ನೆಲದ ನಕ್ಷತ್ರಗಳು..
ನೆಲದ ನಕ್ಷತ್ರ:1
ಅಂತರರಾಷ್ಟ್ರೀಯ ಮಟ್ಟದಲ್ಲಿ ಮಿಂಚುತ್ತಿರುವ ಕಲಾವಿದೆ ರೇಣುಕಾ ಕೇಸರಮಡು
ಕಲೆ ಎಂಬುದು ಸಾಮಾನ್ಯಕ್ಕಿಂತ ಭಿನ್ನವಾದ, ವಿಶೇಷವಾದ ಹಾಗೂ ಗಮನ ಸೆಳೆಯುವ ಕಾಯಕ. ನಮ್ಮ ನಾಡಿನ ಪ್ರಮುಖ ಕಲಾವಿದರಲ್ಲಿ ಒಬ್ಬರಾದ ರೇಣುಕಾ ಕೆಸರಮಡು ಅವರು ಈ ಮಾತಿಗೆ ಜೀವಂತ ಉದಾಹರಣೆಯಾಗಿದ್ದಾರೆ. ಅವರು ಕೇವಲ ಚಿತ್ರಕಲಾವಿದೆಯಷ್ಟೇ ಅಲ್ಲ, ಹಲವಾರು ವರ್ಷಗಳಿಂದ ಶಿಲ್ಪಿಯಾಗಿ, ಕಲಾ ಸಂಘಟನಕಾರರಾಗಿ, ಕಲಾ ವಿಮರ್ಶಕಿಯಾಗಿ ಹಾಗೂ ಕಲಾ ಉಪನ್ಯಾಸಕಿಯಾಗಿ ಕಲಾಲೋಕಕ್ಕೆ ತಮ್ಮದೇ ಆದ ಕೊಡುಗೆ ನೀಡಿದ್ದಾರೆ.
ತುಮಕೂರು ತಾಲೂಕಿನ ಕ್ಯಾತಸಂದ್ರ ಸಮೀಪದ ಕೇಸರಮಡು ಗ್ರಾಮದಲ್ಲಿ ೧೧ ಮಾರ್ಚ್ ೧೯೫೭ರಂದು ಟಿ.ಕೆ. ಚಂದ್ರಶೇಖರಯ್ಯ ಹಾಗೂ ಸಿದ್ದಗಂಗಮ್ಮ ಅವರ ಮಗಳಾಗಿ ಜನಿಸಿದ ರೇಣುಕಾ ಅವರದು ಸಾಮಾನ್ಯ ರೈತ ಹಾಗೂ ಪುರೋಹಿತ ಕುಟುಂಬ. ತುಮಕೂರಿನ ಸಿದ್ದಗಂಗಾ ಕಾಲೇಜಿನಲ್ಲಿ ಬಿಎಸ್ಸಿ ಪದವಿ ಪಡೆದ ಅವರು, ಬೆಂಗಳೂರಿನ ಕೆನ್ ಕಲಾಶಾಲೆಯಲ್ಲಿ ಪ್ರಸಿದ್ಧ ಕಲಾಗುರು ಆರ್.ಎಂ. ಹಡಪದ್ ಅವರ ಮಾರ್ಗದರ್ಶನದಲ್ಲಿ ಐದು ವರ್ಷಗಳ ಡ್ರಾಯಿಂಗ್ ಡಿಪ್ಲೊಮಾ ಪಡೆದರು. ಈ ಕೋರ್ಸ್ನಲ್ಲಿ ಪ್ರತಿ ವರ್ಷವೂ ಮೊದಲ ರ್ಯಾಂಕ್ ಹಾಗೂ ಚಿನ್ನದ ಪದಕವನ್ನು ಅವರು ಮುಡಿಗೇರಿಸಿಕೊಂಡಿದ್ದರು. ತದನಂತರ ಅಣ್ಣಾಮಲೈನಲ್ಲಿ ಇತಿಹಾಸದಲ್ಲಿ ಎಂ.ಎ, ಹಾಗೂ ಬೆಂಗಳೂರಿನಲ್ಲಿ ಕಲಾ ಇತಿಹಾಸದಲ್ಲಿ ಪದವಿಯನ್ನೂ ಪಡೆದರು.
ತಮ್ಮ ಕಲಾ ಪ್ರಯಾಣದ ಪ್ರಾರಂಭದಲ್ಲಿ ಟೆರಾಕೊಟಾ ಹಾಗೂ ಅಲ್ಯುಮಿನಿಯಂ ಶಿಲ್ಪಗಳನ್ನು ರಚಿಸುತ್ತಿದ್ದ ರೇಣುಕಾ ಅವರು, ವಿದೇಶಗಳಲ್ಲಿ ಪ್ರದರ್ಶನಕ್ಕೆ ತೆರಳುವಾಗ ತೂಕದ ಸಮಸ್ಯೆಯಿಂದಾಗಿ ಚಿತ್ರಗಳ ರಚನೆಗೆ ಹೆಚ್ಚು ಒತ್ತು ನೀಡಿದರು. ತೈಲವರ್ಣದ ಬಳಕೆಗೆ ಹೆಚ್ಚು ಸಮಯ ಬೇಕಾಗುವುದರಿಂದ, ಅವರು ಕಾಲಕ್ರಮೇಣ ಅಕ್ರಿಲಿಕ್ ಪ್ಲಾಸ್ಟಿಕ್ ಬಣ್ಣಗಳನ್ನು ಬಳಸುವುದನ್ನು ರೂಢಿಸಿಕೊಂಡರು. ಅವರ ಕಲಾಕೃತಿಗಳಲ್ಲಿ ಮುಖ್ಯವಾಗಿ ಹೆಣ್ಣಿಗೆ ಸಂಬಂಧಪಟ್ಟ ಸ್ವಯಂ ಭಾವಗಳು ಕೇಂದ್ರವಿಷಯವಾಗಿರುತ್ತವೆ. ತಮ್ಮ ಕಲಾ ಸರಣಿಗಳಲ್ಲಿ ಪ್ರಕೃತಿ , ಬುದ್ಧ, ನವರಸ, ಹಂಪಿ ಮುಂತಾದ ವಿಷಯಗಳನ್ನು ಚಿತ್ರಿಸಿದ್ದಾರೆ. ಕೊರೋನಾ ಸಮಯದಲ್ಲಿ ಅವರು 'ಕೊರೋನಾ ಕಿರೀಟ', 'ಕೊರೋನಾ ವೇವ್ಸ್' ಸೇರಿದಂತೆ ೬೦ರಷ್ಟು ರೇಖಾ ಚಿತ್ರಗಳನ್ನು ರಚಿಸಿದ್ದು, ಅವು ಇಟಲಿ ಹಾಗೂ ಭಾರತದ ಹಲವೆಡೆ ಪ್ರದರ್ಶನಗೊಂಡಿವೆ. ಇತ್ತೀಚೆಗೆ ಅವರು ತಮ್ಮದೇ ಚಿತ್ರಗಳನ್ನು ಬಳಸಿಕೊಂಡು ಡಿಜಿಟಲ್ ಕಲಾಕೃತಿಗಳನ್ನೂ ರಚಿಸುತ್ತಿದ್ದಾರೆ.
ಇವರ ಕಲಾ ಸೇವೆಗೆ ಅಂತರರಾಷ್ಟ್ರೀಯ ಗೌರವ ಲಭಿಸಿದೆ.
ರೇಣುಕಾ ಅವರ ಕಲಾಕೃತಿಗಳು ಭಾರತದ ವಿವಿಧ ನಗರಗಳಲ್ಲದೆ ಇಟಲಿ (ಮಿಲಾನ್, ಕೊರ್ಸಿಕೋ), ಫಿನ್ಲ್ಯಾಂಡ್, ಅಮೆರಿಕಾ, ರೊಮೇನಿಯಾ, ಸ್ಪೇನ್, ರಷ್ಯಾ, ಜರ್ಮನಿ ಸೇರಿದಂತೆ ಅನೇಕ ದೇಶಗಳಲ್ಲಿ ಪ್ರದರ್ಶಿತಗೊಂಡಿವೆ ಹಾಗೂ ಅಲ್ಲಿನ ಸಂಗ್ರಹಾಲಯಗಳಲ್ಲಿ ಸ್ಥಾನ ಪಡೆದಿವೆ. ೨೦೦೮ರಲ್ಲಿ ಸಿದ್ದಗಂಗಾ ಮಠದ ಶ್ರೀ ಶ್ರೀ ಶಿವಕುಮಾರ ಸ್ವಾಮಿಗಳ ನೂರನೇ ವರ್ಷದ ಸಂದರ್ಭದಲ್ಲಿ ೧೫ ವಿದೇಶಿ ಹಾಗೂ ೧೫ ದೇಶಿಯ ಕಲಾವಿದರನ್ನು ಒಬ್ಬರೇ ವೇದಿಕೆಗೆ ತಂದು ಅಂತರರಾಷ್ಟ್ರೀಯ ಕಲಾ ಶಿಬಿರವನ್ನು ತುಮಕೂರಿನಲ್ಲಿ ಯಶಸ್ವಿಯಾಗಿ ಆಯೋಜಿಸಿದ್ದರು.
ಇತ್ತೀಚೆಗಿನ ದಿನಗಳಲ್ಲಿ ಕಲಾಶಾಲೆಗಳು ಪ್ರೋತ್ಸಾಹವಿಲ್ಲದೆ ಮುಚ್ಚಲ್ಪಡುತ್ತಿರುವುದರ ಬಗ್ಗೆ ಹಾಗೂ ಕಳೆದ ೧೦-೧೫ ವರ್ಷಗಳಿಂದ ಕಲಾ ಶಿಕ್ಷಕರ ನೇಮಕಾತಿ ಆಗದೆ ಕಲಾ ಶಿಕ್ಷಣ ಕನಿಷ್ಠವಾಗುತ್ತಿರುವುದಕ್ಕೆ ಅವರು ತೀವ್ರ ಕಳಕಳಿ ವ್ಯಕ್ತಪಡಿಸಿದ್ದಾರೆ. "ನಮ್ಮದೇ ಆದ ಕಲಾ ಚಿಂತನೆ, ಪ್ರಯೋಗಗಳು ಇಲ್ಲದಿದ್ದರೆ ಮುಂದೆ ಎಲ್ಲದಕ್ಕೂ ಕೃತಕ ಬುದ್ಧಮತ್ತೆ ಸಿದ್ಧವಾಗಿರುತ್ತದೆ ಹಾಗೂ ಕಲಾವಿದರು ಸಿಗುವುದಿಲ್ಲ" ಎಂದು ಅವರು ಎಚ್ಚರಿಸುತ್ತಾರೆ. ಕಲಾಕೃತಿಗಳನ್ನು ಕೊಂಡುಕೊಳ್ಳುವ ಹವ್ಯಾಸ ಜನರಲ್ಲಿ ವಿರಳವಾಗಿರುವುದರಿಂದ, ಕಲೆಯನ್ನೇ ನಂಬಿ ಬದುಕುವುದು ತುಂಬಾ ಕಷ್ಟ ಎಂದು ಅವರು ಅಭಿಪ್ರಾಯಪಡುತ್ತಾರೆ.
ರೇಣುಕಾ ಅವರ ಪತಿ ಬಿ.ಎಸ್. ಮಲ್ಲಿಕಾರ್ಜುನ ಅವರು ಸುಗಮ ಸಂಗೀತ ಹಾಗೂ ನಾಟಕ ಕಲಾವಿದರಾಗಿದ್ದು, 'ಶ್ರೀ ಬಸವೇಶ್ವರ' ನಾಟಕದಲ್ಲಿ ಒಂದು ಸಾವಿರದಷ್ಟು ಬಾರಿ ಪಾತ್ರ ನಿರ್ವಹಿಸಿದ್ದಾರೆ. ಅವರ ಮಕ್ಕಳು ಕೂಡ ಆರ್ಕೆಟೆಕ್ಟ್ ಹಾಗೂ ಮ್ಯೂಜಿಕ್ ಟೆಕ್ನಾಲಜಿ ಕ್ಷೇತ್ರದಲ್ಲಿ ಗುರುತಿಸಿಕೊಂಡಿದ್ದು, ಕುಟುಂಬವೇ ಸದಾ ಕಲಾತ್ಮಕ ಲೋಕದೊಂದಿಗೆ ಸಂಪರ್ಕ ಹೊಂದಿದೆ. "ಉತ್ತಮ ಕಲಾಕೃತಿಗಳನ್ನು ಮಾಡಿ ಪ್ರದರ್ಶಿಸುವ ಮೂಲಕ ನಮ್ಮ ದೇಶವನ್ನು ಉತ್ತಮವಾಗಿ ಬಿಂಬಿಸಬೇಕು, ಅದೇ ನಾವು ದೇಶಕ್ಕೆ ಕೊಡುವ ಸೇವೆ" ಎಂಬುದು ಈ ಕಲಾವಿದೆಯ ಆಶಯ.
ಸಿಹಿಜೀವಿ ವೆಂಕಟೇಶ್ವರ
ತುಮಕೂರು
9900925529









