30 June 2019

ಎಲ್ಲೆಡೆ ಬಾ ಮಳೆಯೇ(ಕವನ)

 *ಎಲ್ಲೆಡೆ ಬಾ ಮಳೆಯೇ*

ಮಲೆನಾಡಿನಲಿ ಶುರುವಾಗಿದೆ
ಮಳೆ ಹಾಡು
ನೋಡಲು ‌ಕಣ್ಣಿಗೆ ಹಬ್ಬದ
ಮಳೆ ಕಾಡು
ತಂಗಾಳಿ ಬೀಸುತ
ಮರದ ನಡುವೆ ನುಸುಳಿ
ಬೀಳುವ ಹನಿಗಳು
ಎಲೆಗಳ ಮೇಲೆ ಬಿದ್ದು
ತೊಳೆದು ಸ್ವಚ್ಚಗೊಳಿಸಿ
ಸ್ವಚ್ಚತಾ ಅಭಿಯಾನ ಮಾಡಿ
ಚಿಟ ಪಟ ಚಿಟ ಪಟ
ಸದ್ದು ಮಾಡುವ ಕಾಡುವ
ಮಳೆರಾಯ  ಬರೀ ಕಾಡಲೇ
ಬರ ಬೇಡ
ಬರದಿಂದ  ಕಂಗೆಟ್ಟ ನಾಡಿಗೂ
ಬಾ
ಸಿಡಿಲು ಬಡಿದು ಗುಡು ಗುಡಿಗಿ
ಬರುವ ವರ್ಷವೇ
ಬರಸಿಡಿಲಿನಾಘಾತ ತಪ್ಪಿಸಲು
ಈಗಲೇ ಎಲ್ಲೆಡೆ ಬಾ

*ಸಿ ಜಿ ವೆಂಕಟೇಶ್ವರ*

26 June 2019

*ಜೀವಿಸು* (ಇಂದು ವಿಶ್ವ ಮಾದಕವಸ್ತು ವಿರೋಧಿ ದಿನ)

*ಜೀವಿಸು*
(ಇಂದು ವಿಶ್ವ ಮಾದಕವಸ್ತು ವಿರೋಧಿ ದಿನ)

ನಶೆಯಲೇ ತೇಲುತಾ ಬದುಕಬೇಕೆ?
ಉಷೆಯ ಬೆಳಕಿನ‌ಆನಂದ ಬೇಡವೆ?
ಖುಷಿಯಲಿ ಬದುಕ ಸಾಗಿಸಲು
ಪಶುಪತಿಯ ನೀ ನೆನೆ ಸಾಕು

ಕ್ಷಣಿಕ ಸುಖಕೆ ಹಾತೊರೆಯಬೇಡ
ಪ್ರಾಣ ತೆಗೆವ ಚಟಕೆ ಬಲಿಯಾಗಬೇಡ
ಮಾದಕ ವಸ್ತುಗಳಿಂದ ದೂರವಿರು
ಮೋದಕಪ್ರಿಯನಲಿ‌ ಮನಸಿಡು

ದೇಹವ ಹಿಂಡುವ ಆತ್ಮವಿಶ್ವಾಸ ಅಳಿವ
ಮೋಹವೇಕೆ ಅಮಲೇರಿಸುವ ವಸ್ತುವಿಗೆ
ಕಾಯಕದ ಮೇಲೆ ಮನಸಿಡು ನೀನು
ಪವಿತ್ರವಾದ ಆತ್ಮವ ನೆನೆದು ಜೀವಿಸು

*ಸಿ.ಜಿ ವೆಂಕಟೇಶ್ವರ*
*ಗೌರಿಬಿದನೂರು*


22 June 2019

ಯೋಗಾಯೋಗ ಪಡೆಯೋಣ(ಕವನ)

*ಯೋಗಾಯೋಗ ಪಡೆಯೋಣ*

ಯೋಗವ  ಮಾಡೋಣ ಬನ್ನಿ
ಯೋಗಾಯೋಗ ಪಡೆಯೋಣ ಬನ್ನಿ

ದೇಹವ ದಂಡಿಸಿ ಮನವ
ನಿಯಂತ್ರಿಸಿ ಆಸನ‌ ಹಾಕುತ
ಪ್ರಾಣಾಯಾಮ ಧ್ಯಾನವ ಮಾಡಿ
ಯೋಗವ ಮಾಡೋಣ ಬನ್ನಿ

ಕಾಯಕವೇ ಕೈಲಾಸವೆಂದು
ಕರ್ತವ್ಯಗಳನ್ನು ಮಾಡುತ
ಗಡಿಯಾರದಂತೆ ಕೆಲಸವಮಾಡಿ
ಕರ್ಮ ಯೋಗವ ಮಾಡೋಣ ಬನ್ನಿ

ನಹಿ ಜ್ಞಾನೇನ ಸದೃಶಂ ಎಂದು
ಜ್ಞಾನವ ಪಡೆಯುತ ಹಂಚುತ
ಜ್ಞಾನಿಗಳಾಗಿ  ಸುಜ್ಞಾನವ ಪಡೆಯಲು
ಜ್ಞಾನ ಯೋಗವ ಮಾಡೋಣ ಬನ್ನಿ

ಭಕ್ತಿಯಿಂದ ಬೇಡಿ ದೈವವ
ಶಕ್ತಿಯ ಪಡೆದು ನಮ್ಮಾತ್ಮವು
ಪರಮಾತ್ಮನಲಿ ಲೀನವಾಗುವವರಗೆ
ಭಕ್ತಿ ಯೋಗ ಮಾಡೋಣ ಬನ್ನಿ

*ಸಿ.ಜಿ ವೆಂಕಟೇಶ್ವರ*
*ಗೌರಿಬಿದನೂರು*