27 ಮಾರ್ಚ್ 2024

ಯಶಸ್ಸಿನ ಶಿಖರ ಏರೋಣ.

 


ಯಶಸ್ಸಿನ ಶಿಖರ ಏರೋಣ.


ಜೀವನದಲ್ಲಿ ಏನಾದರೂ ಸಾಧಿಸಬೇಕಾದರೆ ನಮಗೊಂದು ಸ್ಪಷ್ಟವಾದ ಗುರಿಯಿರಬೇಕು.ಜೊತೆಗೆ ಮಾರ್ಗದರ್ಶನ ಮಾಡಲು ಗುರುವಿರಬೇಕು.  "ಮಾರ್ನೇ ತೋ ಹಾತಿ ಮಾರೋ ಲೂಟ್ನೇ ತೊ ಭಂಡಾರ್ ಲೂಟೋ " ಎಂಬಂತೆ   ಚಿಕ್ಕ ಗುರಿಯನ್ನು ಹೊಂದದೆ ದೊಡ್ಡ ಗುರಿಯನ್ನು ಇಟ್ಟುಕೊಂಡು ಆ ಕಡೆ ಸಾಗಬೇಕು.

 ನಮ್ಮ ಗುರಿಯೆಡೆಗೆ ಸಾಗುವಾಗ ನಮಗೆ ಕೆಲ ಅಡೆತಡೆಗಳು ಬರುವುದು ಸಹಜ ಅವುಗಳ ಮೆಟ್ಟಿ ಮುಂದೆ ಸಾಗಬೇಕು. ಅದರಂತೆ ಅಲ್ಲಲ್ಲಿ ನಮಗೆ ಯಶಸ್ಸು ಕೂಡಾ ಸಿಗುತ್ತವೆ ಆ ಯಶಸ್ಸು ನಮ್ಮ ತಲೆಗೇರಬಾರದು.ಆ ಯಶಸ್ಸಿಗೆ ಸಂತಸಪಟ್ಟು ಮುಂದೆ ಸಾಗಬೇಕು. ಏಕೆಂದರೆ ಯಶಸ್ಸಿಗೆ ಪುಲ್ ಸ್ಟಾಪ್ ಇಲ್ಲ ಬರೀ ಕಾಮಾಗಳು ಮಾತ್ರ ಇರುತ್ತವೆ. ನಮ್ಮ ಯಶಸ್ಸಿನ ಪಯಣ ನಿರಂತರವಾಗಿರಬೇಕು.


 ಕಂಫರ್ಟ್ ಜೋನ್ ನಿಂದ ಹೊರಬಂದು ರಿಸ್ಕ್ ತೆಗೆದುಕೊಂಡ ಮಹನಿಯರು ಜೀವನದಲ್ಲಿ ಉನ್ನತವಾದದ್ದನ್ನು ಸಾಧಿಸಿದ್ದಾರೆ. ಈ ನಿಟ್ಟಿನಲ್ಲಿ ನಾವು ಯೋಚಿಸಬಹುದು ಫಾರ್ಚೂನ್ ಪೇವರ್ಸ್ ದ ಬ್ರೇವ್ ಎಂಬಂತೆ ಒಳ್ಳೆಯ ಕೆಲಸ ಮಾಡಲು ಕ್ಯಾಲ್ಕುಲೇಟೆಡ್ ರಿಸ್ಕ್ ತೆಗೆದುಕೊಂಡು ಯಶಸ್ಸು ಪಡೆಯಲು ಪ್ರಯತ್ನ ಮಾಡಬಹುದು.


 ಯಶಸ್ಸಿನೆಡೆಗಿನ ನಮ್ಮ ಪಯಣದಲ್ಲಿ ಆಗಾಗ್ಗೆ ನಮ್ಮನ್ನು ಎದೆಗುಂದಿಸುವ ಟೀಕೆಗಳು ಎದುರಾಗಬಹುದು ಅವುಗಳ ಬಗ್ಗೆ ಅಷ್ಟು ತಲೆಕೆಡಿಸಿಕೊಳ್ಳದೇ ನಮ್ಮ ಕರ್ತವ್ಯಗಳಿಂದ ಅವರಿಗೆ ಉತ್ತರ ನೀಡಬೇಕು.ಉನ್ನತ ಸಾಧನೆಯ ಹಾದಿಯಲ್ಲಿ  ಕಲ್ಲು ಮುಳ್ಳುಗಳ ದಾಟಿದ ಮೇಲೆ ಯಶಸ್ಸಿನ ಶಿಖರ ಖಂಡಿತವಾಗಿಯೂ ಸಿಕ್ಕೇ ಸಿಗುತ್ತದೆ.


ಸಿಹಿಜೀವಿ ವೆಂಕಟೇಶ್ವರ

ತುಮಕೂರು

ಶಿಕ್ಷಣದಲ್ಲಿ ರಂಗಕಲೆ ಇಂದಿನ ಅಗತ್ಯ


  

ಶಿಕ್ಷಣದಲ್ಲಿ ರಂಗಕಲೆ ಇಂದಿನ ಅಗತ್ಯ


ವಿದ್ಯಾರ್ಥಿಗೆ ಕೇವಲ ಪರಿಕಲ್ಪನೆಯ ಬಗ್ಗೆ ತಿಳಿಸುವುದು ಸಾಕಾಗುವುದಿಲ್ಲ. ಉತ್ತಮ ಶಿಕ್ಷಕರು ವಿದ್ಯಾರ್ಥಿಯಲ್ಲಿ ವಿಮರ್ಶಾತ್ಮಕ ಚಿಂತನೆಯ ಸಾಮರ್ಥ್ಯವನ್ನು ಮತ್ತು ಮೌಲ್ಯ ಶಿಕ್ಷಣವನ್ನು ಪ್ರೇರೇಪಿಸಬೇಕು  ಅದಕ್ಕೆ ರಂಗಕಲೆಯು ಉಪಯುಕ್ತ ಎಂದು ಮಹಾನ್ ತತ್ವಜ್ಞಾನಿ ಪ್ಲೇಟೋ ತಾನು ಅಕಾಡೆಮಿಯನ್ನು ಆರಂಭಿಸಿದ ಕಾಲದಲ್ಲೇ ಹೇಳಿದ್ದರು.

ನಾಟಕಗಳನ್ನು  ಬೋಧನಾ ಸಾಧನವಾಗಿ ಬಳಸುವ ಮೂಲಕ ವಿದ್ಯಾರ್ಥಿಗಳು ಬೌದ್ಧಿಕವಾಗಿ, ದೈಹಿಕವಾಗಿ, ಸಾಮಾಜಿಕವಾಗಿ ಅಥವಾ ಭಾವನಾತ್ಮಕವಾಗಿ ಎಲ್ಲ ರೀತಿಯಲ್ಲೂ ಬೆಳವಣಿಗೆಗೆ ಹಾಗೂ   ಸಮಗ್ರ ಕಲಿಕೆಗೆ ಕಾರಣವಾಗುತ್ತದೆ.

ಇದರ ಜೊತೆಯಲ್ಲಿ  ಜೀವನ ಕೌಶಲ್ಯಗಳು, ಸಮಸ್ಯೆಗಳನ್ನು ಪರಿಹರಿಸುವ ಕೌಶಲ್ಯಗಳು, ನಾಯಕತ್ವ, ಸಹಕಾರ ಮತ್ತು ಸಹಯೋಗದೊಂದಿಗೆ ವಿದ್ಯಾರ್ಥಿಗಳಿಗೆ ನೀಡುತ್ತದೆ. 


 'ನಾಟಕ' ಪದವು ವಾಸ್ತವವಾಗಿ ಗ್ರೀಕ್ ಪದ 'ಡ್ರಾಮಾ'ಅಥವಾ'ಡ್ರಾವೋ' ನಿಂದ ತೆಗೆದುಕೊಳ್ಳಲಾಗಿದೆ, ಇದು 'ನಾನು ಮಾಡುತ್ತೇನೆ' ಅಥವಾ ಕ್ರಿಯೆಯನ್ನು ಸೂಚಿಸುತ್ತದೆ. ಹೀಗಾಗಿ, ನಾಟಕೀಯ, ರೇಡಿಯೋ, ಟಿವಿ ಅಥವಾ ಕಾಲ್ಪನಿಕ ಕಥೆಯ ನೇರ ಪ್ರದರ್ಶನಗಳ ಮೂಲಕ ನಟನೆ ಅಥವಾ ಪ್ರದರ್ಶನ ಕ್ರಿಯೆಯು ನಾಟಕದಲ್ಲಿ ಬರುತ್ತದೆ.


ಶಿಕ್ಷಣದಲ್ಲಿ ರಂಗಕಲೆಯ ಮಹತ್ವ


ಬರೀ ಸ್ಪೂನ್ ಫೀಡ್ ಮಾಡಿದ ಮಾಹಿತಿ ಮತ್ತು ವಿದ್ಯಾರ್ಥಿಗಳು ಉರುಹೊಡೆದು ಹಾಕುವುದು ಸಮಾಜಕ್ಕೆ ಹಾನಿಕಾರಕ. ವಿದ್ಯಾರ್ಥಿಗಳಲ್ಲಿ ಸೃಜನಶೀಲತೆ, ಸ್ಮಾರ್ಟ್ ಕಲಿಕೆ, ವಿಮರ್ಶಾತ್ಮಕ ಚಿಂತನೆ ಮತ್ತು ತಾರ್ಕಿಕ ಚಿಂತನೆಯ  ಉತ್ತೇಜಿಸಲು , ನಾಟಕ ಮತ್ತು ಕಲೆಗಳು ಶಿಕ್ಷಣ ಪ್ರಕ್ರಿಯೆಯಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತವೆ. ನಿಯಂತ್ರಿತ ವಾತಾವರಣದಲ್ಲಿ, ಒಂದು ಐತಿಹಾಸಿಕ ದೃಶ್ಯವನ್ನು ಪುನರಾವರ್ತಿಸಲು ವಿದ್ಯಾರ್ಥಿಗಳ ಗುಂಪನ್ನು ಕೇಳಿದರೆ, ವಿದ್ಯಾರ್ಥಿಗಳು ಇತಿಹಾಸದಿಂದ ಹೆಸರುಗಳು ಮತ್ತು ದಿನಾಂಕಗಳ ಗುಂಪನ್ನು ಸಂಗ್ರಹಿಸದೆಯೇ ನೆನಪಿಟ್ಟುಕೊಳ್ಳಲು ಮತ್ತು ಅರ್ಥಮಾಡಿಕೊಳ್ಳಲು ಸುಲಭವಾಗುತ್ತದೆ. ಪರಿಣಾಮಕಾರಿ ಕಲಿಕೆಯನ್ನು ಉತ್ತೇಜಿಸಲು ಪ್ರಪಂಚದಾದ್ಯಂತದ ಅನೇಕ ಸಂಸ್ಥೆಗಳಲ್ಲಿ ಶಿಕ್ಷಣ ದಲ್ಲಿ ನಾಟಕ ಮತ್ತು ಕಲೆಗಳನ್ನು ಪಠ್ಯಕ್ರಮದ ಭಾಗವಾಗಿ ಅಳವಡಿಸಲಾಗಿದೆ.   ರೋಲ್-ಪ್ಲೇ ಮೂಲಕ  ವಿದ್ಯಾರ್ಥಿಗಳು ಪರಸ್ಪರ ಮತ್ತು ಗುಂಪು ಸಂವಹನ, ಮತ್ತು ಸಾರ್ವಜನಿಕ ಮಾತನಾಡುವ ಕೌಶಲ್ಯಗಳನ್ನು ಕಲಿಯುತ್ತಾರೆ ಮತ್ತು ಅವರಲ್ಲಿ ಪರಿಶೋಧನೆಯ ಕೌಶಲ್ಯವನ್ನು ಬೆಳೆಸಲು ಈ ವಿಧಾನವು ಸಹಾಯ ಮಾಡುತ್ತದೆ.


ಶಿಕ್ಷಣ ದಲ್ಲಿ ನಾಟಕ ಮತ್ತು ಕಲೆಗಳ ಪ್ರಾಮುಖ್ಯತೆಗೆ ಪ್ರಮುಖ ಕಾರಣಗಳು ಇಲ್ಲಿವೆ


ಸ್ವಯಂ ಅಭಿವ್ಯಕ್ತಿಯನ್ನು ಕಲಿಸುತ್ತದೆ


  ಮಕ್ಕಳು ಶಿಕ್ಷಣ ದಲ್ಲಿ ನಾಟಕ ಮತ್ತು ಕಲೆಗಳ ಬಳಕೆಯ ಮೂಲಕ ಮತ್ತು ಸೃಜನಶೀಲ ಅಭಿವ್ಯಕ್ತಿಯ ಮೂಲಕ ಸ್ವಯಂ ಅಭಿವ್ಯಕ್ತಿಯ ಪ್ರಾಮುಖ್ಯತೆಯ ಬಗ್ಗೆ ಕಲಿಯುತ್ತಾರೆ. ಅವರ ಗ್ರಹಿಕೆ ಮತ್ತು ವಿಶ್ವ ದೃಷ್ಟಿಕೋನವು ವಿಶಾಲವಾಗಿದೆ‌. ಇದು ಜೀವನದಲ್ಲಿ ಭವಿಷ್ಯದಲ್ಲಿ

 ಸಮಸ್ಯೆಗಳನ್ನು ಎದುರಿಸುವ ಕೌಶಲ್ಯಕ್ಕೆ ಅವರನ್ನು ಸಜ್ಜುಗೊಳಿಸುತ್ತದೆ.


ಲೈಪ್ ಸ್ಕಿಲ್ ಟ್ರೈನಿಂಗ್


ಇದು ಟೀಮ್ ವರ್ಕ್, ಸಹಾನುಭೂತಿ, ಸಹಕಾರ ಮತ್ತು ಸಹಯೋಗದಂತಹ ವಿವಿಧ ಜೀವನ ಕೌಶಲ್ಯಗಳನ್ನು ವಿದ್ಯಾರ್ಥಿಗಳಿಗೆ ನೀಡುತ್ತದೆ.


ರಚನಾತ್ಮಕ ಟೀಕೆಗಳನ್ನು ಕಲಿಯುತ್ತಾರೆ

 

 ಮಕ್ಕಳು ಉತ್ತಮ ವ್ಯಕ್ತಿಗಳಾಗಲು ಸಹಾಯ ಮಾಡುವ ರೀತಿಯಲ್ಲಿ ರಚನಾತ್ಮಕ ಟೀಕೆ ಮತ್ತು ಪ್ರತಿಕ್ರಿಯೆಯನ್ನು ಸ್ವೀಕರಿಸುವ ಬಗ್ಗೆ ಕಲಿಯುತ್ತಾರೆ.


ವ್ಯಕ್ತಿತ್ವ ವಿಕಸನಕ್ಕೆ ಸಹಕಾರಿ


 ಶಿಕ್ಷಣ ದಲ್ಲಿ ನಾಟಕ ಮತ್ತು ಕಲೆಯ ಬಳಕೆಯು ವಿದ್ಯಾರ್ಥಿಗಳಲ್ಲಿ ವ್ಯಕ್ತಿತ್ವ ವಿಕಸನವನ್ನು ವೇಗಗೊಳಿಸುತ್ತದೆ.



ಸಮಸ್ಯೆ ಪರಿಹರಿಸುವ ಕೌಶಲ ಬೆಳೆಸುತ್ತದೆ.


  ಸೃಜನಾತ್ಮಕ ಕಲಾ ಪ್ರಕಾರಗಳ ಮೂಲಕ ವಿದ್ಯಾರ್ಥಿಗಳು ಗುಂಪಿನಲ್ಲಿ ಕಲಿಯುವಾಗ ಪ್ರತಿ ಸನ್ನಿವೇಶದಲ್ಲಿ ಸಮಸ್ಯೆ ಪರಿಹರಿಸುವ ಮೌಲ್ಯದ ಬಗ್ಗೆ ಕಲಿಯುತ್ತಾರೆ.ತಂಡವಾಗಿ ಕೆಲಸ ಮಾಡುತ್ತಾ   ಸಮಸ್ಯೆ ಪರಿಹರಿಸುವಲ್ಲಿ ಅತ್ಯುತ್ತಮರಾಗುತ್ತಾರೆ.


ನಾಯಕತ್ವ ಗುಣ ಬೆಳೆಯುತ್ತದೆ.


 ಶಿಕ್ಷಣದಲ್ಲಿ ನಾಟಕ ಮತ್ತು ಕಲೆಯನ್ನು ಬಳಸುವುದು ವಿದ್ಯಾರ್ಥಿಗಳಿಗೆ ನಾಯಕನ ಟೋಪಿಯನ್ನು ಧರಿಸಲು ಮತ್ತು ನಾಯಕತ್ವ ಮತ್ತು ಟೀಮ್‌ವರ್ಕ್‌ಗೆ ಸಂಬಂಧಿಸಿದ ಕೇಂದ್ರ ಕೌಶಲ್ಯಗಳನ್ನು ಅಳವಡಿಸಿಕೊಳ್ಳಲು ಕಲಿಸುತ್ತದೆ.


ಹೀಗೆ ರಂಗಕಲೆಯು ಮಕ್ಕಳಿಗೆ ಬಹುಆಯಾಮದ ಉಪಯುಕ್ತತೆ ಒದಗಿಸುತ್ತದೆ ಅದರಲ್ಲೂ ಜೀವನದ ಕೌಶಲಗಳನ್ನು ಕಲಿಯಲು ಹಾಗೂ  ವೈಯಕ್ತಿಕವಾಗಿ ವ್ಯಕ್ತಿತ್ವ ವಿಕಸನಕ್ಕೆ ಪೂರಕವಾದ ಅಂಶಗಳನ್ನು ರಂಗಕಲೆ ಕಲಿಸುತ್ತದೆ. ಆದ್ದರಿಂದ ಶಿಕ್ಷಣದಲ್ಲಿ ರಂಗಕಲೆಯನ್ನು ಅಳವಡಿಸಿಕೊಳ್ಳುವುದು ಇಂದಿನ ತುರ್ತು ಅಗತ್ಯವಾಗಿದೆ. 


ಸಿಹಿಜೀವಿ ವೆಂಕಟೇಶ್ವರ

ತುಮಕೂರು




19 ಮಾರ್ಚ್ 2024

ಟಿಕೆಟ್

 


ಟಿಕೆಟ್ 


ಚುನಾವಣೆಗೆ ಟಿಕಟ್ ಕೊಟ್ಟರೆ

ನಾನು ನಮ್ಮ ಪಕ್ಷದ ತತ್ವ ಸಿದ್ದಾಂತಕ್ಕೆ ಸದಾ ಬದ್ದ|

ಟಿಕೆಟ್ ಕೈ ತಪ್ಪಿದರೆ ಮುಗಿಯಿತು ಶೀಘ್ರವಾಗಿ ಮತ್ತೊಂದು

ಪಕ್ಷದ ಕದ ತಟ್ಟಲು ಸಿದ್ದ|


ಸಿಹಿಜೀವಿ ವೆಂಕಟೇಶ್ವರ

ತುಮಕೂರು

18 ಮಾರ್ಚ್ 2024

ಪ್ರಜಾಪ್ರಭುತ್ವ ಹೋಳಿ

 


ಪ್ರಜಾಪ್ರಭುತ್ವ ಹೋಳಿ 


ಈಗ ಎಲ್ಲೆಡೆ ಬಿಸಿಲ ಜೊತೆಗೆ ಬೀಸುತ್ತಿದೆ ಚುನಾವಣಾ ಗಾಳಿ

ಆಮಿಷ ನೀಡಿ  ಪಕ್ಷಗಳಿಂದ ಮತದಾರರ ಮೇಲೆ ದಾಳಿ

ಮನಸ್ಸಾಕ್ಷಿಗೆ ಮನಸೋತು 

ಮತದಾನ ಮಾಡಲು ಎದ್ದೇಳಿ 

ಎಲ್ಲರೂ ಸೇರಿ ಆಡೋಣ ಬನ್ನಿ

ಭಾರತದ ಪ್ರಜಾಪ್ರಭುತ್ವ ಹೋಳಿ 


ಸಿಹಿಜೀವಿ ವೆಂಕಟೇಶ್ವರ

ತುಮಕೂರು




16 ಮಾರ್ಚ್ 2024

ಮೆದುಳಿನ ಮೂಲ ಕರುಳು! (ಪುಸ್ತಕ ವಿಮರ್ಶೆ)


 



 ಮೆದುಳಿನ ಮೂಲ ಕರುಳು..


ಆತ್ಮೀಯರಾದ ಗುಬ್ಬಚ್ಚಿ ಸತೀಶ್ ರವರ ಗುಬ್ಬಚ್ಚಿ ಪುಸ್ತಕ ಉದ್ಘಾಟನೆಗೆ ಅತಿಥಿಯಾಗಿ ಹೋದಾಗ ಖರೀದಿಸಿದ ಡಾ ಕೆ ಎನ್ ಗಣೇಶಯ್ಯ ರವರ ಹೊಕ್ಕಳ ಮೆದುಳು ಕಥಾಂಬರಿ ಓದಿದಾಗ ಹೌದು ಇದು ಕಥೆಯೂ ಅಲ್ಲ ಕಾದಂಬರಿಯೂ ಅಲ್ಲ ಅವೆರಡರ ಮಧ್ಯದ ಒಂದು ಪ್ರಕಾರ ಎಂದು ಲೇಖಕರ ಮಾತಿನಲ್ಲಿ ಗಣೇಶಯ್ಯ ರವರು ಹೇಳಿದ್ದು ಸತ್ಯ ಎನಿಸಿತು.


ಕಳೆದ ಭಾನುವಾರ ವಿಜಯ ಕರ್ನಾಟಕ ಪತ್ರಿಕೆಯಲ್ಲಿ ಅವರ ಅಂಕಣದಲ್ಲಿ ಬೆಂಕಿಯ ಆವಿಷ್ಕಾರ ನಮ್ಮ ಮೆದುಳಿನ ವಿಕಾಸಕ್ಕೆ ಹೇಗೆ ನಾಂದಿಯಾಯಿತು ಎಂಬುದನ್ನು ವೈಜ್ಞಾನಿಕವಾಗಿ ವಿವರಣೆ ನೀಡಿದ ಅಂಕಣ ಓದಿದ ನನಗೆ ಈ ಹೊಕ್ಕಳ ಮೆದುಳು ಪುಸ್ತಕದ ಬಗ್ಗೆ ಕುತೂಹಲ ಹೆಚ್ಚಾಗಿ ಓದಿದೆ.


ಇಲ್ಲಿಯೂ ಗಣೇಶಯ್ಯ ರವರ ಕಾದಂಬರಿ ಶೈಲಿ ಪೂರಕ ಮಾಹಿತಿಗೆ ಅಡಿಟಿಪ್ಪಣಿಗಳು ಗಮನ ಸೆಳೆಯುತ್ತವೆ ಎಂದಿನಂತೆ ವಿಷಯದ ಆಯ್ಕೆಯಲ್ಲಿ ಈ ಬಾರಿಯೂ ಅವರು ಹೊಸತೊಂದು ಪ್ರಚಲಿತ ವೈಜ್ಞಾನಿಕ ಮತ್ತು ಜೀವಶಾಸ್ತ್ರದ ವಿಷಯ ತೆಗೆದುಕೊಂಡು ಬಹಳ ಚೆಂದವಾಗಿ ನಿರೂಪಿಸಿದ್ದಾರೆ.


ನ್ಯೂಯಾರ್ಕ್‌ನಲ್ಲಿ ಆಯೋಜಿಸಿದ್ದ 'ವಿಜ್ಞಾನ, ಧರ್ಮ ಮತ್ತು ಆಧ್ಯಾತ್ಮಿಕತೆ' ಎಂಬ ಅಂತಾರಾಷ್ಟ್ರೀಯ ಕಮ್ಮಟದಲ್ಲಿ ಭಾಗವಹಿಸಿಲು ಆಹ್ವಾನಿತಗೊಂಡಿದ್ದ ಭಾರತದ ಧರ್ಮಗುರುಗಳು ಅಚ್ಚರಿಯ ವಿದ್ಯಮಾನವೊಂದಕ್ಕೆ ಸಾಕ್ಷಿಯಾಗುತ್ತಾರೆ. ಅಲ್ಲಿನ ಮಾನಸಿಕ ಆಸ್ಪತ್ರೆಯಲ್ಲಿ ನಡೆದ ದುರಂತವೊಂದಕ್ಕೆ ಇಂದಿನ ನ್ಯಾಯಪದ್ಧತಿಯ ಆವರಣದಲ್ಲಿ ಸೂಕ್ತ ಮತ್ತು ಸಿದ್ಧ ಪರಿಹಾರ ಸಿಗದ ಕಾರಣ, ವಿಜ್ಞಾನಿಗಳ, ನ್ಯಾಯಪಾಲಕರ ಮತ್ತು ಧರ್ಮಗುರುಗಳ ನಡುವೆ ಒಂದು ಜಾಗತಿಕ ಚರ್ಚೆಯನ್ನು ಏರ್ಪಡಿಸಲಾಗಿರುತ್ತದೆ. ಮಾನಸಿಕ ಸ್ಥಿತಿಯಲ್ಲಾಗುವ ಪಲ್ಲಟಗಳ ಬಗ್ಗೆ ನಡೆದ ಈ ಚರ್ಚೆಯಲ್ಲಿ ಎದುರಾಗುವ ಅಂಶಗಳು ಕುತೂಹಲಕಾರಿ ಹಾಗೂ ಹೊಸ ಹೊಳವುಗಳನ್ನು ನೀಡುತ್ತವೆ.

ಆ ಚರ್ಚೆ ಕೆಲವೊಮ್ಮೆ ನಾನು ನಾನಾ ಅಥವಾ ನಾವಾ ಎಂಬ ಅನುಮಾನ ಮೂಡಿಸಿ ಕೊನೆಗೆ ನಮ್ಮ ದೇಹ ಕೇವಲ ನಾನಲ್ಲ ನಾವು ಎಂಬ ತೀರ್ಮಾನಕ್ಕೆ ಬರಲಾಯಿತು.ಈಗ ನಿಮ್ಮಲ್ಲಿ ಸ್ವಲ್ಪ ಗೊಂದಲ ಉಂಟಾಗಬಹುದು ಅದಕ್ಕೆ ನೀವು ಪುಸ್ತಕ ಓದಿಯೇ ಪರಿಹಾರ ಕಂಡುಕೊಳ್ಳಬೇಕು.


ಕೊಲೆ ಮಾಡಿದ ವೈಸರ್ ಈ ಕೊಲೆ ನಾನೊಬ್ಬನೇ ಮಾಡಿಲ್ಲ ಬೇರೆಯವರು ಸೇರಿ ಮಾಡಿದೆವು ಎಂದು ಜಡ್ಜ್ ಮುಂದೆ  ದೃಢವಾಗಿ ಹೇಳಿದಾಗ ಅದರಂತೆ  ತನಿಖೆ ಕೈಗೊಂಡಾಗ ಹೊರಬಂದ ಸತ್ಯಗಳು ನಮ್ಮನ್ನು ಬೆಚ್ಚಿಬೀಳಿಸುತ್ತವೆ. ಬ್ಯಾಕರ್ ನ ಸ್ವಾರ್ಥ ಮತ್ತು ಫಾರ್ಮ ಕಂಪನಿಗಳ ಅನೈತಿಕ ಮತ್ತು ಲಾಭಕೊರತನದ ಆಸೆಯ ಬಗ್ಗೆ ಕಾದಂಬರಿಕಾರರು ಬಹಳ ಚೆನ್ನಾಗಿ ನಿರೂಪಿಸಿದ್ದಾರೆ.

ನಮ್ಮ ಕರುಳಿಗೂ ಮೆದುಳಿಗೂ ಅವಿನಾಭಾವ ಸಂಬಂದವಿದೆ ಎಂಬುದನ್ನು ಗಟ್ ಬ್ರೈನ್ ಆಕ್ಸಿಸ್ ನಲ್ಲಿ ಜೀವ ವಿಜ್ಞಾನಿಗಳು ವಿವರಿಸಿದ್ದಾರೆ. ಕರುಳು ಮತ್ತು ಮೆದುಳಿನ ನಡುವೆ ಇರುವ ಸಂಬಂಧದಿಂದಾಗಿ ಮಾನವನ ಅದೆಷ್ಟು ಜೀವನ ಕ್ರಮಗಳು ಮತ್ತು ವರ್ತನೆಗಳು ಈ ಸೂಕ್ಷ್ಮಾಣುಗಳಿಂದ ನಿಗ್ರಹಿಸಲ್ಪಟ್ಟಿವೆ ಎನ್ನುವ ಬಗ್ಗೆ ದಿನನಿತ್ಯವೂ ಹೊಸ ಹೊಸ ಅನ್ವೇಷಣೆಗಳು ಹೊರಬೀಳುತ್ತಿರುವ ಹಿನ್ನೆಲೆಯಲ್ಲಿ ಈ ಕಥಾಂಬರಿ ನಮಗೆ ಹೊಸ ಜ್ಞಾನ ನೀಡುತ್ತದೆ.


ಮೂಲತಃ ವೈಸರ್ ಒಳ್ಳೆಯವನಾದರೂ ಅವನ ದೇಹದಲ್ಲಿ ಅವನಿಗೆ ಗೊತ್ತಾಗದಂತೆ ಕ್ರೂರ ಮನಸ್ಸಿನ ವ್ಯಕ್ತಿಯಾದ ಕಾರ್ಲೋಸ್ ನ ಕರುಳಿನ ಜೀವ ಕೋಶಗಳನ್ನು ಕಲ್ಚರ್ ಮಾಡಿ  ಅವನ ದೇಹ  ಸೇರುವಂತೆ ಮಾಡಿದಾಗ ಉಂಟಾಗುವ ಬೆಳವಣಿಗೆಯಲ್ಲಿ ವೈಸರ್ ನು   ಬ್ಯಾಕರ್ ಸಾವಿಗೆ ಕಾರಣನಾಗಿದ್ದು ಹೊರಗಿನಿಂದ ಬಂದ ಜೀವಕೋಶಗಳಿಂದ! ಆಗ ಶಿಕ್ಷೆ ಯಾರಿಗೆ ಕೊಡಬೇಕು? ವೈಸರ್ಗೊ? ಅಥವಾ ಅನಾಹುತಕಾರಿ ಜೀವಕೋಶಕ್ಕೋ? 

ಈ ಗೊಂದಲದ ಹಿನ್ನೆಲೆಯಲ್ಲಿ ನಡೆದ ಚರ್ಚೆಯಲ್ಲಿ ನಮ್ಮನ್ನು ಚಿಂತನೆಗೀಡು ಮಾಡುವ ಅಂಶಗಳು ಬಯಲಿಗೆ ಬರುತ್ತವೆ. 

ಇಂತಹ ವೈಜ್ಞಾನಿಕ ಸಂಶೋಧನೆ ಮತ್ತು   ಎ ಐ ಬಳಕೆಯ ಸಮಾಜದಲ್ಲಿ ನಮ್ಮ ಇಂದಿನ ಎಲ್ಲ ನ್ಯಾಯಾಂಗ ನಿಯಮಗಳು ಮತ್ತು ಕಾನೂನುಗಳು

ಮಾನವನನ್ನು ಪ್ರಕೃತಿಯಿಂದ ಬೇರ್ಪಡಿಸಿ, ಹೊರಗೆಳೆದು ಆತನೊಬ್ಬ ವಿಶೇಷ ಜೀವಿ

ಎಂಬ ಕಲ್ಪನೆಯಲ್ಲಿ ರೂಪುಗೊಂಡಿವೆ ಎನ್ನುವುದು ವಿದಿತ. ಆ ಕಾರಣದಿಂದಾಗಿಯೇ

ನಮ್ಮ ನ್ಯಾಯನಿಯಮಗಳಲ್ಲಿ ಕಾನೂನುಗಳಲ್ಲಿ  ಹಲವು ವೈರುಧ್ಯಗಳು ನುಸುಳಿವೆ  ನಮ್ಮನ್ನು ಪ್ರಕೃತಿಯಿಂದ ಬೇರ್ಪಡಿಸಿಕೊಳ್ಳದೆಯೇ, ನಾವೆಲ್ಲರೂ ಅದರ ಭಾಗವಷ್ಟೆ ಎಂಬ ಚಿಂತನೆಯ ಆವರಣದಲ್ಲಿ ನಮ್ಮ ಕಾನೂನು ವ್ಯವಸ್ಥೆಯನ್ನು

ರೂಪಿಸಲು ಕಾಲ ಬಂದಿದೆ 

ವ್ಯವಸ್ಥೆಯನ್ನು, ನಿಯಮಗಳನ್ನು ವಿವಿಧ ದೃಷ್ಟಿಕೋನದಲ್ಲಿ ನೋಡುವುದರಿಂದ  ಈ ಕಾಲಕ್ಕೆ ತಕ್ಕಂತೆ 

ಕಾನೂನುಗಳನ್ನು ರಚಿಸುವ ಅವಶ್ಯಕತೆಗಳು ಮತ್ತು ಸಾಧ್ಯತೆಗಳು ಹುಟ್ಟಿಕೊಳ್ಳುತ್ತವೆ.

ಪರಿಸರದತ್ತ ನಮ್ಮ ದೃಷ್ಟಿ ಬದಲಾಗುತ್ತಿರುವ ಈ ಪರ್ವಕಾಲದಲ್ಲಿ ಅಂತಹ ಚಿಂತನೆಗಳ ಅವಶ್ಯಕತೆ ಹೆಚ್ಚಿದೆ. ಮಾನವನನ್ನು ಪ್ರಕೃತಿಯ ತುಟ್ಟತುದಿಯಲ್ಲಿಟ್ಟು, ಅವನಿಗೆಂದೇ ಪಕೃತಿ, ಅವನಿಂದಲೇ ಪ್ರಕೃತಿ ಎಂಬ ಭಾವವೂ ಬದಲಾಗಬೇಕು. 


ಕಥಾಂಬರಿಯು ಸುಖಾಂತವಾಗಿ ವೈಜರ್ ನಿರಪರಾಧಿ ಎಂದು ತೀರ್ಪು ಕೊಟ್ಟಾಗ ಕ್ಯಾಥರೀನ್ ಮತ್ತು ವೈಜರ್ ನಡುವಿನ ಸಂಭಾಷಣೆ ನಮ್ಮನ್ನು ವಿವಿಧ ಆಯಾಮಗಳಲ್ಲಿ ಚಿಂತನೆ ಒಡ್ಡುತ್ತದೆ.


ಸಿಹಿಜೀವಿ ವೆಂಕಟೇಶ್ವರ

ತುಮಕೂರು

9900925529


ಸಿಹಿಜೀವಿ ವೆಂಕಟೇಶ್ವರ

ತುಮಕೂರು

9900925529