09 ಜೂನ್ 2020

ಸಂಕಷ್ಟ ಹರ ಗಣಪನ ಕೃಪೆ(ಕಥೆ)


ಕಥೆ
ಸಂಕಷ್ಟ ಹರ ಗಣಪನ ಕೃಪೆ

ಲಕ್ಷಾಂತರ ಕಾಂಕ್ರೀಟ್ ಕಟ್ಟಡಗಳು ಗಗನ ಚುಂಬಿಗಳಾಗಿ ಬೆಂಗಳೂರು ಕಾಂಕ್ರೀಟ್ ಸಿಟಿ ಎಂದು ಕರೆದರೂ,ಬೆಂಗಳೂರು ಗಾರ್ಡನ್ ಸಿಟಿ ಎಂದು ಪರಿಚಿತವಾಗಿದೆ.
ಅದಕ್ಕೆ ಕಾರಣ ಕಬ್ಬನ್ ಪಾರ್ಕ್, ಲಾಲ್ ಬಾಗ್ ಪ್ರಮುಖವಾದ ಕಾರಣವಾದರೂ ವಿವಿಧ ಬಡಾವಣೆಗಳ  ಗಿಡ ಮರಗಳ ಕೊಡುಗೆಯೂ ಕಡಿಮೆಯೇನಲ್ಲ.

ವಿಜಯ ನಗರದ ಮೂರನೆಯ ಮುಖ್ಯರಸ್ತೆಯ, ಐದನೆಯ ಅಡ್ಡರಸ್ತೆಯಲ್ಲಿ  ಬಹಳ ಹಳೆಯ ಕಾಲದ ಅಶ್ವಥ್ಥ ವೃಕ್ಷ  ಇಡೀ ವಿಜಯ ನಗರಕ್ಕೆ ಸೌಂದರ್ಯ ಮತ್ತು ಧಾರ್ಮಿಕ, ಮತ್ತು ಸಂಸ್ಕೃತಿಯ  ಪ್ರತೀಕವಾಗಿತ್ತು. ವೈಜ್ಞಾನಿಕ ಚಿಂತಕರಿಗೆ ಈ ಮರ ಆಮ್ಲಜನಕ ನೀಡುವ ಸಾಗರವೆಂದು ಗೌರವವಿದ್ದರೆ, ಆಸ್ತಿಕರಿಗೆ ಈ ಮರ ಬ್ರಹ್ಮ, ವಿಷ್ಣು ಮಹೇಶ್ವರ ಮೂರು ದೇವರು ಒಂದೆಡೆ ಸೇರಿದ ದೈವ ಸ್ವರೂಪದ ಮರ , ಎಂದು ಪೂಜ್ಯ ಭಾವನೆ ಹೊಂದಿದ್ದರು.

ಅಂದು ಸಂಕಷ್ಠಿ ಗಣಪತಿ ಪೂಜೆ ಮಾಡಲು  ನಿರ್ಧಾರ  ಮಾಡಿದ  ಸುಜಾತ ಬೆಳಗಿನ ಜಾವ ಬೇಗನೆ ಎದ್ದು ಸ್ನಾನ ಮಾಡಿ , ಅವಳಿಗೆ ಇಷ್ಟವಾದ ಹಳದಿ ಬಣ್ಣದ ರೇಷ್ಮೆ ಲಂಗ , ಕೆಂಪುಬಣ್ಣದ ದಾವಣಿ ಧರಿಸಿಕೊಂಡು ಭಾವ ತಂದಿದ್ದ ಎರಡು ಮೊಳ ಹೂ ಮುಡಿದು, ಸೀರೆಗೆ ಮ್ಯಾಚಿಂಗ್ ಆಗುವ ಕೆಂಪು ಹಳದಿ ಬಳೆಗಳ ತೊಟ್ಟು, ಕನ್ನಡಿಯಲ್ಲಿ ನೋಡಿಕೊಂಡು   ಹಣೆಗೆ ಕುಂಕುಮವನ್ನು ಇಟ್ಟುಕೊಂಡು, ತನ್ನ ಸೌಂದರ್ಯವನ್ನು ತಾನೇ ನೋಡಿಕೊಂಡು ಸಂತಸದಿಂದ, ದೇವರಿಗೆ ಹೂ , ಹಣ್ಣು  , ಕಾಯಿ ತೆಗೆದುಕೊಳ್ಳಲು ದೇವರ ಕೋಣೆಯ ಕಡೆ ನಡೆದಳು
" ಅಕ್ಕಾ, ಬರೀ ಬಿಡಿ ಹೂ ಇದ್ದಾವೆ, ಕಟ್ಟಿರೋ ಹೂ ಇಲ್ವಾ? ನಾನೀಗ ಅಶ್ವಥ್ ಮರದ ಗಣಪ ಪೂಜೆ ಮಾಡೋಕೆ ಹೋಗ್ಬೇಕು"
" ನಿನ್ನೆ ಕಟ್ಬೇಕು ಅಂದ್ಕೊಂಡೆ ,ಬೇರೆ ಕೆಲ್ಸ ಜಾಸ್ತಿ ಆಗಿ ,ಕಟ್ಲಿಲ್ಲ ಕಣೇ ಸುಜು, ಅಲ್ಲೆ ಮರದತ್ರ ಕಟ್ಟಿ , ದೇವರಿಗೆ ಹಾಕ್ಬಿಡಪ್ಪ"
" ಆಯ್ತಕ್ಕ  ಅಂಗೆ ಮಾಡ್ತಿನಿ"
ಎಂದು ದೇವರ ಪೂಜೆ ಸಾಮಾನುಗಳಿರುವ ಬುಟ್ಟಿ ತೆಗೆದುಕೊಂಡು ಅಶ್ವಥ್ ಗಣೇಶ ಮರದ ಕಡೆಗೆ ಹೊರಟಳು ಸುಜಾತ .

ಈಗಾಗಲೇ ಯಾರೋ ಗಣೇಶನ ಪೂಜೆ ಮಾಡಿ ಹೂ ಅಲಂಕಾರ ಮಾಡಿದ್ದರು.  ಮರದ ಕೆಳಗೆ ಬಂದು , ದೇವರಿಗೆ ಮತ್ತು ಮರಕ್ಕೆ ಕೈ ಮುಗಿದು, ಆಶ್ವಥ ಕಟ್ಟೆಯ ಮೇಲೆ ಕುಳಿತು , ಬುಟ್ಟಿಯಲ್ಲಿ ತಂದ ಬಿಡಿ ಹೂ ಮತ್ತು ದಾರ ತೆಗೆದುಕೊಂಡು ,ಹೂ ಕಟ್ಟಲು ಶುರಮಾಡಿದಳು,  ಅದೇ ಜಾಗಕ್ಕೆ ಎರಡು ಪಾರಿವಾಳಗಳು ಹಾರಿ ಬಂದು  , ಗಣಪತಿಯ ಬಲಭಾಗದಲ್ಲಿ ನಿಂತು ದೇವರ ಆಶೀರ್ವಾದ ಪಡೆದ ದೃಶ್ಯ ನೋಡಿದ  ಸುಜಾತ ಮನದಲ್ಲೇ ಅಂದುಕೊಂಡಳು,
"ಭಗವಂತ ನಾನು ಮತ್ತು ಸತೀಶ ಎಂದು ಈ ಪಕ್ಷಿಗಳ ರೀತಿಯಲ್ಲಿ ಬಂದು ನಿನ್ನ ಆಶೀರ್ವಾದ ಪಡೆವೆವು ಸ್ವಾಮಿ "ಎಂದುಕೊಂಡು ಹೂಕಟ್ಟಿ ಗಣಪತಿಯ ಪೂಜೆ ಮಾಡುವಾಗ
ದೇವರ ಬಲಭಾಗದಿಂದ ಹೂ ಬಿತ್ತು, ಅದನ್ನು ನೋಡಿ ಬಹಳ ಆನಂದಿಂದ ತೆಗೆದುಕೊಂಡು ಕಣ್ಣಿಗೊತ್ತಿಕೊಂಡು ,
" ನನ್ನ ಸತೀಶ ಸಿಗುವ  , ಓ ದೇವ ಧನ್ಯವಾದಗಳು "
ಎಂದು ಅಡ್ಡ ಬಿದ್ದು ,
ಮನೆ ಕಡೆ ಹೊರಟಳು .

ತಿಂಡಿ ತಿಂದು ಪುಸ್ತಕಗಳನ್ನು ತೆಗೆದುಕೊಂಡು, ಕಾಲೇಜಿಗೆ ಹೊರಟಳು ಸುಜಾತ .
" ನಿಮ್ಮ ಊರಿಂದ ನಿನಗೆ ಪತ್ರ ಬಂದಿದೆ ನೋಡೆ ಸುಜಾತ " ಎಂದು  ಗೆಳತಿ ಸಂಜನಾ   ಪತ್ರವನ್ನು ಕೈಗಿತ್ತಳು.

" ಆತ್ಮೀಯ ಸುಜಾತಳಿಗೆ ಚಿದಾನಂದ್ ಮಾಡುವ ನಮಸ್ಕಾರಗಳು  ಒಂದು ಸಿಹಿ ಸುದ್ದಿ ನಿನ್ನ ಸತೀಶನನ್ನು ದೇವೇಂದ್ರಪ್ಪ ತುಮಕೂರಿನಲ್ಲಿ ನೋಡಿದರಂತೆ, ಮುಂದಿನ ಮಾಹಿತಿ ನಂತರ ತಿಳಿಸುವೆ"
ಪತ್ರ ಓದಿದ್ದೇ ತಡ ಕಾಲೇಜಿನ ಕಾರೀಡಾರ್ ನಲ್ಲೇ ಸಂಜನಾಳನ್ನು ತಬ್ಬಿಕೊಂಡು ಖುಷಿ ಪಟ್ಟಳು.
" ಏ ಕೂಲ್ ಬೇಬಿ ವಾಟ್ ಹಾಪಂಡ್ ಎನಿ ಸ್ವೀಟ್ ನ್ಯೂಸ್?
" ನನ್ ಸತೀಶ ಸಿಕ್ಕನಂತೆ, ನನ್ ಸತೀಶ ನನಗೆ ಸಿಕ್ಕೇ ಸಿಕ್ತಾನೆ , ಎಲ್ಲಾ ಸಂಕಷ್ಟ ಹರ ಗಣಪನ ಮಹಿಮೆ, ....."
ಕಾಲೇಜಿನ ಕಾರಿಡಾರ್ ನಲ್ಲಿ
ಹೀಗೆ ಸಂತಸದಲ್ಲಿ ಮೈಮರೆತ ಸುಜಾತಾಳು ಮಾತನಾಡುವಾಗ  ಪ್ರಿನ್ಸಿಪಾಲ್ ,
"ಏ ಏನಮ್ಮ ಅದು ಅಂಗೆ ಕಿರುಚ್ತಾ ಇದಿಯಾ? ಆಮೇಲೆ ನನ್ ಚೇಂಬರ್ ಗೆ ಬಾ.... ಅಂದರು.

*ಸಿ ಜಿ ವೆಂಕಟೇಶ್ವರ*
*ತುಮಕೂರು*


08 ಜೂನ್ 2020

ವಿಘ್ನ ನಿವಾರಕ



*ವಿಘ್ನ ನಿವಾರಕ*

ಪೂಜೆಗೆ ಬಂದಿಹೆ
ವರವನು ಕರುಣಿಸೋ
ಮೊರದಗಲ ಕಿವಿಯ
ವಿನಾಯಕನೆ.

ಹೂಮಾಲೆ ಕಟ್ಟಿ
ಗಂಧ ,ಧೂಪದಿ
ಅರ್ಚಿಸುವೆ ಕಾಪಾಡೋ
ವಕ್ರತುಂಡನೆ.

ಪಾರಿವಾಳದ ಪರಿವಾರ
ಬಂದಿದೆ ನೋಡಿಲ್ಲಿ
ಪ್ರಾಣಿ ಪಕ್ಷಿಗಳ ರಕ್ಷಿಸು
ಲಂಬೋದರನೆ.

ಜಗವು ನಡುಗುತಿದೆ
ಅಗೋಚರ ಜೀವಿಗೆ
ಕಾಪಾಡು ನಮ್ಮನ್ನು
ವಿಘ್ನನಿವಾರಕನೆ.

*ಸಿ ಜಿ ವೆಂಕಟೇಶ್ವರ*

07 ಜೂನ್ 2020

ಇಂದು ವಿಶ್ವ ಆಹಾರ ಸುರಕ್ಷತಾ ದಿನದ ಪ್ರಯುಕ್ತ ಸಿಹಿಜೀವಿಯ ಹಾಯ್ಕುಗಳು

ಸಿಹಿಜೀವಿಯ ಹಾಯ್ಕುಗಳು

(ಇಂದು ವಿಶ್ವ ಆಹಾರ ಸುರಕ್ಷತಾ ದಿನ )

೪೧

ಸೇವಿಸಿದರೆ
ಕಲಬೆರೆಕೆ ಆಹಾರ
ಕಾಪಾಡೋ ಹರ

೪೨

ಕಲಬೆರಕೆ
ಆಹಾರ ಸುರಕ್ಷತೆ
ಕನಸ ಮಾತು

೪೩

ಕಲಬೆರಕೆ
ದೇಹವ ಸೇರುತಿದೆ
ರಾಸಾಯನಿಕ

 ಸಿ‌ ಜಿ ವೆಂಕಟೇಶ್ವರ

ಮುಖವೇ ಕನ್ನಡಿ ( ಚುಟುಕು)

*ಮುಖವೆ ಕನ್ನಡಿ* ಚುಟುಕು

ಪ್ರಿಯೆ ಮೋಸ ಮಾಡಲು ಏನೋನೋ
ಸಮಜಾಯಿಷಿ ಕೊಡಲು ಹಾಕದಿರು ಮುನ್ನುಡಿ.
ಮರೆಮಾಚಲಾಗದು ನಿನ್ನ ದುರುಳತನ
ಪ್ರತಿಫಲನ ಮಾಡುತಿಹುದು ನಿನ್ನ ಮುಖದ ಕನ್ನಡಿ.

ಸಿ ಜಿ ವೆಂಕಟೇಶ್ವರ
ತುಮಕೂರು

ಕಾಲಯ ತಸ್ಮೈ ನಮಃ ( ಚಿಕ್ಕ ಕತೆ)


ಚಿಕ್ಕ ಕಥೆ

*ಕಾಲಾಯ ತಸ್ಮೈ ನಮಃ*

‌"ಯಾವಾಗಲೋ ಹೈಸ್ಕೂಲಿನಲ್ಲಿ ಪ್ರೀತಿ ಮಾಡಿದ ಹುಡುಗನ ನೆನೆದು ಹೀಗೆ ಚಿಂತೆ ಮಾಡಬೇಡ ಕಣೇ ಸುಜಾತ , ನೀನೀಗ ಬೆಂಗಳೂರಿನಲ್ಲಿ ಇದೀಯಾ , ಡಿಗ್ರಿ ತೆಗೊಂಡಿದಿಯಾ, ಆದ್ರೂ ಅದೆಲ್ಲಿ ಇದಾನೋ ನಿನ್ ರೋಮಿಯೋ ? ಅವನ್ನ ನೆನೆದು, ನಿನ್ನ ಯೌವನ ಮತ್ತು ಸಮಯ ಹಾಳು ಮಾಡ್ಕೊತಾ ಇದಿಯಾ, ನನ್ ನೋಡು ಬಿಂದಾಸ್ ಆಗಿದಿನಿ , ಈಗ ನನ್ ನಾಲ್ಕನೇ ಬಾಯ್ ಪ್ರೆಂಡ್ ಬುಲೆಟ್ ತರ್ತಾನೆ ಜಮ್ ಅನ್ನೊ ಅಂಗೆ ಲಾಂಗ್‌ ಡ್ರೈವ್ ಹೋಗ್ತಿವಿ, ಅಮೇಲೆ ಈಟಿಂಗ್   ಡೇಟಿಂಗ್ ಎಕ್ಸೆಟ್ರಾ ಎಕ್ಸೆಟ್ರಾ......."

" ಸಂಜನಾ ನೀನು ನನ್ನ ಹೊಟ್ಟೆ ಉರಿಸಲು ಈ ರೀತಿ ಮಾತನಾಡುವೆ ಅಂತ ನನಗೆ ಗೊತ್ತು ,ನಾನು ಏನೂ ಅಂತನೂ ನಿನಗೆ ಗೊತ್ತು , ನಿಷ್ಕಲ್ಮಶ ಪ್ರೀತಿಗೆ ಕಾಯುವ, ತಾಳ್ಮೆ ಇರುತ್ತದೆ, ಪ್ರೀತಿ ಇನ್ಸ್ಟಂಟ್ ಕಾಫಿ, ಟೀ ಮಾಡ್ದಾಂಗೆ ಅಲ್ಲ, ಪ್ರೀತಿ ಪವಿತ್ರ, ಪ್ರೀತಿ ಅಮರ, ಪ್ರೀತಿಗೆ ಎಕ್ಸಪೈರಿ ಡೇಟ್ ಇಲ್ಲ, ನಿನ್ನಂತವರು ಆತುರಕ್ಕೆ ಬಿದ್ದು ಪ್ರೀತಿಗೆ ಒಂದು ಟೈಮ್ , ಒಂದು ಆತುರತೆ, ಒಂದು ದೈಹಿಕ ಸಂಬಂಧದ ಅರ್ಥ ಕೊಡುತ್ತೀರಿ , ನನ್ ಪ್ರಕಾರ ಅದು ಪ್ರೀತಿನೆ ಅಲ್ಲ ."
" ಆಯ್ತು ಮಾರಾಯ್ತಿ , ನಿನ್ ಪುರಾಣ ಸಾಕು, ಅಗೋ ನನ್ ಪ್ರೆಂಡ್ ಅರ್ಜುನ್ ಬುಲೆಟ್ ನಲ್ಲಿ ಬಂದ , ಬಾಯ್" ಎಂದು ಹೊರಟೇ ಬಿಟ್ಟಳು ಸಂಜನಾ.

ನಾಲ್ಕು ತಿಂಗಳ ನಂತರ ಪಾರ್ಕ್ ನಲ್ಲಿ  ಸಂಜನಾ ಅಳುತ್ತಾ ಕುಳಿತಿದ್ದಳು  ,ಸುಜಾತಳ ನೋಡಿ ಬಿಕ್ಕಿ ಬಿಕ್ಕಿ ಅಳಲಾರಂಬಿಸಿದಳು .
" ಸುಜಾತ ಇಂದು ಮಧ್ಯಾಹ್ನ ಡಾಕ್ಟರ್ "ಟೈಮ್ " ಕೊಟ್ಟಿದ್ದಾರೆ‌ , ಅವನು ತೆಗೆಸೋದಕ್ಕೆ ಹೇಳಿದ, ಯಾಕೋ ಯಾತನೆ ಆಗ್ತಾ ಇದೆ ಸುಜಾತ........" ಸಂಜನಾ ಅಳು ನಿಲ್ಲಲಿಲ್ಲ.

"ಕಾಲಯಾ ತಸ್ಮೈ ನಮಃ , ಅಳಬೇಡ ಸಮಾಧಾನ ಮಾಡಿಕೋ " ಎಂದು  ಸಂಜನಾಳ    ತಲೆಯನ್ನು ತನ್ನ ತೊಡೆಯ ಮೇಲಿಟ್ಟುಕೊಂಡು , ತಾಯಿಯಂತೆ ತಲೆ  ನೇವರಿಸುತ್ತಾ, ಧೈರ್ಯ ಹೇಳುತ್ತಿದ್ದರೆ ,ಸಂಜಾನಳ ಮನಸ್ಸು ಆಸ್ಪತ್ರೆಯಲ್ಲಿ ಮಧ್ಯಾಹ್ನ ನಡೆಯಬಹುದಾದ ಬಲಿ ಕುರಿತು ದೀರ್ಘವಾಗಿ ಯೋಚಿಸುತ್ತಿತ್ತು.....

*ಸಿ ಜಿ ವೆಂಕಟೇಶ್ವರ*
*ತುಮಕೂರು*