01 ಮೇ 2020

ಸಿಹಿಜೀವಿಯ ಎರಡು ಹನಿಗಳು

ಹನಿಗಳು

*೧*

*ದೃಷ್ಟಿ*

ನೋಡುವ ದೃಷ್ಟಿ
ಸರಿಯಿದ್ದರೆ
ಎಲ್ಲಾ ಚೆಲುವು
ಒಲವಿನಿಂದ ಮಾಡಿದ
ಕಾರ್ಯಕೆ ಸದಾ ಗೆಲುವು.

*೨*

*ಕಾರಣ*

ಒಲವಿನ ಮಾತನಾಡುತ
ಸಲುಗೆಯಲಿ ಕೇಳಿದ
ನನ್ನ ಪ್ರೀತಿಸುವೆಯಾ
ಗೆಲುವಿನ ಸರದಾರ
ನಿನ್ನ ಪ್ರೀತಿಸದಿರಲು
ಕಾರಣ ತಿಳಿಸುವೆಯಾ?

*ಸಿ ಜಿ ವೆಂಕಟೇಶ್ವರ*

30 ಏಪ್ರಿಲ್ 2020

ಬರಬಾರದೆ ( ಭಾವಗೀತೆ )

*ಬರಬಾರದೆ* (ಹೆಣ್ಣಿನ ಸ್ವಗತ)
ಭಾವಗೀತೆ

ನನ್ನ ಇನಿಯ,ಮನದ ಗೆಳೆಯ, ಕಾದಿರುವೆ ನಾ, ನೀನೀಗ ಬರಬಾರದೆ |
ಕನಸಲ್ಲೂ ನೀ  ಮನದಲ್ಲೂ ನೀ,ಬಂದು ಈಗ
ಬಿಗಿದಪ್ಪಿಕೊಳಬಾರದೆ|
ನೀ ಇರುವ ಕ್ಷಣವು,ಸ್ವರ್ಗವು ಧರೆಗಿಳಿಯದೆ?||ಪ||

ನೀನಿರಲು ಗೆಲುವು,ನೀನೇನೆ ಒಲವು,ಪ್ರೀತಿಗೆ ಆಶಾಕಿರಣ|
ಒಲವಿನ ರಾಜ ,ಚೆಲುವಿನ ಸ್ನೇಹಿತ,
ನೀ ನನ್ನಯ ಅರುಣ|
ನೀನೇನೆ ಮಾರ, ಜೊತೆಯಾಗು ಬಾರ||
ಮನದನ್ನೆಯ ವರಿಸು ಬಾ|
ಧಿಕ್ಕರಿಸಿದೆ ನಾನು, ಅಪರಂಜಿಯು ನೀನು|
ಬದಲಾದ ಗೆಳತಿಗೆ
ಅವಕಾಶ ಕೊಡಬಾರದೆ|| ಪ||

ಆ ನಿನ್ನ ಸ್ಪರ್ಶ ,ನೀ ಕೊಟ್ಟು ಮುತ್ತು, ಎಡೆಬಿಡದೇ ನೆನೆಪಾಗಿದೆ|
ನಿದಿರೆ ಬರುತಿಲ್ಲ ,ಏನೂ ರುಚಿಸಲ್ಲ
ಏನೆಂದು ನಾ ಹೇಳಲಿ|
ಬರದಿದ್ದರೆ ನೀನು ,ನಾ ಬಾವಿ ಪಾಲು||
ಬರದೇ ನೀನಿರುವೆಯಾ?
ನೀ  ಬಂದೇ ಬರುವೆ ಪ್ರೇಮಾಮೃತ ತರುವೆ|
ಭರವಸೆಯು ನನಗಿದೆ
ನೀ ಬೇಗ ಬರಬಾರದೆ||ಪ||

*ಸಿ ಜಿ ವೆಂಕಟೇಶ್ವರ*
*ತುಮಕೂರು*

29 ಏಪ್ರಿಲ್ 2020

ಸುಸ್ಥಿರ ಸಮಾಜಕ್ಕೆ ಬುದ್ದ ಬಸವಣ್ಣ ಅಂಬೇಡ್ಕರ್ (ಲೇಖನ)



*ಸುಸ್ಥಿರ ಸಮಾಜಕ್ಕಾಗಿ ಬುದ್ದ ಬಸವ ಅಂಬೇಡ್ಕರ್*
ಭಾರತೀಯ ಸಮಾಜವು ಅನಾದಿ ಕಾಲದಿಂದಲೂ ಸಾಮಾಜಿಕವಾಗಿ ಬದಲಾವಣೆ ಹೊಂದುತ್ತ , ವಿವಿದ ಸಂಸ್ಕೃತಿಗಳನ್ನು ಅಳವಡಿಸಿಕೊಂಡು, ಆಚರಣೆಗಳನ್ನು, ಸಂಪ್ರದಾಯಗಳನ್ನು ತನ್ನ ಒಡಲಲ್ಲಿ ಇಟ್ಟುಕೊಂಡು ಬಂದಿದೆ. ಇದರ ಜೊತೆಗೆ ನಮ್ಮ ಸಮಾಜವು ವಿವಿಧ ಕಾರಣಗಳಿಂದ ಏಳು ಬೀಳು ಗಳನ್ನು ಕಂಡಿದೆ. ಕೆಲವೊಮ್ಮೆ ಸಮಾಜದಲ್ಲಿ ಮೂಢನಂಬಿಕೆಗಳು ಕಂದಾಚಾರಗಳು ತಾಂಡವವಾಡುವ ಸಂಧರ್ಭಗಳಲ್ಲಿ ಸಮಾಜಕ್ಕೆ ಬೆಳಕು ನೀಡಲು ಕಾಲ ಕಾಲಕ್ಕೆ ಮಹಾತ್ಮರು ಉದಯಿಸಿ ನಮ್ಮ ಸಮಾಜವನ್ನು ತಿದ್ದುವ ಕಾರ್ಯ ಮಾಡುತ್ತಾ ಸುಸ್ಥಿರ ಸಮಾಜ ನಿರ್ಮಾಣಕ್ಕೆ ಟೊಂಕ ಕಟ್ಟಿ ನಿಂತರು. ಅಂತಹ ಮಹನೀಯರಲ್ಲಿ ಬುದ್ದ, ಬಸವೇಶ್ವರರು, ಮತ್ತು ಅಂಬೇಡ್ಕರರು ಪ್ರಮುಖರು.
*ಸುಸ್ಥಿರ ಸಮಾಜದ ಅರ್ಥ*
ಮುಂದಿನ ಪೀಳಿಗೆಯನ್ನು ಗಮನದಲ್ಲಿಟ್ಟುಕೊಂಡು ಈಗಿನ ಸಮಾಜದ ಕೆಲವು ಮೌಲ್ಯಗಳನ್ನು, ಸತ್ಸಂಪ್ರದಾಯಗಳನ್ನು,ಉತ್ತಮ ಸಂಸ್ಕೃತಿಗಳನ್ನು, ಉಳಿಸಿ ಬೆಳೆಸಿಕೊಂಡು ಹೋಗುವ ಸಮಾಜವನ್ನು  ಸುಸ್ಥಿರ ಸಮಾಜ ಎನ್ನಬಹುದು.
ಇಂದಿನ ಆಧುನಿಕತೆಯ ಯಾಂತ್ರಿಕತೆಯ ಸಮಾಜವು,ತಂತ್ರಜ್ಞಾನದ ಫಲವಾಗಿ, ಅನ್ಯಸಂಸ್ಕೃತಿಗಳ ಪ್ರಭಾವದಿಂದಾಗಿ, ಮದ್ಯಮ ವರ್ಗದ ಬೆಳವಣಿಗೆಯ, ಪರಿಣಾಮವಾಗಿ ನಮ್ಮ ಸಮಾಜವು ಹಿಂದಿಗಿಂತಲೂ ಇಂದು ಅಭಿವೃದ್ಧಿ ಹೊಂದಿದೆ ಎನಿಸಿದರೂ ಮೌಲ್ಯಗಳ ಅಧಃಪತನ, ಪ್ರಾಮಾಣಿಕತೆಯ ಕೊರತೆ, ದೈಹಿಕ ಸುಖವೇ ಮೇಲು ,ಮುಂತಾದ ಭಾವನೆಗಳಿಂದಾಗಿ ಸಮಾಜಿಕ ಹಿಂಜರಿತವಾಗಿದೆಯೇನೋ ಎಂಬ ಅನುಮಾನ ನಮ್ಮನ್ನು ಕಾಡುವುದು
ಇಂತಹ ಸಂದಿಗ್ಧ ಸ್ಥಿತಿಯಲ್ಲಿ ನಮಗೆ ದಾರಿ ತೋರಿ ಸಮಾಜವನ್ನು ಸರಿದಾರಿಗೆ ತರುವ ಶಕ್ತಿ ಇರುವುದು ಬುದ್ದ ,ಬಸವಣ್ಣ ಮತ್ತು ಅಂಬೇಡ್ಕರ್ ರವರ ಚಿಂತನೆಗಳಿಂದ ಮಾತ್ರ ಸಾದ್ಯ.
*ಸುಸ್ಥಿರ ಸಮಾಜಕ್ಕೆ ಗೌತಮ ಬುದ್ಧ ರವರ ಚಿಂತನೆ*
ಸಾಮನ್ಯ ಶಕ ಪೂರ್ವದಿಂದಲೂ ಬುದ್ದ ನಮಗೆ ಬಾಳುವ ರೀತಿಯನ್ನು ಸಾರಿದರು ಸಮಾಜದಲ್ಲಿ ಮಾನವರು ಸಹಬಾಳ್ವೆಯಿಂದ ಬಾಳಲು ಆಸೆಯನ್ನು ಕಡಿಮೆ ಮಾಡಿಕೊಳ್ಳಬೇಕು.ತನ್ಮೂಲಕ ಇತರರ ಅಸೆಗೂ ಬೆಲೆ ನೀಡಬೇಕು ಎಂದು ಪ್ರತಿಪಾದಿಸಿದರು. ಆದರೆ ಇಂದು ನಮ್ಮ ಆಸೆಗಳಿಗೆ ಮಿತಿ ಇಲ್ಲ ಅದರ ಫಲವಾಗಿ ಸಮಾಜದಲ್ಲಿ ವರ್ಗ ಸಂಘರ್ಷಕ್ಕೆ ಕಾರಣವಾಗಿದೆ. ಬುದ್ದನ ತತ್ವ ಪಾಲಿಸಿದರೆ ಸಮಾಜದಲ್ಲಿ ಶಾಂತಿ ಲಬಿಸಿ ಇದು ಸುಸ್ಥಿರ ಸಮಾಜಕ್ಕೆ ನಾಂದಿಯಾಗುವುದು.
ಬುದ್ದನ ಅಷ್ಟಾಂಗ ಮಾರ್ಗ ಅನುಸಾರವಾಗಿ ನಾವು ಒಳ್ಳೆಯ ನಡತೆ, ಒಳ್ಳೆಯ ಗುಣ,ಒಳ್ಳೆಯ ನೋಟ,ಒಳ್ಳೆಯ ಕಾರ್ಯ, ಈಗೆ ಎಲ್ಲರಿಗೂ ನಾವು ಒಳ್ಳೆಯದು ಮಾಡಿದರೆ ಪರರು ನಮಗೆ ಒಳ್ಳೆಯದು ಮಾಡೇ ಮಾಡುವರು ಆಗ ಸಮಾಜವು ಆದರ್ಶ ಸಮಾಜವಾಗಿ ಸುಸ್ಥಿರ ಅಭಿವೃದ್ಧಿಗೆ ಮೂಲ ಕಾರಣವಾಗುತ್ತದೆ.
*ಸುಸ್ಥಿರ ಸಮಾಜಕ್ಕೆ ಬಸವೇಶ್ವರರ ಚಿಂತನೆ*
ಹನ್ನೆರಡನೆಯ ಶತಮಾನದಲ್ಲಿ ಸಾಮಾಜಿಕ ಕ್ರಾಂತಿಯ ಮಾಡಿದ ಭಕ್ತಿ ಭಂಡಾರಿ ಬಸವಣ್ಣನವರು ಅಂದಿನ ಸಮಾಜದ ಮೌಢ್ಯಗಳನ್ನು ,ತೊಲಗಿಸಲು ಪಣತೊಟ್ಟು ಯಶಸ್ವಿಯಾಗಿ ಸಮಾಜ ಸುಧಾರಣೆ ಮಾಡಿದರು.
ಅವರ " ಅನುಭವ ಮಂಟಪ " ಪರಿಕಲ್ಪನೆಯು ಇಂದಿನ ಶಾಸನ ಸಭೆಯ ಮೂಲವಾಗಿದ್ದರೂ ಆ ಮೂಲ ಆಶಯವನ್ನು ನಾವಿಂದು ಮರೆತಿರುವುದು ದುರಂತ. ಎಲ್ಲಾ ವರ್ಗದ ಜನರನ್ನು ಸಮಾನವಾಗಿ ಕಾಣುವ ಪರಿಕಲ್ಪನೆಯು ಅಂದು‌ಸಂಚಲನ ಮೂಡಿಸಿತ್ತು ತಕ್ಕ ಮಟ್ಟಿಗೆ ಸಮಾಜವು ಬದಲಾವಣೆಗಳನ್ನು ಕಂಡಿತು ಆದರೆ ಇಂದು ಸಾಂವಿಧಾನಿಕ ಮಾನ್ಯತೆ ನೀಡಿ ಸಮಾನತೆ ನೀಡಿದರೂ ಅಸಮಾನತೆ ಎಲ್ಲೆಡೆಯೂ ಕಣ್ಣಿಗೆ ರಾಚಿ ನಮ್ಮನ್ನು ಅಣಕಿಸುತ್ತಿದೆ.
ಇನ್ನೂ ಬಸವಣ್ಣ ನವರ ವಚನಗಳು ನಮ್ಮ ಮತ್ತು ಸಮಾಜಕ್ಕೆ ಎಂದೂ ಆರದ ಕೈ ದೀವಿಗೆಗಳು ಅವರ ವಚನಗಳನ್ನು ಅರಿತು, ಅಳವಡಿಸಿಕೊಂಡು ನಡೆದರೆ ಸಮಾಜವು ಆದರ್ಶವಾಗುವುದಷ್ಟೇ ಅಲ್ಲ ಸುಸ್ಥಿರ ಸಮಾಜವು ನಿರ್ಮಾಣ ಆಗುವುದು.
*ಸುಸ್ಥಿರ ಸಮಾಜಕ್ಕೆ ಅಂಬೇಡ್ಕರ್ ರವರ ಚಿಂತನೆ*
ನಮ್ಮ ಭಾರತೀಯ ಸಂವಿಧಾನದ ಪಿತಾಮಹರೆಂದು ಪುರಸ್ಕೃತವಾದ ಅಂಬೇಡ್ಕರ್ ಶಿಕ್ಷಣ, ಸಂಘಟನೆ, ಹೋರಾಟದ ಪರಿಕಲ್ಪನೆಯನ್ನು ನಮಗೆ ಪರಿಚಯಿಸಿದರು ಮತ್ತು ಈ ಮೂಲಕ ವ್ಯಕ್ತಿ, ಸಮಾಜವು ಬದಲಾಗಬಹುದು ಎಂದು ನಮಗೆ ತೋರಿಸಿಕೊಟ್ಟರು .ಅವರು ನಮಗೆ ಪ್ರಪಂಚದಲ್ಲಿಯೇ ಉನ್ನತವಾದ, ಮತ್ತು ಶ್ರೇಷ್ಠ ಸಂವಿಧಾನವನ್ನು ನಮಗೆ ನೀಡಿದ್ದಾರೆ. ಈ ಸಂವಿಧಾನವು ಕೇವಲ ನಮ್ಮ ಆಡಳಿತದ ದಿಕ್ಸೂಚಿ ಮಾತ್ರವಲ್ಲದೆ ನಮ್ಮ ಸಮಾಜದ ಪ್ರತಿಬಿಂಬವೂ ಹೌದು. ಆದರೆ ನಾವು ದುರಾದೃಷ್ಟವಶಾತ್ ಇಂದು ಸಂವಿಧಾನಕ್ಕೆ  ವಿಮುಖರಾಗುತ್ತಿದ್ದೇವೇನೋ ಎಂಬ ಅನುಮಾನ ಈ  ನಮ್ಮ ಸಮಾಜವನ್ನು ನೋಡಿದರೆ ತಿಳಿಯುವುದು.
ಸಮಾನತೆಯನ್ನು ನಾವು ಎಲ್ಲರೂ ಪಡೆಯಬೇಕಿದೆ,ಅಸಮಾನತೆ ಹೋಗಲಾಡಿಸಲು ಹೋರಾಟವು ಅನಿವಾರ್ಯವಾಗಿದೆ.ಶಿಕ್ಷಣ ನಮ್ಮನ್ನು ಬದಲಾವಣೆ ಮಾಡಬಲ್ಲ ಸಾಧನ ಎಂದು ಅಂಬೇಡ್ಕರ್ ರವರು ಪ್ರತಿಪಾದಿಸಿದರು. ಈ ಅಂಶಗಳನ್ನು ನಾವೆಲ್ಲರೂ ಪುನರ್ಮನನ ಮಾಡಿಕೊಳ್ಳಬೇಕಿದೆ ಮತ್ತು ಸಮಾಜದಲ್ಲಿ ಅದನ್ನು ಅಳವಡಿಸಿಕೊಳ್ಳಬೇಕಿದೆ.ಹಾಗು ನಮ್ಮ ಮುಂದಿನ ಪೀಳಿಗೆಗೆ ಇಂತಹ ಉದಾತ್ತವಾದ ಚಿಂತನೆಗಳನ್ನು ವರ್ಗಾವಣೆ ಮಾಡಬೇಕಿದೆ.ಆಗ ಮಾತ್ರ ಸುಸ್ಥಿರ ಸಮಾಜ ನಿರ್ಮಾಣ ಸಾಧ್ಯವಾಗುತ್ತದೆ.
ಏಷ್ಯದ ಬೆಳಕಾದ ಬುದ್ದ ನಮ್ಮ ಸಮಾಜವು ಎದುರಿಸುವ ಎಲ್ಲಾ ಮೂಲ ಸಮಸ್ಯೆಗಳನ್ನು ಪರಿಹರಿಸಲು ಹಲವಾರು ಮಾರ್ಗಗಳನ್ನು ನಮಗೆ ಬೋಧನೆಗಳ ರೂಪದಲ್ಲಿ ನೀಡಿರುವರು ಅವು ಸಾರ್ವಕಾಲಿಕವಾದವುಗಳು ಅವುಗಳ ಪಾಲನೆ ಮತ್ತು ಮುಂದಿನ ಪೀಳಿಗೆಗೆ ಅವುಗಳ ವರ್ಗಾವಣೆ ನಮ್ಮ ಆದ್ಯ ಕರ್ತವ್ಯ ಆಗಬೇಕಿದೆ.
ಭಕ್ತಿ ಮತ್ತು ಸಮಾಜ ಸುಧಾರಕರಾದ ಬಸವಣ್ಣನವರ ಸಮಾಜಮುಖಿ ಚಿಂತನೆಗಳು ಇಂದಿಗೂ ಪ್ರಸ್ತುತ ಅವರ ವಚನಗಳು ನಮಗೆ ದಾರಿ ದೀಪಗಳು ಸಮಾಜ ಪರಿವರ್ತನಾ ಸಾಧನಗಳು ಎಂದರೂ ತಪ್ಪಿಲ್ಲ. ಅವರ ಚಿಂತನೆಗಳು ಸುಸ್ಥಿರ ಸಮಾಜಕ್ಕೆ ಅಡಿಗಲ್ಲುಗಳು.
ಹಿಂದುಳಿದವರ ಸಬಲೀಕರಣದ ದಿಕ್ಸೂಚಿಗಳು ಅವರ ಚಿಂತನೆಗಳನ್ನು ಅಳವಡಿಸಿಕೊಂಡು ಸುಸ್ಥಿರ ಸಮಾಜ ನಿರ್ಮಾಣ ಮಾಡಬೇಕಿದೆ.
ಈಗೆ ಬುದ್ದ ,ಬಸವಣ್ಣನವರು ಮತ್ತು ಅಂಬೇಡ್ಕರ್ ರವರ ಚಿಂತನೆಗಳು ನಮ್ಮ ಸಮಾಜಕ್ಕೆ ಮಾರ್ಗದರ್ಶನ ಮಾಡುವ ಕೈಮರಗಳು ,ಕತ್ತಲಲಿ ಇರುವ ಸಮಾಜಕ್ಕೆ ಬೆಳಕು ನೀಡುವ ಶಾಶ್ವತವಾದ ಪಂಜುಗಳು ಅವರು ನೀಡಿದ ಸಂದೇಶಗಳನ್ನು ಪಾಲಿಸೋಣ ಅವರ ತತ್ವ ಆದರ್ಶಗಳನ್ನು ಮೈಗೂಡಿಸಿಕೊಳ್ಳೋಣ ತನ್ಮೂಲಕ ಸುಸ್ಥಿರ ಸಮಾಜಕ್ಕೆ ಭದ್ರವಾದ ಅಡಿಪಾಯ ಹಾಕೋಣ ಮತ್ತು ಸುಸ್ಥಿರ ಅಭಿವೃದ್ಧಿ ಗುರಿಯನ್ನು ಸಾಧಿಸೋಣ
*ಸಿ ಜಿ ವೆಂಕಟೇಶ್ವರ*
*ತುಮಕೂರು*

28 ಏಪ್ರಿಲ್ 2020

ಅವನಾಗು ನೀನು( ಶಂಕರ ಜಯಂತಿ ನೆನಪಿಗೆ ಹನಿ)



*ಅವನಾಗು ನೀನು*

(ಇಂದು ಶಂಕರ ಭಗವತ್ಪಾದರು ಮತ್ತು ರಾಮಾನುಜಾಚಾರ್ಯರ ಜಯಂತಿ)

ಶಂಕರರು ಅಂದರು ಅದ್ವೈತ
ಮಧ್ವಾಚಾರ್ಯರಂದರು ದ್ವೈತ
ರಾಮಾನುಜರದು ವಿಶಿಷ್ಟಾದ್ವೈತ
ಬಸವೇಶ್ವರರದು ಶಕ್ತಿ ವಿಶಿಷ್ಟಾದ್ವೈತ
ಹೆಸರು ಬೇರೆಯಾದರೂ
ಎಲ್ಲರೂ ಹೇಳಿದ್ದೊಂದೆ
ಅವನಿಯಲಿ ಅವನಿರುವನು
ನಿದ್ದೆಯಿಂದ ಎದ್ದೇಳು
ಅವನಾಗು ನೀನು.

*ಸಿ ಜಿ ವೆಂಕಟೇಶ್ವರ*
*ತುಮಕೂರು*

ರಾಜ್ಯ ಮಟ್ಟದ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ ಪಡೆದ ಚುಟುಕುಗಳು



*ಚುಟುಕು ೧*

*ಕೃತಿ ಚೌರ್ಯ*

ಎಲ್ಲರೂ ಹೊಗಳಿದ್ದೇ ಹೊಗಳಿದ್ದು
ಆ ಲೇಖಕರ ಪಾಂಡಿತ್ಯ ಮತ್ತು ಶೌರ್ಯ
ಉಗುಳಲು‌ ಶುರು ಮಾಡಿದರು ಜನ
ತಿಳಿಯುತ್ತಲೇ ಅವರ ಕೃತಿ ಚೌರ್ಯ

*ಚುಟುಕು ೨*

*ಅರವಟ್ಟಿಗೆ*

ಬೇಸಿಗೆಯಲಿ ದಾಹವ ತಣಿಸಿಕೊಳ್ಳಲು
ನಾವು ಕುಡಿಯಲೇ ಬೇಕು ನೀರು ಆಗಾಗ್ಗೆ
ಮೂಕ ಪ್ರಾಣಿ ಪಕ್ಷಿಗಳ ದಾಹ ನೀಗಿಸಲು
ಕಾಡು,ನಾಡಿನಲಿ ಇಡಬೇಕಿದೆ ಅರವಟ್ಟಿಗೆ

*ಸಿ ಜಿ ವೆಂಕಟೇಶ್ವರ*
*ತುಮಕೂರು*