24 August 2021

NEP 2020.ಲೇಖನ


 


ಹೊಸ ಭರವಸೆಯ ಶಿಕ್ಷಣ ನೀತಿ 


ಹೊಸ ಶಿಕ್ಷಣ ನೀತಿಯನ್ನು ಜಾರಿಗೆ ತರುವ ಮೂಲಕ ಕರ್ನಾಟಕ ರಾಜ್ಯ ಇತಿಹಾಸ ಸೃಷ್ಟಿ ಮಾಡಿದೆ ತನ್ಮೂಲಕ ಇತರೆ ರಾಜ್ಯಗಳಿಗೆ ಮಾದರಿಯಾಗಿದೆ.

2020 ರ ಹೊಸ ಶಿಕ್ಷಣ ನೀತಿಯು ದೇಶದ ಶಿಕ್ಷಣ ಕ್ಷೇತ್ರದಲ್ಲಿ ಅಪಾರವಾದ ಬದಲಾವಣೆಗಳನ್ನು ತರುವ ಮೂಲಕ ರಾಷ್ಟ್ರದ  ಬೆಳವಣಿಗೆಗೆ ಪೂರಕವಾದ ವಾತಾವರಣ ಸೃಷ್ಟಿಸುವ ಕನಸು ಕಂಡಿದೆ.


ಈಗಾಗಲೇ 1968 ಮತ್ತು 1986 ರ ಶಿಕ್ಷಣ ನೀತಿಗಳಿಂದ ದೇಶದ ಶಿಕ್ಷಣ ವ್ಯವಸ್ಥೆ ತಕ್ಕ ಮಟ್ಟಿಗೆ ಬದಲಾವಣೆಗಳನ್ನು ಕಂಡಿದ್ದರೂ  ಇಪ್ಪತ್ತೊಂದನೇ ಶತಮಾನದ ಆಧುನಿಕತೆಯ ,ತಂತ್ರಜ್ಞಾನದ, ಕೃತಕ ಬುದ್ದಿ ಮತ್ತೆಯ , ಬೆಳವಣಿಗೆಗೆ ತಕ್ಕಂತೆ ಅನಿವಾರ್ಯವಾಗಿ ಶಿಕ್ಷಣದ ಆದ್ಯತೆ ಮತ್ತು ಗುರಿಗಳು ಬದಲಾಗಬೇಕಾಗಿತ್ತು ಈ ನಿಟ್ಟಿನಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಭಾರತೀಯರಾದ ನಾವುಗಳು ಅಪ್ಡೇಟ್ ಆಗಲು ಸ್ವಾಗತಿಸಲೇ ಬೇಕಿದೆ.


ಈಗಿರುವ 10+2 ಮಾದರಿಯ ಶಿಕ್ಷಣವನ್ನು 5+3+3+4 ಮಾದರಿಯಲ್ಲಿ ಬದಲಾವಣೆ ಮಾಡಲು ವೈಜ್ಞಾನಿಕ ತಳಹದಿಯನ್ನು ನೀತಿ ನಿರೂಪಕರು ವಿಶ್ಲೇಷಣೆ ಮಾಡಿರುವುದನ್ನು ಗಮನಿಸಬಹುದು. ಸಾಮಾನ್ಯವಾಗಿ ಮಗುವಿನ ಮೆದುಳಿನ 85%ರಷ್ಟು ಬೆಳವಣಿಗೆಯು  6 ವರ್ಷಗಳ ವರೆಗೆ  ಆಗುತ್ತದೆ ಈ ಹಂತದಲ್ಲಿ ಮಗುವಿಗೆ ಕಥೆ, ಹಾಡು, ಸಂಗೀತಗಳ ಮೂಲಕ ಹೇಳಿಕೊಟ್ಟರೆ ಜೀವನ ಪೂರ್ತಿ ನೆನಪಿರುತ್ತದೆ , ಇದನ್ನು ಈಗಿನ ಕೆಲ ಖಾಸಗಿ ಶಾಲೆಗಳು  ಕಿಂಡರ್ ಗಾರ್ಟನ್, ಬೇಬಿ ಸಿಟ್ಟಿಂಗ್ , ಪ್ರೀ ಸ್ಕೂಲ್ ಹೀಗೆ ವಿವಿಧ ಹೆಸರುಗಳಿಂದ ಜಾರಿಗೆ ತಂದಿದ್ದರೂ ಅದು ಕೇವಲ ಉಳ್ಳವರ ಮತ್ತು ಕೆಲವೇ ಮಕ್ಕಳ ಪಾಲಿಗೆ ಲಭ್ಯವಾಗಿತ್ತು .ಈಗ ಸರ್ಕಾರ ದೇಶಾದ್ಯಂತ ಈ ವ್ಯವಸ್ಥೆ ಜಾರಿಗೆ ತರುವುದರ ಮೂಲಕ  ಸಾಮಾಜಿಕ ಮತ್ತು ಆರ್ಥಿಕವಾಗಿ ಹಿಂದುಳಿದ ಮಕ್ಕಳ ಶಿಕ್ಷಣದಲ್ಲಿ ಹೊಸ ಮನ್ವಂತರ ಕ್ಕೆ ನಾಂದಿ ಹಾಡಲಿದೆ.


ಉದ್ದೇಶಿತ ಹೊಸ ಶಿಕ್ಷಣ ನೀತಿಯಲ್ಲಿ ಸಂಕಲನಾತ್ಮಕ ಮೌಲ್ಯ ಮಾಪನಕ್ಕಿಂತ ರೂಪಣ ಮೌಲ್ಯ ಮಾಪನ ಕ್ಕೆ ಒತ್ತು ನೀಡಿರುವುದು ಮತ್ತೊಂದು ಸ್ವಾಗತಾರ್ಹ ಬೆಳವಣಿಗೆ. ಇದರ ಜೊತೆಯಲ್ಲಿ ಅಭಿವ್ಯಕ್ತಿ ಪ್ರಕ್ರಿಯೆ ಅಧಾರಿತ ಶಿಕ್ಷಣ ವ್ಯವಸ್ಥೆ ಗೆ ಹೆಚ್ಚು ಒತ್ತು ನೀಡಿದೆ. ಕೇವಲ ಸಾಂಪ್ರದಾಯಿಕ ವಿಷಯಗಳಾದ ಗಣಿತ ,ವಿಜ್ಞಾನ, ವಿಷಯಗಳ ಜೊತೆಗೆ ಕಲೆ, ದೈಹಿಕ ಶಿಕ್ಷಣ, ವೃತ್ತಿ ಶಿಕ್ಷಣ, ಕೃತಕ ಬುದ್ಧಿಮತ್ತೆ, ಮುಂತಾದ ವಿಷಯಗಳನ್ನು ಕಲಿಕೆಯನ್ನು ಪಠ್ಯ ಕ್ರಮದಲ್ಲಿ ಸೇರಿಸಲು ಉದ್ದೇಶಿಸಿದೆ. ಇದು ಮುಂದಿನ ದಿನಗಳ ಅಗತ್ಯತೆ ಕೂಡಾ ಎಂಬುದನ್ನು ನಾವು ಗಮನಿಸಬೇಕಿದೆ.


ಪ್ರಾಥಮಿಕ ಶಿಕ್ಷಣ ಮಾತೃಭಾಷೆಯಲ್ಲಿ ಆಗಬೇಕೆಂಬುದನ್ನು  ಈ ನೀತಿಯು ಒತ್ತಿ ಹೇಳಿದೆ .ಇದನ್ನು ಯಾರೂ ಅಲ್ಲಗಳೆಯಲಾರರು. ಇದರ ಜೊತೆಗೆ ಉನ್ನತ ಶಿಕ್ಷಣಕ್ಕೆ ಸಹ ಮಾತೃ ಭಾಷೆಯ ಮಾದ್ಯಮ ದಲ್ಲಿ ಕಲಿಯಲು ಅನುವು ಮಾಡಿಕೊಡುತ್ತದೆ ಸ್ಥಳೀಯ 11 ಭಾಷೆಯಲ್ಲಿ ಬಿ. ಟೆಕ್ ಅಧ್ಯಯನ ಮಾಡಬಹುದು ಅದರಲ್ಲಿ ನಮ್ಮ ಕನ್ನಡ ಭಾಷೆ ಸಹ ಸೇರಿದೆ ಇದು ವಿದ್ಯಾರ್ಥಿಗಳ ಕಲಿಕೆ ದೃಷ್ಟಿಯಿಂದ ಮತ್ತು ನಮ್ಮ ಭಾಷೆಯ ಬೆಳವಣಿಗೆಗೆ ಪೂರಕ ಎಂಬುದರಲ್ಲಿ ಸಂದೇಹವಿಲ್ಲ 


ಉನ್ನತ ಶಿಕ್ಷಣದಲ್ಲಿ ಬಹುಶಿಸ್ತೀಯ ಅಧ್ಯಯನಕ್ಕೆ ಈ ನೀತಿಯು ಅನುವುಮಾಡಿಕೊಡುತ್ತದೆ ವಿಜ್ಞಾನ ಕಲಿಯುವವರಿಗೆ ಮಾನವಿಕ ವಿಷಯಗಳ ಕಲಿಯಲು, ಮಾನವಿಕ ವಿಷಯ ಕಲಿಯುವರಿಗೆ ವಿಜ್ಞಾನ ಕಲಿಯಲು ಪ್ರೇರಣೆ ನೀಡುವುದು ಎಲ್ಲರಿಗೂ ಎಲ್ಲಾ ಜ್ಞಾನ ಪಡೆಯಲು ಸಹಾಯಕವಾಗಿದೆ.ಉನ್ನತ ಶಿಕ್ಷಣ ಕ್ಷೇತ್ರದಲ್ಲಿ ಬಹುಶಿಸ್ತಿನ , ಬಹುವಿಷಯಗಳ ,ಶಿಕ್ಷಣದ ಜೊತೆಗೆ ವಿವಿಧ ಶಿಕ್ಷಣ ವಿಭಾಗಗಳ ನಡುವೆ ,ಸಂವಹನ, ಚರ್ಚೆ, ಸಂಶೋದನೆ ಮಾಡಲು ಹೊಸ ಶಿಕ್ಷಣ ನೀತಿ ಪ್ರೇರಣೆ ನೀಡುತ್ತವೆ .


ಇಂತಹ ಉದಾತ್ತವಾದ ಚಿಂತನೆಗಳಿಂದ ಕೂಡಿರುವ , ಹೊಸ ಶಿಕ್ಷಣ ನೀತಿಯು ಭವಿಷ್ಯದ ಉತ್ತಮ ನಾಗರಿಕರನ್ನು ಮಾನವ ಸಂಪನ್ಮೂಲ ವ್ಯಕ್ತಿಗಳಾಗಿ ರೂಪಿಸಿ ತನ್ಮೂಲಕ ನಮ್ಮ ರಾಷ್ಟ್ರದ ಪ್ರಗತಿಯನ್ನು ಕಾಣಲು ಬಯಸಿದೆ. ಇಂತಹ ನೀತಿಯು ನಮ್ಮ ರಾಜ್ಯದಲ್ಲಿ ಮೊದಲಿಗೆ ಜಾರಿಗೆ ಬಂದಿರುವುದು ಕನ್ನಡಾಂಬೆಯ ಮುಕುಟಕ್ಕೆ ಮತ್ತೊಂದು ಗರಿ ಸೇರ್ಪಡೆ ಆದಂತಾಗಿದೆ. ಇದರ ಜೊತೆಗೆ ಈ ನೀತಿಯ ಸಮರ್ಪಕವಾದ ಅನುಷ್ಠಾನ ನಮ್ಮೆಲ್ಲರ ಹೊಣೆ ಎಂಬುದನ್ನು ಮರೆಯಬಾರದು.


ಸಿಹಿಜೀವಿ

ಸಿ ಜಿ ವೆಂಕಟೇಶ್ವರ


No comments: