27 ಏಪ್ರಿಲ್ 2022

ಆಧುನಿಕ ಸೊಸೆ.


 



ಆಧುನಿಕ ಸೊಸೆ.


ಹೊಸ ಸಂಸಾರ ಹಾಲು ಉಕ್ಕಿದಂತೆ ಉಕ್ಕಿ ಹರಿಯಬೇಕು ಸೊಸೆಗೆ ಅತ್ತೆ ಸಲಹೆ ನೀಡಿದರು.  ದಿನಕ್ಕೆರಡು ಲೀಟರ್ ಹಾಲು ಉಕ್ಕಿಸುತ್ತಾ  ಉಕ್ಕಿ ಹರಿದ ಮೇಲೆ ಉಳಿದ ಹಾಲಿನಲ್ಲಿ ಟೀ ಮಾಡಿಕೊಂಡು ಕುಡಿದು ಎರಡು ತಿಂಗಳಿಗೇ ಸ್ಟವ್ ಕಮರಿ  ವಾಸನೆ ಹೊಡೆದದ್ದಕ್ಕೆ ಹೊಸ ಸ್ಟವ್ ಖರೀದಿಸಿದ್ದಾಳೆ.ಏಕೆಂದರೆ ಇವಳು ಆಧುನಿಕ ಸೊಸೆ.


ಹೊಸ  ಕೆಲಸ ಕಲಿತುಕೋ ಎಂಬ ಅತ್ತೆಯ ಮಾತಿಗೆ ಬೆಲೆ ಕೊಟ್ಟು ನಿತ್ಯ 5 ಗಂಟೆಗಳು ಧಾರಾವಾಹಿ ನೋಡುತ್ತಾ ಅದರಲ್ಲಿ ಬರುವ ಸೊಸೆಯ ತರಹ ಕೆಲಸ ಮಾಡಲು ಕಲಿಯುತ್ತಿದ್ದಾಳೆ.ಇವಳೇ ಹೊಸ ಸೊಸೆ.


ಅತ್ತೆ ಅವರ  ಮಗನ ಆರೋಗ್ಯದ ಬಗ್ಗೆ ಎಚ್ಚರ ವಹಿಸಲು ಸೊಸೆಗೆ ಹೇಳಿದರು  .ಆರೋಗ್ಯದ ದೃಷ್ಟಿಯಿಂದ ನಿತ್ಯ ಒಂದು ಸಲ ಮಾತ್ರ ಗಂಡನಿಗೆ ಊಟ  ನೀಡುತ್ತಿದ್ದಾಳೆ.ಇವಳೇ ಅಧುನಿಕ ಸೊಸೆ.


ಗಂಡನಿಗೆ ಕಷ್ಟ ಕೊಡಬಾರದು ಎಂಬ ಸಮಾಜದ ಮಾತು ನೆನಪಾಗಿ ಬೆಳಗ್ಗೆ ಮಾತ್ರ ಅಡುಗೆ ಗಂಡನಿಂದ  ಮಾಡಿಸುತ್ತಿದ್ದಾಳೆ ಕಾರಣ ಇವಳು ಆಧುನಿಕ ಸೊಸೆ.


ಉಳಿತಾಯ ಮಾಡು ಎಂಬ ಮಾವನವರ  ಮಾತಿನಿಂದ ವಾರಕ್ಕೆ ಒಂದು ಹೊಸ ಡ್ರೆಸ್ ಮಾತ್ರ ಕೊಳ್ಳುತ್ತಿದ್ದಾಳೆ.  ಎರಡು ಸಿನಿಮಾಗಳನ್ನು ಮಾತ್ರ ನೋಡುತ್ತಿದ್ದಾಳೆ. ಅದಕ್ಕೆ ಅವಳಿಗೆ ಹೇಳುವುದು ಅಧುನಿಕ ಸೊಸೆ.


ಪತಿಯೇ ಪ್ರತ್ಯಕ್ಷ ದೇವರು ಎಂದು ಅವಳ ಅಮ್ಮ ಹೇಳಿದ್ದು ನೆನಪಾಗಿ,  ವೈಕುಂಠ ಏಕಾದಶಿಯಂದು ಪತಿಯ ಪೂಜೆ ಮಾಡಿ ಮುಖಕ್ಕೆ ಮಂಗಳಾರತಿ ಎತ್ತಿ,ಅವನ ಕಾಲುಗಳ ಮೇಲೆ ತೆಂಗಿನಕಾಯಿ ಹೊಡೆದಳು  ಪಾಪ ಕಾಲಿನ ಬೆರಳು ಜಜ್ಜಿಹೋಗಿ ರಕ್ತ ಬಂದು,ಕಟ್ಟನ್ನೂ ಕಟ್ಟಿದ್ದಾಳೆ  ಶೀಘ್ರದಲ್ಲೇ ಗುಣಮುಖವಾದರೆ 

ತಿರುಪತಿಗೆ ಬರುವೆ ಎಂದು ಹರಕೆ 

ಹೊತ್ತಿದ್ದಾಳೆ.ಇವಳೇ ಆಧುನಿಕ ಸೊಸೆ.


(ಇದು ಎಲ್ಲಾ ಆಧುನಿಕ ಸೊಸೆಯಂದಿರಿಗೆ ಅನ್ವಯವಾಗುವುದಿಲ್ಲ ಹಾಗೇನಾದರೂ ಆದರೆ ಅದು ಕಾಕಾತಾಳೀಯ ಅಷ್ಟೇ)


ಸಿಹಿಜೀವಿ

ಸಿ ಜಿ ವೆಂಕಟೇಶ್ವರ

25 ಏಪ್ರಿಲ್ 2022

ಏಕಗ್ರಾಹಿ. ಹನಿಗವನ.


 


ಏಕಗ್ರಾಹಿ.


ನೊಗ ಹೊತ್ತ ಬಸವನಿಗಿಂತ

ನಗಹೊತ್ತ ಬಸಣ್ಣಿ ಕಂಡರೆ 

ಅವಳು  ನೋಡುತ್ತಲೇ

ನಿಂತು ಬಿಡುವಳು 

ಮುಚ್ಚದಂತೆ ತೆರೆದ ಬಾಯಿ |

ಆಶ್ಚರ್ಯವೇನಿಲ್ಲ ಬಿಡಿ

ಪಾಪ ಅವಳು ನಗ ,ನಾಣ್ಯ

ಕಂಡರೆ ಆಗಿಬಿಡುವಳು ಏಕಗ್ರಾಹಿ||


ಸಿಹಿಜೀವಿ

ಸಿ ಜಿ ವೆಂಕಟೇಶ್ವರ


23 ಏಪ್ರಿಲ್ 2022

ನೀವು ನೀವಾಗಿ .ಶಿಶುಗೀತೆ


 *ನೀವು ನೀವಾಗಿ*

 ಶಿಶುಗೀತೆ


ಒಂದು  ಕಾಡಿನಲಿ ಕೋಳಿಯು

ಬೆಟ್ಟವು ಉಭಯ ಕುಶಲ

ಮಾತಾಡಿದವು .


ಕೋಳಿಯು ಬೆಟ್ಟಕೆ 

ಬೇಸರದಿ  ಹೇಳಿತು 

ನೀನು  ಎತ್ತರ ನಾನೇಕೆ

ಕುಳ್ಳ ಎಂದು ಕರುಬಿತು.


ಬೇಡ ನೀನು ನೀನಾಗಿರು

ಎಂಬ  ಬೆಟ್ಟದ ಸಲಹೆ 

ಕೋಳಿಗೆ ರುಚಿಸಲಿಲ್ಲ

ಕಾಳು ಕಡಿ‌ತಿಂದು 

ಬೆಟ್ಟದೆತ್ತಕೇರುವ ಪ್ರಯತ್ನ

ನಿಲ್ಲಿಸಲಿಲ್ಲ .


ಶಕ್ತಿ ಪಡೆದು ಹಂತ ಹಂತದಿ

ಮರವನೇರಿ ಬೆಟ್ಟದ ಸಮಕ್ಕೆ 

ಏರಲು ಎತ್ತರದ ಕೊಂಬೆ ತಲುಪಿತು .

ನಾನೂ ಎತ್ತರದಲ್ಲಿರುವೆ 

ಎಂದು ಸಂತಸದಿ ಬೀಗಿತು.


ಬೇಟೆಗಾರ ಎತ್ತರದಲ್ಲಿರುವ ಕೋಳಿ

ನೋಡಿ ಕೋವಿಯಿಂದ ಕೊಂದ 

ಬೆಟ್ಟ ಮರುಗಿ ಜಗಕೆ ಸಾರಿತು 

ನೀವು ನೀವಾಗಿ ಅದೇ ಆನಂದ .


ಸಿಹಿಜೀವಿ

*ಸಿ.ಜಿ.ವೆಂಕಟೇಶ್ವರ*

ತುಮಕೂರು





22 ಏಪ್ರಿಲ್ 2022

ಬಾಳೆ ಎಲೆ ಊಟ.


 



ಬಾಲ್ಯದಲ್ಲಿ ನಾವು ಊಟ ಮಾಡುವಾಗ ಮನೆಯಲ್ಲಿ ಮಾತ್ರ  ಗಂಗಳದಲ್ಲಿ ( ತಟ್ಟೆ) ಊಟ ಮಾಡುತ್ತಿದ್ದೆವು .ಹೊಲ ಮತ್ತು ತೋಟಗಳಿಗೆ ಹೋದರೆ .ಹೊಲದಲ್ಲಿ ಸಿಗುವ ಅಳ್ಳ ಎಲೆ(ಔಡಲ) ,ಮುತ್ತುಗದ ಎಲೆ, ಅಥವಾ ಬಾಳೆ ಎಲೆಗಳಲ್ಲೇ ನಮ್ಮ ಊಟ. ಬಾಡೂಟವಾದರೆ ಅಡಿಕೆ ಪಟ್ಟೆಯೇ ಆಗಬೇಕಿತ್ತು. ಈ ಮೇಲಿನ ಅಷ್ಟೂ ನೈಸರ್ಗಿಕ ಊಟದ ಪರಿಕರಗಳು ನಮ್ಮ ಪರಿಸರಕ್ಕೆ ಪೂರಕವಾಗಿ ಮಾಲಿನ್ಯ ರಹಿತವಾಗಿ ನಮ್ಮ ಜೀವನದಲ್ಲಿ ಹಾಸು ಹೊಕ್ಕಾಗಿದ್ದವು. 

ಈಗಲೂ ನಾವು ನಮ್ಮ ಹಳ್ಳಿಗೆ ಹೋದರೆ ಬಾಳೆ ಎಲೆಯ ಊಟವೇ ಆಗಬೇಕು. ನಮ್ಮ ಮಕ್ಕಳೂ ಸಹ ಬಾಳೆ ಎಲೆ ಊಟಕ್ಕೆ ಅಡಿಕ್ಟ್ ಆಗಿರುವರು. " ದೊಡ್ಡಪ್ಪ ತೋಟದಲ್ಲಿ ಬಾಳೆ ಎಲೆ ತೊಗೊಂಡ್ ಬಾ ಊಟಕ್ಕೆ " ಎಂದು ನನ್ನ ಅಣ್ಣನಿಗೆ  ಪ್ರೀತಿಯಿಂದಲೇ ಆರ್ಡರ್ ಮಾಡುತ್ತಾರೆ .

ನಮ್ಮಣ್ಣನೂ ಸಹ ನಾವೂ ಊರಲ್ಲಿ ಇರುವವರೆಗೂ ನಮಗೆ ಬಾಳೆ ಎಲೆಯ ಊಟಕ್ಕೆ ಸರ್ವ ತಯಾರಿ ಮಾಡಿರುತ್ತಾರೆ.


ಬಾಳೆಲೆಯ ಊಟ ಮಾಡಿದರೆ ಆಗುವ ಪ್ರಯೋಜನಗಳು ಒಂದೆರಡಲ್ಲ 

ಬಾಳೆ ಎಲೆಗಳಲ್ಲಿ ಇರುವ ಪಾಲಿಫಿನಾಲ್ಸ್ ಎಂಬ ಆಂಟಿ-ಆಕ್ಸಿಡೆಂಟ್‌ಗಳು, ದೇಹದಲ್ಲಿ ಇರುವ ಸ್ವತಂತ್ರ ರಾಡಿಕಲ್‌ಗಳಿಂದ ರಕ್ಷಿಸಲು ಸಹಾಯ ಮಾಡುತ್ತದೆ. ಇದರಲ್ಲಿರುವ ಪೋಷಕಾಂಶಗಳು ಆಹಾರ ಪದಾರ್ಥಗಳಲ್ಲಿ ಸುಲಭವಾಗಿ ಕಂಡುಬರುತ್ತವೆ. ಇದು ಬ್ಯಾಕ್ಟೀರಿಯಾ ವಿರೋಧಿ ಗುಣಗಳನ್ನು ಹೊಂದಿದ್ದು, ಇದು ಆಹಾರದಲ್ಲಿರುವ ಬ್ಯಾಕ್ಟೀರಿಯಾವನ್ನು ನಿವಾರಿಸಲು ಸಹಾಯ ಮಾಡುತ್ತದೆ. ಆ ಮೂಲಕ ಬಾಳೆ ಎಲೆ ಊಟ ಅನಾರೋಗ್ಯಕ್ಕೆ ಒಳಗಾಗುವ ಸಾಧ್ಯತೆಯನ್ನು ಕಡಿಮೆ ಮಾಡುತ್ತದೆ.

ಬಾಳೆ ಎಲೆಗಳು ಮೇಣದ ತೆಳುವಾದ ಪದರವನ್ನು ಹೊಂದಿದ್ದು, ಅದು ವಿಭಿನ್ನ ರುಚಿಯನ್ನು ಹೊಂದಿರುತ್ತದೆ. ಬಾಳೆ ಎಲೆಯ ಮೇಲೆ ಬಿಸಿ ಆಹಾರವನ್ನು ನೀಡಿದಾಗ, ಮೇಣ ಕರಗಿ ಆಹಾರದೊಂದಿಗೆ ಬೆರೆಯುತ್ತದೆ. ಇದು ಆಹಾರದ ರುಚಿಯನ್ನು ಮತ್ತಷ್ಟು ಹೆಚ್ಚಿಸುತ್ತದೆ.

ಇಂದಿನ ಕಾಲದಲ್ಲಿ ಪರಿಸರ ಮಾಲಿನ್ಯವು ಒಂದು ದೊಡ್ಡ ಸಮಸ್ಯೆಯಾಗಿದೆ. ಸಾಮಾನ್ಯವಾಗಿ ಪ್ಲಾಸ್ಟಿಕ್ ಅಥವಾ ಸ್ಟೈರೊಫೊಮ್ ಫಲಕಗಳನ್ನು ಪಾರ್ಟಿಯಲ್ಲಿ ಬಳಸಲಾಗುತ್ತದೆ. ತಿಂದ ನಂತರ ಈ ತಟ್ಟೆಗಳು ಕೊಳೆಯುವುದು ಕಷ್ಟ. ಬದಲಾಗಿ ನೀವು ಬಾಳೆ ಎಲೆಗಳನ್ನು ಬಳಸಬಹುದು. ಬಾಳೆ ಎಲೆಗಳಲ್ಲಿ ಹೆಚ್ಚು ಬಡಿಸಲು ಜಾಗ ಇರುತ್ತದೆ. ಇದರ ಹೊರತಾಗಿ, ಬಾಳೆ ಎಲೆಯನ್ನು ಸ್ವಚ್ಛಗೊಳಿಸಲು ಹೆಚ್ಚು ನೀರಿನ ಅಗತ್ಯವಿಲ್ಲ. ಇದು ಅತ್ಯಂತ ನೈರ್ಮಲ್ಯವಾಗಿದೆ.

ಬಾಳೆ ಎಲೆಗಳು ಯಾವುದೇ ರೀತಿಯ ರಾಸಾಯನಿಕವನ್ನು ಹೊಂದಿರುವುದಿಲ್ಲ. ಪ್ಲಾಸ್ಟಿಕ್ ತಟ್ಟೆಯಲ್ಲಿ ಆಹಾರವನ್ನು ಪೂರೈಸುವ ಮೂಲಕ, ಕರಗಿದ ಪ್ಲಾಸ್ಟಿಕ್‌ನ ಭಾಗವು ನಮ್ಮ ಹೊಟ್ಟೆಗೆ ಹೋಗಬಹುದು. ಅದು ಕ್ಯಾನ್ಸರ್ ಮತ್ತು ಇತರ ರೋಗಗಳಿಗೆ ಕಾರಣವಾಗಬಹುದು. ಇಂತಹ ಪರಿಸ್ಥಿತಿಯಲ್ಲಿ, ಬಾಳೆ ಎಲೆಗಳ ಮೇಲೆ ತಿನ್ನುವುದು ಆರೋಗ್ಯಕ್ಕೆ ಪ್ರಯೋಜನಕಾರಿಯಾಗಿದೆ.


ಅದ್ದರಿಂದ ಪರಿಸರಕ್ಕೆ ಪೂರಕವಾದ ಬಾಳೆ ಎಲೆ ಊಟಕ್ಕೆ ಎಲ್ಲರೂ ಪ್ರಥಮ ಪ್ರಾಶಸ್ತ್ಯ ನೀಡೋಣ.


ಸಿಹಿಜೀವಿ

ಸಿ ಜಿ ವೆಂಕಟೇಶ್ವರ


19 ಏಪ್ರಿಲ್ 2022

ನಾನು ಮತ್ತು ಸೌದೆ


 


*ನಾನು ಮತ್ತು ಸೌದೆ. 


ನಮ್ಮ ಬಾಲ್ಯದಲ್ಲಿ ಅಡಿಗೆ ಮಾಡಲು ಉರುವಲು ಎಂದರೆ ಬಹುತೇಕ ಕಾಡನ್ನು ಮತ್ತು ಕಟ್ಟಿಗೆಯನ್ನು ಅವಲಂಬಿಸಿದ್ದೆವು. ಸೌದೆ ಒಲೆಗಳು ಪ್ರತಿಯೊಂದು ಮನೆಯಲ್ಲೂ ಇದ್ದವು. ಸೌದೆ ತರವುದು, ಗಂಡು ಹೆಣ್ಣು ಎಂಬ ಭೇದವಿರದೇ ಎಲ್ಲರೂ ಮಾಡುತ್ತಿದ್ದ ಕಾಯಕವಾಗಿತ್ತು. ದಿನದ ಸೌದೆಯ ಅಗತ್ಯಕ್ಕಿಂತ ಹೆಚ್ಚಿನ ಸೌದೆ ತಂದು ಮಳೆಗಾಲಕ್ಕೆ ಸೌದೆಯನ್ನು ಸಂಗ್ರಹ ಮಾಡುವುದೂ ಸಾಮಾನ್ಯವಾಗಿತ್ತು. ಹೊಲೆಯನ್ನು ಮೊದಲು ಹಚ್ಚಲು ಅಡಿಕೆ ಗರಿ, ತೊಗರಿ ಗಿಡಗಳ ಒಣಗಿದ ಸೌದೆಯನ್ನು ಸಾಮಾನ್ಯವಾಗಿ ಬಳಸುತ್ತಿದ್ದರು. ಕ್ರಮೇಣವಾಗಿ ಒಲೆ ಉರಿದಂತೆ ಗಟ್ಟಿ ಸೌದೆಗಳಾದ ತಂಗಟೆ ಸೌದೆ, ಬಂದ್ರೆ ಸೌದೆ, ಲಂಟಾನ್ ಸೌದೆ ಇತ್ಯಾದಿಗಳು ಬಳಕೆಯಾಗುತ್ತಿದ್ದವು. ಕೆಲವೊಮ್ಮೆ ಗೆಳೆಯರ ಜೊತೆಯಲ್ಲಿ ನಾನೂ ಸೌದೆತರಲು ಹೊರಡುತ್ತಿದ್ದೆ .ಮೊದಲಿಗೆ ಊರಿನ ಸುತ್ತಮುತ್ತಲಿನ ಹೊಲಗಳಲ್ಲಿ ಒಣಗಿದ ಅಳ್ಳ ಮರಗಳು( ಔಡಲ), ತೊಗರಿ ಗಿಡಗಳು, ಲಂಟಾನ್ ಗಿಡಗಳನ್ನು ತಂದು ಮನೆಯ ಮುಂದೆ ಹಾಕಿದ ನಾವು ಸುಮಾರು ಐದಾರು ಕಿಲೋಮೀಟರ್ ದೂರದ ಗುಡ್ಡದ ಕಡೆಗೆ ನೋಟ ಬೀರುತ್ತಿದ್ದೆವು .ಕಾಲ್ನಡಿಗೆಯಲ್ಲಿ ಅಷ್ಟು ದೂರ ಸಾಗಿ ಕಾಡಿನಲ್ಲಿ ಅಲ್ಲಲ್ಲಿ ಒಣಗಿ ಬಿದ್ದ ಬಂದ್ರೆ, ತಂಗಟೆ ಮುಂತಾದ ಗಿಡಗಳನ್ನು ಸಂಗ್ರಹಿಸಿ ,ಕಾಲ ಕಾಲಕ್ಕೆ ಸಿಗುವ ಕಾಡಿನ ಹಣ್ಣುಗಳಾದ ಬಿಕ್ಕೇಕಾಯಿ, ದ್ಯಾದಾರೆ ಹಣ್ಣು, ಗೇರು ಹಣ್ಣು, ಲಂಟಾನ್ ಹಣ್ಣು, ಕಾರೆ ಹಣ್ಣು,ಮುಂತಾದ ಹಣ್ಣುಗಳನ್ನು ತಿನ್ನುತ್ತಿದ್ದೆವು.ಕೆಲವೊಮ್ಮೆ ಎಡವಟ್ಟಾಗಿ ಗೇರು ಹಣ್ಣ ತಿಂದ ನಮ್ಮ ಗೆಳೆಯರಿಗೆ ಮೈಯೆಲ್ಲಾ ತುರಿಕೆ ಉಂಟಾಗಿ ಅಳುತ್ತಾ ಮನೆ ಕಡೆಗೆ ನಡೆದ ಉದಾಹರಣೆಗಳಿವೆ.

 ಬಾಯಾರಿಕೆ ಆದಾಗ ಅಲ್ಲೇ  ಗುಂಡಿಯಲ್ಲಿ ನಿಂತಿದ್ದ ನೀರು ಕುಡಿದು ಸೌದೆ ಹೊರೆಹೊತ್ತು ಮನೆ ಕಡೆ ಸಾಗುತ್ತಿದ್ದೆವು. ಐದಾರು ಕಿಲೋಮೀಟರ್ ದೂರ ಸಾಗಲು ಉದ್ದನೆಯ ಹೊರೆ ಕಟ್ಟಿ ತಲೆಯ ಮೇಲೆ ಎರಡು ಮೂರು ಬಟ್ಟೆಗಳ ಸಿಂಬೆ ಮಾಡಿಕೊಂಡು ಸೌದೆ ಹೊರೆ ಹೊತ್ತು ಊರ ಕಡೆ ಸಾಗುವಾಗ ಮಾರ್ಗ ಮಧ್ಯದಲ್ಲಿ ಒಮ್ಮೆ ಹೊರೆ ಕೆಳಗಿಳಿಸಿ ,ಸುಧಾರಿಸಿಕೊಂಡು ಮತ್ತೆ ಊರ ಕಡೆ ಪಯಣ ಬೆಳೆಸಿ ಮನೆಯ ಮುಂದೆ ಸೌದೆ ಹೊರೆ ತಂದು ದೊಪ್ ಎಂದ ಹಾಕಿದಾಗ ಅಮ್ಮ ಹೆಮ್ಮೆಯಿಂದ ನನ್ನ ಕಡೆ ಮೆಚ್ಚುಗೆ ಸೂಚಿಸಿ ಕುಡಿಯಲು ನೀರು ಕೊಟ್ಟು ತಿನ್ನಲು ಸಜ್ಜೆರೊಟ್ಟಿ ಹಾಗೂ ಚಿನಕುರುಳಿ ನೀಡುತ್ತಿದ್ದರು.ಆಗ ಕಾಡು ಸುತ್ತಿದ ದಣಿವೆಲ್ಲಾ ಒಂದೇ ಕ್ಷಣದಲ್ಲಿ ಮಾಯವಾಗುತ್ತಿತ್ತು.


ಊರಿನಲ್ಲಿ ಮದುವೆ ಮತ್ತಿತರ ಶುಭ ಸಮಾರಂಭಗಳು ಜರುಗಿದರೆ ಐದಾರು ಎತ್ತಿನ ಗಾಡಿಗಳಲ್ಲಿ ಜನರು ಕಾಡಿಗೆ ಹೋಗಿ ಸೌದೆ ತರುತ್ತಿದ್ದೆವು.ಆಗ ಹತ್ತು ಕಿಲೋಮೀಟರ್ ಗೂ ದೂರದ ಕಾಡಿಗೆ ಹೋಗಿ ಒಣಗಿದ  ದಪ್ಪ ಸೌದೆ ಗಳನ್ನು ಗಾಡಿಯಲ್ಲಿ ತರುತ್ತಿದ್ದೆವು.ಆಗ ನಮ್ಮದು ಎತ್ತಿನ ಗಾಡಿ ಇರಲಿಲ್ಲ ಒಮ್ಮೆ ಅಮಲ್ದಾರರ ಮನೆಯ ಮದುವೆಗೆ ಸೌದೆ ತರಲು ಹೋದಾಗ ನಾನೂ ಅವರ ಜೊತೆಯಲ್ಲಿ ಹೋಗಿ ಒಂದು ಹೊರೆ ಗಟ್ಟಿ  ಸೌದೆ ತಂದಿದ್ದೆ. ಇದನ್ನು ಗಮನಿಸಿದ ನಮ್ಮ ಪ್ರಾಥಮಿಕ ಶಾಲೆಯ ಶಿಕ್ಷಕರಾಗಿದ್ದ ತಿಪ್ಪೇಸ್ವಾಮಿ ಮೆಷ್ಟ್ರು "ಏ... ವೆಂಕಟೇಶ ಅಡಿಗೆ ಮಾಡಾಕೆ ನಿಮ್ಮ ಮನೆ ಸೌದೆ ಕೊಡೊ "  ಅಂದರು .ಕಾಡು ಅಲೆದು ಕಷ್ಟ ಪಟ್ಟು ಸೌದೆ ತಂದದ್ದು ನೆನಪಾಗಿ ಇಲ್ಲ ಸಾ ...ಸೌದೆ ಕೊಡಲ್ಲ ಅಂದೆ.ನಮ್ಮ ಮೇಷ್ಟ್ರಿಗೆ ಪಿತ್ತ ನೆತ್ತಿಗೇರಿ ನನಗೇ ಇಲ್ಲ ಎನ್ನುತ್ತೀಯಾ ಎಂದು ಚೆನ್ನಾಗಿ ಬಾರಿಸುತ್ತಾ " ನೀನು ಹೆಂಗೆ ಪಾಸಾಗ್ತಿಯ ನೋಡ್ತೀನಿ "ಎಂದು ಎಗರಾಡಿದರು.   ಅಲ್ಲಲ್ಲಿ ಬಾಸುಂಡೆ ಬಂದಿದ್ದವುಗಳನ್ನು ನೋಡಿಕೊಳ್ಳುತ್ತಾ ,  ಅಳುತ್ತಾ ಹೊಲದಲ್ಲಿ ಕೆಲಸ ಮಾಡುತ್ತಿದ್ದ ಅಮ್ಮನ ಬಳಿ ನಮ್ಮ ಮೇಷ್ಟ್ರು ವಿರುದ್ದ ದೂರು ನೀಡಿದೆ.ಅಮ್ಮಾ ನನ್ನ ಸಮಾಧಾನ ಮಾಡಿ ಮೇಷ್ಟ್ರ ಹತ್ತಿರ ಯಾಕೆ ನಿನ್ನ ಹೊಡೆದರು ಅಂತ ಕೇಳ್ತೀನಿ. ಮನೆಗೆ ನಡಿ ಅಂದರು.ಅಮ್ಮ ಮೇಷ್ಟ್ರನ್ನು ಬೈಯುತ್ತಾರೆ ಎಂದು ಮನೆಗೆ ಹಿಂತಿರುಗಿದೆ. ಒಂದು ವಾರ ಕಳೆದರೂ ಅಮ್ಮ ಮೇಷ್ಟ್ರ ಬಳಿ ಬೈಯುವುದಿರಲಿ ಕನಿಷ್ಟ ಪಕ್ಷ ಯಾಕೆ ಹೊಡಿದಿರಿ ಎಂದು ಕೇಳಲಿಲ್ಲ.ಸಿಟ್ಟಿನಿಂದ ಅಮ್ಮನ ಕೇಳಿದೆ ಯಾಕಮ್ಮ ಮೇಷ್ಟ್ರು ನ ಬೈಯಲಿಲ್ಲ ಅಂದು ಕೇಳಿದೆ."ಇದ್ಯೆ ಕೊಡ ಮೇಷ್ಟ್ರು ,ನಾಕ್ ಏಟ್ ಹಾಕಿದ್ರೆ ಆಶೀರ್ವಾದ ಇದ್ದಂಗೆ  ಹೋಗ್ಲಿ ಬಿಡು" ಅಂದಿದ್ದರು . ಈಗ ಆ ಮೇಷ್ಟ್ರ ಆಶೀರ್ವಾದ ಮತ್ತು ಅಮ್ಮನ ಹಾರೈಕೆಯಿಂದ ನಾನು ಮೇಷ್ಟ್ರು ಆಗಿರುವೆ.ನಮ್ಮ ಮೇಷ್ಟ್ರು ಸ್ವರ್ಗವಾಸಿಗಳಾಗಿರುವರು.

ಮೊನ್ನೆ ಊರಿಗೆ ಹೋದಾಗ ನಮ್ಮ ಅತ್ತಿಗೆ ಅಡಿಗೆ ಮನೆಯಲ್ಲಿ ಗ್ಯಾಸ್ ಸಿಲಿಂಡರ್ ಖಾಲಿಯಾಗಿದೆ ಅಂದಾಗ ಅಮ್ಮ ಪ್ರೀತಿಯಿಂದ "ಹೋಗಪ್ಪ ಗುಡ್ಡುಕ್ ಹೋಗಿ ಸೌದೆ ಕಡ್ಕಂಬಾ" ಎಂದು ನಗುತ್ತಾ ಹೇಳಿ ,ಆ ಕಾಲದಲ್ಲಿ ಸೌದೆ ತರಲು ನಾವು ಪಟ್ಟ ಪಾಡುಗಳನ್ನು ನನ್ನ ಮಕ್ಕಳಿಗೆ ವಿವರವಾಗಿ ಹೇಳಿದರು.


ಸಿಹಿಜೀವಿ

ಸಿ ಜಿ ವೆಂಕಟೇಶ್ವರ

ತುಮಕೂರು