30 August 2023

ನೀ ಯಾವ ಮಲ್ಲಿಗೆ..?

 ಅನುಮಾನವಿಲ್ಲ...

ಗೆಳತಿ ನೀನೊಂದು ಮಲ್ಲಿಗೆ...

ಕೆಲವೊಮ್ಮೆ ಅನುಮಾನ..

 ನೀಕಾಡುಮಲ್ಲಿಗೆಯಾ? 

 ಸೂಜಿಮಲ್ಲಿಗೆಯಾ?ಜಾಜಿಮಲ್ಲಿಗೆಯಾ?ದುಂಡುಮಲ್ಲಿಗೆಯಾ?ಮೈಸೂರು ಮಲ್ಲಿಗೆಯಾ? ಮಂಗಳೂರು ಮಲ್ಲಿಗೆಯಾ?ಮುತ್ತುಮಲ್ಲಿಗೆಯಾ?

ಯಾವುದಾದರೇನಂತೆ...

ನೀನೇ ಸುಗಂಧ 

ನೀ ಜೊತೆಗಿದ್ದರೆ ಅದೇ ಚೆಂದ...


#ಸಿಹಿಜೀವಿ ವೆಂಕಟೇಶ್ವರ

ತುಮಕೂರು

29 August 2023

ಬಂಗಾರದ ಮನುಷ್ಯ...ನೀರಜ್


 #ಬಂಗಾರದ_ಮನುಷ್ಯ


#ಸಿಹಿಜೀವಿಯ_ಹನಿ*



 

ವಿಶ್ವ ಅಥ್ಲೆಟಿಕ್ಸ್ ಪಂದ್ಯಾವಳಿಯಲ್ಲಿ

ಭರ್ಜಿ ಎಸೆತದಲ್ಲಿ ಭಾರತಕ್ಕೆ ಬಂದಿದೆ

ಬಂಗಾರ| 

ಇನ್ನೇಕೆ ತಡ 

ಎಲ್ಲರೂ ಸೇರಿ

ಕುಣಿಯೋಣ ಬಾರ ||



ಭಾರತಕ್ಕೆ ಬಂಗಾರದ

ಪದಕ ತಂದಿದೆ

ನೀರಜ್ ಚೋಪ್ರ 

ರವರ ಭರ್ಜಿ ಎಸೆತ|

ಇಡೀ ಭಾರತ ಇಂದು

ಸಂತಸದಲ್ಲಿ ಹುಚ್ಚೆದ್ದು

ಕುಣಿಯುತ್ತಿದೆ ಸತತ||


ಸಿಹಿಜೀವಿ  ವೆಂಕಟೇಶ್ವರ

ತುಮಕೂರು.

28 August 2023

ದಿ‌ನಮಣಿ..


 



*ದಿನಮಣಿ*


ಜಗಕೆ ಬೆಳಕ ನೀಡುವ ತರಣಿ

ದಿನವೂ ಬರುವ ದಿನಮಣಿ 

ಅಪಾರವಾದ  ಶಕ್ತಿಯ ಗಣಿ 

ಕೃತಜ್ಞತೆಯಿಂದ ನೀ ಹಣೆ ಮಣಿ.


*ಸಿಹಿಜೀವಿ ವೆಂಕಟೇಶ್ವರ*

ತುಮಕೂರು

25 August 2023

ಅಂಬಿಕಾ I A S ...

 

ಅಂಬಿಕಾ I P S

ಅರ್ಧದಲ್ಲೇ ಶಾಲೆ ಬಿಟ್ಟ ಬಾಲಕಿ...ಬಾಲ್ಯಾವಿವಾಹವಾದ ಯುವತಿ ಇಂದು IPS ಅಧಿಕಾರಿ...

ಜೀವನದಲ್ಲಿ ಸಣ್ಣ ಪುಟ್ಟ ಅಡೆತಡೆಗಳನ್ನು ಎದುರಿಸಿದಾಗ ಎದೆಗುಂದಿ ತಮ್ಮ ಗುರಿಯೆಡೆಗೆ  ಸಾಗುವುದನ್ನು   ನಿಲ್ಲಿಸಿ ತಮ್ಮ ಹಣೆಬರಹ ಎಂದು ತಮ್ಮನ್ನೇ  ಹಳಿದುಕೊಂಡು ಕೆಲವೊಮ್ಮೆ ದೇವರ ಶಪಿಸುತ್ತಾ ತಲೆ ಮೇಲೆ ಕೈಹೊತ್ತುಕೊಂಡು ಕುಳಿತವರನ್ನು  ಬಹಳ ಮಂದಿಯನ್ನು ನೋಡುತ್ತೇವೆ.ಇದಕ್ಕೆ ಅಪವಾದವೆಂಬಂತೆ ಇಲ್ಲೊಬ್ಬ ಮಹಿಳೆ  ಛಲದಿಂದ ತನ್ನ ಗುರಿಸಾಧಿಸಿ ಇತರರಿಗೆ ಸ್ಪೂರ್ತಿಯಾಗಿದ್ದಾರೆ.

ತಮಿಳುನಾಡು ಮೂಲದ ಆಕೆಯ ಹೆಸರು ಅಂಬಿಕಾ. ಬಾಲ್ಯವಿವಾಹ ಪದ್ದತಿಗೆ ಬಲಿಯಾಗಿ ಸಾಧಾರಣ ಗೃಹಿಣಿಯಾಗಿದ್ದ ಅಂಬಿಕಾ I P S ಪಾಸು ಮಾಡಿ ಅಧಿಕಾರಿಯಾಗಿರುವ ಕಥೆಯೇ ರೋಚಕ ಮತ್ತು ಸ್ಪೂರ್ತಿದಾಯಕ.

ತಮಿಳುನಾಡಿನ ಬಡ ಕುಟುಂಬದಲ್ಲಿ ಜನಿಸಿದ ಎನ್ ಅಂಬಿಕಾರವರಿಗೆ ಪೋಷಕರು    14 ವರ್ಷಕ್ಕೆ ಮದುವೆ ಮಾಡಿ ಬಿಟ್ಟರು. ಪತಿ ಪೊಲೀಸ್ ಪೇದೆಯಾಗಿದ್ದರು. 18ನೇ ವಯಸ್ಸಿಗೆ ಅವರು ಇಬ್ಬರು ಹೆಣ್ಣುಮಕ್ಕಳ ತಾಯಿಯಾದರು. ಜೀವನ ಸುಖವಾಗಿ ಸಾಗುತ್ತಿತ್ತು. ಇಬ್ಬರು ಮಕ್ಕಳ ತಾಯಿಯಾಗಿದ್ದ ಅಂಬಿಕಾ ಅವರು ಒಮ್ಮೆ ತಮ್ಮ ಪತಿಯೊಂದಿಗೆ ಗಣರಾಜ್ಯೋತ್ಸವ ಕಾರ್ಯಕ್ರಮಕ್ಕೆ ತೆರಳಿದ್ದರು. ಅಲ್ಲಿ ಪತಿ ಅಧಿಕಾರಿಗಳಿಗೆ ಸೆಲ್ಯೂಟ್ ಹೊಡೆದರು. ಆ ಘಟನೆ  ಅಂಬಿಕಾ ರವರ ಜೀವನವನ್ನೇ ಬದಲಾಯಿಸುವ ಘಟನೆಯಾಗುತ್ತದೆ ಎಂದು ಸ್ವತಃ ಅವರಿಗೇ ಗೊತ್ತಿರಲಿಲ್ಲ. ತನ್ನ ಪತಿ ಇತರ ಅಧಿಕಾರಿಗೆ ಸೆಲ್ಯೂಟ್ ಹೊಡೆದ  ಆ ಕ್ಷಣ ಆಕೆಯ ಮನಸ್ಸಿನಲ್ಲಿ ಉಳಿಯಿತು.
ಪತಿ ನಮಸ್ಕರಿಸಿದ್ದು ಉನ್ನತ ಅಧಿಕಾರಿಗೆ ಎಂದು ಕೇಳಿ ತಿಳಿದುಕೊಂಡರು. ತಾನೂ ಅದೇ ರೀತಿ ಅಧಿಕಾರಿ ಆಗಬೇಕೆಂದು ದೃಢ ಸಂಕಲ್ಪ ಮಾಡಿದರು. ಆಗ ಅವರಿಗೆ ನೆನಪಾಯಿತು  ಪ್ರೌಢಶಾಲೆ ಅರ್ಧಕ್ಕೆ ಬಿಡಿಸಿ ಮದುವೆ ಮಾಡಿಸಿದ್ದು. ತಾನಿನ್ನೂ ಹತ್ತನೆ ತರಗತಿ ಪಾಸಾಗಿಲ್ಲ ಎಂದು ಅರಿವಿಗೆ ಬಂದ ಕ್ಷಣದಿಂದ   10ನೇ ತರಗತಿಯನ್ನು ದೂರ ಶಿಕ್ಷಣದ ಮೂಲಕ ಮಾಡಲು ಆರಂಭಿಸಿದರು. ಅದೇ ರೀತಿಯಲ್ಲಿ ಪಿಯು ಸಿ ಮತ್ತು ಪದವಿಯನ್ನು ಸಹ ಕರಾಸ್ಪಾಂಡನ್ಸ್ ಕೋರ್ಸ್ ಮೂಲಕ ಪೂರೈಸಿದರು.

ಪದವಿಯ ನಂತರ ಅಂಬಿಕಾ ನಾಗರಿಕ ಸೇವೆಗಳ ಪರೀಕ್ಷೆಗೆ ತಯಾರಿ ಪ್ರಾರಂಭಿಸಲು ಬಯಸಿದ್ದರು. ಆದರೆ ಅವರು ವಾಸಿಸುತ್ತಿದ್ದ ಸ್ಥಳದಲ್ಲಿ UPSC ಪರೀಕ್ಷೆಗೆ ತಯಾರಾಗಲು ಕೋಚಿಂಗ್ ಸೆಂಟರ್ ಸೇರಿದಂತೆ ಯಾವುದೇ ಸೌಲಭ್ಯವಿರಲಿಲ್ಲ.
ಬೇರೆ ದಾರಿ ಇಲ್ಲದೆ ಯುಪಿಎಸ್ ಸಿ ಕೋಚಿಂಗ್ ಗಾಗಿ ಚೆನ್ನೈಗೆ ಹೋಗಲು ಅಂಬಿಕಾ ನಿರ್ಧರಿಸಿದ್ರು. ಮಕ್ಕಳನ್ನು ಬಿಟ್ಟು ಹೋಗುವುದು ಅತ್ಯಂತ ಕಷ್ಟಕರವಾದ ಕೆಲಸವಾಗಿತ್ತು. ಆಗ ಅವರ ಪತಿ ಬೆಂಬಲ ನೀಡಿದರು.
ಅಂಬಿಕಾ ಅವರ ಯಶಸ್ಸಿನಲ್ಲಿ ಪತಿ ಪ್ರಮುಖ ಪಾತ್ರ ವಹಿಸಿದರು. ಅಂಬಿಕಾ ಪರೀಕ್ಷೆಗೆ ತಯಾರಿ ನಡೆಸುತ್ತಿದ್ದಾಗ ಮಕ್ಕಳನ್ನು ಪತಿಯೇ ನೋಡಿಕೊಂಡರು. ಆದರೆ ಕಠಿಣವಾದ ಸಿವಿಲ್ ಸರ್ವೀಸಸ್ ಪರೀಕ್ಷೆಯಲ್ಲಿ ಅಂಬಿಕಾ ಮೊದಲ ಮೂರು ಬಾರಿ ಅನುತ್ತೀರ್ಣ ರಾದರು.

3 ವರ್ಷ ವಿಫಲರಾದಾಗ ಪತಿ ಅಂಬಿಕಾರನ್ನು ಮನೆಗೆ ಮರಳಲು ವಿನಂತಿಸಿದರು. ಆದರೆ ಅಂಬಿಕಾ ಪಟ್ಟು ಬಿಡದೆ ಕೊನೆಯ ಬಾರಿಗೆ ಪರೀಕ್ಷೆಗೆ ಹಾಜರಾಗಲು ಪತಿಯಿಂದ ಅನುಮತಿ ಕೋರಿದರು.
2008 ರಲ್ಲಿ ಅವರ ನಾಲ್ಕನೇ ಪ್ರಯತ್ನದಲ್ಲಿ ಯುಪಿಎಸ್ ಸಿ ಸಿವಿಲ್ ಸರ್ವೀಸ್ ಪರೀಕ್ಷೆಯಲ್ಲಿ ಅಂಬಿಕಾ ತೇರ್ಗಡೆಯಾದರು. ಹಿಂದಿನ ತಪ್ಪುಗಳನ್ನು ತಿದ್ದಿಕೊಂಡು  ತನ್ನ ನಾಲ್ಕನೇ ಪ್ರಯತ್ನದಲ್ಲಿ  ಯಶಸ್ವಿಯಾದರು. ಅವರು   ಪ್ರಸ್ತುತ ಐ ಪಿ ಎಸ್ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.ಅವರ ದಿಟ್ಟ ಪೋಲಿಸ್ ಅಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿರುವುದಕ್ಕಾಗಿ ಜನರು ಅಭಿಮಾನದಿಂದ  ಲೇಡಿ ಸಿಂಗಂ ಎಂಬ ಬಿರುದು ನೀಡಿದ್ದಾರೆ.
ಮನಸ್ಸಿದ್ದರೆ ಮಾರ್ಗವುಂಟು ಸತತ ಪ್ರಯತ್ನಕ್ಕೆ ಸೋಲಿಲ್ಲ ಎಂಬುದಕ್ಕೆ ಅಂಬಿಕಾ ರವರು ಮಾದರಿಯಾಗಿ ನಿಂತಿದ್ದಾರೆ.

ಸಿಹಿಜೀವಿ ವೆಂಕಟೇಶ್ವರ
ತುಮಕೂರು
9900925529


24 August 2023

ವಿಕ್ರಮ... ಪರಾಕ್ರಮ...

 






*ಪರಾಕ್ರಮ*

ನಮ್ಮ ವಿಜ್ಞಾನಿಗಳ ಶ್ರಮದಿಂದ 
ಸಲೀಸಾಗಿ ಶಶಿಯ ಸ್ಪರ್ಶಿಸಿದ ವಿಕ್ರಮ|
ವಿಶ್ವವೇ ಮುಕ್ತಕಂಠದಿಂದ ಶ್ಲಾಘಿಸುತ್ತಿದೆ ಭಾರತದ ಪರಾಕ್ರಮ||
 
*ಸಿಹಿಜೀವಿ ವೆಂಕಟೇಶ್ವರ*
ತುಮಕೂರು

23 August 2023

ಚಂದ್ರಯಾನ ಯಶಸ್ಸಿನ ಹನಿಗಳು...

 


*ಚಂದ್ರಯಾನ 3 ರ ಯಶಸ್ಸಿನ ಹನಿಗಳು*


*ಕೀರ್ತಿ ಪತಾಕೆ*


ಕೊನೆಗೂ  ಫಲಿಸಿತು ಕೊಟ್ಯಂತರ

ಭಾರತೀಯರ ಹಾರೈಕೆ|

ಚಂದ್ರನ ಅಂಗಳದಲ್ಲಿ ಹಾರಾಡಿತು

ನಮ್ಮ ಕೀರ್ತಿ ಪತಾಕೆ| 


*ಸಂಭ್ರಮ*


ನಮ್ಮ ನೌಕೆಯನ್ನು ಆತ್ಮೀಯವಾಗಿ

ಬರಮಾಡಿಕೊಂಡಿದೆ ಚಂದಮಾಮ|

ಮುಗಿಲು ಮುಟ್ಟಿದೆ ಭಾರತೀಯರ

ಮನೆ ಮನಗಳಲ್ಲಿ ಸಂಭ್ರಮ||


*ಸಿಹಿಜೀವಿ ವೆಂಕಟೇಶ್ವರ*

ತುಮಕೂರು


ತಿಂಗಳು....


 

*ತಿಂಗಳು...*

ಭಾರತಾಂಭೆಯ ನೌಕೆಯ
ಸ್ವಾಗತಿಸಲು ಸಿದ್ದವಾಗಿದೆ ತಿಂಗಳು|
ಈ ದೃಶ್ಯವೈಭವವ ತುಂಬಿಕೊಳ್ಳಲು
ಕಾತರವಾಗಿವೆ ನಮ್ಮ  ಕಂಗಳು ||

*ಸಿಹಿಜೀವಿ ವೆಂಕಟೇಶ್ವರ*
ತುಮಕೂರು

ಚಂದ್ರಯಾನ ಮೂರು...


 


ಚಂದ್ರಯಾನ ಮೂರು...


ಇಂದು ಚಂದ್ರನ ದಕ್ಷಿಣ ದೃವ

ತಲುಪಲಿದೆ  ಚಂದ್ರಯಾನ ಮೂರು|

ಭಾರತೀಯರ ವಿಕ್ರಮ ಕಂಡು 

ಗೊಗಳುವರು ಜಗದ ಜನರು ||


22 August 2023

ಕೂಲಿಯಿಂದ M B B S ಗೆ.....


 


ಕೂಲಿಯಿಂದ ಎಂ ಬಿ ಬಿ ಎಸ್ ಗೆ ...

ಬಹುತೇಕ ಎಲ್ಲಾ ಪೋಷಕರ ಆಸೆ ತಮ್ಮ ಮಕ್ಕಳನ್ನು ಡಾಕ್ಟರ್ ಅಥವಾ ಇಂಜಿನಿಯರಿಂಗ್ ಮಾಡಬೇಕು ಎಂಬುದು. ಇದಕ್ಕೆ ತಯಾರಿ ಮಾಡಲು ಐದನೇ ತರಗತಿಯಿಂದ ನೀಟ್ ಜೆ ಇ ಇ ಪರೀಕ್ಷೆಯ ಕೋಚಿಂಗ್ ಇರುವ ಶಾಲೆಗಳಿಗೆ ಲಕ್ಷಾಂತರ ಹಣ ಸುರಿದು ದಾಖಲು ಮಾಡುವರು. ಅಪ್ಪಿತಪ್ಪಿ ಮೊದಲ ಪ್ರಯತ್ನದಲ್ಲಿ ನೀಟ್ ಸಕ್ಸಸ್ ಆಗದಿದ್ದರೆ ಮತ್ತೊಂದಷ್ಟು ಲಕ್ಷ ಕಟ್ಟಿ ಲಾಂಗ್ ಟರ್ಮ್ ದಂಡಯಾತ್ರೆ ಶುರುಮಾಡುತ್ತಾರೆ.ಆಗಲೂ ಸೀಟ್ ಸಿಗದಿದ್ದರೆ ಬಾರಿ ಕುಳಗಳು ಕೋಟಿ ಸುರಿದು ಪ್ರೈವೇಟ್ ಎಂ ಬಿ ಬಿ ಎಸ್ ಕಾಲೇಜಗಳಲ್ಲಿ ದಾಖಲು ಮಾಡಿಯೇ ಬಿಡುತ್ತಾರೆ.ಒಟ್ಟಿನಲ್ಲಿ ನಮ್ಮ ಮಗ ಅಥವಾ ಮಗಳು ಡಾಕ್ಟರ್ ಆಗಲೇಬೇಕು ಎಂಬುದು ಪೋಷಕರ ದೃಢವಾದ ನಿರ್ಧಾರ! ಇನ್ನೂ ಕೆಲವರು ತಮ್ಮ ಮಕ್ಕಳನ್ನು ವಿದೇಶಗಳಿಗೆ ಕಳಿಸಿ ಡಾಕ್ಟರ್ ಮಾಡುವುದೂ ಉಂಟು.
ಇದು ಉಳ್ಳವರ ಕಥೆಯಾದರೆ ಬಡ ಮತ್ತು ಮದ್ಯಮ ವರ್ಗದ ಪೋಷಕರು ಎಟುಕದ ದ್ರಾಕ್ಷಿ ಉಳಿ ಎಂಬಂತೆ ಪಿ ಯು ಸಿ ನಂತರ ಇತರ ಕೋರ್ಸ್ ಸೇರುತ್ತಾರೆ.
ಆದರೆ ಇಲ್ಲೊಬ್ಬ ಯುವಕ ಬಡ ಕುಟುಂಬದಲ್ಲಿ ಜನಿಸಿ ,ಕೂಲಿ ಮಾಡುತ್ತಾ, ಸಂಸಾರ ನಿಭಾಯಿಸುತ್ತಾ  ತನ್ನ ಬಲವಾದ ಇಚ್ಚಾಶಕ್ತಿ ಮತ್ತು ಬದಲಾಗದ ಗುರಿಯನ್ನು ಸಾಧಿಸಲು ತನ್ನ 33 ನೇ ವಯಸ್ಸಿನಲ್ಲಿ M B B S ಸೀಟ್ ಪಡೆದು ಈ ವರ್ಷ ಕಾಲೇಜಿಗೆ ಸೇರಿದ್ದಾನೆ ಮತ್ತು ಡಾಕ್ಟರ್ ಆಗಲು ನಾಲ್ಕೂವರೆ ಹೆಜ್ಜೆ ಮಾತ್ರ ಬಾಕಿ..
12 ನೇ ತರಗತಿ ಮುಗಿದ ಮೇಲೆ 15 ವರ್ಷ ಕೂಲಿ ಕಾರ್ಮಿಕನಾಗಿ ದುಡಿದು  ನಂತರ ಎಂ ಬಿ ಬಿ ಎಸ್ ಸೀಟು ಪಡೆದ ಒಡಿಶಾದ ಕೃಷ್ಣ ಚಂದ ಅಟಕಾ ರವರ ಸಾಧನೆ ಯುವಕರಿಗೆ ಖಂಡಿತವಾಗಿಯೂ ಪ್ರೇರಣಾದಾಯಕ . 
ಅವರ ಸಾಧನೆಯ ಪಥವನ್ನು ಅವರ ಬಾಯಲ್ಲೇ ಕೇಳೋಣ ಬನ್ನಿ. 

ನಾನು ಒಡಿಶಾದ  ಬುಡಕಟ್ಟಿನ ಯುವಕ    ರಾಯಗಡ ಜಿಲ್ಲೆಯ ಬಿಸ್ಸಂಕಟಕ ಬ್ಲಾಕ್ನ  ಥುಪಾಡಿ ಎಂಬುದು ನಮ್ಮ ಗ್ರಾಮ. ನಮ್ಮ ತಂದೆಗೆ ನಾವು
ಐದು ಮಕ್ಕಳು.  ಒಂದು ಎಕರೆ ಮಾತ್ರ  ಅನುತ್ಪಾದಕ ಕೃಷಿ ಭೂಮಿಯಿದೆ.ಜೀವನಕ್ಕೆ ಕೂಲಿಯೇ ಆಧಾರವಾಗಿತ್ತು. ಕಷ್ಟಕರ ಜೀವನದ ನಡುವೆಯೂ  2006 ರಲ್ಲಿ 58% ಗಳಿಸುವ ಮೂಲಕ  ಹತ್ತನೇ ತರಗತಿ ಪರೀಕ್ಷೆಯಲ್ಲಿ ಉತ್ತೀರ್ಣನಾದೆ.
ನಾನು ಪಿ ಯು ಸಿ ಪಾಸ್ ಆಗಿ ಡಾಕ್ಟರ್ ಓದಲು ಆಸೆ ಇತ್ತು ಆದರೆ ಮನೆಯಲ್ಲಿ ಜೀವನ ನಿರ್ವಹಣೆ ತುಂಬಾ ಕಷ್ಟಕರವಾಗಿತ್ತು.
ನನ್ನ ಹೆತ್ತವರು ಜೀವನ ನಿರ್ವಹಣೆಗೆ ಹೆಣಗಾಡುತ್ತಿದ್ದ ಸಮಯದಲ್ಲಿ, ನನ್ನ ಆದ್ಯತೆ ಓದು ಆಗಿರಲಿಲ್ಲ.  ನನ್ನ ಮೂವರು ಕಿರಿಯ ಸಹೋದರರು ಕೂಡಾ ಸಂಸಾರ ನಿಭಾಯಿಸಲು ಕೆಲಸ ಮಾಡಲು ಪ್ರಾರಂಭಿಸಿದರು ಒಬ್ಬ ಮೇಸ್ತ್ರಿಯಾಗಿ , ಮತ್ತೊಬ್ಬ ಮೋಟಾರ್ ಮೆಕ್ಯಾನಿಕ್ ಆಗಿ   ಮತ್ತು ಮೂರನೆಯವನು   ಕೃಷಿಭೂಮಿಯಲ್ಲಿ  ಕೂಲಿಯಾಗಿ, ಕೆಲಸ ಮಾಡುತ್ತಿದ್ದ.
ಆದರೂ ಮನೆಯ ಖರ್ಚು ವೆಚ್ಚ ಹೆಚ್ಚಾಗುತ್ತಲೇ ಇತ್ತು. ಇದನ್ನು ಮನಗಂಡು  ಬಿ.ಎಸ್ಸಿಗೆ ಪ್ರವೇಶ ಪಡೆದರೂ, ಅರ್ಧದಲ್ಲೇ ಓದು ನಿಲ್ಲಿಸಿ
ಮನೆಗೆ ಹಿಂತಿರುಗಿದೆ. ಗದ್ದೆಯಲ್ಲಿ ದಿನವಿಡೀ  ಕಷ್ಟಪಟ್ಟು ದುಡಿಯುತ್ತಿದ್ದೆ.ಆದರೆ ನನಗೆ ಸಿಗುತ್ತಿದ್ದ ದಿನಗೂಲಿ  ಕೇವಲ  100ರೂಪಾಯಿ!  ಯಾರೋ ಕೇರಳದಲ್ಲಿ ಉತ್ತಮ ಕೂಲಿ ನೀಡುವರು ಎಂದು ಕೇಳಿ ಕೇರಳಕ್ಕೆ ವಲಸೆ ಬಂದೆ.
 ಪೆರುಂಬವೂರಿನಲ್ಲಿ ಮೊದಲ ಕೆಲವು ತಿಂಗಳುಗಳು ನನಗೆ ಕೆಲಸಕ್ಕೆ ತಕ್ಕ ಕೂಲಿ ಸಿಗಲೇ ಇಲ್ಲ. ಮತ್ತೆ ನನ್ನ ಅಲೆಮಾರಿ ದಿನಚರಿ ಮುಂದುವರೆಯಿತು.ಕೊಟ್ಟಾಯಂನಲ್ಲಿರುವ ಬೆಂಕಿಕಡ್ಡಿ ತಯಾರಿಕಾ ಘಟಕದಲ್ಲಿ  ಕೆಲಸಕ್ಕೆ ಸೇರಿದೆ
ಅಲ್ಲಿಯೂ ನಾನು ಹಣಕ್ಕಾಗಿ ಹೆಣಗಾಡಿದೆ.
2014 ರಲ್ಲಿ ತೌಪಾಡಿಗೆ ಹಿಂದಿರುಗಿದೆ ಅಲ್ಲಿಯೇ   ಕೃಷಿ ಕಾರ್ಮಿಕನಾಗಿ ಕೆಲಸ ಮಾಡಿದೆ. ಇದೇ ವೇಳೆಯಲ್ಲಿ ನನ್ನ ಜೀವನದಲ್ಲಿ ಮತ್ತೊಂದು ತಿರುವು ಕಂಡಿತು. ನನ್ನ ಮನೆಯವರು ನನಗೆ ಮದುವೆ ಮಾಡಲು ನಿಶ್ಚಯಿಸಿ, ಹೆಣ್ಣು ಗೊತ್ತುಪಡಿಸಿದರು. ಮದುವೆಯ ಹೆಣ್ಣು ಮಿಟ್ಟುಲ  ಒಪ್ಪಿದರೂ ಅವರ ತಂದೆ ಬಡತನದ ಕುಟುಂಬಕ್ಕೆ ಮಗಳ ಕೊಡಲು ಒಪ್ಪಲಿಲ್ಲ. ಕೊನೆಗೆ ಮಿಟ್ಟುಲ ಳ  ಹಠಕ್ಕೆ ಮಣಿದು ಅವರ ತಂದೆ ನನಗೆ ಮಗಳ ನೀಡಿ ಮದುವೆ ಮಾಡಿದರು. ನಮಗೀಗ ಒಬ್ಬ  ಮಗಳು ಮತ್ತು ಬ್ಬ ಮಗನಿದ್ದಾನೆ.
ನಾನು ಕೃಷಿ ಕೂಲಿಯಾಗಿ ಕೆಲಸ ಮಾಡುವಾಗ  ನನ್ನ ಪ್ರಾಥಮಿಕ ಶಾಲಾ ಶಿಕ್ಷಕರ ಪ್ರೋತ್ಸಾಹದ ಮಾತುಗಳು ನನ್ನ ಕಿವಿಯಲ್ಲಿ ರಿಂಗಣಿಸುತ್ತಲೇ ಇದ್ದವು. ಡಾಕ್ಟರ್ ಆಗುವ ನನ್ನ ಬಯಕೆ ತೀವ್ರವಾಯಿತು.  2021 ರಲ್ಲಿ  ನಾನು ತರಬೇತಿ ಕೋರ್ಸ್ಗೆ ಸೇರಿಕೊಂಡೆ ಮತ್ತು ನೀಟ್   ಪರೀಕ್ಷೆಗೆ ತಯಾರಿಗಾಗಿ ಬರ್ಹಾಂಪುರದಿಂದ  ಪುಸ್ತಕಗಳನ್ನು ಖರೀದಿಸಿ ಓದಲು  ಪ್ರಾರಂಭಿಸಿದೆ ಕೂಲಿ ಮಾಡುತ್ತಲೇ ಓದುತ್ತಾ 2022 ರಲ್ಲಿ ನೀಟ್ ಪರೀಕ್ಷೆಯಲ್ಲಿ ಒಳ್ಳೆಯ ಅಂಕಗಳನ್ನು ಪಡೆದರೂ   ಹಣದ ಕೊರತೆಯಿಂದ ಕೌನ್ಸೆಲಿಂಗ್ ಗೆ  ಹೋಗಲಾಗಲಿಲ್ಲ. 2023 ರಲ್ಲಿ   ಮತ್ತೊಮ್ಮೆ NEET  ಪರೀಕ್ಷೆ ಬರೆದೆ. 7,18,996 ರ ಅಖಿಲ ಭಾರತ ಶ್ರೇಣಿಯನ್ನು ಮತ್ತು 3,902 ರ ರಾಜ್ಯ ಶ್ರೇಣಿಯನ್ನು ಪಡೆದೆ.
ಮತ್ತೆ ಅವಕಾಶ ಕೈತಪ್ಪಿ ಹೋಗಬಾರದು ಎಂದು ನಿರ್ಧರಿಸಿ ನಮ್ಮ ಗ್ರಾಮದ ಲೇವಾದೇವಿದಾರರೊಬ್ಬರ ಬಳಿ ಪ್ರವೇಶ ಶುಲ್ಕವಾಗಿ ₹37,950 ಸಾಲ ಪಡೆಯಲು ಮುಂದಾದೆ. ಆಶ್ಚರ್ಯಕರ ಸಂಗತಿಯೆಂದರೆ, ಸಾಲಗಾರನು ತಾನು ಬಡ್ಡಿಯನ್ನು ವಿಧಿಸುವುದಿಲ್ಲ ಎಂದು ಹೇಳಿದರು.
ಈ ಬಾರಿ ಕುಟುಂಬ ಸದಸ್ಯರು ನನ್ನ ಬೆಂಬಲಕ್ಕೆ ನಿಂತಿದ್ದಾರೆ.
ಕಲಹಂಡಿಯ  ಸಾಹಿದ್ ರೆಂಡೋ ಮಜ್ಜಿ ವೈದ್ಯಕೀಯ ಕಾಲೇಜಿನಲ್ಲಿ M B B S  ಗೆ  ದಾಖಲಾಗಿರುವೆ. ನಮ್ಮ ಊರಿನಲ್ಲಿ ಅನಾರೋಗ್ಯದ ಪರಿಣಾಮವಾಗಿ ಹತ್ತಿರದಲ್ಲಿ ಯಾವುದೇ ಡಾಕ್ಟರ್ ಮತ್ತು  ಆಸ್ಪತ್ರೆ  ಇಲ್ಲದೆ ಹಲವಾರು ಜೀವಗಳು ಬಲಿಯಾಗಿವೆ.ನಾನು ಡಾಕ್ಟರ್ ಆಗಿ ನಮ್ಮ ಊರು ನಮ್ಮ ನಾಡಿನಲ್ಲಿ ಸೇವೆ ಮಾಡುವೆ.
ಎಂದು ಕೃಷ್ಣ ಚಂದ ಅಟಕಾ ರವರು  ಆತ್ಮವಿಶ್ವಾಸದಿಂದ ಹೇಳುವಾಗ ನಂಬಿಕೆ ,ಶ್ರದ್ದೆ,ಛಲವನ್ನು ಮೈಗೂಡಿಸಿಕೊಂಡು ಗುರಿಯೆಡೆಗೆ ಸಾಗುವವರಿಗೆ ಯಾವುದೂ ಅಸಾಧ್ಯವಲ್ಲ ಎಂಬುದು ಮನವರಿಕೆಯಾಗುತ್ತದೆ.ಕೃಷ್ಣ ಚಂದ ಅಟಕಾರವರು ಡಾಕ್ಟರ್ ಆಗಿ ಜನಸೇವೆಯಲ್ಲಿ ತೊಡಗಲಿ ಎಂದು ನಾವೆಲ್ಲರೂ ಹಾರೈಸೋಣ.

ಸಿಹಿಜೀವಿ ವೆಂಕಟೇಶ್ವರ
ತುಮಕೂರು
9900925529

20 August 2023

ಸಿಹಿಜೀವಿಯ ಹನಿಗಳು...

 


ಸಿಹಿಜೀವಿಯ ಹನಿಗಳು 


ಕವನವಾಸ....


ಹದಿನಾಲ್ಕು ವರ್ಷ ಪಾಂಡವರು

ಕಾಡಿನಲ್ಲಿ ಮಾಡಿದರು ವನವಾಸ|

ಕವಿತೆಗಳೊಂದಿಗೆ  ಕವಿ ಹದಿನಾಲ್ಕು ವರ್ಷ ಕಳೆದ ಅದು ಕವನವಾಸ||


ನೆನೆದವರ ಮನದಲ್ಲಿ...


ನಾವು ಮನಸಿನಲ್ಲಿ ಅಂದುಕೊಂಡವರು ಮುಂದೆ ಬಂದರೆ 

ನೆನೆದವರ ಮನದಲ್ಲಿ ||

ಮಳೆಯಲ್ಲಿ ನೆನೆಯುವವರ ಮನದಲ್ಲಿ ನಾವು ಇದ್ದರೆ  ಅದೂ ಕೂಡಾ ನೆನೆದವರ ಮನದಲ್ಲಿ|| 


ಸಿಹಿಜೀವಿ ವೆಂಕಟೇಶ್ವರ

ತುಮಕೂರು

19 August 2023

ಶ್ರಾವಣ ಮತ್ತು ಸಣ್ಣಪ್ಪ...

 


ಶ್ರಾವಣ ಮತ್ತು ಸಣ್ಣಪ್ಪ...


ಶ್ರಾವಣ ಪದವೇ ಒಂದು ಸಂಭ್ರಮ. ಬೇಂದ್ರೆ ಅಜ್ಜ ಹೇಳಿದಂತೆ ಶ್ರಾವಣ ಬರೀ ನಾಡಿಗೆ ಬರದೇ ಕಾಡಿಗೆ ಸಕಲ ಜೀವಿಗಳಿಗೆ ಹೊಸ ಚೈತನ್ಯ ಮೂಡಿಸುತ್ತದೆ. ಶ್ರಾವಣವೆಂದರೆ ಹೊಲ ಗದ್ದೆಗಳು ಹಸಿರೊದ್ದು ನಲಿವ ಕಾಲ. ಹಬ್ಬಹರಿದಿನಗಳ ಶ್ರದ್ಧಾ ಭಕ್ತಿಯ ಆಚರಣೆಗಳ ಕಾಲ. ನಾಡಿನ ಬಹುತೇಕ ಕಡೆ ಶ್ರಾವಣ ಶನಿವಾರ ಮತ್ತು ಸೋಮವಾರಗಳನ್ನು ವಿಶೇಷವಾಗಿ ಆಚರಣೆ ಮಾಡಲಾಗುತ್ತದೆ. ಕೆಲವೆಡೆ ಧಾರ್ಮಿಕ ಪುರಾಣಗಳನ್ನು ಶ್ರದ್ಧಾ ಭಕ್ತಿಯಿಂದ ಪಾರಾಯಣ ಮಾಡುವರು ಜೊತೆಗೆ ಕೆಲ ವ್ರತಗಳನ್ನು ಆಚರಿಸುವರು.ಅದರಲ್ಲಿ ಪ್ರಮುಖವಾದ ವ್ರತವೆಂದರೆ ವರಮಹಾಲಕ್ಷಿ ವ್ರತ. ಮೊದಲು ಕೆಲವೇ ಜನರು ಆಚರಿಸುತ್ತಿದ್ದ ವರಮಹಾಲಕ್ಷ್ಮಿ ಹಬ್ಬ ಇಂದು ಹಳ್ಳಿಗಳಿಗೂ ವ್ಯಾಪಿಸಿ ಸಾಂಸ್ಕೃತಿಕ ಬದಲಾವಣೆ ಮತ್ತು ಸಾಮಾಜಿಕ ಬದಲಾವಣೆಗೂ ಸಾಕ್ಷಿಯಾಗಿದೆ. ಶ್ರಾವಣ ಮಾಸವು ನನ್ನ ಬಾಲ್ಯವನ್ನು  ಬಹು ಸಂತಸಗೊಳಿಸಿದೆ ಅದಕ್ಕೆ ಶ್ರವಣಕ್ಕೆ ಧನ್ಯವಾದಗಳನ್ನು ಹೇಳಲೇಬೇಕು. ನಮ್ಮ ಬಾಲ್ಯದ ದಿನಗಳಲ್ಲಿ ನಮ್ಮ ಊರ ಸುತ್ತ ಮುತ್ತಲಿನ ಊರುಗಳಲ್ಲಿ ಶನಿವಾರಗಳಂದು ಶನಿಮಹಾತ್ಮೆ ಓದುವ ಮತ್ತು ಓದಿಸುವ ಕಾರ್ಯ ಸಾಮಾನ್ಯವಾಗಿತ್ತು ಆಗ ಶನಿಮಹಾತ್ಮೆ ಕಥೆ ಓದಲು ಎಲ್ಲರಿಗೂ ಬರುತ್ತಿರಲಿಲ್ಲ ಕಾರಣವೆಂದರೆ ಆ ಪುಸ್ತಕದಲ್ಲಿ ಬರುವ ,ಜಂಪೆ ತ್ರಿಹುಡಿ, ಆದಿತಾಳ ಮುಂತಾದ ಸಂಗೀತ ತಾಳ ಲಯಬದ್ಧವಾಗಿ ಓದಬೇಕಿತ್ತು. ಇದರಿಂದಾಗಿ  ಸಾಮಾನ್ಯವಾಗಿ ಓದಲು ಬರುವ ಎಲ್ಲರಿಗೂ ಸುಲಭವಾಗಿ ಶನಿಮಹಾತ್ಮೆ ಓದಲಾಗುತ್ತಿರಲಿಲ್ಲ. ನಮ್ಮ ಬೀದಿಯಲ್ಲಿ ನಮ್ಮ ಮನೆಯ ಪಕ್ಕದಲ್ಲೇ ವಾಸವಿದ್ದ ಸಣ್ಣಪ್ಪ ಶನಿಮಹಾತ್ಮೆ ಓದಲು ಸುತ್ತಮುತ್ತಲಿನ ಹಳ್ಳಿಗಳಲ್ಲಿ ಬಹಳ ಪ್ರಸಿದ್ಧರು. ಕೃಷ ದೇಹದ ಸಣ್ಣಪ್ಪ ನವರು ಅರವತ್ತು ದಾಟಿದ್ದರೂ ಅವರ  ಕಂಚಿನ ಕಂಠ ಇತರ ಬೀದಿಗೂ ಕೇಳಿಸುತ್ತಿತ್ತು. ಅವರು ಶನಿಮಹಾತ್ಮೆ ಓದಲು ನಮ್ಮ ಊರು ಮತ್ತು  ಬೇರೆ ಹಳ್ಳಿಗಳಿಗೆ ಹೊರಟರೆ ನನಗೆ ಖುಷಿಯೋ ಖುಷಿ ಯಾಕಂದರೆ ಮರುದಿನ ನನಗೆ ಮತ್ತು ಅವರ ಮಗ ಹಾಗೂ ನನ್ನ ಗೆಳೆಯ ಸೀನನಿಗೆ ಸಣ್ಣಪ್ಪರವರು ದೇವರ ಪ್ರಸಾದ ನೀಡುತ್ತಿದ್ದ  ತಂಬಿಟ್ಟು, ಮಂಡಕ್ಕಿ, ಬಾಳೆಹಣ್ಣು ಇತಹಣ್ಣುಗಳು ! ನಾವಿಬ್ಬರು ಬಾಲಕರು ಆ ಎಲ್ಲಾ ತಿನಿಸುಗಳನ್ನು ತಿಂದು ಮಿಕ್ಕಿದರೆ ಉಳಿದ ನಮ್ಮ ಸ್ನೇಹಿತರಿಗೆ ಕೊಡುತ್ತಿದ್ದೆವು.ಮುಂದಿನ ಶನಿವಾರ ಕಳೆದು ಭಾನುವಾರಕ್ಕೆ ಕಾಯುತ್ತಿದ್ದೆವು. ಹೆಂಡತಿ ತೀರಿಕೊಂಡ ಮೇಲೆ ಸಣ್ಣಪ್ಪನವರು  ಮಗನಿಗೆ ತಾಯಿಯ ಪ್ರೀತಿ ಕಡಿಮೆಯಾಗದಂತೆ  ಸಾಕುತ್ತಿದ್ದರು.  ಕೂಲಿ ನಾಲಿ ಮಾಡಿ ಜೀವನ ಸಾಗಿಸುತ್ತಿದ್ದ  ಅವರೇ ತಮ್ಮ ಮಗನಿಗೆ ಊಟ ಮಾಡಿ ಬಡಿಸುತ್ತಿದ್ದರು. ಈಗ ಸಣ್ಣಪ್ಪನವರು ಇಲ್ಲ.ಅವರ ಮಗ ಸೀನ ಇದ್ದಾನೆ  ಮೊನ್ನೆ ಊರಿಗೆ ಹೋದಾಗ ಅವನನ್ನು ಮಾತಾಡಿಸಿ ಬಂದೆ.ಅವರ ಮನೆಯಲ್ಲಿ ಸಣ್ಣಪ್ಪ ನೆನಪಾದರು. ಶ್ರಾವಣ ಮಾಸ ಬಂದಾಗಲೆಲ್ಲ ಇಂತಹ ಸಾರ್ಥಕ ಹಿರಿಯ ಜೀವಿಗಳ ನೆನಪಾಗುತ್ತದೆ.


ಸಿಹಿಜೀವಿ ವೆಂಕಟೇಶ್ವರ

ತುಮಕೂರು.

14 August 2023

ಪೇಡಾ..

 



ಹಂಚಿಬಿಡು ಪೇಡಾ .


ಕೋಗಿಲೆಯು ಕಪ್ಪಾದರೂ ನೋಡಾ

ಸದಾ ಹಾಡುವುದು ಸುಂದರ ಹಾಡ|

ಕೊರತೆ ನೆನದು ಕೊರಗುವುದು ಬೇಡ

ಇರುವುದ ನೆನೆದು ಹಂಚಿಬಿಡು ಪೇಡ||


ಸಿಹಿಜೀವಿ ವೆಂಕಟೇಶ್ವರ

ತುಮಕೂರು 


13 August 2023

ಆಗಸ್ಟ್ ಮಾಸದ ನೆನಪುಗಳು... ಭಾಗ _12 ನರಗುಂದದ ಬಾಬಾ ಸಾಹೇಬ್


 

ಆಗಸ್ಟ್ ಮಾಸದ ನೆನಪುಗಳು...

ಭಾಗ _12

ನರಗುಂದದ  ಬಾಬಾ ಸಾಹೇಬ್

ಬಾಬಾ ಸಾಹೇಬ್ ಎಂದರೆ ತಟ್ಟನೆ ನಮ್ಮ ನೆನೆಪಿಗೆ ಬರುವುದು ಡಾ.ಬಿ ಆರ್ ಅಂಬೇಡ್ಕರ್. ನಮ್ಮ ನಾಡಿನ ರಾಜವಂಶದ ಕುಡಿಯೊಂದು ಅದೇ ಹೆಸರಿನಿಂದ ಪ್ರಖ್ಯಾತಿ ಪಡೆದು ಬ್ರಿಟಿಷರ ದುರಾಡಳಿತದ ವಿರುದ್ಧ ತೊಡೆ ತಟ್ಟಿ ನಿಂತು ಭಾರತದ ಸ್ವತಂತ್ರ ಸಂಗ್ರಾಮದಲ್ಲಿ ಜನರನ್ನು ಹೋರಾಡಲು ಪ್ರೇರಣೆ ನೀಡಿದ ಧೀರನೇ ನರಗುಂದ ಬಾಬಾ ಸಾಹೇಬ್.

ಭಾಸ್ಕರ್ ರಾವ್ ಭಾವೆ ಹುಟ್ಟುತ್ತಲೇ ಐಶಾರಾಮಿ ಜೀವನದಲ್ಲಿ ಕಳೆದರೂ ಕ್ರಮೇಣ ಜನಾನುರಾಗಿಯಾಗಿ ಬಾಬಾ ಸಾಹೇಬ್ ಎಂದು ಕರೆಯಲ್ಪಟ್ಟರು.
ತಂದೆ ದಾದಾಜಿಯ ಆಡಳಿತ ಕಾಲದಲ್ಲಿ ಸಂಸ್ಥಾನ ಸಾಲದಲ್ಲಿ ಮುಳುಗಿಹೋಗಿತ್ತು. ಬಾಬಾ ಸಾಹೇಬ ಪಟ್ಟವೇರಿದ ತಕ್ಷಣ ಸಂಸ್ಥಾನದ ಚಿತ್ರಣವೇ ಬದಲಾಗಲಾರಂಭಿಸಿತು.  ಆಡಳಿತವನ್ನು ಪುನರ್‍ವ್ಯವಸ್ಥೆಗೊಳಿಸಿ ದಕ್ಷತೆಯಿಂದ ಆಳತೊಡಗಿದ. ಸಂಸ್ಥಾನದ ಸಾಲದ ಹೊರೆ ಕಡಿಮೆಮಾಡಿ ಪ್ರಜೆಗಳ ಪ್ರೀತ್ಯಾದರ ಗಳಿಸಿದ.
ದುರದೃಷ್ಟವಶಾತ್ ಬಾಬಾಸಾಹೇಬನಿಗಿದ್ದ ಒಬ್ಬನೇ ಮಗ ತೀರಿಕೊಂಡು ಸಂಸ್ಥಾನ ಉತ್ತರಾಧಿಕಾರಿಯಿಲ್ಲದ  ಪರಿಸ್ಥಿತಿಯೊದಗಿತು. ಆಗ ಬಾಬಾ ಸಾಹೇಬ 1846 ರಲ್ಲಿ ಕಂಪನಿ ಸರ್ಕಾರಕ್ಕೆ ಪತ್ರ ಬರೆದು  ದತ್ತು ಸ್ವೀಕಾರಕ್ಕೆ ಅನುಮತಿ ಕೋರಿದ. ಈ ಪ್ರಶ್ನೆ ಇನಾಮ್ ಕಮಿಷನರ್ ಮ್ಯಾನ್ಸನ್ ಎಂಬುವನ ಪರಿಶೀಲನೆಗೆ ಬಂತು. ಮ್ಯಾನ್ಸನ್ ಸಂಸ್ಥಾನದ ಆರ್ಥಿಕ ಪರಿಸ್ಥಿತಿ ಶೋಚನೀಯ ಸ್ಥಿತಿಯಲ್ಲಿದೆ ಎಂಬ ನೆಪ ಒಡ್ಡಿ ದತ್ತಕ ಸ್ವೀಕಾರಕ್ಕೆ ಅನುಮತಿ ನಿರಾಕರಿಸಿದ. ಇದರಿಂದ ರೋಷಗೊಂಡ ಬಾಬಾಸಾಹೇಬ ಮ್ಯಾನ್‍ಸನ್ನನ ಮೇಲೂ ಬ್ರಿಟಿಷರ ಮೇಲೂ ಸೇಡು ತೀರಿಸಿಕೊಳ್ಳಬಯಸಿದ. 

ಆ ಕಾಲದಲ್ಲಿ ಲಾರ್ಡ್ ಡಾಲ್‍ಹೌಸಿಯ ದತ್ತು ಮಕ್ಕಳಿಗೆ ಹಕ್ಕಿಲ್ಲ ಕಾಯ್ದೆ  ಮತ್ತು ಅದರ ಹಿಂದೆಯೇ ಬಂದ ಇನಾಮ್ ಕಮಿಷನ್ನಿನ ಕಾರ್ಯ ಚಟುವಟಿಕೆಗಳೇ ಮೂಲ ಕಾರಣವಾಗಿ ಉತ್ತರ ಭಾರತಾದ್ಯಂತ ಮಹಾಕ್ರಾಂತಿ ಹತ್ತಿ ಉರಿಯುತ್ತಿತ್ತು. ಯಾವುದೇ ಹಕ್ಕು ಪತ್ರಗಳಿಲ್ಲದೆ ಹೋದರೆ ಅಥವಾ ಸಂಬಂಧಪಟ್ಟ ದಾಖಲೆಗಳು ಸ್ಪಷ್ಟವಾಗಿಲ್ಲವೆಂದು ಕಂಡುಬಂದರೆ ಅಂಥವರ ಭೂಮಿಯನ್ನು ಮುಟ್ಟುಗೋಲು ಹಾಕಿಕೊಳ್ಳುವ ಅಧಿಕಾರವನ್ನು ಇನಾಮ್ ಕಮಿಷನ್ನಿಗೆ ಕೊಡಲಾಗಿತ್ತು. ದಕ್ಷಿಣ ಮರಾಠಾ ದೇಶವೊಂದರಲ್ಲೇ ಇನಾಮ್ ಕಮಿಷನ್ ಸುಮಾರು 35,000 ಜಮೀನ್ದಾರರ ಒಡೆತನ ಹಕ್ಕುಗಳನ್ನು ಪರಿಶೀಲಿಸಿ, 21,000 ಜಮೀನ್ದಾರರ ಸ್ವತ್ತನ್ನು ಸರ್ಕಾರಕ್ಕೆ ಸೇರಿಸಿಕೊಂಡಿತ್ತು. ಇದರಿಂದಾಗಿ ನಿಪ್ಪಾಣಿ, ಜಂಬೋಟಿ ಮುಂತಾದ ಕಡೆಯ ಜಮೀನ್ದಾರರು ಒಟ್ಟುಗೂಡಿ ಬಂಡಾಯವೆದ್ದರು ಬ್ರಿಟಿಷರ ವಿರುದ್ಧ ಎದ್ದು ನಿಂತರೆ ಇವರೆಲ್ಲರ ಸಹಾನುಭೂತಿ ಸಹಾಯ ತನಗೆ ದೊರಕುವುದೆಂದು ಬಾಬಾಸಾಹೇಬ ಭಾವಿಸಿದ. 

ಸಿಪಾಯಿ ದಂಗೆಯಲ್ಲಿ ಮುಖ್ಯಪಾತ್ರ ವಹಿಸಿದ್ದ ಪೇಶ್ವೆ ನಾನಾಸಾಹೇಬನೊಡನೆ ಇವನು ಪತ್ರವ್ಯವಹಾರ ನಡೆಸಿದ. ಅನಂತರ ಡಂಬಳದ ಮತ್ತು ಹಮ್ಮಿಗೆಯ ದೇಸಾಯಿಗಳೊಡನೆ ಮತ್ತು ಮುಂಡರಗಿ ಭೀಮರಾವ್ ಇವರೊಂದಿಗೆ ರಹಸ್ಯಸಮಾಲೋಚನೆ ನಡೆಸಿದ. ಕೊನೆಗೆ ಉತ್ತರ ಕರ್ನಾಟಕಾದ್ಯಂತ ಒಮ್ಮೆಲೆ ಬಂಡಾಯವೆದ್ದು ನರಗುಂದದವರು ಧಾರವಾಡ ಮತ್ತು ಅದರ ಪಶ್ಚಿಮ ಭಾಗವನ್ನೂ ಮುಂಡರಗಿ ಭೀಮರಾಯ ಕೊಪ್ಪಳವನ್ನೂ ವಶಪಡಿಸಿಕೊಳ್ಳಬೇಕೆಂಬ ನಿರ್ಣಯಕ್ಕೆ ಬರಲಾಯಿತು. ಈ ಮಧ್ಯೆ ಬ್ರಿಟಿಷರು ಶಸ್ತ್ರಾಸ್ತ್ರ ಕಾಯಿದೆಗೆ ಅನುಗುಣವಾಗಿ ಬಾಬಾಸಾಹೇಬ ತನ್ನ ಕೋಟೆಯಲ್ಲಿಟ್ಟಿದ್ದ ದೊಡ್ಡ ತೋಪುಗಳು ಮದ್ದುಗುಂಡು ಇತ್ಯಾದಿಗಳನ್ನು ತಮ್ಮ ವಶಕ್ಕೆ ಒಪ್ಪಿಸಬೇಕೆಂದು ಆಜ್ಞೆ ಮಾಡಿದರು. ಆಗ ದಕ್ಷಿಣ ಮರಾಠಾ ದೇಶದ ರಾಜಕೀಯ ಪ್ರತಿನಿಧಿಯಾಗಿದ್ದವ ಮ್ಯಾನ್‍ಸನ್. ಅಂದಿನ ಪ್ರಕ್ಷುಬ್ದ ಪರಿಸ್ಥಿತಿಯಲ್ಲಿ ಈ ಶಸ್ತ್ರಾಸ್ತ್ರಗಳು ಆಂಗ್ಲರ ವಿರೋಧಿಗಳಿಗೆ ದಕ್ಕುವಂತಾಗಬಾರದೆಂಬುದೇ ಬ್ರಿಟಿಷ್ ಸರ್ಕಾರದ ಆಶಯವೆಂದು ಹೇಳಿ, ನಂಬಿಸಿ ಬಾಬಾ ಸಾಹೇಬನಿಂದ ಶಸ್ತ್ರಾಸ್ತ್ರ ಒಪ್ಪಿಸುವ ಆಶ್ವಾಸನೆ ಪಡೆದ. ಬಾಬಾಸಾಹೇಬ ಅತಿಯಾದ ಮಳೆ ಸುರಿಯುತ್ತಿದೆಯೆಂಬ ನೆಪವೊಡ್ಡಿ ಮೂರು ತೋಪುಗಳನ್ನು ದುರ್ಗದಲ್ಲೇ ಉಳಿಸಿಕೊಂಡು ಉಳಿದೆಲ್ಲ ಸಾಮಗ್ರಿಗಳನ್ನೂ ಧಾರವಾಡದತ್ತ ಕಳುಹಿಸಿದ. ಜೊತೆಗೆ ಮಧ್ಯದಾರಿಯಲ್ಲಿ ಇವನೇ ಕಳುಹಿಸಿದ ಜನ ಸಾಗಣೆ ಸಿಬ್ಬಂದಿಯವರ ಮೇಲೆ ಬಿದ್ದು ಎಲ್ಲ ಶಸ್ತ್ರಾಸ್ತ್ರಗಳನ್ನು ದೋಚಿಕೊಂಡು ಬಂದರು.

ಕಾರಣಾಂತರದಿಂದ ಮುಂಡರಗಿ ಭೀಮರಾವ್ ರಹಸ್ಯವಾಗಿ ನಿಗದಿಮಾಡಿದ್ದ ದಿನಕ್ಕೆ ಮೊದಲೇ ಬಂಡಾಯವೆದ್ದ. ಡಂಬಳದ ಖಜಾನೆಯನ್ನು ಲೂಟಿಮಾಡಿ ಕೊಪ್ಪಳ ದುರ್ಗವನ್ನಾಕ್ರಮಿಸಲು ಹೊರಟ. ಈ ವಿಷಯ ತಿಳಿದಾಕ್ಷಣ ಬಾಬಾ ಸಾಹೇಬ ತನ್ನ ಬಳಿಯಿದ್ದ ದೊಡ್ಡ ತೋಪುಗಳನ್ನು ದುರ್ಗದ ಮೇಲೆ ಸರಿಯಾದ ಸ್ಥಳಗಳಲ್ಲಿರಿಸಿ ಯುದ್ಧ ಸನ್ನದ್ಧನಾದ.
ನರಗುಂದದೊಡೆಯನ ಈ ಅಪಾಯಕಾರಿ ಕ್ರಮಗಳ ವಿಷಯ ಮ್ಯಾನ್ಸ್‍ನ್ ಕುರುಂದವಾಡದಲ್ಲಿ ತಿಳಿಯಿತು. ಏನಾದರೂ ಮಾಡಿ ಇವನು ದಂಗೆ ಏಳದಂತೆ, ಅದು ಸಾಧ್ಯವಾಗದಿದ್ದರೆ ರಾಮದುರ್ಗದ ಸಂಸ್ಥಾನದ ಒಡೆಯನಾಗಿದ್ದ ಇವನ ಮಲತಮ್ಮ ದಂಗೆಕೋರರಿಗೆ ಸಹಾಯ ನೀಡದಂತೆ  ಮಾಡಬೇಕೆಂಬ ಉದ್ದೇಶದಿಂದ ಮ್ಯಾನ್ಸನ್ ಮೇ 25 ರಂದು ಒಳದಾರಿ ಹಿಡಿದು ನರಗುಂದದ ಕಡೆಗೆ ಸಾಗಿದ. ಜೊತೆಯಲ್ಲಿ ದಕ್ಷಿಣ ಮರಾಠಾ ಅಶ್ವದಳದ 12 ಮಂದಿಯನ್ನು ಮಾತ್ರ ತನ್ನ ರಕ್ಷಣೆಗಾಗಿ ಕರೆದೊಯ್ದ. ಆದರೆ ಕರ್ನಲ್ ಮಾಲ್ಕಮ್  ರಾಮದುರ್ಗದಲ್ಲಿ ದಕ್ಷಿಣ ಮರಾಠಾ ಆಶ್ವದಳದೊಡನೆ ತನ್ನನ್ನು ಸಂಧಿಸಬೇಕೆಂದು ಆಜ್ಞಾಪಿಸಿದ. ದುರದೃಷ್ಟವಶಾತ್ ಈ ಆಜ್ಞೆ ತಲುಪುವಷ್ಟರಲ್ಲಿ ಕರ್ನಲ್ ಮಾಲ್ಕಮ್ 250 ಕುದುರೆ ಸವಾರರೊಡನೆ ಡಂಬಳದ ಖಜಾನೆ ಲೂಟಿಮಾಡಿದ ಬಂಡುಕೋರರೊಡನೆ ಹೋರಾಟಕ್ಕೆ ಸಿದ್ಧನಾಗಿ ನಿಂತಿದ್ದ. ಇದರಿಂದ ಮ್ಯಾನ್ಸನ್ ರಾಮದುರ್ಗವನ್ನು ತಲುಪಿದಾಗ ಅವನ ರಕ್ಷಣೆಗಾಗಿ ಮಾಲ್ಕಮ್ ಅಲ್ಲಿರಲಾಗಲಿಲ್ಲ. ರಾಮದುರ್ಗದ ಒಡೆಯನೇನೋ ಸ್ನೇಹಭಾವವನ್ನೇ ತೋರಿದ. ಬಾಬಾಸಾಹೇಬ ಬರೆದಿದ್ದ ಪತ್ರ ತೋರಿಸಿ ಅಲ್ಲಿಗೆ ಹೋಗಕೂಡದೆಂದು ಎಚ್ಚರಿಸಿದ. ಈ ಪತ್ರದಲ್ಲಿ ನರಗುಂದದೊಡೆಯ ಅಪಮಾನಕ್ಕಿಂತ ಮರಣವೇ ಲೇಸೆಂದು ರಾಮದುರ್ಗ ಸಹ ದಂಗೆಯಲ್ಲಿ ಪಾಲ್ಗೊಳ್ಳಬೇಕೆಂದೂ ಒತ್ತಿ ಹೇಳಿದ್ದ. ಧಾರವಾಡಕ್ಕೆ ಹೋಗಿ ಅಲ್ಲಿ ಮಾಲ್ಕಮನ ಪಡೆಯನ್ನು ಕೂಡಿಕೊಳ್ಳುವ ಉದ್ದೇಶದಿಂದ, ಎಷ್ಟು ಹೇಳಿದರೂ ಲಕ್ಷಿಸದೆ ಮ್ಯಾನ್ಸನ್ ಮೇ 29ರ ಮಧ್ಯಾಹ್ನ ರಾಮದುರ್ಗದಿಂದ ಹೊರಟ. ಹನ್ನೆರಡು ಮಂದಿ ಆಶ್ವೀಕರಲ್ಲದೆ ಅವನ ಜೊತೆ ಕೆಲವೇ ಪರಿಚಾರಕರಿದ್ದರು. ರಾಮದುರ್ಗದಿಂದ ಧಾರವಾಡದತ್ತ ಹೋಗುವ ದಾರಿ ನರಗುಂದದ ಸಮೀಪದಲ್ಲೇ ಹಾಯುತ್ತಿತ್ತು. ಹೀಗಾಗಿ ಮ್ಯಾನ್ಸನ್ನನ ಸಾಹಸ ಅಪಾಯದಿಂದ ಕೂಡಿತ್ತು. ರಾತ್ರಿಯಾಗುತ್ತಲೇ ಸುರೆಬಾನ ಎಂಬ ಹಳ್ಳಿಯಲ್ಲಿ ಇವನು ತಂಗಿದ.

ಇಷ್ಟರಲ್ಲಿ ಮ್ಯಾನ್ಸನ್ ರಾಮದುರ್ಗದಿಂದ ಕಳುಹಿಸಿದ್ದ ಪತ್ರ ಓದಿ ಕೋಪೋದ್ರಿಕ್ತನಾಗಿದ್ದ ಬಾಬಾಸಾಹೇಬ ಸುಮಾರು 700-800 ಕುದುರೆ ಮತ್ತು ಕಾಲ್ದಳದೊಂದಿಗೆ ರಾಮದುರ್ಗದತ್ತ ಬಂದು ಮ್ಯಾನ್ಸನ್ ಸುರೆಬಾನದಲ್ಲಿ ತಂಗಿರುವ ವಿಷಯ ತಿಳಿದು ಅತ್ತ ಧಾವಿಸಿದ. ಬಾಬಾಸಾಹೇಬನ ಸೈನಿಕರು ಮ್ಯಾನ್ಸನ್ನನ ತಲೆ ಕಡಿದು ಹಾಕಿದರು. ಕತ್ತಲಲ್ಲಿ ಕೇವಲ ಆರು ಮಂದಿ ಸೈನಿಕರು ತಪ್ಪಿಸಿಕೊಂಡರು. ದಕ್ಷಿಣ ಮಹಾರಾಷ್ಟ್ರರ ಅಶ್ವದಳದ ಅಧಿಕಾರಿಗಳಲ್ಲಿ ಶ್ರೇಷ್ಠ ಎನಿಸಿದ್ದ ಪೂರ್ಣಸಿಂಗನೂ ಕೊಲ್ಲಲ್ಪಟ್ಟ. ಮ್ಯಾನ್ಸನ್ನನ ರುಂಡವನ್ನು ನರಗುಂದ ಪಟ್ಟಣದ ದ್ವಾರವೊಂದಕ್ಕೆ ನೇತುಹಾಕಲಾಯಿತು.

ಮ್ಯಾನ್ಸನ್ನ ಬಳಿಯಿದ್ದ ಕಾಗದಪತ್ರಗಳ ಪರಿಶೀಲನೆ ನಡೆಸಿದಾಗ ತನ್ನ ಅನುಚರರೇ ಆದ ಕೃಷ್ಣಾಜಿಪಂತ ಜೋಶಿ ಮೊದಲಾದ ದ್ರೋಹಿಗಳ ಮೂಲಕ ತನ್ನ ಗುಪ್ತ ಕಾರ್ಯಾಗಾರಗಳೆಲ್ಲ ಬ್ರಿಟಿಷರಿಗೆ ಗೊತ್ತಿರುವ ವಿಷಯ ಗಮನಕ್ಕೆ ಬಂದು ಬಾಬಾ ಸಾಹೇಬನಿಗೆ ಗಾಬರಿಯಾಯಿತು. ಈ ದ್ರೋಹಿಗಳು ಮದ್ದಿನ ಮನೆಗೆ ಸಗಣಿ ತುಂಬಿದ್ದರು. ಎಷ್ಟಾದರೂ ಇವನು ಹೋರಾಟಕ್ಕೆ ಸಿದ್ಧನಾದ.
ಮ್ಯಾನ್ಸನ್ ಮತ್ತು ಇತರರಿಗೊದಗಿದ ಘೋರ ಮರಣ ವೃತ್ತಾಂತ ಧಾರವಾಡಕ್ಕೆ ಮಾರನೇ ದಿನ ತಲುಪಿತು. ಕೂಡಲೇ ಧಾರವಾಡದಿಂದ ಅಮರಗೋಳಕ್ಕೆ ಸಣ್ಣ ಪಡೆಯೊಂದನ್ನು ರವಾನಿಸಲಾಯಿತು. ಜೂನ್ 1ರಂದು ಕರ್ನಲ್ ಮಾಲ್ಕಮ್ ದಕ್ಷಿಣ ಮರಾಠಾ ಅಶ್ವದಳದ 150 ಮಂದಿ ದೇಶೀಯ ಪದಾತಿದಳದ 28ನೆಯ ರೆಜಿಮೆಂಟ್ ಮತ್ತು 74ನೆಯ ಪರ್ವತ ಪಡೆಯ ಎರಡು ತುಕಡಿಗಳೊಡನೆ ನರಗುಂದ ತಲುಪಿದ. ನಡೆದ ಹೋರಾಟದಲ್ಲಿ ಪಟ್ಟಣ ಬ್ರಿಟಿಷರ ವಶವಾಯಿತು. ಮಾರನೆಯ ದಿನ ಬ್ರಿಟಿಷರು ಕೋಟೆ ವಶಪಡಿಸಿಕೊಳ್ಳಲು ಹೊರಟರು. ಬಾಬಾಸಾಹೇಬನಿಗೆ ಹೋರಾಟ ಮುಂದುವರಿಸುವುದರಿಂದ ಪ್ರಯೋಜನವಿಲ್ಲವೆಂಬ ಅರಿವಾಯಿತು. ಅಂದು ರಾತ್ರಿಯೇ ಆರು ಮಂದಿ ಆಪ್ತರೊಡನೆ ದುರ್ಗ ತೊರೆದು ಹೋದ.

ಬೆಳಗಾವಿಯ ಪೊಲೀಸ್ ಸೂಪರಿಂಟೆಂಡೆಂಟ್ ಆಗಿದ್ದ ಫ್ರಾಂಕ್ ಸೌಟರ್ ಮಾರನೆಯ ದಿನ ಪಂಢರಾಪುರಕ್ಕೆ ತೆರಳುವ ಯಾತ್ರಾರ್ಥಿಗಳಂತೆ ವೇಷ ಧರಿಸಿದ್ದ ಬಾಬಾಸಾಹೇಬ ಮತ್ತು ಅವನ ಅನುಚರರನ್ನು ತೊರಗಲ್ ಕಾಡಿನಲ್ಲಿ ಸೆರೆಹಿಡಿದು ಬೆಳಗಾಂವಿಗೆ ತಂದ. ವಿಚಾರಣೆ ನಡೆಸಿ ಬಾಬಾಸಾಹೇಬನಿಗೆ ಮರಣದಂಡನೆ ವಿಧಿಸಲಾಯಿತು. 1858 ಜೂನ್ 12ರಂದು ಸಾವಿರಾರು ಮಂದಿಯ ಸಮ್ಮುಖದಲ್ಲಿ ಬೆಳಗಾಂವಿಯಲ್ಲಿ ಈ ವೀರನನ್ನು ನೇಣುಹಾಕಲಾಯಿತು.1858ರ  ಜೂನ್ 3ರಂದು ನರಗುಂದ ಸಂಸ್ಥಾನವನ್ನು ಬ್ರಿಟಿಷರು ತಮ್ಮ ಅಧಿಪತ್ಯಕ್ಕೆ ಒಳಪಡಿಸಿಕೊಂಡರು.  ಬಾಬಾ ಸಾಹೇಬ್ ಕ್ರಾಂತಿಯ ಕಿಚ್ಚು ನಾಡಿನಾದ್ಯಂತ ಹೊತ್ತಿತು. ಸಾವಿರಾರು ದೇಶಭಕ್ತರಿಗೆ ಅವರ ಜೀವನ ಪ್ರೇರಣೆಯಾಯಿತು.

ಸಿಹಿಜೀವಿ ವೆಂಕಟೇಶ್ವರ
ತುಮಕೂರು
9900925529



12 August 2023

ಆಗಸ್ಟ್ ಮಾಸದ ನೆನಪುಗಳು... ಭಾಗ _11 ಕಾರ್ನಾಡ್ ಸದಾಶಿವರಾವ್ .


 

ಆಗಸ್ಟ್ ಮಾಸದ ನೆನಪುಗಳು...

ಭಾಗ _11

ಕಾರ್ನಾಡ್ ಸದಾಶಿವರಾವ್ ..

ದಕ್ಷಿಣ ಕನ್ನಡ ಜಿಲ್ಲೆಯ ಪ್ರಸಿದ್ಧ ಸ್ವಾತಂತ್ರ್ಯ ಹೋರಾಟಗಾರ, ನ್ಯಾಯವಾದಿ, ಸಮಾಜಸೇವಕರಾದ ಕಾರ್ನಾಡ್ ಸದಾಶಿವರಾವ್ ರವರು ಭಾರತದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ತಮ್ಮದೇ ಆದ ಕೊಡುಗೆ ನೀಡಿದ್ದಾರೆ.

1881ರಲ್ಲಿ ಮಂಗಳೂರಿನಲ್ಲಿ ಜನಿಸಿದರು. ತಂದೆ ಕಾರ್ನಾಡು ರಾಮಚಂದ್ರರಾವ್ ಮಂಗಳೂರಿನ ಪ್ರಮುಖ ವಕೀಲರು.ಅವರು ಸದ್ಗುಣಿಯೆಂದೂ ಸ್ವತಂತ್ರ ಧೋರಣೆಯುಳ್ಳ ಸತ್ಯನಿಷ್ಠರೆಂದೂ ಪ್ರಸಿದ್ಧರಾಗಿದ್ದರು. ತಾಯಿ ರಾಧಾಬಾಯಿ.
ಸದಾಶಿವರಾಯರು ಮಂಗಳೂರಿನಲಿ ಪ್ರಾರಂಭಿಕ ಶಿಕ್ಷಣ ಪಡೆದರು. ಮುಂದೆ ಮದರಾಸಿನ ಪ್ರೆಸಿಡೆನ್ಸಿ ಕಾಲೇಜಿನಲ್ಲಿ ಓದಿ ಪದವೀಧರರಾದರು. ಮುಂಬಯಿಯಲ್ಲಿ ನ್ಯಾಯಶಾಸ್ತ್ರ ಪದವಿ ಗಳಿಸಿ ಮಂಗಳೂರಿನಲ್ಲಿ 1906ರಲ್ಲಿ ವಕೀಲಿ  ವೃತ್ತಿಯನ್ನಾರಂಭಿಸಿದರು

ಇವರು ಬಲು ಬೇಗ ವೃತ್ತಿಜೀವನದಲ್ಲಿ ಯಶಸ್ಸು ಗಳಿಸಿದರಾದರೂ ಇವರ ಮನಸ್ಸು ದೇಶದ ಉನ್ನತಿಗಾಗಿ ಸದಾ ತುಡಿಯುತ್ತಿತ್ತು. ಸ್ತ್ರೀಯರ ಪ್ರಗತಿಗಾಗಿ ಮಹಿಳಾ ಸಭಾ ಎಂಬ ಸಂಸ್ಥೆಯೊಂದನ್ನು ಪ್ರಾರಂಭಿಸಿದರು.  ಇವರ ಪತ್ನಿ ಶಾಂತಾಬಾಯಿಯವರೂ ಈ ಸಂಸ್ಥೆಯ ಆಶ್ರಯದಲ್ಲಿ ಮಹಿಳೆಯರಿಗೆ ಉಪಯುಕ್ತ ಕಸಬುಗಳನ್ನು ಹೇಳಿಕೊಡುತ್ತಿದ್ದರು. ದೇಶದಲ್ಲಿ ಸ್ವಾತಂತ್ರ್ಯ ಚಳವಳಿ ತೀವ್ರವಾದಾಗ ಯುವಕರಿಗೆ ರಾಷ್ಟ್ರೀಯ ಶಿಕ್ಷಣವನ್ನು ನೀಡುವತ್ತ ಇವರ ಮನಸ್ಸು ಹರಿಯಿತು.  ಇವರು "ತಿಲಕ್ ವಿದ್ಯಾಲಯ"  ಎಂಬ ರಾಷ್ಟ್ರೀಯ ವಿದ್ಯಾಶಾಲೆಯನ್ನ ಆರಂಭಿಸಿದರು. ಹಿಂದಿ ಭಾಷೆಯನ್ನು ಬೋಧಿಸುವುದರ ಜೊತೆಗೆ ಅಲ್ಲಿ ನೂಲುವುದು, ನೇಯುವುದು ಮುಂತಾದ ಉಪಯುಕ್ತ ಕೈಕಸಬುಗಳನ್ನೂ ಹೇಳಿಕೊಡಲಾಗುತ್ತಿತ್ತು. 

ಗಾಂಧೀಯವರು ಸತ್ಯಾಗ್ರಹ ಚಳವಳಿಯನ್ನಾರಂಭಿಸಿದಾಗ ಕರ್ನಾಟಕದಲ್ಲಿ ಅದರ ಪ್ರತಿಜ್ಞೆಗೆ ಸಹಿಹಾಕಿದವರಲ್ಲಿ ಇವರು ಮೊದಲಿಗರು.  ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಾಂಗ್ರೆಸ್ಸು ಬಲಗೊಂಡಿತು. ದಕ್ಷ ಹಾಗೂ ನಿಷ್ಠಾವಂತ ಸತ್ಯಾಗ್ರಹಿಗಳ ತರಬೇತಿಗಾಗಿ ಇವರು ಧಾರಾಳವಾಗಿ ಹಣ ಸುರಿದರು. ಹಲವು ವರ್ಷಗಳ ಕಾಲ ಇವರು ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರೂ ಕರ್ನಾಟಕ ಪ್ರಾಂತೀಯ ಕಾಂಗ್ರೆಸ್ ಸಮಿತಿಯ ಉಪಾಧ್ಯಕ್ಷರೂ ಆಗಿದ್ದರಲ್ಲದೆ ಅದರ ಅಧ್ಯಕ್ಷರಾಗಿ   ಅಖಿಲಭಾರತ ಕಾಂಗ್ರೆಸ್ ಸಮಿತಿಯ ಸದಸ್ಯರಾಗಿಯೂ ಗುರುತಿಸಿಕೊಂಡು ಸ್ವಾತಂತ್ರ್ಯ ಚಳುವಳಿಯ ಉತ್ತಮ ಸಂಘಟಕ ಎಂಬುದಾಗಿ ಪ್ರಶಂಸೆಗೆ ಪಾತ್ರರಾದರು.

ಮಹಾತ್ಮ ಗಾಂಧೀಯವರ ಅಚ್ಚುಮೆಚ್ಚಿನ ಅನುಯಾಯಿಗಳಲ್ಲೊಬ್ಬರಾಗಿದ್ದ ಇವರು ಗಾಂಧೀಯವರು ಆರಂಭಿಸಿದ ಉಪ್ಪಿನ ಸತ್ಯಾಗ್ರಹ ಸಮಯದಲ್ಲಿ ವೈಯುಕ್ತಿಕ ಸತ್ಯಾಗ್ರಹಿಯಾಗಿ ದಸ್ತಗಿರಿಯಾಗಿ ಕಾರಾಗೃಹವಾಸ ಅನುಭವಿಸಿದರು. 
ಐಶ್ವರ್ಯವಂತರ ಮನೆತನದಲ್ಲಿ ಹುಟ್ಟಿ ಬೆಳೆದವರಾದರೂ ದೀನದಲಿತರ ಬಗ್ಗೆ ಸದಾ ಅನುಕಂಪಹೊಂದಿದ್ದರು ಹಾಗೂ ಅವರ ಉದ್ಧಾರಕ್ಕಾಗಿ  ಬಹಳ ಶ್ರಮಿಸಿದರು. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಮಾಜಸುಧಾರಕರ ದೊಡ್ಡ ಪಡೆಯನ್ನೇ ಕಟ್ಟಿದರು. ಮಹಿಳೆಯರ ಪ್ರಗತಿಗಾಗಿಯೂ ರಾಷ್ಟ್ರೀಯ ಶಿಕ್ಷಣಕ್ಕಾಗಿಯೂ ಇವರು ಕಟ್ಟಿದ ಸಂಸ್ಥೆಗಳು ಯಶಸ್ವಿಯಾಗಿ ಕೆಲಸ ಮಾಡಿದವು. ದಲಿತೋದ್ಧಾರ ಕಾರ್ಯದಲ್ಲಿ ಇವರು ಕೊನೆಯ ವರೆಗೂ ನಿರತರಾಗಿದ್ದರು. ಇವರು ಕೆನರಾ ಸಾರಸ್ವತ ಸಂಘದ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದಾರೆ.

ಸರಳ ಜೀವಿಯಾದ  ಮಹಾತ್ಮ ಗಾಂಧೀಯವರಿಗೆ ಇವರ ಬಗ್ಗೆ  ತುಂಬ ವಿಶ್ವಾಸವಿತ್ತು. ಬೆಂಗಳೂರಿನಲ್ಲಿ ಸೇರಿದ್ದ ಭಾರತ ರಾಷ್ಟ್ರೀಯ ಕಾಂಗ್ರೆಸ್ಸಿನ ಅರವತ್ತೈದನೆಯ ಅಧಿವೇಶನದ  ಸ್ಥಳಕ್ಕೆ ಸದಾಶಿವನಗರ ಎಂದು ಹೆಸರಿಡಲಾಗಿತ್ತು.

1937ರಲ್ಲಿ ಫೈಜ್‍ಪುರದಲ್ಲಿ ಸೇರಿದ್ದ ಕಾಂಗ್ರೆಸ್ ಅಧಿವೇಶನದಲ್ಲಿ ಭಾಗವಹಿಸಿ ಹಿಂದಿರುಗುತ್ತಿದ್ದಾಗ ಇವರ ಆರೋಗ್ಯ ಕೆಟ್ಟಿತು. 1937 ಜನವರಿ 9ರಂದು ಇವರು ಮುಂಬಯಿಯಲ್ಲಿ ನಿಧನರಾದರು. ಕಾರ್ನಾಡ್ ಸದಾಶಿವರಾವ್ ರವರ ದೇಶಭಕ್ತಿ ಮತ್ತು ಸೇವೆಯನ್ನು ಇಂದಿನ ಪೀಳಿಗೆ ನೆನೆದು ಅಳವಡಿಸಿಕೊಂಡರೆ ಅವರ ಬದುಕು ಸಾರ್ಥಕವಾಗುವುದರಲ್ಲಿ ಸಂಶಯವಿಲ್ಲ.

ಸಿಹಿಜೀವಿ ವೆಂಕಟೇಶ್ವರ
ತುಮಕೂರು
990925529

10 August 2023

ಆಗಸ್ಟ್ ಮಾಸದ ನೆನಪುಗಳು... ಭಾಗ _10 ಉಮಾಬಾಯಿ ಕುಂದಾಪುರ.


 


ಆಗಸ್ಟ್ ಮಾಸದ ನೆನಪುಗಳು...

ಭಾಗ _10

ಉಮಾಬಾಯಿ ಕುಂದಾಪುರ.

ಭಾರತದ  ಸ್ವಾತಂತ್ರ್ಯ ಹೋರಾಟಗಾರ್ತಿಯರ ಗುಂಪು ಭಗಿನೀ ಮಂಡಲದ ಸ್ಥಾಪಕಿ, ನಾ. ಸು. ಹರ್ಡೀಕರ್ ಅವರು ಸ್ಥಾಪಿಸಿದ ಹಿಂದೂಸ್ತಾನಿ ಸೇವಾದಲದ ಮಹಿಳಾ ವಿಭಾಗದ ಮುಖ್ಯಸ್ಥೆಯಾಗಿದ್ದವರು, ತನಗೆ ಬರಬಹುದಾಗಿದ್ದ ಪ್ರಶಸ್ತಿಪುರಸ್ಕಾರ, ಸರಕಾರದ ಉನ್ನತ ಹುದ್ದೆಗಳು ಎಲ್ಲವನ್ನೂ ತಿರಸ್ಕರಿಸಿದ ಅಪರೂಪದ ಮಹಿಳೆ  ಉಮಾಬಾಯಿ ಕುಂದಾಪುರ.

ಉಮಾಬಾಯಿಯವರು ಹುಟ್ಟಿದ್ದು 25ನೇ ಮಾರ್ಚ್ 1892ನೇ ಇಸವಿಯಂದು, ಕುಂದಾಪುರದ ಬ್ರಾಹ್ಮಣ ಕುಟುಂಬದಲ್ಲಿ. ಬಾಲ್ಯದ ಹೆಸರು ಭವಾನಿ ಗೋಳಿಕೇರಿ. ತಂದೆ ಗೋಳಿಕೇರಿ ಕೃಷ್ಣರಾವ್ ತಾಯಿ ತುಂಗಾಬಾಯಿ. ಐವರು ಗಂಡುಮಕ್ಕಳೂ ಸೇರಿ ಒಟ್ಟು ಆರು ಮಂದಿ ಮಕ್ಕಳು. 1898ರಲ್ಲಿ ಸಹೋದರರ ಜೊತೆಗೆ ಉಮಾಬಾಯಿಯವರೂ ಸಹ ಮುಂಬಯಿ ಮಹಾನಗರವನ್ನು ಸೇರಿಕೊಂಡರು. 1905ರಲ್ಲಿ 13ನೇ ವಯಸ್ಸಿನಲ್ಲಿ ಸಂಜೀವರಾವ್ ಕುಂದಾಪುರ್ ಅವರನ್ನು ಮದುವೆಯಾದರು.

ಆಕೆಯ ಮಾವ ಆನಂದರಾವ್ ಕುಂದಾಪುರ ಸುಧಾರಣಾವಾದಿ ಮತ್ತು ಮಹಿಳಾ ಸಬಲೀಕರಣದ ಕುರಿತಾಗಿ ಅವರಿಗೆ ಹೆಚ್ಚಿನ ಒಲವಿತ್ತು. ಅವರ ಪ್ರೋತ್ಸಾಹದ ಮೇರೆಗೆ ಉಮಾಬಾಯಿ ಮದುವೆಯ ನಂತರ ಶಿಕ್ಷಣವನ್ನು ಮುಂದುವರೆಸಿದರು. ಆನಂದರಾಯರ ಒತ್ತಾಸೆಯಂತೆ ಉಮಾಬಾಯಿ, ಪೂನಾದ ಅಣ್ಣಾಸಾಹೇಬ್ ಕಾರ್ವೆ ಶಾಲೆಯಲ್ಲಿ ಸೇರಿದರು. ಸುಮಾರು 25  ವರ್ಷ ವಯಸ್ಸಿನ ತನಕ, ಆನಂದರಾಯರು ಸೊಸೆ ಉಮಾಬಾಯಿಗೆ ವಿದ್ಯಾಭ್ಯಾಸದ ವಿಷಯದಲ್ಲಿ ಹೆಚ್ಚಿನ ಸಹಾಯ ಮಾಡಿದರೂ ತನ್ನ ದುರ್ಬಲ ಆರೋಗ್ಯದ ಕಾರಣದಿಂದಾಗಿ, ವಿದ್ಯಾಭ್ಯಾಸವನ್ನು ಮುಂದುವರಿಸಲಾಗಲಿಲ್ಲ. ಹೀಗಾಗಿಯೇ ಅವರ ಕಲಿಕೆ ಆರಂಭವಾಗುವಾಗ ಹೆಚ್ಚೇ ವಯಸ್ಸಾಗಿತ್ತು. ಆದರೆ ಮೆಟ್ರಿಕ್ಯುಲೇಷನ್ ವಿದ್ಯಾಭ್ಯಾಸವನ್ನು ಎರಡೇ ವರ್ಷದಲ್ಲಿ ಮುಗಿಸಿದರು.
ಅಂದಿನ ಕಾಲದಲ್ಲಿ ದಕ್ಷಿಣ ಕನ್ನಡದಲ್ಲಿ ಮೆಟ್ರಿಕ್ಯುಲೇಷನ್ ವಿದ್ಯಾಭ್ಯಾಸವನ್ನು ಪಡೆಯುವುದು ದೊಡ್ಡ ಸಾಧನೆಯೇ ಆಗಿತ್ತು. ಹೀಗಾಗಿ ಉಮಾಬಾಯಿಯವರನ್ನು ಮುಂಬೈನ ಸಾರಸ್ವತ ಮಹಿಳಾ ಸಮಾಜವು ಅವರನ್ನು ಕರೆದು ಗೌರವಿಸಿತು.  

1920 ರ ಆಗಸ್ಟ್ ಒಂದರಂದು ಸ್ವಾತಂತ್ರ್ಯ ಹೋರಾಟಗಾರ ಬಾಲಗಂಗಾಧರ ತಿಲಕರು ಮೃತರಾದರು. ತಿಲಕರ ಮೃತದೇಹದ ಭವ್ಯ ಮೆರವಣಿಗೆಯನ್ನು ನೋಡಿದ ಉಮಾಬಾಯಿಯವರಿಗೆ ಸ್ವಾತಂತ್ರ್ಯ ಹೋರಾಟದಲ್ಲಿ ಧುಮುಕಲು ಪ್ರೇರಣೆಯಾಯಿತು. ಆ ದಿನಗಳಲ್ಲಿ, ಸ್ವಾತಂತ್ರ್ಯ ಹೋರಾಟಕ್ಕೆ ಹೊಸದಾಗಿ ಕಾಲಿಡುವವರಿಗೆ ಕಾಂಗ್ರೆಸ್ ಸಂಘಟನೆ ಮತ್ತು ಅದರ ಸ್ವಯಂಪ್ರೇರಿತ ಸೇವೆ ಅನುಕರಣೀಯವಾಗಿತ್ತು. ಇವೆಲ್ಲವನ್ನು ಗಮನಿಸಿದ ಉಮಾಬಾಯಿಯವರು ಸ್ವಇಚ್ಛೆಯಿಂದ ಸ್ವಾತಂತ್ರ್ಯ ಹೋರಾಟಕ್ಕೆ ಪಾದಾರ್ಪಣೆ ಮಾಡಿದರು.

1920ರಲ್ಲಿ  ಮಹಾತ್ಮಾ ಗಾಂಧೀಜಿಯವರು  ಕರೆ ಕೊಟ್ಟ ಅಸಹಕಾರ ಚಳುವಳಿಯಲ್ಲಿ   ಉಮಾಬಾಯಿ ರವರು ತನ್ನ ಸಹೋದರ ರಘುರಾಮರಾವ್, ಪತಿ ಸಂಜೀವರಾವ್ ಜತೆ ಸೇರಿ  ಉತ್ಸಾಹದಿಂದ ಭಾಗವಹಿಸಿದರು. ಖಾದಿಯ ಬಗ್ಗೆ ಪ್ರಚಾರ ಮಾಡಲು ಆರಂಭಿಸಿದರು. ಮನೆಮನೆಗೆ ತೆರಳಿ ಮಹಿಳೆಯರನ್ನು ಸ್ವಾತಂತ್ರ್ಯ ಸಂಗ್ರಾಮದಲ್ಲಿ ಭಾಗವಹಿಸಲು ಪ್ರೇರೇಪಿಸಿದರು. ಚಳುವಳಿಗೆ ಸಂಬಂಧಿಸಿದಂತೆ ಹಲವಾರು ನಾಟಕಗಳನ್ನು ಬರೆದು ಪ್ರದರ್ಶಿಸಿದರು.
ಉಮಾಬಾಯಿಯವರಿಗೆ 28 ವರ್ಷವಾಗಿದ್ದಾಗ  ಅವರ ಪತಿ ಅಕಾಲಿಕವಾಗಿ ಮರಣಹೊಂದಿದರು. ಗಂಡನ ಮರಣಾನಂತರ, ಉಮಾಬಾಯಿಯವರು ಮಾವನೊಂದಿಗೆ ಹುಬ್ಬಳ್ಳಿಗೆ ಹಿಂತಿರುಗಿದರು. ಆನಂದರಾವ್ ಅವರು ಹುಬ್ಬಳ್ಳಿಯಲ್ಲಿ ಕರ್ನಾಟಕ ಪ್ರೆಸ್ ಅನ್ನು ಆರಂಭಿಸಿದರು.

ಡಾ. ನಾ. ಸು. ಹರ್ಡೀಕರ್ ಅವರು ಭಾರತೀಯ ಯುವಕರನ್ನು ಸ್ವಾತಂತ್ರ್ಯ ಸಂಗ್ರಾಮದಲ್ಲಿ ಭಾಗವಹಿಸುವಂತೆ ಪ್ರೇರೇಪಿಸುವ ಸಲುವಾಗಿ  1923 ರಲ್ಲಿ ಹಿಂದೂಸ್ತಾನಿ ಸೇವಾ ದಳವನ್ನು ಹುಬ್ಬಳ್ಳಿಯಲ್ಲಿ ಪ್ರಾರಂಭಿಸಿದರು. ಉಮಾಬಾಯಿಯವರು ಈ ಸಂಘದಲ್ಲಿ ಸೇರಿಕೊಂಡರಲ್ಲದೆ, ಮಹಿಳಾ ವಿಭಾಗದ ಮುಖ್ಯಸ್ತೆಯಾಗಿಯೂ ಆಯ್ಕೆಯಾದರು. ಉಮಾಬಾಯಿಯವರು, ನಾ. ಸು. ಹರ್ಡೀಕರ್ ಅವರು ಸ್ಥಾಪಿಸಿದ್ದ ತಿಲಕ್ ಕನ್ಯಾ ಶಾಲೆಯ ಉಸ್ತುವಾರಿವಹಿಸಿಕೊಂಡರು.

1924 ರಲ್ಲಿ ಕಾಂಗ್ರೆಸ್ ಸಂಘಟನೆಯ ರಾಷ್ಟ್ರೀಯ ಸಮ್ಮೇಳನವು ಬೆಳಗಾವಿಯಲ್ಲಿ ಜರುಗಿತು. ಅಲ್ಲಿಯವರೆಗೆ ಜರುಗಿದ ಅಖಿಲ ಭಾರತ ಸಮ್ಮೇಳನದಲ್ಲಿ ಮಹಾತ್ಮಾ ಗಾಂಧಿಯವರು ಅಧ್ಯಕ್ಷರಾಗಿ ಭಾಗವಹಿಸಿದ ಏಕೈಕ ಸಮ್ಮೇಳನವಾಗಿತ್ತು ಅದು. ಹರ್ಡೀಕರ್ ಅವರ ಜೊತೆ ಅತ್ಯುತ್ಸಾಹದಿಂದ ಉಮಾಬಾಯಿಯವರು ಈ ಸಮ್ಮೇಳನದಲ್ಲಿ ಭಾಗವಹಿಸಿದರು.   ರಾಜ್ಯದಾದ್ಯಂತ ತಿರುಗಿ ಸುಮಾರು 150ಕ್ಕಿಂತ ಹೆಚ್ಚು ಮಂದಿ ಮಹಿಳೆಯರನ್ನು, ಅದರಲ್ಲೂ ಮನೆಯಲ್ಲಿ ಕುಳಿತ ವಿಧವೆಯರನ್ನು ಸ್ವಾತಂತ್ರ್ಯ ಸಂಗ್ರಾಮದಲ್ಲಿ ಭಾಗವಹಿಸುವಂತೆ ಮಾಡಿದರು. ಆನಂದರಾಯರ ಮನೆ, ಮುದ್ರಣಾ ಘಟಕಗಳು ಸಂಘಟನೆಯ ಚಟುವಟಿಕೆಯ ಕೇಂದ್ರವಾಯಿತು. ಇದರಿಂದಾಗಿ ಬ್ರಿಟೀಶ್ ಸರಕಾರದ ಕೆಂಗಣ್ಣಿಗೆ ಗುರಿಯಾಗಬೇಕಾಯಿತು. ಉಮಾದೇವಿಯವರು ಹಲವಾರು ರಾಷ್ಟ್ರೀಯ ನಾಯಕರ ಸಂಪರ್ಕಕ್ಕೆ ಬರಲು ಈ ಸಮ್ಮೇಳನವು ಸಹಾಯಕವಾಯಿತು.  ಕರ್ನಾಟಕದಲ್ಲಿ ಕಾಂಗ್ರೆಸ್ ಸಂಘಟನೆಯ ಉಪಾಧ್ಯಕ್ಷೆಯಾಗಿ ಆಯ್ಕೆಯಾದರು.
ಭಾರತವು ಸ್ವಾತಂತ್ರ್ಯ ಪಡೆಯುವ ಹೊತ್ತಿಗೆ, ಉಮಾಬಾಯಿಯವರ ಹೆಸರು ಸಾಕಷ್ಟು ಪ್ರಸಿದ್ಧಿಯಾಗಿತ್ತು. ತಾನು ಮಾಡಿದ ಕೆಲಸಕಾರ್ಯಗಳಿಂದ, ಹಲವು ರಾಷ್ಟ್ರೀಯ ನಾಯಕರ ಗಮನ ಸೆಳೆದಿದ್ದರು ಇದನ್ನು ಬಳಸಿಕೊಂಡು ರಾಜಕೀಯ ಪ್ರವೇಶಿಸುವ ಹಲವು ಅವಕಾಶಗಳು ಅವರನ್ನು ಹುಡುಕಿಕೊಂಡು ಬಂದವು. ಸ್ವಾತಂತ್ರ್ಯ ಹೋರಾಟಗಾರರಿಗೆ ಕೊಡಮಾಡುವ, ರಾಷ್ಟ್ರೀಯ ಮತ್ತು ರಾಜ್ಯ ಸರ್ಕಾರದ ಪಿಂಚಣಿಯನ್ನು ಮತ್ತು ಮುಂಚೂಣಿಯ ಸ್ವಾತಂತ್ರ್ಯ ಹೋರಾಟಗಾರರಿಗೆ ನೀಡುವ ತಾಮ್ರಪತ್ರ ಪ್ರಶಸ್ತಿಯನ್ನೂ ಸ್ವೀಕರಿಸಲು ಒಪ್ಪಲಿಲ್ಲ. ಅವರು ಸಾಮಾನ್ಯ ಸ್ವಯಂಸೇವಕಿಯಾಗಿಯೇ ಇರಲು ಬಯಸಿದರು.

ಇಂತಹ ದಿಟ್ಟ ನಿಸ್ವಾರ್ಥ ಮಹಿಳಾ ಸ್ವಾತಂತ್ರ್ಯ   ಹೋರಾಟಗಾರರಾದ ಉಮಾಬಾಯಿ ರವರು 1992 ರಲ್ಲಿ ವಿಧಿವಶರಾದರು. ಈ ಆಗಸ್ಟ್ ಮಾಸದಲ್ಲಿ ಅವರ ತ್ಯಾಗ ನಿಸ್ವಾರ್ಥ ಸೇವೆಯನ್ನು ನೆನೆಯುವುದು ನಮ್ಮ ಆದ್ಯ ಕರ್ತವ್ಯ.

ಸಿಹಿಜೀವಿ ವೆಂಕಟೇಶ್ವರ
ತುಮಕೂರು
9900925529.

09 August 2023

ಆಗಸ್ಟ್ ಮಾಸದ ನೆನಪುಗಳು... ಭಾಗ _9 ಕ್ವಿಟ್ ಇಂಡಿಯಾ ಚಳುವಳಿ...

 

ಆಗಸ್ಟ್ ಮಾಸದ ನೆನಪುಗಳು...

ಭಾಗ _9
ಕ್ವಿಟ್ ಇಂಡಿಯಾ ಚಳುವಳಿ...

ನೂರಾರು ವರ್ಷಗಳ ಕಾಲದ
ಬಳಿಕ ಸ್ವಾತಂತ್ರ್ಯ ಹೋರಾಟಕ್ಕೆ
ದೊರಕಿತು ಸರಿಯಾದ ಹಳಿ|
ಅದುವೆ ಮಾಡು ಇಲ್ಲವೇ ಮಡಿ
ಎಂಬ ಘೋಷಣೆ ಮೊಳಗಿಸಿದ
ಕ್ವಿಟ್ ಇಂಡಿಯಾ ಚಳುವಳಿ||

ಅಹಿಂಸಾ ತತ್ವಗಳನ್ನು ಪಾಲಿಸುವ ಶಾಂತಿದೂತನಿಗೆ ಸಿಟ್ಟು ಬಂದಾಗ ಏನಾಗುತ್ತದೆ ಎಂಬುದಕ್ಕೆ ಉದಾಹರಣೆ  ಕ್ವಿಟ್ ಇಂಡಿಯಾ ಚಳುವಳಿ!  ಗುಲಾಮಗಿರಿಯ ಸಂಕೋಲೆ ಬಿಡಿಸಲು  ಮೊದಲಿನಿಂದಲೂ ಶಾಂತಿಯುತ ಪ್ರತಿಭಟನೆಗಳನ್ನು ಹಮ್ಮಿಕೊಂಡು ಬ್ರಿಟಿಷರ ಗಮನ ಸೆಳೆದ ಮಹಾತ್ಮ ಗಾಂಧೀಜಿಯವರು ಆಗಸ್ಟ್ 9 ರಂದು "ಮಾಡು ಇಲ್ಲವೇ ಮಡಿ" ಕರೋ ಯಾ ಮರೋ" ಎಂದು ಘರ್ಜಿಸಿ "ಬ್ರಿಟಿಷರೆ ಭಾರತ ಬಿಟ್ಟು ತೊಲಗಿ "ಎಂಬ  ನೇರ ಸಂದೇಶ ರವಾನಿಸಿದರು. ಆ ದಿನದ ನೆನಪಿಗಾಗಿ ಪ್ರತಿ ವರ್ಷ ಆಗಸ್ಟ್ 9 ರ ದಿನವನ್ನು "ಕ್ವಿಟ್ ಇಂಡಿಯಾ ದಿನ " ವಾಗಿ ದೇಶಾದ್ಯಂತ ಆಚರಿಸುತ್ತೇವೆ.

1600 ರಲ್ಲಿ ವ್ಯಾಪಾರಕ್ಕೆ ಬಂದ ಆಂಗ್ಲರು ಕ್ರಮೇಣ ನಮ್ಮನ್ನು ಆಳಲು ಶುರು ಮಾಡಿದಾಗ ಅಲ್ಲಲ್ಲಿ ನಡೆದ ಕೆಲ  ಪ್ರತಿರೋಧಗಳು 1857 ರಲ್ಲಿ ಪ್ರಥಮ ಸ್ವಾತಂತ್ರ್ಯ ಸಂಗ್ರಾಮದ ರೂಪ ಪಡೆದ ಬ್ರಿಟಿಷರನ್ನು ನಡುಗಿಸಿದ್ದು ಸುಳ್ಳಲ್ಲ.ಇದರಿಂದ ಪ್ರೇರಣೆಗೊಂಡ ಭಾರತೀಯರು ಅಸಹಕಾರ ಚಳವಳಿ, ಕಾನೂನು ಭಂಗ ಚಳುವಳಿಗಳನ್ನು ಸಂಘಟಿಸಿದರು. ಆದರೂ ಬಗ್ಗದ ಆಂಗ್ಲರಿಗೆ 1948 ರ ಜುಲೈ 14 ರಂದು
ಖಡಕ್ ಸಂದೇಶ ಹೊರಡಿಸಿದ ಕಾಂಗ್ರೆಸ್ ಪಕ್ಷವು ಬ್ರಿಟನ್ನಿನಿಂದ ಸಂಪೂರ್ಣ ಸ್ವಾತಂತ್ರ್ಯಕ್ಕಾಗಿ ಗೊತ್ತುವಳಿ ಹೊರಡಿಸಿತು. ಈ ಬೇಡಿಕೆ ನೆರವೇರದಿದ್ದರೆ, ಅಸಹಕಾರ ಚಳುವಳಿಯನ್ನು ನಡೆಸುವುದಾಗಿಯೂ ಘೋಷಿಸಲಾಯಿತು. ಆದರೆ ಪಕ್ಷದಲ್ಲಿಯೇ ಹಲವಾರು ನಾಯಕರು ಇದನ್ನು ವಿರೋಧಿಸಿದರು. ಚಕ್ರವರ್ತಿ ರಾಜಗೋಪಾಲಾಚಾರಿಯವರು ಈ ಕಾರಣದಿಂದ ಹಲವಾರು ಪ್ರಾದೇಶಿಕ ನಾಯಕರುಗಳೊಂದಿಗೆ ಕಾಂಗ್ರೆಸ್ ಪಕ್ಷವನ್ನು ತೊರೆದರು. ಜವಾಹರಲಾಲ್ ನೆಹರು ಮತ್ತು ಮೌಲಾನಾ ಆಜಾದ್ ಈ ಗೊತ್ತುವಳಿಯನ್ನು ಟೀಕಿಸದರೂ ಕೂಡ ತಮ್ಮ ಬೆಂಬಲ ಸೂಚಿಸಿ ಗಾಂಧೀಜಿಯ ನಾಯಕತ್ವದಲ್ಲಿ ವಿಶ್ವಾಸ ಸೂಚಿಸಿದರು. ಸರ್ದಾರ್ ಪಟೇಲ್ ಮತ್ತು ಡಾ. ರಾಜೇಂದ್ರ ಪ್ರಸಾದ್ ಈ ನಿಲುವಳಿಯನ್ನು ಬಹಿರಂಗವಾಗಿ ಬೆಂಬಲಿಸಿದರು.

ಆದರೆ ಬೇರೆ ಪಕ್ಷಗಳು ಇದಕ್ಕೆ ಸಹಮತ ಸೂಚಿಸಲಿಲ್ಲ. ಭಾರತೀಯ ಕಮ್ಯೂನಿಸ್ಟ್ ಪಕ್ಷ ಮತ್ತು ಹಿಂದೂ ಮಹಾಸಭಾ ಇದನ್ನು ವಿರೋಧಿಸಿದವು. ಮೊಹಮ್ಮದ್ ಅಲಿ ಜಿನ್ನಾರ ವಿರೋಧದ ಕಾರಣ ಮುಸ್ಲಿಮರು ಅಧಿಕ ಸಂಖ್ಯೆಯಲ್ಲಿ ಬ್ರಿಟಿಷರ ಪರವಾಗಿ ನಿಂತರು. ಇದರಿಂದ ಮುಸ್ಲಿಂ ಲೀಗ್ ಪಕ್ಷಕ್ಕೆ ಪ್ರಾಂತೀಯ ಸರ್ಕಾರಗಳಲ್ಲಿ ಅಧಿಕಾರ ದೊರೆಯಿತು.

  1942ರ  ಆಗಸ್ಟ್ 8   ರಂದು ಅಖಿಲ ಭಾರತ ಕಾಂಗ್ರೆಸ್ ಸಮಿತಿಯ ಮುಂಬಯಿ ಅಧಿವೇಶನದಲ್ಲಿ ಭಾರತ ಬಿಟ್ಟು ತೊಲಗಿ  ಎಂಬ ಗೊತ್ತುವಳಿಯನ್ನು ಹೊರಡಿಸಲಾಯಿತು. ಗಾಂಧೀಜಿಯವರು ಮುಂಬಯಿಯ ಗೊವಾಲಿಯ ಮೈದಾನದಲ್ಲಿ ಭಾರತೀಯರಿಗೆ ಅಹಿಂಸಾತ್ಮಕ ಅಸಹಾಕಾರ ಮಾಡುವಂತೆ ಕರೆ ಕೊಟ್ಟರು. ಜನರಿಗೆ ಬ್ರಿಟಿಷ್ ಸರ್ಕಾರವನ್ನು ಅನುಸರಿಸದೇ ಸ್ವತಂತ್ರರಾಗಿ ಬಾಳುವುದಕ್ಕೆ ಕರೆಕೊಟ್ಟರು. ಗಾಂಧೀಜಿಯವರ ಈ ಕರೆಗೆ ಭಾರತೀಯರು ಬೃಹತ್ ಸಂಖ್ಯೆಯಲ್ಲಿ ಓಗೊಟ್ಟರು. ಬೆಂಬಲ ಸೂಚಿಸಿದವರಲ್ಲಿ ಗಾಂಧೀಜಿಯವರ ಅಹಿಂಸಾತ್ಮಕ ತತ್ವದ ವಿರೋಧಿಗಳಾದ ಕ್ರಾಂತಿಕಾರಿಗಳೂ ಸೇರಿದ್ದರು.  

ಬ್ರಿಟಿಷರು ಮುನ್ನೆಚ್ಚರಿಕೆ ಕ್ರಮವಾಗಿ ಗಾಂಧಿಯವರನ್ನು ಬಂಧಿಸಿದರು. ಕಾಂಗ್ರೆಸ್ಸಿನ ಎಲ್ಲ ರಾಷ್ಟ್ರೀಯ ನಾಯಕರನ್ನೂ ಬಂಧಿಸಲಾಯಿತು. ನಂತರ ಕಾಂಗ್ರೆಸ್ ಪಕ್ಷವನ್ನು ನಿಷೇಧಿಸಲಾಯಿತು. ಇದರಿಂದ ಜನರಲ್ಲಿ ವಿರೋಧಿ ಭಾವನೆ ಇನ್ನೂ ಹೆಚ್ಚಾಯಿತು.  ಪಕ್ಷ ನಾಯಕತ್ವದ ಅಭಾವದ ಹೊರತಾಗಿಯೂ ಬೃಹತ್ ಪ್ರಮಾಣದಲ್ಲಿ ವಿರೋಧಿ ಪ್ರದರ್ಶನ ಮತ್ತು ಧರಣಿಗಳು ನಡೆದವು. ಆದರೆ ಎಲ್ಲ ವಿರೋಧಗಳು ಅಹಿಂಸಾತ್ಮಕವಾಗೇನೂ ಉಳಿಯಲಿಲ್ಲ. ಬಾಂಬುಗಳನ್ನು ಸ್ಫೋಟಿಸಲಾಯಿತು, ಸರ್ಕಾರೀ ಕಟ್ಟಡಗಳನ್ನು ಸುಡಲಾಯಿತು, ವಿದ್ಯುತ್ತನ್ನು ನಿಲ್ಲಿಸಲಾಯಿತು, ಮತ್ತು ಸಾರಿಗೆ ಮತ್ತು ಸಂಪರ್ಕಗಳನ್ನು ಸ್ಥಗಿತಗೊಳಿಸಲಾಯಿತು.

ಆದರೆ ಬ್ರಿಟಿಷರು ತ್ವರಿತವಾಗಿ ಪ್ರದರ್ಶನಕಾರರನ್ನು ಬಂಧಿಸಿದರು. ಒಂದು ಲಕ್ಷಕ್ಕಿಂತಲೂ ಹೆಚ್ಚು ಜನರನ್ನು ಬಂಧಿಸಲಾಯಿತು, ಬೃಹತ್ ಪ್ರಮಾಣದಲ್ಲಿ ದಂಡಗಳನ್ನು ವಿಧಿಸಲಾಯಿತು, ಬಾಂಬುಗಳನ್ನು ವಿರೋಧಿಗಳ ಮೇಲೆ ಬಳಸಲಾಯಿತು, ಮತ್ತು ಪ್ರದರ್ಶನಾಕಾರರನ್ನು ಸಾರ್ವಜನಿಕವಾಗಿ ದಂಡಿಸಲಾಯಿತು. ಬಹಳಷ್ಟು ರಾಷ್ಟ್ರೀಯ ನಾಯಕರು ಭೂಗತರಾಗಿ ರೇಡಿಯೋ ಸ್ಟೇಷನ್ ಗಳಿಂದ ಜನರಿಗೆ ಸಂದೇಶ ಕೊಡುತ್ತಿದ್ದರು. ಬ್ರಿಟಿಷರು ಇದರಿಂದ ಎಷ್ಟು ಕಂಗಾಲಾಗಿದ್ದರೆಂದರೆ, ಗಾಂಧೀಜಿ ಮತ್ತು ಇತರ ನಾಯಕರನ್ನು ಬಂಧಿಸಿ ದಕ್ಷಿಣ ಆಫ್ರಿಕಾ ಅಥವಾ ಯೆಮೆನ್ ದೇಶಕ್ಕೆ ಕೊಂಡೊಯ್ಯಲು ಯುದ್ಧನೌಕೆಯನ್ನು ಕರೆಸುವ ಏರ್ಪಾಡು ಮಾಡಲಾಯಿತು. ಆದರೆ ಇದರಿಂದ ಸಂಘರ್ಷಣೆ ಇನ್ನೂ ತೀವ್ರವಾಗುವುದೆಂಬ ಭಯದಿಂದ ಹೀಗೆ ಮಾಡದಿರಲು ನಿರ್ಧಾರ ಮಾಡಲಾಯಿತು. 

ಕಾಂಗ್ರೆಸ್ ಪಕ್ಷದ ನಾಯಕರು ಇಡೀ ಪ್ರಪಂಚದಿಂದ ಮೂರು ವರ್ಷಗಳ ಕಾಲ ಸಂಪರ್ಕ ಕಳೆದುಕೊಂಡರು. ಗಾಂಧೀಜಿಯವರ ಪತ್ನಿ ಕಸ್ತೂರ್ ಬಾ ಗಾಂಧಿ ಮತ್ತು ಕಾರ್ಯದರ್ಶಿ ಮಹಾದೇವ ದೇಸಾಯಿ ಮರಣದ ನಂತರ ಗಾಂಧಿಯವರ ಆರೋಗ್ಯ ಹದಗೆಟ್ಟಿತು. ಇದರ ಹೊರತಾಗಿಯೂ, ಮಹಾತ್ಮಾ ಗಾಂಧಿಯವರು 21 ದಿನಗಳ ಉಪವಾಸವನ್ನು ಕೈಗೊಂಡು ಚಳುವಳಿಯನ್ನು ಮುಂದುವರೆಸಿದರು ಅವರ ಆರೋಗ್ಯ ಇನ್ನೂ ಹದಗೆಟ್ಟ ಕಾರಣ ಬ್ರಿಟಿಷರು ಗಾಂಧಿಯವರನ್ನು ಬಿಡುಗಡೆಗೊಳಿಸಿದರೂ ಕೂಡ, ಅವರು ಕಾಂಗ್ರೆಸ್ ನಾಯಕರ ಬಿಡುಗಡೆಗೆ ಒತ್ತಾಯಿಸಿ ಧರಣಿಯನ್ನು ಮುಂದುವರೆಸಿದರು.

ಕೆಲವು ಚರಿತ್ರೆಕಾರರ ಪ್ರಕಾರ ಈ ಚಳುವಳಿಗೆ ಸೋಲುಂಟಾಯಿತು. ಕಾಂಗ್ರೆಸ್ ಪಕ್ಷವೂ ಕೂಡ ಆಗ ಇದೇ ನಿಲುವನ್ನು ಹೊಂದಿತ್ತು. ಸರ್ಕಾರದ ಕಾರ್ಯವನ್ನು ನಿಲ್ಲಿಸುವ ಇರಾದೆಯಲ್ಲಿ ಸೋಲುಂಟಾದರೂ, ಸರ್ಕಾರಕ್ಕೆ ಇದರಿಂದ ಸಾಕಷ್ಟು ಮುಜುಗರ ಮತ್ತು ಆತಂಕ ಉಂಟಾದವು. ಶೀಘ್ರವಾಗಿ ಸ್ವಾತಂತ್ರ್ಯ ಪಡೆಯುವುದರಲ್ಲಿ ಇದು ವಿಫಲವಾಯಿತು. ಆರಂಭದ ಐದು ತಿಂಗಳಲ್ಲಿಯೇ ಬಹುತೇಕವಾಗಿ ಸ್ತಬ್ಧವಾಯಿತು. ಇದಕ್ಕಿದ್ದ ಒಂದೇ ಕಾರಣವೆಂದರೆ ಸರ್ಕಾರದ ಪರವಾಗಿ ಸೇನೆಗಿದ್ದ ಸ್ವಾಮಿತ್ವ. ಬ್ರಿಟಿಷ್ ಪ್ರಧಾನಮಂತ್ರಿ ಕ್ಲೆಮೆಂಟ್ ಅಟ್ಲೀ ಪ್ರಕಾರ ಈ ಚಳುವಳಿಯ ಕಾಣಿಕೆ ಅತೀ ಕಡಿಮೆಯದ್ದಾಗಿತ್ತು. ಆದರೆ ಭಾರತೀಯ ವಾಯುಪಡೆಯ ಅತೃಪ್ತಿಯನ್ನು ಮುಖ್ಯವಾಗಿ ಉದಾಹರಿಸುತ್ತಾರೆ.

ರಾಷ್ಟ್ರೀಯ ಮಟ್ಟದಲ್ಲಿ ಚಳುವಳಿಗೆ ಯಶಸ್ಸು   ಸಿಗದಿದ್ದರೂ ಸತಾರಾ, ತಲಚೇರ್, ಮತ್ತು ಮಿಡ್ನಾಪುರಗಳಲ್ಲಿ ಬಹು ಯಶಸ್ವಿಯಾಯಿತು. ಮಿಡ್ನಾಪುರದಲ್ಲಿ ಜನರು ಪರ್ಯಾಯ ಸರ್ಕಾರವನ್ನೂ ಸ್ಥಾಪಿಸಿದರು. ನಂತರ ಗಾಂಧೀಜಿಯ ಕರೆಗೆ ಓಗೊಟ್ಟು ಇದನ್ನು ಬಿಟ್ಟುಕೊಟ್ಟರು.

ಕಲ್ಕತ್ತಾ ಉಚ್ಚ ನ್ಯಾಯಾಲಯದ ಮಾಜಿ ಮುಖ್ಯ ನ್ಯಾಯಾಧೀಶರಾದ ಪಿ.ವಿ. ಚಕ್ರಬರ್ತಿಯವರ ಒಂದು ಲೇಖನದ ಪ್ರಕಾರ, "ನಾನು ಪಶ್ಚಿಮ ಬಂಗಾಳದ ರಾಜ್ಯಪಾಲನಾಗಿ 1956ರಲ್ಲಿ ನಿಯುಕ್ತನಾಗಿದ್ದಾಗ ಕ್ಲೆಮೆಂಟ್ ಅಟ್ಲೀಯವರನ್ನು ಬ್ರಿಟಿಷರು ಭಾರತವನ್ನು ಬಿಟ್ಟು ಹೋಗಲು ಪ್ರಮುಖ ಕಾರಣವೇನೆಂದು ಕೇಳಿದಾಗ ದೊರೆತ ಉತ್ತರ: 'ಭಾರತ ಬಿಟ್ಟು ತೊಲಗಿ ಚಳುವಳಿ' ಎಂಬ ಉತ್ತರ ಬಂದಿದ್ದು ಈ ಚಳುವಳಿಯ ಯಶಸ್ಸು ತೋರಿಸುತ್ತದೆ"

ಭಾರತದ ಸ್ವಾತಂತ್ರ್ಯದ ನಿಜವಾದ ಕಾರಣ ಭಾರತೀಯರ ವಿರೋಧವೇ ಅಥವಾ ಸೈನಿಕರ ಬಂಡಾಯವೇ ಎಂಬುದು ವಿವಾದಾತ್ಮಕವಾಗಿದ್ದರೂ ನಿಸ್ಸಂಶಯವಾಗಿ ಹೇಳಬಹುದಾದ ಸಂಗತಿಯೆಂದರೆ ಲಕ್ಷಾಂತರ ಜನರು ಪ್ರೇರಿತರಾಗಿ ಸ್ವಾತಂತ್ರಕ್ಕಾಗಿ  ಹೋರಾಡಿದರೆಂಬುದು. ಬ್ರಿಟಿಷರ ಪ್ರತಿಯೊಂದು ನಡೆಯೂ ಇದನ್ನು ಮತ್ತಷ್ಟು ಪ್ರೇರೇಪಿಸಿತು.  ಸುಭಾಷ್ ಚಂದ್ರ ಬೋಸ್ ರ ಭಾರತೀಯ ರಾಷ್ಟ್ರೀಯ ಸೇನೆ ಮತ್ತು ಮುಂಬಯಿ ದಂಗೆ ಬ್ರಿಟಿಷ್ ಆಡಳಿತದ ಬುಡವನ್ನು ಅಲುಗಾಡಿಸಿದವು.  1946ರ ವೇಳೆಗೆ ಎಲ್ಲ ಬಂಧಿತ ರಾಜಕೀಯ ಅಪರಾಧಿಗಳನ್ನು ಬಿಡುಗಡೆ ಮಾಡಲಾಯಿತು. ಕಾಂಗ್ರೆಸ್ ಪಕ್ಷಕ್ಕೆ ಅಧಿಕಾರ ಬಿಟ್ಟಕೊಡುವ   ಬಗ್ಗೆ ಸಾರ್ವಜನಿಕವಾಗಿ ಮಾತುಕತೆಗಳು ನಡೆದವು. 1947 ರ ಆಗಸ್ಟ್‌ 15 ರಂದು ಭಾರತವನ್ನು ಸ್ವತಂತ್ರ ದೇಶವೆಂದು ಘೋಷಿಸಲಾಯಿತು.

ಒಂದು ಹೊಸ ಯುವ ಪೀಳಿಗೆಯು ಗಾಂಧೀಜಿಯವರ ಕರೆಗೆ ಓಗೊಟ್ಟಿತ್ತು. ಈ ಚಳುವಳಿಯಲ್ಲಿ ಹೋರಾಡಿದ ಭಾರತೀಯರು ಸ್ವತಂತ್ರ ಭಾರತದ ಪ್ರಥಮ ಪೀಳಿಗೆಯವರಾಗಿ ವಸಾಹತುಶಾಹಿ ಕಾಲದ ನಂತರ ಪ್ರಪಂಚದ ಅತಿ ಗಟ್ಟಿಯಾದ ಪ್ರಜಾಪ್ರಭುತ್ವವನ್ನು ಸ್ಥಾಪಿಸಿದರು. ಇದನ್ನು ಮಾನವಕುಲದ ದೂರದರ್ಶಿತ್ವದ ಮಹತ್ತರ ಉದಾಹರಣೆಯೆಂದು ಹೇಳಬಹುದು.

ಸಿಹಿಜೀವಿ ವೆಂಕಟೇಶ್ವರ
ತುಮಕೂರು
9900925529.


ಸಿಹಿಜೀವಿಯ ಹಾಯ್ಕುಗಳು...

 


ಸಿಹಿಜೀವಿಯ ಹಾಯ್ಕುಗಳು..



ಅರ್ಥ ಮಾಡಿಕೋ 

ಕೌತುಕವು ಈ ಜಗ 

ಸರ್ವವೂ ಭಿನ್ನ .


ಅಜ್ಞಾನ ತೊರೆ 

ಕೌಶಲಗಳ  ಪಡೆ 

ಜೀವನ ಧನ್ಯ 


ಸಿಹಿಜೀವಿ ವೆಂಕಟೇಶ್ವರ

ತುಮಕೂರು

08 August 2023

ಆಗಸ್ಟ್ ಮಾಸದ ನೆನಪುಗಳು... ಭಾಗ _8 ಲಾಲಾ ಲಜಪತ ರಾಯ್...


 

ಆಗಸ್ಟ್ ಮಾಸದ ನೆನಪುಗಳು...

ಭಾಗ _8

ಲಾಲಾ ಲಜಪತ ರಾಯ್...

ಲಾಲ್ ಬಾಲ್ ಪಾಲ್ ತ್ರಿಮೂರ್ತಿಗಳು ಆಂಗ್ಲರ ನಿದ್ದೆಗೆಡಿಸಿದ ಮಹಾನ್ ಸ್ವಾತಂತ್ರ್ಯ ಹೋರಾಟಗಾರರು. ಈ ತ್ರಿಮೂರ್ತಿಗಳಲ್ಲಿ ಒಬ್ಬರು ಬ್ರಿಟಿಷರ ದುರಾಡಳಿತ ವಿರುದ್ಧವಾಗಿ ಸ್ವಾತಂತ್ರ್ಯ ಪಡೆಯುವ ಅದಮ್ಯ ಬಯಕೆಯೊಂದಿಗೆ  ಹೋರಾಟ ಮಾಡುವಾಗ ಬ್ರಿಟಿಷ್ ಅಧಿಕಾರಿಯ   ಲಾಟಿ ಏಟಿನಿಂದ  ಅಸುನೀಗಿದರು. ಆ  ಹಾನ್ ಚೇತನವೇ  ಲಾಲಾ ಲಜಪತ ರಾಯ್. 

ಲಾಲಾ ಲಜಪತ ರಾಯ್ ಅವರು ಪಂಜಾಬಿನ ಮೋಗಾ ಜಿಲ್ಲೆಗೆ ಸೇರಿದ ಧುಡಿಕೆ ಎಂಬ ಗ್ರಾಮದಲ್ಲಿ ಜನವರಿ 28, 1865ರಲ್ಲಿ  ಜನಿಸಿದರು. ‘ಲಾಲಾ’ ಎಂಬುದು ಭಾರತೀಯ ಸಂಸ್ಕೃತಿಯಲ್ಲಿ ಹಿರಿಯ ಮನೆತನದಿಂದ ಬಂದವರಿಗೆ ಸಲ್ಲುತ್ತಿದ್ದ ಗೌರವಯುತ ಸಂಬೋಧನೆ. ರಾಯ್ ಅವರ ಪ್ರಾರಂಭಿಕ ಶಿಕ್ಷಣ ಪ್ರಸಕ್ತದಲ್ಲಿ ಹರ್ಯಾಣದಲ್ಲಿರುವ ರೆವಾರಿ ಎಂಬ ಊರಿನಲ್ಲಾಯಿತು. ಲಜಪತ ರಾಯ್ ಅವರ ತಂದೆ ರಾಧಾ ಕೃಷ್ಣನ್ ಅವರು ಅಂದಿನ ದಿನಗಳಲ್ಲಿ ಉರ್ದು ಶಿಕ್ಷಕರಾಗಿದ್ದರು.
ಹಿಂದೂ ಧರ್ಮ ಮತ್ತು ಮನುಸ್ಮೃತಿಗಳಿಂದ ತೀವ್ರ ಪ್ರಭಾವಿತರಾದ ಲಾಲಾ ಲಜಪತ ರಾಯ್ ಅವರು ರಾಜಕೀಯ ಹೋರಾಟ ಮತ್ತು ಬರವಣಿಗೆಗಳ ಕಡೆಗೆ ಅಪಾರ ಒಲವು ಬೆಳೆಸಿಕೊಂಡರು. ಹಿಂದೂ ಮಹಾಸಭಾದ ಕಾರ್ಯಕರ್ತರಾಗಿದ್ದ ಅವರು, ಹಿಂದೂ ಧರ್ಮದಲ್ಲಿ ಶಾಂತಿಯುತ ಹೋರಾಟಕ್ಕೆ ಮಹತ್ವವಿದೆ ಎಂದು ನಂಬಿದ್ದರು. ಇದೇ ಆಧಾರದ ಮೇಲೆ ಅವರು ಭಾರತದ ಸ್ವಾತಂತ್ರ್ಯಕ್ಕಾಗಿ ಅನೇಕ ಶಾಂತಿಯುತ ಚಳುವಳಿಗಳನ್ನು ಆಯೋಜಿಸತೊಡಗಿದರು.

ಆರ್ಯ ಸಮಾಜದಲ್ಲಿ ನಿಷ್ಠೆ ಹೊಂದಿದ್ದ ಅವರು ತಾವು ವಿದ್ಯಾರ್ಥಿಯಾಗಿದ್ದಾಗ  ‘ಆರ್ಯ ಗೆಜೆಟ್’ನ ಸಂಪಾದಕರಾಗಿದ್ದರು. ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಸೇರಿದ ಮೇಲೆ ಅವರು ಪಂಜಾಬಿನಲ್ಲಿ ಸ್ವಾತಂತ್ರ್ಯ ಹೋರಾಟವನ್ನು ಪ್ರಾರಂಭಿಸಿದರು. ಇದರಿಂದಾಗಿ ಬ್ರಿಟಿಷ್ ಆಡಳಿತ ಅವರನ್ನು ಬರ್ಮಾದ ಮಂಡಾಲೈ ಎಂಬಲ್ಲಿಗೆ ಗಡೀಪಾರು ಮಾಡಿತ್ತು. ಕೆಲವು ತಿಂಗಳ ನಂತರದಲ್ಲಿ ಲಾರ್ಡ್ ಮಿಂಟೋ ಅವರಿಗೆ ಲಾಲಾ ಲಜಪತ ರಾಯ್ ಅವರ ವಿರುದ್ಧ ಇರುವ ಆರೋಪಗಳಿಗೆ ಸರಿಯಾದ ಸಾಕ್ಷಾಧಾರಗಳಿಲ್ಲ ಎನಿಸಿ ಭಾರತಕ್ಕೆ ಹಿಂದಿರುಗಲು ಪರವಾನಗಿ ನೀಡಿದರು. 

1907ರಲ್ಲಿ ಅಮೆರಿಕಕ್ಕೆ ತೆರಳಿದ್ದ ಲಾಲಾ ಲಜಪತ್ ರಾಯ್ ಅವರು 1919ರಲ್ಲಿ ಭಾರತಕ್ಕೆ ಹಿಂದಿರುಗಿದರು. ಅವರು ರಚಿಸಿರುವ ಪ್ರವಾಸಿ ಕಥನದಲ್ಲಿ ಪ್ರಸಿದ್ಧ ಬರಹಗಾರರಾದ ಡಬ್ಲ್ಯೂ. ಇ. ಬಿ. ಡುಬೋಯಿಸ್ ಮತ್ತು ಫ್ರೆಡ್ರಿಕ್ ಡೌಗ್ಲಾಸ್ ಮುಂತಾದವರ ಅನೇಕ ಉಕ್ತಿಗಳನ್ನು ಯಥೇಚ್ಛವಾಗಿ ಉಲ್ಲೇಖಿಸಿದ್ದಾರೆ. ಲಜಪತ ರಾಯ್ ಅವರು ಲಾಹೋರಿನಲ್ಲಿ ಬ್ರಿಟಿಷ್ ವಿದ್ಯಾಸಂಸ್ಥೆಗಳಿಗೆ ಪರ್ಯಾಯವಾಗಿ ನ್ಯಾಷನಲ್ ಕಾಲೇಜು  ಪ್ರಾರಂಭಿಸಿದಾಗ ಅದರಲ್ಲಿ ಭಗತ್ ಸಿಂಗ್ ಅವರೂ ವಿದಾರ್ಥಿಯಾಗಿದ್ದರು.  1920ರಲ್ಲಿ  ಕಲ್ಕತ್ತಾದಲ್ಲಿ ನಡೆದ ವಿಶೇಷ ಕಾಂಗ್ರೆಸ್ ಅಧಿವೇಶನದಲ್ಲಿ ಲಾಲಾ ಲಜಪತ ರಾಯ್ ಆ ಸಮಾವೇಶದ ಅಧ್ಯಕ್ಷತೆಯನ್ನು ವಹಿಸಿದ್ದರು. ಈ ಅಧಿವೇಶನದಲ್ಲಿ ಕೈಗೊಂಡ ನಿರ್ಣಯದ ಅನುಸಾರವಾಗಿ ಅಸಹಕಾರ ಚಳುವಳಿಯನ್ನು ಕೈಗೊಂಡಾಗ 1921ರಿಂದ 1923ರ ಅವಧಿಯವರೆಗೆ ಅವರು ಕಾರಾಗೃಹ ವಾಸವನ್ನು ಅನುಭವಿಸಿದರು. ಬಿಡುಗಡೆಯಾದ ಸಂದರ್ಭದಲ್ಲಿ ಅವರು ಲೆಜಿಸ್ಲೇಟಿವ್ ಅಸೆಂಬ್ಲಿಗೆ ಚುನಾಯಿತರಾದರು. ಪಂಜಾಬಿನ ವಿಭಜನೆಗೆ ಅವರು ಮಾತುಕತೆಗಳನ್ನು ಆಯೋಜಿಸಿದರು. ಈ ಕುರಿತು ಅವರು 1924ರ ವರ್ಷದಲ್ಲಿ ‘ದಿ ಟ್ರಿಬ್ಯೂನ್ ಪತ್ರಿಕೆಯಲ್ಲಿ ಬರೆದ ಲೇಖನದಲ್ಲಿ ಸಿಖ್ ಮತ್ತು ಮುಸ್ಲಿಂ ಜನಸಂಖ್ಯೆಯನ್ನು ಆಧರಿಸಿ ಪಂಜಾಬನ್ನು ಪೂರ್ವ ಮತ್ತು ಪಶ್ಚಿಮ ಪಂಜಾಬುಗಳಾಗಿ ವಿಂಗಡಿಸಬೇಕೆಂಬ ವಾದವನ್ನು ಮಂಡಿಸಿದರು. ಅದೇ ರೀತಿಯಲ್ಲಿ ಅವರು ವಾಯವ್ಯ ಸೀಮಾ ಪ್ರದೇಶ, ಸಿಂದ್ ಮತ್ತು ಪೂರ್ವ ಬಂಗಾಳಗಳಲ್ಲಿ ಮುಸ್ಲಿಂ ರಾಜ್ಯಗಳನ್ನು ಪ್ರತ್ಯೇಕಿಸಬೇಕೆಂದು ಪ್ರತಿಪಾದಿಸಿದ್ದರು.

1928ರಲ್ಲಿ  ಭಾರತದಲ್ಲಿನ ಪರಿಸ್ಥಿತಿಯನ್ನು ವರದಿ ಮಾಡಲು ನಿಯೋಜನೆಗೊಂಡಿದ್ದ  ಸರ್ ಜಾನ್ ಸೈಮನ್ ನೇತೃತ್ವದ ಆಯೋಗದಲ್ಲಿ ಒಬ್ಬರೇ ಒಬ್ಬರೂ ಭಾರತೀಯ ಪ್ರತಿನಿಧಿಗಳು ಇರಲಿಲ್ಲ ಎಂಬ ನಿಟ್ಟಿನಲ್ಲಿ ಭಾರತೀಯ ಸಂಘಟನೆಗಳು ಅದನ್ನು ಬಹಿಷ್ಕರಿಸಲು ತೀರ್ಮಾನ ಕೈಗೊಂಡು ದೇಶದಾದ್ಯಂತ ಚಳುವಳಿಯನ್ನು ನಡೆಸಿದವು. ಅಕ್ಟೋಬರ್ 30, 1928ರಂದು ಸೈಮನ್ ಆಯೋಗವು ಲಾಹೋರಿಗೆ ಭೇಟಿ ಕೊಟ್ಟ ಸಂದರ್ಭದಲ್ಲಿ ಲಾಲಾ ಲಜಪತರಾಯ್ ಅವರು ಶಾಂತಿಯುತ ಮೆರವಣಿಗೆಯ ನೇತೃತ್ವ ವಹಿಸಿದರು. ಆ ಸಂದರ್ಭದಲ್ಲಿ ಪೋಲಿಸ್ ಸೂಪರಿಂಟೆಂಡೆಂಟ್ ಜೇಮ್ಸ್ ಎ. ಸ್ಕಾಟ್ ಎಂಬ ದುರಹಂಕಾರಿಯು ಮೆರವಣಿಗೆಯಲ್ಲಿ ಹೋಗುತ್ತಿದ್ದವರ ಮೇಲೆ ಲಾಠಿ ಚಾರ್ಜ್ ಮಾಡುವ ಆದೇಶವಿತ್ತದ್ದೇ ಅಲ್ಲದೆ ಲಾಲಾ ಲಜಪತ ರಾಯ್ ಅವರ ಮೇಲೆ ಸ್ವಯಂ ಆಕ್ರಮಣ ನಡೆಸಿ ಅವರು ತೀವ್ರವಾಗಿ ಗಾಯಗೊಳ್ಳುವುದಕ್ಕೆ ಕಾರಣನಾದನು. ಈ ತೀವ್ರ ಪೆಟ್ಟುಗಳಿಂದ ಹೊರಬರಲಾಗದ ಲಾಲಾ ಲಜಪತ ರಾಯ್ ಅವರು ನವೆಂಬರ್ 17, 1928ರಂದು ಹೃದಯಾಘಾತದಿಂದ ನಿಧನರಾದರು. ಸ್ಕಾಟನ ಈ ದುಷ್ಕೃತ್ಯ ಮಹಾನ್ ದೇಶಭಕ್ತ, ವಿದ್ವಾಂಸ, ಅಹಿಂಸಾ ಪ್ರವೃತ್ತಿಯ ಶಾಂತಿದೂತರೆನಿಸಿದ್ದ ಲಾಲಾ ಲಜಪತ ರಾಯ್ ಅವರ ಮರಣಕ್ಕೆ ಕಾರಣವಾಯಿತು. ಇದರಿಂದ ತೀವ್ರವಾಗಿ ನೊಂದ ಭಗತ್ ಸಿಂಗ್, ರಾಜ ಗುರು, ಸುಖದೇವ್ ಥಾಪರ್, ಚಂದ್ರಶೇಖರ್ ಆಜಾದ್ ಅಂತಹ ವೀರರು ತೀವ್ರ ಹೋರಾಟಕ್ಕಿಳಿದು ರಾಷ್ಟ್ರ ಸ್ವಾತಂತ್ರ್ಯ ಪಡೆಯಲು ಕಾರಣವಾಯಿತು.

ಸಿಹಿಜೀವಿ ವೆಂಕಟೇಶ್ವರ
ತುಮಕೂರು
9900925529

06 August 2023

ಆಗಸ್ಟ್ ಮಾಸದ ನೆನಪುಗಳು... ಭಾಗ _7 ಮದನ ಮೋಹನ ಮಾಳವೀಯ


 

ಆಗಸ್ಟ್ ಮಾಸದ ನೆನಪುಗಳು...

ಭಾಗ _7

ಮದನ ಮೋಹನ ಮಾಳವೀಯ

ಸ್ವಾತಂತ್ರ್ಯ ಹೋರಾಟಗಾರ, ಶಿಕ್ಷಣತಜ್ಞ, ಬಹುಮುಖ ವ್ಯಕ್ತಿತ್ವದ ಪ್ರತಿಭೆ , ಸ್ವಾತಂತ್ರ್ಯ ಹೋರಾಟದ ವೇಳೆ ಸೌಮ್ಯವಾದಿಗಳು ಮತ್ತು ತೀವ್ರವಾದಿಗಳ ನಡುವಿನ ಸೇತುವೆಯಂತೆ ಕಾರ್ಯನಿರ್ವಹಿಸಿದವರು,ಬನಾರಸ್ ಹಿಂದೂ ವಿಶ್ವವಿದ್ಯಾಲಯದ ಸ್ಥಾಪಿಸಿದವರೇ ಮದನ ಮೋಹನ ಮಾಳವೀಯ. 
ಮಾಳವೀಯರು 1861 ನೇ ಡಿಸೆಂಬರ್ 25 ಅಲಹಾಬಾದ್ ನಲ್ಲಿ  'ಶ್ರೀ ಗೌಡ್ ಬ್ರಾಹ್ಮಣ ಕುಟುಂಬ'ದಲ್ಲಿ ಜನಿಸಿದರು. ಅವರ ತಂದೆ 'ಪಂಡಿತ್ ಬ್ರಿಜ್ ನಾಥ್', ಮತ್ತು ತಾಯಿ 'ಮೂನಾ ದೇವಿ'. ಮೂಲತಃ ಅವರು ಮಧ್ಯಪ್ರದೇಶದ 'ಮಾಲ್ವಾ'ದವರು. ಅವರ ಪೂರ್ವಜರು ಸಂಸ್ಕೃತ ಪಾಂಡಿತ್ಯದಲ್ಲಿ ಹೆಸರುವಾಸಿಯಾಗಿದ್ದರು.

ಮಾಳವೀಯ  ರವರು ಸಾಂಪ್ರದಾಯಿಕವಾಗಿ ಎರಡು ಸಂಸ್ಕೃತ ಪಾಠಶಾಲೆಯಲ್ಲಿ ವ್ಯಾಸಂಗ ಮಾಡಿದರು. ನಂತರ ಒಂದು ಇಂಗ್ಲೀಷ್ ಶಾಲೆಯಲ್ಲಿ ಶಿಕ್ಷಣ ಮುಂದುವರಿಸಿದರು.   ತಮ್ಮ ಪ್ರಾಥಮಿಕ ಶಿಕ್ಷಣವನ್ನು 'ಹರದೇವ ಧರ್ಮ ಜ್ಞಾನೋಪದೇಶ ಪಾಠಶಾಲೆ'ಯಲ್ಲಿ ಪ್ರಾಥಮಿಕ ವಿದ್ಯಾಭ್ಯಾಸ ಮುಗಿಸಿದರು. ನಂತರ  'ವಿದ್ಯಾವರ್ಧಿನಿ ಸಭಾ ಶಾಲೆ'ಯಲ್ಲಿ ಓದು ಮುಂದುವರೆಸಿದರು. ಅನಂತರ ಅಲಹಾಬಾದ್ ಜಿಲ್ಲಾ ಶಾಲೆಗೆ ಸೇರಿದರು. ಅಲ್ಲಿದ್ದಾಗ ಮಕರಂದ್ ಕಾವ್ಯನಾಮದ ಅಡಿಯಲ್ಲಿ ಕವನಗಳನ್ನು ಬರೆಯಲು ಪ್ರಾರಂಭಿಸಿದರು.

ಅವು ನಂತರದಲ್ಲಿ ಪತ್ರಿಕೆಗಳಲ್ಲಿ ಮತ್ತು ನಿಯತಕಾಲಿಕೆಗಳಲ್ಲಿ ಪ್ರಕಟಗೊಂಡವು.  ಅಲಹಾಬಾದ್ ವಿಶ್ವವಿದ್ಯಾಲಯದ 'ಮುಯಿರ್ ಸೆಂಟ್ರಲ್ ಕಾಲೇಜ್‍'ನಲ್ಲಿ 1879 ರಲ್ಲಿ ಮೆಟ್ರಿಕ್ಯುಲೇಶನ್ ಮುಗಿಸಿದರು. ಆಗ 'ಹ್ಯಾರಿಸನ್ ಕಾಲೇಜ್`ನ ಪ್ರಾಂಶುಪಾಲರು ಅವರ ಕುಟುಂಬದ ಆರ್ಥಿಕ ಕಷ್ಟಗಳನ್ನು ಎದುರಿಸುತ್ತಿರುವುದನ್ನು ನೋಡಿ, ಮಾಳವೀಯರಿಗೆ ಒಂದು 'ಮಾಸಿಕ ವಿದ್ಯಾರ್ಥಿವೇತನ' ಒದಗಿಸಿದರು. ತಮ್ಮ 'ಬಿಎ ಪದವಿ'ಯನ್ನು ಕಲ್ಕತ್ತಾ ವಿಶ್ವವಿದ್ಯಾಲಯದಲ್ಲಿ ಪೂರ್ಣಗೊಳಿಸಿದರು. ಅವರಿಗೆ ಸಂಸ್ಕೃತ ಎಂ.ಎ. ಮಾಡುವ ಆಸೆ ಇತ್ತು. ಆದಾಗ್ಯೂ ತನ್ನ ಕುಟುಂಬ ಪರಿಸ್ಥಿತಿಗಳು ಮತ್ತು ತನ್ನ ತಂದೆ ಅವರ ಕುಟುಂಬ ನಿರ್ವಹಣೆಗೆ ಭಾಗವತ ಕಥಾ ನಿರೂಪಣೆಯ ವೃತ್ತಿ ಪಡೆಯಲು ಬಯಸಿದರು. 1884 ರಲ್ಲಿ  ಅಲಹಾಬಾದ್ನಲ್ಲಿ ಸರ್ಕಾರದ ಪ್ರೌಢಶಾಲೆಯಲ್ಲಿ  ಶಿಕ್ಷಕನಾಗಿ ತಮ್ಮ ವೃತ್ತಿಜೀವನವನ್ನು ಆರಂಭಿಸಿದರು.ಆದರೆ  ವಿದ್ಯಾಭ್ಯಾಸ ಮುಂದುವರಿಸುವ ದೃಷ್ಟಿಯಿಂದಾಗಿ ಅವರು ವೃತ್ತಿ ಯನ್ನು ತೊರೆದರು. ಬಳಿಕ ಕಾನೂನು ಕಲಿತ ಮಾಳವೀಯರು ಜಿಲ್ಲಾ ನ್ಯಾಯಾಲಯದಲ್ಲಿ ವಕೀಲಿ ವೃತ್ತಿಯನ್ನೂ ನಡೆಸಿದರು.

ಸ್ವಾತಂತ್ರ್ಯ ಹೋರಾಟಕ್ಕೆ ದುಮುಕಿದ ಮಾಳವೀಯ ರವರು 50 ವರ್ಷಗಳ ಕಾಲ ಭಾರತೀಯ ಕಾಂಗ್ರೆಸ್ಸಿನ ಸದಸ್ಯರಾಗಿ ಸ್ವಾತಂತ್ರ್ಯ ಹೋರಾಟಕ್ಕೆ ದಿಗ್ದರ್ಶಕರಾಗಿದ್ದವರು.  ಸ್ವಾತಂತ್ರ್ಯ ಹೋರಾಟಗಾರರಾದ ಗೋಪಾಲ ಕೃಷ್ಣ ಗೋಖಲೆ, ಮತ್ತು ಸಮಾಜ ಸುಧಾರಕರೂ ಆದ 'ಬಾಲಗಂಗಾಧರ ತಿಲಕ'ರ ಅನುಯಾಯಿಯಾಗಿದ್ದರು.
1930 ರಲ್ಲಿ ಮಹಾತ್ಮಾ ಗಾಂಧಿಯವರು ಕರೆ ನೀಡಿದ್ದ ಉಪ್ಪಿನ ಸತ್ಯಾಗ್ರಹ ಮತ್ತು ಕಾನೂನು ಭಂಗ ಚಳವಳಿಯಲ್ಲಿ ಮಾಳವೀಯರು ಸಕ್ರಿಯವಾಗಿ ಭಾಗಿಯಾಗಿದ್ದರು. ಪರಿಣಾಮ ಅವರನ್ನು ಬ್ರಿಟಿಷರು ಬಂಧಿಸಿ ಜೈಲಿಗಟ್ಟಿದರು. ಸ್ವಾತಂತ್ರ್ಯ ಹೋರಾಟಕ್ಕೆ ಮಾಳವೀಯರ ಕೊಡುಗೆಯನ್ನು ಗೋಖಲೆಯವರು ಒಂದೆಡೆ ಹೀಗೆ ನೆನೆಯುತ್ತಾರೆ-'ಮಾಳವೀಯರು ನಿಜವಾದ ತ್ಯಾಗ ಜೀವಿ. ಕೈತುಂಬ ಸಂಬಳ, ಐಷಾರಾಮದ ಜೀವನ ನಡೆಸಬಹುದಾಗಿದ್ದ ಅವರು ದೇಶದ ಕಷ್ಟನಿವಾರಣೆಗೆ ಜೀವನ ಮುಡುಪಿಟ್ಟವರು. ಆದರೆ ಹೋರಾಟದ ಜೀವನ ಅವರನ್ನು ಬಡತನಕ್ಕೆ ನೂಕಿತು."

ಮಾಳವೀಯರು ಪತ್ರಕರ್ತರೂ ಆಗಿದ್ದರು. 1909 ರಲ್ಲಿ ಅಲಹಾಬಾದ್ನಲ್ಲಿ ಇಂಗ್ಲಿಷ್ ಪತ್ರಿಕೆ 'ದಿ ಲೀಡರ್' ಆರಂಭಿಸಿದರು. ಸಮಾಜಪರ, ಸ್ವಾತಂತ್ರ್ಯ ಹೋರಾಟಕ್ಕೆ ಪ್ರೋತ್ಸಾಹಕರವಾದ ವಿಚಾರಗಳನ್ನು ಈ ಪತ್ರಿಕೆಯಲ್ಲಿ ಬರೆಯುತ್ತಿದ್ದರು.  1903 ರಿಂದ 1918 ರವರೆಗೆ ಅಲಹಾಬಾದ್ ನಗರ ಪಾಲಿಕೆಯ ಸದಸ್ಯರಾಗಿ, ಪ್ರಾದೇಶಿಕ ಶಾಸಕಾಂಗ ಸಮಿತಿಯ ಸದಸ್ಯರಾಗಿ ಮಾಳವೀಯರು ಸೇವೆ ಸಲ್ಲಿಸಿದ್ದರು.
1937  ರಲ್ಲಿ ಸಕ್ರಿಯ ರಾಜಕೀಯವರನ್ನು ತೊರೆದ ಅವರು ಬಳಿಕ ಸಮಾಜ ಸುಧಾರಣೆಯತ್ತ ಗಮನ ಕೇಂದ್ರೀಕರಿಸಿದರು. ಮಹಿಳೆಯರ ಶಿಕ್ಷಣ, ವಿಧವಾ ವಿವಾಹ, ಬಾಲ್ಯವಿವಾಹ, ಡಾಂಭಿಕ ಆಚರಣೆಗಳ ವಿರುದ್ಧ ದನಿ ಎತ್ತಿದರು.

ಮಹಾತ್ಮ ಗಾಂಧಿಯವರು ಅತಿ ಹೆಚ್ಚು ಗೌರವ ಹೊಂದಿದ್ದ ಮೂವರಲ್ಲಿ ಮಾಳವೀಯ ಒಬ್ಬರು. ತಿಲಕ್ ಮತ್ತು ಗೋಖಲೆ ಇತರ ಇಬ್ಬರು. ಲಂಡನ್ನಲ್ಲಿ ನಡೆದ ಎರಡನೇ ದುಂಡು ಮೇಜಿನ ಪರಿಷತ್ತಿನಲ್ಲಿ ಗಾಂಧೀಜಿ ಅವರೊಂದಿಗೆ ಭಾಗವಹಿಸಿದ್ದರು. ಖುದ್ದು ಸಂಸ್ಕೃತ ವಿದ್ವಾಂಸರು, ಆದರೆ, ಇಂಗ್ಲಿಷ್ ಮೇಲೆ ಅಷ್ಟೇ ಪ್ರಭುತ್ವ ಹೊಂದಿದವರು. ಅಲ್ಲಿ ನೀಡಿದ ಭಾಷಣದೊಂದಿಗೆ ಬ್ರಿಟಿಷರನ್ನು ಅಚ್ಚರಿಗೊಳಿಸಿದರು. ಆಕ್ಸ್ಫರ್ಡ್, ಕೇಂಬ್ರಿಜ್ನಲ್ಲಿ ಓದದಿದ್ದರೂ ಇಂಗ್ಲಿಷ್ ಮೇಲೆ ಹೊಂದಿರುವ ಹಿಡಿತದ ಬಗ್ಗೆ ಬಹಿರಂಗವಾಗಿ ಪ್ರಶಂಸೆ ವ್ಯಕ್ತಪಡಿಸಿದರಂತೆ ಬ್ರಿಟನ್ನ ರಾಜಕಾರಣಿ ಗಳು. ಭಾರತೀಯ ಶಾಸನಸಭೆಯ ಸದಸ್ಯರಾಗಿದ್ದ ಮಾಳವೀಯ ಅವರು ಜಲಿಯನ್ವಾಲಾಭಾಗ್ ಹತ್ಯಾಕಾಂಡವನ್ನು ಅತ್ಯುಗ್ರವಾಗಿ ಖಂಡಿಸಿದರು.  ಸಂಪ್ರದಾಯಸ್ಥ  ಎನಿಸಿಕೊಂಡರೂ ಬದಲಾವಣೆಗೆ ಸದಾ ತೆರೆದು ಕೊಂಡಿದ್ದರು. ಇದರಿಂದಾಗಿಯೇ ಮಹಾಮನ ಎಂದು ಕರೆಸಿಕೊಂಡಿದ್ದರು.
ಭಾರತ ಸ್ವಾತಂತ್ರ್ಯ ಪಡೆಯುವ ಮುನ್ನವೇ ಅಂದರೆ 1946 ರ ನವೆಂಬರ್ 12 ಮಾನವೀಯ ರವರು   ಇಹಲೊಕ ತ್ಯಜಿಸಿದರು. ಮರಣೋತ್ತರವಾಗಿ ಶ್ರೀಯುತರಿಗೆ  2014  ರಲ್ಲಿ ಭಾರತ ರತ್ನ ಪ್ರಶಸ್ತಿ ನೀಡಲಾಗಿದೆ.

ಸಿಹಿಜೀವಿ ವೆಂಕಟೇಶ್ವರ
ತುಮಕೂರು
9900925529.

ಸ್ನೇಹಿತರ ದಿನದ ಹಾಯ್ಕುಗಳು..

 *ಹಾಯ್ಕುಗಳು...*



ಜೊತೆಗಿದ್ದರೆ

ಗೆಳೆಯರ ದಂಡು

ಸ್ವರ್ಗವೇತಕೆ 



ನನ್ನ ಸ್ನೇಹಿತ 

ಜೊತೆಗಿದ್ದರೆನಗೆ 

ಅದುವೇ ಹಿತ ...



*ಸಿಹಿಜೀವಿ ವೆಂಕಟೇಶ್ವರ*

ತುಮಕೂರು

05 August 2023

ಆಗಸ್ಟ್ ಮಾಸದ ನೆನಪುಗಳು... ಭಾಗ _6 ನೇತಾಜಿ ಸುಭಾಷ್ ಚಂದ್ರ ಬೋಸ್.


 


ಆಗಸ್ಟ್ ಮಾಸದ ನೆನಪುಗಳು...

ಭಾಗ _6

ನೇತಾಜಿ ಸುಭಾಷ್ ಚಂದ್ರ ಬೋಸ್.

ಮಹಾತ್ಮಾ ಗಾಂಧೀಜಿಯವರ ಬಗ್ಗೆ ಅಪಾರವಾದ ಗೌರವವಿಟ್ಟುಕೊಂಡು ಅವರ ಅಹಿಂಸೆ, ಸತ್ಯಾಗ್ರಹ ಮುಂತಾದ ಅಸ್ತ್ರಗಳು ನಮ್ಮ ಸ್ವಾತಂತ್ರ್ಯ ಹೋರಾಟಕ್ಕೆ ಮಹತ್ವದ ತಿರುವು ನೀಡಿವೆ ಎಂಬುದನ್ನು ಅಲ್ಲಗಳೆಯಲಾಗದು. ಅದೇ ರೀತಿಯಲ್ಲಿ ನೇತಾಜಿಯವರು ನಮ್ಮ ಸ್ವಾತಂತ್ರ್ಯ ಹೋರಾಟದಲ್ಲಿ ಮಹತ್ವದ ಪಾತ್ರ ವಹಿಸಿದ್ದರು ಎಂಬುದು ಅಷ್ಟೇ ಸತ್ಯ.

ಸುಭಾಷ್ ಚಂದ್ರ ಬೋಸ್ ಜನಿಸಿದ್ದು 1897ರ ಜನವರಿ 23ರಂದು, ಒಡಿಶಾದ ಕಟಕ್ನಲ್ಲಿ. ತಂದೆ ಜಾನಕೀನಾಥ ಬೋಸ್, ತಾಯಿ ಪ್ರಭಾವತಿ. ಆ ದಂಪತಿಗಳ 14 ಜನ ಮಕ್ಕಳಲ್ಲಿ ಸುಭಾಷ್ 9 ನೇಯವರು.ಕಟಕ್ ನಲ್ಲಿ ರ‍ಯಾವೆನ್ಶಾ ಕೊಲಿಜಿಯೇಟ್ ಶಾಲೆಯಲ್ಲಿ ಪ್ರಾಥಮಿಕ ವ್ಯಾಸಂಗ ಮಾಡಿ ಅಲ್ಲಿ ಮುಖ್ಯೋಪಾಧ್ಯಾಯ ಬೇಣಿಮಾಧವದಾಸ್  ರಿಂದ ಪ್ರೇರಣೆ ಪಡೆದು  ಮುಂದೆ ವಿವೇಕಾನಂದರ ಸಾಹಿತ್ಯಗಳು, ಪತ್ರಗಳು ಮತ್ತು ’ಕೊಲೊಂಬೋದಿಂದ ಆಲ್ಮೋರಾಕ್ಕೆ’ ಉಪನ್ಯಾಸಗಳಿಂದ ಪ್ರಭಾವಿತರಾದ ಬೋಸರು ಅರವಿಂದರ ’ಆರ್ಯ’ ಮಾಸಪತ್ರಿಕೆಯ ತಪ್ಪದ ಓದುಗರಾಗಿದ್ದರು. 

1919ರಲ್ಲಿ ತತ್ವಶಾಸ್ತ್ರ ವಿಭಾಗದಲ್ಲಿ ಬಿ.ಎ. ಪದವಿ ಪಡೆದ ನಂತರ ಐ.ಸಿ.ಎಸ್ ಪರೀಕ್ಷೆಗಾಗಿ ಇಂಗ್ಲೆಂಡಿಗೆ ಪಯಣ ಬೆಳೆಸಿದರು. ನಾಲ್ಕನೇ ಸ್ಥಾನಿಗರಾಗಿ ಐ.ಸಿ.ಎಸ್ ಪಾಸು ಮಾಡಿದರು. ಆದರೆ ಬ್ರಿಟಿಷರ ನೀತಿಗಳ ವಿರುದ್ಧ ಸೆಟೆದು ನಿಂತು
ಬ್ರಿಟಿಷ್ ಸರ್ಕಾರದ ಭಾರತ ವ್ಯವಹಾರ ಸಚಿವ ಎಡ್ವಿನ್ ಮಾಂಟೆಗುಗೆ ಪತ್ರವೊಂದನ್ನು ಬರೆದು ಐ ಸಿ ಎಸ್ ಗೆ  ಗುಡ್ ಬೈ ಹೇಳಿದರು.

20 ತಿಂಗಳ ಇಂಗ್ಲೆಂಡ್ ವಾಸದ ನಂತರ 1921 ರ ಜುಲೈ 16ರಂದು ಮುಂಬಯಿಗೆ ಮರಳಿದರು. ಅಂದೇ ಗಾಂಧೀಜಿ ಜತೆ ಮೊದಲ ಭೇಟಿ ಮಾಡಿದರು.  ಚಿತ್ತರಂಜನ್ ದಾಸ್ ರವರ ಮಾರ್ಗದರ್ಶನದಲ್ಲಿ ಯುವಕರ ಸಂಘಟನೆಗೆ ಆದ್ಯತೆ ನೀಡಿದರು. ಚಳುವಳಿಯ ಸಂದರ್ಭವೊಂದರಲ್ಲಿ ಮ್ಯಾಜಿಸ್ಟ್ರೇಟರು 6 ತಿಂಗಳ ಸಜೆ ಘೋಷಿಸಿದಾಗ ’ಬರಿಯ 6 ತಿಂಗಳೇ? ನನ್ನದೇನು ಕೋಳಿಕದ್ದ ಅಪರಾಧವೇ?’ ಎಂದಿದ್ದರು ಬೋಸ್!

ರಾಷ್ಟ್ರ ನಿರ್ಮಾಣದ ಜವಾಬ್ದಾರಿಯುತ ಸ್ಥಾನದಲ್ಲಿದ್ದು ರಾಷ್ಟ್ರಹಿತಕ್ಕೆ ಧಕ್ಕೆಯಾಗುವ ಯಾವುದೇ ವಿಷಯಗಳಲ್ಲಿ ದುರ್ಬಲನೀತಿ ಹೊಂದಿರಬಾರದೆಂಬ ಸುಭಾಷ್‌ರ ದಿಟ್ಟನಿಲುವಿನ ಪ್ರತಿಧ್ವನಿಯಾಗಿತ್ತು ಆ ಮಾತು. ಕಾಂಗ್ರೆಸ್‌ನ ಬಲಹೀನ ನಾಯಕತ್ವ, ದುರ್ಬಲ ಒಪ್ಪಂದಗಳು, ಸ್ವಾಭಿಮಾನ ಶೂನ್ಯ ವರ್ತನೆಗೆ ಪ್ರತಿಯಾಗಿ ಆತ್ಮಾಭಿಮಾನದ ಸ್ವರಾಜ್ಯಹೋರಾಟಕ್ಕೆ ಬಲತುಂಬಿದವರು ಸುಭಾಷರು.

ಬೋಸ್‌ರಿಗಿದ್ದ ರಾಜಕೀಯ ಚಿಂತನೆಯ ವೈಶಾಲ್ಯತೆ ಆ ಕಾಲಮಾನದ ಯಾರೊಬ್ಬರಲ್ಲೂ ಇರಲಿಲ್ಲ. ಎಂಬುದು ಬಲ್ಲವರ ಮಾತಾಗಿತ್ತು.   ಆಸ್ಟ್ರಿಯಾ, ಇಂಗ್ಲೆಂಡ್, ಜರ್ಮನಿ, ಜಪಾನ್ ಸೇರಿದಂತೆ ಹತ್ತಾರು ರಾಷ್ಟ್ರಗಳಲ್ಲಿ ಮಿಂಚಿನ ಓಡಾಟ ನಡೆಸಿ ಭಾರತೀಯ ಸ್ವರಾಜ್ಯ ಹೋರಾಟದ ದನಿಗೆ ತೀವ್ರತೆ ತಂದಿದ್ದ ಬೋಸರು, ತಾನು ನಂಬಿದ್ದ ಕ್ರಾಂತಿಪಥದಲ್ಲಿ ಎಂದೂ ರಾಜಿಮಾಡಿದವರಲ್ಲ.

1927 ರ ನವೆಂಬರ್‌ನಲ್ಲಿ ಬಂಗಾಳಪ್ರದೇಶ ಕಾಂಗ್ರೆಸ್‌ನ ಅಧ್ಯಕ್ಷರಾಗಿ ಆಯ್ಕೆಯಾದರು. ಆದರೆ ಗಾಂಧೀಜಿಯವರ  ಮಂದ ಮಾರ್ಗಕ್ಕಿಂತ ಸುಭಾಷ್‌ರದು ತೀರಾ ಭಿನ್ನ ಎಂಬುದು ಕ್ರಮೇಣ ಗೊತ್ತಾಯಿತು. ಹತ್ತಾರು ಚಳುವಳಿಗೆ ನೇತೃತ್ವ, ಅಖಿಲಭಾರತ ಟ್ರೇಡ್ ಯೂನಿಯನ್ ಕಾಂಗ್ರೆಸ್‌ನ ಅಧ್ಯಕ್ಷರಾಗಿ ಆಯ್ಕೆಯಾದರು.
ಯೂರೋಪಿನಲ್ಲಿ ಭಾರತದ ಸ್ವಾತಂತ್ರ್ಯ ಹೋರಾಟಪರ ಅಭಿಯಾನ ಕೈಗೊಂಡರು. ಇಂಗ್ಲೆಂಡ್, ಆಸ್ಟ್ರಿಯಾ, ಇಟೆಲಿ ವಿಯೆನ್ನಾಗಳ  ತ್ವರಿತಗತಿಯ ಪ್ರವಾಸ, ಮಿಂಚಿನ ಓಡಾಟ. ಸ್ವಿಟ್ಜರ್ಲೆಂಡ್, ಚೆಕೋಸ್ಲೋವಾಕಿಯಾ, ಪೋಲೆಂಡ್, ಜರ್ಮನಿಗಳಲ್ಲಿ ಭಾರತದ ಪರ ಪ್ರಚಾರ ಮಾಡಿದರು. ಇಟೆಲಿ ಪ್ರಧಾನಿ ಬೆನಿಟೊ  ಮುಸ್ಸೋಲಿನಿ ಜತೆ ಚರ್ಚಿಸಿದರು.
ಕಾಬೂಲ್ ಮೂಲಕ ಬರ್ಲಿನ್ ಸೇರಿದ ಬೋಸ್‌ರಿಂದ ಸೈನಿಕ ಕಾರ‍್ಯಾಚರಣೆ ಮಾಡಲು   ’ಫ್ರೀ ಇಂಡಿಯಾ ಸೆಂಟರ್’ ಸ್ಥಾಪಿಸಿದರು.  ’ಆಜಾದ್ ಹಿಂದ್’ ಲಾಂಛನ, ’ಜೈಹಿಂದ್’ ಘೋಷಣೆ, ನೀಡಿದ  ಬೋಸರಿಗೆ  ಜನರು ಅಭಿಮಾನಿಗಳು  ’ನೇತಾಜಿ’ ಬಿರುದು ನೀಡಿದರು. ಜರ್ಮನ್ ಸೇನಾಕೇಂದ್ರಗಳಿಗೆ ಸೈನಿಕ ತರಬೇತಿ ನೀಡುತ್ತಾ, ಬರ್ಲಿನ್ ರೇಡಿಯೋದಲ್ಲಿ ಆಗಾಗ ಭಾಷಣ ಮಾಡುತ್ತಾ  ಹಿಟ್ಲರ್ ಜತೆ ಭೇಟಿ ಮಾಡಿದರು. ಜಪಾನ್‌ಗೆ ತೆರಳಿ ಅಲ್ಲಿಂದ ಪೂರ್ವಾಂಚಲ ಭಾರತದ ಗಡಿಗಳಲ್ಲಿ ಸೈನ್ಯ ಸಜ್ಜು ಮಾಡಲು ಇಂಡಿಯನ್ ಇಂಡಿಪೆಂಡೆನ್ಸ್ ಲೀಗ್ ಮೂಲಕ ಅವಿರತ ಚಟುವಟಿಕೆ ಹಮ್ಮಿಕೊಂಡು ಅಂಡಮಾನ್ ನಿಕೋಬಾರ್ ನಾಗಾ ಲ್ಯಾಂಡ್ ಗಳಲ್ಲಿ ಸ್ವಾತಂತ್ರ್ಯ ಧ್ವಜಾರೋಹಣ ಮಾಡಿ ಮುನ್ನುಗ್ಗುವಾಗ ಭಾರತೀಯರಿಗೆ ಸುದ್ದಿಯೊಂದು ಬರಸಿಡಿಲಿನಂತೆ ಎರಗಿತು.ನೇತಾಜಿಯವರು ವಿಮಾನ ಅಪಘಾತದಲ್ಲಿ ಮರಣ ಹೊಂದಿದರೆಂಬ ಸುದ್ದಿ ಇಂದಿಗೂ ವಿವಾದಾತ್ಮಕವಾಗಿರುವುದು ದುರದೃಷ್ಟಕರ.

ನರಿ ಬುದ್ದಿಯ ಕೆಂಪು ಮೂತಿಯವರ ಕುತಂತ್ರಗಳು , ಕೆಟ್ಟ ನಡೆಗಳು, ಗೋಮುಖ ವ್ಯಾಘ್ರ ಗುಣಗಳು, ಒಡೆದು ಆಳುವ ನಿಸ್ಸೀಮರಿಗೆ ಶಾಂತಿ ಅಹಿಂಸೆಯ ನಡೆಗಳು ನಾಟಲೇ ಇಲ್ಲ ಎಂಬುದನ್ನು ನಮ್ಮ ದೇಶದ ಇತಿಹಾಸ ಓದಿದ ಯಾರಾದರೂ ಒಪ್ಪಿಕೊಳ್ಳಲೇ ಬೇಕು . ಪರಂಗಿಗಳಿಗೆ ದಂಡಂ ದಶಗುಣಂ ನೀತಿಯೇ ಸರಿಯಾಗಿತ್ತು.ರಕ್ತ ಕೊಡಿ ನಾನು ನಿಮಗೆ ಸ್ವಾತಂತ್ರ್ಯ ಕೊಡಿಸಿವೆ ಎಂದು ಗುಡುಗಿದ ನೇತಾಜಿವರ ಘರ್ಜನೆಗೆ ಬ್ರಿಟಿಷರು ಅಕ್ಷರಶಃ ಕಂಗಾಲಾಗಿ ಹೋದರು.ಅವರ ಆಕ್ರಮಣಕಾರಿ ನೀತಿಗೆ ಆಗಿನ ಯುವಜನ ಮಾರುಹೋಗಿ ಭಾರತೀಯ ರಾಷ್ಟ್ರೀಯ ಸೇನೆ ಸೇರಿ ಸ್ವಾತಂತ್ರ್ಯ ಹೋರಾಟಕ್ಕೆ ದುಮುಕಿದರು.ಇದರಲ್ಲಿ ಮಹಿಳೆಯರು ಸಹ ಪಾಲ್ಗೊಂಡರು ಎಂಬುದನ್ನು ಕ್ಯಾಪ್ಟನ್ ಲಕ್ಷ್ಮೀ ಸೆಹಗಲ್ ರಂತವರನ್ನು ಉದಾಹರಣೆ ನೀಡಬಹುದು.

ಹಿಂಸೆಯನ್ನು ಯಾರೂ ಪ್ರಚೋದಿಸಬಾರದು ಎಂಬುದನ್ನು ನಾನೂ ಒಪ್ಪುವೆ ಆದರೆ ದುಷ್ಟ ಸಂಹಾರ ಕ್ಕೆ ಕೊನೆಯ ಅಸ್ತ್ರವಾಗಿ ಹಿಂಸೆ ತಪ್ಪಲ್ಲ ಎಂಬ ನಮ್ಮ ಶಾಸ್ತ್ರ ಪುರಾಣಗಳಲ್ಲಿಯೂ ಉಲ್ಲೇಖವಿರುವುದನ್ನು ಗಮನಿಸಲೇಬೇಕು. ಮಹಿಷ ,ರಕ್ತಬೀಜರಂತಹ ರಕ್ಕಸರ ಸಂಹಾರ ಮಾಡದೇ ಶಾಂತಿ ಮಂತ್ರ ಪಠಿಸುತ್ತಾ ದೇವಿ ಕುಳಿತಿದ್ದರೆ ಜನರ ಪಾಡೇನಾಗುತ್ತಿತ್ತು? ಇನ್ನೂ ಕೃಷ್ಣಾವತಾರಗಳಲ್ಲಿಯೂ ಅಸುರಿ ಶಕ್ತಿಗಳ ಸಂಹಾರಕ್ಕೆ ಹಿಂಸೆ ತಪ್ಪಲ್ಲ ಎಂಬುದು ಸಾಬೀತಾಗಿದೆ.ಆದ್ದರಿಂದ ನೇತಾಜಿಯವರ ಮಾರ್ಗವೇ ಸರಿ ಎಂಬುದನ್ನು ಕೊನೆಗೆ ಮಹಾತ್ಮ ಗಾಂಧೀಜಿಯವರೇ ರೋಸಿ 1942 ರಲ್ಲಿ "ಬ್ರಿಟೀಷರೇ ಭಾರತ ಬಿಟ್ಟು ತೊಲಗಿ " ಎಂದು ಗುಡುಗಿ ಡೂ ಆರ್ ಡೈ ಎಂದು ಪರೋಕ್ಷವಾಗಿ ಪ್ರಭಲವಾದ ಹೋರಾಟಕ್ಕೆ ಕರೆ ನೀಡಿದ್ದು ನೇತಾಜಿವರ ಮಾರ್ಗವೇ ಸರಿ ಎಂಬುದನ್ನು ಒಪ್ಪಿದಂತೆ ಎಂದು ಕೆಲವರು ಹೇಳುವುದು ತಪ್ಪಲ್ಲ ಎನಿಸುತ್ತದೆ.

ಮುಳ್ಳನ್ನು ಮುಳ್ಳಿನಿಂದಲೇ ತೆಗೆಯಬೇಕೆಂಬ ಮಾತು ಎಂದಿಗೂ ಪ್ರಸ್ತುತ. ದುಷ್ಟ ಬುದ್ದಿಯ ಆಂಗ್ಲರ ಮಣಿಸಲು ಅಹಿಂಸೆಯ ಮಾರ್ಗ ಹಿಡಿಯದೇ ಬೇರೆ ದಾರಿಯಿರಲಿಲ್ಲ ಯುದ್ದ ಮತ್ತು ಪ್ರೀತಿಯಲ್ಲಿ ಎಲ್ಲವೂ ಸರಿ ಎಂಬಂತೆ ನಮ್ಮ ನೇತಾಜಿವರು ನಮ್ಮ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಹಿಂಸೆಯ ಮಾರ್ಗ ಅನುಸರಿಸಿದ್ದು ತಪ್ಪಲ್ಲ ಅಂದು ಅದು ಅನಿವಾರ್ಯವಾಗಿತ್ತು. ನೇತಾಜಿವರ ಮುಂದಾಲೋಚನೆ, ಅವರ ಚಿಂತನೆ ಎಂದಿಗೂ ಅನುಕರಣೀಯ ಅದಕ್ಕೆ ಅವರು ದೈಹಿಕವಾಗಿ ನಮ್ಮೊಂದಿಗೆ ಇಲ್ಲದಿದ್ದರೂ ಈಗಲೂ ಭಾರತೀಯರಿಗೆಲ್ಲ ಒಬ್ಬರೇ ನೇತಾಜಿ.

ಅವರ ಅಭಿಮಾನದಿಂದ ಮನದಾಳದಲ್ಲಿ ಮೂಡಿದ್ದು ಈ ಕವಿತೆ

*ಭಾಗ್ಯವಿಧಾತ*

ವಂದಿಪೆನು ನೇತಾಜಿಗೆ
ನಮಿಪೆನು ವೀರಸಿಂಹನಿಗೆ
ಭಾರತ ರಾಷ್ಟ್ರೀಯ ಸೇನೆ ಕಟ್ಟಿದೆ
ಬ್ರಿಟಿಷರ ಧಿಮಾಕಿಗೆ ಕುಟ್ಟಿದೆ|೧|

ಜೈ ಹಿಂದ್ ಘೋಷ ಮೊಳಗಿಸಿದೆ
ದೇಶ ಭಕ್ತಿಯ ಕಿಚ್ಚು ಹತ್ತಿಸಿದೆ
ಫಾರ್ವರ್ಡ್ ಬ್ಲಾಕ್ ಹರಿಕಾರ
ಪರಂಗಿಯರ ಎದುರಿಸಿದ ಎದೆಗಾರ|೨|

ಭಾರತ ದೇಶದ ಭಾಗ್ಯವಿಧಾತ
ತಾಯಿಯ ಋಣವ ತೀರಿಸಿದಾತ
ಶಿಸ್ತಿನ ಸಿಪಾಯಿ ನಮಗೆಲ್ಲ
ಸ್ಪೂರ್ತಿಯ ಸೆಲೆಯು ಜಗಕೆಲ್ಲ|೩|

ಹಾತೊರೆಯಲಿಲ್ಲ ನಿಮ್ಮ ಸುಖಕೆ
ಹೋರಾಡಿದಿರಿ ನೀವು ಸ್ವಾತಂತ್ರಕೆ
ಉಳಿದಿದೆ ನಿಮ್ಮೆಸರು ಧರೆಯಲೆಲ್ಲ
ನಾವೆಂದಿಗೂ ನಿಮ್ಮನು ಮರೆಯಲ್ಲ|೩|

ಸಿಹಿಜೀವಿ ವೆಂಕಟೇಶ್ವರ
ತುಮಕೂರು
9900925529

ಆಹಾರ..

 


*ಆಹಾರ*


ಪುರಸ್ಕಾರ ಪ್ರಿಯರು ಇವರು

ಹೊಗಳಿಕೆಯೇ ಇವರ ದೇವರು 

ಅರಳುವರು  ಕಂಡರೆ  ಹಾರ 

ಪ್ರಶಸ್ತಿ ಫಲಕಗಳೇ ಇವರ  ಆಹಾರ .


ಸಿಹಿಜೀವಿ ವೆಂಕಟೇಶ್ವರ

ತುಮಕೂರು 

04 August 2023

ಆಗಸ್ಟ್ ಮಾಸದ ನೆನಪುಗಳು... ಭಾಗ _5 ಆಚಾರ್ಯ ವಿನೋಬಾ ಭಾವೆ.


 

ಆಗಸ್ಟ್ ಮಾಸದ ನೆನಪುಗಳು...

ಭಾಗ _5
ಆಚಾರ್ಯ ವಿನೋಬಾ ಭಾವೆ.

ಭೂದಾನ ಚಳುವಳಿಯ ಹರಿಕಾರ,  ಕನ್ನಡ ಭಾಷೆಯ ಬಗ್ಗೆ ಅಪಾರ ಗೌರವ ಹೊಂದಿದ್ದ ಮತ್ತು ನಮ್ಮ ಕನ್ನಡ ಬರವಣಿಗೆಯನ್ನು " ಲಿಪಿಗಳ ರಾಣಿ" ಎಂದು ಮನಸಾರೆ ಹೊಗಳಿದ ಸರಳ ಸಜ್ಜನ ಸ್ವಾತಂತ್ರ್ಯ ಹೋರಾಟಗಾರರಾದ ಆಚಾರ್ಯ ಬಿರುದಾಂಕಿತ ವಿನೋಬಾ ಭಾವೆಯವರನ್ನು ಈ ಆಗಸ್ಟ್ ಮಾಸದಲ್ಲಿ ನೆನೆಯೋಣ.

ವಿನೋಬಾ ಅವರು ಮಹಾರಾಷ್ಟ್ರದ ಕೋಲಬಾ ಜಿಲ್ಲೆಯ ಗಾಗೋಡೆ ಗ್ರಾಮದಲ್ಲಿ ಸೆಪ್ಟೆಂಬರ್ 11, 1895ರಂದು ಜನಿಸಿದರು. ಇವರ ತಂದೆ ನರಹರಿ ಶಂಭುರಾವ್ ಭಾವೆ. ತಾಯಿ ರುಕ್ಮಿಣಿ ದೇವಿ. ಅವರ ಮೂಲ ಹೆಸರು ವಿನಾಯಕ್ ನರಹರಿ ಭಾವೆ. ಬಾಲ್ಯದಲ್ಲಿಯೇ ವಿವಿಧ ಧರ್ಮಗಳ ಸಾರವನ್ನು ಅಧ್ಯಯನ ಮಾಡಿ ಅರಗಿಸಿಕೊಂಡಿದ್ದರು. 

ಅವರಿಗೆ ಗಣಿತದಲ್ಲಿ ಅಪಾರ ಆಸಕ್ತಿ ಇತ್ತು. 1916ರಲ್ಲಿ ತಮ್ಮ ಇಂಟರ್ ಮೀಡಿಯೆಟ್ ಪರೀಕ್ಷೆಗಾಗಿ ಮುಂಬೈಗೆ ಹೊರಟಿದ್ದ ವಿನೋಬಾ ಭಾವೆ ಅವರಿಗೆ ಮಹಾತ್ಮ ಗಾಂಧಿಯವರ ಬರಹವೊಂದು ಕಣ್ಣಿಗೆ ಬಿದ್ದು, ತಮ್ಮ ಓದು ಬರಹದ ಪ್ರಮಾಣ ಪತ್ರಗಳಿಗೆಲ್ಲ ಬೆಂಕಿಗೆ ಹಚ್ಚಿಬಿಟ್ಟರಂತೆ. ತಮ್ಮ ಇಪ್ಪತ್ತೊಂದನೆಯ ವಯಸ್ಸಿನಲ್ಲಿ ಗಾಂಧೀಜಿಯವರ ಅನುಯಾಯಿಯಾಗುವುದರೊಂದಿಗೆ ಸ್ವಾತಂತ್ರ್ಯ ಹೋರಾಟಕ್ಕೆ ಧುಮುಕಿದ ಭಾವೆ ಅನಂತರ ತಿರುಗಿ ನೋಡಲಿಲ್ಲ.
ವಿನೋಬಾ ಭಾವೆ ಒಬ್ಬ ಹಠವಾದಿ ಸತ್ಯಾಗ್ರಹಿ. ಅಹಿಂಸಾ ಮಾರ್ಗದಲ್ಲಿ ಅಪ್ರತಿಮ ನಿಷ್ಠೆಯಿರಿಸಿದ್ದರು.  ಉಪವಾಸ ಸತ್ಯಾಗ್ರಹದಲ್ಲಿ ಎತ್ತಿದ ಕೈ. ಜಾತೀಯತೆಯ ಭೇದ ಅಳಿಸಿ ಎಲ್ಲರೂ ಸೌಹಾರ್ದದಿಂದ ಬಾಳಬೇಕೆಂಬ ಕನಸು ಕಟ್ಟಿ ಅದನ್ನು ನೆರವೇರಿಸಲು ಹರಿಜನರೊಡನೆ ವಿವಿಧ ಮತೀಯರೊಡನೆ ದೇವಾಲಯಗಳಿಗೆ ಪ್ರವೇಶಿಸಿ ಮತ್ತೆ ಮತ್ತೆ ಸೆರೆವಾಸ ಅನುಭವಿಸಿದರು. ಅವರ ಈ ಎಲ್ಲ ಪ್ರಯತ್ನಗಳು ಎಲ್ಲರ ಮನ್ನಣೆಗಳಿಸಿ ಹೊಸ ಕ್ರಾಂತಿಗೆ ನಾಂದಿಯಾಯಿತು.

ಸಂತರಂತೆ ಬಾಳಿದ್ದ ವಿನೋಬಾರವರ ಅಂತಃಸತ್ತ್ವ ಬಹಳ ಪ್ರಭಾವಶಾಲಿಯಾಗಿತ್ತು 1960ರಲ್ಲಿ ಚಂಬಲ್ ಕಣಿವೆಯ ಡಕಾಯಿತರು,   ಅವರಿಗೆ ಶರಣಾಗಿದ್ದು   ಅದಕ್ಕೊಂದು ಉದಾಹರಣೆ. ಈ ಡಕಾಯಿತರೆಲ್ಲರೂ ಮುಂದೆ ಭಾವೆಯವರ ಮಾರ್ಗದರ್ಶನದಲ್ಲಿ  ಜೀವನ ಕಳೆದರು.

1955ರಲ್ಲಿ ’ಭೂದಾನ ಚಳುವಳಿ’ಗೆ ಚಾಲನೆ ನೀಡಿದ ಭಾವೆ ರವರು  ಅದನ್ನು ವ್ಯಾಪಕಗೊಳಿಸಿ ಅಸಂಖ್ಯ ಭೂದಾನಕ್ಕೆ ಪ್ರೇರಣೆ ನೀಡಿದರು. ದೇಶದ ಉದ್ದಗಲಕ್ಕೂ ಕಾಲ್ನಡಿಗೆಯಲ್ಲಿ ಓಡಾಡಿ ಸಹಸ್ರಾರು ಸಾಮಾಜಿಕ ಕಾರ್ಯಕರ್ತರಿಗೆ ಪ್ರೇರಣೆಯಾಗಿ ನಿಂತರು. ಅವರು ಸಿರಿವಂತರಿಂದ ದಾನ ಸ್ವೀಕರಿಸಿ ಬಡಬಗ್ಗರಿಗಾಗಿ ಹಸ್ತಾಂತರಿಸಿದ ಹಳ್ಳಿಗಳ ಸಂಖ್ಯೆ ಸಾವಿರಕ್ಕೂ ಹೆಚ್ಚು. ಅವುಗಳಲ್ಲಿ ತಮಿಳುನಾಡು ಒಂದರಲ್ಲೇ ಅವರು ಸುಮಾರು 175 ಹಳ್ಳಿಗಳನ್ನು ಸಿರಿವಂತರಿಂದ ಸ್ವೀಕರಿಸಿ ಬಡಜನರಿಗೆ ಹಸ್ತಾಂತರಿಸಿದರು.

ಆಚಾರ್ಯ ವಿನೋಬಾ ಅವರು ಬಹುಭಾಷಾ ಪಂಡಿತರಾಗಿದ್ದು ಮರಾಠಿ, ಹಿಂದಿ, ಉರ್ದು, ಇಂಗ್ಲಿಷ್, ಕನ್ನಡ ಭಾಷೆಗಳ ಪರಿಚಯ ಅವರಿಗಿತ್ತು. ಕನ್ನಡ ಭಾಷೆಯ ಲಿಪಿ ಅವರನ್ನು ಮೋಡಿ ಮಾಡಿತ್ತು. ಅವರು ಕನ್ನಡದ ಲಿಪಿಯನ್ನು ‘ಲಿಪಿಗಳ ರಾಣಿ’ ಎಂದು ಶ್ಲಾಘಿಸುತ್ತಿದ್ದರು. 1958ರಲ್ಲಿ ವಿನೋಬಾ ಅವರು ಸಲ್ಲಿಸಿದ ಸಮಾಜ ಸೇವೆಗಾಗಿ ಮ್ಯಾಗ್ಸೆಸೆ ಪ್ರಶಸ್ತಿ ಮತ್ತು 1983ರಲ್ಲಿ ಮರಣೋತ್ತರವಾಗಿ ಭಾರತ ರತ್ನ ಪ್ರಶಸ್ತಿಯನ್ನು ಘೋಷಿಸಲಾಯಿತು.
ವಿನೋಬಾ ಭಾವೆ ಸಮರ್ಥ ಲೇಖಕರಾಗಿದ್ದರು. 1923 ರಲ್ಲಿ ’ಮಹಾರಾಷ್ಟ್ರ ಧರ್ಮ’ ಪತ್ರಿಕೆಯ ಸಂಪಾದಕರಾದರು. ನಾಗಪುರದ ’ಧ್ವಜಸತ್ಯಾಗ್ರಹ’ ದಲ್ಲಿ ತಿಂಗಳಾನುಗಟ್ಟಲೆ ಬಂಧಿತರಾದರು ಮತ್ತು ಕೇರಳದ ’ವೈಕೋಮ್ ಸತ್ಯಾಗ್ರಹ’ಕ್ಕೆ ಹೊರಟು ನಿಂತರು. ಇವೆಲ್ಲದರ ನಡುವೆಯೂ ನಿರಂತರ ಅಧ್ಯಯನಶೀಲರಾಗಿದ್ದ ಅವರು ಮರಾಠಿಯಲ್ಲಿ ಗೀತಾಭಾಷ್ಯ ಬರೆದರು.

ಉಪನಿಷತ್ತುಗಳಿಗೆ ವ್ಯಾಖ್ಯಾನ ಬರೆದರು. ತಿಂಗಳುಗಟ್ಟಲೆ ಜೈಲಿನಲ್ಲಿದ್ದಾಗ ತಮ್ಮ ಸಹ ಖೈದಿಗಳಿಗೆಲ್ಲ ಇವುಗಳ ಬಗ್ಗೆ ಪ್ರವಚನ ಕೊಡಾ ನೀಡುತ್ತಿದ್ದರು. ಕುರಾನ್ ಮತ್ತು ಬೈಬಲ್ಲಿನ ಬೋಧನೆಗಳನ್ನು ಸಹ ಪ್ರಕಟಿಸಿದರಲ್ಲದೆ, ಶಿಕ್ಷಣ, ಸ್ವರಾಜ್ಯ ಶಾಸ್ತ್ರದ ಕುರಿತಾದ ಗ್ರಂಥ ರಚನೆಯನ್ನೂ ಮಾಡಿದರು.
1948 ರಲ್ಲಿ ಗಾಂಧೀಜಿಯವರ ಹತ್ಯೆಯಾದ ನಂತರ ಆಚಾರ್ಯ ವಿನೋಬಾ ಭಾವೆಯವರಿಗೆ ಆಶ್ರಮದ ಬದುಕು ಸಾಕೆನಿಸಿತು. ತಮ್ಮ ಗುರು ಹಾಕಿಕೊಟ್ಟಿದ್ದ ಸರ್ವೋದಯ ಪರಿಕಲ್ಪನೆಯಲ್ಲಿ ಏನಾದರೂ ಗ್ರಾಮ ಸುಧಾರಣೆ ಮಾಡಲು ಸಾಧ್ಯವೆ? ಎಂದು ಯೋಚಿಸಿದ ಅವರು ಗ್ರಾಮಭಾರತದ ದರ್ಶನಕ್ಕಾಗಿ ಕಾಲ್ನಡಿಗೆ ಪ್ರವಾಸ ಹೊರಟರು.

1951 ಏಪ್ರಿಲ್ 18 ರಂದು ಆಂಧ್ರದ ತೆಲಂಗಾಣ ಪ್ರಾಂತ್ಯದ ಪೂಚಂಪಲ್ಲಿ ಎಂಬಲ್ಲಿ ಭಾಷಣ ಮಾಡುತ್ತಾ, ಶ್ರೀಮಂತ ಜಮೀನ್ದಾರರು ತಮ್ಮಲ್ಲಿರುವ ಜಮೀನುಗಳನ್ನು ಬಡವರಿಗೆ ದಾನ ಮಾಡಬೇಕು. ಇದು ಯಾವ ಕಾರಣಕ್ಕೂ ನಿಮ್ಮ ಮನಸ್ಸಿನಲ್ಲಿ ಭಿಕ್ಷೆ ಎಂಬ ಭಾವನೆ ಮೂಡಕೂಡದು, ಬಡತನ ಹೋಗಲಾಡಿಸಲು ಹಾಗೂ ದುಡಿಯುವ ಕೈಗಳಿಗೆ ಉದ್ಯೋಗ ಕಲ್ಪಿಸುವ ದೀಕ್ಷೆ ಎಂದು ಭಾವಿಸಬೇಕು ಎಂದು ಕರೆಯಿತ್ತರು.
ವಿನೋಬಾ ಮಾತುಗಳಿಂದ ಪ್ರಭಾವಿತನಾದ ರಾಮರೆಡ್ಡಿ ಎಂಬ ಜಮೀನ್ದಾರ ಸ್ಥಳದಲ್ಲಿಯೇ ನೂರು ಎಕರೆ ಭೂಮಿಯನ್ನು ವಿನೋಬಾರವರಿಗೆ ದಾನ ಮಾಡಿದ. ಈ ಕ್ರಿಯೆಯಿಂದ ವಿನೋಬಾ ತಕ್ಷಣಕ್ಕೆ ವಿಚಲಿತರಾದರು. ಆದರೆ, ಇದು ದೇವರು ತೋರಿದ ದಾರಿ ಎಂದು ತಿಳಿದ ಅವರು ಈ ಕ್ರಿಯೆಗೆ ಭೂದಾನ ಎಂಬ ಹೆಸರಿಟ್ಟು ಜಮೀನುಗಳನ್ನು ಸ್ವೀಕರಿಸುತ್ತಾ ಹೋದರು. ನೀವು ನೀಡುವ ಜಮೀನಿನಲ್ಲಿ ಯಾವ ಕಾರಣಕ್ಕೂ ದೇಗುಲ, ಛತ್ರ, ಅಥವಾ ಶಿಕ್ಷಣ ಸಂಸ್ಥೆಗಳನ್ನು ನಿರ್ಮಿಸುವುದಿಲ್ಲ.
ಹಸಿವು ಮತ್ತು ಬಡತನದಿಂದ ಬಳಲುತ್ತಿರುವ ಭಾರತದ ಬಡವರು ನಮ್ಮ ಪಾಲಿನ ನಿಜವಾದ ದೇವರಾಗಿದ್ದಾರೆ. ನೀವು ದಾನ ನೀಡುವ ಜಮೀನು ಅವರಿಗೆ ಸಲ್ಲುತ್ತದ ಎಂದು ಘೋಷಿಸುತ್ತಾ ಹೋದರು. ಮೊದಲ 70 ದಿನಗಳ ಪ್ರವಾಸದಲ್ಲಿ 12 ಸಾವಿರ ಎಕರೆ ಭೂಮಿ ದಾನವಾಗಿ ದೊರೆತರೆ, ನಂತರದ 60 ದಿನಗಳಲ್ಲಿ 18 ಸಾವಿರ ಎಕರೆ ಭೂಮಿ ದೊರೆಯಿತು.

ಮೊದಲ ಹಂತದ 800 ಕಿಲೋಮೀಟರ್ ಪಾದಯಾತ್ರೆಯಲ್ಲಿ 30 ಸಾವಿರ ಎಕರೆ ಭೂಮಿಯು ಭೂದಾನವಾಗಿ ವಿನೋಬಾರವರ ಮಡಿಲು ಸೇರಿತ್ತು. 1952 ರಲ್ಲಿ ನೆಹರೂ ರವರು ವಿನೋಬಾ ಅವರನ್ನು ದೆಹಲಿಗೆ ಆಹ್ವಾನಿಸಿ, ಪಂಚವಾರ್ಷಿಕ ಯೋಜನೆಗಳಲ್ಲಿ ಗ್ರಾಮಾಭಿವೃದ್ಧಿಯ ಕುರಿತು ಯಾವ ರೀತಿಯ ಯೋಜನೆಗಳು ಇರಬೇಕೆಂದು ಕೇಳಿದಾಗ ಆಚಾರ್ಯರು ನೀಡಿದ ಉತ್ತರ ಹೀಗಿತ್ತು. “ ಬಡವರ ಹಸಿವನ್ನು ನೀಗಿಸಿಲಾಗದ, ದುಡಿಯುವ ಕೈಗಳಿಗೆ ಕೆಲಸ ನೀಡಲಾಗದ ನಿಮ್ಮ ಪಂಚವಾರ್ಷಿಕ ಯೋಜನೆಗಳನ್ನು ಕಸದ ಬುಟ್ಟಿಗೆ ಬಿಸಾಡಿ. ಮೊದಲು ನೀವು , ನಿಮ್ಮ ಪರಿವಾರ ದೆಹಲಿ ಬಿಟ್ಟು ಹಳ್ಳಿಗಳತ್ತ ಹೊರಡಿ. ಅಲ್ಲಿ ದರ್ಶನವಾಗುವ ನರಕ ಸದೃಶ್ಯ ಬದುಕು ನಿಮಗೆ ದಾರಿ ತೋರಿಸುತ್ತದೆ”.
1958ರಲ್ಲಿ ವಿನೋಬಾ ಅವರು ಸಲ್ಲಿಸಿದ ಸಮಾಜ ಸೇವೆಗಾಗಿ ಮ್ಯಾಗ್ಸೆಸೆ ಪ್ರಶಸ್ತಿ ಮತ್ತು
1983ರಲ್ಲಿ ಮರಣೋತ್ತರವಾಗಿ ಭಾರತ ರತ್ನ ಪ್ರಶಸ್ತಿಯನ್ನು ಘೋಷಿಸಲಾಯಿತು.
1982ರ ವರ್ಷದಲ್ಲಿ ಅವರು ತೀವ್ರ ಅನಾರೋಗ್ಯದಿಂದಿದ್ದರೂ ಯಾವುದೇ ರೀತಿಯ ಔಷದೋಪಚಾರ ಸ್ವೀಕರಿಸಲು ಒಪ್ಪದೆ ನವೆಂಬರ್ 15, 1982ರಂದು ನಿಧನರಾದರು. ಸ್ವಾರ್ಥಕ್ಕಾಗಿಯೇ ಬದುಕುವ ಸಂಕುಚಿತ ಮನೋಭಾವದ ಜನರೇ ಹೆಚ್ಚಾಗಿರುವ ಈ ಕಾಲದಲ್ಲಿ ವಿನೋಬಾ ಭಾವೆ ರವರ ಜೀವನ ಮಾದರಿಯಾಗಿ ಕಾಣಿಸುತ್ತದೆ. ಭಾರತೀಯ ಸಮಾಜದ ಸ್ವಾತಂತ್ರ್ಯ ಮತ್ತು ಒಳಿತಿಗಾಗಿ ಶ್ರಮಿಸಿದ ಆಚಾರ್ಯ ವಿನೋಬಾ ಭಾವೆ ಅವರು ಜನಮನದಲ್ಲಿ ಇಂದಿಗೂ  ಚಿರಸ್ಥಾಯಿಯಾಗಿದ್ದಾರೆ. 

ಸಿಹಿಜೀವಿ ವೆಂಕಟೇಶ್ವರ
ತುಮಕೂರು

ಆಗಸ್ಟ್_ಮಾಸದ_ನೆನಪುಗಳು #ಭಾಗ_4 #ಬಳ್ಳಾರಿ_ಸಿದ್ದಮ್ಮ.


 #ಆಗಸ್ಟ್_ಮಾಸದ_ನೆನಪುಗಳು 


#ಭಾಗ_4 


#ಬಳ್ಳಾರಿ_ಸಿದ್ದಮ್ಮ.


 ಕಿತ್ತೂರುರಾಣಿ ಚನ್ನಮ್ಮ,  ಬೆಳವಾಡಿ ಮಲ್ಲಮ್ಮ, ಝಾನ್ಸಿ ರಾಣಿ ಲಕ್ಷ್ಮೀಬಾಯಿ ಮುಂತಾದ ಧೀರ ಮಹಿಳೆಯರು ಬ್ರಿಟಿಷ್ ಸಾಮ್ರಾಜ್ಯದ ವಿರುದ್ಧ ಸೊಲ್ಲೆತ್ತಿ ನಮ್ಮ ಮನದಲ್ಲಿ ಅಚ್ಚಳಿಯದೆ ಉಳಿದಿದ್ದಾರೆ.

 ಇವರಂತೆ ಸಾವಿರಾರು    ಮಹಿಳೆಯರು ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ಬ್ರಿಟಿಷರ ವಿರುದ್ಧ ಹೋರಾಟ ಮಾಡಿದ್ದಾರೆ.  ಸ್ವಾತಂತ್ರ್ಯ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದು ಸ್ವಾತಂತ್ರ್ಯಾನಂತರ ಫಲಾಪೇಕ್ಷೆಯಿಲ್ಲದೆ ತೆರೆ ಮರೆಗೆ ಸರಿದ ಧೀಮಂತ ಮಹಿಳೆಯರನ್ನು ಆಗಸ್ಟ್ ಮಾಸದಲ್ಲಿ ನೆನೆಪು ಮಾಡಿಕೊಳ್ಳುವುದು ನಮ್ಮ ಕರ್ತವ್ಯ.ಅಂತಹವರಲ್ಲಿ ಪ್ರಮುಖ ಮಹಿಳೆ ಎಂದರೆ 'ಬಳ್ಳಾರಿ ಸಿದ್ದಮ್ಮ'ನವರು. 


ಮಹಾತ್ಮ ಗಾಂಧೀಜಿಯವರನ್ನು ನೋಡಲು ಕರ್ನಾಟಕದ ಬಳ್ಳಾರಿಯಿಂದ ಗುಜರಾತ್ ನ ಸಬರಮತಿ ಆಶ್ರಮಕ್ಕೆ ತೆರಳಿದ ದಿಟ್ಟ ಮಹಿಳೆ ನಮ್ಮ ಸಿದ್ದಮ್ಮ. ಶಿವಪುರ ಧ್ವಜ ಸತ್ಯಾಗ್ರಹ, ವಿದುರಾಶ್ವತ್ಥ ಧ್ವಜ ಸತ್ಯಾಗ್ರಹ ಗಳಲ್ಲಿ ಮಹಿಳೆಯರನ್ನು ಹುರಿದುಂಬಿಸಿ ಸ್ವತಂತ್ರ ಚಳುವಳಿಯನ್ನು ಜನಾಂದೋಲನ ಮಾಡುವಲ್ಲಿ ಸಿದ್ದಮ್ಮ ನವರು ಪ್ರಮುಖ ಪಾತ್ರ ವಹಿಸಿದರು. 


ಬಳ್ಳಾರಿ ಸಿದ್ದಮ್ಮನವರು ಬಳ್ಳಾರಿ ಜಿಲ್ಲೆ ಹಾವೇರಿ ತಾಲ್ಲೂಕಿನ ದುಂಡಸಿ ಗ್ರಾಮದ ಸಂಪ್ರದಾಯಸ್ಥ ಲಿಂಗಾಯತ ಸಮುದಾಯದ ಕುಟುಂಬದಲ್ಲಿ 1900ರಲ್ಲಿ ಜನಿಸಿದರು. ಇವರ ತಂದೆ ತಾಯಂದಿರು ಬಸೆಟಪ್ಪ ಮತ್ತು ಶಿವಮ್ಮ. ಬಸೆಟಪ್ಪನವರು ಮಧ್ಯಮ ಪ್ರಮಾಣದ ವ್ಯಾಪಾರಸ್ಥರು.  ಸಂಪ್ರದಾಯಸ್ಥ  ಸಮಾಜದಲ್ಲಿ ಹೆಣ್ಣುಮಕ್ಕಳನ್ನು ಶಾಲೆಗೆ ಕಳುಹಿಸುವ ಪದ್ದತಿ ಇರಲಿಲ್ಲ. ಅವರ ಕಲಿಕೆ ಏನಿದ್ದರೂ ಮನೆಯ ನಾಲ್ಕು ಗೋಡೆಗಳ ಮಧ್ಯೆ. ಸಿದ್ದಮ್ಮಳಿಗೆ ಕಲಿಯಬೇಕೆಂಬ ಇಚ್ಛೆಯಿದ್ದರೂ ತಂದೆತಾಯಂದಿರು ಅದಕ್ಕೆ ವಿರೋಧ ಮಾಡಿದರು. ಕದ್ದುಮುಚ್ಚಿ ನಾಲ್ಕನೆಯ  ತರಗತಿಯ ತನಕ ವ್ಯಾಸಂಗ ಮಾಡಿದ್ದಾಯ್ತು. ಪ್ರಾಪ್ತ ವಯಸ್ಸಿಗೆ ಬರುತ್ತಲೇ ಬಳ್ಳಾರಿಯ ಮುರುಗಪ್ಪನವರೊಂದಿಗೆ ವಿವಾಹವಾಯ್ತು. ಸುಖ ದಾಂಪತ್ಯ ಮನೆಯಲ್ಲಿ ಯಾವುದಕ್ಕೂ ಕೊರತೆ ಇರಲಿಲ್ಲ.   

ಇದೇ ಸಂದರ್ಭದಲ್ಲಿ ರಾಷ್ಟ್ರೀಯ ಆಂದೋಲನವು ಇಡೀ ದೇಶವನ್ನು ವ್ಯಾಪಿಸಿತು. ಅದರಲ್ಲೂ ಮಹಾತ್ಮ ಗಾಂಧಿಯವರು ಪ್ರಭಾವದಿಂದಾಗಿ 1920 ರಲ್ಲಿ ಆಸಹಕಾರ  ಚಳುವಳಿ,1939 ರಲ್ಲಿ ಉಪ್ಪಿನ ಸತ್ಯಾಗ್ರಹಗಳು ಭಾರತೀಯರಲ್ಲಿ ಸ್ವಾತಂತ್ರ್ಯದ ಕಿಚ್ಛನ್ನು ಹೆಚ್ಚಿತ್ತು. ವಿದ್ಯಾವಂತರಲ್ಲದಿದ್ದರೂ ಸ್ವಾತಂತ್ರ್ಯಕ್ಕಾಗಿ ಹೋರಾಡಲು ಅವರ ಮನಸ್ಸು ತುಡಿಯುತ್ತಿತ್ತು. ತಿಲಕರ ಕೇಸರಿ, ಮರಾಠಿ ಪತ್ರಿಕೆಗಳು ಅವರ ಮೇಲೆ ಪ್ರಬಾವ ಬೀರಿದವು. ಮಹಾತ್ಮ ಗಾಂಧೀಜಿಯವರನ್ನು ನೋಡಿರದಿದ್ದರೂ ಅವರ ಪ್ರಭಾವ ಮುರುಗಪ್ಪ ದಂಪತಿಗಳ ಮೇಲೆ ಬಿದ್ದಿತು.   ಸಿದ್ದಮ್ಮನವರಿಗೆ ಗಾಂಧೀಜಿಯವರನ್ನು ನೋಡಬೇಕು, ಆ ಮಹಾತ್ಮನೊಂದಿಗೆ ಮಾತನಾಡಬೇಕು, ಅವರು ಎಲ್ಲಿ ಇರುತ್ತಾರೆ?ಎಲ್ಲಿ ಸಿಗುತ್ತಾರೆ ?ಎಂಬ ಕುತೂಹಲ. ಗಾಂಧೀಜಿಯವರನ್ನು ನೋಡಬೇಕೆಂದರೆ ವಾರ್ದಾದ ಅವರ ಆಶ್ರಮಕ್ಕೆ ಹೋದರೆ ಸಿಗುತ್ತಾರೆ ಎಂದು ತಿಳಿಯಿತು.ಅಲ್ಲಿಗೆ ಹೋಗಿ ಬರಲು ಹಣ ಬೇಕು. ಕೆಲವು ಕಾಲ ಅಲ್ಲಿಯೇ ತಂಗಬೇಕು. ಇವೇ ಮುಂತಾದ ಪ್ರಶ್ನೆಗಳು ಬಂದಾಗ ಉತ್ತರ ಸಿದ್ದಮ್ಮನವರಲ್ಲಿತ್ತು. ಮನಸ್ಸಿದ್ದರೆ ಮಾರ್ಗ ಎಂಬಂತೆ ಗುಜರಾತಿನ ವಾರ್ದಾಕ್ಕೆ ತೆರಳಿದರು. ಸಿದ್ದಮ್ಮನವರು. ಗಾಂಧೀಜಿಯವರನ್ನು ನೋಡಿ ಅವರೊಂದಿಗೆ ಮಾತನಾಡಿದರು.  ಆಶ್ರಮದಲ್ಲಿದ್ದ ಸಮಯದಲ್ಲಿ ಸ್ವಚ್ಛತಾ ಕೆಲಸ , ದವಸ ದಾನ್ಯಗಳಲ್ಲಿರುವ ಕಲ್ಲು, ಕಡ್ಡಿ ತೆಗೆಯುವುದು. ಮುಂತಾದ ಕೆಲಸಗಳನ್ನು ಮಾಡುತ್ತಾ ಇರುವಾಗಲೇ  ನಾಯಕರಗಳಾದ ಸರ್ದಾರ್ ವಲ್ಲಭಬಾಯಿ ಪಟೇಲ್, ರಾಜಗೋಪಾಚಾರಿ, ಕಾಮರಾಜ್  ಮುಂತಾದವರನ್ನು ಕಾಣುವ ಭಾಗ್ಯ ದೊರೆಯಿತು. ತಾನೂ ಅಂತಹ ನಾಯಕಿಯಾಗಬೇಕೆಂಬ ಹಂಬಲ ಸಿದ್ದಮ್ಮನವರಲ್ಲಿ ಮೂಡಿತು. ಸ್ವಾತಂತ್ರ್ಯಕ್ಕಾಗಿ ತಮ್ಮನ್ನು ಅರ್ಪಿಸಿಕೊಳ್ಳಬೇಕು ಎಂಬುದಾಗಿ ತೀರ್ಮಾನಿಸಿದರು. ಕರ್ನಾಟಕ ರಾಜ್ಯವು ಅಂದು ಹರಿದು ಹಂಚಿಹೋಗಿತ್ತು. ಒಂದೆಡೆ ಕರ್ನಾಟಕದ ಏಕೀಕರಣಕ್ಕಾಗಿ ಹೋರಾಟ ನಡೆಯುತ್ತಿದ್ದರೆ ಮತ್ತೊಂದೆಡೆ ಸ್ವಾತಂತ್ಯಕ್ಕಾಗಿ ಹೋರಾಟ ನಡೆಯುತ್ತಿತ್ತು. ಉತ್ತರ ಕರ್ನಾಟಕ ಭಾಗದಲ್ಲಿ ಹಳೇ ಮೈಸೂರು ಭಾಗದಲ್ಲಿ ನಿರಂತರವಾಗಿ  ಬ್ರಿಟಿಷರ ಹಾಗೂ ಆಳರಸರ ವಿರುದ್ದ ಚಳುವಳಿ ನಡೆಯುತ್ತಿತ್ತು.  

 ಬಳ್ಳಾರಿ ಸಿದ್ದಮ್ಮನವರು  ಚಳುವಳಿಗಾರರನ್ನು ಹರಿದುಂಬಿಸುತ್ತಿದ್ದರು. ಪೋಲಿಸರಿಗೆ ಹೆದರದೆ ಭಾಷಣ ಮಾಡುತ್ತಿದ್ದರು. ಪ್ರತಿಯೊಬ್ಬ ವ್ಯಕ್ತಿಗೂ ಜೀವನದಲ್ಲಿ ಒಂದು ಅವಕಾಶ ಸಿಗುತ್ತದೆ. ಅದನ್ನು ಸದುಪಯೋಗಪಡಿಸಿಕೊಳ್ಳಬೇಕು ಇಲ್ಲದಿದ್ದರೆ ಅದು ಕೈತಪ್ಪಿ ಹೋಗುತ್ತದೆ. ಅಂತಹ ಒಂದು ಅವಕಾಶ ಸಿದ್ದಮ್ಮನವರಿಗೆ ಲಭಿಸಿತು. ಅದೇ  ಮಂಢ್ಯ ಜಿಲ್ಲೆ, ಮದ್ದೂರು ತಾಲ್ಲೂಕು ಶಿವಪುರದಲ್ಲಿ ನಡೆದ ಧ್ವಜಸತ್ಯಾಗ್ರಹ. ಸಿದ್ದಮ್ಮನವರು ಬಳ್ಳಾರಿ ದಾವಣಗೆರೆ,ಚಿತ್ರದುರ್ಗ ಜಿಲ್ಲೆಗಳಲ್ಲಿ ನಡೆಯುತ್ತಿದ್ದ ಚಳುವಳಿಗಳು ಹರತಾಳಗಳಲ್ಲಿ ಸಕ್ರಿಯವಾಗಿ ಭಾಗವಹಿಸುತ್ತಿದ್ದರು. ಶ್ರೀಯುತರುಗಳಾದ ಎಸ್.ನಿಜಲಿಂಗಪ್ಪ, ಟಿ.ಸಿದ್ದಲಿಂಗಯ್ಯ, ಕೆ.ಎಸ್.ಪಾಲರು ಹಾಗೂ ಇನ್ನಿತರ ಮುಖಂಡರು ಚಳುವಳಿಯನ್ನು ಹಬ್ಬಿಸುತ್ತಿದ್ದರು. ಸಿದ್ದಮ್ಮನವರು ಈ ನಾಯಕರುಗಳಿಗೆ ಸಾತ್ ನೀಡುತ್ತಿದ್ದರು.


ಇಡೀ ರಾಜ್ಯದಲ್ಲಿ ಪ್ರಥಮ ಬಾರಿಗೆ ಕಾಂಗ್ರೆಸ್ ದ್ವಜವನ್ನು ಸಾರ್ವಜನಿಕವಾಗಿ ಧ್ವಜಾರೋಹಣ ಮಾಡಲು ಒಂದು ಸ್ವಾಗತ ಸಮಿತಿಯನ್ನು ರಚಿಸಿಕೊಂಡರು. ಇದೊಂದು ಭಾರೀ ಪ್ರಮಾಣದ ಸಭೆಯಾದುದರಿಂದ ಹೆಚ್ಚಾಗಿ ಹಣಕಾಸಿನ ಅಗತ್ಯವಿದ್ದಿತು. ಆ ಕಾರಣದಿಂದಾಗಿಯೇ ಸಾಹುಕಾರ್ ಚನ್ನಯ್ಯನವರನ್ನು ಸ್ವಾಗತ ಸಮಿತಿ ಅಧ್ಯಕ್ಷರನ್ನಾಗಿ ಮಾಡಿದರು. ಹೆಚ್.ಕೆ.ವೀರಣ್ಣ ಗೌಡರು ಕಾರ್ಯದರ್ಶಿಯಾಗಿದ್ದರು. ಕೊಪ್ಪದ ಜೋಗಿಗೌಡರನ್ನು ಖಜಾಂಚಿಯನ್ನಾಗಿಯೂ ಎಂ.ಎನ್.ಜೋಯಿಸ್ರವರನ್ನು ಜೆ.ಓ.ಸಿ.ಯನ್ನಾಗಿ ನೇಮಕ ಮಾಡಿರುವುದಗಿ ಪ್ರಕಟಿಸಿದರು. ಶಿವಪುರದಲ್ಲಿ ತಿರುಮಲೇಗೌಡರ ಜಾಗದಲ್ಲಿ ಧ್ವಜಾರೋಹಣ ಮಾಡಲು ತೀರ್ಮಾನಿಸಿದರು. ಸಭೆ ನಡೆಯುವ ಒಂದು ವಾರ ಮೊದಲೇ ಹೆಚ್.ಸಿ.ದಾಸಪ್ಪ, ಯಶೋಧರ ದಾಸಪ್ಪ, ಬಳ್ಳಾರಿ ಸಿದ್ದಮ್ಮ, ತಾಯಮ್ಮ ವೀರಣ್ಣಗೌಡ, ವೆಂಕಮ್ಮ ಸೀತಾರಾಮಯ್ಯ ಇಂದಿರಾಬಾಯಿ ಕೃಷ್ಣಮೂರ್ತಿ ಇನ್ನೂ ಮುಂತಾದ ನಾಯಕರು ಶಿವಪುರಕ್ಕೆ ಬಂದಿಳಿದರು. ಮಹಿಳೆಯರು ಒಂದೊಂದು ತಂಡಗಳನ್ನಾಗಿ ಮಾಡಿಕೊಂಡು ಹಳ್ಳಿಗಳಿಗೆ ತೆರಳಿ ಗ್ರಾಮಗಳ ಮಹಿಳೆಯರು ಚಳುವಳಿಯಲ್ಲಿ ಭಾಗವಹಿಸುವಂತೆ ಮಾಡುತ್ತಿದ್ದರು. ಸಿದ್ದಮ್ಮನವರು ಬಳ್ಳಾರಿಯಿಂದ ಶಿವಪುರದಂತಹ ಹಳ್ಳಿಗೆ ಬಂದು ಜನರನ್ನು ಹುರಿದುಂಬಿಸುತ್ತಿರುವುದನ್ನು ನೋಡಿದ ಜನ ಸ್ವಇಚ್ಛೆಯಿಂದ ಚಳುವಳಿಗೆ ಧುಮುಕಿದರು. ಹೆಚ್.ಕೆ.ವೀರಣ್ಣಗೌಡ, ಹೆಚ್.ಸಿ.ದಾಸಪ್ಪ, ಸಾಹುಕಾರ್ ಚನ್ನಯ್ಯ ಇನ್ನೂ ಮುಂತಾದವರು ಟಿ. ಸಿದ್ದಲಿಂಗಯ್ಯನವರನ್ನು ಸಮ್ಮೇಳನದ ಅಧ್ಯಕ್ಷರನ್ನಾಗಿ ಮಾಡಿದರು. ಇಂದಿನ ಮಂಡ್ಯ ಜಿಲ್ಲೆ ಮದ್ದೂರು ತಾಲ್ಲೂಕು ಶಿವಪುರದಲ್ಲಿ 1938 ಏಪ್ರಿಲ್ 11, 12, ಹಾಗೂ 13 ರಂದು ಕಾಂಗ್ರೆಸ್ ದ್ವಜವನ್ನು ಹಾರಿಸಲು   ತೀರ್ಮಾನಿಸಿದರು.ಇದನ್ನು ಶಿವಪುರ ರಾಷ್ಟ್ರಕೂಟವೆಂದು ಕರೆದರು. 1938 ರ  ಏಪ್ರಿಲ್ 11ನೇ ತಾರೀಖು ಶಿವಪುರದಲ್ಲಿ ಮೂವತ್ತು ಸಾವಿರ ಜನ ಸೇರಿದರು. ಜಿಲ್ಲಾ ಮ್ಯಾಜಿಸ್ಟ್ರೇಟರಾದ ಜಿ.ಎಂ.ಮೇಕ್ರಿಯವರು ಶಿವಪುರ  ಸುತ್ತಮುತ್ತ ಧ್ವಜಾರೋಹಣ  ಮಾಡದಂತೆ ನಿಷೇಧ ಹೇರಿದ್ದರು. ಅಂದು  ಟಿ. ಸಿದ್ದಲಿಂಗಯ್ಯನವರನ್ನು ಮೆರವಣಿಗೆಯಲ್ಲಿ ಕರೆತರಲಾಯಿತು. ಟಿ ಸಿದ್ದಲಿಂಗಯ್ಯನವರು ಧ್ವಜಾರೋಹಣ ಮಾಡಲಾಗಿ ಅವರನ್ನು ಬಂಧಿಸಿ ಜಿಲ್ಲಾ ನ್ಯಾಯಾಲಯಕ್ಕೆ ಕರೆದುಕೊಂಡು ಹೋದರು. ಸ್ತ್ರೀ ಮುಖಂಡರು ವೇದಿಕೆಯ ಮೇಲೆ ಕುಳಿತಿದ್ದರು. ಸಿದ್ದಲಿಂಗಯ್ಯನವರು ತರುವಾಯ ಹೆಚ್.ಸಿ.ದಾಸಪ್ಪನವರು, ಎಂ.ಎಸ್.ಜೋಯಿಸ್, ಯಶೋಧರ ದಾಸಪ್ಪನವರು, ನಂತರ ಬಳ್ಳಾರಿ ಸಿದ್ದಮ್ಮನವರು ಧ್ವಜಾರೋಹಣ ಮಾಡಿದರು. ಇವರುಗಳನ್ನು ಬಂಧಿಸಿ ಮಂಡ್ಯದ ಜಿಲ್ಲಾ ನ್ಯಾಯಾಲಯಕ್ಕೆ ಕರೆದೂಯ್ದರು. ಬಳ್ಳಾರಿ ಸಿದ್ದಮ್ಮನವರಿಗೆ ಶಿಕ್ಷೆಯಾಯಿತು. 

ಶಿವಪುರದಲ್ಲಿ ನಡೆದ ಧ್ವಜಸತ್ಯಾಗ್ರಹವು ಚಳುವಳಿಗಾರರಿಗೆ ಸ್ಫೂರ್ತಿಯಾಯಿತು. ತಮ್ಮ ತಮ್ಮ ಪಟ್ಟಣಗಳಲ್ಲಿ ಧ್ವಜಾರೋಹಣ ಮಾಡಲು ಜನ ಮುಂದಾದರು. ಅದೇರೀತಿ  ಅಂದಿನ  ಕೋಲಾರ ಜಿಲ್ಲೆ ಇಂದಿನ ಚಿಕ್ಕಬಳ್ಳಾಪುರ ಜಿಲ್ಲೆಯ  ಗೌರಿಬಿದನೂರಿನ ವಿದುರಾಶ್ವತ್ಥ ಎಂಬಲ್ಲಿ ಧ್ವಜಸತ್ಯಾಗ್ರಹ ಏರ್ಪಾಡಾಯಿತು. ಈಗಾಗಲೇ ತಿಳಿಸಿರುವಂತೆ ಶಿವಪುರ  ರಾಷ್ಟ್ರಕೂಟದ ಪ್ರಭಾವದಿಂದಾಗಿ ಬಳ್ಳಾರಿ ಸಿದ್ದಮ್ಮನವರು ಸೇರಿದಂತೆ ಕೆಲವು ಮಹಿಳಾ ಮುಖಂಡರು ವಿದುರಾಶ್ವತ್ಥಕ್ಕೆ ಬಂದಿಳಿದು ಧ್ವಜಾರೋಹಣ ಮಾಡಿದರು. ಜಿಲ್ಲಾ ಮ್ಯಾಜಿಸ್ಟ್ರೇಟರ ಆಜ್ಞೆಯಂತೆ ಪೋಲಿಸರು ಚಳುವಳಿಕಾರರ ಮೇಲೆ ಗುಂಡು ಹಾರಿಸಿದರು. ಕೆಲವರು ಅಸುನೀಗಿದರು. ಗರ್ಭಿಣಿ ಸ್ತ್ರೀಯೊಬ್ಬಳು ಈ ಗೋಲಿಬಾರ್ನಲ್ಲಿ ಅಸುನೀಗಿದಳು ಎಂದು ಸುಳ್ಳು ಸುದ್ದಿ ಹರಡಿತು. ಜನ ರೊಚ್ಚಿಗೆದ್ದು ದಾಂದಲೆ ನಡೆಸಿದರು. ಇದು ರಾಷ್ಟೀಯ ಸುದ್ದಿಯಾಯಿತು. ಸ್ವಾತಂತ್ರ್ಯ ನಂತರ ದಾವಣಗೆರೆಯ ಶಾಸಕಿಯಾಗಿ ಆಯ್ಕೆಯಾದ ಸಿದ್ದಮ್ಮ ರವರು ಹಲವಾರು ಜನಪರ ಕಾರ್ಯಗಳಿಂದ ಜನಮನ ಗೆದ್ದರು. 1982 ನೇ ಇಸವಿಯಲ್ಲಿ ಅವರು ದೈವಾಧೀನರಾದರು. ಈ ಆಗಸ್ಟ್ ಮಾಸದಲ್ಲಿ ಆ ಮಹಾನ್ ಚೇತನಕ್ಕೆ ನಮ್ಮ ನಮನ ಸಲ್ಲಿಸೋಣ...


ಸಿಹಿಜೀವಿ ವೆಂಕಟೇಶ್ವರ

ತುಮಕೂರು.

9900925529

03 August 2023

ಆಗಸ್ಟ್ ಮಾಸದ ನೆನಪುಗಳು...* ಭಾಗ _3 *ಲೋಕಮಾನ್ಯ ಬಾಲ ಗಂಗಾಧರ ತಿಲಕ್

 

*ಆಗಸ್ಟ್ ಮಾಸದ ನೆನಪುಗಳು...*

ಭಾಗ _3

*ಲೋಕಮಾನ್ಯ  ಬಾಲ ಗಂಗಾಧರ ತಿಲಕ್*

ಭಾರತದ ಚಳುವಳಿಯ ಜನಕ ಎಂಬ ಬಿರುದು ಪಡೆದ ನಾಯಕ, ಗಣೇಶ ಚತುರ್ಥಿ ಮತ್ತು ಶಿವಾಜಿ ಜಯಂತಿಗಳನ್ನು ರಾಷ್ಟ್ರೀಯತೆ ಬಿತ್ತುವ ಹಬ್ಬಗಳಾಗಿ ಪರಿವರ್ತಿಸಿದ ಮಹಾನಾಯಕ ,  ಸ್ವರಾಜ್ಯ ನನ್ನ ಜನ್ಮ ಸಿದ್ದ ಹಕ್ಕು ಅದನ್ನು ಪಡೆದೇ ತೀರುವೆ ಎಂದು ಘರ್ಜಿಸಿದ ಹುಲಿ,    ಜನಮಾನಸದಲ್ಲಿ  ಲೋಕಮಾನ್ಯ ಎಂದೇ ನೆಲೆಯೂರಿದ್ದ ಬಾಲ ಗಂಗಾಧರ ತಿಲಕ್ ರವರು ಪ್ರಾತಃ ಸ್ಮರಣೀಯರು. ಆಗಸ್ಟ್ ಮಾಸದ ಈ ಕಾಲದಲ್ಲಿ ತಿಲಕ್ ರವರ ತ್ಯಾಗ ಬಲಿದಾನ ನೆನೆಯುತ್ತಾ ಮಾಸದ ನೆನಪುಗಳ ಮೆಲುಕು ಹಾಕುತ್ತಾ ಮುಂದಿನ ಪೀಳಿಗೆಗೆ ಇಂತಹ ಸ್ವಾತಂತ್ರ್ಯ ಹೋರಾಟಗಾರರ ಬಗ್ಗೆ ಅರಿವು ಮೂಡಿಸೋಣ.

ಬಾಲ ಗಂಗಾಧರ  ತಿಲಕರು ಹುಟ್ಟಿದ್ದು 1856ರ ಜುಲೈ 23ರಂದು ಮಹಾರಾಷ್ತ್ರದ ರತ್ನಗಿರಿಯ ಮಧ್ಯಮ ವರ್ಗದ ಕುಟುಂಬವೊಂದರಲ್ಲಿ ಜನಿಸಿದ ಇವರು  ಚತುರ ವಿದ್ಯಾರ್ಥಿಯಾಗಿದ್ದರು. ಗಣಿತದಲ್ಲಿ ವಿಶೇಷ ಪ್ರತಿಭೆಯಿತ್ತು. ಆಧುನಿಕ, ಕಾಲೇಜು ಶಿಕ್ಷಣ ಪಡೆದುಕೊಂಡ ನವ ಪೀಳಿಗೆಯ ಯುವಕರಲ್ಲಿ ತಿಲಕರೂ ಒಬ್ಬರಾಗಿದ್ದರು. ಪದವಿ ಪಡೆದ ಬಳಿಕ ಪುಣೆಯ ಖಾಸಗೀ ಶಾಲೆಯೊಂದರಲ್ಲಿ ಗಣಿತ ಶಿಕ್ಷಕರಾಗಿ ಸೇರಿದ ತಿಲಕರು ನಂತರ ಅದನ್ನು ಬಿಟ್ಟು ಪತ್ರಕರ್ತರಾದರು. ಪಾಶ್ಚಿಮಾತ್ಯ ಶಿಕ್ಷಣ ಪಧ್ಧತಿಯು ಭಾರತೀಯ ಪರಂಪರೆಯನ್ನು ಅವಹೇಳಿಸುವಂಥಾದ್ದೂ ಹಾಗೂ ಭಾರತದ ವಿದ್ಯಾರ್ಥಿಗಳನ್ನು ಕೀಳುಗಳೆಯುವಂಥಾದ್ದು ಎಂಬ ನಿರ್ಧಾರಕ್ಕೆ ಬಂದ ಅವರು ಈ ಪಧ್ಧತಿಯ ತೀವ್ರ ಟೀಕಾಕಾರರಾದರು. ವಿದ್ಯಾರ್ಥಿಗಳಿಗೆ ಒಳ್ಳೆಯ ಗುಣಮಟ್ಟದ ಶಿಕ್ಷಣ ದೊರೆಯಬೇಕು ಎಂಬ ಉದ್ದೇಶದಿಂದ ಪುಣೆಯಲ್ಲಿ ಡೆಕ್ಕನ್ ಎಜುಕೇಶನ್ ಸೊಸೈಟಿಯನ್ನು ಸ್ಥಾಪಿಸಿದರು.

ತಿಲಕರು ಸ್ಥಾಪಿಸಿದ "ಕೇಸರಿ"  ಮತ್ತು  ಮರಾಠ ಪತ್ರಿಕೆಗಳು ಬಹುಬೇಗ ಜನಸಾಮಾನ್ಯರ ಮನೆಮಾತಾದವು. ಅಭಿಪ್ರಾಯ ಸ್ವಾತಂತ್ರ್ಯವನ್ನು, ಅದರಲ್ಲೂ ಮುಖ್ಯವಾಗಿ, 1905ರ ಬಂಗಾಳದ ವಿಭಜನೆಯ ವಿರೋಧವನ್ನು  ಹತ್ತಿಕ್ಕಿದ ಭಾರತದ ನಾಗರೀಕರನ್ನು  ಸಂಸೃತಿಯನ್ನು, ಪರಂಪರೆಯನ್ನು ಹೀಯಾಳಿಸುವ ಬ್ರಿಟಿಷ್ ಆಡಳಿತದ ವಿರುದ್ಧ ತೀವ್ರ ಟೀಕೆಯನ್ನು ಅವರು ಕೇಸರಿಯಲ್ಲಿ ಮಾಡುತ್ತಿದ್ದರು. ಭಾರತೀಯರಿಗೆ ಸ್ವರಾಜ್ಯದ ಹಕ್ಕನ್ನು ಬಿಟ್ಟುಕೊಡಬೇಕೆಂದು ಅವರು ಪ್ರತಿಪಾದಿಸಿದರು. 1890ರ ದಶಕದಲ್ಲಿ ತಿಲಕರು ಕಾಂಗ್ರೆಸ್ ಸೇರಿದರಾದರೂ  ಬಹುಬೇಗ  ಅದರ ಕೆಲ ನೀತಿಗಳನ್ನು ವಿರೋಧಿಸಿ ಹೊರನಡೆದರು. ಲಾಲ್ ಬಾಲ್ ಪಾಲ್ ಎಂದೇ ಖ್ಯಾತರಾದ
 ಬಿಪಿನ ಚಂದ್ರ ಪಾಲ್ ಹಾಗೂ ಪಂಜಾಬಿನ ಲಾಲಾ ಲಜಪತ ರಾಯ್  ರವರ ಜೊತೆಗೂಡಿ ಸ್ವಾತಂತ್ರ್ಯ ಚಳುವಳಿಯಲ್ಲಿ ತೊಡಗಿಕೊಂಡರು.
1907 ರ ಸೂರತ್ ಅಧಿವೇಶನದಲ್ಲಿ  ಲಾಲ್ ಬಾಲ್ ಪಾಲ್  ನೇತ್ಳತ್ವದಲ್ಲಿ "ಗರಂ ದಳ" ವನ್ನು ಸ್ಥಾಪಿಸಿ ಹೋರಾಟವನ್ನು ಚುರುಕುಗೊಳಿಸಿದರು.
  ವಿವಿಧ ಮೊಕದ್ದಮೆಗಳ ಅಡಿಯಲ್ಲಿ  ಬ್ರಿಟಿಷ್ ನ್ಯಾಯಾಧೀಶರಿಂದ ಅಪರಾಧಿ ಎಂದು ಘೋಷಿಸಲ್ಪಟ್ಟು, 1908 ರಿಂದ 1914 ರವರೆಗೆ ಬರ್ಮಾ ದೇಶದ ಮಂಡಾಲೆಯಲ್ಲಿ ಸೆರೆವಾಸ ಅನುಭವಿಸಿದರು. ಬಿಡುಗಡೆಯಾದ ನಂತರ ತಮ್ಮ ಸಹ- ರಾಷ್ಟ್ರೀಯವಾದಿಗಳನ್ನು ಕೂಡಿಕೊಂಡ ತಿಲಕರು  ಅಖಿಲ ಭಾರತ ಹೋಂ ರೂಲ್ ಲೀಗನ್ನು ಸ್ಥಾಪಿಸುವಲ್ಲಿ ಆನಿ ಬೆಸೆಂಟ್ ಮತ್ತು ಮಹಮದ್ ಆಲಿ ಜಿನ್ನಾರಿಗೆ ಸಹಕಾರ ನೀಡಿದರು. ಅದರ ಮೂಲಕ ಸ್ವಾತಂತ್ರ ಹೋರಾಟವನ್ನು ಮತ್ತೂ ಚುರುಕುಗೊಳಿಸಿದರು.

ತಿಲಕರು ಮೂಲತಃ ಅದ್ವೈತ ವೇದಾಂತದ ಪ್ರತಿಪಾದಕರಾಗಿದ್ದರೂ, ಸಾಂಪ್ರದಾಯಿಕ ಅದ್ವೈತದ "ಜ್ಙಾನವೊಂದರಿಂದಲೇ ಮುಕ್ತಿ" ಎಂಬ ನಂಬುಗೆಯು ಅವರಿಗೆ ಒಪ್ಪಿಗೆಯಿರಲಿಲ್ಲ. ಅದಕ್ಕೆ ಸರಿಸಮನಾಗಿ ಹಾಗೂ ಪೂರಕವಾಗಿ ಅವರು ಕರ್ಮಯೋಗವನ್ನೂ ಸೇರಿಸಿದರು. ವಿವಾಹಕ್ಕೆ ಕನಿಷ್ಠ ವಯೋಮಿತಿಯೇ ಮೊದಲಾಗಿ ತಿಲಕರು ಅನೇಕ ಸಾಮಾಜಿಕ ಸುಧಾರಣೆಗಳನ್ನು  ಮುಂದಿಟ್ಟರು. ಮದ್ಯಪಾನ ನಿಷೇಧದ ಪರವಾಗಿ ಅವರಿಗೆ ಅತ್ಯಂತ ಕಳಕಳಿಯಿತ್ತು. ಶಿಕ್ಷಣ ಹಾಗೂ ರಾಜಕೀಯ ಜೀವನದ ಬಗ್ಗೆ ಅವರ ವಿಚಾರಗಳು ಬಹಳ ಪ್ರಭಾವಶಾಲಿಯಾಗಿದ್ದವು ದೇವನಾಗರಿ ಲಿಪಿಯಲ್ಲಿ ಬರೆಯಲಾಗುವ ಹಿಂದಿ ಭಾಷೆಯು ಭಾರತದ ರಾಷ್ಟ್ರ ಭಾಷೆಯಾಗ  ಬೇಕು ಎಂದು ಮೊದಲು ಸೂಚಿಸಿದವರು ತಿಲಕರು. ಗಾಂಧೀಜಿ ಇದನ್ನು ಮುಂದೆ ಬಲವಾಗಿ ಅನುಮೋದಿಸಿದರು. ಆದರೆ, ತಿಲಕರು ಸಂಪೂರ್ಣವಾಗಿ ಭಾರತದಿಂದ ನಿರ್ಮೂಲನ ಮಾಡಬೇಕೆಂದು ಇಚ್ಛೆ ಪಟ್ಟಿದ್ದ ಇಂಗ್ಲೀಷ್  ಭಾಷೆ ಇಂದಿಗೂ ಸಂವಹನದ ಒಂದು ಮುಖ್ಯ ಸಾಧನವಾಗಿ ಉಳಿದುಕೊಂಡು ಬಂದಿದೆ.ಆದರೂ ಹಿಂದಿ ಮತ್ತು ಇತರ ಭಾರತೀಯ ಭಾಷೆಗಳನ್ನು ಜನಸಾಮಾನ್ಯರ ಮಟ್ಟದಲ್ಲಿ ಬಳಕೆ ಮತ್ತು ಬ್ರಿಟಿಷರ ಕಾಲದಿಂದ ಇಂದಿನವರೆಗೂ ನೀಡಲಾಗುತ್ತಿರುವ ಪ್ರೋತ್ಸಾಹಕ್ಕೆ ತಿಲಕರು ಅಂದು ಪ್ರಾರಂಭಿಸಿದ ಪುನರುಜ್ಜೀವನವೇ ಕಾರಣ ಎನ್ನಲಾಗುತ್ತದೆ. ತಿಲಕರ ಮತ್ತೊಂದು ದೊಡ್ಡ ಕಾಣಿಕೆಯೆಂದರೆ, ಸಾರ್ವಜನಿಕ ಗಣೇಶೋತ್ಸವ. ಭಾದ್ರಪದ ಶುಕ್ಲ ಚತುರ್ಥಿಯಿಂದ ಹಿಡಿದು ಅನಂತ ಚತುರ್ದಶಿಯವರೆಗಿನ 11 ದಿನಗಳ ಈ ಉತ್ಸವ, ಖಾಸಗೀ ಧಾರ್ಮಿಕ ಆಚರಣೆಯನ್ನು ಜನಸಾಮಾನ್ಯರು ಒಟ್ಟುಗೂಡಿ ಆಚರಿಸುವ, ನಾಯಕರುಗಳಿಗೆ ಜನಸಾಮಾನ್ಯರೊಂದಿಗೆ ಸಂಪರ್ಕ ಸಾಧಿಸುವ ಮಾಧ್ಯಮವಾಗಿ ಬದಲಾಯಿಸಿತು. ತಿಲಕರು ಪ್ರಾರಂಭಿಸಿದ ಈ ಪರಂಪರೆ ದೇಶದ ಅನೇಕ ಕಡೆಗಳಲ್ಲಿ ಅದರಲ್ಲೂ ಮುಖ್ಯವಾಗಿ ಮಹಾರಾಷ್ಟ್ರದಲ್ಲಿ ಇಂದಿಗೂ ಮುಂದುವರಿಯುತ್ತಿದೆ.ಪರದೇಶೀ ವಸ್ತುಗಳನ್ನು ಬಹಿಷ್ಕರಿಸುವಂತೆ ಅವರು ನೀಡಿದ ಕರೆ ಬಹಳಷ್ಟು ಭಾರತೀಯರಲ್ಲಿ ದೇಶಭಕ್ತಿಯನ್ನು ಉಕ್ಕಿಸಿತು.

ತಿಲಕರು ಮಹಾತ್ಮಾ ಗಾಂಧಿಯವರ ಅಹಿಂಸಾತ್ಮಕ , ಅಸಹಕಾರ ಚಳುವಳಿಯ ಟೀಕಾಕಾರರಾಗಿದ್ದರು. ಒಂದು ಕಾಲದಲ್ಲಿ ತೀವ್ರವಾದಿ ಕ್ರಾಂತಿಕಾರಿಯೆಂದು ಪರಿಗಣಿಸಲ್ಪಟ್ಟಿದ್ದರೂ, ನಂತರದ ವರ್ಷಗಳಲ್ಲಿ ಅವರು ಗಮನಾರ್ಹವಾಗಿ ಬದಲಾಗಿದ್ದರು. ಭಾರತದ ಸ್ವಾತಂತ್ರ ಗಳಿಸಲು, ಮಾತುಕತೆಗಳ ಮೂಲಕವೇ ಹೆಚ್ಚು ಪರಿಣಾಮಕಾರಿ ಎಂಬ ಬಗ್ಗೆಯೆ ಅವರಿಗೆ ಒಲವಿತ್ತು.  ಸ್ವರಾಜ್ಯ ಮತ್ತು ರಾಜಕೀಯ ಸ್ವಾತಂತ್ರ್ಯಕ್ಕಾಗಿ ಹೋರಾಟವನ್ನು ಜನಸಾಮಾನ್ಯರವರೆಗೆ ಕೊಂಡೊಯ್ದ ತಿಲಕರನ್ನು ಸ್ವಾತಂತ್ರ್ಯ ಚಳುವಳಿಯ ಜನಕ ಎಂದು ಪರಿಗಣಿಸಲಾಗಿದೆ. ಭಾರತೀಯ ಸಂಸ್ಕೃತಿ, ಇತಿಹಾಸ ಹಾಗೂ ಧರ್ಮದ ಬಗ್ಗೆ ಲೇಖನಗಳಿಂದ ಲಕ್ಷಾಂತರ ಭಾರತೀಯರಿಗೆ ತಮ್ಮ ಭವ್ಯ ಪರಂಪರೆಯ ಹಾಗೂ ನಾಗರೀಕತೆಗಳ ಅರಿವು ಮಾಡಿಕೊಟ್ಟು, ಅವರ ಪ್ರಜ್ಙೆಯಲ್ಲಿ ತಮ್ಮ ನಾಡಿನ ಬಗ್ಗೆ ಅಭಿಮಾನವನ್ನು ಮೂಡಿಸಿದರು . ತಿಲಕರನ್ನು ಭಾರತದ ರಾಜಕೀಯ ಹಾಗೂ ಆಧ್ಯಾತ್ಮಿಕ  ನಾಯಕರನ್ನಾಗಿಯೂ, ಮಹಾತ್ಮಾ ಗಾಂಧಿಯವರನ್ನು ಇವರ ಉತ್ತರಾಧಿಕಾರಿಯಾಗಿಯೂ ಅನೇಕರು ಪರಿಗಣಿಸುತ್ತಾರೆ. 1920ರಲ್ಲಿ ತಿಲಕರು ತೀರಿಕೊಂಡಾಗ, ಅವರ ಅಂತ್ಯಕ್ರಿಯೆಯಲ್ಲಿ  ಎರಡು ಲಕ್ಷಕ್ಕೂ ಹೆಚ್ಚು ಜನರು  ಭಾಗವಹಿಸಿದ್ದರು. ಆ ಸಂದರ್ಭದಲ್ಲಿ ಮಹಾತ್ಮಾ ಗಾಂಧಿಯವರು ತಿಲಕರನ್ನು "ಭಾರತದಲ್ಲಿ ಚಳುವಳಿಯ ಜನಕ"   ಎಂದು ಬಣ್ಣಿಸಿದರು.

*ಸಿಹಿಜೀವಿ ವೆಂಕಟೇಶ್ವರ*
ತುಮಕೂರು
9900925529


02 August 2023

ಹಾಯ್ಕುಗಳು..

 ಸ್ಪರ್ಧೆಗೆ...


*ಹಾಯ್ಕುಗಳು*



ನೀನು ಮಾನವ

ಕೃತಜ್ಞತೆಯಿರಲಿ 

ಜೀವಿಗಳಿಗೆ 



ಪರಿಸರಕೆ 

ಕೃತಘ್ನನಾಗಬೇಡ 

ನೀನಳಿಯುವೆ 


*ಸಿಹಿಜೀವಿ ವೆಂಕಟೇಶ್ವರ*

ತುಮಕೂರು

01 August 2023

ಆಗಸ್ಟ್ ಮಾಸದ ನೆನಪುಗಳು....ಖುದಿರಾಮ್ ಬೋಸ್..



ಆಗಸ್ಟ್ ಮಾಸದ ನೆನಪುಗಳು...

೨ ಖುದಿರಾಮ್ ಬೋಸ್...

  ಟೀನೇಜ್ ನಲ್ಲಿ ಹುಡುಗರು ತಮ್ಮದೇ ಲೋಕದಲ್ಲಿ ಮುಳುಗಿ ವೈಯಕ್ತಿಕ ಆಸೆ ಆಕಾಂಕ್ಷೆಗಳನ್ನು ಈಡೇರಿಸಿಕೊಳ್ಳಲು ಹಾತೊರೆಯುತ್ತಾರೆ. ಇದಕ್ಕೆ ವಿರುದ್ಧವಾಗಿ ಹದಿನೆಂಟರ ಹರೆಯದಲ್ಲೇ ಬ್ರಿಟಿಷರ ವಿರುದ್ಧ ಕ್ರಾಂತಿಯ  ಕಿಡಿಯೆಬ್ಬಿಸಿ  ದೇಶಕ್ಕಾಗಿ ತನ್ನ ತಲೆಯನ್ನು ನೇಣುಗಂಬಕ್ಕೆ ಒಡ್ಡಿಕೊಂಡ  ಮಹಾನ್ ಚೇತನವೇ ಖುದಿರಾಮ್ ಬೋಸ್.

1889 ರ  ಡಿಸೆಂಬರ್ ಮೂರರಂದು ಮಿಡ್ನಾಪುರ ಜಿಲ್ಲೆಯ ಅಬೀಬ್ ಪುರದಲ್ಲಿ  ಜನ್ಮತಾಳಿದ ಖುದಿರಾಮ್ ಬೋಸ್ ರವರು  ಚಿಕ್ಕ ವಯಸ್ಸಿನಲ್ಲಿಯೇ ತಾಯಿಯನ್ನು ಕಳೆದುಕೊಂಡರು. ಅವರ ಅಕ್ಕ ಭಾವನ ಅಕ್ಕರೆಯಲ್ಲಿ ಬೆಳೆದ ಖುದಿರಾಮ್ ಬೋಸರು ಅತಿ ಚಿಕ್ಕ ವಯಸ್ಸಿನಲ್ಲಿಯೇ ಕ್ರಾಂತಿಕಾರಿಗಳೊಂದಿಗೆ ಗುರುತಿಸಿಕೊಂಡರು. ಬಂಕಿಮಚಂದ್ರರು ಬರೆದ ‘ಆನಂದ ಮಠ’ ಮತ್ತು ‘ಆನಂದದಾತ’ ಕಾದಂಬರಿಗಳೂ ಅವರ ಮೇಲೆ ಅತ್ಯಂತ ಪ್ರಭಾವ ಬೀರಿದ್ದವು. `ವಂದೇ ಮಾತರಂ’ ಗೀತೆಯಂತೂ ಇವರ ನರನಾಡಿಗಳಲ್ಲಿ ದೇಶ ಭಕ್ತಿ ಉಕ್ಕಿ ಹರಿಯುವಂತೆ ಮಾಡಿತ್ತು. ಹೀಗಾಗಿ ಸುಮಾರು ಹದಿನೈದರ ಹರೆಯದಲ್ಲಿಯೇ ದೇಶಭಕ್ತಿಯನ್ನು ಮೈಗೂಡಿಸಿಕೊಂಡ ಬೋಸ್ ಕ್ರಾಂತಿಕಾರಿ ಸಂಘಟನೆಗಳ ಜೊತೆಗೆ ನಿಕಟ ಸಂಬಂಧವನ್ನಿಟ್ಟುಕೊಂಡುದೇ ಅಲ್ಲದೇ ಅದರ ಪ್ರಚಾರ ಕಾರ್ಯಕ್ಕೆ ತೊಡಗಿ ಕರಪತ್ರಗಳನ್ನು ಹಂಚುತ್ತಿದ್ದಾಗ ಸಿಕ್ಕಿಬಿದ್ದು ಪುನಃ ಬಿಡುಗಡೆಗೊಂಡರು.

 ಸ್ವಾತಂತ್ರ್ಯ ಸಂಗ್ರಾಮದ ಕಿಚ್ಚು ಕಾಳ್ಗಿಚ್ಚಾಗಿ ಭುಗಿಲೆದ್ದ ಕಾಲವದು. ಇದಕ್ಕೆ ಹಲವಾರು ಪತ್ರಿಕೆಗಳು ಕುಮ್ಮಕ್ಕು ನೀಡುತ್ತಿದ್ದವು. ಹೀಗಾಗಿ ಬ್ರಿಟಿಷರ ವಿರುದ್ಧವಾಗಿ ಬರೆದ ಪತ್ರಿಕೆಗಳ ಮೇಲೆ ಮೊಕದ್ದಮೆ ಹೂಡಲಾಗುತ್ತಿತ್ತು. ಅರವಿಂದ ಘೋಷರ ಪ್ರಕಾಶನದಲ್ಲಿ ಹೊರಬರುತ್ತಿದ್ದ ‘ವಂದೇ ಮಾತರಂ’ ಪತ್ರಿಕೆಯೂ ಬ್ರಿಟಿಷರ ಕೆಂಗಣ್ಣಿಗೆ ಗುರಿಯಾಗಿತ್ತು. ಈ ಮೊಕದ್ದಮೆಯ ವಿಚಾರಣೆಯನ್ನು ವಿರೋಧಿಸಿ ಪ್ರತಿಭಟನೆ ಮಾಡುತ್ತಿದ್ದ ನಿರಾಯುಧ ಗುಂಪಿನ ಮೇಲೆ ಬ್ರಿಟಿಷರು ಅನವಶ್ಯಕವಾಗಿ ಲಾಠಿ ಪ್ರಹಾರ ಮಾಡಿದರು. ಇದರಿಂದ ಕೆರಳಿದ ಹದಿನೈದು ವರ್ಷದ ಸುಶೀಲ್ ಸೇನ್ ಬ್ರಿಟಿಷ್ ಅಧಿಕಾರಿಗೆ ತಿರುಗಿಸಿ ಹೊಡೆದರು. ಇದರಿಂದ ರೊಚ್ಚಿಗೆದ್ದ ಬ್ರಿಟಿಷ್ ಅಧಿಕಾರಿ ಕಿಂಗ್ಸ್ ಫೋರ್ಡನು ಆ ಯುವಕನನ್ನು ಮ್ಯಾಜಿಸ್ಟ್ರೇಟ್ ಮುಂದೆ ನಿಲ್ಲಿಸಿ ಆತನ ವಯಸ್ಸನ್ನು ಲೆಕ್ಕಿಸದೆ 15 ಛಡಿ ಏಟಿನ ಶಿಕ್ಷೆ ವಿಧಿಸಿ ವಿಕೃತಿ ಮೆರೆದನು.

ಸುಶೀಲ್ ಕುಮಾರರೇನೋ ಶಿಕ್ಷೆಯನ್ನು ಸಂತೋಷದಿಂದಲೇ ಸ್ವೀಕರಿಸಿದರು. ಆದರೆ ಈ ಅಪ್ರಾಪ್ತ ಬಾಲಕನ ಮೇಲೆ ಲಾಠಿ ಬೀಸಿದ್ದಲ್ಲದೆ, ಉಗ್ರಶಿಕ್ಷೆಗಳನ್ನು ನೀಡುತ್ತಿದ್ದ ಬ್ರಿಟಿಷರ ದಬ್ಬಾಳಿಕೆಯನ್ನು ಸಹಿಸದ ಕ್ರಾಂತಿಕಾರಿಗಳು ಕಿಂಗ್ಸ್ ಫೋರ್ಡನನ್ನು ಮುಗಿಸಲು ತೀರ್ಮಾನಿಸಿದರು. ಇದರ ಸುಳಿವು ಹತ್ತಿದ ಬ್ರಿಟಿಷ್ ಸರ್ಕಾರ ಕಿಂಗ್ಸ್ ಫೋರ್ಡನನ್ನು ಮುಜಾಫರಪುರಕ್ಕೆ ವರ್ಗ ಮಾಡಿತು.

ಹೇಗಾದರಾಗಲಿ ಕಿಂಗ್ಸ್ ಫೋರ್ಡನನ್ನು ಕೊಲ್ಲಲೇಬೇಕು ಎನ್ನುವ ದೃಢ ನಿರ್ಧಾರ ಮಾಡಿದ್ದ ಕ್ರಾಂತಿಕಾರಿಗಳು, ಈ ಕಾರ್ಯವನ್ನು `ಯುಗಾಂತರ ಗುಂಪಿನ ನಾಯಕರಾದ ಸತ್ಯೇಂದ್ರನಾಥ ಬೋಸ್, ಖುದಿರಾಮ್ ಬೋಸ್ ಮತ್ತು ಆತನ ಸಹ ಕ್ರಾಂತಿಕಾರಿ ಪ್ರಫುಲ್ಚಾಕಿಗೆ ವಹಿಸಿದರು. ಆಜ್ಞೆಯಂತೆ ತೆರಳಿದ ಈ ಕ್ರಾಂತಿಕಾರಿಗಳು ಕಿಂಗ್ಸ್ ಫೋರ್ಡನ ಚಲನವಲನಗಳನ್ನು ಗಮನಿಸತೊಡಗಿದರು.

ಕಿಂಗ್ಸ್ ಫೋರ್ಡನು ಸಂಜೆ ಕ್ಲಬ್ಬಿನಿಂದ ಮನೆಗೆ ಬರುವ ದಾರಿಯಲ್ಲಿ ಕಾರಿನ ಮೇಲೆ ಬಾಂಬ್ ಹಾಕಲು ನಿರ್ಧರಿಸಲಾಗಿತ್ತು. ಎಂದಿನಂತೆ ಕಾರು ಹೊರಟು ಬಂದಿತು. ಅದರೊಳಗೆ ಯಾರಿದ್ದಾರೆಂದು ಗಮನಿಸದೆ ಬೋಸ್ ಮತ್ತು ಚಾಕಿ ಬಾಂಬ್ ಎಸೆದರು. ಕಿಂಗ್ಸ್ ಫೋರ್ಡ್ ಬದಲಾಗಿ ಅದರಲ್ಲಿದ್ದ ಇಬ್ಬರು ಮಹಿಳೆಯರು ಅಸುನೀಗಿದರು. ಇತ್ತ ಕಿಂಗ್ಸ್ ಫೋರ್ಡನನ್ನು ಕೊಂದೆವೆಂದುಕೊಂಡ ಈ ಹುಡುಗರು ಒಂದೊಂದು ದಿಕ್ಕಿಗೊಬ್ಬರು ಓಡಿದರು.

ಕ್ರಾಂತಿಕಾರಿಗಳು ಎಸೆದ ಬಾಂಬು ಕಿಂಗ್ಸ್ ಫೋರ್ಡನನ್ನು ಕೊಲ್ಲಲಿಲ್ಲವಾದರೂ, ಇಡೀ ಬ್ರಿಟಿಷ್ ಸಾಮ್ರಾಜ್ಯಕ್ಕೇ ಮೊದಲ ನಡುಕ ಹುಟ್ಟಿಸಿಬಿಟ್ಟಿತ್ತು. ಈ ಹುಡುಗರು ಎಸೆದ ಬಾಂಬು ಕೇವಲ ಕಿಂಗ್ಸ್ ಫೋರ್ಡನ ವಾಹನ ಚೂರು ಚೂರು ಮಾಡಿದ್ದಲ್ಲದೆ ಬ್ರಿಟಿಷ್ ಸಾಮ್ರಾಜ್ಯದ ಅಹಂಕಾರ ಮತ್ತು ದರ್ಪವನ್ನು ನುಚ್ಚುನೂರು ಮಾಡಿತ್ತು.ಇದರಿಂದ ರೊಚ್ಚಿಗೆದ್ದ ಬ್ರಿಟಿಷರು ಖುದಿರಾಮ್ ಬೋಸ್ ಮತ್ತು ಸಂಗಡಿಗರನ್ನು ಸೆರೆಹಿಡಿಯಲು ಸತತವಾಗಿ ಪ್ರಯತ್ನಿಸಿದರು.ಭೂಗತರಾದ ಅವರು ಅಷ್ಟು ಸುಲಭವಾಗಿ ಸಿಗಲಿಲ್ಲ. ಕೊನೆಗೆ
ಮುಜಾಫುರದಿಂದ ಸುಮಾರು ,25  ಮೈಲುಗಳಾಚೆ ಯುವಕ ಖುದಿರಾಮ್ ಬೋಸರನ್ನು ಸೆರೆಹಿಡಿಯಲಾಯಿತು. ತಪ್ಪಿಸಿಕೊಳ್ಳಲು ಆತ ಮಾಡಿದ ಎಲ್ಲ ಸಾಹಸಗಳು ವ್ಯರ್ಥವಾಗಿ ಬಂಧನವಾಗಿ ಹೋಯಿತು. ಅವರ ಮೇಲೆ ವಿಚಾರಣೆ ಎಂಬ ನಾಟಕ ನಡೆದು ಕೊನೆಗೆ ಮರಣದಂಡನೆಯನ್ನು ವಿಧಿಸಲಾಯಿತು. 1908ರ  ಆಗಸ್ಟ್ 11ರಂದು ಅವರನ್ನು  ಗಲ್ಲಿಗೇರಿಸಲಾಯಿತು.

ಸಿಹಿಜೀವಿ ವೆಂಕಟೇಶ್ವರ
ತುಮಕೂರು.
9900925529