೆ ಇತ್ತು. ಅದಕ್ಕಾಗಿ ನಾನು, ಫುಟ್ ಮಸಾಜರ್ ಕಾರ್ಯನಿರ್ವಹಿಸದಂತೆ ನಿಷ್ಕ್ರಿಯೆಗೊಳಿಸಿದೆ ". ದೇವರ ಮಾತು ಕೇಳಿದ ಭಕ್ತನ ಕಣ್ಣಲ್ಲಿ ಪಶ್ಚಾತ್ತಾಪದ ನೀರಿತ್ತು.

ಅದಕ್ಕೆ ಹೇಳುವುದು ಆಗುವುದೆಲ್ಲ  ಒಳ್ಳೆಯದಕ್ಕೆ ಎಂದು.ಕೆಲವು ಬಾರಿ ನಾವಂದುಕೊಂಡಂತೆ ಆಗದಿದ್ದರೆ ಚಡಪಡಿಸುತ್ತೇವೆ. ಗುರಿ ಮುಟ್ಟಲಾಗದಿದ್ದರೆ ಖನ್ನತೆಗೆ ಜಾರುತ್ತೇವೆ. ಯಾವುದೇ ಒಂದು ನಮ್ಮ ಕೈ ತಪ್ಪಿದರೆ ನಮ್ಮ ಪ್ರಯತ್ನ ನಿರಂತರವಾಗಿದ್ದರೆ ಅದಕ್ಕಿಂತ ದೊಡ್ಡ ಕೊಡುಗೆ ನಮ್ಮದಾಗುವುದರಲ್ಲಿ ಸಂದೇಹವಿಲ್ಲ.

ಸಿಹಿಜೀವಿ ವೆಂಕಟೇಶ್ವರ
ಶಿಕ್ಷಕರು
ತುಮಕೂರು
9900925529

ಒಂದಾಗಿ ಬಾಳೋಣ .


 


ಒಂದಾಗಿ ಬಾಳೋಣ

ಒಮ್ಮೆ ಸ್ವರ್ಗಕ್ಕೆ ಯಾರು ಹೋಗಬಹುದು ಎಂಬ ಚರ್ಚೆ ಬಂದಾಗ ಕನಕದಾಸರು ಸೂಕ್ಷ್ಮವಾಗಿ "ನಾನು ಹೋದರೆ ಹೋದೇನು" ಎಂದಿದ್ದರು. ಹೌದು ನಾನು ಎಂಬ ಅಹಂ ನಿಂದ ಇಂದು ಏನೆಲ್ಲಾ ಅನಾವುತಗಳಾಗುತ್ತಿವೆ ಎಂಬುದು ನಮ್ಮ ಕಣ್ಣಮುಂದಿದೆ ಆದರೂ ನಾನತ್ವ ಬಿಡುತ್ತಿಲ್ಲ ವಿಶಾಲ ಮನೋಭಾವ ಬೆಳೆಯುತ್ತಿಲ್ಲ

ಒಂದು ದಿನ ಒಂದು ಮನೆಯ ಹಣತೆಯಲ್ಲಿ ಒಂದು ಚಿಕ್ಕ ಭಿನ್ನಾಭಿಪ್ರಾಯ ಶುರುವಾಯಿತು.
ಹಣತೆ "ನನ್ನಿಂದ ದೀಪ ಉರಿಯುತ್ತಿದೆ ಆ ಬೆಳಕು ನನ್ನದು ” ಎಂದು ಹೇಳಿತು.

ಇದನ್ನು ಕೇಳಿದ ಹಣತೆಯಲ್ಲಿದ್ದ ಎಣ್ಣೆ "ನಾನು ಆ ದೀಪಕ್ಕೆ ಜೀವಾಳ.ನಾನೇ ಇರದಿದ್ದರೆ ದೀಪವೂ ಇಲ್ಲ, ಬೆಳಕೂ ಇಲ್ಲ ಅದಕ್ಕಾಗಿ ಆ ಬೆಳಕು ನನಗೆ ಸೇರಿದ್ದು” ಎಂದಿತು. 

ಇದನ್ನು ಕೇಳಿದ ಬತ್ತಿ "ನಾನು ಉರಿಯುತ್ತಿರುವುದರಿಂದಲೇ ದೀಪ ಉರಿಯುತ್ತಿದೆ ಆದ್ದರಿಂದ ನ್ಯಾಯವಾಗಿ ಬೆಳಕು ನನ್ನದೇ" ಎಂದಿತು.

ಈ ಕಚ್ಚಾಟವನ್ನು ಸೂಕ್ಷ್ಮದಿಂದಲೇ ನೋಡುತಿದ್ದ ಗಾಳಿ "ನಾನು ಇಲ್ಲದೇ ದೀಪವು ಉರಿಯಲ್ಲ , ನಾನು ಹೆಚ್ಚಾದರೆ ದೀಪ ಆರಿಹೋಗುತ್ತದೆ ಆದ್ದರಿಂದ ಬೆಳಕು ನನ್ನದು” ಎಂದು ವಾದಿಸಿತು.

ನಾನು ನನ್ನಿಂದ ಎಂಬ ಕಚ್ಚಾಟದಲ್ಲಿ ಹಣತೆ ಒಡೆದು ಹೋಯಿತು. ಎಣ್ಣೆ ಹರಿದು ಹೋಯಿತು. ಬತ್ತಿಗೆ ಎಣ್ಣೆಯಿಲ್ಲದೆ ಕುಗ್ಗಿ ಹೋಯಿತು. ಗಾಳಿ ಜೋರಾಗಿ ಬೀಸಿ ಉರಿಯುತ್ತಿದ್ದ ದೀಪ ಆರಿಹೋಯಿತು !

ಎಲ್ಲವೂ ಒಟ್ಟಾಗಿ ಇರುತ್ತಿದ್ದರೆ ಆ ದೀಪದ ಭರವಸೆಯ ಬೆಳಕು ಎಲ್ಲರ ಪಾಲಾಗಿತ್ತು. "ಅಹಂ ಭಾವನೆಯಿಂದ ಅಂಧಕಾರವೇ ಹೊರತು ಬೆಳಕಿನ ಸಾನಿಧ್ಯವಿಲ್ಲ"
ಕುವೆಂಪುರವರು ಅದಕ್ಕೆ ಹೇಳಿದ್ದು "ಇಲ್ಲಿ ಯಾರೂ ಮುಖ್ಯರಲ್ಲ ಯಾರೂ ಅಮುಖ್ಯರಲ್ಲ" ಎಲ್ಲರೂ ಒಬ್ಬನಿಗಾಗಿ ಒಬ್ಬ ಎಲ್ಲರಿಗಾಗಿ ಎಂಬ ಸಹಕಾರ ತತ್ವ ಪಾಲಿಸುತ್ತಾ ಸಹಬಾಳ್ವೆ ಮಾಡಿದರೆ ಈ ಧರೆ ನಾಕವಾಗುವುದು.

ಹಮ್ಮಿನಿಂದ ಬ್ರಹ್ಮನೂ ಕೆಟ್ಟ ನಮ್ ಮನೇಲಿ ಒಬ್ಬ ಸುಮ್ ಸುಮ್ ನೆ ಕೆಟ್ಟ  ಎಂಬ ಗಾದೆಯಂತೆ ಇಂದು ಸಾಮರಸ್ಯದ ಕೊರತೆ ಕಾಡುತ್ತಿದೆ."ಹತ್ತಿರವಿದ್ದೂ ದೂರ ನಿಲ್ಲುವೆವು ನಮ್ಮ ಅಹಂ ನ ಕೋಟೆಯಲ್ಲಿ " ಎಂಬ ಕವಿವಾಣಿಯು ಇದನ್ನೇ ನೆನಪಿಸುತ್ತದೆ. "ಐದು ಬೆರಳು ಕೂಡಿದರೆ ಒಂದು ಮುಷ್ಟಿ, ಹಲವು ಮಂದಿ ಸೇರಿದರೆ ಈ ಸಮಷ್ಟಿ" ಆದ್ದರಿಂದ ಕತ್ತರಿಯಂತೆ ಹರಿಯುವ ಕಾರ್ಯ ಮಾಡದೇ ಸೂಜಿಯಂತೆ ಹೊಲಿಯುವ ಕೆಲಸ ಮಾಡುತ್ತಾ ಏಕತೆಯ ಮಂತ್ರ ಪಠಿಸುತ್ತಾ ಒಗ್ಗಟ್ಟಿನಲ್ಲಿ ಬಲವಿದೆ ಎಂಬುದನ್ನು ನೆನಯುತ್ತಾ ನಾವೆಲ್ಲರೂ ಒಂದಾಗಿ ಬಾಳೋಣ...

ಸಿಹಿಜೀವಿ ವೆಂಕಟೇಶ್ವರ
ತುಮಕೂರು

ಜ್ಞಾನಾರ್ಜನೆ

 ಜ್ಞಾನಾರ್ಜನೆ 


ಸುಮ್ಮನೆ ಜ್ಞಾನಾರ್ಜನೆ 

ಮಾಡುತ್ತಾ ಸಾಗು ತಮ್ಮ|

ನಿನಗರಿವಿಲ್ಲದೆ ಓಡುವುದು

ನಿನ್ನಲಿರುವ  ತಮ||

ಇನ್ನೆಲ್ಲಿಯ ತಮ ?

 ಇನ್ನೆಲ್ಲಿಯ ತಮ 


ನಿನ್ನ ನಯನಗಳ ಬೆಳಕಿರುವಾಗ 

ನನ್ನ ಬಾಳಲಿ  ಇನ್ನೆಲಿಯ ತಮ|

ನೀ ಸೂರ್ಯ ನಾ ನಿನ್ನ ಪ್ರತಿಬಿಂಬ

ಮಾತ್ರವೇ ಪ್ರಿಯತಮ|| 


12 November 2023

ಇಷ್ಟದ ಕಲರ್

 



ಇಷ್ಟದ ಕಲರ್


ಆಗಸದಲ್ಲಿರುವ ಕಾಮನ ಬಿಲ್ಲು

ತಂದು ಕೊಡುವೆ ಎಂದ ಲವರ್ರು |

ಸಿಡುಕಿನಿಂದಲೇ ಉತ್ತರಿಸಿದಳು

ಬೇಕಿಲ್ಲ ನನಗೆ ಕಾಮನಬಿಲ್ಲು

ಅದರಲ್ಲಿಲ್ಲ ನನ್ನಿಷ್ಷದ ಕಲರ್ಗಳಾಗ  ಗೋಲ್ಡು ಸಿಲ್ವರು ||


ಸಿಹಿಜೀವಿ ವೆಂಕಟೇಶ್ವರ

ತುಮಕೂರು

11 November 2023

ಅನುಭವಾತ್ಮಕ ಕಲಿಕೆಯಲ್ಲಿ ನಿರತರಾದ ಕ್ಯಾತ್ಸಂದ್ರ ಶಾಲೆಯ ಮಕ್ಕಳು.


 

ಅನುಭವಾತ್ಮಕ ಕಲಿಕೆಯಲ್ಲಿ ನಿರತರಾದ ಕ್ಯಾತ್ಸಂದ್ರ ಶಾಲೆಯ ಮಕ್ಕಳು.


ಅಂದು  ನಾಲ್ಕು ಗೋಡೆಗಳ ಮಧ್ಯೆ ಕಲಿಕೆಯ ಬದಲಾಗಿ ಕ್ಯಾತ್ಸಂದ್ರ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿಗಳು ಅನುಭವಾತ್ಮಕ ಕಲಿಕೆಗೆ ಸಿದ್ದವಾಗಿ  ಹಾಲು ಸಂಸ್ಕರಣಾ ಘಟಕದೊಳಗೊಂದು ಸುತ್ತು ಹಾಕಿ ಕ್ಷೇತ್ರ ಭೇಟಿ ಮಾಡಿ ತಮ್ಮ ಜ್ಞಾನಾರ್ಜನೆ ಮಾಡಿಕೊಂಡರು.

ಆಯ್ದ ಮಾದರಿ ಶಾಲೆಗಳ ವಿದ್ಯಾರ್ಥಿಗಳಿಗೆ ಅತ್ಯುತ್ತಮ ಸಂಸ್ಥೆಗಳ ಭೇಟಿಗಾಗಿ  ಶಿಕ್ಷಕರ ಕಲ್ಯಾಣ ನಿಧಿಯ ಪ್ರಾಯೋಜಕತ್ವದಲ್ಲಿ ಕ್ಯಾತ್ಸಂದ್ರ ಪ್ರೌಢಶಾಲೆಯ ಆಯ್ದ ವಿದ್ಯಾರ್ಥಿಗಳು   ತುಮಕೂರು ಬಳಿಯ ಮಲ್ಲಸಂದ್ರದ ಹಾಲು ಸಂಸ್ಕರಣಾ ಘಟಕಕ್ಕೆ ತರಳಿದ್ದರು.

ಪ್ರಧಾನ ಡೇರಿ ಪ್ರವೇಶಿಸಿದ ಮಕ್ಕಳಿಗೆ ಅಧಿಕಾರಿಗಳು ಮೊದಲಿಗೆ ಹಿತವಚನ ಹೇಳಿ ಮಕ್ಕಳು ಹಾಲು ಸಂಸ್ಕರಣಾ ಘಟಕ ನೋಡಿ ಜ್ಞಾನವನ್ನು ವಿಸ್ತರಿಸಿಕೊಳ್ಳಲು ಕರೆ ನೀಡಿದರು.
ನಳಿನ ಎಂಬ ಸಿಬ್ಬಂದಿ ಮಕ್ಕಳಿಗೆ ಹಾಲಿನ ಕೇಂದ್ರದ ಬಗ್ಗೆ ಹಾಲಿನ ಮಹತ್ವದ ಬಗ್ಗೆ ಮಾಹಿತಿಯನ್ನು ನೀಡುವಾಗ  ಕೇಳಿಸಿಕೊಂಡು ನೋಡುತ್ತಾ    ಮಕ್ಕಳು ತಮ್ಮ ನೋಟ್ ಪುಸ್ತಕದಲ್ಲಿ ನೋಟ್ ಮಾಡಿಕೊಂಡರು.

        ತುಮಕೂರು ಹಾಲು ಒಕ್ಕೂಟವು 30ನೇ ಮಾರ್ಚ್ 1977 ರಂದು ಸಹಕಾರ ಸಂಘಗಳ ರಿಜಿಸ್ಟ್ರಾರ್ ಕಾಯ್ದೆಯಡಿಯಲ್ಲಿ "ತುಮಕೂರು ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ ಲಿಮಿಟೆಡ್" ಎಂದು ನೋಂದಾಯಿಸಲ್ಪಟ್ಟಿದೆ. ಡೈರಿ ಸಹಕಾರಿಗಳನ್ನು ಮೂರು ಹಂತದ ವ್ಯವಸ್ಥೆಯಲ್ಲಿ ಆನಂದ್ ಮಾದರಿಯಲ್ಲಿ ಸ್ಥಾಪಿಸಲಾಯಿತು. ಹಾಲಿನ ಸಂಗ್ರಹಣೆ, ಸಂಸ್ಕರಣೆ ಮತ್ತು ಮಾರಾಟವನ್ನು ನೋಡಿಕೊಳ್ಳಲು ಗ್ರಾಮ ಮಟ್ಟದಲ್ಲಿ ಗ್ರಾಮ ಮಟ್ಟದ ಡೈರಿ ಸಹಕಾರ ಸಂಘಗಳು ಅಸ್ತಿತ್ವಕ್ಕೆ ಬಂದಿವೆ.  





     2574 ಕಂದಾಯ ಗ್ರಾಮಗಳನ್ನು ಒಳಗೊಂಡಿರುವ 10 ತಾಲ್ಲೂಕುಗಳಾದ   ತುಮಕೂರು, ಗುಬ್ಬಿ, ಸಿಎನ್‌ಹಳ್ಳಿ, ತಿಪಟೂರು, ತುರುವೇಕೆರೆ, ಕುಣಿಗಲ್, ಕೊರಟಗೆರೆ, ಸಿರಾ, ಮಧುಗಿರಿ, ಪಾವಗಡ ಇವುಗಳಲ್ಲಿ
ಜೂನ್-2022 ರಂತೆ ಒಟ್ಟು ಸದಸ್ಯರು 2,85,061 ಸದಸ್ಯರನ್ನು ಹೊಂದಿದೆ.

     1975-76ರಲ್ಲಿ ದಿನಕ್ಕೆ ಸರಾಸರಿ 1035 ಕೆಜಿ ಹಾಲು ಸಂಗ್ರಹವಾಗುತ್ತಿತ್ತು. ಒಕ್ಕೂಟದ ನೋಂದಣಿ ಸಮಯದಲ್ಲಿ, ಹಾಲು ಸಂಗ್ರಹಣೆಯು ದಿನಕ್ಕೆ 9,486 ಕೆಜಿಗೆ ಏರಿತು. ಅಂದಿನಿಂದ, ವಿವಿಧ ಇನ್‌ಪುಟ್ ಚಟುವಟಿಕೆಗಳ ಪರಿಣಾಮಕಾರಿ ಅನುಷ್ಠಾನದಿಂದಾಗಿ ಹಾಲಿನ ಸಂಗ್ರಹವು ಅನೇಕ ಪಟ್ಟು ಹೆಚ್ಚಾಗಿದೆ. ಪ್ರಸ್ತುತ ದಿನವೊಂದಕ್ಕೆ 8.94 ಲಕ್ಷ ಕೆಜಿ ಹಾಲು ಸಂಗ್ರಹವಾಗುತ್ತಿದೆ. ಜೂನ್ 29, 2022 ರಂದು, ಒಕ್ಕೂಟವು 9,31,684 ಕೆಜಿಗಳನ್ನು ಸಂಗ್ರಹಿಸಿದೆ ಮತ್ತು ಇದು ಪ್ರಾರಂಭದಿಂದಲೂ ಅತಿ ಹೆಚ್ಚು ಹಾಲು ಸಂಗ್ರಹಣೆಯಾಗಿದೆ.

ಒಕ್ಕೂಟವು ವಿವಿಧ ರೀತಿಯ ಹಾಲುಗಳನ್ನು ಮಾರಾಟ ಮಾಡುತ್ತದೆ ಅಂದರೆ ಟೋನ್ಡ್ ಮಿಲ್ಕ್, ಹೋಮೋಜೆನೈಸ್ಡ್ ಟೋನ್ಡ್ ಹಾಲು, ಹೋಮೊಜೆನೈಸ್ಡ್ ಹಸುವಿನ ಹಾಲು, ವಿಶೇಷ ಹಾಲು ಮತ್ತು ಶುಭಂ ಹಾಲು. ತಯಾರಿಸಿದ ಮತ್ತು ಮಾರಾಟ ಮಾಡಲಾಗುವ ಉತ್ಪನ್ನಗಳ ಇತರ ಶ್ರೇಣಿಯು ಮೊಸರು, UHT-FP ಹಾಲು, ತುಪ್ಪ, ಬೆಣ್ಣೆ ಹಾಲು, ಮೈಸೂರು ಪಾಕ್, ಗೋಡಂಬಿ ಬರ್ಫಿ ಮತ್ತು ಪೇಡಾವನ್ನು ಒಳಗೊಂಡಿದೆ. ಇದಲ್ಲದೆ, ಒಕ್ಕೂಟವು ನಂದಿನಿ ಹಾಲಿನ ಉತ್ಪನ್ನಗಳಿಂದ ಉತ್ಪತ್ತಿಯಾಗುವ ಎಲ್ಲಾ ಉತ್ಪನ್ನಗಳನ್ನು ಮಾರಾಟ ಮಾಡುತ್ತದೆ, ಕೆಎಂಎಫ್ ಘಟಕವು ತನ್ನ ಮಾರುಕಟ್ಟೆ ಪಾಲನ್ನು ಸ್ಥಿರವಾಗಿ ಹೆಚ್ಚಿಸುತ್ತಿದೆ. ಪ್ರಸ್ತುತ ದಿನಕ್ಕೆ 2.88 ಲಕ್ಷ ಲೀಟರ್‌ ಮಾರಾಟ ಮಾಡುತ್ತಿದ್ದೇವೆ. ಎಂದು ನಳಿನ ರವರು ಮಾಹಿತಿ ನೀಡಿದರು.

ಮಾಹಿತಿಯನ್ನು ಕೇಳುತ್ತಾ ಬೆಣ್ಣೆ ತಯಾರಿಸುವ ಘಟಕ, ತುಪ್ಪ ,ಮತ್ತು 6 ರೀತಿಯ ಹಾಲು ಪ್ಯಾಕ್ ಮಾಡುವ ಘಟಕಗಳನ್ನು ಸ್ವತಃ ನೋಡುತ್ತಾ ಅಚ್ಚರಿ ಪಡುತ್ತಾ ಮುಂದೆ ಸಾಗುತ್ತಿದ್ದರು.







ಹೊಸ ಜ್ಞಾನವನ್ನು ಪಡೆದ ಮಕ್ಕಳು ಖುಷಿಪಡುವಾಗಲೇ ಮಕ್ಕಳಿಗೆ ಮತ್ತು ಮಾರ್ಗದರ್ಶಿ ಶಿಕ್ಷಕರಿಗೆ  ಉಚಿತವಾಗಿ ಪೇಡ ನೀಡಿದರು. ಜೊತೆಗೆ ಕೆಲ ಮಕ್ಕಳ ಅಪೇಕ್ಷೆಯಂತೆ ಉಚಿತವಾಗಿ ಹಾಲನ್ನು ಸಹ ನೀಡಿದರು. ಮಕ್ಕಳ ಗುಂಪಿನಲ್ಲಿ ಬಹುತೇಕ ರೈತರ ಮಕ್ಕಳು ಇದ್ದರು ತಮ್ಮ ಪೋಷಕರು ಡೈರಿ ಗಳಲ್ಲಿ ಹಾಕಿದ ಹಾಲು ಹೇಗೆ ಸಂಸ್ಕರಣೆ ಹೊಂದಿ ವಿವಿಧ   ನಂದಿನಿ ಉತ್ಪನ್ನ ಆಗುತ್ತವೆ  ಎಂಬುದನ್ನು ತಿಳಿಸುವುದಾಗಿ ಹೇಳಿದರು. ಇದೇ ಸಂದರ್ಭದಲ್ಲಿ ಇಂತಹ ಡೈರಿಗಳ ಸ್ಥಾಪನೆಯ ಹಿಂದಿನ ಶಕ್ತಿ ಬಿಳಿ ಕ್ರಾಂತಿಯ ಪಿತಾಮಹ ,ಮಿಲ್ಕ್ ಮ್ಯಾನ್ ಆಪ್ ಇಂಡಿಯಾ ವರ್ಗಿಸ್ ಕುರಿಯನ್ ಅವರ ಬಗ್ಗೆ ಮಕ್ಕಳು ಮಾಹಿತಿ ಪಡೆದರು.
         
ಕಡೆಯಲ್ಲಿ  ಮಕ್ಕಳು  ಇಂತಹ ಅನುಭವಾತ್ಮಕ ಕಲಿಕೆಗೆ ಅವಕಾಶ ಕಲ್ಪಿಸಿದ ಶಿಕ್ಷಕರ ಕಲ್ಯಾಣ ನಿಧಿ, ಮುಖ್ಯ ಶಿಕ್ಷಕರು, ಮಾರ್ಗದರ್ಶಿ ಶಿಕ್ಷಕರು, ಡೈರಿಯ ಅಧಿಕಾರಿಗಳು ಹಾಗೂ ಸಿಬ್ಬಂದಿಗೆ ಮಕ್ಕಳು ಹೃದಯಪೂರ್ವಕ ಧನ್ಯವಾದಗಳನ್ನು ಅರ್ಪಿಸಿದರು.ಮುಂದಿನ ದಿನಗಳಲ್ಲಿ ಇನ್ನೂ ಇಂತಹ ಸಂಸ್ಥೆಗಳಿಗೆ ನಮ್ಮನ್ನು ತಿಂಗಳಲ್ಲಿ ಒಂದು ಬಾರಿಯಾದರೂ ಕರೆದುಕೊಂಡು ಹೋಗಿ ಸರ್ ಎಂದು ಪ್ರೀತಿಪೂರ್ವಕವಾಗಿ ಮನವಿ ಮಾಡಿದರು.

ಸಿಹಿಜೀವಿ ವೆಂಕಟೇಶ್ವರ
ಸಮಾಜ ವಿಜ್ಞಾನ ಶಿಕ್ಷಕರು
ಸರ್ಕಾರಿ ಪ್ರೌಢಶಾಲೆ ಕ್ಯಾತ್ಸಂದ್ರ
ತುಮಕೂರು


ಓದೋಣ ಓದಿಸೋಣ..

 


ಓದೋಣ ಓದಿಸೋಣ..



ಒಂದು   ಭಾನುವಾರ ಸಂಜೆ ತುಮಕೂರಿನ ಬಾಯರ್ಸ್ ಕಾಪೀ ಹೌಸ್ ನಲ್ಲಿ ಟೀ ಕುಡಿಯುತ್ತಾ  ಸಮಾನ ಮನಸ್ಕ ಗೆಳೆಯರ ಜೊತೆ ಕುಳಿತು ಟೀ ಕುಡಿಯುವಾಗ ಸಾಹಿತ್ಯ, ಸಮಾಜ ,ಶಿಕ್ಷಣ ಹೀಗೆ ನಮ್ಮ ಮಾತುಕತೆ ಸಾಗುವಾಗ ಓದುವ ಹವ್ಯಾಸ ಕ್ರಮೇಣ ಕಡಿಮೆಯಾಗಿರುವ ಬಗ್ಗೆ ಚರ್ಚೆ ನಡೆಯುವಾಗ   ಸ್ಟೂಡೆಂಟ್ ಬುಕ್ ಹೌಸ್ ಮಾಲೀಕರು ಪ್ರಕಾಶಕರಾದ ಸದಾಶಿವ್ ರವರು ಒಂದು ಘಟನೆ ಹೇಳಿದರು .ಒಮ್ಮೆ ನನ್ನ ಪುಸ್ತಕದ ಅಂಗಡಿಗೆ ನಾಲ್ಕು ಜನ ಕಾರಿನಲ್ಲಿ ಬಂದು ಶಿಕ್ಷಕರು ಎಂದು ಪರಿಚಯ ಮಾಡಿಕೊಂಡು ಓರ್ವ ಶಿಕ್ಷಕರು ಸುಮಾರು ಎಂಟತ್ತು ಉತ್ತಮ ಅಭಿರುಚಿಯ ಪುಸ್ತಕಗಳನ್ನು ಕೊಂಡರು .ಅವರ ಜೊತೆಯಲ್ಲಿ ಇದ್ದ ಶಿಕ್ಷಕರೊಬ್ಬರು "ಸಾಕು ಬಾರಪ್ಪ ಅದೇನ್ ಪುಸ್ತಕ ಓದ್ತಿಯಾ ನೀನು " ಎಂದು ವ್ಯಂಗ್ಯವಾಗಿ ಹೇಳಿದರು ಇದರಿಂದ ನನಗೆ ಬಹಳ ಬೇಸರ ವಾಯಿತು ಎಂದರು.. ಅವರು ಮುಂದುವರೆದು ನಾನು ಪುಸ್ತಕ ಅಂಗಡಿಯಿಟ್ಟು ಹದಿನೈದು ವರ್ಷಗಳಾದವು ಶಿಕ್ಷಕರು ಪುಸ್ತಕ ಕೊಳ್ಳುವುದು ಬಹಳ ಕಡಿಮೆ ಎಂದರು ಅದಕ್ಕೆ ನಾನು ಆಕ್ಷೇಪಿಸಿ ನಾನು ಈ ವರ್ಷ ಹದಿನೈದು ಪುಸ್ತಕ ಕೊಂಡು ಓದಿರುವೆ ಎಂದೆ .ನೀವು ಹಾಗೂ ನಿಮ್ಮಂತವರು ಕೆಲವೇ ಮಂದಿ ಸರ್ ನಮ್ಮ ಮನೆಯ ಪಕ್ಕ ಎರಡು ಶಿಕ್ಷಕರ ಕುಟುಂಬ ಇವೆ ಅವರ ಮನೆಯಲ್ಲಿ ಒಂದು ನ್ಯೂಸ್ ಪೇಪರ್ ಸಹ ತರಿಸಲ್ಲ   ಅವರು ನ್ಯೂಸ್ ಪೇಪರನ್ನೇ  ಓದಲ್ಲ ಎಂದರೆ  ಪುಸ್ತಕ ಓದುವ ಮಾತೆಲ್ಲಿ ಬಂತು?     ಅಂದು ನನ್ನ ಬಾಯಿ ಮುಚ್ಚಿಸಿದರು.

ರವೀಂದ್ರನಾಥ ಟಾಗೋರ್ ರವರು ಒಂದು ದೀಪ ತಾನು ಉರಿಯದೇ ಮತ್ತೊಂದು ದೀಪ ಹಚ್ಚಲಾಗದು ಎಂದಂತೆ ಶಿಕ್ಷಕರಾದವರು ಮೊದಲು ತಾವು  ಓದಿ ಜ್ಞಾನವನ್ನು ಪಡೆದರೆ ಮಾತ್ರ ಮಕ್ಕಳಿಗೆ ಜ್ಞಾನ ನೀಡಲು ಸಾದ್ಯ. ಸಾಧಾರಣ ಶಿಕ್ಷಕ ಪಾಠ ಮಾಡುತ್ತಾನೆ ಉತ್ತಮ ಶಿಕ್ಷಕ ಅರ್ಥ ಮಾಡಿಸುತ್ತಾನೆ ಅತ್ಯುತ್ತಮ ಶಿಕ್ಷಕ ಪ್ರೇರಣೆ ನೀಡುತ್ತಾನೆ ಅಂತಹ ಪ್ರೇರಣೆ ನೀಡುವ ಶಿಕ್ಷಕ ಮೊದಲು ಕಲಿಕಾರ್ಥಿಯಾಗಿ ಕಲಿತಿರಬೇಕು.ಬಹುತೇಕರು ನಂಬಿದಂತೆ ಶಿಕ್ಷಕ ವೃತ್ತಿ ಸಿಕ್ಕಿದ ಮೇಲೆ ಕಲಿಯಲು ಏನೂ ಇಲ್ಲ ಎಂಬುದು ಸುಳ್ಳು. ಕಲಿಕೆಯು ವರ್ಷದಿಂದ ಗೋರಿಯವರೆಗೆ ನಡೆವ ನಿರಂತರ ಪ್ರಕ್ರಿಯೆಯಾಗಿದೆ. ಅದರಲ್ಲೂ ಈ ಇಪ್ಪತ್ತೊಂದನೇ ಶತಮಾನದ  ರೋಬಾಟಿಕ್ ಮತ್ತು  ಕೃತಕ ಬುದ್ಧಿಮತ್ತೆಯ ಕಾಲದಲ್ಲಿ ಮಕ್ಕಳು ಶಿಕ್ಷಕರಿಗಿಂತ ಒಂದು ಹೆಜ್ಜೆ ಮುಂದೆ ಇರುವುದು ನೋಡಬಹುದು. ಶಿಕ್ಷಕರಾದವರು ಅಪ್ಡೇಟ್ ಆಗುತ್ತ ಇರಬೇಕು ಹೊಸ ತಂತ್ರಜ್ಞಾನದ ತಿಳುವಳಿಕೆ, ಬೋಧನಾ ಕ್ಷೇತ್ರದಲ್ಲಿ ನಾವೀನ್ಯತೆಯ ಅಳವಡಿಸಿಕೊಂಡು ಬೋಧನೆ ಮಾಡಿದರೆ ಮಕ್ಕಳು ಶಿಕ್ಷಕರನ್ನು ಆರಾಧಿಸುತ್ತಾರೆ. ಆಗ ಶಿಕ್ಷಕರಿಗಾಗುವ ಆನಂದ ಅನುಭವಿಸಿಯೇ ತಿಳಿಯಬೇಕು ಆ ಅನುಭವ ನನಗಾಗಿದೆ ಎಂದು ಹೆಮ್ಮೆಯಿಂದ ಹೇಳಬಲ್ಲೆ.  ಶಿಕ್ಷಕರಾದವರು ಅಪ್ಡೇಟ್ ಆಗಲಿಲ್ಲ ಎಂದರೆ ಔಟ್ ಡೇಟ್ ಆಗಿಬಿಡುತ್ತೇವೆ ನಮ್ಮ ನಮ್ಮ ಬೋಧನಾ   ವಿಷಯಗಳಲ್ಲಿ ಪ್ರಾವೀಣ್ಯತೆ ಪಡೆಯಲು ಸದಾ ನಾವು ಕಲಿಯುತ್ತಲೇ ಇರಬೇಕು.ಇದರ ಜೊತೆಯಲ್ಲಿ ಶಿಕ್ಷಕರಾದವರು  "teachers must know something about everything and everything about something" ಎಂಬಂತೆ ನಮಗೆ ಇತರೆ ವಿಷಯಗಳ ಜ್ಞಾನವು ಅಗತ್ಯ . 2020 ರ ಹೊಸ ಶಿಕ್ಷಣ ನೀತಿಯು ಸಹ ಇದೇ ಆಧಾರದ ಮೇಲೆ ಶಿಕ್ಷಕರಾದವರು ಕಲಿಯುತ್ತಾ ಕಲಿಸಬೇಕು ಎಂಬುವ ಆಶಯ ಹೊಂದಿದೆ. ಈ ನಿಟ್ಟಿನಲ್ಲಿ ಶಿಕ್ಷಕರಾದ ನಾವು ಕಲಿಯುತ್ತಾ ಕಲಿಸೋಣ, ಕಲಿಸುತ್ತಾ ಕಲಿಯೋಣ .


ಸಿಹಿಜೀವಿ ವೆಂಕಟೇಶ್ವರ

ತುಮಕೂರು.

09 November 2023

ಕನ್ನಡ ದೀಪ ಹಚ್ಚಿದ ಡಿ ಎಸ್ ಕರ್ಕಿ..

 



ಕನ್ನಡ ದೀಪ ಹಚ್ಚಿದ ಡಿ ಎಸ್ ಕರ್ಕಿ..

ಹೆಚ್ಚೇವು ಕನ್ನಡ ದೀಪ.. ಕರುನಾಡ ದೀಪ...ಸಿರಿನುಡಿಯ ದೀಪ...
.ಎಂಬ ಗೀತೆಯನ್ನು ನಾಡಿಗೆ ನೀಡಿ
ಕನ್ನಡಿಗರ  ಮನೆ ಮನಗಳಲ್ಲಿ ಕನ್ನಡ ದೀವಿಗೆ ಬೆಳಗಿಸಿದ ಕವಿ ಯಾರಿಗೆ ಗೊತ್ತಿಲ್ಲ ಹೇಳಿ?  ಹೌದು ಅವರೇ ನಮ್ಮ ಹೆಮ್ಮೆಯ ಡಿ ಎಸ್ ಕರ್ಕಿ ರವರು.  ಅವರು ಸಹಜ ಮಾಧುರ್ಯ ದ ಸಂವೇದನಾಶೀಲ ಮತ್ತು  ರಮ್ಯ ಕವನಗಳ ಮೂಲಕ ಕನ್ನಡ ನಾಡು ನುಡಿ ಸಂಸ್ಕೃತಿಯ ಉನ್ನತಮೌಲ್ಯಗಳನ್ನು ಉದಾತ್ತ ಆದರ್ಶಗಳನ್ನು ಹೃದ್ಯವಾಗಿ ಹಾಡಿದ ಭಾವಗೀತೆಯ ಕವಿ ಎಂದೇ ಪ್ರಸಿದ್ಧರಾಗಿದ್ದರು ಪ್ರತಿ ವರ್ಷ ನವೆಂಬರ್ 15 ರಂದು ಅವರ ಜನ್ಮ ದಿನ ಆಚರಿಸುತ್ತೇವೆ.

ಡಿ.ಎಸ್.ಕರ್ಕಿಯವರು ಬೆಳಗಾವಿ ಜಿಲ್ಲೆಯ ಹಿರೇಕೊಪ್ಪ  ಗ್ರಾಮದಲ್ಲಿ 1907 ನವೆಂಬರ್ 15ರಂದು ಜನಿಸಿದರು. ಇವರ ತಾಯಿ ದುಂಡವ್ವ  ತಂದೆ ಸಿದ್ದಪ್ಪ.ದುಂಡಪ್ಪ ಸಿದ್ದಪ್ಪ ಕರ್ಕಿ ಎಂಬುದು ಇವರ ಪೂರ್ಣ ನಾಮ.ಚಿಕ್ಕಂದಿನಲ್ಲಿಯೆ ತಾಯಿಯನ್ನು ಕಳೆದುಕೊಂಡ ಇವರ ಪ್ರಾಥಮಿಕ ಶಿಕ್ಷಣ ತಾಯಿಯ ತವರೂರಾದ ಬೆಲ್ಲದ ಬಾಗೇವಾಡಿಯಲ್ಲಿ ಆಯಿತು.  ಬೆಳಗಾವಿಯ ಗಿಲಗಂಜಿ ಅರಟಾಳ ಪ್ರೌಢಶಾಲೆಯಲ್ಲಿ ಮಾಧ್ಯಮಿಕ ಶಿಕ್ಷಣ ಪೂರೈಸಿದ ಕರ್ಕಿಯವರು ಧಾರವಾಡದ ಕರ್ನಾಟಕ ಕಾಲೇಜಿನಲ್ಲಿ ಪದವಿ ಅಭ್ಯಾಸದ ನಂತರ 1935ರಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದರು. ಕೊಲ್ಲಾಪುರದ ರಾಜಾರಾಮ ಕಾಲೇಜು, ಪುಣೆಯ ಫರ್ಗ್ಯೂಸನ್ ಕಾಲೇಜು, ಧಾರವಾಡದ ಕರ್ನಾಟಕ ಕಾಲೇಜುಗಳಲ್ಲಿ ಓದಿದರು.  ಕನ್ನಡದಲ್ಲಿ ಸ್ನಾತಕೋತ್ತರ ಪದವಿ ಪಡೆದರು. 1940ರಲ್ಲಿ ಬಿ.ಟಿ. ಪದವಿಯನ್ನು ಪಡೆದು ಗಿಲಗಂಜಿ ಅರಟಾಳ ಪ್ರೌಢಶಾಲೆಯಲ್ಲಿ  ಶಿಕ್ಷಕರಾದರು. 1949ರಲ್ಲಿ "ಕನ್ನಡ ಛಂದಸ್ಸಿನ ವಿಕಾಸ"   ಮಹಾಪ್ರಬಂಧಕ್ಕಾಗಿ ಪಿ.ಎಚ್‍ಡಿ. ಪಡೆದರು. ಕೆಲಕಾಲದಲ್ಲಿ ಕೆ.ಎಲ್.ಇ. ಸೊಸೈಟಿ ಸೇರಿದರು. ಜಿ.ಎ. ಪ್ರೌಢ ಶಾಲೆಯಲ್ಲಿ ಅಧ್ಯಾಪಕರಾದರು. ಅನಂತರ ಬೆಳಗಾವಿಯ ಲಿಂಗರಾಜ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿ, ಕೆ.ಎಲ್.ಇ. ಸೊಸೈಟಿಯ ಹುಬ್ಬಳ್ಳಿಯ ಕಲಾ  ಕಾಲೇಜಿನ ಉಪಪ್ರಾಚಾರ್ಯರಾಗಿ, ಪ್ರಾಂಶುಪಾಲರಾಗಿ, ಕೆಲಕಾಲ ನರೇಗಲ್ ಕಾಲೇಜಿನ ಪ್ರಾಂಶುಪಾಲರಾಗಿ ಸೇವೆಸಲ್ಲಿಸಿ ಹುಬ್ಬಳ್ಳಿಗೆ ಹಿಂದಿರುಗಿದರು. ದಕ್ಷ ಆಡಳಿತಗಾರರೆಂದೂ ಇವರು ಹೆಸರುಗಳಿಸಿದರು. ವಿದ್ಯಾರ್ಥಿಗಳನ್ನು ಸ್ನೇಹಿತರಂತೆ ಕಾಣುತ್ತಿದ್ದರು. ನಿವೃತ್ತಿಯ ನಂತರ ಕರ್ನಾಟಕ ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಪೀಠದಲ್ಲಿ ವಿಶ್ರಾಂತ ಪ್ರಾಧ್ಯಾಪಕರಾಗಿ ಅನೇಕ ವರ್ಷಗಳವರೆಗೆ ವಿದ್ಯಾರ್ಥಿಗಳ ಸಂಶೋಧನೆಗೆ ನೆರವಾದರು. 

ಕರ್ಕಿಯವರು ಭೂಮಿಯ ಸಂಗೀತದ ನಾದದೊಂದಿಗೆ ಭುವನದ ಭಾಗ್ಯರಾಗಿ ತಮ್ಮ ಸಾಹಿತ್ಯ ಕೃಷಿಯನ್ನು ಮಾಡಿದವರು. ಅಧ್ಯಾತ್ಮಿಕತೆ, ಪ್ರಕೃತಿ ಪ್ರೀತಿ, ಸೌಂದರ್ಯದ ಒಲವು ಅವರ ಕಾವ್ಯದ ಜೀವಾಳಗಳಾಗಿವೆ. ಡಿ.ಎಸ್. ಕರ್ಕಿ ಅವರಿಗೆ ಕಾವ್ಯ ಕೃಷಿ ವಿಶೇಷ ಕ್ಷೇತ್ರವಾದರೂ ಎಲ್ಲ ಸಾಹಿತ್ಯ ಪ್ರಕಾರಗಳಲ್ಲಿಯೂ ಜನಪರ ವಿಚಾರಗಳನ್ನು ನೀಡಿದ್ದಾರೆ. ನಾಡಗೀತೆಗಳನ್ನು ಬರೆದು ನಾಡಿನಾದ್ಯಂತ ಪ್ರಸಿದ್ದಿಯನ್ನು ಪಡೆದ ಅವರು ಬೆಳಗಾವಿಯಲ್ಲಿ ಎಸ್.ಡಿ. ಇಂಚಲ, ಬ.ಗಂ. ತುರಮರಿಯರೊಂದಿಗೆ ಸೇರಿ ಕನ್ನಡ ಜೀವಂತಗೊಳಿಸುವಲ್ಲಿ ಮಹತ್ವದ ಪಾತ್ರ ವಹಿಸಿದ್ದು ಈ ಮೂವರೂ ಸೇರಿ 'ಕನ್ನಡದ ಕಿಟ್' ಎಂದೇ ಹೆಸರುವಾಸಿಯಾಗಿದ್ದರು” ಎಂದು ಪ್ರೊ. ಎಂ. ಎಸ್. ಇಂಚಲ ಅಭಿಪ್ರಾಯ ಪಡುತ್ತಾರೆ.

ಪ್ರಕೃತಿ ಮತ್ತು ಜೀವನದ ಸಾತ್ವಿಕ ಸತ್ವ ಸೌಂದರ್ಯದಿಂದ ಅಗಾಧವಾಗಿ ಪ್ರಭಾವಿತರಾದ ಇವರು ಗದ್ಯಪದ್ಯವೆರಡರಲ್ಲೂ ತಮ್ಮ ವ್ಯಕ್ತಿ ವಿಶಿಷ್ಟ ಪ್ರತಿಭೆಯನ್ನು ಪ್ರದರ್ಶಿಸಿದರು. ಕಾವ್ಯ, ಪ್ರಬಂಧ, ಮಕ್ಕಳಸಾಹಿತ್ಯ ಮತ್ತು ಸಂಪಾದನೆ, ಸಂಶೋಧನೆಗೆ ಸಂಬಂಧಿಸಿದ ಒಟ್ಟು ಹನ್ನೊಂದು ಕೃತಿಗಳನ್ನು ಪ್ರಕಟಿಸಿದ್ದಾರೆ. ಆಧ್ಯಾತ್ಮಿಕ ಚಿಂತನೆಗಳನ್ನು ಸೌಂದರ್ಯಪ್ರಜ್ಞೆ ಮತ್ತು ಜೀವನಸಂಸ್ಕೃತಿ ಕುರಿತಾದ ಆರೋಗ್ಯಪೂರ್ಣ ವಿಚಾರಗಳನ್ನು ಬದುಕಿನ ಶುಚಿ ರುಚಿ ಮತ್ತು ಒಲವು ಚೆಲವನ್ನು ಕಲಾತ್ಮಕ ವಿನ್ಯಾಸದಲ್ಲಿ ಸುಕುಮಾರ ಶೈಲಿಯಲ್ಲಿ ಪಡಿಮೂಡಿಸಿರುವ ಇವರ ಕಾವ್ಯಪ್ರತಿಭೆ ಅನನ್ಯವಾದುದು. ನಕ್ಷತ್ರಗಾನ (1949), ಭಾವತೀರ್ಥ (1953), ಗೀತಗೌರವ (1968), ಕರಿಕೆ ಕಣಗಿಲು (1976), ನಮನ (1977)  ಇವು ಇವರ ಕವನ ಸಂಕಲನಗಳು. "ಹಚ್ಚೇವು ಕನ್ನಡದ ದೀಪ, ಕರುನಾಡದೀಪ ಸಿರಿನುಡಿಯದೀಪ ಒಲವೆತ್ತಿ ತೋರುವ ದೀಪ" ಎಂದು ಕನ್ನಡಿಗರ ಎದೆಯಾಳದ ಮಿಡಿತವನ್ನು ಕಾವ್ಯದ ಕೊರಳಲ್ಲಿ ಮಿಡಿದ ನಾಡಕವಿ ಇವರು. ಕವಿಯ ಜೀವನ ಪ್ರೀತಿ, ಪ್ರಕೃತಿ, ಕಲೆ ಮತ್ತು ಸಾಹಿತ್ಯ ಚಿಂತನೆಯ ಚತುರ್ಮುಖ ದರ್ಶನ ನೀಡುವ ಗದ್ಯಕೃತಿ ನಾಲ್ದೆಸೆಯನೋಟ (1952), ಸಾಹಿತ್ಯ ಸಂಸ್ಕೃತಿ ಶೃತಿ (1974) ಇವರ ಗದ್ಯಶೈಲಿಯ ಸೊಗಸು ಪ್ರಬಂಧ ಪ್ರತಿಭೆ ಮತ್ತು ಅನುವಾದ ಸಾಮರ್ಥ್ಯಕ್ಕೆ ಉತ್ತಮ ಉದಾಹರಣೆ. ಮಕ್ಕಳ ಶಿಕ್ಷಣ (1956) ಶಿಕ್ಷಣತಜ್ಞನೊಬ್ಬನ ಶೈಕ್ಷಣಿಕ ಕಾಳಜಿಗಳನ್ನು ಪ್ರಕಟಿಸಿರುವ ಕೃತಿ. ಬಣ್ಣದ ಚೆಂಡು, ತನನತೋಂನಂ ಶಿಶುಗೀತೆಗಳ ಸಂಕಲನಗಳು. ಕರ್ನಾಟಕದ ಅನುಭಾವಿ ಕವಿ ಶಿಶುನಾಳ ಶರೀಫರ ತತ್ವಪದಗಳ ಸಂಗ್ರಹ ಜನಪ್ರಿಯ ಪದಗಳು. ಇದು ಶರೀಫರ ಗೀತೆಗಳ ಆನುಭಾವಿಕ ಸಾಮಾಜಿಕ, ತಾತ್ತ್ವಿಕ ನೆಲೆಗಳ ಗಂಭೀರ ಪ್ರತಿಪಾದನೆ ಯನ್ನೊಳಗೊಂಡಿದೆ. ಕನ್ನಡ ಛಂದೋವಿಕಾಸ (1956) ಕನ್ನಡ ಛಂದಸ್ಸಿನ ಚರಿತ್ರೆ ಮತ್ತು ಸ್ವರೂಪವನ್ನು ಪ್ರಾಚೀನ ಮತ್ತು ಆಧುನಿಕ ಕಾವ್ಯ ಭಾಗಗಳ ಮೂಲಕ ವಿಶ್ಲೇಷಿಸುವ ಸಂಶೋಧನ ಮಹಾ ಪ್ರಬಂಧ. ಛಂದಶ್ಶಾಸ್ತ್ರದ ಗಂಭೀರ ಅಧ್ಯಯನಗಳು ವಿರಳವಾಗಿದ್ದ ಸಂದರ್ಭದಲ್ಲಿ ಛಂದಶ್ಶಾಸ್ತ್ರದ ಅಧ್ಯಯನಕ್ಕೆ ಅಧಿಕೃತ ಆಕರ ಗ್ರಂಥವಾಗಿದ್ದ ಕನ್ನಡ ಛಂದೋವಿಕಾಸ ಅಚ್ಚಗನ್ನಡದ ದೇಸಿ ಛಂದಸ್ಸನ್ನು ಕುರಿತು ನಡೆಸಿರುವ ವಿವೇಚನೆ ಮೌಲಿಕವಾದುದಾಗಿದೆ. ತ್ರಿಪದಿ, ಕಂದ, ರಗಳೆ, ಸಾಂಗತ್ಯ, ಷಟ್ಪದಿ, ಅಕ್ಕರ, ಚೌಪದಿ, ಏಳೆ ಇತ್ಯಾದಿ ಅಚ್ಚಗನ್ನಡ ಛಂದೋಲಯಗಳ, ಚಾರಿತ್ರಿಕ ಮತ್ತು ಕಲಾತ್ಮಕ ನೆಲೆಯ ಚರ್ಚೆ ಕರ್ಕಿಯವರ ವಿದ್ವತ್ ಪರಿಶ್ರಮ ಮತ್ತು ಸದಭಿರುಚಿಯ ಪ್ರತೀಕವಾಗಿದೆ.
ಪ್ರೊ. ಕರ್ಕಿ ಅವರ ಕೃತಿ 'ಗೀತ ಗೌರವ’ ಕೃತಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಸಂದಿದೆ. ಇವರ ಸಾಹಿತ್ಯಕ ಸಾಧನೆಗೆ ಕರ್ನಾಟಕ ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ನೀಡಿ ಗೌರವಿಸಿದೆ (1972). ಕಾವ್ಯಗೌರವ ಎಂಬ ಸಂಭಾವನಾ ಗ್ರಂಥವನ್ನು ಇವರಿಗೆ ಅರ್ಪಿಸಲಾಗಿದೆ (1991)
ಕರ್ಕಿಯವರು ಏಳು ಕವನಸಂಕಲನಗಳನ್ನು, ಎರಡು ಮಕ್ಕಳ ಕವನಸಂಕಲನಗಳನ್ನು ಹಾಗು ಎರಡು ಪ್ರಬಂಧಸಂಕಲನಗಳನ್ನು ನೀಡಿದ್ದಾರೆ. ಕನ್ನಡ ‌ದೀಪ ಹಚ್ಚಿದ  ಕರ್ಕಿಯವರು 1984 ಜನೆವರಿ 16ರಂದು  ಆರಿತು.

ಸಿಹಿಜೀವಿ ವೆಂಕಟೇಶ್ವರ
ತುಮಕೂರು
9900925529


ಸಾಮಾನ್ಯ ಜ್ಞಾನ ಭಾಗ ೧

 


ಸಾಮಾನ್ಯ ಜ್ಞಾನ ಪ್ರಶ್ನೋತ್ತರಗಳು. ಭಾಗ 1 



1.ಆಸ್ಕರ್ ಪ್ರಶಸ್ತಿಗಳನ್ನು ಯಾವ ಕ್ಷೇತ್ರದಲ್ಲಿ ವಿತರಿಸಲಾಗುತ್ತದೆ?


2. ಪ್ರಪಂಚದ ಅತಿ ದೊಡ್ಡ ಮರುಭೂಮಿ ಯಾವುದು?


3.ತಾಪಮಾನವು ವಾಯುಗೋಳದ ಯಾವ ವಲಯದಲ್ಲಿ  ವೇಗವಾಗಿ ಹೆಚ್ಚಾಗುತ್ತದೆ ?


4. ಭಾರತದ ರಾಷ್ಟ್ರೀಯ ಹಣ್ಣು ಯಾವುದು?


5. ಟೈಫಾಯಿಡ್ ಜ್ವರವು _____ ನಿಂದ ಉಂಟಾಗುತ್ತದೆ.


6. ಯಾವ ಸಂವಿಧಾನದ ತಿದ್ದುಪಡಿಗಳು ಪಂಚಾಯತ್ ರಾಜ್ ಸಂಸ್ಥೆಯನ್ನು ಸ್ಥಾಪಿಸಿವೆ?


7. ಸೋಡಿಯಂ ಕಾರ್ಬೋನೇಟ್ ಅನ್ನು ಸಾಮಾನ್ಯವಾಗಿ ಕರೆಯಲಾಗುತ್ತದೆ?


8 .ಎರಡು ಪರಮಾಣುಗಳ ನಡುವೆ ಬಂಧವು ರೂಪುಗೊಂಡಾಗ, ವ್ಯವಸ್ಥೆಯ ಶಕ್ತಿಯು ______.ಆಗುತ್ತದೆ


9 .ನೀರು _____ ಉಷ್ಣತೆಯಲ್ಲಿ  ಗರಿಷ್ಠ ಸಾಂದ್ರತೆಯನ್ನು ಹೊಂದಿದೆ.


10. ನೀಪ್ ಟೈಡ್ಸ್ ಎಂದರೆ._________


11. ಅತಿ ದೊಡ್ಡ ಮೇಲ್ಮೈ ವಿಸ್ತೀರ್ಣವನ್ನು ಹೊಂದಿರುವ ಸಾಗರವು_______ ಆಗಿದೆ.


12.ದೂರವಾಣಿಯನ್ನು ಕಂಡುಹಿಡಿದವರು ಯಾರು?


13.ಏಷ್ಯನ್ ಗೇಮ್ಸ್ ಅನ್ನು ಮೊದಲು ಆಯೋಜಿಸಿದ ದೇಶ ಯಾವುದು?


14."ಪಂಚತಂತ್ರ" ಕಥೆಗಳನ್ನು ಸಂಕಲಿಸಿದವರು ಯಾರು?


15.ಯಾವ ರಾಜವಂಶದ ಅವಧಿಯಲ್ಲಿ ಅಜಂತಾ ಗುಹೆಗಳನ್ನು ನಿರ್ಮಿಸಲಾಯಿತು?


16.'ಭಾರತಮಾತಾ' ಎಂಬ ಪ್ರಸಿದ್ಧ ವರ್ಣಚಿತ್ರದ ವರ್ಣಚಿತ್ರಕಾರ ಯಾರು?


17.ಫ್ರಾನ್ಸ್ನ ರಾಜಧಾನಿ ಯಾವುದು?


18."ಟು ಕಿಲ್ ಎ ಮೋಕಿಂಗ್ ಬರ್ಡ್" ಕಾದಂಬರಿಯನ್ನು ಬರೆದವರು ಯಾರು?


19.ನಮ್ಮ ಸೌರವ್ಯೂಹದ ಅತಿದೊಡ್ಡ ಗ್ರಹ ಯಾವುದು?


20. "ದಿ ಮೋನಾಲಿಸಾ" ಎಂಬ ಪ್ರಸಿದ್ಧ ಕಲಾಕೃತಿಯನ್ನು ಚಿತ್ರಿಸಿದವರು ಯಾರು?




ಸರಿ ಉತ್ತರಗಳು ...


1ಸಿನಿಮಾ

2 ಸಹರಾ

3ಆಯಾನುಗೋಳ

4 ಮಾವು 

5 ಬ್ಯಾಕ್ಟೀರಿಯಾ

6 73 ನೇ ತಿದ್ದುಪಡಿ

7 ವಾಶಿಂಗ್ ಸೋಡಾ 

8 ಇಳಿಕೆ 

9 4 ಡಿಗ್ರಿ ಸೆಲ್ಸಿಯಸ್

10 ದುರ್ಬಲ ಅಲೆಗಳು 

11 ಪೆಸಿಫಿಕ್ ಸಾಗರ

12 ಅಲೆಕ್ಸಾಂಡರ್ ಗ್ರಹಾಂಬೆಲ್ 

13 ಭಾರತ

14 ವಿಷ್ಣು ಶರ್ಮ

15 ಗುಪ್ತರು 

16 ಅಬನೀಂದ್ರ ನಾಥ್ ಟ್ಯಾಗೋರ್

17 ಪ್ಯಾರಿಸ್

18 ಹಾರ್ಪರ್ ಲೀ 

19 ಗುರು 

20 ಲಿಯೋನಾರ್ಡೋ ಡಾ ವಿಂಚಿ 



ಸಿಹಿಜೀವಿ ವೆಂಕಟೇಶ್ವರ

ಶಿಕ್ಷಕರು

ಸರ್ಕಾರಿ ಪ್ರೌಢಶಾಲೆ ಕ್ಯಾತ್ಸಂದ್ರ

ತುಮಕೂರು

9900925529

30 October 2023

ಸಿಕ್ಸರ್...

 



ಸಿಕ್ಸರ್...

ಆಡಿದ ಆರೂ ಪಂದ್ಯಗಳಲ್ಲಿ
ಗೆದ್ದು ಬಾರಿಸಿದೆ ಭಾರತ ಸಿಕ್ಸರು|
ಸರಣಿ ಸೋಲಿನಿಂದ ತವರಿನೆಡೆಗೆ
ಮುಖ ಮಾಡಿಹರು ಆಂಗ್ಲರು ||

ಸಿಹಿಜೀವಿ ವೆಂಕಟೇಶ್ವರ

ತುಮಕೂರು

ವಿಶ್ವ ಮಿತವ್ಯಯ ದಿನ

 



ವಿಶ್ವ ಮಿತ ವ್ಯಯ ದಿನ.


ಕೊಳ್ಳುಬಾಕ ಸಂಸ್ಕೃತಿಯ ವಿರುದ್ಧವಾಗಿ ಜಾಗೃತಿ ಮೂಡಿಸಲು ಮತ್ತು ಭವಿಷ್ಯದ ಅಗತ್ಯಗಳನ್ನು ಪೂರೈಸಲು, ಉಳಿತಾಯಕ್ಕೆ ಪ್ರೋತ್ಸಾಹ ನೀಡಲು ಜಗತ್ತಿನಾದ್ಯಂತ

ಪ್ರತಿವರ್ಷ ಅಕ್ಟೋಬರ್ 31 ರಂದು ವಿಶ್ವ ಮಿತವ್ಯಯ ದಿನ ಆಚರಿಸಲಾಗುತ್ತದೆ. ಭಾರತದಲ್ಲಿ ಒಂದು ದಿನ ಮೊದಲು ಅಂದರೆ, ಅಕ್ಟೋಬರ್ 30ರಂದು ಮಿತವ್ಯಯ ದಿನ ಆಚರಿಸಲಾಗುತ್ತದೆ. ಹೀಗಾಗಿ ಭಾರತದ ಇಂದು ಮತ್ತು ನಾಳೆ ಮಿತವ್ಯಯ ದಿನ ಎನ್ನಬಹುದು. ತಿಂಗಳ ಕೊನೆ ದಿನವಾಗಿರುವುದರಿಂದ ಸ್ಯಾಲರಿ ಆಗದೆ ಅನಿವಾರ್ಯವಾಗಿ ಈ ಎರಡು ದಿನ ಬಹುತೇಕರು ಮಿತವ್ಯಯ ಮಾಡಬಹುದು. ಆದರೆ, ಜೀವನಪೂರ್ತಿ ಮಿತವ್ಯಯ ರೀತಿ ಅನುಸರಿಸಿದರೆ ಸುಖವುಂಟು ಎನ್ನಬಹುದು.  

ಅದಕ್ಕೆ ಕವಿವಾಣಿ 

"ತಿಂಗಳ ಮೊದಲ ದಿನ ಸ್ಯಾಲರಿ

ತಿಂಗಳ ಕೊನೆಯಲ್ಲಿ ಸಾಲಾ ರಿ "

ಎಂದಿರುವುದು. 


ಹಣ ಉಳಿತಾಯ ಮಾಡುವುದು ಮತ್ತು ಹಣಕಾಸು ಭದ್ರತೆ ಹೆಚ್ಚಿಸಿಕೊಳ್ಳಲು ಜನರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ವಿಶ್ವ ಮಿತವ್ಯಯ ದಿನ ಆಚರಿಸಲಾಗುತ್ತದೆ. ಇದು ಕೇವಲ ವೈಯಕ್ತಿಕ ಹಂತದಲ್ಲಿ ಮಾತ್ರವಲ್ಲ ದೇಶಗಳೂ ಹಣ ಮಿತವ್ಯಯ ಮಾಡಬೇಕು ಎನ್ನುವುದನ್ನು ಈ ದಿನ ತಿಳಿಸುತ್ತದೆ. ವಿಶ್ವ ಯುದ್ಧದ ಬಳಿಕ ಇಂತಹ ಮಿತವ್ಯಯಗಳನ್ನು ಸೂಚಿಸಲಾಗಿದೆ. ರಷ್ಯಾ-ಉಕ್ರೇನ್ ಯುದ್ದ, ಇಸ್ರೇಲ್ ಹಮಾಸ್   ಸಂಘರ್ಷದ  ಈ ಸಂದರ್ಭದಲ್ಲಿಯೂ ಹಣದ ತೊಂದರೆಗಳನ್ನು ಜಗತ್ತು ಗಮನಿಸುತ್ತಿದೆ. ಅದಕ್ಕೆ ತಕ್ಕಂತೆ ನಾವೂ ಜಾಗರೂಕತೆಯಿಂದ ಹಣವನ್ನು ಖರ್ಚು ಮಾಡಿ ಉಳಿತಾಯ ಮಾಡಬೇಕಿದೆ.  


1924ರಲ್ಲಿ  ಇಂಟರ್ನ್ಯಾಷನಲ್ ಥ್ರಿಫ್ಟ್ ಕಾಂಗ್ರೆಸ್ ಮೊದಲ ಬಾರಿಗೆ ವಿಶ್ವ ಮಿತವ್ಯಯ ದಿನ ಘೋಷಿಸಿತ್ತು. ಇಟಲಿಯ ಮಿಲನ್ನಲ್ಲಿ ಈ ದಿನವನ್ನು ಮೊದಲ ಬಾರಿಗೆ ಘೋಷಿಸಲಾಯಿತು. ಇಟಲಿಯ ಪ್ರೊಫೆಸರ್ ಫಿಲಿಪ್ಪೊ ರವಿಝಾ ಅವರು ಅಕ್ಟೋಬರ್ 31 ಅನ್ನು ವಿಶ್ವ ಮಿತವ್ಯಯ ದಿನವೆಂದು ಘೋಷಿಸಿದರು. ಜನರು ಹಣ ಉಳಿತಾಯ ಮಾಡುವಂತೆ ಮತ್ತು ಬ್ಯಾಂಕ್ಗಳ ಕುರಿತು ತಮ್ಮ ಭರವಸೆ ಹೆಚ್ಚಿಸಿಕೊಳ್ಳುವಂತೆ ಮಾಡುವ ಉದ್ದೇಶ ಈ ದಿನದ್ದಾಗಿದೆ. ವಿಶ್ವ ಯುದ್ಧದ ಬಳಿಕ ಜನರಲ್ಲಿ ಹಣ ಉಳಿತಾಯದ ಅರಿವು ಹೆಚ್ಚಿಸುವ ಸಲುವಾಗಿ ಈ ದಿನಾಚರಣೆ ಆರಂಭಿಲಾಯಿತು. ಶಾಲೆಗಳಲ್ಲಿ, ಆಫೀಸ್ಗಳಲ್ಲಿ, ಅಸೋಸಿಯೇಷನ್ಗಳಲ್ಲಿ ಜನರು ಹಣ ಉಳಿತಾಯದ ಕುರಿತು ಜಾಗೃತಿ ಮೂಡಿಸಲಾಗುತ್ತದೆ.


1984ರಲ್ಲಿ ಭಾರತದಲ್ಲಿ ಇಂದಿರಾ ಗಾಂಧಿಯವರ ಹತ್ಯೆ ಬಳಿಕ ವಿಶ್ವ ಮಿತವ್ಯಯ ದಿನವನ್ನು ಅಕ್ಟೋಬರ್ 31ರ ಬದಲು ಅಕ್ಟೋಬರ್ 30ಕ್ಕೆ ಆಚರಿಸಲಾಗುತ್ತಿದೆ.  


ವಿಶ್ವ ಮಿತವ್ಯಯ ದಿನದ ಪ್ರಮುಖ ಉದ್ದೇಶ  ಬ್ಯಾಂಕ್ನಲ್ಲಿ ಹಣ ಉಳಿತಾಯ ಮಾಡುವುದು. ಈ ಮೂಲಕ ದೇಶದಲ್ಲಿ ಹಣಕಾಸು ವ್ಯವಸ್ಥೆ ಸರಿಯಾಗಿ ಇರುವಂತೆ ನೋಡಿಕೊಳ್ಳುವುದು. ಹಣವನ್ನು ಮನೆಯಲ್ಲಿ ಉಳಿತಾಯ ಮಾಡಿದರೆ ಅದು ಚಲಾವಣೆಗೊಳ್ಳುವುದಿಲ್ಲ. ಬ್ಯಾಂಕ್ನಲ್ಲಿ ಉಳಿತಾಯ ಮಾಡಿದರೆ ಆ ಹಣದ ಸರಿಯಾದ ಬಳಕೆಯಾಗುತ್ತದೆ.ಆದರೆ ಇತ್ತೀಚಿನ ದಿನಗಳಲ್ಲಿ ಬ್ಯಾಂಕ್ ಗಳಲ್ಲಿ ನಿರಂತರವಾಗಿ ಬಡ್ಡಿಯ ಪ್ರಮಾಣ ಕಡಿಮೆಯಾಗುತ್ತಿರುವುದು ಹಾಗೂ ಬ್ಯಾಂಕುಗಳು ಅನವಶ್ಯಕ ಮತ್ತು ಹೆಚ್ಚು ಶುಲ್ಕಗಳನ್ನು ವಿಧಿಸುವ ಕ್ರಮಗಳಿಂದ ಬೇಸತ್ತು  ಜನರು ಉಳಿತಾಯದ ಕಡೆಗೆ ಮುಖ ಮಾಡದಿರುವುದು ಕಂಡು ಬಂದಿದೆ. ಇದಕ್ಕೊಂದು ಪರಿಹಾರವನ್ನು ತುರ್ತಾಗಿ ಕೈಗೊಳ್ಳಬೇಕಿದೆ. 


2023ರ  ಮಿತ ವ್ಯಯ ದಿನದ ಘೋಷಣೆ 

"ಉಳಿತಾಯದ ಮೂಲಕ ನಿಮ್ಮ ನಾಳೆಗಳನ್ನು  ಜಯಿಸಿ "

 (conquer your tomorrow by savings)  ಭವಿಷ್ಯದಲ್ಲಿ ಏನೇ ಕಷ್ಟ ಬಂದರೂ ನಮ್ಮಲ್ಲಿ ಹಣಕಾಸು ಉಳಿತಾಯವಿದ್ದರೆ ಭಯ ಕಡಿಮೆಯಾಗುತ್ತದೆ. ಭವಿಷ್ಯದಲ್ಲಿ ಕಾಯಿಲೆಗಳು, ಆರ್ಥಿಕ ಸಂಕಷ್ಟಗಳು ಉಂಟಾದರೆ ಬ್ಯಾಂಕ್ನಲ್ಲಿರುವ ನಮ್ಮ ಉಳಿತಾಯದ ಹಣವು ನೆರವಿಗೆ ಬರುತ್ತದೆ. ಹೀಗಾಗಿ, ಉಳಿತಾಯದ ಅಭ್ಯಾಸ ಇಲ್ಲದವರು ಇಂದಿನಿಂದಲೇ ಹಣ ಉಳಿತಾಯ ಆರಂಭಿಸಿ.


ಸಿಹಿಜೀವಿ ವೆಂಕಟೇಶ್ವರ

ತುಮಕೂರು

9900925529

29 October 2023

ಆತ್ಮ ವಿಶ್ವಾಸ ಮೂಡಿಸೋಣ...

 




ಆತ್ಮವಿಶ್ವಾಸ ಮೂಡಿಸೋಣ 


ಒಬ್ಬ ವಿದ್ಯಾರ್ಥಿ ಒಂದು ಟೆಸ್ಟ್ ನಲ್ಲಿ ಕಡಿಮೆ ಅಂಕ ಪಡೆದರೆ, ಒಬ್ಬ ನೌಕರ ಒಂದು ಟಾಸ್ಕ್ ನಲ್ಲಿ ಕಡಿಮೆ ದಕ್ಷತೆ ತೋರಿದರೆ ಸಾಮಾನ್ಯವಾಗಿ ಅವನು ಅಷ್ಟೇ ಎಂದು ಷರಾ ಬರೆದು  ಅವನ ಕೆಳಮಟ್ಟದ  ಪರ್ಪಾರ್ಮೆನ್ಸ್  ಮಾಡುವವನೆಂದು ಷರಾ ಬರೆದು ಅವನ ಹಣೆಗೆ ಕಟ್ಟಿಬಿಡುತ್ತೇವೆ.

ಎಲ್ಲಾ ವ್ಯಕ್ತಿಗಳು ಎಲ್ಲಾ ಕಾಲದಲ್ಲೂ ಒಂದೇ ರೀತಿಯ ಕೆಲಸ ಮಾಡುತ್ತಾರೆ ಎಂದರೆ ಮೂರ್ಖತನವಾದೀತು.

ಸಮಯ, ಸಂದರ್ಭ, ಒತ್ತಡ, ಪರಿಸರ, ಪ್ರೇರಣೆ ಹೀಗೆ ನಾನಾ ಅಂಶಗಳು ನಮ್ಮ ಕಾರ್ಯ ವೈಖರಿಯನ್ನು ನಿರ್ಧಾರ ಮಾಡುತ್ತವೆ.


ವರ್ಷಗಟ್ಟಲೆ ಶ್ರಮಿಸಿ ಬಲ್ಬ್ ಕಂಡುಹಿಡಿದಿದ್ದ ಥಾಮಸ್ ಅಲ್ವಾ ಎಡಿಸನ್. ಅದನ್ನು ಹೋಲ್ಡರ್ ಗೆ ಸಿಕ್ಕಿಸಬೇಕಿತ್ತು. ಹೋಲ್ಡರ್ ಇದ್ದುದು ಮಹಡಿಯ ಮೇಲೆ. "ಹೋಗಿ ಅದಕ್ಕೆ ಸಿಕ್ಕಿಸಿ ಬಾ" ಎಂದು ತನ್ನ ಸಹಾಯಕನೊಬ್ಬನಿಗೆ ಹೇಳಿದ ಎಡಿಸನ್. ಹುಡುಗ ಎಷ್ಟು ನರ್ವಸ್ ಆಗಿದ್ದನೆಂದರೆ ಮೆಟ್ಟಿಲು ಹತ್ತುವುದರೊಳಗಾಗಿ ಅವನ ಕೈ ನಡುಗಿ ಆಗಷ್ಟೇ ಕಷ್ಟಪಟ್ಟು ತಯಾರಿಸಿದ ಬಲ್ಬ್ ಬಿದ್ದು ಒಡೆದುಹೋಯಿತು.

ಎಡಿಸನ್ ಸಿಟ್ಟಾಗಲಿಲ್ಲ. ಮತ್ತೊಂದು ಬಲ್ಬ್ ತಯಾರಿಸಿದ. ಅದಕ್ಕೆ ಪೂರ್ತಿ ಇಪ್ಪತ್ನಾಲ್ಕು ತಾಸು ಹಿಡಿದವು. ಅವನ ಟೀಮಿನ ಅಷ್ಟೂ ಸಹಾಯಕರು ಅದಕ್ಕಾಗಿ ದುಡಿದಿದ್ದರು. ಎಲ್ಲಾ ಆದ ಮೇಲೆ ಮತ್ತೆ ಅದೇ ಹುಡುಗನನ್ನು ಕರೆದು "ಈ ಸಲವೂ ನೀನೇ ಸಿಕ್ಕಿಸಿ ಬಾ" ಎಂದ. ಉಳಿದ ಸಹಾಯಕರು ಇರಸು ಮುರಿಸಿಗೆ ಒಳಗಾದರು. ಈ ಹುಡುಗ ಮತ್ತೆ ಬಲ್ಬ್ ಒಡೆದರೆ, ಅದನ್ನು ತಯಾರಿಸಲು ಮತ್ತೆ ಇಪ್ಪತ್ನಾಲ್ಕು ಗಂಟೆ ಬೇಕು. ಎಡಿಸನ್ ಯಾಕಿಂತ ರಿಸ್ಕು ತೆಗೆದುಕೊಳ್ಳುತ್ತಿದ್ದಾನೆ?

ಅದಕ್ಕೆ ಎಡಿಸನ್ ಹೇಳಿದ " ನೋಡ್ರೋ, ಅಂಥ ಸಾವಿರ ಬಲ್ಬ್ ಗಳನ್ನು ಸಾವಿರ ದಿನ ಕೆಲಸ ಮಾಡಿ ತಯಾರಿಸಿ ಬಿಡಬಹುದು. ಆದರೆ ಆ ಹುಡುಗನ ಆತ್ಮವಿಶ್ವಾಸ ನಾಶವಾಗಿ ಬಿಟ್ಟರೆ ಅದನ್ನು ಮತ್ತೆ ತುಂಬಿ ಕೊಡುವುದು ಸುಲಭವಲ್ಲ!"

ನಾವೂ ಕೂಡಾ ದಿನನಿತ್ಯದ ಜೀವನದಲ್ಲಿ ಎಡಿಸನ್ ಶಿಷ್ಯ ನಂತಹ ಸಾವಿರಾರು ಜನರನ್ನು ನೋಡುತ್ತೇವೆ.ತಪ್ಪೆಸಗಿದರೆ ಮುಗಿಯಿತು ಆಳಿಗೊಂದು ಕಲ್ಲು ಬೀಸಿ ಸಹಸ್ರ ನಾಮಾರ್ಚನೆ ಮಾಡಿ ಮುಂದೆ ಆ ವ್ಯಕ್ತಿ ಆ ಕೆಲಸಕ್ಕೆ ಕೈ ಹಾಕದಂತೆ ಮಾಡಿಬಿಡುತ್ತೇವೆ. ಯಾರಿಗೆ ಆಗಲಿ ಯಶಸ್ಸಿನಲ್ಲಿ ಅವರ ಜೊತೆಗಿರದಿದ್ದರೂ  ತಪ್ಪು ಮಾಡಿದಾಗ ಮತ್ತು ಜೀವನದಲ್ಲಿ ಸೋತಾಗ ಅವರ ಬೆನ್ನಿಗೆ ನಿಲ್ಲೋಣ ನಾಲ್ಕು ಆತ್ಮವಿಶ್ವಾಸವನ್ನು ವೃದ್ಧಿಸುವ ಮಾತುಗಳನ್ನಾಡೋಣ ಯಾರಿಗೆ ಗೊತ್ತು ಆ ವ್ಯಕ್ತಿ ಮುಂದೆ ಅದ್ಭುತವಾದ ಸಾಧನೆ ಮಾಡಬಹುದು! 


ಸಿಹಿಜೀವಿ ವೆಂಕಟೇಶ್ವರ

ತುಮಕೂರು

9900925429


28 October 2023

ರಾಷ್ಟ್ರೀಯ ಏಕತಾ ದಿನ

 



#ರಾಷ್ಟ್ರೀಯ ಏಕತಾ ದಿನ .. 


ಭಾರತದ  ಏಕೀಕರಣದಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಉಕ್ಕಿನ ಮನುಷ್ಯ   ಸರಪಟೇಲರು

ವಲ್ಲಭಭಾಯಿ ಪಟೇಲ್ ಅವರ ಜನ್ಮದಿನವನ್ನು2014 ರಿಂದ  ರಾಷ್ಟ್ರೀಯ ಏಕತಾ  ದಿನವನ್ನಾಗಿ ಆಚರಿಸಲಾಗುತ್ತಿದೆ. 


 ಏಕತೆ, ಸಮಗ್ರತೆ ಮತ್ತು ನೈಜ ಮತ್ತು ಸಂಭಾವ್ಯ ಬೆದರಿಕೆಗಳನ್ನು ತಡೆದುಕೊಳ್ಳಲು ನಮ್ಮ ರಾಷ್ಟ್ರದ ಅಂತರ್ಗತ ಶಕ್ತಿಯನ್ನು ಮರುದೃಢೀಕರಿಸಲು ಇಂತಹ ದಿನಾಚರಣೆಗಳ ಅಗತ್ಯವಿದೆ.


ಭಾರತದ ಏಕೀಕರಣದ ಕಥೆಯೇ ಒಂದು ರೋಚಕ ಬಹುತೇಕ ಅಸಾಧ್ಯ ಎನ್ನಬಹುದಾದ ಕೆಲಸವನ್ನು ಇದು ಸಾಧ್ಯ ಎಂದು ಮಾಡಿ ತೋರಿಸಿದವರು ನಮ್ಮ ಪಟೇಲ್ ರವರು. 


ಭಾರತ ಸ್ವಾತಂತ್ರ್ಯ ನಂತರ

 ಪಟೇಲರು ಉಪಪ್ರಧಾನಿಯಾಗಿ ಗೃಹಖಾತೆಯನ್ನು ವಹಿಸಿಕೊಂಡರು. ತಮ್ಮ ಎಪ್ಪತ್ತೆರಡನೆಯ ವಯಸ್ಸಿನಲ್ಲಿ  565 ರಾಜ ಸಂಸ್ಥಾನಗಳನ್ನು ಭಾರತದಲ್ಲಿ ವಿಲೀನಗೊಳಿಸಿ, ಅಲ್ಲಿ ಪ್ರಜಾಪ್ರಭುತ್ವವನ್ನು ಜಾರಿಗೊಳಿಸುವ ದೇಶದ ರಕ್ಷಣೆಯ ವ್ಯವಸ್ಥೆಯನ್ನು ರೂಪಿಸುವ  ಹಾಗೂ ಭಾರತವನ್ನು ಒಗ್ಗಟ್ಟಾದ ದೇಶವನ್ನಾಗಿ ಕಟ್ಟುವ ಮಹತ್ತರ ಜವಾಬ್ದಾರಿಯನ್ನು ಪಟೇಲರು ಹೊತ್ತುಕೊಂಡರು.  


ಅಧಿಕಾರದ ವಿಕೇಂದ್ರೀಕರಣ, ಧಾರ್ಮಿಕ ಸಮಾನತೆ ಮತ್ತು ಸ್ವಾತಂತ್ರ್ಯ , ಆಸ್ತಿ ಹಕ್ಕು ಇತ್ಯಾದಿ ವಿಷಯಗಳನ್ನು ವಿಷದೀಕರಿಸಿ, ಭಾರತದ ಸಂವಿಧಾನದ ರಚನೆಯಲ್ಲಿ ಮಹತ್ವದ ಕೊಡುಗೆ ನೀಡಿದರು.  ರಾಜ ಮಹಾರಾಜ ಸಾಮಂತರುಗಳಿಂದ ತುಂಬಿದ್ದ ಬ್ರಿಟಿಷ್ ಇಂಡಿಯವನ್ನು ನೈಜ  ಭಾರತವನ್ನಾಗಿಸಲು   ಸಾಮ ಭೇದ ದಾನ ದಂಡ ಇವುಗಳನ್ನು ಸಂದರ್ಭಕ್ಕೆ ಸರಿಯಾಗಿ ಬಳಸಿದ ಹಿರಿಮೆ ಪಟೇಲರದ್ದು.  


ಪ್ರಜೆಗಳ ಆಶೋತ್ತರಗಳಿಗೆ ಹೊಂದಿಕೊಂಡಿದ್ದ ಮೈಸೂರು, ಇಂದೋರ್ ಮುಂತಾದ ಪ್ರಾಂತ್ಯಗಳ ಜೊತೆ ಗೌರವದಿಂದ ವರ್ತಿಸಿದರು. ಸೂಕ್ಷ್ಮ ವಾದ ಜಾಗಗಳಾದ  ತಿರುವಾಂಕೂರು ಮತ್ತಿತರೆಡೆಗೆ  ವಿ. ಪಿ. ಮೆನನ್ ರಂತಹ ಪ್ರತಿನಿಧಿಗಳನ್ನು ಕಳಿಸಿ ಭಾರತದಲ್ಲಿ ತಮ್ಮ ಸಂಸ್ಥಾನವನ್ನು ಸೇರಿಸುವಂತೆ ಆಯಾ ರಾಜರ ಮನ  ಒಲಿಸಿದರು. 


ಯುದ್ಧ ಮಾಡಲು ಹಿಂಜರಿಯದ, ಆದರೆ ನೇರಯುದ್ಧಕ್ಕೆ ಸಿದ್ಧರಿಲ್ಲದ ರಾಜರ ಜೊತೆ ಮಾತನಾಡುವಾಗ ಮಿಲಿಟರಿ ವ್ಯವಹಾರಗಳ ಡೈರೆಕ್ಟರ್ ಜನರಲ್ ಸ್ಯಾಮ್ ಮಾಣಿಕ್ ಶಾರನ್ನು ಜೊತೆಯಾಗಿಟ್ಟುಕೊಂಡು ಹೋಗುತ್ತಿದ್ದರು. ಜುನಾಗಢ್, ಜಮ್ಮು-ಕಾಶ್ಮೀರ, ಹೈದರಾಬಾದ್ ಈ ಮೂರು ರಾಜ್ಯಗಳ ರಾಜರು ಮಾತ್ರ ಪಟೇಲರ ಚಾಕಚಕ್ಯತೆಗೆ ಮತ್ತು ಭಾರತದ ಒಗ್ಗಟ್ಟಿಗೆ ಸವಾಲು ಹಾಕಿದಾಗ  ಸೈನ್ಯವನ್ನು ಕಳಿಸಿ, ರಾಜ್ಯಗಳನ್ನು ಆಕ್ರಮಿಸಿ, ಆಯಾ ರಾಜ್ಯಗಳು ಮತ್ತು ಪ್ರಜೆಗಳನ್ನು ಭಾರತದ ಭಾಗವಾಗಿಸಿದರು.  


565  ಸಂಸ್ಥಾನಗಳಲ್ಲಿ ಹಂಚಿಹೋಗಿದ್ದ ಭಾರತವನ್ನು ಒಗ್ಗೂಡಿಸುವ ಮಹತ್ಕಾರ್ಯಕ್ಕೆ ಪಟೇಲರೇ ಸೂಕ್ತ ವ್ಯಕ್ತಿ ಎಂದು ಕಾಂಗ್ರೆಸ್ ಪಕ್ಷದ ,ಮೌಂಟ್ ಬ್ಯಾಟನ್ನರ ಹಾಗೂ ಹಿರಿಯ ಬ್ರಿಟಿಷ್ ಅಧಿಕಾರಿಗಳ ಒಮ್ಮತದ ಅಭಿಪ್ರಾಯವಾಗಿತ್ತು. “ರಾಜ್ಯಗಳ ಈ ಸಮಸ್ಯೆ ಎಷ್ಟು ಸಂಕೀರ್ಣವಾಗಿದೆಯೆಂದರೆ ನೀವೊಬ್ಬರೇ ಅದನ್ನು ಬಗೆಹರಿಸಲು ಸಮರ್ಥರು” ಎಂದು ಗಾಂಧೀಜಿ ಕೂಡಾ ಪಟೇಲರಿಗೆ ಹೇಳಿದ್ದರು.


ಈ ಗುರುತರ ಕಾರ್ಯವನ್ನು ಯಶಸ್ವಿಯಾಗಿ ಕೈಗೂಡಿಸುವ ಮನಃ ಸ್ಥೈರ್ಯ , ಚಾಣಾಕ್ಷತನ ಹಾಗೂ ಅಚಲತೆ ಇದ್ದವರಾದ ಪಟೇಲರು, ರಾಷ್ಟ್ರಹಿತಕ್ಕಾಗಿ ಮುಂದೆ ನಿಂತು ಸರ್ಕಾರದ ನಿರ್ಧಾರಗಳನ್ನು ಜಾರಿಮಾಡುವುದಕ್ಕೆ ತಯಾರಿದ್ದರೂ, ಸಂಸ್ಥಾನಿಕರೊಂದಿಗೆ ಸಂಧಾನ ನಡೆಸಲು ಬೇಕಾದ ಅನುಭವವನ್ನೂ, ಮುತ್ಸದ್ದಿತನವನ್ನೂ ಪಡೆದುಕೊಂಡಿದ್ದರು.  


ಸ್ವಾತಂತ್ರ್ಯ ಪೂರ್ವದಲ್ಲೇ ಈ ಕಾರ್ಯಕ್ಕೆ ಕೈ ಹಾಕಿದ್ದ ಪಟೇಲರು

1947ರ ಮೇ 6 ರಂದು  ರಾಜರುಗಳ ಜೊತೆ ವಿಲೀನದ ಮಾತುಕತೆ ಪ್ರಾರಂಭಿಸಿದರು. ಈ ಮಾತುಕತೆಯ ಉದ್ದೇಶ ಈ ರಾಜರು ಭವಿಷ್ಯದ ಭಾರತ ಸರ್ಕಾರದೊಂದಿಗೆ ಸಹಕಾರ ಕೊಡುವುದಕ್ಕೂ ಹಾಗೂ ಮುಂದೆ ಉಂಟಾಗಬಹುದಾದ ಘರ್ಷಣೆಗಳನ್ನು ಆರಂಭದಲ್ಲಿಯೇ  ಚಿವುಟಿಹಾಕುವುದಾಗಿತ್ತು.  


ಬಹಳಷ್ಟು ಸಂಸ್ಥಾನಿಕ ರಾಜರುಗಳನ್ನು ತಮ್ಮ ಮನೆಗೆ ಆಹ್ವಾನಿಸಿ ಭೋಜನ ಅಥವಾ ಚಹಾ ಸತ್ಕಾರ ಏರ್ಪಡಿಸಿದ ಪಟೇಲರು ಈ ಸಾಮಾಜಿಕ ಹಾಗೂ ಅನಧಿಕೃತ ಭೇಟಿಗಳ ಮೂಲಕ ಅವರನ್ನು ವಿಲೀನದ ಪ್ರಕ್ರಿಯೆಯಲ್ಲಿ ತೊಡಗಿಸಿದರು.ಹಾಗೂ 1947  ಆಗಸ್ಟ್ 15ರ ಒಳಗಾಗಿ ಭಾರತದಲ್ಲಿ ವಿಲೀನವಾಗುವಂತೆ ಅವರನ್ನು ಆಗ್ರಹಿಸಿದರು.


ತಮ್ಮ ಪ್ರಜೆಗಳ ಭವಿಷ್ಯದ ಹಿತಕ್ಕಾಗಿ ರಾಜ್ಯವನ್ನು ಭಾರತಕ್ಕೆ ಬಿಟ್ಟುಕೊಡುವಂತೆಯೂ, ಭಾರತದಿಂದ ಸ್ವತಂತ್ರವಾಗಿ ರಾಜ್ಯಭಾರ ಮಾಡುವುದರ , ಬಗ್ಗೆ ಎಲ್ಲಾ 565 ರಾಜರುಗಳಿಗೆ ಮನದಟ್ಟು ಮಾಡಿಕೊಟ್ಟರು. ವಿಲೀನವಾದವರ ಪೀಳಿಗೆಯವರಿಗೆ ರಾಜಧನದ ಆಶ್ವಾಸನೆಯನ್ನೂ ಅವರು ನೀಡಿದರು.  ಕಾಶ್ಮೀರ, ಹೈದರಾಬಾದು ಹಾಗೂ ಜುನಾಘಢ, ರಾಜ್ಯಗಳನ್ನು ಹೊರತುಪಡಿಸಿ, ಬಾಕಿ ಎಲ್ಲಾ ಸಂಸ್ಥಾನಗಳೂ ವಿಲೀನಕ್ಕೆ ಒಪ್ಪಿದವು. 


ತಮ್ಮ ಸ್ವಂತ ರಾಜ್ಯ ಗುಜರಾತಿನಲ್ಲಿದ್ದ ಜುನಾಘಡ ಸಂಸ್ಥಾನ ಪಟೇಲರಿಗೆ ಸಹಜವಾಗಿಯೇ ಮಹತ್ವದ್ದಾಗಿತ್ತು. ಅಲ್ಲಿಯ ನವಾಬರ ಮೇಲೆ ಪಾಕಿಸ್ತಾನ ಸೇರುವಂತೆ ಸರ್ ಶಾ ನವಾಜ್ ಭುಟ್ಟೋ ಒತ್ತಡ ಹೇರಿದ್ದರು. ಜುನಾಗಡ ಪಾಕಿಸ್ತಾನದಿಂದ ಸಾಕಷ್ಟು ದೂರವಿದ್ದದ್ದಷ್ಟೇ ಅಲ್ಲ ಅಲ್ಲಿಯ ಜನಸಂಖ್ಯೆಯ ಶೇಕಡಾ  80 ಹಿಂದೂಗಳಾಗಿದ್ದರು. ಪಟೇಲರು ಮುತ್ಸದ್ದಿತನದೊಡನೆ ಬಲಪ್ರದರ್ಶನವನ್ನೂ ಮಾಡಿ ಪಾಕಿಸ್ತಾನ ಜುನಾಘಡದಿಂದ ದೂರವಿರುವಂತೆಯೂ ಹಾಗೂ ಜುನಾಘಡವು ಭಾರತದೊಂದಿಗೆ ವಿಲೀನವಾಗಬೇಕೆಂದೂ ಒತ್ತಡ ಹಾಕಿದರು. ಇದರೊಂದಿಗೆ ಸೇನೆಯ ತುಕಡಿಗಳನ್ನು ಜುನಾಘಡದ ಮೂರು ಪ್ರದೇಶಗಳಿಗೆ ಕಳುಹಿಸಿ ತಮ್ಮ ಧೃಢನಿರ್ಧಾರವನ್ನು ಪ್ರಕಟಪಡಿಸಿದರು. ವ್ಯಾಪಕ ಪ್ರತಿಭಟನೆಯ ನಂತರ ಜನಪರ ಸರ್ಕಾರ  ರಚನೆಯಾದ ಮೇಲೆ ಭುಟ್ಟೋ ಮತ್ತು ನವಾಬ ಇಬ್ಬರೂ ಪಾಕಿಸ್ತಾನಕ್ಕೆ ಪಲಾಯನ ಮಾಡಿದರು. ಪಟೇಲರ ಆದೇಶದ ಮೇರೆ ಭಾರತೀಯ ಸೇನೆ ಹಾಗೂ ಪೋಲೀಸ್ ಪಡೆಗಳು ಜುನಾಘಡವನ್ನು ಪ್ರವೇಶಿಸಿದವು.


ಮುಂದೆ ನಡೆದ ಜನಮತಗಣನೆಯಲ್ಲಿ ಶೇಕಡಾ 99.5 ಮಂದಿ ಭಾರತದೊಂದಿಗೆ ವಿಲೀನದ ಪರವಾಗಿ ಮತವಿತ್ತರು. ಇಂದಿನ ಕರ್ನಾಟಕ, ಮಹಾರಾಷ್ಟ್ರ ಮತ್ತು ಆಂಧ್ರದ ಭಾಗಗಳನ್ನೊಳಗೊಂಡ ಹೈದರಾಬಾದ್ ಭಾರತದ ಸಂಸ್ಥಾನಗಳಲ್ಲಿಯೇ ಅತಿ ದೊಡ್ಡದಾಗಿತ್ತು. ಅಲ್ಲಿನ ನಿಜಾಮ ಮುಸ್ಲಿಮರಾಗಿದ್ದರೂ ಜನಸಂಖ್ಯೆಯ ಶೇಕಡಾ 80 ಹಿಂದೂಗಳಾಗಿದ್ದರು. 


ಜಿನ್ನಾ ಮೊದಲಾದ ಪಾಕಿಸ್ತಾನ ನಾಯಕರು ಹಾಗೂ ಬ್ರಿಟೀಷ್ ರ ಬೆಂಬಲದಿಂದ ಹೈದರಾಬಾದ್ ಸಂಸ್ಥಾನವನ್ನು ಸ್ವತಂತ್ರ ರಾಷ್ಟ್ರವೆಂದು ನಿಜಾಮ ಘೋಷಿಸಿದ. ಆತನ ಸೇನೆಗೆ ಅತ್ಯಾಧುನಿಕ ಸಿಡ್ನಿ ಕಾಟನ್ ಬಂದೂಕುಗಳು, ಮದ್ದುಗುಂಡುಗಳನ್ನು ಮತ್ತು ತರಬೇತಿಯನ್ನು ಬ್ರಿಟೀಷ್ ರು ನೀಡಿದರು.ಕಾಸೀಂ ರಜ್ವಿಯಂಬ ಮತಾಂಧ ಮತ್ತು ಉಗ್ರವಾದಿಯ ಮುಂದಾಳತ್ವದಲ್ಲಿ ಸಾವಿರಾರು ಜನ ರಜಾಕಾರರು ಹೈದರಾಬಾದ್ ಸಂಸ್ಥಾನದಲ್ಲಿ ಜನಸಾಮಾನ್ಯರ ಮೇಲೆ ಆಕ್ರಮಣ ನೆಡೆಸಿದರು. 


ಮಹಿಳೆಯರ ಮಾನಭಂಗ, ಮಕ್ಕಳ ಹತ್ಯೆ, ಜನರ ಹತ್ಯೆ ಇವು ಸಾವಿರಾರು ಕಡೆ ನೆಡೆದವು. ಸ್ವಾಮಿ ರಮಾನಂದತೀರ್ಥರ ನೇತೃತ್ವದಲ್ಲಿ ಹೈದರಾಬಾದ್ ಪ್ರಾಂತ್ಯ ವಿಮೋಚನಾ ಹೋರಾಟ ನೆಡೆಯಿತು. ಕರ್ನಾಟಕದ ಮುಂಡರಗಿಯ ಶಿಬಿರಕ್ಕೆ ಕೇಂದ್ರ ಮಂತ್ರಿ ಗಾಡ್ಗೀಳರನ್ನು ಕಳುಹಿಸಿದ ಪಟೇಲ್ ರು ಈ ಹೋರಾಟಕ್ಕೆ ಬೆಂಬಲ ನೀಡಿ ಪ್ರೋತ್ಸಾಹಿಸಿದರು.


ಯುದ್ಧ ಭೀತಿಯಿಂದ ಹತಾಶರಾಗಿದ್ದ ಮೌಂಟ್ ಬ್ಯಾಟನ್ನರ ಪ್ರಯತ್ನದಿಂದ ತಟಸ್ಥ ಒಪ್ಪಂದವಾದರೂ, ನಿಜಾಮ ತನ್ನ ನಿಲುವನ್ನು ಬದಲಾಯಿಸಿ ಈ ಒಪ್ಪಂದವನ್ನು ತಿರಸ್ಕರಿಸಿದ. ವಿಶ್ವಸಂಸ್ಥೆಗೆ ಈ ವಿವಾದವನ್ನು ಒಪ್ಪಿಸುವ ಕುತಂತ್ರ ಅವನದಾಗಿತ್ತು. 1948ರ ಸೆಪ್ಟೆಂಬರಿನಲ್ಲಿ ಪಟೇಲರು ಭಾರತ ಇನ್ನು ಕಾಯಲಾಗದು ಎಂದು ರಾಜಾಜಿಯವರನ್ನು ಒಪ್ಪಿಸಿ, ಹೈದರಾಬಾದನ್ನು ವಶಕ್ಕೆ ತೆಗೆದುಕೊಳ್ಳಲು ಭಾರತದ ಸೇನೆಯನ್ನು ಕಳುಹಿಸಿದರು.  


ಆಪರೇಷನ್ ಪೋಲೋ ಎಂಬ ಈ ಕಾರ್ಯಾಚರಣೆಯಲ್ಲಿ ಸಾವಿರಾರು ರಜಾಕಾರರು ಕೊಲ್ಲಲ್ಪಟ್ಟರು. 1948 ಸೆಪ್ಟೆ೦ಬರ್ 17 ರಂದು ಈಗಿನ ಬೀದರ್ ಜಿಲ್ಲೆಯ ಹುಮುನಾಬಾದಿನಲ್ಲಿ ನಿಜಾಮರ ಸೈನ್ಯ ಶರಣಾಯಿತು. ಹೈದರಾಬಾದು ಪ್ರಾ೦ತ್ಯ ಸುರಕ್ಷಿತವಾಗಿ ಭಾರತದ ಭಾಗವಾಯಿತು. ಕೇವಲ ಎರಡುದಿನವಷ್ಟೇ ನಡೆದ ಕಾರ್ಯಚರಣೆಯನ್ನು  ಭಾರತ ಸರಕಾರದ ದಾಖಲೆಗಳಲ್ಲಿ ಪೋಲೀಸ್ ಕಾರ್ಯಚರಣೆಯೆ೦ದು ಕರೆಯಲಾಗಿದೆ. 


ನಿಜಾಮರ ಸೈನ್ಯದ ಸೈನ್ಯಾಧಿಕಾರಿ ಒಬ್ಬ ಬ್ರಿಟಿಷ್ ಆಗಿದ್ದನೆ೦ಬುವುದು ಇಲ್ಲಿ ಗಮನಾರ್ಹ. ಬಲಪ್ರಯೋಗದಿಂದ ಹೈದರಾಬಾದನ್ನು ವಶಪಡಿಸಿಕೊಂಡಲ್ಲಿ ಅದು ಹಿಂದೂ-ಮುಸ್ಲಿಮ್ ದಂಗೆಗಳಿಗೆ ಅವಕಾಶ ಕೊಡಬಹುದು ಎಂದು ಮೌಂಟ್ ಬ್ಯಾಟನ್ ಮತ್ತು ನೆಹರೂ ಶಂಕಿಸಿ ಹಿಂಜರಿದರೂ ಪಟೇಲರು ಹೈದರಾಬಾದನ್ನು ಹಾಗೆಯೇ ಬಿಟ್ಟಲ್ಲಿ ಅದು ಭಾರತದ ಪ್ರತಿಷ್ಟೆಗೇ ಸವಾಲಾಗುವುದಷ್ಟೇ ಅಲ್ಲ, ಅದರಿಂದಾಗಿ ಹಿಂದೂಗಳಾಗಲೀ, ಮಸಲ್ಮಾನರಾಗಲೀ ಆ ರಾಜ್ಯದಲ್ಲಿ ಸುರಕ್ಷಿತವಾಗಿರಲು ಸಾಧ್ಯವಿಲ್ಲ ಎಂದು ಪ್ರತಿಪಾದಿಸಿದರು.


ಯಾವುದೇ ನಾಗರೀಕ ಪ್ರತಿಭಟನೆಯಿಲ್ಲದೇ ಯಶಸ್ವಿಯಾದ ಹೈದರಾಬಾದಿನ ವಿಲೀನವನ್ನು ಅನೇಕ ಭಾರತೀಯ ಮುಸ್ಲಿಮರು ಕೊಂಡಾಡಿದರು. ನಿಜಾಮರ ಮೇಲೆ ಸಂತಾಪವಿದ್ದರೂ, ಪಟೇಲರು ಅವರನ್ನು ರಾಜ್ಯದ ಅಲಂಕಾರಿಕ ಮುಖ್ಯಸ್ಥನನ್ನಾಗಿ ನೇಮಿಸಿದರು. ಮುಂದೆ ನಡೆದ ಮಾತುಕತೆಯಲ್ಲಿ ನಿಜಾಮರು ಪಟೇಲರನ್ನು ಕ್ಷಮಾಪಣೆ ಕೇಳಿದ್ದರಿಂದ ಪಟೇಲರು ದೊಡ್ಡ ಮನಸ್ಸಿನಿಂದ ವೈರವನ್ನು ತಮ್ಮ ಮನಸ್ಸಿನಿಂದ ತೆಗೆದುಹಾಕಿದರು.

ಕಾಶ್ಮೀರ ದ ಏಕೀಕರಣವೂ ಪಟೇಲರ ಚಾಣಾಕ್ಷತನದಿಂದ ಆದ ಕಾರ್ಯವಾಗಿದೆ.


ಭಾರತವನ್ನು ಒಟ್ಟುಗೂಡಿಸುವುದು ಸುಲಭದ ಕೆಲಸವೇನಾಗಿರಲಿಲ್ಲ.  ಪಟೇಲರ ಗಣನೀಯ ಸೇವೆಯನ್ನು ಗಮನದಲ್ಲಿಟ್ಟು ಅವರನ್ನು ಭಾರತದ ಬಿಸ್ಮಾರ್ಕ್ ಎಂದು ಕರೆಯಲಾಗುತ್ತದೆ. ಪಟೇಲರು ಭಾರತದ ಕಾನ್ಸ್ಟಿಟ್ಯುಯೆಂಟ್ ಅಸೆಂಬ್ಲಿಯ ಹಿರಿಯ ಸದಸ್ಯರಾಗಿದ್ದರು.


ಭಾರತದ ಸಂವಿಧಾನದಲ್ಲಿ ನಾಗರಿಕ ಸ್ವಾತಂತ್ರ್ಯದ ರೂಪರೇಷೆಗಳನ್ನು ನಿರ್ಧರಿಸುವುದಕ್ಕಾಗಿ ರಚಿಸಲಾಗಿದ್ದ ಅನೇಕ ಮಹತ್ವದ ಸಮಿತಿಗಳ ನಾಯಕರಾಗಿದ್ದರು. ಸರಕಾರದ ರಕ್ಷಣಾತ್ಮಕ ಅಧಿಕಾರವಿರುವ, ವ್ಯಾಪಕ ವೈಯಕ್ತಿಕ ಸ್ವಾತಂತ್ರ್ಯಕ್ಕೆ ಅವರು ಬೆಂಬಲ ನೀಡಿದರು. ರಾಷ್ಟ್ರೀಕೃತ ಸಿವಿಲ್ ಸರ್ವೀಸನ್ನು ಅವರು ಬಲವಾಗಿ ಬೆಂಬಲಿಸಿದ್ದಲ್ಲದೇ , ಆಸ್ತಿ ಹಕ್ಕು ಮತ್ತು ರಾಜಧನದ ಕಲಮುಗಳನ್ನೂ ಸೇರಿಸಿದರು.  ಇಂತಹ ಮಹಾನ್ ಸಾಧನೆ ಮಾಡಿದ ಪಟೇಲರ ಜನ್ಮ ದಿನವನ್ನು ಏಕತಾ ದಿನವನ್ನಾಗಿ ಆಚರಿಸುವುದು ಅರ್ಥಪೂರ್ಣ. ನಮ್ಮ ದೇಶದ ಸಮಗ್ರತೆ ಮತ್ತು ಏಕತೆಗೆ ಈ ದಿನ ನಾವೆಲ್ಲರೂ ಪ್ರತಿಜ್ಞೆ ಸ್ವೀಕರಿಸಿ ಕಾರ್ಯ ಪ್ರವೃತ್ತರಾದರೆ ಈ ದಿನಕ್ಕೆ ಇನ್ನೂ ಅರ್ಥ ಬರುವುದು.


ಸಿಹಿಜೀವಿ ವೆಂಕಟೇಶ್ವರ

ತುಮಕೂರು

9900925529.