27 ಜನವರಿ 2022

ಆವುದು ಘನ ಆವುದು ಕಿರಿದು ಹೇಳಾ?. ವಿಮರ್ಶೆ


 

ಆವುದು ಘನ. ಆವುದು ಕಿರಿದು ಹೇಳಾ? 
ಪುಸ್ತಕ ವಿಮರ್ಶೆ.

ಆತ್ಮೀಯರು ,ಪ್ರಕಾಶಕರು, ನೂರಕ್ಕೂ ಹೆಚ್ಚು ಪುಸ್ತಕಗಳ ಲೇಖಕರಾದ
ಎಂ.ವಿ.ಶಂಕರಾನಂದ ರವರ ಆವುದು ಘನ ಆವುದು ಕಿರಿದು ಹೇಳಾ ಪುಸ್ತಕದಲ್ಲಿ ನಮಗೆ ಐವತ್ತೊಂಭತ್ತು ಸೂಫಿ ಕಥೆಗಳಿವೆ .
ಆ ಎಲ್ಲಾ ಸೂಫಿ  ಕಥೆಗಳು ಮಕ್ಕಳಿಂದ ಹಿಡಿದು ವೃದ್ಧ ರವರೆಗೂ ಎಲ್ಲರಿಗೂ ಇಷ್ಟವಾಗುತ್ತವೆ .

ಈ ಕೃತಿಯ  ಡಾ.ರವಿಕುಮಾರ್ ನೀಹ ರವರು ಸುಧೀರ್ಘವಾದ ಮುನ್ನುಡಿಯಲ್ಲಿ ಉಲ್ಲೇಖ ಮಾಡಿದಂತೆ ಈ ಸೂಫಿ ಕಥೆಗಳನ್ನು  ಓದಿದರೆ ನಮಗೊಂದು ಹೊಳಹು ಮೂಡಿ ಒಂದು ಚಿಂತನೆ ಮೊಳಕೆಯೊಡೆಯುವುದರಲ್ಲಿ ಸಂದೇಹವಿಲ್ಲ.
ಅವರ ಮಾತಿನಲ್ಲೇ ಹೇಳುವುದಾದರೆ ..
ಬದುಕಿನ ಅನಂತ ದರ್ಶನಗಳನ್ನು ಹುಡುಕ ಹೊರಟ ಕಾರಣದಿಂದ ಇಲ್ಲಿನ ಕತೆಗಳಲ್ಲಿ ಇಡೀ ಜೀವಮಂಡಲವೇ ಪಾತ್ರವಾಗಿ ನಿಂತಿವೆ. ಅವು ಪಾತ್ರಗಳು ಎನ್ನುವುದಕ್ಕಿಂತ ಈ ಲೋಕ ತಲುಪಬೇಕಾದ ಮಾನವೀಯ ದರ್ಶನದ ಕಡೆ ಈ ಕತೆಗಳು ಬೆರಳು ತೋರುತ್ತವೆ. ಆ ಕಾರಣದಿಂದ ಈ ಸಂಕಲನದ ತುಂಬಾ ನದಿ, ಮರಳುಭೂಮಿ, ನೆಲ-ಗಾಳಿ, ಮರಳುಗಾಡಿನ ನೀರು, ನೊಣ-ಆನೆ ಸಂಭಾಷಣೆ, ಪ್ರತಿಮೆ, ನಿಧಿ, ಸಾಹುಕಾರನ ಚಿನ್ನದ ನಾಣ್ಯ, ನಡುವಯಸ್ಸಿನ ಹೆಣ್ಣು, ಹಾದಿ ತಪ್ಪಿದ ಮಗ, ರಾಜ-ದರ್ವಸಿ, ಮೂರ್ಖರಾಜ, ಮಸೀದಿ-ಚಪ್ಪಲಿ, ಕಬ್ಬಿಣದ, ದೀಪದ ಕಂಭ, ಮಾಯಾಕನ್ನಡಿ, ಮಾಯಾಭಟ್ಟಲು, ಮಾರಿ ಮುಖವಾಡ, ಮಂತ್ರದಂಡ, ವಿದ್ಯೆ-ಆಹಾರ, ಕತ್ತೆಗಳು, ನಾಯಿ, ಉಡುಪು, ಮೂತ್ರ, ಮರಜೇನು, ನೆಲದೊಳಗಿನ ಮೊರೆತ ಇರುವೆ-ಚಿನ್ನದ ನಾಣ್ಯ, ಮೀನು-ವಜ್ರ, ಮೀನುಗಾರ ರೈತ, ವ್ಯಾಪಾರಿ, ಸನ್ಯಾಸಿ, ಹಕ್ಕಿ, ಬೆಕ್ಕು, ನಾಯಿ, ಹೀಗೆ ಬಹುಪಾತ್ರಗಳು ಇಲ್ಲಿಲ್ಲ ಹರಡಿಕೊಂಡಿವೆ. ಇವೆಲ್ಲವೂ ಜನಸಾಮಾನ್ಯರ ನಡುವಿನಲ್ಲೇ ಇರುವಂಥವು. ತಮ್ಮ ಸುತ್ತಲೇ ಇರುವ ಸಂಗತಿಗಳ ಜತೆಯೇ ಬದುಕಿನ ದರ್ಶನ ಮಾಡಿಸುವುದು ಈ ಕತೆಗಳ ವೈಶಿಷ್ಟ್ಯ ಆ ಕಾರಣದಿಂದ ಕೇವಲ ತಾತ್ವಿಕತೆಗಳೆಂಬ ಕಬ್ಬಿಣದ ಕಡಲೆಗಳು ಜನರನ್ನು ತಲುಪಲು ಏದುಸಿರುಬಿಡುತ್ತಿವೆ. ಜನರ ನಡುವಿನಿಂದಲೇ ಹುಟ್ಟಿದವು ಸಹಜ ಉಸಿರಾಟದಿಂದ ಓಡಾಡಿಕೊಂಡಿರುತ್ತವೆ ಎಂಬುದನ್ನು ಈ ಕತೆಗಳು ಅಂತರ್ಯದಲ್ಲಿ ಧರಿಸಿರುವ ನೆಲೆಗಳು.
ಶಂಕರಾನಂದ ರವರು    ಇಡೀ ಸೂಫಿಯನ್ನು ನಮ್ಮ ಶರಣ ಪರಂಪರೆಗೆ ಅನ್ವಯಿಸಿರುವುದು ವಿಶೇಷವಾಗಿದೆ. ಮತ್ತು ಸರಿಯಾಗಿಯೇ ಇದೆ. ಇಲ್ಲಿನ ಪ್ರತಿ ಕತೆಗಳಿಗೂ ಶರಣರ ವಚನಗಳ ಸಾಲನ್ನೇ ಶೀರ್ಷಿಕೆಯನ್ನಾಗಿ ಇಟ್ಟಿರುವುದು ಅಧ್ಯಯನಕ್ಕೆ ಹೊಸ ತೋರುಗಲ್ಲಾಗಿದೆ ಎಂದರೆ ತಪ್ಪಾಗಲಾರದು.

ಈ ಕೃತಿಯ ಎಲ್ಲಾ ಕಥೆಗಳು ನನಗೆ ಇಷ್ಟವಾದರೂ ಕೆಲವು ನನ್ನನ್ನು ಬಹಳ ಕಾಡಿದವು ಇನ್ನೂ ಕೆಲವನ್ನು ಪುನಃ ಮನನ ಮಾಡಿಕೊಳ್ಳುತ್ತಿರುವೆ.

"ಅರ್ಥದ ಮೇಲಣ ಆಶೆ " ಎಂಬ ಕಥೆಯಲ್ಲಿ
ಕುರುಡರಾದವರು  ಆನೆಯ ಆಕಾರದ ಬಗೆಗಾಗಲೀ ಗಾತ್ರದ ಬಗೆಗಾಗಲಿ
ಯಾವ ಕಲ್ಪನೆಯೂ ಇರದೇ ಆನೆಯನ್ನು ಸಮೀಪಿಸಿ ಕೈಗೆ ತಾಕಿದ ಅದರ ಬೃಹತ್ ದೇಹದ ಅಂಗಾಂಗಗಳ ಮೇಲೆ ಕೈ ಆಡಿಸುತ್ತಾ ಆನೆಯ ಬಗ್ಗೆ ಮಾಹಿತಿಯ ಪಡೆದುಕೊಳ್ಳುವ ಪ್ರಯತ್ನದಲ್ಲಿ ನಿರತರಾದ ಬಗ್ಗೆ ಹೇಳುತ್ತಾ
ತಾವು ಬಿಡಿಬಿಡಿಯಾಗಿ ಮುಟ್ಟಿದ ಅವಯವವೇ ಆನೆ ಎಂಬುದಾಗಿ ಕಲ್ಪಿಸಿಕೊಳ್ಳಲು ಅವರಿಗೆ ಸಾಧ್ಯವಾಯಿತೇ ಹೊರತು ಆ ಎಲ್ಲಾ ಅವಯವಗಳ ಸಮಗ್ರತೆಯಲ್ಲಿ ಮಾತ್ರವೇ ಆನೆ  ಎಂಬ ಪರಿಕಲ್ಪನೆ  ಇರಲು ಸಾಧ್ಯ ಎಂಬುದನ್ನು ಕಲ್ಪಿಸಿಕೊಳ್ಳುವುದೂ ಅವರಿಗೆ ಸಾಧ್ಯವಿರಲಿಲ್ಲ.

ಜ್ಞಾನವನ್ನು ಅದರ ಅಖಂಡತೆಯಲ್ಲಿ ಕಂಡುಕೊಳ್ಳಲಾರದವರು. ನಾವೂ ಸಹ ಕುರುಡರಂತೆಯೇ ಅಪೂರ್ಣತೆಯನ್ನೇ ಪೂರ್ಣತೆ ಎಂಬ ಭ್ರಮೆಯಲ್ಲಿ ಬದುಕುತ್ತೇವೆ .
ನಮ್ಮ ಅಭಿಪ್ರಾಯಗಳು ಬಿಡಿಯಾಗಿ ಸರಿ,ಒಟ್ಟಾಗಿ ತಪ್ಪು ಆದರೂ ಕೆಲವೊಮ್ಮೆ ನಮ್ಮದೇ ಸರಿ ಎಂದು ವಿತಂಡವಾದ ಮಾಡುವುದನ್ನು ನಿಲ್ಲಿಸುವುದಿಲ್ಲ.

"ಅವಧಿ ಅಳಿಯಿತ್ತು" ಎಂಬ ಕಥೆಯು ಚಿಕ್ಕದಾದರೂ  ಬಹುದೊಡ್ಡ ಸಂದೇಶ ನೀಡಿದೆ.
ತನ್ನೆಲ್ಲ ಸಮಸ್ಯೆಗಳು ಬಗೆಹರಿದರೆ ಮನೆಯನ್ನು ಮಾರಿ ಅದರಿಂದ ಬರುವ ಹಣವನ್ನೆಲ್ಲಾ ಬಡಬಗ್ಗರಿಗೆ ದಾನಮಾಡುವುದಾಗಿ ಹರಕೆ ಹೊತ್ತುಕೊಂಡ.
ಸ್ವಲ್ಪ ದಿನಗಳು ಕಳೆಯುವಷ್ಟರಲ್ಲಿ ಅವನ ಸಮಸ್ಯೆಗಳು ಬಗೆಹರಿದವು. ಹರಕೆಯಂತೆ
ನಡೆದುಕೊಳ್ಳಲೇಬೇಕಾದ ವೇಳೆ ಬಂದೊದಗಿತು. ಆದರೆ ಮನೆಯ ಮಾರಾಟದಿಂದ

ಬರುವ ಅಪಾರ ಹಣವನ್ನು ದಾನಮಾಡುವುದೆಂದರೆ ಹೇಗೆ ಎಂಬ ಚಿಂತೆ ಕಾಡತೊಡಗಿತು.
ಒಂದು ಉಪಾಯವನ್ನು ಹುಡುಕಿ ತೆಗೆದ. ಮನೆಗೆ ಒಂದು ಬೆಳ್ಳಿ ನಾಣ್ಯದ ದರವನ್ನು ನಿಗದಿಪಡಿಸಿದ. ಆದರೆ ಮನೆಕೊಳ್ಳುವವನು ಅದರ ಜೊತೆಗೆ ಒಂದು ಬೆಕ್ಕನ್ನು ಕೊಳ್ಳಬೇಕೆಂಬ ಷರತ್ತು ಹಾಕಿದ. ಬೆಕ್ಕಿನ ಬೆಲೆ ಹತ್ತು
ಸಾವಿರ ಬೆಳ್ಳಿ ನಾಣ್ಯಗಳೆಂದು ನಿಗದಿಪಡಿಸಿದ. ಮನೆ ಮತ್ತು ಬೆಕ್ಕು ಷರತ್ತಿನಂತೆ ಜಂಟಿಯಾಗಿ ಮಾರಾಟವಾದುವು. ಆದರೆ ಹರಕೆ ಹೊತ್ತಿದ್ದ ವ್ಯಕ್ತಿಯು ಮನೆಯ ಲೆಕ್ಕದ ಒಂದು ಬೆಳ್ಳಿ ನಾಣ್ಯವನ್ನು ಬಡವನಿಗೆ ದಾನಮಾಡಿ ಬೆಕ್ಕಿನ ಲೆಕ್ಕದ ಹತ್ತು ಸಾವಿರ ಬೆಳ್ಳಿ ನಾಣ್ಯಗಳನ್ನು ತಿಜೋರಿಗೆ ತುಂಬಿಕೊಂಡ. ಹರಕೆಯೇನೋ ತೀರಿದಂತಾಯಿತು. ಆದರೆ ಸ್ವಾರ್ಥದ ದೃಷ್ಟಿಯಲ್ಲಿ ಅದನ್ನು ವ್ಯಾಖ್ಯಾನಿಸಿಕೊಂಡು ಅದರಲ್ಲಿಯೂ ಲಾಭಮಾಡಿಕೊಂಡ.  ಇಂತಹ  ಮನೋಭಾವನೆ ಇರುವ ಜನರು ಸಂಕಟ ಬಂದಾಗ ವೆಂಕಟರಮಣ ಎಂಬುದನ್ನೇ ಮುಂದುವರೆಸುತ್ತಾರೆ.

"ಆವುದು ಘನ, ಆವುದು ಕಿರಿದು ಹೇಳಾ?"ಎಂಬ ಶೀರ್ಷಿಕಾ ಕಥೆಯಲ್ಲಿ ಬರುವ ನೀತಿಯು ಸಾರ್ವಕಾಲಿಕ .ಯಾರು ಭಗವಂತನ ಕರುಣೆಯನ್ನು ಉಪೇಕ್ಷಿಸಿ ಹೆಣ್ಣು, ಹೊನ್ನು, ಮಣ್ಣಿಗಾಗಿ ಆಸೆ ಪಡುತ್ತಾರೋ ಅಂತವರಿಗೆ  ದುರ್ಗತಿ ತಪ್ಪಿದ್ದಲ್ಲ .

ಇತಿಹಾಸ ಲೇಖಕರು ಆತ್ಮೀಯರೂ ಸಂಘಟಕರೂ ಆದ ಎಂ ಎಚ್ ನಾಗಾರಾಜು ರವರು ಬೆನ್ನುಡಿಯಲ್ಲಿ ಹೇಳಿದಂತೆ  ಓದುಗರ  ಮನಸ್ಸನ್ನು ಸಮೃದ್ಧಗೊಳಿಸಿರುವ ಶಂಕರಾನಂದ ರವರಿಗೆ ಸಾಹಿತ್ಯದ ರಚನೆ ಮತ್ತು ಭಾಷಾಂತರದ ಕಲೆ  ಸಿದ್ಧಿಸಿದೆ. ಯಾವುದೇ ಅಡೆತಡೆ ಇಲ್ಲದೆ ನೀರು ಕುಡಿದಷ್ಟೇ  ಸುಲಭವಾಗಿ ಲೀಲಾಜಾಲವಾಗಿ ಭಾಷೆ ಬಳಸುತ್ತಾರೆ. ಮಕ್ಕಳು ಮಾತ್ರವಲ್ಲ ಎಲ್ಲಾ ವಯೋಮಾನದ ಓದುಗರಿಗೂ ಇಲ್ಲಿನ ಕಥೆಗಳು ಋಷಿ ಕೊಡುತ್ತವೆ. ಮುದಗೊಳಿಸುತ್ತವೆ. ಅವರ ಜ್ಞಾನದ ದಿಗಂತವನ್ನು ವಿಸ್ತರಿಸುತ್ತವೆ.ಇದು ನಿಜವೂ ಹೌದು.
ಆದ್ದರಿಂದ ನೀವೂ ಸಹ ಒಮ್ಮೆ ಆವುದು ಘನ ಆವುದು ಕಿರಿದು ಹೇಳಾ? ಪುಸ್ತಕ ಓದಲೇಬೇಕು 

ಪುಸ್ತಕ: ಆವುದು ಘನ ಆವುದು ಕಿರಿದು ಹೇಳಾ?
ಪ್ರಕಾಶನ: ಕಲ್ಪತರು ಪ್ರಕಾಶನ
ವರ್ಷ: 2021
ಬೆಲೆ: 165

ಸಿಹಿಜೀವಿ
ಸಿ ಜಿ ವೆಂಕಟೇಶ್ವರ
ತುಮಕೂರು
9900925529.

26 ಜನವರಿ 2022

ಆಡಿನ ಆಟ.ಶಿಶುಗೀತೆ.


 #ಚಿತ್ರಕವನ


#ಮಕ್ಕಳಕವನ



#ಆಡಿನ_ಆಟ




ಆಡುತ ಬಂದು ಮೋಟಾರು

ಮೇಲೆ ಕುಳಿತಿದೆ ನೋಡು ಆಡೊಂದು

ಹಾಡುತ ಬಂದ ಬಾಲಕ ನೋಡಿ

ಅಚ್ಚರಿ ಪಟ್ಟನು ಕೇಳಿಂದು .


ಕೇಳಿದ  ಬಾಲಕ ಇದು

ನಮ್ಮಯ ವಾಹನ ಮೇಲೇಳು 

ಒಂದಿನ ಕುಳಿತಿಹೆ ಸುಮ್ಮನಿದ್ದು ಬಿಡು

ನೋಯುತಿವೆ ನನ್ನ ಕಾಲ್ಗಳು.


ಅಪ್ಪನ ಜೊತೆಗೆ ಶಾಲೆಗೆ ಹೋಗುವೆ

ಜಾಗ ಬಿಡು ಈಗಲೆ

ನಮ್ಮಮ್ಮ ಬರೋವರೆಗೂ ಏಳಲ್ಲ

ಸುಮ್ಮನೆ ನೀನು ಕಾಯಲೆ.


ಉಪಾಯ ಮಾಡಿ ಸೊಪ್ಪನು 

ತಂದು ಹಿಡಿದನು  ಬಾಲಕನು

ಸ್ಕೂಟರ್ ಇಳಿದೇ ಬಿಟ್ಟಿತು

ಆಡು ತಿನ್ನಲು ಸೊಪ್ಪನ್ನು .


ಹೊಟ್ಟೆಗೆ ಇಂಧನ ಬೀಳಲು

ಆಡು ಹೊರಟಿತು ಹೊಲದ ಕಡೆ 

ಅಪ್ಪನ ಕರೆದ ಬಾಲಕ ಸ್ಕೂಟರ್ 

ಏರಿ ಹೊರಟ ಶಾಲೆ ಕಡೆ .



#ಸಿಹಿಜೀವಿ 

ಸಿ ಜಿ ವೆಂಕಟೇಶ್ವರ

ತುಮಕೂರು

ನಮ್ಮ ಗಣ ತಂತ್ರ ವ್ಯವಸ್ಥೆಯನ್ನು ಬಲಪಡಿಸೋಣ. ಲೇಖನ


 *ಭಾರತದ ೭೪ ನೇ ಗಣರಾಜ್ಯೋತ್ಸವದ ಶುಭಾಶಯಗಳು*💐🌹🌷.


ಆತ್ಮೀಯರೇ...


ನಮ್ಮದು ಪ್ರಪಂಚದಲ್ಲಿಯೇ ದೊಡ್ಡ ಪ್ರಜಾಪ್ರಭುತ್ವ ಗಣತಂತ್ರ ಎಂಬುದಕ್ಕೆ ಭಾರತೀಯರಾದ ನಾವು ಹೆಮ್ಮೆ ಪಡೋಣ. 

ವಿವಿಧ ಭಾಷೆ , ಧರ್ಮ ,ಸಂಸ್ಕೃತಿ ಪರಂಪರೆಗಳನ್ನು ಪ್ರೊತ್ಸಾಹಿಸುತ್ತಾ ಬೆಳೆಸುತ್ತಾ ,ಬೆಳೆಯುತ್ತಾ ಬಂದಿರುವ ನಮ್ಮ ಗಣತಂತ್ರವನ್ನು  ನೋಡಿ ಜಗತ್ತು ಬೆರಗಾಗಿದೆ. 


ಫೆಡರಲ್ ಮತ್ತು ಯುನಿಟರಿ ಎರಡೂ ಸರ್ಕಾರಗಳ ಒಳ್ಳೆಯ ಅಂಶಗಳನ್ನು ಹದವಾಗಿ ಬೆರೆಸಿ ಆಡಳಿತಕ್ಕೆ ಸಜ್ಜುಗೊಳಿಸಿದ ಸಂವಿಧಾನಕಾರರ ಚಾಕಚಕ್ಯತೆ ಮೆಚ್ಚಲೇಬೇಕು. 

ಕೇಂದ್ರ ಮತ್ತು ರಾಜ್ಯಸರ್ಕಾರಗಳ ಅಧಿಕಾರಗಳನ್ನು ಒಕ್ಕೂಟ ವ್ಯವಸ್ಥೆಯ ಮಾರ್ಗಸೂಚಿಯಾಗಿ ಹಂಚಲಾಗಿದೆ .ಕೇಂದ್ರ ಪಟ್ಟಿ, ರಾಜ್ಯ ಪಟ್ಟಿ ,ಸಮವರ್ತಿ ಪಟ್ಟಿ ಹೀಗೆ ಪಟ್ಟಿ ಮಾಡಿ ನಮ್ಮ ಆಡಳಿತಕ್ಕೆ ದಿಕ್ಸೂಚಿ ನೀಡಲಾಗಿದೆ. ಅದರೂ ಕೆಲವೊಮ್ಮೆ ವಿತಂಡವಾದ , ರಾಜಕೀಯ ಮೇಲಾಟ ಮುಂತಾದ ಕಾರಣದಿಂದಾಗಿ ಕೇಂದ್ರ ಮತ್ತು ಸ್ಥಳೀಯ ಸರ್ಕಾರಗಳ ನಡುವೆ ತಿಕ್ಕಾಟ ಉಂಟಾಗಿ ನ್ಯಾಯಾಲಯವು ಮಧ್ಯ ಪ್ರವೇಶಿಸಿ ಸರಿಪಡಿಸಿರುವುದನ್ನು ಕಾಣುತ್ತೇವೆ.


ಇತ್ತೀಚಿನ ದಿನಗಳಲ್ಲಿ ಅನವಶ್ಯಕವಾಗಿ ಪ್ರತ್ಯೇಕವಾದ, ಸಂಕುಚಿತ ಮನೋಭಾವ ಬೆಳೆಸುವುದು, ಜನರಲ್ಲಿ ಪರಸ್ಪರ ದ್ವೇಷದ ಬಾವನೆಗಳ ಕೆರಳಿಸುವುದನ್ನು  ಅಲ್ಲಲ್ಲಿ ಕಾಣುತ್ತಿರುವುದು ದುರದೃಷ್ಟಕರ .ನಮ್ಮೆಲ್ಲ ವೈಯಕ್ತಿಕ ಹಿತಾಸಕ್ತಿಗಿಂತ" ಮಾತೆಯೇ ಮೇಲು" ಎಂಬ ಭಾವನಾತ್ಮಕ ಅಂಶ ನಮ್ಮನ್ನು ಬೆಸೆಯಬೇಕಿದೆ .ಇಲ್ಲದಿದ್ದರೆ ನಮ್ಮ ದೇಶ ಈಗ ಗಳಿಸಿರುವ ಹೆಸರಿಗೆ ಮಸಿ ಬಳಿಯಲು ವಿದೇಶಗಳಲ್ಲಿ ಕೆಲವು ಕಾದು ಕುಳಿತಿವೆ.  ಭಾರತೀಯರಾದ ನಾವು ಇದಕ್ಕೆ ಆಸ್ಪದ ನೀಡಬಾರದು  ೭೩ ನೇ ಗಣರಾಜ್ಯೋತ್ಸವ ಅಚರಿಸುವ ಈ ಶುಭಸಂದರ್ಭದಲ್ಲಿ ಜನನೀ ಜನ್ಮ ಭೂಮಿಶ್ಚ ಸ್ವರ್ಗಾದಪಿ ಗರೀಯಸಿ ಎಂಬಂತೆ ನಮ್ಮ ಭರತಖಂಡ ನಮಗೆ ಸ್ವರ್ಗಕ್ಕಿಂತಲೂ ಮಿಗಿಲು ಭಾರತಮಾತೆಗೆ ಸದಾ ನಮಿಸುತ್ತಾ ಒಗ್ಗಟ್ಟಾಗಿ ಬಾಳೋಣ. ನಮ್ಮ ಗಣತಂತ್ರವನ್ನು ಬಲಪಡಿಸೋಣ.



*ಸಿಹಿಜೀವಿ*

ಸಿ ಜಿ ವೆಂಕಟೇಶ್ವರ

ತುಮಕೂರು.

25 ಜನವರಿ 2022

ಮೀನಾಕ್ಷಿಯ ಸೌಗಂಧ. ಪುಸ್ತಕ ವಿಮರ್ಶೆ.


 




ಮೀನಾಕ್ಷಿಯ ಸೌಗಂಧ.

ವಿಮರ್ಶೆ 


ಬಿ .ಜಿ.ಎಲ್. ಸ್ವಾಮಿ ಶತಮಾನೋತ್ಸವ ವಿಶೇಷವಾದ  ಮೀನಾಕ್ಷಿಯ ಸೌಗಂಧ ಎಂಬ   ಬಿಡಿ ಲೇಖನಗಳು ಓದುಗರಿಗೆ ರಸದೌತಣ ನೀಡುತ್ತವೆ.


ಸ್ವಾಮಿ ಎಂದೇ ಹೆಚ್ಚು ಪರಿಚಿತರಾದ ಡಾ. ಬೆಂಗಳೂರು ಗುಂಡಪ್ಪ ಲಕ್ಷ್ಮೀನಾರಾಯಣ ರವರು ಅಂತರರಾಷ್ಟ್ರೀಯ ಖ್ಯಾತಿಯ ಸಸ್ಯವಿಜ್ಞಾನಿ, ಹೆಸರಾಂತ ಲೇಖಕರಾದ ಡಿ ವಿ ಜಿ ರವರ  ಸುಪುತ್ರರು. ೧೯೧೮ರ ಫೆಬ್ರವರಿ ಜನಿಸಿದ ಸ್ವಾಮಿಯವರು ಸಸ್ಯಶಾಸ್ತ್ರದಲ್ಲಿ ಡಾಕ್ಟರೇಟ್ ಪದವಿಯನ್ನು ಪಡೆದಿದ್ದರು. ೧೯೫೩ರಿಂದ ಚೆನ್ನೈನ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ ಅವರು ಕಾಲೇಜಿನ ಪ್ರಾಂಶುಪಾಲರೂ ಆಗಿದ್ದರು. ಕೆಲವಾರು ಸಸ್ಯಗುಂಪುಗಳನ್ನು ಅನ್ವೇಷಿಸಿದ್ದು, ಅವುಗಳಲ್ಲಿ ಮಹೇಶ್ವರಿ, ಸರ್ಕಂಡ್ರಾ ಇರಿಂಗ್‌ವೈಲಿಯ್ಯ ಸೇರಿವೆ. ಗುರುಗಳ ಹೆಸರುಗಳನ್ನೇ ಗುಂಪುಗಳಿಗೆ ಇರಿಸಿದ್ದಾರೆ. ತಿರುಚರಾಪಳ್ಳಿಯಲ್ಲಿನ ಭಾರತಿದಾಸನ್ ವಿಶ್ವವಿದ್ಯಾಲಯದಲ್ಲಿ ಡಾ. ಸ್ವಾಮಿಯವರ ಹೆಸರಿನ ಗೌರವಾರ್ಥ ಸ್ವಾಮಿ ಬಟಾನಿಕಲ್ ಗಾರ್ಡನ್  ಸ್ಥಾಪಿತಗೊಂಡಿದೆ.


ಸ್ವಾಮಿಯವರ ಬರವಣಿಗೆಯ ವೈವಿಧ್ಯಮಯವಾದುದು. ಅವರ ವಿಷಯ ನಿರೂಪಣೆಯಂತೂ ಮಗ್ಗುಲುಗಳನ್ನು ಒಟ್ಟಿಗೆ ಕಾಣಿಸಿ ಆಸಕ್ತಿ ಹುಟ್ಟಿಸುವಂತಹುದು. ಸೊಗಸಾದ ಹಾಸ್ಯದೊಂದಿಗೆ ಜನಸಾಮಾನ್ಯರಿಗೂ ಅರ್ಥವಾಗುವಂತೆ ಕುರಿತು ತಿಳಿಸಿಕೊಡುವ ಪ್ರತಿಭೆ ಜೊತೆ ಜೊತೆಗೆ ಕಾವ್ಯಗಳಿಂದ ಉಲ್ಲೇಖಗಳನ್ನು ನೀಡುವುದು ಇನ್ನೊಂದು ಸೊಬಗು.


ಬಿ.ಜಿ.ಎಲ್. ಸ್ವಾಮಿಯವರ ಲೇಖನಿಯಿಂದ ಹರಿದುಬಂದಿರುವ ಕೃತಿಗಳಲ್ಲಿ ಕೆಲವೆಂದರೆ: ಹೊನ್ನು, ಕಾಲೇಜು ರಂಗ, ಕಾಲೇಜು ತರಂಗ, ಪ್ರಾಧ್ಯಾಪಕನ ಪೀಠದಲ್ಲಿ, ತಮಿಳು ತಲೆಗಳ ನಡುವೆ , ದಕ್ಷಿಣ ಅಮೆರಿಕ, ಅಮೆರಿಕದಲ್ಲಿ ಬೃಹದಾರಣ್ಯಕ, ಮೊದಲಾದವು. ಅವರು ತಮಿಳಿನಿಂದಲೂ ಕನ್ನಡಕ್ಕೆ ಕೃತಿಗಳನ್ನು ತಂದಿದ್ದಾರೆ.


ಅವರ 'ಹಸುರು ಹೊನ್ನು' ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಸಂದಿದೆ.


ಪ್ರಸ್ತುತ ಪುಸ್ತಕದ

ಆರ್ಜಿತ ಗುಣಗಳೂ ಅನುವಂಶೀಯತೆಯೂ ಎಂಬ ಲೇಖನದಲ್ಲಿ ನಮ್ಮ ಅನುವಂಶೀಯತೆ ಮತ್ತು ಪರಿಸರ ಹೇಗೆ ನಮ್ಮ ವ್ಯಕ್ತಿತ್ವ ರೂಪಿಸಬಹುದು ಎಂಬುದನ್ನು ಸಾಧಾರವಾಗಿ ವಿಶ್ಲೇಷಣೆ ಮಾಡಿರುವರು.


 ಲಿಂಗಜಾತಿಗಳ ಪರಸ್ಪರ ಪರಿಮಾಣ,ಜೀವವಿಜ್ಞಾನದ ತಿಲೋತ್ತಮೆ,ಆದರ್ಶ ಗೆಳೆತನ,ಒಡಲೆರಡು ಆಸುವೊಂದು

,ಅಂತರ ಬುಡಕಟ್ಟಿನವರ ಮದುವೆಗಳಾದಾಗ,“ಕಾಮದಿಂ ಕಡು ಕುರುಡರಾದವರು...",ಪ್ರಣಯ ಪ್ರಸಂಗ,ಪ್ಲಾಟಿಪಸ್,ಜೇಡನ ಚರಕ ,ಹಸಿವಿನ ಬಳ್ಳಿ,ಕದಂಬ, ಪಂಚಾವತಾರ,ಈ ಪರಿಯ ಪ್ರಭೆ ಮುಂತಾದ ಲೇಖನಗಳು ನಮ್ಮನ್ನು ಚಿಂತನೆಗೆ ಹಚ್ಚುತ್ತವೆ.


ಚರಿತ್ರೆಗೆ ಸಂಬಂಧಿಸಿದ ಲೇಖನಗಳಾದ 

ಕೊಂಗುದೇಶದ ರಾಜರು,

ಕೊಡುಂದಾಳೂರಿನಲ್ಲಿ ಕನ್ನಡ, ಎಂಬ ಬರೆಹಗಳು ಇತಿಹಾಸದ ಮೇಲೆ ಹೊಸ ಬೆಳಕು ಚೆಲ್ಲುತ್ತವೆ.


ಸಾಹಿತ್ಯ ಸಂಬಂಧಿತ ಲೇಖನಗಳಾದ 

ರಾಯರ ಆದ್ಯಂಜನ,ಮೀನಾಕ್ಷಿಯ ಸೌಗಂಧ, ಜೇಡರ ದಾಸಿಮಯ್ಯನ ಮತ ವಿಚಾರ,ಕಲಾವಿದ ಕೆ. ವೆಂಕಟಪ್ಪ ಮತ್ತು ವೆಂಕಟಪ್ಪ ಚಿತ್ರಶಾಲೆ, ಪುರಂದರದಾಸರು ಮತ್ತು ಬಿ.ವಿ. ಕಾರಂತರು ಮುಂತದವುಗಳಲ್ಲಿ ಸ್ಚಾಮಿ ರವರು ಬಳಸಿದ ಭಾಷೆ ಉತ್ಕೃಷ್ಟವಾದುದು.ನಿಮಗೆ ಆ ಅನುಭವವಾಗಬೇಕಾದರೆ ನೀವು ಒಮ್ಮೆ ಮೀನಾಕ್ಷಿಯ ಸೌಗಂಧ ಆಘ್ರಾಣಿಸಲೇಬೇಕು.


ಸಿಹಿಜೀವಿ

ಸಿ ಜಿ ವೆಂಕಟೇಶ್ವರ


23 ಜನವರಿ 2022

ಸೆಲೆಬ್ರಿಟಿಗಳೊಂದಿಗೆ ಸಿಹಿಜೀವಿ.ಲೇಖನ ಆತ್ಮ ಕಥೆ ೨೬


 


ಸೆಲೆಬ್ರಿಟಿಗಳೊಂದಿಗೆ ಸಿಹಿಜೀವಿ

ನಾನು ಮೈಸೂರಿನಲ್ಲಿ ಬಿ ಎಡ್ ಮಾಡುವಾಗ ನನ್ನ ಅಣ್ಣನ ಜೊತೆ ದಸರಾ ವಸ್ತು ಪ್ರದರ್ಶನ ವೀಕ್ಷಿಸಲು ಹೋದಾಗ ನಟ ರಮೇಶ್ ಅವರನ್ನು ನೋಡಿದ್ದೆ ಬಹಳ ಸರಳ ನಡೆ ನುಡಿಯ ರಮೇಶ್ ರವರು ನಮ್ಮನ್ನು ಚೆನ್ನಾಗಿ ಮಾತನಾಡಿಸಿದರು. ಆದರೆ ಅಂದು ನಮ್ಮ ಬಳಿ ಕ್ಯಾಮರಾ ಇರಲಿಲ್ಲ ಅವರೊಂದಿಗೆ ಫೋಟೋ ತೆಗೆಸಿಕೊಳ್ಳಲು ಆಗಲಿಲ್ಲ .

ಗೌರಿಬಿದನೂರಿನ SSEA ಸರ್ಕಾರಿ ಪ್ರೌಢಶಾಲೆಯಲ್ಲಿ ನಾನು ಕೆಲಸ ಮಾಡುವಾಗ ಮಕ್ಕಳನ್ನು ಮೂರು ದಿನದ ಪ್ರವಾಸಕ್ಕೆ ಕರೆದುಕೊಂಡು ಹೋದಾಗ ಕೊಲ್ಲೂರಿನಲ್ಲಿ ಅಚಾನಕ್ ಆಗಿ ದರ್ಶನ್ ಅವರ ಭೇಟಿ ಮಾಡಿದೆ.ಅವರು ನಗುತ್ತಲೆ ನನ್ನ ಕೈ ಕುಲುಕಿದರು .ಆದರೆ ಅವರ ಬೌನ್ಸರ್ ಗಳು ಅನವಶ್ಯಕವಾಗಿ ಅಭಿಮಾನಿಗಳನ್ನು ತಳ್ಳುತ್ತಿದ್ದುದು ಯಾಕೋ ನನಗೆ ಇಷ್ಟ ಆಗಲಿಲ್ಲ.

ಅಂತರರಾಷ್ಟ್ರೀಯ ಛಾಯಾಗ್ರಾಹಕರಾದ
ನಮ್ಮ ತಿಪ್ಪೇಸ್ವಾಮಣ್ಣ  ರವರ ಮಗನಾದ ಅರುಣ್ ರವರ ಮದುವೆಗೆ ಹೋದಾಗ ಬೆಂಗಳೂರಿನಲ್ಲಿ ಪ್ರಣಯರಾಜ ಶ್ರೀನಾಥ್ ರವರನ್ನು ನಮ್ಮ ಕುಟುಂಬ ಸಮೇತ ಭೇಟಿ ಮಾಡಿ ಬಹಳ ಹೊತ್ತು  ಮಾತನಾಡಿದೆವು .ನಮ್ಮ ತಿಪ್ಪೇಸ್ವಾಮಣ್ಣ ಶ್ರೀನಾಥ್ ರವರಿಗೆ " ನಮ್ಮ ಹುಡುಗ ಕಥೆ ಕವನ ಬರೀತಾನೆ ಎಂದು ಪರಿಚಯ ಮಾಡಿಸಿದಾಗ ಶ್ರೀನಾಥ್ ರವರು ಮೆಚ್ಚುಗೆ ವ್ಯಕ್ತಪಡಿಸಿ ಗುಡ್ , ಬರೀತಾ ಇರಿ ಎಂದಾಗ ಸ್ವರ್ಗಕ್ಕೆ ಮೂರೇ ಗೇಣು.

ಗೌರಿಬಿದನೂರಿನ ಒಂದು ಫಾರ್ಮ್ ಹೌಸ್ ನಲ್ಲಿ ಶಿವರಾಜ್ ಕುಮಾರ್ ಅಭಿನಯದ ಒಂದು ಚಿತ್ರದ ಶೂಟಿಂಗ್ ಸಮಯದಲ್ಲಿ ಗೆಳೆಯ ಅಂಜನಪ್ಪ ಮತ್ತು ನಾನು ಹೋಗಿ ಶಿವರಾಜ್ ಕುಮಾರ್ ರವರನ್ನು ಭೇಟಿ ಮಾಡಿ ಪೋಟೋ ತೆಗೆಸಿಕೊಂಡೆವು ಶಿವಣ್ಣನ ಸರಳತೆ ಇಷ್ಟವಾಯಿತು.

ಇನ್ನೂ ಕವಿಗಳಾದ ದೊಡ್ಡರಂಗೇಗೌಡ ರವರು, ದಿವಂಗತ ಸಿದ್ದಲಿಂಗಯ್ಯ ಅವರು, ಬಿ ಆರ್ ಲಕ್ಷ್ಮಣ ರಾವ್ ರವರು, ಚಂಪಾರವರು ಜರಗನಳ್ಳಿ ಶಿವಶಂಕರ್ ರವರು ಡಾ. ಹೆಚ್ ಎಲ್ ಪುಷ್ಷ ರವರು, ಗೋರೂರು ಚನ್ನಬಸಪ್ಪ ರವರು ಮುಂತಾದ ಕವಿಗಳನ್ನು ಭೇಟಿಯಾಗಿ ಅವರೊಂದಿಗೆ ಮಾತನಾಡಿರುವುದು ನನ್ನ ಸೌಭಾಗ್ಯ.

ನನ್ನ ನೆಚ್ಚಿನ ನಟರಾದ ರೆಬೆಲ್ ಸ್ಟಾರ್ ಅಂಬರೀಶ್ ರವರನ್ನು ಭೇಟಿ ಮಾಡಲು ಆಗಲಿಲ್ಲ ಎಂಬ ಕೊರಗು ಇದ್ದೇ ಇದೆ.ಆದರೂ ಅವರ ಚಿತ್ರಗಳನ್ನು ನೋಡಿದಾಗ ಅಣ್ಣನವರ ಭೇಟಿಯಾದಷ್ಟೇ ಪುಳಕವಾಗುತ್ತೇನೆ.

ಸಿಹಿಜೀವಿ
ಸಿ ಜಿ ವೆಂಕಟೇಶ್ವರ