31 May 2023

ಹೃದಯದಲ್ಲಿದೆ.

 



ಹೃದಯದಲ್ಲಿದೆ...


ಈಗೀಗ ಅಲ್ಲಲ್ಲಿ ಯಾವದೋ

ಕಾರಣಕ್ಕಾಗಿ ಬೀದಿಗಳಲ್ಲಿ

ರಕ್ತ ಚೆಲ್ಲುತ್ತಲಿದೆ|

ಎಲ್ಲರೂ ಸೇರಿ ಎಲ್ಲಾ ಕಡೆ

ಹುಡುಕುತ್ತಲೇ ಇರುವರು

ಮಾನವೀಯತೆ ಎಲ್ಲಿದೆ?

ನಿಮ್ಮಂತರಾತ್ಮಗಳ ಪ್ರಶ್ನಿಸಿಕೊಳ್ಳಿ

ಅದು ನಿಮ್ಮ ಹೃದಯದಲ್ಲಿದೆ||


ಸಿಹಿಜೀವಿ

ಸಿ ಜಿ ವೆಂಕಟೇಶ್ವರ

ತುಮಕೂರು

9900925529


ಅತ್ತೆಯೂ ತಾಯಿಯೇ..

 



ಅತ್ತೆಯೂ ತಾಯಿಯೇ...

ಇತ್ತೀಚಿನ ದಿನಗಳಲ್ಲಿ  ಸರ್ಕಾರ ಪ್ರತಿ ತಿಂಗಳು ಕೊಡಲು ಉದ್ದೇಶಿರುವ  ಎರಡು ಸಾವಿರ ರೂಪಾಯಿಗಳನ್ನು ಮನೆಯ ಯಜಮಾನಿಗೆ ಕೊಡಲು ತೀರ್ಮಾನ ಮಾಡಿರುವಾಗ ಕೆಲವೆಡೆ ಯಜಮಾನಿ ಅತ್ತೆ ಅಥವಾ ಸೊಸೆಯೇ? ಎಂಬ ವಾದ ಮರುಜೀವ ಪಡೆದಿದೆ. 

ಕೆಲವು ಮನೆಗಳಲ್ಲಿ ಅತ್ತೆ ಸೊಸೆಯರು ತಾಯಿ ಮಗಳ ಸಂಬಂಧ ಹೊಂದಿದ್ದರೆ ಕೆಲ ಮನೆಗಳಲ್ಲಿ ತದ್ವಿರುದ್ಧವಾದ ವಾತಾವರಣ.

ಈ ಅಂಶಗಳನ್ನು ಗಮನಿಸಿದಾಗ ಕಥಾಮೃತ ದ ಒಂದು ಕಥೆ ನೆನಪಾಗುತ್ತದೆ.

ಒಬ್ಬ ತಾಯಿಗೆ ಒಬ್ಬ ಮಗನಿದ್ದ. ತಂದೆ ತೀರಿ ಹೋಗಿದ್ದ. ತಾಯಿಗೆ ಆಗಲೇ ಮುಪ್ಪು ಆವರಿಸಿತ್ತು. ಮಗನ ಮದುವೆಯೂ ಆಗಿತ್ತು. ಹೊಸದಾಗಿ ಸೊಸೆ ಮನೆ ನಡೆಸಲು ಬಂದಿದ್ದಳು. ಸೊಸೆಗೆ ಸ್ವಾತಂತ್ರ್ಯ ಬೇಕಾಗಿ ತಾನೇ ಮನೆಯ ಮಾಲೀಕಳಾಗುವ ಅದಮ್ಯ ಬಯಕೆ ಅವಳಿಗಿತ್ತು. ಆದರೆ ಮನೆಯಲ್ಲಿ ಅತ್ತೆ ಇರುವವರೆಗೆ ಅದು ಸಾಧ್ಯವಿರಲಿಲ್ಲ.

ಒಂದು ದಿನ ಸತಿಯು ಪತಿಗೆ ಹೇಳಿದಳು-''ನಮ್ಮದು ಸಣ್ಣ ವಯಸ್ಸು, ನಾವು ಈ ಮನೆಯಲ್ಲಿ ಸಂತಸದಿಂದ ಜೀವನ ಸಾಗಿಸಬೇಕು. ಅದಕ್ಕೆ ನಮಗೆ ಸ್ವಾತಂತ್ರ್ಯ ಬೇಕು. ನಿಮ್ಮ ತಾಯಿ ಈ ಮನೆಯಲ್ಲಿ ಇರುವವರೆಗೆ ಸಂತಸದ ಜೀವನ ನಡೆಸುವುದು ಸಾಧ್ಯವಿಲ್ಲ. ಎಲ್ಲಿಯಾದರೂ ದೂರ ಹೋಗಿ ತಿರುಗಿ ಬಾರದಂತೆ ನಿಮ್ಮ ತಾಯಿಯನ್ನು ಬಿಟ್ಟು ಬಾ,'' ಎಂದಳು. ''ಸ್ವಾತಂತ್ರ್ಯ ಇಲ್ಲದೆ ಸಂತಸ ಇಲ್ಲ,'' ಎಂಬ ಸತಿಯ ಮಾತು ಪತಿಗೂ ಒಪ್ಪಿಗೆಯಾಯಿತು. ಪತ್ನಿ ಹೇಳಿದ್ದೇ ವೇದವಾಕ್ಯವೆಂದು ಭಾವಿಸಿದ ಪತಿ ಮರುದಿನವೇ ತಾಯಿಯನ್ನು ಊರ ಆಚೆಗೆ ಇರುವ ಅರಣ್ಯಕ್ಕೆ ಕರೆದುಕೊಂಡು ಹೋದ. ಮೊದಲೇ ಅವಳಿಗಾಗಿ ಅಲ್ಲಿ ನಿರ್ಮಿಸಲಾಗಿದ್ದ ಒಂದು ಗುಡಿಸಲಲ್ಲಿ ಬಿಟ್ಟು ಹೇಳಿದ- ''ತಾಯಿಯೇ, ನಿನಗೂ ನನ್ನ ಸತಿಗೂ ಹೊಂದಾಣಿಕೆ ಆಗುತ್ತಿಲ್ಲ. ಹೀಗಾಗಿ ನಮ್ಮ ಸಂತಸದ ಜೀವನಕ್ಕೆ ಅವಕಾಶ ಸಿಗುತ್ತಿಲ್ಲ. ನೀನು ಇಲ್ಲಿಯೇ ಸುಖವಾಗಿರು. ನಿನಗೆ ಜೀವನೋಪಾಯಕ್ಕೆ ಬೇಕಾಗುವುದನ್ನೆಲ್ಲ ಇಲ್ಲಿಯೇ ತಂದು ಕೊಡುತ್ತೇನೆ,'' ಅದು ಕ್ರೂರ ಮೃಗಗಳಿಂದ ತುಂಬಿದ ಅರಣ್ಯವಾಗಿತ್ತು. ಅಲ್ಲಿ ಎಂಥವರಿಗೂ ಇರುವುದು ಅಸಾಧ್ಯವಾಗಿತ್ತು. ಆದರೆ ಮಗನ ಸುಖದ ಮುಂದೆ ಯಾವ ತೊಂದರೆಯೂ ಲೆಕ್ಕಕ್ಕಿಲ್ಲ ಎಂದು ಭಾವಿಸಿದ ತಾಯಿ ಅಲ್ಲಿಯೇ ಗುಡಿಸಲಿನಲ್ಲಿ ವಾಸಿಸಲು ಒಪ್ಪಿದಳು. ತಾಯಿಯನ್ನು ಬಿಟ್ಟು ಮಗನು ಮನೆಗೆ ಹೊರಟು ನಿಂತ. ತಾಯಿ ತನ್ನ ಕೊರಳಲ್ಲಿದ್ದ ಒಂದು ಆಭರಣವನ್ನು ಕೊಡುತ್ತ ಮಗನಿಗೆ ಹೇಳಿದಳು, ''ಇದು ನಿನ್ನ ತಂದೆ ನನಗೆ ಕೊಟ್ಟ ಅತ್ಯಂತ ಪ್ರೀತಿಯ ಕಾಣಿಕೆ. ಇದನ್ನು ನನ್ನ ಪ್ರಾಣದಂತೆ ಇದುವರೆಗೆ ಕಾಪಾಡಿರುವೆ. ಇನ್ನು ಮುಂದೆಯೂ ಕಾಪಾಡಬೇಕೆಂಬುಂದು ನಿನ್ನ ಸತಿಗೆ ನನ್ನ ಕೊನೆಯ ಹರಕೆ. ನೀವಿಬ್ಬರೂ ಸುಖವಾಗಿರಿ,'' 


ಮಗನು ಅರಣ್ಯದಿಂದ ಮನೆಗೆ ವಾಪಸ್‌ ಬಂದ. ಅವನ ಸತಿಗೆ ಅಪಾರ ಸಂತಸ. ನಾವಿನ್ನು ಸ್ವಚ್ಛಂದವಾಗಿರಬಹುದು ಎಂದುಕೊಂಡಳು. ತಾಯಿ ಕೊಟ್ಟ ಆಭರಣವನ್ನು ಸತಿಗೆ ಕೊಡುತ್ತ ಪತಿಯು ಹೇಳಿದ-''ಇದು ನಿನಗೆ ನನ್ನ ತಾಯಿಯ ಕೊನೆಯ ಹರಕೆ,'' ಅದನ್ನು ಕೇಳುತ್ತಲೇ ಅವಳ ಹೃದಯ ಪರಿವರ್ತನೆಯಾಯಿತು ! ''ನಾನೆಂಥ ಕ್ರೂರಿ, ಕರುಣೆ ಇಲ್ಲದವಳು. ಅತ್ತೆಯವರು ಎಂಥ ದಯಾಮಯಿ !,'' ಇಂಥ ಸದ್ಗುಣದ ಅತ್ತೆಯನ್ನು ಹೊರಗೆ ಹಾಕಿದುದು ಅಪರಾಧವೆನಿಸಿತು ಅವಳಿಗೆ. ಮನಪರಿವರ್ತನೆ ಆಗಿದ್ದೇ ತಡ ಮಧ್ಯರಾತ್ರಿಯನ್ನೂ ಗಮನಿಸದೆ ಅತ್ತೆಯನ್ನು ಮನಗೆ ವಾಪಸ್‌ ಕರೆತರಲು ಪತಿಯೊಂದಿಗೆ ಅರಣ್ಯಕ್ಕೆ ಹೋದಳು. 

ಅಷ್ಟರಲ್ಲಿ ಅತ್ತೆಯು ಹಾವು ಕಚ್ಚಿ ಮೃತ್ಯುವಿನ ಬಾಯಿಗೆ ತುತ್ತಾಗಿದ್ದಳು. ಆದರೆ ಆ ತಾಯಿಯ ಮೊಗದಲ್ಲಿ ದಿವ್ಯ ಪ್ರಸನ್ನತೆ ನೆಲೆಸಿತ್ತು! ಆ ಕಾರುಣ್ಯಮಹಿ ಸಾವಿನಲ್ಲೂ ಧೀಮಂತಿಕೆ ಮರೆದಿದ್ದಳು. ಅದನ್ನು ಕಂಡು ಸೊಸೆ ಕರುಳು ಚುಚ್ಚಿದಂತಾಯ್ತು. ತನ್ನ ಸಣ್ಣತನವನ್ನು ನೆನೆದು ಆಕೆ ರೋಧಿಸಿದಳು. ದೈವ ಕಣ್ಣ ಮುಂದಿದ್ದರೂ ಅದನ್ನು ಕಾಣದೆ ಹೋದೆನ್ನಲ್ಲ ಎಂದು ಆಕೆ ಕಣ್ಣೀರು ಹಾಕಿದಳು. 


ಸಿಹಿಜೀವಿ

ಸಿ ಜಿ ವೆಂಕಟೇಶ್ವರ

ಜನರ ಸೇವೆಯೇ ಜನಾರ್ಧನ ಸೇವೆ...

 



ಜನರ ಸೇವೆಯೇ ಜನಾರ್ದನ ಸೇವೆ..



ನಮ್ಮಲ್ಲಿ ಬಹಳ ಜನ ಆಡಂಬರದ ಭಕ್ತಿ ಪ್ರದರ್ಶನ ಮಾಡುವುದನ್ನೇ ಕಾಯಕ ಮಾಡಿಕೊಂಡಿರುವರು.

ದೇವಾಲಯ ಸೇರಿ ಧಾರ್ಮಿಕ ಕೇಂದ್ರಗಳಿಗೆ ಸಣ್ಣ ದೇಣಿಗೆ ನೀಡಿ ದೊಡ್ಡ ಅಕ್ಷರಗಳಲ್ಲಿ ಹೆಸರು ಕರೆಸಿಕೊಳ್ಳುವ ಮಾಹಾನ್ ಭಕ್ತರನ್ನು ಕಾಣುತ್ತೇವೆ. ನಿಜಕ್ಕೂ ದೇವರು ಇಂತಹ ಆಡಂಬರದ ಭಕ್ತಿ ಮೆಚ್ಚಲಾರ. ಅದಕ್ಕೆ ಈ ಘಟನೆಯನ್ನು ಉದಾಹರಣೆ ನೀಡಬಹುದು.

ಒಬ್ಬ ಶ್ರೀಮಂತ ತನ್ನ ತೋಟದಲ್ಲಿ ಬೆಳೆದಿದ್ದ ಒಂದು ಬಾಳೆಯ ಗೊನೆಯನ್ನು ತನ್ನ ತೋಟದಲ್ಲಿ ಕೆಲಸ ಮಾಡುವವನ ಕೈಯಲ್ಲಿ ಕೊಟ್ಟು  ಇದನ್ನು ದೇವಸ್ಥಾನದಲ್ಲಿ ಕೊಟ್ಟು ಬಾ ಎಂದು ಹೇಳಿ ಕಳಿಸಿದನು.

ಆ ಕೆಲಸದವ ಹಸಿವಾಗಿ ಎರಡು ಹಣ್ಣನ್ನ ಬರುವ ದಾರಿಯಲ್ಲಿ ತಿಂದು ಬಿಡುತ್ತಾನೆ ಮಿಕ್ಕಿದ್ದನ್ನ ದೇವಸ್ಥಾನದಲ್ಲಿ ಕೊಟ್ಟು ಮನೆಗೆ ಹಿಂತಿರುಗುತ್ತಾನೆ.

ಅಂದು ರಾತ್ರಿ ದೇವರು ಆ ಶ್ರೀಮಂತನ ಕನಸಲ್ಲಿ ಬಂದು ನೀನು ಕಳುಹಿಸಿದ ಎರಡು ಹಣ್ಣನ್ನ ನಾನು ತಿಂದೆ ತುಂಬಾ ಚೆನ್ನಾಗಿತ್ತು ಎಂದು ಹೇಳಿ ಆ ದೇವರು ಮರೆಯಾಗಿ ಬಿಟ್ಟರು.

ದೇವರ ಮಾತು ಕೇಳಿ ಆ ಶ್ರೀಮಂತ ಕೋಪ ಗೊಂಡ.ನಾನು ಒಂದು ಗೊನೆ ಹಣ್ಣನಲ್ಲವ ದೇವರಿಗೆ ಕಳುಹಿಸಿದ್ದು ಮತ್ತೆ ದೇವರು ಯಾಕೆ ಎರಡು ಹಣ್ಣನ್ನ ಮಾತ್ರ ತಿಂದೆ ಎಂದರು ಎಂದು.

ಕೋಪದಲ್ಲಿ ಆ ಕೆಲಸದವನನ್ನ ವಿಚಾರಿಸಿದರು ಆಗ ಕೆಲಸದವನು ವಿವರಿಸಿದ ದಾರಿಯಲ್ಲಿ ಹಸಿವಾಗಿ ಎರಡು ಹಣ್ಣನ್ನ ನಾನೇ ಬುದ್ದಿ ತಿಂದಿದ್ದು ನನ್ನನ್ನ ಕ್ಷಮಿಸಿ ಎಂದು ಕೇಳಿಕೊಂಡನು.

ಆಗ ಆ ಶ್ರೀಮಂತನಿಗೆ ಅರ್ಥವಾಯಿತು ಕೆಲಸದವನು ತಿಂದ ಎರಡು ಹಣ್ಣು ಮಾತ್ರ ದೇವರಿಗೆ ಹೋಗಿ ಸೇರಿದೆ ಎಂದು. ಅಂದು ಒಂದು ವಿಷಯ ಅರ್ಥವಾಯಿತು ಆ ಶ್ರೀಮಂತನಿಗೆ 

ಒಬ್ಬ ಬಡವ ತಿಂದರೆ ಭಗವಂತ ತಿಂದಹಾಗೆ ಎಂದು. ಇದನ್ನೇ ಹಿರಿಯರು ಹೇಳಿದ್ದು  ಮಾನವನ ಸೇವೆಯೇ ಮಾಧವನ ಸೇವೆ  ಜನತಾ ಸೇವೆಯೇ ಜನಾರ್ದನ ಸೇವೆ ಎಂದು!

ಇನ್ನು ಮುಂದಾದರೂ ಅತ್ಮವಿರುವ ಪ್ರತಿಯೊಬ್ಬರ ಸೇವೆ ಮಾಡುತ್ತಾ ಪರಮಾತ್ಮನ ಸೇರಲು ಪ್ರಯತ್ನಿಸೋಣ...


ಸಿಹಿಜೀವಿ

ಸಿ ಜಿ ವೆಂಕಟೇಶ್ವರ

ತುಮಕೂರು.

27 May 2023

ಮೊಬೈಲ್ ಅವಶ್ಕಕ , ಅನಿವಾರ್ಯವಲ್ಲ..

 



ಈ ವಾರದಲ್ಲಿ ಮೊಬೈಲ್ ಹೊರಗಿನ ಪ್ರಪಂಚದ ಅರಿವು ನನಗೆ ಎರಡು ಬಾರಿಯಾಯಿತು.ಒಮ್ಮೆ ಚಿಕ್ಕಮಗಳೂರು ಸಮೀಪದ ಝರಿ ಇಕೋ ಸ್ಟೇ ನಲ್ಲಿ ವಾಸ್ತವ್ಯದಲ್ಲಿ ಮೊಬೈಲ್ ಇದ್ದರೂ ಯಾವುದೇ ನೆಟ್ವರ್ಕ್ ಇರಲಿಲ್ಲ ಮೊಬೈಲ್ ಆ ಕಡೆ ಬಿಸಾಡಿ ಸುಮ್ಮನೆ ಪ್ರಕೃತಿ ಸೌಂದರ್ಯವ ಸವಿಯುತ ಆತ್ಮೀಯರೊಂದಿದೆ ,ಮರ,ಗಿಡ, ಝರಿ, ಜಿಗಣೆ,  ಕಾನನ, ಕೀಟಗಳ ನಡುವೆ ಕಾಲ ಸರಿದದ್ದೇ ತಿಳಿಯಲಿಲ್ಲ.

ಎರಡನೆ ಬಾರಿಗೆ ನಾಲ್ಕು ದಿನ  ನನ್ನ ಹುಟ್ಟೂರಿನ ನಮ್ಮ ಅಡಿಕೆ ತೋಟಕ್ಕೆ ಮಣ್ಣು ಹೊಡೆಸುವ ಕಾರ್ಯದಲ್ಲಿ ತೊಡಗಿದಾಗ ಕೆಲಸದ ನಡುವೆ ಮೊಬೈಲ್ ಕಡೆ ಗಮನವೇ ಹೋಗಲಿಲ್ಲ .ಕಾಯಕವೇ ಕೈಲಾಸ... 


ಮೊಬೈಲ್ ಅವಶ್ಯಕ ,ಆದರೆ ಅನಿವಾರ್ಯವಲ್ಲ ಮೊಬೈಲ್ ಬಳಕೆ  ವ್ಯಸನವಾಗದಂತೆ , ಕಾಲಹರಣ ಸಾಧನವಾಗದಂತೆ  ನೋಡಿಕೊಳ್ಳುವುದು ನಮ್ಮ ಕೈಯಲ್ಲಿದೆ ಆ ನಿಟ್ಟಿನಲ್ಲಿ ನಮ್ಮ ಪ್ರಯತ್ನವಿರಲಿ...



24 May 2023

ಬೇಸಿಗೆ ರಜೆಯಲ್ಲಿ ಪ್ರವಾಸ...

 

ರಜಾ ಮಜ

ಬೇಸಿಗೆ ರಜೆಯಲ್ಲಿ..ಕುಟುಂಬ ಸದಸ್ಯರೊಂದಿಗೆ  ಧರ್ಮಸ್ಥಳ ಮತ್ತು ಕುಕ್ಕೆಗೆ ಭೇಟಿ ನೀಡಿದ ವಾರದ ಅಂತರದಲ್ಲಿ   ಆತ್ಮೀಯರಾದ  ಕೋಟೆ ಕುಮಾರ್ ,ರಂಗಸ್ವಾಮಯ್ಯ ಮತ್ತು ದಯಾನಂದ್ ರವರ ಜೊತೆಯಲ್ಲಿ ಹಿರೇಮಗಳೂರು, ಚಿಕ್ಕಮಗಳೂರು, ಮುಳ್ಳಯ್ಯನ ಗಿರಿ, ಸೀತಾಳಯ್ಯನ ಗಿರಿ, ದತ್ತಪೀಠ ದರ್ಶನ ಮಾಡಿದೆವು.ಎಂದಿನಂತೆ  ಪ್ರಕೃತಿ ನಮ್ಮನ್ನು ಮಂತ್ರಮುಗ್ದಗೊಳಿಸಿತು.


ಮೊದಲ ಬಾರಿಗೆ ಝರಿ ಇಕೋ ಸ್ಟೇ ನಲ್ಲಿ ವಾಸ್ತವ್ಯ ಮತ್ತು ಪರಿಸರದೊಂದಿಗೆ ಊಟ  ಆಟ, ಟ್ರಕ್ಕಿಂಗ್, ರೋಪ್ ಆಕ್ಟಿವಿಟಿ , ಜಲಪಾತದ ಸ್ನಾನ ಮರೆಯಲಾರದ ಅನುಭವ ನೀಡಿದವು. ಅಂದ ಹಾಗೆ ಮೊದಲಬಾರಿಗೆ ನಾನೇ  ಚಾರ್ಮಾಡಿ ಘಾಟ್, ಶಿರಾಡಿ ಘಾಟ್, ಮತ್ತು ದತ್ತ ಪೀಠ, ಮುಳ್ಳಯ್ಯನ ಗಿರಿ  ಈ ದುರ್ಗಮ ಹಾದಿಯಲ್ಲಿ ಸಾವಿರಾರು ಕಿಲೋಮೀಟರ್ ಕಾರ್‌ ಡ್ರೈವ್ ಮಾಡಿದ ಖುಷಿ ನನ್ನದು .

ನುಡಿಸಂಭ್ರಮ....

 




*ನುಡಿತೋರಣ ಕಟ್ಟುತ್ತಿರುವ ಕವಿಮನಗಳು...* 


ಸಮಾನ ಮನಸ್ಕರು , ಸಹೃದಯಿಗಳು, ಕನ್ನಡದ ಬಗ್ಗೆ ಅಭಿಮಾನ ಇರುವ ಕವಿಮನಗಳು ಕೂಡಿದ ಬಳಗವೇ "ನುಡಿತೋರಣ" 

ನುಡಿತೋರಣ ಚೊಚ್ಚಲ ವಾರ್ಷಿಕ ನುಡಿ ಸಂಭ್ರಮವನ್ನು ಆಚರಿಸಲಿದೆ . ಇದೇ ತಿಂಗಳ 27 ರಂದು ಬೆಂಗಳೂರಿನ ಕನ್ನಡ ಸಾಹಿತ್ಯ ಪರಿಷತ್ತಿನ ಅಕ್ಕಮಹಾದೇವಿ ಸಭಾಂಗಣದಲ್ಲಿ ನಡೆವ ಈ ಕಾರ್ಯಕ್ರಮಕ್ಕೆ ನಾಡಿನಾದ್ಯಂತ ನೂರಾರು ಕವಿಮನಗಳು ಬರಲು ಸಿದ್ದತೆ ಮಾಡಿಕೊಳ್ಳುತ್ತಲಿವೆ. 


ಕನ್ನಡ ನಾಡು, ನುಡಿ , ಸಂಸ್ಕೃತಿಗಳನ್ನು  ಉಳಿಸಿ ಬೆಳೆಸುವ ಉದ್ದೇಶದಿಂದ ಆರಂಭವಾದ ವಾಟ್ಸಪ್ ಬಳಗ ಇಂದು ಎಲ್ಲರ ಮನಗೆದ್ದಿದೆ.

ಈ ಬಳಗದಲ್ಲಿ  ಸಾಹಿತ್ಯ, ಸಂಗೀತ, ನಾಟ್ಯ, ಸಮಾಜಸೇವೆ ಇತ್ಯಾದಿ ಎಲ್ಲಾ ರಂಗದ ಹಿರಿಯರಿದ್ದಾರೆ. ಯುವಕರಿದ್ದಾರೆ, ವಿದ್ಯಾರ್ಥಿಗಳು ಸಹ ಇರುವರು .  ಹಿರಿಯರು ಉದಯೋನ್ಮುಖ ಬರಹಗಾರರ ತಿದ್ದುವ ಪರಿ ಚೆನ್ನ ನಿಯತಕಾಲಿಕ ಅಂಕಣ ಬರಹಗಳು ನನ್ನ ಬಹಳ ಸೆಳೆದಿವೆ. ಈ ಬಳಗಲ್ಲಿ  ಕವನ ,ಗಜಲ್, ಹಾಸ್ಯ,  ಕಥೆಗಳು ಹನಿಗವನಗಳು ಪ್ರತಿದಿನ ಓದುಗರಿಗೆ ಲಭ್ಯ.ಈ ಎಲ್ಲಾ ಸಾಹಿತ್ಯದ ಪ್ರಕಾರಗಳು  ಗುಣಮಟ್ಟದಿಂದ ಕೂಡಿವೆ .  


ಈ ಬಳಗದ ಸದಸ್ಯನಾಗಿ ನಾನು ಗಮನಿಸಿದ ಮತ್ತೊಂದು ಅಂಶವೆಂದರೆ 

ಇತರೆ ಗುಂಪುಗಳು ಕೇವಲ ಶುಭಾಶಯ ಕೋರಲು ಶುಭ ದಿನ ಶುಭರಾತ್ರಿ ಮತ್ತು ಕೆಲವು ಅನಾವಶ್ಯಕ ಅಂಚೆಗಳ ಕಳಿಸಿ ಕಿರಿಕಿರಿ ಮಾಡುವುದರ ಮೂಲಕ ಕಾಲಹರಣದ ತಾಣಗಳಾಗಿವೆ ಆದರೆ  ಇಲ್ಲಿ  ಕಿರಣ್ ಹಿರಿಸಾವೆ, ಶ್ರೀಕಾಂತ್ ಪತ್ರೇಮರ ಮುಂತಾದ ಹಿರಿಯರನ್ನೊಳಗೊಂಡ    ಸಂಚಾಲನ ಸಮಿತಿಯ ನೇತೃತ್ವದಲ್ಲಿ  ಕಾರ್ಯನಿರ್ವಹಿಸುವ  ಈ ಗುಂಪಿನಲ್ಲಿ ತಪ್ಪು ಮಾಡಿದವರಿಗೆ ತಿದ್ದಿ ಹೇಳಿ ಕುಟುಂಬದ ಸದಸ್ಯರಂತೆ  ಕಾಣುವ  ಮತ್ತು ಉತ್ತಮ ಬರವಣಿಗೆಗೆ ಮೆಚ್ಚುಗೆ ಸೂಚಿಸುವ ಅವರ ಗುಣ ನನಗೆ ಬಹಳ ಇಷ್ಟ.

 ಗುಂಪಿನ ಎಲ್ಲ ಸದಸ್ಯರು ಉತ್ತಮ ಭಾವನೆ ಹೊಂದಿ ಪರಸ್ಪರ ಗೌರವಿಸುವ  ಪ್ರೋತ್ಸಾಹ ಮಾಡುವ ಗುಣ ಬೆಳೆಸಿಕೊಂಡು ಉತ್ತಮ ಬಾಂಧವ್ಯ  ಬೆಸೆದು ಕೊಂಡಿದ್ದೇವೆ .


ಈ ವಾರಾಂತ್ಯದಲ್ಲಿ ಬೆಂಗಳೂರಿನಲ್ಲಿ ನಡೆಯುವ ನುಡಿಸಂಭ್ರಮಕ್ಕೆ ತಿಂಗಳಿನಿಂದ ಸಿದ್ಧತೆ ಮಾಡಿಕೊಳ್ಳಲಾಗಿದೆ.ಕವಿಮನಗಳಿಗೆ ಚುಟುಕು, ಲೇಖನ, ಕವನ, ನ್ಯಾನೋಕಥೆ ರಚನಾ ಸ್ಪರ್ಧೆಗಳನ್ನು  ಏರ್ಪಡಿಸಿ ವಿಜೇತರಿಗೆ ಬಹುಮಾನ ವಿತರಣೆ ನಡೆಯಲಿದೆ.  

ಅಂದಿನ ಕಾರ್ಯಕ್ರಮದಲ್ಲಿ 

ಬೆಳಗಿನ ಅವದಿಯಲ್ಲಿ

ಉದ್ಘಾಟನೆಯ ನಂತರ  ಪುಸ್ತಕ ಬಿಡುಗಡೆ ಕಾರ್ಯಕ್ರಮವಿದೆ.

ಶ್ರೀ. ತ.ನಾ. ಶಿವಕುಮಾರ್ ಅವರ

"ಕಂದನ ಪದಗಳು" ಹಾಗೂ

 ಶ್ರೀಮತಿ ಸಿ ಬಿ ಶೈಲಾ  ಜಯಕುಮಾರ್ ಅವರ

ಪುರಾಣ ಪ್ರಮಾಣ ಪುಸ್ತಕಗಳು ಲೋಕಾರ್ಪಣೆಗೊಳ್ಳಲಿವೆ . 

ನಂತರ ನುಡಿತೋರಣ ಬಳಗದ ಅಂಕಣಕಾರರಿಗೆ ಸನ್ಮಾನ ಹಾಗೂ ಕವಿಗೋಷ್ಠಿ ಇರುವುದು ರಾಜ್ಯದ ವಿವಿಧ ಭಾಗಗಳಿಂದ ಆಗಮಿಸುವ ಇಪ್ಪತ್ತಕ್ಕೂ ಹೆಚ್ಚು ಕವಿಮನಗಳು ತಮ್ಮ ಕವಿತೆ ವಾಚಿಸಲಿದ್ದಾರೆ.

ಕನ್ನಡ ನಾಡು ನುಡಿಯ ಸುತ್ತ ಕೇಂದ್ರೀತವಾದ ಈ ಸಂಭ್ರಮದಲ್ಲಿ ನಾವೆಲ್ಲರೂ ಸಡಗರದಿಂದ ಪಾಲ್ಗೊಳ್ಳಲು ಕಾತರರಾಗಿರುವೆವು ನೀವೂ ಬನ್ನಿ ನಿಮ್ಮವರನ್ನು ಕರೆತನ್ನಿ...


ನಿಮ್ಮ...

*ಸಿಹಿಜೀವಿ*

ಸಿ ಜಿ ವೆಂಕಟೇಶ್ವರ

ತುಮಕೂರು

  

*

15 May 2023

ವಿಶ್ವಗುರು ಭಾರತ...

 





ಭಾರತ ದೇಶವು ವಿಶ್ವಗುರುವಾಗಲು ಯತ್ನಿಸುತ್ತಿರುವ ಇಂದಿನ ಪರ್ವಕಾಲದಲ್ಲಿ ಸಾಹಿತ್ಯ ಕ್ಷೇತ್ರದ ಕೊಡುಗೆ .


ಅನಾದಿ ಕಾಲದಿಂದಲೂ ನಮ್ಮ ದೇಶವು ಇತರೆ ದೇಶಗಳಿಗೆ ಕಲೆ, ಸಂಸ್ಕೃತಿ, ಸಂಸ್ಕಾರ, ಶಿಕ್ಷಣ, ಮೌಲ್ಯ ಮುಂತಾದ ವಿಷಯಗಳಲ್ಲಿ ಮಾದರಿಯಾಗಿ ನಿಂತಿದೆ. ವಿದೇಶಿ ವಿದ್ವಾಂಸರು, ಕವಿಗಳು, ದಾರ್ಶನಿಕರು ನಮ್ಮ ದೇಶದ ಹಿರಿಮೆ ಗರಿಮೆ ಕಂಡು ಮುಕ್ತ ಕಂಠದಿಂದ ಹಾಡಿ ಹೊಗಳಿದರು. ಅಮೃತ ಆತ್ಮರು ಅಮೃತ ಪುತ್ರರಾದ ನಮ್ಮನ್ನು ಬ್ರಿಟೀಷರು  ನಮ್ಮ ಅಮೂಲ್ಯವಾದ ಶಿಕ್ಷಣ ಪದ್ದತಿ, ನಮ್ಮ ಸಂಪ್ರದಾಯ ,ಸಂಸ್ಕೃತಿಗಳ ನಾಶ ಮಾಡುತ್ತಾ ನಮ್ಮ ಬಗ್ಗೆ ಅವಹೇಳನ ಮಾಡುತ್ತಾ ನಮ್ಮನ್ನು ಕೀಳಾಗಿ ಕಂಡು ಪಾಶ್ಚಾತ್ಯ ದೇಶಗಳ ಸಂಸ್ಕೃತಿ ಹೆಚ್ಚು ಎಂದು ತೋರಿಸುವ ನಾಟಕವಾಡಿದರು. ಚಿನ್ನ ಎಂದಿದ್ದರೂ ಚಿನ್ನವೇ ಪಾಶ್ಚಿಮಾತ್ಯರು ತಮ್ಮ ಆಳ್ವಿಕೆಯನ್ನು ಅಂತ್ಯ ಮಾಡಿ ಅವರ ದೇಶಕ್ಕೆ ತೆರಳಿದ ಮೇಲೆ ಕ್ರಮೇಣವಾಗಿ ನಮ್ಮತನ ಬೆಳಕಿಗೆ ಬಂದು ಈಗ ಭಾರತವು ಪುನಃ ವಿಶ್ವ ಗುರುವಿನ ಸ್ಥಾನ ಅಲಂಕರಿಸಲು ಸಿದ್ದವಾಗಿದೆ. 

ದೇಶದ ಆರ್ಥಿಕ, ಸಾಮಾಜಿಕ,ಶೈಕ್ಷಣಿಕ, ಆರೋಗ್ಯ, ಜೀವನಮಟ್ಟ , ತಲಾಆದಾಯ , ಜಿಡಿಪಿ , ಹ್ಯಾಪಿನೆಸ್ ಇಂಡೆಕ್ಸ್  ಮುಂತಾದ ಅಂಶಗಳು  ಯಾವುದೇ ದೇಶದ ಔನ್ನತ್ಯ ಸೂಚಿಸುವ ಅಂಶಗಳೆಂದು ಎಲ್ಲರೂ ಒಪ್ಪುತ್ತಾರೆ. ಅದರ ಜೊತೆಯಲ್ಲಿ ಸಾಹಿತ್ಯ ಸಂಸ್ಕೃತಿಗಳು ಸಹ ದೇಶವು ವಿಶ್ವಗುರುವಾಗಲು ನಿರ್ಧಾರಕ ಅಂಶಗಳು ಎಂದರೆ ತಪ್ಪಾಗಲಾರದು.

ವೇದಗಳ ಕಾಲದಿಂದಲೂ 

ನಮ್ಮ ದೇಶದ ಹಲವಾರು ಭಾಷೆಗಳಲ್ಲಿ ಉತ್ಕೃಷ್ಟ ಸಾಹಿತ್ಯ ರಚನೆಯಾಗಿರುವುದು ನಮ್ಮ ದೇಶದ ಹಿರಿಮೆಯನ್ನು ಸೂಚಿಸುತ್ತದೆ. ರವೀಂದ್ರನಾಥ ಟ್ಯಾಗೋರ್ ರವರಂಥವರು ಸಾಹಿತ್ಯಕ್ಕೆ ನೋಬಲ್ ತಂದುಕೊಟ್ಟಾಗ ವಿಶ್ವ ಮತ್ತೊಮ್ಮೆ ನಮ್ಮತ್ತ ನೋಡಿತು. ಆಧುನಿಕ ಕಾಲದಲ್ಲೂ ಹಲವಾರು ಕವಿಗಳು ಲೇಖಕರು ನಮ್ಮ ದೇಶದ ಜನಜೀವನವನ್ನು ತಮ್ಮ ಕೃತಿಗಳಲ್ಲಿ ಕಟ್ಟಿಕೊಡುತ್ತಿದ್ದಾರೆ. 

ಒಂದು ಕಾಲದಲ್ಲಿ ಪಾಶ್ಚಿಮಾತ್ಯರಿಗೆ ಭಾರತವೆಂದರೆ ಹಾವಾಡಿಗರ , ಬುದ್ಧಿರಹಿತ ಜನ ಎಂಬ ಭಾವನೆಗಳನ್ನು ವೀರ ಸನ್ಯಾಸಿ ಸ್ವಾಮಿ ವಿವೇಕಾನಂದರು ತಮ್ಮ ವಿದ್ವತ್ಪೂರ್ಣ ಭಾಷಣ ಮತ್ತು ಪುಸ್ತಕಗಳಿಂದ ಹೋಗಲಾಡಿಸಿ ಭಾರತೀಯರು ಅಮರ ಆತ್ಮರು  ಅಮೃತ ಪುತ್ರರು ಎಂದು ಸಾರಿದರು. 

ಸಾಹಿತ್ಯದ ಮೂಲಕ ಕಥೆ, ಕವನ, ಕಾದಂಬರಿಗಳ ರೂಪದಲ್ಲಿ ಸಾಹಿತಿಗಳು ನಮ್ಮ ನೆಲ ,ಜಲ , ಸಂಸ್ಕೃತಿ ಪರಂಪರೆಯನ್ನು ಜಗತ್ತಿಗೆ ಪರಿಚಯಿಸುವ ಕಾರ್ಯ ಮಾಡುತ್ತಿದ್ದಾರೆ. ಇದು ವಿಶ್ವವನ್ನು ತಲುಪಿ ನಮ್ಮ ದೇಶದ ಬಗ್ಗೆ ಹೆಮ್ಮೆಯ ಭಾವನೆ ಮೂಡುತ್ತದೆ. ಈ ಮೂಲಕ ಭಾರತವು ವಿಶ್ವಗುರುವಾಗಲು ಸಾಹಿತ್ಯವೂ ತನ್ನದೇ ಆದ ಯೋಗದಾನ ನೀಡುತ್ತದೆ ಎಂದು ಹೇಳಬಹುದು.



ಸಿ ಜಿ ವೆಂಕಟೇಶ್ವರ

ತುಮಕೂರು.


14 May 2023

ದಯಮಾಡಿಸು...ಕವನ..

 



*ದಯಮಾಡಿಸು..*


ಅಕ್ಷರ ವಿಸ್ತಾರ ಕವನ..1 ರಿಂದ 16 ಅಕ್ಷರ..

16 ಸಾಲು...



ನೀ

ಬಾರೋ

ವರುಣ 

ಕಾದಿಹೆವು

ಕಾತುರದಿಂದ 

ನಿನ್ನಾಗಮನಕೆ 

ತಡವೇಕೆ ಇನ್ನೂ ಬಾ

ಭುವಿಗೆ ಹರುಷವ ತಾ 

ನಿನ್ನಾಗಮನವೇ ಹಬ್ಬವು

ನಿನ್ನಿಂದಲೇ ಉಳಿವುದೀ ಜಗ 

ಹಿತಮಿತವಾಗಿ ದಯಮಾಡಿಸು 

ಶತವಂದನೆಯ ಮಾಡುವೆನು ನಾನು

ಅತಿಮಾಡುತ ತೊಂದರೆಯ   ಕೊಡದಿರು 

ರೌದ್ರರೂಪ ತಾಳುತಲಿ  ಹೆದರಿಸದಿರು 

ನೀನೇ ನಮ್ಮಯ  ದೈವವು ನೀನೇ ನಮ್ಮ ಜೀವವು 

ಸಕಾಲಕೆ ನೀನು ಬಂದರೆ  ಜೀವನ ಪಾವನವು.


*ಸಿಹಿಜೀವಿ*

ಸಿ ಜಿ ವೆಂಕಟೇಶ್ವರ

ತುಮಕೂರು.




13 May 2023

ವೈಜಂತಿಪುರದ ಜಯ...

 


ವೈಜಯಂತಿಪುರದ ಜಯ...


ಇಪ್ಪತ್ಮೂರು ವರ್ಷಗಳಿಂದ ಕದಂಬರ ಬಗ್ಗೆ ಮಕ್ಕಳಿಗೆ ಪಾಠ ಮಾಡುವಾಗ ಮಯೂರ ಶರ್ಮ ಮಯೂರವರ್ಮನಾದ ಕಥೆಯನ್ನು ಹೇಳಿರುವೆ.ಮಕ್ಕಳು ಅದನ್ನು ಬಹಳ ಆಸಕ್ತಿಯಿಂದ ಕೇಳಿದ್ದಾರೆ.ಮಯೂರನ ಸಾಹಿತ್ಯ  ಕಲೆ ಮತ್ತು ವಾಸ್ತುಶಿಲ್ಪಕ್ಕೆ ಅವನ ಕೊಡುಗೆ ಬಗ್ಗೆಯೂ ಮಕ್ಕಳಿಗೆ ಬೋಧಿಸಿರುವೆ. 

ಮಯೂರನ ಕುರಿತಾದ ಸಂತೋಷಕುಮಾರ ಮೆಹಂದಳೆ ರವರು ಬರೆದ 327 ಪುಟಗಳ ಬೃಹತ್  ಕಾದಂಬರಿ ವೈಜಯಂತಿಪುರ ಓದಿದಾಗ ಮಯೂರನ ಬಗ್ಗೆ ಕದಂಬರ ಬಗ್ಗೆ ನಮ್ಮ ನಾಡಿನ ಬಗ್ಗೆ ಹೆಮ್ಮೆ ಎನಿಸಿತು.ಈ ಭಾವನೆ ಮೂಡಲು ಕಾರಣರಾದ ಮೆಹೆಂದಳೆ ರವರಿಗೆ ನಮನಗಳು. ತಿಂಗಳ ಅಂತರದಲ್ಲಿ ನಾಲ್ಕನೆಯ ಮುದ್ರಣ ಕಂಡ ಕೃತಿಯು ಇನ್ನೂ ಹಲವು ಮುದ್ರಣ ಕಾಣುವಲ್ಲಿ ಸಂಶಯವಿಲ್ಲ.

ಕನ್ನಡ ಪುಸ್ತಕ ಓದುವವರು ಇಲ್ಲ ಎನ್ನುವವರಿಗೆ ಇದು ಸ್ಪಷ್ಟ ಉತ್ತರ . 

ಕ್ರಿ ಶ 316 ರಿಂದ 355 ರವರೆಗೆ  ನಮ್ಮ ನಾಡನ್ನು  ಆಳಿದ ಪ್ರಥಮ ಸಾಮ್ರಾಜ್ಯದ ಸ್ಥಾಪಕ ಮತ್ತು ಮಹಾನ್ ರಾಜ ಕದಂಬ ಸಾಮ್ರಾಟ್ ಮಯೂರಶರ್ಮ ನ ಮಹಾಚರಿತೆ ಓದದೇ ಇದ್ದರೆ ನಮ್ಮ ನಾಡಿನ ಮಹಾನ್ ಐತಿಹಾಸಿಕ ಮಾನವೀಯ ಗುಣಗಳ, ಜನಾನುರಾಗಿ , ಮತ್ಸದ್ದಿಯ ಬಗ್ಗೆ ನೀವು ತಿಳಿಯುವುದೇ ಇಲ್ಲ.


ತಾತ ವೀರಶರ್ಮರೊಂದಿಗೆ  ಪಲ್ಲವರ ನಾಡಿನ  ಕಂಚಿಗೆ ವಿದ್ಯಾಭ್ಯಾಸಕ್ಕೆ ತೆರಳಿದಾಗ ಅನುಭವಿಸಿದ ಅವಮಾನ ಮುಂದೊಂದು ದಿನ ಪಲ್ಲವರ ಸಾಮ್ರಾಜ್ಯದ ಪತನವಾಗಿ ಹೆಮ್ಮೆಯ ಕರ್ನಾಟ ಸಾಮ್ರಾಜ್ಯದ ಉದಯವಾಗುವುದೆಂದು ಮಯೂರನ ಬಿಟ್ಟು ಬೇರಾರಿಗೂ ತಿಳಿದಿರಲಿಕ್ಕಿಲ್ಲ. ಶಾಸ್ತ್ರ ಹೇಳುವವನು  ಶಸ್ತ್ರ ಹಿಡಿದು ಸಾಮ್ರಾಜ್ಯ ಕಟ್ಟಬಲ್ಲ ಎಂಬುದನ್ನು ನಿರೂಪಿಸದವ ಮಯೂರ.

ಕಾದಂಬರಿಯ ಮೊದಲ ಅದ್ಯಾಯದಿಂದ ಕಡೆಯವರೆಗೆ ಓದುತ್ತಾ ಹೋದಂತೆ ಇನ್ನೂ ಓದಬೇಕು. ಎಂಬ.ವೇಗ..ವೇಗ.. ಒಂದೊಳ್ಳೆಯ ಸಿನಿಮಾದ ಸ್ಕ್ರೀನ್ ಪ್ಲೇ ಮತ್ತು ಎಡಿಟಿಂಗ್ ಚೆನ್ನಾಗಿದ್ದರೆ ಆ ಸಿನಿಮಾ ಸೋಲುವುದೆಲ್ಲಿ ಬಂತು .ವೈಜಯಂತಿಪುರ ಆ ಮಟ್ಟದ ಅನುಭವವನ್ನು ಓದುಗರಿಗೆ ನೀಡುತ್ತದೆ. ನಾಲ್ಕನೇ ಶತಮಾನದ ಚಿತ್ರಣವನ್ನು ಕಟ್ಟಿ ಕೊಡುವಲ್ಲಿ ಕಾದಂಬರಿಕಾರರು ಗೆದ್ದಿದ್ದಾರೆ. ಅದರಲ್ಲೂ ಯುದ್ಧದ ಸನ್ನಿವೇಶಗಳ ವರ್ಣನೆ ಓದುವಾಗ ಗ್ರಾಫಿಕ್ಸ್ ಇಲ್ಲದೇ ನಮ್ಮ ಕಣ್ಮುಂದೆ ಯುದ್ಧದ ಸನ್ನಿವೇಶಗಳು ಬಂದು ನಿಲ್ಲುತ್ತವೆ. 

ಗೆರಿಲ್ಲಾ ಮಾದರಿ ಯುದ್ಧದ ತಂತ್ರಗಳು ಸಾಮಂತರು ಮತ್ತು ಬಲಿಷ್ಠ ಸೈನ್ಯ ಎದುರಿಸುವಾಗ ತೋರುವ ವ್ಯೂಹಗಳು ನಿರ್ಧಯವಾಗಿ ಎದುರಾಳಿಗಳ ಶಿರಗಳನ್ನು ಭೀಕರವಾಗಿ ಚೆಂಡಾಡಿ ತನ್ನ ವಿರುದ್ಧವಾಗಿ ಅನಗತ್ಯವಾಗಿ ಬಂಡೆದ್ದರೆ ಇದೇ ಪಾಡು ಎಂದು ಸಂದೇಶ ಸಾರುವ  ಮಯೂರ ಪ್ರಜೆಗಳ ಒಳಿತಿಗೆ ಮಿಡಿಯುವ ಜನಾನುರಾಗಿಯಾಗಿಯೂ ಗಮನಸೆಳೆಯುತ್ತಾನೆ. ಚಂದ್ರವಳ್ಳಿ ಅವನು ಕಟ್ಟಿಸಿದ ಕೆರೆ ಇಂದಿಗೂ ಜೀವಂತ. ಬಂಗಾರದ ನಾಣ್ಯ ಟಂಕಿಸಿ ತಾನೊಬ್ಬ ಉತ್ತಮ ಅರ್ಥಶಾಸ್ತ್ರಜ್ಞ ಎಂದು ನಿರೂಪಿಸಿದ.ವಿದ್ಯಾಭ್ಯಾಸಕ್ಕಾಗಿ ದೂರದೂರಿಗೆ ಪಯಣ ಮಾಡುವುದನ್ನು ತಪ್ಪಿಸಿ ತನ್ನ ನಾಡಿನಾದ್ಯಂತ ಹಲವಾರು ಅಗ್ರಹಾರ ಸ್ಥಾಪಿಸಿ ತಾನೂ ಕಲಿಯುತ್ತಾ ಕಲಿಸಿದ ಶಿಕ್ಷಣಪ್ರೇಮಿಯಾಗಿ ಮಯೂರ ಗಮನಸೆಳೆಯುತ್ತಾನೆ. ಕಲೆ ವಾಸ್ತುಶಿಲ್ಪಕ್ಕೆ ಅವನು ನೀಡಿದ ಕೊಡುಗೆ ತಿಳಿಯಲು ಮಧುಕೇಶ್ವರ ದೇವಾಲಯ ನೋಡಿದರೆ ಸಾಕು  .ಹೀಗೆ ಕಾದಂಬರಿಯಲ್ಲಿ ಮಯುರನ  ವ್ಯಕ್ತಿತ್ವವು ಬಹಳ ಸುಂದರವಾಗಿ  ಮೂಡಿಬಂದಿದೆ. ಇವನು ನಮ್ಮ ನಾಡಿನ ಹೆಮ್ಮೆ. ನಮ್ಮ ಅಸ್ಮಿತೆ ಎಂದು ಹೆಮ್ಮೆ ಪಡಲು ಇನ್ನೇನು ಬೇಕು. 


ಕಾದಂಬರಿಯಲ್ಲಿ ನನಗೆ ಇಷ್ಷವಾದ ಮತ್ತೊಂದು ಅಂಶವೆಂದರೆ ಪಾತ್ರಪೋಷಣೆ.  ಪ್ರಧಾನ ಅಮಾತ್ಯರಾಗಿ ವೀರಶರ್ಮರ ಸಲಹೆ, ತಂದೆಯಾದ ಬಂಧುಸೇನರ ಸಕಾಲಿಕ ತಂತ್ರಗಳು ,ಗೆಳೆಯ ಚಂಡಸೇನನ ಸಕಾಲಿಕ ಬೆಂಬಲ ಮತ್ತು ಯುದ್ಧ ನೀತಿಗಳು ಬೃಹತ್ ಬಾಣನ ಶೌರ್ಯ,

ಚಕ್ರಭಾನು ಮತ್ತು ಶಿವಸ್ಕಂದವರ್ಮ ರು ರಣರಂಗದಲ್ಲಿ ಬಿದ್ದು ಒದ್ದಾಡುವ ಚಿತ್ರಣಗಳು ಗಮನಸೆಳೆಯುತ್ತವೆ. 


ಮೆಹಂದಳೆಯವರು ಈ ಕಾದಂಬರಿ ಬರೆಯಲು ಮಾಡಿದ ಗ್ರೌಂಡ್ ವರ್ಕ್ ಕಾದಂಬರಿಯ ಪುಟಗಳ ಅಡಿಟಿಪ್ಪಣಿಗಳಲ್ಲಿ ಎದ್ದು ಕಾಣುತ್ತದೆ.

ಮೆಹಂದಳೆಯವರ ಬಗ್ಗೆ ನನ್ನ ಮತ್ತೊಂದು ಮೆಚ್ಚುಗೆಯೆಂದರೆ ಸ್ವತಃ ಅವರೇ ಪುಸ್ತಕದ ಒಳಪುಟ ವಿನ್ಯಾಸ ಮತ್ತು ಮುಖಪುಟ ವಿನ್ಯಾಸ ಮಾಡಿರುವುದು .ಎರಡೂ ಸೂಪರ್.

ಒಟ್ಟಾರೆ ಬಹಳ ದಿನಗಳ ನಂತರ ಒಂದು ಉತ್ಕೃಷ್ಟ ಐತಿಹಾಸಿಕ ಕಾದಂಬರಿ ಓದಿದ ಸಂತಸವಾಯಿತು .

ನೀವು ಇನ್ನೂ ಈ ಕಾದಂಬರಿ ಓದಿಲ್ಲವೆಂದರೆ ಇಂದೇ ಖರೀದಿಸಿ ಓದಿ. 


ಸಿಹಿಜೀವಿ

ಸಿ ಜಿ ವೆಂಕಟೇಶ್ವರ

ತುಮಕೂರು.

11 May 2023

ನಲಿ...

 



ನಲಿ


ಉನ್ನತಿ ಅವನತಿ ಏನೇ ಇರಲಿ

ಮಾನವನಾಗಿರುವುದನು ಕಲಿ

ಸದಾ ನಗುವಿರಲಿ ವದನದಲಿ 

ಭೇದ ಭಾವಗಳಿಗೆ ಹೊಡಿ ಗೋಲಿ 

ಉನ್ನತ ಚಿಂತನೆಗಳಿರಲಿ ಮನದಲಿ

ಎಲ್ಲರೊಳಗೊಂದಾಗಿ ನಲಿ.



ಸಿಹಿಜೀವಿ

ಸಿ ಜಿ ವೆಂಕಟೇಶ್ವರ

ತುಮಕೂರು

06 May 2023

ಮತದಾರನೇ ಮಹಾಪ್ರಭು...

 



ನಮ್ಮ ರಾಜ್ಯದಲ್ಲಿ ಐದು ವರ್ಷಕ್ಕೊಮ್ಮೆ ಬರುವ ಮತದಾನದ ಜಾತ್ರೆ ಬಂದಿದೆ.ಈ ಜಾತ್ರೆಯಲ್ಲಿ ನಾವೆಲ್ಲರೂ ಸಂಭ್ರಮ ಸಡಗರದಿ ಪಾಲ್ಗೊಂಡು ಜಾತ್ರೆಯ ಯಶಸ್ವಿಯಾಗಿಸಬೇಕಿದೆ. ಇದು ಚುನಾವಣಾ ಹಬ್ಬವೂ ಹೌದು.ಹಲವಾರು ಜನ ಇದನ್ನು ಯುದ್ಧ ,ಕುರುಕ್ಷೇತ್ರ ಜಂಗೀಕುಸ್ತಿ ಎಂತಲೂ ಕರೆಯುತ್ತಾರೆ. ಯಾವ ಹೆಸರಿನಿಂದ ಕರೆದರೂ ಇದು ಪ್ರಜಾಪ್ರಭುತ್ವದ ಒಂದು ಮಹತ್ವದ ಘಟ್ಟ ಎಂಬುದನ್ನು ಮರೆಯಬಾರದು.
ಈ ಚುನಾವಣಾ ಪ್ರಕ್ರಿಯೆಯಲ್ಲಿ ಮತದಾರನೇ ಮಹಾಪ್ರಭು .ಇತ್ತೀಚಿನ ದಿನಗಳಲ್ಲಿ ಈ ಪ್ರಭು ಯಾವ ರೀತಿಯಲ್ಲಿ ಭ್ರಷ್ಟಾನಾಗಿದ್ದಾನೆಂದರೆ ಓಟು ಕೇಳುವ ಅಭ್ಯರ್ಥಿಗಳು ತಮ್ಮ ಊರು,ಮನೆಗೆ ಬಂದರೆ ಅವರ   ಕೈ ಬಾಯಿ ನೋಡುತ್ತಾರೆ .ಇದಕ್ಕೆ ಪೂರಕವಾಗಿ ಅಲ್ಲಲ್ಲಿ ಕುಕ್ಕರ್, ಸ್ಟೋವ್, ಟೀವಿ,ಸೈಟ್, ಹಣ ಇತ್ಯಾದಿಗಳು ಮತದಾರರ ಕೈಸೇರಿವೆ ಎಂಬ ವರದಿ ಓದುತ್ತಿದ್ದೇವೆ.ಮತದಾರ ಮಹಾಪ್ರಭುವೆ ದಯವಿಟ್ಟು ನಿನ್ನನ್ನು ನೀ ಮಾರಿಕೊಳ್ಳದಿರು.

ಮಾರಿಕೊಳ್ಳದಿರು
ನೋಟಿಗಾಗಿ ನಿನ್ನ
ಓಟನ್ನು |
ಅರ್ಹ ಅಭ್ಯರ್ಥಿಗೆ
ತಪ್ಪದೇ ಒತ್ತು
ಇ. ವಿ .ಎಮ್
ಬಟನ್ನು ||

ನಮ್ಮ ದೇಶದ ಸ್ವಾತಂತ್ರ್ಯದ 75 ನೇ ವರ್ಷದ ಅಮೃತಮಹೋತ್ಸವ ಆಚರಿಸುತ್ತಿರುವ ಈ ಪರ್ವ ಕಾಲದಲ್ಲಿ  ನೂರು ಪ್ರತಿಶತ ಇರಲಿ, ಶೇಕಡಾ75 ಮತದಾನ  ದಾಟದಿರುವುದು ಮತದಾನದ ಬಗ್ಗೆ ನಮ್ಮ ನಿರಾಸಕ್ತಿಯನ್ನು ತೋರಿಸುತ್ತದೆ.
ಮತದಾನದ ದಿನ ಸಾರ್ವತ್ರಿಕ ರಜೆಯ ಮಜ ಸವಿಯಲು ಮತದಾನದ ಬದಲು ಪ್ರವಾಸ ಹೋಗುವ ಮಹಾನುಭಾವರಿಗೇನು ಕಮ್ಮಿಯಿಲ್ಲ.

ಮಾಡೋಣ ನಾವೆಲ್ಲರೂ
ಕಡ್ಡಾಯವಾಗಿ
ಮತದಾನ|
ಎತ್ತಿ ಹಿಡಿಯೋಣ
ನಮ್ಮ ಸಂವಿಧಾನ||

ಇನ್ನೂ ಮತದಾನ ಮಾಡುವ ಕೆಲವರು ದುಡುಕಿ ಆಮಿಷಗಳಿಗೆ ಬಲಿಯಾಗಿ ತಮ್ಮ ಮತ ಮಾರಿಕೊಂಡು ಐದು ವರ್ಷಗಳ ಕಾಲ ಯಾಮಾರಿಬಿಟ್ಟಿರುತ್ತಾರೆ. ಅದಕ್ಕೆ ಹೇಳುವುದು ಮತ ಮಾರಬೇಡಿ.

ನಿಮ್ಮ ಮತವನ್ನು
ಯಾರಿಗೂ
ಮಾರಬೇಡಿ|
ಆಮಿಷಗಳಿಗೆ ಮರುಳಾಗಿ
ಯಾಮಾರಬೇಡಿ||

ಪ್ರಜಾಪ್ರಭುತ್ವದಲ್ಲಿ ನಮ್ಮ ಮತವು ಅಮೂಲ್ಯವಾದುದು ನಮ್ಮ ಸಂವಿಧಾನ ನೀಡಿದ ಹಕ್ಕುಗಳ ಪಡೆಯಲು ನಾವು ಕರ್ತವ್ಯ ಮಾಡಲೇಬೇಕು ಆದ್ದರಿಂದ ನಾವೆಲ್ಲರೂ ಮತದಾನದ ಕರ್ತವ್ಯ ಮಾಡಿ ನಮ್ಮ ಭವಿಷ್ಯವನ್ನು ನಾವೇ ರೂಪಿಸಿಕೊಳ್ಳಬೇಕಿದೆ.

ಮತದಾನ ಮಾಡಿ,
ಮಾಡಿದರೆ ನಮ್ಮ
ಕರ್ತವ್ಯ|
ಸುಂದರವಾಗುವುದು
ನಮ್ಮ ಭವಿತವ್ಯ||

ಆದ್ದರಿಂದ ಸಬೂಬು ಹೇಳದೆ, ಮತದಾನದ ದಿನ ಮತಗಟ್ಟೆಗೆ ತೆರಳಿ ನಮ್ಮ ಮನಸ್ಸಾಕ್ಷಿಯ ಮತ ಹಾಕೋಣ ಉತ್ತಮ ನಾಯಕರ ಆಯ್ಕೆ ಮಾಡಿ ಪ್ರಜಾಪ್ರಭುತ್ವದ ಯಶಸ್ಸು ಕೋರೋಣ.

ತಪ್ಪದೇ ನಾವು
ಚಲಾವಣೆ ಮಾಡಿದರೆ
ನಮ್ಮ ಮತ|
ಮುಂದೆ ನಮ್ಮ
ನಾಡಿಗಾಗುವುದು ಹಿತ||

*ಸಿಹಿಜೀವಿ*
ಸಿ ಜಿ ವೆಂಕಟೇಶ್ವರ.
ಶಿಕ್ಷಕರು
ಸರ್ಕಾರಿ ಪ್ರೌಢಶಾಲೆ ಕ್ಯಾತ್ಸಂದ್ರ
ತುಮಕೂರು
9900925529


ನನ್ನ ಮತ ಮಾರಾಟಕ್ಕಿಲ್ಲ...


 




ನ್ಯಾನೋ ಕಥೆ ೨೩

ನನ್ನ ಮತ ಮಾರಾಟಕ್ಕಿಲ್ಲ.


"ತಗೋಳಪ್ಪ ಇದು ಕುಕ್ಕರ್, ಈ ಸಾರಿ ನಮ್ ಪಕ್ಷಕ್ಕೇ ಓಟ್ ಹಾಕ್ಬೇಕು" ಎಂದು ಕೊಟ್ಟು ಹಲ್ಲುಗಿಂಜಿ ಹೊರನಡೆದ   ಮಿಕ್ಸಿ, ಸೀರೆ, ವಾಚ್ಗಳು  ಮತದಾರನ ಮನೆಗೆ ಬಂದವು. ಕೊನೆಯಲ್ಲಿ ಬಂದವನು  ಐನೂರರ ಹತ್ತು ನೋಟು ನೀಡಿ "ನಮ್ ಪಕ್ಷದ್ ಸಿಂಬಲ್ ಗೊತ್ತಲ್ಲ ಮರೀಬೇಡ " ಎಂದು ಗತ್ತಿನಿಂದ ಹೇಳಿ ಹೋದ .ಒಂದು ಮೂಲೆಯಲ್ಲಿ ಐದನೇ ತರಗತಿ ಓದುತ್ತಿದ್ದ ಮಗ "ನನ್ನ ಮತ ಮಾರಾಟಕ್ಕಿಲ್ಲ "  ಬರಹವನ್ನು  ಹಿಡಿದಿದ್ದ ಯಾರೂ ಅದರೆಡೆ  ಗಮನ ನೀಡಲೇಇಲ್ಲ .


ಸಿಹಿಜೀವಿ

ಸಿ ಜಿ ವೆಂಕಟೇಶ್ವರ

ತುಮಕೂರು



05 May 2023

ಬುದ್ಧನ ಚಿಂತನೆಗಳು...

 


ಬುದ್ದನ ಚಿಂತನೆಗಳು...
ಧಾರ್ಮಿಕ ಮುಖಂಡರು ಹೇಗಿರಬೇಕು...

ಇತ್ತೀಚೆಗೆ ಪಾಲ್ ಕಾರಸ್ ರವರು ರಚಿಸಿರುವ "ಬುದ್ಧೋಪದೇಶ"  ಪುಸ್ತಕ ಓದಿದೆ .ನೂರಾರು ಮರು ಮುದ್ರಣ ಕಂಡ ಈ ಕೃತಿಯನ್ನು ಎಲ್ಲರೂ ಪದೇ ಪದೇ ಓದಬೇಕಾದ ಪುಸ್ತಕ.
ಈ ಪುಸ್ತಕದ ಎಲ್ಲಾ ಅಧ್ಯಾಯಗಳು ಬಹಳ ಉತ್ತಮವಾಗಿದ್ದರೂ ಮೂವತ್ತಮೂರನೇ ಅಧ್ಯಾಯ ನನ್ನನ್ನು ಬಹಳ ಸೆಳೆಯಿತು.ಅದಕ್ಕೆ ಇತ್ತೀಚಿನ ದಿನಗಳಲ್ಲಿ ಕೆಲ  ಧಾರ್ಮಿಕ ಕೇಂದ್ರಗಳ ಮತ್ತು ಕೆಲ ಧರ್ಮಗುರುಗಳ ನಡವಳಿಕೆಗಳು ಕಾರಣವಾಗಿದ್ದಿರಬಹುದು...
ಆ ಅಧ್ಯಾಯದಲ್ಲಿ ಭಿಕ್ಕುಗಳೆಲ್ಲ ಬುದ್ದನ ಬಳಿ ಬಂದು ಓ ಪ್ರಭುವೆ ಪ್ರಾಪಂಚಿಕ ಬದುಕನ್ನ  ತೊರೆದವರು ಮಹಿಳೆಯರನ್ನು ಹೇಗೆ ನೋಡಬೇಕು ಎಂದು ಕೇಳಿದಾಗ ಬುದ್ದನ ಉತ್ತರ ಈ ಕೆಳಗಿನಂತೆ ಇದೆ....
ಮಹಿಳೆಯರತ್ತ ಗಮನಹರಿಯುವುದರ ವಿರುದ್ಧ ರಕ್ಷಿಸಿಕೊಳ್ಳಿ.
ಮಹಿಳೆಯರನ್ನು ನೋಡಿದರೂ ಸಹ ನೋಡದಂತಿರಬೇಕು ಮತ್ತು ಆಕೆಯೊಂದಿಗೆ ಸಂಭಾಷಣೆ ಸಲ್ಲದು.
ಒಂದೊಮ್ಮೆ ಆಕೆಯೊಂದಿಗೆ ಮಾತನಾಡಲೇ ಬೇಕಾದರೆ ಸ್ವಚ್ಛವಾದ ಮನಸ್ಸಿರಬೇಕು.  ಈ. ಜಗತ್ತಿನಲ್ಲಿ ಕಮಲದ ಎಲೆಯಂತೆ ಕಳಂಕರಹಿತನಾಗಿರಬೇಕು ಮತ್ತು ಕೆಸರಿನಲ್ಲಿ ಬೆಳದಿದ್ದರೂ ನಿಷ್ಕಳಂಕತೆಯಿಂದಿರಬೇಕು ಎಂದು ಆಲೋಚಿಸಬೇಕು.  ಮಹಿಳೆಗೆ ವಯಸ್ಸಾಗಿದ್ದರೆ ಆಕೆಯನ್ನು ನಿನ್ನ ತಾಯಿಯಂತೆ ಕಂಡು
ಗೌರವಿಸು.ಆಕೆ ಚಿಕ್ಕವಳಾಗಿದ್ದರೆ ನಿನ್ನ ತಂಗಿಯಂತೆ ನೋಡು, ಆಕೆ ಇನ್ನೂ
ಬಾಲಕಿಯಾಗಿದ್ದರೆ ನಿನ್ನ ಮಗುವಿನಂತೆ ನೋಡು.
ಸಾಧು ಸಂತರು  ಮಹಿಳೆಯನ್ನು ಮಹಿಳೆಯೆಂದೇ ನೋಡಿದರೆ ಅಥವಾ ಅವಳನ್ನು ಮಹಿಳೆಯೆಂದೇ ಮುಟ್ಟಿದರೆ ತಾನು ಕೈಗೊಂಡ ಪ್ರಮಾಣವನ್ನು ಮುರಿದಂತೆ ಮತ್ತು ಆತ ತಥಾಗತನ ಶಿಷ್ಯನಾಗಿ ಇನ್ನೊಂದೂ ಉಳಿಯುವುದಿಲ್ಲ.
ಪುರುಷನಲ್ಲಿ ಕಾಮನೆಗಳ ಶಕ್ತಿ ಅತ್ಯಧಿಕ. ಅದೇ ಪ್ರಕಾರ ಅದಕ್ಕೆ ಹೆದರುತ್ತಾರೆ. ಆಗ ಶ್ರದ್ಧೆಯಿಂದ ದೃಢ ಮನಸ್ಸಿನ ಬಾಣವನ್ನು ತೆಗೆದುಕೊಳ್ಳಬೇಕು.ಆ ಬಾಣದ ಹರಿತವಾದ ತುದಿಯಲ್ಲಿ ಜ್ಞಾನವೆಂಬುದಿರಲಿ.
ನಿಮ್ಮ ಶಿರಗಳನ್ನು ಸತ್ಯಶೀಲ ಆಲೋಚನೆಗಳ ಶಿರಸ್ತ್ರಾಣದಿಂದ  ಮುಚ್ಚಿಕೊಳ್ಳಿ
ಮತ್ತು ಪಂಚೇಂದ್ರಿಯಗಳ ವಿರುದ್ಧ ಇರುವ ಖಚಿತ ನಿಶ್ಚಯದೊಂದಿಗೆ ಹೋರಾಡಿ.
ಕಾಮಾಂಧತೆ ಪುರುಷನ  ಹೃದಯವನ್ನು ಮರೆಮಾಚುತ್ತದೆ. ಮಹಿಳೆಯ ಸೌಂದರ್ಯದಿಂದ ಗೊಂದಲಗೊಂಡಾಗ ಮನಸ್ಸು ಮಂಕಾಗುತ್ತದೆ.
ನಿಮ್ಮ ಇಂದ್ರಿಯ ಬಯಕೆಗಳನ್ನು ಪ್ರೋತ್ಸಾಹಿಸುವ  ಬದಲು ನಿಮ್ಮ ಎರಡೂ ಕಣ್ಣುಗಳನ್ನು ನಿಗಿನಿಗಿ ಕಾಯಿಸಿದ ಕಬ್ಬಿಣದ ಸಲಾಕೆಗಳಿಂದ ಇರಿದುಕೊಳ್ಳುವುದು ವಾಸಿ. ಮಹಿಳೆಯರನ್ನು ಕಾಮಾಂಧತೆ ವಿಷಯಾಸಕ್ತಿಯಿಂದ ನೋಡುವುದಕ್ಕಿಂತ ಈ ಪಶ್ಚಾತ್ತಾಪವೇ ಸರಿಯಾದ ಕ್ರಮ.
ಮಹಿಳೆಯೊಂದಿಗೆ ಮಲಗಿ ನಿಮ್ಮ ವಿಷಯಾಸಕ್ತ ಆಲೋಚನೆಗಳನ್ನು ಉದ್ದೀಪಿಸಿಕೊಳ್ಳುವ ಬದಲು ಹಸಿದ ಹೆಬ್ಬುಲಿಯ ಬಾಯಿಗೆ ಬೀಳುವುದು ವಾಸಿ ಅಥವಾ ಮರಣದಂಡನೆ ಕೊಡುವ ಹಂತಕನ ಕತ್ತಿಯ ಕೆಳಗೆ ಸಿಕ್ಕುವುದು ವಾಸಿ.

ಜಗ ಮಹಿಳೆಯರಿಗೆ ತಮ್ಮ ರೂಪ ಸೌಂದರ್ಯ ತೋರಿಸಲು ಬಹು ಕುತೂಹಲ, ಅವರು ನಡೆಯುತ್ತಿರಲಿ, ನಿಂತಿರಲಿ, ಕುಳಿತಿರಲಿ ಅಥವಾ ಮಲಗಿರಲಿ. ಅದೇ ಅವರ ಹಂಬಲ, ಅವಳ ಚಿತ್ರ ತೆಗೆದಾಗಲೂ ತನ್ನ ಸೌಂದರ್ಯದ ರಮಣೀಯ ಆಕರ್ಷಣೆ ಆದರಲ್ಲಿ ಬಿಂಬಿಸಬೇಕೆಂಬುದೇ ಆಕೆಯ ಬಯಕೆ. ಇದರಿಂದ ಪುರುಷರ ಸ್ಥಿರ ಹೃದಯನ್ನು ಗೆಲ್ಲಬಹುದೆಂಬ ತವಕ
ಹಾಗಾದರೆ ನಿಮ್ಮನ್ನು ನೀವು ರಕ್ಷಿಸಿಕೊಳ್ಳುವುದು ಹೇಗೆ? ಎಂದು ಬುದ್ದ ಬಿಕ್ಕುಗಳನ್ನು  ಪ್ರಶ್ನಿಸುತ್ತಾ ಬುದ್ಧ  ಹೀಗೆಂದರು..
ಅವಳ ಕಣ್ಣೀರನ್ನಾಗಲಿ ಅವಳ ನಗೆಯನ್ನಾಗಲಿ ಶತ್ರುವಿನಂತೆ ನೋಡಬೇಕು.
ಆಕೆಯ ಬಳುಕಿ ಬಾಗುವ ಆಕಾರ, ತೂಗಾಡುವ, ಮರುಳು ಮಾಡುವ ಬಾಹುಗಳು ಮತ್ತವಳ ಸಿಕ್ಕು ಬಿಡಿಸಿದ ಹರಿ ಬಿಟ್ಟ ಕೂದಲುಗಳು, ಪುರುಷನ ಹೃದಯವನ್ನು ಬಲೆಗೆ ಬೀಳಿಸುವ ಉದ್ದೇಶದಿಂದಲೇ ವಿನ್ಯಾಸಿಸಲಾಗಿದೆ ಎಂದೇ ಪರಿಗಣಿಸಿ. ಆದ್ದರಿಂದ ನಾನೇನು ಹೇಳುತ್ತೇನೆಂದರೆ ನಿಮ್ಮ ಮನಸ್ಸನ್ನು ನಿಯಂತ್ರಿಸಿ.
ಅದಕ್ಕೆ ಮಾತ್ರ ಲಗಾಮಿಲ್ಲದ ಪರವಾನಗಿಯನ್ನು ಕೊಡಬೇಡಿ...
ಬುದ್ಧನ ಈ ಸಂದೇಶ ಓದಿದಾಗ ಬೇಡ ಎಂದರೂ ಪ್ರಸ್ತುತ ಸಮಾಜದಲ್ಲಿನ ಕೆಲ ಧಾರ್ಮಿಕ ಮುಖಂಡರ ಚಿತ್ರಗಳು ಕಣ್ಣ ಮುಂದೆ ಬಂದವು...ನಿಮಗೂ ಬಂದಿರುತ್ತದೆ ಅಲ್ಲವೇ? ಮೇಲಿನ ಎಲ್ಲಾ ಸಲಹೆ ಸೂಚನೆಗಳನ್ನು ಸಾಮಾನ್ಯ ಜನರು ಪಾಲಿಸಿದರೂ ತಪ್ಪಿಲ್ಲ.ಏಕೆಂದರೆ ಇತ್ತೀಚಿನ ದಿನಗಳಲ್ಲಿ ಸಮಾಜದಲ್ಲಿ ನಡೆಯುವ ಅನೈತಿಕ ಸಂಬಂಧಗಳ ಪರಿಣಾಮಗಳು, ಮಹಿಳೆಯ ಮೇಲೆ ನಡೆಯುವ ಅಮಾನುಷ ದೌರ್ಜನ್ಯಗಳನ್ನು ಗಮನಿಸಿದಾಗ ಸರ್ವರೂ ಬುದ್ಧನ ಈ ಮೇಲಿನ ಮಾತುಗಳನ್ನು ಮನನ ಮಾಡಿಕೊಂಡು ಅಳವಡಿಸಿಕೊಂಡರೆ ಸಮಾಜ ಸ್ವಲ್ಪ ಮಟ್ಟಿಗಾದರೂ ಸುಧಾರಿಸಬಹುದೇನೋ ಎಂಬ ಆಶಾವಾದ ನನ್ನದು.

ಸಿಹಿಜೀವಿ
ಸಿ ಜಿ ವೆಂಕಟೇಶ್ವರ
ತುಮಕೂರು.