08 ಜೂನ್ 2020

ವಿಘ್ನ ನಿವಾರಕ



*ವಿಘ್ನ ನಿವಾರಕ*

ಪೂಜೆಗೆ ಬಂದಿಹೆ
ವರವನು ಕರುಣಿಸೋ
ಮೊರದಗಲ ಕಿವಿಯ
ವಿನಾಯಕನೆ.

ಹೂಮಾಲೆ ಕಟ್ಟಿ
ಗಂಧ ,ಧೂಪದಿ
ಅರ್ಚಿಸುವೆ ಕಾಪಾಡೋ
ವಕ್ರತುಂಡನೆ.

ಪಾರಿವಾಳದ ಪರಿವಾರ
ಬಂದಿದೆ ನೋಡಿಲ್ಲಿ
ಪ್ರಾಣಿ ಪಕ್ಷಿಗಳ ರಕ್ಷಿಸು
ಲಂಬೋದರನೆ.

ಜಗವು ನಡುಗುತಿದೆ
ಅಗೋಚರ ಜೀವಿಗೆ
ಕಾಪಾಡು ನಮ್ಮನ್ನು
ವಿಘ್ನನಿವಾರಕನೆ.

*ಸಿ ಜಿ ವೆಂಕಟೇಶ್ವರ*

07 ಜೂನ್ 2020

ಇಂದು ವಿಶ್ವ ಆಹಾರ ಸುರಕ್ಷತಾ ದಿನದ ಪ್ರಯುಕ್ತ ಸಿಹಿಜೀವಿಯ ಹಾಯ್ಕುಗಳು

ಸಿಹಿಜೀವಿಯ ಹಾಯ್ಕುಗಳು

(ಇಂದು ವಿಶ್ವ ಆಹಾರ ಸುರಕ್ಷತಾ ದಿನ )

೪೧

ಸೇವಿಸಿದರೆ
ಕಲಬೆರೆಕೆ ಆಹಾರ
ಕಾಪಾಡೋ ಹರ

೪೨

ಕಲಬೆರಕೆ
ಆಹಾರ ಸುರಕ್ಷತೆ
ಕನಸ ಮಾತು

೪೩

ಕಲಬೆರಕೆ
ದೇಹವ ಸೇರುತಿದೆ
ರಾಸಾಯನಿಕ

 ಸಿ‌ ಜಿ ವೆಂಕಟೇಶ್ವರ

ಮುಖವೇ ಕನ್ನಡಿ ( ಚುಟುಕು)

*ಮುಖವೆ ಕನ್ನಡಿ* ಚುಟುಕು

ಪ್ರಿಯೆ ಮೋಸ ಮಾಡಲು ಏನೋನೋ
ಸಮಜಾಯಿಷಿ ಕೊಡಲು ಹಾಕದಿರು ಮುನ್ನುಡಿ.
ಮರೆಮಾಚಲಾಗದು ನಿನ್ನ ದುರುಳತನ
ಪ್ರತಿಫಲನ ಮಾಡುತಿಹುದು ನಿನ್ನ ಮುಖದ ಕನ್ನಡಿ.

ಸಿ ಜಿ ವೆಂಕಟೇಶ್ವರ
ತುಮಕೂರು

ಕಾಲಯ ತಸ್ಮೈ ನಮಃ ( ಚಿಕ್ಕ ಕತೆ)


ಚಿಕ್ಕ ಕಥೆ

*ಕಾಲಾಯ ತಸ್ಮೈ ನಮಃ*

‌"ಯಾವಾಗಲೋ ಹೈಸ್ಕೂಲಿನಲ್ಲಿ ಪ್ರೀತಿ ಮಾಡಿದ ಹುಡುಗನ ನೆನೆದು ಹೀಗೆ ಚಿಂತೆ ಮಾಡಬೇಡ ಕಣೇ ಸುಜಾತ , ನೀನೀಗ ಬೆಂಗಳೂರಿನಲ್ಲಿ ಇದೀಯಾ , ಡಿಗ್ರಿ ತೆಗೊಂಡಿದಿಯಾ, ಆದ್ರೂ ಅದೆಲ್ಲಿ ಇದಾನೋ ನಿನ್ ರೋಮಿಯೋ ? ಅವನ್ನ ನೆನೆದು, ನಿನ್ನ ಯೌವನ ಮತ್ತು ಸಮಯ ಹಾಳು ಮಾಡ್ಕೊತಾ ಇದಿಯಾ, ನನ್ ನೋಡು ಬಿಂದಾಸ್ ಆಗಿದಿನಿ , ಈಗ ನನ್ ನಾಲ್ಕನೇ ಬಾಯ್ ಪ್ರೆಂಡ್ ಬುಲೆಟ್ ತರ್ತಾನೆ ಜಮ್ ಅನ್ನೊ ಅಂಗೆ ಲಾಂಗ್‌ ಡ್ರೈವ್ ಹೋಗ್ತಿವಿ, ಅಮೇಲೆ ಈಟಿಂಗ್   ಡೇಟಿಂಗ್ ಎಕ್ಸೆಟ್ರಾ ಎಕ್ಸೆಟ್ರಾ......."

" ಸಂಜನಾ ನೀನು ನನ್ನ ಹೊಟ್ಟೆ ಉರಿಸಲು ಈ ರೀತಿ ಮಾತನಾಡುವೆ ಅಂತ ನನಗೆ ಗೊತ್ತು ,ನಾನು ಏನೂ ಅಂತನೂ ನಿನಗೆ ಗೊತ್ತು , ನಿಷ್ಕಲ್ಮಶ ಪ್ರೀತಿಗೆ ಕಾಯುವ, ತಾಳ್ಮೆ ಇರುತ್ತದೆ, ಪ್ರೀತಿ ಇನ್ಸ್ಟಂಟ್ ಕಾಫಿ, ಟೀ ಮಾಡ್ದಾಂಗೆ ಅಲ್ಲ, ಪ್ರೀತಿ ಪವಿತ್ರ, ಪ್ರೀತಿ ಅಮರ, ಪ್ರೀತಿಗೆ ಎಕ್ಸಪೈರಿ ಡೇಟ್ ಇಲ್ಲ, ನಿನ್ನಂತವರು ಆತುರಕ್ಕೆ ಬಿದ್ದು ಪ್ರೀತಿಗೆ ಒಂದು ಟೈಮ್ , ಒಂದು ಆತುರತೆ, ಒಂದು ದೈಹಿಕ ಸಂಬಂಧದ ಅರ್ಥ ಕೊಡುತ್ತೀರಿ , ನನ್ ಪ್ರಕಾರ ಅದು ಪ್ರೀತಿನೆ ಅಲ್ಲ ."
" ಆಯ್ತು ಮಾರಾಯ್ತಿ , ನಿನ್ ಪುರಾಣ ಸಾಕು, ಅಗೋ ನನ್ ಪ್ರೆಂಡ್ ಅರ್ಜುನ್ ಬುಲೆಟ್ ನಲ್ಲಿ ಬಂದ , ಬಾಯ್" ಎಂದು ಹೊರಟೇ ಬಿಟ್ಟಳು ಸಂಜನಾ.

ನಾಲ್ಕು ತಿಂಗಳ ನಂತರ ಪಾರ್ಕ್ ನಲ್ಲಿ  ಸಂಜನಾ ಅಳುತ್ತಾ ಕುಳಿತಿದ್ದಳು  ,ಸುಜಾತಳ ನೋಡಿ ಬಿಕ್ಕಿ ಬಿಕ್ಕಿ ಅಳಲಾರಂಬಿಸಿದಳು .
" ಸುಜಾತ ಇಂದು ಮಧ್ಯಾಹ್ನ ಡಾಕ್ಟರ್ "ಟೈಮ್ " ಕೊಟ್ಟಿದ್ದಾರೆ‌ , ಅವನು ತೆಗೆಸೋದಕ್ಕೆ ಹೇಳಿದ, ಯಾಕೋ ಯಾತನೆ ಆಗ್ತಾ ಇದೆ ಸುಜಾತ........" ಸಂಜನಾ ಅಳು ನಿಲ್ಲಲಿಲ್ಲ.

"ಕಾಲಯಾ ತಸ್ಮೈ ನಮಃ , ಅಳಬೇಡ ಸಮಾಧಾನ ಮಾಡಿಕೋ " ಎಂದು  ಸಂಜನಾಳ    ತಲೆಯನ್ನು ತನ್ನ ತೊಡೆಯ ಮೇಲಿಟ್ಟುಕೊಂಡು , ತಾಯಿಯಂತೆ ತಲೆ  ನೇವರಿಸುತ್ತಾ, ಧೈರ್ಯ ಹೇಳುತ್ತಿದ್ದರೆ ,ಸಂಜಾನಳ ಮನಸ್ಸು ಆಸ್ಪತ್ರೆಯಲ್ಲಿ ಮಧ್ಯಾಹ್ನ ನಡೆಯಬಹುದಾದ ಬಲಿ ಕುರಿತು ದೀರ್ಘವಾಗಿ ಯೋಚಿಸುತ್ತಿತ್ತು.....

*ಸಿ ಜಿ ವೆಂಕಟೇಶ್ವರ*
*ತುಮಕೂರು*

ಸಿಹಿಜೀವಿಯ ಹನಿ

ಸಿಹಿಜೀವಿಯ ಹನಿ

ಕೆನ್ನೆಗೆ ಹೊಡೆತ

ಮೂರ್ಖರೊಂದಿಗೆ
ವಾದ ಮಾಡುವುದು
ನಿಮ್ಮ ಕೆನ್ನೆ ಮೇಲೆ
ಕುಳಿತ ಸೊಳ್ಳೆ
ಸಾಯಿಸಲು ಪಣ
ತೊಟ್ಟಂತೆ ತಿಳಿಯಿರಿ|
ಸೊಳ್ಳೆ ಸಾಯಲಿ
ಬಿಡಲಿ ನಿಮ್ಮ
ಕೆನ್ನೆಗೆ ನೀವೇ
ಹೊಡೆದುಕೊಳ್ಳುವಿರಿ||

*ಸಿ ಜಿ ವೆಂಕಟೇಶ್ವರ*