31 January 2024

ಸಿಹಿಜೀವಿಯ ಹಾಯ್ಕುಗಳು...

 




ದುಷ್ಟ ದುರುಳ 

ದುರ್ಗಣದ ಖಜಾನೆ 

ಭುವಿಗೆ ಭಾರ 



ಸನ್ಮಾರ್ಗ ತುಳಿ 

ದುರ್ಮಾರ್ಗವನು ಬಿಡು 

ಸವಿ  ಜೀವನ

30 January 2024

ಸಂಸ್ಕೃತಿ ಸಂಸ್ಕಾರ ಬೆಳೆಸುವ ಮಿಶ್ರ ಮಾಧುರ್ಯ.

 

ಸಂಸ್ಕೃತಿ ಸಂಸ್ಕಾರ ಬೆಳೆಸುವ  ಮಿಶ್ರ ಮಾಧುರ್ಯ.


ಸೋಷಿಯಲ್ ಮೀಡಿಯಾಗಳು ಜನರ ಸಮಯ ಹಾಳು ಮಾಡುತ್ತಿವೆ. ಯುವ ಜನರ ದಾರಿ ತಪ್ಪಿಸುತ್ತಿವೆ ಎಂಬ ಆರೋಪದ ನಡುವೆ ಕೆಲ ಸಂಘ ಸಂಸ್ಥೆಗಳು, ಸಮಾನ ಮನಸ್ಕ ತಂಡಗಳು ವಾಟ್ಸಪ್ ,ಪೇಸ್ ಬುಕ್ ಮುಂತಾದ ಮಾಧ್ಯಮಗಳ ಮೂಲಕ ಕಲೆ ,ಸಾಹಿತ್ಯ, ಸಂಸ್ಕೃತಿ ಬೆಳೆಸುವ ಕಾಯಕ ಮಾಡುವುದು ಸ್ತುತ್ಯಾರ್ಹ.ಈ ಸಾಮಾಜಿಕ ಮಾಧ್ಯಮಕ್ಕೆ ಹೊಸ ಸೇರ್ಪಡೆ ಕ್ಲಬ್ ಹೌಸ್ ಅಥವಾ ಕೇಳು ಕೋಣೆ.ಇಂತಹ ಕೇಳು ಕೋಣೆಯನ್ನು ಸಮರ್ಪಕವಾಗಿ ಬಳಸಿಕೊಂಡು 

ಡಾ.ಗಣಪತಿ ಹೆಗಡೆ ರವರ ನೇತೃತ್ವದಲ್ಲಿ 

ಮೈತ್ರಿ ಫೌಂಡೇಶನ್ ರವರು ಸಂಸ್ಕೃತ ಮತ್ತು ಸಂಸ್ಕೃತಿಗಳ ಪ್ರಸಾರ ಮಾಡುವಲ್ಲಿ ಬಹಳ ಉತ್ತಮ ಕಾರ್ಯ ಮಾಡುತ್ತಿದ್ದಾರೆ ಈಗಾಗಲೇ 123 ದಿನಗಳ ಕಾಲ  ಸತತವಾಗಿ ಮುಂಜಾನೆಯ "ಮಿಶ್ರ ಮಾಧುರ್ಯ" ಕಾರ್ಯಕ್ರಮದಲ್ಲಿ ಕನಿಷ್ಠ ಮುನ್ನೂರಕ್ಕೂ ಹೆಚ್ಚು ಶ್ರೋತೃಗಳು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವರು.

ಪ್ರತಿದಿನ ಮುಂಜಾನೆ ಆರೂವರೆಯಿಂದ ಎಂಟರವರೆಗೆ ‌ನಡೆಯುವ ಈ ಕಾರ್ಯಕ್ರಮದ ಹಿಂದೆ ಒಂದು ಸಂಘಟಿತ ಪ್ರಯತ್ನ ಇರುವುದು ಎದ್ದು ಕಾಣುತ್ತದೆ.ರಾಮತಾರಕ ಜಪದ ಮೂಲಕ ಆರಂಭವಾಗುವ ಕೇಳು ಕೋಣೆಯ ಈ ಕಾರ್ಯಕ್ರಮದಲ್ಲಿ

ಗೀತಾ ಪಠಣವಿರುತ್ತದೆ. ವೇದ ಘೋಷದ ಶ್ಲೋಕಗಳ ಪಠಣ ಮತ್ತು ಅರ್ಥವಿವರಣೆ ಇರುತ್ತದೆ.ನಮ್ಮ ಮೆದುಳಿಗೆ ಮೇವು ಹಾಕುವ ನಮ್ಮ ಸಂಸ್ಕಾರ ಸಂಸ್ಕೃತಿ ಪರಿಚಯ ಮಾಡುವ  ರಸ ಪ್ರಶ್ನೆ ಮೂಡಿಬರುತ್ತದೆ.  ನಾವು ಬಾಲ್ಯದಲ್ಲಿ "ಈಯಂ ಆಕಾಶವಾಣಿ..".ಎಂಬ ಬಲದೇವಾನಂದ್ ಸಾಗರ್ ರವರ  ಸಂಸ್ಕೃತ ವಾರ್ತೆಯನ್ನು ನೆನಪಿಸುವ ಸಂಸ್ಕೃತ ವಾರ್ತೆಯನ್ನು ಕೇಳುವಾಗ ಸಾಮಾನ್ಯ ಜ್ಞಾನದ ಜೊತೆ ಜೊತೆಗೆ ಸಂಸ್ಕೃತ ಭಾಷೆಯ ಜ್ಞಾನ ವಿಕಾಸ ಆಗುವಲ್ಲಿ ಸಹಕಾರಿ.  ಇದರ ಜೊತೆಗೆ ನಮ್ಮ ಆರೋಗ್ಯದ ಬಗ್ಗೆ ಆಯುರ್ವೇದ ಮೂಲದ ಔಷಧೀಯ ಗುಣಗಳ ಪದಾರ್ಥಗಳ ಬಗ್ಗೆ ಮಾಹಿತಿಯನ್ನು ನೀಡುವ  ಅಂಗೈಯಲ್ಲಿ ಆರೋಗ್ಯ ನಮಗೆ ಬಹಳ ಉಪಯುಕ್ತವಾಗಿದೆ. ಹೀಗೆ ಹಲವಾರು ಪ್ರಕಾರಗಳಲ್ಲಿ ನಡೆಯುವ ಕಾರ್ಯಕ್ರಮಗಳಿಗೆ ಕಿವಿಯಾಗುವ ಅವಕಾಶ ಸಿಕ್ಕಿದ್ದು ನಮ್ಮ ಭಾಗ್ಯ ಎಂದು ಹಲವಾರು ಕೇಳುಗರು ತಮ್ಮ ಮನದಾಳದ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಈ ಕಾರ್ಯಕ್ರಮದ ಕೇಂದ್ರ ಬಿಂದು ಮುತ್ತು ಮಾರ್ಗದರ್ಶಕರಾದ ಸಂಸ್ಕೃತ ವಿದ್ವಾನ್ ಡಾ. ಗಣಪತಿ  ಹೆಗಡೆ ರವರು   ಸದ್ಯದಲ್ಲೇ ಇದಕ್ಕೆ ಇನ್ನೂ ಕೆಲ ಅಂಶಗಳನ್ನು ಸೇರಿಸಿ ಈ ಕೇಳುಕೋಣೆಯ ಮಿಶ್ರಮಾಧುರ್ಯ ಕಾರ್ಯಕ್ರಮವನ್ನೂ ಮತ್ತಷ್ಟು ಮಧುರವಾಗಿಸುವ ಸುಳಿವು ನೀಡಿದ್ದಾರೆ. ನಾನಂತೂ ಪ್ರತಿ ದಿನ ಮುಂಜಾನೆ  ಈ ಮಧುರಾನುಭೂತಿ ಪಡೆಯುತ್ತಿರುವೆ ನೀವು ಸಹ ಇಂತಹ ಕ್ಲಬ್ ಹೌಸ್ ಕಾರ್ಯಕ್ರಮ ಕೇಳಿ ನಿಮ್ಮ ವ್ಯಕ್ತಿತ್ವ ಉತ್ತಮ ಪಡಿಸಿಕೊಳ್ಳಬಹುದು.


ಸಿಹಿಜೀವಿ ವೆಂಕಟೇಶ್ವರ

ತುಮಕೂರು

9900925529

29 January 2024

ಪರೀಕ್ಷಾ ಪೇ ಚರ್ಚಾ..ಮತ್ತು ಸಲಹೆಗಳು


ಪರೀಕ್ಷಾ ಪೇ ಚರ್ಚಾ..ಮತ್ತು ಸಲಹೆಗಳು 


ನೆಹರೂ ರವರು ಮಕ್ಕಳ ಪ್ರೀತಿಯ ಚಾಚಾ ನೆಹರೂ ಆಗಿದ್ದರು.ಡಾ ಅಬ್ದುಲ್ ಕಲಾಂ ಜಿ ರವರು ಮಕ್ಕಳಿಗೆ ಅಮೂಲ್ಯವಾದ ಸಲಹೆ ಮಾರ್ಗದರ್ಶನ ನೀಡಿ ಪುಸ್ತಕಗಳನ್ನು ಸಹ ಬರೆದು ಹುರಿದುಂಬಿಸಿದರು.ಅದೇ ಹಾದಿಯಲ್ಲಿ ನಮ್ಮ ಪ್ರಧಾನಿಯವರು ಸಾಗುತ್ತಿದ್ದಾರೆ.

ಪ್ರತಿ ವರ್ಷದಂತೆ ಈ ವರ್ಷವೂ ಮಾನ್ಯ ಪ್ರಧಾನ ಮಂತ್ರಿಗಳು ಪರೀಕ್ಷಾ ಪೆ ಚರ್ಚಾ 2024 ನಡೆಸಿಕೊಟ್ಟರು ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಪೋಷಕರೊಂದಿಗೆ ನೇರ ಸಂವಾದ ನಡೆಸಿದರು. ಈ ಕಾರ್ಯಕ್ರಮವು ದೆಹಲಿಯ  ಭಾರತ್‌ ಮಂಟಪದಲ್ಲಿ ಬೆಳಿಗ್ಗೆ 11:00 ಗಂಟೆಯಿಂದ  ನಡೆಯಿತು  ಈ ಬಾರಿ  ಒಟ್ಟು 205.62 ಲಕ್ಷ ವಿದ್ಯಾರ್ಥಿಗಳು, 14.93 ಲಕ್ಷ ಶಿಕ್ಷಕರು ಮತ್ತು 5.69 ಲಕ್ಷ ಪೋಷಕರು ಪರೀಕ್ಷಾ ಪೇ ಚರ್ಚಾ 2024 ನೋಂದಾಯಿಸಿಕೊಂಡಿದ್ದರು. 


ಮಾನ್ಯ ಪ್ರಧಾನ ಮಂತ್ರಿಗಳು  ಪರೀಕ್ಷೆಯ ಒತ್ತಡವನ್ನು ನಿವಾರಿಸುವ ಮಾರ್ಗಗಳ ಬಗ್ಗೆ ಸಾಮೂಹಿಕವಾಗಿ ಕಾರ್ಯತಂತ್ರ ರೂಪಿಸಲು ಅತ್ಯಂತ ಸ್ಮರಣೀಯ ಸಭೆ ಇದಾಗಿದೆ ಎಂದರು.

ಜೊತೆಗೆ ವಿದ್ಯಾರ್ಥಿಗಳು, ಪೋಷಕರು ಹಾಗೂ ಶಿಕ್ಷಕರ ಗೊಂದಲ ನಿವಾರಿಸುವ ಪ್ರಯತ್ನ ಮಾಡಿದರು. ಅದರಲ್ಲೂ, ಪರೀಕ್ಷೆಯ ಕುರಿತು ವಿದ್ಯಾರ್ಥಿಗಳು ಸಾಲು ಸಾಲು ಪ್ರಶ್ನೆಗಳನ್ನು ಕೇಳಿದ್ದು, ಪ್ರಧಾನಿಯವರು  ಹಲವು ಸಲಹೆಗಳನ್ನು ನೀಡಿದ್ದಾರೆ. ಉದಾಹರಣೆ, ನಿದರ್ಶನಗಳ ಮೂಲಕ ಪರೀಕ್ಷಾ ಭಯ ಹೋಗಲಾಡಿಸಲು ಯತ್ನಿಸಿದ್ದಾರೆ. ಅವುಗಳಲ್ಲಿ ಪ್ರಮುಖ 10 ಸಲಹೆಗಳು ಇಲ್ಲಿವೆ.


ರೈಲು ಬರುತ್ತಲೇ ಯಾರೂ ಸ್ಟೇಷನ್‌ ತಲುಪುವುದಿಲ್ಲ. ರೈಲು ಬರುವ 10 ನಿಮಿಷ ಮೊದಲೇ ತೆರಳುತ್ತೇವೆ. ಹಾಗೆಯೇ, ಪರೀಕ್ಷೆಯ ಕೊಠಡಿಗೂ ಮೊದಲೇ ತೆರಳಬೇಕು. ಕೊಠಡಿಯ ಬಾಗಿಲಿನವರೆಗೆ ಪುಸ್ತಕ ಹಿಡಿದುಕೊಂಡು ಹೋಗಬಾರದು. 10 ನಿಮಿಷ ಮೊದಲೇ ಪರೀಕ್ಷಾ ಕೇಂದ್ರಕ್ಕೆ ತೆರಳಿ. ಗೆಳೆಯರೊಂದಿಗೆ ಮಾತನಾಡಿ, ಒಂದು ಜೋಕ್‌ ಹೇಳಿ, ಮೊದಲು ನಿರಾತಂಕವಾಗಿ ಉಸಿರಾಡಿ.

ಪ್ರಶ್ನೆಪತ್ರಿಕೆ ಕೈಗೆ ನೀಡುತ್ತಲೇ ಗಾಬರಿಯಾಗದಿರಿ. ಪ್ರಶ್ನೆ ಪತ್ರಿಕೆ ಸಿಗುತ್ತಲೇ ಎಲ್ಲ ಪ್ರಶ್ನೆಗಳನ್ನು ಓದಿಕೊಳ್ಳಿ. ಯಾವ ಪ್ರಶ್ನೆಗೆ ಹೆಚ್ಚು ಸಮಯ ಬೇಕಾಗುತ್ತದೆ ಎಂಬುದನ್ನು ಯೋಚಿಸಿ. ಊಟ ಮಾಡುವಾಗ ಯಾರೂ ಗಡಿಯಾರ ನೋಡುವುದಿಲ್ಲ. ಹಾಗೆಯೇ, ಪರೀಕ್ಷೆ ಬರೆಯುವಾಗ ಅನಗತ್ಯವಾಗಿ ಗಡಿಯಾರ ನೋಡಿಕೊಳ್ಳದಿರಿ. ಅವಸರಕ್ಕೆ ಬಿದ್ದು ಬರೆಯಲು ಮುಂದಾಗದಿರಿ.

ಪರೀಕ್ಷೆಗೆ ಹೆಚ್ಚಿನ ವಿದ್ಯಾರ್ಥಿಗಳು ಓದಿಕೊಂಡು ಹೋಗುತ್ತಾರೆಯೇ ಹೊರತು, ಮೊದಲು ಬರೆದು ಬರೆದು ಅಭ್ಯಾಸ ಮಾಡಿಕೊಂಡಿರುವುದಿಲ್ಲ. ಹಾಗಾಗಿ, ಎಷ್ಟೇ ಓದಿದರೂ ಪರೀಕ್ಷೆಯಲ್ಲಿ ಉತ್ತಮವಾಗಿ ಬರೆಯಲು ಆಗುವುದಿಲ್ಲ. ಹಾಗಾಗಿ, ಪರೀಕ್ಷೆಗೂ ಮೊದಲು ಪ್ರಶ್ನೆಗಳಿಗೆ ಉತ್ತರ ಬರೆದು ಬರೆದು ಅಭ್ಯಾಸ ಮಾಡಿಕೊಳ್ಳಿ. ಆಗ ಮನನವೂ ಆಗುತ್ತದೆ, ಪರೀಕ್ಷೆಯಲ್ಲಿ ಸುಲಭವಾಗಿ ಬರೆಯುವುದೂ ಸಾಧ್ಯವಾಗುತ್ತದೆ.

ಯಾರೇ ಆಗಲಿ, ನೀರಿಗೆ ಇಳಿಯದ ಹೊರತು ಈಜು ಕಲಿಯಲು ಸಾಧ್ಯವಿಲ್ಲ. ಹಾಗೆಯೇ, ಹಳೆಯ ಪ್ರಶ್ನೆಪತ್ರಿಕೆಗಳಿಗೆ, ಪ್ರಶ್ನೆಗಳಿಗೆ ಬರೆದು, ನೋಟ್ಸ್‌ಗಳನ್ನು ಮಾಡಿಕೊಂಡು ಪರೀಕ್ಷೆಗೆ ತಯಾರಾಗಿ. ಬರೆದು ಅಭ್ಯಾಸ ಮಾಡಿಕೊಂಡರೆ, ಮನನ ಮಾಡಿಕೊಂಡರೆ ಪರೀಕ್ಷೆಯಲ್ಲಿ ಯಶಸ್ವಿಯಾಗಿ ತೇರ್ಗಡೆ ಹೊಂದಬಹುದು.

ವಿದ್ಯಾರ್ಥಿಗಳು ಓದಿಕೊಂಡು, ಬರೆದುಕೊಂಡು ಪರೀಕ್ಷೆಗೆ ಹೋಗುವುದರ ಜತೆಗೆ ಪರೀಕ್ಷೆಗೆ ಸಿದ್ಧತೆ ಮಾಡಿಕೊಳ್ಳುವಾಗಲೇ ಶಿಕ್ಷಕರೊಂದಿಗೆ ಉತ್ತಮ ಒಡನಾಟ ಇಟ್ಟುಕೊಳ್ಳಬೇಕು. ಓದುವಾಗ ಗೊಂದಲ ಬಂದರೆ ಶಿಕ್ಷಕರಿಗೆ ಪ್ರಶ್ನೆ ಕೇಳಬೇಕು, ಮನೆಯಲ್ಲಿದ್ದರೆ ಮೊಬೈಲ್‌ ಕರೆ ಮಾಡಬೇಕು. ಆಗ ತಕ್ಷಣವೇ ಪ್ರಶ್ನೆಗಳಿಗೆ ಉತ್ತರ ಸಿಗುತ್ತದೆ.

ಎಲ್ಲ ವಿದ್ಯಾರ್ಥಿಗಳ ಬಳಿಯೂ, ಮನೆಗಳಲ್ಲೂ ಮೊಬೈಲ್‌ ಇದೆ. ಆ ಮೊಬೈಲ್‌ಅನ್ನು ನಿತ್ಯ ಚಾರ್ಜ್‌ ಮಾಡದಿದ್ದರೆ ಅದು ಸ್ವಿಚ್‌ಆಫ್‌ ಆಗುತ್ತದೆ. ಹಾಗೆಯೇ ಮನುಷ್ಯನ ದೇಹವನ್ನೂ ರಿಚಾರ್ಜ್‌ ಮಾಡಬೇಕಾಗುತ್ತದೆ. ಅದರಲ್ಲೂ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳು ಮೆದುಳು, ಮನಸ್ಸಿನ ಜತೆಗೆ ದೇಹವನ್ನೂ ಉಲ್ಲಸಿತಗೊಳಿಸಬೇಕು.

ವಿದ್ಯಾರ್ಥಿಗಳು ಒಂದೇ ಕಡೆ ಓದುವ ಬದಲು ಎಳೆ ಬಿಸಿಲಿನಲ್ಲಿ ಕುಳಿತು ಓದಬೇಕು. ಶಾಂತಿಯುತ ವಾತಾವರಣದಲ್ಲಿ ಅಧ್ಯಯನ ಮಾಡಬೇಕು. ಸರಿಯಾಗಿ ನಿದ್ದೆ ಮಾಡಬೇಕು. ಮೊಬೈಲ್‌ನಲ್ಲಿ ಒಂದರ ಹಿಂದೆ ಒಂದು ರೀಲ್ಸ್‌ಗಳನ್ನು ನೋಡಿದರೆ ಮೊದಲು ನೋಡಿದ ರೀಲ್‌ ನೆನಪಿರುವುದಿಲ್ಲ. ಹಾಗಾಗಿ, ಎಡೆಬಿಡದೆ ಓದುವ ಬದಲು ದೇಹಕ್ಕೆ ಬೇಕಾಗುವಷ್ಟು ನಿದ್ದೆ ಮಾಡಬೇಕು. ಇದು ಮೆದುಳು, ಮನಸ್ಸು ಹಾಗೂ ದೇಹದ ಮೇಲೆ ಪರಿಣಾಮ ಬೀರುತ್ತದೆ. ಹಾಗಂತ ಮೋದಿ ಹೇಳಿದರು ಎಂದು ಬರೀ ನಿದ್ದೆಯನ್ನೇ ಮಾಡಬೇಡಿ ಎಂದು ಚಟಾಕಿ ಹಾರಿಸಿದರು.

ಮಕ್ಕಳು ಓದುವುದು, ಬರೆಯುವುದು, ಮನನ ಮಾಡಿಕೊಳ್ಳುವುದು ಎಷ್ಟು ಮುಖ್ಯವೋ ಆಹಾರವೂ ಅಷ್ಟೇ ಮುಖ್ಯ. ಪರೀಕ್ಷೆಯ ದಿನಗಳಲ್ಲಿ ನಿಯಮಿತ ಆಹಾರ ಸೇವಿಸಿ. ಬಡತನ ಇರಲಿ ಸಿರಿತನ ಇರಲಿ ಇರುವ ಆಹಾರ ಸೇವಿಸಿ. ಸರಿಯಾದ ಸಮಯಕ್ಕೆ ಊಟ ಮಾಡಿ.

ವ್ಯಾಯಾಮವು ವಿದ್ಯಾರ್ಥಿಗಳಿಗೆ ಪ್ರಮುಖವಾಗಿದೆ. ನಿತ್ಯವೂ ಬೆಳಗ್ಗೆ ಎದ್ದು ಹಲ್ಲುಜ್ಜುವ ರೀತಿ, ಬೆಳಗ್ಗೆ ಎದ್ದ ತಕ್ಷಣ 10 ನಿಮಿಷವಾದರೂ ವ್ಯಾಯಾಮ ಮಾಡಿ. ಇದರಿಂದ ದೇಹವು ಉಲ್ಲಾಸಗೊಳ್ಳುತ್ತದೆ. ದೈಹಿಕ ಚಟುವಟಿಕೆಯು ವಿದ್ಯಾರ್ಥಿಗಳಿಗೆ ಪ್ರಮುಖವಾಗಿದೆ.

ನಾವು ಚಳಿಯೊಂದಿಗೆ ಜೀವನ ಸಾಗಿಸುವ ಮನಸ್ಥಿತಿ ರೂಢಿಸಿಕೊಂಡರೆ, ಹೆಚ್ಚು ಚಳಿ ಎನಿಸುವುದಿಲ್ಲ. ಪರೀಕ್ಷೆಯೂ ಹಾಗೆಯೇ ನಾವು ಮೊದಲು ಆತ್ಮವಿಶ್ವಾಸದಿಂದ ಪರೀಕ್ಷೆ ಎದುರಿಸುವ ದೃಢ ನಿಶ್ಚಯ ಮಾಡಿಕೊಳ್ಳಬೇಕು. ನಾವು ಮೊದಲು ಮೆದುಳನ್ನು ಪರೀಕ್ಷೆಗೆ ಸಿದ್ಧಗೊಳಿಸುವ ಜತೆಗೆ ಮನಸ್ಸನ್ನೂ ಹುರಿಗೊಳಿಸಬೇಕು. ಈ ಪರೀಕ್ಷೆಯಲ್ಲಿ ನಾನು ಉತ್ತಮ ಅಂಕ ಪಡೆಯುತ್ತೇನೆ ಎಂದು ನಿಶ್ಚಯ ಮಾಡಿಕೊಳ್ಳಬೇಕು. ಎಂದು ತಿಳಿಸಿದ್ದಾರೆ.


ಮಾನ್ಯ ಪ್ರಧಾನ ಮಂತ್ರಿಗಳು ಈ ಪರೀಕ್ಷ ಪೆ ಚರ್ಚಾ ಕಾರ್ಯಕ್ರಮದಲ್ಲಿ ಕೇವಲ ಮಕ್ಕಳಿಗೆ ಮಾತ್ರ ಸಲಹೆ ನೀಡದೆ ಪೋಷಕರು ಮತ್ತು ಶಿಕ್ಷಕರಿಗೂ ಕೆಲ ಕಿವಿ ಮಾತುಗಳನ್ನು ಹೇಳಿದರು.

 ಕೆಲವು ಪೋಷಕರು ಮಗುವಿನ ರಿಪೋರ್ಟ್ ಕಾರ್ಡನ್ನು ತಮ್ಮ ವಿಸಿಟಿಂಗ್ ಕಾರ್ಡ್ ಆಗಿ ಪರಿವರ್ತಿಸುತ್ತಾರೆ.

ಸ್ವತಃ ಯಶಸ್ವಿಯಾಗದಂತಹ ಪೋಷಕರು ತಮ್ಮ ಮಕ್ಕಳ ರಿಪೋರ್ಟ್ ಕಾರ್ಡ್ ಅನ್ನು ದುರುಪಯೋಗ ಪಡಿಸಿಕೊಳ್ಳುತ್ತಾರೆ.

ಅವರು ಎಲ್ಲಿಗೆ ಹೋದರೂ, ಅವರು ತಮ್ಮ ಮಕ್ಕಳ ಬಗ್ಗೆ ಕಥೆಗಳನ್ನು ಹೇಳುತ್ತಾ, ತಮ್ಮ ಯಶಸ್ಸೆನ್ನುವಂತೆ ಬಿಂಬಿಸುತ್ತಾರೆ.

 ಪೋಷಕರು ತಮ್ಮ ಮಕ್ಕಳನ್ನು ಯಾವಾಗಲೂ ಶಪಿಸುತ್ತಾರೆ, ಆದ್ದರಿಂದ ಇದು ನಿಮ್ಮ ಮನಸ್ಸಿನಲ್ಲಿ ರೂಢಿಯಾಗುತ್ತದೆ.ಇದು ತಪ್ಪಬೇಕು ಎಂದರು 

ಪೋಷಕರು-ಮಕ್ಕಳ ಸಂವಹನ ಹೆಚ್ಚಬೇಕು.

ಮಕ್ಕಳಲ್ಲಿ ಒತ್ತಡವನ್ನು ಕಡಿಮೆ ಮಾಡುವಲ್ಲಿ ಶಿಕ್ಷಕರು ಸಹ ಪ್ರಮುಖವಾದ ಪಾತ್ರ ವಹಿಸುತ್ತಾರೆ ಹಾಗೂ ವಹಿಸಬೇಕು.

 ಆದ್ದರಿಂದ, ಶಿಕ್ಷಕರು ಮತ್ತು ವಿದ್ಯಾರ್ಥಿಗಳ ನಡುವೆ ಯಾವಾಗಲೂ ಸಕಾರಾತ್ಮಕ ಸಂಬಂಧ ಇರಬೇಕು.

 ಶಿಕ್ಷಕರ ಕೆಲಸ ಕೇವಲ ಕೆಲಸ ಮಾಡುವುದು ಮಾತ್ರವಲ್ಲ, ಜೀವನವನ್ನು ರೂಪಿಸುವುದು, ಜೀವನಕ್ಕೆ ಶಕ್ತಿ ನೀಡುವುದು,

ಪರೀಕ್ಷೆಯ ಒತ್ತಡವನ್ನು ವಿದ್ಯಾರ್ಥಿಗಳು ಮತ್ತು ಇಡೀ ಕುಟುಂಬ ಮತ್ತು ಶಿಕ್ಷಕರು ಒಟ್ಟಾಗಿ ಪರಿಹರಿಸಬೇಕು.

 ನಾವು ಯಾವುದೇ ಒತ್ತಡವನ್ನು ತಡೆದುಕೊಳ್ಳಲು ಸಮರ್ಥರಾಗಿ, ನಮ್ಮ ಮಾನಸಿಕ ಸ್ಥಿತಿಯಿಂದ ಒತ್ತಡವನ್ನು ನಿವಾರಿಸಬೇಕು.

 ಏನೇ ತೊಂದರೆಗಳಿರಲಿ, ನಾವು ಅದನ್ನು ಕುಟುಂಬದಲ್ಲಿಯೂ ಚರ್ಚಿಸಬೇಕು.

ಜೀವನದಲ್ಲಿ ಯಾವುದೇ ಸವಾಲು ಮತ್ತು ಸ್ಪರ್ಧೆ ಇಲ್ಲದಿದ್ದರೆ, ಜೀವನವು ಸ್ಫೂರ್ತಿದಾಯಕ ಮತ್ತು ಬುದ್ಧಿಹೀನವಾಗುತ್ತದೆ. ಈ ನಿಟ್ಟಿನಲ್ಲಿ ಮಕ್ಕಳು, ಪೋಷಕರು, ಶಿಕ್ಷಕರು ಕಾರ್ಯ ಪ್ರವೃತ್ತರಾಗಬೇಕು ಎಂದು ಕರೆ ನೀಡಿದರು 


ಈ ಸಲಹೆಗಳು ಕೇವಲ ಮಕ್ಕಳಿಗೆ ಮಾತ್ರವಲ್ಲದೆ ಈ ವರ್ಷ ಪರೀಕ್ಷೆ ಬರೆಯುವ ಎಲ್ಲಾ ಪರೀಕ್ಷಾರ್ಥಿಗಳಿಗೆ, ಪೋಷಕರಿಗೆ, ಶಿಕ್ಷಕರಿಗೆ  ನೀಡಿದ ಸಲಹೆಯಂತೆ ತೋರುತ್ತದೆ. ಇವುಗಳನ್ನು ಪಾಲಿಸಿ,ಹಾಗೂ ಗೆಲ್ಲವ ಪಾಲಿಸಿ ನಿಮ್ಮದಾಗಲಿ ಪರೀಕ್ಷೆ ಬರೆಯುವ ಸರ್ವರಿಗೂ ಶುಭವಾಗಲಿ..


ಸಿಹಿಜೀವಿ ವೆಂಕಟೇಶ್ವರ

ಶಿಕ್ಷಕರು

ತುಮಕೂರು

9900925529


27 January 2024

ಮಾನವರಾಗೋಣ..ಭಾಗ ೮

 


ಮಾನವರಾಗೋಣ 


 ಅಮೇರಿಕದಲ್ಲಿ ಒಬ್ಬ   ಖೈದಿಗೆ ಮರಣದಂಡನೆ ವಿಧಿಸಿದಾಗ, ಕೆಲವು ವಿಜ್ಞಾನಿಗಳು ಈ ಖೈದಿಯ ಮೇಲೆ ಕೆಲವು ಪ್ರಯೋಗಗಳನ್ನು ಮಾಡಬೇಕೆಂದು ಸೂಚಿಸಿದ್ದರಿಂದ ಖೈದಿಯನ್ನು ನೇಣು ಹಾಕುವ ಬದಲು ವಿಷಕಾರಿ ಹಾವಿನ  ದಾಳಿಯಿಂದ ಕೊಲ್ಲಲಾಗುವುದು ಎಂದು ತಿಳಿಸಲಾಯಿತು.


ಒಂದು ದೊಡ್ಡ ವಿಷಪೂರಿತ ಹಾವನ್ನು ಕೈದಿಯ ಮುಂದೆ ತರಲಾಯಿತು. ನಂತರ ಖೈದಿಯ ಕಣ್ಣುಗಳನ್ನು ಮುಚ್ಚಿ ಅವನನ್ನು ಕುರ್ಚಿಗೆ ಕಟ್ಟಲಾಯಿತು.  ಅವನಿಗೆ ಹಾವಿನಿಂದ ಕಚ್ಚಿಸಲಿಲ್ಲ, ಆದರೆ ಎರಡು ಪಿನ್ ಗಳಿಂದ ಚುಚ್ಚಲಾಯಿತು. ಆ ಖೈದಿ ಎರಡೇ ಸೆಕೆಂಡುಗಳಲ್ಲಿ ಸತ್ತುಹೋದ.

ಮರಣೋತ್ತರ ಪರೀಕ್ಷೆಯಲ್ಲಿ ಖೈದಿಯ ದೇಹದಲ್ಲಿ ಹಾವಿನ ವಿಷವನ್ನು ಹೋಲುವ ವಿಷವಿದೆ ಎಂದು ತಿಳಿದುಬಂತು.

ಎಲ್ಲರಿಗೂ ಅಚ್ಚರಿ!  ಈ ವಿಷ ಆ ಮೃತ ಖೈದಿಯ ದೇಹದಲ್ಲಿ ಎಲ್ಲಿಂದ ಬಂತು!!? ಅಥವಾ ಖೈದಿಯ ಸಾವಿಗೆ ಕಾರಣವೇನು!? 

ಇದಕ್ಕೆ ಸಿಕ್ಕ ಉತ್ತರವೇನೆಂದರೆ..  "ಮಾನಸಿಕ ಆಘಾತದಿಂದಾಗಿ ಆ ವಿಷವನ್ನು ಅವನ ದೇಹದಿಂದಲೇ ಉತ್ಪಾದಿಸಲಾಯಿತು!!!"


ಆದ್ದರಿಂದ ನಾವು ತೆಗೆದುಕೊಳ್ಳುವ ಪ್ರತಿಯೊಂದು ನಿರ್ಧಾರವು ಧನಾತ್ಮಕ ಅಥವಾ ಋಣಾತ್ಮಕ ಶಕ್ತಿಯನ್ನು ಉತ್ಪಾದಿಸುತ್ತದೆ ಮತ್ತು ಅದಕ್ಕೆ ಅನುಗುಣವಾಗಿ ನಮ್ಮ ದೇಹವು ಹಾರ್ಮೋನುಗಳನ್ನು ಉತ್ಪಾದಿಸುತ್ತದೆ.

90% ಕಾಯಿಲೆಗಳಿಗೆ ಮೂಲ ಕಾರಣ ನಕಾರಾತ್ಮಕ ಆಲೋಚನೆಗಳಿಂದ ಉತ್ಪತ್ತಿಯಾಗುವ ಶಕ್ತಿ. 

ನಾವು ಮಾನಸಿಕವಾಗಿ ಆರೋಗ್ಯವಾಗಿದ್ದರೆ ದೈಹಿಕವಾಗಿ ಆರೋಗ್ಯವಿದ್ದಂತೆ ಸರಿ .ಕಷ್ಟ ಕಾಲದಲ್ಲಿ ನಮ್ಮ ಮನಸ್ಸನ್ನು ಸ್ಥಿರವಾಗಿ ಇಟ್ಟುಕೊಳ್ಳುವುದು ಅತ್ಯವಶ್ಯಕ. ಧೈರ್ಯಂ ಸರ್ವತ್ರ ಸಾಧನಂ ಎಂಬಂತೆ ಯಾವುದೇ ಕಾರಣಕ್ಕೂ ಧೃತಿಗೆಡದೆ ಮುನ್ನೆಡೆಯಬೇಕು. ಕೆಲವರಂತೂ ಮಂಬರುವ ಕಲ್ಪಿತ ತೊಂದರೆಗಳನ್ನು ಊಹಿಸಿಕೊಂಡು ಹಿಂಸೆಪಡುವುದನ್ನು ನೋಡಲಾಗದು. ಬಾರದು ಬಪ್ಪುದು,ಬಪ್ಪುದು ತಪ್ಪುದು ಎಂಬ ಅಣ್ಣನ ವಚನವನ್ನು ನೆನಯುತ್ತಾ ಬಂದದ್ದೆಲ್ಲಾ ಬರಲಿ ರಾಘವೇಂದ್ರನ ದಯೆವೊಂದಿರಲಿ ಎಂದು ನಮ್ಮ ನಮ್ಮ  ಕಾಯಕ ಮಾಡಿದರೆ ಧರೆಯೇ  ಕೈಲಾಸವಾಗುವುದು ಅಲ್ಲವೇ?


ಸಿಹಿಜೀವಿ 

ಸಿ ಜಿ ವೆಂಕಟೇಶ್ವರ

ತುಮಕೂರು


 


22 January 2024

ಮಾನವ ಜನ್ಮವನ್ನು ಪಾವನ ಮಾಡಿಕೊಳ್ಳೋಣ: ಡಾ.ಗುರುರಾಜ್ ಕರ್ಜಗಿ.





 


ಮಾನವ ಜನ್ಮವನ್ನು ಪಾವನ ಮಾಡಿಕೊಳ್ಳೋಣ: ಡಾ.ಗುರುರಾಜ್ ಕರ್ಜಗಿ.


ಜೀವರಾಶಿಗಳಲ್ಲಿ ಶ್ರೇಷ್ಠವಾದ ಮಾನವ ಜನ್ಮವನ್ನು ಡಿ ವಿ ಜಿ ಯಂತವರ ಸಾಹಿತ್ಯದ ಬೆಳಕಿನಲ್ಲಿ  ಪಾವನ ಮಾಡಿಕೊಳ್ಳೋಣ ಎಂದು ಶಿಕ್ಷಣ ತಜ್ಞರು ಹಾಗೂ ವಾಗ್ಮಿಗಳಾದ ಡಾ ಗುರುರಾಜ್ ಕರ್ಜಗಿರವರು ಕರೆ ನೀಡಿದರು.

ತುಮಕೂರಿನ ನಗರ ಕೇಂದ್ರ ಗ್ರಂಥಾಲಯದಲ್ಲಿ ನಡೆದ ಡಿ ವಿ ಜಿ ಯವರ ಜೀವನಧರ್ಮ  ದರ್ಶನ ಉಪನ್ಯಾಸ ಮಾಲಿಕೆಯ 100 ನೇ ಉಪನ್ಯಾಸ ಕಾರ್ಯಕ್ರಮದಲ್ಲಿ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು.

ಕನ್ನಡ ಸಾಹಿತ್ಯ ಪರಿಷತ್ತಿನ ಉಪಾಧ್ಯಕ್ಷರಾಗಿ ಡಿ ವಿ ಜಿಯವರು ಸಲ್ಲಿಸಿದ ಕೊಡುಗೆ ಅಪಾರ, ತುಮಕೂರಿಗೂ ಡಿ ವಿ ಜಿ ರವರಿಗೂ ಅವಿನಾಭಾವ ಸಂಬಂಧವಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾಡೋಜ ಡಾ. ಮಹೇಶ್ ಜೋಶಿರವರು ಅಭಿಪ್ರಾಯಪಟ್ಟರು. ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಡಿ ವಿ ಜಿ ರವರ ಸಹೋದರ ಸಂಬಂಧಿ ಆರ್ ಚಂದ್ರಮೌಳಿ ರವರು ಡಿ ವಿ ಗುಂಡಪ್ಪನವರ ಸಮಾಜ ಮುಖಿ ಚಿಂತನೆಗಳನ್ನು ಉದಾಹರಣೆ ಸಮೇತ ವಿವರಿಸಿದರು. 

ಕಾರ್ಯಕ್ರಮದ ದಿವ್ಯ ಸಾನಿದ್ಯ ವಹಿಸಿದ್ದ ಪಾವಗಡ ರಾಮಕೃಷ್ಣ ಸೇವಾಶ್ರಮದ ಅಧ್ಯಕ್ಷರಾದ ಪರಮಪೂಜ್ಯ ಸ್ವಾಮಿ ಜಪಾನಂದ್ ಜೀ ಮಹಾರಾಜ್ ರವರು ಡಿ ವಿ ಜಿ ಯವರ ಗೀತೆಯನ್ನು ಹಾಡಿ ಕಗ್ಗಗಳ ಮಹತ್ವ ಮತ್ತು ಕನ್ನಡ ಭಾಷೆಯ ಬಳಕೆಯ ಬಗ್ಗೆ ಯುವ ಜನತೆಗೆ ಮಾರ್ಗದರ್ಶನ ನೀಡಬೇಕಿದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕನ್ನಡ ಸಾಹಿತ್ಯ ಪರಿಷತ್ತಿನ ತುಮಕೂರು ಘಟಕದ ಅಧ್ಯಕ್ಷರಾದ ಕೆ ಎಸ್ ಸಿದ್ದಲಿಂಗಪ್ಪ ರವರು ಡಿ ವಿ ಜಿ ರವರ ಜೀವನ ಧರ್ಮದರ್ಶನ  ದ ನೂರು ಕಾರ್ಯಕ್ರಮ ಮಾಡಲು ಸಹಕರಿಸಿದ ಸರ್ವರನ್ನು ಸ್ಮರಿಸಿ ಧನ್ಯವಾದಗಳನ್ನು ಹೇಳಿದರು.

ಕಾರ್ಯಕ್ರಮಕ್ಕೂ ಮೊದಲು ಡಿ ವಿ ಜಿ ರವರ ಕಗ್ಗ ವಾಚನ ಮತ್ತು ಗಮಕ ಕಲಾಶ್ರೀ ವಿದ್ವಾನ್ ಎಂ ಜಿ ಸಿದ್ದರಾಮಯ್ಯ ರವರು ವ್ಯಾಖ್ಯಾನ ಮಾಡಿದರು. 

ತುಮಕೂರು ವಿಶ್ವ ವಿದ್ಯಾನಿಲಯದದ ಉಪಕುಲಪತಿಗಳಾದ ಪ್ರೊ ಎಂ ವೆಂಕಟೇಶ್ವರಲು ಸ್ವಾಗತಿಸಿದರು.

ಪ್ರಜಾಪ್ರಗತಿ ಪತ್ರಿಕೆ ಸಂಪಾದಕರಾದ ಎಸ್ ನಾಗಣ್ಣ ರವರು ವಂದಿಸಿದರು.

ತುಮಕೂರು ಜಿಲ್ಲಾ ಕ ಸಾ ಪ ಮಹಿಳಾ ಪ್ರತಿನಿಧಿ ರಾಣಿ ಚಂದ್ರಶೇಖರ್ ಕಾರ್ಯಕ್ರಮ ನಿರೂಪಿಸಿದರು.

ವಾಸವಿ ಸಂಘದ ಅಧ್ಯಕ್ಷರಾದ ಡಾ ಆರ್.ಎಲ್ ರಮೇಶ್ ಬಾಬು, 

ಜಿಲ್ಲಾ ಕ ಸಾ ಪ ಸಂಘಟನಾ ಕಾರ್ಯದರ್ಶಿ ತೇಜಸ್ವಿ ಕಿರಣ್,

ತಾಲ್ಲೂಕು ಕ ಸಾ ಪ ಅಧ್ಯಕ್ಷರಾದ ಚಿಕ್ಕಬೆಳ್ಳಾವಿ ಶಿವಕುಮಾರ್,  ನಗರ ಕ ಸಾ ಪ ಅಧ್ಯಕ್ಷರಾದ ಗೀತಾ ನಾಗೇಶ್ ,ಕಾರ್ಯದರ್ಶಿ ಸಿಹಿಜೀವಿ ವೆಂಕಟೇಶ್ವರ, ಹಾಗೂ ಇತರ ಪದಾಧಿಕಾರಿಗಳು ಉಪಸ್ಥಿತರಿದ್ದರು. 


19 January 2024

ಸನ್ಯಾಸಿಯಂತೆ ಯೊಚಿಸಿ, ನಿಮ್ಮ ಜೀವನವನ್ನು ಉತ್ತಮಪಡಿಸಿಕೊಳ್ಳಿ.....


 


ಸನ್ಯಾಸಿಯಂತೆ ಯೊಚಿಸಿ, ನಿಮ್ಮ ಜೀವನವನ್ನು ಉತ್ತಮಪಡಿಸಿಕೊಳ್ಳಿ.....


ನಾನು ಇತ್ತೀಚೆಗೆ   ಜಯ್  ಶೆಟ್ಟಿಯವರ "ಥಿಂಕ್ ಲೈಕ್ ಎ  ಮಾಂಕ್" ಪುಸ್ತಕ ಓದಿದೆ. ಅದನ್ನು ಓದಿದ  ಮೇಲೆ ಎಲ್ಲಾ ವಯೋಮಾನದವರು ಪದೇ ಪದೇ ಓದಬೇಕಾದ ಮತ್ತು ಆ ಪುಸ್ತಕದ ಕೆಲ ಉತ್ತಮ ಗುಣಗಳನ್ನು ಅಳವಡಿಸಿಕೊಳ್ಳಲೇಬೇಕಾದ ಅಗತ್ಯವಿದೆ ಎನಿಸಿತು. ಮೂಲ ಇಂಗ್ಲಿಷ್ ಆದರೂ ನಾನು ಕನ್ನಡದ ಆವೃತ್ತಿಯನ್ನು ಓದಿದೆ.

ಇಡೀ ಪುಸ್ತಕ ಓದಿದ ಬಳಿಕ ಆ ಪುಸ್ತಕದ ಸಾರಾಂಶವನ್ನು ನಿಮ್ಮ ಬಳಿ ಹಂಚಿಕೊಳ್ಳಲು ಮನಸಾಗಿದೆ. ಆ ಪುಸ್ತಕದ ಸಾರಾಂಶವನ್ನು  ನಿಮಗೆ ಸಲಹೆ ರೂಪದಲ್ಲಿ ಈ ಕೆಳಗಿನ ಅಂಶಗಳ ರೂಪದಲ್ಲಿ ಸಲಹಾತ್ಮಕವಾಗಿ ಹೇಳಬಯಸುವೆ.


  ಗತದ ಗೊಡವೆಯ ಬಿಡಿ.  ಮತ್ತು ಭವಿಷ್ಯವನ್ನು ಅತಿಯಾಗಿ ಕಲ್ಪಿಸಿಕೊಂಡು ಹಗಲುಗನಸು ಕಾಣಬೇಡಿ. ಪ್ರಸ್ತುತ ಕ್ಷಣದಲ್ಲಿ ವಾಸಿಸಿ ಮತ್ತು ನೀವು ಏನು ಸಾಧಿಸಬಹುದು ಎಂಬುದರ ಮೇಲೆ ಕೇಂದ್ರೀಕರಿಸಿ.ನಿಮ್ಮನ್ನು ಇತರರೊಂದಿಗೆ ಹೋಲಿಸಿಕೊಳ್ಳಬೇಡಿ.  ಪ್ರತಿಯೊಬ್ಬರೂ ತಮ್ಮದೇ ಆದ ವಿಶಿಷ್ಟ ಗುರಿಗಳನ್ನು ಹೊಂದಿ ಅದನ್ನು ತಲುಪಲು ಪ್ರಯಾಣದಲ್ಲಿದ್ದಾರೆ.  ನಿಮ್ಮ ಸ್ವಂತ ಗುರಿ ಮತ್ತು ಪ್ರಗತಿಯತ್ತ ಗಮನಹರಿಸಿ.ನಿಮ್ಮಲ್ಲಿರುವದಕ್ಕೆ ಕೃತಜ್ಞರಾಗಿರಿ.  ನಿಮ್ಮ ಜೀವನದಲ್ಲಿ ದೊಡ್ಡ ಅಥವಾ ಚಿಕ್ಕದಾದ ಯಶಸ್ಸನ್ನು ಸಂಭ್ರಮಿಸಿ  ಮತ್ತು  ಒಳ್ಳೆಯ ವಿಷಯಗಳನ್ನು ಪ್ರಶಂಸಿಸಲು ಸಮಯ ತೆಗೆದುಕೊಳ್ಳಿ.


 ಮೊದಲು ನಿಮ್ಮ ಬಗ್ಗೆ ನಿಮಗೆ ಹೆಮ್ಮೆಯಿರಲಿ. ಮತ್ತು ಇತರರಿಗೆ ದಯೆಯಿಂದಿರಿ.  ನಿಮ್ಮನ್ನು ಮತ್ತು ಇತರರನ್ನು ಸಹಾನುಭೂತಿ ಮತ್ತು ಕಾಳಜಿಯಿಂದ ನೋಡಿಕೊಳ್ಳಿ.

ನಿಯಮಿತವಾಗಿ ಧ್ಯಾನ ಮಾಡಿ.  ಧ್ಯಾನವು ಮನಸ್ಸನ್ನು ಶಾಂತಗೊಳಿಸಲು ಮತ್ತು ಒತ್ತಡವನ್ನು ಕಡಿಮೆ ಮಾಡಲು ಪ್ರಬಲವಾದ ಸಾಧನವಾಗಿದೆ.


  ಸಾವಧಾನತೆಯನ್ನು ಅಭ್ಯಾಸ ಮಾಡಿ.  ಯಾವುದೇ ನಿರ್ಧಾರವನ್ನು ತೆಗೆದುಕೊಳ್ಳುವ ಮೊದಲು   ಪ್ರಸ್ತುತ ಕ್ಷಣಕ್ಕೆ ಗಮನ ಕೊಡುವ ಅಭ್ಯಾಸ ರೂಢಿಸಿಕೊಳ್ಳಿ.

ಅತಿಯಾದ ಅಟ್ಯಾಚ್ ಮೆಂಟ್ ಬೇಕಿಲ್ಲ.ಕೆಲ ಜನರ, ಸ್ಥಳಗಳ,ಮತ್ತು ವಸ್ತುಗಳ ಮೇಲೆ ಅತಿಯಾದ ಅಟ್ಯಾಚ್ ಮೆಂಟ್  ದುಃಖಕ್ಕೆ ಕಾರಣವಾಗಬಹುದು.  ಅಟ್ಯಾಚ್ ಮೆಂಟ್  ಬಿಡಲು ಮತ್ತು ಹೆಚ್ಚು ನಿರಾತಂಕದ ಜೀವನವನ್ನು ನಡೆಸಲು ಕಲಿಯಿರಿ.

 ಗಾಂಧೀಜಿಯಿಂದ ಹಿಡಿದು ಹಲವು  ಮಹಾನ್ ವ್ಯಕ್ತಿಗಳು  ಸರಳವಾಗಿ ಬದುಕುವ ಮಾದರಿಯ ತೋರಿಸಿದ್ದಾರೆ.  ಸರಳತೆ ರೂಢಿಸಿಕೊಳ್ಳಿ  ವಸ್ತು ಆಸ್ತಿ ಮತ್ತು ಬಾಹ್ಯ ಸಂಪತ್ತನ್ನು ಬೆನ್ನಟ್ಟಬೇಡಿ.  ನಿಮಗೆ ನಿಜವಾಗಿಯೂ ಮುಖ್ಯವಾದುದನ್ನು ಮತ್ತು ಅವಶ್ಯಕತೆ ಇರುವುದನ್ನು  ಪಡೆಯಲು ಮಾತ್ರ ಗಮನ  ಕೇಂದ್ರೀಕರಿಸಿ ಮತ್ತು ಸರಳ ಜೀವನವನ್ನು ನಡೆಸಿ.


ಕೆಲವೊಮ್ಮೆ ನೀವು ಮಾಡಿದ ತಪ್ಪಿಗೆ  ನಿಮ್ಮನ್ನೇ ಕ್ಷಮಿಸಿಕೊಳ್ಳಿ ಅದೇ ರೀತಿಯಲ್ಲಿ  ಇತರರನ್ನು ಕ್ಷಮಿಸಿ ತನ್ಮೂಲಕ ನೀವು ದೊಡ್ಡವರಾಗಿ.

ಹೀಗೆ ಥಿಂಕ್ ಲೈಕ್ ಎ ಮಾಂಕ್ ಪುಸ್ತಕದ ಪ್ರಮುಖಾಂಶಗಳ ಆಧಾರದ ಸಲಹೆಗಳ   ಪಟ್ಟಿಯು ಬೆಳೆಯುತ್ತಾ ಸಾಗುತ್ತದೆ. 

ಜಯ್  ಶೆಟ್ಟಿಯವರ ಈ  ಪುಸ್ತಕವು ಹೆಚ್ಚು ಶಾಂತಿಯುತ ಮತ್ತು ತೃಪ್ತಿಕರ ಜೀವನವನ್ನು ನಡೆಸಲು ಪ್ರಾಯೋಗಿಕ ಮಾರ್ಗದರ್ಶಿಯಾಗಿದೆ.  ಅವರ ಪುಸ್ತಕದಲ್ಲಿನ ಪಾಠಗಳನ್ನು ಅನುಸರಿಸುವ ಮೂಲಕ ನಿಮ್ಮ ಮನಸ್ಸನ್ನು ಹೆಚ್ಚು ಶಾಂತವಾಗಿಸಿಕೊಳ್ಳಲು ಮತ್ತು  ಸಹಾನುಭೂತಿಯಿಂದ ವರ್ತಿಸುವ ತರಬೇತಿ ನೀಡಬಹುದು. ಇಂತಹ ಅನುಭವ ನಿಮ್ಮದಾಗಬೇಕಾದರೆ ನೀವು ಥಿಂಕ್ ಲೈಕ್ ಎ ಮಾಂಕ್ ಓದಿ ಬಿಡಿ. ಸನ್ಯಾಸಿಯಂತೆ ಯೊಚಿಸಿ, ನಿಮ್ಮ ಜೀವನವನ್ನು ಉತ್ತಮಪಡಿಸಿಕೊಳ್ಳಿ.....


ಸಿಹಿಜೀವಿ ವೆಂಕಟೇಶ್ವರ

ಶಿಕ್ಷಕರು

ತುಮಕೂರು

9900925529


 

18 January 2024

ಸೈಬರ್ ಕಳ್ಳರಿಂದ ರಕ್ಷಿಸಿಕೊಳ್ಳೋಣ.


 


ಸೈಬರ್ ಕಳ್ಳರಿಂದ ರಕ್ಷಿಸಿಕೊಳ್ಳೋಣ.


ಮೊನ್ನೆ ರಾತ್ರಿ ಎಂಟು ಮೂವತ್ತರ ಸುಮಾರಿಗೆ ಪೋಷಕರೊಬ್ಬರು ಕರೆ ಮಾಡಿ " ಯಾರೋ ಪೋನ್ ಮಾಡಿ ನಿಮ್ ಮಗಳಿಗೆ ಸ್ಕಾಲರ್ಶಿಪ್ ಕೊಡ್ತೀವಿ, ಒಂದೂವರೆ ಸಾವ್ರ ನಿಮ್ ಅಕೌಂಟ್ ನಿಂದ ಟ್ರಾನ್ಸ್ಪರ್ ಮಾಡಿ ಅಂತಾರೆ ,ಏನ್ ಮಾಡ್ಲಿ ಸರ್ " ಅಂತ ಕೇಳಿದರು. ನನಗೆ ಒಂದೆಡೆ ಖುಷಿ ಮತ್ತೊಂದು ಕಡೆ ಬೇಸರವಾಯಿತು.ಖುಷಿ ಯಾಕೆಂದರೆ ನಮ್ಮ ಶಾಲೆಯ ಮಕ್ಕಳಿಗೆ ಆರ್ಥಿಕ ಸಾಕ್ಷರತೆ ಬಗ್ಗೆ ಶಾಲಾ ಪ್ರಾರ್ಥನೆಯ ಸಮಯದಲ್ಲಿ ಹಾಗೂ ಪಾಠದ ಮಧ್ಯ ಆಗಾಗ್ಗೆ ಮಾಹಿತಿ ನೀಡುವಾಗ ಇಂತಹ ಸೈಬರ್ ಕ್ರೈಮ್ ಬಗ್ಗೆ  ಉದಾಹರಣೆ ಸಮೇತ  ಮಾಹಿತಿ ನೀಡಿ  ಜಾಗೃತರಾಗುವಂತೆ ತಿಳಿಸಿದ್ದೆವು.ಆ ವಿದ್ಯಾರ್ಥಿನಿ ಇಂತಹ ಕರೆ ಬಂದಾಗ ತನ್ನ ಪೋಷಕರಿಗೆ ನನಗೆ ಕರೆ ಮಾಡಲು ತಿಳಿಸಿದ್ದಳು ಇದರಿಂದ ಆನ್ಲೈನ್  ಆರ್ಥಿಕ ವ್ಯವಹಾರದ   ವಂಚನೆಯಿಂದ ಪಾರಾಗಿದ್ದರು.

ಬೇಸರದ ಸಂಗತಿಯೇನೆಂದರೆ,ಇಷ್ಟು ದಿನ ಸಂಪಾದನೆ ಮಾಡುವ ಟೆಕ್ಕಿಗಳು,ಗೃಹಿಣಿಯರು ನಿರುದ್ಯೋಗಿಗಳನ್ನು ಟಾರ್ಗೆಟ್ ಮಾಡಿ ಆಧಾರ್ ,ಓಟಿಪಿ, ಫಿಷಿಂಗ್, ವಿಷಿಂಗ್ , ಮುಂತಾದ ಮಾರ್ಗಗಳಲ್ಲಿ ಜನರ ಹಣಕ್ಕೆ ಕನ್ನ ಹಾಕಿದ್ದ ಖದೀಮರು ಈಗ ಶಾಲಾ ಕಾಲೇಜುಗಳಲ್ಲಿ ಓದುವ ಮಕ್ಕಳಿಗೆ ಕರೆ ಮಾಡಿ ಸ್ಕಾಲರ್ಶಿಪ್ ಹಣದ ಆಮಿಷ ನೀಡಿ ವಂಚಿಸುವ ಕಾಯಕಕ್ಕೆ ಇಳಿದಿದ್ದಾರೆ.

ಪೋಷಕರ ಜೊತೆಗೆ ಮಾತಾನಾಡಿದ ಸೈಬರ್ ಕಳ್ಳರ ಸಂಭಾಷಣೆಯ ರೆಕಾರ್ಡಿಂಗ್ ಅನ್ನು ಪೋಷಕರು ನನಗೆ ಕಳಿಸಿದರು. ಅದನ್ನು ಕೇಳಿದಾಗ ಅವರ ಮಾತುಗಾರಿಕೆ, ಸುಳ್ಳು ಹೇಳುವ ಕೌಶಲ್ಯ, ಕಂಡು ನಾನೇ ದಂಗಾದೆ. ಆ ಕಡೆಯಿಂದ ಮಾತನಾಡಿದ ಸೈಬರ್ ವಂಚಕಿಯ ಮಾತುಗಳ ಪ್ರಕಾರ ಸರ್ಕಾರ ಹೊಸದಾಗಿ ಮಕ್ಕಳಿಗೆ ನೇರವಾಗಿ ಗೂಗಲ್ ಪೇ ಅಥವಾ ಪೋನ್ ಪೇ ನಲ್ಲಿ ಮಾತ್ರ ಸ್ಕಾಲರ್ಶಿಪ್ ಹಣ ಹಾಕುತ್ತಾರಂತೆ. ಮಕ್ಕಳು 1500  ಹಣ ಹಾಕಿದರೆ ಅದೂ ಗೂಗಲ್ ಪೇ ನಲ್ಲಿ ಹಾಕಿದರೆ ಮಾತ್ರ ಆ ವಿದ್ಯಾರ್ಥಿಗಳ ಸ್ಕಾಲರ್ಶಿಪ್ ಲಿಂಕ್ ಓಪನ್ ಆಗುತ್ತಂತೆ. ವಿದ್ಯಾರ್ಥಿಗಳು ಈ ಆಫರ್ ತಿರಸ್ಕರಿಸಿದರೆ ಅಂತಹ ವಿದ್ಯಾರ್ಥಿಗಳನ್ನು ರೆಡ್ ಲಿಸ್ಟ್ ಗೆ ಸೇರಿಸುತ್ತಾರಂತೆ.ಅವರಿಗೆ ಲೈಪ್ ನಲ್ಲಿ ಸ್ಕಾಲರ್ಶಿಪ್ ಬರೋದೆ ಇಲ್ವಂತೆ.ಹೀಗೆ ರೈಲು ಬಿಡುತ್ತಾ ಮಕ್ಕಳ ಮತ್ತು ಪೋಷಕರನ್ನು ಭಾವನಾತ್ಮಕ ಬ್ಲಾಕ್ ಮೇಲೆ ಮಾಡಿದ್ದಳು ಸೈಬರ್ ಅಮ್ಮಣ್ಣಿ.

ನಾನು ಆ ಪೋಷಕರಿಗೆ ಯಾವುದೇ ಕಾರಣಕ್ಕೆ ಹಣ ಕೊಡಬೇಡಿ ಎಂದು ಸಲಹೆ ನೀಡಿದೆ.ಜೊತೆಯಲ್ಲಿ ಎಲ್ಲಾ ಸ್ಕಾಲರ್ಶಿಪ್ ಡಿ ಬಿ ಟಿ ಅಂದರೆ ನೇರವಾಗಿ ನಿಮ್ಮ ಮಕ್ಕಳ ಖಾತೆಗೆ ಹಣ ಬರುತ್ತದೆ. ಗೂಗಲ್ ಪೇ ನಲ್ಲಿ ಅಲ್ಲ ಎಂದು ಮನವರಿಕೆ ಮಾಡಿದೆ.

ಆ ಪೋಷಕರು ಹಣ ನೀಡದಿದ್ದಾಗ ಮತ್ತೊಮ್ಮೆ ಕರೆ ಮಾಡಿದ ವಂಚಕರು ಪೋಷಕರು ಮತ್ತು ಸಲಹೆ ನೀಡಿದ ಶಿಕ್ಷಕರನ್ನೇ ಬೈಯ್ದಿದ್ದಾರೆ.

ಈ  ಪ್ರಕರಣದ ತರುವಾಯ ನಮ್ಮ ಮುಖ್ಯ ಶಿಕ್ಷಕರು ಮತ್ತು ಎಲ್ಲಾ ಶಿಕ್ಷಕರು ಮಕ್ಕಳಿಗೆ ಜಾಗೃತಿ ಮೂಡಿಸುವ ಕಾರ್ಯ ಮಾಡಿದ್ದೇವೆ. ಶಾಲಾ ಪ್ರಾರ್ಥನಾ ಅವಧಿಯಲ್ಲಿ ಸುರಕ್ಷಿತ ಬ್ಯಾಕಿಂಗ್, ಸುರಕ್ಷಿತ ಮೊಬೈಲ್ ಬಳಕೆ ಮತ್ತು ಆರ್ಥಿಕ ಸಾಕ್ಷರತೆ ಬಗ್ಗೆ ಮಾಹಿತಿ ನೀಡಿದ್ದೇವೆ.ಪೋಷಕರಿಗೂ ಶಾಲಾ ವಾಟ್ಸಪ್ ಗುಂಪಿನ ಮೂಲಕ ಜಾಗೃತಿ ಮೂಡಿಸುವ ಕಾರ್ಯ ಜಾರಿಯಲ್ಲಿದೆ.


ಸ್ಕಾಲರ್ಶಿಪ್ ಕೊಡುವುದಾಗಿ, ಹಣದ ಸಹಾಯ ಮಾಡುವುದಾಗಿ ನಿಮ್ಮ ನಂಬಿಸಿ, ನಿಮ್ಮಿಂದ ನಿಮ್ಮ ಅಕೌಂಟ್ ನಿಂದ ಹಣ ದೋಚುವ ಸೈಬರ್ ಕಳ್ಳರ ಬಗ್ಗೆ ಸದಾ ಜಾಗೃತರಾಗಿ   ಎಚ್ಚರಿಕೆ ವಹಿಸಿ.ಕಷ್ಟಪಟ್ಟು ಗಳಿಸಿದ ಹಣ ಖದೀಮರ ಪಾಲಾಗಲು ಬಿಡಬೇಡಿ.

ಜಾಗೃತರಾಗಿ..

ಇಂತಹ ಮೋಸದ ಕರೆಗಳು ಬಂದಾಗ

ಸೈಬರ್ ಕ್ರೈಮ್ ಪೋಲಿಸರಿಗೆ ಮಾಹಿತಿ ನೀಡಿ.ಮಕ್ಕಳಿಗೆ ಜಾಗೃತಿ ಮೂಡಿಸಿ.ಮಕ್ಕಳ ಕೈಗೆ ಅನವಶ್ಯಕವಾಗಿ ಪೋನ್ ಕೊಡದಿರಿ.ಇದು ಮಕ್ಕಳ ಮತ್ತು ಪೋಷಕರ ಹಿತಾಸಕ್ತಿಯ ಭಾಗವಾಗಿ  ಆರ್ಥಿಕ ಸಾಕ್ಷರತೆ ಮತ್ತು ಜಾಗೃತಿ ಮೂಡಿಸುವ ಅಭಿಯಾನ.ಬನ್ನಿ ಎಲ್ಲರೂ ಕೈಜೋಡೊಸೋಣ.


ಸಿಹಿಜೀವಿ ವೆಂಕಟೇಶ್ವರ

ಶಿಕ್ಷಕರು ಮತ್ತು ಲೇಖಕರು

ತುಮಕೂರು 

9900925529

17 January 2024

ಮಿಡಿವ ಮನವೇ ಮಗಳು


 


ಮಿಡಿವ ಮನವೇ ಮಗಳು..


ಇಂದಿನ ದಿನಗಳಲ್ಲಿ ವೃದ್ದಾಶ್ರಮಗಳು ಹೆಚ್ಚಾಗುತ್ತಿವೆ.ಹೆತ್ತವರನ್ನು ಅವರ ಸಂಧ್ಯಾ ಕಾಲದಲ್ಲಿ ಗೌರವದಿಂದ ಕಾಣುವವರು ಕ್ರಮೇಣವಾಗಿ ಕಡಿಮೆಯಾಗುತ್ತಿದ್ದಾರೆ. ಇದಕ್ಕೆ ಅಪವಾದವೆಂಬಂತೆ ಗಂಡುಮಕ್ಕಳಿಗೆ ಹೋಲಿಸಿದರೆ ಹೆಣ್ಣು ಮಕ್ಕಳು ತಮ್ಮ ಹೆತ್ತವರನ್ನು ಚೆನ್ನಾಗಿ ನೋಡಿಕೊಳ್ಳುವ ನಿದರ್ಶನಗಳು ನಮಗೆ ಬಹಳ ಸಿಗುತ್ತವೆ. ನ್ಯಾಯಾಲಯ ಮಗಳಿಗೂ ಅಪ್ಪನ ಆಸ್ತಿಯಲ್ಲಿ ಸಮಪಾಲಿದೆ ಎಂದು ಆದೇಶ ಮಾಡಿದರೂ ಕೊಟ್ಟ ಹೆಣ್ಣು ಕುಲಕ್ಕೆ ಹೊರಗೆ ಎಂಬ ವಾದ ಮಾಡಿ ಸಹೋದರಿಯ ಸಾಗ ಹಾಕುವ ಸಹೋದರರೇ ಅಧಿಕ. ನಮ್ಮ ಬಹುತೇಕ ಹೆಣ್ಣು ಮಕ್ಕಳು ಅಪ್ಪನೇ ಆಸ್ತಿಯೆಂಬ ವಿಶಾಲ ಮನೋಭಾವದಿಂದ ತನ್ನ ಹೆತ್ತವರ ಬಗ್ಗೆ ಅಪಾರ ಗೌರವದಿಂದ ಗಂಡನ ಮನೆಯ ದಾರಿ ಹಿಡಿಯುವಳು.ಎಷ್ಟೋ ಬಾರಿ ಅಣ್ಣಂದಿರ ಅಪ್ಪ ಅಮ್ಮ ನ ನೋಡಿಕೊಳ್ಳದೇ ಮನೆಯಿಂದ ಹೊರಹಾಕಿದಾಗ ಮಿಡಿವ ಮನವೇ ಮಗಳು.ಹೆಣ್ಣು ಭ್ರೂಣ ಹತ್ಯೆ ,ಹೆಣ್ಣು ಶಿಶು ಹತ್ಯೆ ಮಾಡುವ ಮೂಢರು ಈ ಕಥೆ ಓದಬೇಕು.


ಅದು ದೊಡ್ಡ ಶ್ರೀಮಂತ ಕುಟುಂಬ. ಶ್ರೀಮಂತನಿಗೆ ಪತ್ನಿ ನಾಲ್ಕು ಜನ ಗಂಡು ಮಕ್ಕಳು ಒಬ್ಬಳು ಮಗಳು ಇದ್ದಳು. ಶ್ರೀಮಂತ ನ್ಯಾಯವಾಗಿ ಸಂಪಾದನೆ ಮಾಡಿ ಆಸ್ತಿ ಗಳಿಸಿ ಊರಿನಲ್ಲಿ ಹಾಗೂ ಸಮಾಜದಲ್ಲಿ ಒಳ್ಳೆ ಹೆಸರು ಪಡೆದಿದ್ದನು. ಕಷ್ಟ ಕಾಲ ಎಂದು ಬಂದವರಿಗೆ ಸಹಾಯ, ಕೆಲವರಿಗೆ ಸಾಲ ಕೊಡುತ್ತಿದ್ದನು. ಕುಟುಂಬದಲ್ಲಿ ಮಗಳನ್ನು ಒಳ್ಳೆಯ ಮನೆಗೆ ಕೊಟ್ಟು ವಿವಾಹ ಮಾಡಿದ್ದನು. ಮಾಡಿದ ಆಸ್ತಿಯನ್ನು  ನಾಲ್ಕು ಜನ ಗಂಡು ಮಕ್ಕಳು ಮತ್ತು ಒಬ್ಬಳು ಮಗಳು ಪತ್ನಿ ಎಲ್ಲರಿಗೂ ಸಮನಾಗಿ ಬರುವಂತೆ ವಿತರಣೆ ಮಾಡಿದ್ದನು. ಶ್ರೀಮಂತನು ವಯೊ ಸಹಜ ಕಾರಣದಿಂದ ಮೃತಪಟ್ಟನು. ಮುಂದಿನ ಸಂಸ್ಕಾರಕ್ಕಾಗಿ ತಯಾರು ಮಾಡುತ್ತಿದ್ದರು ಸಾಕಷ್ಟು ಬಂಧು ಬಳಗ, ಊರಿನವರು, ಮನೆ ಮಕ್ಕಳು ಎಲ್ಲಾ ನೆರದಿದ್ದರು. ಇಡೀ ಕುಟುಂಬ ದುಃಖದಲ್ಲಿ ಮುಳುಗಿತ್ತು. ಇನ್ನೇನು ಶವಯಾತ್ರೆ ಹೊರಡಬೇಕು ಅನ್ನುವ ಹೊತ್ತಿಗೆ ಒಬ್ಬ ಹಿರಿಯ ವ್ಯಕ್ತಿ ಬಂದು ಸ್ವಲ್ಪ ತಡೆಯಿರಿ ನನ್ನದೊಂದು ವಿನಂತಿ ಇದೆ ಕೇಳಿ ಎಂದಾಗ ಅಲ್ಲಿದ್ದವರ ಗಮನವೆಲ್ಲ 

ಏನು ಎಂಬಂತೆ ಅವನತ್ತ ಹರಿಯಿತು. 


ಬಂದ ವ್ಯಕ್ತಿ, ನೋಡಿ ಈ ಶ್ರೀಮಂತರು ಕೆಲವು ತಿಂಗಳ ಹಿಂದೆ ನನ್ನಿಂದ 25 ಲಕ್ಷ ಸಾಲ ಪಡೆದಿದ್ದರು. ಅದನ್ನು ಹಿಂತಿರುಗಿಸಿಲ್ಲ ಈ ದಿನ ಇವರು ಮೃತಪಟ್ಟರೆಂದು ತಿಳಿಯಿತು ಆದ್ದರಿಂದ ಸಾಲ ಪಡೆಯಲು ಬಂದಿದ್ದೇನೆ ನನ್ನ ಸಾಲ ಕೊಟ್ಟು ಮುಂದಿನ ಕಾರ್ಯ ಮಾಡಿ ಎಂದರು. ಆಗ ಕೆಲವು ಹಿರಿಯರು, ನೋಡಿ ಶವಸಂಸ್ಕಾರ ಮುಗಿದು ಬಿಡಲಿ ಆಮೇಲೆ ಮಾತುಕತೆ ಆಡೋಣ ಎಂದರು.

ಆ ವ್ಯಕ್ತಿ ಪಟ್ಟು ಬಿಡದಂತೆ ಇಲ್ಲ ನನಗೆ ಹಣವನ್ನಾದರೂ ಕೊಡಲಿ ಇಲ್ಲದಿದ್ದರೆ ಯಾರಾದರೂ ಕೊಡುವವರು ಜವಾಬ್ದಾರಿ ತೆಗೆದುಕೊಳ್ಳಲಿ ಎಂದರು. ಊರಿನವರೆಲ್ಲ ಆ ನಾಲ್ಕು ಗಂಡು ಮಕ್ಕಳ ಕಡೆ ದೃಷ್ಟಿ ಹರಿಸಿದರು. ಆದರೆ ಅವರ್ಯಾರು ತುಟಿ ಪಿಟಕ್ ಅನ್ನಲಿಲ್ಲ. ಹಾಗಾದರೆ ಯಾರು ಕೊಡುವವರು ಅದೇ  ಚರ್ಚೆಯಾಗಿ ಶವಸಂಸ್ಕಾರಕ್ಕೆ ವಿಳಂಬವಾಗುತ್ತಿತ್ತು. ಆಗ ಈ ಸುದ್ದಿ ಒಳಗಿದ್ದ ಹೆಂಗಸರು ಶ್ರೀಮಂತರ ಪತ್ನಿ ಮತ್ತು ಮಗಳ ಕಿವಿಗೂ ಬಿದ್ದಿತ್ತು. 


ಕೆಲವೇ ನಿಮಿಷಗಳಲ್ಲಿ, ದುಃಖ ತಪ್ತಳಾಗಿದ್ದ ಶ್ರೀಮಂತನ ಮಗಳು ಹೊರಗೆ ಬಂದು

ಒಂದು ಬಟ್ಟೆಯ ಗಂಟನ್ನು ತೆಗೆದು ಸಾಲ  ಕೊಡಬೇಕಾದ ವ್ಯಕ್ತಿಗೆ ಕೊಡುತ್ತಾ, ಇದು ನಮ್ಮ ತಂದೆ ಮಾಡಿಸಿಕೊಟ್ಟ ಒಡವೆಗಳು ಇದನ್ನು ತೆಗೆದುಕೊಂಡು ಶವಸಂಸ್ಕಾರಕ್ಕೆ ಅನುವು ಮಾಡಿಕೊಡಿ ನಮ್ಮ ತಂದೆ ಬಹಳ ಮರ್ಯಾದಸ್ತರು ಎಂದು ಕೈ ಮುಗಿದಳು. ಆ ವ್ಯಕ್ತಿ ಒಡವೆ ಗಂಟನ್ನು ತೆಗೆದುಕೊಂಡು ಹೋದರು. ಮತ್ತೆ ಮುಂದಿನ ಕಾರ್ಯವೆಲ್ಲವೂ ಮುಗಿಯಿತು.


ಮರುದಿನ   ಒಡವೆ ಗಂಟು ತೆಗೆದುಕೊಂಡು ಹೋಗಿದ್ದ  ವ್ಯಕ್ತಿ ಬಂದು ಒಡವೆ ಗಂಟನ್ನು ಶ್ರೀಮಂತನ ಮಗಳ ಕೈಗೆ ಕೊಟ್ಟು ಮಗಳೇ ಇದನ್ನು ನೀನು ತೆಗೆದುಕೋ ಇದು ನಿನ್ನದು, ಜೊತೆಗೆ ಈ 25 ಲಕ್ಷ ರೂಪಾಯಿಗಳು ನಿನಗೆ ಸೇರಿದ್ದು ಎಂದು ಕೊಟ್ಟರು.

ಎಲ್ಲರಿಗೂ ಆಶ್ಚರ್ಯವಾಯಿತು!ಇದು ಯಾವ ಹಣ? ಏಕೆ ಕೊಟ್ಟಿರಿ?ಎಂದು ಕೇಳಿದಾಗ, ಆ ಹಿರಿಯರು ಹೇಳಿದರು. ನಾನು ನಿಮ್ಮ ತಂದೆಗೆ ಸಾಲ ಕೊಟ್ಟಿಲ್ಲ.

ಅವರೇ ನನಗೆ 20 ಲಕ್ಷ  ಸಾಲ ಕೊಟ್ಟಿದ್ದರು. ನಾನು ಇನ್ನೆರಡು ಮೂರು ದಿನದಲ್ಲಿ ಕೊಡಬೇಕು ಎಂದುಕೊಂಡಿದ್ದೆ ಆದರೆ ಅಷ್ಟರಲ್ಲಿ ಮೃತರಾದ ಸುದ್ದಿ ಬಂದಿತು. ಹಣವನ್ನು ಯಾರಿಗೆ ಕೊಡಲಿ ಎಂಬ ಚಿಂತೆ ಶುರುವಾಯಿತು. ಅದಕ್ಕಾಗಿ ಈ ನಾಟಕ ಆಡಬೇಕಾಯಿತು ಎಂದರು.‌


ಅಲ್ಲಿ ಕುಳಿತಿದ್ದ ಗಂಡು ಮಕ್ಕಳೆಲ್ಲ ತಲೆ ತಗ್ಗಿಸಿದರು. ಬಾಕಿ ಇದ್ದವರೆಲ್ಲ ಹೆಣ್ಣು ಮಗಳ ಕಡೆ ಹೆಮ್ಮೆಯಿಂದ ನೋಡಿದರು. ಆ ಹೆಣ್ಣು ಮಗಳು ಆ ಹಣದಿಂದ ತಂದೆಯ ಸಂಸ್ಕಾರವನ್ನೆಲ್ಲ ಮಾಡಿಸಿ ಉಳಿದ ದುಡ್ಡನ್ನು ತಾಯಿಗೆ ಕೊಟ್ಟು ಗಂಡನ ಮನೆಗೆ ಹೊರಟು ಹೋದಳು.


16 January 2024

ಶಿಕ್ಷಣ ಶ್ರೀನಿಧಿ ಕೆ ಬಿ ಜಯಣ್ಣ.

 


ಶಿಕ್ಷಣ ಶ್ರೀನಿಧಿ ಕೆ ಬಿ ಜಯಣ್ಣ.


ಕೆಬಿಜೆ ಎಂದೇ ಜನಮಾನಸದಲ್ಲಿ ನೆಲೆಸಿರುವ ಕೆ ಬಿ ಜಯಣ್ಣ ರವರ ಸೇವೆಯನ್ನು ತುಮಕೂರಿನ ನಾಗರೀಕರು ಸದಾ ಸ್ಮರಿಸುತ್ತಲೇ ಇರುತ್ತೇವೆ. ಶಿಕ್ಷಣ ,ಕಲೆ ಸಂಸ್ಕೃತಿ ನಾಡು ನುಡಿಗೆ ಅವರ ಕೊಡುಗೆ ಅಪಾರ.

ಇಂತಹ ಮಹಾನ್ ಚೇತನಕ್ಕೆ ವಂದನೆ ಸಲ್ಲಿಸುವ ಅವಕಾಶವನ್ನು ನೀಡಿದ ಕೆ ಎಸ್ ಉಮಾಮಹೇಶ್ ಸರ್ ರವರಿಗೆ ಮತ್ತು  ಈ ಅಭಿನಂದನಾ ಗ್ರಂಥದ ಸಂಪಾದಕರಾದ ನನ್ನ ಗುರುಗಳಾದ ವಿದ್ಯಾ ವಾಚಸ್ಪತಿ ಕವಿತಾ ಕೃಷ್ಣ ಗುರುಗಳಿಗೆ ಮೊದಲು ನನ್ನ ನಮನಗಳನ್ನು ಸಲ್ಲಿಸುವೆ.

ವಿದ್ಯಾವಾಹಿನಿ ಕಾಲೇಜ್ ಎಂದರೆ ಥಟ್ಟನೆ ನೆನಪಾಗುವ ಹೆಸರೆ ಕೆ ಬಿ ಜೆ . ಶಿಕ್ಷಣ ಕ್ಷೇತ್ರದಲ್ಲಿ ಬೋಧಕರಾಗಿ, ಶಿಕ್ಷಣ ತಜ್ಞರಾಗಿ ಅವಿಸ್ಮರಣೀಯ ಸೇವೆಯನ್ನು ಸಲ್ಲಿಸುತ್ತಿರುವ  ಶ್ರೀ ಕೆ.ಬಿ.ಜಯಣ್ಣ ಅವರು ಕನ್ನಡ ನಾಡು ಕಂಡ ಸಾಧಕರತ್ನವಾಗಿದ್ದಾರೆ. ತುಮಕೂರು ನಗರದಲ್ಲಿ ವಿದ್ಯಾವಾಹಿನಿ ವಿದ್ಯಾಸಂಸ್ಥೆಯನ್ನು ಸ್ಥಾಪಿಸಿ, ತನ್ಮೂಲಕ ವಿದ್ಯಾವಾಹಿನಿ ಮತ್ತು ವಿದ್ಯಾನಿಧಿ ಪದವಿ ಪೂರ್ವ ಕಾಲೇಜುಗಳ ಮುಖಾಂತರ ಸಲ್ಲಿಸಿರುವ ಸೇವೆ ಸುವರ್ಣಾಕ್ಷರಗಳಲ್ಲಿ ಬರೆದಿಡುವಂತದ್ದು. ನಾನಾ ಬಗೆಯ ಶಿಕ್ಷಣ ಶಾಖೆಗಳನ್ನು ತೆರೆದು ವಿದ್ಯಾರ್ಥಿಸ್ತೋಮಕ್ಕೆ ಮಹದುಪಕಾರವೆಸಗಿದ್ದಾರೆ. ಶ್ರೀಯುತರು ಕಲೆ,ಸಾಹಿತ್ಯ,ಸಾಂಸ್ಕೃತಿಕ,ಕ್ರೀಡೆ ಹಾಗೂ ಲಲಿತಕಲೆಗಳನ್ನು ಪೋಷಿಸುವಲ್ಲಿ ಬದುಕಿನುದ್ದಕ್ಕೂ ಶ್ರಮಿಸಿದ್ದಾರೆ.

ಇತ್ತೀಚೆಗೆ ಎರಡು ಸಮಾರಂಭಗಳಲ್ಲಿ ನಾನು ಕೆ ಬಿ ಜೆ ರವರ ಮಾತುಗಳನ್ನು  ಕೇಳಿದೆ. ಒಂದು ಸೋಮೇಶ್ವರ ಶಾಲೆಯ ಪ್ರೌಢಶಾಲಾ ಮಕ್ಕಳ ಕ್ರೀಡಾಕೂಟದ ಉದ್ಘಾಟನಾ ಸಮಾರಂಭದಲ್ಲಿ, ಮತ್ತೊಂದು ವಿದ್ಯಾನಿಧಿ ಕಾಲೇಜಿನ ಶಿಕ್ಷಕರ ದಿನಾಚರಣೆಯ ಸಮಾರಂಭದಲ್ಲಿ.   78 ರ ಇಳಿವಯಸ್ಸಿನಲ್ಲೂ ಅವರ ಪ್ರಖರ ಚಿಂತನೆಯ ಮಾತುಗಳು ಯುವಕರಿಗೆ ಸ್ಪೂರ್ತಿಯ ಸೆಲೆಯಾಗಿದ್ದವು. ನಾಡು ನುಡಿ ಶಿಕ್ಷಣದ ಬಗ್ಗೆ ಅವರ ಮನ ಮಿಡಿಯುವುದು ಅವರ ಭಾಷಣದಲ್ಲಿ ಎದ್ದು ಕಾಣುತ್ತಿತ್ತು. 


ತುಮಕೂರಿನ ಕ್ಯಾತ್ಸಂದ್ರದಲ್ಲಿ 

 01-06-1946 ರಲ್ಲಿ

 ಶ್ರೀ ಪಟೇಲ್ ಬಸಪ್ಪನವರು ಶ್ರೀಮತಿ ಸರೋಜಮ್ಮನವರು ಸುಪತ್ರರಾಗಿ ಜನಿಸಿದ ಕೆ ಬಿ ಜೆ ರವರು ಕ್ಯಾತ್ಸಂದ್ರ ದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ,ಶ್ರೀ ಸಿದ್ದಗಂಗಾ ಮಠದ  ಶ್ರೀ ಸಿದ್ಧಲಿಂಗೇಶ್ವರ ಸನಿವಾಸ ಶಾಲೆಯಲ್ಲಿ ಪ್ರೌಢಶಾಲೆ ವ್ಯಾಸಂಗ ಮಾಡಿದರು.

ತುಮಕೂರಿನ  ಸರ್ಕಾರಿ ಪದವಿ ಪೂರ್ವ ಕಾಲೇಜು,

 ಶ್ರೀ ಸಿದ್ಧಗಂಗಾ ವಿಜ್ಞಾನ, ಕಲೆ ಮತ್ತು ವಾಣಿಜ್ಯ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಓದಿದ ಇವರು

ಮೈಸೂರಿನ ಮಾನಸ ಗಂಗೋತ್ರಿಯ ವಿಶ್ವವಿದ್ಯಾಲಯ ಕಾಲೇಜಿನಲ್ಲಿ

ಎಂ ಎಸ್ಸಿ, ಬೆಂಗಳೂರಿನ ಸರ್ಕಾರಿ ಶಿಕ್ಷಣ ಮಹಾವಿದ್ಯಾಲಯದಲ್ಲಿ ಬಿ ಎಡ್ ಪದವಿ ಪಡೆದರು.


ಮಾಗಡಿ ತಾಲೂಕಿನ ತಿಪ್ಪಸಂದ್ರದ  ಖಾಸಗಿ ಪ್ರೌಢಶಾಲೆಯಲ್ಲಿ ಗಣಿತ ಶಿಕ್ಷಕರಾಗಿ ವೃತ್ತಿ ಆರಂಭಿಸಿದ ಕೆ ಬಿ ಜಯಣ್ಣರವರು ನಂತರ 

ತಾವು ಓದಿದ  ಶ್ರೀಮಠದ ಸಿದ್ಧಲಿಂಗೇಶ್ವರ ಸನಿವಾಸ ಉನ್ನತ ಪ್ರೌಢಶಾಲೆಯಲ್ಲಿ ಶಿಕ್ಷಕರಾಗಿ ಕಾರ್ಯ ನಿರ್ವಹಿಸುವ ಭಾಗ್ಯ ಲಭಿಸಿತು.


ಶಿಕ್ಷಣದ ಬಗ್ಗೆ ಅಪಾರ ಒಲವಿದ್ದ ಕೆ ಬಿ ಜೆ ರವರು ಶಿಕ್ಷಣ ಸಂಸ್ಥೆಗಳನ್ನು ಅರಂಭಿಸಲು ತೀರ್ಮಾನಿಸಿ ಒಂದು ಸಂಸ್ಥೆ ಆರಂಭಿಸಿದರು ಅದು ಕ್ರಮೇಣವಾಗಿ ಎರಡು,ನಾಲ್ಕು, ಹೀಗೆ ದ್ವಿಗುಣಗೊಂಡು ಪ್ರಸ್ತುತ 6000 ವಿದ್ಯಾರ್ಥಿಗಳು ಕೆ ಬಿ ಜೆ ರವರ ಸಂಸ್ಥೆಗಳಲ್ಲಿ ವಿದ್ಯಾಭ್ಯಾಸವನ್ನು ಮಾಡುತ್ತಿದ್ದಾರೆ!  ಎಂದರೆ ಅವರ ಕೊಡುಗೆಯನ್ನು ನೀವೇ ಅರ್ಥೈಸಿಕೊಳ್ಳಬಹುದು.

ಅವರು ಸ್ಥಾಪಿಸಿದ ಕೆಲ ಶೈಕ್ಷಣಿಕ ಸಂಸ್ಥೆಗಳಲ್ಲಿ

ವಿದ್ಯಾವಾಹಿನಿ ಪದವಿ ಪೂರ್ವ ಕಾಲೇಜು, ವಿದ್ಯಾವಾಹಿನಿ ಕೈಗಾರಿಕಾ ತರಬೇತಿ ಕೇಂದ್ರ, ಸುಮತಿ ಆಂಗ್ಲ ಮಾಧ್ಯಮ ಪ್ರಾಥಮಿಕ ಮತ್ತು ಪ್ರೌಢಶಾಲೆ,

 ವಿದ್ಯಾವಾಹಿನಿ ನರ್ಸಿಂಗ್ ಕಾಲೇಜು, ವಿದ್ಯಾವಾಹಿನಿ ಪ್ರಥಮ ದರ್ಜೆ ಕಾಲೇಜು,ವಿದ್ಯಾನಿಧಿ ಪದವಿ ಪೂರ್ವ ಕಾಲೇಜು,

ವಿದ್ಯಾವಾಹಿನಿ ಪ್ಯಾರಾ ಮೆಡಿಕಲ್ ಕಾಲೇಜು, ಪ್ರಮುಖವಾಗಿವೆ.


ಕೇವಲ ಶಿಕ್ಷಣ ಕ್ಷೇತ್ರವಲ್ಲದೆ ಹತ್ತು ಹಲವು ಸಮಾಜಮುಖಿ ಕಾರ್ಯಕ್ಕಾಗಿ ಕೆ ಬಿ ಜೆ ರವರ ಸ್ಮರಿಸಲೇ ಬೇಕು.


ಪ್ರತಿವರ್ಷ ಡಾ. ಜಿ.ಪರಮೇಶ್ವರ ಅಭಿಮಾನಿ ಬಳಗದ ವತಿಯಿಂದ ಎಸ್.ಎಸ್.ಎಲ್.ಸಿ. ಮತ್ತು ಪಿ.ಯು.ಸಿ.ಯಲ್ಲಿ ಅತಿಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡುವ ಕಾರ್ಯ ಮಾಡುತ್ತಿದ್ದಾರೆ.

ಸೆಕೆಂಡರಿ ಶಿಕ್ಷಕರ ಸಂಘದ ವತಿಯಿಂದ ಪ್ರತಿ ವರ್ಷ 10 ತಾಲ್ಲೂಕಿನ ಪ್ರೌಢಶಾಲೆ ಮತ್ತು ಪದವಿ ಪೂರ್ವ

ಕಾಲೇಜು ಹಾಗೂ ಪದವಿ ಕಾಲೇಜುಗಳ ಒಟ್ಟು 90 ರಿಂದ 100 ಜನ ಸಂಪನ್ಮೂಲ ಹಾಗೂ ಪ್ರಶಸ್ತಿ ಪುರಸ್ಕೃತ ಶಿಕ್ಷಕರು ಮತ್ತು ಉಪನ್ಯಾಸಕರುಗಳಿಗೆ ಸನ್ಮಾನ ಮಾಡಿ ಪ್ರೋತ್ಸಾಹ ಮಾಡುತ್ತಾ ಬಂದಿದ್ದಾರೆ.


ಸೆಕೆಂಡರಿ ಶಿಕ್ಷಕರ ಸಂಘದ ವತಿಯಿಂದ ಪ್ರತಿವರ್ಷ ಎಸ್.ಎಸ್.ಎಲ್.ಸಿ. ಹಾಗೂ ಪಿ.ಯು.ಸಿ.ಯಲ್ಲಿ ತಾಲ್ಲೂಕು ಹಾಗೂ ಜಿಲ್ಲಾ ಮಟ್ಟದಲ್ಲಿ ಅತಿಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡುತ್ತಿದ್ದಾರೆ.


ತುಮಕೂರು ನಗರ ಹಾಗು ಸುತ್ತಲಿನ ಗ್ರಾಮಗಳಲ್ಲಿ ನಡೆಯುವ ಕ್ರೀಡೆ, ಜಾತ್ರೆ, ಉತ್ಸವ, ಹಬ್ಬಹರಿದಿನಗಳು, ದೇವಾಲಯಗಳ ಅಭಿವೃದ್ಧಿ, ಸಾಮೂಹಿಕ ವಿವಾಹ, ಗಣೇಶೋತ್ಸವ ಇತ್ಯಾದಿಗಳಿಗೆ ಉದಾರ ನೆರವು ನೀಡುತ್ತಾ ಸಾಂಸ್ಕೃತಿಕ ಪರಂಪರೆ ಉಳಿಸಿ ಬೆಳೆಸಲು ನೆರವಾಗುತ್ತಿದ್ದಾರೆ.


ಸಾಹಿತ್ಯ ಸಮ್ಮೇಳನ, ನಾಟಕೋತ್ಸವ, ವಿಚಾರ ಸಂಕಿರಣ, ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ವಿದ್ಯಾವಾಹಿನಿ ಸಂಸ್ಥೆಯ ಸಹಯೋಗ ಹಾಗೂ ಪ್ರೋತ್ಸಾಹ ನೀಡುವಲ್ಲಿ ಕೆ ಬಿ ಜೆ ಎತ್ತಿದ ಕೈ.


ಪ್ರತಿವರ್ಷ ತಮ್ಮ ಕಾಲೇಜಿನ ಪ್ರತಿಭಾ ಪುರಸ್ಕಾರ ಹಾಗೂ ವಾರ್ಷಿಕೋತ್ಸವಗಳಿಗೆ ರಾಜ್ಯದ ಪ್ರಸಿದ್ಧ ಗಾಯಕರು, ಸಾಹಿತಿಗಳು, ಸ್ವಾತಂತ್ರ್ಯ ಹೋರಾಟಗಾರರು, ಪ್ರಶಸ್ತಿ ಪುರಸ್ಕೃತರು, ಕ್ರೀಡಾಪಟುಗಳು, ವಿಜ್ಞಾನಿಗಳು ಹಾಗೂ ಚಲನಚಿತ್ರ ನಟರನ್ನು ಆಹ್ವಾನಿಸಿ ಗೌರವ ಸಮರ್ಪಣೆ ಮಾಡುತ್ತಾ ಬಂದಿದ್ದಾರೆ.


ಪ್ರತಿವರ್ಷ ತಮ್ಮ ಕಾಲೇಜಿಗೆ ದಾಖಲಾಗುವ ನೂರಾರು ಬಡವಿದ್ಯಾರ್ಥಿಗಳಿಗೆ ಶುಲ್ಕ ವಿನಾಯಿತಿ ಮೂಲಕ ಅವರ ವಿದ್ಯಾಭ್ಯಾಸ ಮುಂದುವರೆಸಲು ಹಾಗೂ ಸ್ವಂತ ಬದುಕು ಕಟ್ಟಿಕೊಳ್ಳಲು ಪ್ರೋತ್ಸಾಹ ನೀಡುತ್ತಿದ್ದಾರೆ.


ವೃತ್ತಿ ರಂಗಭೂಮಿಯ ಬಗ್ಗೆ ಹಾಗೂ ವೃತ್ತಿ ರಂಗ ಕಲಾವಿದರ ಬಗ್ಗೆ ಅಪಾರ ಕಾಳಜಿ ಹೊಂದಿರುವ ಇವರು ತುಮಕೂರಿನಲ್ಲಿ ವೃತ್ತಿ ರಂಗಭೂಮಿಯ ನಾಟಕಗಳು ನಡೆಯಲು ಉತ್ತೇಜನ ನೀಡುತ್ತಿದ್ದಾರೆ.


ಕೆ.ಬಿ.ಜೆ. ಅಭಿಮಾನಿ ಬಳಗದ ಮೂಲಕ ಪ್ರತಿವರ್ಷ ಶ್ರೀ ಸಿದ್ದಗಂಗಾ ಮಠದ ಜಾತ್ರೆ ಹಾಗೂ ಶ್ರೀಗಳ ಜನ್ಮ ದಿನಾಚರಣೆಯ ಸಂದರ್ಭದಲ್ಲಿ ಸಾವಿರಾರು ಭಕ್ತಾದಿಗಳಿಗೆ ಶುದ್ಧ ಕುಡಿಯುವ ನೀರಿನ ಉಚಿತ ಸೇವೆ ಸಲ್ಲಿಸಲಾಗುತ್ತಿದೆ.


ಕೆ ಬಿ ಜಯಣ್ಣ ರವರ  ಶಿಕ್ಷಣ ಮತ್ತು ಸಾಮಾಜಿಕ ಕ್ಷೇತ್ರದಲ್ಲಿ ಸಲ್ಲಿಸಿದ ಸೇವೆಯನ್ನು ಗುರುತಿಸಿ ಹಲವಾರು ಪುರಸ್ಕಾರಗಳು ಇವರನ್ನು ಹರಸಿ ಬಂದಿವೆ.


 ಅಮೇರಿಕಾದ ವಿಶ್ವವಿದ್ಯಾಲಯ, 1997ರಲ್ಲಿ ಮ್ಯಾನ್ ಆಫ್ ದಿ ಇಯರ್ ಎಂದು ಪ್ರಶಸ್ತಿ ನೀಡಿ ಗೌರವಿಸಿದೆ.

 ಶೈಕ್ಷಣಿಕ ಸೇವೆಗಾಗಿ ಸಲ್ಲಿಸಿದ ಸೇವೆಯನ್ನು ಗುರ್ತಿಸಿ ಬಿಜಾಪುರದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಗೌರವ  ಸ್ವೀಕರಿಸಿದ್ದಾರೆ.

 ತುಮಕೂರಿನ  ಶ್ರೀ ಸಿದ್ಧಗಂಗಾ ಮಠವು ನೀಡುವ ಪ್ರತಿಷ್ಠಿತ ಬಸವ ಪ್ರಶಸ್ತಿಯನ್ನು ಕೆ ಬಿ ಜೆ ರವರು ಸ್ವೀಕರಿಸಿದ್ದಾರೆ.


ತುಮಕೂರಿನ ಜಿಲ್ಲಾಡಳಿತವು  ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ನೀಡಿ  ಗೌರವಿಸಿದೆ.

 

2009 ರಲ್ಲಿ ವಿಜಯ ಕರ್ನಾಟಕ ದಿನಪತ್ರಿಕೆಯು  ಉತ್ತಮ ಸಾಧಕ ಪ್ರಶಸ್ತಿ ನೀಡಿದೆ.


ಇವರ  ಸಾಮಾಜಿಕ ಸೇವೆಯನ್ನು ಗುರ್ತಿಸಿ ಕ್ಯಾತ್ಸಂದ್ರ ದ ಕೆ.ಬಿ.ಜೆ. ಅಭಿಮಾನಿ ಬಳಗವು ಪುರಸ್ಕಾರ ನೀಡಿ ಗೌರವಿಸಿದೆ.

 ಕವಿತಾಕೃಷ್ಣ ಸಾಹಿತ್ಯ ಮಂದಿರವು  ಶಿಕ್ಷಣ ಶ್ರೀನಿಧಿ ಎಂಬ ಬಿರುದು ನೀಡಿ ಸನ್ಮಾನಿಸಿದೆ.

ಇದರ   ಜೊತೆಗೆ ವಿವಿಧ ಕನ್ನಡ ಪರ ಸಂಘಟನೆಗಳು, ಕ್ರೀಡಾ ಹಾಗೂ ಕಲಾಸಂಘಗಳು, ಶಾಲಾ ಕಾಲೇಜುಗಳು, ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಶಿಕ್ಷಕರ ಸಂಘಟನೆಗಳ ಗೌರವಗಳು. ಸಂದಿವೆ.

 ಅವರ  ಧರ್ಮಪತ್ನಿ  ಶ್ರೀಮತಿ ಡಿ.ಆರ್.ಪೂರ್ಣಿಮಾ ಜಯಣ್ಣನವರು ಕೆ ಬಿ ಜೆ ರವರ ಎಲ್ಲಾ ಕಾರ್ಯಗಳಿಗೆ ಬೆಂಬಲವಾಗಿ ನಿಂತಿದ್ದಾರೆ.


ಸಂಘಟನೆ, ಹೋರಾಟ ಮತ್ತು   ಶಿಕ್ಷಣ ಇವು ವ್ಯಕ್ತಿಯ ವ್ಯಕ್ತಿತ್ವದ ನಿರ್ಣಾಯಕ ಅಂಶಗಳು. ಕೆ ಬಿ ಜೆ ರವರು ಈ ಮೂರು ಕ್ಷೇತ್ರಗಳಲ್ಲಿ ತಮ್ಮದೇ ಆದ ಛಾಪು ಮೂಡಿಸಿ ಇಂದಿನ ಯುವ ಪೀಳಿಗೆಗೆ ಮಾದರಿಯಾಗಿದ್ದಾರೆ. ಶ್ರೀಯುತರಿಗೆ ಭಗವಂತ ಆಯುರಾರೋಗ್ಯ ಕರುಣಿಸಲಿ ಎಂದು ಮನದುಂಬಿ ಹಾರೈಸುವೆನು.


ಸಿಹಿಜೀವಿ ವೆಂಕಟೇಶ್ವರ

ಶಿಕ್ಷಕರು ಮತ್ತು ಸಾಹಿತಿಗಳು

ತುಮಕೂರು

9900925529



15 January 2024

ಎಲ್ಲರೊಳಗೊಂದಾಗು.ಚುಟುಕು.

 ಸ್ಪರ್ಧೆಗೆ..



*ಎಲ್ಲರೊಳಗೊಂದಾಗು*


ವಿದ್ಯೆ ಬುದ್ಧಿಯ ಪಡೆದು ದಾರ್ಶನಿಕನಾಗು 

ಗುರು ಹಿರಿಯರ  ಚರಣ

ಪದ್ಮಗಳಿಗೆ ಬಾಗು 

ಪರೋಪಕಾರಕ್ಕೆ ಮೊದಲು ಮುಂದಾಗು

ಭೇದ ಭಾವವನೆಣಿಸದೆ ಎಲ್ಲರೊಳಗೊಂದಾಗು.


*ಸಿಹಿಜೀವಿ ವೆಂಕಟೇಶ್ವರ*

ತುಮಕೂರು

07 January 2024

ರೈತರ ಶೋಷಣೆ ಮತ್ತು ಜಾತಿ ಪದ್ದತಿಯ ವಿರುದ್ದ ಸಿಡಿದೆದ್ದ #ಕಾಟೇರ...

 


ರೈತರ ಶೋಷಣೆ ಮತ್ತು ಜಾತಿ ಪದ್ದತಿಯ ವಿರುದ್ದ ಸಿಡಿದೆದ್ದ #ಕಾಟೇರ...


ಜಗತ್ತಿನಲ್ಲಿ ಇರೋದೆ ಕೆಲವು ಕಥೆಗಳು ಆ ಕಥೆಗಳನ್ನು ವಿಭಿನ್ನವಾಗಿ ಪ್ರಸ್ತುತಪಡಿಸುವವನೇ ಉತ್ತಮ ಕಥೆಗಾರ. ಅಂತಹ ಕಥೆಗಳನ್ನು ಸಶಕ್ತವಾಗಿ ಚಿತ್ರರೂಪ ನೀಡಿ ನಿರ್ದೇಶನ ಮಾಡಿ ಗೆದ್ದ ಚಿತ್ರ ಕಾಟೇರ. ವಾರದಲ್ಲೇ ಶತಕೋಟಿ ಕಲೆಕ್ಷನ್ ಮಾಡಿ ಮುನ್ನುಗ್ಗೋ ಚಿತ್ರದ ಸೂತ್ರದಾರ ತರುಣ್  ಸುಧೀರ್ .

ರೀನಾ ಡಿಸೋಜಾ ಪಾತ್ರದಲ್ಲಿ ಶ್ವೇತಾ ಪ್ರಸಾದ್ ರವರು ಪೋರೆನ್ಸಿಕ್ ತಂಡದ ಜೊತೆಗೆ ತಲೆಬುರುಡೆಯ ಬಗ್ಗೆ ಸಂಶೋಧನೆ ಮಾಡುವ ಶಾಟ್ ನೊಂದಿಗೆ ಆರಂಭವಾಗುವ ಚಿತ್ರದ ಕೊನೆಯ ಫ್ರೇಮ್ ವರಗೆ ಟೈಟಲ್ ಕಾರ್ಡ್ ನೋಡುವವರೆಗೆ ಉಸಿರು ಬಿಗಿ ಹಿಡಿದು ನೋಡುವ ಸಿನಿಮಾ ಕಾಟೇರ. ದರ್ಶನ್ ರವರ ಮಾಮೂಲಿ ಸಿನಿಮಾಕ್ಕೆ ಹೋಲಿಸಿದರೆ ಇಲ್ಲಿ ಬೇರೆ ರೀತಿಯ ದರ್ಶನ್ ರವರ ದರ್ಶನವಾಗುತ್ತದೆ.

ಭೀಮನಹಳ್ಳಿಯ ಕಬ್ಬಿಣ ಕಾಸಿ ಬಡಿದು ಹತಾರ ಮಾಡುವ  ಕಾಟೇರ ತನ್ನ ಹಳ್ಳಿಯ ರೈತರಿಗೆ ಭೂಸುಧಾರಣಾ ಕಾಯಿದೆಯನ್ನು ಜಾರಿಗೆ ತರಲು ರೈತರನ್ನು ಊಳಿಗಮಾನ್ಯ ಭೂಮಾಲೀಕರಾದ ದೇವರಾಯ ಮತ್ತು ಕಾಳೇಗೌಡರಿಂದ ಪಾರು ಮಾಡಲು ಅನೇಕ ಸವಾಲುಗಳನ್ನು ಎದುರಿಸಬೇಕಾಗುತ್ತದೆ.ಆ ಸವಾಲುಗಳನ್ನು ಕಾಟೇರ ಹೇಗೆ ಎದುರಿಸದ ಜಾತಿ ಪದ್ದತಿಗೆ ಹೇಗೆ ಸೆಡ್ಡು ಹೊಡೆದ  ಎಂಬುದನ್ನು ನೀವು ತೆರೆಯ ಮೇಲೆಯೇ ನೋಡಬೇಕು.ಈ ಚಿತ್ರದಲ್ಲಿ ದರ್ಶನ್ ಅಭಿನಯ ಬೇರೆಯೇ ಲೆವೆಲ್ ನಲ್ಲಿದೆ. 

ನಾನು ಸಿನಿಮಾ ನೋಡಿದ್ದು ಐನಾಕ್ಸ್ ರಾಯಲ್ ಸೀಟ್ ನಲ್ಲಿ ನನ್ನ ಪಕ್ಕ ಆರಾಮಾಗಿ ಮಲಗಿ ಸಿನಿಮ ನೋಡುವ ಸುಮಾರು ಅರವತ್ತು ವರ್ಷ ವಯಸ್ಸಿನ ವ್ಯಕ್ತಿ ಸಿನಿಮಾ ಅರಂಭವಾದ ಹತ್ತು ನಿಮಿಷಕ್ಕೆ ಸೀಟಿನ ತುದಿಗೆ ಕುಳಿತು ನೋಡಲಾರಂಬಿಸಿದರು.ಈ ಉದಾಹರಣೆ ಸಾಕು ಸಿನಿಮಾದ ಗುಣಮಟ್ಟ ತಿಳಿಸಲು. ಮಾಸ್ತಿಯವರ ಸಂಭಾಷಣೆ ಚಿತ್ರವನ್ನು ಇನ್ನೂ ಕಳೆಗಟ್ಟಿಸಿದೆ" ಗಂಡ್ಸಾದವ್ನು ಕೆಲ್ಸ ಮಾಡಿ ಬೆವ್ರು ಸುರ್ಸುಬೇಕಲೇ, ಹೆಣ್ ನೋಡಿ  ಜೊಲ್ ಸುರ್ಸ್ ಬಾರ್ದು" ಮುಂತಾದ ಡೈಲಾಗ್ ಜನರ ಮನ ತಾಗುತ್ತವೆ.

ತಾರಾಗಣದಲ್ಲಿ ಅನುಭವಿ ನಟ ನಟಿಯರು ಚಿತ್ರದ ಘನತೆಯನ್ನು ಹೆಚ್ಚಿಸಿದ್ದಾರೆ.

ಕಾಟೇರನಾಗಿ ದರ್ಶನ್ ಎರಡು ಶೇಡ್ ಗಳಲ್ಲಿ ಅಭಿನಯಿಸಿರುವುದು ಅವರ ಅಭಿಮಾನಿಗಳಿಗೆ ಡಬಲ್ ಧಮಾಕ.

ಪ್ರಭಾವತಿ ಪಾತ್ರದಲ್ಲಿ ಆರಾಧನಾ ರಾಮ್ ಮೊದಲ ಚಿತ್ರದಲ್ಲೇ ಅಭಿನಯದಲ್ಲಿ ಸೆಂಚುರಿ ಹೊಡೆದಿರುವರು.

ದೇವರಾಯನಾಗಿ ಜಗಪತಿ ಬಾಬು ಉತ್ತಮ ಖಳನಾಯಕನ ಪಾತ್ರದಲ್ಲಿ ಮಿಂಚಿದ್ದಾರೆ.

ಮಹದೇವಣ್ಣ ಪಾತ್ರದಲ್ಲಿ ಕುಮಾರ್ ಗೋವಿಂದ್ ಅಭಿನಯ ಸುಂದರ.

ಕಾಟೇರನ ಸಹೋದರಿ

ಕುಮಾರಿಯಾಗಿ ಶ್ರುತಿ ಅಭಿನಯ ಎಂದಿನಂತೆ ಉತ್ತಮ.

ಮಾತುಬಾರದ ನಾಟಕ ಕಲಾವಿದ 

ಚೋಂಗ್ಲಾ ಪಾತ್ರದಲ್ಲಿ ವೈಜನಾಥ ಬಿರಾದಾರ್ ಅಭಿನಯ ಕೆಲವೆಡೆ ನಗು ತಂದರೆ ಕೆಲವೆಡೆ ಕಣ್ಣು ತೇವವಾಗುತ್ತದೆ.

ಪುಟ್ಟರಾಜು ಪಾತ್ರದಲ್ಲಿ ಮಾಸ್ಟರ್ ರೋಹಿತ್ ಚುರುಕಾಗಿ ಅಭಿನಯಿಸಿದರೆ,

ಅವಿನಾಶ್ ಶಾನುಬೋಗನಾಗಿ ತಣ್ಣನೆಯ ವಿಲನ್ ಪಾತ್ರ ಮಾಡಿದ್ದಾರೆ.

ಕಾಳೇಗೌಡನಾಗಿ ವಿನೋದ್ ಕುಮಾರ್ ಆಳ್ವ ತೆರೆಯ ಮೇಲೆ ಮಿಂಚಿದ್ದಾರೆ.

ಸುಧಾಕರ್ ರವರ ಛಾಯಾಗ್ರಹಣ ಕಣ್ಣಿಗೆ ಹಬ್ಬ. ಸಂಕಲನಕಾರರಾದ ಕೆ ಎಮ್ ಪ್ರಕಾಶ್ ಚಿತ್ರ ವೇಗವಾಗಿ ಚಲಿಸಲು ತಮ್ಮದೇ ಯೋಗದಾನ ನೀಡಿದ್ದಾರೆ.ಹರಿಕೃಷ್ಣ ರವರ ಸಂಗೀತ ಮತ್ತು ಹಿನ್ನೆಲೆ ಸಂಗೀತ ಚಿತ್ರದ ಹೈಲೈಟ್.ಸಂಗೀತಕ್ಕೆ ತಕ್ಕ ಚೇತನ್ ಕುಮಾರ್, ಯೋಗರಾಜ್ ಭಟ್ ಹಾಗೂ ನನ್ನ ನೆಚ್ಚಿನ ಗೀತ ರಚನೆಕಾರ ವಿ ನಾಗೇಂದ್ರ ಪ್ರಸಾದ್ ರವರ ಸಾಹಿತ್ಯ ಅತ್ಯುತ್ತಮ. 

ಈ ಚಿತ್ರ 70 ,80 ರ ದಶಕದ ಕಥೆ ಆಧಾರಿತ ಆದರೂ ಈಗಲೂ ಅಲ್ಲಲ್ಲಿ ಮರ್ಯಾದೆಗೇಡು ಹತ್ಯೆ, ಜಾತಿ ಪದ್ದತಿಯು ಆಚರಣೆ ನೋಡಿದರೆ ಇದು ಇಂದಿನ ಕಥೆಯೂ ಹೌದು.

 ಎಂಭತ್ತರ ದಶಕಕ್ಕೂ ಹಿಂದಿನವರು ಈ ಚಿತ್ರ ನೋಡಿ ತಮ್ಮ ಕಾಲದ ಜನ  ಜೀವನ ರಿವೈಂಡ್ ಮಾಡಿಕೊಳ್ಳಬಹುದು 

ಜಾತಿ ಪದ್ದತಿ, ಇಂದಿನ ಪೀಳಿಗೆಯ  ಯುವಕರು ಆ ಕಾಲದ ಜೀವನಪದ್ದತಿ ನೋಡಬಹುದು.ಒಟ್ಟಾರೆ ಇದು ಎಲ್ಲರೂ ನೋಡಬೇಕಾದ ಸಿನಿಮಾ ಕೊನೆಯದಾಗಿ ಇಂತಹ ಚಿತ್ರ ನಿರ್ಮಿಸಿದ ಧೀರ ರಾಕ್ಲೈನ್ ವೆಂಕಟೇಶ್ ರವರಿಗೆ ಅಭಿನಂದನೆ ಸಲ್ಲಿಸಲೇಬೇಕು.


ಸಿಹಿಜೀವಿ ವೆಂಕಟೇಶ್ವರ

ತುಮಕೂರು

9900925529

03 January 2024

ಎರಡು ಹಾಯ್ಕುಗಳು

 


ಹಾಯ್ಕುಗಳು 


ಸತತ ಮೋಡ

ದಂಗಾದನು ದಿನಪ

ಬೆಳಕು ಎಲ್ಲಿ?



ರೈತಗೆ ಕಷ್ಟ

ದಂಗೆಯೇಳಬೇಕೇನು 

ಅನ್ನದಾತನು?


ಸಿಹಿಜೀವಿ ವೆಂಕಟೇಶ್ವರ

ತುಮಕೂರು

02 January 2024

ಅಂತರ್ಮುಖಿಗಳಿಗೊಂದು ದಿನ


 


ಅಂತರ್ಮುಖಿಗಳಿಗೊಂದು ದಿನ 


ಕೆಲವರು ಮಾತನಾಡುತ್ತಿದ್ದರೆ ನಾನ್ ಸ್ಟಾಪ್... ಅಂತಹ ವ್ಯಕ್ತಿಗಳ ಕಂಡು   ಅವರು ಕಲ್ಲನ್ನು ಬೇಕಾದರೂ ಒಮ್ಮೆ ಮಾತನಾಡಿಸಬಲ್ಲರು ಎಂದು ಜೋಕ್ ಮಾಡುವುದುಂಟು. ಇದಕ್ಕೆ ವಿರುದ್ಧವಾಗಿ ಕೆಲವರನ್ನು ಎಷ್ಟು   ಮಾತನಾಡಿಸಿದರೂ ಅವರ ಕಡೆಯಿಂದ ಬೇಗ ಪ್ರತಿಕ್ರಿಯೆ ಬರುವುದೇ ಇಲ್ಲ. ಅಯ್ಯೋ ಮಾತಾಡು ಬಾಯಿಂದ ಮುತ್ತೇನು ಉದುರೋಲ್ಲ ಎಂದು ಇಂತವರ ಕಿಚಾಯಿಸುವುದೂ ಉಂಟು ಇಂತಹ ಮೂಡಿಯಾಗಿರುವ ,ಕಡಿಮೆ ಪ್ರತಿಕ್ರಿಯೆ ನೀಡುವ, ಆಗೊಂದು ಈಗೊಂದು ಮಾತನಾಡುವ , ಎಲ್ಲರೊಡನೆ ಕಡಿಮೆ ಬೆರೆಯುವವರನ್ನು ಅಂತರ್ಮುಖಿಗಳು ಎಂದು ಕರೆಯಬಹುದು.

ಬೇರೆಯರೊಂದಿಗೆ ಬೆರೆಯದೇ ಮಂಕಾಗಿರುವ ಇವರು ದಡ್ಡರೆಂದು ನೀವು ಭಾವಿಸಲೇಬಾರದು ಡಾರ್ವಿನ್ ನಿಂದ ಹಿಡಿದು  ಐನ್ಸ್ಟೈನ್ ನಂತಹ ಮಾಹಾನ್ ವಿಜ್ಞಾನಿಗಳು ಕೂಡಾ ಅಂತರ್ಮುಖಿ ವ್ಯಕ್ತಿತ್ವಕ್ಕೆ ಉದಾಹರಣೆ ಎಂಬುದು ನೆನಪಿರಲಿ.

ಪ್ರತಿವರ್ಷ ಜನವರಿ 2 ರಂದು ವಿಶ್ವ ಅಂತರ್ಮುಖಿ ದಿನವನ್ನು ಆಚರಿಸಲಾಗುತ್ತದೆ.

ಅಂತರ್ಮುಖಿಗಳು ಏಕಾಂಗಿಯಾಗಿ ಇರುತ್ತಾರೆಂದು ಅವರ ಬಗ್ಗೆ ತಪ್ಪಾಗಿ ತಿಳಿದುಕೊಳ್ಳಲಾಗಿದೆ. ನಮ್ಮ ಸಮಾಜ ಅಂತರ್ಮುಖಿಗಳನ್ನು ದುರಹಂಕಾರಿ, ನಿರಾಸಕ್ತಿ, ಅಂಜಿಕೆಯುಳ್ಳವರು ಎಂದು ತಪ್ಪಾಗಿ ನಿರ್ಣಯಿಸಲಾಗುತ್ತದೆ. ಈ ದಿನವು ಜನರು ಇಂತಹವರನ್ನು ಹೆಚ್ಚಾಗಿ ಅರ್ಥಮಾಡಿಕೊಳ್ಳಲು ಸಹಾಯ ಮಾಡುತ್ತದೆ.

ಹೆಸರಾಂತ ಮನಶಾಸ್ತ್ರಜ್ಞರಾದ 

ಕಾರ್ಲ್ ಜಂಗ್ ರವರು ಮೊದಲ ಬಾರಿಗೆ    1921ರಲ್ಲಿ  "ಸೈಕಲಾಜಿಕಲ್ ಟೈಪ್ಸ್" ಎಂಬ ಪುಸ್ತಕದಲ್ಲಿ   ಅಂತರ್ಮುಖಿ ಪರಿಕಲ್ಪನೆಯನ್ನು ಮೊದಲು ವ್ಯಾಖ್ಯಾನಿಸಿದರು.  ಪ್ರತಿಯೊಬ್ಬ ವ್ಯಕ್ತಿಯು ಅಂತರ್ಮುಖಿ ಮತ್ತು ಬಹಿರ್ಮುಖಿ ಎಂಬ ಎರಡು ವರ್ಗಗಳಾಗಿ ಬರುತ್ತಾರೆ ಎಂದು ಅವರು ಪ್ರತಿಪಾದಿಸಿದರು. ಜಂಗ್ ಅಂತರ್ಮುಖಿಗಳನ್ನು ಗ್ರೀಕ್ ದೇವರು ಅಪೊಲೊಗೆ ಹೋಲಿಸಿದ್ದಾರೆ. 

ಅಪೊಲೊ ತಿಳುವಳಿಕೆ ಮತ್ತು ಜ್ಞಾನೋದಕ್ಕೆ ಪ್ರಸಿದ್ಧಿ.  ಅಪೊಲೊ ಅಂತರ್ಮುಖಿಗಳು ತಮ್ಮ ಆಂತರಿಕ ಪ್ರಪಂಚದ ಪ್ರತಿಬಿಂಬ, ಕನಸು ಮತ್ತು ದೃಷ್ಟಿಯ ಮೇಲೆ ಕೇಂದ್ರೀಕರಿಸುತ್ತಾರೆ ಎಂದು ವಿವರಿಸಿದರು.

ಅಂತರ್ಮುಖಿಗಳು ಏಕಾಂಗಿಯಾಗಿರುವುದನ್ನು ಹೆಚ್ಚಾಗಿ ಆನಂದಿಸುತ್ತಾರೆ. ಅಂತಹವರು ಮೌನವಾಗಿರುವುದೇ ಹೆಚ್ಚು, ಆದರೆ ಒರಟರಾಗಿವುದಿಲ್ಲ. ಅವರು ಸಾಮಾಜಿಕವಾಗಿ ಉತ್ತಮರಾಗಿರುತ್ತಾರೆ. ಅವರು ಅತ್ಯಂತ ಉತ್ಸಾಹಿಗಳಾಗಿದ್ದು, ಅನ್ವೇಷಕರಾಗಿರುತ್ತಾರೆ. ಎಷ್ಟೋ ಸಲ ಅಂತರ್ಮುಖಿಗಳನ್ನು ತಪ್ಪಾಗಿ ಅರ್ಥೈಸಲಾಗುತ್ತದೆ. 


ಅಂತರ್ಮುಖಿಗಳು ಹೊಸ ಮಾಹಿತಿಗೆ ತ್ವರಿತವಾಗಿ ಪ್ರತಿಕ್ರಿಯಿಸಲು ನಿಧಾನ ಮಾಡುವರು. 

ಅಂತರ್ಮುಖಿಗಳು ಯಾರ ವಿರೋಧಿಗಳಾಗಿರುವುದಿಲ್ಲ, ಆದರೆ ಅವರು ಹೆಚ್ಚು ಜಾಗರೂಕರಾಗಿರುತ್ತಾರೆ ಮತ್ತು ಅವರು ತೆಗೆದುಕೊಳ್ಳುವ .

ಅಂತರ್ಮುಖಿಗಳು ಆಳವಾದ ಚಿಂತಕರು ಮತ್ತು ಹೆಚ್ಚು ಸೃಜನಶೀಲರು.

ಆದ್ದರಿಂದ ನಮ್ಮ ಸುತ್ತ ಮುತ್ತ ಇರುವ ಅಂತರ್ಮುಖಿಗಳನ್ನು ಗೌರವಿಸೋಣ.ಅವರ ಸೃಜನಾತ್ಮಕ ಚಟುವಟಿಕೆಗಳನ್ನು ಹಮ್ಮಿಕೊಳ್ಳಲು ಅವರ ಪಾಡಿಗೆ ಅವರನ್ನು ಬಿಟ್ಟು ಬಿಡೋಣ ತನ್ಮೂಲಕ ಅವರ ಸಂತಸವನ್ನು ಅನುಭವಿಸಲು ಬಿಡೋಣ.


ಸಿಹಿಜೀವಿ ವೆಂಕಟೇಶ್ವರ

ತುಮಕೂರು

01 January 2024

ಸ್ವಾಗತ 2024

 


2024

ಬರ ,ಬೆಲೆ ಏರಿಕೆ,ಯುದ್ದಗಳಿಂದ
ಬಸವಳಿದಿದ್ದು ಸಾಕು|
ಸುಖ ಸಮೃದ್ದಿ ನೀಡಲಿ
ಬರುವ ಎರಡು ಸಾವಿರದ ಇಪ್ಪತ್ನಾಲ್ಕು||

ಸಿಹಿಜೀವಿ ವೆಂಕಟೇಶ್ವರ
ತುಮಕೂರು