26 October 2022

ಕಲಿಸುತ್ತಾ ಕಲಿಯೋಣ


 



ಉತ್ತಮ ಶಿಕ್ಷಕರು ಜೀವನ ಪರ್ಯಂತ ಕಲಿಯುವವರು.. 


ಭಾನುವಾರ ಸಂಜೆ ತುಮಕೂರಿನ ಬಾಯರ್ಸ್ ಕಾಫಿ ಹೌಸ್ ನಲ್ಲಿ ಟೀ ಕುಡಿಯುತ್ತಾ  ಸಮಾನ ಮನಸ್ಕ ಗೆಳೆಯರ ಜೊತೆ ಕುಳಿತು ಟೀ ಕುಡಿಯುವಾಗ ಸಾಹಿತ್ಯ, ಸಮಾಜ ,ಶಿಕ್ಷಣ ಹೀಗೆ ನಮ್ಮ ಮಾತುಕತೆ ಸಾಗುವಾಗ ಓದುವ ಹವ್ಯಾಸ ಕ್ರಮೇಣ ಕಡಿಮೆಯಾಗಿರುವ ಬಗ್ಗೆ ಚರ್ಚೆ ನಡೆಯುವಾಗ   ಸ್ಟೂಡೆಂಟ್ ಬುಕ್ ಹೌಸ್ ಮಾಲೀಕರು ಹಾಗೂ ಪ್ರಕಾಶಕರಾದ ಸದಾಶಿವ್ ರವರು ಒಂದು ಘಟನೆ ಹೇಳಿದರು .ಒಮ್ಮೆ ನನ್ನ ಪುಸ್ತಕದ ಅಂಗಡಿಗೆ ನಾಲ್ಕು ಜನ ಕಾರಿನಲ್ಲಿ ಬಂದು ಶಿಕ್ಷಕರು ಎಂದು ಪರಿಚಯ ಮಾಡಿಕೊಂಡು ಓರ್ವ ಶಿಕ್ಷಕರು ಸುಮಾರು ಎಂಟತ್ತು ಉತ್ತಮ ಅಭಿರುಚಿಯ ಪುಸ್ತಕಗಳನ್ನು ಕೊಂಡರು .ಅವರ ಜೊತೆಯಲ್ಲಿ ಇದ್ದ ಶಿಕ್ಷಕರೊಬ್ಬರು "ಸಾಕು ಬಾರಪ್ಪ ಅದೇನ್ ಪುಸ್ತಕ ಓದ್ತಿಯಾ ನೀನು " ಎಂದು ವ್ಯಂಗ್ಯವಾಗಿ ಹೇಳಿದರು. ಇದರಿಂದ ನನಗೆ ಬಹಳ ಬೇಸರ ವಾಯಿತು ಎಂದರು.. ಅವರು ಮುಂದುವರೆದು ನಾನು ಪುಸ್ತಕ ಅಂಗಡಿಯಿಟ್ಟು ಹದಿನೈದು ವರ್ಷಗಳಾದವು ಶಿಕ್ಷಕರು ಪುಸ್ತಕ ಕೊಳ್ಳುವುದು ಬಹಳ ಕಡಿಮೆ ಎಂದರು. ಅದಕ್ಕೆ ನಾನು ಆಕ್ಷೇಪಿಸಿ ನಾನು ಈ ವರ್ಷ ಹದಿನೈದು ಪುಸ್ತಕ ಕೊಂಡು ಓದಿರುವೆ ಎಂದೆ .ನೀವು ಹಾಗೂ ನಿಮ್ಮಂತವರು ಕೆಲವೇ ಮಂದಿ ಸರ್ ನಮ್ಮ ಮನೆಯ ಪಕ್ಕ ಎರಡು ಶಿಕ್ಷಕರ ಕುಟುಂಬ ಇವೆ ಅವರ ಮನೆಯಲ್ಲಿ ಒಂದು ನ್ಯೂಸ್ ಪೇಪರ್ ಸಹ ತರಿಸಲ್ಲ   ಅವರು ನ್ಯೂಸ್ ಪೇಪರನ್ನೇ  ಓದಲ್ಲ ಎಂದರೆ  ಪುಸ್ತಕ ಓದುವ ಮಾತೆಲ್ಲಿ ಬಂತು?     ಅಂದು ನನ್ನ ಬಾಯಿ ಮುಚ್ಚಿಸಿದರು. 

ರವೀಂದ್ರನಾಥ ಟಾಗೋರ್ ರವರು ಒಂದು ದೀಪ ತಾನು ಉರಿಯದೇ ಮತ್ತೊಂದು ದೀಪ ಹಚ್ಚಲಾಗದು ಎಂದಂತೆ ಶಿಕ್ಷಕರಾದವರು ಮೊದಲು ತಾವು  ಓದಿ ಜ್ಞಾನವನ್ನು ಪಡೆದರೆ ಮಾತ್ರ ಮಕ್ಕಳಿಗೆ ಜ್ಞಾನ ನೀಡಲು ಸಾದ್ಯ. ಸಾಧಾರಣ ಶಿಕ್ಷಕ ಪಾಠ ಮಾಡುತ್ತಾನೆ ಉತ್ತಮ ಶಿಕ್ಷಕ ಅರ್ಥ ಮಾಡಿಸುತ್ತಾನೆ ಅತ್ಯುತ್ತಮ ಶಿಕ್ಷಕ ಪ್ರೇರಣೆ ನೀಡುತ್ತಾನೆ ಅಂತಹ ಪ್ರೇರಣೆ ನೀಡುವ ಶಿಕ್ಷಕ ಮೊದಲು ಕಲಿಕಾರ್ಥಿಯಾಗಿ ಕಲಿತಿರಬೇಕು.ಬಹುತೇಕರು  ನಂಬಿದಂತೆ ಶಿಕ್ಷಕ ವೃತ್ತಿ ಸಿಕ್ಕಿದ ಮೇಲೆ ಕಲಿಯಲು ಏನೂ ಇಲ್ಲ ಎಂಬುದು ಸುಳ್ಳು. ಕಲಿಕೆಯು ಗರ್ಭದಿಂದ  ಗೋರಿಯವರೆಗೆ ನಡೆವ ನಿರಂತರ ಪ್ರಕ್ರಿಯೆಯಾಗಿದೆ. ಅದರಲ್ಲೂ ಈ ಇಪ್ಪತ್ತೊಂದನೇ ಶತಮಾನದ  ರೋಬಾಟಿಕ್ ಮತ್ತು  ಕೃತಕ ಬುದ್ಧಿಮತ್ತೆಯ ಕಾಲದಲ್ಲಿ ಮಕ್ಕಳು ಶಿಕ್ಷಕರಿಗಿಂತ ಒಂದು ಹೆಜ್ಜೆ ಮುಂದೆ ಇರುವುದು ನೋಡಬಹುದು. ಶಿಕ್ಷಕರಾದವರು ಅಪ್ಡೇಟ್ ಆಗುತ್ತ ಇರಬೇಕು ಹೊಸ ತಂತ್ರಜ್ಞಾನದ ತಿಳುವಳಿಕೆ, ಬೋಧನಾ ಕ್ಷೇತ್ರದಲ್ಲಿ ನಾವೀನ್ಯತೆಯ ಅಳವಡಿಸಿಕೊಂಡು ಬೋಧನೆ ಮಾಡಿದರೆ ಮಕ್ಕಳು ಶಿಕ್ಷಕರನ್ನು ಆರಾಧಿಸುತ್ತಾರೆ. ಆಗ ಶಿಕ್ಷಕರಿಗಾಗುವ ಆನಂದ ಅನುಭವಿಸಿಯೇ ತಿಳಿಯಬೇಕು ಆ ಅನುಭವ ನನಗಾಗಿದೆ ಎಂದು ಹೆಮ್ಮೆಯಿಂದ ಹೇಳಬಲ್ಲೆ.  ಶಿಕ್ಷಕರಾದವರು ಅಪ್ಡೇಟ್ ಆಗಲಿಲ್ಲ ಎಂದರೆ ಔಟ್ ಡೇಟ್ ಆಗಿಬಿಡುತ್ತೇವೆ ನಮ್ಮ ನಮ್ಮ ಬೋಧನಾ   ವಿಷಯಗಳಲ್ಲಿ ಪ್ರಾವೀಣ್ಯತೆ ಪಡೆಯಲು ಸದಾ ನಾವು ಕಲಿಯುತ್ತಲೇ ಇರಬೇಕು.ಇದರ ಜೊತೆಯಲ್ಲಿ ಶಿಕ್ಷಕರಾದವರು  "teachers must know something about everything and everything about something" ಎಂಬಂತೆ ನಮಗೆ ಇತರೆ ವಿಷಯಗಳ ಜ್ಞಾನವು ಅಗತ್ಯ . 2020 ರ ಹೊಸ ಶಿಕ್ಷಣ ನೀತಿಯು ಸಹ ಇದೇ ಆಧಾರದ ಮೇಲೆ ಶಿಕ್ಷಕರಾದವರು ಕಲಿಯುತ್ತಾ ಕಲಿಸಬೇಕು ಎಂಬುವ ಆಶಯ ಹೊಂದಿದೆ. ಈ ನಿಟ್ಟಿನಲ್ಲಿ ಶಿಕ್ಷಕರಾದ ನಾವು ಕಲಿಯುತ್ತಾ ಕಲಿಸೋಣ, ಕಲಿಸುತ್ತಾ ಕಲಿಯೋಣ .


ಸಿಹಿಜೀವಿ

ಸಿ ಜಿ ವೆಂಕಟೇಶ್ವರ


ಪಟಾಕಿ ಹೊಡೆಯೋ ಮುನ್ನ.....

 




ಪಟಾಕಿ ಹೊಡೆಯೋ ಮುನ್ನ...


ದೀಪಾವಳಿ ಹಬ್ಬಕ್ಕೆ ಪಟಾಕಿ ಹೊಡಯಬೇಡಿ ಎಂದರೆ ನಿಮ್ಮಲ್ಲಿ ಕೆಲವರು ನನ್ನನ್ನು ಕಣ್ಣು ಕೆಂಪಗೆ ಮಾಡಿಕೊಂಡು ಗುರಾಯಿಸೋದು ಗ್ಯಾರಂಟಿ. ಪರಿಸರ ಅದೂ ಇದು ಅಂದು ನಮ್ಮ ಸಂತೋಷಕ್ಕೆಅಡ್ಡಿ ಮಾಡಲು ನಿವ್ಯಾರು? ನಿವೇನ್ ದುಡ್ ಕೊಟ್ಟು ಪಟಾಕಿ ಕೊಡಿಸ್ತೀರಾ? ಯಾವ್ ಹಬ್ಬಕ್ಕೆ ಇಲ್ಲದ ನಿರ್ಬಂಧ ನಮಗ್ಯಾಕೆ ಹೀಗೆ ನೂರು ಪ್ರಶ್ನೆ ಕೇಳಿ ನನ್ ಬಾಯಿ ಮುಚ್ಚಿಸ್ತೀರಾ ಅಂತಾನೂ ಗೊತ್ತು..

ಅಂತೂ ಪಟಾಕಿ ಹೊಡಿಲೇ ಬೇಕು ಅಂತ ತೀರ್ಮಾನ ಮಾಡಿರೋರ್ನ ನಾನು ತಡೆಯೊಲ್ಲ ಪಟಾಕಿ ಹೊಡಿರಿ ಅದಕ್ಕೂ ಮುಂಚೆ ನಾ ಹೇಳೋ ಮಾತ್ ಕೇಳಿ...

ಮೊದಲನೆಯದಾಗಿ ಪಟಾಕಿ ಹೊಡೆಯಲು ಉತ್ತಮ ಸ್ಥಳ ಆರಿಸಿ. ವಿಶಾಲವಾದ ಪ್ರದೇಶ ಅಥವಾ ಮೈದಾನದಲ್ಲಿ ಪಟಾಕಿ ಹೊಡೆಯುವುದು ಒಳ್ಳೆಯದು. ಸ್ಥಳ ಕಡಿಮೆ ಇರುವವರು ಸಣ್ಣ-ಪುಟ್ಟ ಪಟಾಕಿಗಳನ್ನು ಮಾತ್ರ ಉಪಯೋಗಿಸಿ. ಇತರರಿಗೆ ತೊಂದರೆ ಆಗದಂತೆ ಜಾಗೃತೆ ವಹಿಸಿ.

*  ಪಟಾಕಿ ಸಿಡಿಸುವಾಗ ಮಕ್ಕಳ ಕಡೆಗೂ ಗಮನ ಹರಿಸಿ, ಚಿಕ್ಕ ಮಕ್ಕಳು ಆ ಸ್ಥಳದಿಂದ ದೂರ ಇರುವುದೇ ಉತ್ತಮ.

*  ಪಟಾಕಿ ಸಿಡಿಸುವಾಗ ಕಣ್ಣಿನ ಆರೋಗ್ಯದ ಬಗ್ಗೆಯೂ ಗಮನವಿರಲಿ. ಸಾಧ್ಯವಾದರೆ ನೇತ್ರ ಸುರಕ್ಷತಾ ಸಾಧನಗಳನ್ನು ಬಳಸಿ.

*  ಪಟಾಕಿ ಹೊಡೆಯುವಾಗ ಆದಷ್ಟು ಕಾಟನ್ ಬಟ್ಟೆಗಳನ್ನೇ ಧರಿಸಿ. ಇದು ಬಟ್ಟೆಗೆ ಬೇಗನೆ ಬೆಂಕಿ ಹತ್ತಿಕೊಳ್ಳುವುದನ್ನು ತಪ್ಪಿಸುತ್ತದೆ.

*  ಕಡಿಮೆ ಶಬ್ದ ಮತ್ತು ಕಡಿಮೆ ಹೊಗೆ ಬರುವ ಪಟಾಕಿಗಳಿಗೆ ಮೊದಲ ಆದ್ಯತೆ ನೀಡಿ. ಹಸಿರು ಪಟಾಕಿಗಳನ್ನು ಹೆಚ್ಚಾಗಿ ಬಳಸಿ.

*  ಪಟಾಕಿ, ನಕ್ಷತ್ರ ಕಡ್ಡಿ ಉಪಯೋಗಿಸುವಾಗ ಎಚ್ಚರವಿರಲಿ. ಬೆಂಕಿಯ ಕಿಡಿ ಮುಖ, ಕಣ್ಣು, ಕೂದಲಿಗೆ ಬರದಂತೆ ಎಚ್ಚರ ವಹಿಸಿ.

*  ಪಟಾಕಿ ಹೊಡೆಯುವಾಗ ಕಣ್ಣು ಮಾತ್ರವಲ್ಲದೇ ಕೈ-ಕಾಲು ಗಳಿಗೂ ತಗಲುವ ಅಪಾಯವಿರುವುದರಿಂದ ಆದಾಷ್ಟು ಎಚ್ಚರಿಕೆ ವಹಿಸುವುದು ಸೂಕ್ತ.

*  ಅರ್ಧ ಸುಟ್ಟ ಅಥವಾ ಸಿಡಿಯದೇ ಬಾಕಿ ಉಳಿದಿರುವ ಪಟಾಕಿಗಳನ್ನು ಬಳಸುವುದು ಬೇಡ. ಕತ್ತಲಲ್ಲಿ ಪಟಾಕಿ ಹೊಡೆಯುವ ಸಹಾಯ ಬೇಡ.

*  ಪಟಾಕಿ ಬಾಕ್ಸ್ ಪಕ್ಕದಲ್ಲಿ ಇಟ್ಟು ಪಟಾಕಿ ಹೊಡೆಯುವುದನ್ನು ತಪ್ಪಿಸಿ.

*  ಪ್ರಥಮ ಚಿಕಿತ್ಸೆಯ ಕಿಟ್ ಜೊತೆಗಿರಲಿ.

ಸುಪ್ರೀಂ ಕೋರ್ಟ್ ಪರಿಸರಕ್ಕೆ ಹಾನಿಯಾಗುವ ಪಟಾಕಿಗಳನ್ನು ಹೊಡೆಯಬಾರದು ಎಂದು ಆದೇಶ ನೀಡಿದೆ. ಕಳೆದ ವರ್ಷದಿಂದ ಸರ್ಕಾರ ಹಸಿರು ಪಟಾಕಿಗಳಿಗೆ ಹೆಚ್ಚಿನ ಆದ್ಯತೆ ನೀಡಿದೆ. ಹಾಗಾಗಿ ಎಲ್ಲರೂ ಆದಷ್ಟು ಹಸಿರು ಪಟಾಕಿಗಳನ್ನೇ ಬಳಸಿ. ಪಟಾಕಿ ಹೊಡೆಯಲು ರಾತ್ರಿ 8-10 ಗಂಟೆಯವರೆಗೆ ಮಾತ್ರ ಅವಕಾಶವಿದ್ದು, ಆ ಸಮಯದಲ್ಲೇ ಪಟಾಕಿ ಹೊಡೆಯುವುದು ಉತ್ತಮ. ಸಂಭ್ರಮ, ಸಡಗರದ ಜೊತೆಗೆ ಸುರಕ್ಷತೆ ಕಡೆಗೂ ಗಮನ ಹರಿಸುವುದು ಅಗತ್ಯ. ಎಲ್ಲರಿಗೂ ದೀಪಾವಳಿ ಹಬ್ಬದ ಹಾರ್ಧಿಕ ಶುಭಾಶಯಗಳು.


ಸಿಹಿಜೀವಿ

ಸಿ ಜಿ ವೆಂಕಟೇಶ್ವರ




ಕ್ಯಾತ್ಸಂದ್ರ ಟು ಕ್ಯಾತನಮಕ್ಕಿ


 



ಕ್ಯಾತನಮಕ್ಕಿ 



"ಇದ್ಯಾವ ಸೀಮೆ ರೋಡ್ ರೀ ನಿಲ್ಸಿ ನಾನು ಇಳೀತೀನಿ" ಎಂದೆ "ಸಾರ್ ಈ ರಸ್ತೆ ಸಾವಿರ ಪಾಲು ಮೇಲು. ಮೊದಲು ಹೀಗಿರಲಿಲ್ಲ "ಎಂದ ಅಖಿಲ್ .ಎಲ್ಲಿದೆ ರಸ್ತೆ ಎಂದು ಹುಡುಕಿದೆ .ಅಲ್ಲಿ ರಸ್ತೆಯೇ ಇಲ್ಲ  ಕಡಿದಾದ ಗುಡ್ಡ, ಕಲ್ಲು ಮಣ್ಣು ಅಲ್ಲಲ್ಲಿ ಗಿಡಗಂಟೆ .ನಾವು ಕುಳಿತಿದ್ದ ನಾಲ್ಕು ಇಂಟು ನಾಲ್ಕು ಜೀಪ್ ಚಾಲಕ ಸ್ಟೆರಿಂಗ್ ತಿರುಗಿಸಿದಾಗ ಎಡ ಸೀಟಿನ ತುದಿಯಿಂದ ಬಲ ಸೀಟಿಗೆ ಬಂದು ಬಿದ್ದಾಗ ಈ ಮೇಲಿನಂತೆ ಜೀಪ್ ಚಾಲಕನಿಗೆ ಬೈದಿದ್ದೆ. 

ನಿಧಾನವಾಗಿ ಅಖಿಲ್ ಮಾತನಾಡುತ್ತಾ ಜೀಪ್ ಚಾಲನೆ ಮಾಡುತ್ತಿದ್ದ .ನನಗೆ ಅವನ ಚಾಲನೆ ಮತ್ತು ರಸ್ತೆ ನೋಡಿ ಜೀಪಿನಲ್ಲಿ ಕುಳಿತು ಪಕ್ಕಕ್ಕೆ ನೋಡಿದೆ . ಭಯವಾಯಿತು ಕೆಳಗಡೆ ದೊಡ್ಡ ಪ್ರಪಾತ! ಬೆಳಿಗ್ಗೆ ಆದಿಶಕ್ತಾತ್ಮಕ ಅನ್ನಪೂರ್ಣೇಶ್ವರಿ ದರ್ಶನ ಪಡೆದು ಬಂದ ನಾನು ಮತ್ತೆ ತಾಯಿಗೆ ಬೇಡಿದೆ ಸುರಕ್ಷಿತವಾಗಿ ನಮ್ಮ ಸ್ಥಳ ತಲುಪಿಸಲು.

ನನ್ನ ಜೊತೆಯಲ್ಲಿ ಇದ್ದ ನನ್ನ ಸಹಪಾಠಿಗಳ ಕಥೆಯೂ ಅದೇ ಆಗಿತ್ತು .ನಮ್ಮ ನೋಡಿ ನಗುತ್ತಲೇ ಅಖಿಲ್ " ಸರ್  ಭಯ ಪಡಬೇಡಿ ಇನ್ನೂ ಕೆಲವೇ ನಿಮಿಷ ಗಟ್ಟಿಯಾಗಿ ಹಿಡಿದು ಕುಳಿತುಕೊಳ್ಳಿ ನಾನು ನಿಮ್ಮನ್ನು ಕ್ಯಾತನಮಕ್ಕಿಗೆ ಕರೆದುಕೊಂಡು ಹೋಗುವೆ"  ಎಂದು ಧೈರ್ಯ ತುಂಬಿದ . ಅಖಿಲ್ ಮಾತನಾಡುತ್ತಾ ಗಾಡಿ ಚಲಾಯಿಸುತ್ತಿದ್ದ .ನಿನ್ನೆ ರಾತ್ರಿ ಹೊರನಾಡಿನಲ್ಲಿ ಬಿದ್ದ ಬಾರಿ ಮಳೆಯ ಬಗ್ಗೆ ,ತಾನು ಕೊಂಡು ತಂದ 

ರೈನ್ ಗೇಜ್ ಉಪಕರಣದ ಬಗ್ಗೆ,ಅವರ ತೋಟಕ್ಕೆ ಬಿದ್ದ 

ಅಡಿಕೆ ರೋಗದ ಬಗ್ಗೆ

ಕಳೆನಾಶಕದ ದುಷ್ಪರಿಣಾಮಗಳ ಬಗ್ಗೆ.ಏಲಕ್ಕಿ ಅಡಿಕೆ ಮೆಣಸು, ಕಾಫಿ , ಮುಂತಾದವುಗಳ ಕೃಷಿ ಮತ್ತು ಆ ಕೃಷಿಜೀವನದ ಏರು ಪೇರುಗಳ ಬಗ್ಗೆ ಮಾತನಾಡುತ್ತಾ ಜೀಪ್ ಅನ್ನು ಕಡಿದಾದ  ಬೆಟ್ಟದ ಮೇಲೆ ಹತ್ತಿಸುತ್ತಿದ್ದ .ಕೆಲವೊಮ್ಮೆ ಹಿಂದಕ್ಕೆ ಚಲಿಸಿ ಪುನಃ ಮುಂದಕ್ಕೆ ಗೇರ್ ಹಾಕುತ್ತಿದ್ದ .






ಸ್ವಲ್ಪ ದೂರ ಚಲಿಸಿದ ಮೇಲೆ ಒಂದೆಡೆ ನಿಲ್ಲಿಸಿ ಟಿಕೆಟ್ ತೊಗೊಳ್ಳಿ  ಸರ್ ಎಂದ ಒಬ್ಬರಿಗೆ ಐವತ್ತು ರೂಪಾಯಿಯಂತೆ ಇನ್ನೂರೈವತ್ತು ಕೊಟ್ಟು ಐದು ಟಿಕೆಟ್ ತೆಗೆದುಕೊಂಡೆವು  .ಜೀಪ್ ಮುಂದೆ ಸಾಗಿತು...ಮತ್ತದೇ ಕೊರಕಲು ,ಗುಂಡಿ ಕಲ್ಲು ಮತ್ತು ರಸ್ತೆಯಲ್ಲದ ರಸ್ತೆ .ಎಂಟು ಕಿಲೋಮೀಟರ್ ಹಾದಿಗೆ ಅವನ್ಯಾಕೆ ಎರಡು ಸಾವಿರ ಕೇಳಿದ ಎಂಬುದು ಆಗ ನನಗೆ ಮನವರಿಕೆಯಾಯಿತು. ಸುಮಾರು ಅರ್ಧಗಂಟೆಯ ಪ್ರಯಾಸದ ಪ್ರಯಾಣದ ನಂತರ ಒಂದೆಡೆ ನಿಲ್ಲಿಸಿ " ಇಳೀರಿ ಸರ್ ಇದೇ ಕ್ಯಾತನಮಕ್ಕಿ, ಇಲ್ಲಿಂದ ಮುಂದೆ ನಡೆದುಕೊಂಡು ಹೋಗಿ ಐನೂರು ಮೀಟರ್ ನಲ್ಲಿ ಸ್ವರ್ಗ ಸಿಗುತ್ತೆ, ನಲವತ್ತೈದು ನಿಮಿಷ ಟೈಮ್ ಬೇಗ ಬನ್ನಿ " ಅಂದ  ಸ್ವರ್ಗ ಸಿಕ್ಕರೆ ನಲವತ್ತೈದು ನಿಮಿಷಕ್ಕೆ ಯಾರು ಬರ್ತಾರೆ ಅಂದ್ಕೊಂಡ್ ಕ್ಯಾತನಮಕ್ಕಿ ಗುಡ್ಡದ ಕಡೆಗೆ ಹೆಜ್ಜೆ ಹಾಕಿದೆವು. ಬೆಳಗಿನ ಒಂಭತ್ತೂವರೆ ಗಂಟೆಯಾದ್ದರಿಂದ ಸೂರ್ಯನ ಶಾಖ ಕ್ರಮೇಣ ಏರುತ್ತಿತ್ತು ,ಏದುಸಿರು ಬಿಡುತ್ತಾ ಬೆಟ್ಟ ಹತ್ತುವಾಗ ಬೆವರು ಬರಲಾರಂಭಿಸಿತು ದೇವಸ್ಥಾನದಲ್ಲಿ ತಿಂದ ಪ್ರಸಾದದ ಅವಲಕ್ಕಿ ಯಾವಾಗಲೋ ಕರಗಿ ಹೋಗಿತ್ತು. ಎರಡು ಬಾರಿ ಕೇಳಿ   ಹಾಕಿಸಿಕೊಂಡು ಕುಡಿದ ನನ್ನ ನೆಚ್ಚಿನ ಹೊರನಾಡ ಕಾಫಿ ಪ್ಲೇವರ್ ಮಾತ್ರ ಹಾಗೆಯೇ ಇತ್ತು.




ನಿಧಾನವಾಗಿ ಬೆಟ್ಟ ಹತ್ತಿ ಸಮತಟ್ಟಾದ ಜಾಗದ ಮೇಲೆ ನಿಂತ ನಮಗೆ ಕಂಡಿದ್ದು ನಿಜವಾಗಿಯೂ ಸ್ವರ್ಗ!


ಈ ಮನಮೋಹಕ ದೃಶ್ಯ ಕಂಡ ನಾನು 


ಬೆಳಿಗ್ಗೆ  ಸ್ನಾನ, ಧ್ಯಾನ,

ಅದಿಶಕ್ತಾತ್ಮಕ ಅನ್ನಪೂರ್ಣೇಶ್ವರಿ

ಅಮ್ಮನವರ ದರ್ಶನ| 

ಈಗ ಕ್ಯಾತನಮಕ್ಕಿಯಲ್ಲಿ

ಪ್ರಕೃತಿ ಮಾತೆಯ ಮಾಹಾ ದರ್ಶನ ||


ಎಂದೆ ನನ್ನ ಸ್ನೇಹಿತರು ನನ್ನ ಹನಿಗವನ ಮತ್ತು ನಿಸರ್ಗದ ಸೌಂದರ್ಯ ಕಂಡು ವಾವ್... ವಾವ್ .... ಎಂದು ಹೇಳುತ್ತಲೇ ಇದ್ದರೂ ನಾನು ಸಹ ಅವರ ಜೊತೆಯಲ್ಲಿ ನನಗರಿವಿಲ್ಲದೇ ವಾವ್ ... ಎಂದು ಬಿಟ್ಟೆ.




 ತಂಪಾದ ಗಾಳಿ ಬೆಟ್ಟ ಹತ್ತಿ   ದಣಿದ ದೇಹವನ್ನು ತಂಪು ಮಾಡಿದರೆ ಸುಂದರ ನಯನ ಮನೋಹರ ದೃಶ್ಯಗಳು ಮನಕ್ಕೆ ಸಂತಸ ನೀಡಿದವು. 360 ಡಿಗ್ರಿಯಲ್ಲಿ ಯಾವ ಕಡೆ ತಿರುಗಿದರೂ ಹಸಿರೊದ್ದ ಬೆಟ್ಟಗಳು , ಮಂಜಿನ ತೆರೆಗಳು, ನೀಲಿಗಗನ , ನಾವೆಲ್ಲಿದ್ದೇವೆ ಎಂದು ನಮಗೆ ಮರೆತೇಹೋಯಿತು.  ಈ ದೃಶ್ಯ ನೋಡಿ ಒಂದು ಹನಿಗವನ ಹೇಳಿದೆ

"ಸುತ್ತ ಆಕಾಶ   ನೀಲಿ

ಅಲ್ಲಲ್ಲಿ ಕಾಣುತ್ತಿವೆ ಮೋಡ ಬಿಳಿ

ಎತ್ತ ನೋಡಿದರೂ ಹಸಿರು|

ಈ ದೃಶ್ಯ ನೋಡಿದ ಮೇಲೆ 

ಅನಿಸಿದ್ದೊಂದೇ ,ಸಾರ್ಥಕ ನಮ್ಮ ಉಸಿರು ||" 


ಸಹೋದ್ಯೋಗಿಗಳಾದ ಹನುಮಂತರಾಯಪ್ಪ ಮತ್ತು ರಂಗಸ್ವಾಮಯ್ಯ ಚಪ್ಪಾಳೆ ತಟ್ಟಿದರು.

 ದೂರದಲ್ಲಿ ಹರಿವ ಜುಳು ಜುಳು ಝರಿಯ ನಾದವು ಸಂಗೀತದಂತೆ ನಮಗೆ ಕೇಳಿಸುತ್ತಿತ್ತು ಅಲ್ಲೇ ಸ್ವಲ್ಪ ದೂರದಲ್ಲಿ ನೂರಾರು ಹಸುಗಳು, ಕರುಗಳು  ತಮ್ಮ ಪಾಡಿಗೆ ಮೇಯುತ್ತಿದ್ದವು.ಕೆಲವು ಈಗಾಗಲೇ ಮೇಯ್ದು ಮೆಲುಕು ಹಾಕುತ್ತಾ  ಮಲಗಿದ್ದವು.ನಾಡಿನ ಸಂಪರ್ಕವಿರದ ಕಾಡಿನಲ್ಲಿ ವಾಸಿಸುವ  ದನ ಕರುಗಳ ಜೀವನ ಎಷ್ಟು ಸರಳ ಮತ್ತು ಸುಂದರ ಅಲ್ಲವೆ? ನಾವೇಕೆ ನಮ್ಮ ಜೀವನವನ್ನು ಇಷ್ಟು ಸಂಕೀರ್ಣ ಮಾಡಿಕೊಂಡಿದ್ದೇವೆ ಎಂಬ ಪ್ರಶ್ನೆಗಳು ನನ್ನ ಕಾಡಿದವು...

"ಇಲ್ಲಿ ನೋಡಿ ಸಾರ್ ಎಂತಹ ಸೀನರಿ" ಎಂಬ ಕಲಾವಿದರಾದ ಕೋಟೆ ಕುಮಾರ್ ರವರ ಮಾತಿನಿಂದ ವಾಸ್ತವಕ್ಕೆ ಬಂದು ನೋಡಿದರೆ ಪ್ರಕೃತಿ ಮಾತೆಯ ಸೌಂದರ್ಯದ ಮುಂದೆ ಮಾತುಗಳೆ ಬರದಾದವು.ಮತ್ತೆ ನಮ್ಮ ಮೊಬೈಲ್ ಗೆ ಕೆಲಸ ಪೋಟೋ ವೀಡಿಯೋ ಮಾಡಿಕೊಳ್ಳಲು ನಾ ಮುಂದು ತಾ ಮುಂದು ಎಂದು ಓಡಾಡುವಾಗ " ಹುಷಾರು ಮುಂದೆ ಸಾಗಬೇಡಿ ಪ್ರಪಾತ ಇದೆ"  ಎಂಬ  ನಮ್ಮ ತಂಡದ ಹಿರಿಯ ಸದಸ್ಯ ರಾದ  ಚಂದ್ರಶೇಖರಯ್ಯ ನವರ ಮಾತು ನಮ್ಮನ್ನು ಎಚ್ಚರಿಸಿದವು. 

ಹಿತವಾದ ಗಾಳಿ ಅಗಾಗ್ಗೆ ನಮ್ಮ ಮೈ ಸೋಕುತ್ತಿತ್ತು ಬಿಸಿಲಿದ್ದರೂ ಗಾಳಿಯು ಹಿತವಾಗಿ ಬೀಸುತ್ತಿತ್ತು.ಅದಕ್ಕೆ ಈ ಪ್ರದೇಶಕ್ಕೆ "ಗಾಳಿಗುಡ್ಡ " ಎಂಬ ಹೆಸರಿದೆ ಎಂದು ಸ್ಥಳೀಯರು ವಿವರಣೆ ನೀಡಿದರು. ಆ ಸುಂದರ ಪರಿಸರದಲ್ಲಿ ಓಡಾಡುತ್ತ ಸಮಯ ಕಳೆದದ್ದೆ ಗೊತ್ತಾಗಲಿಲ್ಲ.ಇನ್ನೂ ಸ್ವಲ್ಪ ಕಾಲ ಅಲ್ಲೆ ಕಾಲ ಕಳೆವ ಮನಸಾದರೂ ಅಖಿಲ್ ಹೇಳಿದ್ದ ನಲವತ್ತೈದು ನಿಮಿಷ ಕಳೆದು ಒಂದೂವರೆ ಗಂಟೆಯಾಗಿತ್ತು.ಒಲ್ಲದ ಮನಸ್ಸಿನಿಂದ ಗುಡ್ಡ ಇಳಿದು ಬರುವಾಗ ಮತ್ತೊಮ್ಮೆ ಈ ಸ್ವರ್ಗಕ್ಕೆ ಕುಟುಂಬದ ಸದಸ್ಯರೊಡಗೂಡಿ ಬರಬೇಕೆಂದು ಸಂಕಲ್ಪ ಮಾಡಿದೆವು.

ನಮ್ಮ ಪಿಕಪ್ ವಾಹನ ಏರಿ ಮತ್ತೆ ನಮ್ಮ ಮೈ ಕೈ ಕುಲುಕಿಸಿಕೊಂಡು ಹೊರನಾಡ ಕಡೆ ಹೊರಟೆವು.. ಅಕ್ಕಪಕ್ಕದ ಟೀ ಕಾಫಿ ಗಿಡದ ಸೌಂದರ್ಯವೂ ನಮ್ಮ ಸಂತಸವನ್ನು ಇಮ್ಮಡಿಗೊಳಿಸಿದವು... ಅಖಿಲ್ ಒಂದೆಡೆ  ಜೀಪ್ ಸೈಡಿಗೆ ನಿಲ್ಲಿಸಿ ನಮ್ಮ ಅಪೇಕ್ಷೆಯ ಮೇರೆಗೆ ಏಲಕ್ಕಿ ಗಿಡ ಮತ್ತು ಬುಡದಲ್ಲಿ ಬಿಟ್ಟ ಏಲಕ್ಕಿ ಬುಡ್ಡು ತೋರಿಸಿದ .

ಹೊರನಾಡಿಗೆ ಬಂದು ತಾಯಿ ಅನ್ನಪೂರ್ಣೇಶ್ವರಿಯ ಪ್ರಸಾದ ಸ್ವೀಕರಿಸಿ ನಮ್ಮ ಕಾರಿನಲ್ಲಿ ಊರ ಕಡೆ ಹೊರಟಾಗ ಪದೇ ಪದೇ ಕ್ಯಾತನಮಕ್ಕಿಯ ಪ್ರಕೃತಿ ಮತ್ತು ಅಲ್ಲಿನ ದನ ಕರುಗಳು ಕಾಡಲಾರಂಬಿಸಿದವು.....


ಸ್ನೇಹಿತರೇ ನೀವೂ ಕ್ಯಾತನಮಕ್ಕಿ ಸೌಂದರ್ಯ ಸವಿಯಲು ಒಮ್ಮೆ ಬನ್ನಿ.

ಚಿಕ್ಕಮಗಳೂರು ಜಿಲ್ಲೆಯ ಕಳಸ ತಾಲೂಕಿನ ಪ್ರವಾಸಿಗರ ಅಚ್ಚುಮೆಚ್ಚಿನ ತಾಣ ಕ್ಯಾತನಮಕ್ಕಿ. ಮೂಡಿಗೆರೆಯಿಂದ ಕ್ಯಾತನಮಕ್ಕಿ 72 ಕಿ.ಮೀ ದೂರದಲ್ಲಿದ್ದು ಮೊದಲು ಮೂಡಿಗೆರೆ ತಾಲೂಕಿನಲ್ಲಿದ್ದ ಈ ಸ್ಥಳ ಈಗ ನೂತನವಾಗಿ ಘೋಷಣೆಯಾದ ಕಳಸ ತಾಲೂಕಿಗೆ ಬರುತ್ತದೆ.

ಹೊರನಾಡು ಶ್ರೀ ಕ್ಷೇತ್ರ ಅನ್ನಪೂರ್ಣೇಶ್ವರಿ ದೇವಸ್ಥಾನದ ಸಮೀಪವಿರುವ ಈ ತಾಣಕ್ಕೆ  ಶೃಂಗೇರಿಗೆ ಸಂಪರ್ಕಿಸುವ ರಸ್ತೆಯಲ್ಲಿ ಸಾಗಬೇಕು. ಕಳಸದಿಂದ ಈ ಸುಂದರ ತಾಣ ತಲುಪಲು 20 ಕಿ.ಮೀ ಕ್ರಮಿಸಬೇಕು. ಬಲಿಗೆ ಜೈನ ಬಸದಿಯ ಸಮಿಪದಲ್ಲಿ ಈ ಕ್ಯಾತನಮಕ್ಕಿ ಸುಂದರ ಪ್ರಕೃತಿಯ ತಾಣ ಸಿಗುತ್ತದೆ.

ಅಲ್ಲಲ್ಲಿ ಹೋಂ ಸ್ಟೇ ಗಳು ಸಹ ಇವೆ. ಬೇಕೆಂದರೆ ಒಂದೆರಡು ದಿನ ಉಳಿದು ಕ್ಯಾತನಮಕ್ಕಿ ಜೊತೆಯಲ್ಲಿ ಇತರ ಸ್ಥಳಗಳಲ್ಲಿ ಟ್ರಕ್ಕಿಂಗ್ ಕೂಡಾ ಮಾಡಬಹುದು...


ಸಿಹಿಜೀವಿ

ಸಿ ಜಿ ವೆಂಕಟೇಶ್ವರ.


 





 




25 October 2022

ದೀವಣಿಗೆ ಹಬ್ಬ ...


 

ದೀವಣಿಗೆ ಹಬ್ಬ

ನಮ್ಮ ಹುಟ್ಟೂರು ಕೊಟಗೇಣಿಯಲ್ಲಿ ದೀಪಾವಳಿ ಆಚರಣೆಯ ಸಂಪ್ರದಾಯವಿರಲಿಲ್ಲ .ದಸರಾ ರಜೆಗೆಂದು ಮಾವನವರ ಊರಾದ ಯರಬಳ್ಳಿಗೆ ಹೋದರೆ ಕೆಲವೊಮ್ಮೆ ಶಾಲೆ ಶುರುವಾದರೂ ಅಮ್ಮ ಕರೆದರೂ ಬರುತ್ತಿರಲಿಲ್ಲ.ಕಾರಣ ದೀವಣಿಗೆ ಹಬ್ಬ! ದೀವಣಿಗೆ  ಹಬ್ಬ ಮುಗಿಸಿಕೊಂಡೇ ಬರುವೆ ಎಂದು ಅಮ್ಮನಿಗೆ ಹೇಳುತ್ತಿದ್ದೆ.  ದೀಪಾವಳಿ ಹಬ್ಬವನ್ನು ಯರಬಳ್ಳಿ ಮತ್ತು ಸುತ್ತಮುತ್ತಲಿನ ಹಳ್ಳಿಗಳಲ್ಲಿ "ದೀವಣಿಗೆ " ಹಬ್ಬ ಎಂದೇ ಕರೆಯುತ್ತಿದ್ದರು. ಆಗ ನಮ್ಮ ಮಾವನವರ ಮನೆಯಲ್ಲಿ ಬಹಳ ಚೆನ್ನಾಗಿ ಸಾಕಿದ ಎರಡು ಬಿಳಿ ಎತ್ತುಗಳಿದ್ದವು .ನೋಡಲು ಚೆನ್ನಾಗಿದ್ದರೂ ಗುದ್ದುವುದರಲ್ಲಿ  ಬಹಳ ಚಾಲಾಕಿಗಳಾಗಿದ್ದವು .ನಮ್ಮ ಚಿಕ್ಕಮಾಮ ಮಾತ್ರ ಅವುಗಳ ಕಟ್ಟುವುದು, ಮೇಯಿಸುವುದು , ಮೈತೊಳೆಯುವುದು ಮುಂತಾದ ಕೆಲಸ ಮಾಡುತ್ತಿದ್ದರು. ನಾನು ಅವರ ಜೊತೆಯಲ್ಲಿ ಭಯದಿಂದಲೇ ಎತ್ತುಗಳ ಬಳಿ ಸಾಗುತ್ತಿದ್ದೆ.
ದೀಪಾವಳಿ ಹಬ್ಬ ಹತ್ತಿರ ಬಂದಂತೆ ಎತ್ತುಗಳನ್ನು ಚೆನ್ನಾಗಿ  ಮೇಯಿಸಲು ಹೊಲಗಳ ಬದುಗಳಲ್ಲಿ ಮತ್ತು ಹುಲ್ಲುಗಾವಲಿನ ಕಡೆ ಹೋಗುತ್ತಿದ್ದೆವು . ಬದುಗಳಲ್ಲಿ ಎತ್ತು ಮೇಯುವಾಗ ನಾವೂ ಆಗ ತಾನೆ ಎಳೆಕಾಯಿಯಾಗಿರುವ  ಕಡ್ಲೇ ಕಾಯಿ, ಸಜ್ಜೆ ತೆನೆ, ಅವರೇ ಕಾಯಿ, ಅಲಸಂದೇ ಕಾಯಿ, ಹೆಸರು ಕಾಯಿ , ಮುಂತಾದವುದಳನ್ನು ಮೇಯುತ್ತಿದ್ದೆವು. 
ದೀಪಾವಳಿ ಹಬ್ಬದ ದಿನ ಎಂದಿನಂತೆ ಬೆಳಿಗ್ಗೆ ಬೇಗ ಎದ್ದು ಎತ್ತು ಮೇಯಿಸಲು ಹೊಲಕ್ಕೆ ಹೋಗಿ ಮಧ್ಯಾಹ್ನದ ವೇಳೆಗೆ ದೊಡ್ಡಸೇತುವೆ ಹಳ್ಳದಲ್ಲಿ ಎತ್ತುಗಳ ಮೈತೊಳೆದುಕೊಂಡು  ಮನೆಗೆ ಬರುತ್ತಿದ್ದೆವು .ನಮ್ಮ ಊಟದ ನಂತರ ಎತ್ತಿನ ಕೊಂಬು ಎರೆಯುವವರು ಬರುತ್ತಿಧ್ದರು . ಎತ್ತಿನ ಕೊಂಬುಗಳನ್ನು ಸೂಕ್ಷ್ಮವಾಗಿ ಎರೆದು ನೈಸ್ ಆಗಿ ಮಾಡಿ ನಾವು ಕೊಟ್ಟಷ್ಟು ಹಣ ಪಡೆದು ಅವರು ತೆರಳಿದ ಬಳಿಕ ಎತ್ತುಗಳಿಗೆ  ಅಲಂಕಾರ ಮಾಡುವ ಕೆಲಸ ಶುರು.ಮೊದಲಿಗೆ ಎತ್ತಿನ ಕೊಂಬುಗಳಿಗೆ ಬಣ್ಣ ಬಳಿಯುವುದು. ನಂತರ. ಕೊಂಬಿನ ತುದಿಗೆ ಕಳಸದಂತಹ  ಕೊಡಣಸು ಹಾಕುತ್ತಿದ್ದೆವು. ಕೆಲವೊಮ್ಮೆ ಗಗ್ಗರ ಸಹ ಹಾಕಿ . ಕಾಲಿಗೆ ಗೆಜ್ಜೆ ಕಟ್ಟುತ್ತಿದ್ದೆವು.ಎರಡು ಕೊಂಬುಗಳ ತುದಿಗೆ ಒಂದು ಕಡ್ಡಿ ಕಟ್ಟಿ ಎತ್ತಿನ ಮುಖಗಳಿಗೆ   ಮುಖವಾಡ ಕಟ್ಟಿ   ಅದಕ್ಕೆ ಚೆಂಡು ಹೂ ,ಕನಕಾಂಬರ ಹೂ, ಸೇವಂತಿಗೆ ಹೂಗಳ ಹಾರವನ್ನು ,ಬಲೂನ್ ಗಳನ್ನು, ಪೇಪರ್ ನಿಂದ ಮಾಡಿದ ಡಿಸೈನ್ ಗಳನ್ನು ಕಟ್ಟುತ್ತಿದ್ದೆವು . ಇದರ ಜೊತೆಗೆ ಎತ್ತುಗಳ ಮೈಮೇಲೆಲ್ಲ ಅದರ ಚರ್ಮ ಕಾಣದಂತೆ ಹೂಗಳನ್ನು ಹೊದಿಸುತ್ತಿದ್ದೆವು. ಅದು ಎಂಭತ್ತರ ದಶಕ   ಆಗಿನ ಕಾಲಕ್ಕೆ ನೂರಾರು ರೂಪಾಯಿಗಳನ್ನು ಎತ್ತುಗಳ ಅಲಂಕಾರಕ್ಕಾಗಿ ನಮ್ಮ ಮಾವನವರು   ಖರ್ಚು ಮಾಡುತ್ತಿದ್ದರು. ಮಧ್ಯಾಹ್ನ ಮೂರು ಗಂಟೆಗೆ ಕೊಂಬು ಎರೆಯುವ ಪ್ರಕ್ರಿಯೆಯ ಮೂಲಕ ಅರಂಭವಾದ ನಮ್ಮ  ಎತ್ತುಗಳ  ಅಲಂಕಾರ ಮುಗಿದಾಗ ಸೂರ್ಯ ತನ್ನ ಗೂಡು ಸೇರಿದ್ದ.ಅಲಂಕಾರ ಮುಗಿದ ಮೇಲೆ ನಮ್ಮ ಎತ್ತುಗಳ ಅಂದ ಚೆಂದ ನೋಡಿ ನಮಗೇ ಗುರುತು ಹಿಡಿಯಲಾಗುತ್ತಿರಲಿಲ್ಲ. ಸಂಜೆಗೆ ಮನೆ ದೇವರ ಪೂಜೆ ಮಾಡಿ ಎಡೆ ಇಟ್ಟು ಎತ್ತುಗಳಿಗೂ ಎಡೆ ತಿನ್ನಿಸಿದರೆ ಅರ್ಧ ದೀಪಾವಳಿ ಹಬ್ಬ ಮುಗಿದಂತೆ. ಕ್ರಮೇಣ ನನ್ನ ಬೇಡಿಕೆಯ ಕಡೆ ಗಮನ ಹರಿಸಿದ ನನ್ನ ಮಾವನವರು ವಿರೂಪಾಕ್ಷಪ್ಪರ ಅಂಗಡಿಗೆ ಕರೆದುಕೊಂಡು  ಹೋಗಿ ನನಗೂ ನನ್ನ ಅಣ್ಣನಿಗೂ     ಕಲ್ಲಲ್ಲಿ ಕುಟ್ಟುವ ಪಟಾಕಿ, ತಂತಿ ಮತಾಪು, ಭೂಚಕ್ರ ಮುಂತಾದ ಶಬ್ದ ಬರದ ಪಟಾಕಿ ಕೊಡಿಸುತ್ತಿದ್ದರು.ಆ ಪಟಾಕಿ ಹೊಡೆವಾಗ ನಮಗೆ ಸ್ವರ್ಗ ಮೂರೇ ಗೇಣು.
ಅಲಂಕೃತವಾದ ಎತ್ತುಗಳನ್ನು ಉರುಮೆ ಬಾರಿಸಿಕೊಂಡು ಮೆರವಣಿಗೆ ಮಾಡಿಕೊಂಡು ಊರಿನಿಂದ ಅರ್ಧ ಕಿಲೋಮೀಟರ್ ದೂರದಲ್ಲಿರುವ ಬಯಲಿನಲ್ಲಿ ಒಣಗಿದ ಸೀಮೇಜಾಲಿ ಮತ್ತು  ಇತರ ಕಟ್ಟಿಗೆಯನ್ನು ಒಂದೆಡೆ ದೊಡ್ಡದಾದ ಗುಡ್ಡೆ ಹಾಕಿರುವ" ಈಡು" ಎಂಬ ಕಡೆ ಎತ್ತುಗಳನ್ನು ಓಡಿಸಿಕೊಂಡು ಹೋಗುತ್ತಿದ್ದರು. ಊರಿನ ಎಲ್ಲಾ ಅಲಂಕೃತವಾದ ಎತ್ತುಗಳ ನೋಡುವುದೇ ಒಂದು ಸಂಭ್ರಮ ಕತ್ತಲಲ್ಲೂ ಎತ್ತುಗಳ ಸೌಂದರ್ಯ ಕಂಗೊಳಿಸುತ್ತಿತ್ತು. ಎಲ್ಲಾ ಎತ್ತುಗಳು ಈಡಿನ ಬಳಿ ಬಂದಾಗ ಈಡಿಗೆ ಬೆಂಕಿ ಹಚ್ಚುತ್ತಿದ್ದರು. ಎತ್ತು ಹಿಡಿದವರು ಜೋರಾಗಿ ಕೇಕೇ ಹಾಕುತ್ತಾ ,ಶಿಳ್ಳೆ ಹೊಡೆಯುತ್ತಾ ತಮ್ಮ ಎತ್ತುಗಳು ಜೊತೆ ಈಡು ಸುತ್ತಿ ಊರ ಕಡೆ ಎತ್ತುಗಳ ಜೊತೆಯಲ್ಲಿ ಓಡಿಬರುವ ದೃಶ್ಯಗಳನ್ನು ನೋಡುವುದೇ ಚೆಂದ.ಅಂತಹ ಸಂಧರ್ಭದಲ್ಲಿ ಕೆಲ ಎತ್ತುಗಳಿಗೆ ಮತ್ತು ಜನರಿಗೆ ಬೆಂಕಿಯಿಂದ ಸಣ್ಣ ಪುಟ್ಟ ಗಾಯಗಳಾದ ಉದಾಹರಣೆಗಳೂ ಉಂಟು. ಊರ ಬಳಿ ಬಂದ ಎತ್ತುಗಳನ್ನು ಹಿಡಿದ ರೈತರು ಮೊದಲಿಗೆ ಮಾರಮ್ಮನ ಗುಡಿ ಸುತ್ತಿಸಿ ಆಶೀರ್ವಾದ ಪಡೆದು ತೀರ್ಥ  ಬಂಡಾರ ಹಾಕಿಸಿಕೊಂಡು ರಂಗಪ್ಪನವರ ಗುಡಿ ಸುತ್ತಿಸಿ ಮನೆಗೆ ತೆರಳಿ ಎತ್ತುಗಳಿಗೆ ಮೇವು ಹಾಕಿ ನಾವು ಕರಿಗಡುಬು ಊಟ ಮಾಡುತ್ತಿದ್ದೆವು  . ಊಟದ ಬಳಿಕ ನಾನು ಮತ್ತು ಅಣ್ಣ ಈ ಮೊದಲೇ ತಂದ ಕಲ್ಲಲ್ಲಿ ಕುಟ್ಟುವ ಪಟಾಕಿಯ ಪುಟ್ಟ ಪೇಪರ್ ಡಬ್ಬಿ ಬಿಚ್ಚಿ ಚಟ್ ಎಂದು ಒಂದೊಂದೇ ಪಟಾಕಿ ಕುಟ್ಟಿ ಸಂತಸ ಪಡುವುದನ್ನು ನಮ್ಮಜ್ಜಿ ನೋಡಿ ಖುಷಿ ಪಡುತ್ತಾ ಹುಷಾರು ಕಣ್ರೋ ಎಂದು ಹೇಳುವುದು ಈಗಲೂ ಕಿವಿಯಲ್ಲಿ ಕೇಳಿಸಿದಂತಾಗುತ್ತದೆ. ಈಗ ಹಳ್ಳಿಗಳಲ್ಲೂ ಎತ್ತುಗಳು ಕಡಿಮೆಯಾಗಿ ಟ್ರಾಕ್ಟರ್ ಟಿಲ್ಲರ್ ಬಂದಿವೆ ಎತ್ತುಗಳ ಪೂಜೆಯೆಲ್ಲಿ ಬಂತು?
ನಿನ್ನೆ ನನ್ನ ಚಿಕ್ಕ ಮಗಳು ಅಪ್ಪಾ ನನಗೂ ದೀಪಾವಳಿ ಹಬ್ಬಕ್ಕೆ  ಪಟಾಕಿ ಕೊಡಿಸು ಎಂದಾಗ ಮನುಷ್ಯ ಪ್ರಾಣಿಗಳ ಸಹಜೀವನದ ನನ್ನ ಬಾಲ್ಯದ ದೀಪಾವಳಿ ಬಹಳ ನೆನಪಾಯಿತು. ಬೈಕ್ ಹತ್ತಿ ಮಗಳಿಗೆ ಪಟಾಕಿ ಕೊಡಿಸಲು ತುಮಕೂರು  ನಗರದಲ್ಲಿ ವಾಹನಗಳಿಂದ ಗಿಜಿಗುಡುವ ರಸ್ತೆಯಲ್ಲಿ   ಹೊರಟಾಗ ಯಾಕೋ ಟ್ರಾಪಿಕ್ ನಲ್ಲಿ ಬಹಳ ಕಾಲ ರೆಡ್ ಸಿಗ್ನಲ್ ಕಂಡಂತಾಯ್ತು....

ಸಿಹಿಜೀವಿ
ಸಿ ಜಿ ವೆಂಕಟೇಶ್ವರ
ತುಮಕೂರು

23 October 2022

ನಮ್ಮ ಸಾಂಸ್ಕೃತಿಕ ಪರಂಪರೆಯ ಪ್ರತೀಕ ಬೇಲೂರು..

 



ನಮ್ಮ ಸಾಂಸ್ಕೃತಿಕ ಪರಂಪರೆಯ ಪ್ರತೀಕ ಬೇಲೂರು...


ಇತ್ತೀಚೆಗೆ ವಿಶ್ವಸಂಸ್ಥೆಯ ಯುನೆಸ್ಕೋ ತಂಡ ಕರ್ನಾಟಕದ ಇತಿಹಾಸ ಪ್ರಸಿದ್ಧ  ಬೇಲೂರು ಮತ್ತು ಹಳೇಬೀಡಿನ ದೇವಾಲಯಗಳಿಗೆ ಭೇಟಿ ನೀಡಿ ಯುನೆಸ್ಕೊ ದ   ಸಾಂಸ್ಕೃತಿಕ ಪರಂಪರೆಯ ತಾಣವಾಗಿ ಘೋಷಿಸಲು ಬೇಕಾದ ಮಾರ್ಗದರ್ಶಿ ನಿಯಮಗಳನ್ನು ಪರಿಶೀಲಿಸಿತು. ನಮ್ಮ  ಇತಿಹಾಸ ಮತ್ತು ಪರಂಪರೆಯ ಬಗ್ಗೆ ಹೆಮ್ಮೆ ಪಡುವ ನನ್ನಂತಹ ಕೋಟ್ಯಾಂತರ ಭಾರತೀಯರು ಆಗ ಬಹಳ ಸಂತಸಗೊಂಡೆವು.  ಈಗಾಗಲೇ ಹಲವಾರು ಬಾರಿ ಬೇಲೂರು ನೋಡಿದ್ದರೂ ಮತ್ತೆ ಬೇಲೂರು ನೋಡುವ ಮನಸಾಯಿತು.



ಕಳೆದ ವಾರ ಸಮಾನ ಮನಸ್ಕ ಗೆಳೆಯರೊಂದಿಗೆ ಬೇಲೂರಿಗೆ ಭೇಟಿ ನೀಡಿದ್ದೆ.ಅಂದೂ ಕೂಡಾ ಬೇಲೂರು ಮತ್ತು ಬೇಲೂರಿನ ಶಿಲ್ಪಕಲೆಯು ನನಗೆ ಹೊಸದಾಗಿ ಕಂಡಿತು .800 ವರ್ಷಗಳ ಬಳಿಕವೂ ಆ ಶಿಲ್ಪಕಲೆ ನಮ್ಮನ್ನು ಸೆಳೆಯುತ್ತಿವೆ ಎಂದರೆ ಅದಕ್ಕೆ ಕಾರಣರಾದ  ನಮ್ಮ ಹೊಯ್ಸಳ ಮಹಾರಾಜರ ಬಗ್ಗೆ ಮತ್ತು ಶಿಲ್ಪಿಗಳ ಬಗ್ಗೆ ಹೆಮ್ಮೆ ಅನಿಸಿತು.


ದೇವಾಲಯ ಪ್ರವೇಶ ಮಾಡಿದ ನಮ್ಮ ತಂಡಕ್ಕೆ ಸ್ಥಳೀಯರು ಮತ್ತು ಮಾರ್ಗದರ್ಶಕರು ಕೆಲ ಅಮೂಲ್ಯವಾದ ಮಾಹಿತಿ ನೀಡಿದರು.ಅದರಲ್ಲಿ ಕೆಲವು ನಾವೀಗಾಗಲೆ ಪುಸ್ತಕ ಮತ್ತು ಪತ್ರಿಕೆಗಳಲ್ಲಿ ಓದಿದ ಮಾಹಿತಿಗಳೂ ಇದ್ದವು.





ಬೇಲೂರು ಒಂದು ಐತಿಹಾಸಿಕ ಸ್ಥಳವಾಗಿದ್ದು, ಇಲ್ಲಿನ ಚೆನ್ನಕೇಶವ ದೇವಾಲಯ ಪ್ರಪಂಚದಲ್ಲಿ ಪ್ರಸಿದ್ಧಿ ಪಡೆದಿದೆ.  ಹೊಯ್ಸಳರ ಕಾಲದಲ್ಲಿ ಪ್ರತಿಷ್ಠಾಪನೆಯಾದ  ಈ ದೇವಾಲಯವು ನಕ್ಷತ್ರ ಆಕಾರದಲ್ಲಿದೆ. ಈ ದೇವಾಲಯವು ಸೂಕ್ಷ್ಮ ಕೆತ್ತನೆಯಿಂದ ಕೂಡಿದೆ ಹಾಗೂ ಪ್ರೇಕ್ಷಣೀಯ ಸ್ಥಳವಾಗಿದೆ. ಇಲ್ಲಿಗೆ ಬೇರೆ ಬೇರೆ ಕಡೆಯಿಂದ ಹೆಚ್ಚುಹೆಚ್ಚು ಜನ ಬಂದು ಈ ದೇವಾಲಯನ್ನು ವೀಕ್ಷಿಸುತ್ತಾರೆ. 

ಇದನ್ನು ಹಿಂದೆ  ವೇಲುಪುರ    ಎಂದು ಕರೆಯುತ್ತಿದ್ದರು. ದೇವಾಲಯ ಕಟ್ಟುವ ಕಾರ್ಯ ಹೊಯ್ಸಳ ಚಕ್ರವರ್ತಿಯಾದ ವಿಷ್ಣುವರ್ಧನನ ಆಳ್ವಿಕೆಯಲ್ಲಿ ಪ್ರಾರಂಭವಾಯಿತು. ರಾಜಾ ವಿಷ್ಣುವರ್ಧನನು ತಲಕಾಡಿನಲ್ಲಿ ಚೋಳರ ಮೇಲಿನ ವಿಜಯೋತ್ಸವವನ್ನು ಆಚರಿಸುವ ಸಮಯವಾದ ಸಾಮಾನ್ಯ ಶಕ  1117ರಲ್ಲಿ ತನ್ನ ಗುರುಗಳಾದ ಶ್ರೀ ರಾಮಾನುಜಾಚಾರ್ಯರ ಆಶೀರ್ವಾದದೊಂದಿಗೆ ಚೆನ್ನಕೇಶವಸ್ವಾಮಿಯ ವಿಗ್ರಹವನ್ನು ಪ್ರತಿಷ್ಠೆ ಮಾಡಿದನು. ಈ ರೀತಿಯಾಗಿ ಈ ದೇವಸ್ಥಾನಕ್ಕೆ    ವಿಜಯನಾರಾಯಣಸ್ವಾಮಿ ದೇವಸ್ಥಾನವೆಂದು ಹೆಸರು ಬಂದಿದೆ. ಸುಮಾರು 103  ವರ್ಷಗಳ ಕಾಲ ನಡೆದಂತಹ ಈ ದೇವಾಲಯದ ಕಾರ್ಯ, ವಿಷ್ಣುವರ್ಧನನ ಮೊಮ್ಮಗನಾದ ಇಮ್ಮಡಿ ವೀರ ಬಲ್ಲಾಳನ ಆಳ್ವಿಕೆಯಲ್ಲಿ ರೂಪಗೊಂಡಿತು. ದೇವಾಲಯಕ್ಕೆ ಒಂದು ವಿಮಾನ ಗೋಪುರವಿದ್ದು, ಈ ಕಾರಣವಾಗಿ ಇದನ್ನು ಹೊಯ್ಸಳರ ಏಕಕೂಟ ಶೈಲಿಯ ದೇವಸ್ಥಾನವೆಂದು ಪರಿಗಣಿಸಲಾಗಿದೆ. ಈ ದೇವಾಲಯದ ಗೋಪುರವು 70 ಅಡಿಗಳಿಗೂ ಎತ್ತರವಾಗಿದ್ದು ಧಾಳಿಕಾರರ ಹಾವಳಿಗೆ ಸಿಕ್ಕಿ ವಿರೂಪಗೊಂಡಿತ್ತು. ಇದನ್ನು ಸಾಮಾನ್ಯ ಶಕ  1397 ರಲ್ಲಿ ವಿಜಯನಗರದ ಅರಸರಾದ ಕೃಷ್ಣದೇವರಾಯರ ಮುತ್ತಜ್ಜರಾದ ಹರಿಹರ ಮಹಾರಾಜರ ದಂಡಾಧಿಪತಿ ಸಾಲುವ ಗೊಂಡನೆಂಬವರು ಇದರ ಜೀರ್ಣೋದ್ಧಾರ ಕಾರ್ಯವನ್ನು ಕೈಗೊಂಡರು. ಈ ದೇವಾಲಯಕ್ಕೆ ಇನ್ನೊಂದು ಬಾಗಿಲಿದೆ. ಇದಕ್ಕೆ 'ಆನೆ ಬಾಗಿಲು' ಎಂದು ಕರೆಯುತ್ತಾರೆ.



ದೇವಾಲಯದ ಸುತ್ತಲೂ, ಸಂಕೀರ್ಣವಾದ ಕೆತ್ತನೆಗಳು ಹಿಂದೂ ಮಹಾಕಾವ್ಯಗಳಾದ ರಾಮಾಯಣ ಮತ್ತು ಮಹಾಭಾರತದ ಕಥೆಗಳ ಚಿತ್ರಣವಿದೆ. ಬೇಲೂರು ಜೊತೆಗೆ ಹೊಯ್ಸಳ ಅಧಿಕಾರಾವಧಿಯಲ್ಲಿ ಚಾಲ್ತಿಯಲ್ಲಿದ್ದ ಸಾಂಸ್ಕೃತಿಕ ವೈಭವವನ್ನು ಪ್ರದರ್ಶಿಸುತ್ತವೆ. ಈ ಕಲಾಕೃತಿಗಳನ್ನು ಕಂಡು ಮನಸಾರೆ ಮೆಚ್ಚಿದ ನಾವು ಕೆಲ ಪೋಟೋ ತೆಗೆದುಕೊಂಡು ಕೆಲ ವೀಡಿಯೋ ಮಾಡಿಕೊಂಡೆವು .ನಮ್ಮ ಅಕ್ಕಪಕ್ಕದಲ್ಲಿ ವಿದೇಶಿ ಪ್ರವಾಸಿಗರು ಮತ್ತು ಹೊರರಾಜ್ಯದ ಜನರು ನಮಗಿಂತ ಆಸಕ್ತಿಯಿಂದ ನಮ್ಮ ದೇವಾಲಯ ವೀಕ್ಷಿಸುವುದನ್ನು  ಕಂಡು ನಮ್ಮ ರಾಜ್ಯದ ಬಗ್ಗೆ ಹೆಮ್ಮೆ ಅನಿಸಿತು.




ಇದೇ ದೇವಾಲಯ ಸಮುಚ್ಚಯದಲ್ಲಿ 

 ಚೆನ್ನಕೇಶವ ದೇವಾಲಯದ ಜೊತೆಗೆ ಅನೇಕ ದೇವಾಲಯಗಳಿವೆ. ಅವುಗಳ ನೋಡಲು ನಾವು ಮುಂದೆ ಸಾಗಿದೆವು.ಅವುಗಳಲ್ಲಿ ಪ್ರಮುಖ ದೇವಾಲಯಗಳು ಹೀಗಿವೆ.

ಕಪ್ಪೆ ಚೆನ್ನಿಗರಾಯ ದೇವಸ್ಥಾನ,

ಸೌಮ್ಯನಾಯಕಿ ಅಮ್ಮನವರ ದೇವಸ್ಥಾನ,ಕಲ್ಯಾಣ ಮಂಟಪ,

ವೀರನಾರಾಯಣ ದೇವಸ್ಥಾನ,

ರಂಗನಾಯಕಿ ಅಮ್ಮನವರ ದೇವಸ್ಥಾನ,

ಇದಲ್ಲದೆ ಗೋಪುರದ ಎಡಭಾಗದಲ್ಲಿ ಮಂಟಪ ಸಾಲನ್ನು ಮಾಡಿ ಅಲ್ಲಿ ಚಿಕ್ಕ ಗುಡಿಗಳನ್ನು ಮಾಡಿದ್ದಾರೆ. ಇದರ ನಂತರ ಶ್ರೀ ರಾಮದೇವರ ಗುಡಿ ಇದೆ. ಗೋಪುರದ ಬಲಭಾಗದಲ್ಲಿ ಪುಷ್ಕರಣಿಯನ್ನು ಮಾಡಲಾಗಿದೆ. 


ಕಪ್ಪೆ ಚೆನ್ನಿಗರಾಯನ  ಗುಡಿಯನ್ನು ನೋಡುವಾಗ ಹಿಂದೆ ಓದಿದ ಕೆಲ ಅಂಶಗಳು ನೆನಪಾದವು. ಮುಖ್ಯ ಗುಡಿಯ ಹಾಗೆ ನಕ್ಷತ್ರಾಕಾರವಾದ ಶ್ರೀಚಕ್ರದ ಪೀಠದ ಮೇಲೆ ಕಟ್ಟಲ್ಪಟ್ಟಿದೆ. ಸ್ಥಳೀಯ ಕೆಲವು ಜನರಿಂದ ಇದೇ ಮೂಲವಾಗಿ ಪ್ರಧಾನ ದೇವಾಲಯವಾಗಬೇಕಿತ್ತು ಎಂದು ಕೇಳಿ ಬಂದರೂ ಈ ನಕ್ಷತ್ರಾಕಾರದ ಪೀಠವನ್ನು ಬಿಟ್ಟರೆ ಯಾವುದೇ ಸಾಕ್ಷ್ಯಾಧಾರಗಳು ಮೂಡಿ ಬಂದಿಲ್ಲ. ಈ ದೇವಸ್ಥಾನದ ಗರ್ಭಗುಡಿಯಲ್ಲಿ ಕಪ್ಪೆ ಚೆನ್ನಿಗರಾಯನ ವಿಗ್ರಹವಿದೆ. ಈ ವಿಗ್ರಹದ ಹೊಟ್ಟೆಯಲ್ಲಿ ಕಪ್ಪೆಯನ್ನು ಕೆತ್ತಲಾಗಿದೆ. ಈ ಕಪ್ಪೆಯ ಕೆತ್ತನೆಗೆ ಒಂದು ಹಿನ್ನೆಲೆ ಇದೆ.

ಹಿಂದೆ ಜಕಣಾಚಾರಿಗೂ ಅವರ ಮಗ ಡಂಕಣಾಚಾರ್ಯರಿಗೂ ವಾದ ನಡೆದು, ಡಂಕಣನು ಚೆನ್ನಿಗರಾಯನ ವಿಗ್ರಹದಲ್ಲಿ ದೋಷವಿರುವುದಾಗಿ ಹೇಳಿ, ಅದನ್ನು ನಿರೂಪಿಸಲು ಹೊರಟಾಗ ವಿಗ್ರಹದ ಗರ್ಭದಲ್ಲಿ ಕಪ್ಪೆ ಕಂಡು ಬರಲು, ವಿಗ್ರಹಕ್ಕೆ ಈ ಹೆಸರು ಬಂದಿತೆಂದು ಹೇಳಲಾಗುತ್ತದೆ. ಇದಲ್ಲದೇ ಒಳಾಂಗಣದಲ್ಲಿ ಗೋಪಾಲಕೃಷ್ಣ, ಮಹಿಷಾಸುರಮರ್ದಿನಿ ಮತ್ತು ವಿಷ್ಣು-ಲಕ್ಷ್ಮಿಯರ ಸುಂದರ ಮೂರ್ತಿಗಳಿವೆ. ಈ ದೇವಾಲಯದ ನಂತರ  ಎಡಪಾರ್ಶ್ವದಲ್ಲಿರುವ ದೇವಸ್ಥಾನ ರಂಗನಾಯಕಿ ಅಮ್ಮನವರ ದೇವಸ್ಥಾನ ನೋಡಿದೆವು. ಚತುರ್ಭುಜಾಧಾರಿಯಾದ ಸೌಮ್ಯನಾಯಕಿ ಅಮ್ಮನವರು  ಚೆನ್ನಕೇಶವನ ಮೆಚ್ಚಿನ ಪತ್ನಿಯೆಂದು ಹೇಳುತ್ತಾರೆ.

ಸೌಮ್ಯನಾಯಕಿ ಅಮ್ಮನವರ  ದೇವಾಲಯ ದರ್ಶನ  ನಂತರ  ಕಲ್ಯಾಣ ಮಂಟಪ ನೋಡಿದೆವು.ಇಲ್ಲಿ ಚೆನ್ನಕೇಶವ ಸ್ವಾಮಿಗೂ ಸೌಮ್ಯನಾಯಕಿ ಅಮ್ಮನವರಿಗೂ ಕಲ್ಯಾಣೋತ್ಸವವನ್ನು ಮಾಡಲಾಗುತ್ತದೆ ಎಂದು ತಿಳಿಯಿತು. 

ನಂತರ ಕಲ್ಯಾಣ ಮಂಟಪದ ಒಳಭಾಗದಲ್ಲಿದ ವೀರನಾರಾಯಣ ದೇವಾಲಯ ನೋಡಿದೆವು. ಒಳಗೆ ಗರ್ಭಗುಡಿಯಲ್ಲಿರುವ ವಿಗ್ರಹ ಭಿನ್ನವಾಗಿದೆ. ಈ ಕಾರಣವಾಗಿ ಈ ದೇವಸ್ಥಾನದ ಬಾಗಿಲು ಮುಚ್ಚಿದೆ ಎಂದು ಗೈಡ್ ವಿವರಣೆ ನೀಡಿದರು.


ವೀರನಾರಾಯಣ ದೇವಸ್ಥಾನದ ನಂತರ ಸಿಗುವ ರಂಗನಾಯಕಿ ಅಮ್ಮನವರ ದೇವಾಲಯ ದರ್ಶಿಸಿದೆವು.  ರಂಗನಾಯಕಿ ಅಮ್ಮನವರನ್ನು ಚೆನ್ನಕೇಶವಸ್ವಾಮಿಯ ಜೇಷ್ಠ ಪತ್ನಿ ಎಂದು ಹೇಳುತ್ತಾರೆ. ಕಾರಣಾಂತರಗಳಿಂದ ರಂಗನಾಯಕಿ ಅಮ್ಮನವರಿಗೆ ಆಭರಣಗಳನ್ನು ತೊಡಿಸಲಾಗುವುದಿಲ್ಲವೆಂದು ಸ್ಥಳೀಯರು ಮಾಹಿತಿ ನೀಡಿದರು.


ದೇವಸ್ಥಾನದ ಆವರಣದಲ್ಲಿ ಮೇಲ್ಕಂಡ ದೇವಸ್ಥಾನಗಳನ್ನು ಬಿಟ್ಟು ನೋಡಲು ಇನ್ನೂ ಕೆಲವು ಸ್ಮಾರಕಗಳು  ಆಕರ್ಷಣೆಯ  ಕೇಂದ್ರಗಳಾಗಿ ನಮ್ಮ ಮನಸೆಳೆದವು .ಅವುಗಳೆಂದರೆ ಯಜ್ಞ ಯಾಗಾದಿಗಳನ್ನು ಮಾಡಲು ಯಾಗಶಾಲೆ, ಅಡಿಗೆ ಮಾಡಲು ಪಾಕಶಾಲೆ, ಪುಷ್ಕರಣಿ ಇತ್ಯಾದಿ...


ದೇವಸ್ಥಾನವನ್ನು ಗೋಪುರದ ಮೂಲಕ ಪ್ರವೇಶಿಸಿದರೆ ಆವರಣದ ಎಡಭಾಗದಲ್ಲಿ ಸುಮಾರು   ೪೦ಅಡಿ ಎತ್ತರದ ಒಂದು ಕಂಬ ಕಾಣಿಸುವುದು.ಅದೇ ದೀಪಾಲೆ ಕಂಬ  ಈ ಕಂಬವನ್ನು ನಕ್ಷತ್ರಾಕಾರದ ಒಂದು ಜಗುಲಿಯ ಮೇಲೆ ನಿರಾಧಾರವಾಗಿ ನಿಲ್ಲಿಸಲಾಗಿದೆ. ಕಂಬವು ಈ ಜಗುಲಿಯ ಮಧ್ಯದಲ್ಲಿದ್ದು ಇದರ ಕೆಳಗಡೆ 4 ಸಂದುಗಳನ್ನು ಮಾಡಲಾಗಿದೆ. ಈ ಸಂದುಗಳ ಮೂಲಕ ಒಂದು ಕಡೆ ಇಂದ ಇನ್ನೊಂದು ಕಡೆ ನೋಡಬಹುದು. ಈ ರೀತಿಯಾಗಿ ಈ ಕಂಬವು ಯಾವ ಆಧಾರವೂ ಇಲ್ಲದೆ ನಿಂತಿದೆ ಎಂದು ಖಚಿತವಾಗುತ್ತದೆ. ಜೊತೆಗೆ ವಾಯವ್ಯ ದಿಕ್ಕಿನಿಂದ ಒಂದು ತೆಳುವಾದ ಬಟ್ಟೆ ಅಥವ ಪೇಪರ್ ಚೂರನ್ನು ತುದಿಯಿಂದ ಮಧ್ಯದ ವರೆಗೆ ತಳ್ಳಿದರೆ ಸಲೀಸಾಗಿ ಹೋಗುತ್ತದೆ ಹೀಗಾಗಿ ಇದು ಮೂರೇ ದಿಕ್ಕುಗಳಲ್ಲಿ ನಿಂತಿದೆ ಎಂದು ಸಾಬೀತಾಗುತ್ತದೆ.  ಇದನ್ನು ಗುರುತ್ವಾಕೇಂದ್ರ ಕಂಬ (ಗ್ರಾವಿಟಿ ಪಿಲ್ಲರ್) ಎಂದು ಕರೆಯುತ್ತಾರೆ.ಈ ತುದಿಯ ಬೆಳಕನ್ನು ಆ ತುದಿಯಿಂದ ನೋಡಬಹುದು. ಆ ಕಾಲದ ಶಿಲ್ಪಿಗಳ ಚಾಕಚಕ್ಯತೆಗೆ ಇದಕ್ಕಿಂತ ನಿದರ್ಶನ ಬೇಕಿಲ್ಲ ಎನಿಸಿತು. ಅಲ್ಲಿ ಕೆಲ ಪೋಟೋ ತೆಗೆದುಕೊಂಡ ನಮ್ಮ ತಂಡ  ಆನೆ ಬಾಗಿಲ ಕಡೆ ನಡೆಯಿತು. 

ದೇವಸ್ಥಾನದ ಇನ್ನೊಂದು ಬಾಗಿಲಿಗೆ ಆನೆಬಾಗಿಲು ಎಂದು ಕರೆಯುತ್ತಾರೆ. ಇದು ಸಾಧಾರಣವಾಗಿ ಮುಚ್ಚಿರುತ್ತದೆ. ಮೂಲ ದ್ವಾರ ಗೋಪುರದ ದ್ವಾರವಾಗಿದ್ದರೂ, ದೇವರಿಗೆ ನಡೆಯುವ ಎಲ್ಲಾ ಉತ್ಸವಗಳು ಈ ದ್ವಾರದ ಮೂಲಕವಾಗಿ ಸಂಚರಿಸುತ್ತದೆ. ಈ ರೀತಿಯಾಗಿ ಇದು ವೈಶಿಷ್ಟತೆಯನ್ನು ಪಡೆದಿದೆ ಎಂದು ಮಾರ್ಗದರ್ಶಕ ಮಾಹಿತಿ ನೀಡಿದರು. 

ಮತ್ತು ನಮ್ಮನ್ನು ಮಂಟಪದ ಸಾಲಿನ ಕಡೆ ಕರೆದುಕೊಂಡು ಹೋದರು.

ದೇವಸ್ಥಾನದ ಗೋಪುರ ಮತ್ತು ಆನೆಬಾಗಿಲ ನಡುವೆ ಮಂಟಪದ ಸಾಲನ್ನು ಮಾಡಿದ್ದಾರೆ. ಇಲ್ಲಿ ಚಿಕ್ಕ ಗುಡಿಗಳನ್ನು ಮಾಡಲಾಗಿದೆ. ಈ ಗುಡಿಗಳಲ್ಲಿ ರಾಮಾನುಜಾಚಾರ್ಯರು, ಯೋಗನರಸಿಂಹರು, ಕಾಳಿಮರ್ಧನ ಕೃಷ್ಣ, ಆಂಜನೇಯ ಮುಂತಾದ ವಿಗ್ರಹಗಳನ್ನು ಪ್ರತಿಷ್ಠಾಪಿಸಲಾಗಿದೆ. ಇದಲ್ಲದೆ ರಂಗನಾಯಕಿ ಅಮ್ಮನವರ ದೇವಸ್ಥಾನದ ಪಕ್ಕದಲ್ಲೂ ಮಂಟಪದ ಸಾಲು ಇದೆ. ಇಲ್ಲಿ ಅನೇಕ ಶಿಲಾವಿಗ್ರಹಗಳನ್ನು ಸಂಗ್ರಹಿಸಿ ಪ್ರೇಕ್ಷಕರಿಗೆ ನೋಡಲು ಅನುಕೂಲ ಮಾಡಿ ಇಟ್ಟಿದ್ದಾರೆ. ಮೂಲತಃ ದೇವಸ್ಥಾನದ ಆವರಣವನ್ನು ಅಗೆದಾಗ ದೇವಸ್ಥಾನಕ್ಕೆ ಸಂಬಂಧಪಟ್ಟ ವಿಗ್ರಹಗಳನ್ನು ಇಲ್ಲಿ ಇಡಲಾಗಿದೆ. ಈ ಶಿಲೆಗಳಲ್ಲಿ ಸುಮಾರು 4 ಅಡಿ ಎತ್ತರದ ಗಣಪತಿಯ ವಿಗ್ರಹ, ವಿಷ್ಣು, ಆಂಜನೇಯರ ವಿಗ್ರಹಗಳು ಮತ್ತು ನಾಗ ಕಲ್ಲುಗಳನ್ನು ಕಾಣಬಹುದು. ಮುಖ್ಯವಾಗಿ ಇಲ್ಲಿ ಅನೇಕ ಶಾಸನ ಕಂಬಕಲ್ಲುಗಳನ್ನು ಇಡಲಾಗಿದೆ.ಈ ಶಾಸನಗಳಲ್ಲಿ ದೇವಾಲಯದ ಇತಿಹಾಸ, ದೇವಸ್ಥಾನವನ್ನು ಕಟ್ಟಿದ ಶಿಲ್ಪಿಗಳ ಹೆಸರಿದೆ ಎಂಬ ಮಾಹಿತಿಯನ್ನು ನೀಡಿದರು. 

ಆನೆ ಬಾಗಿಲಿನ ಪಕ್ಕದಲ್ಲಿರುವುದೇ ಪಾಕಶಾಲೆ. ಇಲ್ಲಿ ಪ್ರತಿ ದಿನವೂ  ದೇವರ ನೈವೇದ್ಯಕ್ಕಾಗಿ ಪ್ರಸಾದವನ್ನು ಮಾಡುತ್ತಾರೆ. ಇದರ ಪಕ್ಕದಲ್ಲೇ ಯಾಗಶಾಲೆ ಉಂಟು. ರಥೋತ್ಸವ ಅಥವ ಉತ್ಸವದ ಸಮಯದಲ್ಲಿ ಇಲ್ಲಿ ಶಾಸ್ತ್ರೀಯವಾಗಿ ನಡೆಯಬೇಕಾದ ಯಜ್ಞ-ಯಾಗಾದಿಗಳನ್ನು ಮಾಡುತ್ತಾರೆ.

ಯಾಗಶಾಲೆಯ ಪಕ್ಕದಲ್ಲಿ ರಾಮದೇವರ ದೇವಸ್ಥಾನವಿದೆ. ಗರ್ಭಗುಡಿಯಲ್ಲಿ ರಾಮ, ಸೀತೆ, ಲಕ್ಷ್ಮಣ ಮತ್ತು ಮಾರುತಿಯರ ವಿಗ್ರಹಗಳಿದೆ. ಸಾಮಾನ್ಯವಾಗಿ ರಾಮನ ಎಡಭಾಗದಲ್ಲಿರುವ ಸೀತೆ, ಇಲ್ಲಿ ಬಲಭಾಗದಲ್ಲಿರುವುದನ್ನು ಗಮನಿಸಿ ಎಂದರು ನಮ್ಮ ಗೈಡ್.

ರಾಮದೇವರ ದೇವಸ್ಥಾನದ ಪಕ್ಕದಲ್ಲಿ ವಾಹನ ಮಂಟಪವಿದೆ. ಉತ್ಸವಗಳಿಗೆ ಬೇಕಾಗುವ ವಾಹನ ಪ್ರತಿಮೆಗಳನ್ನು ಇಲ್ಲಿ ಇಡಲಾಗಿದೆ. ಸುಮಾರು ೭ ಅಡಿ ಎತ್ತರದ ಹಿತ್ತಾಳೆಯಿಂದ ನಿರ್ಮಿಸಲಾಗಿರುವ ಗರುಡ, ಹಂಸ, ಆನೆ, ಆಂಜನೇಯ, ಕುದುರೆ, ನವಿಲು ಮುಂತಾದ ವಿಗ್ರಹಗಳನ್ನು ಇಲ್ಲಿ ಇಟ್ಟಿರುತ್ತಾರೆ. ಉತ್ಸವದ ಸಮಯದಲ್ಲಿ ದೇವರ ಉತ್ಸವ ಮೂರ್ತಿಗೆ ಚಿನ್ನದ ಆಭರಣಗಳಿಂದ ಅಲಂಕಾರ ಮಾಡಿ, ಈ ವಾಹನಗಳ ಮೇಲೆ ಕೂರಿಸಿ ಊರಿನಲ್ಲಿ ಉತ್ಸವ ಮಾಡುತ್ತಾರಂತೆ .


ಹೀಗೆ ಬೇಲೂರಿನ ಶಿಲ್ಪಕಲೆಯ ವೈಭವವನ್ನು ಕಣ್ತುಂಬಿಸಿಕೊಂಡು ಗೈಡ್ ಹೇಳುವ ಮಾಹಿತಿಯನ್ನು ಅರ್ಥಮಾಡಿಕೊಂಡು ಸಾಗುತ್ತಿದ್ದ ನಮಗೆ ಸಮಯ ಸರಿದದ್ದೆ ತಿಳಿಯಲಿಲ್ಲ. ಈ ಮೊದಲು ಬೇಲೂರಿಗೆ ಪ್ರವಾಸ ಬಂದಾಗ ನಮ್ಮ ಗಮನವೆಲ್ಲ ಶಿಲಾಬಾಲಿಕೆಯರ ಕಡೆ ಮಾತ್ರ ಇತ್ತು. ಈ ಬಾರಿ ಅಲ್ಲಿನ ಶಾಸನಗಳು, ಮತ್ತು ವಿವಿಧ ದೇವಾಲಯಗಳು ಅವುಗಳ ಇತಿಹಾಸದ ಕಡೆ ಹೆಚ್ಚು ಗಮನಹರಿಸಿ ಮಾಹಿತಿ ಪಡೆದೆವು . ಸುಮಾರು ನಾಲ್ಕು ಗಂಟೆಗಳ ಕಾಲ ನಾವು ನೀರನ್ನು ಸಹ ಕುಡಿಯದೇ ಶಿಲ್ಪಕಲೆ ಆಸ್ವಾದ ಮಾಡಿದ್ದೆವು.  ನಮ್ಮ ದೇಹದಲ್ಲಿ ಇಂಧನ ಕಡಿಮೆಯಾಗಿದೆ ಎಂದು ನಮ್ಮ ಹೆಜ್ಜೆಗಳ ವೇಗ ಹೇಳುತ್ತಿತ್ತು. 

ದೇವಾಲಯದಿಂದ ಹೊರ ಬಂದು ದೇವಸ್ಥಾನದವರೇ ನಿರ್ವಹಣೆ ಮಾಡುತ್ತಿರುವ  ಬೋಜನಾ ಶಾಲೆಯಲ್ಲಿ ಪಾಯಸ ,ಅನ್ನ ಸಾಂಬಾರ್, ಮೊಸರನ್ನ ಸವಿದು. ಮಕ್ಕಳಿಗೆ ಸರ  ತೆಗೆದುಕೊಂಡು ಕಾರ್ ಹತ್ತಲು ಹೊರಟಾಗ 

 ರಾಷ್ಟ್ರಕವಿ ಕುವೆಂಪು ಅವರು ಬೇಲೂರಿನ   ದೇವಾಲಯಗಳನ್ನು ನೋಡಿ ರಚಿಸಿದ  "ಶಿಲೆಯಲ್ಲವೀ ಗುಡಿಯು ಕಲೆಯ ಬಲೆಯು ಸೌಂದರ್ಯ ವಿಪ್ಲವದ ಪಲ್ಲವಿಯು" ಎಂಬ ಮಾತುಗಳು ನೆನಪಾದವು.ವಿಶ್ವಸಂಸ್ಥೆಯ ಸಾಂಸ್ಕೃತಿಕ ಪರಂಪರೆಯ ಪಟ್ಟಿಗೆ ಸೇರಲಿರುವ ಬೇಲೂರಿಗೆ ನೀವೂ ಬನ್ನಿ ನಮ್ಮ ಸಾಂಸ್ಕೃತಿಕ ಪರಂಪರೆಯನ್ನು ಜಗಕ್ಕೆ ಪರಿಚಯಿಸಿ.


ಸಿಹಿಜೀವಿ

ಸಿ ಜಿ ವೆಂಕಟೇಶ್ವರ.

ತುಮಕೂರು




ಚಾರ್ಮಾಡಿ ಘಾಟಿ .ನಮ್ಮ ಪ್ರಾಕೃತಿಕ ಪರಂಪರೆ..




 


ಪ್ರವಾಸ ೭

ಪಶ್ಚಿಮ ಘಟ್ಟಗಳು.. ನಮ್ಮ ಪ್ರಾಕೃತಿಕ ಪರಂಪರೆ...

ಇತ್ತೀಚಿನ ದಿನಗಳಲ್ಲಿ ಪರಿಸರದ ವಿಚಾರದಲ್ಲಿ ಕಸ್ತೂರಿ ರಂಗನ್ ರವರ ವರದಿಯ ಹಿನ್ನೆಲೆಯಲ್ಲಿ ಪಶ್ಚಿಮ ಘಟ್ಟಗಳು ಚರ್ಚೆಯ ವಿಷಯವಾಗಿದ್ದವು .
ಘಟ್ಟಪ್ರದೇಶಗಳೆಂದರೆ ಪರಿಸರ ಪ್ರಿಯರಿಗೆ ಸಂಭ್ರಮದ ತಾಣ, ವಾಂತಿ ಮಾಡಿಕೊಳ್ಳುವ ವ್ಯಕ್ತಿಗಳಿಗೆ ಭಯದ ಸ್ಥಳ, ಕೈಗಾರಿಕೋದ್ಯಮಿಗಳಿಗೆ ತಮ್ಮ ಲಾಭವನ್ನು ಕಡಿಮೆ ಮಾಡುವ ಅಡೆತಡೆಗಳನ್ನು ಒಡ್ಡುವ ಪ್ರದೇಶಗಳು.ಹೀಗೆ ಅವರವರ ಭಾವ ಭಕುತಿಗೆ ವಿಭಿನ್ನವಾಗಿ ಕಾಣುವ ಪಶ್ಚಿಮ ಘಟ್ಟಗಳು ನಮ್ಮ ಪ್ರಾಕೃತಿಕ ಪರಂಪರೆಯ ಪ್ರತೀಕ ಎಂಬುದನ್ನು ಯಾರೂ ಅಲ್ಲಗಳೆಯುವಂತಿಲ್ಲ.
ಕಳೆದ ವಾರ ನಮ್ಮ ಸಮಾನ ಮನಸ್ಕ ತಂಡದ ಆತ್ಮೀಯರು ಕೋಟೆ ಕುಮಾರ್  ರವರ  ನೇತೃತ್ವದಲ್ಲಿ ಧರ್ಮಸ್ಥಳದ ಕಡೆ ಪ್ರವಾಸ ಹೋದಾಗ ಹಲವು ಬಾರಿ ಘಟ್ಟ ಪ್ರದೇಶಗಳನ್ನು ನೋಡಿದ್ದರೂ ಅಂದು ಘಟ್ಟ ಪ್ರದೇಶ ಹೊಸದಾಗಿ ಕಂಡಿತು. ಚಾರ್ಮಾಡಿ ಘಾಟಿಯ ಸೊಬಗಂತೂ ನಮ್ಮನ್ನು ಬಹುವಾಗಿ ಆಕರ್ಷಿಸಿತು.




ಕರ್ನಾಟಕದಲ್ಲಿ ಶಿರಾಡಿ ಘಾಟಿ, ಆಗುಂಬೆ ಘಾಟಿಗಳೆಂಬ ಇತರೆ ಘಾಟಿಗಳಿದ್ದರೂ ಚಾರ್ಮಾಡಿ ಘಾಟಿಯ ಸೌಂದರ್ಯ ನಿಸರ್ಗ ಪ್ರಿಯರಿಗೆ ಬಹು ನೆಚ್ಚಿನ ಪ್ರಾಕೃತಿಕ ತಾಣವಾಗಿದೆ.

ಚಾರ್ಮಾಡಿ ಘಾಟಿಯು  ದಕ್ಷಿಣ ಕನ್ನಡ ಜಿಲ್ಲೆ ಮತ್ತು ಚಿಕ್ಕಮಗಳೂರು ಜಿಲ್ಲೆಗಳ ಗಡಿಯಲ್ಲಿ ಹೊಂದಿಕೊಂಡಿದ್ದು ಪಶ್ಚಿಮ ಘಟ್ಟಗಳ ಸಾಲಿನಲ್ಲಿ ಬರುತ್ತವೆ. ಚಾರ್ಮಾಡಿ ಘಟ್ಟಗಳ ಕೆಳಭಾಗದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿಗೆ ಸೇರಿರುವ ಚಾರ್ಮಾಡಿ ಎಂಬ ಗ್ರಾಮವಿದೆ. ಅದರಿಂದಾಗಿ ಈ ಘಟ್ಟಗಳಿಗೆ ಈ ಹೆಸರು ಬಂದಿದೆ. ದಕ್ಷಿಣ ಕನ್ನಡ ಜಿಲ್ಲೆ ಮತ್ತು ಚಿಕ್ಕಮಗಳೂರು ಜಿಲ್ಲೆಗಳನ್ನು ಬೆಸೆಯುವ ಮುಖ್ಯ ರಸ್ತೆಯೊಂದು ಚಾರ್ಮಾಡಿ ಘಟ್ಟದಲ್ಲಿ ಹಾದು ಹೋಗಿದೆ. ಇಲ್ಲಿ ಎತ್ತರವಾದ ಬೆಟ್ಟ-ಗುಡ್ದ, ಆಳವಾದ ಕಣಿವೆ-ಪ್ರಪಾತ, ದಟ್ಟ ಕಾಡು, ಅಸಂಖ್ಯಾತ ಜಲಪಾತಗಳು, ವನ್ಯಮೃಗಗಳು, ಹತ್ತಾರು ಝರಿ-ತೊರೆ, ಶೋಲ ಕಾಡು,ಅಪರೂಪವಾದ ಹುಲ್ಲುಗಾವಲುಗಳನ್ನು ಕಾಣಬಹುದು. ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಕೊಟ್ಟಿಗೆಹಾರ ಎಂಬ ಗ್ರಾಮದಿಂದ ಪ್ರಾರಂಭವಾಗುವ ಈ ಘಟ್ಟಗಳು ಚಾರ್ಮಾಡಿ ಗ್ರಾಮದ ಬಳಿ ಕೊನೆಗೊಳ್ಳುತ್ತವೆ.



ನಮ್ಮ ಕಾರಿನಲ್ಲಿ  ಬೆಂಗಳೂರಿನ ಕಡೆಯಿಂದ ಹೊರಟ ನಾವು  ಕೊಟ್ಟಿಗೆಹಾರದಲ್ಲಿ ನೀರ್ ದೋಸೆ, ಪಲಾವ್ , ಬೋಂಡಾ ತಿಂದು   ಟೀ ಕುಡಿದು  ಹೊರಟ ನಮಗೆ ನಿಧಾನವಾಗಿ ನಿದ್ರೆ ಹತ್ತಲು ಶುರುವಾಯಿತು. ಚಾರ್ಮಾಡಿ ಘಾಟಿಯ ನಿಸರ್ಗ ನೋಡುತ್ತಾ ತಂಗಾಳಿಯು ನಮ್ಮ ಸೋಕುತ್ತಿದ್ದಂತೆ ನಿದ್ರಾ ದೇವಿ ಆಮೇಲೆ ಬರುವೆ ಎಂದು ಹೊರಟೇಬಿಟ್ಟಳು. ಅಲ್ಲಿಂದ ಮುಂದೆ ನಮ್ಮ ಮೊಬೈಲ್ ಕ್ಯಾಮರಾ ಮತ್ತು ಕಣ್ಣುಗಳಿಗೆ ಭರಪೂರ ಕೆಲಸ . ಕೋಟೇ ಕುಮಾರ್ ರವರು ಎದುರಿಗೆ ಬರುವ ವಾಹನಗಳ ಕಡೆಗೆ ಗಮನ ಹರಿಸುತ್ತಾ ನಿಸರ್ಗ ಸೌಂದರ್ಯ ಸವಿಯುತ್ತಾ ಡ್ರೈವ್ ಮಾಡುತ್ತಿದ್ದರೆ ನಾನು ಚಂದ್ರಶೇಖರಯ್ಯ ಎಮ್ ಎಚ್ ಹನುಮಂತರಾಯಪ್ಪ ಮತ್ತು ರಂಗಸ್ವಾಮಯ್ಯ ರವರು ಅಲ್ಲಲ್ಲಿ ಹರಿವ ಝರಿಯ ಕಲರವ ಕೇಳುತ್ತಾ ದೂರದ ಬೆಟ್ಟಗಳ ಚಿತ್ತಾರ ನೋಡುತ್ತಾ ಬಗೆ  ಬಗೆಯ ಮರಗಳ ನೋಡಿ ಬೆರಗಾಗುತ್ತಾ ಮುಂದೆ ಸಾಗಿದೆವು. ಅಲ್ಲಲ್ಲಿ ನಿಂತು ವ್ಯೂ ಪಾಯಿಂಟ್ ಗಳ ಬಳಿ ಸ್ವಲ್ಪ ಹೆಚ್ಚು ಸಮಯ ಕಳೆದು ನಿಸರ್ಗದಲ್ಲಿ ನಾವು ಒಂದಾಗಿ ನಿಂತು ಮೈ ಮರೆತೆವು.ಪೋಟೋ ವೀಡಿಯೋಗಳನ್ನು ಲೆಕ್ಕವಿಲ್ಲದಷ್ಟು ತೆಗೆದುಕೊಂಡೆವು..ನಿಧಾನವಾಗಿ ಸಾಗಿದ ನಮ್ಮ ಕಾರು ಏರ್ ಪಿನ್ ಬೆಂಡ್, ಎಸ್ ಬೆಂಡ್ ಗಳನ್ನು   ದಾಟಿಕೊಂಡು ಚಾರ್ಮಾಡಿಯ ಬಳಿ ಬಂದಿತು. ಅಲ್ಲಿಂದ ದೊಡ್ಡ ತಿರುವುಗಳು ಇಲ್ಲದಿದ್ದರೂ ನಿಧಾನವಾಗಿ ಸಾಗಬೇಕು. ಈ ಜಾಗದಲ್ಲಿ ವಾಹನ ಚಲಾಯಿಸಲು ಕ್ಷಮತೆ ಬೇಕು. ಹೀಗೆ ಸಾಗಿದ ನಮ್ಮ ಪಯಣ ಉಜಿರೆ ದಾಟಿ ನೇತ್ರಾವತಿ ನದಿಯ ಸೇತುವೆ ಮೇಲೆ ಚಲಿಸಿ ಧರ್ಮಸ್ಥಳ ತಲುಪಿತು. ಮಂಜುನಾಥ ಸ್ವಾಮಿಯ ದರ್ಶನಕ್ಕೆ ಸರದಿ ಸಾಲಿನಲ್ಲಿ ನಿಂತಾಗ ಪಶ್ಚಿಮದ ಘಟ್ಟಗಳ ಚಾರ್ಮಾಡಿಯ ಸೌಂದರ್ಯ ಕಣ್ಣ ಮುಂದೆ ಬರುತ್ತಿತ್ತು ನಮ್ಮ ಪ್ರಾಕೃತಿಕ ಪರಂಪರೆಯ ಬಗ್ಗೆ ಹೆಮ್ಮೆ ಪಡುತ್ತಾ  ದೇವರ ದರ್ಶನಕ್ಕೆ ಸರದಿ ಸಾಲಿನಲ್ಲಿ ಮುಂದೆ ಸಾಗಿದೆವು...

*ಸಿಹಿಜೀವಿ*
ಸಿ ಜಿ ವೆಂಕಟೇಶ್ವರ

20 October 2022

ರಾಣಿಝರಿ .ಒಂದು ಸ್ಥಳ ಹಲವು ಜಗತ್ತು...




 

ರಾಣಿ ಝರಿ. ಒಂದು ಸ್ಥಳ ಹಲವು ಜಗತ್ತು.


ರಾತ್ರಿ ಮಲಗುವಾಗ ನನ್ನ ಮೊಬೈಲ್ ನಲ್ಲಿರುವ ಪೆಡೋಮೀಟರ್ "ಇಂದು ನೀನು  12 ಕಿಲೋಮೀಟರ್ ದೂರ  ನಡೆದಿರುವೆ ಅಂದರೆ 17915.... ಹೆಜ್ಜೆಗಳು ಅಭಿನಂದನೆಗಳು".ಎಂದಿತು.

ಆಗ ನನ್ನ ಅಂದಿನ ದಿನಚರಿ ನೆನಪಾಯಿತು. 


ಕಾಡು   ಸುತ್ತಬೇಕು. ಬೆಟ್ಟ ಹತ್ತಬೇಕು. ಎಲ್ಲಾದರೂ ಪರಿಸರದ ಮಧ್ಯೆ ಕಳೆದುಹೋಗಬೇಕು. ವಾರಾಂತ್ಯದಲ್ಲಿ ಮನೆಯವರೆಲ್ಲ ಸೇರಿ ಒಂದು ಒಳ್ಳೆಯ ಜಾಗಕ್ಕೆ ಟ್ರೆಕ್ಕಿಂಗ್ ಹೋಗಬೇಕು ಎಂದು  ಹಂಬಲಿಸವ ನನ್ನಂತಹ ಪರಿಸರ ಪ್ರಿಯರಿಗೆ  ‘ರಾಣಿಝರಿ’ ಹೇಳಿಮಾಡಿಸಿದ ತಾಣ.ಅಂತಹ ತಾಣಕ್ಕೆ ಟ್ರಕ್ಕಿಂಗ್ ನಂತಹ ಪಯಣ ಮಾಡಿದ್ದು ಅವಿಸ್ಮರಣೀಯ ದಿನ.

ಕಲಾವಿದರಾದ ಕೋಟೆ ಕುಮಾರ್ ರವರ ನೇತೃತ್ವದಲ್ಲಿ ಸಣ್ಣ ಪ್ರಮಾಣದ ಚಾರಣ ಮಾಡಲು ಹೊರಟ ನಮ್ಮ ತಂಡದಲ್ಲಿ ಹಿರಿಯರಾದ ಚಂದ್ರಶೇಖರಯ್ಯ, ರಂಗಸ್ವಾಮಯ್ಯ ಮತ್ತು ಎಮ್ ಎಚ್ ಹನುಮಂತರಾಯಪ್ಪ  ಖುಷಿಯಿಂದ ಚಾರಣದಲ್ಲಿ ಪಾಲ್ಗೊಂಡು ನನ್ನ ಸಂತಸವನ್ನು ಇಮ್ಮಡಿಗೊಳಿಸಿದರು.



ಪಶ್ಚಿಮ ಘಟ್ಟದ ಸಹಸ್ರಾರು ಪರ್ವತಶ್ರೇಣಿಗಳ ಪೈಕಿ ಈ ರಾಣಿಝರಿಯೂ ಒಂದು. ಇದರ ಸುತ್ತಲಿನ ಗುಡ್ಡಗಳು ‘ನಾ ನಿನಗಿಂತ ಮೇಲು... ನಾ ನಿನಗಿಂತ ಮೇಲು...’ ಎಂದು ಪೈಪೋಟಿಗೆ ಬಿದ್ದು ಒಂದಕ್ಕಿಂತ ಇನ್ನೊಂದು ಮೇಲಕ್ಕೆ ಬೆಳೆದು ಮುಗಿಲು ಮುಟ್ಟುವ ರೀತಿ ಹಬ್ಬಿಕೊಂಡಿವೆ. ಮಂಜು ಗಿರಿನೆತ್ತಿಯ ಜತೆ ಆಟಕ್ಕಿಳಿದಂತೆ ಸುತ್ತಿ ಸುಳಿದು, ಮುತ್ತಿ ಮುತ್ತಿಕ್ಕಿ ಸಂಭ್ರಮಿಸುವುದನ್ನು ನೋಡುವ ರೋಮಾಂಚನವೇ ಬೇರೆ.




ರಾಣಿಜರಿಯ ತುದಿಯಲ್ಲಿ ನಿಂತು ನೋಡಿದರೆ ಸುಮಾರು 2,500 ಅಡಿ ಕೆಳಕ್ಕೆ ದಟ್ಟವಾಗಿ ಹಬ್ಬಿರುವ ಹಸಿರು ತುಂಬಿದ ಅರಣ್ಯ ಪ್ರದೇಶದ ರಮಣೀಯ ನೋಟ ಕಾಣಸಿಗುತ್ತದೆ. ಈ ಗುಡ್ಡ ದಕ್ಷಿಣ ಕನ್ನಡ ಮತ್ತು ಚಿಕ್ಕಮಗಳೂರು ಜಿಲ್ಲೆಯ ಗಡಿ ಪ್ರದೇಶ. ನಾವು ಕಾಫಿನಾಡಿನಲ್ಲಿ ನಿಂತು ತುಳುನಾಡನ್ನು ವೀಕ್ಷಿಸಬಹುದು. ಅದು ಈ ತಾಣದ ವಿಶೇಷ. ಗುಡ್ಡದ ತುದಿಯಿಂದ ಕಣ್ಣುಹಾಯಿಸಿದರೆ  ಚಿಕ್ಕ ಚಿಕ್ಕ ಕಟ್ಟಡಗಳು ರಂಗೋಲಿಯ ಚುಕ್ಕಿಯ ಹಾಗೆ ಕಾಣಿಸುತ್ತವೆ. ಸ್ಥಳೀಯರ ಪ್ರಕಾರ ಅದು ಬೆಳ್ತಂಗಡಿ ತಾಲ್ಲೂಕಿನ ಬಂಗಾಡಿ ಗ್ರಾಮ. 




ವರ್ಷದ ಬಹುಕಾಲ ಮಂಜಿನ ಸೆರಗಿನಲ್ಲಿ ತನ್ನ ಸೌಂದರ್ಯವನ್ನು ಮುಚ್ಚಿಕೊಂಡಿರುತ್ತದೆ ಈ ರಾಣಿಝರಿ. ಹಾಗಾಗಿ ಕೆಳಗಿನ ಕಣಿವೆಯನ್ನು ಹಾಗೂ ಸುತ್ತಲಿನ ಗುಡ್ಡಗಳನ್ನು ಕಣ್ಣತುಂಬಿಕೊಳ್ಳಲು ಕಣ್ಣುಗಳಿದ್ದರೆ ಸಾಲದು, ಅದೃಷ್ಟವೂ ಬೇಕು. ನಾವು ಹೋದಾಗ ಮಂಜಿನ ಕಣ್ಣಾಮುಚ್ಚಾಲೆ ನಡದೇ ಇತ್ತು .ಒಂದು ಹಂತದಲ್ಲಿ ಮುಂದೆ ಏನೂ ಕಾಣದಂತೆ ಮಂಜು ಮುಸುಕಿದ್ದೂ ಉಂಟು.  ಆದರೂ ಮಂಜಿನಿಂದ ಮುತ್ತಿಕೊಂಡಿರುವ ರಾಣಿಝರಿಯನ್ನು ನೋಡುವ ಅನುಭವವು ಬೇರೆಯದ್ದೇ! ನೆತ್ತಿಯ ಮೇಲೆ ಸುಮ್ಮನೆ ನಿಂತು ಕಣ್ಣುಚ್ಚಿ, ಎಲ್ಲೋ ಭೂಮಿಯಿಂದಾಚೆ ನಿಂತು ಮೋಡಗಳ ಮಧ್ಯೆ ವಿಹರಿಸುತ್ತಿರುವ ಅನುಭವವಾಗುತ್ತದೆ. ಅಕ್ಟೋಬರ್ ನ ಮಳೆಗಾಲದಲ್ಲಿ  ತಂಗಾಳಿಯು  ಮತ್ತು  ಮಂಜಿನಿಂದ ತುಂಬಿಕೊಂಡು ಚಳಿ ಹುಟ್ಟಿಸುತ್ತದೆ ಈ ಪರ್ವತದ ಒಡಲು. 





ರಾಣಿಝರಿಯು  ಅಷ್ಟೊಂದು ಕಷ್ಟದ ಚಾರಣ ಹಾದಿಯಲ್ಲ. ಕಾರಿನಲ್ಲಿ ಕೊಟ್ಟಿಗೆಹಾರದಿಂದ ಹೊರಟ ನಾವು ಕಳಸ ಹೊರನಾಡ ದಾರಿಯಲ್ಲಿ ಸಾಗಿ 

ಸುಮಾರು 17 ಕಿ.ಮೀ. ದಾರಿ ಕ್ರಮಿಸಿದೆವು. ಸುಂಕಸಾಳ ಎಂಬ ಊರು ಸಿಕ್ಕಿತು . ಸುಂಕಸಾಳದಿಂದ ಮೂರು ಕಿ.ಮೀ. ಚಲಿಸಿದಾಗ  ರಾಣಿಝರಿ ಸಿಕ್ಕಿತ್ತು.

ರಾಣಿಝರಿಗೆ ಸಾಗುವ ದಾರಿಯೂ ಅಷ್ಟೇ ಸೊಗಸಾಗಿದೆ. ಸುತ್ತಲೂ ಹಸಿರಿನಿಂದ ತುಂಬಿರುವ ದಾರಿಯಲ್ಲಿ ಕಾಫಿ ಗಿಡಗಳು ಸೊಬಗು ಹೆಚ್ಚಿಸುತ್ತವೆ. ಕೆಳಗೂರಿನ ಟೀ ಪ್ಲಾಂಟೇಶನ್‍ಗಳನ್ನು  ನೋಡಲು ಕಣ್ಣಿಗೆ ಹಬ್ಬ. ಕಾರಿನಲ್ಲಿ ಕೇಳುತ್ತಿದ್ದ ಹಳೆಯ ಕನ್ನಡ ಚಲನಚಿತ್ರಗೀತೆಗಳು ನಮ್ಮ ನೆನಪುಗಳನ್ನು ಕೆದಕುತ್ತಾ ಸೌಂದರ್ಯ ಸವಿಯುವಂತೆ ಮಾಡುತ್ತಿದ್ದವು .ನಾವು ಅಗಾಗ್ಗೆ ಆ ಹಾಡುಗಳ ಸಾಲುಗಳನ್ನು ಗುನುಗುತ್ತಾ ಪ್ರಕೃತಿಯ ಸೊಬಗನ್ನು ಕಣ್ತುಂಬಿಸಿಕೊಂಡು ಸಾಗುತ್ತಿರುವಾಗ  ಸಾಗುವ ದಾರಿಯಲ್ಲಿ ಸಿಗುವ ಹಲವು ಚಿಕ್ಕ ಪುಟ್ಟ ಹಳ್ಳಿಯ ಹೆಸರುಗಳು ಪೂರ್ಣಚಂದ್ರ ತೇಜಸ್ವಿಯವರನ್ನು ಹಾಗೂ ಅವರ ಕೃತಿಗಳನ್ನು  ನೆನಪಿಸಿದ್ದು ಸುಳ್ಳಲ್ಲ .ನಮ್ಮಂತಹ  ಪ್ರವಾಸಿಗರಿಗೆ ಮತ್ತು ಚಾರಣಿಗರಿಗೆ ಅನುಕೂಲವಾಗುವಂತೆ ಸಮೀಪದಲ್ಲಿ ಹಲವಾರು ಹೋಮ್‍ಸ್ಟೇಗಳು ತಲೆ ಎತ್ತಿರುವುದು ರಸ್ತೆ ಬದಿಯ ನಾಮಫಲಕಗಳಿಂದ ತಿಳಿಯಿತು.





 ರಾಣಿಝರಿಯ ಬುಡದವರೆಗೂ  ತೆರಳಿದ  ನಮಗೆ ಅಲ್ಲಿ ದೂರದಲ್ಲಿ ಕಾಲಬೈರವೇಶ್ವರ ದೇವಾಲಯ ಕಂಡಿತು.  ದೇವರ ದರ್ಶನ ಮಾಡೋಣ ಎಂದ ನನಗೆ ಕೋಟೆ ಕುಮಾರ್ ರವರು" ಈಗಾಗಲೇ ಸಂಜೆಯಾಗಿದೆ ಮೊದಲು ಪ್ರಕೃತಿ ದೇವರ ನೋಡೋಣ" ಎಂದಾಗ   ಎರಡು ಕಿಲೋಮೀಟರ್ ಕಾಲ್ನಡಿಗೆಯ ಮೂಲಕ ಚಾರಣ ಅರಂಬಿಸಿಯೇಬಿಟ್ಟೆವು .ಸಂಜೆಯ ವಾತಾವರಣದಲ್ಲಿ ಅಗಾಗ್ಗೆ ಗುಡುಗು ಕೇಳುತ್ತಿತ್ತು. ಮಳೆ ಬರುವ ಸಂಭವ ಹೆಚ್ಚಾಗಿತ್ತು. "ಮಳೆ ಬಂದರೆ ಅಲ್ಲಿ ಜಿಗಣೆ ಕಾಟ ಹುಷಾರ್ "  ಎಂಬ ಗೆಳೆಯನ ಮಾತು ನೆನೆದು ಕಾಲು ನೋಡಿಕೊಂಡೆ.ಸುಮಾರು  ಅರ್ಧಗಂಟೆಯ ಚಾ


ರಣದ ನಂತರ  ನಮಗೆ ರಾಣಿ ಝರಿಯ ಸೌಂದರ್ಯ ಅನಾವರಣವಾಯಿತು.



ದೂರದಲ್ಲಿ ಬಲ್ಲಾಳರಾಯನ ಕೋಟೆಯ ಅವಶೇಷಗಳು ಅಸ್ಪಷ್ಟವಾಗಿ ಕಾಣುತ್ತವೆ. ಮಂಜಿನ ತೆರೆಯಲ್ಲಿ ಸೂರ್ಯನ ಕಿರಣಗಳು ಚದುರಿ ಸುಂದರ ವಿನ್ಯಾಸ ಮಾಡಿವೆ. ಆಗಾಗ್ಗೆ ಬೀಳುವ ತುಂತುರು ಹನಿಗಳು ಚಾರಣದಿಂದ ಬೆವೆತ ಮೈಗೆ ತಂಪು ನೀಡುತ್ತವೆ. ಕಣ್ಣು ಹಾಯಿಸಿದಷ್ಟೂ  ಹಸಿರೊದ್ದ ಗಿರಿಕಾನನಗಳು ಮನಕ್ಕೆ ಮುದ ನೀಡುತ್ತಿವೆ . ಈ ಸೌಂದರ್ಯ ನೋಡಿದ ನನ್ನ ಮನದ ಮಾತು ಹೊರಬಂದಿತು " ಒಂದು ರಾಜ್ಯ ಹಲವು ಜಗತ್ತು"...ನನ್ನ ಜೊತೆಯಲ್ಲಿದ್ದ  ಸ್ನೇಹಿತರು ಸಹ ಅದೇ ಮಾತುಗಳನ್ನು ಪುನರುಚ್ಚಾರ ಮಾಡಿದರು.  ನಿಧಾನವಾಗಿ ಸೂರ್ಯ ಪರ್ವತಗಳ ಹಿಂದೆ ಸರಿಯುವ ಚಿತ್ರಣ ಸರೆಹಿಡಿಯುವಾಗ " ಸೀಜೀವಿ ಹುಷಾರು ಹಿಂದೆ ಕಾಲಿಡಬೇಡಿ ಪ್ರಪಾತ ಇದೆ" ಎಂಬ ಚಂದ್ರಶೇಖರಯ್ಯ ರವರ ಧ್ವನಿ ಕೇಳಿ ಒಂದು ಹೆಜ್ಜೆ ಹಿಂದೆ ಇಟ್ಟು ಬಗ್ಗಿ ನೋಡಿದೆ.ಪ್ರಪಾತ! ಒಂದು ಕ್ಷಣ ಎದೆ ನಡುಗಿತು. ಆಗ ಅಲ್ಲೇ ಇದ್ದ ಸ್ಥಳೀಯರೊಬ್ಬರು " ಸರ್  ನೀವು ನಿಂತಿರುವ ಪ್ರಪಾತ ಬಹಳ ಆಳವಿದೆ. ಇಲ್ಲಿಂದ  ಯಾರಾದರೂ ಜಾರಿ ಬಿದ್ದರೆ ಅವರ ಮೂಳೆಗಳು ಸಿಗುವುದೂ ಕಷ್ಟ, ಬಲ್ಲಾಳರಾಯನನ್ನು ಟಿಪ್ಪು ಸುಲ್ತಾನ್ ಸೆರೆಹಿಡಿದ ಮೇಲೆ ಅವನ ರಾಣಿ ಇದೇ ಪ್ರಪಾತದಲ್ಲಿ ಬಿದ್ದು ಸಾವನ್ನಪ್ಪಿದರು. ಅದಕ್ಕೆ ಈ ಸ್ಥಳಕ್ಕೆ ರಾಣಿ ಝರಿ ಎಂಬ ಹೆಸರು ಬಂದಿದೆ" ಎಂದರು. ಮುಂದುವರೆದು ಅವರು ಮಾತನಾಡುತ್ತಾ  ಇಲ್ಲಿಂದ ಮುಂದೆ  ಬಲ್ಲಾಳರಾಯನದುರ್ಗಕ್ಕೆ  ಸುಮಾರು 7-8 ಕಿ.ಮೀ. ಚಾರಣ ಮಾಡಬಹುದು ಎಂದು ಮಾಹಿತಿ ನೀಡಿದರು.

ರಾಣಿಝರಿಯ ಸೌಂದರ್ಯ ಕಣ್ತುಂಬಿಕೊಂಡು ನಮ್ಮ ಕಾರಿನ ಕಡೆ ಹೆಜ್ಜೆ ಹಾಕಿದಾಗ ಮಳೆರಾಯ ಜೋರುಸದ್ದಿನೊಂದಿಗೆ  ಬಂದೇ ಬಿಟ್ಟ. ಕಾಡಿನಲ್ಲಿ ಮಳೆಯಲ್ಲಿ ನೆನೆಯುವುದೂ ಒಂದು ಅನನ್ಯ ಅನುಭವ .ಕಾರಿನಲ್ಲಿ ಕುಳಿತು ಹೊರನಾಡಿನ ಕಡೆ ಹೊರಟಾಗ ಮಳೆ ಇನ್ನೂ ಜೋರಾಯಿತು..


ಹೀಗೆ ಹಲವಾರು ವೈಶಿಷ್ಠ್ಯಗಳಿಂದ ಕೂಡಿರುವ ರಾಣಿಝರಿಯನ್ನು ನೋಡಿ ಒಂದೊಳ್ಳೆ ಚಾರಣಸ್ಥಳ ನೋಡಿದ ಸಾರ್ಥಕತೆ ನಮ್ಮದಾಯಿತು. ವಾರಾಂತ್ಯದ ಲಾಂಗ್ ಡ್ರೈವ್ ಹೋಗಿ ಎಂಜಾಯ್ ಮಾಡಿ ಪಶ್ಚಿಮ ಘಟ್ಟದ ಸುಂದರ ಸೌಂದರ್ಯದ ಸೊಬಗನ್ನು ಸವಿಯಲು ನೀವೂ ಒಮ್ಮೆ ರಾಣಿಝರಿಗೆ ಹೋಗಿ ಬನ್ನಿ..


ಸಿಹಿಜೀವಿ

ಸಿ ಜಿ ವೆಂಕಟೇಶ್ವರ.

ತುಮಕೂರು.



18 October 2022

ಗುಂಡಿಗೆ..

 ಗುಂಡಿಗೆ 


ನನ್ನ ಗುಂಡಿಗೆ ಜಗ್ಗದು 

ದಂಡಿನ ದಾಳಿಗೆ 

ವಿರೋಧಿಗಳ ಗುಂಡಿಗೆ |

ಒಳಗೊಳಗೇ ನಡುಗುವುದು

ನನ್ನ ಗುಂಡಿಗೆ ಈ ರಸ್ತೆಗಳ ಗುಂಡಿಗೆ ||



#ಸಿಹಿಜೀವಿ 

ಸಿ ಜಿ ವೆಂಕಟೇಶ್ವರ


ಗುಂಡಿಗೆ ಬಲಿ

 ಗುಂಡಿಗೆಬಲಿ 


ಅಂದು ಜನರು

ಬಲಿಯಾಗುತ್ತಿದ್ದರು

ಹೆಚ್ಚಾಗಿ ಸೈನಿಕರ, ಭಯೋತ್ಪಾದಕರು

ಮತ್ತು ಪೋಲೀಸರ ಗುಂಡಿಗೆ |

ಇಂದು ಹೆಚ್ಚಾಗಿ 

ಬಲಿಯಾಗುತಿಹರು 

ರಸ್ತೆ ಗುಂಡಿಗೆ ||

ಸುಮ್ಮನೆ ಕೂರದಿರು...

 



ಸುಮ್ಮನೇ ಕೂರದಿರು..


ಸೋತೆನೆಂದು ಸುಮ್ಮನೇ ಕೂರದಿರು

ಗೆಲುವು ಎಂದಿಗೂ ಇರುತ್ತದೆ

ಪ್ರಯತ್ನ ಪಡುವವರ ಪರ |

ಚಲಿಸುತ್ತಿರುವ ನದಿಯು

ಒಂದಲ್ಲ ಒಂದು ದಿನ 

ಸೇರಿಯೇ  ಸೇರುತ್ತದೆ ಸಾಗರ ||


#ಸಿಹಿಜೀವಿ 

ಸಿ ಜಿ ವೆಂಕಟೇಶ್ವರ


17 October 2022

ಕನಸಿ‌ನ ಲೋಕದಲೊಂದು ಪಯಣ...

 


ಕನಸಿನ ಲೋಕದಲೊಂದು ಪಯಣ..





ಕಣ್ಣಾಡಿಸಿದರೆ  ಎಲ್ಲಾ ಕಡೆ   ಹಚ್ಚ ಹಸಿರು.ನಮ್ಮ ಉಸಿರು ಹೊರ ಬಂದರೆ ಬಾಯಿ ಮೂಗಿನಿಂದ  ಹೊಗೆ ಬಂದಂತಹ  ಅನುಭವ . ತಂಪಾದ ತಂಗಾಳಿಯು ಬಂದು ನಮ್ಮ ದೇಹ ಸೋಕಿದಾಗ ಆದ ಪರಮಾನಂದ ವರ್ಣಿಸಲಸದಳ ಅದನ್ನು ಅನುಭವಿಸಿಯೇ ತೀರಬೇಕು. ದೂರದಲ್ಲಿರುವ ಬೆಟ್ಟಗಳ ಸಾಲು ನಮ್ಮನ್ನೇ ಕೈ ಬೀಸಿ ಕರೆಯುತ್ತಿದ್ದವು. ಇನ್ನೂ ಸ್ವಲ್ಪ ದೂರದಲ್ಲಿ ಇರುವ  ಕಾನನವು ."ನೀನೇನು ಮಹಾ ?ನಾನೇ ಸುಂದರ. ಕಣ್ತುಂಬಿಸಿಕೊಳ್ಳಲು  ಸಾಲದು ನಿನ್ನ ನಯನ .' ಎಂದು ಕೂಗಿ ಹೇಳಿದಂತಿತ್ತು.  ಸಾಲು ಸಾಲಾದ ಗುರಿಶಿಖರಗಳು ನಾವೇನು ಕಮ್ಮಿ ನಮ್ಮನ್ನು ಸ್ವಲ್ಪ ನೋಡಿ ಎಂದು ಪಿಸುಗುಡುತ್ತಿದ್ದವು.  ಆ ಗಿರಿಶಿಖರಗಳಿಗೆ ಯಾರೋ ಹತ್ತಿಯನ್ನು ಪೋಣಿಸಿದ್ದರು. ಅದರ ಜೊತೆಗೆ ಹಾಗೊಮ್ಮೆ ಈಗೊಮ್ಮೆ ಮಂಜಿನ ತೆರೆಗಳು ಬಂದು ನಮಗೂ ಬೆಟ್ಟಗಳಿಗೂ ಮುತ್ತಿಟ್ಟು ನಿಧಾನವಾಗಿ ಮಾಯವಾಗುತ್ತಿದ್ದವು.ಕ್ಷಣಕಾಲ ಮುಂದಿನ ಎಲ್ಲಾ ದೃಶ್ಯಗಳು ಅದೃಶ್ಯ ನಮ್ಮ ಮುಂದೆ ಬರೀ ಬಿಳಿ ಪರದೆ . ಈಗ ಕಂಡ ಅದ್ಬುತ ದೃಶ್ಯಗಳು ಮಾಯವೇ? ಮಂತ್ರವೇ ?ಎಂಬ ಅನುಮಾನ ವ್ಯಕ್ತಪಡಿಸುತ್ತಾ ಇರುವಾಗ ನಾನೇ ಮಾಯಕಾರ ಎಂದು ರವಿಯು ಇಣುಕಿದ .ಬಿಳಿ ಪರದೆ ಮಾಯವಾಗಿ  ಮತ್ತೆ ಸೌಂದರ್ಯ ಲೋಕದ ಅನಾವರಣ....





ಇಂತಹ ಅದ್ಭುತವಾದ ದೃಶ್ಯಗಳನ್ನು ನೋಡಿದ ನಾವು ಇದು ಕನಸು ಎಂದು ತಿಳಿದೆವು.ಇಲ್ಲ.. ಇದು ಕನಸಲ್ಲ ನಿಜ ನಮ್ಮ ಮುಂದೆ ಕೆಲವರು ತಮ್ಮ ಕ್ಯಾಮೆರಾಗಳಲ್ಲಿ ಪೋಟೋ ತೆಗೆದುಕೊಳ್ಳುತ್ತಿದ್ದರು , ವೀಡಿಯೋ ಚಿತ್ರೀಕರಣದಲ್ಲಿ ತಲ್ಲೀನರಾಗಿದ್ದರು .ಆಗ ನಾವು ವಾಸ್ತವಕ್ಕೆ ಬಂದೆವು ನಿಜವಾಗಿಯೂ ಇದು ಸ್ವರ್ಗ ಸದೃಶ ಚಿತ್ರ! ದೇವರಿಂದ ಈ ತಾಣ ನಿರ್ಮಿಸಲು ಸಾದ್ಯ. ಅದಕ್ಕೆ ಆ ಸ್ಥಳಕ್ಕೆ " ದೇವರ ಮನೆ ಕಾಡು" ಎಂಬ ಅನ್ವರ್ಥನಾಮ ಸಾರ್ಥಕ ಎನಿಸಿತು. 

ಇಂತಹ ಸ್ವರ್ಗ ಸದೃಶವಾದ ತಾಣವನ್ನು ಮೊದಲೇ ಕಣ್ತುಂಬಿಕೊಂಡು ನಮಗೂ ತೋರಿಸಲು ನಮ್ಮ ಸಹೋದ್ಯೋಗಿಗಳು ಹಾಗೂ ಕಲಾವಿದರಾದ ಕೋಟೆ ಕುಮಾರ್ ರವರು ನಮ್ಮನ್ನು ಅವರ ಕಾರಿನಲ್ಲಿ ಕರೆದುಕೊಂಡು ಬಂದರು .ನಮ್ಮೊಂದಿಗೆ ಸಹೋದ್ಯೋಗಿಗಳು ಮತ್ತು ಆತ್ಮೀಯರಾದ  ಚಂದ್ರಶೇಖರಯ್ಯ, ರಂಗಸ್ವಾಮಯ್ಯ ಮತ್ತು ಎಂ ಎಚ್ ಹನುಮಂತರಾಯ ರವರು ಜೊತೆಯಾಗಿ ಈ ಸುಂದರ ತಾಣದ ಸೌಂದರ್ಯ ಸವಿದೆವು. 



ತುಮಕೂರಿನಿಂದ ಹೊರಟ ನಮ್ಮ ತಂಡವು ಕುಣಿಗಲ್ ನ ಪರಿಮಳ ಹೋಟೆಲ್ ನಲ್ಲಿ ಇಡ್ಲಿ ವಡೆ ಮತ್ತು ಟೀ ಯ ಪರಿಮಳ ಸವಿದೆವು.ಅದು ನನ್ನ ಮೊದಲ ಪರಿಮಳ ಸ್ವಾದ .ಉತ್ತಮ ರುಚಿ ಶುಚಿ ನೋಡಿದ ಮೇಲೆ ಮತ್ತೊಮ್ಮೆ ಆ ಹೋಟೆಲ್ ಗೆ ಹೋಗುವ ಮನಸು ಮಾಡಿ...ನಮ್ಮ ಕಾರ್ ಹತ್ತಿ ಪಯಣ ಮುಂದುವರೆಸಿ, ಹಾಸನದ ಮೂಲಕ ಬೇಲೂರು ದಾಟಿ , ಮೂಡಿಗೆರೆಯಲ್ಲೊಂದು ಸ್ಟ್ರಾಂಗ್ ಟೀ ಕುಡಿದು ,ನಮ್ಮ ಕಲಾವಿದರು ದೇವರ ಮನೆ ಕಡೆ ಸ್ಟೇರಿಂಗ್ ತಿರುಗಿಸಿದರು...




ದೇವರ ಮನೆಯ ಸೌಂದರ್ಯವನ್ನು ನಾವು ಸವಿದಾದ ಬಳಿಕ ನಮ್ಮ ಮಧುರ ನೆನಪಿಗೆ ಮತ್ತು ನಮ್ಮವರಿಗೆ ತೋರಿಸಲು ವೀಡಿಯೋ ಮತ್ತು ಚಿತ್ರಗಳ ಸೆರೆಹಿಡಿಯಲು ನಮ್ಮ ಮೊಬೈಲ್ ಮತ್ತು ಸೆಲ್ಪಿ ಸ್ಟಿಕ್ ಗಳನ್ನು ಹೊರತೆಗೆದೆವು . ಮನಬಂದಂತೆ ಪೋಟೋ ತೆಗೆದುಕೊಂಡೆವು .ನಾವು ಸ್ವಲ್ಪ ಹೆಚ್ಚಾಗಿಯೇ   ಪೋಟೋ ತೆಗೆದುಕೊಂಡೆವು ಇದನ್ನು ಗಮನಿಸಿದ ಆಂದ್ರ ಪ್ರದೇಶ ರಾಜ್ಯದ ಪ್ತವಾಸಿಗರೊಬ್ಬರು " "ವೀಳ್ಳಿಕೆ ಪೋಟೋ ಪಿಚ್ಚಿ ಎಕ್ಕುವಾ" ಎಂದದ್ದು ನನಗೆ ಕೇಳಿತು. ಹೌದು ಅಣ್ಣ ಪೋಟೋಗಳಿರಬೇಕಲ್ಲ ನೆನಪಿಗೆ ಎಂದಾಗ ನನಗೆ ತೆಲುಗು ಅರ್ಥ ವಾಗಿದ್ದು ಅವರಿಗೆ ತಿಳಿದು ನಗುತ್ತಾ... ಎಂಜಾಯ್ ಸರ್ ಎಂದು ಹೊರಟರು.. ನಾವು ಬೆಟ್ಟದಿಂದ ಕೆಳಗಿಳಿದು ಬಂದು ಶ್ರೀ ಕಾಲಬೈರವೇಶ್ವರ ದೇವರ ಆಶೀರ್ವಾದ ಪಡೆದೆವು...





 ಶ್ರೀ ಕಾಲಭೈರವೇಶ್ವರ  ದೇವಸ್ಥಾನವನ್ನು ಚೋಳರ ಕಾಲದಲ್ಲಿ ವೆಂಕಣ್ಣನೆಂಬ ಶಿಲ್ಪಿಯು ನಿರ್ಮಿಸಿದನೆಂಬ ಪ್ರತೀತಿ ಇದೆ.ನೋಡಲು ಸುಂದರವಾಗಿರುವ ಈ ದೇವಸ್ಥಾನವು ಗುಡ್ಡ ಗಾಡಿನ ತಪ್ಪಲಿನಲ್ಲಿ ನಿರ್ಮಿಸಲಾಗಿದೆ. ಇತ್ತೀಚೆಗೆ ರಾಜ್ಯದ ವಿವಿದೆಡೆಗಳಿಂದ  ಪ್ರವಾಸಿಗರು  ಈ ಸ್ಥಳ ನೋಡಲು ಬರುತ್ತಿದ್ದಾರೆ.

ನೀವು  ಈ ಸುಂದರ ತಾಣ ನೋಡಲು ಒಮ್ಮೆ ಬನ್ನಿ

ಮೂಡಿಗೆರೆಯಿಂದ ೨೦ ಕಿ.ಮಿ ಒಳಗೆ ಅಂದರೆ ಸಬ್ಬೇನಹಳ್ಳಿ ಗುತ್ತಿ ಹೀಗೆ ಪ್ರಯಾಣಿಸಿದರೆ ಸಿಗುವುದೇ ದೇವರಮನೆ. ಧರ್ಮಸ್ಥಳ ಕಡೆಯಿಂದ ಬರುವುದಾದರೆ ಕೊಟ್ಟಿಗೆಹಾರ ದ ಬಳಿ ಬಲಕ್ಕೆ ಚಲಿಸಿದರೆ ದೇವರಮನೆಗೆ ತಲುಪಬಹುದು. 



ರಸ್ತೆ ಅಷ್ಟೇನೂ ಸರಿಯಿಲ್ಲದಿದ್ದರೂ ಅಡ್ಡಿಯಿಲ್ಲ. ಪ್ರವಾಸೋದ್ಯಮ ಇಲಾಖೆಯವರು ಇನ್ನೂ ಹೆಚ್ಚಿನ ಸೌಕರ್ಯಗಳನ್ನು ನೀಡಿದರೆ ಇದೊಂದು  ಹೆಸರಾಂತ ಪ್ರವಾಸಿ ತಾಣವಾಗುವುದರಲ್ಲಿ ಸಂಶಯವಿಲ್ಲ ..


ಸಿಹಿಜೀವಿ

ಸಿ ಜಿ ವೆಂಕಟೇಶ್ವರ




16 October 2022

ಮಕ್ಕಳ ಆಹಾರ ಪದ್ದತಿ.

 

ವಿದ್ಯಾರ್ಥಿಗಳಿಗಾಗಿ ಉತ್ತಮ ಆಹಾರಾಭ್ಯಾಸಕ್ಕೆ ಕೆಲ ಸಲಹೆಗಳು. 



ಅಮೇರಿಕಾದ ಒಂದು ವಿಶ್ವ ವಿದ್ಯಾಲಯದ ಸಂಶೋಧನೆಯ ಪ್ರಕಾರ ಜಗತ್ತಿನಲ್ಲಿ ಬಹಳ ಜನ ಸ್ಥೂಲಕಾಯತೆ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ ಅದರಲ್ಲೂ ಮಕ್ಕಳಲ್ಲಿ ಇದು ಹೆಚ್ಚಾಗಿ ಕಂಡುಬರುತ್ತದೆ.  

ವಿಪರೀತವಾಗಿ ಹೆಚ್ಚಾದ ದೇಹದ ಕೊಬ್ಬಿನಂಶವು ಮಕ್ಕಳ ಆರೋಗ್ಯ ಅಥವಾ ಆರೋಗ್ಯಕರ ಸ್ಥಿತಿಯ ಮೇಲೆ ಪ್ರತಿಕೂಲ ಪರಿಣಾಮ ಬೀರುವ ಸ್ಥಿತಿಯನ್ನು ಬಾಲ್ಯದ ಸ್ಥೂಲಕಾಯತೆ ಎಂದು ಕರೆಯುತ್ತಾರೆ. ಮಕ್ಕಳಲ್ಲಿರುವ ಈ ಸಮಸ್ಯೆಗೆ ಸ್ಥೂಲ ಕಾಯತೆ ಅನ್ನುವುದಕ್ಕಿಂತ ಹೆಚ್ಚಾಗಿ ’ಹೆಚ್ಚಿನ ತೂಕ’ ಎನ್ನುವುದನ್ನು ಬಳಸುತ್ತಿದ್ದಾರೆ. ಮಕ್ಕಳ ವ್ಯಕ್ತಿತ್ವದ ಮೇಲೆ ಸ್ಥೂಲ ಕಾಯತೆ ಅನ್ನುವ ಶಬ್ಧ ಪ್ರಭಾವ ಬೀರುವುದನ್ನು ತಪ್ಪಿಸಲು ಇದನ್ನು ಬಳಸಲಾಗುತ್ತದೆ. 


ಮಕ್ಕಳ ಈ ಸಮಸ್ಯೆಯನ್ನು ಗಮನದಲ್ಲಿಟ್ಟುಕೊಂಡು ವಿಶ್ವ ಆಹಾರ ದಿನದ ಪ್ರಯುಕ್ತ (ಅಕ್ಟೋಬರ್ ೧೬) ಮಕ್ಕಳಿಗೆ ಈ ಕೆಳಕಂಡ ಸಲಹೆಗಳನ್ನು ನೀಡಲು ಬಯಸುವೆ.

ಆತ್ಮೀಯ ಮಕ್ಕಳೆ...

ನಿಮ್ಮ ದೇಹ ಎಂಬ ವಾಹನದ ಚಲನವಲನಗಳು ಆಹಾರ ಎಂಬ ಇಂಧನವನ್ನು ಆಧರಿಸಿದೆ. ಆಹಾರದ ರುಚಿಗಿಂತ ಅದು ಆರೋಗ್ಯಕ್ಕೆ ಪೂರಕವೇ ಅಲ್ಲವೇ ಎಂಬುದು ಮುಖ್ಯ. ನಾಲಿಗೆಯ ಚಾಪಲ್ಯದ  ನಿಯಂತ್ರಣದೆಡೆಗೆ ಎಳೆವಯಸ್ಸಿನಿಂದಲೇ ಗಮನ ಹರಿಸಿದರೆ ಮಾತ್ರ ಭವಿಷ್ಯತ್ತಿನಲ್ಲಿ ಆರೋಗ್ಯವನ್ನು ಕಾಪಾಡಿಕೊಳ್ಳಲಾದೀತು.


  ಒಂದು ವೇಳೆ ನಿಮ್ಮ ಮನೆಯಲ್ಲಿ ಎಣ್ಣೆಯನ್ನು ಹೆಚ್ಚೆಚ್ಚಾಗಿ ಬಳಸುವ ಪದ್ಧತಿ ಇದ್ದರೆ ಕಡಿಮೆ ಸೇವಿಸುವುದು ಒಳಿತು ಮಧ್ಯಾಹ್ನ ಅನ್ನ ಕಡಿಮೆ ಇರಲಿ, ರಾಗಿಮುದ್ದೆ, ಚಪಾತಿ ಮತ್ತು ತರಕಾರಿಗಳು ಹೆಚ್ಚಾಗಿರಲಿ.  ಮೊಸರಿನ  ಬದಲು ಮಜ್ಜಿಗೆಯೇ ಒಳ್ಳೆಯದು, ಹಪ್ಪಳ, ಸಂಡಿಗೆಗಳ ಬದಲಿಗೆ ಈರುಳ್ಳಿಯನ್ನು ದುಂಡಾಗಿ ಬಿಲ್ಲೆಗಳಂತೆ ಕತ್ತರಿಸಿಕೊಂಡು ಸೇವಿಸಿರಿ.  ಕಣ್ಣುಗಳ ಆರೋಗ್ಯ, ಕಾಂತಿವರ್ಧನೆಗೆ ಕ್ಯಾರೆಟ್ ಮತ್ತು ಹಸಿರು ತರಕಾರಿಗಳನ್ನು ಹೆಚ್ಚೆಚ್ಚು ತಿನ್ನಿರಿ.ರಾತ್ರಿ ಊಟ ಸರಳವಾಗಿ ಮಿತವಾಗಿರಲಿ.

ಬಾಲ್ಯದಲ್ಲಿ ನಿಮಗೆ ತುಂಬಾ ಇಷ್ಟವಾಗಿದ್ದ ಚಾಕೊಲೇಟ್, ಐಸ್ಕ್ರೀಂಗಳ ಆಕರ್ಷಣೆ ಹದಿಹರೆಯದಲ್ಲೂ ನಿಮ್ಮನ್ನು ಬಿಡುತ್ತಿಲ್ಲ ಅಲ್ಲವೇ? ದೇಹದ ತೂಕ ಹೆಚ್ಚಿಸುವುದು ಪರ್ಸಿನ ತೂಕ ಕಡಿಮೆ ಮಾಡುವುದು ಇವೆರಡೇ ಈ ತಿಂಡಿಗಳಿಂದ ಆಗುವ ಸಾಧನೆಗಳು. ಬೇಕರಿ ತಿಂಡಿಗಳಾದರೂ ಅಷ್ಟೇ.

 ನೀರು ಕಾಯಿಸಿ ಕುಡಿಯುವುದು ಉತ್ತಮ. ಸ್ವಲ್ಪ ದೂರ ಹೋಗಿ ಒಳ್ಳೆಯ ನೀರು ತರಬೇಕಾದಲ್ಲಿ ಆ ಶ್ರಮಕ್ಕೆ ಹಿಂಜರಿಯಬೇಡಿ. 

ಜಂಕ್ ಪುಡ್ ತಿನ್ನುವುದನ್ನು 

ಮಕ್ಕಳಿಂದ ಹಿಡಿದು ಮುದಕರ

ವರೆಗೂ ಇಷ್ಟ ಪಡುವುದು ಅತಿ 

ರುಚಿ ಅನಿಸುವುದರಿಂದ ಮತ್ತು 

ವಿವಿಧ ಅಂಗಡಿಗಳಲ್ಲಿ ಸುಲಭ

ವಾಗಿ ದೂರೆಯುವುದರಿಂದ

ಮತ್ತು ಪ್ರಿಯಕರವಾಗಿರುವುದ-

ರಿಂದ ಇವುಗಳನ್ನು ಉಪಯೋಗಿಸುತ್ತಾರೆ.

ಇವುಗಳು  ಆರೋಗ್ಯದ

ಮೇಲೆ ತೀವ್ರ ದುಷ್ಪರಿಣಾಮ 

ಬೀರುವದಲ್ಲದೆ ಕಾಲಾಂತರದಲ್ಲಿ 

ಚಟವಾಗುತ್ತದೆ.ಇದನ್ನೇ ಮುಂದುವರಿಸಿದರೆ ಸರಿಪಡಿಸ-

ಲಾಗದ ಸನ್ನಿವೇಶಕ್ಕೆ ಬರುವುದು 

ಖಂಡಿತ. 

ಹೆಚ್ಚಿನ ಎಣ್ಣೆಯನ್ನು ರುಚಿಗಾಗಿ 

ಉಪಯೋಗಿಸುವುದರಿಂದ

ಇದು ಜಂಕ್ ಪುಡ್ ಆಗಿ,ಅತಿ 

ಹೆಚ್ಚು ಉಪ್ಪು, ಸಕ್ಕರೆ ಮತ್ತು 

ಕೊಬ್ಬು ಹೆಚ್ಚಾಗಿ ಬೊಜ್ಜಿಗೆ 

ಅವಕಾಶ ನೀಡುತ್ತದೆ.  ಮುಂದೆ 

ಇವು ಕಾಲು ನೋವು, ಕೀಲು

ನೋವು ಮತ್ತು ಇತರ  ಅಂಗಾಂಗಳು ನೋವಾಗಲು 

ಆರಂಭಗೊಳ್ಳುತ್ತದೆ.ಕ್ರಮೇಣ 

ಸಕ್ಕರೆ ಖಾಯಿಲೆ, ರಕ್ತದೊತ್ತಡ, 

ಆಲಸ್ಯ ಮುಂತಾದ ರೋಗಗಳಿಗೆ  ನಾವಾಗಿಯೇ 

ಆಹ್ವಾನಿಸಿದಂತಾಗುತ್ತದೆ.ಖಿನ್ನ

ತೆಗೆ ಒಳಗಾಗುವ ಪರಿಸ್ಥಿತಿಗೆ 

ತಲಪುತ್ತೇವೆ.

 ಜಂಕ್ ಪುಡ್ ಸೇವನೆ ಚಟವಾದರೆ ಇದರಿಂದ ಮುಕ್ತಿ ಪಡೆಯವುದು ಮುಂದಿನ ದಿನಗಳಲ್ಲಿ 

ಬಹು ಕಷ್ಟ. ಆದ್ದರಿಂದ ಬಾಲ್ಯದಲ್ಲಿ

ಆದಷ್ಟೂ ಜಂಕ್ ಪುಡ್ ಗಳಿಂದ ದೂರವಿರಿ .ಅತಿಯಾದ ಚಾಕೊಲೆಟ್ ಮತ್ತು ಅತಿಯಾದ ಸಿಹಿ ಸೇವನೆಯು ನಿಮ್ಮ ಹಲ್ಲುಗಳ ಅನಾರೋಗ್ಯಕ್ಕೆ ಕಾರಣವಾಗುತ್ತದೆ ಯಾವುದೇ ಆಗಲಿ ಮಿತಿಯಲ್ಲಿ ಇರಲಿ. 


 ಆಲೂ , ಬೀಟ್ರೂಟ್ನಂಥ ತರಕಾರಿಗಳು, ಮಾವು, ಬಾಳೆ, ಸಪೋಟಾ, ದ್ರಾಕ್ಷಿ, ಖರ್ಜೂರ, ಒಣದ್ರಾಕ್ಷಿ, ಗೋಡಂಬಿಗಳಿಂದ ವಿಮುಖರಾಗಬೇಡಿ. ಸೊಪ್ಪುಗಳು ಬದನೆ, ಹಾಗಲಗಳೂ ಸ್ವಾದಿಷ್ಟವೇ. ಮಾಂಸಾಹಾರಿಯಾಗಿದ್ದಲ್ಲಿ ಮೀನು ತಿನ್ನಿ, ಮೊಟ್ಟೆಗಳನ್ನು ಸೇವಿಸಿ. ಒಟ್ಟಾರೆ ನೀವು ತಿನ್ನುವ ಆಹಾರ ಪೌಷ್ಟಿಕಾಹಾರ ಆಗಿರಲಿ ಮತ್ತು ಸಮತೋಲನದ ಆಹಾರವಾಗಿರಲಿ.  ಅಸಮತೋಲನ ಮತ್ತು ಅವೈಜ್ಞಾನಿಕ ಪದ್ದತಿಯಂತೆ  ಆಹಾರ ಸೇವಿಸಿದರೆ ಔಷಧವೇ ಆಹಾರವಾಗುತ್ತದೆ.ಅದರ ಬದಲಿಗೆ   ಆಹಾರವೇ ಔಷಧವಾಗಲಿ . ಆರೋಗ್ಯಕರ ಕಾಯ ನಮ್ಮದಾಗಲಿ ಸ್ವಸ್ಥ ಸಮಾಜ ಸುಂದರ ಸಮಾಜ ಎಂಬುದು ನಮ್ಮ ಧ್ಯೇಯವಾಗಲಿ.


ಸಿಹಿಜೀವಿ

ಸಿ ಜಿ ವೆಂಕಟೇಶ್ವರ.


15 October 2022

ಜನ ,ಮನ

 


ಜನ, ಮನ 


ಒಪ್ಪದಿದ್ದರೂ ಪರವಾಗಿಲ್ಲ

ಜಗದ ಜನ |

ಒಪ್ಪಬೇಕು ಬದುಕುವುದ

ನಮ್ಮ ಮನ ||


ಸಿಹಿಜೀವಿ

ಸಿ ಜಿ ವೆಂಕಟೇಶ್ವರ

12 October 2022

ಎರಡು ಹಾಯ್ಕುಗಳು...

 


ಸಿಹಿಜೀವಿಯ ಹಾಯ್ಕುಗಳು.



ಶತ್ರುತ್ವವೇಕೆ?

ಮಿತ್ರತ್ವ ಮರಿಬೇಡ

ನಾವೆಲ್ಲಾ ಒಂದೆ .




 ಭಯವೇತಕೆ ? 

ಶತ್ರುಗಳಲ್ಲೂ  ಉಂಟು

 ಒಂದು  ಹೃದಯ 



ಸಿಹಿಜೀವಿ

ಸಿ ಜಿ ವೆಂಕಟೇಶ್ವರ


ಎರಡು ಹನಿಗಳು .

 




ನರಸಮ್ಮ ಗುಂಡನಿಗೆ

ಹೇಳಿದರು ಇಂಜೆಕ್ಷನ್

ನೀಡಿದ ಮೇಲೆ ಸ್ವಲ್ಪ ಹೊತ್ತು

ಉಜ್ಜಬೇಕು ಸೊಂಟ |

ಇದಕ್ಕೆ ಬೇರೆಯವರ ಇಟ್ಟುಕೊಳ್ಳಿ 

ನಾನು ಅಂತವನಲ್ಲ ಎಂದು

ಸಿಟ್ಟಾಗಿ ಜೋರಾಗಿ ಹೊಂಟ ||



ನಾವು ಯಾವಾಗಲೂ

ಏನಾದರೊಂದು ಪ್ರಯತ್ನ

ಮಾಡುತ್ತಲೇ ಇರೋಣ 

ಅದರಲ್ಲಿ ಯಶಸ್ವಿಯಾದರೆ

ಖುಷಿ ಪಡುತ್ತಾರೆ ನಮ್ಮನೆಯವರು |

ವಿಫಲವಾದಾಗಲೂ ಬೇಸರ ಬೇಡ

ಖುಷಿ ಪಡುತ್ತಾರೆ ಪಕ್ಕದ ಮನೆಯವರು ||



ಸಿಹಿಜೀವಿ


ವೇಷ

 ವೇಷ . 



ರಾಜ್ಯದ ಎಲ್ಲೆಡೆಯೂ

ಈಗ ಮಾತೆತ್ತಿದರೆ 

ಪಾದಯಾತ್ರೆ, ಸಮಾವೇಶ |

ಜನರು ಕುತೂಹಲದಿಂದ

ನೋಡುತ್ತಿದ್ದಾರೆ ಬಹುಕೃತ  ವೇಷ ||


ಸಿಹಿಜೀವಿ

11 October 2022

ನಿಮಗೂ ಹುಚ್ಚು ಹಿಡಿಯುತ್ತದೆ...


 *ನಿಮಗೂ ಖಂಡಿತವಾಗಿಯೂ ಹುಚ್ಚು ಹಿಡಿಯುತ್ತದೆ*.



ನಾನು ಟಿ ಸಿ ಹೆಚ್ ಓದುವಾಗ  ಯರಬಳ್ಳಿ ಗೊಲ್ಲರ ಹಟ್ಟಿಯ ನನ್ನ ಗೆಳೆಯ ರಾಜು    ಶಿವರಾಮ ಕಾರಂತರ ಪುಸ್ತಕ "ಹುಚ್ಚು ಮನಸ್ಸಿನ ಹತ್ತು ಮುಖಗಳು" ಪುಸ್ತಕ ನೀಡಿ ಓದಲು ಹೇಳಿದ .ದೊಡ್ಡ ಗಾತ್ರದ ಶಿವರಾಮ್ ಕಾರಂತರ ಆತ್ಮ ಚರಿತ್ರೆಯನ್ನು ಅಷ್ಟೇನೂ ಆಸಕ್ತಿಯಿಂದ ಓದಲಿಲ್ಲ . ಆ ಪುಸ್ತಕದ ಶೀರ್ಷಿಕೆಯ ಕುರಿತು ಒಂದು ರೀತಿಯ ಕುತೂಹಲ ಇದ್ದದ್ದು ಸುಳ್ಳಲ್ಲ. ಒಂದೆರಡು ಅಧ್ಯಾಯ ಮುಗಿಸಿದ ಮೇಲೆ ಬಹಳ ಕುತೂಹಲ ಮತ್ತು ಆಸಕ್ತಿ ಬೆಳೆದು ಪುಸ್ತಕ ಮುಗಿಯುವವರೆಗೂ ನಿಲ್ಲಿಸಲಿಲ್ಲ .ಈ ಪುಸ್ತಕ ಒಂದು ರೀತಿಯಲ್ಲಿ ನನ್ನ ಕಣ್ತೆರಿಸಿದ ಪುಸ್ತಕ ಎಂದರೆ ತಪ್ಪಾಗಲಿಕ್ಕಿಲ್ಲ . ದೇವರು ಎಲ್ಲರಿಗೂ ಒಂದೇ ಗಾತ್ರದ ಮೆದುಳು ಮತ್ತು ಬುದ್ದಿ ಕೊಟ್ಟರೂ ಅದರ ಬಳಕೆಯನ್ನು ಕೆಲವರು ಸಂಪೂರ್ಣವಾಗಿ, ಕೆಲವರು ಭಾಗಶಃ ,ಕೆಲವರಂತೂ ಮೆದುಳು ಮತ್ತು ಬುದ್ದಿ ಬಳಸಿಕೊಳ್ಳದೇ ಮಡೆಯರಾಗಿ, ಮೂರ್ಖರಾಗಿ  ,ಕೀಳರಿಮೆಯಲ್ಲೆ ಜೀವನ ಸಾಗಿಸಿಬಿಟ್ಟಿರುತ್ತಾರೆ.


ಈ ಪುಸ್ತಕದಲ್ಲಿ ಅವರ ಜೀವನಾನುಭವ ಓದುತ್ತಾ ಸಾಗಿದಂತೆ ಅವರ ಬಹುಮುಖ ಪ್ರತಿಭೆ ಅನಾವರಣವಾಗುತ್ತಾ ಹೋಗುತ್ತದೆ.

ಬಹುತೇಕ ಕನ್ನಡಿಗರಿಗೆ  ತಿಳಿದಿರುವಂತೆ ಅವರು ಜ್ಞಾನ ಪೀಠ ಪ್ರಶಸ್ತಿ ಪುರಸ್ಕೃತ ಕವಿ ಆ ಪುಸ್ತಕ ಓದುವ ಮೊದಲಿಗೆ ನನಗೆ ಅವರ ಬಗ್ಗೆ ಅಷ್ಟೇ ಗೊತ್ತಿತ್ತು. ಪುಸ್ತಕದ ಪುಟಗಳ ತಿರುಗಿಸಿದಂತೆ ಅವರ ಹತ್ತಾರು ಮುಖಗಳು ಒಂದೊಂದೇ ಅನಾವರಣಗೊಂಡವು. 

ಮಕ್ಕಳ ಸಂಪೂರ್ಣ ವಿಕಸನ ಕ್ಕಾಗಿ ಬಾಲವನ ಆರಂಭಿಸಿ ಮಕ್ಕಳ ಸರ್ವತೋಮುಖವಾದ ಬೆಳವಣಿಗೆಗೆ ಕಾರಣಕರ್ತರಾದರು ತನ್ಮೂಲಕ ತಮ್ಮೊಳಗೊಬ್ಬ ಶಿಕ್ಷಣ ತಜ್ಞ ಇದ್ದಾನೆಂದು ಪ್ರೂವ್ ಮಾಡಿದರು. 

ಚಲನಚಿತ್ರ ಕ್ಷೇತ್ರವು ತಂತ್ರಜ್ಞಾನ ಬೇಡುವ ಕ್ಷೇತ್ರ ಅವರೇ ಕಥೆ ,ಚಿತ್ರಕಥೆ ,ನಿರ್ಮಾಣ, ಮತ್ತು ನಿರ್ದೇಶನದ ಜವಾಬ್ದಾರಿ ಹೊತ್ತು ನಾನೊಬ್ಬ ತಂತ್ರಜ್ಞ ಎಂದು ಸಾಬೀತು ಮಾಡಿ ತೋರಿದರು. 

ಅಂದು ರಾಜಕೀಯ ಎಂದರೆ ಇಂದಿನಂತೆ ಕಲುಷಿತವಾಗಿರಲಿಲ್ಲ   ಹಣ ಮಾಡುವ  ಉದ್ಯಮವಾಗಿರಲಿಲ್ಲ ನಾನೂ ಒಂದು ಕೈ ನೋಡೇ ಬಿಡುವ ಎಂದು ಚುನಾವಣೆಗೂ ಸ್ಪರ್ಧೆ ಮಾಡಿದರು ಚುನಾವಣೆಯಲ್ಲಿ ಸೋತರು ಅದು ಬೇರೆ ಮಾತು .ಈ ಮೂಲಕ ನಾನೊಬ್ಬ ರಾಜಕೀಯ ಮತ್ಸದ್ದಿ ಎಂದು ತೋರಿಸಿದರು.

ಪರಿಸರದ ನಾಶದಿಂದ ಇಂದು ನಾವು ಬಹಳ ತೊಂದರೆ ಅನುಭವಿಸುತ್ತಿದ್ದೇವೆ ಅದನ್ನು ಕಳೆದ ಶತಮಾನದಲ್ಲೆ ನಮ್ಮನ್ನು ಎಚ್ಚರಿಸಿದ ಪರಿಸರ ತಜ್ಞ ನಮ್ಮ ಕಾರಂತರು. ಕಾರವಾರ ನೌಕಾನೆಲೆ ಮುಂತಾದ ಪರಿಸರಕ್ಕೆ ಹಾನಿಯಾಗುವ ಸರ್ಕಾರದ ಯೋಜನೆಗಳ ವಿರುದ್ಧವಾಗಿ ಜನಾಂದೋಲನ ರೂಪಿಸಿ ಸರ್ಕಾರಕ್ಕೆ ಸಿಂಹ ಸ್ವಪ್ನರಾದರು.

ನಮ್ಮ ಕಲೆ, ಸಂಸ್ಕೃತಿ, ನಮ್ಮ ಅಸ್ಮಿತೆ ಎಂದು ಕಾರಂತರು ತಮ್ಮ ಕೃತಿಗಳಲ್ಲಿ ತೋರಿಸಿಕೊಟ್ಟರು ಅದರ ಜೊತೆಯಲ್ಲಿ ಕೇವಲ ಕರ್ನಾಟಕದ ದಕ್ಷಿಣ ಕನ್ನಡಕ್ಕೆ ಸೀಮಿತವಾಗಿದ್ದ ಯಕ್ಷಗಾನ ಕಲೆಯನ್ನು ತಮ್ಮ ಇಳಿವಯಸ್ಸಿನಲ್ಲೂ ಕಲಿತು ,ಕಲಿಸಿ ಜಗತ್ತಿನ ವಿವಿಧ ದೇಶಗಳಲ್ಲಿ ಪ್ರದರ್ಶನ ನೀಡಿ ನಮ್ಮ ರಾಜ್ಯದ ಮತ್ತು ದೇಶದ ಸಾಂಸ್ಕೃತಿಕ ಪರಂಪರೆಯನ್ನು ಎತ್ತಿ ಹಿಡಿದ ಸಾಂಸ್ಕೃತಿಕ ರಾಯಬಾರಿ ನಮ್ಮ ಕಾರಂತರು .

ಹೀಗೆ ಪುಸ್ತಕ ಪೂರ್ತಿಯಾಗಿ ಓದಿ ಮುಗಿಸಿದಾಗ ಅವರಲ್ಲಿ ಕೆಲ ಹುಚ್ಚುಗಳು ನನಗೂ ಹತ್ತಿದ್ದು ಸುಳ್ಳಲ್ಲ ಆ ಹುಚ್ಚು ಇಂದು  ನನ್ನನ್ನು ಶಿಕ್ಷಕ ವೃತ್ತಿಯ ಜೊತೆಯಲ್ಲಿ  ಲೇಖಕನಾಗಿ, ಕವಿಯಾಗಿ, ಕಾದಂಬರಿಕಾರನಾಗಿ, ಗಾಯಕನಾಗಿ , ಭಾಷಣಕಾರನಾಗಿ, ಸಂಘಟಕನಾಗಿ ರಂಗಭೂಮಿ ನಟನಾಗಿ  , ಛಾಯಾಚಿತ್ರಗ್ರಾಹಕನಾಗಿ, ಕಾರ್ಯ ನಿರ್ವಹಿಸಲು ಪ್ರೇರಣೆಯಾಗಿದೆ .ಮುಂದಿನ ದಿನಗಳಲ್ಲಿ ಈ ಹುಚ್ಚುಗಳ ಪಟ್ಟಿ ದೊಡ್ಡದಾದರೂ ಅಚ್ಚರಿ ಪಡಬೇಕಿಲ್ಲ .

ನಡೆದಾಡುವ ವಿಶ್ವ ಕೋಶ, ಕಡಲತೀರದ ಭಾರ್ಗವ ಎಂಬ ಹೆಸರಿಗೆ ಅನ್ವರ್ಥವಾಗಿ ಬದುಕಿದ ಕಾರಂತರು ನನ್ನಂತಹ ಕೋಟ್ಯಾಂತರ ಜನರ ಪ್ರೇರಕ ಶಕ್ತಿ .ಕಾರಂತರ ಎಲ್ಲಾ ಪ್ರಕಾರದ ಸಾಹಿತ್ಯವನ್ನು ನಾವು ಓದಲೇಬೇಕು ಅದರಲ್ಲೂ ಅವರ ಹುಚ್ಚು ಮನಸ್ಸಿನ ಹತ್ತು ಮುಖಗಳನ್ನು ನೀವೂ ಓದಿ. ಖಂಡಿತವಾಗಿಯೂ ನಿಮಗೂ ಒಂದೆರಡಾದರೂ ನಿಮ್ಮ  ಹುಚ್ಚು ಮಖಗಳು  ಗೋಚರವಾಗುವುದರಲ್ಲಿ ಸಂಶಯವಿಲ್ಲ. 


*ಸಿಹಿಜೀವಿ*

ಸಿ ಜಿ ವೆಂಕಟೇಶ್ವರ.

09 October 2022

ನೆಮ್ಮದಿ ಎಲ್ಲಿದೆ ? ನ್ಯಾನೋ ಕಥೆ


 ನೆಮ್ಮದಿ ಎಲ್ಲಿದೆ 


ಸ್ಮಾರ್ಟ್ ಹೋಂ ನಲ್ಲಿ ಏನಿರಬೇಕೆಂದು  ನಿರ್ಧರಿಸಿದ ಮಾವನವರೇ  ನಿಂತು  ಅಳಿಯ, ಮಗಳ  ನೆಮ್ಮದಿಗೆ   ಐಷಾರಾಮಿ ಬಂಗಲೆ  ಕಟ್ಟಿಸಿದರು. ಇಂಪೋರ್ಟೆಡ್ ಹಾಸಿಗೆ ದಿಂಬು ಅವೂ ಲಕ್ಷಗಳ ಲೆಕ್ಕ !  ರಾತ್ರಿಯ ಪೈವ್ ಸ್ಟಾರ್ ಗೆ ಸಮನಾದ ಡೈನಿಂಗ್ ಟೇಬಲ್ ಮೇಲೆ ಭಕ್ಷ್ಯ ಭೋಜನದ ನಂತರ ಬೆಡ್ರೂಂಗೆ ತೆರಳಿದ ಸಂತೋಷನನ್ನು   ಸುವಾಸನೆ ಮತ್ತು ಮಧುರವಾದ ಸಂಗೀತ ಸ್ವಾಗತಿಸಿತು. ಇಂಪೋರ್ಟೆಡ್ ಬೆಡ್ ಮೇಲೆ ಮಲಗಿದವನಿಗೆ ರಾತ್ರಿ ಹನ್ನೆರಡಾದರೂ ನಿದ್ದೆ ಬರಲಿಲ್ಲ.ಬಲವಂತವಾಗಿ ಕಣ್ಣ ಮುಚ್ಚಿದವನಿಗೆ ಬಾಲ್ಯದಲ್ಲಿ  ಪುಟ್ಟ ಕೋಣೆಯಲ್ಲಿ ಸಗಣಿ ನೆಲದ ಘಮದೊಂದಿಗೆ ಗಾಢವಾದ ನಿದ್ದೆ ಮಾಡಿದ ನೆನಪಾಯಿತು .


ಸಿಹಿಜೀವಿ

ಸಿ ಜಿ ವೆಂಕಟೇಶ್ವರ.

05 October 2022

ಸಿಹಿಜೀವಿಯ ಹಾಯ್ಕುಗಳು

 *ಸಿಹಿಜೀವಿಯ ಹಾಯ್ಕುಗಳು*



*೧*


ಜಯಾಪಜಯ 

ಎಲ್ಲರಿಗೂ ಇದ್ದದ್ದೆ 

ಪ್ರಯತ್ನವಿರಲಿ .



*೨*

ಕಾಯಕ ಮಾಡು 

ಖಚಿತವು ನಿನಗೆ 

ವಿಜಯಮಾಲೆ .


*ಸಿಹಿಜೀವಿ*

ಸಿ ಜಿ ವೆಂಕಟೇಶ್ವರ

04 October 2022

ಬೇವಿನಳ್ಳಮ್ಮ

 https://youtu.be/a8_JqAO7Yts

*ಬೇವಿನಳ್ಳಮ್ಮನ ಗುಡ್ಡದ ಸೌಂದರ್ಯ* ಒಂದು ದಿನದ ಪಿಕ್ನಿಕ್ ಗೆ ಹಿರಿಯೂರು ತಾಲ್ಲೂಕಿನ ಮಾರಿಕಣಿವೆಯಿಂದ  ಹತ್ತಿರ ಇರುವ ಬೇವಿನಹಳ್ಳಿ ಗೆ ಒಮ್ಮೆ  ನೀವೂ  ಬೇಟಿ ಕೊಡಿ

ನಮ್ಮನೆಯ ಮಾರ್ನಾಮಿ...


 ನಮ್ಮನೆಯ ಮಾರ್ನಾಮಿ...


ನಾವು ವಿಜಯ ದಶಮಿಯಂದು ಮಾರ್ನಾಮಿ ಹಬ್ಬ ಮಾಡುವುದನ್ನು ರೂಢಿಸಿಕೊಂಡು ಬಂದಿದ್ದೇವೆ.

ಮೊದ ಮೊದಲು ನಮ್ಮ ಪೂರ್ವಜರ ಉಪ್ಪರಿಗೇನಹಳ್ಳಿಯ  ಮನೆಯಲ್ಲಿ ಮಾರ್ನಾಮಿ ಹಬ್ಬ ಮಾಡುತ್ತಿದ್ದ ನಾವು ಕ್ರಮೇಣ ಕೊಟಗೇಣಿಯ ನಮ್ಮ ಮನೆಯಲ್ಲಿ ಹಬ್ಬದ ಆಚರಣೆಯನ್ನು ಮುಂದುವರೆಸಿರುವೆವು. ಅಂದು ಎಲ್ಲರೂ ಬೆಳಿಗ್ಗೆ ಬೇಗನೆ ಎದ್ದು ನೆಲಕಾರ್ನೆ(ಮನೆಯ ಸ್ವಚ್ಚತೆ) ಮಾಡಿ , ಸ್ನಾನ ಮಾಡಿದ ನಂತರ ಹೆಣ್ಣು ಮಕ್ಕಳು ಅಡಿಗೆ ತಯಾರಿಯಲ್ಲಿ ನಿರತರಾದರೆ ಗಂಡಸರು ಪೂಜಾ ಸಾಮಗ್ರಿಗಳನ್ನು ತರುವುದು ಬಾಳೆ ಕಂದುಕಟ್ಟುವುದು, ಹೂ ಜೋಡಿಸುವುದು,ಪತ್ರೆ ತರುವುದು  ಇಂತಹ ಕಾರ್ಯಗಳಲ್ಲಿ ಮಗ್ನರಾಗುತ್ತೇವೆ.  ಇತ್ತೀಚಿನ ದಿನಗಳಲ್ಲಿ ಶ್ರೀ ಚಿದಾನಂದಾವಧೂತ ವಿರಚಿತ  ಶ್ರೀದೇವಿ ಮಹಾತ್ಮೆಯ ಪುಸ್ತಕ ಪಾರಾಯಣ ಮಾಡುವ ಸಂಪ್ರದಾಯವನ್ನು ಪಾಲಿಸಿಕೊಂಡು ಬರುತ್ತಿದ್ದೇವೆ. ಹದಿನೆಂಟು ಅಧ್ಯಾಯ ಪಾರಾಯಣ ಮಾಡಿ ಕೊನೆಯಲ್ಲಿ ಮಂಗಳಾರತಿ ಮಾಡಿ ನೆಂಟರಿಷ್ಟರಿಗೆ ಪ್ರಸಾದ ನೀಡಿ ನಾವು ತಿನ್ನುತ್ತೇವೆ .ನಮ್ಮ ಮನೆಯಲ್ಲಿ ದಶಮಿಯಂದು ಆಯುಧ ಪೂಜೆಯನ್ನು ಮಾಡುತ್ತೇವೆ ನಮ್ಮ ಟ್ರಾಕ್ಟರ್, ಕಾರ್, ಬೈಕ್ ಗಳನ್ನು ಸಾಲಾಗಿ ನಿಲ್ಲಿಸಿ ಪುಷ್ಪಾಲಂಕಾರ ಮಾಡಿ ಪೂಜೆ ಮಾಡುತ್ತೇವೆ. ಸಂಜೆ ಹಿರಿಯರ ಪೂಜೆಯ ಸಂಭ್ರಮ ಕಳಸಕ್ಕೆ ಅಜ್ಜ ಅಜ್ಜಿಯರ ಬಟ್ಟೆಗಳನ್ನು ಉಡಿಸಿ ಹೂವಿನ ಹಾರ ಆಭರಣಗಳನ್ನು ಹಾಕಿ ಸಿಂಗರಿಸಿ ಹಣ್ಣು, ವಿವಿಧ ಭಕ್ಷಗಳ ಎಡೆಯನಿಟ್ಟು  ಕಾಯಿ ಒಡೆದು ಕುಟುಂಬದ ಸರ್ವರೂ  ಪೂಜಿಸಿ ದೂಫ  ಹಾಕುವೆವು. 

ನಂತರ "ಮೂಡ್ಲ ಮಣೇವು" ಎಂಬ ವಿಶಿಷ್ಟವಾದ ಆಚರಣೆ ಆರಂಭ . ರಾತ್ರಿ ಹತ್ತುಗಂಟೆಯ ನಂತರ ಆರಂಭವಾಗುವ ಈ ಆಚರಣೆಗೆ ನಮ್ಮ ಬೀದಿಯ ಎಲ್ಲಾ ಅಣ್ಣತಮ್ಮಂದಿರ ಮನೆಯವರು ಶಂಖ ,ಜಾಗಟೆ, ಭವನಾಸಿಗಳ ಸಮೇತ ಬಂದು ಒಂದೆಡೆ ಆಸೀನರಾಗುತ್ತಾರೆ. ಅದೇ ಸಮಯದಲ್ಲಿ ಉರಿಮೆಯವರು, ಪಂಜಿನವರು ಬಂದು ತಮ್ಮ ಸೇವಾಕೈಂಕರ್ಯ ನೆರವೇರಿಸುತ್ತಾರೆ. ಕರಿಯ ಕಂಬಳಿಯ ಮೇಲೆ ಎಲ್ಲಾ ಜಾಗಟೆ, ಭವನಾಸಿ ಇಟ್ಟು ಮುತ್ತೈದೆಯರು ತಂದ ಆರತಿ ಇಟ್ಟು ,ನೆಂಟರ ದಾಸಯ್ಯ ಬಂದು ಮೂಡ್ಲ ಮಣೇವು ಕಾರ್ಯಕ್ರಮಕ್ಕೆ ಸಹಕಾರ ನೀಡುವುದು ಗಮನಾರ್ಹ.ಪೂಜೆಯ ಕಡೆಯ ಘಟ್ಟವೆಂಬಂತೆ ಮಣೇವು ಆಟ ಆರಂಭ! ಒಂದು ಟವಲ್ ಮಡಿಚಿ ನೆಲದ ಮೇಲೆ ಹಾಸಿ  ಅದರ ಮೇಲೆ ಬಾಳೆ ಹಣ್ಣು, ಮತ್ತು ಕಾಯಿ ತಂಬಿಟ್ಟು ಇಟ್ಟು ,ದಾಸಯ್ಯ ನವರು ಅದರ ಸುತ್ತಲೂ ಉರಿಮೆ ಸದ್ದಿಗೆ ಅನುಗುಣವಾಗಿ ಜಾಗಟೆ ಬಡಿಯುತ್ತಾ ಸುತ್ತಿ ಕೊನೆಗೆ ಬಾಳೆ ಹಣ್ಣು ತಿನ್ನುತ್ತಾರೆ. ಮಣೇವಿನ ನಂತರ ಎಲ್ಲಾ ಕಾಯಿ ಮತ್ತು ಬಾಳೆ ಹಣ್ಣು ಒಟ್ಟಿಗೆ ಹಾಕಿ ಮಂಡಕ್ಕಿ ಬೆಲ್ಲ ಬೆರೆಸಿ ಎಲ್ಲರಿಗೂ ಹಂಚಿ ತಿನ್ನುವುದರೊಂದಿಗೆ ಮೂಡಲ ಮಣೇವಿಗೆ ಮಂಗಳ ಹಾಡುತ್ತೇವೆ.ಕೊನೆಯಲ್ಲಿ ಉರುಮೆ ಮತ್ತು ಪಂಜಿನವರಿಗೆ ನಮ್ಮ ಕೇರಿಯವರು ಶಕ್ತನುಸಾರ ಹಣ ನೀಡುವುದನ್ನು ಮರೆಯುವುದಿಲ್ಲ. ಮೂಡ್ಲಮಣೇವು ನಂತರ ನಮ್ಮ ಮನೆಗಳಲ್ಲಿ ಪುನಃ ಪೂಜೆ ಮಾಡಿ ನೆಂಟರ ದಾಸಯ್ಯ ಬಂದು ಗೋವಿಂದ ..ಎನ್ನುವ ಶಾಸ್ತ್ರ ಮಾಡಿದಾಗ ಕೆಲವೊಮ್ಮೆ ರಾತ್ರಿ ಹನ್ನೆರಡು ಗಂಟೆ ಹೊಡೆದ ಉದಾಹರಣೆ ಸಹ ಇದೆ.ಗೋವಿಂದ...ಶಾಸ್ತ್ರ ಮುಗಿದ ಮೇಲೆ ಊಟ ಮಾಡಿ ಮಲಗಿದಾಗ ಆಗ ಆ ವರ್ಷದ ಮಾರ್ನಾಮಿ ಹಬ್ಬ ಸುಸೂತ್ರವಾಗಿ ನಡೆದಂತೆ... ಮಲಗುವ ಮುನ್ನ ಹಾರನ ಕಣಿವೆ ರಂಗಪ್ಪನ ಅಂಬು ನೆನೆದು ಮಲಗಿದರೆ ಕನಸಲ್ಲೂ ಅಂಬಿನ ಉತ್ಸವ ಜರುಗುತ್ತವೆ.



ಸಿಹಿಜೀವಿ

ಸಿ ಜಿ ವೆಂಕಟೇಶ್ವರ.


02 October 2022

ಸುಗ್ಗಿ ಕಾಲ

 


#ಸುಗ್ಗಿ_ಸ್ವಿಗ್ಗಿ


ಆಗಾಗ ಸದ್ದು ಮಾಡುತ

ಮನೆಯ ಒಳಹೊರಗೆ 

ಓಡಾಡುತ್ತಿದ್ದರೆ ಅದು

ಅವರೆ ಸುಗ್ಗಿ ಕಾಲ |

ಹೆಂಡತಿ ತವರಿಗೆ 

ಹೋಗಿಬಿಟ್ಟರೆ 

ಇದು "ಸ್ವಿಗ್ಗಿ "ಕಾಲ ||


#ಸಿಹಿಜೀವಿಯ_ಹನಿ 


ಸತ್ಯವಂತ ...

 


ಸತ್ಯವಂತ? 

ನ್ಯಾನೋ ಕಥೆ 


"ಸದಾ ನಾವು ಸತ್ಯವಂತರಾಗಿರಬೇಕು. ಸುಳ್ಳು ಹೇಳಲೇಬಾರದು.ಸತ್ಯವೇ ನಮ್ಮ ತಂದೆ ತಾಯಿ ಸತ್ಯವಾಕ್ಯಕ್ಕೆ ಮೆಚ್ಚಿ ನಡೆದರೆ ಆ ಪರಮಾತ್ಮ ಮೆಚ್ಚುವುದಿಲ್ಲ. ಗಾಂಧೀಜಿಯವರಂತೆ ಸತ್ಯಾಗ್ರಹ ನಮ್ಮ ಅಸ್ತ್ರವಾಗಬೇಕು" ಹೀಗೆ ಸಮಾರಂಭದಲ್ಲಿ ಮಕ್ಕಳಿಗೆ ಭಾಷಣ ಮಾಡುತ್ತಿದ್ದ ತನ್ನ ತಂದೆಯ ಮಾತು ಕೇಳಿದ ಮಗಳಿಗೆ ಸಾಲಗಾರರು ಮನೆಯ ಮುಂದೆ ಬಂದು ಕೇಳಿದಾಗ "ಅಪ್ಪ ಮನೇಲಿ ಇಲ್ಲ ಅಂತ ಹೇಳು" ಎಂದು  ಹೇಳಿದ್ದು  ನೆನಪಾಯಿತು.


*ಸಿಹಿಜೀವಿ*

ಸಿ ಜಿ ವೆಂಕಟೇಶ್ವರ


01 October 2022

ವಿಶ್ವ ವಾಣಿ ೧/೧೦/೨೨


 

ಆ ನೋಟ..

 ಆ..ನೋಟ*


ಮರೆತು ಬಿಡಬಹುದು

ನಿನ್ನಸೌಂದರ್ಯಯುಕ್ತ ಮೈಮಾಟ |

ಮರೆಯಲು ಆಗುತ್ತಲೇ ಇಲ್ಲ

ಇಣುಕಿ ಕೆಣಕಿದ ಆ...ನೋಟ ||


*ಸಿಹಿಜೀವಿ*

ಸಿ ಜಿ ವೆಂಕಟೇಶ್ವರ

ಮಳೆನಾಡು.

 #ಯಲ್ಲೋಅಲರ್ಟ್ 


ಅಂದು ಅತಿ ಹೆಚ್ಚು ಮಳೆ

ಎಂದರೆ ನೆನಪಾಗುತ್ತಿತ್ತು 

ಮಲೆನಾಡು |

ಇಂದು ಇಡೀ ರಾಜ್ಯ, ದೇಶವೇ

ಆಗಿಹೋಗಿದೆ ಮಳೆನಾಡು ||



#ಸಿಹಿಜೀವಿಯ_ಹನಿ