24 ಅಕ್ಟೋಬರ್ 2022

23 ಅಕ್ಟೋಬರ್ 2022

ನಮ್ಮ ಸಾಂಸ್ಕೃತಿಕ ಪರಂಪರೆಯ ಪ್ರತೀಕ ಬೇಲೂರು..

 



ನಮ್ಮ ಸಾಂಸ್ಕೃತಿಕ ಪರಂಪರೆಯ ಪ್ರತೀಕ ಬೇಲೂರು...


ಇತ್ತೀಚೆಗೆ ವಿಶ್ವಸಂಸ್ಥೆಯ ಯುನೆಸ್ಕೋ ತಂಡ ಕರ್ನಾಟಕದ ಇತಿಹಾಸ ಪ್ರಸಿದ್ಧ  ಬೇಲೂರು ಮತ್ತು ಹಳೇಬೀಡಿನ ದೇವಾಲಯಗಳಿಗೆ ಭೇಟಿ ನೀಡಿ ಯುನೆಸ್ಕೊ ದ   ಸಾಂಸ್ಕೃತಿಕ ಪರಂಪರೆಯ ತಾಣವಾಗಿ ಘೋಷಿಸಲು ಬೇಕಾದ ಮಾರ್ಗದರ್ಶಿ ನಿಯಮಗಳನ್ನು ಪರಿಶೀಲಿಸಿತು. ನಮ್ಮ  ಇತಿಹಾಸ ಮತ್ತು ಪರಂಪರೆಯ ಬಗ್ಗೆ ಹೆಮ್ಮೆ ಪಡುವ ನನ್ನಂತಹ ಕೋಟ್ಯಾಂತರ ಭಾರತೀಯರು ಆಗ ಬಹಳ ಸಂತಸಗೊಂಡೆವು.  ಈಗಾಗಲೇ ಹಲವಾರು ಬಾರಿ ಬೇಲೂರು ನೋಡಿದ್ದರೂ ಮತ್ತೆ ಬೇಲೂರು ನೋಡುವ ಮನಸಾಯಿತು.



ಕಳೆದ ವಾರ ಸಮಾನ ಮನಸ್ಕ ಗೆಳೆಯರೊಂದಿಗೆ ಬೇಲೂರಿಗೆ ಭೇಟಿ ನೀಡಿದ್ದೆ.ಅಂದೂ ಕೂಡಾ ಬೇಲೂರು ಮತ್ತು ಬೇಲೂರಿನ ಶಿಲ್ಪಕಲೆಯು ನನಗೆ ಹೊಸದಾಗಿ ಕಂಡಿತು .800 ವರ್ಷಗಳ ಬಳಿಕವೂ ಆ ಶಿಲ್ಪಕಲೆ ನಮ್ಮನ್ನು ಸೆಳೆಯುತ್ತಿವೆ ಎಂದರೆ ಅದಕ್ಕೆ ಕಾರಣರಾದ  ನಮ್ಮ ಹೊಯ್ಸಳ ಮಹಾರಾಜರ ಬಗ್ಗೆ ಮತ್ತು ಶಿಲ್ಪಿಗಳ ಬಗ್ಗೆ ಹೆಮ್ಮೆ ಅನಿಸಿತು.


ದೇವಾಲಯ ಪ್ರವೇಶ ಮಾಡಿದ ನಮ್ಮ ತಂಡಕ್ಕೆ ಸ್ಥಳೀಯರು ಮತ್ತು ಮಾರ್ಗದರ್ಶಕರು ಕೆಲ ಅಮೂಲ್ಯವಾದ ಮಾಹಿತಿ ನೀಡಿದರು.ಅದರಲ್ಲಿ ಕೆಲವು ನಾವೀಗಾಗಲೆ ಪುಸ್ತಕ ಮತ್ತು ಪತ್ರಿಕೆಗಳಲ್ಲಿ ಓದಿದ ಮಾಹಿತಿಗಳೂ ಇದ್ದವು.





ಬೇಲೂರು ಒಂದು ಐತಿಹಾಸಿಕ ಸ್ಥಳವಾಗಿದ್ದು, ಇಲ್ಲಿನ ಚೆನ್ನಕೇಶವ ದೇವಾಲಯ ಪ್ರಪಂಚದಲ್ಲಿ ಪ್ರಸಿದ್ಧಿ ಪಡೆದಿದೆ.  ಹೊಯ್ಸಳರ ಕಾಲದಲ್ಲಿ ಪ್ರತಿಷ್ಠಾಪನೆಯಾದ  ಈ ದೇವಾಲಯವು ನಕ್ಷತ್ರ ಆಕಾರದಲ್ಲಿದೆ. ಈ ದೇವಾಲಯವು ಸೂಕ್ಷ್ಮ ಕೆತ್ತನೆಯಿಂದ ಕೂಡಿದೆ ಹಾಗೂ ಪ್ರೇಕ್ಷಣೀಯ ಸ್ಥಳವಾಗಿದೆ. ಇಲ್ಲಿಗೆ ಬೇರೆ ಬೇರೆ ಕಡೆಯಿಂದ ಹೆಚ್ಚುಹೆಚ್ಚು ಜನ ಬಂದು ಈ ದೇವಾಲಯನ್ನು ವೀಕ್ಷಿಸುತ್ತಾರೆ. 

ಇದನ್ನು ಹಿಂದೆ  ವೇಲುಪುರ    ಎಂದು ಕರೆಯುತ್ತಿದ್ದರು. ದೇವಾಲಯ ಕಟ್ಟುವ ಕಾರ್ಯ ಹೊಯ್ಸಳ ಚಕ್ರವರ್ತಿಯಾದ ವಿಷ್ಣುವರ್ಧನನ ಆಳ್ವಿಕೆಯಲ್ಲಿ ಪ್ರಾರಂಭವಾಯಿತು. ರಾಜಾ ವಿಷ್ಣುವರ್ಧನನು ತಲಕಾಡಿನಲ್ಲಿ ಚೋಳರ ಮೇಲಿನ ವಿಜಯೋತ್ಸವವನ್ನು ಆಚರಿಸುವ ಸಮಯವಾದ ಸಾಮಾನ್ಯ ಶಕ  1117ರಲ್ಲಿ ತನ್ನ ಗುರುಗಳಾದ ಶ್ರೀ ರಾಮಾನುಜಾಚಾರ್ಯರ ಆಶೀರ್ವಾದದೊಂದಿಗೆ ಚೆನ್ನಕೇಶವಸ್ವಾಮಿಯ ವಿಗ್ರಹವನ್ನು ಪ್ರತಿಷ್ಠೆ ಮಾಡಿದನು. ಈ ರೀತಿಯಾಗಿ ಈ ದೇವಸ್ಥಾನಕ್ಕೆ    ವಿಜಯನಾರಾಯಣಸ್ವಾಮಿ ದೇವಸ್ಥಾನವೆಂದು ಹೆಸರು ಬಂದಿದೆ. ಸುಮಾರು 103  ವರ್ಷಗಳ ಕಾಲ ನಡೆದಂತಹ ಈ ದೇವಾಲಯದ ಕಾರ್ಯ, ವಿಷ್ಣುವರ್ಧನನ ಮೊಮ್ಮಗನಾದ ಇಮ್ಮಡಿ ವೀರ ಬಲ್ಲಾಳನ ಆಳ್ವಿಕೆಯಲ್ಲಿ ರೂಪಗೊಂಡಿತು. ದೇವಾಲಯಕ್ಕೆ ಒಂದು ವಿಮಾನ ಗೋಪುರವಿದ್ದು, ಈ ಕಾರಣವಾಗಿ ಇದನ್ನು ಹೊಯ್ಸಳರ ಏಕಕೂಟ ಶೈಲಿಯ ದೇವಸ್ಥಾನವೆಂದು ಪರಿಗಣಿಸಲಾಗಿದೆ. ಈ ದೇವಾಲಯದ ಗೋಪುರವು 70 ಅಡಿಗಳಿಗೂ ಎತ್ತರವಾಗಿದ್ದು ಧಾಳಿಕಾರರ ಹಾವಳಿಗೆ ಸಿಕ್ಕಿ ವಿರೂಪಗೊಂಡಿತ್ತು. ಇದನ್ನು ಸಾಮಾನ್ಯ ಶಕ  1397 ರಲ್ಲಿ ವಿಜಯನಗರದ ಅರಸರಾದ ಕೃಷ್ಣದೇವರಾಯರ ಮುತ್ತಜ್ಜರಾದ ಹರಿಹರ ಮಹಾರಾಜರ ದಂಡಾಧಿಪತಿ ಸಾಲುವ ಗೊಂಡನೆಂಬವರು ಇದರ ಜೀರ್ಣೋದ್ಧಾರ ಕಾರ್ಯವನ್ನು ಕೈಗೊಂಡರು. ಈ ದೇವಾಲಯಕ್ಕೆ ಇನ್ನೊಂದು ಬಾಗಿಲಿದೆ. ಇದಕ್ಕೆ 'ಆನೆ ಬಾಗಿಲು' ಎಂದು ಕರೆಯುತ್ತಾರೆ.



ದೇವಾಲಯದ ಸುತ್ತಲೂ, ಸಂಕೀರ್ಣವಾದ ಕೆತ್ತನೆಗಳು ಹಿಂದೂ ಮಹಾಕಾವ್ಯಗಳಾದ ರಾಮಾಯಣ ಮತ್ತು ಮಹಾಭಾರತದ ಕಥೆಗಳ ಚಿತ್ರಣವಿದೆ. ಬೇಲೂರು ಜೊತೆಗೆ ಹೊಯ್ಸಳ ಅಧಿಕಾರಾವಧಿಯಲ್ಲಿ ಚಾಲ್ತಿಯಲ್ಲಿದ್ದ ಸಾಂಸ್ಕೃತಿಕ ವೈಭವವನ್ನು ಪ್ರದರ್ಶಿಸುತ್ತವೆ. ಈ ಕಲಾಕೃತಿಗಳನ್ನು ಕಂಡು ಮನಸಾರೆ ಮೆಚ್ಚಿದ ನಾವು ಕೆಲ ಪೋಟೋ ತೆಗೆದುಕೊಂಡು ಕೆಲ ವೀಡಿಯೋ ಮಾಡಿಕೊಂಡೆವು .ನಮ್ಮ ಅಕ್ಕಪಕ್ಕದಲ್ಲಿ ವಿದೇಶಿ ಪ್ರವಾಸಿಗರು ಮತ್ತು ಹೊರರಾಜ್ಯದ ಜನರು ನಮಗಿಂತ ಆಸಕ್ತಿಯಿಂದ ನಮ್ಮ ದೇವಾಲಯ ವೀಕ್ಷಿಸುವುದನ್ನು  ಕಂಡು ನಮ್ಮ ರಾಜ್ಯದ ಬಗ್ಗೆ ಹೆಮ್ಮೆ ಅನಿಸಿತು.




ಇದೇ ದೇವಾಲಯ ಸಮುಚ್ಚಯದಲ್ಲಿ 

 ಚೆನ್ನಕೇಶವ ದೇವಾಲಯದ ಜೊತೆಗೆ ಅನೇಕ ದೇವಾಲಯಗಳಿವೆ. ಅವುಗಳ ನೋಡಲು ನಾವು ಮುಂದೆ ಸಾಗಿದೆವು.ಅವುಗಳಲ್ಲಿ ಪ್ರಮುಖ ದೇವಾಲಯಗಳು ಹೀಗಿವೆ.

ಕಪ್ಪೆ ಚೆನ್ನಿಗರಾಯ ದೇವಸ್ಥಾನ,

ಸೌಮ್ಯನಾಯಕಿ ಅಮ್ಮನವರ ದೇವಸ್ಥಾನ,ಕಲ್ಯಾಣ ಮಂಟಪ,

ವೀರನಾರಾಯಣ ದೇವಸ್ಥಾನ,

ರಂಗನಾಯಕಿ ಅಮ್ಮನವರ ದೇವಸ್ಥಾನ,

ಇದಲ್ಲದೆ ಗೋಪುರದ ಎಡಭಾಗದಲ್ಲಿ ಮಂಟಪ ಸಾಲನ್ನು ಮಾಡಿ ಅಲ್ಲಿ ಚಿಕ್ಕ ಗುಡಿಗಳನ್ನು ಮಾಡಿದ್ದಾರೆ. ಇದರ ನಂತರ ಶ್ರೀ ರಾಮದೇವರ ಗುಡಿ ಇದೆ. ಗೋಪುರದ ಬಲಭಾಗದಲ್ಲಿ ಪುಷ್ಕರಣಿಯನ್ನು ಮಾಡಲಾಗಿದೆ. 


ಕಪ್ಪೆ ಚೆನ್ನಿಗರಾಯನ  ಗುಡಿಯನ್ನು ನೋಡುವಾಗ ಹಿಂದೆ ಓದಿದ ಕೆಲ ಅಂಶಗಳು ನೆನಪಾದವು. ಮುಖ್ಯ ಗುಡಿಯ ಹಾಗೆ ನಕ್ಷತ್ರಾಕಾರವಾದ ಶ್ರೀಚಕ್ರದ ಪೀಠದ ಮೇಲೆ ಕಟ್ಟಲ್ಪಟ್ಟಿದೆ. ಸ್ಥಳೀಯ ಕೆಲವು ಜನರಿಂದ ಇದೇ ಮೂಲವಾಗಿ ಪ್ರಧಾನ ದೇವಾಲಯವಾಗಬೇಕಿತ್ತು ಎಂದು ಕೇಳಿ ಬಂದರೂ ಈ ನಕ್ಷತ್ರಾಕಾರದ ಪೀಠವನ್ನು ಬಿಟ್ಟರೆ ಯಾವುದೇ ಸಾಕ್ಷ್ಯಾಧಾರಗಳು ಮೂಡಿ ಬಂದಿಲ್ಲ. ಈ ದೇವಸ್ಥಾನದ ಗರ್ಭಗುಡಿಯಲ್ಲಿ ಕಪ್ಪೆ ಚೆನ್ನಿಗರಾಯನ ವಿಗ್ರಹವಿದೆ. ಈ ವಿಗ್ರಹದ ಹೊಟ್ಟೆಯಲ್ಲಿ ಕಪ್ಪೆಯನ್ನು ಕೆತ್ತಲಾಗಿದೆ. ಈ ಕಪ್ಪೆಯ ಕೆತ್ತನೆಗೆ ಒಂದು ಹಿನ್ನೆಲೆ ಇದೆ.

ಹಿಂದೆ ಜಕಣಾಚಾರಿಗೂ ಅವರ ಮಗ ಡಂಕಣಾಚಾರ್ಯರಿಗೂ ವಾದ ನಡೆದು, ಡಂಕಣನು ಚೆನ್ನಿಗರಾಯನ ವಿಗ್ರಹದಲ್ಲಿ ದೋಷವಿರುವುದಾಗಿ ಹೇಳಿ, ಅದನ್ನು ನಿರೂಪಿಸಲು ಹೊರಟಾಗ ವಿಗ್ರಹದ ಗರ್ಭದಲ್ಲಿ ಕಪ್ಪೆ ಕಂಡು ಬರಲು, ವಿಗ್ರಹಕ್ಕೆ ಈ ಹೆಸರು ಬಂದಿತೆಂದು ಹೇಳಲಾಗುತ್ತದೆ. ಇದಲ್ಲದೇ ಒಳಾಂಗಣದಲ್ಲಿ ಗೋಪಾಲಕೃಷ್ಣ, ಮಹಿಷಾಸುರಮರ್ದಿನಿ ಮತ್ತು ವಿಷ್ಣು-ಲಕ್ಷ್ಮಿಯರ ಸುಂದರ ಮೂರ್ತಿಗಳಿವೆ. ಈ ದೇವಾಲಯದ ನಂತರ  ಎಡಪಾರ್ಶ್ವದಲ್ಲಿರುವ ದೇವಸ್ಥಾನ ರಂಗನಾಯಕಿ ಅಮ್ಮನವರ ದೇವಸ್ಥಾನ ನೋಡಿದೆವು. ಚತುರ್ಭುಜಾಧಾರಿಯಾದ ಸೌಮ್ಯನಾಯಕಿ ಅಮ್ಮನವರು  ಚೆನ್ನಕೇಶವನ ಮೆಚ್ಚಿನ ಪತ್ನಿಯೆಂದು ಹೇಳುತ್ತಾರೆ.

ಸೌಮ್ಯನಾಯಕಿ ಅಮ್ಮನವರ  ದೇವಾಲಯ ದರ್ಶನ  ನಂತರ  ಕಲ್ಯಾಣ ಮಂಟಪ ನೋಡಿದೆವು.ಇಲ್ಲಿ ಚೆನ್ನಕೇಶವ ಸ್ವಾಮಿಗೂ ಸೌಮ್ಯನಾಯಕಿ ಅಮ್ಮನವರಿಗೂ ಕಲ್ಯಾಣೋತ್ಸವವನ್ನು ಮಾಡಲಾಗುತ್ತದೆ ಎಂದು ತಿಳಿಯಿತು. 

ನಂತರ ಕಲ್ಯಾಣ ಮಂಟಪದ ಒಳಭಾಗದಲ್ಲಿದ ವೀರನಾರಾಯಣ ದೇವಾಲಯ ನೋಡಿದೆವು. ಒಳಗೆ ಗರ್ಭಗುಡಿಯಲ್ಲಿರುವ ವಿಗ್ರಹ ಭಿನ್ನವಾಗಿದೆ. ಈ ಕಾರಣವಾಗಿ ಈ ದೇವಸ್ಥಾನದ ಬಾಗಿಲು ಮುಚ್ಚಿದೆ ಎಂದು ಗೈಡ್ ವಿವರಣೆ ನೀಡಿದರು.


ವೀರನಾರಾಯಣ ದೇವಸ್ಥಾನದ ನಂತರ ಸಿಗುವ ರಂಗನಾಯಕಿ ಅಮ್ಮನವರ ದೇವಾಲಯ ದರ್ಶಿಸಿದೆವು.  ರಂಗನಾಯಕಿ ಅಮ್ಮನವರನ್ನು ಚೆನ್ನಕೇಶವಸ್ವಾಮಿಯ ಜೇಷ್ಠ ಪತ್ನಿ ಎಂದು ಹೇಳುತ್ತಾರೆ. ಕಾರಣಾಂತರಗಳಿಂದ ರಂಗನಾಯಕಿ ಅಮ್ಮನವರಿಗೆ ಆಭರಣಗಳನ್ನು ತೊಡಿಸಲಾಗುವುದಿಲ್ಲವೆಂದು ಸ್ಥಳೀಯರು ಮಾಹಿತಿ ನೀಡಿದರು.


ದೇವಸ್ಥಾನದ ಆವರಣದಲ್ಲಿ ಮೇಲ್ಕಂಡ ದೇವಸ್ಥಾನಗಳನ್ನು ಬಿಟ್ಟು ನೋಡಲು ಇನ್ನೂ ಕೆಲವು ಸ್ಮಾರಕಗಳು  ಆಕರ್ಷಣೆಯ  ಕೇಂದ್ರಗಳಾಗಿ ನಮ್ಮ ಮನಸೆಳೆದವು .ಅವುಗಳೆಂದರೆ ಯಜ್ಞ ಯಾಗಾದಿಗಳನ್ನು ಮಾಡಲು ಯಾಗಶಾಲೆ, ಅಡಿಗೆ ಮಾಡಲು ಪಾಕಶಾಲೆ, ಪುಷ್ಕರಣಿ ಇತ್ಯಾದಿ...


ದೇವಸ್ಥಾನವನ್ನು ಗೋಪುರದ ಮೂಲಕ ಪ್ರವೇಶಿಸಿದರೆ ಆವರಣದ ಎಡಭಾಗದಲ್ಲಿ ಸುಮಾರು   ೪೦ಅಡಿ ಎತ್ತರದ ಒಂದು ಕಂಬ ಕಾಣಿಸುವುದು.ಅದೇ ದೀಪಾಲೆ ಕಂಬ  ಈ ಕಂಬವನ್ನು ನಕ್ಷತ್ರಾಕಾರದ ಒಂದು ಜಗುಲಿಯ ಮೇಲೆ ನಿರಾಧಾರವಾಗಿ ನಿಲ್ಲಿಸಲಾಗಿದೆ. ಕಂಬವು ಈ ಜಗುಲಿಯ ಮಧ್ಯದಲ್ಲಿದ್ದು ಇದರ ಕೆಳಗಡೆ 4 ಸಂದುಗಳನ್ನು ಮಾಡಲಾಗಿದೆ. ಈ ಸಂದುಗಳ ಮೂಲಕ ಒಂದು ಕಡೆ ಇಂದ ಇನ್ನೊಂದು ಕಡೆ ನೋಡಬಹುದು. ಈ ರೀತಿಯಾಗಿ ಈ ಕಂಬವು ಯಾವ ಆಧಾರವೂ ಇಲ್ಲದೆ ನಿಂತಿದೆ ಎಂದು ಖಚಿತವಾಗುತ್ತದೆ. ಜೊತೆಗೆ ವಾಯವ್ಯ ದಿಕ್ಕಿನಿಂದ ಒಂದು ತೆಳುವಾದ ಬಟ್ಟೆ ಅಥವ ಪೇಪರ್ ಚೂರನ್ನು ತುದಿಯಿಂದ ಮಧ್ಯದ ವರೆಗೆ ತಳ್ಳಿದರೆ ಸಲೀಸಾಗಿ ಹೋಗುತ್ತದೆ ಹೀಗಾಗಿ ಇದು ಮೂರೇ ದಿಕ್ಕುಗಳಲ್ಲಿ ನಿಂತಿದೆ ಎಂದು ಸಾಬೀತಾಗುತ್ತದೆ.  ಇದನ್ನು ಗುರುತ್ವಾಕೇಂದ್ರ ಕಂಬ (ಗ್ರಾವಿಟಿ ಪಿಲ್ಲರ್) ಎಂದು ಕರೆಯುತ್ತಾರೆ.ಈ ತುದಿಯ ಬೆಳಕನ್ನು ಆ ತುದಿಯಿಂದ ನೋಡಬಹುದು. ಆ ಕಾಲದ ಶಿಲ್ಪಿಗಳ ಚಾಕಚಕ್ಯತೆಗೆ ಇದಕ್ಕಿಂತ ನಿದರ್ಶನ ಬೇಕಿಲ್ಲ ಎನಿಸಿತು. ಅಲ್ಲಿ ಕೆಲ ಪೋಟೋ ತೆಗೆದುಕೊಂಡ ನಮ್ಮ ತಂಡ  ಆನೆ ಬಾಗಿಲ ಕಡೆ ನಡೆಯಿತು. 

ದೇವಸ್ಥಾನದ ಇನ್ನೊಂದು ಬಾಗಿಲಿಗೆ ಆನೆಬಾಗಿಲು ಎಂದು ಕರೆಯುತ್ತಾರೆ. ಇದು ಸಾಧಾರಣವಾಗಿ ಮುಚ್ಚಿರುತ್ತದೆ. ಮೂಲ ದ್ವಾರ ಗೋಪುರದ ದ್ವಾರವಾಗಿದ್ದರೂ, ದೇವರಿಗೆ ನಡೆಯುವ ಎಲ್ಲಾ ಉತ್ಸವಗಳು ಈ ದ್ವಾರದ ಮೂಲಕವಾಗಿ ಸಂಚರಿಸುತ್ತದೆ. ಈ ರೀತಿಯಾಗಿ ಇದು ವೈಶಿಷ್ಟತೆಯನ್ನು ಪಡೆದಿದೆ ಎಂದು ಮಾರ್ಗದರ್ಶಕ ಮಾಹಿತಿ ನೀಡಿದರು. 

ಮತ್ತು ನಮ್ಮನ್ನು ಮಂಟಪದ ಸಾಲಿನ ಕಡೆ ಕರೆದುಕೊಂಡು ಹೋದರು.

ದೇವಸ್ಥಾನದ ಗೋಪುರ ಮತ್ತು ಆನೆಬಾಗಿಲ ನಡುವೆ ಮಂಟಪದ ಸಾಲನ್ನು ಮಾಡಿದ್ದಾರೆ. ಇಲ್ಲಿ ಚಿಕ್ಕ ಗುಡಿಗಳನ್ನು ಮಾಡಲಾಗಿದೆ. ಈ ಗುಡಿಗಳಲ್ಲಿ ರಾಮಾನುಜಾಚಾರ್ಯರು, ಯೋಗನರಸಿಂಹರು, ಕಾಳಿಮರ್ಧನ ಕೃಷ್ಣ, ಆಂಜನೇಯ ಮುಂತಾದ ವಿಗ್ರಹಗಳನ್ನು ಪ್ರತಿಷ್ಠಾಪಿಸಲಾಗಿದೆ. ಇದಲ್ಲದೆ ರಂಗನಾಯಕಿ ಅಮ್ಮನವರ ದೇವಸ್ಥಾನದ ಪಕ್ಕದಲ್ಲೂ ಮಂಟಪದ ಸಾಲು ಇದೆ. ಇಲ್ಲಿ ಅನೇಕ ಶಿಲಾವಿಗ್ರಹಗಳನ್ನು ಸಂಗ್ರಹಿಸಿ ಪ್ರೇಕ್ಷಕರಿಗೆ ನೋಡಲು ಅನುಕೂಲ ಮಾಡಿ ಇಟ್ಟಿದ್ದಾರೆ. ಮೂಲತಃ ದೇವಸ್ಥಾನದ ಆವರಣವನ್ನು ಅಗೆದಾಗ ದೇವಸ್ಥಾನಕ್ಕೆ ಸಂಬಂಧಪಟ್ಟ ವಿಗ್ರಹಗಳನ್ನು ಇಲ್ಲಿ ಇಡಲಾಗಿದೆ. ಈ ಶಿಲೆಗಳಲ್ಲಿ ಸುಮಾರು 4 ಅಡಿ ಎತ್ತರದ ಗಣಪತಿಯ ವಿಗ್ರಹ, ವಿಷ್ಣು, ಆಂಜನೇಯರ ವಿಗ್ರಹಗಳು ಮತ್ತು ನಾಗ ಕಲ್ಲುಗಳನ್ನು ಕಾಣಬಹುದು. ಮುಖ್ಯವಾಗಿ ಇಲ್ಲಿ ಅನೇಕ ಶಾಸನ ಕಂಬಕಲ್ಲುಗಳನ್ನು ಇಡಲಾಗಿದೆ.ಈ ಶಾಸನಗಳಲ್ಲಿ ದೇವಾಲಯದ ಇತಿಹಾಸ, ದೇವಸ್ಥಾನವನ್ನು ಕಟ್ಟಿದ ಶಿಲ್ಪಿಗಳ ಹೆಸರಿದೆ ಎಂಬ ಮಾಹಿತಿಯನ್ನು ನೀಡಿದರು. 

ಆನೆ ಬಾಗಿಲಿನ ಪಕ್ಕದಲ್ಲಿರುವುದೇ ಪಾಕಶಾಲೆ. ಇಲ್ಲಿ ಪ್ರತಿ ದಿನವೂ  ದೇವರ ನೈವೇದ್ಯಕ್ಕಾಗಿ ಪ್ರಸಾದವನ್ನು ಮಾಡುತ್ತಾರೆ. ಇದರ ಪಕ್ಕದಲ್ಲೇ ಯಾಗಶಾಲೆ ಉಂಟು. ರಥೋತ್ಸವ ಅಥವ ಉತ್ಸವದ ಸಮಯದಲ್ಲಿ ಇಲ್ಲಿ ಶಾಸ್ತ್ರೀಯವಾಗಿ ನಡೆಯಬೇಕಾದ ಯಜ್ಞ-ಯಾಗಾದಿಗಳನ್ನು ಮಾಡುತ್ತಾರೆ.

ಯಾಗಶಾಲೆಯ ಪಕ್ಕದಲ್ಲಿ ರಾಮದೇವರ ದೇವಸ್ಥಾನವಿದೆ. ಗರ್ಭಗುಡಿಯಲ್ಲಿ ರಾಮ, ಸೀತೆ, ಲಕ್ಷ್ಮಣ ಮತ್ತು ಮಾರುತಿಯರ ವಿಗ್ರಹಗಳಿದೆ. ಸಾಮಾನ್ಯವಾಗಿ ರಾಮನ ಎಡಭಾಗದಲ್ಲಿರುವ ಸೀತೆ, ಇಲ್ಲಿ ಬಲಭಾಗದಲ್ಲಿರುವುದನ್ನು ಗಮನಿಸಿ ಎಂದರು ನಮ್ಮ ಗೈಡ್.

ರಾಮದೇವರ ದೇವಸ್ಥಾನದ ಪಕ್ಕದಲ್ಲಿ ವಾಹನ ಮಂಟಪವಿದೆ. ಉತ್ಸವಗಳಿಗೆ ಬೇಕಾಗುವ ವಾಹನ ಪ್ರತಿಮೆಗಳನ್ನು ಇಲ್ಲಿ ಇಡಲಾಗಿದೆ. ಸುಮಾರು ೭ ಅಡಿ ಎತ್ತರದ ಹಿತ್ತಾಳೆಯಿಂದ ನಿರ್ಮಿಸಲಾಗಿರುವ ಗರುಡ, ಹಂಸ, ಆನೆ, ಆಂಜನೇಯ, ಕುದುರೆ, ನವಿಲು ಮುಂತಾದ ವಿಗ್ರಹಗಳನ್ನು ಇಲ್ಲಿ ಇಟ್ಟಿರುತ್ತಾರೆ. ಉತ್ಸವದ ಸಮಯದಲ್ಲಿ ದೇವರ ಉತ್ಸವ ಮೂರ್ತಿಗೆ ಚಿನ್ನದ ಆಭರಣಗಳಿಂದ ಅಲಂಕಾರ ಮಾಡಿ, ಈ ವಾಹನಗಳ ಮೇಲೆ ಕೂರಿಸಿ ಊರಿನಲ್ಲಿ ಉತ್ಸವ ಮಾಡುತ್ತಾರಂತೆ .


ಹೀಗೆ ಬೇಲೂರಿನ ಶಿಲ್ಪಕಲೆಯ ವೈಭವವನ್ನು ಕಣ್ತುಂಬಿಸಿಕೊಂಡು ಗೈಡ್ ಹೇಳುವ ಮಾಹಿತಿಯನ್ನು ಅರ್ಥಮಾಡಿಕೊಂಡು ಸಾಗುತ್ತಿದ್ದ ನಮಗೆ ಸಮಯ ಸರಿದದ್ದೆ ತಿಳಿಯಲಿಲ್ಲ. ಈ ಮೊದಲು ಬೇಲೂರಿಗೆ ಪ್ರವಾಸ ಬಂದಾಗ ನಮ್ಮ ಗಮನವೆಲ್ಲ ಶಿಲಾಬಾಲಿಕೆಯರ ಕಡೆ ಮಾತ್ರ ಇತ್ತು. ಈ ಬಾರಿ ಅಲ್ಲಿನ ಶಾಸನಗಳು, ಮತ್ತು ವಿವಿಧ ದೇವಾಲಯಗಳು ಅವುಗಳ ಇತಿಹಾಸದ ಕಡೆ ಹೆಚ್ಚು ಗಮನಹರಿಸಿ ಮಾಹಿತಿ ಪಡೆದೆವು . ಸುಮಾರು ನಾಲ್ಕು ಗಂಟೆಗಳ ಕಾಲ ನಾವು ನೀರನ್ನು ಸಹ ಕುಡಿಯದೇ ಶಿಲ್ಪಕಲೆ ಆಸ್ವಾದ ಮಾಡಿದ್ದೆವು.  ನಮ್ಮ ದೇಹದಲ್ಲಿ ಇಂಧನ ಕಡಿಮೆಯಾಗಿದೆ ಎಂದು ನಮ್ಮ ಹೆಜ್ಜೆಗಳ ವೇಗ ಹೇಳುತ್ತಿತ್ತು. 

ದೇವಾಲಯದಿಂದ ಹೊರ ಬಂದು ದೇವಸ್ಥಾನದವರೇ ನಿರ್ವಹಣೆ ಮಾಡುತ್ತಿರುವ  ಬೋಜನಾ ಶಾಲೆಯಲ್ಲಿ ಪಾಯಸ ,ಅನ್ನ ಸಾಂಬಾರ್, ಮೊಸರನ್ನ ಸವಿದು. ಮಕ್ಕಳಿಗೆ ಸರ  ತೆಗೆದುಕೊಂಡು ಕಾರ್ ಹತ್ತಲು ಹೊರಟಾಗ 

 ರಾಷ್ಟ್ರಕವಿ ಕುವೆಂಪು ಅವರು ಬೇಲೂರಿನ   ದೇವಾಲಯಗಳನ್ನು ನೋಡಿ ರಚಿಸಿದ  "ಶಿಲೆಯಲ್ಲವೀ ಗುಡಿಯು ಕಲೆಯ ಬಲೆಯು ಸೌಂದರ್ಯ ವಿಪ್ಲವದ ಪಲ್ಲವಿಯು" ಎಂಬ ಮಾತುಗಳು ನೆನಪಾದವು.ವಿಶ್ವಸಂಸ್ಥೆಯ ಸಾಂಸ್ಕೃತಿಕ ಪರಂಪರೆಯ ಪಟ್ಟಿಗೆ ಸೇರಲಿರುವ ಬೇಲೂರಿಗೆ ನೀವೂ ಬನ್ನಿ ನಮ್ಮ ಸಾಂಸ್ಕೃತಿಕ ಪರಂಪರೆಯನ್ನು ಜಗಕ್ಕೆ ಪರಿಚಯಿಸಿ.


ಸಿಹಿಜೀವಿ

ಸಿ ಜಿ ವೆಂಕಟೇಶ್ವರ.

ತುಮಕೂರು




ಚಾರ್ಮಾಡಿ ಘಾಟಿ .ನಮ್ಮ ಪ್ರಾಕೃತಿಕ ಪರಂಪರೆ..




 


ಪ್ರವಾಸ ೭

ಪಶ್ಚಿಮ ಘಟ್ಟಗಳು.. ನಮ್ಮ ಪ್ರಾಕೃತಿಕ ಪರಂಪರೆ...

ಇತ್ತೀಚಿನ ದಿನಗಳಲ್ಲಿ ಪರಿಸರದ ವಿಚಾರದಲ್ಲಿ ಕಸ್ತೂರಿ ರಂಗನ್ ರವರ ವರದಿಯ ಹಿನ್ನೆಲೆಯಲ್ಲಿ ಪಶ್ಚಿಮ ಘಟ್ಟಗಳು ಚರ್ಚೆಯ ವಿಷಯವಾಗಿದ್ದವು .
ಘಟ್ಟಪ್ರದೇಶಗಳೆಂದರೆ ಪರಿಸರ ಪ್ರಿಯರಿಗೆ ಸಂಭ್ರಮದ ತಾಣ, ವಾಂತಿ ಮಾಡಿಕೊಳ್ಳುವ ವ್ಯಕ್ತಿಗಳಿಗೆ ಭಯದ ಸ್ಥಳ, ಕೈಗಾರಿಕೋದ್ಯಮಿಗಳಿಗೆ ತಮ್ಮ ಲಾಭವನ್ನು ಕಡಿಮೆ ಮಾಡುವ ಅಡೆತಡೆಗಳನ್ನು ಒಡ್ಡುವ ಪ್ರದೇಶಗಳು.ಹೀಗೆ ಅವರವರ ಭಾವ ಭಕುತಿಗೆ ವಿಭಿನ್ನವಾಗಿ ಕಾಣುವ ಪಶ್ಚಿಮ ಘಟ್ಟಗಳು ನಮ್ಮ ಪ್ರಾಕೃತಿಕ ಪರಂಪರೆಯ ಪ್ರತೀಕ ಎಂಬುದನ್ನು ಯಾರೂ ಅಲ್ಲಗಳೆಯುವಂತಿಲ್ಲ.
ಕಳೆದ ವಾರ ನಮ್ಮ ಸಮಾನ ಮನಸ್ಕ ತಂಡದ ಆತ್ಮೀಯರು ಕೋಟೆ ಕುಮಾರ್  ರವರ  ನೇತೃತ್ವದಲ್ಲಿ ಧರ್ಮಸ್ಥಳದ ಕಡೆ ಪ್ರವಾಸ ಹೋದಾಗ ಹಲವು ಬಾರಿ ಘಟ್ಟ ಪ್ರದೇಶಗಳನ್ನು ನೋಡಿದ್ದರೂ ಅಂದು ಘಟ್ಟ ಪ್ರದೇಶ ಹೊಸದಾಗಿ ಕಂಡಿತು. ಚಾರ್ಮಾಡಿ ಘಾಟಿಯ ಸೊಬಗಂತೂ ನಮ್ಮನ್ನು ಬಹುವಾಗಿ ಆಕರ್ಷಿಸಿತು.




ಕರ್ನಾಟಕದಲ್ಲಿ ಶಿರಾಡಿ ಘಾಟಿ, ಆಗುಂಬೆ ಘಾಟಿಗಳೆಂಬ ಇತರೆ ಘಾಟಿಗಳಿದ್ದರೂ ಚಾರ್ಮಾಡಿ ಘಾಟಿಯ ಸೌಂದರ್ಯ ನಿಸರ್ಗ ಪ್ರಿಯರಿಗೆ ಬಹು ನೆಚ್ಚಿನ ಪ್ರಾಕೃತಿಕ ತಾಣವಾಗಿದೆ.

ಚಾರ್ಮಾಡಿ ಘಾಟಿಯು  ದಕ್ಷಿಣ ಕನ್ನಡ ಜಿಲ್ಲೆ ಮತ್ತು ಚಿಕ್ಕಮಗಳೂರು ಜಿಲ್ಲೆಗಳ ಗಡಿಯಲ್ಲಿ ಹೊಂದಿಕೊಂಡಿದ್ದು ಪಶ್ಚಿಮ ಘಟ್ಟಗಳ ಸಾಲಿನಲ್ಲಿ ಬರುತ್ತವೆ. ಚಾರ್ಮಾಡಿ ಘಟ್ಟಗಳ ಕೆಳಭಾಗದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿಗೆ ಸೇರಿರುವ ಚಾರ್ಮಾಡಿ ಎಂಬ ಗ್ರಾಮವಿದೆ. ಅದರಿಂದಾಗಿ ಈ ಘಟ್ಟಗಳಿಗೆ ಈ ಹೆಸರು ಬಂದಿದೆ. ದಕ್ಷಿಣ ಕನ್ನಡ ಜಿಲ್ಲೆ ಮತ್ತು ಚಿಕ್ಕಮಗಳೂರು ಜಿಲ್ಲೆಗಳನ್ನು ಬೆಸೆಯುವ ಮುಖ್ಯ ರಸ್ತೆಯೊಂದು ಚಾರ್ಮಾಡಿ ಘಟ್ಟದಲ್ಲಿ ಹಾದು ಹೋಗಿದೆ. ಇಲ್ಲಿ ಎತ್ತರವಾದ ಬೆಟ್ಟ-ಗುಡ್ದ, ಆಳವಾದ ಕಣಿವೆ-ಪ್ರಪಾತ, ದಟ್ಟ ಕಾಡು, ಅಸಂಖ್ಯಾತ ಜಲಪಾತಗಳು, ವನ್ಯಮೃಗಗಳು, ಹತ್ತಾರು ಝರಿ-ತೊರೆ, ಶೋಲ ಕಾಡು,ಅಪರೂಪವಾದ ಹುಲ್ಲುಗಾವಲುಗಳನ್ನು ಕಾಣಬಹುದು. ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಕೊಟ್ಟಿಗೆಹಾರ ಎಂಬ ಗ್ರಾಮದಿಂದ ಪ್ರಾರಂಭವಾಗುವ ಈ ಘಟ್ಟಗಳು ಚಾರ್ಮಾಡಿ ಗ್ರಾಮದ ಬಳಿ ಕೊನೆಗೊಳ್ಳುತ್ತವೆ.



ನಮ್ಮ ಕಾರಿನಲ್ಲಿ  ಬೆಂಗಳೂರಿನ ಕಡೆಯಿಂದ ಹೊರಟ ನಾವು  ಕೊಟ್ಟಿಗೆಹಾರದಲ್ಲಿ ನೀರ್ ದೋಸೆ, ಪಲಾವ್ , ಬೋಂಡಾ ತಿಂದು   ಟೀ ಕುಡಿದು  ಹೊರಟ ನಮಗೆ ನಿಧಾನವಾಗಿ ನಿದ್ರೆ ಹತ್ತಲು ಶುರುವಾಯಿತು. ಚಾರ್ಮಾಡಿ ಘಾಟಿಯ ನಿಸರ್ಗ ನೋಡುತ್ತಾ ತಂಗಾಳಿಯು ನಮ್ಮ ಸೋಕುತ್ತಿದ್ದಂತೆ ನಿದ್ರಾ ದೇವಿ ಆಮೇಲೆ ಬರುವೆ ಎಂದು ಹೊರಟೇಬಿಟ್ಟಳು. ಅಲ್ಲಿಂದ ಮುಂದೆ ನಮ್ಮ ಮೊಬೈಲ್ ಕ್ಯಾಮರಾ ಮತ್ತು ಕಣ್ಣುಗಳಿಗೆ ಭರಪೂರ ಕೆಲಸ . ಕೋಟೇ ಕುಮಾರ್ ರವರು ಎದುರಿಗೆ ಬರುವ ವಾಹನಗಳ ಕಡೆಗೆ ಗಮನ ಹರಿಸುತ್ತಾ ನಿಸರ್ಗ ಸೌಂದರ್ಯ ಸವಿಯುತ್ತಾ ಡ್ರೈವ್ ಮಾಡುತ್ತಿದ್ದರೆ ನಾನು ಚಂದ್ರಶೇಖರಯ್ಯ ಎಮ್ ಎಚ್ ಹನುಮಂತರಾಯಪ್ಪ ಮತ್ತು ರಂಗಸ್ವಾಮಯ್ಯ ರವರು ಅಲ್ಲಲ್ಲಿ ಹರಿವ ಝರಿಯ ಕಲರವ ಕೇಳುತ್ತಾ ದೂರದ ಬೆಟ್ಟಗಳ ಚಿತ್ತಾರ ನೋಡುತ್ತಾ ಬಗೆ  ಬಗೆಯ ಮರಗಳ ನೋಡಿ ಬೆರಗಾಗುತ್ತಾ ಮುಂದೆ ಸಾಗಿದೆವು. ಅಲ್ಲಲ್ಲಿ ನಿಂತು ವ್ಯೂ ಪಾಯಿಂಟ್ ಗಳ ಬಳಿ ಸ್ವಲ್ಪ ಹೆಚ್ಚು ಸಮಯ ಕಳೆದು ನಿಸರ್ಗದಲ್ಲಿ ನಾವು ಒಂದಾಗಿ ನಿಂತು ಮೈ ಮರೆತೆವು.ಪೋಟೋ ವೀಡಿಯೋಗಳನ್ನು ಲೆಕ್ಕವಿಲ್ಲದಷ್ಟು ತೆಗೆದುಕೊಂಡೆವು..ನಿಧಾನವಾಗಿ ಸಾಗಿದ ನಮ್ಮ ಕಾರು ಏರ್ ಪಿನ್ ಬೆಂಡ್, ಎಸ್ ಬೆಂಡ್ ಗಳನ್ನು   ದಾಟಿಕೊಂಡು ಚಾರ್ಮಾಡಿಯ ಬಳಿ ಬಂದಿತು. ಅಲ್ಲಿಂದ ದೊಡ್ಡ ತಿರುವುಗಳು ಇಲ್ಲದಿದ್ದರೂ ನಿಧಾನವಾಗಿ ಸಾಗಬೇಕು. ಈ ಜಾಗದಲ್ಲಿ ವಾಹನ ಚಲಾಯಿಸಲು ಕ್ಷಮತೆ ಬೇಕು. ಹೀಗೆ ಸಾಗಿದ ನಮ್ಮ ಪಯಣ ಉಜಿರೆ ದಾಟಿ ನೇತ್ರಾವತಿ ನದಿಯ ಸೇತುವೆ ಮೇಲೆ ಚಲಿಸಿ ಧರ್ಮಸ್ಥಳ ತಲುಪಿತು. ಮಂಜುನಾಥ ಸ್ವಾಮಿಯ ದರ್ಶನಕ್ಕೆ ಸರದಿ ಸಾಲಿನಲ್ಲಿ ನಿಂತಾಗ ಪಶ್ಚಿಮದ ಘಟ್ಟಗಳ ಚಾರ್ಮಾಡಿಯ ಸೌಂದರ್ಯ ಕಣ್ಣ ಮುಂದೆ ಬರುತ್ತಿತ್ತು ನಮ್ಮ ಪ್ರಾಕೃತಿಕ ಪರಂಪರೆಯ ಬಗ್ಗೆ ಹೆಮ್ಮೆ ಪಡುತ್ತಾ  ದೇವರ ದರ್ಶನಕ್ಕೆ ಸರದಿ ಸಾಲಿನಲ್ಲಿ ಮುಂದೆ ಸಾಗಿದೆವು...

*ಸಿಹಿಜೀವಿ*
ಸಿ ಜಿ ವೆಂಕಟೇಶ್ವರ

20 ಅಕ್ಟೋಬರ್ 2022

ರಾಣಿಝರಿ .ಒಂದು ಸ್ಥಳ ಹಲವು ಜಗತ್ತು...




 

ರಾಣಿ ಝರಿ. ಒಂದು ಸ್ಥಳ ಹಲವು ಜಗತ್ತು.


ರಾತ್ರಿ ಮಲಗುವಾಗ ನನ್ನ ಮೊಬೈಲ್ ನಲ್ಲಿರುವ ಪೆಡೋಮೀಟರ್ "ಇಂದು ನೀನು  12 ಕಿಲೋಮೀಟರ್ ದೂರ  ನಡೆದಿರುವೆ ಅಂದರೆ 17915.... ಹೆಜ್ಜೆಗಳು ಅಭಿನಂದನೆಗಳು".ಎಂದಿತು.

ಆಗ ನನ್ನ ಅಂದಿನ ದಿನಚರಿ ನೆನಪಾಯಿತು. 


ಕಾಡು   ಸುತ್ತಬೇಕು. ಬೆಟ್ಟ ಹತ್ತಬೇಕು. ಎಲ್ಲಾದರೂ ಪರಿಸರದ ಮಧ್ಯೆ ಕಳೆದುಹೋಗಬೇಕು. ವಾರಾಂತ್ಯದಲ್ಲಿ ಮನೆಯವರೆಲ್ಲ ಸೇರಿ ಒಂದು ಒಳ್ಳೆಯ ಜಾಗಕ್ಕೆ ಟ್ರೆಕ್ಕಿಂಗ್ ಹೋಗಬೇಕು ಎಂದು  ಹಂಬಲಿಸವ ನನ್ನಂತಹ ಪರಿಸರ ಪ್ರಿಯರಿಗೆ  ‘ರಾಣಿಝರಿ’ ಹೇಳಿಮಾಡಿಸಿದ ತಾಣ.ಅಂತಹ ತಾಣಕ್ಕೆ ಟ್ರಕ್ಕಿಂಗ್ ನಂತಹ ಪಯಣ ಮಾಡಿದ್ದು ಅವಿಸ್ಮರಣೀಯ ದಿನ.

ಕಲಾವಿದರಾದ ಕೋಟೆ ಕುಮಾರ್ ರವರ ನೇತೃತ್ವದಲ್ಲಿ ಸಣ್ಣ ಪ್ರಮಾಣದ ಚಾರಣ ಮಾಡಲು ಹೊರಟ ನಮ್ಮ ತಂಡದಲ್ಲಿ ಹಿರಿಯರಾದ ಚಂದ್ರಶೇಖರಯ್ಯ, ರಂಗಸ್ವಾಮಯ್ಯ ಮತ್ತು ಎಮ್ ಎಚ್ ಹನುಮಂತರಾಯಪ್ಪ  ಖುಷಿಯಿಂದ ಚಾರಣದಲ್ಲಿ ಪಾಲ್ಗೊಂಡು ನನ್ನ ಸಂತಸವನ್ನು ಇಮ್ಮಡಿಗೊಳಿಸಿದರು.



ಪಶ್ಚಿಮ ಘಟ್ಟದ ಸಹಸ್ರಾರು ಪರ್ವತಶ್ರೇಣಿಗಳ ಪೈಕಿ ಈ ರಾಣಿಝರಿಯೂ ಒಂದು. ಇದರ ಸುತ್ತಲಿನ ಗುಡ್ಡಗಳು ‘ನಾ ನಿನಗಿಂತ ಮೇಲು... ನಾ ನಿನಗಿಂತ ಮೇಲು...’ ಎಂದು ಪೈಪೋಟಿಗೆ ಬಿದ್ದು ಒಂದಕ್ಕಿಂತ ಇನ್ನೊಂದು ಮೇಲಕ್ಕೆ ಬೆಳೆದು ಮುಗಿಲು ಮುಟ್ಟುವ ರೀತಿ ಹಬ್ಬಿಕೊಂಡಿವೆ. ಮಂಜು ಗಿರಿನೆತ್ತಿಯ ಜತೆ ಆಟಕ್ಕಿಳಿದಂತೆ ಸುತ್ತಿ ಸುಳಿದು, ಮುತ್ತಿ ಮುತ್ತಿಕ್ಕಿ ಸಂಭ್ರಮಿಸುವುದನ್ನು ನೋಡುವ ರೋಮಾಂಚನವೇ ಬೇರೆ.




ರಾಣಿಜರಿಯ ತುದಿಯಲ್ಲಿ ನಿಂತು ನೋಡಿದರೆ ಸುಮಾರು 2,500 ಅಡಿ ಕೆಳಕ್ಕೆ ದಟ್ಟವಾಗಿ ಹಬ್ಬಿರುವ ಹಸಿರು ತುಂಬಿದ ಅರಣ್ಯ ಪ್ರದೇಶದ ರಮಣೀಯ ನೋಟ ಕಾಣಸಿಗುತ್ತದೆ. ಈ ಗುಡ್ಡ ದಕ್ಷಿಣ ಕನ್ನಡ ಮತ್ತು ಚಿಕ್ಕಮಗಳೂರು ಜಿಲ್ಲೆಯ ಗಡಿ ಪ್ರದೇಶ. ನಾವು ಕಾಫಿನಾಡಿನಲ್ಲಿ ನಿಂತು ತುಳುನಾಡನ್ನು ವೀಕ್ಷಿಸಬಹುದು. ಅದು ಈ ತಾಣದ ವಿಶೇಷ. ಗುಡ್ಡದ ತುದಿಯಿಂದ ಕಣ್ಣುಹಾಯಿಸಿದರೆ  ಚಿಕ್ಕ ಚಿಕ್ಕ ಕಟ್ಟಡಗಳು ರಂಗೋಲಿಯ ಚುಕ್ಕಿಯ ಹಾಗೆ ಕಾಣಿಸುತ್ತವೆ. ಸ್ಥಳೀಯರ ಪ್ರಕಾರ ಅದು ಬೆಳ್ತಂಗಡಿ ತಾಲ್ಲೂಕಿನ ಬಂಗಾಡಿ ಗ್ರಾಮ. 




ವರ್ಷದ ಬಹುಕಾಲ ಮಂಜಿನ ಸೆರಗಿನಲ್ಲಿ ತನ್ನ ಸೌಂದರ್ಯವನ್ನು ಮುಚ್ಚಿಕೊಂಡಿರುತ್ತದೆ ಈ ರಾಣಿಝರಿ. ಹಾಗಾಗಿ ಕೆಳಗಿನ ಕಣಿವೆಯನ್ನು ಹಾಗೂ ಸುತ್ತಲಿನ ಗುಡ್ಡಗಳನ್ನು ಕಣ್ಣತುಂಬಿಕೊಳ್ಳಲು ಕಣ್ಣುಗಳಿದ್ದರೆ ಸಾಲದು, ಅದೃಷ್ಟವೂ ಬೇಕು. ನಾವು ಹೋದಾಗ ಮಂಜಿನ ಕಣ್ಣಾಮುಚ್ಚಾಲೆ ನಡದೇ ಇತ್ತು .ಒಂದು ಹಂತದಲ್ಲಿ ಮುಂದೆ ಏನೂ ಕಾಣದಂತೆ ಮಂಜು ಮುಸುಕಿದ್ದೂ ಉಂಟು.  ಆದರೂ ಮಂಜಿನಿಂದ ಮುತ್ತಿಕೊಂಡಿರುವ ರಾಣಿಝರಿಯನ್ನು ನೋಡುವ ಅನುಭವವು ಬೇರೆಯದ್ದೇ! ನೆತ್ತಿಯ ಮೇಲೆ ಸುಮ್ಮನೆ ನಿಂತು ಕಣ್ಣುಚ್ಚಿ, ಎಲ್ಲೋ ಭೂಮಿಯಿಂದಾಚೆ ನಿಂತು ಮೋಡಗಳ ಮಧ್ಯೆ ವಿಹರಿಸುತ್ತಿರುವ ಅನುಭವವಾಗುತ್ತದೆ. ಅಕ್ಟೋಬರ್ ನ ಮಳೆಗಾಲದಲ್ಲಿ  ತಂಗಾಳಿಯು  ಮತ್ತು  ಮಂಜಿನಿಂದ ತುಂಬಿಕೊಂಡು ಚಳಿ ಹುಟ್ಟಿಸುತ್ತದೆ ಈ ಪರ್ವತದ ಒಡಲು. 





ರಾಣಿಝರಿಯು  ಅಷ್ಟೊಂದು ಕಷ್ಟದ ಚಾರಣ ಹಾದಿಯಲ್ಲ. ಕಾರಿನಲ್ಲಿ ಕೊಟ್ಟಿಗೆಹಾರದಿಂದ ಹೊರಟ ನಾವು ಕಳಸ ಹೊರನಾಡ ದಾರಿಯಲ್ಲಿ ಸಾಗಿ 

ಸುಮಾರು 17 ಕಿ.ಮೀ. ದಾರಿ ಕ್ರಮಿಸಿದೆವು. ಸುಂಕಸಾಳ ಎಂಬ ಊರು ಸಿಕ್ಕಿತು . ಸುಂಕಸಾಳದಿಂದ ಮೂರು ಕಿ.ಮೀ. ಚಲಿಸಿದಾಗ  ರಾಣಿಝರಿ ಸಿಕ್ಕಿತ್ತು.

ರಾಣಿಝರಿಗೆ ಸಾಗುವ ದಾರಿಯೂ ಅಷ್ಟೇ ಸೊಗಸಾಗಿದೆ. ಸುತ್ತಲೂ ಹಸಿರಿನಿಂದ ತುಂಬಿರುವ ದಾರಿಯಲ್ಲಿ ಕಾಫಿ ಗಿಡಗಳು ಸೊಬಗು ಹೆಚ್ಚಿಸುತ್ತವೆ. ಕೆಳಗೂರಿನ ಟೀ ಪ್ಲಾಂಟೇಶನ್‍ಗಳನ್ನು  ನೋಡಲು ಕಣ್ಣಿಗೆ ಹಬ್ಬ. ಕಾರಿನಲ್ಲಿ ಕೇಳುತ್ತಿದ್ದ ಹಳೆಯ ಕನ್ನಡ ಚಲನಚಿತ್ರಗೀತೆಗಳು ನಮ್ಮ ನೆನಪುಗಳನ್ನು ಕೆದಕುತ್ತಾ ಸೌಂದರ್ಯ ಸವಿಯುವಂತೆ ಮಾಡುತ್ತಿದ್ದವು .ನಾವು ಅಗಾಗ್ಗೆ ಆ ಹಾಡುಗಳ ಸಾಲುಗಳನ್ನು ಗುನುಗುತ್ತಾ ಪ್ರಕೃತಿಯ ಸೊಬಗನ್ನು ಕಣ್ತುಂಬಿಸಿಕೊಂಡು ಸಾಗುತ್ತಿರುವಾಗ  ಸಾಗುವ ದಾರಿಯಲ್ಲಿ ಸಿಗುವ ಹಲವು ಚಿಕ್ಕ ಪುಟ್ಟ ಹಳ್ಳಿಯ ಹೆಸರುಗಳು ಪೂರ್ಣಚಂದ್ರ ತೇಜಸ್ವಿಯವರನ್ನು ಹಾಗೂ ಅವರ ಕೃತಿಗಳನ್ನು  ನೆನಪಿಸಿದ್ದು ಸುಳ್ಳಲ್ಲ .ನಮ್ಮಂತಹ  ಪ್ರವಾಸಿಗರಿಗೆ ಮತ್ತು ಚಾರಣಿಗರಿಗೆ ಅನುಕೂಲವಾಗುವಂತೆ ಸಮೀಪದಲ್ಲಿ ಹಲವಾರು ಹೋಮ್‍ಸ್ಟೇಗಳು ತಲೆ ಎತ್ತಿರುವುದು ರಸ್ತೆ ಬದಿಯ ನಾಮಫಲಕಗಳಿಂದ ತಿಳಿಯಿತು.





 ರಾಣಿಝರಿಯ ಬುಡದವರೆಗೂ  ತೆರಳಿದ  ನಮಗೆ ಅಲ್ಲಿ ದೂರದಲ್ಲಿ ಕಾಲಬೈರವೇಶ್ವರ ದೇವಾಲಯ ಕಂಡಿತು.  ದೇವರ ದರ್ಶನ ಮಾಡೋಣ ಎಂದ ನನಗೆ ಕೋಟೆ ಕುಮಾರ್ ರವರು" ಈಗಾಗಲೇ ಸಂಜೆಯಾಗಿದೆ ಮೊದಲು ಪ್ರಕೃತಿ ದೇವರ ನೋಡೋಣ" ಎಂದಾಗ   ಎರಡು ಕಿಲೋಮೀಟರ್ ಕಾಲ್ನಡಿಗೆಯ ಮೂಲಕ ಚಾರಣ ಅರಂಬಿಸಿಯೇಬಿಟ್ಟೆವು .ಸಂಜೆಯ ವಾತಾವರಣದಲ್ಲಿ ಅಗಾಗ್ಗೆ ಗುಡುಗು ಕೇಳುತ್ತಿತ್ತು. ಮಳೆ ಬರುವ ಸಂಭವ ಹೆಚ್ಚಾಗಿತ್ತು. "ಮಳೆ ಬಂದರೆ ಅಲ್ಲಿ ಜಿಗಣೆ ಕಾಟ ಹುಷಾರ್ "  ಎಂಬ ಗೆಳೆಯನ ಮಾತು ನೆನೆದು ಕಾಲು ನೋಡಿಕೊಂಡೆ.ಸುಮಾರು  ಅರ್ಧಗಂಟೆಯ ಚಾ


ರಣದ ನಂತರ  ನಮಗೆ ರಾಣಿ ಝರಿಯ ಸೌಂದರ್ಯ ಅನಾವರಣವಾಯಿತು.



ದೂರದಲ್ಲಿ ಬಲ್ಲಾಳರಾಯನ ಕೋಟೆಯ ಅವಶೇಷಗಳು ಅಸ್ಪಷ್ಟವಾಗಿ ಕಾಣುತ್ತವೆ. ಮಂಜಿನ ತೆರೆಯಲ್ಲಿ ಸೂರ್ಯನ ಕಿರಣಗಳು ಚದುರಿ ಸುಂದರ ವಿನ್ಯಾಸ ಮಾಡಿವೆ. ಆಗಾಗ್ಗೆ ಬೀಳುವ ತುಂತುರು ಹನಿಗಳು ಚಾರಣದಿಂದ ಬೆವೆತ ಮೈಗೆ ತಂಪು ನೀಡುತ್ತವೆ. ಕಣ್ಣು ಹಾಯಿಸಿದಷ್ಟೂ  ಹಸಿರೊದ್ದ ಗಿರಿಕಾನನಗಳು ಮನಕ್ಕೆ ಮುದ ನೀಡುತ್ತಿವೆ . ಈ ಸೌಂದರ್ಯ ನೋಡಿದ ನನ್ನ ಮನದ ಮಾತು ಹೊರಬಂದಿತು " ಒಂದು ರಾಜ್ಯ ಹಲವು ಜಗತ್ತು"...ನನ್ನ ಜೊತೆಯಲ್ಲಿದ್ದ  ಸ್ನೇಹಿತರು ಸಹ ಅದೇ ಮಾತುಗಳನ್ನು ಪುನರುಚ್ಚಾರ ಮಾಡಿದರು.  ನಿಧಾನವಾಗಿ ಸೂರ್ಯ ಪರ್ವತಗಳ ಹಿಂದೆ ಸರಿಯುವ ಚಿತ್ರಣ ಸರೆಹಿಡಿಯುವಾಗ " ಸೀಜೀವಿ ಹುಷಾರು ಹಿಂದೆ ಕಾಲಿಡಬೇಡಿ ಪ್ರಪಾತ ಇದೆ" ಎಂಬ ಚಂದ್ರಶೇಖರಯ್ಯ ರವರ ಧ್ವನಿ ಕೇಳಿ ಒಂದು ಹೆಜ್ಜೆ ಹಿಂದೆ ಇಟ್ಟು ಬಗ್ಗಿ ನೋಡಿದೆ.ಪ್ರಪಾತ! ಒಂದು ಕ್ಷಣ ಎದೆ ನಡುಗಿತು. ಆಗ ಅಲ್ಲೇ ಇದ್ದ ಸ್ಥಳೀಯರೊಬ್ಬರು " ಸರ್  ನೀವು ನಿಂತಿರುವ ಪ್ರಪಾತ ಬಹಳ ಆಳವಿದೆ. ಇಲ್ಲಿಂದ  ಯಾರಾದರೂ ಜಾರಿ ಬಿದ್ದರೆ ಅವರ ಮೂಳೆಗಳು ಸಿಗುವುದೂ ಕಷ್ಟ, ಬಲ್ಲಾಳರಾಯನನ್ನು ಟಿಪ್ಪು ಸುಲ್ತಾನ್ ಸೆರೆಹಿಡಿದ ಮೇಲೆ ಅವನ ರಾಣಿ ಇದೇ ಪ್ರಪಾತದಲ್ಲಿ ಬಿದ್ದು ಸಾವನ್ನಪ್ಪಿದರು. ಅದಕ್ಕೆ ಈ ಸ್ಥಳಕ್ಕೆ ರಾಣಿ ಝರಿ ಎಂಬ ಹೆಸರು ಬಂದಿದೆ" ಎಂದರು. ಮುಂದುವರೆದು ಅವರು ಮಾತನಾಡುತ್ತಾ  ಇಲ್ಲಿಂದ ಮುಂದೆ  ಬಲ್ಲಾಳರಾಯನದುರ್ಗಕ್ಕೆ  ಸುಮಾರು 7-8 ಕಿ.ಮೀ. ಚಾರಣ ಮಾಡಬಹುದು ಎಂದು ಮಾಹಿತಿ ನೀಡಿದರು.

ರಾಣಿಝರಿಯ ಸೌಂದರ್ಯ ಕಣ್ತುಂಬಿಕೊಂಡು ನಮ್ಮ ಕಾರಿನ ಕಡೆ ಹೆಜ್ಜೆ ಹಾಕಿದಾಗ ಮಳೆರಾಯ ಜೋರುಸದ್ದಿನೊಂದಿಗೆ  ಬಂದೇ ಬಿಟ್ಟ. ಕಾಡಿನಲ್ಲಿ ಮಳೆಯಲ್ಲಿ ನೆನೆಯುವುದೂ ಒಂದು ಅನನ್ಯ ಅನುಭವ .ಕಾರಿನಲ್ಲಿ ಕುಳಿತು ಹೊರನಾಡಿನ ಕಡೆ ಹೊರಟಾಗ ಮಳೆ ಇನ್ನೂ ಜೋರಾಯಿತು..


ಹೀಗೆ ಹಲವಾರು ವೈಶಿಷ್ಠ್ಯಗಳಿಂದ ಕೂಡಿರುವ ರಾಣಿಝರಿಯನ್ನು ನೋಡಿ ಒಂದೊಳ್ಳೆ ಚಾರಣಸ್ಥಳ ನೋಡಿದ ಸಾರ್ಥಕತೆ ನಮ್ಮದಾಯಿತು. ವಾರಾಂತ್ಯದ ಲಾಂಗ್ ಡ್ರೈವ್ ಹೋಗಿ ಎಂಜಾಯ್ ಮಾಡಿ ಪಶ್ಚಿಮ ಘಟ್ಟದ ಸುಂದರ ಸೌಂದರ್ಯದ ಸೊಬಗನ್ನು ಸವಿಯಲು ನೀವೂ ಒಮ್ಮೆ ರಾಣಿಝರಿಗೆ ಹೋಗಿ ಬನ್ನಿ..


ಸಿಹಿಜೀವಿ

ಸಿ ಜಿ ವೆಂಕಟೇಶ್ವರ.

ತುಮಕೂರು.