23 October 2022

ಚಾರ್ಮಾಡಿ ಘಾಟಿ .ನಮ್ಮ ಪ್ರಾಕೃತಿಕ ಪರಂಪರೆ..




 


ಪ್ರವಾಸ ೭

ಪಶ್ಚಿಮ ಘಟ್ಟಗಳು.. ನಮ್ಮ ಪ್ರಾಕೃತಿಕ ಪರಂಪರೆ...

ಇತ್ತೀಚಿನ ದಿನಗಳಲ್ಲಿ ಪರಿಸರದ ವಿಚಾರದಲ್ಲಿ ಕಸ್ತೂರಿ ರಂಗನ್ ರವರ ವರದಿಯ ಹಿನ್ನೆಲೆಯಲ್ಲಿ ಪಶ್ಚಿಮ ಘಟ್ಟಗಳು ಚರ್ಚೆಯ ವಿಷಯವಾಗಿದ್ದವು .
ಘಟ್ಟಪ್ರದೇಶಗಳೆಂದರೆ ಪರಿಸರ ಪ್ರಿಯರಿಗೆ ಸಂಭ್ರಮದ ತಾಣ, ವಾಂತಿ ಮಾಡಿಕೊಳ್ಳುವ ವ್ಯಕ್ತಿಗಳಿಗೆ ಭಯದ ಸ್ಥಳ, ಕೈಗಾರಿಕೋದ್ಯಮಿಗಳಿಗೆ ತಮ್ಮ ಲಾಭವನ್ನು ಕಡಿಮೆ ಮಾಡುವ ಅಡೆತಡೆಗಳನ್ನು ಒಡ್ಡುವ ಪ್ರದೇಶಗಳು.ಹೀಗೆ ಅವರವರ ಭಾವ ಭಕುತಿಗೆ ವಿಭಿನ್ನವಾಗಿ ಕಾಣುವ ಪಶ್ಚಿಮ ಘಟ್ಟಗಳು ನಮ್ಮ ಪ್ರಾಕೃತಿಕ ಪರಂಪರೆಯ ಪ್ರತೀಕ ಎಂಬುದನ್ನು ಯಾರೂ ಅಲ್ಲಗಳೆಯುವಂತಿಲ್ಲ.
ಕಳೆದ ವಾರ ನಮ್ಮ ಸಮಾನ ಮನಸ್ಕ ತಂಡದ ಆತ್ಮೀಯರು ಕೋಟೆ ಕುಮಾರ್  ರವರ  ನೇತೃತ್ವದಲ್ಲಿ ಧರ್ಮಸ್ಥಳದ ಕಡೆ ಪ್ರವಾಸ ಹೋದಾಗ ಹಲವು ಬಾರಿ ಘಟ್ಟ ಪ್ರದೇಶಗಳನ್ನು ನೋಡಿದ್ದರೂ ಅಂದು ಘಟ್ಟ ಪ್ರದೇಶ ಹೊಸದಾಗಿ ಕಂಡಿತು. ಚಾರ್ಮಾಡಿ ಘಾಟಿಯ ಸೊಬಗಂತೂ ನಮ್ಮನ್ನು ಬಹುವಾಗಿ ಆಕರ್ಷಿಸಿತು.




ಕರ್ನಾಟಕದಲ್ಲಿ ಶಿರಾಡಿ ಘಾಟಿ, ಆಗುಂಬೆ ಘಾಟಿಗಳೆಂಬ ಇತರೆ ಘಾಟಿಗಳಿದ್ದರೂ ಚಾರ್ಮಾಡಿ ಘಾಟಿಯ ಸೌಂದರ್ಯ ನಿಸರ್ಗ ಪ್ರಿಯರಿಗೆ ಬಹು ನೆಚ್ಚಿನ ಪ್ರಾಕೃತಿಕ ತಾಣವಾಗಿದೆ.

ಚಾರ್ಮಾಡಿ ಘಾಟಿಯು  ದಕ್ಷಿಣ ಕನ್ನಡ ಜಿಲ್ಲೆ ಮತ್ತು ಚಿಕ್ಕಮಗಳೂರು ಜಿಲ್ಲೆಗಳ ಗಡಿಯಲ್ಲಿ ಹೊಂದಿಕೊಂಡಿದ್ದು ಪಶ್ಚಿಮ ಘಟ್ಟಗಳ ಸಾಲಿನಲ್ಲಿ ಬರುತ್ತವೆ. ಚಾರ್ಮಾಡಿ ಘಟ್ಟಗಳ ಕೆಳಭಾಗದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿಗೆ ಸೇರಿರುವ ಚಾರ್ಮಾಡಿ ಎಂಬ ಗ್ರಾಮವಿದೆ. ಅದರಿಂದಾಗಿ ಈ ಘಟ್ಟಗಳಿಗೆ ಈ ಹೆಸರು ಬಂದಿದೆ. ದಕ್ಷಿಣ ಕನ್ನಡ ಜಿಲ್ಲೆ ಮತ್ತು ಚಿಕ್ಕಮಗಳೂರು ಜಿಲ್ಲೆಗಳನ್ನು ಬೆಸೆಯುವ ಮುಖ್ಯ ರಸ್ತೆಯೊಂದು ಚಾರ್ಮಾಡಿ ಘಟ್ಟದಲ್ಲಿ ಹಾದು ಹೋಗಿದೆ. ಇಲ್ಲಿ ಎತ್ತರವಾದ ಬೆಟ್ಟ-ಗುಡ್ದ, ಆಳವಾದ ಕಣಿವೆ-ಪ್ರಪಾತ, ದಟ್ಟ ಕಾಡು, ಅಸಂಖ್ಯಾತ ಜಲಪಾತಗಳು, ವನ್ಯಮೃಗಗಳು, ಹತ್ತಾರು ಝರಿ-ತೊರೆ, ಶೋಲ ಕಾಡು,ಅಪರೂಪವಾದ ಹುಲ್ಲುಗಾವಲುಗಳನ್ನು ಕಾಣಬಹುದು. ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಕೊಟ್ಟಿಗೆಹಾರ ಎಂಬ ಗ್ರಾಮದಿಂದ ಪ್ರಾರಂಭವಾಗುವ ಈ ಘಟ್ಟಗಳು ಚಾರ್ಮಾಡಿ ಗ್ರಾಮದ ಬಳಿ ಕೊನೆಗೊಳ್ಳುತ್ತವೆ.



ನಮ್ಮ ಕಾರಿನಲ್ಲಿ  ಬೆಂಗಳೂರಿನ ಕಡೆಯಿಂದ ಹೊರಟ ನಾವು  ಕೊಟ್ಟಿಗೆಹಾರದಲ್ಲಿ ನೀರ್ ದೋಸೆ, ಪಲಾವ್ , ಬೋಂಡಾ ತಿಂದು   ಟೀ ಕುಡಿದು  ಹೊರಟ ನಮಗೆ ನಿಧಾನವಾಗಿ ನಿದ್ರೆ ಹತ್ತಲು ಶುರುವಾಯಿತು. ಚಾರ್ಮಾಡಿ ಘಾಟಿಯ ನಿಸರ್ಗ ನೋಡುತ್ತಾ ತಂಗಾಳಿಯು ನಮ್ಮ ಸೋಕುತ್ತಿದ್ದಂತೆ ನಿದ್ರಾ ದೇವಿ ಆಮೇಲೆ ಬರುವೆ ಎಂದು ಹೊರಟೇಬಿಟ್ಟಳು. ಅಲ್ಲಿಂದ ಮುಂದೆ ನಮ್ಮ ಮೊಬೈಲ್ ಕ್ಯಾಮರಾ ಮತ್ತು ಕಣ್ಣುಗಳಿಗೆ ಭರಪೂರ ಕೆಲಸ . ಕೋಟೇ ಕುಮಾರ್ ರವರು ಎದುರಿಗೆ ಬರುವ ವಾಹನಗಳ ಕಡೆಗೆ ಗಮನ ಹರಿಸುತ್ತಾ ನಿಸರ್ಗ ಸೌಂದರ್ಯ ಸವಿಯುತ್ತಾ ಡ್ರೈವ್ ಮಾಡುತ್ತಿದ್ದರೆ ನಾನು ಚಂದ್ರಶೇಖರಯ್ಯ ಎಮ್ ಎಚ್ ಹನುಮಂತರಾಯಪ್ಪ ಮತ್ತು ರಂಗಸ್ವಾಮಯ್ಯ ರವರು ಅಲ್ಲಲ್ಲಿ ಹರಿವ ಝರಿಯ ಕಲರವ ಕೇಳುತ್ತಾ ದೂರದ ಬೆಟ್ಟಗಳ ಚಿತ್ತಾರ ನೋಡುತ್ತಾ ಬಗೆ  ಬಗೆಯ ಮರಗಳ ನೋಡಿ ಬೆರಗಾಗುತ್ತಾ ಮುಂದೆ ಸಾಗಿದೆವು. ಅಲ್ಲಲ್ಲಿ ನಿಂತು ವ್ಯೂ ಪಾಯಿಂಟ್ ಗಳ ಬಳಿ ಸ್ವಲ್ಪ ಹೆಚ್ಚು ಸಮಯ ಕಳೆದು ನಿಸರ್ಗದಲ್ಲಿ ನಾವು ಒಂದಾಗಿ ನಿಂತು ಮೈ ಮರೆತೆವು.ಪೋಟೋ ವೀಡಿಯೋಗಳನ್ನು ಲೆಕ್ಕವಿಲ್ಲದಷ್ಟು ತೆಗೆದುಕೊಂಡೆವು..ನಿಧಾನವಾಗಿ ಸಾಗಿದ ನಮ್ಮ ಕಾರು ಏರ್ ಪಿನ್ ಬೆಂಡ್, ಎಸ್ ಬೆಂಡ್ ಗಳನ್ನು   ದಾಟಿಕೊಂಡು ಚಾರ್ಮಾಡಿಯ ಬಳಿ ಬಂದಿತು. ಅಲ್ಲಿಂದ ದೊಡ್ಡ ತಿರುವುಗಳು ಇಲ್ಲದಿದ್ದರೂ ನಿಧಾನವಾಗಿ ಸಾಗಬೇಕು. ಈ ಜಾಗದಲ್ಲಿ ವಾಹನ ಚಲಾಯಿಸಲು ಕ್ಷಮತೆ ಬೇಕು. ಹೀಗೆ ಸಾಗಿದ ನಮ್ಮ ಪಯಣ ಉಜಿರೆ ದಾಟಿ ನೇತ್ರಾವತಿ ನದಿಯ ಸೇತುವೆ ಮೇಲೆ ಚಲಿಸಿ ಧರ್ಮಸ್ಥಳ ತಲುಪಿತು. ಮಂಜುನಾಥ ಸ್ವಾಮಿಯ ದರ್ಶನಕ್ಕೆ ಸರದಿ ಸಾಲಿನಲ್ಲಿ ನಿಂತಾಗ ಪಶ್ಚಿಮದ ಘಟ್ಟಗಳ ಚಾರ್ಮಾಡಿಯ ಸೌಂದರ್ಯ ಕಣ್ಣ ಮುಂದೆ ಬರುತ್ತಿತ್ತು ನಮ್ಮ ಪ್ರಾಕೃತಿಕ ಪರಂಪರೆಯ ಬಗ್ಗೆ ಹೆಮ್ಮೆ ಪಡುತ್ತಾ  ದೇವರ ದರ್ಶನಕ್ಕೆ ಸರದಿ ಸಾಲಿನಲ್ಲಿ ಮುಂದೆ ಸಾಗಿದೆವು...

*ಸಿಹಿಜೀವಿ*
ಸಿ ಜಿ ವೆಂಕಟೇಶ್ವರ

No comments: