24 ಏಪ್ರಿಲ್ 2026

ಮೂವತ್ತನೇ ಹೆರಿಗೆಯ ಕಡೆ ಚಿತ್ತ!.


 ಮೂವತ್ತನೇ ಹೆರಿಗೆಯ ಕಡೆ ಚಿತ್ತ ..



ಮೂರು ವರ್ಷಗಳ ಹಿಂದೆ ಕೀರ್ತಿಶೇಷ    ವಿದ್ಯಾ ವಾಚಸ್ಪತಿ ಕವಿತಾ ಕೃಷ್ಣ ರವರ ಮನೆಯಲ್ಲಿ ನನ್ನ ಅನುಭವ ಕಥನ "ಯಂಗ್ಟಿ" ಪುಸ್ತಕ ಬಿಡುಗಡೆಯ ಸಂದರ್ಭದಲ್ಲಿ ನಮ್ಮ  ನಾಡಿನ  ಹಿರಿಯ ಲೇಖಕರಾದ ಜಿ ಕೆ ಕುಲಕರ್ಣಿರವರು  ಕವಿ ಅಥವಾ ಲೇಖಕರಿಗೆ ಪುಸ್ತಕ ಪ್ರಕಟಣೆ ಎಂಬುದು ಒಂದು ಹೆರಿಗೆ ಇದ್ದಂತೆ ನಾನು ನಾಲ್ಕು ಹೆರಿಗೆಗೆ ಸುಸ್ತಾಗಿರುವೆ ಸಿಹಿಜೀವಿಯವರು ಹನ್ನೆರಡು ಹೆರಿಗೆ ಸಂಭ್ರಮ ಪ್ರಶಂಸನಾರ್ಹ ಎಂದಿದ್ದರು. ಇತ್ತೀಚಿನ ವಿಶ್ವ ಪುಸ್ತಕ ದಿನದಂದು ಅದು ನೆನೆಪಾಯಿತು.
ನನ್ನ ಇದುವರೆಗೆ ಪ್ರಕಟವಾದ ಕೆಲ ಪುಸ್ತಕಗಳ ಬಗ್ಗೆ ನೆನಪಾಯಿತು.
  ನನ್ನ  ಸಾಹಿತ್ಯದ ಬಹುಪಾಲು ಮಕ್ಕಳು ಮತ್ತು ಶಿಕ್ಷಣದ ಸುತ್ತ ಸುಳಿಯುತ್ತದೆ.  ‘ಬಾರೋ ಬಾರೋ ಗುಬ್ಬಚ್ಚಿ’ ಎಂಬ ಶಿಶುಗೀತೆಗಳ ಸಂಕಲನವು 34 ಸರಳ ಶಿಶು  ಗೀತೆಗಳನ್ನು ಒಳಗೊಂಡಿದ್ದು, ಮಕ್ಕಳಲ್ಲಿ ಪ್ರಕೃತಿ ಪ್ರೇಮ, ಸ್ವಚ್ಛತೆ ಮತ್ತು ಶಾಲಾ ಶಿಕ್ಷಣದ ಬಗ್ಗೆ ಆಸಕ್ತಿ ಮೂಡಿಸುತ್ತದೆ. ಶಿಕ್ಷಣ ಕ್ಷೇತ್ರದಲ್ಲಿ ತಂತ್ರಜ್ಞಾನದ ಬಳಕೆಯ ನಾನು   ಬರೆದ ‘ಶಿಕ್ಷಣವೇ ಶಕ್ತಿ’ ಕೃತಿಯು ಆನ್‌ಲೈನ್ ಶಿಕ್ಷಣ, 'ದೀಕ್ಷಾ ಆಪ್' ಮತ್ತು ಡಿಜಿಟಲ್ ಕಲಿಕೆಯ ಮಹತ್ವವನ್ನು ಸಾರುತ್ತದೆ. ಶಿಕ್ಷಕರಾಗಿ ವಿದ್ಯಾರ್ಥಿಗಳಿಗೆ ಪೂರಕವಾಗುವಂತೆ ‘ಸವಿ ಜ್ಞಾನ’, ‘ನಮ್ಮ ಇತಿಹಾಸ’ ಮತ್ತು ‘ಸಾಮಾನ್ಯ ಜ್ಞಾನ ಕ್ವಿಜ್’ ನಂತಹ ಪರಾಮರ್ಶನ ಗ್ರಂಥಗಳನ್ನು ರಚಿಸಿರುವೆ.
ಕಾದಂಬರಿ ಮತ್ತು ಕಥಾ ಸಂಕಲನಗಳ ಮೂಲಕ ಸಾಮಾಜಿಕ ಚಿತ್ರಣ ನೀಡುವ ಪ್ರಯತ್ನದ ಫಲವಾಗಿ  ನನ್ನ  ಚೊಚ್ಚಲ ಕಾದಂಬರಿ ‘ಉದಕದೊಳಗಿನ ಕಿಚ್ಚು’ ಗ್ರಾಮೀಣ ಬದುಕಿನ ವಾಸ್ತವತೆಗಳನ್ನು ತೆರೆದಿಡುತ್ತದೆ. ಈ ಕಾದಂಬರಿಯಲ್ಲಿ ಜೀತ ಪದ್ಧತಿಯ ನೋವು, ಹಳ್ಳಿಯ ಹಬ್ಬಗಳ ಸಡಗರ ಮತ್ತು ದಲಿತರ ದೇಗುಲ ಪ್ರವೇಶದಂತಹ ಗಂಭೀರ ಸಾಮಾಜಿಕ ವಿಚಾರಗಳನ್ನು ಮನೋಜ್ಞವಾಗಿ ಚಿತ್ರಿಸುವ ಪ್ರಯತ್ನ ಮಾಡಿರುವೆ. ನನ್ನ ‘ರಂಗಣ್ಣನ ಗುಡಿಸಲು’ ಕಥಾ ಸಂಕಲನವು ಹದಿಹರೆಯದ ಮನಸ್ಸಿನ ತಳಮಳಗಳು ಮತ್ತು ಮಾನವೀಯ ಸಂಬಂಧಗಳ ಮೌಲ್ಯವನ್ನು ಸಾರುವ ಕಥೆಗಳನ್ನು ಹೊಂದಿದೆ. ಅತಿ ಸಣ್ಣ ಕಥೆಗಳ ಪ್ರಕಾರದಲ್ಲಿ  ಬರೆದ ‘ಸಿಹಿಜೀವಿಯ ನ್ಯಾನೋ ಕಥೆಗಳು’ ಮನುಷ್ಯನ ಅಂತರಾತ್ಮವನ್ನು ಪ್ರಶ್ನಿಸುವ ಶಕ್ತಿಯನ್ನು ಹೊಂದಿವೆ.
 ಕವಿಯಾಗಿ ನನ್ನನ್ಬು ಗುರ್ತಿಸಿದ ಕೃತಿ  ‘ಸಾಲು ದೀಪಾವಳಿ’ ಕವನ ಸಂಕಲನ. ಕನ್ನಡ ಸಾಹಿತ್ಯದಲ್ಲಿ ವಿಶಿಷ್ಟವಾದ ಗಜಲ್ ಪ್ರಕಾರವನ್ನು ಆರಿಸಿಕೊಂಡ ನಾನು, ‘ಸಿಹಿಜೀವಿಯ ಗಜಲ್’ ಮೂಲಕ ಭಕ್ತಿ, ಪ್ರೇಮ ಮತ್ತು ಸಾಮಾಜಿಕ ಚಿಂತನೆಗಳನ್ನು ವ್ಯಕ್ತಪಡಿಸುವ ಪ್ರಯತ್ನ ಮಾಡಿರುವೆ. ಕನಕದಾಸರ ತತ್ವಗಳನ್ನು ಮತ್ತು ಆಧುನಿಕ ಜೀವನದ ಸಂಘರ್ಷಗಳನ್ನು ಗಜಲ್‌ಗಳ ಮೂಲಕ ಚಿತ್ರಿಸಿರುವೆ.  ಅಲ್ಲದೆ, ಚುಟುಕು ಮತ್ತು ಹನಿಗವನಗಳ ಸಂಕಲನ ‘ಸಿಹಿಜೀವಿಯ ಹನಿಗಳು’ ಮೂಲಕ ಸಣ್ಣ ಸಾಲುಗಳಲ್ಲಿ ದೊಡ್ಡ ಅರ್ಥವನ್ನು ತುಂಬಿ ಹನಿಗವನ ರಚನೆ ಮಾಡಿರುವೆ.
ನಾನು ಕೇವಲ ಕಲ್ಪನಾ ಜಗತ್ತಿಗೆ ಸೀಮಿತವಾಗದೆ ನೈಜ ಜಗತ್ತಿನ ಇತಿಹಾಸ ಮತ್ತು ಪ್ರವಾಸದ ಬಗೆಗೂ ಆಸಕ್ತಿ ಹೊಂದಿದ . ‘ಐತಿಹಾಸಿಕ ತಾಣಗಳು’ ಮತ್ತು ‘ಕರ್ನಾಟಕದ 7 ಅದ್ಭುತಗಳು’ ಎಂಬ ಕೃತಿಗಳಲ್ಲಿ ಉಜ್ಜಯಿನಿ, ತಾಜ್ ಮಹಲ್, ಹಂಪಿ ಮತ್ತು ಮೈಸೂರು ಅರಮನೆಯಂತಹ ಪ್ರಮುಖ ಪ್ರವಾಸಿ ತಾಣಗಳ ಬಗ್ಗೆ ಮಾಹಿತಿ ನೀಡಿರುವೆ. ನನ್ನ ಪ್ರವಾಸ ಕಥನ ‘ಕ್ಯಾತಸಂದ್ರ ಟು ಕ್ಯಾತನಮಕ್ಕಿ’ ಪಶ್ಚಿಮ ಘಟ್ಟಗಳ ಸೌಂದರ್ಯ ಮತ್ತು ಚಾರಣದ ಅನುಭವವನ್ನು ಹಂಚಿಕೊಳ್ಳುತ್ತದೆ. ನನ್ನ 25ನೇ ಕೃತಿ ‘ವಿಶ್ವ ಭಾರತ’ ಪತ್ರಿಕಾ ಲೇಖನಗಳ ಸಂಕಲನವಾಗಿದ್ದು, ಭ್ರಷ್ಟಾಚಾರ, ಪರಿಸರ ಸಂರಕ್ಷಣೆ ಮತ್ತು ಜಾಗತಿಕ ವಿದ್ಯಮಾನಗಳ ಮೇಲೆ ಬೆಳಕು ಚೆಲ್ಲುತ್ತದೆ.
ನವ ಪೀಳಿಗೆಗೆ ದೇಶದ ಮಹಾನ್ ಚೇತನಗಳಾದ ಮಹಾತ್ಮಾ ಗಾಂಧೀಜಿ ಮತ್ತು ಡಾ. ಬಿ.ಆರ್. ಅಂಬೇಡ್ಕರ್ ಅವರ ತತ್ವಗಳನ್ನು ತಲುಪಿಸಲು ಇವರು ‘ಗಾಂಧೀಜಿ ಮತ್ತು ಅಂಬೇಡ್ಕರ್ ನುಡಿಮುತ್ತುಗಳು’ ಕೃತಿಯನ್ನು ಸಿದ್ಧಪಡಿಸಿ ಪ್ರಕಟಿಸಿರುವೆ.
"ಸಿಹಿಜೀವಿ ಕಂಡ ಅಂಡಮಾನ್" ಕೃತಿಯಲ್ಲಿ ಅಂಡಮಾನ್ ನ ಪ್ರಕೃತಿ ಸೊಬಗು ಹಾಗೂ ಅಲ್ಲಿಯ ಜನಜೀವನ ಬಿಂಬಿಸುವ ಕಾರ್ಯ ಮಾಡಿರುವೆ ಜಿ ಕೆ ಕುಲಕರ್ಣಿ ರವರ ಭಾಷೆಯಲ್ಲಿ ಅದು ನನ್ನ ಇಪ್ಪತ್ತೊಂಬನೇ ಹೆರಿಗೆ  ಪ್ರಸ್ತುತ. ಭೂತಾನ್ ಪ್ರವಾಸದ ಅನುಭವವನ್ನು ಬರೆದು ಪ್ರಕಟಿಸುವ ಪ್ರಯತ್ನದಲ್ಲಿರುವೆ.ಇದು ನನ್ನ ಮೂವತ್ತನೇ ಹೆರಿಗೆ! ಗೆಳೆಯರು ಆತ್ಮೀಯರು,ಹಿತೈಷಿಗಳು ನಿಮ್ಮ ‌ಹೆರಿಗೆ ಮುಂದುವರೆಯಲಿ ಆಪರೇಶನ್ ಮಾಡಿಸಿಕೊಳ್ಳಬೇಡಿ.ಕುಟುಂಬ ಯೋಜನೆಯ ನಿಯಮಗಳು ನಿಮಗೆ ಬೇಡ ಎಂದಿದ್ದಾರೆ. ನೀವೇನಂತೀರಿ?

ಸಿಹಿಜೀವಿ ವೆಂಕಟೇಶ್ವರ
ತುಮಕೂರು

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ