22 April 2024

ಚೊಂಬು .ಹನಿಗವನ

 


ಚೊಂಬು


ಇನ್ನೂ ಕಾಲ ಮಿಂಚಿಲ್ಲ

ಚೆನ್ನಾಗಿ ಆಡ್ತಾರೆ 

ಆರ್ ಸಿ ಬಿ ನಂಬು|

ಖಂಡಿತವಾಗಿಯೂ

ತಂದೇ ತರ್ತಾರೆ ಚೊಂಬು||


ಸಿಹಿಜೀವಿ ವೆಂಕಟೇಶ್ವರ

ತುಮಕೂರು

21 April 2024

ಭೂದಿನ 2024


 


ಭೂದಿನ 


ಜಗತ್ತಿನ ಎಲ್ಲ ದೇಶಗಳು ಈ ವರ್ಷದ ಜಾಗತಿಕ ತಾಪಮಾನದ ತೊಂದರೆಗಳಿಂದ ಬಳಲಿದ್ದಾರೆ ಎಂದರೆ ತಪ್ಪಾಗಲಾರದು. ಅಕಾಲಿಕ ಮಳೆ ,ಋತುಗಳ  ಏರುಪೇರು, ಉಷ್ಣತೆಯಲ್ಲಿ ಗಣನೀಯ ಹೆಚ್ಚಳ ಇವು ನಾವು ಪ್ರಪಂಚದಾದ್ಯಂತ ಕಾಣುತ್ತಿರುವ ಸಾಮಾನ್ಯ ಸಂಗತಿಗಳು. ಈಗೇಕೆ? ಎಂದು ಪ್ರಶ್ನೆ ಮಾಡಿದರೆ ಬೆರಳು ನಮ್ಮ ಕಡೆಗೆ ತಿರುತ್ತದೆ.

ಈ ನಿಟ್ಟಿನಲ್ಲಿ ಪ್ರತಿವರ್ಷ ಆಚರಿಸಲಾಗುವ ಭೂದಿನದಂದು ನಾವು ಚಿಂತನ ಮಂಥನ ಮಾಡಬೇಕು.

ಪ್ರತಿವರ್ಷ ಭೂ ದಿನವನ್ನು  ಏಪ್ರಿಲ್ 22 ರಂದು ಜಗತ್ತಿನ ಎಲ್ಲಾ ಕಡೆ ಆಚರಿಸಲಾಗುತ್ತದೆ.  ಮೊದಲ ಬಾರಿಗೆ ಏಪ್ರಿಲ್ 22, 1970 ರಂದು ಆಚರಿಸಲಾಯಿತು.

ಪ್ರತಿವರ್ಷ ಒಂದೊಂದು ಥೀಮ್ ಆಧಾರದಲ್ಲಿ ಭೂ ದಿನವನ್ನು ಆಚರಿಸಲಾಗುತ್ತದೆ.


  "ಪ್ಲಾನೆಟ್ ವರ್ಸಸ್ ಪ್ಲ್ಯಾಸ್ಟಿಕ್ಸ್." ಇದು 2024 ರ ಥೀಮ್ ಆಗಿದ್ದು 2040 ರ ಹೊತ್ತಿಗೆ ಶೇಕಡಾ60 ಪ್ಲಾಸ್ಟಿಕ್ ಬಳಕೆ ಕಡಿಮೆ ಮಾಡುವ ಗುರಿಯನ್ನು ಹೊಂದಲಾಗಿದೆ. ಇದಕ್ಕೆ 60×40 ಎಂದು ಸಂಕ್ಷಿಪ್ತವಾಗಿ ಕರೆಯಲಾಗಿದೆ.


ಭೂ ದಿನದ ಹಿನ್ನೆಲೆ.

1969 ರಲ್ಲಿ ಸ್ಯಾನ್ ಫ್ರಾನ್ಸಿಸ್ಕೋದಲ್ಲಿ ನಡೆದ ಯುನೆಸ್ಕೋ ಸಮ್ಮೇಳನದಲ್ಲಿ   ಶಾಂತಿ ಕಾರ್ಯಕರ್ತ ಜಾನ್ ಮೆಕ್‌ಕಾನ್ನೆಲ್ ಭೂಮಿ ಮತ್ತು ಶಾಂತಿಯ ಪರಿಕಲ್ಪನೆಯನ್ನು ಗೌರವಿಸಲು ಒಂದು ದಿನವನ್ನು ಪ್ರಸ್ತಾಪಿಸಿದರು. ಇದನ್ನು ಮೊದಲು ಮಾರ್ಚ್ 21, 1970 ರಂದು ಉತ್ತರ ಗೋಳಾರ್ಧದಲ್ಲಿ ವಸಂತಕಾಲದ ಮೊದಲ ದಿನ ಆಚರಿಸಲಾಗುತ್ತದೆ. ಪ್ರಕೃತಿಯ ಈ ದಿನವನ್ನು ನಂತರ ಮ್ಯಾಕ್‌ಕಾನ್ನೆಲ್ ಬರೆದ ಘೋಷಣೆಯಲ್ಲಿ ಅನುಮೋದಿಸಲಾಯಿತು ಮತ್ತು ಯುನೈಟೆಡ್ ನೇಷನ್ಸ್‌ನಲ್ಲಿ ಪ್ರಧಾನ ಕಾರ್ಯದರ್ಶಿ ಯು ಥಾಂಟ್ ಸಹಿ ಮಾಡಿದರು. ಒಂದು ತಿಂಗಳ ನಂತರ ಯುನೈಟೆಡ್ ಸ್ಟೇಟ್ಸ್ ಸೆನೆಟರ್  ಗೇಲಾರ್ಡ್ ನೆಲ್ಸನ್ ಏಪ್ರಿಲ್ 22, 1970 ರಂದು ರಾಷ್ಟ್ರವ್ಯಾಪಿ ಪರಿಸರ ಆಂದೋಲನ ಕೈಗೊಳ್ಳುವ   ಕಲ್ಪನೆಯನ್ನು ಪ್ರಸ್ತಾಪಿಸಿದರು. ಅವರು ಯುವ ಕಾರ್ಯಕರ್ತ ಡೆನಿಸ್ ಹೇಯ್ಸ್ ಅವರನ್ನು ರಾಷ್ಟ್ರೀಯ ಸಂಯೋಜಕರಾಗಿ ನೇಮಿಸಿಕೊಂಡರು. ನೆಲ್ಸನ್ ಮತ್ತು ಹೇಯ್ಸ್ ಈವೆಂಟ್ ಅನ್ನು "ಅರ್ಥ್ ಡೇ" ಎಂದು ಮರುನಾಮಕರಣ ಮಾಡಿದರು. ಡೆನಿಸ್ ಮತ್ತು ಅವರ ಸಿಬ್ಬಂದಿ  ಸಂಘಟಿಸಿದ  ಕಾರ್ಯಕ್ರಮದಲ್ಲಿ  20 ದಶಲಕ್ಷಕ್ಕೂ ಹೆಚ್ಚು ಜನರು ಬೀದಿಗಳಲ್ಲಿ ಸೇರಿದರು, ಮತ್ತು ಮೊದಲ ಭೂ ದಿನವು ಮಾನವ ಇತಿಹಾಸದಲ್ಲಿ ಅತಿದೊಡ್ಡ ಏಕದಿನ ಪ್ರತಿಭಟನೆಯಾಗಿ ಉಳಿಯುವಂತೆ ಮಾಡಿದರು. 

 2016 ರ ಭೂ ದಿನವು ತನ್ನದೇ ಆದ ಪ್ರಾಮುಖ್ಯತೆ ಹೊಂದಿದೆ. ಅಂದು ದಿನದಂದು, ಪ್ಯಾರಿಸ್ ಒಪ್ಪಂದಕ್ಕೆ ಸಹಿ ಹಾಕಲಾಯಿತು. ಯುನೈಟೆಡ್ ಸ್ಟೇಟ್ಸ್, ಯುನೈಟೆಡ್ ಕಿಂಗ್‌ಡಮ್, ಚೀನಾ ಮತ್ತು 120 ಇತರ ದೇಶಗಳು ಈ ಒಪ್ಪಂದಕ್ಕೆ  ಸಹಿ ಹಾಕಿದವು. 

ಇದುವರೆಗಿನ ಭೂ ದಿನದ ಆಚರಣೆಯ ಫಲಶ್ರುತಿ ಏನು ಎಂಬುದನ್ನು ಕೆಲವರು ಪ್ರಶ್ನಿಸುತ್ತಾರೆ.

ಕ್ಲೀನ್ ಏರ್ ಆಕ್ಟ್‌ನಂತಹ ಹಲವಾರು ಪರಿಸರ ಕಾನೂನುಗಳನ್ನು ಸ್ಥಾಪಿಸಲಾಯಿತು ಅಥವಾ ಗಮನಾರ್ಹವಾಗಿ ಬಲಪಡಿಸಲಾಯಿತು.

ಇತ್ತೀಚಿನ ಘಟನೆಗಳು ನೂರಾರು ಮಿಲಿಯನ್ ಮರಗಳನ್ನು ನೆಡುವುದು, ಸುಸ್ಥಿರ ಕೃಷಿ ಪದ್ಧತಿಗಳೊಂದಿಗೆ ರೈತರನ್ನು ಬೆಂಬಲಿಸುವುದು ಮತ್ತು ಪ್ರಪಂಚದಾದ್ಯಂತ ಹವಾಮಾನ ಸಾಕ್ಷರತಾ ಯೋಜನೆಗಳನ್ನು ಪ್ರಾರಂಭಿಸುವುದು ಸೇರಿವೆ.

ನಾವೂ ಸಹ ಭೂದಿನವನ್ನು ಪರಿಸರಕ್ಕೆ ಪೂರಕವಾದ ಕ್ರಮಗಳನ್ನು ಕೈಗೊಳ್ಳುವ ಮೂಲಕ ಅರ್ಥಪೂರ್ಣವಾಗಿ ಆಚರಿಸೋಣ.


ಮರಗಿಡ ಕಡಿದು

ಕಟುಕರಾಗದೆ

ಪರಿಸರ ಉಳಿಸಲು

ಕಟಿಬದ್ದರಾದರೆ

ಭುವಿಯೆ ಸ್ವರ್ಗವು

ನೋಡು ಶ್ರೀದೇವಿತನಯ


ಸಿಹಿಜೀವಿ ವೆಂಕಟೇಶ್ವರ

ತುಮಕೂರು





ಸಂತಸದ ಮಾರ್ಗ

 



ಸಂತಸದ ಮಾರ್ಗ 


ಎಂದಿಗೂ ಅಳಲು ಬೇಡ

ಜಗಳವಾಡಲೇ ಬೇಡ 

ಇತರರ ಕೆಣಕಬೇಡ 

ಇದೇ ಸಂತಸದ ಮಾರ್ಗ ನೋಡ


ಸಿಹಿಜೀವಿ ವೆಂಕಟೇಶ್ವರ

ತುಮಕೂರು 

ಇಂಧನ ,ಧನ .(ಹನಿಗವನ)

 


ಇಂಧನ 


ಪ್ರಮಾಣಿಕತೆ, ಬದ್ದತೆ,ಮೌಲ್ಯಗಳು

ಪ್ರಜಾಪ್ರಭುತ್ವ ಮತ್ತು ಚುನಾವಣೆಗೆ ಇಂಧನ|

ಈಗೀಗ ಇವೆಲ್ಲವೂ ಗೌಣ 

ಇವಿರದಿದ್ದರೂ ಚಿಂತೆಯಿಲ್ಲ 

ಇದ್ದರೆ  ಸಾಕು ಧನ||


ಸಿಹಿಜೀವಿ ವೆಂಕಟೇಶ್ವರ

ತುಮಕೂರು

09 April 2024

ಅಸಲಿ, ನಕಲಿ

 


ಅಸಲಿ, ನಕಲಿ


ದಿನಕ್ಕೊಂದು ವಸ್ತು ಸಂತೆಯಲಿ

ಯಾವುದು ಅಸಲಿ?  ನಕಲಿ?

ಗುರುತಿಸುವುದನ್ನು  ನೀ ಕಲಿ 

ಬುದ್ದಿವಂತನಾಗು ಈ ಜಗದಲಿ


ಸಿಹಿಜೀವಿ ವೆಂಕಟೇಶ್ವರ

ತುಮಕೂರು


06 April 2024

ವಿಶ್ವ ಆರೋಗ್ಯ ದಿನ. ನನ್ನ ಆರೋಗ್ಯ ನನ್ನ ಹಕ್ಕು.


 


ವಿಶ್ವ ಆರೋಗ್ಯ ದಿನ. ನನ್ನ ಆರೋಗ್ಯ ನನ್ನ ಹಕ್ಕು.


ಮಾನವನ ಜೀವಿತ ಸರಾಸರಿ ಆಯುಷ್ಯ ಹೆಚ್ಚಾಗಿರುವುದು ಇತ್ತೀಚಿನ ಸಮೀಕ್ಷೆಯಿಂದ ಸಾಬೀತಾಗಿದೆ. ಆದರೂ ಜಾಗತಿಕ ತಾಪಮಾನ ಮತ್ತು ಇತರ ಕಾರಣದಿಂದಾಗಿ ವಿವಿಧ ರೋಗಗಳಿಂದ ಬಳಲುವವರೂ ಹೆಚ್ಚಾಗಿದ್ದಾರೆ.

 ವಿಶ್ವದ ಸಕಲ ಮನುಜರ ಆರೋಗ್ಯವನ್ನು ಕಾಪಾಡಿಕೊಳ್ಳುವ ಮಹತ್ವಾಕಾಂಕ್ಷೆಯಿಂದ ಹಲವು ಯೋಜನೆಗಳನ್ನು ಪ್ರಾರಂಭಿಸಲಾಯಿತು. 1948ರಲ್ಲಿ ಜಿನೀವಾದಲ್ಲಿ ನಡೆದ ವಿಶ್ವ ಆರೋಗ್ಯ ಶೃಂಗಸಭೆಯಲ್ಲಿ ವರ್ಷಕ್ಕೊಮ್ಮೆ ವಿಶ್ವ ಆರೋಗ್ಯ ದಿನವನ್ನು ಆಚರಿಸುವ ಮಹತ್ವದ ಬಗ್ಗೆ ಸಮಾಲೋಚಿಸಲಾಯಿತು.


1950ರ ಏಪ್ರಿಲ್ 7 ರಂದು ಪ್ರಥಮ ವಿಶ್ವ ಆರೋಗ್ಯ ದಿನವನ್ನು ಆಚರಿಸಲಾಯಿತು. ಅಂದಿನಿಂದ ಪ್ರತಿವರ್ಷ ಈ ದಿನವನ್ನು ವಿಶ್ವ ಆರೋಗ್ಯ ದಿನವನ್ನಾಗಿ ಆಚರಿಸುತ್ತಾ ಬರಲಾಗಿದೆ. ಅಂದಿನಿಂದ ವಿಶ್ವ ಆರೋಗ್ಯ ಸಂಸ್ಥೆ ಪ್ರತಿವರ್ಷವೂ  ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡು ವಿಶ್ವದೆಲ್ಲೆಡೆ  ವಿವಿಧ ಚಟುವಟಿಕೆಗಳನ್ನು ಏರ್ಪಡಿಸುತ್ತಾ ಬಂದಿದೆ. ಪ್ರತಿ ವರ್ಷ ಒಂದೊಂದು ಥೀಮ್ ಆಧರಿಸಿ ಈ ದಿನವನ್ನು ಆಚರಿಸಲಾಗುತ್ತದೆ. "ನನ್ನ ಆರೋಗ್ಯ ನನ್ನ ಹಕ್ಕು" ಇದು 2024 ರ ಥೀಮ್! ಹೌದು ನಮ್ಮ ಆರೋಗ್ಯ ಕಾಪಾಡಿಕೊಳ್ಳುವುದು ನಮ್ಮ ಹಕ್ಕೂ ಹೌದು ಕರ್ತವ್ಯ ಕೂಡ.


ಆರೋಗ್ಯದ ಕಾಳಜಿಯ ಕುರಿತಾದ  ವಿಷಯಗಳನ್ನು ಜನಸಾಮಾನ್ಯರಿಗೆ ಮುಟ್ಟಿಸಲು ಮತ್ತು ಈ ಬಗ್ಗೆ ಅರಿವು ಮೂಡಿಸಲು ಈ ದಿನದಂದು ವಿವಿಧ ಕಾರ್ಯಕ್ರಮಗಳನ್ನು ಏರ್ಪಡಿಸಲಾಗುತ್ತದೆ. ಹಲವು ಖ್ಯಾತನಾಮರು ಈ ಕಾರ್ಯಕ್ರಮಗಳಲ್ಲಿ ಯಾವುದೇ ಪ್ರತಿಫಲವಿಲ್ಲದೇ ಭಾಗಿಯಾಗಿ ಜನಹಿತ ಕಾರ್ಯಕ್ರಮಗಳಿಗೆ ಬಂಬಲ ನೀಡುತ್ತಾ ಬಂದಿದ್ದಾರೆ. ವಿಷಯದ ಕುರಿತಾದ ಪ್ರಸ್ತುತಿಗಳು ಇಡಿಯ ವರ್ಷ ಜನರ ಮನದಲ್ಲಿ ಹಸಿರಾಗಿ ಉಳಿಯಲು ಕ್ರಮ ಕೈಗೊಳ್ಳಲಾಗುತ್ತದೆ.


ಅರಿವಿಲ್ಲದೇ ಜನತೆ ಆಚರಿಸುತ್ತಾ ಬಂದಿರುವ ಅನಾರೋಗ್ಯಕರ ಮತ್ತು ಪಿಡುಗುಗಳ ಬಗ್ಗೆ ಮಾಹಿತಿ ನೀಡಿ ಜನರನ್ನು ಸರಿದಾರಿಗೆ ತರಲು ಪ್ರಯತ್ನಪಡುತ್ತಾರೆ. ಕಾಲಕಾಲಕ್ಕೆ ತೆಗೆದುಕೊಳ್ಳಬೇಕಾದ ಔಷಧಿ, ಕಾಪಾಡಬೇಕಾದ ನೈರ್ಮಲ್ಯ, ಸ್ವಚ್ಛತಾ ಅಭ್ಯಾಸಗಳು, ನೀರಿನ ದುಂದುವೆಚ್ಚ, ಪರಿಸರದ ಸ್ವಚ್ಛತೆ, ಮೊದಲಾದ ವಿಷಯಗಳ ಬಗ್ಗೆ ಕಾಳಜಿವಹಿಸುವ ಮಾಹಿತಿಯನ್ನು ನೀಡುತ್ತಾರೆ. ನಮ್ಮ ಆರೋಗ್ಯ ಕಾಪಾಡಿಕೊಂಡು  ಸಮಾಜದ ಆರೋಗ್ಯ ಉತ್ತಮಗೊಳಿಸುವ ಪ್ರಯತ್ನಕ್ಕೆ ನಾವೂ ಕೈಜೋಡಿಸೋಣ ತನ್ಮೂಲಕ ಆರೋಗ್ಯಕರ ಸಮಾಜದ ನಿರ್ಮಾಣಕ್ಕೆ ಪಣ ತೊಡೋಣ.

 

ಸಿಹಿಜೀವಿ ವೆಂಕಟೇಶ್ವರ

ತುಮಕೂರು

ಉಗಾದಿ ಹಬ್ಬಕ್ಕೆ ಅಲಂಕಾರದ ಟ್ರೆಂಡ್


 



ಉಗಾದಿ ಹಬ್ಬಕ್ಕೆ ಅಲಂಕಾರದ ಟ್ರೆಂಡ್ .


ಹಬ್ಬಗಳೆಂದರೆ ಏನೋ ಖುಷಿ ತಿಂಗಳಿಂದ ಹೊಸ ಬಟ್ಟೆ ಕೊಂಡು , ಸಾಮಗ್ರಿಗಳನ್ನು ಕೊಂಡು  ಸಂಭ್ರಮಿಸಲು ಸಿದ್ದತೆ ಮಾಡಿಕೊಳ್ಳುತ್ತೇವೆ.ಬಹುತೇಕ ಭಾರತೀಯರಿಗೆ ಹೊಸ ವರ್ಷ ಆರಂಭವಾಗುವುದು ಉಗಾದಿಯಂದು ಹಾಗಾಗಿ ಆ ಹಬ್ಬಕ್ಕೆ ಇತ್ತೀಚಿನ ದಿನಗಳಲ್ಲಿ ಮನೆಯನ್ನು ವಿನೂತನ ರೀತಿಯಲ್ಲಿ  ಡೆಕೊರೇಶನ್ ಮಾಡುವ ಟ್ರೆಂಡ್ ಶುರುವಾಗಿದೆ.ಈ ಶುಭ ಸಂದರ್ಭದಲ್ಲಿ ನೀವೂ ನಿಮ್ಮ ಮನೆಯನ್ನು ಹೊಸ ಟ್ರೆಂಡ್ ಮೂಲಕ ಅಲಂಕರಿಸಲು ಈ ಅಂಶಗಳನ್ನು ಗಮನಿಸಬಹುದು.


 

೧ ಮನೆಯನ್ನು ಚೆನ್ನಾಗಿ ಸ್ವಚ್ಚಗೊಳಿಸೋಣ..

ಇಂದಿ‌ನ ಧಾವಂತದ ಜೀವನದಲ್ಲಿ  ಹಾಗೂ ವಿಭಕ್ತ ಕುಟುಂಬಗಳು ಹೆಚ್ಚಾಗಿರುವ ಕಾಲದಲ್ಲಿ  ಮನೆಯ ಎಲ್ಲರೂ ಉದ್ಯೋಗ ಮಾಡುವವರಾಗಿರುವುದರಿಂದ ಮನೆಯನ್ನು ಸಮಗ್ರವಾಗಿ ಸ್ವಚ್ಚತೆ ಮಾಡಲು ಸಮಯ ಸಿಗದಿರಬಹುದು ಈ ಹಬ್ಬಕ್ಕೆ ನಮ್ಮ ಮನೆಯನ್ನು ಎಲ್ಲರೂ ಸೇರಿ ಸ್ವಚ್ಚ ಮಾಡೋಣ.


೨ ಹಬ್ಬಕ್ಕೆ ತಾಜಾ ಹೂ ಸುಗಂಧವನ್ನುಖರಿದಿಸೋಣ 

ಬಹುತೇಕ ಮನೆಗಳಲ್ಲಿ ಸೌಗಂಧವಿರದ ಕೃತಕ   ಹೂವಿನ ಹಾರಗಳು ಮನೆಯ ಬಾಗಿಲು ಮತ್ತು ಇತರೆಡೆ ನೇತಾಡುವುದು ಸಾಮಾನ್ಯ. ಆದರೆ ತಾಜಾ ಹೂವಿನ ಸುಗಂಧ ಪರಿಮಳದ ಆನಂದ ಅನುಭವಿಸಲು ಸ್ವಾಭಾವಿಕವಾದ ತಾಜಾ ಹೂಗಳನ್ನು ನಮ್ಮ ಮನೆಯ ಅಲಂಕಾರಕ್ಕೆ ಬಳಸೋಣ.


೩  ಮಾವಿನ ಎಲೆಗಳ ಅಲಂಕಾರ.

ಉಗಾದಿಗೂ ಮಾವು   ಬೇವಿಗೂ ಅವಿನಾಭಾವ ಸಂಬಂಧವಿದೆ ಮಾವಿನ  ತಳಿರು ತೋರಣದಿಂದ ನಮ್ಮ ಬಾಗಿಲು ಮತ್ತು ಮನೆಯನ್ನು ಸಿಂಗರಿಸೋಣ ಜೊತೆಗೆ ಬೇವಿನ ಸೊಪ್ಪನ್ನು ಸಹ ಬಳಸೋಣ.


೪ ವರ್ಣ ರಂಜಿತ ರಂಗೋಲಿ.

ಸಂಕ್ರಾಂತಿ  ದೀಪಾವಳಿ ಸೇರಿದಂತೆ  ಎಲ್ಲಾ ಹಬ್ಬಕ್ಕೆ ನಾವು ರಂಗೋಲಿ ಹಾಕುವುದು ಸಾಮಾನ್ಯವಾದರೂ ಯುಗಾದಿಗೆಂದೇ ಒಂದು ಸುಂದರ ವಿನ್ಯಾಸದ ರಂಗೋಲಿಯಿಂದ ನಮ್ಮ ಮನೆಯಂಗಳವನ್ನು ಅಲಂಕರಿಸೋಣ.


೫ ಹಿತ್ತಾಳೆ ಬಟ್ಟಲಿನಲ್ಲಿ ತೇಲುವ ವಿವಿಧ ರೀತಿಯ  ಹೂಗಳ ಅಲಂಕಾರದ  ಮೂಲಕ ನಮ್ಮ ಮನೆಯನ್ನು ಇನ್ನೂ ಸುಂದರವಾಗಿ ಕಾಣುವಂತೆ ಮಾಡೋಣ ಇದು ಇತ್ತೀಚಿನ ಹೊಸ ಟ್ರೆಂಡ್ ಆಗಿದೆ.


೬ ಪೂಜಾ ಕೊಠಡಿಯನ್ನು ಸ್ವಚ್ಚಗೊಳಿಸಿ ಉಗಾದಿ ಹಬ್ಬಕ್ಕೆ ನಮ್ಮ ಮನೆಯ ದೇವ ದೇವತೆಗಳನ್ನು  ವಿಭಿನ್ನವಾಗಿ ತಾಜಾ ಹೂಗಳನ್ನು ಬಳಸಿ   ಅಲಂಕಾರ ಮಾಡಿ ಧೂಪದ್ರವ್ಯ ಗಳಿಂದ  ಮನೆಯ  ಸದಸ್ಯರೆಲ್ಲರೂ ಸೇರಿ ದೇವರ ಪೂಜಿಸಿ ಆನಂದಿಸೋಣ.


೭ ಹಬ್ಬಕ್ಕೆ ವಿಭಿನ್ನವಾದ ಉಡುಗೆ ತೊಡುಗೆಗಳನ್ನು ತೊಟ್ಟು ಅನಂದಿಸೋಣ.ಈ ವಿಷಯದಲ್ಲಿ ಮಾರುಕಟ್ಟೆಯಲ್ಲಿ ಈ ವರ್ಷ ಬಂದ ಹೊಸ ಟ್ರೆಂಡ್ ನ ಬಟ್ಟೆಗಳಿಗೆ ಆದ್ಯತೆ ನೀಡಿ  ಕುಟುಂಬದ ಸದಸ್ಯರೆಲ್ಲರೂ ತೊಟ್ಟು ಗ್ರೂಪ್ ಸೆಲ್ಪಿ ತೆಗೆದುಕೊಂಡು  ಸಂಭ್ರಮಿಸೋಣ.


೮ ಹಬ್ಬದ ಸಂಜೆ ದೀಪ ಬೆಳಗಿಸೋಣ.

ಸಾಮಾನ್ಯವಾಗಿ ದೀಪಾವಳಿಯಲ್ಲಿ ಸಂಜೆ ದೀಪಗಳನ್ನು ಬೆಳಗಿ ಹಬ್ಬದ ಆಚರಣೆಯನ್ನು ಮಾಡುತ್ತೇವೆ ಉಗಾದಿಯ ಸಂಜೆಯೂ ನಾವು ಮನೆಯ ಮುಂದೆ ದೀಪಗಳ ಬೆಳಗಬಹುದು ಜೊತೆಗೆ ಅಲಂಕಾರಿಕ ಎಲೆಕ್ಟ್ರಿಕ್ ಎಲ್ ಇ ಡಿ ಸಹ ಬಳಸಿಕೊಂಡು ಮನೆ ಮನವನ್ನು ಜಗಮಗಿಸಬಹುದು.

 

ಕಾಲಕ್ಕೆ ತಕ್ಕಂತೆ ನಾವು ನಮ್ಮ ಆಚಾರ ವಿಚಾರಗಳನ್ನು ಪಾಲಿಸುತ್ತಾ ತಂತ್ರಜ್ಞಾನದ ಟಚ್ ನೀಡುವ ಮೂಲಕ ಹೊಸ ರೀತಿಯಲ್ಲಿ ಅಚರಣೆ ಮಾಡುತ್ತಾ ನಮ್ಮ ಸಂಸ್ಕೃತಿಯನ್ನು ಪಾಲಿಸೋಣ ಈ ವರ್ಷದ ಉಗಾದಿ ಹಬ್ಬವನ್ನು ಇನ್ನೂ ಹೆಚ್ಚು ಸಂಭ್ರಮಿಸೋಣ.


ಸಿಹಿಜೀವಿ ವೆಂಕಟೇಶ್ವರ

ತುಮಕೂರು

9900925529

ಓದು ವ್ಯಸನವಾಗಲಿ.*.


 



*ಓದು ವ್ಯಸನವಾಗಲಿ.*.


ಯಾವುದೇ ಕಂಪನಿಯ ಮತ್ತು ಸಂಸ್ಥೆಗಳ ಟ್ಯಾಗ್‌ ಲೈನ್ ನಾನು ಬಹಳ ಆಸಕ್ತಿಯಿಂದ ಗಮನಿಸುವೆ.ಆ ಲೈನ್ ಗಳು ಕಡಿಮೆ ಪದದಲ್ಲಿ ಹೆಚ್ಚು ಅರ್ಥಗಳನ್ನು ಧ್ವನಿಸುತ್ತವೆ ಕೆಲವೊಮ್ಮೆ ನಮ್ಮನ್ನು ಚಿಂತನೆಗೆ ಹಚ್ಚುತ್ತವೆ.ಇತ್ತೀಚೆಗೆ ಅಂತಹ ಚಿಂತನೆಗೆ ಹಚ್ಚಿದ ಮತ್ತು ನನ್ನ ಸೆಳೆದ ಟ್ಯಾಗ್ ಲೈನ್ "ಚಂದ ಪುಸ್ತಕ " ಪ್ರಕಾಶನ ಸಂಸ್ಥೆಯ ಟ್ಯಾಗ್ ಲೈನ್ "ಓದಿ ಓದಿ  ಮರುಳಾಗಿ!"

ಓದಿನ ಮಹತ್ವ ಕುರಿತಾಗಿ ನೂರಾರು ಪುಸ್ತಕಗಳು ಬಂದಿವೆ ಸಾವಿರಾರು ಉಪನ್ಯಾಸ ‌ಕೇಳಿರುವೆವು. ಅವುಗಳೆಲ್ಲದರ ಸಾರಾಂಶ ಒಂದೇ ಓದು ನಮ್ಮ ಜೀವನಕ್ಕೆ ಮತ್ತು  ನಮ್ಮ ವ್ಯಕ್ತಿತ್ವ ವಿಕಸನಕ್ಕೆ ಬಹಳ ಮುಖ್ಯ.

ಜೀವನದಲ್ಲಿ ಉನ್ನತವಾದ ಸಾಧನೆ ಮಾಡಿರುವವರು ಓದಿನ ಮಹತ್ವ ಅರಿತು ಇಂದಿಗೂ ಓದುತ್ತಿದ್ದಾರೆ ಅಂತಹ ಕೆಲ ಮಹನಿಯರ ಓದಿನ ಕ್ರಮ ತಿಳಿಯುವುದಾದರೆ 

 ಹನ್ನೆರಡನೇ ವಯಸ್ಸಿನಲ್ಲಿಯೇ ಶೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಿ ಶೇರ್ ಮಾರುಕಟ್ಟೆಯ ಶೇರ್ ಎಂದು ಹೆಸರಾದ ವಾರೆನ್ ಬಫೆಟ್  ರವರು ಸತತ ಇಪ್ಪತ್ತು ವರ್ಷಗಳಿಂದ ವಿಶ್ವದ ಟಾಪ್ ಟೆನ್ ಸಿರಿವಂತರ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ. ಈಗಲೂ ಅವರು ಪ್ರತಿದಿನ ಓದಲು ಹೆಚ್ಚು ಸಮಯ ಕಳೆಯುತ್ತಾರೆ.  ವಾರ್ಷಿಕ ವರದಿಗಳು, ವ್ಯವಹಾರ ಪತ್ರಿಕೆಗಳು ಮತ್ತು ವ್ಯಾಪಕ ಶ್ರೇಣಿಯ ವಿಷಯಗಳ ಪುಸ್ತಕಗಳು, ವಿಶೇಷವಾಗಿ ಹೂಡಿಕೆ ಮತ್ತು ವ್ಯವಹಾರ ನಿರ್ವಹಣೆ ಸೇರಿದಂತೆ ವಿವಿಧ ಪುಸ್ತಕಗಳನ್ನು ಅವರು  ಓದುತ್ತಾರೆ.


 ಅಂತರರಾಷ್ಟ್ರೀಯ ಖ್ಯಾತ ನಿರೂಪಕಿಯಾದ  ಓಪ್ರಾ ವಿನ್ಫ್ರೇ ಅತ್ಯಾಸಕ್ತಿಯ ಓದುಗರಾಗಿರುವರು. ಇವರು ಓದಿದ ಪುಸ್ತಕಗಳ ಬಗ್ಗೆ   ತನ್ನ ಶೋಗಳಲ್ಲಿ  ಅವರು ತನ್ನ ಪ್ರೇಕ್ಷಕರೊಂದಿಗೆ ಪುಸ್ತಕಗಳನ್ನು ಶಿಫಾರಸು ಮಾಡುತ್ತಾರೆ ಮತ್ತು ಚರ್ಚಿಸುತ್ತಾರೆ.  


 ಜಾಗತಿಕ ಶ್ರೀಮಂತರಲ್ಲಿ ಒಬ್ಬರಾದ ಎಲೋನ್ ಮಸ್ಕ್ ಚಿಕ್ಕ ವಯಸ್ಸಿನಿಂದಲೂ ಅತ್ಯಾಸಕ್ತಿಯ ಓದುಗ.  ಅವರು ಬಾಲ್ಯದಲ್ಲಿ ದಿನಕ್ಕೆ 10 ಗಂಟೆಗಳ ಕಾಲ ಓದುತ್ತಿದ್ದೆ ಎಂದು ಸಂದರ್ಶನಗಳಲ್ಲಿ ಉಲ್ಲೇಖಿಸಿದ್ದಾರೆ. ಅಲ್ಲದೇ  ತಮ್ಮ ವಿಶಾಲವಾದ ಜ್ಞಾನದ ಮೂಲವನ್ನು ಅವರ ವ್ಯಾಪಕವಾದ ಓದುವ ಅಭ್ಯಾಸವೇ  ಕಾರಣವೆಂದು ಹೇಳುತ್ತಾರೆ.


 ಬಿಲ್ ಗೇಟ್ಸ್  ಬಗ್ಗೆ ನಮಗೆಲ್ಲ ತಿಳಿದೇ ಇದೆ ಅವರೊಬ್ಬ ಅತ್ಯಾಸಕ್ತಿಯ ಓದುಗ ಎಂದು ಹೆಸರುವಾಸಿಯಾಗಿದ್ದಾರೆ ಮತ್ತು ಆಗಾಗ್ಗೆ ಅವರ ಓದಿದ ಪುಸ್ತಕಗಳ ಬಗ್ಗೆ   ತಮ್ಮ ಬ್ಲಾಗ್ ಆದ    ಗೇಟ್ಸ್ ನೋಟ್ಸ್   ನಲ್ಲಿ  ಹಂಚಿಕೊಳ್ಳುತ್ತಾರೆ.  ಅವರು ಎಲ್ಲಾ ರೀತಿಯ ಪುಸ್ತಕಗಳನ್ನು ಓದುತ್ತಾರೆ  ತಂತ್ರಜ್ಞಾನ ಮತ್ತು ವಿಜ್ಞಾನದ ಬಗ್ಗೆ ನಾನ್ ಫಿಕ್ಷನ್  ಪುಸ್ತಕಗಳಿಂದ ಕಾದಂಬರಿಗಳು ಮತ್ತು ಜೀವನಚರಿತ್ರೆಗಳವರೆಗೆ ವ್ಯಾಪಕ ಶ್ರೇಣಿಯ ಪುಸ್ತಕಗಳನ್ನು ಅವರು ಈಗಲೂ ಓದುತ್ತಾರೆ.


  ಫೇಸ್‌ಬುಕ್‌ನ ಸಿಒಒ ಶೆರಿಲ್ ಸ್ಯಾಂಡ್‌ಬರ್ಗ್ ಅವರು ತಮ್ಮ ಶಿಸ್ತುಬದ್ಧ ಓದುವ ಹವ್ಯಾಸಗಳಿಗೆ ಹೆಸರುವಾಸಿಯಾಗಿದ್ದಾರೆ.  ಅವರ ಪ್ರತಿದಿನ ಓದಲು ಸಮಯವನ್ನು ಮೀಸಲಿಡುತ್ತಾರೆ ಅವರು  ಓದಿದ ಪುಸ್ತಕಗಳ ಬಗ್ಗೆ ತಮ್ಮ  ಸಾಮಾಜಿಕ  ಜಾಲತಾಣಗಳಲ್ಲಿ ಮಾಹಿತಿ ಹಂಚಿಕೊಳ್ಳುತ್ತಾರೆ.ಫೇಸ್‌ಬುಕ್‌ನ ಸಿಇಒ ಮಾರ್ಕ್ ಜುಕರ್‌ಬರ್ಗ್ ಅವರು ಪ್ರತಿ ಎರಡು ವಾರಗಳಿಗೊಮ್ಮೆ ಪುಸ್ತಕವನ್ನು ಓದುವುದನ್ನು ವೈಯಕ್ತಿಕ ಸವಾಲಾಗಿ ಸ್ವೀಕರಿಸಿ ಆ ಸವಾಲಿನಲ್ಲಿ ಗೆದ್ದಿದ್ದಾರೆ.  ಅವರು ವಾರ್ಷಿಕವಾಗಿ ತಮ್ಮ ಓದುವ ಪಟ್ಟಿಯನ್ನು ಹಂಚಿಕೊಳ್ಳುತ್ತಾರೆ ಮತ್ತು ಅವರ ವೈಯಕ್ತಿಕ ಮತ್ತು ವೃತ್ತಿಪರ ಬೆಳವಣಿಗೆಯ ಮೇಲೆ ಪುಸ್ತಕಗಳು ಬೀರಿದ ಪ್ರಭಾವವನ್ನು ಜನರೊಂದಿಗೆ ಹಂಚಿಕೊಳ್ಳುತ್ತಾರೆ.


  ಮೈಕ್ರೋಸಾಫ್ಟ್ ಸಿಇಒ ಸತ್ಯ ನಾಡೆಲ್ಲಾ ಅವರು ಕಾವ್ಯ ಮತ್ತು ಸಾಹಿತ್ಯದ ಪ್ರೀತಿಗೆ ಹೆಸರುವಾಸಿಯಾಗಿದ್ದಾರೆ.  ಅವರು ತಮ್ಮ ನಾಯಕತ್ವದ ಶೈಲಿ ಮತ್ತು ನಿರ್ಧಾರ ತೆಗೆದುಕೊಳ್ಳುವ ಪ್ರಕ್ರಿಯೆಯಲ್ಲಿ ಸಾಹಿತ್ಯದಿಂದ ಕಲಿತ ಪಾಠಗಳನ್ನು ಹೆಚ್ಚಾಗಿ ಅನುಕೂಲಕರವಾಗಿವೆ ಎಂದು ಹೇಳುತ್ತಾರೆ

ಪೆಪ್ಸಿಕೋದ ಮಾಜಿ ಸಿಇಒ ಇಂದ್ರಾ ನೂಯಿ ಅವರು ಉತ್ತಮ ಓದುಗರಾಗಿದ್ದಾರೆ.ಅವರು ತಮ್ಮ ನಾಯಕತ್ವದ ಶೈಲಿ ಮತ್ತು ವ್ಯವಹಾರದ ವಿಧಾನವನ್ನು ರೂಪಿಸುವಲ್ಲಿ ಪುಸ್ತಕಗಳು ಬಹು ಮುಖ್ಯ ಪಾತ್ರವಹಿಸಿವೆ  ಎಂದು ಹೇಳುತ್ತಾರೆ. ನಿರಂತರ ಕಲಿಕೆ ಮತ್ತು ಬೆಳವಣಿಗೆಯನ್ನು ಉತ್ತೇಜಿಸುವ ಮಾರ್ಗವಾಗಿ ಅವರು ತಮ್ಮ ಉದ್ಯೋಗಿಗಳಿಗೆ ಮತ್ತು ಗೆಳೆಯರಿಗೆ ಪುಸ್ತಕಗಳನ್ನು ಓದಲು ಶಿಫಾರಸು ಮಾಡುತ್ತಾರೆ.

ಹೀಗೆ ಪಟ್ಟಿ ಬೆಳೆಯುತ್ತಾ ಹೋಗುತ್ತದೆ.ಈ ಎಲ್ಲಾ ವ್ಯಕ್ತಿಗಳು ವೈಯಕ್ತಿಕ ಮತ್ತು ವೃತ್ತಿಪರ ಬೆಳವಣಿಗೆಗೆ ಅಭ್ಯಾಸವಾಗಿ ಓದುವ ಪ್ರಾಮುಖ್ಯತೆಯನ್ನು ಒತ್ತಿ ಹೇಳುತ್ತಾರೆ. ಜೊತೆಗೆ ಒಬ್ಬರ ದೃಷ್ಟಿಕೋನಗಳು ಮತ್ತು ಜ್ಞಾನದ ನೆಲೆಯನ್ನು ವಿಸ್ತರಿಸಲು ಓದು ತನ್ನದೇ ಪಾತ್ರ ವಹಿಸುತ್ತದೆ.ಆದ್ದರಿಂದ

ಓದುವ ಅಭ್ಯಾಸವನ್ನು ರೂಢಿಸಿಕೊಂಡು  ನಿಮ್ಮ ಜೀವನ ಮತ್ತು ವೃತ್ತಿಯನ್ನು ಉತ್ತಮಪಡಿಸಿಕೊಳ್ಳಿ.ಈ ವರ್ಷದ ಬೇಸಿಗೆ ರಜಾ ದಿನಗಳಲ್ಲಿ ನಮ್ಮ ಮಕ್ಕಳಿಗೆ ಉತ್ತಮ ಪುಸ್ತಕಗಳನ್ನು ಪರಿಚಯಿಸಿ ಓದುವ ರುಚಿ ಹತ್ತಿಸೋಣ.

ಈ ಸಂದರ್ಭದಲ್ಲಿ

ಕನ್ನಡದ ಖ್ಯಾತ ಲೇಖಕರು ಮತ್ತು ಕಾದಂಬರಿಕಾರರಾದ ಸಂತೋಷ ಕುಮಾರ್ ಮೆಹಂದಳೆ ರವರು ಹೇಳುವ ಒಂದು ಮಾತು ನೆನಪಾಗುತ್ತದೆ ಓದು ವ್ಯಸನವಾಗಲಿ!


*ಸಿಹಿಜೀವಿ ವೆಂಕಟೇಶ್ವರ*

ತುಮಕೂರು