01 ಜುಲೈ 2025

ನುಡಿ ತೋರಣ ಸಮಾಗಮ..


 
ನುಡಿತೋರಣ ಮೊದಲ ಸಮಾಗಮದಲ್ಲಿ ಅನಿವಾರ್ಯ ಕಾರಣದಿಂದಾಗಿ ಭಾಗವಹಿಸಿರಲಿಲ್ಲ.ಎರಡು ಮತ್ತು ಮೂರನೇ ಸಮಾವೇಶದಲ್ಲಿ ಪಾಲ್ಗೊಂಡ ಸವಿನೆನಪುಗಳನ್ನು ಈಗಲೂ ಮೆಲುಕು ಹಾಕುತ್ತಿರುವೆ... ಮೂರನೇ ಸಮಾವೇಶದ ದಿನ ಆರಕ್ಕೆ ತುಮಕೂರು ಬಿಟ್ಟು ಒಂಭತ್ತಕ್ಕೆ ಸಾಹಿತ್ಯ ಪರಿಷತ್ತು ಸೇರಿ ಕಿರಣ್ ಸರ್ ಮತ್ತು ನುಡಿ ಬಂಧುಗಳೊಂದಿಗೆ ಬೆಳಗಿನ ಉಪಹಾರ ಸೇವಿಸಿ ಚಿನ್ನು ಪ್ರಿಯ ಸರ್ ರವರೊಂದಿಗೆ ಕನ್ನಡ ಹಾಡು ಹಾಡಿದ್ದು ಖುಷಿ ನೀಡಿತು.ಕಡೆಯ ಕ್ಷಣಗಳಲ್ಲಿ ಪುಸ್ತಕ ಬಿಡುಗಡೆಗೆ ಮನಸ್ಸು ಮಾಡಿದೆ. ನಮ್ಮ ಬಳಗದ ಮುಂದೆ ನನ್ನ ಕೃತಿ ಲೋಕಾರ್ಪಣೆಗೊಂಡಿದ್ದು ಖುಷಿ ನೀಡಿತು. ಹಲವಾರು ಸಾಹಿತ್ಯ ಬಂಧುಗಳನ್ನು ಭೇಟಿ ಮಾಡಿದ್ದು ಸಂತಸ ತಂದಿತು. ಜಿ ಬಿ ಹರೀಶ್ ಸರ್, ಮತ್ತು ಸೇತೂರಾಮ್ ಸರ್ ರವರ ಮಾತು ನೇರವಾಗಿ ಕೇಳಿ ಪುಳಕಗೊಂಡೆ. ನನ್ನ ಐವತ್ತಕ್ಕೂ ಹೆಚ್ಚು ಕೃತಿಗಳನ್ನು ಕೊಂಡ ನಮ್ಮ ನುಡಿ ಬಂಧುಗಳಿಗೆ ನಮನಗಳನ್ನು ಸಲ್ಲಿಸಲೇಬೇಕು. ನುಡಿ ತಾಂಬೂಲ ವಿಶೇಷವಾಗಿತ್ತು. ನಮ್ಮ ಮನೆಯವರ ಮೆಚ್ಚುಗೆ ಗೆ ಪಾತ್ರವಾಗಿದೆ. ಒಟ್ಟಾರೆ ಒಂದು ಉತ್ತಮ ಕೌಟುಂಬಿಕ ಭಾವನಾತ್ಮಕ ನುಡಿ ಹಬ್ಬದಲ್ಲಿ ಪಾಲ್ಗೊಂಡ ಸಾರ್ಥಕ ಭಾವನೆ ನನ್ನದು.... ನಿಮ್ಮ... ಸಿಹಿಜೀವಿ ವೆಂಕಟೇಶ್ವರ
#Bangalore #BangaloreEvents #BookLaunch #AuthorMeet #LiteratureLovers #BookDiscussion #WritersCommunity #ReadingNook #CulturalScene #M

30 ಜೂನ್ 2025

ಮಕ್ಕಳಿಗಾಗಿ ಮಾಹಾತ್ಮರ ಮಾತುಗಳು ಕೃತಿ ಲೋಕಾರ್ಪಣೆ...


 


ಯುವ ಕವಿಗಳು ಮತ್ತು ಲೇಖಕರು ನಮ್ಮ ಪ್ರಾಚೀನ ಕವಿಗಳ ಸಾಹಿತ್ಯ ಓದಬೇಕು.ಆಗಮಾತ್ರ ಉತ್ತಮ ಸಾಹಿತ್ಯ ಹೊರಹೊಮ್ಮಲು ಸಾಧ್ಯ. ಅವಸರದ ಸಾಹಿತ್ಯಕ್ಕೆ ಆಯುಷ್ಯ ಕಡಿಮೆ ಎಂದು ಸಾಹಿತಿಗಳಾದ 

ಡಾ ಕಬ್ಬಿನಾಲೆ ವಸಂತ್ ಭಾರದ್ವಾಜ್ ರವರು ಹೇಳಿದರು. ಶುಭ ಕೋರಿ ಇನ್ನೂ ಹೆಚ್ಚಿನ ಕೃತಿಗಳು ಅವರಿಂದ 

  ಬೆಂಗಳೂರಿನ  ಕನ್ನಡ ಸಾಹಿತ್ಯ ಪರಿಷತ್ತಿನ ಅಕ್ಕಮಹಾದೇವಿ ಸಭಾಂಗಣದಲ್ಲಿ ನುಡಿತೋರಣ ಬಳಗದ ವತಿಯಿಂದ ನಡೆದ ವಾರ್ಷಿಕೋತ್ಸವದ ಅಂಗವಾಗಿ ಪುಸ್ತಕ ಬಿಡುಗಡೆ ಮಾಡಿ ಅವರು ಮಾತನಾಡಿದರು. 


ಇದೇ ಸಂದರ್ಭದಲ್ಲಿ ಸಿಹಿಜೀವಿ ವೆಂಕಟೇಶ್ವರ ರವರ 27 ನೇ ಕೃತಿ ಮಕ್ಕಳಿಗಾಗಿ ಮಹಾತ್ಮರ ಮಾತುಗಳು, ಕಿರಣ್ ಹಿರಿಸಾವೆ ರವರ ಹರಿವು ಕಾದಂಬರಿ ಹಾಗೂ ಡಾ ಗೀತಾ ಎನ್ ರವರ ಮುಕ್ತಕ ಮಂಜೂಷ ಕೃತಿಗಳು ಲೋಕಾರ್ಪಣೆಗೊಂಡವು.

 ಲೇಖಕರಿಗೆ ಶುಭ ಕೋರಿ ಇನ್ನೂ ಹೆಚ್ಚಿನ ಕೃತಿಗಳು ಅವರಿಂದ ಹೊರಹೊಮ್ಮಲಿ ಎಂದು ಆಶಿಸಿದರು.ಈ ಸಂದರ್ಭದಲ್ಲಿ ಹಿರಿಯ ಸಾಹಿತಿಗಳು ಹಾಗೂ ಪಿಟೀಲು ವಾದಕರಾದ ಶ್ಯಾಮ್ ಸುಂದರ್ ರವರು, ಲೇಖಕರಾದ ಧನಂಜಯ ಜೀವಾಳ, ಸಾಹಿತಿಗಳು ಹಾಗೂ ಪ್ರಕಾಶಕರಾದ ಚಿನ್ನುಪ್ರಿಯ, ಸಾಹಿತಿಗಳಾದ ತ ನಾ ಶಿವಕುಮಾರ್,ಅನುಸೂಯ ಸಿದ್ದರಾಮ, ನೇತ್ರ ತಜ್ಞರಾದ ಉದಯ್ ಪಾಟೀಲ್, ಶ್ರೀಕಾಂತ್ ಪತ್ರೆಮರ, ರಾಸು ವೆಂಕಟೇಶ್  ಹಾಗೂ ನುಡಿ ಬಂಧುಗಳು ಉಪಸ್ಥಿತರಿದ್ದರು.


28 ಜೂನ್ 2025

ಶೆಟ್ಟಿ ಹಳ್ಳಿ ಆಂಜನೇಯಸ್ವಾಮಿ ದೇವಾಲಯ.


 ಶೆಟ್ಟಿ ಹಳ್ಳಿ ಆಂಜನೇಯಸ್ವಾಮಿ ದೇವಾಲಯ.


 ಪ್ರಸಿದ್ಧ ಇತಿಹಾಸ ಹೊಂದಿರುವ ಶ್ರೀ ಆಂಜನೇಯ ಸ್ವಾಮಿ ದೇವಾಲಯವು ತುಮಕೂರಿನಿಂದ 3 ಕಿ.ಮೀ. ದೂರದ ಆಗ್ನೇಯ ದಿಕ್ಕಿನಲ್ಲಿರುವ ಶೆಟ್ಟಿಹಳ್ಳಿ ಗ್ರಾಮದಲ್ಲಿದೆ. ಜಾತಿ, ಧರ್ಮ ಭೇದವಿಲ್ಲದೆ ಅತಿ ಹೆಚ್ಚು ಭಕ್ತರನ್ನು ಹೊಂದಿರುವ ನಂಬಿದವರ ಬೇಡಿಕೆಗಳನ್ನು ಈಡೇರಿಸುತ್ತಾನೆಂಬ ನಂಬಿಕೆಯಿಂದ ಭಕ್ತರು ಆಗಮಿಸುತ್ತಾರೆ.

  ಚೈತ್ರ ಮಾಸದಲ್ಲಿ ವಿಶೇಷ ಪೂಜೆಯನ್ನು ಸಲ್ಲಿಸಲಾಗುತ್ತದೆ.

ಮಹಾಭಾರತ ಕಾವ್ಯದಲ್ಲಿ ಬರುವ ಜನಮೇಜಯ ಮಹಾರಾಜ ಯಾಗ ಮಾಡುವ ಮುನ್ನ ವಿಘ್ನಗಳು

ಬಾರದಂತೆ ಈ ಆಂಜನೇಯನನ್ನು ಪ್ರತಿಷ್ಠಾಪನೆ ಮಾಡಿಸಿದರೆಂದು ಸ್ಥಳ ಪುರಾಣ ಹೊಂದಿರುವ ಈ ಪ್ರತಿಮೆಯು ಸುಮಾರು 10 ಅಡಿ ಎತ್ತರ ಹಾಗೂ 6 ಅಡಿ ಅಗಲವಾಗಿದ್ದು ಮುಳಬಾಗಿಲಿನಲ್ಲಿರುವ ಹನುಮಂತನನ್ನು ಬಿಟ್ಟರೆ ಎತ್ತರದಲ್ಲಿ ಎರಡನೇ ಆಂಜನೇಯಸ್ವಾಮಿ ಆಗಿದೆ. ಈ ಆಂಜನೇಯನ ಕೈಯಲ್ಲಿ ಮಾವಿನಹಣ್ಣುಗಳನ್ನು ಹಿಡಿದಿರುವುದು ವಿಶೇಷ,


1893 ರಲ್ಲಿ ಮೈಸೂರು ಪ್ರಾಂತ್ಯದ ಚೌಬೀನೆ ನಾಗ ಕುಮಾರಯ್ಯನವರು ಈ ದೇವಾಲಯದ ಜೀರ್ಣೋದ್ಧಾರ ಮಾಡಿದರೆಂದು ದೇವಾಲಯದಲ್ಲಿರುವ ಶಿಲಾಫಲಕವೊಂದು ತಿಳಿಸುತ್ತದೆ.


#shettihally #anjaneya 

#AnjaneyaTempleTumkur #TumkurTemples #IndianTemples #Anjaneya #DevotionalJourney #Spirituality #TemplesofIndia #VinayakaChaturthi #LocalTemples #ExploringTempleArchitecture #SacredSite #DivineVibes #CulturalHeritage #TempleVisiting #Pilgrimage #Devotees #GodsAndGoddesses #SpiritualTour #TumkurTourism

ಸಿಹಿಜೀವಿಯ ಹನಿ...


ಗುರಿಯೆಡೆಗೆ ನಡೆ

ಎಷ್ಟೇ ಬಂದರೂ ಅಡೆ ತಡೆ ನೋಡದಿರು ಸೋಮಾರಿಗಳ ಕಡೆ। ನಿಲ್ಲದಿರಲಿ ಗುರಿಯೆಡೆಗೆ ನಡೆ||

ಸಿಹಿಜೀವಿ ವೆಂಕಟೇಶ್ವರ

26 ಜೂನ್ 2025

ಪ್ರತಿಭೆಗಳನ್ನು ಗೌರವಿಸೋಣ..


 ತನ್ನ ಪಾಡಿಗೆ ತಾನು  ಹೊಳೆಯುತ್ತಾ ಬದುಕಿದ್ದ ಮಿಂಚುಹುಳವನ್ನು ಹಾವೊಂದು ಬೆನ್ನಟ್ಟಲು ಪ್ರಾರಂಭಿಸಿತು. ಮಿಂಚುಹುಳು ನಿಂತು ಹಾವಿಗೆ ಕೇಳಿತು

"ನಾನು ನಿನ್ನ ಬಳಿ ಮೂರು ಪ್ರಶ್ನೆಗಳನ್ನು ಕೇಳಬಹುದೇ?"


ಹಾವು, "ಕೇಳು " ಎಂದಿತು.


ನಾನು ನಿನ್ನ ಆಹಾರ ಸರಪಳಿಗೆ ಸೇರಿದವನೇ?


ಹಾವು, "ಇಲ್ಲ" ಎಂದಿತು.


ನಾನು ನಿನಗೆ ಏನಾದರೂ ಮಾಡಿದೆಯೇ?


ಹಾವು, "ಇಲ್ಲ" ಎಂದಿತು.


ಹಾಗಾದರೆ ನೀನು ನನ್ನನ್ನು ಏಕೆ ನುಂಗಲು ಬಯಸುತ್ತೀಯ?

 ಆಗ ಹಾವು ಉತ್ತರ ನೀಡಿತು "ನೀನು ಹೊಳೆಯುವುದನ್ನು ನೋಡಿ ನನಗೆ ಸಹಿಸಲಾಗುತ್ತಿಲ್ಲ!" 


ನಮ್ಮಲ್ಲೂ ಅದೇ ಕಥೆ. ಕೆಲವರು ತಮ್ಮ ಶ್ರಮ ಸಹಜ ಪ್ರತಿಭೆಯಿಂದ ಸಾಧನೆ ಮಾಡಿ ಹೆಸರು ಹಣ ಸಂಪಾದನೆ ಮಾಡುತ್ತಿದ್ದಾರೆ. ಅಂತಹ ವ್ಯಕ್ತಿಗಳ ಕಂಡರೆ ಕೆಲ ಸಂಕುಚಿತ ಮನೋಭಾವದವರಿಗೇನೋ ಸಂಕಟ. ಹೊಟ್ಟೆ ಉರಿ.

ಅವರ ಏಳಿಗೆಯನ್ನು ಹೊಳೆಯುವಿಕೆಯನ್ನು ನೋಡಲಾರರು. ಸಹಿಸಲಾರರು. ಇಂತಹ ಗುಣಗಳನ್ನು ತ್ಯಜಿಸೋಣ ಪ್ರತಿಭೆಗಳನ್ನು ಗೌರವಿಸೋಣ.ನಾವು ಬೆಳೆಯೋಣ ಇತರರನ್ನು ಬೆಳೆಸೋಣ.ಏನಂತೀರಾ?


ಸಿಹಿಜೀವಿ ವೆಂಕಟೇಶ್ವರ

ತುಮಕೂರು.