30 January 2024

ಸಂಸ್ಕೃತಿ ಸಂಸ್ಕಾರ ಬೆಳೆಸುವ ಮಿಶ್ರ ಮಾಧುರ್ಯ.

 

ಸಂಸ್ಕೃತಿ ಸಂಸ್ಕಾರ ಬೆಳೆಸುವ  ಮಿಶ್ರ ಮಾಧುರ್ಯ.


ಸೋಷಿಯಲ್ ಮೀಡಿಯಾಗಳು ಜನರ ಸಮಯ ಹಾಳು ಮಾಡುತ್ತಿವೆ. ಯುವ ಜನರ ದಾರಿ ತಪ್ಪಿಸುತ್ತಿವೆ ಎಂಬ ಆರೋಪದ ನಡುವೆ ಕೆಲ ಸಂಘ ಸಂಸ್ಥೆಗಳು, ಸಮಾನ ಮನಸ್ಕ ತಂಡಗಳು ವಾಟ್ಸಪ್ ,ಪೇಸ್ ಬುಕ್ ಮುಂತಾದ ಮಾಧ್ಯಮಗಳ ಮೂಲಕ ಕಲೆ ,ಸಾಹಿತ್ಯ, ಸಂಸ್ಕೃತಿ ಬೆಳೆಸುವ ಕಾಯಕ ಮಾಡುವುದು ಸ್ತುತ್ಯಾರ್ಹ.ಈ ಸಾಮಾಜಿಕ ಮಾಧ್ಯಮಕ್ಕೆ ಹೊಸ ಸೇರ್ಪಡೆ ಕ್ಲಬ್ ಹೌಸ್ ಅಥವಾ ಕೇಳು ಕೋಣೆ.ಇಂತಹ ಕೇಳು ಕೋಣೆಯನ್ನು ಸಮರ್ಪಕವಾಗಿ ಬಳಸಿಕೊಂಡು 

ಡಾ.ಗಣಪತಿ ಹೆಗಡೆ ರವರ ನೇತೃತ್ವದಲ್ಲಿ 

ಮೈತ್ರಿ ಫೌಂಡೇಶನ್ ರವರು ಸಂಸ್ಕೃತ ಮತ್ತು ಸಂಸ್ಕೃತಿಗಳ ಪ್ರಸಾರ ಮಾಡುವಲ್ಲಿ ಬಹಳ ಉತ್ತಮ ಕಾರ್ಯ ಮಾಡುತ್ತಿದ್ದಾರೆ ಈಗಾಗಲೇ 123 ದಿನಗಳ ಕಾಲ  ಸತತವಾಗಿ ಮುಂಜಾನೆಯ "ಮಿಶ್ರ ಮಾಧುರ್ಯ" ಕಾರ್ಯಕ್ರಮದಲ್ಲಿ ಕನಿಷ್ಠ ಮುನ್ನೂರಕ್ಕೂ ಹೆಚ್ಚು ಶ್ರೋತೃಗಳು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವರು.

ಪ್ರತಿದಿನ ಮುಂಜಾನೆ ಆರೂವರೆಯಿಂದ ಎಂಟರವರೆಗೆ ‌ನಡೆಯುವ ಈ ಕಾರ್ಯಕ್ರಮದ ಹಿಂದೆ ಒಂದು ಸಂಘಟಿತ ಪ್ರಯತ್ನ ಇರುವುದು ಎದ್ದು ಕಾಣುತ್ತದೆ.ರಾಮತಾರಕ ಜಪದ ಮೂಲಕ ಆರಂಭವಾಗುವ ಕೇಳು ಕೋಣೆಯ ಈ ಕಾರ್ಯಕ್ರಮದಲ್ಲಿ

ಗೀತಾ ಪಠಣವಿರುತ್ತದೆ. ವೇದ ಘೋಷದ ಶ್ಲೋಕಗಳ ಪಠಣ ಮತ್ತು ಅರ್ಥವಿವರಣೆ ಇರುತ್ತದೆ.ನಮ್ಮ ಮೆದುಳಿಗೆ ಮೇವು ಹಾಕುವ ನಮ್ಮ ಸಂಸ್ಕಾರ ಸಂಸ್ಕೃತಿ ಪರಿಚಯ ಮಾಡುವ  ರಸ ಪ್ರಶ್ನೆ ಮೂಡಿಬರುತ್ತದೆ.  ನಾವು ಬಾಲ್ಯದಲ್ಲಿ "ಈಯಂ ಆಕಾಶವಾಣಿ..".ಎಂಬ ಬಲದೇವಾನಂದ್ ಸಾಗರ್ ರವರ  ಸಂಸ್ಕೃತ ವಾರ್ತೆಯನ್ನು ನೆನಪಿಸುವ ಸಂಸ್ಕೃತ ವಾರ್ತೆಯನ್ನು ಕೇಳುವಾಗ ಸಾಮಾನ್ಯ ಜ್ಞಾನದ ಜೊತೆ ಜೊತೆಗೆ ಸಂಸ್ಕೃತ ಭಾಷೆಯ ಜ್ಞಾನ ವಿಕಾಸ ಆಗುವಲ್ಲಿ ಸಹಕಾರಿ.  ಇದರ ಜೊತೆಗೆ ನಮ್ಮ ಆರೋಗ್ಯದ ಬಗ್ಗೆ ಆಯುರ್ವೇದ ಮೂಲದ ಔಷಧೀಯ ಗುಣಗಳ ಪದಾರ್ಥಗಳ ಬಗ್ಗೆ ಮಾಹಿತಿಯನ್ನು ನೀಡುವ  ಅಂಗೈಯಲ್ಲಿ ಆರೋಗ್ಯ ನಮಗೆ ಬಹಳ ಉಪಯುಕ್ತವಾಗಿದೆ. ಹೀಗೆ ಹಲವಾರು ಪ್ರಕಾರಗಳಲ್ಲಿ ನಡೆಯುವ ಕಾರ್ಯಕ್ರಮಗಳಿಗೆ ಕಿವಿಯಾಗುವ ಅವಕಾಶ ಸಿಕ್ಕಿದ್ದು ನಮ್ಮ ಭಾಗ್ಯ ಎಂದು ಹಲವಾರು ಕೇಳುಗರು ತಮ್ಮ ಮನದಾಳದ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಈ ಕಾರ್ಯಕ್ರಮದ ಕೇಂದ್ರ ಬಿಂದು ಮುತ್ತು ಮಾರ್ಗದರ್ಶಕರಾದ ಸಂಸ್ಕೃತ ವಿದ್ವಾನ್ ಡಾ. ಗಣಪತಿ  ಹೆಗಡೆ ರವರು   ಸದ್ಯದಲ್ಲೇ ಇದಕ್ಕೆ ಇನ್ನೂ ಕೆಲ ಅಂಶಗಳನ್ನು ಸೇರಿಸಿ ಈ ಕೇಳುಕೋಣೆಯ ಮಿಶ್ರಮಾಧುರ್ಯ ಕಾರ್ಯಕ್ರಮವನ್ನೂ ಮತ್ತಷ್ಟು ಮಧುರವಾಗಿಸುವ ಸುಳಿವು ನೀಡಿದ್ದಾರೆ. ನಾನಂತೂ ಪ್ರತಿ ದಿನ ಮುಂಜಾನೆ  ಈ ಮಧುರಾನುಭೂತಿ ಪಡೆಯುತ್ತಿರುವೆ ನೀವು ಸಹ ಇಂತಹ ಕ್ಲಬ್ ಹೌಸ್ ಕಾರ್ಯಕ್ರಮ ಕೇಳಿ ನಿಮ್ಮ ವ್ಯಕ್ತಿತ್ವ ಉತ್ತಮ ಪಡಿಸಿಕೊಳ್ಳಬಹುದು.


ಸಿಹಿಜೀವಿ ವೆಂಕಟೇಶ್ವರ

ತುಮಕೂರು

9900925529

No comments: