14 ಮಾರ್ಚ್ 2026

ರಾಜರ ಅರಮನೆ ಡಬಲ್ ಬೆಡ್ ರೂಂ ಮನೆ!



ರಾಜರ ಅರಮನೆ ಡಬಲ್ ಬೆಡ್ ರೂಂ ಮನೆ!







ಭೂತಾನ್ ನ ರಾಜಧಾನಿ ಥಿಂಪು ನಗರದ ಏಕೈಕ ಹಿಂದೂ ದೇವಾಲಯದ ದರ್ಶನ ಮಾಡಿದ ನಂತರ ಭೂತಾನ್ ನ ರಾಜರ ಮನೆ ಮತ್ತು ಭೂತಾನ್ ಸಂಸತ್ ನೋಡಲು ಹೊರಟೆವು. ನಮ್ಮ ಭೂತಾನ್ ಪ್ರವಾಸದುದ್ದಕ್ಕೂ ನಮ್ಮ ಗೈಡ್ ತೆಂದಿನ್ ಅಲ್ಲಿನ ರಾಜರ ಬಗ್ಗೆ ಬಹಳ ಹೆಮ್ಮೆಯಿಂದ ಹೇಳುತ್ರಿದ್ದ.ಹಾಗಾಗಿ ಭೂತಾನ್ ದೊರೆಯ ಅರಮನೆ ನೋಡಲು ನಾನು ಹಾಗೂ ನನ್ನ ಸ್ನೇಹಿತರು ಕಾತುರರಾಗಿದ್ದೆವು.
ಆದರೆ ಭದ್ರತೆಯ ದೃಷ್ಟಿಯಿಂದ ನಮ್ಮನ್ನು ಆ ಸ್ಮಾರಕಗಳ ಹತ್ತಿರ ಬಿಡಲಿಲ್ಲ. ದೂರದಿಂದಲೇ ಅಲ್ಲಿನ ಸಂಸತ್ ಹಾಗೂ ರಾಜರ  ಅರಮನೆ ನೋಡಿದೆವು. ವಾಸ್ತವವಾಗಿ ಅದು ಅರಮನೆಯಾಗಿರದೇ ಡಬಲ್ ಬೆಡ್ ರೂಂ‌ನ ಮನೆ ಎಂದು ತಿಳಿದು ರಾಜನ ಸರಳ ಜೀವನ ಕಂಡು ಅವರ ಬಗ್ಗೆ ನನಗೂ ಗೌರವ ಭಾವನೆ ಉಂಟಾಯಿತು. ನಮ್ಮಲ್ಲಿ ಗ್ರಾಮ ಪಂಚಾಯತ್ ಸದಸ್ಯರಾದರೆ ಅವರ ವರ್ತನೆ, ದರ್ಪ, ತೋರ್ಪಡಿಸುವ ಗುಣಗಳನ್ನು ಕಂಡಿದ್ದೇವೆ.ಇಡೀ ದೇಶಕ್ಕೆ  ನಾಯಕನಾಗಿರುವ ದೊರೆಯ  ಸರಳ ಜೀವನ ಶೈಲಿ ನಮಗೂ ಅನುಕರಣೀಯ.




ಥಿಂಫು ನಗರದ ಉತ್ತರ ಭಾಗದಲ್ಲಿರುವ ಡೆಚೆಂಚೋಲಿಂಗ್ ಅರಮನೆ ಭೂತಾನ್ ರಾಜಕುಟುಂಬದ ಅಧಿಕೃತ ವಾಸಸ್ಥಳವಾಗಿದೆ. ಅರಮನೆಯ ಸುತ್ತಲೂ ವಿಶಾಲವಾದ ಹಸಿರು ತೋಟಗಳು ಮತ್ತು ಭದ್ರತಾ ವ್ಯವಸ್ಥೆ ಇದೆ. ಸಾಂಪ್ರದಾಯಿಕ ಭೂತಾನಿ ವಾಸ್ತುಶಿಲ್ಪದಲ್ಲಿ ನಿರ್ಮಿಸಲಾದ ಈ ಅರಮನೆ ಬಿಳಿ ಗೋಡೆಗಳು, ಕೆಂಪು ಮೇಲ್ಚಾವಣಿ ಮತ್ತು ನವೀನ ಮರದ ಕೆತ್ತನೆಗಳಿಂದ ಕಂಗೊಳಿಸುತ್ತದೆ.
ಅರಮನೆಯೊಳಗೆ ಪ್ರವೇಶಿಸಲು ಸಾಮಾನ್ಯ ಪ್ರವಾಸಿಗರಿಗೆ ಅವಕಾಶವಿಲ್ಲದಿದ್ದರೂ, ಹೊರಗಿನಿಂದಲೇ ಅದರ ಶಾಂತ ಮತ್ತು ಭವ್ಯ ವಾತಾವರಣ ಗೌರವಭಾವ ಮೂಡಿಸುತ್ತದೆ. ಸ್ಥಳೀಯ ಮಾರ್ಗದರ್ಶಕರು ತಿಳಿಸಿದಂತೆ ಭೂತಾನ್ ರಾಜಮನೆತನ ಜನರೊಂದಿಗೆ ಆಪ್ತ ಸಂಬಂಧ ಹೊಂದಿದೆ. ದೇಶದ ಇಂದಿನ ರಾಜರಾದ ಜನಪ್ರಿಯ ನಾಯಕರೆಂದು ಪರಿಚಿತರು. ಅವರ ಸರಳ ಜೀವನಶೈಲಿ ಮತ್ತು ಶಿಕ್ಷಣಕ್ಕೆ ನೀಡುವ ಮಹತ್ವದ ಬಗ್ಗೆ ಸ್ಥಳೀಯರು ಹೆಮ್ಮೆಪಡುವುದನ್ನು ನಾನು ಕಂಡೆ.





  ದೊರೆಯ ಮನೆಯ ಮುಂಭಾಗದಲ್ಲಿ ಥಿಂಫು ನಗರದ ಪ್ರಮುಖ ಆಕರ್ಷಣೆಯಾದ ಟಾಶಿಚೋ ಜೋಂಗ್ ಕಟ್ಟಡವು ರಾಜಕೀಯ ಮತ್ತು ಧಾರ್ಮಿಕ ಎರಡೂ ಮಹತ್ವವನ್ನು ಹೊಂದಿದೆ. ಇಲ್ಲಿ ಭೂತಾನ್ ಸರ್ಕಾರದ ಕಚೇರಿಗಳು ಮತ್ತು ಧಾರ್ಮಿಕ ಸಂಸ್ಥೆಗಳು ಕಾರ್ಯನಿರ್ವಹಿಸುತ್ತವೆ. ಕಟ್ಟಡದ ವಿಶಾಲ ಅಂಗಣ, ಸಾಂಪ್ರದಾಯಿಕ ಚಿತ್ರಕಲೆ, ಬೌದ್ಧ ಶೈಲಿಯ ಕಂಬಗಳು ಮತ್ತು ಚಿನ್ನದ ಅಲಂಕಾರಗಳು ಮನಸೆಳೆಯುತ್ತವೆ.
ಭೂತಾನ್ ಸಂಸತ್ ವ್ಯವಸ್ಥೆ ಪ್ರಜಾಸತ್ತಾತ್ಮಕ ಮಾದರಿಯಲ್ಲಿ ಕಾರ್ಯನಿರ್ವಹಿಸುತ್ತದೆ.
ಇಲ್ಲಿ ದೇಶದ ಕಾನೂನುಗಳು ಮತ್ತು ನೀತಿಗಳ ಚರ್ಚೆ ನಡೆಯುತ್ತದೆ. ಸಾಂಪ್ರದಾಯಿಕ ವೇಷಭೂಷಣದಲ್ಲಿ ಸಂಸತ್ ಸದಸ್ಯರು ಭಾಗವಹಿಸುವ ದೃಶ್ಯ, ಆಧುನಿಕ ಆಡಳಿತ ಮತ್ತು ಸಂಸ್ಕೃತಿಯ ಸಮನ್ವಯವನ್ನು ತೋರಿಸುತ್ತದೆ.



ಭೂತಾನ್ ಒಂದು ಸಾಂವಿಧಾನಿಕ ರಾಜಪ್ರಭುತ್ವವಾಗಿದ್ದು  ಸಂಸದೀಯ ಸ್ವರೂಪದ ಸರ್ಕಾರವನ್ನು ಹೊಂದಿದೆ.ಅಲ್ಲಿನ ಪ್ರಸ್ತುತ ರಾಜ ಜಿಗ್ಮೆ ಖೇಸರ್ ನಮ್ಗ್ಯೆಲ್ ವಾಂಗ್‌ಚುಕ್ ಅವರು ಮಾದರಿ ಆಡಳಿತ ನೀಡುತ್ತಿದ್ದಾರೆ. ಅವರಿಗೆ  ಭೂತಾನ್‌ನ ಪ್ರಸ್ತುತ ಪ್ರಧಾನ ಮಂತ್ರಿ ಪೀಪಲ್ಸ್ ಡೆಮಾಕ್ರಟಿಕ್ ಪಕ್ಷದ ನಾಯಕ ತ್ಶೆರಿಂಗ್ ಟೋಬ್ಗೇ ರವರು ಕೈಜೋಡಿಸಿದ್ದಾರೆ. 2008 ರಲ್ಲಿ ಭೂತಾನ್‌ನ ಪ್ರಜಾಸತ್ತಾತ್ಮಕ ಪರಿವರ್ತನೆಯನ್ನು ಕಂಡಿತು. 1907 ರಿಂದ ರಾಜಪ್ರಭುತ್ವದೊಂದಿಗಿನ ಅದರ ಸಾಮಾಜಿಕ ಒಪ್ಪಂದದ ವಿಕಸನವೆಂದು ನೋಡಲಾಗುತ್ತದೆ. ವರ್ಲ್ಡ್ ವರ್ಗೀಕರಣದ ಆಡಳಿತಗಳಲ್ಲಿ ವಿ ಡೆಮ್ ಡೆಮಾಕ್ರಸಿ ಸೂಚ್ಯಂಕಗಳ ಪ್ರಕಾರ 2024 ರ ವರ್ಷದಿಂದ ಭೂತಾನ್ ಅನ್ನು ಚುನಾವಣಾ ಪ್ರಜಾಪ್ರಭುತ್ವ ಎಂದು ವರ್ಗೀಕರಿಸಲಾಗಿದೆ.

ಭೂತಾನ್ ನ   ರಾಜಕೀಯ ವ್ಯವಸ್ಥೆಯು ಸಾರ್ವತ್ರಿಕ ಮತದಾನದ ಹಕ್ಕನ್ನು ನೀಡುತ್ತದೆ. ಇದು 25 ಚುನಾಯಿತ ಸದಸ್ಯರನ್ನು ಹೊಂದಿರುವ ಮೇಲ್ಮನೆಯಾದ ರಾಷ್ಟ್ರೀಯ ಮಂಡಳಿಯನ್ನು ಮತ್ತು ರಾಜಕೀಯ ಪಕ್ಷಗಳಿಂದ 47 ಚುನಾಯಿತ ಶಾಸಕರನ್ನು ಹೊಂದಿರುವ ರಾಷ್ಟ್ರೀಯ ಸಭೆಯನ್ನು ಒಳಗೊಂಡಿದೆ.
ಕಾರ್ಯನಿರ್ವಾಹಕ ಅಧಿಕಾರವನ್ನು ಪ್ರಧಾನ ಮಂತ್ರಿ ನೇತೃತ್ವದ ಮಂತ್ರಿ ಮಂಡಳಿಯು ಚಲಾಯಿಸುತ್ತದೆ. ಶಾಸಕಾಂಗ ಅಧಿಕಾರವು ಸರ್ಕಾರ ಮತ್ತು ರಾಷ್ಟ್ರೀಯ ಸಭೆ ಎರಡರಲ್ಲೂ ಇರುತ್ತದೆ. ನ್ಯಾಯಾಂಗ ಅಧಿಕಾರವು ನ್ಯಾಯಾಲಯಗಳಲ್ಲಿದೆ. ಕಾನೂನು ವ್ಯವಸ್ಥೆಯು ಅರೆ-ದೇವಪ್ರಭುತ್ವವಾದಿ ತ್ಸಾ ಯಿಗ್ ಸಂಹಿತೆಯಿಂದ ಹುಟ್ಟಿಕೊಂಡಿದೆ ಮತ್ತು 20 ನೇ ಶತಮಾನದಲ್ಲಿ ಇಂಗ್ಲಿಷ್ ಸಾಮಾನ್ಯ ಕಾನೂನಿನಿಂದ ಪ್ರಭಾವಿತವಾಗಿದೆ . ಮುಖ್ಯ ನ್ಯಾಯಾಧೀಶರು ನ್ಯಾಯಾಂಗದ ಆಡಳಿತ ಮುಖ್ಯಸ್ಥರಾಗಿದ್ದಾರೆ.
ಅಸೆಂಬ್ಲಿಗೆ ಮೊದಲ ಸಾರ್ವತ್ರಿಕ ಚುನಾವಣೆಗಳು ಮಾರ್ಚ್ 24, 2008 ರಂದು ನಡೆದವು. ಜಿಗ್ಮೆ ಥಿನ್ಲೆ ನೇತೃತ್ವದ ಭೂತಾನ್ ಶಾಂತಿ ಮತ್ತು ಸಮೃದ್ಧಿ ಪಕ್ಷ (ಡಿಪಿಟಿ) ಮತ್ತು ಸಂಗಯ್ ನ್ಗೆಡಪ್ ನೇತೃತ್ವದ ಪೀಪಲ್ಸ್ ಡೆಮಾಕ್ರಟಿಕ್ ಪಕ್ಷ (ಪಿಡಿಪಿ) ಪ್ರಮುಖ ಸ್ಪರ್ಧಿಗಳಾಗಿದ್ದವು. ಡಿಪಿಟಿ 47 ಸ್ಥಾನಗಳಲ್ಲಿ 45 ಸ್ಥಾನಗಳನ್ನು ಪಡೆದು ಚುನಾವಣೆಯಲ್ಲಿ ಗೆದ್ದಿತು. ಜಿಗ್ಮೆ ಥಿನ್ಲೆ 2008 ರಿಂದ 2013 ರವರೆಗೆ ಪ್ರಧಾನ ಮಂತ್ರಿಯಾಗಿ ಸೇವೆ ಸಲ್ಲಿಸಿದರು.
2013 ರ ಚುನಾವಣೆಯಲ್ಲಿ ಪೀಪಲ್ಸ್ ಡೆಮಾಕ್ರಟಿಕ್ ಪಕ್ಷ ಅಧಿಕಾರಕ್ಕೆ ಬಂದಿತು. ಅದು 32 ಸ್ಥಾನಗಳನ್ನು ಮತ್ತು 54.88% ಮತಗಳನ್ನು ಗಳಿಸಿತು. ಪಿಡಿಪಿ ನಾಯಕಿ ತ್ಸೆರಿಂಗ್ ಟೋಬ್ಗೆ 2013 ರಿಂದ 2018 ರವರೆಗೆ ಪ್ರಧಾನ ಮಂತ್ರಿಯಾಗಿ ಸೇವೆ ಸಲ್ಲಿಸಿದರು.
೨೦೧೮ ರ ರಾಷ್ಟ್ರೀಯ ಅಸೆಂಬ್ಲಿ ಚುನಾವಣೆಯಲ್ಲಿ ಡ್ರೂಕ್ ನ್ಯಾಮ್ರಪ್ ತ್ಶೋಗ್ಪಾ ಅತಿ ಹೆಚ್ಚು ಸ್ಥಾನಗಳನ್ನು ಗೆದ್ದರು. ಲೋಟೇ ತ್ಶೆರಿಂಗ್ ಅವರನ್ನು ಪ್ರಧಾನಿ ಹುದ್ದೆಗೆ ಮತ್ತು ಡ್ರೂಕ್ ನ್ಯಾಮ್ರಪ್ ತ್ಶೋಗ್ಪಾ ಅವರನ್ನು ಮೊದಲ ಬಾರಿಗೆ ಸರ್ಕಾರಕ್ಕೆ ಕರೆತಂದರು. 
2024 ರ ಚುನಾವಣೆಯ ನಂತರ ಪಿಡಿಪಿ 30 ಸ್ಥಾನಗಳನ್ನು ಗಳಿಸುವುದರೊಂದಿಗೆ ಟೋಬ್ಗೆ ಪ್ರಧಾನಿಯಾಗಿ ಮತ್ತೆ ಅಧಿಕಾರಕ್ಕೆ ಬಂದು ಪ್ರಸ್ತುತ ಉತ್ತಮ ಆಡಳಿತ ನೀಡುತ್ತಿದ್ದಾರೆ ಎಂದು ನಮ್ಮ ಗೈಡ್ ಮಾಹಿತಿ ನೀಡಿದರು.ಭೂತಾನ್ ‌ನ ಸಂಸತ್ತು ಮತ್ತು ದೊರೆಯ ಬಗ್ಗೆ ಗೌರವ ಭಾವದಿಂದ ಆ ಪ್ರದೇಶದಿಂದ ಹೊರ ನಡೆದು ಭೂತಾನ್ ನ ಇತರೆ ಸ್ಥಳಗಳನ್ನು ಅನ್ವೇಷಣೆ ಮಾಡಲು ಹೊರಟೆವು.


ಭಾರತದ ನೆರೆಯ ದೇಶವಾದ ಭೂತಾನ್ ನ ಪ್ರಕೃತಿ ಸೌಂದರ್ಯ ಸವಿದಿದ್ದ ನಾವು ಅಲ್ಲಿನ ರಾಜಕೀಯ ವ್ಯವಸ್ಥೆ ಮತ್ತು ಸಂಸತ್ತಿನ ರಚನೆಯ ಬಗ್ಗೆ ತಿಳಿದು ಭೂತಾನ್ ಬಗ್ಗೆ ಇದ್ದ ಗೌರವ  ಇಮ್ಮಡಿಯಾಯಿತು.ನೀವೂ ಭೂತಾನ್ ಪ್ರವಾಸಕ್ಕೆ ಬಂದರೆ ಭೂತಾನ್ ಸಂಸತ್ ಮತ್ತು ದೊರೆಯ ಮನೆ ನೋಡಲು ಮರೆಯದಿರಿ.

ಸಿಹಿಜೀವಿ ವೆಂಕಟೇಶ್ವರ.
ತುಮಕೂರು
9900925529


BhutanTour #KingPalace #Sihijeevi #Sihijeeviya #Payana #TravelBhutan #ExploreBhutan #BhutanAdventures #PalaceTour #CulturalExperience #HimalayanJourney #BhutanDiaries #TouristAttractions #BhutanTravel #DiscoverBhutan #TravelVlog #AdventureTravel #NatureLovers #BucketListTravel

02 ಮಾರ್ಚ್ 2026

ನಮ್ಮ ಟೀಮ್ ಇಂಡಿಯಾ ನಮ್ಮ ಹೆಮ್ಮೆ.


 


ಟಾಸ್ ಗೆದ್ದಾಗಲೇ ನಾವು ಗೆದ್ದಾಗಿತ್ತು.ಹಿಡಿಯುವ ಕ್ಯಾಚ್ ಗಳನ್ನು ನೆಲಕ್ಕೆ ಹಾಕಿದ್ದು ತೂತ್ ಫೀಲ್ಡಿಂಗ್ ಮಾಡಿ ಕನಿಷ್ಟ 25 ಹೆಚ್ಚು ರನ್ ಕೊಟ್ಟಾಗ ನನಗೆ ನಮ್ಮ ಟೀಮ್ ಮೇಲೆ ಕೋಪ ಬಂದಿದ್ದು ನಿಜ.ಆದರೆ ನಾವು ಪಕ್ಕಾ ಚೇಸಿಂಗ್ ಮಾಸ್ಟರ್ಸ್ ಎಂಬುದನ್ನು ಇಡೆನ್ ಗಾರ್ಡನ್ ‌ನಲ್ಲಿ ಮತ್ತೊಮ್ಮೆ ಸಾಬೀತು ಮಾಡಿದ್ದೇವೆ.ಸಂಜು ಸಾಮ್ ಸನ್ ರ ಜವಾಬ್ದಾರಿಯುತ ಆಟಕ್ಕೆ ಮೆಚ್ಚುಗೆ ಸೂಚಿಸಲೇಬೇಕು ಆಫ್ ಕೋರ್ಸ್ ಈ ಗೆಲುವಿಹೆ  ತಂಡದ ಎಲ್ಲರೂ ತಮ್ಮ  ಯೋಗದಾನ ನೀಡಿರುವರು.ಇದೇ ಆತ್ಮವಿಶ್ವಾಸದಿಂದ ಆಂಗ್ಲರನ್ನು ಜಯಿಸೋಣ.ಮತ್ತೆ ಓವರ್ ಕಾನ್ಫಿಡೆನ್ಸ್ ಬೇಡ.ಪ್ರತಿ ಓವರ್ ನಲ್ಲಿ ಉತ್ತಮವಾಗಿ ಆಡೋಣ.ಸೇಮೀಸ್ ಅಷ್ಟೇ ಅಲ್ಲ ಪೈನಲ್ ನಲ್ಲೂ ಗೆಲ್ಲೋಣ.ಈ ಸಲನೂ ಕಪ್ ನಮ್ದೇ...
ಅಭಿನಂದನೆಗಳು ಟೀಮ್ ಇಂಡಿಯಾ ಇನ್ ಅಡ್ವಾನ್ಸ್...
ನೀವೂ ವಿಶ್ ಮಾಡಬಹುದು..
#T20WorldCup #ICC #BCCi #TeamIndia #SihijeeviyaPayana #CricketFever #IndiaCricket #T20Cricket #WorldCup2023 #CricketHighlight #GoIndia #SupportIndia #InternationalCricket #CricketLife #SportsHighlights #PlayBold #ChaseYourDreams #CricketPassion #BlueArmy


ಮಂತ್ರಮುಗ್ದಗೊಳಿಸುವ ಮೇಘಾಲಯದ ಉಮ್ಮಿಯಾಮ್ ಸರೋವರ

 

ಮಂತ್ರಮುಗ್ದಗೊಳಿಸುವ ಮೇಘಾಲಯದ  ಉಮ್ಮಿಯಾಮ್ ಸರೋವರ




ಈಶಾನ್ಯ ರಾಜ್ಯಗಳನ್ನು ನೆನೆದರೇನೊ ಪುಳಕ. ಬಹು ಕಾಲದಿಂದ ಈಶಾನ್ಯ ರಾಜ್ಯಗಳಿಗೆ ಪ್ರವಾಸ ಹೊರಡಬೇಕೆಂಬ ಕನಸು ಕೊನೆಗೂ ನನಸಾಗಿತ್ತು. ಅಸ್ಸಾಂನ  ಗುವಾಹಟಿ ನಗರದಿಂದ ನಮ್ಮ ಪ್ರವಾಸ ತಂಡದೊಂದಿಗೆ ಹೊರಟ ನಾವು ಮೇಘಾಲಯದ ಪ್ರಕೃತಿ ಸೌಂದರ್ಯ ಸವಿಯಲು ಸಿದ್ದವಾಗಿತ್ತು. ಬೆಟ್ಟ ಗುಡ್ಡಗಳ ರಸ್ತೆಯಲ್ಲಿ ಚಲಿಸಲು ಸೂಕ್ತವಾದ ಎರಡು ಟೆಂಪೋ ಟ್ರಾವೆಲರ್ಸ್‌‌ ಏರಿ ಉತ್ತಮ ರಸ್ತೆಯಲ್ಲಿ ನಮ್ಮ ಪಯಣ ಮುಂದುವರೆಯಿತು. ರಸ್ತೆಯ ಎಡಬಲಗಳಲ್ಲಿ ಕಾಣುವ ದೃಶ್ಯಗಳನ್ನು ಸವಿಯುತ್ತಾ ಸುಮಾರು ಎರಡು ಗಂಟೆಗಳ ಪ್ರಯಾಣದ ನಂತರ ಕಂಡ ಮೊದಲ ಸ್ವರ್ಗ ಸದೃಶ ತಾಣವೇ ಉಮಿಯಾಮ್ ಸರೋವರ!



ಮೊದಲ ಬಾರಿಗೆ ಕೇಳಿದಾಗ ನನಗೂ ಈ ಸ್ಥಳದ ಉಚ್ಚಾರಣೆ ವಿಚಿತ್ರ ಎನಿಸಿದರೂ ಅದರ  ಅದ್ಭುತ ದೃಶ್ಯಗಳನ್ನು ನಾನು ಕಣ್ತುಂಬಿಕೊಂಡಾಗ ಬಣ್ಣದ ಚಿತ್ರಗಳು ಈಗಲೂ ನನ್ನ ನೆನಪಿನ ಕೋಶದಲ್ಲಿ ಅಚ್ಚಳಿಯದೇ ಉಳಿದಿವೆ. 
ಶಿಲ್ಲಾಂಗ್ ನಗರಕ್ಕೆ ಹೋಗುವ ದಾರಿಯಲ್ಲಿ ಬೆಟ್ಟಗಳ ನಡುವೆ ನೀಲಿ ಬಣ್ಣದಲ್ಲಿ ಮಿನುಗುತ್ತಿರುವ ಉಮಿಯಾಮ್ ಸರೋವರದ ಮೊದಲ ನೋಟವೇ ನನ್ನನ್ನು ಮಂತ್ರಮುಗ್ಧನನ್ನಾಗಿ ಮಾಡಿತು. ಸ್ಥಳೀಯರು ಇದನ್ನು “ಬಾರಾ ಪಾನಿ” ಎಂದೂ ಕರೆಯುತ್ತಾರೆ. ಹೆಸರೇ ಹೇಳುವಂತೆ ‌ಇದೊಂದು   ವಿಶಾಲವಾದ ಮಾನವ ನಿರ್ಮಿತ  ನೀರಿನ ಸಾಗರ!

ನಗರದಿಂದ ಸುಮಾರು 15 ಕಿಮೀ ದೂರದಲ್ಲಿ ಹರಡಿಕೊಂಡಿರುವ ಈ ಜಲಾಶಯವನ್ನು 1960ರ ದಶಕದಲ್ಲಿ  ಅಣೆಕಟ್ಟು ನಿರ್ಮಿಸಿ ಸೃಷ್ಟಿಸಲಾಗಿದೆ. ಬೆಟ್ಟಗಳು, ಹಸಿರು ಕಾಡುಗಳು ಮತ್ತು ನೀರಿನ ನೀಲಿ ಪ್ರತಿಬಿಂಬ  ಇವುಗಳ ಸಮನ್ವಯವು ಈ ಸ್ಥಳವನ್ನು ಸ್ವರ್ಗಸಮಾನವಾಗಿಸುತ್ತದೆ.
ಬೆಳಿಗ್ಗೆ ಹೊತ್ತು ಸರೋವರದ ತೀರದಲ್ಲಿ ನಿಂತಾಗ ಮಂಜಿನ ಚಾದರ ನೀರಿನ ಮೇಲೆ ಹರಡಿಕೊಂಡ  ಸೂರ್ಯೋದಯದ ಕಿರಣಗಳು ನೀರಿನ ಮೇಲೆ ಬಂಗಾರದ ಹಚ್ಚನ್ನು ಹಚ್ಚಿದಂತೆ ಕಾಣುವ ದೃಶ್ಯಗಳು ನೋಡುಗರನ್ನು ಮಂತ್ರ ಮುಗ್ಧರನ್ನಾಗಿಸುತ್ತವೆ. ಆ ಕ್ಷಣದಲ್ಲಿ ಕಾಲವೇ ನಿಂತಂತಾಯಿತು.




ಸ್ಥಳೀಯ ಮಾರ್ಗದರ್ಶಕನಿಂದ ತಿಳಿದುಕೊಂಡಾಗ ಈ ಸರೋವರದ ಹಿಂದೆ ಒಂದು ದೊಡ್ಡ ಕಥೆಯಿದೆ ಎಂದು ಅರಿತುಕೊಂಡೆ.  ಈ ಲೇಕ್  ಜಲವಿದ್ಯುತ್ ಉತ್ಪಾದನೆಗಾಗಿ ನಿರ್ಮಿಸಲಾದ ಈಶಾನ್ಯ ಭಾರತದ ಮೊದಲ ಮಹತ್ವದ ಜಲಾಶಯ ಯೋಜನೆಗಳಲ್ಲಿ ಒಂದಾಗಿದೆ.
ಒಮ್ಮೆ ಇಲ್ಲಿ ಖಾಸಿ ಸಮುದಾಯದ ಗ್ರಾಮಗಳು ನೆಲೆಸಿದ್ದವು. ಅಣೆಕಟ್ಟು ನಿರ್ಮಾಣದಿಂದಾಗಿ ಕೆಲವು ಕುಟುಂಬಗಳು ಸ್ಥಳಾಂತರಗೊಳ್ಳಬೇಕಾಯಿತು. ಈ ವಿಚಾರ ತಿಳಿದಾಗ ಪ್ರಕೃತಿ ಸೌಂದರ್ಯದ ಹಿಂದೆ ಇರುವ ಮಾನವ ಕುಲದ ಮನ ಕಲಕುವ  ಕಥೆಗಳು ನನ್ನ ಮನಸ್ಸನ್ನು ಸ್ಪರ್ಶಿಸಿದವು. ಹೀಗೆ ಅಭಿವೃದ್ಧಿಯ ಹೆಸರಿನಲ್ಲಿ ಸಾವಿರಾರು ಕುಟುಂಬಗಳನ್ನು ಸ್ಥಳಾಂತರ ಮಾಡುವುದು ಈಗಲೂ ಮುಂದುವರೆದಿರುವುದನ್ನು ಕಾಣುತ್ತೇವೆ.




ಉಮಿಯಾಮ್ ಸರೋವರ ಪ್ರವಾಸಿಗರಿಗೆ ಕೇವಲ ದೃಶ್ಯ ಸೌಂದರ್ಯವಲ್ಲ  ಸಾಹಸಕ್ಕೂ ಪ್ರಸಿದ್ಧ ಎಂದು ನಮ್ಮ ಟೂರ್ ಗೈಡ್ ಬೆಳಿಗ್ಗೆ ಹೇಳಿದ್ದ ಮಾತು ಕೇಳುತ್ತಾ  ನಾನು ಕಯಾಕಿಂಗ್ ಮಾಡಲು ನಿರ್ಧರಿಸಿದ್ದೆ. ನೀರಿನ ಮಧ್ಯೆ ತೇಲುತ್ತಾ ಬೆಟ್ಟಗಳ ನಡುವೆ ನನ್ನ ಸಣ್ಣ ದೋಣಿ ಸಾಗುತ್ತಿದ್ದ ಕ್ಷಣವನ್ನು ಕಲ್ಪಿಸಿಕೊಂಡು ಮನದಲ್ಲೇ ಖುಷಿ ಪಟ್ಟಿದ್ದೆ ಆದರೆ ಆ ಸ್ಥಳಕ್ಕೆ ಹೋದಾಗ ನನ್ನ ಆಸೆ ಈಡೇರದೇ ಭ್ರಮನಿರಸನಗೊಂಡೆ.
ವಾಟರ್ ಸೈಕ್ಲಿಂಗ್, ಬೋಟ್ ರೈಡ್, ಸ್ಕೂಟಿಂಗ್  ಎಲ್ಲವೂ ಇಲ್ಲಿ ಲಭ್ಯ. ಕುಟುಂಬ ಸಮೇತ ಬಂದ ಪ್ರವಾಸಿಗರು ಹರ್ಷದಿಂದ ಕಾಲ ಕಳೆಯಲು ಅವಕಾಶವಿದೆ ಅದರೆ ನಮ್ಮ ದುರಾದೃಷ್ಟಕ್ಕೆ ಅಂದು ಆ ಎಲ್ಲಾ ಜಲಕ್ರೀಡೆಗಳನ್ನು ಬಂದ್ ಮಾಡಿದ್ದರು.ಆದರೆ ಪ್ರಕೃತಿ ಸೌಂದರ್ಯ ಬಂದ್ ಮಾಡಲು ಸಾಧ್ಯವೆ? ಇನ್ನಷ್ಟು ನಿಸರ್ಗದ ದೃಶ್ಯಗಳನ್ನು ನನ್ನ ಮನದಲ್ಲಿ ತುಂಬಿಕೊಂಡು ಆನಂದಿಸಿದೆ.


ಮಾಮೂಲಿನಂತೆ ನಾವು ಮಾನವರು ಸುಂದರ ತಾಣಗಳನ್ನು ಸುಂದರವಾಗಿರಲು ಎಲ್ಲಿ ಬಿಟ್ಟಿದ್ದೇವೆ?  ಈ ಸುಂದರ ಸರೋವರವೂ ಸವಾಲುಗಳನ್ನು ಎದುರಿಸುತ್ತಿದೆ. ನಗರದ ವೃದ್ಧಿಯಾಗುತ್ತಿರುವ ಜನಸಂಖ್ಯೆಯಿಂದ ಉಂಟಾಗುವ ಮಾಲಿನ್ಯ ಸಮಸ್ಯೆ ಗಂಭೀರವಾಗಿದೆ. ಸರೋವರಕ್ಕೆ ಸೇರುವ ವಾಹ್ ಉಮ್ಖ್ರಾ ಮತ್ತು ವಾಹ್ ಉಮ್ಶಿರ್ಪಿ ನದಿಗಳು ನಗರ ಒಳಚರಂಡಿಯನ್ನು ತರುತ್ತಿವೆ ಎಂದು ತಿಳಿದು ಬೇಸರವಾಯಿತು.
ಮೊದಲು ಡೀಸೆಲ್ ಚಾಲಿತ ದೋಣಿಗಳನ್ನು ಮನರಂಜನೆಗಾಗಿ ಬಳಸಲಾಗುತ್ತಿತ್ತು.
2023ರಲ್ಲಿ ಮೇಘಾಲಯ ಸರ್ಕಾರ ಸೌರಶಕ್ತಿ ಚಾಲಿತ AI ದೋಣಿಯನ್ನು ನಿಯೋಜಿಸಿದೆ ಎಂಬುದು ಆಶಾದಾಯಕ ಸುದ್ದಿ ಕೇಳಿ ಸಂತಸವಾಯಿತು. ಈ ನವೀನ ಪ್ರಯತ್ನವು ಸರೋವರದ ಸ್ವಚ್ಛತೆಯನ್ನು ಕಾಪಾಡಲು ಮಹತ್ವದ ಹೆಜ್ಜೆಯಾಗಿದೆ.





ಸಂಜೆ ಸಮಯದಲ್ಲಿ ಸರೋವರದ ಲೇಕ್ ವ್ಯೂ ಪಾಯಿಂಟ್‌ನಲ್ಲಿ ಕುಳಿತು ಸೂರ್ಯಾಸ್ತವನ್ನು ನೋಡಲು ಸಾವಿರಾರು ಪ್ರವಾಸಿಗರು ಬರುತ್ತಾರೆ. ಆಕಾಶ ಕೆಂಪು-ಕಿತ್ತಳೆ ಬಣ್ಣಗಳಿಂದ ತುಂಬಿಕೊಂಡ. ನೀರಿನ ಮೇಲಿನ ಪ್ರತಿಬಿಂಬ ಚಿತ್ರಕಾರನ ಕಲಾಕೃತಿಯಂತೆ ಕಾಣುತ್ತದೆ. ಇದು ಕೇವಲ ಜಲಾಶಯವಲ್ಲ. ಇದು ಪ್ರಕೃತಿಯ ಮಹತ್ವದ ಪಾಠ. ಮಾನವ ಅಭಿವೃದ್ಧಿ ಮತ್ತು ಪರಿಸರ ಸಂರಕ್ಷಣೆ ನಡುವೆ ಸಮತೋಲನ ಅಗತ್ಯ ಎಂಬ ಸಂದೇಶ ಈ ಸರೋವರ ನೀಡುತ್ತದೆ.

ಉಮಿಯಾಮ್ ಸರೋವರ ಪ್ರವಾಸವು ನನಗೆ ಪ್ರಕೃತಿಯ ಸೌಂದರ್ಯ, ಇತಿಹಾಸದ ಸ್ಪರ್ಶ ಮತ್ತು ಪರಿಸರ ಜಾಗೃತಿ ಮೂರನ್ನೂ ಒಟ್ಟಿಗೆ ನೀಡಿದ ಅನುಭವ ನೀಡಿತು. ಮೇಘಾಲಯಕ್ಕೆ ಭೇಟಿ ನೀಡುವ ಪ್ರತಿಯೊಬ್ಬರೂ ಈ ಸ್ಥಳವನ್ನು ತಪ್ಪದೇ ನೋಡಬೇಕು ಎಂದು ನಾನು ಮನಪೂರ್ವಕವಾಗಿ ಸಲಹೆ ನೀಡುತ್ತೇನೆ.
ಬೆಟ್ಟಗಳ ನಡುವೆ ಮೌನವಾಗಿ ಮಲಗಿರುವ ಆ ನೀಲಿ ಸರೋವರ ನನ್ನ ಮನಸ್ಸಿನಲ್ಲಿ ಸದಾ ಜೀವಂತವಾಗಿಯೇ ಇರುತ್ತದೆ. ಆ ತಾಣದಲ್ಲಿ  ನಾನು ಮಿಸ್ ಮಾಡಿಕೊಂಡ ವಾಟರ್ ಸ್ಪೋರ್ಟ್ಸ್ ಆಡಲು ಮತ್ತು ಸನ್ ಸೆಟ್ ನೋಡಲು ಮತ್ತೊಮ್ಮೆ ಉಮ್ಮಿಯಾಮ್ ಸರೋವರಕ್ಕೆ ಹೋಗಲು ನನ್ನ ಮನ ಹಾತೊರೆಯುತ್ತಿದೆ.

ಸಿಹಿಜೀವಿ ವೆಂಕಟೇಶ್ವರ
ತುಮಕೂರು

26 ಫೆಬ್ರವರಿ 2026

ಪೋಷಕರೇ ದಯವಿಟ್ಟು ಗಮನಿಸಿ...


 ಪೋಷಕರೇ ದಯವಿಟ್ಟು ಗಮನಿಸಿ...



ಇತ್ತೀಚಿಗೆ ಹತ್ತನೇ  ಓದುವ ಮಗುವಿನ   ಪೋಷಕರ ಮನೆಗೆ ಭೇಟಿ ನೀಡಿದಾಗ ತಂದೆಯು   ಅವರ ಮಗನ ಬಗ್ಗೆ ಮಾತನಾಡುತ್ತಾ ದಿನವೂ ಮಗ ಹಣ ಕೇಳುತ್ತಾನೆ.ಬೈಕ್ ಕೊಡಿಸು ಎನ್ನುತ್ತಾನೆ.ಮೊಬೈಲ್ ನಲ್ಲಿ ಸದಾ ಮುಳುಗಿರುತ್ತಾನೆ ಎಂಬ ದೂರುಗಳನ್ನು ನೀಡುತ್ತಾ ನೀವಾದರೂ ಬುದ್ದಿ ಹೇಳಿ ಸರ್ ನಮ್ಮ ಮಾತುಗಳನ್ನು ಕೇಳೊಲ್ಲ.ನಮ್ಮ ಎದುರಿಗೆ ಮಾತನಾಡುತ್ತಾನೆ ಎಂದು ಕಂಪ್ಲೇಂಟ್ ಲಿಸ್ಟ್ ನೀಡಿದರು.ಹೌದು ನಾನು ಇತ್ತೀಚಿನ ದಿನಗಳಲ್ಲಿ ಬಹುತೇಕ ಪೋಷಕರ ಕಡೆಯಿಂದ ಅವರ ಮಕ್ಕಳ ‌ಬಗ್ಗೆ ಹೆಚ್ಚು ಕಡಿಮೆ ಇಂತವೇ ದೂರುಗಳನ್ನು ಸ್ವೀಕರಿಸುವುದು ಮಾಮೂಲಾಗಿದೆ.ನಿಮಗೂ ಈ ಅನುಭವವಾಗಿರಬಹುದು.

ಹತ್ತನೇ ತರಗತಿಯವರೆಗೆ ಶಾಲೆಗಳಲ್ಲಿ ಬೆಳಗಿನ ಅವಧಿಯಲ್ಲಿ ರಾಗಿ ಮಾಲ್ಟ್, ಮಧ್ಯಾಹ್ನ ಮೊಟ್ಟೆ ಬಾಳೆ ಹಣ್ಣಿನ ಜೊತೆಯಲ್ಲಿ ಬಿಸಿಯೂಟ ಹಾಗೂ ಕೆಲವೆಡೆ ಸಂಜೆಯೂ ವಿವಿಧ ಕಾಳುಗಳ ಸ್ನಾಕ್ಸ್ ನೀಡುತ್ತಾರೆ. ಮತ್ತೇಕೆ ಮಕ್ಕಳಿಗೆ ‌ಹಣ? ಆದರೂ ಕೆಲ ಪೋಷಕರು ಮಕ್ಕಳಿಗೆ ಅವರು ಕೇಳದಿದ್ದರೂ ಅಗತ್ಯ ಇಲ್ಲದಿದ್ದರೂ ಹಣ ನೀಡುವುದು ಕಂಡುಬರುತ್ತದೆ.
ಮಕ್ಕಳಿಗೆ ಪೋಷಕರಾದ ನಾವು ಬಾಲ್ಯದಲ್ಲೇ ಆರ್ಥಿಕ ಸಾಕ್ಷರತೆಯ ಪಾಠ ಹೇಳಿಕೊಡಬೇಕಿದೆ. ಆದರೆ   ಬಹುತೇಕ ಪೋಷಕರು ತಮ್ಮ ಬಾಲ್ಯದ ಅನುಭವದ ಆಧಾರದ ಮೇಲೆ ನಮಗೆ ಇದ್ದ ಕಷ್ಟ ನಮ್ಮ ಮಕ್ಕಳಿಗೆ ‌ಇಲ್ಲ ಆದ್ದರಿಂದ ಹಣ ಕೊಡುವೆ ಎಂದು ಅನವಶ್ಯಕವಾಗಿ ಹಣ ನೀಡಿ ದುಂದುವೆಚ್ಚಮಾಡಲು ಪರೋಕ್ಷವಾಗಿ ಕಾರಣರಾಗಿದ್ದಾರೆ. ಇನ್ನೂ ಕೆಲ ಪೋಷಕರು ನಾನು ಚಿಕ್ಕವನಿದ್ದಾಗ ನನಗೆ ಸೈಕಲ್ ಗತಿ ಇರಲಿಲ್ಲ ನನ್ನ ಮಗ ಬೈಕ್ ಓಡಿಸಲಿ ಎಂದು‌ ಎಂಟು ಒಂಭತ್ತು ಓದುವ ಮಕ್ಕಳಿಗೆ  ಬೈಕ್ ನೀಡುವರು ಹತ್ತಕ್ಕೆ ಬಂದಾಗ  ಮಗು ಬೇರೆ ಬ್ರಾಂಡ್ ಬೈಕ್ ಗೆ ಡಿಮಾಂಡ್ ಮಾಡದೇ ಮತ್ತೆನು ಮಾಡಿಯಾನೂ? ಇನ್ನೂ ಮೊಬೈಲ್ ಕಥೆ ಹೇಳುವುದೇ ಬೇಡ ವರ್ಷದ ಮಗುವಿನ ಕೈಗೆ ಮೊಬೈಲ್ ನೀಡಿ ಊಟ ಮಾಡಿಸುವ ಎಷ್ಟೋ ಪೋಷಕರಿದ್ದರೆ.ಇನ್ನೂ ಕೆಲ ಪೋಷಕರು ತಮ್ಮ ಮಕ್ಕಳ ಮೊಬೈಲ್ ಗೀಳನ್ನು ಬೇರೆಯವರ ಬಳಿ ಪಾಸಿಟೀವ್ ಆಗಿ ನನಗೇ ಮೊಬೈಲ್ ಬಳಸಲು ಬರಲ್ಲ ನನ್ನ ಮಗ ನೋಡಿ ಎಷ್ಟು ಚೆನ್ನಾಗಿ ಬಳಸ್ತಾನೆ ಎಂದು ಕೊಚ್ಚಿಕೊಳ್ಳುತ್ತಾರೆ.
ಇಷ್ಟೆಲ್ಲಾ ಆದ ಮೇಲೆ ಊರು ಹಾಳಾದ ಮೇಲೆ‌ ದಿಡ್ಡಿ ಬಾಗಿಲು ಹಾಕಿದರು ಎಂಬಂತೆ ಶಿಕ್ಷಕರು ಮಕ್ಕಳ ತಿದ್ದಲಿ ಎಂದು ಅಲವತ್ತುಕೊಂಡರೆ ಏನು ಉಪಯೋಗ.

ಇದಕ್ಕೆ ಪರಿಹಾರ ಪೋಷಕರ ನಡೆಗಳಲ್ಲೇ ಇದೆ.
ಮೊದಲು ‌ಪೋಷಕರು ಮೊಬೈಲ್ ಬಳಕೆ ಕಡಿಮೆ ಮಾಡಲಿ. ಅಪ್ರಾಪ್ತ ಮಕ್ಕಳಿಗೆ ಬೈಕ್ ನೀಡುವುದನ್ನು ನಿಲ್ಲಿಸಲಿ  ಮಕ್ಕಳಿಗೆ ಹಣದ ಬೆಲೆ ತಿಳಿಸಿಕೊಡಬೇಕು‌
ಅದಕ್ಕೆ ‌ಈ‌ ಕೆಳಗಿನ ಸರಳ ಸಲಹೆ ಪಾಲಿಸಿದರೆ ಒಳಿತು.

ದಿನವೂ ಎಷ್ಟು ಖರ್ಚು ಮಾಡಿದ್ದೀರಿ ಎಂದು ಬರೆಯಲು ನಿಮ್ಮ ಮಕ್ಕಳಿಗೆ ಮಾರ್ಗದರ್ಶನ ನೀಡಿ.ತಿಂಗಳ ಅಂತ್ಯದಲ್ಲಿ ವಿಶ್ಲೇಷಿಸಿ.ಅನಗತ್ಯ ಖರ್ಚುಗಳು ಯಾವವು? ಎಂಬುದರ ಕಡೆ ಗಮನ ಸೆಳೆದು ಮುಂದಿನ ದಿನಗಳಲ್ಲಿ ಅವುಗಳನ್ನು ನಿಯಂತ್ರಿಸಲು‌ ತಿಳಿಸಿ.
ಉಳಿಸಿದ ಒಂದು ರೂಪಾಯಿ ಗಳಿಸಿದ ರೂಪಾಯಿಗೆ ಸಮ ಎಂಬ ಪಾಠವನ್ನು ಹೇಳಿ   ವಾರಕ್ಕೆ ಎಷ್ಟು ಸಾಧ್ಯವೋ ಅಷ್ಟು ಉಳಿತಾಯ ಮಾಡಲು ಪ್ರೋತ್ಸಾಹ ಮಾಡಿ. ಇದಕ್ಕೆ ಪಿಗ್ಗಿ ಬ್ಯಾಂಕ್ ‌ಅಥವಾ ಬ್ಯಾಂಕ್ ಗಳಲ್ಲಿ ಜಾಯಿಂಟ್ ಸೇವಿಂಗ್ಸ್ ಅಕೌಂಟ್ ಓಪನ್ ಮಾಡಿ‌ಕೊಡಿ. ಬಹುತೇಕ ಶಾಲೆಗಳಲ್ಲಿ ಬಿಸಿಯೂಟ ಹಾಲು ನೀಡಲಾಗುತ್ತದೆ. ಕಾಲೇಜಿನ ಮಕ್ಕಳು
ಕಾಲೇಜ್ ಕ್ಯಾಂಟೀನ್  ನಲ್ಲಿ ಅನವಶ್ಯಕ ತಿನ್ನುವುದು ಹಾಗೂ  ಫಾಸ್ಟ್ ಫುಡ್ ಮೇಲೆ ವಿಪರೀತ ಖರ್ಚು ಮಾಡುವುದನ್ನು  ನಿಯಂತ್ರಿಸಿ.ಮನೆ ಊಟ ತೆಗೆದುಕೊಂಡು ಹೋಗುವುದು ಉತ್ತಮ ಆಯ್ಕೆ ಎಂಬುದನ್ನು ಮನದಟ್ಟು ಮಾಡಿಕೊಡಿ.ಮಕ್ಕಳ ಕೈಗೆ ಫೋನ್ ಕೊಟ್ಟಾಗ  ಆಫರ್  ನೋಡಿ ಖರೀದಿ ಮಾಡದಂತೆ ಮಕ್ಕಳಿಗೆ ಮನವರಿಕೆ ಮಾಡಿಕೊಡಿ  ಅಗತ್ಯವೇ ಎಂದು ಕೇಳಿಕೊಳ್ಳಿ. ತೀರ ಅಗತ್ಯವಾಗಿ ಬೇಕಾದ ವಿಶ್ ಲಿಸ್ಟ್  ಮಾಡಿ 48 ಗಂಟೆ ನಂತರ ಖರೀದಿ ನಿಯಮ ಅನುಸರಿಸಿ.ಏಕೆಂದರೆ ಕೆಲವೊಂದು ವಸ್ತುಗಳು ಮೊದಲು ಬೇಕಿನಿಸಿ ನಿಧಾನವಾಗಿ ಯೋಚಿಸಿದಾಗ ಆ ವಸ್ತು ಅನಗತ್ಯ ಎನಿಸಬಹುದು.
ಮಕ್ಕಳಿಗೆ ಬೈಕ್ ಕೊಡಿಸುವ ಬದಲಿಗೆ ಸೈಕಲ್ ‌ಕೊಡಿಸಿ.  ಅಗತ್ಯವಿದ್ದರೆ ಬಸ್ ಪಾಸ್ ಅಥವಾ ಸ್ಟೂಡೆಂಟ್ ಪಾಸ್ ಬಳಸಲು  ಬಳಸಲು ಪ್ರೇರೇಪಿಸಿ.

ಒಟ್ಟಾರೆ ಯುವ ಜನಾಂಗಕ್ಕೆ ಆಗಾಗ್ಗೆ ಸೂಕ್ತ ಸಲಹೆ ಮಾರ್ಗದರ್ಶನ ನೀಡುವ ಮೂಲಕ ದುಂದುವೆಚ್ಚ ಕಡಿಮೆ ಮಾಡಬಹುದು. ಮನೆಯಲ್ಲಿ ಮಕ್ಕಳ ಮೊಬೈಲ್ ಬಳಕೆ ಕಡಿಮೆ ಮಾಡಿ ಸ್ಕ್ರೀನ್ ಟೈಮ್ ಕಡಿಮೆ ಮಾಡಬೇಕಿದೆ.ಈ ನಿಟ್ಟಿನಲ್ಲಿ ಹಲ ದೇಶಗಳಲ್ಲಿ ಹದಿಹರೆಯದ ಮಕ್ಕಳಿಗೆ ಮನನ ಮೊಬೈಲ್ ಬಳಕೆಗೆ ಕೆಲ ನಿರ್ಬಂಧಗಳನ್ನು ಹೇರಿರುವುದು ಸ್ವಾಗತಾರ್ಹ.ನಮ್ಮ ರಾಜ್ಯದಲದಲ್ಲೂ ಇಂತಹ ಚಿಂತನೆ ಶುರವಾಗಿರುವುದು ಸ್ವಾಗತಾರ್ಹ.ನಮ್ಮ ಮಕ್ಕಳು ಮುಂದಿನ ಜವಾಬ್ದಾರಿಯುತ ಪ್ರಜೆಗಳಾಗಲು ಸಂಸ್ಕಾರವಂತರಾಗಲು ಪೋಷಕರ ಪಾತ್ರ ಬಹಳ ಮುಖ್ಯ ನಾವು ಜವಾಬ್ದಾರಿಯುತ ಪೋಷಕರಾಗೋಣ.ಇದಕ್ಕೆ ಸಮಾಜ ಮತ್ತು ಸರ್ವರ ಸಕಾಲಿಕ ಬೆಂಬಲವೂ ಅಗತ್ಯ.

ಸಿಹಿಜೀವಿ ವೆಂಕಟೇಶ್ವರ
ಸಾಹಿತಿಗಳು ಹಾಗೂ ಶಿಕ್ಷಕರು
ತುಮಕೂರು
9900025529

ಸಿಹಿಜೀವಿಯ ಹನಿ.


 

ಇತರರ ಬಗ್ಗೆ ಕೆಟ್ಟದಾಗಿ ಮಾತಾಡುವವರ ಜೊತೆಯಲ್ಲಿ ಕುಳಿತುಕೊಳ್ಳಬೇಡ| ನೀ ಎದ್ದು ಹೋದ ಕ್ಷಣವೇ ನಿನ್ನ ಬಗ್ಗೆ ಕೆಟ್ಟ ಮಾತು ಶುರು ನೋಡಾ||

ಸಿಹಿಜೀವಿ ವೆಂಕಟೇಶ್ವರ