31 December 2024

ಅರೆ ಬರೆ ಜ್ಞಾನ ವಿಶಾಕಾರಿ..(ಲೇಖನ)


 


ಅರೆಬರೆ ಜ್ಞಾನ ವಿನಾಶಕಾರಿ


ಏರ್‌ಪ್ಲೇನ್ ಕ್ಲೀನರ್ ಒಬ್ಬ  ಪೈಲಟ್‌ನ ಕಾಕ್‌ಪಿಟ್ ಅನ್ನು ಸ್ವಚ್ಛಗೊಳಿಸುತ್ತಿದ್ದಾಗ, "ಹೌ ಟು ಫ್ಲೈ ಆನ್ ಏರ್‌ಪ್ಲೇನ್ ಫಾರ್ ಬಿಗಿನರ್ಸ್  (ವಾಲ್ಯೂಮ್1)" ಎಂಬ  ಪುಸ್ತಕವನ್ನು ನೋಡಿದ.


  ಮೊದಲ ಪುಟವನ್ನು ತೆರೆದ "ಎಂಜಿನ್ ಅನ್ನು ಪ್ರಾರಂಭಿಸಲು, ಕೆಂಪು ಗುಂಡಿಯನ್ನು ಒತ್ತಿ...".  ಅವನು ಹಾಗೆ ಮಾಡಿದನು ಮತ್ತು ವಿಮಾನದ ಎಂಜಿನ್ ಆನ್ ಆಯ್ತು...


 ಅವನು ಸಂತೋಷದಿಂದ ಮುಂದಿನ ಪುಟವನ್ನು ತೆರೆದ...:

 "ಏರೋಪ್ಲೇನ್ ಚಲಿಸುವಂತೆ ಮಾಡಲು, ನೀಲಿ ಗುಂಡಿಯನ್ನು ಒತ್ತಿ... "ಅವನು ಹಾಗೆ ಮಾಡಿದನು ಮತ್ತು ವಿಮಾನವು ಅದ್ಭುತ ವೇಗದಲ್ಲಿ ಚಲಿಸಲು ಪ್ರಾರಂಭಿಸಿತು ...


  ಹಾರಬೇಕೆಂದು ಬಯಸಿ,  ಮೂರನೇ  ಪುಟವನ್ನು ತೆರೆದ  ವಿಮಾನವನ್ನು ಹಾರಿಸಲು ದಯವಿಟ್ಟು ಹಸಿರು ಬಟನ್ ಒತ್ತಿರಿ...ಎಂದಿತ್ತು "ಅವನು ಹಾಗೆ ಮಾಡಿದ ಮತ್ತು ವಿಮಾನವು ಹಾರಲು ಪ್ರಾರಂಭಿಸಿತು ...


 ಅವನು ಉತ್ಸುಕನಾಗಿದ್ದ...!!


 ಇಪ್ಪತ್ತು  ನಿಮಿಷಗಳ ಹಾರಾಟದ ನಂತರ, ತೃಪ್ತನಾಗಿ ಆಕಾಶದಿಂದ ಭೂಮಿಗೆ ಇಳಿಯಲು ಬಯಸಿದ್ದ. ಆದ್ದರಿಂದ ಅವನು ನಾಲ್ಕನೇ  ಪುಟಕ್ಕೆ ನೋಡಲು ಪುಸ್ತಕ ತಿರುವಿದ. ಅವನಿಗೆ ಅಚ್ಚರಿ ಕಾದಿತ್ತು.

  ನಾಲ್ಕನೇ ಪುಟದಲ್ಲಿ ಹೀಗಿತ್ತು  "ವಿಮಾನವನ್ನು ಹೇಗೆ ಇಳಿಸುವುದು ಎಂದು ತಿಳಿಯಲು, ದಯವಿಟ್ಟು ಹತ್ತಿರದ ಪುಸ್ತಕದಂಗಡಿಯಲ್ಲಿ ವಾಲ್ಯೂಮ್ 2 ಪುಸ್ತಕ  ಖರೀದಿಸಿ!"


ನಾವೂ ಬಹಳ ಜನ ಹೀಗೆಯೇ ಯಾವುದೇ ವಿಷಯಗಳ ಬಗ್ಗೆ ಸಂಪೂರ್ಣವಾಗಿ ತಿಳಿಯದೇ ಸಾಹಸ ಕಾರ್ಯಗಳಿಗೆ ಕೈ ಹಾಕಿ ಕೈ ಸುಟ್ಟುಕೊಂಡ ಉದಾಹರಣೆಗಳು ಬಹಳ ಇವೆ.half knowledge dangerous ಅಲ್ಲವೆ?


 ಸಿಹಿಜೀವಿ ವೆಂಕಟೇಶ್ವರ


30 December 2024

ಅಮ್ಮನ ಮುತ್ತಿನ ಶಕ್ತಿ ! (ಲೇಖನ )


 ಅಮ್ಮನ ಮುತ್ತಿನ ಶಕ್ತಿ 


ನಮ್ಮ ಮಕ್ಕಳ ಇಷ್ಟ, ಅವರ ಪ್ರತಿಭೆಯನ್ನು ಗುರುತಿಸುವಲ್ಲಿ ಬಹುತೇಕ ಪೋಷಕರು ಸೋತಿದ್ದೇವೆ.ನಮ್ಮಿಷ್ಟದ ಡಾಕ್ಟರ್ ಇಂಜಿನಿಯರ್ ನಮ್ಮ ಮನೆಯಿಂದ ಬರಲೆಂಬ ಹಪ ಹಪಿ ನಮ್ಮದು. ಅಲ್ಲೊಬ್ಬ ತಾಯಿ ಅಂದು ಬಾಲ್ಯದಲ್ಲೇ ತನ್ನ ಮಗನ ಆಸಕ್ತಿ ಗುರ್ತಿಸಿ ನೀಡಿದ ಒಂದು ಪ್ರೋತ್ಸಾಹದಾಯಕ ಪ್ರೀತಿಯ ಮುತ್ತು ಅವನನ್ನು ಮುಂದೆ ಜಗತ್ತಿನ ಶ್ರೇಷ್ಠ ಚಿತ್ರ ಕಲಾವಿದರ ಸಾಲಿನಲ್ಲಿ ನಿಲ್ಲಿಸಿತು.

ಆ ಶ್ರೇಷ್ಠ ಕಲಾವಿದರನೇ ಬೆಂಜಮಿನ್ ವೆಸ್ಟ್!


 ಎರಡು ಶತಮಾನಗಳ ಹಿಂದೆ ರಚಿಸಲ್ಪಟ್ಟ ಅವನ ಕೃತಿಗಳು ಇಂದು ಲಕ್ಷಾಂತರ ಡಾಲರುಗಳಷ್ಟು ಬೆಲೆಬಾಳುತ್ತವೆ.  ಬೆಂಜಮಿನ್ ವೆಸ್ಟ್  ಇಂಗ್ಲೆಂಡಿನ ರಾಯಲ್ ಅಕ್ಯಾಾಡೆಮಿ ಆಫ್ ಆರ್ಟ್ ಸಂಸ್ಥೆಯ ಅಧ್ಯಕ್ಷರಾಗಿದ್ದವರು. ಆಗಿನ ಇಂಗ್ಲೆಂಡ್ ದೊರೆಗಳ ಆಪ್ತಮಿತ್ರರಾಗಿದ್ದವರು.

 ಬೆಂಜಮಿನ್ನರು ಯಾವುದೇ ಕಲಾಶಾಲೆಯ ವಿದ್ಯಾರ್ಥಿಯಾಗಿ ಕಲೆಯನ್ನು ಕಲಿತವರಲ್ಲ. ತಮ್ಮ ವೃತ್ತಿಯ ಉತ್ತುಂಗದಲ್ಲಿದ್ದಾಗ ಯಾವುದೇ ಚಿತ್ರಕಲಾ ಶಾಲೆಗೂ ಹೋಗದೆ ಯಾರಿಂದಲೂ ಪಾಠ ಹೇಳಿಸಿಕೊಳ್ಳದೆ ಇಷ್ಟೊಂದು ಪ್ರಖ್ಯಾತ ಚಿತ್ರಕಾರರಾಗಲು ಸ್ಫೂರ್ತಿ ಯಾರೆಂದು ಕೇಳಿದಾಗ ಅವರು ನನ್ನ ಹೆತ್ತ ತಾಯಿ ನನಗೆ ಕೊಟ್ಟ ಒಂದು ಸಿಹಿಮುತ್ತು ನಾನು ಈ ಮಟ್ಟಕ್ಕೇರಲು ಕಾರಣವಾಯಿತು! ಎಂದರಂತೆ. ಅದು ಹೇಗೆಂದು ಕೇಳಿದಾಗ ಅವರು ಹೇಳಿಕೊಂಡ ಘಟನೆ ಹೀಗಿದೆ.


ಬಡ ಕುಟುಂಬದವರಾದ ಅವರ ತಾಯಿ ಸಂಸಾರ ನಿರ್ವಹಣೆಗಾಗಿ ಸಿರಿವಂತರ ಮನೆಗಳಲ್ಲಿ ಕೆಲಸ ಮಾಡಬೇಕಾಗಿತ್ತಂತೆ. ಒಮ್ಮೆ ಯಾವುದೋ ಮನೆಯವರು ಆಕೆಗೆ ಬರೆಯಲು ಉಪಯೋಗಿಸುವ ಕಪ್ಪು, ನೀಲಿ, ಕೆಂಪು ಮತ್ತು ಹಸಿರು ಶಾಯಿಯ ಶೀಷೆಗಳನ್ನು ತರಲಿಕ್ಕೆ ಕಳುಹಿಸಿದ್ದರಂತೆ. ಅವನ್ನೆಲ್ಲ ಆಕೆ ಕೊಂಡುಕೊಳ್ಳುವಷ್ಟರಲ್ಲಿ ಕತ್ತಲಾಗಿತ್ತು. ಮರುದಿನ ಅದನ್ನು ಕೊಂಡೊಯ್ದರಾದೀತು ಎಂದುಕೊಂಡು ಆಕೆ ಅವೆಲ್ಲವನ್ನು ಮನೆಗೆ ತಂದಿಟ್ಟರು. ಆಕೆಗೆ ಬೆಂಜಮಿನ್ ವೆಸ್ಟ್ ಒಬ್ಬ ಏಳೆಂಟು ವರ್ಷದ ಮಗ ಮತ್ತು ಎರಡು ವರ್ಷ ವಯಸ್ಸಿನ ಸ್ಯಾಲಿ ಎಂಬ ಹೆಣ್ಣು ಮಗಳು ಇದ್ದರು. ಮರುದಿನ ಮುಂಜಾನೆ ಆಕೆ ಕೆಲಸಕ್ಕೆ ಹೋಗುವಾಗ ಬಣ್ಣಬಣ್ಣದ ಶಾಯಿಯ ಶೀಷೆಗಳನ್ನು ತೆಗೆದುಕೊಂಡು ಹೋಗಲು ಮರೆತುಬಿಟ್ಟರು.


ಆಕೆ ಮಗ ಬೆಂಜಮಿನನಿಗೆ ನಿನ್ನ ತಂಗಿ ಸ್ಯಾಾಲಿಯನ್ನು ನಾನು ಬರುವವರೆಗೂ ನೋಡಿಕೋ ಎಂದು ಹೇಳಿ ಹೋದರು. ತಂಗಿಯನ್ನು ಆಟವಾಡಿಸುತ್ತಿದ್ದ ಬೆಂಜಮಿನ್ನನ ಕಣ್ಣಿಗೆ ಬಣ್ಣಬಣ್ಣದ ಶಾಯಿಯ ಶೀಶೆಗಳು ಕಂಡವು. ಆತ ಅವನ್ನು ತನಗೆತಿಳಿದಂತೆ ಮಿಶ್ರಣ ಮಾಡಿದ. ಅವನ್ನು ಬಳಸಿಕೊಂಡು ತನ್ನ ಮುದ್ದು ತಂಗಿ ಸ್ಯಾಲಿಯ ಚಿತ್ರವನ್ನು ಗೋಡೆಯ ಮೇಲೆ ಬಿಡಿಸತೊಡಗಿದ.  ಹಾಗೆ ಮಾಡುವಾಗ ಮನೆಯ ನೆಲದ ಮೇಲೆ, ಅಲ್ಲಿದ್ದ ಕುರ್ಚಿ-ಮೇಜು-ಮಂಚಗಳ ಮೇಲೆ ಮತ್ತು ಗೋಡೆಯ ಮೇಲೆ ಬಣ್ಣ ಚೆಲ್ಲಾಪಿಲ್ಲಿಯಾಗಿ ಚೆಲ್ಲಿತ್ತು. ನೋಡಲು ಅಲ್ಲೇನೋ  ರಾದ್ಧಾಂತವಾದಂತೆ ಕಾಣುತ್ತಿತ್ತು!


ಬೆಂಜಮಿನರ ತಾಯಿ ಮನೆಗೆ ಬಂದಾಗ, ಮನೆಯ ನೆಲ, ಗೋಡೆಗಳು, ಮೇಜು-ಮಂಚಗಳ ಮೇಲೆ ಬಿದ್ದಿದ್ದ ಬಣ್ಣದೋಕುಳಿಯ ರಾದ್ಧಾಂತವನ್ನು ನೋಡಿದರು. ಬೇರೆ ಯಾರಾದರೂ ತಾಯಿ ಆ ರಾದ್ಧಾಂತವನ್ನು ನೋಡಿ ಏನು ಮಾಡಿತಿದ್ದರೋ ಏನೋ? ಆದರೆ ಆಕೆ ಮಗನ ಮೇಲೆ ಸಿಟ್ಟುಗೊಳ್ಳಲಿಲ್ಲ. ಮಗನಿಗೆ ಪೆಟ್ಟು ಕೊಡಲಿಲ್ಲ. ಗೋಡೆಯ ಮೇಲೆ ಮುಸುಕು ಮುಸುಕಾಗಿ ಬಿಡಿಸಲಾಗಿದ್ದ ಮಗಳು ಸ್ಯಾಲಿಯ ಚಿತ್ರವನ್ನು ನೋಡಿದರು. ಮಗನನ್ನು ಹತ್ತಿರ ಕರೆದು ಈ ಚಿತ್ರವನ್ನು ಬಿಡಿಸಿದ್ದು ನೀನೇನಾ? ಎಂದು ಕೇಳಿದರು. ಆತ ಅಂಜುತ್ತಲೇ ಹೌದೆಂದ. ತಕ್ಷಣ ತಾಯಿ ಮಗನನ್ನು ತಬ್ಬಿಕೊಂಡರು. ಕೆನ್ನೆಗೆ ಮುತ್ತು ಕೊಟ್ಟರು. ಎಷ್ಟು ಅದ್ಭುತವಾಗಿ ನಿನ್ನ ತಂಗಿಯ ಚಿತ್ರವನ್ನು ಬಿಡಿಸಿದ್ದೀಯ ಎಂದು ಉದ್ಘಾರ ತೆಗೆದರು!


ಮುಂದೊಂದು ದಿನ ಹೆಸರಾಂತ ಚಿತ್ರಕಾರನಾದ ಬೆಂಜಮಿನ್ ವೆಸ್ಟ್ ಅಂದು ಹುಟ್ಟಿಕೊಂಡ! ಆ ಮುತ್ತು ಮತ್ತು ಪ್ರೋತ್ಸಾಹದ ಮಾತುಗಳೇ ಆತನಿಗೆ ಸ್ಫೂರ್ತಿ ಎಂದು ಬೆಂಜಮಿನ್ನರು ಹೇಳಿಕೊಂಡರಂತೆ! ಅಂದಿನ ಪರಿಸ್ಥಿತಿಯಲ್ಲಿ ಬೆಂಜಮಿನರ ತಾಯಿಯ ಸ್ಥಳದಲ್ಲಿ ನಾವಿದ್ದಿದ್ದರೆ ನಾವೇನು ಮಾಡುತ್ತಿದ್ದೆವು? 

ಒಮ್ಮೆ ಯೋಚಿಸೋಣ.ನಮ್ಮ ಮಕ್ಕಳ ಆಸಕ್ತಿ ಅಭಿರುಚಿಗಳನ್ನು ಗೌರವಿಸೋಣ.ಬೆಂಬಲಿಸೋಣ.

ಯಾರಿಗೆ ಗೊತ್ತು

ಮುಂದೊಂದು ದಿನ ನಮ್ಮ ಮಕ್ಕಳು ಅವರಿಷ್ಟದ ಕ್ಷೇತ್ರದಲ್ಲಿ ಅದ್ಭುತ  ಸೃಷ್ಟಿಸಬಹುದು.


ಸಿಹಿಜೀವಿ ವೆಂಕಟೇಶ್ವರ

27 December 2024

ಹೊಸ ಕ್ಯಾಲೆಂಡರ್ ವರ್ಷದಲ್ಲಿ ಹೊಸದನ್ನು ಸಾಧಿಸೋಣ...

 


ಹೊಸ ಕ್ಯಾಲೆಂಡರ್ ವರ್ಷದಲ್ಲಿ ಹೊಸದನ್ನು ಸಾಧಿಸೋಣ...


ಈ ವರ್ಷ ಅಟಾಮಿಕ್ ಹ್ಯಾಬಿಟ್ ಎಂಬ ಪುಸ್ತಕ ಓದಿದೆ.ನನ್ನ ಮಗಳು ಸಹ ಆ ಪುಸ್ತಕ ಇಷ್ಟ ಪಟ್ಟು  ಮತ್ತೆ ಮತ್ತೆ ಓದುತ್ತಿದ್ದಾಳೆ.

ಈ ಪುಸ್ತಕದ ತಿರುಳು ಇಷ್ಟೇ ಸಣ್ಣ ಸಣ್ಣ ಬದಲಾವಣೆಗಳನ್ನು ಮಾಡಿಕೊಂಡರೆ ಜೀವನದಲ್ಲಿ ಅದ್ಭುತ ಸಾಧಿಸಬಹುದು. 

ಮುಂಬರುವ 2025 ರಲ್ಲಿ   ನಾವೆಲ್ಲರೂ ಸಣ್ಣ ಬದಲಾವಣೆ ಮಾಡಿಕೊಂಡು ನಮ್ಮ ಸಾಧನೆಗೆ ಮುನ್ನುಡಿ ಬರೆಯೋಣ.

 ಆಸೆಗಳನ್ನು ಗುರಿಗಳಾಗಿ  ಬದಲಾಯಿಸಿಕೊಳ್ಳೋಣ.

 ಆಲ್ಕೋಹಾಲ್ ನಿಂದ  ನೀರಿಗೆ ಬದಲಾಯಿಸಿಕೊಳ್ಳೋಣ.

 ಖರ್ಚನ್ನು  ಕಡಿಮೆ ಮಾಡಿ  ಉಳಿತಾಯ ಮಾಡೋಣ.

 ಟಿ ವಿ ನೋಡುವುದನ್ನು ಕಡಿಮೆ ಮಾಡಿ ಪುಸ್ತಕ ಹೆಚ್ಚು ಓದೋಣ.

 ಭಯ ಪಡುವುದನ್ನು ಬಿಟ್ಟು ಸಾಧಿಸಿವ  ಸಂಕಲ್ಪ ಮಾಡೋಣ.

 ಅತಿಯಾಗಿ ಯೋಚಿಸುವುದನ್ನು ನಿಲ್ಲಿಸಿ  ಕೆಲಸ ಮಾಡಲು ಪ್ರಯತ್ನ ಮಾಡೋಣ. 

 ವಿಷಕಾರಿ ಸ್ನೇಹಿತರ ಸೋಗಿನಲ್ಲಿರುವ ಹಿತ ಶತ್ರುಗಳ ಬದಲಿಗೆ ನಮ್ಮ ಮಾರ್ಗದರ್ಶನ ಮಾಡುವವರ ಜೊತೆಯಲ್ಲಿ ಕಾಲ ಕಳೆಯೋಣ.

ದೂರುವುದನ್ನು ನಿಲ್ಲಿಸಿ ಕೃತಜ್ಞತೆ ತೋರೋಣ.

ಹಗಲುಗನಸು ಕಾಣುವುದನ್ನು ನಿಲ್ಲಿಸೋಣ ಕನಸು ನನಸಾಗಿಸಲು ಪ್ರಯತ್ನ ಮಾಡೋಣ.


 ಸಣ್ಣ ಬದಲಾವಣೆಗಳನ್ನು ಮಾಡಿಕೊಂಡು ಮುಂಬರುವ ಕ್ಯಾಲೆಂಡರ್ ವರ್ಷದಲ್ಲಿ  ನಾವು ಹೇಗೆ ದೊಡ್ಡ ಫಲಿತಾಂಶಗಳನ್ನು ಪಡೆಯೋಣ. 

ಸಿಹಿಜೀವಿ ವೆಂಕಟೇಶ್ವರ

ತುಮಕೂರು.



ಐತಿಹಾಸಿಕ ಮಹತ್ವದ "ಈಸ್ಟರ್ನ್ ಎಕ್ಸ್‌ಪೀರಿಯೆನ್ಸಸ್"


 


ಐತಿಹಾಸಿಕ ಮಹತ್ವದ  "ಈಸ್ಟರ್ನ್ ಎಕ್ಸ್‌ಪೀರಿಯೆನ್ಸಸ್"


ಕರ್ನಾಟಕದ ಸಾಮಾನ್ಯ  ಜನತೆಗೆ ಬೆಂಗಳೂರಿನ ಬೌರಿಂಗ್ ಆಸ್ಪತ್ರೆ ಚಿರಪರಿಚಿತ ಆ ಆಸ್ಪತ್ರೆ ಕಟ್ಟಿಸಿದ ಕಮಿಷನರ್ ಲೂಯಿ ಬೆಂಥಾಮ್ ಬೌರಿಂಗ್.ಅವನೊಬ್ಬ ಕೇವಲ ಆಡಳಿತಗಾರನಾಗಿರದೇ ಬಹುಮಖ ಪ್ರತಿಭೆಯ ವ್ಯಕ್ತಿಯಾಗಿದ್ದ. ಅವನು ತನ್ನ ಅನುಭವಗಳನ್ನು ಪುಸ್ತಕ ರೂಪದಲ್ಲಿ ದಾಖಲಿಸಿದ್ದಾನೆ ಆ ಪುಸ್ತಕವೇ "ಈಸ್ಟರ್ನ್ ಎಕ್ಸ್‌ಪೀರಿಯೆನ್ಸಸ್" ಆಂಗ್ಲ ಭಾಷೆಯಲ್ಲಿ ಇರುವ ಇದು  19 ನೇ ಶತಮಾನದ ಮಧ್ಯಭಾಗದಲ್ಲಿ ಭಾರತದ ವಿವಿಧ ಪ್ರದೇಶಗಳ, ವಿಶೇಷವಾಗಿ ಮೈಸೂರಿನ ವಿವರವಾದ ವಿವರಣೆಗಳನ್ನು ನೀಡುತ್ತದೆ. ಇದು ಆ ಕಾಲದ ರಾಜಕೀಯ, ಸಾಮಾಜಿಕ ಮತ್ತು ಆರ್ಥಿಕ ಪರಿಸ್ಥಿತಿಗಳ ಒಳನೋಟಗಳನ್ನು ಒದಗಿಸುತ್ತದೆ. ಬ್ರಿಟಿಷ್ ವಸಾಹತುಶಾಹಿ ಆಡಳಿತ ಮತ್ತು ಸ್ಥಳೀಯ ಜನಸಂಖ್ಯೆಯೊಂದಿಗಿನ ಅದರ ಪರಸ್ಪರ ಕ್ರಿಯೆಯ ಮೌಲ್ಯಯುತ ವಿವರಣೆಯನ್ನು ಈ ಪುಸ್ತಕ ನೀಡುತ್ತದೆ.


ಈ  ಪುಸ್ತಕವು ಮೈಸೂರು, ಕೂರ್ಗ್ ಮತ್ತು ಪಂಜಾಬ್ ಅನ್ನು ಒಳಗೊಂಡ ಭೌಗೋಳಿಕ ವಿವರಣೆಗಳು ಮತ್ತು ಐತಿಹಾಸಿಕ ಹಿನ್ನೆಲೆಗಳನ್ನು ನೀಡುತ್ತದೆ. ಇದು ಬ್ರಿಟಿಷ್ ಪ್ರಭಾವದ ಅಡಿಯಲ್ಲಿ ಭಾರತದ ವಿವಿಧ ಭಾಗಗಳನ್ನು ಅರ್ಥಮಾಡಿಕೊಳ್ಳಲು ಒಂದು ಮೌಲ್ಯಯುತ ಸಂಪನ್ಮೂಲವಾಗಿದೆ. ಅದರಲ್ಲೂ ವಿಶೇಷವಾಗಿ ಈ  ಪುಸ್ತಕವು ಮೈಸೂರಿನ ಆರಂಭಿಕ ಆಡಳಿತಗಾರರು, ಹೈದರ್ ಅಲಿ ಮತ್ತು ಟಿಪ್ಪು ಸುಲ್ತಾನ್ ಅವರ ಏಳ್ಗೆ ಮತ್ತು ನಂತರ ಹಿಂದೂ ರಾಜವಂಶದ ಪುನಃಸ್ಥಾಪನೆಯ ಬಗ್ಗೆ ಪ್ರಸ್ತಾಪಿಸುತ್ತದೆ. ಇದು ಆಡಳಿತ, ಆರ್ಥಿಕತೆ ಮತ್ತು ಜನರ ಸಾಮಾಜಿಕ ಜೀವನದ ಬಗ್ಗೆ ಮಾಹಿತಿಯನ್ನು ನೀಡುತ್ತದೆ. ಇದು ರಾಜ್ಯದ ವಿಶಿಷ್ಟ ರಾಜಕೀಯ ಪಥ ಮತ್ತು ಬ್ರಿಟಿಷರೊಂದಿಗಿನ ಅದರ ಸಂಬಂಧವನ್ನು ಅರ್ಥಮಾಡಿಕೊಳ್ಳಲು ಸಹಾಯಕವಾಗಿದೆ. ಬೆಂಗಳೂರು, ಶ್ರೀರಂಗಪಟ್ಟಣ ಮತ್ತು ಇತರ ಪ್ರಮುಖ ಪಟ್ಟಣಗಳ ವಿವರಣೆಯ ಜೊತೆಯಲ್ಲಿ ಆ ನಗರಗಳ ಐತಿಹಾಸಿಕ ಪ್ರಾಮುಖ್ಯತೆಯನ್ನು ಎತ್ತಿ ತೋರಿಸುತ್ತದೆ. ಆ ಭಾಗದ  ಕೋಟೆಗಳ ವಿವರಗಳನ್ನು ಸಹ ನೀಡುತ್ತದೆ. ಅವುಗಳ ನಿರ್ಮಾಣ, ರಕ್ಷಣೆ ಮತ್ತು ಅವುಗಳಿಗೆ ಸಂಬಂಧಿಸಿದ ಐತಿಹಾಸಿಕ ಘಟನೆಗಳನ್ನು ವಿವರಿಸುತ್ತದೆ.

 "ಈಸ್ಟರ್ನ್ ಎಕ್ಸ್‌ಪೀರಿಯೆನ್ಸಸ್" ಮೈಸೂರಿನಲ್ಲಿ ಬ್ರಿಟಿಷ್ ಆಡಳಿತದ ಬಗ್ಗೆ ಒಳನೋಟಗಳನ್ನು ಒದಗಿಸುತ್ತದೆ. ಸರ್ ಮಾರ್ಕ್ ಕಬ್ಬನ್ ಅವರಂತಹ ಪ್ರಮುಖ ವ್ಯಕ್ತಿಗಳ ಪಾತ್ರಗಳನ್ನು ವಿವರಿಸುತ್ತದೆ. ಬ್ರಿಟಿಷ್ ಪ್ರಭಾವದ ಅಡಿಯಲ್ಲಿ ಸ್ಥಳೀಯ ರಾಜ್ಯವನ್ನು ಆಳುವ ಸವಾಲುಗಳನ್ನು ಚರ್ಚಿಸುತ್ತದೆ, ಕಾನೂನು, ನ್ಯಾಯ ಮತ್ತು ಬ್ರಿಟಿಷ್ ಅಧಿಕಾರಿಗಳು ಮತ್ತು ಸ್ಥಳೀಯ ಆಡಳಿತಗಾರರ ನಡುವಿನ ಸಂಬಂಧದ ಸಮಸ್ಯೆಗಳನ್ನು ಒಳಗೊಂಡಿರುತ್ತದೆ. ಆಡಳಿತದಲ್ಲಿ ಸ್ಥಳೀಯ ಜನರನ್ನು ಹೇಗೆ ಸೇರಿಸಿಕೊಳ್ಳಬೇಕು ಎಂಬುದರ ಬಗ್ಗೆ ಮತ್ತು ಭವಿಷ್ಯದ ನೀತಿಗಾಗಿ ಕೆಲವು ಸಲಹೆಗಳನ್ನು ನೀಡುತ್ತದೆ.

ನಮ್ಮ ಧಾರ್ಮಿಕ ಸಂಪ್ರದಾಯಗಳು ಮತ್ತು ವಿವಿಧ ಸಮುದಾಯಗಳ ಜೀವನ ಸೇರಿದಂತೆ ಮೈಸೂರಿನ ಸಾಮಾಜಿಕ ರಚನೆಯನ್ನು ವಿವರಿಸುತ್ತದೆ. ಕ್ರಿಶ್ಚಿಯನ್ ಮಿಷನರಿ ಚಟುವಟಿಕೆಗಳು ಮತ್ತು ಹೆಸರು ಇಡುವ ಸಂಪ್ರದಾಯಗಳನ್ನು ಒಳಗೊಂಡಂತೆ ಸಾಂಸ್ಕೃತಿಕ ಟಿಪ್ಪಣಿಗಳನ್ನು ಸಹ ನೀಡುತ್ತದೆ.

ಭೂ ಕಂದಾಯ, ವ್ಯಾಪಾರ ಮಾರ್ಗಗಳು, ಕೃಷಿ ಉತ್ಪನ್ನಗಳು ಮತ್ತು ಶ್ರೀಗಂಧದಂತಹ ಬೆಲೆಬಾಳುವ ಸಂಪನ್ಮೂಲಗಳ ಬಗ್ಗೆ ಮಾಹಿತಿಯನ್ನು ಒಳಗೊಂಡಿದೆ. ಲಂಬಾಣಿ ಮತ್ತು ಕೊರ್ಚರ್ಸ್‌ನಂತಹ ವ್ಯಾಪಾರದಲ್ಲಿ ತೊಡಗಿರುವ ಅಲೆಮಾರಿ ಬುಡಕಟ್ಟುಗಳ ಜೀವನೋಪಾಯದ ಬಗ್ಗೆ ಒಳನೋಟಗಳನ್ನು ಒದಗಿಸುತ್ತದೆ.

ಈ ಪುಸ್ತಕ ನಮಗೆ  19 ನೇ ಶತಮಾನದಲ್ಲಿ ಬ್ರಿಟಿಷ್-ಭಾರತೀಯ ಸಂಬಂಧಗಳ ಸಂಕೀರ್ಣ ಮತ್ತು ಬದಲಾಗುತ್ತಿದ್ದ  ಬ್ರಿಟಿಷರ ಆಡಳಿತ ತಂತ್ರಗಳನ್ನು ಪ್ರತಿಬಿಂಬಿಸುತ್ತದೆ. ಪ್ರಾಂತ್ಯಗಳನ್ನು ಸ್ವಾಧೀನಪಡಿಸಿಕೊಳ್ಳುವುದು, ಸ್ಥಳೀಯ ಆಡಳಿತಗಾರರ ಪುನಃಸ್ಥಾಪನೆ ಮತ್ತು ಭಾರತದ ಭವಿಷ್ಯವನ್ನು ರೂಪಿಸುವಲ್ಲಿ ಬ್ರಿಟಿಷರ ಪಾತ್ರವನ್ನು ನಮಗೆ ತಿಳಿಸಿಕೊಡುತ್ತದೆ.

 ನಂದಿದುರ್ಗದ ವಶಪಡಿಸಿಕೊಳ್ಳುವಿಕೆ ಮತ್ತು ಶ್ರೀರಂಗಪಟ್ಟಣದ ಮುತ್ತಿಗೆ ಸೇರಿದಂತೆ ಹಲವಾರು ಮಿಲಿಟರಿ ಘಟನೆಗಳನ್ನು ಈ ಪುಸ್ತಕದಲ್ಲಿ ದಾಖಲೆಯಾಗಿವೆ. ಮತ್ತು ಹೈದರ್ ಅಲಿ ಮತ್ತು ಟಿಪ್ಪು ಸುಲ್ತಾನ್ ಅವರಂತಹ ಪ್ರಮುಖ ಐತಿಹಾಸಿಕ ವ್ಯಕ್ತಿಗಳ ಜೀವನ ಮತ್ತು ಪಾತ್ರಗಳ ಬಗ್ಗೆ ವಿವರಗಳನ್ನು ಒದಗಿಸುತ್ತದೆ. ಭಾರತೀಯ ಐತಿಹಾಸಿಕ ಘಟನೆಗಳ ದಾಖಲೆಯ ಜೊತೆಯಲ್ಲಿ ವಿದೇಶಿ ಘಟನೆಗಳು ಸಹ ಈ ಪುಸ್ತಕದಲ್ಲಿ ದಾಖಲಾಗಿವೆ. ಚೀನಾದಲ್ಲಿ 1854 ರಲ್ಲಿ ಲೇಖಕರು ನಾಂಕಿಂಗ್‌ಗೆ ಭೇಟಿ ನೀಡಿದ ಆಧಾರದ ಮೇಲೆ ತೈಪಿಂಗ್ ದಂಗೆಯ ಬಗ್ಗೆ ಒಳನೋಟಗಳನ್ನು ಒದಗಿಸುತ್ತದೆ. ಆ ಕಾಲದ ರಾಜಕೀಯ ಪರಿಸ್ಥಿತಿಗಳು, ತೈಪಿಂಗ್ ಆಂದೋಲನದ ಸ್ವರೂಪ ಮತ್ತು ವಿದೇಶಿಯರೊಂದಿಗಿನ ಅವರ ಸಂವಹನಗಳ ಬಗ್ಗೆ ಮಾಹಿತಿಯನ್ನು ನೀಡುತ್ತದೆ.

ಒಟ್ಟಾರೆಯಾಗಿ  "ಈಸ್ಟರ್ನ್ ಎಕ್ಸ್‌ಪೀರಿಯೆನ್ಸಸ್" ಐತಿಹಾಸಿಕವಾಗಿ ಮಹತ್ವದ ಪುಸ್ತಕವಾಗಿದೆ. ಇದು ಭಾರತದ, ವಿಶೇಷವಾಗಿ ಮೈಸೂರಿನ ಬಹುಮುಖ ನೋಟವನ್ನು ನೀಡುತ್ತದೆ ಮತ್ತು 19 ನೇ ಶತಮಾನದ ಮಧ್ಯಭಾಗದ ಚೀನಾದ ಒಂದು ಅನನ್ಯ ನೋಟವನ್ನು ಒದಗಿಸುತ್ತದೆ. ಬ್ರಿಟಿಷ್ ವಸಾಹತುಶಾಹಿ ಆಳ್ವಿಕೆ, ಸ್ಥಳೀಯ ಆಡಳಿತ, ಸಾಮಾಜಿಕ , ಆರ್ಥಿಕ ಪರಿಸ್ಥಿತಿಗಳು ಮತ್ತು ಪ್ರಾದೇಶಿಕ ಇತಿಹಾಸದ ಸಂಕೀರ್ಣತೆಗಳನ್ನು ಅರ್ಥಮಾಡಿಕೊಳ್ಳಲು ಇದು ಒಂದು ಸಮೃದ್ಧ ಮೂಲವಾಗಿದೆ. ಈ ಅವಧಿಯ ಭಾರತೀಯ ಇತಿಹಾಸವನ್ನು ಅಧ್ಯಯನ ಮಾಡುವ ಇತಿಹಾಸಕಾರರಿಗೆ ಇದು ಅಮೂಲ್ಯವಾದ ಸಂಪನ್ಮೂಲವಾಗಿದೆ.


ಸಿಹಿಜೀವಿ ವೆಂಕಟೇಶ್ವರ.

ಶಿಕ್ಷಕರು 

ಸರ್ಕಾರಿ ಪ್ರೌಢಶಾಲೆ ಕ್ಯಾತ್ಸಂದ್ರ

ತುಮಕೂರು

 


25 December 2024

ಮಡಿಕೆ ಸೋಡಾ


 #ಮಡ್ಕೆ_ಮಿರ್ಚಿ_ಸೋಡ


ಧರ್ಮಸ್ಥಳದಿಂದ ಕುಕ್ಕೆ ಮಾರ್ಗ ನೀವು ಪ್ರಯಾಣ ಮಾಡುವಾಗ ಪ್ರಯಾಣದ ಆಯಾಸ ಕಡಿಮೆ ಮಾಡಲು ಅಲ್ಲಲ್ಲಿ ಪುಲ್ಜಾರ್ ಸೋಡಾ, ಮಡ್ಕೆ ಸೋಡಾ, ಜೋಳದ ತೆನೆ ,ಅನಾನಸ್ ಮಾರುವ ಗೂಡಂಗಡಿ ಕಾಣಬಹುದು. ಇಂದು ನಾನು ಈ ಮಾರ್ಗವಾಗಿ ಹೋಗುವಾಗ ಮಡ್ಕೆ ಸೋಡ ಕುಡಿದೆ.ಸೋಡ, ಪುದೀನ ,ಜಲ ಜೀರಾ ನಿಂಬೆ ಹಣ್ಣು, ಮೆಣಸಿನ ಕಾಯಿ ಹಾಕಿ ಹದವಾಗಿ ಮಾಡಿದ ಸೋಡಾ ಸ್ವಲ್ಪ ಖಾರ ಸ್ವಲ್ಪ ಸಿಹಿ ಯೊಂದಗಿನ ರುಚಿ ವಿಭಿನ್ನವಾಗಿತ್ತು. ಈ ಕಡೆ ಬಂದರೆ ನೀವು ಒಮ್ಮೆ ರುಚಿ ನೋಡಬಹುದು.

#sihijeeviVenkateshwara 

#soda #cool #drinks #cooldrinks

ಕಲೋತ್ಸವ

 

ಜಿಲ್ಲಾ ಮಟ್ಟದ ಪ್ರತಿಭಾ ಕಾರಂಜಿ ಹಾಗೂ ಕಲೋತ್ಸವ ಸ್ಪರ್ಧೆಗಳು .ತುಮಕೂರು ಜಿಲ್ಲೆ. prathiba karanji and kalotsava 

ಇದು ತುಮಕೂರು ಜಿಲ್ಲಾ ಮಟ್ಟದ ಮಕ್ಕಳ  ಸಾಂಸ್ಕೃತಿಕ ಕಲರವ .ಜಿಲ್ಲೆಯ ವಿವಿಧ ತಾಲ್ಲೂಕಿನಿಂದ ಬಂದ ಮಕ್ಕಳು ತಮ್ಮ ಪ್ರತಿಭೆ ಪ್ರದರ್ಶನ ಮಾಡಿ .ಅರ್ಹರು ರಾಜ್ಯ ಮಟ್ಟಕ್ಕೆ ಆಯ್ಕೆಯಾದರು.

#school #education #kalotsavam #kalotsav #prathibhakaranji @school  #education @Blippi  @VijayKarnataka  #sihijeevivenkateshwara

22 December 2024

ಪ್ರಯತ್ನ ಜಾರಿಯಲ್ಲಿರಲಿ...


 


 1. ಬಲವಾದ ಗಾಳಿ ,ಮಳೆಯಿಂದ  ತನ್ನ ಗೂಡು ಎಷ್ಟೇ ಬಾರಿ ನಾಶವಾದರೂ  ತನ್ನ ಗೂಡು ಕಟ್ಟುವುದನ್ನು ಪಕ್ಷಿಯು   ಬಿಟ್ಟುಬಿಡುವುದಿಲ್ಲ.

 

 2.  ಬಂಡೆಗಳು ಎದುರಾದಾಗ ನದಿಯು ಹರಿಯುವುದನ್ನು ನಿಲ್ಲಿಸುವುದಿಲ್ಲ. ತನ್ನ ದಾರಿಯನ್ನು ಕಂಡುಕೊಂಡು   ನಿರಂತರವಾಗಿ ಹರಿದು ಸಮುದ್ರ ಸೇರುತ್ತದೆ.

 

 3. ಮರದ   ಕೊಂಬೆಗಳು ಮುರಿದಾಗ ಮರವು ಬೆಳೆಯುವುದನ್ನು ನಿಲ್ಲಿಸುವುದಿಲ್ಲ.ಬದಲಿಗೆ ಚಿಗುರುತ್ತಾ ಬೆಳೆಯುತ್ತಾ ಮತ್ತೆ ಮರವಾಗಿ ಕಂಗೊಳಿಸುತ್ತದೆ. 


 4. ಮೋಡಗಳು ಅಡ್ಡಿಯಾದವು ಎಂದು  ಸೂರ್ಯನು  ಹೊಳೆಯುವುದನ್ನು ನಿಲ್ಲಿಸುವುದಿಲ್ಲ. ಇನ್ನೂ ಪ್ರಖರವಾಗಿ ಬೆಳಗುತ್ತದೆ.

 

 5. ಜೇಡದ ಬಲೆ  ಹರಿದಾಗ ಅದು  ಸುಮ್ಮನಿರುವುದಿಲ್ಲ. ಅದು ತಾಳ್ಮೆಯಿಂದ ಮತ್ತೊಮ್ಮೆ ನೇಯ್ಗೆ ಮಾಡುತ್ತದೆ.

 

 6. ಮಣ್ಣು ಗಟ್ಟಿಯಾಗಿರುವುದರಿಂದ ಬೀಜವು ಮೊಳಕೆಯೊಡೆಯುವುದನ್ನು ನಿಲ್ಲಿಸುವುದಿಲ್ಲ.


ಈ ಮೇಲಿನ ಆರು ಪ್ರೇರಣಾದಾಯಕ ಘಟನೆಗಳು ನಮ್ಮನ್ನು ಸಾಧಿಸಲು ಪ್ರೇರಣೆ ನೀಡಬೇಕು.ನಮ್ಮ ಮೇಲೆ ನಮಗೆ ನಂಬಿಕೆ ಇದ್ದು ನಿರಂತರವಾಗಿ ಪ್ರಯತ್ನ ಮಾಡುತ್ತಿದ್ದರೆ ಯಾವ ಗುರಿಯೂ ಕಠಿಣವಲ್ಲ.

ಪ್ರಯತ್ನಿಸುತ್ತಿರೋಣ ನಮ್ಮ ಗುರಿ ಮುಟ್ಟೋಣ.


10 December 2024

ಮಾನವ ಹಕ್ಕುಗಳ ದಿನ..

 


#ಮಾನವ_ಹಕ್ಕುಗಳ_ದಿನ


ಜಗತ್ತಿನಲ್ಲಿ ಜನಿಸಿದ ಪ್ರತಿ ಮನುಷ್ಯನಿಗೂ ನಿರ್ದಿಷ್ಟ ಹಕ್ಕುಗಳಿವೆ. ಮನುಷ್ಯನ ಹಕ್ಕಿನ ಬಗ್ಗೆ ಪ್ರತಿಪಾದಿಸುವ ದಿನ ಮಾನವ ಹಕ್ಕುಗಳ ದಿನ. ಪ್ರತಿವರ್ಷ ಡಿಸೆಂಬರ್ 10ರಂದು ಮಾನವ ಹಕ್ಕುಗಳ ದಿನ ಆಚರಿಸಲಾಗುತ್ತದೆ. ವಿಶ್ವಸಂಸ್ಥೆಯು 1948ರಲ್ಲಿ ಮಾನವ ಹಕ್ಕುಗಳ ದಿನ ಆಚರಣೆಗೆ ಅನುಮೋದನೆ ನೀಡಿತು.

ಜಗತ್ತಿನ ಪ್ರತಿಯೊಬ್ಬ ವ್ಯಕ್ತಿಗೂ ಬದುಕುವ ಹಕ್ಕಿನ ಜೊತೆಗೆ ಒಂದಿಷ್ಟು ಮೂಲಭೂತ ಹಕ್ಕುಗಳಿವೆ. ಪ್ರತಿಯೊಬ್ಬರಿಗೂ ಅರ್ಹವಾಗಿರುವ ಮೂಲಭೂತ ಸ್ವಾತಂತ್ರ್ಯಗಳು ಹಾಗೂ ಹಕ್ಕುಗಳ ಬಗ್ಗೆ ಜಾಗೃತಿ ಮೂಡಿಸಲು ಅಂತರರಾಷ್ಟ್ರೀಯ ಮಟ್ಟದಲ್ಲಿ ಡಿಸೆಂಬರ್ 10ರಂದು ಮಾನವ ಹಕ್ಕುಗಳ ದಿನವನ್ನು ಆಚರಿಸಲಾಗುತ್ತದೆ.

ಈ ಜಗತ್ತಿನಲ್ಲಿ ಎಲ್ಲರಿಗೂ ಸಮಾನ ಹಕ್ಕಿರುವ ಕಾರಣ ಲಿಂಗ, ರಾಷ್ಟ್ರೀಯತೆ, ಜನಾಂಗೀಯತೆ, ಜನಾಂಗ ಅಥವಾ ಧರ್ಮವನ್ನು ಲೆಕ್ಕಿಸದೆ ಪ್ರತಿ ವ್ಯಕ್ತಿಯ ಹಕ್ಕುಗಳನ್ನು ಗೌರವಿಸಬೇಕು. ಮಾಡಿದ ಕೆಲಸವನ್ನು ಗುರುತಿಸಲು ಮತ್ತು ಪ್ರತಿಯೊಬ್ಬರ ಹಕ್ಕುಗಳನ್ನು ರಕ್ಷಿಸಲು ಉದ್ದೇಶವನ್ನು ಈ ದಿನವು ಸಾರಿ ಹೇಳುತ್ತದೆ. ಸಮಾನತೆ, ನ್ಯಾಯ ಮತ್ತು ಮಾನವ ಘನತೆಯ ರಕ್ಷಣೆಗಾಗಿ ಶ್ರಮಿಸಲು ಎಲ್ಲೆಡೆ ಸರ್ಕಾರಗಳು, ಸಂಸ್ಥೆಗಳು ಜನರಿಗೆ ಕರೆ ನೀಡುವ ಕೆಲಸವನ್ನು ಮಾಡುತ್ತವೆ. ಈ ಜಗತ್ತಿನಲ್ಲಿ ಎಲ್ಲರೂ ಸಮಾನರು, ಪ್ರತಿ ಮನುಷ್ಯನಿಗೂ ಸಮಾನತೆಯಲ್ಲಿ ಬದುಕುವ ಹಕ್ಕಿದೆ ಎಂಬುದನ್ನು ಸಾರುವ ದಿನ ಇದಾಗಿದೆ.

ಮಾನವ ಹಕ್ಕುಗಳು ಎಂದರೆ ಮನುಷ್ಯನ ಬದುಕಿಗಾಗಿ ಇರುವ, ಮನುಷ್ಯನ ಅಸ್ತಿತ್ವಕ್ಕಾಗಿ ಇರುವ ಹಕ್ಕುಗಳು. ಈ ದಿನದಂದು ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಮಟ್ಟದಲ್ಲಿ ಮಾನವ ಹಕ್ಕುಗಳಿಗಾಗಿ ಹೋರಾಡಿದ ಎಲ್ಲಾ ಪ್ರಮುಖರನ್ನು ನೆನಪಿಸಿಕೊಳ್ಳಲಾಗುತ್ತದೆ. ಮಾನವ ಹಕ್ಕುಗಳಿಗಾಗಿ ಈ ಹಿಂದೆ ರೂಪಿಸಿದ ಕ್ರಮಗಳು ಮತ್ತು ಜವಾಬ್ದಾರಿಗಳನ್ನು ಪ್ರತಿಬಿಂಬಿಸಲು ಹಾಗೂ ಹಕ್ಕುಗಳನ್ನು ರಕ್ಷಿಸಲು ಶ್ರಮಿಸಲು ಅವಕಾಶವನ್ನು ನೀಡಲಾಗುತ್ತದೆ.

ವಿಶ್ವಸಂಸ್ಥೆಯ ಸಾಮಾನ್ಯಸಭೆಯು ಡಿಸೆಂಬರ್ 10, 1948 ರಂದು ಮಾನವ ಹಕ್ಕುಗಳ ಸಾರ್ವತ್ರಿಕ ಘೋಷಣೆಯನ್ನು ಅಂಗೀಕರಿಸಿತು. ಇದು ಮಾನವ ಹಕ್ಕುಗಳ ರಕ್ಷಣೆಗಾಗಿ ಮೊದಲ ಜಾಗತಿಕ ಮಾನದಂಡವನ್ನು ನಿಗದಿಪಡಿಸಿದ ಹೆಗ್ಗುರುತಾಗಿದೆ. ಜೀವನ, ಸ್ವಾತಂತ್ರ್ಯ, ಶಿಕ್ಷಣ, ಕೆಲಸ ಮತ್ತು ತಾರತಮ್ಯದಿಂದ ಸ್ವಾತಂತ್ರ್ಯ ಸೇರಿದಂತೆ ಪ್ರತಿಯೊಬ್ಬ ವ್ಯಕ್ತಿಯು ಅರ್ಹರಾಗಿರುವ ಮೂಲಭೂತ ಹಕ್ಕುಗಳ ಗುಂಪನ್ನು ಘೋಷಣೆಯಲ್ಲಿ ಉಲ್ಲೇಖಿಸಲಾಗಿದೆ.

ಈ ದಿನವನ್ನು ಮೊದಲು 1950 ರಲ್ಲಿ UNDHR ಅಳವಡಿಸಿಕೊಳ್ಳಲಾಯಿತು.

ಪ್ರತಿಯೊಬ್ಬ ವ್ಯಕ್ತಿಯ ಹಕ್ಕುಗಳನ್ನು ಗೌರವಿಸಬೇಕು ಮತ್ತು ರಕ್ಷಿಸಬೇಕು ಎಂಬುದನ್ನು ನೆನಪಿಸಲು ಮಾನವ ಹಕ್ಕುಗಳ ದಿನವನ್ನು ಆಚರಿಸಲಾಗುತ್ತದೆ. ಜನರು ತಮ್ಮ ಹಕ್ಕುಗಳ ಬಗ್ಗೆ ಅರಿವು ಮೂಡಿಸುವುದು ಮತ್ತು ಸಮಾನತೆ ಮತ್ತು ನ್ಯಾಯವನ್ನು ಮುನ್ನಡೆಸುವಲ್ಲಿ ಸಕ್ರಿಯ ಪಾತ್ರವನ್ನು ವಹಿಸುವ ಗುರಿಯನ್ನು ಹೊಂದಿದೆ. ಮಾನವ ಹಕ್ಕುಗಳ ಕಾರ್ಯಕರ್ತರು ಈ ದಿನವನ್ನು ಸ್ವಾತಂತ್ರ್ಯ ಮತ್ತು ಘನತೆಗಾಗಿ ಪ್ರಸ್ತುತ ಕದನಗಳತ್ತ ಗಮನ ಸೆಳೆಯಲು ಮತ್ತು ನಿಂದನೆಗಳನ್ನು ಪರಿಹರಿಸುವಲ್ಲಿ ಸಹಕಾರವನ್ನು ಒತ್ತಾಯಿಸಲು ಬಳಸುತ್ತಾರೆ.
ಪ್ರತಿ ವರ್ಷವೂ ಮಾನವ ಹಕ್ಕುಗಳ ದಿನಕ್ಕಾಗಿ ಒಂದು ನಿರ್ದಿಷ್ಟ ಥೀಮ್ ಇದೆ, ಅದು ಜಾಗತಿಕ ಗಮನ ಅಗತ್ಯವಿರುವ ಪ್ರಮುಖ ಮಾನವ ಹಕ್ಕುಗಳ ಸಮಸ್ಯೆಯನ್ನು ಎತ್ತಿ ತೋರಿಸುತ್ತದೆ. ಮಾನವ ಹಕ್ಕುಗಳ ದಿನದ 2024 ರ ಥೀಮ್‌ 'ಎಲ್ಲರಿಗೂ ಸಮಾನತೆ: ಅಸಮಾನತೆಯನ್ನು ಕಡಿಮೆ ಮಾಡುವುದು ಮತ್ತು ಮಾನವ ಹಕ್ಕುಗಳನ್ನು ಮುನ್ನಡೆಸುವುದು‘ ಎಂಬುದಾಗಿದೆ.

#sihijeeviVenkateshwara
#kannada #article #tumkur #humanrights #HumanRightsDay


08 December 2024

ಬಾರೆ ಹಣ್ಣು ತಿನ್ನೋಣ ಬಾರೆ


 


ಬಾರೆ ಹಣ್ಣು ತಿನ್ನೋಣ ಬಾರೆ


ನಾನು ಬಾಲ್ಯದಲ್ಲಿ ಬಹಳ ಇಷ್ಟ ಪಟ್ಟು ತಿಂದ ಹಣ್ಣುಗಳೆಂದರೆ  ಬಾರೆ ಹಣ್ಣು ಮತ್ತು ಕಾರೆ ಹಣ್ಣು.ಕಾರೆ ಹಣ್ಣು ಕೀಳಲು ಹೋಗಿ ಅಂಗೈ ಮುಂಗೈ ತರಚು ಗಾಯಗಳಾದರೂ ಬಾಯಲ್ಲಿ ಆ ಹಣ್ಣಿನ ಸ್ವಾದದ ಮುಂದೆ ಅವು ಮಾಯವಾಗುತ್ತಿದ್ದವು.

ನಮ್ಮ ಊರಿನ ನಮ್ಮ ಮನೆಯ ಹಿಂದೆ ಚಿಕ್ಕಜ್ಜರ ರೊಪ್ಪವಿತ್ತು.ರೊಪ್ಪವೆಂದರೆ    ಪ್ರಾಣಿಗಳಿಗೆ  ಒಣ ಹುಲ್ಲು ಸಂಗ್ರಹಿಸುವ ಸಂರಕ್ಷಿತತಾಣ.ಅಲ್ಲಿ ಒಂದು ಬಾರೆ ಮರವಿತ್ತು.ಅದು ಹಣ್ಣು ಬಿಡುವ ಕಾಲಕ್ಕೆ ಊರಿನ ನನ್ನ ವಯಸ್ಸಿನ ಹುಡುಗರೆಲ್ಲ ಆ ಮರಕ್ಕೆ ಆಳಿಗೊಂದು ಕಲ್ಲು ಎಸೆದು ಹಣ್ಣು ಬೀಳಿಸಿಕೊಂಡು ತಿನ್ನುತ್ತಿದ್ದೆವು.ಬಾರೆ ಹಣ್ಣುಗಳಲ್ಲಿ ಮೂರು ರೀತಿ. ಹಸಿರು ಬಣ್ಣದಿಂದ ಕೂಡಿದ ಹಣ್ಣು ಬಹಳ ಕಹಿ ಮತ್ತು ಒಗರು.ಸುಕ್ಕಾದ ಕೆಂಪು ಬಣ್ಣದ ಹಣ್ಣುಗಳು ಸಿಹಿಯಾಗಿದ್ದರೂ ಅದರಲ್ಲಿ ಹುಳುಗಳು ಜಾಸ್ತಿ. ನನಗೆ ದೋರೆಗಾಯಿ ಬಾರೆ ಹಣ್ಣು ಬಹಳ ಇಷ್ಟವಾಗುತ್ತಿತ್ತು.ಇಂತಹ ಹಣ್ಣುಗಳಲ್ಲೂ ಕೆಲವೊಮ್ಮೆ ಹುಳುಗಳ ಇರುವಿಕೆಯನ್ನು ಗಮನಿಸಿ ಬಿಸಾಡಿದ ನೆನಪು.

ಬಾಲ್ಯದಲ್ಲಿ ನಾವು ಬರೀ ಸಂತೋಷಕ್ಕಾಗಿ ಮತ್ತು ಹೊಟ್ಟೆ ತುಂಬಲು ತಿನ್ನುತ್ತಿದ್ದ ಹಣ್ಣು ಔಷಧಿಗಳ ಆಗರ ಎಂಬುದು ಹಲವಾರು ಪುಸ್ತಕ ಓದಿದಾಗ ತಿಳಿಯಿತು.

ಬೇರೆ ಬೇರೆ ಭಾಗದಲ್ಲಿ ಈ ಹಣ್ಣನ್ನು ವಿವಿಧ ಹೆಸರುಗಳಿಂದ ಕರೆಯುತ್ತಾರೆ.

ಬೋರೆ ಹಣ್ಣು, ಬಾರೆ ಹಣ್ಣು, ಬುಗುರಿ ಹಣ್ಣು ಹೀಗೆ ನಾನಾ ಹೆಸರುಗಳಿಂದ ಕರೆಸಿಕೊಳ್ಳುವ

ಈ   ಹಣ್ಣಿನಲ್ಲಿ ವಿಟಮಿನ್ ಎ, ಸಿ ಮತ್ತು ಖನಿಜ ಪೋಷಕಾಂಶಗಳು ಸಮೃದ್ಧವಾಗಿದೆ. ಇದು ಸ್ನಾಯುಗಳು, ನರಮಂಡಲ ಮತ್ತು ಚರ್ಮಕ್ಕೆ ಅಗತ್ಯವಿರುವ ಅನೇಕ ಪೋಷಕಾಂಶಗಳಿಂದ ತುಂಬಿದೆ. ಬೋರೆ ಹಣ್ಣುಗಳಲ್ಲಿರುವ ಪೊಟ್ಯಾಸಿಯಮ್, ರಂಜಕ, ಮ್ಯಾಂಗನೀಸ್, ಕಬ್ಬಿಣ ಹಾಗೂ ಸತು ಹೃದಯವನ್ನು ಆರೋಗ್ಯಕರವಾಗಿರಿಸುತ್ತದೆ. ಇದರಲ್ಲಿರುವ ಕಬ್ಬಿಣದ ಅಂಶವು ಹಿಮೋಗ್ಲೋಬಿನ್ ಮಟ್ಟವನ್ನು ನಿಯಂತ್ರಿಸುತ್ತದೆ ಮತ್ತು ರಕ್ತಹೀನತೆಯನ್ನು ಕಡಿಮೆ ಮಾಡುತ್ತದೆ.


   ಇದರಲ್ಲಿರುವ ಕಬ್ಬಿಣದ ಅಂಶವು ಹಿಮೋಗ್ಲೋಬಿನ್ ಮಟ್ಟವನ್ನು ನಿಯಂತ್ರಿಸುತ್ತದೆ ಮತ್ತು ರಕ್ತಹೀನತೆಯನ್ನು ಕಡಿಮೆ ಮಾಡುತ್ತದೆ. ಬೋರೆ ಹಣ್ಣುಗಳಲ್ಲಿ ವಿಟಮಿನ್ ಸಿ ಹೇರಳವಾಗಿದ್ದು ಇದು ಮೈಬಣ್ಣಕ್ಕೆ ಹೆಚ್ಚಿನ ಕಾಂತಿ ನೀಡಲು ಸಹಕಾರಿಯಾಗಿದೆ. ಅಲ್ಲದೆ ಮೊಡವೆಗಳು ಇಲ್ಲದಂತೆ ಚರ್ಮವನ್ನು ರಕ್ಷಿಸುತ್ತದೆ. ಈ ಹಣ್ಣನ್ನು ಒಣಗಿಸಿ ತಿನ್ನುವುದರಿಂದ ಇದರಲ್ಲಿರುವ ಕ್ಯಾಲ್ಸಿಯಂ ಮತ್ತು ರಂಜಕದ ಅಂಶ ಮೂಳೆಗಳನ್ನು ಬಲಪಡಿಸಲು ಬಹಳ ಉಪಯುಕ್ತವಾಗಿದೆ. ಅಲ್ಲದೆ ಈ ಹಣ್ಣುಗಳಲ್ಲಿರುವ ಫೈಬರ್ ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ. ಮಲಬದ್ಧತೆ ಮತ್ತು ಅಜೀರ್ಣ ಸಮಸ್ಯೆಗಳನ್ನು ಕಡಿಮೆ ಮಾಡುತ್ತದೆ. ಅಲ್ಲದೆ ಇದರಲ್ಲಿರುವ ಆಂಟಿಆಕ್ಸಿಡೆಂಟ್ ಫೈಟೊಕೆಮಿಕಲ್ಸ್, ಪಾಲಿಸ್ಯಾಕರೈಡ್ಗಳು, ಫ್ಲೇವನಾಯ್ಡ್ಗಳು ಮತ್ತು ಸಪೋನಿನ್ಗಳು ಉತ್ತಮ ನಿದ್ರೆಗೆ ಸಹಾಯ ಮಾಡುತ್ತವೆ. ಅದಲ್ಲದೆ ಇದು ರಕ್ತದಲ್ಲಿನ ಸಕ್ಕರೆಯನ್ನು ಕಡಿಮೆ ಮಾಡುವ ಗುಣವನ್ನು ಹೊಂದಿರುವುದರಿಂದ ಮಧುಮೇಹಿಗಳಿಗೂ ಒಳ್ಳೆಯದು. ಮಲಬದ್ಧತೆಯ ಸಮಸ್ಯೆ ಇರುವವರು ಇದನ್ನು ನಿಯಮಿತವಾಗಿ ಸೇವನೆ ಮಾಡುವುದು ಉತ್ತಮ.


ಬೋರೆ ಹಣ್ಣು ಆಸ್ಟಿಯೋಆರ್ಥ್ರೈಟಿಸ್ ತಡೆಗಟ್ಟಲು ಸಹಾಯ ಮಾಡುತ್ತದೆ. ಈ ಹಣ್ಣುಗಳು ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡುವುದಲ್ಲದೆ ರಕ್ತ ಪರಿಚಲನೆಯನ್ನು ಸುಧಾರಿಸುತ್ತವೆ. ಇದು ಹೃದಯವನ್ನು ಆರೋಗ್ಯಕರವಾಗಿಡಲು ಸಹಾಯ ಮಾಡುತ್ತದೆ ಮತ್ತು ಹೃದ್ರೋಗಗಳ ಅಪಾಯವನ್ನು ಕಡಿಮೆ ಮಾಡುತ್ತದೆ. ಈ ಹಣ್ಣಿನ ಪೇಸ್ಟ್ ಮಾಡಿ ಅದನ್ನು ಚರ್ಮದ ಮೇಲೆ ಹಚ್ಚುವುದರಿಂದ ಗಾಯವು ಗುಣವಾಗುತ್ತದೆ ಮತ್ತು ಚರ್ಮವನ್ನು ಮೃದುಗೊಳಿಸುತ್ತದೆ. ಅಲ್ಲದೆ ಈ ಹಣ್ಣಿನ ಆಂಟಿಮೈಕ್ರೊಬಿಯಲ್ ಮತ್ತು ಉತ್ಕರ್ಷಣ ನಿರೋಧಕ ಗುಣಲಕ್ಷಣಗಳಿಂದಾಗಿ ಇದು ಸೋಂಕುಗಳನ್ನು ತಡೆಯುತ್ತದೆ. ಜೊತೆಗೆ ಹಸಿವನ್ನು ತಡೆದು ಜೀರ್ಣಾಂಗ ವ್ಯವಸ್ಥೆಯ ಕಾರ್ಯನಿರ್ವಹಣೆಗೆ ಸಹಾಯಮಾಡುತ್ತದೆ.

ಪ್ರಸ್ತುತ ನಗರದಲ್ಲಿ ವಾಸಿಸುವ ನಾನು 

ಇಂತಹ ಬಹೂಪಯೋಗಿ ಬಾರೆ ಹಣ್ಣನ್ನು  ಕಂಡರೆ ಮೊದಲು ಕೊಂಡು ಮನೆಗೆ ತೆಗೆದುಕೊಂಡು ಹೋಗಿ ಕುಟುಂಬಸಮೇತ ತಿನ್ನುತ್ತೇನೆ.

ನಿಮ್ಮ ಕಣ್ಣಿಗೆ ಈ ಹಣ್ಣು ಬಿದ್ದರೆ ನೀವೂ ಸೇವಿಸಬಹುದು.


ಸಿಹಿಜೀವಿ ವೆಂಕಟೇಶ್ವರ

ತುಮಕೂರು


04 December 2024

ಬಾಳಿಗೆ ತಂಪು ನೀಡಿದ ಚಂದ್ರ


 


ಬಾಳಿಗೆ ತಂಪು ನೀಡಿದ ಚಂದ್ರ


ಕೆಲವರೇ ಹಾಗೇ ತಮ್ಮ ಪಾಡಿಗೆ ತಾವು ಅಗತ್ಯವಿರುವವರಿಗೆ  ಒಳಿತು ಮಾಡುತ್ತಾ ಯಾರಿಗೂ ಹೇಳದೇ  ನಿರ್ಲಿಪ್ತವಾಗಿ ಇದ್ದುಬಿಡುತ್ತಾರೆ.ಅಂತಹ ಪುಟ್ಟ ಸಹಾಯ ಪಡೆದವರ ಜೀವನದಲ್ಲಿ ಅಪಾರವಾದ ಬದಲಾವಣೆಯಾಗಿ ಸಮಜದಲ್ಲಿ ತುಸು ಶಾಂತಿ ನೆಮ್ಮದಿ ನೆಲೆಸಲು ಸಾಧ್ಯವಾಗುತ್ತದೆ. 

    ಅದು  ಅರ್ಧರಾತ್ರಿಯ ಸಮಯ. ಆ ಡಾಕ್ಟರ್ ತಮ್ಮ ಕೆಲಸವೆಲ್ಲಾ ಮುಗಿಸಿ ಮಲಗಿ ಹತ್ತು ನಿಮಿಷವಾಗಿಲ್ಲ, ಯಾರೋ ಬಾಗಿಲು ತಟ್ಟಿದರು.

    ‌ಡಾಕ್ಟರು ಬಹಳ ನಿಯತ್ತಿನ ಮನುಷ್ಯ. ಬೇಸರ ಪಟ್ಟುಕೊಳ್ಳದೆ ಹೋಗಿ ತೆಗೆದರು. ಬಂದ ಮನುಷ್ಯ ಇವರ ಕಾಲು ಹಿಡಿದುಕೊಂಡು "ಸಾರ್, ಒಬ್ಬ ಗರ್ಭಿಣಿ ಹೆಂಗಸು ಬಹಳ ಪ್ರಸವವೇದನೆ ಅನುಭವಿಸುತ್ತಿದ್ದಾಳೆ ಸಾರ್. ಆಕೆಯನ್ನು ನೀವೇ ಕಾಪಾಡಬೇಕು ಸಾರ್. ದಯಮಾಡಿ ನೀವೇ ಬಂದು ಅವಳನ್ನು ಉಳಿಸಬೇಕು, ಆಗಲ್ಲ ಅನ್ನಬೇಡಿ ಸಾರ್" ಎಂದು ಅಲವತ್ತುಕೊಂಡ.

 ಸುಮಾರು ೭೦ ವರ್ಷಗಳ ಕೆಳಗೆ ಮಹಾರಾಷ್ಟ್ರದ ಮೂಲೆಯಲ್ಲೊಂದು ಗ್ರಾಮದಲ್ಲಿನ ಡಾಕ್ಟರ್ ಅವರು. ತಕ್ಷಣ ಅವನೊಂದಿಗೆ ಹೊರಟರು.

    ಆ ಹೆಂಗಸು 19-20ರ ವಯಸ್ಸಿನವಳಿದ್ದಿರಬೇಕು.  ಆಕೆಗೆ ಪ್ರಸವ ನಿಜಕ್ಕೂ ಕಷ್ಟದಾಯಕವಾಗಿತ್ತು.ಬೆಳಗಿನ ಜಾವವಾಗಿತ್ತು. ಆ ಹೆಂಗಸು ಡಾಕ್ಟರ ಕೈಹಿಡಿದುಕೊಂಡು "ಡಾಕ್ಟರ್ ಸಾಹೇಬರೇ, ನನ್ನ ಗಂಡ ನನ್ನ ಬಿಟ್ಟು ಹೋದ. ನಾನು ದಟ್ಟ ದಾರಿದ್ರ್ಯದಲ್ಲಿದ್ದೇನೆ. ನಾನು ಹುಟ್ಟುವ ಮಗುವನ್ನು ಸಾಕುವ ಸ್ಥಿತಿಯಲ್ಲಿ ಇಲ್ಲ. ನನ್ನನ್ನು ಉಳಿಸಬೇಡಿ. ಬೇಡಿಕೊಳ್ಳುತ್ತೇನೆ ನನ್ನನ್ನು ಸಾಯಿಸಿಬಿಡಿ. ಬದುಕಿ ಏನೂ ಉಪಯೋಗವಿಲ್ಲ".

    ಡಾಕ್ಟರ್ ಗೇ ಮನಸ್ಸಿನಲ್ಲಿ ಕಸಿವಿಸಿಯಾಯಿತು. ಎಲ್ಲಾ ಪೇಷಂಟ್ ಗಳೂ 'ಹೇಗಾದರೂ ಮಾಡಿ ನನ್ನನ್ನು ಉಳಿಸಿ' ಎಂದು ಬೇಡಿಕೊಂಡರೆ ಈ ಅಸಹಾಯಕ ಹೆಂಗಸು ನನ್ನನ್ನು ಉಳಿಸಬೇಡಿ ಎಂದು ಬೇಡಿಕೊಳ್ಳುತ್ತಿದ್ದಾಳೆ. ಅಂದಮೇಲೆ ಅವಳಿಗೆ ಬದುಕು ಎಷ್ಟು ದುರ್ಭರವೆನಿಸಿರಬೇಡ, ಎನಿಸಿ ಹೇಳಿದರು "ನಾನು ಡಾಕ್ಟರ್ ಆಗಿ ನನಗೆ ಪೇಷಂಟ್ ಗಳನ್ನು ಉಳಿಸುವುದು ಮಾತ್ರ ಗೊತ್ತು ಹೊರತು ಸಾಯಿಸುವುದು ಗೊತ್ತಿಲ್ಲವಮ್ಮಾ. ನೀನು ಯೋಚನೆ ಮಾಡಬೇಡ. ಅದರ ವಿಚಾರ ಹೆರಿಗೆಯ ನಂತರ ನೋಡಿಕೊಳ್ಳೋಣ" ಎಂದು‌ ಹೇಳಿ ಸಮಾಧಾನ ಪಡಿಸಿ ಪ್ರಸವದ ಕಾರ್ಯವನ್ನು ಮುಂದುವರೆಸಿದರು.

ಕೆಲವು ಗಂಟೆಗಳ ಕಾಲ ಪ್ರಯಾಸ ಪಟ್ಟಮೇಲೆ ಕೊನೆಗೆ ಹೆರಿಗೆಯಾಗಿ ಹೆಣ್ಣು ಮಗುವನ್ನು ಹೆತ್ತಳು. ಸಂತೋಷ ಪಡಬೇಕೋ ದುಃಖ ಪಡಬೇಕೋ‌ ತಿಳಿಯದ ಸ್ಥಿತಿಯಲ್ಲಿದ್ದಳು ಆಕೆ.

     ಡಾಕ್ಟರ್ ಹೊರಡಲು ಸಿದ್ಧರಾಗುತ್ತಾ ಆಕೆಗೆ ಆಶ್ವಾಸನೆ ಕೊಟ್ಟರು "ನೀನು ಚಿಂತೆ ಮಾಡಬೇಡ ತಾಯಿ. ನಾನೇನು ಫೀಸ್  ತಗೋಳ್ತಾ ಇಲ್ಲ. ಬದಲು ನಾನೇ ನಿನಗೆ ಈ ನೂರು ರೂಪಾಯಿ ಕೊಡ್ತಿದ್ದೀನಿ ಇಟ್ಟುಕೋ.

ನಿನಗೆ ಯಾರೂ ಇಲ್ಲ ಅಂದುಕೋಬೇಡ. ನಾನಿದ್ದೀನಿ. ನೀನು ಸುಧಾರಿಸಿಕೊಂಡಮೇಲೆ ಹತ್ತಿರದ ಪುಣೆಗೆ ಹೋಗಿ ಅಲ್ಲಿನ ನರ್ಸಿಂಗ್ ಕಾಲೇಜಿನಲ್ಲಿ ಇಂಥ ಹೆಸರಿನ ಗುಮಾಸ್ತ ಒಬ್ಬರಿದ್ದಾರೆ, ಅವರಿಗೆ ಈ ಪತ್ರ ಕೊಡು. ನಿನಗೆ ಸಹಾಯ ಮಾಡುತ್ತಾರೆ."  

ಡಾಕ್ಟರು ಏನೋ ಒಂದು ಸಂತೃಪ್ತಿಯಿಂದ ವಾಪಸ್ ಹೊರಟರು.

     ಅವರು ಹೇಳಿದಂತೆ ಆಕೆ ಪುಣೆಗೆ ಹೋಗಿ ಆ ಗುಮಾಸ್ತನನ್ನು ಭೇಟಿಯಾಗಿ ಡಾಕ್ಟರ್ ಕೊಟ್ಟ ಪತ್ರವನ್ನು ಕೊಟ್ಟಳು. ಆ ಪತ್ರ ಓದಿದ ಕೂಡಲೇ ಆತ ಆಕೆಯನ್ನು ನರ್ಸಿಂಗ್ ಟ್ರೈನಿಂಗ್ ಗೆ ಸೇರಿಸಿಕೊಂಡು ಹಾಸ್ಟೆಲ್ನಲ್ಲಿ ವಾಸಕ್ಕೂ ಅನುವುಮಾಡಿಕೊಡುತ್ತಾರೆ. 

8 ತಿಂಗಳ ಟ್ರೈನಿಂಗ್ ಮುಗಿದ ನಂತರ ಉದ್ಯೋಗವನ್ನೂ ಕೊಡಿಸುತ್ತಾರೆ.

     ಇಪ್ಪತ್ತೈದು ವರ್ಷಗಳು ಕಳೆದಿವೆ. ಆ ಡಾಕ್ಟರ್ ಈಗ ಮೆಡಿಕಲ್ ಕಾಲೇಜಿನಲ್ಲಿ ಸೀನಿಯರ್ ಪ್ರೊಫೆಸರ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ. ಒಂದು ಯೂನಿವರ್ಸಿಟಿಯವರು

ತಮ್ಮ ಮೇಧಾವಿ ವಿದ್ಯಾರ್ಥಿಗಳಿಗೆ ಬಂಗಾರದ ಮೆಡಲ್ ಪ್ರಶಸ್ತಿಗಳನ್ನು ಪ್ರದಾನ ಮಾಡಲು ಇವರನ್ನು ಆಹ್ವಾನಿಸಿದ್ದಾರೆ. ಆ ಕಾರ್ಯಕ್ರಮ ಮುಗಿದ‌ನಂತರ 'ಚಂದ್ರಾ' ಹೆಸರಿನ ಒಬ್ಬ ಯುವತಿ ಬಂದು ಈ ಡಾಕ್ಟರ್ ರನ್ನು ಭೇಟಿಯಾಗಿ 'ಸರ್, ತಾವು ದಯವಿಟ್ಟು ನಮ್ಮ ಮನೆಗೆ ಬರಬೇಕು' ಎಂದು ಪರಿಪರಿಯಾಗಿ ಬೇಡಿಕೊಳ್ಳುತ್ತಾಳೆ. ಇನ್ಯಾವುದೇ ಡಾಕ್ಟರ್ ಆಗಿದ್ದರೆ ಸಾಧ್ಯವಿಲ್ಲ ಎಂದು ಹೊರಟುಬಿಡುತ್ತಿದ್ದರೇನೋ. ಆದರೆ ಈತ ಸ್ವಲ್ಪ ಮೃದುಮನಸ್ಸಿನವರು. ವಾಪಸ್ ಮನೆಗೆ‌ಹೋಗುವಾಗ ಹಾಗೇ ಈ ಹುಡುಗಿಯ ಮನೆಗೆ ಹೊಕ್ಕು ಹೋದರೇನಾಯ್ತು, ಎಂದುಕೊಂಡು ಆಗಲಿ ಎಂದೊಪ್ಪಿ ಅವಳ ಜೊತೆ ಹೊರಡುತ್ತಾರೆ.

      ಅಲ್ಲಿ ಆ ಹುಡುಗಿಯ ತಾಯಿ ಟೀ ತಂದು ಕೊಡುತ್ತಾ ತನ್ನ ಪರಿಚಯ, ಊರು ಇತ್ಯಾದಿ ಹೇಳುವಾಗ ಡಾಕ್ಟರರ ಮನಸ್ಸು ತಾವು ಅದೇ ಹಳ್ಳಿಯಲ್ಲಿ ಕೆಲಸ ಮಾಡುತ್ತಿದ್ದ ದಿನಗಳನ್ನು ನೆನೆಯುತ್ತದೆ. ಅಷ್ಟರಲ್ಲಿ ಆ ಯುವತಿ ಡಾಕ್ಟರ್ ರ ಕಾಲು ಮುಟ್ಟಿ ನಮಸ್ಕಾರ ಮಾಡುತ್ತಾಳೆ. ಡಾಕ್ಟರಿಗೆ ಬಹಳ ಸಂಕೋಚವೆನಿಸಿ ', ಯಾಕಮ್ಮ ನನಗೆ ನಮಸ್ಕಾರ ಮಾಡುತ್ತಿದ್ದೀಯ' ಎಂದು ಕೇಳಿದಾಗ ಅವಳ ತಾಯಿ ಹೇಳುತ್ತಾಳೆ ' ಡಾಕ್ಟರ್ ಸಾಹೇಬರೇ, ಅವತ್ತು ರಾತ್ರಿ ನನ್ನ ಗುಡಿಸಿಲಿಗೆ ಬಂದು ನನಗೆ ಹೆರಿಗೆ ಮಾಡಿಸಿದಿರಲ್ಲ, ನೆನಪಿದೆಯೇ. ಆಗ ಹುಟ್ಟಿದ ಹೆಣ್ಣು ಮಗುವೇ ಈ ಹುಡುಗಿ.  ಅಂದು ನೀವು ನನಗೆ ತೋರಿಸಿದ ದಯೆಯಿಂದಾಗಿ ನಾನು ಆ ಮಗುವನ್ನು ಬೆಳೆಸಿ ದೊಡ್ಡವಳನ್ನಾಗಿ ಮಾಡಿ ಹೆಚ್ಚಿನ ವಿದ್ಯಾಭ್ಯಾಸ ಕೂಡಾ ಕೊಡಿಸಲಿಕ್ಕಾಯಿತು. ನೀವು ನನ್ನ ಪಾಲಿನ ದೇವರಾಗಿ ಬಂದು ನನ್ನನ್ನು ಕಾಪಾಡಿದಿರಿ. ನನ್ನ ಬದುಕಿಗೊಂದು ದಾರಿಮಾಡಿಕೊಟ್ಟಿರಿ. ಅದಕ್ಕೇ ಅವಳಿಗೆ ನಿಮ್ಮ ಹೆಸರನ್ನೇ ಇಟ್ಟಿದ್ದೇನೆ, 'ಚಂದ್ರಾ' ಎಂದು"

ಎಂದು ಕಣ್ಣೊರೆಸಿಕೊಂಡಳು.  

ಚಂದ್ರಾ ಹೇಳಿದಳು "ಇಷ್ಟರಲ್ಲೇ ನಾವು ಬಡವರಿಗಾಗಿ ಉಚಿತ ಆಸ್ಪತ್ರೆಯನ್ನು ಪ್ರಾರಂಭಿಸುತ್ತಿದ್ದೇವೆ. ಅದಕ್ಕೂನಿಮ್ಮ ಹೆಸರೇ ಇಡುತ್ತೇವೆ. ದಯಮಾಡಿ ಅದರ ಉದ್ಘಾಟನೆಗೆ ನೀವೇ ಬರಬೇಕು ಸರ್". ಅವಳ ಮಾತು ಡಾಕ್ಟರ ಕಣ್ಣಲ್ಲೂ ನೀರು ತರಿಸಿತು. ಆಗಲಿ ಎಂದು ತಲೆಯಾಡಿಸಿದರು.

      ಆ ಡಾಕ್ಟರ್ ಯಾರು ಗೊತ್ತೇ?

ಇನ್ಯಾರೂ ಅಲ್ಲ ಡಾಕ್ಟರ್ ರಾಮಚಂದ್ರ ಕುಲಕರ್ಣಿಯವರು.

ಇನ್ಫೋಸಿಸ್ ಖ್ಯಾತಿಯ ಶ್ರೀಮತಿ ಸುಧಾಮೂರ್ತಿ ಯವರ ತಂದೆ. ಅವರೂ ತಂದೆಯ ಹೆಜ್ಜೆಗಳಲ್ಲೇ ಮುಂದುವರೆದು ಕರುಣಾಮಯಿ ಸಮಾಜಸೇವಕಿಯಾಗಿ ಸೇವೆ ಸಲ್ಲಿಸುತ್ತಿರುವ ವಿಷಯ ನಮಗೆಲ್ಲ ತಿಳಿದಿದೆ.


 ಸಿಹಿಜೀವಿ ವೆಂಕಟೇಶ್ವರ

ತುಮಕೂರು