08 July 2020

ಉದಕದೊಳಗಿನ ಕಿಚ್ಚು ಭಾಗ ೧೧


ಉದಕದೊಳಗಿನ ಕಿಚ್ಚು  ಭಾಗ ೧೧

ಹಿರಿಯೂರು ಕಡೆಯಿಂದ ಬರುವಾಗ ಊರು ಕಾಣುವ ಮೊದಲೇ ಎಡಭಾಗದಲ್ಲಿ ಸಣ್ಣದಾದ ಹೊಗೆ ಕಾಣುವುದು  .ಹತ್ತಿರ ಹೋದಂತೆ ಟಣ್ ಟಣಾ  ಟಣ್ ಎಂಬ ಸದ್ದು, ಅಲ್ಲೆ ಪಕ್ಕದಲ್ಲಿ ಕುಳಿತಿದ್ದ ವ್ಯಕ್ತಿ ಬಲಗೈಯಲ್ಲಿ ಒಂದು ತಿರುಪಳಿ ತರುಗಿಸುತ್ತಿದ್ದ ಅದು ಕೊಳವೆಯ ಮೂಲಕ ಇದ್ದಿಲು ಇರುವ ಭಾಗಕ್ಕೆ ಸೇರಿತ್ತು ಜೋರಾಗಿ ತಿರುಗಿಸಿದರೆ ಜೋರಾದ ಕೆಂಡ  ನಿಧಾನವಾಗಿ ತಿರುಗಿಸಿದರೆ ಬೂದಿ ಆರಿ ಅಕ್ಕ ಪಕ್ಕದಲ್ಲಿ ಚದುರುತ್ತಿತ್ತು .ಕೆಂಪಾಗಿ ಕಾದ ಗುದ್ದಲಿಯನ್ನು ಇಕ್ಕಳದಿಂದ ಹಿಡಿದು ‌ತೆಗೆದು" ಹುಂ ಹಾಕು "
ಎಂದದ್ದೆ ತಡ , ದೊಡ್ಡ ಸುತ್ತಿಗೆಯಿಂದ ವಿಚಿತ್ರ ಸದ್ದು ಮಾಡುತ್ತಾ  ,ಒಂದೆ ಸಮನೆ ಬಡಿಯಲಾರಂಬಿಸಿದ ಮಹಂತೇಶ . ಸುಮಾರಾದವರಿಗೆ ಸುತ್ತಿಗೆ ಅಲ್ಲಾಡಿಸಲು ಆಗುತ್ತಿರಲಿಲ್ಲ  ,ಅಂದರೆ ನೀವೇ ಊಹಿಸಬಹುದು ಮಹಾಂತೇಶನ ದೈತ್ಯ ಶಕ್ತಿಯನ್ನು , ದೊಡ್ಡ ಏಟಾಕಿ  ಉಸ್ಸಪ್ಪಾ ಎಂದು ಕುಳಿತ ಮಹಂತೇಶ , ಅಲ್ಲೇ ಮಣ್ಣಿನ ಮಡಕೆಯಲ್ಲಿದ್ದ ನೀರನ್ನು ಒಂದು ಚೆಂಬಿನಲ್ಲಿ ತುಂಬಿಕೊಂಡು ಗಟಗಟ ಕುಡಿದುಬಿಟ್ಟ. ಎಡಗೈಯಲ್ಲಿ  ಇಕ್ಕಳದಲಿ ಕಾದ ಕಬ್ಬಿಣದ ತುಂಡು‌ಹಿಡಿದು , ಬಲಗೈಯಲ್ಲಿ ಸಣ್ಣ ಸುತ್ತಿಗೆ ಹಿಡಿದು , ಕಮ್ಮಾರಣ್ಣ ತನಗೆ ಬೇಕಾದ ಆಕಾರಕ್ಕೆ ತರಲು ಹೊರಟರೆ , ಕಬ್ಬಿಣ ಕ್ರಮೇಣವಾಗಿ ಕೆಂಪಿನಿಂದ ಕಪ್ಪಾಯಿತು. ಎಷ್ಟೇ ಏಟಾಕಿದರೂ ಬಗ್ಗದಿದ್ದಾಗ ಮತ್ತೆ ಗುದ್ದಲಿಯನ್ನು  ತಿದಿಗೆ ಇಟ್ಟು , ಕಪ್ಪಗಾಗಿದ್ದ ತನ್ನ ಟವಲಿನಿಂದ ಬೆವೆತ ಹಣೆ ಮೈ ಒರೆಸಿಕೊಂಡ ಕಮ್ಮಾರಣ್ಣ
"ಬಾರೋ ಮಾಂತೇಶ ಹಾಕು ನಾಕೇಟ" ಅಂದರು ಗೊಣಗುತ್ತಲೆ
"ಹೇ ಎಷ್ಟಂತ ಹಾಕಲಿ ನನಗೂ ಸಾಕಾಗಿದೆ ಮೈ ಕೈ ನೊವಾಗಿದೆ , ಆಗಲೇ ಐದು ಗಂಟೆ ಆತು ಲೇಟಾದ್ರೆ  ಕಂಬಣ್ಣನ ಹೆಂಡಂದಂಗಡಿ ಬಾಗಿಲು ಹಾಕುತ್ತೆ ತಗ" ಮತ್ತೆ ಟಣ್ ಟಣಾ ಟಣ್ ಶುರುವಾಯಿತು. "ಹು ನೋಡಪ್ಪ ಹನುಮಾಭೋವಿ , ಸಾಕಾ ಇಷ್ಟು ಮನೆ ಇದ್ದರೆ ಬಾಳ ಮೊಂಡಾಗಿತ್ತು ನಿನ್  ಗುದ್ದಲಿ.
" ಇನ್ನೋಂದ್ ಸ್ವಲ್ಪ ಚೂಪುಗ್ ಮಾಡು " ಎಂದಿದ್ದೇ ತಡ ,ಮಹಾಂತೇಶನ ಪಿತ್ತ ನೆತ್ತಿಗೇರಿ ಏ ಹನುಮಾಬೋವಿ ,ಜಾಸ್ತಿ ಚೂಪಾದರೆ ಗುದ್ದಲಿ  ನಿನ್ನ ಕಾಲ ಮೇಲೆ ಬಿದ್ದು  ,ಕಾಲು ತೂತು ಬೀಳುತ್ತೆ , ಸಾಕು ನಡಿ" ಅಂದ ಮಹಾಂತೇಶ.
" ಲೇ ಮಾಂತ ನಾನೇನು ಹೆಂಡ ಕುಡ್ದು ಕರಿಕೆ ಕಡಿಯಲ್ಲ ಕಣಲ   ,ಸುಮ್ಮನೆ ನಾಕೇಟಾಕು  , ಅದೆಲ್ಲಿಗೋ ಅಂದೆಲ್ಲಾ ಆಮೇಲೆ ಹೋಗುವಂತೆ ", ಎಂದರು ಹನುಮಾಭೋವಿ .
ಮಹಂತೇಶನ ಬಡಿತ ಜೋರಾಯಿತು, ಟಣ್ ಟಣಾ ‌ಟಣ್ ...
ಹನುಮಾಭೋವಿಗೆ ಆಗ ಅರವತ್ತೋ ಅರವತ್ತೈದು ಇರಬಹುದು, ಕಣ್ಣಿಗೆ ಕನ್ನಡಕ ಬಂದರೂ  ,ಹೊತ್ತಾರೆ ಎದ್ದು ಚೂಪಾದ ಗುದ್ದಲಿಯನ್ನು ಹೆಗಲಿಗೆ ಸಿಕ್ಕಿಸಿಕೊಂಡು , ಮೊದಲೇ ನಿಗದಿಪಡಿಸಿದ ಹೊಲದ ಕಡೆಗೆ ಪಯಣ ಆರಂಭಿಸುತ್ತಿದ್ದರು.
ಇನ್ನೂ ಸೂರ್ಯದೇವನ ಆಗಮನಕ್ಕೆ ಮುನ್ನವೆ , ಕೆರೆಏರಿಯ ಮೇಲೆ ನಡೆದು ಹೋಗುತ್ತಿದ್ದರೆ ಮನಕ್ಕೇನೊ ಮುದ . ಎಡಕ್ಕೆ ಕೆಂಪಾದ ಆಕಾಶ , ಬಲದಿಂದ ಹಿತವಾದ ತಂಗಾಳಿ , ಅಕ್ಕ ಪಕ್ಕ ಸೀಮೇಜಾಲಿಯ ಗಿಡಗಳು, ಆಗೊಮ್ಮೆ ಈಗೊಮ್ಮೆ ತಲೆ ಮೇಲೆ ಹಾಲು, ಮೊಸರಿನ ಗಡಿಗೆ ಹೊತ್ತು ಬರುವ ಗೊಲ್ಲರ ಹೆಣ್ಣುಮಕ್ಕಳು. ಇದು ಹೊರಗಿನವರಿಗೆ ವಿಶೇಷವಾಗಿ ಕಂಡರೂ ಹನುಮಾಭೊವಿಗೆ ದಿನ(ಸೂರ್ಯ) ಬರುವ ಮೊದಲು ದಿನದ ದಿನಚರಿಯ ಒಂದು ಭಾಗ . ದೇವರಲ್ಲಿ ಅವನ ಬೇಡಿಕೆ ಒಂದೆ ಇಂದು ಕರಿಕೆ( ಗರಿಕೆ ) ಕಡಿವ ಪ್ರದೇಶ ಮೆತ್ತಗಿರಲಿ , ಬಿಸಿಲು ಕಡಿಮೆಯಿರಲಿ  ,ಸಂಜೆ ಹೆಂಡದಂಗಡಿಗೆ ಹೋದಾಗ ಪಟಾಪಟಿ‌ ನಿಕ್ಕರ್ ಜೇಬಿನಲ್ಲಿ ದುಡ್ಡಿರಲಿ , ಅಷ್ಟೇ ಅವನ ಸಂತೃಪ್ತ ಜೀವನದ ಗುಟ್ಟು.
ಹನುಂತಾಭೋವಿ ಹೊಲಕ್ಕೆ  ಹೋಗಿ ಕರಿಕೆ ಕುಡಿಯಲು ಶುರು ಮಾಡುವನು ,ಬೇರು ಸಮೇತ ಕರಿಕೆ (ಗರಿಕೆ) ಕಡಿಯಲು ಕೆಲವೊಮ್ಮೆ ಎರೆ ನೆಲದಲ್ಲಿ ಐದಾರು ಅಡಿ ಆಳಕ್ಕೆ ಅಗೆಯಬೇಕಾದ ಪ್ರಸಂಗ ಬರುತ್ತಿತ್ತು  ,ಅಂತ ಸಮಯದಲ್ಲಿ ತಗಡಿನ ಬಿಲ್ಲೆಯಲ್ಲಿ ಮಣ್ಣನ್ನು ಹೊರಹಾಕಿ ಕರಿಕೆಯ ಮೂಲ ಹುಡುಕಿ ತೆಗೆಯುವ ಕಾಯಕ ನಿಜಕ್ಕೂ ಶ್ರಮದಾಯಕ. ರವಿರಾಯ ನಿಧಾನವಾಗಿ ಮೇಲೇರುತ್ತಿದ್ದಂತೆ ಹನುಮಾಭೋವಿಯ ಬರಿ ಮೈ ಚುರುಗುಟ್ಟುತ್ತಾ , ಬೆವರ ನೀರು ಇಳಿಯಲು ತಲೆಗೆ ಸುತ್ತಿದ್ದ ಟವಲ್ನಲ್ಲಿ ಉಸ್ ಎಂದು ಒರೆಸಿಕೊಂಡು  ,ಪಟಾಪಟಿ ನಿಕ್ಕರ್ ಜೋಬಿನಿಂದ ಒಂದು ಗಣೇಶ ಬೀಡಿ ತೆಗೆದು  ,ಬಾಯಿಗಿಟ್ಟು ಬೆಂಕಿಕಡ್ಡಿ ಗೀರಿ  ,ಎರಡೂ ಕೈಗಳನ್ನು ಬಾಯ ಬಳಿ ತಂದು ಹೊತ್ತಿಸಿ  ,ದಮ್ ಎಳೆದು ಆಕಾಶದೆಡೆ ಹೊಗೆ ಬಿಡುತ್ತಾ ಮನದಲ್ಲೇ ಏನೋ ದ್ಯಾನಿಸುತ್ತಾ ,ಮೋಟು ಬೀಡಿಯನ್ನು ಹೊಸಕಿ ಹಾಕಿ ಮತ್ತೆ ಗುದ್ದಲಿಗೆ ಕೈ ಹಾಕುತ್ತಿದ್ದ .
ಬಾಯಾರಿಕೆಯಾದರೆ , ಅಲ್ಲೇ ದೊಡ್ಡಪ್ಪಗಳ ಹೊಲದಲ್ಲಿ ಬೇಸಿಗೆಯಲ್ಲೂ ಇರುವ ಮಣ್ಣಿನ   ನೀರಿನ‌ ತೊಟ್ಟಿಯಲ್ಲಿ  ನೀರು‌ಕುಡಿಯುತ್ತಿದ್ದ  ,ಇನ್ನೊಂದು ಬದಿಯಲ್ಲಿ ಎಮ್ಮೆ ನೀರು ಕುಡಿಯುತ್ತಿತ್ತು.


"ಏ ಬಿಳಿಯಪ್ಪ ಬರೀ ಮಡಿಕೆ ಕುಳ (ನೇಗಿಲ ಮುಂದಿನ ಕಬ್ಬಿಣದ ಚೂರು ) ಇಡ್ಕಂಡು ಅಲ್ಲಾಡಿಸ್ಕಂಡು ಬಂದ್ರೆ ಇದ್ಲು ಬ್ಯಾಡೇನಪ್ಪ ಇವತ್ತು ನಾನು ಕುಳ ಮಾಡ್ಕೊಡಲ್ಲ ನಡಿ " ಎಂದು ಸಿಟ್ಟಾಗಿ ಕಡ್ಡಿ ಮುರಿದಂತೆ ಹೇಳಿ ಬಿಟ್ಟ ಕಮ್ಮಾರಣ್ಣ . ನಾಳೆ ಒಂದಿನ‌ ,ಆಯ್ತುವಾರ ಮಾತ್ರ ಬ್ಯಾಸಾಯ ಹೊಡೆಯೋದು ,ಸೋಮಾರ ಬ್ಯಾಸಾಯ ಹೊಡ್ಯಂಗಿಲ್ಲ ,ನಿನ್ಗು ಗೊತ್ತು ಈ ಸತಿ ಕುಳ ತಟ್ಟಿ ,  ಮನೆ ಮಾಡ್ಕೊಡು ಅದ್ಯಾಕೆ ಅಂಗಾಡ್ತಿಯಾ? ಮುಂದ್ಲುವಾರ ಬಾರೋವಾಗ ಶ್ಯಾನೆ ಇದ್ಲು ತತ್ತೀನಿ , ಈ ಸತಿ ಒಳ್ಳೆ ಉಳುಮೆ ಮಾಡುಬೇಕು ನಾನು " ಎಂದು  ಬಿಳಿಯಪ್ಪ ಒಂದೆ ಸಮನೆ ಮಾತನಾಡುತ್ತಿದ್ದ ಕಮ್ಮಾರಣ್ಣ ಗೊನಗುತ್ತಾ , ಮಡಿಕೆ ಕುಳಕ್ಕೆ ನಾಕೇಟು ಹಾಕಿ‌ , ಚೂಪು ಮಾಡುವ ಕಾರ್ಯದಲ್ಲಿ ‌ತಲ್ಲೀನನಾದ .
ಮನೆಯಿಂದ ಊರ ಹೊರಗೆ ತಂದಿಟ್ಟ ನೊಗ ,ಪಟಗಣ್ಣಿ, ಮಡಿಕೆ , ಹೂಟೆ ಹಗ್ಗ  ಇವುಗಳನ್ನು ಊರಮುಂದೆ ತರಬೇಕು, ಏಕೆಂದರೆ ಅದು ಆ ಊರಿನ ಸಂಪ್ರದಾಯ.
ಅದರ ಪ್ರಕಾರ ಯಾರೇ ಆದರೂ ಮನೆಯಿಂದಲೇ ನೇರವಾಗಿ ನೊಗ ಹೂಡಿ ಹೊಲಕ್ಕೆ ತೆರಳಬಾರದು . ಆದರೆ ಇದು ಎತ್ತಿನ ಗಾಡಿಗಳಿಗೆ ಅನ್ವಯವಾಗುತ್ತಿರಲಿಲ್ಲ.
ಸತೀಶ ನೊಗ ತಂದರೆ , ಬಿಳಿಯಪ್ಪ ಎತ್ತು‌ಹಿಡಿದು ಮಡಿಕೆ ಹಗ್ಗ ತಂದು . ಎತ್ತುಗಳ ಮೇಲೆ ನೊಗವಿಟ್ಟು ಅದರ ಮೇಲೆ ನೇಗಿಲು ಇಟ್ಟು ಹಗ್ಗದಿಂದ ಬಿಗಿದು ."ಆ ಬಿಡು ....."ಎಂಬ ಸದ್ದಿನೊಂದಿಗೆ ದೂಳು ಮಾಡುತ್ತಾ ಕೆಂಗಲು (ಕೆಂಪು ಮಣ್ಣ ) ಹೊಲದೆಡೆ  ಹೊರಟ . ನೊಗದಿಂದ ಮಡಿಕೆ ಇಳಿಸಿ ತಿರುಗಿಸಿ  ,ಭೂಮಿಯಲ್ಲಿ ಕುಳ ಹೋಗುವಂತೆ ಇಟ್ಟು ಹಗ್ಗದಿಂದ ನೊಗಕ್ಕೆ ಬಂದಿಸಿ , ಸ್ವಲ್ಪ ಮುಂದೆ ಹೋಗಿ ಕಡದು, ಬಳದು ,ನೋಡಿ ಮತ್ತೆ ಹಗ್ಗ ಸರಿಮಾಡಿ , ಎಡಗೈಯಲ್ಲಿ ಮಡಿಕೆ ಹಿಡಿ ಹಿಡಿದು , ಬಲಗೈಯಲ್ಲಿ ಬಾರುಕೋಲು ತಿರುಗಿಸುತ್ತಾ ಟೇಪು ಹಿಡಿದಂತೆ ಮೊದಲ ಸಾಲು ಹೊಡೆದು ತಿರುಗಿಕೊಳ್ಳುವಾಗ  ,ಗುಣಾರಳ್ಳಿ ಕೆರೆಯ ಮಗ್ಗುಲಿನಿಂದ ಸೂರ್ಯ ಇಣುಕಿನೋಡುತ್ತಿದ್ದ. ಯಾವದೋ ಚಿತ್ರ ಗೀತೆ ,ಮತ್ತಾವುದೋ ನಾಟಕದ ಹಾಡುಗಳನ್ನು ತನ್ನದೆ ರಾಗದಲ್ಲಿ ಹಾಡುತ್ತಾ , ಕೆಲವೊಮ್ಮೆ ಸಾಲು ತಪ್ಪಿದ ಎತ್ತುಗಳಿಗೆ ಬೈಯುತ್ತ  ,ಉಳುಮೆ ಕೆಲಸ ಮುಂದುವರೆಸಿದ ಬಿಳಿಯಪ್ಪ.
"ಅಡಿಕೆ ಎಲೆ ಐತೇನೊ ಬಿಳಿಯ" ಎಂದು ಹತ್ತಿರ ಬಂದವರು ಪಕ್ಕದ ಹೊಲದಲ್ಲಿ ಹೊಲ ಹೂಳುತ್ತಿದ್ದ ರಾಮಣ್ಣ
"ಅಡಿಕೆ ಐತೆ  ಎಲೆ ಒಣಗೈತೆ ತಗ "
ತಾನೂ ಎರಡು ಅಡಿಕೆಯನ್ನು ಬಾಯಲ್ಲಿ ಹಾಕಿಕೊಂಡು, ಒಣಗಿದ ವಿಳ್ಯೆದೆಲೆಗೆ  ಸುಣಗಾಯಿ ಡಬ್ಬಿಯಿಂದ ತೋರ್ಬೆರಳಲ್ಲಿ ಸುಣ್ಣ ತೆಗೆದು ಎಲೆಗೆ ಸವರಿ , ಬಾಯಲ್ಲಿ ತುರುಕಿಕೊಂಡು   ಇಬ್ಬರೂ ಜಗಿಯಲಾರಂಬಿಸಿದರು .
ನಿಮ್ಮೊಲ ಎಂಗೆ ಚೆನ್ನಾಗಿ ಅರಿಯುತ್ತಾ?( ಉಳುಮೆ ಆಳದ ಬಗ್ಗೆ) ಕೇಳಿದ ಬಿಳಿಯಪ್ಪ
" ಏ ನಮ್ಮದು ಜಜ್ಜು ನೆಲ ಸುಮಾರಾಗಿ ಅರಿಯುತ್ತೆ ಇನ್ನೆರಡ್ ದಿನ  ಬಿಟ್ರೆ ಮಡಿಕೆ ತೂರಲ್ಲ  , ಮಳೆ ಬಂದರೇನೆ ಬ್ಯಾಸಾಯ ನಂದು,ಸರಿ ಬಿಸ್ಲಾಗುತ್ತೆ ನಾನು ಹೋಗಿ ಮಡಿಕೆ ಹೊಡಿಬೇಕು ಅಂತ ಹೊರಟರು ರಾಮಣ್ಣ.
ಕ್ರಮೇಣವಾಗಿ ಬಿಸಿಲು ಬಲಿತಂತೆ ಹೊಟ್ಟೆ ತಾಳ ಹಾಕಲಾರಂಬಿಸಿತು , ದೂರದಲ್ಲಿ ಸತೀಶ ಬರುವುದು ಕಂಡು , ಸ್ಕೂಲ್ಗೆ ರಜಾ ಇರಾದಿಕ್ಕೆ ಸತೀಶ ಬುತ್ತಿ ತತ್ತಾನೆ ಎಂದು ಮನದಲ್ಲಿ ಅಂದುಕೊಂಡನು ಬಿಳಿಯಪ್ಪ.
ಕೈತೊಳೆದುಕೊಂಡು  ,ತಲೆಗೆ ಕಟ್ಟಿದ ಟವಲ್ ತೆಗೆದು ಗಂಗಳದಲ್ಲಿ(ತಟ್ಟೆ) ಜೋಳದ ಮುದ್ದೆ , ಉರಿದುಳ್ಳಿಕಾಳು ಸಾರಿನಲ್ಲಿ ಒಂದು   ಮುದ್ದೆ ಉಂಡು ಎರಡನೇ ಮುದ್ದೆಗೆ ಮಜ್ಜಿಗೆ ಕಲೆಸಿಕೊಂಡು ಚೆನ್ನಾಗಿ ಕಲೆಸಿ , ಸೊರ್ ....ಸೊರ್.... ಎಂದು ಸವಿಯತೊಡಗಿದ. ಕೊನೆಗೆ ಗಂಗಳದಲ್ಲೇ ಅರ್ಧ ಚೆಂಬಿನಷ್ಟು ಮಜ್ಜಿಗೆ ಹಾಕಿಸಿಕೊಂಡು , ಗಟಗಟನೆ  ಕುಡಿದು ಕೊನೆಗೆ ನೀರು ಕುಡಿವ ಶಾಸ್ತ್ರ ಮಾಡಿ , "ನೀರು ಅಲ್ಲಿ ಹೊಂಗೆ ಮರದಡಿ ಇಟ್ಟು ಹೋಗು"
ಎಂದು ಸತೀಶನಿಗೆ ಹೇಳಿದ .
ಸತೀಶ ಊರಕಡೆ ಹೆಜ್ಜೆ ಹಾಕಿದ .


ಸತೀಶ ಹೋಗಿ ಅರ್ಧ ಗಂಟೆ ಆಗಿರಬಹುದು .ದೂರದಿಂದ ಒಂದು ಹೆಣ್ಣಿನ ಆಕೃತಿ ಬರುತ್ತಿರುವದನ್ನು ಮಡಿಕೆ ಸಾಲಿನ ನಡುವೆಯೂ ಗಮನಿಸಿದ ಬಿಳಿಯಪ್ಪ .
ಇವಳ್ಯಾಕೆ ಇತ್ತ ಬರುತ್ತಿದ್ದಾಳೆ ? ಇವಳ ಅಪ್ಪನಿಗೆ ಬುತ್ತಿ ತಂದಳೆ? ಛೆ ಇಲ್ಲ ಅವರಪ್ಪ ಇವತ್ತು ಬ್ಯಾಸಾಯಕ್ಕೆ ಬಂದಿಲ್ಲ? ಮತ್ಯಾಕೆ ಬಂದಳು? ಹೊಲದಲ್ಲೇನಾದರೂ ಕಲ್ಲುಗಳ ಆರಸಿ ಹಾಕಲು? ಇಲ್ಲ ಅವರ ಹೊಲದಲ್ಲಿ ಕಲ್ಲುಗಳೆ ಇಲ್ಲ ? ಹೇ ಇವಳು ಅವಳಲ್ಲ , ಬ್ಯಾರೆ  ಯಾರೋ ಇರಬಹುದು , ನನಗೆ ಅವಳ ಭ್ರಮೆ, ಮೊನ್ನೆ ಗೌಡ್ರಬಾವಿಯಲ್ಲಿ ಭಜಾರಿಯಂತೆ ಜಗಳಕ್ಕೆ ನಿಂತಾಗ ಅವಳ ಕೈ ಸೋಕಿದಾಗ ಮೈಯೆಲ್ಲಾ ಕರೆಂಟ್ ಪಾಸಾದಂಗಾಗಿತ್ತು .
"ಏ ಗಿಡ್ಡಿ ನಿನಗೈತೆ ಕಣೆ" ಸಿಟ್ಟಿನಿಂದ ನುಡಿದ ಬಿಳಿಯಪ್ಪ
" ಏ ಹೋಗೊಲೋ ಕಂಡಿದಿನಿ ಇವ್ನೇನು ಬಿದುರು ಗಳ ಬೆಳದಂಗ್ ಬೆಳದವ್ನೆ"
ಅಂದು ತುಂಬಿದ ಬಿಂದಿಗೆ ಭರದಲ್ಲಿ ಎತ್ತಿ ಸೊಂಟದ ಮೇಲೆ ಇಡುವಾಗ  ,ಚೆಲ್ಲಿದ ನೀರು ಸೊಂಟದ ಕೆಳಗಿನ ಭಾಗ ನೆನೆಸಿತ್ತು. ಅದನ್ನೇ ನೋಡುತ್ತಾ ನಿಂತ ಬಿಳಿಯಪ್ಪ ಜಗಳ ಮರೆತಿದ್ದ. 
ನಿನ್ನೆಯ ಜಗಳದ ದೃಶ್ಯ ಬಿಳಿಯಪ್ಪನ ಕಣ್ಣ ಮುಂದೆ ಬಂದಿತು .
ಹತ್ತಿರಕ್ಕೆ    ಬರು  ಬರುತ್ತಾ ಪಕ್ಕಾ ಆಗಿತ್ತು ಅವಳೇ ಶೀಲಾ ! ರಂಬೆಯಂತೆ ಇಲ್ಲದಿದ್ದರೂ, ಕೊಂಬೆಗೆ ಲಂಗ ದಾವಣಿ ಹಾಕಿದರೆ ಉಬ್ಬು ತಗ್ಗು ಕಾಣುವಷ್ಟು ಸೌಂದರ್ಯಕ್ಕೇನೂ ಬರವಿರಲಿಲ್ಲ ,ಹಾಲಿನ ಬಿಳುಪಿಲ್ಲದಿದ್ದರೂ ಗೋದಿ ಬಣ್ಣದ, ಸಾಮಾನ್ಯರಿಗಿಂತ  ಅರ್ಧ ಅಡಿ ಕಡಿಮೆ ಎತ್ತರದ ಹುಡುಗಿ  ,ಓದಿನಲ್ಲಿ ಬಿಳಿಯಪ್ಪನಷ್ಟೆ ಓದಿ ಮೂರನೆ ಕ್ಲಾಸು ಪೇಲಾಗಿ , ಈಗ  ಹದಿನೆಂಟನೆ ವರ್ಷದ ಹರೆಯ ಎದ್ದು ಕಾಣುತ್ತಿತ್ತು. ಬಿದಿರಿನ ಬುಟ್ಟಿಯಲ್ಲಿನ ಬುತ್ತಿಯನ್ನು ತಲೆ ಮೇಲೆ ಹೊತ್ತು ಬರುವಾಗ ಕೆಲ ಅವಯವಗಳು ಹೆಚ್ಚೇ ಕುಲುಕುತ್ತಿರುವಂತಿದ್ದವು.
"ಏ ಗಿಡ್ಡಿ ..ಎನ್ ಸಮಾಚಾರ" ರಸ್ತೆಯಲ್ಲಿ ನಡೆವ ಶೀಲಾಳಿಗೆ  ಹೊಂಗೆ ಮರದ ಕೆಳಗೆ ಕೂತು ನೀರು ಕುಡಿಯುತ್ತಾ ಕೂಗಿದ ಬಿಳಿಯಪ್ಪ.
"ಗಿಡ್ಡಿ ಬುಡ್ಡಿ ಅಂದರೆ ಸೆನ್ನಗಿರಲ್ಲ ನೀನೇನು ನನಗೆ ಹೆಸರಿಕ್ಕಿದಿಯಾ?
ಎಂದು ದಾರಿ ಬಿಟ್ಟು, ಬಿಳಿಯಪ್ಪನ ಹೊಲದೆಡೆ ಹೆಜ್ಜೆ ಹಾಕಿದಳು ಶೀಲಾ,
"ನಾನು ಗಿಡ್ಡಿ ಅಂತಲೆ ಕರೀತಿನಿ ಏನೇ ಈಗ"
"ನನ್ನ ಸುದ್ದಿ ನಿನಗ್ ಗೊತ್ತಿಲ್ಲ ಎಲ್ಲ ಹುಡ್ಗೇರಂಗಲ್ಲ ನೋಡು ನಾನು"
" ಎನೇ ಏನ್ ಮಾಡ್ತಿಯೇ ನೀನು "
ಏನ್ ಮಾಡ್ತಿನಾ ನೋಡು ನಿನ್ನೆ ನೀರ್ಸೇದೋವಾಗ ಎಲ್ಲರ್ ಮುಂದೆ ಗಿಡ್ಡಿ ಅಂತಿಯಾ?"
ಮಾತನಾಡುತ್ತಾ ,ಮಾತನಾಡುತ್ತಾ ಆಗಲೇ ಬಿಳಿಯ ಕುಳಿತ ಹೊಂಗೆಯ ಮರದ ನೆರಳಿಗೆ ಬಂದು ನಿಂತಿದ್ದಳು.
ಬುತ್ತಿಯ ಬುಟ್ಟಿ ಕೆಳಗಿಟ್ಟು  ಕೈಯಿಂದ ಬಿಳಿಯನ ಹೊಡೆಯಲು ಮುಂದಾಗುತ್ತಿದ್ದಂತೆ, ಬಿಳಿಯ ಅವಳ ಕೈಹಿಡಿದ. ಕೊಸರಾಡಿ ಅವನ ಕೈಯಿಂದ ಬಿಡಿಸಿಕೊಳ್ಳುವ ಪ್ರಯತ್ನ ಮಾಡಿದಳು , ಗಂಡಿನ ಬಿಗಿಯಾದ ಹಿಡಿತ , ಮತ್ತು  ಬಿಸಿಯುಸಿರು  ತಾಗುತ್ತಿದ್ದಂತೆ
ಶೀಲಾಳು ಕೊಸರುವುದು ಕ್ರಮೇಣ ಕಡಿಮೆಯಾಯಿತು. ಉಸಿರು ಬಿಗಿಯಾಗಿ ,ದೇಹದ ಅಂಗಗಳಲ್ಲಿ ಎನೋ ಬದಲಾವಣೆ ಕಂಡಂತಾಯಿತು .ಅವನೂ ಹಿಡಿತ ಸಡಿಲಿಸಿದ ನಿಧಾನವಾಗಿ ಅವಳನ್ನು ಹತ್ತಿರ ಎಳೆದುಕೊಂಡ, ಅವಳ ಕಡೆ ಪ್ರತಿರೋಧ ಇರದಿರುವುದು ಮನವರಿಕೆಯಾಯಿತು .ಪಕ್ಕದ ಹೊಲದಲ್ಲಿ ರಾಮಣ್ಣ ತನ್ನ ಮಡಿಕೆ ( ನೇಗಿಲು) ಮುರಿದ ಪರಿಣಾಮ ಮನೆಗೆ ಹೋಗಿದ್ದು ನೆನಪಾಯಿತು, ಸುತ್ತಮುತ್ತ ಬರೀ ಕೆಂಗಲು ನೆಲ ,ಹೊಂಗೆ ಮರದಡಿ ಇವರ ಬಿಟ್ಟರೆ ಬೇರೆ ನರಮನುಷ್ಯರಿಲ್ಲ .
ಗಂಡಸಿನ ಬಿಸಿಯುಸಿರು ತಾಗುತ್ತಲೇ ಅವಳ ಕಾಮನೆಗಳ ಕಟ್ಟೆಯೊಡೆದು ಯಾವುದೋ ಸುಖಕೆ ಅವಳ ದೇಹ ಸಜ್ಜಾದಂತಿತ್ತು ,ಅವನ ಪರಿಸ್ಥಿತಿಯೂ ಅದಕ್ಕಿಂತ ಭಿನ್ನವಾಗೇನೂ ಇರಲಿಲ್ಲ ,ಅವನ ಮನದಲ್ಲಿ ಒಂದೇ ಪ್ರಶ್ನೆ ಇವಳೇನಾ ನಿನ್ನೆ ಬಜಾರಿಯಂತೆ ನನ್ನೊಂದಿಗೆ ಜಗಳ ಆಡಿದವಳು ?ಈಗ ಮದನ ಕಾಮ ಕ್ರೀಡೆಗೆ ಸಿದ್ದಳಾಗಿಹಳಲ್ಲ? ಎಂದು ಕೊಳ್ಳುತ್ತಾ, ಛೆ ಇಂತಹ ಸುಂದರ ಶೃಂಗಾರ ಸಮಯದಲ್ಲಿ ಆ ನೆನಪೇಕೆ? ಎಂದು ಅವಳನ್ನು ಇನ್ನೂ ಹತ್ತಿರಕ್ಕೆ ಬರಸೆಳೆದುಕೊಂಡನು .ಹೊಂಗೆ ಮರದ ತಂಪಿನಲೂ ಎರಡೂದೇಹಗಳಲ್ಲಿ ಬೆವರು ಹರಿದಿತ್ತು .ದೂರದಲ್ಲಿ ಬಿಸಿಲಿನಲ್ಲಿ ನೊಗವೊತ್ತು ನಿಂತ ಎತ್ತುಗಳು ಏದುಸಿರು ಬಿಡುತ್ತಿದ್ದವು.....


"ತಾಗಂಬಾರವ್ವ ಮುದ್ದೆ ಸಾರ್ನಾ " ಎಂದು ತಾನು ತಂದಿದ್ದ ಬಿದಿರು ಬುಟ್ಟಿ ಕೆಳಗಿಟ್ಟು ಅದಕ್ಕೆ ಹೊದಿಸಿದ್ದ ಬಿಳಿ ಬಟ್ಟೆ ಬಿಡಿಸಿದರು ಅಗಸರ ಮಾರಪ್ಪ .
ವರ್ಷ ಪೂರ್ತಿ ಕೆಲವರ ಮನೆಯಲ್ಲಿ ಆ ಊರಿನ ಅಗಸರು ಬಟ್ಟೆ ಒಗೆದು ಇಸ್ತ್ರಿ ಮಾಡಿ ಮನೆಗಳಿಗೆ ತಂದು ಕೊಡುತ್ತಿದ್ದರು. ಇದಕ್ಕೆ ಬದಲಾಗಿ  ಅವರು ಹಣ ಪಡೆಯದೇ ಪ್ರತಿದಿನ ಬೆಳಿಗ್ಗೆ ಈ ಎಲ್ಲಾ ಮನೆಗಳಿಂದ ಮುದ್ದೆ ಅನ್ನ .ಸಾರು. ಮಜ್ಜಿಗೆ ,ರೊಟ್ಟಿ ಹೀಗೆ ವಿವಿಧ ಆಹಾರದ ಪದಾರ್ಥಗಳನ್ನು ಒಂದೆ ಬುಟ್ಟಿಯಲ್ಲಿ ಹಾಕಿಸಿಕೊಂಡು ತರುತ್ತಿದ್ದರು. ಸಾರು ಹಾಕಿಸಿಕೊಳ್ಳಲು ಒಂದೇ ಪಾತ್ರೆ ಇರುತ್ತಿದ್ದರಿಂದ ಎಲ್ಲರ ಮನೆಯ ಎಲ್ಲಾ ತರದ ಸಾರನ್ನು ಒಂದೇ ಪಾತ್ರೆಯಲ್ಲಿ ಹಾಕಿಸಿಕೊಳ್ಳುತ್ತಿದ್ದರು ಅದಕ್ಕೆ "ಕೂಡಾಮ್ರ " ಅನ್ನುತ್ತಿದ್ದರು. ಕೂಡು + ಆಮ್ರ(ಸಾಂಬಾರು)  ಸತೀಶನ ಗೆಳೆಯ ಗೋಪಾಲ ಅಗಸರ ಹುಡುಗನಾದ್ದರಿಂದ ಅವನ ಗೆಳೆಯರು ಅವನಿಗೆ ಕೂಡಾಮ್ರ ಎಂದು ಅಡ್ಡೆಸರಿಟ್ಟಿದ್ದರು. "ಹೇ ಕೂಡಾಮ್ರ" ಎಂದ ತಕ್ಷಣ ಗೆಳೆಯರ ಹೊಡೆಯಲು ಅವನು ಓಡಿ ಬರುತ್ತಿದ್ದ.
ಒಂದು ಮುದ್ದೆ ,ಸ್ವಲ್ಪ ಅನ್ನ , ಒಂದು ಸೌಟು  ಸಾರು,ಒಂದು ಲೋಟ ಮಜ್ಜಿಗೆ ಹಾಕಿ "ಮಾರಣ್ಣ ಈ ಬಟ್ಟೆಗಳನ್ನು ಒಗೆದುಕೊಂಡು ಬಾ " ಎಂದು ಬಟ್ಟೆ ಗಂಟು ಕೊಟ್ಟಳು ತಿಪ್ಪಕ್ಕ.
ಬಟ್ಟೆ ಗಂಟಲಿನಲ್ಲಿ ಮೇಲಿದ್ದ ಪಟಾಪಟಿ ನಿಕ್ಕರ್ ಮೇಲಿನ ಕಲೆ ನೋಡಿ ತಿಪ್ಪಕ್ಕ ಇದು ಬಿಳಿಯಪ್ಪನ ನಿಕ್ಕರಾ? ಎಂದ
"ಹೌದು ಅಣ್ಣ ನಿಮಗೇಗೆ ಗೊತ್ತಾಯಿತು?" ಎಂದು ತಿಪ್ಪಕ್ಕ ಆಶ್ಚರ್ಯಕರವಾಗಿ ಕೇಳಿದಳು .
ನಾವು ಅಗಸರಮ್ಮ... ನಮಗೆ ಎಲ್ಲಾ ಗೊತ್ತಾಗುತ್ತೆ .... ಎಂದು ಮುಂದಿನ ಮನೆಗೆ ಹೊರಟರು ಮಾರಣ್ಣ.....

ಮುಂದುವರೆಯುವುದು

ಸಿ ಜಿ ವೆಂಕಟೇಶ್ವರ



No comments: