17 October 2022

ಕನಸಿ‌ನ ಲೋಕದಲೊಂದು ಪಯಣ...

 


ಕನಸಿನ ಲೋಕದಲೊಂದು ಪಯಣ..





ಕಣ್ಣಾಡಿಸಿದರೆ  ಎಲ್ಲಾ ಕಡೆ   ಹಚ್ಚ ಹಸಿರು.ನಮ್ಮ ಉಸಿರು ಹೊರ ಬಂದರೆ ಬಾಯಿ ಮೂಗಿನಿಂದ  ಹೊಗೆ ಬಂದಂತಹ  ಅನುಭವ . ತಂಪಾದ ತಂಗಾಳಿಯು ಬಂದು ನಮ್ಮ ದೇಹ ಸೋಕಿದಾಗ ಆದ ಪರಮಾನಂದ ವರ್ಣಿಸಲಸದಳ ಅದನ್ನು ಅನುಭವಿಸಿಯೇ ತೀರಬೇಕು. ದೂರದಲ್ಲಿರುವ ಬೆಟ್ಟಗಳ ಸಾಲು ನಮ್ಮನ್ನೇ ಕೈ ಬೀಸಿ ಕರೆಯುತ್ತಿದ್ದವು. ಇನ್ನೂ ಸ್ವಲ್ಪ ದೂರದಲ್ಲಿ ಇರುವ  ಕಾನನವು ."ನೀನೇನು ಮಹಾ ?ನಾನೇ ಸುಂದರ. ಕಣ್ತುಂಬಿಸಿಕೊಳ್ಳಲು  ಸಾಲದು ನಿನ್ನ ನಯನ .' ಎಂದು ಕೂಗಿ ಹೇಳಿದಂತಿತ್ತು.  ಸಾಲು ಸಾಲಾದ ಗುರಿಶಿಖರಗಳು ನಾವೇನು ಕಮ್ಮಿ ನಮ್ಮನ್ನು ಸ್ವಲ್ಪ ನೋಡಿ ಎಂದು ಪಿಸುಗುಡುತ್ತಿದ್ದವು.  ಆ ಗಿರಿಶಿಖರಗಳಿಗೆ ಯಾರೋ ಹತ್ತಿಯನ್ನು ಪೋಣಿಸಿದ್ದರು. ಅದರ ಜೊತೆಗೆ ಹಾಗೊಮ್ಮೆ ಈಗೊಮ್ಮೆ ಮಂಜಿನ ತೆರೆಗಳು ಬಂದು ನಮಗೂ ಬೆಟ್ಟಗಳಿಗೂ ಮುತ್ತಿಟ್ಟು ನಿಧಾನವಾಗಿ ಮಾಯವಾಗುತ್ತಿದ್ದವು.ಕ್ಷಣಕಾಲ ಮುಂದಿನ ಎಲ್ಲಾ ದೃಶ್ಯಗಳು ಅದೃಶ್ಯ ನಮ್ಮ ಮುಂದೆ ಬರೀ ಬಿಳಿ ಪರದೆ . ಈಗ ಕಂಡ ಅದ್ಬುತ ದೃಶ್ಯಗಳು ಮಾಯವೇ? ಮಂತ್ರವೇ ?ಎಂಬ ಅನುಮಾನ ವ್ಯಕ್ತಪಡಿಸುತ್ತಾ ಇರುವಾಗ ನಾನೇ ಮಾಯಕಾರ ಎಂದು ರವಿಯು ಇಣುಕಿದ .ಬಿಳಿ ಪರದೆ ಮಾಯವಾಗಿ  ಮತ್ತೆ ಸೌಂದರ್ಯ ಲೋಕದ ಅನಾವರಣ....





ಇಂತಹ ಅದ್ಭುತವಾದ ದೃಶ್ಯಗಳನ್ನು ನೋಡಿದ ನಾವು ಇದು ಕನಸು ಎಂದು ತಿಳಿದೆವು.ಇಲ್ಲ.. ಇದು ಕನಸಲ್ಲ ನಿಜ ನಮ್ಮ ಮುಂದೆ ಕೆಲವರು ತಮ್ಮ ಕ್ಯಾಮೆರಾಗಳಲ್ಲಿ ಪೋಟೋ ತೆಗೆದುಕೊಳ್ಳುತ್ತಿದ್ದರು , ವೀಡಿಯೋ ಚಿತ್ರೀಕರಣದಲ್ಲಿ ತಲ್ಲೀನರಾಗಿದ್ದರು .ಆಗ ನಾವು ವಾಸ್ತವಕ್ಕೆ ಬಂದೆವು ನಿಜವಾಗಿಯೂ ಇದು ಸ್ವರ್ಗ ಸದೃಶ ಚಿತ್ರ! ದೇವರಿಂದ ಈ ತಾಣ ನಿರ್ಮಿಸಲು ಸಾದ್ಯ. ಅದಕ್ಕೆ ಆ ಸ್ಥಳಕ್ಕೆ " ದೇವರ ಮನೆ ಕಾಡು" ಎಂಬ ಅನ್ವರ್ಥನಾಮ ಸಾರ್ಥಕ ಎನಿಸಿತು. 

ಇಂತಹ ಸ್ವರ್ಗ ಸದೃಶವಾದ ತಾಣವನ್ನು ಮೊದಲೇ ಕಣ್ತುಂಬಿಕೊಂಡು ನಮಗೂ ತೋರಿಸಲು ನಮ್ಮ ಸಹೋದ್ಯೋಗಿಗಳು ಹಾಗೂ ಕಲಾವಿದರಾದ ಕೋಟೆ ಕುಮಾರ್ ರವರು ನಮ್ಮನ್ನು ಅವರ ಕಾರಿನಲ್ಲಿ ಕರೆದುಕೊಂಡು ಬಂದರು .ನಮ್ಮೊಂದಿಗೆ ಸಹೋದ್ಯೋಗಿಗಳು ಮತ್ತು ಆತ್ಮೀಯರಾದ  ಚಂದ್ರಶೇಖರಯ್ಯ, ರಂಗಸ್ವಾಮಯ್ಯ ಮತ್ತು ಎಂ ಎಚ್ ಹನುಮಂತರಾಯ ರವರು ಜೊತೆಯಾಗಿ ಈ ಸುಂದರ ತಾಣದ ಸೌಂದರ್ಯ ಸವಿದೆವು. 



ತುಮಕೂರಿನಿಂದ ಹೊರಟ ನಮ್ಮ ತಂಡವು ಕುಣಿಗಲ್ ನ ಪರಿಮಳ ಹೋಟೆಲ್ ನಲ್ಲಿ ಇಡ್ಲಿ ವಡೆ ಮತ್ತು ಟೀ ಯ ಪರಿಮಳ ಸವಿದೆವು.ಅದು ನನ್ನ ಮೊದಲ ಪರಿಮಳ ಸ್ವಾದ .ಉತ್ತಮ ರುಚಿ ಶುಚಿ ನೋಡಿದ ಮೇಲೆ ಮತ್ತೊಮ್ಮೆ ಆ ಹೋಟೆಲ್ ಗೆ ಹೋಗುವ ಮನಸು ಮಾಡಿ...ನಮ್ಮ ಕಾರ್ ಹತ್ತಿ ಪಯಣ ಮುಂದುವರೆಸಿ, ಹಾಸನದ ಮೂಲಕ ಬೇಲೂರು ದಾಟಿ , ಮೂಡಿಗೆರೆಯಲ್ಲೊಂದು ಸ್ಟ್ರಾಂಗ್ ಟೀ ಕುಡಿದು ,ನಮ್ಮ ಕಲಾವಿದರು ದೇವರ ಮನೆ ಕಡೆ ಸ್ಟೇರಿಂಗ್ ತಿರುಗಿಸಿದರು...




ದೇವರ ಮನೆಯ ಸೌಂದರ್ಯವನ್ನು ನಾವು ಸವಿದಾದ ಬಳಿಕ ನಮ್ಮ ಮಧುರ ನೆನಪಿಗೆ ಮತ್ತು ನಮ್ಮವರಿಗೆ ತೋರಿಸಲು ವೀಡಿಯೋ ಮತ್ತು ಚಿತ್ರಗಳ ಸೆರೆಹಿಡಿಯಲು ನಮ್ಮ ಮೊಬೈಲ್ ಮತ್ತು ಸೆಲ್ಪಿ ಸ್ಟಿಕ್ ಗಳನ್ನು ಹೊರತೆಗೆದೆವು . ಮನಬಂದಂತೆ ಪೋಟೋ ತೆಗೆದುಕೊಂಡೆವು .ನಾವು ಸ್ವಲ್ಪ ಹೆಚ್ಚಾಗಿಯೇ   ಪೋಟೋ ತೆಗೆದುಕೊಂಡೆವು ಇದನ್ನು ಗಮನಿಸಿದ ಆಂದ್ರ ಪ್ರದೇಶ ರಾಜ್ಯದ ಪ್ತವಾಸಿಗರೊಬ್ಬರು " "ವೀಳ್ಳಿಕೆ ಪೋಟೋ ಪಿಚ್ಚಿ ಎಕ್ಕುವಾ" ಎಂದದ್ದು ನನಗೆ ಕೇಳಿತು. ಹೌದು ಅಣ್ಣ ಪೋಟೋಗಳಿರಬೇಕಲ್ಲ ನೆನಪಿಗೆ ಎಂದಾಗ ನನಗೆ ತೆಲುಗು ಅರ್ಥ ವಾಗಿದ್ದು ಅವರಿಗೆ ತಿಳಿದು ನಗುತ್ತಾ... ಎಂಜಾಯ್ ಸರ್ ಎಂದು ಹೊರಟರು.. ನಾವು ಬೆಟ್ಟದಿಂದ ಕೆಳಗಿಳಿದು ಬಂದು ಶ್ರೀ ಕಾಲಬೈರವೇಶ್ವರ ದೇವರ ಆಶೀರ್ವಾದ ಪಡೆದೆವು...





 ಶ್ರೀ ಕಾಲಭೈರವೇಶ್ವರ  ದೇವಸ್ಥಾನವನ್ನು ಚೋಳರ ಕಾಲದಲ್ಲಿ ವೆಂಕಣ್ಣನೆಂಬ ಶಿಲ್ಪಿಯು ನಿರ್ಮಿಸಿದನೆಂಬ ಪ್ರತೀತಿ ಇದೆ.ನೋಡಲು ಸುಂದರವಾಗಿರುವ ಈ ದೇವಸ್ಥಾನವು ಗುಡ್ಡ ಗಾಡಿನ ತಪ್ಪಲಿನಲ್ಲಿ ನಿರ್ಮಿಸಲಾಗಿದೆ. ಇತ್ತೀಚೆಗೆ ರಾಜ್ಯದ ವಿವಿದೆಡೆಗಳಿಂದ  ಪ್ರವಾಸಿಗರು  ಈ ಸ್ಥಳ ನೋಡಲು ಬರುತ್ತಿದ್ದಾರೆ.

ನೀವು  ಈ ಸುಂದರ ತಾಣ ನೋಡಲು ಒಮ್ಮೆ ಬನ್ನಿ

ಮೂಡಿಗೆರೆಯಿಂದ ೨೦ ಕಿ.ಮಿ ಒಳಗೆ ಅಂದರೆ ಸಬ್ಬೇನಹಳ್ಳಿ ಗುತ್ತಿ ಹೀಗೆ ಪ್ರಯಾಣಿಸಿದರೆ ಸಿಗುವುದೇ ದೇವರಮನೆ. ಧರ್ಮಸ್ಥಳ ಕಡೆಯಿಂದ ಬರುವುದಾದರೆ ಕೊಟ್ಟಿಗೆಹಾರ ದ ಬಳಿ ಬಲಕ್ಕೆ ಚಲಿಸಿದರೆ ದೇವರಮನೆಗೆ ತಲುಪಬಹುದು. 



ರಸ್ತೆ ಅಷ್ಟೇನೂ ಸರಿಯಿಲ್ಲದಿದ್ದರೂ ಅಡ್ಡಿಯಿಲ್ಲ. ಪ್ರವಾಸೋದ್ಯಮ ಇಲಾಖೆಯವರು ಇನ್ನೂ ಹೆಚ್ಚಿನ ಸೌಕರ್ಯಗಳನ್ನು ನೀಡಿದರೆ ಇದೊಂದು  ಹೆಸರಾಂತ ಪ್ರವಾಸಿ ತಾಣವಾಗುವುದರಲ್ಲಿ ಸಂಶಯವಿಲ್ಲ ..


ಸಿಹಿಜೀವಿ

ಸಿ ಜಿ ವೆಂಕಟೇಶ್ವರ




No comments: