30 ಡಿಸೆಂಬರ್ 2025

ಅಂಡಮಾನ್ ಸ್ವಾತಂತ್ರ ಪಡೆದ ದಿನ..


 ಇಂದು ನಾವು ಸ್ವಾತಂತ್ರ್ಯಹೊಂದಲು ಶುರು ಮಾಡಿದ ವರ್ಷ! ಹೌದು ಈ ಮಾತು ಕೇಳಿದ ಕೆಲವರು ಅಚ್ಚರಿ ಪಡಬಹುದು.ಆದರೆ ಅದೇ ಸತ್ಯ. 


1943 ಡಿಸೆಂಬರ್ 30ರಂದು ನೇತಾಜಿ ಸುಭಾಷ್ ಚಂದ್ರ ಬೋಸ್ ಅವರು ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳ ಪೋರ್ಟ್ ಬೇರ್‌ನಲ್ಲಿ ಭಾರತೀಯ ತ್ರಿವರ್ಣ ಧ್ವಜವನ್ನು ಹಾರಿಸಿದರು. 'ಆಜಾದ್ ಹಿಂದ್' ಸೇನೆ ಅಡಿಯಲ್ಲಿ ಬ್ರಿಟಿಷ್ ಆಳ್ವಿಕೆಯಿಂದ ವಿಮೋಚನೆಗೊಂಡ ಮೊದಲ ತಾತ್ಕಾಲಿಕ ಭಾರತೀಯ ಪ್ರದೇಶವೆಂದು ಘೋಷಿಸಲಾಯಿತು. ಇದು ಭಾರತದ ಸ್ವಾತಂತ್ರ್ಯಕ್ಕೆ ಒಂದು ಮಹತ್ವದ ಸಾಂಕೇತಿಕ ಕಾರ್ಯವಾಗಿತ್ತು. ನೇತಾಜಿಯವರ ವಿವಾದಿತ ಅಂತ್ಯವಾಗದಿದ್ದರೆ ಅದೇ ವರ್ಷ ನಮಗೆ ಸ್ವತಂತ್ರ ಲಭಿಸುವ ಸಾಧ್ಯತೆ ಇತ್ತು.  ಸ್ವತಂತ್ರ ಭಾರತೀಯ ಆಡಳಿತವನ್ನು ಸ್ಥಾಪಿಸಿದ್ದ ನೇತಾಜಿಯವರ ನೆನಪಿಗಾಗಿ ಒಂದು   ದ್ವೀಪಕ್ಕೆ  'ಸ್ವರಾಜ್ ದ್ವೀಪ'   ಎಂದು ಮರುನಾಮಕರಣ ಮಾಡಲಾಗಿದೆ‌.ಎರಡು ವರ್ಷಗಳ ಹಿಂದೆ ಆ ದ್ವೀಪಕ್ಕೆ ನಾನು ಕಾಲಿಟ್ಟಾಗ   ನೇತಾಜಿಯವರು ಆ ಜಾಗದಲ್ಲಿ ಹೇಗೆಲ್ಲ ಓಡಾಡಿ,ಹೋರಾಡಿದರು ಎಂದು ಮನದಲ್ಲೇ ಊಹಿಸಿಕೊಂಡು‌ ರೋಮಾಂಚಕನಗೊಂಡಿದ್ದೆ..


27 ಡಿಸೆಂಬರ್ 2025

ಬಹುಮುಖ ಪ್ರತಿಭೆಯ ಕಲಾವಿದರು ನಮ್ಮ ಕೋಟೆ ಕುಮಾರ್.

 






ಬಹುಮುಖ ಪ್ರತಿಭೆಯ ಕಲಾವಿದ, ಕೋಟೆ ಕುಮಾರ್.



ಲಲಿತ ಕಲೆಗಳು ಮಾನವನ ವಿಕಾಸಕ್ಕೆ ತಮ್ಮದೇ ಆದ ಪ್ರಭಾವ ಬೀರುತ್ತವೆ. ಕೆಲವರು ತಮ್ಮ ವೃತ್ತಿಯ ಜೊತೆಯಲ್ಲಿ ಪ್ರವೃತ್ತಿಯನ್ನು ಬೆಳೆಸಿಕೊಂಡು ಸಮಾಜಕ್ಕೆ ತಮ್ಮದೇ ಕೊಡುಗೆ ನೀಡುತ್ತಾ ಬಂದಿದ್ದಾರೆ. ಅಂತಹವರ ಸಾಲಿಗೆ ಸೇರುವ ಮೇರು ವ್ಯಕ್ತಿತ್ವವೇ ಕೋಟೆಕುಮಾರ್.

ಕೋಟೆಕುಮಾರ್ ಎಂದು ಪ್ರಖ್ಯಾತವಾದ ಕಲಾವಿದರೂ ಲೇಖಕರೂ  ಸಂಘಟಕರೂ ಆದ ಇವರನ್ನು ಅವರ ವಿದ್ಯಾರ್ಥಿಗಳು ಎಮ್ ಎಸ್ ಕೆ ಎಂದೇ ಪ್ರೀತಿಯಿಂದ ಕರೆಯುತ್ತಾರೆ.
ಎಂ ಜಿ ಎಸ್ ಆರಾಧ್ಯ ಮತ್ತು ಎಂ ಬಿ ಶಿವಮ್ಮ ದಂಪತಿಗಳ ಮಗನಾಗಿ
ತುಮಕೂರು ಜಿಲ್ಲೆಯ ಗುಬ್ಬಿ ತಾಲ್ಲೂಕಿನ ಎಂ ಎನ್ ಕೋಟೆಯಲ್ಲಿ ಡಿಸೆಂಬರ್ ಒಂಭತ್ತರ 1965 ರಲ್ಲಿ ಜನಿಸಿದ ಇವರು  B A ,MA, MFA ಪದವಿ ಪಡೆದು
ಚಿತ್ರಕಲಾ ಶಿಕ್ಷಕರಾಗಿ ವಿವಿಧ ಶಾಲೆಗಳಲ್ಲಿ ಸೇವೆ ಸಲ್ಲಿಸುತ್ತಾ 36 ವರ್ಷಗಳ ಕಾಲ ಬೋಧನಾ ಕಾರ್ಯದಲ್ಲಿ ತೊಡಗಿ ಸಾವಿರಾರು ಮಕ್ಕಳಿಗೆ ಜ್ಞಾನವನ್ನು ಉಣಬಡಿಸಿದ್ದಾರೆ. ವೃತ್ತಿಯ ಜೊತೆಯಲ್ಲಿ ಪ್ರವೃತ್ತಿಯನ್ನು ಬೆಳೆಸಿಕೊಂಡ ಇವರು ಸ್ಥಳೀಯ ಮತ್ತು ರಾಜ್ಯ ಮಟ್ಟದ ಪತ್ರಿಕೆಗಳಲ್ಲಿ ಲೇಖನ ಮತ್ತು ವ್ಯಂಗ್ಯಚಿತ್ರ ಬರೆದು ಓದುಗರ ಮತ್ತು ಕಲಾರಸಿಕರ ಮೆಚ್ಚುಗೆ ಪಡೆದಿದ್ದಾರೆ. ಇವರು ಹವ್ಯಾಸಿ ಛಾಯಾಚಿತ್ರಕಾರರಾಗಿ ನೂರಾರು ವನ್ಯ ಜೀವಿ ಚಿತ್ರ ಮತ್ತು ಇತರೆ ಚಿತ್ರಗಳನ್ನು ತೆಗೆದು ಹಲವಾರು ಪತ್ರಿಕೆಗಳಿಗೆ ಕಳಿಸಿದ್ದಾರೆ.
ಇಂದಿನ ಆಧುನಿಕ ಕಾಲದ ಪ್ರಭಾವಿ ಸಮಾಜಿಕ ಮಾಧ್ಯಮ ವಾದ ಯೂಟ್ಯೂಬ್ ಬಳಸಿಕೊಂಡು ಪ್ರವಾಸಿ ತಾಣಗಳು, ವಿವಿಧ ಸಮಾರಂಭಗಳು,,ವಿಶೇಷವಾದ ಸ್ಥಳಗಳ ನೂರಾರು ವೀಡಿಯೋ ಮಾಡಿ ಕಲ್ಚರಲ್ ವ್ಯಾಲಿ ಎಂಬ ಯೂಟ್ಯೂಬ್ ಚಾನೆಲ್ ಆರಂಭಿಸಿ ಲಕ್ಷಾಂತರ ಜನರ ಮೆಚ್ಚುಗೆಗೆ ಪಾತ್ರವಾಗಿದ್ದಾರೆ.


ಮಾನವನ ಬದುಕು ಬೌದ್ಧಿಕ ಮತ್ತು ಅಂತರಂಗಿಕ ಸಂವೇದನೆಗಳ ಸಂಗಮವಾಗಿದ್ದು, ಪ್ರಕೃತಿಯಲ್ಲಿನ ಅನುಸಂದಾನದಲ್ಲಿ ಆಸೆ ಎಂಬ ಮುನ್ನೋಟದಲ್ಲಿ ಆನಂದವೆಂಬ ಹಂತಕ್ಕೆ ಸಮಷ್ಟಿಗೊಳಿಸುವ ಮನಸ್ಸಿನ ಕ್ರಿಯೆಯಾಗಿದೆ. ಭೌತಿಕವಾಗಿ ಅನುಭವಿಸಿದ ಅತ್ಯಂತ ಆನಂದ ಮತ್ತು ದುಃಖ ಕಷ್ಟ ಕ್ಷಣಗಳ ದಾಖಲೆ ಮನಸ್ಸಿನಲ್ಲಿ ನೆಲೆನಿಂತಿರುತ್ತದೆ. ಇಂತಹ ಘಟನೆಗಳು ಪದೇ ಪದೆ ನೆನಪಿನಲ್ಲಿ ಬಂದು ಮತ್ತೆ ಮತ್ತೆ ಅನುಭವಿಸುವ ಆಸೆ ಮಾನವನದ್ದಾಗಿದೆ. ಕಾಲಪಕ್ವತೆಯಲ್ಲಿ ಅಸ್ತಿತ್ವದ ಹುಡುಕಾಟ ಬದುಕಿನ ಗೊಂದಲದಲ್ಲಿ ಅಸ್ಪಷ್ಟ ಅನಿಸಿಕೆಗಳಿಗೊಂದು ಮೂರ್ತರೂಪ ಕೊಡುವ ಪ್ರಯತ್ನ, ಜೀವದ ತುಡಿತ ಪ್ರತಿಯೊಂದೂ ಉಸಿರಿನಲ್ಲೂ ಹುಡುಕಾಟ, ಆದಿ ಅಂತಿಮವಿಲ್ಲದ ಅಗೋಚರ ಅನಂತದತ್ತ ಈ ಮಹಾಯಾನದಲ್ಲಿ ಕಂಡ ಬೆಳಕು, ಶಬ್ದ, ಸ್ಪರ್ಶ, ಗಂಧ, ರುಚಿಗಳಲ್ಲಿ ಪಂಚಭೂತಗಳನ್ನೂ ಅನುಭವಿಸಿ ಮತ್ತೆ ಪಂಚಭೂತಗಳಲ್ಲೇ ಅಂತಿಮ ಸೇರುವ ಸತ್ಯದ ಹುಡುಕಾಟವೇ ಕಲೆ ಎನ್ನಬಹುದು.ಕಲಾ ಕ್ಷೇತ್ರ ಎಲ್ಲರನ್ನೂ ಕೈಬೀಸಿ ಕರೆಯುತ್ತದೆ. ಆದರೆ ಕೆಲವರನ್ನು ಮಾತ್ರ ಆಯ್ಕೆ ಮಾಡಿಕೊಳ್ಳುತ್ತದೆ.ಅಂತಹ ವಿರಳ ಆಯ್ಕೆಯಲ್ಲಿ ಕೋಟೆ ಕುಮಾರ್ ಕೂಡಾ ಒಬ್ಬರು.




ಕೋಟೆ ಕುಮಾರ್ ರವರ ಬಾಲ್ಯವೇ ಅವರನ್ನು ಮುಂದೆ ಓರ್ವ ಸಮಾಜಮುಖಿ ವ್ಯಕ್ತಿಯನ್ನಾಗಿ ರೂಪಿಸಿತು.
ರಸ್ತೆ ಮತ್ತು ವಿದ್ಯುತ್‌ ಇಲ್ಲದ ಊರಿನಲ್ಲಿ   ಅಲ್ಲಿನ ಜನ ಪ್ರಾಕೃತಿಕವಾಗಿ ಬದುಕುತಿದ್ದ ಕಾಲ. ಸೂರ್ಯ ಚಂದ್ರರ ಬೆಳಕಿನಲ್ಲಿ ಕಾಲ ಕಳೆಯುತ್ತಿದ್ದವರು, ದನ, ಕರು, ಕುರಿ ಮೇಕೆಗಳೇ ಜೀವನಾಧಾರ. ವ್ಯವಸಾಯ ಅಲ್ಲಿನ ಮುಖ್ಯ ಕಸುಬು. ಸುತ್ತಲೂ ಗುಡ್ಡ, ಬೆಟ್ಟ, ತೊರೆ, ಕೆರೆಗಳ ಸಾಲು ಸಾಲು, ಊರ ಮಧ್ಯದ ಅರಳೀಮರ, ಈರೇಹಕ್ಕಿಗಳ ತವರು, ಬೆಳಗುರಾತ್ರಿ ಚಿಲಿಪಿಲಿ ನಾದ. ಅಲ್ಲಿನ ಜನರಲ್ಲಿ ಹಣದ ವ್ಯವಹಾರಕ್ಕಿಂತ ಮಧುರ ಮೈತ್ರಿಯ ಕಾಲ, ಯಾವ ನಾಗರೀಕತೆಯ ಸೊಂಕು ಇಲ್ಲದ ಅಪ್ಪಟ ಗ್ರಾಮೀಣ ಬದುಕು. ಊರ ಮುಂದಿನ ಮಾರಿ ಗುಡಿ, ಅರಳೀಕಟ್ಟೆ, ಊರ ಆಚೆಯ ಮಲ್ಲಪ್ಪ ಊರ ದೇವರುಗಳು. ವರ್ಷಕ್ಕೊಮ್ಮೆ ನಡೆವ ಊರ ಹಬ್ಬಕ್ಕೆ ಸೇರುವ ಬಂದುಬಳಗ: ರಾತ್ರಿ ಬೆಳಗು ಅರೆ ತಮಟೆಗಳ ನಾದ; ಕುರಿ, ಕೋಳಿ, ಕೋಣಗಳ ಬಲಿ; ರಾತ್ರಿ ಪೂರಾ ದೊಡ್ಡಾಟ ಚಿಕ್ಕಾಟ ಇವೆಲ್ಲಾ ಆಗೊಮ್ಮೆ ಈಗೊಮ್ಮೆ ಕಾಡುವ ನೆನಪುಗಳು, ಬೇಸಿಗೆ ಬಂತೆಂದರೆ ಗೊಂಬೆರಾಮರ ಚಕ್ಕಳದ ಗೊಂಬೆಯಾಟ, ದೊಂಬರಾಟ, ಕುಕ್ಕೆಮಾರಿ, ಪ್ಲೇಗಮ್ಮ, ಕೋಲೆಬಸವ, ಬುಡುಬುಡಿಕೆ ಇವರೆಲ್ಲರೂ ಹಳ್ಳಿ ಮಕ್ಕಳಿಗೆ ಸಾಂಸ್ಕೃತಿಕ ನೆಂಟರು. ಗೋಲಿ-ಬಳಪ ಆಡುವ ಹುಡುಗರು ಹಳ್ಳಿಗೆ ಹೊಸಬರು ಬಂದರೆ ಮಿಕಿಮಿಕಿ ನೋಡುವ, ಸೈಕಲ್ ಮೋಟಾರ್ ಗಾಡಿ ಬಂದರೆ ಓ.ಎಂದು ಹಿಂದೆ ಓಡುತ್ತಿದ್ದ  ಬಗೆ ವಾರಕ್ಕೊಮ್ಮೆ ಬರುತ್ತಿದ್ದ ಪಾಪಂಪಾಪ್‌ನ ಸಾಬರಿಗೆ ಹೊಂಗೆಬೀಜ, ಬೇವಿನಬೀಜ ಕೊಟ್ಟು ಜಿನುಗು ಬೆಲ್ಲ ತಿನ್ನುವ  ವಿಶೇಷ ತಿಂಡಿ.

ಅನ್ನ ಬಟ್ಟೆಗೆ ಬಲು ಕಷ್ಟ ವರ್ಷಕ್ಕೆ ಎರಡು ಕಾಕಿ ಚಡ್ಡಿ, ನೀಲಿ ಅಂಗಿ, ಹರಿದರೆ ಹಳೆ ಬಟ್ಟೆಯ ತೇಪೆ,ಪೆನ್ನು ಪೇಪ‌ರ್ ಅಪರೂಪ ಅದು ಸಿರಿವಂತರ ಸೊತ್ತು, ಇಂಥಹ ದಿನಗಳಲ್ಲಿ ಇದ್ದ ಬಳಪವೊಂದೇ ಬರೆಯುವ ಮಂತ್ರದಂಡ ವಾಗಿತ್ತು. ಮಾರಿಗುಡಿಯ ಬಂಡೆ, ಅದರ ಮೇಲೆ ಗಣೇಶ, ಲಿಂಗ, ಆನೆ, ಹೂವು ಚಿತ್ರಗಳ ಸರಮಾಲೆ. ಆಗ ಇವರಲ್ಲಿ ಚಿತ್ರಬಿಡಿಸುವ ಆಟ ಪದೇ ಪದೇ ನಡೆಯುತ್ತಿತ್ತು. ಇವರ  ಆಸೆ ಅರಿತ ಅಮ್ಮ ಕೂಲಿ ಮಾಡಿದ ನಾಲ್ಕು ರೂಪಾಯಿಯಲ್ಲಿ ಬಣ್ಣದ ಡಬ್ಬ, ಬರೆಯಲು ಪೆನ್ಸಿಲ್, ಪುಸ್ತಕ ತಂದುಕೊಟ್ಟಿದ್ದು ಮುಂದೆ ಇವರು ಕಲಾವಿದರಾಗಲು ಪ್ರೇರಣೆ ನೀಡಿದವು.
ಬಾಲ್ಯ ಕಳೆದು ಯೌವನದ ಕಾಲ ರಮ್ಯ ಜಗತ್ತಿನ ನಿಗೂಡ ಕತ್ತಲಲ್ಲಿ ಕಳೆದು ಹೋಗುವ ಕಾಲದಲ್ಲಿ ತುದಿ ಮೊದಲಿಲ್ಲದ ಕನಸಿನ ಪಯಣ ಅರಂಭವಾಯಿತು. ಬದುಕೆಂಬ ಮಾಯೆ ಎಲ್ಲವನ್ನೂ ನುಚ್ಚುನೂರು ಮಾಡುತ್ತಿದ್ದ ಬಡತನ! ಬದುಕಿಗಾಗಿ ಹೋರಾಟ ಒಂದೆಡೆಯಾದರೆ  ಮತ್ತೊಂದೆಡೆ ಕಲ್ಪನಾಲೋಕದ ಕುತೂಹಲ. ಎಸ್‌ಎಸ್‌ಎಲ್‌ಸಿ ಆದ ಮೇಲೆ ಮನೆಬಿಟ್ಟು ದೇಶ ಸುತ್ತಿದ್ದು! ಹೊಟ್ಟೆಪಾಡಿಗಾಗಿ ಕೂಲಿಮಾಡಿ ಮಣ್ಣುಕಲ್ಲು ಹೊತ್ತು ಅಲೆದದ್ದು, ಬದುಕಿನ ಒಂದೊಂದು ದಿನವೂ ಒಂದೊಂದು ಪಾಠ, ಲೋಕ ಸತ್ಯದ ಅರಿವು. ಮತ್ತೆ ತಂದೆಯ ಒಲವು ಮನೆ ಸೇರುವಂತೆ ಮಾಡಿತು. ಮುಂದೆ ಓದಲು ಬಲವಂತ ಮಾಡಿದ ಪರಿಣಾಮವಾಗಿ  ಚಿತ್ರ ಕಲಿತು ಶಿಕ್ಷಕನಾಗುವ ಆಸೆ ಕೈಗೂಡಿತು. ಬದುಕನ್ನು ಬಣ್ಣರೇಖೆಗಳಲ್ಲಿ ಕಟ್ಟಿಕೊಳ್ಳುವ ವಿಧಿ ಲಿಖಿತದಂತೆ  ಕೊನೆಗೂ ಬದುಕಿನಲ್ಲಿ ಹೋರಾಡಿ ನೆಲೆಕಂಡುಕೊಂಡರು.





ಗ್ರಾಮೀಣರಿಗೆ ಹೊಟ್ಟೆ ಬಟ್ಟೆಯಂತೆ ದೇವರು, ದೆವ್ವ, ಮಾಟಮಂತ್ರದೊಂದಿಗೆ ಬದುಕು ಹಾಸುಹೊಕ್ಕಾಗಿರುತ್ತದೆ.  ಸುಖವಿದ್ದರೆ ದೇವರು, ಕಷ್ಟಬಂದರೆ ಮಾಟ ಮಂತ್ರ ಅತಿಯಾದರೆ ದೆವ್ವ ಗಾಳಿ. ಓದು ಬರಹ, ವೈಚಾರಿಕತೆ ಇಲ್ಲದ ಮೂಢನಂಬಿಕೆಯ ಆಚರಣೆ. ಅದರಲ್ಲೂ ಒಂದೊಂದು ಸಾಂಸ್ಕೃತಿಕ ಆಚರಣೆ ಮಕ್ಕಳಾದ ನಮಗೆ ಅನುಕರಣೆಯ ಆರಂಭ. ರಾತ್ರಿ ಕುಣಿದ ದೈವ, ದೆವ್ವ ಬೆಳಗಾಗ ನಮ್ಮ ಮೇಲೆ ಬಂದು ಕುಣಿದ ಅನುಕರಣೆ ಇವುಗಳು ಕೋಟೆ ಕುಮಾರ್ ಜೀವನದಲ್ಲಿ ವೈಜ್ಞಾನಿಕ ಚಿಂತನೆ ಹಾಗೂ ಸಾಂಸ್ಕೃತಿಕ ವೈವಿಧ್ಯತೆಯ ಬಗ್ಗೆ ಆಸಕ್ತಿ ಬೆಳೆಸಿಕೊಂಡು ತಮ್ಮ ಕಲೆ ಮತ್ತು ಲೇಖನಗಳಲ್ಲಿ ಅಭಿವಕ್ತಿಗೊಳಿಸಲು ಪ್ರೇರಣೆಯಾದವು.1981ರಲ್ಲಿ ತುಮಕೂರಿನ ರವೀಂದ್ರ ಕಲಾ ನಿಕೇತನದಲ್ಲಿ ಶ್ರೀ ಬಾಬೂರಾವ್ ಹಾಗೂ ಕಿಶೋರ್‌ಕುಮಾರ್‌ರವರ ಮಾರ್ಗದರ್ಶನದಲ್ಲಿ ಆರಂಭವಾದ ಇವರ   ಕಲಾ ಶಿಕ್ಷಣ ಬಣ್ಣ ರೇಖೆಗಳ ಆಕರ್ಷಣೆ, ಬಂದು ಹೋಗುವ ಹಿರಿಯ ಕಲಾವಿದರ ಹಾಗೂ ಕಲಾಕೃತಿಗಳ ಆಕರ್ಷಣೆ ಮತ್ತು ಎಸ್.ಎಂ.ಪಂಡಿತ್, ರವಿವರ್ಮರ ಕಲಾಕೃತಿಗಳು ಸಹಜವಾಗಿ ಸೆಳೆದವು. ಮರುಕೃತಿ ಮಾಡಿ ಆನಂದಿಸಿ  ಅರಳಗುಪ್ಪೆ, ಹಂಪೆ, ಬಾದಾಮಿ, ಐಹೊಳೆ, ಪಟ್ಟದಕಲ್ಲು ಇಲ್ಲಿಯ ಶಿಲ್ಪ ವೈಭವ, ಉತ್ತರ ಕರ್ನಾಟಕದ ಜನಜೀವನ ಶೈಲಿ, ಶಿಲ್ಪಗಳ ರೇಖಾಚಿತ್ರ ರಚಿಸುವುದು, ನಿಸರ್ಗಚಿತ್ರ ರಚನೆ ಇವು ಮನಸ್ಸಿನ ಮೇಲೆ ಗಾಢ ಪ್ರಭಾವಬೀರಿದ ಸನ್ನಿವೇಶಗಳು, ಕಲಾಸಂಮೃದ್ಧಿಯ ಆಳ ಅಧ್ಯಯನ ಮಾಡಬೇಕೆಂಬ ಬಯಕೆಯ ಪರಿಣಾಮವಾಗಿ ಆರ್.ಎಂ.ಹಡಪದ್, ಜೆ.ಎಸ್.ಎಂ.ಮಣಿ, ಉಮೇಶ್ ಮುಂತಾದವರ ಮಾರ್ಗದರ್ಶನದಲ್ಲಿ ಶಿಕ್ಷಣ ಮುಂದುವರಿಸಿ ಸಂಯೋಜನೆ, ಭಾವಚಿತ್ರ, ವ್ಯಕ್ತಿಚಿತ್ರ, ಗ್ರಾಫಿಕಲ್ ಕಲೆ ಹೀಗೆ ವಿವಿಧ ಆಯಾಮದ ಕಲಾ ಪ್ರಾಕಾರಗಳನ್ನು ಅರಿತುಕೊಂಡ ಇವರಿಗೆ  ಸ್ವತಂತ್ರತೆಯ ಅರಿವಾದದ್ದು ಆರ್.ಎಂ.ಹಡಪದ್ ರವರಿಂದ. ಅಲ್ಲದೆ ಬೆಂಗಳೂರಿನ ಕಲಾಮಂದಿರ, ಚಿತ್ರಕಲಾ ಪರಿಷತ್, ವೆಂಕಟಪ್ಪ ಆರ್ಟ್ ಗ್ಯಾಲರಿಗಳಲ್ಲಿ ನಡೆಯುತ್ತಿದ್ದ ಕಲಾ ಪ್ರದರ್ಶನಗಳು, ರೋರಿಚ್, ರುಮಾಲೆ ಚನ್ನಬಸವಯ್ಯ, ಸುಬ್ರಹ್ಮಣ್ಯರಾಜು, ನಂಜುಂಡರಾವ್ ಮುಂತಾದವರ ಸಂಪರ್ಕ, ಅಲ್ಲದೆ ಕೆನ್ ಕಲಾ ಶಾಲೆಗೆ ಬಂದು ಹೋಗುತ್ತಿದ್ದ ಅನೇಕ ಜನ ಹಿರಿಯ ಕಲಾವಿದರು, ಕವಿಗಳು, ಚಿಂತಕರ ಮಾತುಗಳ ಸ್ಪೂರ್ತಿ ಪಿ.ಲಂಕೇಶ್, ಬರಗೂರು ರಾಮಚಂದ್ರಪ್ಪ, ನಾಗತಿಹಳ್ಳಿ ಚಂದ್ರಶೇಖರ್, ಎಂ.ಎಹಚ್.ಕೃಷ್ಣಯ್ಯ, ಜಾನ್ ದೇವರಾಜ್,  ಸಿ.ಚಂದ್ರಶೇಖರ್, ಎಂ.ಟಿ.ವಿ.ಆಚಾರ್ಯ, ಕೃಷ್ಣಶೆಟ್ಟಿ ಮುಂತಾದ ಹಿರಿಯರ ಪ್ರಭಾವ ಇವರ ಕಲಾಕೃತಿಗಳಲ್ಲಿ ಕಾಣಬಹುದು.






ಜಲವರ್ಣ, ತೈಲವರ್ಣ, ಅಕ್ರಲಿಕ್ ಮಾದ್ಯಮದಲ್ಲಿ ಸಮಕಾಲೀನ ತತ್ವಗಳ ಆಧಾರದಲ್ಲಿ ಪ್ರಸ್ತುತ ವಿದ್ಯಮಾನಗಳ ವಾಸ್ತವಿಕ ನೆಲೆಗಟ್ಟಿನ ಬದುಕಿನ ಅಂತರಾಳದ ಪ್ರೀತಿ, ಶಾಂತಿ, ಕೌರ್ಯ, ದ್ವಂದ್ವಗಳನ್ನು ಅಭಿವ್ಯಕ್ತಗೊಳಿಸುವ ಕೋಟೆ ಕುಮಾರ್ ರವರ ಕಲಾಕೃತಿಗಳಲ್ಲಿ ಬದುಕನ್ನು ಅರ್ಥೈಸಲು ಪ್ರಯತ್ನಿಸಿದ್ದಾರೆ. ಪ್ರಖರ ವರ್ಣಗಳಲ್ಲಿ ಸಂಯೋಜಿಸಿರುವ ಕಲಾಕೃತಿಗಳಲ್ಲಿ ಭೌತಿಕತೆಗಿಂತ ಭಾವನಾತ್ಮಕತೆಯೇ ಹೆಚ್ಚು ಪ್ರಾಬಲ್ಯ ಸಾದಿಸಿದೆ.ಇದರ ಜೊತೆಗೆ ವ್ಯಂಗ್ಯಚಿತ್ರಕಾರನಾಗಿ, ಸಮಕಾಲೀನ ಸಾಮಾಜಿಕ, ರಾಜಾಕೀಯ ವಿದ್ಯಮಾನಗಳನ್ನು ಕುರಿತು, ಹೊಣೆಗೇಡಿತನ, ಕೋಮುವಾದ  ಭ್ರಷ್ಟಾಚಾರ, ಸ್ವಾರ್ಥಪರ ವ್ಯವಸ್ಥೆಗಳನ್ನು ಹಾಗೂ ಜನಪ್ರತಿನಿಧಿಗಳನ್ನು ತೀವ್ರವಾಗಿ ಇವರ  ವ್ಯಂಗ್ಯಚಿತ್ರಗಳು ಲೇವಡಿ ಮಾಡುತ್ತವೆ.  


ಕೋಟೆ ಕುಮಾರ್ ರವರ ಕಲಾ ಸೇವೆಯನ್ನು ಗುರ್ತಿಸಿ ನೂರಾರು ಪ್ರಶಸ್ತಿಗಳು ಇವರನ್ನು ಹರಸಿ ಬಂದಿವೆ.ಹಲವಾರು ಸಂಘ ಸಂಸ್ಥೆಗಳು ಇವರನ್ನು ಗೌರವಿಸಿ ಸನ್ಮಾನಿಸಿವೆ.
ಪ್ರಜಾವಾಣಿ ದಿನಪತ್ರಿಕೆಯ ರಾಜ್ಯಮಟ್ಟದ ವ್ಯಂಗ್ಯಚಿತ್ರ ಸ್ಪರ್ಧೆಯಲ್ಲಿ ಡಾ. ರಾಜ್ ಕುಮಾರ್ ಅಪಹರಣದ ಹಿನ್ನಲೆಯಲ್ಲಿ ರಚಿಸಿದ ವ್ಯಂಗ್ಯಚಿತ್ರಕ್ಕೆ ಇವರಿಗೆ  ಪ್ರಶಸ್ತಿ ಲಭಿಸಿದೆ. 'ಕ್ಯಾರಿಕೇಚರ್' ವಿಭಾಗದಲ್ಲೂ ವ್ಯಕ್ತಿಯ ಅಂತರಂಗ ಮತ್ತು ಬಹಿರಂಗ ವ್ಯಕ್ತಿತ್ವದ ಸೂಕ್ಷ್ಮವನ್ನು ಅಭಿವ್ಯಕ್ತಗೊಳಿಸುವಲ್ಲಿ ಪ್ರಯತ್ನಿಸಿದ್ದು 'ರಾಬ್ಬಿದೇವಿ' ಎಂಬ ಕ್ಯಾರಿಕೇಚರ್‌ಗೆ ದೆಹಲಿಯ ಹಿಂದೂಸ್ಥಾನ್ ಟೈಮ್‌ನ ರಾಷ್ಟ್ರಮಟ್ಟದ ಸ್ಪರ್ಧೆಯಲ್ಲಿ ಪ್ರಶಸ್ತಿ ನೀಡಿದ್ದಾರೆ. ಅಲ್ಲದೆ ಕ್ಯಾಮ್ಲನ್ ಆರ್ಟ್ ಫೌಂಡೇಶನ್ ನಡೆಸಿದ ಅಖಿಲ ಭಾರತ ಕಲಾ ಸ್ಪರ್ಧೆಯಲ್ಲಿ "ಬುದ್ಧ ಮತ್ತು ಲ್ಯಾಡನ್" ಎಂಬ ತೈಲವರ್ಣದ ಕೃತಿಗೆ ಪ್ರಶಸ್ತಿ ಲಭಿಸಿದೆ. 'ಸ್ಥಿರ ಚಿತ್ರ' 'ಪ್ರಕೃತಿ ಚಿತ್ರ'ಕ್ಕೆ ಮೈಸೂರು ಸದರಾ ಪ್ರಶಸ್ತಿ ಅಲ್ಲದೆ 'ಜಾನಪದ ಮಹಿಳೆ' ಎಂಬ ಕಲಾಕೃತಿಗೆ ನಾಗಪುರದ ರಾಷ್ಟ್ರೀಯ ಕಲಾಸ್ಪರ್ಧೆಯಲ್ಲಿ ಪ್ರಶಸ್ತಿ, ಅಲ್ಲದೆ 'ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ' ನೀಡಿ ಗೌರವಿಸಿದ್ದಾರೆ.ಇದುವರೆಗೂ ದೆಹಲಿ, ಹೈದ್ರಾಬಾದ್, ಬೆಂಗಳೂರು, ನಾಗಪುರ, ಗೋವಾ, ಪಾಂಡಿಚೆರಿ, ಚನೈ ಮುಂತಾದ ಕಡೆ ಏಕವ್ಯಕ್ತಿ ಹಾಗೂ ಸಮೂಹ ಕಲಾ ಪ್ರದರ್ಶನ ನಡೆಸಿದ್ದಾರೆ. ಈ ಎಲ್ಲಾ ಸೃಜನಶೀಲ ಆಸಕ್ತಿಗಳ ನಡುವೆ ಹಿರಿಯ ಕಲಾವಿದರುಗಳು, ಸಾಹಿತಿಗಳ ಸಂಪರ್ಕ, ಅಲ್ಲದೆ ತುಮಕೂರಿನ ಕಲಾವಿದ ಗೆಳೆಯರ ಬಳಗದೊಂದಿಗೆ "ಕಲರ್ಸ್ ಗ್ರೂಪ್" ಎಂಬ ಸಾಂಸ್ಕೃತಿಕ ಸಂಘಟನೆ ಕಟ್ಟಿ ರಾಜ್ಯ ಮಟ್ಟದ ಮಕ್ಕಳ ಚಿತ್ರಕಲಾ ಸ್ಪರ್ಧೆ, ಯುವ ಕಲಾವಿದರ ಕಲಾ ಶಿಬಿರ, ಮನೆಗೊಂದು ಕಲಾಕೃತಿ, ನಿಮ್ಮೊಂದಿಗೆ ನಾವು ಕಾರ್ಯಕ್ರಮದ ಜೊತೆಗೆ ಕನ್ನಡ ಸಾಹಿತ್ಯ ಪರಿಷತ್, ವಿಜ್ಞಾನಕೇಂದ್ರ, ಕರ್ನಾಟಕ ಲಲಿತ ಕಲಾ

ಅಕಾಡೆಮಿ, ಚಿತ್ರಕಲಾ ಶಿಕ್ಷಕರ ಸಂಘ ಅನೇಕ ಸಂಘ ಸಂಸ್ಥೆಗಳಲ್ಲಿ ಸಕ್ರಿಯ ಸದಸ್ಯನಾಗಿ ಸೇವೆ ಸಲ್ಲಿಸಿರುವ ಇವರು   ಹೊಸ ಹೊಸ ಶೈಲಿಯ ಸರಣಿ ಚಿತ್ರಗಳ ರಚನೆಯಲ್ಲಿ ಒಂದು ಗಟ್ಟಿತನವನ್ನು ಕಂಡುಕೊಳ್ಳಬೇಕೆಂಬ ಬಯಕೆಯನ್ನು ವ್ಯಕ್ತಪಡಿಸುತ್ತಾರೆ.ಕೋಟೆ ಯವರ ಬಹುಪಾಲು ಕಲಾಕೃತಿಗಳು ಪ್ರಕೃತಿ ಮತ್ತು ಗ್ರಾಮೀಣ ಪರಿಸರದ ಬದುಕಿನ ಸಂವೇದನೆಯಲ್ಲಿ ಸೃಷ್ಟಿಗೊಂಡಿವೆ.  ಗ್ರಹಿಕೆಯಮೂರ್ತದಿಂದ ರೂಪಾಂತರ ಪಡೆದು ತನ್ನ ಸೃಜನಶೀಲತೆಯಲ್ಲಿ ಮಣ್ಣಿಗೆ ಹತ್ತಿರವಾಗಿ ಅದರ ಎಲ್ಲಾ ಧ್ವನಿ, ಸ್ಪರ್ಶ ಗಂಧಗಳೊಡನೆ ಬದುಕನ್ನು ಅರ್ಥೈಸಲು ಪ್ರಯತ್ನಿಸಿದ್ದಾರೆ. ನಮ್ಮ ಭವ್ಯ ಪರಂಪರೆ ಮತ್ತು ಸನಾತನ ಸಾಂಸ್ಕೃತಿಕ ಲೋಕವು ಪ್ರಕೃತಿದತ್ತವಾಗಿ ಬಂದಿದ್ದು ಈ ಪ್ರಕೃತಿಯು ತನ್ನದೇ ಆಶಯಗಳನ್ನು, ವೈಶಿಷ್ಟತೆಯನ್ನು, ಬದುಕಿನ ವಿಸ್ಮಯಗಳನ್ನು ಆಳವಾಗಿಹುದುಗಿಸಿಕೊಂಡಿದೆ. ಮಾನವ ಏನೇ ಕಲ್ಪನೆ ಮಾಡಿಕೊಂಡರೂ, ಅದು ಪ್ರಕೃತಿಕ ಒಂದು ಭಾಗವಾಗಿರುತ್ತದೆ. ಇದನ್ನು ಬಿಂಬಿಸುವ  ಈ ಪ್ರಯತ್ನ ಮಾಡಿದ ಇವರು ಜನಪದ ಕುರಿತಾದ ಚಿತ್ರ ಬಿಡಿಸಿದರು.

ಜನಪದ ಚಿತ್ರಗಳು ಪ್ರಾಚೀನ ಪರಂಪರೆಯನ್ನು ಹೊಂದಿದ್ದು ಇಂದಿಗೂ ತನ್ನಲ್ಲಿರುವ ಅನ್ವೇಷಣೆ, ಆಲೋಚನೆ, ಆನಂದ, ಸೌಂದರ್ಯ ಪ್ರಜ್ಞೆಗಳಿಂದ ಗತಕಾಲದ ವೈಭವವನ್ನು ವರ್ತಮಾನದಲ್ಲಿ ನಿಂತು ನೋಡಲು ಒಂದು ವೇದಿಕೆಯನ್ನು ನೀಡುತ್ತದೆ ಎಂಬುದನ್ನು ತಮ್ಮ ಕಲಾಕೃತಿಗಳಲ್ಲಿ ಬಿಂಬಿಸಿದ್ದಾರೆ.ಕಲಾಕೃತಿಗಳು ಅಲಂಕಾರಿಕ ಎಲ್ಲೆಯನ್ನು ಮೀರಿ ಸಾಮಾಜಿಕ ವಿಡಂಬನೆ, ಸಾಮಾಜಿಕ ಪರಿವರ್ತನೆಯ ಮಾಧ್ಯಮಗಳಾಗಿ ಹಾಗೂ ಜ್ಞಾನ ಚಿಂತನೆಗಳಾಗಿ ಬೆಳೆಯಬೇಕೆಂದು ಕೋಟೆಯವರ ಕಲಾಕೃತಿಗಳ  ಆಶಯ.
ಇವರ ಬಹುತೇಕ  ಕಲಾಕೃತಿಗಳು ವಿಶೇಷವಾಗಿ ಜನಪದ ಶೈಲಿಯ ನವ್ಯ ಕಲಾಕೃತಿಗಳಾಗಿದ್ದು ರೇಖಾ ಪ್ರಧಾನವಾದ ಚಿತ್ರ ಶೈಲಿಯನ್ನು ತನ್ನ ಅನುಕೂಲಕ್ಕೆತಕ್ಕಂತೆ ಬಣ್ಣಗಳ ಸಂಯೋಜನೆಯಿಂದ ಹೊಸ, ಹೊಸ ಸಾಧ್ಯತೆಗಳ ಹುಡುಕಾಟ ಮಾಡಿದ್ದಾರೆ. ಪ್ರಕೃತಿ ಮತ್ತು ಮಾನವ ಸಂಬಂಧಗಳನ್ನು ನೇರವಾಗಿ ನೀಡುವ ಪ್ರಯತ್ನ ಸರಳ ಅಲಂಕಾರವೂ ಭವ್ಯತೆಯನ್ನು ಸೃಷ್ಟಿಸುವಂತೆ ಸಂಯೋಜಿಸಲಾಗಿದೆ. ಹೆಚ್ಚು ಸಮತಲಾಕೃತಿಗಳಾಗಿದ್ದು, ಎರಡು ಆಯಾಮಗಳಲ್ಲಿ ಬಣ್ಣಗಳ ಬಳಕೆ ಮಾಡಲಾಗಿದೆ.


ಇರುವ ಖಾಲಿಜಾಗದಲ್ಲಿ ವಸ್ತು ವಿಷಯಕ್ಕನುಗುಣವಾಗಿ ಹೇಳಬೇಕಿರುವ ಮುಖ್ಯಾಂಶಗಳನ್ನು ಮೊದಲುಮಾಡಿ ಪೂರಕ ವಸ್ತು ವಿಷಯಗಳನ್ನು ಹಿನ್ನಲೆಯಾಗಿ ಬಳಸಿ ಸಾಂಕೇತಿಕ ಸನ್ನಿವೇಶಗಳನ್ನು ಸೃಷ್ಟಿಮಾಡಿ   ಮಾನವ ಸಂಬಂಧಗಳು ಆಶಯಗಳನ್ನು ಸಾಂಕೇತಿಕ ಸ್ವರೂಪವನ್ನು ಜನಪದ ಶೈಲಿಗೆ ಹೊಂದುವ ರೇಖಾಲಾಲಿತ್ಯವನ್ನು ಸಮನ್ವಯಗೊಳಿಸುವ ಇವರ ಶೈಲಿ ನನಗೆ ವೈಯುಕ್ತಿಕವಾಗಿ ಬಹಳ ಇಷ್ಟ ಆಗುತ್ತದೆ.

ಕ್ಯಾನ್ವಸ್ ಮೇಲೆ ರೇಖಾ ಸಂಯೋಜನೆ ಆದ ನಂತರ ಆಕ್ರಲಿಕ್ ತೆಳುವರ್ಣಗಳ ಲೇಪಿಸಿ  ಬೇಕಾದ ಬಿಳಿಜಾಗವನ್ನು ಹಾಗೆಯೇ ಖಾಲಿ ಕ್ಯಾನ್‌ವಸ್ ಉಳಿಸಿಕೊಂಡು ನಂತರ ಎರಡು ಆಯಾಮದ ನೆರಳು ಬೆಳಕಿನ ಬಣ್ಣಗಳೊಂದಿಗೆ ಮುಖ್ಯ ಆಕೃತಿಗಳನ್ನು ಪೂರ್ಣಗೊಳಿಸಿಕೊಂಡು ಅದರ ಆಶಯಚಿತ್ರಗಳಿಗೆ ಅದೇ ಬಣ್ಣಗಳ ಬಳಕೆ ಮಾಡಿಕೊಂಡು ಹಿನ್ನೆಲೆ ಮತ್ತು ಮುಖ್ಯ ಆಕೃತಿಗಳಿಗೆ ಸಹಜವಾಗಿ ವಿರುದ್ಧ ಬಣ್ಣಗಳ ಲೇಪನ ಮಾಡಿ . ಉಳಿದ ಖಾಲಿ ಜಾಗ ಅಥವಾ ಹಿನ್ನೆಲೆ ದೃಢೀಕರಿಸುವ ಜಾಗಕ್ಕೆ ದಪ್ಪನಾಗಿ (ಸ್ಪೆಕ್ಟರ್) ಬಳಸಿ ವಿಭಿನ್ನ ಆಯಾಮ ಸೃಷ್ಟಿಸುವ ರೀತಿ ಗಮನ ಸೆಳೆಯಿತು. ಇವರು  ಅಕ್ರಲಿಕ್ ಬಣ್ಣಗಳನ್ನು ತೈಲವರ್ಣಗಳಂತೆ ಬಳಸಿಕೊಳ್ಳುವ ಜೊತೆಗೆ ಪೋಸ್ಟರ್ ವರ್ಣಗಳ ರೀತಿ ಹಾಗೂ ಜಲವರ್ಣಗಳ ರೀತಿ ಬಳಕೆ ಮಾಡುತ್ತಾರೆ.ಗ್ರಾಮ ಸಂಸ್ಕೃತಿಯ ಆಳ ಅಧ್ಯಯನದ ಜೊತೆಗೆ ಬೇರೆ ಬೇರೆ ಜನಪದ ಕಲೆಗಳಾದ ತೊಗಲುಗೊಂಬೆ, ಅಚ್ಚೆ, ರಂಗೋಲಿ, ಬೆಳದಿಂಗಳ ಕಲೆ, ಕಸೂತಿ, ಕೌದಿ, ಬೂತಾರಾದನೆ, ಯಕ್ಷಗಾನ, ಭಿತ್ತಿಚಿತ್ರ, ಮುಖವಾಡಗಳು, ಕಿನ್ನಾಳಕಲೆ ಮುಂತಾದ ಪ್ರಾಕರಗಳ ಸಂಕೇತಗಳನ್ನು ತೆಗೆದುಕೊಂಡು ಜನಪದರ ಮೂಲ ಆಶಯ ಮತ್ತು ಅನುಭವಗಳನ್ನು ಸಂಶೋದಿಸಿ ಕ್ರಿಯಾತ್ಮಕ ರೂಪ ಕೊಡುವ ಪ್ರಯತ್ನ ಮಾಡಿದ್ದಾರೆ.

ಇಂತಹ ಅಪ್ರತಿಮ ಬಹುಮುಖ ಪ್ರತಿಭೆಯ ಕೋಟೆ ಕುಮಾರ್ ರವರು ಆರು ವರ್ಷಗಳ ಕಾಲ ನನ್ನ ಸಹೋದ್ಯೋಗಿಯಾಗಿದ್ದರು ಎಂದು ಹೇಳಲು ನನಗೆ ಹೆಮ್ಮೆಯಾಗುತ್ತದೆ.ನನ್ನ ಶೈಕ್ಷಣಿಕ, ಸಾಹಿತ್ಯ ಕ್ಷೇತ್ರದ ಬೆಳವಣಿಗೆಯಲ್ಲಿ ಹಾಗೂ ವೈಯಕ್ತಿಕವಾಗಿ ನನಗೆ ಅಮೂಲ್ಯವಾದ ಸಲಹೆ ಮಾರ್ಗದರ್ಶನ ನೀಡಿ ಬೆಂಬಲಿಸಿದ್ದಾರೆ.ಶ್ರೀಯುತರು ಇದೇ ಡಿಸೆಂಬರ್ ತಿಂಗಳ 31 ರಂದು  ಸರ್ಕಾರಿ  ಕೆಲಸದಿಂದ ವಯೋ ನಿವೃತ್ತಿ ಹೊಂದುತ್ತಿದ್ದಾರೆ.ಇವರಿಗೆ ದೇವರು ಆಯುರಾರೋಗ್ಯ ಐಶ್ವರ್ಯ ಕರುಣಿಸಲಿ ಅವರ ಸಾಹಿತ್ಯ, ಕಲಾ ಸೇವೆ ಮುಂದುವರೆಯಲಿ ಎಂದು ನಾನು ಮನದುಂಬಿ ಹಾರೈಸುವೆ.ನೀವೂ ಕೋಟೆ ಕುಮಾರ್ ರವರಿಗೆ ಹಾರೈಸಲು ಈ ನಂಬರ್ 9886258195

ಸಿಹಿಜೀವಿ ವೆಂಕಟೇಶ್ವರ
ಸಾಹಿತಿಗಳು ಹಾಗೂ ಶಿಕ್ಷಕರು
ತುಮಕೂರು
9900925529.



11 ಡಿಸೆಂಬರ್ 2025

ಗಾಂಧಾರಿ ಕಲೆ ಯಿಂದ ಶಾಲಾ ಕಾಲೇಜುಗಳಲ್ಲಿ ಕಾಪಿ ತಡೆಯಬಹುದು!


 ಪರೀಕ್ಷೆಗಳಲ್ಲಿ ಕಾಪಿ ಮಾಡುವುದು  ದೊಡ್ಡ ಪಿಡುಗಾಗಿದ್ದು ಕೆಲ ಪರೀಕ್ಷೆಗಳಿಗೆ ಸಿ ಸಿ ಟಿ‌ವಿ ಕ್ಯಾಮರಾ ಹಾಕಿ ವೆಬ್ ಕಾಸ್ಟ್ ಮಾಡಿದರೂ ಕೆಲವೆಡ ನಕಲಾಗುತ್ತಿರುವ ಈ ಕಾಲದಲ್ಲಿ  ಬಳ್ಳಾರಿಯಲ್ಲಿ  ಓರ್ವ ವಿದ್ಯಾರ್ಥಿನಿ  ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ಪ್ರಾಮಾಣಿಕತೆಯಿಂದ  ಪರೀಕ್ಷೆ ಬರೆದು ಉತ್ತಮ ಅಂಕ ಪಡೆದು ಸರ್ವರ ಮೆಚ್ಚುಗೆ ಗಳಿಸಿದ್ದಾಳೆ.


  ಹಿಮಾಬಿಂದು ಎಂಬ ಈ ವಿದ್ಯಾರ್ಥಿನಿ
'ಗಾಂಧಾರಿ' ವಿದ್ಯೆ ಕಲಿತು  ಕಣ್ಣಿಗೆ ಬಟ್ಟೆ ಕಟ್ಟಿಕೊಂಡೇ 8ನೇ ತರಗತಿಯ ಎಫ್‌ಎ 4ರ ಆರು ವಿಷಯ ಗಳ ಪರೀಕ್ಷೆ ಬರೆದು  ಗಮನ ಸೆಳೆದಿದ್ದಾಳೆ. ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ಸ್ಪರ್ಶ, ವಾಸನೆ ಹಾಗೂ ಶಬ್ದದಿಂದಲೇ ವ್ಯಕ್ತಿ ಹಾಗೂ ವಸ್ತುಗಳನ್ನು ಗುರುತಿಸುವ ಅಪರೂಪದ 'ಗಾಂಧಾರಿ ಕಲೆ' ಕರಗತ ಮಾಡಿಕೊಂಡಿರುವುದು ವಿಶೇಷ.

ಬಳ್ಳಾರಿ ತಾಲೂಕಿನ ಕೊರ್ಲಗುಂದಿ ಗ್ರಾಮದ ರಾಮಾಂಜಿನಿ ಹಾಗೂ ಕವಿತಾ ದಂಪತಿ ಹಿರಿಯ ಮಗಳು ಹಿಮಾಬಿಂದು, ಪದ್ಮನಾಭ ಗುರೂಜಿ ಆನ್‌ಲೈನ್‌ನಲ್ಲಿ ನೀಡಿದ ಪಾಠಗಳ ನೆರವಿನಿಂದ ಈ ವಿದ್ಯೆ ಕಲಿತಿದ್ದಾಳೆ.

"ನನ್ನ ಮಗಳು ನಾಲ್ಕನೇ ತರಗತಿ ಯಲ್ಲಿದ್ದಾಗ ಕಲಿಕೆಯಲ್ಲಿ ಬಹಳ ಹಿಂದುಳಿದಿದ್ದಳು. ಗಾಂಧಾರಿ ವಿದ್ಯೆ ಕಲಿಸಿದರೆ ಜ್ಞಾಪಕ ಶಕ್ತಿ ಹೆಚ್ಚುತ್ತದೆ. ಸದಾ ಕ್ರಿಯಾಶೀಲರಾಗಿ ಇರುತ್ತಾರೆ ಎನ್ನುವ ಸ್ನೇಹಿತರ ಸಲಹೆ ಮೇರೆಗೆ ಈ ವಿದ್ಯೆ ಕಲಿಸಿದೆ. ಈ ಪ್ರಯೋಗದ ನಂತರ ಕ್ಲಾಸ್‌ಗೆ ಪ್ರಥಮ ಸ್ಥಾನದಲ್ಲಿ ಬರುತ್ತಿದ್ದಾಳೆ,'' ಎಂದು ಆ ವಿದ್ಯಾರ್ಥಿನಿಯ ತಂದೆ  ರಾಮಾಂಜಿನಿ ರೆಡ್ಡಿ ಸಂತಸ ಹಂಚಿಕೊಂಡಿದ್ದಾರೆ.

ಎಲ್ಲಾ ಸ್ತರಗಳ ಪರೀಕ್ಷೆಯಲ್ಲಿ ಇಂತಹ ಗಾಂಧಾರಿ ವಿದ್ಯೆ ಅಳವಡಿಸಿದರೆ ಹೇಗೆ? ಸಿ ಸಿ ಟಿ ವಿ ಪರೀಕ್ಷಾ ಸಿಬ್ಬಂದಿ ಇತರೆ ಖರ್ಚನ್ನು ಉಳಿಸಬಹುದೇ? ಈ ವಿಷಯದ ಬಗ್ಗೆ ಚರ್ಚೆ ಅಗತ್ಯವಿದೆ.ನೀವೇನಂತೀರಿ.

ಸಿಹಿಜೀವಿ ವೆಂಕಟೇಶ್ವರ
ತುಮಕೂರು

21 ನವೆಂಬರ್ 2025

ಡಾಲ್ಬಿ ಅಟ್ಮಾಸ್ ನಲ್ಲಿ ಸಿನಿಮಾ ನೋಡೋದೆ ಮಜಾ...





ತಾವು ಗಳಿಸಿದ ಹಣದಲ್ಲಿ ಕೆಲ ಭಾಗವನ್ನು ತಮ್ಮ ಮನರಂಜನೆಗೆ ಮೀಸಲಿಡುವ ಜನರಲ್ಲಿ ನಾನೂ ಒಬ್ಬ.ಉತ್ತಮ ಕಥೆ, ಬಿಗಿಯಾದ ಚಿತ್ರಕಥೆ, ಹಿನ್ನೆಲೆ ಸಂಗೀತ, ಮಧುರವಾದ ಹಾಡು ಹಾಸ್ಯ ಇರುವ ಚಿತ್ರ ಯಾವುದಾದರೂ ಯಾವುದೇ ಭಾಷೆಯಾದರೂ ನಾನು ಥಿಯೇಟರ್‌ ಗೆ ಹೋಗುತ್ತೇನೆ‌.ಕೆಲವೊಮ್ಮೆ ಕುಟುಂಬ ಸಮೇತ ಕೆಲವೊಮ್ಮೆ ಒಂಟಿಯಾಗಿಯೇ ಸಿನಿಮಾ ವೀಕ್ಷಣೆ ಮಾಡಲು ಹೊರಡುವೆ.ಹತ್ತಾರು ಓಟಿಟಿ ನೂರಾರು ವೆಬ್ಸೈಟ್ ಗಳಲ್ಲಿ ಸಿನಿಮಾ ಲಭ್ಯವಿದ್ದರೂ ನಾನು ಅಲ್ಲಿ ಸಿನಿಮಾ ನೋಡಲು ಇಚ್ಚಿಸುವುದಿಲ್ಲ. ಸಿನಿಮಾ ಮಂದಿರದಲ್ಲಿ  ಡಾಲ್ಬಿ ಅಟ್ಮಾಸ್  ಎಫೆಕ್ಟ್ ನಲ್ಲಿ ಸಿನಿಮಾ ಎಂಜಾಯ್ ಮಾಡುವುದೇ ಇಂದು ಸುಂದರ ಅನುಭೂತಿಯನ್ನು ನೀಡುತ್ತದೆ.



ಸಿಹಿಜೀವಿ ವೆಂಕಟೇಶ್ವರ...

ತುಮಕೂರು

11 ನವೆಂಬರ್ 2025

ಅಮ್ಮ ಮಗನಿಗೆ ನಮನಗಳು..

ಕರುನಾಡಿನ ಜನತೆಯಾದ ನಾವು ಸದಾ ಕೃತಜ್ಞತೆ ಸೂಚಿಸಿ  ಸ್ಮರಿಸುವ ಹೆಸರುಗಳಲ್ಲಿ ಈ ಚಿತ್ರದಲ್ಲಿರುವ ತಾಯಿ ಮಗನ ಹೆಸರು ಅಗ್ರ ಸ್ಥಾನದಲ್ಲಿರುತ್ತದೆ.ಅಂದಿನ ನಮ್ಮ ಮೈಸೂರು ಸಂಸ್ಥಾನವನ್ನು ಮಾದರಿ ರಾಜ್ಯ ಮಾಡುವಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ್ ಬಹಳ ಉತ್ತಮ ಕಾರ್ಯ ಮಾಡಿದ್ದಾರೆ.ಚಿಕ್ಕ ವಯಸ್ಸಿನಲ್ಲೇ ರಾಜನಾದ ಮಗನಿಗೆ  ಬಾಲ್ಯದಿಂದಲೂ   ಉತ್ತಮ ಶಿಕ್ಷಣ ನೀಡಿ ಒಬ್ಬ ಆಡಳಿತಗಾರನಾಗಿ ಮಾಡುವ ಕಾರ್ಯ ಮಾಡುತ್ತಲೇ ತಾನೂ ಓರ್ವ ಶ್ರೇಷ್ಠ ಆಡಳಿತಗಾರ್ತಿ ಎಂದು ತೋರಿದ ವಾಣಿ ವಿಲಾಸ ಕೆಂಪರಾಜ ನಂಜಮ್ಮಣ್ಣಿ ರವರನ್ನು ನಾವು ದಿನವೂ ನೆನೆಯಬೇಕು.ಇತ್ತೀಚಿಗೆ ವಾಣಿ ವಿಲಾಸ ಪುರಕ್ಕೆ ಕುಟುಂಬ ಸಮೇತ ಭೇಟಿ ನೀಡಿದಾಗ ಈ ಪುತ್ತಳಿಗಳನ್ನು ಕಂಡು ಪುಳಕಗೊಂಡು ಮನದುಂಬಿ ನಮಿಸಿದೆ.ನಮ್ಮ ಮಕ್ಕಳಿಗೆ ಅವರ ಬಗ್ಗೆ ಹೆಮ್ಮೆಯಿಂದ ಪರಿಚಯ ಮಾಡಿದೆ..

ಹಿರಿಯೂರು ತಾಲ್ಲೂಕಿನ ರೈತರು ಇವರನ್ನು ಪೂಜಿಸುತ್ತಿದ್ದಾರೆ.ಇತ್ತೀಚಿನ ದಿನಗಳಲ್ಲಿ ಚಿತ್ರದುರ್ಗದ ವಿವಿಧ ನಗರಗಳು ಸಹ ಮಾರಿ ಕಣಿವೆ ನೀರನ್ನು ಕುಡಿಯುತ್ತಿದ್ದಾರೆ.

ಅಮ್ಮ ಮಗನಿಗೆ ಎಲ್ಲರ ಪರವಾಗಿ ಧನ್ಯವಾದಗಳು..

#VvSagarDam #Hiriyur #Chitradurga #Vanivilaasa #TravelDiaries #NatureLovers #ExploreIndia #WaterDam #AdventureAwaits #LandscapePhotography #IncredibleIndia #HiddenGems #VisitKarnataka #TouristAttraction #TravelGoals #ScenicViews #DiscoverMore #BeautifulDestinations #KarnatakaTourism


 #VvSagarDam #Hiriyur #Chitradurga #Vanivilaasa #TravelDiaries #NatureLovers #ExploreIndia #WaterDam #AdventureAwaits #LandscapePhotography #IncredibleIndia #HiddenGems #VisitKarnataka #TouristAttraction #TravelGoals #ScenicViews #DiscoverMore #BeautifulDestinations #KarnatakaTourism

31 ಅಕ್ಟೋಬರ್ 2025

ಕರುನಾಡ ಕಣ್ಮಣಿಗಳು.. ಭಾಗ ೧ ಸಿದ್ದಪ್ಪ ಕಂಬಳಿ

 


ಕರುನಾಡ ಕಣ್ಮಣಿಗಳು..

ಭಾಗ ೧

ಸಿದ್ದಪ್ಪ ಕಂಬಳಿ





ಕರ್ನಾಟಕದ ಏಕೀಕರಣದ ಕನಸು ಕಂಡು ಆ ನಿಟ್ಟಿನಲ್ಲಿ ಹೋರಾಟ ಮಾಡಿದ ಅನೇಕ ಮಹನೀಯರಲ್ಲಿ ಸಿದ್ದಪ್ಪ ಕಂಬಳಿ ಕೂಡಾ ಒಬ್ವರು. ನಮ್ಮ ನಾಡಿನ ಜನರ ಶಿಕ್ಷಣಕ್ಕಾಗಿ ಅನೇಕ  ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಿದ ಸಿದ್ದಪ್ಪ ನವರನ್ನು ಇಂದು ನಾವೆಲ್ಲರೂ ಕೃತಜ್ಞತೆಯಿಂದ ನೆನೆಯಬೇಕಿದೆ.

ತೋಟಪ್ಪ ಮತ್ತು ಗಂಗಮ್ಮ ದಂಪತಿಗಳ ಮಗನಾಗಿದ್ದ ಸಿದ್ದಪ್ಪ ರವರು 1882ರಲ್ಲಿ ಜನಿಸಿದರು. ಈ ದಂಪತಿಗಳು ಕಂಬಳಿಗಳನ್ನು ಮಾರಾಟ ಮಾಡಿ ಜೀವನ ಸಾಗಿಸುತ್ತಿದ್ದರು. ಶ್ರೀ ಸಿದ್ಧಾರೂಢರ ಆಶೀರ್ವಾದದಿಂದ ಸಿದ್ದಪ್ಪ ಕನ್ನಡದ ಬಗ್ಗೆ ಆಸಕ್ತಿ ಬೆಳೆಸಿಕೊಂಡರು ಮತ್ತು ಸಮಾಜದ ಬಡ ವರ್ಗಗಳಿಗೆ ಸೇವೆ ಸಲ್ಲಿಸುವಲ್ಲಿ ನಂಬಿಕೆ ಇಟ್ಟ ವ್ಯಕ್ತಿಯಾಗಿ ವಿಕಸನಗೊಂಡರು. ಹುಬ್ಬಳ್ಳಿ ಮತ್ತು ಧಾರವಾಡದ ಕನ್ನಡ ಮಾತನಾಡುವ ಪ್ರದೇಶಗಳಲ್ಲಿಯೂ ಮರಾಠಿ ಪ್ರಾಬಲ್ಯ ಹೊಂದಿದ್ದ ಸಮಯದಲ್ಲಿ, ಸಿದ್ದಪ್ಪ ತಮ್ಮ ಪ್ರಾಥಮಿಕ ಶಿಕ್ಷಣವನ್ನು ಐತಿಹಾಸಿಕ ಪಟ್ಟಣವಾದ ಲಕ್ಕುಂಡಿಯಲ್ಲಿ ಮುಗಿಸಿದರು. ನಂತರ ಧಾರವಾಡದಲ್ಲಿ ಪ್ರೌಢಶಾಲೆಗೆ ಹೋಗಿ ಪುಣೆಯಲ್ಲಿ ಪದವಿ ಪಡೆದರು. ಅವರು ಬಾಂಬೆಯ ಸರ್ಕಾರಿ ಕಾನೂನು ಕಾಲೇಜಿನಿಂದ ಕಾನೂನು ಪದವಿ ಪಡೆದು  ಪ್ರಸಿದ್ಧ ವಕೀಲರಾದರು. ಕಾಲ ಕಳೆದಂತೆ ಅವರು ದೀನದಲಿತರ ಪರವಾಗಿ ಹೋರಾಡಿದರು.  ಅನೇಕ ಕನ್ನಡ ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಿದ ಕಂಬಳಿಯವರು
1917 ರಲ್ಲಿ  ಆಗಿನ  ಹುಬ್ಬಳ್ಳಿ  ಪುರಸಭೆಯ ಸದಸ್ಯರಾಗಿ ಆಯ್ಕೆಯಾದರು. 1921 ರಲ್ಲಿ CMC ಯ ಕಾನೂನು ಸಲಹೆಗಾರರಾದರು.ವಕೀಲರ ಸಂಘದ ಅಧ್ಯಕ್ಷರಾಗಿ, ಜಿಲ್ಲಾ ಮಂಡಳಿಯ ಅಧ್ಯಕ್ಷರಾಗಿ ಜಾಗೂ  ಬಾಂಬೆ ಪ್ರಾಂತೀಯ ಮಂಡಳಿಯ ಸದಸ್ಯರಾಗಿ ಸೇವೆ ಸಲ್ಲಿಸಿದರು.
ಶಿಕ್ಷಕರ ತರಬೇತಿ ಅಗತ್ಯ ಕಂಡ ಅವರು ಧಾರವಾಡದಲ್ಲಿ ಪ್ರಾಥಮಿಕ ಶಿಕ್ಷಕರ ತರಬೇತಿ ಕಾಲೇಜನ್ನು ಸ್ಥಾಪಿಸಿದರು. ಆದರೆ, ಸರ್ಕಾರವು ಕಠಿಣ ಕ್ರಮಗಳನ್ನು ಉಲ್ಲೇಖಿಸಿ 1922 ರಲ್ಲಿ ಅದನ್ನು ಮುಚ್ಚಿತು. ಕಾಲೇಜನ್ನು ಮತ್ತೆ ತೆರೆಯುವಂತೆ ಕಂಬಳಿಯವರು ನೋಡಿಕೊಂಡರು. 
ಹರಿದು ಹಂಚಿಹೋಗಿದ್ದ ನಮ್ಮ ನಾಡಿನ ಎಕೀಕರಣ ಬಗ್ಗೆ ಪ್ರಬಲವಾಗಿ ಪ್ರತಿಪಾದಿಸಿದ ಅವರು
1926 ರಲ್ಲಿ ಕರ್ನಾಟಕ ಏಕೀಕರಣ ಸಮಿತಿ ಅಧ್ಯಕ್ಷರಾಗಿ ಆಯ್ಕೆಯಾದರು. ಆಗಿನ  ಶಿಕ್ಷಣ ಸಚಿವರಾಗಿ ಕಾರ್ಯ ನಿರ್ವಹಿಸಿದ ಅವರ ಕರ್ತವ್ಯ, ಕಾರ್ಯವೈಖರಿ, ಅಧ್ಯಯನಶೀಲತೆ ಮತ್ತು ಸಮರ್ಪಣೆಯಿಂದ ಬ್ರಿಟಿಷರು ಬೆರಗಾದರು. ವೆಚ್ಚವನ್ನು ಉಳಿಸಲು ಸರ್ಕಾರ ಧಾರವಾಡದ ಕರ್ನಾಟಕ ಕಾಲೇಜನ್ನು ಮುಚ್ಚಲು ಯೋಜಿಸುತ್ತಿತ್ತು ಆದರೆ ಕಾಲೇಜು ಮುಚ್ಚಿದರೆ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಕಂಬಳಿಯವರು  ಕಠಿಣ ನಿಲುವು ತೆಗೆದುಕೊಂಡರು.
ಈ ಕಾಲೇಜನ್ನು ಸರ್ಕಾರಿ ನಿಧಿಯಿಂದ ಸ್ಥಾಪಿಸಲಾಗಿಲ್ಲ, ಬದಲಾಗಿ ಜನರ ಕೊಡುಗೆಯಿಂದ ಸ್ಥಾಪಿಸಲಾಗಿದೆ ಎಂದು ಹೇಳುವ ಮೂಲಕ ಅವರು ತಮ್ಮ ಕ್ರಮವನ್ನು ಸಮರ್ಥಿಸಿಕೊಂಡರು. ಕಾಲೇಜು ಮುಚ್ಚಿದರೆ ಜನರು ತಮ್ಮನ್ನು ಸುಮ್ಮನೆ ಬಿಡುವುದಿಲ್ಲ ಎಂದು ಅವರು ಹೇಳಿದರು. ಅವರ ಒತ್ತಾಯದ ಮೇರೆಗೆ ಸರ್ಕಾರ ಕಾಲೇಜನ್ನು ಮುಚ್ಚುವ ಕ್ರಮವನ್ನು ಕೈಬಿಟ್ಟಿತು. ನಂತರದ ದಿನಗಳಲ್ಲಿ ಈ ಸಂಸ್ಥೆಯು ಉನ್ನತ ಗುಣಮಟ್ಟದ ಶಿಕ್ಷಣವನ್ನು ನೀಡುವ ಸಂಸ್ಥೆಯಾಗಿ ಪ್ರಗತಿ ಸಾಧಿಸಿತು. 


ಕರ್ನಾಟಕದ ಏಕೀಕರಣವು ಸಿದ್ದಪ್ಪರವರ ಬಹುಕಾಲದ ಕನಸಾಗಿತ್ತು. ದುರದೃಷ್ಟವಶಾತ್ ಅವರು ಪಾರ್ಶ್ವವಾಯುವಿಗೆ ತುತ್ತಾಗಿ ಹಾಸಿಗೆ ಹಿಡಿದರು.  ಆರು ವರ್ಷಗಳ ಅನಾರೋಗ್ಯದ ನಂತರ ಏಪ್ರಿಲ್ 1956 ರಲ್ಲಿ ನಿಧನರಾದರು. ಕೆಲವು ತಿಂಗಳುಗಳ ನಂತರ, ನವೆಂಬರ್ 1956 ರಲ್ಲಿ ಏಕೀಕೃತ ಕರ್ನಾಟಕ ಉದಯವಾದಾಗ ಅವರ ಕನಸು ನನಸಾಗಿತ್ತು.  ಆದರೆ ಅದನ್ನು ನೋಡಲು ಅವರಿರಲಿಲ್ಲ.
ಇಂದಿನ ‌ಕಲುಷಿತ ರಾಜಕೀಯ ವ್ಯವಸ್ಥೆಯನ್ನು ನೀಡಿದಾಗ
ರಾಜಕೀಯ ಪ್ರವೇಶಿಸಲು ಯೋಜಿಸುತ್ತಿರುವ ಯುವಕರಿಗೆ ಕಂಬಳಿಯವರು  ನೀಡಿದ ಸಂದೇಶವು ಗಮನ ಸೆಳೆಯುತ್ತದೆ. "ನಿಮ್ಮನ್ನು ಮತ್ತು ನಿಮ್ಮ ಕುಟುಂಬವನ್ನು ಪೋಷಿಸಲು ನಿಮಗೆ ಸಾಧನವಿದ್ದರೆ ಮಾತ್ರ ನೀವು ರಾಜಕೀಯಕ್ಕೆ ಧುಮುಕಿ. ಇಲ್ಲದಿದ್ದರೆ, ರಾಜಕೀಯ ಪ್ರವೇಶಿಸುವ ಕನಸು ಕಾಣಬೇಡಿ. ಸುರಕ್ಷಿತ ಮತ್ತು ಸುಸ್ಥಿರ ಆದಾಯದ ಮೂಲವಿಲ್ಲದ ರಾಜಕಾರಣಿ ಭ್ರಷ್ಟನಾಗುತ್ತಾನೆ" ಅವರ ಮಾತುಗಳು ಎಷ್ಟು ಸತ್ಯ ಎಂಬುದಕ್ಕೆ ಇಂದಿನ ರಾಜಕಾರಣಿಗಳೇ ಜೀವಂತ ಸಾಕ್ಷಿ.



ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯು  ಸಿದ್ದಪ್ಪ ಕಾಂಬ್ಳಿಯವರ ಪ್ರತಿಮೆಯನ್ನು ಸ್ಥಾಪಿಸಿದೆ. ರಸ್ತೆಯೊಂದಕ್ಕೆ ಅವರ ಹೆಸರನ್ನಿಟ್ಟು ಗೌರವಿಸಿದೆ. ಧಾರವಾಡದ ಕರ್ನಾಟಕ ಕಾಲೇಜಿನ ಆವರಣದಲ್ಲಿ ಕಾಂಬ್ಳಿಯವರ ಕಂಚಿನ ಪ್ರತಿಮೆಯನ್ನು ಸ್ಥಾಪಿಸಲಾಗಿದೆ.
 
ಇಂತಹ ಮಹಾನ್ ನಾಯಕರ ಆದರ್ಶಗಳನ್ನು ನಮ್ಮ ಯುವಕರು ಇಂದು ಮೈಗೂಡಿಸಿಕೊಳ್ಳಲಿ.

ಸಿಹಿಜೀವಿ ವೆಂಕಟೇಶ್ವರ
ತುಮಕೂರು

30 ಅಕ್ಟೋಬರ್ 2025

ಉಸಿರುಗಟ್ಟುವ ವಾತಾವರಣ ತ್ಯಜಿಸಿ ಉಸಿರಾಡೋಣ. (ಲೇಖನ)

 


ಉಸಿರುಗಟ್ಟುವ ವಾತಾವರಣ ತ್ಯಜಿಸಿ ಉಸಿರಾಡೋಣ.


ನಾವು ಕೊಳ್ಳುಬಾಕ ಸಂಸ್ಕೃತಿಯ ದಾಸರಾಗಿ ವಿವಿಧ ಆನ್ಲೈನ್ ಪ್ಲಾಟ್ ಫಾರ್ಮ್ ಮೂಲಕ ಹಬ್ಬ, ಹುಟ್ಟು ಹಬ್ಬ, ಮದುವೆ, ಮುಂಜಿ   ಹೀಗೆ ವಿವಿಧ ಕಾರಣದಿಂದಾಗಿ ಬೇಕಿದ್ದು ಬೇಡವಾದ್ದು  ಖರೀದಿಸಿ  ನಮ್ಮ  ಬೀರುಗಳು,ವಾರ್ಡ್ ರೋಬ್ ಗಳು ತುಂಬಿ ತುಳುಕುವಷ್ಟು ಶಾಪಿಂಗ್ ಮಾಡುತ್ತೇವೆ.ಹಣ ಇಲ್ಲದಿದ್ದರೂ ಕ್ರೆಡಿಟ್ ಕಾರ್ಡ್ ಬಳಸಿಯಾದರೂ ಕೊಳ್ಳುತ್ತೇವೆ.  ಕೊಂಡ ವಸ್ತುಗಳನ್ನು ಮನೆಯಲ್ಲಿ ಪೇರಿಸಿಕೊಂಡು   ಇ ಎಂ ಐ ಕಟ್ಟುತ್ತಾ, ಸಾಲ ತೀರಿಸುವ ಟನ್ಷನ್ ನಲ್ಲಿ ಕೆಲವೊಮ್ಮೆ ಉಸಿರುಗಟ್ಟಿದ ವಾತಾವರಣದಲ್ಲಿ ಜೀವಿಸುತ್ತೇವೆ. ಮಾಲ್ ಸಂಸ್ಕೃತಿ ಇದಕ್ಕೆ ಪ್ರಚೋದನಕಾರಿ. ಹಾಗೆಂದ ಮಾತ್ರಕ್ಕೆ ನೀವು ಕಂಜ್ಯೂಸ್ ಆಗಿ ಎಂತಲೂ ನಾನು ಹೇಳುವುದಿಲ್ಲ.

ಬೇಕಾದ್ರೆ ಉಪಯೋಗಕ್ಕೆ ಎನ್ನುವ ಡಬ್ಬಿಗಳು, ನೆನಪಿಗೂ ಬರದ ಹಳೆಯ ಸ್ಮರಣಿಕೆಗಳು. ನಾವು ಖರೀದಿಸುತ್ತೇವೆ. ಸಂಗ್ರಹಿಸುತ್ತೇವೆ.ಅಪ್‌ಗ್ರೇಡ್ ಮಾಡುತ್ತೇವೆ.ಆದರೆ   ಕೊನೆಗೆ  ಯಾವುದೋ ನಮಗಿಷ್ಟದ ಹಳೆ  ಶರ್ಟ್ ಹುಡುಕಿ ಇದೊಂದೇ ಸಾಕು ಎಂದು ಹಾಕಿಕೊಂಡು ನಡೆದುಬಿಡುತ್ತೇವೆ. ಇವೆಲ್ಲವುಗಳ ಬಗ್ಗೆ
ಜೆಮ್ಸ್ ವಾಲ್ಮನ್ ರವರು “Stuffocation”  ಎಂಬ ಪುಸ್ತಕದಲ್ಲಿ ಚೆನ್ನಾಗಿ ಚಿತ್ರಿಸಿದ್ದಾರೆ.

ನಾವೆಲ್ಲರೂ ಸಂತೋಷವನ್ನು ವಸ್ತುಗಳನ್ನು ಹೆಚ್ಚು ಗುಡ್ಡೇ ಹಾಕುವುದರಲ್ಲಿ ಬೇರೆಯವರಿಗಿಂತ ಹೆಚ್ಚು ವಸ್ತುಗಳನ್ನು ಶೇಖರಣೆ ಮಾಡುವುದರಲ್ಲಿ ಹುಡುಕುವ ಭರದಲ್ಲಿ ನಿಜಕ್ಕೂ ಈ ವಸ್ತುಗಳ ಅಗತ್ಯ ನನಗಿದೆಯಾ? ಎಂಬು ಸ್ವಯಂ ಪ್ರಶ್ನಿಸಿಕೊಳ್ಳುವ ಮನೋಭಾವ ಕಾಣೆಯಾಗಿದೆ.

   ಗ್ರಾಹಕ ಕೇಂದ್ರಿತ  ಕನಸುಗಳಿಂದ ತುಂಬಿರುವ ಮನೆಗಳು, ಸ್ಥಾನಮಾನಕ್ಕಾಗಿ ಕಟ್ಟಲ್ಪಟ್ಟ ದೊಡ್ಡ  ಕಚೇರಿಗಳು ಇಂದಿನ ಟ್ರೆಂಡ್. ಹೆಚ್ಚು ವಸ್ತುಗಳಿದ್ದರೆ  ಉತ್ತಮ ಜೀವನ  ಎಂಬ  ಭ್ರಮೆಯಲ್ಲಿ ಸಿಕ್ಕಿಹಾಕಿಕೊಂಡು ಜೀವಿಸುತ್ತಿದ್ದೇವೆ. 


ವಸ್ತುಗಳು ಕೇವಲ ನಮ್ಮ ಕೋಣೆ ಮತ್ತು ಕಟ್ಟಡಗಳನ್ನು ತುಂಬಿಸಬಹುದು.ಆದರೆ  ಆ ವಸ್ತುಗಳನ್ನು ಬಳಸಿದ   ನೆನಪುಗಳು  ವಸ್ತುವಿಗಿಂತ ಹೆಚ್ಚು ದೀರ್ಘಕಾಲದ ಸಂತೋಷವನ್ನು ನೀಡುತ್ತವೆ. ಉದಾಹರಣೆಗೆ   ನಾವು ಖರೀದಿಸಿದ ಬೂಟುಗಳನ್ನು ನೆನಪಿಡುವುದಿಲ್ಲ. ಆದರೆ ಅವುಗಳನ್ನು ಧರಿಸಿ ನೃತ್ಯ ಮಾಡಿದ ಆ ರಾತ್ರಿ ಎಂದಿಗೂ ಮರೆಯಲಾಗುವುದಿಲ್ಲ. ಅನುಭವಗಳು ವ್ಯಕ್ತಿತ್ವವನ್ನು ರೂಪಿಸುತ್ತವೆ.


ನಾವು ನಮ್ಮಲ್ಲಿರುವ ಆಸ್ತಿ   ಅಂತಸ್ತು  ಸಂಪತ್ತು ಪ್ರದರ್ಶನಕ್ಕೆ ಹಾತೊರೆಯುತ್ತೇವೆ. ತೋರಿಸಬೇಕಾದದ್ದು ಸ್ಥಾನಮಾನಗಳನ್ನಲ್ಲ.ಬದಲಿಗೆ ನಮ್ಮ ಜೀವನವನ್ನು ಪ್ರವಾಸಗಳು, ಆಳವಾದ ಸ್ನೇಹಗಳು, ಕಲಿತ ಕೌಶಲ್ಯಗಳು, ನೋಡಿದ ಸ್ಥಳಗಳಿಂದ ಅರ್ಥಪೂರ್ಣ ಮಾಡಿಕೊಳ್ಳಬೇಕು. ಇವೇ ನಿಜವಾದ ಟ್ರೋಫಿಗಳು!

  ನಾವು  ಸರಳವಾದಂತೆ  ಜೀವನ ವಿಸ್ತರಿಸುತ್ತದೆ.
ಅವ್ಯವಸ್ಥೆ ಹೋಗಿ  ಶಕ್ತಿ ಮರಳುತ್ತದೆ. ಬಯಕೆಗಳು ಕಡಿಮೆಯಾದಾಗ ಕೃತಜ್ಞತೆ ಬೆಳೆಯುತ್ತದೆ. ಹೆಚ್ಚು ಬೇಕು ಎಂದು ಓಡುವುದನ್ನು   ನಿಲ್ಲಿಸಿದಾಗ  ಸಾಕು ಎಂಬುದನ್ನು ಅರಿಯುತ್ತೇವೆ.ಇನ್ನಾದರೂ ನಾವು ನಮ್ಮದೇ ಅತಿಯಾದ  ವಸ್ತುಗಳಿಂದ ನಮಗರಿವಿಲ್ಲದೇ  ಉಸಿರುಗಟ್ಟುವುದನ್ನು ತಪ್ಪಿಸಿಕೊಂಡು ಅರ್ಥಪೂರ್ಣವಾಗಿ ಜೀವಿಸೋಣ.
ನಮ್ಮ ಯಶಸ್ಸಿನ ಮಾನಕಗಳು    ಎಷ್ಟು ವಸ್ತುಗಳನ್ನು ಹೊಂದಿದ್ದೇವೆ ಎಂಬುದಲ್ಲ. ಎಷ್ಟು ಕಾಲ   ಸಂತಸದಿಂದ  ಬದುಕಿದ್ದೇವೆ ಎಂಬುದರಿಂದ  ಅಳೆಯಬೇಕಾಗಿದೆ.
ಅದನ್ನು ಅರಿತ ಕ್ಷಣ ನಿಜವಾಗಿಯೂ ಮತ್ತೆ ನಾವು ಹೊಸದಾಗಿ ಉಸಿರಾಡಲು ಆರಂಭಿಸಿದಂತಾಗುತ್ತದೆ. ಅಂತಹ ಜೀವನದ ಕಡೆ ಸಾಗೋಣ..

ಸಿಹಿಜೀವಿ ವೆಂಕಟೇಶ್ವರ
ತುಮಕೂರು

26 ಅಕ್ಟೋಬರ್ 2025

ಬೆಲೆ. ಹನಿಗವನ


 

ಬೆಲೆ

ಜಂಭ ಕೊಚ್ಚಿಕೊಳ್ಳುತ್ತಾ ಹೇಳಿಕೊಳ್ಳಬೇಡ ಎಲ್ಲರೂ ನನ್ನನ್ನೇ ಇಷ್ಟಪಡುತ್ತಾರೆಂದು| ಕೆಲವೊಮ್ಮೆ ಕಡಿಮೆ ಕಿಮ್ಮತ್ತಿನ ವಸ್ತುಗಳನ್ನು ಕೊಳ್ಳಲು ಜನ ಮುಗಿ ಬೀಳುತ್ತಾರೆ ನಾ ಮುಂದು,ತಾ ಮುಂದು||

ಸಿಹಿಜೀವಿ ವೆಂಕಟೇಶ್ವರ #QuoteSubhashitha #Sihijeevi #Venkateswara #WisdomInKannada #LifeLessons #InspirationalQuotes #SpiritualWisdom #MotivationalQuotes #KannadaCulture #QuoteOfTheDay #SubhashithaWisdom #KannadaProverbs #SelfAwareness #SoulfulQuotes #PositiveVibes #LifeInspired #Venkateswar

22 ಅಕ್ಟೋಬರ್ 2025

ದೋಸೆ ಹಾಕಿ ವಿಶ್ವ ದಾಖಲೆ ನಿರ್ಮಿಸಿದ ವಿಷ್ಣು!


 ಬಹಳಷ್ಟು ಜನರಿಗೆ ದೋಸೆಯೆಂದರೆ ಪ್ರಾಣ.ತರಾವರಿ‌ ದೋಸೆಗಳು ಜನರ ಬಾಯಲ್ಲಿ ನೀರೂರಿಸುತ್ತವೆ.ನನಗೆ ವೈಯಕ್ತಿಕವಾಗಿ ಬೆಣ್ಣೆ ದೋಸೆ,ಈರುಳ್ಳಿ ದೋಸೆ ಇಷ್ಟವಾದರೆ ನಮ್ಮ ಮನೆಯವರಿಗೆ ಮಸಾಲೆ ದೋಸೆ ಇಷ್ಟ.

ಇಲ್ಲೊಬ್ಬರು ರೆಕಾರ್ಡ್ ನಿರ್ಮಿಸಿದ್ದಾರೆ. ದೋಸೆ ತಿನ್ನುವುದರಲ್ಲಿ  ಅಲ್ಲ. ದೋಸೆ ಮಾಡುವುದರಲ್ಲಿ.

ಹೌದು ಈ ದಾಖಲೆಯನ್ನು ನಿರ್ಮಿಸಿದವರು ಭಾರತದ ಪ್ರಸಿದ್ಧ ಬಾಣಸಿಗ ವಿಷ್ಣು ಮನೋಹರ್!


25 ಗಂಟೆಗಳಲ್ಲಿ 15,773 ದೋಸೆಗಳನ್ನು ಹಾಕಿ    ವಿಷ್ಣು ಮನೋಹರ್ ರವರು ತಮ್ಮದೇ  ಹೆಸರಲ್ಲಿ ಇದ್ದ ದಾಖಲೆಯನ್ನು ಮುರಿದು   ಹೊಸ ವಿಶ್ವ ದಾಖಲೆ ನಿರ್ಮಿಸಿದರು. ಇಷ್ಟಕ್ಕೆ ಸುಮ್ಮನಾಗದ ಅವರು ಅಮೆರಿಕದಲ್ಲಿ ಮತ್ತೊಂದು ದಾಖಲೆ ನಿರ್ಮಿಸಲು ಕಾತರರಾಗಿದ್ದಾರೆ.

 


 ಪ್ರಸಿದ್ಧ ಶೆಫ್ ವಿಷ್ಣು ಮನೋಹರ್ ಮಹಾರಾಷ್ಟ್ರದ ಅಮರಾವತಿ ನಗರದಲ್ಲಿ ನಿರಂತರವಾಗಿ 25 ಗಂಟೆಗಳ ಕಾಲ 15,773 ದೋಸೆಗಳನ್ನು ತಯಾರಿಸಿ ಹೊಸ ವಿಶ್ವ ದಾಖಲೆಯನ್ನು ನಿರ್ಮಿಸಿದ್ದಾರೆ. ಈಗ ಅವರು ಅಮೆರಿಕಾದಲ್ಲಿ 26 ಗಂಟೆಗಳ ದೋಸೆ ಮ್ಯಾರಥಾನ್ ಮಾಡಲು ಸಿದ್ಧತೆ ನಡೆಸುತ್ತಿದ್ದಾರೆ. ಕಳೆದ ವರ್ಷ, ಅವರು ನಾಗಪುರದಲ್ಲಿ 24 ಗಂಟೆಗಳಲ್ಲಿ 14,400 ದೋಸೆಗಳನ್ನು ತಯಾರಿಸಿ ದಾಖಲೆ ಮಾಡಿದ್ದರು.


  ಅಕ್ಟೋಬರ್ 2025 ರ  ಶನಿವಾರ ಬೆಳಗ್ಗೆ 7 ಗಂಟೆಗೆ ದೋಸ ತಾವಾ  ಲಾನ್‌ನಲ್ಲಿ ದೋಸೆ ತಯಾರಿಕೆ ಪ್ರಾರಂಭಿಸಿದರು. ಭಾನುವಾರ ಬೆಳಗ್ಗೆ 6 ಗಂಟೆಗೆ ಅವರು ಹಿಂದಿನ ದಾಖಲೆಯನ್ನು ಮುರಿದು 15,700 ದೋಸೆಗಳನ್ನು ತಯಾರಿಸಿದರು. 20 ನಿಮಿಷಗಳ ಅಧಿಕೃತ ವಿರಾಮದ ನಂತರ, ಅವರು ಮತ್ತೆ ಕೆಲಸಕ್ಕೆ ಮುಂದಾಗಿ ಅಮರಾವತಿ ಜನತೆಗೆ ಬಿಸಿ ಬಿಸಿ ದೋಸೆಗಳನ್ನು ನೀಡಿದರು.


ಬೆಳಗ್ಗೆ 8 ಗಂಟೆಗೆ ಅವರು 15,773ನೇ ದೋಸೆಯನ್ನು ತಯಾರಿಸಿ ಹೊಸ ದಾಖಲೆಯನ್ನು ಅಧಿಕೃತವಾಗಿ ಮುಗಿಸಿದರು. ಅದೇ ವೇಳೆ, ಇಂಡಿಯಾ ವರ್ಲ್ಡ್ ರೆಕಾರ್ಡ್ಸ್ ಪ್ರತಿನಿಧಿ ಪ್ರವೀಣ್ ರಾಉತ್ ಅವರು ಮನೋಹರ್ ಅವರಿಗೆ ಪದಕ ಮತ್ತು ಪ್ರಮಾಣಪತ್ರ ನೀಡಿ ಗೌರವಿಸಿದರು.


ಈ ಸಂದರ್ಭದಲ್ಲಿ ಅಮರಾವತಿ ಜನರಿಂದ ದೋಸೆ ತಿನ್ನಲು ಹಾಗೂ ದಾಖಲೆಯನ್ನು ನೋಡಲು ಭಾರಿ ಪ್ರತಿಕ್ರಿಯೆಯು ವ್ಯಕ್ತವಾಯಿತು.ಶನಿವಾರ ಬೆಳಗ್ಗೆ 7 ಗಂಟೆಯಿಂದ ಮನೋಹರ್ ದೋಸೆ ತಯಾರಿಕೆ ಪ್ರಾರಂಭಿಸಿದ ನಂತರ ಸಾವಿರಾರು ಜನರು ಸಾಲಿನಲ್ಲಿ ನಿಂತು ದೋಸೆ ಸವಿದರು. ರಾತ್ರಿ 3 ರಿಂದ 5ರವರೆಗೆ ಜನರ ಸಂಖ್ಯೆ ಸ್ವಲ್ಪ ಕಡಿಮೆಯಾದರೂ, ಬೆಳಗ್ಗೆ 5 ರಿಂದ 8ರವರೆಗೆ ಮತ್ತೆ ಉತ್ಸಾಹ ತುಂಬಿತು.


ಈ ದಾಖಲೆಯ ಕಾರ್ಯಕ್ರಮದಲ್ಲಿ 30,000ಕ್ಕೂ ಹೆಚ್ಚು ಜನರು ಮನೋಹರ್, ಅವರ ಪತ್ನಿ ಅಪರ್ಣಾ, ಮತ್ತು ತಂಡ ತಯಾರಿಸಿದ ದೋಸೆಗಳನ್ನು ಸವಿದರು. ಭಾನುವಾರ ರಾತ್ರಿ ಬದ್ನೇರಾ ಶಾಸಕ ರವಿ ರಾಣಾ ಕೂಡ ಸ್ಥಳಕ್ಕೆ ಬಂದು ಸ್ವತಃ ಕೆಲವು ದೋಸೆಗಳನ್ನು ತಯಾರಿಸಿದರು. ಎಲ್ಲರಿಗೂ ಉಚಿತ ದೋಸೆಗಳನ್ನು ವಿತರಿಸಲಾಯಿತು.

ಈ ದಾಖಲೆಯ ದೋಸೆ ತಯಾರಿಸಲು ಅವರು ಒಂದೇ ಸಮಯದಲ್ಲಿ ನಾಲ್ಕು ತವಾಗಳಲ್ಲಿ  ದೋಸೆ ತಯಾರಿಸಲಾಯಿತು. ಪ್ರತಿ ಎರಡು ನಿಮಿಷಕ್ಕೆ ಸುಮಾರು 28 ಡೋಸೆ ಸಿದ್ಧವಾಗಿ ತಿನ್ನವವರ ಹೊಟ್ಟೆ ಸೇರಿದವು  ಇದಕ್ಕಾಗಿ  500 ಕೆ.ಜಿ. ದೋಸೆ ಹಿಟ್ಟನ್ನು ಮತ್ತು 800 ಕೆ.ಜಿ. ಚಟ್ನಿಯನ್ನು ಬಳಸಲಾಯಿತು


#Dosa #Food #WorldRecord #VishnuManohar #IndianCuisine #StreetFood #CulinaryArts #FoodLovers #Foodiegram #FoodInspiration #GourmetDosa #CulturalHeritage #TastyTreats #DosaLove #ChefVishnu #EpicureanDelight #GlobalCookoff #FoodChallenge #RecordBreakingFood

18 ಅಕ್ಟೋಬರ್ 2025

ದೀಪ..


 ದೀಪ..


ಹಣ ಅಂತಸ್ತು ನೋಡುತಾ
ಮಾಡದಿರು ಎಂದಿಗೂ ತರತಮ|
ದೀಪವ ನೋಡಿ ಕಲಿ ಅದು
ಓಡಿಸುವುದು ದೀನ ದಲಿತರ
ಮನೆ ಮನಗಳ  ತಮ||

ಸಿಹಿಜೀವಿ ವೆಂಕಟೇಶ್ವರ

17 ಅಕ್ಟೋಬರ್ 2025

ಹೇಳಿಕೊಳ್ಳುವಂತಹ ಸಿನಿಮಾ "ಏಳು ಮಲೆ"




ಹೇಳಿಕೊಳ್ಳುವಂತಹ ಸಿನಿಮಾ "ಏಳು ಮಲೆ"

ಅನಿವಾರ್ಯ ಕಾರಣದಿಂದ ಥಿಯೇಟರ್ ನಲ್ಲಿ ಏಳುಮಲೆ ಸಿನಿಮಾ ನೋಡಲಾಗಿರಲಿಲ್ಲ.ಇಂದು ಓಟಿಟಿ ಯಲ್ಲಿ ನೋಡಿದೆ.ಬಹಳ ಅಚ್ಚುಕಟ್ಟಾಗಿ ಚಿತ್ರಕತೆ ಬರೆದು ನಿರ್ದೇಶನ ಮಾಡಿದ ಪುನಿತ್ ರಂಗಸ್ವಾಮಿಯವರು ಕನ್ನಡ ಚಿತ್ರ ರಂಗಕ್ಕೆ ಸಿಕ್ಕ ಮತ್ತೊಬ್ಬ ಭರವಸೆಯ ನಿರ್ದೇಶಕ ಎಂದೆನಿಸಿತು.ಇಂತಹ ಹೊಸಬರನ್ನು ಪ್ರೋತ್ಸಾಹ ಮಾಡಿ ತೆರೆಮರೆಯಲ್ಲಿ ಸೂಕ್ತ ಮಾರ್ಗದರ್ಶನ ನೀಡಿದ ಕ್ರಿಯೇಟಿವ್ ಹೆಡ್ ಕಂ ನಿರ್ಮಾಪಕರಾದ ತರುಣ್ ಕಿಶೋರ್ ಸುಧೀರ್ ಮುಂದೆಯೂ ಇಂತಹ ಸಿನಿಮಾ ನೀಡಲೆಂದು ಆಶಿಸುವೆ.
ಕಥೆಯೇನೂ ಹೊಸದಲ್ಲ.ಅದೇ ಮೇಲ್ವರ್ಗದ ಹುಡುಗಿ ಬಡ ಹುಡುಗ, ಬೇರೆ ಭಾಷೆ, ನಾಡಿನ ಪ್ರೇಮಿಗಳ ಕಥೆ.ಮನೆಯವರ ವಿರೋಧ ಪ್ರೇಮಿಗಳ ಹೋರಾಟ.ಆದರೆ ಆ ಕಥೆಯನ್ನು ನಿರೂಪಿಸಿರುವ ರೀತಿ ಬಹಳ ಚೆನ್ನಾಗಿದೆ.ಆರಂಭದಲ್ಲಿ ಮನೆಯಲ್ಲಿ ಆರಾಮಾಗಿ ಮಲಗಿಕೊಂಡು ಸಿನಿಮಾ ನೋಡುತ್ತಿದ್ದ ನಾನು ಅರ್ಧ ಸಿನಿಮಾ ಆದಾಗ ನನಗರಿವಿಲ್ಲದೇ ಎದ್ದು ಕೂತಿದ್ದೆ. ಪ್ರತಿ ಹತ್ತು ನಿಮಿಷಕ್ಕೊಂದು ಟ್ವಿಸ್ಟ್ ಗಳು  ಉಸಿರು ಬಿಗಿ ಹಿಡಿದು ಸಿನಿಮಾ ನೋಡುವಂತೆ ಮಾಡಿದವು.ಕೊನೆಯ ಶಾಟ್ ನಲ್ಲೂ ಏನೋ ಟ್ವಿಸ್ಟ್ ಇದೆ ಅಂತ ಊಹೆ ಮಾಡುವಾಗಲೇ ಟೈಟಲ್ ಕಾರ್ಡ್ ಬಂತು.ಅಂದರೆ ಪಾರ್ಟ್ ಟೂ   ಬರಬಹುದು ಎಂದು ನನ್ನ ನಿರೀಕ್ಷೆ.


ಮೊದಲ ಸಿನಿಮಾಗಿಂತ ಈ ಸಿನಿಮಾದಲ್ಲಿ ಡಿ ಗ್ಲಾಮ್ ಪಾತ್ರದಲ್ಲಿ ರಾಣಾ ನಟನೆಯಲ್ಲಿ ಪಳಗಿದ್ದಾರೆ. ಕಷ್ಟ ಕಾಲದಲ್ಲಿ ಪ್ರೇಮಿಯ ಸೇರುವ ಅವರ ಕಾತುರದ ಅಭಿನಯ ನೋಡಿದ ನೋಡುಗರು ಜಗ್ಗಪ್ಪ, ಮತ್ತು ಕಿಶೋರ್ ಅವರನ್ನು ಬೈಯ್ದುಕೊಳ್ಳುವ ರೇಂಜ್ ಗೆ ಅಭಿನಯ ಮಾಡಿದ್ದಾರೆ. ಎಂದಿನಂತೆ ಕಿಶೋರ್ ತಮ್ಮ ಅಭಿನಯದ ಮೂಲಕ ನೆಗೆಟಿವ್ ಶೇಡ್ ನ ಪೋಲಿಸ್ ಅಧಿಕಾರಿಯಾಗಿ ಗಮನ ಸೆಳೆಯುತ್ತಾರೆ. ಅನುಭವಸ್ಥ ಹೆಡ್ ಕಾನ್ಸ್‌ಟೇಬಲ್ ಆಗಿ ನಾಗಾಭರಣ ಪ್ರೇಕ್ಷಕರ ಮನ ಗೆಲ್ಲುತ್ತಾರೆ. ತೆಲುಗಿನ ಜಗಪತಿ ಬಾಬು ಕೆಲವೇ ದೃಶ್ಯಗಳಲ್ಲಿ ಬಂದರೂ ಅವರ ಅಭಿನಯ ಸೂಪರ್. ಚಿತ್ರದ ನಡುವೆ ಕಾಡುಗಳ್ಳ ವೀರಪ್ಪನ್ ಹತನಾಗುವ ದೃಶ್ಯಗಳನ್ನು ಬ್ಲೆಂಡ್ ಮಾಡಿರುವುದು ವರ್ಕ್ ಔಟ್ ಆಗಿದೆ.  ಸಿನಿಮಾದ ಗೆಲುವಿನಲ್ಲಿ ಛಾಯಾಗ್ರಾಹಕ ಅದ್ವೈತ ಗುರು ಮೂರ್ತಿ ಕೊಡುಗೆ ಮರೆಯಲಾಗದು.ಡಿ ಇಮ್ಮಾನ್ ರವರ ಹಾಡುಗಳು ಸಂದರ್ಭಕ್ಕೆ ತಕ್ಕಂತೆ ಹೊಂದಿಕೆಯಾಗಿವೆ.ಹಿನ್ನೆಲೆಯಲ್ಲಿ ಅವರು ನೀಡಿದ ಸಂಗೀತ ಚಿತ್ರದ ಮತ್ತೊಂದು ಪ್ಲಸ್ ಪಾಯಿಂಟ್.
ಒಟ್ಟಾರೆ ಕುಟುಂಬ ಸಮೇತ ನೋಡಬಹುದಾದ ಚಿತ್ರ ಏಳುಮಲೆ.ನೀವು ನನ್ನ ಹಾಗೆ ಥಿಯೇಟರ್ ನಲ್ಲಿ ಚಿತ್ರ ಮಿಸ್ ಮಾಡಿಕೊಂಡಿದ್ದರೆ.ಜೀ5ನಲ್ಲಿ ನೋಡಿ..

ಸಿಹಿಜೀವಿ ವೆಂಕಟೇಶ್ವರ.
ತುಮಕೂರು


 

26 ಸೆಪ್ಟೆಂಬರ್ 2025

ನನ್ನ ಅಕೌಂಟ್ ನಲ್ಲಿ ಒಂದು ಪೈಸೇನೂ ಇರಬಾರದು!


 ನನ್ನ ಅಕೌಂಟ್ ನಲ್ಲಿ ಒಂದು ಪೈಸೇನೂ ಇರಬಾರದು!



ಎಸ್ ಎಲ್ ಬೈರಪ್ಪನವರು ಓರ್ವ ಶ್ರೇಷ್ಠ ಕಾದಂಬರಿಕಾರ ಎಂಬುದು ಎಷ್ಟು ಸತ್ಯವೋ ಅವರೊಬ್ಬ ದಾರ್ಶನಿಕ, ಸಂಸ್ಕೃತಿ ಪರಿಚಾರಕ, ನೇರ ನಡೆ ನುಡಿಯ ಮಾನವೀಯ ಮೌಲ್ಯಗಳನ್ನು ಅಳವಡಿಸಿಕೊಂಡು ಬಾಳಿದ ಮಹಾನ್ ಚೇತನ ಎಂಬುದು ಅಷ್ಟೇ ಸತ್ಯ.
ಭೈರಪ್ಪ ರವರ ಬಹುತೇಕ ಕೃತಿಗಳನ್ನು ಓದಿರುವೆ.ಕೆಲವನ್ನು ಮತ್ತೆ ಮತ್ತೆ ಓದಿದ್ದೇನೆ. ಕೆಲ ಕೃತಿಗಳ ಬಗ್ಗೆ ನನ್ನ ಲಿಖಿತ ಅಭಿಪ್ರಾಯಗಳನ್ನು ಬರೆದು ಪತ್ರಿಕೆ ಮತ್ತು ಪುಸ್ತಕಗಳಲ್ಲೂ ಪ್ರಕಟಿಸಿರುವೆ.
ಬೈರಪ್ಪ ರವರ ನಿಷ್ಠುರವಾದ ಮಾತುಗಳು ನನ್ನ ಗಮನ ಸೆಳೆದವು.  ಇತರರು ಏನೆಂದು ಕೊಂಡಾರು ಎಂದು ಯೋಚಿಸದೇ ಆನೆ ನಡೆದದ್ದೇ ದಾರಿ ಎಂದು ಬದುಕಿ ತೋರಿಸಿದರು.
ಇತ್ತೀಚಿನ ದಿನಗಳಲ್ಲಿ ಅವರೊಂದು ಹೇಳಿಕೆ ನೀಡಿದರು."ನಾನು ಸಾಯೋವಾಗ ನನ್ನ ಅಕೌಂಟ್ ನಲ್ಲಿ ಒಂದು ಪೈಸೆಯೂ‌ ಇರಬಾರದು ಎಲ್ಲವನ್ನೂ ಫ್ಲಷ್  ಮಾಡಿಬಿಡಬೇಕು" ಈ ಮಾತು ಕೇಳಿ ಭೈರಪ್ಪನವರ ಬಗ್ಗೆ ಇದ್ದ ಅಭಿಮಾನ ನೂರ್ಮಡಿಯಾಯಿತು. ಹೌದು ಅದರಂತೆ ನಡೆದು ತೋರಿಸಿದರು. ಅವರ ಇದುವರೆಗಿನ ಸಂಪಾದನೆ ಮತ್ತು ಮುಂದೆ ಅವರ ಪುಸ್ತಕಗಳಿಂದ ಬರುವ ರಾಯಲ್ಟಿ ಹಣವನ್ನು ಒಂದು ಟ್ರಸ್ಟ್ ಗೆ  ವರ್ಗಾಯಿಸಿ ಬಡ ಮಕ್ಕಳ ವಿದ್ಯಾಭ್ಯಾಸಕ್ಕೆ ವಿನಿಯೋಗವಾಗಲು ಕ್ರಮ ಕೈಗೊಂಡಿದ್ದಾರೆ. ತನ್ಮೂಲಕ ಇತರರಿಗೆ ಮಾದರಿಯಾಗಿದ್ದಾರೆ.ಅನವಶ್ಯಕವಾಗಿ ಎಸ್ ಎಲ್ ಬಿ ಯವರನ್ನು ಟೀಕಿಸುವ ಪೂರ್ವಾಗ್ರಹ ಪೀಡಿತರೂ ಸಹ ಇವರ ಇಂತಹ ಜನೋಪಯೋಗಿ ನಡೆಗಳನ್ನು ಕಂಡು ಬಾಯಿ ಮುಚ್ಚಿಕೊಂಡು ಮೆಚ್ಚುಗೆ ಸೂಚಿಸಿದ ಪ್ರಸಂಗಗಳಿವೆ.
ಡಾಲರ್ ಗಟ್ಟಲೆ ಸಂಪಾದಿಸಿ ಐಶಾರಾಮಿ ಜೀವನ ನಡೆಸಲು ಉನ್ನತ ಹುದ್ದೆಗೆ ಏರಲು ಅವಕಾಶಗಳಿದ್ದರೂ ನಯವಾಗಿ ನಿರಾಕರಿಸಿ ಲಕ್ಷ್ಮಿಯ ಹಿಂದೆ ಹೋಗದೇ  ಸರಸ್ವತಿ ಸೇವೆಯನ್ನು ಮಾಡಿದ್ದಕ್ಕಾಗಿ ಕರ್ನಾಟಕಕ್ಕೆ ಮೊದಲ‌ "ಸರಸ್ವತಿ ಸಮ್ಮಾನ್" ಹುಡುಕಿಕೊಂಡು ಬಂತು. ನಾನೂ ಬಾಲ್ಯದಲ್ಲಿ ಹಲವು ಸಂಕಷ್ಟಗಳನ್ನು ಅನುಭವಿಸಿದರೂ ಬೈರಪ್ಪರವರ ಬಾಲ್ಯದ ಕಷ್ಟಗಳ ಮುಂದೆ ನನ್ನದೇನೂ ಅಲ್ಲ ಎಂದು ಸಮಾಧಾನ ಪಟ್ಟುಕೊಳ್ಳುವೆ.ಆನಂದಸ್ವಾಮಿಯವರ ಪುಸ್ತಕಗಳು, ಅವರ ಫಿಲಾಸಫಿ ಗುರುಗಳಾದ ಯಮುನಾಚಾರ್ಯ ರವರು ಅವರ ಮೇಲೆ ಬಹು ಪ್ರಭಾವ ಬೀರಿದ ವ್ಯಕ್ತಿತ್ವಗಳು ಎಂದು ಅವರು ಆಗಾಗ್ಗೆ ಹೇಳುತ್ತಿದ್ದರು.ಇದರ ಜೊತೆಯಲ್ಲಿ ಅವರ ದೇಶ ಸುತ್ತುವ, ಕೋಶ ಓದುವ, ಸಾಮಾನ್ಯ ಜನರೊಂದಿಗೆ ಬೆರಯುವ, ಕ್ಷೇತ್ರಕಾರ್ಯವನ್ನು ಮಾಡಿ ಅನುಭವದ ಮೂಲಕ ಬರೆಯುತ್ತಿದ್ದ ರೀತಿಗೆ ಇಂದು ನಮ್ಮ ಮುಂದೆ ಕ್ಲಾಸಿಕ್ ಕೃತಿಗಳಿವೆ.ನಮ್ಮ ದೇಶದ ಬೇರೆ ಭಾಷೆಗಳು, ಅಷ್ಟೇ ಏಕೆ ವಿದೇಶಿ ಭಾಷೆಗಳಿಗೂ ಅವರ ಕೃತಿಗಳು ಅನುವಾದಗೊಂಡು ಈಗಲೂ ಅವರ ಕೃತಿಗಳನ್ನು ಓದುತ್ತಿದ್ದಾರೆ.ಆ ಮೂಲಕ ಭೈರಪ್ಪನವರು ಚಿರಂಜೀವಿಯಾಗಿರುತ್ತಾರೆ.
ಭೈರಪ್ಪನವರ ಮತ್ತೊಂದು ಮಾತನ್ನು ನಾನು ಆಗಾಗ್ಗೆ ಜ್ಞಾಪಿಸಿಕೊಂಡು ನನಗೆ ನಾನೇ ಎಚ್ಚರಿಸಿಕೊಳ್ಳುತ್ತೇನೆ. ಅದೇನೆಂದರೆ "ಊರ ದೇವರು ಊರಾಡಿದಷ್ಟೂ ಮೂಲ ವಿಗ್ರಹಕ್ಕೆ ಬೆಲೆ ಕಡಿಮೆ ಆಗುತ್ತದೆ" ನಮ್ಮಲ್ಲಿ ಬಹಳ ಜನ ನಮ್ಮ ನೈಜ ಸಾಹಿತ್ಯ ಶಕ್ತಿಯನ್ನು ಹೊರತರುವ ಬದಲಿಗೆ ಅಲ್ಪ ಬರೆದು ಅದನ್ನೇ ವಿಜೃಂಭಿಸುವ ಮತ್ತು ಸೆಲಬ್ರೇಟ್ ಮಾಡಿಕೊಂಡು  ಸೆಲೆಬ್ರಿಟಿಯಾಗಿ ಸ್ವಯಂ ಬಿಂಬಿಸಿಕೊಳ್ಳುವವರಿಗೆ ಅವರ ಮಾತುಗಳು ನೆನಪಾಗಬೇಕು.
  ಭಾರತೀಯ ತತ್ತ್ವಶಾಸ್ತ್ರದಲ್ಲಿ ಬರುವ   ಮತ್ತೊಂದನ್ನು ಅವರು ಆಗಾಗ್ಗೆ ಹೇಳುತ್ತಿದ್ದ ಮಾತು ನನಗೆ ಪದೇ ಪದೇ ನೆನಪಾಗುತ್ತದೆ.ಅದು" The lower value should always  serve the higher, the higher is always valuable than lower "

ಸಮಾಜದಲ್ಲಿ ಮೌಲ್ಯಗಳ ಅಧಃಪತನವಾಗುತ್ತಿರುವ ಈ ಕಾಲಘಟ್ಟದಲ್ಲಿ ಭೈರಪ್ಪನವರ ಜೀವನವು ನಮಗೆ ಪ್ರೇರಣೆಯಾಗಲಿ.

ಸಿಹಿಜೀವಿ ವೆಂಕಟೇಶ್ವರ.

16 ಸೆಪ್ಟೆಂಬರ್ 2025

ಇಂದು ಓಜೋನ್ ದಿನ .


 ಪ್ರತಿವರ್ಷ ಸೆಪ್ಟೆಂಬರ್ 16ರಂದು ವಿಶ್ವ ಓಜೋನ್ ದಿನವನ್ನು ಆಚರಿಸಲಾಗುತ್ತದೆ.

ಓಜೋನ್ ಒಂದು ಅನಿಲ (Gas). ಇದರ ರಾಸಾಯನಿಕ ಸೂತ್ರ O₃ ಅಂದರೆ    ಮೂರು ಆಮ್ಲಜನಕ ಅಣುಗಳು!

ಬಣ್ಣವಿಲ್ಲದ, ಆದರೆ ಸ್ವಲ್ಪ “ಹುರಿ” ವಾಸನೆಯಿರುವ ಅನಿಲ.

ಇದು ವಾತಾವರಣದಲ್ಲಿ ಸಹಜವಾಗಿ ಉಂಟಾಗುತ್ತದೆ.


ಭೂಮಿಯ ವಾತಾವರಣದ ಸ್ಟ್ರಾಟೋಸ್ಫಿಯರ್ (Stratosphere) ಭಾಗದಲ್ಲಿ (ಸುಮಾರು 10–50 ಕಿಮೀ ಎತ್ತರದಲ್ಲಿ) ಓಜೋನ್ ಹೆಚ್ಚು ಸಾಂದ್ರತೆಯಲ್ಲಿ ಇರುತ್ತದೆ.

ಈ ಪದರವನ್ನು ಓಜೋನ್ ಪದರ (Ozone Layer) ಎಂದು ಕರೆಯಲಾಗುತ್ತದೆ.

ಇದು ಸೂರ್ಯನಿಂದ ಬರುವ ಅಲ್ಟ್ರಾ ವೈಲೆಟ್ (UV) ಕಿರಣಗಳನ್ನು ಶೋಷಿಸುತ್ತದೆ, ಭೂಮಿಯ ಜೀವಿಗಳಿಗೆ ರಕ್ಷಣೆ ನೀಡುತ್ತದೆ  ಕುಡಿಯುವ ನೀರಿನ ಸ್ವಚ್ಛತೆಗೆ ಓಜೋನ್ ಬಳಸಲಾಗುತ್ತದೆ. ಗಾಳಿ ಮತ್ತು ವಸ್ತುಗಳನ್ನು ಹಾನಿಕಾರಕ ಜೀವಾಣುಗಳಿಂದ ಮುಕ್ತಗೊಳಿಸಲು ಸಹ ಓಜೋನ್ ಉಪಯುಕ್ತ.


ಕೈಗಾರಿಕೆಯಲ್ಲಿ ಬಳಸುವ CFCs (Chlorofluorocarbons), ಏರ್‌ಕಂಡಿಷನರ್, ಫ್ರಿಜ್ ಗ್ಯಾಸ್‌ಗಳು, ಸ್ಪ್ರೆಗಳಲ್ಲಿ ಬಳಸುವ ರಾಸಾಯನಿಕಗಳು ಓಜೋನ್ ಪದರವನ್ನು ಹಾನಿಗೊಳಿಸುತ್ತವೆ.


ನಮ್ಮ ಓಜೋನ್ ಪದರ ರಕ್ಷಿಸೋಣ ತನ್ಮೂಲಕ ನಮ್ಮ ರಕ್ಷಣೆ ಮಾಡಿಕೊಳ್ಳೋಣ.


ಸಿಹಿಜೀವಿ ವೆಂಕಟೇಶ್ವರ

ತುಮಕೂರು.

11 ಸೆಪ್ಟೆಂಬರ್ 2025

ಕುಲದೀಪ.


 


ಕುಲದೀಪ..

ಭಾರತದ ವಿರುದ್ಧ ಯು ಎ ಇ
ಹೀನಾಯವಾಗಿ ಸೋತರು ಪಾಪ!
ಇದಕ್ಕೆ ಪ್ರಮುಖ ಕಾರಣ
ನಮ್ಮ ಸ್ಪಿನ್ ಬೌಲರ್  ಕುಲದೀಪ!!

ಸಿಹಿಜೀವಿ ವೆಂಕಟೇಶ್ವರ
ತುಮಕೂರು
KuldeepYadav #AsiaCupCricket #TeamIndia #ICC #BCCI #CricketHighlights #CricketLovers #IndiaWins #SpinMaster #CricketFans #Cupphaven #CrickerLife #IndianCricket #SportingMoments #BCCI2023 #AsiaCup2023 #FoundationOfWinners #CricketPassion #KuldeepMagic #Champions

09 ಸೆಪ್ಟೆಂಬರ್ 2025

ವಿಶೇಷ ಚೇತನನಾದರೂ ಬಹುಮುಖ ಪ್ರತಿಭೆಯಾಗಿ ಪ್ರಕಾಶಿಸುತ್ತಿರುವ ಪ್ರಕಾಶ್.


 




ವಿಶೇಷ ಚೇತನನಾದರೂ ಬಹುಮುಖ ಪ್ರತಿಭೆಯಾಗಿ ಪ್ರಕಾಶಿಸುತ್ತಿರುವ ಪ್ರಕಾಶ್.

ಸರ್ವಾಂಗಗಳೂ ಸುಸ್ಥಿತಿಯಲ್ಲಿದ್ದರೂ ಸೋಮಾರಿಗಳಾಗಿ ಕಾಲ ಹರಣ ಮಾಡುವ ಹಲವಾರು ಜನರ ನಡುವೆ ತಮ್ಮ ದೌರ್ಬಲ್ಯಗಳನ್ನು ಮೆಟ್ಟಿ ನಿಂತು ಸಮಾಜದಲ್ಲಿ ತಲೆ ಎತ್ತಿಕೊಂಡು ಜೀವನ ಸಾಗಿಸುವ ವಿಶೇಷ ಚೇತನಗಳು ನಮ್ಮ ಮಧ್ಯ ಇರುವುದನ್ನು ಕಾಣುತ್ತೇವೆ.ಅಂತಹ ವಿಶೇಷ ಚೇತನ ಸಾಧಕರೊಬ್ಬರನ್ನು ಇಂದು ನಾನು ನಿಮಗೆ ಪರಿಚಯ ಮಾಡಿಕೊಡುವೆ.

ಹೆಸರು  ಪ್ರಕಾಶ್ ಆರ್ ಸಾಹಿತ್ಯ ವಲಯದಲ್ಲಿ ಅಮೃತ ಹಸ್ತ ಪ್ರಕಾಶ್ ಎಂದು ಗುರ್ತಿಸಿಕೊಂಡ ಇವರು ಕ್ರೀಡಾ ಕ್ಷೇತ್ರದಲ್ಲಿ ದಿವ್ಯಾಂಗ  ಸ್ಪೋರ್ಟ್ಸ್ ಪ್ರಕಾಶ್ ಎಂದು ಹೆಸರು ಮಾಡಿದ್ದಾರೆ.
ಬಾಲ್ಯದಲ್ಲಿ ಸಾಮಾನ್ಯ ಬಾಲಕನಾಗಿದ್ದ ಪ್ರಕಾಶ್ ಚುರುಕಿನ ಚಟುವಟಿಕೆಗಳಿಂದ ನೆರೆಹೊರೆಯವರ ಗಮನ ಸೆಳೆದಿದ್ದರು.ವಿಧಿಯ ಕ್ರೂರತೆಯು ಕೆಲವೊಮ್ಮೆ ನಮ್ಮ ಜೀವನದಲ್ಲಿ ಕೆಟ್ಟ ಘಳಿಗೆ ತಂದು ನಮ್ಮ ಆತ್ಮ ಶಕ್ತಿಗೆ ಸವಾಲಾಗಿ ನಿಲ್ಲುತ್ತದೆ. ಅಂತದೇ ಘಟನೆ ನಮ್ಮ ಪ್ರಕಾಶ್ ರವರ ಜೀವನದಲ್ಲೂ ಆಯಿತು. ಇದ್ದಕ್ಕಿದ್ದಂತೆ ಅವರ ಕಾಲುಗಳು ಸ್ವಾಧೀನ ಕಳೆದುಕೊಂಡವು. ಪೋಷಕರು ಆಘಾತದಿಂದ ವೈದ್ಯಕೀಯ ಚಿಕಿತ್ಸೆಯನ್ನು ಕೊಡಿಸಿದರೂ ಉಪಯೋಗವಾಗಲಿಲ್ಲ.ವೀಲ್ ಚೇರ್ ಏರಿ ಶಾಲೆಯಲ್ಲಿ ಕಲಿತ ಪ್ರಕಾಶ್ ರವರಿಗೆ ಮತ್ತೊಂದು ಆಘಾತ ಕಾದಿತ್ತು. ಕ್ರಮೇಣವಾಗಿ ಅವರ  ಕಿವಿಗಳು ತಮ್ಮ ಗ್ರಹಣ ಶಕ್ತಿಯನ್ನು ಕಳೆದುಕೊಂಡವು.ಎದೆಗುಂದದ ಅವರು ತಮ್ಮ ಪೋಷಕರ ಬೆಂಬಲದಿಂದ ವಿದ್ಯಾಭ್ಯಾಸ ಮುಂದುವರೆಸಿ ಗೌರಿಬಿದನೂರಿನ ಶಾಲೆಯೊಂದರಲ್ಲಿ ಶಿಕ್ಷಕನಾಗಿ ಕಾರ್ಯ ಮಾಡಲು ಶುರುಮಾಡುತ್ತಾರೆ.ಆಗಲೇ ಅವರು ನನಗೆ ಪರಿಚಯವಾಗಿದ್ದು.ಹನಿ ಹನಿ ಇಬ್ಬನಿ ಸಾಹಿತ್ಯ ಬಳಗದಿಂದ ನಮ್ಮ ಪರಿಚಯ ಸ್ನೇಹವಾಗಿ ಮಾರ್ಪಾಡಾಗಿ ಇಂದಿಗೂ ಮುಂದುವರೆದಿದೆ.





ಗೌರಿಬಿದನೂರಿನಿಂದ ಪ್ರಕಾಶ್ ತುಮಕೂರಿಗೆ ಬಂದರು.ನಾನೂ ಬಂದೆ.ಗೌರಿಬಿದನೂರಿನಲ್ಲಿ ವಿಶೇಷ ಚೇತನ ಪ್ರಕಾಶ್ ಶಿಕ್ಷಕ ಹಾಗೂ ಕವಿಯಾಗಿ ಗುರ್ತಿಸಿಕೊಂಡಿದ್ದರೆ ತುಮಕೂರಿಗೆ ಬಂದು ಓರ್ವ ದಿವ್ಯಾಂಗ ಕ್ರೀಡಾಪಟುವಾಗಿ,ಸಮಾಜ ಸೇವಕನಾಗಿ ಸಂಘಟಕನಾಗಿ ಹೊರಹೊಮ್ಮಿದ್ದಾರೆ.ಅವರ ಸಾಧನೆಗಳು ಇತರ ದಿವ್ಯಾಂಗರಿಗೆ ಪ್ರೇರಣೆಯಾಗಿವೆ.



ತುಮಕೂರು ಡಿಸ್ಟ್ರಿಕ್ಟ್  ದಿವ್ಯಾಂಗ ಸ್ಪೋರ್ಟ್ಸ್ ಅಸೋಸಿಯೇಷನ್
ಸಂಸ್ಥಾಪಕ ಅಧ್ಯಕ್ಷರಾಗಿ ಹಾಗೂ 
ವಿದ್ಮಹಿ ವಿಕಲಚೇತನರ ಸೇವಾ ಟ್ರಸ್ಟ್  ಸಂಸ್ಥಾಪಕ  ಅಧ್ಯಕ್ಷರಾಗಿ ಹಲವಾರು ಕಾರ್ಯಕ್ರಮಗಳನ್ನು ಸಂಘಟಿಸುವ ಮೂಲಕ ವಿಶೇಷ ಚೇತನರಿಗೆ ಚೇತನರಾಗಿ ನಿಂತಿದ್ದಾರೆ.ತುಮಕುರು  ಜಿಲ್ಲೆಯಲ್ಲೇ ರಾಜ್ಯ ಮಟ್ಟದ ವೀಲ್ ಚೇರ್ ಕ್ರಿಕೆಟ್ ಆಡಿದ ಮೊದಲಿಗರಾಗಿ ಗುರ್ತಿಸಿಕೊಂಡ ಪ್ರಕಾಶ್
ಜಿಲ್ಲೆಯಲ್ಲಿ ದಿವ್ಯಾಂಗರ ಕ್ರೀಡೆಯನ್ನು ಪರಿಚಯಿಸಿ ಕತ್ತಲಲ್ಲಿರುವ ದಿವ್ಯಾಂಗರನ್ನು ಬೆಳಕಿಗೆ ತರಲು ತುಮಕೂರು ಜಿಲ್ಲಾ ದಿವ್ಯಾಂಗ  ಸ್ಪೋರ್ಟ್ಸ್ ಅಕಾಡೆಮಿಯನ್ನು  ತೆರೆದು 30 ಕ್ಕೂ ಹೆಚ್ಚು ದಿವ್ಯಾಂಗರಿಗೆ ಕ್ರೀಡಾ ತರಬೇತಿ ನೀಡಿ ರಾಷ್ಟ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಅಡುವಂತೆ ಮಾರ್ಗದರ್ಶನ ನೀಡಿದ್ದಾರೆ. ಇವರ ನೇತೃತ್ವದಲ್ಲಿ
ಬೆಳಗಾವಿಯಲ್ಲಿ ನಡೆದ ಕರ್ನಾಟಕ ಪ್ರೀಮಿಯರ್ ಲೀಗ್  ವೀಲ್ ಚೇರ್ ಕ್ರಿಕೆಟ್ ಹಾಗೂ
ಭದ್ರಾವತಿಯಲ್ಲಿ ನಡೆದ ರಾಜ್ಯ ಮಟ್ಟದ ಕ್ರಿಕೆಟ್‌ ಟೂರ್ನಮೆಂಟ್ಗಳಲ್ಲಿ
ತುಮಕೂರು ಜಿಲ್ಲೆಗೆ  ದ್ವಿತೀಯ ಸ್ಥಾನ ಲಭಿಸಿದೆ






ಇದರ ಜೊತೆಗೆ ರಾಜ್ಯ ಮತ್ತು ರಾಷ್ಟ್ರ ಮಟ್ಟದ ದಿವ್ಯಾಂಗರ ವೀಲ್ ಚೇರ್ ಪ್ಯಾರ ಬ್ಯಾಡ್ಮಿಟನ್ ನಲ್ಲಿ ಭಾಗವಹಿಸಿದ್ದಾರೆ.
ರಾಜ್ಯ ಮಟ್ಟದ ದಿವ್ಯಾಂಗರ ಕ್ರೀಡೆಗಳನ್ನು ನಡೆಸುವ ಮೂಲಕ ದಿವ್ಯಾಂಗರಲ್ಲಿ ಆತ್ಮಸ್ಪೈರ್ಯ ತುಂಬುತ್ತಿದ್ದಾರೆ ಇವರ ಪರಿಶ್ರಮದಿಂದ
ತುಮಕುರು ಜಿಲ್ಲೆಯಿಂದ  ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಪಂದ್ಯಾವಳಿಯಲ್ಲಿ  8 ಜನ ಆಯ್ಕೆ ಆಯ್ಕೆಯಾಗಿದ್ದಾರೆ.
ದಿವ್ಯಾಂಗರ ಕ್ರೀಡಾ ಪಟುಗಳಿಗೆ ಅಗತ್ಯವಾದ  ಶೂಸ್ ಮತ್ತು ಟೀ ಶರ್ಟ್ ಗಳನ್ನು ನೀಡಿ ಸಹಾಯ ಮಾಡುತ್ತಿದ್ದಾರೆ ಮುಂಬೈನಲ್ಲಿ ನಡೆದ ನ್ಯಾಷನಲ್ ವೀಲ್ ಚೆರ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ರಾಜ್ಯವನ್ನು   ಪ್ರತಿನಿಧಿಸಿದ್ದಾರೆ.ತುಮಕೂರು ಡಿಸ್ಟ್ರಿಕ್ ದಿವ್ಯಾಂಗ ಸ್ಪೋರ್ಟ್ಸ್ ಅಕಾಡೆಮಿಯ ಮೂಲಕ ವಿಕಲಚೇತನರ ಕ್ರೀಡಾ ಕಾರ್ಯಕ್ರಮಗಳನ್ನು ಅಯೋಜಿಸಿದ್ದಾರೆ.
ದೇಶದಲ್ಲಿಯೇ ಮೊದಲ ಬಾರಿಗೆ ರಾಜ್ಯ ಮಟ್ಟದ ವೀಲ್ ಚೇರ್ ವಾಲಿಬಾಲ್ ಪಂದ್ಯಾವಳಿಯನ್ನು ನಡೆಸುವ ಮೂಲಕ ರಾಜ್ಯಕ್ಕೆ  ಮಾದರಿಯಾಗಿದ್ದಾರೆ.

ನ್ಯಾಷನಲ್  ಬ್ಯಾಸ್ಕೆಟ್ಬಾಲ್ ಚಾಂಪಿಯನ್ಶಿಪ್ ನಲ್ಲಿ  ಭಾಗವಹಿಸಿ ದ್ವಿತೀಯ ಸ್ಥಾನ ಪಡೆದಿದ್ದಾರೆ. 
ನ್ಯಾಷನಲ್ ಅಥ್ಲೆಟಿಕ್ಸ್ ಕ್ರೀಡಾ ಕೂಟದಲ್ಲಿ  ಕರ್ನಾಟಕ ತಂಡಕ್ಕೆ ಮ್ಯಾನೇಜರ್ ಆಗಿ ಆಯ್ಕೆಯಾಗಿದ್ದಾರೆ.
2025 ರ ಅಗಸ್ಟ್ 15ನೇ ತಾರೀಕು  ರಾಜ್ಯ ಮಟ್ಟದ  ವೀಲ್ ಚೇರ್ ಬ್ಯಾಸ್ಕೆಟ್ಬಾಲ್  ತರಬೇತಿ ಶಿಬಿರವನ್ನು ಆಯೋಜಿಸಿದರು.ಇದೇ ವರ್ಷ ಪ್ಯಾರಾಸಿಟ್ಟಿಂಗ್ ಥ್ರೋ ಬಾಲ್ ನಲ್ಲಿ ನಲ್ಲಿ ಭಾಗವಹಿಸಿ ಮೂರನೇ ಸ್ಥಾನ ಪಡೆದಿದ್ದಾರೆ. ಶ್ರೀ ಲಂಕಾ ದಲ್ಲಿ ನಡೆಯುವ ಅಂತರಾಷ್ಟ್ರೀಯ ಪ್ಯಾರಾಸಿಟ್ಟಿಂಗ್ ತ್ರೋ ಬಾಲ್ ಗೆ ಆಯ್ಕೆ ಆಗುವ ಮೂಲಕ ಅಂತಾರಾಷ್ಟ್ರೀಯ ಪ್ಯಾರಾ ಅಥ್ಲೀಟ್ ಆಗಿ ಹೊರ ಹೊಮ್ಮಿದ್ದಾರೆ.





ಇನ್ನೂ ಸಾಹಿತ್ಯ ಕ್ಷೇತ್ರದಲ್ಲಿಯೂ ಪ್ರಕಾಶ್ ರವರ ಸಾಧನೆಯೇನು ಕಡಿಮೆಯಿಲ್ಲ.  ಜಿಲ್ಲಾ ಮಟ್ಟದಿಂದ ಹಿಡಿದು ರಾಷ್ಟ್ರ ಮಟ್ಟದವರೆಗೂ 100  ಕ್ಕೂ ಹೆಚ್ಚು ಕವಿಗೋಷ್ಠಿಗಳಿಗೆ ಆಯ್ಕೆ ಆಗಿ ಕವನ ವಾಚಿಸಿದ್ದಾರೆ.ನಾನೂ ಇವರೊಂದಿಗೆ ಹಲವಾರು ವೇದಿಕೆಗಳಲ್ಲಿ ಕವಿತೆ ವಾಚಿಸಿದ್ದೇನೆ. ಇವರ ಕವನಗಳು
ಹಲವಾರು ಪತ್ರಿಕೆಗಳಲ್ಲಿ ಮತ್ತು ಆನ್ ಲೈನ್ ಪತ್ರಿಕೆಗಳಲ್ಲಿ  ಪ್ರಕಟವಾಗಿವೆ.ತುಮಕೂರಿನ ಕನ್ನಡ ಭವನದಲ್ಲಿ ಇವರ ಚೊಚ್ಚಲ ಕೃತಿ
ಅಮೃತಹಸ್ತ 2019 ರಲ್ಲಿ ಬಿಡುಗಡೆಯಾಗಿ ಓದುಗರ ಮೆಚ್ಚುಗೆಯನ್ನು ಗಳಿಸಿದೆ.
ಅಮೃತಹಸ್ತ ಪುಸ್ತಕದ ಮಾರಾಟದಿಂದ ಬಂದ ಹಣದಿಂದ ಅಂಧ ಮಕ್ಕಳಿಗೆ ಸಹಾಯ ಮಾಡಿದ್ದಾರೆ.
ಪ್ರೇಮ ಕಾದಂಬರಿ ಮತ್ತು ದಿವ್ಯಾಂಗರ ಕ್ರೀಡಾ ಲೋಕದ ಕುರಿತು ಕಾದಂಬರಿ ಪ್ರಕಟಣೆ ಗೆ ಸಿದ್ಧವಾಗಿವೆ.

ಪ್ರಕಾಶ್ ರವರ ಸಾಧನೆ ಇಲ್ಲಿಗೇ ನಿಂತಿಲ್ಲ.ಸಮಾಜ ಸೇವೆಯಲ್ಲೂ ತಮ್ಮ ಛಾಪು ಮೂಡಿಸಿದ್ದಾರೆ
ಅಮೃತಹಸ್ತ ಸಂಸ್ಥೆಯ ಮೂಲಕ
  ಬಡತನದಲ್ಲಿರುವ ದಿವ್ಯಾಂಗರಿಗೆ  ವೀಲ್ ಚೇರ್ ಕೊಡಿಸುವ   ಶೂಸ್ ಮತ್ತು ಟೀ ಶರ್ಟ್ ಗಳನ್ನು ಕೊಡಿಸುವ, ಅನಾಥ ಮಕ್ಕಳಿಗೆ ಸಹಾಯ ಮಾಡುವ ಕಾಯಕ ಮಾಡುತ್ತಿದ್ದಾರೆ.ಅಮೃತಸಿಂಚನ ಸಂಸ್ಥೆ ಜೊತೆ ಸರ್ಕಾರಿ ಶಾಲಾ ಮಕ್ಕಳಿಗೆ ಮತ್ತು ವಿಕಲ ಚೇತನ ಮಕ್ಕಳಿಗೆ  ನೋಟ್ ಪುಸ್ತಕ ಬ್ಯಾಗ್ ಗಳನ್ನು ಕೊಡಿಸುವ ಮೂಲಕ ಸಹಾಯ ಮಾಡುತ್ತಿದ್ದಾರೆ.

ದಾನಿಗಳ ಸಹಕಾರದಿಂದ  "ಒಂದು ಜೊತೆ ಬಟ್ಟೆ" ಅಭಿಯಾನದಲ್ಲಿ ಭಾಗವಹಿಸಿ ಬಡವರಿಗೆ ಬಟ್ಟೆ ವಿತರಿಸಿದ್ದಾರೆ.ಅಂಧ ಮಕ್ಕಳಿಗೆ ಪ್ರತಿ ವರ್ಷ ಊಟ ಮತ್ತು ಸಿಹಿ ಹಂಚುತ್ತ ಬರುತ್ತಿದ್ದಾರೆ.
ಇವರು ಕ್ರೀಡೆ, ಸಾಹಿತ್ಯ ಮತ್ತು ಸಮಾಜ ಸೇವೆ ಗುರ್ತಿಸಿ ಹಲವಾರು ಸಂಘ ಸಂಸ್ಥೆಗಳು ಪ್ರಶಸ್ತಿ ಮತ್ತು ಪುರಸ್ಕಾರ ನೀಡಿ ಗೌರವಿಸಿದ್ದಾರೆ‌
ಕಸ್ತೂರಿ ಸಿರಿಗನ್ನಡ ವೇದಿಕೆಯು ಕಾವ್ಯಶ್ರೀ ಪ್ರಶಸ್ತಿ ನೀಡಿ ಗೌರವಿಸಿದರೆ  ಬೆಂಗಳೂರಿನ ಕವಿವೃಕ್ಷ ವೇದಿಕೆಯು ಕನ್ನಡ ಸಾಹಿತ್ಯ ರತ್ನ ಪ್ರಶಸ್ತಿ ನೀಡಿ ಪುರಸ್ಕರಿಸಿದೆ.
ಕರ್ನಾಟಕ ಚಲನಚಿತ್ರ ಮಂಡಳಿ ಯುವರತ್ನ ಪ್ರಶಸ್ತಿ ನೀಡಿದೆ.ಧಾರವಾಡದ ಚೇತನ ಫೌಂಡೇಶನ್  ರಾಷ್ಟ್ರೀಯ ಕೆಂಪೇಗೌಡ ಪ್ರಶಸ್ತಿ ನೀಡಿ ಗೌರವಿಸಿದೆ.
ಚಿತ್ರೋದ್ಯಮ ತಂಡವು  75 ಸೈನಿಕರೊಂದಿಗೆ ರಾಷ್ಟ್ರೀಯ ಸೇವಾ ರತ್ನ ಪ್ರಶಸ್ತಿ ನೀಡಿ ಗೌರವಿಸಿದೆ. ದಾವಣಗೆರೆಯ ಸಾಧನ ಚಾರಿಟೇಬಲ್ ಟ್ರಸ್ಟ್  ನವರು ಸಾಧನ ರತ್ನ ಪ್ರಶಸ್ತಿ ನೀಡಿದ್ದಾರೆ.
ಬೆಂಗಳೂರಿನ  ಸ್ನೇಹಜೀವಿ ಗೆಳೆಯರ   ಬಳಗವು  ಸ್ನೇಹಜೀವಿ ದಿವ್ಯಾಂಗ ಕ್ರೀಡೆ ರತ್ನ ಪ್ರಶಸ್ತಿ  ನೀಡಿದರೆ
ಕಾವ್ಯಶ್ರೀ ಚಾರಿಟೇಬಲ್ ಟ್ರಸ್ಟ್ ನವರು ಕಾಯಕ ಶ್ರೀ ಹಾಗೂ ಪ್ರಶಸ್ತಿ ನೀಡಿದ್ದಾರೆ.
ಕಾವ್ಯ ಶ್ರೀ ಚಾರಿಟೇಬಲ್  ಟ್ರಸ್ಟ್  ನವರು ಸುವರ್ಣ ಕನ್ನಡಿಗ ಪ್ರಶಸ್ತಿ  ನೀಡಿ ಗೌರವಿಸಿದ್ದಾರೆ.
ಚಂದನ ಸಾಹಿತ್ಯ ವೇದಿಕೆಯಿಂದ ಚಂದನ ಕ್ರೀಡಾ ರತ್ನ ಪ್ರಶಸ್ತಿ ,
ಚೇತನ ಸೋಶಿಯಲ್ ಕ್ಲಬ್ ನವರು  ಬಾರತ ಭೂಷಣ ನ್ಯಾಷನಲ್ ಅವಾರ್ಡ್ ನೀಡಿ ಪುರಸ್ಕಾರಿಸಿದ್ದಾರೆ.

ಇಂತಹ ಅಸಮಾನ್ಯ ಸಾಧನೆ ಮಾಡಿರುವ ವಿಶೇಷ ಚೇತನ ಪ್ರಕಾಶ್ ರವರ ಸಾಧನೆ ಶ್ಲಾಘನೀಯ. ಅವರ ಸಾಧನೆಗೆ ಮೆಚ್ಚುಗೆ ಸೂಚಿಸಲು ಮತ್ತು ಅವರ ಸಮಾಜಮುಖಿ ಕಾರ್ಯಗಳಿಗೆ ಜೊತೆಗೂಡಲು ಅವರ ಈ  8861443413 ನಂಬರ್ ಗೆ ಸಂಪರ್ಕಿಸಬಹುದು.


ಸಿಹಿಜೀವಿ ವೆಂಕಟೇಶ್ವರ
ತುಮಕೂರು
9900925529

17 ಆಗಸ್ಟ್ 2025

ಕೋಟಿ ಜನರ ಹೃದಯ ಗೆದ್ದು ಕೋಟಿ ಸಂಪಾದಿಸಿದ ಡ್ರೈವರ್..


ಅವರೊಬ್ಬ ಸಾಮಾನ್ಯ ಲಾರಿ ಚಾಲಕ   ದಿನಕ್ಕೆ ₹150 ಮಾತ್ರ ಸಂಪಾದಿಸುತ್ತಿದ್ದ ‌ಅವರ ಬ್ರಾಂಡ್ ಮೌಲ್ಯ ಈಗ 5 ಕೋಟಿ ಇದೊಂತರ ನಮ್ಮ ವಿ ಅರ್ ಎಲ್ ಓನರ್ ವಿಜಯ್ ಸಂಕೇಶ್ವರ ಕಥೆಯಂತಿದ್ದರೂ ಸ್ವಲ್ಪ ವಿಭಿನ್ನ. ನಾನೀಗ ನಿಮಗೆ ಪರಿಚಯ ಮಾಡುವ ವ್ಯಕ್ತಿಯ ಹೆಸರು ರಾಜೇಶ್!  ಜಾರ್ಖಂಡ್ ಮೂಲದ ರಾಜೇಶ್ ರವರ ಪೂರ್ಣ ಹೆಸರು ರಾಜೇಶ್ ರವಾನಿ.  ಈಗಲೂ ಲಾರಿ ಚಾಲಕನಾಗಿ ಕೆಲಸ ಮಾಡುತ್ತಾರೆ. ಬರೀ ಲಾರಿ ಡ್ರೈವರ್ ಆಗಿದ್ರೆ ಅವರು ಲಕ್ಷದಲ್ಲಿ ಒಬ್ಬ ಸಾಮಾನ್ಯ ಡ್ರೈವರ್ ಆಗಿರುತ್ತಿದ್ದರು ಆದರೆ ಯೂಟ್ಯೂಬ್ ಅವರನ್ನು ಸ್ಟಾರ್ ಆಗಿ ಪರಿವರ್ತಿಸುವ ಮೂಲಕ ಕೋಟಿ ಸಂಪಾದಿಸುವ ಡಿಜಿಟಲ್ ಕ್ರಿಯೇಟರ್,ಹಾಗೂ ಯೂಟ್ಯೂಬರ್ ಆಗಿ ಪರಿವರ್ತಿಸಿದೆ.

ಬಿಸಿಲು, ಮಳೆ,ಚಳಿ,ಹಗಲು,ರಾತ್ರಿಗಳ ಪರಿವೆ ಇಲ್ಲದೆ ಸಂಸಾರದಿಂದ ವಾರ, ಮಾಸಗಳ ಕಾಲ ದೂರವಿರುವ ಲಾರಿ ಡ್ರೈವರ್ ಗಳ ಲೋಕವೇ ವಿಶಿಷ್ಟ. ಅಂತಹ ಕಾಯಕ ಮಾಡುವ ರಾಜೇಶ್ ಒಮ್ಮೆ ಕುತೂಹಲಕ್ಕೆ ತನ್ನ ಲಾರಿ ಡ್ರೈವಿಂಗ್ ಅನುಭವಗಳನ್ನು ಪುಟ್ಟ ವೀಡಿಯೋ ಮಾಡಿ ಹರಿಬಿಟ್ಟರು. ಜನರು ಅವರ ವೀಡಿಯೋ ನೋಡಿ ಖುಷಿ ಪಟ್ಟು ಸಬ್ಸ್ಕ್ರೈಬ್ ಲೈಕ್ ಶೇರ್ ಮಾಡಿ ಬೆಂಬಲಿಸಿದರು.ಅಲ್ಲೊಂದು ಪವಾಡವೇ ಜರುಗಿತು.ಈಗ ಅವರ "ಆರ್ ರಾಜೇಶ್ ವ್ಲಾಗ್" ಹೆಸರಿನ ಯೂಟ್ಯೂಬ್ ಚಾನೆಲ್ ಗೆ ಬರೋಬ್ಬರಿ ಕಾಲು ಕೋಟಿ ಚಂದಾದಾರರರು.ಎಂಬತ್ತು ಕೋಟಿಗಿಂತ ಹೆಚ್ಚು ವೀಕ್ಷಣೆ ಕಂಡ ಅವರ ಸಂಪಾದನೆ ತಿಂಗಳಿಗೆ ಐದರಿಂದ ಹತ್ತು ಲಕ್ಷಗಳು!


ರಾಜೇಶ್ ತಮ್ಮ ವ್ಲಾಗ್ ಗಳಲ್ಲಿ  ಚಾಲಕರ ದಿನನಿತ್ಯದ ಸಂಕಷ್ಟಗಳು, ರಸ್ತೆಗಳಲ್ಲಿ ಕಂಡುಬರುವ ಅದ್ಭುತ ದೃಶ್ಯಗಳು, ವಾಹನ ಸಂಬಂಧವಾದ ಸಲಹೆಗಳು, ರಸ್ತೆ ಸುರಕ್ಷತಾ ಮಾಹಿತಿಗಳನ್ನು ಅವರು ಹಂಚಿಕೊಳ್ಳುತ್ತಿದ್ದರು. ಮೊದಲಿಗೆ ಕೆಲವರು ಮಾತ್ರ ನೋಡುತ್ತಿದ್ದರು, ಆದರೆ ನಿಧಾನವಾಗಿ ಸಾವಿರಾರು ಜನರು ಅವರ ವಿಡಿಯೋಗಳನ್ನು ನೋಡಲು ಪ್ರಾರಂಭಿಸಿದರು.


ರಾಜೇಶ್ ಅವರ ಸರಳತೆ, ನಿಜವಾದ ಅನುಭವ ಮತ್ತು ಮನಸಾರೆ ಆಡುವ  ಮಾತುಗಳು ಜನರನ್ನು ಆಕರ್ಷಿಸಿದವು. ಅತಿರೇಕವಿಲ್ಲದೆ ತಾನು ಬದುಕುತ್ತಿದ್ದ ಜೀವನವನ್ನೇ ಜನರಿಗೆ ತೋರಿಸುತ್ತಿದ್ದುದರಿಂದ ಎಲ್ಲರೂ ಅವರಿಗೆ ಹತ್ತಿರವಾದರು.


ಕಾಲಕಳೆದಂತೆ ಅವರ ಯೂಟ್ಯೂಬ್ ಚಾನೆಲ್ ಬೆಳೆಯಿತು. ಹವ್ಯಾಸವಾಗಿ ಪ್ರಾರಂಭಿಸಿದ ಕೆಲಸವೇ ಅವರಿಗೆ ಎರಡನೇ ಉದ್ಯೋಗವಾಯಿತು. ಈಗ ಬ್ರಾಂಡ್‌ಗಳು ಅವರನ್ನು ಸಂಪರ್ಕ ಮಾಡಿ  ಕಾರ್ಯಕ್ರಮಗಳಿಗೆ ಆಹ್ವಾನಿಸುತ್ತವೆ.ಯಾಕೆಂದರೆ ಈಗ ಅವರೇ ಒಂದು ಬ್ರಾಂಡ್!

ದುಡ್ಡು ಬಂತು ಎಂದು ರಾಜೇಶ್ ಅರ್ಧ ರಾತ್ರಿಯಲ್ಲಿ ಛತ್ರಿ ಹಿಡಿಯಲಿಲ್ಲ ಬದಲಿಗೆ 

ಇಂದಿಗೂ ರಾಜೇಶ್ ತಮ್ಮ ಲಾರಿಯನ್ನು ಓಡಿಸುತ್ತಲೇ ಇದ್ದಾರೆ. ಜೊತೆಗೆ ಸಾವಿರಾರು ಜನರಿಗೆ ಪ್ರೇರಣೆಯೂ ಆಗಿದ್ದಾರೆ. ಮೋಟಾರು ವಾಹನ ತಯಾರಿಕಾ ದೈತ್ಯ ಕಂಪನಿಯ ಮಾಲಿಕರಲ್ಲಿ ಒಬ್ಬರಾದ ಆನಂದ್ ಮಹಿಂದ್ರ ರಾಜೇಶ್ ರವರನ್ನು ಮನಸಾರೆ ಹೊಗಳಿದ್ದಾರೆ.ಪ್ರಸ್ತುತ ಅವರು ಒಂದು ಕೋಟಿ ಬೆಲೆ ಬಾಳುವ ಮನೆಯನ್ನು ಕಟ್ಟಿಸಿದ್ದಾರೆ.ಅವರ ಮೂವರು ಮಕ್ಕಳು ಅವರ ಯೂಟ್ಯೂಬ್ ವೀಡಿಯೋಗಳನ್ನು ಎಡಿಟ್ ಮಾಡುವ ಪ್ರಮೋಟ್ ಮಾಡುವಲ್ಲಿ ತಂದೆಗೆ ಸಹಾಯ ಮಾಡುತ್ತಿದ್ದಾರೆ.

ಯಾವುದೇ ಕೆಲಸವನ್ನು ಶ್ರದ್ಧೆ, ಮತ್ತು ಅಚ್ಚುಕಟ್ಟಾಗಿ ಮಾಡಿದರೆ ತಂತ್ರಜ್ಞಾನವನ್ನು ಸಮರ್ಪಕವಾಗಿ ಬಳಸಿಕೊಂಡರೆ ಯೂಟ್ಯೂಬ್ ನಂತಹ ವೇದಿಕೆಗಳು ಹೇಗೆ ನಮ್ಮ ಜೀವನವನ್ನು ಧನಾತ್ಮಕವಾಗಿ ಬದಲಾಯಿಸುತ್ತವೆ ಎಂಬುದಕ್ಕೆ ರಾಜೇಶ್ ರವರ ಬದುಕೇ ಉದಾಹರಣೆ. ಇಂದಿನ ಯುವ ಜನರಿಗೆ ರಾಜೇಶ್ ಬಹುದೊಡ್ಡ ಪ್ರೇರಣೆ. ನಮ್ಮ ಹಿನ್ನಲೆ ಏನೇ ಇರಲಿ ಕೆಲಸದೆಡೆಗಿನ  ಒಲವು ಮತ್ತು ನಿರಂತರ ಪರಿಶ್ರಮ ಇದ್ದರೆ ಜೀವನವನ್ನು ಬದಲಾಯಿಸಬಹುದು ಎಂಬುದನ್ನು ರಾಜೇಶ್ ಸಾಬೀತು ಮಾಡಿದ್ದಾರೆ.


ಸಿಹಿಜೀವಿ ವೆಂಕಟೇಶ್ವರ

ತುಮಕೂರು






 

30 ಜುಲೈ 2025

ಸರ್ಕಾರಿ ಕೆಲಸ ಪಡೆದ ರೈತನ ಮೂರೂ ಮಕ್ಕಳು.


 



 ಕೆಲಸ ಸಿಗಲಿಲ್ಲ  ಎಂದು ಪರಿತಪಿಸುತ್ತಾ  ಸರ್ಕಾರಿ ಉದ್ಯೋಗ ಪಡೆಯಲು  ಪರದಾಡುತ್ತಿರುವ ಮಧ್ಯೆಸಾಮಾನ್ಯ ರೈತ ಕುಟುಂಬದ ಮೂವರು ಒಡಹುಟ್ಟಿದವರು ಸರ್ಕಾರಿ ನೌಕರಿ ಗಿಟ್ಟಿಸಿಕೊಂಡು ಗಮನ ಸೆಳೆದಿದ್ದಾರೆ. ಈ ಮೂಲಕ ತಂದೆಯ ಕನಸನ್ನು ಈ  ಮೂವರು ಮಕ್ಕಳು ಈಡೇರಿಸಿದ್ದಾರೆ.


ಕರೀಂನಗರ ಜಿಲ್ಲೆಯ ವೀನವಂಕ ಬಳಿಯ ರೆಡ್ಡಿಪಲ್ಲಿ ಗ್ರಾಮದ ಪೊತುಲು ಇಂದಿರಾ ಮತ್ತು ಚಂದ್ರೈ ದಂಪತಿಯ ಮೂವರೂ ಮಕ್ಕಳು ಸರ್ಕಾರಿ  ಹುದ್ದೆ ಪಡೆದಿದ್ದಾರೆ. 2 ಎಕರೆಯಲ್ಲಿ ದಂಪತಿ ಕೃಷಿ ಜೊತೆಗೆ ಕೂಲಿ ಕೆಲಸ ಮಾಡುತ್ತಾ ಕಷ್ಟಪಟ್ಟು ಮಕ್ಕಳನ್ನು ಓದಿಸಿದ್ದರು. ಎಲ್ಲ ಪೋಷಕರು ಬಯಸುವಂತೆ  ತಮ್ಮ ಮಕ್ಕಳನ್ನು ಸರ್ಕಾರಿ ಕೆಲಸಕ್ಕೆ ಸೇರಿಸಬೇಕು ಎಂದು ತಂದೆ ಕನಸು ಕಂಡಿದ್ದರು.


ಸರ್ಕಾರಿ ಶಾಲೆಯಲ್ಲೇ ಕಲಿತು ಸರ್ಕಾರಿ ಉದ್ಯೋಗ ಪಡೆದ ಮಕ್ಕಳ ಸಾಧನೆ ಕಂಡ ಪೋಷಕರು ಆನಂದ ಭಾಷ್ಪ ಸುರಿಸಿದ್ದಾರೆ.

 ಓರ್ವ ಮಗ ಸಿಆರ್​ಪಿಎಫ್ ಅಸಿಸ್ಟಂಟ್ ಕಮಾಂಡರ್, ಇನ್ನೊಬ್ಬ ಸಿಐಎಸ್​ಪಿ ಕಾನ್ಸ್​ಟೇಬಲ್ ಮತ್ತು ಪುತ್ರಿ ಅಬಕಾರಿ ಕಾನ್ಸ್​ಟೇಬಲ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ.


ಈ ರೈತನ ಹಿರಿಯ ಮಗ ಎಂ ಬಿ ಬಿ ಎಸ್ ಓದಿದದರೂ ಸರ್ಕಾರಿ ಹುದ್ದೆ ಸಿಗದ ಕಾರಣದಿಂದ ಡಾಕ್ಟರ್ ಹುದ್ದೆ ತೊರೆದು ತಂದೆಯ ಆಸೆಯಂತೆ ಸರ್ಕಾರಿ ಕೆಲಸ ಪಡೆದಿದ್ದಾರೆ.

 ಅಜಯ್ ಕರೀಂ ನಗರದ ಪ್ರತಿಮಾ ಕಾಲೇಜಿನಲ್ಲಿ ಎಂಬಿಬಿಎಸ್ ಪೂರ್ಣಗೊಳಿಸಿದ್ದಾರೆ. ಇವರು ವೈದ್ಯಕೀಯ ವೃತ್ತಿಯಲ್ಲಿ ಮುಂದುವರಿಯದೇ ಅಪ್ಪನ ಆಸೆಯಂತೆ ಪೊಲೀಸ್ ಸಮವಸ್ತ್ರ ಧರಿಸಬೇಕೆಂದು ನಿರ್ಧರಿಸಿದ್ದರು. ಅಂತೆಯೇ ಇತ್ತೀಚೆಗೆ ಸ್ಪರ್ಧಾತ್ಮಕ ಪರೀಕ್ಷೆ ಮೂಲಕ ಸಿಆರ್​ಪಿಎಫ್ ಅಸಿಸ್ಟಂಟ್ ಕಮಾಂಡರ್ ಆಗಿ ಆಯ್ಕೆ ಆಗಿದ್ದಾರೆ.


"ಚೆನ್ನಾಗಿ ಓದಿ ಪೊಲೀಸ್ ಅಧಿಕಾರಿಯಾಗುವಂತೆ ನಮ್ಮ ತಂದೆ ನನಗೆ ಬಾಲ್ಯದಿಂದಲೂ ಹೇಳುತ್ತಿದ್ದರು. ಆದರೆ ಡಾಕ್ಟರ್ ಆಗಬೇಕೆಂಬ ನನ್ನ ಕನಸು ಪೂರೈಸಿಕೊಳ್ಳಲು ಎಂಬಿಬಿಎಸ್ ಮಾಡಿದೆ.  ತಂದೆಯ ಮಾತು ನನ್ನನ್ನು ಕಾಡುತ್ತಿತ್ತು. ಆದ್ದರಿಂದ ಸ್ಫರ್ಧಾತ್ಮಕ ಪರೀಕ್ಷೆ ಪಡೆದು ಕಮಾಂಡರ್ ಆಗಿ ತಂದೆಯ ಕನಸು ನನಸು ಮಾಡಿರುವೆ" ಎಂದು ಅಜಯ್ ತಿಳಿಸಿದ್ದಾರೆ.


 ಅಜಯ್ ಅವರ ತಂಗಿ ನವಥಾ ಸರ್ಕಾರಿ ಶಾಲೆಯಲ್ಲಿ ಕಲಿತು ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಇವರು ಕೂಡ ನೇಮಕಾತಿ ಪರೀಕ್ಷೆಯಲ್ಲಿ ಪಾಸಾಗಿ ಅಬಕಾರಿ ಇಲಾಖೆಯಲ್ಲಿ ಕಾನ್ಸ್​ಟೇಬಲ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ. ಹಾಗೆಯೇ ಇವರ ಸಹೋದರ ಶ್ರವಣ ಕೂಡ ಉತ್ತರ ಪ್ರದೇಶದ ಲಖನೌದಲ್ಲಿ ಸಿಐಎಸ್​ಎಫ್ ಕಾನ್ಸ್​ಟೇಬಲ್ ಆಗಿ ಕೆಲಸ ಮಾಡುತ್ತಿದ್ದಾರೆ.



ತಂದೆ ತಾಯಿಗಳು ಕಷ್ಟ ಪಟ್ಟು ಶಿಕ್ಷಣ ನೀಡಿದರು. ಅದಕ್ಕೆ ತಕ್ಕಂತೆ ಮಕ್ಕಳು ಸತತ ಪ್ರಯತ್ನ ಮತ್ತು ಪರಿಶ್ರಮದಿಂದ  ಸರ್ಕಾರಿ ಉದ್ಯೋಗ ಪಡೆದರು.

ಮಧ್ಯಮ ವರ್ಗದ ಕುಟುಂಬದ ಗ್ರಾಮೀಣ ಹಿನ್ನೆಲೆಯಿಂದ ಬಂದ ಈ  ಮೂವರ ಸಾಧನೆ ಇತರರಿಗೆ ಪ್ರೇರಣೆಯಾಗಿದೆ.


ಸಿಹಿಜೀವಿ ವೆಂಕಟೇಶ್ವರ


19 ಜುಲೈ 2025

ಲಲಿತಾಸನಲ್ಲಿ ಕುಳಿತ ಶ್ರೀಕೃಷ್ಣ.


 



ಸಾಮಾನ್ಯ ಶಕ ವರ್ಷ 

950 ರ ಕಾಲದ 

ಚೋಳರ ಕಾಲಕ್ಕೆ ಸೇರಿದ ಈ  ವಿಷ್ಣುವಿನ ವಿಶೇಷವಾದ ಮೂರ್ತಿ ಪ್ರಸ್ತುತ ಬ್ರಿಟಿಷ್‌ ಮ್ಯೂಸಿಯಂ ನಲ್ಲಿದೆ.


 ಲಂಬವಾದ ಅಡ್ಡ ಪಟ್ಟಿಗಳನ್ನು ಹೊಂದಿರುವ ಮೆಟ್ಟಿಲು ಸಿಂಹಾಸನದ ಮೇಲೆ ಲಲಿತಾಸನದಲ್ಲಿ ಕುಳಿತಿರುವ, ಅಗಲವಾದ ಭುಜಗಳು ಮತ್ತು ಕಿರಿದಾದ ಸೊಂಟವನ್ನು ಹೊಂದಿರುವ ಕಿರೀಟಧಾರಿ ವಿಷ್ಣುವಿನ ಕಂಚಿನ ಆಕೃತಿಯು ಆ ಕಾಲದ  ಶಿಲ್ಪಿಗಳ ಚಾಕಚಕ್ಯತೆಗೊಂದು ಉದಾಹರಣೆ.

ನಮ್ಮ ಸಾಂಸ್ಕೃತಿಕ ಪರಂಪರೆ

ನಮ್ಮ ಹೆಮ್ಮೆ..


ಸಿಹಿಜೀವಿ ವೆಂಕಟೇಶ್ವರ.


#CulturalHeritage #HeritagePreservation #CulturalDiversity #Tradition #CulturalIdentity #History #Authenticity #CulturalAwareness #ArtAndCulture #WorldHeritage #CulturalLegacy #RichHeritage #CulturalMapping #CulturalExpression #Folklore #PreserveOurHeritage #CulturalRoots #CulturalFestival #Ethnic

Diversity


14 ಜುಲೈ 2025

ನಾಲ್ಕು ಸೇಬುಗಳ ಕಥೆ.



ನಾಲ್ಕು ಸೇಬುಗಳ ಕಥೆ


ಆರು ವರ್ಷದ ಮಗುವಿಗೆ ಗಣಿತ ಕಲಿಸುತ್ತಿದ್ದ ಶಿಕ್ಷಕಿಯೊಬ್ಬರು "ನಾನು ನಿನಗೆ ಒಂದು ಸೇಬು, ಮತ್ತೊಂದು ಸೇಬು ಹಾಗೂ ಮತ್ತೊಂದು ಸೇಬು ಕೊಟ್ಟರೆ ನಿನ್ನಲ್ಲಿ ಎಷ್ಟು ಸೇಬು ಇರುತ್ತವೆ?" ಎಂದು ಕೇಳಿದರು.

ಮನದಲ್ಲೇ ಲೆಕ್ಕ ಹಾಕಿ 

ಕೆಲವು ಸೆಕೆಂಡುಗಳಲ್ಲಿ ಹುಡುಗ ಆತ್ಮವಿಶ್ವಾಸದಿಂದ, "ನಾಲ್ಕು!" ಎಂದು ಉತ್ತರಿಸಿದನು.


ನಿರಾಶೆಗೊಂಡ ಶಿಕ್ಷಕಿಯು   ಸರಿಯಾದ ಉತ್ತರ ಮೂರನ್ನು  ನಿರೀಕ್ಷಿಸುತ್ತಿದ್ದರು.

 ಮಗು ಸರಿಯಾಗಿ ಕೇಳದಿರಬಹುದೆಂದು ಯೋಚಿಸಿ

ಪ್ರಶ್ನೆಯನ್ನು ಪುನರಾವರ್ತಿಸಿದರು"ದಯವಿಟ್ಟು ಎಚ್ಚರಿಕೆಯಿಂದ ಆಲಿಸು‌

ಇದು ತುಂಬಾ ಸರಳವಾಗಿದೆ. ನೀನು ಎಚ್ಚರಿಕೆಯಿಂದ ಆಲಿಸಿದರೆ ಸರಿಯಾದ ಉತ್ತರ ನೀಡಬಹುದು" ಎಂದು 

"ನಾನು ನಿನಗೆ ಒಂದು ಸೇಬು, ಮತ್ತೊಂದು ಸೇಬು ಹಾಗೂ  ಮತ್ತೊಂದು ಸೇಬು ಕೊಟ್ಟರೆ, ನಿನ್ನಲ್ಲಿ ಎಷ್ಟು ಸೇಬು ಇರುತ್ತವೆ?"


ಹುಡುಗನು ತನ್ನ ಶಿಕ್ಷಕಿಯ ಮುಖದಲ್ಲಿನ  ನಿರಾಶೆಯನ್ನು ಕಂಡು ಮತ್ತೆ ತನ್ನ ಬೆರಳುಗಳ ಮೇಲೆ ಲೆಕ್ಕ ಹಾಕಿದನು. ತನ್ನ ಶಿಕ್ಷಕಿಯನ್ನು ಸಂತೋಷಪಡಿಸುವ ಉತ್ತರವನ್ನು ಹುಡುಕುತ್ತಿದ್ದನು.

ಈ  ಬಾರಿ ಸ್ವಲ್ಪ ಹಿಂಜರಿಕೆಯಿಂದ ಅವನು "ನಾಲ್ಕು..." ಎಂದು ಉತ್ತರಿಸಿದನು.

 ಶಿಕ್ಷಕಿಯ ಮುಖದಲ್ಲಿ ನಿರಾಶೆ ಎದ್ದು ಕಾಣುತ್ತಿತ್ತು.

ಪ್ರಯತ್ನ ಬಿಡದ ಶಿಕ್ಷಕಿ 

ಆ ಹುಡುಗನಿಗೆ ಸೇಬು ಇಷ್ಟವಿಲ್ಲ ಆದರೆ ಸ್ಟ್ರಾಬೆರಿಗಳು ತುಂಬಾ ಇಷ್ಟ ಎಂದು  ನೆನಪಿಸಿಕೊಂಡು ಪ್ರಶ್ನೆ ಕೇಳಲು ಶುರುಮಾಡಿದಳು .


ಈ ಬಾರಿ ಶಿಕ್ಷಕಿಯು ಉತ್ಸಾಹ ಮತ್ತು ಮಿನುಗುವ ಕಣ್ಣುಗಳೊಂದಿಗೆ ಕೇಳಿದರು.

“ನಾನು ನಿನಗೆ ಒಂದು ಸ್ಟ್ರಾಬೆರಿ,ಮತ್ತೊಂದು ಸ್ಟ್ರಾಬೆರಿ ಹಾಗೂ ಮತ್ತೊಂದು ಸ್ಟ್ರಾಬೆರಿ ಕೊಟ್ಟರೆ, ನಿನ್ನಲ್ಲಿ ಎಷ್ಟು ಸ್ಟ್ರಾಬೆರಿ ಇರುತ್ತವೆ ?”

 

ಶಿಕ್ಷಕಿ ಸಂತೋಷವಾಗಿರುವುದನ್ನು ನೋಡಿ,  ಹುಡುಗ ಮತ್ತೆ ತನ್ನ ಬೆರಳುಗಳ ಮೇಲೆ ಲೆಕ್ಕ ಹಾಕಿದನು.

ಅವನ ಮೇಲೆ ಯಾವುದೇ ಒತ್ತಡವಿರಲಿಲ್ಲ, ಆದರೆ ಶಿಕ್ಷಕಿಯ ಮೊಗದಲ್ಲಿ ಸರಿ ಉತ್ತರ ನೀಡುವನೋ ಇಲ್ಲವೋ ಎಂಬ    ಒತ್ತಡ ಕಾಣುತ್ತಿತ್ತು.


ಅವಳು ತನ್ನ ಹೊಸ ವಿಧಾನವು ಯಶಸ್ವಿಯಾಗಬೇಕೆಂದು ಬಯಸಿದ್ದಳು.

ಹಿಂಜರಿಯುತ್ತಲೇ  ನಗುವಿನೊಂದಿಗೆ ಚಿಕ್ಕ ಹುಡುಗ "ಮೂರು?" ಎಂದು ಉತ್ತರಿಸಿದನು.

ಶಿಕ್ಷಕಿಗೆ ಈಗ ಸಂತಸಗೊಂಡು  ನಕ್ಕರು. ಅವರ ವಿಧಾನವು ಯಶಸ್ವಿಯಾಗಿತ್ತು.

ಅವರ ತನ್ನನ್ನು ತಾನೇ ಅಭಿನಂದಿಸಿಕೊಂಡು  ಕೊನೆಯದಾಗಿ ಸೇಬಿ‌ನ ಉದಾಹರಣೆ ಮೂಲಕ ಪ್ರಶ್ನೆ ಕೇಳಿ ಉತ್ತರ ಪಡೆಯಲು ಮುಂದಾದರು.

"ನಾನು ನಿನಗೆ ಒಂದು ಸೇಬು, ಮತ್ತೊಂದು ಸೇಬು ಹಾಗೂ  ಮತ್ತೊಂದು ಸೇಬು ಕೊಟ್ಟರೆ, ನಿನ್ನಲ್ಲಿ ಎಷ್ಟು ಸೇಬು ಇರುತ್ತವೆ?"


ತಕ್ಷಣ ಹುಡುಗ ಆತ್ಮವಿಶ್ವಾಸದಿಂದ   “ನಾಲ್ಕು!” ಅಂದುಬಿಟ್ಟ.

ಶಿಕ್ಷಕಿ ಸಿಟ್ಟಿನಿಂದ ಅದೇಗೆ ನಾಲ್ಕು ಹೇಳು ನೋಡೋಣ ಅಂದರು. 


ಆ ಹುಡುಗ ಪಿಳಿ ಪಿಳಿ ಕಣ್ಣು ಬಿಡುತ್ತಾ "ಏಕೆಂದರೆ ನನ್ನ ಚೀಲದಲ್ಲಿ ಈಗಾಗಲೇ ಒಂದು ಸೇಬು ಇದೆ"  ಮೆಲುದನಿಯಲ್ಲಿ ಉತ್ತರಿಸಿದನು.


ನಾವೂ ಹಾಗೆಯೇ ಯಾರಾದರೂ ನಾವು ನಿರೀಕ್ಷಿಸುವುದಕ್ಕಿಂತ ಭಿನ್ನವಾದ ಉತ್ತರವನ್ನು ನೀಡಿದಾಗ  ಅವರು  ತಪ್ಪು‌ ನಾವು ಮಾತ್ರ ಸರಿ ಎಂಬ ತೀರ್ಮಾನಕ್ಕೆ ಬಂದು ಬಿಡುತ್ತೇವೆ. ಅವರ ಉತ್ತರದಲ್ಲಿ

ನಾವು ಅರ್ಥಮಾಡಿಕೊಳ್ಳದೇ ಇರುವ ಮತ್ತೊಂದು ಕೋನ ಇರಬಹುದು.ಆದ್ದರಿಂದ

ವಿಭಿನ್ನ ದೃಷ್ಟಿಕೋನಗಳನ್ನು ಪ್ರಶಂಸಿಸಲು ಮತ್ತು ಅರ್ಥಮಾಡಿಕೊಳ್ಳಲು ನಾವು ಕಲಿಯಬೇಕು.

ಆಗಾಗ್ಗೆ ನಾವು ನಮ್ಮ ದೃಷ್ಟಿಕೋನಗಳನ್ನು ಇತರರ ಮೇಲೆ ಹೇರಲು ಪ್ರಯತ್ನಿಸುತ್ತೇವೆ.ಇದು ಸಲ್ಲ.

ಯಾರಾದರೂ ನಮಗಿಂತ ವಿಭಿನ್ನ ದೃಷ್ಟಿಕೋನದ ಮಾತುಗಳನ್ನು ಆಡಿದಾಗ  ಕುಳಿತು ನಿಧಾನವಾಗಿ ಕೇಳೋಣ ಇತರರ ತಾರ್ಕಿಕ ಹಾಗೂ ಮೌಲಿಕ ಮಾತುಗಳು ಮತ್ತು ವಿಚಾರಗಳಿಗೆ ಕಿವಿಯಾಗೋಣ.ನಮ್ಮ ವ್ಯಕ್ತಿತ್ವವನ್ನು ಉತ್ತಮ ಪಡಿಸಿಕೊಳ್ಳೋಣ.


ಸಿಹಿಜೀವಿ ವೆಂಕಟೇಶ್ವರ

ಶಿಕ್ಷಕರು

ತುಮಕೂರು

 #PersonalDevelopment #PersonalGrowth #LifeJourney #SelfImprovement #Motivation #Inspiration #GrowthMindset #Resilience #OvercomingObstacles #TransformationStory #SelfDiscovery #Empowerment #SuccessJourney #MindsetMatters #LifeLessons #GoalSetting #AchieveYourDreams #Positiv

11 ಜುಲೈ 2025

ಆತ್ಮೀಯ ಗೆಳೆಯ..


 

ಇತ್ತೀಚೆಗೆ ಮೈಸೂರಿಗೆ ಹೋದಾಗ ಬಿ ಎಡ್ ಮಾಡುವಾಗ ಜೊತೆಯಲ್ಲಿ ಓದಿದ ಗೆಳೆಯ ಸುರೇಶ್ ಸಿಕ್ಕಿದ್ದರು. ಮೈಸೂರು ಸಾಹಿತ್ಯ ಸಂಭ್ರಮದಲ್ಲಿ ನನ್ನ ಜೊತೆಗಿದ್ದು ನನ್ನ ಸಂಭ್ರಮವನ್ನು ಇಮ್ಮಡಿಗೊಳಿಸಿದ ಸ್ನೇಹಜೀವಿ. ಮೈಸೂರು ಮಹಾರಾಜ ಕಾಲೇಜಿನಲ್ಲಿ ಓದಿದ,ಒಡನಾಡಿದ, ಸಂತಸದ ಕ್ಷಣಗಳನ್ನು ಮೆಲುಕು ಹಾಕಿದೆವು. ಸುರೇಶ್ ಈಗ P D O ಆಗಿ ಕಾರ್ಯ ಮಾಡುತ್ತಾರೆ.ಬಿ ಎಡ್ ಓದುವಾಗಲೇ   ನಾನು ಅವರಿಗೆ ತಲೈವ ಎಂದಿದ್ದು ಈಗ ನಿಜಕ್ಕೂ ತಲೈವ ಆಗಿದ್ದಾರೆ. ನಾನೀಗ 27 ಪುಸ್ತಕ ಬರೆದಿರುವ ಲೇಖಕ, ಕವಿ ಎಂಬುದನ್ನು ತನ್ನ ಮಡದಿ ಮಕ್ಕಳಿಗೆ ಹೆಮ್ಮೆಯಿಂದ ಪರಿಚಯಿಸಿದರು.ಒಳ್ಳೆಯ ಬಿರಿಯಾನಿ ಊಟ ಹಾಕಿಸಿದ ಗೆಳೆಯ ಕಳೆದ  ತೊಂಬತ್ತರ ದಶಕದ ನಮ್ಮ ದುರಿತ ಕಾಲ,ಹಾಗೂ ಆ ಕಾಲದಲ್ಲೂ ಎಂಜಾಯ್ ಮಾಡಿದ ಸವಿ ಕ್ಷಣಗಳನ್ನು ನೆ‌ನಪು ಮಾಡಿದರು. ಅವರ ಮಕ್ಕಳಿಗೆ ನನ್ನ ಕೃತಿಗಳನ್ನು ನೀಡಿ ಓದಲು ಹೇಳಿದೆ.ಧನ್ಯವಾದಗಳು🙏🙏 ತಲೈವ ಮತ್ತೊಮ್ಮೆ ಮಗದೊಮ್ಮೆ ಸಿಗೋಣ.ನಮ್ಮ ಸ್ನೇಹವನ್ನು ಸಂಭ್ರಮಿಸೋಣ...

ಇಂತಿ ನಿನ್ನ ಗೆಳೆಯ

ಸಿಹಿಜೀವಿ ವೆಂಕಟೇಶ್ವರ.

#FriendshipGoals #CherishedFriends #FriendshipMatters #BestiesForLife #TrueFriendship #FriendsForLife #BondingTime #BFFs #FriendshipVibes #MakingMemories #GoodFriends #FriendshipForever #UnderstoodByYou #LifelongFriends #CrazyAdventures #SupportSystem #FriendshipLove #DynamicDuos #FriendshipMoments #TogetherAlways

10 ಜುಲೈ 2025

ಗುರು ಪೂರ್ಣಿಮೆ


 ಇಂದಿನ ಸುಭಾಷಿತ:-


 "ಗು"ಕಾರಶ್ಚಾಂಧಕಾರಃ ಸ್ಯಾತ್ "ರು"ಕಾರಸ್ತನ್ನಿರೋಧಕಃ । ಅಂಧಕಾರ ನಿರೋಧಿತ್ವಾತ್ "ಗುರು"ರೀತ್ಯಭಿಧೀಯತೇ ।। ಗುರು ಎಂಬ ಪಾದದಲ್ಲಿ ಗುಕಾರವು ಅಂಧಕಾರವನ್ನು ಸೂಚಿಸುತ್ತದೆ. ರುಕಾರವು ನಿರೋಧವನ್ನು ಸೂಚಿಸುತ್ತದೆ. ಹೀಗಾಗಿ ಗುರು ಶಬ್ದಕ್ಕೆ ಅಂಧಕಾರವನ್ನು ನಾಶಮಾಡುವವನು ಎಂದರ್ಥ.


#TeacherLife #TeachersofInstagram #TeachingTips #InspireTeachers #TeacherAppreciation #ClassroomCommunity #TeacherGoals #EducationMatters #FutureLeaders #TeachTheFuture #EducatorLife #PassionForTeaching #TeacherTravel #LearnThroughPlay #ClassroomStories #TeachingInspiration #BackToSchool #TeachAndInspire #CultivatingYoungMinds

03 ಜುಲೈ 2025

ಸಿಹಿಜೀವಿಯ ಹನಿ


 



ಆರಂಭದಲ್ಲಿ ನಮ್ಮನ್ನು ಬೆಂಬಲಿಸಲು

ಯಾರು ಇಲ್ಲದಿದ್ದರೂ ಚಿಂತೆ ಬೇಡ|

ಪ್ರಖರವಾದ ಸೂರ್ಯನ ಬೆಳಕನ್ನು ಎಷ್ಟು ಕಾಲ ತಡೆಯಬಲ್ಲದು ಮೋಡ||


ಸಿಹಿಜೀವಿ ವೆಂಕಟೇಶ್ವರ. 

02 ಜುಲೈ 2025

DHL ನ ಸ್ಪೂರ್ತಿದಾಯಕ ಕಥೆ


  DHL ನ ಸ್ಪೂರ್ತಿದಾಯಕ ಕಥೆ 1969 ರಲ್ಲಿ ಮೂವರು ಯುವಕರು ತಮ್ಮಲ್ಲಿದ್ದ ಅಲ್ಪಸ್ವಲ್ಪ ಹಣದಲ್ಲಿ ತಮ್ಮ ವಿತರಣಾ ವ್ಯವಹಾರವನ್ನು ಪ್ರಾರಂಭಿಸಲು ನಿರ್ಧರಿಸಿದರು. ಮೊದಲನೆಯವನ ಹೆಸರು ಆಡ್ರಿಯನ್ ಡಾಲ್ಸಿ.ಎರಡನೆಯವ ಲ್ಯಾರಿ ಹಿಲ್ಬ್ಲೋಮ್. ಮೂರನೆಯವ ರಾಬರ್ಟ್ ಲಿನ್. ಹೀಗೇ ಆ ಮೂವರ ಹೆಸರಿನಲ್ಲಿ ಒಂದೊಂದು ಪದ ತೆಗೆದುಕೊಂಡು ಆರಂಭಿಸಿದ ಕಂಪನಿಯೇ DHL ! . 55 ವರ್ಷಗಳ ನಂತರ ಇಂದು DHL ಕಂಪನಿ 250 ವಿಮಾನಗಳನ್ನು ಹೊಂದಿದೆ. 32,000 ವಾಹನಗಳು, 550,000 ಉದ್ಯೋಗಿಗಳಿಗೆ ಉದ್ಯೋಗ ನೀಡಿದೆ. ಇಂದು DHL ಪ್ರಪಂಚದ ಎಲ್ಲೆಡೆ ತನ್ನ ವ್ಯಾಪ್ತಿಯನ್ನು ವಿಸ್ತರಿಸಿದೆ.ಅದರ ಆದಾಯ ನೂರಾರು ಶತಕೋಟಿ ಡಾಲರ್‌ಗಳು! ಜೀವನದಲ್ಲಿ ಯೋಜನೆಗಳು, ವ್ಯವಹಾರ, ಯಶಸ್ಸು, ಕನಸುಗಳು, ಗುರಿಗಳ ಬಗ್ಗೆ ಮಾತನಾಡುವ ಜನರು ಯಾವಾಗಲೂ ನಿಮ್ಮ ಸುತ್ತ ಮುತ್ತ ಇರಲಿ. ನಕಾತ್ಮಕ, ಭಯಭೀತ, ಸೋಮಾರಿ ಜನರಿಂದ ದೂರವಿರಿ. ನೀವು ವ್ಯವಹಾರಕ್ಕೆ ಇಳಿದರೆ.ದೃಢವಾಗಿ ಇರಿ. ಅಂದಿನ DHL ಇಂದಿನ DHL ಆಗಲು 55 ವರ್ಷಗಳು ಬೇಕಾಯಿತು. ಯಶಸ್ಸಿಗೆ ಸಮಯ, ಶ್ರಮ, ಬುದ್ಧಿವಂತಿಕೆ ಮತ್ತು ತಾಳ್ಮೆ ಬೇಕು. ಯಶಸ್ಸು ನಿಮ್ಮದಾಗಲಿ... ಸಿಹಿಜೀವಿ ವೆಂಕಟೇಶ್ವರEntrepreneurship #EntrepreneurMindset #StartUpLife #BizTips #EntrepreneurJourney #SmallBusinessSuccess #GrowthMindset #InnovativeThinking #HustleAndGrind #BusinessMotivation #Suc

ಚಾಣಕ್ಯ ನೀತಿ ಶ್ಲೋಕ:


 ಚಾಣಕ್ಯ ನೀತಿ ಶ್ಲೋಕ:-


 ರೂಪಯೌವನ ಸಂಪನ್ನಾ ವಿಶಾಲಕುಲ ಸಂಭವಾ |

 ವಿದ್ಯಾಹೀನಾ ನ ಶೋಭಂತೇ ನಿರ್ಗಂಧಾ ಇವ ಕಿಂಶುಕಾಃ || 


  ಸೌಂದರ್ಯದಿಂದಲೂ ಯೌವನದಿಂದಲೂ ಯುಕ್ತರು ಮಹಾಕುಲೀನರೂ ವಿದ್ಯಾ ವಿಹೀನರಾದರೆ ಪರಿಮಳವಿಲ್ಲದ  ಪುಷ್ಪಗಳಂತೆ ಸ್ವಲ್ಪವೂ ಶೋಭಿಸುವುದಿಲ್ಲ.ಅಂದರೆ ಯಾರಿಂದಲೂ ಆದರಿಸಲ್ಪಡುವುದಿಲ್ಲ.

01 ಜುಲೈ 2025

ನುಡಿ ತೋರಣ ಸಮಾಗಮ..


 
ನುಡಿತೋರಣ ಮೊದಲ ಸಮಾಗಮದಲ್ಲಿ ಅನಿವಾರ್ಯ ಕಾರಣದಿಂದಾಗಿ ಭಾಗವಹಿಸಿರಲಿಲ್ಲ.ಎರಡು ಮತ್ತು ಮೂರನೇ ಸಮಾವೇಶದಲ್ಲಿ ಪಾಲ್ಗೊಂಡ ಸವಿನೆನಪುಗಳನ್ನು ಈಗಲೂ ಮೆಲುಕು ಹಾಕುತ್ತಿರುವೆ... ಮೂರನೇ ಸಮಾವೇಶದ ದಿನ ಆರಕ್ಕೆ ತುಮಕೂರು ಬಿಟ್ಟು ಒಂಭತ್ತಕ್ಕೆ ಸಾಹಿತ್ಯ ಪರಿಷತ್ತು ಸೇರಿ ಕಿರಣ್ ಸರ್ ಮತ್ತು ನುಡಿ ಬಂಧುಗಳೊಂದಿಗೆ ಬೆಳಗಿನ ಉಪಹಾರ ಸೇವಿಸಿ ಚಿನ್ನು ಪ್ರಿಯ ಸರ್ ರವರೊಂದಿಗೆ ಕನ್ನಡ ಹಾಡು ಹಾಡಿದ್ದು ಖುಷಿ ನೀಡಿತು.ಕಡೆಯ ಕ್ಷಣಗಳಲ್ಲಿ ಪುಸ್ತಕ ಬಿಡುಗಡೆಗೆ ಮನಸ್ಸು ಮಾಡಿದೆ. ನಮ್ಮ ಬಳಗದ ಮುಂದೆ ನನ್ನ ಕೃತಿ ಲೋಕಾರ್ಪಣೆಗೊಂಡಿದ್ದು ಖುಷಿ ನೀಡಿತು. ಹಲವಾರು ಸಾಹಿತ್ಯ ಬಂಧುಗಳನ್ನು ಭೇಟಿ ಮಾಡಿದ್ದು ಸಂತಸ ತಂದಿತು. ಜಿ ಬಿ ಹರೀಶ್ ಸರ್, ಮತ್ತು ಸೇತೂರಾಮ್ ಸರ್ ರವರ ಮಾತು ನೇರವಾಗಿ ಕೇಳಿ ಪುಳಕಗೊಂಡೆ. ನನ್ನ ಐವತ್ತಕ್ಕೂ ಹೆಚ್ಚು ಕೃತಿಗಳನ್ನು ಕೊಂಡ ನಮ್ಮ ನುಡಿ ಬಂಧುಗಳಿಗೆ ನಮನಗಳನ್ನು ಸಲ್ಲಿಸಲೇಬೇಕು. ನುಡಿ ತಾಂಬೂಲ ವಿಶೇಷವಾಗಿತ್ತು. ನಮ್ಮ ಮನೆಯವರ ಮೆಚ್ಚುಗೆ ಗೆ ಪಾತ್ರವಾಗಿದೆ. ಒಟ್ಟಾರೆ ಒಂದು ಉತ್ತಮ ಕೌಟುಂಬಿಕ ಭಾವನಾತ್ಮಕ ನುಡಿ ಹಬ್ಬದಲ್ಲಿ ಪಾಲ್ಗೊಂಡ ಸಾರ್ಥಕ ಭಾವನೆ ನನ್ನದು.... ನಿಮ್ಮ... ಸಿಹಿಜೀವಿ ವೆಂಕಟೇಶ್ವರ
#Bangalore #BangaloreEvents #BookLaunch #AuthorMeet #LiteratureLovers #BookDiscussion #WritersCommunity #ReadingNook #CulturalScene #M

30 ಜೂನ್ 2025

ಮಕ್ಕಳಿಗಾಗಿ ಮಾಹಾತ್ಮರ ಮಾತುಗಳು ಕೃತಿ ಲೋಕಾರ್ಪಣೆ...


 


ಯುವ ಕವಿಗಳು ಮತ್ತು ಲೇಖಕರು ನಮ್ಮ ಪ್ರಾಚೀನ ಕವಿಗಳ ಸಾಹಿತ್ಯ ಓದಬೇಕು.ಆಗಮಾತ್ರ ಉತ್ತಮ ಸಾಹಿತ್ಯ ಹೊರಹೊಮ್ಮಲು ಸಾಧ್ಯ. ಅವಸರದ ಸಾಹಿತ್ಯಕ್ಕೆ ಆಯುಷ್ಯ ಕಡಿಮೆ ಎಂದು ಸಾಹಿತಿಗಳಾದ 

ಡಾ ಕಬ್ಬಿನಾಲೆ ವಸಂತ್ ಭಾರದ್ವಾಜ್ ರವರು ಹೇಳಿದರು. ಶುಭ ಕೋರಿ ಇನ್ನೂ ಹೆಚ್ಚಿನ ಕೃತಿಗಳು ಅವರಿಂದ 

  ಬೆಂಗಳೂರಿನ  ಕನ್ನಡ ಸಾಹಿತ್ಯ ಪರಿಷತ್ತಿನ ಅಕ್ಕಮಹಾದೇವಿ ಸಭಾಂಗಣದಲ್ಲಿ ನುಡಿತೋರಣ ಬಳಗದ ವತಿಯಿಂದ ನಡೆದ ವಾರ್ಷಿಕೋತ್ಸವದ ಅಂಗವಾಗಿ ಪುಸ್ತಕ ಬಿಡುಗಡೆ ಮಾಡಿ ಅವರು ಮಾತನಾಡಿದರು. 


ಇದೇ ಸಂದರ್ಭದಲ್ಲಿ ಸಿಹಿಜೀವಿ ವೆಂಕಟೇಶ್ವರ ರವರ 27 ನೇ ಕೃತಿ ಮಕ್ಕಳಿಗಾಗಿ ಮಹಾತ್ಮರ ಮಾತುಗಳು, ಕಿರಣ್ ಹಿರಿಸಾವೆ ರವರ ಹರಿವು ಕಾದಂಬರಿ ಹಾಗೂ ಡಾ ಗೀತಾ ಎನ್ ರವರ ಮುಕ್ತಕ ಮಂಜೂಷ ಕೃತಿಗಳು ಲೋಕಾರ್ಪಣೆಗೊಂಡವು.

 ಲೇಖಕರಿಗೆ ಶುಭ ಕೋರಿ ಇನ್ನೂ ಹೆಚ್ಚಿನ ಕೃತಿಗಳು ಅವರಿಂದ ಹೊರಹೊಮ್ಮಲಿ ಎಂದು ಆಶಿಸಿದರು.ಈ ಸಂದರ್ಭದಲ್ಲಿ ಹಿರಿಯ ಸಾಹಿತಿಗಳು ಹಾಗೂ ಪಿಟೀಲು ವಾದಕರಾದ ಶ್ಯಾಮ್ ಸುಂದರ್ ರವರು, ಲೇಖಕರಾದ ಧನಂಜಯ ಜೀವಾಳ, ಸಾಹಿತಿಗಳು ಹಾಗೂ ಪ್ರಕಾಶಕರಾದ ಚಿನ್ನುಪ್ರಿಯ, ಸಾಹಿತಿಗಳಾದ ತ ನಾ ಶಿವಕುಮಾರ್,ಅನುಸೂಯ ಸಿದ್ದರಾಮ, ನೇತ್ರ ತಜ್ಞರಾದ ಉದಯ್ ಪಾಟೀಲ್, ಶ್ರೀಕಾಂತ್ ಪತ್ರೆಮರ, ರಾಸು ವೆಂಕಟೇಶ್  ಹಾಗೂ ನುಡಿ ಬಂಧುಗಳು ಉಪಸ್ಥಿತರಿದ್ದರು.


28 ಜೂನ್ 2025

ಶೆಟ್ಟಿ ಹಳ್ಳಿ ಆಂಜನೇಯಸ್ವಾಮಿ ದೇವಾಲಯ.


 ಶೆಟ್ಟಿ ಹಳ್ಳಿ ಆಂಜನೇಯಸ್ವಾಮಿ ದೇವಾಲಯ.


 ಪ್ರಸಿದ್ಧ ಇತಿಹಾಸ ಹೊಂದಿರುವ ಶ್ರೀ ಆಂಜನೇಯ ಸ್ವಾಮಿ ದೇವಾಲಯವು ತುಮಕೂರಿನಿಂದ 3 ಕಿ.ಮೀ. ದೂರದ ಆಗ್ನೇಯ ದಿಕ್ಕಿನಲ್ಲಿರುವ ಶೆಟ್ಟಿಹಳ್ಳಿ ಗ್ರಾಮದಲ್ಲಿದೆ. ಜಾತಿ, ಧರ್ಮ ಭೇದವಿಲ್ಲದೆ ಅತಿ ಹೆಚ್ಚು ಭಕ್ತರನ್ನು ಹೊಂದಿರುವ ನಂಬಿದವರ ಬೇಡಿಕೆಗಳನ್ನು ಈಡೇರಿಸುತ್ತಾನೆಂಬ ನಂಬಿಕೆಯಿಂದ ಭಕ್ತರು ಆಗಮಿಸುತ್ತಾರೆ.

  ಚೈತ್ರ ಮಾಸದಲ್ಲಿ ವಿಶೇಷ ಪೂಜೆಯನ್ನು ಸಲ್ಲಿಸಲಾಗುತ್ತದೆ.

ಮಹಾಭಾರತ ಕಾವ್ಯದಲ್ಲಿ ಬರುವ ಜನಮೇಜಯ ಮಹಾರಾಜ ಯಾಗ ಮಾಡುವ ಮುನ್ನ ವಿಘ್ನಗಳು

ಬಾರದಂತೆ ಈ ಆಂಜನೇಯನನ್ನು ಪ್ರತಿಷ್ಠಾಪನೆ ಮಾಡಿಸಿದರೆಂದು ಸ್ಥಳ ಪುರಾಣ ಹೊಂದಿರುವ ಈ ಪ್ರತಿಮೆಯು ಸುಮಾರು 10 ಅಡಿ ಎತ್ತರ ಹಾಗೂ 6 ಅಡಿ ಅಗಲವಾಗಿದ್ದು ಮುಳಬಾಗಿಲಿನಲ್ಲಿರುವ ಹನುಮಂತನನ್ನು ಬಿಟ್ಟರೆ ಎತ್ತರದಲ್ಲಿ ಎರಡನೇ ಆಂಜನೇಯಸ್ವಾಮಿ ಆಗಿದೆ. ಈ ಆಂಜನೇಯನ ಕೈಯಲ್ಲಿ ಮಾವಿನಹಣ್ಣುಗಳನ್ನು ಹಿಡಿದಿರುವುದು ವಿಶೇಷ,


1893 ರಲ್ಲಿ ಮೈಸೂರು ಪ್ರಾಂತ್ಯದ ಚೌಬೀನೆ ನಾಗ ಕುಮಾರಯ್ಯನವರು ಈ ದೇವಾಲಯದ ಜೀರ್ಣೋದ್ಧಾರ ಮಾಡಿದರೆಂದು ದೇವಾಲಯದಲ್ಲಿರುವ ಶಿಲಾಫಲಕವೊಂದು ತಿಳಿಸುತ್ತದೆ.


#shettihally #anjaneya 

#AnjaneyaTempleTumkur #TumkurTemples #IndianTemples #Anjaneya #DevotionalJourney #Spirituality #TemplesofIndia #VinayakaChaturthi #LocalTemples #ExploringTempleArchitecture #SacredSite #DivineVibes #CulturalHeritage #TempleVisiting #Pilgrimage #Devotees #GodsAndGoddesses #SpiritualTour #TumkurTourism