24 ಮಾರ್ಚ್ 2022

ಪರಮಾಣು


 


ಪರಮಾಣು.

ಅರಿಯುವುದು ಹೇಗೆ
ಹರಿ ನಿನ್ನ ಮಹಿಮೆಯೆ
ಅರಿವಿಲ್ಲದವ ನಾನು|
‌ಸದಾ ನಿನ್ನ ಕೃಪೆಯಿರಲಿ
ಪರಮ ಆತ್ಮ
ನಾನೊಂದು ಪರಮಾಣು||

ಸಿಹಿಜೀವಿ
ಸಿ ಜಿ ವೆಂಕಟೇಶ್ವರ.


23 ಮಾರ್ಚ್ 2022

ಗುರಿ


 ಗುರಿ.


ಮನುಜನಾಗಿ ಹುಟ್ಟಿದ 

ಮೇಲೆ ಏನಾದರೂ

ಸಾಧಿಸಬೇಕಾದರೆ 

ಇರಲೇಬೇಕೊಂದು ಗುರಿ|

ಇಲ್ಲದಿದ್ದರೆ ನಾವು 

ತಿಂದುಂಡು ಕಾಲ ಕಳೆಯುತ್ತಾ

ಅಲೆದಾಡುತ್ತೇವೆ ಹಿಂಬಾಲಿಸಿದಂತೆ

ಒಂದನ್ನು  ಮತ್ತೊಂದು ಕುರಿ||

ಅಜ್ಞಾನದ ಗವಿ .

 

*ಇತಿಹಾಸ*

ಪ್ರಕೃತಿಯ ಕುಂಚದಿ ಚಿತ್ರಿಸಿ

ಜನರ ಅನಂದ ಅರಳಿಸುವ

ಮಹಾನ್ ಕಾಲಾಕಾರನಾಗಿದ್ದ 

ಅಡಾಲ್ಫ್‌ ಹಿಟ್ಲರ್|

ಪರಿಸ್ಥಿತಿ, ಪ್ರಚೋದಿತ ಪರಿಸರ ,ಅಜ್ಞಾನ

ಮುಂತಾದವುಗಳಿಂದ 

ಇತಿಹಾಸದಲ್ಲಿ ಸ್ಥಾನ 

ಪಡೆದ ಜಗದ ಕ್ರೂರ ಕಿಲ್ಲರ್||


ಸಿಹಿಜೀವಿ

ಸಿ ಜಿ ವೆಂಕಟೇಶ್ವರ


21 ಮಾರ್ಚ್ 2022

ಕವಿತೆ .ಭಾಗ್ಯದೇವತೆ.


 

ಕವಿತೆ
ನೀನೆನ್ನ ಭಾಗ್ಯದೇವತೆ.

ಮನದಲಿರುವ
ನೋವು ನಲಿವುಗಳಿಗೆ
ಪದಗಳಾಗುವೆ.

ನೋಡಿದ ಒಳಿತು
ಕೆಡುಕುಗಳನು
ಚಿತ್ರಿಸಲು ನೆರವಾಗುವೆ.

ಸಮಾಜದ ಓರೆಕೋರೆಗಳ
ತಿಳಿದು ತಿಳಿಸಲು
ಮಾಧ್ಯಮವಾಗುವೆ .

ನೀನಿಲ್ಲದಿರೆ
ನನಗೇಕೋ ದುಗುಡ
ನೀ ನನ್ನಲೇ ಸದಾ
ನೆಲೆಸೆಂದು ಬಯಸುವೆ

ಸಿಹಿಜೀವಿ
ಸಿ ಜಿ ವೆಂಕಟೇಶ್ವರ.


19 ಮಾರ್ಚ್ 2022

ಉದಕದೊಳಗಿನ ಕಿಚ್ಚು ಭಾಗ ೨೧


 


ನಾಟಕದ ಪ್ರಾಕ್ಟೀಸ್ , ಮನೆಯಲ್ಲಿ ಕೆಲಸ ಇವುಗಳ ನಡುವೆ  ಸತೀಶನಿಗೆ ದಿನಗಳು ಉರುಳಿದ್ದೆ ಗೊತ್ತಾಗಲಿಲ್ಲ . ಬೇಸಿಗೆ  ರಜೆ ಕಳೆದು ಎರಡನೇ ವರ್ಷದ ಪಿ ಯು ಸಿ ಓದಲು ಕಾಲೇಜು ಜೂನ್ ಮೂರನೆ ತಾರೀಖು ಆರಂಭವಾಗುವುದು ಎಂದು ಪ್ರಿನ್ಸಿಪಾಲ್ ಹೇಳಿದ್ದು ನೆನಪಾಗಿ,  ಪುಸ್ತಕ ಮತ್ತು ಪೆನ್ನುಗಳ  ಜೋಡಿಸಿಕೊಂಡು ಅನ್ನ ಮೊಸರು ಉಂಡು ಊರ ಮುಂದಿನ ಬಸ್ ನಿಲ್ದಾಣದ ಬಳಿ ಬಂದು ಪಾಕ್ಷಪ್ಪರ ಅಂಗಡಿ ಹಿಂದಿರುವ ಬೇವಿನ ಮರದ ಕಡೆ ನೋಡಿದ ,ಯಾರೂ ಇರಲಿಲ್ಲ. ಇನ್ಯಾರು ಇರುವರು ಅವಳು ಕಾಣೆಯಾಗಿ ಎಷ್ಟೋ ತಿಂಗಳಾದವಲ್ಲ .


ಮೊದಲಾದರೆ ಸತೀಶ ಬರುವ ಮೊದಲೇ ಬಿಗಿಯಾದ ರವಿಕೆ ತೊಟ್ಟು ಎದೆಯ ಮೇಲೆ ಸುಮ್ಮನೆ ಇರಲಿ ಎಂದು ಹಾಕಿಕೊಂಡ ದಾವಣಿ ಅಲ್ಲಿರದೇ ಬೇಸರಗೊಂಡು ಎಲ್ಲಿಗೋ ಜರುಗಿರುತ್ತಿತ್ತು, ಬೇವಿನ ಮರದ ಕೆಳಗಿರುವ ಕಲ್ಲಿನ ಬೆಂಚಿನ ಮೇಲೆ ಕುಳಿತು ಅವಳು ಕಾಲು ಅಲ್ಲಾಡಿಸುತ್ತಿದ್ದರೆ ಕಾಲ್ಗೆಜ್ಜೆ ತಾಳ ಬದ್ದವಾಗಿ ಸದ್ದು ಮಾಡುತ್ತಿದ್ದವು,  ಊರ ತರ್ಲೆ ಹುಡುಗರು ಅವಳ ನೋಡಲೆ ಬಂದು ದೂರದಲ್ಲಿ ನಿಲ್ಲುತ್ತಿದ್ದರು. ಆದರೆ ಅವಳು ಮಾತ್ರ ಸತೀಶನ ಬಿಟ್ಟು ಯಾರನ್ನೂ ಕಣ್ಣೆತ್ತಿಯೂ ನೋಡುತ್ತಿರಲಿಲ್ಲ, ಅವನು ಬಂದೊಡನೆ ಚಂಗನೆ ಕಲ್ ಬೆಂಚಿನಿಂದ ಎಗರಿ ಇಳಿದು ನಕ್ಕು ಮತ್ತೆ  ಜೈರಾಂ ಬಸ್ ಬರುವವರೆಗೂ ಅಲ್ಲೇ ಕುಳಿತು ನಗುವಿನ ವಿನಿಮಯ, ಮನಸುಗಳ ಪಿಸುಮಾತಿನ ವಿನಿಮಯ ನಡೆಯುತ್ತಿತ್ತು.


ಮತ್ತೆ ಅವಳಿಲ್ಲದ್ದನ್ನು ನೆನೆದು ಬೇಸರದಿಂದ ಶೆಟ್ಟರ ಭೀಮಮೂರ್ತಿ ಅಂಗಡಿಯ ಮುಂದೆ ನಿಂತು ,ಆಸ್ಪತ್ರೆಯ ದಿನ್ನೆ ಕಡೆಗೆ ನೋಡಲಾರಂಭಿಸಿದ, ಅಂದೇಕೋ ಬಸ್ ಸಹ ನಿಧಾನವಾಗಿ ಬೇಸರದಿಂದ ಏದುಸಿರು ಬಿಡುತ್ತಾ ಬಂದು ‌ನಿಂತಿತು.

ಡ್ರೈವರ್ ಮೂರ್ತಣ್ಣ "ಏ ....ಆ ಬಕೆಟ್ ತಗಂಡು ಜಗ್ಗ ನಲ್ಲಿಲಿ ನೀರ್ ತಂದು ರೇಡಿಯೇಟರ್ ಗೆ ಹಾಕಲೆ . ಹೊಗೆ ಬತೈತೆ" ಕೂಗಿದರು

ಕಂಡಕ್ಟರ್ ಸೀನ ಬಕೆಟ್ ನಲ್ಲಿ ನೀರು ತಂದು ಚಿಕ್ಕ ಜಗ್ ನಲ್ಲಿ ತುಂಬಿ  ರೇಡಿಯೇಟರ್ ಗೆ ಹಾಕಿ ಬಕೆಟ್ ಅನ್ನು ಒಂದು ಸೀಟ್ನ  ಕೆಳಗೆ ಇಟ್ಟು "ರೈಟ್ ರೈಟ್" ಅಂದ 

ಬಸ್ಸು ದೊಡ್ಡ ಸೇತುವೆ ದಾಟಿ ನಮೂಜಿ  ದಿನ್ನೆಯನ್ನು ಕಷ್ಟಪಡುತ್ತಾ ಹತ್ತುತ್ತಿತ್ತು. ಸತೀಶನ  ಮನ ಸುಜಾತಳ ಬಗ್ಗೆ ಯೋಚಿಸುತ್ತಿತ್ತು.


ಮೊದಲಿನಿಂದಲೂ ಸೈನ್ಸ್ ತಲೆಗೆ ಹತ್ತಲಿಲ್ಲ ,ಮೊದಲಾಗಿದ್ದರೆ  ಕಾಲೇಜು ತರಗತಿಗಳು ಬೇಸರವಾದರೆ ಸುಜಾತಳ ಜೊತೆ ಯಾವುದಾದರೂ ಪಾರ್ಕಿನಲ್ಲೋ ,ಶ್ರೀಶೈಲ ಅಥವಾ ಜಯಲಕ್ಷ್ಮಿ ಚಿತ್ರಮಂದಿರಗಳಲ್ಲಿ ಯಾವುದಾದರೂ ಚಲನಚಿತ್ರ ನೋಡುತ್ತಾ ಕಾಲ ಕಳೆಯುತ್ತಿದ್ದ .ಈಗ ಅವಳಿಲ್ಲ. ನರಹರಿ ರೂಂ ನಲ್ಲಿ ಉಳಿಯಲು ಮಾವ ಬಿಡುತ್ತಿಲ್ಲ , ಹಿರಿಯೂರಿಗೆ ಹೋಗಲೂ ಬೇಸರದಿಂದ ಹೋಗದಿದ್ದರೆ ಅದಕ್ಕೂ ಅಜ್ಜಿ ಮಾವಂದಿರು ಯಾಕೋ ಕಾಲೇಜ್ ಗೆ ಹೋಗಿಲ್ಲ ಎಂದು ಬೈಯುತ್ತಿದ್ದರು .ಒಟ್ಟಿನಲ್ಲಿ  ಸತೀಶನಿಗೆ ಯಾವ ಕಡೆಯಿಂದಲೂ ನೆಮ್ಮದಿ ಇಲ್ಲದಂತಾಗಿತ್ತು.

ದೇವಿಮಹಾತ್ಮೆ ನಾಟಕದಲ್ಲಿ ಪಾತ್ರ ಮಾಡಿದ ಎಲ್ಲರನ್ನೂ ‌ದೇವಿ ಹೂವಿನಂತೆ ಮೇಲೆತ್ತಿಕೊಳ್ಳುವಳು ಎಂದೂ ,ದೇವಿಗೆ ಅವಮಾನ ಮಾಡಿದವರನ್ನು ಭಸ್ಮ ಮಾಡುವಳು ಎಂದು ,ಎರಡಕ್ಕೂ ಉದಾಹರಣೆ ಸಮೇತ ಕೆಲವರ ಹೆಸರು ಹೇಳಿದ್ದರು ,ಹಾಗೆ ಯೋಚಿಸಿದಾಗ ಅದು ದಿಟವೂ ಎಂಬುದು ಕೆಲ ಉದಾಹರಣೆ ಮೂಲಕ ತಿಳಿದಿತ್ತು. ಸತೀಶ ದೇವಿಮಹಾತ್ಮೆ ನಾಟಕದಲ್ಲಿ ಪಾತ್ರ ಮಾಡಲು ಇದೂ ಒಂದು ಕಾರಣವಾಗಿತ್ತು, ಮನಃಪೂರ್ವಕವಾಗಿ ಸುಜಾತ ನನಗೇ ಸಿಗಬೇಕು ಮತ್ತು ಅವಳೊಂದಿಗೆ ನನ್ನ ಮದುವೆಯಾಗಬೇಕು ಎಂದು ಪ್ರಾಕ್ಟೀಸ್ ಮಾಡುವಾಗ ಕೆಲವೊಮ್ಮೆ, ಮತ್ತು ನಾಟಕವಾಡುವಾಗ ಒಂದೆರಡು ಸಲ ಎಂದುಕೊಂಡದ್ದನ್ನು‌ ಸತೀಶ ಜ್ಞಾಪಿಸಿಕೊಂಡ.

ಹಾಗಾದರೆ ಜನರು ನಂಬಿರುವುದು ಸುಳ್ಳಾ?

ದೇವಿಯ ಮಹಾತ್ಮೆ ಏನೂ ಇಲ್ಲವೆ?

ನಾಟಕ ಆಗಿ ಮೂರ್ನಾಲ್ಕು ತಿಂಗಳಾದರೂ ನನಗೇನು ಒಳ್ಳೆಯದು ಏಕೆ ಕಾಣಲಿಲ್ಲ?  ಹೀಗೆ ನಾನ ಪ್ರಶ್ನೆಗಳು ಸತೀಶನ ತಲೆಯಲ್ಲಿ ಗಿರಕಿ ಹೊಡೆಯುತ್ತಿದ್ದವು.


ಹೀಗೆ ಒಂದು ಭಾನುವಾರ ತಿಮ್ಮಕ್ಕ ಸತೀಶನ ಕರೆದು 

" ನನಗೆ ರಾಗಿ, ಜೋಳ ಹಸನು ಮಾಡಿ ಹಿಟ್ಟು ಮಾಡಿಸಲು ಮೆಷಿನ್ಗೆ ಹೋಗಬೇಕು ಇವತ್ತು ಬಿಳಿಯಣ್ಣ ನಿಗೆ ನೀನೇ ಬುತ್ತಿ ಕೊಟ್ ಬಾ ಸತೀಶ " ಎಂದರು


"ಆಯ್ತು ಅಕ್ಕ ಬುತ್ತಿ ಕಟ್ ಕೊಡು ನಾನೇ ತಗಂಡು ಹೋಗಿ ಬತ್ತೀನಿ " ಖುಷಿಯಿಂದಲೇ ನುಡಿದ ಸತೀಶ 


ಮೊದಲಾಗಿದ್ದರೆ ಬಿದಿರು ಬುಟ್ಟಿಯಲ್ಲಿ ಬುತ್ತಿ ಹೊತ್ತು ಹೋಗುತ್ತಿದ್ದ ಸತೀಶ ಮನೆಗೆ ಹೊಸ ಹೀರೊ ಸೈಕಲ್‌ ಬಂದಾಗಿನಿಂದ ಎಲ್ಲದಕ್ಕೂ ಸೈಕಲ್‌ ಏರಿ ಹೋಗುತ್ತಿದ್ದ ,ಅಷ್ಟಕ್ಕೂ ಆಗ ಆ ಊರಿನಲ್ಲಿ ಇದ್ದದ್ದೇ ಐದಾರು ಸೈಕಲ್ ಇದು ಸಹ ಪದೇ ಪದೇ ಸತೀಶ ಸೈಕಲ್‌ ಬಳಸಲು ಕಾರಣವಾಗಿತ್ತು.

ಬಣ್ಣ ಬಣ್ಣದ ವೈರ್ನಿಂದ ಮಾಡಿದ ಬ್ಯಾಗಿನಲ್ಲಿ ಬುತ್ತಿ ಕಟ್ಟುತ್ತಾ 

" ನಿನಗೂ ಅಲ್ಲೇ ಇಡಲೇನೋ ಬುತ್ತೀನ ? ನೀನು ಅಲ್ಲೇ ಉಮ್ತೀಯಾ? ಕೇಳಿದರು ತಿಮ್ಮಕ್ಕ

" ಬ್ಯಾಡಕ್ಕೋ, ನಾನ್ ಮನೆಗೆ ಬತ್ತೀನಿ ಬಿಳಿಮಾವನಿಗೆ ಮಾತ್ರ ಇಕ್ಕು ಸಾಕು" ಹೇಳಿದ ಸತೀಶ.


ಸಾಮಾನ್ಯವಾಗಿ ಊರ ಬಾಗಿಲಿನಿಂದ ಹೊಲಕ್ಕೆ ಹೋಗುವ ಮಾರ್ಗ ,ಆದರೆ ಸತೀಶ ಬೇಕಂತಲೆ ಬುತ್ತಿ ಇಟ್ಟುಕೊಂಡು ಸೈಕಲ್ಲನ್ನು ಮಾರಮ್ಮನ ಗುಡಿಯ ಕಡೆ ತಿರುಗಿಸಿ ಹೊರಟ .

ಇದನ್ನು ತಿಮ್ಮಕ್ಕ ಗಮನಿಸಿದರೂ ಎನೋ ಹುಡುಗಾಟ ಇರಲಿ ಬಿಡು ಒಟ್ಟಿನಲ್ಲಿ ನಾನು ಇಂದು ಎರಡು ಕಿಲೋಮೀಟರ್ ನಡೆದು ಬುತ್ತಿ ಕೊಡುವುದು ತಪ್ಪಿತಲ್ಲ ಎಂದು ಮನೆಯ ಒಳಗೆ ನಡೆದರು.


ಕಾರಣವಿಷ್ಟೇ ಸುಜಾತ ಇಂದಾದರೂ ಮನೆಗೆ ಬಂದಿರಬಹುದೆ ? ಇಂದಾದರೂ ನಾನು ಅವಳ ನೋಡಬೇಕು ಎಂಬ ಹಂಬಲ, ಕಡೆ ಪಕ್ಷ ಅವಳು ಇಲ್ಲದಿದ್ದರೂ  ಅವಳಿದ್ದ  ಮನೆಯನ್ನು ದಿನಕ್ಕೆ ಒಮ್ಮೆಯಾದರೂ ನೋಡಿದರೆ ಏನೋ ಮನಸಿಗೆ ನೆಮ್ಮದಿ,ಎಂದು ತಿಳಿದಿದ್ದ ಸತೀಶ.


" ಏ ಎದ್ದಾಳಪ್ಪ ಯಾರು ನೀನು? ಯಾವೂರು? ಯಾಕೆ ಇಲ್ಲಿ ಮಲಗಿದ್ದಿಯಾ?"


ಕಪ್ಪನೆಯ ಡಾಂಬರ್ ಕಾದು ರಸ್ತೆಯಿಂದ ಕೆಳಗಿಳಿಯುತ್ತಿತ್ತು,ಸ್ವಲ್ಪ ದೂರ ನೋಡಿದರೆ ಕಪ್ಪನೆಯ ರಸ್ತೆಯ ಮೇಲೆ ನೀರು ಕಂಡಂತಾಗುತ್ತಿತ್ತು, ಬಿಸಿಲಿನ ಜಳಕ್ಕೆ ರಸ್ತೆಯ ಪಕ್ಕದ ಮಾಗಿ ಮಾಡಿದ ಕೆಂಪುಮಣ್ಣು ಬಣ್ಣ ಕಳೆದುಕೊಂಡಿತ್ತು


ಮುಖದ ಮೇಲೆ ಹಾಕಿಕೊಂಡ ತೂತುಗಳಿರುವ ಬಣ್ಣ ಕಳೆದುಕೊಂಡ ಲುಂಗಿಯನ್ನು ಸರಿಸಿ ಮುಲುಕುತ್ತಾ, ಮಧ್ಯಾಹ್ನದ ಬಿರುಬಿಸಿಲಿನಲ್ಲೂ  ನಡುಗುತ್ತಾ  ಕಷ್ಟ ಪಟ್ಟು ಮೇಲೇಳಲು ಪ್ರಯತ್ನ ಪಟ್ಟರು ಆ ವ್ಯಕ್ತಿ,

ವಯಸ್ಸು ನಲವತ್ತರಿಂದ ಐವತ್ತು ಇರಬಹುದು, ಗಡ್ಡ ಮೀಸೆಗಳು ಉದ್ದವಾಗಿ ಬೆಳೆದಿದ್ದರಿಂದ ಮುಖದ ಆಕಾರ ಅಸ್ಪಷ್ಟ, ಕೆದರಿರುವ ಬಿಳಿಮಿಶ್ರಿತ  ಕಪ್ಪು ಕೂದಲನ್ನು ನೋಡಿದರೆ  ಎಷ್ಟೋ ದಿನಗಳಿಂದ ಸ್ನಾನ ಮಾಡಿಲ್ಲ ಎಂಬುದು ಗೊತ್ತಾಗುತ್ತಿತ್ತು.


ಚಿಗುರು ಮೀಸೆಯ, ಬೆಳ್ಳನೆಯ ಸುಂದರ ಮೈಕಟ್ಟಿನ, ಸಾಧಾರಣ ಆಳ್ತನದ ಸತೀಶನ ನೋಡಿ,

" ನಾನು ಮಾರಣ್ಣ ಕಣಪ್ಪ ನಮ್ಮ ಊರು ಬಳ್ಳಾರಿ ಹತ್ರ ತೋರಣಗಲ್ಲು ಕಣಪ್ಪ ."ಎಂದು ನಡುಗುತ್ತ ಉತ್ತರಿಸಿದ ಮಾರಪ್ಪ.

" ಅದು ಸರಿ ಈ ಬಿಸ್ಲಾಗೆ ಈ ಜಾಲಿ ಮರದ ಕೆಳಗೆ ಯಾಕೆ ಮಲ್ಗಿದಿಯಾ?

" ಅಯ್ಯೋ ನಮ್ಮಂತವ್ರಿಗೆ ಜಾಲಿ ಮರ ಅಲ್ದೆ ಇನ್ಯಾವ್ ಬಂಗ್ಲೆ ಸಿಗುತ್ತಪ್ಪ ಮಲ್ಗಾಕೆ" 

ನೋವಿನಿಂದ ಮುಲುಕುತ್ತಾ , ಜೀವನದ ಮೇಲೆ , ಪ್ರಪಂಚದ ಮೇಲಿನ ಜಿಗುಪ್ಸೆಯಿಂದ ನುಡಿದ ಮಾರಪ್ಪ"

" ಅಣ್ಣಾ ಬೆಳಿಗ್ಗೆ ಊಟ ಗೀಟ ಮಾಡಿದ್ಯಾ ಇಲ್ವೊ?" ಕೇಳಿದ ಸತೀಶ

" ಅಯ್ಯೋ ನಿನ್ನೆ ಸಂಜೆ ಹಿರಿಯೂರಿನ ಟಿ ಬಿ ಸರ್ಕಲ್ ಹತ್ರ ಯಾರೋ ಪುಣ್ಯಾತ್ಮ ಒಂದ್ ಪ್ಲೇಟ್ ಇಡ್ಲಿ ಕೊಡಿಸಿದ್ದ ಕಣಪ್ಪ, ಅದನ್ನು ತಿಂದದ್ದೆ ಕೊನೆ ,ಹರ್ತಿಕೋಟೆ ಹತ್ತಿರ ಜಗ್ಗ ನಲ್ಲಿಲಿ ಈ ನೀರು ತುಂಬಿಸಿಕೊಂಡು ಕುಡಿತಿದಿನಿ " ಎಂದು 

ಅರ್ಧದಷ್ಟು ತುಂಬಿದ   ನೀರಿನ ಬಾಟಲ್ ತೋರಿಸಿದರು ಮಾರಣ್ಣ.


"ಇಗ ಕೈ ತೊಳ್ಕ ಒಂದ್ ಅರ್ಧ ಮುದ್ದೆ ಸಾರು ಐತೆ ಉಣ್ಣು"  ಅಂದ ಸತೀಶ


" ಸತೀಶನ ಮಾವ ಬಿಳಿಯಪ್ಪ ಹೊಲದಲ್ಲಿ ನೇಗಿಲು ಹೊಡೆಯಲು ಬಂದಿದ್ದರು ಅವರಿಗೆ ಬುತ್ತಿ ತಂದಿದ್ದ ಸತೀಶ.ಹೊಲದಲ್ಲಿ ಉಳುವ ಕಷ್ಟಕರ ಕೆಲಸ ಮಾಡುವ ಬಿಳಿಯಪ್ಪ ಯಾವಾಗಲೂ ಮೂರು ಮುದ್ದೆ ಉಣ್ಣುತ್ತಿದ್ದರು, ಯಾಕೋ ಅಂದು ಎರಡೂವರೆ ಮುದ್ದೆ ಉಂಡು  

"ಸತೀಶ ನನಗೆ ಸಾಕು ನೀನೆ ಉಣ್ಣು" ಅಂದರಂತೆ 

"ಬ್ಯಾಡ ಮಾವ ನಾನು ಮನೇಲೆ ಉಣ್ತೀನಿ" ಎಂದು ಬುತ್ತಿಯ ವೈರ್ ಬ್ಯಾಗ್ ನಲ್ಲಿ ಇಟ್ಟುಕೊಂಡು ದಾರಿಯಲ್ಲಿ ಸೈಕಲ್‌ ಮೇಲೆ ಬರುವಾಗ ಮಾರಪ್ಪನ ಕಂಡ.

 

ಕಷ್ಟ ಪಟ್ಟು ಎದ್ದು ತನ್ನ ಕೈಚೀಲದಲ್ಲಿದ್ದ ಅಲ್ಯೂಮಿನಿಯಂ ತಟ್ಟೆ ತೆಗೆದು ಅದಕ್ಕೆ ಸ್ವಲ್ಪ ನೀರು ಹಾಕಿ ತೊಳೆವ ಶಾಸ್ತ್ರ ಮಾಡಿ  ಮುದ್ದೆ ಸಾರು ಹಾಕಿಸಿಕೊಂಡು ಒಂದೇ ಸಮನೆ ಗಬಗಬನೆ ತಿನ್ನಲು ಶುರುಮಾಡಿದರು ಮಾರಣ್ಣ.

ಇದನ್ನು ನೋಡಿದ ಸತೀಶನಿಗೆ ಮೊದಲ ಬಾರಿ ಹಸಿವನ್ನು  ನೋಡಿದಂತಾಯಿತು. ಅವನ ಮಾವ ಮುಕುಂದಯ್ಯನವರು ಸತೀಶ ಒಮ್ಮೆ ಕಲ್ಲಿನ ಮುಸುರೆ ಬಾನಿಗೆ ತಟ್ಟೆಯಲ್ಲಿ ಹೆಚ್ಚಾಗಿ ಬಿಟ್ಟ ಮುದ್ದೆ ಬಿಸಾಕುವಾಗ ಹೇಳಿದ ಮಾತು ನೆನಪಾಯಿತು. " ಎಷ್ಟೋ ಜನ ಈ ಪ್ರಪಂಚದಲ್ಲಿ ಒಂದೊತ್ತು ಊಟ ಇಲ್ದೆ ಮಲಗ್ತಾರೆ ಇಂಗೆ ಉಣ್ಣೋ ಅನ್ನ ಪೋಲು ಮಾಡಬೇಡ"


"ಅದ್ಸರಿ ಮಾರಣ್ಣ ಇಂಗ್ಯಾಕೆ ಇಲ್ಲಿ ಮಲ್ಕಂಡಿದಿರಾ? ಇದು ಬಳ್ಳಾರಿ ರೋಡ್ ಅಲ್ವ ಯಾವುದಾದರೂ ಬಸ್ ಹತ್ತಿ ನಿಮ್ಮೂರ್ಗೆ ಹೋಗಾದಲ್ವ?

" ಅಯ್ಯೋ ,ಅಪ್ಪ ಬಸ್ ಗೆ ಹೋಗಾಕೆ ನನಗೂ ಆಸೆ , ಬಸ್ ಚಾರ್ಜು ಬೇಕಲ್ಲ? , "

"ಈಗ ನೀವು ಎಲ್ಲಿಂದ ಬಂದ್ರಿ?"

" ಬೆಂಗಳೂರಿನಿಂದ! "

ಕೇಳುತ್ತಲೆ ದಂಗಾದ ಸತೀಶ , ಸರಿ ಸುಮಾರು ನೂರಾ ಎಂಭತ್ತು ಕಿಲೋಮೀಟರ್ !.

" ಅಷ್ಟು ದೂರದಿಂದ ನಡೆದೇ ಬಂದಿರಾ?"

ಹೌದು ಎಂಬಂತೆ ತಲೆ ಆಡಿಸಿದರು ಮಾರಣ್ಣ.

"ಅದ್ಯಾಕೆ ಹೀಗೆ ನಡದೇ ಬಂದಿರಿ ದುಡ್ ಇರಲಿಲ್ಲವೆ?

" ಅಯ್ಯೋ ಅದೊಂದು ದೊಡ್ಡ ಕಥೆ ಕಣಪ್ಪ , ನಮ್ದು ಊರಾಗೆ ಜಮೀನೆಲ್ಲ ಇತ್ತು ,ಮಳೆ ಬೆಳೆ ಚೆನ್ನಾಗೆ ಆಗ್ತಿತ್ತು, ನಾನು ಬೇಸಾಯ ಮಾಡ್ಕೊಂಡು ಹೆಂಡ್ತಿ ,ಒಬ್ಬಳು ಮಗಳು, ಸುಖವಾಗಿ ಇದ್ವಿ.  ನಮ್ಮೂರ್ನಾಗೆ ಮೂರ್ನಾಲ್ಕು ಜನ ಬೆಂಗಳೂರಿನಲ್ಲಿ ಕೆಲ್ಸ ಮಾಡಿ ಚೆನ್ನಾಗಿ ದುಡಿದು ತಮ್ಮ ಮನೆಯನ್ನು ರಿಪೇರಿ ಮಾಡ್ಸಿ , ಸ್ವಲ್ಪ ದುಡ್ ಅವರ ಅಪ್ಪ ಅಮ್ಮನ ಕೈಗೆ ಕೊಟ್ಟು ಹೋದರು, ಅದನ್ನು ನೋಡಿದ ನನ್ ಹೆಂಡತಿ ,ನೀನೂ  ಬೆಂಗಳೂರಿಗೆ ಹೋಗಿ ದುಡಿ ,ನನಗೆ ಬಂಗಾರದ ಒಡವೆ  ಮಾಡಿಸು, ಬೆಂಗಳೂರಿನಲ್ಲಿ ಚೆನ್ನಾಗಿ ದುಡಿದರೆ  ನಮ್ಮ ಮಗಳ  ಓದಿಗೆ ಅನುಕೂಲ ಆಗುತ್ತದೆ ಅಂದಳು. ನಾನು ಬೇಡ, ಇಲ್ಲೇ ನಮ್ಮ ಜಮೀನಿನ ಕೆಲಸ ಮಾಡುವೆ ದೇವರು ನಮಗೆ ಕೊಟ್ಟಿರೋದೆ ಸಾಕು ಎಂದರೂ ಕೇಳಲಿಲ್ಲ.


ಅಂತೂ ಬೆಂಗಳೂರು ಸೇರಿ ವಾಚ್ಮೆನ್ ಕೆಲಸಕ್ಕೆ ಸೇರಿ ಆರು ತಿಂಗಳಲ್ಲಿ ಎರಡು ಬಾರಿ ಊರಿಗೆ ಹೋಗಿ ಹಣ ಕೊಟ್ಟು ಬಂದಿದ್ದೆ ,ಹೆಂಡತಿಯೇನೋ ಸಂತಸ ಪಟ್ಟಳು ,ಮಗಳು ಮಾತ್ರ ಯಾಕೋ   "ಅಪ್ಪ ನೀನು ಬೆಂಗಳೂರಿಗೆ ಹೋಗ ಬೇಡ ಇಲ್ಲೇ ಇರು ಎಂದು ಕಣ್ಣೀರಾಕಿದ್ದಳು".


"ಅಯ್ತು ಮಗಳೆ   ಬೇಗ ಬರುವೆ "ಎಂದು ಪುನಃ ಬೆಂಗಳೂರಿಗೆ ಬಂದೆ .ನನ್ ಕೆಲಸ ನೋಡಿದ ಸಾವ್ಕಾರರು ನನಗೆ ಸಂಬಳ ಜಾಸ್ತಿ ಮಾಡಿ ,ಮೊದಲು ಕೆಲಸ ಮಾಡುವ ವಾಚ್ಮನ್ ಕೆಲಸದಿಂದ ತೆಗೆದರು.ಇದರಿಂದ ಸಿಟ್ಟಾದ ಆ ವಾಚ್ಮನ್ ನಾನಿಲ್ಲದಾಗ ನಮ್ ಕಂಪನಿಯಲ್ಲಿ ಕಳ್ಳತನ ಮಾಡಿ ಅದನ್ನು ನನ್ನ ಮೇಲೆ ಹೊರಿಸಿದ, ಸಾವ್ಕಾರರು  ನನ್ನನ್ನು ಕೆಲಸದಿಂದ ತೆಗೆದರು . 


ಬೇರೆ ಕೆಲಸ ನೋಡುತ್ತಾ ಅಲೆದೆ ಕೆಲಸ ಸಿಗಲಿಲ್ಲ ,ಕೈಯಲ್ಲಿದ್ದ ಕಾಸು ಖಾಲಿಯಾಯಿತು .ಊರಿಗೆ ಹೋಗೋಣ ಎಂದು ಮೆಜೆಸ್ಟಿಕ್ ಗೆ ಬಂದು ಒಂದಿಬ್ಬರನ್ನು ಬಸ್ ಚಾರ್ಜ್ ಗೆ ಹಣ ಕೇಳಿದೆ ಅವರು ನನಗೆ ಅವಮಾನ ಮಾಡಿದರು ,ಇದರಿಂದ ಬೇಸತ್ತು ಅಲ್ಲಿಂದಲೆ ನಡೆದು ನಮ್ಮೂರು ಸೇರಲು ತೀರ್ಮಾನ ಮಾಡಿ ,ನಡೆಯುತ್ತಾ ಯಾರಾದರೂ ಏನಾದರೂ ಕೊಟ್ಟರೆ ತಿನ್ನುವೆ ,ಇಲ್ಲ ಅಂದರೆ ಇದೋ" ಎಂದು ನೀರಿನ ಬಾಟಲ್ ತೋರಿಸಿದರು ಮಾರಣ್ಣ

ಅವರ ಕಥೆ ಕೇಳಿ ಸತೀಶನಿಗೆ ಬಹಳ ಬೇಸರವಾಯಿತು.


" ಅಣ್ಣ ನಾನು ಸೈಕಲ್‌ ತಂದಿರುವೆ ,ನಿಮ್ಮನ್ನು ಯರಬಳ್ಳಿ ವರೆಗೆ ಸೈಕಲ್‌ ನಲ್ಲಿ ಕರೆದುಕೊಂಡು ಹೋಗುವೆ ಬನ್ನಿ " ಎಂದ ಸತೀಶ 

 ಬೇರೆಯವರ ಕಷ್ಟಕ್ಕೆ ಸ್ಪಂದಿಸುವ ಮತ್ತು   ಸಹಾಯ ಮಾಡುವ ಮಾಡುವ ಗುಣ ತಾಯಿ ಭೂದೇವಮ್ಮನಿಂದ ರಕ್ತಗತವಾಗಿ ಬಂದಂತಿತ್ತು ಸತೀಶನಿಗೆ.


ನಿಂತು‌ಕೊಳ್ಳಲು ಪ್ರಯತ್ನ ಪಟ್ಟ ಮಾರಣ್ಣ ನೋವಿಂದ ಬಳಲಿ ಬಿದ್ದರು ಅವರ ಎತ್ತಲು ಹೋದ ಸತೀಶ ನೋಡಿದ್ದು ಭಯಾನಕ, 

ತನಗರಿವಿಲ್ಲದೆ ಕಣ್ಣಲ್ಲಿ ನೀರು ಹರಿಯಲಾರಂಬಿಸಿದವು.

ಅಂಗಾಲುಗಳಲ್ಲಿ ರಕ್ತ ಜಿನುಗುತಿದೆ ,ಅಲ್ಲಲ್ಲಿ ರಕ್ತ ಹೆಪ್ಪುಗಟ್ಟಿದೆ ,ಅಲ್ಲಲ್ಲಿ ಬೊಬ್ಬೆ ಬಂದಿವೆ ,ಕೆಲವೆಡೆ ಬಟ್ಟೆ ಕಟ್ಟಲಾಗಿದೆ.

" ಅಲ್ಲಾ ಅಣ್ಣ ಇಂತಹ ನೋವು ಎಂಗೆ ತಡ್ಕೊಂಡಿದಿರಿ "ಎಂದು ಬುತ್ತಿ ಬಟ್ಟೆ ಹರಿದು ಎರಡೂ ಕಾಲಿಗೆ ಕಟ್ಟಿ ಸೈಕಲ್ ಮೇಲೆ ಕೂರಿಸಿಕೊಂಡು ಯರಬಳ್ಳಿಯ ಮಾರಮ್ಮನ ಗುಡಿಯ ಬಳಿ ನಿಲ್ಲಿಸಿದ .


"ಯಾರಪ್ಪ ಸತೀಶ ಇವರು "

ಕೇಳಿದರು ಊರ ಪ್ರಮುಖ ಕಾಟಯ್ಯ

ಮಾರಣ್ಣನ ಕಥೆ ಕೇಳಿ ಆಗಲೆ ಯರಬಳ್ಳಿಯ ಆಸ್ಪತ್ರೆಗೆ ಸೈಕಲ್‌ ಮೇಲೆ ಕರೆದುಕೊಂಡು ಹೋಗಿ ಬ್ಯಾಂಡೇಜ್ ಹಾಕಿಸಿ ಇಂಜೆಕ್ಷನ್ ಕೊಡಿಸಿ , ಬಸ್ಚಾರ್ಜ್ ಗೆ ಸ್ವಲ್ಪ ಹಣ ಕೊಟ್ಟು , ಸಂಜೆಯ ಐದು ಗಂಟೆಯ  ನೀಲಕಂಠೇಶ್ವರ ಬಸ್ ಗೆ ಹತ್ತಿಸಿ 

" ಕಂಡಕ್ಟರ್ ಇವರನ್ನು ಬಳ್ಳಾರಿ ಗೆ ಇಳಿಸಿ"ಎಂದರು ಕಾಟಯ್ಯ.

ಸತೀಶನನ್ನು ಒಮ್ಮೆ, ಕಾಟಯ್ಯ ನನ್ನು ಒಮ್ಮೆ ನೋಡುತ್ತಾ ಗಳಗಳನೆ ಅಳಲಾರಂಬಿಸಿದರು ಮಾರಣ್ಣ.


ನೀಲಕಂಠೇಶ್ವರ ಬಸ್ ಹೊಗೆ ಉಗುಳುತ್ತಾ 

ಆಸ್ಪತ್ರೆಯ ದಿನ್ನೆ ಹತ್ತಿ ಚಳ್ಳಕೆರೆ ಕಡೆಗೆ ಚಲಿಸಿತು, ದೂರ ಹೋಗುವವರೆಗೂ ಕಿಟಕಿಯಾಚೆ ಮಾರಣ್ಣನ ಅಲ್ಲಾಡುವ ಕೈ ಕಾಣುತ್ತಿತು.....


"  ಮದ್ಯಾನ  ಬುತ್ತಿ ಕೊಡಾಕೋದಾನು ಈಗ ಬಂದೇನಪ್ಪ ಸಾವ್ಕಾರ ತಡಿ ಮಾವ ಬರ್ಲಿ ಹೇಳ್ತಿನಿ ,ಸೈಕಲ್‌ ಸಿಕ್ಕರೆ ಸಾಕು ಅದೇನ್ ಸುತ್ತಾಕೆ ಹೋಗ್ತಿಯೋ ಭಗವಂತನೆ ಬಲ್ಲ " 

ಸಂಜೆ ಐದೂ ಕಾಲು ಹೊತ್ತಿಗೆ ಮನೆಗೆ ಬಂದ ಸತೀಶನನ್ನು ಬೈಯಲು ಶುರು ಮಾಡಿದರು .

ಇದರ ಬಗ್ಗೆ ಪ್ರತಿಕ್ರಿಯೆ ನೀಡದೆ ಸಗಣಿ ತಟ್ಟಿ ತೆಗೆದುಕೊಂಡು ಸಗಣಿ ಬಾಸಾಕಲು ದನದ ಅಕ್ಕೆಗೆ ಹೋಗಿ ಅನ್ಯಮನಸ್ಕನಾಗಿ , ನನದೇ ಮಹಾಸಮಸ್ಯೆ ಎಂದು ಕೊಂಡಿದ್ದೆ ,ಇಂದು ಮಾರಣ್ಣನ ನೋಡಿ ನನ್ ಸಮಸ್ಯೆ ಏನೂ ಅಲ್ಲ ಅಲ್ಲವೆ? ದೇವರೆ ನನ್ನ ಸುಜಾತಳಿಗೆ ಇಂತಹ ಸಮಸ್ಯೆ ಬರದಿರಲಿ. ಮತ್ತೆ ಮನಸು ಅಲ್ಲಿಗೆ ಹೋಯಿತು.ಮಾರಣ್ಣ ಸುಖಿ ರೈತ ,ಯಾರದೊ ಆಸೆಗೆ ಬಲಿಯಾಗಿ, ಆಕರ್ಷಣೆ ಯಿಂದ ನಗರಕ್ಕೆ ಹೋಗಿ ಅನ್ನ ಕೊಡುವ ಕೈ ಅನ್ನ ಬೇಡುವ ಹೀನ ಸ್ಥಿತಿಯನ್ನು ಕಂಡು ಯಾಕೋ ಬೇಸರವಾಗುತ್ತದೆ, ಅಷ್ಟಕ್ಕೂ ಎಲ್ಲರೂ ಒದಿ ಕೆಲಸಕ್ಕೆ ಪಟ್ಟಣಕ್ಕೆ ಹೋದರೆ ಹಳ್ಳಿಯಲ್ಲಿ ದುಡಿಯುವರು ಯಾರು? ದೇಶಕ್ಕೆ ಅನ್ನ ನೀಡುವವರಾರು? ದೇಶಕ್ಕೆ ಬೆನ್ನೆಲುಬಾಗುವವರು ಯಾರು? ಕೃಷಿ ಮಾಡಿ ಗೌರವಯುತ ಜೀವನ ಸಾಗಿಸಲು ಸಾದ್ಯವಿಲ್ಲವೆ? 

ಮೊದಲ ಬಾರಿಗೆ ಸುಜಾತಳ ನೆನಪಿನ ಇತರ  ಜೀವನದಲ್ಲಿನ ಸಮಸ್ಯೆಗಳು ಮತ್ತು ರೈತರ ಬಗ್ಗೆ ಯೋಚಿಸಲಾರಂಬಿಸಿದ ಸತೀಶ .

ಒಂದು ರೀತಿಯಲ್ಲಿ ಮಾರಣ್ಣನ ಭೇಟಿ ಮಾಡಿದ ಮೇಲೆ ಸತೀಶನಿಗೆ ಬುದ್ದನಿಗೆ ಜ್ಞಾನೋದಯ ಆದಂತೆ ಅಲ್ಪಮಟ್ಟದ ಬದಲಾವಣೆಗಳನ್ನು ತಂದದ್ದು ಸುಳ್ಳಲ್ಲ

ಅದರ ಮುಂದಿನ ಸೂಚನೆ ಎಂಬಂತೆ ಮಂಗಳವಾರ ಬಿಳಿಯಪ್ಪ ಮಾವನ ಬದಲಿಗೆ ಇವನೆ ನೇಗಿಲು ಹೊಡೆಯಲು ಶುರು ಮಾಡಿದ ,ಬಿಳಿಯಪ್ಪ ‌ಇದೇ ಚಾನ್ಸು ಎಂದು ಶ್ರೀರಾಮಪ್ಪ ನಡೆಸುವ ಇಸ್ಪೀಟು ಕ್ಲಬ್ಗೆ ಹೋಗಿ ರಮ್ಮಿ ಹಾಡಲು ಕುಳಿತ...



ಮುಂದುವರೆಯುವುದು.....



ಸಿ ಜಿ ವೆಂಕಟೇಶ್ವರ







17 ಮಾರ್ಚ್ 2022

ದಯೆ.ಹನಿಗವನ


 


ಬಡಿದಾಡುವಿರೇತಕೆ
ಅಂಧಕಾರದಿ ಬಿದ್ದು
ಪರಸ್ಪರ ಪ್ರೀತಿ
ತೋರದಯೇ |
ಬಿಟ್ಟುಬಿಡಿ ದ್ವೇಷವನು
ಇರಲಿ ಸಕಲ


ಜೀವಿಗಳ ಮೇಲೆ ದಯೆ||

ಸಿಹಿಜೀವಿ
ಸಿ ಜಿ ವೆಂಕಟೇಶ್ವರ

16 ಮಾರ್ಚ್ 2022

ಧೃತರಾಷ್ಟ್ರಾಲಿಂಗನ


 ಧೃತರಾಷ್ಟ್ರಾಲಿಂಗನ


ಧೃತರಾಷ್ಟ್ರಾಲಿಂಗನ 


ವಿವೇಚನೆಯಿಲ್ಲದೆ 

ಇತರರ ತಾಳಕ್ಕೆ ಕುಣಿಯುತಾ

ದುಷ್ಚಟಗಳ ದಾಸರಾದರೆ 

ನಾಡಿನ ಯುವಜನ |

ಪಶ್ಚಾತ್ತಾಪ ಪಡುವ

ಮೊದಲೇ ಆಗಿಬಿಡುವುದು

ಧೃತರಾಷ್ಟ್ರಾಲಿಂಗನ||


ಸಿಹಿಜೀವಿ

ಸಿ ಜಿ ವೆಂಕಟೇಶ್ವರ


ಪ್ರಜಾಪ್ರಗತಿ .೧೬/೩/೨೨


 

ಭಗವಂತ


 

*ಭಗವಂತ ಮತ್ತು ಪ್ರತಿಬಿಂಬ* ಹನಿಗವನ



*ಭಗವಂತ ಮತ್ತು ಪ್ರತಿಬಿಂಬ*


ಹೃದಯದಲ್ಲಿ ದೈವಿ ಗುಣಗಳಾದ ಪ್ರೀತಿ ಕರುಣೆ ಪ್ರಾಮಾಣಿಕತೆ ತಾಳ್ಮೆ ಕ್ಷಮೆ ನಿಸ್ವಾರ್ಥ ಗುಣಗಳಿದ್ದರೆ ಭಗವಂತನೇ ನೆಲೆಸುವನು 

ಮನದ ತುಂಬ |

ಪಾತ್ರೆಯಲ್ಲಿ ನೀರಿದ್ದರೆ ಮಾತ್ರ ಅದರಲ್ಲಿ ಮೂಡುತ್ತದೆಯಲ್ಲವೇ ಪ್ರತಿಬಿಂಬ||


*ಸಿಹಿಜೀವಿ*

ಸಿ ಜಿ ವೆಂಕಟೇಶ್ವರ

12 ಮಾರ್ಚ್ 2022

ಶ್ರೀದೇವಿ ಮಹಾತ್ಮೆ ನಾಟಕ ಪ್ರಸಂಗ .ಉದಕದೊಳಗಿನ ಕಿಚ್ಚು.ಭಾಗ ೨೦



ನಾಟಕ ಪ್ರಸಂಗ ದೇವಿ ಮಹಾತ್ಮೆ


" ಓಂ ನಮೋ ಭಾವಾನಿ ತಾಯೆ....ಒಂ ನಮೋ ಶಿವಶಕ್ತಿ ಕಾಯೆ....... ಓಂ ನಮೋ ಭವಭಕ್ತಿ ಕಾಯೆ........ ತಮೋ ನಿವಾರಿಣಿ ಶಕ್ತಿ ಶರಣೆ ಜಗಪಾಲಿನಿ...... ಒಂ ನಮೋ ಅಸುರಕುಲನಾಷಿನಿ ...... ಒಂ ನಮೋ ನಮೋ ಸಹಕಾರಣಿ........"
ಹಾರ್ಮೋನಿಯಂ ಶೃತಿಗೊಳಿಸುತ್ತಾ  ಆಲೂರು ಬಸವಾಚಾರ್ ತಲೆ ಅಲ್ಲಾಡಿಸುತ್ತಾ ಎಡಗೈ ಕಿರುಬೆರಳು ಇಲ್ಲದಿದ್ದರೂ ಶುದ್ದ ಶೃತಿಯಲ್ಲಿ ಸಂಗೀತ ಬಾರಿಸುತ್ತಾ ರಾಗವಾಗಿ, ಭಕ್ತಿಪೂರಕವಾಗಿ ಹಾಡುತ್ತಾ ,ಕೆಲವೊಮ್ಮೆ ನಿಂತಿರುವವರ ನೋಡಿ ,ಕಣ್ಣುಗಳಲ್ಲೇ ಏನೋ ಹೇಳುತ್ತಾ, ಕೆಂಪನೆಯ ಸಣ್ಣ ಟವಲ್ ನಿಂದ ಆಗಾಗ್ಗೆ ಬರುವ ಬೆವರನ್ನು ಒರೆಸುತ್ತಾ, ಲೆಗ್ ಹಾರ್ಮೋನಿಯಂ ನ್ನು ಎರಡೂ ಕಾಲಗಳಲ್ಲಿ ತುಳಿಯುತ್ತಾ, ಹಾಡನ್ನು ಮುಂದುವರೆಸಿ , ಕೈಯ ಒಂಭತ್ತೂ ಬೆರಳುಗಳನ್ನು ಬಿಳಿ,ಕಪ್ಪು ಮನೆಗಳ ಮೇಲೆ ಒಮ್ಮೆಲೆ ಇಟ್ಟು ಪಿಂ........ ಎನಿಸಿ ಲೆಗ್ ಹಾರ್ಮೋನಿಯಂ ಅನ್ನು ಒತ್ತುವುದನ್ನು ನಿಲ್ಲಿಸಿ ,
" ನೋಡ್ರಪ ಇದು ಅಮ್ಮನ ಪ್ರಾರ್ಥನೆ ,ಇದನ್ನು ಪ್ರತಿ ದಿನ ದೇವಿ ಪೋಟೋಗೆ ಭಕ್ತಿಯಿಂದ ಪೂಜೆ ಮಾಡಿ ಎಲ್ಲ ಪಾತ್ರಧಾರಿಗಳು ಸಾಲಾಗಿ ನಿಂತು ಭಕ್ತಿಯಿಂದ ಹೇಳ್ಬೇಕು ,ಕೊನೆಗೆ ನಿಮ್ ಸಂಘ ಅದ್ಯಾವದ್ ಅದು. ಆ.... ಅದೇ ಅಂಬಿಕಾ ಕಲಾ ಸಂಘಕ್ಕೆ ಅಂತ. ಒಬ್ಬರು ಅನ್ನಬೇಕು ಉಳಿದವರು. ಜೈ ಅನ್ನಬೇಕು.ಅರ್ಥ ಆಯ್ತಾ"  ಎಂದು ಕೆಂಪನೆಯ ಟವಲ್ ನಿಂದ ಹಣೆಯ ಮೇಲೆ ,ಕತ್ತಿನ ಮೇಲೆ ಕರೆಸಿಕೊಳ್ಳುತ್ತಾ ದೀರ್ಘವಾದ ವಿವರಣೆಯನ್ನು ಕೊಟ್ಟರು ನಾಟಕದ ಮಾಸ್ಟರ್ ಆಲೂರು ಬಸವಾಚಾರ್ .
ವಯಸ್ಸಿನಲ್ಲಿ ಬಸವಾಚಾರ್ ಅವರಿಗಿಂತ ದೊಡ್ಡವರು ಮೂರ್ನಾಲ್ಕು ಜನ ಉಳಿದವರು ಅವರಿಗಿಂತ ಚಿಕ್ಕವರು ಆದರೂ ಶಾಲೆಯಲ್ಲಿ ಶಿಕ್ಷಕರ ಮುಂದೆ ನಿಲ್ಲುವ ವಿಧೇಯ ವಿದ್ಯಾರ್ಥಿಗಳ ತರ ಕೈಕಟ್ಟಿ ನಿಂತಿದ್ದರು ಶ್ರೀ ದೇವಿ ಮಹಾತ್ಮೆ ನಾಟಕದ ಭಾವಿ ಪಾತ್ರಧಾರಿಗಳು  .

ಪ್ರತಿ ವರ್ಷವೂ ಜಾತ್ರೆಗೆ ಅಥವಾ ಬೇಸಿಗೆ ಕಾಲದಲ್ಲಿ ಕನಿಷ್ಟ ಮೂರ್ನಾಲ್ಕು ನಾಟಕಗಳನ್ನು ಆಡುವ ಯರಬಳ್ಳಿಯ ಗ್ರಾಮಸ್ಥರು  "ಸರ್ಪಸಾಮ್ರಾಜ್ಯ" ನಾಟಕವು ಬಹಳ ಸಲ ಪ್ರದರ್ಶನ  ಮಾಡಿದ್ದರು, "ಮೂರುವರೆ ವಜ್ರ "ಎಂಬ ದೊಂಬಿ ನಾಟಕ ಆಗೊಮ್ಮೆ ಈಗೊಮ್ಮೆ ಪ್ರದರ್ಶನ ಮಾಡಿದ್ದರು, ಕುರುಕ್ಷೇತ್ರ ನಾಟಕ ಆಡಲು ಬಹುಬಾರಿ ತಯಾರಿ ಮಾಡಿಕೊಂಡರೂ ಯಾಕೋ ಪ್ರದರ್ಶನ ಭಾಗ್ಯ ಕಂಡಿರಲಿಲ್ಲ.

ಹದಿನೈದು ದಿನಗಳ ‌ಹಿಂದೆ ರಂಗೇನಹಳ್ಳಿಯಲ್ಲಿ " ಶಾಂಭವಿ ಮಹಾತ್ಮೆ" ನಾಟಕ ನೋಡಲು ಹೋದ ಕೆಲ ಯುವಕರು ನಮ್ಮ ಊರಲ್ಲಿ ದೇವಿ ಮಹಾತ್ಮೆ ನಾಟಕ ಆಡಲು ತೀರ್ಮಾನ ಮಾಡಿ ಒಂದು ರಾತ್ರಿ ರಂಗಪ್ಪನ ಗುಡಿಯಲ್ಲಿ ಎಲ್ಲರೂ ಕಲೆತು ಈ ಬಗ್ಗೆ ಮಾತನಾಡಲು ಶುರು ಮಾಡಿದರು.
" ಶುಂಭ ನಿಶುಂಭರ ದರ್ಭಾರ್ ಪ್ಲಾಟ್ ಬಾಳ ಸೆಂದಾಗೈತೆ ದೇವಿ ಕಥೆ ಈ ಸಲ ನಮ್ಮೂರಾಗೆ ಆಡಾನ " ಮಹಲಿಂಗಪ್ಪ ನುಡಿದರು.
" ಏ ಆಲೂರು ಬಸವಾಚಾರ್ ಅವರೆ ಬರ್ದು ಅವರೇ ನಿರ್ದೇಶನ ಮಾಡುವ "ಶ್ರೀದೇವಿ ಮಹಾತ್ಮೆ" ಅರ್ಥಾತ್ ರಕ್ತಬಿಜಾಸುರ ವಧೆ ನಾಟಕ ಹೋದ ವಾರ ನಾನು ಕಳವಿಭಾಗಿನಲ್ಲಿ ನೋಡಿದೆ ಸಕ್ಕತ್ ಆಗೈತೆ ,ಹಾಡುಗಳು ಡೈಲಾಗ್ ಒಂದಕ್ಕಿಂತ ಒಂದು ಸೂಪರ್ ಆಗ್ಯಾದೆವೆ" ಪೂಜಾರ್ ಮಂಜ ಹೇಳಿದ .
ಈಗೆ ಒಬ್ಬೊಬ್ಬರು ಒಂದೊಂದು ಪ್ಲಾಟ್ ಬಗ್ಗೆ ಒಲವು ತೋರಿಸುತ್ತಾ ಅದೇ ನಾಟಕ ಬೇಕು ಎಂದು ಸಮರ್ಥನೆ ಮಾಡಲು ಇಳಿದರು .
" ಆತು ಈಗ ಈ ವರ್ಸ ದೇವಿ ನಾಟ್ಕ ಆಡೋದು ಪಕ್ಕಾ ಅಂತ ಆತು ಅಲ್ವೇನ್ರಪ್ಪ ,ಆದರೆ ಪ್ಲಾಟ್ ಯಾವ್ದು ಅನ್ನೋದು ತೀರ್ಮಾನ ಆಗಬೇಕು ,ಒಂದ್ ಕೆಲ್ಸ ಮಾಡಿ ,ನಾಳೆ ಇಷ್ಟೊತ್ತಿಗೆ ಶಾಂಭವಿ ಮಹಾತ್ಮೆ ,ಮತ್ತು ದೇವಿ ಮಹಾತ್ಮೆ ಎರಡೂ ಪ್ಲಾಟ್ ತಗಂಬರಿ ಆಮೇಲೆ ತೀರ್ಮಾನ ಮಾಡಾನ " ತೀರ್ಮಾನ ಹೇಳಿದರು ಕೆ ಜಿ ಕಾಟಯ್ಯ.
ಎಲ್ಲರೂ ಕಾರ ಮಂಡಕ್ಕಿ ತಿಂದು ಮನೆಯ ಕಡೆ ಹೊರಟರು.

ಆಲೂರು ಬಸವಾಚಾರ್ ರವರ ಶ್ರೀದೇವಿ ಮಹಾತ್ಮೆ ನಾಟಕವನ್ನೇ ಆಡಲು‌ ತೀರ್ಮಾನ ಮಾಡಿ ಅವರೇ ಪಾತ್ರಗಳನ್ನು ಹಂಚಿಕೊಂಡು ,ಎಷ್ಟು ದುಡ್ಡು ಖರ್ಚಾಗುತ್ತದೆ? ಯಾವ ಪಾತ್ರಕ್ಕೆ ಎಷ್ಟು ದುಡ್ಡು ?ಎಲ್ಲಾ ತೀರ್ಮಾನ ಮಾಡಿ ಕೆ ಜಿ ಕಾಟಯ್ಯ ರವರಿಗೆ ಇಡೀ ನಾಟಕದ ಜವಾಬ್ದಾರಿ ನೀಡಲಾಯಿತು.

" ಸ್ವಾಮಿ ಮುಂದಿನ್ ತಿಂಗ್ಳು ನಮ್ಮೂರಾಗೆ ನಾವು ನೀವ್ ಬರ್ದಿರೋ ದೇವಿ ಮಹಾತ್ಮೆ ನಾಟಕ ಆಡ್ಬೇಕು ಅದಕ್ಕೆ ನೀವೇ ಬಂದು ನಾಟಕ ಕಲಿಸಿಕೊಡ್ಬೇಕು" ವಿನಂತಿ ಮಾಡಿದರು ಕೆ ಜಿ ಕಾಟಯ್ಯ.
" ನೋಡಿ‌ ಇವ್ರೆ ನಿನ್ನೆ ಮೇಟಿಕುರ್ಕೆ ನವರು ಬಂದಿದ್ದರು ಅವರ ಊರಲ್ಲಿ ಮೂರನೆ ಸಲ ಈ ನಾಟಕ ಆಡ್ತಾರೆ ಅದಕ್ಕೆ ಬರಬೇಕು ಅಂತ ಕೇಳಿದರು ನಾನು ಒಪ್ಪಿಕೊಂಡು ಬಿಟ್ಟೆ ,ಒಂದ್ ದಿನ ಮೊದ್ಲೆ ಬರಬಾರ್ದಾಗಿತ್ತಾ? ಬಸವಾಚಾರ್ ನುಡಿದರು.
" ಸಾ ಆ ಊರ್ನವ್ರು ಈಗಾಗಲೇ ಎರ್ಡು ಸತಿ ದೇವಿ ಕಥೆ  ಆಡೆದಾರೆ ಅಂತ ನೀವೆ ಹೇಳಿದ್ರಿ ಇದೊಂದ್ ಸತಿ ಅವ್ರಿಗೆ ಯಾರಾದರೂ ನಿಮ್ ಶಿಷ್ಯರನ್ನು ಕಳಿಸಿ,
ದಯವಿಟ್ಟು ನಮ್ಮೂರಿಗೆ ನೀವು ಬರಲೇಬೇಕು, ಯಾಕಂದ್ರೆ ನಮ್ಮೂರಾಗೆ ಇದೆ ಮೊದ್ಲು ನಾವು ಅಮ್ಮನ ಕಥೆ ಆಡ್ತಾಇರೋದು" ದಯಾನೀಯವಾಗಿ ಬೇಡಿದರು ಕಾಟಯ್ಯ.
"ಒಳ್ಳೆ ಸಂದಿಗ್ದಕ್ಕೆ ಬಂತಲ್ಲ,,, ಆ , ನೀವು ನೋಡಿದರೆ ನಾನೇ ಬೇಕು ಅಂತೀರಾ ಅವರಿಗೆ ನಾನು ಮಾತು ಕೊಟ್ ಬಿಟ್ಟಿದಿನಿ,
ಒಂದ್ ಕೆಲ್ಸ ಮಾಡಿ ನಾಳೆ ನಿಮ್ಮಲ್ಲಿ‌ ಯಾರಾದರೂ ಒಬ್ಬರು ಬರ್ರಿ , ಮೇಟಿಕುರ್ಕೆಗೆ ಯಾರಾದರೂ ಅರ್ಜೆಸ್ಟ್ ಆದರೆ ,ನಾನು  ಹಾರ್ಮೋನಿಯಂ ಪೆಟ್ಟಿಗೆ ಹಾಕ್ಕೆಂಡು ನಿಮ್ಮೂರ್ಗೆ ಬತ್ತಿನಿ ,ಆವೂರ್ಗೆ ಯಾರೂ ಸಿಗಲಿಲ್ಲ ಅಂದ್ರೆ ಬೇಜಾರಾಗ್ ಬೇಡಿ " ಖಡಾಖಂಡಿತವಾಗಿ ಹೇಳಿದರು ನಾಟಕದ ಮಾಸ್ಟರ್.
" ಅಡ್ವಾನ್ಸ್ ಏನಾರಾ ಕೊಡಾನಾ ಸಾರ್ "
" ಅಯ್ಯೋ ದುಡ್ ಎಲ್ ಹೋಗುತ್ತಪ್ಪ  ಇರಲಿ ಇಟ್ಕಾ ನಾಳೆ ನೋಡಾನ"
ಕಾಟಯ್ಯ ನ‌ಜೊತೆ ಬಂದ ಇಬ್ಬರು ಟೀ ಕುಡಿದು ಯರಬಳ್ಳಿಯ ಕಡೆ ಹಿಂತಿರುಗಿದರು.

ಗುರುವಾರ ಸಂಜೆ ನಾಲ್ಕು   ಗಂಟೆಯಿಂದ ಐದು ಜನ ಊರ ಮುಂದೆ ನಿಂತು‌ ಹಿರಿಯೂರಿನ ಕಡೆಯಿಂದ ಬರುವ ಎಲ್ಲಾ ಬಸ್ಗಳನ್ನು ನೋಡುತ್ತಾ ಸಂತೆಗೆ ಹೋದ ಅಮ್ಮ ಕಾರ ಮಂಡಕ್ಕಿ ತರ್ತಾರೆ ಅಂತ ಕಾಯೋ ಚಿಕ್ಕ ಮಕ್ಕಳ ತರ ಕಾಯುತ್ತಿದ್ದರು ಕಾಟಯ್ಯ ಮತ್ತು ಸ್ನೇಹಿತರು.

ಅಂತೂ ಏಳು ಗಂಟೆಯ ಕರ್ನಾಟಕ ಬಸ್ಗೆ ಯಾವುದೋ ಪೆಟ್ಟಿಗೆ ಇಳಿಸುವ ದೃಶ್ಯ ಕಂಡು ಚಂಗನೆ ನೆಗೆದರು ಸದಾನಂದಯ್ಯ. ಅವರ ಕಾಯುವಿಕೆಗೆ ಮೋಸವಾಗಲಿಲ್ಲ
ಪೆಟ್ಟಿಗೆಯೊಂದಿಗೆ ಬಸವಾಚಾರ್ ಮಾಸ್ಟರ್ ಸಹ ಇಳಿದರು. ಕೆ ಜಿ‌ ಕಾಟಯ್ಯ ಮತ್ತು ಸ್ನೇಹಿತರ ಆನಂದಕ್ಕೆ ಪಾರವೇ ಇರಲಿಲ್ಲ ,ಅಂದೇ ನಾಟಕ ಆಡಿದಷ್ಟು ಖುಷಿಯಾಯಿತು.
" ಏ ಪಾತಲಿಂಗ ಬಾರೊ ಇಲ್ಲಿ ಈ ಹಾರ್ಮೋನಿಯಂ ಪೆಟ್ಟಿಗೆ ತಗಂಡೋಗಿ ರಂಗಪ್ಪನ ಗುಡಿ ಹತ್ರ ಇಡು ಪೂಜಾರ್ ಮಂಜುಗೆ ಹೇಳು ಅವನು ಒಳಗೆ ಇಟ್ಕಂತಾನೆ " ಅದೇಶ ನೀಡಿದರು ಕಾಟಯ್ಯ
" ಆತು ಗೌಡ ಎಂದು ತಲೆ ಮೇಲೆ ಟವಲ್ನಿಂದ ಸಿಂಬೆ ಮಾಡಿಕೊಂಡು ಮಣ ಭಾರದ ಲೆಗ್ ಹಾರ್ಮೋನಿಯಂ ಅನ್ನು ಹೊತ್ತು ರಂಗಪ್ಪನ ಗುಡಿಯ ಕಡೆ ನಡೆದ ಪಾತಲಿಂಗಪ್ಪ.
ನಾಳೆನೆ ಎಲ್ಲಾ ಪೋಟೋ ಪ್ರತಿಷ್ಟಾಪನೆ ಮಾಡಿ ಪ್ರಾಕ್ಟೀಸ್ ಸುರು ಮಾಡಿ ಬಿಡಾನ ಸರ್ , ನೀವು ನಮ್ಮ ಮನೇಲಿ ಇರಿ ನಮಗೇನು ತೊಂದರೆ ಇಲ್ಲ .ಎಂದು ಬಸವಾಚಾರ್ ರವರ ಜೊತೆ ಮಾತಾನಾಡುತ್ತಾ ಮಾರಮ್ಮನ ಗುಡಿಯ ಮುಂದೆ ನಡೆದು , ಊರ ಬಾಗಿಲ ದಾಟಿ ಅವರ ಮನೆಯ ಕಡೆ ನಡೆದರು ಕಾಟಯ್ಯ.

" ಆಂ  ಇನ್ನೊಂದು ಮಾತು, ದಿನ ರಾತ್ರಿ ಎಂಟು ಗಂಟೆಗೆ ಪ್ರಾಕ್ಟೀಸ್ ಶುರುವಾಗುತ್ತೆ ಎಲ್ಲಾ ಟೈಮಿಗೆ ಸರಿಯಾಗಿ ಬಂದು ಪ್ರಾರ್ಥನೆ ಇಂದ ಹಿಡಿದು ಅವತ್ತಿನ ಪ್ರಾಕ್ಟೀಸ್ ಮುಗಿಯವರೆಗೂ ಇರಬೇಕು, ನೀವು ಬಾಳ ಜನ ಓದಾಕ್ ಬರೆಯಾಕ್ ಬರದಿರೋ ಮೋಢರಿದಿರಿ ಅಂದರೆ ಅವ್ರು ಕಲೆಗಾರರು ಅಲ್ಲ ಅಂತ ಅಲ್ಲ, ಅಣ್ಣಾವ್ರು ಓದಿದ್ದು ಬರೆ ಮೂರ್ನೆ ಕ್ಲಾಸ್ ಆದರೂ ಅವ್ರ ನಟನೆ ? ಅದಕ್ಕೆ ಹೇಳ್ತಾ ಇದಿನಿ ಚೆನ್ನಾಗಿ  ಪ್ರಾಕ್ಟೀಸ್ ಮಾಡಿದರೆ ನಾಟಕ ಚೆನ್ನಾಗಿ ಆಗುತ್ತೆ ನಿಮಗೂ ಹೆಸ್ರು, ನನಗೂ ಹೆಸ್ರು, ಅಮ್ಮನ ನಾಟಕ ಆಡಿದ್ದು ನಮಗೆ ಅವ್ಳ ಆಶೀರ್ವಾದ ಸಿಗುತ್ತೆ, ಯಾರೂ ಯಾವುದೇ ಕಾರಣಕ್ಕೆ, ಬೀಡಿ‌ಸೇದಿ ,ಕುಡ್ಕಂಡೂ ಪ್ರಾಕ್ಟೀಸ್ ಮಾಡಕೆ ಬರಾಂಗಿಲ್ಲ ,ಗೊತ್ತಲ್ಲ ಇದು ದೇವಿ ನಾಟ್ಕ, ಇನ್ನೂ ನಾನು ನಿಮಗೆ ಹೇಳ್ಕೊಡೋವಾಗ ಆಗಾಗ ಬೈಯ್ಯಬಹುದು ಬೇಜಾರ್ ಮಾಡ್ಕೋಬಾರ್ದು. ......"ಹೀಗೆ ಏನು ಬೇಕು ಏನು ಬೇಡ ಎಂದು ಪಾತ್ರಧಾರಿಗಳಿಗೆ ಆಲೂರು ಬಸವಾಚಾರ್ ರವರು, ಹಾರ್ಮೋನಿಯಂ ಪೆಟ್ಟಿಗೆ ಮುಂದೆ ಕುಳಿತು ಎದೆಯುಬ್ಬಿಸಿ  ತಿಳುವಳಿಕೆ ಹೇಳುತ್ತಿದ್ದ ರೀತಿಯಲ್ಲಿ ನಾನು ಮಾಸ್ಟರ್ ಎಂಬ ಆತ್ಮವಿಶ್ವಾಸ ಇತ್ತು, ಅಲ್ಲಿಂದಲೇ ಪಾತ್ರಧಾರಿಗಳಿಗೆ ಅವರ ಬಗ್ಗೆ ಒಂದು ರೀತಿಯ ಭಯ ಮತ್ತು ಭಕ್ತಿ ಶುರುವಾಗಿತ್ತು. ಅವೆರಡಿದ್ದರೆ ಯಾವುದೇ ಕೆಲಸ ಸುಲಭವಾಗಿ ನೆರವೇರುತ್ತದೆ ಎಂದು ‌ಯಾರೋ ಹೇಳಿದ ನೆನಪಾಯಿತು.

" ಹೂಂ ಪ್ಲಾಟ್ ನೋಡೋರ್ಯಾರು? ಬಾ ತಗ ಪುಸ್ತಕ, ಮೊದಲ ಸೀನ್ ಕಶ್ಯಪ ಬ್ರಹ್ಮ ಬಾರೋ ಯಾರು?"
ಕುಂಬಾರ್ ರಾಮಣ್ಣ ಅಳುಕುತ್ತಲೆ ಬಂದು ಹಾರ್ಮೋನಿಯಂ ಪೆಟ್ಟಿಗೆ ಮುಂದೆ ನಿಂತು ,ಬಸವಾಚಾರ್ ರವರ ಕಾಲಿಗೆ ಬಿದ್ದು ,ಪೆಟ್ಟಿಗೆಗೆ ಕೈಮುಗಿದು ನಿಂತರು.
" ಓ ಜಗಜ್ಜಾಲಕ.. ಪೊರೆ ಅನಾಥ ರಕ್ಷಕ .....ಓ....ಜಗಜ್ಜಾಲಕ‌....." ಎಂದು ಹಾರ್ಮೋನಿಯಂ ನುಡಿಸುತ್ತಾ ಮಾಸ್ತರ್ ಹೇಳಿಕೊಟ್ಟರು .ಮಾಸ್ತರ್ ಮೂರು ಸಲ ಹೇಳಿದರೂ ರಾಮಣ್ಣ ಸುಮ್ಮನೆ ನಿಂತಿದ್ದರು ಹೇಳಪ್ಪ ಇದು ನಾಟಕದ ಮೊದಲನೆಯ ಹಾಡು ಮತ್ತು ನಿನ್ನ ಮೊದಲ ಹಾಡು.
ಬೇರೆ ಹುಡುಗರು ,ಸ್ನೇಹಿತರು ಏ ಹೇಳಲಾ ಎಂದು ಒತ್ತಡ ಹೇರಿದಾಗ
"ಓ..........ಜಗ ......ಜಗಲಕೆ ........."
" ಹೇ ಅದ್ಯಾದೋ ಜಗಲಕ ,ಬುಡ್ಡಲಕ? ಜಗಜ್ಜಾಲಕ ಅನ್ನು "
" ಮೇಷ್ಟ್ರೆ ಆಟುದ್ದ ಹೇಳಾಕೆ ಬರಲ್ಲ ಸ್ವಲ್ಪ ಸಣ್ ಹಾಡು ಹೇಳ್ಕೊಡಿ"
" ಲೇ ಇದೆ ಸಣ್ ಹಾಡು ,ಇನ್ನೂ ಮಹಿಷಾಸುರ ,ರಕ್ತಬೀಜ ,ದೇವಿ ಹಾಡು ಎಂತೆಂತ ದೊಡ್ಡ ಹಾಡು ಡೈಲಾಗ್ ಐದಾವೆ ಗೊತ್ತೇನೊ? ಹೇಳು ಓ .....ಜಗಜ್ಜಾಲಕ...
" ಓ.... ಜಗಾಲಕಲಕ" ಹಾಡಲು ಶುರು ಮಾಡಿದರು ರಾಮಣ್ಣ..
"ಹೇ ಕಾಟಯ್ಯ ಅದೆಲ್ಲಿ ಹಿಡ್ಕಂಬಂದ್ರೀ ಇವ್ನ ಮೊದಲನೇ ಪಾತ್ರ ,ಎಂಗ್ಮಾಡ್ಬೇಕು, ಇವುನೊಳ್ಳೆ, ತೊ ..ಎಂದು ಬೇಜಾರು ಮಾಡಿಕೊಂಡರು.
" ಹೇ ರಾಮ ಯಾಕಲ ಮೇಷ್ಟ್ರು ಹೇಳಿಕೊಟ್ಟಂಗೆ ಹೇಳಲ"
" ಯಾಕೋ ನ್ಯಾಲಿಗೆ ತಿರಗ್ತಾ ಇಲ್ಲ ಕಣಣ್ಣ ನಾಳೆ ಹೇಳ್ತಿನಿ" ಅಂದ ರಾಮಣ್ಣ
" ಹುಂ .ಹೋಗಲಿ ಮಾತು ಹೇಳು"
"ಮಾನವನು ....ಮಾನವನು ...ಮಾನವನು...ಅದೆಷ್ಟು ಮಾನವನು ಮುಂದಕ್ಕೇಳಪ್ಪ ಹೇ ಪ್ಲಾಟ್ ಮೇನೇಜರ್ ಎತ್ತಿ ಕೊಡಪ್ಪ
" ಮಾನವನು ತನ್ನ‌ ಆತ್ಮಶುದ್ದಿ ಪಡೆಯಬೇಕಾದರೆ ಕಾಯಾ, ವಾಚಾ, ಮನಸಾ ಈ ತ್ರಿ ಕರಣ ಗಳು ಶುದ್ಧವಾಗಿರಬೇಕು" ಹೇಳಿಕೊಟ್ಟರು ಪ್ಲಾಟ್ ಮೇನೇಜರ್.
ರಾಮಣ್ಣ ತಲೆ ಕೆರದುಕೊಂಡು ಹಿ...ಹಿ... ಮಾತು ಗಟ್ಟಿ ಮಾಡಿಲ್ಲ ಸಾರ್ ನಾಳೆ ಹೇಳ್ತಿನಿ." ಅಂದರು
" ಏನ್ ಕಾಟಯ್ಯ ಎಲ್ಲರಿಗೂ ಮಾತು ಬರುತ್ತೆ ಹಾಡು ಹೇಳ್ಕೊಡ್ಬೇಕು ಅಂದಿದ್ರಿ ಏನಿದು? " ಕೇಳಿದರು ಮೇಷ್ಟ್ರು
" ನಾಳೆ ಎಲ್ಲಾ ಹೇಳ್ತಾರೆ ಸಾ"
"ಅಂಗಾದರೆ ನಾಳೆ ಪ್ರಾಕ್ಟೀಸ್ ಮಾಡಾನ ,ಹಾರ್ಮೊನಿ‌ ಇಳಸ್ಲಾ?
" ಏ ಬ್ಯಾಡ ಸಾ, ಬ್ಯಾರೆ ಪಾತ್ರ ಪ್ರಾಕ್ಟೀಸ್ ಮಾಡ್ಸನಾ"
" ನಾರದ ಯಾರು ಬಾರಪ್ಪ "
ಕರೆದರು ಮೇಷ್ಟ್ರು
ಊರಲ್ಲಿ ಹತ್ತನೇ ಕ್ಲಾಸ್ ಓದಿರೊ ಕೆಲವರಲ್ಲಿ ಮುರಾರಿ ಕೂಡ ಒಬ್ಬ ಮೂರುವರೆ ವಜ್ರದಲ್ಲಿ ಒಂದು ಸಣ್ಣ ಪಾತ್ರ ಚೆನ್ನಾಗಿ ಮಾಡಿದ್ದ  ಅದಕ್ಕೆ ಈ ನಾಟಕದಲ್ಲಿ ಪ್ರಮೋಮೊಶನ್ ಕೊಟ್ಟು ,ನಾರದನ ಪಾತ್ರ ಕೊಟ್ಟಿದ್ದರು.
ಲುಂಗಿ ಮೇಲೆ ಕಟ್ಟಿಕೊಂಡು ,ಪೆಟ್ಟಿಗೆ ಮುಂದೆ ನಿಂತು ಮೇಷ್ಟ್ರು ಮತ್ತು ಪೆಟ್ಟಿಗೆಗೆ ಕೈಮುಗಿದು ನಿಂತರು
" ಲುಂಗಿ ಕೆಳಗೆ ಬಿಡಪ್ಪ ,ಏನ್ ಎಲ್ಲರಿಗೂ ತೋರುಸ್ತಿಯಾ? "  ನಗುತ್ತಲೆ ಹೇಳಿದರು ಮೇಷ್ಟ್ರು, ಎಲ್ಲರೂ ಗೊಳ್ ಎಂದು ನಕ್ಕರು.
" ಅದ್ಯಾಕ್ರಯ್ಯ ನಕ್ತಿರಾ , ನೀವು ಅಷ್ಟೇ ಯಾರೆ ಪಾತ್ರಧಾರಿಗಳು ಬಂದು ಪೆಟ್ಟಿಗೆ ಮುಂದೆ ನಿಂತಾಗ ಲುಂಗಿ‌ ಇಳಿಬಿಟ್ಟಿರಬೇಕು ,ಪಟಪಟಿ ನಿಕ್ಕರ್ನಾಗೊ,ಕಾಚಾದಾಗೋ ಬಂದ್ರೆ ನಾನ್ ಒಳಗೆ ಸೇರ್ಸಲ್ಲ "
ಮತ್ತೆ ಕಿಸಕ್ ಎಂದ ಶಬ್ದ ಕೇಳಿ ಯಾರದು? ಅಂದರು ಮೇಷ್ಟ್ರು ,
ಹೇ ಮೇಷ್ಟ್ರು ಬಾಳ ಕಟ್ನಿಟ್ಟು ಕಣಪ್ಪ ಎಂದು ಯಾರೊ ಮೆಲ್ಲಗೆ ಹೇಳಿದ ಮಾತು ಮೇಷ್ಟ್ರು ಕಿವಿಗೆ ಬಿದ್ದರೂ ಕೇಳಿಸದವರಂತೆ ಒಳಗೊಳಗೆ ಸಂತೋಷಪಡುತ್ತಾ
" ಹುಂ ಹಾಡು ಎತ್ಗೆಳಪ್ಪ ನಾರದ"
" ಕಲಹ.... ಪ್ರಿಯನೆಂದೆಲ್ಲ ....ಕರೆಯುವರು..... ನನ್ನ..... ಸಲಹೆಯನು ....ನೀಡುವ ‌
.. ನಾರದನ ದೂರುವರು ಎಲ್ಲಾ....... "
"ಹುಂ ಪರಾವಾಗಿಲ್ಲ ಸ್ವಲ್ಪ, ತಾಳ ,ಮತ್ತು ರಾಗದ ಕಡೆ ಗಮನ ಕೊಡು ,ಹಾರ್ಮೋನಿಯಂ ಕಡೆ ಗಮನ ಇರ್ಲಿ ,ಎಲ್ಲಿ ನಾರದನ ಕೈಯಲ್ಲಿ ‌ಚಕ್ಕೆ ನೆ ಇಲ್ಲ, "
" ನಾಳೆ ತತ್ತಿನಿ ಸಾರ್"
" ಇದೊಳ್ಳೆ ಕತೆ ಆತಲ್ಲಾ ಎಲ್ಲಾ ನಾಳೆನೆ ಅಂತಿರಾ. ನಾವು ಶುಕ್ರವಾರದ ಬದಲು ಶನಿವಾರ ಪ್ರಾಕ್ಟೀಸ್ ಶುರು ಮಾಡ್ಬೇಕಾಗಿತ್ತು. ಅಲ್ವೇನ್ರಯ್ಯ? ಅಂದರು ಮೇಷ್ಟ್ರು.
" ಮಾತ್ ಬತ್ತವೇನಯ್ಯ ನಾರದ "
"ಇನ್ನೂ ಕೆಲವು ಗಟ್ ಮಾಡ್ಬೇಕು ಸರ್"
" ನೋಡಪ್ಪ ದೇವಿ  ನಾಟ್ಕ ಸಕ್ಸಸ್ ಆಗ್ಬೇಕು ಅಂದರೆ ನಾರದ ಮುಖ್ಯ ಎಲ್ಲಾ ಹಾಡು ಮಾತು ಪಕ್ಕಾ ಇರಬೇಕು ಅರ್ಥ ಆತಾ?
" ಆತು ಸರ್ ನಾಳೆ ಗಟ್ ಮಾಡ್ಕೆಂಡು ಬತ್ತೀನಿ" ಎಂದರು ಮುರಾರಿ
ಆತು ಮುಂದ್ಲು ಪಾತ್ರ ದೇವೇಂದ್ರ ಯಾರು ಬಾರಪ್ಪ"
ಆರು ಅಡಿ ಎತ್ತರದ ದಪ್ಪ ದೇಹ ,ನಡೆಯುವಾಗ ,ಅಡ್ಡಡ್ಡ ನಡೆಯುವ, ಗಿರಿಜಾ ಮೀಸೆ ಬಿಟ್ಟ ವೈಟ್ ಅಂಡ್ ವೈಟ್ ಅಂಗಿ ಪಂಚೆ  ಹಾಕಿದ ಸದಾನಂದಪ್ಪ ಬಂದು ರಾಮಣ್ಣನಂತೆ ಮೇಷ್ಟ್ರು ಮತ್ತು ಪೆಟ್ಟಿಗೆಗೆ ಕೈ ಮುಗಿದು  ನಿಂತರು.
"ಹುಂ ನೀನೇನಪ್ಪ ದೇವೇಂದ್ರ ? ಮೊದಲನೆ ಹಾಡು ಇವತ್ತು ಹೇಳ್ ಕೊಡ್ತಿನಿ ಹೇಳು"  ಎಂದು ಹಾರ್ಮೋನಿಯಂ ನುಡಿಸುತ್ತಾ
"ಆರು ಸಮರು ಎನಗೆ ......ಈ ಧರೆಯೊಳಗಾರು ಸಮರು ನನಗೆ........." ಹುಂ ಹೇಳು ಅಂದರು ಮೇಷ್ಟ್ರು
" ಆರು ಸಾಂಬರು ನನಗೆ ... ಆರು ಸಾಂಬಾರು ನನಗೆ"
"ಹೇ... ಹೇ... ನಿಲ್ಸಯ್ಯ  ಎಲ್ಲೈತೆ ಸಾಂಬರ್ ? ಸಾಂಬಾರ್ ಅಲ್ಲ ಕಣಯ್ಯ ಅದು ಸಮರು . ಸಮ ..ಸಮ... ರು ಹೇಳು"
"ನಾನು ಓದಿಲ್ಕ ಮೇಷ್ಟ್ರೆ ನ್ಯಾಲಿಗೆ ತಿರ್ಗಲ್ಲ ನೀವೆ ನಿದಾನಕ್ಕೆ ಹೇಳ್ಕೊಡ್ಬೇಕು, ನಾನು ಬೇಕಾದರೆ ಹಗಲೊತ್ತು ಪ್ರಾಕ್ಟೀಸ್ ಮಾಡಾಕೆ ಬತ್ತಿನಿ , ಸಣ್ ಹುಡುಗ್ನಿಂದ ನಾಟ್ಕ ಆಡ್ಬೇಕು ಅಂತ ಆಸೆ ಸಾ ,ಈ ನಾಟ್ಕಕ್ಕೆ ನನ್ದು ಅಲ್ದೆ ಮೂರು ಜನಾ ಪಾತ್ರಧಾರಿಗಳ ದುಡ್ ನಾನೆ ಕೊಟ್ಟಿದಿನಿ ಸಾ,"ಎಂದು ವಿಧೇಯತೆಯಿಂದ ನುಡಿದಾಗ ,
"ಆತು ಕಣಯ್ಯ ನಿನಗೇನೊ ಆಸೆ ಇದೆ ,ಹಾಡೆ ಬರಲ್ಲ ಸರಿಯಾಗಿ, ಮೊದಲು ಪದಗಳ ಉಚ್ಚಾರ ಕಲ್ತುಕೋ ," ಎಂದರು ಮೇಷ್ಟ್ರು
" ಆ...ಹಾ ...ಹ ಎಂತಹ ಪಾತ್ರಾಧಾರಿಗಳ ಕಲ್ಸೆದಿರಾ ಕಾಟಯ್ಯ? ಯಾರಿಗೂ ಮಾತೆ ಬರಲ್ಲ, ಹಾಡು ಹೇಳೋ ಗಂಧ ಇಲ್ಲ, ಇವರನ್ನು ಕಟ್ಕೊಡು ಪೌರಾಣಿಕ ನಾಟಕ ಎಂಗ್ರಿ ಹಾಡ್ಸೋದು ? ಅದೂ ಇನ್ನೂ ಇಪ್ಪತ್ಮೂರು ದಿನ ಐತೆ ನಿವ್ ಪಿಕ್ಸ್ ಮಾಡಿರೋ ನಾಟಕ ಆಡೋ ದಿನ ಆಗುತ್ತೇನ್ರಿ ? ನನಗೇನೋ ಇವರನ್ನೆಲ್ಲ ತಿದ್ದೋಕೆ ಒಂದ್ ತಿಂಗಳಾದ್ರೂ ಬೇಕು ಅನುಸುತ್ತೆ ಕಣಯ್ಯ.
" ಅಂಗನ್ಬೇಡಿ ಸಾ , ಇವತ್ತು ಮೊದಲು ಅದಕ್ಕೆ , ನಾಳೆಯಿಂದ ಎಲ್ಲಾ ಚೆನ್ನಾಗಿ ಪ್ರಾಕ್ಟೀಸ್ ಮಾಡ್ತಾರೆ, ನಾಟ್ಕ ಮುಂದಕ್ಕೆ ಹಾಕಿದ್ರೆ ಮಳೆಗಾಲ ಬರುತ್ತೆ, ನಮಿಗೆ ಹೊಲ ಮನೆ ಕೆಲ್ಸ ಜಾಸ್ತಿ ,ಸ್ವಲ್ಪ ಅಡ್ಜೆಸ್ಟ್ ಮಾಡ್ಕೊಂಡು ಇವ್ರಿಗೆ ನೀವೆ ಕಲ್ಸಬೇಕು ಸರ್ ಅದಕೆ ನಾವ್, ನೀವೇ ಬೇಕು ಅಂತ ನಿಮ್ ಹತ್ರ ಬಂದಿದ್ದು" ಒಂದೇ ಸಮನೆ ಬೇಡಿದರು ಕಾಟಯ್ಯ
ದೀರ್ಘವಾದ ನಿಟ್ಟುಸಿರು ಬಿಟ್ಟ ಮೇಷ್ಟ್ರು
" ಹುಂ ಆತು ನೋಡಾನಾ ಏ ಮುಂದಿನ ಪಾತ್ರ ಯಾರು ಬರ್ರಪಾ"
" ಅಣ್ಣ ಮಹಿಷಾಸುರ ಪಾತ್ರ ಮಾಡಿರೋ ಮಧು ಬಂದಿಲ್ಲ ಅಣ್ಣ" ಹೊರಕೇರಿ ಅಂದ
ಕಾಟಯ್ಯನಿಗೆ ಪದೇ ಪದೇ ಮೇಷ್ಟ್ರು ಸಿಟ್ಟಾಗುವುದು, ಪಾತ್ರಧಾರಿಗಳು ಸರಿಯಾಗಿ ಮಾತು ಹೇಳದಿರುವುದು , ಇದೆಲ್ಲದ್ದರಿಂದ  ಬೇಸರಗೊಂಡು ಒಮ್ಮೆಲೆ ಎಗರಿಬಿದ್ದರು
" ಕತ್ತೆ ಕಾಯೋಕ್ ಹೋಗ್ರಿ ನನ್ ಮಕ್ಕಳ ಒಬ್ಬನಿಗಾದರೂ ಜ‌ಬಾದಾರಿ ಇಲ್ಲ,"ಹೊರಕೇರಿ ಮೇಲೆ ರೇಗಿದರು
" ನಾನೇನು ಮಾಡ್ದೆ ಅಣ್ಣ "
"ನೀನಲ್ಲಲೆ ಅವನ್ ಮಧು  ಎಲ್ ಹಾಳಾಗೋದ?"
"ನಾನು ಎಷ್ಟಂತ ಒಬ್ಬನೇ ತಲೆ ಕೆಡಿಸ್ಕಳ್ಲೀ, ನೋಡ್ರಿ ಸಾ ಇವರನ್ನು ಕಟ್ಗಂಡು ಎಂಗೆ ನಾಟ್ಕ ಆಡ್ಸಾದು?
" ಅಣ್ಣಾ ಕಾಪಿ ಕಾಸ್ಕೆಂಡು ಬಂದಿದಿನಿ ಎಲ್ಲಿಡ್ಲಿ? ಸಿದ್ದಮಲ್ಲ ಕೇಳಿದ
" ನನ್ ತಲೆ ಮ್ಯಾಲೆ ಸುರಿ" ಮತ್ತೂ ರೇಗಿದರು ಕಾಟಯ್ಯ
" ಹೋಗ್ಲಿ ಬಿಡಯ್ಯ ಕಾಟಯ್ಯ ಅದ್ಯಾಕೆ ಸಿಟ್ಟಾಕ್ತಿಯಾ ಇವತ್ತು ಮೊದಲ ದಿನ ಸಾಕು ಇಲ್ಲಿಗೆ ನಿಲ್ಸಾನಾ ಪ್ರಾಕ್ಟೀಸ್ ನ ಏ ಕಾಪಿ ಲೋಟಕ್ಕೆ ಹಾಕಿ ತಾಂಬಾರ " ಎಂದರು ಮೇಷ್ಟ್ರು.
ಕಾಫಿ ಕುಡಿದು ಮೇಷ್ಟ್ರು ಹಾರ್ಮೋನಿಯಂ ಪೆಟ್ಟಿಗೆ ಇಳಿಸಿದಾಗ ರಾತ್ರಿ ಒಂದೂವರೆ .
ಎಲ್ಲಾ ಪಾತ್ರಧಾರಿಗಳು ಅವರವರ ಮನೆ ಕಡೆ ಹೊರಟರೆ
ಕಾಟಯ್ಯ ಮತ್ತು ಮೇಷ್ಟ್ರು ಕಾಟಯ್ಯನ ಮನೆ ಕಡೆ  ಹೆಜ್ಜೆ ಹಾಕಿದರು ಗೌಡರ ಮನೆ ಮುಂದಿನ ನಾಯಿ ಜೋರಾಗಿ ಬೊಗಳಲಾರಂಭಿಸಿತು
" ಹೇ ಮುಚ್ಚು ಬಾಯಿ " ಎಂದು ಗದರಿಸಿದರು ಕಾಟಯ್ಯ.
ನಾಯಿ ಇನ್ನೂ ಜೋರಾಗಿ ಬೊಗಳಲಾರಂಭಿಸಿತು.

"ಅವನ್ ಧಿಮಾಕು ಜಾಸ್ತಿ ಆತು,‌ ಅವನ್ ಇಲ್ಲ ಅಂದ್ರೆ ನಾಟಕ ಆಗಲ್ವಾ? ಇನ್ನೂ ಯಾರಾದ್ರೂ ಇದ್ರೆ ನೋಡ್ರಿ, ಎಂದು ಸಿಟ್ಟಿನಿಂದ ‌ಕೇಳಿದರು ಕಾಟಯ್ಯ, ಅಣ್ಣ ಇವನು ಮಾಡ್ತಾನೆ ಅಂತ ಸುಮ್ಮನೆ ಜೋಕ್ ಮಾಡಾಕೆ ಹೇಳಿದರು ಪ್ರಾಕ್ಟೀಸ್ ಮಾಡೋ ಹುಡುಗ್ರು
" ಯಾರು ? ಸತೀಶನ ? ಏನೋ ಮಾಡ್ತಿಯೇನೋ? " ಕೇಳಿದರು ಕಾಟಯ್ಯ.
ಸುಜಾತಳ ಕಾಣದೆ ಎಲ್ಲಿರುವಳು ಎಂದು ಮಾಹಿತಿ ಸಿಗದೆ ಯಾವಾಗಲೂ ಖಿನ್ನವಾಗಿ,ಕಲಿತಿರುವ ಚಟ ಬಿಡಲಾರದೇ ಚಡಪಡಿಸುವ ಅವನ ನೋಡಿ ,ಚಿದಾನಂದ ದಿನವೂ ನಾಟಕದ ಪ್ರಾಕ್ಟೀಸ್ ಹತ್ರ ಸತೀಶನ ಕರೆದುಕೊಂಡು ಬರುತ್ತಿದ್ದ. ಈ ಪ್ರಾಕ್ಟೀಸ್ ನೋಡಿಯಾದರೂ ಅವಳ ಮರೆಯಲಿ‌, ಎಂಬ ಆಶಯ ಅವನದು.ಸತೀಶ ಮಹಿಷಾಸುರ ನ  ಪಾತ್ರ ಮಾಡ್ತಾನೆ ಅಂತೆ ಹೇಳಿದ್ದೇ ಚಿದಾನಂದ್.
ಕಾಟಯ್ಯ ಇದ್ದಕ್ಕಿದ್ದಂತೆ ಸತೀಶನನ್ನು ಕೇಳಿದ ಪ್ರಶ್ನೆಗೆ ಏನು ಹೇಳಬೇಕೆಂದು ತೋಚಲಿಲ್ಲ ,ಇಲ್ಲ ಎನ್ನಲು ಧೈರ್ಯ ಬರಲಿಲ್ಲ ಏಕೆಂದರೆ ಇವನು ಹತ್ತನೆಯ ತರಗತಿಯಲ್ಲಿ ಹೆಚ್ಚು ಅಂಕ ಬಂದಾಗ ಮನೆಗೆ ಬಂದು ಹೂವಿನ ಹಾರ ಹಾಕಿ ಐದು ನೂರು ಹಣ ಕೊಟ್ಟು ನೀನು ನಮ್ ಊರ ಮರ್ಯಾದೆ ಹೆಚ್ಚು ಮಾಡಿದೆ ಕಣ ಹುಡುಗ ಎಂದು ಹೊಗಳಿ ಭೇಷ್ ಎಂದು ಬೆನ್ನು ತಟ್ಟಿದ್ದರು.ಅದರಿಂದ ಅವನು ಅಷ್ಟು ಬೇಗ ಪ್ರತಿಕ್ರಿಯೆ ನೀಡದೆ ಸುಮ್ಮನೆ ಇದ್ದ
" ಸುಮ್ಮನೆ ಇದಾನೆ ಅಂದರೆ ಪಾತ್ರ ಮಾಡ್ತಾನೆ ಅಂತಾನೆ ಅರ್ಥ " ಹೇಳೆಬಿಟ್ಟ ಚಿದಾನಂದ್  ಬೇರೆಯವರಿಗೆ ಚಿದಾನಂದ್ ಜೋಕ್ ಮಾಡಿ ಸತೀಶನ ಇಕ್ಕಟ್ಟಿಗೆ ಸಿಕ್ಕಿಸುತ್ತಿದ್ದಾನೆ ಎನಿಸಿದರೂ ,ಚಿದಾನಂದ್ ಸತೀಶನ ನಟನೆಯನ್ನು ಯೂನಿಯನ್ ಡೇ ದಿನ ನೋಡಿದ್ದ ,ಅದಕ್ಕಿಂತ ಮುಖ್ಯವಾಗಿ ಈ ಮೂಲಕವಾದರೂ ಸುಜಾತಳ ಮರೆಯಲಿ ಎಂಬ ಆಸೆ.
" ಆತು ಹೇಳಣ ಮಾಡ್ತಾನೆ, ಸತೀಶನ ಮಾವ ಮುರಾರಿ ಹೇಳೆಬಿಟ್ಟರು " ರೇಡಿಯೋದಲ್ಲಿ ಆಗಾಗ್ಗೆ ಬರುವ ಹಾಡುಗಳನ್ನು ಯಥಾವತ್ತಾಗಿ ಹೇಳುವುದನ್ನು, ನೋಡಿದ ಸಿನಿಮಾ ಡೈಲಾಗ್ ಸ್ಪಷ್ಟವಾಗಿ ಹೇಳುವ ಅವನ ಕಲೆಯನ್ನು ಮುರಾರಿ ಮನೆಯಲ್ಲಿ ಗಮನಿಸಿದ್ದರು .
" ಹುಂ ಇನ್ನೇನು ಮಾವ ನಾರದ ,ಅಳಿಯ ಮಹಿಷಾಸುರ ,ಇನ್ನೊಂದಿಬ್ಬರು ನೀವೇ ಯಾರಾರ ಆಡ್ರಪ್ಪ ನಾಟಕ ನಿಮ್ದೆ ಆಗುತ್ತದೆ " ಚಿದಾನಂದ್ ನಕ್ಕ ಎಲ್ಲರೂ ನಕ್ಕರು.
"ನಾಳೆ ಪ್ಲಾಟ್ ತಗಂಡು ಮಾತು ಹಾಡು ಬರ್ಕ ಎಂಗೂ ರಜ ಐತಲ್ಲ, ಚೆನಾಗಿ ಆಡ್ಬೇಕು ಕಣಪ್ಪ ಆ ನನ್ ಮಗ ಮಧು ಏನ್ ಅವ್ನೆ ದೊಡ್ಡ ನಟ ಅಂದ್ಕಂಡದಾನೆ ಎಂದು ಸತೀಶನ ಹತ್ತಿರ ಬಂದು ಎರಡನೇ ಸಲ ಬೆನ್ನು ತಟ್ಟಿದರು"
"ಆತಣ್ಣ ಟ್ರೈ ಮಾಡ್ತಿನಿ " ಎಂದ ಸತೀಶ.

ಮೂರು ದಿನಗಳ ನಂತರ ಮಾತು ಹಾಡು ಕಲಿತುಕೊಂಡು‌ ಪ್ರಾಕ್ಟೀಸ್ ಮಾಡಲು ಬಂದ ಸತೀಶ
"ಮಹಿಷೇಷನೆಂದೆನಿಸಿ  ಮಹಿಯೊಳಗೆ ಮೆರೆವೆ........ ಜೈಸುತಲಿ ವೈರಿಗಳ ಸೆರೆಪಿಡಿದು ತರುವೆ...,."
ಹಾರ್ಮೋನಿಯಂ ಮಾಸ್ತರ್ ಹಾಡು ನುಡಿಸುತ್ತಲೆ ರಾಗವಾಗಿ, ತಾಳವಾಗಿ ,ಸುಸೂತ್ರವಾಗಿ ಹಾಡಿದ ಸತೀಶ
ಪ್ರಾಕ್ಟೀಸ್ ನೋಡುವ ಜನರು ಶಿಳ್ಳೆ ಹೊಡೆದು ಚಪ್ಪಾಳೆ ಹೊಡೆದು ಇದು ನಾಟಕವೇನೋ ಎಂಬಂತೆ " ಒನ್ಸ್ ಮೋರ್ "ಎಂದರು
" ಇದು  ಕಲೆ ಅಂದ್ರೆ ನಾನು ಬಂದ್ ಒಂದ್ ವಾರ ಆತು ,ಹಾರ್ಮೋನಿಯಂಗೆ ಕರೆಕ್ಟ್ ಆಗಿ ಹಾಡಿದವನು ಈ ಹುಡ್ಗ ಒಬ್ಬನೆ ,ವೆರಿ ಗುಡ್ ಕಣೋ ಹುಡ್ಗ, ಇನ್ನೊಂದು ಸ್ವಲ್ಪ ದಪ್ಪ ಇದ್ದಿದ್ದರೆ ಈ ಪಾತ್ರ ಸೂಪರ್ ಆಗಿ ಒಪ್ಪಿರೋದು ನಿನಗೆ, ಇರಲಿ ಈಗಲೂ ಚೆನಾಗ್ ಬರುತ್ತೆ "
" ಅವರಪ್ಪನೂ ಕಲಾವಿದ ಸರ್ ಕುರುಕ್ಷೇತ್ರ ನಾಟಕದಾಗೆ ದುರ್ಯೋಧನನ ಪಾತ್ರ ಮಾಡ್ತಿದ್ರು" ಹೆಮ್ಮೆಯಿಂದ ಗತಿಸಿದ ಭಾವನ ನೆನೆದು ಗದ್ಗದಿತರಾದರು ಮುರಾರಿ.
"ಅದೇ ಮತೆ ,ಕಲೆ ಇವನ ರಕ್ತದಲ್ಲಿ ಇದೆ ಸ್ವಲ್ಪಮಟ್ಟಿಗೆ ಪ್ರೋತ್ಸಾಹ ಕೊಟ್ಟರೆ ಒಳ್ಳೆ ಕಲಾವಿದ ಆಗ್ತಾನೆ. ವೆರಿ ಗುಡ್" ಮೇಷ್ಟ್ರು ಸತೀಶನನ್ನು ಹತ್ತಿರ ಕರೆದು ಬೆನ್ನು ಸವರಿದರು .ಉಳಿದ ಪಾತ್ರಧಾರಿಗಳು ಒಳಗೊಳಗೆ ಹೊಟ್ಟೆ ಉರಿದುಕೊಳ್ಳುತ್ತಿದ್ದರು ,ಕಾರಣ ಮೇಷ್ಟ್ರು ಬಂದು ವಾರವಾಗುತ್ತಾ ಬಂದರೂ ಎಲ್ಲ ಪಾತ್ರಧಾರಿಗಳನ್ನು ವಾಚಾಮಗೋಚರವಾಗಿ ಬಯ್ಯುವುದೇ ಆಗಿತ್ತು, ಮೊದಲ ಬಾರಿಗೆ ಹೊಗಳಿಕೆ ನೋಡಿದ್ದರು.
" ಹುಂ ಮಾತು ಗಟ್ ಮಾಡಿದೆಯೇನಯ್ಯ ಹೇಳು ನೋಡೋಣ" ಎಂದು ಮೇಷ್ಟ್ರು ಹೇಳಿದ್ದೇ ತಡ
" ಬ್ರಹ್ಮಾಂಡವನ್ನೇ ಚೆಂಡಾಡಬಲ್ಲ ದಂಡನಾಯಕರ ಮಂಡಲದಿಂದ ಮಂಡಿತನಾಗಿ , ಹರಿಕುಲ ಕುಠಾರನೆ‌ನಿಸಿ, ಹರಬ್ರಹ್ಮರಿಂದ ಅಮೋಘ ವರಗಳನ್ನು ಪಡೆದಿರುವ ನನಗೆ , ಸಕಲ ಚರಾಚರ ರಾಕ್ಷಸರು ಕಪ್ಪ ಕಾಣಿಕೆಗಳನ್ನು ತಂದು ಒಪ್ಪಿಸುತ್ತಿಹರು.ಅವಿಧೇಯತೆಯಿಂದ ವರ್ತಿಸಿದವರನ್ನು ಸದೆ ಬಡಿದು ಏಕ ಚಕ್ರಾಧಿಪತ್ಯ ಪಡೆದಿರುವೆನು, ಅಂದ ಮೇಲೆ ನನ್ನ ಅಭ್ಯುದಯಕ್ಕೆ ಮೇರೆಯೇ ಇಲ್ಲ......."
ಪಟಪಟನೆ ಮಾತುಗಳನ್ನು ಒಪ್ಪಿಸಿದ ರೀತಿ ನೋಡಿ ಎಲ್ಲರೂ ದಂಗಾದರು.

"ಸಾರ್ ಮೂರು ದಿನದಿಂದ ಬ್ರಹ್ಮುಂದು ಪ್ರಾಕ್ಟೀಸ್ ಮಾಡ್ಸಿಲ್ಲ " ಬೇಕು ಅಂತಲೆ ಬ್ರಹ್ಮ ನ ಪಾತ್ರ ಮಾಡಿದ ರಾಜಪ್ಪನಿಗೆ ಹಾಡು ಮಾತು ಬರದಿರುವ ಅವನ ಅವಸ್ಥೆ ನೋಡಿ ಮಜಾ ತಗೋಳ್ಳಾಕೆ ಕಾಳಪ್ಪ  ಹೇಳಿದ
" ಹುಂ ಬಾರಪ್ಪ ಬ್ರಹ್ಮ  ನಿಂದ್ ಆದ ಮ್ಯಾಲೆ ಇವತ್ತಿನ ಪ್ರಾಕ್ಟೀಸ್ ನಿಲ್ಸಾಣಾ,"
ಬ್ರಹ್ಮನ ಪಾತ್ರಧಾರಿ ರಾಜಪ್ಪ ಬಂದು ಪೆಟ್ಟಿಗೆ ಮುಂದೆ ನಿಂತರು
" ಹರಿ ನಾರಾಯಣ..... ದುರಿತ ನಿವಾರಣ.....  ಪೊರೆ ಲಕ್ಷ್ಮಿ ರಮಣ, ನಾರಾಯಣ, ಹರಸು......"
ಮೇಷ್ಟ್ರು ಹೇಳಿಕೊಟ್ಟು ಹುಂ ಹೇಳಪ್ಪ ಅಂದರು
" ಹರಿ ನಾಯಾರಣ,.. ಹರಿ ನಯಾರಾಣ.. ......"
"ಏ ನಾಯಾರಣ ಅಲ್ಲಯ್ಯ  . ಹರಿ ನಾರಾಯಣ..."
" ಆತು ಸಾ ಹಾಡ್ತಿನಿ, ಹರಿ ನಯಾರಣ,....ಹರಿ ನಯಾರಣ
ಮೇಷ್ಟ್ರಿಗೆ ನಗು ಬಂದು ನಗುತ್ತಾ...
" ಏ ನಿನ್ ನಾಲಿಗೆ ತಗೊಂಡೋಗಿ ರಾಗಿ ಹುಲ್ಲ ತುಳುಸ್ತಾರಲ್ಲ ಆ  ರೋಣುಗಲ್ಲ ಕೆಳಗೆ ಇಡು ಎಂದು ಬೈಯ್ದರು
ಪ್ರಾಕ್ಟೀಸ್ ನೋಡಲು ಬಂದ ಕಾಳಪ್ಪ
" ಹರಿ ನಾರಾಯಣ ಐನೂರು ರುಪಾಯಿ ಹೋದ್ವಣ್ಣ " ಎಂದು ರಾಜಪ್ಪನ ಹಂಗಿಸಿದ
" ನೀನ್ಯಾವನಲೆ ಮಾತಾಡಕೆ ನಾಟ್ಕಕ್ಕೆ ನನ್ ಐನೂರು ಹೋಗ್ಲಿ ನಾನು ನಾಟ್ಕ ಆಡ್ತೀನಿ ನೋಡು ಎಂದು ಸಿಟ್ಟಿನಿಂದ ಹೇಳಿದ ,ಕಾಳಪ್ಪ ಓಡಿ ಹೋದ.
"ಸಾಕು ಇವತ್ತಿಗೆ ಇಲ್ಲಿಗೆ ನಿಲ್ಸಾಣಾ, ನಾಳೆ  ಮಾತು ಸರಿಯಾಗಿ ಕಲ್ತುಕೊಂಡು ಬರ್ರಿ" ಎಂದು ಪೆಟ್ಟಿಗೆ ಇಳಿಸಿ ಹೊರಟರು.

ಮಾರನೆ ದಿನ ಇಡೀ ಊರಲ್ಲೆ ಸತೀಶನ ಮಾತು ಎರಡನೆ ಬಾರಿಗೆ ಊರವರು ಸತೀಶನನ್ನು ಹೊಗಳಲು‌ ಶುರುಮಾಡಿದರು.

ಕೆಂಪು, ನೀಲಿ ಬಣ್ಣದ ಕರಪತ್ರಗಳನ್ನು ಅಲ್ಲಲ್ಲಿ ಅಂಟಿಸಲಾಗಿತ್ತು ಅದರಲ್ಲಿ ಎಲ್ಲಾ ಪಾತ್ರಧಾರಿಗಳ ಹೆಸರು ಅವರ ಪಾತ್ರ , ಹಾರ್ಮೋನಿಯಂ, ತಬಲ ಮ್ಯಾನೇಜರ್, ಮುಂತಾದ ವಿವರ ಇದ್ದವು .ತನ್ನ ಹೆಸರು ಓದಿದ ಸತೀಶ ಮನದಲ್ಲೇ ಸಂತಸಪಟ್ಟ.
" ನೀನು ಏನೇ ಹೇಳು ಕಾಟಯ್ಯ ಪಾಂಪ್ಲೇಟ್ ಎಲ್ಲಾ ಓಕೆ ಕೆಳಗೆ "ಲಕ್ಷ್ಮಿ ಬೀಡಿ ಸೇದಿರಿ "ಅಂತ ಇರೋದು ಅಬಾಸ" ಅಂದರು ಗುಂಡ್ ಶೆಟ್ಟರು
" ಶೆಟ್ರೆ ಪಾಂಪ್ಲೇಟ್ ಮಾಡ್ಸಾಕೆ ಲಕ್ಷ್ಮಿ ಬೀಡಿನಾರು ದುಡ್ ಕೊಟ್ಟದಾರೆ " ವ್ಯಂಗ್ಯವಾಗಿ ಹೇಳಿದರು ಕಾಟಯ್ಯ
" ಮುಂದಿನ ಸಲ ನಾಟಕ ಆಡ್ದಾಗ ಹೇಳಿ ಪಾಂಪ್ಲೇಟ್ ನಾನು ಮಾಡಿಸ್ತೀನಿ ನನ್ನ ಹೆಸರು ಹಾಕ್ಸಾದು ಬೇಡ" ಶೆಟ್ಟರ ಮಾತು ಕೇಳಿ ಕಾಟಯ್ಯ ನಿಗೆ ನಾಚಿಕೆಯಾದಂತಾಗಿ
ಆತು ಶೆಟ್ಟರೆ ಇಲ್ಲಿ‌ಇದನ್ನ ಅಂಟು ಹಾಕಿ ಎಂದು ಹೊರಟರು.

ಬ್ರಮ್ಮಿ ಹೋಟೆಲ್ ಹತ್ತಿರ ದೊಡ್ಡ ರಟ್ಟಿನ  ಪಾಂಪ್ಲೇಟ್ ಅಂಟಿಸಿದ್ದರು
" ಸೀನ್ ಯಾವೂರ್ದು ಕಾಟಣ್ಣ ? " ಬ್ರಮ್ಮಿ ಕೇಳಿದ
" ಏ ಹರ್ತಿಕೋಟೆ ರಾಯಣ್ಣನ ಸೀನ್ಸ್ ಕಣಪ್ಪ"
"ಒಂದ್ ಸತಿ ತರೂರು ಸೀನ್ಸ್ ತರ್ಸಣ, ಸಕತ್ ಆಗಿರುತ್ತೆ ಸೀನ್ , ನಾಟ್ಕನೂ ಸೂಪರ್ ಆಗಿರುತ್ತದೆ."
" ಸರಿ ನಾಟಕಕ್ಕೆ ಒಂದ್ ನೂರು ರುಪಾಯಿ ಕೊಡು "
" ಹೆ.....ನಾವ್ ಎಲ್ಲಿ ಅಷ್ಟು   ಕೊಡಾಕ್ ಆಗುತ್ತಣ್ಣ ತಲೆ ಕರೆದು ಕೊಂಡು ಹೇಳಿದ "
" ಅದಕ್ಕೆ ಮುಚ್ಕಂಡ್ ಟೀ ಕೊಡು ,ತರೂರ್ ಸೀನ್ ಅಂತೆ " ಹುರಿದುಬಿದ್ದರು ಕಾಟಯ್ಯ.

ನಾಟಕದ ದಿನ ಬಂದೇ ಬಿಟ್ಟಿತು .ರಾಕ್ಷಸನ ಪಾತ್ರವಾದರೂ ಸತೀಶ ಅಮ್ಮನ ಸಲಹೆಯ ಮೇರೆಗೆ ಉಪವಾಸ ಇದ್ದು ನಾಟಕ ಆಡಲು ಸಿದ್ದನಾದ .ಮಗನ ನಾಟಕ ಕಣ್ತುಂಬಿಕೊಳ್ಳಲು ಭೂದೇವಮ್ಮ ಚೌಡಗೊಂಡನಹಳ್ಳಿಯಿಂದ ಬಂದಿದ್ದರು .

ಗಣಸ್ತುತಿ ಮಾಡಿ , "ಓಂ ನಮೊ ಭವಾನಿ‌ ತಾಯೆ... " ಪ್ರಾರ್ಥನೆ ಆರಂಭವಾಯಿತು.
ನಾಟಕವು ಯಾರೂ ಊಹಿಸದಷ್ಟು ಸ್ವತಃ ಮೇಷ್ಟ್ರು ಗೆ ಆಶ್ಚರ್ಯ, ಜಗಲಕಕ ಎಂಬ ಕಶ್ಯಪ ಸ್ಪಷ್ಟವಾಗಿ ಮಾತಾಡುತ್ತಾನೆ .ದೇವೆಂದ್ರ ರಾಗವಾಗಿ ಹಾಡುತ್ತಾನೆ.
ಮೇಷ್ಟ್ರುಗೆ ಅರ್ಥವಾಯಿತು ಅಂದು ಪ್ರಾಕ್ಟೀಸ್ ನಲ್ಲಿ ಸತೀಶನ ಹೊಗಳಿದಾಗಿಂದ ಎಲ್ಲರೂ ಚಾಲೆಂಜ್ ಆಗಿ ತೆಗೆದುಕೊಂಡು ಪ್ರಾಕ್ಟೀಸ್ ಮಾಡಿದ್ದರು.

ನಾಟಕ ಸಾಗಿದಂತೆಲ್ಲ ರಕ್ತ ಬೀಜಾಸುರನ ಹುಟ್ಟು, ಬೆಳವಣಿಗೆ, ಅವನು ಬ್ರಹ್ಮ ,ವಿಷ್ಣು ಮಹೇಶ್ವರ ಇವರ ಸೆರೆಮನೆಯಲ್ಲಿ ಇಟ್ಟು ತೊಂದರೆಗಳನ್ನು ನೀಡುವುದು ,ನಂತರ ಶ್ರೀದೇವಿಯ ಪ್ರತ್ಯಕ್ಷ, ನೋಡೋಕೆ ಕಣ್ಣೆರಡು ಸಾಲವು. ರಂಗದಾಸಪ್ಪ ಎಂಬುವವರು ದೇವಿ ಪಾತ್ರ  ಮಾಡಿದರು ದೇವಿಯೇ ಉದ್ಭವಿಸಿದ ರೀತಿಯಲ್ಲಿ
" ವನವಿದು ರಾರಾಜಿಸುತಿಹುದೇ.... ಅಂದದಲಿ ಚೆಂದದಲಿ‌ ಶೋಭಿಸುತಿಹುದೆ...." ಹಾಡು.

"ವರಪುರುಷನ ಮಹಿಷನ ..... ವನವಿದಹ ...ವರಪುರುಷನ ಮಹಿಷನ..."
ಈ ಹಾಡು ಹೇಳುವಾಗ ಪ್ರೇಕ್ಷಕರು ತಮಗರಿವಿಲ್ಲದೆ ಎರಡೂ ಕೈಜೋಡಿಸಿ ಮುಗಿಯುತ್ತಿದ್ದರು.

ದೇವಿಯೊಂದಿಗೆ, ಸುಗ್ರೀವ ,ಚಂಡ ಚಾಮುಂಡ ಮುಂತಾದ ರಾಕ್ಷಸರ ಕಾಳಗ ಚೆನ್ನಾಗಿ ಮೂಡಿ ಬಂತು
ಶುಂಭ ,ನಿಶುಂಭರ ಕಾದಾಟ , ಅದರಲ್ಲೂ ಮಹಿಷಾಸುರನ ಆರ್ಭಟ ,ಹಾಡು ನಟನೆ ಕಂಡ ಬೇರೆ ಊರು ಜನರು ಬೇಷ್ ಎಂದರೆ ಕೆಲವರು ಮೆಡಲ್ ಹಾಕಲು ರಂಗಮಂದಿರಕ್ಕೆ ನುಗ್ಗಲು ಯತ್ನ ಮಾಡಿದರು .
" ಈಗ ಬ್ಯಾಡ ಇನ್ನೂ ಸ್ಯಾನೆ ನಾಟಕ ಐತೆ ಆಮೇಲೆ ಬೇಕಾದ್ರೆ ಅವಕಾಶವನ್ನು ಕೊಡ್ತೀವಿ "ಅಂದರು ಕಾಟಯ್ಯ

ಕೊನೆಯ ಸೀನ್ ನಲ್ಲಿ ದೇವಿಯು ರಕ್ತಬೀಜಾಸುರನ ವಧೆ ಮಾಡಿದಾಗ ಸೂರ್ಯ ನಿಧಾನವಾಗಿ ಕಣ್ತೆರೆಯುತ್ತಿದ್ದ
ಮಗನ ನಟನೆ ನೋಡಿದ ಜನರು ಬಂದು
ಭೂದೇವಮ್ಮ ನ ಬಳಿ ಹೇಳುವಾಗ ಗಂಡ ಬಾಲಾಜಿ ನೆ‌ನಪು ಬಂತು .ನಾಟಕ ಮುಗಿದು ಬಣ್ಣ ತೊಳೆಯಲು ಹೋದ ಸತೀಶನನ್ನು ಗೆಳೆಯರು ಮತ್ತು ಅಭಿಮಾನಿಗಳು ಪ್ರೀತಿಯಿಂದ ಹೊತ್ತು ಕುಣಿಯುತ್ತಿದ್ದರು ,ಇದನ್ನು ಕಂಡ ಭೂದೇವಮ್ಮನ ಕಣ್ಣುಗಳಲ್ಲಿ ಆನಂದ ಬಾಷ್ಪ ಉದುರಿದವು.ಕ್ರಮೇಣವಾಗಿ ಸೂರ್ಯನ ಪ್ರಖರ ಬೆಳಕು ಹೆಚ್ಚಾಯಿತು.


ಸಿ‌ ಜಿ ವೆಂಕಟೇಶ್ವರ

 

11 ಮಾರ್ಚ್ 2022

ಕುಬ್ಜ .ನ್ಯಾನೋ ಕಥೆ.


 


ಕುಬ್ಜ. ನ್ಯಾನೋ ಕಥೆ 


ಅವನು ಇಂಜಿನಿಯರಿಂಗ್ ನಲ್ಲಿ ಬಂಗಾರದ ಪದಕ ಪಡೆದು ಎಂ. ಟೆಕ್ ವಿದೇಶದಲ್ಲಿ ಓದಿ ಕಡಲ ತಡಿಯಲ್ಲಿ ಸುಂದರ ಮನೆ ನಿರ್ಮಿಸಿದ .

ತನ್ನದೇ  ಮನೆಯಾದ್ದರಿಂದ ವಿಶೇಷವಾದ ಮುತುವರ್ಜಿಯಿಂದ ಮನೆಯನ್ನು ಸದೃಢವಾಗಿ ವಿಶೇಷವಾದ ವಿನ್ಯಾಸ ಬಳಸಿ ನಿರ್ಮಿಸಿದ್ದ.

ಕಾರ್ಯನಿಮಿತ್ತವಾಗಿ  ವಿದೇಶದಿಂದ ಹಿಂದಿರುಗಿದವನು ಹೆಂಡತಿ ಮಕ್ಕಳನ್ನು ಕಾಣಲು ಉಡುಗೊರೆಗಳೊಂದಿಗೆ ಮನೆಯ ಬಳಿ ಬಂದವನಿಗೆ ಶಾಕ್ ಕಾದಿತ್ತು! 

ಸುನಾಮಿಯ ಅಲೆಗಳು ಅವನ ಮನೆಯನ್ನು ನೆಲಸಮ ಮಾಡಿದ್ದವು. ಕೈಯಲ್ಲಿದ್ದ ಉಡುಗೊರೆಗಳನ್ನು ನೆಲಕ್ಕೆ ಚೆಲ್ಲಿದ ಅವನ ಕಣ್ಣುಗಳಲ್ಲಿ ನೀರು ಜಿನುಗಲಾರಂಭಿಸಿತು.ಅವನ ಮನದಲ್ಲೇ ಅಂದುಕೊಂಡ ಪ್ರಕೃತಿ ಮುಂದೆ ನನ್ನ ಇಂಜಿನಿಯರಿಂಗ್ ಪ್ರತಿಭೆ ಕುಬ್ಜ.....



ಸಿಹಿಜೀವಿ

ಸಿ ಜಿ ವೆಂಕಟೇಶ್ವರ

09 ಮಾರ್ಚ್ 2022

ಶಾಂತಿ ನೆಲೆಸಲಿ .


 



*ಶಾಂತಿ ನೆಲೆಸಲಿ*


ಗೂಡಲಿರುವ ಮರಿಗಳೆಲ್ಲ 

ಬಾಡಿ ಹೋಗಿವೆ

ಹಸಿದ ಹೊಟ್ಟೆ ತುಂಬದೇ

ಅಮ್ಮನ ಕೂಗುತಿವೆ.



ಮನುಜನ  ಯುದ್ದದಾಹದಿಂದ 

ಪಕ್ಷಿ ಸತ್ತು ಬಿದ್ದಿದೆ

ಕಾಳು ತರಲು ಹೋದ ಅಮ್ಮ

ಶಿವನ ಪಾದ ಸೇರಿದೆ .


ಅನಾಥ ಮರಿಗಳಿಗೆ ಗುಟಕು

ನೀಡುವವರು ಯಾರು?

ಯಾರದೋ ಕಿರೀಟಕ್ಕೆ ಲಕ್ಷಾಂತರ

ಜೀವಿಗಳಿಗಿಲ್ಲ ಸೂರು.


ಇನ್ನಷ್ಟು ದಿನ ಈ ಮೇಲಾಟ 

ಮದ್ದು ಗುಂಡುಗಳ ಜಗದಲಿ 

ನಿಂತು ಬಿಡಲಿ ಯುದ್ಧಗಳು

ಭುವಿಯಲಿ  ಶಾಂತಿ ನೆಲಸಲಿ .


ಸಿಹಿಜೀವಿ

ಸಿ ಜಿ ವೆಂಕಟೇಶ್ವರ.

07 ಮಾರ್ಚ್ 2022

ಅರವಳಿಕೆ


 


ಅರವಳಿಕೆ .


ಚೌಕಾಸಿ ಮಾಡದೇ

ನೀನೇನೋ ಕೊಟ್ಟುಬಿಡುವೆ

ಸಿಹಿಮುತ್ತನು ಅರಿತು

ನನ್ನ ಮನದ ಬಯಕೆ |

ನನ್ನ ಪಾಡು ಏನೆಂದು

ಹೇಳಲಿ ಎಲ್ಲೆಲ್ಲೋ ತೇಲಿಬಿಡುವೆನು 

ಪಡೆದಂತೆ ಅರವಳಿಕೆ ||


ಸಿಹಿಜೀವಿ

ಸಿ ಜಿ ವೆಂಕಟೇಶ್ವರ.




02 ಮಾರ್ಚ್ 2022

ತ್ರಿಮುಖಿ.ಪುಸ್ತಕ ವಿಮರ್ಶೆ.


 


ತ್ರಿಮುಖಿ   ಪುಸ್ತಕ ವಿಮರ್ಶೆ

(ನೆನಪುಗಳ ಹಾದಿಯಲ್ಲಿ )  



ಸಿ ಆರ್ ಸತ್ಯ ರವರು ಬರೆದ 

ತ್ರಿಮುಖಿ ಓದುತ್ತಾ ಕುಳಿತಾಗ ಒಬ್ಬ ವ್ಯಕ್ತಿ ತನ್ನ ಪ್ರಾಮಾಣಿಕವಾದ ಪ್ರಯತ್ನ ಮತ್ತು ಅವಕಾಶಗಳನ್ನು ಸರಿಯಾಗಿ ಬಳಸಿಕೊಂಡರೆ ,ಉತ್ತಮ ವ್ಯಕ್ತಿಗಳ ಸತ್ಸಂಗ ದೊರತರೆ ನಾವೂ ಬೆಳೆಯಬಹುದು ಮತ್ತು ದೇಶಕ್ಕಾಗಿ ನಮ್ಮ ಕೈಲಾದ ಸೇವೆ ಸಲ್ಲಿಸಬಹುದು ಎಂಬುದು ಮನವರಿಕೆಯಾಯಿತು.

ಇದಕ್ಕೆ ಬಾಹ್ಯಾಕಾಶ ತಂತ್ರಜ್ಞರು ಕವಿಗಳು ಆದ ಸಿ ಆರ್ ಸತ್ಯ ಅವರೇ ಜೀವಂತ ಸಾಕ್ಷಿ.


ಸಿ. ಆರ್, ಸತ್ಯ ಅವರು ವೃತ್ತಿಪರವಾಗಿ ಬಾಹ್ಯಾಕಾಶ ತಂತ್ರಜ್ಞಾನದಲ್ಲಿ ಪರಿಣತರು, ಐವತ್ತು ವರ್ಷಗಳಿಗೂ ಮೇಲ್ಪಟ್ಟು ಇವರು ಈ ಕ್ಷೇತ್ರದಲ್ಲಿ ಇಸ್ರೋ ಮತ್ತು ಟಾಟಾ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸಿದ್ದಾರೆ. ಕನ್ನಡ ಮತ್ತು ಇಂಗ್ಲಿಷ್ನಲ್ಲಿ ಇವರು ಬರೆದಿರುವ ತಾಂತ್ರಿಕ ಮತ್ತು ವೈಜ್ಞಾನಿಕ ಲೇಖನಗಳು, ಮೈಸೂರು ವಿಶ್ವವಿದ್ಯಾನಿಲಯದ ವಿಶ್ವಕೋಶದಲ್ಲಿ, ರಕ್ಷಣಾ ಇಲಾಖೆಯ ಪ್ರಕಟಣೆಗಳಲ್ಲಿ, ವಿಜ್ಞಾನ ಲೋಕ, ಉತ್ಥಾನ ಇಂತಹ ನಿಯತಕಾಲಿಕೆಗಳಲ್ಲಿ ಮತ್ತು ವೈಜ್ಞಾನಿಕ ಲೇಖನ ಸಂಕಲನಗಳ ಪುಸ್ತಕಗಳಲ್ಲಿ ಕಾಣಬಹುದು. ಸತ್ಯ ಅವರು ಕನ್ನಡ ಮತ್ತು ಇಂಗ್ಲಿಷ್ನಲ್ಲಿ ಪುಸ್ತಕಗಳನ್ನೂ ಪ್ರಕಟಿಸಿದ್ದಾರೆ. ಇವಲ್ಲಿ ವ್ಯಕ್ತಿ ಚಿತ್ರಗಳಿವೆ. ಜೀವನಾನುಭವಗಳಿವೆ, ಹಾಸ್ಯ ಸಂಕಲನವಿದೆ ಮತ್ತು ಸಂಶೋಧನೆಗಳಿವೆ, ಇವರ ಕುಹಕ  ಕವನ 'ಆಚೇ ಮನೆ ಸುಬ್ಬಮ್ಮನಿಗೆ ಏಕಾದಸಿ ಉಪವಾಸ' 1959ರಲ್ಲಿ ಕೊರವಂಜಿ ಮಾಸಪತ್ರಿಕೆಯಲ್ಲಿ ಪ್ರಕಟವಾಗಿ, ನಂತರ ಹೊರಬಂದ ಅಪರಂಜಿ ಪತ್ರಿಕೆಯಲ್ಲಿ ಅನೇಕ ಹಾಸ್ಯ ಲೇಖನಗಳನ್ನು ಈಗಲೂ ಬರೆಯುತ್ತಿದ್ದಾರೆ. ತಿರುವನಂತಪುರದಲ್ಲಿರುವ ಶ್ರೀ ಅನಂತಪದ್ಮನಾಭ ಸ್ವಾಮಿ ದೇವಸ್ಥಾನದ ಕಲ್ಲುಗಳ ಮೇಲೆ ಸತ್ಯ ಅವರು ಮಾಡಿದ ಸಂಶೋಧನೆಯ ಬಗ್ಗೆ ಕನ್ನಡದಲ್ಲಿ ಅವರು ಬರೆದಿರುವ 'ಅಳಿವಿಲ್ಲದ ಸ್ಥಾವರ' ಪುಸ್ತಕಕ್ಕೆ ಕರ್ನಾಟಕ ಸಾಂಸ್ಕೃತಿಕ ಅಕಾಡೆಮಿಯಿಂದ ಹಾಗೂ ಇವರೇ ಬರೆದಿರುವ ಪುಸ್ತಕದ ಇಂಗ್ಲಿಷ್ ಅನುವಾದ 'ಸೆಂಟಿನಲ್ಸ್ ಆಫ್ ಗ್ಲೋರಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಪುರಸ್ಕಾರಗಳು ದೊರೆತಿವೆ. ಬಹುಮುಖ ಆಸಕ್ತಿಯುಳ್ಳ ಸತ್ಯ ಅವರು ಪರಿಸರ ರಕ್ಷಣೆ, ಸಾಹಿತ್ಯ, ವಿದ್ಯಾರ್ಥಿಗಳಿಗೆ ಕನ್ನಡದಲ್ಲಿ ವಿಜ್ಞಾನ ಪರಿಚಯ, ಶಬ್ಧ ಚಿತ್ರಗಳ ನಿರೂಪಣೆಗಳು - ಈ ಕ್ಷೇತ್ರಗಳಲ್ಲೂ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ದೇಶದ ಹಿರಿಯ ವಿಜ್ಞಾನಿಗಳು ಹಾಗೂ ನಾಯಕರೊಡನೆ ಒಡನಾಟ, ಅನೇಕ ದೇಶಗಳಲ್ಲಿನ ಪ್ರಯಾಣ ಮತ್ತು ತಮ್ಮ ಹವ್ಯಾಸಗಳಿಂದ ಮೂಡಿಬಂದ ಕೆಲವು ಕುತೂಹಲಕರ ಅನುಭವಗಳನ್ನು ಈ ಪುಸ್ತಕ 'ತ್ರಿಮುಖಿ'ಯಲ್ಲಿ ಸತ್ಯ ಅವರು ಓದುಗರಲ್ಲಿ ಹಂಚಿಕೊಂಡಿದ್ದಾರೆ.


ಮೊದಲನೆಯ ಭಾಗದಲ್ಲಿ ಅವರು  ನಮ್ಮ ರಾಜ್ಯದ ಹೊರಗಡೆ ಬಾಹ್ಯಾಕಾಶ ಕ್ಷೇತ್ರದಲ್ಲಿ ಕೆಲಸ ಮಾಡುವ ಸಂದರ್ಭದಲ್ಲಿ ಘಟಿಸಿದ ಪ್ರಮುಖವಾದ ಘಟನೆಗಳ ಮೆಲುಕು ಹಾಕಿದ್ದಾರೆ. ಅದರಲ್ಲಿ ದೇಶದ ಮಹಾನ್ ವಿಜ್ಞಾನಿಗಳು, ಮಂತ್ರಿಗಳು ,ಮುಖ್ಯಮಂತ್ರಿ ಗಳು ವಿದ್ವಾಂಸರು ,ಇತಿಹಾಸತಜ್ಞರು, ಹೀಗೆ ಗಣ್ಯ ವ್ಯಕ್ತಿಗಳ ಒಡನಾಟವನ್ನು ದಾಖಲಿಸಿದ್ದಾರೆ. 


ಎರಡನೇ ಮುಖದಲ್ಲಿ ಅವರ ವಿದೇಶಿ ಪ್ರವಾಸದ ಸ್ವಾರಸ್ಯಕರ ಅನುಭವವನ್ನು ಕಟ್ಟಿಕೊಡುವ ಪ್ರಯತ್ನ ಮಾಡಿದ್ದಾರೆ. ಅಮೆರಿಕಾ, ಶ್ರೀಲಂಕಾ, ಈಜಿಪ್ಟ್, ಇಸ್ರೇಲ್ ಹೀಗೆ ಬಹುತೇಕ ದೇಶಗಳಲ್ಲಿ ಮಾಡಿದ ಪ್ರವಾಸದ ಅನನ್ಯ ನೆನಪುಗಳನ್ನು ನಮ್ಮೊಂದಿಗೆ ಹಂಚಿಕೊಳ್ಳುವ ಮೂಲಕ ನಮಗೂ ವಿದೇಶಿ ಪ್ರವಾಸ ಕೈಗೊಳ್ಳಲು ಪ್ರೇರಣೆ ನೀಡಿದ್ದಾರೆ.


ಮೂರನೆಯ ಮುಖದಲ್ಲಿ ಮರಳಿ ತಾಯ್ನಾಡಿಗೆ ಮರಳಿದ ನಂತರದ ಅವರ ಜೀವಮಾನದ ಪ್ರಮುಖ ಅಂಶಗಳ ಮೇಲೆ ಬೆಳಕು ಚೆಲ್ಲಿದ್ದಾರೆ.


ನನಗೆ ಸತ್ಯ ರವರ ಈ ಪುಸ್ತಕದಲ್ಲಿ ಬಹಳ ಆಸಕ್ತಿ ಮತ್ತು ಇಚ್ಚೆಯಿಂದ ಓದಿದ ಭಾಗಗಳೆಂದರೆ  ಅವರು ಒಡನಾಡಿದ ಭಾರತದ ರತ್ನಗಳಾದ ಡಾ. ಎ. ಪಿ ಜೆ ಅಬ್ದುಲ್ ಕಲಾಂಜಿ, ರಾಜಾರಾಮಣ್ಣ, ಡಾ.ವಿಕ್ರಂ ಸಾರಾಬಾಯ್ ಮುಂತಾದವರ ಬಗ್ಗೆ ಅವರ ಅನುಭವಗಳು ನಮ್ಮ ಮೇಲೆ ಪ್ರಭಾವ ಬೀರುತ್ತವೆ. 


ಸಿ ಆರ್ ಸತ್ಯ ರವರು ಓದುಗರಲ್ಲಿ ವಿನಂತಿ ಮಾಡಿಕೊಂಡಂತೆ  ಇದು ಅವರ  'ಆತ್ಮ ಚರಿತ್ರೆ' ಎಂದು ಮಾತ್ರ ಪರಿಗಣಿಸಬೇಕಿಲ್ಲ .  ಅವರ ಮಾತುಗಳಲ್ಲಿ ಹೇಳುವುದಾದರೆ" ಆತ್ಮ ಚರಿತ್ರೆ ಬರೆಯುವುದಕ್ಕೆ ನಾನು ಯಾವ ರೀತಿಯ ಸಾಧಕನೂ ಅಲ್ಲ ಸಾಹಿತಿಯೂ ಅಲ್ಲ. ಆದರೆ ಎಲ್ಲರಿಗೂ ಆಗುವ ಹಾಗೆ ನನ್ನ ಜೀವನದಲ್ಲಿ ಅನೇಕ ಬಗೆಯ ಅನುಭವಗಳನ್ನು ಅನುಭವಿಸಿದವನು. ಅನುಭವಗಳು ಸಹಜವಾಗಿಯೇ ಜೀವನ ಮಾರ್ಗದಲ್ಲಿ ನಮ್ಮನ್ನು ಆವರಿಸುತ್ತವೆ. ಕೆಲವು ಸಂತಸದ ಅನುಭವಗಳಾದರೆ ಮತ್ತೆ ಕೆಲವು ಮನಸ್ಸನ್ನು ಕಲಕುವ ಅನುಭವಗಳೂ ಆಗಿರುತ್ತವೆ. ಇದರಿಂದ ನಮ್ಮ ಮೇಲೆ ನಾನಾ ಬಗೆಯ ಪರಿಣಾಮಗಳು ಬೀರಿದಂತಾಗುತ್ತವೆ. ಕೆಲವು ನಮ್ಮ ಸ್ಮೃತಿ ಪಟಲದಲ್ಲಿ ಹಾಗೆಯೇ ಉಳಿಯುತ್ತವೆ. ಕೆಲವು ಕಾಲ ಸಾಗುತ್ತಿದ್ದ ಹಾಗೆಯೇ ನಮ್ಮ ಮನಸ್ಸಿನಿಂದ ದೂರವಾಗುತ್ತವೆ.

ಅನುಭವ ಅನ್ನುವುದು ಒಂದು ವೈಯಕ್ತಿಕ ಪ್ರಕ್ರಿಯೆಯೇನೋ ಹೌದು. ಆದರೆ ಅವನ್ನು ಬೇರೊಬ್ಬರಲ್ಲಿ ಹಂಚಿಕೊಳ್ಳುವುದೇಕೆ ಎಂದು ಕೇಳಬಹುದು.

ನನ್ನ ಅನಿಸಿಕೆಯ ಪ್ರಕಾರ ಎಲ್ಲಾ ಅನುಭವಗಳಿಗೂ ಅನುಭವಿಸುವವರಿಗಲ್ಲದೆ ಮಿಕ್ಕವರಿಗೆ ಅವುಗಳಲ್ಲಿ ಕಾಣಬಹುದಾದ ಕೆಲವು ಅಂಶಗಳಿವೆ. ಅವು ವ್ಯಕ್ತಿತ್ವದ ವಿಷಯವಿರಬಹುದು, ಚಾರಿತ್ರಿಕ ಮಾಹಿತಿಯಿರಬಹುದು. ಹಾಸ್ಯವಿರಬಹುದು, ಕೆಲವು ರೋಚಕ ಸಂಗತಿಗಳಿರಬಹುದು. ಇವುಗಳಲ್ಲಿ ಯಾವುದಾದರೊಂದು ಅಂಶವು ಓದುಗರ ಮನಸ್ಸನ್ನು ಸ್ಪಂದಿಸುತ್ತದೆ ಎಂಬುದು ನನ್ನ ಭಾವನೆ. ಜೀವನ ಎಂಬುವುದಕ್ಕೆ ಅನೇಕ ಆಯಾಮಗಳಿವೆ. ನಾವು ನಮ್ಮ ಜೀವನ ಪಥದಲ್ಲಿ ನಡೆಯುವಾಗ, ನಮ್ಮ ಬಗ್ಗೆ ನಾವೇ ಅರಿವು ಮಾಡಿಕೊಳ್ಳುತ್ತೇವೆ; ಒಡನಾಟವಿದ್ದ ಮಿಕ್ಕವರನ್ನು ಅರ್ಥೈಸಿಕೊಳ್ಳುತ್ತೇವೆ; ನೋಡುವ, ಜ್ಞಾಪಿಸುವ ಸ್ಥಳಗಳನ್ನು ಅರಿಯುತ್ತೇವೆ. ಇದರಿಂದ ನಾವು ಸಾಕಷ್ಟು ಕಲಿಯುತ್ತೇವೆ. ಇಂತಹ ಕಲಿಕೆ ರಸಮಯವಾಗಿರುತ್ತದೆ, ವೈವಿಧ್ಯಗಳಿಂದಾಗಿ ಕೂಡಿರುತ್ತದೆ. ಒಮ್ಮೊಮ್ಮೆ ದು:ಖಮಯವಾಗಿಯೂ ಇರುತ್ತದೆ. ಆದರೆ, ಇದನ್ನು ನಾವು ಗ್ರಹಿಸುವ ಬಗೆ ಬಹುಮಟ್ಟಿಗೆ ವ್ಯಕ್ತಿಗತವಾಗಿರುತ್ತದೆ. ನಮ್ಮ ಅನುಭವಗಳು ನಮ್ಮ ಮಾನಸಿಕ

ಸ್ಥಿತಿಗತಿಗಳ ಮೇಲೆ ಅವಲಂಬಿತವಾಗಿರುತ್ತದೆ. ನಮ್ಮದೇ ಬಣ್ಣದ ಗಾಜುಗಳುಳ್ಳ ಕನ್ನಡಕಗಳ ಮೂಲಕ ಹೊರಪ್ರಪಂಚವನ್ನು ಕಾಣುತ್ತೇವೆ. ಇದರಿಂದಾಗಿ, ನಮ್ಮ ಸುತ್ತಮುತ್ತಲಿನ ಅನೇಕ ಆಗುಹೋಗುಗಳನ್ನು ನಾವು ನೋಡುವುದೇ ಇಲ್ಲ! ಅವು ಘಟನೆಗಳಿರಬಹುದು, ಸಾಧಕರಿರಬಹುದು, ರಸವತ್ತಾದ ಹಿನ್ನೆಲೆಯುಳ್ಳ ಸ್ಥಳಗಳಿರಬಹುದು. ಮನಸ್ಸಿನಲ್ಲಿ ನಿಲ್ಲುವ ಪುಸ್ತಕ-ನಾಟಕ-ಚಲನಚಿತ್ರ-ಸಂಗೀತ ಇರಬಹುದು. ಹೀಗೆ ನಮ್ಮಲ್ಲಿರುವ ಮಾನಸಿಕ ಪ್ರವೃತ್ತಿಯಿಂದಾಗಿ, ನಾವು ಎಷ್ಟೋ ಜೀವನಾನುಭವಗಳೊಡನೆ ಸ್ಪಂದಿಸುವುದೇ ಇಲ್ಲ! ಇದನ್ನು ನಾನು ಇಷ್ಟು ನಿಖರವಾಗಿ ಏಕೆ ಹೇಳುತ್ತಿದ್ದೇನೆಂದರೆ, ಇವೆಲ್ಲವೂ ನಾನು ನನ್ನ ಜೀವನದಲ್ಲಿ ಕಂಡುಕೊಂಡ ಸತ್ಯವೇ ಆಗಿದೆ".


ತ್ರಿಮುಖಿ ಪುಸ್ತಕ ಓದುತ್ತಾ ನಮಗೆ ಸಿ ಆರ್ ಸತ್ಯ ರವರ ಬಹುಮಖಗಳ ಪರಿಚಯವಾಗುತ್ತದೆ.ನಮ್ಮ ದೇಶದ ಬಾಹ್ಯಾಕಾಶ ಸಾಧನೆಗೆ ಪೂರಕವಾದ ತಂತ್ರಜ್ಞರಲ್ಲಿ ಅವರೂ ಕೂಡಾ ಒಬ್ಬರು ಎಂಬ ಹೆಮ್ಮೆಯ ಭಾವ ಮೂಡುತ್ತದೆ. ಅವರ ನಿವೃತ್ತಿ ಜೀವನ ಸುಖಕರವಾಗಿರಲಿ ಹಾಗೂ ಅವರಿಂದ ಇನ್ನೂ ಇಂತಹ ಪುಸ್ತಕಗಳು ಹೊರಬರಲಿ ಅವುಗಳ ಓದುವ ಸೌಭಾಗ್ಯ ನಮ್ಮದಾಗಲಿ..




ಪುಸ್ತಕ: ತ್ರಿಮುಖಿ

ಲೇಖಕರು:  ಸಿ ಆರ್ ಸತ್ಯ 

ಪ್ರಕಾಶನ :ಬೀಚಿ ಪ್ರಕಾಶನ

ವರ್ಷ:೨೦೨೧

ಬೆಲೆ:೧೯೯₹


ಸಿಹಿಜೀವಿ

ಸಿ ಜಿ ವೆಂಕಟೇಶ್ವರ

ತುಮಕೂರು


ಸುವರ್ಣಮುಖಿ. ಪುಸ್ತಕ ವಿಮರ್ಶೆ.


 


ಸುವರ್ಣ ಮುಖಿ . ವಿಮರ್ಶೆ.



ಆತ್ಮೀಯರು ಪ್ರಕಾಶಕರು ಆದ ಎಂ ವಿ  ಶಂಕರಾನಂದರ  ಜೊತೆ ಒಮ್ಮೆ ಸಿದ್ದರ ಬೆಟ್ಟದ ಚಾರಣಕ್ಕಾಗಿ ಹೋದಾಗ ಅಲ್ಲೇ ಹತ್ತಿರದ ಹೊಲತಾಳ್ ನ ಅಬೇತೋಸಂ ( ಅನೌಪಚಾರಿಕ ಬೇಸಾಯ ಮತ್ತು ತೋಟಗಾರಿಕೆ ಸಂಸ್ಕೃತಿ) ಗೆ ಭೇಟಿ ನೀಡಿದಾಗ ಈ ಪುಸ್ತಕವನ್ನು ಡಾ.ಸಿದ್ದಗಂಗಯ್ಯ ಹೊಲತಾಳ್ ರವರಿಂದ ಖರೀದಿಸಿ ತಂದು 464 ಪುಟಗಳ ಬೃಹತ್ ಪುಸ್ತಕವನ್ನು ಕೆಲವೇ ದಿನಗಳಲ್ಲಿ ಓದಿ ಮುಗಿಸಿದೆ.


ಸಿದ್ಧರ ಬೆಟ್ಟದ ಆಸುಪಾಸಿನ ಅಧ್ಯಯನ ಎಂಬ ಟ್ಯಾಗ್ ಲೈನ್ ನ ಪುಸ್ತಕದಲ್ಲಿ 

ಡಾ. ಸಿದ್ಧಗಂಗಯ್ಯ ಹೊಲತಾಳು ರವರು ಚನ್ನರಾಯನ ದುರ್ಗ ದ ಸಮಗ್ರ ಅಧ್ಯಯನ ಮತ್ತು ಪ್ರವಾಸ ಮಾಡಿ ಅನುಭವದ ಕಥನವನ್ನು ಈ ಪುಸ್ತಕದಲ್ಲಿ ನೀಡಿದ್ದಾರೆ  ಪರಿಸರ ಪ್ರಿಯರು, ಸಂಶೋಧನಾ ವಿದ್ಯಾರ್ಥಿಗಳು, ಪ್ರವಾಸಪ್ರಿಯರಿಗೆ ಇದೊಂದು ಆಕರ ಗ್ರಂಥವೆಂದರೆ ತಪ್ಪಾಗಲಾರದು.


ಡಾ. ಸಿದ್ಧಗಂಗಯ್ಯ ಹೊಲತಾಳು ರವರ  ಈ ಹೆಸರಿನಲ್ಲಿಯೇ ನೆಲಮೂಲದ ಹಳ್ಳಿಯ ಹೆಸರು ಇರುವುದನ್ನು ಗುರುತಿಸಬಹುದು. 'ಹೊಲತಾಳು ಗ್ರಾಮವು ಕೋಳಿಕಲ್ ಅರಣ್ಯ ಪ್ರದೇಶದ ತಪ್ಪಲಿನಲ್ಲಿ ಅಂದರೆ ಸಿದ್ಧರಬೆಟ್ಟದ ದಕ್ಷಿಣ ದಿಕ್ಕಿನಲ್ಲಿದೆ. ಈ ನೆಲದಲ್ಲಿ ಆಳಿದನೆಂದು  ಆಕರಗಳಿಂದ ತಿಳಿದು ಬರುವ ಕುರಂಗರಾಯನ ಸತಿಯ ಕಥನದೊಂದಿಗೆ ತಳುಕ ಹಾಕಿಕೊಂಡಿರುವ 'ಹೊಲತಾಳು' ಗ್ರಾಮದವರಾದ ಸಿದ್ಧಗಂಗಯ್ಯನವರು ವೃತ್ತಿಯಲ್ಲಿ ಪ್ರಾಧ್ಯಾಪಕರಾಗಿದ್ದರು. ಇವರನ್ನು ಆಂಗ್ಲಭಾಷಾ ವಿದ್ವಾಂಸರಾಗಿ, ಪರಿಸರವಾದಿಯಾಗಿ ಸಾವಯವ ಕೃಷಿಕರಾಗಿ, ದೇಸೀ ಸಂಸ್ಕೃತಿಯ ಹರಿಕಾರರಾಗಿ, ದಣಿವರಿಯದ ಓದುಗರಾಗಿ, ಸಂಶೋಧಕರಾಗಿ ಗುರುತಿಸಬಹುದು. 'ಅಬೇತೋಸಂ' ಎಂಬ ಕೇಂದ್ರದ ಸ್ಥಾಪಕರಾಗಿದ್ದಾರೆ. ನೆಲಮೂಲದ ಕಥನವನ್ನು ಮುಂದಿನ ಪೀಳಿಗೆಗೂ ಪ್ರಸರಿಸುವ ಬದ್ಧತೆ ಮತ್ತು ಉತ್ಸಾಹವನ್ನು ಹೊಂದಿದ್ದಾರೆ.


ಚನ್ನರಾಯನದುರ್ಗ ಆಡಳಿತ ಘಟಕದ ವ್ಯಾಪ್ತಿಯಲ್ಲಿರುವ ಸ್ಥಳಗಳನ್ನು ಪರಿಚಯಿಸಿರುವ ಇವರ ಪ್ರಯತ್ನವು ಶ್ಲಾಘನೀಯವಾದುದು. ಚನ್ನರಾಯನದುರ್ಗದಿಂದ ದೊಗ್ಗನಹಳ್ಳಿ, ಮಲ್ಲೇಕಾವು,  ಗೌಜುಗಲ್ಲು, ಬೆಂಡೋಣೆ, ಬೂದಗವಿ, ಜೋನಿಗರಹಳ್ಳಿ, ತೋವಿನಕೆರೆ, ಮಣುವಿನಕುರಿಕೆ, ಹೊಲತಾಳು, ದೊಡ್ಡನರಸಯ್ಯನಪಾಳ್ಯ,ಮುಂತಾದ ಹಳ್ಳಿಗಳ ಪ್ರವಾಸ ಮಾಡಿ ಅಲ್ಲಿನ ಐತಿಹಾಸಿಕ, ಸಮಾಜೋ ಆರ್ಥಿಕ ಸಾಂಸ್ಕೃತಿಕ ಅಧ್ಯಯನ ಮಾಡಿ ನಮಗೆ ಒಂದು ಉತ್ತಮ ಚಿತ್ರಣ ನೀಡಿದ್ದಾರೆ.


ಕೃತಿಕಾರರ ಮಾತಿನಲ್ಲೇ ಹೇಳುವುದಾದರೆ 

'ಸುವರ್ಣಮುಖಿ' ಬಹುತೇಕ ನಿಧಾನ ನಡಿಗೆಯ ಪ್ರವಾಸಕಥನ.

ಈ ಪ್ರವಾಸದಲ್ಲಿ ಅರಿವು, ಅಧ್ಯಯನ : ಸಂವಾದ, ಸಂಶೋಧನೆ ; ಪ್ರಾಕೃತಿಕ ಸೊಬಗು, ಪ್ರಾಯೋಗಿಕ ಅನುಭವ; ಚಿಂತನ-ಮಂಥನ ; ಕರಕುಶಲ ಜಾನಪದ-ಸಂಪ್ರದಾಯ-ಆಚರಣೆ-ಹಾಡು ; ಹಿಂದಿನ - ಇಂದಿನ - ಮುಂದಿನ ನೋಟ

ಎಲ್ಲವೂ ಈ ಬರವಣಿಗೆಯಲ್ಲಿ ಸಂಮಿಳಿತವಾಗಿವೆ. ಕನಸು-ಕಲ್ಪನೆ-ಕತೆಯೂ ಇದೆ, ಸಿದ್ಧರಬೆಟ್ಟದ ಆಸುಪಾಸು - ಚನ್ನರಾಯನದುರ್ಗ ಹೋಬಳಿ, ಬಾರ್ಡರ್ ಲೈನ್ ಒಳಗೊಂಡಂತೆ. ಸುಮಾರು ಎಂಭತ್ತು ಕಿಲೋಮೀಟರ್ ಸುತ್ತಳತೆ, ಎಂಭತ್ತು ಹಳ್ಳಿಗಳ ವ್ಯಾಪ್ತಿಯಲ್ಲಿ ಅವರ ನಡಿಗೆ. 


ಸುವರ್ಣಮುಖಿ ನದಿಯ ಜಲದ ಜಾಡಿನಲ್ಲಿ ಬೇಸಾಯ ಸಂಸ್ಕೃತಿಯ ಅನಂತ ಮುಖಗಳನ್ನು  ಪಯಣದ ಅವಧಿಯಲ್ಲಿ ನೋಡಿ ದಾಖಲಿಸಿದ್ದಾರೆ. ಸಮಾಜ-ಕೃಷಿ-ಆರ್ಥಿಕತೆ-ನೀರು-ಅರಣ್ಯ ,ಮಣ್ಣಿನ ಗುಣ-ಕಲೆ-ಸ್ಥಳೀಯ ಸಂವೇದನೆ-ಸ್ಥಿತ್ಯಂತರ , ಅರಿವು, ಮಾಗಿಯ ಬೆಳಗಿನ ಚುಮುಚುಮು ಚಳಿ-ಮಂಜು, ಮಧ್ಯಾಹ್ನದ ಬಿಸಿಲು, ಸಂಜೆಯ ಸುಳಿಗಾಳಿಯಿಂದ ಆರಂಭವಾಗಿ ಚೈತ್ರದ ಚಿಗುರಿನ ಪಕ್ಷಿಗಳಿಂಚರದಲ್ಲಿ ಮುಂದುವರಿದು, ಮಳೆಬಿದ್ದ ನೆಲವ ಉತ್ತಿ ಬೀಜ ಬಿತ್ತಿ ಪೈರುನೆಟ್ಟು

ಗರಿಮೇದು ಬೆಳೆಕಟ್ಟುವ ತನಕ ನನ್ನ ಈ ಪ್ರವಾಸ ಮುಂದುವರೆದಿದೆ.


ಈ ಪುಸ್ತಕಕ್ಕೆ ಮುನ್ನುಡಿಯನ್ನು ಬರೆದ ಜಾನಪದ ತಜ್ಞರಾದ ಡಾ.ಬಸವರಾಜ ನೆಲ್ಲಿಸರ ರವರ ಮಾತಿನಲ್ಲಿ ಹೇಳುವುದಾದರೆ 

ನಮ್ಮ ಹಳ್ಳಿಯ ಯುವಕರು ಉದ್ಯೋಗ ಅರಸಿ ಬೆಂಗಳೂರಿಗೆ ಬಂದವರು ಏನು ಮಾಡ್ತಾ ಇದ್ದಾರೆ? ಬೇಕರಿಯಲ್ಲಿ, ಗ್ಯಾರೇಜಿನಲ್ಲಿ, ಗಾರ್ಮೆಂಟಿನಲ್ಲಿ, ಚಪ್ಪಲಿ ಅಂಗಡಿಗಳಲ್ಲಿ, ಟ್ಯಾಕ್ಸಿ ಚಾಲನೆಯಲ್ಲಿ, ಹೋಟೆಲ್ಗಳಲ್ಲಿ, ಮಾಲ್ಗಳಲ್ಲಿ ಜವಾನರೋ ದಿವಾನರೋ ಆಗಿ ದುಡಿಯುತ್ತಿದ್ದಾರೆ. ಮದುವೆ ಮಾಡಿಕೊಂಡ್ರೆ ಮನೆ ಮಾಡಬೇಕಲ್ಲಾ ಎಂದು ಸಣ್ಣ ರೂಮಿನಲ್ಲಿದ್ದು, ಅನ್ನ ಮಾಡಿಕೊಂಡು ಹೋಟೆಲ್ ಸಾಂಬಾರ್ ತಂದು, ಉಂಡು ಜೀವನ ಮಾಡ್ತಿದ್ದಾರೆ. 'ಕೆಟ್ಟು ಪಟ್ಟಣ ಸೇರು' ಅನ್ನೋ ಗಾದೆ ಮಾತು, ಈಗ 'ಕೆಡೋದಕ್ಕೆ ಪಟ್ಟಣ ಸೇರು' ಆಗಿದೆ. ಮೈಬಗ್ಗಿಸಿ ಬೆವರು ಹರಿಸಿ ದುಡಿದ್ರೆ 'ಭೂಮಿತಾಯಿ ಕೂಡಾಕಿಲ್ಲವಾ! ಹೀಗೆ ಪ್ರತಿ ಹಳ್ಳಿಗಳಲ್ಲೂ ಹಣದ ಬೆನ್ನುಹತ್ತಿ ಪೇಟೆ ಸೇರಿದವರ ದೊಡ್ಡ ಪಟ್ಟಿಯೇ ದೊರೆಯುತ್ತದೆ. ವಾಣಿಜ್ಯ ಬೆಳೆಯಾದ ಶುಂಠಿ ಬೆಳೆಯಲು, ಕೇರಳದ ಮಲೆಯಾಳಿಗಳು, ಪಾಳುಬಿದ್ದ ಜಮೀನು ನೋಡಲು ಹಳ್ಳಿಗಳಿಗೆ ಬರುತ್ತಿದ್ದಾರೆ. ಆದರೆ ನಮ್ಮವರು ಏನು ಮಾಡುತ್ತಿದ್ದಾರೆ? ಗಂಡಸರಿಗಿಂತ ನಮ್ಮೂರಿನ ಹೆಂಗಸರಿಗೆ ಶ್ರಮಿಕ ಪ್ರಜ್ಞೆ ಹೆಚ್ಚು ಕುಟುಂಬದಲ್ಲಿ ಹತ್ತು ಕೈಗಳು ಗಲೀಜು ಮಾಡುತ್ತವೆ ಎರಡು ಕೈಗಳು ಶುಚಿ ಮಾಡುತ್ತವೆ. ಹೊಲದಲ್ಲಿ ಸಿರಿಧಾನ್ಯಗಳಾದ ಆರ್ಕ, ನವಣೆ ಮುಂತಾದವನ್ನು ಬೆಳೆಯುತ್ತಾರೆ. ಗ್ರಾಮೀಣ ವೃತ್ತಿಗಳು ನೂರಾರಿದ್ದವು. ಕುಂಬಾರ, ಕಮ್ಮಾರ, ಚಮ್ಮಾರ, ತೋಟಿ, ತಳವಾರ, ಸಾರುವಯ್ಯ ಮುಂತಾದವರೆಲ್ಲರ ಕಸುಬುಗಳು, ಮೂಲ ಸಂಸ್ಕೃತಿ ಯಿಂದ ಮರೆಯಾಗುತ್ತಿವೆ. ದೇಶಿಜ್ಞಾನ ಪದ್ಧತಿ ಮರೆಯಾಗುತ್ತಿದೆ. ರೈತ ಕೃಷಿಯನ್ನೇ ನಂಬಿದವನು ಹೊಸದನ್ನ ಕಲಿಯುವುದಿಲ್ಲ, ಹಳೆಯದನ್ನು ಬಿಡುವುದಿಲ್ಲ ಎಂಬಂತಾಗಿದೆ. 'ನಮ್ಮಂಗೆ ನೀವಾಗ್ಬೇಡಿ' ಎಂದು ರೈತರು ತಮ್ಮ ಮಕ್ಕಳಿಗೆ ಹೇಳುತ್ತಾ, ಅಲ್ಪಸ್ವಲ್ಪ ಓದಿದ ಯುವಕ ಯುವತಿಯರು ಉದ್ಯೋಗಕ್ಕಾಗಿ ಬೆಂಗಳೂರಿಗೆ ಹೋಗುತ್ತಿದ್ದಾರೆ. ನಮ್ಮೆಲ್ಲರ ಬೇರುಗಳು ಗ್ರಾಮಮೂಲವೇ ಆಗಿರುವುದರಿಂದ ನಮ್ಮ ಸಂಸ್ಕೃತಿ ಉಳಿದು ಬರಬೇಕಾದರೆ ಪ್ರಾಮಾಣಿಕ ದುಡಿಮೆ, ಶ್ರದ್ಧೆ, ಜೊತೆಗೆ ಸ್ವಸಾಮರ್ಥ್ಯವಿರಬೇಕು. ವಿದ್ಯಾವಂತರಾದವರು ಮರಳಿ ತಮ್ಮ ತಮ್ಮ ಊರುಗಳಿಗೆ ಬಂದು ಕೃಷಿ ಕಾಯಕದಲ್ಲಿ ತೊಡಗಿ, ಮರಗಿಡಗಳನ್ನು ನೆಟ್ಟು, ಕೃಷಿಹೊಂಡಗಳನ್ನು ನಿರ್ಮಿಸಿ ಹಸಿರು ಸಮೃದ್ಧಿಯ ಬೇಸಾಯಮಾಡಿ ಗಾಂಧೀಜಿಯ ಗ್ರಾಮೀಣ ಅಭಿವೃದ್ಧಿಯ ಕನಸನ್ನು ನನಸು ಮಾಡುತ್ತ ಹೆಜ್ಜೆ ಹಾಕಬೇಕೆಂಬುದು ಲೇಖಕರ ಮಹದಾಸೆ .ಅದಕ್ಕೆ ಅವರೇ ಮಾದರಿ.


'ಸುವರ್ಣಮುಖಿ'ಯಲ್ಲಿ ನೀರು ಮತ್ತು ಮಣ್ಣಿನ ಸಂರಕ್ಷಣೆಯಲ್ಲದೆ, ಈ ನದಿ ಹರಿವ ಕಡೆಯಲ್ಲೆಲ್ಲಾ ಜೀವ ಅರಳಿಸುವ ಶಕ್ತಿ ಇದೆ.  ಸಿದ್ದಗಂಗಯ್ಯ ರವರು ಒಂದು ಹೋಬಳಿಯ ಸಮಗ್ರ ಪ್ರವಾಸ ಕಥನ ಓದಿದ ನನಗೆ ಇವರು ತುಮಕೂರು ಜಿಲ್ಲೆಯ ೧೦ ತಾಲೂಕಿನ ಎಲ್ಲಾ ಹೋಬಳಿಯ ಪ್ರವಾಸ ಕಥನ ಬರೆದರೆ ಅದು ಮುಂದಿನ ಪೀಳಿಗೆಗೆ ನಮ್ಮ ಸಾಂಸ್ಕೃತಿಕ ಮತ್ತು ಪ್ರಾಕೃತಿಕ ಪರಂಪರೆಯನ್ನು ಚಿತ್ರಿಸುವ ಕೆಲಸ ಮಾಡಿದಂತಾಗುತ್ತದೆ. ಜೊತೆಗೆ ಒಂದು ಉತ್ತಮ ಆಕರ ಗ್ರಂಥ ನೀಡಿದಂತಾಗುತ್ತದೆ.


ಪುಸ್ತಕದ ಹೆಸರು: ಸುವರ್ಣಮುಖಿ


ಲೇಖಕರು: ಡಾ. ಸಿದ್ದಗಂಗಯ್ಯ ಹೊಲತಾಳು


ಪ್ರಕಾಶಕರು: ಸ್ಟೂಡೆಂಟ್ ಬುಕ್ ಕಂಪನಿ.ತುಮಕೂರು

ಬೆಲೆ: 400. ₹


ಸಿಹಿಜೀವಿ

ಸಿ ಜಿ ವೆಂಕಟೇಶ್ವರ

ತುಮಕೂರು.


01 ಮಾರ್ಚ್ 2022

ಬಾಲ್ಯದ ನಂಬಿಕೆಗಳು


 


ಬಾಲ್ಯದ ನಂಬಿಕೆಗಳು 


ಬಾಲ್ಯದಲ್ಲಿ ನಾವು ಆಡಿದ ಆಟಗಳು ಕೀಟಲೆಗಳು ಒಂದಾ ಎರಡಾ ಕೆಲವು ಮುಗ್ದ ನಂಬಿಕೆಗಳು ಸಹ ನಮ್ಮನ್ನು ಆ ತರಹದ ಆಟಗಳಿಗೆ ಪ್ರೇರಣೆ ನೀಡುತ್ತಿದ್ದವು .

ಅಂತಹ ನಂಬಿಕೆಗಳಲ್ಲಿ ಒಂದು ದೊಣ್ಣೆ ಕ್ಯಾತ ಹೊಡೆದು ಅದರ ಬಾಯಲ್ಲಿ ನಾಣ್ಯ ಇಟ್ಟು ನಾವು ಹಣ ಹುಡುಕಲು ಹೊರಟರೆ ಅಪಾರ ಪ್ರಮಾಣದ ಹಣ ಲಭಿಸುತ್ತದೆ ಎಂಬ ನಂಬಿಕೆ.ಒಮ್ಮೆ ಬೇಲಿ ಸಾಲು ಅಲೆದು ಹುಡುಕಿ ಕಡೆಗೂ ಒಂದು ದೊಣ್ಣೇಕ್ಯಾತ ಹೊಡೆದು ಅದರ ಬಾಯಲ್ಲಿ ಐದು ಪೈಸೆಯ ನಾಣ್ಯ ಇಟ್ಟು ಉತ್ತರ ದಿಕ್ಕಿನಲ್ಲಿ ಹಣ ಹುಡುಕಲು ನಡೆದೆವು ಕಾಕತಾಳೀಯ ಎಂಬಂತೆ ಚಂದ್ರಯ್ಯನವರ ಅಂಗಡಿಗೆ ಹತ್ತು ಹೆಜ್ಜೆ ದೂರದಲ್ಲಿ ಒಂದು ರೂಪಾಯಿ ಸಿಕ್ಕೇ ಬಿಟ್ಟಿತು. ನಮ್ಮ ಸಂತಸಕ್ಕೆ ಪಾರವೇ ಇರಲಿಲ್ಲ.ಎಲ್ಲಾ ಗೆಳೆಯರು ಚಂದ್ರಯ್ಯನವರ ಅಂಗಡಿಗೆ ಹೋಗಿ ಬೋಟಿ ಮತ್ತು ಮಂಡಕ್ಕಿ ಉಂಡೆ ತಿಂದು ಮಜಾ ಮಾಡಿದೆವು .ಮುಂದಿನ ಭಾನುವಾರದ ದೊಣ್ಣೇಕ್ಯಾತಕ್ಕೆ ಕಾದೆವು ಆದರೆ ಅಂದು ಎಷ್ಟು ಹುಡುಕಿದರೂ ಹಣದ ಸುಳಿವಿರಲಿಲ್ಲ.ಮೊನ್ನೆ ಊರಿಗೆ ಹೋದಾಗ ಆನಂದ ಸಿಕ್ಕಾಗ ಇದೆಲ್ಲಾ ನೆನದು ನಕ್ಕೆವು.

ಇದರ ಜೊತೆಯಲ್ಲಿ ಬಾಲ್ಯದಲ್ಲಿ ಇನ್ನೂ ವಿಚಿತ್ರ ನಂಬಿಕೆಗಳು ಇದ್ದವು .ಹುಣಸೆ ಬೀಜ ತಿಂದರೆ ಹೊಟ್ಟೆಯಲ್ಲಿ ಮರ ಬೆಳೆಯುತ್ತೆ, ನವಿಲು ಗರಿ ಪುಸ್ತಕದಲ್ಲಿ ಮರಿ ಹಾಕುತ್ತೆ, ಬೆಳೆಯುವ ಸಸ್ಯದ ಚಿಗುರಿಗೆ ಉಗುರು ತೋರಿಸಿದರೆ ಸುಟ್ಟು ಹೋಗುತ್ತದೆ, ಉದುರಿದ ಹಲ್ಲನ್ನು ಬೇರೆಯವರು ಕಾಲಲ್ಲಿ ತುಳಿದರೆ ಹಲ್ಲು ಹುಟ್ಟಲ್ಲ, ಆಕಾಶದಲ್ಲಿ ನಕ್ಷತ್ರಗಳ ಬಿದ್ದರೆ ಆ ಕಡೆ ನಮ್ಮ ಬಂಧುಗಳ ಮರಣ ಆಗುತ್ತದೆ. ಹೀಗೆ ನಂಬಿಕೆ, ಮೂಢನಂಬಿಕೆ  ನಮ್ಮ ಬಾಲ್ಯದಲ್ಲಿ ಹಾಸುಹೊಕ್ಕಾಗಿ ಹೋಗಿದ್ದವು ಅವನ್ನು ನೆನದರೆ ನಗು ಬರುತ್ತದೆ.



ಸಿಹಿಜೀವಿ

ಸಿ ಜಿ ವೆಂಕಟೇಶ್ವರ


ಸ್ವರ್ಗ ನಿಸರ್ಗ .ಪುಸ್ತಕ ವಿಮರ್ಶೆ .


 


ಸ್ವರ್ಗ ನಿಸರ್ಗ . ವಿಮರ್ಶೆ.



ನಿಸರ್ಗದ ಚೆಲುವನ್ನು ವರ್ಣಿಸುವುದೇ ನನ್ನ ಕಾಯಕವೆಂದು ಪ್ರತಿದಿನವೂ ಜಪದಂತೆ ರೂಢಿಸಿಕೊಂಡಿರುವ ನೇಸರ ದಿನೇಶ್ ರವರ ಚೊಚ್ಚಲ ಕೃತಿ ಸ್ವರ್ಗ ನಿಸರ್ಗ ಓದುಗರ ಮನಸೆಳೆಯುತ್ತದೆ .ಪ್ರಕೃತಿ ಪ್ರಿಯರಿಗೆ ಇಲ್ಲಿನ ಕವಿತೆಗಳು ಬಹಳ ಇಷ್ಟವಾಗುತ್ತವೆ.ಬಹುತೇಕ ಗೀತೆಗಳು ಗೇಯತೆ ಹೊಂದಿರುವುದರಿಂದ ಓದುಗರು ಹಾಡಿನ ರೂಪದಲ್ಲಿ ಗುನುಗಿಕೊಳ್ಳುವರು.


ಹಾಸನದ ಕಾರ್ಯಕ್ರಮದಲ್ಲಿ ಪ್ರಾತಿನಿಧಿಕ ಚೊಚ್ಚಲ ಕವನ ಸಂಕಲನ ಬಿಡುಗಡೆ ಸಮಾರಂಭದಲ್ಲಿ ಪರಿಚಿತವಾದ ಸಹೃದಯ ದಿನೇಶ್ ರವರು ಸರಳ ಸಜ್ಜನ ಪ್ರತಿಭೆ .  ನಮ್ಮ ಸ್ನೇಹ. ಈಗಲೂ ಮುಂದುವರೆದಿದೆ. ಈ ಪುಸ್ತಕದಲ್ಲಿ ನನ್ನ ಹೆಸರನ್ನು ಸಹ ನಮೂದು ಮಾಡಿರುವುದು ಅವರ ದೊಡ್ಡತನ .


ದಿನೇಶ್, ಎನ್, ಮಡಿವಾಳ ಅಮ್ಮಿನಳ್ಳಿರವರು ಉತ್ತರಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಅಮಿನಳ್ಳಿಯವರು  .

ಓದಿದ್ದು ಹತ್ತನೆಯ ತರಗತಿಯಾದರೂ ಕವನ, ಕಥೆ, ಲೇಖನ, ಗಝಲ್, ಹನಿಗವನ, ನ್ಯಾನೊ ಕಥೆ, ಚುಟುಕು, ರುಬಾಯಿ, ಹಾಯ್ಕು, ಟಂಕಾ, ಮತ್ತು ಭಾವಗೀತೆಗಳ ರಚನೆಯಲ್ಲಿ ಅವರ ಪ್ರಬುದ್ಧತೆ ನೋಡಿದರೆ ಯಾವ ವಿದ್ವಾಂಸರಿಗೂ ಕಮ್ಮಿಯಿಲ್ಲ ಎನಿಸುತ್ತದೆ.

ಇವರ ಸಾಹಿತ್ಯ ಕೃಷಿ ಗುರ್ತಿಸಿ

ಕನ್ನಡ ಕವಿವಾಣಿ ಮಾಸಪತ್ರಿಕೆ ಚಿಂತಾಮಣಿ, ಚಿಕ್ಕಬಳ್ಳಾಪುರ ಜಿಲ್ಲೆ ಇವರಿಂದ ಸಾಹಿತ್ಯ ಮಂದಾರ ಪ್ರಶಸ್ತಿ. 

ನವಪರ್ವ ಫೌಂಡೇಶನ್ (ರಿ.) ಬೆಂಗಳೂರು ಇವರಿಂದ ಜನಪದ ಕಾವ್ಯ ಪುರಸ್ಕಾರ 

 ಕನ್ನಡ ಸಾಹಿತ್ಯ ಪರಿಷತ್ತು ತಾಲೂಕು ಘಟಕ ಚಿಂತಾಮಣಿ ಇವರಿಂದ ಕರುನಾಡು ಚುಟುಕು ಶ್ರೀ ಪ್ರಶಸ್ತಿ 

ಉತ್ತಿಷ್ಠ ಚಾರಿಟೆಬಲ್ ಸೇವಾ ಟ್ರಸ್ಟ್ (ರಿ.) ಬೆಂಗಳೂರು ಇವರಿಂದ ಉತ್ತಿಷ್ಟ

ಕನ್ನಡ ಕವನ ಪ್ರಶಸ್ತಿ. ನೀಡಿ ಗೌರವಿಸಿವೆ .

ಇವರ ರಚನೆಗಳು 

ನಿರಂತರ, ನಿಮ್ಮೆಲ್ಲರ ಮಾನಸ, ಕರ್ಮವೀರ, ತರಂಗ, ಸಂಪದ ಸಾಲು, ಮಾಸಪತ್ರಿಕೆಗಳು, ವಿಜಯವಾಣಿ, ಸಂಯುಕ್ತ ಕರ್ನಾಟಕ, ಜನಮಾಧ್ಯಮ, ಲೋಕಧ್ವನಿ, ಪ್ರಜಾಪ್ರಗತಿ, ಜನಮಿಡಿತ, ಬದಲಾವಣೆ, ಹೀಗೆ ಹಲವು ಮಾಸಪತ್ರಿಕೆಗಳು ಮತ್ತು ದಿನಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಮೂಡಬಿದಿರೆಯ "ಕಾಲ" ಎಂಬ ದೂರದರ್ಶನ ಚಾನೆಲ್ ಹಾಗೂ ಆಕಾಶವಾಣಿ ಕೇಂದ್ರ ಮಂಗಳೂರು ಮತ್ತು ಕಾರವಾರ ಇಲ್ಲೆಲ್ಲ ಸಾಹಿತ್ಯದ ಕಂಪು ಹರಡಿದೆ.


ಈ ಸಂಕಲನಕ್ಕೆ ಮುನ್ನುಡಿ ಬರೆದ ಕವಯತ್ರಿ ಮತ್ತು ವಿಮರ್ಶಕರಾದ ವಾಣಿ ಭಂಡಾರಿ ರವರ ಮಾತುಗಳಲ್ಲಿ ಹೇಳುವುದಾದರೆ 

ರವಿಯು ನಿತ್ಯವೂ ಬೆಳಗುತಿರಲು ಪ್ರಕೃತಿಯ ಒಡಲಾಳದಲ್ಲಿ ಇರುವ ಲಕ್ಷಾಂತರ ಜೀವಜಂತುಗಳಿಗೆ ಭಾಸ್ಕರನ ಹೊಂಗಿರಣಗಳಿಂದಾಗಿ ಬಾಡಿದ ಮೊಗದಲ್ಲಿ ಹಿಡಿಯಷ್ಟಾದರೂ ನಗೆಮೊಗ್ಗು ಚೆಲ್ಲಲಿ ಎಂಬ "ನಿಸರ್ಗಕವಿ" ಗಳ ಮಹೋನ್ನತವಾದ ಅಶಯವು ತಮ್ಮ ಬೆಳಗಿನ ಕವಿತೆಗಳ ಮೂಲಕ ಸಹೃದಯರನ್ನು ತಲುಪುತ್ತಾ ಕವಿ ಮನಗಳಲ್ಲಿ ಸಂಭ್ರಮವನ್ನುಂಟು ಮಾಡುತ್ತದೆ.

ಹೀಗೆ ದಿನ ದಿನವೂ ಬೆಳಗಿನ ನವಿರು ಕಿರಣಕ್ಕೊಂದು ಹೊಸ ಕವಿತೆ ಎಂಬಂತೆ ನವನೂತನತೆಯಲ್ಲಿ ನಿಸರ್ಗವನ್ನು ಆಸ್ವಾದಿಸುತ್ತಾ, ರವಿಯನ್ನು ಧ್ಯಾನಿಸುತ್ತಾ, ಆರಾಧಿಸುತ್ತಾ, ಮೌನದೊಳಗೆ ಧ್ಯಾನಿಯಾಗಿ ಸಹೃದಯ ರಸಿಕರನ್ನು ರಂಜಿಸುವ ಕವಿಹೃದಯವು ನಿಸರ್ಗ ಕವಿಗಳಾಗಿ ಹೊರಹೊಮ್ಮಿರುವುದು ಅವರ ನೈಜ ಕಾವ್ಯ ಸಂಪತ್ತಿನ ದ್ಯೋತಕವೆನ್ನಬಹುದು. ಹಚ್ಚ ಹಸಿರಿನ ಬೆಚ್ಚನೆಯ ಸಿರಿ-ಝರಿ, ಕೆರೆ-ತೊರೆ. ಹಳ್ಳ-ಕೊಳ್ಳ, ಬನ-ವನಗಳ ನಡುವೆ ಕಾವ್ಯಕುಸುಮವಾಗಿ ಕಂಗೊಳಪ ದಿನೇಶ್ ಅವರು ನಾ ಕಂಡಂತೆ ಈಗಾಗಲೇ ಬೆಳಗಿನ ಕುರಿತಾಗಿಯೆ ಬರೆದಿರುವ ಕವಿತೆಗಳ ಸಂಖ್ಯೆ ಒಂದು ಸಾವಿರಕ್ಕಿಂತಲೂ ಮಿಗಿಲಾಗಿದೆ ಎಂಬುದು ಹೆಮ್ಮೆಯ ವಿಷಯ. 

ಅವರ ನಿಸರ್ಗ ವರ್ಣನೆ ಯ ಕೆಲ ಸಾಲುಗಳು ಹೀಗಿವೆ..


ಹಾಡ್ಯಾವೊ ಬೆಳ್ಳಿ ಕಿರಣ ಓಡೋಡಿ ಬಂದು ನಿಂದು..

 ಹೊಳ್ಳೆತೆ ಮೊಗವು ಚೆಂದ ನಗಿಗಡಲು ಉಕ್ಕಿ ಮೆರ್ದು..


ಹೊಳೆವ ಬೆಳ್ಳಿ ತಾರೆ ಅಲ್ಲಿ ಬಾನ ಮಡಿಲು ಚೆಂದ.. 

ನಲಿವ ಬಳ್ಳಿ ಬಳುಕಿ ಇಲ್ಲ. ಇಳೆಯ ಗುಡಿಗೆ ಅಂದ..


ಹೀಗೆ ಪ್ರತಿ ಪದ್ಯ ಓದುವಾಗ ನಿಸರ್ಗ ನಮ್ಮ ಕಣ್ಣ ಮುಂದೆ ನಿಲ್ಲುತ್ತದೆ.


ಬೆನ್ನುಡಿ ಬರೆದ ದತ್ತಗುರು ಕಂಠಿ ರವರ ಮಾತಿನಂತೆ  

ನಮ್ಮ ಸಾರಸ್ವತ ಲೋಕದಲ್ಲಿ ಮಿಂಚುತ್ತಿರುವ ಯುವ ಪ್ರತಿಭೆ ದಿನೇಶ.ಎನ್.ಅಮ್ಮಿನಳ್ಳಿ  ಯವರು, ಮೃದು ಸ್ವಭಾವ, ಮಿತ ಭಾಷಿ, ಅವರ ಪ್ರಥಮ ಕವನ ಸಂಕಲನ 'ಸ್ವರ್ಗ ನಿಸರ್ಗ ದಲ್ಲಿ ಸೌಮ್ಯ-ಸಂಸ್ಕಾರಯುತ ಕಾವ್ಯಧಾರೆ ಸ್ಪುರಣಗೊಂಡಿದೆ. ಸಂಪದ್ಭರಿತ ಬೆಳಗಿನ ಮಡಿಲ ಬೆಡಗಿನ ಹಾಡುಗಳು ಅನಾವರಣಗೊಂಡಿವೆ. ಬಡತನದ ಕಾರಣ ಶಿಕ್ಷಣ ಕ್ಷೇತ್ರದಲ್ಲಿ ಇಂದಿನ ಕಾಲಕ್ಕನುಗುಣವಾಗಿ ಕಲಿತದ್ದು ಕಡಿಮೆಯೆನಿಸಿದರೂ ಸಾಹಿತ್ಯ ಕ್ಷೇತ್ರದಲ್ಲಿ ಅಗಾಧ ಪಾಂಡಿತ್ಯ, ಶಬ್ಧಗಳನ್ನು ದುಡಿಸಿಕೊಳ್ಳುವ ಕೌಶಲ್ಯತೆ ದಿನೇಶರಿಗಿದೆ. ನನಗೆ ತಿಳಿದ ಹಾಗೆ ದಿನೇಶರ  ಕಾವ್ಯ ಸಂಪತ್ತು ಈಗಾಗಲೇ ನೂರಾರು ಕವಿಗೋಷ್ಠಿಗಳಲ್ಲಿ  ಆಕಾಶವಾಣಿಯಲ್ಲ, ದೂರದರ್ಶನದಲ್ಲಿ  ಸ್ಥಳೀಯ ಮತ್ತು ರಾಜ್ಯಮಟ್ಟದ ಪತ್ರಿಕೆಗಳಲ್ಲಿ ಬೆಳಕು ಕಂಡಿವೆ. ಒಮ್ಮೆಲೆ ಹತ್ತು ಸಂಕಲನಕ್ಕಾಗುವಷ್ಟು ಕಾವ್ಯ ಸರಕು ಅವರಲ್ಲಿದ್ದರೂ ಸದ್ಯ ಒಂದಕ್ಕೆ ಮಾತ್ರ ಬಿಡುಗಡೆಯಾಗುವ ಸುಯೋಗ. ಸಾಹಿತ್ಯದ ಬಹುತೇಕ ಎಲ್ಲ ಪ್ರಾಕಾರಗಳಲ್ಲಿ ಕೈಯಾಡಿಸಿದರೂ ಕಾವ್ಯ ರಚನೆಯೆಂದರೆ, ಅಪರಿಮಿತ ಆಸಕ್ತಿ ಮತ್ತು ಸಾಹಿತ್ಯ ಭಕ್ತಿ, ಇಂದಿನ ಯುವ ಬರಹಗಾರರಿಗೆಲ್ಲ ಮಾದರಿಯೆನಿಸುವ ಅವರ ಕೈಂಕರ್ಯ ಅಮೋಘ ಮತ್ತು ಅದ್ಭುತ. 

ನೇಸರ ದಿನೇಶ್ ರವರ ಈ ಕೃತಿ ಕಂಡು ಮೊದಲು ಸಂತಸಗೊಂಡವನು‌ ನಾನು  .ಇವರ ಪುಸ್ತಕವು ಕನ್ನಡ ಪುಸ್ತಕ ಪ್ರಾಧಿಕಾರ ದ ಸಹಾಧನ ಪಡೆದ ಕೃತಿಯಾಗಿದೆ.ಕನ್ನಡಿಗರು ಇವರ ಪುಸ್ತಕ ಕೊಂಡು ಓದಬೇಕಿದೆ.ಈ ವರ್ಷ ಅವರ ಹಲವು ಕೃತಿಗಳು ಬೆಳಕು ಕಾಣಲಿ ಎಂದು ಹಾರೈಸುವೆ.


ಪುಸ್ತಕದ ಹೆಸರು: ಸ್ವರ್ಗ ನಿಸರ್ಗ

ಕವಿ:ದಿನೇಶ್ ಎನ್ ಮಡಿವಾಳ

ಪ್ರಕಾಶನ: ದಿನಾ ಪ್ರಕಾಶನ .ಅಮ್ಮಿಹಳ್ಳಿ

ಬೆಲೆ: ೧೦೦


ಸಿಹಿಜೀವಿ

ಸಿ ಜಿ ವೆಂಕಟೇಶ್ವರ

ತುಮಕೂರು

9900925529


ಅರ್ಧ ಸತ್ಯ .ಪುಸ್ತಕ ವಿಮರ್ಶೆ.


 



ಅರ್ಧ ಸತ್ಯ . ವಿಮರ್ಶೆ


ಮಾಕೋನಹಳ್ಳಿ ವಿನಯ್ ಮಾಧವ್ ರವರ ಅರ್ಧ ಸತ್ಯ ಒಂದು ಉತ್ತಮ ಕಥಾ ಸಂಕಲನ .ಇವರ ಕಥಾ ಸಂಕಲನ ಓದುತ್ತಾ ಅಪರಾದ ಜಗತ್ತಿನ ಪೂರ್ಣ ಸತ್ಯ ನಮಗೆ ಗೋಚರವಾಗುತ್ತದೆ .ಕೆಲ ಗಣ್ಯ ವ್ಯಕ್ತಿಗಳ ಮತ್ತು ಸ್ವಘೋಷಿತ ಮಾಹಾನ್ ನಾಯಕರ ಗೋಸುಂಬೆ ತನ ಬೆಳಕಿಗೆ ಬರುತ್ತದೆ.


ವಿನಯ್ ಮಾಧವ್ ರವರು

ಹುಟ್ಟಿದ್ದು, ಕೊಡಗು ಜಿಲ್ಲೆಯ ಸುಂಟಿಕೊಪ್ಪದಲ್ಲಿ.ಮೈಸೂರು, ಕಾರ್ಕಳ, ಉಡುಪಿ ಮತ್ತು ಶಿವಮೊಗ್ಗಗಳಲ್ಲಿ ಶಾಲಾ, ಕಾಲೇಜುಗಳಿಗೆ ಹೋಗಿ,ಓದಿದರೂ 

ಪದವಿ ವಂಚಿತರಾದರು.1989ರಲ್ಲೇ ಬೆಂಗಳೂರಿಗೆ ಬಂದರು.

 1994ರವರೆಗೆ ಪತ್ರಿಕೋದ್ಯಮದ ಬಗ್ಗೆ ಯಾವುದೇ ಜ್ಞಾನವಿಲ್ಲದವರು. 1996ರಲ್ಲಿ ಇಂಡಿಯನ್ ಎಕ್ಸ್ಪ್ರೆಸ್ ಪತ್ರಿಕೆಯಲ್ಲಿ ಇಂಗ್ಲಿಷ್ ಪತ್ರಕರ್ತನಾಗಿ ಕೆಲಸ ಆರಂಭಿಸಿದರು . ಅವರ ಪತ್ರಕರ್ತರ ಜೀವನದ  ಅನುಭವದ ಮೂಸೆಯಲ್ಲಿ ಅರ್ಧ ಸತ್ಯ ಪುಸ್ತಕದ ಬಹುತೇಕ ಕಥೆಗಳು ಮೂಡಿ ಬಂದಿವೆ .

ಸೆಲೆಬ್ರಿಟಿ ಕ್ರೈಂ ರಿಪೋರ್ಟರ್. ಆದವರು  ಯಾವ ಸುದ್ದಿಯ ಹಿಂದೆ ಬೇಕಾದರೂ ಹೋಗಬಹುದು .ಯಾವ ಅಪರಾಧ ಸುದ್ದಿಯೂ ಅವರ  ಕಣ್ಣಪ್ಪಿಸಿ ಹೋಗೋಕೆ ಸಾಧ್ಯನೇ ಇಲ್ಲ. ವೇಶ್ಯಾವಾಟಿಕೆ, ಡ್ರಗ್ಸ್, ಕೊಲೆ, ಅಂಡರ್ವರ್ಲ್ಡ್ ಯಾವುದಾದರೂ ಸರಿ. ಯಾವ ಪೋಲಿಸ್ ಅಧಿಕಾರಿಯ ಹತ್ತಿರ ಬೇಕಾದರೂ ಘಂಟೆಗಟ್ಟಲೆ ಕುಳಿತು ಮಾತನಾಡಿ, ತಮಗೆ ಬೇಕಾದ ಸುದ್ದಿ ಹೊರ ತರಬಲ್ಲರು .ಆ ಹಿನ್ನೆಲೆಯಲ್ಲಿ ಈ ಕಥಾಸಂಕಲನ  ಗಮನ ಸೆಳೆಯುತ್ತದೆ.


 ಅರ್ಧ ಸತ್ಯ ಕಥೆಯ ಇಡೀ ಕಥಾ ಸಂಕಲನದ ದೊಡ್ಡ ಕಥೆ ಮತ್ತು ಕುತೂಹಲಕರ ತಿರುವುಗಳನ್ನು ಹೊಂದಿದ ಆಸಕ್ತಿ ಕೆರಳಿಸುವ ಕಥೆಯಾಗಿದೆ. ಈ ಕಥೆಯನ್ನು ಓದುವಾಗ ಒರ್ವ ವಿವಾದಿತ ಸ್ವಾಮೀಜಿಯವರು ನಮ್ಮ ಕಣ್ಣ ಮುಂದೆ ಬಂದರೆ ಅದು ಮಾಧ್ಯಮಗಳು ಆ ಕಾಲದಲ್ಲಿ ನೀಡಿದ ಬಹುವಾದ ಪ್ರಚಾರವೂ ಒಂದು ಕಾರಣ. ಇನ್ನುಳಿದ ಕಥೆಗಳಾದ ಪ್ರಮೋಶನ್,ಪರೀಕ್ಷೆ, ಕನಿಷ್ಠ ಬಿಲ್ಲೆ,ಅತ್ಯಾಚಾರದ ಸುಳಿ,ನಕ್ಷತ್ರಗಳು, ಮುಂತಾದವು ಉತ್ತಮ ನಿರೂಪಣೆ ಮತ್ತು ತಂತ್ರಗಳ ಮೂಲಕ ಗಮನ ಸೆಳೆಯುತ್ತವೆ.



ಪುಸ್ತಕದ ಹೆಸರು: ಅರ್ಧ ಸತ್ಯ 

  ಲೇಖಕರು:ಮಾಕೋನಹಳ್ಳಿ ವಿನಯ್ ಮಾಧವ್

 ಬೆಲೆ:150.00

ಪ್ರಕಾಶಕರು : ಸಾವನ್ನ ಪ್ರಕಾಶನ