17 ಮೇ 2025

ಐತಿಹಾಸಿಕ ತಾಣ ದೇವರಾಯ ಪಟ್ಟಣ.


 


ಐತಿಹಾಸಿಕ ತಾಣ ದೇವರಾಯ ಪಟ್ಟಣ.


ಇತ್ತೀಚೆಗೆ  ನಮ್ಮ ಇಲಾಖೆಯ ನಿಯೋಜಿತ ಕಾರ್ಯನಿಮಿತ್ತವಾಗಿ ತುಮಕೂರಿನ ಸಮೀಪದ ದೇವರಾಯ ಪಟ್ಟಣಕ್ಕೆ  ಹೋಗಿದ್ದೆ. ಬೈಕ್ ನಲ್ಲಿ ಹೊರಟ ನನ್ನನ್ನು "ದೇವಾಲಯಗಳ ಊರು ದೇವರಾಯ ಪಟ್ಟಣಕ್ಕೆ ಸ್ವಾಗತ" ಎಂಬ ಸ್ವಾಗತ ಕಮಾನು ಸ್ವಾಗತಿಸಿತು. ಸಿದ್ದಿವಿನಾಯಕ ಮತ್ತು ವೀರಾಂಜನೇಯ ದೇವಾಲಯಗಳಲ್ಲಿ ದೇವರ ದರ್ಶನ ಪಡೆದು ಐತಿಹಾಸಿಕ ಹರಿಹರೇಶ್ವರ ದೇಗುಲದ ಕಡೆ ಹೊರಟೆ.ತುಸು ದಿಬ್ಬದ ಮೇಲೆ ನನ್ನ ಗಾಡಿ ಚಲಿಸಿದ ನಂತರ ಎರಡು ಕಲ್ಲಿನ ರಚನೆಗಳು ನನ್ನ ಕಣ್ಣಿಗೆ ಬಿದ್ದವು. ಅದರಲ್ಲಿ ಮೊದಲನೇ ಸ್ಮಾರಕವೇ ಹರಿಹರೇಶ್ವರ ದೇವಾಲಯ. ಅದರ ಮುಂದಿನದು ವಿಶ್ರಾಂತಿ ಗೃಹದಂತಹ ರಚನೆ. ಈ ಎರಡೂ ಸ್ಮಾರಕಗಳ ಮುಂದಿನ ಜಲರಾಶಿಯು ಪ್ರವಾಸಿಗರ ಪ್ರಮುಖವಾದ ಆಕರ್ಷಣೆ ಅದೇ ದೇವರಾಯ ಪಟ್ಟಣದ ಕೆರೆ.

 

 ಹರಿಹರೇಶ್ವರ ದೇವಾಲಯವು ಸುಮಾರು ಐನೂರು ವರ್ಷಗಳಷ್ಟು ಹಳೆಯದಾದ ಪ್ರಾಚೀನ ದೇಗುಲವಾಗಿದ್ದು ಈಗಲೂ ಪೂಜೆ ಪುರಸ್ಕಾರಗಳು ನಡೆಯುತ್ತವೆ. ಗರ್ಭಗುಡಿಯಲ್ಲಿ  ಹರಿ ಹರರ ಸಂಯೋಜಿತ ಆಕರ್ಷಕ ವಿಗ್ರಹವಿದೆ. ಆದ್ದರಿಂದ ಈ ದೇವಸ್ಥಾನಕ್ಕೆ ಹರಿಹರೇಶ್ವರ ದೇವಾಲಯ ಎಂಬ ಹೆಸರು ಬಂದಿದೆ.

ದೇವಾಲಯದ ಒಳಗಿನ ಒಂದು ಶಾಸನವು ಈ ಪ್ರಾಚೀನ ದೇವಾಲಯವನ್ನು ನವೀಕರಿಸಲು 1913 ರಲ್ಲಿ ತಾಲ್ಲೂಕು ಆದೇಶವನ್ನು ಹೊರಡಿಸಲಾಗಿದೆ ಎಂದು ದಾಖಲಿಸುತ್ತದೆ. 

ಸ್ಥಳೀಯ ಮುಖಂಡರನ್ನು ಮಾತನಾಡಿಸಿದಾಗ ಈ ದೇವಾಲಯ ಚೋಳರ ಅವಧಿಯಲ್ಲಿ ನಿರ್ಮಾಣವಾಗಿದೆ ಎಂದರು.ದೇವರಾಯ ಪಟ್ಟಣದ ನಾಗರೀಕರ ಬಾಯಲ್ಲಿ ಈ ಗುಡಿಯನ್ನು ಚೋಳರ ಗುಡಿ ಎಂದು ಜನಜನಿತವಾಗಿದೆ.

 

ದೇವಾಲಯದ ಮೂಲವು ಅಸ್ಪಷ್ಟವಾಗಿದ್ದರೂ ದೇವರಾಯಪಟ್ಟಣವು 500 ವರ್ಷಗಳಿಗೂ ಹೆಚ್ಚಿನ ಇತಿಹಾಸವನ್ನು ಹೊಂದಿದೆ. ಎಪಿಗ್ರಾಫಿಯಾ ಕರ್ನಾಟಿಕಾ ಪ್ರಕಾರ  ಶ್ರೀ ತಿಮ್ಮಣ್ಣ ನಾಯಕ ಈ ಅವಧಿಯಲ್ಲಿ ದೇವರಾಯಪಟ್ಟಣದ ಮುಖ್ಯಸ್ಥರಾಗಿದ್ದರು. ಅವರ ಮಗ ಕೆಂಚ ಸೋಮಣ್ಣ ನಾಯಕ ರಾಜನ ವಿಶ್ವಾಸಾರ್ಹ ಸೇನಾಧಿಪತಿಯಾದರು.

1513 ರಲ್ಲಿ, ಕೆಂಚ ಸೋಮಣ್ಣ ತನ್ನ ಕುಟುಂಬಕ್ಕೆ ಕೃಪೆಯನ್ನು ಕೋರಿ ಸ್ಥಳೀಯ ದೇವರಿಗೆ ಒಂದು ಗ್ರಾಮವನ್ನು ದಾನ ಮಾಡಿದನು. ಅವನ ಗೌರವಾರ್ಥವಾಗಿ ಎರಡು ಗ್ರಾಮಗಳಿಗೆ ಕೆಂಚನಪಾಳ್ಯ ಮತ್ತು ಕೆಂಚನಕೋಟೆ ಎಂದು ಮರುನಾಮಕರಣ ಮಾಡಲಾಯಿತು ಎಂಬ ಉಲ್ಲೇಖವಿದೆ.





ದೇವಾಲಯದ ಮುಂದೆ ಇರುವ ಮಂಟಪದಂತಹ ಸ್ಮಾರಕವನ್ನು ಬೃಹತ್ ಕಲ್ಲು ಬಂಡೆಗಳಿಂದ ನಿರ್ಮಿಸಲಾಗಿದೆ.ಚೋಳರ ಕಾಲದಲ್ಲಿ ಸೈನಿಕರ ತಂಗುದಾಣವಾಗಿ ಇದನ್ನು ನಿರ್ಮಿಸಲಾಗಿದೆ ಎಂದು ಕೆಲವರು ಹೇಳುತ್ತಾರೆ.

ಹರಿಹರೇಶ್ವರ ದೇವಾಲಯದ ಜೀರ್ಣೋದ್ಧಾರ ಟ್ರಸ್ಟ್ ನವರು ಆಗಾಗ್ಗೆ ಈ ದೇವಾಲಯವನ್ನು  ಜೀರ್ಣೋದ್ಧಾರ ಮಾಡಿದ ಬಗ್ಗೆ ಅಲ್ಲಿನ ಶಿಲಾ ಫಲಕಗಳಲ್ಲಿ ಉಲ್ಲೇಖಿಸಿರುವುದನ್ನು ನಾನು ಗಮನಿಸಿದೆ. ಈಗ ಮತ್ತೊಮ್ಮೆ ಈ ಸ್ಮಾರಕಗಳ ಜೀರ್ಣೋದ್ಧಾರ ಮಾಡುವ ಅಗತ್ಯವಿದೆ.


ಈ ದೇವಾಲಯದ ಎಡಭಾಗದಲ್ಲಿರುವ ಬೃಹತ್ ಏಕಶಿಲೆಯು ಇಲ್ಲಿನ ಮತ್ತೊಂದು ಆಕರ್ಷಣೆ.

ಭಗವಾನ್ ಹನುಮಂತನು ಸಂಜೀವಿನಿ ಪರ್ವತವನ್ನು ಎತ್ತುತ್ತಿರುವ ವಿಗ್ರಹ ಸುಂದರವಾಗಿದೆ. ಅದೇ ಕಲ್ಲಿನ ಮೇಲೆ    ಶ್ರೀಕೃಷ್ಣನು ಕಾಳಿಂಗ ಮರ್ಧನ ಮಾಡುವ ವರ್ಣ ಚಿತ್ರವನ್ನು ಕಲಾವಿದರು ಚಿತ್ರಿಸಿದ್ದಾರೆ ಆ ಕಲಾವಿದರು ಮೆಚ್ಚುಗೆಗೆ ಅರ್ಹ. ಈ ಕಲಾಕೃತಿಗಳನ್ನು ನೋಡಿ ಮುಂದೆ ಸಾಗಿದಾಗ ತಾಯಿಮುದ್ದಮ್ಮ ದೇಗುಲ ನೋಡಬಹುದು. ಅಲ್ಲಿಂದ ಮುಂದೆ ಕರೆಯ ಮೇಲೆ ವಾಯುವಿಹಾರ ಮಾಡಲು ಉತ್ತಮ ಮಾರ್ಗವಿದೆ.ನಾನು ಆ  ಮಾರ್ಗದಲ್ಲಿ ಕೆಲ ಮೀಟರ್ ವಾಕ್ ಮಾಡುತ್ತಾ ಸುತ್ತಲೂ ಇರುವ ಬೆಟ್ಟಗಳು ಮತ್ತು ಕೆರೆಯ ನೀರನ್ನು ಕಂಡು ಸಂತಸ ಪಟ್ಟು ನನ್ನ ಬೈಕ್ ಏರಿ ತುಮಕೂರಿನ ಕಡೆಗೆ ಹಿಂತಿರುಗಿದೆ.

ನಿಮಗೆ ಐತಿಹಾಸಿಕ ತಾಣಗಳ ಬಗ್ಗೆ

ಆಸಕ್ತಿ ಇದ್ದರೆ, ಆಸ್ತಿಕರಾಗಿದ್ದರೆ,ದೈವಭಕ್ತರಾದರೆ ,ಪರಿಸರ ಪ್ರೇಮಿಯಾಗಿದ್ದರೆ ಈ ವೀಕೆಂಡ್ ನಲ್ಲಿ ನೀವು ದೇವರಾಯಪಟ್ಟಣಕ್ಕೆ ಹೋಗಿ ಬನ್ನಿ. 


ಸಿಹಿಜೀವಿ ವೆಂಕಟೇಶ್ವರ

ತುಮಕೂರು


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ