31 January 2023

ದೇವ ಪೂಜೆ...

 



ದೇವ ಪೂಜೆ.


ಸೂರ್ಯ ,ಚಂದ್ರ‌ರು 

ಸದಾ ಕರ್ತವ್ಯದಲ್ಲಿರುವರು 

ಜಗದ ಒಳಿತಿಗೆ 

ಒಂದು ದಿನವೂ ಹಾಕದೆ ರಜೆ|

ನಾವೂ ಕರ್ತವ್ಯ ಮಾಡಬೇಕಿದೆ

ಸರ್ವರ ಒಳಿತಿಗೆ ಜಗದ ಹಿತಕೆ

ಇಷ್ಟು ಮಾಡಿದರೆ ಸಾಕು 

ಮಾಡಲೇಬೇಕಿಲ್ಲ ದೇವಪೂಜೆ ||

ಚಾಟ್ ಜಿ ಪಿ ಟಿ ಮತ್ತು ಶಿಕ್ಷಣ...

 


ಚಾಟ್ ಜಿ ಪಿ ಟಿ ಮತ್ತು ಶಿಕ್ಷಣ ವ್ಯವಸ್ಥೆ...


ಮೊನ್ನೆ ಒಬ್ಬರು ಪೋಷಕರು ಪೋನ್ ಮಾಡಿ ಸಾರ್ ನನ್ನ ಮಗ ಯಾವಾಗಲೂ ಮೊಬೈಲ್ ಫೋನ್ ನೋಡ್ತಾನೆ ಅವನಿಗೆ ಸ್ವಲ್ಪ ಬುದ್ದಿ ಹೇಳಿ ಎಂದಾಗ ಅವರ ಮಗನ ಮಾತಾಡಿಸಿದಾಗ ಸಾರ್ ನಾನು ಪಾಠಕ್ಕೆ ಸಂಬಂಧಿಸಿದಂತೆ ಗೂಗಲ್ ನಲ್ಲಿ ನೋಡಿ ತಿಳಿಯುತ್ತಿದ್ದೆ ಎಂದ.

ಅವನಿಗೆ ಗೂಗಲ್ ನೋಡಲೇಬೇಡ ಎಂದು ಹೇಳುವ ಸ್ಥಿತಿಯಲ್ಲಿ ಇಂದು ನಾವಿಲ್ಲ ಗೂಗಲ್ ನಮ್ಮ ಜೀವನದ ಅವಿಭಾಜ್ಯ ಅಂಗವೇನೋ ಎಂಬ ಭಾವನೆ ಬಂದು ಬಿಟ್ಟಿದೆ. ಆ ಹುಡುಗನಿಗೆ ಗೂಗಲ್ ಬಳಕೆ ಕಡಿಮೆ ಮಾಡಿ ಪುಸ್ತಕ ,ಪತ್ರಿಕೆಗಳಲ್ಲಿ ವಿಷಯ ಸಂಗ್ರಹಿಸಲು ಸಲಹೆ ನೀಡಿ ಪೋನ್ ಕಟ್ ಮಾಡಿದೆ .


ಈ ಗೂಗಲ್ ನಿಂದ ಇನ್ನೂ ಏನೇನು ಅನುಕೂಲ ಮತ್ತು ಅನಾನುಕೂಲ ಇವೆ ಎಂದು ಯೋಚಿಸುವಾಗ ಜಗತ್ತಿನಲ್ಲಿ ಇಂದು ಬಹುಚರ್ಚೆಯ ಚಾಟ್ ಜಿ ಪಿ ಟಿ ನೆನಪಾಯಿತು.

ಗೂಗಲ್ ಗೆ ಟಕ್ಕರ್ ನೀಡುವ ಈ ಕೃತಕ ಬುದ್ದಿ ಮತ್ತೆಯ ತಾಣವು ನಾವು ಕೇಳಿದ ಮಾಹಿತಿಯನ್ನು ನೇರವಾಗಿ ನೀಡುತ್ತದೆ.ಒಮ್ಮೆ ವೆಬ್ ಸೈಟ್ ಗೆ ಹೋಗಿ ನೊಂದಾಯಿಸಿದರೆ ನಿಮಗೆ ಬೇಕಾದ ಮಾಹಿತಿಯನ್ನು ಕೇಳಲು ಟೈಪ್ ಮಾಡಿದರೆ ಅದು ಉತ್ತರ ಬರೆಯುತ್ತಾ ಸಾಗುತ್ತದೆ.


ಚಾಟ್ ಜಿ ಪಿ ಟಿ    ನವೆಂಬರ್ 2022 ರಲ್ಲಿ ಓಪನ್‌‍ಎಐ ನಿಂದ ಪ್ರಾರಂಭಿಸಲಾದ ಚಾಟ್‌ಬಾಟ್ ಆಗಿದೆ. ಇದು ಓಪನ್‌‍ಎಐ ನ  ಕುಟುಂಬದ ದೊಡ್ಡ ಭಾಷಾ ಮಾದರಿಗಳ ಮೇಲೆ ನಿರ್ಮಿಸಲ್ಪಟ್ಟಿದೆ. ಮೇಲ್ವಿಚಾರಣೆಯ ಮತ್ತು ಬಲವರ್ಧನೆಯ ಕಲಿಕೆಯ ತಂತ್ರಗಳೆರಡರ ಜೊತೆಗೆ ಉತ್ತಮವಾಗಿ ಟ್ಯೂನ್ ಮಾಡಲಾಗಿದೆ. 


ಚಾಟ್‌ಜಿಪಿಟಿ ಅನ್ನು ನವೆಂಬರ್ 30 2022 ರಂದು ಮೂಲ ಮಾದರಿಯಾಗಿ ಪ್ರಾರಂಭಿಸಲಾಯಿತು.  ಅಂದರೆ ಅದಕ್ಕೆ ಕೇವಲ ಮೂರು ತಿಂಗಳ ಪ್ರಾಯ!  ಅದರ  ಕಾರ್ಯ ವಿಧಾನದಿಂದ ಜಗತ್ತಿನಲ್ಲಿ ಮನೆಮಾತಾಗಿದೆ.ಎಲ್ಲರ ಮನ ಗೆದ್ದು  ಗೂಗಲ್ ನಂತಹ ದೈತ್ಯ ಕಂಪನಿಯೇ ಚಿಂತಿಸುವಂತೆ ಮಾಡಿದೆ. 

ನಮಗೆ ಬೇಕಾದ ಮಾಹಿತಿಯನ್ನು ಕೇವಲ ಕರ್ಸರ್ ಬ್ಲಿಂಕ್ ಮಾಡುತ್ತಲೇ ನೀಡುವ ಈ ಚಾಟ್ ಬಾಟ್ ಮೊದಲೇ ಫೀಡ್ ಮಾಡಿದ ಮಾಹಿತಿಯನ್ನು ನಮಗೆ ಸಂಸ್ಕರಿಸಿ ಕೊಡುತ್ತದೆ. ಇದು ಕೆಲವೊಮ್ಮೆ ನಿಖರತೆಯ ಪ್ರಶ್ನೆಗಳನ್ನು ಹುಟ್ಟುಹಾಕುತ್ತದೆ.



ಬರವಣಿಗೆಯ ವಿಷಯದಲ್ಲಿ ಸದ್ಯಕ್ಕೆ ಪರೀಕ್ಷೆಯಲ್ಲಿ ಅಚ್ಚುಕಟ್ಟಾಗಿ ಪುಟ ತುಂಬಿಸುವ ಚಾಲಾಕಿಗಳ ಹಂತದಲ್ಲಿದೆ ಈ Chat GPT, ಆದರೆ, ಪುಟ ತುಂಬಿಸಿರುವುದರಲ್ಲಿ ಸತ್ವವೇನಾದರೂ ಇದೆಯೇ ಎಂದು ಹುಡುಕಿದರೆ ಸಂಪೂರ್ಣವಾಗಿ ಹೌದು ಎಂದು ಹೇಳಲಾಗುವುದಿಲ್ಲ.ಇದು ಚಾಟ್ ಜಿ ಪಿ ಟಿ ಯ ಮಿತಿಯೂ ಹೌದು ಎಂದರೆ ತಪ್ಪಾಗಲಾರದು. 


ಇದು ನೂರಾರು ಪದಗಳನ್ನು ಚಕಚಕನೆ ಬರೆದುಕೊಡಬಹುದು. ಆದರೆ, ಸತ್ವದ ವಿಚಾರದಲ್ಲಿ ಚಾಟ್  GPT ವಿಶ್ವಾಸ ಗಳಿಸಿಕೊಳ್ಳುವುದು ಅಷ್ಟು ಸುಲಭವಿಲ್ಲ.  

ಇದು ಹೇಗೆ ಕಾರ್ಯನಿರ್ವಹಣೆ ಮಾಡುತ್ತದೆ ಎಂದು 

ಪರೀಕ್ಷೆ ಮಾಡಲು  

ನಾನು ಬೋಧನೆ ಮಾಡುವ ಸಮಾಜ ವಿಜ್ಞಾನ ವಿಷಯದ ಸುಭಾಷ್ ಚಂದ್ರ ಬೋಸ್ ಬಗ್ಗೆ ಕೇಳಿದಾಗ ಈ ಜಿ ಪಿ.ಟಿ  ತನ್ನ ಕರ್ಸರ್ ಬ್ಲಿಂಕ್ ಬ್ಲಿಂಕಿಸಿ ಶೇಕಡಾ ಐವತ್ತು ಸರಿ ಉತ್ತರ ನೀಡಿತು . 

 ಇದರ ಕಂಟೆಂಟ್ ಅನ್ನು ಕಣ್ಣು ಮುಚ್ಚಿಕೊಂಡು ಒಪ್ಪಿಕೊಳ್ಳಲು ಸಾಧ್ಯವಿಲ್ಲ. ಏಕೆಂದರೆ ನ್ಯಾಚುರಲ್ ಲ್ಯಾಂಗ್ವೇಜ್ ಪ್ರೊಸೆಸಿಂಗ್' (NLP) ಇನ್ನೂ ಅ ಹಂತ ತಲುಪಿಲ್ಲ.

ಮನುಷ್ಯ ಭಾಷೆಯನ್ನು ಯಂತ್ರಗಳಿಗೆ ಸಹಜವಾಗಿ ಅರ್ಥ ಮಾಡಿಸುವ ಪ್ರಕ್ರಿಯೆ ಈ NLP. ಧ್ವನಿ ಅಥವಾ ಬರಹದ ಮೂಲಕ ನೀಡುವ ಕಮಾಂಡ್ ಅನ್ನು ಯಂತ್ರಗಳು ಮನುಷ್ಯರಂತೆಯೇ ಅರ್ಥ ಮಾಡಿಕೊಳ್ಳಲು ಈ ಪ್ರಕ್ರಿಯೆ ನೆರವಾಗುತ್ತದೆ. ಚಾಟ್  GPTಯಲ್ಲಿ ಇದರ ಮುಂದುವರಿದ ತಂತ್ರಜ್ಞಾನ ಬಳಕೆಯಾಗುತ್ತಿದೆ. ಇದೇ ಕಾರಣಕ್ಕೆ ನಾವು ಕೊಡುವ ಕಮಾಂಡ್ ಅನ್ನು ಅದು ಕ್ಷಣಮಾತ್ರದಲ್ಲೇ ಬರೆದು ಮುಗಿಸುತ್ತದೆ. ಯಾವುದೇ ಭಾಷೆಯಿಂದ ಇನ್ಯಾವುದೇ ಭಾಷೆಗೆ ಬರಹವನ್ನು ಭಾಷಾಂತರಿಸುವ, ಧ್ವನಿಯ ಮೂಲಕ ನೀಡುವ ಕಮಾಂಡ್ಗಳಿಗೆ ಪ್ರತಿಕ್ರಿಯಿಸುವ ಹಾಗೂ ಬರಹವನ್ನು ಸಂಸ್ಕರಿಸಿ ಸಂಕ್ಷಿಪ್ತಗೊಳಿಸುವ AIನ ಕೆಲಸವನ್ನು NLP ಸುಲಭವಾಗಿಸುತ್ತದೆ. ಮಾಹಿತಿ ಸಂಗ್ರಹ ಮತ್ತು ಬರಹದ ಸಂಸ್ಕರಣೆ ಎರಡೂ ಕೆಲಸಗಳು ಚಾಟ್  GPTಯ ಮೂಲಕ ಅಗುತ್ತಿರುವುದರಿಂದ ಇದರ ಕೆಲಸ ಅಚ್ಚರಿಯ ಹಾಗೆ ಕಾಣುತ್ತಿದೆಯಷ್ಟೆ.


ಶಿಕ್ಷಣ ತಜ್ಞರ ಅತಂಕವೇನು... 


ಕರೋನಾ ಪೂರ್ವ ಹಾಗೂ ಕರೋನೋತ್ತರ ಅವದಿಯಲ್ಲಿ 

ರಾಷ್ಟ್ರೀಯ ಸರ್ವೇಗಳು ಹೊರ ಹಾಕಿದ ಮಾಹಿತಿಯ ಆಧಾರದ ಮೇಲೆ ದೇಶದ ಬಹುತೇಕ ಮಕ್ಕಳು  ಓದು ಬರಹ ಮತ್ತು ಲೆಕ್ಕಾಚಾರ (F L N )  ದಲ್ಲಿ ಹಿಂದುಳಿದಿದೆ  . ಇಂತಹ ವಿದ್ಯಾರ್ಥಿಗಳು ಶಿಕ್ಷಕರು ನೀಡಿದ ಭಾಷೆಗೆ ಸಂಬಂಧಿಸಿದ ಗೃಹಪಾಠಗಳನ್ನು ಮಾಡಿಕೊಡಲು ಜಿ ಪಿ ಟಿ ಮೊರೆ ಹೋದರೆ ಅದು  ಕ್ಷಣಗಳಲ್ಲಿ ಮಾಡಿಕೊಡುತ್ತದೆ. ಲೆಕ್ಕಗಳನ್ನು ಹಂತ ಹಂತವಾಗಿ ಮಾಡಿ ತೋರಿಸುತ್ತದೆ ಅದನ್ನು ನಕಲು ಮಾಡಿ ಶಾಲೆಗೆ ತಂದರೆ ಶಿಕ್ಷಕರು ಅದನ್ನು ನೋಡಿ ಮಗು F L N ಸಾಧಿಸಿದೆ ಎಂಬ ತೀರ್ಮಾನಕ್ಕೆ ಬರಬಹುದು.

ನಮ್ಮ ದೇಶದಲ್ಲಿ ಇದು ಈಗೀಗ ಚರ್ಚೆಯ ವಿಷಯವಾಗಿದೆ ಆದರೆ  ಅಮೆರಿಕದ ಕೆಲ ವಿಶ್ವವಿದ್ಯಾಲಯಗಳು ಚಾಟ್ ಜಿ ಪಿ ಟಿ ಯನ್ನು ನಿಷೇಧಿಸಿವೆ. ಭಾರತದ ಕೆಲ ಕಾಲೇಜುಗಳು ಸಹ ಇದೇ ಹಾದಿ ತುಳಿದಿವೆ. ಚಾಟ್ ಜಿ ಪಿ ಟಿ  ಹಾವಳಿ ನಿಯಂತ್ರಣ ಮಾಡಲು ಕಾಲೇಜುಗಳಲ್ಲಿ ಗೃಹಪಾಠ ನೀಡದೇ  ತಾವೇ ಹಾಳೆಗಳನ್ನು ನೀಡಿ ಉತ್ತರ ಬರೆಸಲು ಚಿಂತನೆ ಮಾಡುತ್ತಿದ್ದಾರೆ. 

ಮೌಲ್ಯಮಾಪನ ಪ್ರಕ್ರಿಯೆಯು ಮೇಲೂ ಇದು ದುಷ್ಪರಿಣಾಮ ಬೀರುವ ಆತಂಕವಿದೆ  .

ಈಗಾಗಲೇ ಎಷ್ಟೇ ಬಿಗಿ ಮಾಡಿದರೂ ಶಾಲಾ ಕಾಲೇಜುಗಳಿಂದ ಹಿಡಿದು ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ನಕಲು ಹಾವಳಿ ಪಿಡುಗಾಗಿ ಪರಿಣಮಿಸಿ ಅದು ಭ್ರಷ್ಟಾಚಾರಕ್ಕೆ ದಾರಿಯಾಗಿ  ಶಿಕ್ಷಣ ವ್ಯವಸ್ಥೆ ಮತ್ತು ಆಡಳಿತ ವ್ಯವಸ್ಥೆಗೆ ತಲೆನೋವಾಗಿ ಪರಿಣಮಿಸಿದೆ. ಈ ಜಿ ಪಿ ಟಿ ನಕಲು ಮಾಡಲು ವಿದ್ಯಾರ್ಥಿಗಳಿಗೆ ಉಚಿತವಾಗಿ ಸಿಕ್ಕಿ ಕೋತಿ ಕೈಯಲ್ಲಿ ಸಿಕ್ಕ ಗುಲಗಂಜಿಯಾಗುವುದೇನೋ ಎಂಬ ಅತಂಕ ಮೂಡುತ್ತದೆ.


ಸಿಹಿಜೀವಿ

ಸಿ ಜಿ ವೆಂಕಟೇಶ್ವರ

ಶಿಕ್ಷಕರು

ಸರ್ಕಾರಿ ಪ್ರೌಢಶಾಲೆ ಕ್ಯಾತ್ಸಂದ್ರ

ತುಮಕೂರು

ವಿಸ್ಮಯ

 #ನೀನೊಂದು_ಅದ್ಭುತ_ವಿಸ್ಮಯ 



ನೀ ಸನಿಹವಿರೆ 

ಮಾಯುವುದು 

ಹೃದಯದ ಗಾಯ |

ಅದಕ್ಕೆ ಹೇಳುವುದು

ನೀನೊಂದುಅದ್ಭುತ ವಿಸ್ಮಯ ||


#ಸಿಹಿಜೀವಿಯ_ಹನಿ 

29 January 2023

ರೇನ್ ಬೋ...

 



ರೇನ್ ಬೋ ಸರಿ ಇಲ್ಲ...


ನಾನು ವಿವರಣೆ ನೀಡಿದೆ 

ಕಾಮನ ಬಿಲ್ಲಿನಲ್ಲಿ ಇರೋ

ಬಣ್ಣ ಸೇರ್ಸಿ ಅಂದ್ರು ವಿಬ್ಗಯಾರ್ |

ನನ್ನವಳು ತಗಾದೆ ತೆಗೆದಳು 

ಸರಿ ಇಲ್ಲ ಕಣ್ರೀ ಈ ರೇನ್ ಬೋ

ಇದ್ರಲ್ಲಿ ಇಲ್ವೇ ಇಲ್ಲ ನನ್ನಿಷ್ಟದ ಕಲರ್ ಗಳಾದ ಗೋಲ್ಡ್, ಸಿಲ್ವರ್ ||


ಸಿಹಿಜೀವಿ

ಸಿ ಜಿ ವೆಂಕಟೇಶ್ವರ.


27 January 2023

ಮನೋವೇಗ

 


ನೀ...ನನ್ನ ಬಳಿಯಿಲ್ಲದಿದ್ದರೆ

ತಿಳಿಯದ ಆವೇಗ |

ಆದರೂ ತಲುಪುವೆ ನಿನ್ನ

ಅದಕ್ಕೆ ಕಾರಣ ಮನೋವೇಗ||

21 January 2023

ಕರುವ್ಗಲ್ಲು...


 

ಪುಸ್ತಕ  ವಿಮರ್ಶೆ...
ಕುರುವ್ಗಲ್ಲು...

ಹಾಲ್ಪ್ ಸರ್ಕಲ್ ಕ್ಲಬ್  ಹೌಸ್ ಕಾರ್ಯಕ್ರಮದಲ್ಲಿ ಡಾ ಮಾರುತಿ ಎನ್ ಎನ್ ರವರ "ದ್ಯಾಮವ್ವನ ಮಗ" ಕಥೆ ಕೇಳಿ ಅವರ ಪರಿಚಯ ಮಾಡಿಕೊಂಡು ಕುರುವ್ಗಲ್ಲು ಪುಸ್ತಕ ತಂದು ಓದಿದೆ.

ಸಪ್ನಾ ಬುಕ್ ಹೌಸ್ ನವರು ಪ್ರಕಟಿಸಿದ ಕುರುವ್ಗಲ್ಲು ವಿಭಿನ್ನವಾದ ಶೀರ್ಷಿಕೆಯಿಂದ ಗಮನಸೆಳೆವ  ಕಥಾಸಂಕಲನ. ಈ ಪುಸ್ತಕವು ಓದುಗರನ್ನು ಸೆಳೆಯುವಲ್ಲಿ ಸಫಲವಾಗಿದೆ  ಎಂದು ಹೇಳಬಹುದು.ಇಲ್ಲಿ ಗ್ರಾಮೀಣ ಸಮಾಜದ ಚಿತ್ರಣವಿದೆ. ನಗರದ ಸಂಕೀರ್ಣವಾದ ಬದುಕಿನ ನೋಟವಿದೆ.  ಶತಮಾನಗಳಿಂದ ಅಳಿಯದೇ ಈಗಲೂ ಸಮಾಜದಲ್ಲಿ ಅಲ್ಲಲ್ಲಿ ಕಾಡುವ ಸಾಮಾಜಿಕ ಸಮಸ್ಯೆಗಳ  ಮೇಲೆ ಬೆಳಕು ಚೆಲ್ಲುವ ನೋವಿನ ಕಥೆಯಿದೆ.

ಡಾ. ಮಾರುತಿ ಎನ್.ಎನ್ ರವರು ಹುಟ್ಟಿದ್ದು, ಬೆಳೆದಿದ್ದು ತುಮಕೂರು ಜಿಲ್ಲೆಯ, ಕೊರಟಗೆರೆ ತಾಲ್ಲೂಕಿನ ನೀಲಗೊಂಡನಹಳ್ಳಿಯಲ್ಲಿ, ಪ್ರಾಥಮಿಕ ಮತ್ತು ಪ್ರೌಢಶಿಕ್ಷಣವನ್ನು ಹುಟ್ಟೂರಲ್ಲೇ ಮುಗಿಸಿ, ಪದವಿ ಪೂರ್ವ ಶಿಕ್ಷಣಕ್ಕೆಂದು ತುಮಕೂರು ನಗರಕ್ಕೆ ಬಂದವರು ಇಪ್ಪತ್ತೆರಡು ವರ್ಷಗಳಿಂದ ಇಲ್ಲಿ ನೆಲೆಸಿದ್ದಾರೆ. ಉನ್ನತ ಶಿಕ್ಷಣವನ್ನು ತುಮಕೂರು ವಿಶ್ವವಿದ್ಯಾನಿಲಯದಲ್ಲಿ ಪಡೆದ ಇವರು ರಸಾಯನಶಾಸ್ತ್ರದಲ್ಲಿ, ಮನೋವಿಜ್ಞಾನದಲ್ಲಿ, ಹಾಗೂ ಶಿಕ್ಷಣದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಶಿಕ್ಷಣದಲ್ಲಿ ಸಂಶೋಧನಾ ಪ್ರಬಂಧ ಮಂಡಿಸಿರುವ ಇವರಿಗೆ ಗೌರವ ಡಾಕ್ಟರೇಟ್ ಪುರಸ್ಕಾರವೂ ಲಭಿಸಿದೆ. ಮನೋವಿಜ್ಞಾನದ ವಿಷಯದಲ್ಲಿ ಸಂಶೋಧನೆಯಲ್ಲೂ ತೊಡಗಿಕೊಡಿದ್ದಾರೆ.  ಪ್ರಸ್ತುತ ಪ್ರತಿಷ್ಠಿತ ಶ್ರೀ ಸಿದ್ದಾರ್ಥ ಶಿಕ್ಷಣ ಮಹಾವಿದ್ಯಾಲಯದಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಬಹುಮುಖ ಪ್ರತಿಭೆಯ ಹೊಂದಿರುವ,
ಶೈಕ್ಷಣಿಕ ಮನೋವಿಜ್ಞಾನ ಮತ್ತು ಶೈಕ್ಷಣಿಕ ತಂತ್ರಶಾಸ್ತ್ರದಲ್ಲಿ ಹೆಚ್ಚಿನ ಒಲವಿರುವ ಇವರು ನೂರಾರು ವಿಚಾರ ಸಂಕಿರಣ, ಪುನಶ್ವೇತನ ಕಾರ್ಯಾಗಾರಗಳಲ್ಲಿ ಭಾಗವಹಿಸಿದ್ದಾರೆ. ತುಮಕೂರು ವಿಶ್ವವಿದ್ಯಾನಿಲಯದ ಪ್ರಶಿಕ್ಷಕರ ಸಂಘದ ಕಾರ್ಯದರ್ಶಿಯಾಗಿದ್ದಾಗ ಶ್ರೀಯುತರು ಅನೇಕ ಕಾರ್ಯಾಗಾರ ಮತ್ತು ವಿಚಾರಗೋಷ್ಠಿಗಳನ್ನು ಸಂಘಟಿಸಿರುತ್ತಾರೆ.

ಹೊಸದನ್ನು ಕಲಿಯಬೇಕು, ಇತರರಿಗೆ ಕಲಿಸಬೇಕು ಎಂಬ ಮಹದಾಸೆಯಿಂದ ಪ್ರತಿದಿನ ತುಡಿಯುವ ಇವರು ಯೂಟ್ಯೂಬ್ ಚಾನೆಲ್ ಮೂಲಕ ವಿಚಾರಧಾರೆಗಳನ್ನು ಕಲಿಕಾಸಕ್ತರಿಗೆ ಪಸರಿಸುತ್ತಿದ್ದಾರೆ.

ಇವರ  ಚೊಚ್ಚಲ ಕಥಾ ಸಂಕಲನ "ನಿಗೂಢ ನಿಶಾಚರಿಗಳು" ಓದುಗರಿಂದ ಮೆಚ್ಚುಗೆ ಪಡೆದ ಕೃತಿಯಾಗಿದೆ.
ಪ್ರಸ್ತುತ ಕಥಾ ಸಂಕಲನದಲ್ಲಿ ಒಟ್ಟು ಒಂಭತ್ತು ಕಥೆಗಳಿವೆ. ಎಲ್ಲಾ ಕಥೆಗಳು ಉತ್ತಮವಾಗಿವೆ

ಮೂರು ಅನುಮಾನ,ಹಳೇಪಾತ್ರೆ ರಾಮ್ಯಾ,ಒರಗು ಕಂಬದಲ್ಲೇ ಉಳಿದ ನಿಟ್ಟುಸಿರು, ಕರುವಲ್ಲು ಇವು ನನ್ನನ್ನು ಕಾಡಿದ  ಕಥೆಗಳು.
ಈ ಕೃತಿಗೆ ಇಜಯ ಖ್ಯಾತಿಯ ಪೂರ್ಣಿಮಾ ಮಾಳಗಿಮನಿ ರವರು ಮುನ್ನುಡಿ ಬರೆದಿದ್ದು ನಾಡೋಜ ಕಮಲಾ ಹಂಪನಾ ಬೆನ್ನುಡಿ ಬರೆದಿದ್ದಾರೆ.

ಡಾ.ಮಾರುತಿ ರವರು ತಮ್ಮ ಕರುವ್ಗಲ್ಲು ಕಥಾ ಸಂಕಲನ ಓದುವಾಗ ಅದೇ ಮಾದರಿಯ  ನನ್ನ ಬಾಲ್ಯದ ಯರಬಳ್ಳಿಯಲ್ಲಿ ಕಂಡ  "ಬಿದ್ ಕಲ್ ರಂಗಪ್ಪ "ನ ನೆನಪಾಯಿತು.
ಈ ಕಥಾ ಸಂಕಲನದ ಪ್ರತಿಯೊಂದು ಕಥೆಯೂ ವಿಭಿನ್ನವಾಗಿ ಮೂಡಿ ಬಂದಿವೆ.
"ದ್ಯಾಮವ್ವನ ಮಗ" ಕಥೆಯನ್ನು ಓದಿದಾಗ ಇತ್ತೀಚಿಗೆ ಪತ್ರಿಕೆಯಲ್ಲಿ ದೇವದಾಸಿ ಪದ್ಧತಿ ಬಗ್ಗೆ ಓದಿದ ನೆನಪಾಯಿತು. ದೇವರ ಹೆಸರಿನಲ್ಲಿ ಶೋಷಣೆ ಮಾಡುವ, ಊರಿನ ಕಾಮುಕರ  ದೌರ್ಜನ್ಯಕ್ಕೊಳಗಾಗಿ, ಮುತ್ತು ಕಟ್ಟಿಸಿಕೊಳ್ಳುವ ಸಂಪ್ರದಾಯಕ್ಕೆ ಬಲಿಯಾಗುವ ದ್ಯಾಮವ್ವನ ನತದೃಷ್ಟ ಮಗನ ಕಥೆಯನ್ನು ಕಥೆಗಾರರು   ಚೆನ್ನಾಗಿ ಚಿತ್ರಿಸಿದ್ದಾರೆ .

ದಾಯಾದಿ ಮತ್ಸರವು  ಅನಾದಿ ಕಾಲದಿಂದಲೂ ಇದ್ದದ್ದೆ, ಅಧಿಕಾರಕ್ಕಾಗಿ, ಆಸ್ತಿಗಾಗಿ ಯಾವ ಮಟ್ಟಕ್ಕೆ ಬೇಕಾದ್ರೂ ಇಳಿಯಬಹುದೆನ್ನುವ ಕಟು ಸತ್ಯದ ಅನಾವರಣವನ್ನು "ಹೊಸ ಶಿಕಾರಿ" ಕಥೆಯಲ್ಲಿ  ಚಿತ್ರಿಸಿದ್ದಾರೆ.

ರೇಲ್ವೆ ಹಳಿಯ ಪಕ್ಕ ಸ್ಲಮ್ ನಲ್ಲಿ ವಾಸಿಸುವ, ತಮಿಳು ನಾಡಿನಿಂದ ವಲಸೆ ಬಂದ ಕಾರ್ಮಿಕರ ಹೃದಯಸ್ಪರ್ಶಿ ಕಥೆಯಾದ "ಚಿನ್ನ ತಂದವರು" ಕಥೆಯಲ್ಲಿ ಬಡ ಕೂಲಿ ಕಾರ್ಮಿಕರ ಜೀವನಕ್ಕೆ ಹೋರಾಟ ಮಾಡುವ ಪರಿ ಪೋಲೀಸ್ ವ್ಯವಸ್ಥೆಯ ಅಣಕ ಮುಂತಾದವುಗಳನ್ನು ಕಣ್ಣಿಗೆ ಕಟ್ಟುವಂತೆ ತೋರಿಸಿದ್ದಾರೆ. ಅಲ್ಲಿಯ ಪಾತ್ರದಾರಿಗಳು ಚಿನ್ನ ತಂದರೆ? ನೀವು ಕಥಾ ಸಂಕಲನ ಓದಿಯೇ ತಿಳಿಯಬೇಕು.

"ಆನಂತ್ಯ"ಕಥೆಯಲ್ಲಿ  ಚರಂಡಿ  ಶುಚಿ ಮಾಡುವ ಕಾರ್ಮಿಕನ ಧಾರುಣ ಕಥೆಯನ್ನು ಕಟ್ಟಿ ಕೊಟ್ಟಿರುವ ಮಾರುತಿ ರವರು  ಸಮಾಜವನ್ನು ಸೂಕ್ಷ್ಮ ವಾಗಿ ಗಮನಿಸಿ ಅವರ ಬದುಕಿನ ಕಷ್ಟಗಳನ್ನು ನಮ್ಮ ಮುಂದೆ ಅನಾವರಣ ಮಾಡಿದ್ದಾರೆ.

''ಮೂರು ಅನುಮಾನ"  ಕಥೆಯ ಬಗ್ಗೆ ಹೇಳುವುದಾದರೆ... ಒಂದು ದೇಹ ಬಿದ್ದಿದೆ. ಅದು ಕೊಲೆಯೋ, ಆಕಸ್ಮಿಕ ಸಾವೋ, ಯಾಕೆ, ಹೇಗೆ, ಎಲ್ಲಿ? ಯಾವಾಗ? ಎಂಬೆಲ್ಲಾ ಪ್ರಶ್ನೆಗಳಿಗೆ ಉತ್ತರ  ಬೇಕಿದ್ದರೆ ನೀವೇ ಆ ಕಥೆಯನ್ನು ಓದಬೇಕಿದೆ. 

"ಹಳೇ ಪಾತ್ರೆ ರಾಮ್ಯ"ಕಥೆಯ ಬಗ್ಗೆ ಹೇಳುವುದಾದರೆ ರಾಮ್ಯ  ಸೈಕಲ್ ಮೇಲೆ ಪಾತ್ರೆಗಳ ಬುಟ್ಟಿಯನ್ನಿಟ್ಟುಕೊಂಡು ಊರೂರು ತಿರುಗುತ್ತ ಜೀವನ ಸಾಗಿಸುವ ನಿರುಪದ್ರವಿ ಅಲೆಮಾರಿ. ರಾಮ್ಯಾ ತನ್ನ ಅಣ್ಣ ಮತ್ತು ಅತ್ತಿಗೆಯರಿಗಾಗಿ ಪಡುವ ಕಷ್ಟ, ಮಾಡುವ ತ್ಯಾಗ, ಒಂಟಿಯಾಗೇ ಇರುತ್ತೇನೆಂದರೂ ಬಿಡದ. ಬಂಧು ಬಳಗದ ಒತ್ತಾಯಕ್ಕೆ ಮಣಿದು ಮದುವೆಯಾಗಿ, ಮಡದಿಯ ಅನೈತಿಕ ಸಂಬಂಧದಿಂದ ಅವನ ಜೀವನ  ಹೇಗೆ ಜೀವನ ಜಟಿಲವಾಗುತ್ತಲೇ ಹೋಗುವುದನ್ನು ಓದುವ ನಮಗೆ ರಾಮ್ಯಾನ ಬಗ್ಗೆ ಅನುಕಂಪ ಹುಟ್ಟದೇ ಇರದು.

"ಒರಗು ಕಂಬದಲ್ಲೇ ಉಳಿದ ನಿಟ್ಟುಸಿರು"  ಕಥೆಯಲ್ಲಿ  ಊರವರ ಚುಡಾಯಿಸುವುದರಿಂದ ನೊಂದು ಕೊಳ್ಳುತ್ತಿದ್ದ ಸೂರಣ್ಣ  ಕ್ರಮೇಣ  ತೃತೀಯ ಲಿಂಗಿಯಾಗಿ  ತೆರೆದುಕೊಳ್ಳುವ ಬಗೆ   ಮತ್ತು ತೃತೀಯ ಲಿಂಗಿಗಳ ತಳಮಳಗಳನ್ನು   ಉತ್ತಮವಾಗಿ ಚಿತ್ರಿಸಿದ್ದಾರೆ.

ಒಟ್ಟಾರೆ ಹೇಳುವುದಾದರೆ ವಿಭಿನ್ನ ಕಥಾ ವಸ್ತುಗಳಿಂದ ಕೂಡಿದ   ಮಾರುತಿ ರವರ ಈ ಕಥಾಸಂಕಲನ ಓದುಗರ ಮನಗೆಲ್ಲುತ್ತಲಿದೆ.ನೀವು ಒಮ್ಮೆ ಈ ಕಥೆಗಳನ್ನು ಓದಿಬಿಡಿ.
ಮಾರುತಿಯವರ ಬರಹ ಪಯಣ ಮುಂದುವರೆಯಲಿ ಅವರಿಂದ ಇನ್ನೂ ಹೆಚ್ಚಿನ ಕೃತಿಗಳು ಹೊರಬರಲಿ ಎಂದು ಹಾರೈಸುವೆ...

ಸಿಹಿಜೀವಿ
ಸಿ ಜಿ ವೆಂಕಟೇಶ್ವರ
ತುಮಕೂರು.

20 January 2023

ಬದುಕು ನಿಂತ ನೀರಲ್ಲ...

 

ಬದುಕು ನಿಂತ ನೀರಲ್ಲ...

ಒಂದು ಕಾಲದಲ್ಲಿ ಎಲ್ಲರ ಕೈಯಲ್ಲೂ
ನೋಕಿಯಾ  ಫೋನ್  ಗಳು  ಪ್ರಪಂಚದ ಬಹುತೇಕ ದೇಶಗಳಲ್ಲಿ ನೋಕಿಯಾ ತನ್ನ ಗ್ರಾಹಕರನ್ನು ಹೊಂದಿ  ಮಾರುಕಟ್ಟೆಯಲ್ಲಿ ಪಾರಮ್ಯ  ಹೊಂದಿತ್ತು...ಈಗ ಆಪಲ್, ಸ್ಯಾಮ್ಸಂಗ್, ರೆಡ್ಮಿ  ,ರಿಯಲ್ ಮಿ ಮುಂತಾದ ಹೊಸ ಕಂಪನಿಗಳ ಅಬ್ಬರದಲಿ ನೋಕಿಯಾ ಕಳೆದು ಹೋಗುವ ಅಪಾಯದಲ್ಲಿದೆ.ಹಾಗಾದರೆ ನೋಕಿಯಾ ಮಾಡಿದ ತಪ್ಪೇನು? ಏನೂ ಇಲ್ಲ ಕಾಲಕ್ಕೆ ತಕ್ಕನಾಗಿ ಬದಲಾವಣೆಗಳಿಗೆ  ಹೊಂದಿಕೊಳ್ಳಲಿಲ್ಲ  ತನ್ನನ್ನು  ತಾನು  ಅಪ್ಡೇಟ್ ಮಾಡಿಕೊಳ್ಳಲಿಲ್ಲ . ತಂತ್ರಜ್ಞಾನದ ಬೆಳವಣಿಗೆಗೆ ತಕ್ಕಂತೆ ಬದಲಾಗಲಿಲ್ಲ ಅಷ್ಟೇ.

ಜೀವನದಲ್ಲಿ ಬದಲಾವಣೆ ಬಹಳ ಮುಖ್ಯ. ಅದರಲ್ಲೂ ಈ ಪ್ರಸ್ತುತ ಪ್ರಪಂಚದಲ್ಲಿ ಸರಾಸರಿ ಹತ್ತು ವರ್ಷಗಳಿಗೊಮ್ಮೆ ವ್ಯಾವಹಾರಿಕ ಪ್ರಪಂಚದ ವಾಸ್ತವ ಬದಲಾಗುತ್ತಿದೆ. ದಶಕದ ಹಿಂದೆ ಊಹೆಗೂ ಸಿಗದಿದ್ದ ನೌಕರಿಗಳು ಇಂದು  ಮಾರುಕಟ್ಟೆಯನ್ನು ಆಕ್ರಮಿಸಿವೆ. ಈವೆಂಟ್ ಮ್ಯಾನೇಜರ್, ಫ್ಲವರ್ ಡೆಕೋರೇಟರ್,  ಡಿಲೆವರಿ ಬಾಯ್, ಯ್ಯೂಟೂಬರ್ ,ಬ್ಲಾಗರ್,  ಇಂತಹ ಹೊಸ ಉದ್ಯೋಗಗಳು ಸುಮಾರು ಮೂವತ್ತು ವರ್ಷಗಳ ಹಿಂದೆ ಕಿವಿಯ ಮೇಲೆ ಬಿದ್ದಿರಲಿಲ್ಲ. ಇವು ಕೆಲ ಉದಾಹರಣೆಗಳು ಮಾತ್ರ. ನಾನು ಈ ಲೇಖನ ಬರೆಯುತ್ತಿರುವಾಗ ಜಗದ ಎಲ್ಲೊ ಒಂದು ಕಡೆ ಹೊಸ ಉದ್ಯಮ, ಉದ್ಯೋಗ ಸೃಜನವಾಗಿರುತ್ತದೆ. ಇಂತಹ ಉದ್ಯೋಗಗಳ  ಅರಿವು ನಮಗಿರಬೇಕು ಅದಕ್ಕೆ ತಕ್ಕ ಶಿಕ್ಷಣ ಕೌಶಲಗಳನ್ನು ಪಡೆಯಲು ನಿರಂತರವಾಗಿ ಪ್ರಯತ್ನ ಮಾಡುತ್ತಲೇ ಇರಬೇಕು. ಹೀಗಾಗಿ ನಮ್ಮ ಅರಿವನ್ನು ಬೆಳೆಯಲು ಬಿಡದಿದ್ದರೆ ಅವಕಾಶವಂಚಿತರಾಗುತ್ತೇವೆ. Update ಆಗದಿದ್ದರೆ outdated ಆಗಿಬಿಡಬಹುದು. ಬಹಳ ಬಾರಿ ನನಗಿಷ್ಟು ಸಾಕು, ನಾನು ಬದಲಾಗುವುದು ಬೇಕಿಲ್ಲ  ಎನಿಸಬಹುದು. ಆದರೆ, ನಾವು ಯಾವುದನ್ನು ಇಂದು ಸಂಪೂರ್ಣವಾಗಿ ಅವಲಂಬಿಸಿದ್ದೇವೋ ಅದು ನಾಳೆ ಇಲ್ಲವಾದರೆ ನಮ್ಮ ಅಸ್ತಿತ್ವಕ್ಕೇ ಸಂಚಕಾರ ಮೂಡಿದಂತಾಗುತ್ತದೆ. ಒಂದು ಕಾಲದಲ್ಲಿ ರಾರಾಜಿಸುತ್ತಿದ್ದ ಟೈಪ್ ರೈಟರ್ ಯಂತ್ರಗಳು ಇಂದು ಸಂಗ್ರಹಾಲಯದ ವಸ್ತುಗಳಾಗಿವೆ.ಗ್ರಾಮಾಪೋನ್,  ಟೇಪ್ ರೆಕಾರ್ಡರ್ , ವಾಲ್ಕ್ಮಾನ್ , ವಿಸಿಪಿ, ವಿ ಸಿ ಆರ್ , ಕ್ಯಾಸೆಟ್ ಗಳು  ಮೂಲೆ ಗುಂಪಾಗಿವೆ. ಮೊಬೈಲ್ ಫೋನುಗಳು ಬಂದ ಮೇಲೆ ಪೇಜರ್ ಅಗತ್ಯ ಇಲ್ಲದೇ ಹೋಗಿದೆ. ಆದ್ದರಿಂದ ನಮ್ಮ ವೃತ್ತಿ ಇಂದು ಎಷ್ಟೇ ಸುರಕ್ಷಿತ ಎನಿಸಿದರೂ ಪರಿಸ್ಥಿತಿ ದಿಢೀರನೆ ಬದಲಾಗಬಹುದು ಇದಕ್ಕೆ ಉತ್ತಮ ಉದಾಹರಣೆ ಎಂದರೆ ಲಕ್ಷಗಳ ಪ್ಯಾಕೇಜ್ ಹೋಂದಿ ಕೆಲಸ ಮಾಡುತ್ತಿದ್ದ ಟೆಕ್ಕಿಗಳನ್ನು ಡೌನ್ ಸೈಜಿಂಗ್, ರಿಸೆಷನ್ ಕಾಸ್ಟ್ ಕಟ್ ಇನ್ನೂ ಏನೇನೊ ಹೆಸರಲ್ಲಿ ಕೆಲಸದಿಂದ ತೆಗೆದು ಸದ್ದಿಲ್ಲದೇ ಮನೆಗೆ ಕಳಿಸುವ ಚಿತ್ರಣ ನಮ್ಮ ಮುಂದಿದೆ. ಇಂತಹ ಸಂದರ್ಭಗಳಲ್ಲಿ  ಸಮಯಕ್ಕೆ ತಕ್ಕಂತೆ ಜ್ಞಾನದ ವಿಸ್ತರಣೆ, ಹೊಸ ಕೌಶಲಗಳ ಕಲಿಕೆ ನಮ್ಮ ನೆರವಿಗೆ ಬಂದೇ ಬರುತ್ತವೆ.  ಅರಿವನ್ನು ವಿಸ್ತರಿಸದೆ ಹೋದರೆ ನಮ್ಮ ಅಸ್ತಿತ್ವವೇ ಉಳಿಯದಿರಬಹುದು. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ನಮ್ಮ ಮಾನಸಿಕ ಆರೋಗ್ಯವನ್ನು ಕಾಪಾಡಿಕೊಳ್ಳಲು ನಾವು ಮರೆಯಬಾರದು .
ವ್ಯಾಯಾಮ, ಧ್ಯಾನ, ಧನಾತ್ಮಕ ಚಿಂತನೆಗಳು, ಹೊಸಬರೊಡನೆ ಬೆರೆಯುವ ಮನಃಸ್ಥಿತಿ, ಹೊಸದನ್ನು ಕಲಿಯುವ ಬಯಕೆ, ಪ್ರವಾಸ, ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಕೊಳ್ಳುವಿಕೆ, ಸೋಮಾರಿತನ ಬಿಟ್ಟು ಯಾವುದೋ ಉತ್ಪಾದಕ ಕೆಲಸದಲ್ಲಿ ತೊಡಗಿಕೊಳ್ಳುವಿಕೆ, ಆರೋಗ್ಯಕರ ಆಹಾರ, ಒಳ್ಳೆಯ ನಿದ್ರೆ, ಸಾಮಾಜಿಕ ಸಂಬಂಧಗಳು, ಮೊದಲಾದವು ನಮ್ಮ ಅರಿವನ್ನು ಬೆಳೆಸುತ್ತವೆ. ನಮ್ಮ ನಿಯಮಿತ ಜೀವನಾವಧಿಯನ್ನು ಉತ್ತಮ ರೀತಿಯಿಂದ ಕಳೆಯಲು ಮನಸ್ಸನ್ನು ಚಿಂತನೆಗಳ ವಿಸ್ತರಣೆಗೆ ಸಜ್ಜುಗೊಳಿಸುವುದು ಒಳ್ಳೆಯ ವಿಧಾನ. ಈ ಪ್ರಕ್ರಿಯೆ ಸದಾ ಜಾರಿಯಲ್ಲಿರಲಿ ಅದಕ್ಕೆ ತಿಳಿದವರು ಹೇಳಿರುವುದು ಬದುಕು ನಿಂತ ನೀರಲ್ಲ.

ಸಿಹಿಜೀವಿ
ಸಿ ಜಿ ವೆಂಕಟೇಶ್ವರ
ತುಮಕೂರು

17 January 2023

R V M ವೋಟಿಂಗ್ ಮೆಷಿನ್ ಏನು ಎತ್ತ....


 



ವೋಟಿಂಗ್ ಹೆಚ್ಚಳಕ್ಕೆ ಆರ್ ವಿ ಎಂ  ಪೂರಕವಾಗಲಿದೆ. 


ಪ್ರಪಂಚದ ಅತಿದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರವಾದ ಭಾರತದ ರಾಜಕೀಯ ವ್ಯವಸ್ಥೆ ಮತ್ತು ಆಡಳಿತವನ್ನು ಕಂಡ ಪ್ರಪಂಚದ ಹಲವಾರು ದೇಶಗಳು ಅಚ್ಚರಿ ಮತ್ತು ಮೆಚ್ಚುಗೆ ವ್ಯಕ್ತಪಡಿಸುತ್ತಿವೆ.140 ಕೋಟಿಗೂ ಅಧಿಕ ಜನಸಂಖ್ಯೆ ಹೊಂದಿರುವ ನಮ್ಮ ದೇಶದಲ್ಲಿ ಅಚ್ಚುಕಟ್ಟಾಗಿ ಚುನಾವಣೆ ನಡೆಸುವುದೇ ಒಂದು ಸವಾಲು. ಆ ಸವಾಲು ಮೆಟ್ಟಿ ಚುನಾವಣೆ ನಡೆಸುತ್ತಾ ಬಂದಿರುವ ಭಾರತದ ಚುನಾವಣಾ ಆಯೋಗಕ್ಕೆ ಅಭಿನಂದಿದಲೇಬೇಕು .ಇಷ್ಟೆಲ್ಲಾ ಸಂತಸದ ಸುದ್ದಿಯ ನಡುವೆ ಬೇಸರದ ಸಂಗತಿಯೆಂದರೆ ಇದುವರೆಗಿನ ಸಾರ್ವತ್ರಿಕ ಚುನಾವಣೆಯಲ್ಲಿ ಶೇಕಡಾ ನೂರು ಇರಲಿ ಶೇಕಡಾ ತೊಂಬತ್ತು ಮತದಾನ ಆಗಿಲ್ಲ! 

ಕಳೆದ ಲೋಕಸಭಾ ಚುನಾವಣೆಯಲ್ಲಿ ಅಂದರೆ 2019 ರಲ್ಲಿ ನಡೆದ ಚುನಾವಣೆಯಲ್ಲಿ  ಚುನಾವಣಾ ಆಯೋಗ ,ಸ್ವೀಪ್ ಮತ್ತು ಶಾಲಾಕಾಲೇಜುಗಳ  ಇ ಎಲ್ ಸಿ ಕ್ಲಬ್ ಗಳ ಮತದಾನದ ಜಾಗೃತಿಯ ಪರಿಣಾಮವಾಗಿ ಕಳೆದ ಲೋಕಸಭಾ ಚುನಾವಣೆಗೆ ಹೋಲಿಸಿದರೆ ಕೊಂಚ ಹೆಚ್ಚು ಎನ್ನುವಷ್ಟು 

 67.4 % ಮತದಾನ ಆಗಿದೆ . ನೊಂದಾಯಿತ 

30 ಕೋಟಿ ಜನ ತಮ್ಮ ಮತದಾನದ  ಹಕ್ಕು ಚಲಾಯಿಸಿಲ್ಲ ಎಂಬುದು ನಮ್ಮ ಜನರು ಮತದಾನದ ಬಗ್ಗೆ ಇರುವ ನಿರಾಸಕ್ತಿ ಎಷ್ಟಿದೆ ಎಂಬುದು ತಿಳಿಯುತ್ತದೆ.


ಮತದಾನ ಕಡಿಮೆಯಾಗಲು ಜನರ ನಿರಾಸಕ್ತಿ, ರಾಜಕಾರಣಿಗಳ ಬಗ್ಗೆ ಅನಾದರ ಮುಂತಾದ ಅಂಶಗಳು ಕಾರಣವಾದರೂ ವಲಸೆ  ಮತದಾನ ಕಡಿಮೆಯಾಗಲು ಅತಿ ದೊಡ್ಡ ಕಾರಣ ಎಂಬ ಸತ್ಯ ಅರಿತ ಚುನಾವಣಾ ಆಯೋಗ ಒಂದು ಹೊಸ ಪ್ರಯೋಗಕ್ಕೆ ಕೈ ಹಾಕಿದೆ. ಅದೇ  

ವಲಸಿಗರ   ವಾಸಸ್ಥಳದಿಂದಲೇ ಮತದಾನ ಅವಕಾಶ ನೀಡುವ  ಆರ್ ವಿ ಎಂ ಅಂದರೆ ರಿಮೋಟ್ ಎಲೆಕ್ಟ್ರಾನಿಕ್ ವೋಟಿಂಗ್ ಮೆಷಿನ್ 


ವಲಸಿಗ ಮತದಾರರು ತಾವಿರುವ ಸ್ಥಳದಿಂದಲೇ ಮತದಾನ ಮಾಡಲು ಅನುವಾಗುವಂತೆ ದೂರನಿಯಂತ್ರಿತ. ವಿದ್ಯುನ್ಮಾನ ಮತಯಂತ್ರದ ಮಾದರಿಯನ್ನು ಕೇಂದ್ರ ಚುನಾವಣಾ

ಆಯೋಗವು ಅಭಿವೃದ್ಧಿಪಡಿಸಿದೆ.

ಎಲೆಕ್ಟ್ರಾನಿಕ್ ವೋಟಿಂಗ್ ಮಷೀನ್ (ಆರ್ವಿಎಂ) ಕಾರ್ಯಶೈಲಿಯ ಬಗ್ಗೆ ಆಯೋಗವು ರಾಜಕೀಯ ಪಕ್ಷಗಳಿಗೆ ಜ.16ರಂದು ಪ್ರಾತ್ಯಕ್ಷಿಕೆ ನೀಡಲು ಉದ್ದೇಶಿಸಿತ್ತು .ಆದರೆ ಅದು ನೆರವೇರಲಿಲ್ಲ. ಈ  ಸೌಲಭ್ಯ ಜಾರಿಗೆ ಬಂದರೆ, ವಲಸಿಗರು

ತಾವು ವಾಸವಿರುವ ಸ್ಥಳದಿಂದಲೇ ಮತದಾನ ಮಾಡಬಹುದು. ಮತದಾನ ಮಾಡಲೆಂದೇ ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರಿರುವ  ಸ್ಥಳಕ್ಕೆ  ಪ್ರಯಾಣಿಸುವ ಅಗತ್ಯ ಬರುವುದಿಲ್ಲ.     


ಪ್ರಾತ್ಯಕ್ಷಿಕೆ ಹಾಗೂ ಆರ್ವಿಎಂ ನ  ಕಾರ್ಯಶೈಲಿ ವಿವರಿಸಲು  "ಮಾನ್ಯತೆ  ಪಡೆದ ಎಂಟು ರಾಷ್ಟ್ರೀಯ ಮತ್ತು  57 ಪ್ರಾದೇಶಿಕ ಪಕ್ಷಗಳಿಗೆ ಆಯೋಗ   ಅಹ್ವಾನ ಕಳುಹಿಸಿ ಆಯೋಗದ ಪರಿಣತರು ಮತ್ತು ಸದಸ್ಯರು ಸಭೆಯಲ್ಲಿ ಭಾಗವಹಿಸಿ  ಇವಿಎಂಗಳ  ದೂರನಿಯಂತ್ರಿತ  ನಿರ್ವಹಣೆ ಸಾಧ್ಯವಿದೆ ಎಂದು ಪ್ರಾತ್ಯಕ್ಷಿಕೆಯನ್ನು ನೀಡಬೇಕಿತ್ತು ಅದು ಈಗ ಮುಂದಕ್ಕೆ ಹೋಗಿದೆ. 


ಮತದಾನದಲ್ಲಿ ಸಕ್ರಿಯವಾಗಿ ಭಾಗವಹಿಸಲು  ತಾಂತ್ರಿಕ ಸಹಾಯ ಒದಗಿಸುವುದು ಈ ಉಪಕ್ರಮದ ಪ್ರಮುಖ ಉದ್ದೇಶ. ಒಂದು   ಆರ್ಪಿಎಂ. ಮತಗಟ್ಟೆಯಿಂದ ಒಟ್ಟು 72 ಕ್ಷೇತ್ರಗಳ ಅಭ್ಯರ್ಥಿಗಳನ್ನು ಆಯ್ಕೆ ಮಾಡುವ ಅವಕಾಶ   ಇರಲಿದೆ. ಇಲ್ಲಿ ಯಾವುದೇ  ಲೋಪಕ್ಕೆ ಅವಕಾಶ ಇರುವುದಿಲ್ಲ, ಇಂಟರ್ನೆಟ್ ಸಂಪರ್ಕ ಕಲ್ಪಿಸಲಾಗುವುದಿಲ್ಲ  ಎಂದು ಆಯೋಗ ಹೇಳಿದೆ. 



ಅಲ್ಲದೆ ವಲಸಿಗರಿಗೆ ಮತದಾನಕ್ಕೆ ಅವಕಾಶ ಕಲ್ಪಿಸುವ ಕ್ರಮ, ಪ್ರಕ್ರಿಯೆಯ ಅನುಷ್ಠಾನ ಕ್ರಮ, ಪೂರಕವಾಗಿ ಆಡಳಿತಾತ್ಮಕವಾಗಿ ಆಗಬೇಕಿರುವ ಬದಲಾವಣೆ, ಪ್ರತ್ಯೇಕ ಕಾಯ್ದೆಯ ಅಗತ್ಯ ಕುರಿತಂತೆ ಅಭಿಪ್ರಾಯ ತಿಳಿಸುವಂತೆಯೂ ಪಕ್ಷಗಳಿಗೆ ಕೋರಲಾಗಿದೆ. 


ಸಮರ್ಪಕ ಸಾರಿಗೆ ವ್ಯವಸ್ಥೆಯ ಕೊರತೆಯಿಂದ ಕುಗ್ರಾಮಗಳ ಮತಗಟ್ಟೆಗಳಿಗೆ ಮತಯಂತ್ರ ಸಾಗಣೆ, ಸಿಬ್ಬಂದಿ ಪ್ರಯಾಣ ಕಷ್ಟವಾಗಿದೆ ಮತ್ತು ಮತ  ಎಣಿಕ ಕೂಡಾ ತಾಂತ್ರಿಕವಾಗಿ ಸವಾಲಿನದ್ದಾಗಿದೆ

ಮದುವೆ,ಶಿಕ್ಷಣ, ಉದ್ಯೋಗ ಮುಂತಾದ ಕಾರಣದಿಂದಾಗಿ 85% ಜನರು ಮತದಾನದಿಂದ ವಂಚಿತರಾಗುತ್ತಿದ್ದಾರೆ  ಅಂತಹವರಿಗೆ ಆರ್ ಪಿ ಎಮ್ ವರದಾನವಾಗಲಿದೆ.

ಎಂದು ಆಯೋಗದ ಅಧಿಕಾರಿಗಳು ಆಶಾಭಾವನೆ ವ್ಯಕ್ತಪಡಿಸುತ್ತಾರೆ.

ಈ ಪ್ರಯೋಗಗಳನ್ನು ರಾಜಕೀಯ ಪಕ್ಷಗಳು ಒಪ್ಪಿದರೆ 2023 ರಲ್ಲಿ ನಡೆಯುವ ಒಂಭತ್ತು ರಾಜ್ಯಗಳ ವಿಧಾನಸಭಾ ಚುನಾವಣೆಯಲ್ಲಿ  ಜಾರಿಗೆ ತರಲಾಗುತ್ತದೆ. ಇದರ ಸಾಧಕ ಬಾಧಕ ಪರಿಗಣಿಸಿ  

2024  ರ ಲೋಕಸಭೆ ಚುನಾವಣೆಯಲ್ಲಿ ಈ ಆರ್ ಪಿ ಎಂ ಅಳವಡಿಸಿಕೊಳ್ಳುವ ಸಾಧ್ಯತೆ ಇದೆ.


ಈ ಆರ್ ಪಿ ಎಂ ಹೇಗೆ ಕೆಲಸ ಮಾಡಲಿದೆ ಎಂಬುದನ್ನು ನೋಡುವುದಾದರೆ ವಲಸೆ ಹೋದ ವ್ಯಕ್ತಿ 

ಮೊದಲು ತಮ್ಮ ಮತವಿರುವ  ಮೂಲ  ಕ್ಷೇತ್ರದ ಚುನಾವಣಾ ಅಧಿಕಾರಿಗಳಿಗೆ ಮಾಹಿತಿಯನ್ನು ನೀಡಿ ದೂರದ ಸ್ಥಳದಲ್ಲಿ ಮತದಾನ ಮಾಡಲು ಅನುಮತಿ ಕೋರಬೇಕು.ನಂತರ ವಲಸೆ ಜನಗಳಿಗೆ ಮೀಸಲಾದ ಮತಗಟ್ಟೆಯಲ್ಲಿ ಮತದಾನದ ಇತರ ಎಲ್ಲಾ ಕಾರ್ಯಚಟುವಟಿಕೆಗಳನ್ನು ಅನುಸರಿಸಿ ಮತದಾನಕ್ಕೆ ಅವಕಾಶವನ್ನು ನೀಡಲಾಗುತ್ತದೆ 



ಮಾಹಿತಿ ಹಾಗೂ ಪ್ರಾತ್ಯಕ್ಷಿಕೆಗೆ    ವಿರೋಧ ವ್ಯಕ್ತಪಡಿಸಿರುವ ವಿಪಕ್ಷಗಳು ರಿಮೋಟ್ ವೋಟಿಂಗ್ ಮಷೀನ್ ನ  ಅಗತ್ಯವೇನಿದೆ ಎಂದು ಕೇಳಿರುವುದಲ್ಲದೇ ಚುನಾವಣ ಆಯೋಗಕ್ಕೆ ಪ್ರಶ್ನೆಗಳ ಸುರಿಮಳೆಯನ್ನೇ ಸುರಿಸಿವೆ.

ಇದೇ ವೇಳೆ ಮೊಟ್ಟಮೊದಲಿಗೆ ಆರ್ವಿಎಂ ಪರಿಕಲ್ಪನೆಯೇ ಸ್ವೀಕಾರಾರ್ಹವಲ್ಲ. ಇದನ್ನು ಪರಿಚಯಿಸುವ ಮೊದಲು ಚುನಾವಣಾ ಆಯೋಗವು ದೇಶದ ಹಲವು ಪಕ್ಷಗಳು ಇವಿಎಂ ಕುರಿತು ಎತ್ತಿರುವ ಕಳವಳಗಳಿಗೆ ಉತ್ತರಿಸಬೇಕು. ನಗರ ಪ್ರದೇಶದ ಮತದಾರರು ಏಕೆ ಹಕ್ಕು ಚಲಾವಣೆಯಲ್ಲಿ ಹಿಂದಿದ್ದಾರೆ ಎಂಬುದನ್ನು ಅರಿತು, ಅದನ್ನು ಸರಿಪಡಿಸುವ ಕೆಲಸ ಮಾಡಬೇಕು ಎಂದೂ ವಿಪಕ್ಷಗಳು ಸಲಹೆ ನೀಡಿವೆ. 

 ಈ ವಿಚಾರದ ಬಗ್ಗೆ ಚರ್ಚೆ ಮಾಡಲು ಇನ್ನಷ್ಟು ಕಾಲಾವಕಾಶ ನೀಡುವಂತೆ ವಿಪಕ್ಷಗಳು ಆಗ್ರಹಿಸಿದ ಕಾರಣ ಆರ್ವಿಎಂ ಯಂತ್ರಗಳ ಪ್ರಾತ್ಯಕ್ಷಿಕೆಯನ್ನು ಚುನಾವಣ ಆಯೋಗ ಮುಂದೂಡಿತು. ಅಲ್ಲದೇ ರಿಮೋಟ್ ವೋಟಿಂಗ್ ಮಷೀನ್ ಬಳಕೆ ಕುರಿತು ಪ್ರತಿಕ್ರಿಯೆ ಸಲ್ಲಿಸಲು ನೀಡಲಾಗಿದ್ದ ಗಡುವನ್ನೂ ಫೆ.28ರ ವರೆಗೆ ವಿಸ್ತರಣೆ ಮಾಡಿತು. ಈ ಹಿಂದೆ ಜ.31ರೊಳಗಾಗಿ ಪ್ರತಿಕ್ರಿಯೆ ನೀಡುವಂತೆ ಸೂಚಿಸಲಾಗಿತ್ತು.


ವಿಪಕ್ಷಗಳು ಕೇಳಿರುವ ಕೆಲ ಪ್ರಶ್ನೆಗಳು ಈ ಹೀಗಿವೆ 

ವಲಸೆ ಕಾರ್ಮಿಕನು ಬೇರೆ ರಾಜ್ಯದಲ್ಲೂ ನೋಂದಣಿ ಮಾಡಿಕೊಂಡು, ತನ್ನ ಊರಲ್ಲೂ ನೋಂದಣಿ ಮಾಡಿಕೊಂಡಿದ್ದರೆಆಗ ಡುಪ್ಲಿಕೇಟ್ ತಡೆಯಲು ಏನು ಮಾಡುತ್ತೀರಿ?

ದೂರದೂರಲ್ಲಿ ಮತಗಟ್ಟೆ ಸ್ಥಾಪಿಸಲು ನಿಗದಿತ ಸ್ಥಳವನ್ನು ಹೇಗೆ ನಿರ್ಧರಿಸುತ್ತೀರಿ?

ಕ್ಷೇತ್ರದಾಚೆಗೆ ದೂರದೂರಲ್ಲಿ ನಡೆಯುವ ಮತದಾನ ಪ್ರಕ್ರಿಯೆಯನ್ನು ಪೋಲಿಂಗ್ ಏಜೆಂಟ್ ನಿಗಾ ವಹಿಸುವುದು ಹೇಗೆ?

ವಿವಿಪ್ಯಾಟ್ ಸ್ಲಿಪ್ಗಳ ಸಾಗಾಟ ಹಾಗೂ ದಾಸ್ತಾನು ಎಲ್ಲಿ, ಹೇಗೆ ಮಾಡುತ್ತೀರಿ?

ದೂರದೂರಲ್ಲಿ ಚಲಾವಣೆಯಾದ ಮತಗಳನ್ನು ಪ್ರತ್ಯೇಕವಾಗಿ ಎಣಿಸುತ್ತೀರಾ ಅಥವಾ ಕ್ಷೇತ್ರದ ಮತಗಳೊಂದಿಗೆ ಮಿಶ್ರ ಮಾಡುತ್ತೀರಾ? 

ಅರ್ಹ ವಲಸೆ ಕಾರ್ಮಿಕರು ಬೇರೆ ಬೇರೆ ರಾಜ್ಯಗಳಲ್ಲಿರುವಾಗ ನಾವು(ಪಕ್ಷಗಳು) ಚುನಾವಣಾ ಪ್ರಚಾರ ಮಾಡುವುದು ಹೇಗೆ?


ಪ್ರತಿಪಕ್ಷಗಳು ಎತ್ತಿರುವ ಈ ಎಲ್ಲಾ ಪ್ರಶ್ನೆಗಳಿಗೆ ಆಯೋಗವು ಸೂಕ್ತವಾದ ಉತ್ತರ ನೀಡಿ ಆರ್ ವಿ ಎಂ ಬಗ್ಗೆ ಇರುವ ಸಂದೇಹಗಳನ್ನು ದೂರ ಮಾಡಬೇಕಿದೆ. ಹೊಸ ತಂತ್ರಜ್ಞಾನ ಮತ್ತು ಉಪಕ್ರಮಗಳನ್ನು ಪರಿಚಯಿಸುವಾಗ ಆರಂಭದಲ್ಲಿ ಕೆಲ ತೊಡಕು ಸಂದೇಹಗಳು ಸಹಜ ಅವುಗಳನ್ನು ಪರಿಹರಿಸಿಕೊಂಡು ಮುಂದೆ ಸಾಗಿದರೆ ಆರ್ ವಿ ಎಂ ಮುಂದೊಂದು ದಿನ ಶೇಕಡಾ ನೂರು ಮತದಾನ ನಡೆದು ಪ್ರಜಾಪ್ರಭುತ್ವವನ್ನು ಬಲಪಡಿಸುವ ಉಪಕ್ರಮ ಆಗಬಹುದು ಎಂಬ ಆಶಾವಾದ ಹೊಂದೋಣ. 


ಸಿಹಿಜೀವಿ

ಸಿ ಜಿ ವೆಂಕಟೇಶ್ವರ

ಶಿಕ್ಷಕರು 

ಸರ್ಕಾರಿ ಪ್ರೌಢಶಾಲೆ ಕ್ಯಾತ್ಸಂದ್ರ

ತುಮಕೂರು.





*ಇಂದಿನ ವಿಶ್ವವಾಣಿ ಪತ್ರಿಕೆಯಲ್ಲಿ ಪ್ರಕಟವಾದ ನನ್ನ ಲೇಖನ೧೭/೧/೨೩*


 

13 January 2023

ಸಣ್ ಪಿನ್ ಚಾರ್ಜರ್ ಮಾಯವಾಗಲಿದೆ....

 


ಮಾಯವಾಗಲಿದೆ ಗುಂಡ್ ಪಿನ್ ಚಾರ್ಜರ್... 

ನಿಮ್ ಮನೇಲಿ ಗುಂಡ್ ಪಿನ್  ಚಾರ್ಜರ್ ಇದ್ಯಾ? ನಿಮ್ ಮನೇಲಿ ದೆಬ್ಬೇ ಚಾರ್ಜರ್ ಇದ್ಯಾ? ಇವು ಸಾಮಾನ್ಯವಾಗಿ  ನಾವು ಬೇರೆ ಊರುಗಳಿಗೆ ಹೋದಾಗ ,ಪ್ರವಾಸ ಮಾಡುವಾಗ ಚಾರ್ಜರ್ ಖಾಲಿಯಾಗಿ ಪವರ್ ಬ್ಯಾಂಕ್ ಕೂಡಾ ದಮ್ ಕಳೆದುಕೊಂಡಾಗ  ಮೊಬೈಲ್  ಚಾರ್ಜರ್ ಮರೆತು ಬಂದಾಗ ನಮ್ಮ ಬಾಯಿಂದ ಬರುವ ಅಮ್ಮಾ ..ತಾಯಿ..ನುಡಿಗಳು . ಬಹುತೇಕ ನಾವೆಲ್ಲರೂ ಒಂದಲ್ಲ ಒಂದು ಬಾರಿ ಇಂತಹ ಮುಜುಗರದ ಘಟನೆಗಳಿಗೆ ಸಾಕ್ಷಿಯಾಗಿರುತ್ತೇವೆ.
ಇಂತಹ ಸಮಸ್ಯೆಗಳನ್ನು ಗಮನದಲ್ಲಿಟ್ಟುಕೊಂಡು ಭಾರತೀಯ ಮಾನಕ ಸಂಸ್ಥೆ
(ಬಿಐಎಸ್ ) ಎಲ್ಲ ಉಪಕರಣಗಳಿಗೆ ಟೈಪ್-ಸಿ ಚಾರ್ಜರ್ ಅಳವಡಿಕೆ ಮಾಡಲು ಶಿಪಾರಸು ಮಾಡಿದೆ.
ಹಾಗೂ  ಮೂರು ರೀತಿಯ ಎಲೆಕ್ಟ್ರಾನಿಕ್ ಉಪಕರಣಗಳಿಗೆ ಗುಣಮಟ್ಟ ಮಾನದಂಡಗಳನ್ನು ನಿಗದಿಪಡಿಸಿದೆ. ಡಿಜಿಟಲ್ ಟಿ.ವಿ ರಿಸೀವರ್ಗಳು, ಟೈಪ್-ಸಿ ಯುಎಸ್ಬಿ ಕೇಬಲ್ ಹಾಗೂ ವಿಡಿಯೊ ಕಣ್ಣಾವಲು ವ್ಯವಸ್ಥೆಗಳಿಗೆ (ಬಿ ಐಎಸ್) ಮಾನದಂಡಗಳನ್ನು ಗೊತ್ತುಪಡಿಸಿದೆ.

ಲ್ಯಾಪ್ಟಾಪ್, ಮೊಬೈಲ್ ಸೇರಿದಂತೆ ಎಲ್ಲ ರೀತಿಯ ಎಲೆಕ್ಟ್ರಾನಿಕ್ ಉಪಕರಣಗಳಲ್ಲೂ ಏಕರೂಪ ಬಳಕೆಗೆ ಹೊಂದುವ ರೀತಿಯಲ್ಲಿ ಟೈಪ್- ಸಿ ವಿಧದ ಪೋರ್ಟ್, ಪ್ಲಗ್, ಕೇಬಲ್ಗಳನ್ನು ತಯಾರಿಸಬೇಕು. ಎಂಬ ಮಾನದಂಡ ರೂಪಿಸಲಾಗಿದೆ. ದೇಶದಲ್ಲಿ ಮಾರಾಟವಾಗುವ ಎಲ್ಲ ರೀತಿಯ ಸ್ಮಾರ್ಟ್ಫೋನ್ಗಳು ಹಾಗೂ ಇತರೆ ಎಲೆಕ್ಟ್ರಾನಿಕ್ ಉಪಕರಣಗಳಿಗೆ ಏಕರೂಪದ ಚಾರ್ಜಿಂಗ್ ಸವಲತ್ತು ಒದಗಿಸುವುದಕ್ಕಾಗಿ ಈ ಮಾನದಂಡ ಗೊತ್ತುಪಡಿಸಲಾಗಿದೆ.

ಈ ಮಾನದಂಡದಿಂದಾಗಿ, ಪ್ರತಿಯೊಬ್ಬ ಗ್ರಾಹಕರಿಗೂ ಪ್ರತ್ಯೇಕ ಚಾರ್ಜರ್ ಅನ್ನು ಒದಗಿಸುವ ಅಗತ್ಯ ಇರುವುದಿಲ್ಲ. ಪ್ರತಿ ಬಾರಿ ಉಪಕರಣ ಖರೀದಿಸಿದಾಗ ಗ್ರಾಹಕರು ತಮ್ಮ ಮೊಬೈಲ್ಗೆ ಹೊಂದಿಕೆಯಾಗಬಲ್ಲ ಪ್ರತ್ಯೇಕ ಚಾರ್ಜರ್ ಅನ್ನು ಖರೀದಿಸುವ ಅಗತ್ಯವಿರುವುದಿಲ್ಲ. ಈ ಕ್ರಮದಿಂದ ಇ ತ್ಯಾಜ್ಯ ಉತ್ಪಾದನೆಯೂ ತಗ್ಗಲಿದ್ದು, ಚಾರ್ಜರ್ ಖರೀದಿಗೆ ಮಾಡುವ ವೆಚ್ಚವೂ ಉಳಿತಾಯವಾಗಲಿದೆ. ಹಲವು ದೇಶಗಳು ಈ ಮಾನದಂಡವನ್ನು ಅನುಸರಿಸುವತ್ತ ಈಗಾಗಲೇ ಹೆಜ್ಜೆ ಇರಿಸಿವೆ.

ಇತ್ತೀಚಿನ ದಿನಗಳಲ್ಲಿ ವಿಡಿಯೊ ನಿಗಾ ವ್ಯವಸ್ಥೆಗೆ ಹೆಚ್ಚಿನ ಬೇಡಿಕೆಯಿದ್ದು, ಗ್ರಾಹಕರಿಗೆ ಯಾವ ರೀತಿಯ ಉಪಕರಣಗಳನ್ನು ಖರೀದಿಸುವುದು ಸೂಕ್ತ ಎಂಬ ಗೊಂದಲವಿದೆ. ಇದನ್ನು ನಿವಾರಣೆ ಮಾಡುವುದಕ್ಕಾಗಿ ಮಾನಕ ಸಂಸ್ಥೆಯು ವಿಡಿಯೊ ನಿಗಾ ವ್ಯವಸ್ಥೆಗೆ ಮಾನದಂಡ ರೂಪಿಸಿದೆ. ಕ್ಯಾಮರಾ, ಇಂಟರ್ಫೇಸ್, ಇನ್ಸ್ಟಾಲೇಷನ್ ಮೊದಲಾದವುಗಳಿಗೆ ನಿಯಮಗಳನ್ನು ಗೊತ್ತುಪಡಿಸಿದೆ. ಭದ್ರತಾ ವ್ಯವಸ್ಥೆಯನ್ನು ಹೆಚ್ಚು ನಿಖರವಾಗಿ ಹಾಗೂ ಕಡಿಮೆ ವೆಚ್ಚದಲ್ಲಿ ಪಡೆಯಲು ಈ ಮಾನದಂಡಗಳು ನೆರವಾಗುತ್ತವೆ.
ಇದರ ಜೊತೆಯಲ್ಲಿ ಬಿ ಐ ಎಸ್ ಮತ್ತೊಂದು ಸಲಹೆ ನೀಡಿದೆ  

ಸೆಟ್ ಟಾಪ್ ಬಾಕ್ಸ್ ಇಲ್ಲದೆ ಪ್ರೀ ಟು ಏರ್ ಟಿ ವಿ ಚಾನೆಲ್ ನೋಡಲು ಅನುವಾಗುವಂತೆ ಎಲ್ಲಾ ಟಿ ವಿ ಗಳಲ್ಲಿ ಇನ್ ಬಿಲ್ಟ್ ರಿಸೀವರ್ ಅಳವಡಿಸಲು ತಿಳಿಸಿದೆ ಇದು ಸಹ ಮುಂದಿನ ದಿನಗಳಲ್ಲಿ ಕ್ರಾಂತಿಕಾರಿ ಬೆಳವಣಿಗೆಯಾಗಿ ಪರಿಣಮಿಸಲಿದೆ.
ಪ್ರಸ್ತುತ ಸನ್ನಿವೇಶದಲ್ಲಿ
ಜನರು ಶುಲ್ಕ ಸಹಿತ ಹಾಗೂ ಉಚಿತ ಟಿ.ವಿ ವಾಹಿನಿಗಳನ್ನು ವೀಕ್ಷಿಸಬೇಕಾದರೆ, ಸೆಟ್ಟಾಪ್ ಬಾಕ್ಸ್ಗಳನ್ನು ಖರೀದಿಸಬೇಕಿದೆ. ದೂರದರ್ಶನದ ಉಚಿತ ಚಾನಲ್ಗಳನ್ನು ವೀಕ್ಷಿಸಬೇಕಿದ್ದರೂ, ಸೆಟ್ ಟಾಪ್ ಬಾಕ್ಸ್ ಖರೀದಿಸಲೇಬೇಕಿದೆ. ಆದರೆ  ಉಚಿತ ಚಾನಲ್ಗಳನ್ನು ಸೆಟ್ ಟಾಪ್ ಬಾಕ್ಸ್ ಇಲ್ಲದೆಯೇ ವೀಕ್ಷಿಸುವುದು ಇನ್ನುಮುಂದೆ ಸಾಧ್ಯವಾಗಲಿದೆ.

ಸ್ಯಾಟಲೈಟ್ ಟ್ಯೂನರ್ಗಳನ್ನು ಅಳವಡಿಸಿದ ರಿಸೀವರ್ಗಳನ್ನು ಟಿ ವಿ  ತಯಾರಿಸುವಾಗಲೇ ಅಳವಡಿಸಲಾಗುತ್ತದೆ. ತಂತ್ರಜ್ಞಾನದ ಈ ಸೌಲಭ್ಯದಿಂದ ಸರ್ಕಾರದ ಹಲವು ಕಾರ್ಯಕ್ರಮಗಳು, ಶೈಕ್ಷಣಿಕ ಮಾಹಿತಿ ವೀಕ್ಷಕರಿಗೆ ಸುಲಭವಾಗಿ ಸಿಗಲಿವೆ.
ಇದು ಹೆಚ್ಚಾಗುತ್ತಿರುವ ಈ ವೇಸ್ಟ್ (e waste) ತಡೆಗಟ್ಟಲು ದಾರಿಯಾಗಲಿದೆ. ಪರಿಸರ ಕಾಳಜಿಹೊಂದಿದ ಮತ್ತು ಗ್ರಾಹಕ ಸ್ನೇಹಿಯಾದ ಇಂತಹ ಸಣ್ಣ ಸಣ್ಣ ನಡೆಗಳು ಪರಿಸರ ಉಳಿಸಿ ಬೆಳೆಸುವಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತವೆ. ನಮ್ಮ ಸರ್ಕಾರಗಳು ಇಂತಹ ಕ್ರಮಗಳನ್ನು ಹೆಚ್ಚಾಗಿ  ಜಾರಿಗೆ ತರಬೇಕು ಇಂತಹ ಉಪಕ್ರಮಗಳಿಗೆ ಜನರು ಸಹ ಬೆಂಬಲ ನೀಡಬೇಕಿದೆ ತನ್ಮೂಲಕ ಸುಸ್ಥಿರ ಅಭಿವೃದ್ಧಿಗೆ ಕೈಜೋಡಿಸಬೇಕಿದೆ.

ಸಿ ಜಿ ವೆಂಕಟೇಶ್ವರ
ಶಿಕ್ಷಕರು
ಸರ್ಕಾರಿ ಪ್ರೌಢಶಾಲೆ
ಕ್ಯಾತ್ಸಂದ್ರ
ತುಮಕೂರು

12 January 2023

ಸ್ವಾಮಿ ವಿವೇಕಾನಂದ...


 


  *ಸ್ವಾಮಿ ವಿವೇಕಾನಂದ*


ಸ್ವಾಮಿ ವಿವೇಕಾನಂದರ ಜನ್ಮದಿನದ ನೆನಪಿಗಾಗಿ  ಪ್ರತಿವರ್ಷ ಜನವರಿ 12 ರಂದು   ರಾಷ್ಟ್ರೀಯ ಯವದಿನ  ಆಚರಿಸಲಾಗುತ್ತದೆ. ಪ್ರಪಂಚ ಕಂಡ  ಮಹಾನ್ ಚಿಂತಕ, ಶ್ರೇಷ್ಠ ವಾಗ್ಮಿ  ಹಾಗೂ ಮಹಾನ್ ದೇಶಭಕ್ತರಾಗಿದ್ದ ವಿವೇಕಾನಂದರ ಸಂದೇಶಗಳು   ಇಂದಿಗೂ ಪ್ರಸ್ತುತವಾಗಿವೆ. 


“ಬ್ರದರ್ಸ್  ಅಂಡ್ ಸಿಸ್ಟರ್ಸ್ ಆಪ್ ಅಮೆರಿಕಾ"   ಎಂದು ಹೇಳುತ್ತಾ ವಿದೇಶಿಯರ ಮನ ಗೆದ್ದು  ಚಪ್ಪಾಳೆ ಗಿಟ್ಟಿಸಿಕೊಂಡ ಅವರು ವೇದಾಂತದ ತತ್ವಗಳು, ಅವುಗಳ ಅಧ್ಯಾತ್ಮಿಕ  ಮಹತ್ವ ಇತ್ಯಾದಿಗಳನ್ನು  ವಿಶ್ವ ಧರ್ಮ ಸಮ್ಮೇಳನದಲ್ಲಿ  ಜಗತ್ತಿಗೆ ಪರಿಚಯಿಸಿದ ರೀತಿ ಅಮೋಘ.


ಭಾರತ ಮೂಢರ ದೇಶ,ಜ್ಞಾನ ಹೀನರ ದೇಶವೆಂಬ ಪಾಶ್ಚಿಮಾತ್ಯರ ತಪ್ಪು ಕಲ್ಪನೆಗಳನ್ನು ದೂರ ಮಾಡಿದ ವೀರ ಸನ್ಯಾಸಿ ಈ ಸಮ್ಮೇಳನದಲ್ಲಿ ನಮ್ಮ ದೇಶದ ಶಕ್ತಿ, ಸಂಸ್ಕಾರ, ಪರಂಪರೆಯ ಬಗ್ಗೆ ಎಳೆ ಎಳೆಯಾಗಿ ಬಿಡಿಸಿ ಹೇಳಿ ನಮ್ಮ ದೇಶದ ಬಗ್ಗೆ ವಿದೇಶಿಯರ ಮನೋಭಾವವನ್ನು ಬದಲಾಗುವಂತೆ ಮಾಡಿದ ಧೀಮಂತ ನಮ್ಮ ವಿವೇಕಾನಂದ ರವರು. 


ಸ್ವಾಮಿ ವಿವೇಕಾನಂದರ ಬಾಲ್ಯದ ಹೆಸರು ನರೇಂದ್ರ  ಅವರು 12 ಜನವರಿ 1863  ರಂದು ಕೊಲ್ಕತ್ತಾದ  ಶ್ರೀಮಂತ ಕುಟುಂಬದಲ್ಲಿ ಜನಿಸಿದರು. ಅವರ ತಂದೆ ವಿಶ್ವನಾಥ ದತ್ತ  ಅವರು ಆ ಕಾಲದ ಪ್ರಸಿದ್ಧ  ವಕೀಲರಾಗಿದ್ದರು  ತಾಯಿ  ಭುವನೇಶ್ವರಿ ದೇವಿ ಬಾಲ್ಯದಲ್ಲಿ ಚುರುಕು ಬುದ್ದಿಯ  ಹುಡುಗನಾಗಿದ್ದ ನರೇಂದ್ರ ಸಂಗೀತ, ಜಿಮ್ನಾಸ್ಟಿಕ್ಸ್ ಮತ್ತು ಅಧ್ಯಯನದಲ್ಲಿ ಉತ್ತಮ ಸಾಧನೆ ಮಾಡಿದ. ಅವರು ಕಲ್ಕತ್ತಾ ವಿಶ್ವವಿದ್ಯಾನಿಲಯದಿಂದ ಪದವಿ ಪಡೆಯುವ ಹೊತ್ತಿಗೆ, ಅವರು ವಿವಿಧ ವಿಷಯಗಳ ಬಗ್ಗೆ, ವಿಶೇಷವಾಗಿ ಪಾಶ್ಚಾತ್ಯ ತತ್ವಶಾಸ್ತ್ರ ಮತ್ತು ಇತಿಹಾಸದ ಬಗ್ಗೆ ಅಪಾರ ಜ್ಞಾನವನ್ನು ಪಡೆದರು. ಯೋಗದ ಮನೋಧರ್ಮದಿಂದ ಜನಿಸಿದ ಅವರು ತಮ್ಮ ಬಾಲ್ಯದಿಂದಲೂ ಧ್ಯಾನವನ್ನು ಅಭ್ಯಾಸ ಮಾಡುತ್ತಿದ್ದರು.


ಶ್ರೀರಾಮಕೃಷ್ಣ ಪರಮಹಂಸರ ಭೇಟಿಯು ವಿವೇಕಾನಂದರ ಜೀವನದ. ನಿರ್ಣಾಯಕ ಘಟ್ಟಗಳಲ್ಲಿ ಒಂದು ಎಂದು ಹೇಳಲೇಬೇಕು. ಪರಮಹಂಸರು  ವಿವೇಕಾನಂದರ  ಮನಸ್ಸಿನ ಹಲ  ಸಂದೇಹಗಳನ್ನು ಹೋಗಲಾಡಿಸಿದರಲ್ಲದೆ, ಅವರ ಶುದ್ಧ, ನಿಸ್ವಾರ್ಥ ಪ್ರೀತಿಯ ಮೂಲಕ ಅವರನ್ನು ಗೆದ್ದರು. ಹೀಗೆ ಗುರು-ಶಿಷ್ಯರ ಸಂಬಂಧವು ಪ್ರಾರಂಭವಾಯಿತು. ಮುಂದೆ ಗುರುಗಳ ಹೆಸರಿನಲ್ಲಿ ರಾಮಕೃಷ್ಣ ಮಿಷನ್ ಆರಂಭಿಸಿ ಸಮಾಜ ಸೇವೆ ಮಾಡಿದ್ದು ಇತಿಹಾಸ. ವರ್ತಮಾನದಲ್ಲಿಯೂ ಹಲವಾರು ಶಾಖೆಗಳನ್ನು ಹೊಂದಿರುವ  ರಾಮಕೃಷ್ಣ ಆಶ್ರಮಗಳು   ಕೋಟ್ಯಾಂತರ ಜನಗಳಿಗೆ ಜ್ಞಾನ ನೀಡುವ ಕೇಂದ್ರಗಳಾಗಿರುವುದು ನಮಗೆ ತಿಳಿದ ವಿಷಯವೇ ಆಗಿದೆ. 

 

ಭಾರತದ ಬಗ್ಗೆ ಇನ್ನೂ  ತಿಳಿಯಲು ಅವರು  

ಭಾರತದಾದ್ಯಂತ ಬರಿಗಾಲಲ್ಲಿ  ಪ್ರವಾಸ ಕೈಗೊಂಡರು ಆ  ಸಮಯದಲ್ಲಿ ಸ್ವಾಮಿ ವಿವೇಕಾನಂದರು ಜನಸಾಮಾನ್ಯರ ಭೀಕರ ಬಡತನ ಮತ್ತು ಹಿಂದುಳಿದಿರುವಿಕೆಯನ್ನು ನೋಡಿ ಆಳವಾಗಿ ಭಾವುಕರಾದರು. ಭಾರತದ ಅವನತಿಗೆ ನಿಜವಾದ ಕಾರಣ ಜನಸಾಮಾನ್ಯರ ನಿರ್ಲಕ್ಷ್ಯ ಎಂದು ಅರ್ಥಮಾಡಿಕೊಂಡ ಮತ್ತು ಬಹಿರಂಗವಾಗಿ ಘೋಷಿಸಿದ ಭಾರತದ ಮೊದಲ ಧಾರ್ಮಿಕ ನಾಯಕ. ಹಸಿದ ಲಕ್ಷಾಂತರ ಜನರಿಗೆ ಆಹಾರ ಮತ್ತು ಇತರ ಜೀವನಾವಶ್ಯಕತೆಗಳನ್ನು ಒದಗಿಸುವುದು ತಕ್ಷಣದ ಅಗತ್ಯವಾಗಿತ್ತು. ಇದಕ್ಕಾಗಿ ಅವರಿಗೆ ಕೃಷಿ, ಗ್ರಾಮೋದ್ಯೋಗ ಇತ್ಯಾದಿಗಳ ಸುಧಾರಿತ ವಿಧಾನಗಳನ್ನು ಕಲಿಸಬೇಕು ಎಂದು ಪ್ರತಿಪಾದಿಸಿದರು.  ಈ ಸಂದರ್ಭದಲ್ಲಿಯೇ ವಿವೇಕಾನಂದರು ಭಾರತದಲ್ಲಿನ ಬಡತನದ ಸಮಸ್ಯೆಯ ತಿರುಳನ್ನು ಗ್ರಹಿಸಿದರು. ಶತಮಾನಗಳ ಕಾರಣದಿಂದಾಗಿ ದಬ್ಬಾಳಿಕೆಯ  ದೀನದಲಿತ ಜನಸಾಮಾನ್ಯರು ತಮ್ಮ ಸ್ಥಿತಿಯನ್ನು ಸುಧಾರಿಸುವ ಸಾಮರ್ಥ್ಯದಲ್ಲಿ ನಂಬಿಕೆಯನ್ನು ಕಳೆದುಕೊಂಡಿದ್ದರು. ಅವರ ಮನಸ್ಸಿನಲ್ಲಿ ತಮ್ಮ ಮೇಲೆ ನಂಬಿಕೆಯನ್ನು ತುಂಬುವುದು ಎಲ್ಲಕ್ಕಿಂತ ಮೊದಲು  ಅಗತ್ಯವಾಗಿತ್ತು. ಇದಕ್ಕೆ  ಭಾರತದ ಧಾರ್ಮಿಕ ತತ್ತ್ವಶಾಸ್ತ್ರದ ಪ್ರಾಚೀನ ವ್ಯವಸ್ಥೆಯಾದ ವೇದಾಂತದಲ್ಲಿ ಬೋಧಿಸಲಾದ ಆತ್ಮದ ಸಂಭಾವ್ಯ ದೈವತ್ವದ ಸಿದ್ಧಾಂತವಾದ ಆತ್ಮದ ತತ್ವದಲ್ಲಿ ಸ್ವಾಮೀಜಿ ಈ ಸಂದೇಶವನ್ನು ಕಂಡುಕೊಂಡರು.  ಬಡತನದ ನಡುವೆಯೂ, ಜನಸಾಮಾನ್ಯರು ಧರ್ಮಕ್ಕೆ ಅಂಟಿಕೊಂಡಿರುವುದನ್ನು ಅವರು ಕಂಡರು . ಆದರೆ ಅವರಿಗೆ ವೇದಾಂತದ ಜೀವನ ನೀಡುವ, ಉತ್ಕೃಷ್ಟವಾದ ತತ್ವಗಳು ಮತ್ತು ಅವುಗಳನ್ನು ಪ್ರಾಯೋಗಿಕ ಜೀವನದಲ್ಲಿ ಹೇಗೆ ಅನ್ವಯಿಸಬೇಕು ಎಂದು ಎಂದಿಗೂ ಕಲಿಸಲಾಗಿಲ್ಲ.

ಆದ್ದರಿಂದ ಜನಸಾಮಾನ್ಯರಿಗೆ ಎರಡು ರೀತಿಯ ಜ್ಞಾನದ ಅಗತ್ಯವಿತ್ತು ತಮ್ಮ ಆರ್ಥಿಕ ಸ್ಥಿತಿಯನ್ನು ಸುಧಾರಿಸಲು ಲೌಕಿಕ ಜ್ಞಾನ ಮತ್ತು ಅವರಲ್ಲಿ ನಂಬಿಕೆಯನ್ನು ತುಂಬಲು ಮತ್ತು ಅವರ ನೈತಿಕ ಪ್ರಜ್ಞೆಯನ್ನು ಬಲಪಡಿಸಲು ಆಧ್ಯಾತ್ಮಿಕ ಜ್ಞಾನ. ಶಿಕ್ಷಣದ ಮೂಲಕ ಈ ಎರಡೂ ಜ್ಞಾನವನ್ನು ನೀಡಬಹುದು ಎಂದು ವಿವೇಕಾನಂದರು ಒತ್ತಿ ಹೇಳಿ ಅದನ್ನು ಜಾರಿಗೆ ತಂದರು.  


ಶಿಕ್ಷಣದ ಹರಡುವಿಕೆ ಮತ್ತು ಬಡ ಜನಸಾಮಾನ್ಯರ ಮತ್ತು ಮಹಿಳೆಯರ ಉನ್ನತಿಗಾಗಿ ಅವರ ಯೋಜನೆಗಳನ್ನು ಕೈಗೊಳ್ಳಲು,ಸಮರ್ಪಿತ ಜನರ ದಕ್ಷ ಸಂಘಟನೆಯ ಅಗತ್ಯವಿದೆ ಎಂದು  ಪ್ರತಿಪಾದಿಸುತ್ತಾ   ಬಡವರ ಮತ್ತು ದಮನಿತ  ಜನರ ಮನೆ ಬಾಗಿಲಿಗೆ ಉದಾತ್ತ ಆಲೋಚನೆಗಳನ್ನು ತರುವಲ್ಲಿ  ರಾಮಕೃಷ್ಣ ಮಿಷನ್ ಕಾರ್ಯವ್ಯಾಪ್ತಿ ವಿಸ್ತಾರವಾಯಿತು.


ಅಸಂಖ್ಯಾತ ಭಾಷಾ, ಜನಾಂಗೀಯ, ಐತಿಹಾಸಿಕ ಮತ್ತು ಪ್ರಾದೇಶಿಕ ವೈವಿಧ್ಯತೆಗಳ ಹೊರತಾಗಿಯೂ, ಭಾರತವು ಅನಾದಿ ಕಾಲದಿಂದಲೂ ಸಾಂಸ್ಕೃತಿಕ ಏಕತೆಯ ಬಲವಾದ ಅರ್ಥವನ್ನು ಹೊಂದಿದೆ. ಆದಾಗ್ಯೂ, ಸ್ವಾಮಿ ವಿವೇಕಾನಂದರು ಈ ಸಂಸ್ಕೃತಿಯ ನಿಜವಾದ ಅಡಿಪಾಯವನ್ನು ಬಹಿರಂಗಪಡಿಸಿದರು ಮತ್ತು ಆ ಮೂಲಕ ರಾಷ್ಟ್ರವಾಗಿ ಏಕತೆಯ ಭಾವನೆಯನ್ನು ಸ್ಪಷ್ಟವಾಗಿ ವ್ಯಾಖ್ಯಾನಿಸಿದರು ಮತ್ತು ಬಲಪಡಿಸಿದರು. 


ಸ್ವಾಮೀಜಿ ಭಾರತೀಯರಿಗೆ ತಮ್ಮ ದೇಶದ ಶ್ರೇಷ್ಠ ಆಧ್ಯಾತ್ಮಿಕ ಪರಂಪರೆಯ ಬಗ್ಗೆ ಸರಿಯಾದ ತಿಳುವಳಿಕೆಯನ್ನು ನೀಡಿದರು ಮತ್ತು ಆ ಮೂಲಕ ನಮ್ಮ ಗತಕಾಲದ ಬಗ್ಗೆ ನಮಗೆ ಹೆಮ್ಮೆ ಮೂಡಿಸಿದರು. ಇದಲ್ಲದೆ, ಪಾಶ್ಚಿಮಾತ್ಯ ಸಂಸ್ಕೃತಿಯ ನ್ಯೂನತೆಗಳನ್ನು ಮತ್ತು ಈ ನ್ಯೂನತೆಗಳನ್ನು ನಿವಾರಿಸಲು ಭಾರತದ ಕೊಡುಗೆಯ ಅಗತ್ಯವನ್ನು ಅವರು ಭಾರತೀಯರಿಗೆ ಸೂಚಿಸಿದರು.  


 ಭಾರತದ ಸ್ವಾತಂತ್ರ್ಯ ಚಳವಳಿಯ ಹಲವಾರು ಪ್ರಮುಖ ನಾಯಕರು ಸ್ವಾಮೀಜಿಯವರು ನಮಗೆ ಪ್ರೇರಕ ಶಕ್ತಿ  ಎಂದು ಒಪ್ಪಿಕೊಂಡಿದ್ದಾರೆ. ಸ್ವತಂತ್ರ ಭಾರತದ ಮೊದಲ ಪ್ರಧಾನ ಮಂತ್ರಿ ಜವಾಹರಲಾಲ್ ನೆಹರು ಅವರ ಮಾತುಗಳಲ್ಲಿ ಹೇಳುವುದಾದರೆ “ಖಿನ್ನತೆಗೆ ಒಳಗಾದ ಮತ್ತು ನಿರುತ್ಸಾಹಗೊಂಡ ಹಿಂದೂ ಮನಸ್ಸಿಗೆ ಟಾನಿಕ್ ಆಗಿ ಸ್ವಾಮೀಜಿ ನಮಗೆ ಮಾರ್ಗದರ್ಶನ ನೀಡಿದ್ದಾರೆ  "

  ನೇತಾಜಿರವರು  “ಸ್ವಾಮೀಜಿ ಪೂರ್ವ ಮತ್ತು ಪಶ್ಚಿಮ, ಧರ್ಮ ಮತ್ತು ವಿಜ್ಞಾನ, ಹಿಂದಿನ ಮತ್ತು ಪ್ರಸ್ತುತವನ್ನು ಸಮನ್ವಯಗೊಳಿಸಿದರು. ಮತ್ತು ಅದಕ್ಕಾಗಿಯೇ ಅವರು ಶ್ರೇಷ್ಠ. ಅವರ ಬೋಧನೆಗಳಿಂದ ನಮ್ಮ ದೇಶವಾಸಿಗಳು ಅಭೂತಪೂರ್ವ ಸ್ವಾಭಿಮಾನ, ಸ್ವಾವಲಂಬನೆ ಮತ್ತು ಸ್ವಾವಲಂಬನೆಯನ್ನು ಗಳಿಸಿದ್ದಾರೆ",ಎಂದರು.   


ನವಭಾರತದ ಸೃಷ್ಟಿಗೆ ಸ್ವಾಮೀಜಿಯವರು ಅತ್ಯಂತ ವಿಶಿಷ್ಟ ಕೊಡುಗೆ  ನೀಡಿದ್ದಾರೆ  ಭಾರತೀಯರ ಮನಸ್ಸನ್ನು ತುಳಿತಕ್ಕೊಳಗಾದ ಜನಸಾಮಾನ್ಯರಿಗೆ ತಮ್ಮ ಕರ್ತವ್ಯಕ್ಕೆ ತೆರೆದುಕೊಳ್ಳುವುದು. ಕಾರ್ಲ್ ಮಾರ್ಕ್ಸ್ ಅವರ ವಿಚಾರಗಳು ಭಾರತದಲ್ಲಿ ತಿಳಿದಿರುವ ಮುಂಚೆಯೇ, ಸ್ವಾಮೀಜಿ ಅವರು ದೇಶದ ಸಂಪತ್ತಿನ ಉತ್ಪಾದನೆಯಲ್ಲಿ ಕಾರ್ಮಿಕ ವರ್ಗಗಳ ಪಾತ್ರದ ಬಗ್ಗೆ ಮಾತನಾಡಿದರು. ಅವರ ಚಿಂತನೆಗಳು ಇಂದಿಗೂ ಪ್ರಸ್ತುತ 

 ಆಧುನಿಕ ಯುಗದ ಶ್ರೇಷ್ಠ ಸಂತ, ಚಿಂತಕರಲ್ಲಿ ಒಬ್ಬರು. ಅವರು ಭಾರತದ ಕೋಟ್ಯಂತರ ಯುವ ಜನರಿಗೆ ಸ್ಫೂರ್ತಿಯೂ ಹೌದು. ಅವರ ಜೀವನ, ಅವರು ತೋರಿದ ಸನ್ಮಾರ್ಗಗಳು ಭಾರತೀಯರಿಗೆ ಆದರ್ಶಪ್ರಾಯವಾಗಿದೆ. ಅವರ ಆದರ್ಶಗಳನ್ನು ಪಾಲಿಸಿ ನಮ್ಮನ್ನು ನಾವು ಉದ್ಧಾರ ಮಾಡಿಕೊಂಡು ತನ್ಮೂಲಕ ಸಮಾಜದ ಮತ್ತು ದೇಶದ ಒಳಿತಿಗೆ ಪಣತೊಡೋಣ...


*ಸಿಹಿಜೀವಿ*

ಸಿ ಜಿ ವೆಂಕಟೇಶ್ವರ

ತುಮಕೂರು


09 January 2023

ನಂದನವನ

 



*ನಂದನವನ*


ಸಕಲ ಜೀವಿಗಳನ್ನು ಗೌರವಿಸಿ

ನಾವು ತೋರಿದಾಗ ಅಕ್ಕರೆ 

ನಂದನವನ ಆಗುವುದು 

ಈ ಜಗ ಇದು ಖರೆ 


*ಸಿಹಿಜೀವಿ*

ಸಿ ಜಿ ವೆಂಕಟೇಶ್ವರ 

04 January 2023

ಹ್ಯಾಪಿ ಬ್ರೈಲ್ ಡೆ ..



 


ಹ್ಯಾಪಿ ಬ್ರೈಲ್ ಡೇ....



ಸರ್ ಪ್ರತಿ ವರ್ಷ ನಾನು ಜನವರಿ ನಾಲ್ಕನೇ ತಾರೀಖಿನಂದು ಮೈಸೂರಿಗೆ ಹೋಗುವೆ ಎಂದರು ಸುರೇಶ್ ರವರು

ಏನ್ ಸಾರ್ ಟೂರಾ ? ಪ್ರಶ್ನೆ ಮಾಡಿದೆ .ಇಲ್ಲ ಅಂದು ಲೂಯಿ ಬ್ರೈಲ್ ಜನ್ಮದಿನ  ಆಚರಣೆ ಮಾಡುವ  ಸಲುವಾಗಿ ಹೋಗುತ್ತಿರುವೆ ಎಂದರು.


 ದೃಷ್ಟಿ ವಿಶೇಷ ಚೇತನ ಶಿಕ್ಷಕರಾದ ಸುರೇಶ್ ರವರು ಆ ದಿನದ ಮಹತ್ವ ತಿಳಿಸಿದರು.


ಲೂಯೀ ಬ್ರ್ರೈಲ್‌ರವರ 214 ನೇ ಜನ್ಮದಿನಾಚರಣೆಯನ್ನು ಈ ವರ್ಷ ಆಚರಿಸಲಾಗುತ್ತಿದೆ.

ಅಂಧರ ಬಾಳಿನ ಜ್ಯೋತಿ, ಅಕ್ಷರ ಬ್ರಹ್ಮ, ಆಶಾಕಿರಣ

ಅಂಧರ ಜೀವನಕ್ಕೆ ಸ್ಪೂರ್ತಿ, ಅಂಧರ ಬಾಳಿಗೆ ಓಜೋಸ್ಸನ್ನ ನೀಡಿದಂತಹ ಬ್ರೈಲ್ ಲಿಪಿಯ ಮಾಂತ್ರಿಕ, ಬೈಲ್ ಲಿಪಿಯ ಜನಕ, ಅಂಧರ ಜೀವನವನ್ನು ಪಾವನಗೊಳಿಸಿದ ಶಿಲ್ಪಿ, ಅಂಧರ ಆತ್ಮಗೌರವ ಘನತೆಯನ್ನು ಎತ್ತಿ ಹಿಡಿದ ಲೂಯಿ ಬೈಲ್‌ರವರಿಗೆ ಎಲ್ಲರೂ ಗೌರವಿಸಲೇಬೇಕಿದೆ.ಅದರಲ್ಲಿ ದೃಷ್ಟಿ ವಿಶೇಷ ಚೇತನರು ಮರೆಯುವುದಾದರೂ ಹೇಗೆ? 

ಅಂತದೇ ಅಭಿಮಾನ ಹೊಂದಿರುವ ಸುರೇಶ್ ರವರು 

ಮೈಸೂರಿನ ಸರ್ಕಾರಿ ಅಂಧಮಕ್ಕಳ ಪಾಠಶಾಲೆ ಆವರಣದಲ್ಲಿ ಅನಾವರಣಗೊಂಡಿರುವ ಬ್ರೈಲ್ ಪ್ರತಿಮೆಗೆ 2021 ನೇ ಸಾಲಿನಿಂದ ಪ್ರತಿ ಭಾನುವಾರದಂದು ಗುರು ಹಿರಿಯರ, ಬಂಧು-ಮಿತ್ರರ ಹಿತೈಶಿಗಳ ಸಹಭಾಗಿತ್ವದೊಂದಿಗೆ ಪೂಜಿಸುವ ವಿಶೇಷವಾದ  ಕಾರ್ಯಕ್ರಮವನ್ನು ಹಮ್ಮಿಕೊಂಡು ಬಂದಿದ್ದು, ಈ ವರ್ಷದ ಜನವರಿ ನಾಲ್ಕರಂದು  ಮೈಸೂರಿನ ಆ ಪ್ರತಿಮೆಯ ಬಳಿ ಸರಳ ಸಮಾರಂಭ ಏರ್ಪಾಡು ಮಾಡಿ ತಮ್ಮ ಸ್ವಂತ ಖರ್ಚಿನಲ್ಲಿ ಪಾಕೆಟ್ ಕ್ಯಾಲೆಂಡರ್ ಮಾಡಿಸಿ ಅದರಲ್ಲಿ ಬ್ರೈಲ್ ಲಿಪಿಯ ಪರಿಚಯ ಮತ್ತು ನುಡಿಗಟ್ಟುಗಳನ್ನು ಮುದ್ರಿಸಿ ಉಚಿತವಾಗಿ  ಸಾರ್ವಜನಿಕರಿಗೆ ಹಂಚುವ ಯೋಜನೆ ಹಾಕಿಕೊಂಡು ಮೈಸೂರಿಗೆ ಪಯಣ ಮಾಡಿದ್ದಾರೆ. ಉದಯೋನ್ಮುಖ ಸಾಹಿತಿಗಳು, ಪುಸ್ತಕ ಪ್ರೇಮಿಗಳು ಸಹ ಆಗಿರುವ  ಸುರೇಶ್ ರವರು ಕರಪತ್ರಗಳ ಮೇಲೆ ಬರೆದ ಸಾಲುಗಳು ಗಮನ ಸೆಳೆದವು 


"ಅಕ್ಷರ ಕಲಿತ ಅಂಧ ಸಾಕ್ಷರ ಸಮಾಜಕ್ಕೆ ಚಂದ,

ಅಂಧರೆಂದು ಜರಿಯದಿರಿ,

ಅವರು ಮನುಜರು ಮರೆಯದಿರಿ"


ಸುರೇಶ್ ಸರ್ ನಿಮ್ಮಂತಹ ಶಿಕ್ಷಕರ ಪಾಲಿಗೆ ಬ್ರೈಲ್ ಕೊಡುಗೆ ಅನನ್ಯ .ನೀವು ಸಹ ನಿಮ್ಮ  ವಿದ್ಯಾರ್ಥಿಗಳ ಬಾಳಲ್ಲಿ ಆದರ್ಶ ಶಿಕ್ಷಕರಾಗಿ ಎಂದು ಹಾರೈಸುತ್ತಾ ನಾನೂ ಕೂಡಾ 

ಹ್ಯಾಪಿ ಬ್ರೈಲ್ ಡೇ ಎಂದು ಹೇಳುವೆ ..


ಸಿಹಿಜೀವಿ.

ಸಿ ಜಿ ವೆಂಕಟೇಶ್ವರ

ತುಮಕೂರು


ಹಾಯ್ಕುಗಳು...

 




ಹಾಯ್ಕುಗಳು...


ಎಲ್ಲಿದೆ ಅಂದ 

ಒಳಗಣ್ಣಿನಲಿದೆ 

ಅಂದನಾ ಅಂಧ


ಯಾರಿಗೆ ಬೇಕು?

ಗುಣವಿಲ್ಲದ ಅಂದ 

ನಿಷ್ಪ್ರಯೋಜಕ 


ಸಿಹಿಜೀವಿ

ಸಿ ಜಿ ವೆಂಕಟೇಶ್ವರ

ತುಮಕೂರು


02 January 2023

ಗಾಯ ಮಾಯ..

 


ಗಾಯ..ಮಾಯ..

ಬಣ್ಣದ ಬಣ್ಣದ ಮಾತುಗಳನಾಡಿ
ನಾ ಬಣ್ಣಿಸುತ್ತಿರುವಾಗಲೇ ನೀ ಮಾಯ |
ಮಾಡಿ ಹೋಗಿರುವೆ ನನ್ನ
ಹೃದಯಕ್ಕೆ ಮರೆಯದ ಗಾಯ ||

ಸಿಹಿಜೀವಿ..

01 January 2023

ಟೂ ಟೂ...ಸೆ ಸೆ...


 ಮೂರು ಮೂರು ಮಟ  ಟೂ ಟೂ ಟೂ

ಅನ್ಕೋತಾ  ಶೆಟ್ಗೊಂಡು ಆ 

ವರ್ಸ ಹೊಂಟು  ಹೊಯ್ತ್ರಿ |

ಸ್ವಾಗತ ಮಾಡೋನ್ರಿ ನಾವ್ 

ಎರಡು ಮಟ ಟೂ ಅಂದು ಒಂದ್ ಮಟ ಸೇ ಅನ್ನೋ  ಟ್ವೆಂಟಿ ಟ್ಬೆಂಟಿತ್ರಿ |