ಗಜಲ್ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ
ಗಜಲ್ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ

25 ಸೆಪ್ಟೆಂಬರ್ 2021

ಗಜಲ್


 


ಗಜಲ್ 


ನಿನ್ನೊಡನೆ ಕಳೆದ ನೆನಪುಗಳ ಬುತ್ತಿ ಬಿಚ್ಚಿ ಮೆಲುಕು ಹಾಕುತಿರುವೆ 

ನೀನಿತ್ತ ಉಡುಗೊರೆಗಳ ನೋಡುತಾ

ಮೈ ಮರೆಯುತಿರುವೆ.


ನೀನಿಲ್ಲದೆ ಸಾಯಲೂ ಮನಸಿಲ್ಲದೆ ಬದುಕುತಿರುವೆ 

ಭರವಸೆಯ ಜೋಕಾಲಿಯ ಕಟ್ಟಿ ಜೀಕುತಿರುವೆ 


ಒಲವ ಪಡೆಯಲು ಅವಸರ ಬೇಕಿಲ್ಲ

ಎಂದು ಕಲಿಯುತಿರುವೆ

ಚೆಲುವಾಗಿರುವುದೆಲ್ಲಾ ನಂಬಿಕೆಗೆ ಅರ್ಹವಲ್ಲ ಎಂದು ಅರಿಯುತಿರುವೆ


ಸವಿನೆನೆಪುಗಳ ಮೆಲುಕು ಹಾಕಲು

ಶುಲ್ಕ ಬೇಡವೆಂದು ತಿಳಿಯುತಿರುವೆ

ಮನದಲೊಂದು ಮಹಲು ಕಟ್ಟಿ

ನಿನ್ನನ್ನು ಕರೆಯುತಿರುವೆ 


ಬಾಳಲಿ ಸಿಹಿಜೀವಿ ಬರುವಳೆಂಬ ಆಸೆಯಲಿ ಬದುಕುತಿರುವೆ  

ಭರವಸೆಯ ಕಣ್ಗಳಲಿ ನಿನ್ನ  ಹಾದಿಯನೆ ನೋಡುತಿರುವೆ.


*ಸಿಹಿಜೀವಿ*

ಸಿ ಜಿ ವೆಂಕಟೇಶ್ವರ




11 ಜೂನ್ 2021

ಗಜಲ್ (ಸಿದ್ದಲಿಂಗಯ್ಯ ರವರಿಗೆ ನುಡಿ ನಮನ)


 


*ಗಜಲ್*


*ಊರು ಕೇರಿಯ* ತೋರಿಸಿದವರೆ ನಿಮಗೆ ನಮನ

*ಕಪ್ಪು ಕಾಡಿನ ಹಾಡನ್ನು* ಹಾಡಿದವರೆ ನಿಮಗೆ ನಮನ


*ಹೊಲೆಮಾದಿಗರ ಹಾಡು* ಗುನುಗಿದವರೆ ನಿಮಗೆ ನಮನ

ಕವಿತೆಗಳಲಿ *ಸಾವಿರಾರು ನದಿಗಳ* ಹರಿಸಿದವರೆ ನಿಮಗೆ ನಮನ


ಜಾತಿಭೂತದ  *ನೆಲಸಮಕೆ* ಪಣತೊಟ್ಟವರೆ ನಿಮಗೆ ನಮನ

*ರಸಗಳಿಗೆಗಳನು* ನಮಗೆ ಕಟ್ಟಿಕೊಟ್ಟವರೆ ನಿಮಗೆ ನಮನ


*ಗ್ರಾಮ ದೇವತೆಗಳ* ದರ್ಶನ ಮಾಡಿಸಿದವರೆ ನಿಮಗೆ ನಮನ

*ಏಕಲವ್ಯನಂತೆ* ಕಲಿಕೆ ಮಾಡಿರೆಂದವರೆ ನಿಮಗೆ ನಮನ


ದುರ್ಜನರ *ಅವತಾರಗಳ* ಬಯಲಿಗೆಳೆದವರೆ ನಿಮಗೆ ನಮನ

ಸಿಹಿಜೀವಿಗಳಿಗೆ *ಜನಸಂಸ್ಕೃತಿಯ* ಪರಿಚಯಿಸಿದವರೆ ನಿಮಗೆ ನಮನ


(ಸಿದ್ದಲಿಂಗಯ್ಯ ರವರ ಕೃತಿಗಳ ಅಧಾರವಾಗಿ ಬರೆದ ಗಜಲ್)


ಸಿಹಿಜೀವಿ

ಸಿ ಜಿ ವೆಂಕಟೇಶ್ವರ



22 ಮೇ 2021

ಗಜಲ್ .


 *ಗಜಲ್*


ಹಸಿದ ಜೀವಗಳಿಗೆ  ಅನ್ನ ನೀಡಿ

ನೊಂದವರಿಗೆ ಸಾಂತ್ವನವನ್ನ ನೀಡಿ


ಉಳ್ಳವರಿಗೆ ಬಹುಮಹಡಿಯಲಿ ವಾಸ

ಮನೆಯಿಲ್ಲದವರಿಗೆ ಸೂರನ್ನ ನೀಡಿ.


ಬಟ್ಟೆಯಿದ್ದರೂ ದಿಗಂಬರರು ನೋಡಿಲ್ಲಿ

ಮರ್ಯಾದಸ್ತರಿಗೆ  ವಸನವನ್ನ ನೀಡಿ.


ಕಲಿತರೂ ಕತ್ತಲಲಿ ತೊಳಲುತಿಹರಲ್ಲ 

ಅಂಧಕಾರಲ್ಲಿರುವವರಿಗೆ ಬೆಳಕನ್ನ ನೀಡಿ.


"ಸಿಹಿಜೀವಿ" ಗಳಿಗೆ ಸಂಕಟವಿಹುದಿಲ್ಲಿ

ಅಶಕ್ತರಿಗೆ  ಸಹಾಯಹಸ್ತವನ್ನ ನೀಡಿ 


*ಸಿಹಿಜೀವಿ*

ಸಿ ಜಿ ವೆಂಕಟೇಶ್ವರ

ತುಮಕೂರು

28 ಮಾರ್ಚ್ 2021

ಗಜಲ್


 




*ಗಜಲ್*


ನೋವಿನಲ್ಲೂ ನಗುತಿರವ  ಜನಗಳ ಸಂತೈಸು

ನೊಂದು ಬೇಯುತಿರುವ ಮನಗಳ ಸಂತೈಸು


ಧರಣಿಯು ಕೇವಲ ಮಾನವರದು ಮಾತ್ರವಲ್ಲ

ಭುವಿಯಲಿರುವ ಎಲ್ಲಾ ಪ್ರಾಣಿಗಳ ಸಂತೈಸು


ರೆಕ್ಕೆ ಬಲಿತ ಪಕ್ಷಿಗಳು ಹಾರಾಡುವುದು ಸಹಜ 

ವೃದ್ಧಾಶ್ರಮದಲಿರುವ ಜನ್ಮದಾತರುಗಳ ಸಂತೈಸು


ಝಗಮಗಿಸುತಿವೆ ಉಳ್ಳವರ ಮಹಲುಗಳು

ಸೂರಿರದೆ ಕೊರುಗಿರುವ ಹಾಡಿಗಳ ಸಂತೈಸು 


ದುರ್ಜ‌ನರು ಅಟ್ಟಹಸಾದಿ ಮೆರೆಯುತಿಹರು

ಬೆಂದು ಬಳಲುತಿರುವ "ಸಿಹಿಜೀವಿ"ಗಳ ಸಂತೈಸು 


*ಸಿಹಿಜೀವಿ*

ಸಿ ಜಿ ವೆಂಕಟೇಶ್ವರ

22 ಫೆಬ್ರವರಿ 2021

ಗಜಲ್


*ಗಜಲ್*

ಹನಿ ಹನಿ ಇಬ್ಬನಿಯ ನೋಡುವುದೇ ಸಂಭ್ರಮ|
ಸ್ವರ ಸ್ವರ ಬೆರೆಸಿ ಹಾಡುವುದೇ ಸಂಭ್ರಮ||

ಕಷ್ಟ ಕೋಟಲೆಗಳು ನೂರಾರು ಅನ್ನದಾತಗೆ|
ಕೊನೆಗವನು ಸುಗ್ಗಿಯ ಮಾಡುವುದೇ ಸಂಭ್ರಮ ||

ನವಮಾಸ ಹೊತ್ತು ನೋವ ಅನುಭವಿಸುವಳು ತಾಯಿ|
ಕಂದನು ಅಂಗಾಲಲಿ ಜಾಡಿಸಿ ಕಾಡುವುದೇ ಸಂಭ್ರಮ||

ಎಷ್ಟೇ ಕಡೆದರೂ ಶಿಲ್ಪವಾಗಲಿಲ್ಲ ಎಂಬ ಕೊರಗು ಗುರುಗಳಿಗೆ |
ಶಿಷ್ಯರ ಸಾಧನೆಯ ಕಂಡು ಹೆಮ್ಮೆ ಪಡುವುದೇ ಸಂಭ್ರಮ||

ವಿರಹದ ಬೇಗೆಯಲಿ ಸುಡುತಿಹಳು ಪ್ರಿಯಸಖಿ|
ಏನೇ ಆದರೂ  ಸಿಹಿಜೀವಿಯ ಕೂಡುವುದೇ ಸಂಭ್ರಮ||

*ಸಿಹಿಜೀವಿ*
ಸಿ ಜಿ ವೆಂಕಟೇಶ್ವರ


18 ಜೂನ್ 2020

ಗಜ಼ಲ್ ೬೭

*ಗಜ಼ಲ್೬೭*

ಸಂಸಾರದ ನೊಗವನೊತ್ತ ಜೋಡೆತ್ತುಗಳು ನಾವು
ನಮಗೆ ನಾವೇ ಧಣಿಗಳು ದಣಿವರಿಯದ ಜೀವಗಳು ನಾವು.

ತುಂಬಿದ ಬಂಡಿಗೆ ಆಧಾರ ಕಣಿಗೆ ಕಡಾಣಿಗಳು
ಕೋಟಲೆಗಳಿದ್ದರೂ ನಗುವ ಮುಳ್ಳಿನ ಮೇಲಿನ ಸುಮಗಳು ನಾವು.

ಕೃಷಿ ಮಾಡುತಾ ಕೃಶವಾದರೂ ಖುಷಿಯಲ್ಲಿರುವೆವು
ಕಾಯಕವೇ ಕೈಲಾಸವೆಂಬ ಧಣಿವರಿಯದ ಜೀವಗಳು ನಾವು .

ಸಾಸಿರ ನೋವುಗಳಿದ್ದರೂ ಅನ್ನ ನೀಡುವ ಅನ್ನದಾತರು
ಬತ್ತ ಬೆಳೆಯುತಲಿ ಬತ್ತದ ವಿಶ್ವಾಸವಿರುವ ಜೀವಿಗಳು ನಾವು.

ಬೇಸರವಿಲ್ಲದೆ ಬೇಸಾಯವ ಮಾಡುತ ಬಾಳುವೆವು
ಬಾಳ ಬಂಡಿಯನು ಎಳೆಯುವ ಸಿಹಿಜೀವಿಗಳು ನಾವು.

*ಸಿ ಜಿ ವೆಂಕಟೇಶ್ವರ*

ಕಡಾಣಿ= ಗಾಡಿಯ ಚಕ್ರಕ್ಕೆ ಸಿಕ್ಕಿಸುವ ಕಬ್ಬಿಣದ ಸರಳು.
ಕಣಿಗೆ= ಎತ್ತನ ಗಾಡಿಗೆ ಸಿಗಿಸುವ ಕಟ್ಟಿಗೆ.

17 ಜೂನ್ 2020

ಗಜ಼ಲ್ ೬೬ ( ರಂಗೋಲಿ)


*ಗಜ಼ಲ್೬೬*

ದಿನವೂ ನಾನು ಹಾಕುವೆ ಅಂಗಳದಲೆಲ್ಲಾ ರಂಗೋಲಿ
ನನ್ನವನು ಮಾಡಿರುವ ನನ್ನ ಬಾಳೆಲ್ಲಾ ರಂಗೋಲಿ

ಮುತ್ತುಗಳ ಮಳೆಗರೆದು ನನಗೆರಡು ಮುತ್ತುಗಳ ನೀಡಿದ
ಅವರಾಡುವ ಬಾಲಲೀಲೆಗಳಿಗೆ ಮನೆಯಲೆಲ್ಲಾ ರಂಗೋಲಿ

ಮುದ್ದಾಡಲು ಶುರು ಮಾಡಿದರೆ ರಸಿಕರಂಗನವನು
ಮೈಮುರಿದೆದ್ದಾಗ  ಹಾಸಿಗೆಯ ಮಡಿಕೆಯಲೆಲ್ಲಾ ರಂಗೋಲಿ

ದಾಂಪತ್ಯ ಜೀವನದಲ್ಲಿದೆ ಸವಿನೆನಪಿನ ಬುತ್ತಿ
ನನ್ನರಸ ನುಡಿಯುತಿರೆ ಹೃದಯದಲೆಲ್ಲಾ ರಂಗೋಲಿ

ಇನಿಯನಿರದಿರೆ ಮಲ್ಲಿಗೆ ಸಂಪಿಗೆಗೂ ವಾಸನೆಯಿಲ್ಲ
ಸಿಹಿಜೀವಿಯು ಬಳಿಯಿದ್ದರೆ ಮನದಲೆಲ್ಲಾ ರಂಗೋಲಿ

*ಸಿ ಜಿ ವೆಂಕಟೇಶ್ವರ*
.

16 ಜೂನ್ 2020

ಗಜ಼ಲ್ ೬೫


ಗಜ಼ಲ್ ೬೫

ಗಿರಿಯು ಬರಸೆಳೆದು ಆಗಸವನು ತಬ್ಬಿದೆ
ನಾನಿಂದು  ಇನಿಯಳ ತನುವನು ತಬ್ಬಿದೆ

ಸಲಿಲಕೂ ಭುವಿಗೂ ಮುಗಿಯದ ಬಂಧ
ಸುಲಲಿತವಾಗಿ ಅರಿವ ಮನವನು ತಬ್ಬಿದೆ

ನೀನಿದ್ದರೆ ನನ್ನ ಬದುಕೆಲ್ಲ ಬಂಗಾರ
ನಮಗಾಗಿ ನಮ್ಮಿಬ್ಬರ ಗೆಲುವನು ತಬ್ಬಿದೆ

ನೀನಿರದೆ ಬಲಹೀನನು‌ ನೀನೆನಗೆ ಬಲ
ನನ್ನೊಲವ ನೂರಾನೆಯ ಬಲವನು ತಬ್ಬಿದೆ

ಕಾಮನೆಗಳಿಗೆ ಸಾವಿರಾರು ರಂಗುಗಳು
ಹೊಂಬಣ್ಣ ಸಿಹಿಜೀವಿಯ ಒಲವನು ತಬ್ಬಿದೆ

*ಸಿ ಜಿ ವೆಂಕಟೇಶ್ವರ*

15 ಜೂನ್ 2020

ಗಜ಼ಲ್ (ಕಟುಕರಿರುವರು)


ಗಜ಼ಲ್

ಚಿಗುರುವ ಮುನ್ನವೇ ಕತ್ತರಿಸುವ ಕಟುಕರಿರುವರು
ಹೆಣ್ಣು ಅಬಲೆಯೆಂದು  ಅಪಹರಿಸುವ ಕಟುಕರಿರುವರು.

ಹಸುಳೆ ಮುದುಕಿಯರೆಂದು ನೋಡದೆ
ಎರಗುವರು
ಮನೆಯ ಒಳಗೂ ಹೊರಗೂ ಹಿಂಸಿಸುವ ಕಟುಕರಿರುವರು.

ಅಬಲೆಯರ ಕಣ್ಣೀರ ಕೋಡಿಗೆ ಕೊನೆಯೆಂದು?
ಕೋಮಲೆಯರ ಶೀಲಹರಣ ಮಾಡಿ ಸಂಭ್ರಮಿಸುವ ಕಟುಕರಿರುವರು.

ಬೇಲಿಯೇ ಎದ್ದು ಹೊಲವ ಮೇಯುಲು ಕಾಯುವರಾರು?
ಕಾಯಬೇಕಾದ ಸಂಬಂಧಿಕರೆ ಕೊಂದು ಮುಗಿಸುವ ಕಟುಕರಿರುವರು.

"ಸಿಹಿಜೀವಿ"ಯಗಳಿಗೆ ಕಹಿ ಗುಳಿಗೆಗಳೆ ಎಲ್ಲಾಕಡೆ
ಗಳಿಗೆಗೊಬ್ಬರಂತೆ ಕೋಮಲೆಯರ ಮುಗಿಸುವ ಕಟುಕರಿರುವರು.

*ಸಿ ಜಿ ವೆಂಕಟೇಶ್ವರ*

05 ಏಪ್ರಿಲ್ 2020

ಗಜ಼ಲ್ ೬೩(ರಾಜ್ಯ ಮಟ್ಟದ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ ಪಡೆದ ಗಜ಼ಲ್

ಗಜ಼ಲ್ ೬೩

ವೈರಾಣುವೊಂದು ನಮಗೆ ಹೊಸ ಸಂದೇಶ ನೀಡಿದೆ
ಹೈರಾಣಾಗಿರುವ ನಮಗೆ  ಯೋಚಿಸಲೊಂದು ಅವಕಾಶ ಮಾಡಿದೆ 


ದೊಡ್ಡಣ್ಣನೆಂದು ದಡ್ಡತನದಿ ಮೆರೆದವರದೀಗ ಸದ್ದಿಲ್ಲ
ಮಂಗಳನ ತಲುಪಿ ಚಂದ್ರನ ಗೆದ್ದವರಿಗೆ
ಅಂತರಾವಲೋಕನಕೆ ಪ್ರಶ್ನೆಗಳ ನೀಡಿದೆ

ಸುತ್ತಾಡದೆ ಅತ್ತಿತ್ತ ಹೋಗದೆ  ಮನೆಯಲೇ ನಾವು ಬಂದಿಗಳು
ಸಂತಸ ಹೊರಗಿಲ್ಲ ಒಳಗೆ ನೋಡೆಂಬ ಆಜ್ಞೆಯ ನೀಡಿದೆ

ಬಡವ ಧನಿಕ ರಾಜ  ರಾಣಿ  ಅಮಾತ್ಯ ಎಲ್ಲರನು ಮುಟ್ಟುತಿದೆ
ಯಾವ ಭೇದವಿಲ್ಲದೆ ಎಲ್ಲರಿಗೂ ಒಂದೇ ಗುಂಡಿಯ ತೋಡಿದೆ.


ಪ್ರಶ್ನಿಸಿದೆ ನೀನೇಕೆ  ಸಿಹಿಜೀವಿಗಳ  ತೊರೆದು ಹಣದ ಹಿಂದೆ ಓಡುವೆ?
ಹಮ್ಮನು ತೊರೆದು ಸಮರಸದಿ ಬಾಳು ಒಳತಿಗೆ ಜಾಡಿದೆ

*ಸಿ ಜಿ ವೆಂಕಟೇಶ್ವರ*
*ತುಮಕೂರು*

02 ಏಪ್ರಿಲ್ 2020

ಗಜ಼ಲ್ ೬೨ (ರಘುರಾಮ)

*ಗಜ಼ಲ್೬೨*

ಜಯತು‌ ಜಯ‌ ರಾಮ ಹರಸು ರಘುರಾಮ
ಭಯವ ನೀಗಿ ಅಭಯ ಕರುಣಿಸು ರಘುರಾಮ.

ಸದ್ಗುಣ ವೈಭವಶಾಲಿ ತ್ರಿಭುವನ ಪಾಲಕನೆ
ನಮ್ಮ ದುರ್ಗುಣಗಳ  ತೊಲಗಿಸು ರಘುರಾಮ.

ದಶಕಂಠನ ಹರಿದ ದಶರಥ ಪುತ್ರನೆ ಶ್ರೀರಾಮ
ದಿಶೆ ತೋರಿ ಸರಿಪಥದಲಿ‌ ನಡೆಸು ರಘುರಾಮ.

ಅಯೋಧ್ಯಾಪಾಲಕ ಜಯವ ನೀಡುವ ಜಯರಾಮ
ಜನಗಳ ಮನಗಳ  ದುಗುಡವ ಅಳಿಸು ರಘುರಾಮ

ತಾರಕ ಮಂತ್ರವ ಬಿಡದೆ ಜಪಿಸುವೆ  ರಘುನಾಥ
ಸಿಹಿಜೀವಿಗಳ ಕಾಪಾಡಿ ಉಳಿಸು  ರಘುರಾಮ

*ಸಿ ಜಿ ವೆಂಕಟೇಶ್ವರ*
*ತುಮಕೂರು*



23 ಮಾರ್ಚ್ 2020

ಗಜ಼ಲ್ ೬೧(ಬಾ ಇನಿಯ)

ಗಜ಼ಲ್ ೬೧

ತಲೆಬಾಗಿಲಲಿ ತಲೆಬಾಗಿ ನಿಂತಿಹೆನು ತಣಿಸಲು ಬಾ ಇನಿಯ
ನಗದೊಡನೆ ಮಿನುಗುತ ನಿಂತಿರುವೆ ನಗಿಸಲು ಬಾ ಇನಿಯ.

ವಡ್ಯಾಣ ಬಿಗಿಯಾಗುತಿದೆ ನಿನ್ನ ಲೀಲೆಗಳ  ನೆನದು
ಬಂಡಿಯಿಂದಿಳಿದು ವಿರಹ ವೇದನೆ ಬಿಡಿಸಲು ಬಾ ಇನಿಯ.

ರಂಗಿನ ಸೀರೆಯುಟ್ಟು ರಂಗವಲ್ಲಿ ಹಾಕಿರುವೆನು
ರಂಗಮಂಚದಿ ರಂಗಿನಾಟದಿ  ರಂಗೇರಿಸಲು ಬಾ ಇನಿಯ.

ಕಂಠೀಹಾರವೇಕೋ ನಿಲ್ಲುತ್ತಿಲ್ಲ ಏದುಸಿರು ಬಿಡುತಿಹೆ
ಬಿರಿದೆದೆಯ ಭಾರವನು  ಇಳಿಸಲು ಬಾ ಇನಿಯ.

ದುಂಡು ಮಲ್ಲಿಗೆ ಚಂದನದ ಸೌಗಂಧವಿದೆ ನನ್ನಲಿ
*ಸಿಹಿಜೀವಿ* ಯಾಗಿ ಚೆಂದುಟಿ ಚುಂಬಿಸಲು ಬಾ ಇನಿಯ.

*ಸಿ ಜಿ ವೆಂಕಟೇಶ್ವರ*
*ತುಮಕೂರು*

20 ನವೆಂಬರ್ 2019

ಗಜಲ್ ೬೦ (ಸಾಲುವುದಿಲ್ಲ)


*ಗಜಲ್*

ಭೂರಮೆಯ ಸೊಬಗು ನೋಡಲು ಕಣ್ಣುಗಳು ಸಾಲವುದಿಲ್ಲ
ಪ್ರಕೃತಿ ಸಿರಿಯ ಬಣ್ಣಿಸಲು ಪದಗಳು ಸಾಲುವುದಿಲ್ಲ.

ಪರಿಸರದಲಿದೆ ಸಂಗೀತ ಹಕ್ಕಿಗಳ ಕಲರವ ದುಂಬಿಗಳ ಝೇಂಕಾರ .
ಸಿಡಿಲು ಮಳೆ ಗುಡುಗಿನಲೂ ಸಾಮಗಾನ ಕೇಳಲು ಕಿವಿಗಳು ಸಾಲುವುದಿಲ್ಲ.


ತರುಲತೆಗಳು ಖಗಮೃಗಗಳು ಕಾನನದ ಸೊಬಗಿನ ಮೂಲ
ನದನದಿ ಝರಿ ತೊರೆಗಳ ಅಂದ ಹೊಗಳಲು ರೂಪಕಗಳು ಸಾಲುವುದಿಲ್ಲ

ಮಲ್ಲೆ ಮಲ್ಲಿಗೆ ಜಾಜಿ ಕೇದಗೆ ಸಂಪಿಗೆಯ ಸುವಾಸನೆ ಬಲು ಚೆಂದ
ವರ್ಷಕಾಲದ ಮಣ್ಣವಾಸನೆಯ ಕಂಪು ಹೊಗಳಲು ಕವನಗಳು ಸಾಲುವುದಿಲ್ಲ.

ಈ ಜಗವು ಆನಂದಮಯವಾಗಲು ಸಿಹಿಜೀವಿಗಳ ಕೊಡುಗೆ ಅಪಾರ
ಪರಿಸರವ  ಬಳಸಿ ಉಳಿಸಿ ಬೆಳೆಸಲು ಸಣ್ಣ ಪ್ರಯತ್ನಗಳು ಸಾಲುವುದಿಲ್ಲ.

*ಸಿ ಜಿ ವೆಂಕಟೇಶ್ವರ*

15 ನವೆಂಬರ್ 2019

ಗಜಲ್ ೫೯(ಕನಕದಾಸರು)

*ಗಜಲ್59*

*ಕನಕದಾಸರ  ಜಯಂತಿಯ‌ ಶುಭಾಶಯಗಳು*

ಧನಕನಕ ತೃಣಸಮಾನರೆಂದು ತೋರಿಸಿದವರು ಕನಕದಾಸರು.
ಕೊನೆತನಕ ಹರಿಚರಣ ಬಿಡಬೇಡವೆಂದು ಬೋಧಿಸಿದವರು ಕನಕದಾಸರು.


ಅಹಂ ನಿಂದ ಒಡೆಯುತ್ತಿವೆ ಮನೆ ಮನಗಳು .
ನಾನು ಹೋದರೆ ಸ್ವರ್ಗಸುಖವೆಂಬ ಸತ್ಯ  ದರ್ಶನ ಮಾಡಿಸಿದವರು ಕನಕದಾಸರು.

ಮಂದಿರ ಮಸೀದಿಗಳಲಿಮಾತ್ರ ಭಗವಂತನಿರುವ ಎಂಬ ಮೂಢರು
ನಿಷ್ಕಲ್ಮಷ  ನಿಜಭಕ್ತಿಯಿಂದ ಕೃಷ್ಣನ ದರ್ಶನ ಪಡೆದವರು ಕನಕದಾಸರು.

ಪಾಶ್ಚಿಮಾತ್ಯರ ಆಹಾರಪದ್ದತಿಯ ಅನುಕರಿಸಿ ಕಾಯ ರೋಗಗಳ ಗೂಡು.
ರಾಮಧಾನ್ಯದ ಮಹತ್ವವನು ಲೋಕಕೆ
ಎತ್ತಿತೋರಿದವರು ಕನಕದಾಸರು.


ಸಂಕಟ ಬಂದಾಗ ದೇವರ ನೆನವವರು ಎಲ್ಲೆಡೆ.
ಸದಾ ಹರಿಭಕ್ತರಾಗಿ ವೆಂಕಟೇಶ್ವರನ ಭಜಿಸಿದವರು ಕನಕದಾಸರು.

*ಸಿ.ಜಿ ವೆಂಕಟೇಶ್ವರ*

03 ಸೆಪ್ಟೆಂಬರ್ 2019

ಗಜಲ್ ೫೮ (ನಾರಿಕೇಳ)

*ಗಜ್ಹಲ್೫೮*

ಕಲಿಯುಗದ ಕಲ್ಪವೃಕ್ಷವೆಂದು ಹೆಸರಾಗಿದೆ ನಾರಿಕೇಳ.
ನಾರಿಯರ ನೀಳ ಕೂದಲಿಗೆ ಕಾರಣವಾಗಿದೆ ನಾರಿಕೇಳ.

ಭಗವಂತನಿಗೆ ಅರ್ಪಿಸಲು ಕಾಯಿ ನೀಡುವೆ
ಔಷದಿಯ ಆಗರದ ಎಳನೀರು ನೀಡಿದೆ ನಾರಿಕೇಳ.

ಬಡವರ ಗುಡಿಸಲಿಗೆ ತೆಂಗಿನ ಚಾಪೆ ಆಧಾರ
ರೈತರ ಬೇಸಾಯಕೆ ಹಗ್ಗವ ಕರುಣಿಸಿದೆ ನಾರಿಕೇಳ.

ಸಾರಿಗೆ ಸಾರ ಕೊಡಲು ತೆಂಗಿನ ತುರಿ ಬೇಕು
ಸಾಮನ್ಯರ ಉರುವಲಿನ ಮೂಲವಾಗಿದೆ  ನಾರಿಕೇಳ.

ಸ್ವಚ್ಛ ಭಾರತ ಅಭಿಯಾನಕೆ ಪೊರಕೆ ನೀಡಿದೆ
ಸಿಹಿಜೀವಿಗಳಿಗೆ ಒಳಿತುಮಾಡುತಲಿದೆ ನಾರಿಕೇಳ

*ಸಿ ಜಿ ವೆಂಕಟೇಶ್ವರ*
*ಗೌರಿಬಿದನೂರು*










02 ಜುಲೈ 2019

ಗಜ್ಹಲ್ ೫೭

*ಗಜ್ಹಲ್ ೫೭*

ಕುಟ್ಟಿ ಪುಡಿಮಾಡು ಕಷ್ಟಗಳೆಂಬ ಹೆಬ್ಬಂಡೆಗಳ ಗೆಲ್ಲುವೆ  ನೀನು
ಬಿದ್ದವನೆಂದು ಕೊರಗದಿರು ಮುಂದೆ  ಎದ್ದೇಳುವೆ ನೀನು

ಅವಮಾನ ಅಪಮಾನಗಳೆ  ಸಾಧನೆಗಳ ಮೆಟ್ಟಿಲು
ದಾರಿಯಿಲ್ಲವೆಂದು ಮರುಗದಿರು ದೊರೆಯಾಗುವೆ  ನೀನು

ಸಂತೆಯಲಿ ನಿಂತು ಸದ್ದಿಗಂಜತ ಕಳವಳಪಡಬೇಡ
ಸಂತನಾಗಲು ಸಹಿಸುವುದ ಕಲಿ ಯೋಗಿಯಾಗುವೆ ನೀನು

ಕಳೆದು ಕೊಳ್ಳಲು ನೀನೇನು ತಂದಿಲ್ಲ ಇಲ್ಲಿ
ಕಳೆದಲ್ಲೇ ಹುಡುಕು  ಮುಕ್ತಿ ಹೊಂದುವೆ ನೀನು

ಮುಳ್ಳುಗಳು ನಡುವೆಯೂ ನಗುವುದು ಗುಲಾಬಿ
ಕಷ್ಟದಲೂ ನಗುವುದ ಕಲಿ ಸಿಹಿಜೀವಿಯಾಗುವೆ ನೀನು

*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*



07 ಏಪ್ರಿಲ್ 2019

ಗಜಲ್ ೫೬(ಸಾವು)

   
*ಗಜ್ಹಲ್ ೫೬*
ಸಾಸಿರ ಕೋಟಿಗಳ ಒಡೆಯನಿಗೆ ತಪ್ಪದು ಸಾವು
ಸಾಧು ಸಂತರಿಗು ಬಿಡದೆ  ಬಪ್ಪುದು ಸಾವು .

ಬಡವ ಬಲ್ಲಿದ ಮೇಲು‌ಕೀಳು‌ ನೋಡುವುದಿಲ್ಲ
ಸಮಾನತೆಯ ಸಂದೇಶ ಸಾರಲು ಬರುವುದು ಸಾವು.

ಬೆಳಗಾದ ಮೇಲೆ ಮಧ್ಯಾಹ್ನ ಸಂಜೆಯಾಗಲೇಬೇಕು
ಕರುಣಾಮಯಿಗಳಿಗೂ ಕರುಣೆ ತೋರದೆ ಆಗಮಿಸುವುದು ಸಾವು.

ಬರಿಗೈಲಿ ಬಂದರೂ ಕೈ ತುಂಬಾ ಸಂಪತ್ತು ಸಂಪಾದನೆಯ ಜಪ
ಆರಡಿ ಮೂರಡಿ‌ ತಾಣವ ಸೇರಿಸಲು ಬರದೇ ಇರದು ಸಾವು.

ದೇವತೆಗಳಂತೆ ಅಮರನಾಗಲು‌‌ ಸಿಹಿಜೀವಿಗೂ ಹಂಬಲ
ಕಾಲನು ಕರೆ ಮಾಡಲು ಮನೆ ಬಾಗಿಲಲಿ ನಿಲ್ಲುವುದು ಸಾವು.

*ಸಿ.ಜಿ ವೆಂಕಟೇಶ್ವರ*
*ಗೌರಿಬಿದನೂರು*


25 ಮಾರ್ಚ್ 2019

*ಗಜಲ್೫೫(ಬಾ ಮಳೆಯೇ ಬಾ)

         *ಗಜಲ್*

ಧರೆಯತ್ತಿ ಉರಿಯುತಿದೆ ವರ್ಷವೆ ಬಾ
ತಿರೆಯ ಜೀವಿಗಳು ತತ್ತರಿಸಿವೆ ಪರ್ಜನ್ಯವೆ ಬಾ .

ಉತ್ತರೀಯ ನೆನೆಸಲೂ ಜಲವಿಲ್ಲ ಇಲ್ಲಿ
ಬಾಯಾರಿಕೆಗೆ ಉತ್ತರಿಸುವ ಉತ್ತರವೆ ಬಾ.

ನೊಗವ ಹೂಡಿಲ್ಲ ರೈತರು ನೀ ಬರದೆ
ಮೊಗೆದರೂ ಮುಗಿಯದ ಮಘವೆ ಬಾ .

ಹರಿಣಗಳಾದಿಯಾಗಿ ಮೃಗಗಳಿಗೆ ಜಲವಿಲ್ಲ
ಜೀವರಾಶಿಗಳ ರಕ್ಷಕ ಮೃಗಶಿರವೆ ಬಾ .

ಹಸ್ತತೊಳೆಯಲು ನೀರಿಲ್ಲ ಎಲ್ಲೆಡೆಯೂ
ಸೀಹಿಜೀವಿಗಳ ಜೀವನಾಡಿ ಹಸ್ತಚಿತ್ತವೆ ಬಾ.

*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*





23 ಮಾರ್ಚ್ 2019

ಗಜಲ್ ೫೪(ನನ್ನ ಶಿಕ್ಷಕ)


         *ಗಜಲ್೫೪*


ಕನಸು ಕಾಣಲು ಹೇಳಿಕೊಟ್ಟವನೇ ನನ್ನ ಶಿಕ್ಷಕ,
ನನಸಾದ ನನ್ನ ಗುರಿಗಳ ತಲುಪಿಸಿದವನೇ ನನ್ನ ಶಿಕ್ಷಕ .

ದೇವರು ಕಣ್ಣಿಗೆ ಕಾಣುವುದು ಅಪರೂಪ,
ಶಿವನ ಸ್ವರೂಪಿಯಾಗಿ ಕ್ಷಕಿರಣ ಬೀರಿದವನೇ ನನ್ನ ಶಿಕ್ಷಕ

ಕೆಡಲು ನೂರು ದಾರಿಗಳು ಆಧುನಿಕ ಜಗದಿ,
ಬದುಕಲು ಮಾರ್ಗದರ್ಶನ ನೀಡಿದವನೇ ನನ್ನ ಶಿಕ್ಷಕ.

ಸಮಾಜ ತಿದ್ದುವವರು ಬಹಳಿಲ್ಲ ಭವದಿ ,
ಸಾಮ ದಾನ ಭೇದ  ದಂಡಗಳಲಿ ಕಲಿಸಿದವನೇ ನನ್ನ ಶಿಕ್ಷಕ.

ಸೀಜೀವಿಯು ಅಂಧಕಾರದಲ್ಲಿದ್ದು ತೊಳಲುತಲಿದ್ದನು ,
ಜ್ಞಾನದ ಪಂಜನಿಡಿದು ಬಾಳ ಬೆಳಗಿಸಿದವನೇ ನನ್ನ ಶಿಕ್ಷಕ.

*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*





22 ಮಾರ್ಚ್ 2019

ಗಜಲ್ ೫೩(ಜೀವಜಲ)

*ಗಜ್ಹಲ್*

ಜೀವಿಗಳು ಉಳಿಯಲು ರಕ್ಷಿಸಬೇಕಿದೆ  ಜೀವಜಲ
ನಾವುಗಳು ಅಳಿಯದಿರಲು ಸಂಗ್ರಹಿಸಬೇಕಿದೆ ಜೀವಜಲ

ಬಳಸಿಯಾಗಿದೆ ಮಂದಿನ ಪೀಳಿಗೆಯ ಸಲಿಲ
ಭುವಿಯ ವಾರಸುದಾರರಿಗೆ  ಬಳುವಳಿ ನೀಡಬೇಕಿದೆ ಜೀವಜಲ

ಉಳಿಸಿದ  ಹನಿ ಗಳಿಸಿದ ಕೋಟಿ ಹನಿಗೆ ಸಮ
ಅತಿ ಕಡಿತಗೊಳಿಸಿ  ಮಿತವಾಗಿ ಬಳಸಬೇಕಿದೆ ಜೀವಜಲ

ನೀರಿನ ಮೂಲಗಳಿಗೆ ಕನ್ನಹಾಕಿದ್ದು ಸಾಕು
ಸ್ವಾಭಾವಿಕ ರೀತಿಯಲಿ ಪಡೆಯಬೇಕಿದೆ ಜೀವಜಲ

ಸಿಹಿಜೀವಿಯಂತೆ ಜಲಸಂಸ್ಕೃತಿ ಪಾಲಿಸಬೇಕಿದೆ ನಾವೆಲ್ಲ
ಹನಿ ಹನಿಗೂಡಿಸಿ ಹಳ್ಳವಾಗಿಸಲು ಉಳಿಸಬೇಕಿದೆ ಜೀವಜಲ

*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*

*ಇಂದು ವಿಶ್ವ ಜಲದಿನ ಬನ್ನಿ ಜಲಸಂರಕ್ಷಣೆಯ ಪಣ ತೊಡೋಣ*