12 April 2025

ತಿರುಪತಿ ದರ್ಶನ ಇನ್ನು ಸುಲಭ: ವಾಟ್ಸ್​ಆ್ಯಪ್​ನಲ್ಲೇ ಟಿಕೆಟ್ ಬುಕ್​​ ಮಾಡಬಹುದಂತೆ.

 



ತಿರುಪತಿ ದರ್ಶನ ಇನ್ನು ಸುಲಭ: ವಾಟ್ಸ್​ಆ್ಯಪ್​ನಲ್ಲೇ ಟಿಕೆಟ್ ಬುಕ್​​  ಮಾಡಬಹುದಂತೆ.


ತಿರುಪತಿ ವೆಂಕಟೇಶ್ವರನ ದರ್ಶನ ಇನ್ನಷ್ಟು ಸುಲಭಗೊಳಿಸುವ ನಿಟ್ಟಿನಲ್ಲಿ ವಾಟ್ಸ್​ಆ್ಯಪ್​  ಮೂಲಕವೇ ಸೇವೆ ಒದಗಿಸಲು ಟಿಟಿಡಿ ಮುಂದಾಗಿದೆ. 


ಇತ್ತೀಚಿನ ತಿರುಮಲ ಭೇಟಿಯ ನಂತರ, ತಿರುಮಲ ತಿರುಪತಿ ದೇವಸ್ಥಾನಗಳು ತೀರ್ಥಯಾತ್ರೆಯ ಅನುಭವವನ್ನು ಹೆಚ್ಚಿಸುವ ಗುರಿಯ ಬಗ್ಗೆ ಮುಖ್ಯ ಮಂತ್ರಿ ನಾಯ್ಡು ರವರು ಸಭೆ ನಡೆಸಿದರು.  ಇದರಲ್ಲಿ ಸುವ್ಯವಸ್ಥಿತ ಟಿಕೆಟ್ ಬುಕಿಂಗ್, ವಸತಿ ಹಂಚಿಕೆ ಸೇರಿದಂತೆ ಹಲವು ವಿಷಯಗಳ ಬಗ್ಗೆ ಚರ್ಚೆ ನಡೆಯಿತು. ಈ ಸಂದರ್ಭದಲ್ಲಿ ವಾಟ್ಸ್​ಆ್ಯಪ್​  ಮೂಲಕ ಸೇವೆ ಒದಗಿಸುವುದೂ ಸೇರಿದ್ದು, ಅದನ್ನೀಗ ಪ್ರಾಯೋಗಿಕವಾಗಿ ಜಾರಿಗೊಳಿಸಲಾಗಿದೆ.  ವಾಟ್ಸಾಪ್‌ನಲ್ಲಿ 15 ಸೇವೆಗಳನ್ನು ಸಂಯೋಜಿಸಿದೆ.  ಟಿಕೆಟ್ ಬುಕಿಂಗ್, ವಸತಿ ಮತ್ತು ಇತರ ಸೇವೆಗಳಿಗಾಗಿ ಕಾಯುವ ಸಮಯವನ್ನು ಕಡಿಮೆ ಮಾಡುವುದು ನಮ್ಮ ಗುರಿಯಾಗಿದೆ ಎಂದು ಟಿಟಿಡಿ ಹೇಳಿದೆ.


ಟಿಕೆಟ್​ ಬುಕಿಂಗ್​, ವಸತಿ ಸೌಲಭ್ಯ ಇತ್ಯಾದಿಗಳಿಗೆ ನೀವು ಮಾಡಬೇಕಿರುವುದು ಇಷ್ಟು -ಮೊದಲಿಗೆ  ನಿಮ್ಮ ಮೊಬೈಲ್​ನಲ್ಲಿ 9552300009 ಸಂಖ್ಯೆಯನ್ನು ಟಿಟಿಡಿ ಸೇವೆ ಅಥವಾ ಇನ್ನಾವುದೇ ಹೆಸರುಗಳಿಂದ ಸೇವ್​ ಮಾಡಿಕೊಳ್ಳಿ. - ಆ ಸಂಖ್ಯೆಗೆ ವಾಟ್ಸ್​ಆ್ಯಪ್​ ಮೂಲಕ Hi ಎಂದು ಕಳುಹಿಸಿ-   ಅಲ್ಲಿ ವಿವಿಧ ರೀತಿಯ ಆಯ್ಕೆಗಳು ಬರುತ್ತವೆ. ಅದಕ್ಕೂ ಮುನ್ನ “ಆಂಧ್ರ ಪ್ರದೇಶ ಸರ್ಕಾರಿ ನಾಗರಿಕ ಸಹಾಯಕ ಸೇವೆಗೆ ಸ್ವಾಗತ. ನಿಮ್ಮ ಅನುಕೂಲತೆ ನಮ್ಮ ಆದ್ಯತೆಯಾಗಿದೆ. ದಯವಿಟ್ಟು ನಿಮಗೆ ಅಗತ್ಯವಿರುವ ನಾಗರಿಕ ಸೇವೆಯನ್ನು ಆರಿಸಿ" (“Welcome to Andhra Pradesh Government Citizen Helper Service. Your convenience is our priority. Please choose the civil service you need.") ಎನ್ನುವ ಸಂದೇಶ ಬಂದು, ಟಿಟಿಡಿಯ ಸೇವೆಗಳನ್ನು (Service) ನೀಡಲಾಗುತ್ತದೆ.- ಮೊದಲಿಗೆ ಸೇವೆ (Select Services) ಮೇಲೆ ಕ್ಲಿಕ್​ ಮಾಡಿ.- ಅಲ್ಲಿ ನಿಮಗೆ ಟಿಕೆಟ್​ ಬುಕಿಂಗ್​ ಸೇರಿದಂತೆ ವಿವಿಧ  ಆಯ್ಕೆಗಳನ್ನು ನೀಡಲಾಗುತ್ತದೆ:ಅವುಗಳೆಂದರೆ: ದೇವಾಲಯ ದರ್ಶನ ಟಿಕೆಟ್ ಬುಕಿಂಗ್ - ಆಂಧ್ರಪ್ರದೇಶದಾದ್ಯಂತ ಜನಪ್ರಿಯ ದೇವಾಲಯಗಳಿಗೆ ನಿಮ್ಮ ದರ್ಶನ ಟಿಕೆಟ್‌ ಪಡೆದುಕೊಳ್ಳುವುದು. ವಿಶೇಷ ಸೇವಾ ಬುಕಿಂಗ್‌ಗಳು: ದೈವಿಕ ಆಶೀರ್ವಾದಕ್ಕಾಗಿ ವಿಶೇಷ ಪೂಜೆಗಳು ಮತ್ತು ಸೇವೆಗಳನ್ನು ಬುಕ್ ಮಾಡುವುದು.ವಸತಿ ಬುಕಿಂಗ್‌ಗಳು - ದೇವಾಲಯಗಳ ಬಳಿ ತೊಂದರೆ-ಮುಕ್ತ ವಸತಿ ಪಡೆಯುವುದು  ಟಿಕೆಟ್​ ಬುಕಿಂಗ್​ ಮಾಡುವುದಾದರೆ, ಈ ಆಪ್ಷನ್​ ಮೇಲೆ  ಕ್ಲಿಕ್​  ಮಾಡಿ, ಅಲ್ಲಿ ಟಿಕೆಟ್​ ಬುಕ್​ ಮಾಡಿ, ಅಲ್ಲಿಯೇ ಪೇಮೆಂಟ್​ ಮಾಡಬಹುದಾಗಿದೆ. 


ಇದನ್ನು ಹೊರತುಪಡಿಸಿದರೆ, ಉಳಿದ ನಾಲ್ಕು ಸೇವೆಗಳು ಹಾಗೂ ಅದರ ಡಿಟೇಲ್ಸ್​ ಇಲ್ಲಿದೆ...ಸ್ಲಾಟೆಡ್ ಸರ್ವದರ್ಶನ ಲೈವ್ ಸ್ಥಿತಿ (Slotted Sarvadarshan Live Status)ಸರ್ವದರ್ಶನ ಲೈವ್ ಸ್ಥಿತಿ (Sarvadarshan Live Status)ಶ್ರೀ ವಾಣಿ ಟ್ರಸ್ಟ್ ಲೈವ್ ಸ್ಥಿತಿ (Sri Vani Trust Live Status)ಮುಂಗಡ ಠೇವಣಿ ಮರುಪಾವತಿ ಲೈವ್ ಸ್ಥಿತಿ (Advance Deposit Refund Live Status)ಸೇವಾ ವಿವರಣೆಗಳು (Service Descriptions)ಸ್ಲಾಟೆಡ್ ಸರ್ವದರ್ಶನ ಲೈವ್ ಸ್ಥಿತಿ: ಕೋಟಾಗಳು ಮತ್ತು ನೀಡಲಾದ ಟೋಕನ್‌ಗಳನ್ನು ಒಳಗೊಂಡಂತೆ ತಿರುಪತಿಯಲ್ಲಿ ಸರ್ವದರ್ಶನ ಟೋಕನ್‌ಗಳ ಲಭ್ಯತೆಯನ್ನು ಪರಿಶೀಲಿಸಬಹುದುದ. ಸರ್ವದರ್ಶನ ಲೈವ್ ಸ್ಥಿತಿ: ಕ್ಯೂ ಕಂಪಾರ್ಟ್‌ಮೆಂಟ್‌ಗಳು ಮತ್ತು ಅಂದಾಜು ಕಾಯುವ ಸಮಯಗಳನ್ನು ಒಳಗೊಂಡಂತೆ ವೈಕುಂಠಂ ಕ್ಯೂ ಕಾಂಪ್ಲೆಕ್ಸ್ -2 ರಲ್ಲಿ ಕಾಯುತ್ತಿರುವ ಭಕ್ತರ ಸಂಖ್ಯೆಯ ಕುರಿತು ಅಪ್​ಡೇಟ್​ ಪಡೆಯಬಹುದು. ಶ್ರೀ ವಾಣಿ ಟ್ರಸ್ಟ್ ಲೈವ್ ಸ್ಥಿತಿ: ಲಭ್ಯವಿರುವ ಮತ್ತು ನೀಡಲಾದ ಟಿಕೆಟ್ ವಿವರಗಳನ್ನು ಒಳಗೊಂಡಂತೆ ತಿರುಮಲದಲ್ಲಿ ಶ್ರೀವಾಣಿ ಟಿಕೆಟ್‌ಗಳ ಪ್ರಸ್ತುತ ಸ್ಥಿತಿಯನ್ನು ವೀಕ್ಷಿಸಬಹುದು. ಮುಂಗಡ ಠೇವಣಿ ಮರುಪಾವತಿ ಲೈವ್ ಸ್ಥಿತಿ: ತಿರುಮಲದಲ್ಲಿ ಕೊಠಡಿ ಹಂಚಿಕೆಗಳಿಗೆ ಅನ್ವಯವಾಗುವ ನಿಮ್ಮ ಠೇವಣಿ ಮರುಪಾವತಿಯ ಸ್ಥಿತಿಯನ್ನು ಟ್ರ್ಯಾಕ್ ಮಾಡಬಹುದು.


ಓಂ  ನಮೋ  ವೆಂಕಟೇಶಾಯ ...

11 April 2025

ಒಮ್ಮೆ ನಕ್ಜಾಗ...ತ ರಾ ಸು ಕೃತಿ





"ಒಮ್ಮೆ ನಕ್ಕ ನಗು" ಕೊನೆಗೆ ಅಳು ಬರಿಸಿತು.

ಕಳೆದ ತಿಂಗಳು ತ ರಾ ಸು ರವರ ಐತಿಹಾಸಿಕ ಕಾದಂಬರಿಗಳಾದ ಕಸ್ತೂರಿ ಕಂಕಣ, ಕಂಬನಿಯ ಕುಯಿಲು, ರಾಜ್ಯದಾಹ, ತಿರುಗುಬಾಣ, ಹೊಸ ಹಗಲು ಕಾದಂಬರಿಗಳನ್ನು  ಓದಿದ ನಾನು ಇಂದು ಅವರ "ಒಮ್ಮೆ ನಕ್ಕ ನಗು" ಕಾದಂಬರಿ ಓದಿದೆ. ‌ಇದೊಂದು ಸಂಪೂರ್ಣ ವಿಭಿನ್ನವಾದ ಕಾದಂಬರಿ ಇಲ್ಲಿ ತ ರಾ ಸು ರವರ ಸರಳ ನಿರೂಪಣೆ ಅವರ ಭಾಷೆಯ ಬಳಕೆ ಬಹು ಸುಂದರ. ಓದುವಾಗ ನಾನು ಒಬ್ಬನೇ ನಕ್ಕಿರುವೆ. ಆ ನಗು ಕೆಲವೊಮ್ಮೆ ನಾಯಿಡೂ ನ ಹುಚ್ಚುತನ ಕಂಡಾಗ  ನಗು, ಕನಕಲಿಂಗಂ ನ ಅಸಹಾಯಕತೆಯಿಂದ ಮಾಡುವ ಕುತಂತ್ರಗಳು ತನಗೇ ತಿರುಗುಬಾಣವಾದಾಗ ಅದನ್ನು ಓದಿ ನಗು ಬಂದಿದೆ.ಆದರೆ ಕೋಮಲಾ ಪರಿಸ್ಥಿತಿಯ ಕೈಗೊಂಬೆಯಾಗಿ ಜೀವನದಲ್ಲಿ ಹಲವಾರು ನೋವು ನುಂಗಿ ಅವಿವಾಹಿತೆಯಾದರೂ ಗರತಿಯಂತೆ ಬಾಳಿ ಕೊನೆಗೂ ತನ್ನ ಆಸೆ ಕೈಗೂಡದಿದ್ದಾಗ ಅವಳು ನೋವಿನಿಂದ ನಗುವುದನ್ನು ಓದುವಾಗ ನಗುವಿನ ಬದಲು ಅಳು ಬರುತ್ತದೆ. 
ಈ ಕಾದಂಬರಿಯು ವಸ್ತು
 ಕಳೆದ ಶತಮಾನದ ಅರವತ್ತರ ದಶಕದಲ್ಲಿ ನಡೆಯುವ ಘಟನೆಗಳ ಆಧಾರದಲ್ಲಿ ರಚಿತವಾಗಿದೆ. ಆಂದ್ರಪ್ರದೇಶ ತಮಿಳುನಾಡಿನ ಭಾಗದಲ್ಲಿ ನಡೆಯುವ ಕಥೆಯಾದ್ದರಿಂದ  ತೆಲುಗು ಪದಗಳು ಮತ್ತು ಹೆಸರುಗಳು ಧಾರಾಳವಾಗಿ ಬಂದು ಹೋಗುತ್ತವೆ.  ಪುಸ್ತಕ ಹಳೆಯದಾದರೂ  ಆ ಸಾಹಿತ್ಯ ಸೌಗಂಧ ಇನ್ನೂ ಉತ್ತಮ.
 ಮೂರು ಪಾತ್ರಗಳ ಮನದಲ್ಲಿ ಮೂಡುವ ಯೋಚನೆ ಮತ್ತು ಭಾವನೆಗಳ ಮಹಾಪೂರವನ್ನು ತರಾಸು ಅವರು ಈ ಕಾದಂಬರಿಯಲ್ಲಿ ನಮಗೆ ಕಟ್ಟಿಕೊಡುವ ಪ್ರಯತ್ನ ಮಾಡಿದ್ದಾರೆ ಹಾಗೂ ಆ ಪ್ರಯತ್ನದಲ್ಲಿ ಅವರು ಸಫಲರೂ ಆಗಿದ್ದಾರೆ. ಇಲ್ಲದಿದ್ದರೆ  ಕಾದಂಬರಿ ಪ್ರಕಟವಾದ ಅರವತ್ತೈದು ವರ್ಷಗಳ ನಂತರದಲ್ಲಿ ಓದಿ ಇದರ ಬಗ್ಗೆ ನಾನು ನಾಲ್ಕು ಮಾತು ಬರೆಯುತ್ತಿರಲಿಲ್ಲ.
  ಈ  ಕಾದಂಬರಿಯಲ್ಲಿ ಬರುವ ಮೂರು ಪ್ರಮುಖ ಪಾತ್ರದಲ್ಲಿ ಭಾವನೆಗಳು ಮತ್ತು ಆಲೋಚನಾ ತರಂಗಗಳಿಗೆ ಪ್ರಾಮುಖ್ಯತೆಯನ್ನು ನೀಡಲಾಗಿದೆ. ಒಬ್ಬ ನಾಯಿಡೂ ಅವನು ದುಡ್ಡಿನ ಅಮಲಿನಲ್ಲಿ ಬೇಕಾಗಿದ್ದನ್ನು ಪಡೆಯುವ ಹುನ್ನಾರದಲ್ಲಿರುವವ. ಇನ್ನೊಬ್ಬ  ಕನಕಲಿಂಗಂ  ನಾಯಿಡೂನ  ಕೆಳಗಿದ್ದುಕೊಂಡು ಅವನ ಬಯಕೆಗಳನ್ನು ಕೇವಲ ನೋಡಿಕೊಂಡು ಸುಮ್ಮನಿರುವವ. ಮತ್ತೊಂದು ಕೋಮಲ ಎಂಬ ಹೆಸರಿಗೆ ಮಾತ್ರ ಕೋಮಲವಾದ ಕಾದಂಬರಿಯಲ್ಲಿ ನೋವನ್ನು ಪ್ರತಿಬಿಂಬಿಸುವ ಪಾತ್ರ. ಸಮಾಜದಲ್ಲಿ ಹೆಣ್ಣಾಗಿ, ಮನೆಯಲ್ಲಿ ಗಂಡಾಗಿ ದುಡಿದು, ಸಂತೋಷವನ್ನು ಕಾಣದ ಕಷ್ಟಜೀವಿ. ಮೊದಲೆರಡು ಪಾತ್ರಗಳು ದುಡ್ಡಿನ ದೃಷ್ಟಿಕೋನದಿಂದ ಸುಖಜೀವಿಗಳು ಆದರೆ ಆಸೆಯೆಂಬ ಪರ್ವತದ ತುದಿಯನ್ನು ಎಂದೂ ಹತ್ತಿ ಸುಮ್ಮನಾಗದ ಅತಿಯಾಸೆ ಜೀವಿಗಳು.  ಇತ್ತ ಹೆಣ್ಣುಜೀವ ಆಸೆಯನ್ನು ಮುಚ್ಚಿಟ್ಟುಕೊಂಡು ಬಾಳುತ್ತಿದ್ದರೂ ಧನದ ಅಭಾವ. ಹೀಗೆ ಮಾನವ ತನ್ನ ಜೀವನದಲ್ಲಿ ಎಷ್ಟು ಸುಖವಾಗಿ ಇರಲು ಪ್ರಯತ್ನಿಸಿದರೂ ಯಾವುದೊ ಒಂದು ರೂಪದಲ್ಲಿ ದುಃಖದ ಛಾಯೆ ಕೆಲವು ಬಾರಿ ಅವನ ಮೇಲೆ ಮೂಡುತ್ತದೆ. ಅದೇ ಜೀವನವೆಂಬ   ಚಿತ್ರಣವನ್ನು ತರಾಸು ಅವರು ಈ ಕಾದಂಬರಿಯ ಮುಖಾಂತರ ತಿಳಿಸಲು ಪ್ರಯತ್ನಿಸಿದ್ದಾರೆ.ಕನಕಲಿಂಗಂ ಒಬ್ಬ ಸಾಧಾರಣ ಮನುಷ್ಯ ಹಾಗೆಯೇ ಒಬ್ಬ ಸ್ವಯಂಘೋಷಿತ ಕವಿಯೂ ಕೂಡ! ಅವನಿಗೆ ಸಿನಿಮಾದ ಗೀಳು, ಅದಕ್ಕೆ ಹಾಡು ಚಿತ್ರಕಥೆ ಬರೆಯುವುದು ಇತ್ಯಾದಿ ಬರೆಯುವ ಹುಚ್ಚು. ಆದರೆ ಎಂದೂ ಅದರಲ್ಲಿ ಅವನು ಸಫಲವಾದವನಲ್ಲ. ಅವರ ಇವರ ಕಾಲುಹಿಡಿದು ಹೇಗೋ ಜೀವನವನ್ನು ನಡೆಸುತ್ತಿದ್ದನು. ನಾಯಿಡು ಆಗರ್ಭ ಶ್ರೀಮಂತ, ಚಲನಚಿತ್ರದ ನಿರ್ಮಾಪಕನಾಗಬೇಕೆಂದು ಚೆನ್ನೈ ಗೆ ಬಂದು  ಕನಕಲಿಂಗಂ  ಜೊತೆಗೆ ಇರಲಾರಂಭಿಸಿರುತ್ತಾನೆ. ನಾಯಿಡು ಬಹಳ ಜಾಲಿ ಮನುಷ್ಯ. ಸದಾ ವಿಲಾಸಿ ಜೀವನವನ್ನು ನಡೆಸುತ್ತಿದ್ದವ, ಸದಾ ಹೆಣ್ಣಿನ ಸಂಗವನ್ನು ಬಯಸುವ ಕಾಮಾಂಧ. ಅವನ ಹದ್ದಿನ ಕಣ್ಣು ಯಾವುದಾದರೂ ಹುಡುಗಿಯ ಮೇಲೆ ಬಿದ್ದರೆ ಅವಳನ್ನು ಪಡೆಯಲೇಬೇಕು ಎಂಬ ಹಠಮಾರಿ ಗುಣ ಅವನದು. ಅದಕ್ಕೆ ಸಹಾಯಕ್ಕೆ ಬರುತ್ತಿದ್ದವ ಈ  ಕನಕಲಿಂಗಂ. ಆ ಹುಡುಗಿಯನ್ನು ಪತ್ತೆ ಹಚ್ಚಿ ನಾಯಿಡುಗೆ ಅವಳು ದಕ್ಕುವಂತೆ ಮಾಡುತ್ತಿದ್ದ. ಒಂದು ದಿನ ನಾಯಿಡು ಊರಿನಲ್ಲಿರದಾಗ ಕನಕಲಿಂಗಂ ಮನೆಯ ಚಾವಣಿಯ ಮೇಲೆ ಸಿಗರೇಟ್ ಸೇದುತ್ತಾ ಬಿಸಲಿಗೆ ನಿಂತಿದ್ದಾಗ ಅಲ್ಲಿ ಒಂದು ಹುಡುಗಿ ಬಸ್ಸಿಗಾಗಿ ಕಾಯುತ್ತ ನಿಂತಿರುತ್ತಾಳೆ. ಹಾಗೆಯೇ ಸಂಜೆಯೂ   ಮತ್ತೆ ಬಸ್ಸಿನಿಂದ ಇಳಿಯುವುದನ್ನು ನೋಡುತ್ತಾನೆ. ಅವಳ ನಾಜೂಕುತನ, ತಲೆ ಕೆಳಗೆ ಹಾಕಿಕೊಂಡು ನಡೆಯುವ ನಾಚಿಕೆಯ ಸ್ವಭಾವ ಯಾಕೋ ಕನಕಲಿಂಗಂನಿಗೆ ತುಂಬಾ ಇಷ್ಟವಾಯಿತು. ಅವಳ ಮೇಲೆ ನಿಧಾನವಾಗಿ ಅನುರಕ್ತನಾದ. ಕೆಲದಿನಗಳ ನಂತರ ನಾಯಿಡುವಿನ ಆಗಮನವಾಯಿತು. ಅವನು ಕನಕಲಿಂಗಂ ಬೆಳಿಗ್ಗೆ-ಸಾಯಂಕಾಲ ಛಾವಣಿಯಲ್ಲಿ ನೋಡುತ್ತಿದ್ದ ಆ ಹುಡುಗಿಯ ಬಗ್ಗೆ ತಿಳಿದುಕೊಂಡ. ಆ ಹುಡುಗಿಯನ್ನು ಪಡೆಯಬೇಕೆಂಬ ದಾಹ ಅವನಲ್ಲಿ ಮೂಡಿತು. ತನ್ನ ಆಸೆಯನ್ನು ಕನಕಲಿಂಗಂ ಮುಂದೆ ವ್ಯಕ್ತಪಡಿಸಿದ. ಕನಕಲಿಂಗಂಗೆ ಸ್ವಲ್ಪ ದುಃಖವಾದರೂ ಹುಡುಗಿಯನ್ನು ದೊರಕಿಸಿಕೊಡುವುದು ತನ್ನ ಕರ್ಮ. ಸುಮ್ಮನೆ ಅವಳ ಮೇಲೆ ಒಲವು ತೋರಿಸಿದೆನೆಂದು ತಾನೇ ಹಳಿದುಕೊಂಡನು. ಸಮೀಪದ ಅಂಗಡಿಯಲ್ಲಿ ಆ ಹುಡುಗಿಯ ಬಗ್ಗೆ ವಿಚಾರಿಸಿದನು.ಆ ಹುಡುಗಿಯ ಹೆಸರು ಕೋಮಲ. ಮನೆಯಲ್ಲಿ ಬಡತನ. ತಂದೆಗೆ ಖಾಯಿಲೆಯಾಗಿ ಕೆಲಸವನ್ನು ಬಿಟ್ಟರು. ಕೋಮಲ ದುಡಿದು ಮನೆಗೆ ಬಂದು ಹಾಕಬೇಕು. ಅವಳದು ಮದುವೆಯ ವಯಸ್ಸು ಆದರೂ ಮನೆಯಲ್ಲಿ ಮದುವೆಯಾಗಲು ಬಿಡದೆ ಅವಳನ್ನು ಹೀಗೆ ದುಡಿಸುತ್ತಿರುವುದು ವಿಪರ್ಯಾಸ. ಅವಳು ಕೆಲಸ ಮಾಡುತ್ತಿದ್ದಲ್ಲಿಯ ಮಾಲೀಕ ವಾರಿಯರ್ ಮದುವೆಯ ಪ್ರಸ್ತಾಪ ಆಕೆಯ ಮುಂದೆ ಇಟ್ಟಿದ್ದ. ಆದರೆ ಅವಳ ತಂದೆಯ ನಿಯಮ ಕೇವಲ ಅವಳನ್ನಷ್ಟೇ ಅಲ್ಲ ಅವಳ ಸಂಸಾರವನ್ನೂ ಸಾಕಬೇಕು ಎಂಬುದು. ಅದಕ್ಕಾಗಿ ಅವಳಿಗೆ ಸೂಕ್ತವಾದ ವರವೇ ಸಿಕ್ಕಿರಲಿಲ್ಲ. ವಾರಿಯರ್ ಕೂಡ ಬೇಸತ್ತು ಅವಳನ್ನು ಕೈಬಿಟ್ಟಿದ್ದ. ಅವಳು ಬೇರೆಯ ಕಡೆ ನೌಕರಿ ಹಿಡಿದಾಗ ಅಲ್ಲಿಯ ಒಬ್ಬ ಸಹೋದ್ಯೋಗಿಯ ಅಸಭ್ಯ ವರ್ತನೆ ಅವಳನ್ನು ಇನ್ನೂ ಮಂಕು ಮಾಡಿತ್ತು. ಮನೆಯಲ್ಲಿ ಅದರಿಂದ ತಂದೆಗೆ ಅವಳ ಮೇಲೆ ಬಹಳ ಕೋಪ ಆದರೂ ತನ್ನ ಕುಟುಂಬ ಎಂದು ಅವಳು ಸಲಹುತ್ತಿದ್ದಾದರೂ ಅವಳಿಗೆ ತಲೆ ಕೆಡುತ್ತಿತ್ತು. ಇವಳು ಪ್ರತಿದಿನ ನಾಯಿಡು ಮನೆಯ ಮುಂದೆ ನಡೆದುಕೊಂಡು ಹೋಗುವಾಗ ಅವನ ಕಣ್ಣು ಇವಳ ಮೇಲೆಯೇ ನೆಟ್ಟಿರುತ್ತಿತ್ತು. ಇವಳು ಕಣ್ಣೆತ್ತಿ ಕೂಡ ಅವನತ್ತ ನೋಡುತ್ತಿರಲಿಲ್ಲ. ಆದರೆ ಮನೆಯಲ್ಲಿ  ತಂದೆ ಅವಳನ್ನು ನಿರ್ದಯವಾಗಿ ನಿಂದಿಸಿ, ತಾಯಿಯೂ ಅನವಶ್ಯಕ ಅನುಮಾನ ವ್ಯಕ್ತಪಡಿಸಿದ್ದರಿಂದ   ಮರುದಿನ ಅವಳಿಗೆ ಏನೋ ಮನದಲ್ಲಿ ತಾನು ಬೇರೆಯವನೊಬ್ಬನ ಸುಖವನ್ನು ಬಯಸಿತು. ಅದು ಕೇವಲ ಸುಖ ಮಾತ್ರವಾಗಿರದೇ ಮದುವೆಯಾಗದಿದ್ದರೂ ಮಗುವನ್ನು ಪಡೆಯಲೇಬೇಕು ಎಂಬ ಉತ್ಕಟವಾದ ಬಯಕೆಯುಂಟಾಯಿತು.
 ಹಾಗೆಯೇ ಅವಳ  ಸಹೋದ್ಯೋಗಿ ಚಂದ್ರನ್ ಮಾಡಿದ್ದ ಮೋಸಕ್ಕೆ ಬಲಿಯಾದರೂ ಒಂದು ಸಲ ಅವನಿಂದ ಸುಖಪಡೆಯಬಹುದಾಗಿತ್ತು ಎಂಬ ಕೊರಗು ಅವಳನ್ನು ಕಾಡಿತು. ಮಹಾನ್ ಕಾಮಾಂಧ  ನಾಯಿಡುವನ್ನು ನೋಡಿದಾಗ ಆ ಆಸೆ ಮತ್ತೆ ಅವಳಿಗೆ   ಚಿಗುರೊಡೆಯಿತು. ಅವನ ಆ ಸಿರಿವಂತನ ಕಳೆಗೆ ಅವಳು ಮಾರಿಹೋಗಿದ್ದಳು. ಒಂದು ದಿನ ನಾಯಿಡು ಬಯಸುತ್ತಿದ್ದ ಹಕ್ಕಿ ತಾನೇ ತನಾಗಿ ಅವನ ರೂಂ ಬಳಿ ಬಂದು ರೊಟ್ಟಿ ಜಾರಿ ತುಪ್ಪಕ್ಕೆ ಬಿದ್ದ ಅನುಭವವಾಯಿತು. ನೂರಾರು ಹೆಣ್ಣುಗಳು ಹುರಿದು ಮುಕ್ಕಿದ್ದ ನಾಯ್ಡು ಕೋಮಲಗಾಗಿ ತಿಂಗಳುಗಟ್ಟಲೇ ಹುಚ್ಚನಾಗಿ ಕಾತರಿಸಿದ್ದ.ಅಂತಹ ಕೋಮಲಾ ತಾನೇ ನಾಯ್ಡುವನ್ನು ಹುಡುಕಿಕೊಂಡು ಬಂದು ನನಗೆ ಸುಖ ಕೊಡು ಎಂದಾಗ ನಾಯ್ಡು ಅವಳ   ಬಯಕೆಯನ್ನು ಈಡೇರಿಸಲು ವಿಫಲನಾದ.ತನ್ನ ಗಂಡಸ್ತನದ ಬಗ್ಗೆ   ನಾಯ್ಡು ತಾನೇ ಅಸಹ್ಯ ಪಟ್ಟುಕೊಂಡ.
ತನಗೆ ಸುಖ ನೀಡು ಎಂದು ನಾಚಿಕೆ ತೊರೆದು ಬಂದ ಹೆಣ್ಣಿಗೆ   ನಾಯ್ಡು  ಏಕೆ ಸುಖ ನೀಡಲಾಗಲಿಲ್ಲ ಎಂಬುದನ್ನು ನೀವು ಕಾದಂಬರಿ ಓದಿಯೇ ತಿಳಿಯಬೇಕು.

ಸಿಹಿಜೀವಿ ವೆಂಕಟೇಶ್ವರ.
ತುಮಕೂರು

09 April 2025

ಹಳ್ಳಿಗಳ ನಾಮದ ಮೇಲೆ ಬೆಳಕ ಚೆಲ್ಲುವ ದೇ ಜ ಗೌ ಕೃತಿ.


 


 ಹಳ್ಳಿಗಳ ನಾಮದ ಮೇಲೆ ಬೆಳಕ ಚೆಲ್ಲುವ   ದೇ ಜ ಗೌ ಕೃತಿ.


ದೇಜಾಗೌ ಎಂದು ಕರೆಯಲ್ಪಡುವ ಪ್ರೊ. ಡಿ. ಜವರೇ ಗೌಡ ಅವರು ಕನ್ನಡ ಸಾಹಿತ್ಯ ಮತ್ತು ಸಂಸ್ಕೃತಿ ಕ್ಷೇತ್ರದಲ್ಲಿ ಪ್ರಮುಖ ವಿದ್ವಾಂಸ ಮತ್ತು ಬರಹಗಾರರಾಗಿದ್ದರು. ಅವರು ಸ್ಥಳನಾಮಗಳ ಅಧ್ಯಯನದಲ್ಲಿ ತೀವ್ರ ಆಸಕ್ತಿ ಹೊಂದಿದ್ದರು. ಈ    ಕ್ಷೇತ್ರಕ್ಕೆ ಗಮನಾರ್ಹ ಕೊಡುಗೆಗಳನ್ನು ನೀಡಿದ್ದಾರೆ. ಭಾರತೀಯ ಸ್ಥಳನಾಮಗಳ ಸೊಸೈಟಿಯೊಂದಿಗಿನ ಅವರ ಕೆಲಸ ಮತ್ತು ಮೈಸೂರು ಜಿಲ್ಲೆಯ ಗ್ರಾಮನಾಮಗಳ ಕುರಿತಾದ ಅವರ ಸಂಶೋಧನೆಯು ಕರ್ನಾಟಕದ ಭಾಷಾ ಮತ್ತು ಸಾಂಸ್ಕೃತಿಕ ಪರಂಪರೆಯನ್ನು ಸಂರಕ್ಷಿಸುವ ಮತ್ತು ಅರ್ಥಮಾಡಿಕೊಳ್ಳುವ ಅವರ ಸಮರ್ಪಣೆಯನ್ನು ತೋರಿಸುತ್ತದೆ. ಗೌಡರ ಶೈಕ್ಷಣಿಕ ಅನ್ವೇಷಣೆಗಳು ಮತ್ತು ಸಾಹಿತ್ಯಿಕ ಕೊಡುಗೆಗಳು ಕನ್ನಡ ಭಾಷೆ ಮತ್ತು ಸಂಸ್ಕೃತಿಯ ಅಧ್ಯಯನದ ಮೇಲೆ ಶಾಶ್ವತವಾದ ಪ್ರಭಾವ ಬೀರಿವೆ.


 ದೇ  ಜ  ಗೌ ಅವರ "ವಿಲೇಜ್ ನೇಮ್ಸ್ ಆಪ್ ಮೈಸೂರ್ ಡಿಸ್ಟ್ರಿಕ್ಟ್ " ಎಂಬ ಪುಸ್ತಕವನ್ನು ಓದಿದೆ.ಇದು ಮೈಸೂರು ಜಿಲ್ಲೆಯ ಗ್ರಾಮಗಳ ಹೆಸರುಗಳು ಹೇಗೆ ಬಂದಿವೆ ಎಂಬ ಬಗ್ಗೆ ವಿವರವಾದ ಮಾಹಿತಿಯನ್ನು ನೀಡುತ್ತದೆ. 

 1998 ರಲ್ಲಿ ಪ್ರಕಟವಾದ ಈ ಕೃತಿಯು ಸ್ಥಳನಾಮಗಳ ಮೂಲ, ವಿಕಸನ ಮತ್ತು ಅರ್ಥದ ಅಧ್ಯಯನವಾದ ಓನೋಮಾಸ್ಟಿಕ್ಸ್   ಕ್ಷೇತ್ರಕ್ಕೆ ಮಹತ್ವದ ಕೊಡುಗೆಯಾಗಿದೆ.


ಈ   ಪುಸ್ತಕವನ್ನು ಎರಡು ಭಾಗಗಳಾಗಿ ವಿಂಗಡಿಸಲಾಗಿದೆ.

ಭಾಗ ಒಂದು ನಮಗೆ  ನಿರ್ದಿಷ್ಟತೆಗಳು ಮತ್ತು ಸಾರ್ವತ್ರಿಕತೆಗಳ ಆಧಾರದ ಮೇಲೆ ಗ್ರಾಮ ಹೆಸರುಗಳ ವರ್ಗೀಕರಣದ ಬಗ್ಗೆ ಮಾಹಿತಿಯನ್ನು ಒದಗಿಸುತ್ತದೆ. 

ಭಾಗ ಎರಡು ಗ್ರಾಮ ಹೆಸರುಗಳ ಶಬ್ದಾರ್ಥದ ಅಧ್ಯಯನದ ಮೇಲೆ ಕೇಂದ್ರೀಕರಿಸುತ್ತದೆ.


ಈ ಪುಸ್ತಕವು ಗ್ರಾಮಗಳ ಹೆಸರುಗಳ ಸಂಕೀರ್ಣತೆಗಳನ್ನು ಪರಿಶೀಲಿಸುತ್ತಾ ಪ್ರಾಚೀನ ಕಾಲದಿಂದಲೂ ಅವುಗಳ ಬೇರುಗಳನ್ನು ಪತ್ತೆಹಚ್ಚುವ ಪ್ರಯತ್ನ ಮಾಡುತ್ತದೆ. ಹಾಗೂ    ಅವುಗಳ ನಾಮಕರಣದ ಮೇಲೆ ಪ್ರಭಾವ ಬೀರಿದ ವಿವಿಧ ಅಂಶಗಳನ್ನು ವಿಶ್ಲೇಷಿಸುತ್ತದೆ. ಗೌಡರ ವಿಧಾನವು ಐತಿಹಾಸಿಕ ಮತ್ತು ವಿಶ್ಲೇಷಣಾತ್ಮಕವಾಗಿದೆ, ಭೌಗೋಳಿಕ, ಸಾಂಸ್ಕೃತಿಕ, ಸಾಮಾಜಿಕ ಮತ್ತು ರಾಜಕೀಯ ಅಂಶಗಳು ಈ ಗ್ರಾಮಗಳ ಗುರುತುಗಳನ್ನು ಹೇಗೆ ರೂಪಿಸಿವೆ ಎಂಬುದರ ಸಮಗ್ರ ನೋಟವನ್ನು ಒದಗಿಸುತ್ತದೆ.


 ನಿರ್ದಿಷ್ಟತೆ ಮತ್ತು ಸಾಮಾನ್ಯ ಲಕ್ಷಣಗಳನ್ನು ಆಧರಿಸಿದ ಗ್ರಾಮ ಹೆಸರುಗಳ ವಿವರವಾದ ವರ್ಗೀಕರಣವು ಪುಸ್ತಕದ ಒಂದು ಶಕ್ತಿಯಾಗಿದೆ. ಈ ವರ್ಗೀಕರಣವು ಗ್ರಾಮ ಹೆಸರುಗಳ ಅರ್ಥಗಳು ಮತ್ತು ಮೂಲಗಳನ್ನು ಸ್ಪಷ್ಟಪಡಿಸುವಲ್ಲಿ ಸಹಾಯ ಮಾಡುತ್ತದೆ. ಪ್ರದೇಶದ ಐತಿಹಾಸಿಕ, ಸಾಂಸ್ಕೃತಿಕ ಮತ್ತು ಭಾಷಾ ಹಿನ್ನೆಲೆಗಳ ಬಗ್ಗೆ ಒಳನೋಟಗಳನ್ನು  ಸಹ  ಒದಗಿಸುತ್ತದೆ. ಕಾಲಾನಂತರದಲ್ಲಿ ಗ್ರಾಮ ಹೆಸರುಗಳ ರೂಪಾಂತರದ ಮೇಲೆ ಭಾಷಾ ವಿಕಸನ, ಸಂಸ್ಕೃತೀಕರಣ ಮತ್ತು ಆಂಗ್ಲೀಕರಣದ ಪ್ರಭಾವವನ್ನು ಲೇಖಕರು ಪ್ರಸ್ತಾಪಿಸಿದ್ದಾರೆ.

 ಗೌಡರು ಈ ಅರ್ಥಪೂರ್ಣ  ವಿಶ್ಲೇಷಣೆಗೆ  ಹಾಗೂ ಗ್ರಾಮಗಳ ಹೆಸರುಗಳ ವ್ಯುತ್ಪತ್ತಿ ಮತ್ತು ಶಬ್ದಾರ್ಥದ ಮೌಲ್ಯವನ್ನು ಪತ್ತೆಹಚ್ಚಲು ಶಿಲಾಶಾಸನ ದಾಖಲೆಗಳು, ಸಾಹಿತ್ಯ ಕೃತಿಗಳು, ಗೆಜೆಟಿಯರ್‌ಗಳು ಮತ್ತು ಜನಗಣತಿ ದಾಖಲೆಗಳಂತಹ ವಿವಿಧ ಮೂಲಗಳನ್ನು ಸಮರ್ಪಕವಾಗಿ ಬಳಸಿಕೊಂಡಿದ್ದಾರೆ.


  ಮೈಸೂರು ಜಿಲ್ಲೆಯ ಐತಿಹಾಸಿಕ ಹಿನ್ನೆಲೆಯನ್ನು ಸಹ  ಈ  ಪುಸ್ತಕ ನಮಗೆ ಒದಗಿಸುತ್ತದೆ. ಈ ಪ್ರದೇಶದ ಮೇಲೆ ಪ್ರಭಾವ ಬೀರಿದ ವಿವಿಧ ರಾಜವಂಶಗಳು ಮತ್ತು ಆಡಳಿತಗಾರರ ಬಗ್ಗೆ ಚರ್ಚಿಸುತ್ತದೆ. ಗ್ರಾಮ ಹೆಸರುಗಳ ವಿಕಸನ ಮತ್ತು ಅವುಗಳ ಸಾಂಸ್ಕೃತಿಕ ಮಹತ್ವವನ್ನು ಅರ್ಥಮಾಡಿಕೊಳ್ಳುವಲ್ಲಿ ಈ ಐತಿಹಾಸಿಕ ಸಂದರ್ಭವು ನಿರ್ಣಾಯಕವಾಗಿದೆ.


ವ್ಯಾಪಕವಾದ ಕ್ಷೇತ್ರ ಕಾರ್ಯದ ಕೊರತೆಯಿಂದಾಗಿ ಅಧ್ಯಯನದ ಮಿತಿಗಳನ್ನು ಲೇಖಕರು ಒಪ್ಪಿಕೊಂಡರೂ  ಪುಸ್ತಕದಲ್ಲಿ ಪ್ರಸ್ತುತಪಡಿಸಲಾದ ಸಂಶೋಧನೆ ಮತ್ತು ವಿಶ್ಲೇಷಣೆ ಶ್ಲಾಘನೀಯ. 

ಒಟ್ಟಾರೆ ಈ ಕೃತಿಯು ವಿದ್ವಾಂಸರು, ಇತಿಹಾಸಕಾರರು, ಭಾಷಾಶಾಸ್ತ್ರಜ್ಞರು ಮತ್ತು ಹಳ್ಳಿಗಳ ಹೆಸರುಗಳಲ್ಲಿ ಹುದುಗಿರುವ ಶ್ರೀಮಂತ ಸಾಂಸ್ಕೃತಿಕ ಪರಂಪರೆಯನ್ನು ಅರ್ಥಮಾಡಿಕೊಳ್ಳಲು ಆಸಕ್ತಿ ಹೊಂದಿರುವ ಯಾರಿಗಾದರೂ ಅಮೂಲ್ಯವಾದ ಸಂಪನ್ಮೂಲವಾಗಿದೆ.


ಸಿಹಿಜೀವಿ ವೆಂಕಟೇಶ್ವರ

ತುಮಕೂರು



08 April 2025

ಕಾಶ್ಮೀರದ ಇತಿಹಾಸದ ಮೇಲೆ ಬೆಳಕು ಚೆಲ್ಲುವ ಕೃತಿ. ಪುಸ್ತಕ ಪರಿಚಯ.


 


ಕಾಶ್ಮೀರದ ಇತಿಹಾಸದ ಮೇಲೆ ಬೆಳಕು ಚೆಲ್ಲುವ ಕೃತಿ.

  

ಲೇಖಕ ಕೋಟಾ ವೆಂಕಟಾಚಲಂ ಒಬ್ಬ ಭಾರತೀಯ ವಿದ್ವಾಂಸ ಮತ್ತು ಲೇಖಕರಾಗಿದ್ದು ಭಾರತೀಯ ಕಾಲಗಣನೆ ಮತ್ತು ಇತಿಹಾಸದ ಅಧ್ಯಯನಕ್ಕೆ ಅವರ ಕೊಡುಗೆ ಅಪಾರ. ಅವರ ಬರಹಗಳು ಪ್ರಾಚೀನ ಭಾರತೀಯ ಮಹಾನ್ ಕೃತಿಗಳ ಆಳವಾದ ಅಧ್ಯಯನ ಮಾಡಿ  ಪಾಶ್ಚಿಮಾತ್ಯ ವಿದ್ವಾಂಸರು ಪ್ರಸ್ತಾಪಿಸಿದ ಐತಿಹಾಸಿಕ ಅಂಶಗಳ ಆಧಾರದ ಮೇಲೆ  ವಿಮರ್ಶಾತ್ಮಕ ದೃಷ್ಟಿಕೋನದಲ್ಲಿ ಹತ್ತಾರು ಪುಸ್ತಕಗಳನ್ನು ಬರೆದಿದ್ದಾರೆ. ಅವರು ತೆಲುಗು ಮತ್ತು ಇಂಗ್ಲಿಷ್‌ನಲ್ಲಿ ಹಲವಾರು ಕೃತಿಗಳನ್ನು ಬರೆದಿದ್ದಾರೆ.

"ಕ್ರೋನಾಲಜಿ ಆಪ್ ಕಾಶ್ಮೀರ್ ಹಿಸ್ಟರಿ  ರಿಕನ್ಸ್ಟಕ್ಟೆಡ್ " ಎಂಬ ಪುಸ್ತಕವು ಆಂಗ್ಲ ಭಾಷೆಯಲ್ಲಿದ್ದು 

 ಇದು ಕಾಶ್ಮೀರದ ಐತಿಹಾಸಿಕ ಕಾಲಗಣನೆಯ ವಿಮರ್ಶಾತ್ಮಕ ಮರುಮೌಲ್ಯಮಾಪನವನ್ನು ನೀಡುತ್ತದೆ.  ಈ ಪುಸ್ತಕವು ಪಾಶ್ಚಿಮಾತ್ಯ ವಿದ್ವಾಂಸರು ನಮ್ಮ ಮೇಲೆ ಹೇರಿದ   ಕಾಲಗಣನೆಯನ್ನು ಪ್ರಶ್ನಿಸುತ್ತಾ 

 ಭಾರತೀಯ ಇತಿಹಾಸದಲ್ಲಿ ಹೇಗೆ ತಿರುಚಿದ್ದಾರೆ ಎಂದು ಹೇಳಿದ್ದಾರೆ.  ವಿಶೇಷವಾಗಿ ಭಾರತೀಯ ನಾಗರಿಕತೆಯ ಪ್ರಾಚೀನತೆಗೆ ಸಂಬಂಧಿಸಿದಂತೆ ಪೂರ್ವಭಾವಿ ಕಲ್ಪನೆಗಳಿಂದ ಕೂಡಿದೆ ಎಂದು ವೆಂಕಟಾಚಲಂ ವಾದಿಸುತ್ತಾರೆ. 


  ಭಾರತೀಯ ಇತಿಹಾಸದ ಪುನರ್ನಿರ್ಮಾಣದಲ್ಲಿ ಭಾರತೀಯ ಪುರಾಣಗಳು, ಮಹಾಕಾವ್ಯಗಳು ಮತ್ತು ಐತಿಹಾಸಿಕ ಕೃತಿಗಳಿಗೆ ಆದ್ಯತೆ ನೀಡುವ ಪ್ರಾಮುಖ್ಯತೆಯನ್ನು ವೆಂಕಟಾಚಲಂ ಪ್ರತಿಪಾದಿಸುತ್ತಾರೆ. ಈ ಮೂಲಗಳನ್ನು ಪಾಶ್ಚಿಮಾತ್ಯ ವಿದ್ವಾಂಸರು  ನಿರ್ಲಕ್ಷಿಸಿದ್ದಾರೆ.ಇದರ ಪರಿಣಾಮವಾಗಿ ಭಾರತದ ಐತಿಹಾಸಿಕ ಪಥದ ತಪ್ಪಾದ ಮತ್ತು ಅಪೂರ್ಣ ತಿಳುವಳಿಕೆ ಉಂಟಾಗುತ್ತದೆ ಎಂದು ಅವರು ಅಭಿಪ್ರಾಯ ಪಟ್ಟಿದ್ದಾರೆ.

 ಭಾರತೀಯ ಇತಿಹಾಸದಲ್ಲಿನ ಮಹತ್ವದ ಘಟನೆಗಳು ಮತ್ತು ವ್ಯಕ್ತಿಗಳಿಗೆ ಪರಿಷ್ಕೃತ ಕಾಲಗಣನೆಯನ್ನು ಲೇಖಕರು ಪ್ರಸ್ತಾಪಿಸಿದ್ದಾರೆ.  ಉದಾಹರಣೆಗೆ ಅವರು ಮಹಾಭಾರತ ಯುದ್ಧವನ್ನು ಕ್ರಿ.ಪೂ. 3138 ರ ಸುಮಾರಿಗೆ ನಡೆದಿದೆ ಎಂದು ಅಭಿಪ್ರಾಯಪಡುತ್ತಾರೆ.

 ಈ ಪುಸ್ತಕವು ಕಾಶ್ಮೀರದ ಪ್ರಮುಖ ಐತಿಹಾಸಿಕ ಪಠ್ಯವಾದ ಕಲ್ಹಣನ "ರಾಜತರಂಗಿಣಿ" ಯ ಆಳವಾದ ವಿಶ್ಲೇಷಣೆಯನ್ನು ಮಾಡಿದೆ.ಅದರ ಮಹತ್ವ, ಮೂಲಗಳು ಮತ್ತು ವಿದ್ವತ್ಪೂರ್ಣ ವ್ಯಾಖ್ಯಾನಗಳನ್ನು ಚರ್ಚಿಸುತ್ತದೆ. 


ವೆಂಕಟಾಚಲಂ ಅವರು ಬುಹ್ಲರ್, ಹಲ್ಟ್ಜ್ ಮತ್ತು ಸ್ಟೈನ್ ಅವರಂತಹ ಪಾಶ್ಚಿಮಾತ್ಯ ಇತಿಹಾಸಕಾರರ ಕೃತಿಗಳನ್ನು ಟೀಕಿಸಿದ್ದಾರೆ.  ಅವರ ವ್ಯಾಖ್ಯಾನಗಳನ್ನು ಪ್ರಶ್ನಿಸುತ್ತಾ   ಭಾರತೀಯ ಇತಿಹಾಸದ ತಪ್ಪು ನಿರೂಪಣೆಗಳನ್ನು ಖಂಡಿಸಿದ್ದಾರೆ.

 ಈ ಪುಸ್ತಕವು ಮಹಾಭಾರತ ಯುದ್ಧದ ಡೇಟಿಂಗ್, ಕಲಿಯುಗ ಮತ್ತು ಬುದ್ಧ, ವಿಕ್ರಮಾದಿತ್ಯ ಮತ್ತು ಕಾನಿಷ್ಕನಂತಹ ವ್ಯಕ್ತಿಗಳ ಕಾಲಗಣನೆ ಸೇರಿದಂತೆ ಭಾರತೀಯ ಇತಿಹಾಸದಲ್ಲಿನ ವಿವಾದಾತ್ಮಕ ಕಾಲಾನುಕ್ರಮದ ಸಮಸ್ಯೆಗೆ ಪರಿಹಾರವನ್ನು ಸೂಚಿಸುವ ಪ್ರಯತ್ನ ಮಾಡಿದ್ದಾರೆ.

ಜೊತೆಗೆ  ಈ ಪುಸ್ತಕವು ಮುಸ್ಲಿಂ ಆಳ್ವಿಕೆ, ಚಕ್ಸ್, ಮೊಘಲರು, ಆಫ್ಘನ್ನರು, ಸಿಖ್ಖರು ಮತ್ತು ಡೋಗ್ರಾಗಳನ್ನು ಒಳಗೊಂಡ ಕಾಶ್ಮೀರದ  ಐತಿಹಾಸಿಕ ಅವಧಿಗಳ ಅವಲೋಕನವನ್ನು ಸಹ ಒದಗಿಸುತ್ತದೆ.


ಒಟ್ಟಾರೆ ನಮ್ಮನ್ನು ಚಿಂತನೆಗೆ ಹಚ್ಚುವ ಇದು ಭಾರತೀಯರು ಓದಲೇ ಬೇಕಾದ ಕೃತಿ.


ಸಿಹಿಜೀವಿ ವೆಂಕಟೇಶ್ವರ

ತುಮಕೂರು

 

06 April 2025

ನಮ್ಮ ಮೌಲ್ಯ ನಮಗೇ ತಿಳಿದಿಲ್ಲ


 


ನಮ್ಮ ಮೌಲ್ಯ ನಮಗೇ ತಿಳಿದಿಲ್ಲ 


ಇದೊಂದು  ಕಬ್ಬಿಣದ ಬಾರ್. ಇದರ ಮೌಲ್ಯ ಸುಮಾರು 100 ಡಾಲರ್.


ನೀವು ಇದರಿಂದ  ಕುದುರೆ ಲಾಳಗಳನ್ನು ತಯಾರಿಸಲು ನಿರ್ಧರಿಸಿದರೆ, ಅದರ ಮೌಲ್ಯ  250 ಡಾಲರ್ ಗೆ  ಹೆಚ್ಚಾಗುತ್ತದೆ.


ಬದಲಾಗಿ ನೀವು ಇದರಲ್ಲಿ ಹೊಲಿಗೆ ಸೂಜಿಗಳನ್ನು ತಯಾರಿಸಲು ನಿರ್ಧರಿಸಿದರೆ ಅದರ ಮೌಲ್ಯ ಸುಮಾರು 70,000 ಡಾಲರ್ ಗೆ  ಹೆಚ್ಚಾಗುತ್ತದೆ.



ನೀವು ಇದರಿಂದ ಗಡಿಯಾರದ ಸ್ಪ್ರಿಂಗ್‌ಗಳನ್ನು ಉತ್ಪಾದಿಸಲು ನಿರ್ಧರಿಸಿದರೆ ಅದರ  ಮೌಲ್ಯ ಸುಮಾರು 6 ಮಿಲಿಯನ್‌ ಡಾಲರ್ ಗೆ  ಹೆಚ್ಚಾಗುತ್ತದೆ.


ಕಬ್ಬಿಣದ ಬಾರ್ ನೀವೇ! ನೀವು ನಿಮ್ಮ ಮೌಲ್ಯವನ್ನು ಹೇಗೆ ಹೆಚ್ಚಿಸಿಕೊಳ್ಳಬಹುದು ಎಂಬುದರ ಬಗ್ಗೆ ಗಮನ ಕೊಡಿ. ನಿಮ್ಮಲಿರುವ ಅದ್ಭುತ ವ್ಯಕ್ತಿ ಹೊರಬರಲಿ.ನಿಮ್ಮ ವ್ಯಕ್ತಿತ್ವ ಉಜ್ವಲವಾಗಲಿ..


ಸಿಹಿಜೀವಿ ವೆಂಕಟೇಶ್ವರ



04 April 2025

ಗೇದು..ಬೂತಾನಿನ ಪ್ರಮುಖ ಪ್ರಾಕೃತಿಕ ತಾಣ.





 


ಭೂತಾನ್ ಪ್ರವಾಸ ೭ 

ಗೇದು..


ಕರ್ಬಂತಿ ಗಿಂಬ ನೋಡಿ ಬಸ್ ಏರಿ ಸಾಗುವಾಗ ನಮ್ಮ ನಾಡಿನ ಘಾಟಿಗಳಲ್ಲಿ ಸಂಚರಿಸಿದ ಅನುಭವವನ್ನು ಪಡೆಯುತ್ತೇವೆ.ಎಲ್ಲಾ ಕಡೆ ಹಸುರು ಮತ್ತು  ತಿರುವು ಮುರುವು ರಸ್ತೆಯಲ್ಲಿ ಸಾಗಿದೆವು.

ಹೀಗೆ ಸಾಗಿ ವಿಶ್ರಾಂತಿ ಗಾಗಿ ಗೇದು ಎಂಬ ಸ್ಥಳದಲ್ಲಿ ನಿಲ್ಲಿಸಿದೆವು.


ಚುಖಾ ಜಿಲ್ಲೆಯ ಒಂದು ಪಟ್ಟಣ ಗೆಡು. ಮೂಲತಃ ಸ್ಥಳೀಯ ಜಲವಿದ್ಯುತ್ ಸ್ಥಾವರದಲ್ಲಿ ಕೆಲಸ ಮಾಡುವ ಜನರಿಗೆ ವಸತಿ ಕಲ್ಪಿಸಲು ಅಭಿವೃದ್ಧಿಪಡಿಸಲಾದ ಈ ಪಟ್ಟಣವು ಈಗ ಒಂದು ಸಣ್ಣ ಕಾಲೇಜಿಗೆ ನೆಲೆಯಾಗಿದೆ. ಬೆಟ್ಟದ ಸ್ಥಳಕ್ಕೆ ಅಂಟಿಕೊಂಡಿರುವ ಗೆಡುವಿನ ಸೌಂದರ್ಯ ಸವಿದು ಪೋಟೋ ತೆಗೆದುಕೊಂಡು ವೀಡಿಯೋ ಮಾಡಿಕೊಂಡೆವು.


   ಫ್ಯೂಯೆಂಟ್‌ಶೋಲಿಂಗ್ ಮತ್ತು ಥಿಂಫು  ನಡುವಿನ ಅತಿದೊಡ್ಡ ಜನಸಂಖ್ಯಾ ಕೇಂದ್ರವಾಗಿರುವುದರಿಂದ  ಇದು ಉಪಾಹಾರ ಸೇವಿಸಲು ಅನುಕೂಲಕರ ಸ್ಥಳವಾಗಿದೆ.

ಸ್ವಲ್ಪ ವಿಶ್ರಾಂತಿ ಪಡೆದ ನಂತರ ನಾವು ಗೆದುವಿನಲ್ಲಿ  ಇರುವ 

ಎಂಟು ಧರ್ಮ ಕಾಯ ಸ್ತೂಪಗಳನ್ನು ನೋಡಿದೆವು. 

ಎಂಟು ಮಹಾ ಬೌದ್ಧ ಸ್ತೂಪಗಳು  ಪ್ರಮುಖ ಟಿಬೆಟಿಯನ್ ಬೌದ್ಧಧರ್ಮದ  ಸಂಸ್ಕೃತಿಯಾಗಿದೆ.ಇದು ಬುದ್ಧ ಶಾಕ್ಯಮುನಿಯ ಜೀವನ ಮತ್ತು ಕೃತಿಗಳಲ್ಲಿನ ಎಂಟು ಪ್ರಮುಖ ಘಟನೆಗಳನ್ನು ಪ್ರತಿನಿಧಿಸುತ್ತದೆ. ಎಂಟು ಮಹಾ ಬೌದ್ಧ ಸ್ತೂಪಗಳು ಪ್ರಬುದ್ಧ ಮನಸ್ಸಿನ ಸಂಕೇತಗಳಾಗಿವೆ ಮತ್ತು ಅದರ ಸಾಕ್ಷಾತ್ಕಾರದ ಮಾರ್ಗವಾಗಿದೆ. 


ಎಂಟು ಮಹಾ ಬೌದ್ಧ ಸ್ತೂಪಗಳು ಬುದ್ಧನ ದೇಹ, ಮಾತು ಮತ್ತು ಮನಸ್ಸನ್ನು ಪ್ರತಿನಿಧಿಸುತ್ತವೆ. ಪರಿಣಾಮವಾಗಿ, ಎಂಟು ಸ್ತೂಪಗಳು ಬೌದ್ಧ ಅನುಯಾಯಿಗಳ ಪೂಜಾ ಸ್ಥಳಗಳಾಗಿವೆ.

ಮೊದಲ ಸ್ತೂಪ  ಬುದ್ಧನ ಜನನದ ಕಮಲದ ಹೂವು ಸ್ತೂಪ 

ಎರಡನೇಯದು ಜ್ಞಾನೋದಯ ಸ್ತೂಪ. 

ಮೂರನೆಯದು  ಧರ್ಮದ ಚಕ್ರವನ್ನು ತಿರುಗಿಸುವ ಸ್ತೂಪ. ನಾಲ್ಕನೆಯ ಸ್ತೂಪ ಮಹಾ ಪವಾಡ ಸ್ತೂಪ. 

ಐದು  ತುಶಿತ ಸ್ವರ್ಗದಿಂದ ಬಂದ ಸ್ತೂಪ.ಆರನೇ ಸ್ತೂಪ ಸಾಮರಸ್ಯದ ಸ್ತೂಪ. 

ಏಳನೇಯದು ಸರ್ವವಿಜಯಶಾಲಿ ಸ್ತೂಪ 

ಕೊನೆಯ ಮತ್ತು ಎಂಟನೇ ಸ್ತೂಪ  ಪರಿನಿರ್ವಾಣ ಸ್ತೂಪ.

ಎಲ್ಲಾ ಎಂಟೂ ಸ್ತೂಪಗಳನ್ನು ದರ್ಶಿಸಿ ಕೈಮುಗಿದು ಹೊರಬಂದು ಮತ್ತೊಮ್ಮೆ ಪ್ರಕೃತಿಯ ಸೊಬಗನ್ನು ಸವಿಯುತ್ತಾ ಬಸ್ ಏರಿ ಥಿಂಫು ಕಡೆಗೆ ಪಯಣ ಮುಂದುವರೆಸಿದೆವು.


ಸಿಹಿಜೀವಿ ವೆಂಕಟೇಶ್ವರ

ತುಮಕೂರು

 


03 April 2025

ಮರೆತು ಹೋದ ಸ್ವಾತಂತ್ರ್ಯ ಹೋರಾಟಗಾರರ ಸ್ಮರಿಸೋಣ.


 ಮರೆತು ಹೋದ ಸ್ವಾತಂತ್ರ್ಯ ಹೋರಾಟಗಾರರ ಸ್ಮರಿಸೋಣ.ಈ



ನಾನು ಇಂದು ಪ್ರಭಾ ಚೋಪ್ರಾ ಮತ್ತು ಪಿ.ಎನ್. ಚೋಪ್ರಾ ಅವರಿಂದ ರಚಿತವಾದ ಇಂಗ್ಲೀಷ್ ಪುಸ್ತಕ  

"ಫರ್ಗಾಟನ್ ಹೀರೋಸ್ ಆಫ್ ಇಂಡಿಯಾಸ್ ಫ್ರೀಡಂ ಸ್ಟ್ರಗಲ್ " ಎಂಬ ಆಂಗ್ಲ  ಪುಸ್ತಕ ಓದಿದೆ.

ಇದರಲ್ಲಿ  ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗಿಯಾಗಿದ್ದ ಅಸಂಖ್ಯಾತ ಮರೆತುಹೋದ ವೀರರು, ಕ್ರಾಂತಿಕಾರಿಗಳು, ಸ್ವಾತಂತ್ರ್ಯ ವೀರರ  ತ್ಯಾಗ ಮತ್ತು  ಶೌರ್ಯದ ವಿವರವಾದ ಮಾಹಿತಿಯಿದೆ.


 ಈ ಕೃತಿಯ ಲೇಖಕರು  ಬ್ರಿಟಿಷ್ ಸರ್ಕಾರ ಸಿದ್ಧಪಡಿಸಿದ ರಹಸ್ಯ ಗುಪ್ತಚರ ವರದಿಗಳನ್ನು ಅಧ್ಯಯನ ಮಾಡಿ ನಮಗೆ ಈ ಅಮೂಲ್ಯವಾದ ಕೊಡುಗೆಯನ್ನು ನೀಡಿದ್ದಾರೆ. ಸ್ವಾತಂತ್ರ್ಯ ಚಳವಳಿಯನ್ನು ಮೇಲ್ವಿಚಾರಣೆ ಮಾಡಲು ಮತ್ತು ನಿಗ್ರಹಿಸಲು ರಚಿಸಲಾದ ಈ ದಾಖಲೆಗಳು   ನಮ್ಮ ದೇಶಭಕ್ತರ ಅಚಲ ಧೈರ್ಯ, ತ್ಯಾಗ ಮತ್ತು ದೃಢನಿಶ್ಚಯಕ್ಕೆ ಪ್ರಬಲ ಸಾಕ್ಷಿಯಾಗಿ ನಿಂತಿವೆ.


 ಈ ಪುಸ್ತಕವು ಸ್ವಾತಂತ್ರ್ಯ ಹೋರಾಟಗಾರರ ಕೊಡುಗೆಗಳನ್ನು ಬೆಳಕಿಗೆ ತರುವಲ್ಲಿ  ಪ್ರಮುಖವಾದ ಪಾತ್ರವನ್ನು ವಹಿಸುತ್ತದೆ.ಹಾಗೂ 

 ಶ್ರೀಮಂತ ಐತಿಹಾಸಿಕ ಹಿನ್ನೆಲೆಯನ್ನು ಒದಗಿಸುತ್ತದೆ. ಬ್ರಿಟಿಷ್ ಆಳ್ವಿಕೆಯ ವಿರುದ್ಧ ಪ್ರತಿರೋಧದ ವಿಕಸನದ ಸ್ವರೂಪವನ್ನು ವಿವರಿಸುತ್ತದೆ. ಆರಂಭಿಕ ಸಾಂವಿಧಾನಿಕ ವಿಧಾನಗಳ ಜೊತೆಗೆ ನಿರ್ದಿಷ್ಟ ಘಟನೆಗಳು ಮತ್ತು ನೀತಿಗಳಿಂದ ಪ್ರಚೋದಿಸಲ್ಪಟ್ಟ ಬೆಳೆಯುತ್ತಿರುವ ಕ್ರಾಂತಿಕಾರಿ ಉತ್ಸಾಹವು ಹೇಗೆ ಹೊರಹೊಮ್ಮಿತು ಎಂಬುದನ್ನು ಇದು ಸ್ಪಷ್ಟಪಡಿಸುತ್ತದೆ. ಪೂನಾದಲ್ಲಿ ಬುಬೊನಿಕ್ ಪ್ಲೇಗ್ ಏಕಾಏಕಿ ಉಂಟಾದ ನಂತರದ ಅಸಮಾಧಾನ ಮತ್ತು ಪ್ಲೇಗ್ ಸಮಿತಿಯ ಬಲವಂತದ ಕ್ರಮಗಳನ್ನು ಹೆಚ್ಚುತ್ತಿರುವ ಅಶಾಂತಿಯ ವೇಗವರ್ಧಕಗಳಾಗಿ ಪುಸ್ತಕವು ವಿವರಿಸುತ್ತದೆ. ಸ್ವದೇಶಿ ಚಳುವಳಿ ಮತ್ತು ಬಂಗಾಳದ ವಿಭಜನೆಯನ್ನು ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸಿದ ಪ್ರಮುಖ ಕ್ಷಣಗಳಾಗಿ ಪ್ರಸ್ತುತಪಡಿಸಲಾಗಿದೆ. ಇದು ಹೆಚ್ಚು ಆಮೂಲಾಗ್ರ ಪ್ರತಿರೋಧದ ರೂಪಗಳು ಮತ್ತು ಸ್ವಾತಂತ್ರ್ಯಕ್ಕಾಗಿ ಸಶಸ್ತ್ರ ಹೋರಾಟಕ್ಕೆ ಬದ್ಧವಾಗಿರುವ ಕ್ರಾಂತಿಕಾರಿ ಸಂಘಟನೆಗಳ ಹೊರಹೊಮ್ಮುವಿಕೆಗೆ ಕಾರಣವಾಯಿತು.


 ಬ್ರಿಟಿಷ್ ಅಧಿಕಾರಿಗಳ ಮೇಲಿನ ದಾಳಿಗಳನ್ನು ಯೋಜಿಸುವಲ್ಲಿ ಮತ್ತು ಕಾರ್ಯಗತಗೊಳಿಸುವಲ್ಲಿ ನಿರ್ಣಾಯಕ ಪಾತ್ರ ವಹಿಸಿದ ಅನುಸಿಲನ್ ಸಮಿತಿಯಂತಹ ಪ್ರಮುಖ ರಹಸ್ಯ ಸಮಾಜಗಳ ಚಟುವಟಿಕೆಗಳ ಮೇಲೆ ಈ ಪುಸ್ತಕ ಬೆಳಕು ಚೆಲ್ಲುತ್ತದೆ. ಇದು ಕ್ರಾಂತಿಕಾರಿಗಳು ತಮ್ಮ ಉದ್ದೇಶಕ್ಕೆ ತೋರಿದ ಅಚಲ ಬದ್ಧತೆಯನ್ನು ವಿವರಿಸುವ ನಿರ್ದಿಷ್ಟ ಧಿಕ್ಕಾರ ಮತ್ತು ತ್ಯಾಗದ ಕೃತ್ಯಗಳನ್ನು ವಿವರಿಸುತ್ತದೆ. ಖುದಿರಾಮ್ ಬೋಸ್ ಮತ್ತು ಪ್ರಫುಲ್ಲ ಚಾಕಿ ಅವರು ಬ್ರಿಟಿಷ್ ಮ್ಯಾಜಿಸ್ಟ್ರೇಟ್‌ರನ್ನು ಹತ್ಯೆ ಮಾಡಲು ಪ್ರಯತ್ನಿಸಿದ ಘಟನೆಗಳಂತಹ ಘಟನೆಗಳನ್ನು ಈ ಪುಸ್ತಕ  ವಿವರಿಸುತ್ತದೆ.ಈ ಕಾರ್ಯಾಚರಣೆಯು ಅಮಾಯಕ ನಾಗರಿಕರ ಸಾವಿಗೆ ದುರಂತವಾಗಿ ಕಾರಣವಾಯಿತು.ಈ ಹೋರಾಟದಲ್ಲಿ ಅಂತರ್ಗತವಾಗಿದ್ದ  ಅಪಾಯಗಳು ಮತ್ತು ನೈತಿಕ ಸಂಕೀರ್ಣತೆಗಳನ್ನು ಒತ್ತಿಹೇಳುತ್ತದೆ.


ವಿದೇಶಿ ನೆಲದಲ್ಲಿ ಕಾರ್ಯನಿರ್ವಹಿಸುತ್ತಿರುವ ಭಾರತೀಯ ಕ್ರಾಂತಿಕಾರಿಗಳ ಪ್ರಮುಖ ಕೊಡುಗೆಗಳನ್ನು ಸಹ ಸೂಕ್ಷ್ಮವಾಗಿ ಇಲ್ಲಿ  ದಾಖಲಿಸುತ್ತದೆ. ಲಂಡನ್‌ನಲ್ಲಿ ಭಾರತೀಯ ಹೋಮ್ ರೂಲ್ ಸೊಸೈಟಿಯನ್ನು ಸ್ಥಾಪಿಸಿದ ಶ್ಯಾಮ್‌ಜಿ ಕೃಷ್ಣ ವರ್ಮಾ ಮತ್ತು ಜರ್ಮನ್ ನೆಲದಲ್ಲಿ ಭಾರತೀಯ ರಾಷ್ಟ್ರೀಯ ಧ್ವಜವನ್ನು ಧೈರ್ಯದಿಂದ ಹಾರಿಸಿದ ಮೇಡಮ್ ಭಿಖಾಜಿ ಕಾಮಾ ಅವರಂತಹ ವ್ಯಕ್ತಿಗಳಿಗೆ ಸರಿಯಾದ ಮನ್ನಣೆ ನೀಡಲಾಗುತ್ತದೆ. ಬೆಂಬಲವನ್ನು ಸಜ್ಜುಗೊಳಿಸುವುದು, ನಿರ್ಣಾಯಕ ನಿಧಿಗಳನ್ನು ಸಂಗ್ರಹಿಸುವುದು, ಅಗತ್ಯ ಶಸ್ತ್ರಾಸ್ತ್ರಗಳನ್ನು ಸಂಗ್ರಹಿಸುವುದು ಮತ್ತು ಬ್ರಿಟಿಷ್ ಆಳ್ವಿಕೆಯನ್ನು ವಿರೋಧಿಸುವ ಸರ್ಕಾರಗಳೊಂದಿಗೆ ಕಾರ್ಯತಂತ್ರದ ಮೈತ್ರಿಗಳನ್ನು ರೂಪಿಸುವ ಗುರಿಯನ್ನು ಹೊಂದಿರುವ ವಿವಿಧ ದೇಶಗಳಲ್ಲಿ ರಹಸ್ಯ ಜಾಲಗಳ ಸ್ಥಾಪನೆಯನ್ನು  ಈ ಪುಸ್ತಕ  ವಿವರಿಸುತ್ತದೆ.


ಸ್ವತಂತ್ರ ಎಂದರ ಸ್ವೇಚ್ಛೆ ಎಂದು ಅಪಾರ್ಥ ಮಾಡಿಕೊಡಿರುವ 

 ಇಂದಿನ ಪೀಳಿಗೆಯು ಇಂತಹ ಪುಸ್ತಕಗಳನ್ನು ಓದುವ ಅಗತ್ಯವಿದೆ. ತನ್ಮೂಲಕ ನಮ್ಮ ರಾಷ್ಟ್ರದ ಸ್ವಾತಂತ್ರ್ಯಕ್ಕಾಗಿ ತಮ್ಮ ತ್ಯಾಗ ಮತ್ತು ಬಲಿದಾನ ಮಾಡಿದ ಆತ್ಮಗಳಿಗೆ ಗೌರವ ಸೂಚಿಸಬೇಕಿದೆ.


ಸಿಹಿಜೀವಿ ವೆಂಕಟೇಶ್ವರ

ಸಾಹಿತಿಗಳು ಹಾಗೂ

ಸಮಾಜ ವಿಜ್ಞಾನ ಶಿಕ್ಷಕರು

ತುಮಕೂರು

02 April 2025

ಆಂತರಿಕ ಶಾಂತಿ ಹೊಂದುವುದು ಹೇಗೆ?


 


ಆಂತರಿಕ ಶಾಂತಿ ಹೊಂದುವುದು ಹೇಗೆ?


ಹೊರಗೆ ಅಶಾಂತಿಯ ವಾತಾವರಣವಿದ್ದರೂ ಸಾಧಕರು ತಮ್ಮ ಆಂತರಿಕ ಶಾಂತಿಯನ್ನು ಕಾಯ್ದುಕೊಂಡು ಸಂತಸದಿಂದ ಇರುವುದನ್ನು ಗಮನಿಸಿದ್ದೇವೆ.

ನಾವೂ  ಆಂತರಿಕ ಶಾಂತಿಯನ್ನು ಕಾಪಾಡಿಕೊಳ್ಳಲು  ಸಾಧ್ಯವಿದೆ. ಅದಕ್ಕೆ ನಮ್ಮ ಜೀವನದಲ್ಲಿ  ಅಲ್ಪ ಸ್ವಲ್ಪ  ಬದಲಾವಣೆ ಮಾಡಿಕೊಂಡರೆ ಸಾಕು.

 ನಮ್ಮ ಜೀವನದಲ್ಲಿ ಕೆಲ ವಿಷಕಾರಿ ಜನರಿರುತ್ತಾರೆ ಅವರು ಸರ್ವರಿಗೂ ವಿಷ ಕಕ್ಕುವುದೇ ತಮ್ಮ ಕಾಯಕವನ್ನಾಗಿ ಮಾಡಿಕೊಂಡಿರುತ್ತಾರೆ ಅಂತವರಿಂದ ಆದಷ್ಟೂ ದೂರವಿರೋಣ.


ಕೆಲವೊಮ್ಮೆ ನಮ್ಮಲ್ಲಿ ನಕಾರಾತ್ಮಕ ಆಲೋಚನೆಗಳು ಮೂಡುವುದು ಸಹಜ ಇದರ ಜೊತೆಯಲ್ಲಿ ನಕಾರಾತ್ಮಕ ಆಲೋಚನೆ ಮಾಡುವರು ನಮ್ಮ ಸುತ್ತುವರೆದರೆ ಮುಗಿಯಿತು. ಇವರು ನಮ್ಮನ್ನು   ಎಂದಿಗೂ ಬೆಳೆಯಲು ಸಹಾಯ ಮಾಡುವುದಿಲ್ಲ. ಇಂಥವರಿಂದ ದೂರವಿರೋಣ.

ಜೀವನದಲ್ಲಿ ಕೆಲವೊಮ್ಮೆ ಸಂಘರ್ಷ ಮಾತಿನ ಚಕಮಕಿ ನಡೆಯುತ್ತದೆ. ನಮ್ಮ ಶಾಂತಿಗಾಗಿ  ಎಲ್ಲರೊಂದಿಗೆ  ಯುದ್ಧಕ್ಕೆ ಇಳಿಯುವುದನ್ನು ಕಡಿಮೆ ಮಾಡಿಕೊಂಡು ಬುದ್ಧಿವಂತಿಕೆಯಿಂದ ಸಮಸ್ಯೆ ಬಗೆಹರಿಸಿಕೊಳ್ಳೋಣ.   ಪ್ರತಿಯೊಂದಕ್ಕೂ ಅನಗತ್ಯವಾಗಿ ನಮ್ಮ ಶಕ್ತಿ ವ್ಯಯಮಾಡುತ್ತಾ  ಪ್ರತಿಕ್ರಿಯೆಯನ್ನು ನೀಡುವ  ಅಗತ್ಯವಿಲ್ಲ.

ನಾವೇನು ರೋಬೋ ಅಥವಾ ಯಂತ್ರಗಳಲ್ಲ ನಮಗೂ ದಣಿವು ಸಹಜ ಅಂತಹ ಸಂದರ್ಭದಲ್ಲಿ ವಿಶ್ರಾಂತಿ ಪಡೆಯೋಣ. ಬಹಳ ದಣಿದಂತೆ ಅನಿಸಲು ಪ್ರಾರಂಭಿಸಿದಾಗ ರಜೆಯ ತೆಗದುಕೊಂಡು ರಿಪ್ರೆಶ್ ಆಗೋಣ. 

  ನಮಗಾಗಿ ಸಮಯವನ್ನು ಮಾಡಿಕೊಳ್ಳೋಣ. ಜನಜಂಗುಳಿಯಿಂದ ಮನಸ್ಸಿಗೆ ಕಿರಿಕಿರಿಯಾಗಿ ಅಶಾಂತಿಯೆನಿಸಿದರೆ ಒಂಟಿಯಾಗಿರುವುದು ಕೆಲವೊಮ್ಮೆ ಚಿಕಿತ್ಸೆಯೆಂದು ಭಾವಿಸಿ  ಒಂಟಿಯಾಗಿರಲು ಪ್ರಯತ್ನಿಸೋಣ  


ಅತಿಯಾದ ಸಾಮಾಜಿಕ ಮಾಧ್ಯಮಗಳ ಬಳಕೆ  ನಮ್ಮ ಶಾಂತಿಯುತ ಮನಸ್ಸನ್ನು ಕದಡಬಹುದು ಆದ್ದರಿಂದ ಅಗತ್ಯವಿರುವಾಗ ಮಾತ್ರ ಕಡಿಮೆ ಸಮಯ ಸಾಮಾಜಿಕ ಮಾಧ್ಯಮಗಳನ್ನು ಬಳಸಲು ಕಡಿವಾಣ ಹಾಕಿಕೊಳ್ಳೋಣ.ಮತ್ತು ಹೊಸ ಹವ್ಯಾಸಗಳು ಒತ್ತಡ ಕಡಿಮೆ ಮಾಡಿ ನಾವು ಸಂತಸದಿಂದ ಇರಲು ಪೂರಕವಾಗಿವೆ ಇಂತಹ ಉತ್ಪಾದಕ ಹವ್ಯಾಸಗಳನ್ನು ಹೆಚ್ಚು ರೂಪಿಸಿಕೊಳ್ಳೋಣ.

ಕೆಲವೊಮ್ಮೆ ಸಮಯ ಸಂದರ್ಭಕ್ಕೆ ಅನುಗುಣವಾಗಿ

ಬದಲಾವಣೆಗೆ ಹೊಂದಿಕೊಳ್ಳುವ ಗುಣವೂ ನಮ್ಮದಾಗಬೇಕು. 


ಹೀಗೆ ನಮ್ಮ ಸಂತಸ ಆಂತರಿಕ ಶಾಂತಿಗೆ ಬಹುತೇಕ ನಾವೇ ಕಾರಣರಾಗಿರುವುದರಿಂದ ಸಂತಸದಿಂದ ಬಾಳೋಣ ಆಂತರಿಕ ಶಾಂತಿ ಅನುಭವಿಸೋಣ.


ಸಿಹಿಜೀವಿ ವೆಂಕಟೇಶ್ವರ

ತುಮಕೂರು