28 ಏಪ್ರಿಲ್ 2025

ತೃಪ್ತಿಕರವಾದ ಜೀವನ ನಮ್ಮದಾಗಲಿ..

 

ತೃಪ್ತಿಕರವಾದ ಜೀವನ ನಮ್ಮದಾಗಲಿ..


ಮಾನವನ ಗುಣವೇ ಹಾಗೆ.ಇಷ್ಟು ಇದ್ದರೆ ಮತ್ತಷ್ಟು ಬೇಕು.ಮತ್ತಷ್ಟು ಬಂದರೆ ಮಗದೊಷ್ಟು ಬೇಕು ಎಂಬ ಮಹಾದಾಸೆ ಬೆಳೆಯುತ್ತಲೇ ಇರುತ್ತದೆ. ಇರುವುದಲ್ಲೇ ತೃಪ್ತಿಯಿಂದ ಜೀವಿಸುವವರು ಬಲು ವಿರಳ.ಅತಿಯಾಸೆಯಿಂದ ಅತಿಯಾಗಿ ಪಡೆಯಲು ಹೋಗಿ ಪೀಕಲಾಟಕ್ಕೆ ಸಿಲುಕುವವರನ್ನು ಎಲ್ಲೆಡೆ ಕಾಣುತ್ತೇವೆ. ಅಂತದೇ ವ್ಯಕ್ತಿಯ ಕಥೆ ಓದಿ. ಭಕ್ತನೊಬ್ಬ ಭಗವಂತನನ್ನು ಪ್ರಾರ್ಥಿಸಿ "ತನಗೆ ಬೇಕಾದುದೆಲ್ಲವನ್ನು ತಾನು ಕೇಳಿದ ಒಡನೆ ದೊರಕಬೇಕು ಮತ್ತು ನಾನು ಹೇಳಿದ ಕೆಲಸಗಳು ತಾನು ಹೇಳಿದ ತಕ್ಷಣ ಜರುಗಬೇಕು ಹಾಗೆ ನಡೆಸಿ ಕೊಡುವ ಒಬ್ಬನನ್ನು ನನಗೆ ವರವಾಗಿ ಕರುಣಿಸು"ಎಂದು ಬೇಡಿದ.ಭಗವಂತ ಹೇಳಿದ "ನೋಡು ಆಲೋಚನೆ ಮಾಡು ನಾನು ನಿನಗೆ ವರವನ್ನು ಕೊಡುವೆ ಅದರ ಫಲಾ ಫಲಗಳನ್ನು ನೀನು ಅನುಭವಿಸುವುದಕ್ಕೆ ತಯಾರಿದ್ದರೆ ನಿನಗೆ ನಾನು ವರವನ್ನು ಕೊಡುತ್ತೇನೆ". ಭಕ್ತನು ಬಹಳ ಸಂತೋಷದಿಂದ ಆಗಲಿ ಎಂದ. ಭಗವಂತನು ಅವನ ಜೊತೆಗೆ ಒಂದು ಭೂತವನ್ನು ಕಳುಹಿಸಿದನು.


ಭಕ್ತನಿಗೆ   ಖುಷಿಯೋ ಖುಷಿ. ಆ ಭೂತಕ್ಕೆ ನನಗೆ ಒಂದು ದೊಡ್ಡ ಅರಮನೆ ಬೇಕು ಎಂದಾಗ ಆ ಭೂತ ತಕ್ಷಣ ಅವನಿಗೆ ಒಂದು ಅರಮನೆಯನ್ನು ಕಟ್ಟಿಸಿತು. ನನಗೆ ಪಂಚ ಭಕ್ಷ ಪರಮಾನ್ನ ಬೇಕು ಅಂದಾಗ ಅದು ಅವನ ಮುಂದೆ ಬಂತು. ನನಗೆ ಮುತ್ತು, ವಜ್ರ ಬಂಗಾರ ಒಡವೆಗಳು ಬೇಕು ಅಂದಾಗ ಅವುಗಳೂ ಅವನ ಮುಂದೆ ಪ್ರತ್ಯಕ್ಷ ವಾದವು. ಆದರೆ ಆ ಭೂತ ಭಕ್ತನಿಗೆ ಒಂದಾದ ಮೇಲೆ ಒಂದು ಕೆಲಸ ಕೊಡು ಮತ್ತು ಕೊಡುತ್ತಲೇ ಇರಬೇಕು ನನಗೆ ಸುಮ್ಮನೆ ಇರಲು ಸಾಧ್ಯವಿಲ್ಲ ನೀನು ನನಗೆ ಒಂದಾದ ಮೇಲೆ ಒಂದು ಕೆಲಸ ಕೊಡುತ್ತಿರಲೇಬೇಕು ಎಂದಾಗ ಈ ಭಕ್ತನಿಗೆ ಏನು ಮಾಡುವುದೆಂದು ತಿಳಿಯಲಿಲ್ಲ. ಭಕ್ತನಿಗೆ ಬೇರೆ ಯಾವ ಕೆಲಸವೂ ಮಾಡಲು ಆ ಭೂತ ಬಿಡದೆ ನೀನು ನನಗೆ ಪುರುಸೊತ್ತಿಲ್ಲದೆ ಕೆಲಸ ಕೊಡುತ್ತಿರಬೇಕು ಇಲ್ಲದಿದ್ದರೆ ನಿನ್ನನ್ನೇ ನಾನು ತಿಂದು ಮುಗಿಸಿ ಬಿಡುವೆ ಎಂದು ಹೆದರಿಸಿತು. ಆ ಭಕ್ತ ಊಟ ಮಾಡುವುದಕ್ಕೂ  ಬೇರೆ ಏನು ಕೆಲಸ ಮಾಡುವುದಕ್ಕೂ ಈ ಭೂತ ಬಿಡಲಿಲ್ಲ. ಆಗ ಆ ಭಕ್ತನಿಗೆ ತಾನು ಅದು ಬೇಕು ಇದು ಬೇಕು ಎಂದು ಭಗವಂತನನ್ನು ಕೇಳಿದ್ದು ತನಗೆ ಕಷ್ಟ ವಾಯಿತು ಎಂದು ಮತ್ತೆ ಭಗವಂತನನ್ನು ಪ್ರಾರ್ಥಿಸಿದ. "ದಯವಿಟ್ಟು ಈ ಭೂತದಿಂದ ನನಗೆ ಬಿಡುಗಡೆ ಕೊಡಿಸು. ಈ ಭೂತಕ್ಕೆ ಕೆಲಸ ಹೇಳುವುದು ನನಗೆ ಅಸಾಧ್ಯ ನನಗೆ ಏನು ಬೇಡ ಈಗ ನನಗಿರುವುದೇ ಸಾಕು" ಎಂದನು. ಆಗ ಭಗವಂತ ಆ ಭೂತವನ್ನು ಕರೆದು "ನೋಡು ಅಲ್ಲಿ ನಿಂತಿರುವ ನಾಯಿಯ ಬಲವನ್ನು ನೆಟ್ಟಗೆ ಮಾಡು" ಎಂದು ಹೇಳಿ ಆ ಭಕ್ತನನ್ನ್ನುಭೂತದ ಕಷ್ಟದಿಂದ ಪಾರು ಮಾಡಿದನು.


ಭಗವಂತ ನಮಗೇನು ಬೇಕು ಎಂದು ಅರ್ಥಮಾಡಿಕೊಂಡು ಕೊಡಬೇದ್ದನ್ನು ಈಗಾಗಲೇ ಕೊಟ್ಟಿರುವನು. ಇದರ ಜೊತೆಗೆ ಬೆಲೆಕಟ್ಟಲಾಗದ ಅಮೂಲ್ಯವಾದ ಕಾಯ ನೀಡಿ ಸೂಕ್ತವಾದ ಕಾಯಕ ಮಾಡಲು ಹೇಳಿರುವನು. ಅದಕ್ಕೆ ನಾವು ಅವನಿಗೆ ಸದಾ ಕೃತಜ್ಞತೆಯಿಂದ ಇದ್ದು ಇರುವುದರಲ್ಲೇ ತೃಪ್ತಿಕರವಾಗಿ ಜೀವನ ಸಾಗಿಸುವ ಕಲೆಯನ್ನು ರೂಢಿಸಿಕೊಂಡು ಬಾಳಬೇಕು.


ಸಿಹಿಜೀವಿ ವೆಂಕಟೇಶ್ವರ

ತುಮಕೂರು.   

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ