ಲೇಖನ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ
ಲೇಖನ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ

31 ಮೇ 2025

ಅಹಲ್ಯಾ ಬಾಯ್ ಹೋಳ್ಕರ್..



ಮರಾಠ ಮನೆತನದ ಮಹಾರಾಣಿ ತನ್ನ ಗಂಡ ಮಕ್ಕಳನ್ನು ಚಿಕ್ಕ ವಯಸ್ಸಿನಲ್ಲಿ ಕಳೆದುಕೊಂಡರೂ ಧೃತಿಗೆಡದೆ ದಿಟ್ಟ ಆಡಳಿತ ನೀಡಿದ ಮಹಾಸಾದ್ವಿ ಅಹಲ್ಯ ಬಾಯ್ ಹೋಳ್ಕರ್.ಕಲೆ, ಸಂಸ್ಕೃತಿ, ವಾಸ್ತುಶಿಲ್ಪಕ್ಕೆ ಅವರ ಕೊಡುಗೆ ಅಪಾರ.ಇಂದು ಅವರ 300 ನೇ ಜಯಂತಿ ಇಂತಹ ಮಹಾನ್ ಆದರ್ಶ ಮಹಿಳೆಯನ್ನು ನೆನೆಯುತ್ತಾ ಅವರಿಗೆ ಜನ್ಮ ದಿನದ ಶುಭಾಶಯಗಳನ್ನು ಕೋರೋಣ.


 

29 ಮೇ 2025

ನಿಂದಕರಿರಬೇಕು!


 



ನಿಂದಕರಿರಬೇಕು.


ಬಿರು ಮಳೆಗಾಲದಲ್ಲಿ ಹೊಲಗಳಲ್ಲಿ  ಕೆಲಸ ಮಾಡುವ  ಕೆಲವು ಹುಡುಗರನ್ನು ಒಬ್ಬ ವೃದ್ಧ ನೋಡಿದರು. ಅವರಲ್ಲಿ ಒಬ್ಬ ಹುಡುಗ ಶೂಗಳನ್ನು ಧರಿಸಿರಲಿಲ್ಲ.  ದಪ್ಪ ಉಣ್ಣೆಯ ಸಾಕ್ಸ್‌ಗಳನ್ನು ಮಾತ್ರ ಧರಿಸಿದ್ದ.   ಅವನನ್ನು ಕರೆದು

"ಬರಿಗಾಲಲ್ಲಿ ಕೆಲಸ ಮಾಡಿದರೆ   ಕಾಲುಗಳಿಗೆ  ಗಾಯಗಳಾಗುತ್ತವೆ.  ನೀನು ನಿನ್ನ ಬೂಟುಗಳನ್ನು ಏಕೆ ಧರಿಸಿಲ್ಲ?"ಎಂದು ಕೇಳಿದರು.

ಹುಡುಗ ಪ್ರತಿಕ್ರಿಯಿಸಿ

"ನಾನು ಎರಡು ವಾರಗಳ ಹಿಂದೆ ನನ್ನ ಬೂಟುಗಳನ್ನು ಕಳೆದುಕೊಂಡೆ. ಅಂದಿನಿಂದ ನಾನು ಯಾವಾಗಲೂ ಗಾಯಗೊಂಡ ಕಾಲುಗಳ ಜೊತೆಗೆ ಮನೆಗೆ ಹಿಂತಿರುಗುವೆ ಅದಕ್ಕೆ ಈ ಬಟ್ಟೆಗಳನ್ನು ಪಾದಗಳಿಗೆ ಕಟ್ಟಿಕೊಂಡಿರುವೆ" ಎಂದನು. 

ಮುದುಕ ಒಂದು ಕ್ಷಣ ಯೋಚಿಸಿ ನಂತರ ತನ್ನ ಚೀಲದಿಂದ ನಾಲ್ಕು ಬೂಟುಗಳನ್ನು ಹೊರತೆಗೆದನು. ಒಂದು ಜೋಡಿ ಸ್ವಚ್ಛ ಮತ್ತು ಸುಂದರವಾಗಿತ್ತು, ಆದರೆ ಇನ್ನೊಂದು ಜೋಡಿ ಕೊಳಕು ಮತ್ತು ಮಣ್ಣಾಗಿತ್ತು. ನಂತರ ಅವನು ಹುಡುಗನನ್ನು ಕೇಳಿದನು.

"ಶುದ್ಧ ಬೂಟುಗಳು ಅಥವಾ ಕೊಳಕು ಬೂಟುಗಳು? ಒಂದನ್ನು ಆರಿಸಿಕೋ"

ಹುಡುಗ ಶೂಗಳತ್ತ ಕಣ್ಣು ಹಾಯಿಸಿ ನಂತರ ಉತ್ತರಿಸಿದನು.

"ನನಗೆ ಕೊಳಕು ಬೂಟುಗಳು ಹೆಚ್ಚು ಇಷ್ಟ ಸರ್."

ಮುದುಕನು ದಿಗ್ಭ್ರಮೆಗೊಂಡನು ಮತ್ತು ಅವನ ಉತ್ತರ ಕೇಳಿ ಆಶ್ಚರ್ಯಚಕಿತನಾಗಿ ಕೇಳಿದರು.

"ನೀನು ಸ್ವಚ್ಛವಾದ ಬೂಟುಗಳಿಗಿಂತ ಕೊಳಕು ಬೂಟುಗಳನ್ನು ಏಕೆ ಆಯ್ಕೆ ಮಾಡಿದೆ?"

 ಹುಡುಗ ಮುಗುಳ್ನಗುತ್ತಾ ಹೇಳಿದ

"ನಾನು ಹೊಲ ಗದ್ದೆಗಳಲ್ಲಿ  ಕೆಲಸ ಮಾಡುತ್ತೇನೆ. ಆದ್ದರಿಂದ ನನಗೆ ಸ್ವಚ್ಛವಾದ ಶೂಗಳ ಅಗತ್ಯವಿಲ್ಲ. ನಾನು ಸ್ವಚ್ಛವಾದ ಶೂಗಳೊಂದಿಗೆ ಕೆಲಸ ಮಾಡಿದರೆ ಅವು ಕೊಳಕು ಮತ್ತು ಮಣ್ಣಾಗುತ್ತವೆ. ಮತ್ತು ಮುಖ್ಯವಾಗಿ ಈ  ಕೊಳಕಾಗಿ ಕಾಣುವ  ಶೂಗಳು ಚರ್ಮದಿಂದ ಮಾಡಲ್ಪಟ್ಟಿರುತ್ತವೆ. ಆದರೆ ಸ್ವಚ್ಛವಾದ ಶೂಗಳು ಸಿಂಥೆಟಿಕ್ ನಿಂದ ಮಾಡಿವೆ. ಚರ್ಮವು ಶೂಗಳನ್ನು ತಯಾರಿಸಲು ಲಭ್ಯವಿರುವ ಅತ್ಯಂತ ಬಾಳಿಕೆ ಬರುವ ವಸ್ತುವಾಗಿದೆ. ಅವು ಇತರ ಆಯ್ಕೆಗಳಿಗಿಂತ ಹೆಚ್ಚು ಕಾಲ ಉಳಿಯುತ್ತವೆ. ಆದ್ದರಿಂದ ಚರ್ಮದ ಶೂಗಳು ಎಷ್ಟೇ ಕೊಳಕಾಗಿದ್ದರೂ ನಾನು ಅವುಗಳನ್ನು ಶುದ್ಧವಾದ ಸಿಂಥೆಟಿಕ್ ಶೂಗಳಿಗಿಂತ ಹೆಚ್ಚು ಮೆಚ್ಚುತ್ತೇನೆ."

 ಬಾಲಕನ ಉತ್ತರ ಕೇಳಿದ ಮುದುಕ ವಿಶಾಲವಾಗಿ ಮುಗುಳ್ನಕ್ಕು  ಬಾಲಕನ ಬುದ್ದಿವಂತಿಕೆ ಮೆಚ್ಚಿ ಅವನು ಇಚ್ಛೆ ಪಟ್ಟ ಶೂ ನೀಡಿ ಮುಂದೆ ಸಾಗಿದರು.


ನಮ್ಮ ಜೀವನದಲ್ಲೂ   ಕೆಲವೊಮ್ಮೆ ಜನರು ನಮ್ಮ ಹೆಸರನ್ನು ಹಾಳುಮಾಡಲು, ನಮ್ಮ ವ್ಯಕ್ತಿತ್ವವನ್ನು ಕೆಡಿಸಲು ಮತ್ತು ನಮ್ಮ ಬಗ್ಗೆ ವದಂತಿಗಳನ್ನು ಸೃಷ್ಟಿಸಲು ಹೊಟ್ಟೆ ಕಿಚ್ಚಿನ ಜನ ಅವರ ಕೈಲಾದಷ್ಟು ಪ್ರಯತ್ನ ಮಾಡುತ್ತಾರೆ. ಅವರು ನಿಮ್ಮ ವ್ಯಕ್ತಿತ್ವವನ್ನು ಹಾಳುಮಾಡುವ ಕೊಳಕು ಚರ್ಮದ ಬೂಟುಗಳಂತೆ ನಿಮ್ಮನ್ನು ಕೊಳಕು ಎಂದು ತೋರಿಸಲು ಸುಳ್ಳು ಆಪಾದನೆಗಳ  ಕೆಸರನ್ನು ನಮ್ಮಡೆ ಎಸೆಯುತ್ತಾರೆ. ಅವರು ನಮ್ಮ ಮೇಲೆ ಮಣ್ಣನ್ನು ಎಸೆಯಲಿ,ಕೆಸರು ಎಸೆಯಲಿ ಅವರು ಏನು ಬೇಕಾದರೂ ಹೇಳಲಿ. ಏಕೆಂದರೆ ಅವರು ನಮ್ಮನ್ನು ಟೀಕಿಸಲು ಯಾವುದೇ ರೀತಿಯ ಪದಗಳನ್ನು ಬಳಸಿದರೂ ಅವರು ನಮ್ಮ ನಿಜವಾದ ಒಳ್ಳೆಯ ವ್ಯಕ್ತಿತ್ವವನ್ನು ಕೀಳಾಗಿ ಕಾಣಲು ಅಥವಾ ನಾಶಮಾಡಲು ಸಾಧ್ಯವಿಲ್ಲ.  ಅವರು ನಮ್ಮ ಒಳ್ಳೆಯ ಕಾರ್ಯಗಳನ್ನು ಎಂದಿಗೂ ಕಸಿದುಕೊಳ್ಳಲು ಸಾಧ್ಯವಿಲ್ಲ. ನಾವು ಯಾವಾಗಲೂ ಇರುವಂತೆಯೇ ಇನ್ನೂ ಹೊಳೆಯುತ್ತೇವೆ. ನಮ್ಮನ್ನು ನಿಜವಾಗಿಯೂ ಚೆನ್ನಾಗಿ ತಿಳಿದಿರುವವರು ನಮ್ಮನ್ನು ಇನ್ನೂ ಮೆಚ್ಚುತ್ತಾರೆ. ಅವರು ನಮ್ಮ ಮೌಲ್ಯವನ್ನು ಗುರುತಿಸುತ್ತಾರೆ ಮತ್ತು ಅವರು ನಮ್ಮನ್ನು ಪ್ರಶಂಸಿಸುತ್ತಾರೆ. ಹಾಗಾಗಿ ನಿಂದಕರ ಬಗ್ಗೆ ತಲೆಕೆಡಿಸಿಕೊಳ್ಳದೇ ನಮ್ಮತನ ಬಿಡದೆ ನಮ್ಮ ಪಾಡಿಗೆ ನಾವು ಕಾಯಕ ಮಾಡುತ್ತ ಸಾಗೋಣ.


ಸಿಹಿಜೀವಿ ವೆಂಕಟೇಶ್ವರ

ತುಮಕೂರು

17 ಮೇ 2025

ಕೋಳಿಯ ಜೀವನ ಪಾಠ.


 


ಕೋಳಿಯ ಜೀವನ ಪಾಠ.


ಕೋಳಿಯೆಂದರೆ ನಮಗೆ ನೆನಪಾಗುವುದು ಮುಂಜಾನೆಯ ಕೂಗು, ಇಲ್ಲವೇ ಮೊಟ್ಟೆ, ಇಲ್ಲಾ ಅಂದ್ರೆ ಕಬಾಬ್, ಬಿರ್ಯಾನಿ, ಅಷ್ಟೇ. 

ಆದರೆ ಕೋಳಿಯಿಂದಲೂ ನಾವು ಜೀವನದ ಪಾಠಗಳನ್ನು ಕಲಿಯಬಹುದು ಅವ್ಯಾವು ನೋಡೋಣ ಬನ್ನಿ.

ಕೋಳಿ ಮೊದಲು ಮೊಟ್ಟೆ ಇಟ್ಟು ಅವುಗಳ ಮೇಲೆ ಕುಳಿತುಕೊಳ್ಳುವ ಮೂಲಕ ಅದರ  ಉತ್ತಮ ಯೋಜನೆಯನ್ನು ನಾವು ಗಮನಿಸಬೇಕು.

 

ಕೋಳಿಯು ಮೊಟ್ಟೆಗಳ ಮೇಲೆ ಕುಳಿತು ಕಾವು ಕೊಡಲಾರಂಭಿಸಿದಾಗ  ಅದು ಚಲನೆಯನ್ನು ಕಡಿಮೆ ಮಾಡುತ್ತದೆ ಇದು ಶಿಸ್ತುಬದ್ಧ ನಡವಳಿಕೆ. ನಾವು ಸಹ ಏನಾದರೂ ಅಸಾಧಾರಣ ಸಾಧನೆ ಮಾಡುವಾಗ ಅನವಶ್ಯಕ ತಿರುಗಾಟ ಕಡಿಮೆ ಮಾಡಿ ಶಿಸ್ತು ರೂಢಿಸಿಕೊಳ್ಳಬೇಕು. ಅದು ಕಾವು ಕೊಡುವ ವೇಳೆ  ಕಡಿಮೆ ಆಹಾರ ಸೇವನೆಯಿಂದಾಗಿ ಅದು ತನ್ನ ಮೊಟ್ಟೆಗಳ ಮೇಲೆ ಕುಳಿತಾಗ ದೈಹಿಕವಾಗಿ ತೂಕವನ್ನು ಕಳೆದುಕೊಳ್ಳುತ್ತದೆ ಇದು 

ತ್ಯಾಗ ಮತ್ತು ಪರಹಿತಚಿಂತನೆಗೆ ಉದಾಹರಣೆ. ಇದರ ಜೊತೆಯಲ್ಲಿ ಇಲ್ಲಿ ಉಲ್ಲೇಖಿಸಬೇಕಾದ ಮತ್ತೊಂದು ಅಂಶವೆಂದರೆ ಒಂದು ಕೋಳಿಯು ಮತ್ತೊಂದು ಕೋಳಿಯ ಮೊಟ್ಟೆಗಳ ಮೇಲೆ ಕುಳಿತು ಕಾವು ಕೊಟ್ಟು ಮರಿ ಮಾಡುವುದನ್ನು ನಾವು ನೋಡಿದ್ದೇವೆ.ಇದು ಕೋಳಿಯ   ಉದಾರ ಮತ್ತು ನಿಸ್ವಾರ್ಥ ಮನಸ್ಸಿಗೆ ಸಾಕ್ಷಿ.

 ಅದು 21 ದಿನಗಳ ಕಾಲ ಮೊಟ್ಟೆಗಳ ಮೇಲೆ ಕುಳಿತು ತಾಳ್ಮೆಯಿಂದ ಕಾಯುತ್ತದೆ ಮತ್ತು ಅವು ಮರಿಯಾಗದಿದ್ದರೂ ಅದು ಮತ್ತೆ ಮೊಟ್ಟೆಗಳನ್ನು ಇಡುತ್ತದೆ ಇದು ನಂಬಿಕೆ, ಭರವಸೆ ಮತ್ತು ಧೈರ್ಯಕ್ಕೆ ಉದಾಹರಣೆ.

ಇದು ಫಲವತ್ತಾಗಿಸದ ಮೊಟ್ಟೆಗಳನ್ನು ಪತ್ತೆ ಮಾಡುತ್ತದೆ 

ಸೂಕ್ಷ್ಮ ಮತ್ತು ವಿವೇಚನಾಶೀಲ ಕೋಳಿಯು  ಕೊಳೆತ ಮೊಟ್ಟೆಗಳನ್ನು ತ್ಯಜಿಸುತ್ತದೆ ಮತ್ತು ಮೊಟ್ಟೆಯೊಡೆದ ಮರಿಗಳನ್ನು ಅದು ಒಂದೇ ಆಗಿದ್ದರೂ ಸಹ ನೋಡಿಕೊಳ್ಳಲು ಪ್ರಾರಂಭಿಸುತ್ತದೆ.ಇದು ಕೋಳಿಯ 

ಬುದ್ಧಿವಂತಿಕೆ,ಪ್ರಜ್ಞೆ ಮತ್ತು ವಾಸ್ತವಿಕತೆಯನ್ನು ಪ್ರತಿನಿಧಿಸುತ್ತದೆ.


 ಅದು ಮರಿಯ ಹಾರೈಕೆ ಮಾಡುವಾಗ ಅದರ ಮರಿಯನ್ನು ಯಾರೂ ಮುಟ್ಟಲು ಸಾಧ್ಯವಿಲ್ಲ.ಅದು

ರಕ್ಷಣಾತ್ಮಕ ಪ್ರೀತಿ.

ಅದು ತನ್ನ ಎಲ್ಲಾ ಮರಿಗಳನ್ನು ಒಟ್ಟುಗೂಡಿಸುತ್ತಾ  ಏಕತೆಯ ಸಂದೇಶವನ್ನು ಸಾರುತ್ತದೆ.ಮರಿಗಳನ್ನು ಪ್ರೌಢಾವಸ್ಥೆಗೆ ತರುವ ಮೊದಲೇ ಎಂದಿಗೂ  ಕೈಬಿಡದೇ ಉತ್ತಮ ಮಾರ್ಗದರ್ಶನ ನೀಡುತ್ತದೆ.


ಹೀಗೆ ಕೋಳಿಯಂತಹ ಸಾಮಾನ್ಯ ಜೀವಿಯು ತನಗರಿವಿಲ್ಲದೇ ಎಂತಹ ಅಮೂಲ್ಯವಾದ ಸಂದೇಶಗಳನ್ನು ನೀಡುತ್ತದೆ. ಇಂತಹ ಸಂದೇಶಗಳನ್ನು ನಾವೂ ನಮ್ಮ ಜೀವನದಲ್ಲಿ ಅಳವಡಿಸಿಕೊಂಡು ನಮ್ಮ ಜನ್ನ ಸಾರ್ಥಕ ಪಡಿಸಿಕೊಳ್ಳೋಣ.


ಸಿಹಿಜೀವಿ ವೆಂಕಟೇಶ್ವರ

ತುಮಕೂರು

ಐತಿಹಾಸಿಕ ತಾಣ ದೇವರಾಯ ಪಟ್ಟಣ.


 


ಐತಿಹಾಸಿಕ ತಾಣ ದೇವರಾಯ ಪಟ್ಟಣ.


ಇತ್ತೀಚೆಗೆ  ನಮ್ಮ ಇಲಾಖೆಯ ನಿಯೋಜಿತ ಕಾರ್ಯನಿಮಿತ್ತವಾಗಿ ತುಮಕೂರಿನ ಸಮೀಪದ ದೇವರಾಯ ಪಟ್ಟಣಕ್ಕೆ  ಹೋಗಿದ್ದೆ. ಬೈಕ್ ನಲ್ಲಿ ಹೊರಟ ನನ್ನನ್ನು "ದೇವಾಲಯಗಳ ಊರು ದೇವರಾಯ ಪಟ್ಟಣಕ್ಕೆ ಸ್ವಾಗತ" ಎಂಬ ಸ್ವಾಗತ ಕಮಾನು ಸ್ವಾಗತಿಸಿತು. ಸಿದ್ದಿವಿನಾಯಕ ಮತ್ತು ವೀರಾಂಜನೇಯ ದೇವಾಲಯಗಳಲ್ಲಿ ದೇವರ ದರ್ಶನ ಪಡೆದು ಐತಿಹಾಸಿಕ ಹರಿಹರೇಶ್ವರ ದೇಗುಲದ ಕಡೆ ಹೊರಟೆ.ತುಸು ದಿಬ್ಬದ ಮೇಲೆ ನನ್ನ ಗಾಡಿ ಚಲಿಸಿದ ನಂತರ ಎರಡು ಕಲ್ಲಿನ ರಚನೆಗಳು ನನ್ನ ಕಣ್ಣಿಗೆ ಬಿದ್ದವು. ಅದರಲ್ಲಿ ಮೊದಲನೇ ಸ್ಮಾರಕವೇ ಹರಿಹರೇಶ್ವರ ದೇವಾಲಯ. ಅದರ ಮುಂದಿನದು ವಿಶ್ರಾಂತಿ ಗೃಹದಂತಹ ರಚನೆ. ಈ ಎರಡೂ ಸ್ಮಾರಕಗಳ ಮುಂದಿನ ಜಲರಾಶಿಯು ಪ್ರವಾಸಿಗರ ಪ್ರಮುಖವಾದ ಆಕರ್ಷಣೆ ಅದೇ ದೇವರಾಯ ಪಟ್ಟಣದ ಕೆರೆ.

 

 ಹರಿಹರೇಶ್ವರ ದೇವಾಲಯವು ಸುಮಾರು ಐನೂರು ವರ್ಷಗಳಷ್ಟು ಹಳೆಯದಾದ ಪ್ರಾಚೀನ ದೇಗುಲವಾಗಿದ್ದು ಈಗಲೂ ಪೂಜೆ ಪುರಸ್ಕಾರಗಳು ನಡೆಯುತ್ತವೆ. ಗರ್ಭಗುಡಿಯಲ್ಲಿ  ಹರಿ ಹರರ ಸಂಯೋಜಿತ ಆಕರ್ಷಕ ವಿಗ್ರಹವಿದೆ. ಆದ್ದರಿಂದ ಈ ದೇವಸ್ಥಾನಕ್ಕೆ ಹರಿಹರೇಶ್ವರ ದೇವಾಲಯ ಎಂಬ ಹೆಸರು ಬಂದಿದೆ.

ದೇವಾಲಯದ ಒಳಗಿನ ಒಂದು ಶಾಸನವು ಈ ಪ್ರಾಚೀನ ದೇವಾಲಯವನ್ನು ನವೀಕರಿಸಲು 1913 ರಲ್ಲಿ ತಾಲ್ಲೂಕು ಆದೇಶವನ್ನು ಹೊರಡಿಸಲಾಗಿದೆ ಎಂದು ದಾಖಲಿಸುತ್ತದೆ. 

ಸ್ಥಳೀಯ ಮುಖಂಡರನ್ನು ಮಾತನಾಡಿಸಿದಾಗ ಈ ದೇವಾಲಯ ಚೋಳರ ಅವಧಿಯಲ್ಲಿ ನಿರ್ಮಾಣವಾಗಿದೆ ಎಂದರು.ದೇವರಾಯ ಪಟ್ಟಣದ ನಾಗರೀಕರ ಬಾಯಲ್ಲಿ ಈ ಗುಡಿಯನ್ನು ಚೋಳರ ಗುಡಿ ಎಂದು ಜನಜನಿತವಾಗಿದೆ.

 

ದೇವಾಲಯದ ಮೂಲವು ಅಸ್ಪಷ್ಟವಾಗಿದ್ದರೂ ದೇವರಾಯಪಟ್ಟಣವು 500 ವರ್ಷಗಳಿಗೂ ಹೆಚ್ಚಿನ ಇತಿಹಾಸವನ್ನು ಹೊಂದಿದೆ. ಎಪಿಗ್ರಾಫಿಯಾ ಕರ್ನಾಟಿಕಾ ಪ್ರಕಾರ  ಶ್ರೀ ತಿಮ್ಮಣ್ಣ ನಾಯಕ ಈ ಅವಧಿಯಲ್ಲಿ ದೇವರಾಯಪಟ್ಟಣದ ಮುಖ್ಯಸ್ಥರಾಗಿದ್ದರು. ಅವರ ಮಗ ಕೆಂಚ ಸೋಮಣ್ಣ ನಾಯಕ ರಾಜನ ವಿಶ್ವಾಸಾರ್ಹ ಸೇನಾಧಿಪತಿಯಾದರು.

1513 ರಲ್ಲಿ, ಕೆಂಚ ಸೋಮಣ್ಣ ತನ್ನ ಕುಟುಂಬಕ್ಕೆ ಕೃಪೆಯನ್ನು ಕೋರಿ ಸ್ಥಳೀಯ ದೇವರಿಗೆ ಒಂದು ಗ್ರಾಮವನ್ನು ದಾನ ಮಾಡಿದನು. ಅವನ ಗೌರವಾರ್ಥವಾಗಿ ಎರಡು ಗ್ರಾಮಗಳಿಗೆ ಕೆಂಚನಪಾಳ್ಯ ಮತ್ತು ಕೆಂಚನಕೋಟೆ ಎಂದು ಮರುನಾಮಕರಣ ಮಾಡಲಾಯಿತು ಎಂಬ ಉಲ್ಲೇಖವಿದೆ.





ದೇವಾಲಯದ ಮುಂದೆ ಇರುವ ಮಂಟಪದಂತಹ ಸ್ಮಾರಕವನ್ನು ಬೃಹತ್ ಕಲ್ಲು ಬಂಡೆಗಳಿಂದ ನಿರ್ಮಿಸಲಾಗಿದೆ.ಚೋಳರ ಕಾಲದಲ್ಲಿ ಸೈನಿಕರ ತಂಗುದಾಣವಾಗಿ ಇದನ್ನು ನಿರ್ಮಿಸಲಾಗಿದೆ ಎಂದು ಕೆಲವರು ಹೇಳುತ್ತಾರೆ.

ಹರಿಹರೇಶ್ವರ ದೇವಾಲಯದ ಜೀರ್ಣೋದ್ಧಾರ ಟ್ರಸ್ಟ್ ನವರು ಆಗಾಗ್ಗೆ ಈ ದೇವಾಲಯವನ್ನು  ಜೀರ್ಣೋದ್ಧಾರ ಮಾಡಿದ ಬಗ್ಗೆ ಅಲ್ಲಿನ ಶಿಲಾ ಫಲಕಗಳಲ್ಲಿ ಉಲ್ಲೇಖಿಸಿರುವುದನ್ನು ನಾನು ಗಮನಿಸಿದೆ. ಈಗ ಮತ್ತೊಮ್ಮೆ ಈ ಸ್ಮಾರಕಗಳ ಜೀರ್ಣೋದ್ಧಾರ ಮಾಡುವ ಅಗತ್ಯವಿದೆ.


ಈ ದೇವಾಲಯದ ಎಡಭಾಗದಲ್ಲಿರುವ ಬೃಹತ್ ಏಕಶಿಲೆಯು ಇಲ್ಲಿನ ಮತ್ತೊಂದು ಆಕರ್ಷಣೆ.

ಭಗವಾನ್ ಹನುಮಂತನು ಸಂಜೀವಿನಿ ಪರ್ವತವನ್ನು ಎತ್ತುತ್ತಿರುವ ವಿಗ್ರಹ ಸುಂದರವಾಗಿದೆ. ಅದೇ ಕಲ್ಲಿನ ಮೇಲೆ    ಶ್ರೀಕೃಷ್ಣನು ಕಾಳಿಂಗ ಮರ್ಧನ ಮಾಡುವ ವರ್ಣ ಚಿತ್ರವನ್ನು ಕಲಾವಿದರು ಚಿತ್ರಿಸಿದ್ದಾರೆ ಆ ಕಲಾವಿದರು ಮೆಚ್ಚುಗೆಗೆ ಅರ್ಹ. ಈ ಕಲಾಕೃತಿಗಳನ್ನು ನೋಡಿ ಮುಂದೆ ಸಾಗಿದಾಗ ತಾಯಿಮುದ್ದಮ್ಮ ದೇಗುಲ ನೋಡಬಹುದು. ಅಲ್ಲಿಂದ ಮುಂದೆ ಕರೆಯ ಮೇಲೆ ವಾಯುವಿಹಾರ ಮಾಡಲು ಉತ್ತಮ ಮಾರ್ಗವಿದೆ.ನಾನು ಆ  ಮಾರ್ಗದಲ್ಲಿ ಕೆಲ ಮೀಟರ್ ವಾಕ್ ಮಾಡುತ್ತಾ ಸುತ್ತಲೂ ಇರುವ ಬೆಟ್ಟಗಳು ಮತ್ತು ಕೆರೆಯ ನೀರನ್ನು ಕಂಡು ಸಂತಸ ಪಟ್ಟು ನನ್ನ ಬೈಕ್ ಏರಿ ತುಮಕೂರಿನ ಕಡೆಗೆ ಹಿಂತಿರುಗಿದೆ.

ನಿಮಗೆ ಐತಿಹಾಸಿಕ ತಾಣಗಳ ಬಗ್ಗೆ

ಆಸಕ್ತಿ ಇದ್ದರೆ, ಆಸ್ತಿಕರಾಗಿದ್ದರೆ,ದೈವಭಕ್ತರಾದರೆ ,ಪರಿಸರ ಪ್ರೇಮಿಯಾಗಿದ್ದರೆ ಈ ವೀಕೆಂಡ್ ನಲ್ಲಿ ನೀವು ದೇವರಾಯಪಟ್ಟಣಕ್ಕೆ ಹೋಗಿ ಬನ್ನಿ. 


ಸಿಹಿಜೀವಿ ವೆಂಕಟೇಶ್ವರ

ತುಮಕೂರು


12 ಮೇ 2025

ನಮ್ಮ ಶುಶ್ರೂಷಕರು ನಮ್ಮ ಭವಿಷ್ಯ.


ನಮ್ಮ ಶುಶ್ರೂಷಕರು ನಮ್ಮ ಭವಿಷ್ಯ.


ಪ್ರತಿ ವರ್ಷ ಮೇ 12 ರಂದು, ಪ್ರಪಂಚವು ಅಂತರರಾಷ್ಟ್ರೀಯ ದಾದಿಯರ ದಿನ ಅಥವಾ ಶುಶ್ರೂಷರ ದಿನ  ಆಚರಿಸುತ್ತದೆ.ಇದು ಆಧುನಿಕ ಶುಶ್ರೂಷೆಯ ಪ್ರವರ್ತಕಿ ಎಂದು  ಪರಿಗಣಿಸಲ್ಪಡುವ ಫ್ಲಾರೆನ್ಸ್ ನೈಟಿಂಗೇಲ್  ಅವರ ಜನ್ಮ ವಾರ್ಷಿಕೋತ್ಸವವನ್ನು ಗೌರವಿಸುತ್ತದೆ. ಈ ದಿನವು ಆರೋಗ್ಯ ರಕ್ಷಣೆ, ಸಮಾಜ ಮತ್ತು ವಿಶ್ವ ಆರ್ಥಿಕತೆಯಲ್ಲಿ ದಾದಿಯರು ವಹಿಸುವ ನಿರ್ಣಾಯಕ ಪಾತ್ರಗಳನ್ನು ಗೌರವಿಸುತ್ತದೆ.


1953 ರಲ್ಲಿ ಅಮೆರಿಕದ ಆರೋಗ್ಯ, ಶಿಕ್ಷಣ ಮತ್ತು ಕಲ್ಯಾಣ ಇಲಾಖೆಯ ಪ್ರತಿನಿಧಿ ಡೊರೊಥಿ ಸದರ್ಲ್ಯಾಂಡ್, ದಾದಿಯರನ್ನು ಗೌರವಿಸಲು ಅಂತರರಾಷ್ಟ್ರೀಯ ದಿನದ ಕಲ್ಪನೆಯನ್ನು ಮೊದಲು ಪ್ರಸ್ತಾಪಿಸಿದರು. ಅವರು ಅಧ್ಯಕ್ಷ ಡ್ವೈಟ್ ಡಿ. ಐಸೆನ್‌ಹೋವರ್ ಅವರಿಗೆ ಈ ಸಲಹೆಯನ್ನು ನೀಡಿದರು. 1965 ರಲ್ಲಿ ಅಂತರರಾಷ್ಟ್ರೀಯ ದಾದಿಯರ ದಿನವನ್ನು ಅಂತರರಾಷ್ಟ್ರೀಯ ದಾದಿಯರ ಮಂಡಳಿ (ICN) ಔಪಚಾರಿಕವಾಗಿ ಆರಂಬಿಸಲು ಪ್ರಸ್ತಾಪಿಸಿತು ಆದರೂ ಆ ಸಮಯದಲ್ಲಿ ಈ ಪ್ರಸ್ತಾಪವನ್ನು ಅಂಗೀಕರಿಸಲಿಲ್ಲ. 1974 ರಲ್ಲಿ ಫ್ಲಾರೆನ್ಸ್ ನೈಟಿಂಗೇಲ್ ಅವರ ಜನ್ಮದಿನದೊಂದಿಗೆ ಹೊಂದಿಕೆಯಾಗುವ ನಿಗದಿತ ದಿನಾಂಕವಾಗಿ ಮೇ 12 ಅನ್ನು ಆಯ್ಕೆ ಮಾಡಿದಾಗ ಅವರ ಪರಂಪರೆ ಮತ್ತು ಜಾಗತಿಕವಾಗಿ ನರ್ಸಿಂಗ್ ವೃತ್ತಿಯ ಮಹತ್ವವನ್ನು ಮತ್ತಷ್ಟು ಗಟ್ಟಿಗೊಳಿಸಲಾಯಿತು.


ಪ್ರತಿ ವರ್ಷ  ಐಸಿಎನ್ ಅಂತರರಾಷ್ಟ್ರೀಯ ದಾದಿಯರ ದಿನದ ಥೀಮ್ ಅನ್ನು ಆಯ್ಕೆ ಮಾಡುತ್ತದೆ, ಇದು ಪ್ರಪಂಚದಾದ್ಯಂತದ ದಾದಿಯರು ಮತ್ತು ಆರೋಗ್ಯ ವ್ಯವಸ್ಥೆಗಳ ಮೇಲೆ ಪರಿಣಾಮ ಬೀರುವ ಪ್ರಮುಖ ಸಮಸ್ಯೆಗಳ ಮೇಲೆ ಕೇಂದ್ರೀಕರಿಸುತ್ತದೆ. ಈ ಥೀಮ್‌ಗಳು ಜಾಗೃತಿ ಮೂಡಿಸಲು ಸುಧಾರಿತ ಕೆಲಸದ ಪರಿಸ್ಥಿತಿಗಳನ್ನು ಉತ್ತೇಜಿಸಲು ಮತ್ತು ಉತ್ತಮ ಗುಣಮಟ್ಟದ ಆರೋಗ್ಯ ರಕ್ಷಣೆಯನ್ನು ಒದಗಿಸುವಲ್ಲಿ ಮತ್ತು ರೋಗಿಗಳ ಫಲಿತಾಂಶಗಳನ್ನು ಹೆಚ್ಚಿಸುವಲ್ಲಿ ದಾದಿಯರು ವಹಿಸುವ ನಿರ್ಣಾಯಕ ಪಾತ್ರವನ್ನು ಒತ್ತಿಹೇಳಲು ಪ್ರಯತ್ನಿಸುತ್ತವೆ.

ಈ ವರ್ಷ 2025 ರ ಅಂತರರಾಷ್ಟ್ರೀಯ ದಾದಿಯರ ದಿನದ ಥೀಮ್ "ನಮ್ಮ ದಾದಿಯರು. ನಮ್ಮ ಭವಿಷ್ಯ. ದಾದಿಯರನ್ನು ನೋಡಿಕೊಳ್ಳುವುದು ಆರ್ಥಿಕತೆಯನ್ನು ಬಲಪಡಿಸುತ್ತದೆ" . ಈ ಥೀಮ್ ದಾದಿಯರ ಆರೋಗ್ಯ ಮತ್ತು ಯೋಗಕ್ಷೇಮವನ್ನು ಉತ್ತೇಜಿಸುವುದು ಎಷ್ಟು ಮುಖ್ಯ ಎಂಬುದನ್ನು ಎತ್ತಿ ತೋರಿಸುತ್ತದೆ. ಉತ್ತಮ ಗುಣಮಟ್ಟದ ಆರೈಕೆಯನ್ನು ಒದಗಿಸಲು ಹಾಗೂ ಆರೋಗ್ಯ ವ್ಯವಸ್ಥೆಗಳನ್ನು ಸುಧಾರಿಸಲು ಮತ್ತು ಜಾಗತಿಕ ಮಟ್ಟದಲ್ಲಿ ಆರ್ಥಿಕ ಸ್ಥಿತಿಸ್ಥಾಪಕತ್ವವನ್ನು ಹೆಚ್ಚಿಸಲು ಆರೋಗ್ಯಕರ ಶುಶ್ರೂಷಾ ಕಾರ್ಯಪಡೆ ಎಷ್ಟು ಮುಖ್ಯ ಎಂಬುದನ್ನು ಇದು ಒತ್ತಿಹೇಳುತ್ತದೆ. 



ದಾದಿಯರನ್ನು ಭಾವನಾತ್ಮಕ, ಮಾನಸಿಕ ಮತ್ತು ದೈಹಿಕ ತೊಂದರೆಗಳಿಂದ ರಕ್ಷಿಸಲು ತಕ್ಷಣದ ಹಣಕಾಸು ಮತ್ತು ಕಾರ್ಯಸಾಧ್ಯ ಪರಿಹಾರಗಳನ್ನು ಒದಗಿಸುವುದರ ಜೊತೆಗೆ ಅವರಿಗೆ ಗೌರವ, ಮೌಲ್ಯ ಮತ್ತು ಬೆಂಬಲವನ್ನು ಖಚಿತಪಡಿಸಿಕೊಳ್ಳುವುದನ್ನು ಈ ಥೀಮ್ ಒತ್ತಾಯಿಸುತ್ತದೆ. ದಾದಿಯರ ಯೋಗಕ್ಷೇಮವನ್ನು ಮೊದಲು ಜಾರಿಗೆ ತರುವ ಮೂಲಕ, ಆರೋಗ್ಯ ವ್ಯವಸ್ಥೆಗಳು ಸಮುದಾಯದ ಫಲಿತಾಂಶಗಳನ್ನು ಸುಧಾರಿಸಬಹುದು ಮತ್ತು ಹೆಚ್ಚು ಸುಸ್ಥಿರ ಆರ್ಥಿಕತೆಯನ್ನು ಸೃಷ್ಟಿಸಬಹುದು.


(ಚಿತ್ರದಲ್ಲಿರುವವರು ನಮ್ಮ ಶುಶ್ರೂಷಕ ಬಂಧುಗಳು)


ಸಿಹಿಜೀವಿ ವೆಂಕಟೇಶ್ವರ


 

29 ಏಪ್ರಿಲ್ 2025

ಶುಭವಾಗಲಿಸೂರ್ಯಾವಂಶಿ,ನಿನ್ನ ಭವಿಷ್ಯ ವೈಭವವಾಗಿರಲಿ.


ಶುಭವಾಗಲಿಸೂರ್ಯಾವಂಶಿ,ನಿನ್ನ ಭವಿಷ್ಯ ವೈಭವವಾಗಿರಲಿ.


ಕಳೆದೆರಡು ದಿನಗಳಿಂದ ಎಲ್ಲರ ಬಾಯಲ್ಲಿ ನಲಿದಾಡುವ ಹೆಸರೇ ವೈಭವ್ ಸೂರ್ಯವಂಶಿ.

ಯಾರು ಈ ವೈಭವ್ ಸೂರ್ಯ ವಂಶಿ?

14 ವರ್ಷದ ಹುಡಗನೊಬ್ಬನನ್ನು ರಾಜಸ್ಥಾನ್ ರಾಯಲ್ಸ್  ಕೋಟಿ ಕೊಟ್ಟು ಐ ಪಿ ಎಲ್ ಆಟಗಾರನಾಗಿ ಕೊಂಡಾಗಲೇ ಬಹುತೇಕರು ಹುಬ್ಬೇರಿಸಿ ನೋಡಿದ್ದರು. ಚೊಚ್ಚಲ ಐಪಿಎಲ್ ನಲ್ಲಿ  ಎದುರಿಸಿದ ಮೊದಲ ಎಸೆತವನ್ನು ಸಿಕ್ಸ್ ಹೊಡೆದಾಗ ಜನ ಬೆರಗು ಗಣ್ಣಿನಿಂದ ನೋಡಿದ್ದರು.ಬೆಂಗಳೂರಿನ ವಿರುದ್ಧದ ಆಟದಲ್ಲಿ ಗಮನ ಸೆಳೆದಿದ್ದ ಸೂರ್ಯವಂಶಿಯ ವೈಭವವು  ಪೂರ್ಣ ಪ್ರಮಾಣದಲ್ಲಿ ಪ್ರಜ್ವಲಿಸಿದ್ದು ಗುಜರಾತ್ ವಿರುದ್ಧದ ಪಂದ್ಯದಲ್ಲಿ.ವೇಗದ ಅರ್ಧ ಶತಕ, ವೇಗದ ಶತಕ ಬಾರಿಸಿ ತಂಡವನ್ನೂ ಗೆಲ್ಲಿಸಿ ತಾನೂ ಗೆದ್ದು ತನ್ನ ಗುರು ಗ್ರೇಟ್ ವಾಲ್ ದ್ರಾವಿಡ್ ಚರಣಗಳಿಗೆ ವಿನಮ್ರವಾಗಿ ವಂದಿಸಿ ಮುಗ್ಧ ನಗೆ ಬೀರಿದ ಹುಡುಗನ ಬಗ್ಗೆ ಖಂಡಿತವಾಗಿಯೂ ಹೆಮ್ಮೆಯಾಗುತ್ತದೆ.


ಮಾರ್ಚ್ 27 ತಾರೀಖಿನಂದು 2011ರಲ್ಲಿ ಬಿಹಾರದ ಸಮಷ್ಟಿಪುರದ ತಾಜ್‌ಪುರದಲ್ಲಿ ಜನಿಸಿದ ವೈಭವ್ ಸೂರ್ಯವಂಶಿ  ಚಿಕ್ಕ ವಯಸ್ಸಿನಲ್ಲಿಯೇ ಗಮನಾರ್ಹ ಸಾಧನೆಗಳಿಗೆ ಹೆಸರುವಾಸಿಯಾದ ಭಾರತೀಯ ಕ್ರಿಕೆಟಿಗ. ಎಡಗೈ ಬ್ಯಾಟ್ಸ್‌ಮನ್ ಮತ್ತು ನಿಧಾನಗತಿಯ ಎಡಗೈ ಸಾಂಪ್ರದಾಯಿಕ ಬೌಲರ್ ಆಗಿರುವ ಈ ಬಾಲಕ ಈಗ  ದೇಶೀಯ ಕ್ರಿಕೆಟ್‌ನಲ್ಲಿ ಬಿಹಾರ ಮತ್ತು ಇಂಡಿಯನ್ ಪ್ರೀಮಿಯರ್ ಲೀಗ್  ನಲ್ಲಿ ರಾಜಸ್ಥಾನ ರಾಯಲ್ಸ್ ಪರ ಆಡುತ್ತಿದ್ದಾನೆ. 

 ಜನವರಿ 2024 ರಲ್ಲಿ ಮುಂಬೈ ವಿರುದ್ಧ ಬಿಹಾರ ಪರ ರಣಜಿ ಟ್ರೋಫಿಗೆ ಪಾದಾರ್ಪಣೆ ಮಾಡಿದ ಈ ಪೋರನ ವಯಸ್ಸು  12 ವರ್ಷ ಮತ್ತು 284 ದಿನಗಳು!

 ಬಿಹಾರ ಪರ ಪಾದಾರ್ಪಣೆ ಮಾಡಿದ ಎರಡನೇ ಕಿರಿಯ ಆಟಗಾರ ಮತ್ತು ಪ್ರಥಮ ದರ್ಜೆ ಕ್ರಿಕೆಟ್ ಇತಿಹಾಸದಲ್ಲಿ ನಾಲ್ಕನೇ ಕಿರಿಯ ಭಾರತೀಯ ಎಂಬ ಮನ್ನಣೆಯನ್ನು ಪಡೆದ.

 ಐಪಿಎಲ್ ಇತಿಹಾಸದಲ್ಲಿ ಅತ್ಯಂತ ಕಿರಿಯ ಆಟಗಾರನಾದ ಈ ಬಾಲಕ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ರಾಜಸ್ಥಾನ ರಾಯಲ್ಸ್ ಪರ ಪಾದಾರ್ಪಣೆ ಮಾಡಿದ.  ತಮ್ಮ ತಂಡ ಎರಡು ರನ್‌ಗಳ ಸೋಲಿನ ಹೊರತಾಗಿಯೂ ಅವನ 20 ಎಸೆತಗಳಲ್ಲಿ ಮೊದಲ ಎಸೆತದಲ್ಲಿ ಸಿಕ್ಸರ್ ಸೇರಿದಂತೆ 34 ರನ್ ಗಳಿಸಿದ್ದು  ಮೆಚ್ಚುಗೆಗೆ ಅರ್ಹ.

 

ಸೂರ್ಯವಂಶಿ ಒಂಬತ್ತನೇ ವಯಸ್ಸಿನಲ್ಲಿ ಕ್ರಿಕೆಟ್ ಆಡಲು ಪ್ರಾರಂಭಿಸಿದ. ಆರಂಭದಲ್ಲಿ ಅವರ ತಂದೆ ರೈತ ಮತ್ತು ಅರೆಕಾಲಿಕ ಪತ್ರಕರ್ತ ಸಂಜೀವ್ ಅವರಿಂದ ತರಬೇತಿ ಪಡೆದು ನಂತರ  ಸಮಸ್ತಿಪುರದಲ್ಲಿ ಕ್ರಿಕೆಟ್ ಅಕಾಡೆಮಿಯನ್ನು ಸೇರಿದ. ಬಳಿಕ   ಮಾಜಿ ರಣಜಿ ಆಟಗಾರ ಮನೀಶ್ ಓಜಾ ಅವರ ಅಡಿಯಲ್ಲಿ ತರಬೇತಿ ಪಡೆದ. ಅವನ  ಪ್ರತಿಭೆ ಬೆಳಕಿಗೆ ಬಂದದ್ದು ವಿನೂ ಮಂಕಡ್ ಟ್ರೋಫಿಯಲ್ಲಿ! ಆ ಪಂದ್ಯದಲ್ಲಿ  ಅವನ 12 ನೇ ವಯಸ್ಸಿನಲ್ಲಿ ಐದು ಪಂದ್ಯಗಳಲ್ಲಿ  400 ರನ್ ಗಳಿಸಿ ಎಲ್ಲರ ಗಮನ ಸೆಳೆದ. ದೇಶೀಯ ಪಂದ್ಯಾವಳಿಗಳಲ್ಲಿ ಮತ್ತು ನಾಗ್ಪುರದಲ್ಲಿ ರಾಜಸ್ಥಾನ್ ರಾಯಲ್ಸ್‌ನ ಟ್ರಯಲ್ಸ್‌ನಲ್ಲಿ ಉತ್ತಮ ಪ್ರದರ್ಶನಗಳನ್ನು ನೀಡಿದ. ಅಲ್ಲಿ  ಎಂಟು ಸಿಕ್ಸರ್‌ಗಳು ಮತ್ತು ನಾಲ್ಕು ಬೌಂಡರಿಗಳನ್ನು ಹೊಡೆದು ಐಪಿಎಲ್ ಸೆಲೆಕ್ಟರ್  ಗಮನ ಸೆಳೆದ.

ಈಗ ಇಡೀ ಜಗದ ಕ್ರಿಕೆಟ್ ಅಭಿಮಾನಿಗಳ ಕಣ್ಮಣಿ ಆಗಿರುವ ಈ ಪ್ರತಿಭಾವಂತ ಬಾಲಕನ ಪ್ರತಿಭೆ ಜನರ ಅತಿಯಾದ ನಿರೀಕ್ಷೆಯ ಭಾರದಿಂದ ನಲುಗದಿರಲಿ ಎಂಬುದೇ ನನ್ನ ಆಶಯ. ಶುಭವಾಗಲಿ ಸೂರ್ಯಾವಂಶಿ.ನಿನ್ನ ಭವಿಷ್ಯ ವೈಭವವಾಗಿರಲಿ.


ಸಿಹಿಜೀವಿ ವೆಂಕಟೇಶ್ವರ

ತುಮಕೂರು



 

28 ಏಪ್ರಿಲ್ 2025

ತೃಪ್ತಿಕರವಾದ ಜೀವನ ನಮ್ಮದಾಗಲಿ..

 

ತೃಪ್ತಿಕರವಾದ ಜೀವನ ನಮ್ಮದಾಗಲಿ..


ಮಾನವನ ಗುಣವೇ ಹಾಗೆ.ಇಷ್ಟು ಇದ್ದರೆ ಮತ್ತಷ್ಟು ಬೇಕು.ಮತ್ತಷ್ಟು ಬಂದರೆ ಮಗದೊಷ್ಟು ಬೇಕು ಎಂಬ ಮಹಾದಾಸೆ ಬೆಳೆಯುತ್ತಲೇ ಇರುತ್ತದೆ. ಇರುವುದಲ್ಲೇ ತೃಪ್ತಿಯಿಂದ ಜೀವಿಸುವವರು ಬಲು ವಿರಳ.ಅತಿಯಾಸೆಯಿಂದ ಅತಿಯಾಗಿ ಪಡೆಯಲು ಹೋಗಿ ಪೀಕಲಾಟಕ್ಕೆ ಸಿಲುಕುವವರನ್ನು ಎಲ್ಲೆಡೆ ಕಾಣುತ್ತೇವೆ. ಅಂತದೇ ವ್ಯಕ್ತಿಯ ಕಥೆ ಓದಿ. ಭಕ್ತನೊಬ್ಬ ಭಗವಂತನನ್ನು ಪ್ರಾರ್ಥಿಸಿ "ತನಗೆ ಬೇಕಾದುದೆಲ್ಲವನ್ನು ತಾನು ಕೇಳಿದ ಒಡನೆ ದೊರಕಬೇಕು ಮತ್ತು ನಾನು ಹೇಳಿದ ಕೆಲಸಗಳು ತಾನು ಹೇಳಿದ ತಕ್ಷಣ ಜರುಗಬೇಕು ಹಾಗೆ ನಡೆಸಿ ಕೊಡುವ ಒಬ್ಬನನ್ನು ನನಗೆ ವರವಾಗಿ ಕರುಣಿಸು"ಎಂದು ಬೇಡಿದ.ಭಗವಂತ ಹೇಳಿದ "ನೋಡು ಆಲೋಚನೆ ಮಾಡು ನಾನು ನಿನಗೆ ವರವನ್ನು ಕೊಡುವೆ ಅದರ ಫಲಾ ಫಲಗಳನ್ನು ನೀನು ಅನುಭವಿಸುವುದಕ್ಕೆ ತಯಾರಿದ್ದರೆ ನಿನಗೆ ನಾನು ವರವನ್ನು ಕೊಡುತ್ತೇನೆ". ಭಕ್ತನು ಬಹಳ ಸಂತೋಷದಿಂದ ಆಗಲಿ ಎಂದ. ಭಗವಂತನು ಅವನ ಜೊತೆಗೆ ಒಂದು ಭೂತವನ್ನು ಕಳುಹಿಸಿದನು.


ಭಕ್ತನಿಗೆ   ಖುಷಿಯೋ ಖುಷಿ. ಆ ಭೂತಕ್ಕೆ ನನಗೆ ಒಂದು ದೊಡ್ಡ ಅರಮನೆ ಬೇಕು ಎಂದಾಗ ಆ ಭೂತ ತಕ್ಷಣ ಅವನಿಗೆ ಒಂದು ಅರಮನೆಯನ್ನು ಕಟ್ಟಿಸಿತು. ನನಗೆ ಪಂಚ ಭಕ್ಷ ಪರಮಾನ್ನ ಬೇಕು ಅಂದಾಗ ಅದು ಅವನ ಮುಂದೆ ಬಂತು. ನನಗೆ ಮುತ್ತು, ವಜ್ರ ಬಂಗಾರ ಒಡವೆಗಳು ಬೇಕು ಅಂದಾಗ ಅವುಗಳೂ ಅವನ ಮುಂದೆ ಪ್ರತ್ಯಕ್ಷ ವಾದವು. ಆದರೆ ಆ ಭೂತ ಭಕ್ತನಿಗೆ ಒಂದಾದ ಮೇಲೆ ಒಂದು ಕೆಲಸ ಕೊಡು ಮತ್ತು ಕೊಡುತ್ತಲೇ ಇರಬೇಕು ನನಗೆ ಸುಮ್ಮನೆ ಇರಲು ಸಾಧ್ಯವಿಲ್ಲ ನೀನು ನನಗೆ ಒಂದಾದ ಮೇಲೆ ಒಂದು ಕೆಲಸ ಕೊಡುತ್ತಿರಲೇಬೇಕು ಎಂದಾಗ ಈ ಭಕ್ತನಿಗೆ ಏನು ಮಾಡುವುದೆಂದು ತಿಳಿಯಲಿಲ್ಲ. ಭಕ್ತನಿಗೆ ಬೇರೆ ಯಾವ ಕೆಲಸವೂ ಮಾಡಲು ಆ ಭೂತ ಬಿಡದೆ ನೀನು ನನಗೆ ಪುರುಸೊತ್ತಿಲ್ಲದೆ ಕೆಲಸ ಕೊಡುತ್ತಿರಬೇಕು ಇಲ್ಲದಿದ್ದರೆ ನಿನ್ನನ್ನೇ ನಾನು ತಿಂದು ಮುಗಿಸಿ ಬಿಡುವೆ ಎಂದು ಹೆದರಿಸಿತು. ಆ ಭಕ್ತ ಊಟ ಮಾಡುವುದಕ್ಕೂ  ಬೇರೆ ಏನು ಕೆಲಸ ಮಾಡುವುದಕ್ಕೂ ಈ ಭೂತ ಬಿಡಲಿಲ್ಲ. ಆಗ ಆ ಭಕ್ತನಿಗೆ ತಾನು ಅದು ಬೇಕು ಇದು ಬೇಕು ಎಂದು ಭಗವಂತನನ್ನು ಕೇಳಿದ್ದು ತನಗೆ ಕಷ್ಟ ವಾಯಿತು ಎಂದು ಮತ್ತೆ ಭಗವಂತನನ್ನು ಪ್ರಾರ್ಥಿಸಿದ. "ದಯವಿಟ್ಟು ಈ ಭೂತದಿಂದ ನನಗೆ ಬಿಡುಗಡೆ ಕೊಡಿಸು. ಈ ಭೂತಕ್ಕೆ ಕೆಲಸ ಹೇಳುವುದು ನನಗೆ ಅಸಾಧ್ಯ ನನಗೆ ಏನು ಬೇಡ ಈಗ ನನಗಿರುವುದೇ ಸಾಕು" ಎಂದನು. ಆಗ ಭಗವಂತ ಆ ಭೂತವನ್ನು ಕರೆದು "ನೋಡು ಅಲ್ಲಿ ನಿಂತಿರುವ ನಾಯಿಯ ಬಲವನ್ನು ನೆಟ್ಟಗೆ ಮಾಡು" ಎಂದು ಹೇಳಿ ಆ ಭಕ್ತನನ್ನ್ನುಭೂತದ ಕಷ್ಟದಿಂದ ಪಾರು ಮಾಡಿದನು.


ಭಗವಂತ ನಮಗೇನು ಬೇಕು ಎಂದು ಅರ್ಥಮಾಡಿಕೊಂಡು ಕೊಡಬೇದ್ದನ್ನು ಈಗಾಗಲೇ ಕೊಟ್ಟಿರುವನು. ಇದರ ಜೊತೆಗೆ ಬೆಲೆಕಟ್ಟಲಾಗದ ಅಮೂಲ್ಯವಾದ ಕಾಯ ನೀಡಿ ಸೂಕ್ತವಾದ ಕಾಯಕ ಮಾಡಲು ಹೇಳಿರುವನು. ಅದಕ್ಕೆ ನಾವು ಅವನಿಗೆ ಸದಾ ಕೃತಜ್ಞತೆಯಿಂದ ಇದ್ದು ಇರುವುದರಲ್ಲೇ ತೃಪ್ತಿಕರವಾಗಿ ಜೀವನ ಸಾಗಿಸುವ ಕಲೆಯನ್ನು ರೂಢಿಸಿಕೊಂಡು ಬಾಳಬೇಕು.


ಸಿಹಿಜೀವಿ ವೆಂಕಟೇಶ್ವರ

ತುಮಕೂರು.   

21 ಏಪ್ರಿಲ್ 2025

10G ಗೆ ದಾಪುಗಾಲಿಟ್ಟ ಡ್ರಾಗನ್


  

10G ಗೆ ದಾಪುಗಾಲಿಟ್ಟ ಡ್ರಾಗನ್..


ಭಾರತದ ಕೆಲ ಪ್ರತಿಷ್ಠಿತ ಟೆಲಿಕಾಂ ಕಂಪನಿಗಳು ಭಾರತದ ಎಲ್ಲಾ ಕಡೆ 5G ಸೇವೆ ಅರಂಭಿಸಿದ್ದೇವೆ ಎಂದು ನಾಮಮಾತ್ರಕ್ಕೆ ಹೇಳುತ್ತಿವೆ.ಇನ್ನೂ 2G ಮುಟ್ಟದ ಗ್ರಾಮಗಳಿವೆ. ನಾನಿರುವ ತುಮಕೂರಿನಲ್ಲಿ ನನ್ನ ಒಂದೇ ಮೊಬೈಲ್ ನಲ್ಲಿ ಎರಡು ಕಂಪನಿಗಳ 5G ಸಿಮ್ ಇದ್ದರೂ ಇಂಟರ್ನೆಟ್ ಸ್ಪೀಡ್ ಇನ್ನೂ kbps ನಲ್ಲೇ ಇದೆ.ಇನ್ನೂ ಹಳ್ಳಿಗಳ ನೆಟ್ವರ್ಕ್ ನೀವೇ ಯೋಚಿಸಿ. ನಮ್ಮ ಕಥೆ ಇದಾದರೆ ಚೀನಾವು ಆರು, ಏಳಲ್ಲ 10G  ಇಂಟರ್ನೆಟ್ ಸೇವೆಯನ್ನು ಪರೀಕ್ಷೆ ಮಾಡಿ ಜಗತ್ತಿಗೆ ಅಚ್ಚರಿಯ ಸಂದೇಶ ನೀಡಿದೆ.

ಹುವೈ ಮತ್ತು ಚೀನಾ ಯುನಿಕಾರ್ನ್ ಜಂಟಿಯಾಗಿ ಚೀನಾದ ಈ ಮೊದಲ 10ಜಿ ಬ್ರಾಡ್‌ಬ್ಯಾಂಡ್ ನೆಟ್‌ವರ್ಕ್ ಅನ್ನು ಹೆಬ್ಬೆಪ್ರಾಂತ್ಯದ ಸುನನ್ ಕೌಂಟಿಯಲ್ಲಿ  ಅನುಷ್ಠಾನಗೊಳಿಸಿದೆ.

ಭಾರತದಲ್ಲಿ ಸರಾಸರಿ ಬ್ರಾಡ್‌ಬ್ಯಾಂಡ್‌ ಡೌನ್‌ಲೋಡ್ ಸ್ಪೀಡ್ 100 ಎಂಬಿ ಪಿಎಸ್ ಒಳಗಿದೆ. ಆದರೆ ಚೀನಾವು 1000 ಎಂ ಬಿ ಪಿಎಸ್‌ ವೇಗದ ಬ್ರಾಡ್‌ಬ್ಯಾಂಡ್ ಪರಿಚಯಿಸುವ ಮೂಲಕ ಇಂಟರ್ನೆಟ್ ಮೂಲಸೌಲಭ್ಯ ಕ್ಷೇತ್ರದಲ್ಲಿ ಆ ದೇಶ ಬಹುದೊಡ್ಡ ಜಿಗಿತ ದಾಖಲಿಸಿದೆ.ಇದರ ಪರಿಣಾಮವಾಗಿ 

900 ಜಿಬಿಯಷ್ಟು ಭಾರಿ ಫೈಲ್‌ಗಳನ್ನು ಈ ತಂತ್ರಜ್ಞಾನದಿಂದ ಕೆಲ ಸೆಕೆಂಡಲ್ಲಿ ಡೌನ್‌ಲೋಡ್ ಮಾಡಬಹುದು ಈ ಸ್ಪೀಡ್ ನಿಂದ 

8ಕೆ ವಿಡಿಯೋ ಸ್ಟ್ರೀಮಿಂಗ್, ಅಡ್ವಾನ್ಸ್ ಕ್ಲೌಡ್ ಕಂಪ್ಯೂಟಿಂಗ್‌ಗೆ ಅನುಕೂಲವಾಗಲಿದೆ.

ಭಾರತದ ಟೆಲಿಕಾಂ ಕ್ಷೇತ್ರವು ಮುಂದಿನ  ವರ್ಷ 6G ಅನುಷ್ಠಾನ ಮಾಡಲು ತಯಾರಿ ನಡೆಸಿದೆ. 10 G ಗೆ ಹೋಗಲು ಇನ್ನೂ ಎಷ್ಟು ಸಂವತ್ಸರ ಕಳೆಯಬೇಕೋ ಆ ಭಗವಂತನಿಗೇ ಗೊತ್ತು.


ಸಿಹಿಜೀವಿ ವೆಂಕಟೇಶ್ವರ

ತುಮಕೂರು 

12 ಏಪ್ರಿಲ್ 2025

ತಿರುಪತಿ ದರ್ಶನ ಇನ್ನು ಸುಲಭ: ವಾಟ್ಸ್​ಆ್ಯಪ್​ನಲ್ಲೇ ಟಿಕೆಟ್ ಬುಕ್​​ ಮಾಡಬಹುದಂತೆ.

 



ತಿರುಪತಿ ದರ್ಶನ ಇನ್ನು ಸುಲಭ: ವಾಟ್ಸ್​ಆ್ಯಪ್​ನಲ್ಲೇ ಟಿಕೆಟ್ ಬುಕ್​​  ಮಾಡಬಹುದಂತೆ.


ತಿರುಪತಿ ವೆಂಕಟೇಶ್ವರನ ದರ್ಶನ ಇನ್ನಷ್ಟು ಸುಲಭಗೊಳಿಸುವ ನಿಟ್ಟಿನಲ್ಲಿ ವಾಟ್ಸ್​ಆ್ಯಪ್​  ಮೂಲಕವೇ ಸೇವೆ ಒದಗಿಸಲು ಟಿಟಿಡಿ ಮುಂದಾಗಿದೆ. 


ಇತ್ತೀಚಿನ ತಿರುಮಲ ಭೇಟಿಯ ನಂತರ, ತಿರುಮಲ ತಿರುಪತಿ ದೇವಸ್ಥಾನಗಳು ತೀರ್ಥಯಾತ್ರೆಯ ಅನುಭವವನ್ನು ಹೆಚ್ಚಿಸುವ ಗುರಿಯ ಬಗ್ಗೆ ಮುಖ್ಯ ಮಂತ್ರಿ ನಾಯ್ಡು ರವರು ಸಭೆ ನಡೆಸಿದರು.  ಇದರಲ್ಲಿ ಸುವ್ಯವಸ್ಥಿತ ಟಿಕೆಟ್ ಬುಕಿಂಗ್, ವಸತಿ ಹಂಚಿಕೆ ಸೇರಿದಂತೆ ಹಲವು ವಿಷಯಗಳ ಬಗ್ಗೆ ಚರ್ಚೆ ನಡೆಯಿತು. ಈ ಸಂದರ್ಭದಲ್ಲಿ ವಾಟ್ಸ್​ಆ್ಯಪ್​  ಮೂಲಕ ಸೇವೆ ಒದಗಿಸುವುದೂ ಸೇರಿದ್ದು, ಅದನ್ನೀಗ ಪ್ರಾಯೋಗಿಕವಾಗಿ ಜಾರಿಗೊಳಿಸಲಾಗಿದೆ.  ವಾಟ್ಸಾಪ್‌ನಲ್ಲಿ 15 ಸೇವೆಗಳನ್ನು ಸಂಯೋಜಿಸಿದೆ.  ಟಿಕೆಟ್ ಬುಕಿಂಗ್, ವಸತಿ ಮತ್ತು ಇತರ ಸೇವೆಗಳಿಗಾಗಿ ಕಾಯುವ ಸಮಯವನ್ನು ಕಡಿಮೆ ಮಾಡುವುದು ನಮ್ಮ ಗುರಿಯಾಗಿದೆ ಎಂದು ಟಿಟಿಡಿ ಹೇಳಿದೆ.


ಟಿಕೆಟ್​ ಬುಕಿಂಗ್​, ವಸತಿ ಸೌಲಭ್ಯ ಇತ್ಯಾದಿಗಳಿಗೆ ನೀವು ಮಾಡಬೇಕಿರುವುದು ಇಷ್ಟು -ಮೊದಲಿಗೆ  ನಿಮ್ಮ ಮೊಬೈಲ್​ನಲ್ಲಿ 9552300009 ಸಂಖ್ಯೆಯನ್ನು ಟಿಟಿಡಿ ಸೇವೆ ಅಥವಾ ಇನ್ನಾವುದೇ ಹೆಸರುಗಳಿಂದ ಸೇವ್​ ಮಾಡಿಕೊಳ್ಳಿ. - ಆ ಸಂಖ್ಯೆಗೆ ವಾಟ್ಸ್​ಆ್ಯಪ್​ ಮೂಲಕ Hi ಎಂದು ಕಳುಹಿಸಿ-   ಅಲ್ಲಿ ವಿವಿಧ ರೀತಿಯ ಆಯ್ಕೆಗಳು ಬರುತ್ತವೆ. ಅದಕ್ಕೂ ಮುನ್ನ “ಆಂಧ್ರ ಪ್ರದೇಶ ಸರ್ಕಾರಿ ನಾಗರಿಕ ಸಹಾಯಕ ಸೇವೆಗೆ ಸ್ವಾಗತ. ನಿಮ್ಮ ಅನುಕೂಲತೆ ನಮ್ಮ ಆದ್ಯತೆಯಾಗಿದೆ. ದಯವಿಟ್ಟು ನಿಮಗೆ ಅಗತ್ಯವಿರುವ ನಾಗರಿಕ ಸೇವೆಯನ್ನು ಆರಿಸಿ" (“Welcome to Andhra Pradesh Government Citizen Helper Service. Your convenience is our priority. Please choose the civil service you need.") ಎನ್ನುವ ಸಂದೇಶ ಬಂದು, ಟಿಟಿಡಿಯ ಸೇವೆಗಳನ್ನು (Service) ನೀಡಲಾಗುತ್ತದೆ.- ಮೊದಲಿಗೆ ಸೇವೆ (Select Services) ಮೇಲೆ ಕ್ಲಿಕ್​ ಮಾಡಿ.- ಅಲ್ಲಿ ನಿಮಗೆ ಟಿಕೆಟ್​ ಬುಕಿಂಗ್​ ಸೇರಿದಂತೆ ವಿವಿಧ  ಆಯ್ಕೆಗಳನ್ನು ನೀಡಲಾಗುತ್ತದೆ:ಅವುಗಳೆಂದರೆ: ದೇವಾಲಯ ದರ್ಶನ ಟಿಕೆಟ್ ಬುಕಿಂಗ್ - ಆಂಧ್ರಪ್ರದೇಶದಾದ್ಯಂತ ಜನಪ್ರಿಯ ದೇವಾಲಯಗಳಿಗೆ ನಿಮ್ಮ ದರ್ಶನ ಟಿಕೆಟ್‌ ಪಡೆದುಕೊಳ್ಳುವುದು. ವಿಶೇಷ ಸೇವಾ ಬುಕಿಂಗ್‌ಗಳು: ದೈವಿಕ ಆಶೀರ್ವಾದಕ್ಕಾಗಿ ವಿಶೇಷ ಪೂಜೆಗಳು ಮತ್ತು ಸೇವೆಗಳನ್ನು ಬುಕ್ ಮಾಡುವುದು.ವಸತಿ ಬುಕಿಂಗ್‌ಗಳು - ದೇವಾಲಯಗಳ ಬಳಿ ತೊಂದರೆ-ಮುಕ್ತ ವಸತಿ ಪಡೆಯುವುದು  ಟಿಕೆಟ್​ ಬುಕಿಂಗ್​ ಮಾಡುವುದಾದರೆ, ಈ ಆಪ್ಷನ್​ ಮೇಲೆ  ಕ್ಲಿಕ್​  ಮಾಡಿ, ಅಲ್ಲಿ ಟಿಕೆಟ್​ ಬುಕ್​ ಮಾಡಿ, ಅಲ್ಲಿಯೇ ಪೇಮೆಂಟ್​ ಮಾಡಬಹುದಾಗಿದೆ. 


ಇದನ್ನು ಹೊರತುಪಡಿಸಿದರೆ, ಉಳಿದ ನಾಲ್ಕು ಸೇವೆಗಳು ಹಾಗೂ ಅದರ ಡಿಟೇಲ್ಸ್​ ಇಲ್ಲಿದೆ...ಸ್ಲಾಟೆಡ್ ಸರ್ವದರ್ಶನ ಲೈವ್ ಸ್ಥಿತಿ (Slotted Sarvadarshan Live Status)ಸರ್ವದರ್ಶನ ಲೈವ್ ಸ್ಥಿತಿ (Sarvadarshan Live Status)ಶ್ರೀ ವಾಣಿ ಟ್ರಸ್ಟ್ ಲೈವ್ ಸ್ಥಿತಿ (Sri Vani Trust Live Status)ಮುಂಗಡ ಠೇವಣಿ ಮರುಪಾವತಿ ಲೈವ್ ಸ್ಥಿತಿ (Advance Deposit Refund Live Status)ಸೇವಾ ವಿವರಣೆಗಳು (Service Descriptions)ಸ್ಲಾಟೆಡ್ ಸರ್ವದರ್ಶನ ಲೈವ್ ಸ್ಥಿತಿ: ಕೋಟಾಗಳು ಮತ್ತು ನೀಡಲಾದ ಟೋಕನ್‌ಗಳನ್ನು ಒಳಗೊಂಡಂತೆ ತಿರುಪತಿಯಲ್ಲಿ ಸರ್ವದರ್ಶನ ಟೋಕನ್‌ಗಳ ಲಭ್ಯತೆಯನ್ನು ಪರಿಶೀಲಿಸಬಹುದುದ. ಸರ್ವದರ್ಶನ ಲೈವ್ ಸ್ಥಿತಿ: ಕ್ಯೂ ಕಂಪಾರ್ಟ್‌ಮೆಂಟ್‌ಗಳು ಮತ್ತು ಅಂದಾಜು ಕಾಯುವ ಸಮಯಗಳನ್ನು ಒಳಗೊಂಡಂತೆ ವೈಕುಂಠಂ ಕ್ಯೂ ಕಾಂಪ್ಲೆಕ್ಸ್ -2 ರಲ್ಲಿ ಕಾಯುತ್ತಿರುವ ಭಕ್ತರ ಸಂಖ್ಯೆಯ ಕುರಿತು ಅಪ್​ಡೇಟ್​ ಪಡೆಯಬಹುದು. ಶ್ರೀ ವಾಣಿ ಟ್ರಸ್ಟ್ ಲೈವ್ ಸ್ಥಿತಿ: ಲಭ್ಯವಿರುವ ಮತ್ತು ನೀಡಲಾದ ಟಿಕೆಟ್ ವಿವರಗಳನ್ನು ಒಳಗೊಂಡಂತೆ ತಿರುಮಲದಲ್ಲಿ ಶ್ರೀವಾಣಿ ಟಿಕೆಟ್‌ಗಳ ಪ್ರಸ್ತುತ ಸ್ಥಿತಿಯನ್ನು ವೀಕ್ಷಿಸಬಹುದು. ಮುಂಗಡ ಠೇವಣಿ ಮರುಪಾವತಿ ಲೈವ್ ಸ್ಥಿತಿ: ತಿರುಮಲದಲ್ಲಿ ಕೊಠಡಿ ಹಂಚಿಕೆಗಳಿಗೆ ಅನ್ವಯವಾಗುವ ನಿಮ್ಮ ಠೇವಣಿ ಮರುಪಾವತಿಯ ಸ್ಥಿತಿಯನ್ನು ಟ್ರ್ಯಾಕ್ ಮಾಡಬಹುದು.


ಓಂ  ನಮೋ  ವೆಂಕಟೇಶಾಯ ...

11 ಏಪ್ರಿಲ್ 2025

ಒಮ್ಮೆ ನಕ್ಜಾಗ...ತ ರಾ ಸು ಕೃತಿ





"ಒಮ್ಮೆ ನಕ್ಕ ನಗು" ಕೊನೆಗೆ ಅಳು ಬರಿಸಿತು.

ಕಳೆದ ತಿಂಗಳು ತ ರಾ ಸು ರವರ ಐತಿಹಾಸಿಕ ಕಾದಂಬರಿಗಳಾದ ಕಸ್ತೂರಿ ಕಂಕಣ, ಕಂಬನಿಯ ಕುಯಿಲು, ರಾಜ್ಯದಾಹ, ತಿರುಗುಬಾಣ, ಹೊಸ ಹಗಲು ಕಾದಂಬರಿಗಳನ್ನು  ಓದಿದ ನಾನು ಇಂದು ಅವರ "ಒಮ್ಮೆ ನಕ್ಕ ನಗು" ಕಾದಂಬರಿ ಓದಿದೆ. ‌ಇದೊಂದು ಸಂಪೂರ್ಣ ವಿಭಿನ್ನವಾದ ಕಾದಂಬರಿ ಇಲ್ಲಿ ತ ರಾ ಸು ರವರ ಸರಳ ನಿರೂಪಣೆ ಅವರ ಭಾಷೆಯ ಬಳಕೆ ಬಹು ಸುಂದರ. ಓದುವಾಗ ನಾನು ಒಬ್ಬನೇ ನಕ್ಕಿರುವೆ. ಆ ನಗು ಕೆಲವೊಮ್ಮೆ ನಾಯಿಡೂ ನ ಹುಚ್ಚುತನ ಕಂಡಾಗ  ನಗು, ಕನಕಲಿಂಗಂ ನ ಅಸಹಾಯಕತೆಯಿಂದ ಮಾಡುವ ಕುತಂತ್ರಗಳು ತನಗೇ ತಿರುಗುಬಾಣವಾದಾಗ ಅದನ್ನು ಓದಿ ನಗು ಬಂದಿದೆ.ಆದರೆ ಕೋಮಲಾ ಪರಿಸ್ಥಿತಿಯ ಕೈಗೊಂಬೆಯಾಗಿ ಜೀವನದಲ್ಲಿ ಹಲವಾರು ನೋವು ನುಂಗಿ ಅವಿವಾಹಿತೆಯಾದರೂ ಗರತಿಯಂತೆ ಬಾಳಿ ಕೊನೆಗೂ ತನ್ನ ಆಸೆ ಕೈಗೂಡದಿದ್ದಾಗ ಅವಳು ನೋವಿನಿಂದ ನಗುವುದನ್ನು ಓದುವಾಗ ನಗುವಿನ ಬದಲು ಅಳು ಬರುತ್ತದೆ. 
ಈ ಕಾದಂಬರಿಯು ವಸ್ತು
 ಕಳೆದ ಶತಮಾನದ ಅರವತ್ತರ ದಶಕದಲ್ಲಿ ನಡೆಯುವ ಘಟನೆಗಳ ಆಧಾರದಲ್ಲಿ ರಚಿತವಾಗಿದೆ. ಆಂದ್ರಪ್ರದೇಶ ತಮಿಳುನಾಡಿನ ಭಾಗದಲ್ಲಿ ನಡೆಯುವ ಕಥೆಯಾದ್ದರಿಂದ  ತೆಲುಗು ಪದಗಳು ಮತ್ತು ಹೆಸರುಗಳು ಧಾರಾಳವಾಗಿ ಬಂದು ಹೋಗುತ್ತವೆ.  ಪುಸ್ತಕ ಹಳೆಯದಾದರೂ  ಆ ಸಾಹಿತ್ಯ ಸೌಗಂಧ ಇನ್ನೂ ಉತ್ತಮ.
 ಮೂರು ಪಾತ್ರಗಳ ಮನದಲ್ಲಿ ಮೂಡುವ ಯೋಚನೆ ಮತ್ತು ಭಾವನೆಗಳ ಮಹಾಪೂರವನ್ನು ತರಾಸು ಅವರು ಈ ಕಾದಂಬರಿಯಲ್ಲಿ ನಮಗೆ ಕಟ್ಟಿಕೊಡುವ ಪ್ರಯತ್ನ ಮಾಡಿದ್ದಾರೆ ಹಾಗೂ ಆ ಪ್ರಯತ್ನದಲ್ಲಿ ಅವರು ಸಫಲರೂ ಆಗಿದ್ದಾರೆ. ಇಲ್ಲದಿದ್ದರೆ  ಕಾದಂಬರಿ ಪ್ರಕಟವಾದ ಅರವತ್ತೈದು ವರ್ಷಗಳ ನಂತರದಲ್ಲಿ ಓದಿ ಇದರ ಬಗ್ಗೆ ನಾನು ನಾಲ್ಕು ಮಾತು ಬರೆಯುತ್ತಿರಲಿಲ್ಲ.
  ಈ  ಕಾದಂಬರಿಯಲ್ಲಿ ಬರುವ ಮೂರು ಪ್ರಮುಖ ಪಾತ್ರದಲ್ಲಿ ಭಾವನೆಗಳು ಮತ್ತು ಆಲೋಚನಾ ತರಂಗಗಳಿಗೆ ಪ್ರಾಮುಖ್ಯತೆಯನ್ನು ನೀಡಲಾಗಿದೆ. ಒಬ್ಬ ನಾಯಿಡೂ ಅವನು ದುಡ್ಡಿನ ಅಮಲಿನಲ್ಲಿ ಬೇಕಾಗಿದ್ದನ್ನು ಪಡೆಯುವ ಹುನ್ನಾರದಲ್ಲಿರುವವ. ಇನ್ನೊಬ್ಬ  ಕನಕಲಿಂಗಂ  ನಾಯಿಡೂನ  ಕೆಳಗಿದ್ದುಕೊಂಡು ಅವನ ಬಯಕೆಗಳನ್ನು ಕೇವಲ ನೋಡಿಕೊಂಡು ಸುಮ್ಮನಿರುವವ. ಮತ್ತೊಂದು ಕೋಮಲ ಎಂಬ ಹೆಸರಿಗೆ ಮಾತ್ರ ಕೋಮಲವಾದ ಕಾದಂಬರಿಯಲ್ಲಿ ನೋವನ್ನು ಪ್ರತಿಬಿಂಬಿಸುವ ಪಾತ್ರ. ಸಮಾಜದಲ್ಲಿ ಹೆಣ್ಣಾಗಿ, ಮನೆಯಲ್ಲಿ ಗಂಡಾಗಿ ದುಡಿದು, ಸಂತೋಷವನ್ನು ಕಾಣದ ಕಷ್ಟಜೀವಿ. ಮೊದಲೆರಡು ಪಾತ್ರಗಳು ದುಡ್ಡಿನ ದೃಷ್ಟಿಕೋನದಿಂದ ಸುಖಜೀವಿಗಳು ಆದರೆ ಆಸೆಯೆಂಬ ಪರ್ವತದ ತುದಿಯನ್ನು ಎಂದೂ ಹತ್ತಿ ಸುಮ್ಮನಾಗದ ಅತಿಯಾಸೆ ಜೀವಿಗಳು.  ಇತ್ತ ಹೆಣ್ಣುಜೀವ ಆಸೆಯನ್ನು ಮುಚ್ಚಿಟ್ಟುಕೊಂಡು ಬಾಳುತ್ತಿದ್ದರೂ ಧನದ ಅಭಾವ. ಹೀಗೆ ಮಾನವ ತನ್ನ ಜೀವನದಲ್ಲಿ ಎಷ್ಟು ಸುಖವಾಗಿ ಇರಲು ಪ್ರಯತ್ನಿಸಿದರೂ ಯಾವುದೊ ಒಂದು ರೂಪದಲ್ಲಿ ದುಃಖದ ಛಾಯೆ ಕೆಲವು ಬಾರಿ ಅವನ ಮೇಲೆ ಮೂಡುತ್ತದೆ. ಅದೇ ಜೀವನವೆಂಬ   ಚಿತ್ರಣವನ್ನು ತರಾಸು ಅವರು ಈ ಕಾದಂಬರಿಯ ಮುಖಾಂತರ ತಿಳಿಸಲು ಪ್ರಯತ್ನಿಸಿದ್ದಾರೆ.ಕನಕಲಿಂಗಂ ಒಬ್ಬ ಸಾಧಾರಣ ಮನುಷ್ಯ ಹಾಗೆಯೇ ಒಬ್ಬ ಸ್ವಯಂಘೋಷಿತ ಕವಿಯೂ ಕೂಡ! ಅವನಿಗೆ ಸಿನಿಮಾದ ಗೀಳು, ಅದಕ್ಕೆ ಹಾಡು ಚಿತ್ರಕಥೆ ಬರೆಯುವುದು ಇತ್ಯಾದಿ ಬರೆಯುವ ಹುಚ್ಚು. ಆದರೆ ಎಂದೂ ಅದರಲ್ಲಿ ಅವನು ಸಫಲವಾದವನಲ್ಲ. ಅವರ ಇವರ ಕಾಲುಹಿಡಿದು ಹೇಗೋ ಜೀವನವನ್ನು ನಡೆಸುತ್ತಿದ್ದನು. ನಾಯಿಡು ಆಗರ್ಭ ಶ್ರೀಮಂತ, ಚಲನಚಿತ್ರದ ನಿರ್ಮಾಪಕನಾಗಬೇಕೆಂದು ಚೆನ್ನೈ ಗೆ ಬಂದು  ಕನಕಲಿಂಗಂ  ಜೊತೆಗೆ ಇರಲಾರಂಭಿಸಿರುತ್ತಾನೆ. ನಾಯಿಡು ಬಹಳ ಜಾಲಿ ಮನುಷ್ಯ. ಸದಾ ವಿಲಾಸಿ ಜೀವನವನ್ನು ನಡೆಸುತ್ತಿದ್ದವ, ಸದಾ ಹೆಣ್ಣಿನ ಸಂಗವನ್ನು ಬಯಸುವ ಕಾಮಾಂಧ. ಅವನ ಹದ್ದಿನ ಕಣ್ಣು ಯಾವುದಾದರೂ ಹುಡುಗಿಯ ಮೇಲೆ ಬಿದ್ದರೆ ಅವಳನ್ನು ಪಡೆಯಲೇಬೇಕು ಎಂಬ ಹಠಮಾರಿ ಗುಣ ಅವನದು. ಅದಕ್ಕೆ ಸಹಾಯಕ್ಕೆ ಬರುತ್ತಿದ್ದವ ಈ  ಕನಕಲಿಂಗಂ. ಆ ಹುಡುಗಿಯನ್ನು ಪತ್ತೆ ಹಚ್ಚಿ ನಾಯಿಡುಗೆ ಅವಳು ದಕ್ಕುವಂತೆ ಮಾಡುತ್ತಿದ್ದ. ಒಂದು ದಿನ ನಾಯಿಡು ಊರಿನಲ್ಲಿರದಾಗ ಕನಕಲಿಂಗಂ ಮನೆಯ ಚಾವಣಿಯ ಮೇಲೆ ಸಿಗರೇಟ್ ಸೇದುತ್ತಾ ಬಿಸಲಿಗೆ ನಿಂತಿದ್ದಾಗ ಅಲ್ಲಿ ಒಂದು ಹುಡುಗಿ ಬಸ್ಸಿಗಾಗಿ ಕಾಯುತ್ತ ನಿಂತಿರುತ್ತಾಳೆ. ಹಾಗೆಯೇ ಸಂಜೆಯೂ   ಮತ್ತೆ ಬಸ್ಸಿನಿಂದ ಇಳಿಯುವುದನ್ನು ನೋಡುತ್ತಾನೆ. ಅವಳ ನಾಜೂಕುತನ, ತಲೆ ಕೆಳಗೆ ಹಾಕಿಕೊಂಡು ನಡೆಯುವ ನಾಚಿಕೆಯ ಸ್ವಭಾವ ಯಾಕೋ ಕನಕಲಿಂಗಂನಿಗೆ ತುಂಬಾ ಇಷ್ಟವಾಯಿತು. ಅವಳ ಮೇಲೆ ನಿಧಾನವಾಗಿ ಅನುರಕ್ತನಾದ. ಕೆಲದಿನಗಳ ನಂತರ ನಾಯಿಡುವಿನ ಆಗಮನವಾಯಿತು. ಅವನು ಕನಕಲಿಂಗಂ ಬೆಳಿಗ್ಗೆ-ಸಾಯಂಕಾಲ ಛಾವಣಿಯಲ್ಲಿ ನೋಡುತ್ತಿದ್ದ ಆ ಹುಡುಗಿಯ ಬಗ್ಗೆ ತಿಳಿದುಕೊಂಡ. ಆ ಹುಡುಗಿಯನ್ನು ಪಡೆಯಬೇಕೆಂಬ ದಾಹ ಅವನಲ್ಲಿ ಮೂಡಿತು. ತನ್ನ ಆಸೆಯನ್ನು ಕನಕಲಿಂಗಂ ಮುಂದೆ ವ್ಯಕ್ತಪಡಿಸಿದ. ಕನಕಲಿಂಗಂಗೆ ಸ್ವಲ್ಪ ದುಃಖವಾದರೂ ಹುಡುಗಿಯನ್ನು ದೊರಕಿಸಿಕೊಡುವುದು ತನ್ನ ಕರ್ಮ. ಸುಮ್ಮನೆ ಅವಳ ಮೇಲೆ ಒಲವು ತೋರಿಸಿದೆನೆಂದು ತಾನೇ ಹಳಿದುಕೊಂಡನು. ಸಮೀಪದ ಅಂಗಡಿಯಲ್ಲಿ ಆ ಹುಡುಗಿಯ ಬಗ್ಗೆ ವಿಚಾರಿಸಿದನು.ಆ ಹುಡುಗಿಯ ಹೆಸರು ಕೋಮಲ. ಮನೆಯಲ್ಲಿ ಬಡತನ. ತಂದೆಗೆ ಖಾಯಿಲೆಯಾಗಿ ಕೆಲಸವನ್ನು ಬಿಟ್ಟರು. ಕೋಮಲ ದುಡಿದು ಮನೆಗೆ ಬಂದು ಹಾಕಬೇಕು. ಅವಳದು ಮದುವೆಯ ವಯಸ್ಸು ಆದರೂ ಮನೆಯಲ್ಲಿ ಮದುವೆಯಾಗಲು ಬಿಡದೆ ಅವಳನ್ನು ಹೀಗೆ ದುಡಿಸುತ್ತಿರುವುದು ವಿಪರ್ಯಾಸ. ಅವಳು ಕೆಲಸ ಮಾಡುತ್ತಿದ್ದಲ್ಲಿಯ ಮಾಲೀಕ ವಾರಿಯರ್ ಮದುವೆಯ ಪ್ರಸ್ತಾಪ ಆಕೆಯ ಮುಂದೆ ಇಟ್ಟಿದ್ದ. ಆದರೆ ಅವಳ ತಂದೆಯ ನಿಯಮ ಕೇವಲ ಅವಳನ್ನಷ್ಟೇ ಅಲ್ಲ ಅವಳ ಸಂಸಾರವನ್ನೂ ಸಾಕಬೇಕು ಎಂಬುದು. ಅದಕ್ಕಾಗಿ ಅವಳಿಗೆ ಸೂಕ್ತವಾದ ವರವೇ ಸಿಕ್ಕಿರಲಿಲ್ಲ. ವಾರಿಯರ್ ಕೂಡ ಬೇಸತ್ತು ಅವಳನ್ನು ಕೈಬಿಟ್ಟಿದ್ದ. ಅವಳು ಬೇರೆಯ ಕಡೆ ನೌಕರಿ ಹಿಡಿದಾಗ ಅಲ್ಲಿಯ ಒಬ್ಬ ಸಹೋದ್ಯೋಗಿಯ ಅಸಭ್ಯ ವರ್ತನೆ ಅವಳನ್ನು ಇನ್ನೂ ಮಂಕು ಮಾಡಿತ್ತು. ಮನೆಯಲ್ಲಿ ಅದರಿಂದ ತಂದೆಗೆ ಅವಳ ಮೇಲೆ ಬಹಳ ಕೋಪ ಆದರೂ ತನ್ನ ಕುಟುಂಬ ಎಂದು ಅವಳು ಸಲಹುತ್ತಿದ್ದಾದರೂ ಅವಳಿಗೆ ತಲೆ ಕೆಡುತ್ತಿತ್ತು. ಇವಳು ಪ್ರತಿದಿನ ನಾಯಿಡು ಮನೆಯ ಮುಂದೆ ನಡೆದುಕೊಂಡು ಹೋಗುವಾಗ ಅವನ ಕಣ್ಣು ಇವಳ ಮೇಲೆಯೇ ನೆಟ್ಟಿರುತ್ತಿತ್ತು. ಇವಳು ಕಣ್ಣೆತ್ತಿ ಕೂಡ ಅವನತ್ತ ನೋಡುತ್ತಿರಲಿಲ್ಲ. ಆದರೆ ಮನೆಯಲ್ಲಿ  ತಂದೆ ಅವಳನ್ನು ನಿರ್ದಯವಾಗಿ ನಿಂದಿಸಿ, ತಾಯಿಯೂ ಅನವಶ್ಯಕ ಅನುಮಾನ ವ್ಯಕ್ತಪಡಿಸಿದ್ದರಿಂದ   ಮರುದಿನ ಅವಳಿಗೆ ಏನೋ ಮನದಲ್ಲಿ ತಾನು ಬೇರೆಯವನೊಬ್ಬನ ಸುಖವನ್ನು ಬಯಸಿತು. ಅದು ಕೇವಲ ಸುಖ ಮಾತ್ರವಾಗಿರದೇ ಮದುವೆಯಾಗದಿದ್ದರೂ ಮಗುವನ್ನು ಪಡೆಯಲೇಬೇಕು ಎಂಬ ಉತ್ಕಟವಾದ ಬಯಕೆಯುಂಟಾಯಿತು.
 ಹಾಗೆಯೇ ಅವಳ  ಸಹೋದ್ಯೋಗಿ ಚಂದ್ರನ್ ಮಾಡಿದ್ದ ಮೋಸಕ್ಕೆ ಬಲಿಯಾದರೂ ಒಂದು ಸಲ ಅವನಿಂದ ಸುಖಪಡೆಯಬಹುದಾಗಿತ್ತು ಎಂಬ ಕೊರಗು ಅವಳನ್ನು ಕಾಡಿತು. ಮಹಾನ್ ಕಾಮಾಂಧ  ನಾಯಿಡುವನ್ನು ನೋಡಿದಾಗ ಆ ಆಸೆ ಮತ್ತೆ ಅವಳಿಗೆ   ಚಿಗುರೊಡೆಯಿತು. ಅವನ ಆ ಸಿರಿವಂತನ ಕಳೆಗೆ ಅವಳು ಮಾರಿಹೋಗಿದ್ದಳು. ಒಂದು ದಿನ ನಾಯಿಡು ಬಯಸುತ್ತಿದ್ದ ಹಕ್ಕಿ ತಾನೇ ತನಾಗಿ ಅವನ ರೂಂ ಬಳಿ ಬಂದು ರೊಟ್ಟಿ ಜಾರಿ ತುಪ್ಪಕ್ಕೆ ಬಿದ್ದ ಅನುಭವವಾಯಿತು. ನೂರಾರು ಹೆಣ್ಣುಗಳು ಹುರಿದು ಮುಕ್ಕಿದ್ದ ನಾಯ್ಡು ಕೋಮಲಗಾಗಿ ತಿಂಗಳುಗಟ್ಟಲೇ ಹುಚ್ಚನಾಗಿ ಕಾತರಿಸಿದ್ದ.ಅಂತಹ ಕೋಮಲಾ ತಾನೇ ನಾಯ್ಡುವನ್ನು ಹುಡುಕಿಕೊಂಡು ಬಂದು ನನಗೆ ಸುಖ ಕೊಡು ಎಂದಾಗ ನಾಯ್ಡು ಅವಳ   ಬಯಕೆಯನ್ನು ಈಡೇರಿಸಲು ವಿಫಲನಾದ.ತನ್ನ ಗಂಡಸ್ತನದ ಬಗ್ಗೆ   ನಾಯ್ಡು ತಾನೇ ಅಸಹ್ಯ ಪಟ್ಟುಕೊಂಡ.
ತನಗೆ ಸುಖ ನೀಡು ಎಂದು ನಾಚಿಕೆ ತೊರೆದು ಬಂದ ಹೆಣ್ಣಿಗೆ   ನಾಯ್ಡು  ಏಕೆ ಸುಖ ನೀಡಲಾಗಲಿಲ್ಲ ಎಂಬುದನ್ನು ನೀವು ಕಾದಂಬರಿ ಓದಿಯೇ ತಿಳಿಯಬೇಕು.

ಸಿಹಿಜೀವಿ ವೆಂಕಟೇಶ್ವರ.
ತುಮಕೂರು

08 ಏಪ್ರಿಲ್ 2025

ಕಾಶ್ಮೀರದ ಇತಿಹಾಸದ ಮೇಲೆ ಬೆಳಕು ಚೆಲ್ಲುವ ಕೃತಿ. ಪುಸ್ತಕ ಪರಿಚಯ.


 


ಕಾಶ್ಮೀರದ ಇತಿಹಾಸದ ಮೇಲೆ ಬೆಳಕು ಚೆಲ್ಲುವ ಕೃತಿ.

  

ಲೇಖಕ ಕೋಟಾ ವೆಂಕಟಾಚಲಂ ಒಬ್ಬ ಭಾರತೀಯ ವಿದ್ವಾಂಸ ಮತ್ತು ಲೇಖಕರಾಗಿದ್ದು ಭಾರತೀಯ ಕಾಲಗಣನೆ ಮತ್ತು ಇತಿಹಾಸದ ಅಧ್ಯಯನಕ್ಕೆ ಅವರ ಕೊಡುಗೆ ಅಪಾರ. ಅವರ ಬರಹಗಳು ಪ್ರಾಚೀನ ಭಾರತೀಯ ಮಹಾನ್ ಕೃತಿಗಳ ಆಳವಾದ ಅಧ್ಯಯನ ಮಾಡಿ  ಪಾಶ್ಚಿಮಾತ್ಯ ವಿದ್ವಾಂಸರು ಪ್ರಸ್ತಾಪಿಸಿದ ಐತಿಹಾಸಿಕ ಅಂಶಗಳ ಆಧಾರದ ಮೇಲೆ  ವಿಮರ್ಶಾತ್ಮಕ ದೃಷ್ಟಿಕೋನದಲ್ಲಿ ಹತ್ತಾರು ಪುಸ್ತಕಗಳನ್ನು ಬರೆದಿದ್ದಾರೆ. ಅವರು ತೆಲುಗು ಮತ್ತು ಇಂಗ್ಲಿಷ್‌ನಲ್ಲಿ ಹಲವಾರು ಕೃತಿಗಳನ್ನು ಬರೆದಿದ್ದಾರೆ.

"ಕ್ರೋನಾಲಜಿ ಆಪ್ ಕಾಶ್ಮೀರ್ ಹಿಸ್ಟರಿ  ರಿಕನ್ಸ್ಟಕ್ಟೆಡ್ " ಎಂಬ ಪುಸ್ತಕವು ಆಂಗ್ಲ ಭಾಷೆಯಲ್ಲಿದ್ದು 

 ಇದು ಕಾಶ್ಮೀರದ ಐತಿಹಾಸಿಕ ಕಾಲಗಣನೆಯ ವಿಮರ್ಶಾತ್ಮಕ ಮರುಮೌಲ್ಯಮಾಪನವನ್ನು ನೀಡುತ್ತದೆ.  ಈ ಪುಸ್ತಕವು ಪಾಶ್ಚಿಮಾತ್ಯ ವಿದ್ವಾಂಸರು ನಮ್ಮ ಮೇಲೆ ಹೇರಿದ   ಕಾಲಗಣನೆಯನ್ನು ಪ್ರಶ್ನಿಸುತ್ತಾ 

 ಭಾರತೀಯ ಇತಿಹಾಸದಲ್ಲಿ ಹೇಗೆ ತಿರುಚಿದ್ದಾರೆ ಎಂದು ಹೇಳಿದ್ದಾರೆ.  ವಿಶೇಷವಾಗಿ ಭಾರತೀಯ ನಾಗರಿಕತೆಯ ಪ್ರಾಚೀನತೆಗೆ ಸಂಬಂಧಿಸಿದಂತೆ ಪೂರ್ವಭಾವಿ ಕಲ್ಪನೆಗಳಿಂದ ಕೂಡಿದೆ ಎಂದು ವೆಂಕಟಾಚಲಂ ವಾದಿಸುತ್ತಾರೆ. 


  ಭಾರತೀಯ ಇತಿಹಾಸದ ಪುನರ್ನಿರ್ಮಾಣದಲ್ಲಿ ಭಾರತೀಯ ಪುರಾಣಗಳು, ಮಹಾಕಾವ್ಯಗಳು ಮತ್ತು ಐತಿಹಾಸಿಕ ಕೃತಿಗಳಿಗೆ ಆದ್ಯತೆ ನೀಡುವ ಪ್ರಾಮುಖ್ಯತೆಯನ್ನು ವೆಂಕಟಾಚಲಂ ಪ್ರತಿಪಾದಿಸುತ್ತಾರೆ. ಈ ಮೂಲಗಳನ್ನು ಪಾಶ್ಚಿಮಾತ್ಯ ವಿದ್ವಾಂಸರು  ನಿರ್ಲಕ್ಷಿಸಿದ್ದಾರೆ.ಇದರ ಪರಿಣಾಮವಾಗಿ ಭಾರತದ ಐತಿಹಾಸಿಕ ಪಥದ ತಪ್ಪಾದ ಮತ್ತು ಅಪೂರ್ಣ ತಿಳುವಳಿಕೆ ಉಂಟಾಗುತ್ತದೆ ಎಂದು ಅವರು ಅಭಿಪ್ರಾಯ ಪಟ್ಟಿದ್ದಾರೆ.

 ಭಾರತೀಯ ಇತಿಹಾಸದಲ್ಲಿನ ಮಹತ್ವದ ಘಟನೆಗಳು ಮತ್ತು ವ್ಯಕ್ತಿಗಳಿಗೆ ಪರಿಷ್ಕೃತ ಕಾಲಗಣನೆಯನ್ನು ಲೇಖಕರು ಪ್ರಸ್ತಾಪಿಸಿದ್ದಾರೆ.  ಉದಾಹರಣೆಗೆ ಅವರು ಮಹಾಭಾರತ ಯುದ್ಧವನ್ನು ಕ್ರಿ.ಪೂ. 3138 ರ ಸುಮಾರಿಗೆ ನಡೆದಿದೆ ಎಂದು ಅಭಿಪ್ರಾಯಪಡುತ್ತಾರೆ.

 ಈ ಪುಸ್ತಕವು ಕಾಶ್ಮೀರದ ಪ್ರಮುಖ ಐತಿಹಾಸಿಕ ಪಠ್ಯವಾದ ಕಲ್ಹಣನ "ರಾಜತರಂಗಿಣಿ" ಯ ಆಳವಾದ ವಿಶ್ಲೇಷಣೆಯನ್ನು ಮಾಡಿದೆ.ಅದರ ಮಹತ್ವ, ಮೂಲಗಳು ಮತ್ತು ವಿದ್ವತ್ಪೂರ್ಣ ವ್ಯಾಖ್ಯಾನಗಳನ್ನು ಚರ್ಚಿಸುತ್ತದೆ. 


ವೆಂಕಟಾಚಲಂ ಅವರು ಬುಹ್ಲರ್, ಹಲ್ಟ್ಜ್ ಮತ್ತು ಸ್ಟೈನ್ ಅವರಂತಹ ಪಾಶ್ಚಿಮಾತ್ಯ ಇತಿಹಾಸಕಾರರ ಕೃತಿಗಳನ್ನು ಟೀಕಿಸಿದ್ದಾರೆ.  ಅವರ ವ್ಯಾಖ್ಯಾನಗಳನ್ನು ಪ್ರಶ್ನಿಸುತ್ತಾ   ಭಾರತೀಯ ಇತಿಹಾಸದ ತಪ್ಪು ನಿರೂಪಣೆಗಳನ್ನು ಖಂಡಿಸಿದ್ದಾರೆ.

 ಈ ಪುಸ್ತಕವು ಮಹಾಭಾರತ ಯುದ್ಧದ ಡೇಟಿಂಗ್, ಕಲಿಯುಗ ಮತ್ತು ಬುದ್ಧ, ವಿಕ್ರಮಾದಿತ್ಯ ಮತ್ತು ಕಾನಿಷ್ಕನಂತಹ ವ್ಯಕ್ತಿಗಳ ಕಾಲಗಣನೆ ಸೇರಿದಂತೆ ಭಾರತೀಯ ಇತಿಹಾಸದಲ್ಲಿನ ವಿವಾದಾತ್ಮಕ ಕಾಲಾನುಕ್ರಮದ ಸಮಸ್ಯೆಗೆ ಪರಿಹಾರವನ್ನು ಸೂಚಿಸುವ ಪ್ರಯತ್ನ ಮಾಡಿದ್ದಾರೆ.

ಜೊತೆಗೆ  ಈ ಪುಸ್ತಕವು ಮುಸ್ಲಿಂ ಆಳ್ವಿಕೆ, ಚಕ್ಸ್, ಮೊಘಲರು, ಆಫ್ಘನ್ನರು, ಸಿಖ್ಖರು ಮತ್ತು ಡೋಗ್ರಾಗಳನ್ನು ಒಳಗೊಂಡ ಕಾಶ್ಮೀರದ  ಐತಿಹಾಸಿಕ ಅವಧಿಗಳ ಅವಲೋಕನವನ್ನು ಸಹ ಒದಗಿಸುತ್ತದೆ.


ಒಟ್ಟಾರೆ ನಮ್ಮನ್ನು ಚಿಂತನೆಗೆ ಹಚ್ಚುವ ಇದು ಭಾರತೀಯರು ಓದಲೇ ಬೇಕಾದ ಕೃತಿ.


ಸಿಹಿಜೀವಿ ವೆಂಕಟೇಶ್ವರ

ತುಮಕೂರು

 

06 ಏಪ್ರಿಲ್ 2025

ನಮ್ಮ ಮೌಲ್ಯ ನಮಗೇ ತಿಳಿದಿಲ್ಲ


 


ನಮ್ಮ ಮೌಲ್ಯ ನಮಗೇ ತಿಳಿದಿಲ್ಲ 


ಇದೊಂದು  ಕಬ್ಬಿಣದ ಬಾರ್. ಇದರ ಮೌಲ್ಯ ಸುಮಾರು 100 ಡಾಲರ್.


ನೀವು ಇದರಿಂದ  ಕುದುರೆ ಲಾಳಗಳನ್ನು ತಯಾರಿಸಲು ನಿರ್ಧರಿಸಿದರೆ, ಅದರ ಮೌಲ್ಯ  250 ಡಾಲರ್ ಗೆ  ಹೆಚ್ಚಾಗುತ್ತದೆ.


ಬದಲಾಗಿ ನೀವು ಇದರಲ್ಲಿ ಹೊಲಿಗೆ ಸೂಜಿಗಳನ್ನು ತಯಾರಿಸಲು ನಿರ್ಧರಿಸಿದರೆ ಅದರ ಮೌಲ್ಯ ಸುಮಾರು 70,000 ಡಾಲರ್ ಗೆ  ಹೆಚ್ಚಾಗುತ್ತದೆ.



ನೀವು ಇದರಿಂದ ಗಡಿಯಾರದ ಸ್ಪ್ರಿಂಗ್‌ಗಳನ್ನು ಉತ್ಪಾದಿಸಲು ನಿರ್ಧರಿಸಿದರೆ ಅದರ  ಮೌಲ್ಯ ಸುಮಾರು 6 ಮಿಲಿಯನ್‌ ಡಾಲರ್ ಗೆ  ಹೆಚ್ಚಾಗುತ್ತದೆ.


ಕಬ್ಬಿಣದ ಬಾರ್ ನೀವೇ! ನೀವು ನಿಮ್ಮ ಮೌಲ್ಯವನ್ನು ಹೇಗೆ ಹೆಚ್ಚಿಸಿಕೊಳ್ಳಬಹುದು ಎಂಬುದರ ಬಗ್ಗೆ ಗಮನ ಕೊಡಿ. ನಿಮ್ಮಲಿರುವ ಅದ್ಭುತ ವ್ಯಕ್ತಿ ಹೊರಬರಲಿ.ನಿಮ್ಮ ವ್ಯಕ್ತಿತ್ವ ಉಜ್ವಲವಾಗಲಿ..


ಸಿಹಿಜೀವಿ ವೆಂಕಟೇಶ್ವರ



04 ಏಪ್ರಿಲ್ 2025

ಗೇದು..ಬೂತಾನಿನ ಪ್ರಮುಖ ಪ್ರಾಕೃತಿಕ ತಾಣ.





 


ಭೂತಾನ್ ಪ್ರವಾಸ ೭ 

ಗೇದು..


ಕರ್ಬಂತಿ ಗಿಂಬ ನೋಡಿ ಬಸ್ ಏರಿ ಸಾಗುವಾಗ ನಮ್ಮ ನಾಡಿನ ಘಾಟಿಗಳಲ್ಲಿ ಸಂಚರಿಸಿದ ಅನುಭವವನ್ನು ಪಡೆಯುತ್ತೇವೆ.ಎಲ್ಲಾ ಕಡೆ ಹಸುರು ಮತ್ತು  ತಿರುವು ಮುರುವು ರಸ್ತೆಯಲ್ಲಿ ಸಾಗಿದೆವು.

ಹೀಗೆ ಸಾಗಿ ವಿಶ್ರಾಂತಿ ಗಾಗಿ ಗೇದು ಎಂಬ ಸ್ಥಳದಲ್ಲಿ ನಿಲ್ಲಿಸಿದೆವು.


ಚುಖಾ ಜಿಲ್ಲೆಯ ಒಂದು ಪಟ್ಟಣ ಗೆಡು. ಮೂಲತಃ ಸ್ಥಳೀಯ ಜಲವಿದ್ಯುತ್ ಸ್ಥಾವರದಲ್ಲಿ ಕೆಲಸ ಮಾಡುವ ಜನರಿಗೆ ವಸತಿ ಕಲ್ಪಿಸಲು ಅಭಿವೃದ್ಧಿಪಡಿಸಲಾದ ಈ ಪಟ್ಟಣವು ಈಗ ಒಂದು ಸಣ್ಣ ಕಾಲೇಜಿಗೆ ನೆಲೆಯಾಗಿದೆ. ಬೆಟ್ಟದ ಸ್ಥಳಕ್ಕೆ ಅಂಟಿಕೊಂಡಿರುವ ಗೆಡುವಿನ ಸೌಂದರ್ಯ ಸವಿದು ಪೋಟೋ ತೆಗೆದುಕೊಂಡು ವೀಡಿಯೋ ಮಾಡಿಕೊಂಡೆವು.


   ಫ್ಯೂಯೆಂಟ್‌ಶೋಲಿಂಗ್ ಮತ್ತು ಥಿಂಫು  ನಡುವಿನ ಅತಿದೊಡ್ಡ ಜನಸಂಖ್ಯಾ ಕೇಂದ್ರವಾಗಿರುವುದರಿಂದ  ಇದು ಉಪಾಹಾರ ಸೇವಿಸಲು ಅನುಕೂಲಕರ ಸ್ಥಳವಾಗಿದೆ.

ಸ್ವಲ್ಪ ವಿಶ್ರಾಂತಿ ಪಡೆದ ನಂತರ ನಾವು ಗೆದುವಿನಲ್ಲಿ  ಇರುವ 

ಎಂಟು ಧರ್ಮ ಕಾಯ ಸ್ತೂಪಗಳನ್ನು ನೋಡಿದೆವು. 

ಎಂಟು ಮಹಾ ಬೌದ್ಧ ಸ್ತೂಪಗಳು  ಪ್ರಮುಖ ಟಿಬೆಟಿಯನ್ ಬೌದ್ಧಧರ್ಮದ  ಸಂಸ್ಕೃತಿಯಾಗಿದೆ.ಇದು ಬುದ್ಧ ಶಾಕ್ಯಮುನಿಯ ಜೀವನ ಮತ್ತು ಕೃತಿಗಳಲ್ಲಿನ ಎಂಟು ಪ್ರಮುಖ ಘಟನೆಗಳನ್ನು ಪ್ರತಿನಿಧಿಸುತ್ತದೆ. ಎಂಟು ಮಹಾ ಬೌದ್ಧ ಸ್ತೂಪಗಳು ಪ್ರಬುದ್ಧ ಮನಸ್ಸಿನ ಸಂಕೇತಗಳಾಗಿವೆ ಮತ್ತು ಅದರ ಸಾಕ್ಷಾತ್ಕಾರದ ಮಾರ್ಗವಾಗಿದೆ. 


ಎಂಟು ಮಹಾ ಬೌದ್ಧ ಸ್ತೂಪಗಳು ಬುದ್ಧನ ದೇಹ, ಮಾತು ಮತ್ತು ಮನಸ್ಸನ್ನು ಪ್ರತಿನಿಧಿಸುತ್ತವೆ. ಪರಿಣಾಮವಾಗಿ, ಎಂಟು ಸ್ತೂಪಗಳು ಬೌದ್ಧ ಅನುಯಾಯಿಗಳ ಪೂಜಾ ಸ್ಥಳಗಳಾಗಿವೆ.

ಮೊದಲ ಸ್ತೂಪ  ಬುದ್ಧನ ಜನನದ ಕಮಲದ ಹೂವು ಸ್ತೂಪ 

ಎರಡನೇಯದು ಜ್ಞಾನೋದಯ ಸ್ತೂಪ. 

ಮೂರನೆಯದು  ಧರ್ಮದ ಚಕ್ರವನ್ನು ತಿರುಗಿಸುವ ಸ್ತೂಪ. ನಾಲ್ಕನೆಯ ಸ್ತೂಪ ಮಹಾ ಪವಾಡ ಸ್ತೂಪ. 

ಐದು  ತುಶಿತ ಸ್ವರ್ಗದಿಂದ ಬಂದ ಸ್ತೂಪ.ಆರನೇ ಸ್ತೂಪ ಸಾಮರಸ್ಯದ ಸ್ತೂಪ. 

ಏಳನೇಯದು ಸರ್ವವಿಜಯಶಾಲಿ ಸ್ತೂಪ 

ಕೊನೆಯ ಮತ್ತು ಎಂಟನೇ ಸ್ತೂಪ  ಪರಿನಿರ್ವಾಣ ಸ್ತೂಪ.

ಎಲ್ಲಾ ಎಂಟೂ ಸ್ತೂಪಗಳನ್ನು ದರ್ಶಿಸಿ ಕೈಮುಗಿದು ಹೊರಬಂದು ಮತ್ತೊಮ್ಮೆ ಪ್ರಕೃತಿಯ ಸೊಬಗನ್ನು ಸವಿಯುತ್ತಾ ಬಸ್ ಏರಿ ಥಿಂಫು ಕಡೆಗೆ ಪಯಣ ಮುಂದುವರೆಸಿದೆವು.


ಸಿಹಿಜೀವಿ ವೆಂಕಟೇಶ್ವರ

ತುಮಕೂರು

 


03 ಏಪ್ರಿಲ್ 2025

ಮರೆತು ಹೋದ ಸ್ವಾತಂತ್ರ್ಯ ಹೋರಾಟಗಾರರ ಸ್ಮರಿಸೋಣ.


 ಮರೆತು ಹೋದ ಸ್ವಾತಂತ್ರ್ಯ ಹೋರಾಟಗಾರರ ಸ್ಮರಿಸೋಣ.ಈ



ನಾನು ಇಂದು ಪ್ರಭಾ ಚೋಪ್ರಾ ಮತ್ತು ಪಿ.ಎನ್. ಚೋಪ್ರಾ ಅವರಿಂದ ರಚಿತವಾದ ಇಂಗ್ಲೀಷ್ ಪುಸ್ತಕ  

"ಫರ್ಗಾಟನ್ ಹೀರೋಸ್ ಆಫ್ ಇಂಡಿಯಾಸ್ ಫ್ರೀಡಂ ಸ್ಟ್ರಗಲ್ " ಎಂಬ ಆಂಗ್ಲ  ಪುಸ್ತಕ ಓದಿದೆ.

ಇದರಲ್ಲಿ  ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗಿಯಾಗಿದ್ದ ಅಸಂಖ್ಯಾತ ಮರೆತುಹೋದ ವೀರರು, ಕ್ರಾಂತಿಕಾರಿಗಳು, ಸ್ವಾತಂತ್ರ್ಯ ವೀರರ  ತ್ಯಾಗ ಮತ್ತು  ಶೌರ್ಯದ ವಿವರವಾದ ಮಾಹಿತಿಯಿದೆ.


 ಈ ಕೃತಿಯ ಲೇಖಕರು  ಬ್ರಿಟಿಷ್ ಸರ್ಕಾರ ಸಿದ್ಧಪಡಿಸಿದ ರಹಸ್ಯ ಗುಪ್ತಚರ ವರದಿಗಳನ್ನು ಅಧ್ಯಯನ ಮಾಡಿ ನಮಗೆ ಈ ಅಮೂಲ್ಯವಾದ ಕೊಡುಗೆಯನ್ನು ನೀಡಿದ್ದಾರೆ. ಸ್ವಾತಂತ್ರ್ಯ ಚಳವಳಿಯನ್ನು ಮೇಲ್ವಿಚಾರಣೆ ಮಾಡಲು ಮತ್ತು ನಿಗ್ರಹಿಸಲು ರಚಿಸಲಾದ ಈ ದಾಖಲೆಗಳು   ನಮ್ಮ ದೇಶಭಕ್ತರ ಅಚಲ ಧೈರ್ಯ, ತ್ಯಾಗ ಮತ್ತು ದೃಢನಿಶ್ಚಯಕ್ಕೆ ಪ್ರಬಲ ಸಾಕ್ಷಿಯಾಗಿ ನಿಂತಿವೆ.


 ಈ ಪುಸ್ತಕವು ಸ್ವಾತಂತ್ರ್ಯ ಹೋರಾಟಗಾರರ ಕೊಡುಗೆಗಳನ್ನು ಬೆಳಕಿಗೆ ತರುವಲ್ಲಿ  ಪ್ರಮುಖವಾದ ಪಾತ್ರವನ್ನು ವಹಿಸುತ್ತದೆ.ಹಾಗೂ 

 ಶ್ರೀಮಂತ ಐತಿಹಾಸಿಕ ಹಿನ್ನೆಲೆಯನ್ನು ಒದಗಿಸುತ್ತದೆ. ಬ್ರಿಟಿಷ್ ಆಳ್ವಿಕೆಯ ವಿರುದ್ಧ ಪ್ರತಿರೋಧದ ವಿಕಸನದ ಸ್ವರೂಪವನ್ನು ವಿವರಿಸುತ್ತದೆ. ಆರಂಭಿಕ ಸಾಂವಿಧಾನಿಕ ವಿಧಾನಗಳ ಜೊತೆಗೆ ನಿರ್ದಿಷ್ಟ ಘಟನೆಗಳು ಮತ್ತು ನೀತಿಗಳಿಂದ ಪ್ರಚೋದಿಸಲ್ಪಟ್ಟ ಬೆಳೆಯುತ್ತಿರುವ ಕ್ರಾಂತಿಕಾರಿ ಉತ್ಸಾಹವು ಹೇಗೆ ಹೊರಹೊಮ್ಮಿತು ಎಂಬುದನ್ನು ಇದು ಸ್ಪಷ್ಟಪಡಿಸುತ್ತದೆ. ಪೂನಾದಲ್ಲಿ ಬುಬೊನಿಕ್ ಪ್ಲೇಗ್ ಏಕಾಏಕಿ ಉಂಟಾದ ನಂತರದ ಅಸಮಾಧಾನ ಮತ್ತು ಪ್ಲೇಗ್ ಸಮಿತಿಯ ಬಲವಂತದ ಕ್ರಮಗಳನ್ನು ಹೆಚ್ಚುತ್ತಿರುವ ಅಶಾಂತಿಯ ವೇಗವರ್ಧಕಗಳಾಗಿ ಪುಸ್ತಕವು ವಿವರಿಸುತ್ತದೆ. ಸ್ವದೇಶಿ ಚಳುವಳಿ ಮತ್ತು ಬಂಗಾಳದ ವಿಭಜನೆಯನ್ನು ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸಿದ ಪ್ರಮುಖ ಕ್ಷಣಗಳಾಗಿ ಪ್ರಸ್ತುತಪಡಿಸಲಾಗಿದೆ. ಇದು ಹೆಚ್ಚು ಆಮೂಲಾಗ್ರ ಪ್ರತಿರೋಧದ ರೂಪಗಳು ಮತ್ತು ಸ್ವಾತಂತ್ರ್ಯಕ್ಕಾಗಿ ಸಶಸ್ತ್ರ ಹೋರಾಟಕ್ಕೆ ಬದ್ಧವಾಗಿರುವ ಕ್ರಾಂತಿಕಾರಿ ಸಂಘಟನೆಗಳ ಹೊರಹೊಮ್ಮುವಿಕೆಗೆ ಕಾರಣವಾಯಿತು.


 ಬ್ರಿಟಿಷ್ ಅಧಿಕಾರಿಗಳ ಮೇಲಿನ ದಾಳಿಗಳನ್ನು ಯೋಜಿಸುವಲ್ಲಿ ಮತ್ತು ಕಾರ್ಯಗತಗೊಳಿಸುವಲ್ಲಿ ನಿರ್ಣಾಯಕ ಪಾತ್ರ ವಹಿಸಿದ ಅನುಸಿಲನ್ ಸಮಿತಿಯಂತಹ ಪ್ರಮುಖ ರಹಸ್ಯ ಸಮಾಜಗಳ ಚಟುವಟಿಕೆಗಳ ಮೇಲೆ ಈ ಪುಸ್ತಕ ಬೆಳಕು ಚೆಲ್ಲುತ್ತದೆ. ಇದು ಕ್ರಾಂತಿಕಾರಿಗಳು ತಮ್ಮ ಉದ್ದೇಶಕ್ಕೆ ತೋರಿದ ಅಚಲ ಬದ್ಧತೆಯನ್ನು ವಿವರಿಸುವ ನಿರ್ದಿಷ್ಟ ಧಿಕ್ಕಾರ ಮತ್ತು ತ್ಯಾಗದ ಕೃತ್ಯಗಳನ್ನು ವಿವರಿಸುತ್ತದೆ. ಖುದಿರಾಮ್ ಬೋಸ್ ಮತ್ತು ಪ್ರಫುಲ್ಲ ಚಾಕಿ ಅವರು ಬ್ರಿಟಿಷ್ ಮ್ಯಾಜಿಸ್ಟ್ರೇಟ್‌ರನ್ನು ಹತ್ಯೆ ಮಾಡಲು ಪ್ರಯತ್ನಿಸಿದ ಘಟನೆಗಳಂತಹ ಘಟನೆಗಳನ್ನು ಈ ಪುಸ್ತಕ  ವಿವರಿಸುತ್ತದೆ.ಈ ಕಾರ್ಯಾಚರಣೆಯು ಅಮಾಯಕ ನಾಗರಿಕರ ಸಾವಿಗೆ ದುರಂತವಾಗಿ ಕಾರಣವಾಯಿತು.ಈ ಹೋರಾಟದಲ್ಲಿ ಅಂತರ್ಗತವಾಗಿದ್ದ  ಅಪಾಯಗಳು ಮತ್ತು ನೈತಿಕ ಸಂಕೀರ್ಣತೆಗಳನ್ನು ಒತ್ತಿಹೇಳುತ್ತದೆ.


ವಿದೇಶಿ ನೆಲದಲ್ಲಿ ಕಾರ್ಯನಿರ್ವಹಿಸುತ್ತಿರುವ ಭಾರತೀಯ ಕ್ರಾಂತಿಕಾರಿಗಳ ಪ್ರಮುಖ ಕೊಡುಗೆಗಳನ್ನು ಸಹ ಸೂಕ್ಷ್ಮವಾಗಿ ಇಲ್ಲಿ  ದಾಖಲಿಸುತ್ತದೆ. ಲಂಡನ್‌ನಲ್ಲಿ ಭಾರತೀಯ ಹೋಮ್ ರೂಲ್ ಸೊಸೈಟಿಯನ್ನು ಸ್ಥಾಪಿಸಿದ ಶ್ಯಾಮ್‌ಜಿ ಕೃಷ್ಣ ವರ್ಮಾ ಮತ್ತು ಜರ್ಮನ್ ನೆಲದಲ್ಲಿ ಭಾರತೀಯ ರಾಷ್ಟ್ರೀಯ ಧ್ವಜವನ್ನು ಧೈರ್ಯದಿಂದ ಹಾರಿಸಿದ ಮೇಡಮ್ ಭಿಖಾಜಿ ಕಾಮಾ ಅವರಂತಹ ವ್ಯಕ್ತಿಗಳಿಗೆ ಸರಿಯಾದ ಮನ್ನಣೆ ನೀಡಲಾಗುತ್ತದೆ. ಬೆಂಬಲವನ್ನು ಸಜ್ಜುಗೊಳಿಸುವುದು, ನಿರ್ಣಾಯಕ ನಿಧಿಗಳನ್ನು ಸಂಗ್ರಹಿಸುವುದು, ಅಗತ್ಯ ಶಸ್ತ್ರಾಸ್ತ್ರಗಳನ್ನು ಸಂಗ್ರಹಿಸುವುದು ಮತ್ತು ಬ್ರಿಟಿಷ್ ಆಳ್ವಿಕೆಯನ್ನು ವಿರೋಧಿಸುವ ಸರ್ಕಾರಗಳೊಂದಿಗೆ ಕಾರ್ಯತಂತ್ರದ ಮೈತ್ರಿಗಳನ್ನು ರೂಪಿಸುವ ಗುರಿಯನ್ನು ಹೊಂದಿರುವ ವಿವಿಧ ದೇಶಗಳಲ್ಲಿ ರಹಸ್ಯ ಜಾಲಗಳ ಸ್ಥಾಪನೆಯನ್ನು  ಈ ಪುಸ್ತಕ  ವಿವರಿಸುತ್ತದೆ.


ಸ್ವತಂತ್ರ ಎಂದರ ಸ್ವೇಚ್ಛೆ ಎಂದು ಅಪಾರ್ಥ ಮಾಡಿಕೊಡಿರುವ 

 ಇಂದಿನ ಪೀಳಿಗೆಯು ಇಂತಹ ಪುಸ್ತಕಗಳನ್ನು ಓದುವ ಅಗತ್ಯವಿದೆ. ತನ್ಮೂಲಕ ನಮ್ಮ ರಾಷ್ಟ್ರದ ಸ್ವಾತಂತ್ರ್ಯಕ್ಕಾಗಿ ತಮ್ಮ ತ್ಯಾಗ ಮತ್ತು ಬಲಿದಾನ ಮಾಡಿದ ಆತ್ಮಗಳಿಗೆ ಗೌರವ ಸೂಚಿಸಬೇಕಿದೆ.


ಸಿಹಿಜೀವಿ ವೆಂಕಟೇಶ್ವರ

ಸಾಹಿತಿಗಳು ಹಾಗೂ

ಸಮಾಜ ವಿಜ್ಞಾನ ಶಿಕ್ಷಕರು

ತುಮಕೂರು

02 ಏಪ್ರಿಲ್ 2025

ಆಂತರಿಕ ಶಾಂತಿ ಹೊಂದುವುದು ಹೇಗೆ?


 


ಆಂತರಿಕ ಶಾಂತಿ ಹೊಂದುವುದು ಹೇಗೆ?


ಹೊರಗೆ ಅಶಾಂತಿಯ ವಾತಾವರಣವಿದ್ದರೂ ಸಾಧಕರು ತಮ್ಮ ಆಂತರಿಕ ಶಾಂತಿಯನ್ನು ಕಾಯ್ದುಕೊಂಡು ಸಂತಸದಿಂದ ಇರುವುದನ್ನು ಗಮನಿಸಿದ್ದೇವೆ.

ನಾವೂ  ಆಂತರಿಕ ಶಾಂತಿಯನ್ನು ಕಾಪಾಡಿಕೊಳ್ಳಲು  ಸಾಧ್ಯವಿದೆ. ಅದಕ್ಕೆ ನಮ್ಮ ಜೀವನದಲ್ಲಿ  ಅಲ್ಪ ಸ್ವಲ್ಪ  ಬದಲಾವಣೆ ಮಾಡಿಕೊಂಡರೆ ಸಾಕು.

 ನಮ್ಮ ಜೀವನದಲ್ಲಿ ಕೆಲ ವಿಷಕಾರಿ ಜನರಿರುತ್ತಾರೆ ಅವರು ಸರ್ವರಿಗೂ ವಿಷ ಕಕ್ಕುವುದೇ ತಮ್ಮ ಕಾಯಕವನ್ನಾಗಿ ಮಾಡಿಕೊಂಡಿರುತ್ತಾರೆ ಅಂತವರಿಂದ ಆದಷ್ಟೂ ದೂರವಿರೋಣ.


ಕೆಲವೊಮ್ಮೆ ನಮ್ಮಲ್ಲಿ ನಕಾರಾತ್ಮಕ ಆಲೋಚನೆಗಳು ಮೂಡುವುದು ಸಹಜ ಇದರ ಜೊತೆಯಲ್ಲಿ ನಕಾರಾತ್ಮಕ ಆಲೋಚನೆ ಮಾಡುವರು ನಮ್ಮ ಸುತ್ತುವರೆದರೆ ಮುಗಿಯಿತು. ಇವರು ನಮ್ಮನ್ನು   ಎಂದಿಗೂ ಬೆಳೆಯಲು ಸಹಾಯ ಮಾಡುವುದಿಲ್ಲ. ಇಂಥವರಿಂದ ದೂರವಿರೋಣ.

ಜೀವನದಲ್ಲಿ ಕೆಲವೊಮ್ಮೆ ಸಂಘರ್ಷ ಮಾತಿನ ಚಕಮಕಿ ನಡೆಯುತ್ತದೆ. ನಮ್ಮ ಶಾಂತಿಗಾಗಿ  ಎಲ್ಲರೊಂದಿಗೆ  ಯುದ್ಧಕ್ಕೆ ಇಳಿಯುವುದನ್ನು ಕಡಿಮೆ ಮಾಡಿಕೊಂಡು ಬುದ್ಧಿವಂತಿಕೆಯಿಂದ ಸಮಸ್ಯೆ ಬಗೆಹರಿಸಿಕೊಳ್ಳೋಣ.   ಪ್ರತಿಯೊಂದಕ್ಕೂ ಅನಗತ್ಯವಾಗಿ ನಮ್ಮ ಶಕ್ತಿ ವ್ಯಯಮಾಡುತ್ತಾ  ಪ್ರತಿಕ್ರಿಯೆಯನ್ನು ನೀಡುವ  ಅಗತ್ಯವಿಲ್ಲ.

ನಾವೇನು ರೋಬೋ ಅಥವಾ ಯಂತ್ರಗಳಲ್ಲ ನಮಗೂ ದಣಿವು ಸಹಜ ಅಂತಹ ಸಂದರ್ಭದಲ್ಲಿ ವಿಶ್ರಾಂತಿ ಪಡೆಯೋಣ. ಬಹಳ ದಣಿದಂತೆ ಅನಿಸಲು ಪ್ರಾರಂಭಿಸಿದಾಗ ರಜೆಯ ತೆಗದುಕೊಂಡು ರಿಪ್ರೆಶ್ ಆಗೋಣ. 

  ನಮಗಾಗಿ ಸಮಯವನ್ನು ಮಾಡಿಕೊಳ್ಳೋಣ. ಜನಜಂಗುಳಿಯಿಂದ ಮನಸ್ಸಿಗೆ ಕಿರಿಕಿರಿಯಾಗಿ ಅಶಾಂತಿಯೆನಿಸಿದರೆ ಒಂಟಿಯಾಗಿರುವುದು ಕೆಲವೊಮ್ಮೆ ಚಿಕಿತ್ಸೆಯೆಂದು ಭಾವಿಸಿ  ಒಂಟಿಯಾಗಿರಲು ಪ್ರಯತ್ನಿಸೋಣ  


ಅತಿಯಾದ ಸಾಮಾಜಿಕ ಮಾಧ್ಯಮಗಳ ಬಳಕೆ  ನಮ್ಮ ಶಾಂತಿಯುತ ಮನಸ್ಸನ್ನು ಕದಡಬಹುದು ಆದ್ದರಿಂದ ಅಗತ್ಯವಿರುವಾಗ ಮಾತ್ರ ಕಡಿಮೆ ಸಮಯ ಸಾಮಾಜಿಕ ಮಾಧ್ಯಮಗಳನ್ನು ಬಳಸಲು ಕಡಿವಾಣ ಹಾಕಿಕೊಳ್ಳೋಣ.ಮತ್ತು ಹೊಸ ಹವ್ಯಾಸಗಳು ಒತ್ತಡ ಕಡಿಮೆ ಮಾಡಿ ನಾವು ಸಂತಸದಿಂದ ಇರಲು ಪೂರಕವಾಗಿವೆ ಇಂತಹ ಉತ್ಪಾದಕ ಹವ್ಯಾಸಗಳನ್ನು ಹೆಚ್ಚು ರೂಪಿಸಿಕೊಳ್ಳೋಣ.

ಕೆಲವೊಮ್ಮೆ ಸಮಯ ಸಂದರ್ಭಕ್ಕೆ ಅನುಗುಣವಾಗಿ

ಬದಲಾವಣೆಗೆ ಹೊಂದಿಕೊಳ್ಳುವ ಗುಣವೂ ನಮ್ಮದಾಗಬೇಕು. 


ಹೀಗೆ ನಮ್ಮ ಸಂತಸ ಆಂತರಿಕ ಶಾಂತಿಗೆ ಬಹುತೇಕ ನಾವೇ ಕಾರಣರಾಗಿರುವುದರಿಂದ ಸಂತಸದಿಂದ ಬಾಳೋಣ ಆಂತರಿಕ ಶಾಂತಿ ಅನುಭವಿಸೋಣ.


ಸಿಹಿಜೀವಿ ವೆಂಕಟೇಶ್ವರ

ತುಮಕೂರು


27 ಮಾರ್ಚ್ 2025

ರಂಗಪರಂಪರೆ ಬೆಂಬಲಿಸೋಣ. (ಇಂದು ವಿಶ್ವ ರಂಗ ಭೂಮಿ ದಿನ)


 


ರಂಗಪರಂಪರೆ ಬೆಂಬಲಿಸೋಣ.

(ಇಂದು ವಿಶ್ವ ರಂಗ ಭೂಮಿ ದಿನ)

ಇಂದಿನ ಮನರಂಜನೆ ಎಂದರೆ  ಸಿನಿಮಾ  ಮತ್ತು ಸಾಮಾಜಿಕ ಮಾಧ್ಯಮಗಳು ಎಂಬುದು ಸತ್ಯವಾದರೂ ನಾಟಕಗಳು ಅನಾದಿ ಕಾಲದಿಂದಲೂ ಮನರಂಜನೆ ನೀಡುತ್ತಾ ಬಂದಿವೆ. ರಂಗಭೂಮಿ ಇಂದಿಗೂ ಪ್ರಸ್ತುತ ಎಂಬುದನ್ನು ಈಗಲೂ ಹಮ್ಮಿಕೊಳ್ಳುತ್ತಿರುವ ಹಲವಾರು ನಾಟಕ ಪ್ರದರ್ಶನಗಳು ನಿರೂಪಿಸುತ್ತಿವೆ.

ವಿಶ್ವ ರಂಗಭೂಮಿ ದಿನವನ್ನು ಮಾರ್ಚ್ 27 ರಂದು ಆಚರಿಸಲಾಗುತ್ತದೆ. ಪ್ರದರ್ಶನ ಕಲೆಗಳನ್ನು ಆಚರಿಸಲು ಮತ್ತು ಸಮಾಜದಲ್ಲಿ ಅದರ ಪ್ರಾಮುಖ್ಯತೆಯ ಬಗ್ಗೆ ಗಮನ ಸೆಳೆಯಲು ಅಂತರರಾಷ್ಟ್ರೀಯ ರಂಗಭೂಮಿ ಸಂಸ್ಥೆ  1962ರಿಂದ  ಈ ದಿನವನ್ನು  ಆಚರಿಸಿಕೊಂಡು ಬರುತ್ತಿದೆ. 

ಪ್ರದರ್ಶನ ಕಲೆಗಳನ್ನು ಉತ್ತೇಜಿಸುವುದು. ಈ ದಿನಾಚರಣೆಯ  ಪ್ರಮುಖವಾದ ಉದ್ದೇಶ. ಇದರ ಜೊತೆಯಲ್ಲಿ ರಂಗಭೂಮಿಯು ಒಂದು ಕಲಾ ಪ್ರಕಾರವಾಗಿ ಮತ್ತು ಸಂಸ್ಕೃತಿ ಮತ್ತು ಸಮಾಜದ ಮೇಲೆ ಅದರ ಪ್ರಭಾವವನ್ನು ಎತ್ತಿ ತೋರಿಸುವ ಗುರಿಯನ್ನು ಹೊಂದಿದೆ.ರಂಗಭೂಮಿ ಕಾರ್ಮಿಕರನ್ನು ಬೆಂಬಲಿಸುತ್ತಾ  ಪೋಷಕ ನಟರು, ನಿರ್ದೇಶಕರು, ಬರಹಗಾರರು ಮತ್ತು ರಂಗಭೂಮಿಯಲ್ಲಿ ಕೆಲಸ ಮಾಡುವ ಇತರರಿಗೆ ವೇದಿಕೆಯಾಗಿ ಕಾರ್ಯನಿರ್ವಹಿಸುತ್ತದೆ. ಈ ದಿನವು ಪ್ರಪಂಚದಾದ್ಯಂತದ ರಂಗಭೂಮಿಗಳ ನಡುವೆ ವಿಚಾರಗಳು ಮತ್ತು ಅನುಭವಗಳ ವಿನಿಮಯವನ್ನು ಉತ್ತೇಜಿಸುತ್ತದೆ. ಜೊತೆಗೆ ವಿವಿಧ ನಾಟಕ ಸಂಪ್ರದಾಯಗಳು ಮತ್ತು ಶೈಲಿಗಳತ್ತ ಗಮನ ಸೆಳೆಯುತ್ತದೆ.

 ವಿಶ್ವ ರಂಗಭೂಮಿ ದಿನವು ರಂಗಭೂಮಿ ಪ್ರದರ್ಶನಗಳಲ್ಲಿ ಆಸಕ್ತಿಯನ್ನು ಹೆಚ್ಚಿಸಲು ಮತ್ತು ಜನರು ನಾಟಕಗಳಿಗೆ  ಭೇಟಿ ನೀಡಲು ಪ್ರೇರೇಪಿಸುತ್ತದೆ.

ಈ ದಿನದಂದು

 ಅನೇಕ ದೇಶಗಳು ರಂಗಭೂಮಿಗೆ ಮೀಸಲಾಗಿರುವ ವಿಶೇಷ ಪ್ರದರ್ಶನಗಳು, ಉತ್ಸವಗಳು ಮತ್ತು ಕಾರ್ಯಕ್ರಮಗಳನ್ನು ಆಯೋಜಿಸುತ್ತವೆ. ಇವು ಸಾಮಾನ್ಯವಾಗಿ ಕಲೆಯ ಮಹತ್ವ ಮತ್ತು ಸಮಾಜದ ಮೇಲೆ ಅದರ ಪ್ರಭಾವವನ್ನು ಎತ್ತಿ ತೋರಿಸುವ ಪ್ರದರ್ಶನಗಳಾಗಿವೆ.ಕಾರ್ಯಕ್ರಮಗಳು ಮತ್ತು ಉಪನ್ಯಾಸಗಳು. ರಂಗಭೂಮಿಗಳು ಮತ್ತು ಶಿಕ್ಷಣ ಸಂಸ್ಥೆಗಳು ರಂಗಭೂಮಿಯ ಕಲೆ ಮತ್ತು ಸಮಾಜದಲ್ಲಿ ಅದರ ಪಾತ್ರಕ್ಕೆ ಮೀಸಲಾದ ಉಪನ್ಯಾಸಗಳು, ಕಾರ್ಯಾಗಾರಗಳು ಮತ್ತು ಚರ್ಚೆಗಳನ್ನು ಆಯೋಜಿಸುತ್ತವೆ.ಪ್ರತಿ ವರ್ಷ, ರಂಗಭೂಮಿಯ ದಿನದಂದು ಜಗತ್ತಿನ ಪ್ರಸಿದ್ಧ ವ್ಯಕ್ತಿಯನ್ನು ಈ ದಿನಕ್ಕೆ ವಿಶೇಷ ಸಂದೇಶವನ್ನು ಬರೆಯಲು ಆಯ್ಕೆ ಮಾಡಲಾಗುತ್ತದೆ.ನಂತರ ಅದನ್ನು ಪ್ರಪಂಚದಾದ್ಯಂತ ವಿತರಿಸಲಾಗುತ್ತದೆ. ಈ ಸಂದೇಶಗಳು ಜನರನ್ನು ಪ್ರೇರೇಪಿಸುತ್ತವೆ ಮತ್ತು ರಂಗಭೂಮಿಯ ಮಹತ್ವವನ್ನು ಎತ್ತಿ ತೋರಿಸುತ್ತವೆ. 


  ಕನ್ನಡಕ್ಕೂ ಒಮ್ಮೆ ಈ ಗೌರವ ಸಂದಿತ್ತು. ನಾಟಕಕಾರ ಗಿರೀಶ್ ಕಾರ್ನಾಡ್ ಅವರನ್ನು ವಿಶ್ವರಂಗಭೂಮಿ ದಿನದ ಸಂದೇಶ ನೀಡುವಂತೆ 2002ರಲ್ಲಿ ಕೇಳಿಕೊಳ್ಳಲಾಗಿತ್ತು. ಕಾರ್ನಾಡರು ಆಗ  ಅಂತರರಾಷ್ಟ್ರೀಯ ಸಂಸ್ಥೆಯ ರಾಯಭಾರಿಯೂ ಆಗಿದ್ದರು. ವಿಶ್ವದ ನಾನಾ ಭಾಷೆಯ ರಂಗಕರ್ಮಿಗಳು ಅಂದು ಈ ಸಂದೇಶ ಓದಿ ನಾಟಕ ಪ್ರಯೋಗ ಇತ್ಯಾದಿ ಉತ್ಸವಗಳನ್ನು ಆಚರಿಸಿದ್ದರು. 


2023ರ ವರ್ಷದ ರಂಗಭೂಮಿ ದಿನಕ್ಕೆ ಪ್ರಸಿದ್ಧ ನಾಟಕ ರಚನಕಾರ ನೊಬೆಲ್ ಪ್ರಶಸ್ತಿ ವಿಜೇತ ದರಿಯ ಫೋ ಅವರು ಸಂದೇಶ ನೀಡಿದ್ದರು.   ಅವರು ತಮ್ಮ  ಸಂದೇಶದಲ್ಲಿ “ಹೆಚ್ಚು ಹೆಚ್ಚು ಯುವಜನತೆ ರಂಗ ಚಟುವಟಿಕೆಗಳಲ್ಲಿ ಪಾಲ್ಗೊಂಡು ಹೊಸ ಚಿಂತನೆಗಳ ಮೂಲಕ ಉತ್ತಮ ಸಮಾಜವನ್ನು ನಿರ್ಮಿಸುವುದಕ್ಕೆ ಪೂರಕರಾಗಬೇಕಾಗಿದೆ” ಎಂದು ಕರೆ ನೀಡಿದ್ದರು.

2024 ರಲ್ಲಿ  'ಕಲೆಯೇ ಶಾಂತಿ' ಎಂಬ ಶೀರ್ಷಿಕೆಯ ಸಂದೇಶವನ್ನು ನಾರ್ವೇಜಿಯನ್ ಬರಹಗಾರ ಮತ್ತು ನಾಟಕಕಾರ ಜಾನ್ ಫೋಸ್ಸೆ ನೀಡಿದ್ದರು.

ಈ ವರ್ಷ ಗ್ರೀಸ್ ನ ಲೇಖಕ ,ನಾಟಕಕಾರ, ನಿರ್ದೇಶಕ

ಥಿಯೋಡೋರೋಸ್ ಟೆರ್ಜೊಪೌಲೋಸ್ ವಿಶ್ವ ರಂಗಭೂಮಿ ದಿನದ ಸಂದೇಶ ನೀಡಿದ್ದಾರೆ.

ವೃತ್ತಿ ರಂಗಭೂಮಿಯ ಕಲಾವಿದರು ರಂಗಭೂಮಿಯ ಬೆಳವಣಿಗೆಗೆ ತಮ್ಮದೇ ಆದ ಕೊಡುಗೆ ನೀಡುತ್ತಾ ಬಂದಿದ್ದಾರೆ.ಇದಕ್ಕೆ ಪೂರಕವಾಗಿ ಹವ್ಯಾಸಿ ರಂಗ ಕಲಾವಿದರು ಸಹ ರಂಗಭೂಮಿಗೆ ತಮ್ಮದೇ ಆದ ಕೊಡುಗೆಗಳನ್ನು ನೀಡುತ್ತಿದ್ದಾರೆ.ಜಗದ ಎಲ್ಲಾ ಕಡೆ ನಾಟಕ ಚಟುವಟಿಕೆಗಳು ಇನ್ನೂ ಹೆಚ್ಚು ಸಕ್ರಿಯವಾಗಲಿ ನಮ್ಮ ಸಾಂಸ್ಕೃತಿಕ ಪರಂಪರೆ  ಅಭಿವೃದ್ಧಿಯಾಗಲಿ ಎಂದು ಆಶಿಸೋಣ.


ಸಿಹಿಜೀವಿ ವೆಂಕಟೇಶ್ವರ

ತುಮಕೂರು







20 ಮಾರ್ಚ್ 2025

ಬಾಗ್ಡೋಗ್ರಾ ವಿಮಾನ ನಿಲ್ದಾಣ.

 ಭೂತಾನ್ ಪ್ರವಾಸ 

ಬಾಗ್ಡೋಗ್ರಾ ವಿಮಾನ ನಿಲ್ದಾಣ.




ಬಾಗ್ಡೋಗ್ರಾ ವಿಮಾನ ನಿಲ್ದಾಣ.    ಹೌದು ನನಗೂ ಮೊದಲು ಉಚ್ಚರಿಸಲು ಕಷ್ಟವಾದ ಹೆಸರು.

ಬೆಂಗಳೂರಿನ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಬೆಳಗಿನ ಜಾವ ಹೊರಟ ನಮ್ಮ ಆಕಾಸ ಏರ್ಲೈನ್ ಪಶ್ಚಿಮ ಬಂಗಾಳದ  ಬಾಗ್ಡೋಗ್ರಾ ವಿಮಾನ ನಿಲ್ದಾಣದಲ್ಲಿ ಲ್ಯಾಂಡ್ ಆಗುವ ಮುನ್ನ ಸಾವಿರಾರು ಕಿಲೋಮೀಟರ್ ಪಯಣ ಮಾಡಿದ್ದೆವು. ಭೂತಾನ್ ಪ್ರವಾಸ ಕೈಗೊಳ್ಳಲು ನಾವು ಈ ವಿಮಾನ ನಿಲ್ದಾಣದಲ್ಲಿ ಇಳಿದು ರಸ್ತೆ ಮೂಲಕ ಹಸಿಮರ ಪುಟ್ಶಿಲಾಂಗ್ ಮೂಲಕ ಭೂತಾನ್ ಪ್ರವೇಶ ಮಾಡಲು ಪ್ಲಾನ್ ಮಾಡಿ ಹೊರಟಿದ್ದೆವು. ಬೆಳಗಿನ 8 ಗಂಟೆಗೆ ಬಾಗ್ಡೋಗ್ರಾ ವಿಮಾನ ನಿಲ್ದಾಣದಲ್ಲಿ ನಾವು ಲ್ಯಾಂಡ್ ಆಗುತ್ತೇವೆ.ವಿಮಾನ ನಿಲ್ದಾಣದಲ್ಲಿ ಪೋಟೋ ವೀಡಿಯೋ ಮಾಡಬೇಡಿ ಎಂದು ಗಗನ ಸಖಿ ಹೇಳಿದರು.


ಬಾಗ್ಡೋಗ್ರಾ ವಿಮಾನ ನಿಲ್ದಾಣ ಪಶ್ಚಿಮ ಬಂಗಾಳದ ಸಿಲಿಗುರಿ ನಗರಕ್ಕೆ ಸೇವೆ ಸಲ್ಲಿಸುವ ಕಸ್ಟಮ್ಸ್ ವಿಮಾನ ನಿಲ್ದಾಣವಾಗಿದೆ. ಇದು  ಭಾರತೀಯ ವಾಯುಪಡೆಯ ಬಾಗ್ಡೋಗ್ರಾ ವಾಯುಪಡೆ ನಿಲ್ದಾಣದಲ್ಲಿ ನಾಗರಿಕ ಎನ್ಕ್ಲೇವ್ ಆಗಿ ಕಾರ್ಯನಿರ್ವಹಿಸುತ್ತದೆ. ಇದು ಡಾರ್ಜಿಲಿಂಗ್, ಗ್ಯಾಂಗ್ಟಾಕ್, ಕುರ್ಸಿಯೊಂಗ್, ಕಾಲಿಂಪಾಂಗ್, ಮಿರಿಕ್ ಮತ್ತು ಉತ್ತರ ಬಂಗಾಳ ಪ್ರದೇಶದ ಇತರ ಭಾಗಗಳು ಮತ್ತು ಈಶಾನ್ಯ ಬಿಹಾರದ ಗಿರಿಧಾಮಗಳಿಗೆ ಪ್ರವೇಶ ದ್ವಾರವಾಗಿದೆ. ಭಾರತ ಸರ್ಕಾರವು 2002 ರಲ್ಲಿ ಈ   ವಿಮಾನ ನಿಲ್ದಾಣಕ್ಕೆ ಸೀಮಿತ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಸ್ಥಾನಮಾನವನ್ನು ನೀಡಿದೆ.  ಬ್ಯಾಂಕಾಕ್-ಸುವರ್ಣಭೂಮಿ ಮತ್ತು ಪಾರೋಗೆ ಸೀಮಿತ ಅಂತರರಾಷ್ಟ್ರೀಯ ಕಾರ್ಯಾಚರಣೆಗಳೊಂದಿಗೆ  ಇದು ಪಶ್ಚಿಮ ಬಂಗಾಳದ ಎರಡನೇ ಅತ್ಯಂತ ಜನನಿಬಿಡ ವಿಮಾನ ನಿಲ್ದಾಣವಾಗಿದೆ.

 ಹಾಗೂ ಭಾರತದ 17 ನೇ ಅತ್ಯಂತ ಜನನಿಬಿಡ ವಿಮಾನ ನಿಲ್ದಾಣ. ಇದು ವಾಯುಯಾನ ಟರ್ಬೈನ್ ಇಂಧನದ ಮೇಲೆ ಶೂನ್ಯ ಮಾರಾಟ ತೆರಿಗೆಯನ್ನು ಹೊಂದಿರುವ ಭಾರತದ ಕೆಲವೇ ವಿಮಾನ ನಿಲ್ದಾಣಗಳಲ್ಲಿ ಒಂದಾಗಿದೆ.  ಈ ವಿಮಾನ ನಿಲ್ದಾಣವು 13 ವಿಮಾನ ನಿಲ್ದಾಣಗಳಿಗೆ ಮಾರ್ಗಗಳನ್ನು ಹೊಂದಿದೆ ಮತ್ತು 3 ದೇಶಗಳಿಗೆ ಭಾರತ , ಭೂತಾನ್ ಮತ್ತು ಥೈಲ್ಯಾಂಡ್ ಸಂಪರ್ಕ ಕಲ್ಪಿಸುತ್ತದೆ.  

ವಿಮಾನ ನಿಲ್ದಾಣ ತಲುಪಿ ಅಲ್ಲೇ ಪ್ರೇಶ್ ಅಪ್ ಆಗಿ ಹೊರಬಂದ ನಮ್ಮ ತಂಡವನ್ನು ನಮ್ಮ ಟೂರ್ ಮೇನೇಜರ್ ಪ್ರಕಾಶ್ ಸ್ವಾಗತಿಸಿ ತಿನ್ನಲು ಪುರಿ ಮತ್ತು ಸಾಗು ಕೊಟ್ಟರು.ಮುದ್ದೆ ಅನ್ನ ತಿನ್ನುವ ನಮಗೆ ಪುರಿ ಸಾಗು‌ ಅಷ್ಟು ‌ರುಚಿಸಲಿಲ್ಲ. ನಮಗಾಗಿ ಸಿದ್ದವಾಗಿದ್ದ ಎರಡು ಮಿನಿ ಬಸ್ ಏರಿ ಜೈಗಾನ್ ಕಡೆ ಪಯಣ ಮುಂದುವರೆಸಿದೆವು.




18 ಮಾರ್ಚ್ 2025

ಭೂತಾನ್ ನ ಹೆಬ್ಬಾಗಿಲು ಫುಂಟ್‌ಶೋಲಿಂಗ್


 


ಭೂತಾನ್ ನ ಹೆಬ್ಬಾಗಿಲು 

ಫುಂಟ್‌ಶೋಲಿಂಗ್ 


  ಫುಂಟ್‌ಶೋಲಿಂಗ್! ಮೊದಲ ಬಾರಿ ಹೆಸರು ಕೇಳಿದರೆ ವಿಚಿತ್ರ ಎನಿಸಬಹುದು. ನಾವು ಭೂತಾನ್ ಪ್ರವಾಸ ಮಾಡಲು ಬಾಗ್ಡೋಗ್ರಾ ವಿಮಾನ ನಿಲ್ದಾಣದಿಂದ ರಸ್ತೆ ಮೂಲಕ ಜೈಗಾನ್ ತಲುಪಿ ಅದಕ್ಕೆ ಹೊಂದಿಕೊಂಡಿರುವ ಫುಂಟ್ ಶೋಲಿಂಗ್ ಸೇರಲು ಹೊರಟೆವು. ಇದು ದಕ್ಷಿಣ ಭೂತಾನ್‌ನ ಗಡಿ ಪಟ್ಟಣವಾಗಿದ್ದು ಚುಖಾ ಜಿಲ್ಲೆಯ ಆಡಳಿತ ಸ್ಥಾನವಾಗಿದೆ.

ಫ್ಯೂಯೆಂಟ್‌ಶೋಲಿಂಗ್ ಭಾರತದ ಜೈಗಾಂವ್ ಪಟ್ಟಣಕ್ಕೆ ಹೊಂದಿಕೊಂಡಿದೆ. ಗಡಿಯಾಚೆಗಿನ ವ್ಯಾಪಾರವು ಸ್ಥಳೀಯ ಆರ್ಥಿಕತೆಯನ್ನು ಅಭಿವೃದ್ಧಿಪಡಿಸಲು ಕಾರಣವಾಗಿದೆ. ಥಿಂಫುಗೆ ಸ್ಥಳಾಂತರಗೊಳ್ಳುವ ಮೊದಲು ಈ ಪಟ್ಟಣವು ಬ್ಯಾಂಕ್ ಆಫ್ ಭೂತಾನ್‌ನ ಪ್ರಧಾನ ಕಚೇರಿಯನ್ನು ಹೊಂದಿತ್ತು . 


ಮೊದಲು ಭೂತಾನ್ ನಲ್ಲಿ ಕಾಂಕ್ರೀಟ್ ಮನೆಗಳನ್ನು ನಿರ್ಮಿಸಲು ಅವಕಾಶವಿರಲಿಲ್ಲ.

ಭೂತಾನ್ ನ ದಿವಂಗತ ಪ್ರಧಾನಿ ಜಿಗ್ಮೆ ದೋರ್ಜಿ ಫುಂಟ್‌ಶೋಲಿಂಗ್ ನಿವಾಸಿಗಳಿಗೆ ಕಾಂಕ್ರೀಟ್ ಮನೆಗಳನ್ನು ನಿರ್ಮಿಸಬಹುದು ಎಂದು ಆದೇಶ ಮಾಡಿದ ಪರಿಣಾಮವಾಗಿ ತಾಶಿ ಗ್ರೂಪ್ ಆಫ್ ಕಂಪನಿಗಳು ಮೊದಲ ಕಾಂಕ್ರೀಟ್ ಮನೆಯನ್ನು ನಿರ್ಮಿಸಿದವು. ಇದರ ಪರಿಣಾಮವಾಗಿ ಈ ಪ್ರದೇಶ ಕ್ರಮೇಣವಾಗಿ ನಗರವಾಗಿ ಅಭಿವೃದ್ಧಿಯಾಯಿತು.


ಫಂಟ್‌ಶೋಲಿಂಗ್ ಒಂದು ಬಿಸಿ ಉಷ್ಣವಲಯದ ಮಾನ್ಸೂನ್ ಹವಾಮಾನವನ್ನು ಹೊಂದಿದ  ತಾಣವಾಗಿದ್ದು   ಸರಾಸರಿ ವಾರ್ಷಿಕ 3,953 ಮಿಲಿಮೀಟರ್  ಮಳೆಯನ್ನು ಪಡೆಯುತ್ತದೆ ಬೇಸಿಗೆಯು ದೀರ್ಘವಾಗಿರುತ್ತದೆ.ನಾವು ಅಕ್ಟೋಬರ್ ತಿಂಗಳಲ್ಲಿ ಅಲ್ಲಿಗೆ ಭೇಟಿ ನೀಡಿದರೂ ಬೆಳಗಿನ ಎಂಟು ಗಂಟೆಗಾಗಲೇ ಸೂರ್ಯನ ಕಿರಣಗಳು ನಮ್ಮ ನೆತ್ತಿಯನ್ನು ಸುಡಲಾರಂಬಿಸಿದ್ದವು.

  

ಭಾರತ-ಭೂತಾನ್ ಗಡಿಯು ಎರಡು ವಿಭಿನ್ನ ನಗರ ಪ್ರದೇಶಗಳನ್ನು ಪ್ರತ್ಯೇಕಿಸುತ್ತದೆ. ಗಡಿಯಾಚೆಗಿನ ಜೈಗಾಂವ್ ದೊಡ್ಡದಾಗಿದೆ, ಗದ್ದಲ ಮತ್ತು ಜೋರಾಗಿದೆ, ಇದು ಪಶ್ಚಿಮ ಬಂಗಾಳದ ಇತರ ಅನೇಕ ವಾಣಿಜ್ಯ ಕೇಂದ್ರಗಳಂತೆಯೇ ಇದೆ, ಆದರೂ ಅನೇಕ ಭೂತಾನ್ ಖರೀದಿದಾರರನ್ನು ಹೊಂದಿದೆ. ಫಂಟ್‌ಶೋಲಿಂಗ್ ಭೂತಾನ್‌ನ ಆರ್ಥಿಕ, ಕೈಗಾರಿಕಾ ಮತ್ತು ವ್ಯಾಪಾರ ರಾಜಧಾನಿಯಾಗಿರುವುದರಿಂದ ಇತರ ಭೂತಾನ್ ಪಟ್ಟಣಗಳಿಗಿಂತ ವಿಶಿಷ್ಟವಾಗಿ ಹೆಚ್ಚು ನಗರವಾಗಿದೆ. 


ಭೂತಾನ್‌ಗೆ ವ್ಯಾಪಾರವಾಗುವ ಹೆಚ್ಚಿನ ಸರಕುಗಳು ಫುಂಟ್‌ಶೋಲಿಂಗ್ ಮೂಲಕ ಸಾಗಣೆಯಾಗುತ್ತವೆ. ಇದು ಭಾರತದೊಂದಿಗಿನ ವ್ಯಾಪಾರಕ್ಕಾಗಿ ಭೂತಾನ್‌ಗೆ ಪ್ರವೇಶ ದ್ವಾರವಾಗಿದೆ. 


ಗಡಿಯ ಜೈಗಾನ್ ನಿಂದ  ಭೂತಾನಿನ ಪ್ರವೇಶಕ್ಕೆ  ಸ್ಥಳೀಯರು ಕೆಲವೊಮ್ಮೆ ದಾಖಲೆಗಳನ್ನು ನೀಡದೆ  ದಾಟಬಹುದು. ಭಾರತ, ಬಾಂಗ್ಲಾದೇಶ ಮತ್ತು ಮಾಲ್ಡೀವ್ಸ್‌ನ ಪ್ರವಾಸಿಗರು ಭೂತಾನ್‌ಗೆ ಪ್ರವೇಶಿಸಲು ವೀಸಾ ಅಗತ್ಯವಿಲ್ಲ ಆದರೆ ಪಾಸ್‌ಪೋರ್ಟ್ ಅಥವಾ ಮತದಾರರ ಗುರುತಿನ ಚೀಟಿಯಂತಹ ಗುರುತಿನ ಪುರಾವೆಗಳನ್ನು ತೋರಿಸಬೇಕು ಮತ್ತು ಭೂತಾನ್‌ಗೆ ಪ್ರವೇಶಿಸಲು ಫಂಟ್‌ಶೋಲಿಂಗ್‌ನಲ್ಲಿ ಪರವಾನಗಿಗಾಗಿ ಅರ್ಜಿ ಸಲ್ಲಿಸಬೇಕು. ಇತರ ವಿದೇಶಿಯರಿಗೆ ಬಾಡಿಗೆ ನೋಂದಾಯಿತ ಪ್ರವಾಸ ಮಾರ್ಗದರ್ಶಿಯಿಂದ ಪ್ರಸ್ತುತಪಡಿಸಲಾದ ವೀಸಾ ಅಗತ್ಯವಿದೆ. ಪಟ್ಟಣದ ಪ್ರವೇಶ ದ್ವಾರವನ್ನು ಸಶಸ್ತ್ರ ಸೀಮಾ ಬಲದ  ಮತ್ತು ಭೂತಾನ್ ಸೇನಾ ಸಿಬ್ಬಂದಿ ಕಾವಲು ಕಾಯುತ್ತಿದ್ದರು.

ಈ ಪಟ್ಟಣವು ರಾಷ್ಟ್ರೀಯ ಹೆದ್ದಾರಿಯ ಮೂಲಕ ಉಳಿದ ಪ್ರಮುಖ ನಗರಗಳೊಂದಿಗೆ ಸಂಪರ್ಕ ಹೊಂದಿದೆ. ಈ ಪಟ್ಟಣವು ವಿಮಾನ ನಿಲ್ದಾಣ ಸೌಲಭ್ಯಗಳನ್ನು ಅಥವಾ ನೇರ ರೈಲು ಮಾರ್ಗವನ್ನು ಹೊಂದಿಲ್ಲ.ಆದರೆ ಭಾರತೀಯ ರೈಲ್ವೆಯು ಹತ್ತಿರದಲ್ಲಿ ರೈಲು ನಿಲ್ದಾಣಗಳನ್ನು ಹೊಂದಿದೆ. ಉತ್ತರ ಬಂಗಾಳದ ಹತ್ತಿರದ ರೈಲ್ವೆ ಸ್ಟೇಷನ್  ಹಸಿಮಾರದಿಂದ ಫುಂಟ್‌ಶೋಲಿಂಗ್‌ಗೆ 20 ಕಿಮೀ  ಇದೆ. ಸಿಲಿಗುರಿ, ನ್ಯೂ ಜಲ್ಪೈಗುರಿ ಮತ್ತು ನ್ಯೂ ಅಲಿಪುರ್ದೂರ್ ಹತ್ತಿರದ ದೊಡ್ಡ ರೈಲ್ವೆ ಜಂಕ್ಷನ್‌ಗಳಾಗಿವೆ. ಉತ್ತರ ಬಂಗಾಳದ ಪಟ್ಟಣಗಳಿಂದ ಬಸ್‌ಗಳು ಲಭ್ಯವಿವೆ. ಭಾರತೀಯ ಮೂಲದ ಖಾಸಗಿ ಮತ್ತು ಭೂತಾನ್ ಸರ್ಕಾರದ ಬಸ್ ಗಳು ಹೀಗೆ ಎರಡೂ ರೀತಿಯ ಬಸ್‌ಗಳನ್ನು ನೋಡಬಹುದು. ನಾವು ಮೊದಲೇ ನಮ್ಮ ಟ್ರಾವೆಲ್ ಏಜೆನ್ಸಿ ಮೂಲಕ ಬಸ್ ಬುಕ್ ಮಾಡಿದ್ದರಿಂದ ಎರಡು ಮಿನಿ ಬಸ್ ಗಳು ನಮಗಾಗಿ ಕಾದಿದ್ದವು.

ಅವುಗಳನ್ನು ಏರಿ  ಪುಂಟ್ ಶಿಲಾಂಗ್ ಕಡೆಗೆ ತಲುಪುವ ಮುನ್ನ ಒಂದು ರಾತ್ರಿ ಅಲ್ಲೇ ತಂಗಿದ್ದೆವು.


ಸಿಹಿಜೀವಿ ವೆಂಕಟೇಶ್ವರ

ತುಮಕೂರು







ಕಲ್ಪನಾ ಚಾವ್ಲಾ..


 ಚಿಕ್ಕ ವಯಸ್ಸಿನಲ್ಲಿ ಹರ್ಯಾಣ ದ ಕರ್ನಾಲ್ ನಲ್ಲಿ ರಾತ್ರಿ ಅಂಗಳದಲ್ಲಿ ತನ್ನ ಕುಟುಂಬದ ಜೊತೆಯಲ್ಲಿ ಮಲಗಿದ್ದಾಗ ನಕ್ಷತ್ರ ಎಣಿಸುವ ಕೆಲಸ ಮಾಡದೇ ಆ ನಕ್ಷತ್ರಗಳಿರುವ ಕಡೆ ತನ್ನ ಗುರಿ ನೆಟ್ಟು ಅದರಲ್ಲಿ ಯಶಸ್ಸು ಕಂಡು ಬಾಹ್ಯಾಕಾಶಕ್ಕೆ ನೆಗೆದು ಸಾಹಸ ಮಾಡಿ‌ ಕೊನೆಗೆ ಬಾಹ್ಯಾಕಾಶದಲ್ಲೇ ಮರಣ ಹೊಂದಿ ನಕ್ಷತ್ರವಾದ ನಕ್ಷತ್ರವೇ ಕಲ್ಪನಾ ಚಾವ್ಲಾ! ಇಂದು ಅವರ ಹುಟ್ಟಿದ ದಿನ ಕೋಟ್ಯಾಂತರ ಬಾಹ್ಯಾಕಾಶ ಪ್ರಿಯರ ಸ್ಪೂರ್ತಿ ನಮ್ಮ ಕಲ್ಪನಾ ಚಾವ್ಲ.


ಕಲ್ಪನಾ ಚಾವ್ಲಾ ಮಾರ್ಚ್ 17 ರ 1962ರಲ್ಲಿ ಜನಿಸಿದ ಅವರು   ಗಗನಯಾತ್ರಿಯಾಗಿ ಬಾಹ್ಯಾಕಾಶ ಎಂಜಿನಿಯರ್ ಆಗಿ ಅವರು ಬಾಹ್ಯಾಕಾಶಕ್ಕೆ ಹಾರಿದ ಮೊದಲ ಭಾರತೀಯ ಮೂಲದ ಮಹಿಳೆ ಎಂಬ ಕೀರ್ತಿಗೆ ಪಾತ್ರರಾದರು. ಚಾವ್ಲಾ ಚಿಕ್ಕ ವಯಸ್ಸಿನಿಂದಲೂ ಬಾಹ್ಯಾಕಾಶ ಎಂಜಿನಿಯರಿಂಗ್‌ನಲ್ಲಿ ಆಸಕ್ತಿಯನ್ನು ವ್ಯಕ್ತಪಡಿಸಿದರು ಮತ್ತು ಭಾರತದ ದಯಾಳ್ ಸಿಂಗ್ ಕಾಲೇಜು ಮತ್ತು ಪಂಜಾಬ್ ಎಂಜಿನಿಯರಿಂಗ್ ಕಾಲೇಜಿನಲ್ಲಿ ಎಂಜಿನಿಯರಿಂಗ್ ಪದವಿ ಪಡೆದು   ಯುನೈಟೆಡ್ ಸ್ಟೇಟ್ಸ್‌ಗೆ ಪ್ರಯಾಣ ಬೆಳೆಸಿದರು. ಅಲ್ಲಿ ಅವರು ತಮ್ಮ ಎಂಎಸ್ಸಿ ಮತ್ತು ಪಿಎಚ್‌ಡಿ ಗಳಿಸಿದರು, ೧೯೯೦ ರ ದಶಕದ ಆರಂಭದಲ್ಲಿ ನೈಸರ್ಗಿಕ ಯುನೈಟೆಡ್ ಸ್ಟೇಟ್ಸ್ ನಾಗರಿಕರಾದರು.

ನಾಸಾ ಸೇರಿ ಮೊದಲ ಗಗನಯಾನ ಯಶಸ್ವಿಯಾಗಿ ಪೂರೈಸಿ ಎರಡನೇ ಗಗನಯಾನದಲ್ಲಿ ತನ್ನ ಆರು ಜನ ಸಹ ಯಾತ್ರಿಗಳೊಂದಿಗೆ ಅಕಾಲ ಮರಣ ಹೊಂದಿದರು.

ಕಲ್ಪನಾ ರ ಸಾಧನೆಯನ್ನು ಎಲ್ಲರೂ ಪ್ರಶಂಸಿಸೋಣ.

#ಕಲ್ಪನಾ #ಚಾವ್ಲಾ #kalpana @highlight CgVenkateshwara Cg #KalpanaChawla #kalpanachavla #NASA #NasaSpaceAppsChallenge

28 ಫೆಬ್ರವರಿ 2025

ಕಂಬನಿಯ ಕುಯಿಲು ಪುಸ್ತಕ ಪರಿಚಯ.


 


ಕಂಬನಿಯ ಕುಯಿಲು..


ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಕಟಿಸಿರುವ ಶಾ ಮಂ ಕೃಷ್ಣ ರಾಯರವರ ಸಂಪಾದಕತ್ವದ ತ ರಾ ಸು ಸಾಹಿತ್ಯ ಸಂಪದ ಸಂಪುಟ ಒಂದರ ಐತಿಹಾಸಿಕ ಕಾದಂಬರಿಗಳ ಸೆಟ್ ನಲ್ಲಿ ಮೂರು ಕಾದಂಬರಿಗಳಲ್ಲಿ.   ಎರಡನೇ ಕಾದಂಬರಿ "ಕಂಬನಿಯ ಕುಯಿಲು" ಕಾದಂಬರಿಯನ್ನು ಶಿವರಾತ್ರಿ ಜಾಗರಣೆ ಮಾಡುತ್ತಾ ಓದಿದೆ.


ಮದಕರಿನಾಯಕರ ಮರಣದ ಶೋಕದಿಂದ ಮೊದಲುಗೊಳ್ಳುವ ಕಾದಂಬರಿಯು ಗೌರವ್ವನಾಗತಿಯು ತನ್ನ ಹಠದಿಂದಾಗಿ ಸಹಗಮನಕ್ಕೆ ಸಿದ್ದವಾಗಿರುವ ಹಿರಿಯ ಓಬವ್ವನಾಗತಿಯ ಮೇಲೆ ದುರ್ಗದ ಭವಿಷ್ಯದ ಭಾರ ಹಾಕಿ ತಾನು ಸಹಗಮನ ಮಾಡುತ್ತಾಳೆ. ಇಹಲೋಕದ ಬಂಧನಗಳಿಂದ ಮುಕ್ತಳಾಗಿ ಸ್ವರ್ಗ ಸೇರುವ ಆತುರದಲ್ಲಿದ್ದ ಓಬವ್ವನಾಗತಿಗೆ ಬಿದ್ದ ಕರ್ತವ್ಯ ನಿರ್ವಹಿಸುವಾಗ ಇನ್ನೇನು ಎಲ್ಲಾ ತಾವಂದುಕೊಂಡಂತೆ   ಮದಕರಿನಾಯಕರ   ಆಸೆಯ ಈಡೇರಿಕೆಯಾಯಿತು ಎನ್ನುವಾಗ ಬರುವ ವಿವಿಧ ವಿಘ್ನಗಳನ್ನು ಭುವನಪ್ಪ, ಕಸ್ತೂರಿ ನಾಯಕ, ಗಿರಿಜೆ ಮುಂತಾದವರ ಬೆಂಬಲದಿಂದ ಚಾಕಚಕ್ಯತೆಯಿಂದ ನಿಭಾಯಿಸಿದರೂ ಕೊನೆಗೆ ಹೊಂಡದಲ್ಲಿ ಬಿದ್ದು ಆತ್ಮಹತ್ಯೆ ಮಾಡಿಕೊಂಡದ್ದು ಓದುವಾಗ ಕಂಬನಿ ಬೀಳುತ್ತದೆ.

 

ಲಿಂಗಪ್ಪನಾಯಕರ ಮಾತೃಪ್ರೇಮ, ತ್ಯಾಗಗಳ ಬಗ್ಗೆ ಓದುವಾಗ ಮನ ನೋಯುತ್ತದೆ. ಭುವನಪ್ಪನವರಿಗೆ ದುರ್ಗದ ಮೇಲಿರುವ ಅಪಾರ ನಿಷ್ಠೆಯಿಂದ ಆಗಲಿರುವ ಅನಾಹತ  ತಪ್ಪಿಸಲು ಶತಾಯಗತಾಯ ಪ್ರಯತ್ನ ಮಾಡುವ ಜೊತೆಯಲ್ಲಿ ತನ್ನ  ಪ್ರಧಾನಿ ಹುದ್ದೆಯನ್ನು ರಾಜ್ಯದ ಒಳಿತಿಗಾಗಿ ತ್ಯಾಗ ಮಾಡಿದರೂ ಕೊನೆಗೆ ತಮ್ಮ ಕೈ ಮೀರಿ ಒಳಶತೃಗಳ ಪಿತೂರಿಗೆ ಪ್ರಾಣ ಅರ್ಪಿಸಿದ್ದನ್ನು ಓದುವಾಗ ಕಂಬನಿ ಹನಿಯುತ್ತದೆ.

  ನ್ಯಾಯದ ಹೆಸರಿನಲ್ಲಿ ದ್ವೇಷ,ಕಠೋರತೆ, ಹಠಗಳೇ ರೂಪವೆತ್ತಂತೆ ನಿಲ್ಲುವ ದಳವಾಯಿ ಮುದ್ದಣ್ಣ ಖಳನಾಯಕನ ಕುತಂತ್ರಗಳನ್ನು ಓದುವಾದ ಮೈ ಉರಿಯುತ್ತದೆ.  ತನ್ನ ಅಸಮಾಧಾನದ ಸಣ್ಣ ಕಿಡಿಯಿಂದ ಆರಂಭವಾದ ಒಳಸಂಚು ದುರ್ಗವನ್ನೇ ದಹಿಸುವಾಗ ಅದನ್ನು ಹಿಡಿತಕ್ಕೆ ತರಲಾಗದೇ ತಾವೇ ಬೆಂದು ಮಾರಣಹೋಮಕ್ಕೆ ಮೊದಲ ಬಲಿಯಾಗುವ ದಳವಾಯಿ ದೇಸಣ್ಣನ ರುಂಡ ಎಗರುವಾಗ ಭಯವಾಗುತ್ತದೆ.

  ದುರ್ಗದ ಅಂತಃಕಲಹದಲ್ಲಿ ಕರ್ತವ್ಯ ನಿಷ್ಠೆಗೆ ಹೆಸರಾದ   ಗಿರಿಜವ್ವ ತದ್ವಿರುದ್ಧವಾದ ಗುಣಗಳ   ವೀರನಾಯಕನ ದುರಂತ ಅಂತ್ಯವನ್ನು ಓದುವಾಗ ನಮ್ಮ ಅಳು ತಡೆಯುವುದು ಕಷ್ಟ.

 ಕಸ್ತೂರಿನಾಯಕ ದುರ್ಗದ ನಾಯಕರ ಪ್ರಾಣ ರಕ್ಷಣಾ ಕವಚ.ಆದರೂ ನಾಯಕರ ಸಾವಿನ ಸುದ್ದಿ ತಿಳಿದು ತನ್ನ ಆತ್ಮಹುತಿ ಮಾಡಿಕೊಳ್ಳುವುದು ನೋಡಿ ಮನ ಮಿಡಿಯುತ್ತದೆ. 

ಈ ಕಾದಂಬರಿ ಓದುವಾಗ  ರಾಜ್ಯ, ಅರಮನೆ, ವೈಭವ, ಅಧಿಕಾರಗಳ ಬಗ್ಗೆ ಜಿಗುಪ್ಸೆ ಮೂಡಿಸುತ್ತದೆ.  

ಕಾದಂಬರಿ ಓದಿ ಮುಗಿಸಿದ ಎರಡು ಮೂರು ದಿನ ಒಂದು ರೀತಿಯ ಬೇಸರ ಆವರಿಸುವುದು ಸತ್ಯ. ಅಷ್ಟು ಪರಿಣಾಮಕಾರಿಯಾಗಿ ದುರ್ಗದ ಇತಿಹಾಸದ ಹಿನ್ನೆಲೆಯಲ್ಲಿ ಕಾದಂಬರಿ ರಚಿಸಿದ   ತ ರಾ ಸು ರವರ ಪ್ರತಿಭೆಯನ್ನು ಎಷ್ಟು ಹೊಗಳಿದರೂ ಸಾಲದು. ಅವರ ಮತ್ತೊಂದು ಕಾದಂಬರಿ "ರಾಜ್ಯ ದಾಹ " ಓದಿ ಮತ್ತೆ ಸಿಗುತ್ತೇನೆ

ಧನ್ಯವಾದಗಳು

ನಿಮಗೆ ತ ರಾ ಸು ರವರ ಯಾವ ಕಾದಂಬರಿ ಇಷ್ಟ ಎಂದು ಹೇಳಬಹುದು.


ಸಿಹಿಜೀವಿ ವೆಂಕಟೇಶ್ವರ