29 February 2024

ಸಮಾಜಮುಖಿ ಚಿಂತನೆಯ ಗ್ರಂಥಪಾಲಕ ಎಸ್ ಆರ್ ಯೋಗಾನಂದ್ .

 



ಸಮಾಜಮುಖಿ ಚಿಂತನೆಯ ಗ್ರಂಥಪಾಲಕ ಎಸ್ ಆರ್ ಯೋಗಾನಂದ್ .


"ಪಿ ಯು ಸಿ ಕಾಲೇಜಿನ ಮೇಲ್ಪಟ್ಟ ಕಾಲೇಜುಗಳಲ್ಲಿ  ಮಕ್ಕಳ ಕಲಿಕೆಗೆ ಮತ್ತು ಜ್ಞಾನಾರ್ಜನೆಗೆ ಪೂರಕವಾದ ಒಂದು ಪ್ರತ್ಯೇಕ ಗ್ರಂಥಾಲಯ ಕಟ್ಟಡವಿರಬೇಕು.ವಿಶಾಲವಾದ ಕಟ್ಟಡದ ಕೆಳಾಂತಸ್ತು ಮತ್ತು ಮೇಲ್ ಅಂತಸ್ತು ಹೊಂದಿರಬೇಕು. ಮೇಲಿನ ಅಂತಸ್ತಿನಲ್ಲಿ ಪಠ್ಯಕ್ರಮಕ್ಕೆ ಪೂರಕವಾದ  ಪುಸ್ತಕಗಳು, ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಿ ನಡೆಸಲು ಅಗತ್ಯವಾದ ಪುಸ್ತಕಗಳು ಲಭ್ಯವಿರಬೇಕು.ಜೊತೆಗೆ ಅತ್ಯಾಧುನಿಕ ಡಿಜಿಟಲ್ ಗ್ರಂಥಾಲಯವಿರಬೇಕು.    ಕೆಳಭಾಗದಲ್ಲಿ ಸಭಾಂಗಣವಿರಬೇಕು ಅಲ್ಲಿ ಆಗಾಗ್ಗೆ ವಿದ್ಯಾರ್ಥಿಗಳಿಗೆ ಸಾಮಾನ್ಯ ಜ್ಞಾನ ಕ್ಕೆ ಮತ್ತು ವ್ಯಕ್ತಿತ್ವ ವಿಕಸನ ತರಗತಿಗಳನ್ನು ಹಮ್ಮಿಕೊಳ್ಳಬೇಕು..".ಹೀಗೆ ತನ್ನ ಯೋಜನೆಗಳನ್ನು ಪಟಪಟನೆ ಹೇಳುತ್ತಾ ಹೋಗುತ್ತಾನೆ ಗೆಳೆಯ ಯೋಗಾನಂದ್ ...

ಇತ್ತೀಚೆಗೆ ನ್ಯಾಯಾಧೀಶರ ಪರೀಕ್ಷೆಯಲ್ಲಿ ಉತ್ತೀರ್ಣರಾದ ಮದ್ದೂರು ತಾಲ್ಲೂಕಿನ ರಂಜಿತಾ ಎಂಬುವವರು ಕಾಲೇಜಿನ ಲೈಬ್ರರಿ ನಾನು ಯಶಸ್ಸು ಗಳಿಸಲು ಮೂಲ ಕಾರಣ ಎಂಬ ಮಾತುಗಳನ್ನು ಕೇಳಿದಾಗ

ಯೋಗಾನಂದ್ ರವರ ಚಿಂತನೆ ಸರಿಯಾದುದು ಎಂದು ನನಗೆ ಮನವರಿಕೆಯಾಯಿತು.


ಗೆಳೆಯ ಯೋಗಾನಂದ ಎಸ್.ಆರ್.ಗ್ರಂಥಪಾಲಕರಾಗಿ  ಬಾಲಕರ ಸರ್ಕಾರಿ ಪದವಿ ಪೂರ್ವ ಕಾಲೇಜು ಅರಕಲಗೂಡು ಹಾಸನ ಜಿಲ್ಲೆ. ಇಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಸದಾ ಚಲನಶೀಲ ಸಮಾಜ ಮುಖಿ ಚಿಂತನೆಯ ಇವರು ಸದಾ ಒಂದಿಲ್ಲೊಂದು ಚಟುವಟಿಕೆಗಳಲ್ಲಿ ಪಾಲ್ಗೊಳ್ಳುತ್ತಾರೆ.

ಹಾಸನ ಜಿಲ್ಲೆಯ ಅರಕಲಗೂಡು ತಾಲ್ಲೂಕಿನ ಶೀಗೋಡು ಗ್ರಾಮದ ನಿವಾಸಿಗಳಾದ ರಾಚಪ್ಪ   ಶಿವಮ್ಮ ದಂಪತಿಗಳ    ಮಗನಾಗಿ ಜುಲೈ ತಿಂಗಳ 1976 ರಲ್ಲಿ ಜನಿಸಿದರು.

ಪ್ರಾಥಮಿಕ ಶಿಕ್ಷಣವನ್ನು ತಮ್ಮ ಹುಟ್ಟಿದ ಊರಾದ ಶೀಗೋಡು ಗ್ರಾಮದ ಸರ್ಕಾರಿ ಪ್ರಾಥಮಿಕ ಪಾಠ ಶಾಲೆಯಲ್ಲಿ ಪೂರೈಸಿದರು.

 5  ರಿಂದ 7 ನೇ ತರಗತಿ ಯನ್ನು  ಪಿರಿಯಾಪಟ್ಟಣ ತಾಲೂಕಿನ ಸಂಗರಹಳ್ಳಿಯ  ಸರ್ಕಾರಿ ಹಿರಿಯ ಪ್ರಾಥಮಿಕ ಪಾಠ ಶಾಲೆಯಲ್ಲಿ ವ್ಯಾಸಂಗ ಮಾಡಿದರು.

   ಮೈಸೂರು ಜಿಲ್ಲೆಯ ಚನ್ನಂಗೆರೆಯ   ಶ್ರೀ ಸಿಡಿಲು ಮಲ್ಲಿಕಾರ್ಜುನ ಸ್ವಾಮಿ ಪ್ರೌಢಶಾಲೆಯಲ್ಲಿ ಹತ್ತನೇ ತರಗತಿಯನ್ನು ಓದಿದ ಬಳಿಕ 

ಕೆ ಆರ್ ನಗರದ ಭೇರ್ಯದ  ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಪಿ ಯು ಸಿ ವ್ಯಾಸಂಗ ಮಾಡಿದರು.

 ಕೆ.ಆರ್.ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಪದವಿ ಪಡೆದು ಮೈಸೂರಿನ ಸರ್ಕಾರಿ ಶಿಕ್ಷಕರ ಶಿಕ್ಷಣ ಮಹಾವಿದ್ಯಾಲಯದಲ್ಲಿ ಬಿ ಎಡ್ ಓದುವಾಗ ಇವರು ನನ್ನ ಸಹಪಾಠಿಯಾಗಿದ್ದರು ಎಂಬುದು ನನಗೆ ಹೆಮ್ಮೆ. ಅಂದು ಆರಂಭವಾದ  ನಮ್ಮ ಸ್ನೇಹ ಇಂದಿಗೂ ಮುಂದುವರೆದಿದೆ.

ನಂತರ ಮೈಸೂರು ವಿಶ್ವವಿದ್ಯಾನಿಲಯದ ಮಾನಸ ಗಂಗೋತ್ರಿಯಲ್ಲಿ

 ಅರ್ಥಶಾಸ್ತ್ರದಲ್ಲಿ ಎಂ.ಎ ಸ್ನಾತಕ ಪದವಿ ಪಡೆದರು.

 ಮಾನಸ ಗಂಗೋತ್ರಿ ಮೈಸೂರು ವಿಶ್ವವಿದ್ಯಾನಿಲಯ. ಗ್ರಂಥಾಲಯ ವಿಷಯದಲ್ಲಿ ಕರ್ನಾಟಕ ರಾಜ್ಯ ಮುಕ್ತ ವಿಶ್ವ ವಿದ್ಯಾಲಯದಿಂದ ಪದವಿ ಮತ್ತು ಸ್ನಾತಕೋತ್ತರ ಪದವಿ ಪಡೆದರು.

ಪದವಿ ಪೂರ್ವ ಶಿಕ್ಷಣ ಇಲಾಖೆಯ ಗ್ರಂಥಪಾಲಕರಾಗಿ KPSC ನೇರ ನೇಮಕಾತಿಯಲ್ಲಿ ಆಯ್ಕೆಗೊಂಡು ಸ.ಪ.ಪೂ.ಕಾಲೇಜು H.D.ಕೋಟೆಯಲ್ಲಿ ಗ್ರಂಥಪಾಲಕರಾಗಿ ಮೊದಲು

 ಸೇವೆಗೆ ಸೇರಿದರು. ನಂತರ ಸ.ಪ.ಪೂ.ಕಾಲೇಜು ಆನೇಕಲ್ 

 ಮಹಾತ್ಮಾ ಗಾಂಧಿ ಸ.ಪ.ಪೂರ್ವ ಕಾಲೇಜು ಕುಣಿಗಲ್ ,ಕೃಷ್ಣರಾಜೇಂದ್ರ ಬಾಲಕರ ಸ.ಪ.ಪೂರ್ವ ಕಾಲೇಜಿನಲ್ಲಿ   ಸೇವೆ ಸಲ್ಲಿಸಿದ್ದು

ಪ್ರಸ್ತುತ  ಬಾಲಕರ ಸ.ಪ.ಪೂರ್ವ ಕಾಲೇಜು ಅರಕಲಗೂಡಿನಲ್ಲಿ  ಸೇವೆ ಸಲ್ಲಿಸುತ್ತಿದ್ದಾರೆ.

ಇದರ ಜೊತೆಯಲ್ಲಿ ಸಂಘಟನೆ ಸೇವಾ ಕ್ಷೇತ್ರದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.

 ಕರ್ನಾಟಕ ರಾಜ್ಯ ಪದವಿ ಪೂರ್ವ ಶಿಕ್ಷಣ ಇಲಾಖೆಯ ಗ್ರಂಥಪಾಲಕರ ಸಂಘದಲ್ಲಿ ಸುಮಾರು 5 ವರ್ಷಗಳ ಕಾಲ ಸಹ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿರುತ್ತಾರೆ.

ಇವರು ಸೇವೆ ಸಲ್ಲಿಸಿದಂತಹ ಯಾವುದೇ ಕಾಲೇಜಿನಲ್ಲಿ ಕಾಲೇಜು ವಿಭಾಗಕ್ಕೆ ಪ್ರತ್ಯೇಕವಾದ ಗ್ರಂಥಾಲಯದ ವ್ಯವಸ್ಥೆ ಇರಲಿಲ್ಲ.ಇವರ ಪ್ರಾಮಾಣಿಕ ಪ್ರಯತ್ನದ ಫಲವಾಗಿ

ಪ್ರತಿ ಕಾಲೇಜಿ ನಲ್ಲಿಯೂ ಪ್ರತ್ಯೇಕವಾದ ಗ್ರಂಥಾಲಯದ ವ್ಯವಸ್ಥೆಯನ್ನು ಪ್ರಾಂಶುಪಾಲರ,ಉಪನ್ಯಾಸಕರ,ಹಾಗೂ ಕಾಲೇಜು ಅಭಿವೃದ್ಧಿ ಸಮಿತಿಯ ಅಧ್ಯಕ್ಷರು, ಇತರೆ ಸದಸ್ಯರ ಸಹಕಾರ ದೊಂದಿಗೆ ವ್ಯವಸ್ಥಿತವಾದ ಗ್ರಂಥಾಲಯದ ವ್ಯವಸ್ಥೆಯನ್ನವಿದ್ಯಾರ್ಥಿಗಳಿಗೆ ನೀಡುವ ಪ್ರಯತ್ನವನ್ನ ಮಾಡಿರುತ್ತಾರೆ.ಇದು ವಿದ್ಯಾರ್ಥಿಗಳ ಶೈಕ್ಷಣಿಕ ಗುಣಮಟ್ಟವನ್ನ ಹೆಚ್ಚಿಸುವಲ್ಲಿ,ದ್ವಿತೀಯ ಪಿಯುಸಿ ಪರೀಕ್ಷಾ ಫಲಿತಾಂಶ ಹೆಚ್ಚಿಸುವ ನಿಟ್ಟಿನಲ್ಲಿ ಉತ್ತಮ  ಕೆಲಸ ಎಂದು ಸಾರ್ವಜನಿಕರು ಮೆಚ್ಚುಗೆ ಸೂಚಿಸಿದ್ದಾರೆ. 

ಯೋಗಾನಂದ್ ರವರು ವಿದ್ಯಾರ್ಥಿಗಳಿಗೆ ಓದುವ ಹವ್ಯಾಸವನ್ನು ಬೆಳಸುವಲ್ಲಿ ಹಾಗೂ ಸ್ಪರ್ಧಾತ್ಮಕ ಪರೀಕ್ಷೆಗಳ ಬಗ್ಗೆ ವಿದ್ಯಾರ್ಥಿಗಳಿಗೆ ತರಗತಿಯಲ್ಲಿ ಜಾಗೃತಿ ಹಾಗೂ ಅರಿವು ಮೂಡಿಸುತ್ತಿರುವುದು.  ವಿದ್ಯಾರ್ಥಿಗಳ ಸರ್ವತೋಮುಖ ಅಭಿವೃದ್ಧಿಗೆ ಪಠ್ಯ ಚಟುವಟಿಕೆಯ ಜೊತೆಗೆ ಸಹಪಠ್ಯ ಚಟುವಟಿಕೆಗಳಾದ ಕ್ರೀಡೆ, ಸಾಂಸ್ಕೃತಿಕ,NSS ವಿಶೇಷ ವಾರ್ಷಿಕ ಶಿಬಿರಗಳಲ್ಲಿ ಸಹ ಶಿಬಿರಾಧಿಕಾರಿಗಳಾಗಿ ಕಾರ್ಯ ನಿರ್ವಹಿಸಿರುತ್ತಿದ್ದಾರೆ.

 2008 -09 ನೇ ಶೈಕ್ಷಣಿಕ ಸಾಲಿನಲ್ಲಿ ಕರ್ನಾಟಕ ರಾಜ್ಯಾದ್ಯಂತ ಪ್ರಾದೇಶಿಕ ಅಸಮತೋಲನವನ್ನ ಹೋಗಲಾಡಿಸಲು

 ಶ್ರೀ ಡಿ ಎಮ್ ನಂಜುಡಪ್ಪ ನವರ ವರದಿಯಂತೆ ಆಯ್ದ  ಶಾಲಾ-ಕಾಲೇಜಿನಲ್ಲಿ ಜಾರಿಗೆ ತಂದಿದ್ದ ಶೈಕ್ಷಣಿಕ ವೃತ್ತಿ ಮಾರ್ಗದರ್ಶನದ ಘಟಕ ಅಧಿಕಾರಿಯಾಗಿ ಕಾರ್ಯ ನಿರ್ವಹಿಸಿದ್ದಾರೆ.ಬೆಂಗಳೂರಿನ ಜಿಲ್ಲಾ ಉದ್ಯೋಗ ವಿನಿಮಯ ಅಧಿಕಾರಿಗಳ ಕಛೇರಿಯಲ್ಲಿ ನಡೆಸಲಾಗುತ್ತಿದ್ದ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ವಿಶೇಷ ತರಗತಿಗಳನ್ನ ಮಾಡಿರುತ್ತಾರೆ.


ಎಲೆ ಮರೆಯ ಕಾಯಿಯಂತೆ ಕನ್ನಡ ಸಾಹಿತ್ಯ ಬೆಳವಣಿಗೆಗೆ ತಮ್ಮದೇ ಆದ ಕೊಡುಗೆ ನೀಡುವ ಇವರು ಮಕ್ಕಳಲ್ಲಿ ಹಾಗೂ ಸಾರ್ವಜನಿಕರಲ್ಲಿ ಓದುವ ಹವ್ಯಾಸ ಬೆಳೆಸಲು ತಾವೇ ಹಣ ಕೊಟ್ಟು ಪುಸ್ತಕ ಖರೀದಿಸಿ ಮಕ್ಕಳಿಗೆ ಬಹುಮಾನ ರೂಪದಲ್ಲಿ, ದೊಡ್ಡವರಿಗೆ, ಮದುವೆ ಗೃಹಪ್ರವೇಶ ಮುಂತಾದ ಸಂದರ್ಭಗಳಲ್ಲಿ ಉಡುಗೊರೆಯಾಗಿ ನೀಡುತ್ತಿದ್ದಾರೆ.

"ನಾನು ಮಾಡಿದ್ದು ಸ್ವಲ್ಪ ಮಾಡಬೇಕಿರುವವುದು ಬಹಳಷ್ಟಿದೆ 

ಮುಂದಿನ ವೃತ್ತಿ ಬದುಕಿನಲ್ಲಿ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಉತ್ತಮವಾದ ಸುಸಜ್ಜಿತ ಅತ್ಯಾಧುನಿಕ ಮೂಲ ಭೂತ ಸೌಕರ್ಯಗಳನ್ನು  ಹೊಂದಿರುವ ಮಾದರಿ  ಗ್ರಂಥಾಲಯವನ್ನು ಸರ್ಕಾರದ,ಇಲಾಖೆಯ ವತಿಯಿಂದ ಸ್ಥಾಪಿಸಿಕೊಂಡು ಪದವಿ ಪೂರ್ವ ಶಿಕ್ಷಣ ಇಲಾಖೆಯಲ್ಲಿ ಮಾದರಿ ಗ್ರಂಥಾಲಯದ ಸೇವೆಯನ್ನು ಸಲ್ಲಿಸುವ ಕನಸನ್ನ ಹೊಂದಿರುತ್ತೇನೆ. ಇದಕ್ಕೆಲ್ಲ ಇಲಾಖೆಯ ಸರ್ಕಾರದ ಸಹಕಾರ,ಸಲಹೆ,

ಮಾರ್ಗದರ್ಶನದಲ್ಲಿ ಸೇವೆ ಸಲ್ಲಿಸಲು ಇಚ್ಚಿಸಿರುತ್ತೇನೆ" ಎಂದು ಯೋಗಾನಂದ್ ಆತ್ಮ ವಿಶ್ವಾಸ ದಿಂದ ಹೇಳುವಾಗ ಅವರ ಸೇವಾ ಮನೋಭಾವ ಮತ್ತು ಸಾಮಾಜಿಕ ‌ಕಳಕಳಿ ನನ್ನ ಮನಸೆಳೆಯಿತು.

ನಿನ್ನ ಸೇವಾಕೈಂಕರ್ಯ ಹೀಗೆಯೇ ಮುಂದುವರೆಯಲಿ ಗೆಳೆಯ ನಿನ್ನ ಗುರಿಗಳು ಈಡೇರಲಿ ಸಮಾಜಮುಖಿ ಸೇವಾ ಕಾರ್ಯಕ್ರಮಗಳಿಗೆ   ನಿಮ್ಮೊಂದಿಗೆ ನಾವಿದ್ದೇವೆ ಶುಭವಾಗಲಿ...


ಸಿಹಿಜೀವಿ ವೆಂಕಟೇಶ್ವರ

ತುಮಕೂರು


28 February 2024

ಮಕ್ಕಳಿಗೆ ಡಿಜಿಟಲ್ ಪೌರತ್ವದ ಅರಿವು


 


 ಮಕ್ಕಳಿಗೆ  ಡಿಜಿಟಲ್ ಪೌರತ್ವದ ಅರಿವು 


ಪ್ರತಿಯೊಬ್ಬ ನಾಗರೀಕರು ಯಾವುದಾದರೊಂದು ದೇಶದ ಪೌರತ್ವ ಹೊಂದಿಯೇ ಹೊಂದಿರುತ್ತಾರೆ ಇದರ ಜೊತೆಯಲ್ಲಿ ಇಂದಿನಎಲೆಕ್ಟ್ರಾನಿಕ್ ಯುಗ, ಇಂಟರ್ನೆಟ್ ಯುಗ ಮತ್ತು ಕಂಪ್ಯೂಟರ್ ಯುಗದಲ್ಲಿ ಡಿಜಿಟಲ್ ಪೌರತ್ವವೂ ಮಹತ್ವವನ್ನು ಹೊಂದಿದೆ. ಎಲ್ಲರಿಗೂ ಈ ವಿಷಯದಲ್ಲಿ ತಿಳುವಳಿಕೆ ನೀಡುವುದು ಅಗತ್ಯ ಅದರಲ್ಲೂ ಶಾಲಾ ಮಕ್ಕಳಿಗೆ ಡಿಜಿಟಲ್ ಪೌರತ್ವ ದ ಬಗ್ಗೆ ತಿಳುವಳಿಕೆ ನೀಡಿ ಜಾಗೃತಿ ಮೂಡಿಸುವುದು ಇಂದಿನ ತುರ್ತು ಅಗತ್ಯ.


ಡಿಜಿಟಲ್ ಪೌರತ್ವ ಎಂದರೇನು?


ನಮ್ಮ ದೈನಂದಿನ ಜೀವನದಲ್ಲಿ ನಮಗೆ ನಿಯಮಗಳು ಮತ್ತು ಜವಾಬ್ದಾರಿಗಳಿರುವಂತೆಯೇ, ನಾವು ತಂತ್ರಜ್ಞಾನ ಮತ್ತು ಇಂಟರ್ನೆಟ್ ಬಳಸುವಾಗ ಅವುಗಳನ್ನು ಹೊಂದಿದ್ದೇವೆ. ಉತ್ತಮ ಡಿಜಿಟಲ್ ನಾಗರಿಕರಾಗಿರುವುದು ಎಂದರೆ ತಂತ್ರಜ್ಞಾನವನ್ನು ಗೌರವಯುತವಾಗಿ, ಜವಾಬ್ದಾರಿಯುತವಾಗಿ ಮತ್ತು ಸುರಕ್ಷಿತವಾಗಿ ಬಳಸುವುದು ಎಂದರ್ಥ.


ಉತ್ತಮ ಡಿಜಿಟಲ್ ಪ್ರಜೆಯಾಗುವುದು ಹೇಗೆ?


1. ಇತರರೊಂದಿಗೆ ಸೌಜನ್ಯದಿಂದ ವರ್ತಿಸುವುದು.


ನಾವು ಒಬ್ಬರನ್ನು ಮುಖತಃ ಭಟಿಮಾಡಿದಾಗ ಹೇಗೆ ವರ್ತಿಸುತ್ತೇವೆಯೋ, ಆನ್ ಲೈನ್ ನಲ್ಲಿರುವಾಗ ಕೂಡಾ ಜನರೊಂದಿಗೆ ಹಾಗೆಯೇ ವರ್ತಿಸಬೇಕು. ನಾವು ಸಭ್ಯ ಪದಗಳನ್ನು ಬಳಸಬೇಕು. ಯಾರನ್ನೂ ಹೀಯಾಳಿಸಬಾರದು ಮತ್ತು ನೋಯಿಸಬಾರದು.

ಇತರರು ಸಹಾಯ ಬೇಡಿದರೆ ನಾವು ನಮಗೆ ತಿಳಿದಿರುವುದನ್ನು ಹೇಳಿ ಅವರಿಗೆ ಸಹಾಯ ಮಾಡಬಹುದು. ನಾವು ಉತ್ತಮ ಆನ್ ಲೈನ್ ಸಂಬಂಧಗಳನ್ನು ಹೊಂದಿರಬೇಕು.


2. ಇತರರ ಗೌಪ್ಯತೆಯನ್ನು ಗೌರವಿಸುವುದು.


ಇತರರ ಅನುಮತಿಯಿಲ್ಲದೆ ನಾವು ಅವರ ವೈಯಕ್ತಿಕ ಮಾಹಿತಿ ಅಥವಾ ಚಿತ್ರಗಳನ್ನು ಹಂಚಿಕೊಳ್ಳಬಾರದು.

ನಾವು ಆನ್ ಲೈನ್ ನಲ್ಲಿ ಮಾಡುವ ಕೆಲಸವು ಇತರರ ಮೇಲೆ ಪರಿಣಾಮ ಬೀರಬಹುದು ಎಂಬುದನ್ನು ನೆನಪಿಟ್ಟುಕೊಳ್ಳುವುದು ಮುಖ್ಯ ಆದ್ದರಿಂದ ಇನ್ನೊಬ್ಬರ ಬಗ್ಗೆ, ಏನನ್ನಾದರೂ ಪೋಸ್ಟ್ ಮಾಡುವ ಅಥವಾ ಹಂಚಿಕೊಳ್ಳುವ ಮೊದಲು ನಾವು ಯಾವಾಗಲೂ ಯೋಚಿಸಬೇಕು.

ನಾವು ಆನ್ ಲೈನ್ ನಲ್ಲಿ ಸುಳ್ಳು ಸುದ್ದಿ ಹಬ್ಬಿಸಬಾರದು ಅಥವಾ ಇತರರ ರಹಸ್ಯಗಳನ್ನು ಹಂಚಿಕೊಳ್ಳಬಾರದು.


3. ತಂತ್ರಜ್ಞಾನವನ್ನು ಜಾಗರೂಕತೆಯಿಂದ ಬಳಸುವುದು.


ತಂತ್ರಜ್ಞಾನವು ಅದ್ಭುತವಾಗಿದೆ ಮತ್ತು ವಿಸ್ಮಯಕಾರಿಯಾಗಿದೆ. ಆದರೆ ನಾವು ಅದನ್ನು ಜವಾಬ್ದಾರಿಯುತವಾಗಿ ಬಳಸಬೇಕು. ಆನ್ ಲೈನ್ ನಲ್ಲಿ ಸಮಯ ಕಳೆಯುವುದು ಮತ್ತು ಹೊರಗೆ ಆಟವಾಡುವುದು, ಪುಸ್ತಕಗಳನ್ನು ಓದುವುದು ಅಥವಾ ಕುಟುಂಬ ಮತ್ತು ಸ್ನೇಹಿತರೊಂದಿಗೆ ಸಮಯ ಕಳೆಯುವುದು ಮುಂತಾದ ಇತರ ಚಟುವಟಿಕೆಗಳನ್ನು ಮಾಡುವುದರ ನಡುವೆ ನಾವು ಸಮತೋಲನವನ್ನು ಕಂಡುಕೊಳ್ಳಬೇಕು.

ನಾವು ಕಲಿಯಲು ಮತ್ತು ಬೆಳೆಯಲು ಸಹಾಯ ಮಾಡುವ ರೀತಿಯಲ್ಲಿ ನಾವು ತಂತ್ರಜ್ಞಾನವನ್ನು ಬಳಸಬೇಕು. ನಮ್ಮ ಜ್ಞಾನ ಮತ್ತು ಸೃಜನಶೀಲತೆಯನ್ನು ವಿಸ್ತರಿಸುವ ಅನೇಕ ಶೈಕ್ಷಣಿಕ ಸಂಪನ್ಮೂಲಗಳ ಸದ್ಬಳಕೆ ಮಾಡಿಕೊಳ್ಳಬೇಕು.


4. ನಿಯಮಗಳನ್ನು ಪಾಲಿಸುವುದು.


ನಮ್ಮ ಪೋಷಕರು, ಶಿಕ್ಷಕರು ಮತ್ತು ನಾವು ಭೇಟಿ ನೀಡುವ ವೆಬ್ ಸೈಟ್ ಗಳು ನಿಗದಿಪಡಿಸಿದ ನಿಯಮಗಳನ್ನು ಮತ್ತು ಮಾರ್ಗಸೂಚಿಗಳನ್ನು ನಾವು ಯಾವಾಗಲೂ ಅನುಸರಿಸಬೇಕು. ನಮ್ಮನ್ನು ಸುರಕ್ಷಿತವಾಗಿಡಲು ಈ ನಿಯಮಗಳಿವೆ.

ನಾವು ಆನ್ ಲೈನ್ ನಲ್ಲಿ ತಪ್ಪು ಮಾಡಿದರೆ, ಆಕಸ್ಮಿಕವಾಗಿ ಬೇಡದ ಯಾವುದನ್ನಾದರೂ ಕ್ಲಿಕ್ ಮಾಡಿದರೆ, ದೊಡ್ಡವರಿಗೆ ಹೇಳುವುದು ಮುಖ್ಯ ಸಮಸ್ಯೆಯನ್ನು ಪರಿಹರಿಸಲು ಅವರು ನಮಗೆ ಸಹಾಯ ಮಾಡಬಹುದು ಮತ್ತು ನಾವು ಅದರಿಂದ ಕಲಿಯಬಹುದು.


5. ಆನ್ ಲೈನ್ ಸುರಕ್ಷತೆಯ ಬಗ್ಗೆ, ತಿಳುವಳಿಕೆ


ಅನುಮಾನಾಸ್ಪದವಾಗಿ ಕಾಣುವ ವೆಬ್ ಸೈಟ್ ಗಳು, ಜಾಹೀರಾತುಗಳು, ಫೋನ್ ಸಂಖ್ಯೆಗಳು, ಸಂದೇಶಗಳು, ಲಿಂಕ್ ಗಳನ್ನು ಹೇಗೆ ಗುರುತಿಸುವುದು ಮತ್ತು ತಪ್ಪಿಸುವುದು ಎಂಬುದನ್ನು ನಾವು ತಿಳಿದಿರಬೇಕು. ಏನಾದರೂ ಸರಿ ಎನಿಸದಿದ್ದರೆ, ಸಹಾಯಕ್ಕಾಗಿ ದೊಡ್ಡವರನ್ನು 

ನಮ್ಮ ಸಾಧನಗಳು ಮತ್ತು ಸಾಮಾಜಿಕ ಮಾಧ್ಯಮ ಖಾತೆಗಳನ್ನು ಸುರಕ್ಷಿತವಾಗಿಡಲು ನಾವು ಬಲವಾದ ಪಾಸ್ ವರ್ಡ್ ಗಳನ್ನು ಬಳಸಬೇಕು.

ನಾವು ನಮ್ಮ ಪಾಸ್ ವರ್ಡ್ ಅಥವಾ ಒಟಿಪಿಯನ್ನು ಯಾರೊಂದಿಗೂ ಹಂಚಿಕೊಳ್ಳಬಾರದು.


ಸಿಹಿಜೀವಿ ವೆಂಕಟೇಶ್ವರ

ಶಿಕ್ಷಕರು

ತುಮಕೂರು

9900925529


25 February 2024

ಯಾರು ಶ್ರೇಷ್ಠ?

 


ಯಾರು ಶ್ರೇಷ್ಠ?



ಜಗದ ಎಲ್ಲಾ  ವಸ್ತುಗಳು ಮತ್ತು  ಜೀವಿಗಳು ತಮ್ಮದೇ ಆದ ಮಹತ್ವ ಹೊಂದಿವೆ. ನೀರು ಗಾಳಿ ಬೆಂಕಿ, ಭೂಮಿ ಹೀಗೆ ಎಲ್ಲವೂ ಮುಖ್ಯ. ಮಾನವರ ವಿಷಯಕ್ಕೆ ಬಂದರೆ ಪ್ರತಿಯೊಬ್ಬರೂ ಒಂದೊಂದು ವಿಷಯಗಳಲ್ಲಿ ಪರಿಣತಿ ಹೊಂದಿ ತಮ್ಮದೇ ಆದ ಉಪಯುಕ್ತತೆ ಹೊಂದಿರುತ್ತಾರೆ. ಆದರೆ ಪೂರ್ವಾಗ್ರಹದಿಂದ ಕೆಲವರನ್ನು ಅನವಶ್ಯಕವಾಗಿ ಅವಮಾನಿಸಿ ಅವರನ್ನು ಜರೆದು ಕೆಲಸಕ್ಕೆ ಬಾರದವರೆಂದು ಹಣೆಪಟ್ಟಿ ಕಟ್ಟಿಬಿಡುತ್ತೇವೆ.

ಒಂದಾನೊಂದು ಕಾಲದಲ್ಲಿ ಒಬ್ಬ ರಾಜನಿದ್ದ. ಆ ರಾಜನಿಗೆ 3 ಜನ ಮಕ್ಕಳು. ಹಿರಿಯ ರಾಜಕುಮಾರನ ಹೆಸರು ರಾಜೇಂದ್ರ. ಎರಡನೇ ರಾಜಕುಮಾರ ಸೋಮೆಂದ್ರ. ಹಾಗೂ ಮೂರನೇ ರಾಜಕುಮಾರ ದೇವೇಂದ್ರ. ಮೂವರೂ ರಾಜಕುಮಾರರೂ ವಿದ್ಯಾರ್ಜನೆ ಮುಗಿಸಿ ರಾಜಧಾನಿಗೆ ಹಿಂದಿರುಗಿದ ಮೇಲೆ ರಾಜನಿಗೆ ಒಂದು ಯೋಚನೆ ಬಂತು. ಮೂರು ಜನ ರಾಜಕುಮಾರರಲ್ಲಿ ಯಾರು ತನ್ನನ್ನು ಹೆಚ್ಚು ಪ್ರೀತಿಸುತ್ತಾರೆ ಎಂದು ಪರೀಕ್ಷಿಸಲು ನಿರ್ಧರಿಸಿದ. ಆ ಯೋಚನೆ ಬಂದ ಕೂಡಲೇ ರಾಜ ಮೂವರೂ ರಾಜಕುಮಾರರನ್ನು ಕರೆಸಿದ. ಅವರೆಲ್ಲರಿಗೆ ಒಂದು ಪ್ರಶ್ನೆ ಹಾಕಿದ. ಅದೇನೆಂದರೆ ರಾಜನನ್ನು ಅವರು ಎಷ್ಟು ಪ್ರೀತಿಸುತ್ತಾರೆ ಎಂಬ ಪ್ರಶ್ನೆ ಹಾಕಿ ಮಾರನೇ ದಿನ ಉತ್ತರಿಸಲು ಹೇಳಿದ. ಮರುದಿನ ಹಿರಿಯ ರಾಜಕುಮಾರ ರಾಜೇಂದ್ರ ಬಂದು ತಾನು ರಾಜನನ್ನು ನಗ, ನಾಣ್ಯ, ಸಂಪತ್ತು ಎಲ್ಲವುಗಳಿಗಿಂತ ಹೆಚ್ಚಾಗಿ ಪ್ರೀತಿಸುತ್ತೇನೆಂದು ಹೇಳಿದ. ರಾಜನಿಗೆ ಸಂತೋಷವಾಯಿತು. ಎರಡನೇ ರಾಜಕುಮಾರ ಸೋಮೆಂದ್ರ ಬಂದು ತಾನು ರಾಜನನ್ನು ಎಲ್ಲಾ ಸಿಹಿತಿಂಡಿಗಳು ಕಜ್ಜಾಯಗಳಿಗಿಂತ ತುಂಬಾ ಹೆಚ್ಚಾಗಿ ಪ್ರೀತಿಸುತ್ತೇನೆಂದು ಹೇಳಿದ. ರಾಜನಿಗೆ ಖುಶಿಯಾಯ್ತು. ಮೂರನೇ ರಾಜಕುಮಾರ ದೇವೇಂದ್ರ ಬಂದು ತಾನು ರಾಜನನ್ನು ಉಪ್ಪಿಗಿಂತ ಹೆಚ್ಚಾಗಿ ಪ್ರೀತಿಸುತ್ತೇನೆಂದು ಹೇಳಿದ. ರಾಜನಿಗೆ ತುಂಬಾ ಕೋಪ ಬಂತು. ತನ್ನನ್ನು ಆ ಕನಿಷ್ಠ ಉಪ್ಪಿಗಿಂತ ಪ್ರೀತಿಸುತ್ತಾನೆಂದು ಹೇಳುತ್ತಾನಲ್ಲ ದೇವೇಂದ್ರ ಎಂದು. ರಾಜ ಕೋಪದಿಂದ ದೇವೇಂದ್ರನಿಗೆ ಬೈದು ತನ್ನನ್ನು ಪ್ರೀತಿಸದ ಮೇಲೆ ತನ್ನ ರಾಜ್ಯ ಸಂಪತ್ತು ಯಾವುದರಲ್ಲೂ ನಿನಗೆ ಹಕ್ಕಿಲ್ಲ ಎಂದು ಹೇಳಿ ದೇವೇಂದ್ರನನ್ನು ರಾಜ್ಯದಿಂದ ಹೊರಕ್ಕೆ ಹಾಕಿಬಿಟ್ಟ.


ತಂದೆಯು ತನ್ನನ್ನು ಮನೆಯಿಂದ ಹೊರಹಾಕಿದ್ದಕ್ಕೆ ದೇವೇಂದ್ರ ತುಂಬಾ ನೊಂದುಕೊಂಡ. ಹೀಗೆ ದು:ಖಿಸುತ್ತಾ ಒಂದು ದಿನ ದಾರಿಯಲ್ಲಿ ನಡೆದು ಹೋಗುತ್ತಿರುವಾಗ ಒಬ್ಬಳು ತುಂಬಾ ವಯಸ್ಸಾದ ಅಜ್ಜಿ ನಡೆಯಲಾರದೇ ಕಷ್ಟ ಪಡುತ್ತಿರುವುದನ್ನು ನೋಡಿದ ದೇವೇಂದ್ರ ಆ ಅಜ್ಜಿಯನ್ನು ಕೈ ಹಿಡಿದು ಆಕೆಯ ಮನೆಯವರೆಗೂ ಆಕೆಗೆ ನಡೆಯಲು ಸಹಾಯ ಮಾಡಿದ. ದೇವೇಂದ್ರನ ಈ ಸಹಾಯದಿಂದ ತುಂಬಾ ಸಂತೋಷಗೊಂಡ ಆ ಅಜ್ಜಿ ದೇವೇಂದ್ರ ನ ಪೂರ್ವಾಪರಗಳನ್ನು ವಿಚಾರಿಸಿದಳು. ದೇವೇಂದ್ರ ನಡೆದ ಕತೆಯನ್ನೆಲ್ಲ ಅಜ್ಜಿಗೆ ವಿವರಿಸಿದ. ಕಥೆಯನ್ನು ಕೇಳಿದ ಅಜ್ಜಿ ದೇವೇಂದ್ರನಿಗೆ ಸಹಾಯ ಮಾಡಲು ನಿರ್ಧರಿಸಿದಳು. ದೇವೇಂದ್ರನನ್ನು ಕರೆದು ಹೀಗೆ ಹೇಳಿದಳು. “ನನಗೆ ಮಾಯಾವಿ ಶಕ್ತಿಯಿದೆ, ಆ ಶಕ್ತಿಯನ್ನು ಬಳಸಿ ನಿನಗೆ ಒಂದು ರಾಜ್ಯ ನಿರ್ಮಿಸಿ ಕೊಡುತ್ತೇನೆ. ನೀನು ಇದೆ ರೀತಿ ಒಳ್ಳೆಯತನದಿಂದ ಆ ರಾಜ್ಯವನ್ನು ಆಳಬೇಕು” ಎಂದು ಆದೇಶಿಸಿದಳು. ಇದರಿಂದ ಸಂತೋಷಗೊಂಡ ದೇವೇಂದ್ರ ಆದೇಶವನ್ನು ಶಿರಸಾ ಪಾಲಿಸುತ್ತೇನೆ ಎಂದು ಮಾತು ಕೊಟ್ಟ. ಮಾತಿನಂತೆ ಅಜ್ಜಿ ದೇವೇಂದ್ರನಿಗೆ ಒಂದು ಸುಂದರ ಸಂಪದ್ಭರಿತ ರಾಜ್ಯ ಕಟ್ಟಿ ಕೊಟ್ಟಳು. ಸಂತೋಷಗೊಂಡ ದೇವೇಂದ್ರ ಅಜ್ಜಿಗೆ ಧನ್ಯವಾದ ಹೇಳಿ ತನ್ನ ರಾಜ್ಯಕ್ಕೆ ಹೋಗಿ ದಕ್ಷತೆಯಿಂದ ರಾಜ್ಯಭಾರ ಮಾಡತೊಡಗಿದ.


ಕೆಲ ಕಾಲದ ನಂತರ ದೇವೇಂದ್ರನಿಗೆ ತನ್ನ ತಂದೆ ತಾಯಿ ಸಹೋದರರನ್ನು ಭೇಟಿಯಾಗುವ ಆಸೆಯಾಯ್ತು. ಆದರೆ ತಂದೆಗೆ ತನ್ನ ಮೇಲಿರುವ ಕೋಪ ಇನ್ನೂ ಕಡಿಮೆಯಾಗಿದೆಯೋ ಇಲ್ಲವೋ ಎನ್ನುವ ಆತಂಕ. ಅದಕ್ಕೆ ಅವನು ಒಂದು ಉಪಾಯ ಯೋಚಿಸಿದ. ತನ್ನ ಸುತ್ತ ಮುತ್ತಲಿನ ಎಲ್ಲಾ ರಾಜ್ಯದ ರಾಜರಿಗೆ ಒಂದು ಔತಣಕೂಟ ಏರ್ಪಡಿಸಿದ. ಆ ಔತಣಕೂಟಕ್ಕೆ ದೇವೇಂದ್ರನ ತಂದೆ ತಾಯಿ ಸಹೋದರರನ್ನೂ ಆಮಂತ್ರಿಸಿದ.


ಔತಣ ಕೂಟಕ್ಕೆ ಆಮಂತ್ರಣ ನೀಡಿದ ರಾಜ ಯಾರೆಂದು ತಿಳಿದಿಲ್ಲವಾದರೂ ದೇವೇಂದ್ರನ ತಂದ ಪರಿವಾರ ಸಮೇತ ಆಗಮಿಸಿದ. ಎಲ್ಲಾ ರಾಜರೂ ಆಗಮಿಸಿದ ಮೇಲೆ ರಾಜ ಅಂದರೆ ದೇವೇಂದ್ರ ಸಭೆಗೆ ಆಗಮಿಸದೆ ತನ್ನ ಮಂತ್ರಿಯನ್ನು ಕಳುಹಿಸಿ ಔತಣದ ನಂತರ ರಾಜ ಆಗಮಿಸುತ್ತಾರೆ ಎಂಬ ಸಂದೇಶವನ್ನು ಸಭೆಯಲ್ಲಿ ಘೋಷಿಸಿದ. ಔತಣಕೂಟಕ್ಕೆ ಸಿದ್ದಪಡಿಸಿದ ಎಲ್ಲಾ ತಿನಿಸುಗಳನ್ನು ತಂದು ಸಭೆಯಲ್ಲಿ ಇಟ್ಟರು ವಿಧ ವಿಧ ಕಜ್ಜಾಯಗಳು ತಿಂಡಿ ತಿನಿಸುಗಳು ನೋಡಿದ ತಕ್ಷಣ  ಬಾಯಲ್ಲಿ ನೀರೂರುವಂತಿತ್ತು. ಸಭೆಯಲ್ಲಿ ಕುಳಿತಿದ್ದ ರಾಜರುಗಳಿಗೆಲ್ಲಾ ಊಟ ಬಡಿಸಲಾಯ್ತು. ಒಂದೆರಡು ತುತ್ತು ಊಟ ಮಾಡಿ ಎಲ್ಲರೂ ಮುಖ ಮುಖ ನೋಡಿಕೊಳ್ಳಲಾರಂಭಿಸಿದರು. ಯಾಕೆಂದರೆ ಯಾವ ಅಡುಗೆಗೂ ಉಪ್ಪೇ ಹಾಕಿರಲಿಲ್ಲ. ನೋಡಲು ತುಂಬಾ ಸುಂದರವಾಗಿ ಕಂಡ ಆ ಎಲ್ಲಾ ತಿಂಡಿ ತಿನಿಸುಗಳೂ ಸಪ್ಪೆ ಸಪ್ಪೆ. ಉಪ್ಪಿಲ್ಲದ ಆ ಅಡುಗೆ ಸ್ವಲ್ಪವೂ ರುಚಿಕರವಾಗಿರಲಿಲ್ಲ. ಎಲ್ಲರೂ ಉಪ್ಪಿಲ್ಲದ ಆ ಸಪ್ಪೆ ಊಟವನ್ನು ತೆಗಳಲು ಶುರು ಮಾಡಿದರು. ದೇವೇಂದ್ರನ ತಂದೆ ಸಹ ಇದೆಂತ ಕೆಟ್ಟ ಊಟ ಎಂದು ಬಯ್ದ. ಆಗ ಸಭೆಗೆ ದೇವೇಂದ್ರ ಆಗಮಿಸಿದ. ಉಪ್ಪಿಲ್ಲದೆ ಊಟ ತಯಾರಿಸಿದುದರ ಕಾರಣ ಘೋಷಿಸಿದ. ತಾನು ತನ್ನ ತಂದೆಯನ್ನು ಉಪ್ಪಿಗಿಂತ ಹೆಚ್ಚಾಗಿ ಪ್ರೀತಿಸುತ್ತೇನೆಂದಾಗ ತನ್ನ ತಂದೆ ಉಪ್ಪನ್ನು ತುಂಬಾ ಕನಿಷ್ಠ ವಸ್ತುವೆಂದು ಪರಿಗಣಿಸಿ ತನ್ನನ್ನು ಮನೆಯಿಂದ ಹೊರಗೆ ಹಾಕಿದ ವಿಷಯ ತಿಳಿಸಿದ. ಅದಕ್ಕಾಗಿಯೇ ಉಪ್ಪಿನ ಬೆಲೆಯನ್ನು ಎಲ್ಲರಿಗೂ ಮನವರಿಕೆ ಮಾಡಲೆಂದೆ ಉಪ್ಪಿಲ್ಲದ ಅಡುಗೆಯನ್ನು ಎಲ್ಲರಿಗೂ ತಿನಿಸಿದ್ದಾಗಿ ಹೇಳಿದ. ಆಗ ದೇವೇಂದ್ರನ ತಂದೆಗೆ ತಾನು ಮಾಡಿದ ತಪ್ಪಿನ ಅರಿವಾಯ್ತು. ದೇವೇಂದ್ರನಲ್ಲಿ ಕ್ಷಮೆ ಕೇಳಿದ. ದೇವೇಂದ್ರ ಮತ್ತೆ ತನ್ನ ತಂದೆ ತಾಯಿ ಪರಿವಾರದೊಡಗೂಡಿ ಸಂತೋಷವಾಗಿ ಒಳ್ಳೆಯತನದಿಂದ ರಾಜ್ಯಭಾರ ಮಾಡಿದ.

ಈ ಜಗದಲಿ ಯಾರೂ ಮೇಲಲ್ಲ ಯಾರೂ ಕೀಳಲ್ಲ ಎಲ್ಲರಿಗೂ ತಮ್ಮದೇ ಆದ ಮಹತ್ವವಿದೆ.


 ಸಿಹಿಜೀವಿ ವೆಂಕಟೇಶ್ವರ

ತುಮಕೂರು

9900925529

ಆತ್ಮೀಯ ಶಿಕ್ಷಕ, ಶಿಕ್ಷಕಿಯರೆ ದಯವಿಟ್ಟು ಗಮನಿಸಿ...

 


ಆತ್ಮೀಯ ಶಿಕ್ಷಕ, ಶಿಕ್ಷಕಿಯರೆ ದಯವಿಟ್ಟು ಗಮನಿಸಿ...


ಜಾಗತೀಕರಣ, ಆಧುನೀಕರಣ, ಕೈಗಾರಿಕೀಕರಣ, ನಗರೀಕರಣದ ಈ ಕಾಲಘಟ್ಟದಲ್ಲಿ ಮೊಬೈಲ್,ಎ ಐ ,ಟಿ ವಿ ಗಳು ಮತ್ತು ಸಾಮಾಜಿಕ ಮಾದ್ಯಮಗಳ ಅತಿಯಾದ ಬಳಕೆಯ ಈ ಸಂಧಿಕಾಲದಲ್ಲಿ ಶಿಕ್ಷಕರ ಕೆಲಸ ಸವಾಲಿನದು ಎಂದರೆ ತಪ್ಪಾಗಲಾರದು. ಪ್ರಭುತ್ವದ ಕೆಲ ನಿಯಮಗಳು, ಮಕ್ಕಳ ಅತಿಯಾದ ನಕಾರಾತ್ಮಕ ಚಟುವಟಿಕೆಗಳು, ಪೋಷಕರ ಅತಿಯಾದ ಮುದ್ದು ಇವುಗಳ ಪರಿಣಾಮವಾಗಿ ಶಾಲೆಗೆ ಬರುವ ಕೆಲ ಮಕ್ಕಳ ವರ್ತನೆ ಸಾಮಾನ್ಯ ವಿದ್ಯಾರ್ಥಿಗಳ ವರ್ತನೆಯಂತಿರದೆ ಯಾವುದೋ ಬಾಹ್ಯ ಪ್ರಪಂಚದಿಂದ ಪ್ರೇರಣೆಗೊಂಡು ನಿರ್ದೇಶಿತವಾದಂತೆ ಭಾಸವಾಗುತ್ತದೆ. ಇಂತಹ ಸಂಕೀರ್ಣವಾದ ಸಮಯದಲ್ಲಿ ಶಿಕ್ಷಕರಾದ ನಾವು ಇನ್ನೂ ಹೆಚ್ಚಿನ ಜವಾಬ್ದಾರಿ ಮತ್ತು ಎಚ್ಚರಿಕೆಯಿಂದ ಕಾರ್ಯ ನಿರ್ವಹಿಸುವ ಅನಿವಾರ್ಯ ಪರಿಸ್ಥಿತಿ ಎದುರಾಗಿದೆ.

 ಮೊನ್ನೆ ಈ ವಿಷಯಕ್ಕೆ ಸಂಬಂಧಿಸಿದಂತೆ ಗೆಳೆಯನೋರ್ವ ಒಂದು ಸಂದೇಶ ಕಳಿಸಿದ್ದ ಅದಕ್ಕೆ ಕೆಲ ನನ್ನ ಮಾತುಗಳನ್ನು ಸೇರಿಸಿರುವೆ.

ಇಂದಿನ ಶಿಕ್ಷಕರಾದ ನಾವು ಅಗತ್ಯವಾಗಿ ಕೆಲ ಅಂಶಗಳನ್ನು ತಿಳಿದಿರಬೇಕು ಹಾಗೂ ನಮ್ಮ ಬೋಧನಾ ಜೀವನದಲ್ಲಿ ಕೆಲ ಮಾರ್ಪಾಡುಗಳನ್ನು ಮಾಡಿಕೊಳ್ಳಲು ಪ್ರಯತ್ನ ಮಾಡೋಣ.

ತೀರಾ ಇತ್ತೀಚಿನವರೆಗೆ ಶಿಕ್ಷಕರು ಪ್ರಶ್ನಾತೀತರಾಗಿದ್ದರು. ಆದರೆ ಇಂದು ಅವರನ್ನು ವಿದ್ಯಾರ್ಥಿಗಳೂ ಸೇರಿದಂತೆ ಎಲ್ಲರೂ ಪ್ರಶ್ನಿಸಬಹುದು ಎಂದು ತಿಳಿದಿರಲಿ.ಮೊದಲು ಟೀಚಿಂಗ್ ಪ್ರೊಫೆಷನ್ ಈಸ್ ನೋಬಲ್ ಪ್ರೊಫೆಷನ್ ಎಂಬ ಗೌರವವಿತ್ತು.ಆದರೆ  ಶಿಕ್ಷಕ ವೃತ್ತಿ ಇಂದು ಇತರ ವೃತ್ತಿಗಳಂತೆ ಒಂದು ವೃತ್ತಿ ಎಂದು ಕೆಲವರು ಭಾವಿಸಿದ್ದಾರೆ ಎಂಬುದು ನಿಮಗೆ  ಗೊತ್ತಿರಲಿ.ಧರ್ಮ, ಜಾತಿ, ರಾಜಕೀಯ ದಂತಹ ವಿಚಾರಗಳು ಈ ದಿನಗಳಲ್ಲಿ ತೀರಾ ಸೂಕ್ಷ್ಮ ವಿಚಾರಗಳು. ಇಲ್ಲಿ ಹಗ್ಗದ ಮೇಲಿನ ನಡಿಗೆಯಂತಹ ಎಚ್ಚರ ಅಗತ್ಯ ಎಂಬ ಅರಿವಿರಲಿ.

ಈ ಮೇಲಿನ ಎಲ್ಲಾ ಕ್ಷೇತ್ರಗಳಲ್ಲೂ ನಿಮ್ಮ ನಿಲುವು ತಟಸ್ಥವಾಗಿಯೇ ಇರಲಿ.ನಮಗೂ ಖಾಸಗಿ ಬದುಕಿದೆ. ನಮ್ಮ ಖಾಸಗಿ ಬದುಕಿನ ಖಾಸಗಿ ವಿಚಾರಗಳು ಕೂಡಾ ನಮ್ಮ ವೃತ್ತಿ ಬದುಕಿನ ಮೇಲೆ ಪರಿಣಾಮ ಬೀರುತ್ತವೆ ಎಂಬ ಸತ್ಯದ ಅರಿವಿರಲಿ.

ನಮ್ಮ ನಿಯಂತ್ರಣದಲ್ಲಿ  ವಿದ್ಯಾರ್ಥಿ ಸಮುದಾಯ ಇದೆ ಎಂಬ ಭಾವನೆ ಪೂರ್ತಿ ನಿಜವಲ್ಲ. ಅವರನ್ನು ಶಾಲೆಯ ಹೊರಗಿನ ವಿವಿಧ ಶಕ್ತಿಗಳು ವಿವಿಧ ಪರಿಸರ ಕೂಡಾ ನಿಯಂತ್ರಿಸುತ್ತಿರಬಹುದು ಎಂಬ ಅರಿವಿರಲಿ.ನೀವೆಷ್ಟೇ ಸರಿ ಇದ್ದರೂ, ನಿಮ್ಮನ್ನು ವಿರೋಧಿಸುವ ಶಕ್ತಿಯೊಂದು ನಿಮ್ಮ ಪಕ್ಕದಲ್ಲೇ ಇದೆ ಎಂದು ಎಚ್ಚರವಹಿಸಿ. ಯಾಕೆಂದರೆ ನಿಮಗೆ ಸರಿಯೆನಿಸಿದ್ದು ಇತರರ ದೃಷ್ಟಿಯಿಂದ ತಪ್ಪಾಗಿ ಕಾಣಬಹುದು.ಸಂಘರ್ಷ ಮತ್ತು ಸಮನ್ವಯ, ಇವೆರಡರ  ನಡುವೆ ಯಾವುದನ್ನು ಆಯ್ಕೆ ಮಾಡಿಕೊಳ್ಳಲಿ ಎಂಬ ಗೊಂದಲ ಎದುರಾದಾಗ ಸಮನ್ವಯವನ್ನು ಆಯ್ದುಕೊಳ್ಳಿ. ಸಂಘರ್ಷದಿಂದ ಯುದ್ದ ಗೆದ್ದು ನಾವೇನು ಸಾಮ್ರಾಟರಾಗಬೇಕಿಲ್ಲ. ನಮ್ಮ ಭಾವೀ ಸಮಾಜವೂ ಸಮನ್ವಯದ ಜೀವನ ಪದ್ಧತಿಯನ್ನೇ ಕಲಿಯಬೇಕಿದೆ. ಸಮನ್ವಯ ಎಂದರೆ ಶರಣಾಗತಿ ಅಥವಾ ವೀಕ್ನೆಸ್  ಎಂದು ಅರ್ಥವಲ್ಲ. ಇದಕ್ಕಾಗಿ ಮನವೊಲಿಸುವ ಕಲೆ ಯಲ್ಲಿ ಪರಿಣತಿ ಸಾಧಿಸಿ.

ನೀವು ಬೋಧಿಸುವ ವಿಷಯ ಮತ್ತು  ಬೋಧನಾ ವಿಧಾನದ ಬಗ್ಗೆ ಸಾಧ್ಯವಾದಷ್ಟು ಪಾಂಡಿತ್ಯ ಗಳಿಸಿ. ಅಪ್ಡೇಟ್ ಆಗಿ. ಎಷ್ಟೇ ಜ್ಞಾನಿಯಾಗಿದ್ದರೂ ಇನ್ನಷ್ಟು ಕಲಿಯುವ ವಿದ್ಯಾರ್ಥಿಯಾಗಿಯೇ ಮುಂದುವರಿಯಿರಿ.ಕಲಿಕೆ ಗರ್ಭದಿಂದ ಗೋರಿಯವರೆಗೆ ನಿರಂತರ ಎಂಬುದನ್ನು ಮತ್ತೊಂದು ಬಾರಿ ನೆನಪಿಸಿಕೊಳ್ಳಿ.

ನಿಮ್ಮ ಎದುರು ಇರುವ ಮಕ್ಕಳನ್ನು ಅವರು ಸೂಕ್ಷ್ಮ ಸಂವೇದನಾಶೀಲರು ಎಂದೇ ಭಾವಿಸಿ ಭೋಧನೆ ಮಾಡಿ. ಅವರು ವಯಸ್ಸಿನಲ್ಲಿ ನಿಮಗಿಂತ ಚಿಕ್ಕವರಿರಬಹುದು. ಆದರೂ ಇಂದಿನ ಇಂಟರ್ನೆಟ್ ಯುಗದಲ್ಲಿ ಕೆಲವು ವಿಷಯಗಳಲ್ಲಿ ಅವರು ಕಿರಿಯ ಶರೀರ ಧರಿಸಿರುವ ಹಿರಿಯ ಜೀವ  ಆಗಿರುತ್ತಾರೆ ಎಂದು ನೆನಪಿಡಿ.ಮಕ್ಕಳಿಗೆ ನಿಮ್ಮಷ್ಟು ತಿಳಿಯದೇ ಇರಬಹುದು. ಆದರೆ ಅವರು ನಿಮ್ಮನ್ನು ತಿಳಿದಿರುತ್ತಾರೆ ಎಂದು ಅರಿವು ಇರಲಿ.

ವಿದ್ಯಾರ್ಥಿಗಳು ನೀವು ಹೇಳಿದ್ದನ್ನು ಅರ್ಥ ಮಾಡಿಕೊಳ್ಳದೇ ಹೋದರೂ, ನೀವು ಹೇಳದೇ ಇದ್ದುದನ್ನು ಅರ್ಥ ಮಾಡಿಕೊಳ್ಳಲು ತುಂಬಾ ಪ್ರಯತ್ನಿಸುತ್ತಾ ಇರುತ್ತಾರೆ ಎಂಬ ರಹಸ್ಯ ನಿಮಗೆ ಗೊತ್ತಿರಲಿ. ಈಗ ಚಾಟ್ ಜಿ ಪಿ ಟಿ, ಮತ್ತು ಎ ಐ ನಂತಹ ಸಹಾಯಕರು  ಅವರ ಮನೆಯಲ್ಲಿದ್ದಾರೆ.ವಿಷಯ ಜ್ಞಾನ ದೊಂದಿಗೆ ಸಂವಹನ ಕೌಶಲ, ಔದ್ಯೋಗಿಕ ಮಾರ್ಗದರ್ಶನ, ಸಮಸ್ಯೆಗಳ ಪರಿಹಾರದಂತಹ ಜೀವನ ಕೌಶಲಗಳನ್ನು ವಿದ್ಯಾರ್ಥಿಗಳಿಗೆ ಕಲಿಸಿ. ಮತ್ತು ಮೊದಲು ಇವುಗಳನ್ನು ನೀವು ಕಲಿಯಿರಿ.ನೀವು ಕಲಿಸಿದ್ದೆಲ್ಲವನ್ನೂ ಮರೆತರೂ, ಮಕ್ಕಳು ಸದಾ ನಿಮ್ಮನ್ನು ಮರೆಯದೆ ಇರುವಂತಹ ಶಿಕ್ಷಕರಾಗಲು ಪ್ರಯತ್ನಿಸಿ.ಮಾತು ಬಲ್ಲವನಿಗೆ ಜಗಳವಿಲ್ಲ, ಊಟ ಬಲ್ಲವನಿಗೆ ರೋಗ‌ವಿಲ್ಲ. ಎಂಬ ಗಾದೆ ಮಾತನ್ನು ಮೌನ ಬಲ್ಲವನಿಗೆ ಜಗಳವಿಲ್ಲ ಎಂಬಂತೆ ಕೊಂಚ ವಿಸ್ತರಿಸಿಕೊಳ್ಳಿ.ನಿಮ್ಮ ಮೌನವೂ ಎಷ್ಟು ಪ್ರಭಾವಶಾಲಿ ಆಗಿರುತ್ತದೆ  ಎಂಬುದನ್ನು ಅನುಭವದಿಂದ ಕಲಿಯಿರಿ.ಪಾಠಕ್ಕೆ ಪೂರಕವಾದ ವಿಷಯಗಳನ್ನು ಪ್ರಸ್ತುತ ಪಡಿಸುವ ಅಗತ್ಯ ಎದುರಾದಾಗ ಇದನ್ನು ಹೇಳದೇ ಇರುವುದು, ಅದನ್ನು ಹೇಳುವುದಕ್ಕಿಂತ ಹೆಚ್ಚು ಪ್ರಯೋಜನಕರ ಎಂದು ಅನಿಸಿದರೆ ಅದನ್ನು ಹೇಳದೇ ಇರುವುದೇ ಉತ್ತಮ ಎಂದು ನೆನಪಿಡಿ.ನಿಮ್ಮ ಸಹೋದ್ಯೋಗಿಗಳು ಮತ್ತು ಮುಖ್ಯಸ್ಥ ರೊಂದಿಗೆ ನಿಮಗೆದುರಾಗುವ ಸಮಸ್ಯೆ ಗಳ ಮತ್ತು ಗೊಂದಲಗಳ ಬಗ್ಗೆ ಚರ್ಚಿಸಿ. ಅವರ ಸಲಹೆ, ಮಾರ್ಗದರ್ಶನ ಪಡೆಯಲು ಹಿಂಜರಿಯಬೇಡಿ.ಎಷ್ಟೇ ಪರಿಣಿತರಿದ್ದರೂ ನಮ್ಮಿಂದ ತಪ್ಪುಗಳು ನಡೆದು ಹೋಗಬಹುದು. ತಪ್ಪುಗಳು ನಡೆದುಹೋದರೆ ಪ್ರಾಂಜಲ ಮನಸ್ಸಿನಿಂದ ಅದನ್ನು ಒಪ್ಪಿಕೊಂಡು ಮುಂದುವರಿಯಿರಿ.

ನಮ್ಮನ್ನು ಟೀಕಿಸುವವರನ್ನು ಹತ್ತಿರ ಇರಿಸಿಕೊಳ್ಳಿ. ಅದರಿಂದ ನಿಮಗೆ ಒಳಿತು ಜಾಸ್ತಿ ಎಂದು ಗೊತ್ತಿರಲಿ.

ಸಮಾಜ ಮತ್ತು ವಿದ್ಯಾರ್ಥಿಗಳು ನಿಮ್ಮ ಯಾವುದೇ ಶಕ್ತಿಗೆ ತಲೆ ಬಾಗದೆ ಹೋದರೂ ನಹಿ ಜ್ಞಾನೇನ ಸದೃಶಂ ಎಂಬಂತೆ ಜ್ಞಾನ ಸಂಪತ್ತಿಗೆ ತಲೆಬಾಗುತ್ತಾರೆ ಎಂಬ ವಿಶ್ವಾಸ ನಿಮ್ಮಲ್ಲಿರಲಿ. ಜ್ಞಾನ ಸಂಪತ್ತಿನ ನೆರವಿನಿಂದ ನೀವು ಎಲ್ಲರ ಗೌರವಾದರಗಳನ್ನು ಖಂಡಿತಾ ಪಡೆಯುತ್ತೀರಿ. ಈ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಕಾರ್ಯಪ್ರವೃತ್ತರಾಗೋಣ.

ಶಿಕ್ಷಕ ವೃತ್ತಿ ಹಿಂದೆಯೂ, ಇಂದಿಗೂ ಮುಂದೆ ಹಾಗೂ ಎಂದೆಂದಿಗೂ ಪವಿತ್ರ ವೃತ್ತಿ ಎಂಬುದನ್ನು ಸಾಬೀತುಪಡಿಸೋಣ.


ಸಿಹಿಜೀವಿ ವೆಂಕಟೇಶ್ವರ

ತುಮಕೂರು

9900925529.


ಗುರುವೇ ನಮಃ

 ಗುರುವೇ ನಮಃ 


ಗುರು ಬ್ರಹ್ಮ ಗುರು ವಿಷ್ಣು ಗುರು ಸಾಕ್ಷಾತ್ ಪರಬ್ರಹ್ಮ ತಸ್ಮೈ ಶ್ರೀ ಗುರುವೇ ನಮಃ ಎಂಬ ಉಕ್ತಿಯಂತೆ ಶಿಕ್ಷಕರಿಗೆ ದೇವರ ಸ್ಥಾನ ನೀಡಲಾಗಿದೆ. ಆಧುನೀಕರಣ ಹಾಗೂ ಇತರ ಕಾರಣದಿಂದಾಗಿ ಅಲ್ಲಲ್ಲಿ ಶಿಕ್ಷಕರ ಬಗ್ಗೆ ಕೆಲ ನಕಾರಾತ್ಮಕ ಸುದ್ದಿಗಳು ಬಿತ್ತರವಾಗುತ್ತಿದ್ದರೂ  ಇಂದಿಗೂ ಗುರುಗಳಿಗೆ ತನ್ನದೇ ಆದ ಸ್ಥಾನವಿದೆ.ಈ ಕೆಳಗಿನ ಘಟನೆ ಗುರುವಿನ ಮಹತ್ವ ಸಾರುತ್ತದೆ. 


ಒಮ್ಮೆ ಡಾ.ವಿ ಕೃ   ಗೋಕಾಕರು ರೈಲಿನಲ್ಲಿ ಪ್ರವಾಸ ಮಾಡುತ್ತಿದ್ದರು.

ರಾತ್ರಿ ಪ್ರವಾಸ­ವಾದ್ದರಿಂದ ಪೈಜಾಮಾ, ಶರ್ಟು ಹಾಕಿಕೊಂಡಿದ್ದರು. ಮಲಗುವ ಮುನ್ನ ಶರ್ಟು ತೆಗೆದಿಟ್ಟು ಬನಿಯನ್ ನೊಂದಿಗೆ ಮಲಗಿದ್ದರು. ಬೆಳಿಗ್ಗೆ ಎಚ್ಚರವಾದಾಗ ರೈಲು ಒಂದು ನಿಲ್ದಾಣದಲ್ಲಿ ನಿಂತಿತ್ತು. ಗೋಕಾಕರು ಕಿಟಕಿಯಿಂದ ಆಚೆ ನೋಡಿ ಹತ್ತಿರದಲ್ಲೇ ಚಹಾದ ಅಂಗಡಿ ಇರುವು­ದನ್ನು ಕಂಡರು. ಚಹಾ ಕುಡಿಯ­ಬೇಕೆಂದು ಅವಸರದಿಂದ ಪೈಜಾಮಾದ ಜೇಬಿನಲ್ಲಿ ಎರಡು ರೂಪಾಯಿ ಹಾಕಿ­ಕೊಂಡು ಕೆಳಗಿಳಿದರು. ನೇರವಾಗಿ ಚಹಾದ ಅಂಗಡಿಗೆ ನಡೆದು ಚಹಾ ಆರ್ಡರ್ ಮಾಡಿದರು.


ಚಹಾ ಕುಡಿಯುತ್ತಿದ್ದಂತೆ ರೈಲು ಹೊರಡ­ತೊಡಗಿತು. ಇವರು ಗಾಬರಿಯಿಂದ ಚಹಾ ಕುಡಿಯುವುದನ್ನು ಬಿಟ್ಟು ರೈಲಿನ ಕಡೆಗೆ ಓಡಿದರು. ಆದರೆ ರೈಲು ಹೊರಡುತ್ತ ವೇಗವನ್ನು ಪಡೆದುಕೊಳ್ಳ­ತೊಡಗಿತು. ಇವರು ಎಷ್ಟೇ ಧಾವಂತ­ದಿಂದ ಓಡಿದರೂ ರೈಲು ಮುಂದೆ ಹೋಗಿಯೇ ಬಿಟ್ಟಿತು! ಡಾ. ಗೋಕಾಕ­ರಿಗೆ ಈಗ ಫಜೀತಿ. ಹಾಕಿಕೊಳ್ಳಲು ಬಟ್ಟೆಯಿಲ್ಲ, ಹಣವೂ ಇಲ್ಲ. ಇದ­ರೊಂದಿಗೆ ತಾವು ಹೊರಟಿದ್ದ ಮಹತ್ವದ ಕಾರ್ಯಕ್ರಮದಲ್ಲಿ ಭಾಗಿಯಾಗಲಾಗುವುದಿಲ್ಲ.


ಇನ್ನೇನು ಮಾಡು­ವುದು ಎಂದು ಚಿಂತಿಸುವಷ್ಟರಲ್ಲಿ ರೈಲು ಪ್ಲಾಟ್‌ಫಾರ್ಮ್‌ ದಾಟಿಯಾಗಿತ್ತು. ಇವರು ಹತಾಶರಾಗಿ ನಿಂತಿದ್ದಾಗ ಒಂದು ಆಶ್ಚರ್ಯಕರ ಸಂಗತಿ ಘಟಿಸಿತು! ಹೊರಟಿದ್ದ ರೈಲು ನಿಂತಿತು. ಇವರು ನೋಡುತ್ತಿದ್ದಂತೆ ಹಿಂದೆ ಹಿಂದೆ ಬರತೊಡಗಿತು! ರೈಲಿನ ಗಾರ್ಡ್ ಇದ್ದ ಬೋಗಿ ಪ್ಲಾಟ್ ಫಾರ್ಮ್  ಮೇಲೆ ಬಂದೊಡನೆ ಅದರಲ್ಲಿದ್ದ ಗಾರ್ಡ್ ಹೊರಗೆ ಹಾರಿಕೊಂಡ. ಗೋಕಾಕರು ನೋಡುತ್ತಿರುವಂತೆ ಆತ ಓಡಿಬಂದು ಅವರ ಕಾಲು ಮುಟ್ಟಿ ನಮಸ್ಕರಿಸಿದ!


ಇವರು ಬೆರಗಿನಲ್ಲಿದ್ದಂತೆಯೇ ಅತ ಹೇಳಿದ  ‘ಸರ್, ನಾನು ಕರ್ನಾಟಕ ಕಾಲೇಜಿನಲ್ಲಿ ನಿಮ್ಮ ವಿದ್ಯಾರ್ಥಿ­ಯಾಗಿದ್ದೆ. ನಾನು ಬಿ.ಎ. ಓದುತ್ತಿರು­ವಾಗ ಪರೀಕ್ಷೆಯಲ್ಲಿ ಕಾಪಿ ಮಾಡುತ್ತಿ­ದ್ದೆನೆಂದು ನೀವು ಮೂರು ವರ್ಷ ಡಿಬಾರ್ ಮಾಡಿಸಿದ್ದಿರಿ’. ‘ಹೌದಲ್ಲ, ನೀನು ಮೆನೆಜಿಸ್ ಅಲ್ಲವೇ?’ ಕೇಳಿದರು ಗೋಕಾಕ. ‘ಹೌದು ಸರ್, ಡಿಬಾರ್ ಮಾಡಿದ್ದು ನಿಮ್ಮ ತಪ್ಪಲ್ಲ ಸರ್, ಅದು ನನ್ನ ತಪ್ಪಿಗೆ ಶಿಕ್ಷೆ. ಆದರೆ ಆಮೇಲೆ ನಾನು ತಮ್ಮನ್ನು ಕಂಡು ಕ್ಷಮೆ ಕೇಳಿ ಪರಿಶ್ರಮ­ದಿಂದ ಓದಿದೆ. ನಂತರ ನೀವು ನನ್ನ ಡಿಬಾರ್ ಅವಧಿಯನ್ನು ಒಂದು ವರ್ಷಕ್ಕೆ ಇಳಿಸಿದಿರಿ. ಮರುವರ್ಷ ನಾನು ಪರೀಕ್ಷೆಗೆ ಕುಳಿತು ಪಾಸಾದೆ. ನನಗೆ ಈ ಗಾರ್ಡ್‌ ಕೆಲಸ ದೊರಕಿತು. ಸರ್, ಇಂದಿಗೂ ನಾನು ತಮ್ಮ ಇಂಗ್ಲೀಷ್ ತರಗತಿಗಳನ್ನು ಮರೆತಿಲ್ಲ’ ಎಂದ ಗಾರ್ಡ್‌ ಮೆನೆಜಿಸ್.


ಗೋಕಾಕರು ನಿರಾಳವಾಗಿ ರೈಲನ್ನೇರಿ ಪ್ರವಾಸ ಮುಂದುವರೆಸಿದರು. ಆದರ್ಶ ಶಿಕ್ಷಕರು ಏನೆಲ್ಲ ಮಾಡಬಹುದು. ವಿದ್ಯಾರ್ಥಿ­ಗಳನ್ನು ವಿಷಯದಲ್ಲಿ ಹೇಗೆ ಪ್ರೋತ್ಸಾ­­ಹಿಸಬಹುದು, ಅವರ ಬದುಕಿಗೆ ಮಾರ್ಗದರ್ಶನ ನೀಡಬಹುದು, ಸಮಾಜದಲ್ಲಿ ಪರಿವರ್ತನೆ ತರಬ­ಹುದು. ಇದೆಲ್ಲದರ ಜೊತೆಗೆ ಮುಂದೆ ಹೋದ ರೈಲನ್ನು ಕೂಡ ಮರಳಿ ಪ್ಲಾಟಫಾರ್ಮ್‌ಗೆ ತರಬಹುದು.

 ಒಬ್ಬ ಆದರ್ಶ ಶಿಕ್ಷಕ  ಮಕ್ಕಳಿಗೆ ಸ್ಪೂರ್ತಿ ಚೈತನ್ಯ ವನ್ನು ತುಂಬ್ತಾನೆ. ಮಕ್ಕಳ ಮನಸ್ಸನ್ನು ಅರಿತು ಅವರೊಡನೆ ಬೆರೆತು ನಿರಂತರ ವಿದ್ಯಾರ್ಥಿಯಾಗಿರುತ್ತಾನೆ.

ಉತ್ತಮ ಸಮಾಜದ ರೂವಾರಿಯಾಗಿರುತ್ತಾನೆ. 


ಸಿಹಿಜೀವಿ ವೆಂಕಟೇಶ್ವರ

ತುಮಕೂರು

9900925529


ತನ್ನಂತೆ ಪರರ ಬಗೆದೊಡೆ ಕೈಲಾಸ.

 


ತನ್ನಂತೆ ಪರರ ಬಗೆದೊಡೆ ಕೈಲಾಸ.


ಮಾನವ ಸಂಘಜೀವಿ. ನಮ್ಮ ನೆಮ್ಮದಿಗೆ  ಸಹಜೀವನ,ಸಹಕಾರ ಅಪೇಕ್ಷಣೀಯವಾದರೂ ಮಾನವ ಸಹಜ ಗುಣಗಳಾದ ಮತ್ಸರ, ಸ್ವಾರ್ಥ ಸದಾ ಇಣುಕಿ  ನಮ್ಮ ಮತ್ತು ಸಮಾಜದ ನೆಮ್ಮದಿ ಹಾಳು ಮಾಡಿಬಿಡುತ್ತವೆ.

ಒಂದು ದಿನ ಯಮಧರ್ಮರಾಯ ಒಂದು ವ್ಯಕ್ತಿಯ ಪ್ರಾಣವನ್ನು ಕೊಂಡೊಯ್ಯಲು ಭೂಮಿಗೆ ಬಂದ. ಆದರೆ ಪ್ರಾಣ ಕೊಂಡೊಯ್ಯಬೇಕಾಗಿದ್ದ ವ್ಯಕ್ತಿಯೇ ಯಮಧರ್ಮನಿಗೆ ಎದುರಾದ. ಯಮನಿಗೆ ಭೂಲೋಕ ಸುತ್ತಿ ಸುತ್ತಿ ದಾಹವಾಗಿತ್ತು. ಅವನಿಗೆ ಕುಡಿಯಲು ನೀರು ಕೇಳುತ್ತಾನೆ. ಸಾಯಬೇಕಾಗಿರುವ ವ್ಯಕ್ತಿಯೇ ನೀರು ಕೊಟ್ಟು ದಾಹ ತೀರಿಸುತ್ತಾನೆ.


           ಆದರೆ ಯಮ ಕೊಂಡೊಯ್ಯಬೇಕಾದ  ವ್ಯಕ್ತಿ ಅವನೇ ಎಂದು ತಿಳಿದು ಒಂದು ವರ ಕೊಡುತ್ತಾನೆ. ಏನೆಂದರೆ ಒಂದು ಹಣೆಬರಹದ ಪುಸ್ತಕ ಕೊಟ್ಟು ಇದರಲ್ಲಿ ನಿನಗೆ ಅಂತ ಒಂದು ಹಾಳೆ ಇದೆ. ನಿನಗೆ ಏನು ಬೇಕೋ ಅದನ್ನು ಬರೆದುಕೊ. ನೀನು ಏನು ಬರೆದುಕೊಂಡರೂ ನೆರವೇರುವುದು. ಇದರಲ್ಲಿ ಸಂಶಯವಿಲ್ಲ. ಆದರೆ ನೀನು ಬರೆದುಕೊಳ್ಳಲು ನಿನಗೆ ಐದು ನಿಮಿಷ ಮಾತ್ರ ಸಮಯ, ಆ ಐದು ನಿಮಿಷವೇ ನಿನಗೇ ಅತ್ಯಮೂಲ್ಯ. ಆ ಐದು ನಿಮಿಷ ದಾಟಿದ ನಂತರ ನಿನ್ನ ಹಣೆಬರಹ ಹೇಗಿರುತ್ತೋ ಹಾಗಾಗುವುದು ಎಂದು ಹೇಳಿ ಒಂದು ಪುಸ್ತಕ ಕೊಡುತ್ತಾನೆ. 


     ಆ ವ್ಯಕ್ತಿ ಪುಸ್ತಕ ತೆಗೆದ ತಕ್ಷಣ ಮೊದಲ ಪುಟ ಓದುತ್ತಾನೆ.ಅದರಲ್ಲಿ ನಿನ್ನ ಸ್ನೇಹಿತ ವಿದೇಶಕ್ಕೆ ಹೋಗುತ್ತಾನೆ ಎಂದಿರುತ್ತದೆ. ಅದಕ್ಕೆ ಅವನು ವಿದೇಶಕ್ಕೆ ಹೋಗಬಾರದೆಂದು ಬರೆದು ತಡೆಯುತ್ತಾನೆ.ಮತ್ತೊಂದು ಪುಟ ತೆರೆಯುತ್ತಾನೆ ಅದರಲ್ಲಿ ಮತ್ತೊಬ್ಬ ಸ್ನೇಹಿತ ಲಕ್ಷಗಟ್ಟಲೆ ಲಾಟರಿ ಗೆಲ್ಲುತ್ತಾನೆಂದಿರುತ್ತದೆ. ಅವನಿಗೆ ಲಾಟರಿ ಸಿಗಬಾರದು ಎಂದು ಬರೆಯುತ್ತಾನೆ. 

ಮತ್ತೊಂದು ಪುಟ ತೆರೆಯುತ್ತಾನೆ. ಅದರಲ್ಲಿ ಅವನ ಆಪ್ತ ಗೆಳತಿ ಆಗರ್ಭ ಶ್ರೀಮಂತನನ್ನು ಮದುವೆಯಾಗುತ್ತಾಳೆ ಎಂದಿರುತ್ತದೆ.ಆಪ್ತ ಗೆಳತಿ ಆಗರ್ಭ ಶ್ರೀಮಂತ ವ್ಯಕ್ತಿಯನ್ನು  ಮದುವೆಯಾಗಬಾರದೆಂದು ಬರೆಯುತ್ತಾನೆ. 

ಮತ್ತೊಂದು ಪುಟ ತೆರೆಯುತ್ತಾನೆ. ಪಕ್ಕದ ಮನೆಯ ರೈತ ಬೆಳೆದ ಬೆಳೆಗೆ ಒಳ್ಳೆಯ ಬೆಲೆ ಸಿಕ್ಕಿ ಸಿರಿವಂತನಾಗುತ್ತಾನೆಂದು ಇರುತ್ತದೆ. ಅವನು ಸಿರಿವಂತ ನಾಗಬಾರದು ಎಂದು ಬರೆಯುತ್ತಾನೆ. ಕೊನೆಯ ಹಾಳೆ ತೆರೆಯುತ್ತಾನೆ. ಅದು ಖಾಲಿ ಹಾಳೆಯಾಗಿರುತ್ತದೆ. ಅದರಲ್ಲಿ ಬರೆಯಬೇಕೆನ್ನುವಷ್ಟರಲ್ಲಿ  ಯಮ ಆ ಪುಸ್ತಕವನ್ನು ಕಸಿದುಕೊಳ್ಳುತ್ತಾನೆ. ಏಕೆಂದರೆ ಅವನಿಗೆ ಕೊಟ್ಟ ಐದು ನಿಮಿಷದ ಗಡುವು  ಮುಗಿದು ಹೋಗಿರುತ್ತದೆ. ಆಗ ಯಮ ಹೇಳುತ್ತಾನೆ, "ನಿನ್ನ ಆಯಸ್ಸು ಮುಗಿದಿದೆ ನಡೆ" ಎಂದು. ಆಗ ಆ ವ್ಯಕ್ತಿ ಹೇಳುತ್ತಾನೆ ನನಗೆ ಅಂತ ನಾ ಏನು ಬರೆದುಕೊಳ್ಳಲಿಲ್ಲ ಎಂದು. ಆಗ ಯಮ ಹೇಳುತ್ತಾನೆ ನಿಮಗೆ ಅಂತ ಒಂದಷ್ಟು ವರ್ಷ ಆಯಸ್ಸು ಕೊಟ್ಟಿರುತ್ತೇವೆ. ಅದರಲ್ಲೂ ವರವೆಂದು ಒಂದೈದು ನಿಮಿಷ ಆಯಸ್ಸು ಕೊಟ್ಟರೂ ನಿಮ್ಮಬಗ್ಗೆ ಯೋಚಿಸದೆ ಪರರ ಅವನತಿಯ ಬಗ್ಗೆ ಯೋಚಿಸುತ್ತೀರಾ ಎಂದರೆ  ಏನು ಹೇಳೋಣ? 

ಜೀವನವಿಡೀ ಕೊಟ್ಟರು ನೀವೇನೆಂದು ತಿಳಿಯದೆ ಪರರ ಬಗ್ಗೆ ಆಲೋಚಿಸುವವರಿಗೆ ಇಲ್ಲಿಬದುಕುವ ಹಕ್ಕಿಲ್ಲವೆಂದು ಕರೆದೊಯ್ದುಬಿಡುತ್ತಾನೆ.

ನಮಗೆ ಅಂತ ಒಂದಷ್ಟು ಹಾಳೆಗಳಿವೆ.ನಮಗೆ ಅಂತ ಒಂದಷ್ಟು ದಿನಗಳಿವೆ.

ನಮಗೆ ಅಂತ ಒಂದು ಬದುಕಿದೆ.

ನಮಗೆ ಅಂತ ಒಂದು ದಾರಿಯಿದೆ.

ನಮಗೆ ಅಂತ ಏನಿದಿಯೋ ಅದು ಸನ್ಮಾರ್ಗದಲ್ಲಿರಲಿ ಅದು ಬಿಟ್ಟು  ಪರರ ಬಗ್ಗೆ ಅಸೂಯೆ ಪಡುವುದು ತರವಲ್ಲ. ಸರ್ವೇ ಜನಾಃ ಸುಖಿನೋಭವಂತು ಎಂಬ ಭಾವನೆ ನಮ್ಮದಾಗಲಿ.ತನ್ನಂತೆ ಪರರ ಬಗೆದೊಡೆ ಕೈಲಾಸ  ಬಿನ್ನಾಣವಕ್ಕು ಸರ್ವಜ್ಞ .ಅಲ್ಲವೇ?


ಸಿಹಿಜೀವಿ ವೆಂಕಟೇಶ್ವರ

ತುಮಕೂರು

9900925529




ಆರ್ಟಿಕಲ್ 370 #article370


 


ಆರ್ಟಿಕಲ್ 370 ...


ಪ್ರಕಾಶಕ ಮತ್ತು ಲೇಖಕರಾದ ಗೆಳೆಯ ಶಂಕರಾನಂದ್ ರವರ ಜೊತೆಯಲ್ಲಿ ಇತ್ತೀಚೆಗೆ ಐನಾಕ್ಸ್ ಥಿಯೇಟರ್ ನಲ್ಲಿ ಆರ್ಟಿಕಲ್ 370 ಚಿತ್ರ ವೀಕ್ಷಿಸಿದೆ.

ತುಮಕೂರಿನಲ್ಲಿ ಐನಾಕ್ಸ್ ಆರಂಭವಾದ ತರುವಾಯ ಕನ್ನಡ ಸೇರಿ ಹಿಂದಿ, ತೆಲುಗು,ಇಂಗ್ಲಿಷ್, ತಮಿಳು ಹೀಗೆ ವಿವಿಧ ಭಾಷೆಯ ಎಲ್ಲಾ ಜಾನರ್ ಸಿನಿಮಾ ನೋಡಿದ್ದರೂ ರಾಜಕೀಯ ಜ್ಞಾನ ನೀಡುವ ,ದೇಶದ ಭದ್ರತಾ ವಿಷಯ ಮತ್ತು ಏಕತೆಯ ಸಂದೇಶ ಸಾರುವ ಈ ಚಿತ್ರ ಗಮನಾರ್ಹವಾದದು ಎಂದು ನನಗನಿಸಿತು.


 2016 ರಿಂದ 2019 ರವರೆಗೆ ಕಾಶ್ಮೀರದಲ್ಲಿ 370 ನೇ ವಿಧಿಯನ್ನು ರದ್ದುಗೊಳಿಸುವ ಹಿನ್ನೆಲೆಯಲ್ಲಿ ನಡೆದ ಅನೇಕ ಘಟನೆಗಳನ್ನು ಒಟ್ಟುಗೂಡಿಸಿ. ಉತ್ತಮ ಸ್ಕ್ರೀನ್ ಪ್ಲೇ ಮೂಲಕ ನಮಗೆ ಚಿತ್ರವನ್ನು ಸಮರ್ಪಕವಾಗಿ ತಲುಪಿಸಿದ ಚಿತ್ರತಂಡಕ್ಕೆ ಒಂದು ಮೆಚ್ಚುಗೆ ಹೇಳಲೇಬೇಕು.  

ಜೋನಿ ಹಕ್ಸರ್ ಎಂಬ ಗುಪ್ತಚರ ಅಧಿಕಾರಿಯ ಡಿ ಗ್ಲಾಮ್ ಪಾತ್ರದಲ್ಲಿ ಯಾಮಿ ಗೌತಮಿ ಅತ್ಯುತ್ತಮ ಅಭಿನಯ ನೀಡಿದ್ದಾರೆ. ತನ್ನ ತಂದೆಯ ಅಸಹಜ ಸಾವು ನೆನೆದು ಹಾಗೂ ಜೀವದ ಗೆಳೆಯ ಅಸುನೀಗಿದ ಸಮಯದಲ್ಲಿ ನೋವಿನಿಂದ ಬಳಲುವ ಅಭಿನಯ ಗಮನ ಸೆಳೆಯುತ್ತದೆ.  ತಮಿಳುನಾಡು ಮೂಲದ  ಗೃಹ ಕಾರ್ಯದರ್ಶಿಯಾಗಿ  ಪ್ರಿಯ ಮಣಿಯವರದು ಪ್ರಬುದ್ದ ಅಭಿನಯ.370ನೇ ವಿಧಿಯ  ರದ್ದತಿಗೆ ಕಾರಣವಾಗುವ ಘಟನೆಗಳನ್ನು ಬಹಳ ಚಾಕಚಕ್ಯತೆಯಿಂದ ನಿರ್ವಹಿಸುವಲ್ಲಿ ನಿರ್ದೇಶಕರಾದ 

ಆದಿತ್ಯ ಸುಹಾಸ್ ಜಂಬಳೆರವರು ಪ್ರಿಯಾಮಣಿ 

ಅವರಿಂದ ಉತ್ತಮ ಅಭಿನಯ ತೆಗೆದಿದ್ದಾರೆ. 

 ಒಂದೆಡೆ ಬಿಲ್ ಮಂಡನೆಯ  ಹಿನ್ನೆಲೆಯಲ್ಲಿ ನಡೆಯುವ ರಾಜಕೀಯ ಚಟುವಟಿಕೆಗಳು, ಕಣಿವೆಯಲ್ಲಿ ನಡೆವ ಉಗ್ರ ಚಟುವಟಿಕೆಗಳು,  ಅವುಗಳನ್ನು ನಿಭಾಯಿಸಲು ಪಿ ಎಂ ಓ ಕಛೇರಿಯ ಕಾರ್ಯಾಚರಣೆ  ಇವುಗಳು ಕೆಲವೊಮ್ಮೆ ನಮಗೆ ಜ್ಞಾನದ ಜೊತೆಯಲ್ಲಿ ಆಕ್ಷನ್ ಥ್ರಿಲ್ಲರ್ ರೀತಿಯಲ್ಲಿ  ನಮ್ಮನ್ನು ನಮ್ಮ ಆಸನದ ತುದಿಯಲ್ಲಿ ಇರಿಸುತ್ತದೆ.


ಇನ್ನೂ ಚಿತ್ರದ ಸಂಕಲನ ಬಹಳ ಚುರುಕಾಗಿರುವುದರಿಂದ ಸಿನಿಮಾ ನಿಮೆಗೆಲ್ಲಿಯೂ ಬೋರ್ ಆಗುವುದಿಲ್ಲ 

ವಿಶೇಷವಾಗಿ 370 ನೇ ವಿಧಿಯ ಕಾನೂನು ಅಂಶಗಳ ಚರ್ಚೆಯ ಸಮಯದಲ್ಲಿ  ಕ್ಯಾಮರಾ ಕೆಲಸ ಮತ್ತು  ಹಿನ್ನೆಲೆಯ  ಸಂಗೀತವು ಶ್ಲಾಘನೀಯವಾಗಿದೆ. 


ಚಿತ್ರ ನೋಡಿ ಥಿಯೇಟರ್ ನಿಂದ   ಹೊರ ಬರುವಾಗ ಕಾಲೇಜು ವಿದ್ಯಾರ್ಥಿಗಳು ಬಿಲ್ ಅನ್ನು ರಾಜ್ಯ ಸಭೆಯಲ್ಲಿ ಮಂಡಿಸಿದ ರೀತಿ, ಅಲ್ಲಿ ನಡೆದ ಚರ್ಚೆಯ ಪ್ರಮುಖಾಂಶಗಳ ಬಗ್ಗೆ ಮಾತನಾಡುವುದನ್ನು ಕೇಳಿಸಿಕೊಂಡ ನನಗೆ ನಿಜಕ್ಕೂ ಇದೊಂದು ಕಾಡುವ ಸಿನಿಮಾ ಎಂದನಿಸಿತು. ಬಿಲ್ ಮಂಡನೆಯ ಹಿನ್ನೆಲೆ, ಕಾನೂನಿನ ಜ್ಞಾನ, ಭದ್ರತೆ ,ಮುಂತಾದ ವಿಷಯಗಳು ಎಷ್ಟು ಮುಖ್ಯ ಎಂಬುದನ್ನು ರಾಜ್ಯಶಾಸ್ತ್ರದ ವಿದ್ಯಾರ್ಥಿಗಳು ಮತ್ತು ರಾಜಕೀಯ ಆಸಕ್ತರು ಈ ಸಿನಿಮಾ ನೋಡಿದರೆ ಒಂದು ನಿರ್ದಿಷ್ಟ ಜ್ಞಾನ ಲಭಿಸುತ್ತದೆ.ಒಟ್ಟಾರೆ ಹೇಳುವುದಾದರೆ ನಮ್ಮ ದೇಶದ ಎಲ್ಲ ನಾಗರಿಕರು  ನೋಡಲೇಬೇಕಾದ ಚಿತ್ರ ಇದು.


ಸಿಹಿಜೀವಿ ವೆಂಕಟೇಶ್ವರ

ತುಮಕೂರು

ಪ್ರೇಮ ಗೀತೆ

 ಬಾ

ನಲ್ಲೆ

ಸೇರೋಣ

ಸಂತಸದಿ 

ನಲಿದಾಡೋಣ

ಸಂಭ್ರಮಿಸುತಲಿ

ನಮ್ಮ ಪ್ರೀತಿಯನು 

ಜಗತ್ತಿಗೆ ತೋರಿಸೋಣ

ಪ್ರೇಮೋತ್ಸವ ಇದು

ನನ್ನ ನಿನ್ನ ಗೀತೆ

ಹಾಡೋಣ ಇಂದು

ಪ್ರೇಮಗೀತೆ

ಒಟ್ಟಾಗಿ 

ನಾನು

ನೀ


ಸಿಹಿಜೀವಿ ವೆಂಕಟೇಶ್ವರ






ಉತ್ಸವ

ಇದು 


22 February 2024

ಮತ್ತೆ ಏರಿಸುವುದು.(ಹನಿಗವನ)

 


ಮತ್ತೆ ಏರಿಸುವುದು.


ಎಣ್ಣೆ ಬೆಲೆಯನ್ನು 

ಯಾಕೆ ಮತ್ತೆ ಏರಿಸುವುದು|

ಸಿಟ್ಟಿನಿಂದ ಕೇಳಿದ ಗುಂಡ

ಎಕೆಂದರೆ ಅದು "ಮತ್ತೇ" ಏರಿಸುವುದು||


ಸಿಹಿಜೀವಿ ವೆಂಕಟೇಶ್ವರ

ತುಮಕೂರು

19 February 2024

ಮಕ್ಕಳಲ್ಲಿ ಪೌರ ಪ್ರಜ್ಞೆ ಮೂಡಿಸುವ ಸಿ ಎಂ ಸಿ ಎ

 



ಮಕ್ಕಳಲ್ಲಿ  ಪೌರ ಪ್ರಜ್ಞೆ ಮೂಡಿಸುವ ಸಿ ಎಂ ಸಿ ಎ.



ಇಂದಿನ ಪೋಷಕರು ಮಕ್ಕಳಿಗೆ ಹೇಳುವ ಒಂದೇ ಮಾತು ಜಾಸ್ತಿ ಪರ್ಸೆಂಟೇಜ್ ತೆಗಿ, ಟೈಮ್ ವೇಸ್ಟ್ ಮಾಡಬೇಡ, ಕಲ್ಚರಲ್ ಆಕ್ಟಿವಿಟೀಸ್ ಏನೂ ಬೇಡ  ಬರೀ ಓದು ಸಾಕು.

ಹೀಗೆ ಬೆಳೆದ ಮಕ್ಕಳಿಗೆ 

ಪ್ರಜಾಪ್ರಭುತ್ವ, ಸರ್ಕಾರ, ಸಾಮಾಜಿಕ ಸಮಾನತೆ, ಲಿಂಗ ಸಮಾನತೆ, ಬಹುತ್ವ ಇವೆಲ್ಲವೂ ಹೇಗೆ ತಾನೆ ಅರ್ಥವಾಗಬೇಕು?  

ಕೆಲ ಶಾಲಾ ಕಾಲೇಜುಗಳಲ್ಲಿ ಈ ಕುರಿತಾದ ಪ್ರಯತ್ನಗಳಾಗಿರುವುದು ಸ್ವಾಗತಾರ್ಹ ಆದರೆ ಅಷ್ಟೊಂದು ವ್ಯಾಪಕವಾಗಿ ಆಗಿಲ್ಲದಿರುವುದು ಅಷ್ಟೇ ಸತ್ಯ. ಈ ನಿಟ್ಟಿನಲ್ಲಿ

ಬೆಂಗಳೂರಿನ ಚಿಲ್ಡ್ರನ್  ಮೂವ್‌ಮೆಂಟ್ ಫಾರ್ ಸಿವಿಕ್ ಅವೇರ್‌ನೆಸ್‌ ಸಂಸ್ಥೆಯು (ಸಿಎಂಸಿಎ) ಎರಡು ದಶಕಕ್ಕೂ ಹೆಚ್ಚಿನ ಅವಧಿಯಿಂದ ಕೆಲಸ ಮಾಡುತ್ತಿದೆ.

ಐದು ವರ್ಷಗಳ ಹಿಂದೆ ನಾನು ಈ ಸಂಸ್ಥೆಗೆ ಭೇಟಿ ನೀಡಿದ್ದೆ  ಆ ಸಂಸ್ಥೆಯಲ್ಲಿ  ಸಹಾಯಕ ನಿರ್ದೇಶಕರಾಗಿ  ಕಾರ್ಯನಿರ್ವಹಿಸುವ ಮರಳಪ್ಪ ರವರು ಸಂಸ್ಥೆಯ ಕಾರ್ಯ ವಿಧಾನವನ್ನು ವಿವರಿಸಿದ್ದರು.


'ಪಬ್ಲಿಕ್ ಅಫೇರ್ಸ್ ಸೆಂಟರ್' ಸಂಸ್ಥೆಯ ಯೋಜನೆಯಾಗಿ 'ಚಿಲ್ಡ್ರನ್    ಮೂವ್‌ಮೆಂಟ್ ಫಾರ್ ಸಿವಿಕ್ ಅವೇರ್‌ನಸ್‌' ಹುಟ್ಟು ಪಡೆಯಿತು. ನಂತರದ ದಿನಗಳಲ್ಲಿ ಈ ಯೋಜನೆಯೇ ಸಂಸ್ಥೆಯ ರೂಪ ಪಡೆದುಕೊಂಡಿತು. ಮಂಜುನಾಥ ಸದಾಶಿವ, ವೃಂದಾ ಭಾಸ್ಕರ್ ಹಾಗೂ ಪ್ರಿಯಾ ಕೃಷ್ಣಮೂರ್ತಿ ಅವರು ಸೇರಿ ಈ ಸಂಸ್ಥೆಯನ್ನು 2000ನೇ ಇಸ್ವಿಯಲ್ಲಿ ಹುಟ್ಟುಹಾಕಿದರು.


ಮಕ್ಕಳನ್ನು ಜವಾಬ್ದಾರಿಯುತ ಪ್ರಜೆಯಾಗಿಸಲು, ಅವರಲ್ಲಿ ಜೀವನ ಕೌಶಲಗಳನ್ನು ತುಂಬಲು ಈ ಸಂಸ್ಥೆ ಹಲವು ಕಾರ್ಯಕ್ರಮಗಳನ್ನು ಹಾಕಿಕೊಂಡಿದೆ. ಸಂಸ್ಥೆಯ ಕಾರ್ಯಕರ್ತರು ಶಾಲೆ ಶಾಲೆಗಳಿಗೆ ತೆರಳಿ ಸಂಸ್ಥೆಯ ಕುರಿತು, ಅವರ ಯೋಜನೆಯ ಕುರಿತು ವಿವರಿಸುತ್ತಾರೆ. ಅದು, ಸರ್ಕಾರಿ ಶಾಲೆ ಇರಬಹುದು, ಖಾಸಗಿ ಶಾಲೆ ಇರಬಹುದು. ಶಾಲೆಯು ಒಪ್ಪಿಗೆ ನೀಡಿದರೆ, ಸಂಸ್ಥೆಯು ತನ್ನ ಕಾರ್ಯಚಟುವಟಿಕೆಗಳನ್ನು ಆರಂಭಿಸುತ್ತದೆ. ಶಾಲೆಗಳೂ ಖುದ್ದಾಗಿ ಸಂಸ್ಥೆಯನ್ನು ಸಂಪರ್ಕಿಸಬಹುದು.


6ನೇ ತರಗತಿಯಿಂದ 10ನೇ ತರಗತಿಯ ವರೆಗಿನ ಮಕ್ಕಳನ್ನು ಸಂಸ್ಥೆಯು ಮುಖ್ಯ ಗುರಿಯನ್ನಾಗಿಸಿಕೊಂಡಿದೆ. 6ನೇ ತರಗತಿಯ ಒಬ್ಬ ಮಗುವು ಈ ಯೋಜನೆಯ ಭಾಗವಾದರೆ, ಆ ಮಗುವು 10ನೇ ತರಗತಿಗೆ ಬರುವವರೆಗೂ ಸಂಸ್ಥೆಯ ಯೋಜನೆಗಳ ಭಾಗವಾಗಿಯೇ ಇರುತ್ತದೆ. ಶಾಲೆಯೊಂದರಲ್ಲಿ ವಾರಕ್ಕೆ ಒಂದು ತರಗತಿಯನ್ನು ಪ್ರತಿ ತರಗತಿಯ ಮಕ್ಕಳಿಗೆ ಸಂಸ್ಥೆಯು ನಡೆಸುತ್ತದೆ. ತಜ್ಞರ ಮೂಲಕ ಸಂಸ್ಥೆಯು ತನ್ನದೇ ಪಠ್ಯಕ್ರಮವನ್ನೂ ರೂಪಿಸಿಕೊಂಡಿದೆ. ಸಹಾನುಭೂತಿ, ಒಂದು ವಿಷಯದ ಕುರಿತು ವಿಮರ್ಶೆ ಮಾಡುವುದು, ಕ್ರಿಯಾಶೀಲ ವಿಚಾರವಂತಿಕೆಯನ್ನು ಬೆಳೆಸಿಕೊಳ್ಳುವುದು, ಉತ್ತಮ ಸಂವಹನ ಹೀಗೆ ಅನೇಕ ಜೀವನ ಕೌಶಲಗಳನ್ನೂ ಸಂಸ್ಥೆ ಕಲಿಸಿಕೊಡುತ್ತದೆ.


ಪ್ರಾಯೋಗಿಕ ಚಟುವಟಿಕೆಗಳೇ ಸಂಸ್ಥೆಯ ಪಠ್ಯಕ್ರಮ. ಕರ್ನಾಟಕವಲ್ಲದೆ, ತಮಿಳುನಾಡು, ಮಹಾರಾಷ್ಟ್ರ ಮತ್ತು ಒಡಿಶಾದಲ್ಲಿಯೂ ತನ್ನ ಕಾರ್ಯ ಚಟುವಟಿಕೆಗಳನ್ನು ಸಂಸ್ಥೆ ವಿಸ್ತರಿಸಿ ಕೊಂಡಿದೆ. ತನ್ನೆಲ್ಲಾ ಕಾರ್ಯಚಟು ವಟಿಕೆಗಳನ್ನು ಸಂಸ್ಥೆ ಉಚಿತವಾಗಿ ಮಾಡುತ್ತದೆ. ದಾನಿಗಳ ದೇಣಿಗೆಯೇ ಸಂಸ್ಥೆಯ ಆರ್ಥಿಕ ಬೆನ್ನೆಲುಬು. 


ಹಾಗೂ ನಾಗರಿಕ ಸಮಸ್ಯೆಗಳ ಕುರಿತು ತಿಳಿಸಿಕೊಡಲು 'ಸಿಎಂಸಿಎ ಕ್ಲಬ್' ಯೋಜನೆಯನ್ನು ಸಂಸ್ಥೆ ರೂಪಿಸಿದೆ. ಜೊತೆಗೆ, ಸರ್ಕಾರದೊಂದಿಗೆ ಕೈಜೋಡಿಸಿ, ಮಕ್ಕಳ ಗ್ರಾಮ ಸಭೆಗಳನ್ನೂ ಸಂಸ್ಥೆ ಆಯೋಜಿಸುತ್ತದೆ. 'ನನ್ನ ಒಳಿತಿಗಾಗಿ ಗ್ರಂಥಾಲಯ' ಎನ್ನುವ ಯೋಜನೆಯಡಿ, ಗ್ರಾಮದಲ್ಲಿನ ಗ್ರಂಥಾಲಯಕ್ಕೆ ಬರುವಂತೆ ಮಕ್ಕಳನ್ನು ಹುರಿದುಂಬಿಸುತ್ತದೆ. ನಾಗರಿಕ ವಿಷಯಗಳ ಕುರಿತು ಜಾಗೃತಿ ಮೂಡಿಸಲು, ಮಕ್ಕಳಿಂದ ಹಲವು ಚಟುವಟಿಕೆಗಳನ್ನು ಮಾಡಿಸುತ್ತದೆ. ಕಾರ್ಯಚಟುವಟಿಕೆ: ಶಾಲೆಯಲ್ಲಿ ಶೌಚಾಲಯ ಇಲ್ಲದಿದ್ದರೆ, ಬಾಲಕಿಯರಿಗೆ ಪ್ರತ್ಯೇಕ ಶೌಚಾಲಯ ವ್ಯವಸ್ಥೆ ಇಲ್ಲದಿದ್ದರೆ, ತಮ್ಮ ಮನೆಯ ಎದುರು ಕಸ ಸುರಿಯುತ್ತಿದ್ದರೆ, ಬಾಲ ಕಾರ್ಮಿಕ ಪದ್ಧತಿ ನಡೆಯುತ್ತಿದ್ದರೆ... ಹೀಗೆ ಅನೇಕ ಸಾಮಾಜಿಕ ಸಮಸ್ಯೆಗಳ ಕುರಿತು, ಪರಿಸರ ಸಂರಕ್ಷಣೆ ಕುರಿತು ಮಕ್ಕಳಲ್ಲಿ ಜಾಗೃತಿ ಮೂಡಿಸಲಾಗುತ್ತದೆ. 

ಹೀಗೆ ಸಿ ಎಮ್ ಸಿ‌ಎ  ಭವಿಷ್ಯದ ಜವಾಬ್ದಾರಿಯುತ ನಾಗರಿಕರ ನಿರ್ಮಾಣಕ್ಕೆ ಉತ್ತಮ ಯೋಜನೆಗಳನ್ನು ರೂಪಿಸಿ ಕಾರ್ಯಪ್ರವೃತ್ತವಾಗಿದೆ.ಇವರೊಂದಿಗೆ ಸಮುದಾಯವು ಸಕ್ರಿಯವಾಗಿ ಪಾಲ್ಗೊಂಡು ಸಾರ್ವಜನಿಕರು ಸಹಕಾರ ನೀಡಿದರೆ ಜವಾಬ್ದಾರಿಯುತ ಸಮಾಜ ನಮ್ಮದಾಗುತ್ತದೆ.


ಸಿಹಿಜೀವಿ ವೆಂಕಟೇಶ್ವರ

ತುಮಕೂರು.

17 February 2024

ಜ್ಞಾನಪೀಠವೇರಿದ ಗುಲ್ಜಾರ್ ಗೆ ಜೈ... ಹೋ.


 ಜ್ಞಾನಪೀಠವೇರಿದ ಗುಲ್ಜಾರ್ ಗೆ ಜೈ... ಹೋ...



ಸಂಪೂರಣ್ ಸಿಂಗ್ ಕಾಲ್ರಾ ಎಂದರೆ ಬಹಳಷ್ಟು ಜನರಿಗೆ ಬೇಗ ಅರ್ಥವಾಗದಿರಬಹುದು. ಜೈ ಹೋ ಹಾಡಿನ ಗೀತ ರಚನೆಕಾರ ಯಾರೆಂದರೆ ತಟ್ಟನೆ ನೆನಪಾಗುವೆ ಹೆಸರೇ ಗುಲ್ಜಾರ್.

ಕವಿಯಾಗಿ, ಚಿತ್ರ ನಿರ್ದೇಶಕರಾಗಿ, ಗೀತ ರಚನಕಾರರಾಗಿ ಪ್ರಸಿದ್ಧಿ ಪಡೆದಿದ್ದಾರೆ.  ಹಿಂದಿ-ಉರ್ದು, ಪಂಜಾಬಿ, ಮತ್ತು ಹಲವು ಉಪಭಾಷೆಗಳಾದ ಬ್ರಜ್, ಖಾರಿಬೋಲಿ, ಹರ್ಯಾಣ್ವಿ, ಮರ್ವಾರಿ ಭಾಷೆಗಳಲ್ಲಿ ಅವರದ್ದು ಅಪ್ರತಿಮ ಪ್ರಭುತ್ವ. 

ಇವರಿಗೆ ಈ ವರ್ಷದ ಭಾರತದ ಸಾಹಿತ್ಯ ಕ್ಷೇತ್ರದ ಅತ್ಯುನ್ನತ ಪುರಸ್ಕಾರ ಜ್ಞಾನಪೀಠ ಪ್ರಶಸ್ತಿ ಲಭಿಸಿರುವುದು ಸಂತಸದ ವಿಷಯ.


ಗುಲ್ಜಾರರು ಈಗಿನ ಪಾಕಿಸ್ಥಾನದ ಭಾಗವಾಗಿರುವ ‘ದಿನಾ ಝೇಲಂ’ ಎಂಬ ಊರಿನಲ್ಲಿ ಸಿಖ್  ಮನೆತನವೊಂದರಲ್ಲಿ ಆಗಸ್ಟ್ 18. 1936ರಲ್ಲಿ ಜನಿಸಿದರು.  ಗುಲ್ಜಾರರು ಕವಿಯಾಗುವುದಕ್ಕೆ ಮುಂಚೆ ದೆಹಲಿಯ ಗ್ಯಾರೇಜ್ ಒಂದರಲ್ಲಿ ಕಾರ್ ಮೆಕಾನಿಕ್ ಆಗಿದ್ದರು.  ಸಿನಿಮಾ ಸಾಹಿತಿಯಾಗಿ ಗುಲ್ಜಾರರು ಮೊದಲಿಗೆ ಬಿಮಲ್ ರಾಯ್ ಮತ್ತು ಹೃಷಿಕೇಶ್ ಮುಖರ್ಜಿ ಅವರೊಂದಿಗೆ ಕಾರ್ಯ ನಿರ್ವಹಿಸಲು ಪ್ರಾರಂಭಿಸಿದರು.  


ಗೀತರಚನಕಾರರಾಗಿ ಗುಲ್ಜಾರರು ಪ್ರವೇಶ ಪಡೆದದ್ದು  1963ರಲ್ಲಿ    ಸಚಿನ್ ದೇವ್ ಬರ್ಮನ್ ಸಂಗೀತ ನೀಡಿದ ‘ಬಂಧಿನಿ’ ಚಿತ್ರದ ಮೂಲಕ.  ಆ ಚಿತ್ರದ ಎಲ್ಲ ಹಾಡುಗಳನ್ನು ಬರೆದ ಶೈಲೇಂದ್ರರು ಗುಲ್ಜಾರರಿಗೆ ‘ಮೋರಾ ಗೋರ ಆಂಗ್ ಲಾಯ್ಲೆ’ ಗೀತೆಯನ್ನು ಬರೆಯುವ ಅವಕಾಶವನ್ನು ಕಲ್ಪಿಸಿಕೊಟ್ಟರು.  ಈ ಹಾಡಿಗೆ ಅಭಿನಯ ನೀಡಿದವರು ನೂತನ್.  ಗುಲ್ಜಾರರ  ಚಿತ್ರಗೀತೆಗಳು ಸಚಿನ್ ದೇವ್ ಬರ್ಮನ್ ಮತ್ತು ರಾಹುಲ್ ದೇವ್ ಬರ್ಮನ್ ಸಂಗೀತ ನಿರ್ದೇಶನದಲ್ಲಿ  ಹೆಚ್ಚು ಪ್ರಸಿದ್ಧಿ ಪಡೆದವು.  ಹೀಗಾಗಿ ಬರ್ಮನ್ ಅವರನ್ನು ತಮ್ಮ ಚಿತ್ರ ಜೀವನಕ್ಕೆ ಇಂಬುಕೊಟ್ಟವರು ಎಂದು ಗುಲ್ಜಾರ್ ಕೃತಜ್ಞತೆಯಿಂದ ಸ್ಮರಿಸುತ್ತಾರೆ.  ಸಲೀಲ್ ಚೌಧುರಿ ಸಂಗೀತ ನಿರ್ದೇಶನದ ಆನಂದ್, ಮೇರೆ ಅಪ್ನೆ ಮುಂತಾದ ಚಿತ್ರಗಳಲ್ಲಿ ಗುಲ್ಜಾರರ ಗೀತೆಗಳು ಪ್ರಶಸ್ತಿ ಪಡೆದವು.  ಮೌಸಂ ಚಿತ್ರದ ಮದನ್ ಮೋಹನ್; ವಿಶಾಲ್ ಭಾರದ್ವಾಜ್ ಸಂಗೀತ ನಿರ್ದೇಶನದ  ‘ಮ್ಯಾಚಿಸ್’, ಓಂಕಾರ, ಕಾಮಿನಯ್; ಎ ಆರ್ ರೆಹಮಾನ್ ಅವರ ದಿಲ್ ಸೆ, ಗುರು, ಸ್ಲಂ ಡಾಗ್ ಮಿಲಿಯನೇರ್, ರಾವಣ್; ಶಂಕರ್ ಎಹಸಾನ್ ಲಾಯ್ ಅವರ ಬಂಟಿ ಔರ್ ಬಬ್ಲಿ ಹೀಗೆ ಎಲ್ಲ ತಲೆಮಾರುಗಳ ಸಂಗೀತ ನಿರ್ದೇಶಕರ ಜೊತೆಯಲ್ಲಿ ಸಾಹಿತ್ಯ ರಚಿಸಿದ ಕೀರ್ತಿ ಗುಲ್ಜಾರರಿಗೆ ಸೇರಿದೆ.


ಗೀತ ರಚನಾಕಾರರಾಗಿ ಗುಲ್ಜಾರರು ಸಚಿನ್ ದೇವ್ ಬರ್ಮನ್, ಸಲಿಲ್ ಚೌದುರಿ, ಶಂಕರ ಜೈ ಕಿಶನ್. ಹೇಮಂತ್ ಕುಮಾರ್, ರಾಹುಲ್ ದೇವ್ ಬರ್ಮನ್, ಲಕ್ಷ್ಮೀಕಾಂತ್ ಪ್ಯಾರೆಲಾಲ್, ಮದನ್ ಮೋಹನ್, ಎ ಆರ್ ರಹಮಾನ್,   ರಾಜೇಶ್ ರೋಶನ್, ಅನು ಮಲಿಕ್, ಶಂಕರ್- ಎಹಸಾನ್ -ಲಾಯ್,  ವಿಶಾಲ್ ಭಾರದ್ವಾಜ್ ಮುಂತಾದ ಸಂಗೀತ ನಿರ್ದೇಶಕರೊಂದಿಗಿನ ಜೊತೆಗಾರಿಕೆಯಲ್ಲಿ ಎದ್ದು ಕಾಣುತ್ತಾರೆ.


ಕೇವಲ ಗೀತ ರಚನೆ ಮಾತ್ರವಲ್ಲದೆ ಅವರು ಹಲವಾರು ಚಿತ್ರಗಳಿಗೆ ಸಾಹಿತ್ಯ, ಚಿತ್ರಕತೆ ಮತ್ತು ಸಂಭಾಷಣೆಗಳನ್ನೂ ಒದಗಿಸಿದ್ದಾರೆ.  ಗುಲ್ಜಾರರು ನಿರ್ದೇಶಿಸಿದ ಚಿತ್ರಗಳು ಹಲವಾರು ಪ್ರಶಸ್ತಿಗಳನ್ನು ಗಳಿಸಿ ವಿದ್ವಜ್ಜನರಿಂದ ಮೊದಲ್ಗೊಂಡು ಸಾಮಾನ್ಯರವರೆಗೆ ಎಲ್ಲ ವರ್ಗದ ಜನರನ್ನೂ ಆಕರ್ಷಿಸಿವೆ.  ದೂರದರ್ಶನದಲ್ಲಿ ಅವರು  ಮಿರ್ಜಾ ಗಾಲಿಬ್, ತಹರೀರ್ ಮುನ್ಷಿ ಪ್ರೇಮಚಂದ್ ಕಿ ಕಹಾನಿ ಮುಂತಾದ ಧಾರಾವಾಹಿಗಳನ್ನು ಸಹಾ ಸೃಷ್ಟಿಸಿದ್ದಾರೆ.  ಹೆಲೋ ಜಿಂದಗಿ, ಪೊಟ್ಲಿ ಬಾಬಾ ಕಿ, ಜಂಗಲ್ ಬುಕ್ ಮುಂತಾದ ದೂರದರ್ಶನ ದೃಶ್ಯಾವಳಿಗಳಿಗೆ  ಗೀತೆ ರಚನೆ ಸಹಾ ಮಾಡಿದ್ದಾರೆ.


ಆಶೀರ್ವಾದ್, ಆನಂದ್, ಖಾಮೋಷಿ ಮುಂತಾದ ಪ್ರಸಿದ್ಧ ಚಿತ್ರಗಳಿಗೆ ಚಿತ್ರಕತೆ ಮತ್ತು ಸಂಭಾಷಣೆ ಬರೆದ ನಂತರದಲ್ಲಿ ಗುಲ್ಜಾರರು  1971ರಲ್ಲಿ ‘ಮೇರೆ ಅಪ್ನೆ’ ಎಂಬ ಚಿತ್ರದ ಮೂಲಕ ನಿರ್ದೇಶನಕ್ಕೆ ಕಾಲಿಟ್ಟರು.  ತಪನ್ ಸಿನ್ಹಾ ಅವರ ಬೆಂಗಾಲಿ ಚಿತ್ರ ‘ಅಪರಿಜನ್’ ಅವರ ಹಿಂದಿ ಅವತರಣಿಕೆಯಾದ ಈ ಚಿತ್ರದಲ್ಲಿ ಮೀನಾ ಕುಮಾರಿ ಪ್ರಮುಖ ಪಾತ್ರ ನಿರ್ವಹಿಸಿದ್ದರು.  ಈ ಚಿತ್ರದ ಸಾಧಾರಣ ಯಶಸ್ಸಿನ ನಂತರದಲ್ಲಿ ಗುಲ್ಜಾರರು ‘ಪರಿಚಯ್’ ಮತ್ತು ‘ಕೋಶಿಶ್’ ಚಿತ್ರಗಳನ್ನೂ ನಿರ್ದೇಶಿಸಿದರು.  ಪರಿಚಯ್ ಚಿತ್ರ ಬೆಂಗಾಲಿ ಬಾಷೆಯ ‘ರಂಗೀನ್ ಉತ್ತರೈನ್’ ಕಥೆಯನ್ನು ಆಧರಿಸಿ  ಇಂಗ್ಲಿಷ್ ಭಾಷೆಯ ‘ದಿ ಸೌಂಡ್ ಆಫ್ ಮ್ಯೂಸಿಕ್’ ಪ್ರೇರಣೆ ಪಡೆದು  ಜನ ಮೆಚ್ಚುಗೆ ಗಳಿಸಿತು.  ‘ಕೋಶಿಶ್’ ಚಿತ್ರ ಕಿವುಡು ಮೂಖ ದಂಪತಿಗಳ ಕಥಾಹಂದರವನ್ನೂ ಒಳಗೊಂಡು ಜಯಾಬಾಧುರಿ ಮತ್ತು ಸಂಜೀವ್ ಕುಮಾರ್ ಅವರ ಅಪ್ರತಿಮ ಅಭಿನಯವನ್ನು ಹೊರತಂದಿತ್ತು.  ಸಂಜೀವ್ ಕುಮಾರ್ ಈ ಚಿತ್ರದ ಅಭಿನಯಕ್ಕಾಗಿ ಶ್ರೇಷ್ಠ ನಟ ಪ್ರಶಸ್ತಿ ಪಡೆದರು.   1973ರಲ್ಲಿ ತೆರೆಕಂಡ ‘ಅಚಾನಕ್’ ಗುಲ್ಜಾರರ ಮತ್ತೊಂದು ಶ್ರೇಷ್ಠ ಚಿತ್ರವಾಗಿ ಅಪಾರ ಜನಪ್ರಿಯತೆಯ ಜೊತೆಗೆ ಪ್ರಶಸ್ತಿಗಳನ್ನೂ ಗಳಿಸಿಕೊಂಡಿತು.  ಗುಲ್ಜಾರರ ‘ಅಂಧಿ’ ಮತ್ತೊಂದು ಶ್ರೇಷ್ಠ ಚಿತ್ರ.  ‘ಕಾಲಿ ಆಂಧಿ’ ಎಂಬ ಕಮಲೇಶ್ವರ್ ಅವರ ಕಥೆಯನ್ನು ಆಧರಿಸಿದ ಈ ಚಿತ್ರ ಅಪಾರ ಜನಪ್ರಿಯತೆ ಮತ್ತು ಪ್ರಶಸ್ತಿಗಳನ್ನು ಗಳಿಸಿತ್ತು.  ಈ ಚಿತ್ರಕತೆ ತಾರಕೇಶ್ವರ ಸಿನ್ಹ ಅವರ ಜೀವನವನ್ನು ಆಧರಿಸಿತ್ತು.  .ಅವರ ಮುಂದಿನ ಚಿತ್ರ ಖುಷ್ಬೂ.  ಅವರ ‘ಮೌಸಂ’ ಚಿತ್ರ ಮತ್ತೊಂದು ಬಾರಿ ರಾಷ್ಟ್ರೀಯ ಪ್ರಶಸ್ತಿ ಪಡೆಯಿತು.  ಶರ್ಮಿಳಾ ಠಾಗೂರ್ ಈ ಚಿತ್ರದ ಅಭಿನಯಕ್ಕಾಗಿ ಶ್ರೇಷ್ಠ ನಟಿ ಪ್ರಶಸ್ತಿ ಪಡೆದರು.  ಸಂಜೀವ್ ಕುಮಾರರ ಅಭಿನಯ ಕೂಡಾ ಅಷ್ಟೇ ಶ್ರೇಷ್ಠ ಮಟ್ಟದ್ದಾಗಿತ್ತು.  ಅವರ ‘ಅಂಗೂರ್’ ಚಿತ್ರ ಅತ್ಯುತ್ತಮ ಹಾಸ್ಯ ಚಿತ್ರಗಳ ಪರಂಪರೆಯಲ್ಲಿ ನಿಲ್ಲುವಂತದ್ದು.  ಅವರ ಇನ್ನಿತರ ಚಿತ್ರಗಳಾದ ಇಜಾಸತ್, ಮಾಚಿಸ್, ಹು ತು ತು ಮುಂತಾದವು ಕೂಡ ಚಿತ್ರ ವಿದ್ವಾಂಸರ ಮೆಚ್ಚುಗೆ ಪಡೆದಂತಹವು.  ಗುಲ್ಜಾರರ ನಿರ್ದೇಶನದಲ್ಲಿ ಸಂಜೀವ್ ಕುಮಾರ್, ಜಯಾ ಬಾಧುರಿ, ಜಿತೇಂದ್ರ, ವಿನೋದ್ ಖನ್ನ, ಹೇಮಾಮಾಲಿನಿ ಮುಂತಾದವರ ಶ್ರೇಷ್ಠ ಅಭಿನಯ ಬೆಳಕಿಗೆ ಬಂತು.  ದೂರದರ್ಶನದಲ್ಲಿ ಮೂಡಿ ಬಂದ ಮಿರ್ಜಾ ಗಾಲಿಬ್ ಸರಣಿಯಲ್ಲಿ ನಸೀರುದ್ದೀನ್ ಷಾ  ಅಭಿನಯಿಸಿದ್ದರು.  ಇನ್ನು ಅವರ ಚಿತ್ರಗಳ ಹಾಡುಗಳಲ್ಲಿ ಪರಿಚಯ್ ಚಿತ್ರದ ‘ಮುಸಾಫಿರ್ ಹೂ ಯಾರೋ’, ಆಂಧಿಯ ‘ತೆರೆ ಬಿನಾ ಜಿಂದಗಿ ಸೆ ಕೊಯಿ’,’ಇಜಾಸತ್ ಚಿತ್ರದ ‘ಮೇರಾ ಕುಚ್ ಸಮಾನ್’, ಮಾಸೂಮ್ ಚಿತ್ರದ ‘ತುಜ್ಸೆ ನಾರಾಜ್ ನಹಿ ಜಿಂದಗಿ’ ಮುಂತಾದವು ಚಿರಸ್ಮರಣೀಯವಾಗಿವೆ.  ಅವರ ನಿರ್ದೇಶನದ ಹೊರತಾಗಿ ಕೂಡಾ ಇತರ ಚಿತ್ರಗಳಲ್ಲಿ ಇಂದೂ ಮೂಡಿ ಬರುತ್ತಿರುವ ಅವರ ಗೀತ ಸಾಹಿತ್ಯ ಜನಮನವನ್ನು ನಿರಂತರ ಬೆಳಗುತ್ತಾ ಸಾಗಿದೆ.


ಕವಿಯಾಗಿ ಗುಲ್ಜಾರ್ ಅವರ ಕಾವ್ಯಗಳು ಚಾಂದ್ ಪುಕರಾಜ್ ಕಾ, ರಾತ್ ಪಷ್ಮಿನೇ ಕಿ, ಪಂದ್ರಾಹ್ ಪಾಂಚ್ ಪಚ್ಹತ್ತರ್ ಮುಂತಾದ ಕಾವ್ಯ ಸಂಕಲನಗಳಲ್ಲಿ ದಾಖಲಾಗಿವೆ.  


 ಗುಲ್ಜಾರ್ ರವರಿಗೆ ಹಲವಾರು ಪ್ರಶಸ್ತಿ ಗೌರವಗಳು ಸಂದಿವೆ 

  2008ರಲ್ಲಿ   ಪದ್ಮಭೂಷಣ,

2002ರಲ್ಲಿ   ವರ್ಷದ ಕೇಂದ್ರ ಸಾಹಿತ್ಯ ಅಕಾಡೆಮಿ ಗೌರವ,

ಸ್ಲಂ ಡಾಗ್ ಮಿಲಿಯನೇರ್’ ಚಿತ್ರದ ‘ಜೈ ಹೋ’ ಗೀತೆಗಾಗಿ ಸಂದ ಅಕಾಡೆಮಿ ಪ್ರಶಸ್ತಿ,

ಗ್ರಾಮಿ ಪ್ರಶಸ್ತಿ ಮುಂತಾದವು ಗುಲ್ಜಾರ್ ಅವರ ವಿದ್ವತ್ಪೂರ್ಣ ಹಾಗೂ ಜನಪ್ರಿಯ ಅಭಿವ್ಯಕ್ತಿಗಳೆರಡೂ ಕ್ಷೇತ್ರಗಳಲ್ಲಿನ ಅಪ್ರತಿಮ ಸಾಧನೆಗಳ ದ್ಯೋತಕವಾಗಿವೆ.

2014ರಲ್ಲಿ ಪ್ರತಿಷ್ಠಿತ ಡಾ. ಬಾಬಾಸಾಹೇಬ್ ಫಾಲ್ಕೆ ಪ್ರಶಸ್ತಿ ಅವರ ಮುಡಿಗೇರಿದೆ. ಪ್ರಸ್ತುತ ಜ್ಞಾನಪೀಠ ಪ್ರಶಸ್ತಿ ಲಭಿಸಿದೆ ಅಭಿನಂದನೆಗಳು ಗುಲ್ಜಾರ್ ಜಿ..


ಸಿಹಿಜೀವಿ ವೆಂಕಟೇಶ್ವರ

ತುಮಕೂರು

9900925529



ನಮ್ಮ @ಸಂವಿಧಾನ ನಮ್ಮ ಹೆಮ್ಮೆ..

 


ನಮ್ಮ  #ಸಂವಿಧಾನ ನಮ್ಮ ಹೆಮ್ಮೆ..


ಸುಮಾರು ಇನ್ನೂರೈವತ್ತು  ವರ್ಷಗಳ ದಾಸ್ಯ ಸಂಕೋಲೆಯಿಂದ 1947 ರಲ್ಲಿ  ಮುಕ್ತಿ ಪಡೆದ ಭಾರತಕ್ಕೆ ನಮ್ಮದೇ ಆದ ಸುಶಾಸನ ಮಾಡಿಕೊಂಡು ಆಳ್ವಿಕೆ ಮಾಡುವ ಸಂಧಿ ಸಮಯದಲ್ಲಿ ಪ್ರಪಂಚವೇ ಬೆರಗುಗಣ್ಣಿನಿಂದ ನೋಡುವಂತ ಭಾರತೀಯರೆಲ್ಲ ಹೆಮ್ಮೆ ಪಡುವ ಸಂವಿಧಾನ ರಚನೆ ಮಾಡಿ ತೋರಿಸಿದ್ದು ಪ್ರತಿಯೊಬ್ಬ ಭಾರತೀಯನ ಹೆಮ್ಮೆ. 


ಇಂತಹ ಮಹಾನ್ ಸಂವಿಧಾನ ರಚನೆಯಲ್ಲಿ ಡಾ ಬಾಬು ರಾಜೇಂದ್ರ ಪ್ರಸಾದ್ ಅಧ್ಯಕತೆಯಲ್ಲಿ ಮುನ್ನೂರಕ್ಕೂ ಹೆಚ್ಚು ಸದಸ್ಯರು ವಿವಿದ ಕ್ಷೇತ್ರಗಳನ್ನು ಪ್ರತಿನಿಧಿಸಿ ಭಾಗವಹಿಸಿ ತಮ್ಮದೇ ಆದ ಕೊಡುಗೆಗಳನ್ನು ನೀಡಿದ್ದಾರೆ.

ಅದರಲ್ಲೂ ಕರಡು ಸಮಿತಿಯ ಅಧ್ಯಕ್ಷರಾದ ಡಾ ಬಾಬಾ ಸಾಹೇಬ್ ಅಂಬೇಡ್ಕರ್ ರವರು ಸಂವಿಧಾನ ರಚನೆಯಲ್ಲಿ ಮಹತ್ವದ ಪಾತ್ರ ವಹಿಸಿ "ಸಂವಿಧಾನದ ಶಿಲ್ಪಿ " ಎಂದು ಮಾನ್ಯರಾಗಿದ್ದಾರೆ.

ಸುದೀರ್ಘವಾದ ಹೋರಾಟದ ಫಲವಾಗಿ ಭಾರತಕ್ಕೆ ಸ್ವಾತಂತ್ರ್ಯ ಕೊಡಲು ಬ್ರಿಟಿಷರು ತೀರ್ಮಾನಿಸಿದರು.

ಕ್ಲಿಮೆಂಟ್ ಆಟ್ಲಿ ಎಂಬಾತ ಬ್ರಿಟಿಷ್ ಪ್ರಧಾನಮಂತ್ರಿಯಾದರು. ಅವರು 1946ರಲ್ಲಿ ಭಾರತಕ್ಕೆ ಸ್ವಾತಂತ್ರ್ಯ ಕೊಡುವ ಭರವಸೆಯನ್ನು ಹಾಗೂ ಅದಕ್ಕೆ ಪೂರಕವಾಗಿ ಸಂವಿಧಾನ ಸಭೆಯನ್ನು ರಚಿಸಿಕೊಳ್ಳಲು ಅನುಮತಿಯನ್ನು ನೀಡಿದರು.


ಅದರಂತೆ 1946ರಲ್ಲಿ ಚುನಾವಣೆಯ ಮೂಲಕ 389 ಮುಖಂಡರನ್ನೊಳಗೊಂಡ ಒಂದು ಸಂವಿಧಾನ ಸಭೆಯನ್ನು ರಚಿಸಲಾಯಿತು. (ಮುಂದೆ ಈ ಸಭೆಯ ಸದಸ್ಯರ ಸಂಖ್ಯೆ 299ಕ್ಕೆ ಇಳಿಯಿತು.) ಇದರಲ್ಲಿ ಪ್ರಮುಖ ರಾಜಕೀಯ ಮುಖಂಡರು, ಕಾಂಗ್ರೆಸ್ ಪಕ್ಷದವರು, ಕಮ್ಯುನಿಷ್ಟರು. ಸಮಾಜವಾದಿಗಳು, ಕೈಗಾರಿಕೋದ್ಯಮಿಗಳು, ಕಾರ್ಮಿಕ ಸಂಘಗಳ ಪ್ರತಿನಿಧಿಗಳು, ವಿಭಿನ್ನ ಆರ್ಥಿಕ ಮತ್ತು ರಾಜಕೀಯ ಸಿದ್ಧಾಂತಗಳವರು, ಭಿನ್ನ ಪಂಥಗಳಿಗೆ ಸೇರಿದವರು, ಹಿಂದುಗಳು. ಮುಸಲ್ಮಾನರು, ಕ್ರಿಶ್ಚಿಯನ್ನರು, ಪಾರ್ಸಿಗಳು, ನಾಸ್ತಿಕರು ಮತ್ತು ವಿಭಿನ್ನ ಸಾಮಾಜಿಕ ವರ್ಗಗಳಿಗೆ ಸೇರಿದವರು. ಶ್ರೀಮಂತರು, ಮಧ್ಯಮ ವರ್ಗದವರು. ಹಿಂದುಳಿದ ವರ್ಗದವರು. ಅನುಸೂಚಿತ ಜಾತಿ ಮತ್ತು ಅನುಸೂಚಿತ ಬುಡಕಟ್ಟುಗಳಿಗೆ ಸೇರಿದವರು ಎಲ್ಲರೂ ಈ ಸಮಿತಿಯಲ್ಲಿದ್ದರು.


ಆಸ್ಟ್ರೇಲಿಯಾ, ಕೆನಡಾ ,ಐರ್ಲೆಂಡ್, ಜಪಾನ್ , ರಷ್ಯಾ, ಅಮೇರಿಕಾ ಇಂಗ್ಲೆಂಡ್, ಜರ್ಮನಿ ,ಪ್ರಾನ್ಸ್  ಮುಂತಾದ ಇಪ್ಪತ್ತಕ್ಕೂ ಹೆಚ್ಚು ದೇಶಗಳ ಸಂವಿಧಾನಗಳನ್ನು ಆಧ್ಯಯನ ಮಾಡಿ ಅವುಗಳ ಉತ್ಕೃಷ್ಟ ಅಂಶಗಳನ್ನು ನಮ್ಮ ಸಂವಿಧಾನದಲ್ಲಿ ಅಳವಡಿಸಿಕೊಳ್ಳುವಲ್ಲಿ ಅಂಬೇಡ್ಕರ್ ರವರ ಪಾತ್ರ ಪ್ರಮುಖವಾದುದು. 

2 ವರ್ಷ, 11 ತಿಂಗಳು18  ದಿನಗಳ ಕಠಿಣ ಕಾರ್ಯದ ಫಲವಾಗಿ 1949 ನವೆಂಬರ್ 26 ರಂದು ನಮ್ಮ ಸಂವಿಧಾನವನ್ನು ಅಂಗೀಕರಿಸೆದೆವು.ಆ ಸವಿನೆನಪಿಗಾಗಿ ಪ್ರತಿ ವರ್ಷ ನವೆಂಬರ್26 ನ್ನು ಸಂವಿಧಾನ ದಿನ ವನ್ನಾಗಿ ಆಚರಿಸಲಾಗುತ್ತದೆ.

ಜನವರಿ 26 1950 ರಂದು ನಮ್ಮ ಸಂವಿಧಾನವು ಅಧಿಕೃತವಾಗಿ ಜಾರಿಗೆ ಬಂದ ದಿನವನ್ನು ಪ್ರತಿ ವರ್ಷ ಗಣತಂತ್ರ ದಿನ ವಾಗಿ ಆಚರಿಸಲಾಗುತ್ತದೆ.


ನಮ್ಮ ಸಂವಿಧಾನದ ಮಹತ್ವ...


ಭಾರತ ಸಂವಿಧಾನವು ಭಾರತದ ಪ್ರಜೆಗಳಾದ ನಾವು... ಎಂಬ ಪ್ರಾರಂಭಿಕ ವಾಕ್ಯದೊಂದಿಗೆ ಪ್ರಾರಂಭವಾಗುವುದು. ಸಂವಿಧಾನದ ಪೂರ್ವಪೀಠಿಕೆಯು ಸಂವಿಧಾನದ ಪೂರ್ಣ ಸಾರಾಂಶವಾಗಿದೆ. ಭಾರತ ಸಂವಿಧಾನದ ಫಲವಾಗಿ, ಭಾರತದಲ್ಲಿ ವಂಶಪಾರಂಪರಿಕ ಆಡಳಿತ ಕೊನೆಗೊಂಡು ಪ್ರಜೆಗಳೇ ತಮ್ಮ ಪ್ರತಿನಿಧಿಗಳನ್ನು ಆಯ್ಕೆ ಮಾಡುವ ವ್ಯವಸ್ಥೆ ಜಾರಿಯಾಗಿದೆ.


ಭಾರತ ಸಂವಿಧಾನವು ಭಾರತದ ತಳಮಟ್ಟದ ಜನರಿಂದ ಹಿಡಿದು ಮೇಲ್ಮಟ್ಟದ ಜನರವರೆಗೆ ಸಾಮಾಜಿಕ ನ್ಯಾಯ, ಆರ್ಥಿಕ ಸಬಲೀಕರಣ, ರಾಜಕೀಯ ಪ್ರಾತಿನಿಧ್ಯವನ್ನು ನೀಡುವ ಮೂಲಕ ಅವರನ್ನು ಸಶಕ್ತಗೊಳಿಸುವ ಆಶಯವನ್ನು ಹೊಂದಿದೆ.

ಭಾರತ ಒಂದು ವೈವಿಧ್ಯತೆಯಿಂದ ಕೂಡಿದ ರಾಷ್ಟ್ರ ಇಲ್ಲಿ ಅನೇಕ ಜಾತಿ, ಧರ್ಮ, ಸಂಸ್ಕೃತಿಗಳು ಆಚರಣೆಯಲ್ಲಿವೆ. ವೈವಿಧ್ಯತೆಯಲ್ಲೂ ಏಕತೆಯನ್ನು ಸಾಧಿಸಿ, ಪ್ರತಿಯೊಬ್ಬ ಪ್ರಜೆಯ ಸರ್ವತೋಮುಖ ಅಭಿವೃದ್ಧಿಯನ್ನು ಸಾಧಿಸುವ ಗುರಿಯನ್ನು ಹೊಂದಿ ಆ ಮೂಲಕ ನಮ್ಮ ಸಂವಿಧಾನವು ಶ್ರೇಷ್ಠತೆಯನ್ನು ಸಾಧಿಸಿದೆ.


ಮತದಾನದ ಹಕ್ಕಿನ ಮೂಲಕ ಪ್ರಜೆಗಳೆಲ್ಲರೂ ರಾಜಕೀಯ ಹಕ್ಕನ್ನು ಪಡೆದು, ತಮ್ಮ ಮತದಾನದ ಮೂಲಕ ತಮ್ಮ ಆಯ್ಕೆಯ ಪ್ರತಿನಿಧಿಯನ್ನು ಆರಿಸುವ ಹಕ್ಕನ್ನು ಇಂದು ಸಂವಿಧಾನ ನೀಡಿದೆ.


ಮಹಿಳೆಯರು ಮತ್ತು ಮಕ್ಕಳ ಶಿಕ್ಷಣದ ಕುರಿತಾಗಿ ಹೇಳುವುದಾದರೆ  ಸಂವಿಧಾನ ಪೂರ್ವದಲ್ಲಿ ಎಲ್ಲ ಮಹಿಳೆಯರು ಮತ್ತು ಮಕ್ಕಳಿಗೆ ಶಿಕ್ಷಣ ದೊರೆಯುತ್ತಿರಲಿಲ್ಲ. ಭಾರತ ಸಂವಿಧಾನದಲ್ಲಿ ಸರ್ವರಿಗೂ ಶಿಕ್ಷಣ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಪ್ರತಿಯೊಂದು ಸಮಾಜದ ಮಹಿಳೆಯರು ಮತ್ತು ಮಕ್ಕಳು ಇಂದು ಉಚಿತ ಶಿಕ್ಷಣವನ್ನು ಪಡೆದು ತಮ್ಮ ಬದುಕನ್ನು ಕಟ್ಟಿಕೊಳ್ಳಲು ಸಂವಿಧಾನ ಅನುವು ಮಾಡಿಕೊಟ್ಟಿದೆ.

ಭಾರತದ ಎಲ್ಲ ಪ್ರಜೆಗಳ ಸರ್ವತೋಮುಖ ಅಭಿವೃದ್ಧಿಯು ಸಂವಿಧಾನದ ಮೂಲ ಆಶಯ ಮತ್ತು ಮೂಲ ಆಧಾರವಾಗಿದೆ.

ಭಾರತ ಸ್ವಾತಂತ್ರ್ಯಗೊಂಡು ಎಪ್ಪತ್ತೈದು ವರ್ಷಗಳ ಪೂರೈಸಿದ ಈ ಅಮೃತ ಕಾಲದಲ್ಲಿ ಸಂವಿಧಾನ ಜಾಗೃತಿ ಕಾರ್ಯಕ್ರಮದ ಅಂಗವಾಗಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಜನರಲ್ಲಿ ಸಂವಿಧಾನದ ಜಾಗೃತಿ ಮೂಡಿಸುವ ಕಾರ್ಯ ಮಾಡುತ್ತಿರುವುದು ಶ್ಲಾಘನೀಯ.


ಸಿಹಿಜೀವಿ ವೆಂಕಟೇಶ್ವರ

ತುಮಕೂರು.

12 February 2024

ನೆಮ್ಮದಿಯಿಂದಿರುವುದು ಹೇಗೆ?


ನೆಮ್ಮದಿಯಿಂದಿರುವುದು  ಹೇಗೆ?




ಅಲ್ಲೊಂದು ಪುಟ್ಟ ಗುಡಿಸಲು. ಅದೊಂದು ಚಿಕ್ಕ ಸಂಸಾರ. ಕೂಲಿನಾಲಿ ಮಾಡಿ ಜೀವನ ಸಾಗಿಸುತ್ತಿದ್ದ ಅವರ ಮುಖದಲ್ಲಿ ಸದಾ ಮಂದಹಾಸ, ಶ್ರಮವಹಿಸಿ ದುಡಿಯುತ್ತಿದ್ದಿದ್ದರಿಂದ ಸದೃಢ ಶರೀರವಿತ್ತು. ನಿತ್ಯ ಗಂಜಿ ಊಟವನ್ನೇ ಮಾಡಿದರೂ ಅವರೆಲ್ಲ ನೆಮ್ಮದಿಯ ಜೀವನ ನಡೆಸುತ್ತಿದ್ದರು. ಗುಡಿಸಲ ಎದುರು ಭಾಗದಲ್ಲೊಂದು ಭವ್ಯ ಬಂಗಲೆ. ಸಿರಿತನದ ಎಲ್ಲ ವೈಭೋಗಗಳು ತುಂಬಿಕೊಂಡಿದ್ದರೂ ಮನೆಯ ಜನರ ಮೊಗದಲ್ಲಿ ಏನೋ ಅಸಂತುಷ್ಟಿ.  ಮನೆಯಲ್ಲಿ ಯಾವಾಗಲೂ ಬಿಗುವಿನ ವಾತಾವರಣ. ಮನೆಯೊಡತಿಗೆ ಸದಾ ಮನದಲ್ಲಿ ಕಾಡುವ ಪ್ರಶ್ನೆಯೇನೆಂದರೆ ‘ನಮಗೆ ಎಲ್ಲ ರೀತಿಯ ಐಶ್ವರ್ಯಗಳಿದ್ದರೂ ಈ ಅತೃಪ್ತಿ, ಅಸಮಾಧಾನ ಏಕೆ? ದಿನವಿಡೀ ಕೂಲಿ ಮಾಡಿದ್ರೂ ಆ ಗುಡಿಸಲಿನ ಜನ ಸಂತಸದಿಂದ ಹೇಗೆ ಇರುವರು?’ ಎಂದು.


ಹೀಗಿರುವಾಗ ಸಾಧುವೊಬ್ಬರು ಆಕೆಯ ಮನೆಗೆ ಬಂದರು. ಮನದಲ್ಲಿ ಕಾಡುತ್ತಿದ್ದ ಆ ಪ್ರಶ್ನೆಯನ್ನು ಸಾಧುಗಳಲ್ಲಿ ಹೇಳಿಕೊಂಡಳು. ಆಗ ಅವರು, ‘ತಾಯಿ, ನಿನ್ನ ಪ್ರಶ್ನೆಗೆ ಉತ್ತರಿಸುವ ಮೊದಲು ಒಂದು ಕೆಲಸ ಮಾಡು. ಇಂದಿನಿಂದ ಒಂದು ತಿಂಗಳಕಾಲ ಆ ಬಡ ಜನರಿಗೆ ನಿತ್ಯವೂ ಮನೆಗೆ ಕರೆದು ಮೃಷ್ಟಾನ್ನ ಭೋಜನ ಹಾಕು.ನಂತರ ಅವರನ್ನು ಕರೆಯುವುದನ್ನು ನಿಲ್ಲಿಸು ಮುಂದಿನ ಬೆಳವಣಿಗೆಯನ್ನು ಗಮನಿಸಿ ನನಗೆ ತಿಳಿಸು’ ಎಂದರು. ಅದರಂತೆ ಆ ಹೆಂಗಸು ತಿಂಗಳ ಕಾಲ ಮೃಷ್ಟಾನ್ನ ಭೋಜನವನ್ನು ಆ ಜನರಿಗೆ ಉಣಬಡಿಸಿದಳು. ಅವರೋ ಸಂತೋಷದಿಂದ ಬಂದು ಊಟ ಮಾಡಿ ಹೋಗುತ್ತಿದ್ದರು. ನಂತರ ಇದ್ದಕ್ಕಿದ್ದಂತೆ ಊಟ ಕೊಡುವುದನ್ನು ನಿಲ್ಲಿಸಿ ಬಿಟ್ಟಳು.


ಆಶ್ಚರ್ಯವೆಂಬಂತೆ ಇಷ್ಟುದಿನ ಖುಷಿಯಿಂದಿರುತ್ತಿದ್ದ ಅವರಲ್ಲಿ ಏನೋ ಒಂದು ರೀತಿಯ ಬೇಸರದ ಭಾವನೆ ಕಾಣತೊಡಗಿತು. ಉಚಿತವಾದ ಭೋಜನದ ಸವಿ ಕಂಡ ಅವರಿಗೆ ಈಗ ನಿತ್ಯದ ಊಟ ಸಪ್ಪೆ ಎನಿಸತೊಡಗಿತು. ದುಡಿಮೆ ಮರೆತ ಶರೀರ ಕೃಶವಾಗತೊಡಗಿತು. ‘ಅಯ್ಯೋ ದಿನಾಲೂ ಇಂಥ ಊಟ ಸವಿಯುವ ಭಾಗ್ಯ ನಮಗಿಲ್ಲವಲ್ಲ’ ಎಂಬ ಕೊರಗು ಅವರನ್ನು ಆವರಿಸಿಬಿಟ್ಟಿತು. ಇದನ್ನೆಲ್ಲ ಗಮನಿಸಿದ ಆ ಹೆಂಗಸು ಸಾಧುಗಳಲ್ಲಿ ವಿಷಯ ತಿಳಿಸಿದಾಗ ಅವರು ‘ನಿನ್ನ ಪ್ರಶ್ನೆಗೆ ಉತ್ತರ ಇಲ್ಲಿಯೇ ಇದೆ. ಮೊದಲು ಇದ್ದುದ್ದರಲ್ಲಿಯೇ ಅವರು ತೃಪ್ತರಾಗಿದ್ದರು. ಆದ್ದರಿಂದ ಸದಾ ಸಂತಸದಿಂದಿರುತ್ತಿದ್ದರು. ಈಗ ಬೇರೆಯವರನ್ನು ನೋಡಿ ತಮಗಿಲ್ಲವಲ್ಲ ಎಂಬ ಕೊರಗು ಅವರನ್ನು ಕಾಡುತ್ತಿರುವುದರಿಂದ ನಗು ಮಾಯವಾಗಿದೆ. ಅದಕ್ಕೇ ಹಿರಿಯರು, ‘ಸಂತೃಪ್ತಿಯೇ ಸುಖಕ್ಕೆ ಕಾರಣ’ ಎಂದು ಹೇಳಿರುವುದು. ಆದ್ದರಿಂದಲೇ ನಾವು ನಮ್ಮನ್ನು ಬೇರೆಯವರಿಗೆ ಹೋಲಿಸಿಕೊಳ್ಳದೆ ಇದ್ದುದ್ದರಲ್ಲಿಯೇ ತೃಪ್ತಿ ಕಂಡುಕೊಂಡಲ್ಲಿ ನೆಮ್ಮದಿಯಿಂದ ಜೀವನ ನಡೆಸಬಹುದು’ ಎಂದರು. ಡಿ ವಿ ಜಿ ಯವರು ತಮ್ಮ ಕಗ್ಗದಲ್ಲಿ 

ಬರದಿಹುದರೆಣಿನಿಕೆಯಲಿ ಬಂದಿಹುದ ಮರೆಯದಿರು ।ಗುರುತಿಸೊಳಿತಿರುವುದನು ಕೇಡುಗಳ ನಡುವೆ ।।

ಇರುವ ಭಾಗ್ಯವ ನೆನೆದು ಬಾರೆನೆಂಬುದನು ಬಿಡು ।ಹರುಷಕದೆ ದಾರಿಯೆಲೊ – ಮಂಕುತಿಮ್ಮ ।।  

ಎಂದಿರುವರು.


 ನಮಗೆ ನಿಜವಾದ ಸಂತೋಷವೇನೆಂದು ಗೊತ್ತಿಲ್ಲ.  ನಮಗೆ ಯಾವುದು ಸಂತೋಷ ನೀಡುವ ವಸ್ತು, ವ್ಯಕ್ತಿ ಅಥವಾ ವಿಷಯ ಎಂದೂ ಗೊತ್ತಿಲ್ಲ. ತೃಪ್ತಿ ಎಂದರೆ ಏನು ಮತ್ತು ಹೇಗಿರುತ್ತದೆ ಎನ್ನುವುದು ನಮಗೆ ಅರಿವಿಲ್ಲ. ಹೀಗಿರುವಾಗ ಸಂತೋಷ ಪಡುವುದಾದರೂ ಹೇಗೆ ?  ಬಹಳ ಸುಲಭ   ನಮಗೆ ಸಿಕ್ಕದ್ದರಲ್ಲಿ ತೃಪ್ತಿಯಿಂದ ಜೀವಿಸೋಣ.ಸಂತೋಷಪಡೋಣ.


ಸಿಹಿಜೀವಿ ವೆಂಕಟೇಶ್ವರ

ಶಿಕ್ಷಕರು

ತುಮಕೂರು


  

11 February 2024

ಮರಳುಗಾಡು ..

 ಮರಳುಗಾಡು


ಬೇಸರದಿಂದ ಕೂಡಿ

ನನ್ನ ಜೀವನವಾಗಿದೆ

ಮರಳುಗಾಡು |

ನನ್ನ ಕಾಪಾಡಲು ನನ್ನ

ಕಡೆಗೆ ಮರಳು ಗಾಡು ||



ಸಿಹಿಜೀವಿ ವೆಂಕಟೇಶ್ವರ

ತುಮಕೂರು

ಬಾರದ ರತ್ನ

 


ಬಾರದ ರತ್ನ


ಈ ವರ್ಷ ಐದು ಗಣ್ಯರಿಗೆ

ಸಿಕ್ಕಿದೆ ಭಾರತ ರತ್ನ|

ತಾವು ನಿರೀಕ್ಷಿಸಿದವರಿಗೆ 

ಸಿಗದಿದ್ದರೆ ಅದು ಬಾರದ ರತ್ನ||


ಸಿಹಿಜೀವಿ ವೆಂಕಟೇಶ್ವರ

ತುಮಕೂರು

09 February 2024

ಸಾಮಾನ್ಯ ಜ್ಞಾನ ಪ್ರಶ್ನೋತ್ತರ ಭಾಗ ೩ #gk #quiz @kannada

 


ಸಾಮಾನ್ಯ ಜ್ಞಾನ ಪ್ರಶ್ನೋತ್ತರ ಭಾಗ ೩


41."ದಿ ಸ್ಟಾರಿ ನೈಟ್" ಅನ್ನು ಯಾವ ಪ್ರಸಿದ್ಧ ಕಲಾವಿದ ಚಿತ್ರಿಸಿದ್ದಾರೆ?

42.ಚೀನಾದ ಕರೆನ್ಸಿ ಯಾವುದು?

43.ವಿಶ್ವದ ಅತಿ ಎತ್ತರದ ಜಲಪಾತ ಯಾವುದು?

44.ಮೈಕ್ರೋಸಾಫ್ಟ್ ಕಾರ್ಪೊರೇಶನ್ ಅನ್ನು ಸ್ಥಾಪಿಸಿದವರು ಯಾರು?

45.ಭಾರತದ ರಾಷ್ಟ್ರೀಯ ಲಾಂಛನ ಯಾವುದು?

46.ಭೂ ವಿಸ್ತೀರ್ಣದಲ್ಲಿ ವಿಶ್ವದ ಅತ್ಯಂತ ಚಿಕ್ಕ ದೇಶ ಯಾವುದು?

47."ದಿ ಪರ್ಸಿಸ್ಟೆನ್ಸ್ ಆಫ್ ಮೆಮೊರಿ" ಅನ್ನು ಚಿತ್ರಿಸಿದವರು ಯಾರು?

48.ಭಾರತದ ಮೊದಲ ರಾಷ್ಟ್ರಪತಿ ಯಾರು?

49.ಆಸ್ಟ್ರೇಲಿಯಾದ ರಾಜಧಾನಿ ಯಾವುದು?

50.ಪ್ರಪಂಚದಲ್ಲಿ ಅತಿ ಹೆಚ್ಚು ಮಾತನಾಡುವ ಭಾಷೆ ಯಾವುದು?

51.ಭಾರತದಲ್ಲಿ ಅತ್ಯುನ್ನತ ನಾಗರಿಕ ಪ್ರಶಸ್ತಿ ಮತ್ತು ಗೌರವ ಯಾವುದು?

52.ವಿಸ್ತೀರ್ಣದಲ್ಲಿ ಭಾರತದ ಅತಿ ದೊಡ್ಡ ರಾಜ್ಯ ಯಾವುದು

53.ಭಾರತೀಯ ಸಂವಿಧಾನದ ಪಿತಾಮಹ ಎಂದು ಯಾರನ್ನು ಕರೆಯುತ್ತಾರೆ?

54."ದಿ ಕ್ಯಾಂಟರ್ಬರಿ ಟೇಲ್ಸ್" ಬರೆದವರು ಯಾರು?

55.ವಿಶ್ವದ ಅತ್ಯಂತ ಆಳವಾದ ಸಾಗರ ಯಾವುದು?

56.ಪ್ರಸ್ತುತ ಭಾರತದ ಪ್ರಧಾನ ಮಂತ್ರಿ ಯಾರು?

57.ಗುರುತ್ವಾಕರ್ಷಣೆಯ ನಿಯಮವನ್ನು ಕಂಡುಹಿಡಿದವರು ಯಾರು?

58.ಉತ್ತರ ಅಮೇರಿಕಾದಲ್ಲಿ ಅತಿ ದೊಡ್ಡ ಜಲಪಾತ

ಯಾವುದು?

59."ದಿ ಲಾಸ್ಟ್ ಸಪ್ಪರ್" ಅನ್ನು ಚಿತ್ರಿಸಿದವರು ಯಾರು?

60.ಭಾರತದ ಅತಿ ದೊಡ್ಡ ಮರುಭೂಮಿ ಯಾವುದು


ಉತ್ತರಗಳು.

41.ವಿನ್ಸೆಂಟ್ ವ್ಯಾನ್ ಗಾಗ್.

42.ಚೈನೀಸ್ ಯುವಾನ್.

43.ಏಂಜೆಲ್ ಫಾಲ್ಸ್.

44.ಬಿಲ್ ಗೇಟ್ಸ್ ಮತ್ತು ಪಾಲ್ ಅಲೆನ್.

45. ನಾಲ್ಕು ತಲೆಯ ಸಿಂಹ.

46.ವ್ಯಾಟಿಕನ್ ಸಿಟಿ.

47.ಸಾಲ್ವಡಾರ್ ಡಾಲಿ

48.ಡಾ. ರಾಜೇಂದ್ರ ಪ್ರಸಾದ್

49.ಕ್ಯಾನ್‌ಬೆರಾ

50.ಮ್ಯಾಂಡರಿನ್ ಚೈನೀಸ್.

51.ಭಾರತ ರತ್ನ

52.ರಾಜಸ್ಥಾನ

53.ಡಾ.ಬಿ.ಆರ್. ಅಂಬೇಡ್ಕರ್

54.ಜೆಫ್ರಿ ಚಾಸರ್.

55.ಪೆಸಿಫಿಕ್ ಸಾಗರ.

56.ನರೇಂದ್ರ ಮೋದಿ.

57.ಸರ್ ಐಸಾಕ್ ನ್ಯೂಟನ್.

58.ನಯಾಗರಾ ಜಲಪಾತ.

59.ಲಿಯೊನಾರ್ಡೊ ಡಾ ವಿನ್ಸಿ.

60.ಥಾರ್ ಮರುಭೂಮಿ


ಸಿಹಿಜೀವಿ ವೆಂಕಟೇಶ್ವರ

ಶಿಕ್ಷಕರು

ಸರ್ಕಾರಿ ಪ್ರೌಢಶಾಲೆ ಕ್ಯಾತ್ಸಂದ್ರ

9900925529

08 February 2024

ಸಾಮಾನ್ಯ ಜ್ಞಾನ ಪ್ರಶ್ನೋತ್ತರ ಭಾಗ 2

 



ಸಾಮಾನ್ಯ ಜ್ಞಾನ ಪ್ರಶ್ನೋತ್ತರ ಭಾಗ 2 



21 ವಿಶ್ವದ ಅತಿ ಎತ್ತರದ ಪರ್ವತ ಯಾವುದು


22.ಅಮೇರಿಕಾ ಸಂಯುಕ್ತ ಸಂಸ್ಥಾನದ ಪ್ರಸ್ತುತ ಅಧ್ಯಕ್ಷರು ಯಾರು?


23.ಭೂಪ್ರದೇಶದ ಪ್ರಕಾರ ಅತ್ಯಂತ ಚಿಕ್ಕ ಖಂಡ ಯಾವುದು?


24.ಪೆನ್ಸಿಲಿನ್ ಕಂಡುಹಿಡಿದವರು ಯಾರು?


25.ಯಾವ ಪ್ರಸಿದ್ಧ ಭೌತಶಾಸ್ತ್ರಜ್ಞ ಸಾಪೇಕ್ಷತಾ ಸಿದ್ಧಾಂತವನ್ನು ಅಭಿವೃದ್ಧಿಪಡಿಸಿದರು?


26.ಭಾರತದ ರಾಷ್ಟ್ರೀಯ ಪ್ರಾಣಿ ಯಾವುದು ?


27.ವಿಶ್ವದ ಅತಿ ದೊಡ್ಡ ಸಾಗರ ಯಾವುದು?


28.ಚಂದ್ರನ ಮೇಲೆ ಕಾಲಿಟ್ಟ ಮೊದಲ ವ್ಯಕ್ತಿ ಯಾರು?


29.ನಮ್ಮ ಸೌರವ್ಯೂಹದ ಯಾವ ಗ್ರಹವನ್ನು "ಕೆಂಪು ಗ್ರಹ" ಎಂದು ಕರೆಯಲಾಗುತ್ತದೆ?


30.ಜಪಾನ್ನ ರಾಜಧಾನಿ ಯಾವುದು?


31.ದೂರವಾಣಿಯನ್ನು ಕಂಡುಹಿಡಿದವರು ಯಾರು?


32.ವಿಶ್ವದ ಅತಿ ಉದ್ದದ ನದಿ ಯಾವುದು?


33.ಭೂ ವಿಸ್ತೀರ್ಣದಲ್ಲಿ ಜಗತ್ತಿನ ಅತಿ ದೊಡ್ಡ ದೇಶ ಯಾವುದು?


34.ನೊಬೆಲ್ ಪ್ರಶಸ್ತಿಯನ್ನು ಗೆದ್ದ ಮೊದಲ ಮಹಿಳೆ ಯಾರು?


35.ಕೆನಡಾದ ರಾಜಧಾನಿ ಯಾವುದು?


36.ಲೈಟ್ ಬಲ್ಬ್ ಅನ್ನು ಕಂಡುಹಿಡಿದವರು ಯಾರು?


37ಜಗತ್ತಿನ ಅತಿ ದೊಡ್ಡ ಮರುಭೂಮಿ ಯಾವುದು?


38."ಹ್ಯಾಮ್ಲೆಟ್" ಎಂಬ ಪ್ರಸಿದ್ಧ ನಾಟಕವನ್ನು ಬರೆದವರು ಯಾರು?


39.ಭೂಮಿಯ ಮೇಲಿನ ಅತಿ ದೊಡ್ಡ ಪ್ರಾಣಿ ಯಾವುದು?


40.ಜರ್ಮನಿಯ ಪ್ರಸ್ತುತ ಚಾನ್ಸೆಲರ್ ಯಾರು?



ಸರಿಉತ್ತರಗಳು.


21ಮೌಂಟ್ ಎವರೆಸ್ಟ್.

22ಜೋ ಬಿಡನ್.

23 ಆಸ್ಟ್ರೇಲಿಯಾ

24ಅಲೆಕ್ಸಾಂಡರ್ ಫ್ಲೆಮಿಂಗ್.

25ಆಲ್ಬರ್ಟ್ ಐನ್ಸ್ಟೈನ್.

26ಬಂಗಾಳ ಹುಲಿ.

27ಪೆಸಿಫಿಕ್ ಸಾಗರ.

28ನೀಲ್ ಆರ್ಮ್ಸ್ಟ್ರಾಂಗ್.

29ಮಂಗಳ

30ಟೋಕಿಯೋ

31ಅಲೆಕ್ಸಾಂಡರ್ ಗ್ರಹಾಂ ಬೆಲ್.

32 ನೈಲ್ ನದಿ.

33 ರಷ್ಯಾ

34 ಮೇರಿ ಕ್ಯೂರಿ.

35 ಒಟ್ಟಾವಾ

36. ಥಾಮಸ್ ಎಡಿಸನ್.

37 ಸಹಾರಾ ಮರುಭೂಮಿ.

38 ವಿಲಿಯಂ ಷೇಕ್ಸ್ಪಿಯರ್.

39  ನೀಲಿ ತಿಮಿಂಗಿಲ.

40 ಏಂಜೆಲಾ ಮರ್ಕೆಲ್.


ಸಿಹಿಜೀವಿ ವೆಂಕಟೇಶ್ವರ

ಶಿಕ್ಷಕರು ಮತ್ತು ಲೇಖಕರು

ತುಮಕೂರು 

 9900925529

07 February 2024

ಟ್ರಾಫಿಕ್ ಪೋಲೀಸ್ ಪಾರ್ಕ್


 


ಟ್ರಾಫಿಕ್ ಪೋಲೀಸ್ ಪಾರ್ಕ್..



ಇತ್ತೀಚಿಗೆ ನಮ್ಮ ಶಾಲೆಯ ಅಪ್ರಾಪ್ತ ಬಾಲಕರು  ಅಸುರಕ್ಷಿತ ಬೈಕ್ ಚಾಲನೆಯ ಪರಿಣಾಮವಾಗಿ ಜೀವತೆತ್ತ ಘಟನೆಯು ಆಗಾಗ ನೆನಪಾಗಿ ಮನಸ್ಸು ಭಾರವಾಗುತ್ತದೆ.ಮಕ್ಕಳಿಗೆ ಮತ್ತು ಪೋಷಕರಿಗೆ ಎಷ್ಟೇ ಜಾಗೃತಿ ಮೂಡಿಸಿದರೂ ಪ್ರಯೋಜನವಾಗುತ್ತಿಲ್ಲ.

ಶಾಲೆಗೆ ಟ್ರಾಫಿಕ್ ಪೋಲೀಸ್ ಕರೆಸಿ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡೂ ಪ್ರಯತ್ನ ಮಾಡಲಾಯಿತು.

ವಿಷಯಕ್ಕೆ ಸಂಬಂಧಿಸಿದಂತೆ, ರಸ್ತೆ ಸುರಕ್ಷತೆಯು ಅತ್ಯವಶ್ಯಕವಾಗಿದ್ದು, ಶಾಲಾ ಹಂತದಲ್ಲಿ ಮಕ್ಕಳಲ್ಲಿ ಈ ಕುರಿತು ಅರಿವು ಮೂಡಿಸುವ ನಿಟ್ಟಿನಲ್ಲಿ ಸಾರಿಗೆ ಇಲಾಖೆಯು ಹಲವಾರು ಉಪಕ್ರಮಗಳನ್ನು ಅಳವಡಿಸಿಕೊಂಡು ಕಾರ್ಯಪ್ರವೃತ್ತವಾಗಿರುವುದು ಶ್ಲಾಘನೀಯ.

ರಸ್ತೆ ಅಪಘಾತಗಳು ಘಟಿಸದಂತೆ ತಡೆಯುವ ಪ್ರಯತ್ನವನ್ನು ಸಂಚಾರ ವಿಭಾಗವು ಮಾಡುತ್ತಿದ್ದು, ವಿವಿಧ ಶಾಲೆಗಳಲ್ಲಿ ಸಂಚಾರಿ ಠಾಣೆಯ ಅಧಿಕಾರಿ ಸಿಬ್ಬಂದಿಯವರು Student Association for Road Safety ಯೋಜನೆಯಡಿಯಲ್ಲಿ ರಸ್ತೆ ಸುರಕ್ಷತೆಯ ಬಗ್ಗೆ ಶಾಲಾ ಮಕ್ಕಳಲ್ಲಿ ಅರಿವು ಮೂಡಿಸುವ ಕ್ರಮ ಕೈಗೊಳ್ಳುವುದರ ಜೊತೆಗೆ Safe Root to School ಯೋಜನೆಯಡಿಯಲ್ಲಿ ಶಾಲೆಗಳ ಸುತ್ತಮುತ್ತ ವಿದ್ಯಾರ್ಥಿಗಳ ಸುರಕ್ಷತೆಗೆ ಅಗತ್ಯವಾದ ಕ್ರಮಗಳನ್ನು ಅಭ್ಯಸಿಸಿ, ಅಗತ್ಯ ಮೂಲಭೂತ ಸೌಕರ್ಯಗಳನ್ನು ಏರ್ಪಡಿಸಲು ಕ್ರಮಗಳನ್ನು ಕೈಗೊಳ್ಳುತ್ತಿದ್ದಾರೆ.


ಈ ನಿಟ್ಟಿನಲ್ಲಿ "Traffic Police Park" ನ್ನು ಬೆಂಗಳೂರಿನ ಸೇಂಟ್ ಮಾರ್ಕ್ಸ್ರ್ ರಸ್ತೆಯಲ್ಲಿ ನಿರ್ಮಿಸಲಾಗಿದ್ದು, “ಮೊಳಕೆಯಲ್ಲಿಯೇ ತಿದ್ದಿರಿ” ಎಂಬುದು ಈ ಪಾರ್ಕ್‌ನ ಧ್ಯೇಯ ವಾಕ್ಯವಾಗಿದೆ. ನೂರಾರು ಮಕ್ಕಳನ್ನು ಒಂದು ಕಡೆ ಸೇರಿಸಿ ಪಾದಚಾರಿ ಮಾರ್ಗದ ಬಗ್ಗೆ ತಿಳುವಳಿಕೆ, ರಸ್ತೆ ಅಪಘಾತವನ್ನು ತಪ್ಪಿಸಿ ಜೀವವನ್ನು ಉಳಿಸುವ ಸಂಚಾರಿ ನಿಯಮಗಳ ಕುರಿತು ಮಕ್ಕಳಲ್ಲಿ ತಿಳುವಳಿಕೆ ಮೂಡಿಸುವುದು. Traffic Park ನ ಪ್ರಮುಖ ಉದ್ದೇಶವಾಗಿದೆ.

ಇಲ್ಲಿ ಜೀಬ್ರಾ ಕ್ರಾಸಿಂಗ್,ರೋಡ್ ಮಾರ್ಕಿಂಗ್, ಸಿಗ್ನಲ್, ಜೀರೋ ಟಾಲೆರೆನ್ಸ್ ಜೋನ್ ಹೀಗೆ ವಿವಿಧ ವಿಷಯಗಳ ಪರಿಚಯ ಮಾಡಿಕೊಡಲಾಗುತ್ತದೆ.

ಇದೇ ಸ್ಥಳದಲ್ಲಿ ಮಕ್ಕಳಿಗೆ ಹೆಚ್ಚಿನ ಮಾಹಿತಿ ಒದಗಿಸುವ ದೃಷ್ಟಿಯಿಂದ ಗ್ರಂಥಾಲಯದ ಸೌಲಭ್ಯವನ್ನು ಕಲ್ಪಿಸಲಾಗಿದೆ. ಇದು ಅತ್ಯಂತ ಅನುಕೂಲಕರ ಸ್ಥಳವಾಗಿದ್ದು, ಶಾಲಾ ವಿದ್ಯಾರ್ಥಿಗಳನ್ನು ನಿರಂತರವಾಗಿ ಇಲ್ಲಿಗೆ ಕರೆ ತಂದು ರಸ್ತೆ ಸುರಕ್ಷತೆಯ ನಿಯಮಗಳ ಬಗ್ಗೆ ಅರಿವು ನೀಡಲಾಗುತ್ತಿದೆ.


ಸುರಕ್ಷಿತ ಚಾಲನೆ ಎಲ್ಲದ್ದಕ್ಕೂ ಸಾಧನಾ ಎಂಬ ಶೀರ್ಷಿಕೆಯಡಿ'ರಸ್ತೆ ಸುರಕ್ಷತೆ ಪ್ರಾಣ ರಕ್ಷೆ' ಎಂಬ ಅಂಶದೊಂದಿಗೆ ಸುರಕ್ಷಿತವಾದ ಹಾಗೂ ಸುರಕ್ಷಿತವಲ್ಲದ ಸಾರಿಗೆ ನಿಯಮಗಳ ಬಗ್ಗೆ ಮಕ್ಕಳಿಗೆ ತಿಳುವಳಿಕೆಯನ್ನು ನೀಡುತ್ತದೆ. 


ಮೇಲ್ಕಂಡ ಅಂಶಗಳನ್ವಯ ರಸ್ತೆ ಸುರಕ್ಷತೆ ಕುರಿತು ಮಕ್ಕಳಿಗೆ ಪ್ರಾಯೋಗಿಕವಾಗಿ ತಿಳುವಳಿಕೆ ನೀಡಲುTraffic Park ಒಂದು ಸೂಕ್ತ ತಾಣವಾಗಿದೆ. ಶಾಲಾ ಹಂತದಲ್ಲಿ ಕೈಗೊಳ್ಳುವ ಕ್ಷೇತ್ರ ಭೇಟಿ ಇಲ್ಲವೆ ಶೈಕ್ಷಣಿಕ ಪ್ರವಾಸಗಳ ಸಂದರ್ಭಗಳಲ್ಲಿ ಈ ಸ್ಥಳದ ವೀಕ್ಷಣೆ ಕೈಗೊಂಡು, ವಿದ್ಯಾರ್ಥಿಗಳಿಗೆ ಈ ಕುರಿತು ಅರಿವು ಮೂಡಿಸಲು ಕ್ರಮವಹಿಸಲು ತಿಳಿಸಲಾಗಿದೆ. ಹಾಗೂ 04 ರಿಂದ 10 ನೆಯ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳ ಕಡ್ಡಾಯ ವೀಕ್ಷಣೆಗೆ ಅಗತ್ಯ ಕ್ರಮ ಕೈಗೊಳ್ಳಬೇಕಿದೆ 


ಈ Traffic Park ಸೆಂಟ್ ಮಾಕ್ಸರ್ ರಸ್ತೆ, ಹೋಟೆಲ್ ಏರ್ಲೈನ್ ಎದುರು, ಬೌರಿಂಗ್ ಇನ್ ಟಿಟ್ಯೂಟ್ ಹತ್ತಿರ, ಅನಿಲ್ ಕುಂಬ್ಳೆ ವೃತ್ತ ಬೆಂಗಳೂರು ಇಲ್ಲಿ ಇದೆ. ಬೆಂಗಳೂರಿನ ಶಾಲೆಗಳು ಈ ಯೋಜನೆಯ ಪ್ರಯೋಜನ ಪಡೆಯಲು ಇಲ್ಲಿಗೆ ತಪ್ಪದೇ ಮಕ್ಕಳನ್ನು ಕರೆದುಕೊಂಡು ಹೋಗಿ ಜಾಗೃತಿ ಮೂಡಿಸಬಹುದು. ಮುಂದಿನ ದಿನಗಳಲ್ಲಿ ಇಂತಹ ಜಾಗೃತಿ ಟ್ರಾಫಿಕ್ ಪಾರ್ಕ್ ಗಳು ಜಿಲ್ಲಾ ಕೇಂದ್ರ ಹಾಗೂ ತಾಲ್ಲೂಕು ಕೇಂದ್ರಗಳಲ್ಲೂ ಇಂತಹ ಯೋಜನೆಗಳು ವಿಸ್ತರಣೆಯಾಗಿ ಎಲ್ಲಾ ಮಕ್ಕಳಿಗೆ ಈ ಯೋಜನೆಯ ಮೂಲಕ ರಸ್ತೆ ಸುರಕ್ಷತಾ ಪಾಠ ಲಭಿಸಿದಂತಾಗುತ್ತದೆ.ತನ್ಮೂಲಕ ಭವಿಷ್ಯದ ಪ್ರಜೆಗಳಿಗೆ ಸುರಕ್ಷತಾ ಜ್ಞಾನ ಲಭಿಸಿ ಸಾವಿರಾರು ಅಮೂಲ್ಯ ಜೀವಗಳ ರಕ್ಷಣೆ ಮಾಡಿದಂತಾಗುತ್ತದೆ. ಇಂತಹ ಸತ್ಕಾರ್ಯಕ್ಕೆ ಶಿಕ್ಷಕರು, ಪೋಷಕರು, ಸಾರ್ವಜನಿಕರು ಮತ್ತು ಸಮುದಾಯ ಇಂತಹ ಕಾರ್ಯಕ್ರಮಗಳಿಗೆ ಸಕಾರಾತ್ಮಕ ಸ್ಪಂದನೆ ಮತ್ತು ಸಹಕಾರ ನೀಡಿದರೆ ಅಪಘಾತಗಳು ಕಡಿಮೆಯಾಗುವುದರಲ್ಲಿ ಸಂದೇಹವಿಲ್ಲ.


ಸಿಹಿಜೀವಿ ವೆಂಕಟೇಶ್ವರ

ತುಮಕೂರು


05 February 2024

ಮರೆಯಲಾಗದ ನಾಗರ ಹೊಳೆ ಸಫಾರಿ

 



ಮರೆಯಲಾಗದ ನಾಗರ ಹೊಳೆ ಸಫಾರಿ 


ಕಳೆದ ವರ್ಷ ಇದೇ ದಿನ ನೀನು ನಿನ್ನ ಸಹೋದ್ಯೋಗಿಗಳ ಜೊತೆಯಲ್ಲಿ ನಾಗರ ಹೊಳೆ ಪ್ರವಾಸದಲ್ಲಿ ಖುಷಿಯಲ್ಲಿದ್ದೆ ಎಂದು ಮುಖಪುಟ ನೆನಪಿಸಿತು.

ಹೌದು ಕೆಲಸದ ಏಕತಾನತೆ ನಿವಾರಿಸಲು ನಮ್ಮ ಮುಖ್ಯ ಶಿಕ್ಷಕರು ಮತ್ತು ಸಹೋದ್ಯೋಗಿಗಳ ಜೊತೆಯಲ್ಲಿ ಒಂದು ದಿನದ ಪ್ರವಾಸ ಹೊರಟೆವು. ಅಂದು ನಾವು  ನಾಗರ ಹೊಳೆ ಅಭಯಾರಣ್ಯದ ಸೊಗಸಾದ ಚಿತ್ರಗಳನ್ನು ಕಣ್ತುಂಬಿಕೊಂಡೆವು.


ಕರ್ನಾಟಕದ ಮೈಸೂರಿನ ತಪ್ಪಲಿನಲ್ಲಿ ಮತ್ತು ತಮಿಳುನಾಡಿನ ನೀಲಗಿರಿ ಪರ್ವತಗಳ ನಡುವೆ ಇರುವ ನಾಗರ ಹೊಳೆ 640 ಚದರ ಕಿ.ಮೀ. ಇದ್ದು ಹಲವಾರು ರೀತಿಯ ವನ್ಯಜೀವಿಗಳಿಗೆ ನೆಲೆಯಾಗಿರುವ ಅಭಯಾರಣ್ಯ. ರಾಜೀವ್ ಗಾಂಧಿ ರಾಷ್ಟ್ರೀಯ ಉದ್ಯಾನವನವು ಕರ್ನಾಟಕದ ಪ್ರಮುಖ ಹುಲಿ ಮೀಸಲು ಪ್ರದೇಶವಾಗಿದೆ ಮತ್ತು ಇದು ಪ್ರಾಜೆಕ್ಟ್ ಟೈಗರ್ ಮತ್ತು ಪ್ರಾಜೆಕ್ಟ್ ಎಲಿಫೆಂಟ್ ಅಡಿಯಲ್ಲಿ ಸಂರಕ್ಷಣೆಯ ಪ್ರಮುಖ ಕೇಂದ್ರವಾಗಿದೆ. ಈ ಅಭಯಾರಣ್ಯವು ವಿಶ್ವದ ಅತಿದೊಡ್ಡ ಏಷ್ಯಾಟಿಕ್ ಆನೆಗಳ ಹಿಂಡಿಗೆ ಆತಿಥ್ಯ ವಹಿಸಿದೆ ಮತ್ತು ಅಸಂಖ್ಯಾತ ಜಾತಿಯ ಪಕ್ಷಿಗಳು, ಸಸ್ಯ ಸಂಪತ್ತು ಮತ್ತು ಪ್ರಾಣಿ ಸಂಕುಲವನ್ನು ದೊಡ್ಡ ಕ್ರೂರ ಪ್ರಾಣಿಗಳು , ಸರೀಸೃಪಗಳು, ಕಾಡೆಮ್ಮೆ , ಜಿಂಕೆ, ಕರಡಿಗಳು ಮತ್ತು ಸಣ್ಣ ಪ್ರಾಣಿಗಳನ್ನು ಒಳಗೊಂಡಿದೆ .

 ಕರ್ನಾಟಕದ ಪ್ರಮುಖ ಹುಲಿ ಮೀಸಲು ಪ್ರದೇಶವಾದ ನಾಗರ ಹೊಳೆ ವನ್ಯಜೀವಿ ಉತ್ಸಾಹಿಗಳು ಮತ್ತು ಛಾಯಾಗ್ರಾಹಕರಿಗೆ ಭೇಟಿ ನೀಡಲೇಬೇಕಾದ ರಾಷ್ಟ್ರೀಯ ಉದ್ಯಾನವನವಾಗಿದೆ. ಏಕೆಂದರೆ ಅರಣ್ಯ ಸಫಾರಿಯಲ್ಲಿ ಬಂಗಾಳ ಹುಲಿಗಳು ಮತ್ತು ಏಷ್ಯಾಟಿಕ್ ಆನೆಗಳನ್ನು ತಮ್ಮ ಸ್ವಾಭಾವಿಕ ಸ್ಥಳಗಳಲ್ಲಿ ನೋಡಬಹುದು ಎಂದು ನಮ್ಮ ಸ್ನೇಹಿತರು ಹೇಳಿದ್ದರು. ಅದಕ್ಕೆ ನಮ್ಮ ಕ್ಯಾಮೆರಾ ಸಿದ್ದವಾಗಿಟ್ಟು ಕೊಂಡು ನಿಧಾನವಾಗಿ ಸಾಗುವ ನಮ್ಮ ಟೆಂಪೋ ಟ್ರಾವೆಲ್ ನಲ್ಲಿ ಮೈಯೆಲ್ಲಾ ಕಣ್ಣಾಗಿ ನೋಡುತ್ತಿದ್ದೆವು.ಆದರೆ ನಮಗೆ ಹುಲಿರಾಯ ಕಾಣಿಸಲೇ ಇಲ್ಲ. ಜಿಂಕೆಗಳ ದಂಡು, ನರಿಗಳು, ಒಂದೆರಡು ಆನೆಗಳು ನಮ್ಮ ಕ್ಯಾಮೆರಾಗಳಲ್ಲಿ ಸೆರೆಯಾದದ್ದು ಸಮಾಧಾನಕರ.ನಮ್ಮ ಸಹೋದ್ಯೋಗಿಮಿತ್ರರಾದ ಕೋಟೆ ಕುಮಾರ್ ರವರು ನಮ್ಮ ಇಡೀ ಸಫಾರಿಯನ್ನು ತಮ್ಮ ಕ್ಯಾಮರಾದಲ್ಲಿ ವೀಡಿಯೋ ಮಾಡಿದ್ದರು.

  ನಾಗರ ಹೊಳೆ  ರಾಷ್ಟ್ರೀಯ ಉದ್ಯಾನವು ಹೆಚ್ಚಿನ ಸಂಖ್ಯೆಯ ಕಾಡು ನಾಯಿಗಳು, ಚಿರತೆಗಳು ಮತ್ತು ಕರಡಿಗಳಿಗೆ ನೆಲೆಯಾಗಿದೆ. ಕಾಡೆಮ್ಮೆ, ಕಾಡು ಹಂದಿ, ಸಾಂಬಾರ್ ಜಿಂಕೆ, ಕೃಷ್ಣ ಮೃಗ, ಚುಕ್ಕೆ ಜಿಂಕೆಗಳು ಮತ್ತು ಹಲವಾರು ಜಾತಿಯ ಪಕ್ಷಿಗಳು ಸಾಮಾನ್ಯವಾಗಿ ಗುರುತಿಸ್ಪಡುವ ಸಸ್ಯಹಾರಿ ಪ್ರಾಣಿಗಳು. ನಮಗೂ ಹಲ ಜಾತಿಯ ಪಕ್ಷಿಗಳ ದರ್ಶನವಾಯಿತು.

ನಾಗರ ಹೊಳೆ ರಾಷ್ಟ್ರೀಯ ಉದ್ಯಾನವನವು 300ಕ್ಕೂ ಹೆಚ್ಚು ಪ್ರಭೇದಗಳಿಗೆ ಸೇರಿದ ಪಕ್ಷಿಗಳಿಗೆ ಆಶ್ರಯ ನೀಡಿದೆ ಎಂದು ಹೆಚ್ಚುವರಿ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಮನೋಜ್ ಕುಮಾರ್ ಹೇಳಿದರು. ಆದರೆ ನಮಗೆ ಕಂಡಿದ್ದು ಕೆಲ ಪ್ರಭೇದಗಳು ಮಾತ್ರ ಎಂದು ಬೇಸರದಿ ನುಡಿದಾಗ  ಎಲ್ಲಾ ಪ್ರಬೇಧಗಳನ್ನು ನೋಡಲು ಪಕ್ಷಿ ವೀಕ್ಷಕರಿಗೆ ಕ್ಯಾಂಪ್ ಮಾಡಲಾಗುವುದು ಆಗ ಬನ್ನಿ ಎಂದರು.

ನಾಗರ ಹೊಳೆ ರಾಷ್ಟ್ರೀಯ ಉದ್ಯಾನವನದಲ್ಲಿ ತೇಗದ ಮರಗಳು ಮತ್ತು ರೋಸ್‌ವುಡ್‌ನ ಸಮೃದ್ಧ ಸಂಗ್ರಹವಿದೆ.ನಾವು ಚಲಿಸುವ ರಸ್ತೆಯ ಮಾರ್ಗದ ಇಕ್ಕೆಲಗಳಲ್ಲಿ ಒಣಗಿ ಬಿದ್ದ ಮರಗಳು ಒಂದೊಂದು ಕಲಾಕೃತಿಗಳಂತೆ ಕಂಡವು.

ನಾವು ನಾಗರ ಹೊಳೆ ಕಾಡಿನ ಮಧ್ಯ ಹಾದು ಹೋಗುವಾಗ ಗಮನಿಸಿದ ಮತ್ತೊಂದು ಅಂಶವೆಂದರೆ ಅಲ್ಲಲ್ಲಿ ಕಾಣುವ  ಬುಡಕಟ್ಟು ಜನಾಂಗದವರ ಮನೆಗಳು! ಹಾಗೂ ಶಾಲೆ ,ವನ್ಯಜೀವಿಗಳು ಮತ್ತು ಪ್ರಕೃತಿಯೊಂದಿಗೆ ಅವರು ಹೇಗೆ ಹೊಂದಿಕೊಂಡು ಜೀವಿಸುತ್ತಿದ್ದಾರೆ ಎಂದು ಮನದಲ್ಲಿ ಅವರ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದೆ.ನಾವೇಕೆ ಬರೀ ಕಾಂಕ್ರೀಟ್ ಕಾಡನ್ನು ಬೆಳೆಸುತ್ತಾ ಅದನ್ನೇ ಅಭಿವೃದ್ಧಿ ಎಂಬ ಭ್ರಮೆಯಲ್ಲಿದ್ದೇವೆ ಎಂದು ಪ್ರಶ್ನಿಸಿಕೊಂಡೆ.ನಮ್ಮ ಟೆಂಪೋ ಟ್ರಾವೆಲರ್ ಸಾಕಷ್ಟು ಹೊಗೆ ಉಗುಳುತ್ತಾ, ಸದ್ದು ಮಾಡುತ್ತಾ ನಾಗರ ಹೊಳೆ ಅಭಯಾರಣ್ಯದಿಂದ ಹೊರಗೆ ಚಲಿಸಿತು.


ಸಿಹಿಜೀವಿ ವೆಂಕಟೇಶ್ವರ

ತುಮಕೂರು

9900925529

 

#ಮರ

 


ಮರ.


ನೆಟ್ಟು ಬಿಡು

ಕನಿಷ್ಠಪಕ್ಷ ಒಂದು ಮರ|

ಪರಿಸರ ಸಂರಕ್ಷಣಾ

ಕಾರ್ಯಕ್ರಮದಲ್ಲಿ

ನೀನಾಗುವೆ ಅಮರ||


04 February 2024

ಭಾರತ(ಥ)

 ಬಾರಥ 


ಅಡ್ವಾಣಿಯವರು  ಅಂದು 

ಭಾರತ ಯಾತ್ರೆ

ಮಾಡಿದ್ದರು ಏರಿ ರಥ|

ಇಂದು ಅವರಿಗೆ 

ಅತ್ಯುನ್ನತವಾದ ಗೌರವ 

ನೀಡಿ ಸನ್ಮಾನಿಸಿದೆ ಭಾರತ||



ಬಜೆಟ್ ಅರ್ಥ.

 


ಬಜೆಟ್ ಅರ್ಥ.


ಬಜೆಟ್ ಗ  ಮುಖ್ಯವಾಗಿ 

ಆಧಾರವಾಗಿರುವುದು

ಅರ್ಥ|

ಬಜೆಟ್ ನ ಟೀಕಿಸುವ 

ಕೆಲವರಿಗೇ ಆಗಿರುವುದೇ ಇಲ್ಲ

ಅರ್ಥ||


ಪೋಷಕರಿಗೊಂದು ಪತ್ರ...

 



ಪೋಷಕರಿಗೊಂದು ಪತ್ರ...

ಆತ್ಮೀಯ ಪೋಷಕರೇ....


 ಎಸ್ ಎಲ್ ಸಿ ವಿದ್ಯಾರ್ಥಿಗಳಿಗೆ ದಿನಾಂಕ 5.2.2024 ರಿಂದ ಎರಡನೇ  ಅಭ್ಯಾಸ ಪತ್ರಿಕೆಯ   ಪರೀಕ್ಷೆ ಪ್ರಾರಂಭವಾಗುವುದರಿಂದ ತಮ್ಮ ಮಗುವನ್ನು ಪರೀಕ್ಷೆಗೆ ತಯಾರಿ ನಡೆಸಿ ಉತ್ತಮ ಅಂಕ ಪಡೆಯಲು ಮನೆಯಲ್ಲಿ ಪ್ರೇರಣೆ ಮತ್ತು ಮಾರ್ಗದರ್ಶನ ನೀಡಿ...ಈ ಪರೀಕ್ಷೆಗೆ ಗೈರುಹಾಜರಾಗದಂತೆ  ಕಡ್ಡಾಯವಾಗಿ ಹಾಜರಾಗಲು ಕ್ರಮ ವಹಿಸಿ.....


ಮಕ್ಕಳಿಗೆ ಆದಷ್ಟೂ ಮೊಬೈಲ್ ಮತ್ತು ಬೈಕ್ ಕೊಡುವುದನ್ನು ನಿಲ್ಲಿಸಿ...ಓದಿನ ಕಡೆ ಹೆಚ್ಚು ಗಮನ ಕೊಡಲು ತಿಳಿಸಿ...


8 ಮತ್ತು ಒಂಭತ್ತನೆಯ ತರಗತಿಯ ಮಕ್ಕಳಿಗೆ ಈ ವರ್ಷ ಮೌಲ್ಯಂಕನ ಪರೀಕ್ಷೆ ಇರುವುದರಿಂದ ಆ ಮಕ್ಕಳಿಗೆ ಸೋಮವಾರ ಅಂದರೆ 5/2/2024 ರಿಂದ ಸಂಜೆ 4.20 ರಿಂದ 5 ಗಂಟೆಯ ವರೆಗೆ ವಿಶೇಷ ತರಗತಿಗಳನ್ನು ಆರಂಭಿಸುತ್ತಿದ್ದೇವೆ...  ನಿಮ್ಮ ಮಕ್ಕಳು ಶಾಲಾ ಅವಧಿ ಮುಗಿದ ಬಳಿಕ ಮನೆ ತಲುಪುವುದನ್ನು ಖಚಿತ ಮಾಡಿಕೊಳ್ಳಿ.



ಮತ್ತೊಮ್ಮೆ ಎಲ್ಲಾ ಮಕ್ಕಳ ಪೋಷಕರಿಗೆ ತಮ್ಮ ಮಕ್ಕಳು ಯೂನಿಫಾರ್ಮ್ ,ಶೂ ,ಹಾಕಿಕೊಂಡು, ಸಭ್ಯವಾದ ರೀತಿಯಲ್ಲಿ ಕಟಿಂಗ್ ಮಾಡಿಸಿ ಶಾಲೆಗೆ ಕಳಿಸುವುದು ನಿಮ್ಮ ಜವಾಬ್ದಾರಿಯಾಗಿರುತ್ತದೆ.ಶಾಲೆಯ ಶಿಸ್ತು ಕಾಪಾಡಲು, ಮಕ್ಕಳ ವ್ಯಕ್ತಿತ್ವ ರೂಪಿಸಲು  ಮತ್ತು ಗುಣಮಟ್ಟದ ಶಿಕ್ಷಣವನ್ನು ನೀಡಲು  ನಿಮ್ಮ ಸಹಕಾರ ಅಗತ್ಯ... ನಿಮ್ಮ ಸಹಕಾರದ ನಿರೀಕ್ಷೆಯಲ್ಲಿ....


ಇಂದ...


ಮುಖ್ಯ ಶಿಕ್ಷಕರು 

ಮತ್ತು ಸಿಬ್ಬಂದಿ

ಸರ್ಕಾರಿ ಪ್ರೌಢಶಾಲೆ ಕ್ಯಾತ್ಸಂದ್ರ

 

02 February 2024

ಉದ್ಯಮಿಯಾಗಲು ದಶಸೂತ್ರಗಳು.

 



ಉದ್ಯಮಿಯಾಗಲು ದಶಸೂತ್ರಗಳು.


ಅಂದು ಒಂದು ಚಿಕ್ಕ ಗ್ಯಾರೇಜ್ ನಲ್ಲಿ ಆರಂಭವಾದ ಒಂದು ಐಟಿ ಕಂಪನಿಯು ಇಂದು ಲಕ್ಷಾಂತರ ಕೋಟಿ ವ್ಯವಹಾರ ಮಾಡುತ್ತಾ ಸಾವಿರಾರು ಕುಟುಂಬಕ್ಕೆ ಆಧಾರ ಸ್ತಂಭವಾಗಿರುವ ತನ್ಮೂಲಕ ದೇಶದ ಜಿ ಡಿ ಪಿ ಗೂ ಕೊಡುಗೆ ಸಲ್ಲಿಸುತ್ತಿರುವ ನಮ್ಮ ಕರ್ನಾಟಕದ ಹೆಮ್ಮೆಯ ಇನ್ಪೋಸಿಸ್ ಯಶೋಗಾಥೆ ನಮಗೆಲ್ಲ ತಿಳಿದಿದೆ. ನಾರಾಯಣಮೂರ್ತಿ ರವರು ಯಶಸ್ವಿ ಉದ್ಯಮಿಯಾಗಿ ಇಂದಿನ ಯುವ ಉದ್ಯಮಿಗಳಿಗೆ ಮತ್ತು ಉದ್ಯಮಗಾರಿಕೆಗೆ ಪ್ರೇರಕ ಶಕ್ತಿಯಾಗಿದ್ದಾರೆ. 

ರಿಸ್ಕ್ ತೆಗೆದುಕೊಳ್ಳುವ ಗುಣ ,ಸತತ ಪರಿಶ್ರಮ ಸ್ಮಾರ್ಟ್ ವರ್ಕ್ ಮಾಡುವ ಯಾರಾದರೂ ಯಶಸ್ವಿ ಉದ್ಯಮಿಯಾಗಬಹುದು. ಇದರ ಜೊತೆಗೆ ನಿಮ್ಮ  ಈ ಕೆಳಕಂಡ ಗುಣಗಳಿದ್ದರೆ ಉದ್ಯಮಗಾರಿಕೆ ನಿಮ್ಮದಾಗುವಲ್ಲಿ ಸಂದೇಹವಿಲ್ಲ.

  

1 ವ್ಯಾಪಾರ ಗಮನ:


ಎಲ್ಲಾ ನಿರ್ಧಾರಗಳು ಮತ್ತು ಕ್ರಿಯೆಗಳಿಗೆ ಆಧಾರವಾಗಿರುವ ಉದ್ದೇಶವು ಯಾವಾಗಲೂ ವ್ಯಾಪಾರ ಲಾಭ ಮತ್ತು ಬೆಳವಣಿಗೆಯಾಗಿದೆ.ಆದ್ದರಿಂದ ಉದ್ಯಮಿಯಾಗಬೇಕಾದವನು ಸದಾ ತನ್ನ ವ್ಯಾಪಾರದ ಬಗ್ಗೆ ವಿಶೇಷ ಗಮನಹರಿಸಬೇಕು.


2 ಆತ್ಮವಿಶ್ವಾಸ:


ತಾನು ಹಿಡಿದ ಕಾರ್ಯವನ್ನು ಮಾಡಿಯೇ ತೋರುತ್ತೇನೆ ಎಂಬ ಆತ್ಮವಿಶ್ವಾಸ ಇರಲೇಬೇಕು 

 ಸ್ವಯಂ ನಂಬಿಕೆಯನ್ನು ಹೊಂದಿ  ವ್ಯವಹಾರದ ಬೆಳವಣಿಗೆಗೆ ಒಬ್ಬರ ಸಾಮರ್ಥ್ಯವನ್ನು  ಗುರ್ತಿಸಿ ಬೆಳೆಸಲು ಮೊದಲು ತಾನು ಆತ್ಮವಿಶ್ವಾಸ ಹೊಂದಿರಬೇಕಾಗುತ್ತದೆ. 


3 ಸೃಜನಾತ್ಮಕತೆ:


ಸೃಜನಾತ್ಮಕ ಉದ್ಯಮಿಗಳು ಯಾವಾಗಲೂ ತಮ್ಮ ವ್ಯವಹಾರವನ್ನು ಉತ್ತಮಗೊಳಿಸಲು ಅನನ್ಯ ಮಾರ್ಗಗಳ ಬಗ್ಗೆ ಯೋಚಿಸುತ್ತಾರೆ. ಅವರು ವ್ಯಾಪಾರ ಕ್ಷೇತ್ರದಲ್ಲಿನ ಬದಲಾವಣೆಗಳ ಬಗ್ಗೆ ತಿಳಿದಿರುತ್ತಾರೆ ಮತ್ತು ಔಟ್ ಆಪ್  ಬಾಕ್ಸ್  ಚಿಂತನೆಯಲ್ಲಿ ಪ್ರವೀಣರಾಗಿರುತ್ತಾರೆ. ಹಾಗೂ ಅವರು ನವೀನ ವ್ಯವಹಾರ ಕಲ್ಪನೆಗಳು ಮತ್ತು ವಿಧಾನಗಳನ್ನು ತ್ವರಿತವಾಗಿ ಅಳವಡಿಸಿಕೊಳ್ಳುತ್ತಾರೆ.


4 ಪ್ರತಿನಿಧಿ:


ವ್ಯವಹಾರವು ಬೆಳೆಯುತ್ತಿರುವಾಗ  ಸ್ಮಾರ್ಟ್ ಉದ್ಯಮಿಗಳು ತಾವು ಎಲ್ಲವನ್ನೂ ಮಾಡಲು ಸಾಧ್ಯವಿಲ್ಲ ಎಂದು ಅರಿತುಕೊಳ್ಳುತ್ತಾರೆ ಮತ್ತು ಅವರು ತಮ್ಮ ತಂಡಕ್ಕೆ ಹೆಚ್ಚಿನ ಜವಾಬ್ದಾರಿಗಳನ್ನು ಹಸ್ತಾಂತರಿಸಬೇಕಾಗುತ್ತದೆ.ಅದು ವ್ಯವಹಾರಗಳ ವಿಸ್ತರಣೆ ಮತ್ತು ತಮ್ಮ ಕಂಪನಿಯ ಬೆಳವಣಿಗೆಗೆ ಪೂರಕವಾಗಿರುತ್ತದೆ.


5 ಸಂಕಲ್ಪ:


ಯಾವುದೇ ಶ್ರೇಷ್ಠ ಕೆಲಸಗಳು ಉತ್ತಮ ಸಂಕಲ್ಪದಿಂದ ಆರಂಭವಾಗುತ್ತವೆ.

ಯಶಸ್ವಿ ಉದ್ಯಮಿಗಳು ಉತ್ತಮ ಸಂಕಲ್ಪದೊಂದಿಗೆ  ಕಠಿಣ ಸಮಯಗಳಲ್ಲಿ ಪರಿಶ್ರಮ ಪಡುತ್ತಾರೆ ಮತ್ತು ಅವರ ದೃಢತೆ ಅವರಿಗೆ ಹಿಂದೆಂದೂ ಬಲವಾಗಿ ಪುಟಿದೇಳಲು ಸಹಾಯ ಮಾಡುತ್ತದೆ.


6 ಸ್ವತಂತ್ರ:


ಒಬ್ಬ ವ್ಯಕ್ತಿಯು ಏಕಾಂಗಿಯಾಗಿ ವ್ಯವಹಾರವನ್ನು ಪ್ರಾರಂಭಿಸಬಹುದು ಮತ್ತು ನಡೆಸಬಹುದು ಇದರ ಜೊತೆಗೆ ಸಕಾಲದಲ್ಲಿ ಉತ್ತಮ. ನಿರ್ಣಯವನ್ನು ಕೈಗೊಳ್ಳಲು ಉದ್ಯಮಿಯಾದವನು ಹಿಂದೆ ಮುಂದೆ ನೋಡಬಾರದು. 


7 ಜ್ಞಾನ ಅನ್ವೇಷಕ:


ಮಹಾನ್ ವಾಣಿಜ್ಯೋದ್ಯಮಿಗಳು 'ಜ್ಞಾನವು ಶಕ್ತಿ' ಎಂದು ಅರಿತುಕೊಳ್ಳುತ್ತಾರೆ ಮತ್ತು ಅವರು ತಮ್ಮ ಪ್ರತಿ ಸ್ಪರ್ಧಿಗಳಿಗಿಂತ ಮುಂದೆ ಇರಲು ಎಲ್ಲಾ ಉದ್ಯಮದ ಬೆಳವಣಿಗೆಗಳು ಮತ್ತು ಮಾಹಿತಿಗಳನ್ನು ಅಪ್ಡೇಟ್ ಮಾಡಿಕೊಂಡಿರುತ್ತಾರೆ. ಹೊಸತಿಗೆ ಹಾತೊರೆಯುತ್ತಾರೆ.


8 ಪ್ರವರ್ತಕ:


ಪರಿಣಾಮಕಾರಿ ಉದ್ಯಮಿಗಳು ತಮ್ಮ ವ್ಯಾಪಾರವನ್ನು ಅನುಮೋದಿಸಲು ಮತ್ತು ಎಲ್ಲಾ ವೇದಿಕೆಗಳಲ್ಲಿ ಅದನ್ನು ಉತ್ತೇಜಿಸುತ್ತಾರೆ.ಇದಕ್ಕೆ ಸಾಮಾಜಿಕ ಮಾಧ್ಯಮ ಸೇರಿದಂತೆ ವಿವಿಧ ಮಾಧ್ಯಮಗಳ ಬಳಕೆ ಮಾಡಿಕೊಂಡು ತನ್ನ ಉತ್ಪನ್ನಗಳನ್ನು ಸರ್ವರಿಗೂ ತಲುಪಿಸುವ ಪ್ರಾಮಾಣಿಕ ಪ್ರಯತ್ನ ಮಾಡಬೇಕು.


9 ಉತ್ತಮ ಸಂಬಂಧ:


ಹೆಚ್ಚು ಯಶಸ್ವಿ ಉದ್ಯಮಿಗಳು ಸಾಮಾನ್ಯವಾಗಿ ಉದ್ಯೋಗಿಗಳು, ಗ್ರಾಹಕರು ಮತ್ತು ಗ್ರಾಹಕರೊಂದಿಗೆ ಬಲವಾದ ಪರಸ್ಪರ ಕೌಶಲ್ಯಗಳನ್ನು ಪೋಷಿಸುವ ಉತ್ತಮ ಸಂಬಂಧವನ್ನು  ಹೊಂದಿರುತ್ತಾರೆ. ಇದು ಅವರ ಉದ್ಯಮದ ಯಶಸ್ಸಿಗೆ ಪೂರಕವಾದ ಅಂಶವಾಗಿದೆ.


10 ರಿಸ್ಕ್ ಟೇಕಿಂಗ್:


ಫಾರ್ಚೂನ್ ಪೇವರ್ಸ್ ಬ್ರೇವ್ ಎಂಬಂತೆ ಕೆಲವೊಮ್ಮೆ ನಾವು ಮುನ್ನುಗ್ಗಲೇ ಬೇಕು.

ದ್ಯಮಶೀಲತೆಯ ಮೂಲತತ್ವವು ಅಪಾಯ ತೆಗೆದುಕೊಳ್ಳುವಿಕೆಯನ್ನು ಒಳಗೊಳ್ಳುತ್ತದೆ ಮತ್ತು ಯಶಸ್ವಿ ವ್ಯಾಪಾರ ವ್ಯಕ್ತಿಗಳು ಲೆಕ್ಕ ಹಾಕಿದ ಅಪಾಯಗಳನ್ನು ತೆಗೆದುಕೊಳ್ಳುವಲ್ಲಿ ಪ್ರವೀಣರಾಗಿರುತ್ತಾರೆ.


ಈ ಮೇಲಿನ ದಶಗುಣಗಳಿರುವ ಯಾರಾದರೂ ಹೊಸ ಉದ್ಯಮ ಆರಂಭಿಸಲು ಮುಂದಡಿ ಇಡಬಹುದು. ಇದಕ್ಕೆ ಪೂರಕವಾಗಿ ಸರ್ಕಾರದ ಅರ್ಥಿಕ ಬೆಂಬಲ ಆತ್ಮೀಯರ ಪ್ರೋತ್ಸಾಹ ಇದ್ದರೆ ಉದ್ಯಮಗಾರಿಕೆ ಕಷ್ಟದಾಯಕವಲ್ಲ.


ಸಿಹಿಜೀವಿ ವೆಂಕಟೇಶ್ವರ

ತುಮಕೂರು

9900925529