03 ಏಪ್ರಿಲ್ 2026

ತುಮಕೂರು ಜಿಲ್ಲೆಯಲ್ಲೊಂದು ಚಿಕ್ಕತಿರುಪತಿ!


 ತುಮಕೂರು ಜಿಲ್ಲೆಯಲ್ಲೊಂದು   ಚಿಕ್ಕತಿರುಪತಿ!




ತುಮಕೂರು ಜಿಲ್ಲೆಯಲ್ಲೊಂದು ಚಿಕ್ಕ ತಿರುಪತಿ ಇದೆ. ದಿನವೂ  ಭಕ್ತಾದಿಗಳು ವೆಂಕಟೇಶ್ವರ ಸ್ವಾಮಿಯ ದರ್ಶನ ಪಡೆದು ಪುನೀತರಾಗುತ್ತಿದ್ದಾರೆ. ಸ್ವಾಮಿ ನೆಲೆಸಿರುವ ಚಿಕ್ಕತಿರುಪತಿ ಎಂದು ಹೆಸರಾದ ತಾಣವೇ ಸಿದ್ದನಹಳ್ಳಿ.     ಶಿರಾ ತಾಲ್ಲೂಕಿನ ಸಿದ್ದನಹಳ್ಳಿಯು ತಾಲ್ಲೂಕು ಕೇಂದ್ರದಿಂದ 14 ಕಿಲೋಮೀಟರ್ ಅಂತರದಲ್ಲಿದೆ.ಶಿರಾದಿಂದ‌  ಅಮರಾಪುರ ರಸ್ತೆಯ ಮೂಲಕ  12 ಕಿಲೋಮೀಟರ್ ಚಲಿಸಿ   ತಿರುವಿನಲ್ಲಿ 2 ಕಿಲೋಮೀಟರ್ ದಾರಿ ಕ್ರಮಿಸಿದರೆ ಸಿಗುವುದೇ   ಸಿದ್ದನಹಳ್ಳಿ ಶ್ರೀಕ್ಷೇತ್ರ. ಇದಕ್ಕೆ ವೆಂಕಟೇಶ್ವರ ದೇವಾಲಯ ಹಾಗೂ ತಿಮ್ಮಪ್ಪ ದೇವಾಲಯ   ಎಂತಲೂ ಕರೆಯುತ್ತಾರೆ. ಈ  ಕ್ಷೇತ್ರದಲ್ಲಿ ಶ್ರೀತಿಮ್ಮಪ್ಪ ಸ್ವಾಮಿಯು 200 ವರ್ಷಗಳಿಂದ ನೆಲೆಗೊಂಡಿದ್ದಾರೆ.  1992ರಿಂದ 1995ರವರೆಗೆ ನವೀನ ‌ದೇವಾಲಯ ನಿರ್ಮಿಸಿ ಲೋಕಾರ್ಪಣೆ ಮಾಡಲಾಗಿದೆ.

1995ರಲ್ಲಿ ತಿರುಮಲ ತಿರುಪತಿದೇವಸ್ಥಾನಂ ವತಿಯಿಂದ ಕೊಡುಗೆಯಾಗಿ 5 ಆಡಿ ಎತ್ತರ ಸುಂದರ ಕೃಷ್ಣಶೀಲಾಮೂರ್ತಿ ಶ್ರೀ ವೆಂಕಟರಮಣಸ್ವಾಮಿ ವಿಗ್ರಹವನ್ನು ನೀಡಲಾಗಿದೆ. ಶ್ರೀಸ್ವಾಮಿಯು ಹಸನ್ಮುಖಿಯಾಗಿ ಭಕ್ತರನ್ನು ಸೆಳೆಯುತ್ತಾ ಕಷ್ಟಕಾರ್ಪಣ್ಯವನ್ನು ನಿವಾರಿಸುತ್ತಾ ರಾಜ್ಯದ ನಾನಾ ಭಾಗಗಳಿಂದ ಬರುವ  ಭಕ್ತರಿಗೆ ದರ್ಶನ ಕರುಣಿಸಿ ಅವರ ಕಷ್ಟಗಳನ್ನು ಪರಿಹರಿಸುತ್ತಿದ್ದಾರೆ. ವರ್ಷವಿಡೀ ಎಲ್ಲಾ ಹಬ್ಬ ಹರಿದಿನಗಳಲ್ಲಿ ಧಾರ್ಮಿಕ ಕಾರ್ಯಕಲಾಪಗಳು ನೆಡೆಯುತ್ತಿವೆ. ದಿವಂಗತ ಶಿಕ್ಷಕರಾದ  ಶ್ರೀಬಿ.ನಂಜಯ್ಯ ರವರು ಜವಾಬ್ದಾರಿ ವಹಿಸಿಕೊಂಡು ಮತ್ತು ಸಂಸ್ಥಾಪಕ ಅಧ್ಯಕ್ಷರಾಗಿ ತನ್ನ ಆಪ್ತ ಶಿಷ್ಯರ  ಸಹಕಾರದಿಂದ ಭಕ್ತರಿಂದ ದೇಗುಲ ನಿರ್ಮಾಣ ಮಾಡಲು ಸಾಧ್ಯವಾಯಿತು. ಜೊತೆಗೆ ತಮ್ಮ ಸಮುದಾಯದ ಗುಡಿಕಟ್ಟಿನ ಅಣ್ಣತಂದಿರುಗಳ ಹಾಗೂ ಕಾರ್ಯಕಾರಿ ಸಮಿತಿಯ ಮತ್ತು ಗ್ರಾಮದ ಭಕ್ತರ ಸರ್ವವಿಧವಾದ ಸಹಕಾರ ಸಿಕ್ಕಿತ್ತು.

1995 ಮೇ 10, 11, 12, ಮೂರು ದಿನಗಳ ಕಾಲ ವಿಜೃಂಭಣೆಯಿಂದ ಉನ್ನತ ವೇದೋಕ್ತ ವಿದ್ವಾಂಸರಿಂದ ಹೋಮ, ಹವನಾದಿಗಳು-ಪಾರಾಯಣಗಳು, ಅಧಿವಾಸಗಳು, ಧಾರ್ಮಿಕ ಪೂಜಾವಿಧಿವಿಧಾನಗಳೊಂದಿಗೆ ಪರಮ ಪೂಜ್ಯ ಶ್ರೀಶ್ರೀಗಳ ದಿವ್ಯಸಾನಿದ್ಯದಲ್ಲಿ ಬೆಂಗಳೂರು ಜಿಲ್ಲೆ, ಬಸವನಹಳ್ಳಿಯ ಪಾಂಚರಾತ್ರಗಮ ಉ।ವೇ॥ಪು॥ವಿದ್ವಾನ್ ಶ್ರೀ ರಾಮಕೃಷ್ಣಚಾರ್ಯರ ಮತ್ತು 11 ಜನರ ಆಗಮಿಕರ ತಂಡದೊಂದಿಗೆ ಶ್ರೀಸ್ವಾಮಿಯ ಸ್ಥಿರಮೂರ್ತಿ ಪ್ರತಿಷ್ಟಾಪನೆ ಕಾರ್ಯ ನೆರವೇರಿತು.


ವಿಮಾನಗೋಪುರ, ಕಳಸಪ್ರತಿಷ್ಠೆ, ಮತ್ತು ಕುಂಭಾಭಿಷೇಕದ ಕಾರ್ಯವನ್ನು ನೆರವೇರಿಸುವಾಗ ವಿಷ್ಣುವಿನ ವಾಹನವಾದ ಶ್ರೀ ಗರುಡಸ್ವಾಮಿಯು ಗೋಪುರವನ್ನು ಮೂರು ಬಾರಿ ಪ್ರದಕ್ಷಿಣೆ ಬಂದು ಆಶಿರ್ವಾದ ಮಾಡಿದನ್ನ ಜನ ಇನ್ನು ನೆನಪಿಸಿಕೊಳ್ಳುತ್ತಿದ್ದಾರೆ. ಸುಮಾರು 8 ರಿಂದ 10 ಸಾವಿರ ಜನರ ಸಮಕ್ಷಮದಲ್ಲಿ ಈ ಮಹಾಕಾರ್ಯ ಅಂದು ನಿರ್ವಿಘ್ನವಾಗಿ ನೆರವೇರಿತು.

ಸಿದ್ದನಹಳ್ಳಿಯ ಗ್ರಾಮದೇವತೆ ಶ್ರೀ ದುರ್ಗಮ್ಮ ದೇವರಿಗೆ ಆರತಿ ಉತ್ಸವನ್ನು ಸಂಭ್ರಮದಿಂದ ಗ್ರಾಮದ ಜನತೆ, ಹಿರಿಯರು, ಮಹಿಳೆಯರು ಭಕ್ತಿಪೂರ್ವಕವಾಗಿ ನೆರವೇರಿಸಿದರು. ಅಂದು ಸಾಂಕೇತಿಕವಾಗಿ ಉಚಿತ ವಿವಾಹ ನೆರವೇರಿಸಲಾಯಿತು. ನಂತರ 48 ದಿನ ವಿವಿಧ ಭಕ್ತಮಹಾಷಯರು ಮಂಡಲ ಪೂಜೆಯನ್ನು ನೆರವೇರಿಸಿದರು. ಅಂದಿನಿಂದ ಇಲ್ಲಿಯವರೆಗೆ ಪ್ರತಿವರ್ಷವು ವೈಶಾಖಮಾಸ ಶುದ್ಧ ಚಾಂದ್ರಮಾನ ಶ್ರೀ ವೈಷ್ಣವ ಜಯಂತಿ ಚಿತ್ತಾ ನಕ್ಷತ್ರದಂದು ಶ್ರೀ ವೆಂಕಟೇಶ್ವರಸ್ವಾಮಿಯ ವಾರ್ಷಿಕೋತ್ಸವನ್ನು ವೈಭವದೊಂದಿಗೆ ನಡೆಸುತ್ತಾ ಬರಲಾಗಿದೆ.

ಜೊತೆಗೆ ಪ್ರತಿವರ್ಷವೂ ತಿರುಪತಿಯ ವೆಂಕಟೇಶ್ವರ ಸ್ವಾಮಿಯ ಲಡ್ಡು-ತೀರ್ಥ ಪ್ರಸಾದವೂ ವಿತರಣೆಯಾಗುತ್ತಿದೆ. ತುಮಕೂರು ಜಿಲ್ಲೆಗೆ ಪ್ರಪ್ರಥಮವಾಗಿ ತಿರುಪತಿಯಿಂದ ಬಂದ ಸ್ವಾಮಿ ಇದಾಗಿರುತ್ತದೆ. ಧಾರ್ಮಿಕ ಸಮಾರಂಭಗಳಲ್ಲಿ ಗ್ರಾಮದ ಹಿರಿಯರಿಗೆ, ಸಮುದಾಯದ ಗಣ್ಯರನ್ನು  ಗೌರವಿಸುತ್ತಾ ಪ್ರತಿವರ್ಷವೂ ಪೂಜ್ಯಶ್ರೀಗಳನ್ನ ಕರೆಸಿ ಪಾದಪೂಜೆಯೊಂದಿಗೆ ಕಲಾಪ ಜರುಗುತ್ತಿದೆ. ಸದರಿ ದೇವಾಲಯದಲ್ಲಿ ಮದುವೆ ನಾಮಕರಣ, ಚೌಲೋಪನಯನ ಕಾರ್ಯಗಳು ಜರುಗುತ್ತಿವೆ. ವೈಕುಂಠ ಏಕಾದಶಿ ಸೇರಿದಂತೆ ವಿವಿಧ ಹಬ್ಬ ಹರಿದಿನಗಳಲ್ಲಿ ದೇವಾಲಯದಲ್ಲಿ ವಿಶೇಷವಾಗಿ ಅಲಂಕರಿಸಿ ಶಾಸ್ತ್ರೋಕ್ತವಾಗಿ ಪೂಜಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತದೆ. ಹೊರಗಡೆಯಿಂದ ಬರುವ ಭಕ್ತರ ಅನುಕೂಲಕ್ಕೆ ಉಳಿದುಕೊಳ್ಳಲು ಸರ್ಕಾರ ಅನುದಾನವಿಲ್ಲದೆ ಬರೀ ಗ್ರಾಮೀಣ ಭಕ್ತರುಗಳ ಗುಡಿಕಟ್ಟಿನ ಅಣ್ಣತಮ್ಮಂದಿರ ಸಹಕಾರದಿಂದ ವಿಶ್ರಾಂತಿಗೃಹ ನಿರ್ಮಾಣವಾಗಿದೆ. ಈ ದೇಗುಲಕ್ಕೆ ಸರ್ಕಾರದಿಂದ ಸರ್ಕಾರೇತರ ಸಹಕಾರ ಸಿಕ್ಕಿದಲ್ಲಿ ಉತ್ತಮ ಕಾರ್ಯಗಳು ನಡೆದು ಧಾರ್ಮಿಕ ಸೊಗಡು ಹೆಚ್ಚಿ ಉತ್ತಮ ಕ್ಷೇತ್ರವಾಗುವುದರಲ್ಲಿ ಸಂದೇಹವೇವಿಲ್ಲ.

ಗ್ರಾಮೀಣ ಜನತೆ, ಮಕ್ಕಳಲ್ಲಿ ಭಕ್ತಿ-ಧಾರ್ಮಿಕ ಕಾರ್ಯಗಳು ಹೆಚ್ಚಾಗಿ ಧರ್ಮವನ್ನು ರಕ್ಷಿಸಿದ್ದೇ ಆದಲ್ಲಿ ಧರ್ಮವು ನಮ್ಮನ್ನು ಕಾಪಾಡುವುದರಲ್ಲಿ ಸಂದೇಹವಿಲ್ಲ  ಇಂತಹ ಚಿಕ್ಕ ತಿರುಪತಿಗೆ ಒಮ್ಮೆಯಾದರು ಹೋಗಿ ಸ್ವಾಮಿಯ ದರ್ಶನ ಪಡೆದರೆ ಜೀವನ ಸಾರ್ಥಕವಾದೀತು. ಈ ದೇಗುಲಕ್ಕೆ ಮಾಜಿ ಸಚಿವರು ಕರ್ನಾಟಕ ಸರ್ಕಾರದ ‌ದೆಹಲಿ‌ಯಲ್ಲಿ ವಿಶೇಷ ಪ್ರತಿನಿಧಿಯಾದ ಟಿ ಬಿ ಜಯಚಂದ್ರ ಹಾಗೂ ಮಾಜಿ ಶಾಸಕರಾದ ರಾಜೇಶ್ ಗೌಡರ ಕೊಡುಗೆಗಳನ್ನು ಟ್ರಸ್ಟ್ ನ ಪದಾಧಿಕಾರಿಗಳು ಮನದುಂಬಿ ಸ್ಮರಿಸಿಕೊಳ್ಳುತ್ತಾರೆ. ಇದೇ ರೀತಿಯಲ್ಲಿ   ಭಕ್ತರ ಹಾಗೂ ಜನಪ್ರತಿನಿಧಿಗಳ ಸಹಕಾರ ದೊರೆತರೆ ಈ ಕ್ಷೇತ್ರ ಬೆಳೆಯುತ್ತಾ ಬೆಳಗುವಲ್ಲಿ ಸಂದೇಹವಿಲ್ಲ.

ಈ ವರ್ಷದ 31 ನೇ ವಾರ್ಷಿಕೋತ್ಸವದ ಹಾಗೂ ಸಾಮೂಹಿಕ ಶ್ರೀನಿವಾಸ ಕಲ್ಯಾಣೋತ್ಸವ ಕಾರ್ಯಕ್ರಮವು ತಿರುಮಲ ತಿರುಪತಿ ದೇವಸ್ಥಾನದ ಅನುಗ್ರಹದೊಂದಿಗೆ ಏಪ್ರಿಲ್ 11 ಮತ್ತು 12 ರಂದು ನಡೆಯಲಿದೆ. ಮಹಾಶರಣ ಶ್ರೀ ಕಮ್ಮಾರ ಕಲ್ಲಯ್ಯ ವೇದಿಕೆಯಲ್ಲಿ ನಡೆಯುವ ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು  ನಿಟ್ಟರಹಳ್ಳಿಯ ನಿಜಶರಣ ಕಮ್ಮಾರ ಕಲ್ಲಯ್ಯ ಶ್ರೀಮಠದ ಪೀಠಾದ್ಯಕ್ಷರಾದ ಪರಮ ಪೂಜ್ಯ
  ಶ್ರೀ ‌ಶ್ರೀ ಶ್ರೀ ಡಾ. ನೀಲಕಂಠಾಚಾರ್ಯ ಸ್ವಾಮೀಜಿ ಹಾಗೂ ಪಟ್ಟನಾಯಕನ ಹಳ್ಳಿಯ  ಸ್ಪಟಿಕಪುರಿ ಗುರುಗುಂಡ ಬ್ರಹ್ಮೇಶ್ವರ ಮಠದ ಪೀಠಾಧ್ಯಕ್ಷರಾದ ಪರಮ ಪೂಜ್ಯ
  ಶ್ರೀ ‌ಶ್ರೀ ಶ್ರೀ ನಂಜಾವಧೂತ ಮಹಾಸ್ವಾಮೀಜಿ ರವರು ವಹಿಸಲಿದ್ದಾರೆ.
ಇದೇ ಸಂದರ್ಭದಲ್ಲಿ  ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರಿಗೆ ದೇವಾಲಯದ ವತಿಯಿಂದ ಗೌರವ ಶ್ರೀರಕ್ಷೆ ನೀಡಲಾಗುತ್ತದೆ. ತುಮಕೂರಿನ ಸಾಧಕ ರತ್ನ ಶ್ರೀ ಗುರುಮೂರ್ತಿ, ಸಾಹಿತಿಗಳಾದ ಶ್ರೀಮತಿ ರತ್ನಮ್ಮ ಹಾಗೂ ಸಾಹಿತಿಗಳು ಶಿಕ್ಷಕರೂ ಆದ ಸಿಹಿಜೀವಿ ವೆಂಕಟೇಶ್ವರ ರವರು ಈ ಬಾರಿಯ ಶ್ರೀರಕ್ಷೆ ಪಡೆಯಲಿದ್ದಾರೆ.
ವೇದಿಕೆ ಕಾರ್ಯಕ್ರಮ ಹಾಗೂ ಧಾರ್ಮಿಕ ಕಾರ್ಯಕ್ರಮಗಳ ನಂತರ ಅನ್ನ ಸಂತರ್ಪಣೆ ಏರ್ಪಡಿಸಲಾಗಿದೆ.
ವೆಂಕಟೇಶ್ವರ ಸ್ವಾಮಿಯ ಭಕ್ತಾದಿಗಳು ಈ ಎಲ್ಲಾ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಸ್ವಾಮಿಯ ಕೃಪೆಗೆ ಪಾತ್ರರಾಗಲು ಶ್ರೀ ವೆಂಕಟೇಶ್ವರ ಚಾರಿಟಬಲ್ ಟ್ರಸ್ಟ್ ನ ಅಧ್ಯಕ್ಷರಾದ ಎಲ್ ಎನ್ ಮಂಜುನಾಥ್ ಹಾಗೂ ಪದಾಧಿಕಾರಿಗಳು ಮನವಿ ಮಾಡಿದ್ದಾರೆ.
ಬನ್ನಿ ಚಿಕ್ಕ ತಿರುಪತಿ ಕ್ಷೇತ್ರದಲ್ಲಿ ನಡೆಯುವ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು ಸ್ವಾಮಿಯ ಕೃಪೆಗೆ ಪಾತ್ರರಾಗೋಣ.


ಸಿಹಿಜೀವಿ ವೆಂಕಟೇಶ್ವರ
ಶಿಕ್ಷಕರು ಹಾಗೂ ಸಾಹಿತಿಗಳು
ತುಮಕೂರು
9900925529

ಸಿಹಿಜೀವಿಯ ಹನಿ


 ಭರವಸೆಯ ನಾಳೆಗಳನ್ನು‌ 

ಅರಸುತ್ತಾ ಸಾಗುತ್ತಿದೆ ನಮ್ಮ ಪಯಣ|

ಕಷ್ಟಗಳು‌ ನೂರಿರಲಿ 

ನಿಲ್ಲದು ನಮ್ಮ ಬಾಳ ಯಾನ||


ಸಿಹಿಜೀವಿ ವೆಂಕಟೇಶ್ವರ


#Quote #KannadaQuote #Sihijeevi #SihijeeviyaPayana #Motivation #Inspiration #Wisdom #LifeLessons #CulturalQuotes #IlluminateYourJourney #StayPositive #QuotesToLiveBy #LoveKannada #JoyfulJourney #Mindfulness #Empowerment #HeartfeltQuotes #QuoteOfTheDay #Philosophy

28 ಮಾರ್ಚ್ 2026

Ipl ಫ್ಯಾನ್ ಪಾರ್ಕ್ ತುಮಕೂರಲ್ಲಿ..


 

ತುಮಕೂರಿನಲ್ಲಿ 
ಕಳೆದ ವರ್ಷ ನಾನು‌ IPL ಫ್ಯಾನ್ ಪಾರ್ಕ್ ಬಗ್ಗೆ ವೀಡಿಯೋ ಹಾಕಿದ್ದೆ  ಬಹಳಷ್ಟು ಮುಖಪುಟದ ಬಂಧುಗಳು ಪ್ಯಾನ್ ಪಾರ್ಕ್ ಗೆ ಬರಲು ಉತ್ಸುಕರಾಗಿದ್ದರು. ಇಂದು ಮತ್ತು ನಾಳೆ ಮಾತ್ರ ತುಮಕೂರಿನಲ್ಲಿ ಫ್ಯಾನ್ ಪಾರ್ಕ್ ಇರುತ್ತದೆ.ಅಂದರೆ 28 ಮತ್ತು 29 ದಿನಾಂಕ ಮಾತ್ರ. ಇಂದು ನಮ್ಮ RCB ಮತ್ತು ಹೈದರಾಬಾದ್ ನಡುವಿನ ಪಂದ್ಯವನ್ನು ದೊಡ್ಡ ಪರದೆಯ ಮೇಲೆ ಅಲ್ಲಿಯೇ ನೋಡೋಣ ಬನ್ನಿ..
ಬರಲಾಗದವರು
ನನ್ನ sihijeeviya payana ಯೂಟ್ಯೂಬ್ ನಲ್ಲಿ ನೇರ ಪ್ರಸಾರ ವೀಕ್ಷಿಸಬಹುದು..

#TataIPL #IPLMatches #TumkurFanPark #RCB #Hyderabad #Sihijeevi #SihijeeviyaPayana #CricketFan #MatchDay #IPL2023 #RoyalChallengersBangalore #CricketLovers #LiveCricket #FanExperience #SportsFan #CricketInIndia #GameDay #CheerForRCB #LovelyIndia #TeamRCB

24 ಮಾರ್ಚ್ 2026

ಪಾರೋದ ಐತಿಹಾಸಿಕ ರಿನ್ ಪುಂಗ್ ಕೋಟೆ.


  

 
ಪಾರೋದ   ಐತಿಹಾಸಿಕ ರಿನ್ ಪುಂಗ್ ಕೋಟೆ.


ಭೂತಾನ್ ನ ಥಿಂಪು ನಂತರ ಸುಂದರ ‌ನಗರ ಪಾರೋ. ಇಡೀ ದೇಶದಲ್ಲಿ ಇಲ್ಲಿ ಮಾತ್ರ ಏರ್ಪೋರ್ಟ್ ಇರುವುದು.   ನಮ್ಮ ಪ್ರವಾಸದ ಎರಡನೇ ದಿನ ನಾವು  ಇಲ್ಲಿನ ಪ್ರಮುಖ ಆಕರ್ಷಣೆಗಳಲ್ಲಿ ಒಂದಾದ  ರಿನ್ ಪುಂಗ್ ಝಾಂಗ್ ನೊಡಲು ಹೊರಟೆವು.    ರಿನ್ ಪುಂಗ್ ಕೋಟೆ. ಕೆಲವರು  ಹಾಗೂ  ಪಾರೋ ಝಾಂಗ್ ಎಂದು ಕರೆತ್ತಾರೆ. ಇದು ಭೂತಾನಿನ ಪಾರೋ ಜಿಲ್ಲೆಯ ಕಾಗ್ಯು ಶಾಲೆಯ ಡ್ರುಕ್ಪಾ ವಂಶಾವಳಿಯ ಒಂದು ದೊಡ್ಡ ಕೋಟೆಯಾಗಿದೆ.

ನಾವು ಈ ಕೋಟೆಗೆ ಹಿಂದಿನ ಭಾಗದಿಂದ ಪ್ರವೇಶ ಪಡೆದೆವು.ಈ ಕೋಟೆಗೆ ಹೋಗುವ ಮೊದಲು ನಮ್ಮ ಗೈಡ್ ತೆಂದಿನ್ ಒಂದು ರೀತಿಯ ವಿಶೇಷವಾದ ವೇಲ್ ರೀತಿಯ ಬಟ್ಟೆಯನ್ನು ಹಾಕಿದರು.ಇದರ ಬಗ್ಗೆ ಕೇಳಿದಾಗ ಭೂತಾನ್ ನ ಜನತೆ ಅವರ ಪ್ರಮುಖ ದೇವಾಲಯ, ಬೌದ್ಧ ಸ್ತೂಪ, ಸರ್ಕಾರಿ ಕಛೇರಿ ,ಸಂಸತ್ ಗೆ ಭೇಟಿ ನೀಡುವಾಗ ಈ ರೀತಿಯ ವಿಶೇಷವಾದ ಅಡ್ಡ ವಸ್ತ್ರಗಳನ್ನು ಹಾಕಬೇಕು ಇದರಲ್ಲಿ ಮೂರು ಬಗೆಯ ವಸ್ತ್ರಗಳನ್ನು ಅವರ ಆಕರ್ಷಣೀಯ ಮತ್ತು ಹುದ್ದೆಗಳ ಆಧಾರದ ಮೇಲೆ ಹಾಕಲಾಗುತ್ತದೆ.

 ರಿನ್ ಪುಂಗ್ ಕೋಟೆಯು ಕೇವಲ ಕೋಟೆಯಾಗಿರದೇ ಇದು  ಬೌದ್ಧ ಮಠವೂ ಹೌದು ಹಾಗೂ  ಜಿಲ್ಲಾ ಸನ್ಯಾಸಿಗಳ ಮಂಡಳಿ ಮತ್ತು ಪಾರೋ ಝಾಂಗ್‌ಖಾಗ್‌ನ ಸರ್ಕಾರಿ ಆಡಳಿತ ಕಚೇರಿಗಳನ್ನು ಹೊಂದಿದೆ. ಇದನ್ನು ಯುನೆಸ್ಕೋ  ಸಾಂಸ್ಕೃತಿಕ ಪರಂಪರೆಯ ತಾಣವಾಗಿ   ಸೇರ್ಪಡೆಗಾಗಿ ಭೂತಾನ್‌ನ ತಾತ್ಕಾಲಿಕ ಪಟ್ಟಿಯಲ್ಲಿ ತಾತ್ಕಾಲಿಕ ತಾಣವಾಗಿ ಪಟ್ಟಿ ಮಾಡಲಾಗಿದೆ. ಆದಷ್ಟು ಬೇಗ ಇದು ಯುನೆಸ್ಕೋ ಸಾಂಸ್ಕೃತಿಕ ತಾಣವಾಗಿ ಸೇರ್ಪಡೆಯಾಗಲಿ ಎಂದು ಆಶಿಸೋಣ.



ಈ ಕೋಟೆಯ ಪ್ರವೇಶ ದ್ವಾರದಲ್ಲಿ ನಮ್ಮನ್ನು ತಪಾಸಣೆ ಮಾಡಿ ಒಳಗೆ ಬಿಡುತ್ತಿದ್ದರು.ಆ ಸಮಯದಲ್ಲಿ ಸಭ್ಯ ಉಡುಪು ಧರಿಸಿದವರನ್ನು ಮಾತ್ರ ಒಳಗೆ ಬಿಡುತ್ತಿದ್ದರು.ನಮ್ಮ ತಂಡದ ಸ್ನೇಹಿತರಲ್ಲಿ ಒಬ್ಬರು ಬರ್ಮುಡ ಧರಿಸಿದ್ದರು ಅವರನ್ನು ಒಳಗಡೆ ಬಿಡಲಿಲ್ಲ. ಅಷ್ಟು ಕಟ್ಟುನಿಟ್ಟಿನ ನಿಯಮಗಳನ್ನು ಅಲ್ಲಿ ಪಾಲಿಸಲಾಗುತ್ತದೆ.   ಜೊತೆಯಲ್ಲಿ ನಾವು ಆ ಕೋಟೆಯಲ್ಲಿ ಪ್ರಶಾಂತವಾಗಿ ಇರುವಂತೆ ಸೂಚನೆ ನೀಡಿದರು.

ಪಾರೋ ಝೋಂಗ್‌ನ ಐತಿಹಾಸಿಕ ದಾಖಲೆಗಳ ಪ್ರಕಾರ  ಈ ಸ್ಥಳದ ಕೆಳಗಿನ ಬಂಡೆಯ ಮುಖವನ್ನು 8 ನೇ ಶತಮಾನದಲ್ಲಿ ಗುರು ರಿನ್‌ಪೋಚೆರವರು ಈ ಸ್ಥಳವನ್ನು   ರಿಂಗ್‌ಪಂಗ್ ಎಂದು ಕರೆದರು. ನಂತರ ಈ ಸ್ಥಳದಲ್ಲಿ ಝೋಂಗ್ ಅನ್ನು ನಿರ್ಮಿಸಿದಾಗ ಅದು   ರಿಂಗ್ ಫಂಗ್ ಝೋಂಗ್   ಎಂದು ಕರೆಯಲ್ಪಟ್ಟಿತು.
15 ನೇ ಶತಮಾನದಲ್ಲಿ ಸ್ಥಳೀಯ ಸಮುದಾಯವು ಪಾರೊದಲ್ಲಿರುವ ಹಂಗ್ರೆಲ್ ಬಂಡೆಯನ್ನು ಫಾಜೊ ಡ್ರುಗೊಮ್ ಝಿಗ್ಪೊ ಅವರ ವಂಶಸ್ಥ ಲಾಮಾ ಡ್ರುಂಗ್ ಡ್ರುಂಗ್ ಗಯಾಲ್‌ಗೆ ಅರ್ಪಿಸಿತು. ಡ್ರುಂಗ್ ಡ್ರುಂಗ್ ಗಯಾಲ್ ಒಂದು ಸಣ್ಣ ದೇವಾಲಯವನ್ನು ನಿರ್ಮಿಸಿದರು.  ನಂತರ ಹಂಗ್ರೆಲ್ ಡ್ಜಾಂಗ್ ಎಂದು ಕರೆಯಲ್ಪಡುವ ಐದು ಅಂತಸ್ತಿನ ಕೋಟೆಯನ್ನು ನಿರ್ಮಿಸಿದರು.
17 ನೇ ಶತಮಾನದ ವೇಳೆಗೆ ಹಂಗ್ರೆಲ್‌ನ ಪ್ರಭುಗಳು ಎಂದು ಕರೆಯಲ್ಪಡುವ ಅವರ ವಂಶಸ್ಥರು ಈ ಕೋಟೆಯನ್ನು ಏಕೀಕೃತ ಭೂತಾನ್ ರಾಜ್ಯದ ಸ್ಥಾಪಕ ಮತ್ತು ಡ್ರುಕ್ಪಾ ವಂಶಾವಳಿಯ ಮುಖ್ಯಸ್ಥ ಝಬ್ಡ್ರಂಗ್ ನ್ಗಾವಾಂಗ್ ನಮ್ಗ್ಯಾಲ್‌ಗೆ ಅವರ ಧಾರ್ಮಿಕ ಮತ್ತು ರಾಜಕೀಯ ಅಧಿಕಾರವನ್ನು ಗುರುತಿಸಿ ಅರ್ಪಿಸಿದರು. 1644 ರಲ್ಲಿ ಝಬ್ಡ್ರಂಗ್ ಹಳೆಯ ರಚನೆಯನ್ನು ಕೆಡವಿ ಹೊಸ ಝೋಂಗ್‌ಗೆ ಅಡಿಪಾಯ ಹಾಕಿದರು. 


23 ನೇ ಪೆನ್‌ಲೋಪ್ ದಾವಾ ಪೆಂಜೋರ್‌ನ ಆಳ್ವಿಕೆಯಲ್ಲಿ  ಮೊದಲ ರಾಜ ಗೊಂಗ್ಸಾ ಉಗ್ಯೆನ್ ವಾಂಗ್‌ಚುಕ್ ಸಿಂಹಾಸನಾರೋಹಣ ಮಾಡುವ ಮೊದಲು ಕೋಟೆಯು  ಬೆಂಕಿಯಿಂದ ತೀವ್ರವಾಗಿ ಹಾನಿಗೊಳಗಾಯಿತು.20 ಮೀಟರ್ ಅಗಲದ ಥೊಂಗ್‌ಡ್ರೆಲ್ ಹೊರತುಪಡಿಸಿ, ಹೆಚ್ಚಿನ ಅವಶೇಷಗಳು ಮತ್ತು ಪ್ರತಿಮೆಗಳು ನಾಶವಾದವು. ಥೊಂಗ್‌ಡ್ರೆಲ್‌ಗೆ ಗೌರವ ಸಲ್ಲಿಸುವುದರಿಂದ ಆಧ್ಯಾತ್ಮಿಕ ಅರ್ಹತೆ ಮತ್ತು ವಿಮೋಚನೆಯ ಸಾಮರ್ಥ್ಯ ಬರುತ್ತದೆ ಎಂದು ಭಕ್ತರು ನಂಬಿದ್ದಾರೆ. 1993 ರ ಚಲನಚಿತ್ರ ಲಿಟಲ್ ಬುದ್ಧದ ಹಲವಾರು ದೃಶ್ಯಗಳನ್ನು ಪಾರೋ ರಿನ್‌ಪುಂಗ್ ಝೋಂಗ್‌ನಲ್ಲಿ ಚಿತ್ರೀಕರಿಸಲಾಗಿದೆ.

ಈ ಕೋಟೆಯಲ್ಲಿರುವ ಪ್ರಮುಖ ಸ್ಮಾರಕಗಳನ್ನು ನಮಗೆ ನಮ್ಮ ಗೈಡ್ ನಮಗೆ ತೋರಿಸುತ್ತಾ ವಿವರಣೆ ನೀಡುತ್ತಾ ಕೋಟೆಯಲ್ಲಿ ಒಂದು ಸುತ್ತು ಹಾಕಿಸಿ ನಮಗೆ ಕೋಟೆಯ ಪರಿಚಯ ಮಾಡಿಸಿದರು.ಸೂರ್ಯಾಸ್ತದ ಸಮಯದಲ್ಲಿ ರಿನ್‌ಪುಂಗ್ ಡ್ಜಾಂಗ್ ಮತ್ತು ನೇಮಿ ಝಾಮ್ ಸೇತುವೆ
ರಿನ್‌ಪುಂಗ್ ಡ್ಜಾಂಗ್ ಒಳಗೆ ಹದಿನಾಲ್ಕು ದೇವಾಲಯಗಳು ಮತ್ತು ಪ್ರಾರ್ಥನಾ ಮಂದಿರಗಳಿವೆ. ಅವೆಂದರೆ ಕುಂಗರ್ವ,ಸನ್ಯಾಸಿಗಳ ಸಭಾ ಭವನ,ಶ್ರೀಗಂಧದ ಸ್ತೂಪ,ರಕ್ಷಕ ದೇವಾಲಯ,ಗುರುವಿನ ಎಂಟು ಅಭಿವ್ಯಕ್ತಿಗಳ ದೇವಾಲಯ,ಲಾಮಾ ಮುಖ್ಯಸ್ಥರ ಪ್ರಾರ್ಥನಾ ಮಂದಿರ,ಅಮಿತಾಯಸ್ ಪ್ರಾರ್ಥನಾ ಮಂದಿರ,ದಿ ಕ್ಲಿಯರ್ ಕ್ರಿಸ್ಟಲ್ ಶ್ರೈನ್,ಹನ್ನೊಂದು ಮುಖದ ಅವಲೋಕಿತೇಶ್ವರನ ಪ್ರಾರ್ಥನಾ ಮಂದಿರ,ಅಬಾಟ್‌ನ ಅಪಾರ್ಟ್‌ಮೆಂಟ್‌ಗಳು,ಅಕ್ಷೋಭ್ಯ ದೇಗುಲ,ನಿಧಿ ಬಹಿರಂಗಪಡಿಸುವವರ ದೇವಾಲಯ,ರಾಜನ ಅಪಾರ್ಟ್‌ಮೆಂಟ್‌ಗಳು,ಬುರ್ಸಾರನ ದೇವಾಲಯ
ಮುಖ್ಯ ಝೊಂಗ್‌ನ ಹೊರಗೆ ದೇಯಾಂಗ್ಖಾ ದೇವಸ್ಥಾನವಿದೆ.
ರಿನ್‌ಪುಂಗ್ ಡ್ಜಾಂಗ್ ಮೇಲಿನ ಬೆಟ್ಟದ ಮೇಲೆ 1649 ರಲ್ಲಿ ನಿರ್ಮಿಸಲಾದ ಏಳು ಅಂತಸ್ತಿನ ಕಾವಲು ಗೋಪುರ ಕೋಟೆ ಅಥವಾ ಟಾ ಡ್ಜಾಂಗ್ ಇದೆ. 1968 ರಲ್ಲಿ ಇದನ್ನು ಭೂತಾನ್ ರಾಷ್ಟ್ರೀಯ ವಸ್ತುಸಂಗ್ರಹಾಲಯದ ನೆಲೆಯಾಗಿ ಸ್ಥಾಪಿಸಲಾಯಿತು .
ರಿನ್‌ಪುಂಗ್ ಡ್ಜಾಂಗ್‌ನ ಸ್ವಲ್ಪ ಕೆಳಗೆ ಸಾಂಪ್ರದಾಯಿಕ ಮುಚ್ಚಿದ ಕ್ಯಾಂಟಿಲಿವರ್ ಸೇತುವೆ ಇದೆ.
ಈ ಕೋಟೆಯ ಸೌಂದರ್ಯವನ್ನು ಸವಿಯುತ್ತಾ ಸಾಗಿದ ನಮ್ಮನ್ನು  ನಮ್ಮ ಗೈಡ್ ಮಿಲೆನಿಯಮ್ ವ್ಯೂ ಪಾಯಿಂಟ್ ಬಳಿ ಕರೆದುಕೊಂಡು ಹೋದರು.ಅದು ಬಹಳ ಸುಂದರವಾದ ದೃಶ್ಯಗಳನ್ನು ಹೊಂದಿ ನಮ್ಮ ಮನ ತಣಿಸಿತು. ಪಾರೋ ಏರ್ಪೋರ್ಟ್, ನದಿ ಕಣಿವೆ, ಕಾಡುಗಳು, ಮನೆಗಳು ಮುಂತಾದ ಸೀನರಿಗಳು ನೋಡುಗರನ್ನು ಸೆಳೆಯುತ್ತವೆ.ಅದೇ ಪ್ರದೇಶದಲ್ಲಿ ಇರುವ ಒಂದು ಮನೆಯ ಕಡೆ ತೋರಿಸಿದ ನಮ್ಮ ‌ಗೈಡ್ ಆ ಮನೆಯು ರಾಜ ಮನೆತನದವರು ಪಾರೋಗೆ ಬಂದಾಗ ಉಳಿದುಕೊಳ್ಳಲು ಇರುವ ಮನೆ. ಭಾರತದಲ್ಲಿ  ಇಂದಿರಾಗಾಂಧಿ ರವರ ಹತ್ಯೆ ಆದಾಗ ರಾಜೀವ್ ಗಾಂಧಿಯವರನ್ನು ಆ ಮನೆಯಲ್ಲಿ ಸುರಕ್ಷಿತವಾಗಿ ಇಟ್ಟಿದ್ದರು ಎಂದು ಹೇಳಿದರು.



ಆ ಕೋಟೆಯಲ್ಲಿ ಇರುವ ಕೆಲ ವಿಶೇಷವಾದ ಪೋಟೋಗಳ ಕಡೆಗೆ ನಮ್ಮ ಗಮನ ಸೆಳೆದ ನಮ್ಮ ಗೈಡ್ ತೆಂದಿನ್ ಆ ಕೋಟೆಯಲ್ಲಿ ವಾರ್ಷಿಕವಾಗಿ ನಡೆಯುವ ಧಾರ್ಮಿಕ ಆಚರಣೆಗಳ ಬಗ್ಗೆ ತಿಳಿಸಿದರು.

ಸಾಂಪ್ರದಾಯಿಕ ಭೂತಾನೀಸ್ ಚಂದ್ರಮಾನ  ಕ್ಯಾಲೆಂಡರ್‌ನ ಎರಡನೇ ತಿಂಗಳಿನ ಹನ್ನೊಂದನೇ ತಾರೀಖಿನಿಂದ ಹದಿನೈದನೇ ದಿನದವರೆಗೆ ಅಂದರೆ ಸಾಮಾನ್ಯವಾಗಿ ಗ್ರೆಗೋರಿಯನ್ ಕ್ಯಾಲೆಂಡರ್‌ನ ಮಾರ್ಚ್ ಅಥವಾ ಏಪ್ರಿಲ್‌ನಲ್ಲಿ  ರಿನ್‌ಪುಂಗ್ ಕೋಟೆಯಲ್ಲಿ ಒಂದು ದೊಡ್ಡ ವಾರ್ಷಿಕ ಉತ್ಸವ ಅಥವಾ ತ್ಶೆಚು ನಡೆಯುತ್ತದೆ. ಈ ಸಂದರ್ಭದಲ್ಲಿ ಪವಿತ್ರ ಚಿತ್ರಗಳನ್ನು ಮೆರವಣಿಗೆಯಲ್ಲಿ ತೆಗೆದುಕೊಳ್ಳಲಾಗುತ್ತದೆ. ಇದರ ನಂತರ ಧಾರ್ಮಿಕ ಕಥೆಗಳನ್ನು ತಿಳಿಸುವ ಸಾಂಪ್ರದಾಯಿಕ ಮುಖವಾಡ ನೃತ್ಯಗಳ ಸರಣಿಯನ್ನು ಸನ್ಯಾಸಿಗಳು ಹಲವಾರು ದಿನಗಳವರೆಗೆ ಪ್ರದರ್ಶಿಸುತ್ತಾರೆ.
ಹದಿನೈದನೇ ದಿನದ ಬೆಳಗಿನ ಜಾವದಲ್ಲಿ, ಪದ್ಮಸಂಭವನ ಎಂಟು ಅವತಾರಗಳಾದ     ಗುರು ಪೆಮಾ ಜಂಗ್ನಿ, ಗುರು ನಿಮಾ ಯೋಯೆಜರ್, ಗುರು ಸಿಂಗ್ಯೆ ಡ್ರಾಡ್ರಾಂಗ್, ಗುರು ತ್ಶೋಕಿ ದೋರ್ಜಿ, ಗುರು ಶಾಚಾ ಸಿಂಗ್ಯೆ, ಗುರು ಪೆಮಾ ಗೈಲ್ಪೋ, ಗುರು ದೋರ್ಜಿ ಡೋಲೋ ಮತ್ತು ಗುರು ಲೋಡನ್ ಚೋಕ್ಸೆ ಗಳನ್ನು ಚಿತ್ರಿಸುವ ಒಂದು ದೊಡ್ಡ ಪವಿತ್ರ ಥೋಂಗ್ಡ್ರೆಲ್ ಬ್ಯಾನರ್ ಥಂಗ್ಕಾವನ್ನು  ಬೆಳಗಿನ ಜಾವದಲ್ಲಿ ಸಾರ್ವಜನಿಕರಿಗೆ ಪ್ರದರ್ಶಿಸಲಾಗುತ್ತದೆ. ಸೂರ್ಯನ ಬೆಳಕು ಅದರ ಮೇಲೆ ಬೀಳಲು ಬಿಡದಿರುವ ಸಂಪ್ರದಾಯವನ್ನು ಉಳಿಸಿಕೊಳ್ಳಲು ಬೌದ್ಧ  ಸನ್ಯಾಸಿಗಳು ಮುಖವಾಡ ನೃತ್ಯ ಮಾಡುವ ನೆಲವನ್ನು ದೆಯಾಂಗ್ಖಾ ಎಂದು ಕರೆಯಲಾಗುತ್ತದೆ ಎಂದು ಹೇಳಿದರು.

ಕೋಟೆಯ ಐತಿಹಾಸಿಕ ಜಾಗೂ ಧಾರ್ಮಿಕ ಮಹತ್ವ ತಿಳಿದ ನಾವು ಕೋಟೆಯ ಒಳಭಾಗ ಹಾಗೂ ಹೊರಭಾಗದಲ್ಲಿ ನಮ್ಮ ತಂಡದ ಜೊತೆಯಲ್ಲಿ ನೆನಪಿಗಾಗಿ ಪೋಟೋ ತೆಗೆದುಕೊಂಡು ಭೂತಾನ್ ನ ಮತ್ತೊಂದು ದೇಗುಲ ಕಿಚು ಲಕಾಂಗ್ ಕಡೆಗೆ ಪಯಣ ಬೆಳೆಸಿದೆವು.

ಸಿಹಿಜೀವಿ ವೆಂಕಟೇಶ್ವರ
ತುಮಕೂರು.

21 ಮಾರ್ಚ್ 2026

ನಮ್ಮೂರ ಪಾತೇದೇವರು.

 


ಪಾತಲಿಂಗೇಶ್ವರ ಮಹಿಮೆ.


ನಮ್ಮೂರ ಅಧಿ ದೇವತೆ ಚೌಡೇಶ್ವರಿಯಷ್ಟೇ ಪ್ರಮುಖವಾದ ಮೂರು ದೇವಾಲಯಗಳಲ್ಲಿ ಪಾತಲಿಂಗೇಶ್ವರ ಅಥವಾ ಪಾರ್ಥಲಿಂಗೇಶ್ವರ ಗುಡಿಯು ನಮ್ಮೂರ ಜನರ ಪ್ರಾರ್ಥನಾ ತಾಣವಾಗಿದೆ.
ಬಾಲ್ಯದಲ್ಲಿ  ನಮ್ಮೂರ ಶಾಲೆಯಲ್ಲಿ ಓದುವಾಗ ಸೋಮವಾರ ಮತ್ತು ಪ್ರಮುಖವಾದ ದೇವರ ಕಾರ್ಯವಿದ್ದಾಗ ನಮ್ಮ ಸಹಪಾಠಿ ಚಂದ್ರ ಶಾಲೆಗೆ ಬರುತ್ತಿರಲಿಲ್ಲ. ನಮ್ಮ TNT ಅರ್ಥಾತ್  ತಿಪ್ಪೇಶಪ್ಪ  ‌ಮೇಷ್ಟ್ರು ಚಂದ್ರನ ಅಕ್ಷರಶಃ ಹೊತ್ತುಕೊಂಡು ಬನ್ನಿ ಎಂದು  ನಮ್ಮನ್ನು ಕಳಿಸುತ್ತಿದ್ದರು.ನಾವು ಕೆಲವೊಮ್ಮೆ ಗುರುಗಳ ಮಾತನ್ನು ಶಿರಸಾವಹಿಸಿ ಪಾಲಿಸಿ ಅವನನ್ನು ಎತ್ತಾಕಿಕೊಂಡು ಬಂದಿದ್ದೆವು.ಹೀಗೆ ಒಮ್ಮೆ ಚಂದ್ರನನ್ನು ಎತ್ತಾಕಿಕೊಂಡು ಬರಲು ಹೋದಾಗ ಅವರಪ್ಪ ನಮ್ಮನ್ನು ಗದರಿ ಕಳಿಸಿ‌‌ ಶಾಲೆಗೆ ಬಂದು " ಮೇಷ್ಟ್ರೇ ನಮ್ ಹುಡ್ಗ ಸೋಮಾರ ಇಸ್ಕೂಲ್ ಗೆ ಬರಲ್ಲ ಅಷ್ಟೇ, ಇನ್ಮೇಲೆ ಈ ಹುಡುಗ್ರು ನಮ್ ಮನೆ ಹತ್ರ ಬಂದ್ರೆ ನೆಟ್ಗಿರಲ್ಲ ನೋಡು" ಎಂದು ಗದರಿ ಹೋಗಿದ್ದರು. ಅಲ್ಲಿ ಗೆ ನಮ್ ಮಾಷ್ಟ್ರು ಚಂದ್ರು ಬಂದಾಗ ಬರಲಿ ಎಂದು ತೀರ್ಮಾನಕ್ಕೆ ಬಂದು ಸುಮ್ಮನಾಗಿದ್ದರು.ಚಂದ್ರಪ್ಪನಿಗೆ ಪಾತಲಿಂಗೇಶ್ವರನ ಸೇವೆ ಮಾಡುವ ಪುಣ್ಯ ಲಭಿಸಿತ್ತು.ದೊಡ್ಡಪ್ಪ ಜಡಿಯಪ್ಪ,ಹಾಗೂ  ಅಪ್ಪ ತಮ್ಮಣ್ಣನವರ ದೈವ ಭಕ್ತಿಯಿಂದ ಪ್ರೇರಿತನಾದ ಚಂದ್ರಪ್ಪ ದೇವರ ಪೂಜೆಗೆ ತನ್ನ ‌ಜೀವನ ಮೀಸಲಿಟ್ಟ.ಈಗ ಪಾತಲಿಂಗೇಶ್ವರ ಸ್ವಾಮಿಯ ಪ್ರಮುಖ ಅರ್ಚಕನಾಗಿರುವ ನನ್ನ ಗೆಳೆಯ ಚಂದ್ರಪ್ಪ ನಮ್ಮ  ಪಾತೇದೇವರ ದೈವಿಕ ಕಾರ್ಯಗಳನ್ನು ಸುಸೂತ್ರವಾಗಿ ನಡೆಸಿಕೊಂಡು ಬರುತ್ತಿದ್ದಾನೆ.ಯುಗಾದಿ ಹಬ್ಬಕ್ಕೆ ‌ಊರಿಗೆ ಹೋದಾಗ ಪಾತೇದೇವರ ಗುಡಿಯ  ಬಾಗಿಲು ಮುಚ್ಚಿತ್ತು.ಎಲ್ಲಿದ್ದನೋ ಗೆಳೆಯ ಕ್ಷಣಾರ್ಧದಲ್ಲಿ ಬಂದು  ಬಾಗಿಲು ತೆರೆದು ನಮ್ಮ ಕುಟುಂಬಕ್ಕೆ ಸ್ವಾಮಿಯ ದರ್ಶನ ಮಾಡಿಸಿ ಪ್ರಸಾದ ಕೊಟ್ಟ. ಅದಕ್ಕಿಂತ ಮಿಗಿಲಾಗಿ ಒಂದು ವಿಶೇಷ ಪುಸ್ತಕದ ಪ್ರಸಾದ ನೀಡಿದ. ಅದು ಪಾತಲಿಂಗೇಶ್ವರ ಸ್ವಾಮಿ ಕುರಿತಾಗಿ ನಮ್ಮೂರ ಕಂಡಕ್ಟರ್ ರಾಮಣ್ಣ ಬರೆದ ಪುಸ್ತಕ. ಅದರಲ್ಲಿ ಸ್ವಾಮಿಯ ಜೀವನ ಮತ್ತು ಪವಾಡಗಳ ಕುರಿತಾದ ಹತ್ತಾರು ಪ್ರಸಂಗಗಳಿವೆ.ಮುಂದೆ ಅವುಗಳ ಬಗ್ಗೆ ತಿಳಿಸುವೆ.ಸ್ವಾಮಿಯ ಕೃಪೆಯಾದರೆ ನಾನು ಪಾತೇದೇವರ ಕುರಿತೊಂದು ಪುಸ್ತಕ ಬರೆಯುವ ಬಯಕೆಯಿದೆ.
ಪಾತೇದೇವರು ನಿಮ್ಮನ್ನು ಹರಸಲಿ..