25 November 2018

ಕಲಿಯುಗ ಕರ್ಣ ( ನುಡಿನಮನ)

                      *ಕಲಿಯುಗ ಕರ್ಣ*(ನುಡಿನಮನ)

ಚಿತ್ರರಂಗದ ಹೆಮ್ಮೆಯ
ಮೈಸೂರ್ ಜಾಣ
ಅಭಿಮಾನಿಗಳ ಪಾಲಿನ
ಪ್ರೀತಿಯ ಜಲೀಲ
ಕೋಟಿ ಜನರ ಪಾಲಿಗೆ
ಮಂಡ್ಯದ ಗಂಡು
ದುಷ್ಟರ ಪಾಲಿಗೆ
ರೆಬೆಲ್ ಸ್ಟಾರ್
ಪಡ್ಡೆಗಳ ಪ್ರೀತಿಯ
ಕನ್ವರ್ ಲಾಲ್
ನಟನೆಯಲಿ ಎಂದೂ
ಮರೆಯದ  ದಿಗ್ಗಜ
ಕೊಡಗೈದಾನಿಯಾದ
ಕಲಿಯುಗ ಕರ್ಣ
ಕನ್ನಡ ಕಲಾವಿದರಿಗೆ
ನಮಗೆಲ್ಲ ಅಣ್ಣ
ಅಮರ್ ನಾಥ್  ಹೆಸರಿನಂತೆ
ಅಮರನಾದೆ
ದೇಹದಿಂದ ನಿನ್ನ ಪ್ರಾಣ
ಹೋದರೂ ನಮ್ಮ ಹೃದಯದಲಿ
ಶಾಶ್ವತವಾಗಿ ನೆಲೆಸಿರುವೆ

*ಸಿ.ಜಿ ವೆಂಕಟೇಶ್ವರ*
*ಗೌರಿಬಿದನೂರು*

24 November 2018

ಗಜ಼ಲ್51(ಬದಲಾಗಿದ್ದೇನೆ)

          *ಗಜ಼ಲ್ 51*

ನಲವತ್ತು ದಾಟಿದ ಮೇಲೆ ನಿಜವಾಗಿ ಬದುಕಲು‌  ಬದಲಾಗಿದ್ದೇನೆ
ಗತಕಾಲದ ಮೆನಪುಗಳ ಮೊಗೆದು  ಸವಿಯಲು   ಬದಲಾಗಿದ್ದೇನೆ

ತಪ್ಪು ಮಾಡದವರಾರಿಲ್ಲ ಪರಿಪೂರ್ಣರು ಹುಟ್ಟಿಲ್ಲ
ವ್ಯಕ್ತಿ ,ವಸ್ತುಗಳು  ಹೇಗಿದ್ದರೂ ಹಾಗೆಯೇ  ಸ್ವೀಕರಿಸಲು‌  ಬದಲಾಗಿದ್ದೇನೆ

ನಡೆಯುವುದ ತಡೆಯುವ ನಿಯಂತ್ರಣ ಶಕ್ತಿ ನಾನಲ್ಲ
ನಿನ್ನೆ ನಾಳೆಗಳ ಚಿಂತಿಸದೇ   ವರ್ತಮಾನದಿ ಜೀವಿಸಲು  ಬದಲಾಗಿದ್ದೇನೆ

ಕುರುಡು ಕಾಂಚಾಣ ಕುಣಿದು ಅಮ್ಮ ಅಪ್ಪ ಬಂಧು ಬಳಗ ದೂರಮಾಡಿದೆ
ಸಂಬಂಧ ಗಳೊಂದಿಗೆ ರಾಜಿಯಾಗಿ ಸಂಭ್ರಮಿಸಲು ಬದಲಾಗಿದ್ದೇನೆ

ಸೂರ್ಯ, ಚಂದಿರ,ಗಾಳಿ ,ಭುವಿ ನಿರಂತರ ಕಾಯಕ ನಿರತ
ಸೀಜೀವಿಯನು ಇತರರು ಪ್ರಶಂಸೆ ಮಾಡಬೇಕು ಎಂಬುದನು ತೊರೆಯಲು ಬದಲಾಗಿದ್ದೇನೆ

*ಸಿ.ಜಿ ವೆಂಕಟೇಶ್ವರ*
*ಗೌರಿಬಿದನೂರು*

23 November 2018

ಮಾತಾಪಿತರಾಗೋಣ (ಹನಿಗವನ)

*ಮಾತಾಪಿತರಾಗೋಣ*

ಓ ನನ್ನ ಒಲವ ನಲ್ಲೆ
ವಿರಸವನು ನೀಗೋಣ
ಸರಸದಲಿ ಸಂಭ್ರಮಿಸೋಣ
ವರುಷದೊಳಗೊಂದು
ವರ ಪಡೆದು ಮುದ್ದಾದ
ಕಂದನಿಗೆ ಮಾತಾಪಿತರಾಗೋಣ

*ಸಿ.ಜಿ ವೆಂಕಟೇಶ್ವರ*
*ಗೌರಿಬಿದನೂರು*

21 November 2018

ಮರೆಯಲಾರೆ (ಕವನ)

              *ಮರೆಯಲಾರೆ*

ಸವಿಯಾದ ನೆನಪು ಮರೆಯಲಾರೆ
ಕವಿಯಾಗಿ ಅವುಗಳ ವರ್ಣಿಸಲಾರೆ

ಅಕ್ಷರ ಕಾಗುಣಿತ ತಪ್ಪಿ ಬ್ಯಾ ಬ್ಯಾ
ಅಂದಾಗ ಬೆತ್ತದಿ ಬಾರಿಸಿ
ಬಾಸುಂಡೆ ಬರುವಂತೆ ಬಾರಿಸಿ
ಜೀವನ ಪಾಠ  ಕಲಿಸಿದ
ಭಗವಂತನಂತಹ ಗುರುವ ಮರೆಯಲಾರೆ

ಬುಗುರಿ ಚಿನ್ನಿದಾಂಟು ಕುಂಟೊಬಿಲ್ಲೆ
ಆಟಗಳಲ್ಲಿ ನಲಿದಾಡಿ
ಬೇಲಿ ಸಾಲಲಿ‌ ಸುತ್ತಿ
ಕಾರೆ ತೊಂಡೆ ಹಣ್ಣುಗಳ ಸವಿವಾಗ
ಜೊತೆಗಿದ್ದ  ಬಾಲ್ಯದ ಗೆಳೆಯರ ಮರೆಯಲಾರೆ

ಅಪ್ಪನಿಲ್ಲದಿದ್ದರೂ ಒಪ್ಪವಾಗಿ ಬೆಳೆಸಿ
ಹೆತ್ತು ಹೊತ್ತು ಸಾಕಿ ಸಲಹಿ
ಹೊತ್ತಿಗೆ ತುತ್ತು ಅನ್ನ ನೀಡಿ
ಹೊತ್ತಗೆ  ಹಿಡಿಯುವಂತೆ ಮಾಡಿ
ಅತಿ‌ಮುದ್ದಾಗಿ ಬೆಳೆಸಿದ ಅಮ್ಮನ ಮರೆಯಲಾರೆ

ಮರಳಿನಲಿ ಗೂಡನ್ನು ಕಟ್ಟಿ
ಕೈ ಕೈ ಹಿಡಿದು ನೆಡೆದಾಡಿ
ನಿನ್ನನೇ ಮದುವೆಯಾಗುವೆನೆಂದು
ಅಪ್ಪ ಅಮ್ಮನ ಆಟವನಾಡಿದ
ಮೊದಲ ಒಲವನು ಮರೆಯಲಾರೆ

*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*

12 November 2018

ಹೊಸ ಜಗವ ಕಟ್ಟೋಣ ( ಕವನ)

*ಹೊಸ ಜಗ ಕಟ್ಟೋಣ*

 ದೀಪದ ಹಬ್ಬದಿ  ಮೆರೆಯುವುದಿಲ್ಲ
ಪರಿಸರ ಕಾಳಜಿ ಮರೆಯುವುದಿಲ್ಲ

ಪಟಾಕಿ ಚಟಾಕಿ ಹೊಡೆಯುವುದಿಲ್ಲ
ಸಿಹಿ ಹಂಚುವುದು ಮರೆಯುವುದಿಲ್ಲ
ಭೂಚಕ್ರಗಳನು ಹಚ್ಚವುದಿಲ್ಲ
ಚಕ್ರಪಾಣಿಯ ಸ್ಮರಣೆ ಮರೆಯುವುದಿಲ್ಲ

ಬಿರುಸು   ಬಾಣಗಳ ಬಳಸುವುದಿಲ್ಲ
ದಿರಿಸು ಧರಿಸಿ ಮಿಂಚುವೆವವು ಎಲ್ಲ
ಆಕಾಶಬುಟ್ಡಿ ಕಟ್ಟಲು ಮರೆಯಲ್ಲ
ಮಾಲಿನ್ಯವನು ನಾವು ಮಾಡುವುದಿಲ್ಲ

ಬೊಗಸೆಯಲಿ ದೀಪದಳ ಬೆಳಗಿಸುವೆವು
ದೀಪದಿಂದಲಿ ದೀಪಗಳ  ಹಚ್ಚುವೆವು
ಕತ್ತೋಲೋಡಿಸಿ ಬೆಳಕು ಮೂಡಿಸುವೆವು
ಹೊಸ ಜಗವ ಕಟ್ಡಲು ಪಣತೊಡುವೆವು

*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*

08 November 2018

*ವರ ಬರ*

           *ವರ ಬರ*

ವಿಜ್ಞಾನ ತಂತ್ರಜ್ಞಾನ
ಜಾಗತೀಕರಣ ಆಧುನೀಕರಣ
ಮನುಕುಲಕ್ಕೆ ಕೆಲವೊಮ್ಮೆ
ವರವಾಗಿದೆ
ಜೊತೆಗೆ ಪ್ರೀತಿ ವಿಶ್ವಾಸ
ಆಚಾರ,ವಿಚಾರ ಸಂಸ್ಕೃತಿ
ಮಾನವೀಯತೆಯ ಬರ ತಂದಿದೆ 

ಮಹಾಬಲಿ (ಕವನ)

                     *ಮಹಾಬಲಿ*

ಪರಿಸರ ಮಾಲಿನ್ಯ
ದುರಾಸೆಗಿಡಿದ ಕನ್ನಡಿ
ಸುಸ್ಥಿರ ಅಭಿವೃದ್ಧಿಯ ಕಡೆಗಣಿಸಿ
ಅಸ್ಥಿರ ಗೊಳಿಸಿರುವೆವು ಭುವಿಯ
ವ್ಯಗ್ರಗೊಂಡಳು  ಭೂಮಾತೆ

ಅತಿವೃಷ್ಟಿ ಅನಾವೃಷ್ಡಿ  ಬರ
ಉಬ್ಬರ ಜಾಗತಿಕ ತಾಪಮಾನ
ಎಲ್‌ ನೀನೋ  ಲಾ  ನೀನೋ
ಏನೇನೋ
ಚಂಡಿಯಂತಹ ಚಂಡಮಾರುತ
ಜ್ಬಾಲೆಯುಗುಳುವ ಜ್ವಾಲಾಮುಖಿ
ಬಾಯಿತೆಗೆವ ಭೂಕಂಪ
ಪ್ರಕೃತಿ ಕ್ರಮೇಣ ಸಣ್ಣ ಪುಟ್ಟ
ಬಲಿ ಪಡೆದು ಎಚ್ಚರಿಕೆ ನೀಡಿಯಾಯಿತು
ಬುದ್ದಿ ಕಲಿತಿಲ್ಲ ನಾವು
ಮುಂದುವರೆಸಿದ್ದೇವೆ ಅದೇ ದುರ್ವರ್ತನೆ
ಮಹಾಬಲಿ ಗಾಗಿ ಕಾದಿದ್ದಾಳೆ
ಪ್ರಕೃತಿ ಮಾತೆ

*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*


06 November 2018

ಕನಸ ದೀಪಾವಳಿ ( ಹನಿಗವನ)

              *ಕನಸ ದೀಪಾವಳಿ*

ಒಂದು ದಿನ ಮೊದಲೇ
ಆರಂಭವಾಗಿದೆ ದೀಪಾವಳಿ
ನಮ್ಮ ಗೃಹದಲಿ
ಓದಲು ಹೋದ ನನ್ನ
ಕನಸು ಹಿಂದಿರುಗಿದಳು
ಇಂದು ಮನೆಗೆ
ಆನೆ ಪಟಾಕಿಯಂತೆ ಚಟಪಟ
ಮಾತನಾಡುತ್ತಾ ಬಾಯಲಿ
ನಗುವೆಂಬ ಸುರ್ ಸರ್ ಬತ್ತಿಯ
ಬೆಳಕು ನೀಡುತ  ಮೊಗದಲಿ
ಗಲ್ ಗಲ್ ಎಂದು ಸದ್ದುಮಾಡಿ
ನಡೆದಾಡುತ್ತಿದ್ದಾಳೆ ಮನೆಯಲಿ

*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*

ದಿನವೂ ದೀಪಾವಳಿ (ಹನಿಗವನ)

            *ದಿನವೂ ದೀಪಾವಳಿ*

ಬೆಳಕ ನೀಡಿ ಬೆಳಕ ಪಡೆವ
ಸೂರ್ಯ ತಾರೆ ಚಂದ್ರರಿಂದ
ಮಾಲಿನರಹಿತ  ಪರಿಸರ ಸ್ನೇಹಿ
ದೀಪಗಳ  ಹಬ್ಬ ನಿರಂತರ .

ಬಾನಿನ ದಿನಕರ ಚುಕ್ಕಿ ಗಳಿಂದ
ಸ್ಪೂರ್ತಿ ಪಡೆದು ನಾವೂ ಸಹ
ಅಜ್ಞಾನ ಓಡಿಸಿ ತಮವ ನೀಗಿ
ದೀಪದಿಂದ ದೀಪಗಳ ಹಚ್ಚಿ
ದಿನವೂ ದೀಪಾವಳಿ ಆಚರಿಸೋಣ

*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*

01 November 2018

ಕನ್ನಡ ಓರಾಟಗಾರ (ನ್ಯಾನೋ ಕಥೆ)

                *ನ್ಯಾನೋ ಕಥೆ*

*ಕನ್ನಡ ಓರಾಟಗಾರ*

"ನಮ್ಮ ನಾಡು ನಮ್ಮ ನುಡಿಯ ಬಗ್ಗೆ ನಾವು ಅಭಿಮಾನ ಪಡದಿದ್ದರೆ ಮತ್ಯಾರು ಬರುವರು? ನಮ್ಮ ಭಾಷೆ ಉಳಿಸಲು ಕನ್ನಡ ಪತ್ರಿಕೆಗಳನ್ನು, ಪುಸ್ತಕಗಳನ್ನು ಕೊಂಡು ಓದಬೇಕು.ಕನ್ನಡ ಶಾಲೆಗಳ ಬಲಪಡಿಸಬೇಕು" ಎಂದು ಸಮಾರಂಭದಲ್ಲಿ ಭಾಷಣ ಮಾಡಿದ ರಮೇಶನು  ಸನ್ಮಾನ ಸ್ವೀಕರಿಸಿ ಮನೆಗೆ ಬಂದ
"ಅಪ್ಪ ಇಲ್ಲಿದ್ದ ಟೈಮ್ಸ್ ಆಪ್ ಇಂಡಿಯಾ ಪೇಪರ್ ನೋಡಿದೆಯಾ?  " ಎಂದು ಮಗಳು ಕೇಳುವ  ಹೊತ್ತಿಗೆ  ಮಗ "ನಾಳೆ ನಮ್ಮ ಕಾನ್ವೆಂಟ್ ನಲ್ಲಿ ಪೇರೆಂಟ್ಸ್ ಮೀಟಿಂಗ್ ಇದೆ ನೀನು ಮಮ್ಮಿ ಬರಬೇಕಂತೆ " ಅಂದ .

*ಸಿ.ಜಿ ವೆಂಕಟೇಶ್ವರ*
*ಗೌರಿಬಿದನೂರು*

ಗಂಧದ ಬೀಡು( ಕವನ)

                    *ಗಂಧದ ಬೀಡು*

ಕನ್ನಡ ನಾಡು ನಮ್ಮ ಚಿನ್ನದ ಬೀಡು
ಕನ್ನಡ ನಾಡು ನಮ್ಮ ಗಂಧದ ನಾಡು |ಪ|

ಹಕ್ಕ ಬುಕ್ಕರಾಳಿದ ನಾಡಿದು
ಒಡೆಯರು ಗೌಡರು ಕಟ್ಟಿದ ಬೀಡಿದು
ಕದಂಬ ಹೋಯ್ಸಳರಾಳಿದ ನಾಡಿದು
ಚೆನ್ನಮ್ಮ ಓಬವ್ವರ ಕಂಡ ನೆಲವಿದು     
                                |ಕನ್ನಡ  ನಾಡು |                                                                                                         

ಬೇಲೂರು ಹಳೇಬೀಡು ಕೆತ್ತನೆ ಸೊಬಗು
ಬಾದಾಮಿ ಐಹೊಳೆ ಹಂಪಿಯ ವೈಭವ
ಶಿಲ್ಪಕಲೆಯ ತವರೂರು ನಮ್ಮದು
ಲಲಿತ ಕಲೆಗಳ ಸುಂದರ ತಾಣವು
                         |ಕನ್ನಡ ನಾಡು|

ಪಂಪ ರನ್ನ ಜನ್ನರ ನೆಲೆಯಿದು
ಅಷ್ಟ ಜ್ಞಾನ ಪೀಠಿಗಳ ನೆಲೆಯಿದು
ನವ್ಯ ನವೋದಯ ಕವಿಗಳ ಧರೆಯಿದು
ಜೇನಿನ ಸವಿ ನುಡಿ ನಮ್ಮಯ ನುಡಿಯು
                       |ಕನ್ನಡ ನಾಡು|

ಕನ್ನಡವನ್ನು ಎಲ್ಲರು ಕಲಿಯುವ
ನಮ್ಮಯ ನುಡಿಯ ಎಲ್ಲರಿಗೆ ಕಲಿಸುವ
ಕಲಿತು ಕಲಿಸುತಾ ಕನ್ನಡ ಬೆಳೆಸುವ
ನಮ್ಮ ನಾಡಿನ ಕೀರ್ತಿಯ ಬೆಳಗುವ
                        |ಕನ್ನಡ ನಾಡು|

*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*