29 February 2020

ಜಾಸ್ತಿ(ಹನಿಗವನ)

*ಜಾಸ್ತಿ*

(ಫೆಬ್ರವರಿ ೨೯)

ಯಾಕೆ ಸುಮ್ಮನೆ
ಮಾಡ್ತೀಯ ಕುಸ್ತಿ
ಸಂತಸದಿಂದಿರು
ಇಂದು ಸಿಕ್ಕಿದೆ
ಒಂದು‌ ದಿನ ಜಾಸ್ತಿ

*ಸಿ ಜಿ ವೆಂಕಟೇಶ್ವರ*

24 February 2020

ಧನ (ಚುಟುಕು)


*ಧನ*

ಇಂದು ಬರುವುದು ಧನ
ನಾಳೆ ಆಗಬಹುದು ನಿರ್ಧನ
ಧನವಿದ್ದರೂ ನಿಲ್ಲಲ್ಲ ನಿಧನ
ಇದ್ದಾಗ ನೀನು ಮಾಡು ದಾನ.

*ಸಿ ಜಿ ವೆಂಕಟೇಶ್ವರ*

20 February 2020

ಹಿತವರಾರು.ಮತದಾನ ಜಾಗೃತಿ ಗೀತೆ (ಪ್ರಜಾವಾಣಿ



ನೀರಿನ ಬಾಟಲ್ ರಿಯಾಯಿತಿ ದರ ಇರಲಿ .ಪ್ರಜಾವಾಣಿ


ಅಹಿಂಸೆ ಪಾಲಿಸಿ .ನ್ಯಾನೋ ಕಥೆ (ಮಂಗಳ ಪತ್ರಿಕೆಯಲ್ಲಿ)

ಅಹಿಂಸೆ ಪಾಲಿಸಿ .ನ್ಯಾನೋ ಕಥೆ (ಮಂಗಳ ಪತ್ರಿಕೆಯಲ್ಲಿ)

ಕರ್ನಾಟಕ ನೀರು ‌ಕೊಡಲಿ ( ಸಂಯುಕ್ತ ಕರ್ನಾಟಕ)



ಕರ್ನಾಟಕ ನೀರು ‌ಕೊಡಲಿ ( ಸಂಯುಕ್ತ ಕರ್ನಾಟಕ)

ದೇವದಾಸ್ (ಹನಿಗವನ)

*ದೇವದಾಸ* ಹನಿಗವನ

ಮೊದ ಮೊದಲು ಪ್ರೀತಿಸಿ ಪ್ರೇಮದಾಸ
ಪ್ರೀತಿಸಿದವಳು ಮಾಡಿದಳು ಮೋಸ
ಪ್ರೀತಿ ಕೈಕೊಟ್ಟಮೇಲೆ  ದೇವದಾಸ
ಆಮೇಲೆ ಚಟಗಳ  ದಾಸಾನುದಾಸ

*ಸಿ ಜಿ‌ ವೆಂಕಟೇಶ್ವರ*


18 February 2020

ನಾವೂ ಬದಲಾಗಬೇಕಿದೆ (ಶೈಕ್ಷಣಿಕ ಲೇಖನ)

ನಾವೂ ಬದಲಾಗಬೇಕಿದೆ

"ನನ್ನ ದೇಶದ ಎಲ್ಲಾ ಪ್ರಜೆಗಳು ಗುಣಮಟ್ಟದ ಶಿಕ್ಷಣ ಪಡೆದಾಗ ಈ ದೇಶದ ಬಾವುಟ ಇನ್ನೂ ಎತ್ತರಕ್ಕೆ ಹಾರುವುದು.
ದೇಶದ ಎಲ್ಲ ಪ್ರಜೆಗಳು ಅರೋಗ್ಯಹೊಂದಿದಾಗ ನನ್ನ ಭಾರತದ ಧ್ವಜ ಹೆಮ್ಮೆಯಿಂದ ಹಾರಾಡುವುದು."

ಮೂರನೇ ಬಾರಿಗೆ ಮುಖ್ಯ ಮಂತ್ರಿಯಾಗಿ ಪದಗ್ರಹಣ ಮಾಡುತ್ತಾ ದೆಹಲಿಯ ಮುಖ್ಯಮಂತ್ರಿ ಅರವಿಂದ ಕೇಜ್ರೀವಾಲ್ ರವರು ಈಗೆ ಭಾಷಣ ಮಾಡಿದ್ದು ಕೇಳಿ ಆಶ್ಚರ್ಯಕರವಾಗಿ ಕಂಡುಬರಲಿಲ್ಲ.ಇದೇ ಮಾತನ್ನು ಇತರೆ ರಾಜಕಾರಣಿಗಳು ಹೇಳಿದ್ದರೆ ಅದು ಹತ್ತರ ನಡುವೆ ಇನ್ನೊಂದು ಆಶ್ವಾಸನೆ, ಪೊಳ್ಳು ಭರವಸೆ, ಮತದಾರರ ಓಲೈಕೆಯ ಮಾತುಗಳು ಎಂದು ಜರೆಯಬಹುದಾಗಿತ್ತು.

ಆದರೆ ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಕಟವಾದ ದೆಹಲಿಯ ಶಾಲೆಗಳ ಚಿತ್ರಣ ನೋಡಿದವರಿಗೆ .ಈ ಮೇಲಿನ ಮಾತಿನಲ್ಲಿ ಸತ್ಯವಿದೆ ಎನಿಸದಿರದು.ದೇಶದ ಬಹುತೇಕ ಸರ್ಕಾರಿ ಶಾಲೆಗಳ ಪರಿಸ್ಥಿತಿಯನ್ನು ನೋಡಿದಾಗ ಸರ್ಕಾರಿ ಶಾಲೆಗಳನ್ನು ಕಂಡರೆ ಮೂಗು ಮುರಿಯುವವರೇ ಹೆಚ್ಚು. ಅದರೆ ದೆಹಲಿ ಸರ್ಕಾರಿ ಶಾಲೆಗಳನ್ನು ಕಂಡ ಮೇಲೆ ಸರ್ಕಾರಿ ಶಾಲೆಗಳ ಬಗ್ಗೆ ನಮಗಿರುವ ಮನೋಭಾವ ಖಂಡಿತವಾಗಿಯೂ ಬದಲಾಗುತ್ತದೆ.
ಅಷ್ಟಕ್ಕೂ ಈ ಬದಲಾವಣೆ ಸುಲಭವಾಗಿ ,ಮತ್ತು ಶೀಘ್ರವಾಗಿ ಆಯಿತೆ ? ಖಂಡಿತವಾಗಿ ರಾತ್ರೋರಾತ್ರಿ ಇಂತಹ ಬದಲಾವಣೆಗಳನ್ನು ಮಾಡಲು ಸಾದ್ಯವಿಲ್ಲ. ಇದಕ್ಕೆ ಬದ್ದತೆ ,ತಾಳ್ಮೆ, ಇಚ್ಛಾ ಶಕ್ತಿ ಅಗತ್ಯವಾದ ಅಂಶಗಳಾಗಿದ್ದವು.
ದೆಹಲಿಯ ಮಾಜಿ ಸಂಸದೆಯಾದ ಆತಿಶಿಯವರ ಮಾತುಗಳಲ್ಲಿ ಹೇಳುವುದಾದರೆ. " ಕಳೆದ ಐದು ವರ್ಷಗಳಲ್ಲಿ ದೆಹಲಿಯ ಶಾಲೆಗಳ ಚಿತ್ರಣ ಬದಲಿಸಲು ,ಸರ್ಕಾರ, ಶಿಕ್ಷಕರು, ಸ್ವಯಂಸೇವಾ ಸಂಘ ಸಂಸ್ಥೆಗಳು, ಪೋಷಕರು, ಅಧಿಕಾರಿಗಳು, ಲಾಭೇತರ ಸಂಸ್ಥೆಗಳು, ಟೊಂಕ ಕಟ್ಟಿ ನಿಂತ ಪರಿಣಾಮವಾಗಿ ಇಂದು ದೆಹಲಿಯ ಶಾಲೆಗಳು ದೇಶದಲ್ಲಿ ಮನೆ ಮಾತಾಗಿವೆ."

ದೆಹಲಿ ಶಾಲೆಗಳು ಬದಲಾವಣೆ ಆಗಿದ್ದೇಗೆ?

ಮೊದಲು ದೆಹಲಿಯ ಶಾಲೆಗಳು ಇತರೆ ಶಾಲೆಗಳ ರೀತಿ ಸರಿಯಾದ ಕಟ್ಟಡವಿಲ್ಲದ ,ಶೌಚಾಲಯ ಇಲ್ಲದ ,ಮೂಲಭೂತ ಸೌಕರ್ಯಗಳು ಇಲ್ಲದ ,ಇತ್ಯಾದಿ ಇಲ್ಲದ ಶಾಲೆಗಳು ಆಗಿದ್ದವು .ಇಂತಹ ಶಾಲೆಗಳು ಬದಲಾವಣೆ ಮಾಡಲು ಕ್ರಮೇಣವಾಗಿ ಅಪೇಕ್ಷಿತ ಬದಲಾವಣೆ ತರಲು ಪಣ ತೊಡಲಾಯಿತು.ಮೊದಲು ಅಲ್ಲಿನ ಶೌಚಾಲಯಗಳನ್ನು ಸ್ವಚ್ಚ ಗೊಳಿಸದ ಕಾರ್ಯ ಮಾಡಲಾಯಿತು. ಆರಂಭದಲ್ಲಿ .ಮಕ್ಕಳಿಂದ ,ಶಿಕ್ಷಕರಿಂದ ಸಮುದಾಯದ, ಸಹಕಾರ ಸಿಗದಿದ್ದರೂ ,ಪ್ರಯತ್ನ ಮುಂದುವರೆಸಿ ಶಾಲೆಗಳ ಶೌಚಾಲಯ ಸ್ವಚ್ಚವಾಗಿ ಮಕ್ಕಳ ಆರೋಗ್ಯದಲ್ಲಿ ಸುಧಾರಣೆ ಕಂಡು ಬಂದಿತು.

ಜಗಮಗಿಸುವ ಶಾಲೆಗಳ ಕಟ್ಟಡಗಳು
ದೆಹಲಿಯ
ಸರ್ಕಾರಿ ಶಾಲೆಗಳ ಮಕ್ಕಳು ಇತರೆ ಖಾಸಗಿ ಶಾಲೆಗಳ ಮಕ್ಕಳ ನೋಡಿ ಅವರಂತಹ ಶಾಲೆಗಳ ‌ಕಟ್ಟಡ ನಮಗಿಲ್ಲ ಮೂಲಭೂತವಾದ ಸೌಕರ್ಯಗಳಿಲ್ಲ ಎಂದು   ಕೀಳರಿಮೆ ಪಡುತ್ತಿದ್ದರು .ಇದನ್ನು ಮನಗಂಡ ಅಲ್ಲಿನ ಸ್ವಯಂ ಸೇವಾ ಸಂಸ್ಥೆಗಳು, ಸರ್ಕಾರದ ಸಮುದಾಯದ ಸಹಭಾಗಿತ್ವದಲ್ಲಿ ಸರ್ಕಾರಿ ಶಾಲಾ ಕಟ್ಟಡಗಳು ಹೊಸದಾಗಿ ನಿರ್ಮಾಣ ಮಾಡಲ್ಪಟ್ಟವು .ಕೆಲ ಶಾಲೆಗಳು ಸುಣ್ಣ ಬಣ್ಣ ಕಂಡು ಕಂಗೊಳಿಸಿದವು, ಮೂಲಭೂತ ಸೌಲಭ್ಯಗಳು ಸಿಗಲಾರಂಬಿಸಿದವು. ಶಾಲೆಗಳು ಆಕರ್ಷಣೆಯ ತಾಣಗಳಾಗಿ ಕ್ರಮೇಣವಾಗಿ ದಾಖಲಾತಿ ಹೆಚ್ಚಾಯಿತು.

ಇರುವ ವ್ಯವಸ್ಥೆಯಲ್ಲಿ ಚಾಂಪಿಯನ್ ಹುಡುಕಾಟ.

ಶಾಲೆಗಳ ಮೂಲಭೂತ ಸೌಕರ್ಯಗಳನ್ನು ನೀಡಿದ ಮಾತ್ರಕ್ಕೆ ಆ ಶಾಲೆಗಳ ಪ್ರಗತಿ ಸಾದ್ಯವಿಲ್ಲ ಗುಣಮಟ್ಟದ ಶಿಕ್ಷಕರ ಅಗತ್ಯ ಕೂಡ ಮುಖ್ಯ ಈ ನಿಟ್ಟಿನಲ್ಲಿ ದೆಹಲಿಯಲ್ಲಿ ವ್ಯವಸ್ಥೆಯ ಭಾಗದಿಂದ ಚಾಂಪಿಯನ್ ಶಿಕ್ಷಕರ ಹುಡುಕು ಕಾರ್ಯ ಆರಂಭವಾ ಯಿತು. ಎಲ್ಲಾ ರಂಗದಲ್ಲಿ ಇರುವಂತೆ ಸಾಮಾನ್ಯ ಸಂಭಾವ್ಯ ವಕ್ರರೇಖೆ (normal probability curve) ಶಿಕ್ಷಣ ಕ್ಷೇತ್ರದಲ್ಲಿ ಅನ್ವಯ ಮಾಡುವುದಾದರೆ 20% ಶಿಕ್ಷಕರು ಅತ್ಯುತ್ತಮ ಕೌಶಲಗಳನ್ನು ಹೊಂದಿರುವ, ತಂತ್ರಜ್ಞಾನದ ತಿಳುವಳಿಕೆ ಹೊಂದಿರುವ  ಅತೀ ಬದ್ಧತೆಯ ಶಿಕ್ಷಕರು ಇರುತ್ತಾರೆ, 60% ಶಿಕ್ಷಕರು ಸಮಾನ್ಯವಾದ ಸರಾಸರಿಯಾಗಿ ಉತ್ತಮ ಶಿಕ್ಷಕರಾಗಿ ಕಾರ್ಯ ನಿರ್ವಹಿಸುವವರು. ಇನ್ನುಳಿದ 20% ಶಿಕ್ಷಕರು ವಿವಿಧ ಕಾರಣದಿಂದಾಗಿ ಕಡಿಮೆ ಸಾಮರ್ಥ್ಯವನ್ನು ಹೊಂದಿ ಬೋಧನೆ ಮಡುವವರು. ದೆಹಲಿಯಲ್ಲಿ ಮೊದಲ 20% ಶಿಕ್ಷಕರಿಗೆ ಮೊದಲು ಹೆಚ್ಚಿನ ತರಭೇತಿಯನ್ನು ನೀಡ ಉಳಿದ ಶಿಕ್ಷಕರಿಗೆ ನಂತರ ಪ್ರೇರೇಪಣೆ ನೀಡಿ ಇರುವ ಶಿಕ್ಷಕರನ್ನು  ಗುಣಮಟ್ಟದ ಶಿಕ್ಷಕರನ್ನಾಗಿ ಪರಿವರ್ತಿಸುವ ಮೂಲಕ ಗುಣಾತ್ಮಕ ಶಿಕ್ಷಣಕ್ಕೆ ನಾಂದಿ ಹಾಡಲಾಯಿತು.

ಪಠ್ಯ ಕ್ರಮ

ದೇಶದ ಎಲ್ಲಾ ಶಾಲೆಗಳಲ್ಲಿ ರಾಷ್ಟ್ರೀಯ ಪಠ್ಯಕ್ರ ಚೌಕಟ್ಟಿನ ಅಡಿಯಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿಗನುಗುಣವಾಗಿ.ಪಠ್ಯಕ್ರಮ ಇದ್ದಂತೆ ದೆಹಲಿಯ ಶಾಲೆಗಳು ಸಹ‌ಇದೇ ಪಠ್ಯ ಕ್ರಮದ ಜೊತೆಗೆ
ಶಾಲೆಗಳಲ್ಲಿ  "ಸಂತಸ" ಮತ್ತು "ಉದ್ಯಮಗಾರಿಕೆ" ಎಂಬ ಹೊಸ ಪಠ್ಯ ಸೇರಿಸುವ ಮೂಲಕ ಶಾಲೆಗೆ ಸಂತಸದಾಯಕ ಕಲಿಕಾ ವಾತಾವರಣ ಸೃಷ್ಟಿ ಮಾಡಿ ತಮ್ಮ ಮುಂದಿನ‌ ಜೀವನವನ್ನು ರೂಪಿಕೊಳ್ಳುವ ಶಿಕ್ಷಣ ನೀಡಲು ಶಾಲೆಗಳು ಸಜ್ಜಾದವು ಇದರ ಪರಿಣಾಮವಾಗಿ ಖಾಸಗಿ ಶಾಲೆಗಳಿಗಿಂತ ಸರ್ಕಾರಿ ಶಾಲೆಗಳು ಹೆಚ್ಚು ಆಕರ್ಷಿತವಾದವು. ದೇಶದ ಮನೆಮಾತಾದವು.

ನಮ್ಮಲ್ಲೇನಾಗಬೇಕು.

ನಮ್ಮ ರಾಜ್ಯದಲ್ಲಿ ಮೂಲಭೂತ ಸೌಕರ್ಯಗಳ ದೃಷ್ಟಿಯಿಂದ ಕೊಠಡಿಗಳ ಕೊರತೆಯೇನೂ ಇಲ್ಲ ಆದರೆ ಕೆಲವೆಡೆ ಕಟ್ಟಡಗಳ ಶಿಥಿಲವಾಗಿರುವಂತವುಗಳ ದುರಸ್ತಿ ಮಾಡಿ ಸುಣ್ಣ ಬಣ್ಣ ಹೊಡೆದು ಮೂಲಭೂತ ಸೌಕರ್ಯಗಳನ್ನು ಹೆಚ್ಚು ನೀಡಿ ಹೊರಗಿನಿಂದ ನೋಡಿದಾಕ್ಷಣ ಆಕರ್ಷಣೆ ಮಾಡುವಂತೆ ಕಟ್ಟಡಗಳು ನವೀಕರಣಗೊಳ್ಳಬೇಕಿದೆ. ಈ ವಿಚಾರದಲ್ಲಿ ನಮ್ಮ ರಾಜ್ಯದ ಹಲವು ಕಂಪನಿಗಳಾದ ಇನ್ಫೋಸಿಸ್ , ವಿಪ್ರೋ,ಇನ್ನೂ ಮುಂತಾದ ಕಂಪನಿಗಳು ಕಾರ್ಪೊರೇಟ್ ಸಮಾಜಿಕ ಜವಾಬ್ದಾರಿ ಅಂಗವಾಗಿ ಹಲವಾರು ಶಾಲೆಗಳ ದತ್ತು ತೆಗೆದುಕೊಳ್ಳುವ ಮೂಲಕ ಮೂಲಭೂತ ಸೌಕರ್ಯ ವೃದ್ಧಿಗೆ ತಮ್ಮ ಯೋಗಾದಾನ ನೀಡಿವೆ.ಇನ್ನೂ ಮಾನ್ಯ ಶಿಕ್ಷಣ ಸಚಿವರು ಶಾಲೆಗಳ ಮೂಲಭೂತ ಸೌಕರ್ಯಗಳ ಮತ್ತು ಶೈಕ್ಷಣಿಕ ಅಗತ್ಯ ಕುರಿತಾದ ಸಮಾಜ ಮತ್ತು ಶಾಲೆಗಳ ನಡುವೆ ಕೊಂಡಿಯಾಗಿ ಕಾರ್ಯ ನಿರ್ವಹಿಸಲು ಒಂದು ಆಪ್ ಬಿಡುಗಡೆ ಮಾಡುವುದಾಗಿ‌ ಹೇಳಿರುವುದು ಸ್ವಾಗತಾರ್ಹ.
ನಮ್ಮಲಿ ಶಿಕ್ಷಕರ ಮಕ್ಕಳ ಅನುಪಾತ ಇತರೆ ರಾಜ್ಯಗಳಿಗೆ ಹೋಲಿಸಿದರೆ ಹೆಚ್ಚಾಗಿದೆ ಬಹುದಿನದ ಬೇಡಿಕೆಯಂತೆ ಇದು ಎಲ್ಲಾ ಹಂತದಲ್ಲಿ ಕಡಿಮೆಯಾಗಬೇಕಿದೆ.ಪರೀಕ್ಷಾ ವ್ಯವಸ್ಥೆಯು ಸಹ ಅಮೂಲಾಗ್ರ ಬದಲಾಗಬೇಕಿದೆ. ಪಾಸು ನಪಾಸು ಎಲ್ಲಾ ಹಂತದಲ್ಲಿ ಇದ್ದರೆ ಉತ್ತಮ.
ಇನ್ನೂ ನಮ್ಮ ರಾಜ್ಯದಲ್ಲಿ ಹಲವು ಹಂತದ ಸ್ಪರ್ಧಾತ್ಮಕ ಪರೀಕ್ಷೆಯ ಮೂಲಕ ಶಿಕ್ಷಕರ ನೇಮಕಾತಿ ಆಗುವುದರಿಂದ  ಬೇರೆ ರಾಜ್ಯಕ್ಕಿಂತ ಬುದ್ದಿವಂತ ಶಿಕ್ಷಕರು ಇರುವುದು ಹಲವು ಸಮೀಕ್ಷೆಗಳ ಮೂಲಕ ಸಾಬೀತಾಗಿದೆ. ಈ ಶಿಕ್ಷಕರಿಗೆ ದೆಹಲಿಯಲ್ಲಿ ನೀಡಿದಂತೆ ವಿವಿದ ತರಭೇತಿಯನ್ನು ನೀಡಿ ಪ್ರೇರಣೆ ನೀಡಬೇಕು.
ದೆಹಲಿಯ ಶಾಲೆಗಳ ಪ್ರಗತಿಗೆ ಸಮುದಾಯದ ಸಹಕಾರ ಮಹತ್ವದ್ದು ನಮ್ಮಲ್ಲೂ SD MC ಗಳು ಇದ್ದು ಅವು ಶಿಕ್ಷಣ, ಮಕ್ಕಳು, ಶಾಲೆಗಳ ಅಭಿವೃದ್ಧಿ ಗೆ ಗಮನ‌ ನೀಡದೆ ಬಹುತೇಕ ಕಡೆ ರಾಜಕೀಯದ ಪ್ರಯೋಗಶಾಲೆಗಳಾಗಿರುವುದು ವಿಪರ್ಯಾಸದ ಸಂಗತಿ .ಈ ಸಮಿತಿಗಳು ತಮ್ಮ ನಿಜವಾದ ಜವಾಬ್ದಾರಿಗಳನ್ನು ಅರಿತು ಶಾಲೆಗಳ ಪ್ರಗತಿಗೆ ಶ್ರಮಿಸಬೇಕಿದೆ.
ಅದೃಷ್ಟವಶಾತ್ ಇಂದು ನಮಗೆ ಬದ್ದತೆಯಿರುವ  ಒಳ್ಳೆಯ ಶಿಕ್ಷಣ ಮಂತ್ರಿಗಳು ಸಿಕ್ಕಿದ್ದಾರೆ. ಉತ್ತಮ ಅಧಿಕಾರಿಗಳ ವರ್ಗವಿದೆ.ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯು ಘೋಷಣೆ ಆಗುವ ಈ ಪರ್ವ ಕಾಲದಲ್ಲಿ ನಮ್ಮ ಶಿಕ್ಷಣ ವ್ಯವಸ್ಥೆಯನ್ನು ಆಮೂಲಾಗ್ರವಾಗಿ ಬದಲಾವಣೆ ಮಾಡಿ ನಮ್ಮ ಶಾಲಾ ಶಿಕ್ಷಣ ವ್ಯವಸ್ಥೆಯನ್ನು ಇತರೆ ರಾಜ್ಯಗಳು ಅನುಕರಣೆ ಮಾಡುವಂತೆ ಮಾಡಲು ಎಲ್ಲರ ಪ್ರಾಮಾಣಿಕ ಪ್ರಯತ್ನ ಅಗತ್ಯ

ಸಿ ಜಿ‌ ವೆಂಕಟೇಶ್ವರ

16 February 2020

ಬಟ್ಟೆ (ನ್ಯಾನೋ ಕಥೆ)

*ಬಟ್ಟೆ*
*ನ್ಯಾನೋ ಕಥೆ*

"ನನಗೆ 5000 ರೂಪಾಯಿ ಬೇಕೇ ಬೇಕು ,ಹೊಸ ವರ್ಷಕ್ಕೆ ನನ್ನ ಎಲ್ಲಾ ಸ್ನೇಹಿತರು ಬಟ್ಟೆಗಳನ್ನು ಕೊಳ್ಳಲು ಅವರ ತಂದೆ 10000 ಹಣ ನೀಡಿದ್ದಾರೆ." ಎಂದು ಮಗ ಏರು ಧ್ವನಿಯಲ್ಲಿ ಕೇಳಿದ " ನಮ್ಮದು ಮಧ್ಯಮವರ್ಗದ ಕುಟುಂಬ ಮನೆಯಲ್ಲಿ ದುಡಿಯುತ್ತಿರುವವನು ನಾನೊಬ್ಬ ,ನಿನಗೆ ಕೆಲಸವಿಲ್ಲ,ನಿನ್ನ ತಂಗಿಗೆ ಮದುವೆ ಮಾಡಬೇಕು,ಖರ್ಚು ಹೆಚ್ಚು ಅಲ್ಲವೇ" ಎಂದು ಅಪ್ಪ  ತಿಳಿಹೇಳಿದರೂ ಕೇಳದ ಮಗ 5000 ಹಣ ಪಡೆದು ಹೊರಟುಹೋದ. ರೂಮ್‌ ನಿಂದ ಹಳೆಯ ಶರ್ಟ್ ತಂದು ಕಿತ್ತಿದ್ದ ಗುಂಡಿ ತಾವೇ ಹಾಕಿ ಮಗಳೆ ಇದನ್ನು ಇಸ್ತ್ರಿ ಮಾಡಮ್ಮ ಶಾಲೆಗೆ ಹೋಗಬೇಕು ಟೈಮ್ ಆಯ್ತು ಎಂದು ಸ್ನಾನಕ್ಕೆ ಹೊರಟರು. ಅಪ್ಪನ ಶರ್ಟ್ ಇಸ್ತ್ರಿ ಮಾಡುವಾಗ ಮಗಳಿಗೆ ಅರಿವಿಲ್ಲದೆ ಅವಳ ಕಣ್ಣುಗಳಿಂದ ನಾಲ್ಕನಿ ನೀರು ಶರ್ಟ್ ಮೇಲೆ ಬಿದ್ದವು.

*ಸಿ.ಜಿ ವೆಂಕಟೇಶ್ವರ*

14 February 2020

ಕರ್ನಾಟಕ ನೀರ್(ಕಿರು ಲೇಖನ)

*ಕರ್ನಾಟಕ ನೀರ್*


ಕೇರಳದಲ್ಲಿ ಒಂದು ಲೀಟರ್ ಖನಿಜಯುಕ್ತ ಕುಡಿಯುವ ನೀರಿನ ಬಾಟಲ್ಗೆ ಗರಿಷ್ಠ13 ರೂಗಳನ್ನು ನಿಗದಿ ಮಾಡಿ ಕೇರಳ ಸರ್ಕಾರ ಆದೇಶ ಮಾಡಿರುವುದು ಸ್ವಾಗತಾರ್ಹ. ಇದನ್ನು ಎಲ್ಲಾ ರಾಜ್ಯಗಳು ಅನುಸರಿಸುವುದು ಉತ್ತಮ. ನಮ್ಮ ರಾಜ್ಯದಲ್ಲಿ ಒಂದು ಲೀಟರ್ ನೀರಿನ ಬೆಲೆ 20 ರೂಪಾಯಿಗಳು ಎಂದು ನಿಗದಿ ಮಾಡಿದ್ದರೂ ಕೆಲ ಹೋಟೆಲ್ ಗಳು ಮತ್ತು ರಾಜ್ಯ ರಸ್ತೆ ಸಾರಿಗೆ ನಿಗಮದ ಕೆಲ ನಿಲ್ದಾಣಗಳಲ್ಲಿ ನಿಗದಿತ ದರಕ್ಕಿಂತ ಹೆಚ್ಚು ಹಣ ವಸೂಲಿ ಮಾಡುವುದು ಗಮನಕ್ಕೆ ಬಂದರೂ ಸಂಬಂಧಿಸಿದ ಅಧಿಕಾರಿಗಳು ಜಾಣಕುರುಡು ,ಜಾಣಕಿವುಡು ಪ್ರದರ್ಶನವನ್ನು ಮಾಡುವುದು ಗುಟ್ಟಾಗಿ ಉಳಿದಿಲ್ಲ. ಈ ವಿಚಾರದಲ್ಲಿ ಭಾರತೀಯ ರೈಲ್ವೆ ನಡೆ ಉತ್ತಮ ಎಂದು ಹೇಳಬಹುದು ಅದು ತನ್ನದೇ ಆದ "ರೇಲ್ ನೀರ್" ಮೂಲಕ ಜನರಿಗೆ ಕಡಿಮೆ ಬೆಲೆಗೆ ನೀರು ನೀಡುತ್ತಿದೆ. ಇದೇ ಮಾದರಿಯಲ್ಲಿ ನಮ್ಮ ರಾಜ್ಯದ ಸರ್ಕಾರಿ ಬಸ್ ನಿಲ್ದಾಣಗಳಲ್ಲಿ "ಕರ್ನಾಟಕ ಸಾರಿಗೆ ನೀರ್" ರಿಯಾಯಿತಿ ದರದಲ್ಲಿ ನೀಡಬಹುದಲ್ಲವೇ ?

*ಸಿ ಜಿ ವೆಂಕಟೇಶ್ವರ*
ಚೌಡಗೊಂಡನ ಹಳ್ಳಿ
ಹೊಳಲ್ಕೆರೆ ತಾಲ್ಲೂಕು
9900925529

13 February 2020

ರೇಡಿಯೋ (ಕವನ)

‌*ರೇಡಿಯೋ*

(ಇಂದು ವಿಶ್ವ ರೇಡಿಯೋ ದಿನ)

ಬೆಳಗು ಮಾಡಲು
ವಂದೇ ಮಾತರಂ
ಸುಪ್ರಭಾತದೊಂದಿಗೆ ಬಂದು
ಪ್ರದೇಶ ಸಮಾಚಾರ ತಿಳಿಸಿ
ಗಾಂಧೀ ಸ್ಮೃತಿಯನ್ನು
ಮಾಡಿಸುತ್ತಿದ್ದ ನಿನ್ನ ಹೇಗೆ ಮರೆಯಲಿ.

ನನ್ನೂರು ಪರವೂರುಗಳ
ವರ್ತೆಗಳ ತಿಳಿಸಿ
ಸಂಸ್ಕೃತ ಬರದಿದ್ದರೂ ಕೇಳಿಸಿ
ಕೃಷಿಕರಿಗೆ ಮಾಹಿತಿ ನೀಡಿ
ಯುವಕರಿಗೆ ಯುವವಾಣಿಯಾದ
ನಿನ್ನ ಹೇಗೆ ಮರೆಯಲಿ.

ನಮ್ಮ ಹೆಸರು ಹೇಳಿ
ನಿಮ್ಮ ಮೆಚ್ಚಿನ ಗೀತೆಗಳ ಕೇಳಿಸಿ
ಮಕ್ಕಳ ಚಿಲಿಪಿಲಿ
ಗಿಳಿವಿಂಡು ಆಲಿಸಲು
ಕಲಿಸಿದ ನಿನ್ನ ಹೇಗೆ ಮರೆಯಲಿ.

ಕ್ರಿಕೆಟ್ ಎಬಿಸಿ
ಗೊತ್ತಿಲ್ಲದಿದ್ದರೂ
ಇಂಗ್ಲಿಷ್ ಮತ್ತು ಹಿಂದಿಯ
ಮೂಲಕ ವಿವರಣೆ ನೀಡಿ
ಬಹುಭಾಷೆಗಳ ಕಲಿಸಿದ
ನಿನ್ನ ಹೇಗೆ ಮರೆಯಲಿ.

ನೂರಾರು.ಜಿ ಬಿ ಗಟ್ಟಳೆ ಹಾಡಿವೆ,
ಹತ್ತಾರು ಚಾನೆಲ್ಗಳು ಮಾಹಿತಿ ನೀಡಿವೆ
ಸುದ್ದಿಗೆ ಸಾವಿರಾರು ವಾಹಿನಿಗಳಿವೆ
ನಿನ್ನಷ್ಟು ಆಪ್ತ ಯಾರೂ ಇಲ್ಲ
ನೀ ಮಾಡಿದ ಮೋಡಿ ಮರೆಯಲ್ಲ
ಕೋಟಿ ನಮನಗಳು ನಿ‌ನಗೆ ರೇಡಿಯೋ.

*ಸಿ ಜಿ ವೆಂಕಟೇಶ್ವರ*


12 February 2020

ಗೌರವ ( ರುಬಾಯಿ)

ಗೌರವ (ರುಬಾಯಿ)
ಮರೆತುಬಿಡು ಇತರರಿಗೆ ಮಾಡಿದ ಉಪಕಾರವ
ನೆನೆಯದಿರು ನಿನಗೆ ಮಾಡಿದ ಅಪಕಾರವ
ಎಲ್ಲರಲೂ‌ ಉಂಟು ‌ಒಳಿತು ಕೆಡುಕು
ಒಳ್ಳೆಯದು ಗುರುತಿಸು ಹುಡುಕಿ ಬರುವುದು ಗೌರವ.
*ಸಿ ಜಿ ವೆಂಕಟೇಶ್ವರ*

11 February 2020

ವೀಣಾಪಾಣಿ(ಭಕ್ತಿಗೀತೆ)




*ವೀಣಾಪಾಣಿ*

ಸುಜ್ಞಾನದಾಯಿಕೆ ಶಾರದಾ ಮಾತೆ
ವಂದಿಪೆ ನಿನಗೆ ಹೇ ಜಗನ್ಮಾತೆ
ವಿದ್ಯೆ ಬುದ್ಧಿಯ ನೀಡುವ ತಾಯಿ
ಹರಸುತ ನಮ್ಮನ್ನು ನೀ ಕಾಯಿ.

ಸುವಿಮಳ ಚರಿತೆ  ನಮಿಪೆ ನಿನಗೆ
ಗೆಲುವನು ಕರುಣಿಸು ನಮಗೆ
ಶ್ವೇತ ವಸ್ತ್ರ ದ   ಶಾರದಾ ಮಾತೆ
ಜ್ಞಾನವ ನೀಡಮ್ಮ ವಾತ್ಸಲ್ಯದಾತೆ.

ವಾಣಿ ವೀಣಾಪಾಣಿಯೆ ಭಕ್ತಿದಾತೆ
ತಮವ ತೊರೆಯಮ್ಮ ಮುಕ್ತಿದಾತೆ
ಕರದಲಿ ಪುಸ್ತಕವ ಹಿಡಿದಿರುವೆ
ಶರಣೆಂದರೆ ಪೊರೆದು‌ ಕಾಯುವೆ.

ಧರಸಿರುವೆ ಹೊಳೆವ ವರಮಣಿ
ಅಜನ ರಾಣಿ ಕರುಣಿಸು ವಾಣಿ
ಅರಿವನು ನೀಡುವ ತಾಯಿಸರಸ್ವತಿ
ನಿನ್ನ ಮಕ್ಕಳಿಗೆ ನೀಡು ಸದಾ ಸನ್ಮತಿ .

*ಸಿ ಜಿ ವೆಂಕಟೇಶ್ವರ*


ಯಾವಾಗ? (ಕವನ)

*ಯಾವಾಗ?*

ತನ್ನ ಮನೆ ಕಸವ ತೆಗೆದು
ಪರರ ಮನೆಯ ಮುಂದೆ,
ಬೀದಿಗೆ ಹಾಕುವ ಮನಸ್ಸಲ್ಲೆ
ನಾನು ಸ್ವಚ್ಚ ಮಾನವ ಎಂಬ
ಹುಸಿ ಆತ್ಮ ಪ್ರೌಢಿಮೆ ಬೇರೂರುತ್ತಿದೆ.

ಮೇಲು ಕೀಳು
ಜಾತಿ ಮತದ ಕಳೆಯು ಹೆಚ್ಚಾಗಿ
ನಾ ಹೆಚ್ಚು ನೀ ಕಡಿಮೆ
ಅವನು ಸರಿಯಿಲ್ಲ ಎಂಬ
ಸಂಕುಚಿತ ಮನೋಭಾವ ಬೇರೂರುತ್ತಿದೆ.

ಪರೋಪಕಾರಂ ಇದಮಿತ್ತಂ ಶರೀರ
ಎಂಬ ಕಲ್ಪನೆ ಕ್ರಮೇಣವಾಗಿ ಮಾಯವಾಗಿ
ನಾನಿದ್ದರೆ ನೀನು ,ನಾನೇ ಮುಖ್ಯ ಎಂಬ
ಸ್ವಾರ್ಥ ಎಲ್ಲೆಡೆ ಬೇರೂರುತ್ತಿದೆ.

ಲೌಕಿಕ ಸುಖದ ಹಿಂದೆ ಬಿದ್ದು
ಅಲೌಕಿಕದ ಆತ್ಮಸಂತೋಷವ
ಕಡೆಗಣಿಸುವ ಮನೋಭಾವನೆ
ಬೇರೂರುತ್ತಿದೆ .

ಸರ್ವೇ ಭದ್ರಾಣಿ ಪಶ್ಯಂತು ಎಂಬ
ಭಾವನೆ ಮರೆಯಾಗಿ ದುಃಖದಲ್ಲಿರುವವರ
ನೋಡಿ ಸೆಲ್ಪಿ ವೀಡಿಯೋ ಮಾಡುವ
ಸಂಸ್ಕೃತಿಯ ಬೇರೂರುತ್ತಿದೆ.

ಬೇರೂರುಬೇಕಿದ್ದ ಪ್ರೀತಿ, ದಯೆ,ಕರುಣೆ,ಸಹಕಾರ ಸಹಬಾಳ್ವೆ, ಅನುಕಂಪಗಳು.ಮೊಳಕೆಯೊಡಲು ಸಹ
ಬಿಡದ ನಾವು ನಿಜವಾದ ಮಾನವೀಯ ಸಮಾಜ ನಿರ್ಮಿಸುವುದು ಯಾವಾಗ?

*ಸಿ ಜಿ ವೆಂಕಟೇಶ್ವರ*

04 February 2020

ಸ್ವಾಸ್ಥ್ಯ ಸಮಾಜ ನಿರ್ಮಿಸೋಣ( ಲೇಖನ)


ಸ್ವಾಸ್ಥ್ಯ ಸಮಾಜ ನಿರ್ಮಿಸೋಣ
ಕರ್ನಾಟಕದಲ್ಲಿ ಮಕ್ಕಳ ಅಪೌಷ್ಟಿಕತೆ ಗಣನೀಯವಾಗಿ ಕಡಿಮೆಯಾಗಿರುವ ವರದಿ ನೋಡಿ ತುಂಬಾ ಸಂತಸವಾಯಿತು.ಇಪ್ಪತ್ತೊಂದನೇ ಶತಮಾನದಲ್ಲಿ ನಾವಿದ್ದರೂ ವಿವಿಧ ಕ್ರಾಂತಿಗಳಾದ ಹಸಿರು ಕ್ರಾಂತಿ, ನೀಲಿಕ್ರಾಂತಿ,ಹಳದಿಕ್ರಾಂತಿ,ಶ್ವೇತ ಕ್ರಾಂತಿ ಮಾಡಿರುವೆವವು ಎಂದು ಕೊಚ್ಚಿಕೊಂಡರೂ ಇಂದು ಜಗದಲ್ಲಿ ಕೋಟ್ಯಾಂತರ ಜನರು ಬಡತನದಲ್ಲಿ ಇರುವುದು ವ್ಯವಸ್ಥೆಯನ್ನು ಮತ್ತು ಅಭಿವೃದ್ಧಿಯನ್ನು ಅಣಕಿಸಿದಂತೆ. ಅದರಲ್ಲೂ ಏನೂ ಅರಿಯದ ಕಂದಮ್ಮಗಳು ಅಪೌಷ್ಟಿಕತೆಯ ಕೂಪಕ್ಕೆ ಸಿಕ್ಕು ತಮ್ಮದಲ್ಲದ ತಪ್ಪಿನಿಂದ ವಿವಿಧ ರೋಗಗಳಿಂದ ಬಳಲುತ್ತಿರುವ ಮತ್ತು ಮರಣಹೊಂದುತ್ತಿರುವ ಚಿತ್ರಣ. ನಮ್ಮ ಕಣ್ಣ ಮುಂದಿದೆ. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಆಶಾಕಿರಣ ಎಂಬಂತೆ ಕರ್ನಾಟಕದಲ್ಲಿ ಈ ವರ್ಷ ಅಪೌಷ್ಟಿಕತೆಯ ಪ್ರಮಾಣ 0.33 ಕಡಿಮೆಯಾಗಿದೆ. ನೋಡಲು ಈ ಆನುಪಾತ ಚಿಕ್ಕದು ಎಂದು ಕಂಡರೂ 2015 ರಲ್ಲಿ ರಾಜ್ಯದ ಅಪೌಷ್ಟಿಕತೆಯ ಮಕ್ಕಳ ಸಂಖ್ಯೆ 21652 ರಿಂದ ಈ ವರ್ಷದ ಹೊತ್ತಿಗೆ 11265 ಕ್ಕೆ ಕಡಿಮೆಯಾಗಿದೆ ಇದು ಗಮನಾರ್ಹವಾದ ಬೆಳವಣಿಗೆ ಈ ದಿಸೆಯಲ್ಲಿ ಕಾರ್ಯಪ್ರವತ್ತವಾದ ಸರ್ಕಾರಗಳು ಸರ್ಕಾರೇತರ ಸಂಘ ಸಂಸ್ಥೆಗಳು, ವಿವಿಧ ಇಲಾಖೆಯ ಎಲ್ಲಾ ಅಧಿಕಾರಿಗಳು ಮತ್ತು ನೌಕರರು ಅಭಿನಂದನಾರ್ಹರು. ಅನ್ನಭಾಗ್ಯ,ಕ್ಷೀರಭಾಗ್ಯ,ಸೃಷ್ಟಿ ಯೋಜನೆ, ವೈದ್ಯಕೀಯ ವೆಚ್ಚ ಯೋಜನೆಗಳ ಫಲ ಈ ಸಕಾರಾತ್ಮಕ ಬೆಳವಣಿಗೆ.ಆದರೂ ಬೆಳಗಾವಿಯಲ್ಲಿ1249 ಮಕ್ಕಳು, ಬಳ್ಳಾರಿಯಲ್ಲಿ 1134  ಮಕ್ಕಳು ಅಪೌಷ್ಟಿಕತೆಯಿಂದ ಬಳಲುತ್ತಿರುವ ವರದಿ ಅತಂಕ ತರುವ ಅಂಶವಾಗಿದೆ.ಈ ವರ್ಷದ ಕೇಂದ್ರ ಬಜೆಟ್ ನಲ್ಲಿ ಅಪೌಷ್ಟಿಕತೆಯ ಹೋಗಲಾಡಿಸಲು ಹೆಚ್ಚಿನ ಅನುದಾನವನ್ನು ಮೀಸಲಿಟ್ಟಿರುವುದು ಸ್ವಾಗತಾರ್ಹ. ಇದರ ಜೊತೆಗೆ ಸಮರ್ಪಕವಾಗಿ ಯೋಜನೆಯ ಅನುಷ್ಠಾನಕ್ಕೆ ಅಧಿಕಾರಿಗಳು ಮುಂದಾದರೆ ಮಕ್ಕಳು ಮತ್ತು ಮಹಿಳೆಯರಲ್ಲಿ ಅಪೌಷ್ಟಿಕತೆಯು ಕಡಿಮೆಯಾಗುತ್ತದೆ ತನ್ಮೂಲಕ ಸ್ವಾಸ್ಥ್ಯ ಜನತೆ ಸ್ವಾಸ್ಥ್ಯ ಸಮಾಜದ ಪರಿಕಲ್ಪನೆಯನ್ನು ಸಾಕಾರ ಮಾಡಬಹುದು.
ಸಿ ಜಿ ವೆಂಕಟೇಶ್ವರ

01 February 2020

ರಾಜ್ಯ ಮಟ್ಟದ ಗಜಲ್ ಕಾರ್ಯಾಗಾರದಲ್ಲಿ ಪ್ರಮಾಣಪತ್ರ ಪಡೆದ ಸಂಧರ್ಭದಲ್ಲಿ ಹಿರಿಯ ಗಜಲ್ ಕವಿಗಳೊಂದಿಗೆ ತುಮಕೂರು ವಿಶ್ವವಿದ್ಯಾಲಯದಲ್ಲಿ ಆಯೋಜಿಸಿದ್ದ ಕಾರ್ಯ ಕ್ರಮ*



ರಾಜ್ಯ ಮಟ್ಟದ ಗಜಲ್ ಕಾರ್ಯಾಗಾರದಲ್ಲಿ ಪ್ರಮಾಣಪತ್ರ ಪಡೆದ ಸಂಧರ್ಭದಲ್ಲಿ ಹಿರಿಯ ಗಜಲ್ ಕವಿಗಳೊಂದಿಗೆ ತುಮಕೂರು ವಿಶ್ವವಿದ್ಯಾಲಯದಲ್ಲಿ ಆಯೋಜಿಸಿದ್ದ ಕಾರ್ಯ ಕ್ರಮ*