25 ಏಪ್ರಿಲ್ 2020

ಎರಡು ಚುಟುಕುಗಳು

ಎರಡು ಚುಟುಕುಗಳು


*ದೇಗುಲಗಳು*

ಸಕಲ ಕಾಲಕೂ ಮನಕಾನಂದ ನೀಡುತ್ತಿವೆ
ಬೇಲೂರು ಹಳೇಬೀಡಿನ ಶಿಲಾಬಾಲಿಕೆಗಳು
ಕಲಾರಸಿಕರನ್ನು ಕೈಬೀಸಿ ಕರೆಯುತ್ತಲಿವೆ
ಕನ್ನಡ ನಾಡಿನ ವಿಶ್ವ ಪ್ರಸಿದ್ಧ ದೇಗುಲಗಳು.


*ನಿಲ್ಲುತ್ತಿಲ್ಲ*

ವೈರಾಣುವಿನ ಪ್ರವರಕ್ಕೆ ಹೈರಾಣಾಗಿದೆ ಜಗ
ಎಲ್ಲಡೆ ಮರಣಮೃದಂಗವು  ನಿಲ್ಲುತ್ತಿಲ್ಲ
ವೈದ್ಯರು,ನಾರಾಯಣ,ಶ್ರಮಿಸುತ್ತಲಿದ್ದಾರೆ
ಕಾಲವನ್ನು ತಡೆಯೋರು ಯಾರೂ ಇಲ್ಲ.

*ಸಿ ಜಿ ವೆಂಕಟೇಶ್ವರ*
*ತುಮಕೂರು*

24 ಏಪ್ರಿಲ್ 2020

ಪುಸ್ತಕ ವಿಮರ್ಶೆ (ಜೋಗಿ ಕತೆಗಳು)


ಪುಸ್ತಕ ವಿಮರ್ಶೆ
ಇಂದು ನಾನು ಓದಿದ ಪುಸ್ತಕ ಜೋಗಿ ಕಥೆಗಳು
ಒಂದಕ್ಕಿಂತ ಒಂದು ವಿಭಿನ್ನವಾದ ಕಥಾವಸ್ತುವನ್ನು ಒಳಗೊಂಡ ೨೧ ಕಥೆಗಳನ್ನು ಒಂದೆ ಓದಿಗೆ ಆರಿಸಿಕೊಂಡು ಹೋದ ಪುಸ್ತಕ .ಜೋಗಿರವರ ಭಾಷೆ ಕಥೆಗಳಲ್ಲಿ ಬರುವ ತಿರುವುಗಳನ್ನು ಓದಿಯೇ ಅನುಭವಿಸಬೇಕು
ಅವರ ಗೆಳೆಯ ಸೂರಿಯವರ ವಿಮರ್ಶೆ ಪುಸ್ತಕದ ಮೊದಲ ಪುಟಗಳಲ್ಲಿ ಓದಿದ ಮೇಲೆ ಇಡಿ ಕಥೆಗಳ ಓದಿದ ಮೇಲೆ ಸೂರಿ ಒಬ್ಬ ಸಾಮಾನ್ಯ ಓದುಗನಂತೆ ವಿಮರ್ಶೆ ಮಾಡಿರುವುದು ನನ್ನ ಅರಿವಿಗೆ ಬಂತು.
ಈ ಕಥೆಗಳಲ್ಲಿ ಬರುವ ಬಹುತೇಕ ಪಾತ್ರಗಳು ನಾವು ಕೇಳಿದ ಮಹಾನ್ ವ್ಯಕ್ತಿಗಳದು ಉದಾಹರಣೆಗೆ ಪುರಂದರ ವಿಠ್ಠಲ ಗೊರೂರು ರಾಮಸ್ವಾಮಿ ಇತ್ಯಾದಿ .
ಒಟ್ಟಿನಲ್ಲಿ ಇಂದು ಒಂದು ಉತ್ತಮ ಪುಸ್ತಕ ಓದಿದ ಖುಷಿ
*ಸಿ.ಜಿ.ವೆಂಕಟೇಶ್ವರ*

ಸುಖಿ(ಹನಿ)

*ಸುಖಿ*

ಅವಳಿದ್ದರೆ ನನಗೆ ಸಂತಸ
ಅವರಿದ್ದರೆ ನಾನು ಸುಖಿ
ಎಂದು ಹಲುಬುತ್ತಿದ್ದೆ
ವಿಸ್ಮಯವೆಂದರೆ ಈಗೀಗ
ಅವರಿವರು ಇರದೇ
ಸುಖವಾಗಿರುವೆ ನಾನು
ಪರಮಾನಂದ ಅನುಭವಿಸುವೆ
ಇಲ್ಲದಿದ್ದರೆ " ನಾನು".

ಸಂಪತ್ತನ ದಿನಚರಿ (ಶಿಶುಗೀತೆ)

*ಸಂಪತ್ತನ ದಿನಚರಿ*

ಹತ್ತು ಹತ್ತು ಇಪ್ಪತ್ತು
ತೋಟಕೆ ಹೋದನು ಸಂಪತ್ತು.

ಇಪ್ಪತ್ತು ಹತ್ತು ಮೂವತ್ತು
ಗೆಳೆಯರ ದಂಡು ನೆರೆದಿತ್ತು.

ಮೂವತ್ತು ಹತ್ತು ನಲವತ್ತು
ಸವಿದರು ಹಣ್ಣುಗಳ ಗಮ್ಮತ್ತು.

ನಲವತ್ತು ಹತ್ತು  ಐವತ್ತು
ಕ್ರಮೇಣ ಹೊತ್ತು ಜಾರಿತ್ತು.

ಐವತ್ತು ಹತ್ತು ಅರವತ್ತು
ಮನೆ ಕಡೆ ಸವಾರಿ ನಡೆದಿತ್ತು.

ಅರವತ್ತು ಹತ್ತು ಎಪ್ಪತ್ತು
ಅಜ್ಜಿ ಕೊಟ್ಟರು ಸಿಹಿಮುತ್ತು.

ಎಪ್ಪತ್ತು ಹತ್ತು ಎಂಭತ್ತು
ಚಂದಿರ ಬಾನಲಿ ಬಂದಿತ್ತು .

ಎಂಭತ್ತು ಹತ್ತು ತೊಂಬತ್ತು
ಅಮ್ಮ ಕೊಟ್ಟರು ಕೈತುತ್ತು.

ತೊಂಬತ್ತು ಹತ್ತು ನೂರು
ಮಲಗುವ ಕೋಣೆ ಸೇರು

ಹತ್ತರಿಂದ ನೂರು ಈಗಿತ್ತು
ಸಂಪತ್ತನ ದಿನಚರಿ ಮುಗಿದಿತ್ತು

*ಸಿ ಜಿ ವೆಂಕಟೇಶ್ವರ*
*ತುಮಕೂರು*

23 ಏಪ್ರಿಲ್ 2020

ಜೀವಾತ್ಮಗಳ ವಿಕ್ರಯ (ಕಾದಂಬರಿಯ ವಿಮರ್ಶೆ)

ಪುಸ್ತಕ ವಿಮರ್ಶೆ

ಕಾದಂಬರಿ ಜೀವಾತ್ಮಗಳ ವಿಕ್ರಯ

"ಜೀವಾತ್ಮಗಳ ವಿಕ್ರಯ" ಕಾದಂಬರಿಯ ಹೆಸರೇ ನನ್ನ ಓದಲು ಪ್ರೇರೇಪಿಸಿತು. ಹೆಸರಾಂತ ಆಂಗ್ಲ ಕಾದಂಬರಿಕಾರರಾದ ಶ್ರೀ ವಿದ್ಯಾಧರ ದುರ್ಗೇಕರ್ ರವರ ಮೊದಲ ಕನ್ನಡ ಕಾದಂಬರಿ ಈ ಜೀವಾತ್ಮಗಳ ವಿಕ್ರಯ

ಅಭಿವೃದ್ಧಿ ಮತ್ತು ಪರಿಸರದ ವಿಷಯಗಳು ಬಂದಾಗ ಬಹಳ ಸಲ‌ ಅಭಿವೃದ್ಧಿಯ ಹೆಸರಿನಲ್ಲಿ ಮುಗ್ದ ಜನರ ಶೋಷಣೆ ಮತ್ತು ಪರಿಸರದ ಮೇಲಿನ ದೌರ್ಜನ್ಯವು ಗೆಲುವು ಸಾಧಿಸಿರುವುದನ್ನು ನಾವು ಕಾಣುತ್ತೇವೆ.
ಈ ಕಾದಂಬರಿ ಸಹ ಅದೇ ರೀತಿಯ ಕಥಾವಸ್ತು ಇಟ್ಟುಕೊಂಡು ವಿಭಿನ್ನವಾದ ನಿರೂಪಣೆಯೊಂದಿಗೆ ಓದುಗರ ಮನಸೆಳೆಯುತ್ತದೆ.

ಬಯಲು ಸೀಮೆಯ ನನಗೆ ಕರಾವಳಿಯ ಬದುಕು ಅಷ್ಟಾಗಿ ಪರಿಚಿತವಿರಲಿಲ್ಲ ಈ ಕಾದಂಬರಿಯ ಮೊದಲೆರಡು ಅದ್ಯಾಯ ಓದುವಾಗ ಕರಾವಳಿಯ ಚಿತ್ರಣ ನನ್ನ ಕಣ್ಣ ಮುಂದೆ ಹಾದು ಹೋಯಿತು.

ಪ್ರಸ್ತುತ ಕಾದಂಬರಿಯಲ್ಲಿ ಕಾದಂಬರಿಕಾರರು ಬೃಹತ್ ಕೈಗಾರಿಕಾ ಸ್ಥಾಪನೆಗೆ ಅಲಿಗದ್ದೆ ಸೇರಿದಂತೆ  ಮೂರು ಹಳ್ಳಿಗಳನ್ನು ವಶಪಡಿಸಿಕೊಳ್ಳಲು ರಾಜಕಾರಣಿಗಳಾದ ಕುಬೇರ, ಮತ್ತು ದಾಮು ಹೇಗೆ ಹೊಂಚು ಹಾಕಿ ಸಂಚು ಮಾಡುವರು. ಇದಕ್ಕೆ ‌ಯುವ ವಕೀಲೆ ರೋಶನಿ ಮತ್ತು ಕಾಲೇಜು ಅದ್ಯಾಪಕ ಅಮರ್ ಹೇಗೆ ಎಲ್ಲಾ ರೀತಿಯಲ್ಲಿ ಪ್ರತಿಭಟನೆಗಳನ್ನು ಆಯೋಜಿಸಿ ಹಳ್ಳಿಯ ಜನರಿಗೆ ನ್ಯಾಯ ಕೊಡಿಸಲು ಬಹಳ ‌ಪ್ರಾಮಾಣಿಕ ಪ್ರಯತ್ನ ಮಾಡುವರು, ಆದರೆ ಭ್ರಷ್ಟಾಚಾರದ ವ್ಯವಸ್ಥೆ, ಅಪ್ರಮಾಣಿಕ ಪೊಲೀಸರು, ಅನಕ್ಷರಸ್ಥರು, ಚಟದಾಸರು ಈಗೆ ಹಲವಾರು ಜನರ ಷಡ್ಯಂತ್ರದಿಂದ ಹಳ್ಳಿಯ ಜನರು ಕೇವಲ ತಮ್ಮ ಜಮೀನನ್ನು ಬಿಟ್ಟು ಹೊರಡುವುದಿಲ್ಲ ತಮ್ಮ ಜೀವಾತ್ಮಗಳ ಮಾರಿಕೊಂಡು ನಿರ್ಜೀವವಾಗಿ ತಿಳಿಯದ ಜಾಗಕ್ಕೆ ಹೊರಡುವ ಜನರ ಕಂಡು ಕಾದಂಬರಿಯ ಕಡೆಯಲ್ಲಿ ನಮ್ಮ ಕಣ್ಣಲ್ಲಿ ಒಂದೆರಡು ಹನಿ ಜಿನುಗದಿರದು .

ಕುಬೇರ ಮತ್ತು ದಾಮುರಂತಹ ಗೋಮುಖ ವ್ಯಾಘ್ರರು ಹಳ್ಳಿಯ ಜನರನ್ನು ವಂಚಿಸುತ್ತಾ ಬಹುರಾಷ್ಟ್ರೀಯ ಕಂಪನಿಗೆ ಒಳಗೊಳಗೆ ಹೇಗೆ ಸಹಕರಿಸಿ ಸ್ವ ಕಲ್ಯಾಣ ಮಾಡಿಕೊಳ್ಳುವರು. ಹಾಗೂ ಹಳ್ಳಿಯಲ್ಲಿ ಅನೈತಿಕ ಚಟುವಟಿಕೆಗಳನ್ನು ಪ್ರೋತ್ಸಾಹ ನೀಡಿ  ಹೇಗೆ ಹಳ್ಳಿಯ ವಾತಾವರಣದಲ್ಲಿ ಕೆಟ್ಟ ಬದಲಾವಣೆ ತಂದರು ಎಂಬುದನ್ನು ಕಾದಂಬರಿಕಾರರು ಚೆನ್ನಾಗಿ ಬಿಂಬಿಸಿದ್ದಾರೆ  ಇಂದಿಗೂ ನಮ್ಮ ಸಮಾಜದಲ್ಲಿ ಇಂತವರು ಇರುವುದು ದುರದೃಷ್ಟಕರ.

ಹಳ್ಳಿಯಲ್ಲಿ ಧರ್ಮ ಸಮನ್ವಯತೆಯನ್ನು ಬಿಂಬಿಸುವಲ್ಲಿ ಕಾದಂಬರಿಕಾರರು ಉತ್ತಮವಾದ ಚಿತ್ರ ಕಟ್ಟಿಕೊಟ್ಟಿದ್ದಾರೆ, ಜೋನ್ , ಅಲೋಮ, ಪ್ರಾನ್ಸಿಸ್, ಮತ್ತು ಕಥಾನಾಯಕನ ನಡುವಿನ ಸಂಬಂಧ ,ಹಳ್ಳಿಯ ಜನರ ಅನ್ಯೋನ್ಯತೆ ಬಿಂಬಿಸಿದ್ದಾರೆ ಇದು ಇಂದಿನ ಸಮಾಜಕ್ಕೆ ಬೇಕಾದ ತುರ್ತು ಅಗತ್ಯ

ಗಂಭೀರವಾದ ವಿಷಯದ ಕುರಿತ ಕಾದಂಬರಿಯಲ್ಲಿ ಎರಡು ಮೂರು ಕಡೆ ಲೇಖಕರು ಓದುಗರಿಗೆ ಶೃಂಗಾರ ರಸದೌತಣ ನೀಡಿದ್ದಾರೆ.
ಯುವ ಜೋಡಿ ರೋಶನಿ ಮತ್ತು ಸಮರ್ ರೊಮ್ಯಾಂಟಿಕ್ ದೃಶ್ಯಗಳು ಓದುವಾಗ ಮೈಬಿಸಿಯಾಗುವುದು ಸುಳ್ಳಲ್ಲ .

ಒಟ್ಟಾರೆ ಹೇಳುವುದಾದರೆ ಈ ಕಾದಂಬರಿಯಲ್ಲಿ‌ ಅಲ್ಲಲ್ಲಿ ಕೆಲವು ಅನುವಾದ ದೋಷಗಳನ್ನು ಹೊರತುಪಡಿಸಿದರೆ ಚಿಂತನೆಗೆ ಹಚ್ಚುವ, ಸಮಾಜದ ಬಗ್ಗೆ ಕಾಳಜಿ ಇರುವ ,ಪರಿಸರ ಕಾಳಜಿ ಇರುವ ನಮ್ಮಲ್ಲಿ ಜಾಗೃತಿ ಮೂಡಿಸುವ ಒಂದು ಸುಂದರ ಕಾದಂಬರಿ ಎಂದು ಹೇಳಬಹುದು.
 ಇಂದು ವಿಶ್ವ ಪುಸ್ತಕ ದಿನ ಈ ದಿನದಂದು ನೀವು ಸಹ ಇಂತಹ ಕಾದಂಬರಿಯನ್ನು  ಓದಲು ಸಲಹೆ ನೀಡುವೆನು.
ವಂದನೆಗಳೊಂದಿಗೆ

ಸಿ ಜಿ ವೆಂಕಟೇಶ್ವರ
ತುಮಕೂರು

ಕಾದಂಬರಿ ಹೆಸರು: ಜೀವಾತ್ಮಗಳ ವಿಕ್ರಯ

ಕಾದಂಬರಿಕಾರರ ಹೆಸರು: ವಿದ್ಯಾಧರ ದುರ್ಗೇಕರ್.

ಪ್ರಕಾಶನ: ಅವಂತ ಗಾರ್ಡೆ ಪ್ರಕಾಶನ
ಬೆಂಗಳೂರು.

ಬೆಲೆ:೨೨೫