02 ಜುಲೈ 2024

ದೃಷ್ಟಿಹೀನರ ಬಾಳಿನ ಬೆಳಕು ಲೂಯಿಸ್ ಬ್ರೈಲ್

 






ಲೂಯಿಸ್ ಬ್ರೈಲ್ 


ಮೇದಾವಿಯ ಸ್ಪರ್ಶ (ದಿ ಟಚ್ ಆಫ್ ಜೀನಿಯಸ್)


ದೃಷ್ಟಿ ದೋಷವಿರುವವರಿಗಾಗಿ  ಸ್ಪರ್ಶ ಆಧಾರಿತ ಓದುವ ಮತ್ತು ಬರೆಯುವ ವ್ಯವಸ್ಥೆಗಾಗಿ 'ಸಾರ್ವಕಾಲಿಕ 100 ಉನ್ನತ ಆವಿಷ್ಕಾರಕರು'ಎಂದು   ಗುರುತಿಸಲ್ಪಟ್ಟ ಲೂಯಿಸ್ ಬ್ರೈಲ್ ರವರು ಜಗತ್ತಿಗೆ ಅತ್ಯಮೂಲ್ಯವಾದ ಕೊಡುಗೆ  ನೀಡಿದ್ದಾರೆ.


ಸಾಮಾನ್ಯ ಬಾಲಕ ಲೂಯಿಸ್ ಬ್ರೈಲ್‌ನನ್ನು  ನಾಯಕನನ್ನಾಗಿ ಮಾಡಿದ ದುರಂತದ ಕಥೆ ಇದು.  1812 ರಲ್ಲಿ ಮೂರು ವರ್ಷದ ಲೂಯಿಸ್ ಫ್ರಾನ್ಸ್‌ನ ಕೂಪ್ವ್ರೆಯಲ್ಲಿ ತನ್ನ ತಂದೆಯ ಚರ್ಮದ ಅಂಗಡಿಯಲ್ಲಿ ಆಡುತ್ತಿದ್ದನು. ಅವರ ತಂದೆ  ಕುದುರೆಗಾಡಿಗಳಿಗೆ ಚರ್ಮದ ವಸ್ತುಗಳನ್ನು ತಯಾರಿಸುವ ಕೆಲಸ ಮಾಡುತ್ತಿದ್ದರು. ಈ  ಹುಡುಗನು ಗಟ್ಟಿಯಾದ ಚರ್ಮದಲ್ಲಿ ರಂಧ್ರಗಳನ್ನು ಚುಚ್ಚಲು ಬಳಸುವ  ಮೊನಚಾದ ಉಪಕರಣದೊಂದಿಗೆ ಆಟವಾಡುತ್ತಿದ್ದಾಗ ಅದು ಜಾರಿ ಅವನ ಕಣ್ಣಿಗೆ ಚುಚ್ಚಿತು!


ಗಾಯದಿಂ ಎರಡೂ ಕಣ್ಣುಗಳಿಗೆ ಸೋಂಕು ತಗುಲಿತು. ಲೂಯಿಸ್ಗೆ ಅವನ ಪ್ರಪಂಚವು ಇದ್ದಕ್ಕಿದ್ದಂತೆ ಏಕೆ ಕತ್ತಲೆಯಾಯಿತು ಎಂಬುದನ್ನು ಅರ್ಥಮಾಡಿಕೊಳ್ಳಲು   ಸಾಧ್ಯವಾಗಲಿಲ್ಲ.


ಲೂಯಿಸ್ ತುಂಬಾ ಬುದ್ದಿವಂತ ಮತ್ತು ತ್ವರಿತವಾಗಿ ಪಾಠಗಳನ್ನು ಕಂಠಪಾಠ ಮಾಡುತ್ತಿದ್ದ ಆದರೆ ಸ್ಥಳೀಯ ಶಾಲೆಯಲ್ಲಿ ಕಲಿಕೆ ಸರಿಯಾಗಲಿಲ್ಲ.  

ಕೊನೆಗೆ ಪ್ಯಾರಿಸ್‌ನಲ್ಲಿರುವ ದೃಷ್ಟಿ ದೋಷವಿರುವವರಿಗೆ ಇರುವ  ವಿಶೇಷ ಶಾಲೆಗೆ ಸೇರಿದ. ಆದರೆ ಅದಕ್ಕೂ ಮಿತಿಗಳಿದ್ದವು. ಉದಾಹರಣೆಗೆ ಆ ತರಗತಿಯಲ್ಲಿ ಕೇವಲ ಹದಿನಾಲ್ಕು ಪುಸ್ತಕಗಳನ್ನು ಓದಬೇಕಿತ್ತು. ದೃಷ್ಟಿಹೀನರಿಗಾಗಿ ಪುಸ್ತಕಗಳನ್ನು ತಯಾರಿಸುವುದು ಕಷ್ಟಕರವಾಗಿತ್ತು ಮತ್ತು ತುಂಬಾ ದೊಡ್ಡ ಅಕ್ಷರಗಳನ್ನು ಬಳಸಿದ ಪರಿಣಾಮವಾಗಿ ಪುಸ್ತಕಗಳು ಭಾರವಾಗಿದ್ದವು. ದೊಡ್ಡ ಅಕ್ಷರಗಳ ಬಳಕೆಯ ಪರಿಣಾಮವಾಗಿ ಒಂದೊಂದು ಪುಟಕ್ಕೆ  ಕೆಲವೇ ವಾಕ್ಯಗಳು ಮಾತ್ರ ಇದ್ದವು.


"ವಿಶಾಲ ಅರ್ಥದಲ್ಲಿ ಸಂವಹನಕ್ಕೆ ಅವಕಾಶ ನೀಡಿದರೆ    ಜ್ಞಾನಕ್ಕೆ ಅವಕಾಶ ನೀಡಿದಂತೆ" 



ಲೂಯಿಸ್ ಒಬ್ಬ ಪ್ರತಿಭಾನ್ವಿತ ಸೆಲ್ಲೋ ಮತ್ತು ಆರ್ಗನ್ ಪ್ಲೇಯರ್ ಆಗಿದ್ದರು. ಅವರು ಪ್ಯಾರಿಸ್‌ನ ಕೆಲವು ದೊಡ್ಡ  ಚರ್ಚ್‌ಗಳಲ್ಲಿ ತಮ್ಮ ಸಂಗೀತದ ಪ್ರತಿಭೆ ಪ್ರದರ್ಶಿಸಿದ್ದರು. ಆದರೂ ಅವನ ಮನಸ್ಸು ದೃಷ್ಟಿ ಹೀನರಿಗೆ  ಸುಲಭವಾಗಿ ‘ಬೆರಳಿನಲ್ಲಿ ಓದಲು’ ಸಹಾಯ ಮಾಡಲು ಏನಾದರೂ ಮಾಡಬೆಕೆಂದು ಹಾತೊರೆಯುತ್ತಿತ್ತು.

ಮನಸ್ಸಿನಲ್ಲಿ ಅದೇ ವಿಷಯದ ಬಗ್ಗೆ ಚಿಂತನ ಮಂಥನ ಮಾಡುವಾಗ ಒಂದು

ರಜೆಯ ದಿನದಂದು ಮನೆಯಲ್ಲಿದ್ದಾಗ  ಲೂಯಿಸ್ ಮಹಾ ಹೊಳಹು  ಹೊಳೆಯಿತು!  ಶಾಲೆಯಲ್ಲಿ ಓದುವಾಗ  ಸೈನಿಕರು ಕತ್ತಲೆಯಲ್ಲಿ ಬಳಸುವ ರಹಸ್ಯ ಸಂಕೇತದ ಬಗ್ಗೆ ಕೇಳಿದ್ದರು. ಇದನ್ನು ಚಾರ್ಲ್ಸ್ ಬಾರ್ಬಿಯರ್ ಎಂಬ ಸೇನಾ ಕ್ಯಾಪ್ಟನ್ ಅಭಿವೃದ್ಧಿಪಡಿಸಿದ್ದರು.  ಕಾಗದದ ಮೇಲೆ ಸ್ಪರ್ಶಿಸಿ 'ಅನುಭವಿಸಬಹುದಾದ' ಡ್ಯಾಶ್‌ಗಳು ಮತ್ತು ಚುಕ್ಕೆಗಳ ಸರಣಿಯನ್ನು ಬಳಸಲಾಗಿತ್ತು. 

ಇದೇ ತಂತ್ರ ಬಳಸಿ ಅದ್ಭುತ ಸಾಧಿಸಲು ಹದಿನೈದು ವರ್ಷ ವಯಸ್ಸಿನ ಲೂಯಿಸ್ ಸಿದ್ದನಾದ  ಚುಕ್ಕೆಗಳ ಮಾದರಿಯನ್ನು ರೂಪಿಸಲು ಚರ್ಮದಲ್ಲಿ ರಂಧ್ರಗಳನ್ನು ಮಾಡಲು ತನ್ನ ಕಣ್ಣು ಶಾಶ್ವತ ಅಂಧತ್ವಕ್ಕೆ ಕಾರಣವಾದ  ಚೂಪಾದ ಆಯುಧ ಬಳಸಿದ!    ಹಲವಾರು ಸತತ ಪ್ರಯತ್ನದ ಫಲವಾಗಿ ವರ್ಣಮಾಲೆಯ ಅಕ್ಷರಗಳನ್ನು ಪ್ರತಿನಿಧಿಸಲು ಅವುಗಳನ್ನು ಮರುಜೋಡಿಸಿ  ಮರುಸ್ಥಾಪಿಸಿದ.


 1829 ರಲ್ಲಿ  ಅಧಿಕೃತವಾಗಿ 'ಬ್ರೈಲ್' ಎಂಬ ಈ ಹೊಸ ವ್ಯವಸ್ಥೆಯನ್ನು ಪ್ರಕಟಿಸಿದಾಗ ಲೂಯಿಸ್ ಬ್ರೈಲ್ ಗೆ  ಇಪ್ಪತ್ತು ವರ್ಷ ವಯಸ್ಸು.  ಮುಂದಿನ ಕೆಲವು ವರ್ಷಗಳ ಕಾಲ ಅದರ ಮೇಲೆ ಕೆಲಸ ಮಾಡಿದರು. ಬ್ರೈಲ್‌ನ ಚುಕ್ಕೆಗಳ ವ್ಯವಸ್ಥೆಯು ಬೆರಳಿನ ಸ್ಪರ್ಶದಿಂದ ಓದಲು ಹೆಚ್ಚು ಸುಲಭವಾಗಿತ್ತು. ಆದರೆ ಔಪಚಾರಿಕವಾಗಿ ಅಳವಡಿಸಿಕೊಳ್ಳಲು ಹೆಚ್ಚು ಸಮಯ ತೆಗೆದುಕೊಂಡಿತು. 1870 ರ ಹೊತ್ತಿಗೆ ಇದು ಫ್ರಾನ್ಸ್ ಮತ್ತು ಇತರ ದೇಶಗಳಲ್ಲಿಯೂ ಬಳಕೆಗೆ ಬಂತು.


ಸಿಹಿಜೀವಿ ವೆಂಕಟೇಶ್ವರ

ತುಮಕೂರು

ಪಿನ್ ನಂಬರ್ ಗೊತ್ತಾ?

 


 ಪಿನ್ ನಂಬರ್ ಗೊತ್ತಾ?


ನಾವು ನಮ್ಮ ಪ್ರಮುಖ ದಾಖಲೆಗಳನ್ನು ಬರೆಯುವಾಗ , ಅರ್ಜಿಗಳನ್ನು ತುಂಬುವಾಗ ಪಿನ್ ಕೋಡ್ ಅಥವಾ ಜಿಪ್ ಕೋಡ್ ತುಂಬಲೇ ಬೇಕು.ಎಷ್ಟೋ ಜನರಿಗೆ ಈ ಪಿನ್ ಬಗ್ಗೆ ಗೊತ್ತೇ ಇರುವುದಿಲ್ಲ ‌ಕೆಲವರು ತಕ್ಷಣವೇ ಗೂಗಲಿಸಿ ಆ ಪಿನ್ ನಮೂದಿಸಿ ಮತ್ತೆ ಮರೆತುಬಿಡುವರು. ಇದು ಮರೆಯುವಂತದ್ದಲ್ಲ ನಮ್ಮ ನಾವಿರುವ ಸ್ಥಳದ ಮೂಲ ವಿಳಾಸ ಅದನ್ನು ಸದಾ ನೆನೆಪಿಟ್ಟುಕೊಳ್ಳುವುದು ಅಗತ್ಯ ಮತ್ತು ಅನಿವಾರ್ಯ. 

ಪಿನ್ ಕೋಡ್ ,ಪೋಸ್ಟಲ್ ಇಂಡೆಕ್ಸ್ ,ಅಂಚೆ ಸೂಚ್ಯಂಕ ಸಂಖ್ಯೆ (ಪಿನ್ ಕೋಡ್) ಎಂಬುದು ಆಂಗ್ಲ ಭಾಷೆಯ ಪೋಸ್ಟಲ್ ಇಂಡೆಕ್ಸ್ ನಂಬರ್ (Postal Index Number) ಎಂಬುದರ ಪಾರಿಭಾಷಿಕ ಪದ. ಅದು ಅಂಚೆ ಕಛೇರಿಗಳಿಗೆ ಭಾರತೀಯ ಅಂಚೆ ಇಲಾಖೆಯ ಆಡಳಿತವು ಬಳಸುವ ಸಂಖ್ಯಾ ವ್ಯವಸ್ಥೆ. ಅದು ಆರು ಅಂಕೆಗಳನ್ನು ಹೊಂದಿರುತ್ತದೆ. ಈ ವ್ಯವಸ್ಥೆಯನ್ನು 15 ಆಗಸ್ಟ್ 1962 ರಂದು ಜಾರಿಗೆ ತರಲಾಯಿತು.

ಎಂಟು ಪ್ರಾದೇಶಿಕ ವಲಯಗಳು ಮತ್ತು ಭಾರತೀಯ ಸೇನೆಗಾಗಿಯೇ ಒಂದು ಸಕ್ರಿಯವಾದ ವಲಯ ಸೇರಿದಂತೆ ಭಾರತದಲ್ಲಿ ಒಂಬತ್ತು ಪಿನ್ ಕೋಡ್ ವಲಯಗಳು ಇವೆ. ಪಿನ್ ಕೋಡ್ ಮೊದಲ ಅಂಕಿಯು "ವಲಯ"ವನ್ನೂ, ಎರಡನೇ ಅಂಕಿಯ "ಉಪವಲಯ"ವನ್ನೂ, ಮೂರನೇ ಅಂಕಿಯು ಅಂಚೆ-ವಿಂಗಡಣೆಯ "ಜಿಲ್ಲೆ"ಯನ್ನೂ ಸೂಚಿಸುತ್ತವೆ. ಕೊನೆಯ ಮೂರು ಅಂಕೆಗಳ ಗುಂಪು "ಅಂಚೆ ಕಛೇರಿ"ಯನ್ನು ನಿರ್ದೇಶಿಸುತ್ತದೆ.

ಭಾರತ ಸರ್ಕಾರದ ಸಂವಹನ ಸಚಿವಾಲಯದ ಹೆಚ್ಚುವರಿ ಕಾರ್ಯದರ್ಶಿ ಶ್ರೀರಾಮ್ ಭಿಕಾಜಿ ವೆಲಂಕರ್ ಭಾರತದಲ್ಲಿ ಮೊದಲು ಪಿನ್ ವ್ಯವಸ್ಥೆ  ಪರಿಚಯಿಸಿದರು. ತಪ್ಪಾದ ವಿಳಾಸಗಳು, ಒಂದೇ ರೀತಿಯ ಸ್ಥಳದ ಹೆಸರುಗಳು ಮತ್ತು ಸಾರ್ವಜನಿಕರು ಬಳಸುವ ವಿವಿಧ ಭಾಷೆಗಳಲ್ಲಿ ಗೊಂದಲವನ್ನು ನಿವಾರಿಸಲು, ಹಸ್ತಚಾಲಿತ ವಿಂಗಡಣೆ ಮತ್ತು ಅಂಚೆ ವಿತರಣೆಯನ್ನು ಸರಳಗೊಳಿಸುವ ಈ ವ್ಯವಸ್ಥೆಯನ್ನು ಪರಿಚಯಿಸಲಾಯಿತು.


ಎಂಟು ಪ್ರಾದೇಶಿಕ ವಲಯಗಳು ಮತ್ತು ಒಂದು ಕ್ರಿಯಾತ್ಮಕ ವಲಯ (ಭಾರತೀಯ ಸೇನೆಗೆ) ಸೇರಿದಂತೆ ಭಾರತದಲ್ಲಿ ಒಂಬತ್ತು ಅಂಚೆ ವಲಯಗಳಿವೆ. 



ಸಿಹಿಜೀವಿ ವೆಂಕಟೇಶ್ವರ

ತುಮಕೂರು


01 ಜುಲೈ 2024

ವೈದ್ಯರಿಗೆ ನಮನಗಳು ...ಇಂದು ವೈದ್ಯರ ದಿನ

 




ವೈದ್ಯರ ದಿ‌ನ 

"ವೈದ್ಯೋ ನಾರಾಯಣ ಹರಿ"ಎಂಬಂತೆ ಡಾಕ್ಟರ್ ಗಳು ದೇವರ ಸಮಾನ.ಸಮಾಜದಲ್ಲಿ ಅವರಿಗೆ ತಮ್ಮದೇ ಆದ ಗೌರವವಿದೆ.ಅವರ ಸೇವೆಯನ್ನು ಎಷ್ಟು ಸ್ಮರಿಸಿ ‌ಕೃತಜ್ಞತೆ ಸಲ್ಲಿಸಿದರೂ ಸಾಲದು ಆದರೂ ಅವರಿಗಾಗಿ ರಾಷ್ಟ್ರ ಮಟ್ಟದಲ್ಲಿ ಒಂದು ದಿನವನ್ನು ಮೀಸಲಿಡಲಾಗಿದೆ ಮತ್ತು 
ಭಾರತದಲ್ಲಿ ಜುಲೈ 1 ರಂದು ರಾಷ್ಟ್ರೀಯ ವೈದ್ಯರ ದಿನವನ್ನು ಆಚರಿಸಲಾಗುತ್ತದೆ:

 ಮಾನವೀಯತೆಗೆ ಅವರ ನಿಸ್ವಾರ್ಥ ಸೇವೆಗಾಗಿ ವೈದ್ಯರು ಮತ್ತು ಆರೋಗ್ಯ ವೃತ್ತಿಪರರನ್ನು ಗೌರವಿಸಲು ಈ ದಿನವನ್ನು ಆಚರಿಸಲಾಗುತ್ತದೆ.ಪ್ರಸಿದ್ಧ ವೈದ್ಯ ಮತ್ತು ಪಶ್ಚಿಮ ಬಂಗಾಳದ ಮಾಜಿ ಮುಖ್ಯಮಂತ್ರಿಯಾಗಿದ್ದ ಡಾ. ಬಿಧನ್ ಚಂದ್ರ ರಾಯ್ ಅವರ ಜನ್ಮದಿನವನ್ನು ವೈದ್ಯರ ದಿನವೆಂದು ಆಚರಿಸಲಾಗುತ್ತದೆ. ಡಾ. ರಾಯ್ ಅವರು ಜುಲೈ 1, 1882 ರಂದು ಜನಿಸಿದರು
ಪಶ್ಚಿಮ ಬಂಗಾಳದ ಎರಡನೇ ಮುಖ್ಯಮಂತ್ರಿಯಾಗಿ, ವೈದ್ಯರಾಗಿ ಬಿ ಸಿ ರಾಯ್ ವೈದ್ಯಕೀಯ ರಂಗಕ್ಕೆ ಅಮೋಘ ಕೊಡುಗೆಗಳನ್ನು ನೀಡಿದ್ದಾರೆ. ಜಾದವಪುರ್ ಟಿ ಬಿ ಆಸ್ಪತ್ರೆ, ಚಿತ್ತರಂಜನ್ ಸೇವಾ ಸದನ, ಕಮಲಾ ನೆಹರೂ ಮೆಮೋರಿಯಲ್ ಆಸ್ಪತ್ರೆ, ವಿಕ್ಟೋರಿಯಾ ಇನ್ಸ್ ಟಿಟ್ಯೂಶನ್, ಚಿತ್ತರಂಜನ್ ಕ್ಯಾನ್ಸರ್ ಆಸ್ಪತ್ರೆ ಹಾಗೂ ಮಹಿಳೆಯರು ಮತ್ತು ಮಕ್ಕಳಿಗೆ ವಿಶೇಷವಾಗಿ ತೆರೆದಿರುವ ಚಿತ್ತರಂಜನ್ ಸೇವಾ ಸದನಗಳ ಸ್ಥಾಪನೆಯಲ್ಲಿ ಬಿ ಸಿ ರಾಯ್ ಪಾತ್ರ ಪ್ರಮುಖವಾಗಿದೆ. ಇವರ ಸೇವೆಯನ್ನು ಪರಿಗಣಿಸಿ 1961ರ ಫೆಬ್ರವರಿ 4ರಂದು ಮರಣೋತ್ತರ ಭಾರತ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ತಮ್ಮ 80 ನೇ ವಯಸ್ಸಿನಲ್ಲಿ 1962 ರಲ್ಲಿ ಹುಟ್ಟಿದ  ದಿನಾಂಕದಂದೇ  ನಿಧನರಾದರು. ನಮ್ಮ ಜೀವನದಲ್ಲಿ ಮತ್ತು ಸಮಾಜದಲ್ಲಿ ವೈದ್ಯರ ಮಹತ್ವದ ಬಗ್ಗೆ ಜಾಗೃತಿ ಮೂಡಿಸಲು  ಪ್ರತಿ ವರ್ಷ ವೈದ್ಯರ  ದಿನವನ್ನು ಆಚರಿಸಲಾಗುತ್ತದೆ.
2024 ರಲ್ಲಿ ರಾಷ್ಟ್ರೀಯ ವೈದ್ಯರ ದಿನದ ಥೀಮ್ "ಹೀಲಿಂಗ್ ಹ್ಯಾಂಡ್ಸ್, ಕೇರಿಂಗ್ ಹಾರ್ಟ್ಸ್."

ಸಿಹಿಜೀವಿ ವೆಂಕಟೇಶ್ವರ
ತುಮಕೂರು

30 ಜೂನ್ 2024

ಸಿನಿಮಾ ಟಿಕೆಟ್ ಕಲೆಕ್ಟರ್ ಟು ಡಿಸ್ಟ್ರಿಕ್ಟ್ ಕಲೆಕ್ಟರ್

 


ಸಿನಿಮಾ ಟಿಕೆಟ್ ಕಲೆಕ್ಟರ್ ಟು ಡಿಸ್ಟ್ರಿಕ್ಟ್ ಕಲೆಕ್ಟರ್.


ಆತ ಚೆನ್ನೈನ ಪ್ರಖ್ಯಾತ ಸತ್ಯಂ   ಸಿನಿಮಾಸ್ ಎಂಬ ಥಿಯೇಟರ್ ನಲ್ಲಿ ತಿಂಗಳಿಗೆ ಮೂರು ಸಾವಿರ ರೂಪಾಯಿಗಳ ಸಂಪಾದನೆ ಮಾಡುವ ಉದ್ಯೋಗ ಮಾಡಿದರು.ಅದನ್ನು ತೊರೆದು  ಒಂದು ಚಿಕ್ಕ ಹೋಟೆಲ್ ನಲ್ಲಿ ಹೊಟ್ಟೆ ಪಾಡಿಗಾಗಿ  ಸರ್ವರ್ ಆಗಿ ಸೇವೆ ಸಲ್ಲಿಸುತ್ತಾ ಛಲದಿಂದ ಓದಿ ತಾನಂದುಕೊಂಡ ಮಹೋನ್ನತ ಗುರಿ ಸಾಧಿಸಿದ. ಇಂದು I A S ಅಧಿಕಾರಿಯಾಗಿ ಸಾವಿರಾರು ಜನರಿಗೆ ಸರ್ವ್ ಮಾಡುವ ವ್ಯಕ್ತಿಯಾಗಿ ಬೆಳೆದಿದ್ದಾರೆ. ಸಿನಿಮಾ ಮಂದಿರದಲ್ಲಿ ಟಿಕೆಟ್ ಕಲೆಕ್ಟರ್ ಆಗಿದ್ದವರು ಇಂದು ಡಿಸ್ಟ್ರಿಕ್ಟ್‌ ಕಲೆಕ್ಟರ್ ಆಗಿದ್ದಾರೆ. ಅವರೇ ಕೆ ಜಯ್ ಗಣೇಶ್ !


ಸಾಧಿಸುವವನಿಗೆ ಸಾಧಿಸುವ ಛಲ, ಶ್ರಮ ಆಸಕ್ತಿ ಇದ್ರೆ ಖಂಡಿತ ಯಶಸ್ಸು ಸಿಕ್ಕೇ ಸಿಗುತ್ತೆ ಅನ್ನೋದಕ್ಕೆ ಈ ವ್ಯಕ್ತಿಯೇ  ಉದಾಹರಣೆ. ಮನೆಯಲ್ಲಿ ಬಡತನ ಮನೆಯ ಜವಾಬ್ದಾರಿಯನ್ನು ಹೊಂದಿದ್ದರೂ   ಲೈಫ್ ನಲ್ಲಿ ಏನನ್ನಾದ್ರೂ ಸಾಧಿಸಬೇಕು ಈ ಬಡತನದಿಂದ ಹೊರಬರಬೇಕು ನನ್ನ ಫ್ಯಾಮಿಲಿ ಜೊತೆ ನಾಲ್ಕು ಜನಕ್ಕೆ ಅನುಕೂಲವಾಗುವಂತ ಕೆಲಸ ಏನಾದ್ರು ಮಾಡಬೇಕು ಎಂಬುದಾಗಿ ಅಂದುಕೊಂಡು ಕಷ್ಟ ಪಟ್ಟು ಓದಿ UPSC ಪರೀಕ್ಷೆಯಲ್ಲಿ ಪಾಸ್ ಆಗಿ ಇವತ್ತು IAS ಅಧಿಕಾರಿಯಾಗಿದ್ದಾರೆ.

 ಮೂಲತಃ ತಮಿಳುನಾಡಿನವರಾದ ಇವರು ಆರು ಬಾರಿ ಸಿವಿಲ್ ಸರ್ವೀಸ್ ಪರೀಕ್ಷೆಯಲ್ಲಿ ವಿಫಲತೆ ಅನುಭವಿಸಿದರೂ ಛಲ ಬಿಡದ ತ್ರಿವಿಕ್ರಮನಂತೆ ಏಳನೇ ಬಾರಿಗೆ  156 ನೇ ಸ್ಥಾನ ಪಡೆದು ದೇಶದ ಅತ್ಯುನ್ನತ ನಾಗರಿಕ ಸೇವೆ ಸೇರಿದ್ದಾರೆ. ಹೌದು ಯಾವುದೇ ಕೋಚಿಂಗ್ ಇಲ್ಲದೆ ಹೋಟೆಲ್ ನಲ್ಲಿ ಸಪ್ಲೈಯರ್ ಕೆಲಸ ಮಾಡುವ ಜೊತೆಗೆ UPSC ಪರೀಕ್ಷೆ ತಯಾರಿ ನಡೆಸುತ್ತಿದ್ದರು. 

UPSC ಪರೀಕ್ಷೆಯಲ್ಲಿ ಪಾಸ್ ಆಗುವುದು ಅಷ್ಟು ಸುಲಭದ ಮಾತಲ್ಲ ಯಾಕೆಂದರೆ ಈ ಪರೀಕ್ಷೆಯನ್ನು ಲಕ್ಷಾಂತರ ಮಂದಿ ಬರೆಯುತ್ತಾರೆ. ಅದರಲ್ಲೂ ಬಡತನದಿಂದ ಬಂದ ಈ ಜೈ ಗಣೇಶ್ ಅವರಿಗೆ ಇನ್ನೂ ಕಷ್ಟದ ಹಾದಿಯಾಗುತ್ತದೆ. ಕೆ.ಜಯಗಣೇಶ್  ಅವರು ವೆಲ್ಲೂರಿನ ತಂತೈ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ತಮ್ಮ ಬಿ.ಟೆಕ್ ಪದವಿಯನ್ನು ಪೂರ್ಣಗೊಳಿಸಿದರು. ಅವರು ತಮ್ಮ ನಾಲ್ಕು ಒಡಹುಟ್ಟಿದವರಲ್ಲಿ ಹಿರಿಯರಾಗಿದ್ದರು. ಇಂತಹ ಪರಿಸ್ಥಿತಿಯಲ್ಲಿ ಕುಟುಂಬದ ಜವಾಬ್ದಾರಿಯೂ ಅವರ ಮೇಲಿತ್ತು.

ಕೆ.ಜೈಗಣೇಶ್ ಅವರು ತಮ್ಮ ಗ್ರಾಮದಲ್ಲಿ ಮೂರು ಬಾರಿ ನಾಗರಿಕ ಸೇವಾ ಪರೀಕ್ಷೆಗೆ ಅರ್ಜಿ ಸಲ್ಲಿಸಿದರು ಆದರೆ ಮೂರು ಬಾರಿ ಅನುತ್ತೀರ್ಣರಾದ ನಂತರ ಅವರು ತಮ್ಮ ಹಳ್ಳಿಯನ್ನು ತೊರೆದು ಚೆನ್ನೈಗೆ ಹೋಗಬೇಕು ಎಂದು ಅರಿತುಕೊಂಡರು ಮತ್ತು ಅಲ್ಲಿಂದ ಅವರು ತಮ್ಮ ಸಿದ್ಧತೆಯನ್ನು ಚುರುಕುಗೊಳಿಸಿದರು. ಈ ಪರಿಸ್ಥಿತಿಯಲ್ಲಿ ಅಣ್ಣಾನಗರ ತಲುಪಿ ಅಖಿಲ ಭಾರತ ಸರ್ಕಾರಿ ಸಂಸ್ಥೆಯಲ್ಲಿ ಐಎಎಸ್ ಪ್ರವೇಶ ಪಡೆದರು. ಹೊಟ್ಟೆ ಪಾಡಿಗೆ ಕೆಲ ತಿಂಗಳು ಸಿನಿಮಾ ಮಂದಿರದಲ್ಲಿ ಟಿಕೆಟ್ ನೀಡುವ ಕೆಲಸ ಮಾಡಿದರು. ನಂತರ ಹೋಟೆಲ್ ಸಪ್ಲೈಯರ್ ಆಗಿ ಕೆಲಸ ಮಾಡಿದರು.  ಐಎಎಸ್ ಅಧಿಕಾರಿಯಾಗುವ ಮೊದಲು ಜೀವನದಲ್ಲಿ ಸಾಕಷ್ಟು ಕಷ್ಟ ಪಟ್ಟು ಛಲ ಬಿಡದೆ ತನ್ನ ಗುರಿಯನ್ನು ಮುಟ್ಟಿದ್ದಾರೆ. ಎಲ್ಲಾ ಸೌಕರ್ಯಗಳಿದ್ದರೂ ಸೋಮಾರಿತನ ಹೊದ್ದು ಮಲಗುವ ,ಬೀದಿ ಸುತ್ತುತ್ತಾ ಅಪ್ರಯೋಜಕರಾದ ಸಾವಿರಾರು ಯುವಕರಿಗೆ ಜಯ್ ಗಣೇಶ್  ರಂತಹವರು ಮಾದರಿಯಾಗಬೇಕೆ ಹೊರತು ಯಾವುದೋ ಸಿನಿಮಾದ ಹೀರೋ ಅಥವಾ ಹೀರೋಯಿನ್ ಗಳಲ್ಲ ಅಲ್ಲವೆ?


ಸಿಹಿಜೀವಿ ವೆಂಕಟೇಶ್ವರ

ತುಮಕೂರು

9900925529

ವಿಶ್ವಕಪ್ ಸಂಭ್ರಮಕ್ಕೆ ಸಿಹಿಜೀವಿಯ ಐದು ಹನಿಗಳು.

 


ವಿಶ್ವಕಪ್ ಸಂಭ್ರಮಕ್ಕೆ ಸಿಹಿಜೀವಿಯ ಐದು ಹನಿಗಳು.


*ಕಪ್  ನಮ್ದೆ*


ಗೆಲುವಿನ ಬಳಿ ಸಾರಿ

ಮುಗ್ಗುರಿಸುತ್ತಿತ್ತು ಸತತ|

ಈ ಬಾರಿ ವಿಶ್ವಕಪ್ ಕಿರೀಟ

ಧರಿಸಿ ಬೀಗಿದೆ ಭಾರತ||


 *ರಾಹುಲ್  ದ್ರಾವಿಡ್*


ನಾಯಕನಾದಾಗ ಪ್ರಯತ್ನಿಸಿದರೂ 

ಕಪ್ ಗೆಲ್ಲಲಿಲ್ಲ  ಮುಸುಕಿತ್ತು ಸೋಲಿನ ಕಾರ್ಮೋಡ|

ದ್ರೋಣಾಚಾರ್ಯರಾಗಿ ವಿದ್ಯೆ

ನೀಡಿ ಕಪ್ ತಂದಿದ್ದಾರೆ ನೊಡೀಗ

ನಮ್ಮ ರಾಹುಲ ದ್ರಾವಿಡ||



*ಕೋಹ್ಲಿ*


ತಮ್ ಪಾಡಿಗೆ ತಾವ್ ಆಡ್ತಾರೆ

ಯಾರೆ ಹೊಗುಳ್ಲಿ ಬೈಯ್ಲಿ|

ಫೈನಲ್ ನಲ್ ಮಸ್ತ್ ಆಟ ಆಡಿ

ಕಪ್ ಗೆಲ್ಲೋಕೆ ಕಾರ್ಣ ಆದ್ರು ನೋಡ್ರಿ ನಮ್ ಕೋಹ್ಲಿ||



*ವಿರೋಚಿತ ಸೋಲು*


ಭಾರತ ವಿಶ್ವ ಕಪ್ ಗೆದ್ದದ್ದ ಕಂಡು

ಹೊಗಳುತಿದೆ ಲೋಕಾ|

ಗೌರವಕ್ಕೆ ಅರ್ಹ ವೀರೋಚಿತ ಸೋಲನುಭವಿಸಿದ ದಕ್ಷಿಣ ಆಫ್ರಿಕಾ||


*ಆನಂದ ಭಾಷ್ಪ* 


ಭಾರತದ ವಿಜಯಕ್ಕೆ ದೇವಾನುದೇವತೆಯರು ಹಾರೈಸಿದರು ಸುರಿಸಿ ಪುಷ್ಪ|

ಆಟಗಾರರಾದಿಯಾಗಿ ಇಡೀ

ಭಾರತವೇ ಸಂಭ್ರಮಿಸಿತು ಸುರಿಸುತ ಆನಂದಭಾಷ್ಪ||


*ಸಿಹಿಜೀವಿ ವೆಂಕಟೇಶ್ವರ*

ತುಮಕೂರು

9900925529