ವಿಮರ್ಶೆ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ
ವಿಮರ್ಶೆ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ

09 ಏಪ್ರಿಲ್ 2025

ಹಳ್ಳಿಗಳ ನಾಮದ ಮೇಲೆ ಬೆಳಕ ಚೆಲ್ಲುವ ದೇ ಜ ಗೌ ಕೃತಿ.


 


 ಹಳ್ಳಿಗಳ ನಾಮದ ಮೇಲೆ ಬೆಳಕ ಚೆಲ್ಲುವ   ದೇ ಜ ಗೌ ಕೃತಿ.


ದೇಜಾಗೌ ಎಂದು ಕರೆಯಲ್ಪಡುವ ಪ್ರೊ. ಡಿ. ಜವರೇ ಗೌಡ ಅವರು ಕನ್ನಡ ಸಾಹಿತ್ಯ ಮತ್ತು ಸಂಸ್ಕೃತಿ ಕ್ಷೇತ್ರದಲ್ಲಿ ಪ್ರಮುಖ ವಿದ್ವಾಂಸ ಮತ್ತು ಬರಹಗಾರರಾಗಿದ್ದರು. ಅವರು ಸ್ಥಳನಾಮಗಳ ಅಧ್ಯಯನದಲ್ಲಿ ತೀವ್ರ ಆಸಕ್ತಿ ಹೊಂದಿದ್ದರು. ಈ    ಕ್ಷೇತ್ರಕ್ಕೆ ಗಮನಾರ್ಹ ಕೊಡುಗೆಗಳನ್ನು ನೀಡಿದ್ದಾರೆ. ಭಾರತೀಯ ಸ್ಥಳನಾಮಗಳ ಸೊಸೈಟಿಯೊಂದಿಗಿನ ಅವರ ಕೆಲಸ ಮತ್ತು ಮೈಸೂರು ಜಿಲ್ಲೆಯ ಗ್ರಾಮನಾಮಗಳ ಕುರಿತಾದ ಅವರ ಸಂಶೋಧನೆಯು ಕರ್ನಾಟಕದ ಭಾಷಾ ಮತ್ತು ಸಾಂಸ್ಕೃತಿಕ ಪರಂಪರೆಯನ್ನು ಸಂರಕ್ಷಿಸುವ ಮತ್ತು ಅರ್ಥಮಾಡಿಕೊಳ್ಳುವ ಅವರ ಸಮರ್ಪಣೆಯನ್ನು ತೋರಿಸುತ್ತದೆ. ಗೌಡರ ಶೈಕ್ಷಣಿಕ ಅನ್ವೇಷಣೆಗಳು ಮತ್ತು ಸಾಹಿತ್ಯಿಕ ಕೊಡುಗೆಗಳು ಕನ್ನಡ ಭಾಷೆ ಮತ್ತು ಸಂಸ್ಕೃತಿಯ ಅಧ್ಯಯನದ ಮೇಲೆ ಶಾಶ್ವತವಾದ ಪ್ರಭಾವ ಬೀರಿವೆ.


 ದೇ  ಜ  ಗೌ ಅವರ "ವಿಲೇಜ್ ನೇಮ್ಸ್ ಆಪ್ ಮೈಸೂರ್ ಡಿಸ್ಟ್ರಿಕ್ಟ್ " ಎಂಬ ಪುಸ್ತಕವನ್ನು ಓದಿದೆ.ಇದು ಮೈಸೂರು ಜಿಲ್ಲೆಯ ಗ್ರಾಮಗಳ ಹೆಸರುಗಳು ಹೇಗೆ ಬಂದಿವೆ ಎಂಬ ಬಗ್ಗೆ ವಿವರವಾದ ಮಾಹಿತಿಯನ್ನು ನೀಡುತ್ತದೆ. 

 1998 ರಲ್ಲಿ ಪ್ರಕಟವಾದ ಈ ಕೃತಿಯು ಸ್ಥಳನಾಮಗಳ ಮೂಲ, ವಿಕಸನ ಮತ್ತು ಅರ್ಥದ ಅಧ್ಯಯನವಾದ ಓನೋಮಾಸ್ಟಿಕ್ಸ್   ಕ್ಷೇತ್ರಕ್ಕೆ ಮಹತ್ವದ ಕೊಡುಗೆಯಾಗಿದೆ.


ಈ   ಪುಸ್ತಕವನ್ನು ಎರಡು ಭಾಗಗಳಾಗಿ ವಿಂಗಡಿಸಲಾಗಿದೆ.

ಭಾಗ ಒಂದು ನಮಗೆ  ನಿರ್ದಿಷ್ಟತೆಗಳು ಮತ್ತು ಸಾರ್ವತ್ರಿಕತೆಗಳ ಆಧಾರದ ಮೇಲೆ ಗ್ರಾಮ ಹೆಸರುಗಳ ವರ್ಗೀಕರಣದ ಬಗ್ಗೆ ಮಾಹಿತಿಯನ್ನು ಒದಗಿಸುತ್ತದೆ. 

ಭಾಗ ಎರಡು ಗ್ರಾಮ ಹೆಸರುಗಳ ಶಬ್ದಾರ್ಥದ ಅಧ್ಯಯನದ ಮೇಲೆ ಕೇಂದ್ರೀಕರಿಸುತ್ತದೆ.


ಈ ಪುಸ್ತಕವು ಗ್ರಾಮಗಳ ಹೆಸರುಗಳ ಸಂಕೀರ್ಣತೆಗಳನ್ನು ಪರಿಶೀಲಿಸುತ್ತಾ ಪ್ರಾಚೀನ ಕಾಲದಿಂದಲೂ ಅವುಗಳ ಬೇರುಗಳನ್ನು ಪತ್ತೆಹಚ್ಚುವ ಪ್ರಯತ್ನ ಮಾಡುತ್ತದೆ. ಹಾಗೂ    ಅವುಗಳ ನಾಮಕರಣದ ಮೇಲೆ ಪ್ರಭಾವ ಬೀರಿದ ವಿವಿಧ ಅಂಶಗಳನ್ನು ವಿಶ್ಲೇಷಿಸುತ್ತದೆ. ಗೌಡರ ವಿಧಾನವು ಐತಿಹಾಸಿಕ ಮತ್ತು ವಿಶ್ಲೇಷಣಾತ್ಮಕವಾಗಿದೆ, ಭೌಗೋಳಿಕ, ಸಾಂಸ್ಕೃತಿಕ, ಸಾಮಾಜಿಕ ಮತ್ತು ರಾಜಕೀಯ ಅಂಶಗಳು ಈ ಗ್ರಾಮಗಳ ಗುರುತುಗಳನ್ನು ಹೇಗೆ ರೂಪಿಸಿವೆ ಎಂಬುದರ ಸಮಗ್ರ ನೋಟವನ್ನು ಒದಗಿಸುತ್ತದೆ.


 ನಿರ್ದಿಷ್ಟತೆ ಮತ್ತು ಸಾಮಾನ್ಯ ಲಕ್ಷಣಗಳನ್ನು ಆಧರಿಸಿದ ಗ್ರಾಮ ಹೆಸರುಗಳ ವಿವರವಾದ ವರ್ಗೀಕರಣವು ಪುಸ್ತಕದ ಒಂದು ಶಕ್ತಿಯಾಗಿದೆ. ಈ ವರ್ಗೀಕರಣವು ಗ್ರಾಮ ಹೆಸರುಗಳ ಅರ್ಥಗಳು ಮತ್ತು ಮೂಲಗಳನ್ನು ಸ್ಪಷ್ಟಪಡಿಸುವಲ್ಲಿ ಸಹಾಯ ಮಾಡುತ್ತದೆ. ಪ್ರದೇಶದ ಐತಿಹಾಸಿಕ, ಸಾಂಸ್ಕೃತಿಕ ಮತ್ತು ಭಾಷಾ ಹಿನ್ನೆಲೆಗಳ ಬಗ್ಗೆ ಒಳನೋಟಗಳನ್ನು  ಸಹ  ಒದಗಿಸುತ್ತದೆ. ಕಾಲಾನಂತರದಲ್ಲಿ ಗ್ರಾಮ ಹೆಸರುಗಳ ರೂಪಾಂತರದ ಮೇಲೆ ಭಾಷಾ ವಿಕಸನ, ಸಂಸ್ಕೃತೀಕರಣ ಮತ್ತು ಆಂಗ್ಲೀಕರಣದ ಪ್ರಭಾವವನ್ನು ಲೇಖಕರು ಪ್ರಸ್ತಾಪಿಸಿದ್ದಾರೆ.

 ಗೌಡರು ಈ ಅರ್ಥಪೂರ್ಣ  ವಿಶ್ಲೇಷಣೆಗೆ  ಹಾಗೂ ಗ್ರಾಮಗಳ ಹೆಸರುಗಳ ವ್ಯುತ್ಪತ್ತಿ ಮತ್ತು ಶಬ್ದಾರ್ಥದ ಮೌಲ್ಯವನ್ನು ಪತ್ತೆಹಚ್ಚಲು ಶಿಲಾಶಾಸನ ದಾಖಲೆಗಳು, ಸಾಹಿತ್ಯ ಕೃತಿಗಳು, ಗೆಜೆಟಿಯರ್‌ಗಳು ಮತ್ತು ಜನಗಣತಿ ದಾಖಲೆಗಳಂತಹ ವಿವಿಧ ಮೂಲಗಳನ್ನು ಸಮರ್ಪಕವಾಗಿ ಬಳಸಿಕೊಂಡಿದ್ದಾರೆ.


  ಮೈಸೂರು ಜಿಲ್ಲೆಯ ಐತಿಹಾಸಿಕ ಹಿನ್ನೆಲೆಯನ್ನು ಸಹ  ಈ  ಪುಸ್ತಕ ನಮಗೆ ಒದಗಿಸುತ್ತದೆ. ಈ ಪ್ರದೇಶದ ಮೇಲೆ ಪ್ರಭಾವ ಬೀರಿದ ವಿವಿಧ ರಾಜವಂಶಗಳು ಮತ್ತು ಆಡಳಿತಗಾರರ ಬಗ್ಗೆ ಚರ್ಚಿಸುತ್ತದೆ. ಗ್ರಾಮ ಹೆಸರುಗಳ ವಿಕಸನ ಮತ್ತು ಅವುಗಳ ಸಾಂಸ್ಕೃತಿಕ ಮಹತ್ವವನ್ನು ಅರ್ಥಮಾಡಿಕೊಳ್ಳುವಲ್ಲಿ ಈ ಐತಿಹಾಸಿಕ ಸಂದರ್ಭವು ನಿರ್ಣಾಯಕವಾಗಿದೆ.


ವ್ಯಾಪಕವಾದ ಕ್ಷೇತ್ರ ಕಾರ್ಯದ ಕೊರತೆಯಿಂದಾಗಿ ಅಧ್ಯಯನದ ಮಿತಿಗಳನ್ನು ಲೇಖಕರು ಒಪ್ಪಿಕೊಂಡರೂ  ಪುಸ್ತಕದಲ್ಲಿ ಪ್ರಸ್ತುತಪಡಿಸಲಾದ ಸಂಶೋಧನೆ ಮತ್ತು ವಿಶ್ಲೇಷಣೆ ಶ್ಲಾಘನೀಯ. 

ಒಟ್ಟಾರೆ ಈ ಕೃತಿಯು ವಿದ್ವಾಂಸರು, ಇತಿಹಾಸಕಾರರು, ಭಾಷಾಶಾಸ್ತ್ರಜ್ಞರು ಮತ್ತು ಹಳ್ಳಿಗಳ ಹೆಸರುಗಳಲ್ಲಿ ಹುದುಗಿರುವ ಶ್ರೀಮಂತ ಸಾಂಸ್ಕೃತಿಕ ಪರಂಪರೆಯನ್ನು ಅರ್ಥಮಾಡಿಕೊಳ್ಳಲು ಆಸಕ್ತಿ ಹೊಂದಿರುವ ಯಾರಿಗಾದರೂ ಅಮೂಲ್ಯವಾದ ಸಂಪನ್ಮೂಲವಾಗಿದೆ.


ಸಿಹಿಜೀವಿ ವೆಂಕಟೇಶ್ವರ

ತುಮಕೂರು



07 ಜನವರಿ 2024

ರೈತರ ಶೋಷಣೆ ಮತ್ತು ಜಾತಿ ಪದ್ದತಿಯ ವಿರುದ್ದ ಸಿಡಿದೆದ್ದ #ಕಾಟೇರ...

 


ರೈತರ ಶೋಷಣೆ ಮತ್ತು ಜಾತಿ ಪದ್ದತಿಯ ವಿರುದ್ದ ಸಿಡಿದೆದ್ದ #ಕಾಟೇರ...


ಜಗತ್ತಿನಲ್ಲಿ ಇರೋದೆ ಕೆಲವು ಕಥೆಗಳು ಆ ಕಥೆಗಳನ್ನು ವಿಭಿನ್ನವಾಗಿ ಪ್ರಸ್ತುತಪಡಿಸುವವನೇ ಉತ್ತಮ ಕಥೆಗಾರ. ಅಂತಹ ಕಥೆಗಳನ್ನು ಸಶಕ್ತವಾಗಿ ಚಿತ್ರರೂಪ ನೀಡಿ ನಿರ್ದೇಶನ ಮಾಡಿ ಗೆದ್ದ ಚಿತ್ರ ಕಾಟೇರ. ವಾರದಲ್ಲೇ ಶತಕೋಟಿ ಕಲೆಕ್ಷನ್ ಮಾಡಿ ಮುನ್ನುಗ್ಗೋ ಚಿತ್ರದ ಸೂತ್ರದಾರ ತರುಣ್  ಸುಧೀರ್ .

ರೀನಾ ಡಿಸೋಜಾ ಪಾತ್ರದಲ್ಲಿ ಶ್ವೇತಾ ಪ್ರಸಾದ್ ರವರು ಪೋರೆನ್ಸಿಕ್ ತಂಡದ ಜೊತೆಗೆ ತಲೆಬುರುಡೆಯ ಬಗ್ಗೆ ಸಂಶೋಧನೆ ಮಾಡುವ ಶಾಟ್ ನೊಂದಿಗೆ ಆರಂಭವಾಗುವ ಚಿತ್ರದ ಕೊನೆಯ ಫ್ರೇಮ್ ವರಗೆ ಟೈಟಲ್ ಕಾರ್ಡ್ ನೋಡುವವರೆಗೆ ಉಸಿರು ಬಿಗಿ ಹಿಡಿದು ನೋಡುವ ಸಿನಿಮಾ ಕಾಟೇರ. ದರ್ಶನ್ ರವರ ಮಾಮೂಲಿ ಸಿನಿಮಾಕ್ಕೆ ಹೋಲಿಸಿದರೆ ಇಲ್ಲಿ ಬೇರೆ ರೀತಿಯ ದರ್ಶನ್ ರವರ ದರ್ಶನವಾಗುತ್ತದೆ.

ಭೀಮನಹಳ್ಳಿಯ ಕಬ್ಬಿಣ ಕಾಸಿ ಬಡಿದು ಹತಾರ ಮಾಡುವ  ಕಾಟೇರ ತನ್ನ ಹಳ್ಳಿಯ ರೈತರಿಗೆ ಭೂಸುಧಾರಣಾ ಕಾಯಿದೆಯನ್ನು ಜಾರಿಗೆ ತರಲು ರೈತರನ್ನು ಊಳಿಗಮಾನ್ಯ ಭೂಮಾಲೀಕರಾದ ದೇವರಾಯ ಮತ್ತು ಕಾಳೇಗೌಡರಿಂದ ಪಾರು ಮಾಡಲು ಅನೇಕ ಸವಾಲುಗಳನ್ನು ಎದುರಿಸಬೇಕಾಗುತ್ತದೆ.ಆ ಸವಾಲುಗಳನ್ನು ಕಾಟೇರ ಹೇಗೆ ಎದುರಿಸದ ಜಾತಿ ಪದ್ದತಿಗೆ ಹೇಗೆ ಸೆಡ್ಡು ಹೊಡೆದ  ಎಂಬುದನ್ನು ನೀವು ತೆರೆಯ ಮೇಲೆಯೇ ನೋಡಬೇಕು.ಈ ಚಿತ್ರದಲ್ಲಿ ದರ್ಶನ್ ಅಭಿನಯ ಬೇರೆಯೇ ಲೆವೆಲ್ ನಲ್ಲಿದೆ. 

ನಾನು ಸಿನಿಮಾ ನೋಡಿದ್ದು ಐನಾಕ್ಸ್ ರಾಯಲ್ ಸೀಟ್ ನಲ್ಲಿ ನನ್ನ ಪಕ್ಕ ಆರಾಮಾಗಿ ಮಲಗಿ ಸಿನಿಮ ನೋಡುವ ಸುಮಾರು ಅರವತ್ತು ವರ್ಷ ವಯಸ್ಸಿನ ವ್ಯಕ್ತಿ ಸಿನಿಮಾ ಅರಂಭವಾದ ಹತ್ತು ನಿಮಿಷಕ್ಕೆ ಸೀಟಿನ ತುದಿಗೆ ಕುಳಿತು ನೋಡಲಾರಂಬಿಸಿದರು.ಈ ಉದಾಹರಣೆ ಸಾಕು ಸಿನಿಮಾದ ಗುಣಮಟ್ಟ ತಿಳಿಸಲು. ಮಾಸ್ತಿಯವರ ಸಂಭಾಷಣೆ ಚಿತ್ರವನ್ನು ಇನ್ನೂ ಕಳೆಗಟ್ಟಿಸಿದೆ" ಗಂಡ್ಸಾದವ್ನು ಕೆಲ್ಸ ಮಾಡಿ ಬೆವ್ರು ಸುರ್ಸುಬೇಕಲೇ, ಹೆಣ್ ನೋಡಿ  ಜೊಲ್ ಸುರ್ಸ್ ಬಾರ್ದು" ಮುಂತಾದ ಡೈಲಾಗ್ ಜನರ ಮನ ತಾಗುತ್ತವೆ.

ತಾರಾಗಣದಲ್ಲಿ ಅನುಭವಿ ನಟ ನಟಿಯರು ಚಿತ್ರದ ಘನತೆಯನ್ನು ಹೆಚ್ಚಿಸಿದ್ದಾರೆ.

ಕಾಟೇರನಾಗಿ ದರ್ಶನ್ ಎರಡು ಶೇಡ್ ಗಳಲ್ಲಿ ಅಭಿನಯಿಸಿರುವುದು ಅವರ ಅಭಿಮಾನಿಗಳಿಗೆ ಡಬಲ್ ಧಮಾಕ.

ಪ್ರಭಾವತಿ ಪಾತ್ರದಲ್ಲಿ ಆರಾಧನಾ ರಾಮ್ ಮೊದಲ ಚಿತ್ರದಲ್ಲೇ ಅಭಿನಯದಲ್ಲಿ ಸೆಂಚುರಿ ಹೊಡೆದಿರುವರು.

ದೇವರಾಯನಾಗಿ ಜಗಪತಿ ಬಾಬು ಉತ್ತಮ ಖಳನಾಯಕನ ಪಾತ್ರದಲ್ಲಿ ಮಿಂಚಿದ್ದಾರೆ.

ಮಹದೇವಣ್ಣ ಪಾತ್ರದಲ್ಲಿ ಕುಮಾರ್ ಗೋವಿಂದ್ ಅಭಿನಯ ಸುಂದರ.

ಕಾಟೇರನ ಸಹೋದರಿ

ಕುಮಾರಿಯಾಗಿ ಶ್ರುತಿ ಅಭಿನಯ ಎಂದಿನಂತೆ ಉತ್ತಮ.

ಮಾತುಬಾರದ ನಾಟಕ ಕಲಾವಿದ 

ಚೋಂಗ್ಲಾ ಪಾತ್ರದಲ್ಲಿ ವೈಜನಾಥ ಬಿರಾದಾರ್ ಅಭಿನಯ ಕೆಲವೆಡೆ ನಗು ತಂದರೆ ಕೆಲವೆಡೆ ಕಣ್ಣು ತೇವವಾಗುತ್ತದೆ.

ಪುಟ್ಟರಾಜು ಪಾತ್ರದಲ್ಲಿ ಮಾಸ್ಟರ್ ರೋಹಿತ್ ಚುರುಕಾಗಿ ಅಭಿನಯಿಸಿದರೆ,

ಅವಿನಾಶ್ ಶಾನುಬೋಗನಾಗಿ ತಣ್ಣನೆಯ ವಿಲನ್ ಪಾತ್ರ ಮಾಡಿದ್ದಾರೆ.

ಕಾಳೇಗೌಡನಾಗಿ ವಿನೋದ್ ಕುಮಾರ್ ಆಳ್ವ ತೆರೆಯ ಮೇಲೆ ಮಿಂಚಿದ್ದಾರೆ.

ಸುಧಾಕರ್ ರವರ ಛಾಯಾಗ್ರಹಣ ಕಣ್ಣಿಗೆ ಹಬ್ಬ. ಸಂಕಲನಕಾರರಾದ ಕೆ ಎಮ್ ಪ್ರಕಾಶ್ ಚಿತ್ರ ವೇಗವಾಗಿ ಚಲಿಸಲು ತಮ್ಮದೇ ಯೋಗದಾನ ನೀಡಿದ್ದಾರೆ.ಹರಿಕೃಷ್ಣ ರವರ ಸಂಗೀತ ಮತ್ತು ಹಿನ್ನೆಲೆ ಸಂಗೀತ ಚಿತ್ರದ ಹೈಲೈಟ್.ಸಂಗೀತಕ್ಕೆ ತಕ್ಕ ಚೇತನ್ ಕುಮಾರ್, ಯೋಗರಾಜ್ ಭಟ್ ಹಾಗೂ ನನ್ನ ನೆಚ್ಚಿನ ಗೀತ ರಚನೆಕಾರ ವಿ ನಾಗೇಂದ್ರ ಪ್ರಸಾದ್ ರವರ ಸಾಹಿತ್ಯ ಅತ್ಯುತ್ತಮ. 

ಈ ಚಿತ್ರ 70 ,80 ರ ದಶಕದ ಕಥೆ ಆಧಾರಿತ ಆದರೂ ಈಗಲೂ ಅಲ್ಲಲ್ಲಿ ಮರ್ಯಾದೆಗೇಡು ಹತ್ಯೆ, ಜಾತಿ ಪದ್ದತಿಯು ಆಚರಣೆ ನೋಡಿದರೆ ಇದು ಇಂದಿನ ಕಥೆಯೂ ಹೌದು.

 ಎಂಭತ್ತರ ದಶಕಕ್ಕೂ ಹಿಂದಿನವರು ಈ ಚಿತ್ರ ನೋಡಿ ತಮ್ಮ ಕಾಲದ ಜನ  ಜೀವನ ರಿವೈಂಡ್ ಮಾಡಿಕೊಳ್ಳಬಹುದು 

ಜಾತಿ ಪದ್ದತಿ, ಇಂದಿನ ಪೀಳಿಗೆಯ  ಯುವಕರು ಆ ಕಾಲದ ಜೀವನಪದ್ದತಿ ನೋಡಬಹುದು.ಒಟ್ಟಾರೆ ಇದು ಎಲ್ಲರೂ ನೋಡಬೇಕಾದ ಸಿನಿಮಾ ಕೊನೆಯದಾಗಿ ಇಂತಹ ಚಿತ್ರ ನಿರ್ಮಿಸಿದ ಧೀರ ರಾಕ್ಲೈನ್ ವೆಂಕಟೇಶ್ ರವರಿಗೆ ಅಭಿನಂದನೆ ಸಲ್ಲಿಸಲೇಬೇಕು.


ಸಿಹಿಜೀವಿ ವೆಂಕಟೇಶ್ವರ

ತುಮಕೂರು

9900925529

08 ಫೆಬ್ರವರಿ 2023

ಸಮಾಧಾನಿಯಾಗಿರಿ...


 


ಸಮಾಧಾನಿಯಾಗಿರಿ...
ಪುಸ್ತಕ ಪರಿಚಯ...

ಇತ್ತೀಚೆಗೆ ಬೆಂಗಳೂರಿನ ನ್ಯಾಶನಲ್ ಕಾಲೇಜಿನಲ್ಲಿ ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ ಆಯೋಜಿಸಿದ್ದ  ರಾಜ್ಯ ಮಟ್ಟದ ಅತ್ಯುತ್ತಮ ಶಿಕ್ಷಕ ಪುರಸ್ಕಾರ ಪಡೆಯಲು ಹಾಜರಾಗಿ ಪ್ರಶಸ್ತಿ ಸ್ವೀಕರಿಸಿದ್ದು ಬಹಳ ಸಂತಸ ನೀಡಿತು.ಅದಕ್ಕಿಂತ ಮುಖ್ಯವಾಗಿ ಡಾ .ಸಿ ಆರ್ ಚಂದ್ರಶೇಖರ್ ರವರನ್ಬು ಹತ್ತಿರದಿಂದ ನೋಡುವ ಸೌಭಾಗ್ಯ! ಅಷ್ಟೇ ಅಲ್ಲ ನನ್ನ ಹತ್ತನೇ ಕೃತಿಯನ್ನು ಅವರೇ ಲೋಕಾರ್ಪಣೆ ಮಾಡಿದ್ದು! ಇನ್ನೇನು ಬೇಕು ನನಗೆ.ಒಟ್ಟಾರೆ ಆ ಇಡಿ ದಿನ ಸಂತಸದಲ್ಲಿ ತೇಲಿದ್ದೆ.ಆ ಕ್ಷಣಗಳನ್ನು ಈಗಲೂ ಪದೇ ಪದೇ ಮೆಲುಕು ಹಾಕುತ್ತಲೇ ಇರುವೆ.
280 ಕ್ಕೂ ಹೆಚ್ಚು ಕೃತಿಗಳನ್ನು ಬರೆದಿರುವ ಅವರ ಬಗ್ಗೆ ಸರ್ವರಿಗೂ ಪರಿಚಯವಿದೆ.
 ಅವರು ಮಾನಸಿಕ ಆರೋಗ್ಯ ತಜ್ಞರು. ಬೆಂಗಳೂರಿನ ನಿಮ್ಹಾನ್ಸ್ ನಲ್ಲಿ ವೈದ್ಯರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ. ಇವರು ಮಾನಸಿಕ ಆರೋಗ್ಯಕ್ಕೆ ಸಂಬಂಧಿಸಿದಂತೆ ಹಲವಾರು ಪುಸ್ತಕಗಳನ್ನು ಬರೆದಿದ್ದಾರೆ. ದೆವ್ವ, ಭೂತ, ಭಾನಾಮತಿಗಳ ಬಗ್ಗೆ ವಿಶೇಷ ಆಸಕ್ತಿ ವಹಿಸಿ ಆ ಬಗ್ಗೆ ಸಾಕಷ್ಟು ಅಧ್ಯಯನಗಳನ್ನು ನಡೆಸಿದ್ದಾರೆ  ಸಾವಿರಾರು ಭಾಷಣಗಳನ್ನು ನೀಡಿದ್ದಾರೆ. 750ಕ್ಕೂ ಹೆಚ್ಚು ಕಾರ್ಯಾಗಾರಗಳಲ್ಲಿ ಭಾಗವಹಿಸಿದ್ದಾರೆ.   ಮಾನಸಿಕ ಆರೋಗ್ಯ, ಸಾಮಾನ್ಯ ಆರೋಗ್ಯ, ಲೈಂಗಿಕ ವಿಜ್ಞಾನ, ವೈಚಾರಿಕ ಸಾಹಿತ್ಯ, ಕಾದಂಬರಿ, ಸಣ್ಣ ಕತೆ, ಅನುವಾದ ಸಾಹಿತ್ಯ ಮುಂತಾದ ಪ್ರಕಾರಗಳಲ್ಲಿ ಕೆಲಸ ಮಾಡಿದ್ದಾರೆ. 1986ರಲ್ಲೇ ಸ್ಥಾಪಿತವಾಗಿದ್ದ ಕನ್ನಡ ವೈದ್ಯ ಸಾಹಿತ್ಯ ಪರಿಷತ್ತಿಗೆ 1994ರಲ್ಲಿ ಪುನಃಶ್ಚೇತನ ನೀಡಿದರು. ಹಲವಾರು ವಿದೇಶಗಳಿಗೆ ತಜ್ಞ ವೈದ್ಯರಾಗಿಯೂ ಮತ್ತು ಪ್ರವಾಸಿಗರಾಗಿಯೂ ಹೋಗಿಬಂದಿದ್ದಾರೆ.
ಅಂದಿನ ಸಮಾರಂಭದಲ್ಲಿ ನನಗೆ ಮತ್ತು ಪ್ರಶಸ್ತಿ ಪುರಸ್ಕೃತರಿಗೆ ಅವರ ಇತ್ತೀಚಿನ ಪುಸ್ತಕ "ಸಮಾಧಾನಿಯಾಗಿರಿ" ಉಚಿತವಾಗಿ ನೀಡಿದರು. ಮನೆಗೆ ಬಂದು  ಪುಸ್ತಕ ಓದಿದಾಗ ಪಕ್ಕದಲ್ಲೇ ಕುಳಿತು ಅಣ್ಣ ಅಥವಾ ತಂದೆ ನಮಗೆ ವ್ಯಕ್ತಿತ್ವ ಕುರಿತಾದ ಪಾಠ ಹೇಳಿದಂತಿತ್ತು. ಒಬ್ಬ ಶಿಕ್ಷಕ ಮಕ್ಕಳಿಗೆ ಮುದ್ದಿಸಿ ಜೀವನದ ಪಾಠ ಹೇಳಿದಂತಿತ್ತು.ಒಬ್ಬ ಅಜ್ಜಿ ತನ್ನ ಅನುಭವಗಳನ್ನು ಮೊಮ್ಮಕ್ಕಳಿಗೆ ಪ್ರೀತಿಯಿಂದ ಹೇಳಿದಂತಿತ್ತು. 
ಈ ಪುಸ್ತಕದಲ್ಲಿ ಒಟ್ಟು ಮೂವತ್ತು  ಲೇಖನಗಳಿವೆ.
ಆರೋಗ್ಯ ಜೀವನ ಕ್ರಮ,ಔಷಧಿಗಳು
, ಮಾನಸಿಕ ಆರೋಗ್ಯ,ಮಕ್ಕಳ ವಿಕಾಸ ,ಮಕ್ಕಳ ನಡೆವಳಿಕೆಗಳು, ಹರೆಯದವರ ಮನೋ ತಲ್ಲಣ,ಕುಟುಂಬದ ಸಬಲೀಕರಣ
,ನಿದ್ರಾ ತೊಂದರೆಗಳು,ಹೆಚ್ಚುತ್ತಿರುವ ಆತ್ಮಹತ್ಯೆ ಮಾನಸಿಕ ಸಮಸ್ಯೆಗಳು,ಪುರುಷರ ಮಾನಸಿಕ ಸಮಸ್ಯೆಗಳು ಸ್ಪೈಸ್ ಟೆನ್ಷನ್  ಕಿರಿಕಿರಿಯಿಂದ ಪಾರಾಗುವುದು ಹೇಗೆ?, ಏಕಿಷ್ಟು ಆತಂಕ?,ಸಾವು: ಭಯ ಬೇಕೆ?,ಸ್ಕಿಜೋಫ್ರೀನಿಯಾ, ಗೀಳು ಮನೋರೋಗ,ಸುಖ ಪಡುವ ಚಟ ,ಅಶ್ಲೀಲ ಚಿತ್ರಗಳ ವೀಕ್ಷಣೆಯ ಚಟ,ಹಿಸ್ಟ್ರಿಯಾನಿಕ್ ವ್ಯಕ್ತಿತ್ವ, ಹದಗೆಡುತ್ತಿರುವ ವೃದ್ಧರ ಮನಸ್ಸು,ಮನೋರೋಗಗಳಿಗೆ ಮದ್ದು,ಸಂಗೀತ ಚಿಕಿತ್ಸೆ, ದಾನ- ಧರ್ಮ ಪರೋಪಕಾರ, ದೆವ್ವ-ಭೂತಗಳಿವೆಯೇ?,ದೇವರಲ್ಲಿ ನಂಬಿಕೆ ಎಷ್ಟಿರಬೇಕು ಹೇಗಿರಬೇಕು? ,ನಂಬಿಕೆಗಳು - ವೈಜ್ಞಾನಿಕ ಮನೋಭಾವ,ಸ್ವಗೌರವ - ಸ್ವಾಭಿಮಾನ, ಪಾಸಿಟಿವ್ ಸೈಕಾಲಜಿ, ಕೋವಿಡ್-19ರಿಂದಾಗಿ ಹೆಚ್ಚುತ್ತಿರುವ ಮಾನಸಿಕ ಆರೋಗ್ಯ ಸಮಸ್ಯೆಗಳು, ನಿಮ್ಮ ಮನಸ್ಸಿನ ನೋವಿಗೆ ಪರಿಹಾರ, ಬೈಪೋಲಾರ್ ಅಫೆಕ್ಟಿವ್  ಡಿಸಾರ್ಡರ್,ನಿಮ್ಮ ಮನಸ್ಸನ್ನು ಅರ್ಥಮಾಡಿಕೊಳ್ಳಿ ...
ಹೀಗೆ ವಿವಿಧ ವಿಷಯಗಳ ಅದ್ಯಾಯಗಳು ಓದಿಸಿಕೊಂಡು ಸಾಗುತ್ತವೆ. ಈ ಪುಸ್ತಕ ನನಗಾಗಿಯೇ ಬರೆದಿದೆಯೇನೋ ಎನಿಸದಿರದು.ಇದರಲ್ಲಿ ಬಾಲಕರಿಂದ ಹಿಡಿದು ವೃದ್ಧ ರವರೆಗೆ ಎಲ್ಲರಿಗೂ ಅನ್ವಯಿಸುವ ಲೇಖನಗಳಿವೆ ಇವೆಲ್ಲವೂ  ಪದೇ ಪದೇ ನಮ್ಮನ್ನು ಕಾಡುತ್ತವೆ.ಈ ಪುಸ್ತಕ ಪದೇ ಪದೇ ಓದಿ ಮನನ ಮಾಡಿಕೊಳ್ಳುವ ಮತ್ತು ಈ ಎಲ್ಲಾ ಅಂಶಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವ ಅಗತ್ಯವಿದೆ.

ಡಾ ಸಿ ಆರ್ ಸಿ ರವರ ಮಾತುಗಳಲ್ಲೇ ಹೇಳುವುದಾದರೆ..
"ಕಣ್ಣಿಗೆ ಕಾಣದ, ಕೈಗೆ ಸಿಗದ ಮನಸ್ಸನ್ನು ನಾವು ಅರ್ಥ ಮಾಡಿಕೊಳ್ಳುವುದಿಲ್ಲ.ಆದರೆ ಈ ಮನಸ್ಸೇ ದೇಹದ ಸಾರಥಿ, ನಮ್ಮ ನಡೆ ನುಡಿಗಳು, ಎಲ್ಲಾ ಕ್ರಿಯೆ-ಪ್ರತಿಕ್ರಿಯೆ ಗಳನ್ನು ನಿಯಂತ್ರಿಸುತ್ತದೆ. ಮನಸ್ಸು ದೃಢವಾಗಿದ್ದರೆ, ಪ್ರಶಾಂತವಾಗಿದ್ದರೆ, ನಮ್ಮ ದೇಹ ಆರೋಗ್ಯವಾಗಿರುತ್ತದೆ. ನಮ್ಮ ಸಾಮರ್ಥ್ಯ ಹೆಚ್ಚಿರುತ್ತದೆ. ಹಲವು ಕಾರಣಗಳಿಂದ ಮನಸು ಪ್ರಕ್ಷುಬ್ಧ ವಾಗುತ್ತದೆ. ರೋಗಗ್ರಸ್ತವಾಗುತ್ತದೆ ಅದಕ್ಕೆ ಚಿಕಿತ್ಸೆ ಪರಿಹಾರವು ಇದೆ".
ಈ ಪುಸ್ತಕದ ಮತ್ತೊಂದು ವಿಶೇಷವೆಂದರೆ ಪ್ರತಿ ಅದ್ಯಾಯದ ಕೊನೆಯಲ್ಲಿ ಉಳಿದ ಪುಟದಲ್ಲಿ ಒಂದು ಕವಿತೆ ಅಥವಾ ಚಿಂತನೆಗೆ ಹಚ್ಚುವ ಸಾಲುಗಳ ಮುದ್ರಣ ಮಾಡಿರುವುದು .ಆ ಸಾಲುಗಳು ಚಿಂತಿಸುವ  ನಮ್ಮನ್ನು  ಚಿಂತನ ಮಂಥನ ಮಾಡುವಂತೆ ಪ್ರೇರೇಪಿಸುತ್ತವೆ.
ಅದಕ್ಕೆ ಉದಾಹರಣೆ ಈ ಸಾಲುಗಳು

"ರೋಗಿಗೆ ಬೇಕು ಏನು?
ಔಷಧಿ ಮಾತ್ರವಲ್ಲ, ಔಷಧಿಯ ಜೊತೆ ಬೇಕು ಸುಲಭ ಜೀರ್ಣವಾಗುವ ಮುಷ್ಟಿ ಆಹಾರ, ಸಾಂತ್ವನ– ಭರವಸೆಯ ಮಾತುಗಳು, ಸಹಾನುಭೂತಿ- ಸಹನೆಯ ಆರೈಕೆ ಆರೇಳು ಗಂಟೆಗಳ ಸುಖ ನಿದ್ರೆ. ಸ್ವಚ್ಛತೆ,ವೈಯಕ್ತಿಕ ಮತ್ತು ಪರಿಸರ ಸಂಗೀತ ಶ್ರವಣ, ಮೌನ - ಧ್ಯಾನ. ಸಕಾರಾತ್ಮಕ ಚಿಂತನೆ – ಭರವಸೆ ಸಮಯದ ಶಿಸ್ತು – ಔಷಧ ಸೇವನೆ ಲಘು ವ್ಯಾಯಾಮ - ನಡಿಗೆ - ಚಲನೆ, ನಗು - ಹಾಸ್ಯ - ಸಂತೋಷಕರ ಸಂಭಾಷಣೆ ಅವಧಿ ಗೊಂದಾವರ್ತಿ ವೈದ್ಯರ ಸಲಹೆ. ಆತಂಕ - ಗೊಂದಲಗಳ ನಿವಾರಣೆ. ಅತಿ ಅನುಕಂಪ - ಅಯ್ಯೋ ಪಾಪ ಎನ್ನ ಬೇಡಿ ರೋಗದ ವಿರುದ್ಧ ಹೋರಾಟದಲ್ಲಿ ಜಯ ನಿನ್ನದೇ ಎನ್ನಿ."
ಎಷ್ಟು ಅರ್ಥಪೂರ್ಣ ಅಲ್ಲವೇ ಸ್ನೇಹಿತರೆ..
ಪೋಷಕರು ಮಕ್ಕಳ ಭವಿಷ್ಯದ ಬಗ್ಗೆ ಹೇರುವ ಒತ್ತಡದ ಬಗ್ಗೆ ಸಿ ಆರ್ ಸಿ ರವರು ಹೀಗೆ ಸಲಹೆ ನೀಡಿದ್ದಾರೆ
"  ನಿಮ್ಮ ಮಕ್ಕಳು ಓದಿ ಏನಾಗ ಬೇಕು? ಡಾಕ್ಟರ್, ಇಂಜಿನೀಯರ್ , ಆಫೀಸರ್ , ಉದ್ಯಮಿ, ವ್ಯಾಪಾರಿ, ಕೋಟ್ಯಾಧಿಪತಿ ಸಮಾಜದಲ್ಲಿ ಅತಿ ಗಣ್ಯ ವ್ಯಕ್ತಿ ,ಎ.ಐ.ಪಿ? ಅವರುಏನೇ ಆಗಲಿ ಅವರಿಗೇ ಬಿಡಿ .ಅವರು ಸದಾ ಅರೋಗ್ಯ ವಂತರಾಗಿರಲಿ. ಸ್ವಾಭಿಮಾನಿಗಳಾಗಿರಲಿ, ಸ್ವಾವಲಂಬಿಗಳಾಗಲಿ ಗುಣವಂತರಾಗಿ, ಮನುಷ್ಯರಾಗಿ ಬಾಳಲಿ ದುಡಿಯುವವರಾಗಲಿ."
ದೇವ ಬಗ್ಗೆ ಅವರು ಪುಸ್ತಕದಲ್ಲಿ ಬರೆದ ಕವನ ನನಗೆ ಬಹಳ ಇಷ್ಟವಾಯಿತು ಅದನ್ನು ನೀವು ಒಮ್ಮೆ ಓದಿ
"ದೇವರು ನಗುತ್ತಾನೆ...
ಪರಮೇಶ್ವರ ಪರೀಕ್ಷೆಯಲ್ಲಿ ಪಾಸ್ ಮಾಡಿಸಪ್ಪ, ಹುಡುಗಿಯನ್ನು ಪ್ರೀತಿಸಿದ್ದೇನೆ,ಮದುವೆ ಮಾಡಿಸಪ್ಪ, ಉದ್ಯೋಗ ಬೇಗ ಸಿಗುವಂತೆ ಹರಸಪ್ಪ, ವ್ಯಾಪಾರ ಪ್ರಾರಂಭಿಸಿದ್ದೇನೆ, ಲಾಭ ತರಿಸಪ್ಪ, ಟೆಂಡರ್ ಹಾಕಿದ್ದೇನೆ, ಗುತ್ತಿಗೆ ನನಗೆ ಸಿಗಲಪ್ಪ, ಚುನಾವಣೆಗೆ ನಿಂತಿದ್ದೇನೆ, ನನ್ನನ್ನೇ ಗೆಲ್ಲಿಸಪ್ಪ ಮನೆ ನಿರ್ಮಾಣ, ಮಗಳ ಮದುವೆ ನಿರ್ವಿಘ್ನವಾಗಿ ನಡೆಯಲಿ ವಿಚ್ಛೇದನಕ್ಕೆ ಅರ್ಜಿ ಹಾಕಿದ್ದೇವೆ, ಬೇಗ ಸಿಗಲಿ. ಕೊಲೆ ಕಳ್ಳತನಕ್ಕೆ ಹೊರಟಿದ್ದೇನೆ.  ಸಿಕ್ಕಿಹಾಕಿಕೊಳ್ಳದಿರಲಿ, ಮೋಸ ಮಾಡಿ ಹಣ ಆಸ್ತಿ ಕಬಳಿಸುವೆ. ಅವು ನನಗೆ ದಕ್ಕಲಿ. ತೆರಿಗೆ ಕಟ್ಟಿಲ್ಲ. ಐಟಿ- ಇಡಿ ದಾಳಿ ಆಗದಿರಲಿ. ಪರಸ್ತ್ರೀ ಸಂಗವಿದೆ. ನನ್ನ ಪತ್ನಿಗೆ/ ಪತಿಗೆ ಅದು ತಿಳಿಯದಿರಲಿ.
ಅಪಾರ ಸಂಪತ್ತಿನ ಸಂಗ್ರಹ ಸಂಗ್ರಹವಿದೆ. ಕಳ್ಳಕಾಕರ ಪಾಲಾಗದಿರಲಿ. ನನ್ನ ಶತಾಯುಷಿ ಮಾಡಿ, ಮರಿ ಮೊಮ್ಮಗನ ಮದುವೆ ಕಾಣಲಿ. ಇಷ್ಟೆಲ್ಲಾ ಇಷ್ಟಾರ್ಥ ಪೂರೈಸಿದ್ದರೆ ನಿನಗೆ ಚಿನ್ನದ ಕಿರೀಟ! ಭಕ್ತರ ಬೇಡಿಕೆಗಳ ಹಿಂಡನ್ನು ಕಂಡು ದೇವರು ನಗುತ್ತಾನೆ. ಈಡೇರಿಸುವುದು ಸಾಧ್ಯವಿಲ್ಲ. ಕಣ್ಣು ಮುಚ್ಚಿ ಕಲ್ಲಾಗಿ ಕೂತಿದ್ದಾನೆ".

ಹೀಗೆ ಲೇಖನಗಳಿಂದ ,ಕವನಗಳಿಂದ ಸಮೃದ್ಧ ವಾದ ಈ ಪುಸ್ತಕ ಮಾನಸಿಕ ಆರೋಗ್ಯದ ಬೈಬಲ್ ಎಂದರೂ ತಪ್ಪಾಗಲಾರದು.  ಎಲ್ಲರ ಮನೆಯಲ್ಲಿ ಈ ಪುಸ್ತಕವಿರಬೇಕು  ಎಲ್ಲರೂ ಈ ಪುಸ್ತಕವನ್ನು ಆಗಾಗ್ಗೆ ಓದುತ್ತಿರಬೇಕು.
ಬೆಂಗಳೂರಿನ ಸಮಾಧಾನ ಸಲಹಾ ಕೇಂದ್ರ ಪ್ರಕಾಶನ ಮಾಡಿರುವ 128 ಪುಟಗಳ ಈ ಪುಸ್ತಕ ಕೈಗೆಟುಕುವ ಬೆಲೆ ಅಂದರೆ ಕೇವಲ ನೂರು ರೂಪಾಯಿಗೆ ದೊರೆಯುತ್ತದೆ. 2021 ರಲ್ಲಿ ಪ್ರಕಟವಾದ ಈ ಪುಸ್ತಕ ಒಂದೇ ವರ್ಷದಲ್ಲಿ ಮರುಮುದ್ರಣ ಕಂಡಿದೆ.
ಪುಸ್ತಕ ಎಲ್ಲಾ ಪುಸ್ತಕ ಮಳಿಗೆಗೆಳಲ್ಲಿ ಲಭ್ಯ. ಪುಸ್ತಕ ಬೇಕಾದವರು 9845605615 ಸಂಪರ್ಕ ಮಾಡಬಹುದು. ಇನ್ನೇಕೆ ತಡ
ಪುಸ್ತಕ ಓದಿರಿ.ನಿಮ್ಮ ಮನಸ್ಸನ್ನು ಅರ್ಥಮಾಡಿಕೊಳ್ಳಿ .ಸಮಾಧಾನಿಯಾಗಿರಿ!

ಸಿಹಿಜೀವಿ
ಸಿ ಜಿ ವೆಂಕಟೇಶ್ವರ
ಶಿಕ್ಷಕರು
ಸರ್ಕಾರಿ ಪ್ರೌಢಶಾಲೆ ಕ್ಯಾತ್ಸಂದ್ರ
ತುಮಕೂರು.


25 ಸೆಪ್ಟೆಂಬರ್ 2022

ವಂದೇ ಭಾರತಂ

 


ವಿಮರ್ಶೆ ೫೨
ವಂದೇ  ಭಾರತಂ 

ನನ್ನ ಪುಸ್ತಕಗಳನ್ನು ಪೋಸ್ಟ್ ಮಾಡಲು ಕ್ಯಾತ್ಸಂದ್ರ ಪೋಸ್ಟ್ ಆಫೀಸ್ ಗೆ ತೆರಳಿದಾಗ ಅಲ್ಲಿಯ ಪೋಸ್ಟ್ ಮಾಸ್ಟರ್ ರವರು " ಸರ್ ನಿಮ್ಮಂಗೆ ಒಬ್ರು ಪುಸ್ತಕ ಬರೀತಾರೆ ಅವರ ಹೆಸರು ರೇಣುಕಾರಾಧ್ಯ ಅಂತ ನಂಬರ್ ತಗೊಳಿ"  ಎಂದು ಕೊಟ್ಟರು .ಒಂದು ದಿನ  ಮಗಳನ್ನು ಶಾಲೆಗೆ ಬಿಡಲು ಬಸ್ ನಿಲ್ದಾಣದ ಬಳಿ ನಿಂತಿದ್ದಾಗ   ರೇಣುಕಾರಾಧ್ಯ ರವರು " ವಂದೇ ಭಾರತಂ " ಪುಸ್ತಕ ನೀಡಿ ಓದಲು ಹೇಳಿದರು.
ಮುನ್ನೂರಾ ನಲವತ್ತನಾಲ್ಕು  ಪುಟಗಳ ಪುಸ್ತಕವನ್ನು ಎರಡು ದಿನಗಳಲ್ಲಿ ಓದಿದೆ. ಪ್ರತಿಯೊಬ್ಬ ಭಾರತೀಯನು ಓದಲೇ ಬೇಕಾದ ಪುಸ್ತಕ ಇದು.ಇದರಲ್ಲಿ ದೇಶಭಕ್ತಿ ಉಕ್ಕಿಸುವ ಲೇಖನಗಳಿವೆ.ಮಕ್ಕಳಿಗೆ ಕಿವಿಮಾತುಗಳಿವೆ, ಹಿರಿಯರ ಆದರ್ಶಗಳ ನಿದರ್ಶನಗಳಿವೆ.ಭಾರತೀಯ ಸಂಸ್ಕೃತಿಯ ದರ್ಶನವಿದೆ. ಜವಾಬ್ದಾರಿಯುತ ನಾಗರಿಕನಾಗಲು ಮಾಡಬೇಕಾದ ಕರ್ತವ್ಯಗಳೇನು ಎಂದು ಎಚ್ಚರಿಸುವ ಅಂಶಗಳಿವೆ .

ಕರ್ನಾಟಕರತ್ನ, ಪದ್ಮಭೂಷಣ, ಮಹಾದಾಸೋಹಿ, ನಿರಂಜನಪ್ರಣವಸ್ವರೂಪಿ ಪರಮಪೂಜ್ಯ ಡಾ॥ ಶ್ರೀ ಶ್ರೀ ಶ್ರೀ ಶಿವಕುಮಾರ ಮಹಾಸ್ವಾಮಿಗಳವರಿಗೆ ಈ ಕೃತಿಯನ್ನು ಭಕ್ತಿ ಪೂರ್ವಕವಾಗಿ ಸಮರ್ಪಿಸಿದ ಲೇಖಕರು ಶ್ರೀಗಳೊಂದಿಗಿನ ಒಡನಾಟದ ಚಿತ್ರಣವನ್ನು ಓದುಗರೊಂದಿಗೆ ಇಲ್ಲಿಯ ಕೆಲ ಅಧ್ಯಾಯಗಳಲ್ಲಿ  ಹಂಚಿಕೊಂಡಿದ್ದಾರೆ.

ಶ್ರೀ ಎಸ್. ರೇಣುಕಾರಾಧ್ಯ ಅವರು ಈಗ ಎಪ್ಪತ್ತೈದರ ಹರೆಯದಲ್ಲಿದ್ದಾರೆ. ಇವರು ಪ್ರೌಢಶಾಲಾ ಶಿಕ್ಷಕರಾಗಿ ಸಹಸ್ರಾರು ವಿದ್ಯಾರ್ಥಿಗಳ ಬದುಕಿಗೆ ದಾರಿದೀಪವಾಗಿದ್ದಾರೆ. ನಲವತ್ತು ವರ್ಷಗಳ ಕಾಲ ಶಿಕ್ಷಕರಾಗಿ ಮಕ್ಕಳಿಗೆ ಜ್ಞಾನವನ್ನು ಉಣಬಡಿಸಿದ್ದಾರೆ . ಬಡಕುಟುಂಬವೊಂದರಲ್ಲಿ ಜನಿಸಿ, ತಮ್ಮ ಇಚ್ಚಾಶಕ್ತಿಯಿಂದಲೂ ಸ್ವಸಾಮರ್ಥ್ಯದಿಂದಲೂ, ಪರಮಪೂಜ್ಯ ಸಿದ್ಧಗಂಗಾಶ್ರೀಗಳ ಆಶೀರ್ವಾದದಿಂದಲೂ ಹಂತಹಂತವಾಗಿ ಮೇಲೇರಿದ್ದಾರೆ! ಅವರು ಶಿಕ್ಷಕರಾಗಿ ಕೇವಲ ಬೋಧನೆಯಲ್ಲೇ ವಿರಮಿಸದೆ, ಸಹಸ್ರಾರು ಮಸ್ತಕಗಳನ್ನು ಓದಿ, ತಮ್ಮ ಅನುಭವವನ್ನು ವಿದ್ಯಾರ್ಥಿಗಳೊಡನೆ ಹಂಚಿಕೊಂಡಿದ್ದಾರೆ. ಸಾಹಿತ್ಯ, ತತ್ತ್ವಜ್ಞಾನ, ಸಮಾಜವಿಜ್ಞಾನ, ರಾಜಕೀಯಶಾಸ್ತ್ರ, ಮನಃಶಾಸ್ತ್ರ ಇವೇನು ಒಂದೇ ಎರಡೇ? ಹಲವು ಜ್ಞಾನಕ್ಷೇತ್ರಗಳ ಜ್ಞಾನಭಂಡಾರವನ್ನು ಶ್ರೀ ಎಸ್.ರೇಣುಕಾರಾಧ್ಯ ಅವರು ತಮ್ಮದನ್ನಾಗಿಸಿಕೊಂಡಿದ್ದಾರೆ. 'ವಂದೇಭಾರತಂ' ಎಂಬ ಈ ಕೃತಿಯನ್ನು ಓದಿದರೆ ನಿಮಗೆ ಅವರ ಬಗ್ಗೆ ಅಪಾರ ಗೌರವ ಉಂಟಾಗುವುದರಲ್ಲಿ ಸಂದೇಹವಿಲ್ಲ.

344 ಪುಟಗಳ ಈ ಪುಸ್ತಕದಲ್ಲಿ ಪುರಾಣ-ಸಂಸ್ಕೃತಿ-ಪರಂಪರೆ ಎಂಬ ಭಾಗದಲ್ಲಿ 11ಲೇಖನಗಳಿವೆ. ಇತಿಹಾಸ-ವ್ಯಕ್ತಿಚಿತ್ರ ಎಂಬ ಭಾಗದಲ್ಲಿ 7 ಲೇಖನಗಳಿವೆ. ವಚನಕಾರರು -ಸಿದ್ಧಗಂಗಾಶ್ರೀಗಳು ಎಂಬ ಭಾಗದಲ್ಲಿ 15 ಲೇಖನಗಳಿವೆ. ಶಿಕ್ಷಣ-ಸಂಸ್ಕೃತಿ ಎಂಬ ಭಾಗದಲ್ಲಿ 5 ಲೇಖನಗಳು, ರಾಷ್ಟ್ರಪ್ರೇಮ-ಅಸ್ಮಿತೆ ಎಂಬ ಭಾಗದಲ್ಲಿ 7 ಲೇಖನಗಳು ವ್ಯಕ್ತಿಚಿತ್ರದಲ್ಲಿ 6 ಲೇಖನಗಳು, ಆಶಯ-ಚಿಂತನೆ ಭಾಗದಲ್ಲಿ 14 ಲೇಖನಗಳು, ಲಘುಬರಹ  -ಚಿಂತನೆಯಲ್ಲಿ 8 ಲೇಖನಗಳಿದ್ದು ಒಟ್ಟು 75 ಲೇಖನಗಳಿರುವ ಈ ಪುಸ್ತಕ ಸರ್ವಜನ ಪ್ರಿಯ ಆಗುವುದಕ್ಕೆ ಎಲ್ಲ ಬಗೆಯ ಅರ್ಹತೆಯನ್ನೂ ಪಡೆದಿದೆ.

ನಾಡಿನ ವಿವಿಧ ಮಠ ಮಾನ್ಯಗಳ ಸ್ವಾಮೀಜಿಗಳು ಗುರು ಹಿರಿಯರು, ಲೇಖಕರ ಹಿತೈಷಿಗಳು ಪುಸ್ತಕದ ಬಗ್ಗೆ ತಮ್ಮ ಸದಭಿಪ್ರಾಯಗಳನ್ನು ದಾಖಲಿಸಿದ್ದಾರೆ.
ಪ್ರೊ . ಮಲ್ಲೇಪುರಂ ಜಿ ವೆಂಕಟೇಶ ರವರು ಈ ಪುಸ್ತಕಕ್ಕೆ ತಮ್ಮ ಮುನ್ನುಡಿ ಬರೆದು ಹಾರೈಸಿದ್ದಾರೆ. ಅವರ ಮಾತುಗಳನ್ನು ಉಲ್ಲೇಖಿಸಿ ಹೇಳುವುದಾದರೆ......

ಶ್ರೀ ಎಸ್. ರೇಣುಕಾರಾಧ್ಯರ ಚೊಚ್ಚಲಕೃತಿಯಲ್ಲಿ ಕನ್ನಡ ಗದ್ಯವು ಮಾತು ಮತ್ತು ಬರೆಹ ಎರಡರ ಸೂಕ್ಷ್ಮನೇಯ್ಗೆಯನ್ನು ಹೊಂದಿದೆ. ಈ ನೇಯ್ಗೆಯಲ್ಲಿ ಆರ್ದತೆ, ಸರಳತೆ, ಹಾಸ್ಯ ಮತ್ತು ಗಾಂಭೀರ್ಯತೆ ಮನೆಮಾಡಿಕೊಂಡಿವೆ. ಇವೆಲ್ಲವನ್ನು ಇಲ್ಲಿರುವ ಎಪ್ಪತ್ತೈದು ಲೇಖನಗಳಲ್ಲಿ ಸಹೃದಯ ಓದುಗರು ದಿಟಕ್ಕೂ ಕಾಣಬಹುದು. ಒಬ್ಬ ಪ್ರಬುದ್ಧ ಸಾಹಿತಿಯ ಬರೆಹಕ್ಕೆ ಸಮಾನಾಂತರವಾದ ಬರೆಹವನ್ನು ಶ್ರೀ ಎಸ್.ರೇಣುಕಾರಾಧ್ಯ ಅವರು ಹೊಂದಿದ್ದಾ ರೆಂಬುದೇ ನಾವು ಗಮನಿಸತಕ್ಕ ಸಂಗತಿ, ಇಲ್ಲಿಯ ಎಲ್ಲಾ ಲೇಖನಗಳು ಮುಖ್ಯವಾಗಿ ರಾಷ್ಟ್ರಚಿಂತನೆ, ರಾಷ್ಟ್ರಭಕ್ತಿ, ರಾಷ್ಟೋನ್ನತಿಯನ್ನೇ ಕೇಂದ್ರ ಮಾಡಿಕೊಂಡಿವೆ. ರೇಣುಕಾರಾಧ್ಯರು ವ್ಯಕ್ತಿಗಳನ್ನು ಕುರಿತು ಬರೆಯಲಿ, ಸನ್ನಿವೇಶವನ್ನು ಕುರಿತು ಬರೆಯಲಿ, ಯಾವುದೇ ವಸ್ತುಸಂಚಯವನ್ನು ಕುರಿತು ಬರೆಯಲಿ ಅವರು 'ರಾಷ್ಟ್ರ' ಚಿಂತನೆಯ ಮೂಲಕವೇ ತಮ್ಮ ಆಶಯವನ್ನು ವ್ಯಕ್ತಪಡಿಸುತ್ತಾರೆ. ನಾವು ಜಾತಿ, ಮತ, ವರ್ಗ ಮುಂತಾದ ಸಣ್ಣಸಣ್ಣ ಕಮರಿಯಲ್ಲಿ ಬಿದ್ದು ಹೊರಳಾಡುತ್ತಿದ್ದೇವೆ. ನಮಗೆ ದೇಶ ಮುಖ್ಯವಾಗುತ್ತಿಲ್ಲ. ಇಲ್ಲೆಲ್ಲಾ ಸ್ವಾರ್ಥಮಯತೆ ತುಂಬಿ ತುಳುಕಾಡುತ್ತಿದೆ. ಇಲ್ಲಿ ಸಮಷ್ಟಿ ಪ್ರಜ್ಞೆ ದೂರವಾಗಿ ವೃಷ್ಟಿ ನಿಲುವನ್ನು ನಾವು ಅಪ್ಪಿಕೊಂಡು ಬಿಟ್ಟಿದ್ದೇವೆ. ಇದು ಇಂದಿನ ದುಃಸ್ಥಿತಿ, ನಾವು ಸ್ವಾತಂತ್ರ್ಯ ಪಡೆದ ಮೇಲೆ, ನಮ್ಮ ಸಮಾಜ ಸಾಗಬೇಕಾಗಿದ್ದ ದಿಕ್ಕುದೆಸೆಗಳು ವಿಮುಖಗೊಂಡಿರುವುದಕ್ಕಾಗಿ ಸಾತ್ವಿಕ ಕ್ರೋಧವನ್ನು ಶ್ರೀಮಾನ್ ರೇಣುಕಾರಾಧ್ಯ ಅವರು ತಮ್ಮ ಲೇಖನಗಳಲ್ಲಿ ವ್ಯಕ್ತಪಡಿಸಿದ್ದಾರೆ.

ಇಲ್ಲಿಯ ಬರೆಹಗಳು ಪ್ರಾಚೀನ, ಮಧ್ಯಕಾಲೀನ, ಅರ್ವಾಚೀನ ಕಾಲಗಳಲ್ಲಿ ನಡೆದ ಸಂಗತಿಗಳನ್ನು ಮರು ರೂಪಿಸುತ್ತಿವೆ. ಇಲ್ಲಿ ವ್ಯಕ್ತಿ, ಕುಟುಂಬ, ಸಮುದಾಯ, ರಾಷ್ಟ್ರ,
ವಿಶ್ವದವರೆಗಿನ ವಿಚಾರಗಳು ಪರಿಕಲ್ಪಿತಗೊಂಡಿವೆ. ಪೂರ್ವ-ಪಶ್ಚಿಮದ ವ್ಯಕ್ತಿ, ವಸ್ತು ವಿಚಾರಗಳು ಬಂದು ಕೂಡಿಕೊಂಡಿವೆ. ಆದರೆ, ಭಾರತದ ಸಮಗ್ರ ಅಭಿವೃದ್ಧಿಯ ಬಗೆಗೆ ಅಪಾರವಾದ ತುಡಿತ-ಮಿಡಿತಗಳು ಪ್ರಧಾನ ಆಶಯಗಳಾಗಿರುವುದಂತೂ ನಿತ್ಯಸತ್ಯ ಶ್ರೀ ರೇಣುಕಾರಾಧ್ಯರು 'ಶ್ರೀಸಾಮಾನ್ಯನೆ ಭಗವನ್ ಮಾನ್ಯಂ' ಎಂಬ ತತ್ವೋಪಾಸನೆಯನ್ನು ಗಟ್ಟಿಯಾಗಿ ಹಿಡಿದುಕೊಂಡಿದ್ದಾರೆ. ಈ ಮಾತು ಅವರ ಬರೆಹಗಳಿಗೂ ಅವುಗಳ ಹಿಂದಿರುವ ಆಶಯಗಳಿಗೂ ಅನ್ವಯವಾಗುತ್ತವೆ. ರೇಣುಕಾರಾಧ್ಯರು ವಿಫುಲವಾದ ಸಂಗತಿಗಳನ್ನು ನಮ್ಮ ಮುಂದೆ ಹರಡುತ್ತಾರೆ. ನಾವು ಎಷ್ಟು ಬೇಕಾದರೂ ಹೆಕ್ಕಿಕೊಳ್ಳಬಹುದು. ಅವುಗಳ ಮೂಲಕ 'ವಿಚಾರಕಲ್ಪ'ದ ಬೀಜ ಅಲ್ಲಿರುವುದನ್ನು ಕಾಣಬಹುದು. ಆರಾಧ್ಯರು ಶ್ರೀಕೃಷ್ಣ-ಸುಧಾಮರ ಬಗೆಗೆ ಬರೆದ ಲೇಖನದಲ್ಲಿ 'ಸ್ನೇಹ'ದ ಸಾಮಾಜಿಕ ತಂತುವನ್ನು ತಂದು ಲೇಖನದಲ್ಲಿ ಜೋಡಿಸುತ್ತಾರೆ. ನಮ್ಮ 'ರಾಷ್ಟ್ರಗೀತೆ” ಯಾರಿಗೆ ಗೊತ್ತಿಲ್ಲ! ಆ ಗೀತೆಯ ಇತಿಹಾಸವನ್ನು ಸರಳವಾಗಿ  ತಿಳಿಸುತ್ತಾರೆ. 'ಸಂವಿಧಾನ ರಚನೆಗೊಂಡ ಹಂತಹಂತದ ವಿವರಗಳು ಇಲ್ಲಿ ಸೊಗಸಾಗಿ ಮೂಡಿಬಂದಿವೆ. ಭಾರತದ ಸಂವಿಧಾನದ ಆಶಯ-ದೂರದೃಷ್ಟಿ-ಸಂಕಲ್ಪಗಳನ್ನು ವಿವರಗಳ ಸಮೇತ ಓದುಗರಿಗೆ ಆರಾಧ್ಯರು ಮನವರಿಕೆ ಮಾಡಿಕೊಡುತ್ತಾರೆ. ಈ ಅಂಶಗಳನ್ನು ಶಿಕ್ಷಕನಾಗಿ ನಾನೂ ತರಗತಿ ಕೋಣೆಗಳಲ್ಲಿ ಮಕ್ಕಳಿಗೆ ಮನವರಿಕೆ ಮಾಡಿಕೊಟ್ಟಿದ್ದೇನೆ. ಪರಮಪೂಜ್ಯ ಶ್ರೀಶಿವಕುಮಾರಸ್ವಾಮಿಗಳ ವ್ಯಕ್ತಿತ್ವ, ಅವರ ದೃಷ್ಟಿ, ಸ್ವಭಾವ, ದಿನಚರಿ ಇವುಗಳನ್ನು ಒಳಗೊಂಡ ಏಳೆಂಟು ಲೇಖನಗಳು ಇಲ್ಲಿವೆ. ಒಂದೊಂದು ಲೇಖನಗಳಲ್ಲೂ ನಾವು ಅರಿತುಕೊಂಡು ಅನುಸರಿಸಬೇಕಾದ 'ಮಾರ್ಗದರ್ಶಿ' ಸೂತ್ರಗಳು ಇಲ್ಲಿವೆ. ಗಾಂಧೀಜಿ, ವಿವೇಕಾನಂದ, ರಮಣಮಹರ್ಷಿ, ಅರವಿಂದರು, ಮುಂತಾದ ಆಧುನಿಕ ವಿಭೂತಿಪುರುಷರ ಸಂಕಥನಗಳು ನಮ್ಮನ್ನು ಎಚ್ಚರಿಸುತ್ತವೆ. ಪ್ರಾಚೀನ ಸಂಸ್ಕೃತ ಸಾಹಿತ್ಯದ ವಾಲ್ಮೀಕಿ, ವ್ಯಾಸ, ಕಾಳಿದಾಸ ಮುಂತಾದ ಕವಿಗಳನ್ನ ಕುರಿತಾದ ಲೇಖನಗಳಲ್ಲಿ ನಮ್ಮ ಸಂಸ್ಕಾರ-ಸಂಸ್ಕೃತಿಯನ್ನು ಪುನಃ ರೂಪಿಸಿಕೊಳ್ಳಬೇಕಾದ ಕಡೆ ಲೇಖಕರು ಬೊಟ್ಟುಮಾಡಿ ತೋರಿಸುತ್ತಾರೆ. ಅಲ್ಲಿಂದಾಚೆಗೆ ಉಪನಿಷತ್ ಕಾಲಕ್ಕೆ ಹೋಗಿ ಯಾಜ್ಞವಲ್ಕ ಮುಂತಾದ ಋಷಿಗಳ ತತ್ತ್ವಮಸಿ, ಅಹಂಬ್ರಹ್ಮಾಸ್ಮಿ ಎಂಬ ಋಷಿಚಿಂತನೆಗಳನ್ನು ಇಂದಿನ ಕಾಲಕ್ಕೆ ಅನ್ವಯಿಸಿ ಮಾತನಾಡುತ್ತಾರೆ. ಮೆಕಾಲೆ ಮಹಾಶಯ ಇಂಗ್ಲಿಷ್ ಭಾಷೆಯನ್ನು ನಮ್ಮ ದೇಶದಲ್ಲಿ ಬಿತ್ತುವ ಮೂಲಕ, ಸಹಸ್ರಾರು ಪಾರಂಪರಿಕ ಗುರುಕುಲಗಳು ನಾಶವಾಗಿ, ತನ್ಮೂಲಕ ಸಂಸ್ಕೃತ ಶಿಕ್ಷಣ ನಾಶವಾಗಿದ್ದಕ್ಕೆ ಲೇಖಕರು ಅಪಾರವಾಗಿ ನೊಂದುಕೊಳ್ಳುತ್ತಾರೆ. 

ಈ ಪುಸ್ತಕದ ಪ್ರತಿ ಪುಟವೂ ಮೌಲ್ಯಯುತ ಪ್ರತಿ ಅಧ್ಯಾಯದ ಕೊನೆಯಲ್ಲಿ ಉಳಿವ ಜಾಗದಲ್ಲಿ ಜಗದ ಉದಾತ್ತ ಚಿಂತಕರ ನುಡಿ ಮತ್ತುಗಳನ್ನು ಮುದ್ರಿಸಿದ್ದಾರೆ .ಓದುಗರಿಗೆ ಅವು ಬೋನಸ್!  ಇಂತಹ ಅಮೂಲ್ಯ ಕೃತಿ ಮೌಲ್ಯಗಳ ಅಧಃಪತನದ  ಇಂದಿನ ಸಮಾಜಕ್ಕೆ ಪಂಜು ಇದ್ದಂತೆ ಆ ಪಂಜನಿಡಿದು ಸಾಧ್ಯವಾದಷ್ಟು ನಮ್ಮ ದಾರಿಯಲ್ಲಿ ಬೆಳಕು ಪಡೆದು ಇತರರಿಗೂ ಬೆಳಕು ನೀಡಲು ಈ ಪುಸ್ತಕವನ್ನು ಎಲ್ಲರೂ ಕೊಂಡು ಓದೋಣ.ನಮ್ಮ ದೇಶದ ಸಂಸ್ಕೃತಿಯನ್ನು ಎತ್ತಿ ಹಿಡಿಯೋಣ .ಉತ್ತಮ ನಾಗರೀಕರಾಗೋಣ.

ಪುಸ್ತಕದ ಹೆಸರು: ವಂದೇ ಭಾರತಂ
ಲೇಖಕರು: ಎಸ್ ರೇಣುಕಾರಾಧ್ಯ.
ಪ್ರಕಾಶನ : ದಾಸೇನ ಹಳ್ಳಿ ಎಸ್ ರೇಣುಕಾರಾಧ್ಯ. ತುಮಕೂರು
ಬೆಲೆ: 330.

ಸಿಹಿಜೀವಿ
ಸಿ ಜಿ ವೆಂಕಟೇಶ್ವರ
ತುಮಕೂರು
9900925529


16 ಆಗಸ್ಟ್ 2022

ಎಲೆ ಮರೆಯ ಅಲರು ...


 


ವಿಮರ್ಶೆ ೫೧

ಎಲೆ ಮರೆಯ ಅಲರು.


ಬೆಳಗೆರೆ ಕೃಷ್ಣಶಾಸ್ತ್ರಿಗಳ ಯೇಗ್ದಾಗೆಲ್ಲಾ ಐತೆ ಪುಸ್ತಕ ಓದಿದ ಮೇಲೆ ಅವರ ಇತರ ಕೃತಿಗಳನ್ನು ಓದುವ ಹಂಬಲವಾಯಿತು.ಅದರಂತೆ ಮೊನ್ನೆ ಎಲೆ ಮರೆಯ ಅಲರು ಎಂಬ ಅವರ ಕೃತಿಯನ್ನು ಓದಿದೆ.

ಓದುತ್ತಾ ಬೆಂಗಳೂರು, ತಳಕು, ಆಂದ್ರ ಹೆಗ್ಗೆರೆ ,ಕಾಪರಹಳ್ಳಿ ,ಬೆಳಗೆರೆ ಹೀಗೆ ನಾನಾ ಊರುಗಳ ಸುತ್ತಿದ ಹಾಗೂ ನಾನಾ ವ್ಯಕ್ತಿಗಳ ವ್ಯಕ್ತಿತ್ವದ ಪರಿಚಯವಾಯಿತು.ಕೃಷ್ಣ ಶಾಸ್ತ್ರಿಗಳ ನಿರೂಪಣೆ ಮತ್ತು ಬರವಣಿಗೆಯ ಶೈಲಿ ಓದುಗರನ್ನು ಸೆಳೆಯುತ್ತದೆ. ಒಂದೇ ಸಿಟ್ಟಿಂಗ್ ನಲ್ಲಿ ಕೂತು ಓದುವಂತೆ ಮಾಡುತ್ತದೆ.

ಸ್ವಿಮ್ಮಿಂಗ್ ನಾರಾಯಣ ರವರು ಅವರಿಗೆ ಬೆಂಗಳೂರಿನಲ್ಲಿ ಆಶ್ರಯದಾತರಾಗಿ ಅನ್ನದಾತರಾಗಿ ಸಹಕಾರ ನೀಡಿದ್ದನ್ನು ತಮ್ಮ ಅಗ್ರ ಲೇಖನದಲ್ಲಿ ಕೃತಜ್ಞತಾಪೂರ್ವಕವಾಗಿ ಸ್ಮರಿಸುತ್ತಾ ನಾರಾಯಣ ರವರ ವ್ಯಕ್ತಿತ್ವದ ಪರಿಚಯ ಮಾಡಿದ್ದಾರೆ.

ನಾವೂ ನಾಟಕವಾಡಿದ್ದು ಎಂಬ ಅಧ್ಯಾಯದಲ್ಲಿ ಹುಡುಗಾಟಿಕೆಗೆಂದು ಆಡಿದ ಮಾತು ನಿಜವಾಗಿ ಶಾಲೆಯ ಶಿಕ್ಷಕರ ಮತ್ತು ಹಿರಿಯರ ಬೆಂಬಲದಿಂದ ಯಶಸ್ವಿಯಾಗಿ ಅದರಿಂದ ಬಂದ ಹಣವನ್ನು ವಿದ್ಯಾರ್ಥಿಗಳ ಮಧ್ಯಾಹ್ನದ ಉಪಾಹಾರಕ್ಕೆ ಬಳಸುವ ಅವರ ಮುಂದಾಲೋಚನೆ ಮತ್ತು ಸಹಾಯ ಮಾಡುವ ಗುಣಕ್ಕೆ ಹಿಡಿದ ಕನ್ನಡಿ ಎನ್ನಬಹುದು ಇದು ಮುಂದೆ ಬೆಳಗೆರೆಯಲ್ಲಿ ಶಾರದಾ ಶಾಲೆ ಆರಂಭದಿಂದ ಹಿಡಿದು  ಇತರ ಸೇವಾ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಪ್ರಕಟವಾಗಿದ್ದನ್ನು ಕಾಣಬಹುದು.

ಈ ಪುಸ್ತಕದಲ್ಲಿ ಹೆಗ್ಗರೆಯಲ್ಲಿ ಅವರು ಶಿಕ್ಷಕರಾಗಿ ಕಾರ್ಯನಿರ್ವಹಿಸುವ ಸಂಧರ್ಭದಲ್ಲಿ ದಾನಿಗಳಿಂದ ಹಣ ಸಂಗ್ರಹಿಸಿ ಶಾಲಾ ಕೊಠಡಿಗಳು ಮತ್ತು ರಂಗಮಂದಿರ ನಿರ್ಮಾಣ ಮಾಡಿದ ವಿವರಗಳು ಮತ್ತು ಕಬ್ಬಿಣದ ಅಂಗಡಿಯ ಮುಸ್ಲಿಂ ಮಾಲಿಕನ ನಡುವಿನ ಸಂಭಾಷಣೆ ಮತ್ತು ಸಂಬಂಧ ನಮ್ಮನ್ನು ಚಿಂತನೆಗೆ ಹಚ್ಚುತ್ತದೆ. ಸರ್ಕಾರದ ಹಣದಲ್ಲಿ ಎಷ್ಟು ಪರ್ಸೆಂಟ್ ಕಮಿಷನ್  ಹೊಡೆಯೋಣ ಎಂದು ಯೋಚಿಸುವ ಕಂಟ್ರಾಕ್ಟರ್ ಮತ್ತು ಅಧಿಕಾರಿಗಳು ನಮ್ಮ ಕೃಷ್ಣ ಶಾಸ್ತ್ರಿಗಳ ಆದರ್ಶ ರೂಢಿಸಿಕೊಂಡು ಸೇವಾ ಮನೋಭಾವ ಹೊಂದಬೇಕಿದೆ.ಅದು ಅಸಾಧ್ಯ ಕನಸು ಎಂಬುದು ಸಹ ನನಗೆ ಮನವರಿಕೆ ಆಗಿದೆ.ಹೆಗ್ಗೆರೆಯ ನಮ್ಮ ಬಂಧುಗಳ ಮನೆಗೆ ಹೋದಾಗ ಈಗಲೂ ಗಟ್ಟಿಮುಟ್ಟಾಗಿ ನಿಂತ ಶಾಲಾಕೊಠಡಿಗಳು ಮತ್ತು ರಂಗಮಂದಿರ ನೋಡಿ ಮನದಲ್ಲೇ ಕೃಷ್ಣ ಶಾಸ್ತ್ರಿಗಳಿಗೆ ಒಂದು ನಮನ ಸಲ್ಲಿಸುವೆ.   

  ಟಿ ಎಸ್  ವೆಂಕಣ್ಣಯ್ಯನವರ ಆದರ್ಶ ಮತ್ತು ನಮ್ಮ ಒಡೆಯರ ಉನ್ನತವಾದ ಆಡಳಿತ ಚಿಂತನೆ ನಮಗೆ ಈ ಪುಸ್ತಕದಲ್ಲಿ ಶಾಸ್ತ್ರಿರವರು ಕಟ್ಟಿಕೊಟ್ಟಿದ್ದಾರೆ.   ವೆಂಕಣ್ಣಯ್ಯನವರು ಮಹಾರಾಜರ ಮಗನ ಕಲಿಕೆ ಗಣನೀಯವಾಗಿ ಇಲ್ಲದ ಕಾರಣ  ಅನುತ್ತೀರ್ಣ ಮಾಡಿರುತ್ತಾರೆ.   ಆಗ ಅರಮನೆಗೆ ವೆಂಕಣ್ಣಯ್ಯನವರ  ಕರೆಸಿದ ಮಹಾರಾಜರು ಮನಸ್ಸು ಮಾಡಿದ್ದರೆ ಮಗನನ್ನು ಪಾಸು ಮಾಡಲು ಹೇಳಬಹುದಾಗಿತ್ತು ಆದರೆ ಅವರು ಹಾಗೆ ಮಾಡಲಿಲ್ಲ. ಮನೆ ಪಾಠ ಮಾಡಲು ವೆಂಕಣ್ಣಯ್ಯನವರ ಕೇಳಿದರು ಅದಕ್ಕೆ ಒಪ್ಪದೇ ಮನೆ ಪಾಠ ಮಾಡಲು ಅವರ ಶಿಷ್ಯರಾದ ಕುವೆಂಪುರವರ ಗೊತ್ತು ಮಾಡುವ ಭರವಸೆ ನೀಡಿದರು.ಕೊನೆಗೆ ಬಿ ಎಂ ಶ್ರೀ ರವರು ಮನೆ ಪಾಠ ಮಾಡುವ ಮೂಲಕ ಯುವರಾಜರು ಪಾಸಾದರು . ಈ ಘಟನೆಯನ್ನು ಓದಿದ   ಶಿಕ್ಷಕನಾದ ನನಗೆ  ಶಿಕ್ಷಣದ ವ್ಯಾಪರೀಕರಣದ ಈ  ದಿನಗಳಲ್ಲಿ ವೆಂಕಣ್ಣಯ್ಯನವರಂತಹ ಅಧ್ಯಾಪಕರು ಮತ್ತು ಮಹಾರಾಜರಂತಹ ಆಡಳಿತಗಾರರ ಅವಶ್ಯಕತೆ ತೀರಾ ಇದೆ ಎಂದೆನಿಸಿತು.

ಮದ್ದನಕುಂಟೆಯಲ್ಲಿ ಜೈಮಿನಿ ಭಾರತ ಓದಿದ ಘಟನೆಯನ್ನು ನೆನೆಯುತ್ತಾ ಇವರು ಜೈಮಿನಿ ಭಾರತವನ್ನು ತಪ್ಪಾಗಿ ಓದಿದಾಗ  ,ಇವರಿಗೆ  ಮುಜಗರವಾಗದಂತೆ ಆ ಹಳ್ಳಿಯ ಅನಕ್ಷರಸ್ಥರು ತಿದ್ದಿದ ಪರಿಯನ್ನು ಶಾಸ್ತ್ರೀಯವರು ಬಹಳ ಚೆನ್ನಾಗಿ ನಿರೂಪಿಸಿದ್ದಾರೆ.


ಹೀಗೆ ಇಡೀ ಪುಸ್ತಕದಲ್ಲಿ ಎಲೆ ಮರೆಯ ಅಲರುಗಳನ್ನು ನಮಗೆ ತೋರಿಸುವ ಕಾರ್ಯವನ್ನು ಬೆಳಗೆರೆ ಕೃಷ್ಣಶಾಸ್ತ್ರಿಗಳು ಮಾಡಿದ್ದಾರೆ.ಈ ಎಲ್ಲಾ ಅಲರುಗಳು ನಮ್ಮಲ್ಲಿ ಸುಪ್ತವಾಗಿರುವ ಒಳ್ಳೆಯ ಗುಣಗಳನ್ನು ಜಾಗೃತಗೊಳಿಸುವುದರಲ್ಲಿ ಸಂದೇಹವಿಲ್ಲ. ನೀವೂ ಒಮ್ಮೆ ಎಲೆ ಮರೆಯ ಅಲರಿನ ದರ್ಶನ ಮಾಡಲು ಮನವಿ ಮಾಡುವೆ.


ಸಿಹಿಜೀವಿ

ಸಿ ಜಿ ವೆಂಕಟೇಶ್ವರ

ತುಮಕೂರು

07 ಆಗಸ್ಟ್ 2022

ಅಂದನಾ ತಿಂಮ..


ವಿಮರ್ಶೆ ೫೦

ಅಂದನಾ ತಿಂಮ

ಬೀಚಿ ಪ್ರಕಾಶನದಿಂದ ಹೊರಬಂದಿರುವ ಅಂದನಾ ತಿಂಮ ಪುಸ್ತಕ ಬೀಚಿಯರೇ ಹೇಳುವಂತೆ ಇದು ಅವರ ಐವತ್ತೊಂದನೇ ಅಪರಾಧ .ಈ ಪುಸ್ತಕ ಓದಿದ ಅಪರಾಧಕ್ಕೆ ನನಗೆ ನಿಜವಾಗಿಯೂ ಬಹಳ ಸಂತಸದ ಶಿಕ್ಷೆ ಲಭಿಸಿತು ಎಂದು ಹೇಳಲು ಸಂತಸವಾಗುತ್ತದೆ .
ಪುಸ್ತಕ ವಿಮರ್ಶಾ ಕಾರ್ಯದಲ್ಲಿ ಇದು ನನಗೆ ಸುವರ್ಣ ಸಂಭ್ರಮ ನಾನು ಓದಿ ನನ್ನ ಅನಿಸಿಕೆ ಬರೆವ ಕಾರ್ಯದಲ್ಲಿ ಇದು ಐವತ್ತನೇ ಪುಸ್ತಕ! ನೂರಾರು ಪುಸ್ತಕ ಓದಿದ್ದರೂ ಕೆಲವೇ ಪುಸ್ತಕಗಳ ಬಗ್ಗೆ ಅನಿಸಿಕೆ ಬರೆಯುವ ಮನಸಾಗಿ ಅದು ಐವತ್ತು ತಲುಪಿದೆ. ಬೀಚಿಯವರ ಪುಸ್ತಕಕ್ಕೆ ವಿಮರ್ಶೆ ಬರೆಯಲು ಎಂಟೆದೆ ಬೇಕು .ನಾನು ಕೇವಲ ಅವರ ಪುಸ್ತಕದ ಬಗ್ಗೆ ನಾಲ್ಕು ಅಭಿಪ್ರಾಯ ಹೇಳಬಹುದು.
ಅಂದನಾ ತಿಂಮ  ಮುಕ್ತಕ, ಹನಿಗವನ, ಕವನ ಮುಂತಾದ ಪ್ರಕಾರಗಳ ಪುಸ್ತಕ .ಎಂದಿನಂತೆ ತಮ್ಮ ಮೊನಚು ವಿಡಂಬನಾತ್ಮಕ ಬರಹ ನಮ್ಮನ್ನು ಸೆಳೆಯುತ್ತದೆ.
ಬೀಚಿಯವರೇ ಹೇಳಿರುವಂತೆ ಕೃತಿ ರಚನೆ ಬರೆಯುವವರು  ತಮ್ಮ ಆತ್ಮ ತೃಪ್ತಿಗಾಗಿ ಮಾಡುವ ಕಾಯಕ ಓದುಗರ ಪ್ರಶಂಸೆ ಮತ್ತು ವಿಮರ್ಶೆ ನಂತರದ ಪ್ರಕ್ರಿಯೆ.
ಸಮಾಜದ ಹಲವಾರು ಮುಖಗಳನ್ನು, ಅರ್ಥಾತ್ ನನ್ನ ಮನದ ಏರಿಳಿತಗಳನ್ನು ಈ ಕೃತಿಯಲ್ಲಿ ಪ್ರತಿಬಿಂಬಿಸಲು ಪ್ರಯತ್ನ ಮಾಡಿದ್ದೇನೆ. ಆದರೆ, ಸಾಧಿಸಿದ್ದೆಷ್ಟು ? ಇದಕ್ಕೆ ಉತ್ತರ, ಕನ್ನಡ ರಸಿಕ ಓದುಗರಲ್ಲಿದೆ. ಈ ಎಲ್ಲವೂ ಮೇರು ಪರ್ವತದಂತಹ ಮಹಾಕೃತಿಗಳೊ ? ಆಚಂದ್ರಾರ್ಕವಾಗಿ ಸದಾ ಇವು ಉಳಿಯುತ್ತವೆಯೇ ? ಅಥವಾ ಇವೆಲ್ಲವೂ ಒಂದು ದೊಡ್ಡ ಕಸದ ಬುಟ್ಟಿಗೆ ಅನ್ನವಾಗುತ್ತವೆಯೇ ? ಈ ಪ್ರಶ್ನೆಗಳಿಗೆ ಉತ್ತರವನ್ನು ಹೇಳುವ ಅಧಿಕಾರ ಯಾರಾದರೊಬ್ಬ ವ್ಯಕ್ತಿಗೆ ಇಲ್ಲ ಎಂಬುದಾದರೆ ಆ ವ್ಯಕ್ತಿ ನಾನು. ನನ್ನ ಕೃತಿಯ ಬೆಲೆಯನ್ನು ನಾನೇ ಕಟ್ಟಲೇ ? ಕಾಲರಾಯ ತನ್ನ ಜರಡಿಯನ್ನು ಸದಾ ಆಡಿಸುತ್ತಲೇ ಇರುತ್ತಾನೆ, ಹುಟ್ಟಿದುದೆಲ್ಲವೂ ಅದರಲ್ಲಿ ಬೀಳಲೇಬೇಕು ಇದು ಪ್ರಕೃತಿಯ ನಿಯಮ.  ಹಾರಿಹೋದುದು ಜೊಳ್ಳು, ಉಳಿದುದು ಕಾಳು. ಇಂದು ಜೊಳ್ಳಾಗಿ ಕಂಡುದುದು ನಾಳೆ ಕಾಳಾದೀತು, ಇಂದು ಕಾಳಾಗಿ ಕಂಡುದುದು ನಾಳೆ ಜೊಳ್ಳಾದೀತು. ಮೌಲ್ಯವನ್ನು ಮುಂದಿನ ಪೀಳಿಗೆ ನಿರ್ಧರಿಸುತ್ತದೆ. ಆ ತಲೆನೋವು ನನಗೇಕೆ ?
“ನಿಮ್ಮ ಇಷ್ಟು ಕೃತಿಗಳಲ್ಲಿ ಅತ್ಯುತ್ತಮ ಕೃತಿ  ಯಾವುದು ?” ಎಂದೊಬ್ಬ ನನ್ನ ಕಿರಿಯ ಮಿತ್ರರು ಹೇಳಿದರು. ಇದುವರೆಗೂ ಆಗಿರುವ ಕೃತಿಗಳಲ್ಲಿ ಒಂದೂ ಅಲ್ಲ, ಆ ಅತ್ಯುತ್ತಮ ಕೃತಿ ಇನ್ನು ಮೇಲಾಗಬೇಕು ಎಂಬುದಷ್ಟೇ ನನ್ನ ಉತ್ತರ. ಈ ಜೀವಮಾನದಲ್ಲಿ ಅದು ಆಗಬಹುದು. ಆಗದೆಯೂ ಇರಬಹುದು. ಆಗದಿದ್ದಲ್ಲಿ ನನಗೆ ದುಃಖವೂ ಇಲ್ಲ. ಬೇರಿನ್ನಾರಾದರೂ ಮಾಡಿ ಯಾರು ಎಂಬ ಆಶೆ ಇದೆ, ನಾನಿದುವರೆಗೂ ಮಾಡಿರುವ ಕೆಲಸದಿಂದ ನನಗೆ ಸಂಪೂರ್ಣ ತೃಪ್ತಿ ಆಗಿದೆ, ಇನ್ನು ನಾನು ಮಾಡುವುದೇನೂ ಉಳಿದಿಲ್ಲ ಎಂದು ಕಾಲು ಚಾಚಿ ಕುಳಿತವನು ಇನ್ನು ಬದುಕಿರುವ ಅವಶ್ಯಕತೆಯಾದರೂ ಏನಿದೆ ? ಆಗಬೇಕಾದ ಕೆಲಸ ಇದೆ ಎಂಬುದಕ್ಕೆ ನಾನಿನ್ನೂ ಬದುಕಿರುವುದೇ ಸಾಕ್ಷಿ. ಕೈಲಿರುವ ಪೇನಾ ಕೆಳಕ್ಕೆ ಬಿದ್ದ ನಂತರ ಸಾಹಿತಿ ಸಾಯಬಾರದು, ಅವನು ಸತ್ತ ನಂತರ ಅವನ ಕೈಲಿರುವ ಪೇನಾ ಕೆಳಕ್ಕೆ ಬೀಳಬೇಕು." ಎಂಬ ಮಾತುಗಳು ಯುವ ಬರಹಗಾರರಿಗೆ ಪಾಠದಂತಿವೆ.

ಈ ಪುಸ್ತಕದಲ್ಲಿ ಮುದ್ರಿತವಾಗಿರುವ ನನ್ನ ಕಾಡಿದ  ಕೆಲ ಸಾಲುಗಳ ಬಗ್ಗೆ ಗಮನಹರಿಸುವುದಾದರೆ
“ಬದುಕಲಿಕೆ ತಿನಬೇಕು, ತಿನ್ನಲು ಬದುಕಲ್ಲ”
"ಗುರಿ ಬೇಕು ಬಾಳಿಂಗೆ, ಗುರಿ ಹಿರಿದು ಬೇಕು”
ಎಂಬುದಾಗಿ ಎಚ್ಚರಿಕೆ ಕೊಡುತ್ತಾ, ಆತ್ಮಮೆಚ್ಚುವಂತೆ ಜೀವನ
ನಡೆಸಬೇಕೆನ್ನುತ್ತಾರೆ ಬೀಚಿಯವರು .

“ದೊಡ್ಡ ಜೇಬಿದೆ ಇವಗೆ, ಹೃದಯ ಬಹು ಚಿಕ್ಕದು; ದೊಡ್ಡ ಹೃದಯದವಗೆ ಚಿಕ್ಕ ಜೇಬು"
ಎಷ್ಟು ಅರ್ಥಗರ್ಭಿತವಾಗಿದೆ ಅಲ್ಲವೆ?
“ಎಲೆ, ಎಲೆ ಹೋಗಲಿ, ಬೇರು ಒಣಗಿಸಬೇಡ
ಬಾಳವೃಕ್ಷದ ಬೇರು ನಂಬಿಕೆಯೊ ತಿಂಮ”
ದೇವರಲ್ಲಿ ನಂಬಿಕೆ, ತಂದೆ-ತಾಯಿಗಳಲ್ಲಿ ನಂಬಿಕೆ, ಮಡದಿ ಮಕ್ಕಳಲ್ಲಿ
ನಂಬಿಕೆ, ತನ್ನಲ್ಲೇ ತನಗೆ ನಂಬಿಕೆ-ಜೀವನದ ಭಾಗ್ಯವೆಲ್ಲ ನಂಬಿಕೆಯ ಆಧಾರದ ಮೇಲಿದೆ. 'ನಂಬಿ ಕೆಟ್ಟವರಿಲ್ಲವೊ' ಎಂಬುದು ದಾಸರು ಕೊಟ್ಟ ಅಭಯ!
ಕಾಲಪ್ರವಾಹದಲ್ಲಿ ರಾಜ್ಯ-ಸಾಮ್ರಾಜ್ಯಗಳೂ, ಮತ ಮಠಗಳೂ, ಭಾಷಾ ಸಾಹಿತ್ಯಗಳೂ, ಕಲಾ-ವೃತ್ತಿಗಳೂ ಕೊಚ್ಚಿಕೊಂಡು ಹೋದವು, ನಾಗರಿಕತೆ ಗಳೆಷ್ಟೋ ಮಣ್ಣುಗೂಡಿದವು. “ಮಾನವತೆ ನಿಂತಿಹದು” ಅಂದನಲ್ಲದೆ
'ಮಂಕುತಿಮ್ಮ' ! ತಿಂಮನೂ ಸಹ “ದೈವಕಿಂತಲು ದೊಡ್ಡದಿನ್ನೊಂದು ಇದೆ ಎನಗೆ ಮಾನವತೆಯೇ ದಾರಿ, ನಡೆಯೋ”
ಎಂದು ಬೆನ್ನು ತಟ್ಟುತ್ತಾನೆ.
ಅನ್ನುವಾಗ ಬೀchiಯವರು ನಮ್ಮ ದೃಷ್ಟಿಗೊಂದು ಹೊಸ ತಿರುವನ್ನೇ
ಕೊಡುತ್ತಾರೆ.
“ಮಕ್ಕಳೊಂದಿಗೆ ಆಟ ಅದು ಸ್ವರ್ಗ ತಿಂದು ಮಕ್ಕಳೇ ದೇವರು | ಹೌದೇನೋ ತಿಂಮ?”
ಬಾಳ ಸಾರ್ಥಕತೆಗೆ ಹೊಸ ದಾರಿ ತೋರಿಸುತ್ತಾರೆ. ಜೀವನ ನಮಗೆ ಸಹ್ಯವಾಗಬೇಕಾದರೆ ಏನು ಮಾಡಬೇಕೆಂಬುದನ್ನು ಬೀchi ಯವರು
“ಎಲ್ಲರೂ ನಗಬೇಕು, ನಗು ಜೀವದುಸಿರು,
ಬಲ್ಲವರ ಹಾಸ್ಯ ರಸಕವಳದೂಟ” ಎಂದು ಹೇಳಿ ನಗು ನಗುತಾ ಬಾಳಬೇಕು ಎಂದು ಕರೆನೀಡಿದ್ದಾರೆ.

ಒಟ್ಟಾರೆ ಬೀಚಿಯವರ ಈ ಪುಸ್ತಕ ಓದುತ್ತಿದ್ದಾಗ ಕಾವ್ಯ ಓದುತ್ತಲೇ ಜೀವನದ ಸತ್ಯಗಳ ಬಗ್ಗೆ ಪ್ರವಚನ ಕೇಳಿದ ಅನುಭವವನ್ನು ಪಡೆದೆ .ನೀವು ಇಂತಹ ಅನುಭವ ಪಡೆಯಬೇಕಾದರೆ  ಒಮ್ಮೆ ತಿಂಮ ಏನಂದ ಎಂದು ಓದಲೇಬೇಕು.

ಪುಸ್ತಕದ ಹೆಸರು: ಅಂದನಾ ತಿಂಮ
ಲೇಖಕರು: ಬೀಚಿ
ಪ್ರಕಾಶನ: ಬೀಚಿ ಪ್ರಕಾಶನ
ಬೆಲೆ: 125₹

ಸಿಹಿಜೀವಿ
ಸಿ ಜಿ ವೆಂಕಟೇಶ್ವರ

 

06 ಆಗಸ್ಟ್ 2022

ಹಂಪಿ ವಿಜಯನಗರ ...


 


ವಿಮರ್ಶೆ ೪೯


ಹಂಪಿ ವಿಜಯನಗರ  


ಹಂಪಿ ವಿಜಯನಗರ ಒಂದು ಸಂಗ್ರಹಯೋಗ್ಯ ಕೃತಿಯಾಗಿದೆ. ಇದರಲ್ಲಿ ಬರುವ  ಹತ್ತೊಂಬತ್ತು ಬರಹಗಳಲ್ಲಿ  ಒಂದೊಂದು ಬರಹವೂ ವಿಜಯನಗರ ಇತಿಹಾಸ ಸಂಶೋಧನೆಯ ಒಂದೊಂದು ಸವಾಲುಗಳನ್ನು ಪ್ರತಿನಿಧಿಸುವಂತಹದು. ಪ್ರೊ. ಲಕ್ಷಣ್ ತೆಲಗಾವಿ ಯವರು ಪ್ರತಿಯೊಂದು ಬರಹಕ್ಕೂ ಆಯ್ಕೆಮಾಡಿಕೊಂಡಿರುವ ವಿಷಯ, ಸಂಗ್ರಹಿಸಿರುವ ವಿಪುಲ ಅಕರಸಾಮಗ್ರಿ   ವಿಷಯದ ಒಳಹೊಕ್ಕು ನೋಡಿರುವ ಪರಿ ಇವೆಲ್ಲವೂ ನಮಗೆ  ಬೆರಗನ್ನುಂಟುಮಾಡುತ್ತವೆ . ಈ ಸಂಕಲನದಲ್ಲಿರುವ ಬಹುತೇಕ ಬರಹಗಳು ಸಂಶೋಧನಾತ್ಮಕ ವಾಗಿದ್ದು, ಪ್ರಥಮಬಾರಿಗೆ ಹಲವಾರು ಹೊಸ ವಿಷಯಗಳನ್ನು ಪ್ರಕಟಪಡಿಸುವಲ್ಲಿ ಯಶಸ್ವಿಯಾಗಿವೆ. ವಿದ್ಯಾರ್ಥಿಗಳಿಗೆ, ಅಧ್ಯಯನಶೀಲರಿಗೆ ಮಾತ್ರವಲ್ಲ, ವಿದ್ವಾಂಸರಿಗೂ ಸಂಶೋಧಕ ರಿಗೂ ಈ ಬರಹ ಸಂಗ್ರಹ ಹೆಚ್ಚಿನ ಪ್ರಯೋಜನವುಳ್ಳ ಪುಸ್ತಕ. ಹಲವಾರು ವರ್ಷಗಳಿಂದ  ಪರಿಶ್ರಮವಹಿಸಿ ಸಿದ್ಧಪಡಿಸಲಾಗಿರುವ ಇಲ್ಲಿಯ ಬರಹಗಳು  ಹಿರಿಯ ಸಂಶೋಧಕ ಪ್ರೊ. ಲಕ್ಷ್ಮಣ್ ತೆಲಗಾವಿಯವರ ವಿದ್ವತ್ತಿಗೆ  ಹಿಡಿದಿರುವ ಕನ್ನಡಿಯಂತಿವೆ. ಹಂಪಿ ಸ್ಮಾರಕಗಳು ಪ್ರೇರಣೆಯ ಪ್ರತೀಕಗಳಾಗಿದ್ದರೆ, ತೆಲಗಾವಿಯವರ ಇಂತಹ ಬರಹಗಳು ಸ್ಫೂರ್ತಿಯ ಸೆಲೆಗಳಾಗಿವೆ. 

 ಈ ಪುಸ್ತಕದಲ್ಲಿ ನನ್ನ ಗಮನವನ್ನು ಗಾಢವಾಗಿ ಸೆಳೆದ ಬರಹವೆಂದರೆ 'ಒಂದನೇ ಬುಕ್ಕನ ನಾಣ್ಯದ ಮರುಪರಿಶೀಲನೆಯ ನೆಲೆಯಲ್ಲಿ ಆತನ ಶಿಲ್ಪದ ಶೋಧ' ಎಂಬುದು. ಸಂಶೋಧನ ಬರವಣಿಗೆಗೆ ಇದೊಂದು ಅತ್ಯುತ್ತಮ ಉದಾಹರಣೆ. ಪ್ರೊ. ತೆಲಗಾವಿಯವರ ಆಳವಾದ ಅಧ್ಯಯನವನ್ನು ಸಮರ್ಥಿಸುವ ಬರಹವಿದು. ವಿಷಯವನ್ನು ಬೆಳೆಸುವುದು, ವಿವಿಧ ಆಯಾಮಗಳ ಮೂಲಕ ಅದನ್ನು ವಿಶ್ಲೇಷಿಸುವುದು, ತಾರ್ಕಿಕವಾಗಿ ಅಂತ್ಯಗೊಳಿಸುವುದು ಈ ಸಾಧ್ಯತೆಗಳನ್ನು ಅವರು ಇಲ್ಲಿ ಬಹು ಸಮರ್ಪಕವಾಗಿ ತೋರಿಸಿಕೊಟ್ಟಿದ್ದಾರೆ. ಕೆಲವು ನಾಣ್ಯಶಾಸ್ತ್ರಜ್ಞರು ಕೈಗೊಂಡ ಅವಸರದ ಅಥವಾ ಉದ್ದೇಶಪೂರ್ವಕ ಅಧ್ಯಯನದ ಕಾರಣವಾಗಿ ಒಂದನೇ ಬುಕ್ಕನ ನಾಣ್ಯವನ್ನು ತಪ್ಪಾಗಿ ಗುರುತಿಸಿ ಪ್ರಚಾರಕ್ಕೆ ತಂದುದನ್ನು ಪ್ರೊ. ತೆಲಗಾವಿಯವರು ಸಾಧಾರವಾಗಿ ಖಂಡಿಸಿದ್ದಾರೆ.ಅವರ ನಿಲುವು ನಿರ್ಣಯಗಳನ್ನು ಪ್ರಶ್ನಿಸಿದ್ದಾರೆ. ಅವರ ಸಂಶೋಧನೆಯ ಫಲವಾಗಿ ಚಿತ್ರದುರ್ಗ ಬೆಟ್ಟದಲ್ಲಿ ಒಂದನೇ ಬುಕ್ಕನ ಸಮಪ್ರಮಾಣದ ಕುಳಿತಿರುವ ಭಂಗಿಯ ಶಿಲ್ಪ ಬೆಳಕಿಗೆ ಬಂದುದನ್ನು ಕರ್ನಾಟಕದ ವಿದ್ವಾಂಸರು ಗಮನಿಸಬೇಕು.


ಕನ್ನಡದ ಬಖೈರುಸಾಹಿತ್ಯ ಕುರಿತು ಆಳವಾಗಿ ಅಧ್ಯಯನ ಮಾಡಿದವರಲ್ಲಿ ಪ್ರೊ. ತೆಲಗಾವಿಯವರೂ ಒಬ್ಬರು. ಈ ಸಂಕಲನದಲ್ಲಿ ಸೇರಿರುವ 'ರಾಮರಾಜನ ಬಖೈರು: ಪುನರಾವಲೋಕನ' ಎಂಬ ಬರಹವು ಅವರ ಆಳವಾದ ಚಿಂತನೆಯನ್ನು ದೃಢಪಡಿಸುತ್ತದೆ. ಈ ಬಖೈರ್ನ ಅಧ್ಯಯನಮಾರ್ಗವನ್ನು ಪರಿಶೀಲಿಸುವುದರೊಡನೆ, ಈ ಬಖೈರ್ನ ಹುಟ್ಟಿನ ಜತೆಯಲ್ಲಿ ಕಾಣಿಸಿಕೊಂಡ ಇತರ ಪರ್ಶಿಯನ್ಗ್ರಂಥಗಳ ತುಲನೆಯನ್ನೂ ಅವರು ಇಲ್ಲಿ ಮಾಡಿದ್ದಾರೆ. ಈ ಎರಡೂ ಸಂಪ್ರದಾಯಗಳ ಪಠ್ಯಗಳಲ್ಲಿಯ ವ್ಯತ್ಯಾಸಗಳನ್ನು ಸ್ಥೂಲವಾಗಿ ಯಾದರೂ ಪ್ರಸ್ತಾಪಿಸಿದ್ದಾರೆ. ಇದರೊಡನೆ, ಈ ಬಖೈರ್ನ ಉಪಯುಕ್ತತೆ, ವಿಶೇಷಗಳು ಹಾಗೂ ಇತಿಮಿತಿಗಳನ್ನು ಕುರಿತು ಸೂಕ್ಷ್ಮವಾಗಿ ವಿವರಿಸಿದ್ದಾರೆ.


ಪ್ರೊ. ತೆಲಗಾವಿಯವರು ಶ್ರೀಕೃಷ್ಣದೇವರಾಯನ ಆಡಳಿತಾವಧಿಯಲ್ಲಿದ್ದ ವಿಜಯನಗರ ಸೇನೆಯ ವಿವರವಂತೂ ತೀರಾ ರೋಚಕವಾದುದು, ವಿವಿಧ ಮೂಲಗಳಿಂದ ಸಂಗ್ರಹಿಸಲಾದ ಸೇನಾಸಂಖ್ಯೆ ಇತ್ಯಾದಿ ಮಾಹಿತಿ ಕುತೂಹಲ ಕಾರಿಯಾಗಿದೆ. ಈಗಾಗಲೇ ಈ ಸಂಬಂಧದಲ್ಲಿ ವಿದೇಶಿ ಪ್ರವಾಸಿಗರ ಬರಹಗಳನ್ನಾಧರಿಸಿ ಸ್ವಲ್ಪಮಟ್ಟಿಗೆ ಇತರ ಇತಿಹಾಸಕಾರರು ಬರೆದಿದ್ದರೂ ಅವುಗಳ ಪುನರಾವಲೋಕನ ದೊಡನೆ ಪ್ರೊ. ತೆಲಗಾವಿಯವರು ಕೆಲವು ನೂತನಾಂಶಗಳನ್ನು ಪ್ರಸ್ತಾಪಿಸಿದ್ದಾರೆ.


ಈಗಾಗಲೇ ಕೆಲವಾರು ವಿಜಯನಗರ ಶಾಸನಗಳ   ಪತ್ತೆಹಚ್ಚಿ ಬೆಳಕಿಗೆ ತರುವುದರೊಡನೆ, ಅವುಗಳ ಅಳವಾದ ಅಧ್ಯಯನ ಕೈಗೊಂಡ ಪ್ರೊ, ತೆಲಗಾವಿಯವರು, ಒಂದನೆಯ ಬುಕ್ಕ ಹಾಗೂ ಅವನ ಅಧೀನದ ರಾಜಪ್ರತಿನಿಧಿಗಳ ಶಾಸನಗಳನ್ನು ಮರು ಅಧ್ಯಯನಕ್ಕೊಳಪಡಿಸಿದ್ದಾರೆ. ಈ ಸಂಕಲನದಲ್ಲಿ ಸೇರಿರುವ 'ದೊಡ್ಡೇರಿ ,ಹರ್ತಿಕೋಟೆ ಶ್ರೀರೇವಣ ಸಿದ್ಧೇಶ್ವರಮಠದ ಸಂಗ್ರಹದಲ್ಲಿರುವ ಒಂದನೇ ಬುಕ್ಕ ಮತ್ತು ರಾಮರಾಯರಿಗೆ ಸಂಬಂಧಿಸಿದ ತಾಮ್ರಪಟಗಳ ನಕಲು ಪ್ರತಿಗಳು ಬರಹವು ಅವರ ಪಾಲಿಗೆ ಸವಾಲಿನದಾಗಿದ್ದು, ಈಗ ಕಾಗದದ ಮೇಲೆ ಉಳಿದುಕೊಂಡಿರುವ ಮೂಲಶಾಸನಪಾಠಗಳನ್ನು ಸಂಶೋಧನಾತ್ಮಕವಾಗಿ ಅಧಿಕೃತಗೊಳಿಸುವ ಕಾರ್ಯದಲ್ಲಿ ಅವರು ಹೆಜ್ಜೆಯಿರಿಸಿದ್ದಾರೆ. ಈ ದಾಖಲೆಗಳನ್ನು ಪರಿಶೀಲನೆ ಗೊಳಪಡಿಸಿ ಅವುಗಳಿಂದ ಕೆಲವು ವಾಸ್ತವಾಂಶಗಳನ್ನು ಸಂಗ್ರಹಿಸಿಕೊಟ್ಟಿದ್ದಾರೆ.


ವಿಜಯನಗರ ಇತಿಹಾಸದ ಸಮಗ್ರತೆ ಕುರಿತು ಎಷ್ಟು ಹೇಳಿದರೂ ಕಡಿಮೆಯೇ, ಕರ್ನಾಟಕದಲ್ಲಿ ಈ ಇತಿಹಾಸದ ಬಗೆಗೆ ನಡೆದಿರುವ ಸಂಶೋಧನೆಗಳಿಗೆ ಹೊರಬಿದ್ದಿರುವ ಪ್ರಕಟಣೆಗಳಿಗೆ ಲೆಕ್ಕವೇ ಇಲ್ಲ. ರಾಷ್ಟ್ರೀಯ ಅಂತಾರಾಷ್ಟ್ರೀಯ ಮಟ್ಟದಲ್ಲಿಯೂ ಈ ಇತಿಹಾಸ ಅಧ್ಯಯನದಲ್ಲಿ ತೊಡಗಿಸಿ ಕೊಂಡಿರುವ ವಿದ್ವಾಂಸರ ಸಂಖ್ಯೆಯೂ ಬಹು ದೊಡ್ಡದು ಆದರೂ ಹಂಪಿ ಸ್ಮಾರಕಗಳು ಹಾಗೂ ವಿಜಯನಗರ ಸಾಮ್ರಾಟರ ಇತಿಹಾಸ- ಇವುಗಳ ಅಧ್ಯಯನ  ಪೂರ್ಣಗೊಂಡಿಲ್ಲ. ತೋಡಿದಷ್ಟೂ ದೂರೆಯುವ  ಆಕರಸಂಪತ್ತಾಗಲಿ, ಬರೆದು ಮತ್ತೆ ಮತ್ತೆ ಎದುರಾಗುವ  ಚರ್ಚಾಸ್ಪದ ಸಂಗತಿಗಳಾಗಿ ನಮ್ಮ ಮುಂದೆ ನಿಲ್ಲುತ್ತವೆ .ಆ ಚರ್ಚೆಗಳಿಗೆ ತೆಲಗಾವಿರವರ ಈ ಪುಸ್ತಕ ಸಮರ್ಪಕವಾದ ಉತ್ತರ ಎಂಬುದು ನನ್ನ ಅಭಿಪ್ರಾಯ.



ಪುಸ್ತಕದ ಹೆಸರು: ಹಂಪಿ ವಿಜಯನಗರ

ಲೇಖಕರು: ಪ್ರೊ ಲಕ್ಷಣ್ ತೆಲಗಾವಿ.

ಪ್ರಕಾಶನ: ವಾಲ್ಮೀಕಿ ಸಾಹಿತ್ಯ ಸಂಪದ.ಹರ್ತಿಕೋಟೆ.

ಬೆಲೆ: 200₹


ಸಿಹಿಜೀವಿ

ಸಿ ಜಿ ವೆಂಕಟೇಶ್ವರ

ತುಮಕೂರು

ಕನ್ನಡ ರಂಗಭೂಮಿಯ ಕಲಾಪ್ರತಿಭೆಗಳು


 


ವಿಮರ್ಶೆ ೪೮
ಕನ್ನಡ ರಂಗಭೂಮಿಯ ಕಲಾಪ್ರತಿಭೆಗಳು .

ಆತ್ಮೀಯರು ಪ್ರಕಾಶಕರು ಹಾಗೂ ಲೇಖಕರಾದ ಎಂ ವಿ ಶಂಕರಾನಂದ ರವರು ಬರೆದ ಕನ್ನಡ ರಂಗಭೂಮಿಯ ಕಲಾಪ್ರತಿಭೆಗಳು ಎಂಬ ಪುಸ್ತಕವನ್ನು ನಾನು ಓದಲು ಕಾರಣ ನಾನೂ ಒಬ್ಬ ಹವ್ಯಾಸಿ ಕಲಾವಿದ .ಈ ಪುಸ್ತಕದಲ್ಲಿ ಲೇಖಕರು ಕರ್ನಾಟಕದ ರಂಗಭೂಮಿಯ ಸಾಧಕರಲ್ಲಿ ಪ್ರಮುಖವಾದ  64 ನಕ್ಷತ್ರಗಳ ಬಗ್ಗೆ ಪರಿಚಯಿಸಿದ್ದಾರೆ.
ಜೊತೆಯಲ್ಲಿ ಕರ್ನಾಟಕದ ರಂಗಭೂಮಿಯ ಬಗ್ಗೆ ವಿವರಣೆಯನ್ನು ಸಹ ನೀಡಿರುವುದು ಪ್ರಶಂಸನಾರ್ಹ.

ತುಮಕೂರು ಜಿಲ್ಲೆಯ ಮಧುಗಿರಿ ತಾಲ್ಲೂಕಿನ ಕೋಡ್ಲಾಪುರದಲ್ಲಿನ ಒಂದು ಪುರೋಹಿತ ಕುಟುಂಬದಲ್ಲಿ,ಜನಿಸಿದ ಶಂಕರಾನಂದ ರವರು ಹುಟ್ಟೂರಿನಲ್ಲೇ ಪ್ರಾಥಮಿಕ, ಪ್ರೌಢಶಾಲೆಗಳಲ್ಲಿ ವಿದ್ಯಾಭ್ಯಾಸ ಮುಗಿಸಿ ,ಮುಂದೆ ಮಧುಗಿರಿಯಲ್ಲಿ ಪಿಯುಸಿ, ಪದವಿ ವ್ಯಾಸಂಗ  ಮಾಡಿ  ಮೈಸೂರಿನಲ್ಲಿ ಇಂಗ್ಲಿಷ್ ಭಾಷೆಯಲ್ಲಿ ಸ್ನಾತಕೋತ್ತರ ಅಧ್ಯಯನ ಮಾಡಿದ್ದಾರೆ. ಕನ್ನಡದ ಪ್ರತಿಷ್ಠಿತ ಪ್ರಕಾಶನ ಸಂಸ್ಥೆ ಸಪ್ನ ಬುಕ್ಹೌಸಿನಲ್ಲಿ ಸಂಪಾದಕರಾಗಿ, ಚೆನ್ನೈನ ಪ್ರಕಾಶನ ಸಂಸ್ಥೆ ಸುರಾ ಬುಕ್ಸ್ (ಪ್ರೈ) ಲಿ.ನಲ್ಲಿ ವ್ಯವಸ್ಥಾಪಕ ಸಂಪಾದಕರಾಗಿ ಸೇವೆ ಸಲ್ಲಿಸಿದ್ದಾರೆ. ಕನ್ನಡದಲ್ಲಿ ಐವತ್ತಕ್ಕೂ ಹೆಚ್ಚಿನ ಸ್ವತಂತ್ರ, ಅನುವಾದ, ಸಂಪಾದನಾ ಕೃತಿಗಳ ರಚನೆ ಮಾಡಿರುವ ಇವರಿಗೆ
ಮಧುಗಿರಿ, ಗೌರಿಬಿದನೂರು ತಾಲ್ಲೂಕು ರಾಜ್ಯೋತ್ಸವ ಪ್ರಶಸ್ತಿ, ಚಿಕ್ಕಬಳ್ಳಾಪುರ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ, ಓಂಶಕ್ತಿ ಸಾಹಿತ್ಯ ಪ್ರಶಸ್ತಿ ಮತ್ತು ಹೇಮಂತ ಸಾಹಿತ್ಯ ಪುರಸ್ಕಾರಗಳು ಹುಡುಕಿಕೊಂಡು ಬಂದಿವೆ . ಇವರು ಹಲವು ರಾಜ್ಯಮಟ್ಟದ, ಪ್ರಾದೇಶಿಕ, ಜಿಲ್ಲಾ ಪತ್ರಿಕೆಗಳ ಉಪ ಸಂಪಾದಕರೂ, ಅಂಕಣಕಾರರೂ ಆಗಿ ಕಾರ್ಯ ನಿರ್ವಹಿಸಿದ್ದಾರೆ. ಪ್ರಸ್ತುತ ಆನಂದ್ ಪಬ್ಲಿಕೇಷನ್ಸ್ ಸಂಸ್ಥೆ ಆರಂಭಿಸಿ ಹಲವಾರು ಉದಯೋನ್ಮುಖ ಕವಿ, ಲೇಖಕರ ಕೃತಿಗಳನ್ನು ಹೊರತರುವ ಜೊತೆ ಜೊತೆಯಲ್ಲಿ ಅವರೂ ಸಹ ಹಲವಾರು ಕೃತಿಗಳನ್ನು ರಚನೆ ಮಾಡುತ್ತಾ ಕನ್ನಡ ತಾಯಿಗೆ   ಸೇವೆ ಸಲ್ಲಿಸುತ್ತಿದ್ದಾರೆ .

ರಂಗಭೂಮಿ ಎಂದರೆ, ಒಂದು ಪ್ರದೇಶದ, ಜನಸಮುದಾಯದ ಬದುಕಿನ ಸಾಂಸ್ಕೃತಿಕ, ರಾಜಕೀಯ, ಇತಿಹಾಸದೊಂದಿಗೆ, ಸಾಹಿತ್ಯ ಕೃತಿಯಾಗಿ, ರಂಗ ಮಂಚದಲ್ಲಿ ನಾಟಕವಾಗಿ, ರೂಪಕವಾಗಿ ಜನಮನಕ್ಕೆ ಹತ್ತಿರವಾದ ಕಲಾಕ್ಷೇತ್ರ. ಜಗತ್ತಿನಾದ್ಯಂತ ಆಯಾ ಜನಾಂಗ, ದೇಶ, ಪ್ರದೇಶಗಳ ರಂಗಭೂಮಿ ರೂಪು ಗೊಂಡುದುದನ್ನು ನಾವು ಕಾಣುತ್ತೇವೆ.

ಕನ್ನಡದಲ್ಲಿ ಜನಪದ ರಂಗಭೂಮಿ, ವೃತ್ತಿ ರಂಗಭೂಮಿ ಮತ್ತು ಹವ್ಯಾಸಿ ರಂಗಭೂಮಿಗಳಾಗಿ ವಿಂಗಡಿಸಬಹುದು. ಕನ್ನಡ ಜನಪದ ರಂಗಭೂಮಿಯಿಂದ ಪ್ರೇರಣೆ ಪಡೆದ ಮರಾಠಿಯ ಸೀತಾಸ್ವಯಂವರ ನಾಟಕ ಮಹಾರಾಷ್ಟ್ರದ ಉದ್ದಗಲಕ್ಕೂ ಪ್ರದರ್ಶನ ಕಂಡು ಮುಂಬಯಿ ಪ್ರಾಂತ್ಯಕ್ಕೊಳಪಟ್ಟ ಉತ್ತರ ಕರ್ನಾಟಕದ ಪಟ್ಟಣಗಳಿಗೂ ಲಗ್ಗೆ ಇಟ್ಟು, ಕನ್ನಡ ನೆಲದಲ್ಲಿ ಮರಾಠಿ ಮತ್ತು ಪಾರ್ಸಿ ಕಂಪನಿಗಳದ್ದೆ ನಾಟಕದಾಟ, ನಾಟಕದೂಟ, ಕಾರುಬಾರುಗಳಾದಾಗ ಕನ್ನಡಿಗರ ಸ್ವಾಭಿಮಾನ ಕೆಣಕುವಂತಾಯಿತು. ಈ ವೇಳೆಗೆ ಶಾಂತ ಕವಿಗಳೆಂದು ಹೆಸರಾದ ಸಕ್ಕರಿ ಬಾಳಾಚಾರ್ಯರು ಮರಾಠಿ ನಾಟಕಕ್ಕೆ ಪ್ರತಿಯಾಗಿ ಕನ್ನಡ ನಾಟಕಗಳನ್ನು ರಚಿಸುವಲ್ಲಿ ಕಾರಣರಾದರು. ಹೀಗೆ ಸಮಗ್ರ ಕರ್ನಾಟಕ ವೃತ್ತಿ ರಂಗ ಭೂಮಿ ಇತಿಹಾಸದಲ್ಲಿ ಗದಗಿಗೆ ಪ್ರಥಮ ಕೀರ್ತಿ ಸಲ್ಲುವಂತಾಯಿತು.

1856ನೇ ಜನವರಿ 15ರಂದು ಜನಿಸಿದ ಸಕ್ಕರಿ ಬಾಳಾಚಾರ್ಯರು ಗದಗಿನ ಶ್ರೀಮಂತ ಉಮಚಗಿ ಲಚಪ್ಪ ನಾಯಕ ಎಂಬುವರ ಪ್ರೋತ್ಸಾಹದಿಂದ ಹಲವಾರು ಯುವಕರ ನೆರವಿನಿಂದ 1872ರಲ್ಲಿ ವೀರನಾರಾಯಣ ಪ್ರಸಾದಿತ ನಾಟಕ ಮಂಡಳಿ' ಸ್ಥಾಪಿಸಿದರು. ಇದು ಉತ್ತರ ಕರ್ನಾಟಕದ ಪ್ರಥಮ ವೃತ್ತಿ ನಾಟಕ ಸಂಸ್ಥೆ.

ಮುಂದೆಯೂ ಪಾರಸಿ ಕಂಪನಿಗಳ ಪಾರಮ್ಯ ಮೈಸೂರು ಪ್ರಾಂತ್ಯದಲ್ಲಿ ಮುಂದುವರೆದಾಗ, ಮೈಸೂರಿನ ಕೆಲವು ಮಂದಿ ಕಲಾವಿಲಾಸಿಗಳು ಸುಮಾರು 1879-80ರಲ್ಲಿ ಸಿ.ಆರ್.ರಘುನಾಥರಾಯರ ನೇತೃತ್ವದಲ್ಲಿ ಒಂದು ಕನ್ನಡ ನಾಟಕ ಸಂಘವನ್ನು ಆರಂಭಿಸಿ 'ಶ್ರೀ ಶಾಕುಂತಲ ಕರ್ನಾಟಕ ನಾಟಕಸಭಾ' ಎಂದು ಹೆಸರಿಟ್ಟು ಕಾರ್ಯನಿರತರಾದರು. ಮುಂದೆ ಮೈಸೂರು ಒಡೆಯರಾದ ಚಾಮರಾಜೇಂದ್ರರ ನೆರವಿನೊಂದಿಗೆ 1880ರಲ್ಲಿ 'ಶ್ರೀ ಚಾಮರಾಜೇಂದ್ರ ಕರ್ನಾಟಕ ನಾಟಕ ಸಭಾ' ಎಂಬ ಹೆಸರಿನಿಂದ ನಾಟಕ ಮಂಡಳಿಯೊಂದನ್ನು ಸ್ಥಾಪಿಸಿ ಕನ್ನಡ ರಂಗಭೂಮಿಗೆ ಭದ್ರ ಬುನಾದಿ ಹಾಕಿ ಸತ್‌ ಸಂಪ್ರದಾಯವೊಂದನ್ನು ನಿರ್ದಿಷ್ಟವಾಗಿ ರೂಪಿಸಿದರು.

1882ರಲ್ಲಿ ಅರಮನೆಗೆ ಸೇರಿದ ವಿದ್ಯಾರ್ಥಿಗಳಿಂದ 'ಮೈಸೂ‌ರ್  ರಾಯಲ್ ಸ್ಕೂಲ್ ಡ್ರಾಮ್ಯಟಿಕ್ ಕಂಪನಿ' ಸ್ಥಾಪನೆಯಾಯಿತು. ಮುಂದೆ ಪೆರಿಸ್ವಾಮಿ ಅಯ್ಯಂಗಾರ್ -ಚಿನ್ನಸ್ವಾಮೀ ಅಯ್ಯಂಗಾರ್ ಸಹೋದರರ 'ರಸಿಕ ಮನೋಲ್ಲಾಸಿನಿ ನಾಟಕ ಕಂಪನಿ' ಜನ್ಮ ತಾಳಿತು. ನಂತರ ಚಾಮರಾಜೇಂದ್ರ ಕರ್ನಾಟಕ ನಾಟಕ ಸಭಾ ನಿಂತ ಮೇಲೆ ಅದರಲ್ಲಿನ ಕೆಲವರು ಸೇರಿ 1919ರಲ್ಲಿ 'ಶ್ರೀಚಾಮುಂಡೇಶ್ವರಿ ಕರ್ನಾಟಕ ನಾಟಕ ಸಭಾ' ಎಂದು ಎನ್. ಸುಬ್ಬಣ್ಣನವರ ನೇತೃತ್ವದಲ್ಲಿ ಹೊಸ ತಂಡ ರಚನೆಯಾಗಿ ಮುನ್ನಡೆಯಿತು. ಇದರಲ್ಲಿ ಮುಂದೆ ಆರ್. ನಾಗೇಂದ್ರರಾವ್, ಮಳವಳ್ಳಿ ಸುಂದರಮ್ಮನವರು ಬೇರೆ ಬೇರೆ ಕಾಲದಲ್ಲಿ ಆಡಳಿತ ಹೊಣೆ ಹೊತ್ತರು.

ನಾಟ್ಯ ಶಿರೋಮಣಿ ವರದಾಚಾರ್ಯರು 'ರತ್ನಾವಳಿ ನಾಟಕ ಸಭಾ'ವನ್ನು 1902ರಲ್ಲಿ ಸ್ಥಾಪಿಸಿದರು. ಮೈಸೂರು ರಂಗಭೂಮಿಯಲ್ಲಿ ಮೊಟ್ಟಮೊದಲು ವಿದ್ಯುತ್‌ ಶಕ್ತಿಯ ಸಹಾಯದಿಂದ ದೀಪಾಲಂಕಾರ, ಬಣ್ಣಗಳ ವಿಧವನ್ನು ಅಳವಡಿಸಿದರು.

ಮೈಸೂರು ಪ್ರಾಂತ್ಯದಲ್ಲಿ ಇನ್ನೊಂದು ಹೆಸರಾಂತ ಸಂಸ್ಥೆ 'ಶ್ರೀ ಗುಬ್ಬಿ ಚೆನ್ನಬಸವೇಶ್ವರ ಕೃಪಾಪೋಷಿತ ನಾಟಕ ಮಂಡಳಿ' 1884ರಲ್ಲಿ ಗುಬ್ಬಿ ಚಂದಣ್ಣನವರ ನೇತೃತ್ವದಲ್ಲಿ ಹುಟ್ಟಿತು. ಹೀಗೆ ಜನನವಾದ ಕನ್ನಡ ರಂಗಭೂಮಿ ಇಂದು ವಿಶ್ವದ ಗಮನವನ್ನು ಸೆಳೆಯುವ ಮಟ್ಟಿಗೆ ಬೆಳೆದು ನಿಂತಿದೆ.
ಹೀಗೆ ಲೇಖಕರು ಕನ್ನಡ ರಂಗಭೂಮಿ ಬೆಳೆದುಬಂದ ಹಾದಿಯ ಸಂಕ್ಷಿಪ್ತವಾಗಿ ತಿಳಿಸಿದ್ದಾರೆ. ಕನ್ನಡದ ಅರವತ್ತನಾಲ್ಕು  ಕಲಾ ಪ್ರತಿಭೆಗಳ ಸಾಧನೆಗಳ ಬಗ್ಗೆ ಈ ಕೃತಿಯಲ್ಲಿ ಪರಿಚಯಿಸಿಕೊಡುವ ಪ್ರಯತ್ನ ಮಾಡಿರುವ ಲೇಖಕರು ಈ ಕೆಳಗಿನ ನಕ್ಷತ್ರಗಳ ಪರಿಚಯ ಮಾಡಿಕೊಟ್ಟಿದ್ದಾರೆ.
ಟಿ.ಎಸ್.ಲೋಹಿತಾಶ್ವ,ಅವಿನಾಶ್ ಕಾಮತ್, ಮುಖ್ಯಮಂತ್ರಿ ಚಂದ್ರು, ಮಂಡ್ಯ ರಮೇಶ್, ಕೆ.ಮಂಜುನಾಥಯ್ಯ,ಉಮಾಶ್ರೀ ,ಲೋಕನಾಥ್, ಲಕ್ಷ್ಮೀ ಚಂದ್ರಶೇಖರ್
,ಪ್ರಕಾಶ್ ಬೆಳವಾಡಿ,ಅಹಲ್ಯಾ ಬಲ್ಲಾಳ್ ,ಡಿ.ಆರ್. ಕಾಮತ್
, ಬಿ.ಆರ್. ಮಂಜುನಾಥ್ ,ಚಂದ್ರಶೇಖರ ಕಂಬಾರ , ವಾಸುದೇವ ಗಿರಿಮಾಜಿ
, ಧೀರೇಂದ್ರ ಗೋಪಾಲ್, ಜಿ.ವಿ.ಶಿವಾನಂದ್‌ ,ಶಾಂತಾ ಹುಬೈಕ‌
, ಯಶವಂತ ಸರದೇಶಪಾಂಡೆ,
ವಸಂತ ನಾಕೋಡ , ಕಾಳಪ್ಪ ಪತ್ತಾರ, ಕೆ.ಎಸ್.ಪೂರ್ಣಿಮಾ , ರೋಹಿಣಿ ಹಟ್ಟಂಗಡಿ,ಡಾ. ವಿಜಯಾ,ಆದವಾನಿ ಲಕ್ಷ್ಮೀದೇವಿ,ಎಂ.ವಿ.ರಾಜಮ್ಮ,ಕಲ್ಪನಾ
ಬಿ.ಆರ್. ಪಂತಲು,ಕಣಗಲ್ ಪ್ರಭಾಕರ ಶಾಸ್ತ್ರಿ , ಉದಯಕುಮಾರ್
ಸಿ.ಜಿ.ವೆಂಕಟೇಶ್ವರ,ಸುಪ್ರಿಯಾ ಎಸ್. ರಾವ್,ಬಾಲಕೃಷ್ಣ ನಿಲ್ದಾಣ್ಣಾಯ, ಸರೋಜಾ ಹೆಗಡೆ , ಸದಾನಂದ ಸುವರ್ಣ, ವಾಸುಕಿ ವೈಭವ್ , ಭರತ್ ಕುಮಾರ್,ಮರಿಯಪ್ಪ, ನಾಟೇಕ‌ರ್ ಮೋಹನ್,ಕಿಕ್ಕೇರಿ ಕೃಷ್ಣಮೂರ್ತಿ,ಕಿಶೋರಿ ಬಲ್ಲಾಳ್‌,ಆಶಾಲತಾ,ಗಿರಿಜಾ ಲೋಕೇಶ್,  ಲೋಕೇಶ್,
ವೈಶಾಲಿ ಕಾಸರವಳ್ಳಿ,ಕಲ್ಪನಾ ನಾಗನಾಥ್, ದಾಕ್ಷಾಯಿಣಿ ಭಟ್,
ಪ್ರೇಮಾ ಕಾರಂತ,ಯಮುನಾ ಮೂರ್ತಿ,ದೀಪಾ ರವಿಶಂಕರ್,ಪ್ರಸನ್ನ,
ಚಿಟ್ಟಾಣಿ ರಾಮಕೃಷ್ಣ ಹೆಗಡೆ,
ಕಾಳಿಂಗ ನಾವಡ, ಕೆರೆಮನೆ ಶಿವರಾಮ ಹೆಗಡೆ, ಕೆರೆಮನೆ ಶಂಭು ಹೆಗಡೆ, ಕೆರೆಮನೆ ಮಹಾಬಲ ಹೆಗಡೆ
ಹೊ. ಮಂಜುನಾಥ ಭಾಗವತ, ಕ. ಮಂಜುನಾಥ ಭಾಗವತ. ಲೀಲಾವತಿ ಬೈಪಡಿತ್ತಾಯ,ಬಲಿಪ ನಾರಾಯಣ ಭಾಗವತ,ಶೇಣಿ ಗೋಪಾಲಕೃಷ್ಣ ಭಟ್
ನೆಟ್ಟೂರು ನಾರಾಯಣ ಭಾಗವತ .
ಈ ಕಲಾವಿದರ ಬಗ್ಗೆ ತಿಳಿದು ಬಹಳ ಸಂತೋಷವಾಯಿತು.

ಈ ಪುಸ್ತಕದ  ಮುಖಪುಟ ಗಮನ ಸೆಳೆಯುತ್ತದೆ ಅದಕ್ಕೆ ವಿ ಎಲ್ ಪ್ರಕಾಶ್ ರವರು ಅಭಿನಂದನಾರ್ಹರು .ಪುಸ್ತಕ ಅಚ್ಚುಕಟ್ಟಾಗಿ ಬರಲು ಅದರ ಒಳ ವಿನ್ಯಾಸ ಸಹ ಚೆನ್ನಾಗಿ ಮೂಡಿಬಂದಿರುವುದು ಗಮನಾರ್ಹ. ಕಲಾ ನಕ್ಷತ್ರಗಳಿಗೆ ಪೂರಕವಾದ ಚಿತ್ರಗಳು ಬಹಳ ಚೆನ್ನಾಗಿವೆ .ಒಟ್ಟಾರೆ ಈ ಪುಸ್ತಕ ಚೆನ್ನಾಗಿದೆ ರಂಗಭೂಮಿಯ ಬಗ್ಗೆ ಆಸಕ್ತಿ ಇರುವ ಮತ್ತು ಕಲಾರಾಧಕರು ಈ ಪುಸ್ತಕ ಓದಲೇಬೇಕು

ಪುಸ್ತಕದ ಹೆಸರು:ಕನ್ನಡ ರಂಗಭೂಮಿಯ ಕಲಾಪ್ರತಿಭೆಗಳು
ಲೇಖಕರು: ಎಂ ವಿ ಶಂಕರಾನಂದ
ಪ್ರಕಾಶನ: ಆನಂದ್ ಪಬ್ಲಿಕೇಶನ್ .ತುಮಕೂರು
ಬೆಲೆ:450₹

ಸಿಹಿಜೀವಿ
ಸಿ ಜಿ ವೆಂಕಟೇಶ್ವರ
ತುಮಕೂರು

05 ಆಗಸ್ಟ್ 2022

ಸೋನಾಗಾಚಿ....


 


ವಿಮರ್ಶೆ ೪೭ 

ಸೋನಾಗಾಚಿ


ಹದಿಮೂರು ಕಥೆಗಳನ್ನು ಹೊಂದಿರುವ "ಸೋನಾಗಾಚಿ " ಕಥಾ ಸಂಕಲನದ ಪ್ರತಿಯೊಂದು ಕಥೆಯೂ ವಿಭಿನ್ನವಾದ ಕಥಾವಸ್ತುವನ್ನು ಹೊಂದಿವೆ. ಇಲ್ಲಿನ ಬಹುತೇಕ ಕಥೆಗಳು ಮಯೂರ ಮಾಸಪತ್ರಿಕೆಯಲ್ಲಿ ಪ್ರಕಟ ಗೊಂಡಂಥವುಗಳೇ ಆಗಿವೆ. ಸುಧಾ ವಾರಪತ್ರಿಕೆ ಮತ್ತು ಸಂಜೆ ವಾಣಿ ವಿಶೇಷಾಂಕದಲ್ಲಿ ಪ್ರಕಟವಾದ ಕಥೆಗಳು ಇವೆ ಕೆಲವನ್ನು ಈಗಾಗಲೇ ಓದಿರುವೆ.ಎಲ್ಲಾ ಕಥೆಗಳು ಒಂದೆಡೆ ಇರುವುದರಿಂದ ಆಗಾಗ ಓದಿ ಮೆಲುಕು ಹಾಕಬಹುದು.

ಹಂದ್ರಾಳ ರವರು ಪಾತ್ರಗಳ ಸೃಷ್ಟಿ ಮಾಡುವಲ್ಲಿ ಘಟನೆಗಳನ್ನು ಕಟ್ಟಿಕೊಡುವುದರಲ್ಲಿ ನಿಸ್ಸೀಮರು 

ರಾಮಲಾಲ್, ಅತ್ತರು ಮಾರುವ ಸಲೀಮ್, ಮಾದೇಗೌಡ  ಕೆಲವು ಉದಾಹರಣೆಗಳು .ಈ ಪಾತ್ರಗಳು  ಸಾಮಾನ್ಯರಲ್ಲಿ ಸಾಮಾನ್ಯರಾದರೂ ಇವರೆಲ್ಲ ಕೊನೆಗೆ ತಮ್ಮ ನಿಜಕ್ಕೆ ಮರಳುವ ಧೀಮಂತರು, ಹಂದ್ರಾಳರ ಕತೆಗಳಿಗಾಗಿಯೇ ಇವರು ನಿಜವಾಗುವ ಪಾತ್ರಗಳಲ್ಲ; ನಿಜ ಜೀವನದಲ್ಲಿಯೂ ನಾವು ಕಾಣುವ ಇಂತಹ ಅಪರೂಪದ ವ್ಯಕ್ತಿಗಳೇ ಹಂದ್ರಾಳರ ಕತೆಗಳಲ್ಲಿ ಹೊಸದಾಗಿ ಜೀವಧಾರಣೆ ಮಾಡಿ ಹೀರೋಗಳಾಗುತ್ತಾರೆ. ಅನೂಹ್ಯಳ ಸುತ್ತ ಕಟ್ಟಿಕೊಂಡಿದ್ದ ಬ್ರೆಕ್ಟನ ಕನಸು ಮುರಿದು ಬಿದ್ದಾಗ ಆತ ವಾಸ್ತವಕ್ಕೆ ಮರಳುತ್ತಾನೆ. 'ಸೋನಾಗಾಚಿ'ಯ ಅಲ್ಲಮಪ್ರಭು ವೇಶ್ಯೆಯನ್ನು ವರಿಸಿ ಉದ್ಧಾರವಾಗುತ್ತಾನೆ. ಇವರೆಲ್ಲರ ಉದ್ಧಾರ ಕತೆಗಾರನ ಕಲ್ಪನೆಯಲ್ಲಷ್ಟೆ ರೂಪು ಪಡೆದದ್ದಲ್ಲ. ನಮ್ಮ ಸುತ್ತ ಕಾಣುವ ವ್ಯಕ್ತಿಗಳ ದೈನಂದಿನ ವಾಸ್ತವಗಳೇ ಇಲ್ಲಿ ಕತೆಯಾಗುತ್ತವೆ. ಸಾಮಾನ್ಯ ಮನುಷ್ಯನ ವಿವೇಕ, ಮತ್ತು ಜಾಣತನಗಳನ್ನು ಈ ಕತೆಗಳು ಗೆಲ್ಲಿಸುತ್ತವೆ. ಬೈ ಎಲೆಕ್ಷನ್‌ನಲ್ಲಿ ಹುರಿಯಾಳಾಗಿ ನಿಲ್ಲುವ ಗಿರಿಗೌಡನಳ್ಳಿಯ ಮಾದೇಗೌಡನ ಒಂದು ಕತೆಯಿದೆ ಇಲ್ಲಿ. ಮಾದೇಗೌಡ ಇಂದಿನ ನಡತೆಗೆಟ್ಟ ಶಕ್ತಿರಾಜಕಾರಣಕ್ಕೆ ತನ್ನ ಹುಂಬತನದಲ್ಲಿ ಬಲಿಯಾದವನು. ಅವನು ಚುನಾವಣೆಯಲ್ಲಿ ಸೋತು, ಕೈ ಬರಿದಾಗಿ ನಿಂತಾಗ, ಹತಾಶೆಗೊಳ್ಳದೆ ಮತ್ತೆ ತನ್ನ ರಾಗಿ ಮಿಶನ್ ಕೆಲಸಕ್ಕೆ ನಿಲ್ಲುತ್ತಾನೆ. ಇವು ಹಂದ್ರಾಳರ ಕಥಾಜಗತ್ತು. ಓದುಗರ ಮನವೊಲಿಸಲು ಹಂದ್ರಾಳರು ಎಲ್ಲಿಯೂ ಕಲ್ಪನೆಯನ್ನು ಉತ್ರ್ಪೇಕ್ಷಿಸು ವುದಿಲ್ಲ. ಇವರು ಕಾಣುವ ವಾಸ್ತವ ಜಗತ್ತು ತೃಣಮಾತ್ರವೂ ಕಲ್ಪಿತ ಎನಿಸುವುದಿಲ್ಲ.  


 'ಪೆಂಚಾಲಯ್ಯನ ಪೆನ್ಷನ್ ಫೈಲು', 'ಕತ್ತಲು ಮತ್ತು ಮಳೆ' 'ಇನ್ನಾದರೂ ಸಾಯಬೇಕು' ಕತೆಗಳನ್ನು ಇಲ್ಲಿ ಉಲ್ಲೇಖಿಸಲೇಬೇಕಿದೆ. ಪೆಂಚಾಲಯ್ಯ ತನ್ನ ಪೆನ್ಷನ್ ಫೈಲಿನಲ್ಲಿ ಸಿಕ್ಕಿಕೊಂಡ ಒಂದು ತೊಡಕನ್ನು ನಿವಾರಿಸಿಕೊಳ್ಳುವ ಕತೆ 'ಪೆಂಚಾಲಯ್ಯನ ಪೆನ್ಷನ್ ಫೈಲು', ಹೆಚ್ಚಿನ ಸಂದರ್ಭಗಳಲ್ಲಿ, ಮನುಷ್ಯ ತನ್ನ ಸಹಜವಾದ ಜಾಣತನವನ್ನೇ ನೆಚ್ಚಿಕೊಳ್ಳುತ್ತಾನೆ. ಆಳದಲ್ಲಿ ನಾವೆಲ್ಲ. ಅಂತಹ ಉಪಾಯಗಾರರೇ, ಕಾನೂನಿನ ಕುರುಡನ್ನೂ ನೌಕರಶಾಹಿಯ ಸಂಚುಗಳನ್ನೂ ಸಿಟ್ಟು ಮತ್ತು ವ್ಯಂಗ್ಯದಲ್ಲಿ ಹಂದ್ರಾಳರು ನಿರೂಪಿಸುವ ಸುಲಭದ ಮಾರ್ಗವನ್ನು ಹಿಡಿಯದೆ ಮನುಷ್ಯರ ತಿಳಿವಳಿಕೆಗೆ ಸಂಭ್ರಮಿಸುವ ಸಂಯಮ ತೋರುತ್ತಾರೆ.  

 ಹಂದ್ರಾಳರ ಕಥಾಜಗತ್ತಿನ ಮನುಷ್ಯರನ್ನ ನಿಕಟವಾಗಿ ನೋಡುವುದರಲ್ಲಿ ಒಂದು ಆನಂದವಿದೆ. ಇವರೆಲ್ಲ ಏಕಾಂತದಲ್ಲಿ ತಮ್ಮ ನೈತಿಕತೆಗೆ ನಿಜ ಎನ್ನುವಂತೆ ಯೋಚಿಸಬಲ್ಲವರು. ಯೋಚನೆಯಂತೆ ಬದುಕಿ ತೋರಿಸಬಲ್ಲ ಈ ಧೀರರು ಯಾವತ್ತೂ ಸದ್ಯಕ್ಕೆ ಸ್ಪಂದಿಸುತ್ತಾರೆ: 'ಪರಿವರ್ತನೆ' ಕತೆಯ ರಾಜಕಾರಣಿ ತಿರುಬೋಕಿ ಜೈಲಿನಲ್ಲಿರುವಾಗ ತನ್ನ ಅಂತರಂಗದ ಮಾತನ್ನು ಆಲಿಸುವುದು ಒಂದು ಲೋಕೋತ್ತರ ವಿದ್ಯಮಾನ. 'ಕತ್ತಲು ಮತ್ತು ಮಳೆ'ಯ ಶಾಲ್ಮಲ ಕೂಡ ತನ್ನ ಆತ್ಮಸಾಕ್ಷಿಯಂತೆ ವರ್ತಿಸುವವಳು. ಆದರೆ ಲೋಕದ ರೀತಿಯನ್ನೂ ಬಲ್ಲವಳು. ಆದ್ದರಿಂದ ತನ್ನನ್ನು ಹಿಂದೊಮ್ಮೆ ಪ್ರೀತಿಸಿದವನ ಬಳಿಗೆ ಆಕೆ ಮರಳಿದಾಗ ಅದೊಂದು ಅನೈತಿಕ ಕ್ರಿಯೆ ಎನಿಸುವುದಿಲ್ಲ.


ಈ ಸಂಕಲನದಲ್ಲಿರುವ ಒಂದು ಅಪೂರ್ವವಾದ ಕತೆ 'ಇನ್ನಾದರೂ ಸಾಯಬೇಕು'. ಹಂದ್ರಾಳರ ಕತೆಗಳಲ್ಲಿ ಅಸಹಜವಾದ ಸಾವು ಕಡಿಮೆ, ಆದರೆ ಈ ಕತೆಯ ಪ್ರೊಫೆಸರ್ ಋಗ್ವದಿ ನೇಣು ಬಿಗಿದುಕೊಂಡು ಸಾಯುತ್ತಾರೆ. ಪ್ರೊ. ಋಗ್ವದಿ ಸಾಯುವ ಉದ್ದೇಶ ಹೊಂದಿರಲಿಲ್ಲವಾದರೂ, ತಮ್ಮ ತಲೆಯೆಲ್ಲ ತುಂಬಿಕೊಂಡ ಸಾವಿನ ಧ್ಯಾನದಿಂದ, ಆತ್ಮಹತ್ಯೆಯ ಒಂದು ಸನ್ನಿವೇಶವನ್ನು ರಿಹರ್ಸಲ್ ಮಾಡುವ ಲಘುವಾದ ಮನಸ್ಥಿತಿಯಲ್ಲೇ ತಂದುಕೊಂಡ ಸಾವು ಇದು. ಸಾಯಬೇಕೆಂದು ಬೆಂಕಿ ಹಚ್ಚಿಕೊಂಡು ಸಾಯದೆ ಆಸ್ಪತ್ರೆ ಸೇರಿದ್ದ ಶಿಷ್ಯ ವೆಂಕಟೇಶ್ ಯಾದವನನ್ನು ಕಾಣಲು ಹೋಗುವ ಪ್ರೊ. ಋಗ್ವದಿ ಅಲ್ಲಿ ಹೇಳುವ ಮಾತು ಅವರ ಮನಸ್ಥಿತಿಯನ್ನು ತೋರುವಂಥದ್ದು, “ಎಂಥ ಅವಿವೇಕಿಯಯ್ಯಾ ನೀನು! ಅದಕ್ಕೊಂದು ಪ್ರಾಪರ್ ಪ್ರಿಪರೇಶನ್ ಬೇಕಾಗುತ್ತೆ. ನೀನು ನೇಣು ಬಿಗಿದುಕೊಳ್ಳಬೇಕಾಗಿತ್ತು” ಎಂದುಬಿಡುತ್ತಾರೆ. ಮಾರನೆಯ ದಿನ ತಾನೇ “ಆರೆ, ಒಂದು ಅಟೆಂಪ್ಟ್ ಏಕೆ ಮಾಡಬಾರದು?” ಎಂದು ತನ್ನ ಕುತೂಹಲಕ್ಕೆ ತನ್ನ ಪ್ರಾಣವನ್ನೇ ಕಳೆದುಕೊಳ್ಳುವ ಋಗ್ವದಿಯ ಕತೆ ಕೇಶವರೆಡ್ಡಿ ಹಂದ್ರಾಳ ಲೋಕ ವೀಕ್ಷಣೆಯ ಪ್ರತಿಭೆಗೆ ಉದಾಹರಣೆಯಾಗುತ್ತದೆ. ಈ ಕತೆ ನಮ್ಮ ವಿರುದ್ಧ ನಮ್ಮನ್ನೇ ಎಚ್ಚರಿಸುತ್ತದೆ.


ಹೀಗೆ ನಮ್ಮ ಮನೆಯ ಸುತ್ತ ಮುತ್ತ ನಡೆಯುವ ಪಾತ್ರಗಳನ್ನು ಚಿತ್ರದಲ್ಲಿ ಕಟ್ಟಿಕೊಡುವ ಕಥೆಗಳು ಕೆಲವೊಮ್ಮೆ ನಮ್ಮ ಕಥೆಯೇನೋ ಅನಿಸುವಷ್ಟು ನಮ್ಮನ್ನು ಕಾಡುತ್ತವೆ.ನೀವು ಒಮ್ಮೆ ಸೋನಾಗಾಚಿ ಓದಿಬಿಡಿ.



ಪುಸ್ತಕದ ಹೆಸರು: ಸೋನಾಗಾಚಿ

ಲೇಖಕರು: ಕೇಶವರೆಡ್ಡಿ ಹಂದ್ರಾಳ 

ಪ್ರಕಾಶನ: ಸಪ್ನ ಬುಕ್ ಹೌಸ್ .ಬೆಂಗಳೂರು

ಬೆಲೆ: 190 ₹


ಸಿಹಿಜೀವಿ

ಸಿ ಜಿ ವೆಂಕಟೇಶ್ವರ

ತುಮಕೂರು

ಧ್ವಜವೆಂದರೆ ಬಟ್ಟೆಯಲ್ಲ....

 



ವಿಮರ್ಶೆ ೪೬

ಧ್ವಜವೆಂದರೆ ಬಟ್ಟೆಯಲ್ಲ .

ಇತ್ತೀಚಿನ ದಿನಗಳಲ್ಲಿ ಮಾಧ್ಯಮಗಳಲ್ಲಿ "ಘರ್ ಘರ್ ತಿರಂಗಾ" ಮನೆ ಮನೆಯಲ್ಲಿ ಬಾವುಟ" ಅಭಿಯಾನ ಸದ್ದು ಮಾಡುತ್ತಿದೆ. ಇದರ ಜೊತೆಯಲ್ಲಿ ಕೆಲ ದಿನಗಳ ಹಿಂದೆ  ಕೇಂದ್ರ ಸರ್ಕಾರವು ಧ್ವಜ ಸಂಹಿತೆಗೆ ಕೆಲವು ತಿದ್ದುಪಡಿಗಳನ್ನು ತಂದು ರಾತ್ರಿ ವೇಳೆಯಲ್ಲಿ ಸಹ ದ್ವಜ ಹಾರಾಡಿಸಬಹುದು ಎಂದು ಹೇಳಿದ್ದು ವಿವಾದಕ್ಕೆ ತಿರುಗಿದ್ದು ನಮಗೆ ತಿಳಿದೇ ಇದೆ.ನಮ್ಮ ಹೆಮ್ಮೆ ಹಾಗೂ  ಅಸ್ಮಿತೆಗಳಾದ ರಾಷ್ಟ್ರ ಧ್ವಜ ಹಾಗೂ ರಾಷ್ಟ್ರ ಲಾಂಛನಗಳ ಹೆಸರಿನಲ್ಲಿ  ವಿವಾದಗಳು ಉಂಟಾಗುತ್ತಿರುವುದು ಬೇಸರದ ಸಂಗತಿ.
ಸ್ವಾತಂತ್ರ್ಯದ ಅಮೃತ ಮಹೋತ್ಸವದ ಈ ಪರ್ವ ಕಾಲದಲ್ಲಿ ಭಾರತೀಯರು ಹೆಮ್ಮೆಯಿಂದ ತಮ್ಮ ವಾಟ್ಸಪ್  ಡೀಪಿಗಳಲ್ಲೂ ನಮ್ಮ ತಿರಂಗಾ ಹಾಕಿಕೊಂಡಿರುವುದು ದೇಶಭಕ್ತಿಯ ಜೋಶ್ ನ ಸೂಚಕ ಎಂದರೂ ತಪ್ಪಾಗಲಾರದು.
ಈ ಹಿನ್ನೆಲೆಯಲ್ಲಿ  ಸಂತೋಷ್ ಜಿ ಆರ್ ರವರು ಬರೆದ ಪುಸ್ತಕ ಧ್ವಜವೆಂದರೆ ಬಟ್ಟೆಯಲ್ಲ ಎಂಬ ಪುಸ್ತಕ ನನ್ನ ಆಕರ್ಷಿಸಿತು. ಅದರ ಟ್ಯಾಗ್ ಲೈನ್ ಓದಿದಾಗ ಪುಸ್ತಕ ಓದಲೇ ಬೇಕೆಂದು ಕೈಗೆತ್ತಿಕೊಂಡೆನು. ಆ ಟ್ಯಾಗ್ ಲೈನ್ ಈಗಿತ್ತು. " ವೇದಗಳಿಂದ ವಿವಾದಗಳವರೆಗೆ.... ಸಾಗಿ ಬಂದ ಹಾದಿ".
ಪುಸ್ತಕ ಓದಿ ಮುಗಿಸಿದಾಗ ಒಂದು ಉತ್ತಮ ಆಕರಗ್ರಂಥ ಓದಿದ ಅನುಭವವಾಯಿತು.
ಜಿ.ಆರ್. ಸಂತೋಷ್ ಅವರು ಧ್ವಜವನ್ನು ವಸ್ತುವಾಗಿ ಆಯ್ಕೆ ಮಾಡಿಕೊಂಡು ಈ ಪುಸ್ತಕ ರಚಿಸಿದ್ದಾರೆ. ಇದು ಒಂದು ರೀತಿಯಿಂದ ನಮ್ಮ ದೇಶದ ವಿವಿಧ ಯುಗಗಳ ಧ್ವಜದ ಚರಿತ್ರೆ, ಆದರೆ ಕೇವಲ ರಾಜಮಹಾರಾಜರ ಧ್ವಜಗಳನ್ನು ಚರ್ಚಿಸದೆ, ಸಾಂಸ್ಕೃತಿಕವಾಗಿ ಮಹತ್ವ ಪಡೆಯುವ, ಜನಸಾಮಾನ್ಯರ, ಮಿಡಿತಕ್ಕೆ ಸ್ಪಂದಿಸುವ ಅಂಶಗಳನ್ನು ಚರ್ಚೆಗೆ ತಂದಿರುವುದು ಸ್ವಾಗತಾರ್ಹ. ಇದರೊಂದಿಗೆ ಹೊಯ್ಸಳ, ವಿಜಯನಗರ ಮೊದಲಾದ ರಾಜವಂಶಗಳ ಧ್ವಜದ ವಿವರಗಳಿವೆ. ಪಾಲಿ ಧ್ವಜದ ಕುರಿತ ವಿಶೇಷ ಅಂಶಗಳು ಒತ್ತಟ್ಟಿಗೆ ಬಂದಿವೆ.

ಸಂತೋಷ್ ಜಿ.ಆರ್ ಕನ್ನಡದ ಉದಯೋನ್ಮುಖ ಲೇಖಕರು ಮತ್ತು ಸಂಶೋಧನ ಪ್ರವೃತ್ತಿಯನ್ನು ಹೊಂದಿರುವ ಅಧ್ಯಯನಕಾರರು. ಸಂಸ್ಕೃತಿ, ತತ್ತ್ವಶಾಸ್ತ್ರ, ಸಾಮಾಜಿಕ ಹಾಗೂ ರಾಜಕೀಯ ಚಿಂತನೆ, ಆರ್ಥಿಕತೆ ಮತ್ತು ಸಂತುಲಿತ ಅಭಿವೃದ್ಧಿ ಈ ಕ್ಷೇತ್ರಗಳಲ್ಲಿ ಸಂಶೋಧನೆಯ ಕಾರ್ಯದಲ್ಲಿ ನಿರತವಾಗಿರುವ Foundation for Indic Research Studies (FIRST) ಸಂಸ್ಥೆಯಲ್ಲಿ ಆಡಳಿತಾಧಿಕಾರಿಗಳಾಗಿದ್ದಾರೆ.
ಇವರು ಮೂಲತಃ ವಿಜ್ಞಾನ ಪದವೀಧರರು, ಕಾರ್ಪೋರೇಟ್ ಉದ್ಯಮ ಕ್ಷೇತ್ರದಲ್ಲಿ ಮಾನವಸಂಪನ್ಮೂಲ ಮತ್ತು ಆಡಳಿತ ನಿರ್ವಹಣೆಯ ವಿಭಾಗಗಳಲ್ಲೂ ಕಾರ್ಯನಿರ್ವಹಿಸಿದ್ದಾರೆ. ವಿದ್ಯಾರ್ಥಿ ಮತ್ತು ಯುವಜನರಲ್ಲಿ ವ್ಯಕ್ತಿತ್ವವಿಕಾಸ ಹಾಗೂ ರಾಷ್ಟ್ರೀಯ ಪ್ರಜ್ಞೆ ಮೂಡಿಸುವ ನಿಟ್ಟಿನಲ್ಲಿ ಶ್ರಮಿಸುತ್ತಿರುವ ಅನೇಕ ಸ್ವಯಂಸೇವಾ ಸಂಸ್ಥೆಗಳ ಕಾರ್ಯಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ.
ಇತಿಹಾಸ, ಸಾಹಿತ್ಯ ಮತ್ತು ಪ್ರಾಚೀನ ವಿಜ್ಞಾನ ಪರಂಪರೆ ಇವರ ಆಸಕ್ತಿಯ ವಿಷಯ. ಇದರೊಟ್ಟಿಗೆ ಸಾಮಾಜಿಕ, ಸಾಂಸ್ಕೃತಿಕ ಮತ್ತು ರಾಷ್ಟ್ರಜಾಗೃತಿಯ ಚಿಂತನೆಗಳನ್ನು ಹೊಂದಿರುವ ನೂರಾರು ಲೇಖನಗಳನ್ನು ಕನ್ನಡದ ಅನೇಕ ನಿಯತಕಾಲಿಕೆಗಳಲ್ಲಿ ಪ್ರಕಟಿಸಿದ್ದಾರೆ.

ಪ್ರಸ್ತುತ ಪುಸ್ತಕದಲ್ಲಿ ಪ್ರಸ್ತಾವಿತ ಕೆಲ ಅಂಶಗಳು ನಮ್ಮನ್ನು ಚಿಂತನೆಗೆ ಹಚ್ಚುತ್ತವೆ.
ಧ್ವಜ, ರಾಷ್ಟ್ರಗೀತೆ ಇವು ನಮ್ಮಲ್ಲಿ ಬೆಚ್ಚನೆಯ ಭಾವನೆ ಮೂಡಿಸದಿದ್ದರೆ ಎಲ್ಲವೂ ವ್ಯರ್ಥ, ರಾಜಕಾರಣಿಯ ಚಾಲಾಕಿತನ, ಸಾಹಿತಿಯ ಆತ್ಮರತಿ, ಪತ್ರಕರ್ತನ ಸ್ವಯಂಘೋಷಿತ ಜ್ಞಾನ ಎಲ್ಲವನ್ನೂ ಮೀರಿದ ಎಳೆಯ ಹುಡುಗಿಯ ಚಂಚಲತೆ, ನಿಷ್ಟುರತೆ, ಕಾವ್ಯಮಯ ಬದುಕು ಧ್ವಜಕ್ಕಿದೆ. ಇಲ್ಲದಿದ್ದರೆ ನೂರಾರು ಸೈನಿಕರು ಧ್ವಜಕ್ಕಾಗಿ ರಕ್ತ ಸುರಿಸಿದ್ದನ್ನು ವಿವರಿಸುವುದು ಕಷ್ಟ, ಧ್ವಜ ಹಾರಿಸಲು ಆದೇಶ ಹೊರಡಿಸುವುದನ್ನು ಬಿಟ್ಟು ಬೇರೆ, ಹೃದಯ ಪರಿವರ್ತನೆಯ ದಾರಿಗಳನ್ನು ಅಧಿಕಾರದಲ್ಲಿರುವವರು ಯೋಚಿಸಬೇಕು.  ಸಂತೋಷ್ ರವರು ಬರೆದಿರುವ ಪುಸ್ತಕ ಇತಿಹಾಸ, ಪರಂಪರೆ ಕುರಿತು ಮೆಚ್ಚುಗೆ, ವಿಮರ್ಶೆ ಎರಡನ್ನೂ ಬೆಳೆಸಿಕೊಳ್ಳಲು ಸಹಾಯ ಮಾಡಿದರೆ ಅವರ ಪರಿಶ್ರಮ ಸಾರ್ಥಕ.  ಯಾವುದೇ ಇತಿಹಾಸದ ಅಧ್ಯಯನ ನಮ್ಮನ್ನು ಒಳಗೇ ನೋಯುವಂತೆ, ಮಾಗುವಂತೆ ಮಾಡಬೇಕು. ಭಾರತದ ಇತಿಹಾಸದಲ್ಲಿ ಧ್ವಜ ಒಂದು ಸಂಕೇತ. ಈಗ ಎಡ, ಬಲ ಎಂದು ಕೃತಕ ಪರಿಮಿತ ಗೆರೆ ಕುಯ್ದುಕೊಂಡು ಮುಕ್ತ ಚರ್ಚೆಯೇ ಸಾಧ್ಯವಾಗುತ್ತಿಲ್ಲ.

ಲೇಖಕರು ಈ ಪುಸ್ತಕದಲ್ಲಿ ಕೇವಲ ರಾಷ್ಟ್ರ ಧ್ವಜದ ಬಗ್ಗೆ ಮಾತ್ರ ಉಲ್ಲೇಖ ಮಾಡಿಲ್ಲ ಬದಲಾಗಿ ವಿವಿಧ ಪ್ರಕಾರದ ಧ್ವಜಗಳು ಅವುಗಳ ಅರ್ಥ ಮತ್ತು ಹಿನ್ನೆಲೆಗಳನ್ನು ಸಚಿತ್ರವಾಗಿ ಕಟ್ಟಿಕೊಡುವ ಪ್ರಯತ್ನ ಮಾಡಿದ್ದಾರೆ.
ರಾಮಾಯಣ ಮಹಾಭಾರತದ ಕಾಲದಲ್ಲಿ ಬಳಸಿಕೊಂಡು ಬಂದ ಧ್ವಜಗಳು ಅವುಗಳ ಅರ್ಥ ,ವಿಶ್ವವಿದ್ಯಾಲಯ ಮತ್ತು ರಾಷ್ಟ್ರ ಧ್ವಜದ ಬಗ್ಗೆ ವಿವರಗಳನ್ನು ನೀಡಿರುವರು.ಧ್ವಜ ಶಕುನಗಳ ಬಗ್ಗೆ ಪ್ರಸ್ತಾಪ ಮಾಡಿದ್ದಾರೆ.
ಈ ಪುಸ್ತಕದಲ್ಲಿ ಬರುವ
ಕಣ್ಣುರಿಸಿದ ಹಸಿರು ಧ್ವಜ , ಶೌರ್ಯ ಸಾರಿದ ವೀರರು, ಮೇರೆ ಮೀರಿದ ಕನ್ನಡ ಧ್ವಜಗಳು, ವೀರ ಪರಂಪರೆಯ ಕರುನಾಡ ಧ್ವಜಗಳು ,ಪಾಲಿ ಧ್ವಜದ ವಿಶೇಷತೆ, ಪಾಲಿ ಧ್ವಜಾಧೀಶ ಇಮ್ಮಡಿ ಪುಲಕೇಶಿ,ವಿಶ್ವ ಸಾಮ್ರಾಜ್ಯ ಸ್ಥಾಪಿಸಿದ ರಾಷ್ಟ್ರಕೂಟರು,ಶಾರ್ದೂಲ ಧ್ವಜದ ವಿಜಯಗಾಥೆ, ವಿಜಯನಗರದ ವರಾಹ ಧ್ವಜ,ಕೆಳದಿಯ ಗಂಡಭೇರುಂಡ,ವಿಜಯ್ ಧ್ವಜಸ್ತಂಭಗಳು, ಧ್ವಜತಾರಿಣಿ ನಿವೇದಿತಾ, ಧ್ವಜಯುದ್ಧದಿಂದ ಸ್ವಾತಂತ್ರ್ಯದೆಡೆಗೆ,ಹಾರಾಡಿದ ಸ್ವಾತಂತ್ರ್ಯ ಧ್ವಜಗಳು,ಧ್ವಜಧಾರಿಣಿ ಮೇಡಂ ಕಾಮಾ, ಸ್ವರಾಜ್ಯ ಧ್ವಜ ಚರಕಾಂಕಿತ ತ್ರಿವರ್ಣ, ತ್ರಿವರ್ಣದ ವರ್ಣಸಂಕರ,ಧ್ವಜಾರ್ಪಣೆಗೊಂಡ ನವಸುಮಗಳು ,ಸುಭಾಷರ ವ್ಯಾಘ್ರ ಧ್ವಜ,ಆರೆಸ್ಸೆಸ್ ಮತ್ತು ರಾಷ್ಟ್ರ ಧ್ವಜ.,ಧ್ವಜವೇ ಗುರುವಾದಾಗ , ಕರ್ನಾಟಕದಲ್ಲಿ ಧ್ವಜ ಸತ್ಯಾಗ್ರಹಗಳು
ಮುಂತಾದ ಶೀರ್ಷಿಕೆಯ ಅಧ್ಯಾಯಗಳು ನಮಗೆ ವಿಶೇಷವಾದ ಜ್ಞಾನವನ್ನು ನೀಡುತ್ತವೆ.

ದೇಶವಿದೇಶಗಳಲ್ಲಿ ಈ ಪುಸ್ತಕದ ಬಗ್ಗೆ ಒಳ್ಳೆಯ ಅಭಿಪ್ರಾಯ ಕೇಳಿಬಂದಿದೆ ಕೆಲ ಗಣ್ಯರು ಈ ಪುಸ್ತಕದ ಬಗ್ಗೆ ಆಡಿರುವ ಮಾತುಗಳಲ್ಲಿ ಕೆಲವನ್ನು ಹೇಳುವುದಾದರೆ...
"ಮನೆ ಎಂದ ಮೇಲೆ ಅದಕ್ಕೊಂದು ಸೂರು ಇರಬೇಕಲ್ಲವೇ? ಸಮುದಾಯ ಎಂದರೆ ಅದಕ್ಕೊಂದು ಅಸ್ಮಿತೆ ಇರಬೇಕಲ್ಲವೇ? ದೇಶ ಎಂದ ಮೇಲೆ ಅದನ್ನು ಸಂಕೇತಿಸುವ ಹಲವು ಕಿರೀಟಗಳು ನಮಗೆ ಹೆಮ್ಮೆಯಲ್ಲವೇ? ಈ ಎಲ್ಲ ಪ್ರಶ್ನೆಗಳಿಗೆ ಅಕ್ಷರ ಲೋಕದಲ್ಲಿ ಉತ್ತರ ಕೊಟ್ಟ ಪುಸ್ತಕ 'ಧ್ವಜವೆಂದರೆ ಬಟ್ಟೆಯಲ್ಲ'- ಇದರಲ್ಲಿನ ವಿಷಯ ವಿಸ್ತಾರ, ಚಾರಿತ್ರಿಕ ನಿಖರತೆ, ಸತ್ಯದರ್ಶನ ನಮ್ಮ ಭಾರತೀಯತೆಯ ಹೆಮ್ಮೆಯನ್ನ ಮತ್ತು ಗರಿಮೆಯನ್ನ ಇನ್ನೂ ಗಟ್ಟಿಗೊಳಿಸುತ್ತದೆ. ಓದಿಗೆ ಮನನಕ್ಕೆ ಅರಿವಿಗೆ, ಇಂದು ಅರ್ಥೈಸಿಕೊಳ್ಳಬೇಕಾದ ಪುಸ್ತಕ, ಈ ಅಕ್ಷರ ಜ್ಞಾನ ಎಂದು ಟಿ. ಎಸ್. ನಾಗಾಭರಣ ರವರು ಅಭಿಪ್ರಾಯ ಪಟ್ಟಿದ್ದಾರೆ.
"ನಮ್ಮ ರಾಷ್ಟ್ರಧ್ವಜ ರೂಪುಗೊಂಡ ಬಗೆಯ ಇತಿಹಾಸವನ್ನು ತಿಳಿಸುವುದರೊಂದಿಗೆ ಸ್ವಾತಂತ್ರ್ಯ ಚಳವಳಿಯ ಸ್ವರೂಪದ ಪಕ್ಷಿನೋಟವನ್ನೂ ನೀಡುವ ಈ ಅಪೂರ್ವ ಕೃತಿಯು ಆದಷ್ಟೂ ಬೇಗ ಇಂಗ್ಲಿಷ್ ಮತ್ತು ನಮ್ಮ ದೇಶದ ಇತರ ಪ್ರಮುಖ ಭಾಷೆಗಳಿಗೂ ಅನುವಾದಗೊಂಡು ಭಾರತದ ಸಮಸ್ತ ಮನೆ ಮನಗಳನ್ನು ತಲುಪುವಂತಾಗಲಿ ಎಂಬುದೇ ನನ್ನ ಆಶಯ ಎಂದು ಇತಿಹಾಸ ತಜ್ಞರಾದ ಸುರೇಶ್ ಮೂನ ರವರು ಮೆಚ್ಚುಗೆ ಸೂಚಿಸಿದ್ದಾರೆ.
ಭಾರತೀಯರೆಲ್ಲರೂ ಸಹ ಇಂತಹ ಮೌಲಿಕ ಕೃತಿಯನ್ನು ಓದಿ ನಮ್ಮ ಧ್ವಜ ಸಂಸ್ಕೃತಿಯ ಬಗ್ಗೆ ಹೆಮ್ಮೆ ಪಡಬೇಕಿದೆ
ನೀವೂ ಸಹ ಓದುವಿರಲ್ಲವೆ?

ಪುಸ್ತಕದ ಹೆಸರು: ಧ್ವಜವೆಂದರೆ ಬಟ್ಟೆಯಲ್ಲ .
ಲೇಖಕರು: ಸಂತೋಷ್ ಜಿ ಆರ್
ಪ್ರಕಾಶನ: ಹಂಸ ಪ್ರಕಾಶನ. ಬೆಂಗಳೂರು.

ಸಿಹಿಜೀವಿ
ಸಿ ಜಿ ವೆಂಕಟೇಶ್ವರ


ಅಪ್ಪ ಅಂದ್ರೆ ಆಕಾಶ...


 


ಅಪ್ಪ ಅಂದ್ರೆ ಆಕಾಶ. 
ವಿಮರ್ಶೆ.೪೫
ಬಹುತೇಕ ದಿನಪತ್ರಿಕೆಗಳಲ್ಲಿ ಓದಿದ್ದ ಲೇಖನಗಳ ಗುಚ್ಛ ಒಂದೇ ಕಡೆ ಓದುವ ಅವಕಾಶ ಅಪ್ಪ ಅಂದ್ರೆ ಆಕಾಶ  .ಒಮ್ಮೆ ಓದಿ ಸುಮ್ಮನಿದ್ದರೆ ಸಾಲದು ಆಗಾಗ್ಗೆ ಓದುವ ನಮಗೆ ಚೈತನ್ಯ ನೀಡುವ ಘಟನೆಗಳ ಕಣಜ ಇದು.ಇದರ ಕತೃ ಆತ್ಮೀಯರು ಸಜ್ಜನರಾದ ಎ ಆರ್ ಮಣಿಕಾಂತ್ ರವರು.
ಎ ಆರ್ ಮಣಿಕಾಂತ್
ಜನಿಸಿದ್ದು ಮಂಡ್ಯ ಜಿಲ್ಲೆ ನಾಗಮಂಗಲ ತಾಲೂಕಿನ ಆಯಿತನಹಳ್ಳಿ, ಓದಿದ್ದು ಮಂಡ್ಯದ ಪಿ.ಇ.ಎಸ್. ಕಾಲೇಜಿನಲ್ಲಿ ಬಿ.ಇ ಆಟೊಮೊಬೈಲ್, ಒಲಿದಿದ್ದು ಪತ್ರಿಕೋದ್ಯಮ. ಮೊದಲು ಹಾಯ್ ಬೆಂಗಳೂರ್, ನಂತರ ಸಂಯುಕ್ತ ಕರ್ನಾಟಕ, ಆನಂತರ ವಿಜಯ ಕರ್ನಾಟಕದಲ್ಲಿನೌಕರಿ. ವಿಜಯ ಕರ್ನಾಟಕದಲ್ಲಿ ಬರೆಯುತ್ತಿದ್ದ 'ಉಭಯ ಕುಶಲೋಪರಿ ಸಾಂಪ್ರತ', 'ಹಾಡು ಹುಟ್ಟಿದ ಸಮಯ', 'ಮರೆಯಲಿ ಹ್ಯಾಂಗ', 'ಈ ಗುಲಾಬಿಯು ನಿನಗಾಗಿ' ಅಂಕಣಗಳು ಸಕಲೆಂಟು ಮಂದಿಯ ಮೆಚ್ಚುಗೆಗೆ  ಪಾತ್ರವಾದವು.  ಪ್ರಕಟವಾಗಿರುವ ಪುಸ್ತಕಗಳಲ್ಲಿ.  'ಹಾಡು ಹುಟ್ಟಿದ ಸಮಯ ಮತ್ತು ಈ ಗುಲಾಬಿಯು ನಿನಗಾಗಿ ಪುಸ್ತಕಗಳು ತಲಾ ನಾಲ್ಕು ಮುದ್ರಣಗಳನ್ನು ಕಂಡಿವೆ. 'ಅಮ್ಮ ಹೇಳಿದ ಎಂಟು ಸುಳ್ಳುಗಳು' 60 ತಿಂಗಳಲ್ಲಿ 75,000 ಪ್ರತಿಗಳು ಮಾರಾಟವಾಗಿ ದಾಖಲೆ ಸ್ಥಾಪಿಸಿರುವ ಪುಸ್ತಕ. ಈ ಪುಸ್ತಕಕ್ಕೆ ಸೇಡಂನ 'ಅಮ್ಮ' ಪ್ರಶಸ್ತಿ ಹಾಗೂ ಕರ್ನಾಟಕ ರಾಜ್ಯ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿ ಲಭಿಸಿದೆ.

ಮಣಿಕಾಂತ್ ರವರ  ಬರಹಕ್ಕೆ ಒಂದು ಚಂದದ ಶೈಲಿ ಸಿದ್ಧಿಸಿದೆ. ಇಂಥ ಬರವಣಿಗೆಗೆ ಹೇಳಿ ಮಾಡಿಸಿದ ಶೈಲಿ ಅದು! ಇಲ್ಲಿರುವ ಹಲವಾರು ಕತೆಗಳನ್ನು ಅವರು ಪ್ರತ್ಯಕ್ಷ ನೋಡಿ ಬರೆದಿದ್ದಾರೆ, ಕೇಳಿ ಬರೆದಿದ್ದಾರೆ. ಅಂತರ್ಜಾಲದಿಂದ ಬಸಿದುಕೊಂಡು ಬರೆದಿದ್ದಾರೆ. 'ಒಂದು ಮಾವಿನಮರ', 'ಒಬ್ಬ ಹುಡುಗ ಮತ್ತು ನಾವು ನೀವು...', 'ಪ್ರಾರ್ಥನೆ' ಇಂಥ ಕತೆಗಳನ್ನು ತನ್ನ ಕಲ್ಪನೆಯಿಂದ ಕಡೆದು ಬಿಡಿಸಿದ್ದಾರೆ. ಕೆಲವು ಕತೆಗಳ ಪಾತ್ರಗಳೊಂದಿಗೆ ಮಾತಾಡಿದ್ದಾರೆ! 'ಅಮ್ಮ ಮತ್ತು ಒಂದು ರೂಪಾಯಿ', 'ಅಪ್ಪ ಅಂದ್ರೆ ಆಕಾಶ' - ಕತೆಗಳಲ್ಲಿ ತಾವೇ ಪಾತ್ರವಾಗಿದ್ದಾರೆ! ಇಲ್ಲಿರುವ ಅಷ್ಟೂ 'ಕತೆ'ಗಳಲ್ಲಿ ಮಾತಿನ ತೇವ ಆರದಂತೆ, ತಾವೇ  ಎದುರುಕೂತು ಮಾತಾಡಿದಂತೆ 'ಕತೆ' ಹೇಳಿದ್ದಾರೆ.

ಮಣಿಕಾಂತ್ ರವರುಬರೆಯಲು ಆರಿಸಿಕೊಳ್ಳುವ ಕತೆಗಳಲ್ಲೇ ಅವರ  ಮನಸ್ಸು ಅರ್ಥವಾಗುತ್ತದೆ.  ತನ್ನ ತಮ್ಮ ತಂಗಿಯರಂಥ ಹುಡುಗ ಹುಡುಗಿಯರು ಸೋತು ಕೈಚೆಲ್ಲಿದಾಗ ಅವರನ್ನೊಂದಿಷ್ಟು ಚಂದದ ಬದುಕಿಗೆ ತಿರುಗಿಸಬೇಕೆನ್ನುವ ತಹತಹವಿದೆ. ಸ್ವತಃ ಭಾವುಕರಾದ  ಅವರಿಗೆ ಒಂದು ಭಾವನಾ ಪ್ರಪಂಚವನ್ನು ತನ್ನ ಹೊರಗೂ ಕಟ್ಟಬೇಕೆಂಬ ಆಸೆಯಿದೆ. ಹಾಗಾಗಿ ಅವರ ಬರಹಗಳೆಲ್ಲ ಇಂಥ ಆಸೆಗೆ ಸಾಕ್ಷಿಯಾಗುತ್ತವೆ - ತೋಡಿದ್ದಕ್ಕೆ ಜಲವೇ ಸಾಕ್ಷಿಯಾಗುವಂತೆ!

ಇವರ ಬರವಣಿಗೆಯಲ್ಲಿ ಅವರದೇ ಒಂದು 'ರಿದಂ' ಇದೆ. ಒಂದು ಲಾಲಿತ್ಯವಿದೆ. ಭಾಷೆಯನ್ನು ತೀರಾ ಅಲಂಕಾರಗಳಿಂದ ತುಂಬದೆಯೂ ಅದಕ್ಕೆ ಒಂದು ಲಾಲಿತ್ಯವನ್ನು ಲಯವನ್ನು ನೀಡುವಂಥ ಕಲಾವಂತಿಕೆ ಇದೆ. ಅದರಲ್ಲೂ ತನ್ನ ಬರಹಗಳೊಳಗಿನ ಪಾತ್ರಗಳನ್ನು ಮಾತನಾಡಿಸುವಾಗ ಮಣಿರವರ  ಬರವಣಿಗೆ ಸೂಪರ್, ಬಹುಪಾಲು ಪಾತ್ರಗಳು ಆಡುವ ಮಾತು ಮಣಿಯವರದೇ ! ಅಲ್ಲಿ ಮಾತಾಡುವುದು ಆ ಪಾತ್ರಗಳಲ್ಲಿ ವ್ಯಕ್ತಿಗಳು ಮಣಿಕಾಂತ್ ರವರ ಗುಣಗ್ರಾಹಿ ಮನಸ್ಸು ನಿರ್ವ್ಯಾಜ ಅಂತಃಕರಣ!

ಈ ಪುಸ್ತಕದ ಎಲ್ಲಾ ಅಧ್ಯಾಯಗಳು ಇಷ್ಟವಾದರೂ ಕೆಲವು ನನ್ನ ಈಗಲೂ ಕಾಡುತ್ತಿವೆ ಅವುಗಳು ...ಎಮ್ಮೆ ಕಾಯುತ್ತಿದ್ದ ಹುಡುಗ ಎಂ.ಎ ಮಾಡಿದವರನ್ನೂ ಮೀರಿಸಿದ,ಅಮ್ಮ ಮತ್ತು ಒಂದು ರುಪಾಯಿ... ಮಕ್ಕಳನ್ನು ಕಳೆದುಕೊಂಡವರು ,
ಅಪ್ಪನಿಂದ ಅನಿಷ್ಟ ಅನ್ನಿಸಿಕೊಂಡವಳು, ಮಿಸ್ ಇಂಡಿಯ ಆದಳು,ಈ ಡಿ.ಸಿ.ಗೆ ವರ್ಗವಾದರೆ ಜನ ಬೀದಿಗಿಳಿದು ಪ್ರತಿಭಟಿಸುತ್ತಾರೆ,
ಟ್ಯೂಶನ್ ಮಾಡಿ ಕೋಟಿ ದುಡಿದ!
'ನೆನಪಿಲ್ಲ' ಎಂದವಳನ್ನೂ ನೆಪ ಹೇಳದೆ ಮದುವೆಯಾದೆ,ಬೇಕರಿಯಲ್ಲಿ ಕ್ಲೀನರ್ ಆಗಿದ್ದ ಹುಡುಗ ಬಾನೆತ್ತರ ಬೆಳೆದ , ಆತ ಒಂದೇ ಬೆರಳಲ್ಲಿ ಪರೀಕ್ಷೆ ಬರೆದು ಡಿಸ್ಟಿಂಕ್ಷನ್ ಪಡೆದ , ಒಂದು ಲೋಟ ಹಾಲಿನ ರೂಪದಲ್ಲಿ ಹಣ ಸಂದಾಯವಾಗಿದೆ,
ಇನ್ನೇಕೆ ತಡ ನೀವೂ ಪುಸ್ತಕ ಖರೀದಿಸಿ ಒಮ್ಮೆ ಓದಿಬಿಡಿ ಕೆಲ ಘಟನೆಗಳು ನಿಮ್ಮನ್ನು ಕಾಡದೇ ಬಿಡವು.

ಪುಸ್ತಕ: ಅಪ್ಪಾ ಅಂದ್ರೆ ಆಕಾಶ
ಲೇಖಕರು: ಎ ಆರ್ ಮಣಿಕಾಂತ್
ಬೆಲೆ: 130
ಪ್ರಕಾಶನ: ನೀಲಿಮಾ ಪ್ರಕಾಶನ ಬೆಂಗಳೂರು.

ಜಲದೀವಿಗೆ .ಪುಸ್ತಕ ವಿಮರ್ಶೆ


 

జలದೀವಿಗೆ 

ಇಂದ್ರಕುಮಾರ್ ರವರು ಜಲದೀವಿಗೆ ಪುಸ್ತಕದಲ್ಲಿ   ಮತ್ತೆಮತ್ತೆ ಪ್ರತಿಪಾದಿಸುವುದು ಶ್ರಮ ಸಹಿತವಾದ ಬದುಕಿನ ಸಮೃದ್ಧತೆಯನ್ನು, ಸುಖವನ್ನು, ದೇಹಶ್ರಮವಿಲ್ಲದ ಕೇವಲ ಬೌದ್ಧಿಕ ಶ್ರಮವನ್ನು ಮಾತ್ರ ಮಾಡುತ್ತ ನಗರದಲ್ಲಿ ಬದುಕುತ್ತಿರುವ ಒಂದು ಬಹುದೊಡ್ಡ ಸಮುದಾಯ ನಿಜವಾದ ಅರ್ಥದಲ್ಲಿ ವಿಶೇಷ ಚೇತನ  ಸಮಾಜ, ತನ್ನ ವಿಕಲತೆಯನ್ನು ಮರೆಮಾಚುವುದಕ್ಕಾಗಿ ಅದು ಜಿಮ್ಗಳನ್ನೋ, ವ್ಯಾಯಾಮಕೇಂದ್ರಗಳನ್ನೋ, ಸ್ಪಾಗಳನ್ನೋ ತೆರೆದುಕೂತಿದೆ. ಮೈಮುರಿದು ದುಡಿಯುವ ಸಂಸ್ಕೃತಿಯಿಂದ ದೂರವಾದ ಜನರು ತಾವಾಗಿಯೇ ರೋಗಗಳ ಅವಾಸಸ್ಥಾನವಾಗುತ್ತಾರೆ. ಹಾಗಾಗಿ ಶ್ರಮದ ಬದುಕಿಗೆ ಮರಳೋಣ ಬನ್ನಿ ಎಂಬ ಕರೆಯನ್ನು ಅನೇಕ ಶ್ರಮಜೀವಿಗಳ ಕಥನಗಳ ಮೂಲಕ ಇಂದ್ರಕುಮಾರ್ ಅವರು ನಮಗೆ ಕೊಡುತ್ತಾರೆ. ಇಲ್ಲೇ ಸ್ವಾಮಿ ಏವೇಕಾನಂದರ ಒಂದು ಮಾತನ್ನು ನೆನಪಿಸುವುದು ಸೂಕ್ತ. "ಮೂರು ಹೊತ್ತು ಧ್ಯಾನ ಮಾಡುವುದು, ನಮಾಜ್ ಮಾಡುವುದು ಆಧ್ಯಾತ್ಮಿಕತೆಯಲ್ಲ, ಶ್ರಮಪಡುವುದು, ಶ್ರಮವನ್ನು ಸುಖ ಎಂದು ಭಾವಿಸುವುದು, ಶ್ರಮದ ಮೂಲಕವೇ ಧ್ಯಾನ ನಡೆಸುವುದು ನಿಜವಾದ ಆಧ್ಯಾತ್ಮಿಕತೆ". ಈ ಮಾತಿನ ಅರ್ಥವನ್ನು ಅರಿತಂತೆ ಇಂದ್ರಕುಮಾರ್ ಅವರು 'ಜಲ ದೀವಿಗೆ' ಪುಸ್ತಕದ ಮೂಲಕ ನಮಗೆ ದರ್ಶನ ಮಾಡಿಸುವವರೆಲ್ಲರೂ ನಿಜವಾದ ಅರ್ಥದಲ್ಲಿ ಶ್ರಮಯೋಗಿಗಳೇ ಆಗಿದ್ದಾರೆ. ಸತ್ಯಮೇವ ಜಯತೇ ಎಷ್ಟು ಮುಖ್ಯವೋ ಶ್ರಮಮೇವ ಜಯತೇ ಕೂಡ ಅಷ್ಟೇ ಮುಖ್ಯ ಎಂಬುದನ್ನು ಒಂದು ತತ್ತ್ವದಂತೆ ತಮ್ಮ ಈ ಪುಸ್ತಕದ ಮೂಲಕ ಪ್ರತಿಪಾದಿಸಿದ್ದಾರೆ.

ಪರಿಸರ, ನೀರು, ವನ್ಯಜೀವಿಗಳ ಸಂರಕ್ಷಣೆ, ನೈಸರ್ಗಿಕ ಮತ್ತು ಸಹಜ ಸಮೃದ್ಧ ಕೃಷಿ ಬಗ್ಗೆ ಹೆಚ್ಚು ಅರಿತಿದ್ದ  ಜಿ ಇಂದ್ರಕುಮಾರ್ ನಾಡಿನ ಪ್ರಮುಖ ಪತ್ರಿಕೆಗಳಲ್ಲಿ ಹಲವಾರು ಬರಹಗಳನ್ನು ಆಗಾಗ್ಗೆ ಬರೆಯುತ್ತಿದ್ದರು ಸಂಯುಕ್ತ ಕರ್ನಾಟಕದ ಉಪಸಂಪಾದಕರಾಗಿ ಕಾರ್ಯ ನಿರ್ವಹಿಸುತ್ತಿದ್ದರು, ಆ ಪತ್ರಿಕೆಯಲ್ಲಿ ಪ್ರತಿವಾದ ಅರಣ್ಯ, ನೀರು, ಪರಸರ ಸಂರಕ್ಷಣೆ ಕುರಿತು ಲೇಖನಗಳು ಪ್ರಕಟವಾಗಿವೆ. ಶುಮಕೂರು ನಗರದ ವಾರ್ಡ್ ನಂ.೧ಕ್ಕೆ ಸೇರುವ ಐತಿಹಾಸಿಕ ಮಹತ್ವ ಪಡೆದಿರುವ ಡಿ.ಎಂ.ಪಾಳ್ಯದವರು. ಕೃಷಿಕ ಮೂಲದ ಮನೆತನದವರು, ಎಂ.ಎ. ಓದಿದ್ದು, ಬರವಣಿಗೆಯಲ್ಲಿ ತಮ್ಮದೆ ಆದ ಛಾಪು ಮೂಡಿಸಿಕೊಂಡಿದ್ದರು.ಕನ್ನಡ ಪುಸ್ತಕ ಪ್ರಾಧಿಕಾರ ಅವರ ಪ್ರಥಮ ನಾಟಕ 'ಸಾಲವತಿ'ಯನ್ನು ಪ್ರಕಟಿಸಿತ್ತು . ಈ ನಾಟಕಕ್ಕೆ ಅಖಿಲ ಭಾರತ ಕನ್ನಡ ನಾಟಕ ಸ್ಪರ್ಧೆಯಲ್ಲಿ ತೃತೀಯ ಬಹುಮಾನ ಬಂದಿದೆ. ನಾಟಕ, ಕಾವ್ಯ, ಕಥೆಗಳ ರಚನೆ, ಇತಿಹಾಸ ಸಂಶೋಧನೆ ಜೊತೆಗೆ ಬಹುಮುಖ ಪ್ರತಿಭೆಯಾಗಿದ್ದರು.
ಜಲದೀವಿಗೆ ಪುಸ್ತಕದಲ್ಲಿ 35 ಲೇಖನಗಳಿದ್ದು   ಈ ಪುಸ್ತಕ ವಿಶೇಷವಾಗಿ ತುಮಕೂರಿನ ಜಲಸಾಕ್ಷರತೆಯ ಬಗ್ಗೆ ಅತೀವ ಕಾಳಜಿಯನ್ನು ಇಟ್ಟುಕೊಂಡಿದೆ. ತುಮಕೂರು ತಾಲ್ಲೂಕಿನ ದೇವರಾಯನದುರ್ಗದ ಬೆಟ್ಟಗಳ ತಪ್ಪಲಿನಲ್ಲಿ ಎಲೆಮರೆಯ ಕಾಯಿಯಂತೆ ಕೆಲಸ ಮಾಡುತ್ತಿರುವ ದುರ್ಗದನಾಗೇನಹಳ್ಳಿಯ ಮಹೇಶ ಎಂಬ ಯುವಕನಿಂದ ತೊಡಗಿ ಮಾನ್ಯ ಶ್ರೀ ಸಿದ್ದರಾಮಯ್ಯನವರ ಸರಕಾರದಲ್ಲಿ ದಕ್ಷ ಮಂತ್ರಿಯಾಗಿ ಕೆಲಸ ಮಾಡಿದ್ದ ಟಿ ಬಿ ಜಯಚಂದ್ರ ಅವರ ಜಲಸಾಹಸಗಳವರೆಗೆ ಈ ಪುಸ್ತಕ ಬೆಳಕು ಚೆಲ್ಲುತ್ತದೆ.

ಬರಗಾಲವನ್ನು ಮೆಟ್ಟಿ ನಿಲ್ಲುವುದು ಹೇಗೆ ಎಂದು ತೋರಿಸಿದ ರೈತರ ಸಾಹಸದ ಕಥನಗಳು, ತಲಪರಿಗೆಗಳ ಮಹತ್ವ ಮತ್ತು ಅವುಗಳನ್ನು ಕಾಪಿಟ್ಟುಕೊಂಡಿರುವ ಜಲಯೋಧರ ದಿಟ್ಟತನದ ಕಥನಗಳು ಈ ಪುಸ್ತಕದ ಶಕ್ತಿಯನ್ನು ಹೆಚ್ಚಿಸಿವೆ. ಅತಿಕಡಿಮೆ ನೀರಿನಲ್ಲಿ ತನ್ನ ತೋಟಗಳನ್ನು ಉಳಿಸಿಕೊಳ್ಳುವುದು ಹೇಗೆ ಎಂಬುದರ ಕುರಿತು ಯೋಚನೆ ಮಾಡಿ ಯಶಸ್ಸುಗಳಿಸಿದ ಕಾಮಣ್ಣನಂಥವರನ್ನು ಇಂದ್ರಕುಮಾರ್ ಅವರು ಕೃಷಿ ವಿಜ್ಞಾನಿ ಎಂದು ಕರೆದಿರುವುದು ಅತ್ಯಂತ ಅರ್ಥಪೂರ್ಣವಾಗಿದೆ. ಇಂತಹ ಹತ್ತು-ಹಲವು ಸಜೀವ ನಿದರ್ಶನಗಳನ್ನು ಇಂದ್ರಕುಮಾರ್ ಅವರು ಕೊಡುತ್ತ ಪೇಟೆ-ಪಟ್ಟಣಗಳ ಕಿಷ್ಕಿಂಧೆಯಂತಹ ಉಸಿರುಗಟ್ಟಿಸುವ ವಾತಾವರಣದಲ್ಲಿ ತಮ್ಮ ಬದುಕನ್ನು ಸವೆಸುತ್ತ,  ಬಂದಿರುವ ಹಳ್ಳಿಯ ಯುವಕರನ್ನು ಕೃಷಿಯ ಸಮೃದ್ಧ ಬದುಕಿನ ಕಡೆಗೆ ಕೈಬೀಸಿ ಕರೆಯುವ ಪ್ರಯತ್ನವನ್ನು ಈ ಪುಸ್ತಕದಲ್ಲಿ ಮಾಡಿರುವುದು ಸ್ತುತ್ಯಾರ್ಹ ಕೆಲಸವಾಗಿದೆ.

ಇಂದ್ರಕುಮಾರ್ ಅವರ ಈ ಪುಸ್ತಕದಲ್ಲಿನ ಒಂದು ಸ್ಥಾಯಿ ಗುಣವೆಂದರೆ ಪರಿಸರ ಕುರಿತ ಆಳವಾದ ಕಾಳಜಿಯನ್ನು ಧರಿಸಿರುವುದು ಈ ಕಾಳಜಿ ಇಲ್ಲಿನ
ಪ್ರತಿಯೊಂದು ಲೇಖನಗಳಲ್ಲೂ ಸತತವಾಗಿ ಹರಿಯುತ್ತಿದೆ. ಆಧುನಿಕ ಕಾಲದಲ್ಲಿ ಒಂಚೂರು ಬೆವರು ಸುರಿಸದ ಜನರು ಸುಲಭ ಜೀವಿಗಳಾಗಿ ರೂಪಾಂತರ ಗೊಂಡಿದ್ದಾರೆ. ಇಡೀ ಜಗತ್ತಿಗೆ ಕೊಳ್ಳುಬಾಕತೆಯ  ರೋಗ ತಗುಲಿದ ಕಾರಣದಿಂದ, ಭೂಮಿ ತನ್ನ ಮರು ಉತ್ಪಾದನಾ ಶಕ್ತಿಯನ್ನು ಕಳೆದುಕೊಂಡಿದೆ. ಇಂತಹ ಬಂಜೆತನವನ್ನು ನಿವಾರಿಸುವುದು ಹೇಗೆ ಎಂಬುದರ ಬಗೆಗೂ ಇಂದ್ರಕುಮಾರ್ ಚಿಂತನೆ ನಡೆಸಿದ್ದಾರೆ.
ಒಟ್ಟಾರೆ ಹೇಳುವುದಾದರೆ ಈ ಜಲದೀವಿಗೆ ಪುಸ್ತಕ ಪರಿಸರದ ಬಗ್ಗೆ ಕಾಳಜಿ ಇರುವ ಸಮಾಜಮುಖಿ ಚಿಂತನೆಯ ಪುಸ್ತಕ ಎಲ್ಲರೂ ಓದಲೇಬೇಕಾದ ಪುಸ್ತಕ ಎಂದು ಹೇಳಬಹುದು.

ಪುಸ್ತಕದ ಹೆಸರು: ಜಲದೀವಿಗೆ
ಪ್ರಕಾಶನ: ಗೋಮಿನಿ ಪ್ರಕಾಶನ ತುಮಕೂರು
ಬೆಲೆ: 110

ಸಿಹಿಜೀವಿ
ಸಿ ಜಿ ವೆಂಕಟೇಶ್ವರ
ತುಮಕೂರು

04 ಆಗಸ್ಟ್ 2022

ಮಾಗದೇಯ ಪುಸ್ತಕ ವಿಮರ್ಶೆ....

 


ವಿಮರ್ಶೆ ೪೩

ಮಾಗದೇಯ 


ಸದ್ಯೋಜಾತ ಭಟ್ಟರು ಬರೆದ ಐತಿಹಾಸಿಕ ಸತ್ಯಗಳ ವಿಶ್ಲೇಷಣೆಯ ಪುಸ್ತಕ ಮಾಗದೇಯ. ಸದ್ಯೊಜಾತ ಭಟ್ಟರ ಮಿಹಿರ ಕುಲಿ ಓದಿದ ನಾನು ಕುತೂಹಲದೊಂದಿಗೆ ಓದಲು ಆರಂಭಿಸಿದೆ. ಮುನ್ನೂರಾ ಎಂಟು ಪುಟಗಳ ಈ ಪುಸ್ತಕ ಓದಿ ಮುಗಿಸಲು ಒಂದು ವಾರ ಬೇಕಾಯಿತು. ಪುಸ್ತಕ ಓದಿ ಮುಗಿಸಿದ ಮೇಲೆ ಇತಿಹಾಸದ ಶಿಕ್ಷಕನಾದ ನನಗೆ ಇತಿಹಾಸದ ಕೆಲ ಹೊಸ ಅಂಶಗಳು ತಿಳಿದವು . 


ಹಿಂದಿನ ಅವರ ಪುಸ್ತಕಗಳಂತೆ ಈ ಪುಸ್ತಕದಲ್ಲಿಯೂ ಸಹ ಅವರು ತಮ್ಮ ಶಿಷ್ಯೆಯಾದ ಮಹತಿಯೊಂದಿಗೆ ಸಂವಾದ ಮಾಡುತ್ತಾ ವಿಷಯ ನಿರೂಪಣೆ ಮಾಡುವ ತಂತ್ರ ಮಾಗದೇಯ ದಲ್ಲೂ ಮುಂದುವರೆದಿದೆ.ಘಟನೆಗಳನ್ನು ಐತಿಹಾಸಿಕ, ಪೌರಾಣಿಕ ಮತ್ತು ಮಹಾಗ್ರಂಥಗಳ ಆಧಾರದ ಮೇಲೆ ವಿಶ್ಲೇಷಣೆಯ ಮೂಲಕ ವಿವರಿಸುವ ರೀತಿ ನಿಜಕ್ಕೂ ನನಗೆ ಬಹಳ ಇಷ್ಟವಾಯಿತು.


'ದೇವಾನುಪ್ರಿಯ'ನೆನ್ನಿಸಿಕೊಂಡ ಇತಿಹಾಸಪುರುಷ  ಎಂಬ ಮೊದಲ ಅದ್ಯಾಯದಲ್ಲಿ ಬಿಂಬಿಸಾರ ಮತ್ತು ಸಮುದ್ರ ಗುಪ್ತರ ಬಗ್ಗೆ ನಾವು ಕೇಳಿರದ ವಿವಿಧ ವಿಷಯಗಳ ಬಗ್ಗೆ ಬೆಳಕು ಚೆಲ್ಲಿದೆ.

ಮಿಥಿಲೆಯ ಹಾದಿಯಲ್ಲಿ ರಾಮ ಎಂಬ ಅಧ್ಯಾಯದಲ್ಲಿ ಜನಕ, ಸೀತೆ, ರಾಮ, ಮುಂತಾದ ಪೌರಾಣಿಕ ಪಾತ್ರಗಳ ಬಗ್ಗೆ ಆಧ್ಯಾತ್ಮಿಕ ಹಿನ್ನೆಲೆಯಲ್ಲಿ ನಮ್ಮನ್ನು ಚಿಂತನೆಗೆ ಹಚ್ಚುತ್ತವೆ.

ಜಾತಕಉಲ್ಲೇಖಗಳು,ಪುರಾಣೋಲ್ಲಿಖಿತ,ವೈಶಾಲಿಯ ರಾಜ ವಂಶ , ಮಗಧದ ಭೌಗೋಳಿಕ ಅವಲೋಕನ, ಇತಿಹಾಸದತ್ತ ,ಆರ್ಯರು ಮತ್ತು ವ್ರಾತ್ಯರು,ಸೂತಪುರಾಣಿಕರು,ಇನ್ನಷ್ಟು ವಂಶಾವಳಿ,ಪಿತೃಲೋಕದ ಹೆಬ್ಬಾಗಿಲು ಗಯಾ ಮುಂತಾದ ಅದ್ಯಾಯಗಳು ಒಂದಕ್ಕಿಂತ ಒಂದು ಹೊಸ ಚಿಂತನೆಗೆ ಹಚ್ಚಿ ಇತಿಹಾಸದ ಮೇಲೆ ಬೆಳಕು ಚೆಲ್ಲುತ್ತವೆ. 


ಸೇತೂರಾಮ್ ರವರು ಪುಸ್ತಕದ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ಹೀಗೆ ದಾಖಲಿಸಿದ್ದಾರೆ .ಸದ್ಯೋಜಾತ ಭಟ್ಟರು  ಮಾಗಧೇಯದಲ್ಲಿ ಅಲೆಕ್ಸಾಂಡರ್ನ ಪೂರ್ವದ ಕಾಲಮಾನದ ಇತಿಹಾಸ ಬಿಚ್ಚಿಟ್ಟಿದ್ದಾರೆ. ಚಾಣಕ್ಯ ಚಂದ್ರಗುಪ್ತರ ಕಾಲ ಕ್ರಿಸ್ತಪೂರ್ವ' ೧೫೩೪. ಅಲೆಕ್ಸಾಂಡರನ ಕಾಲ ಕ್ರಿಸ್ತಪೂರ್ವ ೩೨೭. ಗ್ರೀಕ್ ಲೇಖಕರು ಅವರ ಕಾಲದಲ್ಲಿದ್ದ ಚಂದ್ರಮಸು ಅನ್ನುವವನನ್ನು ಉಲ್ಲೇಖಿಸಿದ್ದಾರಂತೆ. ಇವನನ್ನೇ ಇತಿಹಾಸಕಾರರು ಚಂದ್ರಗುಪ್ತ ಎಂದು ಬಣ್ಣಿಸಿದ್ದಾರಂತೆ ಇಷ್ಟು ಮಾಹಿತಿಗಳನ್ನು ಶ್ರೀಯುತರು ಆಧಾರ ಪ್ರಮಾಣ ಸಮೇತ ಉಲ್ಲೇಖಿಸುತ್ತಾರೆ. ಹೀಗಿದ್ದೂ ಇತಿಹಾಸಕಾರರು ಕ್ರಿಸ್ತ ಪೂರ್ವ ೧೫೩೪ರ ಚಂದ್ರಗುಪ್ತ ಚಾಣಕ್ಯರನ್ನು ಅಲೆಕ್ಸಾಂಡರನ ಕಾಲಕ್ಕೆ ತಂದು ಸುಮಾರು ೧೨೦೦ ವರ್ಷಗಳ ಈ ದೇಶದ ಇತಿಹಾಸವನ್ನೇ ಮುಚ್ಚಿಟ್ಟಿದ್ದಾರೆ. ಈ ದೇಶದ ಅರಿವಿಗೆ ಮಾಗಧೇಯ ಮುಖ್ಯವಾಗತ್ತೆ.

ಇತಿಹಾಸ ಮರೆತ ಸಮುದಾಯಕ್ಕೆ ಭವಿಷ್ಯ ಇರಲ್ಲ ಹಾಗಾಗಿ ಇತಿಹಾಸ ಮುಖ್ಯ ಸಾಧನೆ ಸಂಶೋಧನೆಗಳೆಲ್ಲ. ವ್ಯಕ್ತಿ ಮೂಲಕವೇ ಹೊರತು ಸಂಸ್ಥೆ ಮೂಲಕವಲ್ಲ, ಈ ನಿಟ್ಟಿನಲ್ಲಿ ಶ್ರೀಯುತರ ಪ್ರಯತ್ನ ಸ್ತುತ್ಯಾರ್ಹ ಮಾತ್ರವಲ್ಲ ಶ್ಲಾಘನೀಯವೂ ಕೂಡಾ. ಪ್ರಸ್ತುತದಲ್ಲಿ ಅದು ಮುಖ್ಯವೂ ಹೌದು.

ಮಗಧರ ಕಾಲಜ್ಞಾನದಿಂದ ಆಧುನಿಕ ಕಾಲಮಾಪನದವರೆಗಿನ ವರಾಹಮಿಹಿರರ ಕಾಲಜ್ಞಾನ, ಆರ್ಯಭಟರ ಸಿದ್ಧಾಂತ, ಕೊನೆ ಇಲ್ಲದ ಬಾನಿನಲ್ಲಿ ಭಾನುವಿನ ಹೆಜ್ಜೆಗಳನ್ನು ಕಾಲಮಾಪನದಲ್ಲಿ ಉಪಯೋಗಿಸುವ ತಂತ್ರ, ನಿರಂತರವಾಗಿರುವ ಕಾಲದ ಪ್ರವಾಹವನ್ನು ಕೊನೆಯಿಲ್ಲದ ವರ್ತುಲಗಳಲ್ಲಿ ವಿಂಗಡಿಸುವ ನೈಪುಣ್ಯ ಅವುಗಳಿಗೆ ಹೊಸಭಾಷ್ಯಗಳನ್ನು ಒದಗಿಸುವ ಸಾಧ್ಯತೆಗಳು, ಇವೆಲ್ಲ ನಮ್ಮನ್ನು ಬಡಿದೆಬ್ಬಿಸಿದುದರಿಂದ ಆ ಹೆಸರು ಯಾಕೋ ಬಹಳ ವಿಚಿತ್ರವೆನಿಸಿತು. ಗ್ರಂಥವನ್ನು ಪೂರ್ಣವಾಗಿ ಓದಿದ ಮೇಲೆ ಎಲ್ಲವೂ ತಿಳಿಯದಿದ್ದರೂ ಕಾಲಕ್ಕೆ ಇನ್ನೊಂದು ಆಧ್ಯಾತ್ಮಿಕ ಆಯಾಮವು ಇರುವ ಸಾಧ್ಯತೆ ತಿಳಿದು ಸಂತೋಷವಾಯಿತು. ಸದ್ಯೋಜಾತರ ಗ್ರಂಥ 'ಮಾಗಧೇಯ' ಏನೋ ಹೊಸತನ್ನು ಹೇಳಲಿದೆ ಎನ್ನುವ ನಿರೀಕ್ಷೆ ಹುಸಿಯಾಗಲಿಲ್ಲ ಎಂಬ ಕೆ ಪಿ ರಾವ್ ರವರ ಮಾತುಗಳನ್ನು ಯಾರೂ ಅಲ್ಲಗಳೆಯಲಾರರು.


ಸದ್ಯೋಜಾತ ಭಟ್ಟರು ಬಹುಮುಖ ಪ್ರತಿಭೆಯನ್ನು ಉಳ್ಳವರು, ಸಂಸ್ಕೃತ ಭಾಷೆಯ ಮೇಲೆ ಅತ್ಯುತ್ತಮ ಹಿಡಿತವನ್ನು ಹೊಂದಿರುವವರು. ಶಾಸನಗಳನ್ನು ಓದಲು ತಿಳಿದವರು. ಹಾಗಾಗಿ ಇವರು ತಮ್ಮ ಮಾಗಧೇಯ ಕೃತಿಯಲ್ಲಿ ಕೇವಲ ಪುರಾಣಗಳಲ್ಲಿರುವ ಮಾಹಿತಿಯನ್ನಷ್ಟೇ ನೀಡುತ್ತಾ ಹೋಗುವುದಿಲ್ಲ. ಬದಲಿಗೆ ಮರಾಣಗಳಲ್ಲಿರುವ ಮಾಹಿತಿಯ ಬಗ್ಗೆ ಪಾಶ್ಚಾತ್ಯ ವಿದ್ವಾಂಸರು ಏನು ಹೇಳುತ್ತಾರೆ ಎನ್ನುವುದನ್ನು ದಾಖಲಿಸುವುದರ ಜೊತೆಯಲ್ಲಿ, ಅನೇಕ ಕಡೆ ಖಗೋಳೀಯ ಪುರಾವೆಗಳನ್ನೂ ಒದಗಿಸುತ್ತಾರೆ. ಇದು ಅವರ ಆಧ್ಯಯನದ ಆಳ ಹಾಗೂ ವಿಸ್ತ್ರತ ಹರವನ್ನು ಸೂಚಿಸುತ್ತದೆ. ಹಾಗಾಗಿ ಭಾರತವನ್ನಾಳಿದ ರಾಜವಂಶಗಳ ಹಿನ್ನೆಲೆಯನ್ನು ಓದಿ, ಅರ್ಥ ಮಾಡಿಕೊಂಡು, ಆ ಬಗ್ಗೆ ವಿವೇಚನೆಯನ್ನು ಮಾಡಲು ಮಾಗಧೇಯ ಒಳ್ಳೆಯ ಪ್ರವೇಶವನ್ನು ಕೊಡುತ್ತದೆ. ಈ ಹಿನ್ನೆಲೆಯಲ್ಲಿ ಮಾಗಧೇಯವನ್ನು ನಾವೆಲ್ಲರೂ ಸ್ವಾಗತಿಸಬೇಕು.


ಸದ್ಯೋಜಾತ ಭಟ್ಟರು ಈ  ಪುಸ್ತಕದಲ್ಲಿ ಪ್ರಧಾನವಾಗಿ ಮಗಧದ ಇತಿಹಾಸವನ್ನು ದಾಖಲಿಸಿದ್ದಾರೆ. ಆದರೆ ಭಾರತದಲ್ಲಿ ಕನಿಷ್ಠ 120 ಪ್ರಧಾನ ರಾಜವಂಶಗಳು ಆಳಿವೆ. ಈ ವಂಶಗಳಲ್ಲಿ ಅದೆಷ್ಟು ರಾಜ ಮಹಾರಾಜರು ಹುಟ್ಟಿ, ಈ ಭೂಮಿಯಲ್ಲಿ ರಾಜ್ಯಭಾರವನ್ನು ಮಾಡಿದರೋ, ಆ ಎಲ್ಲ ನಿಖರ ಮಾಹಿತಿಯು ನಮಗೆ ದೊರೆಯದಾಗಿದೆ. ಸದ್ಯೋಜಾತ ಭಟ್ಟರು ಈ ಎಲ್ಲ ರಾಜವಂಶಗಳ ಇತಿಹಾಸವ ಕಾಲಬದ್ಧವಾಗಿ ಬರೆದರೆ, ಅದು ನಮ್ಮದೇಶದ ಅತ್ಯಮೂಲ್ಯ ರತ್ನವಾದೀತು ಹಾಗಾಗಿ ಸದ್ಯೋಜಾತ ಭಟ್ಟರು ಇನ್ನು ಮುಂದೆ ಒಂದು ಮಹತ್ವಾಕಾಂಕ್ಷೆಯನ್ನ ಇಟ್ಟುಕೊಂಡು ಬರೆಯುವುದು ಒಳ್ಳೆಯದು. ಸದ್ಯೋಜಾತ ಭಟ್ಟರು, ನಮ್ಮ ಕಣ್ಣಿಗೆ ಬೀಳದೆ ಮರೆಯಾಗಿರುವ ಭಾರತೀಯ ಸಂಸ್ಕೃತಿಯ ವಿವಿಧ ಆಯಾಮಗಳು ಮತ್ತಷ್ಟು ಬರೆಯಲಿ ಎಂದು ಆಶಿಸುತ್ತೇನೆ. ಭಾರತದ ಇತಿಹಾಸದ ಬಗ್ಗೆ ಆಸಕ್ತಿ ಇರುವವರು, ಇತಿಹಾಸ ಬೋಧಿಸುವವರು, ಮತ್ತು ವಿದ್ಯಾರ್ಥಿಗಳು ಈ ಪುಸ್ತಕವನ್ನು ಓದಲೇಬೇಕು ಎಂದು ನಾನು ಪ್ರೀತಿಪೂರ್ವಕವಾಗಿ ಆಗ್ರಹಿಸುತ್ತೇನೆ.



ಪುಸ್ತಕದ ಹೆಸರು: ಮಾಗದೇಯ

ಲೇಖಕರು: ಸದ್ಯೋಜಾತ

ಪ್ರಕಾಶನ: ಸಮನ್ವಿತ .ಬೆಂಗಳೂರು

ಬೆಲೆ:300₹


ಸಿಹಿಜೀವಿ

ಸಿ ಜಿ ವೆಂಕಟೇಶ್ವರ

ತುಮಕೂರು.


01 ಜುಲೈ 2022

ಮೂರು ತಲೆಮಾರು.


 

ಮೂರು ತಲೆಮಾರು.
ವಿಮರ್ಶೆ

ತ ಸು ಶಾಮರಾಯರ ಜನ್ಮ ಶತಮಾನೋತ್ಸವದ ನೆನಪಿನಲ್ಲಿ ಮಾಡಿದ ಪ್ರಕಟಣೆಯಾದ
"ಮೂರು ತಲೆಮಾರು" ಕನ್ನಡದ ಮೊದಲ ಪ್ರಾಧ್ಯಾಪಕ ಶ್ರೀ ಟಿ.ಎಸ್.ವೆಂಕಣ್ಣಯ್ಯ ಅವರನ್ನು ಕುರಿತಾಗಿ ಅವರ ಸಹೋದರ ಶ್ರೀ ತ.ಸು.ಶ್ಯಾಮರಾಯರು ಬರೆದ ಜೀವನ ಚರಿತ್ರೆ .ಇದು ತ.ಸು.ಶಾಮರಾಯರ ಆತ್ಮ ಚರಿತ್ರೆ ಎಂದರೂ ತಪ್ಪಿಲ್ಲ.
  ಈ "ಮೂರು ತಲೆಮಾರು"ವಿನಲ್ಲಿ ಶ್ರೀ ಶಾಮರಾಯರು ಶ್ರೀ ತ.ಸು.ವೆಂಕಣ್ಣಯ್ಯನವರ ಬಗೆಗೆ ಸ್ವತಃ ಕಂಡ, ತಾಯಿ ಮತ್ತು ಇತರ ಸೋದರರಿಂದ ಕೇಳಿದ ಮತ್ತು ಅನುಭವಿಸಿದ ವಿವರಗಳನ್ನು ಮೂರು ವಿಭಾಗಗಳಲ್ಲಿ ಬರೆದಿದ್ದಾರೆ. ಈ ಕೃತಿಗೆ ಮುನ್ನುಡಿಯನ್ನು ರಾಷ್ಟ್ರಕವಿ ಶ್ರೀ ಜಿ.ಎಸ್.ಶಿವರುದ್ರಪ್ಪ ರವರು ಬರೆದಿರುವುದು ವಿಶೇಷ. 
ಜಿ ಎಸ್ ಎಸ್ ರವರ ಮಾತಿನಲ್ಲೇ ಹೇಳುವುದಾದರೆ ಈ ಕೃತಿ, ಪುರಾಣ, ಚರಿತ್ರೆ ಹಾಗೂ ವಾಸ್ತವಗಳನ್ನು ಒಂದು ಸೃಜನಶೀಲ ಕೇಂದ್ರಬಿಂದುವಿಗೆ ತಂದುಕೊಂಡು ಸಾಕ್ಷಿಪ್ರಜ್ಞೆಯಲ್ಲಿ ನಿರೂಪಿಸಿದ ಅನನ್ಯ ಕಥನವಾಗಿದೆ. ನಿಜವಾಗಿ ನೋಡಿದರೆ ಪುರಾಣ ಚರಿತ್ರೆ ಮತ್ತು ವಾಸ್ತವ ಎಂದು ನಾವು ಗುರುತಿಸುವ ಈ ಮೂರು ನೆಲೆಗಳಿಗೆ ಅಂತಹ ವ್ಯತ್ಯಾಸವೇನೂ ಇಲ್ಲ. ಈ ಮೂರೂ ಅಸ್ತಿತ್ವದ ನಿರಂತರತೆ ಯಲ್ಲಿ ಉದ್ಭದ್ಧವಾಗುವ ಘಟನಾವಳಿಗಳನ್ನು ಕುರಿತು ಕಾಲ - ದೇಶ ಬದ್ಧವಾದ ಮನಸ್ಸು ತನ್ನ ಸಂಸ್ಕಾರಕ್ಕೆ ಅನುಸಾರವಾಗಿ ಅದನ್ನು ಗ್ರಹಿಸುವ ಹಾಗೂ ವ್ಯಾಖ್ಯಾನಿಸುವ ಕ್ರಮಕ್ಕೆ ನಾವು ಕೊಟ್ಟುಕೊಳ್ಳುವ ಹೆಸರುಗಳಷ್ಟೇ.
ಲೇಖಕರ ಬಿನ್ನಹದಲ್ಲಿ ಶಾಮರಾಯರು ಕಳೆದ ಕೆಲವು ಶತಮಾನಗಳಿಂದ ವ್ಯತ್ಯಾಸಗೊಳ್ಳುತ್ತಾ ಹೋಗಿರುವ ಧಾರ್ಮಿಕ, ರಾಜಕೀಯ, ಸಾಮಾಜಿಕ ಮತ್ತು ಆರ್ಥಿಕ ಜೀವನ ಮೌಲ್ಯಗಳ ಒಂದು ಕಿರುನೋಟವನ್ನು ಇಲ್ಲಿ ಕಾಣಬಹುದು. ಈ ದೃಷ್ಟಿಯಿಂದ ಇದು ಸರ್ವಜನಾದರಣೀಯವಾಗುವುದೆಂದು ಆಶಯ ವ್ಯಕ್ತಪಡಿಸಿದ್ದರು .ಪುಸ್ತಕ ಓದಿದ ಮೇಲೆ ನಿಜಕ್ಕೂ ಓದುಗರಿಗೆ ಮೂರು ತಲೆಮಾರಿನ ವೈವಿಧ್ಯಮಯ ಅನುಭವಗಳನ್ನು ಓದಿದ ಸಂತಸ ಖಂಡಿತವಾಗಿಯೂ ದೊರೆಯುತ್ತವೆ.
ಈ ಮೊದಲೇ ಹೇಳಿದಂತೆ ಈ ಪುಸ್ತಕದ ಮೂರು ವಿಭಾಗಗಳಲ್ಲಿ
" ಕೇಳಿದ್ದು" ವಿಭಾಗದಲ್ಲಿ ಶ್ರೀ ವೆಂಕಣ್ಣಯ್ಯನವರ ಪೂರ್ವೀಕರ ವಿಚಾರಗಳಿಂದ ಹಿಡಿದು ಅವರ ಅಂತಿಮ ಯಾತ್ರೆ ವಿವರಗಳು ದಾಖಲಾಗಿವೆ.
   "ಕಂಡದ್ದು" ವಿಭಾಗದಲ್ಲಿ   ತಳುಕಿನಲ್ಲಿನ ವ್ಯಕ್ತಿಗಳು, ಸುಬ್ಬಣ್ಣ ನವರ  ಬಾಲ್ಯ, ವಿವಾಹ, ಅವರ ಸಂಪರ್ಕಕ್ಕೆ ಬಂದ ವ್ಯಕ್ತಿಗಳು ಸುಬ್ಬಣ್ಣ ನವರ ಅಂತಿಮ ದಿನಗಳ ಪ್ರಸ್ತಾಪಗಳಿವೆ.
ಕೊನೆಯ "ಅನುಭವಿಸಿದುದು" ಭಾಗದಲ್ಲಿ ಶ್ರೀ ವೆಂಕಣ್ಣಯ್ಯನವರ ಬಾಲ್ಯ, ಶಿಕ್ಷಣ, ವೃತ್ತಿ, ಸಂಸಾರ  ಅಂತ್ಯದ ಮಾಹಿತಿಗಳಿವೆ.
ಮೊದಲ ಭಾಗ "ಕೇಳಿದ್ದು". ಅದರಲ್ಲಿನ ಮುಖ್ಯ ಏಳು  ಅಧ್ಯಾಯಗಳಿವೆ .
ಬಂದನಾ ಹುಲಿರಾಯನು,ಧರ್ಮೋ ರಕ್ಷತಿ ರಕ್ಷಿತಃ,ಹಾಳೂರಿನ ಅನುಭವ
,ಸತ್ವಪರೀಕ್ಷೆ,ವೆಂಕಣ್ಣಯ್ಯನವರ ಪೂರ್ವಿಕರು , 'ದೇವರಲೀಲೆ' ವೆಂಕಪ್ಪನವರು ವೈಷ್ಣವರಾದುದು ಎಂಬ ಶೀರ್ಷಿಕೆ ಅಡಿಯಲ್ಲಿ ಬರುವ ಪ್ರತಿಯೊಂದು ಸಾಲು ನಮಗೆ ದಾರಿ ದೀಪ ಎಂದರೆ ತಪ್ಪಾಗಲಾರದು. ಬಂದನಾ ಹುಲಿರಾಯ ಎಂಬ ಭಾಗದಲ್ಲಿ ತಮ್ಮದಲ್ಲದ ತಪ್ಪಿಗೆ ಶಿಕ್ಷೆಯನ್ನು ಅನುಭವಿಸಿದ್ದು ಹಾಗೂ ಸರಳವಾದ ಮತ್ತು ಧಾರ್ಮಿಕ ಸತ್ ಚಿಂತನೆಗಳ ಫಲವಾಗಿ  ಮತ್ತೆ ಉನ್ನತವಾದ ಸ್ಥಾನ ಪಡೆಯುವ ಮಾರ್ಗ ಇಂದಿನ ಸಮಾಜಕ್ಕೆ ದಾರಿದೀವಿಗೆ ಎಂಬುದು ನನ್ನ ಅನಿಸಿಕೆ. 
ಹಿರಿಯೂರಿನಿಂದ ಚಳ್ಳಕೆರೆ ಮಾರ್ಗದಲ್ಲಿ ನಾನು ಪ್ರಯಾಣ ಮಾಡುವಾಗ ಗರಣಿ ಎಂಬ ಊರಿನ ಬಳಿ ಬಂದಾಗ ವೆಂಕಣ್ಣಯ್ಯನವರ ಹಾಳೂರಿನ ಪ್ರಸಂಗ ನೆನಪಾಗುತ್ತದೆ ಮತ್ತು ಆ ಕಾಲದಲ್ಲಿ ಅತೀಂದ್ರಿಯ ಶಕ್ತಿಗಳನ್ನು ಜನ ಹೇಗೆ ನಂಬಿದ್ದರು ಎಂಬುದನ್ನು ವಿವರಿಸುವಾಗ ನಂಬಲು ಕಷ್ಟವಾದರೂ ಓದುತ್ತಾ ರೋಚಕತೆಯ ಅಂಶಗಳು ಮನಸೆಳೆಯುತ್ತವೆ.
"ಕಂಡದ್ದು" ಭಾಗದಲ್ಲಿ ಇಪ್ಪತ್ತೊಂದು ಅಧ್ಯಾಯಗಳಿದ್ದು
ತಳುಕಿನಲ್ಲಿ ನೆಲೆಸಿದರು.
ವೆಂಕಣ್ಣಯ್ಯನವರು ತೀರಿಕೊಂಡ ಮೇಲೆ ಅವರ ಪತ್ನಿ ಹನುಮಕ್ಕ ಮೂವರು ಮಕ್ಕಳೊಡನೆ ತಳುಕು ಗ್ರಾಮಕ್ಕೆ ಬಂದು ನೆಲೆಸಿದ ಬಗ್ಗೆ, ಊರ ಪ್ರಮುಖರಿಗೆ ವೆಂಕಣ್ಣಯ್ಯನವರಲ್ಲಿ ಅಪಾರ ಅಭಿಮಾನ ಇದ್ದುದರಿಂದ ಅವರಿಗೆ ಎಲ್ಲ ರೀತಿಯ ನೆರವನ್ನು ಮಾಡಿಕೊಟ್ಟ ರೀತಿ, ಚಳ್ಳಕೆರೆ ತಾಲ್ಲೂಕು ಕಛೇರಿ ಗುಮಾಸ್ತ ಶ್ಯಾಮಣ್ಣ ವೆಂಕಣ್ಣಯ್ಯನವರ ಮಗ ಸುಬ್ಬಣ್ಣನಿಗೆ ಲೆಕ್ಕಪತ್ರ ಇಡುವ ಕಲೆ ಕಲಿಸಿಕೊಟ್ಟ ವಿಚಾರಗಳು ಪ್ರಸ್ತಾಪವಾಗಿವೆ.
ಸುಬ್ಬಣ್ಣನ ವಿವಾಹ ಪ್ರಸಂಗ ,
ನರಸಮ್ಮ ರವರ ಬಗ್ಗೆ ಪುತ್ರೋತ್ಸವದ ಬಗ್ಗೆ,ಸ್ಟ್ಯಾಂಪ್ವೆಂಡರ್ ಸುಬ್ಬಣ್ಣ,ಕಂಟ್ರಾಕ್ಟದಾರ ಭೀಮರಾಯ,ಅಶ್ವರತ್ನರಂಗ
, ಗುಗ್ಗರಿ ಕಂಚವ್ವ - ತೊರೆಯಪ್ಪ,ಸಣ್ಣ ಸುಬ್ಬಣ್ಣನ ಮದುವೆ,ಅಡಿಕೆಯ ಕಳವು ,ದಾಯಾದಿ ಮಾತ್ಸರ್ಯ, ಸೇಂದಿ ಕಂಟ್ರಾಕ್ಟರ್ ಹಾಗೂ ಅಚ್ಚಮ್ಮ ಎಂಬ ಅಧ್ಯಾಯಗಳು ಅಂದಿನ ಜನಜೀವನ ಮತ್ತು ಕುಟುಂಬ ವ್ಯವಸ್ಥೆಯ ಬಗ್ಗೆ ಬೆಳಕು ಚೆಲ್ಲುತ್ತವೆ.
ಕೊನೆಯ ಭಾಗ "ಅನುಭವಿಸಿದುದು" ನಲ್ಲಿ ಮೂರನೆಯ ತಲೆಮಾರಿನ ವೆಂಕಣ್ಣಯ್ಯನವರ   ಬಾಲ್ಯ ಮತ್ತು ವಿದ್ಯಾಭ್ಯಾಸ, ಕಾಲೇಜು ವಿದ್ಯಾಭ್ಯಾಸ ಧಾರವಾಡದಲ್ಲಿ ಅಧ್ಯಾಪನ ಕೈಗೊಂಡ ಬಗ್ಗೆ,ಬೆಂಗಳೂರಿನ ಜೀವನದ ಕೆಲ ಪ್ರಮುಖ ಘಟನೆಗಳ ಉಲ್ಲೇಖವಿದೆ.
ಮೈಸೂರುಜೀವನ,ವೆಂಕಣ್ಣಯ್ಯನವರ ವ್ಯಕ್ತಿತ್ವ,ಸಾಹಿತ್ಯ ಸೃಷ್ಟಿ
ಹಾಗೂ ಕೊನೆಯ ದಿನಗಳ ಬಗ್ಗೆ ತ ಶು ಶಾಮರಾಯ ರವರು ತಮ್ಮ ನೆನಪಿನ ಭಂಡಾರದಿಂದ ಉತ್ತಮ ಮಾಹಿತಿಯನ್ನು  ಪುಸ್ತಕ ರೂಪದಲ್ಲಿ ನೀಡಿರುವರು .ಮೂರು ತಲೆಮಾರುಗಳ ಮಹಾನ್ ಚೇತನಗಳ ಬಗ್ಗೆ ತಿಳಿಯಲು ಎಲ್ಲರೂ ಈ ಪುಸ್ತಕ ಓದಲೇಬೇಕು.

ಪುಸ್ತಕದ ಹೆಸರು: ಮೂರು ತಲೆಮಾರು
ಲೇಖಕರು: ತ.ಸು.ಶಾಮರಾಯ
ಪ್ರಕಾಶನ: ತಳುಕಿನ ವೆಂಕಣ್ಣಯ್ಯ ಸ್ಮಾರಕ ಗ್ರಂಥಮಾಲೆ, ಬೆಂಗಳೂರು
ಬೆಲೆ: 200ರೂ.

ಸಿಹಿಜೀವಿ
ಸಿ ಜಿ ವೆಂಕಟೇಶ್ವರ
ತುಮಕೂರು

28 ಜೂನ್ 2022

ತಿಂಮ ರಸಾಯನ .

 


ತಿಂಮ ರಸಾಯನ . ವಿಮರ್ಶೆ


ಬೀಚಿ ಯವರ ತಿಂಮ ರಸಾಯನ ಓದಿದಾಗ ಇದು ಒಮ್ಮೆ ಓದಿ ಎತ್ತಿಡುವ  ಪುಸ್ತಕ ಅಲ್ಲ ಎಂಬುದು ಮನವರಿಕೆ ಆಯಿತು. ಒಮ್ಮೆ ಓದಿದಾಗ ಒಂದು ರೀತಿಯ ಅರ್ಥ ಧ್ವನಿಸಿದರೆ ಮತ್ತೊಮ್ಮೆ ಮಗದೊಮ್ಮೆ ವಿವಿಧ ಅರ್ಥ ಹೊರಹೊಮ್ಮಿಸಿ ನಮ್ಮನ್ನು ಮುಗಳ್ನಗುವಂತೆ ಮಾಡುತ್ತದೆ.

ಪ್ರೊ. ಅ. ರಾ. ಮಿತ್ರ ರವರು ತಮ್ಮ ನುಡಿಗಳಲ್ಲಿ ಹೇಳಿರುವಂತೆ 

ತಿಂಮ ರಸಾಯನ ಒಂದು ಶಬ್ದಕ್ರೀಡೆ . ಶಬ್ದಕ್ಕೆ ಒಂದೇ ಅರ್ಥವಿರಬೇಕೆಂಬ ನಿಯಮವೇನೂ ಇಲ್ಲವಷ್ಟೆ, ನಿಘಂಟುಗಳೇ ಒಂದು ಶಬ್ದದ ನಾನಾ ಅರ್ಥದ ಕವಲುಗಳನ್ನು ಗುರುತಿಸುತ್ತವೆ. ಆದರೆ ವಿನೋದಶೀಲರಾದವರು ಆ ನಿಘಂಟುಗಳಿಗೂ ಸಿಲುಕದ ಬೇರೆಯೇ ಅರ್ಥದ ಚಕ್ಕೆಯನ್ನು ಕೆತ್ತುವುದರಲ್ಲ ಸಿದ್ಧಹಸ್ತರು. ಕನ್ನಡದಲ್ಲಿ ಕೈಲಾಸಂ, ರಾಶಿ, ರಾಜರತ್ನಂ, ಲಾಂಗೂಲಾಚಾರ್ಯ, ನಾ. ಕಸ್ತೂರಿ, ವೇಣುಗೋಪಾಲ ಸೊರಬ ಮೊದಲಾದವರು ಈ ಕ್ರೀಡೆಯಲ್ಲಿ ಕುಶಲರಾದರೆ, ಬೀchiಯವರು 'ಉಗ್ರಗಣ್ಯರು' ಎಂದು ಹೇಳಬಹುದು. ಉದಾಹರಣೆಗೆ ಮಹತ್ವಾಕಾಂಕ್ಷೆ ಎಂದರೆ ಆತ್ಮಕ್ಕೆ ಬರುವ ಉದರ ರೋಗ – ಎಷ್ಟು ಅರ್ಥಗರ್ಭಿತವಾಗಿದೆ ನೋಡಿ. ಪತ್ರ ವ್ಯವಹಾರ ಎಂದರೆ ಜಾಣತನದಿಂದ ಸಮಯವನ್ನು ಹಾಳು ಮಾಡುವ ಒಂದೇ ಯೋಗ್ಯ ಉಪಾಯವಾಗುತ್ತದೆ. ಜಾತಿ ಎಂದರೆ ದೇವರು ಕೊಡುವ ಬುದ್ಧಿಗೆ ದೆವ್ವ ಕೂಡುವ ಆಫೀಮಂತೆ! ಸೋಮವಾರದ ದಿನ ರಜೆ ಕೇಳುವವನು ಸೋಮಾರಿ"ಯಂತೆ! ಈ ಬಗೆಯ ದುರ್ವ್ಯಾಖ್ಯೆಗಳನ್ನು ಅರ್ಥಪೂರ್ಣವಾಗಿ ರಚಿಸಿದ ಆಂಬ್ರೋಸ್ ಬಿಯರ್ಸ್  ಬರೆದ ಡೆವಿಲ್ಸ್ ಡಿಕ್ಷನರಿ ಜಾಡಿನಲ್ಲಿ ಸಾಗುತ್ತದೆ. ತಿಂಮ ರಸಾಯನ ಮಿದುಳಿನ ಉನ್ನತ ಕ್ರೀಡೆಗೆ ಒಂದು ಶ್ರೇಷ್ಠ ಮಾದರಿಯಾಗಿದೆ.

ಈ ಪುಸ್ತಕದ ಬಗ್ಗೆ ಬೀಚಿ ಯವರ ಮಾತುಗಳಲ್ಲಿ ಹೇಳುವುದಾದರೆ

ಇದು ಒಂದು ನಿಘಂಟು, ಜಾತಿ ನಿಘಂಟಲ್ಲ-ನಿಘಂಟು ಮಾಡಬೇಕಾದ ಕೆಲಸ ಮಾಡುತ್ತಿಲ್ಲ ಅಷ್ಟೇ ಅಲ್ಲ. ಅದು ಮಾಡಲಾರದ ಮತ್ತು ಮಾಡಬಾರದ ಕೆಲಸವನ್ನೂ ಇದು ಮಾಡುತ್ತದೆ. ಕತೆ, ಕಾದಂಬರಿ, ನಾಟಕ ಅಥವಾ ಬೇರಿನ್ನಾದರೂ ಆಗಲು ಆಕಾರ ಮಾತ್ರವೇ ಅಲ್ಲ. ಆಚಾರವೂ ಅಡ್ಡಬರುತ್ತದೆ. ಒಂದೇ ವಿಷಯ ಅಥವಾ ಸನ್ನಿಹಿತ ವಿಷಯಗಳು ಇದರ ಸಾಮಗ್ರಿಯಲ್ಲ, ಆಡು ಮೇದಂತೆ ಕಾಡನ್ನೆಲ್ಲ ಬಾಯಾಡಿದೆ. ಕಣಿವೆಯ ಆಳದ ಒಳಗೂ ಇಳಿದಿದೆ. ಬೆಟ್ಟದ ತುಟ್ಟ ತುದಿಯನ್ನು ಮುಟ್ಟಿದೆ. ಆನೆಗೆ ಆಗದ ಕೆಲಸವನ್ನು ಆಡು ಆಡುತ್ತಾ ಮಾಡುತ್ತದೆ. ತಕ್ಷಣವೇ ಕೊಲ್ಲುವ ವಿಷದ ಎಲೆಯೊಂದಿಗೆ, ಮರುಕ್ಷಣವೇ ಬದುಕಿಸುವ ಸಂಜೀವಿನಿಯೂ ಈ 'ರಸಾಯನ'ದ ಹೊಟ್ಟೆಗೆ ಸೇರಿ ಸರ್ವಸಮರ್ಪಕವಾಗಿದೆ.

ಈ ರಸಾಯನದ ಅನುಪಾನಕ್ಕೂ ಒಂದು ಕ್ರಮವಿದೆ ಎಂಬುದನ್ನು ಇಲ್ಲಿ ಹೇಳದಿದ್ದರೆ ತಿಂಮನಿಗೆ ದ್ರೋಹ ಬಗೆದಂತಾಗುವ ಅಪಾಯವಿದೆ. 'ಆ'ದಿಂದ ಹಿಡಿದು 'ಕ್ಷ'ದವರೆವಿಗೂ ದುಡುದುಡು ಓಡುತ್ತ ಓದಿದರೆ ಗಂಟೆಯೊಳಗಾಗಿ ಮುಗಿದೇ ಹೋಗುತ್ತದೆ. ಹಾಗೆ ಪಠಿಸಲು ಇದೇನು ಅರ್ಥವಾಗಲಾರದ ಶ್ರಾದ್ಧಮಂತ್ರವೇ? ಹಲ್ಲಿಲ್ಲದವರು ಕಬ್ಬಿನ ತುಂಡನ್ನು ಹಾಗೂಮ್ಮೆ ಹೀಗೊಮ್ಮೆ ಬಾಯಲ್ಲಿ ಹೊರಳಿಸಿ ಉಗಿದರೆ ಕಬ್ಬಿನ ತಪ್ಪೇ ? ಹಲ್ಲಿನ ತಪ್ಪೇ? ಹಲ್ಲಿನ ಗಾಣಕ್ಕೆ ಹಾಕಿ ಆಗಿದಂತೆ ನಾಲಗೆಯ ಮೇಲೆ ರಸವು ಸುರಿಯುತ್ತದೆ, ಬಾಯಿ ತಾನೇ ಚಪ್ಪರಿಸುತ್ತದೆ. ತನಗೆ ತಿಳಿಯದೆ. ಇದಾದರೂ ಹಾಗೆಯೇ, ಆಗೊಮ್ಮೆ, ಈಗೊಮ್ಮೆ, ಹಾಗಿಷ್ಟು. ಹೀಗಿಷ್ಟು, ನಿದ್ರೆ ದೂರವಿದ್ದಾಗ ಊಟದ ನಂತರ, ಆಟದ ಮುಂಚೆ, ಗೆಳೆಯರ ಗುಂಪಿನಲ್ಲಿ ಮನೆಯವಳ ಮುಂದೆ ಅಥವಾ ಹಿಂದೆ ಓದಿ ಓದಿ ಗುಟುಕರಿಸಿಟ್ಟರೆ, ಮತ್ತಾವಾಗಲೋ ಇನ್ನೆಲ್ಲಿಯೋ ಯಾವುದೋ ತುಣುಕು ಸ್ಮರಣಿಗೆ ಬಂದು ನಗು ಮುಸಿಮುಸಿಯುತ್ತದೆ. ರಸಾಯನವು ಅನ್ನವಲ್ಲ, ಔಷಧಿಯೂ ಅಲ್ಲ, ಮನಸಿಗೊಂದು ಟಾನಿಕ್.ನಿಜ 

ಈ ಟಾನಿಕ್ ಅನ್ನು ನಾನು ಆಗಾಗ ಸವಿಯುವೆನು. ನೀವು ಸಹ ಆಗಾಗ್ಗೆ ತಿಂಮ ರಸಾಯನ ಸವಿಯಬೇಕೆಂದರೆ ನಿಮ್ಮ ಬಳಿ ರಸಾಯನ ಖಂಡಿತವಾಗಿಯೂ ಇರಲೇಬೇಕು.

ಮುಗಿಸುವ ಮುನ್ನ ತಿಂಮ ರಸಾಯನದ ರುಚಿಯ ಸ್ಯಾಂಪಲ್ ನೀಡುವೆ ಅವುಗಳನ್ನು ಓದಿದ ಮೇಲೆಯು ನೀವು ರಸಾಯನ ಓದಲಿಲ್ಲ ಎಂದರೆ ಅದು ನಿಮಗೆ ಬಿಟ್ಟಿದ್ದು.

ಚಂದ್ರ ಎಂದರೆ ಪಕ್ಕಾ ದೇಶಭಕ್ತ ,ಪರಧನದಂತಿರುವ ಸೂರ್ಯನ ಪ್ರಕಾಶವನ್ನು ಕೈಬಾಡಿಗೆ ತಂದು ತನ್ನ ಪ್ರತಿಷ್ಠೆ ಬೆಳೆಸಿಕೊಂಡವ.

ವಿಮೆ ಎಂದರೆ ಬಡವನಾಗಿ ಬಾಳಿ ಸತ್ತು ಧನಿಕನಾಗಲು ಏಕಮಾತ್ರ ಉಪಾಯ.

ವಿರಕ್ತ ಎಂದರೆ ರಕ್ತ ವಿಹೀನ,ನಂಬಿ ಬಂದ ತಿಗಣೆಗಳನ್ನು ಆಹಾರ ಕೊಡದೆ ಕೊಲ್ಲುವವನು.ವಿರಹ ಎಂದರೆ ಪ್ರೇಮಕ್ಕೆ ವಿರಹವು, ಬೆಂಕಿಗೆ ಗಾಳಿ ಇದ್ದಂತೆ-ಚಿಕ್ಕದನ್ನು ಕೊಲ್ಲುತ್ತದೆ. ದೊಡ್ಡದನ್ನು ಪ್ರಜ್ವಲಿಸುತ್ತದೆ.ವಿರಾಮ

ಎಂದರೆ ವಿರಾಮವಿದ್ದಾಗಲೇ ಕೆಲಸ ಮಾಡು - ಕೆಲಸವಿದ್ದಾಗ ಕೆಲಸ ಮಾಡಲು ವಿರಾಮವು ಅಡ್ಡ ಬರುತ್ತದೆ...

ಇನ್ನೂ ಇಂತಹ ನಿಘಂಟಿನ ಸ್ವಾದ ಸವಿಯಲು ತಿಂಮ ರಸಾಯನ ಸವಿಯಲೇಬೇಕು.


ಪುಸ್ತಕದ ಹೆಸರು: ತಿಂಮ ರಸಾಯನ

ಲೇಖಕರು: ಬೀಚಿ

ಪ್ರಕಾಶನ: ಬೀಚಿ ಪ್ರಕಾಶನ ಬೆಂಗಳೂರು

ಬೆಲೆ:120₹ 


ಸಿಹಿಜೀವಿ

ಸಿ ಜಿ ವೆಂಕಟೇಶ್ವರ

ತುಮಕೂರು


26 ಜೂನ್ 2022

ದುರ್ಗದ ಬೇಡರ್ದಂಗೆ.


 




 ದುರ್ಗದ  ಬೇಡರ್ದಂಗೆ  

ಚಾರಿತ್ರಿಕ ಕಾದಂಬರಿ


ಪ್ರಕಾಶಕರು ಮತ್ತು ಲೇಖಕರಾದ ಎಂ ವಿ ಶಂಕರಾನಂದ ಹಾಗೂ ಪತ್ರಕರ್ತರಾದ ಪ್ರೊಫೆಸರ್ ವಿ ಎಲ್ ಪ್ರಕಾಶ್ ರವರೊಂದಿಗೆ ಒಂದು ಭಾನುವಾರ ತುಮಕೂರಿನಿಂದ ಚಿತ್ರದುರ್ಗಕ್ಕೆ  ಚಿತ್ರಸಾಹಿತಿ ಮತ್ತು ಕಾದಂಬರಿಕಾರರಾದ ಬಿ ಎಲ್ ವೇಣುರವರನ್ನು ಭೇಟಿಯಾಗಲು ಹೊರಟೆವು . 

ಅವರ ಮನೆಯಲ್ಲಿ ಅವರ ಭೇಟಿಯ ನಂತರ ನಾನು ಬರೆದ ಎರಡು ಕೃತಿಗಳ ನೀಡಿ , ಅವರೊಂದಿಗೆ ಮಾತಿಗಿಳಿದಾಗ ವಿಷ್ಣುವರ್ಧನ್, ಅಂಬರೀಶ್ ರವರ ಒಡನಾಟ ,ಸಾಹಿತಿಯಾಗಿ ಅವರ ಅನುಭವ, ಐತಿಹಾಸಿಕ ಕಾದಂಬರಿಗಳ ರಚನೆಯ ಒಳಹೊರಗು ಹೀಗೆ ಮಾತನಾಡುತ್ತಾ ಸುಮಾರು ಮೂರು ಗಂಟೆಗಳು ಕಳೆದದ್ದೆ ಗೊತ್ತಾಗಲಿಲ್ಲ .

ಅಲ್ಲಿಂದ ಬರುವಾಗ ಇತ್ತೀಚೆಗೆ ಅವರು ಬರೆದ " ದುರ್ಗದ ಬೇಡರ್ದಂಗೆ "ಹಾಗೂ "ಸುರಪುರ ವೆಂಕಟಪ್ಪನಾಯಕ " ಪುಸ್ತಕಗಳನ್ನು ತಂದೆವು.

ಮೊದಲಿಗೆ ದುರ್ಗದ ಬೇಡರ್ದಂಗೆ ಪುಸ್ತಕ ಓದಲು ಶುರುಮಾಡಿದೆ. ಪುಸ್ತಕ ಓದಿ ಮುಗಿಸಿದಾಗ ಇತಿಹಾಸದ ವಿದ್ಯಾರ್ಥಿಯಾದ ನನಗೆ ಒಂದು ಐತಿಹಾಸಿಕ ಕಾದಂಬರಿ ಓದಿ ಹೊಸ ವಿಚಾರ ತಿಳಿದ ಸಂತಸವುಂಟಾಯಿತು.ಅದರಲ್ಲೂ ದುರ್ಗದವನಾಗಿ,ಕನ್ನಡಿಗನಾಗಿ, ಭಾರತೀಯನಾಗಿ ಬ್ರಿಟಿಷರ ಸಂಕೋಲೆಯಿಂದ ಬಿಡಿಸಲು ಏಳು ಬೇಡರ ಯುವಕರು ಸಿಡಿದೆದ್ದ ಪರಿ ರೋಮಾಂಚಕಾರಿ ಅದೇ ನಿಜವಾದ ಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮ .


1857ರದ್ದು ಮೊದಲ ಸ್ವಾತಂತ್ರ್ಯ ಸಂಗ್ರಾಮ ಎಂಬುದು ಇತಿಹಾಸದಲ್ಲಿ ದಾಖಲಾಗಿರುವಂಥದ್ದು. ಆದರೆ ಇದಕ್ಕೂ ಎಂಟು ವರ್ಷ ಮೊದಲೇ (1849) ಚಿತ್ರದುರ್ಗದಲ್ಲಿ ಏಳು ಬೇಡ ಹುಡುಗರು ಬ್ರಿಟಿಷರ ವಿರುದ್ಧ ಮಾಡಿದ ದಂಗೆಯೇ ಮೊದಲ ಸಂಗ್ರಾಮವಾಗಿತ್ತೆಂಬುದು ವೇಣುರವರ  ಕೃತಿಯ ಒಟ್ಟು ಸಾರ. ಇದನ್ನು ಪ್ರತಿಪಾದಿಸಿ ಋಜುವಾತು ಮಾಡುವಲ್ಲಿ ಹಲವು ದಾಖಲೆಗಳನ್ನು ಅವರು ಅವಲಂಬಿಸಿದ್ದಾರೆ; ಇವುಗಳ ಆಧಾರದ ಮೇಲೆ ದಂಗೆಯ ಕಥಾನಕವನ್ನು ಕಟ್ಟಿಕೊಟ್ಟಿದ್ದಾರೆ. ವೇಣು ಸರ್ ರವರ  ಕಥನ ಶೈಲಿ ಹಾಗೂ ದಂಗೆಯ ಕಾಲಘಟ್ಟವನ್ನು ಕಟ್ಟಿಕೊಟ್ಟ ರೀತಿ ನಿಜವಾಗಿಯೂ ಅದ್ಭುತ!

 ಕಥೆಯ ವಿಸ್ತರಣೆ ಮತ್ತು ದಂಗೆಯ ವಿವರಗಳನ್ನು ಕಟ್ಟಿಕೊಡುವಲ್ಲಿ ವೇಣುರವರ  ಕಲ್ಪನೆ. ಮುಪ್ಪುರಿಗೊಳ್ಳುವ ಬಗೆ ನಿಜಕ್ಕೂ ವಿಶಿಷ್ಟ. ಏಳು ಜನ ಬೇಡರ ಹುಡುಗರು ಬ್ರಿಟಿಷರ ವಿರುದ್ಧ ದಂಗೆ ಎದ್ದರು. ಕೊನೆಯಲ್ಲಿ ಬ್ರಿಟಿಷರ ಗುಂಡುಗಳಿಗೆ ಬಲಿಯಾದರು. ಇದು ಒಟ್ಟಾರೆ ಕಥೆ. ಈ ಕಥೆ ನಡೆದು ಬರುವ ದಾರಿ, ಪಾತ್ರಗಳ ಒಲವು ನಿಲುವು: ವೈಯಕ್ತಿಕ ಸಂಕಷ್ಟಗಳನ್ನು ಸಹಿಸುತ್ತಲೇ ವ್ಯಕ್ತಿಗತ ನೆಲೆಯಾಚೆಯ ಸಾಮಾಜಿಕ ಬದುಕಿನ ನೆಮ್ಮದಿಯೇ ಬದುಕಿನ ಸಿರಿ ಎಂಬ ಖಚಿತತೆ ಬಂದೊರಗಿರುವ ಸಮಸ್ಯೆ ಸಂಸಾರದಲ್ಲ, ಸಮಾಜದ್ದು, ಸಮಾಜಕ್ಕಾಗಿ ಬಲಿಯಾಗಲೂ ಸಿದ್ಧರಿರಬೇಕು ಎಂಬ ಸ್ಪಷ್ಟತೆ ಇವೆಲ್ಲವೂ ಕಾದಂಬರಿಯನ್ನು ಮೇಲುಸ್ತರಕ್ಕೆ ಏರಿಸುತ್ತವೆ.


ಕಥೆಯನ್ನು ಸೃಜಿಸಿರುವ ರೀತಿ ದುರ್ಗದ ಸೊಗಡಿನ ಭಾಷೆ, ಸಂಭಾಷಣೆ, ಅಲ್ಲಲ್ಲಿ ಬರುವ ಹಾಸ್ಯ ಪ್ರಸಂಗಗಳು ಗಮನಸೆಳೆಯುತ್ತವೆ. ಇಡೀ ಕಾದಂಬರಿ ಓದುವಾಗ ನಾವೊಂದು ಚಲನಚಿತ್ರ ವೀಕ್ಷಣೆ ಮಾಡಿದ ಅನುಭವವಾಗುತ್ತದೆ.ಅಂತೆಯೇ ಗೆಳೆಯ ವಿ ಎಲ್ ಪ್ರಕಾಶ್ ರವರಿಗೆ ಈ ಕಾದಂಬರಿ ಚಲನಚಿತ್ರ ಮಾಡಲು ಸಾಧ್ಯವೇ ಎಂದು ಕೇಳಿಯೂ ಬಿಟ್ಟೆ. 


ಡಾಬ್ಸ್ ಮತ್ತು ಹರ್ಕ್ನೆಸ್ ರವರ ಕ್ರೌರ್ಯ ಬ್ರಿಟಿಷರು ಭಾರತೀಯ ಸಮಾಜದ ಮೇಲೆ ಮಾಡಿದ ದಬ್ಬಾಳಿಕೆಯನ್ನು ಪ್ರತಿನಿಧಿಸುತ್ತದೆ. ವಾಲ್ಮೀಕಿಯಾಗಿ, ನರಸಿಂಹನಾಗಿ, ಮುದುಕನಾಗಿ, ಹರಿಕಥೆಮಾಡುವವನಾಗಿ ಕಥಾ ನಾಯಕ ವಿವಿಧ ಪಾತ್ರಗಳಲ್ಲಿ ಬ್ರಿಟಿಷರಿಗೆ ಚಳ್ಳೆ ಹಣ್ಣು ತಿನ್ನಿಸಿದ ಪರಿ ನಿಜಕ್ಕೂ ಸುಂದರ.

ಎಲೆ ಮರೆ ಕಾಯಿಯಂತೆ ದೊಡ್ಡೇರಿ ಗೌಡರು ಯುವಕರ ಸ್ವಾತಂತ್ರ್ಯ ಹೋರಾಟಕ್ಕೆ ನೀಡಿದ ನೈತಿಕ ಬೆಂಬಲದ ಜೊತೆಗೆ ಕಾಲ ಕಾಲಕ್ಕೆ ದವಸ ಧಾನ್ಯಗಳನ್ನು ಒದಗಿಸಿ ಸಂಪನ್ಮೂಲಗಳನ್ನು ಕ್ರೂಢಿಕರಿಸಿದ ರೀತಿಯೂ ಪ್ರಶಂಸಾರ್ಹ.ಇಂತಹ ಸಾವಿರಾರು ಎಲೆಮರೆ ಕಾಯಿಯಾಗಿ ಸ್ವಾತಂತ್ರ್ಯ ಕ್ಕೆ ಹೋರಾಡಿದವರ  ಸೇವೆಯನ್ನು ನಾವು ಸಂಶೋಧನೆಯ ಮೂಲಕ ಗುರ್ತಿಸಬೇಕಿದೆ.


ಕೈಮಾಕ್ಸ್ನಲ್ಲಿ ದುರ್ಗದ ದಂಗೆ ನಿರ್ಣಾಯಕ  ಹಂತ ತಲುಪಿದಾಗ ವಾಲ್ಮೀಕಿಯು ಮೂಲಕ ವೇಣುರವರು ಉತ್ತಮ ಭಾರತೀಯ ಮೌಲ್ಯವನ್ನು ಚಿತ್ರಿಸಿದ್ದಾರೆ .  ಬ್ರಿಟಿಷ್ ಅಧಿಕಾರಿ ಆರ್.ಎಸ್.ಡಾಬ್ಗೆ ದಂಗೆಯ ಅಂತಿಮ ಹಂತದಲ್ಲಿ ಮುಖಾಮುಖಿಯಾದ ಕಥಾನಾಯಕ ಪೆಟ್ಟು ತಿಂದು ಕೊನೆಯುಸಿರೆಳೆಯುತ್ತಿದ್ದ ಸಮಯದಲ್ಲಿ  ತನೆಗೆದುರಾದ ಡಾಬ್ ಮೇಲೆ, ಅವಕಾಶವಿದ್ದರೂ, ಗುಂಡು ಹಾರಿಸುವುದಿಲ್ಲ. ಬದಲಾಗಿ ಬುರುಜಿನ ಮೇಲೆ ಹಾರುವ ಬ್ರಿಟಿಷ್ ಧ್ವಜವನ್ನು ಉಡಾಯಿಸಿ ಸಾಯುತ್ತಾನೆ. ಏಕೆಂದರೆ ಡಾಬ್ಗೆ ಗುರಿಯಿಟ್ಟಾಗ ಆತನ ಪತ್ನಿ ಜೇನ್ ಧಾವಿಸಿ ಅಡ್ಡ ಬಂದು "ಬ್ರದರ್". ಎಂದು ಕೈಮುಗಿದು ಗೋಗರೆಯುತ್ತಾಳೆ.   ಅದನ್ನು ಕಂಡ ವಾಲ್ಮೀಕಿಯ ಮನ ಕರಗುತ್ತದೆ. ಭಾರತೀಯರು ಮನುಷ್ಯನ ಕೌಟು೦ಬಿಕ ವಾಸ್ತವಗಳಿಗೆ ಕೊಡುವ ಬೆಲೆ ಮತ್ತು ಗೌರವವನ್ನು ವೇಣುರವರು   ಈ ಮೂಲಕ ತುಂಬ ಸೊಗಸಾಗಿ  ಕಟ್ಟಿ ಕೊಟ್ಟಿದ್ದಾರೆ. ಸಂಘರ್ಷ ತಾತ್ವಿಕತೆಗೆ ಮಾತ್ರ ಸೀಮಿತವಾಗಿರಬೇಕು ಎಂಬುದನ್ನು ಮನಮುಟ್ಟುವಂತೆ ಚಿತ್ರಿಸಿದ್ದಾರೆ. ಜೊತೆಗೆ ಕಾದಂಬರಿಯ ಕೊನೆಯ ಭಾಗದಲ್ಲಿ ನೆರೆದ ಜನರಿಗೆ ನಾಯಕ ನೀಡಿದ ಸಂದೇಶ ದುರ್ಗದ ಜನರಲ್ಲಿ ಹಾಗೂ ದೇಶವಾಸಿಗಳಲ್ಲಿ ಆ ಕಾಲಕ್ಕೆ ಕ್ರಾಂತಿಯ ಕಿಡಿ ಹಚ್ಚಿದ್ದು ಗಮನಾರ್ಹವಾದದ್ದು. 

ದುರ್ಗದವನಾಗಿ ದುರ್ಗದ ಬೇಡರ್ದಂಗೆ ಶೀರ್ಷಿಕೆ ಸರಿ ಎನಿಸಿದರೂ " ಭಾರತದ ಸ್ವತಂತ್ರ ಸಂಗ್ರಾಮ " ಎಂಬ ಶೀರ್ಷಿಕೆ ಇದ್ದಿದ್ದರೆ ಇನ್ನೂ ವ್ಯಾಪಕತೆ ಬರುತ್ತಿತ್ತು ಎನಿಸಿತು. ಇಂತಹ ಐತಿಹಾಸಿಕ ಕಾದಂಬರಿಯನ್ನು ಎಲ್ಲರೂ ಓದಬೇಕು. ತನ್ಮೂಲಕ ನಿಜವಾದ ಇತಿಹಾಸ ತಿಳಿಯಬೇಕು ಹಾಗೂ ನಮ್ಮ ಸಾಂಸ್ಕೃತಿಕ ಪರಂಪರೆಯನ್ನು ಉಳಿಸಿ ಬೆಳೆಸಬೇಕು .ವೇಣು ಸರ್ ರವರು ಇಂತಹ ಇತಿಹಾಸದ ಮೇಲೆ ಬೆಳಕು ಚೆಲ್ಲುವ ಕಾದಂಬರಿಗಳನ್ನು ಇನ್ನೂ ಹೆಚ್ಚು ಬರೆಯಲಿ ಹಾಗೂ ಓದುವ ಸೌಭಾಗ್ಯ ನಮ್ಮದಾಗಲಿ ಎಂದು ಆಶಿಸುವೆ.


ಪುಸ್ತಕದ ಹೆಸರು: ದುರ್ಗದ  ಬೇಡರ್ದಂಗೆ  .ಚಾರಿತ್ರಿಕ ಕಾದಂಬರಿ

ಲೇಖಕರು: ಬಿ ಎಲ್ ವೇಣು.

ಪ್ರಕಾಶನ: ಗೀತಾಂಜಲಿ ಪ್ರಕಾಶನ ತುಮಕೂರು.

ಬೆಲೆ:300₹



ಸಿಹಿಜೀವಿ

ಸಿ ಜಿ ವೆಂಕಟೇಶ್ವರ

ತುಮಕೂರು

9900925529

29 ಮೇ 2022

ಹೊರಳು .


 


ಹೊರಳು ಮತ್ತು ಇತರೆ ಕಥೆಗಳು.ವಿಮರ್ಶೆ ೩೯ 




ಆತ್ಮೀಯರು  ಲೇಖಕರು ಮತ್ತು ಪ್ರೊಫೆಸರ್ ಆದ ವಿ ಎಲ್ ಪ್ರಕಾಶ್ ರವರು ನೀವು ಓದಲೇಬೇಕು ಎಂದು  ನನಗೆ ನೀಡಿದ ಪುಸ್ತಕ ಕೆ ಎಸ್ ಪ್ರಭಾ ರವರ ಹೊರಳು ಮತ್ತು ಇತರೆ ಕಥೆಗಳು  .ಈ ಪುಸ್ತಕ ನನಗೆ ನಿಜಕ್ಕೂ ಹಿಡಿಸಿತು.

ದೊಡ್ಡಬಳ್ಳಾಪುರದಂತಹ ಊರಿನಲ್ಲಿ ತಮ್ಮ ಬದುಕಿನ ದಾರಿ ಮತ್ತು ಗುರಿಯನ್ನು ತಾವೇ ಗೊತ್ತುಪಡಿಸಿಕೊಂಡ ವ್ಯಕ್ತಿಗಳಲ್ಲಿ ಪ್ರಭಾ ಮೇಡಂ ಮುಖ್ಯರಾಗಿ ಕಾಣುತ್ತಾರೆ. ಸಾಂಪ್ರದಾಯಿಕ ಎರಕಗಳಲ್ಲಿ ಸಿದ್ಧ ಆಕೃತಿಗಳು ಮಾತ್ರ ದೊರಕುತ್ತವೆ. ಇವು ಸಾದಸೀದ ಹಾಗೂ ಸುರಕ್ಷವಾಗಿರುತ್ತವೆ. ನಮ್ಮ ಚಹರೆ ಪಟ್ಟಿಯನ್ನು ನಾವೇ ರೂಪಿಸಿಕೊಂಡಾಗ, ನಮ್ಮ ವಿಧಿಯನ್ನು ನಾವೇ  ನಿರ್ದೇಶಿಸಿಕೊಂಡಾಗ ಅನೇಕ ಅಗ್ನಿ ದಿವ್ಯಗಳನ್ನು ಹಾದು ಬರಬೇಕಾಗುತ್ತದೆ. ಸ್ಥಾಪಿತ ವ್ಯವಸ್ಥೆಗಳ ವಿರುದ್ಧ ದಂಗೆ ಏಳಬೇಕಾಗುತ್ತದೆ.ಇಂಥ ಸಂದರ್ಭಗಳಲ್ಲಿ ಗೆಲುವಲ್ಲ, ಸೋಲು ಕೂಡ ಘನವಾಗಿಯೇ ಕಾಣುತ್ತದೆ. ಅವು ದೊಡ್ಡ ಪಾಠಗಳಂತೆ ಇರುತ್ತವೆ. ಅದರಲ್ಲೂ ಹೆಣ್ಣಾಗಿದ್ದರಂತೂ ಇದು ಇನ್ನಷ್ಟು ಕಠಿಣ ದಾರಿ.ಪ್ರಭಾ ಅವರು ಇಂಥ ದಾರಿಯಲ್ಲಿ ಬಹುದೂರ ಸಾಗಿ ಬಂದಿದ್ದಾರೆ. ಬಲವಾದ ಹೆಗ್ಗುರುತುಗಳನ್ನು ಮೂಡಿಸಿದ್ದಾರೆ.


70ರ ದಶಕದಲ್ಲಿ ಕನ್ನಡ ನೆಲದಲ್ಲಿ ಮೂಡಿದ ಕ್ರಾಂತಿಕಾರತನ, ಮತ್ತು 'ಸ್ವ'ದ ಹುಡುಕಾಟದ ಮೂಲಕವೇ ಬಹಿರಂಗದಲ್ಲಿ ತಮ್ಮ ಇರುವನ್ನು ಕಂಡುಕೊಳ್ಳುವ ಚಳವಳಿಯ ಪಾಲುದಾರರಾದ ಮೇಡಂ, ಸೃಜನಶೀಲ ಪ್ರಭೆಯನ್ನು ಕಾಪಿಟ್ಟುಕೊಂಡವರು, ಅದು ಕತೆ, ಪ್ರಬಂಧ, ಕವಿತೆಗಳಲ್ಲಿ ಚಲ್ಲುವರೆದಿದೆ. ಹೊರಳು ಮತ್ತು ಇತರ ಕತೆಗಳು ಸಂಕಲನದಲ್ಲಿ ಬರುವ ಮೊದಲ ಕಥೆಯಲ್ಲಿ ಇಲ್ಲಿಯ ನಾಯಕಿಗೆ ಮದುವೆಯಾಗಿ ಏಳುವರ್ಷಗಳಾಗಿವೆ. ಈಸ್ಟ್ ಹಾಕಿದ ಬ್ರೆಡ್ಡಿನ ಹಾಗೆ ಉಬ್ಬಿಕೊಳ್ಳುತ್ತಿರುವ ಬೊಜ್ಜಿನ ಬೆಳವಣಿಗೆಗೆ ಅವಳು ಸಿಕ್ಕಿದ್ದಾಳೆ. ಆದರೂ ಯೌವನ ಇನ್ನೂ ಅವಳಿಂದ ಕಾಲ್ತೆಗೆಯುವ ಸನ್ನಾಹದಲ್ಲಿಲ್ಲ. ಮುಖದ ಮೇಲೆ ಮೊಡವೆ ಅಂದವನ್ನು ಹೆಚ್ಚಿಸುವಂತೆ ತೋರಿದರೂ,ಕೀವುಗಟ್ಟಿದ ಅದೊಂದು ಅಸಹ್ಯ. ಹೊರಗಿನ ಬದುಕೂ ಹೀಗೆಯೇ ಸಹ್ಯ ಮತ್ತು ಅಸಹ್ಯಗಳ ಜೊತೆಗಿನ ಪ್ರೀತಿ ಕಳೆದುಕೊಂಡಿದೆ. ತನ್ನ ಆಫೀಸಿನಲ್ಲಿರುವ ರಮೇಶನ ಚೆಲುವಿಗೆ ಒಲಿಯಲು ಮನಸ್ಸು ಹಾತೊರೆಯುತ್ತಿದೆ. ಅವನ ಸಖ್ಯವನ್ನು ಬಯಸುತ್ತಿದೆ. ಎಂದೆನಿಸಿದರೂ, ಆ ನೋಟವನ್ನೇ ಇವಳು ಬಯಸುತ್ತಿದ್ದಾಳೆ. ತಾನು ಮದುವೆಯಾದ ಹೆಣ್ಣು ರಮೇಶ? ಪ್ರಶ್ನೆಯನ್ನು ಕೇಳಿಕೊಂಡರೂ, ರಮೇಶನ ನೋಟವೇ ಬೇಕೆಂದು  ಒಳಗೇ ಕುಟುಕುತ್ತಿದೆ. ರಮೇಶನಿಗೆ, ಅವನ ರೂಪಕ್ಕೆ  ತಾನು ಮರುಳಾದೆನೇ ಎಂದು ತನ್ನೊಳಗನ್ನು ಅವನು ತನ್ನ ಬಳಿಯೇ ಇರಲಿ ಎಂಬ ಸೆಳೆತ, ಕೀವು ತುಂಬಿದ ಮೊಡವೆಯಂತೆ ಈ ಅನಿಸಿಕೆಗಳು ಅಸಹ್ಯ ಎನಿಸಿದರೂ, ಅದನ್ನು ಬಿಟ್ಟುಕೊಡಲು ಸಿದ್ಧವಿಲ್ಲದ ಆಸೆಗಳು, ಹಂಬಲಗಳು. ಇದು ಇಲ್ಲಿಗೆ ನಿಲ್ಲುವುದಲ್ಲ. ಪಕ್ಕದ ಮನೆಯ ಆನಂದನ ದುಂಡು ಮುಖ, ದಪ್ಪ ಮೀಸೆ, ತುಟಿಗಳನ್ನು ನೋಡುವಾಗಲೂ ರಮೇಶನೇ ಕಣ್ಮುಂದೆ ಬಂದಂತಾಗುತ್ತದೆ. ತನ್ನ ಗಂಡ ಮನೆಗೆ ಬಂದು ಸೊಂಟ ಬಳಸಿದಾಗಲೂ ಈ ಹೆಣ್ಣಿನ ಮನದೊಳಗೆ ಸುಳಿಯುವವನು ರಮೇಶನೇ, ಇಂಥ ತಾಕಲಾಟ, ನೋವು, ನೈತಿಕ ಪ್ರಶ್ನೆಗಳನ್ನು ಮೀರಿ ಅಪೇಕ್ಷೆಗಳು, ಈ ತೊಳಲಾಟದಲ್ಲಿಯೇ ಈಕೆ ತನ್ನ ವಾಸ್ತವವನ್ನು ಕಂಡುಕೊಳ್ಳಬೇಕಾಗಿದೆ.ಬದುಕನ್ನು ಕಟ್ಟಿಕೊಳ್ಳಬೇಕಾಗಿದೆ.ಬದುಕಿಗೆ ಅರ್ಥ ಮತ್ತು ಸಾರ್ಥಕ್ಯವನ್ನು ತಂದುಕೊಳ್ಳಬೇಕಾಗಿದೆ. ಇದೊಂದು ಸವಾಲು.ನಿತ್ಯ ಸೆಣಸಾಟಕ್ಕೆ ಸಿದ್ಧಪಡಿಸುವ ಸವಾಲು.


'ಹೊರಳು' ಕತೆಯನ್ನು ಬಿಟ್ಟರೆ ಇಲ್ಲಿರುವ ಉಳಿದೆಲ್ಲ ಕತೆಗಳೂ 'ಮೊಡವೆ'ಯಂತೆಯೇ ಇಂಥ ತೊಳಲಾಟವನ್ನು ಹಿಡಿದುಕೊಡುವ ಪ್ರಯತ್ನಗಳೇ. ಹೆಣ್ಣಿನ ಮನದಾಳದಲ್ಲಿ ಹೊಮ್ಮುವ ಇಂಥ ಭಾವಗಳನ್ನು ಹಿಡಿದು ಪರೀಕ್ಷಿಸಲು ನೋಡುತ್ತವೆ. ಮನಸ್ಸಿನ ಚಲನೆಯನ್ನು ಅದು ಚಲಿಸುವ ದಿಕ್ಕನ್ನು ಪ್ರಾಮಾಣಿಕ ನೋಟದಿಂದ ಹಿಡಿಯುವುದೇ ಈ ಕತೆಗಳ ಹೆಗ್ಗಳಿಕೆಯಾದಂತೆಯೂ ತೋರುತ್ತದೆ. ಜೊತೆಗೆ ಗಂಡು ಹೆಣ್ಣಿನ ಸಂಬಂಧಗಳ ನಿಜರೂಪವನ್ನು ದಿಟ್ಟತನದಿಂದ ಬಿಡಿಸಿ ನೋಡುವುದು, ಪ್ರೀತಿಯ ಹೆಸರಿನಲ್ಲಿ ತೊಡುವ ಮುಖವಾಡಗಳನ್ನು ಕಳಚಿ ಹಾಕಲೆತ್ನಿಸುವುದು, ಗಂಡು ಮತ್ತು ಹೆಣ್ಣಿನ ನಡುವಿರುವ ನಿರಂತರ ಆಕರ್ಷಣೆಯ ಸ್ವರೂಪ ಎಂಥದ್ದು ಎಂಬುದನ್ನು ಕಂಡುಕೊಳ್ಳಲು ಹೆಣಗುವುದು ಇವೆಲ್ಲ ಪ್ರಭಾ ಅವರ ಕಥನ ಕಲೆಯ ಹಿಂದಿರುವ ಕಾಳಜಿಗಳು. ಇಂಥ ಹುಡುಕಾಟ ನಿಧಾನಕ್ಕೆ ಮಾಗುವುದು, ಬೇರೊಂದು ಮಜಲನ್ನು ಮುಟ್ಟುವುದು, ತನ್ನ ಪ್ರತಿಸ್ಪರ್ಧಿಯಾದ ಇನ್ನೊಬ್ಬ ಹೆಣ್ಣನ್ನು ದ್ವೇಷದಿಂದ ನೋಡುವ ನೋಟದಲ್ಲಿಯೇ ಬದಲಾವಣೆಯಾಗಿ, ಅದು ಸಹಾನುಭೂತಿಗೆ, ಅನುಕಂಪಕ್ಕೆ ದಾರಿಮಾಡಿಕೊಡುವುದನ್ನು (ಕಳೆದುಹೋದವರು-ಕತೆ) ಇಲ್ಲಿ ಗಮನಿಸಬಹುದು. ಹೊರಗಿನ ಮತ್ತು ಒಳಗಿನ ಒತ್ತಡಗಳಿಗೆ ಬಲಿಯಾದ ಹೆಣ್ಣು ತನ್ನ ಏಕಾಂಗಿತನದಲ್ಲಿ, ಅಸಹಾಯಕತೆಯ ಸನ್ನಿವೇಶದಲ್ಲಿ ತನ್ನ ಸಂಗಕ್ಕೆ ಪುರುಷನೊಬ್ಬನನ್ನು ಬಯಸಿದರೆ, ಅದು ಮಹಾ ಅಪರಾಧವಾಗಿ ತನಗೇಕೆ ಕಾಣಬೇಕು ಎಂಬ ಅರಿವು ಕಥಾನಾಯಕಿಯ ಮನದಲ್ಲಿ ಮೂಡುವುದು ಇನ್ನೊಂದು ಬೆಳವಣಿಗೆ. ಈ ಸಹಾನುಭೂತಿಯೇ ಇನ್ನೊಂದು ಜೀವದ ಬಗೆಗಿನ ಪ್ರೀತಿಯೂ ಆಗಿ ಬದಲಾಗುವುದು ಪ್ರಭಾ ಅವರ ಕತೆಗಳಿಗೆ ಹೊಸದೊಂದು ಅಯಾಮವನ್ನೇ ತಂದುಕೊಡುತ್ತದೆ. ಅರಿವಿನ ಬಾಗಿಲು ಎಂದರೆ ಇದೇ. ಅದು ಬೆಳಕಿನ ಬಾಗಿಲು.


'ಹೊರಳು' ಈ ಸಂಕಲನದಲ್ಲಿ ಭಿನ್ನವಾದ ಕತೆ, ದೊಡ್ಡವರ ಪ್ರಪಂಚದ ನಡವಳಿಕೆಗಳು ಪುಟ್ಟ ಮಕ್ಕಳ ಮುಗ್ಧ ಮನಸ್ಸುಗಳ ಮೇಲೆ ಎಂಥ ಕೆಟ್ಟ ಪರಿಣಾಮವನ್ನು ಬೀರುತ್ತವೆ, ಅರಳಬೇಕಾದ ಮನಸ್ಸುಗಳನ್ನು ಹೇಗೆ ಕಮರಿಸುತ್ತವೆ ಎಂಬುದನ್ನು ಬಹಳ ಸೂಕ್ಷ್ಮವಾಗಿ, ನಯಗಾರಿಕೆಯಿಂದ ಹೇಳುವ ಕತೆ. ಕತೆ ಕಟ್ಟುವಲ್ಲಿ ಲೇಖಕಿ ತೋರುವ

ಸಂಯಮ, ಬರವಣಿಗೆಯ ಮೇಲಿನ ಹಿಡಿತ ಇವೆಲ್ಲವನ್ನೂ ಈ ಕತೆ ತೋರಿಸಿಕೊಡುತ್ತದೆ.


ಪ್ರಭಾ ಅವರ ಕತೆಗಳು ಎಲ್ಲಿಯೂ ಜಾಳುಜಾಳಾಗುವುದಿಲ್ಲ. ಕಲೆಗಾರಿಕೆಯನ್ನು ಧಿಕ್ಕರಿಸುವುದಿಲ್ಲ. ಕಲೆಗಾರಿಕೆಯ ಸೂಕ್ಷ್ಮ ಅಂಶಗಳಿಗೆ ಮುಖ ತಿರುಗಿಸುವುದಿಲ್ಲ. ಈ ದೃಷ್ಟಿಯಿಂದ ನೋಡಿದಾಗ ಪ್ರಭಾರವರು  ಅಭಿನಂದನೆಗೆ ಅರ್ಹರಾಗುತ್ತಾರೆ. ಆದರೆ ಇನ್ನಷ್ಟು ಆಳಕ್ಕೆ ಹೋಗುವ, ಮನುಷ್ಯ ಸಂಬಂಧಗಳನ್ನು ತೀವ್ರವಾಗಿ ಶೋಧಿಸುವ ಪ್ರಯತ್ನವನ್ನು ಇವರು ಮಾಡುವುದಿಲ್ಲ. ಇಂಥ ಅವಕಾಶವು ಇದ್ದ ಕಡೆಗಳಲ್ಲೂ ಅದನ್ನು ಬಿಟ್ಟುಕೊಟ್ಟು ಅಲ್ಪತೃಪ್ತಿಯಿಂದಲೇ ಕತೆಗಳನ್ನು ಮುಗಿಸಿಬಿಡುತ್ತಾರೆ.


ಕತೆಯಾಗಲಿ, ಕಾದಂಬರಿಯಾಲಿ, ಕವಿತೆಯಾಗಲಿ ಅಥವಾ ಇನ್ನಾವುದೇ ಸೃಜನಶೀಲ ಬರಹವಾಗಲಿ ಅದೊಂದು ಬದುಕಿನ ಶೋಧ. ನಿರಂತರವಾಗಿ ಈ ಕ್ರಿಯೆಯಲ್ಲಿ ತೊಡಗುವುದರ ಮೂಲಕವೇ ನಾವು ಬದುಕಿನ ಅರ್ಥವನ್ನು ಕಂಡುಕೊಳ್ಳಬಹುದು. ಪ್ರಭಾ  ಮೇಡಂ ರವರು ಇನ್ನಷ್ಟು ಈ ಶೋಧದಲ್ಲಿ ತಮ್ಮನ್ನು ತೊಡಗಿಸಿಕೊಳ್ಳಲಿ ಹಾಗೂ ಅವರ ಲೇಖನಿಯಿಂದ ಇನ್ನೂ ಹತ್ತಾರು ಪುಸ್ತಕಗಳು ಹೊರಹೊಮ್ಮಲಿ ಎಂದು ಆಶಿಸುವೆ.


ಪುಸ್ತಕದ ಹೆಸರು: ಹೊರಳು ಮತ್ತು ಇತರೆ ಕಥೆಗಳು

ಲೇಖಕರು: ಕೆ ಎಸ್ ಪ್ರಭಾ

ಪ್ರಕಾಶನ: ಅನಿಕೇತನ ಟ್ರಸ್ಟ್

ಬೆಲೆ:60₹


ಸಿಹಿಜೀವಿ

ಸಿ ಜಿ ವೆಂಕಟೇಶ್ವರ

ತುಮಕೂರು

27 ಮೇ 2022

ಹೊನ್ನಾವರಿಕೆ. ಪುಸ್ತಕ ವಿಮರ್ಶೆ.

 



ಹೊನ್ನಾವರಿಕೆ. ವಿಮರ್ಶೆ ೩೭ 

ಎಂ ಆರ್ ಕಮಲ ರವರು ರಚಿಸಿರುವ ಹೊನ್ನಾವರಿಕೆ ಪ್ರಬಂಧಗಳ ಸಂಕಲನ ಹೆಸರಿನಿಂದಲೇ ನನ್ನ ಕುತೂಹಲ ಕೆರಳಿಸಿ ಓದುವಂತೆ ಪ್ರೇರೇಪಿಸಿತು.

ಎಂ.ಆರ್. ಕಮಲ, ಹಾಸನ ಜಿಲ್ಲೆಯ ಅರಸೀಕರೆ ತಾಲ್ಲೂಕಿನ ಮೇಟಿಕುರ್ಕೆ ಯವರು, ಹುಟ್ಟಿದ್ದು: ೧೯೫೯ರಲ್ಲಿ, ತಂದೆ ಎಂ. ಎಚ್. ರಾಮಸ್ವಾಮಿ, ತಾಯಿ ವಿಶಾಲಾಕ್ಷಿ. ಬೆಂಗಳೂರು ವಿಶ್ವವಿದ್ಯಾಲಯದ ಎಂ.ಎ., ಎಲ್.ಎಲ್.ಬಿ. ಪದವೀಧರೆಯಾದ ಇವರು ಸ್ನಾತಕೋತ್ತರ ಪರೀಕ್ಷೆಯಲ್ಲಿ ಪಾಶ್ಚಿಮಾತ್ಯ ಸಾಹಿತ್ಯ ಅಧ್ಯಯನಕ್ಕಾಗಿ ಬಿ.ಎಂ.ಶ್ರೀ' ಸ್ವರ್ಣಪದಕ ಪಡೆದಿದ್ದಾರೆ. ಫ್ರೆಂಚ್ ಭಾಷೆಯನ್ನು ಆರು ವರ್ಷಗಳ ಕಾಲ ಅಧ್ಯಯನ ಮಾಡಿರುವ ಕಮಲ ಫ್ರೆಂಚ್ ಭಾಷೆಯಲ್ಲಿ ಪದವೀಧರರು.


ಕನ್ನಡ ಸಾಹಿತ್ಯ ಮತ್ತು ನಾಟ್ಯಕ್ಷೇತ್ರದಲ್ಲಿ ಕಮಲ ಅವರ ಹೆಸರು ಮತ್ತು ಸಾಧನೆಗಳು ಚಿರಪರಿಚಿತ. ಪ್ರಕಟಿತ ಕಾವ್ಯ ಸಂಗ್ರಹಗಳು: ಶಕುಂತಲೋಪಾಖ್ಯಾನ (೧೯೮೮), ಪಾಣೆ ಮತ್ತು ಇತರ ಕವಿತೆಗಳು (೧೯೯೨),  ಮಾತೋಶ್ರೀ ರತ್ನಮ್ಮ ಹೆಗ್ಗಡೆ ಸ್ಮಾರಕ ಪುರಸ್ಕಾರ ಹಾಗೂ ಮುದ್ದಣ ಕಾವ್ಯ ಪ್ರಶಸ್ತಿ ಪಡೆದಿವೆ, ಹೂವ ಚೆಲ್ಲಿದ ಹಾದಿ (೨೦೦೭), ಮಾಡಿದಡಿ (೨೦೧೭), ಗದ್ಯಗಂಧಿ (೨೦೨೦), ಮಾರಿಬಿಡಿ ಸಂಕಲನ ಅಮ್ಮ ಪ್ರಶಸ್ತಿ ಪಡೆದಿದೆ. ಕಾವ್ಯ ಕ್ಷೇತ್ರದಲ್ಲಿನ ಸಾಧನೆಗಾಗಿ ೨೦೧೮ನೇ ಸಾಲಿನ ಮಾಸ್ತಿ ಪ್ರಶಸ್ತಿಯನ್ನು ಕಮಲ ಪಡೆದಿದ್ದಾರೆ. ನೆಲದಾಸೆಯ ನಕ್ಷತ್ರಗಳು (೨೦೨೧) ಅವರ ಆರನೆಯ ಕಾವ್ಯಸಂಗ್ರಹ,


ಕಾಳನಾಮ ಚರಿತೆ ೨೦೧೮ರಲ್ಲಿ ಪ್ರಕಟವಾದ ಹಗುರ ಹರಟೆಯ ಹಂದರ, ಕಸೂತಿಯಾದ ನೆನಪು, ಕೊಳದ ಮೇಲಿನ ಗಾಳಿ ೨೦೧೯ರಲ್ಲಿ, ಊರ ಬೀದಿಯ ಸುತ್ತು ಕ್ವಾರಂಟೈನ್ ೨೦೨೦ರಲ್ಲಿ ಪ್ರಕಟವಾದ ಪ್ರಬಂಧ ಸಂಕಲನ. ಇವು ಇವರ ಪ್ರಮುಖ ಸಾಹಿತ್ಯದ ಕೃತಿಗಳು


ಅನುವಾದ ಸಾಹಿತ್ಯದಲ್ಲಿ ಮಹತ್ವದ ಕೊಡುಗೆ ನೀಡಿರುವ ಕಮಲ ಆಫ್ರಿಕನ್-ಅಮೆರಿಕನ್, ಮಹಿಳಾ ಕಾವ್ಯದಲ್ಲಿ ವಿಶೇಷ ಪರಿಶ್ರಮವನ್ನು ಹೊಂದಿದ್ದಾರೆ. ಕತ್ತಲ ಹೂವಿನ ಹಾಡು (೧೯೮೯), ಇವರು ಸಂಪಾದಿಸಿ, ಕನ್ನಡಿಸಿರುವ ಕಪ್ಪು ಲೇಖಕಿಯರ ಕಾವ್ಯ ಸಂಗ್ರಹ. ಕನ್ನಡದಲ್ಲಿ ಮೊದಲ ಬಾರಿಗೆ ಕಪ್ಪು ಕವಿಗಳನ್ನು ಪರಿಚಯಿಸುವ ಪ್ರಯತ್ನ ಓದುಗರ ಗಮನ ಮತ್ತು ವಿಮರ್ಶಕ ಮಾನ್ಯತೆ ಎರಡನ್ನೂ ಪಡೆಯಿತು. ಈ ಪ್ರಯತ್ನದ ವಿಸ್ತರಣೆಯಾಗಿ ಆಫ್ರಿಕನ್ ಅಮೆರಿಕನ್ ಸಮಾಜ ವಿಕಾಸಗೊಂಡ ಬಗೆ, ಗುಲಾಮಗಿರಿ ಪದ್ಧತಿಯ ವಿರುದ್ಧ ಅವರ ಹೋರಾಟ, ಮಹಿಳೆಯರು ಸಾಹಿತ್ಯದ ಮೂಲಕ ತಮ್ಮ ಅಭಿವ್ಯಕ್ತಿಯನ್ನು ಪಡೆದುಕೊಳ್ಳಲು ಮಾಡಿದ ಹೋರಾಟಗಳ ಕಥೆಯನ್ನು ಕಪ್ಪು ಪಟ್ಟಿ ಬೆಳಕಿನ ಹಾಡು' ಕೃತಿ ಸರಣಿಯ ನಾಲ್ಕು ಪುಸ್ತಕಗಳು ತೆರೆದಿಡುತ್ತವೆ. ಆರು ವರ್ಷಗಳ ಅವಧಿಯಲ್ಲಿ ಆಯ್ಕೆ, ಸಂಪಾದನೆ ಮತ್ತು ಅನುವಾದಗೊಂಡ ಈ ಕೃತಿಗಳು: ಕಪ್ಪು ಪಟ್ಟಿಯ ಬೆಳಕಿನ ಹಾಡು, ಉತ್ತರ ನಕ್ಷತ್ರ, ರೂಸಾಪಾರ್ಕ್ಸ್ಳ ನನ್ನ ಕಥೆ ಮತ್ತು ಸೆರೆ ಹಕ್ಕಿ ಹಾಡುವುದು ಏಕೆಂದು ಬಲ್ಲೆ. ಈ ಪುಸ್ತಕಗಳು ಕರ್ನಾಟಕ ಸಾಹಿತ್ಯ ಅಕಾಡೆಮಿ, ಕರ್ನಾಟಕ ಅನುವಾದ ಸಾಹಿತ್ಯ ಅಕಾಡೆಮಿ ಪುರಸ್ಕಾರಕ್ಕೆ, ಶಿವಮೊಗ್ಗ ಕರ್ನಾಟಕ ಸಂಘದ ಎಸ್.ವಿ.ಪರಮೇಶ್ವರ ಭಟ್ಟ ಪ್ರಶಸ್ತಿಗೆ ಪಾತ್ರವಾಗಿವೆ. ಅನುವಾದ ಕ್ಷೇತ್ರದಲ್ಲಿನ ಸಾಧನೆಗಾಗಿ ಕುವೆಂಪು ಭಾಷಾಭಾರತಿ ಪ್ರಾಧಿಕಾರದ ಗೌರವ ಪ್ರಶಸ್ತಿಯನ್ನು ಕೂಡ ಕಮಲ ಪಡೆದಿದ್ದಾರೆ. 



ಪ್ರಸ್ತುತ ಹೊನ್ನಾವರಿಕೆ ಪ್ರಬಂಧಗಳು

 ಅವರ ಈ ಹಿಂದಿನ ಗದ್ಯ ಬರಹಗಳಂತೆಯೇ ಸರಳ ಮತ್ತು ನೇರ ನಿರೂಪಣೆ ಈ ಪ್ರಬಂಧಗಳಲ್ಲಿಯೂ ವಿಸ್ತಾರಗೊಂಡಿದೆ. ಈ ಅಂಶಗಳೇ ಅವರಿಗೆ ತಮ್ಮದೇ ಓದುಗ ವರ್ಗವನ್ನು ಸೃಷ್ಟಿ ಕೊಟ್ಟಿವೆ.


ಮನುಷ್ಯನ ಖಾಸಗಿ ಬದುಕಿನ ಅನುಭವಗಳು ಲೋಕಾನುಭವವಾಗಿ ಬದಲಾದಾಗ ಅರಿವೇ ಆಗದೆ ಓದುಗನ ಮನಸ್ಸನ್ನು ವ್ಯಾಪಿಸಬಲ್ಲವು  ಇಲ್ಲಿ ಹೇಳುತ್ತಿರುವ ಸಂಗತಿ, ಪ್ರಸಂಗ, ಅನುಭವಗಳು ನಮಗೂ ಆ ಗಿವೆಯಲ್ಲ ಎಂಬ ಅಚ್ಚರಿಯಲ್ಲಿ ಓದುಗ ಅದರಲ್ಲಿ ತಲ್ಲೀನವಾಗಬಲ್ಲ ಗುಣವನ್ನು ಈ ಪ್ರಬಂಧಗಳು ಪಡೆದಿವೆ. ಅದರಲ್ಲೂ ನನ್ನಂತಹ ಶಿಕ್ಷಕರಿಗೆ ಅನಿಸದೆ ಇರದು. ಬದುಕಿನ ಸಾಮಾನ್ಯ ಸಂಗತಿಗಳಿಗೂ ಅದರದೇ ಆದ ಚೆಲುವು ಇರುತ್ತದೆ  ಎಂಬ  ಅರಿವನ್ನು ಈ ಬರಹಗಳು ಮೂಡಿಸತ್ತವೆ.


ಚೋಟುದ್ದದ ಹುಡುಗರು ,

ಕಳೆದುದು ಸಿಗದಿರಲಿ,ಇಡೀ ಮನೆಯನ್ನೇ ಯಾರೋ ಮಡಿಚಿಡುತ್ತಿದ್ದಾರೆ,ಕನಸೊಂದನ್ನು ಸುರುಳಿ ಸುತ್ತಿ,ಬಾಗಿಲು ತೆಗೆಯ,

ವರ್ತಮಾನ ಕಾಲದ ಹುಡುಕಾಟದಲ್ಲಿ , ಎಲ್ಲ ಹೆಣ್ಣುಗಳ ದನಿಯಾಗಲಿ,ಒಂದು ಲಹರಿ,

ಬಚ್ಚಿಟ್ಟಿದ್ದು ಪರರಿಗೂ ಅಲ್ಲ,

'ಡಿಲೀಟ್' ಮಾಡುತ್ತಾ ಬದುಕುವುದು,

ಗಂಟಲಲ್ಲಿ ಮುರಿದ ಮುಳ್ಳು ,

ಬೀದಿಯಲ್ಲಿ ಸಿಕ್ಕ ಕತೆಗಳು,

ಒಂದು ರಫ್ ನೋಟ್ಬುಕ್,ವಾಸ್ತವದ ಬೆಂಕಿಯಲ್ಲಿ ಸುಡದ ನೆನಪುಗಳು, ಗಾಡಿಯ ಮೋಹ,

ನೆನಪುಗಳ ಬುತ್ತಿ ಚಿಗುರು, ಮುಂತಾದ ವಿಭಿನ್ನ ವಿಷಯಗಳ ಪ್ರಬಂಧಗಳು ನನಗೆ ಇಷ್ಟ ಆದವು.

ಅದರಲ್ಲೂ ಕೊನೆಯ ಪ್ರಬಂಧವಾದ 

ಎಲ್ಲಾ "ಪ್ರೀತಿಯ ಶಿಕ್ಷಕರಿಗೆ " ಎಂಬ ಪ್ರಬಂಧವು ನನ್ನಂತವನ ಕುರಿತೇ ಬರದಂತಹ ಸಲಹಾ ರೂಪದ ಪ್ರಬಂಧ ಎನಿಸಿತು.


ಒಟ್ಟಾರೆ ನೀವು ಒಮ್ಮೆ ಹೊನ್ನಾವರಿಕೆ ಓದಿದರೆ ವಿಭಿನ್ನ ವಿಷಯಗಳ ಪ್ರಬಂಧಗಳ ಪ್ರಪಂಚ ನಿಮ್ಮ ಮುಂದೆ ತೆರೆದುಕೊಳ್ಳುತ್ತದೆ.


ಪುಸ್ತಕದ ಹೆಸರು: ಹೊನ್ನಾವರಿಕೆ

ಲೇಖಕರು : ಎಂ ಆರ್ ಕಮಲ 

ಪ್ರಕಾಶನ: ಕಥನ ಪ್ರಕಾಶನ ಬೆಂಗಳೂರು

ಬೆಲೆ: 175.00 ₹



ಸಿಹಿಜೀವಿ

ಸಿ ಜಿ ವೆಂಕಟೇಶ್ವರ

ತುಮಕೂರು

26 ಮೇ 2022

ಕವಿ ಹಿಡಿದ ಕನ್ನಡಿ .


 



ಕವಿ ಹಿಡಿದ ಕನ್ನಡಿ.  ವಿಮರ್ಶೆ.



ಕವಿ ಹಿಡಿದ ಕನ್ನಡಿ .ಇದು ಕವಿ ದೊಡ್ಡರಂಗೇಗೌಡರು ಅಂಕಣ ಬರಹಗಳ ಸಂಕಲನವಾಗಿದೆ. ಇಲ್ಲಿ ದೇಸೀಯ ನೆಲೆಗಟ್ಟಿನಲ್ಲಿಯೇ ಸಹಜವಾದ ಸಹೃದಯ ಪ್ರೀತಿಯ ವಿಮರ್ಶಾ ಲೇಖನಗಳಿವೆ. ಈ ಕೃತಿಯಲ್ಲಿ ಅನೇಕ ಲೇಖನಗಳಿದ್ದು ಸಾಹಿತ್ಯ ದಿಗ್ಗಜರಾದಂಥ ಶ್ರೇಷ್ಠ ಕವಿಗಳಿಂದ ಸಾಮಾನ್ಯ ಎಲೆಮರೆಯ ಕಾಯಿಯಂಥ ಕವಿಗಳ ಕಾವ್ಯ ಕೃತಿಗಳವರೆಗೆ ವಿಮರ್ಶೆ ಸಾಗುತ್ತದೆ. ಪ್ರಾಚೀನ ಕಾಲದ ಮಹತ್ವತೆಯನ್ನು ಆಧುನಿಕ ಜಗತ್ತಿನವರೆಗೂ ನಡೆದ ಘಟನೆಗಳು ಅವುಗಳ ವಿಭಿನ್ನ ದೃಷ್ಟಿ ಧೋರಣೆಯ ಆಯಾಮಗಳನ್ನು ಇಂದು ಎಲ್ಲ ವರ್ಗದ ಜನರೂ ಓದಿ ಅರ್ಥೈಸಿಕೊಂಡು ತಮ್ಮ ಜ್ಞಾನವನ್ನು ಹೆಚ್ಚಿಸಿಕೊಳ್ಳಬಹುದಾದ ಗಹನವಾದ ವಿಚಾರ ಅಡಗಿದೆ.

ಸಾಹಿತ್ಯ ನಿರ್ಮಿತಿಯ ಹಿಂದಿರುವ ಪ್ರಜ್ಞೆಯನ್ನು ಹೆಚ್ಚು ವಾಸ್ತವಿಕವನ್ನಾಗಿ ಮಾಡುತ್ತದೆ. ಹಾಗೆಯೇ ದೊಡ್ಡರಂಗೇಗೌಡರ ಕಾಲದ ವಸ್ತುವನ್ನು ಗ್ರಹಿಸಿದ ರೀತಿಯನ್ನು ಅವರ ಒಟ್ಟಾರೆ ತಾತ್ವಿಕ ಹಿನ್ನೆಲೆಯಲ್ಲಿಯೇ ಅರ್ಥಮಾಡಿಕೊಳ್ಳಬೇಕು. ಈ ಜಾಗತಿಕ ಅನುಭವದ ಹಿನ್ನೆಲೆ ದಟ್ಟವಾಗಿದೆ  ಕವಿ ಯೇಟ್ಸ್ ನ ಹಾಗೆ ದೊಡ್ಡರಂಗೇಗೌಡರು ಕೂಡಾ ಪೂರ್ಣ ಬೌದ್ಧಿಕ ವ್ಯವಸ್ಥೆಯನ್ನು ವೈಯುಕ್ತಿಕ ಹಂತದಲ್ಲಿ ನಿರ್ಮಿಸಿಕೊಂಡರು. ಹಾಗಾಗಿ ಆಲೋಚನಾ ಕ್ರಮಗಳು ನಿರಾಯಾಸವಾಗಿ ಬರುತ್ತವೆ. ಈ ರೀತಿಯ ಕವಿಗಳು ತಮ್ಮ ವಿಚಾರಗಳನ್ನು ತಮ್ಮ ವೈಚಾರಿಕ ಆಕೃತಿಗಳ ಶೋಧನೆಗಾಗಿ ಬಳಸಿದ್ದಾರೆ. ಇವರ ಪ್ರತಿಮಾ ಜಗತ್ತು, ಭಾಷೆಯ ಉಪಯೋಗ ಮುಂತಾದವು ಅಭಿವ್ಯಕ್ತಿಯಲ್ಲಿ ತಮ್ಮ ಬೌದ್ಧಿಕ ಜಗತ್ತಿನ ಸೂಕ್ಷ್ಮ ವಾಹಕಗಳಾಗಿ ದುಡಿಯುತ್ತವೆ. ಇದು ಮೆಚ್ಚಬೇಕಾದ ಅಂಶವಾಗಿದೆ.

ಕವಿ ಮತ್ತು ಲೇಖಕರಾದ ದೊಡ್ಡರಂಗೇಗೌಡರು ಈ ಪುಸ್ತಕ ಬರೆಯಲು ಪ್ರೇರಣೆಯಾದ ಅಂಶಗಳನ್ನು ಹೀಗೆ ವಿವರಿಸುತ್ತಾರೆ.

"ಅರವತ್ತರ ದಶಕದಿಂದಲೂ ನಾನು ಬರವಣಿಗೆಯನ್ನು ಗಂಭೀರವಾಗಿ ತೆಗೆದುಕೊಂಡೆ, ನಿರಂತರ ಕೃಷಿ ಮಾಡುತ್ತಾ ಬಂದೆ, ಕನ್ನಡ ಪತ್ರಿಕೆಗಳಿಗೆ ಅಂಕಣಗಳನ್ನು ಬರೆಯುತ್ತಾ ಬಂದೆ. ಹಾಗೆ ಬರೆದ ಕೆಲವು ಲೇಖನಗಳನ್ನು ಸಂಕಲಿಸಿ ಇಲ್ಲಿ ಕೃತಿಯ ರೂಪದಲ್ಲಿ ನೀಡಿದ್ದೇನೆ.


ನನ್ನ ಸುತ್ತ ಮುತ್ತಣ ಸನ್ನಿವೇಶಗಳಿಗೆ ಪ್ರಾಮಾಣಿಕವಾಗಿ ಒಬ್ಬ ಕವಿಯಾಗಿ ಸಮಾಜಕ್ಕೆ ಕನ್ನಡಿ ಹಿಡಿಯುವ ಪ್ರಯತ್ನ ಮಾಡಿದ್ದೇನೆ. ಸಾಹಿತ್ಯ ಯಾವತ್ತೂ ಜನಜೀವನದ ಪ್ರತಿಬಿಂಬವೂ ಹೌದು. ಈ ಕಾರಣದಿಂದಲೂ ಇದು ಕವಿ ಗ್ರಹಿಸಿದ ಗ್ರಹಿಕೆಗಳು ಎಲ್ಲ ರೂಕ್ಷ ವಿಷಯಗಳಿಗೂ ಕವಿ ಕನ್ನಡಿ ಹಿಡಿದು ನೋಡಿ ಪ್ರತಿಕ್ರಿಯಿಸಿದ್ದರ ಫಲ ಇದು.  ಹೀಗಾಗಿ "ಕವಿ ಹಿಡಿದ ಕನ್ನಡಿ” ಎಂದು ಪುಸ್ತಕಕ್ಕೆ ಹೆಸರಿಸಿದ್ದೇನೆ." ಎಂದಿದ್ದಾರೆ.

ಈ ಕೃತಿಯಲ್ಲಿ ಬರುವ ಲೇಖನಗಳ ಕಡೆ ಒಮ್ಮೆ ಗಮನ ಹರಿಸುವುದಾದರೆ 

ನಾವು ಭಾರತೀಯರು ಎತ್ತ ಸಾಗುತ್ತಿದ್ದೇವೆ? ಎಂಬ ಲೇಖನದಲ್ಲಿ ಆಧುನಿಕತೆಯೆಡೆಗೆ ಮಾನವ ಸಾಗಬೇಕಾದಾಗ ಆದ ಕೆಲ ಘಟನೆಗಳ ಚಿತ್ರಣ ನೀಡಿದ್ದಾರೆ.

ಸಾಹಿತ್ಯ ಸೌರಭ “ವಡ್ಡಾರಾಧನೆ” ,

ಕವಿ ಪಂಪಣ್ಣ ಅವರ ಮಹಾನ್ ಸಾಧನೆ ,ಪಾಂಡಿತ್ಯದಲ್ಲಿ ಎತ್ತಿದ ಕೈ : ಮಂಜೇಶ್ವರದ ಗೋವಿಂದ ಪೈ! 

ಮುಂಬೆಳಕಿನ ಮುಂಗೋಳಿ ಹಟ್ಟಿಯಂಗಡಿ ನಾರಾಯಣರಾಯರು, ಕನ್ನಡ ಕಾವ್ಯಕ್ಕೆ ಹೊಸ ನುಡಿಗಟ್ಟು ನೀಡಿದ  ಬಿ.ಎಂ.ಶ್ರೀ ,ಅಮಿತಾನಂದ ನೀಡುವ ಸೃಜನ ಸಂಪನ್ನ,ದಾರ್ಶನಿಕ ಮಾರ್ಗ ಕವಿ ಡಿ.ವಿ.ಜಿ.,ವೈಚಾರಿಕತೆ ಬಿತ್ತಿದ ಅಪೂರ್ವ ಮಹಾಕವಿ ಕುವೆಂಪು,“ಸರ್ವ ಸೌಖ್ಯವೂ ಕುಟುಂಬದಲ್ಲೇ ಇದೆ”ಎಂದು ಸಾರಿದ ವರಕವಿ ದ.ರಾ.ಬೇಂದ್ರೆ ಬಹುಮುಖಿ ಆಯಾಮಗಳ ಬೇಂದ್ರೆ,ನಮ್ಮ ನಮ್ಮ ಮತಿಗಳು ನಮ್ಮ ಮೆಚ್ಚಿನ ದೀವಿಗೆಯಾಗಲಿ!

ಸಾಹಿತ್ಯ ಸಂಸರ್ಗ ಹಾ.ಮಾ.ನಾ ಒಂದು ಸಂಸ್ಮರಣೆ, ಮಂದಾರ ಹೂವಿನಂಥ ಮಹೋನ್ನತ ಮುಗಳಿ,

ಉತ್ಕರ್ಷದ ಹೊನಲಿನಲ್ಲಿ ಸುಗಮ ಸಂಗೀತ ಮುತ್ತಿನಂಥ ಕಾವ್ಯ ಬರೆದ ಕೊಡಗಿನ ಮುತ್ತಣ್ಣ,

ಸಹೃದಯರ ಭಾವ ಸಂಚಲನ ಮಾಡಿದ ಕವಿ ಇಂಚಲ ಅನನ್ಯ ಆಧ್ಯಾತ್ಮ ರಂಗ: ಅವತಾರ ಶೃಂಗ ,

ಆದರ್ಶ ಗುರುಗಳು ಸತ್ಪುರುಷರು ಕನ್ನಡ ನವ್ಯಕಾವ್ಯದ ಬಹುಮುಖೀ ಆಯಾಮಗಳು,ಕನ್ನಡ ಕಾವ್ಯಲೋಕ ದಾಖಲಿಸಿದ ಯುಗಾದಿ ನಾಡಕಟ್ಟುವ ಹಾಡು ಬರೆದನವ್ಯ ಕವಿ ಗೋಪಾಲಕೃಷ್ಣಾಡಿಗರು, ಪರ್ವತವಾಣಿ ಅವರ ಬಿಂಬ ಪ್ರತಿಬಿಂಬಗಳು , ಸಿ.ಪಿ.ಕೆ. ಅವರ “ಚಿಂತನೆ ಚಿಂತಾಮಣಿ" ಭಾವನೆಗಳ ಜೊತೆಗೆ ಚಿಂತನೆಗಳ ಬೆಸೆದ ಕವಿ  ವಿಷ್ಣುನಾಯ್ಕ, ಅಭಿವ್ಯಕ್ತಿಯ ಸಾಧ್ಯತೆಗಳ ವಿಸ್ತರಿಸಿದ ಅಸೀಮ ಅನ್ವೇಷಕತೇಜಸ್ವಿ,ಜ್ವಾಲಾಮುಖಿಯಂಥ ಕಾವ್ಯ ಬರೆದ ವಾಲೀಕಾರ

ಮಧು ಮಧುರ ಗೀತೆಗಳನಿತ್ತ ಗೀತಕಾರ ಸು. ರುದ್ರಮೂರ್ತಿಶಾಸ್ತ್ರಿ, ಶ್ರೀನಿವಾಸರಾಜು ಅಕ್ಕರೆಯ ಕನ್ನಡದ ಅನನ್ಯ ಪರಿಚಾರಕ ಅಸಮಾನತೆಯ ವಿರುದ್ಧ ಸಿಡಿದೆದ್ದ ತಪ್ತಕವಿ,ದಲಿತ ಬದುಕಿನ ಸಮರ್ಥ ಚಿತ್ರಣ ನೀಡಿದ ಕವಿ,ಡಾ|| ಸಿದ್ಧಲಿಂಗಯ್ಯ ,

 ಈ ನೆಲದ ಕೃಷಿಕ ಕವಿ ಸಿದ್ದಪ್ಪ ಬಿದರಿ, ಅಲೆಮಾರಿ ಜೀವನಕ್ಕೆ ಹಿಡಿದ ರನ್ನಗನ್ನಡಿಗಬಾಳ,

ಆಧುನಿಕ ಕಾವ್ಯ ವೈಚಾರಿಕತೆಗೆ ಪ್ರಾಮುಖ್ಯ ವಾಸ್ತವತೆಯ ರೂಕ್ಷ ಮುಖಗಳು,ಮುಂತಾದ ಲೇಖನಗಳು ಓದುಗರಿಗೆ ಕೆಲ ಮಹಾನ್ ವ್ಯಕ್ತಿಗಳ ಪರಿಚಯ ಮಾಡುತ್ತಾ ನಮ್ಮ ಜ್ಞಾನವನ್ನು ಹೆಚ್ಚಿಸುತ್ತವೆ ಎಂಬುದರಲ್ಲಿ ಎರಡು ಮಾತಿಲ್ಲ.


ಪುಸ್ತಕದ ಹೆಸರು: ಕವಿ ಹಿಡಿದ ಕನ್ನಡಿ 

ಲೇಖಕರು:ಡಾ. ದೊಡ್ಡ ರಂಗೇಗೌಡ.

ಪ್ರಕಾಶನ:ಉನ್ನತಿ ಪ್ರಕಾಶನ

ವರ್ಷ:೨೦೧೫

ಬೆಲೆ:೨೪೦₹


ಸಿಹಿಜೀವಿ

ಸಿ ಜಿ ವೆಂಕಟೇಶ್ವರ

12 ಮೇ 2022

ಬೆಲ್ಲಂ ಪುಲ್ಲಕ್ಕ .ಪುಸ್ತಕ ವಿಮರ್ಶೆ


 ವಿಮರ್ಶೆ 35.


ಬೆಲ್ಲಂ ಪುಲ್ಲಕ್ಕ 



ತುಮಕೂರು ಮೂಲದ ಲೇಖಕರಾದ

ಮಲ್ಲಿಕಾರ್ಜುನ ಹೊಸಪಾಳ್ಯರ ಬೆಲ್ಲಂಪುಲ್ಲಕ್ಕ  ಶೀರ್ಷಿಕೆಯ ಆಕರ್ಷಕ ಪುಸ್ತಕದ  ಹದಿನೈದು ಅಧ್ಯಾಯಗಳಲ್ಲಿ ಪ್ರತಿ ಅಧ್ಯಾಯವೂ ಓದಿಸಿಕೊಂಡು ಹೋಗುತ್ತವೆ. ಈ ಸಂಕಲನದಲ್ಲಿ ಕೃಷಿಯನ್ನು ನಂಬಿದ ರೈತರ ದಿನನಿತ್ಯದ ಬದುಕಿನ ತವಕ ತಲ್ಲಣ, ನೋವು ನಲಿವು, ಸಂಭ್ರಮ ಸಡಗರ, ಜಗಳ-ಮುನಿಸು ಎಲ್ಲವೂ ಇವೆ. ಓದುಗರಿಗೆ ಅಪರೂಪಕ್ಕೆ ಸಿಗುವ ಹಳ್ಳಿಗಾಡಿನ ಒಳನೋಟಗಳನ್ನು ಅವರು ಚೆನ್ನಾಗಿ ಕಟ್ಟಿ ಕೊಟ್ಟಿದ್ದಾರೆ.


ನಗರಗಳಿಗೆ ಹೋಲಿಸಿ ಗ್ರಾಮಗಳಲ್ಲಿ ಅದಿಲ್ಲ ಇದಿಲ್ಲ ಎಂಬ 'ಇಲ್ಲವುಗಳ ಪಟ್ಟಿಯನ್ನೇ ಎಲ್ಲರೂ ಮುಂದಿಡುತ್ತಾರೆ. ಆದರೆ ಒಳಹೊಕ್ಕು ನೋಡಿದರೆ ಅಲ್ಲಿನ ಸೀಮಿತ ಅವಕಾಶಗಳನ್ನು ಹಿಗ್ಗಿಸಬಲ್ಲ ನಾನಾ ಬಗೆಯ ಸಾಧ್ಯತೆಗಳನ್ನು ಶೋಧಿಸುವವರ ಎಷ್ಟೊಂದು ಕಥನಗಳು ಕಾಣುತ್ತವೆ. ಅಲ್ಲಿನ ಬದುಕಿನಲ್ಲಿ ಎಷ್ಟೊಂದು ಬಣ್ಣಗಳು ಕಾಣುತ್ತವೆ. ದುಡಿಮೆಗೆ ಎಷ್ಟೊಂದು ಪರ್ಯಾಯಗಳಿಗೆ ಮನರಂಜನೆಗೆ ಏನೆಲ್ಲ ಅವಕಾಶಗಳಿವೆ. ಎಲ್ಲಕ್ಕಿಂತ ಮುಖ್ಯವಾಗಿ ಜನರಾಡುವ ಭಾಷೆಯಲ್ಲಿ ಎಷ್ಟೊಂದು ವೈವಿಧ್ಯ ಕಾಣುತ್ತದೆ.


ಮಲ್ಲಿಕಾರ್ಜುನ ಹೊಸಪಾಳ್ಯರವರ 

ಹುಟ್ಟೂರು, ತುಮಕೂರು ಜಿಲ್ಲೆಯ ಮಧುಗಿರಿ ತಾಲ್ಲೂಕಿನ ಹೊಸಪಾಳ್ಯ ಪತ್ರಿಕೋದ್ಯಮ ಸ್ನಾತಕೋತ್ತರ ಪದವಿಯಲ್ಲಿ ಎರಡು ಚಿನ್ನದ ಪದಕ ಮತ್ತು ಪದವಿಯಲ್ಲಿ ಕನ್ನಡ ವಿಷಯದಲ್ಲಿ ಟಿ.ಪಿ.ಕೈಲಾಸಂ ಚಿನ್ನದ ಪದಕ ಪಡೆದ ಇವರು ಮೂರು ದಶಕಗಳಿಂದ ದೇಸಿ ಬೀಜಗಳ ಸಂರಕ್ಷಣೆ, ಜಲಮೂಲ ದಾಖಲಾತಿ, ಸುಸ್ಥಿರ ಕೃಷಿ, ಸಿರಿಧಾನ್ಯ ಉತ್ತೇಜನ ಕ್ಷೇತ್ರಗಳಲ್ಲಿ ಕಾರ್ಯನಿರ್ವಹಣೆ, ವಿವಿಧ ಸಂಸ್ಥೆ ಹಾಗೂ ಸರ್ಕಾರಿ ಯೋಜನೆಗಳಲ್ಲಿ ದಾಖಲಾತಿ ಸಮಾಲೋಚಕ ವೃತ್ತಿ ಹವ್ಯಾಸಿ ಬರಹಗಾರರಾದ ಇವರ ರಚನೆಗಳು  ಕನ್ನಡ ಪ್ರಭ, ವಿಜಯಕರ್ನಾಟಕ ಹಾಗೂ ಉದಯವಾಣಿ ಪತ್ರಿಕೆಗಳಲ್ಲಿ ಕೃಷಿ ವಿಚಾರಗಳ ಅಂಕಣ ಬರವಣಿಗೆ, ಪ್ರಬಂಧ ಹಾಗೂ ಕಥೆಗಳು ವಿವಿಧ ಪತ್ರಿಕೆಗಳಲ್ಲಿ ಪ್ರಕಟವಾಗಿವೆ.


ಕೃಷಿ ಮಾಧ್ಯಮ ಕೇಂದ್ರದ ಕೃಷಿ ಪತ್ರಿಕೋದ್ಯಮ ಪ್ರಶಸ್ತಿ: ಸಿಡಿಎಲ್ ಸಂಸ್ಥೆಯ 'ಚರಕ' ಅಭಿವೃದ್ಧಿ ಪತ್ರಿಕೋದ್ಯಮ ಪ್ರಶಸ್ತಿ, ಮೈಸೂರು ಜಿಲ್ಲಾ ಪತ್ರಕರ್ತರ ಸಂಘದ 'ಮುರುಘಾಶ್ರೀ' ಅಭಿವೃದ್ಧಿ ಪತ್ರಿಕೋದ್ಯಮ ಪ್ರಶಸ್ತಿ, ಸುಕೃತ ಕೃಷಿ ಬರಹಗಾರ ಪ್ರಶಸ್ತಿ ಪುರಸ್ಕೃತ, ತುಮಕೂರು ಜಿಲ್ಲಾ ಲೇಖಕಿಯರ ಸಂಘದ ಕಥಾ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಸಂದಿದೆ.


'ತೇಜಸ್ವಿ ನೆನಪಲ್ಲಿ ಅಲ್ಮೇರಾ ರಿಪೇರಿ' ಪ್ರಬಂಧಗಳ ಸಂಕಲನವೂ ಸೇರಿದಂತೆ, ಕೃಷಿ ಮತ್ತು ನೀರಿಗೆ ಸಂಬಂಧಪಟ್ಟ 'ನೆಟ್ಟಿರಾಗಿ', 'ಕೃಷಿ ಆಚರಣೆ', 'ಪೈರುಪಚ್ಚೆ. 'ಕೊರಲೆ', 'ಚೌಳು ನೆಲದ ಬಂಗಾರ', 'ಸಿರಿಧಾನ್ಯ ಪರಂಪರೆ', 'ನಶಿಸುತ್ತಿರುವ ನೀರಿನ ಜ್ಞಾನ', 'ತಲಪರಿಗೆ' ಇತ್ಯಾದಿ 13 ಪುಸ್ತಕಗಳ ಪ್ರಕಟಣೆ ಆಗಿವೆ.

 

ಗದ್ದಲದ ಸಂಭ್ರಮದ ಗದ್ದೆ ಕಣಗಾಲ ನನ್ನ ಬಾಲ್ಯ ನೆನಪಿಸಿತು. ರಾಜ್ ಕುಮಾರ್ ಮತ್ತು ರಾಗಿ ರೊಟ್ಟಿ ಪ್ರಬಂಧ ನನ್ನ ತಾಯಿಯ ನೆನಪು ಮಾಡಿಸಿತು. ಮಲ್ಲಿಕಾರ್ಜುನ್ ರವರಿಗೆ ರೊಟ್ಟಿ ಇಷ್ಟ ಇರಲಿಲ್ಲ .ಆದರೆ ನನಗೆ ನನ್ನಮ್ಮ ಮಾಡಿದ ರಾಗಿ ರೊಟ್ಟಿ ಈಗಲೂ ಇಷ್ಟ. ಗಂಧಸಾಲೆಯ ಘಮಲಿನಲ್ಲಿ ಬರುವ  ಭತ್ತದ ತಳಿಗಳಂತಹ ತಳಿಗಳ ಸಂರಕ್ಷಣೆ ಮಾಡುವುದು ನಮ್ಮ ಕರ್ತವ್ಯ ಆಗಬೇಕು. ಪೊರಕೆಗಳ ಬಗ್ಗೆ ಬರೆದ ಪ್ರಬಂಧವು ನಾನೂ ಒಮ್ಮೆ ಪ್ರಬಂಧ ಬರೆದಿದ್ದನ್ನು ನೆನಪಿಗೆ ತಂದಿತು.

ಪ್ರತಿಯೊಂದು ಪ್ರಬಂಧಕ್ಕೆ ಹೊಂದುವ ರೇಖಾಚಿತ್ರಗಳ ಉಲ್ಲೇಖ ಮಾಡಲೇಬೇಕು .ಜೊತೆಗೆ ಆಕರ್ಷಕ ಶೀರ್ಷಿಕೆಗೆ ತಕ್ಕಂತೆ ಮುಖಪುಟವಿದೆ.

ಒಟ್ಟಾರೆ ಹಳ್ಳಿಗಾಡಿನ ಸುತ್ತಾಟದ ಕಥೆಗಳನ್ನು ಓದಿ ಬೆಲ್ಲಂಪುಲ್ಲಕ್ಕರ ಚಾಕಚಕ್ಯತೆ, ಲೇಖಕರ ತಂದೆಯವರ ಬೈಯ್ಗಳವನ್ನು ಸವಿಯಲು ನೀವು ಬೆಲ್ಲಂ ಪುಲ್ಲಕ್ಕ ಓದಲೇಬೇಕು.


ಸಿಹಿಜೀವಿ

ಸಿ ಜಿ ವೆಂಕಟೇಶ್ವರ

ತುಮಕೂರು