10 ಫೆಬ್ರವರಿ 2022

ಮಮ್ಮಿ ಅಲ್ಲ ಅಮ್ಮ.


 ಮಮ್ಮಿ ಅಲ್ಲ ಅಮ್ಮ

ಅಂದು ಅಮಾವಾಸೆ. "ಇವತ್ತು ಹುಷಾರು. ನಿಂಬೇ ಹಣ್ಣು ಕೊಯ್ದು ಹೊಸಲ ಮೇಲೆ ಇಡು "ಎಂದು ಸೊಸೆಗೆ ಕೆಂಚಮ್ಮ ಬೆಳಿಗ್ಗೆಯೇ ಎಚ್ಚರಿಕೆ ನೀಡಿದ್ದರು. ಮಗನಿಗೆ ಸಂಜೆ ಕತ್ತಲಾಗುವುದರೊಳಗೆ ಮನೆಗೆ ಸೇರಿಕೊಳ್ಳಬೇಕು ಎಂದು ವಾರ್ನಿಂಗ್ ನೀಡಿದ್ದರು. ಇದನ್ನು ಕೇಳಿಸಿಕೊಂಡು ಪುಟ್ಟ ಬಾಲಕಿ " ಯಾಕಜ್ಜಿ ಇವತ್ತು ಏನಾದರೂ ವಿಶೇಷನಾ? ಎಂದು ಕೇಳಿದಳು.
" ವಿಶೇಷ ಅಲ್ಲಮ್ಮ ... ನಾವು ಯಾಮಾರಿದ್ರೆ ನಾಶ.ಯಮನ ಬಳಿ ಸೀದಾ ಪ್ರವೇಶ"  ಎಂದು ಒಗಟಾಗಿ ಹೇಳಿದ್ದ ಕೇಳಿ ಆ ಮಗೂಗೆ ಇ‌ನ್ನೂ ಗೊಂದಲವಾಯಿತು.

ಅಜ್ಜಿ ಮುಂದುವರೆದು" ಹೋದ ವರ್ಷ ಇದೇ ಅಮಾವಾಸೆ ದಿನ  ನಮ್ ಊರಿನ ಶೆಟ್ರು ಮನೆನಾಗೆ ಘಲ್ ..ಘಲ್ .. ಎಂದು ಗೆಜ್ಜೆ ಕಟ್ಟಿಕೊಂಡು ಬಂದ ಒಂದು ದೆವ್ವ ಅವರ ಮಗನನ್ನು ಕೊಂದು ಹಾಕಿತಂತೆ .ಅದಕ್ಕೆ ಈ ಅಮಾಸೆ ಡೇಂಜರ್...ಹುಷಾರಾಗಿರಬೇಕು" ಎಂದಾಗ ಆ ಬಾಲಕಿಗೆ ಭಯ ಆವರಿಸಿತು.


ಅದೇ ಗುಂಗಲ್ಲಿ ಅಂದು ಆ ಬಾಲಕಿಗೆ ಹಗಲೆಲ್ಲಾ ಗೆಜ್ಜೆ ಸದ್ದೇ ಕೇಳುದಂತಾಗುತ್ತಿತ್ತು.‌ಸಂಜೆಯಾಗುತ್ತಲೇ  ಅಜ್ಜಿಯ ಅಣತಿಯಂತೆ ಮಗ ಬೇಗನೇ ಮನೆಗೆ ಬಂದ.‌ಸೊಸೆ ನಿಂಬೇಹಣ್ಣು ಕೊಯ್ದು ಮನೆಯ ಬಾಗಿಲ ಬಳಿ ಇಟ್ಟು ಪೂಜೆ ಮಾಡಿದಳು.


ಊಟದ ನಂತರ ಎಂದಿಗಿಂತ ಮೊದಲೇ ಪುಟ್ಟ ಬಾಲಕಿ ಮಲಗಲು ಕೋಣೆಯ ಬಳಿ ತೆರಳಿ ಅಪ್ಪನ ಪಕ್ಕದಲ್ಲಿ ಬೆಡ್ ಶೀಟ್ ಒದ್ದುಕೊಂಡು ಮಲಗಿದಳು.ಭಯದಲ್ಲಿ ಎಷ್ಟೊತ್ತಾದರೂ ನಿದ್ದೆತ್ತಲಿಲ್ಲ.ಬೆಳಿಗ್ಗೆ ಅಜ್ಜಿ ಹೇಳಿದ ಮಾತುಗಳು ನೆನಪಾದವು. ಕ್ರಮೇಣ ಘಲ್ ....ಘಲ್...ಸದ್ದು ಕೇಳಲಾರಂಭಿಸಿತು. ಭಯದಿಂದ ಅಪ್ಪಾ.... ದೆವ್ವ... ದೆವ್ಚ...ಎಂದು ಭಯದಿಂದ ಕೂಗಿದಳು.


" ಅಲ್ಲ ಕಣೇ... ಈ ಕಾಲ್ಚೈನು ಬೇಡ ...ಬಹಳ ಸೌಂಡು ಮಾಡುತ್ತೆ ಅಂತ ಹೇಳ್ದೇ ಇವತ್ತೇ ಆ ಚೈನ್ ಹಾಕ್ಕಂಡಿದಿಯಾ.ನೋಡು ಪಾಪ ಆ ಮಗ ನೀನೇ ದೆವ್ವ ಅಂತ ಹೆದರ್ಕಂಡಿದೆ" ಎಂದ ಪತಿರಾಯ.


"ರೀ ನಿಮಗೆ ಯಾವಾಗಲೂ ನಮ್ ಅಪ್ಪ ಕೊಡ್ಸಿರೋ ಚೈನ್ ಮ್ಯಾಲೇ ಕಣ್ಣು ಎಂದು ಬೆಡ್ ಶೀಟ್ ಕೊಡವಿದಳು".


ಮಗಳು ಬೆಡ್ ಶೀಟ್ ನಿಧಾನವಾಗಿ ಸರಿಸಿ ನೋಡಿ ಅಮ್ಮಾ ಎಂದು ಖಾತ್ರಿ ಮಾಡಿಕೊಂಡು ಕಣ್ಣು ಮುಚ್ಚಿ ನಿದ್ದೆಗೆ ಜಾರಿದಳು.


ಸಿಹಿಜೀವಿ


ಸಿ ಜಿ ವೆಂಕಟೇಶ್ವರ


ತುಮಕೂರು


9900925529.

09 ಫೆಬ್ರವರಿ 2022

"ರಂಗಸಿರಿ ಕಥಾ ಐಸಿರಿ " ಪುಸ್ತಕ ವಿಮರ್ಶೆ.


 

"ರಂಗಸಿರಿ ಕಥಾ ಐಸಿರಿ " ಪುಸ್ತಕ ವಿಮರ್ಶೆ.

"ರಂಗಸಿರಿ ಕಥಾ ಐಸಿರಿ " ಒಂದು ವಿಭಿನ್ನವಾದ ನಾಟಕ ಪ್ರದರ್ಶನಗಳ ವಿಮರ್ಶಾ ಕೃತಿಯಾಗಿ ಗಮನಸೆಳೆಯುತ್ತದೆ. ಇದರ ಕೃತಿಕಾರರಾದ ಗೊರೂರು ಅನಂತರಾಜು ರವರು ನಿಜವಾಗಿಯೂ ಅಭಿನಂದನಾರ್ಹರು.

ಕಳೆದ ಮೂರು ವರ್ಷಗಳಿಂದ ನಾನು ಗಮನಿಸಿದ ಹಾಗೆ ಶ್ರೀ ಗೊರೂರು ಅನಂತರಾಜು ರವರು ಕನ್ನಡದ ಬಹುತೇಕ ಪತ್ರಿಕೆಯಲ್ಲಿ ಬರಹ ಲೋಕದಲ್ಲಿ ವೈವಿಧ್ಯಮಯ ಬರವಣಿಗೆಯ ಮೂಲಕ ಗುರ್ತಿಸಿಕೊಂಡವರು.  ಸರಳ ಸಜ್ಜನಿಕೆಯ ಹೆಚ್ಚಿನದೇನನ್ನೂ ನಿರೀಕ್ಷಿಸದ  ಬರಹದ ಜೊತೆಯಲ್ಲಿ   ಕಲೆ, ರಂಗಭೂಮಿ, ಸಾಂಸ್ಕೃತಿಕ ಚಟುವಟಿಕೆಗಳ ಸಂಘಟಿಸಿದ ಬಹುಮುಖ ಪ್ರತಿಭೆ.ಓದಿನ ದಿನಗಳಲ್ಲೇ ಸಾಹಿತ್ಯ ಓದುವ ಹವ್ಯಾಸ ರೂಢಿಸಿಕೊಂಡು, ಸಾಹಿತಿಗಳು ಮತ್ತು ಕಲಾವಿದರುಗಳ ಬಗ್ಗೆ ಪ್ರೀತಿ ಅಭಿಮಾನ ಬೆಳೆಸಿಕೊಂಡು, ಹಾಗೂ ಓರ್ವ ಸಾಹಿತಿಯಾಗಿ ಸಮಾಜದಲ್ಲಿ ಗುರ್ತಿಸಿಕೊಳ್ಳಬೇಕೆಂಬ ಹಂಬಲ ಹೊಂದಿ: ಈ ದಿಶೆಯಲ್ಲಿ ಒಂದೊಂದೇ ಮೆಟ್ಟಿಲನ್ನು ಏರುತ್ತಾ ಬೆಳೆಯುತ್ತಾ ಬಂದವರು.
ಹಲವಾರು ಸಂಘಟನೆಯ ಚಟುವಟಿಕೆಯಲ್ಲಿ ಸಕ್ರೀಯವಾಗಿ ತೊಡಗಿಸಿಕೊಂಡು ಸಾಹಿತ್ಯ ಸಾಂಸ್ಕೃತಿಕ, ಸಮಾಜ ಸೇವೆಯಲ್ಲಿ ತಮ್ಮದೇ ಆದ ಪಾತ್ರ ನಿರ್ವಹಿಸಿದ್ದಾರೆ. ಹಾಸನ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯದರ್ಶಿಯಾಗಿ, ತಾಲ್ಲೂಕು ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದಾರೆ. ಊರಿನಲ್ಲಿ ಕನ್ನಡ ಕಲಾಸಾಹಿತ್ಯ ವೇದಿಕೆ ಸಂಸ್ಥೆ ಸ್ಥಾಪಿಸಿ ನಾಟಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ಸಂಘಟಿಸಿ ನಡೆಸಿಕೊಟ್ಟಿದ್ದಾರೆ: ಭಾರತ ಜ್ಞಾನ ವಿಜ್ಞಾನ ಸಮಿತಿಯಲ್ಲಿ ಜನಾರೋಗ್ಯ ಜಾಥಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಆನಂತರ ಸಾಕ್ಷರತಾ ಆಂದೋಲನ ಜಾಥಾದಲ್ಲಿ ತೊಡಗಿಸಿ ಕೊಂಡಿದ್ದಾರೆ.

ಸ್ವತಃ ಕಲಾವಿದರಾದ ಅನಂತರಾಜುರವರು ತಾವು ನೋಡಿದ ನಾಟಕಗಳನ್ನು ವಿಮರ್ಶೆ ಮಾಡಿದ ಪರಿ ಅನನ್ಯ. "ರಂಗಸಿರಿ ಕಥಾ ಐಸಿರಿ" ಕೃತಿಯಲ್ಲಿ ನಾಟಕಗಳ ಕಥೆಗಳನ್ನು ಸಂಕ್ಷಿಪ್ತವಾಗಿ ಹೇಳುವ ಮೂಲಕ ವಿಮರ್ಶೆ ಮಾಡಿರುವ ರೀತಿ ನನಗೆ ಬಹಳ ಮೆಚ್ಚುಗೆಯಾಯಿತು.ನಾನು ಕೂಡಾ ಹವ್ಯಾಸಿ ರಂಗಭೂಮಿಯ ಕಲಾವಿದನಾಗಿರುವುದರಿಂದ ನಾನು ನೋಡಿದ ಕೆಲ ನಾಟಕಗಳ ವಿಮರ್ಶೆ ಓದುವಾಗ ನಾಟಕಗಳು ಪುನಃ ನನ್ನ ಸ್ಮೃತಿ ಪಠಲದಲ್ಲಿ ಹಾದು ಹೋದವು .
ನಾನು ನೋಡದ ನಾಟಕಗಳು ನನ್ನ  ಕಣ್ಮುಂದೆ ನಡೆಯುತ್ತಿವೆಯೇನೋ ಎಂಬಂತೆ ಕಥೆಯ ಮೂಲಕ ವಿಮರ್ಶೆ ಮಾಡಿರುವ ರೀತಿ ಚೆನ್ನಾಗಿದೆ. 

'ರಂಗಸಿರಿ ಕಥಾ ಐಸಿರಿ' ಕೃತಿ ರಂಗಪ್ರಯೋಗಗಳ ವಿಮರ್ಶೆಗಳ ಸಂಕಲನವಾಗಿದೆ. ಲೇಖಕರು ಹಾಸನದಲ್ಲಿ ನೋಡಿದ ನಾಟಕಗಳ ವಿಮರ್ಶೆ ಇವಾಗಿವೆ. ಪ್ರಸಿದ್ಧ ಕತೆಗಾರರು ಮತ್ತು ಕಾದಂಬರಿಕಾರರ ಕತೆ ,ಕಾದಂಬರಿಗಳು ರಂಗರೂಪಾಂತರಗೊಂಡು ಸೃಜನಶೀಲ ನಿರ್ದೇಶಕರ ಮೂಲಕ ರಂಗದ ಮೇಲೆ ಯಶಸ್ವಿ ಪ್ರಯೋಗಗೊಂಡಿರುವ ನಾಟಕ ವಿಮರ್ಶೆಯಾಗಿರುವುದು ವಿಶೇಷವಾಗಿದೆ. 

ಕೃತಿಯಲ್ಲಿ ವಿಮರ್ಶೆಗೆ ಒಳಪಡಿಸಿದ ನಾಟಕಗಳಲ್ಲಿ ಪ್ರಮುಖವಾದವುಗಳು
ಕೆ.ಪಿ. ಪೂರ್ಣಚಂದ್ರ ತೇಜಸ್ವಿ ಕಥೆ ಆಧಾರಿತ ನಾಲ್ಕು ನಾಟಕಗಳು, ಕರ್ವಾಲೊ, ಅಣ್ಣನ ನೆನಪು ಕಿರಗೂರಿನ ಗಯ್ಯಾಳಿಗಳು, ಕೃಷ್ಣಗೌಡನ ಆನೆ,
ಡಾ. ಶಿವರಾಮ ಕಾರಂತರ ಕಾದಂಬರಿ ಆಧಾರಿತ ನಾಟಕ ಮೂಕಜ್ಜಿಯ ಕನಸುಗಳು, ಪಿ. ಲಂಕೇಶ್ರವರ ಕಥೆ ಆಧಾರಿತ ನಿವೃತ್ತರು,
ಡಾ. ಚಂದ್ರಶೇಖರ್ ಪಾಟೀಲ್ ರವರ ಕೊಡುಗೆಗಳು,ರಾಜಶೇಖರ್ ಮಠಪತಿ ರವರ ಗಾಂಧಿಯ ಅಂತಿಮ ದಿನಗಳು, ಚಂದ್ರಕಾಂತ ಕುಸನೂರು-ದಿಂಡಿ,
ಮಂಜುನಾಥ ಬೆಳಕೆರೆ ನನ್ನೊಳು ನೀ ನಿನ್ನೊಳು ನಾ,ವಿವೇಕ ಶಾನಭಾಗ್ ರವರ ಕಥೆಯಾಧಾರಿತ-ಕಂತು,
ಶರದ ಉಪಾಧೆ (ಮರಾಠಿ)-ರಾಶಿಚಕ್ರ, ಕೇದಾರಶಿಂದ-ಸಹಿರೀ ಸಹಿ,
ಸಚಿನ ಮೋಟೆ - ಒಂದ ಆಟ ಭಟ್ಟರದು, ಅಗ್ರಹಾರ ಕೃಷ್ಣಮೂರ್ತಿ - ದಾರಶುಕೊ ,ಸಾಣೇಹಳ್ಳಿ ಶ್ರೀ ಪಂಡಿತಾರಾದ್ಯ ಶಿವಾಚಾರ ಮಹಸ್ವಾಮಿ ರವರ ಯುಗಾಚಾರ್ಯ,
ದು.ಸರಸ್ವತಿ-ಬದುಕು ಬಯಲು ಎ. ರೇವತಿ (ತಮಿಳು) ಆತ್ಮಕಥೆ ,
ಯಶವಂತ್ ಮನೋಹರ್ ರ ಮಾಯಿ, ಡಾ|| ಚಂದ್ರಶೇಖರ್ ಕಂಬಾರ  ರವರ ಶಿವರಾತ್ರಿ,
ಬಸವಣ್ಣನವರ ವಚನಗಳನ್ನಾಧರಿಸಿದ ಕೂಡಲ ಸಂಗಮ,ನಂಜುಂಡ ಮೈಮ್ ರವರ  ವಿಕೇಂದ್ರೀಕರಣ,ಎನ್. ಎಸ್. ರಾವ್ ರವರ ವಿಷ ಜ್ವಾಲೆ , ತೋರಣಗಲ್ ರಾಜರಾವ್ ರವರ ಸುಭದ್ರ ಕಲ್ಯಾಣ,
ಬೆಳ್ಳಾವೆ ನರಹರಿಶಾಸ್ತ್ರಿ ರವರ  ಶ್ರೀಕೃಷ್ಣಗಾರುಡಿ,
ಕಂಗಲ್ ಹನುಮತ ರಾಯ ಅವರ ರಕ್ತರಾತ್ರಿ,ಬೆಳ್ಳಾವೆ ನರಹರಿ ಶಾಸ್ತ್ರಿ ರವರ ಸಂಪೂರ್ಣ ರಾಮಾಯಣ 3 ಪ್ರಯೋಗಗಳು,
ಪುಟ್ಟಸ್ವಾಮಯ್ಯ ರವರ ಕುರುಕ್ಷೇತ್ರದ  ಪ್ರಯೋಗಗಳು, ಹೊಂಡರಬಾಳು ಎಸ್. ಲಿಂಗರಾಜೇ ಅರಸ್ ರವರ ದಕ್ಷಯಜ್ಞ,ದೇವಿ ಮಹಾತ್ಮ  ನಿರ್ದೇಶನ ಎ. ಸಿ. ರಾಜು,
ರಾಜಕವಿ ಪಂಡಿತ ತಿರುಮಲೆ ಶ್ರೀನಿವಾಸ ಅಯ್ಯಂಗಾರ್ ರವರ
ಭಕ್ತ ಪ್ರಹ್ಲಾದ 2 ಪ್ರಯೋಗಗಳು , ಶ್ರೀಕೃಷ್ಣ ತುಲಾಭಾರ, ಸತಿ ಸಾವಿತ್ರಿ ಸೀತಾಲಕ್ಷ್ಮೀ ಸತ್ಯಮೂರ್ತಿ,
ಎಚ್. ಬಿ. ರಮೇಶ್ ರವರ ನಾಟ್ಯ ರಾಣಿ ಶಾಂತಲಾ, ರಾಜ ಸತ್ಯವ್ರತ - ನಿರ್ದೇಶನ ಸೀಗೆನಾಡು ಪಾಲಾಕಾಚಾರ್,ಅಂತಿಗೊನೆ : ಗ್ರೀಕ್ಮೂಲ ಸಾಫೋಕ್ಲೀಸ್ ಕನ್ನಡಕ್ಕೆ
ಪಿ. ಲಂಕೇಶ್, ಚಂದ್ರಮಂಡಲ - ಪ್ರಾಸಾದ್ ರಕಿತ್, ಲೀಲಾಂತ್ಯ - ಎನ್. ಸುದರ್ಶನ,ಬುಗುರಿ - ಮೊಗಳ್ಳಿ ಗಣೇಶ್,ಊರುಕೇರಿ - ಡಾ|| ಸಿದ್ಧಲಿಂಗಯ್ಯ,ಲಂಕೇಶ್ವರ - ಡಾ|| ಮಳಲಿ ವಸಂತಕುಮಾರ್

ಈ ಮೇಲಿನ ಎಲ್ಲಾ ನಾಟಕಗಳ ಸಂಕ್ಷಿಪ್ತವಾದ ವಿವರಣೆಯ ನೀಡುವ ಮೂಲಕ ಉತ್ತಮವಾದ ವಿಮರ್ಶೆ ಮಾಡಿದ್ದಾರೆ ಗೊರೂರು ಅನಂತರಾಜು ರವರು. ಅವರು ಕನ್ನಡ  ಸಾರಸ್ವತ ಲೋಕಕ್ಕೆ ಇನ್ನೂ ಹೆಚ್ಚಿನ ಕೃತಿಗಳನ್ನು ನೀಡಲಿ ಎಂದು ಹಾರೈಸುತ್ತೇನೆ .
ಪುಸ್ತಕದ ಹೆಸರು:  "ರಂಗಸಿರಿ ಕಥಾ ಐಸಿರಿ "
ಲೇಖಕರು: ಗೊರೂರು ಅನಂತರಾಜು
ಪ್ರಕಾಶನ: ಗೊರೂರು ಅನಂತರಾಜು
ಬೆಲೆ: ೧೪೦.

ಸಿಹಿಜೀವಿ
ಸಿ ಜಿ ವೆಂಕಟೇಶ್ವರ
ತುಮಕೂರು
9900925529


07 ಫೆಬ್ರವರಿ 2022

ತಿರುಕನ ದರ್ಶನ .


 


ತಿರುಕನ ದರ್ಶನ ಮಾಡಿಸಿದ ಶಾಂತಮ್ಮ.


ಅವರು ಶಾಂತಮ್ಮ .ಸುಮಾರು ಐವತ್ತು ವರ್ಷ ವಯಸ್ಸಿನ ,ಕೂದಲು ಬೆಳ್ಳಗಿರುವ ,ಸಾಧಾರಣ ಮೈಕಟ್ಟಿನ , ಮಹಿಳೆ. ಮುಂದಿನ ನಾಲ್ಕೈದು ಹಲ್ಲುಗಳು ಉದುರಿದ್ದರೂ ಸ್ಪಷ್ಟವಾಗಿ ಮಾತನಾಡುತ್ತಿದ್ದರು .ಅದರೆ ನಮ್ಮ ಕೊಟಗೇಣಿಯ ಜನರಿಗೆ ಅವರ ಮಾತು ಸರಿಯಾಗಿ ಅರ್ಥವಾಗದೇ ಬಾಯಿ ತೆರೆದುಕೊಂಡು ಅವರನ್ನೆ ನೋಡುತ್ತಿದ್ದರು. ಕಾರಣ ಅವರು ಉತ್ತರ ಕರ್ನಾಟಕದ ಕನ್ನಡ ಮಾತನಾಡುತ್ತಿದ್ದರು . 

ನಾನು ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಓದುವಾಗ ನಮ್ಮ ಊರಿಗೆ ಅಂಗನವಾಡಿ ಸಹಾಯಕಿಯಾಗಿ ಬಂದ ನಂತರ ಗೊತ್ತಾಗಿದ್ದು ಅವರದು ಒಂಟಿ ಜೀವನ ಎಂದು! ಇರಲು ಬಾಡಿಗೆ ಮನೆಯ ಹುಡುಕಾಟ ನಡೆಸಿದಾಗ ನಮ್ಮ ಊರಿನ ಪಾರ್ಥಲಿಂಗೇಶ್ವರ ಯುವಕ ಸಂಘದ ಮನೆಯಲ್ಲಿ ಇರುವಂತೆ ಊರವರು ಹೇಳಿದರು . ಅದರಂತೆಯೇ ಶಾಂತಮ್ಮ ಸಂಘದ ಮನೆಯಲ್ಲಿ ವಾಸ ಆರಂಭಿಸಿದರು. ಹೊಸ ಜಾಗ ,ಹೊಸ ಮನೆಯಲ್ಲಿ ಇರಲು ಸ್ವಲ್ಪ ಭಯಗೊಂಡವರಂತೆ ಕಂಡ ಶಾಂತಮ್ಮ ನಮ್ಮ ಅಮ್ಮನ ಬಳಿ ಬಂದು " ನಿಮ್ ವೆಂಕಟೇಶ್ ಸಂಜೀ ಹೊತ್ತು ನನ್ನ ಸಂಗಡ ಮಲ್ಗಾಕ ಕಳುಸು, ಅವಂಗೆ ನಾ ಬೇಕಾದರೆ ಒದಾದು ಬರ್ಯಾದು ಹೇಳ್ಕೊಡ್ತೇನೆ" ಎಂದಾಗ ಅಮ್ಮ ಒಪ್ಪಿದರು. ನನ್ನ ಜೊತೆಗೆ ನನಗಿಂತ ಐದಾರು ವರ್ಷ ಹಿರಿಯರಾದ ಗೊಲ್ಲರ ಹಟ್ಟಿಯ  ಗಾಯತ್ರಕ್ಕ ಸಹ  ಜೊತೆಯಾದರು. ಶಾಂತಮ್ಮನವರ ಸಂಘದ ಮನೆಯಲ್ಲಿ ರಾತ್ರಿಯ ವೇಳೆಯಲ್ಲಿ ಓದಿ, ಬರೆದುಕೊಂಡು ಅಲ್ಲೇ ಮಲಗಿ ಬೆಳಿಗ್ಗೆ ಎದ್ದು ನಮ್ಮ ಮನೆಗೆ ಹೋಗುತ್ತಿದ್ದೆವು. ಕ್ರಮೇಣವಾಗಿ ನಾನು ಮತ್ತು ಗಾಯತ್ರಕ್ಕ ಇಬ್ಬರೂ ಶಾಂತಮ್ಮನವರ ಸಾಕು ಮಕ್ಕಳು ಎಂದು ಊರವರೇ ಪಟ್ಟ ಕಟ್ಟಿದರು. ಕೆಲವೊಮ್ಮೆ ಶಾಂತಮ್ಮ ರಾತ್ರಿ ವೇಳೆ ನಮಗೆ ಪಕೋಡ, ಬೋಂಡಾ, ರೊಟ್ಟಿ, ಚಕ್ಕುಲಿ ಮಾಡಿಕೊಡುತ್ತಿದ್ದರು ಆ ರುಚಿಯಾದ ತಿಂಡಿ ತಿನಿಸು ತಿಂದ ಕೆಲ ದಿನ ಓದು ಬರಹ ಸೊನ್ನೆಯಾಗಿದ್ದೂ ಉಂಟು...


ಶಾಂತಮ್ಮ ನಮ್ಮ ಊರಿಂದ ಎಲ್ಲೇ ಹೊರಟರೂ ನಾನು ಮತ್ತು ಗಾಯಕ್ಕ ಖಾಯಂ ಆಗಿ ಅವರ ಜೊತೆಗೆ ಹೋಗಲೇಬೇಕೆಂಬ ಅಲಿಖಿತ ನಿಯಮ ಜಾರಿಯಲ್ಲಿತ್ತು ಇದನ್ನು ಮನಗಂಡು ಭಾನುವಾರ ಮತ್ತು ರಜಾದಿನಗಳಲ್ಲಿ ದುರ್ಗ ,ಹೊಳಲ್ಕೆರೆ, ಹೊರಕೆರೆದೇವರಪುರ ಹೀಗೆ ನಮ್ಮ ಪಯಣ ಸಾಗುತ್ತಿತ್ತು.

ಮೊದಲ ಬಾರಿಗೆ ನಮಗೆ ಹೊಳಲ್ಕೆರೆ ಬಳಿಯಿರುವ ಅರೇಹಳ್ಳಿಗೆ ಕರೆದುಕೊಂಡು ಹೋಗಿ ರೈಲಿನ ದರ್ಶನ ಮಾಡಿಸಿದ್ದರು. ರಾಮಗಿರಿ ಬೆಟ್ಟ ಹತ್ತಿಸಿದ್ದರು. ಟೆಂಟ್ ನಲ್ಲಿ ಡ್ಯಾನ್ಸ್ ರಾಜಾ ಡ್ಯಾನ್ಸ್ ಸಿ‌ನಿಮಾ ತೋರಿಸಿದ್ದರು. ಒಮ್ಮೆ ಮಲ್ಲಾಡಿಹಳ್ಳಿಯ ಆಶ್ರಮಕ್ಕೆ ಕರೆದುಕೊಂಡು ಹೋಗಿ ಆಶ್ರಮದಲ್ಲಿ ತಿರುಕ ಎಂದೇ ಖ್ಯಾತರಾದ ಯೋಗ ಗುರುಗಳಾದ ರಾಘವೇಂದ್ರ ಸ್ವಾಮೀಜಿಗಳ ದರ್ಶನ ಮಾಡಿಸಿದ್ದರು. ಶಾಂತಮ್ಮನವರ ಒತ್ತಾಯದ ಮೇರೆಗೆ  ಸ್ವಾಮೀಜಿಯವರು ನೆಲಮಹಡಿಯ ಅವರ ಧ್ಯಾನದ ಕೋಣೆಗೆ ಕರೆದುಕೊಂಡು ಹೋಗಿ ಆ ಕೋಣೆಯ ದರ್ಶನ ಮಾಡಿಸಿದ್ದರು. ಆಗ ನಮಗೆ ಸ್ವಾಮೀಜಿಯವರ ಬಗ್ಗೆ  ಅಷ್ಟಾಗಿ ತಿಳಿದಿರಲಿಲ್ಲ. ಕ್ರಮೇಣವಾಗಿ ನಾವು ಬೆಳೆದಂತೆ ಪತ್ರಿಕೆಯಲ್ಲಿ, ಟೀವಿಗಳಲ್ಲಿ ಅವರ ವಿಷಯ ಮತ್ತು ಸೇವಾಮನೋಭಾವ  ತಿಳಿದು .ಅವರ ದರ್ಶನ ಭಾಗ್ಯ ಪಡೆದ ನಾವೆಷ್ಟು ಪುನೀತರು ಎಂದು ಅರ್ಥವಾಯಿತು .ಈಗ ಶಾಂತಮ್ಮ ನವರೂ ನಮ್ಮೊಂದಿಗಿಲ್ಲ ಪೂಜ್ಯ ಸ್ವಾಮೀಜಿಯವರು ಸಹ .ಆದರೆ ಅವರಿಬ್ಬರೂ ನನ್ನ ಜೀವನದಲ್ಲಿ ಪ್ರಮುಖಪಾತ್ರ ವಹಿಸಿದ ಪ್ರಾತಃ ಸ್ಮರಣೀಯರು. ಅವರ  ನೆನೆದರೆ ಮನದಲೇನೋ ಗೌರವ, ಸಮಾಧಾನ ಭಾವ ಉಂಟಾಗುತ್ತದೆ.


ಸಿಹಿಜೀವಿ

ಸಿ ಜಿ ವೆಂಕಟೇಶ್ವರ

ತುಮಕೂರು.