16 ಏಪ್ರಿಲ್ 2020

ಸಿಹಿಜೀವಿಯ ೫ ಹನಿಗಳು

*ಸಿಹಿಜೀವಿಯ ೫ ಹನಿಗಳು*

*೧*

*ನಾರಾಯಣ*

ಜಂಬದಿ ಡಂಬದಿ
ಏತಕೆ ಮಾಡುವೆ
ದೇವರ ಪಾರಾಯಣ|
ಹಸಿದ ಹೊಟ್ಟೆಗೆ
ಅನ್ನವ ನೀಡು
ಅಲ್ಲೇ ಇರುವ
ನಮ್ಮ ನಾರಾಯಣ||

*೨*

*ಗೆಲುವು*


ಸಿಕ್ಕೇ ಸಿಗುವುದು
ನೀನೆಣಿಸಿದ ಗೆಲುವು
ಇದ್ದರೆ ನಿನಗೆ
ಜ್ಞಾನದ ಹಸಿವು


*೩*
*ಪಾಲು*

ಗೆಲುವು ಬಂತೆಂದು
ಹಿರಿಹಿರಿ ಹಿಗ್ಗಬೇಡ
ಅದರಲ್ಲಿ ಸೋಲಿನ
ಪಾಲಿದೆ ಮರೆಯಬೇಡ.

*೪*

*ಜೇಡ*

ಸೋತೆನೆಂದು
ಎಂದಿಗೂ ಕುಗ್ಗಬೇಡ
ಬಿಡುವುದೇ
ಬಲೆ ಹೆಣೆವುದ
ಸೋತ ಜೇಡ?

*೫*

*ಕನ್ನಡಿ*

ಬರುವುದು ಗೆಲುವು ಒಂದು ದಿನ
ಪ್ರಯತ್ನ ಮಾಡು ಪ್ರತಿ ದಿನ
ಸೋಲೇ ಗೆಲುವಿನ ಮುನ್ನುಡಿ
ಪ್ರಯತ್ನ ಯಶಸ್ವಿನ ಕನ್ನಡಿ.


*ಸಿ ಜಿ ವೆಂಕಟೇಶ್ವರ*
*ತುಮಕೂರು*


ಮರೆಯದಿರು (ಬಹುಮಾನ ಪಡೆದ ಚುಟುಕು)

*ಮರೆಯದಿರು* 
(ಹನಿ ಹನಿ ವಿಸ್ಮಯ ರಾಜ್ಯ ಮಟ್ಟದ ಸ್ಪರ್ಧೆಯಲ್ಲಿ ಸಮಾಧಾನಕರ ಬಹುಮಾನ ಪಡೆದ ಚುಟುಕು )

ಸೋತೆನೆಂದು ಚಿಂತಿಸುತ ನೀ ಕೂರುವೆ ಏಕೀಗ
ಬಿದ್ದರು ಬಲೆಯನು ಹೆಣೆಯುವ ಜೇಡವ ನೋಡೀಗ
ನಿನ್ನೊಳಗಿರುವ ಶಕ್ತಿಯು ಹೆಚ್ಚಿದೆ ಮರೆಯದಿರು
ಗೆಲುವದು ಬಂದಾಗ ಹುಚ್ಚಾಗಿ ಮೆರೆಯದಿರು.

*ಸಿ ಜಿ ವೆಂಕಟೇಶ್ವರ*
*ತುಮಕೂರು*

15 ಏಪ್ರಿಲ್ 2020

ಆರೈಕೆ ಮಾಡು(ಕವನ)



*ಆರೈಕೆ ಮಾಡು*

ನೀನು ಒಂದು ದಿನ
ಆಗುವೆ ಮುದುಕ
ಆಗ ನೀನು ಅರಿತು
ಕೊಳ್ಳುವೆ  ಬದುಕ

ಯೌವನ ಯಾರಿಗೂ
ಶಾಶ್ವತವಲ್ಲ
ಮಗನೆ ವೃದ್ಧಾಪ್ಯ
ಇದು ತಪ್ಪಲ್ಲ

ಹಣ್ಣೆಲೆ ಉದರುವ
ಕಾಲವು ಬಂದಿದೆ
ಚಿಗುರೆಲೆ ನಗುವ
ನೋಡಿ ನಲಿದಿದೆ

ಬಾಲ್ಯದಿ ನಡೆದೆನು
ಆಡಿಸಿ‌ ಕೈಕಾಲು
ಈಗ ಬಂದಿದೆ
ನೋಡಿಲ್ಲಿ ಕೈಕೋಲು

ಆರೈಕೆ ಮಾಡು
ಈ ಅಪ್ಪನನು
ಮಗನು ಹಿಡಿವ
ನಿನ್ನ ದಾರಿಯನು.

*ಸಿ ಜಿ ವೆಂಕಟೇಶ್ವರ*
*ತುಮಕೂರು*

ಸಿಹಿಜೀವಿಯ ಹತ್ತು ಹನಿಗಳು (ಸಹನೆ)

*ಚುಟುಕುಗಳು*

*೧*

*ವರ*

ದೇವರಿಗೆ ನೂರು ನಮನ
ಕೊಟ್ಟ ನನಗೆ ಸಾವಿರ ವರ
ಅಮ್ಮನೆಂಬ ಸಹನಾಮೂರ್ತಿ
ಕೊಡುಗೆಯು ದೊಡ್ಡ ವರ.

*೨*

*ಆತುರ*

ಸಹನೆಯಿಲ್ಲ ಎಲ್ಲೆಡೆ ಆತುರದ
ಪಾಸ್ಟ್ ಪುಡ್ ಜಮಾನ
ಇಂದು ಗಿಡ ನೆಟ್ಟು
ನಾಳೆ ಬಯಸುವರು ಹಣ್ಣನ್ನ.

*೩*

*ಜೀವನದಿ*

ರೂಢಿಸಿಕೊಂಡರೆ ನೀನು
ಸತ್ಯ, ಶಾಂತಿ ,ಸಹನೆಯ ಜೀವನದಿ
ಸರಾಗವಾಗಿ ಸಾಗರವ
ಸೇರುವುದು ಬದುಕೆಂಬ ‌ಜೀವನದಿ

*೪*

*ಸಿಂಹಿಣಿ*

ನನ್ನವಳು ಸಾಮಾನ್ಯವಾಗಿ
ಸಹನಾಮಣಿ ಸಹಧರ್ಮಿಣಿ
ಕೆರಳಿ ನಿಂತರೆ ನೋಡಬೇಕು
ಅವಳೊಂದು ಸಿಂಹಿಣಿ.

*೫*

*ಸಾಧನೆಯ ಮೂಲ*

ಮಾಡುವ ಕೆಲಸದಲ್ಲಿದ್ದರೆ
ಸಹನೆ, ಶ್ರದ್ಧೆ ಯಶ ಪಡೆವೆ
ಕಾಟಾಚಾರದ ಗುಣವಿದ್ದರೆ
ಏನೂ ಸಾಧಿಸದೆ ಮಡಿವೆ.

*೬*

*ತಾಯಿ*

ಸಹನೆಗೆ ಮತ್ತೊಂದು ಹೆಸರೇ
ನಮ್ಮ ಭೂಮಿತಾಯಿ
ಭೂತಾಯಿಯ ಪ್ರತಿರೂಪ
ನನ್ನನೆತ್ತ  ತಾಯಿ .

*೭*

*ನಮನ*

ಸಹನೆಗೆ ಮತ್ತೊಂದು ಹೆಸರೇ
ಜನ್ಮ ಕೊಟ್ಟ ನನ್ನಮ್ಮ
ಮಹಾನ್ ಕೊಡುಗೆಗೆ ಇದೋ
ನಮನ ನಿನಗೆ ಬ್ರಹ್ಮ .

*೮*

*ಮಹಾಜಾಣ*

ಸಾಧಕನಾದವನಿಗೆ ಇರಲೇಬೇಕು
ಸಹನೆಯೆಂಬ ಮಹಾಗುಣ
ಅಂತಹವನ ಹೊಗಳುವುದು
ಜಗವು ಮಹಾಜಾಣ .

*೯*

*ಪಶ್ಚಾತ್ತಾಪ ಪಡೆದಿರು*

ಸಹನೆಯು ದೌರ್ಬಲ್ಯದ
ಸಂಕೇತವೆಂದು ತಿಳಿಯದಿರು
ಕೋಪದ ಕೈಗೆ ಬುದ್ದಿ
ನೀಡಿ ಪಶ್ಚಾತ್ತಾಪ ಪಡೆದಿರು.

*೧೦*

*ತೂತು ಮಡಿಕೆ*

ಸಹನೆಯಲಿ ಕೇಳುವವನು
ಉತ್ತಮ ಮಾತುಗಾರನಾಗುವ
ಅರೆಬರೆ ಕಲಿತವನು
ತೂತು ಮಡಕೆಯಾಗುವ.

*ಸಿ ಜಿ ವೆಂಕಟೇಶ್ವರ*
*ತುಮಕೂರು*

14 ಏಪ್ರಿಲ್ 2020

ಸಿಹಿಜೀವಿಯ ಹನಿ‌(ನಿಗ)

*ನಿಗ*

ಅವನು ರೂಪದಲಿ
ಚೆಲುವಾಂತ ಚೆನ್ನಿಗ
ಅದಕ್ಕೆ ಅವಳು
ಯಾವಾಗಲೂ
ಅವನ ಮೇಲೆ
ಇಟ್ಟಿರುವಳು ನಿಗ

*ಸಿ ಜಿ ವೆಂಕಟೇಶ್ವರ*
*ತುಮಕೂರು*