30 ಆಗಸ್ಟ್ 2021

ಕೃಷ್ಣನೇ ಸರ್ವಸ್ವ


 ಕೃಷ್ಣನೇ ಸರ್ವಸ್ವ


ಕೃಷ್ಣನೆಂದರೆ ಆಕರ್ಷಣೆ

 ಕೃಷ್ಣನೆಂದರೆ ದೈವ

 ಕೃಷ್ಣನೆಂದರೆ ಸರ್ವಸ್ವ

 ಕೃಷ್ಣನೆಂದರೆ ಜೀವನ|

ಅವನ ಸದಾ ಸ್ಮರಿಸುತಾ

ಮಾಡಿಕೊಳ್ಳೋಣ ನಮ್ಮ

ಜೀವನವ ಪಾವನ||

29 ಆಗಸ್ಟ್ 2021

ಸನ್ಮಾನ (ನ್ಯಾನೋ ಕಥೆ)

 


*ಸನ್ಮಾನ* (ನ್ಯಾನೋ ಕಥೆ)


ಕಾಲಿಲ್ಲದವಳು ಎಂದು ಅವಳನ್ನು ಬಾಲ್ಯದಲ್ಲಿ ಊರವರು ಮೂದಲಿಸಿದ್ದರು. 

ಇಂದು ಅದೇ ಊರಿನಲ್ಲಿ ಅಂದು ನಿರ್ಲಕ್ಷ್ಯಕ್ಕೆ ಒಳಗಾದ ಭಾಗ್ಯಮ್ಮ   ಸನ್ಮಾನ  ಸ್ವೀಕರಿಸುತ್ತಿದ್ದಾರೆ. 

"ವಿಕಲಚೇತನೆ ಭಾರತಕ್ಕೆ ಬಂಗಾರದ ಪದಕ ಪಡೆದಿರುವುದು ನಮ್ಮ ದೇಶದ ಭಾಗ್ಯ "ಎಂದು ಗ್ರಾಮ ಪಂಚಾಯಿತಿ ಅಧ್ಯಕ್ಷ  ಸಮಯಸಾಧಕ ಮೂರ್ತಿ ಭಾಷಣ ಮಾಡುವಾಗ ,ಸರ್ಕಾರ ಉಚಿತವಾಗಿ  ವಿಕಲಚೇತನರಿಗೆ ನೀಡುವ ಮೂರು ಚಕ್ರದ ಬೈಕ್ ನೀಡಲು ಸಾವಿರ ರೂ ಲಂಚ ಪಡೆದದ್ದು ಭಾಗ್ಯ ಳಿಗೆ ನೆನಪಾಯಿತು. 


#ಸಿಹಿಜೀವಿ


28 ಆಗಸ್ಟ್ 2021

ಸಂತನೊಂದಿಗೆ ಸಿಹಿಜೀವಿಯ ನಾಲ್ಕು ಮಾತು .ವಿಮರ್ಶೆ

 


"ಸಂತನೊಂದಿಗೆ  ಸಿಹಿಜೀವಿಯ ನಾಲ್ಕು ಮಾತುಗಳು"

  ಕರ್ನಾಟಕ ಸರ್ಕಾರ ಕನ್ನಡ ಪುಸ್ತಕ ಪ್ರಾಧಿಕಾರದ  ಧನಸಹಾಯ ಪಡೆದ
ಶ್ರೀಮತಿ ವಾಣಿ ಭಂಡಾರಿ ಮೇಡಂರವರ ಮೊದಲ ಗಜಲ್ ಸಂಕಲನದ ಬಗ್ಗೆ ಸಿಹಿಜೀವಿಯ ನಾಲ್ಕು ಮಾತುಗಳು . ಕನ್ನಡ ಉಪನ್ಯಾಸಕರು, ಕವಿಗಳು ,ಅಂಕಣಕಾರರು, ಗಜಲ್ ಕಾರರು , ಗಾಯಕರು ಈಗೆ ಬಹುಮುಖ ಪ್ರತಿಭೆಯಾದ ವಾಣಿ ಭಂಡಾರಿ ರವರು   ಏಳನೇ ತರಗತಿಯಿಂದಲೇ ಸಾಹಿತ್ಯ ಆಸಕ್ತಿಯನ್ನು ಹೊಂದಿ   ಸಾಹಿತ್ಯ ಚಟುವಟಿಕೆಗಳಲ್ಲಿ ಮತ್ತು ಸಂಗೀತ ಕಲಿಕೆಯನ್ನು ಮಾಡಿರುವ ಬಗ್ಗೆ ಗಜಲ್ ಸಂಕಲನದಲ್ಲಿ ಅವರ ನುಡಿಗಳಲ್ಲಿ ವ್ಯಕ್ತವಾಗುತ್ತದೆ. ಅವರ ಗಜಲ್ ಗಳು ಅವರ ದೀರ್ಘ  ಸಾಹಿತ್ಯದ ಕೃಷಿಯನ್ನು  ಸಶಕ್ತವಾಗಿ ಬಿಂಬಿಸುತ್ತವೆ.

     
ಮೂರು ವರ್ಷಗಳ ಹಿಂದೆ  ಹನಿ ಹನಿ ಇಬ್ಬನಿ ಸಾಹಿತ್ಯ ಬಳಗದಲ್ಲಿ ಪರಿಚಿತರಾದ ವಾಣಿ ಭಂಡಾರಿ ರವರು ಸದಾ ಹಸನ್ಮುಖಿ ಸಾಹಿತ್ಯದ ವಿವಿಧ ಪ್ರಕಾರಗಳಲ್ಲಿ ಬರೆಯುತ್ತಾ ನನ್ನಂತಹ ಕಲಿಕಾರ್ತಿಗಳಿಗೆ ಸಕಾಲಿಕ ಪ್ರೋತ್ಸಾಹ ಮತ್ತು ಸಲಹೆ ನೀಡುತ್ತಾ ಬಂದಿದ್ದಾರೆ.

   "ಸಂತೆನೊಳಗಿನ ಧ್ಯಾನ" ಎಂಬ ಶೀರ್ಷಿಕೆಯೇ  ಆಕರ್ಷಕ ಮತ್ತು ಕುತೂಹಲ ಪುಸ್ತಕ ಓದಿ ಮುಗಿಸಿದ ಮೇಲೆ ಈ ಶೀರ್ಷಿಕೆಯ ಔಚಿತ್ಯ ನನಗೆ ಮನವರಿಕೆಯಾಯಿತು.

ಈ  ಗಜಲ್ ಸಂಕಲನದಲ್ಲಿ  ಹೆಣ್ಣಿನಲ್ಲಿರುವ ನೋವುಗಳು, ಸಮಾಜದ ಅಂಕು ಡೊಂಕುಗಳು, ಸಮಯಸಾಧಕ ಜನರ ಡೋಂಗಿತನ, ನಮ್ಮ ಏಳಿಗೆಯನ್ನು ಕಂಡು  ಕಾಲೆಳೆಯುವ ಹಿತಶತೃಗಳ ಪ್ರಲಾಪ ,ಈಗೆ ವಿವಿಧ ವಿಷಯ ವಸ್ತುಗಳನ್ನು ಆಯ್ಕೆ ಮಾಡಿಕೊಂಡು ಬರೆದ ಬಹುತೇಕ ಗಜಲ್ ಗಳು ಸಮಾಜ ಮುಖಿಯಾಗಿರುವುದು ಗಮನಾರ್ಹ.

 
ಮೂರನೇ ಗಜಲ್ ನಲ್ಲಿ ಬರುವ
"ಕಣ್ಣಿದ್ದೂ ಕುರುಡಾಗಿ ನಿಂತಿದ್ದಾರೆ ಕೆಸರಿನ ಕಮಲದ ಏಳಿಗೆ ಸಹಿಸಲ್ಲ " ಎಂದು ಬದುಕ ಆಲಯದಲ್ಲಿ ಒಂಟಿ ಪಯಣ ಮಾಡುವಾಗ ಹೊಟ್ಟೆ ಕಿಚ್ಚಿನ ಜನರು ನೀಡುವ ಉಪದ್ರವಗಳ ಬಗ್ಗೆ ಸಂಕುಚಿತ ಭಾವದ ಮಾನವರಿಗೆ ಸೂಕ್ಷ್ಮವಾಗಿ ತಿವಿದಿದ್ದಾರೆ.

ಇತಿಹಾಸದ ಪುಟಗಳಲ್ಲಿ ,ಪುರಾಣಗಳ ಬೆಳಕಲ್ಲಿ ನೋಡಿದಾಗ ಹಿಂಸೆಯ ವಿರುದ್ದವಾಗಿ ಅಹಿಂಸೆ ,ದ್ವೇಷದ ವಿರುದ್ದವಾಗಿ ಪ್ರೀತಿಯು ಜಯ ಗಳಿಸಿರುವುದು ಸರ್ವ ವೇದ್ಯ.ಈ ಹಿನ್ನೆಲೆಯಲ್ಲಿ ಗಜಲ್ ಕಾರ್ತಿ ಯವರು
ಎಂಟನೆಯ ಗಜಲ್ ನಲ್ಲಿರುವಂತೆ
"ಗುದ್ದಲಿ ಹಾರೆ ಪಿಕಾಸಿ ಎಲ್ಲಾ ಚುಚ್ಚಿ ರಕ್ತ ಬರಿಸಿ ನಕ್ಕು ನಲಿದಿದ್ದವು|
ಕಾಲ ಕಾಯುವುದಿಲ್ಲ ಬಿಡಿ ಬೊಗಸೆ ಕಂಗಳ ಪ್ರೀತಿಗೂ ಒಮ್ಮೆ ಬಲ ಬರುತ್ತದೆ||"
ಎಂದು ಹೇಳುವ ಮೂಲಕ ಪ್ರೀತಿ ಮತ್ತು ಅಹಿಂಸೆಯನ್ನು ಜಗತ್ತಿನಲ್ಲಿ ಪಸರಿಸೋಣ ಎಂಬ ಸಂದೇಶ ನೀಡಿದ್ದಾರೆ.

ಗಜಲ್ ಸಂಕಲನದ ಹದಿನೈದನೇ ಗಜಲ್ ನಲ್ಲಿ ಕವಯಿತ್ರಿಯವರು

" ಕವಿಯ ಕೊಲ್ಲುವ ಭರದಲ್ಲಿ ಕವಿತೆಯ ಆಶಯ ಮರೆಯದಿರಿ|
ಕವಿಗೆ ಚುಚ್ಚುವ ಆವೇಶದಲ್ಲಿ ಕವಿಭಾವ ಏನೆಂದು ತಿಳಿಯದೇ ಮುನ್ನುಗ್ಗದಿರಿ||"
ಎಂದು ಮೊಸರಲ್ಲಿ ಕಲ್ಲು ಹುಡುಕುವ ಧೀರರಿಗೆ ಕಿವಿಮಾತು ಹೇಳಿರುವರು .
ಇದೇ ಭಾವದ ಇಪ್ಪತ್ತನೆಯ ಗಜಲ್ ನಲ್ಲಿ
"ಕವಿಯನ್ನು ಕೊಂದವರ ಕಂಡಿದ್ದೇನೆ ಆದರೆ ಕಾವ್ಯ ಸಾಯಲಿಲ್ಲ|
ಕವಿ ಭಾವವನ್ನು ಅರ್ಥೈಸದವರ ಕಂಡಿದ್ದೇನೆ ಆದರೆ ಭಾವ ಬತ್ತಲಿಲ್ಲ||"
ಎಂದು ಕವಿಭಾವ ಅರ್ಥೈಸದೆ ಬರೀ ಒಣ ಟೀಕೆ ಮಾಡುವ ಮೂಢರ ಬಗ್ಗೆ ಕನಿಕರ ತೋರುತ್ತಲೇ ಅಂತವರಿಗೆ ಚಾಟಿ ಬೀಸಿದ್ದಾರೆ.

ಪ್ರೀತಿಯಲ್ಲಿ ಮೋಸ ಮಾಡಿ ಕೈಕೊಟ್ಟು ಓಡಿ ಹೋದ ಪ್ರೇಯಸಿಯ ನೆನದು ತನ್ನ ತಾನೆ ಸಮಾಧಾನ ಮಾಡಿಕೊಳ್ಳುವ ಪರಿಯನ್ನು ನಲವತ್ತೈದನೇ ಗಜಲ್ ಬಹಳ ಚೆನ್ನಾಗಿ ಬಿಂಬಿಸುತ್ತದೆ.
"ಹೃದಯ ಹಿಂಡಿದ ಕಿರಾತಕಿಯ ನೆನೆಪುಗಳು ಏತಕೆ ಸುಮ್ಮನಿದ್ದು ಬಿಡು|
ನಿನ್ನಂತರಂಗದ ಒಲವು ದಿಕ್ಕರಿಸಿದ ಜಾರಿಣಿಯ ಪ್ರೀತಿ ಏಕೆ ಬೇಕು ಕೊರಗದೇ ಇದ್ದು ಬಿಡು||"
ಎಂದು ಖಾರವಾದ ಪದಗಳಲ್ಲಿ ಹೇಳಿದ್ದಾರೆ .

ಪ್ರೀತಿ ಇಲ್ಲದ ಮೇಲೆ ಹೂವು ಅರಳುವುದು ಹೇಗೆ ? ಎಂಬ ಣವಿ ಯವರ ಕಾವ್ಯ ದಂತೆ
"ಒಲವಿರದ ಮನದ ಬಾವಿಯೊಳಗೆ ವಾಣಿ ಬದುಕಲಾರಳು |
ಗೋರಿಯೊಳಗೆ ಚುರನಿದ್ರಿಸಲು ಓಗೊಟ್ಟು ಬಂದಾಗಿದೆ ಗಾಲಿಬ್|| ಎಂಬ ಶೇರ್ ನಲ್ಲಿ ಪ್ರೀತಿಯಿರುವೊಡೆ ಮಾತ್ರ ನಾನಿರುವೆ ಪ್ರೀತಿಯಿಲ್ಲದೆಡೆ ಇರುವುದಕ್ಕಿಂತ ಇಹವ ತ್ಯಜಿಸುವುದೇ ಮೇಲು ಎಂದು ಅಭಿವ್ಯಕ್ತಿ ಪಡಿಸಿದ್ದಾರೆ.

ಹೀಗೆ ಒಂದಕ್ಕಿಂತ ಒಂದು ಚೆಂದದ ೬೦  ಗಜಲ್ ಒಳಗೊಂಡ ಈ ಸಂಕಲನ ಓದುಗರ ಮನ ಕಲಕದೆ ಇರದು.
ಇನ್ನೂ ಸ್ವಲ್ಪ  ಗಜಲ್ ಸಾಹಿತ್ಯ ಅಧ್ಯಯನ ಮಾಡಿದರೆ ಮತ್ತು ವಿವಿಧ ಪ್ರಕಾರಗಳ ಗಜಲ್ ಬರೆಯಲು ಪ್ರಯತ್ನ ಪಟ್ಟರೆ ಇನ್ನೂ ಸುಂದರ ರಚನೆ ವಾಣಿ ಭಂಡಾರಿ ಮೇಡಂ ರವರಿಗೆ ಬರೆಯಲು ಸಾದ್ಯವಿದೆ.ಅವರ ಲೇಖನಿಯಿಂದ ಮುಂದಿನ ದಿನಗಳಲ್ಲಿ ಗಜಲ್ ಸಂಕಲನ ಸೇರಿ ಕವನ, ವಿಮರ್ಶೆ, ಅಂಕಣರಹ ,ಕಥೆ, ಕಾದಂಬರಿ ಹೀಗೆ ವಿವಿದ ಪ್ರಕಾರಗಳಲ್ಲಿ ಪುಸ್ತಕಗಳು ಪ್ರಕಟವಾಗಲಿ ಎಂದು ಹಾರೈಸುವೆ.

        ಗಜಲ್ ಸಂಕಲನ:-ಸಂತನೊಳಗಿನ ಧ್ಯಾನ
ಕವಯಿತ್ರಿ:- ವಾಣಿ ಭಂಡಾರಿ
ಬೆಲೆ:-೧೦೦/-
ಪ್ರಕಾಶನ : ಭಂಡಾರಿ ಪ್ರಕಾಶನ
ಶಿವಮೊಗ್ಗ
ವರ್ಷ : ೨೦೨೦

*ಸಿಹಿಜೀವಿ*
ಸಿ ಜಿ ವೆಂಕಟೇಶ್ವರ


27 ಆಗಸ್ಟ್ 2021

ಕೊರೆಯುವವರು ಮತ್ತು ಸುತ್ತಿಗೆಗಳು


 

ಕೊರೆಯುವವರು ಮತ್ತು ಸುತ್ತಿಗೆಗಳು 

ಕೆಲವೊಮ್ಮೆ ನಮ್ಮ ಆತ್ಮೀಯರು, ಬಂಧುಗಳು, ಸಹೋದ್ಯೋಗಿಗಳು, ನಮ್ಮ ಜೊತೆಗೆ  ಮುಖತಃ ಅಥವಾ ಪೋನ್ ನಲ್ಲಿ ಮಾತನಾಡುವಾಗ ನಮಗೆ ಅವರ ಮಾತು ಕೇಳಲು ಸಮಯವಿದೆಯೇ? ಅಥವಾ ಇಷ್ಟ ಇದೆಯಾ? ಎಂದು ಕೇಳದೇ ಟೇಕನ್  ಫಾರ್ ಗ್ರಾಂಟೆಡ್ ಎಂಬಂತೆ ಗಂಟೆಗಟ್ಟಲೆ ಮಾತನಾಡಲು ಶುರು ಮಾಡುವರು. ಇದು ನಮಗೆ ಕಿರಿಕಿರಿಯಾದರೂ ಅವರೊಂದಿಗೆ ನೇರವಾಗಿ ನಮ್ಮ ಅಭಿಪ್ರಾಯಗಳನ್ನು ತಿಳಿಸಲು ನಮಗೂ ಮುಜುಗರ .

ಇನ್ನೂ ಕೆಲ ಮಹಾಶಯರು ಎದುಗಿರುವವರು ಮಾತನಾಡಲು ಅವಕಾಶ ನೀಡದೆ ತಾವೆ ವಟ ವಟ ಮಾತನಾಡುತ್ತಾ ತಮ್ಮ ಪಾಂಡಿತ್ಯ ತೋರುವರು.ಕೆಲವೊಮ್ಮೆ ವಿತಂಡವಾದಕ್ಕೂ ಇಳಿಯುವರು.
ಇಂತವರಿಂದ ಕೆಲವೊಮ್ಮೆ ನಾವು ತಪ್ಪಿಸಿಕೊಳ್ಳಲೇ ಬೇಕು ಅದಕ್ಕೆ ನಾವು ಹೀಗೆ ಮಾಡಬಹುದು.

೧ ವ್ಯಕ್ತಿಗಳು ಕರೆಯಲ್ಲಿ ಇದ್ದರೆ ನನಗೆ ಮತ್ತೊಂದು ಮುಖ್ಯವಾದ ಕರೆ ಬರುತ್ತಿದೆ ನಂತರ ಕರೆ ಮಾಡುವೆ ಎಂದು ಹೇಳಿ ಕರೆ ಕಟ್ ಮಾಡಬಹುದು.

ನಮಗೆ ಇಷ್ಟವಿಲ್ಲದಿದ್ದರೂ
ಕೆಲವರು ಮಾಡುತ್ತಲೆ 
ಇರುವರು ಕರೆ|
ಅಂತವರಿಗೆ ಮತ್ತೊಂದು
ಕರೆಯಿದೆ ಎಂದು
ಪೋನ್ ಕಟ್ 
ಮಾಡುವುದು ಖರೆ||

೨ ಕೊರೆಯುವ ವ್ಯಕ್ತಿ ಎದುರುಗಿದ್ದರೆ ಒಂದು ಅತೀ ತುರ್ತು ಕೆಲಸವಿದೆ ಎಂದು ಎದ್ದು ಹೋಗಬಹುದು.

ಕೆಲವರು ಕೊರೆಯುತ್ತಾರೆ
ಕೇಳುವವರ ತಾಳ್ಮೆ
ಪರೀಕ್ಷೆ ಮಾಡಲು|
ಅಂತವರ ಮುಂದೆ
ಅವರಿಗೆ ಗೊತ್ತಿಲ್ಲದೆ
ಕಿವಿಯಲ್ಲಿ 
ಇಟ್ಟುಕೊಂಡಿರುವೆ 
ಇಯರ್ ಪೋನ್
ಹೊಸ ಮಾಡೆಲ್ಲು||



೩ ಸುತ್ತಿಗೆ ಆಸಾಮಿ ಜೊತೆಗೆ ಕಾರ್ಯ ನಿರ್ವಹಿಸುವುದು ಅನಿವಾರ್ಯವಾದರೆ ಅವರ ಮಾತಿಗೆ ಕಡಿಮೆ ಪ್ರತಿಕ್ರಿಯೆ ನೀಡಿ ‌ನಮ್ಮ ಕೆಲಸದಲ್ಲಿ ತಲ್ಲೀನವಾಗುದು.

ಕೆಲವರೇ ಹಾಗೆ 
ಮಾತು ನಿಲ್ಲಿಸುವುದಿಲ್ಲ
ಒಂದು ಅಥವಾ ಎರಡು
ಸುತ್ತಿಗೆ|
ಅದಕ್ಕೆ ಅಂತವರಿಗೆ
ನಾಮಕರಣವಾಗುತ್ತದೆ
ಸುತ್ತಿಗೆ||

ಸಿಹಿಜೀವಿ
ಸಿ ಜಿ ವೆಂಕಟೇಶ್ವರ.

26 ಆಗಸ್ಟ್ 2021

ಸಿಹಿಜೀವಿಯ ಬಾಳಿನ ಏಳು ಬೀಳುಗಳು .


 


ಸಿಹಿಜೀವಿಯ ಜೀವನದ  ಏಳು ಬೀಳುಗಳು
ಸಾಮಾನ್ಯ ಬಡ ಕುಟುಂಬದಿಂದ ಬಂದ ನಾನು ಹುಟ್ಟಿದ ಐದು ವರ್ಷಕ್ಕೆ ಅಪ್ಪ ಹಾವು ಕಡಿದು ತೀರಿಕೊಂಡರು . ಅಮ್ಮನ ನೆರಳಲ್ಲಿ ಬೆಳೆದ ನಾನು ಶಾಲೆಗೆ ಹೋಗುತ್ತಾ ರಜಾದಿನಗಳಲ್ಲಿ  ಅಮ್ಮನ ಜೊತೆಯಲ್ಲಿ  ಈರುಳ್ಳಿ ಕೊಯ್ಯುವ,  ಹತ್ತಿ ಬಿಡಿಸುವ , ರಾಗಿ ಹೊಲ ಕೊಯ್ಯುವ, ರಸ್ತೆ ಕಾಮಗಾರಿ,  ಬಾವಿ ಮಣ್ಣು ಹೊರುವ ಕೂಲಿ ಕೆಲಸ  ಕೆಲಸ ಮಾಡುತ್ತಾ ಬೆಳೆವನು

್ರಾಥಮಿಕ ಶಾಲಾ ಹಂತದಲ್ಲೇ ಓದಿನಲ್ಲಿ ಮುಂದಿದ್ದ ನನ್ನನ್ನು ನಮ್ಮ ತಿಪ್ಪೇಸ್ವಾಮಿ ಶಿಕ್ಷಕರು ಶಾಲಾ ಮಾನಿಟರ್ ಮಾಡಿದ್ದರು. ಇದು ನನ್ನಲ್ಲಿ ಆತ್ಮವಿಶ್ವಾಸವನ್ನು ಹೆಚ್ಚಿಸಿತು .ಎಷ್ಟೋ ಬಾರಿ ನಮ್ಮ ಶಿಕ್ಷಕರು ರಜೆ ಮೇಲೆ ತರಳಿದಾಗ ನಾನೇ ಇಡೀ ನಾಲ್ಕು ತರಗತಿಗಳನ್ನು ಆ ಚಿಕ್ಕ ವಯಸ್ಸಿನಲ್ಲಿಯೇ ನಿಭಾಯಿಸಿದ್ದನ್ನು ನೆನದು ಈಗಲೂ ನನ್ನ ಬಗ್ಗೆ ನನಗೇ ಹೆಮ್ಮೆ ಆಗುತ್ತದೆ.

ಐದನೆಯ ತರಗತಿಗೆ ನಮ್ಮ ಚೌಡಗೊಂಡನಹಳ್ಳಿ ಗ್ರಾಮದಿಂದ  ಎರಡು ಕಿಲೋಮೀಟರ್ ದೂರದ ಉಪ್ಪರಿಗೇನಹಳ್ಳಿ ಗ್ರಾಮಕ್ಕೆ ಹೋಗಬೇಕಾಯಿತು .ಪ್ರತಿದಿನ ನಮ್ಮ ಪುಸ್ತಕಗಳನ್ನು ಹೊತ್ತುಕೊಂಡು ಕೈಚೀಲಗಳಿಲ್ಲದೇ ಒಂದು ಎಲೆಸ್ಟಿಕ್ ಕಟ್ಟಿಕೊಂಡು ಹೆಗಲಮೇಲೆ ಹೊತ್ತು ಮತ್ತೊಂದು ಕೈಯಲ್ಲಿ ಅಮ್ಮ ನೀಡಿದ ಮುದ್ದೆ ಸಾರು ಇರುವ ಟಿಪನ್ ಕ್ಯಾರಿಯರ್ ಹಿಡಿದು ದಿನವೂ  ನಾಲ್ಕು ಕಿಲೋಮೀಟರ್ ದೂರವನ್ನು ಕಾಲಲ್ಲಿ ಚಪ್ಪಲಿಯೂ ಇಲ್ಲದೆ ನಡೆದುಕೊಂಡು ಹೋಗಿ ವಿದ್ಯಾಭ್ಯಾಸ ಮುಂದುವರೆಸಿದೆನು.

ನಾನು ಒಂಭತ್ತನೆಯ ತರಗತಿ ಪಾಸಾಗಿ ಬೇಸಿಗೆ ರಜೆಯಲ್ಲಿ ಅಮ್ಮನ ಜೊತೆಗೆ ನಮ್ಮೂರಿಂದ ನೂರೈವತ್ತು ಕಿಲೋಮೀಟರ್ ದೂರದಲ್ಲಿರುವ ಶಿವಮೊಗ್ಗ ಕ್ಕೆ ಭತ್ತ ಕೊಯ್ಯುವ ಮತ್ತು ಬಡಿಯಲು ಕೂಲಿ ಹೋಗಿದ್ದೆ. ಅಲ್ಲಿ ನಾಯಿಗೂಡಿಗೂ ಕಡೆಯಾದ ಮನೆಗಳಲ್ಲಿ ಸೊಳ್ಳೆಗಳ ಕಾಟ ಸಹಿಸಿಕೊಂಡು ಕಷ್ಟ ಪಟ್ಟು ದುಡಿದರೂ ಮೆಸ್ತ್ರಿಯ ಮೋಸದಿಂದ ಮಾಡಿದ ಶ್ರಮಕ್ಕೆ ಸರಿಯಾದ ಕೂಲಿ ಸಿಗದೇ ಹುಟ್ಟೂರಿಗೆ ಬೇಸರದಿಂದ ಹಿಂತಿರುಗಿದ್ದೆ.

ಕಷ್ಟಗಳು ಒಟ್ಟಿಗೆ ಬರುತ್ತವಂತೆ , ಒಮ್ಮೆ ಜ್ವರ ಎಂದು ಅಮ್ಮ ನನ್ನ ಹೊರ ಕೆರೆ ದೇವ ಪುರದ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋದಾಗ ಯಾವುದೋ ಪರೀಕ್ಷೆ ಮಾಡಿ ನಿಮ್ಮ ಮಗನಿಗೆ ಟಿ ಬಿ ಇದೆ ಎಂದರು . ಹಾಗಂದರೆ ಏನು ಎಂದು ನನಗೂ ನನ್ನ ಅಮ್ಮನಿಗೆ ತಿಳಿಯಲಿಲ್ಲ ,ಡಾಕ್ಟರ್ ಆ ಖಾಯಿಲೆಯ ಬಗ್ಗೆ ವಿವರಿಸಿದಾಗ ಅಮ್ಮನ ಕಣ್ಣಲ್ಲಿ ಧಾರಾಕಾರವಾಗಿ ನೀರು ಹರಿಯಿತು. ಡಾಕ್ಟರ್ ಅಮ್ಮನ ಸಮಾಧಾನ ಮಾಡಿ ಪ್ರತಿ ದಿನ ಇವನಿಗೆ ಮೂರು ತಿಂಗಳ ಕಾಲ ದಿನಕ್ಕೆ ಒಂದು  ಇಂಜೆಕ್ಷನ್ ಮತ್ತು ಮಾತ್ರೆ ಕೊಡುವೆ ಎಂದರು.
ದಿನವೂ ಉಪ್ಪೇರಿಗೇನಹಳ್ಳಿಗೆ ಶಾಲೆ ಗೆ ತರಳಿ ಎರಡು ಪಿರೀಯಡ್ ಪಾಠ  ಮುಗಿಸಿಕೊಂಡು ಶಿಕ್ಷಕರ ಅನುಮತಿ ಪಡೆದು ಬಸ್ ಏರಿ ಹೊರ ಕರೆ ದೇವ ಪುರದ ಆಸ್ಪತ್ರೆಗೆ ತೆರಳಿ ಇಂಜೆಕ್ಷನ್ ಪಡೆದು ಮತ್ತೆ ಶಾಲೆಗೆ ಬಂದು ಸಂಜೆ ನಡೆದುಕೊಂಡು ನಮ್ಮ ಊರು ತಲುಪುತ್ತಿದ್ದೆ.

ಹೀಗೆ ಮೂರು ತಿಂಗಳ ನಂತರ ಪುನಃ ಪರೀಕ್ಷೆ ಮಾಡಿದ ಡಾಕ್ಟರ್ ನಾನು ಟಿ ಬಿ ರೋಗದಿಂದ ಸಂಪೂರ್ಣವಾಗಿ ಗುಣಮುಖ ಆಗಿರುವುದನ್ನು ಅಮ್ಮನಿಗೆ ಹೇಳಿದರು ಅಮ್ಮ ಮತ್ತೆ ಅತ್ತರು ಈ ಬಾರಿ ಸಂತೋಷದಿಂದ .ಅಲ್ಲೇ ಎಲ್ಲರಿಗೂ ಕೇಳುವಂತೆ ಚೌಡವ್ವ, ತಿಮ್ಮಪ್ಪ ನೀವು ದೊಡ್ಡೋರು ಕಣಪ್ಪ ಎಂದು ಆಕಾಶ ನೋಡಿ ಕೈಮುಗಿದರು.

ಎಸ್ಸೆಸ್ಸೆಲ್ಲಿ ಓದಲು ಅಮ್ಮ ಯರಬಳ್ಳಿಯ ಮಾವನವರ ಮನೆಗೆ ಕಳಿಸಿದರು. ಬೆಳಿಗ್ಗೆ ಎದ್ದು ಎತ್ತು ಎಮ್ಮೆಗಳ ಸಗಣಿ ಬಾಚಿ . ಕೈಕಾಲು ಮುಖತೊಳೆದುಕೊಂಡು ಎಂಟು ಗಂಟೆಗೆ ಕಾಲೇಜಿಗೆ ಹೋಗಿ ,ಹನ್ನೊಂದು ಗಂಟೆಗೆ ಮನೆಗೆ ಬಂದು ಊಟ ಮಾಡಿ  ಎಮ್ಮೆ ಮೇಯಿಸಲು ಹೊಲ ಕ್ಕೆ ಹೋಗಿ ಅಲ್ಲೇ ಹೋಮ್ ವರ್ಕ್ ಮಾಡುತ್ತಾ ಓದುತ್ತಿದ್ದೆ  .ಹೀಗೇ ಎಮ್ಮೆ ಮೇಯಿಸುತ್ತಾ ಪರೀಕ್ಷೆ ಬರೆದ ನಾನು ಇಡೀ ಕಾಲೇಜಿಗೆ ಅತೀ ಹೆಚ್ಚು ಅಂಕ ಪಡೆದು ಫಸ್ಟ್ ಕ್ಲಾಸ್ ನಲ್ಲಿ ಪಿ ಯು ಸಿ ಪಾಸದ ನಾನು ಅಕ್ಕ ಪಕ್ಕದ ಹಳ್ಳಿಯವರ ಬಾಯಲ್ಲಿ ಹೊಗಳಿಸಿಕೊಂಡು ಒಳಗೊಳಗೇ ಖುಷಿ ಪಟ್ಟೆ .

ಶಿಕ್ಷಕನಾಗಬೇಕೆಂದು ಟಿ ಸಿ ಎಚ್ ಕಾಲೇಜು ಸೇರಿದೆ ಆರು ತಿಂಗಳಾದ ಮೇಲೆ ತಿಳಿಯಿತು ಅದು ಅನಧಿಕೃತವಾದ ಕಾಲೇಜ್ ಎಂದು .ಪರೀಕ್ಷೆ ಬರೆಯಲು ಸರ್ಕಾರ ಒಪ್ಪದಾದಾಗ ನನ್ನ ಗೆಳೆಯರ ಜೊತೆಯಲ್ಲಿ ವಿಧಾನಸೌಧದ ಮುಂಬಾಗ ಸತ್ಯಾಗ್ರಹ ಮಾಡಿದೆವು ಸರ್ಕಾರದವರ ಮನ ಕರಗಲಿಲ್ಲ. ಅಷ್ಟೂ ಜನ ಸ್ನೇಹಿತರು ಅಲ್ಲೇ ಕಣ್ಣಿನಲ್ಲಿ ನೀರು ಇಂಗುವವರೆಗೆ ಅತ್ತು, ನಮ್ಮ ಊರಿಗೆ ಹಿಂತಿರುಗಿದೆವು.

ಸುದೀರ್ಘ ಕಾನೂನು ಹೋರಾಟದ ಮೂಲಕ ಹೈಕೋರ್ಟ್ ನಮ್ಮ ಟಿ ಸಿ ಹೆಚ್ ಪರೀಕ್ಷೆ ಬರೆಯಲು ಅನುಮತಿ ನೀಡಿತು.
ಟಿ ಸಿ ಹೆಚ್ ಮುಗಿಸಿ 1999 ರಲ್ಲಿ ಸರ್ಕಾರಿ  ಪ್ರಾಥಮಿಕ ಶಿಕ್ಷಕನಾಗಿ ಹುಚ್ಚವ್ವನಹಳ್ಳಿಯಲ್ಲಿ ಕೆಲಸಕ್ಕೆ ಸೇರಿದೆ.
ಮೊದಲ ತಿಂಗಳ ಸಂಬಳದಲ್ಲಿ ಅಮ್ಮನಿಗೆ ಸೀರೆ ಕೊಡಿಸಿದೆ ಅಮ್ಮ ಅಂದೂ ಅತ್ತರು.

ಪ್ರಸ್ತುತ ಪ್ರೌಢಶಾಲಾ ಶಿಕ್ಷಕನಾಗಿ ಕೆಲಸ ಮಾಡುತ್ತಿರುವೆ. ಈ ೨೧ ವರ್ಷಗಳಲ್ಲಿ ಸಾವಿರಾರು ಮಕ್ಕಳಿಗೆ ವಿದ್ಯಾದಾನ ಮಾಡಿದ ಸಂತೃಪ್ತಿ ಇದೆ. ಜಿಲ್ಲಾ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕಾರ ಲಭಿಸಿದೆ . ಹಲವು ಸಂಘಸಂಸ್ಥೆಗಳು ನನ್ನ ಕಿರು ಸಾಧನೆಯ ಗುರ್ತಿಸಿ  ರಾಜ್ಯ ಮಟ್ಟದ ಸಾಹಿತ್ಯ ಪುರಸ್ಕಾರ ನೀಡಿವೆ.
ಸಾಹಿತ್ಯದ ಆಸಕ್ತಿ ಕ್ರಮೇಣವಾಗಿ ಬೆಳೆದು , ಕಥೆ, ಕವನ ,ಗಜಲ್ ಹನಿಗವನ ,ಕಾದಂಬರಿ , ಹೀಗೆ ವಿವಿಧ ಪ್ರಕಾರಗಳಲ್ಲಿ  ಬರೆಯುತ್ತಿರುವೆ.
ಈಗಾಗಲೆ ಮೂರು ಪುಸ್ತಕ ಪ್ರಕಟಮಾಡಿರುವೆ .ಇನ್ನೂ ಬರೆಯುತ್ತಾ ಇರುವೆ.
ಮಡದಿ ,ಇಬ್ಬರು ಹೆಣ್ಣು ಮಕ್ಕಳು ತಾಯಿಯೊಂದಿಗೆ  ಸಂತಸದಿಂದ ಜೀವನ ಸಾಗಿಸುತ್ತಿರುವೆ. ಇದಕ್ಕೆ ನನ್ನ ಅಣ್ಣ ಮತ್ತು ಕುಟುಂಬದ ಬೆಂಬಲ ಸಹಕಾರ ಮರೆಯಲಾರೆ .
ನಲವತ್ತಾರು ವಸಂತಗಳನ್ನು ಪೂರೈಸಿರುವ ನಾನು ಜೀವನದಲ್ಲಿ ಹಲವಾರುಏಳು ೀಳುಗಳಿಗೆ ಸಾಕ್ಷಿಯಾಗಿರುವೆ.  ಕಷ್ಟಗಳು ಬಂದಾಗ ಕುಗ್ಗದೇ ಸುಖಬಂದಾಗ ಹಿಗ್ಗದೆ ಸ್ಥಿತಪ್ರಜ್ಞ ನಾಗಲು ಪ್ರಯತ್ನ ಮಾಡುತ್ತಿರುವೆ.ಮುಂದಿನ ಜೀವನ ಬಂದಂತೆ ಸ್ವೀಕರಿಸಲು ಮಾಗುತ್ತಿದ್ದೇನೆ ..

*ಸಿಹಿಜೀವಿ
ಸಿ ಜಿ ವೆಂಕಟೇಶ್ವರ