31 ಮೇ 2025

ಅಹಲ್ಯಾ ಬಾಯ್ ಹೋಳ್ಕರ್..



ಮರಾಠ ಮನೆತನದ ಮಹಾರಾಣಿ ತನ್ನ ಗಂಡ ಮಕ್ಕಳನ್ನು ಚಿಕ್ಕ ವಯಸ್ಸಿನಲ್ಲಿ ಕಳೆದುಕೊಂಡರೂ ಧೃತಿಗೆಡದೆ ದಿಟ್ಟ ಆಡಳಿತ ನೀಡಿದ ಮಹಾಸಾದ್ವಿ ಅಹಲ್ಯ ಬಾಯ್ ಹೋಳ್ಕರ್.ಕಲೆ, ಸಂಸ್ಕೃತಿ, ವಾಸ್ತುಶಿಲ್ಪಕ್ಕೆ ಅವರ ಕೊಡುಗೆ ಅಪಾರ.ಇಂದು ಅವರ 300 ನೇ ಜಯಂತಿ ಇಂತಹ ಮಹಾನ್ ಆದರ್ಶ ಮಹಿಳೆಯನ್ನು ನೆನೆಯುತ್ತಾ ಅವರಿಗೆ ಜನ್ಮ ದಿನದ ಶುಭಾಶಯಗಳನ್ನು ಕೋರೋಣ.


 

29 ಮೇ 2025

ನಿಂದಕರಿರಬೇಕು!


 



ನಿಂದಕರಿರಬೇಕು.


ಬಿರು ಮಳೆಗಾಲದಲ್ಲಿ ಹೊಲಗಳಲ್ಲಿ  ಕೆಲಸ ಮಾಡುವ  ಕೆಲವು ಹುಡುಗರನ್ನು ಒಬ್ಬ ವೃದ್ಧ ನೋಡಿದರು. ಅವರಲ್ಲಿ ಒಬ್ಬ ಹುಡುಗ ಶೂಗಳನ್ನು ಧರಿಸಿರಲಿಲ್ಲ.  ದಪ್ಪ ಉಣ್ಣೆಯ ಸಾಕ್ಸ್‌ಗಳನ್ನು ಮಾತ್ರ ಧರಿಸಿದ್ದ.   ಅವನನ್ನು ಕರೆದು

"ಬರಿಗಾಲಲ್ಲಿ ಕೆಲಸ ಮಾಡಿದರೆ   ಕಾಲುಗಳಿಗೆ  ಗಾಯಗಳಾಗುತ್ತವೆ.  ನೀನು ನಿನ್ನ ಬೂಟುಗಳನ್ನು ಏಕೆ ಧರಿಸಿಲ್ಲ?"ಎಂದು ಕೇಳಿದರು.

ಹುಡುಗ ಪ್ರತಿಕ್ರಿಯಿಸಿ

"ನಾನು ಎರಡು ವಾರಗಳ ಹಿಂದೆ ನನ್ನ ಬೂಟುಗಳನ್ನು ಕಳೆದುಕೊಂಡೆ. ಅಂದಿನಿಂದ ನಾನು ಯಾವಾಗಲೂ ಗಾಯಗೊಂಡ ಕಾಲುಗಳ ಜೊತೆಗೆ ಮನೆಗೆ ಹಿಂತಿರುಗುವೆ ಅದಕ್ಕೆ ಈ ಬಟ್ಟೆಗಳನ್ನು ಪಾದಗಳಿಗೆ ಕಟ್ಟಿಕೊಂಡಿರುವೆ" ಎಂದನು. 

ಮುದುಕ ಒಂದು ಕ್ಷಣ ಯೋಚಿಸಿ ನಂತರ ತನ್ನ ಚೀಲದಿಂದ ನಾಲ್ಕು ಬೂಟುಗಳನ್ನು ಹೊರತೆಗೆದನು. ಒಂದು ಜೋಡಿ ಸ್ವಚ್ಛ ಮತ್ತು ಸುಂದರವಾಗಿತ್ತು, ಆದರೆ ಇನ್ನೊಂದು ಜೋಡಿ ಕೊಳಕು ಮತ್ತು ಮಣ್ಣಾಗಿತ್ತು. ನಂತರ ಅವನು ಹುಡುಗನನ್ನು ಕೇಳಿದನು.

"ಶುದ್ಧ ಬೂಟುಗಳು ಅಥವಾ ಕೊಳಕು ಬೂಟುಗಳು? ಒಂದನ್ನು ಆರಿಸಿಕೋ"

ಹುಡುಗ ಶೂಗಳತ್ತ ಕಣ್ಣು ಹಾಯಿಸಿ ನಂತರ ಉತ್ತರಿಸಿದನು.

"ನನಗೆ ಕೊಳಕು ಬೂಟುಗಳು ಹೆಚ್ಚು ಇಷ್ಟ ಸರ್."

ಮುದುಕನು ದಿಗ್ಭ್ರಮೆಗೊಂಡನು ಮತ್ತು ಅವನ ಉತ್ತರ ಕೇಳಿ ಆಶ್ಚರ್ಯಚಕಿತನಾಗಿ ಕೇಳಿದರು.

"ನೀನು ಸ್ವಚ್ಛವಾದ ಬೂಟುಗಳಿಗಿಂತ ಕೊಳಕು ಬೂಟುಗಳನ್ನು ಏಕೆ ಆಯ್ಕೆ ಮಾಡಿದೆ?"

 ಹುಡುಗ ಮುಗುಳ್ನಗುತ್ತಾ ಹೇಳಿದ

"ನಾನು ಹೊಲ ಗದ್ದೆಗಳಲ್ಲಿ  ಕೆಲಸ ಮಾಡುತ್ತೇನೆ. ಆದ್ದರಿಂದ ನನಗೆ ಸ್ವಚ್ಛವಾದ ಶೂಗಳ ಅಗತ್ಯವಿಲ್ಲ. ನಾನು ಸ್ವಚ್ಛವಾದ ಶೂಗಳೊಂದಿಗೆ ಕೆಲಸ ಮಾಡಿದರೆ ಅವು ಕೊಳಕು ಮತ್ತು ಮಣ್ಣಾಗುತ್ತವೆ. ಮತ್ತು ಮುಖ್ಯವಾಗಿ ಈ  ಕೊಳಕಾಗಿ ಕಾಣುವ  ಶೂಗಳು ಚರ್ಮದಿಂದ ಮಾಡಲ್ಪಟ್ಟಿರುತ್ತವೆ. ಆದರೆ ಸ್ವಚ್ಛವಾದ ಶೂಗಳು ಸಿಂಥೆಟಿಕ್ ನಿಂದ ಮಾಡಿವೆ. ಚರ್ಮವು ಶೂಗಳನ್ನು ತಯಾರಿಸಲು ಲಭ್ಯವಿರುವ ಅತ್ಯಂತ ಬಾಳಿಕೆ ಬರುವ ವಸ್ತುವಾಗಿದೆ. ಅವು ಇತರ ಆಯ್ಕೆಗಳಿಗಿಂತ ಹೆಚ್ಚು ಕಾಲ ಉಳಿಯುತ್ತವೆ. ಆದ್ದರಿಂದ ಚರ್ಮದ ಶೂಗಳು ಎಷ್ಟೇ ಕೊಳಕಾಗಿದ್ದರೂ ನಾನು ಅವುಗಳನ್ನು ಶುದ್ಧವಾದ ಸಿಂಥೆಟಿಕ್ ಶೂಗಳಿಗಿಂತ ಹೆಚ್ಚು ಮೆಚ್ಚುತ್ತೇನೆ."

 ಬಾಲಕನ ಉತ್ತರ ಕೇಳಿದ ಮುದುಕ ವಿಶಾಲವಾಗಿ ಮುಗುಳ್ನಕ್ಕು  ಬಾಲಕನ ಬುದ್ದಿವಂತಿಕೆ ಮೆಚ್ಚಿ ಅವನು ಇಚ್ಛೆ ಪಟ್ಟ ಶೂ ನೀಡಿ ಮುಂದೆ ಸಾಗಿದರು.


ನಮ್ಮ ಜೀವನದಲ್ಲೂ   ಕೆಲವೊಮ್ಮೆ ಜನರು ನಮ್ಮ ಹೆಸರನ್ನು ಹಾಳುಮಾಡಲು, ನಮ್ಮ ವ್ಯಕ್ತಿತ್ವವನ್ನು ಕೆಡಿಸಲು ಮತ್ತು ನಮ್ಮ ಬಗ್ಗೆ ವದಂತಿಗಳನ್ನು ಸೃಷ್ಟಿಸಲು ಹೊಟ್ಟೆ ಕಿಚ್ಚಿನ ಜನ ಅವರ ಕೈಲಾದಷ್ಟು ಪ್ರಯತ್ನ ಮಾಡುತ್ತಾರೆ. ಅವರು ನಿಮ್ಮ ವ್ಯಕ್ತಿತ್ವವನ್ನು ಹಾಳುಮಾಡುವ ಕೊಳಕು ಚರ್ಮದ ಬೂಟುಗಳಂತೆ ನಿಮ್ಮನ್ನು ಕೊಳಕು ಎಂದು ತೋರಿಸಲು ಸುಳ್ಳು ಆಪಾದನೆಗಳ  ಕೆಸರನ್ನು ನಮ್ಮಡೆ ಎಸೆಯುತ್ತಾರೆ. ಅವರು ನಮ್ಮ ಮೇಲೆ ಮಣ್ಣನ್ನು ಎಸೆಯಲಿ,ಕೆಸರು ಎಸೆಯಲಿ ಅವರು ಏನು ಬೇಕಾದರೂ ಹೇಳಲಿ. ಏಕೆಂದರೆ ಅವರು ನಮ್ಮನ್ನು ಟೀಕಿಸಲು ಯಾವುದೇ ರೀತಿಯ ಪದಗಳನ್ನು ಬಳಸಿದರೂ ಅವರು ನಮ್ಮ ನಿಜವಾದ ಒಳ್ಳೆಯ ವ್ಯಕ್ತಿತ್ವವನ್ನು ಕೀಳಾಗಿ ಕಾಣಲು ಅಥವಾ ನಾಶಮಾಡಲು ಸಾಧ್ಯವಿಲ್ಲ.  ಅವರು ನಮ್ಮ ಒಳ್ಳೆಯ ಕಾರ್ಯಗಳನ್ನು ಎಂದಿಗೂ ಕಸಿದುಕೊಳ್ಳಲು ಸಾಧ್ಯವಿಲ್ಲ. ನಾವು ಯಾವಾಗಲೂ ಇರುವಂತೆಯೇ ಇನ್ನೂ ಹೊಳೆಯುತ್ತೇವೆ. ನಮ್ಮನ್ನು ನಿಜವಾಗಿಯೂ ಚೆನ್ನಾಗಿ ತಿಳಿದಿರುವವರು ನಮ್ಮನ್ನು ಇನ್ನೂ ಮೆಚ್ಚುತ್ತಾರೆ. ಅವರು ನಮ್ಮ ಮೌಲ್ಯವನ್ನು ಗುರುತಿಸುತ್ತಾರೆ ಮತ್ತು ಅವರು ನಮ್ಮನ್ನು ಪ್ರಶಂಸಿಸುತ್ತಾರೆ. ಹಾಗಾಗಿ ನಿಂದಕರ ಬಗ್ಗೆ ತಲೆಕೆಡಿಸಿಕೊಳ್ಳದೇ ನಮ್ಮತನ ಬಿಡದೆ ನಮ್ಮ ಪಾಡಿಗೆ ನಾವು ಕಾಯಕ ಮಾಡುತ್ತ ಸಾಗೋಣ.


ಸಿಹಿಜೀವಿ ವೆಂಕಟೇಶ್ವರ

ತುಮಕೂರು

28 ಮೇ 2025

ಸಿಹಿಜೀವಿಯ ನುಡಿ

 


ಸಿಹಿಜೀವಿಯ ನುಡಿ.


ಬದ್ಧತೆ ಇಲ್ಲದಿದ್ದರೆ ಯಾವುದೇ 

ಕೆಲಸ ಆರಂಭ ಮಾಡಲಾಗದು|

ನಿರಂತರ ಪ್ರಯತ್ನ ಇಲ್ಲದಿದ್ದರೆ

ಯಾವುದೇ ಗುರಿ ಮುಟ್ಟಲಾಗದು||


ಸಿಹಿಜೀವಿ ವೆಂಕಟೇಶ್ವರ

17 ಮೇ 2025

ಕೋಳಿಯ ಜೀವನ ಪಾಠ.


 


ಕೋಳಿಯ ಜೀವನ ಪಾಠ.


ಕೋಳಿಯೆಂದರೆ ನಮಗೆ ನೆನಪಾಗುವುದು ಮುಂಜಾನೆಯ ಕೂಗು, ಇಲ್ಲವೇ ಮೊಟ್ಟೆ, ಇಲ್ಲಾ ಅಂದ್ರೆ ಕಬಾಬ್, ಬಿರ್ಯಾನಿ, ಅಷ್ಟೇ. 

ಆದರೆ ಕೋಳಿಯಿಂದಲೂ ನಾವು ಜೀವನದ ಪಾಠಗಳನ್ನು ಕಲಿಯಬಹುದು ಅವ್ಯಾವು ನೋಡೋಣ ಬನ್ನಿ.

ಕೋಳಿ ಮೊದಲು ಮೊಟ್ಟೆ ಇಟ್ಟು ಅವುಗಳ ಮೇಲೆ ಕುಳಿತುಕೊಳ್ಳುವ ಮೂಲಕ ಅದರ  ಉತ್ತಮ ಯೋಜನೆಯನ್ನು ನಾವು ಗಮನಿಸಬೇಕು.

 

ಕೋಳಿಯು ಮೊಟ್ಟೆಗಳ ಮೇಲೆ ಕುಳಿತು ಕಾವು ಕೊಡಲಾರಂಭಿಸಿದಾಗ  ಅದು ಚಲನೆಯನ್ನು ಕಡಿಮೆ ಮಾಡುತ್ತದೆ ಇದು ಶಿಸ್ತುಬದ್ಧ ನಡವಳಿಕೆ. ನಾವು ಸಹ ಏನಾದರೂ ಅಸಾಧಾರಣ ಸಾಧನೆ ಮಾಡುವಾಗ ಅನವಶ್ಯಕ ತಿರುಗಾಟ ಕಡಿಮೆ ಮಾಡಿ ಶಿಸ್ತು ರೂಢಿಸಿಕೊಳ್ಳಬೇಕು. ಅದು ಕಾವು ಕೊಡುವ ವೇಳೆ  ಕಡಿಮೆ ಆಹಾರ ಸೇವನೆಯಿಂದಾಗಿ ಅದು ತನ್ನ ಮೊಟ್ಟೆಗಳ ಮೇಲೆ ಕುಳಿತಾಗ ದೈಹಿಕವಾಗಿ ತೂಕವನ್ನು ಕಳೆದುಕೊಳ್ಳುತ್ತದೆ ಇದು 

ತ್ಯಾಗ ಮತ್ತು ಪರಹಿತಚಿಂತನೆಗೆ ಉದಾಹರಣೆ. ಇದರ ಜೊತೆಯಲ್ಲಿ ಇಲ್ಲಿ ಉಲ್ಲೇಖಿಸಬೇಕಾದ ಮತ್ತೊಂದು ಅಂಶವೆಂದರೆ ಒಂದು ಕೋಳಿಯು ಮತ್ತೊಂದು ಕೋಳಿಯ ಮೊಟ್ಟೆಗಳ ಮೇಲೆ ಕುಳಿತು ಕಾವು ಕೊಟ್ಟು ಮರಿ ಮಾಡುವುದನ್ನು ನಾವು ನೋಡಿದ್ದೇವೆ.ಇದು ಕೋಳಿಯ   ಉದಾರ ಮತ್ತು ನಿಸ್ವಾರ್ಥ ಮನಸ್ಸಿಗೆ ಸಾಕ್ಷಿ.

 ಅದು 21 ದಿನಗಳ ಕಾಲ ಮೊಟ್ಟೆಗಳ ಮೇಲೆ ಕುಳಿತು ತಾಳ್ಮೆಯಿಂದ ಕಾಯುತ್ತದೆ ಮತ್ತು ಅವು ಮರಿಯಾಗದಿದ್ದರೂ ಅದು ಮತ್ತೆ ಮೊಟ್ಟೆಗಳನ್ನು ಇಡುತ್ತದೆ ಇದು ನಂಬಿಕೆ, ಭರವಸೆ ಮತ್ತು ಧೈರ್ಯಕ್ಕೆ ಉದಾಹರಣೆ.

ಇದು ಫಲವತ್ತಾಗಿಸದ ಮೊಟ್ಟೆಗಳನ್ನು ಪತ್ತೆ ಮಾಡುತ್ತದೆ 

ಸೂಕ್ಷ್ಮ ಮತ್ತು ವಿವೇಚನಾಶೀಲ ಕೋಳಿಯು  ಕೊಳೆತ ಮೊಟ್ಟೆಗಳನ್ನು ತ್ಯಜಿಸುತ್ತದೆ ಮತ್ತು ಮೊಟ್ಟೆಯೊಡೆದ ಮರಿಗಳನ್ನು ಅದು ಒಂದೇ ಆಗಿದ್ದರೂ ಸಹ ನೋಡಿಕೊಳ್ಳಲು ಪ್ರಾರಂಭಿಸುತ್ತದೆ.ಇದು ಕೋಳಿಯ 

ಬುದ್ಧಿವಂತಿಕೆ,ಪ್ರಜ್ಞೆ ಮತ್ತು ವಾಸ್ತವಿಕತೆಯನ್ನು ಪ್ರತಿನಿಧಿಸುತ್ತದೆ.


 ಅದು ಮರಿಯ ಹಾರೈಕೆ ಮಾಡುವಾಗ ಅದರ ಮರಿಯನ್ನು ಯಾರೂ ಮುಟ್ಟಲು ಸಾಧ್ಯವಿಲ್ಲ.ಅದು

ರಕ್ಷಣಾತ್ಮಕ ಪ್ರೀತಿ.

ಅದು ತನ್ನ ಎಲ್ಲಾ ಮರಿಗಳನ್ನು ಒಟ್ಟುಗೂಡಿಸುತ್ತಾ  ಏಕತೆಯ ಸಂದೇಶವನ್ನು ಸಾರುತ್ತದೆ.ಮರಿಗಳನ್ನು ಪ್ರೌಢಾವಸ್ಥೆಗೆ ತರುವ ಮೊದಲೇ ಎಂದಿಗೂ  ಕೈಬಿಡದೇ ಉತ್ತಮ ಮಾರ್ಗದರ್ಶನ ನೀಡುತ್ತದೆ.


ಹೀಗೆ ಕೋಳಿಯಂತಹ ಸಾಮಾನ್ಯ ಜೀವಿಯು ತನಗರಿವಿಲ್ಲದೇ ಎಂತಹ ಅಮೂಲ್ಯವಾದ ಸಂದೇಶಗಳನ್ನು ನೀಡುತ್ತದೆ. ಇಂತಹ ಸಂದೇಶಗಳನ್ನು ನಾವೂ ನಮ್ಮ ಜೀವನದಲ್ಲಿ ಅಳವಡಿಸಿಕೊಂಡು ನಮ್ಮ ಜನ್ನ ಸಾರ್ಥಕ ಪಡಿಸಿಕೊಳ್ಳೋಣ.


ಸಿಹಿಜೀವಿ ವೆಂಕಟೇಶ್ವರ

ತುಮಕೂರು

ಐತಿಹಾಸಿಕ ತಾಣ ದೇವರಾಯ ಪಟ್ಟಣ.


 


ಐತಿಹಾಸಿಕ ತಾಣ ದೇವರಾಯ ಪಟ್ಟಣ.


ಇತ್ತೀಚೆಗೆ  ನಮ್ಮ ಇಲಾಖೆಯ ನಿಯೋಜಿತ ಕಾರ್ಯನಿಮಿತ್ತವಾಗಿ ತುಮಕೂರಿನ ಸಮೀಪದ ದೇವರಾಯ ಪಟ್ಟಣಕ್ಕೆ  ಹೋಗಿದ್ದೆ. ಬೈಕ್ ನಲ್ಲಿ ಹೊರಟ ನನ್ನನ್ನು "ದೇವಾಲಯಗಳ ಊರು ದೇವರಾಯ ಪಟ್ಟಣಕ್ಕೆ ಸ್ವಾಗತ" ಎಂಬ ಸ್ವಾಗತ ಕಮಾನು ಸ್ವಾಗತಿಸಿತು. ಸಿದ್ದಿವಿನಾಯಕ ಮತ್ತು ವೀರಾಂಜನೇಯ ದೇವಾಲಯಗಳಲ್ಲಿ ದೇವರ ದರ್ಶನ ಪಡೆದು ಐತಿಹಾಸಿಕ ಹರಿಹರೇಶ್ವರ ದೇಗುಲದ ಕಡೆ ಹೊರಟೆ.ತುಸು ದಿಬ್ಬದ ಮೇಲೆ ನನ್ನ ಗಾಡಿ ಚಲಿಸಿದ ನಂತರ ಎರಡು ಕಲ್ಲಿನ ರಚನೆಗಳು ನನ್ನ ಕಣ್ಣಿಗೆ ಬಿದ್ದವು. ಅದರಲ್ಲಿ ಮೊದಲನೇ ಸ್ಮಾರಕವೇ ಹರಿಹರೇಶ್ವರ ದೇವಾಲಯ. ಅದರ ಮುಂದಿನದು ವಿಶ್ರಾಂತಿ ಗೃಹದಂತಹ ರಚನೆ. ಈ ಎರಡೂ ಸ್ಮಾರಕಗಳ ಮುಂದಿನ ಜಲರಾಶಿಯು ಪ್ರವಾಸಿಗರ ಪ್ರಮುಖವಾದ ಆಕರ್ಷಣೆ ಅದೇ ದೇವರಾಯ ಪಟ್ಟಣದ ಕೆರೆ.

 

 ಹರಿಹರೇಶ್ವರ ದೇವಾಲಯವು ಸುಮಾರು ಐನೂರು ವರ್ಷಗಳಷ್ಟು ಹಳೆಯದಾದ ಪ್ರಾಚೀನ ದೇಗುಲವಾಗಿದ್ದು ಈಗಲೂ ಪೂಜೆ ಪುರಸ್ಕಾರಗಳು ನಡೆಯುತ್ತವೆ. ಗರ್ಭಗುಡಿಯಲ್ಲಿ  ಹರಿ ಹರರ ಸಂಯೋಜಿತ ಆಕರ್ಷಕ ವಿಗ್ರಹವಿದೆ. ಆದ್ದರಿಂದ ಈ ದೇವಸ್ಥಾನಕ್ಕೆ ಹರಿಹರೇಶ್ವರ ದೇವಾಲಯ ಎಂಬ ಹೆಸರು ಬಂದಿದೆ.

ದೇವಾಲಯದ ಒಳಗಿನ ಒಂದು ಶಾಸನವು ಈ ಪ್ರಾಚೀನ ದೇವಾಲಯವನ್ನು ನವೀಕರಿಸಲು 1913 ರಲ್ಲಿ ತಾಲ್ಲೂಕು ಆದೇಶವನ್ನು ಹೊರಡಿಸಲಾಗಿದೆ ಎಂದು ದಾಖಲಿಸುತ್ತದೆ. 

ಸ್ಥಳೀಯ ಮುಖಂಡರನ್ನು ಮಾತನಾಡಿಸಿದಾಗ ಈ ದೇವಾಲಯ ಚೋಳರ ಅವಧಿಯಲ್ಲಿ ನಿರ್ಮಾಣವಾಗಿದೆ ಎಂದರು.ದೇವರಾಯ ಪಟ್ಟಣದ ನಾಗರೀಕರ ಬಾಯಲ್ಲಿ ಈ ಗುಡಿಯನ್ನು ಚೋಳರ ಗುಡಿ ಎಂದು ಜನಜನಿತವಾಗಿದೆ.

 

ದೇವಾಲಯದ ಮೂಲವು ಅಸ್ಪಷ್ಟವಾಗಿದ್ದರೂ ದೇವರಾಯಪಟ್ಟಣವು 500 ವರ್ಷಗಳಿಗೂ ಹೆಚ್ಚಿನ ಇತಿಹಾಸವನ್ನು ಹೊಂದಿದೆ. ಎಪಿಗ್ರಾಫಿಯಾ ಕರ್ನಾಟಿಕಾ ಪ್ರಕಾರ  ಶ್ರೀ ತಿಮ್ಮಣ್ಣ ನಾಯಕ ಈ ಅವಧಿಯಲ್ಲಿ ದೇವರಾಯಪಟ್ಟಣದ ಮುಖ್ಯಸ್ಥರಾಗಿದ್ದರು. ಅವರ ಮಗ ಕೆಂಚ ಸೋಮಣ್ಣ ನಾಯಕ ರಾಜನ ವಿಶ್ವಾಸಾರ್ಹ ಸೇನಾಧಿಪತಿಯಾದರು.

1513 ರಲ್ಲಿ, ಕೆಂಚ ಸೋಮಣ್ಣ ತನ್ನ ಕುಟುಂಬಕ್ಕೆ ಕೃಪೆಯನ್ನು ಕೋರಿ ಸ್ಥಳೀಯ ದೇವರಿಗೆ ಒಂದು ಗ್ರಾಮವನ್ನು ದಾನ ಮಾಡಿದನು. ಅವನ ಗೌರವಾರ್ಥವಾಗಿ ಎರಡು ಗ್ರಾಮಗಳಿಗೆ ಕೆಂಚನಪಾಳ್ಯ ಮತ್ತು ಕೆಂಚನಕೋಟೆ ಎಂದು ಮರುನಾಮಕರಣ ಮಾಡಲಾಯಿತು ಎಂಬ ಉಲ್ಲೇಖವಿದೆ.





ದೇವಾಲಯದ ಮುಂದೆ ಇರುವ ಮಂಟಪದಂತಹ ಸ್ಮಾರಕವನ್ನು ಬೃಹತ್ ಕಲ್ಲು ಬಂಡೆಗಳಿಂದ ನಿರ್ಮಿಸಲಾಗಿದೆ.ಚೋಳರ ಕಾಲದಲ್ಲಿ ಸೈನಿಕರ ತಂಗುದಾಣವಾಗಿ ಇದನ್ನು ನಿರ್ಮಿಸಲಾಗಿದೆ ಎಂದು ಕೆಲವರು ಹೇಳುತ್ತಾರೆ.

ಹರಿಹರೇಶ್ವರ ದೇವಾಲಯದ ಜೀರ್ಣೋದ್ಧಾರ ಟ್ರಸ್ಟ್ ನವರು ಆಗಾಗ್ಗೆ ಈ ದೇವಾಲಯವನ್ನು  ಜೀರ್ಣೋದ್ಧಾರ ಮಾಡಿದ ಬಗ್ಗೆ ಅಲ್ಲಿನ ಶಿಲಾ ಫಲಕಗಳಲ್ಲಿ ಉಲ್ಲೇಖಿಸಿರುವುದನ್ನು ನಾನು ಗಮನಿಸಿದೆ. ಈಗ ಮತ್ತೊಮ್ಮೆ ಈ ಸ್ಮಾರಕಗಳ ಜೀರ್ಣೋದ್ಧಾರ ಮಾಡುವ ಅಗತ್ಯವಿದೆ.


ಈ ದೇವಾಲಯದ ಎಡಭಾಗದಲ್ಲಿರುವ ಬೃಹತ್ ಏಕಶಿಲೆಯು ಇಲ್ಲಿನ ಮತ್ತೊಂದು ಆಕರ್ಷಣೆ.

ಭಗವಾನ್ ಹನುಮಂತನು ಸಂಜೀವಿನಿ ಪರ್ವತವನ್ನು ಎತ್ತುತ್ತಿರುವ ವಿಗ್ರಹ ಸುಂದರವಾಗಿದೆ. ಅದೇ ಕಲ್ಲಿನ ಮೇಲೆ    ಶ್ರೀಕೃಷ್ಣನು ಕಾಳಿಂಗ ಮರ್ಧನ ಮಾಡುವ ವರ್ಣ ಚಿತ್ರವನ್ನು ಕಲಾವಿದರು ಚಿತ್ರಿಸಿದ್ದಾರೆ ಆ ಕಲಾವಿದರು ಮೆಚ್ಚುಗೆಗೆ ಅರ್ಹ. ಈ ಕಲಾಕೃತಿಗಳನ್ನು ನೋಡಿ ಮುಂದೆ ಸಾಗಿದಾಗ ತಾಯಿಮುದ್ದಮ್ಮ ದೇಗುಲ ನೋಡಬಹುದು. ಅಲ್ಲಿಂದ ಮುಂದೆ ಕರೆಯ ಮೇಲೆ ವಾಯುವಿಹಾರ ಮಾಡಲು ಉತ್ತಮ ಮಾರ್ಗವಿದೆ.ನಾನು ಆ  ಮಾರ್ಗದಲ್ಲಿ ಕೆಲ ಮೀಟರ್ ವಾಕ್ ಮಾಡುತ್ತಾ ಸುತ್ತಲೂ ಇರುವ ಬೆಟ್ಟಗಳು ಮತ್ತು ಕೆರೆಯ ನೀರನ್ನು ಕಂಡು ಸಂತಸ ಪಟ್ಟು ನನ್ನ ಬೈಕ್ ಏರಿ ತುಮಕೂರಿನ ಕಡೆಗೆ ಹಿಂತಿರುಗಿದೆ.

ನಿಮಗೆ ಐತಿಹಾಸಿಕ ತಾಣಗಳ ಬಗ್ಗೆ

ಆಸಕ್ತಿ ಇದ್ದರೆ, ಆಸ್ತಿಕರಾಗಿದ್ದರೆ,ದೈವಭಕ್ತರಾದರೆ ,ಪರಿಸರ ಪ್ರೇಮಿಯಾಗಿದ್ದರೆ ಈ ವೀಕೆಂಡ್ ನಲ್ಲಿ ನೀವು ದೇವರಾಯಪಟ್ಟಣಕ್ಕೆ ಹೋಗಿ ಬನ್ನಿ. 


ಸಿಹಿಜೀವಿ ವೆಂಕಟೇಶ್ವರ

ತುಮಕೂರು